Tag Archives: Corruption in Media

ಚೆಡ್ಡಿ ಪತ್ರಕರ್ತರ ಸಂಚಿಗೆ ಪತ್ರಕರ್ತರ ಐ.ಪಿ.ಎಸ್. ಮಗ ಬಲಿಪಶು

ಮಧುಕರ ಶೆಟ್ಟಿ ಸಂದರ್ಶನ ವಿವಾದ – ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರ ಸಂಚಿಗೆ  ಸಮಾಜವಾದಿ ಪತ್ರಕರ್ತರ ಐ.ಪಿ.ಎಸ್ ಮಗ ಬಲಿಪಶು

-ಚಂದ್ರಗಿರಿ

ದಿನಾಂಕ 13-11-2011ರ ಭಾನುವಾರ ಕಾರ್ಪೊರೇಟ್ ಎಂ.ಪಿ. ಮಲೆಯಾಳಿ ರಾಜೀವ್ ಚಂದ್ರಶೇಖರ್ ಮಾಲಿಕತ್ವದಲ್ಲಿ ಬರುವ ಕನ್ನಡ ಪ್ರಭದಲ್ಲಿ ಲೋಕಾಯುಕ್ತದಲ್ಲಿ ಕೆಲಸ ಮಾಡಿದ ಐ.ಪಿ.ಎಸ್. ಅಧಿಕಾರಿ ಮಧುಕರ ಶೆಟ್ಟಿ ಆವರ ಸಂದರ್ಶನ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕೊಳದಲ್ಲಿ ಅಪಾರವಾದ ಹೊಂಡನ್ನು ಸೃಷ್ಟಿ ಮಾಡಿದೆ. ರಜೆ ಮೇಲೆ ಅಮೆರಿಕಾಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿರುವ  ಐ.ಪಿ.ಎಸ್. ಅಧಿಕಾರಿ ಮುಗ್ಧ ಮಧುಕರ ಶೆಟ್ಟೆ ಅವರ ಸಂದರ್ಶನ ಪ್ರಾಮಾಣಿಕತೆಯಿಂದ ಕೂಡಿದ್ದರೂ ಸಮಯೋಚಿತ ಸಂಚಿಗೆ ಬಲಿಯಾಗಿದೆ.

ಈಚಿನ ದಿನಗಳಲ್ಲಿ ಕರ್ನಾಟಕದ ಜನರಿಗೆ  ಲೋಕಾಯುಕ್ತದ ಬಗ್ಗೆ ನಂಬಿಕೆಯನ್ನು ಶಿಥಿಲಗೊಳಿಸುವ ಮಧುಕರ್ ಅವರ ಈ ಸಂದರ್ಶನ ಈ ಸಂದರ್ಭದಲ್ಲಿ ಪ್ರಕಟವಾಗಿರುವುದು ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಮುಂದಾಗಿದ್ದ ಒಂದು ಸಂಸ್ಥೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಅನುಮಾನವಿದೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳು ಮತ್ತು ಕೆಲ ರಾಜಕಾರಣಿಗಳು ಮಧುಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡಿರುವ ದಟ್ಟ ಅನುಮಾನಗಳು ನನ್ನನ್ನು ಕಾಡುತ್ತಿವೆ.

ಕನ್ನಡದ ಹೆಸರಾಂತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮಶೆಟ್ಟರ ಮಗನಾದ ಶ್ರೀ ಮಧುಕರ ಶೆಟ್ಟರು ಪತ್ರಿಕಾ ವಲಯ ಹಾಗೂ ಪ್ರಗತಿಪರ ವಲಯದಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ನಾನು ಬಲ್ಲ ಅನೇಕ ಪತ್ರಿಕಾ ಸ್ನೇಹಿತರು ಅವರು ಉಡುಪಿಯಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದನ್ನು, ಲೋಕಾಯುಕ್ತದಲ್ಲಿ ಭ್ರಷ್ಟರನ್ನು ಮಟ್ಟ ಹಾಕಿದ ಬಗೆಯನ್ನು, ಅದರಲ್ಲೂ ವಿಶೇಷವಾಗಿ ಕಟ್ಟಾ ಸುಬ್ರಮಣ್ಯಾ ನಾಯ್ಡು ಅವರ ಭೂ ವಂಚನೆ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ವಿಜೃಂಭಣೆಯಿಂದ ವಿವರಿಸಿದ್ದಾರೆ.

ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿ ಐ.ಪಿ.ಎಸ್. ತರಬೇತಿ ಪಡೆದು ದಕ್ಷ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟರು ಇದ್ದಕ್ಕಿದ್ದಂತೆ ಎರಡು ವರ್ಷ ಅಮೆರಿಕದಲ್ಲಿ ಓದುವ ಸಲುವಾಗಿ ರಜೆ ಹಾಕುವ ಪ್ರಸಂಗ ಎದುರಾದಾಗ ಅವರ ಆಪ್ತ ಬಳಗ ಶೆಟ್ಟರಿಗೆ ಲೋಕಾಯುಕ್ತ ಕಾರ್ಯ ವೈಖರಿ ಬಗ್ಗೆ ಬೇಸರವಾಗಿರುವುದನ್ನು ಅಲ್ಲಲ್ಲಿ ವಿಷಾದನೀಯವಾಗಿ ವಿವರಿಸುತ್ತಿತ್ತು. ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡ ಬಗ್ಗೆಯೂ  ಗಿಲ್ಡ್ ಮತ್ತು ಕ್ಲಬ್‌ಗಳಲ್ಲಿ ಈ ಬಳಗ ಮಾತನಾಡಿದ್ದುಂಟು.

ಮಧುಕರ್ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆಯನ್ನು ಪ್ರಶ್ನಿಸಿ ಅವರ ಅತಿಯಾದ ಪ್ರಚಾರವನ್ನು ಟೀಕಿಸುತ್ತಿದ್ದುದು ಅವರ ಪತ್ರಿಕಾ ಮಿತ್ರರ ಮಾತಿನಿಂದ ನಮಗೆ ಗೊತ್ತಾಗುತ್ತಿತ್ತು. ಸಂತೋಷ ಹೆಗ್ಡೆ ಬಗ್ಗೆ ತಮಗಿರುವ ಅಸಮಾಧಾನವನ್ನು ಮಧುಕರ ಲೋಕಾಯುಕ್ತ ಸಂಸ್ಥೆಯೇನು ಸಾಚ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ವ್ಯಕ್ತ ಪಡಿಸುತ್ತಿದ್ದುದು ಅನೇಕ ಪತ್ರಕರ್ತರಿಗೆ ಗೊತ್ತಾಗಿತ್ತು. ಆದರೆ ಸಂತೋಷ ಹೆಗ್ಡೆ ಅವರ ಪ್ರಾಮಾಣಿಕತೆ ಮುಂದೆ ಮಧುಕರರ “ಗಾಸಿಪ್” ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.

ಆದರೀಗ ಲೋಕಾಯುಕ್ತ  ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆ ರೇಣುಕಾಚಾರ್ಯ, ಕುಮಾರಸ್ವಾಮಿ, ಬಿ.ಜೆ.ಪಿ. ಈಶ್ವರಪ್ಪ, ಮಾಜಿ ರೌಡಿ ಶೀಟರ್ ಬಿ.ಕೆ. ಹರಿಪ್ರಸಾದ್ ಅಂತಹವರ ಟೀಕೆಗೆ ತುತ್ತಾಗಿರುವ ಸಂದರ್ಭದಲ್ಲಿ ಮುಗ್ಧ ಮಧುಕರ  ಕನ್ನಡ ಪ್ರಭಕ್ಕೆ ದೂರವಾಣಿ ಸಂದರ್ಶನ ನೀಡಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹೂರಣವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಜೈಲಿಗೆ ಹೋಗಿ ಬರುತ್ತಿರುವಾಗ,  ಮಗನ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದಾಗ ಮಂಡಲ ಪಂಚಾಯತಿ ಸದಸ್ಯರ ರೀತಿಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಮಾಜಿ ಪ್ರಧಾನಿಗಳು ಧಮಕಿ ಹಾಕಿರುವಾಗ ಮಧುಕರರ ಮುಗ್ಧ ಹೇಳಿಕೆ ಪ್ರಾಮಾಣಿಕತೆಯ ಆದರ್ಶವನ್ನು ನಂಬಿ ಬದುಕು ನಡೆಸುವ ಕನ್ನಡಿಗರ ಪಾಲಿಗೆ ನುಂಗಲಾರದ ತುತ್ತು. ನಮಗೆ ಈಗ ಕರ್ನಾಟಕದಲ್ಲಿ ಸಂತೋಷ ಹೆಗ್ಡೆ ಬಿಟ್ಟರೆ ಬೇರಾರೂ ಪ್ರಾಮಾಣಿಕರು ಮತ್ತು ಪರಿಪಕ್ವರೂ ಕಾಣುತ್ತಿಲ್ಲದ ಈ ಸಂದರ್ಭದಲ್ಲಿ ಮಧುಕರರ ಸಂದರ್ಶನ ಪ್ರಾಮಾಣಿಕರ ಆತ್ಮಸ್ಥೈರ್ಯಕ್ಕೆ  ಸವಾಲಾಗಿ ಪರಿಣಮಿಸಿದೆ.

