Category Archives: ರವಿ ಕೃಷ್ಣಾರೆಡ್ಡಿ

ಚುನಾವಣಾ ಸಿದ್ಧತೆಗಳು, ಸ್ವಪರಿಚಯ, ಇತ್ಯಾದಿ…

ವರ್ತಮಾನ.ಕಾಮ್‌ನ ಪ್ರಿಯ ಓದುಗರೆ,

ನಿಮಗೆ ಗೊತ್ತಿರುವ ಹಾಗೆ ನಾನು ಇತ್ತೀಚೆಗೆ ಚುನಾವಣಾ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿಯತನಕದ ಪ್ರತಿಕ್ರಿಯೆ ಚೆನ್ನಾಗಿದೆ. ಈಗಾಗಲೇ ಸುಮಾರು 40000 ದಷ್ಟು ಪ್ಯಾಂಪ್ಲೆಟ್‌ಗಳನ್ನು ಕ್ಷೇತ್ರದಲ್ಲಿ ಹಂಚಲಾಗಿದೆ. ಒಂದು ತಂಡವನ್ನು ಕಟ್ಟುವ ಕೆಲಸ ನಡೆಯುತ್ತಿದೆ. Ravi_pamphlet_Kan_11-02_13ಚುನಾವಣಾ ಆಯೋಗದ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿ ರೂ.16 ಲಕ್ಷ. ಬಹುಶಃ ಅಷ್ಟನ್ನೂ ನಿಮ್ಮಂತಹ ಸಮಾನಮನಸ್ಕರಿಂದ, ಸ್ನೇಹಿತರಿಂದ, ಸಾರ್ವಜನಿಕರಿಂದಲೇ ಸಂಗ್ರಹಿಸುವ ಗುರಿ ಇದೆ. ಚುನಾವಣೆಗೆ ಮೊದಲು ಕ್ಷೇತ್ರದ ಬಹುತೇಕ ಮತದಾರರನ್ನು ಮುಟ್ಟುವ ವಿಶ್ವಾಸ ಇದೆ. ಈ ಚುನಾವಣೆ ಮುಂದಿನ ದಿನಗಳಲ್ಲಿನ ನಮ್ಮ ರಾಜ್ಯದ ರಾಜಕಾರಣದ ರೀತಿ-ನೀತಿಗಳನ್ನು ಬಹುಪಾಲು ನಿರ್ಧರಿಸುತ್ತದೆ ಎನ್ನುವ ನಂಬಿಕೆ ನನಗಿದೆ. ಇನ್ನು ನಾಲ್ಕೈದು ವರ್ಷಗಳ ನಂತರ ಈ ತರಹದ ರಾಜಕಾರಣ ಮತ್ತು ಚುನಾವಣೆಗಳೇ ಮುಖ್ಯವಾಹಿನಿಯಲ್ಲಿರುತ್ತವೆ ಮತ್ತು ಅದು ಪ್ರಮುಖ ಪಕ್ಷಗಳನ್ನೂ ಸರಿದಾರಿಗೆ ಬರಲು ಒತ್ತಡ ಹೇರುತ್ತದೆ. ಅದಕ್ಕಾಗಿ ಕೇವಲ ಕೆಲವರೇ ಅಲ್ಲ, ಸಮಾಜದ ಬಗ್ಗೆ ಮಾತನಾಡುವ ಮತ್ತು ಕಾಳಜಿ ಇರುವ ಎಲ್ಲರೂ ಪ್ರಯತ್ನಿಸಬೇಕಿದೆ.

ಈ ಹಿನ್ನೆಲೆಯಲ್ಲಿ ನಾನು ನನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲೇಖನ ನಿಮ್ಮ ಗಮನಕ್ಕೂ ತರೋಣ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ನೀವೂ ಸಹ ಈ ಪ್ರಯತ್ನಕ್ಕೆ ಕೈಜೋಡಿಸುತ್ತೀರ ಎಂದು ಭಾವಿಸುತ್ತೇನೆ.

ರವಿ…


“There comes a time when one must take the position that is neither safe nor politic nor popular, but he must do it because conscience tells him it is right.” ― Martin Luther King Jr.

