Category Archives: ಶ್ರೀಪಾದ್ ಭಟ್

ಕೇವಲ ಒಂದು ಜಾಕೆಟ್, ಟೋಪಿ ಮತ್ತು ಒಂದು ಗುಲಾಬಿ

– ಇಂಗ್ಲೀಷ್ : ಸಾಬಾ ನಕ್ವಿ
– ಅನುವಾದ: ಬಿ.ಶ್ರೀಪಾದ ಭಟ್

೧೯೯೧ರಲ್ಲಿ ಸೋವಿಯತ್ ಯೂನಿಯನ್ ಗಣರಾಜ್ಯ ವ್ಯವಸ್ಥೆ ಕುಸಿದು ಬಿದ್ದಾಗ ಜನಸಮೂಹವು ಲೆನಿನ್ ಮತ್ತು ಜೋಸೆಫ್ ಸ್ಟಾಲಿನ್ ಅವರ ಪ್ರತಿಮೆಗಳನ್ನು ಕೆಡವಿ ಧ್ವಂಸಗೊಳಿಸಿದರು. ಸೋವಿಯತ್‌ನ ನಾಗರಿಕರ ಆಕ್ರೋಶ ಮತ್ತು ಕೋಪ ಎಷ್ಟಿತ್ತೆಂದರೆ ಆ ಪ್ರತಿಮೆಗಳನ್ನು ಅವುಗಳ ಪೀಠದಿಂದ ನೆಲಕ್ಕೆ ಕೆಡವಿ, ಕಲ್ಲುಗಳನ್ನು ತೂರಿ ಉನ್ಮಾದದಿಂದ ವರ್ತಿಸಿದರು. ನಂತರ ವಿರೂಪಗೊಂಡ ಆ ಪ್ರತಿಮೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ, ಅದಕ್ಕಂಟಿದ ಧೂಳನ್ನು ಕೊಡವಿ ಆಧುನಿಕ ಪ್ರತಿಮೆಗಳೊಂದಿಗೆ ಲೆನಿನ್, ಸ್ಟಾಲಿನ್‌ರ ದುರಸ್ತಿಗೊಂಡ ಪ್ರತಿಮೆಗಳನ್ನು ಮಾಸ್ಕೋ ಪಾರ್ಕನಲ್ಲಿ ಮರಳಿ ಸ್ಥಾಪಿಸಲಾಯಿತು. ಆದರೆ ಈ ಲೆನಿನ್ ಮತ್ತು ಸ್ಟಾಲಿನ್ ಪ್ರತಿಮೆಗಳನ್ನು ಹಿಂದಿನಂತೆ ಸೋವಿಯತ್‌ನ ಎತ್ತರದ ಪೀಠಗಳಲ್ಲಿ ಆ ಗತಕಾಲದ ವೈಭವದೊಂದಿಗೆ ಮರಳಿ ಸ್ಥಾಪಿಸಲು ಮಾತ್ರ ಸಾಧ್ಯವಾಗಲಿಲ್ಲ.

ನರೇಂದ್ರ ಮೋದಿಯ ಅಧಿಕಾರದ ಕಡೆ ಎತ್ತರೆತ್ರಕ್ಕೆ ಏರುತ್ತಿರುವುದು ಮತ್ತು ಆ ಅಧಿಕಾರವು ಏಕವ್ಯಕ್ತಿ ಕೇಂದ್ರಿತ, ಏಕಪಕ್ಷ ಕೇಂದ್ರಿತ ವ್ಯವಸ್ಥೆಯ ಕಡೆಗೆ ನೆಲೆಗೊಳ್ಳತೊಡಗಿರುವುದರ ಕುರಿತಾಗಿ ಯಾವುದೇ ಅನುಮಾನ ಇಟ್ಟುಕೊಳ್ಳುವ ಅಗತ್ಯವಿಲ್ಲ. ಇದೇ ಸಂದರ್ಭದಲ್ಲಿ ಇಂಡಿಯಾದ ಚುನಾವಣಾ ರಾಜಕಾರಣದ ಸಿನಿಕತನದಿಂದಾಗಿ ಮತ್ತು ನೆಹರೂ ಸಂತತಿಯ ದೋಷಪೂರಿತ ಮತ್ತು ಊಹಾತೀತ ಆಡಳಿತದ ಕಾರಣಕ್ಕಾಗಿ ಇಂದು ನೆಹ್ರೂವಿಯನ್ ಐಡಿಯಾಲಜಿಗಳು ಮತ್ತು ಆದರ್ಶಗಳು ಟೊಳ್ಳಾಗಿರುವುದನ್ನೂ ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಕಾಲವು ಬದಲಾಗುತ್ತಿದೆ, ಸಂಗತಿಗಳೂ ಬದಲಾಗುತ್ತಿವೆ ಮತ್ತು ಇದು ಆರಂಭ ಮಾತ್ರ.

ಅತ್ಯಂತ ಉನ್ನತವಾದ ಆದರ್ಶಗಳನ್ನು ಹೊಂದಿದ್ದ ಮತ್ತು ಆ ಆದರ್ಶಗಳನ್ನು ವ್ಯಕ್ತಪಡಿಸಲು ಬಳಸುತ್ತಿದ್ದ nehru_ambedkarಅಸಾಧಾರಣವಾದ ವಾಕ್ಪಟುತ್ವವನ್ನು ಹೊಂದಿದ್ದ ನೆಹರೂ ಕೆಲವು ಗುರುತರವಾದ ತಪ್ಪುಗಳನ್ನು ಸಹ ಮಾಡಿದ್ದರು. ವ್ಯಕ್ತಿ ಸ್ವಾತಂತ್ರ, ಬಹುತ್ವವಾದ, ಒಳಗೊಳ್ಳುವಿಕೆ, ಸೆಕ್ಯುಲರಿಸಂ, ಮಾನವೀಯತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಕ್ಷಮತೆಗಳಂತಹ ಉದಾತ್ತವಾದ ಆದರ್ಶ ಗುಣಗಳನ್ನು ಹೊಂದಿದ್ದ ನೆಹರೂರವರ ಈ ಮೌಲ್ಯಗಳ ವಿಷಯದಲ್ಲಿ ಎಲ್ಲಿಯೂ ರಾಜಿಯಾಗದಂತಹ ವ್ಯಕ್ತಿತ್ವವನ್ನು ಇನ್ನು ಮುಂದೆ ಕಾಪಾಡಿಕೊಳ್ಳಲು ಸಾಧ್ಯವೇ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ. ಏಕೆಂದರೆ ಕೇರಳದ ಆರೆಸಸ್‌ನ ಮುಖವಾಣಿ ಪತ್ರಿಕೆ ಕೇಸರಿಯಲ್ಲಿ ಇತ್ತೀಚೆಗೆ ಬರೆದ ಒಂದು ಲೇಖನದಲ್ಲಿ ನಾಥುರಾಮ್ ಗೋಡ್ಸೆ ಗಾಂಧಿ ಬದಲಿಗೆ ನೆಹರೂವನ್ನು ಹತ್ಯೆ ಮಾಡಬೇಕಿತ್ತು ಎಂದು ಪ್ರತಿಪಾದಿಸಲಾಗಿದೆ. ನಂತರ ಈ ಲೇಖನವನ್ನು ಹಿಂತೆಗೆದುಕೊಳ್ಳಲಾಗುವುದೆಂದು ಘೋಷಿಸಿದರೂ ಆ ಭಾವನಾತ್ಮಕ ಮನಸ್ಥಿತಿ ಮಾತ್ರ ನಿಚ್ಛಳವಾಗಿದೆ. ಅಂದರೆ ನೆಹರೂ ಏನೋ ಬದುಕಿಕೊಂಡರು ಆದರೆ ನೆಹರೂ ಪ್ರತಿಪಾದಿಸಿದ ಮೌಲ್ಯಗಳು ಮತ್ತು ನೈತಿಕತೆಗಳು ತೀರಿಕೊಂಡವೇ?

ವಿಕೃತಗೊಂಡ ಸ್ವರೂಪಗಳಲ್ಲಿ ಸಾಮಾಜಿಕ ಸ್ಥಿತ್ಯಂತರಗಳು ನಮ್ಮ ಕಣ್ಣ ಮುಂದೆಯೇ ಘಟಿಸುತ್ತಿವೆ. ಪ್ರಾಣಿ ಹತ್ಯೆ ಮತ್ತು ಲವ್ ಜಿಹಾದ್‌ನಂತಹ ವಿಷಯಗಳನ್ನು ಪದೇ ಪದೇ ಎತ್ತಿಕೊಂಡು ಹಲ್ಲೆಗಳನ್ನು ನಡೆಸುವುದು ವ್ಯಕ್ತಿಸ್ವಾತಂತ್ರದ ಉಲ್ಲಂಘನೆ ಮತ್ತು ಅವಕಾಶಗಳ ನಿರಾಕರಣೆಗೆ ಉದಾಹರಣೆಗಳು ಮತ್ತು ಈ ದುಷ್ಕ್ರತ್ಯಗಳನ್ನು ನಡೆಸುತ್ತಿರುವವರು ವಿಶ್ವದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಹೊಂದಿದ ಸಂಘಟನೆಯ ಸದಸ್ಯರು ಎನ್ನುವ ಸತ್ಯ ನಾವು ಮತ್ತಷ್ಟು ಜಾಗರೂಕರಾಗಿರಬೇಕು ಎಂದು ಎಚ್ಚರಿಸುತ್ತದೆ.

ವಾಸ್ತವ ಸಂಗತಿಯೇನೆಂದರೆ ಭಾರತವು ಹಿಂದೂ ರಾಷ್ಟ್ರ ಮತ್ತು ಇನ್ನೊಂದು ರಾಷ್ಟ್ರ ಎನ್ನುವ ಎರಡು ದೇಶಗಳನ್ನು ಒಳಗೊಂಡಿದೆ ಎನ್ನುವ ನಂಬಿಕೆ ಮತ್ತು ಮೂಲಭೂತ ತತ್ವವನ್ನು ಬಿಜೆಪಿ ಮತ್ತು ಸಂಘ ಪರಿವಾರವು ಪ್ರತಿಪಾದಿಸುತ್ತಿವೆ. ಮಸಲ ಈ ವಿಷಯದಲ್ಲಿ ಬೆಜೆಪಿಯಲ್ಲಿ ಬಿರುಕು ಉಂಟಾದರೂ ಸಹಿತ ಸಂಘ ಪರಿವಾರದ ಭಯದ ಎಚ್ಚರಿಕೆಯ ಮೂಲಕ ಆ ಬಿರುಕಿಗೆ ಯಶಸ್ವಿಯಾಗಿ ತೇಪೆ ಹಚ್ಚಲಾಗಿದೆ. ಸಂಘ ಪರಿವಾರದಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹ ಮನಸ್ಥಿತಿ ಮತ್ತು ಚಿಂತನೆಗಳ ಏಕತಾನತೆಯ ಮೂಲಕ ಈ ಮಾದರಿಯ ಚಿಂತನೆಗಳು ಮತ್ತು ಅದರ ಯೋಜನೆಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ ಮತ್ತು ಮತ್ತು ರಾಜಕೀಯ ಔಚಿತ್ಯತೆ ಮತ್ತು ಪ್ರಯೋಜಕತೆಯ ಆಧಾರದ ಮೇಲೆ ಮುಂದುವರೆಯುತ್ತವೆ. ಬಿಜೆಪಿಗೆ ರಾಜಕೀಯ ಏಳಿಗೆಗಾಗಿ, bhagvat-gadkari-modiಲಾಭಕ್ಕಾಗಿ ಯಾವುದೇ ರಾಜ್ಯ ಅಥವಾ ನಗರವನ್ನ ಗುರುತಿಸಿಲಾಗಿದೆ ಎಂದರೆ ಆ ರಾಜ್ಯ ಮತ್ತು ನಗರದಲ್ಲಿ ಕೋಮು ಗಲಭೆಗಳು ನಿರಂತರವಾಗಿ ವೃದ್ಧಿಯಾಗುತ್ತವೆ. ತೀರಾ ಇತ್ತೀಚಿನ ಉದಾಹರಣೆಯೆಂದರೆ ದೆಹಲಿಯ ತ್ರಿಲೋಕಪುರಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಹುಟ್ಟುಹಾಕಲಾದ ಕೋಮು ಗಲಭೆಗಳು.ಮುಂದಿನ ಕೆಲವೇ ತಿಂಗಳುಗಳಲ್ಲಿ ದೆಹಲಿಯಲ್ಲಿ ಚುನಾವಣೆಗಳು ನಡೆಯುತ್ತವೆ. ದಲಿತರನ್ನು ಚುರುಕಾದ ಹಿಂದೂ ಏಜೆಂಟರಂತೆ ಬಳಸಿಕೊಂಡು ಮುಸ್ಲಿಂರು ನಮ್ಮೆಲ್ಲರಿಗೆ ಸಮಾನವಾದ ಶತೃ ಎನ್ನುವ ಚಿಂತನೆಯ ಮೂಲಕ ದಲಿತರು ವರ್ಸಸ್ ಮುಸ್ಲಿಂ ಎನ್ನುವ ಕಾಳಗದ ಅಖಾಡವನ್ನು ಸಜ್ಜುಗೊಳಿಸಲಾಗುತ್ತದೆ ಮತ್ತು ಮತ್ತಷ್ಟು ಗಟ್ಟಿಗೊಳಿಸಲಾಗುತ್ತದೆ. ೨೦೧೫ರಲ್ಲಿ ಬಿಹಾರ್ ರಾಜ್ಯದಲ್ಲಿ ಚುನಾವಣೆಗಳು ಜರುಗಲಿವೆ.ಆಗ ಆ ರಾಜ್ಯದಲ್ಲಿ ಕೋಮು ಗಲಭೆಗಳು ತೀವ್ರವಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಇನ್ನು ಪಶ್ಚಿಮ ಬಂಗಾಳ. ಅಲ್ಲಿ ಎಡ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಕಡೆಗೆ ವಲಸೆ ಹೋಗತೊಡಗಿದ್ದಾರೆ ಮತ್ತು ಈ ಪ್ರಕ್ರಿಯೆಯಿಂದಾಗಿ ಅಲ್ಲಿನ ಸಾಮಾಜಿಕ ವಲಯವು ಸಂಪೂರ್ಣವಾಗಿ ಏರುಪೇರಾಗುತ್ತಿದೆ. ತೃಣಮೂಲ ಕಾಂಗ್ರಸ್ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದರೆ ಆ ರಾಜ್ಯದಲ್ಲಿ ಬಾಂಬ್ ತಯಾರಿಕೆ ಮತ್ತು ಭಯೋತ್ಪಾದಕರ ಕುರಿತಾದ ಕೋಮುವಾದಿ ಸುದ್ದಿಗಳನ್ನು ದಿನನಿತ್ಯ ತೇಲಿಬಿಡಲಾಗುತ್ತಿದೆ. ಕಾಂಗ್ರೆಸ್ ಶೂನ್ಯದಲ್ಲಿ ಲೀನವಾಗುತ್ತಿದ್ದರೆ ಸಂಘ ಪರಿವಾರದ ಅಭಿವೃದ್ಧಿ ಸೂಚ್ಯಂಕ ಏರುಮುಖದಲ್ಲಿದೆ. ಶಾಂತಿವಾದದ ತತ್ವ ಎಂದೂ ಕಾಣೆಯಾಗಿದೆ ಮತ್ತು ನೆರೆಹೊರೆ ರಾಷ್ಟ್ರಗಳ ವಿರುದ್ಧ ೫೬ ಇಂಚಿನ ಎದೆಯನ್ನು ತಟ್ಟುವ ಪರಾಕ್ರಮದ ಅಭಿವ್ಯಕ್ತಿಯಿಂದ ರಾಜಕೀಯ ಲಾಭಗಳು ದ್ವಿಗುಣಗೊಳ್ಳತೊಡಗಿರುವುದಂತೂ ವಾಸ್ತವ.

ಹಾಗಿದ್ದಲ್ಲಿ ಮೋದಿಯ ಕಾಲದಲ್ಲಿ ನೆಹರೂ ಏನಾಗಬಹುದು? ಏಕಚಕ್ರಾಧಿಪತ್ಯದಲ್ಲಿ ಪ್ರತಿಮೆಗಳು ನೆಲಕ್ಕರುಳಿ ಆ ಬಿಡುಗಡೆಯ ಕ್ಷಣಗಳಲ್ಲಿ ಜನಸಾಮಾನ್ಯರು ಪರಸ್ಪರ ಮುಖಾಮುಖಿಯಾಗುವಂತಹ ಸಂದರ್ಭಗಳಾಗಲಿ, ಪ್ರತಿಮೆಗಳನ್ನು ಒಡೆದು ನೆಲಕ್ಕುರುಳಿಸುವ ಮತ್ತು ಐಕಾನ್‌ಗಳ ಮುಖಕ್ಕೆ ಮಸಿ ಬಳಿಯುವಂತಹ ನಾಟಕೀಯ ಬೆಳವಣಿಗೆಗಳಾಗಲಿ ಸದ್ಯಕ್ಕೆ ಗೋಚರಿಸುತ್ತಿಲ್ಲ.Nehru ಈ ನಾವೀನ್ಯ ಮಾದರಿಯ ಚುನಾವಣಾ ಪ್ರಜಾಪ್ರಭುತ್ವದ ಇಂದಿನ ಇಂಡಿಯಾದಲ್ಲಿ ಇತಿಹಾಸದ ವ್ಯಕ್ತಿಗಳನ್ನು ಬಳಸಿಕೊಂಡು ಸಮಕಾಲೀನ ಸಂದರ್ಭದಲ್ಲಿ ಉದ್ರೇಕಗೊಂಡ ಗುಂಡಿಗಳನ್ನು ಒತ್ತುವಂತಹ ಒಂದು ಬಗೆಯ ನವಮಾದರಿಯ ಪ್ರಕ್ರಿಯೆ ಸದ್ಯಕ್ಕೆ ಚಲಾವಣೆಯಲ್ಲಿದೆ. ಈ ಕಾಲವನ್ನು ಐಕಾನ್‌ಗಳನ್ನು ಉದ್ದೇಶಪೂರ್ವಕವಾಗಿ ತ್ವರಿತಗತಿಯಲ್ಲಿ ಸ್ವಾಧೀನಪಡಿಸಿಕೊಳ್ಳುವ, ಕೊಂಡುಕೊಳ್ಳುವ ಕಾಲಘಟ್ಟವೆಂದು ಖಚಿತವಾಗಿ ಕರೆಯಬಹುದು. ಮೋದಿ ಈ ಇತಿಹಾಸದ ಪ್ರತಿಯೊಂದು ವ್ಯಕ್ತಿಯನ್ನು ತಣ್ಣಗೆ ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಗಾಂಧಿಯನ್ನು ಇಂದು ಕೇವಲ ಒಂದು ಸ್ವಚ್ಛ ಭಾರತದ ಪ್ರಚಾರದ ಮಾಡೆಲ್ ಆಗಿ ಪರಿವರ್ತನೆಗೊಳಿಸಲಾಗಿದೆ. (ಇಲ್ಲಿ ಮೋದಿ ಮೊದಲಿಗರೇನಲ್ಲ. ಈ ಹಿಂದೆ ಅಡ್ವಾನಿಯವರು ತಮ್ಮನ್ನು ತಾವು ಆಧುನಿಕ ಲೋಹಪುರುಷ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದರು). ಬಲಿಪಶುಗಳಾಗಿರುವ ಸಾವಿರಾರು ಅಲ್ಪಸಂಖ್ಯಾತರ ಸ್ವಾಸ್ಥಕ್ಕಾಗಿ ಯಾವುದೇ ಯೋಜನೆಗಳನ್ನು ರೂಪಿಸದೇ ಮೌನವಾಗಿರುತ್ತಲೇ ಮಾಧ್ಯಮ ಮತ್ತು ರಾಷ್ಟ್ರವನ್ನು ೧೯೮೪ರ ಗಲಭೆಗಳಲ್ಲಿ ಹತರಾದ ಸಿಖ್ ಸಮುದಾಯಕ್ಕೆ ಪರಿಹಾರವನ್ನು ಕೊಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಮೋದಿ ಅತ್ಯಂತ ಚಾಣಾಕ್ಷತೆಯಿಂದ ವರ್ತಿಸಿದ್ದಾರೆ.

