Category Archives: ಜಗದೀಶ್ ಕೊಪ್ಪ

ರಥಯಾತ್ರೆ ಎಂಬ ವೃದ್ಧಾಪ್ಯದ ವ್ಯಸನ

-ಡಾ. ಎನ್.ಜಗದೀಶ್ ಕೊಪ್ಪ

ವ್ಯಯಕ್ತಿಕವಾಗಿ ಹಾಗೂ ತಾತ್ವಿಕವಾಗಿ ನಮ್ಮ ಸಿಟ್ಟು ಮತ್ತು ತಕಾರಾರುಗಳು ಏನೇ ಇರಲಿ ಭಾರತೀಯ ಜನತಾ ಪಾರ್ಟಿ ಎಂಬ ಪಕ್ಷದಲ್ಲಿ ಗೌರವಿಸಬೇಕಾದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು ವಾಜಪೇಯಿ, ಮತ್ತೊಬ್ಬರು ಎಲ್.ಕೆ.ಅಧ್ವಾನಿ. ಈ ಇಬ್ಬರು ಮಹನೀಯರು ತಮ್ಮ ತತ್ವ ಸಿದ್ಧಾಂತಗಳ ಜೊತೆಗೆ, ಸಾರ್ವಜನಿಕ ಬದುಕಿನಲ್ಲಿ ಒಬ್ಬ ರಾಜಕಾರಣಿಗೆ ಇರಬೇಕಾದ ಬದ್ಧತೆ, ಪ್ರಾಮಾಣಿಕತೆ, ಶುದ್ಧ ಚಾರಿತ್ರ್ಯ, ಇವುಗಳನ್ನು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದವರು.

ವಾಜಪೇಯಿ ಈ ದೇಶದ ಪ್ರಧಾನ ಮಂತ್ರಿಯ ಹುದ್ದೆ ಅಲಂಕರಿಸಿ ವೃದ್ಧಾಪ್ಯದ ಕಾರಣಕ್ಕಾಗಿ ರಾಜಕೀಯದಿಂದ ನಿವೃತ್ತಿಗೊಂಡಿದ್ದರೆ, ಕಳೆದ ಒಂದು ದಶಕದಿಂದ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಾದ ಅಧ್ವಾನಿಯವರು ಇದೀಗ ತಮ್ಮ ಪಕ್ಷದಲ್ಲಿ ಹುದ್ದೆಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಬಿ.ಜೆ.ಪಿ. ಪಕ್ಷದ ವರ್ತಮಾನದ ವಾಸ್ತವ.

10 ವರ್ಷದ ಹಿಂದೆ “ಭಾರತ ಬೆಳುಗುತಿದೆ” ಎಂಬ ಘೋಷಣೆ ಇಟ್ಟುಕೊಂಡು ಎಷ್ಟೇ ಪ್ರಚಾರ ಮಾಡಿದರೂ ಎನ್.ಡಿ.ಎ. ಮೈತ್ರಿಕೂಟವನ್ನು ಭಾರತೀಯ ಮತದಾರ ತಿರಸ್ಕರಿಸಿ, “ಅಮ್ ಆದ್ಮಿ” ಎಂಬ ಘೋಷಣೆಗೆ ಒಲಿದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ. ಇದರಿಂದಾಗಿ ಮುಂದಿನ ಪ್ರಧಾನಿ ಎಂದು ಎಲ್ಲೆಡೆ ಪ್ರತಿಬಿಂಬಿಸಿದ್ದ ಅಧ್ವಾನಿ ಕನಸು ನುಚ್ಚು ನೂರಾಯಿತು. ಆದರೆ, ಅವರು ಎದೆಗುಂದಲಿಲ್ಲ. 84ರ ಈ ಇಳಿ ವಯಸ್ಸಿನಲ್ಲೂ ತಮ್ಮ ಆರೋಗ್ಯ ಮತ್ತು ತತ್ವ ಸಿದ್ದಾಂತಗಳನ್ನು ಕಾಪಾಡಿಕೊಂಡು ಬಂದು ಮತ್ತೊಮ್ಮೆ ರಥಯಾತ್ರೆ ಮೂಲಕ ಯುದ್ಧಕ್ಕೆ ಅಣಿಯಾಗಿದ್ದಾರೆ.

ಸೋಜಿಗದ ಸಂಗತಿಯೆಂದರೆ, ಪಕ್ಷಕ್ಕೆ ಮರಳಿರುವ ಉಮಾಭಾರತಿ ಹೊರತಪಡಿಸಿದರೆ, ಯಾವೊಬ್ಬ ರಾಷ್ಟ್ರೀಯ ನಾಯಕರು ಅಧ್ವಾನಿ ನಮ್ಮ ಪಕ್ಷದ ಮುಂದಿನ ಪ್ರಧಾನಿ ಎಂದು ಹೇಳಲು ಸಿದ್ಧರಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ತೆರೆಮರೆಯಲ್ಲಿ ಪ್ರಧಾನಿ ಹುದ್ದೆಗೆ ಪೈಪೋಟಿ ನಡೆಸಿರುವುದು ಅಧ್ವಾನಿಯವರಿಗೆ ನುಂಗಲಾರಾದ ತುತ್ತಾಗಿದೆ. ಯು.ಪಿ.ಎ. ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಎಂದು ಅವರು ಘೋಷಿಸಿಕೊಂಡಿದ್ದರೂ, ಇದು ತಮ್ಮ ಅಸ್ತಿತ್ವಕ್ಕಾಗಿ ಅಧ್ವಾನಿ ನಡೆಸಿರುವ ಹೋರಾಟ ಎಂಬುದನ್ನ ಎಲ್ಲರೂ ಬಲ್ಲರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಬಿ.ಜೆ.ಪಿ ಪಕ್ಷದಿಂದ ಕಿತ್ತುಕೊಂಡಿರುವ ನಮ್ಮ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಎಲ್ಲಾ  ಮುಖಂಡರ ಬಾಯಿಗೆ ಬೀಗ ಜಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಕರ್ನಾಟಕ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕ ತಲೆತಗ್ಗಿಸುವಂತಹದ್ದು.

ಇವತ್ತಿಗೂ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಗಾಲಿ ಜನಾರ್ಧನರೆಡ್ಡಿ, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ದು, ಕೃಷ್ಣಯ್ಯ ಶೆಟ್ಟಿ, ಮೊಕದ್ದಮೆ ಎದುರಿಸುತ್ತಿರುವ ಶಾಸಕ ಸಂಪಂಗಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸಲು ಸಿದ್ದವಾಗುತ್ತಿರುವ ಹಾಲಪ್ಪ, ಇವರನ್ನು ನೈತಿಕತೆಯ ಆಧಾರದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗದಿರುವ ಸ್ಥಿತಿಯಲ್ಲಿ ಪಕ್ಷ ಇರುವಾಗ ಭ್ರಷ್ಠಾಚಾರದ ಕುರಿತು ಬಿ.ಜೆ.ಪಿ ನಾಯಕರು ಮಾತನಾಡುವುದು ನಿಜಕ್ಕೂ ನಗೆಪಾಟಿಲಿನ ಸಂಗತಿ.

ಆರೋಪಿ ಮತ್ತು ಆಪಾದಿತ ಎಂಬ ಕಾನೂನಿನ ಪರಿಭಾಷೆಯ ಪದಗಳನ್ನು ರಕ್ಷಣೆಗೆ ಗುರಾಣಿ ಮಾಡಿಕೊಂಡಿರುವ ಬಿ.ಜೆ.ಪಿ ಪಕ್ಷ ಮುಂದಿನ ದಿನಗಳಲ್ಲಿ ಆಪರೇಶನ್ ಕಮಲ ಎಂಬ ಅನೈತಿಕಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿ ಉಪಚುನಾವಣೆಗಳ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನ ಖರ್ಚು ಮಾಡಿಸಿದ ಬಗ್ಗೆ ಜನರಿಗೆ ಉತ್ತರಿಸಬೇಕಾಗಿದೆ. (ಕೊಪ್ಪಳ ಉಪಚುನಾವಣೆಗೆ ಖರ್ಚಾದ ಹಣದಮೊತ್ತ 65 ಲಕ್ಷ ರೂಪಾಯಿ, ಇದು ಚನಾವಣಾ ಆಯೋಗ ಸಿಬ್ಬಂದಿಗಾಗಿ ಖರ್ಚು ಮಾಡಿದ ಹಣ.)

ಸಾಮಾಜಿಕ ನ್ಯಾಯದ ಬಗ್ಗೆ ರಾಜ್ಯ ಬಿ.ಜೆ.ಪಿ. ನಾಯಕರು ನಮ್ಮ ಸಂವಿಧಾನದ ಮೂಲ ಆಧಾರಗಳಾದ ಜಾತ್ಯಾತೀತ ಹಾಗೂ ಧರ್ಮಾತೀತ ಮನೋಭಾವವನ್ನು ಮರೆತು ರಾಜ್ಯದ ವಿ.ವಿ.ಗಳಿಗೆ ಉಪಕುಲಪತಿಗಳ ನೇಮಕ ಹಾಗೂ ಇತರೆ ಉನ್ನತ ಹುದ್ದೆಗಳ ನೇಮಕದಲ್ಲಿ ಒಂದೇ ಜಾತಿಗೆ ಪ್ರಾಧಾನ್ಯ ನೀಡಿದ್ದರ ಬಗ್ಗೆ ಜೊತೆಗೆ ಎಗ್ಗಿಲ್ಲದೆ ಮಠ ಮಾನ್ಯಗಳಿಗೆ ಪ್ರಸಾದದಂತೆ ರಾಜ್ಯ ಬೊಕ್ಕಸದ ಹಣವನ್ನು ಹಂಚಿದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳ್ಲಬೇಕಾಗಿದೆ.

ದಸರಾ ಉದ್ಘಾಟನೆಗೆ ಬರಗೂರು ರಾಮಚಂದ್ರಪ್ಪನವರ ನಂತರ, ಧಾರ್ಮಿಕ ನಾಯಕನ್ನು ಹೊರತು ಪಡಿಸಿದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಯಾವುದೇ ರಂಗದಲ್ಲಿ ಒಬ್ಬ ಗಣ್ಯ ವೈಕ್ತಿ ಬಿ.ಜೆ.ಪಿ ಸರ್ಕಾರಕ್ಕೆ ಏಕೆ ಸಿಗಲಿಲ್ಲ?

ಕರ್ನಾಟಕದ ಬೆಳವಣಿಗೆ ಕುರಿತು ಮೊದಲಿನಿಂದಲೂ ಅಸಮಾಧಾನ ವ್ಯಕ್ತ ಪಡಿಸಿದ ಏಕೈಕ ನಾಯಕರೆಂದರೆ ಎಲ್.ಕೆ. ಅಧ್ವಾನಿ ಮಾತ್ರ. ಅವರ ಮಾತಿಗೆ ಪಕ್ಷ ಮೊದಲೇ ಬೆಲೆ ನೀಡಿದ್ದರೆ, ಪಕ್ಷಕ್ಕೆ ಇಂದು ರಾಷ್ಟಮಟ್ಟದಲ್ಲಿ ಈ ರೀತಿಯ ಮುಜುಗರ ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ.

ಪಕ್ಷದ ರಾಷ್ಟೀಯ ಅಧ್ಯಕ್ಷರಾದ ನಿತೀನ್ ಗಡ್ಕರಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ರಾಜ್ಯ ನಾಯಕರ ಜೊತೆ ಚೌಕಾಶಿ ಶುರುವಿಟ್ಟುಕೊಂಡು ನಾಗಪುರದಲ್ಲಿ ತಮ್ಮ ಪುತ್ರನ ವಿವಾಹಕ್ಕೆ 13 ಕೋಟಿ ರೂ.ಹಣ ಖರ್ಚು ಮಾಡಿದಾಗಲೇ ಪಕ್ಷ ವಾಜಪೇಯಿ ಮತ್ತು ಅಧ್ವಾನಿ ಕಾಲದಲ್ಲಿ ಕಾಪಾಡಿಕೊಂಡು ಬಂದಿದ್ದ ನೈತಿಕತೆಯ ನೆಲೆಗಟ್ಟು ಕುಸಿದು  ಹೋಗಿದೆ ಎಂದು ನಾಗರೀಕರಿಗೆ ಮನದಟ್ಟಾಗಿ ಹೋಯಿತು.

