Category Archives: ಶ್ರೀಪಾದ್ ಭಟ್

ಸಿದ್ಧಲಿಂಗಯ್ಯ ಮತ್ತು ಆಳ್ವಾಸ್ ನುಡಿಸಿರಿ : ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಿಲ್ಲ


– ಬಿ. ಶ್ರೀಪಾದ ಭಟ್


 

22 ಅಕ್ಟೋಬರ್, 1964. ಸಾಹಿತ್ಯದಲ್ಲಿನ ಸಾಧನೆಗಾಗಿ ತನಗೆ ನೀಡಿದ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುತ್ತ ಚಿಂತಕ ಜೀನ್ ಪಾಲ್ ಸಾರ್ತೆ, “ನಾನು ಯಾವಾಗಲೂ ಸರ್ಕಾರ ಅಥವಾ ಅಫೀಶಯಲ್ ಆಹ್ವಾನಗಳನ್ನು,ಪುರಸ್ಕಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಒಂದು ಸಂಸ್ಥೆಯಾಗುವ ಎಲ್ಲಾ ಸಾಧ್ಯತೆಗಳನ್ನು ಲೇಖಕನು ತಿರಸ್ಕರಿಸಬೇಕು. ಲೇಖಕನ ಬದ್ಧತೆಯ ಅಗತ್ಯತೆಯನ್ನಾಧರಿಸಿ ನನ್ನ ನಿಲುವನ್ನು ರೂಪಿಸಿಕೊಂಡಿದ್ದೇನೆ. ರಾಜಕೀಯ, ಸಾಮಾಜಿಕ, ಸಾಹಿತ್ಯಕ ಸ್ಥಾನಗಳನ್ನು ಅಲಂಕರಿಸುವ ಲೇಖಕ ಅದರ ಮಿತಿಯೊಳಗೊಳಪಟ್ಟೇ ವರ್ತಿಸಬೇಕು siddalingayyaಮತ್ತು ಮುಖ್ಯವಾಗಿ ಅದು ಕೇವಲ ಆತನ ಲೋಕವಾಗಿರಬೇಕು” ಎಂದು ಮಾರ್ಮಿಕವಾಗಿ ಹೇಳುತ್ತಾನೆ. ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುವ ಸಾರ್ತೆಗೆ ಅದು ಕೇವಲ ಪಶ್ಚಿಮ ಜಗತ್ತಿನ ಲೇಖಕರಿಗಾಗಿ ಮತ್ತು ಪೂರ್ವ ಜಗತ್ತಿನ ಬಂಡಾಯ ಲೇಖಕರಿಗಾಗಿ ಮಾತ್ರ ಮೀಸಲು ಇರುವಂತಿದೆ ಎಂದು ಅಭಿಪ್ರಾಯ ಪಡುತ್ತಾನೆ.

ಇದು ನಡೆದು ಐವತ್ತು ವರ್ಷಗಳಾಗಿವೆ. ಆದರೆ ಅದರ ಆಶಯಗಳು ಇಂದಿಗೂ ಪ್ರಸ್ತುತ. ಏಕೆಂದರೆ ಇತ್ತೀಚೆಗೆ ನಮ್ಮ ಪ್ರೀತಿಯ ಕವಿಗಳು ಸಿದ್ಧಲಿಂಗಯ್ಯನವರು (ನಮ್ಮನ್ನು ರೂಪಿಸಿದ ಕವಿ ಮತ್ತು ಹೋರಾಟಗಾರ) “ಅಳ್ವಾಸ್ ನುಡಿಸಿರಿ”ಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ನಂತರ ಅದನ್ನು ತಾತ್ವಿಕ ಮತ್ತು ನೈತಿಕ ಕಾರಣಗಳಿಗಾಗಿ ವಿರೋಧಿಸಿದ ಗೆಳೆಯರಿಗೆ ಉತ್ತರಿಸುತ್ತಾ ಮತ್ತೊಬ್ಬ ಗೆಳೆಯರು ಆ ಭಾಗವಹಿಸುವಿಕೆಯನ್ನು ಸಮರ್ಥಿಸುತ್ತಾ ’ಅದರಲ್ಲಿ ಅಂತಹ ತಪ್ಪೇನಿಲ್ಲ, ಕೇವಲ ನಮ್ಮೊಳಗೆ ಸಿದ್ಧಾಂತಗಳನ್ನು ಮಾತನಾಡಿ ಪ್ರಯೋಜನವಿಲ್ಲ, ಆ ಪ್ರಗತಿಪರ ಚಿಂತನೆಗಳು ವಿರೋಧಿ ಬಣಗಳಿಗೂ ತಲುಪಬೇಕು, ಅಲ್ಲಿಯೂ ಚರ್ಚಿತವಾಗಬೇಕು ಎನ್ನುವ ಕಾರಣಕ್ಕಾಗಿ ಸಿದ್ಧಲಿಂಗಯ್ಯನವರ ಅಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಗೆಳೆಯರು ಒಪ್ಪಿಕೊಂಡಿದ್ದಾರೆ ಮತ್ತು ಅಲ್ಲಿ ನಮ್ಮ ಪ್ರೀತಿಯ ಕವಿಗಳು ತಮ್ಮ ಪ್ರಗತಿಪರ ನಿಲುವುಗಳನ್ನು ಬಿಟ್ಟುಕೊಡದೆ ಆ ಗುಂಪಿಗೂ ಚಾಟಿಯೇಟನ್ನು ಬೀಸಲಿ ಎಂದು ಆಶಿಸಿದ್ದಾರೆ. ಇವರ ಒಟ್ಟಾರೆ ಆಶಯಗಳಿಗೆ ಯಾರಿಗೂ ವಿರೋಧವಿಲ್ಲ. ನಾವೆಲ್ಲ ವಿಭಿನ್ನ ನೆಲೆಯ ಜನರೊಂದಿಗೆ, ಭಿನ್ನಾಭಿಪ್ರಾಯಗಳ ಜನರೊಂದಿಗೆ ಸಂವಾದಿಸಬೇಕು ಎನ್ನುವುದೂ ನಮೆಲ್ಲರ ಆಶಯಗಳೂ ಸಹ ಅಗಿರುತ್ತದೆ. ಆದರೆ ಅದು at what cost? ಗೆಳೆಯರ ಸದುದ್ದೇಶದ ಇಡೀ ಆಶಯಗಳು ವಿತಂಡವಾದದಂತೆ ಕಾಣತೊಡಗುವುದಕ್ಕೆ ಕಾರಣ ಅವರು ಅದಕ್ಕಾಗಿ ಯಾವ ಬೆಲೆ ತೆರಬೇಕು ಎನ್ನುವುದನ್ನು ತಮ್ಮನ್ನು ತಾವು ಪ್ರಶ್ನಿಸಿಕೊಂಡಿಲ್ಲ. ತನ್ನ ಕಡೆಯ ವರ್ಷಗಳಲ್ಲಿ ತಾನು ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಸಾರ್ತೆ, “ಆ ಬಹುಮಾನದ ಹಣ (ಸುಮಾರು 21000 ಪೌಂಡ್) ಅನ್ನು ಜನಾಂಗೀಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಸಂಘಟನೆಗೆ ಕೊಡಬಹುದಾಗಿತ್ತೇನೋ. ಏಕೆಂದರೆ ಆ ಸಂಘಟನೆಗೆ ಅದರ ಅವಶ್ಯಕತೆ ಇತ್ತು” ಎಂದು ಬರೆದುಕೊಳ್ಳುತ್ತಾನೆ ಹೊರತಾಗಿ ಪಶ್ಚತ್ತಾಪ ಮಾತ್ರ ಪಡುವುದಿಲ್ಲ. ಏಕೆಂದರೆ ಸಾರ್ತೆಗೆ ಗೊತ್ತಿತ್ತು ಒಂದು ಸದುದ್ದೇಶಕ್ಕಾಗಿ ಹಣವನ್ನು ಪಡೆದುಕೊಳ್ಳುವುದೇನೋ ಸರಿ, ಆದರೆ ಅದು at what cost?

ಮೇಲ್ನೋಟಕ್ಕೆ ಕಾಣುವಂತೆ ಅಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸಹಜವಾಗಿಯೇ ಟಿಎ, ಡಿಎ ಮತ್ತು ಪಾಲ್ಗೊಳ್ಳುವಿಕೆಗೆ ಕೃತಜ್ಞತೆಯಾಗಿ ಹಣವನ್ನೂ ಕೊಡುತ್ತಾರೆ. ಮತ್ತು ಅಲ್ಲಿರುವವರೆಗೂ ಊಟ, ವಸತಿಗಳ ಉಚಿತ ವ್ಯವಸ್ಥೆಯೂ ಇರುತ್ತದೆ. ಇಷ್ಟನ್ನು ಅನುಭವಿಸುವ, alva-nudisiri-baraguru-mohan-alva-veerendra-heggade-vivek-raiಪಡೆದುಕೊಳ್ಳುವ ಲೇಖಕ ಅಲ್ಲಿ ಹೋಗಿ ಅವರ ವಿರುದ್ಧ ತನ್ನ ಮಾತಿನ ಚಾಟಿಯೇಟನ್ನು ಬೀಸಬೇಕೆಂದು ಆಶಿಸುವುದು ಕೇವಲ ಮುಗ್ಧತೆಯಲ್ಲ ಅದು ಅಪಾಯಕಾರಿಯೂ ಹೌದು. ಏಕೆ ಅಪಾಯಕಾರಿಯೆಂದರೆ ಸಂಸ್ಥೆಯೊಂದರ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಅದರ ವಿರುದ್ಧ ಮಾತನಾಡುವುದೇ ಆತ್ಮವಂಚನೆಯಲ್ಲವೇ? ಅದಕ್ಕೇ ಸಾರ್ತೆ ಹೇಳುವುದು “ಲೇಖಕ ಸ್ವತ ತಾನೇ ಒಂದು ಸಂಸ್ಥೆಯಾಗುವ ಅಪಾಯದಿಂದ ಸದಾ ಹೊರಗಿಬೇಕು”. ಇಲ್ಲಿ ನಮ್ಮ ಪ್ರೀತಿಯ ಸಿದ್ಧಲಿಗಯ್ಯನವರ ವಿಷಯದಲ್ಲಿ ಅದು ದಯನೀಯವಾಗಿ ಸೋತಿದೆ. ಏಕೆ ಗೊತ್ತೆ? ಪ್ರತಿಭಾವಂತರಿಗೆ, ಪ್ರಾಮಾಣಿಕರಿಗೆ ಅರ್ಥಪೂರ್ಣವಾಗಿ, ನಿಷ್ಪಕ್ಷಪಾತವಾಗಿ ಮಾತನಾಡಲು ಒಂದು ಸಂಸ್ಥೆ, ವ್ಯಕ್ತಿ, ಧರ್ಮ, ಸಮುದಾಯದ ಆಚರಣೆ ಮತ್ತು ಧೋರಣೆಗಳು ಯಾವ ಕಾಲಕ್ಕೂ ಅಡ್ಡಿಯಾಗುವುದಿಲ್ಲ. ಅಡ್ಡಿಯಾಗಿದೆ ಎಂದರೆ ಮತ್ತೇನರ್ಥ?