ಏರುಗತಿಯಲ್ಲಿರುವ ಬಹುಸಂಖ್ಯಾತ ತತ್ವವೂ ಇಂದು ನಮ್ಮೆದುರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂದರೆ ಹಿಂದೂ ರಾಷ್ಟ್ರದ ನಗಾರಿ ಬಡಿತವು ನೆಹರೂ ಅವರ ಸೆಕ್ಯುಲರಿಸಂ ಕನಸುಗಳ ಹಿಂದೆ ಅವಿತುಕೊಂಡಿದೆಯೇ? ಹೊರ ಬರಲು ಕಾಯುತ್ತಿದೆಯೇ? ೧೯೬೫ರಿಂದಲೂ ಇಂಡಿಯಾದ ರಾಜಕೀಯವನ್ನು ವರದಿ ಮಾಡುತ್ತಿರುವ ಮಾರ್ಕ ಟುಲಿ ಅವರು “ಈಗಲೇ ಭವಿಷ್ಯ ನುಡಿಯುವುದು ಕಷ್ಟವಾದರೂ ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಸೆಕ್ಯುಲರಿಸಂ ಪರಿಕಲ್ಪನೆಯನ್ನು ಬದಲಾಯಿಸಲು ನಿಶ್ಚಯಿಸಲಾಗಿದೆ. ಇದರ ಅರ್ಥ ಸೆಕ್ಯುಲರಿಸಂ ಸಾಯುತ್ತದೆ ಎಂದಲ್ಲ.” ಎನ್ನುತ್ತಾರೆ. ಮುಂದುವರೆದ ಟುಲಿ ಭಾರತದ ಮೊದಲ ಪ್ರಧಾನಿ ನೆಹರೂ ಮಾಡಿದ ತಪ್ಪನ್ನು ನರೇಂದ್ರ ಮೋದಿ ತನ್ನ ಅನುಕೂಲಕ್ಕೆ ತಕ್ಕಂತೆ ಸರಿಪಡಿಸಿಕೊಳ್ಳತ್ತಾರೆ ಎಂದು ವಿವರಿಸುತ್ತಾ “ಆಡಳಿತಾತ್ಮಕ ವಿಷಯದಲ್ಲಿ ನೆಹರೂ ಅವರು ಓಬಿರಾಯನ ಕಾಲದ ಬ್ರಿಟೀಷ್ ಮಾದರಿಯನ್ನು ಮುಂದುವರೆಸಿ ದೊಡ್ಡ ತಪ್ಪನ್ನೇ ಮಾಡಿದರು. ಹೀಗಾಗಿ ಬಾಬೂಗಳು ಜನರನ್ನು ಹೀಗೆಳೆದು ಮಾತನಾಡಿಸುವ ಕಲೋನಿಯಲ್ ವ್ಯವಸ್ಥೆಯಿಂದ ಇಂಡಿಯಾ ಹೊರಬರಲಿಲ್ಲ. ಮೋದಿಯು ಮತ್ತೇನಿಲ್ಲ, ಈ ಅಧಿಕಾರಿಶಾಹಿ ವರ್ಗ ಸರಿಯಾದ ವೇಳೆಗೆ ಕೆಲಸಕ್ಕೆ ಹಾಜರಾಗವಂತೆ ಮಾಡಿ ಇಡೀ ಬ್ಯೂರೋಕ್ರಾಸಿಯನ್ನು ಹದ್ದುಬಸ್ತಿನಲ್ಲಿಟ್ಟರೆ ಅದು ಮೋದಿಯು ಪ್ರಜಾಪ್ರಭುತ್ವವನ್ನು ಜಾರಿಗೊಳಿಸಿದಂತೆಯೇ” ಎಂದು ಹೇಳುತ್ತಾರೆ. ಆದರೆ ಮಾಜಿ ಸಂಪಾದಕ ಮತ್ತು ಪತ್ರಕರ್ತ ಕುಮಾರ್ ಕೇತ್ಕರ್ ಅವರು “ನೆಹರೂ ಅವರೊಂದಿಗೆ ಮೋದಿಯನ್ನು ಹೋಲಿಸುವುದು ದೈವನಿಂದನೆ ಎನಿಸಿಕೊಳ್ಳುತ್ತದೆ. ನೆಹರೂ ಒಬ್ಬ ದೂರದರ್ಶಿತ್ವವನ್ನುಳ್ಳ ದಾರ್ಶನಿಕರಾಗಿದ್ದರು. ಅವರನ್ನು ಅರ್ಥ ಮಾಡಿಕೊಳ್ಳುವುದೆಂದರೆ ಜಗತ್ತನ್ನೇ ಅರ್ಥ ಮಾಡಿಕೊಂಡಂತೆ. ನೆಹರೂ ಬರ್ನಾಡ್ ಷಾ ಮತ್ತು ಐನ್‌ಸ್ಟೀನ್ ಅವರೊಂದಿಗೆ ಸಂಭಾಷಿಸುತ್ತಿದ್ದರು. ಆದರೆ ಮೋದಿಯು ಈ ದೇಶದ ಅಧಿಕಾರವನ್ನು ಆವಾಹಿಸಿಕೊಳ್ಳುವ ಕೇವಲ ಒಬ್ಬ ಸಿಇಓ ಅಷ್ಟೆ. ನೆಹರೂ ಮೋದಿಯ ಮುಂದೆ ಆಸ್ತಿತ್ವದಲ್ಲಿ ಉಳಿದಾರೆಯೇ ಎನ್ನುವ ಪ್ರಶ್ನೆಯೇ ತುಂಬಾ ಬಾಲಿಶ. ಇಲ್ಲಿ ಈ ಪ್ರಶ್ನೆಯ ಅವಶ್ಯಕತೆಯೇ ಇಲ್ಲ” ಎಂದು ವಿವರಿಸುತ್ತಾರೆ.

ನೆಹರೂ ಅವರ ಪಕ್ಷ ಮತ್ತು ವಂಶ ಹಿಂದೆಂದಿಗಿಂತಲೂ ಹೆಚ್ಚಾಗಿ ನಾಶವಾಗಿ ಹೋಗಿದೆ. ಕಣ್ಮರೆಯಾಗುತ್ತಿದೆ. ರಾಹುಲ್ ಗಾಂಧಿಯ ರಾಜಕೀಯ ಸೋಲು ಮತ್ತು ರಾಬರ್ಟ ವಧೇರನ ಅನಾಕರ್ಷಕ ವ್ಯಕ್ತಿತ್ವ ಮಾತ್ರ ಇಂದು ಉಳಿದುಕೊಂಡಿವೆ. ಭವಿಷ್ಯದಲ್ಲಿ ನಿರಂತರ ಸೋಲನ್ನು ದಿಟ್ಟಿಸುತ್ತಿರುವ ನೆಹರೂ ಅವರ ಈ ಪಕ್ಷಕ್ಕೆ ಗೆಲುವೆನ್ನುವುದು ಮರೀಚಿಕೆಯಾಗಿದೆ. (ಒಂದಂತೂ ನಿಜ. ಒಂದು ವಂಶದ ಸದಸ್ಯರ ಹೆಸರಿನ ಕಟ್ಟಡಗಳು, ಯೋಜನೆಗಳು, ಅವಾರ್ಡಗಳು ಇನ್ನು ಮುಂದೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ನೆಹರೂ ಬೆಂಬಲಿಗರೂ ಸಹ ಈ ಬೆಳವಣಿಗೆಯಿಂದ ಖುಷಿಯಾಗಿದ್ದಾರೆ). ಅಷ್ಟೇಕೆ, ಇತ್ತಿಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವೂ ಸಹ ನೆಹರೂ ಅವರನ್ನು ದೊಡ್ಡ ಮಟ್ಟದಲ್ಲೇನು ಬಳಸಿಕೊಳ್ಳುತ್ತಿರಲಿಲ್ಲ. ಬಿಜೆಪಿಯ ಪ್ರಮುಖರೊಬ್ಬರು ನೆಹರೂ ಇಂಡಿಯಾ ದೇಶವನ್ನು ಕಟ್ಟಿದ ಶಿಲ್ಪಿಗಳಲ್ಲೊಬ್ಬರು ಎಂದು ಇಂದಿಗೂ ಗುರುತಿಸುತ್ತಾರೆ. ಆರೆಸಸ್ ಪ್ರತಿಯೊಂದು ನಡೆಯನ್ನು ವಿರೋಧಿಸುತ್ತದ್ದ ನೆಹರೂ ಲೆಗಸಿಯನ್ನು ಅಳಸಿ ಹಾಕುವುದು ಸುಲಭವಲ್ಲ. ಅದನ್ನು ಉದ್ದೇಶಪೂರ್ವಕವಾಗಿಯೂ ಸಾಧಿಸುವುದು ಕಷ್ಟ ಎಂದು ಹೇಳುತ್ತಾರೆ. ಬಹುಶ ಸರ್ದಾರ್ ಪಟೇಲ್ ನೆಹರೂ ಅವರನ್ನು ಎದುರಿಸಲು ಉತ್ತಮ ಆಯ್ಕೆ ಏನೋ ಎಂದು ಸಹ ಒಪ್ಪಿಕೊಳ್ಳುತ್ತಾರೆ. ಗಾಂಧಿಯನ್ನು ಇಂದಿಗೂ ದೇಶವು ಐಕಾನ್ ಆಗಿ, ನಿಜದ ದೇಶಭಕ್ತನೆಂದು ಪೂಜಿಸುತ್ತಿದೆ ಆದರೆ ದೇಶದ ಯಾವುದೇ ರಾಜ್ಯವು, ಪಕ್ಷವು 200px-MKGandhi[1]ಗಾಂಧೀವಾದವನ್ನು ಆಚರಿಸುತ್ತಿಲ್ಲ, ಬೆಳಸುತ್ತಿಲ್ಲ. ಒಂದು ದೇಶವಾಗಿ ನಾವು ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ನಮ್ಮನ್ನು ರೂಪಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲಬೇಕು. ನೆಹರೂ ಮಾದರಿಯ ಸೋಷಿಲಿಸಂ ಎನ್ನುವ ಐಡಿಯಾಲಜಿಗಳ ಸ್ತಂಭಗಳನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ೧೯೪೭ರಿಂದ ೧೯೬೪ರವರೆಗೆ ಪ್ರಧಾನಿಯಾಗಿದ್ದ ನೆಹರೂ ನಮ್ಮ ಈ ದೇಶವು ಒಂದು ಕಾಲೋನಿಯ ವ್ಯವಸ್ಥೆಯಿಂದ ಸದೃಢ ಪ್ರಜಾಪ್ರಭುತ್ವ ದೇಶವಾಗಿ ರೂಪುಗೊಂಡಿದ್ದನ್ನು ನೆಹರೂ ಸಾಕ್ಷೀಕರಿಸಿದ್ದರು. ಆ ಬೆಳವಣಿಗೆಯ ಹಂತಗಳನ್ನು ನೀರೆರೆದು ಪೋಷಿಸಿದರು. ನಾವು ಕಲೋನಿಯೋತ್ತರ ಜಗತ್ತನ್ನು ಗಮನಿಸಿದಾಗ ಅನೇಕ ಕಲೋನಿಯಲ್ ದೇಶಗಳು ಸ್ವಾತಂತ್ರಗೊಂಡು ಪ್ರಜಾಪ್ರಭುತ್ವದ ಹತ್ತಿರಕ್ಕೆ ಬಂದು ಮರಳಿ ಸರ್ವಾಧಿಕಾರಕ್ಕೆ ಜಾರಿಕೊಂಡಿದ್ದನ್ನು ಕಾಣುತ್ತೇವೆ. ಆದರೆ ನೆಹರೂ ಅವರ ೧೭ ವರ್ಷಗಳ ಆಡಳಿತ ಇಂಡಿಯಾ ದೇಶ ಸರ್ವಾಧಿಕಾರಕ್ಕೆ ತೆವಳಲೂ ಸಹ ಅವಕಾಶ ಮಾಡಿಕೊಡಲಿಲ್ಲ ಬದಲಾಗಿ ಎಲ್ಲಾ ಇನ್ಸಿಟ್ಯೂಟ್‌ಗಳನ್ನು ವ್ಯವಸ್ಥಿತವಾಗಿಟ್ಟರು.

ಹೀಗಿದ್ದಲ್ಲಿ ಬಿಜೆಪಿ ಪಕ್ಷವು ನೆಹರೂ ಅವರನ್ನು ಹೇಗೆ ಎದುರುಗೊಳ್ಳುತ್ತದೆ? ಆರೆಸಸ್‌ನ ಮುಖವಾಣಿ ಪತ್ರಿಕೆಯ ಮಾಜಿ ಸಂಪಾದಕ ಶೇಷಾದ್ರಿಚಾರಿ ಅವರು “ನಾವು ನೆಹರೂ ಅವರ ವಿರೋಧಿಗಳೆಂದು ಊಹಿಸಲೂ ಸಾಧ್ಯವಿಲ್ಲ. ಇಂಡಿಯಾದ ಎಲ್ಲ ಐಕಾನ್ ಗಳನ್ನು ನಾವು ಗೌರವಿಸುತ್ತೇವೆ. ಗಾಂಧಿಯಿಂದ ಪಟೇಲ್ ವರೆಗೆ ಮತ್ತು ಮನ್ನಣೆಗಳನ್ನು ನಿರಾಕರಿಸಲ್ಪಟ್ಟ ಪ್ರಾಂತೀಯ ನಾಯಕರನ್ನು ಸಹ ನಾವು ಗೌರವಿಸುತ್ತೇವೆ” ಎಂದು ಹೇಳುತ್ತಾರೆ.