ಇಂತಹ ದಯನೀಯ ಸ್ಥಿತಿಯಲ್ಲಿ ಮುಂದಿನ ಪ್ರಧಾನಿಯಾಗಲು ಹೊರಟಿರುವ ಪಕ್ಷದ ಹಿರಿಯ ನಾಯಕ ಅಧ್ವಾನಿಯವರ ಹಾದಿ ಸುಗುಮವಾಗಿಲ್ಲ. ಕಾಲ ಬದಲಾದಂತೆ ತಲೆಮಾರುಗಳ ಚಿಂತನೆ ಕೂಡ ಬದಲಾಗುತ್ತಿದೆ. ಈ ಕಟು ವಾಸ್ತವ ಸ್ಥಿತಿಯನ್ನು ಅಧ್ವಾನಿಯವರು ಜೀರ್ಣಿಸಿಕೊಳ್ಳಬೇಕಾಗಿದೆ.

ಜೀವನದಿಗಳ ಸಾವಿನ ಕಥನ – 7

ಡಾ.ಎನ್.ಜಗದೀಶ್ ಕೊಪ್ಪ

ಇದು ಗುಜರಾತ್‌ನ ನರ್ಮದಾ ಸರೋವರ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸ್ಥಳಾಂತರಗೊಂಡ ಸ್ಥಳೀಯ ನಿವಾಸಿಗಳ ನೋವಿನ ಕಥನ.

“ಅಣೆಕಟ್ಟು ನಿರ್ಮಾಣಕ್ಕಾಗಿ ಸರಕಾರ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿತು. ನಾವು ಬದುಕಿ ಬಾಳಿದ್ದ ಪವರ್ಟ ಎಂಬ ಗ್ರಾಮದಿಂದ ನೂರಾರು ಕಿ.ಮೀ. ದೂರದ ಮಣಿಬೇಲಿ ಎಂಬ ಪ್ರದೆಶಕ್ಕೆ ನಮ್ಮ ಕುಟುಂಬಗಳನ್ನು ಸ್ಥಳಾಂತರಿಸಿದೆ. ನದಿ, ಅರಣ್ಯಗಳಿಂದ ಸುತ್ತುವರೆದಿದ್ದ ನಮ್ಮ ಗ್ರಾಮಕ್ಕೆ ತೀರ ವಿರುದ್ಧವಾದ ಪ್ರಾದೇಶಿಕ ಲಕ್ಷಣಗಳುಳ್ಳ ಅಪರಿಚಿತ ಗುಡ್ಡ ಗಾಡು ಪ್ರದೇಶ ಈ ಮಣಿಬೇಲಿ. ನಮ್ಮ ಮಕ್ಕಳು ನದಿಯಲ್ಲಿ ಈಜಾಡಿ, ದನ ಕರುಗಳನ್ನು ಮೇಯಿಸಿಕೊಂಡು, ಅರಣ್ಯದಿಂದ ಉರುವಲು ಕಟ್ಟಿಗೆಗಳನ್ನು ತರುತ್ತಿದ್ದರು. ನಾವಿದ್ದ ಪವರ್ಟ ಗ್ರಾಮದ ಭೂಮಿ ಫಲವತ್ತಾಗಿತ್ತು. ಆ ಭೂಮಿ ಯಾವುದೇ ಗೊಬ್ಬರ ಬೇಡುತ್ತಿರಲಿಲ್ಲ.

“ಈಗ ಇಲ್ಲಿ ಈ ಹೊಸ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹಿಡಿದು ದನಕರುಗಳಿಗೂ ಸಹ ನಾವು ಕೊಳವೆ ಬಾವಿಯನ್ನು ಆಶ್ರಯಿಸಬೇಕಾಗಿದೆ.

“ನಾವಿದ್ದ ಗ್ರಾಮದಲ್ಲಿ ದೊರೆಯುತ್ತಿದ್ದ ಬಿದಿರು, ನಾರು, ಗಿಡ ಮೂಲಿಕೆ ಸಸ್ಯಗಳು, ಕಾಡು ಪ್ರಾಣಿಗಳು ನಮ್ಮ ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಈಗ ಈ ಅಪರಿಚಿತ ಸ್ಥಳದಲ್ಲಿ ಎಲ್ಲದಕ್ಕೂ ಹಣ ತೆರಬೇಕಾಗಿದೆ. ಮೊದಲೇ ಅನಕ್ಷರಸ್ಥ, ಬಡವರಾದ ನಾವು ಹಣ ಎಲ್ಲಿಂದ ತರಬೇಕು? ಇಲ್ಲಿಗೆ ಬಂದ ಮೊದಲ ವರ್ಷದಲ್ಲೇ 38 ಮಕ್ಕಳು ಸಾವನ್ನಪ್ಪಿದವು. ಹತ್ತಿರದ ಪಟ್ಟಣಕ್ಕೆ ಹೋಗಬೇಕಾದರೆ ಬಸ್ ಹಿಡಿದು ಹೋಗಬೇಕು. ಪುನರ್ವಸತಿ ಪ್ರದೇಶದಲ್ಲಿ ನಮಗೆ ನೀಡಲಾಗುತ್ತಿದೆ ಎಂದು ಹೇಳಿದ್ದ ಭೂಮಿ, ನಿವೇಶನ, ರಸ್ತೆ, ನೀರು, ವಿದ್ಯುತ್ ಇವಲ್ಲಾ ಕನಸಿನ ಮತಾಗಿದೆ. ಸರಕಾರವನ್ನು ಎದುರಿಸಲಾಗದ ಅಸಹಾಯಕ ಸ್ಥಿತಿಯಲ್ಲಿರುವ ನಾವು ಒಂದು ರೀತಿಯ ಬಯಲು ಬಂಧೀಖಾನೆಯ ಖೈದಿಗಳು.”

ಇದು 1992 ರಲ್ಲಿ ಪುನರ್ವಸತಿ ಪ್ರದೇಶಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಗ್ರಾಮಸ್ಥರು ಹೇಳಿಕೊಂಡ ನೋವಿನ ಕತೆ. ಇಂತಹ ದುರಂತ ಕೇವಲ ಭಾರತಕ್ಕೆ ಅಥವಾ ಗುಜರಾತ್‌ಗೆ ಸೀಮಿತವಾಗಿಲ್ಲ. ಇದು ಜಗತ್ತಿನೆಲ್ಲೆಡೆ ಅಣೆಕಟ್ಟು ನಿರ್ಮಾಣದ ನೆಪದಲ್ಲಿ ಅತಂತ್ರರಾದವರ ಆಕ್ರಂದನ.

ಕಳೆದ 70 ವರ್ಷಗಳ ಅವಧಿಯಲ್ಲಿ ಈ ರೀತಿ ನಿರಾಶ್ರಿತರಾದವರಲ್ಲಿ ಬಹುತೇಕ ಮಂದಿ ಅರಣ್ಯವಾಸಿಗಳು ಕೃಷಿಕಾರ್ಮಿಕರು ಮತ್ತು ಬಡ ಗ್ರಾಮಸ್ಥರು. ಯಾವುದೇ ರಾಜಕೀಯ ಇಲ್ಲವೆ ಹೋರಾಟದ ಬಲವಿಲ್ಲದವರು.

ಮೇಲ್ನೋಟಕ್ಕೆ ನಮಗೆ ಕಾಣಸಿಗುವವರು ಇಂತಹವರು ಮಾತ್ರ. ಪರೋಕ್ಷವಾಗಿ, ಅಣೆಕಟ್ಟು ನಿರ್ಮಾಣವಾದ ನಂತರ ಸಿಬ್ಬಂದಿ ವಸತಿಗಾಗಿ ನಿರ್ಮಿಸಿದ ಪಟ್ಟಣಕ್ಕೆ, ರಸ್ತೆಗೆ, ವಿದ್ಯುತ್ ಕಂಬ ಮತ್ತು ವಿದ್ಯುತ್ ಸರಬರಾಜು ಮುಂತಾದ ವ್ಯವಸ್ಥೆಗಳಿಗೆ ಭೂಮಿ ಕಳೆದುಕೊಂಡ ನತದೃಷ್ಟರು ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದವರ ಪಟ್ಟಿಯಲ್ಲಿ ಬರುವುದಿಲ್ಲ. ಇವರೆಲ್ಲ ಈಗ ನಗರದಿಂದ ನಗರಕ್ಕೆ ಚಲಿಸುವ ವಲಸೆ ಕಾರ್ಮಿಕರಾಗಿ ಇಲ್ಲವೇ ಕೊಳೆಗೇರಿಗಳ ನಿವಾಸಿಗಳಾಗಿ ಬದುಕು ದೂಡುತ್ತಿದ್ದಾರೆ. ನಿಸರ್ಗದ ಕೊಡುಗೆಗಳಾದ ನೀರು, ನದಿಯಲ್ಲಿ ದೊರೆಯುವ ಮೀನು, ತಮ್ಮ ದನ ಕರುಗಳಿಗೆ ದೊರೆಯುತ್ತಿದ್ದ ಹಸಿರು ಮೇವು, ಕಾಡಿನಲ್ಲ ಸಿಗುತ್ತಿದ್ದ ಹಲವು ಬಗೆಯ ಹಣ್ಣುಗಳಿಂದ ವಂಚಿತರಾದ ಇವರ ಬದುಕಿನ ನೋವು, ಕಣ್ಣೀರು ಆಧುನಿಕ ಯುಗದ ಅಬ್ಬರದ ನಡುವೆ ನಿಶ್ಯಬ್ಧವಾಗಿದೆ.

ಈವರೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಅಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾಗಿರುವ ಕುಟುಂಬಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ ಖಚಿತ ಮಾಹಿತಿಯನ್ನು ಯಾವುದೇ ಸರಕಾರಗಳು ಬಹಿರಂಗಗೊಳಿಸಿಲ್ಲ.  ಇವರು ನೀಡುವ ಸಂಖ್ಯೆಗೂ, ನಿಜವಾಗಿ ನಿರ್ವಸತಿಗರಾದವರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಭಾರತ ಮತ್ತು ಚೀನಾ ದೇಶಗಳಲ್ಲಿ ಅತಂತ್ರರಾದಷ್ಟು ಜನ ಬೇರಾವ ದೇಶಗಳಲ್ಲೂ ಆಗಿಲ್ಲ. ದೆಹಲಿ ಮೂಲದ ಸಾಮಾಜಿಕ ಅಧ್ಯಯನ ಸಂಸ್ಥೆಯ ಸಮೀಕ್ಷೆ ಪ್ರಕಾರ 1947 ರಿಂದ 2000 ಇಸವಿಯವರೆಗೆ ಭಾರತದಲ್ಲಿ ಒಂದೂವರೆ ಕೋಟಿ ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಕಳೆದ 10 ವರ್ಷಗಳಿಂದೀಚೆಗೆ ಅಂದಾಜು 50 ಲಕ್ಷ ಜನತೆ ನಿರಾಶ್ರಿತರಾಗಿದ್ದಾರೆ. ವಿಶ್ವಬ್ಯಾಂಕ್‌ಗೆ ಚೀನಾ ಸರಕಾರ ನೀಡಿದ ಮಾಹಿತಿಯಂತೆ 1950 ರಿಂದ 1989 ರವರೆಗೆ 1 ಕೋಟಿ 20 ಲಕ್ಷ ಜನರು ಚೀನಾದಲ್ಲಿ ಅತಂತ್ರರಾಗಿದ್ದಾರೆ ಎಂದು ತಿಳಿಸಿದೆ. ಆದರೆ ಚೀನಾದಲ್ಲಿ ಈ ಕುರಿತಂತೆ ಹಲವು ದಶಕಗಳ ಕಾಲ ಅಧ್ಯಯನ ನಡೆಸಿರುವ ಸಮಾಜ ಶಾಸ್ತ್ರಜ್ಞ ಡೈಕ್ವಿಂಗ್, 4 ರಿಂದ 6 ಕೋಟಿ ಜನತೆ ಚೀನಾದಲ್ಲಿ ಅಣೆಕಟ್ಟು ನಿರ್ಮಾಣದಿಂದ ಅತಂತ್ರರಾಗಿದ್ದಾರೆ ಎಂದು ದೃಢಪಡಿಸಿದ್ದಾನೆ.