ಒಂದಂತೂ ನಿಜ. ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಾಗಿಲ್ಲ. ಇಲ್ಲಿ ಅಳ್ವಾಸ್ ಸಂಸ್ಥೆಯ ಪರಮೋಚ್ಛ ನಾಯಕ ಮೋಹನ್ ಅಳ್ವ ಅವರ ಇತಿಹಾಸ ಇಡೀ ಕನ್ನಡದ ಪ್ರಜ್ಞಾವಂತರಿಗೆ ಗೊತ್ತು. ಆತನ ಸರ್ವಾಧಿಕಾರ ವ್ಯಕ್ತಿತ್ವ ಎಲ್ಲರಿಗೂ ಗೊತ್ತು. ಅವರೊಬ್ಬ ಬಂಡವಾಳಶಾಹಿ ಎನ್ನುವುದೂ ಎಲ್ಲರಿಗೂ ಗೊತ್ತು. ಸಾರ್ವಜನಿಕ ಶಿಕ್ಷಣದ ಸಂವಿಧನಾತ್ಮಕ ಜೀವಪರ ಆಶಯಗಳಿಗೆ ಸ್ವಲ್ಪವೂ ಬೆಲೆ ಕೊಡದ ಶಿಕ್ಷಣದ ವ್ಯಾಪಾರಿ ಎನ್ನುವುದು ಎಲ್ಲರಿಗೂ ಗೊತ್ತು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಶೋಷಣೆಯ ಕುರಿತಾಗಿ ಅನೇಕ ಆರೋಪಗಳಿವೆ ಎನ್ನುವುದೂ ಎಲ್ಲರಿಗೂ ಗೊತ್ತು. ಅವರು ಮತೀಯವಾದಿ ಸಂಘ ಪರಿವಾರದದೊಂದಿಗೆ ನಂಟನ್ನು ಹೊಂದಿರುವುದು ಎಲ್ಲರಿಗೂ ಗೊತ್ತು. alva-veerendra-heggadeಇತ್ತೀಚೆಗೆ ಸೌಜನ್ಯ ಕೊಲೆ ಪ್ರಕರಣದ ಆರೋಪದಲ್ಲಿ ಹೆಸರು ಕೇಳಿಬರುತ್ತಿರುವ ಕುಟುಂಬದಲ್ಲೊಬ್ಬರಾದ ಧರ್ಮಸ್ಥಳದ ವೀರೇಂದ್ರ ಹೆಗಡೆಯ ಅಪ್ತ ಭಕ್ತರು ಇವರೆಂದೂ ಎಲ್ಲರಿಗೂ ಗೊತ್ತು. ಒಟ್ಟಾರೆ ಈ ಮೋಹನ್ ಆಳ್ವ ಎನ್ನುವ ಉದ್ಯಮಿಯ ಈ ಸಾಹಿತ್ಯ ಸೇವೆ ಒಂದು ದರ್ಪದ, ಸಾಮಂತ ಪಾಳೇಗಾರನ ಅದ್ದೂರಿ ಪ್ರದರ್ಶನ ಎನ್ನುವುದೂ ಎಲ್ಲರಿಗೂ ಗೊತ್ತು. ಅದರೆ ಇಷ್ಟೆಲ್ಲ ಗೊತ್ತಿದ್ದೂ ಒಂದು ತಲೆಮಾರನ್ನು, ಸಮುದಾಯದ ಪ್ರಜ್ಞೆಯನ್ನು ಬೆಳಿಸಿದ ರೂಪಿಸಿದ ಮಹತ್ವದ ಕವಿ, ಹೋರಾಟಗಾರ ಮೇಲಿನ ಅಪಾಯದ ಕರೆಗಂಟೆಯ, ಓಲಗದ ಸದ್ದನ್ನು ಕೇಳಿಸಿಕೊಳ್ಳದೆ ತನ್ನ ಈ ನಿರ್ಲಕ್ಷದ ಕಾರಣಕ್ಕಾಗಿ ತನ್ನ ಈ ವರ್ತನೆಗಳ ಮೂಲಕ ಹೊಸ ತಲೆಮಾರಿನ ಚೇತನವನ್ನೇ ಉಡುಗಿಸಿಬಿಡುತ್ತಾನೆ.

ಈ ಮೋಹನ್ ಅಳ್ವಾರ ದರ್ಪದ ದುಡ್ಡಿನ (ಇದಕ್ಕಾಗಿ, ಕನ್ನಡಮ್ಮನ ಸೇವೆಗಾಗಿ ತಾನು ಕೋಟ್ಯಾಂತರ ರೂಪಾಯಿಗಳನ್ನು ಸಾಲ ಮಾಡಿ ದಿವಾಳಿಯಾಗಿದ್ದೇನೆ ಎಂದು ಬೇರೆ ಹೇಳಿಕೊಂಡಿದ್ದಾರೆ) ಒಡ್ಡೋಲಗದಲ್ಲಿ ಭಾಗವಹಿಸುವದೆಂದರೆ ನಮ್ಮ ನಮ್ಮ ನೈತಿಕತೆ ಕಳೆದಿದೆ ಎಂದೇ ಅರ್ಥ. vijaykarnataka-mohan-alva-22122013ಇದು ತುಂಬಾ ಸರಳ. ಏಕೆ ಗೊತ್ತೆ, ಈ ಮೋಹನ ಅಳ್ವಾರಂತವರು ಪಿಂಗಾಣಿ ಅಂಗಡಿಯಲ್ಲಿ ನುಗ್ಗುವ ಗೂಳಿಯಂತೆ. ಆ ನುಗ್ಗುವಿಕೆಯೇ ಧ್ವಂಸಗೊಳಿಸಲಿಕ್ಕಾಗಿ ಮಾತ್ರ. ಇದೂ ಸಹ ತುಂಬಾ ಸರಳ. ಏಕೆ ಗೊತ್ತೆ, ಈ ನವಉದಾರೀಕರಣದ ಇಂದಿನ ಸಂದರ್ಭದಲ್ಲಿ ಈ ಬಗೆಯ ದರ್ಪದ ನಾಯಕರಿಂದ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳೂ ಮಾಕೆಟ್ ಟ್ರೆಂಡ್‌ಗಳನ್ನು ಹುಟ್ಟಿಹಾಕುತ್ತಿರುತ್ತವೆ. ಅರೇ ನೋಡಿ ಅಳ್ವಾಸ್ ನುಡಿಸರಿಯ ವೈಭವ, ಅಚ್ಚುಕಟ್ಟು, ಊಟದ ವ್ಯವಸ್ಥೆ ಆಹಾ ಏನು ಮಜಾ ಏನು ಸುಖಾ ಎನ್ನುವ ಸುಖ ಲೋಲುಪ್ತತೆಯ ಟ್ರೆಂಡ್ ಹುಟ್ಟಿ ಹಾಕುತ್ತದೆ. ಈ ಸುಖ ಲೋಲುಪ್ತತೆಯಲ್ಲಿ ಬೂಟು ಮತ್ತು ಚಾಟಿಯೇಟಿನ ವಿರುದ್ಧ ಹೋರಾಟದ ಸಾವಿರಾರು ನದಿಗಳು ಹುಟ್ಟುವುದಕ್ಕೂ ಸಾಧ್ಯವಿಲ್ಲ. ಅಲ್ಲಿಗೆ ಅದು ಮುಗಿದಂತೆ. ಸಾರ್ತೆಯ “ಶುದ್ಧ ಸಾಹಿತ್ಯ” ಎಂದರೆ ಕೇವಲ ಮಡಿವಂತಿಕೆಯ, ಶ್ರೇಷ್ಠತೆಯ ವ್ಯಸನದ ಸಾಹಿತ್ಯ ಮಾತ್ರವಲ್ಲ. ಆ ಶುದ್ದ ಸಾಹಿತ್ಯ ಆರ್ಥಿಕ ತೆವಲುಗಳನ್ನು ನಿರಾಕರಿಸುತ್ತದೆ. ಆ ಶುದ್ಧ ಸಾಹಿತ್ಯ ವಿತಂಡವಾದಗಳನ್ನು ನಿರಾಕರಿಸುತ್ತದೆ. ಕೊಳ್ಳುಬಾಕುತನವನ್ನು ನಿರಾಕರಿಸುತ್ತದೆ. ಮತ್ತು ತಾತ್ಕಾಲಿಕ ಜನಪ್ರಿಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ ಮತ್ತು ಮುಖ್ಯವಾಗಿ ಜನಪ್ರಿಯತೆ ಪಡೆದುಕೊಂಡಿದ್ದೆಲ್ಲವೂ ಜನಪರವಲ್ಲ ಎಂದು ಘೋಷಿಸಿಬಿಡುತ್ತದೆ ಸಾರ್ತೆಯ ಶುದ್ಧ ಸಾಹಿತ್ಯ.

ಹೀಗಾಗಿ ಅತ್ಯಂತ ಜನಪ್ರಿಯ “ಅಳ್ವಾಸ್ ನುಡಿಸಿರಿ” ಜನಪರ ಸಮ್ಮೇಳನ ಅಲ್ಲವೇ ಅಲ್ಲ. ಇದನ್ನು ಈ ನಾಡಿನ ಪ್ರಜ್ಞಾವಂತರೆಲ್ಲರೂ ನಿರಾಕರಿಸಬೇಕು. ನಿಜ ನಮ್ಮ ಗೆಳೆಯರ ಆಶಯದಂತೆ ನಾವು ಭಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಬೆರೆತು ಸಂವಾದ ನಡೆಸಬೇಕಾಗಿದೆ. ಚರ್ಚಿಸಬೇಕಾಗಿದೆ. ನಾವೆಲ್ಲ ಕುರುಡಾಗಿ, ಕಿವುಡಾಗಿ ವರ್ತಿಸಲು ಸಾಧ್ಯವಿಲ್ಲ. ಆದರೆ ಈ ದರ್ಪದ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವದರ ಮೂಲಕ ಅದು ಸಾಧ್ಯವೂ ಇಲ್ಲ ಮತ್ತು ಅದರ ಅವಶ್ಯಕತೆ ಖಂಡಿತವಾಗಿಯೂ ಇಲ್ಲ.

ಒಂದು ಕಡೆ ಲಂಕೇಶ್ ಹೇಳುತ್ತಾರೆ, “ಒಂದು ವಚನ ತನ್ನ ಪ್ರೀತಿಯ ಬಲದಿಂದ ಕಾಲವನ್ನೂ ಮೀರಿ ಹರಿದು ಬರುತ್ತದೆ. ನಾಶಗೊಳ್ಳಲು ಅದು ಒಪ್ಪುವುದೇ ಇಲ್ಲ”. ಹೌದು ನಾವು ಈ ಪ್ರೀತಿಯ, ಸೌಹಾರ್ದತೆಯ ಬಲೆಯನ್ನು ನೇಯುವುದರ ಮೂಲಕ ಬಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಚರ್ಚಿಸಬೇಕಾಗಿದೆಯೇ ಹೊರತು ಆ ಅವಾಂತಕಾರಿ ಮತ್ತು ಅಪಾಯಕಾರಿ ಆಳ್ವಾಸ್ ನುಡಿಸಿರಿಯ ವೇದಿಕೆಯಿಂದ ಮಾತ್ರ ಅಲ್ಲವೇ ಅಲ್ಲ.

ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ …


 -ಎಸ್.ಗಂಗಾಧರಯ್ಯ


ಗಾಂಧಿ ಜಯಂತಿ ಪ್ರಯುಕ್ತ ವರ್ತಮಾನ ಬಳಗ ಆಯೋಜಿಸಿದ್ದ ಕಥಾ ಸ್ಪರ್ಧೆಗೆ ಬಂದಿದ್ದ ನಲವತ್ತು ಕಥೆಗಳನ್ನು ಓದಲು ನಾನು ತೆಗೆದುಕೊಂಡಿದ್ದು ಬರೋಬ್ಬರಿ ಎರಡು ತಿಂಗಳು.katha-sprade-2014-223x300 ಈ ಹೊತ್ತಿನಲ್ಲಿ ನನಗೆ ಸ್ಪಷ್ಟವಾಗಿದ್ದು- ಖುಷಿಗೆ ಕಥೆಯೊಂದನ್ನು ಓದುವುದಕ್ಕೂ, ವಿಮರ್ಶೆಗಾಗಿ ಕಥೆಯೊಂದನ್ನು ಓದುವುದಕ್ಕೂ, ಇಲ್ಲಾ ಯಾವ ದೃಷ್ಟಿಯಲ್ಲಿ ಇದು ಹೆಚ್ಚು ಪರಿಣಾಮಕಾರಿ ಅಥವಾ ಅದು ಕಥೆಯಾಗಿದೆಯೋ ಇಲ್ಲವೋ ಅನ್ನುವುದನ್ನು ಗುರುತಿಸುದಕ್ಕೂ ಇರಬಹುದಾದ ಹಾಗೂ ಇರಲೇಬೇಕಾದ ಎಚ್ಚರ. ಎಂದೂ ಇಂಥ ಇಕ್ಕಟಿಗೆ ಸಿಲುಕದಿದ್ದ ನಾನು ಅಥವಾ ಇಂಥದ್ದೊಂದು ಶಿಸ್ತಿನ ಓದಿಗೆ ಒಳಪಡಿಸಿಕೊಳ್ಳದಿದ್ದ ನಾನು ಇಲ್ಲಿನ ಅನೇಕ ಕಥೆಗಳನ್ನು ಎರಡು, ಮೂರು ಸರ್ತಿ ಓದಿದ್ದು ಒಂದು ಕಡೆಗಿದ್ದರೆ, ಕೆಲವು ಕಥೆಗಳು ಪ್ರತೀ ಓದಿನಲ್ಲೂ ಬೇರ ಬೇರೆ ರೀತಿಯಲ್ಲಿ ಓದಿಸಿಕೊಳ್ಳತೊಡಗಿದ್ದು ಹಾಗೂ ಕಥೆಯೊಂದಕ್ಕೆ ಇರಬಹುದಾದ ಸಾಧ್ಯತೆಗಳನ್ನು ಹೇಳುತ್ತಲೇ ಅದು ಓದುಗನಾದ ನನ್ನೊಳಗೆ ವಿಸ್ತರಿಸಿಕೊಳ್ಳುತ್ತಾ ಹೋಗುವ ಅಚ್ಚರಿಯ ಪರಿ ಮತ್ತೊಂದು ಕಡೆಗಿತ್ತು. ಭಾವ, ಬುದ್ಧಿಗಳು ಒಂದಾಗಿ ಮೇಳೈಸಿದೊಡೆ ಏನಾಗ ಬಹುದೋ ಅದೆಲ್ಲಾ ಇಲ್ಲಿ ಘಟಿಸಿದೆ. ಹಾಗಾಗಿ ಈ ಅಷ್ಟೂ ಕಥೆಗಳನ್ನು ಓದುವಂಥ ಹೊತ್ತಲ್ಲಿ ಅವು ಉಂಟುಮಾಡಿರುವ ತೀವ್ರತೆ, ಪರಿಣಾಮ ಹಾಗೂ ಹೊಸ ಲೋಕ, ಹೊಸ ಪರಿಭಾಷೆಗಳ ಹಿನ್ನೆಲೆಯೇ ನನ್ನ ಆಯ್ಕೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ ಅನ್ನುವುದನ್ನು ಹೇಳುತ್ತಲೇ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಕಥೆಗಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಮೊದಲ ಬಹುಮಾನ ಪಡೆದ ಕಥೆ ‘ಕಾಲ ವ್ಯಾಧಿ’, ಕಾಲವೇ ವ್ಯಾಧಿಯಾಗುವ, ಅದೇ ಮುಂದೊಂದು ದಿನ ಅದೇ ವ್ಯಾಧಿಗೆ ಮದ್ದಾಗುವ ವಿಶೇಷ ಲೋಕವೊಂದನ್ನು ಅನಾವರಣಗೊಳಿಸುತ್ತದೆ. ಹರಿಯುವ ಕಾಲದೊಂದಿಗೆ ದೇಗುವ ಬದುಕು, ಅದರೊಳಗಿನ ಪ್ರೇಮ, ಕಾಮ, ನೆನಪು, ಕನಸು, ವಾಸ್ತವಗಳ ನಡುವೆ ತುಯ್ದಾಡುತ್ತಾ ಏಕ ಕಾಲಕ್ಕೆ ಮನಸ್ಸಿನ ಖಾಯಿಲೆಯಂತೆಯೂ, ದೇಹದ ಖಾಯಿಲೆಯಂತೆಯೂ ಭಾಸವಾಗುತ್ತಾ ತನ್ನ ಕೇಂದ್ರ ಬಿಂದುವನ್ನು ಪ್ರೇಮದ ಸುತ್ತಲೇ ಸುತ್ತಿಸಿದರೂ, ನಿರೂಪಕನ ಹೊಂಗೆ ತೋಪಿನ ನೆನಪಿನೊಂದಿಗೆ ಮತ್ತೊಂದು ಆಯಾಮದಿಂದಲೂ ತನ್ನನ್ನು ಓದುವಂತೆ ನೋಡಿಕೊಳ್ಳುವ ಪರಿಯಲ್ಲಿ ಇದರ ಸಾರ್ಥಕತೆ ಇದೆ.

ಎರಡನೆಯ ಬಹುಮಾನ ಪಡೆದ ‘ಬೋನಿಗೆ ಬಿದ್ದವರು’, ಕಥೆಯ ಶೀರ್ಷಿಕೆಯೇ ಸಾಂಕೇತಿಕವಾಗಿದೆ.ಗಂಗಾಧರಯ್ಯಬದಲಾವಣೆಯ ಗಾಳಿಯಲ್ಲಿ, ಬದುಕಿನ ಅನಿವಾರ್ಯತೆಯಲ್ಲಿ, ಅಪ್ಪಟ ದೇಸಿ ಕಸುಬೊಂದು ಅಥವಾ ದೇಸೀ ಬದುಕೊಂದು ಪಡೆದುಕೊಳ್ಳಬಹುದಾದ ತಿರುವುಗಳನ್ನೂ ಅಸಹಾಯಕತೆಯನ್ನೂ ತನ್ನದೇ ರೀತಿಯ ವ್ಯಂಗ್ಯ, ಸೆಡವು ಮುಂತಾದ ಸಮಾಜಮುಖಿ ಪರಿಕರಗಳೊಂದಿಗೆ ಓದುಗನನ್ನು ಹೊಸದೊಂದು ಅಷ್ಟೊಂದು ಪರಿಚಿತವಲ್ಲದ ಲೋಕದೊಳಗೆ ನಡೆದಾಡಿಸುತ್ತದೆ.ಇಲ್ಲಿ ಕೆಳಸ್ತರದ ಬದುಕೊಂದು ಆಧುನಿಕತೆಯ ದೆಸೆಯಿಂದಾದ ಪಲ್ಲಟಗಳಿಂದಾಗಿ ಚಡಪಡಿಸುವ ಹಾಗೂ ಅನಿವಾರ್ಯವಾಗಿ ತಮ್ಮ ಸಾಂಪ್ರದಾಯಿಕ ಜ್ಞಾನವನ್ನು ಅವಕಾಶವಾದಿತನಕ್ಕೆ ಪರಿವರ್ತಿಸಿಕೊಳ್ಳಬೇಕಾದ ಹೊತ್ತಿನಲ್ಲಿ ಆ ಬದುಕು ತೋರುವ ಸಂಯಮ, ಸಹಕಾರಗಳೆದುರು ಆಧುನಿಕತೆ ಹಾಗೂ ಸರಕಾರದ ಯೋಜನೆಗಳು ಏದುಸಿರು ಬಿಡುತ್ತವೆ.ಇಲ್ಲಿ ಬರುವ ಸರಕಾರಿ ಯೋಜನೆಗಳು, ಅವುಗಳನ್ನು ‘ಗುಳುಂ’ಮಾಡಿಬಿಡುವ ಭ್ರಷ್ಟ ಮನಸ್ಸುಗಳಿಗೆ ಬೇಕಿರುವ ನೈತಿಕ ಚಿಕಿತ್ಸೆಯ ಆಶಯ ಹಾಗೂ ನಶಿಸಿ ಹೋಗುತ್ತಿರುವ ದೇಸೀ ಜ್ಞಾನದ ಬಗೆಗಿನ ಕಾಳಜಿ ಕಥೆಯ ಹೆಚ್ಚುಗಾರಿಕೆ.

ಮೂರನೆಯ ಬಹುಮಾನ ಪಡೆದ ಕಥೆ ‘ಚಿವುಟಿದಷ್ಟೂ ಚಿಗುರು’, ಆಧುನಿಕ ಬದುಕಿನಲ್ಲಿ ಛಿದ್ರಗೊಳ್ಳುತ್ತಿರುವ ಸಂಬಂಧಗಳು ಹಾಗೂ ಅವುಗಳು ಉಂಟು ಮಾಡಬಹುದಾದ ಪರಿಣಾಮಗಳನ್ನು ಹಿಡಿದಿಡಲೆತ್ನಿಸುತ್ತದೆ.ಸಧ್ಯದ ಸ್ಥಿತಿಯಲ್ಲಿ ಸರ್ವೇ ಸಾಮಾನ್ಯವಾಗುತ್ತಿರುವ, ಅದರಲ್ಲೂ ಮಹಾನಗರಗಳಲ್ಲಿ ಇದೊಂದು ಮಹಾ ಸಮಸ್ಯೆಯೇ ಆಗುತ್ತಿರುವಾಗ ಇದರ ವಸ್ತುವೇ ಈ ಕಥೆಗೊಂದು ಸಾರ್ವತ್ರಿಕ ಗುಣ ಒದಗಿಸಿ ಕೊಟ್ಟಿದೆ.ಕೊಂಚ ಸೆಂಟಿಮೆಂಟಲ್ ಅನಿಸಬಹುದಾಗಿದ್ದಂಥ ಹಾಗೂ ಕೊಂಚ ಯಾಮಾರಿದ್ದರೂ ಒಂದು ತೀರಾ ಸಾಮಾನ್ಯ ಕಥೆಯಾಗಿ ಬಿಡಬಹುದಾಗ್ಗಿದ್ದಂಥ ವಸ್ತುವನ್ನು ಕಥೆಗಾರರು ನೀಭಾಯಿಸಿರುವ ರೀತಿಯಿಂದಾಗಿ ಆಲೋಚನೆಗೆ ಹಚ್ಚ ಬಲ್ಲಂಥ ಕಥೆಯಾಗಿ ರೂಪುಗೊಂಡಿದೆ.

ಮೆಚ್ಚಿಗೆ ಪಡೆದ ಕಥೆಗಳಲ್ಲಿ ‘ಹೇ ರಾಮ್’ ತನ್ನ ವಿಡಂಬನಾತ್ಮಕ ಗುಣದಿಂದಾಗಿ ಪರಿಣಾಮಕಾರಿಯಾಗಿದೆ.ಗಾಂಧಿ ಜಯಂತಿಯ ಆಚರಣೆಯ ಕ್ರಮದಲ್ಲಿರುವ ಕೃತಕತೆ, ಪರಸ್ಪರ ಅಪನಂಬಿಕೆ, ತೋರಿಕೆಯ ಗುಣ, ಇಡೀ ಗಾಂಧಿ ತತ್ವಗಳನ್ನು ನಗೆಪಾಟಲಿಗೀಡು ಮಾಡುವಂಥ ವಾತಾವರಣವನ್ನು ಕಟ್ಟಿಕೊಟ್ಟಿದೆ.ಇಲ್ಲಿ ಪತ್ರೆಪ್ಪ ಎಲ್ಲಾ ಜನಸಾಮಾನ್ಯನ ಪ್ರತಿನಿಧಿಯಂತೆ ಕಾಣುತ್ತಾ, ಭ್ರಷ್ಟ ವ್ಯವಸ್ಥೆಯ ಎದುರು ಕುಸಿದು ಹೋಗುವ ಕ್ರಿಯೆಯ ಸಂಕೇತವಾಗಿದ್ದಾನೆ.

