Category Archives: ಶ್ರೀಧರ್ ಪ್ರಭು

ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ


– ಶ್ರೀಧರ್ ಪ್ರಭು


ಕಲ್ಕತ್ತೆಯ ಬೇಲೂರು ಮಠದ ನಿರ್ಮಾಣ ಕೊನೆಯ ಹಂತದಲ್ಲಿತ್ತು. ಅಲ್ಲಿ ಹೆಚ್ಚಿನ ಕಟ್ಟಡ ಕಾರ್ಮಿಕರೆಲ್ಲರೂ ಬಂಗಾಳ ಬಿಹಾರ ಗಡಿ ಭಾಗದ ಸಂಥಾಲ್ ಆದಿವಾಸಿಗಳು. ಎರಡು ತುತ್ತು ಅನ್ನ ಕೊಟ್ಟರೆ ಸಾಕು ಬಂಗಾಳದ ಹಳ್ಳಿಗಳಲ್ಲಿ ಕೃಷಿ ಕೂಲಿ ಕೆಲಸ ಮತ್ತು ನಗರ ಭಾಗಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಕೊಂಡು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದ ಈ ಕಷ್ಟ ಜೀವಿಗಳ ಮಧ್ಯೆ ತುಂಬು ಆತ್ಮೀಯತೆಯಿಂದ ಬೆರೆತು ಹೋಗುತ್ತಿದ್ದ ವಿವೇಕಾನಂದರಿಗೆ ಬಹು ಬೇಗ ಕ್ಷೀಣಿಸುತ್ತಿದ್ದ ತಮ್ಮ ಅರೋಗ್ಯದ ಪರಿವೆ ಎಲ್ಲವೂ ಮರೆಯುತ್ತಿತ್ತು. ಒಂದು ದಿನ ವಿವೇಕಾನಂದರು ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಒಬ್ಬ ಶಿಷ್ಯರಿಗೆ ಹೇಳುತ್ತಾರೆ ” ನನ್ನ ಕೊನೆಯ ಆಸೆ ಏನು ಗೊತ್ತೇ? Vivekanandaಯುರೋಪ್ ಮತ್ತು ಅಮೇರಿಕೆಯಲ್ಲಿ ಜರುಗುವ ನಮ್ಮ ವೇದಾಂತ ಕಾರ್ಯಕ್ರಮಗಳ ಸಂಪಾದನೆಯನ್ನು ಸಂಪೂರ್ಣವಾಗಿ ವ್ಯಯಿಸಿದರೂ ಚಿಂತೆಯಿಲ್ಲ, ಈ ನನ್ನ ಜನಕ್ಕೆ ದಿನವೂ ಹೊಟ್ಟೆ ತುಂಬಾ ಅನ್ನ ಬಡಿಸಬೇಕು. ಎಷ್ಟೊಂದು ಅನ್ನ ಗೊತ್ತೇ? ಈ ಅನ್ನಕ್ಕೆ ಬೇಕಿರುವ ಅಕ್ಕಿಯನ್ನು ಬಸಿದು ಚೆಲ್ಲಿದ ನೀರಿನಿಂದ ಗಂಗೆಯ ಮಡಿಲೆಲ್ಲವೂ ಬೆಳ್ಳಗಾಗಿ ಬಿಡಬೇಕು!”

ಇದೆಲ್ಲ ಕಳೆದು ಸುಮಾರು ನೂರಾ ಹದಿನೈದು ವರ್ಷಗಳು ಸಂದರೂ ಗಂಗೆ, ಯಮುನೆ, ತುಂಗೆ, ಭಾಗೀರತಿಗಳ ನೀರು ಇನ್ನೂ ಬೆಳ್ಳಗಾಗಿಲ್ಲ.

ಮೇ ೨೦೧೫ ರಲ್ಲಿ ವಿಶ್ವ ಸಂಸ್ಥೆಯ “ಆಹಾರ ಮತ್ತು ಕೃಷಿ ಸಂಘಟನೆ” (FAO) ಪ್ರಕಟಿಸಿದ “ವಿಶ್ವ ಆಹಾರ ಸುರಕ್ಷತಾ “ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ೧೯೪.೬ ಮಿಲಿಯನ್ (ಹತ್ತೊಂಬತ್ತುವರೆ ಕೋಟಿ) ಜನ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲೂ ಸಾಕಷ್ಟಿದೆ.

೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿನ “ವಿಮೋಚನಾ” ಸಂಘಟನೆಯ ಅಧ್ಯಕ್ಷರು ಅಂದಿನ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಕರ್ನಾಟಕದಲ್ಲಿ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳ ಬಗ್ಗೆ india-poverty-hungerಒಂದು ಸವಿಸ್ತಾರವಾದ ಪತ್ರ ಬರೆದು ಕರ್ನಾಟಕದ ನ್ಯಾಯಾಂಗ ಈ ಬಗ್ಗೆ ಗಮನ ಹರಿಸಲು ಕೋರುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯವು ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಯೆಂದು (W. P. No. 381571 / 2011) ದಾಖಲಿಸಿಕೊಂಡು, ಅಕ್ಟೋಬರ್ ೨೦೧೧ ರಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಒಂದು ವಿವರವಾದ ವರದಿ ನೀಡಲು ನಿರ್ದೇಶನ ನೀಡುತ್ತಾರೆ. ಆಗಸ್ಟ್ ೨೦೧೨ ರಲ್ಲಿ ಸೇವಾ ಪ್ರಾಧಿಕಾರ, ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎನ್. ಕೆ. ಪಾಟೀಲ್ ನೇತೃತ್ವದ ಸಮಿತಿ ರಚಿಸಿ ತನ್ನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವರದಿಯಲ್ಲಿನ ಕೆಲವು ವಿವರಗಳನ್ನು ಗಮನಿಸಿ:

  1. ಪ್ರತಿ ಸಾವಿರ ಶಿಶುಗಳಲ್ಲಿ ಕರ್ನಾಟಕದಲ್ಲಿ ಆಹಾರ ಕೊರತೆಯಿಂದಾಗಿ ಒಂದು ವರ್ಷಕ್ಕೂ ಮಿಕ್ಕದ ೪೩ ಶಿಶುಗಳು ಅಸು ನೀಗುತ್ತವೆ.
  2. ಐದು ವರ್ಷಗಳ ಒಳಗಿನ ಪ್ರತಿ ಸಾವಿರ ಶಿಶುಗಳಲ್ಲಿ ಸುಮಾರು ೫೫ ಶಿಶುಗಳು ಆಹಾರ ಕೊರತೆಯಿಂದ ಸಾವನ್ನಪ್ಪುತ್ತವೆ.
  3. ೨೦೧೨ ರ ಅಂಕಿ ಅಂಶ ಗಳ ಪ್ರಕಾರ ICDS ಯೋಜನೆಯಲ್ಲಿ ಕರ್ನಾಟಕದಲ್ಲಿ ದಾಖಲಾದ ೩೫,೯೯, ೪೮೪ ಮಕ್ಕಳಲ್ಲಿ ಸುಮಾರು ೧೧,೩೯,೪೫೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ, ಸುಮಾರು ೬೩,೨೭೩ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.
  4. ೨೦೧೨ ರಲ್ಲಿ ಸುಮಾರು ೧೬,೧೨,೧೬೩ ಮಕ್ಕಳಿಗೆ ICDS ಯೋಜನೆಯ ಲಾಭವೇ ದಕ್ಕುತ್ತಿಲ್ಲ. ಇವರಲ್ಲಿ ೨,೧೭,೮೮೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದರೆ, ೨೧,೧೫೧ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.

ಇದೆಲ್ಲ ನಾಲ್ಕು ವರ್ಷಗಳ ಹಿಂದಿನ ಕಥೆ. ಮತ್ತು ಇವೆಲ್ಲವೂ ಸರಕಾರಿ ಅಂಕಿ ಅಂಶಗಳಲ್ಲಿ ಹಿಡಿದಿಟ್ಟ ವಿವರಗಳು; ಇನ್ನು ಇಂದಿನ ಸತ್ಯಾಂಶ ಇನ್ನೆಷ್ಟು ಭೀಕರವೋ?

ನಮ್ಮ ಸಂವಿಧಾನದ ೩೯ (ಎಫ್ ) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಂತರಾಗಿ ಬದುಕಲು ಬೇಕಾದ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರಭುತ್ವಕ್ಕಿದೆ. ವಿಪರ್ಯಾಸವೆಂದರೆ, ನಲವತ್ತೇಳರ ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಏಳು ದಶಕಗಳು ಸಂದ ನಂತರ ಸ್ವತಂತ್ರ ಭಾರತದಲ್ಲಿ ಜನಿಸಿದ ಒಂದು ಶಿಶುವಿಗೆ ಕನಿಷ್ಠ ಬದುಕಲು ಬೇಕಿರುವಷ್ಟು ಆಹಾರ ಕೊಡದಷ್ಟು ದಾರಿದ್ರ್ಯವಿರುವ ಸಮಾಜದಲ್ಲಿ ನಾವಿದ್ದೇವೆ. ೨೦೦೫ ಮತ್ತು ೨೦೧೩ ರ ಮಧ್ಯೆ FCI ಗೋದಾಮುಗಳಲ್ಲಿ ಸುಮಾರು 1.94 ಲಕ್ಷ ಮೆಟ್ರಿಕ್ ಟನ್ ಗಳಷ್ಟು (೧೯೪೦೦೦೦೦೦೦೦೦೦೦ ಕಿಲೊ) ಆಹಾರ ಸಾಮಗ್ರಿ ಮಣ್ಣು ಪಾಲಾಗಿದೆ. ಇದರ ಸಾವಿರದ ಒಂದು ಅಂಶ ಆಹಾರ ಶಿಶುಗಳ ಹಸಿದ ಹೊಟ್ಟೆ ಸೇರಿದ್ದರೆ ಎಷ್ಟು ಲಕ್ಷ ಮಕ್ಕಳನ್ನು ಬದುಕಿಸಬಹುದಿತ್ತೋ?

ಪ್ರಸಕ್ತದಲ್ಲಿ ಅನ್ನವನ್ನು ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಡವರಿಗೆ ಅಕ್ಕಿಕೊಡುವದರಿಂದ ಮೊದಲ್ಗೊಂಡು, Siddaramaiah-annyabhagyaಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವದನ್ನು ಕೂಡ ವಿರೋಧಿಸಲಾಗುತ್ತಿದೆ. ಒಂದು ಕಡೆ, ಭಾರತವನ್ನೇ ತಮ್ಮ ಮನೆ ಮಾಡಿಕೊಂಡು ಬಡವರ ಮಧ್ಯೆ ಗುಡಿಸಲು ಕಟ್ಟಿಕೊಂಡು ಬಡಜನರನ್ನು ಸಂಘಟಿಸುತ್ತಿರುವ ವಿಶ್ವ ಮಾನ್ಯ ಅರ್ಥ ಶಾಸ್ತ್ರಜ್ಞ್ಯ ಜೀನ್ ಡ್ರೀಜ್ ರಂಥವರು ಬಡವರ ಆಹಾರದ ಹಕ್ಕಿನ ಪರ ಧ್ವನಿ ಎತ್ತಿದ್ದಾರೆ. ಆದರೆ ಭಾರತವನ್ನು ‘ಮಾತೃಭೂಮಿ’ ಎನ್ನುವ “ಬುದ್ಧಿವಂತ” ಜಾತಿಗಳ ಸಾಹಿತಿಗಳು ಇದನ್ನು ವಿರೋಧಿಸಿದ್ದಾರೆ. ಮಾತು ಮಾತಿಗೆ ವೇದ ಉಪನಿಷತ್ತು ಉಲ್ಲೇಖಿಸಿ ಮಾತನಾಡುವವರು “ಅನ್ನಂ ಬ್ರಹ್ಮೇತಿ ವ್ಯಜಾನತ್” ಎಂಬ ತೈತ್ತಿರೀಯ ಉಪನಿಷತ್ತಿನ ವಾಕ್ಯವನ್ನು ಕೇವಲ ತಮ್ಮ ಚಿತ್ತ ಭಿತ್ತಿಯಲ್ಲಿ ಮೂಡಿಸಿಕೊಳ್ಳದೆ ಭಾವಕೋಶದಲ್ಲಿಳಿಸಿಕೊಂಡು ನೋಡಿದರೆ ಹಸಿವಿನ ಭೀಕರತೆ ಕಾಣಿಸೀತು. ಶಾಸ್ತ್ರಗಳನ್ನೇ ಶಸ್ತ್ರ ಮಾಡಿಕೊಂಡು ಸಮಾಜದ ಬಹುಜನರನ್ನು ಅಕ್ಷರದಿಂದ ವಂಚಿಸಿದ ಶಕ್ತಿಗಳೇ ಇಂದು ಬಡವರಿಗೆ ಅನ್ನದಿಂದ ವಂಚಿಸುವ ಹುನ್ನಾರದಲ್ಲಿ ಒಂದಾಗಿದ್ದಾರೆ.

ಮಧ್ಯಮವರ್ಗಕ್ಕೂ ಸಾಕಷ್ಟು ಗೊಂದಲಗಳಿವೆ. ಇಂದು ಸರಕಾರ ಸಬ್ಸಿಡಿ ಹಣ ನೀಡದಿದ್ದರೆ ಇಂದು ಪ್ರತಿ ಮನೆಗೂ ಒಂದೂವರೆ ಪಟ್ಟು ವಿದ್ಯುತ್ ಮತ್ತು ಅಡುಗೆ ಗ್ಯಾಸ್ ದರ ತೆರಬೇಕು. ಒಂದೇ ಒಂದು ವರ್ಷ ಸಬ್ಸಿಡಿ ನೀಡದಿದ್ದರೆ ದೇಶದ ಅರವತ್ತು ಶೇಕಡಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸತ್ತು ಹೋಗುತ್ತವೆ. IITಯ ವಿವೇಕಾನಂದ ಅಧ್ಯಯನ ಕೇಂದ್ರದಲ್ಲಿ ದೇಶಭಕ್ತಿ ಪ್ರದರ್ಶಿಸಿ ಬೇಜಾರಾದ ನಂತರ ನಂತರ ಅಮೇರಿಕ ಕೈ ಬೀಸಿ ಕರೆಯುತ್ತದೆ. ಮಧ್ಯಮ ವರ್ಗಕ್ಕೆ ಇವೆಲ್ಲವೂ ಪ್ರಕೃತಿ ಸಹಜ; ಆದರೆ ಬಡವರಿಗೆ ಅಕ್ಕಿ ಕೊಟ್ಟರೆ ಅದು ದೇಶ ದ್ರೋಹ!