ಮಧುಕರ ಶೆಟ್ಟರು ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ನಮ್ಮ ಎರಡು ಮಾತಿಲ್ಲ. ಅಂತೆಯೇ ಇವರು ಸಿನಿಕರು ಎಂಬುದು ಸಂದರ್ಶನದ ಪ್ರತಿ ಹಂತದಲ್ಲೂ ವ್ಯಕ್ತವಾಗಿದೆ. ಕೆಟ್ಟು ಕೆರ ಹಿಡಿದಿರುವ ಈ ವ್ಯವಸ್ಥೆಯಲ್ಲಿ ಪರಿಸ್ಥಿತಿಯನ್ನು ನಿಧಾನಕ್ಕೆ ನಿಯಂತ್ರಣಕ್ಕೆ ತಂದುಕೊಂಡು ಸಮಾಜವನ್ನು ಸುಧಾರಣೆ ಮಾಡುವ ಹಂತಕ್ಕೆ ಹೋಗಬೇಕು. ಅದು ಬಿಟ್ಟು ತಡ ರಾತ್ರಿ ಗೋಷ್ಠಿಗಳಲ್ಲಿ ಪರಿಚಯಸ್ಥರ ಮುಂದೆ ತಾನೇ ಕೆಲಸ ಮಾಡುವ ವ್ಯವಸ್ಥೆ ಬಗ್ಗೆ ದೂರಿ ಒಳ್ಳೆಯವನಾಗಬಾರದು. ಇದು ಮೀಡಿಯಾ ಫ್ರೆಂಡ್ಲಿ ಆಫೀಸರ್ ಮನೋಭಾವನೆಗಿಂತ ಮಿಗಿಲಾಗಿ ಏನೂ ಅಲ್ಲ.

ದೂರದ ಅಮೆರಿಕೆಯಿಂದ ದೂರವಾಣಿಯಲ್ಲಿ ನೀವು ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರೊಂದಿಗೆ ಮಾತನಾಡಿದ ನಂತರ ಕನ್ನಡ ನಾಡಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹೀಗಿವೆ ನೊಡಿ ಮಧುಕರ್..:

  • ಬಿ.ಜೆ.ಪಿ ಅಧ್ಯಕ್ಷ ಈಶ್ವರಪ್ಪ ‘ಕಳ್ಳರನ್ನು ಕಳ್ಳರೇ ಹಿಡಿಯುವುದು ಎಂತಹ ಹಾಸ್ಯಾಸ್ಪದ’ ಎಂದಿದ್ದಾರೆ.
  • ‘ಮಧುಕರ್ ನನಗೆ ಈ ಹಿಂದೆಯೇ ಈ ವಿಷಯವನ್ನು ತಿಳಿಸಿದ್ದರು. ಅದಕ್ಕೆ ನಾನು ಲೋಕಾಯುಕ್ತ ಸಂಸ್ಥೆ ಬಗ್ಗೆ ಹಿಂದಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದು,’ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಇನ್ನೂ ಮುಂದೆ ಹೋಗಿ ಸಂತೋಷ ಹೆಗ್ಡೆ ಅವರನ್ನು ಮತ್ತೊಮ್ಮೆ ಟೀಕೆ ಮಾಡಿದ್ದಾರೆ.
  • ಮಧುಕರ್ ಅಮೆರಿಕಾಕ್ಕೆ ಹೋದ ಮೇಲೆ ಸಿಐಎ ಏಜೆಂಟ್ ಥರ ಮಾತನಾಡುತ್ತಾರೆ ಕಣ್ರೀ ಎಂದು ವಡ್ಡರ್ಸೆಗೆ ಆಗದ ಕೆಲವು ಕುಹಕಿ ಕಮುನಿಸ್ಟರು ಕೇಕೆ ಹಾಕುತ್ತಿದ್ದಾರೆ.

ಏನೇ ಆಗಲಿ, ಮಧುಕರ ಶೆಟ್ಟರು ಕನ್ನಡಿಗರಿಗೆ ಏನಾದರೂ ತಮ್ಮ ಸಂದೇಶ ರವಾನಿಸುವದಿದ್ದರೆ ಯೂಟ್ಯೂಬ್ ಮುಖಾಂತರ ಮಾತನಾಡಲಿ. ನಾವು ಅದನ್ನು ಡೌನ್ ಲೋಡ್ ಮಾಡಿ ಪ್ರೆಸ್ ಕ್ಲಬ್‌ನಲ್ಲಿ ಪ್ರದರ್ಶಿಸುತ್ತೇವೆ. ಇನ್ನು ಮುಂದೆ ಮಧುಕರ್ ಕಾಸಿಗಾಗಿ ಸುದ್ದಿ ಪ್ರಕಟಿಸುವ ಚೆಡ್ಡಿ ಪತ್ರಕರ್ತರಿಗೆ ಟ್ರ್ಯಾಪ್ ಆಗುವುದು ಬೇಡ.

objection-to-yeddyurappa's-approval-for-statewide-paper-page2

ಕಾಸಿಗಾಗಿ ಸುದ್ದಿ ಪ್ರಕಟಿಸದ ದಿನಪತ್ರಿಕೆಗಳು ಈಗ ಯಾವು ಉಳಿದಿವೆ?

– ಪರಶುರಾಮ ಕಲಾಲ್

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ ಇವತ್ತು ತನ್ನ ಮೂಲ ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿದೆ.

ಒಂದು ಕಡೆ 2ಜಿ ಸ್ಟೆಕ್ರಮ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಡದ ಹಗರಣಗಳು ಬಯಲಾಗುವುದಕ್ಕೆ ಕಾರಣವಾಗಿ ಆಳುವವರ ಕಣ್ಣಿಗೆ ಖಳನಾಗಿ ಕಾಣತೊಡಗಿದೆ. ಪಿ.ಸಾಯಿನಾಥ್ ಅವರ ಬರಹಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದರ್ಭ ಪ್ಯಾಕೇಜ್ ಘೋಷಿಸಿದ ಉದಾಹರಣೆಯು ನಮ್ಮ ಮುಂದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಪತ್ರಿಕಾರಂಗ ಈ ವಿಷಯಗಳಲ್ಲಿ ಕೆಲಸ ಮಾಡಿ ಸೈ ಅನ್ನಿಸಿಕೊಂಡಿದೆ.

ಇಷ್ಟು ಮಾತ್ರ ಆಗಿದ್ದರೆ ಸಮಸ್ಯೆ ಏನೋ ಇಲ್ಲ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಟು ಅವರ ಹೇಳಿಕೆಯನ್ನು ಅತ್ಯುಗ್ರವಾಗಿ ಖಂಡಿಸಿ ಬಿಡಬಹುದಿತ್ತು. ಆದರೆ ಕಾವಲು ನಾಯಿಯಾಗಿ ಕೆಲಸ ಮಾಡುವ ಜೊತೆಗೆ ರಾಜಕಾರಣಿಗಳ, ಕಾರ್ಪೊರೇಟ್ ಸಂಸ್ಥೆಗಳ ಮುದ್ದಿನ ನಾಯಿ ಆಗಿಯೂ ಕೆಲಸ ಮಾಡಿರುವ ಉದಾಹರಣೆಗಳು ಇವೆಯಲ್ಲಾ? ಇವೆಲ್ಲವಕ್ಕೂ ಏನು ಹೇಳಬೇಕು. ದೆಹಲಿಯ ಶಾಲೆಯ ಶಿಕ್ಷಕಿ ಉಮಾ ಖುರಾನ ಪ್ರಕರಣವಾಗಲಿ, ಅಥವಾ ವೈದ್ಯರ ಪುತ್ರಿ ಅರುಶಿ ಕೊಲೆ ಪ್ರಕರಣದ ಬಗ್ಗೆ ವಿದ್ಯುನ್ಮಾನ ಮಾಧ್ಯಮ ನಡೆದುಕೊಂಡು ರೀತಿ ಹೇಗಿತ್ತು? ಈ ವಿದ್ಯುನ್ಮಾನ ಮಾಧ್ಯಮಗಳ ಹುಳುಕುಗಳನ್ನು ಇವೆಲ್ಲಾ ಬಯಲುಗೊಳಿಸಿಲ್ಲವೇ? ಕಾರ್ಪೊರೇಟ್ ಕಂಪನಿಗಳು ಮತ್ತು ಪತ್ರಕರ್ತರ ನಡುವೆ ಇರುವ ಅನೈತಿಕ ಸಂಬಂಧ ನೀರಾ ರಾಡಿಯ ಪ್ರಕರಣ ಬಯಲಿಗೆ ತಂದಿತು. ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯುವವರು ಇವುಗಳನ್ನು ಕೂಡಾ ಗಮನಿಸಬೇಕಾಗುತ್ತದೆ.