ಮತ್ತೊಂದು ಮೆಚ್ಚಿಗೆ ಪಡೆದ ‘ಇಸುಮುಳ್ಳು’ ಒಂದು ನೀಳ್ಗತೆ.ಆಡು ಭಾಷೆ ಮತ್ತು ಗ್ರಾಂಥಿಕ ಭಾಷೆಗಳನ್ನು ಬಳಸಿಕೊಂಡು ಹೇಳಲೆತ್ನಿಸುವ ಹಳ್ಳಿಯ ಕುಟುಂಬವೊಂದರ ಸಂಪ್ರದಾಯ, ನಂಬಿಕೆ, ಹಾದರ, ಅಜ್ಜ ಮೊಮ್ಮಗನ ನಡುವಿನ ಆತ್ಮೀಯ ಸಂಬಂಧದೊಂದಿಗೆ ಅಲ್ಲಿನ ಪರಿಸರವೂ ಪೂರಕವಾಗಿ ಒದಗಿ ಬಂದಿರುವುದರಿಂದ ಇದು ಕಾದಂಬರಿಯ ಭಾಗವೊಂದರಂತೆ ಓದಿಸಿಕೊಳ್ಳುತ್ತದೆ. ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ಕಥೆಯಾಗಿಸುವ ಕ್ರಮದ ತುಡಿತವೇ ಇದರ ಗಾತ್ರವನ್ನು ಸಹ್ಯಗೊಳಿಸಿದೆ.

ಇನ್ನು ಕೊನೆಯ ಮಾತು : ನನ್ನನ್ನು ಇಂಥದ್ದೊಂದು ಕಥನ ಪರಂಪರೆಗೆ ಮುಖಾಮುಖಿಯಾಗಲು ಅನುವು ಮಾಡಿಕೊಟ್ಟ ಗೆಳೆಯರಾದ ಶ್ರೀಪಾದ ಭಟ್ ಹಾಗೂ ರವಿಕೃಷ್ಣಾರೆಡ್ಡಿಯವರಿಗೆ ವಂದನೆಗಳು.

ಹೈದರ್ ಸಿನಿಮಾ: ಮನೆಯೊಳಗೆ ಮನೆಯೊಡೆಯನಿಲ್ಲ?


– ಬಿ. ಶ್ರೀಪಾದ ಭಟ್


 

ವಿಶಾಲ್ ಭಾರದ್ವಜ್ ನಿರ್ದೇಶಿಸಿದ ಚಿತ್ರ ಹೈದರ್ ಷೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕವನ್ನಾಧರಿಸಿದ ಹಿಂದಿ ಸಿನೆಮಾ. ಈ ಮೊದಲು ವಿಶಾಲ್ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ಅನ್ನು ಆಧರಿಸಿ ಮಕ್ಬೂಲ್ ಅನ್ನು, ಒಥೆಲೋವನ್ನು ಆಧರಿಸಿ ಓಂಕಾರ ಸಿನಿಮಾವನ್ನು ನಿರ್ದೇಶಿದ್ದರು. ಇವುಗಳಲ್ಲಿ ಮಕ್ಬೂಲ್ ಚಿತ್ರವು ವಿಶಾಲ್ ಭಾರದ್ವಜ್ ನಿರ್ದೇಶಿಸಿದ ಚಿತ್ರ ಹೈದರ್ ಷೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕವನ್ನಾಧರಿಸಿದ ಹಿಂದಿ ಸಿನೆಮಾ. ಈ ಮೊದಲು ವಿಶಾಲ್ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ಅನ್ನು ಆಧರಿಸಿ ಮಕ್ಬೂಲ್ ಅನ್ನು, ಒಥೆಲೋವನ್ನುHaider-1 ಆಧರಿಸಿ ಓಂಕಾರ ಸಿನಿಮಾವನ್ನು ನಿರ್ದೇಶಿದ್ದರು. ಇವುಗಳಲ್ಲಿ ಮಕ್ಬೂಲ್ ಚಿತ್ರವು ಮುಂಬೈನ ಭೂಗತ ಲೋಕವನ್ನು ಹಿನ್ನೆಲೆಯಾಗಿ ಬಳಸಿಕೊಂಡಿದ್ದರೆ ಓಂಕಾರ ಚಿತ್ರದಲ್ಲಿ ಉತ್ತರ ಪ್ರದೇಶದ ಹಸಿ ಹಸಿಯಾದ ಫ್ಯೂಡಲ್ ಗ್ರಾಮವನ್ನು ಬಳಸಿಕೊಂಡಿದ್ದರು. ಈಗ ಕಾಶ್ಮೀರದ ವ್ಯವಸ್ಥೆಯ ಹಿನ್ನಲೆಯನ್ನು (ಪೂರಾ ಕಾಶ್ಮೀರ ಖೈದಖಾನ್ ಹೈ) ಬಳಸಿಕೊಂಡು ಹೈದರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಹುಶ ಈ ಹೈದರ್ ಸಿನಿಮಾ ವಿಶಾಲ್ ಅವರ ಅರ್ಥಪೂರ್ಣವಾದ, ಅಂಥೆಟಿಕ್ ಆದ ರಾಜಕೀಯ ಸಿನಿಮಾ. ಅಪಾರ ಧೈರ್ಯವಂತಿಕೆಯನ್ನು ಪ್ರದರ್ಶಿಸಿದ ವಿಶಾಲ್ ತಮ್ಮ ಈ ನಡೆಗೆ ಸಾರ್ಥಕತೆ ಕಂಡುಕೊಂಡಿದ್ದಾರೆ. ಷೇಕ್ಸಪಿಯರ್ನ ನಾಟಕಗಳ ಹುಡಕಾಟದ ಮೂಲಕ ಇಂಡಿಯಾವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದ ವಿಶಾಲ್ ಗೆ ಈ ಹೈದರ್ ಸಿನಿಮಾ ಒಂದು ಗಮ್ಯವನ್ನು ತೋರಿಸಿದಂತಿದೆ. ವಿಶಾಲ್ ಹ್ಯಾಮ್ಲೆಟ್ ನಾಟಕವನ್ನು ಬಳಸಿಕೊಂಡು ಕಾಶ್ಮೀರ ರಾಜ್ಯದ ಭಯೋತ್ಪಾದನೆ ಮತ್ತು ಮಿಲಿಟರಿಯ ನಡುವಿನ ಹೋರಾಟದ ಅತ್ಯಂತ peak ಆದ ಕಾಲಘಟ್ಟವನ್ನು ಸಮರ್ಥವಾಗಿ ಮತ್ತು ಗುಣಾತ್ಮಕವಾಗಿ ಹೈದರ್ ಸಿನಿಮಾದ ಮೂಲಕ ನಿರೂಪಿಸಿದ್ದಾರೆ. ಬಹುಶ ಇದು ವಿಶಾಲ್ ಭಾರಧ್ವಜ್ ಅವರ ಅತ್ಯಂತ ಮಹತ್ವದ, ಅತ್ಯುತ್ತಮ ಚಿತ್ರಗಳಲ್ಲೊಂದೆನಿಸುತ್ತದೆ.

ತೊಂಬತ್ತರ ದಶಕದ ಮಧ್ಯಭಾಗದಷ್ಟೊತ್ತಿಗೆ ಕಾಶ್ಮೀರದಲ್ಲಿನ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಅವರ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಕ್ರಮೇಣ ಸರ್ಕಾರಿ ಭಯೋತ್ಪಾದನೆ ಎಂದು ಕರೆಯುವಷ್ಟು ಕ್ರೌರ್ಯದಿಂದ ಕೂಡಿತ್ತು. ಈ ಕ್ರೌರ್ಯ ಮತ್ತು ನಿರಪರಾಧಿ ಕಾಶ್ಮೀರಿಗಳ ಮೇಲಿನ ದೌರ್ಜನ್ಯವನ್ನು ವಿಶಾಲ್ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಆ ಕಾಲಘಟ್ಟದಲ್ಲಿ ಕಾಶ್ಮೀರ ಕಣಿವೆಯಲ್ಲಿನ ದಿಗಿಲು, ಪ್ರಕ್ಷುಬ್ಧತೆ ಇಡೀ ಕಣಿವೆಯ ತುಂಬಾ ಮಿಲಿಟರಿ ಸಮವಸ್ತ್ರ ಧರಿಸಿದ ಸೈನಿಕರ ತುಕಡಿಗಳು, ಸದಾ ಗುಂಡಿನ ಮಳೆ ಸುರಿಸುತ್ತಿರುವ ಬಂದೂಕು, ಹಠಾತ್ತಾಗಿ ಕಾಣೆಯಾಗುವ ಮನೆಯ ಮಕ್ಕಳು, ಈ ಸದಾ ಉರಿಯುತ್ತಿರುವ ಬೆಂಕಿಯಂತಹ ಇಡೀ ತೊಂಬತ್ತರ ದಶಕದ ಕಾಶ್ಮೀರ ಕಣಿವೆ ಹೈದರ್ ಸಿನಿಮಾಗೆ ಅತ್ಯಂತ ಸೂಕ್ತವಾಗಿ ಮತ್ತು ಸಮರ್ಥವಾದ ಚಿತ್ರಕತೆಯಾಗಿ ಒದಗಿಬಂದಿದೆ. ಹೈದರ್ನಲ್ಲಿ ಕಾಶ್ಮೀರಿಗಳ ಐಡೆಂಟಿಟಿ ಕ್ರೈಸಿಸ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ ವಿಶಾಲ್. ಬಶ್ರತ್ ಪೀರ್ ಅವರೊಂದಿಗೆ ಕಥೆ, ಚಿತ್ರಕತೆ ಬರೆದಿರುವ ವಿಶಾಲ್ ಹ್ಯಾಮ್ಲೆಟ್ ಅನ್ನು ಇಲ್ಲಿ ಹೈದರ್ ಎನ್ನುವ ಕಾಶ್ಮೀರದ ವಿದ್ಯಾರ್ಥಿಯಾಗಿ ರೂಪಾಂತರಿಸಿದ್ದಾರೆ.