ಹತ್ತಾರು ಸಾವಿರ ಕೋಟಿ ಕೈಗಾರಿಗಾ ಸಹಾಯ ಧನ ಮತ್ತು ಪುಗಸಟ್ಟೆ ಸರಕಾರಿ ಜಮೀನು ಪಡೆದು ಕೊಂಡು ಹತ್ತೂವರೆ ಸಾವಿರ ಕಾರ್ಮಿಕರನ್ನು ದುಡಿಸಿಕೊಂಡು ಕೇವಲ ಎರಡೂವರೆ ದಶಕಗಳಲ್ಲಿ ಹದಿನೇಳು ಸಾವಿರದ ಐನೂರು ಬಿಲಿಯನ್ ಡಾಲರ್ (ರೂಪಾಯಿ ಅಲ್ಲ ಅಮೆರಿಕನ್ ಡಾಲರ್, ಗಮನಿಸಿ) ಸಂಪತ್ತು ಸಂಗ್ರಹಿಸಿರುವ ಗೌತಮ್ ಅದಾನಿಯವರಿಗೇ ಸುಸ್ತಾಗಿಲ್ಲ, ಇನ್ನು ಸಾಕು ಎನಿಸಿಲ್ಲ; ಇನ್ನು ತಿಂಗಳಿಗೆ ಹತ್ತು-ಹದಿನೈದು ಕೆಜಿ ಅಕ್ಕಿ ಪಡೆದುಕೊಂಡ ಬಡವನಿಗೆ ಸೋಮಾರಿತನ ಬರುತ್ತದೆಯೇ?

ಇಂದು ಬಡವರ ಜೀವನಕ್ಕೆ ಅಕ್ಕಿ ಬಂದು ಅವರ ಪ್ರಾಥಮಿಕ ಅಗತ್ಯತೆಗಳಿಗೆ ಹರಸಾಹಸ ಮಾಡುವ ಪ್ರಮೇಯ ಕೊಂಚ ಮಟ್ಟಿಗೆ ತಗ್ಗಿದೆ. ಎರಡು ಮುಷ್ಟಿ ಅಕ್ಕಿಗೆ ಜೀತದಂತೆ ದುಡಿಸಿಕೊಳ್ಳುವವರ ಸೊಲ್ಲು ಸ್ವಲ್ಪ ಅಡಗಿದೆ. ಮನೆ ಕೆಲಸದವರಿಂದ ಮೊದಲ್ಗೊಂಡು ಕಟ್ಟಡ ಕಾರ್ಮಿಕರ ತನಕ ಅಸಂಖ್ಯ ಅಸಂಘಟಿತರಿಗೆ ಮಾನವ ಘನತೆಗೆ ಸಲ್ಲಬೇಕಾದ ವೇತನ ಕೊಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೊಲದಲ್ಲಿ ದುಡಿಯುವ ಕೃಷಿ ಕಾರ್ಮಿಕ, ನಮ್ಮ ಕೊಳೆ ತೊಳೆಯುವ ಪೌರ ಕಾರ್ಮಿಕರಿಗೆ ಚಿಲ್ಲರೆ ಕಾಸು ಕೊಟ್ಟು ದುಡಿಸಿಕೊಳ್ಳುವ ಕಾಲ ಮರೆಯಾಗುತ್ತಿದೆ.

ಇಂದು ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬುದ್ಧಿಶಕ್ತಿಯಿಂದ ಮತ್ತು ಶ್ರಮಶಕ್ತಿಯಿಂದ ಕೆಲಸ ಮಾಡುವ ಕಾರ್ಮಿಕರ ವೇತನಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅದು ಇರಲೂ ಕೂಡದು. ನಿಜವಾಗಿ ನೋಡಿದರೆ ಶ್ರಮ ಶಕ್ತಿಯ ಕಾರ್ಮಿಕರಿಗೆ ಹೆಚ್ಚಿನ ಆಹಾರ ಮತ್ತು ಅರ್ಥಿಕ ಸುರಕ್ಷತೆಯ ಅಗತ್ಯವಿದೆ.

ನಿಮಗೆ ಗೊತ್ತಿರಲಿ, ಸಬ್ಸಿಡಿಯನ್ನು ಹಿಗ್ಗಾ ಮುಗ್ಗಾ ವಿರೋಧಿಸುವ ಅಮೇರಿಕ ವರ್ಷವೊಂದಕ್ಕೆ ತನ್ನ ಕೃಷಿ ಕ್ಷೇತ್ರಕ್ಕೆ ೨೦ ಬಿಲಿಯನ್ ಡಾಲರ್ ಗಳಷ್ಟು “ಸಹಾಯ ಧನ” ನೀಡುತ್ತದೆ. ಯೋಚಿಸಿ ನೋಡಿ, ಎಲ್ಲವನ್ನು ಮಾರುಕಟ್ಟೆಯೇ ನಿರ್ಧರಿಸಲಿ ಎಂದು ಬಗ್ಗೆ ಜಗತ್ತಿಗೆಲ್ಲ ಪಾಠ ಹೇಳುವ ಅಮೇರಿಕ ಯಾಕೆ ಸಹಾಯ ಧನ ಕೊಡಬೇಕು? ಯಾಕೆಂದರೆ ಜಾಗತಿಕ ಕೃಷಿ ಬಿಕ್ಕಟ್ಟು ಎಷ್ಟು ಭೀಕರವಾಗಿದೆಯೆಂದು ಎಲ್ಲರಿಗಿಂತ ಚೆನ್ನಾಗಿ ಅಮೆರಿಕೆಗೇ ಗೊತ್ತಿದೆ. ಬಂಡವಾಳ ಆಕರ್ಷಿಸುವ ನೆಪದಲ್ಲಿ ಇದ್ದ ಅರಣ್ಯ ಮತ್ತು ಕೃಷಿ ಭೂಮಿಯನ್ನು ಕಸಿಯುತ್ತಿರುವ ಸರಕಾರಗಳು ಕೃಷಿಯನ್ನು ಅಷ್ಟಿಷ್ಟು ಕೂಡ ಪೋಷಿಸದಿದ್ದರೆ ಇನ್ನು ಒಂದೆರಡು ದಶಕಗಳಲ್ಲೇ ಹೊಟ್ಟೆಗೆ ಸಿಮೆಂಟ್ ತಿನ್ನುವ ಪ್ರಮೇಯ ಬಂದೀತು. ಅಕ್ಕಿ ದವಸ ಧಾನ್ಯಗಳನ್ನು ವಿತರಿಸುವ ಅನಿವಾರ್ಯತೆ ಇದ್ದ ಕಡೆ ಅವುಗಳನ್ನು ಖರೀದಿಸುವ ಅನಿವಾರ್ಯತೆ ಕೂಡ ಇರುತ್ತದೆ. ಹಾಗೆಂದೇ, ರೈತರ ಬೆಳೆಗಳಿಗೆ ತಕ್ಕ ಬೆಲೆಯೂ ದಕ್ಕುತ್ತದೆ.

ಕಾಲೇಜ್ ಮತ್ತು ವಿಶ್ವ ವಿದ್ಯಾಲಯ ಪ್ರಾಧ್ಯಾಪಕರೂ ಸೇರಿದಂತೆ, ಇಂದು ಸಂಘಟಿತವಲಯದಲ್ಲಿರುವ ಕಾರ್ಮಿಕ ವರ್ಗ (ಮಧ್ಯಮ ವರ್ಗ), ಬ್ಯಾಂಕ್, ಸರಕಾರಿ ವಲಯ, ವಿಮಾ ನೌಕರರು ಇತ್ಯಾದಿ ESI, PF, PPF, ಪೆನ್ಷನ್ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. india-middle-classಆದಾಯ ತೆರಿಗೆ ಕಟ್ಟುವ ಈ ದೇಶದ ತೆರಿಗೆದಾರ ಈ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ಯಾಕೆ ಹಣ ಕೊಡಬೇಕು? ಈ ಹಣವನ್ನು ಬಂಡವಾಳವಾಗಿ ವಿನಿಯೋಗಿಸಿದರೆ ಇನ್ನಷ್ಟು ಲಾಭ ಬರುವದಿಲ್ಲವೆ? ಈ ಪ್ರಶ್ನೆಗೆ ಮಧ್ಯಮ ವರ್ಗ ಉತ್ತರಿಸುವುದೇ?

ಅದು ಹೋಗಲಿ, ನಮ್ಮ ಖಾತೆಯ ಮಂತ್ರಿಗಳಿಗೆ ವಯಸ್ಸು ಜಾಸ್ತಿಯಾಯಿತು, ಅವರು ಸೂಟು ಬೂಟು ಧರಿಸಿ ಇಂಗ್ಲೀಷ್ ಮಾತಾಡುವುದಿಲ್ಲ ಹಾಗಾಗಿ ಅವರನ್ನು ಬದಲಾಯಿಸಿ ಎಂದು ಪಟ್ಟು ಹಿಡಿದ IT, ITES, BT, BPO ವಲಯ, ಸರಕಾರದ ಸಹಾಯಧನ ಪಡೆದು ಸಾಮಾನ್ಯ ವಾಣಿಜ್ಯ ಬಳಕೆಯ ವಿದ್ಯುತ್ ದರಕ್ಕಿಂತ ಶೇಕಡಾ ೨೫ ರಷ್ಟು ಕಡಿಮೆ ವಿದ್ಯುತ್ ದರ ಪಾವತಿ ಮಾಡುತ್ತಿದೆ ಎಂಬುದು ಎಷ್ಟು ಜನಕ್ಕೆ ಗೊತ್ತಿದೆ? ಈ ವಿನಾಯತಿ ಸುಮಾರು ಹದಿನೈದು ವರ್ಷಗಳಿಂದ ಜಾರಿಯಲ್ಲಿದೆ. ಈ ವಿನಾಯತಿ ಹಣವನ್ನು ವಿನಿಯೋಗಿಸಿದ್ದರೆ ಇಂದು ಕರ್ನಾಟಕದಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತಿರಲಿಲ್ಲವೇ? ಇದು ಪರವಾಗಿಲ್ಲ; ಆದರೆ ಅಕ್ಕಿ ಕೊಟ್ಟರೆ ಅದು ಅರ್ಥಿಕ ವಿಕೃತಿ? ಅಲ್ಲವೇ?

ಅನ್ನಭಾಗ್ಯವನ್ನು ವಿರೋಧಿಸುವವರಲ್ಲಿ ಬಹುತೇಕರು ಹೇಳುವುದು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದು. ಇಂದು ಕೈಗಾರಿಕಾ ಶೆಡ್ ಗಳು, ಸರಕಾರೀ ಬಂಗಲೆಗಳು, BDA ನಿವೇಶನಗಳು, ಬಿಟ್ಟರೆ, ಪ್ರಶಸ್ತಿ, ಬಿರುದು ಬಾವಲಿಗಳನ್ನೂ ಮಾರಿಕೊಂಡವರಿದ್ದಾರೆ. ಸರಕಾರಿ ಉದ್ಯೋಗದಲ್ಲಿದ್ದು ಕೊಂಡೇ ಖಾಸಗಿ ಕೆಲಸ ಮಾಡುವ ವೈದ್ಯರು, ಶಿಕ್ಷಕರು, ಯಾವುದಕ್ಕೂ ಬರವಿಲ್ಲ. ಅಸಮತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಮಾಜದಲ್ಲಿ ಅಂತಹ ವಿಕೃತಿಗಳು ಎಲ್ಲಾ ಹಂತಗಳಲ್ಲೂ, ಎಲ್ಲಾ ವರ್ಗ ವಿಭಾಗಗಳಲ್ಲೂ ಸಹಜವಾಗಿ ನುಸುಳಿವೆ. ಈ ವಿಕೃತಿಗಳನ್ನು ಖಂಡಿತ ತಡೆಯಬೇಕು; ಅಂತೆಯೇ, ಮೇಲಿನ ಸ್ಥರದಿಂದ ಮೊದಲ್ಗೊಂಡು ಈ ಪ್ರಯತ್ನವಾಗಬೇಕೇ ವಿನಃ ನಿರ್ಗತಿಕರಿಂದ ಅನ್ನ ಕಸಿಯುವ ಮೂಲಕ ಅಲ್ಲ. ಸರಕಾರೀ ಆಸ್ಪತ್ರೆಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪತ್ರೆಯನ್ನೇ ಮುಚ್ಚುವುದು ಹೇಗೆ ಮದ್ದಲ್ಲವೋ ಹಾಗೆಯೇ ಅನ್ನಭಾಗ್ಯದ ದುರುಪಯೋಗಕ್ಕೆ ಅನ್ನವನ್ನೇ ಕಸಿಯುವುದೂ ಮದ್ದಲ್ಲ.

ಇಂದು ಎಲ್ಲೆಂದರಲ್ಲಿ ತಲೆ ಎತ್ತಿರುವ ವಿಶೇಷ ವಿತ್ತ ವಲಯಗಳನ್ನು (SEZ) ನೋಡಿ. ಈ ವಲಯಗಳಿಗೆ ಭಾರತದ ಯಾವ ಕಾನೂನು ಕೂಡ ಅನ್ವಯಿಸುವುದಿಲ್ಲ. ನಿಜವಾಗಿ ನೋಡಿದರೆ ಕಾನೂನಿನ ಪ್ರಕಾರ SEZಗಳು ಭಾರತದ ಸ್ವಾಧೀನತೆಗೆ ಒಳಪಡುವುದಿಲ್ಲ. ಕರ್ನಾಟಕ ಒಂದರಲ್ಲೇ ಸುಮಾರು ಒಂದು ನೂರರಷ್ಟು SEZ ಗಳು ತಲೆ ಎತ್ತಿವೆ. ಇಂದು ಒಬ್ಬ ಸಾಮಾನ್ಯ ವಲಯದ ದೊಡ್ಡ ಕೈಗಾರಿಕೊದ್ಯಮಿಗೆ ಕನಸಲ್ಲೂ ದಕ್ಕದ ಸವಲತ್ತುಗಳು SEZ ವಲಯಕ್ಕೆ ದಕ್ಕಿವೆ. ತೆರಿಗೆ ವಿನಾಯತಿ, ಸ್ಟ್ಯಾಂಪ್ ಮೊತ್ತದ ವಿನಾಯತಿ, ವಿದ್ಯುತ್ ದರದಲ್ಲಿ ಕಡಿತ ಇತ್ಯಾದಿ ಸವಲತ್ತುಗಳು ದೊರೆಯುವ ಈ SEZ ಗಳ Streetchildrenಬಗ್ಗೆ ಯಾವ ಕೈಗಾರಿಕಾ ದಿಗ್ಗಜನೂ ಸೊಲ್ಲೆತ್ತುವುದಿಲ್ಲ. ಅವರ ಸಿಟ್ಟು ಏನಿದ್ದರೂ ಅಕ್ಕಿಯ ಮೇಲೆ.

ಅದು ಹೋಗಲಿ ನಿಮ್ಮ ಮನೆಯಲ್ಲಿ ಮೇಲೆ ಸೌರ ಶಕ್ತಿ ಚಾಲಿತ ಹೀಟರ್ ಅಳವಡಿಸಿದರೆ ಒಂದು ವಿದ್ಯುತ್ ಯೂನಿಟ್ ಗೆ ಐವತ್ತು ಪೈಸೆ ವಿನಾಯತಿಯಿದೆ. ಇದಕ್ಕೆ ಕೊಡುವ ಸಮರ್ಥನೆ ಏನು ಗೊತ್ತೇ ಅಷ್ಟರ ಮಟ್ಟಿಗೆ ಉಷ್ಣ ಸ್ಥಾವರದ ಕಲ್ಲಿದ್ದಲು ಉಳಿತಾಯ ಮತ್ತು ಇದು ಪರಸರ ಸ್ನೇಹಿ. ಅದೇ ಒಬ್ಬ ಬಡವ ತನ್ನ ಮನೆಯ ಭೂಸ ಇಲ್ಲವೇ ಸೆಗಣಿ ಶೇಖರಿಸಿ ನೀರು ಬಿಸಿ ಮಾಡಿದರೆ, ಇಲ್ಲಾ ತಣ್ಣೀರು ಸ್ನಾನ ಮಾಡಿದರೆ ಯಾವ ವಿದ್ಯುತ್ ವಿನಾಯತಿ ಇದೆ?

