Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 8

ಡಾ.ಎನ್.ಜಗದೀಶ್ ಕೊಪ್ಪ

ಅಭಿವೃದ್ಧಿ ಮತ್ತು ಆಧುನಿಕತೆ ಮನುಷ್ಯನನ್ನು ನೆಲದ ಸಂಸ್ಕೃತಿಯಿಂದ ದೂರ ಮಾಡಿದ್ದು ಮಾತ್ರವಲ್ಲದೆ, ಪ್ರಕೃತಿಯ ಕೊಡುಗೆಗಳಾದ ನೆಲ- ಜಲ, ಗಾಳಿ, ಗಿಡ-ಮರ ಇವೆಲ್ಲವೂ ತನ್ನ ಉಪಭೋಗಕ್ಕಾಗಿ ಇರುವ ಪುಕ್ಕಟೆ ಸವಲತ್ತುಗಳು ಎಂಬ ಅಹಂ ಅನ್ನು ಅವನೆದೆಗೆ ಕಸಿ ಮಾಡಿಬಿಟ್ಟವು. ಹೀಗಾಗಿ 21 ನೇ ಶತಮಾನದ ನಾಗರಿಕರಿಗೆ ಕಾಡು, ಬೆಟ್ಟ, ಗುಡ್ಡ, ಕಣಿವೆ, ಕಂದರಗಳಲ್ಲಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ನಿಸರ್ಗದ ಮಕ್ಕಳಾದ ಆದಿವಾಸಿಗಳೆಂದರೆ ತಾತ್ಸಾರ.

ಇವತ್ತಿನ ಮೂಲ ಮಂತ್ರವಾಗಿರುವ ಅಭಿವೃದ್ಧಿಯ ನಾಗಾಲೋಟಕ್ಕೆ ಸಿಕ್ಕಿ ತತ್ತರಿಸಿದವರೇ ಈ ಮಣ್ಣಿನ ಮಕ್ಕಳು. ಜಗತ್ತಿನೆಲ್ಲೆಡೆ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಚರಿತ್ರೆಯಲ್ಲಿ ಈ ಮೂಕ ಮಕ್ಕಳ ಅರಣ್ಯ ರೋದನವಿದೆ, ರಕ್ತ ಸಿಕ್ತ ಅಧ್ಯಾಯದ ಭಾಗಗಳಿವೆ.

ಭಾರತ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಈವರೆಗೆ ಅಣೆಕಟ್ಟು ಯೋಜನೆಗಳಿಂದ ನಿರ್ವಸತಿಗರಾದವರಲ್ಲಿ ಶೇ.40 ರಷ್ಟು ಆದಿವಾಸಿ ಜನರಿದ್ದಾರೆ. ನಾವು ಅರಿಯಬೇಕಾದ ಸತ್ಯವೇನೆಂದರೆ, ಭಾರತದ ಜನಸಂಖ್ಯೆಯ ಶೇ.6 ರಷ್ಟು ಮಂದಿ ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳಿದ್ದಾರೆ. ಇಂದಿನ ಬಹುತೇಕ ಅಭಿವೃದ್ಧಿ ಯೋಜನೆಗೆ ಬಲಿಪಶುಗಳಾಗುತ್ತಿರುವವರಲ್ಲಿ ಈ ನತದೃಷ್ಟರು ಮುಂಚೂಣಿಯಲ್ಲಿದ್ದಾರೆ. ಇಂತಹ ದುರಂತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಪಿಲಿಫೈನ್ಸ್ ದೇಶದಲ್ಲಿರುವ 47 ಲಕ್ಷ ಆದಿವಾಸಿಗಳಲ್ಲಿ 58 ಸಾವಿರ ಮಂದಿಯನ್ನು ಹಾಗೂ ವಿಯೆಟ್ನಾಂನಲ್ಲಿ 1 ಲಕ್ಷದ 22 ಸಾವಿರ ಮಂದಿಯನ್ನು ಅಣೆಕಟ್ಟು ಪ್ರದೇಶಗಳಿಂದ ಒಕ್ಕಲೆಬ್ಬಿಸಲಾಗಿದೆ.