ಅಲೀಘಡದಲ್ಲಿ ಓದುತ್ತಿರುವ ಹೈದರ್ ತನ್ನ ತಂದೆ ಕಾಣೆಯಾಗಿರುವ ಸುದ್ದಿ ತಿಳಿದು ಮರಳಿ ಕಾಶ್ಮಿರಕ್ಕೆ ಬರುತ್ತಾನೆ. ತನ್ನ ಬಾಲ್ಯಕಾಲದ, ಯೌವ್ವನದ ಮನೆ ಇಂದು ಮಿಲಿಟರಿ ಬಾಂಬ್ ದಾಳಿಗೆ ತುತ್ತಾಗಿ ನಾಶವಾಗಿದೆ. ಭಗ್ನ ಅವಶೇಷಗಳು ಹೈದರ್ನನ್ನು ಸ್ವಾಗತಿಸುತ್ತವೆ. ಮಿಲಿಟರಿಯವರು ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಹೈದರ್ನ ತಂದೆಯನ್ನು ಬಂಧಿಸಿರುತ್ತಾರೆ. ಆದರೆ ಮನೆಗೆ ಭೇಟಿ ಕೊಟ್ಟಾಗ ತನ್ನ ತಾಯಿ ಟಬು ( ಗಜಾಲ) ತನ್ನ ತಂದೆಯ ಸೋದರ ಕೇಯ್ ಕೇಯ್ ( ಖುರ್ರಂ) ನೊಂದಿಗೆ ಪ್ರೇಮದಲ್ಲಿ ಮುಳುಗಿರುವುದು ಕಂಡು ಹೈದರ್ ದಿಗ್ಭ್ರಮೆಗೊಳ್ಳುತ್ತಾನೆ. ನಂತರ ಕಾಣೆಯಾಗಿದ್ದ ತನ್ನ ತಂದೆ ಸತ್ತಿರುವುದು ಗೊತ್ತಾಗಿ ಅದಕ್ಕೆ ಕಾರಣರಾದವರ ವಿವರಗಳೂ ಗೊತ್ತಾಗಿ ಸಂಪೂರ್ಣ ದುಖದಲ್ಲಿ ಮುಳುಗುವ ಹೈದರ್, ಮನಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಪ್ರತೀಕಾರಕ್ಕೆ ಮುನ್ನುಗ್ಗುತ್ತಾನೆ. ಮೂಲ ನಾಟಕ ಹ್ಯಾಮ್ಲೆಟ್ನಲ್ಲಿ ಭೂತವಾಗಿ ಬಂದು ತನ್ನ ಕೊಲೆಯ ಹಿಂದಿನHaider ರಹಸ್ಯವನ್ನು ಹ್ಯಾಮ್ಲೆಟ್ಗೆ ಹೇಳುವ ಆತನ ತಂದೆಯ ಪಾತ್ರ ಹೈದರ್ ಸಿನಿಮಾದಲ್ಲಿ ಸಂದೇಶಗಳನ್ನು ಹೊತ್ತು ತರುವ ರೋಡರ್ ಪಾತ್ರವಾಗಿ ಮೂಡಿ ಬಂದಿದೆ. ಇರ್ಫಾನ್ ಖಾನ್ ಈ ರೋಡರ್ ಪಾತ್ರದಲ್ಲಿ ನಟಿಸಿದ್ದಾನೆ. ಎಂದಿನಂತೆ ಅತ್ಯುತ್ತಮ ನಟನೆ ಇರ್ಫಾನ್ ಖಾನ್ದು. ತೀರಾ ತೆಳುವಾದ, ಅನೈತಿಕ ಚಾರಿತ್ರ್ಯದ ಕ್ಲಾಡಿಯಸ್ ( ಖುರ್ರಂ) ಪಾತ್ರದಲ್ಲಿ ಅಭಿನಯಿಸಿರುವ ಕೇಯ್ ಕೇಯ್ ತನ್ನ ಧ್ವನಿ ಬದಲಾಯಿಕೊಂಡು ಸಮರ್ಥವಾಗಿ ಅಭಿನಯಿಸಿದ್ದಾನೆ. ಹ್ಯಾಮ್ಲೆಟ್ನ ಪ್ರೇಯಸಿ ಒಫೀಲಿಯಾ (ಆರ್ಶಿಯಾ) ಪಾತ್ರದಲ್ಲಿ ಅಭಿನಯಿಸಿರುವ ಶ್ರದ್ಧಾ ಕಪೂರ್ ತನ್ನ ಬೆರಗು ಹುಟ್ಟಿಸುವ, ಕಾಡುವ ಆಕರ್ಷಕ ಕಣ್ಣುಗಳ ಮೂಲಕ ಗಮನ ಸೆಳೆಯುತ್ತಾಳೆ. ಕೇಂದ್ರ ಪಾತ್ರ ಹ್ಯಾಮ್ಲೆಟ್ ( ಹೈದರ್) ಆಗಿ ಶಾಹಿದ್ ಕಪೂರ್ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾನೆ. ಮುಗ್ಧ ವಿದ್ಯಾರ್ಥಿಯಾಗಿ, ತಂದೆಯ ಪ್ರೀತಿಯ ಮಗನಾಗಿ ನಂತರ ಸನ್ನಿವೇಶಗಳ ಬಲೆಗೆ ಸಿಲುಕುತ್ತಾ ನಿಸ್ಸಹಾಯಕನಾಗಿ, ಪ್ರತೀಕಾರದ ಬೇಟೆಯಲ್ಲಿರುವ ಕುಪಿತ ಕಾಶ್ಮೀರಿ ಯುವಕನಾಗಿ ಒಂದು ಕೊಲಾಜ್ ಪಾತ್ರವಾಗಿ ನಿರ್ವಹಿಸಲು ಶಾಹಿದ್ ಕಪೂರ್ಗೆ ತಮ್ಮ ಚಿತ್ರಕತೆಯಲ್ಲಿ ವಿಫುಲ ಅವಕಾಶಗಳನ್ನು ಒದಗಿಸಿದ್ದಾರೆ ನಿರ್ದೇಶಕ ವಿಶಾಲ್.ಇದನ್ನು ಶಾಹಿದ್ ಸಮರ್ಥವಾಗಿ ಬಳಸಿಕೊಂಡಿದ್ದಾನೆ ಎಂದೇ ಹೇಳಬಹುದು. ಆದರೆ ಹ್ಯಾಮ್ಲೆಟ್ನ ಇರುವಿಕೆ, ಇಲ್ಲದಿರುವಿಕೆಯ ತಳಮಳ, ನೋವು, ಸಂಧಿಗ್ಧತೆಯನ್ನು ಆಳವಾಗಿ ಗ್ರಹಿಸಲು ನಟ ಶಾಹಿದ್ ಕಪೂರ್ ಯಶಸ್ವಿಯಾಗಿಲ್ಲವೇನೋ ಎಂದೆನಿಸುತ್ತದೆ. ಚಿತ್ತ ಸ್ವಾಸ್ಥ್ಯ ಕಳೆದುಕೊಂಡ ಹೈದರ್ನಾಗಿ ನಟಿಸಿದ ಶಾಹಿದ್ ಅದರ ಗಂಭೀರತೆಯನ್ನು ಅರಿತಂತಿಲ್ಲ. ಆ ಭಾಗದ ನಟನೆ, ಮಾಮೂಲಿ ಬಾಲಿವುಡ್ ಶೈಲಿಯ ನಟನೆಯಂತಿದೆ. ಇದಕ್ಕೆ ನಿರ್ದೇಶಕನೂ ಸಹ ಹೊಣೆ.

ಹ್ಯಾಮ್ಲ್ಲೆಟ್ ನಾಟಕದ ಜೀವಾಳವಾಗಿದ್ದ ಸ್ವಗತಗಳು ಹೈದರ್ನಲ್ಲಿ ಸಿನಿಮಾ ಭಾಷೆಯಾಗಿ, ರೂಪಕಗಳಾಗಿ ಬರುವುದೇ ಇಲ್ಲ. ಇದು ಈ ಸಿನಿಮಾದ ಮಿತಿಗಳಲ್ಲೊಂದು. ಮತ್ತು ಸಿನಿಮಾದ ಅವಧಿ ಹಾಗೂ ಆರಂಭದ ಧೀರ್ಘವಾದ ಸನ್ನಿವೇಶಗಳು ಚಿತ್ರಕತೆಯನ್ನು ಸಹ ಎಳೆದಂತೆ ಅನುಭವವಾಗುತ್ತದೆ. ಆದರೆ ಮಿಲಿಟರಿ ಬಾಂಬ್ ದಾಳಿಗೆ ತುತ್ತಾಗಿ ನಾಶವಾಗುವ ಹೈದರ್ನ ಮನೆಯ ಭಗ್ನ ಅವಶೇಷಗಳೊಂದಿಗೆ ಆರಂಭವಾಗುವ ಸಿನಿಮಾ ಕ್ಲೈಮಾಕ್ಸ್ನಲ್ಲಿ ಸ್ಮಶಾನಕ್ಕೆ ಬಂದು ಮುಟ್ಟುತ್ತದೆ. ಇಡೀ ಕತೆಯ ಸಂಕೀರ್ಣತೆಯನ್ನು ಇದು ಪರಿಣಾಮಕಾರಿಯಾಗಿ ಧ್ವನಿಸುತ್ತದೆ.

ಆದರೆ ಇಡೀ ಹೈದರ್ ಸಿನಿಮಾದ ಶಕ್ತಿ ಗರ್ಟೂಡ್  (ಗಜಾಲ) ಪಾತ್ರದಲ್ಲಿ ಅಭಿನಯಿಸಿರುವ ಟಬು. ಹೈದರ್ ಸಿನಿಮಾ belongs to Tabu. ಹೈದರ್ನ ತಾಯಿ ಗಜಾಲಳ ಪಾತ್ರದಲ್ಲಿ ಅತ್ಯಂತ ಘನತೆಯಿಂದ ಅಭಿನಯಿಸಿದ್ದಾಳೆ ಟಬು. ಆಕೆಯ ಕಣ್ಣುಗಳು ಅಚ್ಚರಿ ಹುಟ್ಟಿಸುವಷ್ಟು ನಮ್ಮನ್ನು ಕಾಡುತ್ತವೆ. ಆಕೆಯ ಗಾಂಭೀರ್ಯ ಮತ್ತು ಚಂಚಲತೆ ಇಡೀ ಚಿತ್ರವನ್ನೇ ಪೊರೆದಿರುವುದು ಮಾತ್ರ ನಿಜ. ಸಂಸಾರದಿಂದ, ಬದುಕಿನಿಂದ ಏನನ್ನೂ ನಿರೀಕ್ಷೆಯನ್ನೇ ಇಟ್ಟುಕೊಳ್ಳದ, ಆದರೆ ಒಳ ಆಕಾಂಕ್ಷೆಗಳು ವ್ಯಕ್ತಿತ್ವವನ್ನು ಮೀರಿ ಹೊರ ಬರುವಂತಹ ವೈರುಧ್ಯತೆಯ ಸನ್ನಿವೇಶಗಳಲ್ಲಿ, ಗಂಡನ ಸಾವಿಗೆ ತಾನು ನೇರ ಪಾತ್ರಧಾರಿಯಲ್ಲದಿದ್ದರೂ ಪರೋಕ್ಷವಾಗಿ ಸಹಕರಿಸಿರುವುದು ಅವಳಲ್ಲಿ ಕೀಳರಿಮೆ ಹುಟ್ಟಿಸಿದೆಯೇ ಅಥವಾ ಗಂಡನ ಸೋದರ ಖುರ್ರಂನ ಬಾಹುಗಳಲ್ಲಿ ನೆಮ್ಮದಿಯಾಗಿದ್ದಾಳೆಯೇ ಎನ್ನವಂತಹ ನಿಗೂಢ ಗಜಾಲ ಪಾತ್ರದೊಳಗೆ ಆದ್ರತೆಯನ್ನು, ಮಾರ್ದವತೆಯನ್ನು, ದಿಟ್ಟತೆಯನ್ನು ತರುವಲ್ಲಿ ಟಬು ಯಶಸ್ವಿಯಾಗಿದ್ದಾಳೆ. ಅದರಲ್ಲೂ ಈಡಿಪಸಿಸಂನ ನೆರಳುಗಳನ್ನು ಬಿತ್ತಿರುವಂತಹ ಮಗನೊಂದಿಗಿನ ಕೆಲವು ಸನ್ನಿವೇಶಗಳಲ್ಲಿ ಟಬು ನಟನೆಯ ಅದ್ಭುತ ರೂಹುಗಳನ್ನು ದಾಖಲಿಸಿದ್ದಾಳೆ. ಬಹುಶಃ ಕಳೆದ ದಶಕಗಳಲ್ಲಿ ಬಂದ ಅತ್ಯಂತ ಸಂಕೀರ್ಣವಾದ ಆದರೆ ಬೋಲ್ಡ್ ಆದ ಸ್ತ್ರೀ ಪಾತ್ರ ಈ ಗಜಾಲ. ಇದನ್ನು ಟಬು ಸಮರ್ಥವಾಗಿ ನಿಭಾಯಿಸಿದ್ದಾಳೆ.