ಸಮಾಜದ ಹೆಚ್ಚಿನ ಸವಲತ್ತು ಸಹಾಯ ಧನಗಳು ಯಾವತ್ತೂ ಅಪಾತ್ರರಿಗೇ ಮೀಸಲು. ತಳವರ್ಗ ಸ್ವಲ್ಪ ಮಟ್ಟಿನ ತುಂಡು ತುಣುಕು ಏನಾದರೂ ಕೇಳಲು ಬಂದರೆ ಗದರಿ ಕಳಿಸುವ ವ್ಯವಸ್ಥೆ ನಮ್ಮದು.

ಒಂದು ಹಿಡಿ ಅಕ್ಕಿ, ಒಂದು ಮೊಟ್ಟೆ ತಿಂದು ಯಾವ ಬಡವನೂ ಕೈಗಾರಿಕಾ ಸಾಮ್ರಾಜ್ಯ ಕಟ್ಟುವುದಿಲ್ಲ. ಹಾಗೆಯೇ, ಸರಕಾರದ ಸೌಕರ್ಯ, ವಿನಾಯತಿ, ಸವಲತ್ತು ಪಡೆದು ನಡೆಸುವ ಯಾವ ಕೈಗಾರಿಕೆಗಳೂ ಬಡವರು ಒಂದು ಹೊತ್ತಿನ ಅನ್ನ ತಿಂದ ಮಾತ್ರಕ್ಕೆ ಸತ್ತು ಹೋಗುವುದಿಲ್ಲ. ಯಾರಿಗೆ ಏನೇ ಆಗಲಿ, ಯಾವ (ರಾಷ್ಟ್ರೀಯ) ಪ್ರಾಧ್ಯಾಪಕರ ಸಂಬಳ ಸವಲತ್ತಿಗೂ ಬಡವನ ಅಕ್ಕಿಯಿಂದ ಕತ್ತರಿ ಬೀಳುವುದಿಲ್ಲ.

ಒಂದು ಕೊನೆಯ ಮಾತು. ಕೈಗಾರಿಕೆಗಳು, ಉದ್ದಿಮೆದಾರರು, ರಾಜಕಾರಣಿಗಳು, ಅರ್ಥ ಶಾಸ್ತ್ರಜ್ಞರು ವ್ಯಕ್ತಪಡಿಸುತ್ತಿರುವ ವಿರೋಧವನ್ನು ಅರ್ಥೈಸಿಕೊಳ್ಳಬಹುದು. ಆದರೆ ಜೀವನದ ದಯನೀಯ ಮಜಲುಗಳನ್ನು ಕಂಡಿರುವ ಒಬ್ಬ ಸಾಹಿತಿBhyrappa ಅನ್ನ ವಿರೋಧಿಯಾದರೆ ತುಂಬಾ ಸಂಕಟವೆನಿಸುತ್ತದೆ. ಭೈರಪ್ಪನವರನ್ನು ಸೈದ್ಧಾಂತಿಕ ಕಾರಣಗಳಿಗಾಗಿ ವಿರೋಧಿಸುವವರೂ ಕೂಡ ಅವರ ಸಂಘರ್ಷಮಯ ಜೀವನವನ್ನು ಗೌರವಿಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ, ಹಸಿವಿನ ಸಂಕಟವನ್ನು ಇನ್ನಿಲ್ಲದಂತೆ ಅನುಭವಿಸಿ, ಅವಿರ್ಭಾವಿಸಿ ಪಕ್ವವಾಗಬೇಕಿದ್ದ, ಹಸಿವಿನ ಕುರಿತು ಜಾಗೃತಿ ಮೂಡಿಸಿ ಹೋರಾಟ ನಿರೂಪಿಸುವದರಲ್ಲಿ ಮುಂಚೂಣಿಯಲ್ಲಿರ ಬೇಕಿದ್ದ ನಾಡಿನ ಹಿರಿಯ ಜೀವವೊಂದು ಅನ್ನವನ್ನು ವಿರೋಧಿಸುತ್ತಿರುವುದು ಅತ್ಯಂತ ಕ್ರೂರ ವಿಪರ್ಯಾಸ.

ಮಾರುಕಟ್ಟೆಯ ಮಂತ್ರವಾದಿಗಳ ಅಕ್ಷಮ್ಯ ಅನಾಚಾರಗಳ ಬಗ್ಗೆ ಸೊಲ್ಲೇ ಎತ್ತದ ಭೈರಪ್ಪನವರು, ತಮ್ಮ ಎಲ್ಲ ಬಾಣ ಬಿರುಸು ಗಳನ್ನೂ ಒಂದು ತುತ್ತು ಅನ್ನದ ಮೇಲೆ ಹೂಡುತ್ತಿದ್ದಾರೆ. ಶಾಸಕರ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯ, ಗಣಿ ಅಟ್ಟಹಾಸಗಳಿಂದ ತುಂಬಿದ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಕರ್ನಾಟಕದ ಜನ ಸಮುದಾಯ ಒಟ್ಟು ಗೂಡಿ ತಿರಸ್ಕರಿಸಿದಾಗ ಜನ ಸಮುದಾಯಕ್ಕೆ ನೇತೃತ್ವ ಕೊಡಲು ಬಾರದ ಈ ಜಾಗೃತಿ ಅನ್ನವನ್ನು ಹಂಚಲು ಹೊರಟಾಗ ಹೇಗೆ ಜಾಗೃತವಾಯಿತೋ ಅವರೇ ಹೇಳಬೇಕು.

ಹೆಸರು ಹೇಳಿಕೊಳ್ಳಲೂ ಹೇಸಿಕೊಳ್ಳುವವರು vs. ಭವಿಷ್ಯ ಭಾರತದ ದಿಟ್ಟ ಸ್ಥಂಭಗಳು


– ಶ್ರೀಧರ್ ಪ್ರಭು


“ಡಿಯರ್ ಮ್ಯಾಮ್” ಎಂದು ಶುರುವಾಗುವ ‘ಒಕ್ಕಣೆ’.
ಯಾರು ಬರೆದದ್ದು?
ಗೊತ್ತಿಲ್ಲ .
ಯಾರಿಗೆ ಬರೆದದ್ದು? ಈ ‘ಮ್ಯಾಮ್’ ಎಂದರೆ ಯಾರು?
ಗೊತ್ತಿಲ್ಲ.
ಯಾವಾಗ ಬರೆದದ್ದು?
ಗೊತ್ತಿಲ್ಲ.
ದಿನಾಂಕ ನಮೂದಾಗಿದೆಯಾ?
ಇಲ್ಲ.
ಪತ್ರಕ್ಕೆ ಯಾರಾದರೂ ಸಹಿ ಹಾಕಿದ್ದಾರಾ?
ಅದೂ ಇಲ್ಲ.
ಹೋಗಲಿ, ನಕಲಿಯೇ ಸರಿ, ಯಾರದಾದರೂ ಹೆಸರು ಬರೆದಿದ್ದಾರಾ? ಸಹಿ ಹಾಕಿದ್ದಾರಾ? ಇಲ್ಲವೇ ಇಲ್ಲ.

ಒಂದು ಕಡೆ “ನಾನು” ಇನ್ನೊಂದು ಕಡೆ “ನಾವು” ಇನ್ನೊಂದು ಕಡೆ “ಐಐಟಿ ವಿದ್ಯಾರ್ಥಿಗಳು” ಎಂದು ಹೇಳಿಕೊಳ್ಳುವ ಅನಾಮಧೇಯ, iit-madrasಗತಿ-ಗೋತ್ರವಿಲ್ಲದ ಒಂದು ಕಾಗದ.

ಈ “ಮ್ಯಾಮ್” ಯಾರು, ಈ ಹಾಳೆಗೆ “ಡ್ಯಾಡ್” ಯಾರು ಎಂದು ಗೊತ್ತಿಲ್ಲದ ಇಂತಹ ಒಂದು ಲಡಾಸು ಹಾಳೆಯೊಂದನ್ನು “ಆಧರಿಸಿ”, ಮೇ ೧೫, ೨೦೧೫ ರಂದು ಘನ ಭಾರತ ಸರಕಾರದ ಮಾನವ ಸಂಪನ್ಮೂಲ ಉನ್ನತ ಶಿಕ್ಷಣ ವಿಭಾಗದ ಅಧೀನ ಕಾರ್ಯದರ್ಶಿಯೊಬ್ಬರು ಚೆನ್ನೈನ IIT-M ನ ನಿರ್ದೇಶಕರಿಗೆ ಒಂದು ನಿರ್ದೇಶನ ಕೊಡುತ್ತಾರೆ. ನಿರ್ದೇಶನ ಜಾರಿ ಮಾಡಲು ನಿರ್ದೇಶಕರು ಚಾತಕ ಪಕ್ಷಿ ಯಂತೆ ಕಾದಿದ್ದು, ತಕ್ಷಣವೇ ವಿದ್ಯಾರ್ಥಿಗಳ “ಯೋಗಕ್ಷೇಮ” ನೋಡಿಕೊಳ್ಳುವ ಡೀನ್ ರಿಗೆ ಒಂದು ನಿರ್ದೇಶನ ರವಾನೆ ಮಾಡುತ್ತಾರೆ. ‘ಯೋಗಕ್ಷೇಮ’ದ ಡೀನ್ ಒಬ್ಬ ಅರ್.ವರುಣ ಕೃಷ್ಣ ಎಂಬ ವಿದ್ಯಾರ್ಥಿಗೆ ಒಂದೂವರೆ ಸಾಲಿನ ಒಂದು ಇಮೇಲ್ ಕಳಿಸಿ ತಕ್ಷಣವೇ ಜಾರಿಗೆ ಬರುವಂತೆ “ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್”ನ ಈ ಕ್ಷಣಕ್ಕೆ ಜಾರಿಗೆ ಬರುವಂತೆ ಮಾನ್ಯತೆ ರದ್ದು ಗೊಳಿಸುತ್ತಾರೆ.

ಈ ರದ್ದತಿಗೆ ಕಾರಣ? ‘ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಐಐಟಿ ನೀಡಿದ ‘ಸವಲತ್ತು’ ಗಳನ್ನ ದುರುಪಯೋಗ ಮಾಡಿಕೊಂಡಿದೆ ಎಂದು. ಯಾವ ಸವಲತ್ತು, ಯಾವಾಗ, ಯಾರು ಕೊಟ್ಟಿದ್ದು? ಯಾರು ಉಪಯೋಗಿಸಿದ್ದು? ಹೇಗೆ ದುರುಪಯೋಗ ಮಾಡಿದ್ದು? ಅದೆಲ್ಲ ‘ಪಿಕ್ಚರ್’ ನಲ್ಲಿಲ್ಲ ಸಿನಿಮಾ ಮುಗಿದ ಮೇಲೆ ನೋಡಿಕೊಳ್ಳಿ.

‘ಔಪಚಾರಿಕತೆ’ ಎಂದಾದರೂ ಸರಿ ಕಾರಣ ಕೇಳಿ ನೋಟಿಸು, ವಿವರಣೆ, ಏನಾದರೂ ಬೇಕೇ? ಅದೆಲ್ಲಾ ಯಾಕೆ? ಮೊದಲು ಕ್ರಮ ಕೈಗೊಂಡು ನಂತರ ‘ವಿಚಾರಣೆ’. ಹೇಗಿದೆ ನೋಡಿ ನಮ್ಮ ಕಾರ್ಯ ದಕ್ಷತೆಯ ತಾಕತ್ತು! ಕೇಂದ್ರ ಸರಕಾರ ಏನೂ (?) ಮಾಡುತ್ತಿಲ್ಲ ಎಂದು ಯಾಕೆ ಬೊಬ್ಬೆ ಹೊಡೆಯುತ್ತಾರೋ ತಲೆ ಸರಿಯಿಲ್ಲದ ಜನ!

ಬಾಬಾಸಾಹೇಬ್ ಜನ್ಮ ದಿನದಂದು (೧೪ ಏಪ್ರಿಲ್) ೨೦೧೪ ಅಂಬೇಡ್ಕರ್, ಪೆರಿಯಾರ್ ಮತ್ತು ಭಗತ್ ಸಿಂಗ್ ambedkar-periyar-study-circleವಿಚಾರಗಳಿಂದ ಪ್ರಭಾವಿತರಾದ ಚೆನ್ನೈ ನಲ್ಲಿರುವ ಐಐಟಿ ಯಲ್ಲಿನ ಎಲ್ಲ ಜಾತಿ ವರ್ಗ ವಿಭಾಗಗಳ ಸಮಾನ ಮನಸ್ಕ ವಿದ್ಯಾರ್ಥಿಗಳು ಒಂದುಗೂಡಿ ಒಂದು ವಿಚಾರ ಮಂಟಪ ಕಟ್ಟುತ್ತಾರೆ. ಒಂದು, ಐದು, ಹತ್ತು ಹೀಗೆ ತಮ್ಮ ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ (ಸಂಸ್ಥೆಯಿಂದ ಒಂದು ದಮ್ಮಡಿ ಕಾಸು ತೆಗೆದು ಕೊಳ್ಳದೆ) ವೈವಿಧ್ಯಮಯ ವಿಷಯಗಳನ್ನು ಅಯ್ದು ಪರಿಣಿತರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಯಂತ್ರ-ತಂತ್ರ-ಮಂತ್ರ ಗಳ ಮಾಯೆಯಲ್ಲಿ ಮುಳುಗಿದ್ದ ಅಗ್ರಹಾರವನ್ನೂ ನಾಚಿಸುವ ವಾತಾವರಣದಲ್ಲಿ, ‘ಭಾರತದ ಕೃಷಿ ಬಿಕ್ಕಟ್ಟು’, ‘೧೯೪೭ ರ ಕಾರ್ಖಾನೆ ಕಾಯಿದೆಗೆ ತಿದ್ದುಪಡಿ ಮತ್ತು ಕಾರ್ಮಿಕರ ಹಿತಾಸಕ್ತಿ’, ‘ಭಾಷಾ ಸಮಸ್ಯೆ’, ಕುಲಾಂತರಿ ಬೀಜಗಳು’ ಮೊದಲಾದ ವಿಚಾರ ಪ್ರಚೋದಕ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಸಂಘಟಿಸುತ್ತಾರೆ.

ಹೀಗಿದ್ದಾಗ, ಜೂನ್, ೨೦೧೪ ರ ಹೊತ್ತಿಗೆ ವಿದ್ಯಾರ್ಥಿ “ಯೋಗಕ್ಷೇಮ” ದ ಜವಾಬ್ದಾರಿಯಿರುವ ಡೀನ್ ರಿಂದ ಬಂತೊಂದು ಬುಲಾವು. ‘ನಿಮ್ಮ ವೇದಿಕೆಯ ಹೆಸರೇ ಸರಿಯಿಲ್ಲವಲ್ಲ’! ಈ ಅಂಬೇಡ್ಕರ್-ಪೆರಿಯಾರ್ ಎಂದೆಲ್ಲ ಹೆಸರು ಇಟ್ಟುಕೊಂಡರೆ ಸಮಾಜದ ಸ್ವಾಸ್ಥ್ಯ ಹಾಳಾಗುವುದಿಲ್ಲವೆ? ಅದೂ ಸರಿಯೇ. ಆದರೆ ಈ ‘ಹಾಳಾದ’ ವಿದ್ಯಾರ್ಥಿಗಳು ಹೆಸರು ಬದಲಿಸಲು ಒಪ್ಪಲಿಲ್ಲ!

