Category Archives: ಜಗದೀಶ್ ಕೊಪ್ಪ

ಜೀವನದಿಗಳ ಸಾವಿನ ಕಥನ – 10

– ಡಾ.ಎನ್. ಜಗದೀಶ್ ಕೊಪ್ಪ

ಇದು ಉತ್ಪ್ರೇಕ್ಷೆಯ ಮಾತಲ್ಲ. ಇಂದು ಜಗತ್ತಿನೆಲ್ಲೆಡೆ ಅಣೆಕಟ್ಟಿನ ಯೋಜನೆಯಿಂದ ಸಂತ್ರಸ್ತರಾದ ಬಹುತೇಕ ಮಂದಿ ಹೇಳಹಸರಿಲ್ಲದಂತೆ ಕಣ್ಮರೆಯಾಗಿದ್ದಾರೆ. ಹಲವರನ್ನು ನಗರದ ಕೊಳೆಗೇರಿಗಳು ನುಂಗಿಹಾಕಿದರೆ, ಮತ್ತೆ ಕೆಲವರು ನಗರದಿಂದ ನಗರಕ್ಕೆ ವಲಸೆ ಹೋಗುವ ಕಾರ್ಮಿಕರಾಗಿ ಪರಿವರ್ತನೆ ಹೊಂದಿದ್ದಾರೆ.

ಪುನರ್ವಸತಿ ಪ್ರದೇಶದಲ್ಲಿ ಸರಕಾರಗಳು ನೀಡಿದ ಪರಿಹಾರ ಧನದಿಂದ ಹೊಸ ಬದುಕನ್ನು ರೂಪಿಸಿಕೊಂಡವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವು ಪುನರ್ವಸತಿ ಪ್ರದೇಶಗಳಲ್ಲಿ ಸಂತ್ರಸ್ತರ ಬದಲು ಹೊರಗಿನಿಂದ ಬಂದವರೇ ಬದುಕುತ್ತಿದ್ದಾರೆ. ಒರಿಸ್ಸಾದ ರೆಂಗಿಲಿ ಅಣೆಕಟ್ಟಿನ ಪುನರ್ವಸತಿ ಪ್ರದೇಶದಲ್ಲಿ ಒಂದೇ ಒಂದು ಕುಟುಂಬವೂ ಇಲ್ಲದಿರುವುದು ಸಮೀಕ್ಷೆಯಿಂದ ಧೃಡಪಟ್ಟಿದೆ. ಇಲ್ಲಿನ ಬಹುತೇಕ ಫಲಾನುಭವಿಗಳು ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ.

ಚೀನಾ ಸರಕಾರ ಅಧಿಕೃತವಾಗಿ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ ಚೀನಾದಲ್ಲಿ ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದವರ ಪೈಕಿ ಶೇ.30ರಷ್ಟು ಮಂದಿ ಪರಿಹಾರ ಧನದಿಂದ ಹೊಸಬದುಕು ರೂಪಿಸಿಕೊಂಡಿದ್ದರೆ, ಶೇ.30 ರಷ್ಟು ಮಂದಿ ಸಂತೃಪ್ತ ಬದುಕು ರೂಪಿಸಲು ಹೆಣಗುತ್ತಿದ್ದಾರೆ. ಉಳಿದ ಶೇ.40 ರಷ್ಟು ಮಂದಿ ನಗರಗಳ ಕೊಳಗೇರಿಯಲ್ಲಿ ಬಡತನದ ರೇಖೆಯ ಕೆಳಗೆ ಬದುಕು ದೂಡುತ್ತಿದ್ದಾರೆ.

ಜಾಗತಿಕ ಮಟ್ಟದ ಸಮೀಕ್ಷೆಯಿಂದ ದೃಢ ಪಟ್ಟಿರುವ ಅಸಲಿ ಸಂಗತಿಯೆಂದರೆ, ಈವರೆಗೆ ಅಣೆಕಟ್ಟು ಯೋಜನೆಗಳಿಂದ ನೆಲೆ ಕಳೆದುಕೊಂಡವರ ಪೈಕಿ ಶೆ.80 ರಷ್ಟು ಅರಣ್ಯವಾಸಿಗಳು, ಕೃಷಿ ಕಾರ್ಮಿಕರು, ಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಇವರೆಲ್ಲಾ ಅರಣ್ಯದಲ್ಲಿ ದೊರೆಯುತ್ತಿದ್ದ ಪುಕ್ಕಟೆ ಉರುವಲು ಕಟ್ಟಿಗೆ, ಹಣ್ಣು ಹಂಪಲು, ಗೆಡ್ಡೆ-ಗೆಣಸು, ತಮ್ಮ ಜಾನುವಾರುಗಳಿಗೆ ಯಥೇಚ್ಛವಾಗಿ ದೊರೆಯುತ್ತಿದ್ದ ಮೇವು ಮತ್ತು ನೀರಿನಿಂದ ಬಡತನದ ನಡುವೆಯೂ ಸರಳ ಸಂತೃಪ್ತ ಜೀವನ ಸಾಗಿಸುತ್ತಿದರು. ಆದರೆ ಪರಿಹಾರ ಧನ ಪಡೆದು ಹೊಸ ಸ್ಥಳಗಳಿಗೆ ಸ್ಥಳಾಂತರಗೊಂಡ ನಂತರ ಪ್ರತಿಯೊಂದಕ್ಕೂ ಹಣ ತೆರಬೇಕಾದ ಅಸಹಾಯಕ ಸ್ಥಿತಿಯಲ್ಲಿ, ಇತ್ತ ಬದುಕಲೂ ಆಗದೆ, ಅತ್ತ ಸಾಯಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ.

ಅಣೆಕಟ್ಟು ಯೋಜನೆಗಳಿಂದ ಭೂಮಿ ಕಳೆದುಕೊಂಡವರಲ್ಲಿ ಬಹುತೇಕ ಅನಕ್ಷರಸ್ಥ ರೈತರೇ ಆಗಿರುವುದರಿಂದ, ಭ್ರಷ್ಟ ಅಧಿಕಾರಿಗಳು, ವಕೀಲರು, ರಿಯಲ್ ಎಸ್ಟೇಟ್ ಏಜೆಂಟರುಗಳ ದೊಡ್ಡ ಭೂಮಾಫಿಯಾವೊಂದು ಜಗತ್ತಿನೆಲ್ಲೆಡೆ ಈಗ ತಲೆಯೆತ್ತಿದೆ. ಯೋಜನೆಗಾಗಿ ಸರಕಾರ ನಿಗದಿ ಪಡಿಸಿದ ಭೂ ವಿಸ್ತೀರ್ಣ ಕುರಿತಂತೆ ಅಧಿಸೂಚನೆ ಹೊರಬೀಳುತ್ತಿದ್ದಂತೆ, ಅಣೆಕಟ್ಟು ಸ್ಥಳದ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಆಗಮಿಸುವ ಈ ಮಾಫಿಯಾ ತಂಡದ ಸದಸ್ಯರು, ರೈತರಿಗೆ ಹಣ ನೀಡಿ, ಅವರಿಂದ ಭೂಮಿ ಖರೀದಿಸಿ, ಅಧಿಕಾರಿಗಳೊಂದಿಗೆ ಶಾಮೀಲಾಗಿ, ಬಂಜರು ಭೂಮಿಯನ್ನು ಕೃಷಿ ಭೂಮಿಯೆಂದು ದಾಖಲೆಗಳನ್ನು ಪರಿವರ್ತಿಸಿ, ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.

Almatti-Dam

Almatti Dam

ಆಲಮಟ್ಟಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಬಾಗಲಕೋಟೆ ಸುತ್ತ-ಮುತ್ತ ಈ ರೀತಿ ದಂಧೆ ನಡೆದು ನೂರಾರು ವಕೀಲರು ಕೋಟ್ಯಾಧೀಶರಾಗಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಿಶ್ವಬ್ಯಾಂಕ್, ಕರ್ನಾಟಕ ಮತ್ತು ಕೇಂದ್ರ ಸರಕಾರಕ್ಕೆ ಯೋಜನೆ ಮುಗಿಯುವವರೆಗೂ, ಪುನರ್ವಸತಿ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಬಿ.ಎಂ.ಜಾಮ್‌ದಾರ್ ಎಂಬ ಪ್ರಾಮಾಣಿಕ ಅಧಿಕಾರಿಯನ್ನು ಬದಲಾಯಸಬಾರದೆಂದು ಷರತ್ತು ವಿಧಿಸಿತ್ತು. ಜಾಮ್‌ದಾರ್ ಅವಧಿಯಲ್ಲಿ ನಿಜವಾದ ಫಲಾನುಭವಿಗಳಿಗೆ ಪರ್ಯಾಯ ಭೂಮಿ ಹಾಗೂ ಪರಿಹಾರ ದೊರೆಯಿತು. ಇಂದಿಗೂ ಬಾಗಲಕೋಟೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಎಸ್.ಎಮ್. ಜಾಮ್‌ದಾರ್ ಎಂಬ ಪರಿಶುದ್ಧ ಹಸ್ತದ, ಜಿಗಟು ವ್ಯಕ್ತಿತ್ವದ ಐ.ಎ.ಎಸ್. ಅಧಿಕಾರಿ ದಂತಕತೆಯಾಗಿದ್ದಾರೆ.(ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಇವರ ಪಾತ್ರ ಮಹತ್ವದ್ದು.)

ನೆರೆಯ ಆಂದ್ರದ ಶ್ರೀಶೈಲ ಅಣೆಕಟ್ಟು ಯೋಜನೆಯ ಸಂದರ್ಭದಲ್ಲಿ (1981ರಲ್ಲಿ) ಭೂಮಿ ಕಳೆದುಕೊಂಡ 1 ಲಕ್ಷ ರೈತರಲ್ಲಿ ಪರ್ಯಾಯ ಕೃಷಿ ಭೂಮಿ ಸಿಗದೆ, ಶೇ.80 ರಷ್ಟು ರೈತರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ದೆಹಲಿ ಮೂಲದ ಲೋಕಾಯಣ್ ಸ್ವಯಂ ಸೇವಾ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ.

ಮಧ್ಯ ಪ್ರದೇಶದಲ್ಲಿಯೂ ಹರಿಯುವ ನರ್ಮದಾ ನದಿಗೆ 1980 ರಲ್ಲಿ ಬಾರ್ಗಿ ಅಣೆಕಟ್ಟು ನಿರ್ಮಿಸುವ ಸಂದರ್ಭದಲ್ಲಿ ಅಲ್ಲಿನ ಸರಕಾರ, ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಪ್ರತಿಯೊಂದು ಆದಿವಾಸಿ ಕುಟುಂಬಕ್ಕೆ 5 ಎಕರೆ ಪರ್ಯಾಯ ಭೂಮಿ ಒದಗಿಸುವುದಾಗಿ ಭರವಸೆ ನೀಡಿತ್ತು, ಇದನ್ನು ನಂಬಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಸರಕಾರ ನೀಡಿದ್ದು ಒಂದು ನಿವೇಶನ, ಒಂದಿಷ್ಟು ಹಣ ಸಹಾಯ ಮಾತ್ರ. ಯೋಜನೆಯಿಂದ ಮುಳುಗಡೆಯಾಗುವುದು 29 ಸಾವಿರ ಹೆಕ್ಟೇರ್ ಪ್ರದೇಶ ಎಂದು ಹೇಳಲಾಗಿತ್ತು. ಯೋಜನೆ ಪೂರ್ಣಗೊಂಡು ಜಲಾಶಯದಲ್ಲಿ ನೀರು ಸಂಗ್ರಹವಾದಾಗ, ಅರಣ್ಯ ಹಾಗೂ ಕೃಷಿ ಭೂಮಿ ಸೇರಿ ಮುಳುಗಡೆಯಾದದ್ದು ಒಟ್ಟು 87 ಸಾವಿರ ಹೆಕ್ಟೇರ್ ಪ್ರದೇಶ. ಸರಕಾರದ ಸುಳ್ಳು ಆಶ್ವಾಸನೆಗಳಿಂದ 1 ಲಕ್ಷ 14 ಸಾವಿರ ಮಂದಿ ನಿರ್ಗತಿಕರಾದರು.