ನಾಗರೀಕತೆಯ ಸೋಂಕಿಲ್ಲದೆ, ಆಧುನಿಕ ಬದುಕಿನ ಕ್ರಮಗಳಿಗಿಂತ ವಿಭಿನ್ನವಾಗಿ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಈ ಜನತೆ ತಮ್ಮ ಮೂಲ ನೆಲೆಗಳಿಂದ ಪಲ್ಲಟಗೊಂಡ ನಂತರ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಆಧುನಿಕ ಬದುಕಿನ ಆಹಾರ, ಉಡುಗೆ-ತೊಡುಗೆ, ಆಚಾರ-ವಿಚಾರಗಳಿಗೆ ಹೊಂದಿಕೊಳ್ಳಲಾಗದ ಬುಡಕಟ್ಟುಗಳ ಸಂತತಿ ನಶಿಸಿ ಹೋಗುತ್ತಿದೆ. ಅನೇಕ ಸರಕಾರಗಳು ಇವರಿಗೆ ಮನೆ, ಕೃಷಿಭೂಮಿ ಮುಂತಾದ ಸವಲತ್ತುಗಳನ್ನು ನೀಡಿದ್ದರೂ ತಾವು ಹಿಂದೆ ವಾಸಿಸುತ್ತಿದ್ದ ಭೂಮಿಯ ಬಗ್ಗೆ, ಅಲ್ಲಿನ ಗಿಡ-ಮರಗಳ ಬಗೆಗಿನ ವಿಚಿತ್ರ ಆಕರ್ಷಣೆಯ ಜೊತೆಗೆ ಪ್ರತಿಯೊಂದಕ್ಕೂ ದೈವಿಕ ಶಕ್ತಿ ಇದೆ ಎಂದು ನಂಬಿ ಪೂಜಿಸಿಕೊಂಡು ಬಂದಿದ್ದ ಪದ್ಧತಿ ಇವುಗಳಿಂದ ವಂಚಿತರಾದದ್ದೇ ಬುಡಕಟ್ಟು ಜನಾಂಗಕ್ಕೆ ದೊಡ್ಡ ಆಘಾತವಾಗಿದೆ. ಮಾನಸಿಕ ಒತ್ತಡ ಮತ್ತು ರೋಗ, ಅನೇಕ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿರುವ ಈ ಜನತೆ ನಿಸರ್ಗದಲ್ಲಿ ದೊರೆಯುತ್ತಿದ್ದ ಗಿಡ ಮೂಲಿಕೆಗಳಿಂದ ವಂಚಿತರಾಗಿ ಸಾವಿಗೆ ಶರಣಾಗುತ್ತಿದ್ದಾರೆ.

ಇದಕ್ಕೊಂದು ಜ್ವಲಂತ ಉದಾಹರಣೆ ಎಂದರೆ ಬ್ರೆಜಿಲ್ ದೇಶದ ಮೂಲ ನಿವಾಸಿಗಳ ಅವಸಾನದ ಕಥನ.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boeದಕ್ಷಿಣ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಬ್ರೆಜಿಲ್ ಇಂದಿಗೂ ಮೂಲ ನಿವಾಸಿಗಳ ಸಂಸ್ಕೃತಿಯಿಂದ ಪ್ರೇರಿತವಾದ ನಾಡು. ಅಲ್ಲಿನ ಜನತೆಯ ನಡೆ-ನುಡಿ, ಆಹಾರ, ಉಡುಪು ಎಲ್ಲವುಗಳಲ್ಲಿ ಬುಡಕಟ್ಟು ಜನಾಂಗದ ಸಂಸ್ಕೃತಿ ಮತ್ತು ಆಚರಣೆಗಳು ಮಿಳಿತಗೊಂಡಿವೆ. ಕಳೆದ 40 ವರ್ಷಗಳ ಅವಧಿಯಲ್ಲಿ ಬ್ರೆಜಿಲ್‌ನಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಫಲವಾಗಿ ಉದ್ಭವಿಸಿದ ಸಾಮಾಜಿಕ ಕ್ಷೊಭೆಯೊಂದು ಅಲ್ಲಿನ ಸರಕಾರಕ್ಕೆ ಸವಾಲಾಗಿದೆ.