ಆದರೆ ಮೋದಿಯು ಎಲ್ಲಾ ಬಗೆಯ ವಿರೋಧಾಭಾಸಗಳನ್ನು ತಮಗೆ ಅನುಕೂಲಕರವಾಗುವಂತೆ ರೂಪಿಸಿಕೊಳ್ಳುವಲ್ಲಿ ನುರಿತರಾಗಿದ್ದಾರೆ. ಮೋದಿಯು ಪುರಾಣಗಳ ಮಹತ್ವವನ್ನು ಹೊಗಳುತ್ತಾ ಹಿಂದೂ ಸನಾತನ ಧರ್ಮವನ್ನು ಪ್ರತಿಪಾದಿಸುತ್ತಿದ್ದರೂ ಸಹ ಸಮಾಜದ ಒಂದು ವರ್ಗವು ಮೋದಿಯನ್ನು ಅಭಿವೃದ್ಧಿಯ ಮತ್ತು ಆಧುನಿಕತೆಯ ಸಂಕೇತವೆಂದು ಪರಿಗಣಿಸುತ್ತದೆ

ಇತಿಹಾಸಕಾರ, ಚಿಂತಕ ಮುಶ್ರಲ್ ಹಸನ್ ಅವರು “ಇಂದಿನ ದಿನಗಳಲ್ಲಿ ಪಟೇಲ್ ಅವರನ್ನು ಅಬ್ಬರದಿಂದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ನೆಹರೂ ಅವರನ್ನು ಗೌಣಗೊಳಿಸಲು. ನೆಹರೂವಿಯನ್ ಲೆಗಸಿಯನ್ನು ತ್ಯಜಿಸಲಾಗುತ್ತಿದೆ. ಇತಿಹಾಸದ ಒಂದು ಐಕಾನ್ ಅನ್ನು ಮತ್ತೊಂದು ಐಕಾನ್‌ನ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಆ ಮೂಲಕ ಹೊಸ ಇತಿಹಾಸವನ್ನೇ ಕಂಡು ಹಿಡಿಯಲಾಗುತ್ತದೆ” ಎಂದು ಹೇಳುತ್ತಾರೆ. ಆದರೆ ಬಿಜೆಪಿ ಪಕ್ಷಕ್ಕೆ ಹಿಂದೂಯಿಸಂನ ಐಡಿಯಾಲಜಿಯ ಮಿತಿಗಳು ಮತ್ತು ಅದರ ಕುಂಠಿತಗೊಂಡ ಪ್ರಭಾವದ narender_modi_rssಕುರಿತಾಗಿ ಅರಿವಿದೆ. ಹೀಗಾಗಿಯೇ ಪಾನ್-ಇಂಡಿಯಾ ಇಕಾನ್‌ಗಳನ್ನು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ೨೦೧೪ರ ಚುನಾವಣೆಯಲ್ಲಿ ಗೆದ್ದು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾದ ಬಿಜೆಪಿಯ ದೇವೇಂದ್ರ ಫಡ್ನಿಸ್ ಒಬ್ಬ ಆರೆಸಸ್ ಸ್ವಯಂಸೇವಕ. ಕಟ್ಟಾ ಆರೆಸಸ್. ಭ್ರಾಹ್ಮಣ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡುತ್ತ ಅಪ್ಪಿತಪ್ಪಿ ಆರೆಸಸ್‌ನ ಸ್ಥಾಪಕರಾದ ಗೋಳ್ವಲ್ಕರ್, ಸಾವರ್ಕರ್, ಹೆಡ್ಗೇವಾರ್ ಇವರನ್ನು ನೆನೆಸಿಕೊಳ್ಳಲೇ ಇಲ್ಲ. ಬದಲಾಗಿ ಅಂಬೇಡ್ಕರ್, ಜೋತಿಬಾ ಫುಲೆ ಅವರನ್ನು ಉದಾಹರಿಸಿದರು. ದೆಹಲಿಯ ಪಾಲಿಸಿ ಸಂಶೋಧನ ಕೇಂದ್ರದ ಅಧ್ಯಕ್ಷರಾದ ಪ್ರತಾಪ್ ಬಾನು ಮೆಹ್ತ ಅವರು “ಇತಿಹಾಸದ ವ್ಯಕ್ತಿಗಳನ್ನು ಕೇವಲ ಐಕಾನ್‌ಗಳ ಮಟ್ಟಕ್ಕೆ ಇಳಿಸಿ ಅವರ ಕುರಿತಾದ ನಿಜವಾದ ಸಂವಾದವನ್ನು ಕಡೆಗಣಿಸುತ್ತಿದ್ದೇವೆ ಮತ್ತು ಇದರ ಕುರಿತಾದ ಚರ್ಚೆಗಳು ಉಸಿರುಗಟ್ಟಿಸುತ್ತವೆ. ನೆಹರೂ ಮತ್ತು ಗಾಂಧಿಯ ನಡುವೆ ಅಪಾರ ಭಿನ್ನಾಭಿಪ್ರಾಯಗಳಿದ್ದರಿಬಹುದು. ನೆಹರೂ ಮತ್ತು ಪಟೇಲ್ ಒಟ್ಟಾಗಿ ಕಾರ್ಯ ನಿರ್ವಹಿಸಲೂ ಸಾಧ್ಯವಿರಲಿಲ್ಲ. ಇಂದು ಸೆಕ್ಯುಲರ್ ಯುಟೋಪಿಯ ಮತ್ತು ಸೆಕ್ಯುಲರಿಸಂನ ಆಚರಣೆ ಬಳಕೆಯಲ್ಲಿದೆ. ನಿಜಕ್ಕೂ ನೆಹರೂ ಅವರು ಇಂಡಿಯಾದ ಸೆಕ್ಯುಲರಿಸಂನ ಬಲು ದೊಡ್ಡ ಪ್ರವರ್ತಕರು. ಆದರೆ ಕಾಂಗ್ರೆಸ್ ಪಕ್ಷವು ಇಂಡಿಯಾ ದೇಶವನ್ನು ಎರಡು ಸಮುದಾಯಗಳ ಗಣರಾಜ್ಯವೆಂದು ನಂಬಿತ್ತು. ಹಿಂದೂ ರಾಷ್ಟ್ರವನ್ನು ಇತಿಹಾಸದ ಹಿನ್ನೆಲೆಯಲ್ಲಿ ನೋಡುವ ತಪ್ಪನ್ನು ನಾವು ಮಾಡಬಾರದು” ಎಂದು ಬರೆಯುತ್ತಾರೆ.

ತಮ್ಮ ಭಾಷಣದ ಕೊನೆಯ ಭಾಗದಲ್ಲಿ ನೆಹರೂ ಅವರು ಹೇಳುತ್ತಾರೆ, “ತಮ್ಮ ಚಿಂತನೆಗಳಲ್ಲಿ ಮತ್ತು ಆಚರಣೆಗಳಲ್ಲಿ ಸಂಕುಚಿತ ಮನೋಭಾವವುಳ್ಳ ಜನರರಿರುವ ದೇಶವು ನಿಜಕ್ಕೂ ಗ್ರೇಟ್ ದೇಶವಲ್ಲ.” ಇದು ಅತ್ಯಂತ ಶಕ್ತಿಯುತವಾದ ಸಂದೇಶವೆಂದೇ ಹೇಳಬಹುದು. ಇದು ತನ್ನ ಸರಳತೆ ಮತ್ತು ತರ್ಕದಲ್ಲಿ ವಿಶ್ವರೂಪಿಯಾಗಿದೆ. ಇದಕ್ಕಾಗಿಯೇ ನೆಹರೂ ಅವರನ್ನು ನೆಲಸಮಗೊಳಿಸಲು ಕಷ್ಟ. ಪ್ರತಿಮೆಗಳನ್ನು ಧ್ವಂಸಗೊಳಿಸಿ ನೆಲಕ್ಕುರುಳಿಸಬಹುದು, ಆದರೆ ವಿಚಾರಗಳು ಜೀವಂತವಾಗಿರುತ್ತವೆ.

ಬಲಿಷ್ಠ ಯಜಮಾನ್ಯ ವ್ಯವಸ್ಥೆ : ಪ್ರತಿರೋಧದ ಮಾಡೆಲ್ ಗಳಾವುವು?


– ಬಿ. ಶ್ರೀಪಾದ ಭಟ್


ಅದು ಎಂಬತ್ತರ ದಶಕದ ಆರಂಭದ ವರ್ಷಗಳು. ಕರ್ನಾಟಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತದಿಂದ rape-illustrationಚುನಾವಣೆಯಲ್ಲಿ ಸೋಲನ್ನನುಭವಿಸಿ ರಾಮಕ್ರಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷವೆನ್ನುವ ಜನಪ್ರಿಯ ಸರ್ಕಾರವು ಆಡಳಿತದಲ್ಲಿತ್ತು. ಆಗ ರಾಯಚೂರು ಜಿಲ್ಲೆಯಲ್ಲಿನ ಕುದುರೆಮೋತಿ ಸ್ವಾಮಿ ಎನ್ನುವ ಲಿಂಗಾಯಿತ ಮಠಾದೀಶರೊಬ್ಬರು ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಈ ದುಷೃತ್ಯವು ಬಹಿರಂಗಗೊಂಡು ರಾಜ್ಯಾದ್ಯಾಂತ ಪ್ರತಿಭಟನೆಗಳು ನಡೆದವು. ಹೋರಾಟಗಾರರ ಒತ್ತಾಯಕ್ಕೆ ಮಣಿದ ಆಗಿನ ಹೆಗಡೆ ಸರ್ಕಾರ ತನಿಖೆಗಾಗಿ ಒಂದು ಸದನ ಸಮಿತಿಯನ್ನು ನೇಮಿಸಿತ್ತು. ಆದರೆ ಎಂತಹ ವೈರುಧ್ಯವೆಂದರೆ ಆರು ಮಂದಿ ಶಾಸಕರ ಸಮಿತಿಯಲ್ಲಿ ಐವರು ಸದಸ್ಯರು ಲಿಂಗಾಯಿತ ಜಾತಿಗೆ ಸೇರಿದವರಾಗಿದ್ದರು. ಅಲ್ಲಿಗೆ ಆ ಸದನ ಸಮಿತಿಯ ಹಣೆಬರಹವೇ ಹೆಚ್ಚೂ ಕಡಿಮೆ ನಿರ್ಧಾರವಾದಂತಾಯ್ತು. ಇನ್ನು ಅದರ ವರದಿಯ ಕುರಿತಾಗಿ ಪ್ರಜ್ಞಾವಂತರಲ್ಲಿ ಆಸಕ್ತಿಯೇ ಉಳಿಯಲಿಲ್ಲ. ಜಾತಿ ಎನ್ನುವುದು ಹೇಗೆ ಬಹಿರಂಗವಾಗಿ ಪ್ರಭಾವಿಸುತ್ತದೆ ಮತ್ತು ಅದೇ ಸಂದರ್ಭದಲ್ಲಿ ಅಂತರ್ಗತವಾಗಿಯೂ ಪ್ರವಹಿಸುತ್ತಿರುತ್ತದೆ ಎಂದು ಆಗ ವಿದ್ಯಾರ್ಥಿಗಳಾಗಿದ್ದ ನಮಗೆಲ್ಲಾ ಗೊತ್ತಾಗಿತ್ತು.

ಅನೇಕ ಮಠಾಧೀಶರ ಮೇಲೆ ಈ ಬಗೆಯ ಲೈಂಗಿಕ ದೌರ್ಜನ್ಯಗಳ ಆರೋಪಗಳು ಹೊಸದಲ್ಲವೆನ್ನುವಂತೆಯೇnithyananda_2 ಎಲ್ಲಾ ಬಲಿಷ್ಠ ಜಾತಿಗಳ ಭಕ್ತರು ತಮ್ಮ ತಮ್ಮ ಜಾತಿ ಮಠಗಳ ಸ್ವಾಮಿಗಳ ಕುರಿತಾಗಿ ಬೇಕೆಂತಲೇ ಮುಗ್ಧರಾಗಿ ವರ್ತಿಸುತ್ತಿರುತ್ತಾರೆ. ಸ್ನೇಹಿತರೊಬ್ಬರು ಹೇಳುತ್ತಿದ್ದರು “ಪ್ರತಿಯೊಂದು ಮಠದಲ್ಲಿನ ಖಾಸಗಿ ಕೋಣೆಯಲ್ಲಿ ಒಂದು ತೊಟ್ಟಿಲಿರುತ್ತದೆ. ಎಲ್ಲವನ್ನೂ ಪರಿತ್ಯಜಿಸಿದ್ದೇವೆ ಎಂದೇ ಬೊಗಳೆ ಬಿಡುವ ಹಲವಾರು ಸ್ವಾಮಿಗಳು ಖಾಸಗಿಯಾಗಿ ಮತ್ತು ಗುಟ್ಟಾಗಿ ಸಂಸಾರಗಳನ್ನು ನಡೆಸುತ್ತಿರುವ ವಿಚಾರಗಳೂ ಆಯಾ ಭಕ್ತರಿಗೂ ಗೊತ್ತಿರುತ್ತದೆ. ಮತ್ತು ಆ ಮಠದ ಸುತ್ತಮುತ್ತಲಿನ ಸಮಾಜಕ್ಕೂ ಗೊತ್ತಿರುತ್ತದೆ. ಅನೇಕ ಸ್ವಾಮಿಗಳ ಲೈಂಗಿಕ ಅತ್ಯಾಚಾರಗಳೂ ಈ ಭಕ್ತರಿಗೆ, ಸಮಾಜಕ್ಕೆ ಗೊತ್ತಿರುತ್ತದೆ. ಆದರೆ ಆ ಸ್ವಾಮಿಯು ಬದುಕಿರುವುವರೆಗೂ ಯಾರೂ ಇದರ ಕುರಿತಾಗಿ ಬಾಯ್ಬಿಡುವುದಿಲ್ಲ. ನಿಗೂಢವಾಗಿ ಜಾಣ ಕಿವುಡು, ಜಾಣ ಕುರುಡರಂತೆ ವರ್ತಿಸುತ್ತಿರುತ್ತಾರೆ. ಸತ್ತ ನಂತರ ನೋಡಿದಿರಾ ದೇವರು ಇಂತಹವರನ್ನು ಕ್ಷಮಿಸುವುದಿಲ್ಲ ಎಂದು ಆಡಿಕೊಳ್ಳುತ್ತಾರೆ!! ಕಡೆಗೂ ಈ ಭಕ್ತರು ಮತ್ತು ಸಮಾಜ ಸ್ವಾಮಿಯನ್ನು ದೂಷಿಸುವುದಿಲ್ಲ ಬದಲಾಗಿ ದೇವರ ಮಹಿಮೆಯನ್ನು ಕೊಂಡಾಡುತ್ತಾರೆ”.

ಇಡೀ ಭಕ್ತ ಸಮೂಹವನ್ನೇ ಧಾರ್ಮಿಕತೆಯ, ಜಾತಿಯ ಹೆಸರಿನಲ್ಲಿ ಮಾನಸಿಕವಾಗಿ ತಮ್ಮ ಅಡಿಯಾಳಾಗಿಸಿಕೊಳ್ಳುವ ಅನೇಕ ಮಠಾಧೀಶರು ಇದೇ ಜಾತಿ ಮತ್ತು ಹಣದ ಬಲದಿಂದ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಹಂಗಿನಲ್ಲಿರಿಸಿಕೊಂಡಿರುತ್ತಾರೆ. ಜಾತಿ, ಧರ್ಮ, ಹಣದ ಈ ಚಕ್ರವ್ಯೂಹವು ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಆದರೆ ಅದರ ಒಳಸುಳಿಗಳು ಅರ್ಥವಾಗಿರುವುದಿಲ್ಲ. ಇತ್ತೀಚಿನ ಈ ಹವ್ಯಕ ಮಠದ ಸ್ವಾಮಿ ರಾಘವೇಶ್ವರ ವಿರುದ್ಧ ಇರುವ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಅದರ ಒಟ್ಟಾರೆ ಇತಿಹಾಸ ಮತ್ತು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ವಿದ್ಯಾಮಾನಗಳು ಮೇಲಿನ ಸಂಗತಿಗಳಿಗೆ ಸಾಕ್ಷಿಯಾಗಿವೆ.

ರಾಮಚಂದ್ರಾಪುರ ಮಠದ ಸ್ವಾಮಿ ರಾಘವೇಶ್ವರರು ಗೋಸ್ವಾಮಿಗಳೆಂದೇ ಪ್ರಸಿದ್ಧಿ ಹೊಂದಿದ್ದಾರೆ. ಈ ಸ್ವಾಮಿಯ ಗೋರಕ್ಷಣೆಯ ಹೆಸರಿನ ಅನ್ಯ ಧರ್ಮದ ವಿರುದ್ಧದ ಪ್ರಚೋದನಾತ್ಮಕ ಕಾರ್ಯಕ್ರಮಗಳು ಸ್ವಜಾತಿ ಭಕ್ತರ ಸುಪ್ತಪ್ರಜ್ಞೆಯೊಳಗೆ ಆಳವಾಗಿ ಬೇರೂರಿರುವ Raghweshwara_Bharathi_gurujiಧಾರ್ಮಿಕತೆಯ ಅಮಾನವೀಯ ನಂಬಿಕೆಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾದವು. ಈ ಬಗೆಯ ಧಾರ್ಮಿಕ ಪ್ರಲೋಭನೆಯ ಮೂಲಕವೇ ರಾಘವೇಶ್ವರ ಸ್ವಾಮಿ ಕ್ಷಿಪ್ರಗತಿಯಲ್ಲಿ ಬ್ರಾಹ್ಮಣ ಭಕ್ತರ ನಡುವೆ ಜನಪ್ರಿಯನಾಗಿಬಿಟ್ಟರು. ಈ ಜನಪ್ರಿಯತೆಯನ್ನು ನಂಬಿ ರಾಘವೇಶ್ವರ ಸ್ವಾಮಿ ಯಡಿಯೂರಪ್ಪವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗೋಕರ್ಣೇಶ್ವರ ಮಠವನ್ನು ವಶಪಡಿಸಿಕೊಳ್ಳುವ ವಿಫಲ ಪ್ರಯತ್ನಕ್ಕೆ ಕೈ ಹಾಕಿದ್ದರು. ಸ್ವತ ಬ್ರಾಹ್ಮಣ ಸಮಾಜದ ಇತರೇ ಮಠಾಧೀಶರು ಅಸೂಯೆ ಪಡುವಷ್ಟು ರಾಘವೇಶ್ವರ ಸ್ವಾಮಿ ತನ್ನ ಬುಡವನ್ನು ಭದ್ರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಮತ್ತು ಆ ಇಡೀ ಪ್ರಕ್ರಿಯೆಯು ಕಾನೂನಿನ ಆಶಯಕ್ಕೆ ಅನುಗುಣವಾಗಿ ತನಿಖೆಗೆ ಅರ್ಹವಾಗಿದೆ. ಸದರಿ ಸ್ವಾಮಿಯು ಇತರೇ ಬಹುತೇಕ ಬ್ರಾಹ್ಮಣ ಮಠಗಳ ಸ್ವಾಮಿಗಳಂತೆಯೇ ಸಂಘ ಪರಿವಾರದೊಂದಿಗೆ ನಿಕಟ ಭಾಂದವ್ಯವನ್ನು ಹೊಂದಿದ್ದರೆ. ತಾವೆಲ್ಲಾ ಹಿಂದೂ ಧರ್ಮೋಧ್ಧಾರಕರು ಎಂದೇ ನಂಬಿರುವ, ಸನಾತನ ಪರಂಪರೆ, ಬ್ರಾಹ್ಮಣ್ಯದ ಯಜಮಾನ್ಯ ಮತ್ತು ಶ್ರೇಣಿಕೃತ ವರ್ಣಾಶ್ರಮದ ಸಮಾಜವನ್ನು ಭವ್ಯ ಭಾರತದಲ್ಲಿ ಮರಳಿ ಪ್ರತಿಷ್ಠಾಪಿಸಲು ಕಂಕಣಬದ್ಧರಾಗಿರುವ, ಜೀವ ವಿರೋಧಿ ಲೋಕದೃಷ್ಟಿಯನ್ನು ಹೊಂದಿರುವ ವಿವಿಧ ಮಠಗಳ ಬಹುಪಾಲು ಬ್ರಾಹ್ಮಣ ಸ್ವಾಮಿಗಳು ಇದಕ್ಕಾಗಿ ಸಂಘ ಪರಿವಾರವನ್ನು ಸಂಪೂರ್ಣವಾಗಿ ಆಶ್ರಯಿಸಿದ್ದಾರೆ. ನೇರವಾಗಿಯೇ ಬಲಪಂಥೀಯ ರಾಜಕಾರಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಅನೇಕ ಭಾರತೀಯರಿಗಿಂತಲೂ ಸದರಿ ಸ್ವಾಮಿಗಳಿಗೆ ಬಲಪಂಥೀಯ ರಾಜಕೀಯದ ಸಿದ್ಧಾಂತಗಳು ಚೆನ್ನಾಗಿ ಗೊತ್ತಿದೆ. ಇಡೀ ಬಿಜೆಪಿಯನ್ನು ಸನಾತನವಾದಿ ಧಾರ್ಮಿಕತೆಗೆ ಗಂಟು ಹಾಕುವಲ್ಲಿ ದೇಶಾದ್ಯಾಂತ ಹರಡಿರುವ ಅನೇಕ ಬ್ರಾಹ್ಮಣ ಸ್ವಾಮಿಗಳ ಪಾಲು ಸಾಕಷ್ಟಿದೆ. ಆದರೆ ದುರಂತವೆಂದರೆ ನ್ಯಾಯ, ನೀತಿಯ ಕುರಿತಾಗಿ ನಿರರ್ಗಳವಾಗಿ ಮಾತನಾಡುವ ಬಿಜೆಪಿಯ ಅಭಿಮಾನಿ ವಿದ್ಯಾವಂತರು ಮೇಲಿನ ಸಂವಿಧಾನ ವಿರೋಧಿ ಸ್ವರೂಪಗಳ ಕುರಿತು ಕಿಂಚಿತ್ತೂ ಬಾಯ್ಬಿಡುವುದಿಲ್ಲ. ಮತ್ತು ಇತರೇ ಪಕ್ಷಗಳ ರಾಜಕಾರಣಿಗಳು ಸಹ ಜಾತಿ ಮತ್ತು ಹಣದ ಕಾರಣಕ್ಕಾಗಿ ಈ ಸ್ವಾಮಿಗಳೊಂದಿನೆ ನೇರವಾಗಿ ಅಥವಾ ಪರೋಕ್ಷವಾಗಿ ಪಕ್ಷಾತೀತರಾಗಿ ಗುರುತಿಸಿಕೊಂಡಿರುತ್ತಾರೆ.