ಪತ್ರಿಕೋದ್ಯಮದ ಅಲಿಖಿತ ನಿಯಮಗಳನ್ನು ಎಷ್ಟು ಪತ್ರಿಕೆಗಳು ಪಾಲಿಸುತ್ತಿವೆ? ಕೋಮು ಸಂಘರ್ಷ ನಡೆದಾಗ ಎರಡು ಕೋಮುಗಳ ಹೆಸರುಗಳನ್ನು ಬಯಲುಗೊಳಿಸಬಾರದು ಎಂದಿದೆ. ಎಷ್ಟು ಪತ್ರಿಕೆಗಳು ಈ ನಿಯಮಕ್ಕೆ ಬದ್ಧವಾಗಿವೆ? ಕೋಮು ಹೆಸರು ಹೇಳದಿದ್ದರೂ ಆಸ್ಪತ್ರೆಗೆ ದಾಖಲಾದವರು, ಬಂಧಿತರ ಹೆಸರನ್ನು ಒಂದು ಕೋಮು ದೃಷ್ಠಿಯಲ್ಲಿಟ್ಟುಕೊಂಡು ಪ್ರಕಟಿಸುತ್ತವೆಯಲ್ಲ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹೆಸರನ್ನು ಪ್ರಕಟಿಸಬಾರದು. ಆಕೆಯ ಫೋಟೋ ಹಾಕಬಾರದು ಎಂದಿದೆ. ಈಗ ಅದು ಪಾಲಿಸಲಾಗುತ್ತಿದೆಯೆ? ಕೆಲವು ಟಿವಿ ಚಾನಲ್‌ಗಳಂತೂ ಅವರನ್ನು ಸಂದರ್ಶನ ಮಾಡಿ ಅಸಹ್ಯ ಪ್ರಶ್ನೆ ಕೇಳುವ ಮೂಲಕ ಎಲ್ಲವನ್ನೂ ಬಟ್ಟಾಬಯಲಾಗಿಸಿ, ರಂಜನೆ ಒದಗಿಸುತ್ತಿಲ್ಲವೇ?

ಇನ್ನು, ಕಾಸಿಗಾಗಿ ಸುದ್ದಿ ಪ್ರಕಟಿಸದ ಕನ್ನಡ ದಿನಪತ್ರಿಕೆಗಳು ಈಗ ಯಾವು ಉಳಿದಿವೆ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಸು ತೆಗೆದುಕೊಂಡು ಚುನಾವಣೆ ಸುದ್ದಿ ಬರೆದು ಹಣ ಮಾಡಿಲ್ಲವೇ? ಪತ್ರಿಕಾ ಮಾಲೀಕರೇ ಈ ಅಡ್ಡ ಹಾದಿ ಹಿಡಿದ ಮೇಲೆ ಬಿಡಿ ಸುದ್ದಿಗಾರರು, ವರದಿಗಾರರು ಅದೇ ಹಾದಿ ತುಳಿದರೆ ಇದನ್ನು ಟೀಕಿಸುವ ನೈತಿಕತೆ ಪತ್ರಿಕಾ ಮಾಲೀಕರಿಗೆ ಎಲ್ಲಿದೆ? ಪ್ರಶ್ನಿಸುವ ಹಕ್ಕನ್ನು ಸಂಪಾದಕರು ಕಳೆದುಕೊಂಡಂತಾಗಲಿಲ್ಲವೇ?

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

ಸಂಪಾದಕರು, ಸಂಪಾದಕರ ಬಳಗ ಆಕ್ರಮವೆಸಗಿ, ಒಂದು ಪತ್ರಿಕೆಯಿಂದ ಹೊರ ಬಂದ ಮೇಲೆ ಅವರಿಗೆ ರತ್ನಗಂಬಳಿ ಹಾಸಿ ಮತ್ತೊಂದು ಪತ್ರಿಕೆ ಅವಕಾಶ ಮಾಡಿಕೊಡುತ್ತಿರುವುದನ್ನು ನೋಡಿದರೆ ಈ ಆಕ್ರಮವೆಸಗುವವರು ಪತ್ರಿಕೆಯ ಮಾಲೀಕರಿಗೆ ಬೇಕು ಎಂದಾಗುವುದಿಲ್ಲವೇ? ಅವರು ಈ ಆಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದೇ ಅರ್ಥವಲ್ಲವೇ? ಪತ್ರಿಕೋದ್ಯಮ ಇಂತಹ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿದೆ.

ಭಾರತೀಯ ಪತ್ರಿಕಾ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದ ಅನೇಕ ಉದಾಹರಣೆಗಳು ಇವೆ. ಎಷ್ಟೇ ಆಗಲಿ ಈ ಮಂಡಳಿ ಹಲ್ಲಿಲ್ಲದ ಹಾವು. ಛೀಮಾರಿ ಹಾಕುವುದನ್ನು ಬಿಟ್ಟು ಬೇರೇನೋ ಅದರಿಂದ ಸಾಧ್ಯವಿಲ್ಲ. ತಪ್ಪೊಪ್ಪಿಗೆಯನ್ನು ಸಣ್ಣದಾಗಿ ಪ್ರಕಟಿಸಿ ಕೈತೊಳೆದುಕೊಂಡು ಏನೋ ಆಗಿಲ್ಲ ಎನ್ನುವಂತೆ ವರ್ತಿಸಿಲ್ಲವೇ? ಕೆಲವರು ಸ್ವಯಂ ನೈತಿಕತೆಯ ಪಾಠ ಹೇಳುತ್ತಿದ್ದಾರೆ. ಈ ಸ್ವಯಂ ನೈತಿಕತೆಯ ಪಾಠ ಇವತ್ತು ಯಾರು ಪಾಲಿಸುತ್ತಾರೆ. ಯಾರಿಗೆ ಈ ಉಪದೇಶ? ಈ ಕುರಿತ ಮುಖಾಮುಖಿ ಮಾತ್ರ ವಸ್ತುನಿಷ್ಠತೆಗೆ ಹತ್ತಿರ ಬರಲು ಸಾಧ್ಯವಾಗುತ್ತದೆ.

ಪತ್ರಿಕೋದ್ಯಮವನ್ನು ಗುರಾಣಿ ಮಾಡಿಕೊಂಡವರ ನಡುವೆ…

– ಪರಶುರಾಮ ಕಲಾಲ್

ಪತ್ರಿಕೋದ್ಯಮ ಹಲವಾರು ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಪತ್ರಕರ್ತರಿಗೆ ಉಸಿರುಗಟ್ಟಿಸುವ ವಾತಾವರಣ ಇದೆ. ಇದು ಅರ್ಧ ಸತ್ಯ ಮಾತ್ರ. ಉಳಿದ ಅರ್ಧ ಸತ್ಯವೆಂದರೆ ಅಲ್ಲೂ ಏನಾದರೂ ಮಾಡಬಹುದು. ಅದಕ್ಕೆ ಬದ್ಧತೆ ಬೇಕು. ಜೀವನ ಪ್ರೀತಿ ಇರಬೇಕು. ಜನರಿಗೆ ಏನಾದರೂ ಮಾಡಬೇಕು ಎನ್ನುವ ಕಾಳಜಿ ಇರಬೇಕು. ಆಗ ಹೊಸ ದಾರಿಗಳು ಗೋಚರಿಸುತ್ತವೆ. ಸಿನಿಕರಾಗಿ ಮಾತನಾಡಿದರೆ ಇರುವ ದಾರಿ ಮುಚ್ಚಿ ಹೋಗುತ್ತವೆ ಅಷ್ಟೇ.

ಹಣ ಮಾಡಬೇಕೆಂದವರು ಈ ಕ್ಷೇತ್ರ ಆಯ್ದುಕೊಳ್ಳಬಾರದು. ಬೇರೆ ಕ್ಷೇತ್ರಗಳ ಕಡೆ ಹೋಗಬೇಕು. ಇದು ಪತ್ರಿಕೋದ್ಯಮಕ್ಕೆ ಒಂದಿಷ್ಟು ಮಾನ ತರಬಲ್ಲದು. ಪತ್ರಿಕೋದ್ಯಮವನ್ನೇ ಗುರಾಣಿ ಮಾಡಿಕೊಂಡು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವವರು, ಡಿನೋಟಿಪೆಕೇಷನ್ ಮಾಡಿಸಿಕೊಂಡು ಕೋತಿ ತಾನು ತಿಂದು ಮೇಕೆಯ ಮೋತಿಗೆ ಒರೆಸಿದಂತೆ ಮಾಡುವವರ ನಡುವೆ ಇದು ಮಾನ ತರಬಲ್ಲ ಕೆಲಸವಾಗುವುದು. ಇಂತಹವರನ್ನು ಮಾಡೆಲ್ ಮಾಡಿಕೊಂಡು ಹಲಬುವುದನ್ನು ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಮೊಟ್ಟ ಮೊದಲು ಬಿಡಬೇಕು. ಇವರು ಯಾರು ಮಾಡೆಲ್ ಅಲ್ಲ. ಮಾಡೆಲ್ ಆಗಿ ಕಾಣುವವರು ನಮಗೆ ತುಂಬಾ ಜನ ಇದ್ದಾರೆ.