ಕಡೆಗೆ ಹೈದರ್ ನಿರ್ದೇಶಕನ ಧೈರ್ಯವಂತಿಕೆಯನ್ನು ಕೂಡ ಪರಿಚಯಿಸುತ್ತದೆ. ಏಕೆಂದರೆ ಅತ್ಯಂತ ಸಂಕೀರ್ಣವಾದ, ಪ್ರತಿ ಸನ್ನಿವೇಶದಲ್ಲೂ ನಾಟಕೀಯತೆಯನ್ನು ಬಯಸುವಂತಹ ಹ್ಯಾಮ್ಲೆಟ್ ನಾಟಕವನ್ನು ಸಿನಿಮಾಗೆ ರೂಪಾಂತರಿಸಲು ಕೈಗೆತ್ತಿಕೊಂಡಿದ್ದಕ್ಕೆ, ಕಾಶ್ಮೀರದ ಹಿಂಸೆ, ಕೊಲೆ, ಪ್ರಕ್ಷುಬ್ಧತೆಯನ್ನು ಪಕ್ಷಪಾತವಿಲ್ಲದೆ, ದೇಶಪ್ರೇಮದ ವೈಭವೀಕರಣಕ್ಕೆ ಬಲಿಯಾಗದೆ ನೈಜವಾಗಿ ಕಟ್ಟಿಕೊಟ್ಟಿದ್ದಕ್ಕೆ ಮತ್ತು ಕಡೆಗೆ ಮೂಲ ನಾಟಕದ ಅಂತ್ಯವನ್ನು ನಿರಾಕರಿಸಿ ಪ್ರತೀಕಾರ ಮತ್ತು ಹಿಂಸೆಯ ಇರುವಿಕೆ ನಮ್ಮನ್ನು ಎಲ್ಲಿಯೂ ಕೊಂಡೊಯ್ಯುವುದಿಲ್ಲ ಅದರ ಇಲ್ಲದಿರುವಿಕೆಯೇ ನಮ್ಮ ಆಶಯ ಎಂದು ನಿರ್ಧರಿಸಿದ್ದಕ್ಕೆ.

ಮೋದಿ ಬ್ರಾಂಡ್ : “ನಾನು ಯಜಮಾನ; ಯಜಮಾನಿಕೆ ಮಾಡುತ್ತಿದ್ದೇನೆ”


– ಬಿ. ಶ್ರೀಪಾದ ಭಟ್


ಗಾಂಧಿಯವರು ರಾಜಕಾರಣಿಗಳ ಮಧ್ಯೆ ಸಂತ, ಸಂತರ ನಡುವೆ ರಾಜಕಾರಣಿ – ಜಾರ್ಜ ಅರ್ವೆಲ್

ಗಾಂಧಿ ಕುರಿತಾಗಿ ಒಂದು ಕಡೆ ಅರ್ವೆಲ್ ಬರೆಯುತ್ತಾನೆ “ವಿಪರ್ಯಾಸವೆಂದರೆ 1869ರಲ್ಲಿ ಜನಿಸಿದ ಗಾಂಧಿಯು ಏಕಚಕ್ರಾಧಿಪತ್ಯದ ಸ್ವರೂಪವನ್ನು ಅದರ ಸಮಗ್ರ ಪ್ರಭಾವ ವಲಯವನ್ನು ಅರ್ಥ ಮಾಡಿಕೊಂಡಿರಲಿಲ್ಲ. ಗಾಂಧಿಗೆ ತನ್ನ ಸತ್ಯಾಗ್ರಹವನ್ನು ಬಳಸಿಕೊಂಡು ಜಗತ್ತನ್ನು ಎಚ್ಚರಗೊಳಿಸಲು ಹೋರಾಡುತ್ತಿದ್ದೇನೆ ಎಂಬ ಮುಗ್ಧ ನಂಬುಗೆಯಿತ್ತು.ಆದರೆ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿಯ ಯಶಸ್ಸು ಅನುಮಾನಾಸ್ಪದವೇ. ಏಕೆಂದರೆ ಆಕ್ರಮಿತ ದೇಶದ ವಿರುದ್ಧದ ಹೋರಾಟಕ್ಕೂ ತಮ್ಮದೇ ಸರ್ಕಾರದ ಸರ್ವಾಧಿಕಾರಿ ಆಡಳಿತದ ವಿರುದ್ಧದ ಹೋರಾಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಏಕೆಂದರೆ ಕೃತಜ್ಞತೆ ಎನ್ನುವುದು ಸಹ ಅಂತರಾಷ್ಟ್ರೀಯ ರಾಜಕೀಯದ ಲಕ್ಷಣಗಳಲ್ಲೊಂದು.”

ಅರ್ವೆಲ್ ನ ಮೇಲಿನ ಮಾತುಗಳು ಒಂದು ಕಾಲಕ್ಕೆ ನಮ್ಮನ್ನು ತೀವ್ರ ಚಿಂತನೆಗೆ ಹಚ್ಚಿದ್ದವು. ಅನೇಕ ಬಾರಿ ಇದು ಅತಿಯಾಯ್ತೇನೋ ಎಂದೆನಿಸುತ್ತಿತ್ತು. 200px-MKGandhi[1]ಆದರೆ ಅಂಬೇಡ್ಕರ್ ಅವರೊಂದಿಗೆ ಗಾಂಧಿಯವರ ಸಂವಾದ, ಚರ್ಚೆ, ಜಗಳಗಳನ್ನು ಅಧ್ಯಯನ ಮಾಡಿದಾಗ ಅದು ನಿಜವೇನೂ ಅನ್ನಿಸುತ್ತಿತ್ತು. ಏಕೆಂದರೆ ಇಂಡಿಯಾದ ಜಾತಿ ಪದ್ಧತಿಯನ್ನು, ಇಲ್ಲಿನ ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯದಿಂದ ತಳ ಸಮುದಾಯಗಳ ಬಿಡುಗಡೆಗೆ ಗಾಂಧಿ ಮಾರ್ಗದಲ್ಲಿ ಉತ್ತರವೇ ಇರಲಿಲ್ಲ. ಅಂಬೇಡ್ಕರ್ ಅವರ ಹೋರಾಟ ಮತ್ತು ಚಿಂತನೆಗಳು ಮಾತ್ರ ಇದರ ವಿಮೋಚನೆಗೆ ಇರುವ ಮಹತ್ವದ ಮತ್ತು ಉಳಿದಿರುವ ಒಂದೇ ದಾರಿ ಎನ್ನವುದು ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ನಮಗೆಲ್ಲ ಮತ್ತೆ ಮತ್ತೆ ಖಾತರಿಯಾಗುತ್ತಿದೆ. ಆದರೆ ಗಾಂಧಿ ಮಹಾನ್ ಪ್ರಜಾಪ್ರಭುತ್ವವಾದಿಯಾಗಿದ್ದರು. ಸದಾಕಾಲ ತಮ್ಮ ಮನಸ್ಸನ್ನು ತೆರೆದಿಟ್ಟುಕೊಳ್ಳುತ್ತಿದ್ದ ಗಾಂಧಿ ಅಂಬೇಡ್ಕರ್ ಅವರೊಂದಿಗಿನ ದಶಕಗಳ ಕಾಲ ನಡೆಸಿದ ಸಂವಾದಗಳಿಂದ ಜಾತಿ ಪದ್ಧತಿಯ ಕುರಿತಾದ ತಮ್ಮ ಸನಾತನ ನಿಲುವುಗಳಿಂದ ಕೊಂಚ ಕೊಂಚವಾಗಿ ಬಿಡುಗಡೆಗೊಂಡು ಮತ್ತಷ್ಟು ಸುಧಾರಿಸಿಕೊಳ್ಳುತ್ತಲೇ ಸಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅರ್ವೆಲ್ ನ ಮೇಲಿನ ಮಾತುಗಳನ್ನು ಗಮನಿಸಿದಾಗ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿ ಎಲ್ಲಿ ಮುಟ್ಟುತ್ತದೆ ಎಂದರೆ ನರೇಂದ್ರ ಮೋದಿಯಂತಹ ಪ್ರಜಾಪ್ರಭುತ್ವ ವಿರೋಧಿಯ ಕೈಯಲ್ಲೂ ಸರಾಗವಾಗಿ ಬಳಕೆಗೊಳ್ಳಲ್ಪಡುತ್ತದೆ. ಗಾಂಧಿಯ ಹುಟ್ಟಿದ ದಿನವನ್ನೂ ಹೈಜಾಕ್ ಮಾಡಿರುವ ಮೋದಿ ಅದನ್ನು ಸ್ಚಚ್ಛತಾ ಆಂದೋಲನದ ದಿನವನ್ನಾಗಿ ಪರಿವರ್ತಿಸಿದ್ದಾರೆ. ಇಂದು ಇಡೀ ದೇಶದ ವಿದ್ಯಾವಂತ ವರ್ಗ ಗಾಂಧಿಯನ್ನು ಮರೆತು ಮೋದಿಯ ಹೆಸರಿನಲ್ಲಿ ಈ ಸಂಪೂರ್ಣ ಮರೆಮೋಸದ, ಹುಸಿಯಾದ ಸ್ವಚ್ಛತಾ ಅಂದೋಲನದಲ್ಲಿ ತೊಡಗಿದೆ.