ಪುನರ್ವಸತಿಗಾಗಿ ಗೋರಕ್‌ಪುರ ಎಂಬಲ್ಲಿ ಭೂಮಿ ನಿಗದಿ ಪಡಿಸಿ, ಅಲ್ಲಿ ವಸತಿ, ಶಾಲೆ, ಸಮುದಾಯಭವನ, ಆಸ್ಪತ್ರೆ ಎಲ್ಲವೂ ನಿರ್ಮಾಣವಾದವು. ಆದರೆ ಅಲ್ಲಿ ಬಂದು ವಾಸಿಸಿದವರು, ಇತರೆಡೆಯಿಂದ ಬಂದ ವಲಸೆ ಕಾರ್ಮಿಕರು.

ಒಟ್ಟಾರೆ ಈ ಯೋಜನೆಗಳಿಂದ ಸಂತ್ರಸ್ತರಾದವರು ಮತ್ತು ನಿರ್ಗತಿಕರಾದವರು ಕೆಳ ಮಧ್ಯಮ ವರ್ಗದ ರೈತರು, ಆದಿವಾಸಿಗಳು ಮಾತ್ರ. 1994 ರಲ್ಲಿ ತಾನು ಕೈಗೆತ್ತುಕೊಂಡಿದ್ದ 192 ಯೋಜನೆಗಳ ಕುರಿತಂತೆ, ಪುನರ್ವಸತಿ ಕುರಿತು ಪರಾಮರ್ಶಿಸಿದ ವಿಶ್ವಬ್ಯಾಂಕ್, ಪರಿಹಾರ ಹಾಗೂ ಪುನರ್ವಸತಿ ವಿಷಯಗಳಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಂಡಿದೆ. ಆದರೆ ಇದರ ಹೊಣೆಗಾರಿಕೆಯನ್ನು ಸ್ಥಳೀಯ ಸರಕಾರಗಳ ಮೇಲೆ ಹಾಕಿದೆ.

ಸ್ಥಳಾಂತರಗೊಂಡ ರೈತರ ದೊಡ್ಡ ಬವಣೆಯೆಂದರೆ ತಾವು ಪಾರಂಪರಿಕವಾಗಿ ತಮ್ಮ ಕೃಷಿಭೂಮಿಯಲ್ಲಿ ಬೆಳೆಯುತ್ತಿದ್ದ ಬೆಳೆಗಳನ್ನು ಬೆಳೆಯಲಾರದ ಅಸಹಾಯಕ ಸ್ಥಿತಿ. ಇವರಿಗೆ ಸರಕಾರಗಳು ಪರ್ಯಾಯವಾಗಿ ಭೂಮಿ ನೀಡಿದ್ದರೂ ಕೂಡ ಬಹುತೇಕ ಎಲ್ಲಾ ಭೂಮಿಗಳು ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಗಳು.

1992 ರಲ್ಲಿ ವಿಯೆಟ್ನಾಂನ ಹೊಯಾಬಿನ್ ಅಣೆಕಟ್ಟು ಕಟ್ಟಿದ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ಬೆಳೆಯಾಗಿದ್ದ ಭತ್ತದ ಬೆಳೆಯಿಂದ ರೈತರು ವಂಚಿತರಾದರು. ಅವರಿಗೆ ನೀಡಿದ್ದ ಬಂಜರು ಭೂಮಿಯಲ್ಲಿ ಮೆಕ್ಕೆಜೋಳ ಮಾತ್ರ ಬೆಳೆಯಲು ಸಾಧ್ಯವಾಗಿತ್ತು. ಅನ್ನವೇ ಅವರಿಗೆ ಪ್ರಮುಖ ಆಹಾರವಾಗಿದ್ದ ಸಂದರ್ಭದಲ್ಲಿ ಈ ಸಂತ್ರಸ್ತರು ಮೆಕ್ಕೆಜೋಳವನ್ನೇ ತಿಂದು ಬದುಕಬೇಕಾಯಿತು.

ಬಹುತೇಕ ಜಗತ್ತಿನೆಲ್ಲೆಡೆ ಕಂಡು ಬಂದಿರುವ ಒಂದು ಸಾಮ್ಯತೆಯೆಂದರೆ, ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದ ಜನತೆ ಹೊಸ ಜಾಗದ ಪರಿಸರ, ನೀರು, ಆಹಾರಕ್ಕೆ ಹೊಂದಿಕೊಳ್ಳಲಾಗದೆ ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿರುವುದು. ಈ ಕುರಿತಂತೆ ನಮ್ಮ ನರ್ಮದಾ ಅಣೆಕಟ್ಟು ಯೋಜನೆಯ ನಿರಾಶ್ರಿತರ ಕುರಿತ ವರದಿ ಚಿಂತಾಜನಕ ಮಾತ್ರವಲ್ಲ ಭಯಾನಕವೂ ಆಗಿದೆ. ಕರಿಬಾ ಎಂಬ ಮೂಲ ಗ್ರಾಮದಿಂದ ಸ್ಥಳಾಂತರಗೊಂಡ ಜನತೆ, ಕೇವಲ 2 ತಿಂಗಳ ಅವಧಿಯಲ್ಲಿ ನಿದ್ರಾಹೀನತೆ, ಸಿಡುಬುರೋಗಗಳಿಗೆ ತುತ್ತಾಗಿ ಒಂದು ವರ್ಷದಲ್ಲಿ 121 ಮಂದಿ ಮೃತಪಟ್ಟರು. ಇವರಲ್ಲಿ ಬಹಳಷ್ಟು ಮಂದಿ ಮಕ್ಕಳು ಮತ್ತು ವೃದ್ಧರೇ ಆಗಿದ್ದರು.  1984 ರಲ್ಲಿ ಪರ್ವೆಟ ಎಂಬ ಪುನರ್ವಸತಿ ಶಿಬಿರದಲ್ಲಿ 17 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 11 ಮಕ್ಕಳು 4 ವರ್ಷಗಳ ಒಳಗಿನವರಾಗಿದ್ದರು. ಇವುಗಳ ಜೊತೆಗೆ ಬಹುತೇಕ ನಿರಾಶ್ರಿತರಿಗೆ ಅಣೆಕಟ್ಟು ಕೆಳಗಿನ ನದಿ ಪಾತ್ರದ ದಡದಲ್ಲಿ ಪುನರ್ವಸತಿ ಕಲ್ಪಿಸಿದ್ದು, ಜಲಾಶಯದಿಂದ ನೀರು ಹೊರಬಿಟ್ಟ ವೇಳೆ ಉಂಟಾಗುವ ಪ್ರವಾಹದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

The Sardar Sarovar Dam, partially completed in August 2008

ಸ್ಥಳಾಂತರದಿಂದ ಆದ ಮತ್ತೊಂದು ದೊಡ್ಡ ಅನಾಹುತವೆಂದರೆ ಅಗೋಚರವಾಗಿ ಸಂಭವಿಸಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳು. ಇಂದಿಗೂ ಕೂಡ ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದೆ. ಆದರೆ  ಸಂತ್ರಸ್ತರಿಗೆ ಪರಿಹಾರದ ಹಣವನ್ನು ನೀಡುವಾಗ ಪುರುಷರನ್ನು ಮಾತ್ರ ಗಣನೆಗೆ ತೆಗೆದುಕೊಂಡ ಪರಿಣಾಮವಾಗಿ, ಕೆಲವೊಮ್ಮೆ ಯಜಮಾನನ ದುಶ್ಚಟ, ವ್ಯಸನಗಳ ಕಾರಣದಿಂದ ಕುಟುಂಬದ ಮಹಿಳೆಯರು, ಮಕ್ಕಳು ಹಸಿವಿನಿಂದ ಬಳಲುವಂತಾಗಿದೆ. ಜೊತೆಗೆ ತಾವು ಬದುಕಿದ್ದ ಹಳ್ಳಿಯಲ್ಲಿ ಆಚರಿಸುತ್ತಿದ್ದ ಹಬ್ಬ, ಸಾಂಸ್ಕೃತಿಕ ಆಚರಣೆಗಳನ್ನು ಬಿಟ್ಟು, ಹೊಸಜಾಗದಲ್ಲಿ ಇವರಂತಯೇ ಸ್ಥಳಾಂತರಗೊಂಡ ಬೇರೆ ಹಳ್ಳಿಗಳ, ಬೇರೆ ಧರ್ಮ, ಜಾತಿಯ ಅಪರಿಚಿತ ಜನರ ಜೊತೆ ಒಟ್ಟಿಗೆ ಬದುಕಬೇಕಾದ ಸಂದರ್ಭದಲ್ಲಿ ಆವರಿಸಿಕೊಂಡ ಖಿನ್ನತೆಯಿಂದ ಬಳಲುತ್ತಿದ್ದಾರೆ.

ಈ ಕುರಿತಂತೆ ಒರಿಸ್ಸಾದ ರೆಂಗಿಲಿ ಅಣೆಕಟ್ಟು ಯೋಜನೆಯ ನಿರಾಶ್ರಿತರ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿರುವ ಒರಿಸ್ಸಾದ ಸಮಾಜ ಶಾಸ್ತ್ರಜ್ಞರಾದ ಎನ್.ಕೆ. ಬೆಹುರ ಮತ್ತು ಪಿ.ಕೆ.ನಾಯಕ್, ಪರಿಹಾರದ ಹಣ ಹಂಚಿಕೆಯ ಸಂಬಂಧ ಕುಟುಂಬ ಸದಸ್ಯರಲ್ಲಿ ಕಲಹ, ಒಡೆದುಹೋದ ಅವಿಭಕ್ತ ಕುಟುಂಬ ಪದ್ಧತಿ, ಹೊಸ ಪರಿಸರದಲ್ಲಿ ಪೋಷಿಸಿಕೊಂಡು ಬಂದಿದ್ದ ಜಾತಿ ಪದ್ಧತಿಯನ್ನು ಮುಂದುವರಿಸಲಾಗದ ಅಸಹಾಯಕತೆ, ಪತನಗೊಂಡ ಅವರ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಇವೆಲ್ಲವನ್ನೂ ಗುರುತಿಸಿದ್ದಾರೆ. ಹಾಗಾಗಿ ಒಂದು ಯೋಜನೆಯ ಸಫಲತೆಯ ಹಿಂದೆ ಅನೇಕ ವಿಕಾರ ಮತ್ತು ವಿಷಾದದ ಮುಖಗಳಿವೆ ಎಂಬುದನ್ನು ಅಭಿವೃದ್ಧಿಯ ಬಾಲ ಬಡುಕರು ಚಿಂತಿಸಬೇಕಾಗಿದೆ.