ಪತ್ರಿಕೋದ್ಯಮ ಇವತ್ತು ಹೊರಳುವ ಹಾದಿಯಲ್ಲಿದೆ. ಒಂದು ಕಡೆ ಅದು ದೃಶ್ಯ ಮಾಧ್ಯಮಗಳನ್ನು ಎದುರಿಸಬೇಕಿದೆ. ಮತ್ತೊಂದು ಕಡೆ ಪತ್ರಿಕೆಗಳ ಪೈಪೋಟಿಯನ್ನು ಎದುರಿಸಬೇಕಿದೆ. ಇದು ಎಲ್ಲಾ ಪತ್ರಿಕೆಗಳಿಗೆ ಅನ್ವಯಿಸುತ್ತಿದೆ. ಹಳೇಯ ಶೈಲಿಯಲ್ಲಿ ಇವತ್ತು ಪತ್ರಿಕೆಯನ್ನು ನಡೆಸಲು ಆಗುವುದಿಲ್ಲ. ಬದಲಾದ ಕಾಲಮಾನಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಗೆ ಸಜ್ಜಾಗಬೇಕಿದೆ. ಈ ಪೈಪೋಟಿಯಲ್ಲಿ ತನ್ನತನ ಮರೆಯದೇ ಉಳಿಸಿಕೊಳ್ಳಬೇಕಿದೆ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಆ ಮಾತು ಬೇರೆ.

ಕ್ಷಣ ಕ್ಷಣದ ಸುದ್ದಿಗಳನ್ನು ಲೈವ್ ಆಗಿ ಬಿತ್ತರಿಸುವ ದೃಶ್ಯ ಮಾಧ್ಯಮದ ಎದುರು ಪತ್ರಿಕೆಗಳ ಸುದ್ದಿಗಳು ತಂಗಳಾಗಿ ಬಿಟ್ಟಿರುತ್ತವೆ. ಇದನ್ನೇ ಉಣಬಡಿಸಿದರೆ ಓದುಗರು ಪತ್ರಿಕೆ ಯಾಕೆ ಓದಬೇಕು? ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸುವ ಜೊತೆಗೆ ಅದನ್ನು ವಿಶ್ಲೇಷಣೆ ಮಾಡಲೇಬೇಕಾಗುತ್ತದೆ. ಈ ವಿಶ್ಲೇಷಣೆಯು ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಇರಬೇಕು. ಇಂತಹ ಸುದ್ದಿಗಳನ್ನು ಹೆಚ್ಚು ಮಾಡುವ ಮೂಲಕವೇ ದೃಶ್ಯ ಮಾಧ್ಯಮವನ್ನು ಎದುರಿಸುವ ಮೂಲಕ ಹೊಸ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಪತ್ರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಇದನ್ನು ಪತ್ರಿಕೆಗಳು ಅರ್ಥ ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ವಿನ್ಯಾಸ, ತಲೆಬರಹದಲ್ಲಿ ಅಕ್ಷರಗಳ ಆಟ ಆಡುವುದೇ ದೊಡ್ಡ ಪತ್ರಿಕೋದ್ಯಮ ಎಂದು ಕೆಲವರು ಭಾವಿಸಿದ್ದಾರೆ. ಇದು ತಪ್ಪಲ್ಲ, ಇದೇ ಪತ್ರಿಕೆಯ ಜೀವಾಳ ಆಗಲು ಸಾಧ್ಯವಿಲ್ಲ. ಕೆಲವು ಪತ್ರಿಕೆಗಳು ತಮ್ಮ ಭಾಷೆಯ ಶೈಲಿಯನ್ನು ಬದಲಿಸಿ, ಟ್ಯಾಬ್ಲಾಯ್ಡ್ ಪತ್ರಿಕೆಗಳ ಶೈಲಿಯಲ್ಲಿ ಬರೆಯಲು ಆರಂಭಿಸಿವೆ. ಇದು ಕೂಡಾ ಆಪಾಯವೇ. ಜನರಲ್ಲಿ ಗಾಢ ನಂಬಿಕೆಯನ್ನು ಕೊಡದೇ ಅವರ ನಂಬಿಕೆಯನ್ನು ಶಿಥಿಲಗೊಳಿಸುವ ಈ ಪ್ರಯತ್ನ ಸಿನಿಕರನ್ನು ಹೆಚ್ಚು ಮಾಡಬಹುದೇ ಹೊರತು ಅದು ಜನಾಭಿಪ್ರಾಯ ರೂಪಿಸಲಾರದು.

ಒಂದು ಪತ್ರಿಕೆಯು ತನ್ನನ್ನು ತಾನು ಮರುರೂಪಿಸಿಕೊಂಡು ಹೊಸ ಭಾಷೆಯಲ್ಲಿ, ಹೊಸ ಶೈಲಿಯಲ್ಲಿ ಕಾಣಿಸಿಕೊಂಡರೆ ಜನ ಅದನ್ನು ಖಂಡಿತ ಸ್ವೀಕರಿಸುತ್ತಾರೆ. ಇದಕ್ಕೆ ಯಾರ ಅಡ್ಡಿಯೂ ಇಲ್ಲ. ಜಾಹಿರಾತು ಎನ್ನುವುದು ಕೂಡಾ ಅಡ್ಡಿಯಾಗುವುದಿಲ್ಲ. ಆದರೆ ಪತ್ರಿಕೆಗಳ ಸಂಪಾದಕರು ಯಾಕೋ ಮನಸ್ಸು ಮಾಡುತ್ತಿಲ್ಲ. ಮಾಲೀಕರು ಎಂದೂ ಅಡ್ಡಿ ಬರುವುದಿಲ್ಲ. ಕೆಲವು ಸುದ್ದಿಗಳಿಗೆ ಅಡ್ಡ ಬಂದರೂ ಈ ಬದಲಾವಣೆಗೆ ಖಂಡಿತ ಅಡ್ಡ ಬರಲಾರರು. ಪತ್ರಿಕೆಗಳು ಹೊಸ ಭಾಷೆಯಲ್ಲಿ ಜನರಿಗೆ ಹತ್ತಿರವಾಗುತ್ತಾ ಹೋದರೆ ಯಾವ ಮಾಲೀಕನಿಗೆ ಇಷ್ಟ ಆಗುವುದಿಲ್ಲ ಹೇಳಿ?

ಕೊರತೆ ಇರುವುದು, ಈ ಬಗ್ಗೆ ಪತ್ರಿಕೋದ್ಯಮದಲ್ಲಿ ಗಂಭೀರವಾಗಿ ಆಲೋಚಿಸುವ ಮನಸ್ಸುಗಳದ್ದು. ಎಲ್ಲರೂ ಒಂದು ಕಡೆ ಕುಳಿತು ಈ ಬಗ್ಗೆ ಯೋಚಿಸಲು ಆರಂಭಿಸುವುದು ಸಾಧ್ಯವಾಗಬೇಕು.

ಕುಶವಂತ್ ಸಿಂಗ್ ಇಲ್ಲ್‌ಸ್ಟ್ರೇಟೆಡ್ ವೀಕ್ಲಿ ಪತ್ರಿಕೆ ಸಂಪಾದಕರಾಗಿದ್ದಾಗ ಆ ಪತ್ರಿಕೆಯ ಸರ್ಕ್ಯೂಲೇಷನ್ ತುಂಬಾ ಏರಿತು. ಪ್ರೀತೀಶ್ ನಂದಿ ಸಂಪಾದಕರಾದಾಗ ಪತ್ರಿಕೆ ಸರ್ಕ್ಯೂಲೇಷನ್ ಇಳಿಯಿತು. ಆದರೆ ಪ್ರೀತೀಶ್ ನಂದಿ ಹೆಸರು ತುಂಬಾ ಏರಿತು. ಇದು ಸುಳ್ಳು, ಸತ್ಯವೋ ಗೊತ್ತಿಲ್ಲ. ಅದು ಏನೇ ಇರಲಿ, ಕನ್ನಡ ಪತ್ರಿಕೆಗಳ ಇವತ್ತಿನ ಅರ್ಭಟ ನೋಡಿದರೆ ಈ ಕಥೆ ನೆನಪಾಗುತ್ತದೆ.