ಸಾಮಾನ್ಯವಾಗಿ ಅಣೆಕಟ್ಟು ನಿರ್ಮಾಣವಾಗುವ ಅರಣ್ಯ ಅಥವಾ ನದಿಯ ಇಕ್ಕೆಲಗಳ ಸರಕಾರಿ ಭೂಮಿಯಲ್ಲಿ ವಾಸಿಸುವ ಅಥವಾ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಂದಿ ಬಡವರಾಗಿದ್ದು, ಅವರ ಬಳಿ ಈ ಭೂಮಿಯ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿರುವುದಿಲ್ಲ. ಹಾಗಾಗಿ ಇವರು ಯಾವುದೇ ಪರಿಹಾರದಿಂದ ವಂಚಿತರಾಗಿದ್ದು, ಸರಕಾರದ ನಿರ್ವಸತಿಗರ ಪಟ್ಟಿಯಲ್ಲಿ ಇವರು ಸೇರುವುದಿಲ್ಲ. ಇಂತಹ ನತದೃಷ್ಟ ಕುಟುಂಬಗಳ ಅಂಕಿ-ಅಂಶ ಈವರೆಗೆ ನಿಖರವಾಗಿ ಎಲ್ಲಿಯೂ ಸಿಗದ ಕಾರಣ ಖಚಿತ ಅಂಕಿ-ಅಂಶಗಳಿಗೆ ತೊಡಕಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ ಗುಜರಾತ್‌ನ ನರ್ಮದಾ ಅಣೆಕಟ್ಟಿನ ಯೋಜನೆ.

1961 ರಲ್ಲಿ ಅಣೆಕಟ್ಟು ಕಾಮಗಾರಿ ಸಿಬ್ಬಂದಿ ವಸತಿ ನಿರ್ಮಾಣಕ್ಕಾಗಿ ಜಾಗ ತೆರವುಗೊಳಿಸಿದ 800 ಕುಟುಂಬಗಳಿಗೆ ಇಂದಿಗೂ ಪರಿಹಾರ ದೊರೆತಿಲ್ಲ. ಅವರು ವಾಸಿಸುತ್ತಿದ್ದ ನಿವೇಶನ-ಮನೆಗೆ ಹಕ್ಕು ಪತ್ರ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಅಭಯಾರಣ್ಯದಲ್ಲಿ ಕಾಡಿನ ಕಿರು ಉತ್ಪನ್ನಗಳನ್ನೇ ನಂಬಿ ಬದುಕಿದ್ದ 10 ಸಾವಿರ ಆದಿವಾಸಿಗಳನ್ನು ಯಾವುದೇ ಪರಿಹಾರ ಅಥವಾ ನಿವೇಶನ ನೀಡದೆ ಒಕ್ಕಲೆಬ್ಬಿಸಲಾಯಿತು.

1 ಲಕ್ಷದ 40 ಸಾವಿರ ರೈತರು ನರ್ಮದಾ ಅಣೆಕಟ್ಟು ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿದ್ದಾರೆ. ಇವರಲ್ಲಿ 25 ಸಾವಿರ ರೈತರ ಜಮೀನು 5 ಎಕರೆಗಿಂತ ಕಡಿಮೆ. ಇವರನ್ನು ನಂಬಿ ಬದುಕಿದ್ದ ಕೃಷಿ ಕಾರ್ಮಿಕರು ನಗರಗಳತ್ತ ವಲಸೆ ಹೋದರು. ಕೃಷಿಭೂಮಿಯಲ್ಲದೆ ಅನೇಕ ನಗರ-ಪಟ್ಟಣಗಳು, ಹಳ್ಳಿಗಳೂ ನರ್ಮದಾ ಸರೋವರದ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ನಗರ- ಪಟ್ಟಣಗಳಲ್ಲಿ ಬದುಕಿದ್ದ ಅನೇಕ ವ್ಯಾಪಾರಿಗಳು, ಕಾರ್ಮಿಕರು ಯಾವುದೇ ಪರಿಹಾರಕ್ಕೆ ಅನರ್ಹರಾಗಿದ್ದರು. ಜಲಾಶಯ ನಿರ್ಮಾಣವಾದ ನಂತರ ನದಿ ನೀರು ಸಮುದ್ರ ಸೇರುವವರೆಗಿನ ನದಿ ಇಕ್ಕೆಲಗಳಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವಿಸಿದ್ದ ಮೀನುಗಾರರ ಕುಟುಂಬಗಳೂ ಸಹ ಈ ವೃತ್ತಿಯಿಂದ ವಂಚಿತರಾಗಿ, ಅನಿವಾರ್ಯವಾಗಿ ಬೇರೆ ವೃತ್ತಿಯನ್ನು ಆಯ್ಕೆ ಮಾಡಕೊಳ್ಳಬೇಕಾಯಿತು. 1985 ರಲ್ಲಿ ವಿಶ್ವಬ್ಯಾಂಕ್ ನರ್ಮದಾ ಅಣೆಕಟ್ಟು ಯೋಜನೆಗೆ ಸಾಲ ನೀಡುವ ಸಂದರ್ಭದಲ್ಲಿ, ಯೋಜನೆಯಿಂದ ನಿರಾಶ್ರಿತವಾಗುವ ಕುಟುಂಬಗಳ ಸಂಖ್ಯೆ 6,603 ಎಂದು ತಿಳಿಸಿತ್ತು. 1996 ರಲ್ಲಿ ಇದೇ ವಿಶ್ವಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಈ ಯೋಜನೆಯಿಂದ 41,500 ಕುಟುಂಬಗಳು ತಮ್ಮ ಮನೆ, ಜಮೀನುಗಳನ್ನು ಕಳೆದುಕೊಂಡಿವೆ ಎಂದು ತಿಳಿಸಿತು.

ಇವೆಲ್ಲವೂ ಮೇಲ್ನೋಟಕ್ಕೆ ತಕ್ಷಣದ ಪರಿಣಾಮವೆನಿಸಿದರೂ, ದೀರ್ಘಾವಧಿ ಕಾಲದಲ್ಲಾಗುವ ಸಾಮಾಜಿಕ ಪರಿಣಾಮಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ದೀರ್ಘಕಾಲಿಕ ಸಾಮಾಜಿಕ ಪರಿಣಾಮಗಳಿಂದ ಬಳಲುವವರು ಜಲಾಶಯ ಅಥವಾ ಅಣೆಕಟ್ಟುಗಳ ಕೆಳಗಿನ ನದಿಪಾತ್ರದ ಜನರು.

ಆಫ್ರಿಕಾ ಖಂಡದ ನೈಜೀರಿಯಾದಲ್ಲಿ ನದಿಯ ಪ್ರವಾಹವನ್ನು ತಡೆಗಟ್ಟುವ ಉದ್ದೇಶದಿಂದ ನೈಜಿರ್ ನದಿಗೆ ಕಟ್ಟಲಾದ ಕ್ವೆಂಜೆ (kainji) ಅಣೆಕಟ್ಟಿನಿಂದ, ನದಿಯ ನೀರಿನ ಹರಿಯುವಿಕೆ ಸ್ಥಗಿತಗೊಂಡ ಪರಿಣಾಮ 50 ಸಾವಿರ ಮಂದಿ ಅನಾಥರಾಗುವ ಸ್ಥಿತಿ ಬಂತು. ನದಿಯ ಇಕ್ಕೆಲಗಳಲ್ಲಿ ವ್ಯವಸಾಯ, ಜಾನುವಾರು ಸಾಕಾಣಿಕೆ, ಮೀನುಗಾರಿಕೆ ವೃತ್ತಿಯಿಂದ ಬದುಕಿದ್ದ ಈ ಜನತೆ ತಮ್ಮ ಮೂಲ ಕಸುಬುಗಳಿಂದ ವಂಚಿತರಾದರು. ಈ ಪ್ರದೇಶವೊಂದರಲ್ಲೇ ವರ್ಷವೊಂದಕ್ಕೆ 1 ಲಕ್ಷ ಟನ್ ಕುರಿ, ಮೇಕೆ, ದನದ ಮಾಂಸ ಯೂರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. 1968 ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ಈ ಪ್ರಮಾಣ ಕೇವಲ 30 ಸಾವಿರ ಟನ್‌ಗೆ ಕುಸಿಯಿತು.

ಇದೇ ನೈಜೀರಿಯಾದಲ್ಲಿ ಸೊಕೊಟೊ ನದಿಗೆ ಕಟ್ಟಲಾದ ಬಕಲೋರಿ ಅಣೆಕಟ್ಟಿನಿಂದಾಗಿ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಭತ್ತ ಹಾಗೂ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಮೆಕ್ಕೆಜೋಳ, ಹತ್ತಿ ಇತರೆ ಬೆಳೆಗಳ ಚಟುವಟಿಕೆ ಸ್ತಬ್ಧಗೊಂಡವು.

ಇದಕ್ಕಿಂತ ಭಿನ್ನವಾದ ಸಾಮಾಜಿಕ ಹಾಗೂ ನೈಸರ್ಗಿಕ ದುರಂತವೆಂದರೆ ಬ್ರೆಜಿಲ್ ದೇಶದ್ದು. ವಿಶ್ವಬ್ಯಾಂಕ್ ನೆರವಿನಿಂದ ನಿರ್ಮಿಸಲಾದ ಸೊಬ್ರಾಡಿನೊ ಅಣೆಕಟ್ಟಿನ ಹಿನ್ನೀರಿನಿಂದ 70 ಸಾವಿರ ಮಂದಿ ಸ್ಥಳಾಂತರಗೊಂಡರೆ, 25 ಸಾವಿರ ಹೆಕ್ಟೇರ್ ಕೃಷಿಭೂಮಿ ಮುಳುಗಡೆಯಾಯಿತು.

ಸಾವೊ ಪ್ರಾನ್ಸಿಸ್ಕೊ ನದಿಗೆ ಕಟ್ಟಿದ ಅಣೆಕಟ್ಟಿನ ಕೆಳಗೆ 800 ಕಿ.ಮೀ. ಉದ್ದದ ನದಿ ಪಾತ್ರದಲ್ಲಿ ಬೆಳೆಯಲಾಗುತ್ತಿದ್ದ ಭತ್ತದ ಬೆಳೆಗೆ ಸಮರ್ಪಕ ನೀರಿಲ್ಲದೆ, ಭತ್ತದ ಕೃಷಿಯನ್ನೇ ರೈತರು ಕೈ ಬಿಡಬೇಕಾಯಿತು. ಇದರಿಂದಾಗಿ 50 ಸಾವಿರ ಮಂದಿ ಕೃಷಿಕರು, ಮತ್ತು ಕೃಷಿ ಕೂಲಿ ಕಾರ್ಮಿಕರು ಅತಂತ್ರರಾದರು. ಇವರಿಗೆ ಬೇರೆಡೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ನೀಡಲಾಗುವುದೆಂದು ವಿಶ್ವಬ್ಯಾಂಕ್ ಮತ್ತು ಬ್ರೆಜಿಲ್ ಸರಕಾರ ಜಂಟಿಯಾಗಿ ನೀಡಿದ್ದ ಆಶ್ವಾಸನೆ ಕೇವಲ ಭರವಸೆಯಾಗಿಯೇ ಉಳಿಯಿತು.