ಯೂರೋಪಿಯನ್ನರ ಆಕ್ರಮಣ ಹಾಗೂ ವಸಾಹತುಶಾಹಿಯ ದಬ್ಬಾಳಿಕೆ ಇವುಗಳಿಂದ ಪಾರಾಗಿ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷ ಬದುಕಿದ್ದ ವೈಮಿರಿ-ಅಟ್ರೋರಿ ಬುಡಕಟ್ಟು ಜನಾಂಗ ಜಲಾಶಯ ಮತ್ತು ಅಣೆಕಟ್ಟುಗಳಿಂದಾಗಿ ಅತಂತ್ರವಾಗಿದೆ. 1905 ರಲ್ಲಿ 6 ಸಾವಿರದಷ್ಟಿದ್ದ ವೈಮಿರಿ ಮತ್ತು ಅಟ್ರೋರಿ ಜನಾಂಗದ ಜನಸಂಖ್ಯೆ 1985 ರ ವೇಳೆಗೆ ಕೇವಲ 374 ಕ್ಕೆ ಇಳಿದಿತ್ತು. ಈ ಜನಾಂಗವನ್ನು ಉಳಿಸಲು ಬ್ರಜಿಲ್ ಸರಕಾರ ಕಾಡಿನಲ್ಲಿ ಅವರ ಬದುಕಿಗೆ ಪೂರಕವಾಗುವಂತೆ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರೂ ಪ್ರತಿಫಲ ಮಾತ್ರ ಶೂನ್ಯವಾಗಿದೆ. ನದಿಗಳಲ್ಲಿ ದೊರೆಯುತ್ತಿದ್ದ ಮೀನು, ಆಮೆ ಮತ್ತು ಅವುಗಳ ಮೊಟ್ಟೆ ಈ ಜನಾಂಗದ ಪ್ರಮುಖ ಆಹಾರವಾಗಿತ್ತು. ಈಗ ಬದುಕುಳಿದವರ ಸಂಖ್ಯೆ ಬರಿ 97 ಮಾತ್ರ.

ಇದಕ್ಕಿಂತ ಭಿನ್ನವಾದ ಕತೆ ಬಾಂಗ್ಲಾ ದೇಶದ ಚಕ್ಮಾ ಬುಡಕಟ್ಟು ಜನಾಂಗದ್ದು. ಈ ಜನರ ಸಮಸ್ಯೆ ಕೇವಲ ಬಾಂಗ್ಲಾಕ್ಕೆ ಸೀಮಿತವಾಗಿರದೆ ಭಾರತಕ್ಕೂ ಸಮಸ್ಯೆಯಾಗಿದೆ. ಬಾಂಗ್ಲಾದ ಆಗ್ನೇಯ ಪ್ರಾಂತ್ಯದ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದಲ್ಲಿ ಹರಿಯುತ್ತಿರುವ ನದಿಯೊಂದಕ್ಕೆ ಅಮೆರಿಕಾದ ನೆರವಿನೊಂದಿಗೆ ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಿದ ಕಪ್ಟಾಯ್ ಅಣೆಕಟ್ಟಿನಿಂದಾಗಿ 1 ಲಕ್ಷ ಚಕ್ಮಾ ಬುಡಕಟ್ಟು ಜನಾಂಗ ನೆಲೆ ಕಳೆದುಕೊಂಡಿತು. ಸರಕಾರ ಇವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಎಡವಿದ ಪರಿಣಾಮವಾಗಿ ನಗರಕ್ಕೆ ವಲಸೆ ಬಂದ, ಮೂಲತಃ ಬೌದ್ಧ ಧರ್ಮವನ್ನು ಆಚರಿಸಿಕೊಂಡು ಬಂದಿದ್ದ ಚಕ್ಮಾ ಜನಾಂಗಕ್ಕೂ ಮತ್ತು ಸ್ಥಳೀಯ ಮುಸ್ಲಿಮರಿಗೂ ಘರ್ಷಣೆ ಏರ್ಪಟ್ಟು ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಚಕ್ಮಾ ನಿವಾಸಿಗಳು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿ ಬಂದಿದ್ದು ಇವರನ್ನು ವಾಪಸ್ ಕಳಿಸಲಾಗದೆ ಇತ್ತ ಪುನರ್ವಸತಿಯನ್ನು ಕಲ್ಪಿಸಲಾಗದ ಸ್ಥಿತಿಯನ್ನು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಎರಡು ಸರಕಾರಗಳೂ ಎದುರಿಸುತ್ತಿವೆ. ಬಾಂಗ್ಲಾ ಮತ್ತು ಬ್ರೆಜಿಲ್‌ನ ಬುಡಕಟ್ಟು ಜನಾಂಗದ ಕತೆಗಿಂತ ಬೇರೆಯದೇ ಆದ ನೋವಿನ ಕತೆ ಅಮೆರಿಕಾದ ಇತಿಹಾಸದಲ್ಲಿ ದಾಖಲಾಗಿದೆ.