ಅರ್ವೆಲ್ “ಗಾಂಧಿಯವರ ‘ಮೋಸಗಾರರು ಕಡೆಗೆ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ’ ಎನ್ನುವ ಸರಳೀಕೃತYoung_Ambedkar ಗ್ರಹಿಕೆ ಯಾವುದೇ ದೂರಗಾಮಿ ಪರಿಣಾಮಗಳನ್ನು, ಸಂಚಲನಗಳನ್ನು ಉಂಟುಮಾಡದಿರುವುದಕ್ಕಾಗಿ ಗಾಂಧೀಯ ಈ ತತ್ವಗಳು ಈ ಮೇಲ್ವರ್ಗಕ್ಕೆ ಅಪ್ಯಾಯಮಾನವಾಗಿದ್ದವು” ಎಂದು ಹೇಳುತ್ತಾನೆ.ಇದು ಸತ್ಯ. ಗಾಂಧಿಯವರ ಪ್ರಾಮಾಣಿಕ, ಸತ್ಯನಿಷ್ಠತೆ ಎಲ್ಲವನ್ನೂ ಕೈ ಬಿಟ್ಟ ಇಂಡಿಯಾದ ಫ್ಯಾಸಿಸ್ಟರು ಮತ್ತು ಮತೀಯವಾದಿಗಳು ಮತ್ತು ಅವರೊಂದಿಗೆ ಕೈಜೋಡಿಸಿರುವ ಇಲ್ಲಿನ ವಿದ್ಯಾವಂತ ವರ್ಗ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಗಾಂಧಿಯನ್ನು ಬಳಸಿಕೊಳ್ಳುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಗಾಂಧಿಯವರ 150ನೇ ಜನ್ಮದಿನಾಚರಣೆ ವರ್ಷ 2019ರ ವೇಳೆಗೆ ಹೆಚ್ಚೂ ಕಡಿಮೆ ಗಾಂಧಿಯನ್ನೇ ಅಪ್ರಸ್ತುತಗೊಳಿಸುವ ಒಂದು ಬೃಹತ್ ಯೋಜನೆಯ ಮೊದಲ ಹಂತವೇ ಮೋದಿಯ ಈ ಸ್ವಚ್ಛತಾ ಆಂದೋಲನ. ಅಂಬೇಡ್ಕರ್ ವಾದಿ ನಿಮ್ಗಾಡೆಯವರು ಗಾಂಧಿಯವರ ಕುರಿತಾಗಿ “ಮೇಲುಕೀಳಿನ ವರ್ಣಾಶ್ರಮವು ನಿಜವೆನ್ನುವುದಾದರೆ ನಾನು ಅಸ್ಪೃಶ್ಯನಾಗಿ ಸಾಯಲು ಬಯಸುತ್ತೇನೆ ಎಂದು ಹೇಳಿದ ಮಹಾತ್ಮ ಗಾಂಧಿಯವರು ಅಪಾರ ಧೈರ್ಯಸ್ಥರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಜಾತೀಯತೆಯನ್ನು ವಿರೋಧಿಸುತ್ತಿದ್ದ ಗಾಂಧಿಯವರು ಅದೇ ಶ್ರೇಣೀಕೃತ ಜಾತಿ ಪದ್ಧತಿಯ ಮೇಲೆ ಕಟ್ಟಲ್ಪಟ್ಟ ವರ್ಣಾಶ್ರಮವನ್ನು ಸಮರ್ಥಿಸುತ್ತಿದ್ದರು. ಬಾಬಾಸಾಹೇಬರು ಪ್ರತಿಪಾದಿಸಿದ ರಾಜಕೀಯ ಹಕ್ಕುಗಳನ್ನು ಸಾಧಿಸುವುದರ ಮೂಲಕ ಅಸ್ಪೃಶ್ಯರು ವರ್ಣಾಶ್ರಮದ ಸಂಕೋಲೆಗಳಿಂದ ವಿಮೋಚನೆಯನ್ನು ಪಡೆಯಬೇಕು ಎಂಬ ಮಾನವೀಯ ತತ್ವಕ್ಕೆ ವಿರುದ್ಧವಾಗಿ ವ್ಯಕ್ತಿಗತವಾದ ವೈಯುಕ್ತಿಕ ಸುಧಾರಣೆಯ ಮೂಲಕ ಜಾತೀಯತೆಯನ್ನು ಅಳಿಸಿ ಹಾಕಬೇಕೆಂಬ ಗಾಂಧಿಯವರ ಚಿಂತನೆ ಬಾಲಿಶವಾಗಿತ್ತು. ವಾರ್ಧಾದ ಆಶ್ರಮದಲ್ಲಿ ಬ್ರಾಹ್ಮಣನೊಬ್ಬನ ಕೈಯಲ್ಲಿ ಕಸಗುಡಿಸುವ ಮೂಲಕ ಕೆಳಜಾತಿಯವರಿಗೆ ನೋಡಿ ನಿಮ್ಮ ಕಸ ಗುಡಿಸುವ ಕೆಲಸವೂ ಶ್ರೇಷ್ಠವಾದದ್ದು ಎಂದು ಗಾಂಧಿ ಹೇಳುತ್ತಾರೆ. ಆ ಮೂಲಕ ಪರೋಕ್ಷವಾಗಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ಬಾಬಾ ಸಾಹೇಬರು ಪ್ರತಿಪಾದಿಸುವುದು ಕಸಗುಡಿಸುವವನು ಆ ಕಾಯಕದಿಂದ ಮೇಲಕ್ಕೇರಿ ಶ್ರೇಣೀಕೃತ ವ್ಯವಸ್ಥೆಯ ಮೆಟ್ಟಿಲುಗಳ ಮೇಲಕ್ಕೇರುತ್ತ ಅತ್ಯತ್ತಮವಾದ ಹುದ್ದೆಯನ್ನು ಅಲಂಕರಿಸಬೇಕೆಂಬುದಾಗಿತ್ತು. ಇದು ಗಾಂಧಿಯವರಿಗೆ ಅರ್ಥವಾಗಲೇ ಇಲ್ಲ” ಎಂದು ಬರೆಯುತ್ತಾರೆ.

ಇಂದು ಈ ನರೇಂದ್ರ ಮೋದಿಯ ಈ ಸ್ವಚ್ಛತಾ ಅಂದೋಲನವನ್ನು ಸಹ ನಾವೂ ಈ ಹಿನ್ನೆಲೆಯಲ್ಲಿಯೇ ಅರಿಯಬೇಕಾಗಿದೆ. Manual_scavanging11-300x196[2]ಇಲ್ಲಿ ಜಾಡಮಾಲಿಗಳಿಗೆ, ಈ ಮಲ ಸ್ವಚ್ಛಗೊಳಿಸುವ ತಳ ಸಮುದಾಯಗಳಿಗೆ, ಪೌರ ಕಾರ್ಮಿಕರಿಗೆ ಈ ಅಮಾನವೀಯ ವೃತ್ತಿಯಿಂದ ವಿಮೋಚನೆ ಕೊಡಿಸಬೇಕೆನ್ನುವುದು ಈ ಸೋ ಕಾಲ್ಡ್ ಪ್ರಧಾನ ಮಂತ್ರಿಯ ಮೊದಲ ಆದ್ಯತೆಯಾಗಬೇಕಿತ್ತು. ಈ ಬಿಡುಗಡೆಯ ಕಾರ್ಯಸೂಚಿಯು ಸ್ವಚ್ಛತಾ ಆಂದೋಲನದ ಮೊದಲ ಕೆಲಸವಾಗಬೇಕಿತ್ತು. ತಳ ಸಮುದಾಯಗಳ ಬದುಕಿಗೆ ಘನತೆ ತಂದುಕೊಟ್ಟು ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲಕ್ಕೇರಲು ಅವಕಾಶಗಳನ್ನು ಕಲ್ಪಿಸಕೊಡಬೇಕೆನ್ನುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದ್ದ ನರೇಂದ್ರ ಮೋದಿಗೆ ಅಂಬೇಡ್ಕರ್ ಅವರ ಚಿಂತನೆಗಳ ಆಳವೇ ಅರಿವಿಲ್ಲ. ಅಥವಾ ಅರಿವಾದರೆ ತಮ್ಮ ಸಂಘ ಪರಿವಾರದ ಸನಾತನವಾದಕ್ಕೆ ತಿಲಾಂಜಲಿ ಕೊಡಬೇಕಾಗುವ ಸಾಧ್ಯತೆಗಳನ್ನು ಮನಗಂಡ ಮೋದಿ ಅಂಬೇಡ್ಕರ್ ಅವರನ್ನು ಮುಟ್ಟದೆ ಕಡೆಗೆ ಆಶ್ರಯಿಸಿದ್ದು ಗಾಂಧಿಯವರನ್ನು. ಆದರೆ ತಮ್ಮ ವೈಯುಕ್ತಿಕ ಜೀವನದಲ್ಲಿ ತಮ್ಮ ಪ್ರತಿಯೊಂದು ನಡೆಗೂ ನೈತಿಕ ಗೆರೆಯನ್ನು ಎಳೆದುಕೊಳ್ಳುತ್ತಿದ್ದ ಗಾಂಧಿ, ಹಿಂದೂಮುಸ್ಲಿಂರ ನಡುವಿನ ಸೌಹಾರ್ದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ನಿಜದ ಗಾಂಧಿ ಮೋದಿ ಮತ್ತವರ ಪಟಾಲಂಗೆ ಬೇಕಾಗಿಲ್ಲ. ಸಬರಮತಿ ಆಶ್ರಮವನ್ನು ಸ್ವತಃ ತಾವೇ ಸ್ವಚ್ಛಗೊಳಿಸುತ್ತಿದ್ದ ಗಾಂಧಿ ಎನ್ನುವ ಒಂದು ತೆಳುವಾದ ಕ್ಯಾರಿಕೇಚರ್ ಅನ್ನು ಮಾತ್ರ ಹೆಕ್ಕಿಕೊಂಡು ಅದನ್ನು ಇಪ್ಪತ್ತೊಂದನೇ ಶತಮಾನದಲ್ಲಿ ಮೋದಿ ಬ್ರಾಂಡ್ ನ ಮೂಲಕ ಪ್ರಯೋಗಿಸುತ್ತಿದೆ ಆಧುನಿಕ ಇಂಡಿಯಾ.

ತನ್ನ ಜನಪ್ರಿಯತೆ ಕುಸಿಯುತ್ತಿದೆ ಎಂದು ಅರಿವಾದ ಕ್ಷಣ ಕೋಮುವಾದಕ್ಕೆ ಮೊರೆ ಹೋಗಿ ನೂರಾರು ಮುಗ್ಧ ಜನರ ಸಾವಿಗೆ ಕಾರಣವಾಗುವ ಈ ಮತೀಯವಾದಿಗಳು modi-clean-indiaಇಂದು ದ್ವೇಷ, ತಿರಸ್ಕಾರಗಳ ವಿರುದ್ಧ ಹೋರಾಡಿದ ಸೆಕ್ಯುಲರ್ ಗಾಂಧಿಯವರನ್ನು ಹೈಜಾಕ್ ಮಾಡಿಕೊಂಡು 2019ರ ವೇಳೆಗೆ ಬಾಪುವನ್ನು ಎಲ್ಲಿಗೆ ತಂದು ಮುಟ್ಟಿಸಬಹುದು ಎಂದು ನೆನೆದು ಆತಂಕವಾಗುತ್ತಿದೆ. ಈ ಸ್ವಚ್ಛತಾ ಆಂದೋಲನವೆನ್ನವುದು ಗುಪ್ತ ಕಾರ್ಯಸೂಚಿಯೊಂದನ್ನು ಪ್ರಯೋಗಾತ್ಮವಾಗಿ ಜಾರಿಗೊಳಿಸುವ ಅಜೆಂಡಾ. ಈ ಅಜೆಂಡಾಗಳನ್ನು ಅಳವಡಿಸಿಕೊಳ್ಳುವ ತಂತ್ರವಾಗಿಯೇ ಮೋದಿ ಬ್ರಾಂಡ್ ಅನ್ನು ತೇಲಿ ಬಿಡಲಾಗುತ್ತಿದೆ. ಮೋದಿಯ ಅಮೇರಿಕ ಭೇಟಿಯನ್ನು ಅತ್ಯಂತ ಜನಪ್ರಿಯವಾಗಿಸಲು ಮೊದಲು ಅಮೇರಿಕಾದಲ್ಲಿನ ಸಂಘ ಪರಿವಾರದ ಎಲ್ಲಾ ಅಂಗ ಸಂಸ್ಥೆಗಳು ಅತ್ಯಂತ ಕರಾರುವಕ್ಕಾಗಿ ಕ್ಷಿಪ್ರಗತಿಯಲ್ಲಿ ಕಾರ್ಯಪ್ರವೃತ್ತರಾಗಿ, ಅನಿವಾಸಿ ಭಾರತೀಯರನ್ನು ಸಂಘಟಿಸಿ ಅಲ್ಲಿ ಮೋದಿ ಬ್ರಾಂಡ್ ಅನ್ನು ಹುಟ್ಟಿ ಹಾಕಿದರು. ಇಂಡಿಯಾದ ಪ್ರಧಾನಮಂತ್ರಿಯೊಬ್ಬನ ವಿದೇಶಿ ಭೇಟಿ ಕೇವಲ ರಾಜತಾಂತ್ರಿಕ ಕಾರಣಗಳಿಗೆ, ರಾಜಕೀಯ ಸಂಬಂಧಗಳ ಕುರಿತಾದ ದ್ವಿಪಕ್ಷೀಯ ಮಾತುಕತೆಗೆ ಸುದ್ದಿಯಾಗಬೇಕಿತ್ತು. ಆದರೆ ಇದೆಲ್ಲವೂ ನೇಪಥ್ಯಕ್ಕೆ ಸರಿದು ಅಲ್ಲಿನ ಸಂಘ ಪರಿವಾರದ ತತ್ವಬದ್ಧ ಸಂಸ್ಥೆಗಳು ಇಂಡಿಯಾವೆಂದರೆ ಅದು ಮೋದಿ ಬ್ರಾಂಡ್ ಮಾತ್ರ ಎನ್ನುವ ಮರೀಚಿಕೆಯನ್ನು ಹುಟ್ಟು ಹಾಕಲು ಯಶಸ್ವಿಯಾದವು. ಇದು ಆರೆಸಸ್ ಅನ್ನೂ ದಂಗುಬಡಿಸಿದಂತಿದೆ. ಅದರ ಬೆನ್ನಲ್ಲೇ ಇಂಡಿಯಾದಲ್ಲಿ ಗಾಂಧಿ ಹುಟ್ಟಿದ ದಿನದಂದೇ ಬಾಪುವನ್ನು ಅಪ್ರಸ್ತುಗೊಳಿಸುತ್ತ ಮೋದಿ ಬ್ರಾಂಡ್ ಅನ್ನು ಪ್ರಸ್ತುಗೊಳಿಸುವ ಅಜೆಂಡಾವನ್ನು 2014 ಅಕ್ಟೋಬರ್ 2 ರಿಂದ ಪ್ರಾರಂಭವಾಗಿದೆ.