ಅಣೆಕಟ್ಟು ನಿರ್ಮಾಣವಾಗಿ, ಜಲಾಶಯದಿಂದ ಹೊರಬಿದ್ದ ನೀರಿನ ಪರಿಣಾಮ 6 ವರ್ಷಗಳ ನಂತರ ಕಾಣಿಸಿಕೊಂಡು, 40 ಸಾವಿರ ಮಂದಿ ವಿವಿಧ ರೋಗಗಳಿಂದ ಬಳಲಿದರು. ಈ ನೀರನ್ನು ಕುಡಿದ ಬಹುತೇಕ ಮಂದಿ ಹೊಟ್ಟೆನೋವಿನಿಂದ, ಚರ್ಮದ ಖಾಯಿಲೆಯಿಂದ ನರಳಿದರೆ, ಸಾವಿರಾರು ಮಕ್ಕಳು ನಿರಂತರ ಬೇಧಿಯಿಂದ ನಿತ್ರಾಣರಾಗಿ ಅಸುನೀಗಿದರು. ಇವೆಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀಯರ ಗುಪ್ತಾಂಗಗಳಲ್ಲಿ ಉಂಟಾದ ತುರಿಕೆ, ಗಾಯದಿಂದ ರಕ್ತ, ಕೀವು ಸೋರುವಂತಾಯಿತು. ಈ ಜನತೆಯ ಮುಖ್ಯ ಆಹಾರವಾಗಿದ್ದ ಮೀನು, ಸೀಗಡಿಗಳಿಂದ ಸಿಗುತ್ತಿದ್ದ ಪ್ರೋಟೀನ್‌ನಿಂದ ಮತ್ತು ವಿಟಮಿನ್‌ಗಳಿಂದ  ಸಶಕ್ತರಾಗಿದ್ದ ಇವರು, ತಾವು ಯಾವ ಖಾಯಿಲೆಯಿಂದ, ಯಾವ ಕಾರಣಕ್ಕಾಗಿ ಬಳಲುತ್ತಿದ್ದೇವೆ ಎಂಬುದನ್ನು ಅರಿಯಲಾಗದೆ ಅಸುನೀಗಿದರು.

(ಮುಂದುವರಿಯುವುದು)

ದಂತಗೋಪುರದ ದಂಡನಾಯಕರು

 ಡಾ.ಎನ್. ಜಗದೀಶ್ ಕೊಪ್ಪ

                   ಅವರು ಈ ಕಗ್ಗತ್ತಲಿನಲ್ಲಿ ಹಾಡಬಲ್ಲರೆ?
ಹೌದು ಹಾಡಬಲ್ಲರು
ಕಗ್ಗತ್ತಲನ್ನು ಕುರಿತು ಮಾತ್ರ
ಅವರು ಹಾಡಬಲ್ಲರು
ಬರ್ಟೋಲ್ ಬ್ರೆಕ್ಟ್

ಈ ಅಂಕಿ ಅಂಶವನ್ನು ನೀವು ನಂಬಲೇಬೇಕು. ಈ ದೇಶದ ನಗರ ಪ್ರದೇಶದ ವ್ಯಕ್ತಿ ದಿನವೊಂದಕ್ಕೆ 33 ರೂಗಳನ್ನು ಹಾಗೂ ಗ್ರಾಮಾಂತರ ಪ್ರದೇಶದ ವ್ಯಕ್ತಿ 26 ರೂ ಗಿಂತ ಹೆಚ್ಚು ಖರ್ಚು ಮಾಡಿದರೆ, ಅವರು ಬಡವರಲ್ಲ. ಭಾರತದ ಜನತೆ ಬೆಚ್ಚಿ ಬೀಳಿಸುವ ಈ  ವರದಿಯನ್ನು ನಮ್ಮ ಕೇಂದ್ರ ಯೋಜನಾ ಆಯೋಗ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಿದೆ.

ನಮ್ಮನ್ನಾಳುವ ಜನನಾಯಕರು ವಾಸ್ತವದ ಬದುಕಿನಿಂದ ಎಷ್ಟು ದೂರವಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕು. ಅತ್ಯಂತ ನೋವಿನ ಸಂಗತಿಯೆಂದರೆ, ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಡಾ. ಮನಮೋಹನ್‌ ಸಿಂಗ್ ಸಾಧಾರಣ ವ್ಯಕ್ತಿಯಲ್ಲ. ಜಗತ್‌ಪ್ರಸ್ದಿದ್ಧ ಲಂಡನ್ ಸ್ಕೂಲ್ ಆಪ್ ಎಕಾನಾಮಿಕ್ಸ್ ಸಂಸ್ಥೆಯಿಂದ ಡಾಕ್ಟರೇಟ್ ಪಡೆದವರು. ಜೊತೆಗೆ ಅರ್ಥಶಾಸ್ರದ ಪಿತಾಮಹ ಎನಿಸಿಕೊಂಡ ಆಡಂ ಸ್ಮಿತ್ ಹೆಸರಿನಲ್ಲಿ ಇರುವ ಚಿನ್ನದ ಪದಕ ಪಡೆದ ಪ್ರಥಮ ಏಷ್ಯಾದ ವ್ಯಕ್ತಿ. ಇವೆಲ್ಲಕಿಂತ ಹೆಚ್ಚಾಗಿ ಇಡೀ ಜಗತ್ತೇ  ಗೌರವಿಸುವ ಶ್ರೇಷ್ಟ ಆರ್ಥಿಕ ತಜ್ಙ. ಇಂತಹ ವ್ಯಕ್ತಿಯ ಉಸ್ತುವಾರಿಯಲ್ಲಿರುವ , ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಮತ್ತೋರ್ವ ಆರ್ಥಿಕ ತಜ್ಙ ಮೊಂಟೆಕ್ ಸಿಂಗ್ ಅಹ್ಲುವಾಲಿಯ ನ್ಯಾಯಲಯಕ್ಕೆ ನೀಡಿರುವ ವರದಿ ಇಡೀ ದೇಶಾದ್ಯಂತ ನಗೆಪಾಟಲಿಗೀಡಾಗಿದೆ.

1921 ರ ಡಿಸಂಬರ್ 12 ರಂದು ನಡೆದ ಕಾಂಗ್ರೆಸ್ ಅಧೀವೇಶನದಲ್ಲಿ ಮಾತನಾಡಿದ್ದ ಗಾಂಧೀಜಿ ಹೇಳಿದ್ದ ಮಾತುಗಳು ಇವು, “ಒಂದು ದೇಶ ಎಷ್ಡು ಸದೃಡವಾಗಿದೆ ಎಂಬುದು ನಿರ್ಧಾರವಾಗುವುದು ಆ ದೇಶದಲ್ಲಿರುವ ಕೋಟ್ಯಾಧೀಶ್ವರರ ಆಧಾರದ ಮೇಲಲ್ಲ, ಆ ದೇಶದಲ್ಲಿ ಎಷ್ಟು ಮಂದಿ ಬಡವರು ಬಡತನದ ಸುಳಿಯಿಂದ ಹೊರ ಬಂದಿದ್ದಾರೆ ಎಂಬುವುದರ ಆಧಾರದ ಮೇಲೆ.” ಇಂತಹ ಕಟು ವಾಸ್ತವದ ಗ್ರಹಿಕೆಗಳನ್ನು ಮರೆತ ನಮ್ಮ ನಾಯಕರ ಬೌದ್ಧಿಕ ಸ್ಥಿರತೆ ಬಗ್ಗೆ ಈಗ ಸಂಶಯ ಉಂಟಾಗುತ್ತಿದೆ.

ಸ್ವತಃ ಕೇಂದ್ರ ಸರ್ಕಾರ ಧೃಡಪಡಿಸಿರುವ ಅಂಕಿ ಅಂಶದ ಆಧಾರದ ಪ್ರಕಾರ ಭಾರತದಲ್ಲಿ ಶೇ.49ರಷ್ಟು ಮಂದಿ ಬಡವರಿದ್ದಾರೆ. ಸರ್ಕಾರದ ಮಾಹಿತಿಯನ್ನು ಹೊರತು ಪಡಿಸಿದರೆ, ವಾಸ್ತವವಾಗಿ ಈ ದೇಶದಲ್ಲಿ ಶೇ.72 ರಷ್ಟು ಮಂದಿ ಬಢವರು ಇರುವುದು ಸತ್ಯ.

ಬಡತನದ ಬಗ್ಗೆ ಯಾವ ಅನುಭವವಾಗಲಿ, ತಿಳಿದುಕೊಳ್ಳುವ ಮನಸ್ಸಾಗಲಿ ಇಲ್ಲದಿರುವ ಈ ನಾಯಕರು ಒಮ್ಮೆ ತಮ್ಮ ಕುಟುಂಬದ ಪರವಾಗಿ ದಿನಸಿ ಅಂಗಡಿಗೆ, ಅಥವಾ  ತರಕಾರಿ ಅಂಗಡಿಗೆ ಇಲ್ಲವೇ, ಮಧ್ಯಮ ವರ್ಗದ ಹೊಟೇಲ್ ಗೆ ಹೋಗಿ ಬಂದಿದ್ದರೆ ವಾಸ್ತವ ಸ್ಥಿತಿ ಏನೆಂಬುದು ಅರ್ಥವಾಗುತಿತ್ತು.

ಬಡತನ ಕೇವಲ ಹಸಿವಿನ ವಿಚಾರ ಮಾತ್ರವಲ್ಲ, ಅದೊಂದು ಸಮಾಜದ ಬಹುಮುಖಿ ಕೊರತೆ, ಜೊತೆಗೆ ಮೈ ಮತ್ತು ಮನಸ್ಸುಗಳನ್ನು ನಿರಂತರವಾಗಿ ಸುಡುವ ಸಮಸ್ಯೆ ಎಂದು ವಿಶ್ಲೇಷಿಸಿದವರು ಅಮಾರ್ತ್ಯ ಸೇನ್. ಅಲ್ಲಿಯವರೆಗೆ ಜಾಗತೀಕರಣದ ಹುಚ್ಚು ಹೊಳೆಯಲ್ಲಿ ತೇಲುತ್ತಿರುವ ಈ ಜಗತ್ತಿಗೆ ಬಡತನದ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ, ಇಂದಿಗೂ ಇಲ್ಲ.

ಇವತ್ತಿಗೂ ಭಾರತದ 120 ಕೋಟಿ ಜನಸಂಖೈಯಲ್ಲಿ ಶೇ.70 ರಷ್ಟು ಮಂದಿ ಬಡವರಾಗಿ ಉಳಿದಿದ್ದಾರೆ. ಇದು ವಾಸ್ತವಿಕ ಆಧಾರದ ಸಂಖ್ಯೆ. ಆದರೆ ಸರ್ಕಾರದ ಅಂಕಿ ಅಂಶಗಳಲ್ಲಿ ಶೇ 44 ರಷ್ಟು ಮಾತ್ರ. ಈಗ ಇದು ಶೇ. 37 ಕ್ಕೆ ಇಳಿದಿದೆಯಂತೆ.  ಹೆಬ್ಬೆಟ್ಟಿನ ಸಹಿ ಹಾಕುತಿದ್ದ ಅನಕ್ಷರಸ್ತನಿಗೆ ಅವನ ಹೆಸರು ಬರೆಯಲು ಕಲಿಸಿ ಸಾಕ್ಷರ ಎಂದು ಹಣೆಪಟ್ಟಿ ಕಟ್ಟಿ  ದೇಶದಲ್ಲಿ ಅನಕ್ಷರತೆ ತೊಲಗಿತು ಎಂದು ಅಂತರಾಷ್ಟೀಯ ಮಟ್ಟದಲ್ಲಿ ಡಂಗೂರ ಸಾರಿದ ಕಥೆಯಷ್ಟು ಸುಲಭವಲ್ಲ ಈ ಸಂಗತಿ. ಭಾರತದ ಬಡ ಬೊರೇಗೌಡ ಅವಿದ್ಯಾವಂತ ಅಥವಾ ವಿದ್ಯಾವಂತ ಯಾವ ವರ್ಗಕ್ಕೆ ಸೇರಿದರೂ ಗಳಿಸುವುದು ಇಲ್ಲವೇ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ನಿಜವಾದ ಬಡವನನ್ನು ಬಡವನಲ್ಲವೆಂದು ಘೋಷಿಸಿ ಅವನ ಸವಲತ್ತುಗಳನ್ನು ಕಿತ್ತುಕೊಳ್ಳುವುದು ಅಮಾನವೀಯ ಮತ್ತು ಅಮಾನುಷ ಕೃತ್ಯ.