ಸುದ್ದಿಮನೆಯ ದೋಸೆಯೂ ತೂತೆ

-ಹನುಮಂತ ಹಾಲಿಗೇರಿ

ಮೊನ್ನೆಯಷ್ಟೆ ಮಾಧ್ಯಮ ಕಚೇರಿಗಳ ಸುದ್ದಿ ಸಂಪಾದನೆ ವಿಭಾಗಗಳಲ್ಲಿ ಒಂದು ಸುದ್ದಿ ಬಿಸಿ ಬಿಸಿ ಚರ್ಚೆಗೀಡಾಗಿ ಅಷ್ಟೆ ವೇಗದಲ್ಲಿ ಬಿಸಿ ಕಳೆದುಕೊಂಡಿತು. ಉದಯವಾಣಿ ಪತ್ರಿಕೆಯ ವರದಿಗಾರ ಸುರೇಶ್ ಪುದವೆಟ್ಟು ಅವರು ಸಚಿವ ಮುರುಗೇಶ್ ನಿರಾಣಿಯವರ ಭ್ರಷ್ಟಾಚಾರದ ಬಗ್ಗೆ ಒಂದು ಲೇಖನ ಬರೆದಿದ್ದರು. ಇದು ನಿರಾಣಿಯವರ ಕಣ್ಣು ಕೆಂಪಗಾಗಲು ಕಾರಣವಾಗಿರಬೇಕು. ಸುರೇಶ್ ಅವರ ಹೆಂಡತಿ ಮಾನಸ ಪುದುವೆಟ್ಟ ನಿರಾಣಿ ಮಾಲಿಕತ್ವದ ಸಮಯ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಾರಣವಿಲ್ಲದೆ ದೂರದ ಗುಲ್ಬರ್ಗಕ್ಕೆ ವರ್ಗ ಮಾಡಲಾಯಿತು. ಅವರು ಗುಲ್ಬರ್ಗಕ್ಕೆ ಹೋಗಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದರು. ಎಂಥ ವಿಚಿತ್ರ ನೋಡಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಈ ಘಟನೆಯನ್ನು ಸಕ್ರಿಯ ಪತ್ರಕರ್ತರೆಲ್ಲರೂ ತಮ್ಮ ಆತ್ಮೀಯ ವಲಯಗಳಲ್ಲಿ ಗುಸು ಗುಸು ಮಾತಾಡಿದರು. ಒಂದು ಕ್ಷಣ, ಛೆ, ಹೀಗಾಗಬಾರದಿತ್ತು ಎಂದು ನಿಟ್ಟುಸಿರು ಬಿಟ್ಟರು.  ಮುಂದಿನ ಕ್ಷಣ ಕ್ಯಾಮರಾ, ಪೆನ್ನು ಪ್ಯಾಡು ಸೇರಿದಂತೆ ಸಾಮಾನು ಸರಂಜಾಮುಗಳನ್ನು ಹೆಗಲೇರಿಸಿಕೊಂಡು ಸುದ್ದಿಗಳ ಬೇಟೆಗೆ ನಡೆದುಬಿಟ್ಟರು. ಅಲ್ಲಿಗೆ ಭರಿ ಗದ್ದಲವೆಬ್ಬಿಸಬೇಕಾದ ಸುದ್ದಿಮನೆಯದೆ ಸುದ್ದಿಯೊಂದು ಹಳತಾಗಿ ಸತ್ತು ಹೋಯಿತು. ರವಿ ಕೃಷ್ಣಾರೆಡ್ಡಿಯವರು ತಮ್ಮ ವರ್ತಮಾನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದನ್ನು ಬಿಟ್ಟರೆ ಈ ಸುದ್ದಿ ಎಲ್ಲಿಯೂ ಸುದ್ದಿ ಮಾಡಲೆ ಇಲ್ಲ.

ಇಂಥ ಘಟನೆ ಯಾವುದೊ ಒಂದು ಕಾರ್ಖಾನೆಯ ಕಾರ್ಮಿಕನ ಮೇಲೆ ನಡೆದಿದ್ದರೆ ಅದರ ಸುದ್ದಿಯೇ ಬೇರೆಯಾಗಿರುತ್ತಿತ್ತು. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದು ಮಾಲಿಕರು ಕ್ಷಮೆ ಕೋರಿ ಮತ್ತೆ ತಮ್ಮ ಆದೇಶವನ್ನು ಹಿಂಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಿತ್ತು. ಆದರೆ ದಿನನಿತ್ಯ ಅಂತಹ ಹತ್ತಾರು ತರಹದ ಪ್ರತಿಭಟನೆಗಳಿಗೆ ಹಾಜರಾಗಿ ವರದಿ ಮಾಡುವ ನಮ್ಮ ಸುದ್ದಿ ಸಂಸ್ಥೆಗಳಿಗೆ ಏನಾಗಿದೆ? ದಿನನಿತ್ಯ ಇಂತಹ ದೌಜನ್ಯಗಳನ್ನು ಸಹಿಸಿ ಮನಸ್ಸು ಜಡಗೊಂಡಿದೆಯೆ? ಇಂಥ ಘಟನೆ ದೌರ್ಜನ್ಯವೆಂದು ಅನಿಸಲೆ ಇಲ್ಲವೆ?

ಕಡೆಪಕ್ಷ ಮಾಧ್ಯಮಗಳ ಮುಖ್ಯಸ್ಥರಾದರೂ ಈ ಬಗ್ಗೆ ದ್ವನಿ ಎತ್ತಬೇಕಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಮೇಯುತ್ತ ಕುಳಿತಿರುವ ಅವರ್ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಾರು. ಯಾರೇನೇ ಹೇಳಲಿ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೋಣದ ಬಗ್ಗೆ ತಲೆಕೆಡಿಸಿಕೊಳ್ಳುವವರ ತಟ್ಟೆಯಲ್ಲಿಯೆ ಕತ್ತೆ ಸತ್ತು ಬಿದ್ದಿದೆ. ಸುದ್ದಿ ಮನೆಯ ದೋಸೆಯೂ ತೂತೆ! ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ಸದಾ ಎಚ್ಚರದ ಸ್ಥಿತಿಯಲ್ಲಿರುವುದನ್ನು ನೋಡಿಕೊಳ್ಳಬೇಕಾದ ಮಾಧ್ಯಮರಂಗವೇ ಕುಲಗೆಟ್ಟುಹೋಗಿದೆ. ಪರಿಶುದ್ಧಗೊಳಿಸಬೇಕಾದ ಗಂಗಾಜಲವೇ ಹೊಲಸುಗಬ್ಬೆದ್ದು ನಾರುತ್ತಿದೆ.

ಪತ್ರಿಕೆ ಎಂದೊಡನೆ ಬಹಳಷ್ಟು ಜನರಿಗೆ `ವಸ್ತುನಿಷ್ಟ’ಎಂಬ ಶಬ್ದ ತಟ್ಟನೆ ತಮ್ಮ ಸ್ಮತಿ ಪಟದಲ್ಲಿ ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಪತ್ರಿಕೋದ್ಯಮ ಇನ್ನು ಬೆಳೆಯುವ ಹಂತದಲ್ಲಿಯೆ ಇರುವಾಗಲೆ ಡಿವಿಜಿಯವರು ಬರೆದಿರುವ `ವೃತ್ತಪತ್ರಿಕೆ’ ಎಂಬ ಪುಸ್ತಕವನ್ನು ಓದಿದರೆ ಪತ್ರಿಕೋದ್ಯಮಕ್ಕೂ ಶಬ್ದಕ್ಕೂ ಇರುವ ನಂಟಿನ ಅರಿವಾಗುತ್ತದೆ. ಪತ್ರಿಕೆಗಳಲ್ಲಿನ ಸುದ್ದಿ ವಸ್ತುನಿಷ್ಟ ಎನ್ನುವ ಕಾರಣಕ್ಕಾಗಿಯೆ ಬಹಳಷ್ಟು ಜನರು ನೂರಕ್ಕೆ ನೂರರಷ್ಟು ನಂಬಿ ಬಿಡುತ್ತಾರೆ. ಆದರೆ ನಂಬುತ್ತಾರೆ ಎಂದು ಗೊತ್ತಿದ್ದೂ ಸುದ್ದಿಕರ್ತರು ಸುಳ್ಳು ಸುದ್ದಿ ಸೃಷ್ಟಿಸುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ.