ಧರ್ಮ ಮತ್ತು ಜಾತಿ ಅಂತಿಮವಾಗಿ ಸಮಾಜ ಮತ್ತು ರಾಜಕೀಯವನ್ನು ನಿಯಂತ್ರಿಸಬೇಕು ಎನ್ನುವ ಉದ್ದೇಶವನ್ನು ಹೊಂದಿರುವ ಬಹುಪಾಲು ಬ್ರಾಹ್ಮಣ ಮಠಾಧೀಶರು ಬ್ರಾಹ್ಮಣದ ವೈದಿಕತೆಯ ಶ್ರೇಷ್ಠತೆಯ ಗರ್ವ ಆ ಮೂಲಕ ಅಸಮಾನತೆ, ತಾರತಮ್ಯ, ಪ್ರತ್ಯೇಕತೆ ಮತ್ತು ಜಾತಿ ಕ್ರೌರ್ಯವನ್ನು ಸದಾ ಹಿಂದೂ ಧರ್ಮದ ಮುಂಚೂಣಿಯಲ್ಲಿ ಪ್ರತಿಷ್ಠಾಪಿಸಬೇಕೆಂದು ಅನೇಕ ಬ್ರಾಹ್ಮಣ ಮಠಾದೀಶರು ಬಹಿರಂಗವಾಗಿಯೇ ಪ್ರಚಾರ ಮಾಡುತ್ತಾ ತಮ್ಮ ಜಾತಿ, ಉಪಪಂಗಡಗಳೊಳಗೆ ಪ್ರಭಾವಶಾಲಿಗಳಾಗಿ ಬೆಳೆಯುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಹ ಬಹಿರಂಗವಾಗಿ ಈ ಸ್ವಾಮಿಗಳೊಂದಿಗೆ ಗುರುತಿಸಿಕೊಂಡಿರುವುದು ಇಡೀ ವ್ಯವಸ್ಥೆಯಲ್ಲಿ ಎಲ್ಲಾ ಬಗೆಯ ಕಾನೂನು, ಕಟ್ಟಳೆ, ನಿಯಮಗಳಿಗೆ ಅತೀತರಾದ ಅತ್ಯಂತ ಬಲಿಷ್ಠವಾದ ಯಜಮಾನ್ಯದ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ಕಾರಣವಾಗಿದೆ. ಇಲ್ಲಿ ಕೇವಲ ಬ್ರಾಹ್ಮಣದ ಮಠಾಧೀಶರು ಮಾತ್ರವಲ್ಲ, ಈ ರಾಜ್ಯದ ಎಲ್ಲಾ ಬಲಿಷ್ಠ ಜಾತಿಯ ಮಠಾದೀಶರೂ ಸಹ ಈ ಸಂವಿಧಾನ ವಿರೋಧಿ ಯಜಮಾನ್ಯದ ಭಾಗವಾಗಿಯೇ ನೆಲೆಗೊಂಡಿದ್ದಾರೆ. ಈ ಯಜಮಾನ್ಯವನ್ನು ಸಂವಿಧಾನಬದ್ಧವಾಗಿ ವಿರೋಧಿಸಿ ಈ ನೆಲದ ಕಾನೂನಿಗೆ ನೀವೆಲ್ಲರೂ ಒಳಪಡುತ್ತೀರಿ ಎಂದು ಪ್ರಜ್ಞಾವಂತರು ಪ್ರತಿರೋಧ ತೋರಿಸಿದರೆ ಅಲ್ಲಿಗೆ ಆ ಪ್ರಜ್ಞಾವಂತರಿಗೆ ಕೇಡುಗತಿ ಬಂದಿದೆಯೆಂದೇ ಅರ್ಥ.

ತೀರಾ ಇತ್ತೀಚೆಗೆ ಬೆಂಗಳೂರಿನ ಆರ್ಕಿಡ್ ಶಾಲೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಅಲ್ಲಿನ ಶಿಕ್ಷಕ ಗುಂಡಪ್ಪ ಎನ್ನುವವರನ್ನು ಬಂಧಿಸಲಾಯಿತು. ಕೆಲವು ತಿಂಗಳ ಹಿಂದೆ ಮತ್ತೊಂದು ಶಾಲೆಯಲ್ಲಿ ಇದೇ ಲೈಂಗಿಕ ದೌರ್ಜನ್ಯದ ಆರೋಪದ ಅಡಿಯಲ್ಲಿ ಜೈಶಂಕರ್ ಎನ್ನುವ ಶಿಕ್ಷಕನನ್ನು ಬಂಧಿಸಲಾಯಿತು. ಆದರೆ ದುದುಷ್ಟವಶಾತ್ ಮೇಲಿನ ಬಲಿಷ್ಠraghava_swamiji ಯಜಮಾನ್ಯದ ವ್ಯವಸ್ಥೆಯ ಕುರಿತಾಗಿ ಅರಿವಿಲ್ಲದಯೇ ರಾಮಚಂದ್ರಾಪುರ ಮಠದ ಭಕ್ತರು ಮತ್ತು ಆ ಮಠದ ರಾಮಕಥಾ ತಂಡದ ಗಾಯಕಿಯೂ ಆಗಿದ್ದ ಪ್ರೇಮಲತಾ ಎನ್ನುವವರು ರಾಘವೇಶ್ವರ ಸ್ವಾಮಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪೋಲಿಸರಿಗೆ ದೂರು ಕೊಟ್ಟಾಗ ಪೋಲೀಸರು ಬಂಧಿಸಿದ್ದು ಆರೋಪಕ್ಕೆ ಗುರಿಯಾದ ರಾಘವೇಶ್ವರ ಸ್ವಾಮಿಯಲ್ಲ. ಬದಲಾಗಿ ದೌರ್ಜನ್ಯಕ್ಕೆ ಒಳಗಾದ ಪ್ರೇಮಲತಾ ಅವರನ್ನು. ಇದಕ್ಕೆ ಕಾರಣ ಸದರಿ ಸ್ವಾಮಿ ಪ್ರೇಮಲತಾ ಮತ್ತು ದಿವಾಕರ್ ಶಾಸ್ತ್ರಿ ದಂಪತಿಗಳ ಮೇಲೆ ಕೊಟ್ಟ ಬೋಗಸ್ ದೂರನ್ನು ಆಧರಿಸಿ ಪ್ರೇಮಲತ ಅವರನ್ನು ಬಂಧಿಸುತ್ತಾರೆ. ಆರೋಪಿಗಳಾಗಿರುವ ಗುಂಡಪ್ಪ ಮತ್ತು ಜೈಶಂಕರ್ ನನ್ನು ಈ ನೆಲದ ಕಾನೂನಿನಂತೆ ಬಂಧಿಸುವ ಪೋಲೀಸ್ ವ್ಯವಸ್ಥೆ ಅತ್ಯಾಚಾರದ ಆರೋಪಿ ರಾಘವೇಶ್ವರ ಸ್ವಾಮಿಯ ವಿಚಾರದಲ್ಲಿ ಹಿಂಜರಿಯುತ್ತಿರುವುದು ಬಲಿಷ್ಠ ಯಜಮಾನ್ಯದ ವ್ಯವಸ್ಥೆಯ ಪ್ರಭಾವವನ್ನು ಸೂಚಿಸುತ್ತದಷ್ಟೆ. ದಿವಾಕರ ಶಾಸ್ತ್ರಿಯವರ ತಮ್ಮ ಶಾಮ ಶಾಸ್ತ್ರಿ ಮಠದ ಪರವಾಗಿ ನಿಲ್ಲಬೇಕೆಂಬ ಬೆದರಿಕೆಯ ಕರೆಗಳಿಗೆ ಭಯಗೊಂಡು ಆತ್ಮಹತ್ಯೆ ಸಹ ಮಾಡಿಕೊಳ್ಳುತ್ತಾರೆ. ಮಠದ ಕಡೆಯಿಂದ ಪ್ರೇಮಲತ ಅವರು ನೀಡಿದ ದೂರನ್ನು ಸ್ವೀಕರಿಸಬೇಡಿ ಎನ್ನುವ ಒತ್ತಡವೂ ಪೋಲೀಸರ ಮೇಲೆ ಇತ್ತಂತೆ. ಮಾಧ್ಯಗಳಿಗೆ ಈ ಅತ್ಯಾಚಾರದ ಕುರಿತಾಗಿ ವರದಿ ಮಾಡಬೇಡಿ ಎನ್ನುವ ತಾಕೀತನ್ನು ಮಾಡಲಾಯಿತು. ಚಾತುರ್ಮಾಸ್ಯವೆನ್ನುವ ಧಾರ್ಮಿಕ ವಿಧಿಯನ್ನು ಮುಂದೊಡ್ಡಿ ಸ್ವಾಮಿಯ ಬಂಧನವನ್ನು ತಡೆಹಿಡಿದಿದ್ದು ನ್ಯಾಯಾಂಗ ನಿಂದನೆಯಾಗುತ್ತದೆ. ಆದರೆ ಇದೂ ಸಹ ಅರಣ್ಯರೋಧನವಾಗಿಬಿಡುವುದು ಈ ಬಲಿಷ್ಠ ಯಜಮಾನ್ಯ ವ್ಯವಸ್ಥೆಯ ಪ್ರಭಾವವನ್ನು ಸೂಚಿಸುತ್ತದೆ.

ಇನ್ನು ಸಮಾಜದ ಪ್ರತಿಕ್ರಿಯೆ ನೋಡಿ. ಬ್ರಾಹ್ಮಣ ಸಮಾಜದ ಅನೇಕ ಮಹಿಳಾ ಭಕ್ತರು ಎರಡೂ ಕಡೆ ತಪ್ಪಿದೆಯಲ್ಲ ಎಂದು ರಾಗ ಎಳೆಯುತ್ತಿದ್ದಾರಂತೆ!! ಪ್ರೇಮಲತ ಅವರ ನೈತಿಕತೆಯನ್ನು ಆಡಿಕೊಳ್ಳುತಿದ್ದಾರಂತೆ!! ಆದರೆ ಈ ವಿದ್ಯಾವಂತರಿಗೆ ಸ್ವಾಮಿಯ ಅನೈತಿಕತೆ ಇವರಲ್ಲಿ ಹೇಸಿಗೆ ಹುಟ್ಟಿಸಿಲ್ಲ. ಇವರಿಗೆ ಸರ್ವಸಂಗ ಪರಿತ್ಯಾಗಿಯೆಂದು ಘೋಷಿಸಿಕೊಳ್ಳುವ ಸ್ವಾಮಿ ಈ ರೀತಿ ಅತ್ಯಾಚಾರದ ಆರೋಪಕ್ಕೆ ಸಿಲುಕಿರುವುದು ಅಘಾತಕಾರಿಯಾಗಬೇಕಿತ್ತು. ಆದರೆ ಭಕ್ತರು ಅನುಮಾನ ಪಡುತ್ತಿರುವುದು ಪ್ರೇಮಲತ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ದೂರು ಕೊಡುತ್ತಿರುವುದರ ವಿಷಯದಲ್ಲಿ. ಇದು ಪ್ರತಿಬಾರಿಯೂ ವಿಚಾರಣೆಗೆ ಹಾಜರಾಗಲು ಅನೇಕ ತಗಾದೆಗಳನ್ನು ತಗೆಯುತ್ತಿರುವ ಈ ಸ್ವಾಮಿಗೆ ಮಾನಹಾನಿ ಮಾಡಲು ಪಿತೂರಿ ನಡೆಯುತ್ತಿದೆ ಎಂದು ಈ ಸ್ವಜಾತಿ ಭಕ್ತಗಣವು ಆರೋಪಿಸುತ್ತಿರುವುದು ಮತ್ತು ಈ ಸ್ವಾಮಿಯ ಅನೈತಿಕತೆಯನ್ನು ಬೆಂಬಲಿಸುತ್ತಿರುವ ಈ ಬ್ರಾಹ್ಮಣ ಸಮಾಜದ ವಿದ್ಯಾವಂತರ ನೈತಿಕ ಅದಪತನವನ್ನು ತೋರಿಸುತ್ತದೆ ಅಷ್ಟೇ. ಡಬಲ್ ಡಿಗ್ರಿಗಳನ್ನು ಪಡೆದ ಬ್ರಾಹ್ಮಣ ವಿದ್ಯಾವಂತರಿಗೆ ತಮ್ಮ ಪ್ರಜ್ಞೆಯೊಳಗೆ ಬೇರುಬಿಟ್ಟಿರುವ ಜಾತಿವಾದವನ್ನು ಮೀರಲು ಸಾಧ್ಯವಾಗುತ್ತಿಲ್ಲ ಎನ್ನುವದಕ್ಕಿಂತಲೂ ಎಲ್ಲವನ್ನೂ ಜೀರ್ಣಿಸಿಕೊಳ್ಳಲು ಹವಣಿಸುವ ವೈದಿಕತೆ ಮತ್ತೆ ಚಲಾವಣೆಗೆ ಬರಲು ಸಹಕರಿಸಲು ಇವರೆಲ್ಲ ಉತ್ಸುಕರಾಗಿದ್ದಾರೆ ಎಂದೇ ವಿಶ್ಲೇಷಿಸಬೇಕಾಗುತ್ತದೆ. ಭಯೋತ್ಪಾದನೆ ಧಾಳಿ ನಡೆದಾಗ ಯಾಕೆ ನೀವು ಖಂಡಿಸುತ್ತಿಲ್ಲ ಎಂದು ಮುಸ್ಲಿಂ ಸಮುದಾಯದ ಕಡೆಗೆ ಗೋಣು ತಿರುಗಿಸುವ ಈ ಸೋ ಕಾಲ್ಡ್ ವಿದ್ಯಾವಂತರು ಇಂದು ಅತ್ಯಾಚಾರದ ಆರೋಪಕ್ಕೆ ಗುರಿಯಾದ ತಮ್ಮ ಜಾತಿಯ ಸ್ವಾಮಿಯ ಕೃತ್ಯವನ್ನು ಖಂಡಿಸುವುದಿರಲಿ ಒಂದು ಪಾಪ ಪ್ರಜ್ಞೆಯ ಸಣ್ಣ ಅಂಶವೂ ಇವರಲ್ಲಿ ಕಾಣುತ್ತಿಲ್ಲ.

ಜಾತಿ ಸಮಾಜ ಮತ್ತು ಜಾತಿ ಮಠಗಳ ಸನಾತನವಾದದ ಮೂಲಭೂತವಾದಿ ಹಸಿವಿಗೆ ಮೈಯೆಲ್ಲಾ ಬಾಯಿ. ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರವೆಂದು ಬಿಂಬಿಸಿ ಬೌದ್ಧ ಧರ್ಮವನ್ನು ಆಪೋಶನ ತೆಗೆದುಕೊಳ್ಳಲು ವಿಫಲ ಯತ್ನ ನಡೆಸಿದ ಈ ವೈದಿಕಶಾಹಿ ವಚನ ಚಳುವಳಿಯನ್ನು, ಗಾಂಧಿಯನ್ನು, ಅಂಬೇಡ್ಕರ್ ಅವರನ್ನೂ ಬಿಟ್ಟಿಲ್ಲ. ಹಿಂದುತ್ವದ ಚರ್ಚೆಯನ್ನು ಸನಾತನವಾದಕ್ಕೆ ಗಂಟು ಹಾಕುವ ಈ ಪುರೋಹಿತಶಾಹಿಯನ್ನು ಮೌನವಾಗಿ ಬೆಂಬಲಿಸುವ ಇಲ್ಲಿನ ವಿದ್ಯಾವಂತರು ಕ್ರಿಯಾಶೀಲ ಜಾತಿವಾದಿಗಳು. ಅಮೇರಿಕಾ, ಯುರೋಪಿಯನ್ ರಾಷ್ಟ್ರಗಳಿಗೆ ಹಾರಲು ತವಕದಲ್ಲಿರುವ ಈ ವಿದ್ಯಾವಂತರು ಆರೆಸಸ್ ಮಾದರಿಯ ರಾಷ್ಟ್ರೀಯವಾದದ ಪ್ರತಿಪಾದಕರು. ಜೊತೆಗೆ ನವಬ್ರಾಹ್ಮಣ್ಯವಾದದ ವಕ್ತಾರರೂ ಹೌದು. ಅನಿವಾಸಿ ಭಾರತೀಯರಾಗಿ ಇವರು ಈ ರಾಘವೇಶ್ವರ, ಕಂಚಿ ಕಾಮಕೋಟಿ, ಪೇಜಾವರ, ಶೃಂಗೇರಿ, ರವಿಶಂಕರ ಇನ್ನೂ ಮುಂತಾದ ಸ್ವಾಮಿಗಳನ್ನು ಒಳಗೊಳ್ಳುವಂತಹ ವೈದಿಕಶಾಹಿ ರಾಷ್ಟ್ರೀಯತೆಯನ್ನು ವಿದೇಶಗಳಲ್ಲಿ ಪ್ರತಿಪಾದಿಸುತ್ತಾರೆ. ಬ್ರಾಹ್ಮಣ್ಯವಾದದ ವೈದಿಕಶಾಹಿಯನ್ನು ಪ್ರತಿಪಾದಿಸುವ ಭರಾಟೆಯಲ್ಲಿರುವ ಈ ವಿದ್ಯಾವಂತರಿಗೆ ಸಂತ ಕಬೀರನ ಪರಂಪರೆ, ಉದಾರವಾದಿ ನೆಲೆಯ ಅನೇಕ ಭಕ್ತಿಪಂಥದ, ಅವಧೂತ ಪರಂಪರೆಯ ಜನಪರ ಮಾದರಿಗಳ ಪರಿಚಯವೂ ಇಲ್ಲ ಅಥವಾ ಗೊತ್ತಿದ್ದರೂ ಚಾಣಾಕ್ಷತೆಯಿಂದ ಮರೆಮಾಚುತ್ತಾರೆ.