ಈ ಕಾರಣಕ್ಕಗಿಯೆ ಪತ್ರಕರ್ತ ಪಿ.ಸಾಯಿನಾಥ್ ಕಳೆದ 20 ವರ್ಷಗಳಲ್ಲಿ ನಮ್ಮ ಅರ್ಥಶಾಸ್ರ ಮತ್ತು ಅರ್ಥಶಾಸ್ರಜ್ಞರುಗಳ ಯಶಸ್ಸ್ಸು ಎಂದರೆ, ಜನಸಾಮಾನ್ಯರ ಬದುಕಿಗೆ ಸಂಬಂಧವಿರದಂತೆ ಅರ್ಥವ್ಯವಸ್ಥೆಗಳನ್ನು ರೂಪಿಸಿರುವುದು ಎಂದು ಗೇಲಿ ಮಾಡಿದ್ದಾರೆ.

ತೆಂಡೂಲ್ಕರ್ ಸಮಿತಿಯ ಆಧಾರದ ಮೇಲೆ ವರದಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ, ಜೊತೆಗೆ ಈ ಅಂಕಿ ಅಂಶ ಬದಲಾಗುವ ಸಾಧ್ಯತೆ ಕೂಡ ಇದೆ. ಭಾರತದ ನಾಗರೀಕ ತೆಗೆದುಕೊಳ್ಳುವ ಆಹಾರದ ಪ್ರಮಾಣದ ಆಧಾರದ ಮೇಲೆ ಆಂದರೆ, ಮನುಷ್ಯನೊಬ್ಬನಿಗೆ  ದಿನವೊಂದಕ್ಕೆ ನಗರ ಪ್ರದೇಶದಲ್ಲಿ 2100 ಕ್ಯಾಲೋರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 2400 ಕ್ಯಾಲೋರಿ ಗಳಷ್ಟು ಪ್ರಮಾಣದ ಆಹಾರದ ಅಗತ್ಯವಿದೆ. ಸಧ್ಯ ಭಾರತದಲ್ಲಿ1100 ರಿಂದ  1600 ರಷ್ಟು ಕ್ಯಾಲೋರಿ ಅಹಾರ ಮಾತ್ರ ದೊರೆಯುತ್ತಿದೆ. ಇವತ್ತಿಗೂ ಹಸಿವಿನಿಂದ ದಿನವೊಂದಕ್ಕೆ 10 ಸಾವಿರಕ್ಕೂ ಅಧಿಕ ಮಕ್ಕಳು ಭಾರತದಲ್ಲಿ ಸಾಯುತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ವಿಭಾಗದ ವರದಿಯಲ್ಲಿ ತಿಳಿಸಲಾಗಿದೆ. ಈವರೆಗೆ 2ಲಕ್ಷದ 45 ಸಾವಿರದ ಅಧಿಕ ರೈತರು ಸಾವಿಗೆ ಶರಣಾಗಿದ್ದಾರೆ. ಇಂತಹ ಕಟು ವಾಸ್ತವ ಸಂಗತಿಗಳು ನಮ್ಮೆದುರು ಇದ್ದಾಗಲೂ ಕೂಡ ಅಂತರಾಷ್ಟೀಯ ಸಮುದಾಯದೆದುರು ಭಾರತದಲ್ಲಿ ಬಡತನವಿಲ್ಲ ಎಂದು ತೋರ್ಪಡಿಸಿಕೊಳ್ಳಲು ಈ ನಾಟಕದ ಅವಶ್ಯಕತೆ ಇರಲಿಲ್ಲ. ಇಲ್ಲಿಯ ಬಡವನೊಬ್ಬ ಸಾಯಲು ನಿರ್ಧರಿಸಿ ವಿಷ ಕೊಳ್ಳಲು ಹೋದರೆ, ಮಾರುಕಟ್ಟೆಯಲ್ಲಿ ಆತನಿಗೆ  26 ರೂಪಾಯಿಗೆ ವಿಷ ಕೂಡ ಸಿಕ್ಕುವುದಿಲ್ಲ.

ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಅರ್ಥಶಾಸ್ರಜ್ಞೆ ಉತ್ಸಾ ಪಟ್ನಾಯಕ್ ವರ್ತಮಾನದ ಬೆಲೆ ಸೂಚ್ಯಂಕ ಆಧರಿಸಿ ಆಹಾರಕ್ಕಾಗಿ ಕನಿಷ್ಠ ಗ್ರಾಮಾಂತರ ಪ್ರದೇಶದಲ್ಲಿ 36 ರೂಪಾಯಿಗಳು, ನಗರ ಪ್ರದೇಶದಲ್ಲಿ 60 ರೂಪಾಯಿಗಳನ್ನು ಮನುಷ್ಯನೊಬ್ಬ ಖರ್ಚು ಮಾಡಬೇಕಾಗಿದೆ ಎಂದಿದ್ದಾರೆ.

ಈ ದೇಶದ ಅಸಮಾನತೆಯ ಬಗ್ಗೆ ಎಲ್ಲಗೂ ತಿಳಿದಿದೆ. ಜಿಂದಾಲ್ ಸಮೂಹದ ಅಧ್ಯಕ್ಷ ನವೀನ್ ಜಿಂದಾಲ್ ವಾರ್ಷಿಕವಾಗಿ 69 ಕೋಟಿ, ರಿಲೆಯನ್ಸ್ ಸಮೂಹದ ಮುಖೇಶ್ ಅಂಬಾನಿ 42 ಕೋಟಿ, ಅನಿಲ್ ಅಂಬಾನಿ 35 ಕೋಟಿ ಸಂಬಳ ಪಡೆಯುತಿದ್ದಾರೆ. ನಮ್ಮ ಕೆಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ತಿಂಗಳಿಗೆ ಪ್ರವಾಸ ಭತ್ಯ, ಮನೆಬಾಡಿಗೆ ಭತ್ಯ ಹೊರತುಪಡಿಸಿ, 1ಲಕ್ಷದ 20 ಸಾವಿರ ಸಂಬಳ ಪಡೆಯುತಿದ್ದಾನೆ.

ಇದೇ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ ಕನಿಷ್ಟ 100 ಕೂಲಿ ನಿಗದಿಪಡಿಸಿರುವಾಗ , ಆಹಾರಕ್ಕಾಗಿ 26 ರುಪಾಯಿಯನ್ನು ಹೇಗೆ ನಿರ್ಧರಿಸಿತು?

ಮುಕ್ತ ಮಾರುಕಟ್ಟೆಯ ಪ್ರಭುತ್ವದ ಈ ಜಗತ್ತಿನಲ್ಲಿ ಬಡವರಿಗೆ ನೀಡುವ ಉಚಿತ ಶಿಕ್ಷಣ ಆರೋಗ್ಯ, ಸಬ್ಸಿಡಿಯುಕ್ತ ಆಹಾರಧಾನ್ಯ ಎಲ್ಲವೂ ವಿಶ್ವ ವಾಣಿಜ್ಯ ಸಂಘಟನೆ ಹಾಗೂ ಅದರ ಕೂಸುಗಳಾದ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟೀಯ ನಿಧಿ  ಸಂಸ್ಥೆ ಇವುಗಳ ಕೆಂಗಣ್ಣಿಗೆ ಗುರಿಯಾಗಿವೆ. ಭಾರತ ಈಗ ಎಲ್ಲಾ ಸಬ್ಸಿಡಿಗಳನ್ನು ತೆಗೆದುಹಾಕಬೇಕಾಗಿದೆ. ಆ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ ಇದಾಗಿದೆ. 12 ನೇ ಪಂಚವಾರ್ಷಿಕ ಯೋಜನೆಯ ರೂಪು ರೇಷೆಗಳನ್ನು ಗಮನಿಸಿದರೆ, ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳಶಾಹಿಗಳ  ಮಾರುಕಟ್ಟೆಯ ಪ್ರಭುತ್ವಕ್ಕೆ ಬಲಿ ಕೊಡುವ ಸಂಚು ನಡೆದಿದೆ ಎಂದು ಊಹಿಸಬಹುದು.

1990 ರ ದಶಕದಲ್ಲಿ ಜಾಗತೀರಣಕ್ಕೆ ಬಾರತದ ಹೆಬ್ಬಾಗಿಲನ್ನು ತೆರೆದವರು ಇದೇ ಮನಮೋಹನ್ ಸಿಂಗ್. ಜಾಗತೀಕರಣದ ಒಳಿತು, ಕೆಡಕುಗಳು ಏನೇ ಇರಲಿ, ವೈರುಧ್ಯಗಳನ್ನು ಸೃಷ್ಟಿಸಿ, ಉಳ್ಳವರ ಭಾರತ ಮತ್ತು ನರಳುವವರ ಭಾರತ ಎಂಬ ಎರಡು ಭಾರತ ಗಳು ಸೃಷ್ಟಿಯಾಗಿರುವುದು ಸತ್ಯ. ಬಡವರ ನಿರ್ಮೂಲನೆ ಮಾಡುವುದರ ಮೂಲಕ ಬಡತನ ನಿರ್ಮೂಲನೆ ಮಾಡುವುದು ಈಗಿನ ಗುರಿಯಾಗಿದೆ.

ಇಲ್ಲಿ ಗಾಳಿ, ನೀರು, ಸೇರಿದಂತೆ ಎಲ್ಲವೂ ಮಾರಾಟದ ಸರಕುಗಳಾಗಬೇಕು. ಆಗಲೇ ಜಾಗತೀಕರಣಕ್ಕೆ, ಹಾಗೂ ಅದರ ಪ್ರತಿಪಾದಕರಿಗೆ ನೆಮ್ಮದಿ.

ಜೀವನದಿಗಳ ಸಾವಿನ ಕಥನ – 6

– ಡಾ.ಎನ್.ಜಗದೀಶ್ ಕೊಪ್ಪ

ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ನಡೆಯುವ ತೀವ್ರತರವಾದ ರಾಸಾಯನಿಕ ಕ್ರಿಯೆಯಿಂದಾಗಿ ನೀರಿನ ಗುಣಮಟ್ಟದ ಬದಲಾವಣೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಜಲಾಶಯಗಳಲ್ಲಿ ತಿಂಗಳು ಇಲ್ಲವೆ ವರ್ಷಾನುಗಟ್ಟಲೆ ಶೇಖರವಾಗುವ ನೀರು ಜಲಚರಗಳಿಗಷ್ಟೇ ಅಲ್ಲ, ಅದು ಕುಡಿಯಲು ಹಾಗೂ ಕೃಷಿಚಟುವಟಿಕೆಗೆ ಬಳಸುವ ಗುಣಮಟ್ಟ ಹೊಂದಿರುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.