ಸೆಪ್ಟೆಂಬರ್ ೨೦೧೪ ರಲ್ಲಿ ಮತ್ತೊಮ್ಮೆ ಅಂಬೇಡ್ಕರ್ ಮತ್ತು ಪೆರಿಯಾರ್ ಹೆಸರುಗಳು ಜನರ ಮಧ್ಯೆ ಕಂದಕವನ್ನು ತೋಡುತ್ತವೆ; ಆದ್ದರಿಂದ ನಿಮ್ಮ ‘ಹೆಸರು’ ಬದಲಿಸಿ ಎಂದು ಡೀನ್ ಮತ್ತೊಮ್ಮೆ ಹೆದರಿಸಲಾಯಿತು.

ಏಪ್ರಿಲ್ ೨೦೧೫ ರ ಅಂಬೇಡ್ಕರ್ ಜಯಂತಿಯ ಸಂದರ್ಭ ಮತ್ತು ತನ್ನ ಹುಟ್ಟಿನ ಮೊದಲ ವರ್ಷಾಚರಣೆ ಸಂದರ್ಭದಲ್ಲಿ ಅಂಬೇಡ್ಕರ್ “ಜಾತಿ ವಿನಾಶ”ದ ಉಕ್ತಿಗಳನ್ನು ನೇರವಾಗಿ ಉದಾಹರಿಸಿ ಬರೆದ ಕರಪತ್ರವನ್ನು ಹೊರಡಿಸಲಾಯಿತು. ಈ ಕರಪತ್ರದಲ್ಲಿ ‘ಭಾರತ ಮಾತೆ’ ಯ ಸಂಕಷ್ಟಗಳ ವಿವರಣೆ ಇತ್ತು ನಿಜ ಆದರೆ ಇದಕ್ಕಿಂತ ಖಾರದ ಕರಪತ್ರಗಳನ್ನು ಸ್ವತಃ ರಾಷ್ಟ್ರೀಯ ಸ್ವಯಂ ಸೇವಕ ಇಂದು ಕೇಂದ್ರದ ವಿರುದ್ಧ ಹೊರಡಿಸಿದೆ. ಅಂಬೇಡ್ಕರ್ ಜಯಂತಿಯ ಮೊದಲು ಅಥವಾ ನಂತರ ಯಾವುದೇ ಅಹಿತಕರ ಘಟನೆಗಳಾಗಲಿಲ್ಲ. IIT ಸಂಸ್ಥೆಯ ಯಾವ ನೀತಿ ನಿಯಮಗಳ ಉಲ್ಲಂಘನೆಯೂ ಆಗಲಿಲ್ಲ. ಏಕಾಏಕಿ, ತಮ್ಮ ಹೆಸರು ಬರೆದುಕೊಳ್ಳಲು ಅಂಜುವ ಪುಕ್ಕಲುಗಳು ‘ಬರೆದ’ ಬುರ್ನಾಸು ಹಾಳೆಯನ್ನು ಆಧರಿಸಿ ವಿಚಾರಶೀಲ ವಿದ್ಯಾರ್ಥಿಗಳ ಸಂಘಟನೆಯನ್ನು IIT ಮಟ್ಟಿಗೆ ನಿಷೇಧಿಸಲಾಗಿದೆ.

ಸ್ವತಃ ‘ಸ್ವಾತಂತ್ರ್ಯವೇ ನನ್ನ ಜನ್ಮ ಸಿದ್ಧ ಹಕ್ಕು’ ಎಂದವರೇ ಅಂಬೇಡ್ಕರ್ ಬರಹಗಳನ್ನು ಹೋಗಲಿ ಜಾಹೀರಾತನ್ನು ಪ್ರಕಟಿಸುವ ನೈತಿಕತೆ ತೋರಿಸಲಿಲ್ಲ. ಇನ್ನು ಇಂದಿನ ‘ಅಗ್ರಹಾರಗಳಿಂದ’ ಹೆಚ್ಚಿನದನ್ನು ನಿರೀಕ್ಷಿಸುವುದು ಮೂರ್ಖತನ. ಇತ್ತೀಚಿಗೆ ಸಾಮಾಜಿಕ ತಾಣಗಳ ಸರದಾರರೊಬ್ಬರು ತಂತ್ರಜ್ಞಾನ ಬೋಧಿಸುವ ಸಂಸ್ಥೆ ಯಲ್ಲಿ ಅಂಬೇಡ್ಕರ್ ಹೆಸರಿನ ಸಂಘಟನೆಯ ಔಚಿತ್ಯ ಪ್ರಶ್ನಿಸಿದ್ದಾರೆ? ಮೀಸಲಾತಿಯನ್ನು ಕಾರಣವಾಗಿಟ್ಟು ಕೊಂಡು ಅಂಬೇಡ್ಕರ್‌ರನ್ನು ವಿರೋಧಿಸುವ ಇವರು ಮೀಸಲಾತಿ ಇಲ್ಲದ ಅಷ್ಟೇ ಅಲ್ಲ, ೧೦೦% ಮೀಸಲಾತಿ ಇವರಿಗೇ ಇದ್ದ ಐದು ಸಾವಿರ ವರ್ಷಗಳ ‘ಸುವರ್ಣ ಯುಗ’ ದಲ್ಲಿ ತಮ್ಮ ಬ್ರಹ್ಮ ತೇಜಸ್ಸಿನಿಂದ ಒಂದು ಪಾಯಖಾನೆಯನ್ನೂ ಕೂಡ ಅವಿಷ್ಕರಿಸಲಾಗಲಿಲ್ಲ ಏಕೆ ಎಂದು ಅವರು ಉತ್ತರಿಸಬೇಕು.

ಇಂದು IIT ಗಳನ್ನು ಯಂತ್ರ-ಮಂತ್ರ ತಂತ್ರಗಳ ತಾಣ ಮಾಡ ಹೊರಟವರಿಗೆ ಇರುಸು ಮುರುಸು ಆಗುವುದೇನೆಂದರೆ, IIT Madras Student Protestಅಲ್ಲಿನ ಅನೇಕ ಜಾಗೃತ ವಿದ್ಯಾರ್ಥಿಗಳು ಜನಪರ ಸಿದ್ಧಾಂತಗಳ ಪರ ವಾಲುತ್ತಿರುವುದು. ನಿಮಗೆ ಗೊತ್ತಿರಲಿ ಚೆನ್ನೈ IIT ಯ Humanities and Social Sciences ವಿಭಾಗ ಒಂದರಲ್ಲೇ ಸುಮಾರು ನಲವತ್ತೆರಡು ಅಧ್ಯಾಪಕರಿದ್ದಾರೆ! ಸಾಮಾಜಿಕ ವಿಜ್ಞಾನವನ್ನು ವಿಜ್ಞಾನವೆಂದೇ ಒಪ್ಪದ ಬುರುಡೆ ಪುರಾಣ ಶೂರರಿಗೆ ಏನು ಹೇಳುವುದು? ಅಂಬೇಡ್ಕರ್ ಪೆರಿಯಾರ್ ಈ ದೇಶದಲ್ಲಿ ಹುಟ್ಟದಿದ್ದರೆ, ಗಂಡು ಮಕ್ಕಳಾಗಲು ಮಾತ್ರೆ ಕೊಡುವವರು ಯಾ ಬದರಿ ಕೇದಾರದಲ್ಲಿ ಭಕ್ತರು ಮಲವಿಸರ್ಜನೆ ಮಾಡಿದ್ದಕ್ಕೆ ಜಲಪ್ರಳಯದ ನಂಟು ತಾಗಿಸುವವರು ಪ್ರಳಯಾಂತಕ ಬುದ್ಧಿವಂತರೆನ್ನಿಸಿಕೊಳ್ಳುತ್ತಿದ್ದರು.

ಅಂಬೇಡ್ಕರ್ ಮೇರು ಪರ್ವತ; ಡಾಕ್ಟರ ಆಫ್ ಸೈನ್ಸ್ ಪದವಿ ಪಡೆದ ಪ್ರತಿಭಾವಂತರ ಹೆಸರನ್ನು ವೈಜ್ಞಾನಿಕ ಚಿಂತನೆಯ ಮಂಟಪಕ್ಕೆ ಇಡದೆ ಇನ್ಯಾರ ಹೆಸರನ್ನು ಇಡಬೇಕು? ಅವರು ಪಡೆದಷ್ಟು ಪದವಿಗಳನ್ನು ಒಂದೊಂದರಂತೆ ಒಬ್ಬಬ್ಬರಿಗೆ ಹಂಚಿದರೆ ನಾಲ್ಕಾರು ಅಗ್ರಹಾರಗಳು ಪದವೀಧರರಾಗಬಹುದು. ಇನ್ನು ಪೆರಿಯಾರ್ ಚಿಂತನೆ ಇಂದು ದಕ್ಷಿಣ ಭಾರತದ ಸಾಮಾಜಿಕ ಚಿಂತನೆಯ ಮೂಲ ದ್ರವ್ಯ. ಪೆರಿಯಾರ್ ರಿಂದ ಪ್ರೇರಿತವಾದ ಅನೇಕ ಸಂಘಟನೆಗಳು ನಾಡಿನಾದ್ಯಂತ ಸಾವಿರಾರು ಮೂಢನಂಬಿಕೆ ವಿರೋಧಿ ಕಾರ್ಯಕ್ರಮ ಗಳನ್ನು ಸಂಘಟಿಸಿದೆ. ಸಾಮಾಜಿಕ ವಿಜ್ಞಾನದ ಬಗ್ಗೆ ಬದ್ಧತೆ ಇರುವ ಯಾರೇ ಅದರೂ ಗೌರವಿಸುವ ಅಂಬೇಡ್ಕರ್-ಪೆರಿಯಾರ್ ರನ್ನು ಕೆಲವು ಕೊಳಕು ಮನಸ್ಸುಗಳ ಧಮಕಿಗೆ ಹೆದರಿ ಬಿಡುವಂತಿದ್ದರೆ ಭಾರತಕ್ಕೆ IIT Madras Student Protest-SmritiIraniಭವಿಷ್ಯವೇ ಇಲ್ಲ ಎಂದು ಕೊಳ್ಳಬೇಕಿತ್ತು. ಆದರೆ ಹಾಗಾಗಲಿಲ್ಲ.

ವಿಜ್ನ್ಯಾನದ ಮೊದಲ ಪಾಠ – ಪ್ರಶ್ನಿಸದೆ ಒಪ್ಪದಿರು. ಸಮಾಜದ ಕೊಳಕುಗಳನ್ನು ನಿರ್ಭೀತಿಯಿಂದ ಪ್ರಶ್ನಿಸಿದ, ಬದಲಿಸಿದ ಚಿಂತಕರಿಬ್ಬರೂ ಸಮಾಜ ವಿಜ್ಞಾನಿಗಳಲ್ಲವೇ? ಅಂಬೇಡ್ಕರ್ IIT ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪ್ರತಿಯೊಂದು ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯ ಪಠ್ಯಕ್ರಮದ ಭಾಗವಾಗಬೇಕು. ಅಂಬೇಡ್ಕರ್ ಮನಸ್ಸು ಮಾಡಿದ್ದರೆ ಅಮೇರಿಕಾದ ಯಾವುದೋ ದೊಡ್ಡ ವಿಶ್ವವಿದ್ಯಾಲಯದಲ್ಲಿ ಕುಳಿತು ಭಾರತದ ಬಗ್ಗೆ ಟೀಕೆ ಟಿಪ್ಪಣೆ ಮಾಡಿಕೊಂಡು ಡಾಲರ್ ಎಣಿಸಬಹುದಿತ್ತೇನೊ. ಅವರು ಸಹಿಸಿದ ಅಪಮಾನ ಸಂಕಟಗಳನ್ನು ನೋಡಿದರೆ ಅವರು ವಿದೇಶಕ್ಕೆ ಹೋಗಿದ್ದು ತಪ್ಪು ಎಂದು ಯಾರೂ ಎಂದುಕೊಳ್ಳುತ್ತಿರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ‘ಗೋಮಾತೆ’,’ಘರ್-ವಾಪಸಿ’ಜಪಿಸಿ, ಅಮೇರಿಕ ವೀಸಾ ಸಿಕ್ಕರೆ ಚೆನ್ನೈನಲ್ಲಿ ಸೊಳ್ಳೆಕಾಟದ ನೆಪ ಹೇಳಿ ಗುಟ್ಟಲ್ಲಿ ಅಮೇರಿಕ ಸೇರಿಕೊಳ್ಳುವ IIT ಯ ‘ಬುದ್ಧಿವಂತ’ ಜಾತಿಗಳ ವಟುಗಳು ನೈಜ ದೇಶಭಕ್ತಿ ಏನೆಂದು ಕಲಿಯಬೇಕಾದ್ದು ಅಂಬೇಡ್ಕರ್‌ರಿಂದ.

ಚೆನ್ನೈ ಮಾತ್ರವಲ್ಲ ದೇಶದ ಪ್ರತಿಯೊಂದು ಕಡೆಯೂ ದಿಟ್ಟ ಪ್ರತಿಭಟನೆಗಳು ನಡೆದಿವೆ. ಬಂಡೆಯಂತೆ ಸ್ಥಿರವಾಗಿ ನಿಂತಿರುವ ಈ ದಿಟ್ಟಪೋರರು ಭವಿಷ್ಯ ಭಾರತದ ಭರವಸೆ. ಏನೇ ಹೇಳಿ, ವಿವೇಕಾನಂದರ ಹೆಸರು ಉಪಯೋಗಿಸಿ ಕನಿಷ್ಠ ಹೆಸರು ಬರೆದುಕೊಳ್ಳುವುದಕ್ಕೂ ಅಂಜುವ ಜನ, ಈ ನೆಲದ ಸತ್ವ ಹೀರಿ ಬೆಳೆದ ನೈಜ ಮತ್ತು ದಿಟ್ಟ ಪೋರರನ್ನು ಎಂದಿಗೂ ಎದುರಿಸಲು ಸಾಧ್ಯವಿಲ್ಲ.

ಅರುಣ್ ಶೌರಿಯವರ ಸುಳ್ಳು ದೇವರುಗಳು ಮತ್ತವರ ನೈಜ ನಿಂದಾ ಭಕ್ತಿ


– ಶ್ರೀಧರ್ ಪ್ರಭು


ರಾಮ ರಾಮ…

ವರ್ಷ ೨೦೦೨. ಸಿಪಿಎಂನ ವಕೀಲರ ಸಂಘಟನೆ AILU ಕೇರಳದ ಕೊಚ್ಚಿಯಲ್ಲಿ ಅಖಿಲ ಭಾರತ ವಕೀಲರ ಸಮಾವೇಶವನ್ನು ಆಯೋಜಿಸಿತ್ತು. ವೇದಿಕೆಯ ಮೇಲಿದ್ದ ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಹಶಿಮ್ ಅಬ್ದುಲ್ ಹಲಿಂ, ಕಲ್ಕತ್ತಾ ಮುಖ್ಯ ನ್ಯಾಯಾಲಯದ ಅಡ್ವೋಕೇಟ್ ಜನರಲ್ ನರೋ ನಾರಾಯಣ ಗೂಪ್ತು ಮತ್ತು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವಕೀಲರೆಲ್ಲ ಒಬ್ಬ ವ್ಯಕ್ತಿಯ ಆಗಮನವನ್ನು ಕಾತರದಿಂದ ಎದುರು ನೋಡುತ್ತಿದ್ದರು. ಯಾರು ಗೊತ್ತೇ ಆ ವ್ಯಕ್ತಿ? ರಾಮ ಜೇಠ್ಮಲಾನಿ!