 (ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ ಮತ್ತು ರವಿ ಕೃಷ್ಣಾರೆಡ್ಡಿ

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 9

-ಡಾ.ಎನ್.ಜಗದೀಶ್ ಕೊಪ್ಪ

ಅಣೆಕಟ್ಟುಗಳು ಜಗತ್ತಿನೆಲ್ಲೆಡೆ ನದಿಗಳನ್ನು ಮಾತ್ರ ಕೊಲ್ಲಲಿಲ್ಲ. ಇದರ ಜೊತೆಜೊತೆಗೆ ಮನುಕುಲದ ಪೂವರ್ಿಕರು ಎಂದೇ ಜಾಗತಿಕ ಸಮುದಾಯ ನಂಬಿಕೊಂಡು ಬಂದಿದ್ದ, ಅರಣ್ಯವಾಸಿಗಳಾದ ಆದಿವಾಸಿ ಬುಡಕಟ್ಟು ಜನಾಂಗವನ್ನು ಕೂಡ ಹೇಳ ಹಸರಿಲ್ಲದಂತೆ ನಿರ್ನಾಮ ಮಾಡಿದವು.

ಅಣೆಕಟ್ಟುಗಳ ನಿಮರ್ಾಣದ ಇತಿಹಾಸದಲ್ಲಿ, ಗ್ವಾಟೆಮಾಲದಲ್ಲಿ ನಡೆದ ನರಮೇಧ ನಾಗರಿಕ ಜಗತ್ತು ತಲೆ ತಗ್ಗಿಸುವಂತಹದ್ದು. 1980ರ ದಶಕದಲ್ಲಿ ನಡೆದ ಈ ದುರಂತ ಘಟನೆ, ಅಭಿವೃದ್ಧಿಯ ವಾರಸುದಾರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿ ದಾಖಲಾಗಿದೆ.

ಗ್ವಾಟೆಮಾಲದ ರಿಯೊನಿಗ್ರೊ ಎಂಬ ಅರಣ್ಯದಲ್ಲಿನ ಆದಿವಾಸಿಗಳ ವಸತಿ ಪ್ರದೇಶದಲ್ಲಿ ನಡೆದ 376 ಮಂದಿಯ (ಮಹಿಳೆಯರೂ, ಪುರುಷರು, ಮಕ್ಕಳೂ ಸೇರಿದಂತೆ) ನರಮೇಧ ಅಲ್ಲಿನ ಮಾಯ ಅಚಿ ಎಂಬ ಬುಡಕಟ್ಟು ಜನಾಂಗಕ್ಕೆ ಇಂದಿಗೂ ದುಸ್ವಪ್ನವಾಗಿ ಕಾಡುತ್ತಿದೆ.

ವಿಶ್ವಬ್ಯಾಂಕ್, ಇಂಟರ್ ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಇಟಲಿ ಸರಕಾರದ ಧನ ಸಹಾಯದೊಂದಿಗೆ ಗ್ವಾಟೆಮಾಲ ಸರಕಾರ ಚಿಕ್ಸೊಯ್ ಅಣೆಕಟ್ಟು ನಿಮರ್ಿಸಲು 1976 ರಲ್ಲಿ ಯೋಜನೆ ರೂಪಿಸಿದಾಗ ನರಮೇಧದ ಅಧ್ಯಾಯ ಪ್ರಾರಂಭವಾಯಿತು.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe1976 ರಲ್ಲಿ ಸರಕಾರದ ಅಧಿಕಾರಿಗಳು ಹಾಗೂ ವಿದ್ಯುತ್ ಇಲಾಖೆಯ ಇಂಜಿನಿಯರ್ಗಳು ನೇರವಾಗಿ ಹೆಲಿಕಾಪ್ಟರ್ನಲ್ಲಿ ರಿಯೊನಿಗ್ರೊ ಗ್ರಾಮಕ್ಕೆ ಬಂದಿಳಿದು, ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಎಲ್ಲರೂ ಜಾಗ ಖಾಲಿ ಮಾಡಬೇಕು ಎಂದು ಹೇಳಿದಾಗಲೇ ಸರಕಾರ ಮತ್ತು ಆದಿವಾಸಿಗಳ ನಡುವೆ ಸಂಘರ್ಷ ಶುರುವಾಯಿತು. ಸರಕಾರವು ಇವರಿಗೆ ಕೊಡಲು ನಿರ್ಧರಿಸಿದ ಪರಿಹಾರದ ಮೊತ್ತ, ಹೊಸದಾಗಿ ತೋರಿಸಿದ ಸ್ಥಳದ ಬಗ್ಗೆ ಅತೃಪ್ತಿಗೊಂಡ ಅಲ್ಲಿನ ಮೂಲನಿವಾಸಿಗಳು ಸ್ಥಳಾಂತರಗೊಳ್ಳಲು ನಿರಾಕರಿಸಿದರು. ಹಲವಾರು ಬಾರಿ ನಡೆದ ಸಂಧಾನ ಸಭೆಗಳು ವಿಫಲಗೊಂಡ ನಂತರ ಸರಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಯಿತು. ಇದಕ್ಕಾಗಿ ಸರಕಾರ ತುಳಿದ ಹಾದಿ ಮಾತ್ರ ಅನೈತಿಕ ಮಾರ್ಗವಾಗಿತ್ತು. ನಿರಂತರ 4 ವರ್ಷಗಳ ಸಂಘರ್ಷಣೆಯ ನಂತರ, ಸರಕಾರ ಗ್ವಾಟೆಮಾಲದಲ್ಲಿ ನಡೆಯುತ್ತಿದ್ದ ಗೆರಿಲ್ಲಾ ಬಂಡುಕೋರರಿಗೆ ಆಹಾರ, ಆಶ್ರಯ ನೀಡುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಮೂಲನಿವಾಸಿಗಳಿಗೂ ಬಂಡುಕೋರರು ಎಂಬ ಹಣೆಪಟ್ಟಿ ಹಚ್ಚಿತು.

1980ರ ಮಾರ್ಚ್ ತಿಂಗಳಲ್ಲಿ ಆದಿವಾಸಿಗಳ ಗ್ರಾಮಕ್ಕೆ ಬಂದ ಮೂವರು ಮಿಲಿಟರಿ ಪೋಲೀಸರು, ಅಣೆಕಟ್ಟು ನಿಮರ್ಾಣದ ಸ್ಥಳದಿಂದ ಕಬ್ಬಿಣ ಕಳುವಾಗಿದೆ ಎಂಬ ನೆಪದಲ್ಲಿ ಕೆಲವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಬಂಧನಕ್ಕೆ ವಿರೋಧ ವ್ಯಕ್ತ ಪಡಿಸಿದ ನಿವಾಸಿಗಳು ಪ್ರತಿದಾಳಿ ನಡೆಸಿದರು. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳುವ ಭಯದಲ್ಲಿ ಓರ್ವ ಪೋಲೀಸ್ ನದಿಯಲ್ಲಿ ಮುಳುಗಿ ಸತ್ತ.

ಈ ಘಟನೆಯ ನಂತರ, ನಾಲ್ಕು ತಿಂಗಳ ಕಾಲ ತಣ್ಣಗಿದ್ದ ಸರಕಾರ ಮತ್ತೆ ಸಂಧಾನದ ನೆಪದಲ್ಲಿ, ಇಬ್ಬರು ಬುಡಕಟ್ಟು ಜನಾಂಗದ ನಾಯಕರನ್ನು ತಮ್ಮ ದಾಖಲೆಗಳ ಸಮೇತ ಅಣೆಕಟ್ಟು ಸ್ಥಳಕ್ಕೆ ಬರಲು ಆಹ್ವಾನಿಸಿತು. ಅವರಿಂದ ಬಲವಂತವಾಗಿ ಸಹಿ ಪಡೆದ ಸರಕಾರ, ಆ ಇಬ್ಬರು ನಾಯಕರನ್ನು ಒಂದುವಾರ ಕಾಲ ಗುಪ್ತ ಸ್ಥಳದಲ್ಲಿ ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿ ಕೊಂದು ಹಾಕಿತು.

ಈ ಘಟನೆ ನಡೆದ ಎರಡು ವರ್ಷಗಳ ನಂತರ ಸರಕಾರ, 1982ರ ಫೆಬ್ರವರಿ ತಿಂಗಳಿನಲ್ಲಿ 73 ಮಂದಿ ಮಹಿಳೆಯರು, ಪುರುಷರು, ಎಕ್ಯೂಕ್ ಎಂಬ ನಗರಕ್ಕೆ ಬಂದು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಆದೇಶ ಹೊರಡಿಸಿತು. ರಿಯೊನಿಗ್ರೊ ಹಳ್ಳಿಯಿಂದ ಮಿಲಿಟರಿ ಪೋಲೀಸರ ಕಛೇರಿಗೆ ಹೋದ 73 ಮಂದಿಯಲ್ಲಿ ಬದುಕುಳಿದು, ಹಳ್ಳಿಗೆ ಹಿಂದಿರುಗಿದ್ದು ಏಕೈಕ ಮಹಿಳೆ ಮಾತ್ರ. ಗ್ವಾಟೆಮಾಲ ಸರಕಾರದ ಸಿವಿಲ್ ಡಿಫೆನ್ಸ್ ಪೆಟ್ರೊಲ್ ಎಂಬ ಮಿಲಿಟರಿ ಪೋಲಿಸ್ ಪಡೆ ಎಲ್ಲರನ್ನೂ ನಿರ್ಧಕ್ಷಿಣ್ಯವಾಗಿ ಕೊಂದುಹಾಕಿತು. ಇದು ಸಾಲದೆಂಬಂತೆ ಅದೇ 1982ರ ಮಾರ್ಚ್ 13 ರಂದು 10 ಸೈನಿಕರು ಹಾಗೂ 25 ಪೋಲೀಸ್ ತುಕಡಿಯೊಂದಿಗೆ ಬಂದಿಳಿದ ನರಹಂತಕರು ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಬೇಟೆಯಾಡಿದರು. ಗಂಡಸರು ಮತ್ತು ಮಹಿಳೆಯರನ್ನು ಬಂದೂಕಿನ ಹಿಡಿಯಿಂದ, ಲಾಠಿಯಿಂದ ಬಡಿದು ಕೊಂದರೆ, ಮಕ್ಕಳ ಕೊರಳಿಗೆ ಹಗ್ಗ ಹಾಕಿ ಮರಕ್ಕೆ ನೇತುಹಾಕುವುದರ ಮೂಲಕ ಕೊಂದರು. 107 ಹಸುಳೆಗಳನ್ನು ಈ ಸಂದರ್ಭದಲ್ಲಿ ಹೊಸಕಿ ಹಾಕಲಾಯಿತು. ಈ ನರಮೇಧದಲ್ಲಿ ಬದುಕುಳಿದದ್ದು ಇಬ್ಬರು ಮಹಿಳೆಯರು ಮಾತ್ರ.