ಪತ್ರಿಕೋಧ್ಯಮದ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ವಿಜೃಂಭಿಸುವ `ವಸ್ತುನಿಷ್ಟತೆ’ಎನ್ನುವ ಶಬ್ದ, ವಿದ್ಯಾರ್ಥಿ ಮಾದ್ಯಮರಂಗಕ್ಕೆ ಪ್ರಾಯೋಗಿಕವಾಗಿ ಇಳಿದ ನಂತರ ನಿಧಾನಕ್ಕೆ ತನ್ನ ಮರೆಯಾಗುತ್ತಾ ಹೋಗುತ್ತದೆ. ಈ ಮರೆಯಾಗಿಸುವ ಕ್ರಿಯೆಯನ್ನು ಮರಿ ಪತ್ರಕರ್ತ ತನ್ನ ಹಿರಿ ಪತ್ರಕರ್ತರಿಂದಲೆ ಕಲಿಯುತ್ತಾ ಹೋಗುತ್ತಾನೆ. ವಾಸ್ತವ ಪತ್ರಿಕೋದ್ಯಮವೇ ಬೇರೆ, ವಾಸ್ತವವೇ ಬೇರೆ ಎಂದು ಮರಿ ಪತ್ರಕರ್ತನಿಗೆ ಅನಿಸತೊಡಗುತ್ತದೆ. ವೈದ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆಯ ಬಗ್ಗೆ ಪ್ರಮಾಣ ಬೋಧಿಸುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಆ ಸಂಪ್ರದಾಯ ಪತ್ರಿಕೋದ್ಯಮ ಕಾಲೇಜುಗಳಿಗೂ ವಿಸ್ತರಣೆಯಾದಾರೆ ಒಳಿತು ಎನಿಸುತ್ತದೆ.

ಇರುವ ಸುದ್ದಿಗೂ ಮಾಧ್ಯಮಗಳಲ್ಲಿ ಬರುವ ಸುದ್ದಿಗೂ ಬಹುತೇಕ ಸಂದರ್ಭಗಳಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ವರದಿಗಾರನ ಮನೋಸ್ಥಿತಿ, ಹಿನ್ನೆಲೆ, ಪೂರ್ವಾಗ್ರಹಗಳು ಸ್ವಲ್ಪಮಟ್ಟಿಗಾದರೂ ಸುದ್ದಿ ಸಂಪಾದನೆಯಲ್ಲಿ ತಮ್ಮ ಮೂಗನ್ನು ತೂರಿಸಿಯೇ ಬಿಟ್ಟಿರುತ್ತವೆ. ಕೆಲವು ಸಂದರ್ಭದಲ್ಲಿ ವಸ್ತುನಿಷ್ಟತೆ ಸಂಪೂರ್ಣವಾಗಿ ತಿರುಚಲ್ಪಟ್ಟರೂ ಅಡ್ಡಿಯಿಲ್ಲ.

ವರದಿಗಾರ, ಹಿರಿಯ ವರದಿಗಾರ, ಸುದ್ದಿ ಸಂಪಾದಕ-ಸಂಪಾದಕನ ಮೂಲಕ ಹಾದು ಹೋಗುವ ಸುದ್ದಿಗಳು ಪ್ರತಿ ಹಂತದಲ್ಲಿಯೂ ಬದಲಾಗುತ್ತಾ ಹೋಗುತ್ತವೆ. ಕೆಲವೊಮ್ಮೆ ಆಯಾ ಸುದ್ದಿಗಳ ಮೇಲೆ, ಪತ್ರಿಕೆಯ ದೇಯೋದ್ದೇಶ, ಪತ್ರಿಕೆಯ ಮಾಲಿಕನ ಮರ್ಜಿ, ಪ್ರಸರಣ ವಿಭಗ, ಜಾಹಿರಾತು ವಿಭಾಗಗಳು ಪ್ರಭಾವ ಬೀರುತ್ತವೆ. ಈ ಎಲ್ಲ ಹಾದಿಗಳಲ್ಲಿ ಹಾದು ಬಂದ ಮೇಲೆ ಅಳಿದುಳಿದ ಸುದ್ದಿ ಕೆಲವೊಮ್ಮೆ ಸಣ್ಣದಾಗಿ ನಕಾರಾತ್ಮಕಾವಾಗಿಯೂ, ಹಲವೊಮ್ಮೆ ದೊಡ್ಡದಾಗಿ ಸಕಾರಾತ್ಮಕವಾಗಿಯೂ ಪ್ರಕಟನೆಯ ಹಂತಕ್ಕೆ ಬರುತ್ತದೆ. ಅದನ್ನು ಓದುಗ ಓದುತ್ತಾನೆ ಮತ್ತು ನಂಬುತ್ತಾನೆ.

ತಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ವಾಸ್ತವಾಂಶಗಳನ್ನು ಮುಚ್ಚಿಟ್ಟು ಸುದ್ದಿಗಳನ್ನು ಮಾಲಿಕರ, ಜಾಹಿರಾತುದಾರರ, ಸಂಪಾದಕರ ಮರ್ಜಿಗಳಂತೆ (ಓದುಗರ ಮರ್ಜಿಯನ್ನು ಹೊರತು ಪಡಿಸಿ) ತಿರುಚಿ ಬರೆಯುವ ಕೆಲವಾದರೂ ಪ್ರಾಮಾಣಿಕ ಪತ್ರಕರ್ತರಿಗೆ ಒಳಗೊಳಗೆ ಬೇಸರವಿದೆ. ಈ ಬಗ್ಗೆ ಮರುಕವಿದೆ. ಇಂಥವರು ಸುದ್ದಿ ಮನೆಯಿಂದ ಸುದ್ದಿಮನೆಗೆ ಅಲೆದಾಡುತ್ತಲೆ ಇರುತ್ತಾರೆ. ಆದರೆ ಎಲ್ಲ ಸುದ್ದಿ ಮನೆಗಳ ದೊಸೆಯೂ ತೂತೆ ಎಂದು ಅರಿವಾಗುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಆದಾಗ್ಯೂ ತಮ್ಮ ಮಿತಿಯಲ್ಲಿ ಏನಾದರೂ ಮಾಡಬೇಕು ಎಂಬ ತುಡಿತಕ್ಕೆ ಮಿಡಿಯುತ್ತಲೆ ಇರುತ್ತಾರೆ. ಇಂಥ ಪ್ರಾಮಾಣಿಕ ಪತ್ರಕರ್ತರಿಗೆ ಜಾಲತಾಣಗಳು, ಬ್ಲಾಗ್‌ಗಳು ಮರುಭೂಮಿಯಲ್ಲಿ ಕಂಡ ಒಯಸಿಸ್‌ಗಳಾಗಿ ಒದಗುತ್ತಿವೆ. ಸುದ್ದಿ ಮನೆಗಳಲ್ಲಿ ಸುಳ್ಳು-ಪಳ್ಳು ಬರೆದು ಪಾಪ ಮಾಡುವ ಪತ್ರಕರ್ತರು ಜಾಲತಾಣಗಳಲ್ಲಿ ಅನಾಮಧೇಯರ ಹೆಸರಿನನಲ್ಲಿ ಸತ್ಯ ಬರೆದು ಪಾಪ ಪರಿಹಾರ ಮಾಡಿಕೊಳ್ಳುತ್ತಿದ್ದಾರೆ. ಸಂಪಾದಕೀಯ, ಕಾಲಂ 9, ವರ್ತಮಾನದಂತಹ ಕೆಲವು (ನನಗೆ ಗೊತ್ತಿರುವ) ಜಾಲತಾಣಗಳು ಮಾಧ್ಯಮರಂಗದ ಹುಳುಕುಗಳನ್ನು ಹೊರಗೆ ಹಾಕಲಿಕ್ಕೆ ಹುಟ್ಟಿಕೊಂಡಂತೆ ಕೆಲಸ ಮಾಡುತ್ತಿವೆ. ಇನ್ನು ಪತ್ರಿಕಗಳಲ್ಲಿ ತಮ್ಮ ಅಭಿರುಚಿ, ಆಸಕ್ತಿಗಳನ್ನು ತಣಿಸಿಕೊಳ್ಳಲಾಗದ ಹಲವು ಸೃಜನಶೀಲ ಪತ್ರಕರ್ತರು ತಮ್ಮದೊಂದು ಬ್ಲಾಗ್ ಸೃಷ್ಟಿಸಿ ಅವುಗಳಲ್ಲಿ ಕತೆ-ಕವಿತೆಗಳ ಶಿಲ್ಪ ಕೆತ್ತುವುದಕ್ಕೆ ಶುರು ಹಚ್ಚಿಕೊಂಡಿದ್ದಾರೆ.