ಆ ದಿನಗಳಲ್ಲಿ, ವಾಜಪೇಯಿ ಸರಕಾರ, ಅದಕ್ಕಿಂತ ಜಾಸ್ತಿ, ವಾಜಪೇಯಿಯವರನ್ನು ಕಂಡರೆ ಉರಿದು ಬೀಳುತ್ತಿದ್ದ ಜೇಠ್ಮಲಾನಿಯನ್ನು ಕರೆಸಿ ಅಂದಿನ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಿಸುವ ಆಲೋಚನೆ ಇರಬೇಕು ಸಂಘಟಕರಿಗೆ. ಸಭಾ ಮರ್ಯಾದೆ, ಔಪಚಾರಿಕತೆ, ಸ್ವಾಗತ, ಪರಿಚಯ ಇದ್ಯಾವುದರ ಗೋಜಿಲ್ಲದೆ ಸೀದಾ ಮೈಕಾಸುರನೆಡೆ ನುಗ್ಗಿದ ಈ ಜೇಠ್ಮಲಾನಿ ಉಸಿರೂ ತೆಗೆದುಕೊಳ್ಳದೆ ಸುಮಾರು ಸುಮಾರು ನಲವತ್ತೈದು ನಿಮಿಷ ಮಾತನಾಡಿದರು. ಇದರಲ್ಲಿ ನಲವತ್ತುನಾಲ್ಕು ನಿಮಿಷ ಕೇರಳ ಮತ್ತು ಪಶ್ಚಿಮ ಬಂಗಾಳದ ಎಡ ಸರಕಾರಗಳನ್ನು ಬೈದದ್ದು. mod-shourieಇನ್ನೊಂದು ನಿಮಿಷ ಭಾರತ-ಚೈನಾ ಯುದ್ಧ ಯುದ್ಧ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಕಮ್ಯುನಿಸ್ಟರ ಪಾತ್ರ ಇತ್ಯಾದಿ ಮಾತಾಡಿದ್ದು. ವಕೀಲರ ಸಮಸ್ಯೆಗಳು, ಸಂಘಟನೆ ಇತ್ಯಾದಿಗಳ ಪ್ರಸ್ತಾಪವೇ ಇಲ್ಲ. ಸಂಘಟಕರಿಗೆ ‘ಕೈ ತೋರಿಸಿ ಅವಲಕ್ಷಣ’… ಅಷ್ಟೇಕೆ, ಇರಲಾರದೆ ಇರುವೆ ಬಿಟ್ಟುಕೊಂಡ ಅನುಭವ!

ಇತ್ತೀಚಿಗೆ ಈ ಅರುಣ್ ಶೌರಿ ಮೋದಿ ಸರಕಾರವನ್ನು ಮೂದಲಿಸಿದಾಗ ಇದೆಲ್ಲ ನೆನಪಾಯಿತು. ಶೌರಿಯವರ ‘ಉರಿ’ ನೋಡಿ ಕೆಲವರಿಗೆ ಇವರನ್ನು ಮುಖ್ಯ ಅತಿಥಿಯಾಗಿ ಯಾವುದಾದರು ಪ್ರಗತಿಪರರ ಕಾರ್ಯಕ್ರಮಗಳಿಗೆ ಕರೆಯಿಸುವ ಖಯಾಲಿ ಏನಾದರು ಬಂದಿದ್ದರೆ ಈ ಮೇಲಿನ “ರಾಮಾಯಣ” ದ ಪ್ರಸಂಗ ಗಮನಿಸುವುದೊಳಿತು.

ಜಾನಾಮಿ ಧರ್ಮಂ…

ಒಂದು ಪಕ್ಷ ಈ ಉಮಾ ಭಾರತಿ, ಸಾಕ್ಷಿ ಮಹಾರಾಜನಂಥವರು ಬದಲಾಗಬಹುದು ಆದರೆ ಶೌರಿಯಂಥವರು ಎಂದಿಗೂ ಬದಲಾಗುವುದಿಲ್ಲ. ಶೌರಿ ತರಹದವರು “ಜಾನಾಮಿ ಧರ್ಮಂ ನಚಮೆ ಪ್ರವೃತ್ತ:” (ಸರಿಯಾದ ಮಾರ್ಗ ಯಾವುದೆಂದು ಗೊತ್ತು – ಅದರಲ್ಲಿ ಪ್ರವೃತ್ತನಾಗಲಾರೆ) ಎನ್ನುವ ಸಿದ್ಧಾಂತದವರು.

ಶೌರಿ ನೈಜ ಅರ್ಥದಲ್ಲಿ ಬಲಪಂಥೀಯ. ಸಂಘ ಪರಿವಾರದಲ್ಲಿ ಹಲವರು ಬಲಪಂಥದ ರಾಜಕೀಯ ಅಥವಾ ಧಾರ್ಮಿಕ ಆಯಾಮವನ್ನು ಸೀಮಿತವಾಗಿ ಅನುಸರಿಸುತ್ತಾರೆ; ಅರ್ಥಿಕ ವಿಚಾರಗಳಲ್ಲಿ ಸ್ವಲ್ಪ ಮಟ್ಟಿಗೆ (ಅವರದ್ದೇ ಢೊಂಗಿ ಮಾದರಿಯದ್ದೆ ಇರಲಿ) ಸಮಾಜವಾದವನ್ನು ಒಪ್ಪುತ್ತಾರೆ. ಆದರೆ ಶೌರಿ ಹಾಗಲ್ಲ. ಆತ ಎಲ್ಲ ಸ್ವರೂಪ ಆಯಾಮಗಳಲ್ಲಿ ಬಲಪಂಥವನ್ನು ತಬ್ಬುವ ಸಿದ್ಧಾಂತದ ಪ್ರತಿಪಾದಕ. ಸಂವಿಧಾನದ ಎಲ್ಲ ಆಶಯಗಳಿಗೂ ಸಂಪೂರ್ಣವಾಗಿ ವಿರೋಧಿಸುವವನನ್ನು ನೀವು ನೋಡಬೇಕಿದ್ದರೆ ಅದು ಶೌರಿಯೇ. ಅಂಬೇಡ್ಕರ್ ರಿಂದ ಮೊದಲ್ಗೊಂಡು ಎಡಪಂಥೀಯ ಇತಿಹಾಸಕಾರರು, ಕ್ರೈಸ್ತರು, ಮುಸಲ್ಮಾನರು, ಎಲ್ಲ ಬಹುಜನರನ್ನೂ ತುಳಿಯಲು ಸೈದ್ಧಾಂತಿಕ ತಳಹದಿ ತಯಾರಾಗುವುದು ಈ ಶೌರಿಯ ಫ್ಯಾಕ್ಟರಿಯಲ್ಲಿ. ಅಮೇರಿಕ ಪ್ರೇರಿತ ಅರ್ಥಿಕ ಮುಕ್ತ ಮಾರುಕಟ್ಟೆ ವಿಚಾರಧಾರೆಯನ್ನು ನಮ್ಮ ದೇಶದಲ್ಲಿ ಅತ್ಯಂತ ಪ್ರಭಲವಾಗಿ ಪ್ರತಿಪಾದಿಸಿದ್ದು ಶೌರಿ. ಎಲ್ಲವನ್ನೂ ಮಾರುಕಟ್ಟೆಯೇ ನಿರ್ಧರಿಸಬೇಕು ಎಂಬ ಸಿದ್ಧಾಂತ ಪ್ರತಿಪಾದನೆಯ ಭಾಗವಾಗಿಯೇ ಶೌರಿ ಎಡ ಮತ್ತು ಸಮಾಜವಾದಿ ಸಿದ್ಧಾಂತಗಳನ್ನು ವಿರೋಧಿಸುವುದು. ಅಂಬೇಡ್ಕರ್ ರನ್ನು ವಿರೋಧಿಸದಿದ್ದರೆ ಸಾಮಾಜಿಕ ಸಮಾನತೆ ಯನ್ನು ಹೇಗೆ ತುಳಿಯುವುದು? ಭಾರತದಲ್ಲಿ ನೈಜ ಅರ್ಥದಲ್ಲಿ ಬಲಪಂಥದ ಮಗ್ಗುಲು ಮುರಿದದ್ದು ಅಂಬೇಡ್ಕರ್. ಬೇರೆ ಯಾರನ್ನು ಎದುರಿಸಬೇಕಿದ್ದರೂ ಸೈ ಎನ್ನುವ ಸಂಘಿ ಪಡೆ ಅಂಬೇಡ್ಕರ್ ಮುಂದೆ ಮೊಣಕಾಲೂರುತ್ತದೆ. ಆದ್ದರಿಂದ ಅಂಬೇಡ್ಕರರ ಚಾರಿತ್ರ್ಯ ವಧೆ ಮಾಡುವ ಉದ್ದೇಶದಿಂದ ಶೌರಿ “Worshiping False Gods” ಬರೆದದ್ದು. ಹೀಗೆ ಶೌರಿ ತುಂಬಾ ಆಸಕ್ತಿ, ಪರಿಶ್ರಮ, ಅಧ್ಯಯನ ಪೂರ್ಣವಾಗಿ ಬಲಪಂಥದ ಸರ್ವ ಆಯಾಮ ಮತ್ತು ಮಜಲುಗಳ ಬೆನ್ನಿಗೆ ನಿಲ್ಲುವವರು.

ಅಯೋಧ್ಯ ಕಾಂಡ

೧೯೯೦ರ ಸುಮಾರಿಗೆ ಬಿಜೆಪಿ ಮೇಲ್ಜಾತಿಯ ಮಧ್ಯಮ ಮತ್ತು ಮೇಲ್ವರ್ಗದ ಜನಮಾನಸದೊಳಗೆ ಸಂಪೂರ್ಣವಾಗಿ ಹೊಕ್ಕು ಆಗಿತ್ತು. ಆದರೆ ಅಲ್ಲಲ್ಲಿ ಅಪಸ್ವರಗಳು ಇದ್ದೇ ಇದ್ದವು. ರಾಮ ಮಂದಿರ ಬೇಕು, ಸರಿ; ಆದರೆ, ಮಸೀದಿ ಕೆಡವುವುದು, ಜನರನ್ನು ಕೊಲ್ಲುವುದು ಇತ್ಯಾದಿ ಬೇಡ ಎನ್ನುವ ಒಂದು ವರ್ಗವಿತ್ತು. ಹಾಗೆಯೇ ದೇಶದ ಬಹುದೊಡ್ಡ ಬುದ್ಧಿಜೀವಿ ವರ್ಗ ಸಂಘ ಪರಿವಾರದ ಕೋಮುವಾದವನ್ನು ವಿರೋಧಿಸುತ್ತಿತ್ತು. ಆ ಸಮಯದಲ್ಲಿ ಸಂಘ ಪರಿವಾರಕ್ಕೆ ನೆನಪಾಗಿದ್ದು ಅರುಣ ಶೌರಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ಮುಖಾಂತರ ದೇಶದಾದ್ಯಂತ “Arun Shourie Speaks on Ayodhya” ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಶೌರಿ, ಜಗದೀಶ ಕಾರಂತ, ಅನಂತ ಕುಮಾರ ಹೆಗಡೆಯವರಂತೆ ಬೆಂಕಿ ಕಾರಲಿಲ್ಲ; ತುಂಬಾ ವ್ಯವಧಾನದಿಂದ ಯಾರಿಗೂ ಗೊತ್ತಾಗದಂತೆ ಊಟದಲ್ಲಿ ನುಣ್ಣನೆ ಗಾಜಿನ ಪುಡಿ ಬೆರೆಸಿ ಬಿಟ್ಟರು. ಇಂದು ಜಗದೀಶ ಕಾರಂತ, ಅನಂತ ಕುಮಾರರ ಭಾಷಣಗಳನ್ನ ಜನ ಮರೆತಿದ್ದಾರೆ; ಆದರೆ ಅಂದು ಶೌರಿ ಬೆರೆಸಿದ ‘ನುಣ್ಣನೆ ಗಾಜಿನ ಪುಡಿ’ ಸಮಾಜದ ಸಣ್ಣ ಕರುಳನ್ನೇ ಕತ್ತರಿಸಿ ಹಾಕಿದೆ. ಹೀಗಾಗಿ ‘ಅನ್ಯ’ ಕೋಮಿನೊಂದಿಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಜೀರ್ಣಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿ ಉಳಿದಿಲ್ಲ.

ಸುಳ್ಳು ದೇವರುಗಳ ಸತ್ಯ

ನಿಜ ಹೇಳಬೇಕೆಂದರೆ, ಶೌರಿಗೆ ಮೋದಿಯವರ ನೀತಿಗಳ ಬಗ್ಗೆ ಯಾವ ಘನಂದಾರಿ ಭಿನ್ನಾಭಿಪ್ರಾಯಗಳೂ ಇದ್ದಂತೆ ಇಲ್ಲ. ಹಾಗೆಂದು ಕೇವಲ ಮಿನಿಸ್ಟರ್ ಗಿರಿಗಾಗಿ, ಈ ಶೌರಿ ಹುಚ್ಚೆದ್ದು ಕುಣಿಯುವ ಜನವೂ ಅಲ್ಲ. ಇಂದು ಶೌರಿಗೆ ಬೇಕಾಗಿರುವುದು ಮನ್ನಣೆ; ಸಾಂಕೇತಿಕ ವಾಗಿಯಾದರೂ ಸರಿ, ಬೇಕಿರುವುದು ಅಧಿಕಾರ ಕೇಂದ್ರದ ಒಳಗಿನ ಒಂದು ವೇದಿಕೆ. ಜತೆಗೆ ತಮ್ಮನ್ನು ಬಳಸಿ ಬಿಸಾಡಿದ ವೇದನೆ ಶೌರಿಯಂಥವರಲ್ಲಿದೆ.

ಆದರೆ, ಇಂದು ಮೋದಿಯವರಿಗೆ ವಿಚಾರವಾದಿಗಳು ಎಂದರೆ ತುಂಬಾ ಅಲರ್ಜಿ. ಯೋಚಿಸಿ ರಾಜಕಾರಣ ಮಾಡುವ ಯಾರೇ ಆಗಲಿ, shourie-modiಕೆಲವೊಮ್ಮೆ ಪರಿಣಾಮ ಲೆಕ್ಕಿಸದೆ ಮನಸ್ಸಿನಲ್ಲಿದ್ದದ್ದು ಹೇಳಿ ಬಿಡುತ್ತಾರೆ. ವ್ಯಕ್ತಿ ಪೂಜೆ ಮಾಡುವುದಿಲ್ಲ; ಹೀಗಾಗಿ, ವಿಚಾರವಾದಿಗಳನ್ನು ಪಳಗಿಸುವುದು ಸುಲಭವಲ್ಲ. ಇನ್ನು ಇವರ ಮೀಡಿಯಾ ಸಖ್ಯದಿಂದಾಗಿ ಇವರ ವಿಚಾರಗಳು ಬೇಗ ಜನರನ್ನು ತಲುಪುತ್ತವೆ. ಇವೆಲ್ಲವೂ ಮೋದಿಯವರ ಬೃಹತ್ ಉದ್ಯಮ ಪ್ರೇರಿತ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ದೊಡ್ಡ ಅಡ್ಡಿ. ಹೀಗೆಂದೇ, ಶೌರಿ ತರಹದವರನ್ನು ಕೇವಲ ಬಳಸಿಕೊಳ್ಳಲಾಗುತ್ತದೆಯೇ ಹೊರತು ಅಧಿಕಾರ ಕೊಟ್ಟು ಶಕ್ತಿ ಕೇಂದ್ರದ ಒಳಗೆ ಬಿಟ್ಟುಕೊಳ್ಳಲಾಗುವುದಿಲ್ಲ.