ನಾಗರಿಕ ಜಗತ್ತಿನ ಸಂಪರ್ಕವಿರಲಿ, ಕಾನೂನು ಮತ್ತು ಮಾನವ ಹಕ್ಕುಗಳ ಬಗ್ಗೆ ಅರಿವಿರದ ಅಮಾಯಕ ಮೂಲನಿವಾಸಿಗಳ ನೋವಿನ ದೌರ್ಜನ್ಯಕ್ಕೆ ಪ್ರತಿಭಟಿಸಿ ಆಗ ಗ್ವಾಟೆಮಾಲದಲ್ಲಿ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಸರಕಾರವನ್ನು ಎದುರು ಹಾಕಿಕೊಳ್ಳುವ ಶಕ್ತಿ ಯಾರಿಗೂ ಇರಲಿಲ್ಲ. ಈ ನರಮೇಧ ಘಟನೆ ಸಂಭವಿಸಿದ ಎರಡು ತಿಂಗಳ ನಂತರ, ಮತ್ತೆ ದಾಳಿನಡೆಸಿದ ಮಿಲಿಟರಿ ಪೋಲಿಸರು 35 ಮಕ್ಕಳು ಸೇರಿದಂತೆ, 95 ಮಂದಿ ಆದಿವಾಸಿಗಳನ್ನು, ತಾವು ಬದುಕಿದ್ದ  ಹಳ್ಳಿಯಲ್ಲೇ ಸಾಲಾಗಿ ನಿಲ್ಲಿಸಿ ಹಣೆಗೆ ಗುಂಡಿಕ್ಕಿ ಕೊಂದರು. ಕೊನೆಗೆ ಗ್ವಾಟೆಮಾಲ ಸರಕಾರದ ವಿರುದ್ಧ ದನಿ ಎತ್ತಿದ ಎಡಪಂಥೀಯ ಪಕ್ಷದ ಕಾರ್ಯಕರ್ತರು, ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿ ಈ ನರಮೇಧದ ಬಗ್ಗೆ ವಿಶ್ವದ ಗಮನ ಸೆಳೆದರು. ಈ ಸಂದರ್ಭದಲ್ಲಿ ಅಮೆರಿಕಾದ ಸ್ವಯಂ ಸೇವಾ ಸಂಸ್ಥೆ ವಿಟ್ನೆಸ್ ಫಾರ್ ದಿ ಪೀಪಲ್ಸ್ ರಂಗಪ್ರವೇಶ ಮಾಡಿ ಈ ಅಣೆಕಟ್ಟು ಯೋಜನೆಗೆ ಹಣಕಾಸಿನ ನೆರವು ನೀಡಿದ ವಿಶ್ವಬ್ಯಾಂಕ್ ಸೇರಿದಂತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ವೇಳೆಗಾಗಲೇ ಹತ್ಯೆಯಾದ 369 ಆದಿವಾಸಿಗಳು ಸೇರಿದಂತೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ 72 ಸಾವಿರ ನಾಗರೀಕರು 1980ರಿಂದ 1984ರ ಅವಧಿಯೊಳಗೆ ಹತ್ಯೆಯಾಗಿದ್ದರು, ಇಲ್ಲವೆ ಕಾಣೆಯಾಗಿದ್ದರು. ಸ್ವಯಂ ಸೇವಾ ಸಂಸ್ಥೆ ನಡೆಸಿದ ತನಿಖೆಯ ಮೂಲಕ ಧೃಡಪಟ್ಟ ಅಸಲಿ ಸಂಗತಿಯೆಂದರೆ ಈ ನರಮೇಧ ಮತ್ತು ಸಂಘರ್ಷದ ಹಿಂದೆ ಸರಕಾರದ ಹಲವಾರು ಅಧಿಕಾರಿಗಳ ಕೈವಾಡವಿದ್ದು, ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾಗುವ ಮಂದಿಗೆ ನೀಡಲಾಗುವ ಪರಿಹಾರವನ್ನು ತಮ್ಮದಾಗಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಗಳೇ ಗಲಾಟೆಗೆ ಪ್ರಚೋದನೆ ನೀಡಿ ಫಲಾನುಭವಿಗಳನ್ನು ಹತ್ಯೆಗೈದಿದ್ದರು.

ಮೂಲತಃ ಈ ಅಣೆಕಟ್ಟು ಯೋಜನೆಯ ರೂಪು ರೇಷೆ ಸುಳ್ಳಿನ ಕಂತೆಗಳ ಮೇಲೆ ರೂಪುಗೊಂಡಿತ್ತು. ಈ ಅಣೆಕಟ್ಟಿನ ನೀಲಿ ನಕಾಶೆಯನ್ನು ಸಿದ್ದಪಡಿಸಿದ್ದು ಜರ್ಮನಿ ಮೂಲದ ಲ್ಯಾಮ್ ಕನ್ಸಾರ್ಟಿಯಮ್ ಎಂಬ ಸಂಸ್ಥೆ. ಇದರ ಅಂಗ ಸಂಸ್ಥೆಯಾದ ಲ್ಯಾಮಿಯರ್ ಇಂಟರ್ನ್ಯಾಷನಲ್ ಎಂಬ ಸಂಸ್ಥೆ ಪರಿಸರ ಹಾನಿ ಹಾಗೂ ಯೋಜನೆಯಿಂದ ನಿರ್ಗತಿಕರಾಗುವ ಸಂಖ್ಯೆ ಕುರಿತಂತೆ ವರದಿ ಸಿದ್ಧಪಡಿಸಿತ್ತು. ಈ ವರದಿಯ ಪ್ರಕಾರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಹಳ್ಳಿಗಳಿಂದ ನಿರ್ವಸತಿಗರಾಗುವ ಸಂಖ್ಯೆ ಕೇವಲ 1,500 ಆದಿವಾಸಿಗಳು ಮಾತ್ರ. ವಾಸ್ತವವಾಗಿ 18 ಸಾವಿರ ಮಂದಿ ಆದಿವಾಸಿಗಳು ಅರಣ್ಯದಲ್ಲಿ ವಾಸವಾಗಿದ್ದರು. ವರದಿಯಲ್ಲಿ ಕೆಲವು ಗ್ರಾಮಗಳಲ್ಲಿ ಜನವಸತಿ ಇಲ್ಲ ಎಂದು ನಮೂದಿಸಲಾಗಿತ್ತು.

ಈ ಅಣೆಕಟ್ಟಿನ ವಿವಾದದಿಂದಾಗಿ ಚಿಕ್ಸೊಯ್ ನರಮೇಧ ಹೆಸರಿನಿಂದ ಪ್ರಸಿದ್ಧವಾದ ಈ ಘಟನೆಯ ಕುರಿತಂತೆ 1979ರಿಂದ 1991ರವರೆಗೆ ಸುಮಾರು 12 ವರ್ಷಗಳ ಕಾಲ ವಿಶ್ವಬ್ಯಾಂಕ್ ಆಗಲಿ ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ ಆಗಲಿ ಇಟಲಿ ಸರಕಾರವಾಗಲಿ ತುಟಿ ಬಿಚ್ಚಲಿಲ್ಲ.

ಅಣೆಕಟ್ಟು ಕಾಮಗಾರಿ ನಡೆದ ಸಮಯದಲ್ಲಿ ವರ್ಷವೊಂದರಲ್ಲಿ ಕನಿಷ್ಠ 3 ತಿಂಗಲ ಕಾಲ ವಿಶ್ವಬ್ಯಾಂಕ್ನ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಕಾಮಗಾರಿಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಆದಿವಾಸಿಗಳ ನರಮೇಧಕ್ಕೆ ಮೌನ ಸಾಕ್ಷಿಯಾಗಿದ್ದರು. 1985ರಲ್ಲಿ ಈ ಅಣೆಕಟ್ಟು ಯೋಜನೆಗೆ ಹಣ ಸಾಲದಾದಾಗ ಇಷ್ಟೆಲ್ಲ ಘಟನೆಗಳು ಸಂಭವಿಸಿದ್ದರೂ ಕೂಡ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ನೀಡಿತು. ಈ ಸಾಲ ನೀಡಿಕೆಯ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿತ್ತು. ಏಕೆಂದರೆ ತಾಂತ್ರಿ ಸಹಾಯ ಮತ್ತು ನಿರ್ಮಾಣ ಗುತ್ತಿಗೆಯನ್ನು ಸ್ವಿಡ್ಜರ್‌ಲ್ಯಾಂಡ್ ಮೂಲದ ಮೋಟಾರ್ ಕೊಲಂಬಸ್ ಹಾಗೂ ಅಮೆರಿಕಾದ ಇಂಟರ್ನ್ಯಾಷನಲ್ ಎಂಬ ಬಹು ರಾಷ್ಟ್ರೀಯ ಕಂಪನಿಗಳು ವಹಿಸಿಕೊಂಡಿದ್ದವು.

ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರೆ 1991ರಲ್ಲಿ ಅಣೆಕಟ್ಟು ಕಾಮಗಾರಿ ಮುಕ್ತಾಯಗೊಂಡಾಗ ಸಾಲ ನೀಡಿದ್ದ ವಿಶ್ವಬ್ಯಾಂಕ್ ತಾನು ನೀಡಿದ್ದ ಮುಕ್ತಾಯ ಪ್ರಮಾಣ ಪತ್ರದಲ್ಲಿ “ಗ್ವಾಟೆಮಾಲದ ಚಿಕ್ಸೊಯ್ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದ 1,500 ಮಂದಿ ಆದಿವಾಸಿಗಳು ಘರ್ಷಣೆಯಲ್ಲಿ ಮೃತಪಟ್ಟಿದ್ದು, ಯೋಜನೆ ವಿಳಂಬವಾಗಲು ಸ್ಥಳೀಯರ ಪ್ರತಿರೋಧ ಕಾರಣ,” ಎಂದು ತಿಳಿಸಿ, ಸಂಘರ್ಷದಲ್ಲಿ ಮೃತಪಟ್ಟ ಪುನರ್ವಸತಿ ಉಸ್ತುವಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳಿಗೆ ಶ್ರದ್ಧಾಂಜಲಿ ಕೂಡ ಅರ್ಪಿಸಿತ್ತು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಅಮೆರಿಕಾದ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ “ವಿಟ್ನೆಸ್ ಫಾರ್ ದಿ ಪೀಪಲ್ಸ್” 1996ರ ತನ್ನ ವಾರ್ಷಿಕ ವರದಿಯಲ್ಲಿ ಘಟನೆಯ ಬಗ್ಗೆ ಹೀಗೆ ನಮೂದಿಸಿತ್ತು: “ಗ್ವಾಟೆಮಾಲ ದುರಂತದ ಬಗ್ಗೆ ವಿಶ್ವಬ್ಯಾಕ್ಗೆ ಅರಿವಿತ್ತು. ಸಾಲವನ್ನು ವಿಸ್ತರಿಸುವ ಸಮಯದಲ್ಲಿ ಅಲ್ಲಿ ನಡೆದ ಹಿಂಸೆ, ನರಮೇಧದ ಬಗ್ಗೆ ಗೊತ್ತಿಲ್ಲವೆಂದರೆ ಇದು ವಿಶ್ವಬ್ಯಾಂಕ್ನ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ. ಈ ಹಿಂಸೆಯ ಹಿಂದೆ ವಿಶ್ವಬ್ಯಾಂಕ್ನ ಕೈವಾಡವಿತ್ತು ಎಂದು ನಾವು ನಂಬಬೇಕಾಗುತ್ತದೆ.”

ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಕನಸಿನ ಯೋಜನೆಗೆ ಅಡ್ಡಿಯಾಗುವ ಅಮಾಯಕರನ್ನು ಹೊಸಕಿ ಹಾಕಲು ಸೂತ್ರದಾರನಂತೆ ತೆರೆಯ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅಮೆರಿಕಾದ ಕೈಗೂಸಿನಂತೆ ವರ್ತಿಸುವ ವಿಶ್ವಬ್ಯಾಂಕಿನ ವಿಶ್ವ ರೂಪಕ್ಕೆ ಗ್ವಾಟೆಮಾಲ ದುರಂತಕ್ಕಿಂತ ಬೇರೊಂದು ಪುರಾವೆ ಬೇಕಿಲ್ಲ.

(ಮುಂದುವರಿಯುವುದು)

ಅಭಿಮಾನಿಗಳು ಮತ್ತು ಅವತಾರಗಳು

-ಡಾ.ಎನ್.ಜಗದೀಶ್ ಕೊಪ್ಪ

ಇದು ನಾವು ಬದುಕುತ್ತಿರವ ವರ್ತಮಾನದ ಸಮಾಜದ ಅಧೋಗತಿಯೋ? ಅಥವಾ ನಮ್ಮ ಜನಸಾಮಾನ್ಯರ ವೈಚಾರಿಕ ಪ್ರಜ್ಞೆಯ ದಾರಿದ್ರ್ಯವೋ? ಅರ್ಥವಾಗುತ್ತಿಲ್ಲ.. ಕಳೆದ 21 ರ ಶುಕ್ರವಾರ ಯಡಿಯೂರಪ್ಪನವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕಿನಕೆರೆಯ 20 ಮಂದಿ ಗ್ರಾಮಸ್ಥರು, ಯಡಿಯೂರಪ್ಪ ಅಭಿಮಾನಿಗಳು ಎಂಬ ಬ್ಯಾನರ್ ಅಡಿಯಲ್ಲಿ ಅಲ್ಲಿನ ಮಣ್ಣನ್ನು ತಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಾಗಿಲಿನಲ್ಲಿ ಕಾದಿದ್ದರು.
ಯಡಿಯೂರಪ್ಪನವರ ಕೈಯಲ್ಲಿ ಆ ಮಣ್ಣನ್ನು ಮುಟ್ಟಿಸಿ ನಂತರ ಹಂಚಿಕೊಳ್ಳುವ ಬಯಕೆ ಅವರದಾಗಿತ್ತು (ಬಹುಶಃ ತಿನ್ನಲಿಕ್ಕೆ ಇರಬಹುದು). ಈ ಅಂಧಾಭಿಮಾನವನ್ನು ಹೇಗೆಂದು ವ್ಯಾಖ್ಯಾನಿಸಲಿ? ನಾಡಿನಲ್ಲಿ ಕಣ್ಣೆದುರೇ ಕರಗಿ ಹೋಗುತ್ತಿರುವ ವೈಚಾರಿಕ ಪ್ರಜ್ಞೆಯ ದುರಂತವೆನ್ನಲೆ?

ತಲೆಯೆತ್ತುತ್ತಿರುವ ಮೂರನೇ ದರ್ಜೆಯ ಸಂಸ್ಕೃತಿಯೆದುರಿನ ನಮ್ಮ ಅಸಹಾಯಕತೆ ಎನ್ನಬೇಕೆ?
ಇತ್ತೀಚಿನ ದಿನಗಳಲ್ಲಿ ಯಾವುದೇ ರಂಗದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿಗಳ ಪಾಲಿಗೆ ಅಭಮಾನಿಗಳು ಎಂಬ ಸಂಗತಿ ವಿಮೋಚನೆಯಾಗದ ಶಾಪದಂತಾಗಿದೆ, ತನ್ನ ಅಭಿಮಾನಿಗಳನ್ನು ದೇವರೆಂದು ಕರೆದ ತಮ್ಮ ಬದುಕಿನುದ್ದಕ್ಕೂ ಆರಾಧಿಸಿದ ಡಾ. ರಾಜ್ ಕುಮಾರ್ ರವರಿಗೆ ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಈ  ಅಭಿಮಾನಿಗಳು ಕೊಟ್ಟ ಬಳುವಳಿ ಎಂತಹದ್ದು ಎಂಬುದು ಕನ್ನಡಿಗರೆಲ್ಲಾ  ಬಲ್ಲ ಸಂಗತಿ. ರಾಜ್ ಕುಟಂಬಕ್ಕೆ ಅಂತಿಮ ಗೌರವ ಸಲ್ಲಿಸಲು ಬಿಡದ ಇಂತಹ ಅಭಿಮಾನಿಗಳು ಜಗತ್ತಿನಲ್ಲಿ ಯಾರಿಗೂ ಬೇಡ ಎಂದು ಆ ಕ್ಷಣದಲ್ಲಿ ಎಲ್ಲರಿಗೂ ಅನಿಸಿದ್ದು ನಿಜ.
ಅಭಿಮಾನವೆಂಬುದು ವ್ಯಕ್ತಿಯೊಬ್ಬನ ಅನನ್ಯ ಸಾಧನೆ ಕುರಿತಂತೆ ಜನ ಸಾಮಾನ್ಯರ ಅಂತರಂಗದ ಆರಾಧನೆ ಹೊರತು, ಅದು ಬಹಿರಂಗ ಪ್ರದರ್ಶನವಲ್ಲ. ಸಂಗೀತ, ನೃತ್ಯ,  ಸಾಹಿತ್ಯ, ಕ್ರೀಡೆ, ರಂಗಭೂಮಿ, ಸಿನಿಮಾ, ಹೀಗೆ ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪೂರ್ವ ಸಾಧನೆ ಮಾಡಿದವರನ್ನು ಮೆಚ್ಚುವುದು, ಅವರ ಬದ್ಧತೆಯ ಬಗ್ಗೆ ಶ್ಲಾಘನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂಸ್ಕೃತಿಕ ಅಭಿರುಚಿ, ಇಂತಹ ಅಭಿಮಾನ ಸಾಧಕರಿಗೆ ತಾವು ಸಾಗುತ್ತಿರುವ ಮಾರ್ಗದಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ತಂದುಕೊಡುವಂತಹದ್ದು..
ಆದರೆ ಇಂದು ನಮ್ಮ ಮುಂದೆ ನಡೆಯುತ್ತಿರುವುದು ದಿಢೀರನೆ ಹುಟ್ಟಿಕೊಂಡ ಕಟೌಟ್ ಹಾಗೂ ಫ್ಲೆಕ್ಸ್ ಸಂಸ್ಕೃತಿಯ  ನಾಯಕರ ಕುರುಡು ಆರಾಧನೆ ಮಾತ್ರ. ಇದು ಸಾಮಾಜಿಕ ಬದುಕಿನ ಸ್ವಾಸ್ಥವನ್ನು ಕೆಡಿಸುವಂತಿದೆ. ಈ ಸಮಾಜಕ್ಕೆ, ಈ ನಾಡಿಗೆ, ಅಥವಾ ಈ ನೆಲಕ್ಕೆ ಈ ರೀತಿಯ ಹುಸಿ ಸಂಸ್ಕೃತಿಯ ನಾಯಕರ ಕೊಡುಗೆ ಏನು? ಅವರ ಅಭಿಮಾನಿಗಳು ಎನಿಸಿಕೊಂಡವರಿಗೂ ಸಹ ಉತ್ತರ ಗೊತ್ತಿಲ್ಲ. ಏಕೆಂದರೆ ಅಭಿಮಾನಗಳ ಸಂಘ ಎಂಬುದು ಕೆಲವರ ಪಾಲಿಗೆ ಲಾಭದಾಯಕ ದಂಧೆಯಾಗಿದೆ.
ಸುಮ್ಮನೆ ಹಾಗೆ ಈ ಪಟ್ಟಿ ಗಮನಿಸಿ, ಯಡಿಯೂರಪ್ಪ ಅಭಿಮಾನಿಗಳಸಂಘ, ವಿದಾನಸೌಧದ ಕಚೇರಿಯಲ್ಲಿ ಸಚಿವ ಸೋಮಣ್ಣ ಪಕ್ಷದ ಕಾರ್ಯಕರ್ತನಿಂದ ಚಪ್ಪಲಿ ಏಟು ತಿಂದದ್ದಕ್ಕೆ, ಪ್ರತಿಭಟಿಸುವ ಸಲುವಾಗಿ ಹುಟ್ಟಿಕೊಂಡ ಸೋಮಣ್ಣ ಅಭಿಮಾನಿಗಳ ಸಂಘ, ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ, ರೇಣುಕಾಚಾರ್ಯ ಅಭಿಮಾನಿಗಳ ಸಂಘ (ಈ ಸಂಘ ಈ ಬಾರಿಯ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಬ್ಯಾನರ್ ಹಿಡಿದು  ಕಲಾವಿದರ ಜೊತೆ  ಸಾಗಿತು.) ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅಭಿಮಾನಿಗಳ ಸಂಘ, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ, ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘ, ಈ ಪಟ್ಟಿಯನ್ನು ನೀವು ರಾಜ್ಯದ ಎಲ್ಲಾ ಶಾಸಕರಿಗೆ, ಸಚಿವರಿಗೆ ಮತ್ತು ಸಂಸದರಿಗೂ ಅನ್ವಯಿಸಬಹುದು. ಯಾವ ಪುರುಷಾರ್ಥಕ್ಕೆ ಈ ಅಭಿಮಾನಿಗಳ ಸಂಘಗಳು?
ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲುಪಾಲಾದ ನಟನೊಬ್ಬನಿಗೆ ಗುಡಿ ಗೋಪುರಗಳ ಮುಂದೆ ಕಾಯಿ ಹೊಡೆದು ಕ ರ್ಪೂರ ಹಚ್ಚಿದ, ಕಣ್ಣೀರ ಧಾರೆ ಸುರಿಸಿದ ಅಭಿಮಾನಿಗಳನ್ನು ನೀವೆಲ್ಲಾ ಗಮನಿಸಿದ್ದೀರಿ ಇದು ಈ ನಾಡಿನ ಸಾಮಾಜಿಕ ಅಥವಾ ಸಾಂಸ್ಕೃತಿಕ ಲೋಕದ  ಬದುಕು ಅಧಃಪತನದ ಪಾತಾಳಕ್ಕೆ ಇಳಿದಿರುವ ಸಂಕೇತವೆ  ಎಂಬುದರ ಕುರಿತು ನಾಡಿನ ಎಲ್ಲಾ ಪ್ರಜ್ಞಾವಂತರು ಗಂಭೀರವಾಗಿ ಆಲೋಚಿಸಬೇಕಾದ ವಿಷಯ.
ಮನುಷ್ಯನೊಬ್ಬನ ವರ್ತನೆಯ  ತಿಕ್ಕಲುತನದ ಪರಮಾವಧಿ ಎನ್ನಬಹುದಾದ ಈ ಅತಿರೇಕ ಹುಟ್ಟಿಕೊಂಡದ್ದು ನಮ್ಮ ನೆರೆಯ ತಮಿಳುನಾಡಿನಲ್ಲಿ. 1950ರ ದಶಕದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯನ್ನು ರಾಮಸ್ವಾಮಿ ಪೆರಿಯಾರ್ ಹುಟ್ಟುಹಾಕಿದ ಸಂದರ್ಭದಲ್ಲಿ ಅವರ ಗರಡಿಯಲ್ಲಿ ಪಳಗಿ  ಪ್ರವರ್ಧಮಾನಕ್ಕೆ ಬಂದ ಸಿ.ಎನ್. ಅಣ್ಣಾದೊರೆ, ಮತ್ತು ಎಂ. ಕರುಣಾನಿಧಿ ತಮ್ಮ ಅಸ್ಖಲಿತ ಹಾಗೂ ಅದ್ಘುತ ತಮಿಳು ಭಾಷಣಗಳಿಂದ ಅಲ್ಲಿನ ಜನರ ಮನಗೆದ್ದರು, ಇದೇ ವೇಳೆ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಹೇರಿದ್ದನ್ನು ತೀವ್ರವಾಗಿ ಖಂಡಿಸಿ, ತಮಿಳು ಭಾಷೆ, ಸಂಸ್ಕೃತಿ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದರು. ಜೊತೆಗೆ ಈ ಇಬ್ಬರು ನಾಯಕರು ತಮಿಳು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದರ ಮೂಲಕ ಚಳುವಳಿಯ ಸಂದೇಶಗಳನ್ನು ತಮಿಳರ ಮನಮುಟ್ಟುವಂತೆ ಮಾಡಿದರು. ಇವರ ಎಲ್ಲಾ ಸಿನಿಮಾಗಳಿಗೆ ಎಂ.ಜಿ.ರಾಮಚಂದ್ರನ್ ನಾಯಕನಾದದ್ದು ವಿಶéೇಷ. ಇದು ಅಲ್ಲಿನ ಜನರಲ್ಲಿ ನಾಯಕರ ಬಗ್ಗೆ ಅಭಿಮಾನ ಬೆಳೆಯಲು ಕಾರಣವಾಯಿತು. ಇವರ ಈ ಹೋರಾಟ 1967ರಲ್ಲಿ ತಮಿಳುನಾಡಿನಲ್ಲಿ ಪ್ರಪಥಮ ಬಾರಿಗೆ ಕಾಂಗ್ರೇಸೇತರ ಡಿ.ಎಂ.ಕೆ. ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿ, ಅಣ್ಣಾದೊರೆ ಮುಖ್ಯಮಂತ್ರಿಯಾದರು. ಆದರೆ ಕೇವಲ ಎರಡು ವರ್ಷದಲ್ಲಿ ಅಂದರೆ 1969ರಲ್ಲಿ ಅಣ್ಣಾದೊರೆ ಆಕಸ್ಮಿಕವಾಗಿ ನಿಧನರಾದಾಗ 26 ಮಂದಿ ತಮಿಳು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 12 ಮಂದಿ ಚಲಿಸುವ ರೈಲಿನಿಂದ ಬಿದ್ದು ಸಾವಿಗೆ ಶರಣಾಗಿದ್ದರು. ಅವರ ಅಂತಿಮ ಸಂಸ್ಕಾರಕ್ಕೆ ಅಂದಿನ ಮದ್ರಾಸ್ ನಗರದ ಮೆರೀನಾ ಬೀಚ್ ಬಳಿ 14 ಲಕ್ಷ ಅಭಿಮಾನಿಗಳು ಸೇರಿದ್ದು ಇಂದಿಗೂ ವಿಶ್ವದಾಖಲೆ.