“ಹುಲಿಯ ನೆರಳಿನೊಳಗೆ – ಅಂಬೇಡ್ಕರವಾದಿಯ ಆತ್ಮಕಥೆ” ಒಂದು ಟಿಪ್ಪಣಿ


-ಮಹಾದೇವ ಸಾಲಾಪೂರ


ಉಚಲ್ಯಾ, ಅಕ್ರಮಸಂತಾನ, ಗಬಾಳ, ಬಹಿಷ್ಕೃತ, ವಾಲ್ಮೀಕಿ, ಬಲುತ, ನೋವು ತುಂಬಿದ ಬದುಕು ಹೀಗೆ ಮರಾಠಿಯಿಂದ ಅನುವಾದಗೊಂಡ ಹಾಗೂ ಕನ್ನಡದಲ್ಲಿ ಪ್ರಕಟವಾದ ದಲಿತ ಆತ್ಮಕತೆಗಳ ಬಾಲ್ಯ ಮತ್ತು ಬದುಕಿನ ಚಿತ್ರಣಗಳು ವಿಭಿನ್ನ ಅನುಭವ ಜಗತ್ತನ್ನು ನಿರ್ಮಿಸಿಕೊಟ್ಟಿವೆ. ಪ್ರತಿಯೊಬ್ಬರ ಬಾಲ್ಯವೂ ಅಸಮಾನ ಭಾರತದ ಚರಿತ್ರೆಯನ್ನು ಹೇಳುತ್ತದೆ. Huliya Neralu-2ಕುಲಮೂಲದ ಕಸುಬುಗಳು, ಕಸುಬಿನ ದಾರುಣ ಚಿತ್ರಣ, ಹುಟ್ಟಿನಿಂದ ಗುರುತಿಸಲ್ಪಡುವ ಜಾತಿಯೂ, ಆಯಾ ಪರಿಸರಕ್ಕೆ ಸಂಬಂಧಪಟ್ಟ ಆಚರಣೆಗಳು, ಬಂಧು-ಬಾಂಧವರ ಸಂಬಂಧಗಳು, ಬಡತನ, ಹಸಿವು, ಶೋಷಣೆ, ಕಲಿಕೆಗಾಗಿ ಪರಿತಪಿಸುವ ರೀತಿಯೂ, ಆಧುನಿಕ ಶಿಕ್ಷಣವ್ಯವಸ್ಥೆಯಲ್ಲಿನ ಶಾಲಾ ಆವರಣದಲ್ಲಿ ಆಚರಿಸಲ್ಪಡುವ ಅಸ್ಪೃಶ್ಯತೆಯೂ ಹೀಗೆ ಭೀಕರವಾದ ತಾರತಮ್ಯದ ಜಗತ್ತನ್ನು ದಲಿತ ಆತ್ಮಕತೆಗಳಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಎಲ್ಲ ಆತ್ಮಕತೆಗಳ ಬಾಲ್ಯವು ಒಂದೆ ಪಡಿಯಚ್ಚಿನಲ್ಲಿ ಎರಕಹೊಯ್ದಂತೆ ಭಾಸವಾದರೂ ಕಟ್ಟಿಕೊಡುವ ಪರಿಸರದ ನಿವೇದನೆ ಅಸ್ಪೃಶ್ಯ ಭಾರತದ ಒಂದೊಂದು ಮಗ್ಗಲುಗಳನ್ನು ಶೋಧಿಸುತ್ತವೆ. ಸಾಂಪ್ರದಾಯಿಕ ಪ್ರಜಾಪ್ರಭುತ್ವವು ಹಳ್ಳಿಗಳಲ್ಲಿತ್ತು. ಅದೇ ಆಶಯದಲ್ಲಿ ಸಂವಿಧಾನವೂ ರಚನೆಯಾಗಬೇಕಿತ್ತು ಎಂದು ಹಂಬಲಿಸುವವರು ದಲಿತ ಅಸ್ಮಿತೆಯ ಈ ಬಾಲ್ಯದ ಕುರುಹುಗಳನ್ನು ಕೊಂಚ ಗಮನಿಸಬೇಕು.

ಈ ದೇಶದಲ್ಲಿ ಪವಿತ್ರವಾದದ್ದು ಒಂದೇ, ಅದು ಸಂವಿಧಾನ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಳ್ಳುತ್ತಾನೆ ಎಂದಾದರೆ ಅವನಿಗೆ ಅಂಬೇಡ್ಕರ್ ಅವರು ಯಾವದೋ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಆಧುನಿಕ  ಭಾರತದ ನಿರ್ಮಾತೃ, ಅಪ್ರತಿಮ ದೇಶಪ್ರೇಮಿ, ಪಾರಂಪರಿಕವಾಗಿ ಅಸ್ತಿತ್ವದಲ್ಲಿದ್ದ ಸಂವಿಧಾನವನ್ನು ಭಂಜಿಸಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಮೂಲಕ ಹೊಸಗುರುತನ್ನು ನೀಡಿದ ಮಹಾತ್ಮ ಎಂಬುದನ್ನು ಮಣಗಾನುತ್ತಾನೆ. (ಆಗ ಮನೆಯೊಳಗೆ ತೂಗುಹಾಕಿರುವ ಅಂಬೇಡ್ಕರ್ ಅವರ ಫೋಟೋ ನೋಡಿ ನೀವು ಅವರಾ..? ಎನ್ನುವ ಹೊಸ ಐಡೆಂಟಿಟಿಯ ವಿಧಾನ ಇಲ್ಲವಾಗಬಹುದು.) ಆ ಹುಲಿಯ ಹೆಜ್ಜೆಗುರುತುಗಳನ್ನು ಇವತ್ತಿನ ಈ ಜಾತಿಸಂಘಟಣೆಯ ಜಂಝಾವಾತಗಳ ನಡುವೆ ಮತ್ತೆಮತ್ತೆ  ಕೆದಕಬೇಕಿದೆ, ಅವರ ಆಲೋಚನೆಗಳನ್ನು ಈ ಹೊತ್ತಿಗೆ ತಕ್ಕಂತೆ ವಿಮರ್ಶಿಸಿ, ಆ ಅಧ್ಯಯನದ ಶಿಸ್ತನ್ನು, ಆ ನ್ಯಾಯನಿಷ್ಠುರ ವ್ಯಕ್ತಿತ್ವವನ್ನು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ಈ ಅರಿವಿನಲ್ಲಿ ಭಾರತದ ಹೊಸ ಚಲನೆಯ ಆರಂಭವಾಗಿರುವುದರಿಂದ ಅಂಬೇಡ್ಕರ್ ಅವರ ಬದುಕು ಬರಹ ಭಾಷಣಗಳನ್ನು ನಾವು ಮತ್ತೆಮತ್ತೆ ಓದಿಕೊಳ್ಳುತ್ತಲೇ ಇರಬೇಕಾಗುತ್ತದೆ.

ಕೃಷಿವಿಜ್ಞಾನಿಯಾದ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ ಅಂಬೇಡ್ಕರವಾದಿಯ ಆತ್ಮಕಥೆ’ಯನ್ನು ಕನ್ನಡಕ್ಕೆ ಬಿ. ಶ್ರೀಪಾದರವರ  ಭಾವಾನುವಾದ ಮಾಡಿದ್ದಾರೆ.  ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಭಾರತದ ಕ್ರಾಂತಿಸೂರ್ಯರ ಬದುಕು ಮತ್ತು ಹೋರಾಟದ ಕುರಿತಾದ ಟಿಪ್ಪಣಿಗಳಿರುವುದರಿಂದ ಈ ಹೊತ್ತುಗೆ ಉಳಿದೆಲ್ಲ ಆತ್ಮಕತೆಗಳಿಗಿಂತ ಭಿನ್ನವಾಗಿದೆ.

ಅಂಬೇಡ್ಕರರ ನಂತರ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದ ಎರಡನೇ  ದಲಿತವ್ಯಕ್ತಿ ಎಂದೇ ಹೆಸರಾಗಿರುವ ಇವರ ಬದುಕಿನಲ್ಲೂ ಅಸ್ಪೃಶ್ಯ ಭಾರತದ ಅನುಭವಗಳೇ ತುಂಬಿದ್ದಾವೆ. ಆ ಎಲ್ಲ ಅಪಮಾನ, ನಿಂದೆ, ಬಡತನ, ಅಸಹಾಯಕತೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಛಲದ ಹುಲಿಯ ಹೆಜ್ಜೆಜಾಡಿನಲ್ಲಿ ನಡೆಯುವ ನಿಮ್ಗಾಡೆಯವರ ಬದುಕು ಮತ್ತು ಹೋರಾಟದ  ಭಾವಜಗತ್ತು ಸ್ವವಿಮರ್ಶಾ ಧಾಟಿಯಲ್ಲಿರುವುದರಿಂದ ತುಂಬ ಆಪ್ತವಾಗುತ್ತದೆ.

ಆತ್ಮಕತೆಯ ಮೊದಲ ಅಧ್ಯಾಯದ ಕೊನೆಯಭಾಗದಲ್ಲಿ ಅವರ ತಂದೆ ಹೇಳಿಬರೆಯಿಸಿದ ಭಾಷಣದಲ್ಲಿ ಭೀಮರಾವ ಅಂಬೇಡ್ಕರ್ ಅವರ ಹೆಸರನ್ನು ಕೇಳಿ ಪುಳಕಿತರಾಗುವ Young_Ambedkarನಿಮ್ಗಾಡೆಯವರ ಆತ್ಮಕತೆಯುದ್ದಕ್ಕೂ ಬಾಬಾಸಾಹೇಬರ ಛಲದ, ಆತ್ಮವಿಶ್ವಾಸದ, ಅಧ್ಯಯನ ಶಿಸ್ತಿನ, ಹೋರಾಟ ರೂಪಿಸಿದ ರೀತಿಗಳೆಲ್ಲವೂ ಪ್ರಭಾವೀಕರಿಸಿರುವುದನ್ನ ಚಿತ್ರಿಸಿದ್ದಾರೆ. ತೀರ ಖಾಸಗಿಯಾಗಿ ಅವರೊಂದಿಗೆ ಒಡನಾಡಿದ ಕ್ಷಣಗಳಂತೂ ನಾಮದೇವ ನಿಮ್ಗಾಡೆಯವರನ್ನು ರೂಪಿಸಿದ್ದಾವೆ. ನೆಹರೂ ಅವರನ್ನು ತರುಬಿ ಕೇಳುವ ಪ್ರಶ್ನೆ, ಗಾಂಧೀಜಿಯವರ ಅಸ್ಪೃಶ್ಯತೆ ನಿವಾರಣೆ ನಡೆಯ ನಡುವಿನ ಭಿನ್ನತೆಯನ್ನ ವಿವರಿಸುವ ಬಗೆ, ಹಾಗೂ ಮಾರ್ಟಿನ್ ಲೂಥರ ಕಿಂಗ್ ಅವರೊಂದಿಗಿನ ಸಂವಾದದಲ್ಲಿ ಭಾರತದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ವಾಸ್ತವವನ್ನೂ ಆವೇಶಭರಿತರಾಗಿ ನಿರರ್ಗಳ ಮಾತಾಡುವ ಉಮೇದು…. ಈ ಎಲ್ಲದರ ಹಿಂದೆ ಆಳವಾದ ಸುಪ್ತಪ್ರಜ್ಞೆಯಲ್ಲಿ ತುಂಬಿಕೊಂಡಿದ್ದ ಬಾಬಾಸಾಹೇಬರ ಚಿಂತನೆಗಳೇ ಪ್ರೇರಣಶಕ್ತಿಯಾಗಿದ್ದವು.

ತನ್ನ ಸಹಪಾಠಿ ಓದುತ್ತಿದ್ದ ಪುಸ್ತಕ ಯಾವುದೆಂದು ಕೇಳಲು ಹೋಗಿ ಅವಮಾನಿತರಾದ ಲೇಖಕರು ಮುಂದೊಂದು ದಿನ ತುಳಸೀರಾಮಾಯಣ ಓದಿ ‘ಈ ಅವಮಾನಗಳು, ಬಯ್ಗಳುಗಳು, ತಲೆಯೆತ್ತಿ  ಬದುಕಲು ನನಗೆ ಮತ್ತಷ್ಟು ದೃಢತೆಯನ್ನು, ಆತ್ಮವಿಶ್ವಾಸವನ್ನು ತಂದುಕೊಟ್ಟವು.  ಈ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಲು ಅಂದೇ ದೃಢಸಂಕಲ್ಪ ಮಾಡಿದೆ. ಈ ನಿಸ್ಸಹಾಯಕತೆಯನ್ನು ಮೀರಲು ನನಗಿರುವ ಒಂದೇ ಗುರಿ ಶಿಕ್ಷಣವೆಂದು ಅಂದು ನನಗೆ ಮನದಟ್ಟಾಯಿತು’ ಎಂದು ಹೇಳುತ್ತಾರೆ. ಇನ್ನೊಂದೆಡೆ ದೇವಸ್ಥಾನದ ಅತಿಕ್ರಮ ಪ್ರವೇಶ ಮತ್ತು ದೇವರ ವಿಗ್ರಹಗಳನ್ನು ನಾಶಪಡಿಸದ್ದಾರೆಂಬ ಸುಳ್ಳು ಆರೋಪ ಮಾಡಿದ ಸವರ್ಣಿಯರು ಕೊಟ್ಟ ಫಿರ್ಯಾದಿಯನ್ನ ಅನುಸರಿಸಿ ಪೋಲಿಸರು ಬಂಧಿಸಲು ಬಂದಾಗ  ತಂದೆ ಹೇಳುವ ಧೈರ್ಯದ ಮಾತುಗಳು ಹೀಗೆ ನಾಮದೇವ ನಿಮ್ಗಾಡೆಯವರನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹೋರಾಟದ ಬದುಕಿಗೆ ಸಜ್ಜುಗೊಳಿಸುವ ಘಟಣೆಗಳು – ವ್ಯಷ್ಠಿಯಿಂದ ಸಮಷ್ಠಿಗೆ ತುಡಿಯುವ ಜೀವವೊಂದನ್ನು ತಯಾರು ಮಾಡಿದ ಹಾಗಿವೆ.

ವಿಧಾನಸಭೆಯ ಸದಸ್ಯರಾಗುವ ಅವಕಾಶವೊಂದು ಒದಗಿಬಂದಾಗ ಬಾಬಾಸಾಹೆಬರು ಹೇಳುವ ಮಾರ್ಮಿಕವಾದ ಮಾತುಗಳು ಬಹಳ ಉಪಯುಕ್ತವಾದವು ಎನಿಸುತ್ತವೆ. ಮಗನಿಗೆ ಭೀಮರಾವ್ ಎಂದು ಹೆಸರಿಟ್ಟಾಗ, ಶಿಕ್ಷಣಕ್ಕೆ ಒಂದು ಕಡೆ ನಿಲುಗಡೆಯಿಡಬೆಕಲ್ಲ ಎಂದು ಹೇಳಿದಾಗ, ಸಂಸತ್ತಿನಲ್ಲಿ ಅವರ ಕಾಲಿಗೆರಗಿದಾಗ ಹೀಗೆ ನಿಮ್ಗಾಡೆಯವರಿಗೆ ಅಂಬೇಡ್ಕರರು ಪ್ರತಿಕ್ರಿಯಿಸಿರುವ ರೀತಿಗಳಂತೂ ಅದ್ಭುತ ಗಳಿಗೆಗಳೇ ಆಗಿವೆ. ಇದು ನಾಮದೇವ ನಿಮ್ಗಾಡೆಯವರ ಆತ್ಮಕಥನ ಹೇಗೋ ಹಾಗೆ ಭೀಮರಾವ್ ಅಂಬೇಡ್ಕರರ ಜೀವನಚರಿತ್ರೆಯೂ ಆಗಿದೆ ಎಂಬರ್ಥದಲ್ಲಿ ಹೇಳಿರುವ ಡಾ. ಅಪ್ಪಗೆರೆ ಸೋಮಶೇಖರ್ ಅವರ ಮಾತು ಅಕ್ಷರಶಃ ಸತ್ಯ.