ಅದೇನೇ ಆದರೂ ಶೌರಿಯೇ ತಮ್ಮ ವರ್ಗ ಮತ್ತು ಜಾತಿಯ ಹಿತಾಸಕ್ತಿ ಗಳನ್ನು ಕಾಪಾಡುವ ನೈಜ ಸಾಮರ್ಥ್ಯ ಉಳ್ಳವರು ಎಂಬುದು ಖಂಡಿತವಾಗಿ ಬಲಪಂಥೀಯರಿಗೆ ಗೊತ್ತಿದೆ. ಇನ್ನು ಶೌರಿಯ ಭಿನ್ನಾಭಿಪ್ರಾಯಗಳು ಕೂಡ ಕ್ಷಣಿಕ. ಒಟ್ಟಾರೆ, ಶೌರಿಯವರ ಭಕ್ತಿ ಎಂಥದ್ದೆಂದರೆ, ಅವರು ಪೂಜಿಸುವ ದೇವರುಗಳೇ ಸುಳ್ಳಾದರೂ ಅವರ ಭಕ್ತಿ ಸುಳ್ಳಾಗದು. ಇನ್ನು ಈ ಸುಳ್ಳು ದೇವರುಗಳ ಮಹಿಮೆ ಎಂಥಹದ್ದೆಂದರೆ ಈ ಭಕ್ತನ ನಿಂದಾ ಭಕ್ತಿಯ ಮುಂದೆ ಎಂತೆಂತಹ ನೈಜ ಭಕ್ತರ ದಾಸ್ಯ ಭಕ್ತಿಯೂ ಲೆಕ್ಕಕ್ಕಿಲ್ಲ.

ಕದ್ದ ತಲೆಮಾರುಗಳನ್ನು ಹುಡುಕುತ್ತಾ… : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-2)


– ಶ್ರೀಧರ್ ಪ್ರಭು


 

“We are all visitors to this time, this place. We are just passing through. Our purpose here is to observe, to learn, to grow, to love… and then we return home.”

– ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲಿ ಪ್ರಚಲಿತವಿರುವ ಒಂದು ನಾಣ್ಣುಡಿ

ಪ್ರಪಂಚದ ಮೊದಲ ಕಾಲಾಪಾನಿ

ಇಂಗ್ಲೆಂಡ್ ಮತ್ತು ಅಮೆರಿಕೆಯ ಔದ್ಯೋಗಿಕ ಕ್ರಾಂತಿ ಒಂದು ಕಡೆ ಪ್ರಗತಿ ಮತ್ತು ಶ್ರೀಮಂತಿಕೆ ತಂದರೆ ಇನ್ನೊಂದೆಡೆ ಅತ್ಯಂತ ಕ್ರೂರ ಅಸಮಾನತೆಯನ್ನೂ ತಂದೊಡ್ಡಿತು. ಕಾರ್ಮಿಕರ, ಅದರಲ್ಲೂ ಬಾಲ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ ಮಿತಿ ಮೀರಿತ್ತು. ಬಹುತೇಕ ಜೈಲುಗಳು ತುಂಬಿ ತುಳುಕುತ್ತಿದ್ದವು. ಇಂತಹುದ್ದರಲ್ಲಿ, ಸಾಮ್ರಾಜ್ಯಶಾಹಿಗಳು ಕಂಡು ಕೊಂಡ ಸುಲಭ ಮಾರ್ಗವೆಂದರೆ ಕೈದಿಗಳನ್ನು ದೂರದ ದ್ವೀಪಗಳಿಗೆ ಸಾಗಿಸುವುದು. ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು ಅಂಡಮಾನಿನ ಕಾಲಾಪಾನಿ Australia-aborigines-artಶಿಕ್ಷೆ ಕಂಡುಕೊಂಡಂತೆ, ತಮ್ಮದೇ ದೇಶದಲ್ಲಿನ ದಂಗೆ, ಹೋರಾಟಗಳನ್ನು ಹತ್ತಿಕ್ಕಲು ಕೈದಿಗಳನ್ನು ಆಸ್ಟ್ರೇಲಿಯಾಗೆ ಸಾಗಿಸುವ ಮಾರ್ಗ ಕಂಡು ಹಿಡಿಯಲಾಯಿತು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ನಡುವಿನ ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಸುಮಾರು 1,65,000 ಜನರನ್ನು ಆಸ್ಟ್ರೇಲಿಯಾಗೆ ಸಾಗಿಸಲಾಯಿತು.

ಮೂಲನಿವಾಸಿಗಳ ಮಾರಣ ಹೋಮ

ಹೀಗೆ ಕಾಲಿಟ್ಟ ಪಾಶ್ಚಿಮಾತ್ಯರು ಕೇಳಿ ಕಂಡರಿಯದ ರೋಗ ರುಜಿನಗಳನ್ನು ಮೂಲ ನಿವಾಸಿಗಳಿಗೆ ಅಂಟಿಸಿಬಿಟ್ಟರು. ನೆಗಡಿಯಿಂದ ಮೊದಲ್ಗೊಂಡು ಸೀತಾಳೆ ಸಿಡುಬು, ಕಾಲರ, ಕ್ಷಯ ರೋಗ, ಸಿಫಿಲಿಸ್ ನಂತಹ ಗುಪ್ತ ರೋಗಗಳು ಅಂಟಿಕೊಂಡು ಸಿಡ್ನಿ ಸುತ್ತಲಿನ ಅರ್ಧದಷ್ಟು ಮೂಲನಿವಾಸಿಗಳು ಸ್ವರ್ಗವಾಸಿಗಳಾದರು.

ನಲವತ್ತು ಸಾವಿರ ವರ್ಷಗಳಿಂದ ನೆಲವನ್ನು ತಬ್ಬಿ ಬದುಕಿದ ಪ್ರಾಚೀನ ಸಂಸ್ಕೃತಿಯೊಂದನ್ನು ಸಾಮ್ರಾಜ್ಯದಾಹದ ಬಿಳಿಯರು ಕೇವಲ (ಹತ್ತೊಂಬತ್ತನೇ ಶತಮಾನದ ಮೊದಲ) ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಗುರುತು ಸಿಗದಂತೆ ನಾಶಮಾಡಿಬಿಟ್ಟಿದ್ದರು.

ಬ್ರಿಟಿಷರ ಸಾಮ್ರಾಜ್ಯಶಾಹಿ ದಾಹದಲ್ಲಿ ಬೆಂದು 1901ರ ವರೆಗೂ ಒಂದು ವಸಾಹತುವಾಗಿಯೇ ಉಳಿದಿತ್ತು. ಅರ್ಥಿಕ ಅಸಮಾನತೆಯಲ್ಲಿ ಬೆಂದು ಬಂದ ಶೋಷಿತರು ಮತ್ತು ಸಾಮ್ರಾಜ್ಯ ಶಾಹಿಗಳು ಸೇರಿ ಮೂಲನಿವಾಸಿಗಳನ್ನು ಶೋಷಿಸಿದರು. ಇಂದು ಸಿಡ್ನಿ ರಾಜಧಾನಿಯಾಗಿರುವ ನ್ಯೂ ಸೌತ್ ವೇಲ್ಸ್ ನಿಂದ ಬೇರ್ಪಟ್ಟು ತಮ್ಮದೇ ಪ್ರಾಂತ್ಯ ನಿರ್ಮಿಸಿಕೊಳ್ಳಬೇಕು ಎಂಬ ಆಶಯದಿಂದ ಅಂದು ಕೇವಲ ಪೋರ್ಟ್ ಫಿಲ್ಲಿಪ್ ಒಂದು ಜಿಲ್ಲೆಯಾಗಿದ್ದ ವಿಕ್ಟೋರಿಯಾ ಪ್ರಾಂತ್ಯದ ಜನ ಹೋರಾಟ ನಡೆಸಿದರು. ಒಂದು ಪ್ರಾಂತ್ಯದ “ದೊಡ್ಡಣ್ಣನ” ವ್ಯವಹಾರ ಸಹಿಸದೆ ಹೋರಾಟಗಳು ನಡೆದವು.

ಯಾರಿಗೆ ಬಂತು ಎಲ್ಲಿಗೆ ಬಂತು?

ಆಸ್ಟ್ರೇಲಿಯಾ 1901 ರಲ್ಲಿ ಗಣರಾಜ್ಯವಾಗಿ ಉದಯಿಸಿತು. ಆದರೆ ಮೂಲನಿವಾಸಿಗಳ ಶೋಷಣೆ ಇನ್ನೂ ತೀವ್ರವಾಯಿತು. 1909 ರಿಂದ 1969 ರ ವರೆಗೆ ಸಾವಿರಾರು ಮಕ್ಕಳನ್ನು ತಮ್ಮ ತಂದೆ ತಾಯಿಯರಿಂದ ಕದ್ದು ಸರಕಾರ ಪ್ರಾಯೋಜಿಸಿದ ಹಾಸ್ಟೆಲ್ ಗಳಿಗೆ (ಒಂದು ರೀತಿಯಲ್ಲಿ ಮಕ್ಕಳ ಜೈಲುಗಳು) ಸಾಗಿಸಲಾಯಿತು. ಹೀಗಾಗಿ ಮೂಲನಿವಾಸಿಗಳನ್ನು Australia-family-aborigines“ಕದ್ದ ತಲೆಮಾರುಗಳು’ (ಸ್ಟೋಲನ್ ಜೆನರೇಶನ್ಸ್) ಎಂದು ಕೆರೆಯುವ ಪರಿಪಾಠವಿದೆ. ಇಂದಿಗೆ ಕೇವಲ ನಾಲ್ಕು ದಶಕಗಳ ಹಿಂದಿನವರೆಗೂ ಆಸ್ಟ್ರೇಲಿಯ ಸರಕಾರ ‘ಸುಸಂಸ್ಕೃತ’ ಗೊಳಿಸುವಸಲುವಾಗಿ ಕಾನೂನಿನನ್ವಯ ಮೂಲನಿವಾಸಿಗಳ ಮಕ್ಕಳನ್ನು ಅಪಹರಿಸುತ್ತಿತ್ತು.

ಹೆತ್ತವರಿಂದ ಬೇರ್ಪಟ್ಟ ಸಾವಿರಾರು ಜನರು ಕಳೆದೇ ಹೋದರು. ವ್ಯಕ್ತಿ ಗಳು ಮಾತ್ರವಲ್ಲ ಹಲವು ಜನಾಂಗಗಳೇ ಕಳೆದು ಹೋದವು

ರಕ್ತದ ಕಲೆ ತೊಳೆಯುತ್ತಾ…

ಆಸ್ಟ್ರೇಲಿಯಾಗೆ ಮೂಲನಿವಾಸಿಗಳ ರಕ್ತ ಅಂಟಿರುವುದು ಎಷ್ಟು ನಿಜವೋ ಅದನ್ನು ತೊಳೆಯಲು ನಡೆಯುತ್ತಿರುವ ಪ್ರಯತ್ನಗಳೂ ಅಷ್ಟೇ ನಿಜ. ತಾವು ಕ್ಷಮಿಸಲಾಗದ ಅಪರಾಧ ಮಾಡಿದ್ದೇವೆ ಎಂಬ ಅಪರಾಧಿ ಪ್ರಜ್ಞೆ ಬಹುತೇಕರಲ್ಲಿದೆ. ಕಳೆದ ದಶಕ ಒಂದರಲ್ಲೇ ಸರಕಾರ ಉತ್ತರ ಆಸ್ಟ್ರೇಲಿಯ ಪ್ರಾಂತದ 21% (ಹದಿಮೂರು ಲಕ್ಷ ಚದುರ ಮೀಟರ್ ನಷ್ಟು) ಭೂಮಿಯ ಒಡೆತನವನ್ನು ಮೂಲನಿವಾಸಿಗಳಿಗೆ ವಹಿಸಿ ಕೊಟ್ಟಿದೆ.

2008 ರಲ್ಲಿ ಅಂದಿನ ಪ್ರಧಾನಿ ಕೆವಿನ್ ರಡ್ ಮೂಲನಿವಾಸಿಗಳ ಬಹಿರಂಗ ಕ್ಷಮೆ ಕೇಳಿದರು. ಸರಕಾರ ಮೂಲನಿವಾಸಿಗಳ ಸಲುವಾಗಿ ಆಸ್ಟ್ರೇಲಿಯ ಸರಕಾರವೇ ಲಕ್ಷಗಟ್ಟಲೆ ಡಾಲರ್ ಖರ್ಚು ಮಾಡಿ ಮೂಲನಿವಾಸಿಗಳ ಆಶಯಗಳನ್ನು ಪ್ರತಿಪಾದಿಸುವ ಸಂವಾದ ಕಾರ್ಯಕ್ರಮಗಳನ್ನು ಸಂಯೋಜಿಸಿದೆ. ಇಂತಹ ಸಾಕಷ್ಟು ಕಾರ್ಯಕ್ರಮಗಳು ಆಸ್ಟ್ರೇಲಿಯ ದೇಶದ ಹೊರಗೂ ಜರುಗಿವೆ. ಅಂತಹ ಒಂದೆರಡು ಕಾರ್ಯಕ್ರಮಗಳು ಬೆಂಗಳೂರಿನಲ್ಲೂ ನಡೆದಿವೆ. ಸರಕಾರವೇ ಮುಂದೆ ನಿಂತು, ದುಡ್ಡು ಮತ್ತು ಅಂತರ ರಾಷ್ಟ್ರೀಯ ಮಟ್ಟದ ಪ್ರಚಾರ ಕೊಡಿಸಿ ತಾವೇ ಎಸಗಿದ ಅನ್ಯಾಯಗಳ ಖಂಡನೆ ಮಾಡುವ ಇಂತಹ ಉದಾಹರಣೆಗಳು ಅಪರೂಪ.

ನವೆಂಬರ್ 2014 ನಲ್ಲಿ ಜರುಗಿದ ಬೆಂಗಳೂರು Australia-aborigines-costumeಸಾಹಿತ್ಯ ಹಬ್ಬ (Bengaluru Literary Festival)ದಲ್ಲಿ ಕೂಡ ಅಂತಹ ಒಂದು ಸಂವಾದ ಜರುಗಿತ್ತು. ಕ್ಯಾತೀ ಕ್ರೇಗೀ, ಡೈಲನ್ ಕೋಲ್ಮನ್, ಅನೀಟ ಹೈಸ್, ಜೇರ್ಡ್ ಥಾಮಸ್, ಎಲೆನ್ ವಾನ್, ನೀರ್ವೆನ್ ಮತ್ತು ನಿಕೋಲ್ ವಾಟ್ಸನ್ ಮೊದಲಾದ ಆಸ್ಟ್ರೇಲಿಯಾದ ಜನಪರ ಲೇಖಕರು ಮತ್ತು ಹೋರಾಟಗಾರರೂ ಪಾಲ್ಗೊಂಡಿದ್ದರು. ಇಂತಹ ಆಸ್ಟ್ರೇಲಿಯದ ಅನೇಕ ಸಾಮಾಜಿಕ ಕಳಕಳಿಯ ಚಿಂತಕರು ಭಾರತದ ದಲಿತ-ಆದಿವಾಸಿ ಹೋರಾಟಗಳ ನಡುವೆ ಬಾಂಧವ್ಯ ಬೆಸೆಯುವ ಪ್ರಯತ್ನದಲ್ಲಿದ್ದಾರೆ.