ಇದೇ ಪರಂಪರೆ 1987ರಲ್ಲಿ ನಟ ಹಾಗೂ ತಮಿಳುನಾಡಿನ  ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ ನಿಧನರಾದಾಗ ಮುಂದುವರೆದು 19 ಮಂದಿ ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 7 ಮಂದಿ ಸೀಮೆಎಣ್ಣೆ ಸುರಿದುಕೊಂಡು ಸಾವನ್ನಪ್ಪಿದರು. ಇಂತಹ ಅತಿರೇಕದ ಅಭಿಮಾನ ಸಿನಿಮಾ ನಟರ ಮೂಲಕ ಮುಂದುವರಿದು, ಅದು ಕನರ್ಾಟಕದಲ್ಲೂ ಹುಚ್ಚು ಹೊಳೆಯಾಗಿ ಹರಿಯುತ್ತಾ ಇದೀಗ ನಮ್ಮ ನಟರುಗಳನ್ನು ಮತ್ತು ರಾಜಕೀಯ ನಾಯಕರನ್ನು ಆವರಿಸಿಕೊಂಡಿದೆ. ಅಭಿಮಾನಿ ಸಂಘವನ್ನು ನೇರವಾಗಿ ತಿರಸ್ಕರಿದ ಏಕೈಕ ದಕ್ಷಿಣಭಾರತದ ನಟನೆಂದರೆ, ಕಮಲ್ ಹಾಸನ್ ಮಾತ್ರ. ಇಂತಹ ವಿವೇಚನೆ ನಮ್ಮ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ. ಜೊತೆಗೆ ಈ ಅಭಿಮಾನಿಗಳ ಅತಿರೇಕಗಳನ್ನು ರೋಚಕತೆಯಿಂದ ಬಿಂಬಿಸುವ ನಮ್ಮ ದೃಶ್ಯ ಮಾಧ್ಯಮಗಳು ಕೂಡ ಒಮ್ಮೆ ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 8

ಡಾ.ಎನ್.ಜಗದೀಶ್ ಕೊಪ್ಪ

ಅಭಿವೃದ್ಧಿ ಮತ್ತು ಆಧುನಿಕತೆ ಮನುಷ್ಯನನ್ನು ನೆಲದ ಸಂಸ್ಕೃತಿಯಿಂದ ದೂರ ಮಾಡಿದ್ದು ಮಾತ್ರವಲ್ಲದೆ, ಪ್ರಕೃತಿಯ ಕೊಡುಗೆಗಳಾದ ನೆಲ- ಜಲ, ಗಾಳಿ, ಗಿಡ-ಮರ ಇವೆಲ್ಲವೂ ತನ್ನ ಉಪಭೋಗಕ್ಕಾಗಿ ಇರುವ ಪುಕ್ಕಟೆ ಸವಲತ್ತುಗಳು ಎಂಬ ಅಹಂ ಅನ್ನು ಅವನೆದೆಗೆ ಕಸಿ ಮಾಡಿಬಿಟ್ಟವು. ಹೀಗಾಗಿ 21 ನೇ ಶತಮಾನದ ನಾಗರಿಕರಿಗೆ ಕಾಡು, ಬೆಟ್ಟ, ಗುಡ್ಡ, ಕಣಿವೆ, ಕಂದರಗಳಲ್ಲಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ನಿಸರ್ಗದ ಮಕ್ಕಳಾದ ಆದಿವಾಸಿಗಳೆಂದರೆ ತಾತ್ಸಾರ.

ಇವತ್ತಿನ ಮೂಲ ಮಂತ್ರವಾಗಿರುವ ಅಭಿವೃದ್ಧಿಯ ನಾಗಾಲೋಟಕ್ಕೆ ಸಿಕ್ಕಿ ತತ್ತರಿಸಿದವರೇ ಈ ಮಣ್ಣಿನ ಮಕ್ಕಳು. ಜಗತ್ತಿನೆಲ್ಲೆಡೆ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಚರಿತ್ರೆಯಲ್ಲಿ ಈ ಮೂಕ ಮಕ್ಕಳ ಅರಣ್ಯ ರೋದನವಿದೆ, ರಕ್ತ ಸಿಕ್ತ ಅಧ್ಯಾಯದ ಭಾಗಗಳಿವೆ.

ಭಾರತ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಈವರೆಗೆ ಅಣೆಕಟ್ಟು ಯೋಜನೆಗಳಿಂದ ನಿರ್ವಸತಿಗರಾದವರಲ್ಲಿ ಶೇ.40 ರಷ್ಟು ಆದಿವಾಸಿ ಜನರಿದ್ದಾರೆ. ನಾವು ಅರಿಯಬೇಕಾದ ಸತ್ಯವೇನೆಂದರೆ, ಭಾರತದ ಜನಸಂಖ್ಯೆಯ ಶೇ.6 ರಷ್ಟು ಮಂದಿ ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳಿದ್ದಾರೆ. ಇಂದಿನ ಬಹುತೇಕ ಅಭಿವೃದ್ಧಿ ಯೋಜನೆಗೆ ಬಲಿಪಶುಗಳಾಗುತ್ತಿರುವವರಲ್ಲಿ ಈ ನತದೃಷ್ಟರು ಮುಂಚೂಣಿಯಲ್ಲಿದ್ದಾರೆ. ಇಂತಹ ದುರಂತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಪಿಲಿಫೈನ್ಸ್ ದೇಶದಲ್ಲಿರುವ 47 ಲಕ್ಷ ಆದಿವಾಸಿಗಳಲ್ಲಿ 58 ಸಾವಿರ ಮಂದಿಯನ್ನು ಹಾಗೂ ವಿಯೆಟ್ನಾಂನಲ್ಲಿ 1 ಲಕ್ಷದ 22 ಸಾವಿರ ಮಂದಿಯನ್ನು ಅಣೆಕಟ್ಟು ಪ್ರದೇಶಗಳಿಂದ ಒಕ್ಕಲೆಬ್ಬಿಸಲಾಗಿದೆ.

ನಾಗರೀಕತೆಯ ಸೋಂಕಿಲ್ಲದೆ, ಆಧುನಿಕ ಬದುಕಿನ ಕ್ರಮಗಳಿಗಿಂತ ವಿಭಿನ್ನವಾಗಿ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಈ ಜನತೆ ತಮ್ಮ ಮೂಲ ನೆಲೆಗಳಿಂದ ಪಲ್ಲಟಗೊಂಡ ನಂತರ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಆಧುನಿಕ ಬದುಕಿನ ಆಹಾರ, ಉಡುಗೆ-ತೊಡುಗೆ, ಆಚಾರ-ವಿಚಾರಗಳಿಗೆ ಹೊಂದಿಕೊಳ್ಳಲಾಗದ ಬುಡಕಟ್ಟುಗಳ ಸಂತತಿ ನಶಿಸಿ ಹೋಗುತ್ತಿದೆ. ಅನೇಕ ಸರಕಾರಗಳು ಇವರಿಗೆ ಮನೆ, ಕೃಷಿಭೂಮಿ ಮುಂತಾದ ಸವಲತ್ತುಗಳನ್ನು ನೀಡಿದ್ದರೂ ತಾವು ಹಿಂದೆ ವಾಸಿಸುತ್ತಿದ್ದ ಭೂಮಿಯ ಬಗ್ಗೆ, ಅಲ್ಲಿನ ಗಿಡ-ಮರಗಳ ಬಗೆಗಿನ ವಿಚಿತ್ರ ಆಕರ್ಷಣೆಯ ಜೊತೆಗೆ ಪ್ರತಿಯೊಂದಕ್ಕೂ ದೈವಿಕ ಶಕ್ತಿ ಇದೆ ಎಂದು ನಂಬಿ ಪೂಜಿಸಿಕೊಂಡು ಬಂದಿದ್ದ ಪದ್ಧತಿ ಇವುಗಳಿಂದ ವಂಚಿತರಾದದ್ದೇ ಬುಡಕಟ್ಟು ಜನಾಂಗಕ್ಕೆ ದೊಡ್ಡ ಆಘಾತವಾಗಿದೆ. ಮಾನಸಿಕ ಒತ್ತಡ ಮತ್ತು ರೋಗ, ಅನೇಕ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿರುವ ಈ ಜನತೆ ನಿಸರ್ಗದಲ್ಲಿ ದೊರೆಯುತ್ತಿದ್ದ ಗಿಡ ಮೂಲಿಕೆಗಳಿಂದ ವಂಚಿತರಾಗಿ ಸಾವಿಗೆ ಶರಣಾಗುತ್ತಿದ್ದಾರೆ.