ಸಾಮಾನ್ಯವಾಗಿ ಜಲಾಶಯದಿಂದ ಬಿಡುಗಡೆಯಾಗಿ ಹರಿಯುವ ನೀರು ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಬೆಚ್ಚಗಿನ ಉಷ್ಣಾಂಶವನ್ನು ಹೊಂದಿರುತ್ತದೆ. ಈ ರೀತಿಯ ಪ್ರಕ್ರಿಯೆ ನೀರಿನಲ್ಲಿ ಬಿಡುಗಡೆಯಾಗುವ ಆಮ್ಲಜನಕದ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಈ ವ್ಯತ್ಯಾಸದಿಂದಾಗಿ ಸಿಹಿ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತಿದ್ದ ಸೀಗಡಿ ಹಾಗೂ ಅನೇಕ ಜಲಚರ ಪ್ರಭೇದಗಳಿಗೆ ಮಾರಕವಾಗಿದೆ.

ಜಲಾಶಯದಲ್ಲಿ ಮೊದಲ ವರ್ಷ ಶೇಖರಗೊಳ್ಳುವ ನೀರು, ಅತ್ಯಂತ ಹೆಚ್ಚಿನ ರೀತಿಯಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಭೂಮಿ, ಅಲ್ಲಿನ ಅರಣ್ಯ ಪ್ರದೇಶ, ಗಿಡ-ಮರ, ನೀರಿನಲ್ಲಿ ಸತ್ತ ಪ್ರಾಣಿಗಳ ಅವಶೇಷಗಳ ಕೊಳೆಯುವಿಕೆಯಿಂದಾಗಿ ನೀರಿನಲ್ಲಿ ಅತ್ಯಧಿಕ ಮಟ್ಟದ ಮಿಥೇನ್ ಅನಿಲ ಮತ್ತು ಇಂಗಾಲಾಮ್ಲ ಬಿಡುಗಡೆಯಾಗುತ್ತದೆ.

1964ರಲ್ಲಿ ದಕ್ಷಿಣ ಅಮೆರಿಕಾದ ಬ್ರೊಕೊಪಾಂಡೊ ಎಂಬ ಅಣೆಕಟ್ಟು ನಿರ್ಮಾಣವಾದಾಗ, ಸುರಿನಾಮ್ ಪ್ರದೇಶದ 1,500 ಚ.ಕಿ.ಮೀ. ಮಳೆಕಾಡು ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಯಿತು. ಜಲಾಶಯದಲ್ಲಿ ಮೊದಲ ವರ್ಷ ಶೇಖರವಾದ ನೀರಿನಲ್ಲಿ ಹೈಡ್ರೊಜನ್ ಸಲ್ಫೈಡ್ ಅತ್ಯಧಿಕ ಮಟ್ಟದಲ್ಲಿ ಉತ್ಪಾದನೆಯಾದ್ದರಿಂದ ನೀರಿನ ದುರ್ವಾಸನೆಯಿಂದಾಗಿ, ಮೊದಲ ಎರಡು ವರ್ಷಗಳ ಕಾಲ ಅಣೆಕಟ್ಟು ನಿರ್ವಹಣಾ ಸಿಬ್ಬಂಧಿ ಮುಖವಾಡ ತೊಟ್ಟು ಕಾರ್ಯ ನಿರ್ವಹಿಸಬೇಕಾಯಿತು. ಜೊತೆಗೆ ವಿದ್ಯುತ್ ಉತ್ಪಾದನೆಗಾಗಿ ಟರ್ಬೈನ್ ಇಂಜಿನ್ನಿಗೆ ಕೊಳವೆ ಮೂಲಕ ನೀರು ಹಾಯಿಸಿದ ಪ್ರಯುಕ್ತ, ಕೊಳವೆ ಹಾಗೂ ಇಂಜಿನ್ಗಳು ತುಕ್ಕು ಹಿಡಿದು 1971 ರಲ್ಲಿ ಇವುಗಳ ದುರಸ್ತಿಗೆ 40 ದಶಲಕ್ಷ ಡಾಲರ್ ಹಣ ಖರ್ಚಾಯಿತು. ಇದು ಅಣೆಕಟ್ಟು ನಿರ್ಮಾಣ ವೆಚ್ಚದ ಶೇ.1.7 ರಷ್ಟಿತ್ತು. ನಂತರ ಜಲಾಶಯದ ಕೆಳಭಾಗದ 110 ಕಿ.ಮೀ. ದೂರದಲ್ಲಿ ಹರಿವ ನೀರಿನಲ್ಲಿ ಆಮ್ಲಜನಕ ಉತ್ಪತ್ತಿಯಾಗಿ ನೀರಿನ ಗುಣ ಮಟ್ಟ ಸುಧಾರಿಸಿತು.

ಇಂತಹದೇ ನೈಸರ್ಗಿಕ ದುರಂತ ಬ್ರೆಜಿಲ್‌ನಲ್ಲೂ ಸಹ ಸಂಭವಿಸಿತು. ಬಲ್ಖಿನಾ ಅಣೆಕಟ್ಟು ನಿರ್ಮಾಣದಿಂದಾಗಿ ಅಲ್ಲಿನ 2,250 ಚ.ಕಿ.ಮೀ. ಅರಣ್ಯ(ಮಳೆಕಾಡು) ಪ್ರದೇಶ ಜಲಾಶಯದಲ್ಲಿ ಮುಳುಗಿತು. ಇದರಿಂದಾಗಿ ಅಣೆಕಟ್ಟು ನಿರ್ವಹಣಾ ವೆಚ್ಚ ಶೇ. 9ರಷ್ಟು ಅಧಿಕಗೊಂಡಿತು.

ಅರ್ಜೆಂಟೈನಾ, ಪೆರುಗ್ವೆ ದೇಶಗಳ ನಡುವೆ ಯುಕ್ರಿಟಾ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಜಲಾಶಯದ ನೀರಿನ ರಾಸಾಯನಿಕ ಕ್ರಿಯೆಯಿಂದ 1,200ರಷ್ಟು ಜಲಚರ ಪ್ರಬೇಧಗಳು ಸತ್ತುಹೋದವು.  ಕೆನಡಾ, ಫಿನ್ಲ್ಯಾಂಡ್, ಥಾಯ್ಲೆಂಡ್ ದೇಶಗಳ ಜಲಾಶಯಗಳಲ್ಲಿ ಬೆಳೆದ ಮೀನುಗಳಲ್ಲಿ ಹೆಚ್ಚಿನ ಮಟ್ಟದ ಪಾದರಸದ ಅಂಶವಿರುವುದು ಕಂಡುಬಂದಿತು.

ಇವೆಲ್ಲವುಗಳಿಗಿಂತ ಗಂಭೀರ ಸಂಗತಿಯೆಂದರೆ, ಜಲಾಶಯದ ನೀರು ಆವಿಯಾಗುವಿಕೆಯ ಪ್ರಮಾಣ ಆತಂಕವನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಸೂರ್ಯನ ಪ್ರಖರ ಬಿಸಿಲಿನ ಶಾಖದಿಂದ ಜಲಾಶಯದ ನೀರು ಆವಿಯಾಗುವ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದೆ. ಜಗತ್ತಿನ ಎಲ್ಲಾ ಜಲಾಶಯಗಳಲ್ಲಿ ಶೇಖರವಾಗಿರುವ ನೀರಿನಲ್ಲಿ 170 ಘನ ಚ.ಕಿ.ಮೀ.ನಷ್ಟು ನೀರು ವಾರ್ಷಿಕವಾಗಿ ಆವಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ಜಗತ್ತಿನಲ್ಲಿ ಬಳಕೆಯಾಗುತ್ತಿರುವ ಕುಡಿಯುವ ನೀರಿನ ಪ್ರಮಾಣದ ಶೇ.7 ರಷ್ಟು. ಈಜಿಪ್ಟ್ನ ನೈಲ್ ನದಿಯ ನಾಸರ್ ಜಲಾಶಯದಿಂದ ಆವಿಯಾಗುವ ನೀರಿನ ಪ್ರಮಾಣ 11.2 ಘನ ಚ.ಕಿ.ಮೀ. ಅಂದರೆ ಈ ನೀರು ಆಫ್ರಿಕಾ ಖಂಡದ ಎಲ್ಲಾ ರಾಷ್ಟ್ರಗಳು ಗೃಹ ಬಳಕೆಗೆ ಉಪಯೋಗಿಸುತ್ತಿರುವ ಪ್ರಮಾಣದಷ್ಟು.

ಮೀನು ಸಂತತಿಯ ಅವಸಾನ

ಅಭಿವೃದ್ಧಿ ಯುಗದ ರಭಸದ ಬೆಳವಣಿಗೆಯಲ್ಲಿ, ನಮ್ಮಗಳ ಚಿಂತನಾ ಲಹರಿ ನಾಗಾಲೋಟದಲ್ಲಿ ಓಡುತ್ತಿರುವಾಗ, ಅಭಿವೃದ್ಧಿಯ ಯೋಜನೆಯಿಂದಾಗುವ ಸಾಫಲ್ಯದ ಜೊತೆ ಅನಾಹುತಗಳ ಕಡೆಗೂ ನಮ್ಮ ಗಮನವಿರಬೇಕು. ಜೀವಜಾಲದ ಸೂಕ್ಷ್ಮತೆಯನ್ನು ಸಾವಧಾನವಾಗಿ ಅವಲೋಕಿಸುವ ಗುಣವೇ ನಮ್ಮಿಂದ ದೂರವಾಗಿದೆ. ಅಣೆಕಟ್ಟು, ಜಲಾಶಯ, ಅವುಗಳಿಂದ ದೊರೆಯುವ ನೀರು, ವಿದ್ಯುತ್ ಮಾತ್ರ ನಮ್ಮ ಕೇಂದ್ರ ಗುರಿಯಾಗಿದೆ. ನದಿಯ ನೀರಿನ ಓಟಕ್ಕೆ ತಡೆಯೊಡ್ಡಿದ ಪರಿಣಾಮ ಸಾವಿರಾರು ಜಾತಿಯ ಮೀನುಗಳ ಸಂತತಿಗೆ ನಾವು ಅಡ್ಡಿಯಾಗಿದ್ದೇವೆ ಎಂಬ ಅಂಶವೇ ನಮಗೆ ಮರೆತು ಹೋಗಿರುವುದು ವರ್ತಮಾನದ ದುರಂತ.

ಅಮೆರಿಕಾದ ಕೊಲಂಬಿಯಾ ನದಿಯೊಂದರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮೊದಲು 10 ರಿಂದ 16 ದಶಲಕ್ಷದಷ್ಟಿದ್ದ ಸಾಲ್ಮನ್ ಜಾತಿಯ ಮೀನುಗಳ ಸಂಖ್ಯೆ ನಂತರದ ದಿನಗಳಲ್ಲಿ 1.5 ದಶಲಕ್ಷಕ್ಕೆ ಇಳಿಯಿತು. ಈ ನದಿಯುದ್ದಕ್ಕೂ 30 ಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ಮೀನುಗಾರಿಕೆಯಿಂದ ದೊರೆಯುತ್ತಿದ್ದ 6.5 ಶತಕೋಟಿ ಡಾಲರ್ ಆದಾಯಕ್ಕೆ ಧಕ್ಕೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಪಾಕಿಸ್ತಾನದಲ್ಲಿ ಹಲ್ಸಾ ಎಂಬ ಅಪರೂಪದ ಮೀನಿನ ಸಂತತಿ ಸೇರಿದಂತೆ ಮೊಸಳೆ, ಡಾಲ್ಫಿನ್, ಸೀಗಡಿ ಇವುಗಳ ಸಂತಾನೋತ್ಪತ್ತಿ ಕುಂಠಿತಗೊಂಡಿದೆ.

ಇವುಗಳ ಸಂತಾನೋತ್ಪತ್ತಿಗಾಗಿ ಹಾಗೂ ನದಿ ಮತ್ತು ಜಲಾಶಯಗಳ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಜಗತ್ತಿನ ಬಹುತೇಕ ರಾಷ್ಟ್ರಗಳು ವಾರ್ಷಿಕವಾಗಿ ಕೋಟ್ಯಾಂತರ ಹಣವನ್ನು ವ್ಯಯಿಸುತ್ತಿವೆ.