ಇಂದು ಪ್ರಪಂಚದಾದ್ಯಂತ ಮೂಲನಿವಾಸಿಗಳು, ದಲಿತರು ಮತ್ತು ದಮನಿತರ ಪರ ನಡೆಯುತ್ತಿರುವ ಹೋರಾಟಗಳ ಆಶಯಗಳು ಬಹುತೇಕವಾಗಿ ಒಂದೇ. ಸಾಮ್ರ್ಯಾಜ್ಯಶಾಹಿಶೋಷಣೆಯ ವಿರುದ್ಧ ನಡೆದ ಸ್ವತಂತ್ರ ಹೋರಾಟದ ಮುಂದುವರಿದ ಭಾಗವಾಗಿ ದಲಿತ, ಶೋಷಿತ ಮತ್ತು ಮೂಲನಿವಾಸಿಗಳಿಗೆ ಸೇರಬೇಕಿರುವ ಹಕ್ಕುಗಳನ್ನು ಪಡೆಯುವ ಹೋರಾಟಗಳು ಒಂದಕ್ಕೊಂದು ಬೆಸೆದು ಒಗ್ಗಟ್ಟಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.

ಶುಭ್ರತೆಯನ್ನು ಹಣತೆ ಮಾಡಿ ತೇಲಿ ಬಿಟ್ಟಂತೆ : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-1)

[ವಕೀಲರೂ ಮತ್ತು ನಮ್ಮ ವರ್ತಮಾನ ಬಳಗದ ಲೇಖಕರೂ ಆಗಿರುವ ಶ್ರೀಧರ್ ಪ್ರಭು ಇತ್ತೀಚೆಗೆ ತಾನೆ ಆಸ್ಟ್ರೇಲಿಯ ಪ್ರವಾಸ ಮಾಡಿಕೊಂಡು ಬಂದಿದ್ದಾರೆ. ಬಂದ ತಕ್ಷಣ ತಮ್ಮ ಪ್ರವಾಸ ಕಥನ ಬರೆಯಲು ಆರಂಭಿಸಿದ್ದಾರೆ. ಈಗಾಗಲೆ ನಮ್ಮಲ್ಲಿ ಪ್ರಕಟವಾಗಿರುವ ಶ್ರೀಧರರ ಲೇಖನಗಳಿಗೆ ಸಾಕಷ್ಟು ಮೆಚ್ಚಿಗೆಗಳು ಬಂದಿರುವುದಷ್ಟೇ ಅಲ್ಲದೆ ಅವರು ನಮ್ಮ ಬಳಗದ ಸಕ್ರಿಯ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಇಂದು ಅವರ ಪ್ರವಾಸ ಕಥನದ ಮೊದಲ ಕಂತು ಪ್ರಕಟಿಸುತ್ತಿದ್ದೇವೆ. ಇದು ಸುದೀರ್ಘವಾಗಿ, ಸವಿಸ್ತಾರವಾಗಿ ಮೂಡಿಬರಲಿ ಎಂದು ಆಶಿಸುತ್ತೇವೆ. ಅವರ ಬರಹಗಳು ನಮ್ಮೆಲ್ಲರಿಗೂ ಪ್ರಸ್ತುತವಾಗಿರುತ್ತವೆ ಎನ್ನುವುದು ಈ ಮೊದಲ ಕಂತಿನಲ್ಲೇ ರುಜುವಾತಾಗುತ್ತಿದೆ. -ರವಿ]


– ಶ್ರೀಧರ್ ಪ್ರಭು


ಹೆಸರು: ರಾಯ್ ಪಾಮರ್
ವಯಸ್ಸು: 75 ವರ್ಷ
ವಾಸ: ಸೀಫೋರ್ಡ್ ಉಪನಗರ, ಮೆಲ್ಬರ್ನ್, ಆಸ್ಟ್ರೇಲಿಯಾ
ಉದ್ಯೋಗ: ಬ್ಯಾಂಕ್‌ನಿಂದ ನಿವೃತ್ತಿ ಪಡೆದ ನಂತರದಲ್ಲಿ ದಕ್ಷಿಣ ಮೆಲ್ಬರ್ನ್‌ ನಲ್ಲಿ ಆಫೀಸು ಕಟ್ಟಡಗಳಲ್ಲಿನ ಶೌಚಾಲಯಗಳ ಸ್ವಚ್ಚತೆ
ಹವ್ಯಾಸ: ಸೈಕಲ್ ಸವಾರಿ, ಪರ್ವತಾರೋಹಣ ಮತ್ತು ಗಾಲ್ಫ್

ಬ್ಯಾಂಕ್‌ನಿಂದ ನಿವೃತ್ತನಾದ ಮೇಲೆ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಎನಿಸಿದಾಗ ರಾಯ್ Australia-1ಒಂದು ಯೋಜನಾ ವರದಿ (project report) ತಯಾರಿಸಿ ಸಾಲಕ್ಕಾಗಿ ತನ್ನ ಬ್ಯಾಂಕ್ ಅನ್ನು ಸಂಪರ್ಕಿಸಿದ. ತಕ್ಷಣದಲ್ಲೇ ಸಾಲ ಮಂಜೂರಾಯಿತು; ಅಷ್ಟೇ ಅಲ್ಲ, ತಾನೂ ಕೆಲಸ ಕೊಟ್ಟಿತಲ್ಲದೇ, ಬ್ಯಾಂಕ್ ತನ್ನ ಅನೇಕ ಔದ್ಯಮಿಕ ಗ್ರಾಹಕರಿಗೆ ರಾಯ್‌ನನ್ನು ಪರಿಚಯಿಸಿಕೊಟ್ಟಿತು. ಇಂದು ರಾಯ್ ತನ್ನ ಸ್ವಂತ ಉದ್ಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಕುತೂಹಲದಿಂದ ಮಾತಿಗೆಳೆದಾಗ ರಾಯ್ ಹೇಳಿದ್ದು ಅಚ್ಚರಿ ಮೂಡಿಸಿತು. ರಾಯ್ ಹೇಳಿದ್ದಿಷ್ಟು: ಸುಮಾರು ಎರಡು ಗಂಟೆಗಳಷ್ಟು ಕೆಲಸ ಮಾಡಿದರೆ ಅರವತ್ತು ಡಾಲರ್ ಸಂಪಾದಿಸುವ ಕೆಲಸವೆಂದರೆ ಈ ಕಟ್ಟಡಗಳ ನೈರ್ಮಲ್ಯದ ಕೆಲಸ. ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಯೊಳಗೆ ಕೆಲಸ ಮುಗಿಸಿ ಬಿಟ್ಟರೆ ನಂತರದ ಎಂಟು ಗಂಟೆಗಳ ಕಾಲ ತನ್ನ ಓದು, ಹವ್ಯಾಸಗಳಿಗೆ ಮೀಸಲಿಡಲು ಅವಕಾಶವಿದೆ.

ಬೆಳಿಗ್ಗೆ ಎಂಟು ಗಂಟೆಗೆಲ್ಲ ಕೆಲಸ ಮುಗಿಸಿ ಒಂಭತ್ತು ಗಂಟೆಗೆ ಮನೆ ಸೇರುವ ರಾಯ್ ತನ್ನ ಪ್ರೀತಿಯ ನಾಯಿ ಕೇಟಿ ಜತೆ ತಿರುಗಾಟಕ್ಕೆ ತೆರಳುತ್ತಾರೆ. ನಂತರ ಚಹಾ ಸಮಯ. ಹೆಂಡತಿ ಜೊತೆಗೂಡಿ ಉಭಯ ಕುಶಲೋಪರಿ ಮುಗಿಸಿ ಕಾರಿನ ಮೇಲೆ ಸೈಕಲ್ ಹೇರಿಕೊಂಡು ಆಲ್ಬರ್ಟ್ ಪಾರ್ಕ್ ನಲ್ಲಿ ಒಂದು ಗಂಟೆ ಸೈಕ್ಲಿಂಗ್ ಮುಗಿಸಿದ ನಂತರ ಕ್ರೀಡೆಯ ಬಗ್ಗೆ ಓದು. ನಂತರದಲ್ಲಿ ಮಧ್ಯಾಹ್ನದ ಊಟದ ತಯಾರಿ. ಮಧ್ಯಾಹ್ನ ಒಂದು ಗಂಟೆ ನಿದ್ರೆ. ಆರು ಗಂಟೆ ಸುಮಾರಿಗೆ ಸಣ್ಣ ಬಾಟಲಿ ಬಿಯರ್ ಜತೆ ಒಂದು ಗಂಟೆ ಕಾಲ ನಿಧಾನದ ಊಟ. ನಂತರ ಸಣ್ಣ ವಾಕಿಂಗ್ ಮತ್ತು ಕೊಂಚ ಓದು ಮುಗಿಸಿಕೊಂಡು ಎಂಟು ಗಂಟೆಗೆಲ್ಲ ಗೊರಕೆ ಶುರು. ಇನ್ನು ಹದಿನೈದು ದಿನಕ್ಕೊಮ್ಮೆ ಸಣ್ಣ ಬೆಟ್ಟಗಳಲ್ಲಿ ಬೋಟಿಂಗ್ ಮತ್ತು ಪರ್ವತಾರೋಹಣಕ್ಕೆಂದು ಹೋಗುವ ಪರಿಪಾಠ.

ನಮ್ಮ ಪೌರ ಕಾರ್ಮಿಕರ ದಿನಚರಿಯನ್ನೊಮ್ಮೆ ನೆನೆಸಿಕೊಳ್ಳಿ! ಸ್ವಚ್ಚತೆ ದೈವತ್ವಕ್ಕಿಂತ ಮೇಲು ಎಂದು ನಂಬಿರುವ ರಾಯ್ ತಾನು ಕೊನೆಯ ಬಾರಿ ಚರ್ಚ್‌ಗೆ ಯಾವಾಗ ಹೋಗಿರಬಹುದು ಎಂದು ನೆನಪೇ ಇಲ್ಲ. ತಾನು ಪ್ರೀತಿಸಿದ ಇಸ್ಲಾ ಳನ್ನು ಮದುವೆಯಾಗಿದ್ದು ಮೆಲ್ಬರ್ನ್ ನಗರದ ಪ್ರಾಣಿ ಸಂಗ್ರಹಾಲಯದಲ್ಲಿ.

ನಮ್ಮ ದೇಶದಲ್ಲಿ ‘ಸ್ವಚ್ಚತೆ’ ಕಾಪಾಡಲು ಜಾತಿಯೊಂದನ್ನು ಸೃಷ್ಟಿಸಿಕೊಂಡು, ಮಲಹೊರುವ ಕಾಯಕದಲ್ಲಿ ಅವರಿಗೆ 100% ‘ಮೀಸಲಾತಿ’ ಕೊಟ್ಟಿದ್ದೇವೆ ಎಂದು ಹೇಳಬೇಕೆನಿಸಿದರೂ, ನಮ್ಮ ದೇಶದ ಮಾನ ಮತ್ತು ರಾಯ್ ಪಾಮರ್‌ನ ಪ್ರಾಣ (ಆಶ್ಚರ್ಯದಿಂದ) ಎರಡೂ ಹೋಗುವುದು ಬೇಡ ಎಂದೆನಿಸಿ ಸುಮ್ಮನಾದೆ.

ಆಸ್ಟ್ರೇಲಿಯಾದ ತುಂಬೆಲ್ಲ ನೈರ್ಮಲ್ಯದಲ್ಲೇ ಶ್ರೇಷ್ಠತೆ ಕಾಣುವ, ಕ್ರೀಡೆ ಹವ್ಯಾಸ ಮತ್ತು ಪ್ರವಾಸಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ರಾಯ್ ನಂಥವರೇ Australia-2ಬಹುಸಂಖ್ಯಾತರು. ನೈರ್ಮಲ್ಯದ ಕೆಲಸವನ್ನು ಯಾಕೆ ಹೇಸಿಗೆ ಎಂದುಕೊಳ್ಳಬೇಕು ಎಂಬುದೇ ಅರ್ಥವಾಗದ ಮೇಲೆ ಅದನ್ನು ಜಾತಿಯೊಂದಕ್ಕೆ ಅಂಟಿಸಿ ತುಚ್ಚವಾಗಿಸುವ ಪ್ರಕ್ರಿಯೆ ಅವರಿಗೆ ಹೇಗೆ ಗೊತ್ತಾಗಬೇಕು? ಇವರದ್ದು ಮೀಡಿಯಾ ಮುಂದೆ ಪೊರಕೆ ಹಿಡಿದ ಮುಸುಡಿ ತೋರಿಸುವಂಥ ಗಿಮಿಕ್ ಅಲ್ಲ; ಅವರ, ಮತ್ತವರ ಸಮಾಜದ ಭಾವಕೋಶದ ತುಂಬೆಲ್ಲ ಆವರಿಸಿರುವ ಒಂದು ಅವಿಭಾಜ್ಯತೆ.

ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ವಚ್ಚತೆ ಸಹಜವಾಗಿ ಇರುವಂಥದ್ದೇ. ಅದರಲ್ಲೂ ಇಲ್ಲಿನ ಒಂದು ವಿಶೇಷವೆಂದರೆ, ಕಸ ಗುಡಿಸುವುದು, ಕಕ್ಕಸು ತೊಳೆಯುವುದು, ಬಟ್ಟೆ ಬರೆ ಸ್ವಚ್ಛ ಗೊಳಿಸುವುದು ಇತ್ಯಾದಿ, ವಕೀಲಿ, ವೈದ್ಯಕೀಯ ಮುಂತಾದವುಗಳಷ್ಟೇ ಸಹಜವಾದ ಕೆಲಸ. ವಾರಕ್ಕೊಂದು ಬಾರಿ ಬರುವ ಪುರಸಭೆಯ ವಾಹನ ಮನೆಯಲ್ಲಿನ ಕಸದ ಬುಟ್ಟಿಗಳನ್ನು (ಆಹಾರ ಇತ್ಯಾದಿ ಕೇಸರಿ ಮುಚ್ಚಳದ ಬುಟ್ಟಿಯಲ್ಲಿ ಮತ್ತು ಪ್ಲಾಸ್ಟಿಕ್, ರಬ್ಬರ್ ಇತ್ಯಾದಿ ಕೆಂಪು ಮುಚ್ಚಳದ ಬುಟ್ಟಿಯಲ್ಲಿ ತುಂಬಿಸಿ ಇಡಬೇಕು) ಸರದಿಯಂತೆ ಎತ್ತಿ ಅನಾಮತ್ತಾಗಿ ತನ್ನೊಳಗೆ ಸುರಿದುಕೊಳ್ಳುವ ವಾಹನ ಹತ್ತೇ ನಿಮಿಷದಲ್ಲಿ ಒಂದಿಡೀ ಬಡಾವಣೆಯ ಕಸವನ್ನು ಸಂಗ್ರಹಿಸುತ್ತದೆ.