ಇದಕ್ಕೊಂದು ಜ್ವಲಂತ ಉದಾಹರಣೆ ಎಂದರೆ ಬ್ರೆಜಿಲ್ ದೇಶದ ಮೂಲ ನಿವಾಸಿಗಳ ಅವಸಾನದ ಕಥನ.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boeದಕ್ಷಿಣ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಬ್ರೆಜಿಲ್ ಇಂದಿಗೂ ಮೂಲ ನಿವಾಸಿಗಳ ಸಂಸ್ಕೃತಿಯಿಂದ ಪ್ರೇರಿತವಾದ ನಾಡು. ಅಲ್ಲಿನ ಜನತೆಯ ನಡೆ-ನುಡಿ, ಆಹಾರ, ಉಡುಪು ಎಲ್ಲವುಗಳಲ್ಲಿ ಬುಡಕಟ್ಟು ಜನಾಂಗದ ಸಂಸ್ಕೃತಿ ಮತ್ತು ಆಚರಣೆಗಳು ಮಿಳಿತಗೊಂಡಿವೆ. ಕಳೆದ 40 ವರ್ಷಗಳ ಅವಧಿಯಲ್ಲಿ ಬ್ರೆಜಿಲ್‌ನಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಫಲವಾಗಿ ಉದ್ಭವಿಸಿದ ಸಾಮಾಜಿಕ ಕ್ಷೊಭೆಯೊಂದು ಅಲ್ಲಿನ ಸರಕಾರಕ್ಕೆ ಸವಾಲಾಗಿದೆ.

ಯೂರೋಪಿಯನ್ನರ ಆಕ್ರಮಣ ಹಾಗೂ ವಸಾಹತುಶಾಹಿಯ ದಬ್ಬಾಳಿಕೆ ಇವುಗಳಿಂದ ಪಾರಾಗಿ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷ ಬದುಕಿದ್ದ ವೈಮಿರಿ-ಅಟ್ರೋರಿ ಬುಡಕಟ್ಟು ಜನಾಂಗ ಜಲಾಶಯ ಮತ್ತು ಅಣೆಕಟ್ಟುಗಳಿಂದಾಗಿ ಅತಂತ್ರವಾಗಿದೆ. 1905 ರಲ್ಲಿ 6 ಸಾವಿರದಷ್ಟಿದ್ದ ವೈಮಿರಿ ಮತ್ತು ಅಟ್ರೋರಿ ಜನಾಂಗದ ಜನಸಂಖ್ಯೆ 1985 ರ ವೇಳೆಗೆ ಕೇವಲ 374 ಕ್ಕೆ ಇಳಿದಿತ್ತು. ಈ ಜನಾಂಗವನ್ನು ಉಳಿಸಲು ಬ್ರಜಿಲ್ ಸರಕಾರ ಕಾಡಿನಲ್ಲಿ ಅವರ ಬದುಕಿಗೆ ಪೂರಕವಾಗುವಂತೆ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರೂ ಪ್ರತಿಫಲ ಮಾತ್ರ ಶೂನ್ಯವಾಗಿದೆ. ನದಿಗಳಲ್ಲಿ ದೊರೆಯುತ್ತಿದ್ದ ಮೀನು, ಆಮೆ ಮತ್ತು ಅವುಗಳ ಮೊಟ್ಟೆ ಈ ಜನಾಂಗದ ಪ್ರಮುಖ ಆಹಾರವಾಗಿತ್ತು. ಈಗ ಬದುಕುಳಿದವರ ಸಂಖ್ಯೆ ಬರಿ 97 ಮಾತ್ರ.

ಇದಕ್ಕಿಂತ ಭಿನ್ನವಾದ ಕತೆ ಬಾಂಗ್ಲಾ ದೇಶದ ಚಕ್ಮಾ ಬುಡಕಟ್ಟು ಜನಾಂಗದ್ದು. ಈ ಜನರ ಸಮಸ್ಯೆ ಕೇವಲ ಬಾಂಗ್ಲಾಕ್ಕೆ ಸೀಮಿತವಾಗಿರದೆ ಭಾರತಕ್ಕೂ ಸಮಸ್ಯೆಯಾಗಿದೆ. ಬಾಂಗ್ಲಾದ ಆಗ್ನೇಯ ಪ್ರಾಂತ್ಯದ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದಲ್ಲಿ ಹರಿಯುತ್ತಿರುವ ನದಿಯೊಂದಕ್ಕೆ ಅಮೆರಿಕಾದ ನೆರವಿನೊಂದಿಗೆ ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಿದ ಕಪ್ಟಾಯ್ ಅಣೆಕಟ್ಟಿನಿಂದಾಗಿ 1 ಲಕ್ಷ ಚಕ್ಮಾ ಬುಡಕಟ್ಟು ಜನಾಂಗ ನೆಲೆ ಕಳೆದುಕೊಂಡಿತು. ಸರಕಾರ ಇವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಎಡವಿದ ಪರಿಣಾಮವಾಗಿ ನಗರಕ್ಕೆ ವಲಸೆ ಬಂದ, ಮೂಲತಃ ಬೌದ್ಧ ಧರ್ಮವನ್ನು ಆಚರಿಸಿಕೊಂಡು ಬಂದಿದ್ದ ಚಕ್ಮಾ ಜನಾಂಗಕ್ಕೂ ಮತ್ತು ಸ್ಥಳೀಯ ಮುಸ್ಲಿಮರಿಗೂ ಘರ್ಷಣೆ ಏರ್ಪಟ್ಟು ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಚಕ್ಮಾ ನಿವಾಸಿಗಳು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿ ಬಂದಿದ್ದು ಇವರನ್ನು ವಾಪಸ್ ಕಳಿಸಲಾಗದೆ ಇತ್ತ ಪುನರ್ವಸತಿಯನ್ನು ಕಲ್ಪಿಸಲಾಗದ ಸ್ಥಿತಿಯನ್ನು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಎರಡು ಸರಕಾರಗಳೂ ಎದುರಿಸುತ್ತಿವೆ. ಬಾಂಗ್ಲಾ ಮತ್ತು ಬ್ರೆಜಿಲ್‌ನ ಬುಡಕಟ್ಟು ಜನಾಂಗದ ಕತೆಗಿಂತ ಬೇರೆಯದೇ ಆದ ನೋವಿನ ಕತೆ ಅಮೆರಿಕಾದ ಇತಿಹಾಸದಲ್ಲಿ ದಾಖಲಾಗಿದೆ.

ನಗರದ ಜನತೆಗೆ ಕುಡಿಯುವ ನೀರಿಗಾಗಿ ಅಮೆರಿಕಾದ ಉತ್ತರ ಡಕೋಟ ಪ್ರದೇಶದಲ್ಲಿ ನಿರ್ಮಿಸಿದ ಗ್ಯಾರಿಸನ್ ಅಣೆಕಟ್ಟಿನಿಂದಾಗಿ ಅಮೆರಿಕನ್ ಮೂಲನಿವಾಸಿಗಳಾದ ಮಂಡಾನ್ಸ್, ಅರಿಕಾಸ್, ಹಿಡಸ್ಟಾಸ್ ಜನಾಂಗಗಳನ್ನು ಅಮೆರಿಕಾ ಸರಕಾರ ಅಪೋಷನ ತೆಗೆದುಕೊಂಡಿದೆ.

ಜಲಾಶಯ ನಿರ್ಮಾಣವಾದ ನದಿ ಪಾತ್ರದಲ್ಲಿ ಜಾನುವಾರು ಸಾಕಾಣಿಕೆ ಹಾಗೂ ಮೀನುಗಾರಿಕೆಯನ್ನು ನಂಬಿ ಬದುಕಿದ್ದ ಈ ಜನಾಂಗ ತನ್ನ ಅಸಹಾಯಕ ಸ್ಥಿತಿಯಲ್ಲಿ ಜಲಾಶಯದ ಹಿನ್ನೀರಿನ ಪಕ್ಕದಲ್ಲಿ ವಾಸಿಸಲು ಅನುಮತಿ ಕೇಳಿತು. ಜೊತೆಗೆ ಹಿನ್ನೀರಿನಲ್ಲಿ ಮುಳುಗುವ ಮರಗಳನ್ನು ಕಡಿದು ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಪ್ರಾರ್ಥಿಸಿಕೊಂಡಿತು. ಎಲ್ಲಾ ಬೇಡಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ ಅಮೆರಿಕನ್ ಸರಕಾರ ಬುಡಕಟ್ಟು ಜನಾಂಗದ ಪ್ರತಿನಿಧಿಯಿಂದ ಬಲವಂತವಾಗಿ ಸಹಿ ಪಡೆದು ಅಲ್ಲಿನ ನಿವಾಸಿಗಳನ್ನು, ಜಾನುವಾರುಗಳನ್ನು ಹೊರದಬ್ಬಿತು.

1948 ರಲ್ಲಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ಕಛೇರಿಯಲ್ಲಿ ಅಂದಿನ ಆಂತರಿಕ ಆಡಳಿತ ಕಾರ್ಯದರ್ಶಿ ಕ್ಯಾಪ್‌ ಕೃಗ್ ಎದುರು ತಮ್ಮೆಲ್ಲ ವಸತಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಾರ್ವಭೌಮ ಹಕ್ಕು ಸರಕಾರಕ್ಕಿದೆ ಎಂದು ಬುಡಕಟ್ಟು ಜನಾಂಗದ ನಾಯಕ ಜಾರ್ಜ್ ಗಿಲ್ಲೆಟ್ ಸಹಿ ಮಾಡಿದ ಸನ್ನಿವೇಶವನ್ನು ರೆಸಿನಾರ್ ಎಂಬ ಲೇಖಕ ತನ್ನ “ದಿ ಅಮೆರಿಕನ್ ವೆಸ್ಟ್ ಅಂಡ್ ಇಟ್ಸ್ ಡಿಸಪ್ಪಿಯರಿಂಗ್ ವಾಟರ್” ಎಂಬ ಕೃತಿಯಲ್ಲಿ ಈ ರೀತಿ ಬಣ್ಣಿಸಿದ್ದಾನೆ. “ಕಾರ್ಯದರ್ಶಿ ಕೃಗ್ ಎದುರು ತಲೆ ಬಗ್ಗಿಸಿ ನಿಂತಿದ್ದ ದೃಢವಾದ ಮೈಕಟ್ಟಿನ ಬುಡಕಟ್ಟು ಜನಾಂಗದ ನಾಯಕ ಒಪ್ಪಂದ ಪತ್ರಕ್ಕೆ ಭಾರವಾದ ಹೃದಯದಿಂದ ಸಹಿ ಮಾಡಿದನು. ಸಹಿಗೆ ಮುನ್ನ ಇಂದಿನಿಂದ ನಮ್ಮ ಜನಾಂಗದ ಭವಿಷ್ಯಕ್ಕೆ ಬೆಳಕೆಂಬುದು ಕನಸಿನ ಮಾತು ಎಂದು ನೊಂದು ನುಡಿದನು. ಸಹಿ ಮಾಡಬೇಕಾದ ಮೇಜಿನ ಮೇಲೆ ಡಜನ್‌ ಗಟ್ಟಲೆ ಪೆನ್‌ಗಳನ್ನು ಇಡಲಾಗಿತ್ತು. ಅವುಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ತನ್ನ ಎಡಗೈ ಹಸ್ತದಿಂದ ಮುಖವನ್ನು ಮುಚ್ಚಿಕೊಂಡು ಬಿಕ್ಕಿ-ಬಿಕ್ಕಿ ಅಳುತ್ತಾ ಬಲಗೈನಲ್ಲಿ ಪತ್ರಕ್ಕೆ ಸಹಿ ಮಾಡಿದನು”.