ಸುದ್ದಿಮನೆ ದೊಸೆಯ ತೂತುಗಳನ್ನು ನೋಡಿ ನೋಡಿ ಬೇಸರಗೊಂಡ ಕೆಲವು ಪತ್ರಕರ್ತರು ಇಂಥದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮೂಗು ತೂರಿಸಲು ಹೋಗದೆ ಸುಮ್ಮನೆ ತಮಗೆ ವಹಿಸಿದ ಅಸೈನ್‌ಮೆಂಟ್‌ಗಳನ್ನು (ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯಂಥವು. ಪೊಲಿಟಿಕಲ್ ರಿಪೋರ್ಟರ್ಸ್ ಭಾಷೆಯಲ್ಲಿ ಹೇಳುವುದಾದರೆ ಚಿಲ್ರೆ ಪಲ್ರೆ ಅಸೈನ್‌ಮೆಂಟ್‌ಗಳು) ಮುಗಿಸಿ ರಂಗಭೂಮಿ, ಸಾಹಿತ್ಯದಂತಹ ಹವ್ಯಾಸಗಳಲ್ಲಿ ಕಳೆದುಹೋಗುತ್ತಾರೆ. ಇಂಥವರಿಗೆ ಹೊಟ್ಟೆ ಹೊರೆಯಲು ಇದೊಂದು ಉದ್ಯೋಗವಷ್ಟೆ. ಬಹುತೇಕ ನಾನು ಇಂಥವರ ಸಾಲಿಗೆ ಸೇರುತ್ತೇನೆ ಎಂದರೆ ಅಡ್ಡಿಯಿಲ್ಲ.

ಯಾಕ್ರೀ, ಎಷ್ಟೊಂದು ಜಾಹಿರಾತು ನೀಡಿದ್ದೇವೆ, ಇಷ್ಟೇನಾ ಸುದ್ದಿ ನಮ್ಮದು?

– ಪರಶುರಾಮ ಕಲಾಲ್

ಜಾಹಿರಾತು ಇಲ್ಲದೇ ಯಾವುದೇ ಪತ್ರಿಕೆಗಳು ಬದಕಲಾರವು. ಒಂದು ಪತ್ರಿಕೆಗೆ ನಾವು ಕೊಡುವ 3 ರೂ. ಏನೇನೂ ಅಲ್ಲ. ಪತ್ರಿಕೆಯನ್ನು ಮನೆಗೆ ಮುಟ್ಟಿಸುವ ಹುಡುಗ, ವಿತರಕರಿಗೆ, ಸಾಗಾಣಿಕೆಗೆ ಅದರ ಎಲ್ಲಾ ಖರ್ಚು ಹೆಚ್ಚುಕಡಿಮೆ ಸಾಟಿಯಾಗಿ ಬಿಡುತ್ತದೆ. ಅಂದರೆ ಪತ್ರಿಕೆಯೊಂದು ಉಚಿತವಾಗಿಯೇ ಪತ್ರಿಕೆಯನ್ನು ವಿತರಿಸುತ್ತದೆ ಎಂದೇ ಅರ್ಥ.

ಕಳೆದ 20 ವರ್ಷಗಳಲ್ಲಿ ಎಲ್ಲದರ ಬೆಲೆಯೂ ಏರಿದೆ. ಪೆಟ್ರೋಲ್ ಅಂತೂ ಜ್ವರದಂತೆ ಏರುತ್ತಲೇ ಇದೆ. ಆದರೆ ದಿನ ಪತ್ರಿಕೆಗಳು ಮಾತ್ರ ಬೆಲೆ ಏರಿಸಿಲ್ಲ. ವಿಜಯ ಕರ್ನಾಟಕ ಆರಂಭವಾದಾಗ ಬೆಲೆ ಏರಿಕೆಯ ಸಮರದಲ್ಲಿ ಎಲ್ಲಾ ಪತ್ರಿಕೆಗಳು ಬೆಲೆ ಇಳಿಸಿಕೊಂಡು ಸ್ಪರ್ಧೆ ನಡೆಸಿದ ಇತಿಹಾಸವೂ ಇದೆ. ಈಗ ಸದ್ಯ ಯಾವ ಪತ್ರಿಕೆಯೂ ಬೆಲೆ ಏರಿಸುವ ಸಾಹಸಕ್ಕೆ ಇಳಿಯುತ್ತಿಲ್ಲ. ಕಾದು ನೋಡುತ್ತಾ ಇವೆ.

ಹೊಸ ಪತ್ರಿಕೆಗಳು ಕಾಲಿಡುತ್ತಾ ಇವೆ. ಅವುಗಳ ಸ್ವರೂಪ, ಬೆಲೆ ಎಲ್ಲವೂ ಮತ್ತೊಮ್ಮೆ ದರ ಸಮರ ನಡೆದು ನಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ.

ಪತ್ರಿಕೆಗಳಿಗೆ ಸರ್ಕಾರ ನೀಡಿರುವ ಜಾಹಿರಾತು ಕುರಿತು “ವರ್ತಮಾನ” ಪ್ರಕಟಿಸಿದೆ. ಇದರ ಬಗ್ಗೆ ಇನ್ನಷ್ಟು ಚರ್ಚೆ ಬೆಳೆಸಲು ಇದನ್ನು ಪೀಠಿಕೆಯಾಗಿ ಬರೆದಿರುವೆ.

ಪತ್ರಿಕೆಗಳಿಗೆ ಜಾಹಿರಾತು ಅನಿವಾರ್ಯ ಅವಲಂಬನೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಒಂದು ಪತ್ರಿಕೆಯು ಮುಖಪುಟದಲ್ಲಿ ಕಾಲುಪುಟ ಜಾಹಿರಾತಿಗೆ ಮಾತ್ರ ಜಾಗ ಮೀಸಲಿಟ್ಟಿತ್ತು. ಒತ್ತಡ ಬಂದಾಗಲೂ ಅದು ರಾಜೀ ಆಗಿರಲಿಲ್ಲ. ಬೇರೆ ಪತ್ರಿಕೆಗಳು ಈ ನಿಯಮ ಉಲ್ಲಂಘಿಸಿ, ಮುಖಪುಟದ ತುಂಬಾ ಜಾಹಿರಾತು ಹಾಕಲು ಆರಂಭಿಸಿದರೂ. ಈಗ ಆ ಪತ್ರಿಕೆಯೂ ಕೂಡಾ ಜಾಹಿರಾತಿಗೆ ಮೈ ತೆರೆದುಕೊಂಡು ಬಿಟ್ಟಿದೆ. ಕೆಲವು ಜಾಹಿರಾತುಗಳನ್ನು ಹಾಕಲು ಈ ಹಿಂದೆ ಒಪ್ಪುತ್ತಿರಲಿಲ್ಲ. ಈಗ ಯಾವ ಜಾಹಿರಾತು ಕೊಟ್ಟರೂ ನಡೆಯುತ್ತೇ ಎಂದೇ ಎಲ್ಲಾ ಜಾಹಿರಾತು ತೆಗೆದುಕೊಳ್ಳಲಾರಂಭಿಸಲಾಗಿದೆ. ಒಂದು ಕಡೆ ಸಿಂಗಲ್ ಕಾಲಂನಲ್ಲಿ “ಜಾಹಿರಾತುವಿನಲ್ಲಿ ಪ್ರಕಟವಾದ ವಿಷಯಕ್ಕೂ ಪತ್ರಿಕೆಗೂ ಯಾವುದೇ ಸಂಬಂಧವಿಲ್ಲ,” ಎಂದು ಪ್ರಕಟಿಸಿ ಈ ಸಂಕಷ್ಟದಿಂದ ಪಾರಾಗಿ ಕೈ ತೊಳೆದುಕೊಂಡಿವೆ.

ರಾಜ್ಯ ಸರ್ಕಾರ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳ ಜಾಹಿರಾತು ಕೊಡುವುದು ಗಣ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ, ಉದಾಹರಣೆಗೆ, ಅಣೆಕಟ್ಟು ಲೋಕಾರ್ಪಣೆ, ಮೈಸೂರು ದಸರಾ ಹಬ್ಬ ಇಂತಹ ಸಂದರ್ಭದಲ್ಲಿ ಜಾಹಿರಾತು ನೀಡುತ್ತದೆ.

ಈ ಜಾಹಿರಾತು ನೀಡುವಲ್ಲಿ ಕೆಲವು ನಿಬಂಧನೆಗಳು ಇವೆ. ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮಾತ್ರ ಬಳಸಬೇಕು ಎನ್ನುವುದು. ಆದರೆ ರಾಜ್ಯ ಸರ್ಕಾರ ಈ ಎಲ್ಲಾ ನಿಬಂಧನೆಗಳನ್ನು ಉಲ್ಲಂಘಿಸಿದೆ. ಬೇಕಾಬಿಟ್ಟಿ ಜಾಹಿರಾತು ನೀಡಿದೆ. ಮುಖ್ಯಮಂತ್ರಿ, ಸಚಿವರ ನಿಂತಿರುವ, ಕುಳಿತಿರುವ ಫೋಟೋಗಳನ್ನು ಹಾಕಿದೆ. ಈ ನಿಬಂಧನೆಗಳನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಎಲ್ಲರಿಗೂ ಜಾಹಿರಾತು ಬೇಕೇ ಬೇಕು.