ವರ್ತಮಾನ ಬಳಗದ ಪುಟ್ಟ ಸಮಾಗಮ, ಎಸ್.ಆರ್.ಹಿರೇಮಠ್ ಮತ್ತು ಕಥಾಸ್ಪರ್ಧೆಯ ವಿಜೇತರೊಂದಿಗೆ…

ಆತ್ಮೀಯರೇ,

ಮೊನ್ನೆ ನಮ್ಮ ವರ್ತಮಾನ ಬಳಗವರು ಮತ್ತು ಕೆಲವು ಸ್ನೇಹಿತರು ಈ ಬಾರಿಯ (೨೦೧೪) ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕತೆಗಳನ್ನು ಬರೆದಿರುವ ಕೆಲವು ಕತೆಗಾರರೊಂದಿಗೆ ಊಟಕ್ಕೆಂದು ಸೇರಿದ್ದೆವು. ಕಥಾಸ್ಪರ್ಧೆಯ ಮೊದಲ ಮೂರು ಬಹುಮಾನಿತ ಕತೆಗಳನ್ನು ಬರೆದಿರುವ ಕತೆಗಾರರು ಮತ್ತು ಈ ಬಾರಿಯ ತೀರ್ಪುಗಾರರು ಅಂದು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣಕ್ಕೆ ಈ ಪುಟ್ಟ ಸಮಾಗಮ. ಹಾಗೆಯೇ, ನಮ್ಮ ರಾಜ್ಯದ ವರ್ಷದ ವ್ಯಕ್ತಿಯಾಗಿ ನಮ್ಮ ವರ್ತಮಾನ ಬಳಗ ಆಯ್ಕೆ ಮಾಡಿದ್ದ ಎಸ್.ಆರ್.ಹಿರೇಮಠರೂ ನೆನ್ನೆ ಬೆಂಗಳೂರಿನಲ್ಲಿ ಇದ್ದರು. ಸಾಧ್ಯವಾದರೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನಮ್ಮ ಕತೆಗಾರರಿಗೆ ಅವರಿಂದಲೇ ಬಹುಮಾನ ವಿತರಣೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಸಿಗುತ್ತದೆ. ಅಲ್ಲಿ ಸೇರಿದ್ದೆವು. katha-sprade-2014-223x300ನಮ್ಮ ವರ್ತಮಾನ.ಕಾಮ್‌ನೊಂದಿಗೆ ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿರುವ ನಾಲ್ಕೈದು ಜನ ಬೆಂಗಳೂರಿನ ಹೊರಗೆಯೇ ಇರುವುದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ ಮತ್ತು ನಗರದಲ್ಲಿಯೇ ಇರುವ ಇನ್ನೂ ಕೆಲವರು ಕಾರ್ಯಬಾಹುಳ್ಯದಿಂದಾಗಿ ಬರಲಾಗಲಿಲ್ಲ. ಬರಬೇಕಾಗಿದ್ದ ಈ ಬಾರಿಯ ತೀರ್ಪುಗಾರರಾಗಿದ್ದ ಎಸ್.ಗಂಗಾಧರಯ್ಯನವರೂ ಬರಲಾಗಿರಲಿಲ್ಲ. ಅವರನ್ನು ಬಿಟ್ಟರೆ ಒಟ್ಟಾರೆಯಾಗಿ ನಮ್ಮ ಬಳಗದ ಬಹುತೇಕರು ಹಾಜರಿದ್ದರು.

ಊಟದ ನಂತರ ಎಸ್.ಆರ್.ಹಿರೇಮಠರು ಹಾಜರಿದ್ದ ಕರೆಗಾರರಾದ ಟಿ.ಎಸ್.ವಿವೇಕಾನಂದ, ಟಿ.ಕೆ.ದಯಾನಂದ್, ಮತ್ತು ಎಚ್.ಎಸ್.ಅನುಪಮರಿಗೆ ಬಹುಮಾನಗಳನ್ನು ಕೊಟ್ಟರು. ಕಳೆದ ಬಾರಿಯ ತೀರ್ಪುಗಾರರಾಗಿದ್ದ ರಾಮಲಿಂಗಪ್ಪ ಟಿ.ಬೇಗೂರುರವರು ಈ ಸಂದರ್ಭದಲ್ಲಿ ಹಾಜರಿದ್ದು, ಬಹಳ ಆಪ್ತ ವಾತಾವರಣದಲ್ಲಿ, ಒಂದು ರೀತಿಯಲ್ಲಿ ಖಾಸಗಿಯಾಗಿ ಇದು ಮುಗಿಯಿತು.

ಈ ಪುಟ್ಟ ಸಮಾಗಮಕ್ಕೆ ಆಗಮಿಸಿದ್ದ ಎಸ್.ಆರ್.ಹಿರೇಮಠ್, ಡಾ.ರಾಮಲಿಂಗಪ್ಪ ಟಿ.ಬೇಗೂರು, ಟಿ.ಎಸ್.ವಿವೇಕಾನಂದ ಮತ್ತು ಕುಟುಂಬದವರು, ಟಿ.ಕೆ.ದಯಾನಂದ್, ಡಾ.ಎಚ್.ಎಸ್.ಅನುಪಮ, ಬಿ.ಶ್ರೀಪಾದ ಭಟ್, ಜಯಶಂಕರ ಹಲಗೂರು, ಆನಂದ ಯಾದವಾಡ ಮತ್ತು ಕುಟುಂಬದವರು, ರವಿ ಮತ್ತು ಕುಟುಂಬದವರು, ಈಶ್ವರ್ ಮತ್ತು ಕುಟುಂಬದವರು, ಫ್ರಭಾ ಎನ್. ಬೆಳವಂಗಲ, ನವೀನ್ ಸೂರಿಂಜೆ, ತೇಜ ಸಚಿನ್ ಪೂಜಾರಿ, ಡಾ. ಅಶೋಕ್ ಕೆ,ಆರ್., ಅನಂತ ನಾಯ್ಕ, ಶಾಂತಲಾ ದಾಮ್ಲೆ, ಪ್ರಶಾಂತ್ ಹುಲ್ಕೋಡು, ಚಂದ್ರಶೇಖರ ಬೆಳಗೆರೆ, ಬಸವರಾಜು, ಶ್ರೀಧರ್ ಪ್ರಭು, ನಿತಿನ್, ಬಸೂ ಸೂಳಿಬಾವಿ ಮತ್ತವರ ಸ್ನೇಹಿತರು- ಎಲ್ಲರಿಗೂ ವರ್ತಮಾನ ಬಳಗದಿಂದ ಧನ್ಯವಾದ ಮತ್ತು ಕೃತಜ್ಞತೆಗಳು.

ಮತ್ತೊಮ್ಮೆ ಬಂದ ಎಲ್ಲಾ ಸ್ನೇಹಿತರಿಗೂ ಬಳಗದ ಪರವಾಗಿ ಧನ್ಯವಾದಗಳು.

ನಮಸ್ಕಾರ,
ರವಿ
ವರ್ತಮಾನ ಬಳಗದ ಪರವಾಗಿ.

vartamana_spardhe_1

 

vartamana_spardhe_2

ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ


– ಬಿ. ಶ್ರೀಪಾದ ಭಟ್


 

 

 

There is little difference in people, but that little difference makes a big difference. The little difference is attitude and big difference is whether it is positive or negative – W.Clement stone

“ಮಾರ್ಕ್ಸ್‌ವಾದದ ಕುರಿತಾಗಿ ಪ್ರಮುಖ ಟೀಕೆಯೆಂದರೆ ಮಾರ್ಕ್ಸಿಸಂ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಮಾತ್ರ ಬದ್ಧವಾಗಿರುತ್ತದೆ. ಅದು ಹೆಣ್ಣು ಮತ್ತು ಗಂಡನ್ನು ಇತಿಹಾಸದ ಒಂದು ಕೈಗೊಂಬೆಯನ್ನಾಗಿ ಮಾತ್ರ ಪರಿಭಾವಿಸುತ್ತದೆ ಮತ್ತು ಹೀಗೆ ಪರಿಭಾವಿಸುವ ಮೂಲಕ ಅವರ ಸ್ವಾತಂತ್ರ್ಯದ, ವೈಯುಕ್ತಿಕ ನೆಲೆಗಳ ಬದುಕನ್ನು ನಿರಾಕರಿಸುತ್ತದೆ. ಮಾನವ ಸಂತತಿಯ ಪ್ರತಿರೋಧಿಸಲಾರದಷ್ಟು ಕಟುವಾದ, ಕನಿಕರವಿಲ್ಲದ, ಅಪಾರವಾದ ಶಕ್ತಿಯನ್ನುಳ್ಳ ಒಂದು ಬಗೆಯ ಉಗ್ರವಾದ ಕಟ್ಟುನಿಟ್ಟನ್ನೊಳಗೊಂಡ ಇತಿಹಾಸದ ಕಾನೂನುಗಳನ್ನು ಮಾರ್ಕ್ಸ್ ನಂಬುತ್ತಾನೆ. ಆತನ ಪ್ರಕಾರ ಫ್ಯೂಡಲಿಸಂ ವ್ಯವಸ್ಥೆಯು ಬಂಡವಾಳಶಾಹಿಯ ಹುಟ್ಟಿಗೆ ಕಾರಣವಾಗುತ್ತದೆ, ಬಂಡವಾಳಶಾಹಿಯು ಮುಂದೆ ಸಮಾಜವಾದಕ್ಕೆ ದಾರಿ ಮಾಡಿಕೊಡುತ್ತದೆ. ಇತಿಹಾಸ ಕುರಿತಾದ ಮಾರ್ಕ್ಸ್‌ನ ಸಿದ್ಧಾಂತವು ವಿಧಿನಿಯಮ ನಂಬುಗೆಯ ಸೆಕ್ಯುಲರ್ ಅವತರಿಣಿಕೆಯಷ್ಟೆ. ಇದು ಮಾರ್ಕ್ಸ್‌ವಾದಿ ರಾಜ್ಯಗಳಂತೆಯೇ ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಸದಾ ವಿರೋಧವಾಗಿರುತ್ತದೆ” ಎಂದು ಟೆರಿ ಈಗಲ್ಟನ್ ಬರೆಯುತ್ತಾನೆ.

ಆದರೆ ಇತ್ತೀಚೆಗೆ ‘ವಾರ್ತಾಭಾರತಿ’ ವಿಶೇಷಾಂಕಕ್ಕಾಗಿ ನೀಡಿದ ಸಂದರ್ಶನದಲ್ಲಿ ಕಂಚ ಐಲಯ್ಯನವರು ಕಮ್ಯುನಿಷ್ಟರ ಕುರಿತಾದ ಹೇಳಿಕೆಗಳು ತುಂಬಾ ಬೀಸು ಬೀಸಾಗಿವೆ. ಹಾಗೆಯೇ ನನ್ನ ಪತ್ರಕರ್ತ ಗೆಳೆಯರದ್ದೂ ಸಹ.

ಮುಂದುವರೆದು ಟೆರಿ ಮಾರ್ಕ್ಸ್‌ವಾದವು ಕ್ರಾಂತಿಕಾರಿ ಸಿದ್ಧಾಂತವಂತೂ ಅಲ್ಲ. ಮಾರ್ಕ್ಸ್ ಸಮಾಜವಾದದ, ಕಮ್ಯುನಿಸಂನ ಹರಿಕಾರನಂತೂ ಅಲ್ಲವೇ ಅಲ್ಲ. ಮಾರ್ಕ್ಸ್ Karl-Marxಉದಾರವಾದಿಯಾಗಿದ್ದ. ಪ್ರಾರಂಭದ ದಿನಗಳಲ್ಲಿ ಯುರೋಪ್‌ನ ರಾಷ್ಟ್ರಗಳಲ್ಲಿನ ದುಡಿಯುವ ವರ್ಗಗಳ ಚಳುವಳಿಗಳಾಗಲೇ ಸಮಾಜವಾದಿ ಚಿಂತನೆಗಳಿಗೆ ಒಗ್ಗಿಕೊಳ್ಳಲಾರಂಬಿಸಿದ್ದವು. ತಾನು ಸಮಾಜವಾದದ ಸಿದ್ಧಾಂತವನ್ನು ಬಿತ್ತಿದವನೆಂಬುದನ್ನು ಸ್ವತಃ ಮಾರ್ಕ್ಸ್‌ನೇ ನಿರಾಕರಿಸುತ್ತಾನೆ. ಆದರೆ ಮಾರ್ಕ್ಸ್ ಸಮಾಜವಾದ ಸಿದ್ಧಾಂತವನ್ನು ಮರು ರೂಪಿಸಿದ್ದಂತೂ ನಿಜ. ಮಾರ್ಕ್ಸ್‌ವಾದವು ಬಂಡವಾಳಶಾಹಿಯ ಬಲು ದೊಡ್ಡ ಟೀಕಾಕಾರ ಮತ್ತು ಬಂಡವಾಳಶಾಹಿಯ ಒಪ್ಪಿತ ಸಂಸ್ಕೃತಿಗೆ ಅದು ವಿರೋಧ ನೆಲೆಯ ಮತ್ತೊಂದು ಪ್ರತಿಸಂಸ್ಕೃತಿಯಾಗಿಯೇ ರೂಪಿತಗೊಂಡಿದೆ. ಎಲ್ಲಿಯವರೆಗೆ ಬಂಡವಾಳಶಾಹಿಯ ಸಂಸ್ಕೃತಿ ಇರುತ್ತದೆಯೋ ಅಲ್ಲಿಯವರೆಗೆ ಮಾರ್ಕ್ಸ್‌ವಾದವೂ ಪ್ರಚಲಿತವಾಗಿರುತ್ತದೆ ಎನ್ನುದರಲ್ಲಿ ಸಂಶಯವೇ ಇಲ್ಲ. ಮಾರ್ಕ್ಸ್‌ನ ವಿಮುಖನೀತಿಗಳು ಹೆಗೆಲ್‌ನಿಂದ ಪ್ರಭಾವಗೊಂಡಿದ್ದವು. ಸಹಕಾರ ತತ್ವದಡಿ ನಿರ್ಮಿತಿಗೊಳ್ಳುವ ಸಮಾಜವು ಶೋಷಣೆಯಿಂದ ಮುಕ್ತಗೊಂಡು ಸ್ವಾವಲಂಬನೆಯನ್ನು ಸಾಧಿಸಲು ಕ್ರಾಂತಿಕಾರಿ ಮಾರ್ಗವನ್ನು ಆರಿಸಿಕೊಳ್ಳುತ್ತದೆ ಎಂದು ಮಾರ್ಕ್ಸ್ ಪ್ರತಿಪಾದಿಸಿದ್ದ. ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಪರಿಸ್ಥಿತಿಯೇ ಜೀವನದ ನಿರ್ಧಾರಕ ಅಂಶವಾಗಿರುತ್ತದೆ ಮತ್ತು ಇದಕ್ಕೆ ಪೂರಕವಾಗಿ ಇತಿಹಾಸದುದ್ದಕ್ಕೂ ಉತ್ಪಾದನ ಪದ್ಧತಿಗಳು ಬದಲಾವಣೆಗೊಳಲ್ಪಡುತ್ತಿರುತ್ತವೆ ಎಂಬುದು ಮಾರ್ಕ್ಸ್‌ನ ಎರಡು ಪ್ರಮುಖ ಚಿಂತನೆಗಳು ಸಹ ಆತ ಅವಿಷ್ಕಾರ ಮಾಡಿದ್ದಲ್ಲ. ಅದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದವು. ಹಾಗಿದ್ದರೆ ಮಾರ್ಕ್ಸಿಸಂನ ವೈಶಿಷ್ಟತೆ ಇರುವುದು ವರ್ಗಕ್ಕಿಂತಲೂ ವರ್ಗ ಹೋರಾಟ ಮುಖ್ಯ ಎನ್ನುವ ನೀತಿಯಲ್ಲೇ? ಆದರೆ ಬಹಶಃ ಇದು ಕೂಡ ಹಳೆಯದು. ಉದಾಹರಣೆಗೆ ಒಲಿವರ್ ಗೋಲ್ಡ್ ಸ್ಮಿತ್‌ನ ‘ಪಾಳುಬಿದ್ದ ಹಳ್ಳಿ’ಯ ಕವನದ ಸಾಲುಗಳಲ್ಲಿ, ಜಾನ್ ಮಿಲ್ಟನ್‌ನ ‘ಕಾಮೂಸ್’ ಪದ್ಯದಲ್ಲಿ, ಶೇಕ್ಸಪಿಯರ್‌ನ ‘ಕಿಂಗ್ ಲಿಯರ್’ ನಾಟಕದಲ್ಲಿ ವರ್ಗ ಹೋರಾಟದ ಮಾತುಗಳು ಕಾಣಿಸಿಕೊಳ್ಳುತ್ತವೆ. “‘ಬಡವರ ರಕ್ತವನ್ನು ಬಸಿದು ಸೌಧವನ್ನು ಕಟ್ಟಿದ ಜಮೀನ್ದಾರನ ಆಸ್ತಿಯೇ ಸಾಮಾಜಿಕ ಸಂಘರ್ಷದ ಕೇಂದ್ರವಾಗುತ್ತದೆ” ಎಂದು ವಾಲ್ಟೇರ್ ಹೇಳುತ್ತಾನೆ. ಆದರೆ ಪ್ರಮುಖವಾದ ವ್ಯತ್ಯಾಸವೆಂದರೆ ಸಾವಯವವಾದ ಸಾಮೂಹಿಕ ಒಗ್ಗಟ್ಟಿನಲ್ಲಿ ಮಾನವ ನಾಗರಿಕತೆಯು ರೂಪುಗೊಳ್ಳುತ್ತದೆ ಎಂದು ಅನೇಕ ಸಾಮಾಜಿಕ ಚಿಂತಕರು ಪರಿಭಾವಿಸಿದರೆ ಮಾರ್ಕ್ಸ್ ಸಾಮೂಹಿಕ ಗುಂಪಿನ ಭಿನ್ನತೆಯಲ್ಲಿ ನಾಗರೀಕತೆಯು ರೂಪುಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಬಂಡವಾಳಗಾರನು ದುಡಿಯುವ ವರ್ಗಗಳ ದಿನಗೂಲಿಯನ್ನು ಕನಿಷ್ಠ ಮಟ್ಟದಲ್ಲಿ ಮುಂದುವರೆಸಿ ತನ್ನ ವ್ಯಾಪಾರದ ಹಿತಾಸಕ್ತಿಗಳನ್ನು ಮೇಲ್ಮಟ್ಟಕ್ಕೇರಿಸಿಕೊಳ್ಳಲು ಹವಣಿಸುತ್ತಾನೆ ಎನ್ನುವುದು ಮಾರ್ಕ್ಸ್‌ನ ವಾದ ಎಂದು ಬರೆಯುತ್ತಾನೆ.