ನಾವು ಅಸ್ಪೃಶ್ಯತೆ ಕಡಿಮೆಯಾಗಿದೆ ಎಂದು ಭಾವಿಸುವ ನಗರ ಪ್ರದೇಶಗಳಲ್ಲಿ ಕೂಡ ಪೌರ ಕಾರ್ಮಿಕರನ್ನು ಮನೆಯೊಳಗೆ ಸೇರಿಸಿಕೊಳ್ಳುವ ಪರಿಪಾಠ ಇಲ್ಲ. ಅಳಿದುಳಿದ ಹಳಸಲನ್ನು ಐದು ಅಡಿ ಎತ್ತರದಿಂದ ಬಿಸಾಕಿ ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳುತ್ತೇವೆ. ಅಂತಹುದರಲ್ಲಿ ಮೊನ್ನೆ ಕ್ರಿಸ್ಮಸ್ ನ ಮುನ್ನಾ ದಿನ, ವಿಕ್ಟೋರಿಯಾ ರಾಜ್ಯದ ಫ್ರಾಂಕ್ಸ್ಟನ್ ಪುರಸಭೆಯ ಸಿಬ್ಬಂದಿ ಅಗ್ನಿಶಾಮಕದಳದ ವಾಹನದಲ್ಲಿ ಮನೆ ಮನೆಗೂ ಬಂದು ಮಕ್ಕಳಿಗೆಲ್ಲ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಮಿಠಾಯಿ ಹಂಚಿ ಹೋದದ್ದು ವಿಶೇಷ. ಮನೆಯಲ್ಲಿನ ಎಲ್ಲರೂ ಪೌರ ಸಿಬ್ಬಂದಿಯನ್ನು ಸಂತೋಷದಿಂದ ಬರಮಾಡಿಕೊಂಡು ಸಿಹಿಯ ಪೊಟ್ಟಣವನ್ನು ಲಗುಬಗೆಯಿಂದ ತೆರೆದು ಪ್ರಸಾದದಂತೆ ತಿಂದರು!

ಐತಿಹಾಸಿಕ ಸ್ಮಾರಕಗಳು, ಉದ್ಯಾನಗಳು, ಪ್ರಾಣಿ ಸಂಗ್ರಹಾಲಯಗಳು ಮುಂತಾದೆಡೆಗಳಲ್ಲಿ ಹುಲ್ಲುಹಾಸಿನ ಮೇಲೆ ಕುಳಿತು ಊಟ ಮಾಡಲು ಯಾವ ನಿರ್ಬಂದನೆಯೂ ಇಲ್ಲ. ಸಾರ್ವಜನಿಕರು ತಮ್ಮ ಪ್ಲಾಸ್ಟಿಕ್ ಪೊಟ್ಟಣಗಳು ಮಿಕ್ಕ ಆಹಾರ ಇತ್ಯಾದಿ ತಾವೇ ತುಂಬಿಸಿಕೊಂಡು ಹೋಗುತ್ತಾರೆ. ರೈಲು-ಬಸ್ ನಿಲ್ದಾಣ, ಉದ್ಯಾನವನ, ಜನಪ್ರಿಯ ಪ್ರವಾಸಿ ತಾಣ ಮತ್ತಿತರೇ ಹೆಚ್ಚು ಜನಸಂದಣಿಯ ಜಾಗಗಳಲ್ಲಿ ಕೂಡ ಶೌಚಾಲಯಗಳು ಅಸ್ಥವ್ಯಸ್ಥವಾಗಿಲ್ಲ.

ಹೆದ್ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಮತ್ತು ಊಟ ಮಾಡಲು ಕಲ್ಲಿನ ಮೇಜು-ಬೆಂಚುಗಳನ್ನೂ ನಿರ್ಮಿಸಿದ್ದಾರೆ. Australia-3ಯಾವ ನರಪಿಳ್ಳೆಯೂ ಸುಳಿಯದ ಅಂಥಹ ನಿರ್ಜನ ಪ್ರದೇಶಗಳಲ್ಲಿ ಕೂಡ ಸ್ವಚ್ಚತೆ ರಾರಾಜಿಸುತ್ತದೆ. ಇನ್ನೊಂದು ವಿಶೇಷವೆಂದರೆ ನೆಲಕ್ಕೇ ಜೋಡಿಸಿದ ಅನಿಲಚಾಲಿತ ಒಲೆಗಳನ್ನೂ ನಿರ್ಮಿಸಿ ಇಟ್ಟಿದ್ದಾರೆ. ಒಂದೆರಡು ಡಾಲರ್ ನಾಣ್ಯ ಹಾಕಿದರೆ ಉರಿಯುವ ಈ ಒಲೆ ಚಳಿಗಾಲದಲ್ಲಿ ಆಹಾರ ಬಿಸಿ ಮಾಡಿಕೊಳ್ಳಲು, ಎಣ್ಣೆ ಇಲ್ಲದೆ ಹುರಿಯಲು ಕೂಡ ತುಂಬಾ ಸಹಾಯಕಾರಿ. ಸಾವಿರಾರು ಮೈಲಿ ಸತತವಾಗಿ ಸಾಗುವ ವಾಹನ ಚಾಲಕರಿಗೆ ನಿದ್ದೆಯ ಜೋಂಪು ಬಂದಾಗ ವಿಶ್ರಮಿಸಲೆಂದೇ ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಿದ್ದಾರೆ. ತೀರ ನಿರ್ಜನವಾದ ಹೆದ್ದಾರಿಗಳ ಬದಿಯಲ್ಲಿ ಕೂಡ ರಸ್ತೆ ಬದಿಯಲ್ಲಿ ಮಲ ಮೂತ್ರ ಮಾಡಿದ್ದನ್ನು ನಾವು ನೋಡಲಿಲ್ಲ.

ಸಿಂಗಾಪುರ್ ನಂತೆ, ಗಲೀಜು ಮಾಡುವುದನ್ನು ಇಲ್ಲಿ ಅಪರಾಧೀಕರಣಗೊಳಿಸಿದಂತಿಲ್ಲ. ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬೆದರಿಸುವ ಇಲ್ಲವೇ ಭಾರೀ ದಂಡ ವಿಧಿಸುವ ಫಲಕಗಳೂ ಇಲ್ಲಿಲ್ಲ. ಆಸ್ಟ್ರೇಲಿಯಾನಲ್ಲಿ ಸಾರ್ವಜನಿಕ ಸ್ವಚ್ಚತೆ ಎಂಬುದು ತಮ್ಮ ತಮ್ಮ ಮನೆಗಳಲ್ಲಿ ತಾವಾಗಿಯೇ ವಹಿಸಿಕೊಂಡು ಸಂತೋಷದಿಂದ ಮಾಡುವ ರೀತಿಯದ್ದು; ಯಾವ ಒತ್ತಾಯ, ಬೆದರಿಕೆ, ಪ್ರಚಾರ ಅಥವಾ ಧಾರ್ಮಿಕ ಕಟ್ಟಳೆಗಳ ಸಲುವಾಗಿ ಹೇರಿಕೊಂಡ ಭಾರವಲ್ಲ.

ಪ್ರತಿ ವರ್ಷ ಸೆಪ್ಟೆಂಬರ್ 7 ರಂದು “ಆಸ್ಟ್ರೇಲಿಯಾ ಸ್ವಚ್ಚತಾ ದಿವಸ” ಆಚರಿಸಲಾಗುತ್ತದೆ. “ಕ್ಲೀನ್ ಅಪ್ ಆಸ್ಟ್ರೇಲಿಯಾ” ಎಂಬ ಜನಪ್ರಿಯ ಆಂದೋಲನ ದೇಶದಾದ್ಯಂತ ವ್ಯಾಪಿಸಿದೆ. ಆಸ್ಟ್ರೇಲಿಯಾದ ಪರಿಸರ ಇಲಾಖೆ “ನೈರ್ಮಲ್ಯ ನೀತಿ” ಯೊಂದನ್ನು ನಿರೂಪಿಸಿ, ತನ್ನ ಕಸವನ್ನು ರಸವಾಗಿಸುವ ತಂತ್ರ ನಿರೂಪಿಸಿದೆ. ಆದರೆ ನೈರ್ಮಲ್ಯ ಸರಕಾರೀ ಹೇರಿಕೆಯಿಂದ ಪ್ರೇರೇಪಿತವಲ್ಲ.

ಆಸ್ಟ್ರೇಲಿಯಾ ನಿರ್ಜನ ಪ್ರದೇಶವಾದ್ದರಿಂದ ಅಲ್ಲಿ ನೈರ್ಮಲ್ಯ ಉಳಿದಿದೆ ಎಂಬ ಭಾವನೆಯಿದೆ. ಇದು ಅರ್ಧ ಸತ್ಯ. ಇಂದು ಮೆಲ್ಬರ್ನ್‌ನ ಜನಸಂಖ್ಯೆ ನಲವತ್ತು ಲಕ್ಷ ದಾಟಿದೆ; ಸಿಡ್ನಿ ನಗರ ಅರ್ಧ ಕೋಟಿ ಅಂಚಿನಲ್ಲಿದೆ. ವಿಕ್ಟೋರಿಯಾ ರಾಜ್ಯ ಒಂದರಲ್ಲೇ ಸುಮಾರು ನಲವತ್ತು ದೇಶಗಳಿಂದ ವಲಸೆ ಬಂದ ಲಕ್ಷಾಂತರ ಜನರಿದ್ದಾರೆ. ಪ್ರತಿ ವರ್ಷ ಸುಮಾರು ಅರವತ್ತು ಲಕ್ಷದಷ್ಟು ಪ್ರವಾಸಿಗರು ಆಸ್ಟ್ರೇಲಿಯಾಗೆ ಬಂದಿಳಿಯುತ್ತಾರೆ.

ನಮ್ಮ ಕೆಲಸವೇನಿದ್ದರೂ ಕಸ ಹಾಕುವುದು, ಅದನ್ನು ಬಳಿಯುವುದು ಕೀಳು ಜಾತಿಯೊಂದರ ಮೀಸಲು ವೃತ್ತಿ ಎಂಬುದೇ ನಮ್ಮ ಅಚಲ ನಂಬಿಕೆ. ಹೇಗೆ “ಮೇಲು” ಜಾತಿಗಳನ್ನು ಯುದ್ಧ ಮಾಡುವುದರಿಂದ ದೂರ ಮಾಡಿದ್ದರಿಂದ ನಮ್ಮ ದೇಶ ಗುಲಾಮಗಿರಿಯ ಸಂಕೋಲೆಗೆ ಸುತ್ತಿಕೊಂಡಿತೋ ಹಾಗೇ ನೈರ್ಮಲ್ಯವನ್ನು ಕಾಪಾಡುವ ಕರ್ತವ್ಯವನ್ನು “ಕೀಳು” ಜಾತಿಯ ಕೊರಳಿಗೆ ಕಟ್ಟಿ ಅದನ್ನು ಹೇಸಿಗೆಯ ದೃಷ್ಟಿಯಿಂದ ನೋಡಿದ್ದರಿಂದ ನಮ್ಮ ದೇಶ ದೊಡ್ಡದೊಂದು ತಿಪ್ಪೆ ಗುಂಡಿಯಾಗಿದೆ. ನಮ್ಮ ನದಿಗಳು ಹೆಣಗಳು ಮತ್ತು ರಾಸಾಯನಿಕಗಳನ್ನು ಮೆತ್ತಿದ ವಿಗ್ರಹಗಳನ್ನು ನುಂಗುವ ನುಂಗಬೇಕಾದ ಅನಿವಾರ್ಯತೆ ಇರುವ ವಿಷದ ಗುಂಡಿಗಳು.

ಅಲ್ಲಿನ ಜನ ಜೀವನ, ಆಹಾರ ಪದ್ಧತಿ ಮತ್ತು ಔದ್ಯೋಗಿಕ ಪ್ರಗತಿ ನೋಡಿದರೆ ಭಾರತದ ನೂರರಷ್ಟು ಪರಿಸರ ಹಾನಿಯಾಗಬೇಕಿತ್ತು. ಆದರೆ ಮೆಲ್ಬರ್ನ್ ನಗರ 2011 ರಿಂದಲೂ ಸತತವಾಗಿ ವಿಶ್ವದ ‘ಜೀವಿಸಲು ಅತ್ಯಂತ ಯೋಗ್ಯ’ ನಗರವೆಂದು ಘೋಷಿತವಾಗಿದ್ದರೆ, ಅಡಿಲೇಡ್ ವಿಶ್ವದ ಎರಡನೇ ಸ್ವಚ್ಛ ನಗರ ಎನಿಸಿದೆ.

ಆಸ್ಟ್ರೇಲಿಯಾನಲ್ಲಿ ಕ್ರಿಸ್ಮಸ್ ಸಂದರ್ಭದಲ್ಲೂ ಒಂದೇ ಒಂದು ಸಾರ್ವಜನಿಕ ಸ್ಥಳವನ್ನು ಒಂದಿನಿತೂ ಗಲೀಜು ಮಾಡಿದ್ದು ನಮ್ಮ ಕಣ್ಣಿಗೆ ಬೀಳಲಿಲ್ಲ. ಕ್ರಿಸ್ಮಸ್ ಆಚರಣೆ ಧಾರ್ಮಿಕ ಆಚರಣೆ ಎನಿಸುವಂತೆ ಇಲ್ಲವೇ ಇಲ್ಲ. ಹೆಚ್ಚೆಂದರೆ ಅದೊಂದು ದೊಡ್ಡ ಸಾಮಾಜಿಕ ಉತ್ಸವ. ಜನರೆಲ್ಲರೂ ಒಟ್ಟು ಸೇರಿ ನಮ್ಮ ತರಹದ ಜಾತ್ರೆ ಆಯೋಜಿಸುತ್ತಾರೆ. ಸುತ್ತಲಿನ ಮನೆಗಳ ಜನರು ಹತ್ತಿರದ ಮೈದಾನದಲ್ಲಿ ಎಲ್ಲರೂ ಸೇರಿ ಪಟಾಕಿ, ಬಾಣ-ಬಿರುಸು ಸಿಡಿಸಿ ಸಂಭ್ರಮಿಸುತ್ತಾರೆ. ಜನರ ಬದುಕಿನಲ್ಲಿ ಧರ್ಮದ ಪಾತ್ರ ನಗಣ್ಯ. ಹಾಗೆಂದೇ, ಧಾರ್ಮಿಕ ಕಾರಣಗಳಿಂದ ಸೇರಿಕೊಂಡು ಯಾವ ಕಾರಣಕ್ಕೂ ಯಾವುದೇ ಪರಿಸರ ಹಾನಿಯೂ ಕಾಣಸಿಗದು.

ಜಾತಿ-ಧರ್ಮದ ಸೊಂಕಿಲ್ಲದ ಸಮಾಜ ಮಾತ್ರ ನೈಜ ನೈರ್ಮಲ್ಯವನ್ನು ಸಾಧಿಸಬಲ್ಲದು ಎಂಬುದಕ್ಕೆ ಆಸ್ಟ್ರೇಲಿಯಾ ಜೀವಂತ ನಿದರ್ಶನ.