ನಗರದ ಜನತೆಗೆ ಕುಡಿಯುವ ನೀರಿಗಾಗಿ ಅಮೆರಿಕಾದ ಉತ್ತರ ಡಕೋಟ ಪ್ರದೇಶದಲ್ಲಿ ನಿರ್ಮಿಸಿದ ಗ್ಯಾರಿಸನ್ ಅಣೆಕಟ್ಟಿನಿಂದಾಗಿ ಅಮೆರಿಕನ್ ಮೂಲನಿವಾಸಿಗಳಾದ ಮಂಡಾನ್ಸ್, ಅರಿಕಾಸ್, ಹಿಡಸ್ಟಾಸ್ ಜನಾಂಗಗಳನ್ನು ಅಮೆರಿಕಾ ಸರಕಾರ ಅಪೋಷನ ತೆಗೆದುಕೊಂಡಿದೆ.

ಜಲಾಶಯ ನಿರ್ಮಾಣವಾದ ನದಿ ಪಾತ್ರದಲ್ಲಿ ಜಾನುವಾರು ಸಾಕಾಣಿಕೆ ಹಾಗೂ ಮೀನುಗಾರಿಕೆಯನ್ನು ನಂಬಿ ಬದುಕಿದ್ದ ಈ ಜನಾಂಗ ತನ್ನ ಅಸಹಾಯಕ ಸ್ಥಿತಿಯಲ್ಲಿ ಜಲಾಶಯದ ಹಿನ್ನೀರಿನ ಪಕ್ಕದಲ್ಲಿ ವಾಸಿಸಲು ಅನುಮತಿ ಕೇಳಿತು. ಜೊತೆಗೆ ಹಿನ್ನೀರಿನಲ್ಲಿ ಮುಳುಗುವ ಮರಗಳನ್ನು ಕಡಿದು ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಪ್ರಾರ್ಥಿಸಿಕೊಂಡಿತು. ಎಲ್ಲಾ ಬೇಡಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ ಅಮೆರಿಕನ್ ಸರಕಾರ ಬುಡಕಟ್ಟು ಜನಾಂಗದ ಪ್ರತಿನಿಧಿಯಿಂದ ಬಲವಂತವಾಗಿ ಸಹಿ ಪಡೆದು ಅಲ್ಲಿನ ನಿವಾಸಿಗಳನ್ನು, ಜಾನುವಾರುಗಳನ್ನು ಹೊರದಬ್ಬಿತು.

1948 ರಲ್ಲಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ಕಛೇರಿಯಲ್ಲಿ ಅಂದಿನ ಆಂತರಿಕ ಆಡಳಿತ ಕಾರ್ಯದರ್ಶಿ ಕ್ಯಾಪ್‌ ಕೃಗ್ ಎದುರು ತಮ್ಮೆಲ್ಲ ವಸತಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಾರ್ವಭೌಮ ಹಕ್ಕು ಸರಕಾರಕ್ಕಿದೆ ಎಂದು ಬುಡಕಟ್ಟು ಜನಾಂಗದ ನಾಯಕ ಜಾರ್ಜ್ ಗಿಲ್ಲೆಟ್ ಸಹಿ ಮಾಡಿದ ಸನ್ನಿವೇಶವನ್ನು ರೆಸಿನಾರ್ ಎಂಬ ಲೇಖಕ ತನ್ನ “ದಿ ಅಮೆರಿಕನ್ ವೆಸ್ಟ್ ಅಂಡ್ ಇಟ್ಸ್ ಡಿಸಪ್ಪಿಯರಿಂಗ್ ವಾಟರ್” ಎಂಬ ಕೃತಿಯಲ್ಲಿ ಈ ರೀತಿ ಬಣ್ಣಿಸಿದ್ದಾನೆ. “ಕಾರ್ಯದರ್ಶಿ ಕೃಗ್ ಎದುರು ತಲೆ ಬಗ್ಗಿಸಿ ನಿಂತಿದ್ದ ದೃಢವಾದ ಮೈಕಟ್ಟಿನ ಬುಡಕಟ್ಟು ಜನಾಂಗದ ನಾಯಕ ಒಪ್ಪಂದ ಪತ್ರಕ್ಕೆ ಭಾರವಾದ ಹೃದಯದಿಂದ ಸಹಿ ಮಾಡಿದನು. ಸಹಿಗೆ ಮುನ್ನ ಇಂದಿನಿಂದ ನಮ್ಮ ಜನಾಂಗದ ಭವಿಷ್ಯಕ್ಕೆ ಬೆಳಕೆಂಬುದು ಕನಸಿನ ಮಾತು ಎಂದು ನೊಂದು ನುಡಿದನು. ಸಹಿ ಮಾಡಬೇಕಾದ ಮೇಜಿನ ಮೇಲೆ ಡಜನ್‌ ಗಟ್ಟಲೆ ಪೆನ್‌ಗಳನ್ನು ಇಡಲಾಗಿತ್ತು. ಅವುಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ತನ್ನ ಎಡಗೈ ಹಸ್ತದಿಂದ ಮುಖವನ್ನು ಮುಚ್ಚಿಕೊಂಡು ಬಿಕ್ಕಿ-ಬಿಕ್ಕಿ ಅಳುತ್ತಾ ಬಲಗೈನಲ್ಲಿ ಪತ್ರಕ್ಕೆ ಸಹಿ ಮಾಡಿದನು”.