ಇಂಡಿಯಾದ ಕಮ್ಯುನಿಷ್ಟರ ಆದರ್ಶಗಳು ಪ್ರಶ್ನಾತೀತವಾಗಿದ್ದವು. ತಾವು ನಂಬಿದ ತತ್ವಗಳಿಗೆ ಸಂಪೂರ್ಣ ಬದ್ಧರಾಗಿ, ಜನಸಾಮಾನ್ಯರ, ಬಡವರ ಪರವಾಗಿ, Niyamagiri_Protestsನಿಸ್ವಾರ್ಥದಿಂದ ಸಾರ್ವಜನಿಕ ಜೀವನದಲ್ಲಿ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಇಲ್ಲಿನ ಕಮ್ಯುನಿಷ್ಟರು ಮೂಢನಂಬಿಕೆಗಳ ವಿರುದ್ಧ, ಕೋಮುವಾದದ ವಿರುದ್ಧ ನಿರಂತರ ಸಂಘಟನೆಗಳು, ಚಳುವಳಿಗಳನ್ನು ರೂಪಿಸಿದ್ದಾರೆ. ಬಂಡವಾಳಶಾಹಿಗಳ ಯಜಮಾನ್ಯವನ್ನು ದಿಟ್ಟತನದಿಂದ ಎದುರಿಸಿ, ಜೀವ ತೆತ್ತವರು ಇಂಡಿಯಾದ ಕಮ್ಯುನಿಷ್ಟರು. ಇವರಾರು ಬಂಗಲೆಗಳನ್ನು ಕಟ್ಟಲಿಲ್ಲ. ತಮ್ಮ ಸ್ವಂತದ ಬದುಕನ್ನೂ ಈ ಕ್ರಾಂತಿಕಾರಿ ಸಂಘಟನೆಗಳಿಗೆ ಮುಡಿಪಾಗಿಟ್ಟ ಇಲ್ಲಿನ ಕಮ್ಯುನಿಷ್ಟರು ಸರಳ ಬದುಕಿಗೆ ಅತ್ಯುತ್ತಮ ಮಾದರಿಯಾಗಿದ್ದಾರೆ. ಸೈದ್ಧಾಂತಿಕ ತಿಕ್ಕಾಟಗಳಲ್ಲಿ, ಸೆಮಿನಾರಿನಲ್ಲಿ ಬೌಧ್ಧಿಕ ಕಸರತ್ತುಗಳ ಮೂಲಕ ಎಡಪಂಥೀಯ ಚಿಂತನೆಗಳ ಅನೇಕ ಆಶಯಗಳ ನುಡಿಮುತ್ತನ್ನು ಉದ್ಧರಿಸುವ ನಮ್ಮ ಅಕಡೆಮಿಕ್ ಬೌದ್ಧಿಕ ವಲಯ ಒಂದು ಕಡೆಯಲ್ಲಿದ್ದರೆ ಮತ್ತೊಂದು ಕಡೆ ಸಾವಿರಾರು ಕಮ್ಯುನಿಷ್ಟ್ ಕಾರ್ಯಕರ್ತರು ಇಂದಿಗೂ ತಮಗೆ ಸಿಗುವ ಕೆಲವು ಸಾವಿರ ರೂ.ಗಳ ಸಂಬಳಕ್ಕಾಗಿ ಪ್ರಾಮಾಣಿಕ ಹೋರಾಟಗಳನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ. ಅನೇಕ ಕಾರ್ಯಕರ್ತರು ಮತ್ತು ನಾಯಕರು ಹಣಕಾಸಿನ ಅಡಚಣೆಗಳಿಂದ ತಮ್ಮ ಆರೋಗ್ಯದ ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ಜನಪರವಾಗಿರುವ, ಶೋಷಣೆಯ, ಬಂಡವಾಳಶಾಹಿಗಳ ವಿರುದ್ಧ, ಮೌಢ್ಯಗಳ ವಿರುದ್ಧ ಸದಾ ಹೋರಾಡುವ ಇಲ್ಲಿನ ಎಡಪಂಥೀಯರ ಹೋರಾಟದ ಮಿತಿಗಳನ್ನು ಟೀಕಿಸುವಾಗ ನಮ್ಮ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಅಕಡೆಮಿಕ್ ಶಿಸ್ತನ್ನು, ಅದರ ಅವಲಂಬನೆಯ ಅವಶ್ಯಕತೆಗೆ ಎಳ್ಳು ನೀರು ಬಿಟ್ಟು ತೀರಾ ಸಾಮಾನ್ಯವಾದ ತಿಳುವಳಿಕೆಯಿಂದ ಮತ್ತು ಅನೇಕ ವೇಳೆ ವೈಯುಕ್ತಿಕ ವಿರೋಧಗಳನ್ನಾಧರಿಸಿ ಏಕಾಏಕಿ ಕಮ್ಯುನಿಷ್ಟರನ್ನು ಟೀಕಿಸಲಾರಂಭಿಸುತ್ತಾರೆ. ಇವರ ಈ ವಾಗ್ದಾಳಿಗಳು ಸಾವಿರಾರು ಕಾರ್ಯಕರ್ತರ ನೈತಿಕ ಶಕ್ತಿಯನ್ನೇ ಉಡುಗಿಸುತ್ತದೆ ಎನ್ನುವ ಪ್ರಾಥಮಿಕ ತಿಳುವಳಿಕೆ ಸಹ ಇಲ್ಲದಂತೆ ಇವರೆಲ್ಲಾ ವರ್ತಿಸುತ್ತಿರುವುದು ಪ್ರಶ್ನಾರ್ಹ.

ಕಳೆದ ಎಂಬತ್ತೈದು ವರ್ಷಗಳ ಕಮ್ಯನಿಷ್ಟ್ ಪಕ್ಷಗಳ ಹೋರಾಟಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಇಂಡಿಯಾದ ಸಂದರ್ಭದಲ್ಲಿ ಎಡ ಪಕ್ಷಗಳ ಹೋರಾಟವು Left _Mangaloreವರ್ಗ ಸಂಘರ್ಷವನ್ನು ಉತ್ಪಾದನಾ ಪದ್ಧತಿಯ ಸರಪಳಿಯೊಂದಿಗೆ ಬಂಧಿಸುವುದರ ಮೂಲಕ ಅಭೂತವೆನ್ನಬಹುದಾದಂತಹ ಸಂಘಟನೆಯನ್ನು ಹುಟ್ಟುಹಾಕಿರುವುದು ಇಂದು ನಮ್ಮ ಮುಂದಿದೆ. ಒಂದು ವರ್ಗವು ಉತ್ಪಾದನೆಯ ಜವಾಬ್ದಾರಿ ಮತ್ತು ನಿಯಂತ್ರಣವನ್ನು ತನ್ನದಾಗಿಸಿಕೊಂಡರೆ ದುರುಪಯೋಗಕ್ಕೆ ಒಳಪಟ್ಟಿದ್ದ ಮತ್ತೊಂದು ವರ್ಗದ ಪ್ರಾತಿನಿಧ್ಯವನ್ನು ವಹಿಸಿದ್ದ ಎಡಪಕ್ಷಗಳು ಆ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವು. ಇಲ್ಲಿ ಉತ್ಪಾದನಾ ಶಕ್ತಿಗಳು ತಮ್ಮ ಅಭಿವೃದ್ಧಿಗೆ ಪೂರಕವಾಗುವಂತಹ ವರ್ಗಗಳನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಂಡಾಗ ಆದರ ಮುಂದಿನ ದಿನಗಳಲ್ಲಿ ಈ ಬಳಸಲ್ಪಟ್ಟ ವರ್ಗಗಳೇ ಉತ್ಪಾದನಾ ಶಕ್ತಿಗಳಿಗೆ ತೊಡಕಾಗುವುದರ ಪ್ರಕ್ರಿಯೆಗೆ ಚಾಲನೆ ನೀಡಿದ ಕಮ್ಯನಿಷ್ಟರು ಆ ಮೂಲಕ ವರ್ಗ ಸಂಘರ್ಷದ ಇತಿಹಾಸದಲ್ಲಿ ಒಂದು ರಾಜಕೀಯ ಕ್ರಾಂತಿಯನ್ನೇ ಸಾಧಿಸಿದರು. ಇದು ಇತಿಹಾಸದಲ್ಲಿ ದಾಖಲಾಗಿದೆ. ಇದನ್ನು ನೋಡುವ ಪ್ರಾಮಾಣಿಕ ಒಳಗಣ್ಣಿದ್ದರೆ ಸಾಕಷ್ಟೆ. ಇಲ್ಲಿ ಪಶ್ಚಿಮ ಬಂಗಾಳದ ಸಿಂಗೂರು, ನಂದಿಗ್ರಾಮ ಭೂ ಹೋರಾಟದ ಸಂದರ್ಭದಲ್ಲಿ ಕಮ್ಯುನಿಷ್ಟರ ಸೋಲನ್ನು ಕುರಿತಾಗಿ ಬರೆಯುವ ಟೀಕಾಕಾರರು ಮೂವತ್ತು ವರ್ಷಗಳ ಕಮ್ಯುನಿಷ್ಟರ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚೂ ಕಡಿಮೆ ಕೋಮುಗಲಭೆಗಳೇ ನಡೆಯಲಿಲ್ಲ. ಅದರಲ್ಲೂ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಕೂಡ. ಇದನ್ನು ಮರೆಯುವುದು ಮರೆಮೋಸವಲ್ಲವೇ? ಅಲ್ಲಿನ ಪಂಚಾಯ್ತಿ ರಾಜ್ ಪದ್ಧತಿ, ಭೂ ಹಂಚಿಕೆ ಚಳುವಳಿ ಅನೇಕ ದಶಕಗಳ ಕಾಲ ಇಂಡಿಯಾದ ಇತರೇ ರಾಜ್ಯಗಳಿಗೆ ಮಾದರಿಯಾಗಿದ್ದವು.

ಅಷ್ಟು ದೂರ ಬೇಡ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮೂವತ್ತರ ದಶಕದಿಂದ ಎಪ್ಪತ್ತರ ದಶಕದವರೆಗೂ ಅಲ್ಲಿನ ಬೀಡಿ ಕಾರ್ಮಿಕರ, Left_Mangaloreಕೂಲಿ ಕಾರ್ಮಿಕರ, ಹೋರಾಟಗಳನ್ನು ನಿರಂತರವಾಗಿ ನಡೆಸಿದ್ದು ಕಮ್ಯುನಿಷ್ಟರು. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಅದಕ್ಕೆ ಬೇರೆ ವೇದಿಕೆಯೇ ಬೇಕಾಗುತ್ತದೆ. ಆದರೆ ಇಂತಹ ನಿಸ್ವಾರ್ಥ ಹೋರಾಟವನ್ನು ಇಂದು ಬರೆಯುವಾಗ ಎಂದೋ ನಡೆದು ಹೋದ ಘಟನೆಗಳು ಎಂದು ಮಾತ್ರ ಉದಾಹರಿಸುತ್ತಿಲ್ಲ. ಇಂದಿಗೂ ಆ ಕಾಲದ ಪ್ರಾಮಾಣಿಕ ಹೋರಾಟ ಇಂದಿನ ಕಮ್ಯುನಿಷ್ಟ್ ಕಾರ್ಯಕರ್ತರನ್ನು ಪೊರೆಯುತ್ತಿದೆ. ಆದರೆ ನವಉದಾರೀಕರಣದ ಇಂದಿನ ದಿನಗಳಲ್ಲಿ ಮತೀಯವಾದದ ಸಮಾಜವನ್ನು ಎದುರಿಸುವುದು ಪ್ರತಿಯೊಬ್ಬರಿಗೂ ಒಂದು ಸವಾಲಾಗಿ ಎದುರಾಗುತ್ತಿರುವ, ಈ ಪ್ರತಿ ಸವಾಲಿಗೂ ಹೊಸ ನುಡಿಕಟ್ಟನ್ನು ಕಂಡುಕೊಳ್ಳಬೇಕಾದಂತಹ ಬಿಕ್ಕಟ್ಟಿನ ಇಂದಿನ ಕಾಲದಲ್ಲಿ ಯಾವುದೇ ಜನಪರ ಮಾಡೆಲ್‌ಗಳನ್ನು ಕಟ್ಟಲು ವಿಫಲರಾದ ನಾವು ಇಂದಿನ ಹೋರಾಟಗಳ ಮಿತಿಗೆ ಪ್ರಾಮಾಣಿಕ ಕಾರ್ಯಕರ್ತರನ್ನು ದೂಷಿಸುವುದು ಅಮಾನವೀಯವಾಗುತ್ತದೆ.

ಆದರೆ ಇಂದಿನ ನವಉದಾರೀಕರಣದ ಕಾಲಘಟ್ಟದಲ್ಲಿ, ಕೇಂದ್ರದಲ್ಲಿ ಬಿಜೆಪಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ, ಇಡೀ ಸರ್ಕಾರಿ ಉದ್ದಿಮೆಗಳನ್ನು ಮುಂದಿನ ವರ್ಷಗಳಲ್ಲಿ ಕ್ರಮೇಣ ಖಾಸಗೀಕರಣಗೊಳಿಸುವ ಬೃಹತ್ ಯೋಜನೆಯ ಅನುಷ್ಠಾನದಲ್ಲಿರುವ ಮೋದಿಯ ರಾಜ್ಯಭಾರದಲ್ಲಿ ನಮ್ಮಲ್ಲಿನ ಎಡಪಂಥೀಯ ಪಕ್ಷಗಳು ಮತ್ತಷ್ಟು ತೀವ್ರತೆಯಿಂದ, ಈಗಿನ ಸವಕಲು ಮಾರ್ಗವನ್ನು ಕೈಬಿಟ್ಟು ವಿಭಿನ್ನ ಚಿಂತನೆಗಳಿಂದ ನಿರಂತರ ಹೋರಾಟಗಳನ್ನು ಕಟ್ಟುವ, ಮುಂದಿನ ದಶಕಕ್ಕೆ ಜನಪರ ರಾಜಕೀಯ ತಳಹದಿಯನ್ನು ರೂಪಿಸುವಂತಹ ವಿವಿಧ ಮಾಡೆಲ್‌ಗಳನ್ನು ಇಷ್ಟರಲ್ಲಾಗಲೇ ಕಟ್ಟಬೇಕಿತ್ತು. ತಮ್ಮ ಮಡಿವಂತಿಕೆಯನ್ನು ಬಿಟ್ಟು ಸಮಾನಮನಸ್ಕರೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಶುರುವಾಗಬೇಕಿತ್ತು. ಆದರೆ ಇದಾವುದೂ ಕಾಣುತ್ತಿಲ್ಲ. ಚುನಾವಣಾ ಸೋಲುಗಳಿಂದ ಸಂಪೂರ್ಣ ನಿಶ್ಯಕ್ತಿಗೊಂಡಂತೆ ಕಾಣುತ್ತಿರುವ ಇಲ್ಲಿನ ಎಡ ಪಕ್ಷಗಳು ಮರುಚೇತನ ಪಡೆದುಕೊಳ್ಳುವ ಯಾವ ಲಕ್ಷಣಗಳೂ ಸದ್ಯಕ್ಕಂತೂ ಕಾಣುತ್ತಿಲ್ಲ. ಈ ಹಿನ್ನಡೆಗಳೇ ನಮ್ಮಲ್ಲಿ ಪದೇ ಪದೇ ಎಡಪಕ್ಷಗಳ ಕುರಿತಾದ ಭ್ರಮನಿರಸನವನ್ನು ಮೂಡಿಸುತ್ತವೆ. ಈ ಎಡಪಂಥೀಯ ಪಕ್ಷಗಳ ಬಿಕ್ಕಟ್ಟು ಅಂತರಿಕವಾಗಿರುವುದು ಎಷ್ಟು ನಿಜವೂ ಈ ನವಉದಾರೀಕರಣದ ಕಾಲದಲ್ಲಿ ಬಳಸಬೇಕಾದ ಸಮಕಾಲೀನ ನುಡಿಕಟ್ಟುಗಳಿಗಾಗಿ ಇವರು ಇನ್ನೂ ತಡಕಾಡುತ್ತಿರುವುದು ಕೂಡ ನಮ್ಮ ಕಣ್ಣ ಮುಂದಿದೆ.