ಅಮೆರಿಕಾ ದೇಶವೊಂದೆ ಸಾಲ್ಮನ್ ಜಾತಿಯ ಮೀನಿನ ರಕ್ಷಣೆಗಾಗಿ ಕೊಲಂಬಿಯಾ ನದಿ ಪಾತ್ರದಲ್ಲಿ 350 ದಶಲಕ್ಷ ಡಾಲರ್ ಹಣವನ್ನು ಪ್ರತಿ ವರ್ಷ ಖರ್ಚು ಮಾಡುತ್ತಿದೆ.

ಸರಕಾರಗಳು ಏನೇ ಕಸರತ್ತು ನಡೆಸಿದರೂ ಮೀನುಗಳ ಸಂತಾನೋತ್ಪತ್ತಿ ಯೋಜನೆ ವಿಫಲವಾಗಿದೆ. ಸಮುದ್ರದ ಉಪ್ಪು ನೀರಿನಿಂದ ಹೊರ ಬರುತ್ತಿದ್ದ ಹಲವು ಜಾತಿಯ ಮೀನುಗಳು, 15 ದಿನಗಳ ಕಾಲ ಸತತವಾಗಿ ನದಿಗಳಲ್ಲಿ ಈಜಿ, ಸಿಹಿನೀರಿನಲ್ಲಿ ಸಂತಾನೋತ್ಪತ್ತಿ ನಡೆಸಿ ಮತ್ತೆ ತಮ್ಮ ಮರಿಗಳೊಂದಿಗೆ ಸಮುದ್ರ ಸೇರುತ್ತಿದ್ದವು. ಅವುಗಳ ಸರಾಗ ಹಾಗೂ ಸುದೀರ್ಘ ಪಯಣಕ್ಕೆ ಅಣೆಕಟ್ಟು ಅಡ್ಡ ಬಂದ ಪ್ರಯುಕ್ತ ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆಗೆ ಕುತ್ತು ಬಂದಿತು. ಕೆಲವು ರಾಷ್ಟ್ರಗಳಲ್ಲಿ ಅಣೆಕಟ್ಟು ಪ್ರದೇಶದ ಪಕ್ಕದಲ್ಲಿ ನದಿಗೆ ಬೈಪಾಸ್ ರೀತಿಯಲ್ಲಿ ಕೃತಕ ನದಿ ನಿರ್ಮಿಸಿ ಮೀನುಗಳ ಸಂತಾನೋತ್ಪತ್ತಿಗೆ ಪ್ರಯತ್ನಿಸಿದರೂ ಕೂಡ ಈ ಯೋಜನೆ ವಿಫಲವಾಯ್ತು.

ಇಷ್ಟೆಲ್ಲಾ ಅನಾಹುತಗಳ ಹಿಂದೆ, ಅಣೆಕಟ್ಟು ನಿರ್ಮಾಣಕ್ಕೆ ಮುನ್ನ, ಪರಿಸರದ ಮೇಲಿನ ಪರಿಣಾಮ, ಯೋಜನೆಯ ಸಾಧ್ಯತೆಗಳ ಬಗ್ಗೆ ಸಮೀಕ್ಷಾ ವರದಿ ತಯಾರಿಸುವ ಅಂತರಾಷ್ಟ್ರೀಯ ಮಾಫಿಯಾ ಒಂದಿದೆ. ಇದು ಬಹುರಾಷ್ಟ್ರ ಕಂಪನಿಗಳ, ಸಾಲನೀಡುವ ವಿಶ್ವಬ್ಯಾಂಕ್ನ ಕೈಗೊಂಬೆಯಂತೆ ವರ್ತಿಸುತ್ತಿದೆ.

ಪರಿಸರದ ಮೇಲಿನ ಪರಿಣಾಮ ಕುರಿತು ನಡೆಸಲಾಗುವ ಬಹುತೇಕ ಅಧ್ಯಯನಗಳು ಅಮೆರಿಕಾದ ಪ್ರಭಾವದಿಂದ ಪ್ರೇರಿತಗೊಂಡು, ಅಣೆಕಟ್ಟುಗಳ ನಿರ್ಮಾಣದಿಂದ ಆಗಬಹುದಾದ ವಾಸ್ತವ ಚಿತ್ರಣವನ್ನು ಮರೆಮಾಚಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಅಣೆಕಟ್ಟು ಕುರಿತಾದ ನೈಸರ್ಗಿಕ ಪರಿಣಾಮ ಹಾಗೂ ಸಾಧಕ-ಬಾಧಕ ಕುರಿತ ವರದಿ ನೀಡುವ ಹಾಗೂ ಅಣೆಕಟ್ಟು ನಿರ್ಮಾಣ ಕಾಮಗಾರಿ ಕುರಿತು ಸಲಹೆ ನೀಡುವ ವೃತ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪ್ರಮಾಣದ ದಂಧೆಯಾಗಿ ಬೆಳೆದಿದೆ. 1990ರ ದಶಕದಲ್ಲಿ ಬ್ರಿಟೀಷ್ ಕನ್ಸಲ್ಟೆಂಟ್ ಬ್ಯೂರೊ ಎನ್ನುವ ಸಂಸ್ಥೆ 2.5 ಬಿಲಿಯನ್ ಡಾಲರ್ ಹಣವನ್ನು ಕೇವಲ ವರದಿ ಮತ್ತು ಸಲಹೆ ನೀಡುವುದರ ಮೂಲಕ ಗಳಿಸಿತ್ತು.

ಕಳೆದ ಒಂದು ದಶಕದಿಂದ ಅಣೆಕಟ್ಟು ಕಾಮಗಾರಿ ನಿರ್ವಹಿಸುವ ಬೃಹತ್ ಕಂಪನಿಗಳು ತಾವೇ ಇಂತಹ ಸಲಹಾ ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದು, ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ನೀಡುವ ವರದಿ ಅಣೆಕಟ್ಟು ನಿರ್ಮಾಣಕ್ಕೆ ಪೂರವಾಗಿರುತ್ತವೆ. ವರದಿಯಲ್ಲಿ ಕಾಣಿಸುವ ಮುಳುಗಡೆಯಾಗುವ ಪ್ರದೇಶ, ಅರಣ್ಯ, ಒಕ್ಕಲೆಬ್ಬಿಸುವ ಜನವಸತಿ ಪ್ರದೇಶ, ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ರೂಪಿಸುವ ಅಂದಾಜು ವೆಚ್ಚ ಇವೆಲ್ಲವೂ ನೈಜ ಸ್ಥಿತಿಯಿಂದ ದೂರವಾಗಿರುತ್ತವೆ. ಸರಕಾರಗಳು, ಅದರ ಮಂತ್ರಿಗಳು, ಅಧಿಕಾರಿಶಾಹಿ ಹೀಗೆ ಎಲ್ಲವನ್ನೂ, ಎಲ್ಲರನ್ನೂ ಏಕ ಕಾಲಕ್ಕೆ ನಿಭಾಯಿಸುವ ಕುಶಲತೆಯನ್ನು ಹೊಂದಿರುವ ಈ ಸಲಹಾ ಸಂಸ್ಥೆಗಳು, ಮಾಧ್ಯಮಗಳನ್ನು ದಿಕ್ಕು ತಪ್ಪಿಸುವ ಕಲೆಯನ್ನೂ ಸಹ ಕರಗತ ಮಾಡಿಕೊಂಡಿವೆ.

ಇದಕ್ಕೆ ಸ್ಪಷ್ಟ ಉದಾಹರಣೆಗಳೆಂದರೆ, ಥಾಯ್ಲೆಂಡ್‌ನ ನ್ಯಾಮ್ ಚೋಆನ್ ಅಣೆಕಟ್ಟು ನಿರ್ಮಾಣದ ಸಮಯ ಜೈವಿಕ ಪರಿಸರ ನಾಶವಾಗುವ ಪ್ರಮಾಣ ಕುರಿತಂತೆ ನೀಡಿದ ವರದಿಯಲ್ಲಿ 122 ಜಾತಿ ವನ್ಯ ಮೃಗಗಳ ಸಂತತಿಗೆ ಧಕ್ಕೆಯಾಗಲಿದೆ ಎಂದು ಹೇಳಲಾಗಿತ್ತು. ವಾಸ್ತವವಾಗಿ ರಾಯಲ್ ಫಾರೆಸ್ಟ್ ಡಿಪಾರ್ಟ್‌ಮೆಂಟ್ ನಡೆಸಿದ ಸಮೀಕ್ಷೆಯಲ್ಲಿ 338 ಜೈವಿಕ ವೈವಿಧ್ಯತೆಗಳಿಗೆ ಅಪಾಯವಾಗುವ ಸೂಚನೆ ಕಂಡು ಬಂತು,.

ಭಾರತದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಈ ಮೂರು ರಾಜ್ಯಗಳಲ್ಲೂ ಹರಿಯುವ ನರ್ಮದಾ ನದಿಗೆ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದಕ್ಕೆ ವಿಶ್ವಬ್ಯಾಂಕ್ ಹಣಕಾಸಿನ ನೆರವು ನೀಡಿದೆ. ಅಣೆಕಟ್ಟು ನಿರ್ಮಾಣದ ನೈಸರ್ಗಿಕ ಪರಿಣಾಮ ಕುರಿತಂತೆ ವಿಶ್ವಬ್ಯಾಂಕ್ ತಾನೇ ನಿಯೋಜಿಸಿದ್ದ ಸಂಸ್ಥೆಯಿಂದ ವರದಿ ತಯಾರಿಸಿದ್ದು, ಈವರೆಗೆ ಈ ವರದಿಯನ್ನು ಸಾರ್ವಜನಿಕವಾಗಿ ಇರಲಿ ಭಾರತ ಸರಕಾರಕ್ಕೂ ನೀಡಿಲ್ಲ.

ಹೀಗೆ ಅಣೆಕಟ್ಟು ನಿರ್ಮಾಣದ ಹಿಂದೆ ಅಗೋಚರ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಎಲ್ಲಾ ಅಡೆ-ತಡೆಗಳನ್ನು ಧ್ವಂಸ ಮಾಡುವಷ್ಟು ದೈತ್ಯ ಶಕ್ತಿಯನ್ನು ಪಡೆದಿವೆ.