ಮೊಂಟಾನ್ ವಿಶ್ವವಿದ್ಯಾಲಯದ ಅಮೆರಿಕನ್ ಮೂಲ ನಿವಾಸಿಗಳ ಅಧ್ಯಯನ ಕೇಂದ್ರದ ನಿರ್ದೇಶಕ ಪ್ಯಾಟ್ರಿಕ್ ಮೋರಿಸ್, ಅಮೆರಿಕನ್ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಉತ್ತರ ಡಕೋಟ ಪ್ರಾಂತ್ಯದಲ್ಲಿ ಹರಿಯುವ ಮಿಸ್ಸೊರಿ ನದಿ ಶೇ.70 ರಷ್ಟು ಮೂಲನಿವಾಸಿಗಳಿಗೆ ಮೀನುಗಾರಿಕೆ ಹಾಗೂ ಜಾನುವಾರು ಸಾಕಾಣಿಕೆ ಮೂಲಕ ಉದ್ಯೋಗ ಒದಗಿಸಿತ್ತು ಎಂದಿದ್ದಾರೆ.

ಕೊಲಂಬಿಯಾ ಪ್ರಾಂತ್ಯದಲ್ಲಿ ಅಮೆರಿಕನ್ನರು ಸಾಲ್ಮನ್ ಜಾತಿಯ ಮೀನುಗಳ ಸಂತತಿ ನಾಶದ ಪಾಪಕ್ಕೂ ಹೊಣೆಯಾಗಿದ್ದಾರೆ. ಶಿಲ್ಲಿನ ನದಿಯೊಂದಕ್ಕೆ ಕಟ್ಟಲಾದ ಗ್ರ್ಯಾಂಡ್ ಕೌಲಿ ಎಂಬ ಅಣೆಕಟ್ಟಿನಿಂದಾಗಿ ಮೀನಿನ ಸಂತತಿ ನಶಿಸಿಹೋಯಿತು.

1940 ರ ಜೂನ್ 17 ರಂದು ಪ್ರಥಮ ಬಾರಿಗೆ ಅಣೆಕಟ್ಟಿನಿಂದ ನೀರು ಹರಿಸಿದಾಗ, ತಾವು ಹಿಂದೆ ಮೀನಿನ ಶಿಕಾರಿ ಮಾಡುತ್ತಿದ್ದ ಕೆಟಲ್ ಜಲಪಾತದ ಬಳಿ ನೆಲದ ಮೂಲ ನಿವಾಸಿಗಳು ಕಳೆದುಹೋದ ತಮ್ಮ ಬದುಕನ್ನು ನೆನೆಯುತ್ತಾ ನದಿಗೆ ಅಶ್ರುಧಾರೆಯನ್ನು ಅರ್ಪಿಸಿದರು.

ಇದು ಬದುಕಿನ ವ್ಯಂಗ್ಯವೋ ಅಥವಾ ದುರಂತವೊ ನೀವೇ ನಿರ್ಧರಿಸಿ. 1951 ರಲ್ಲಿ ಅಮೆರಿಕಾ ಸರಕಾರ ಮೂಲನಿವಾಸಿಗಳಿಗೆ ಪರಿಹಾರವಾಗಿ ದಾಖಲೆಯ 5 ಕೋಟಿ 40 ಲಕ್ಷ ಡಾಲರ್ ಹಣ ಹಾಗೂ ವಾರ್ಷಿಕ ಪರಿಹಾರವಾಗಿ 1.5 ಕೋಟಿ ಡಾಲರ್ ನೆರವು ಘೋಷಿಸಿತ್ತು. ನೋವಿನ ಸಂಗತಿಯೆಂದರೆ ಈ ಪರಿಹಾರವನ್ನು ಪಡೆಯಲು ಬುಡಕಟ್ಟು ಜನಾಂಗದ ಒಂದೇ ಒಂದು ಜೀವ ಕೂಡ ಉಳಿದಿರಲಿಲ್ಲ.

(ಚಿತ್ರಕೃಪೆ: ವಿಕಿಪೀಡಿಯ)

(ಮುಂದುವರಿಯುವುದು)

Leave a Reply

Your email address will not be published. Required fields are marked *