ನಿಜ. ಜಾತಿ ಪದ್ಧತಿಯನ್ನು ಕರಾರುವಕ್ಕಾಗಿ ಅರಿಯದಿರುವುದು ನಮ್ಮ ಎಡ ಪಕ್ಷಗಳ ಒಂದು ದೊಡ್ಡ ಮಿತಿಯೇ ಸರಿ. ನಿಜಕ್ಕೂ ಹೇಳಬೇಕೆಂದರೆ ಇಲ್ಲಿನ Left_Movementsಕಮ್ಯನಿಷ್ಟ್ ಪಕ್ಷವು ಇಂಡಿಯಾದಲ್ಲಿ ಜಾತಿ ಪದ್ಧತಿ ಎನ್ನುವುದು ಇದೆ ಎನ್ನುವುದನ್ನು ಒಪ್ಪಿಕೊಂಡು ಮೂವತ್ನಾಲ್ಕು ವರ್ಷಗಳಾದವಷ್ಟೇ ಎಂದು ಲೇಖಕರು, ಪತ್ರಕರ್ತರು ಅಭಿಪ್ರಾಯ ಪಡುತ್ತಾರೆ. ವರ್ಷಗಳು ಹಿಂದು ಮುಂದಾದರೂ ಕಡೆಗೆ ಆ ಅಭಿಪ್ರಾಯ ಮಾತ್ರ ನಿಜ. ‘ಎಲ್ಲಾ ಇತಿಹಾಸವೂ ವರ್ಗ ಸಂಘರ್ಷಗಳ ಇತಿಹಾಸವಾಗಿರುತ್ತದೆ’ ಎಂದು ಹೇಳಿದ ಮಾರ್ಕ್ಸ್ ನ ಮಾತಿನ ಅರ್ಥ ಇತಿಹಾಸವೆಲ್ಲವೂ ವರ್ಗ ಸಂಘರ್ಷವೇ ಎಂದಲ್ಲ, ಬದಲಾಗಿ ಮಾನವ ಇತಿಹಾಸದಲ್ಲಿ ವರ್ಗ ಸಂಘರ್ಷವೂ ಒಂದು ಪ್ರಮುಖ ಭಾಗವಾಗಿರುತ್ತದೆ ಎಂದರ್ಥ. ಸಂಪತ್ತು ಮತ್ತು ಶಕ್ತಿಯ ಅಸಮಾನ ಹಂಚಿಕೆಯನ್ನುಳ್ಳ ಸಮಾಜವು ಅನೈತಿಕ ಎಂದು ಮಾರ್ಕ್ಸ್ ಧೃಢವಾಗಿ ನಂಬಿದ್ದ. ಇಂಡಿಯಾದ ಸಂದರ್ಭದಲ್ಲಿ ಆ ಅಸಮಾನತೆಯೆಂದರೆ ಜಾತಿ ಪದ್ಧತಿ ಮತ್ತು ವರ್ಣಾಶ್ರಮ ವ್ಯವಸ್ಥೆ. ಜಮೀನ್ದಾರನ ಬಳಿ ಜೀತಕ್ಕಿರುವ ವ್ಯಕ್ತಿ ಕೇವಲ ಬಡವ ಮಾತ್ರವಲ್ಲ ಜೊತೆಗೆ ದಮನಿತ ಜಾತಿಗೆ ಸೇರಿದವನಾಗಿರುತ್ತಾನೆ. ಆದರೆ ಇಂಡಿಯಾ ಸಮಾಜದ, ಜಾತಿ ವ್ಯವಸ್ಥೆಯ ಸಂಕೀರ್ಣ ಸ್ವರೂಪವನ್ನು, ವಾಸ್ತವವನ್ನು, ಜಾತಿ ಪದ್ಧತಿಯ ಕರಾಳತೆಯನ್ನು ನಮ್ಮ ಕಮ್ಯುನಿಷ್ಟರು ಅರಿಯದೇ ಹೋದರು ಮತ್ತು ಅರಿತುಕೊಂಡವರು ಅದನ್ನು ನಿರ್ಲಕ್ಷಿಸಿದರು. ತಮ್ಮ ಪಕ್ಷಗಳಲ್ಲಿ ಸದಸ್ಯರನ್ನು ನಾಮಕರಣ ಮಾಡುವಾಗ, ನಾಯಕರನ್ನು ಆರಿಸುವಾಗ ಸಾಮಾಜಿಕ ನ್ಯಾಯದ ಮೀಸಲಾತಿಯನ್ನು ಪರಿಗಣಿಸಲೇ ಇಲ್ಲ. ಹೀಗಾಗಿ ಅನೇಕ ದಶಕಗಳ ಕಾಲ ಬ್ರಾಹ್ಮಣರೇ ಎಡಪಂಥೀಯ ಚಳುವಳಿಗಳ ನೇತೃತ್ವ ವಹಿಸಿರುವುದು ಸಾಮಾನ್ಯ ಸಂಗತಿಯಾಗಿತ್ತು. ಸಾಮಾಜಿಕ ನ್ಯಾಯದ ಚಳುವಳಿಯ ಸಂದರ್ಭದಲ್ಲಿ ಇದು ಟೀಕೆಗೆ ಒಳಗಾಗಿದ್ದು ಸಹಜ ಮತ್ತು ನ್ಯಾಯಯುತವಾಗಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಮಾರ್ಕ್ಸ್ ಸಿದ್ಧಾಂತವನ್ನು ಗ್ರಹಿಸುವ ಕ್ರಮದಲ್ಲಿ, ಇಂಡಿಯಾದ ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯದ ನೆಲೆಯಲ್ಲಿ ಮಾಕ್ರ್ಸವಾದವನ್ನು ವ್ಯಕ್ತಿ ಪ್ರಜ್ಞೆ ಮತ್ತು ಸಾಮಾಜಿಕತೆಯನ್ನು ಇಲ್ಲಿನ ಶ್ರೇಣೀಕೃತ ವ್ಯವಸ್ಥೆಗೆ ಅನ್ವಯಿಸಿ ಹೋರಾಟಗಳನ್ನು ಕಟ್ಟುವುದರಲ್ಲಿ ನಮ್ಮ ಕಮ್ಯುನಿಷ್ಟ್ ಪಕ್ಷದವರು ತುಂಬಾ ಮುಗ್ಧರಾಗಿ ವರ್ತಿಸಿದರು ಮತ್ತು ಅದನ್ನು ಪ್ರಾತಿನಿಧಿಕವಾಗಿ ತೆಗೆದುಕೊಳ್ಳಲೇ ಇಲ್ಲ ಎಂದೆನಿಸುತ್ತದೆ.

ವರ್ಗಗಳಲ್ಲಿಯೂ ಜಾತಿಗಳಿರುತ್ತವೆ, ಅವು ಅಸಮಾನತೆಯ ನೆಲೆಯಲ್ಲಿರುತ್ತವ. ಇಲ್ಲಿ ಜಾತಿ ಆಧಾರಿತ ಶ್ರೇಷ್ಠತೆಯ ಪ್ರಶ್ನೆ ಬಂದಾಗ ಇದೇ ದುಡಿಯುವ ವರ್ಗಗಳು ಪ್ರೊಲೆಟರಿಯೇಟ್ ನ ಸಿದ್ಧಾಂತಕ್ಕೆ antithesis ಆಗಿ ವರ್ತಿಸಲು ಶುರು ಮಾಡುತ್ತಾರೆ. ವರ್ಗವನ್ನಾಧರಿಸಿ ಕಟ್ಟಿದ ಯೂನಿಯನ್ನಿನ ಒಳಗೆ ವರ್ಣಾಶ್ರಮದ ಶ್ರೇಣಿಕೃತ ವ್ಯವಸ್ಥೆ ರೂಪುಗೊಂಡಿರುತ್ತದೆ. ಇಲ್ಲಿ ಮೇಲ್ಜಾತಿಯ ಕಾರ್ಮಿಕರು ಜಾತಿಯ ಪ್ರಶ್ನೆ ಬಂದಾಗ ಇವರು ತಮ್ಮ ತಳ ಸಮುದಾಯಗಳ ಕಾಮ್ರಡ್ ಗಳನ್ನೂ ಧಿಕ್ಕರಿಸಿ ಜಾತಿಪದ್ಧತಿಗೆ ಮಣೆ ಹಾಕುತ್ತಾರೆ ಎನ್ನುವುದು ವಾಸ್ತವ.ಇದು ಇತಿಹಾಸವೂ ಹೌದು ಮತ್ತು ವರ್ತಮಾನವೂ ಹೌದು. ಆದರೆ ಈ ಜಾತಿ ಪದ್ಧತಿಯ ಈ ಕರಾಳ ವಾಸ್ತವಕ್ಕೆ ಕುರುಡಾಗಿ ಕೇವಲ ಏಕರೂಪಿಯಾಗಿ ವರ್ಗಗಳನ್ನು ಮತ್ತು ವರ್ಗ ಸಂಘರ್ಷಗಳನ್ನು ತಮ್ಮ ಮೂಲಭೂತ ಹೋರಾಟವನ್ನಾಗಿ ಮಾಡಿಕೊಂಡರು ಇಂಡಿಯಾದ ಕಮ್ಯುನಿಷ್ಟರು. ಮತ್ತೊಂದು ಕಡೆ ಕಮ್ಯುನಿಷ್ಟ್ ಪಕ್ಷದ ಯೂನಿಯನ್ ನ ಅಡಿಯಲ್ಲಿ ಲಕ್ಷಾಂತರ ಕಾರ್ಮಿಕರು ಸದಸ್ಯರಾಗಿದ್ದಾರೆ. ಆದರೆ ಬಹುಪಾಲು ಕಾರ್ಮಿಕರಿಗೆ ಕಮ್ಯುನಿಷ್ಟ್ ಪಕ್ಷದ ಬಗ್ಗೆ ಇರುವ ಒಲವು ಮತ್ತು ಸಂಬಂಧಗಳು ಕೇವಲ ತಮ್ಮ ವೈಯುಕ್ತಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಷ್ಟರ ಮಟ್ಟಿಗೆ ಅಷ್ಟೆ.ಆದರೆ ಕಮ್ಯನಿಷ್ಟರ ಎಡಪಂಥೀಯ ಚಿಂತನೆಗಳಿಗೆ, ಸೆಕ್ಯುಲರ್ ತತ್ವಗಳಿಗೆ ಮುಕ್ಕಾಲು ಪಾಲು ಕಾರ್ಮಿಕರು ಯಾವುದೇ ಪ್ರಾಮುಖ್ಯತೆಯನ್ನೇ ನೀಡುವುದಿಲ್ಲ. ನಮ್ಮ ಕಮ್ಯುನಿಷ್ಟ್ ಪಕ್ಷಗಳು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಜಟಿಲತೆಗಳನ್ನು ವಾಸ್ತವ ನೆಲೆಗಟ್ಟಿನಿಂದ ನೋಡದೆ ಎಲ್ಲದಕ್ಕೂ ಆರ್ಥಿಕ ವ್ಯವಸ್ಥೆಯೇ ಅಡಿಪಾಯ ಎಂದು ಸರಳರೇಖೆಯಂತೆ ಹೊರಟಿದ್ದೇ ಈ ದುರಂತಕ್ಕೆ ಕಾರಣ.

ಹೀಗಾಗಿ ಇವರ ಯೂನಿಯನ್ನಿನ ಲಕ್ಷಾಂತರ ಕಾರ್ಮಿಕರಿಗೆ ತಮ್ಮ ನೌಕರಿಯಲ್ಲಿನ ತೊಂದರೆಗಳಿಗೆ, ಇಂಕ್ರಿಮೆಂಟ್ ಗಳಿಗೆ, ಬೋನಸ್ ಗೆ ಮತ್ತು ಅಲ್ಲಿನ ವರ್ಗ ಅಸಮಾನತೆಯ ವಿರುದ್ಧ ಹೋರಾಡಲು ಮಾತ್ರ ಕಮ್ಯನಿಷ್ಟ ಪಕ್ಷದ ಯೂನಿಯನ್ ಗಳು ಬೇಕು, ಆದರೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ನಿರ್ಣಯಗಳನ್ನು ನಿರ್ಧರಿಸುವಾಗ, ಮಾರ್ಕ್ಸ್ ನ ಸಮತಾವಾದದ ಚಿಂತನೆಗಳನ್ನು ಅರ್ಥೈಸಿಕೊಳ್ಳುವಾಗ ಈ ಕಾರ್ಮಿಕರು ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾರೆ. ಉತ್ಪಾದನಾ ಸಾಮರ್ಥ್ಯದ General-Strike-Indiaವಿಕಸನವೆಂದರೆ ತಂತ್ರಜ್ಞಾನದ ವಿಕಸನವೂ ಹೌದು. ಇವೆರಡೂ ಪರಸ್ಪರ ಪೂರಕವಾಗಿ ಬೆಳೆಯತೊಡಗಿದಾಗ ಇಂಡಿಯಾದಂತಹ ಪ್ರತ್ಯೇಕತೆಯನ್ನೊಳಗೊಂಡ ಸಮಾಜದಲ್ಲಿ ಈ ಬೇಳವಣಿಗೆಯು ಕೇವಲ ಒಂದು ಸಮುದಾಯಗಳ, ಮೇಲ್ಜಾತಿಗಳ, ಸವರ್ಣೀಯರ ಉನ್ನತಿಯಾಗಿರುತ್ತದೆ ಎಂದು ಅರ್ಥೈಸುವಲ್ಲಿ ನಮ್ಮ ಕಮ್ಯುನಿಷ್ಟರು ತುಂಬಾ ತಡ ಮಾಡಿದರು. ಏಕೆಂದರೆ ಸಾಮಾಜಿಕ ಸಂಬಂಧಗಳೇ ಸಮಾಜದ ವಿಕಸನದ ಶೈಲಿಯನ್ನು ನಿರ್ಧರಿಸುತ್ತವೆ ಎನ್ನುವ ಸತ್ಯ ನಮ್ಮ ಎಡಪಂಥಿಯ ಹೋರಾಟಗಾರರಿಗೆ ಸ್ಪಷ್ಟವಾಗಲಿಲ್ಲವೇ ಅಥವಾ ಅದನ್ನು ನಿರ್ಲಕ್ಷಿಸಿದರೇ? ಆಂದರೆ ಆಧುನಿಕ ವಿಜ್ಞಾನ ಮತ್ತು ಮಾನವನ ಸ್ವಾತಂತ್ರ ಮತ್ತು ಆಧ್ಯಾತ್ಮ ಮತ್ತು ಧಾರ್ಮಿಕತೆ ಮತ್ತು ಆದಿವಾಸಿ, ತಳಸಮುದಾಯಗಳ ಶ್ರೀಮಂತ ಅವೈದಿಕ ಸಾಂಸ್ಕೃತಿಕ ಜಗತ್ತು ಇವೆಲ್ಲದರ ನಡುವಿನ ಪರಸ್ಪರ ವಿರೋಧಾಭಾಸಗಳು ಮತ್ತು ಇವುಗಳ ನಡುವಿನ ಸಾಮಾಜಿಕ- ಸಾಂಸ್ಕೃತಿಕ-ಆರ್ಥಿಕ ಸಂರಚನೆಗಳನ್ನು ಆಧ್ಯಯನ ಮಾಡಲು ನಮ್ಮ ಕಮ್ಯುನಿಷ್ಟರು ತೋರಿಸಿದ ನಿರಾಸಕ್ತಿಗಾಗಿ ಇಂದು ಅಪಾರ ಬೆಲೆ ತೆರಬೇಕಾಗಿ ಬಂದಿದೆ. ಈ ಅಪಾಯಗಳನ್ನು ಗ್ರಹಿಸಿಯೇ ಮಾರ್ಕ್ಸ್ ವಾದಿ  ಚಿಂತಕ ಗ್ರಾಮ್ಷಿಯು “ಸಾಂಸ್ಕೃತಿಕ ಸಂಘಟನೆಗಳು ಹೋರಾಟಗಳ ಮತ್ತು ವ್ಯವಸ್ಥೆಯ ಕೇಂದ್ರವಾಗಿರಬೇಕು ಮತ್ತು ರಾಜಕೀಯ ಮತ್ತು ಆರ್ಥಿಕ ಸಂಘಟನೆಗಳು ಸಾಂಸ್ಕೃತಿಕ ಸಂಘಟನೆಗೆ ಪೂರಕವಾಗಿ ಕೆಲಸ ಮಾಡಬೇಕು “ಎಂದು ಪ್ರತಿಪಾದಿಸಿದ. ಬೌದ್ಧಿಕ ಪ್ರೇರಣೆಗಳ ಮೂಲಕ ಜನಸಾಮಾನ್ಯರೆಲ್ಲರೂ ಬುದ್ಧಿಜೀವಿಗಳಾಗಬೇಕೆಂದು ಆಶಿಸಿದ. ಏಕೆಂದರೆ ಒಮ್ಮೆ ಪ್ರಳಯಕ್ಕೆ ತುತ್ತಾಗಿ ಇಡೀ ವಿಶ್ವವೇ ನಾಶಗೊಂಡಾಗ ಮರಳಿ ಬೂದಿಯಿಂದ ನಾಗರಿಕತೆಯನ್ನು ಕಟ್ಟಬೇಕಾದಂತಹ ಸಂದರ್ಭದಲ್ಲಿ ಈ ಬುದ್ಧಿಜೀವಿ ಜನಸಾಮಾನ್ಯರ ಅವಶ್ಯಕತೆ ಬೇಕೇ ಬೇಕು.

ಆದರೆ ಇಂಡಿಯಾದ ಕಮ್ಯುನಿಷ್ಟ್ ಪಕ್ಷದ ಕುರಿತಾಗಿ ಮಾತನಾಡುವಾಗ ಈ ಎಲ್ಲ ಸಂಕೀರ್ಣ ತರ್ಕಗಳನ್ನು ಸರಳೀಕರಿಸಿ ಹೇಳುವುದೂ ತುಂಬಾ ಕಷ್ಟ. ಇಲ್ಲಿನ ಕಮ್ಯುನಿಷ್ಟರ ನಿಸ್ವಾರ್ಥ ಹೋರಾಟಗಳನ್ನು, ಸೆಕ್ಯಲರಿಸಂ ಅನ್ನು, ಪ್ರಾಮಾಣಿಕತೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಕಡೆಗಣಿಸಿದ್ದೇ ಆದರೆ ಒಂದು ಪ್ರಾಮಾಣಿಕ, ಜನಪರ ಹೋರಾಟವನ್ನು ನಾವೇ ಕೈಯಾರೆ ಕೊಂದಂತೆ. ಇಷ್ಟೆಲ್ಲಾ ಸಂಕೀರ್ಣತೆಯನ್ನು ಐಲಯ್ಯನವರು, ನಮ್ಮ ಪತ್ರಕರ್ತ ಗೆಳೆಯರು ಇಷ್ಟೊಂದು ಸರಳೀಕರಿಸಿ ಮಾತನಾಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಸತ್ಯಾನ್ವೇಷಣೆಯಲ್ಲಿದ್ದೇವೆ ಎಂದೇ ಹೊರಡುವ ಇವರೆಲ್ಲಾ ಕಡೆಗೆ ಸ್ವತಃ ತಮ್ಮ ಮಾತಿನ ಐಭೋಗಕ್ಕೆ ತಾವೇ ಬಲಿಯಾಗಿ ಹಾದಿ ತಪ್ಪಿ ತಪ್ಪಾದ ಗಮ್ಯದ ಕಡೆಗೆ ಚಲಿಸುತ್ತಿದ್ದಾರೆ. ಆದರೆ ಇದರಿಂದಾಗುವ ಅಪಾಯವೇನೆಂದರೆ ಹೊಸ ತಲೆಮಾರಿನ ಹುಡುಗರಿಗೆ ಈ ಮೇಲ್ಪದರದ, ಗತಿ ತಪ್ಪಿದ ಹೇಳಿಕೆಗಳೇ ಸತ್ಯವಾಗಿ ಹೋದರೆ ಗತಿಯೇನು?