“ಹಸಿವಿನಿಂದ, ಬಡತನದಿಂದ ಸಾಯುವ ಪ್ರತಿಯೊಬ್ಬ ವ್ಯಕ್ತಿಯೊಬ್ಬನ ಸಾವು ದೇಶದ ಆತ್ಮಗೌರವದ, modi_ambani_tata_kamathಘನತೆಯ ಸಾವು” ಎಂದು ನಂಬಿದ್ದ ಬಾಪು “ಇಲ್ಲಿನ ಪ್ರತಿಯೊಂದು ಅವಿಷ್ಕಾರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪದಿದ್ದರೆ ಆ ಅವಿಷ್ಕಾರವೇ ವ್ಯರ್ಥ” ಎಂದು ಹೇಳುತ್ತಿದ್ದರು. ಆದರೆ ಗಾಂದಿಯನ್ನು ಮುಟ್ಟದ ಮೋದಿ ಲಕ್ಷಾಂತರ ಬಡವರನ್ನು ಸುಲಿಯುವ ಶ್ರೀಮಂತರ, ಖಾಸಗೀಕರಣದ, ಕಾರ್ಪೋರೇಟ್ ಸಾರ್ವಭೌಮತ್ವಕ್ಕಾಗಿ ಯಾವುದೇ ರೀತಿಯ ಕ್ರೌರ್ಯವನ್ನು ಸಹಿಸಿಕೊಳ್ಳುವಂತೆ ಇಂಡಿಯಾವನ್ನು ಮಾನಸಿಕವಾಗಿ ತಯಾರು ಮಾಡುತ್ತಿರುವ ಮೋದಿ ಗುಲಾಮಗಿರಿ ದಿಕ್ಕಿಗೆ ಇಲ್ಲಿನ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸುತ್ತಿದ್ದಾರೆ. ಮೋದಿಯ ಶ್ರೀಮಂತರ ಪರವಾದ ಅಪ್ತವಾದ ಕನಸು ಮತ್ತು ಸಂಘ ಪರಿವಾರದ ‘ಮುಸ್ಲಿಂರು, ಕ್ರೈಸ್ತರು, (ತಳ ಸಮುದಾಯಗಳು, ಆದಿವಾಸಿಗಳು) ನಮ್ಮ ಶತೃಗಳು’ ಎನ್ನುವ ಇಂಡಿಯಾ ಎರಡನ್ನೂ ಒಂದೇ ಏಟಿನಲ್ಲಿ ಸಾಧಿಸುವಂತೆ ಇಂದಿನ ಮೋದಿ ಬ್ರಾಂಡ್ ಅನ್ನು ರೂಪಿಸಲಾಗುತ್ತಿದೆ. “ನಾನು ಯಜಮಾನ; ಯಜಮಾನಿಕೆ ಮಾಡುತ್ತಿದ್ದೇನ” ಇದು ಈ ಮೋದಿ ಬ್ರಾಂಡ್ ನ ಸ್ವರೂಪ

ಆದರೆ ಆಧುನಿಕ ನಾಗರಿಕತೆಯೆಂದರೆ ಕೊಳ್ಳುಬಾಕ ಜೀವನ ಮತ್ತು ಈ ಬಗೆಯ ಅಪಾಯಕಾರಿ, ಹುಸಿಯಾದ ಬ್ರಾಂಡ್ ಗಳನ್ನು ಆರಾಧಿಸುವ ಇಲ್ಲಿನ gujarat_violence_1ವಿದ್ಯಾವಂತ ವರ್ಗ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಇಷ್ಟೊಂದು ಸರಳೀಕರಿಸುವಷ್ಟು ಅವಿದ್ಯಾವಂತರು, ಮೌಢ್ಯರಾಗಿದ್ದಾರೆಯೇ? ಆಗಿದ್ದಾರೆ. ಏಕೆಂದರೆ ಆಗಲೇ ಕಳೆದ ಐವತ್ತು ವರ್ಷಗಳಲ್ಲಿ ಇಂಡಿಯಾದ ವಿದ್ಯಾವಂತ ವರ್ಗ ಅತ್ತ ಅಂಬೇಡ್ಕರ್ ಅವರನ್ನೂ ಮುಟ್ಟಲಿಲ್ಲ, ಅಪ್ಪಿಕೊಳ್ಳಲಿಲ್ಲ. ಮತ್ತೊಂದು ಕಡೆ ಗಾಂಧಿಯನ್ನು ಒಪ್ಪಿಕೊಂಡು ಕಳೆದ ಐವತ್ತು ವರ್ಷಗಳಲ್ಲಿ ಬಾಪುವನ್ನು ನಿರಂತರವಾಗಿ ಹಾಸ್ಯಾಸ್ಪದ ವಸ್ತುವನ್ನಾಗಿರಿಸಿದ್ದಾರೆ. ಇಂದು ಹಾಸ್ಯಾಸ್ಪದಗೊಂಡ ಬಾಪುವನ್ನು ಹೈಜಾಕ್ ಮಾಡುವುದು ಈ ಮತೀಯವಾದಿಗಳಿಗೆ ಅತ್ಯಂತ ಸುಲುಭದ ಕೆಲಸ. ಈ ಬಗೆಯ ಹುಸಿಯಾದ, ಅಪಾಯಕಾರಿಯಾದ ಬ್ರಾಂಡ್ ಗಳ ಮೂಲಕ ಈ ಅಪ್ರಬುದ್ಧ ರಾಜಕೀಯ ಮಾದರಿಗಳು ಮತ್ತೇನಲ್ಲದೆ ಸ್ವಾತಂತ್ರ, ಕ್ರಿಯಾಶೀಲತೆ, ದಿಟ್ಟತೆಗಳಿಲ್ಲದ ಆಯುಧಗಳನ್ನು ಸೃಷ್ಟಿಸುತ್ತಿವೆ. ರಹಮತ್ ತರೀಕೇರೆ ಅವರು “ಈ ಆಯುಧಗಳ ಕೆಲಸವೇ ತನ್ನನ್ನು ಧಾರಣ ಮಾಡಿದವರ ಇಷ್ಟಾನಿಷ್ಟ ಪೂರೈಸುವುದು. ಆಯುಧದಾರಿಗಳು ಅವನ್ನು ಮನುಷ್ಯರ ತಲೆ ಕಡಿಯಲು ಬಳಸಬಹುದು. ಗಿಡ ಟೊಂಗೆ ಕಡಿಯಲು ಅಥವಾ ಮುಳ್ಳುಗಿಡವನ್ನು ತೆಗೆಯಲು ಬಳಸಬಹುದು.” ಎಂದು ಬರೆಯುತ್ತಾರೆ. ಈಗ ಸದ್ಯಕ್ಕೆ ಆಯುಧಗಳನ್ನು ಬಳಸಿಕೊಂಡು ಸ್ವಚ್ಛತಾ ಆಂದೋಲನವನ್ನು ರೂಪಿಸುತ್ತಿದೆ ಈ ಮೋದಿ ಬ್ರಾಂಡ್. ಒಮ್ಮೆ ತಮ್ಮ ಜನಪ್ರಿಯತೆ ಕುಸಿಯತೊಡಗಿದಾಗ ಇಲ್ಲಿನ ಮತೀಯವಾದಿಗಳು ಇದೇ ಆಯುಧಗಳನ್ನು ಬಳಸಿಕೊಂಡು ಬೀದಿಗಳಲ್ಲಿ ಹತ್ಯಾಕಾಂಡಗಳನ್ನು ಸಹ ರೂಪಿಸಬಲ್ಲರು ಎಂದು ಕಳೆದ ಎಂಬತ್ತು ವರ್ಷಗಳ ಇಂಡಿಯಾದ ಕೋಮುವಾದ ಇತಿಹಾಸವೇ ಸಾಕ್ಷಿ. ಆಗಲೂ ಸಹ ರಕ್ತಸಿಕ್ತದ ಇಂಡಿಯಾದ ಬೀದಿಗಳನ್ನು ಇದೇ ಸ್ವಚ್ಛತಾ ಆಂದೋಲನದ ಮೂಲಕ ಶುಚಿಗೊಳಿಸತ್ತಾರೇನೋ ಈ ವಿದ್ಯಾವಂತ ವರ್ಗ !!

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014″ರ ಫಲಿತಾಂಶ

ಆತ್ಮೀಯರೇ,

ಎಲ್ಲರಿಗೂ 2014ರ “ಗಾಂಧಿ ಜಯಂತಿ” katha sprade 2014ಆಚರಣೆಯ ಶುಭಾಶಯಗಳು.

ವರ್ತಮಾನ ಬಳಗ ಆಯೋಜಿಸಿದ್ದ ಈ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಸುಮಾರು 40 ಕತೆಗಳು ಬಂದಿದ್ದವು. ಈ ಸಾರಿಯ ತೀರ್ಪುಗಾರರು ಸಾಹಿತಿ ಮತ್ತು ಪ್ರಾಧ್ಯಾಪಕ ಎಸ್. ಗಂಗಾಧರಯ್ಯನವರು. ಇಂತಹ ಜವಾಬ್ದಾರಿಯನ್ನು ನಿಭಾಯಿಸಲು ಒಪ್ಪಿಕೊಂಡ ಅವರಿಗೆ ವರ್ತಮಾನ ಬಳಗ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಅವರು ಆಯ್ಕೆ ಮಾಡಿರುವ ಉತ್ತಮ ಕತೆಗಳು ಹೀಗಿವೆ:

  • ಮೊದಲ ಬಹುಮಾನ : “ಕಾಲವ್ಯಾಧಿ” – ಟಿ.ಎಸ್. ವಿವೇಕಾನಂದ್
  • ಎರಡನೆಯ ಬಹುಮಾನ : “ಬೋನಿಗೆ ಬಿದ್ದವರು” – ಟಿ.ಕೆ. ದಯಾನಂದ್
  • ಮೂರನೆಯ ಬಹುಮಾನ : “ಚಿವುಟಿದಷ್ಟೂ ಚಿಗುರು” – ಎಚ್.ಎಸ್. ಅನುಪಮ
  • ಪ್ರೋತ್ಸಾಹಕ ಬಹುಮಾನಗಳು :
    • ಹೇ ರಾಮ್” – ಪಾರ್ವತಿ ಪಿಟಗಿ
    • ಇಸುಮುಳ್ಳು” – ಅನುಪಮಾ ಪ್ರಸಾದ್

ಕಥಾ ಸ್ಪರ್ಧೆಗೆ ತಮ್ಮ ಕತೆಗಳನ್ನು ಆಸಕ್ತಿಯಿಂದ ಕಳುಹಿಸಿ, ಈ ಕಥಾಸ್ಪರ್ಧೆಯನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು. ತೀರ್ಪುಗಾರರಾದ ಎಸ್. ಗಂಗಾಧರಯ್ಯನವರಿಗೆ ಕೃತಜ್ಞತೆಗಳು. ಈ ಕಥಾ ಸ್ಪರ್ಧೆಯ ಆಯೋಜನೆಯಲ್ಲಿ ವಿಶೇಷವಾಗಿ ಸಹಕರಿಸಿದ ನಮ್ಮ ಬಳಗದ ಶ್ರೀಪಾದ ಭಟ್ಟರಿಗೆ ಧನ್ಯವಾದಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ಮತ್ತೊಮ್ಮೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂದನೆಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್