ಮೊಂಟಾನ್ ವಿಶ್ವವಿದ್ಯಾಲಯದ ಅಮೆರಿಕನ್ ಮೂಲ ನಿವಾಸಿಗಳ ಅಧ್ಯಯನ ಕೇಂದ್ರದ ನಿರ್ದೇಶಕ ಪ್ಯಾಟ್ರಿಕ್ ಮೋರಿಸ್, ಅಮೆರಿಕನ್ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಉತ್ತರ ಡಕೋಟ ಪ್ರಾಂತ್ಯದಲ್ಲಿ ಹರಿಯುವ ಮಿಸ್ಸೊರಿ ನದಿ ಶೇ.70 ರಷ್ಟು ಮೂಲನಿವಾಸಿಗಳಿಗೆ ಮೀನುಗಾರಿಕೆ ಹಾಗೂ ಜಾನುವಾರು ಸಾಕಾಣಿಕೆ ಮೂಲಕ ಉದ್ಯೋಗ ಒದಗಿಸಿತ್ತು ಎಂದಿದ್ದಾರೆ.

ಕೊಲಂಬಿಯಾ ಪ್ರಾಂತ್ಯದಲ್ಲಿ ಅಮೆರಿಕನ್ನರು ಸಾಲ್ಮನ್ ಜಾತಿಯ ಮೀನುಗಳ ಸಂತತಿ ನಾಶದ ಪಾಪಕ್ಕೂ ಹೊಣೆಯಾಗಿದ್ದಾರೆ. ಶಿಲ್ಲಿನ ನದಿಯೊಂದಕ್ಕೆ ಕಟ್ಟಲಾದ ಗ್ರ್ಯಾಂಡ್ ಕೌಲಿ ಎಂಬ ಅಣೆಕಟ್ಟಿನಿಂದಾಗಿ ಮೀನಿನ ಸಂತತಿ ನಶಿಸಿಹೋಯಿತು.

1940 ರ ಜೂನ್ 17 ರಂದು ಪ್ರಥಮ ಬಾರಿಗೆ ಅಣೆಕಟ್ಟಿನಿಂದ ನೀರು ಹರಿಸಿದಾಗ, ತಾವು ಹಿಂದೆ ಮೀನಿನ ಶಿಕಾರಿ ಮಾಡುತ್ತಿದ್ದ ಕೆಟಲ್ ಜಲಪಾತದ ಬಳಿ ನೆಲದ ಮೂಲ ನಿವಾಸಿಗಳು ಕಳೆದುಹೋದ ತಮ್ಮ ಬದುಕನ್ನು ನೆನೆಯುತ್ತಾ ನದಿಗೆ ಅಶ್ರುಧಾರೆಯನ್ನು ಅರ್ಪಿಸಿದರು.

ಇದು ಬದುಕಿನ ವ್ಯಂಗ್ಯವೋ ಅಥವಾ ದುರಂತವೊ ನೀವೇ ನಿರ್ಧರಿಸಿ. 1951 ರಲ್ಲಿ ಅಮೆರಿಕಾ ಸರಕಾರ ಮೂಲನಿವಾಸಿಗಳಿಗೆ ಪರಿಹಾರವಾಗಿ ದಾಖಲೆಯ 5 ಕೋಟಿ 40 ಲಕ್ಷ ಡಾಲರ್ ಹಣ ಹಾಗೂ ವಾರ್ಷಿಕ ಪರಿಹಾರವಾಗಿ 1.5 ಕೋಟಿ ಡಾಲರ್ ನೆರವು ಘೋಷಿಸಿತ್ತು. ನೋವಿನ ಸಂಗತಿಯೆಂದರೆ ಈ ಪರಿಹಾರವನ್ನು ಪಡೆಯಲು ಬುಡಕಟ್ಟು ಜನಾಂಗದ ಒಂದೇ ಒಂದು ಜೀವ ಕೂಡ ಉಳಿದಿರಲಿಲ್ಲ.

(ಚಿತ್ರಕೃಪೆ: ವಿಕಿಪೀಡಿಯ)

(ಮುಂದುವರಿಯುವುದು)

ಚಂದ್ರೇಗೌಡರಿಗೆ ಕೆಲವು ಪ್ರಶ್ನೆಗಳು

ಡಾ. ಎನ್. ಜಗದೀಶ್ ಕೊಪ್ಪ

ಇದು ನಮ್ಮ ಸಾಮಾಜಿಕ ಅಥವಾ ರಾಜಕೀಯ ಅದಃಪತನವೆಂದರೂ ತಪ್ಪಾಗಲಾರದು. ಸಂಸದ ಹಾಗೂ ಕರ್ನಾಟಕ ಕಂಡ ಹಿರಿಯ ಮುತ್ಸದ್ದಿ ರಾಜಕಾರಣಿ ನಿನ್ನೆ ಮಂಗಳವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿ ನಡೆಸಿ, ದೆಹಲಿಯ ತಿಲಕ್ ನಗರ ಪೋಲಿಸ್ ಠಾಣೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರಧ್ವಜ ಇವರ ವಿರುದ್ಧ ದೂರು ದಾಖಾಲಾಗಿರುವುದರಿಂದ ರಾಜಿನಾಮೆ ಕೊಡಬೇಕೆಂದು ಅಪ್ಪಣೆ ಹೊರಡಿಸಿದ್ದಾರೆ. ಅವರ ಮಾತು ನಿಜ. ನೈತಿಕ ಪ್ರಜ್ಙೆ ಇರುವ ಯಾವುದೇ ರಾಜಕಾರಣಿ ರಾಜಿನಾಮೆ ನೀಡಬೇಕು.

ಮಾನ್ಯ ಚಂದ್ರೇಗೌಡರು ಇಂತಹ ರಾಜಾಜ್ಞೆ ನೀಡುವ ಮುನ್ನ ತಾವು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದಲ್ಲಿ, ಆರೋಪ ಹೊತ್ತು ಜೈಲು ಪಾಲಾದವರ ಎಷ್ಟು ಮಂದಿಯ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಅಥವಾ ಆರೋಪ ಹೊತ್ತವರ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಎಂಬುದಕ್ಕೆ ಉತ್ತರಿಸಬೇಕು. ಈ ಸಂದರ್ಭದಲ್ಲಿ ಯಾವೊಬ್ಬ ಪತ್ರಕರ್ತ ಈ ಕುರಿತಂತೆ ಪ್ರಶ್ನಿಸಲಿಲ್ಲ. ಇದು ಈ ತಲೆಮಾರಿನ ಪತ್ರಕರ್ತರಿಗೆ ತಮ್ಮ ವೃತ್ತಿಯ ಬಗ್ಗೆ ಇರುವ ಅಜ್ಞಾನವೊ? ಅಥವಾ ಪ್ರಶ್ನೆ ಕೇಳಲು ಹಿಂಜರಿಕೆಯೋ? ನನಗೆ ಅರ್ಥವಾಗುತ್ತಿಲ್ಲ.

ತನ್ನ ಮೂರು ದಶಕಗಳ ರಾಜಕೀಯ ಜೀವನವನ್ನು ಕಾಂಗ್ರೆಸ್  ಪಕ್ಷದಲ್ಲಿ ಕಳೆದು ಶಾಸಕನಾಗಿ, ಸಂಸದನಾಗಿ, ವಿದಾನಸಭೆಯ ಒಳ್ಳೆಯ ಸ್ಪೀಕರ್ ಹೆಸರು ಮಾಡಿದ್ದ ಚಂದ್ರೇಗೌಡರು ರಾಜಕೀಯವಾಗಿ ಕಸದಬುಟ್ಟಿಗೆ ಸೇರಿದ ಸಂದರ್ಭದಲ್ಲಿ,, ಯಡಿಯೂರಪ್ಪ ಕರೆದು ಬೆಂಗಳೂರು ಉತ್ತರ ಪಾರ್ಲಿಮೆಂಟ್ ಕ್ಷೇತ್ರಕ್ಕೆ ಸೀಟು ಕೊಟ್ಟು ಗೆಲ್ಲಿಸಿದ ಮಾತ್ರಕ್ಕೆ ಈ ರೀತಿಯ ಬೌದ್ಧಿಕ ದಿವಾಳಿತನಕ್ಕೆ ಓಳಗಾಗಬಾರದಿತ್ತು.

ಕಳೆದ ಹತ್ತು ವರ್ಷದ ಹಿಂದಿನ ಮಾತು ಇದು. ಮಂಡ್ಯ ಜಿಲ್ಲೆಯ ಸ್ವಾತಂತ್ರೈ ಹೋರಾಟಗಾರ ಹಾಗೂ ಜಿಲ್ಲೆ ಹಿರಿಯ ಪತ್ರಕರ್ತ ಪಿ.ಎನ್. ಜವರಪ್ಪಗೌಡ ಹೆಸರಿನಲ್ಲಿ (ಕ್ರೀಡಾಪಟು ವಿಕಾಸ್ ಗೌಡರ ಅಜ್ಜ) ನಾವು ಗೆಳೆಯರು 10 ಸಾವಿರ ರೂ. ಗಳ ಪ್ರಶಸ್ತಿ ಸ್ಥಾಪಿಸಿದೆವು, ಮೊದಲ ವರ್ಷ ಹಿರಿಯ ಪತ್ರಕರ್ತ ಜಯಶೀಲರಾವ್ ಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ  ಇದೇ ಚಂದ್ರೇಗೌಡ ಆಡಿದ ಮಾತುಗಳು ಇವು : “ಇವತ್ತಿನ ರಾಜಕಾರಣಿಗಳು ಮುಖವಾಡತೊಟ್ಟಿಕೊಂಡು ಬದುಕುತಿದ್ದಾರೆ.”

ಇವತ್ತಿನ ಚಂದ್ರೇಗೌಡರು ಯಾವ ಮುಖವಾಡ ತೊಟ್ಟು ಬದುಕುತಿದ್ದಾರೆ?

ಇನ್ನು ನಮ್ಮ ಮಠಾದೀಶರು ಯಡಿಯೂರಪ್ಪನ ವಿತರಿಸಿದ ಪ್ರಸಾದ ತಿಂದು ಈ ರೀತಿ ಬೀದಿಗೆ ಬೀಳಬಾರದಿತ್ತು. ಇವರೆಲ್ಲಾ ಒಮ್ಮೆ ಅಲ್ಲಮಪ್ರಭುವಿನ ಈ ವಚನ ಓದಿಕೊಳ್ಳುವುದು ಒಳಿತು.

ಮಠವೇಕೊ, ಪರ್ವತವೇಕೊ
ಜನವೇಕೊ, ನಿರ್ಜವೇಕೊ
ಚಿತ್ತ ಸಮಾಧಾನವುಳ್ಳ ಶರಣಂಗೆ
ಮತ್ತೆ ಹೊರಗಣ ಚಿಂತೆ, ಧ್ಯಾನ ಮೌನ
ಜಪ ತಪವೇಕೊ ತನ್ನ ತಾನರಿದ ಶರಣಂಗೆ ಗುಹೇಶ್ವರಾ