ಇದು ಒಂದಾದರೆ ಮತ್ತೊಂದು ಸರ್ಕಾರಿ ಇಲಾಖೆಯ ಜಾಹಿರಾತುಗಳು. ಭೂಸ್ವಾಧೀನ ಪ್ರಕ್ರಿಯೆಯ ಜಾಹಿರಾತುಗಳಂತೂ ಎರಡು ಮೂರು ಫೇಜಿಗಳಷ್ಟು ಬರುತ್ತವೆ. ಇವೆಲ್ಲವೂ ಎಲ್ಲಾ ಎಡಿಸನ್ ದರದಲ್ಲಿ ಪ್ರಕಟವಾಗುತ್ತದೆ. ಸರ್ಕಾರಿ ಇಲಾಖೆಯ ಜಾಹಿರಾತು, ಅರೆ ಸರ್ಕಾರಿ ಇಲಾಖೆಯ ಜಾಹಿರಾತುಗಳನ್ನು ಎಲ್ಲಾ ಎಡಿಷನ್‌ನಲ್ಲೂ ಮುದ್ರಿಸಲಾಗುತ್ತದೆ. ಲೋಕಲ್ ಎಡಿಷನ್‌ನಲ್ಲಿ ಹಾಕಿ ಎಂದರೂ ಯಾವ ಪತ್ರಿಕೆಗಳು ಅದನ್ನು ಒಪ್ಪುವುದಿಲ್ಲ. ಜಾಹಿರಾತು ಮುಖ್ಯಸ್ಥರು ನೇರವಾಗಿಯೇ ಎಲ್ಲಾ ಎಡಿಷನ್ ಅಂತಾ ಹೇಳ್ರಿ, ಕೊಡಲಿಲ್ಲ ಅಂದರೆ ದಬಾಯಿಸಿ ಎಂದೇ ಹೇಳುತ್ತಾರೆ.

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

ಒಂದು ಉದಾಹರಣೆಯನ್ನು ಇಲ್ಲಿ ಹೇಳುತ್ತೇನೆ. ಪ್ರಾದೇಶಿಕ ಸಾರಿಗೆ ಇಲಾಖೆಯು ತನ್ನ ಒಂದು ಹಳೇಯ ಜೀಪನ್ನು ಹರಾಜು ಹಾಕಬೇಕಾಯಿತು. ಹರಾಜಿನಲ್ಲಿ ಜೀಪು 30 ಸಾವಿರ ರೂ.ಗೆ ಹೋದರೆ ಅದೇ ಹೆಚ್ಚು. ಆದರೆ ಈ ಜೀಪು ಹರಾಜು ಜಾಹಿರಾತಿಗೆ ನೀಡಿದ ಹಣ 60 ಸಾವಿರಕ್ಕೂ ಅಧಿಕ. ಎಲ್ಲಾ ಪತ್ರಿಕೆಗಳು ಈ ಜಾಹಿರಾತು ಪಡೆಯಲು ತಮ್ಮದೇ ಆದ ಮಾರ್ಗ ಅನುಸರಿಸುತ್ತವೆ. ಬಿಡಿ ಸುದ್ದಿಗಾರರು ಈ ಜಾಹಿರಾತು ಹಿಡಿಯಲು ಹರಸಾಹಸ ಮಾಡುತ್ತಾರೆ. ಕೆಲವರು ಸರ್ಕಾರಿ ಇಲಾಖೆಯ ಗುಮಾಸ್ತರಿಗೆ ಬರುವ ಕಮೀಷನ್‌ನಲ್ಲಿ ಸ್ವಲ್ಪಪಾಲು ನೀಡುತ್ತಾರೆ. ಹಾಗೇ ನೀಡುವಂತೆ ಜಾಹಿರಾತು ಮುಖ್ಯಸ್ಥರು ಹೇಳಿ ಕೊಡುವುದು ಉಂಟು.

ರಾಜ್ಯಮಟ್ಟದ ಲೋಕಲ್ ಪೇಜ್‌ನಲ್ಲಿ ರಾಜ್ಯಮಟ್ಟದ ಸರ್ಕಾರಿ ಜಾಹಿರಾತುಗಳನ್ನು ಹಾಕಲಾಗುತ್ತದೆ. ಇದು ಲೋಕಲ್ ಜಾಹಿರಾತು ಎಂಬ ಭ್ರಮೆ ಹುಟ್ಟಿಸಲಾಗುತ್ತದೆ. ಆದರೆ ಅದು ಬೇರೆ ಎಡಿಷನ್‌ನಲ್ಲೂ ಪುನರಾವರ್ತನೆಯಾಗಿರುತ್ತದೆ. ಎಲ್ಲಾ ಎಡಿಷನ್ ಪೇಜ್‌ಗೆ ಜಾಹಿರಾತು ಬಿಲ್ ನೀಡುವಾಗ ಸಲ್ಲಿಸಲಾಗುತ್ತದೆ.

ರಾಜ್ಯಮಟ್ಟದ ದಿನ ಪತ್ರಿಕೆಯ ಜಿಲ್ಲಾ ಪೇಜುಗಳ ಜಾಹಿರಾತುಗಳ ದರವೂ ಕೂಡಾ ಸ್ಪರ್ಧಾತ್ಮಕವಾಗಿರುತ್ತದೆ. ಜಾಹಿರಾತು ಪುರವಣಿಯಂತೂ 1 ಲಕ್ಷಕ್ಕೆ ನೀಡಲಾಗುತ್ತದೆ. ಎರಡು ಪೇಜ್ ಕಲರ್, ಎರಡು ಪೇಜ್ ಕಪ್ಪು ಬಿಳಪು. ಅದರಲ್ಲಿ ಒಂದು ಪುಟ ಜಾಹಿರಾತು ಕೊಟ್ಟವರ ಗುಣಗಾನಕ್ಕೆ ಮೀಸಲಿರುತ್ತದೆ. ಜನ್ಮದಿನದ ಜಾಹಿರಾತು ಪುರಾವಣಿಯಂತೂ ಲಿಮ್ಕಾ ದಾಖಲೆಯಾಗುವ ಮಟ್ಟಕ್ಕೆ ಮುಟ್ಟಿವೆ. ತಮ್ಮ ತಂದೆ ತೀರಿಕೊಂಡು 12 ವರ್ಷಗಳ ತರುವಾಯ ಒಬ್ಬ ವ್ಯಕ್ತಿಯು ತನ್ನ ತಂದೆಯ ತಿಥಿಗೆ 24 ಪುಟಗಳ ಜಾಹಿರಾತು ನೀಡಿ ವಿಕ್ರಮ ಸ್ಥಾಪಿಸಿದನು. ಮತ್ತೊಬ್ಬರು ತಮ್ಮ ಜನ್ಮದಿನಕ್ಕಾಗಿ 63 ಪುಟಗಳ ಜಾಹಿರಾತು ಪುರವಣಿ ತಂದು ಲಿಮ್ಕಾ ದಾಖಲೆಗೆ ಹೆಸರು ಕಳಿಸಿದ್ದಾರೆ. ಇಲ್ಲಿಗೆ ಬಂದು ನಿಂತಿದೆ ಜಾಹಿರಾತು. ಜಾಹಿರಾತು ಕೊಡುವ ಶಿಕ್ಷಣ ಸಂಸ್ಥೆ, ರಾಜಕಾರಣಿ, ಉದ್ಯಮಿಯ ಬಗ್ಗೆ ವರ್ಷಪೂರ್ತಿ ಅವರ ಫೋಟೋ ಛಾಪಿಸಿ, ಅವರ ಕಾರ್ಯಕ್ರಮದ ವರದಿ, ಕರೆ ನೀಡಿದ ಸುದ್ದಿ ಬರೆಯುತ್ತಾ ಇರಬೇಕು. ಯಾಕ್ರೀ ಎಷ್ಟೊಂದು ಜಾಹಿರಾತು ನೀಡಿದ್ದೇವೆ. ಇಷ್ಟೇನಾ ಸುದ್ದಿ ನಮ್ಮದು. ನಮ್ಮ ಫೋಟೋ ಬಂದಿಲ್ಲ ಯಾಕ್ರಿ ಎಂದು ಕೇಳುವ ಅಧಿಕಾರ ಅವರಿಗೆ ಇದ್ದೇ ಇರುತ್ತದೆ. ಅವರನ್ನು ಸಮಾಧಾನ ಪಡೆಸಲೇಬೇಕು. ಈ ದೊಡ್ಡ ಪತ್ರಿಕೆಗಳ ಜಾಹಿರಾತು ಭರಾಟೆಯಲ್ಲಿ ಸ್ಥಳೀಯ ದಿನ ಪತ್ರಿಕೆಗಳು ಉಸಿರಾಡಲು ಆಗದೇ ಉಬ್ಬಸ ರೋಗಕ್ಕೆ ತುತ್ತಾಗಿ ಬಿಟ್ಟಿವೆ. ಕೆಲವೊಂದು ಸತ್ತೇ ಹೋಗಿವೆ.