(ಮುಂದುವರಿಯುವುದು)

ಈ ಸರಣಿಯ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾವೆಂಬುದು ಬದುಕಿನಲ್ಲಿ ಬರುವ ಏಕೈಕ ಆಮಂತ್ರಣ

ತಂತ್ರಜ್ಙಾನ ರಂಗದಲ್ಲಿ ದಂತ ಕಥೆಯಂತೆ ಬದುಕಿ ಇದೇ 5 ರಂದು ತೀರಿಹೋದ ಸ್ಟೀವ್ ಜಾಬ್ಸ್‌ದು ತನ್ನ ಹೊಸ ಹೊಸ ಅವಿಷ್ಕಾರಗಳ ಮೂಲಕ ಇಂದಿನ ತಲೆಮಾರಿನ ಹೃದಯಗಳಲ್ಲಿ ಶಾಶ್ವತ ನಿಲ್ಲುವಂತಹ ವ್ಯಕ್ತಿತ್ವ. ಸಾವಿನ ತೂಗುಕತ್ತಿಯ ಕೆಳಗೇ ಬದುಕು ದೂಡುತ್ತಾ ಜಗತ್ತಿನ ಮಾಹಿತಿ ರಂಗಕ್ಕೆ ಐಪ್ಯಾಡ್, ಐಪಾಡ್, ಐಪೊನ್ ಗಳನ್ನು ನೀಡಿದ ಅಪ್ರತಿಮ ಸಾಹಸಿ, ಸ್ಟೀವ್. 2005 ರ ಜೂನ್ 12 ರಂದು ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿ.ವಿ.ಯ ಘಟಿಕೋತ್ಸವದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳಲು ಸಿದ್ಧವಾಗಿದ್ದ ಯುವ ಜನಾಂಗವನ್ನು ಕುರಿತು ಸ್ಟೀವ್ ಮಾಡಿದ ಭಾಷಣ ಇಂದಿಗೂ ಪ್ರಸಿದ್ಧವಾಗಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

ಡಾ.ಎನ್. ಜಗದೀಶ್ ಕೊಪ್ಪ

ನಾನು 17 ನೇ ವಯಸ್ಸಿನಲ್ಲಿ ಓದಿದ ವಾಕ್ಯ ನನಗಿನ್ನೂ ನೆನಪಿದೆ. ಆ ಸಾಲುಗಳು ಹೀಗಿದ್ದವು: “ಈ ದಿನವೇ ನನ್ನ ಕಡೆಯ ದಿನವೆಂದು ನೀನು ಬದುಕಿದರೇ ನಿನ್ನ ನಿರ್ಧಾರ ಸರಿ.”‘ ಕಳೆದ 33 ವರ್ಷಗಳಿಂದಲೂ ನನ್ನನ್ನು ಈ ಸಾಲುಗಳು ಕಾಡುತ್ತಾ ಬದುಕನ್ನ ಮುನ್ನೆಡೆಸಿವೆ. ಪ್ರತಿ ದಿನ ಬೆಳಿಗ್ಗೆ ಕನ್ನಡಿಯ ಮುಂದೆ ನಿಂತು ನಾನು ಕೇಳಿಕೊಳ್ಳುತ್ತೇನೆ, ” ಈದಿನ ನಿನ್ನ ಕೊನೆಯ ದಿನವಿರಬಹುದೆ?” ಆವಾಗ ನನ್ನ ಒಳ ಮನಸ್ಸು ಹೇಳುತ್ತದೆ, “ಇಲ್ಲ ಇನ್ನೂ ಹಲವಾರು ದಿನಗಳು ಸರತಿಯ ಸಾಲಿನಲ್ಲಿ ಕಾಯುತ್ತಿವೆ,” ಎಂದು. ಆಗ ನನಗನಿಸುತ್ತದೆ, ಹೌದು, ನನ್ನಿಂದ ಕೆಲವು ಬದಲಾವಣೆಗಳು ಆಗಬೇಕಾಗಿದೆಯೆಂದು. ನಾನು ಸಧ್ಯದಲ್ಲೇ ಸಾಯುತ್ತೀನಿ ಎಂದು ನಾನು ಬಲ್ಲೆ, ಈ ಕಾರಣಕ್ಕಾಗಿ ಬದುಕಿನಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಬಾಚಿ ತಬ್ಬಿಕೊಳ್ಳುತಿದ್ದೇನೆ. ಏಕೆಂದರೆ, ಸಾವಿನ ಸಮ್ಮುಖದಲ್ಲಿ ಸಂತೋಷ, ಮುಜುಗರ, ವೈಫಲ್ಯ ಇವೆಲ್ಲವೂ ಗೌಣ. ಹಾಗಾಗಿ ಬದುಕಿನ ವಾಸ್ತವ ಸಂಗತಿಗಳ ಬಗ್ಗೆ ಯೋಚಿಸುತ್ತೇನೆ. ಸಾವಿನ ಮೂಲಕ ಬದುಕಿನಲ್ಲಿ ಎದುರಿಸಬೇಕಾದ ಹಲವಾರು ಸಂಗತಿಗಳು ದೂರವಾಗುತ್ತವೆ. ನೀನು ಈಗಾಗಲೇ ಬತ್ತಲೆಯಾಗಿರುವಾಗ ನಿನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನೀನು ನಡೆಯಲೇಬೇಕು ಎಂಬುದು ನನ್ನ ಅಂತರಂಗದ ಧ್ವನಿಯಾಗಿದೆ.

ಒಂದು ವರ್ಷದ ಹಿಂದೆ ಬೆಳಗಿನ ಜಾವ ಆಸ್ಪತ್ರೆಯಲ್ಲಿ ನನ್ನ ದೇಹವನ್ನು ತಪಾಸಣೆಗೆ ಒಳಪಡಿಸಿದಾಗ ನನ್ನ ಮೆದೋಜೀರಕ ಗ್ರಂಥಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ದೃಢಪಟ್ಟಿತು. ನನಗೆ ಮೇದೋಜೀರಕ ಗ್ರಂಥಿ ಅಂದರೆ ಏನೆಂಬುದು ಗೊತ್ತಿರಲಿಲ್ಲ, ವೈದ್ಯರು ಈ ಬಗ್ಗೆ ವಿವರಿಸಿ, ಬಹಳ ದಿನ ಬದುಕುವ ಆಸೆಯನ್ನ ನಾನು ತ್ಯಜಿಸುವಂತೆ ಸೂಚಿಸಿದರು. ಅವರ ಸೂಚನೆ ಸಾವಿಗೆ ಸಿದ್ಧವಾಗಿರು ಎಂಬಂತಿತ್ತು. ಜೊತೆಗೆ ನನ್ನ ಮಕ್ಕಳಿಗೆ, ಪತ್ನಿಗೆ ಮುಂದಿನ ಹತ್ತು ವರ್ಷಗಳಲ್ಲಿ ನಾನು ಏನು ಹೇಳಬೇಕೆಂದಿದ್ದೆ ಅವೆಲ್ಲವನ್ನು ಕೆಲವೇ ತಿಂಗಳಲ್ಲಿ ಹೇಳಿ ಮುಗಿಸು ಎಂಬಂತಿತ್ತು. ಇದರಿಂದ ನನ್ನ ಕುಟುಂಬಕ್ಕೆ ಒಳಿತಾಗಿ ನನ್ನ ಸಾವಿನ ದಾರಿ ಸುಗಮವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿತ್ತು. ಆ ದಿನ ಸಂಜೆಯವರೆಗೆ ಆಸ್ಪತ್ರೆಯಲ್ಲಿ ನನ್ನನ್ನು ಇರಿಸಿಕೊಂಡು ನನ್ನ ಗಂಟಲಿನ ಹಾಗೂ ಹೊಟ್ಟೆಯ ಒಳ ಭಾಗದ ಮಾಂಸದ ತುಣುಕುಗಳನ್ನು ತೆಗೆದು, ಜೈವಿಕ ಪರೀಕ್ಷೆಗೆ ಒಳಪಡಿಸಲಾಯ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ನನ್ನ ಪತ್ನಿಗೆ ವೈದ್ಯರು ಹೊಸ ಭರವಸೆಯೊಂದನ್ನು ಕೊಟ್ಟರು. ಶಸ್ರಚಿಕಿತ್ಸೆ ಮೂಲಕ ರೋಗಕ್ಕೆ ತುತ್ತಾಗಿರುವ ಭಾಗಗಳನ್ನು ತೆಗೆದು ಇನ್ನಷ್ಟು ಹೊಸ ಜೀವಕೋಶಗಳನ್ನು ಬೆಳೆಸುವುದರ ಮೂಲಕ ಸಾವನ್ನು ಒಂದಷ್ಟು ವರ್ಷಗಳ ಕಾಲ ಮುಂದೂಡಬಹುದೆಂಬುದೇ ವೈದ್ಯರ ಭರವಸೆಯಾಗಿತ್ತು. ನಿರಾಸೆಯ ಕಡಲಲ್ಲಿ ಮುಳುಗಿದ್ದವನಿಗೆ ಅದೊಂದು ಸಣ್ಣ ಭರವಸೆಯ ಬೆಳಕು ನನ್ನ ಪಾಲಿಗೆ.

ನಾನು ಯುವಕನಾಗಿದ್ದಾಗ “Whole Earth Catalog” (ಜಗತ್ತಿನ ವಿಷಯಗಳು) ಎಂಬ ಪುಸ್ತಕ ಪ್ರಕಟವಾಗಿತ್ತು. ನನ್ನ ತಲೆಮಾರಿನ ಪಾಲಿಗೆ ಅದೊಂದು ಬೈಬಲ್. ಇದನ್ನು ಸಿದ್ಧಪಡಿಸಿದವರು ಇಲ್ಲೇ ಸಮೀಪದ ಮೆನ್ಲೊ ಪಾರ್ಕ್ ನಲ್ಲಿರುವ ಸ್ಟೀವರ್ಟ್ ಬ್ರಾಂಡ್. ಅವರು ಈ ಪುಸ್ತಕಕ್ಕೆ ಕಾವ್ಯದ ಸ್ಪರ್ಶ ನೀಡಿದ್ದರು. 1960ರ ನಂತರ ನಾವೆಲ್ಲ ಬಲ್ಲಂತೆ ಪರ್ಸನಲ್ ಕಂಪ್ಯೂಟರ್‌ಗಳು ಆವಿಷ್ಕಾರಗೊಂಡು, ಟೈಪ್‌ರೈಟರ್‌ಗಳು, ಪೋಲಾರೈಡ್ ಕ್ಯಾಮೆರಾಗಳು, ಕತ್ತರಿಗಳು ನೇಪಥ್ಯಕ್ಕೆ ಸರಿದವು. ಸ್ಟೀವರ್ಟ್ ಮತ್ತು ಅವನ ತಂಡ ಜಗತ್ತಿನ ವಿಷಯಗಳು ಕುರಿತಾದ ಕೊನೆಯ ಸಂಪುಟವನ್ನು 1970ರಲ್ಲಿ ಹೊರತಂದಿತು. ಅದು ಇವತ್ತಿನ ಗೂಗಲ್‌ನ ಪುಸ್ತಕ ರೂಪ, ಗೂಗಲ್ ಬರುವುದಕ್ಕೆ 35 ವರ್ಷಗಳ ಹಿಂದೆಯೇ, ಎನ್ನಬಹುದು. ಅದೊಂದು ಆದರ್ಶವಾದಿಯಾಗಿತ್ತು. ಹಾಗೆಯೇ ಉಪಯುಕ್ತ ಸಲಕರಣೆಗಳಿಂದ ಮತ್ತು ಉತ್ತಮ ಚಿಂತನೆಗಳಿಂದ ತುಂಬಿತುಳುಕುತ್ತಿತ್ತು. ನನಗೆ ಆ ಕೊನೆಯ ಸಂಪುಟದ ಹಿಂಬದಿಯ ರಕ್ಷಾ ಪುಟದಲ್ಲಿ ಪ್ರಕಟವಾಗಿದ್ದ ಬೆಟ್ಟ ಹತ್ತುತ್ತಿರುವ ಯುವಕರ ಚಿತ್ರಹಾಗೂ ಅದರ ಕೆಳಗೆ ಮುದ್ರಿಸಿದ್ದ “ಸದಾ ಹಸಿವಿನಿಂದಿರು ಮತ್ತು ಸದಾ ಮೂರ್ಖನಂತಿರು” ಎಂಬ ವಾಕ್ಯ ಈಗಲೂ ನೆನಪಿದೆ. ಇಲ್ಲಿ ಹಸಿವೆಂದರೆ ಜ್ಞಾನದ ಹಸಿವು. ಮೂರ್ಖನಂತೆ ಬದುಕುವುದೆಂದರೆ ನಮ್ಮ ಅಹಂಗಳನ್ನು ತ್ಯಜಿಸುವುದು ಎಂದರ್ಥ. ಇಂತಹ ನಾಣ್ಣುಡಿಗಳು ನಿಮ್ಮ ಬದುಕನ್ನು ಮುನ್ನಡೆಸಲಿ ಎಂದು ಹಾರೈಸುತ್ತೇನೆ. ವಂದನೆಗಳು.

(ಚಿತ್ರಕೃಪೆ: ವಿಕಿಪೀಡಿಯ)