ಪ್ರಿಯ ನಾಗರಿಕ ಬಂಧುಗಳೇ,

ನನ್ನೂರು ಬೆಂಗಳೂರಿನ ಪಕ್ಕದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮ. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದುತ್ತ ಬೆಳೆದ ನಾನು ಹೊಲಗದ್ದೆಯಲ್ಲಿ ಕೆಲಸ ಮಾಡುತ್ತ, ಹಸು ಎಮ್ಮೆಗಳನ್ನು ಮೇಯಿಸುತ್ತ, ಕತೆ ಕಾದಂಬರಿಗಳನ್ನು ಓದುತ್ತ ಬಾಲ್ಯ ಕಳೆದೆ. ನಂತರ ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮತು ಎಮ್.ಇ. ಪಡೆದು ಕಳೆದ ಹದಿನೈದು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದು, ನನ್ನ ಉದ್ಯೋಗ ಮತ್ತು ಚಟುವಟಿಕೆಗಳು ಕೆನಡಾ, ಇಟಲಿ, ಕೊರಿಯಾ ದೇಶಗಳಿಗೂ ನನ್ನನ್ನು ಒಯ್ದಿವೆ. ನನ್ನ ವಯಸ್ಕ ಜೀವನದ ಬಹುಪಾಲು ಭಾಗ ಹೊರದೇಶದಲ್ಲಿಯೇ ಕಳೆದಿದ್ದರೂ ಕನ್ನಡ ಮತ್ತು ಕರ್ನಾಟಕ ಯಾವಾಗಲೂ ನನ್ನ ಮನಸ್ಸು ಮತ್ತು ಕ್ರಿಯೆಯ ಭಾಗವಾಗಿತ್ತು. ಕಳೆದ ಹತ್ತು ವರ್ಷಗಳಿಂದಲೂ ನಾನು ರಾಜ್ಯದ ಅನೇಕ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಷಯಗಳಿಗೆ ಸ್ಪಂದಿಸುತ್ತ, ಅವುಗಳ ಬಗ್ಗೆ ನಿರಂತರವಾಗಿ ಬರೆಯುತ್ತಾ ಬಂದಿದ್ದೇನೆ. ಅಮೆರಿಕದಲ್ಲಿ ಇದ್ದಾಗ ಅಲ್ಲಿಯ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಅದೇ ಸಮಯದಲ್ಲಿ ಕನ್ನಡದ ವಚನಗಳು, ಹಲವು ವೈಚಾರಿಕ ಲೇಖನ-ಪುಸ್ತಕಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು www.vicharamantapa.net ಎಂಬ ವೆಬ್‌ಸೈಟ್ ಆರಂಭಿಸಿದ್ದೆ. ಮತ್ತು, ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವಿಕೆಯ ಮುಂದುವರೆದ ಭಾಗವಾಗಿ 2006 ರಲ್ಲಿ “ವಿಕ್ರಾಂತ ಕರ್ನಾಟಕ” ಎಂಬ ವಾರಪತ್ರಿಕೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದೆ. ಈ ಪತ್ರಿಕೆಯು ಆ ಕಾಲಘಟ್ಟದ ಎಲ್ಲಾ ಬಗೆಯ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳಿಗೆ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಿದ್ದು ಇಂದಿಗೂ ನನಗೆ ಹೆಮ್ಮೆಯ ವಿಷಯ. ಆ ಪ್ರಕ್ರಿಯೆಯಲ್ಲಿ ವಿಕ್ರಾಂತ ಕರ್ನಾಟಕದೊಂದಿಗೆ ಕೆಲಸ ಮಾಡಿದ, ಅದರಲ್ಲಿ ತೊಡಗಿಕೊಂಡ ಎಲ್ಲಾ ಲೇಖಕ-ಪ್ರಗತಿಪರ ಮಿತ್ರರ ಸಹಭಾಗಿತ್ವ ಮತ್ತು ಬೆಂಬಲ ಇಂದಿಗೂ ನನ್ನಲ್ಲಿ ಆಶಾವಾದ ಮತ್ತು ಸ್ಫೂರ್ತಿಯನ್ನು ಹೆಚ್ಚಿಸುತ್ತಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ 2008 ರ ಸಮಯದಲ್ಲಿ ಕರ್ನಾಟಕದ ರಾಜಕಾರಣ ಅಧೋಗತಿಗೆ ತಲುಪಿ, ಎಲ್ಲಾ ಪ್ರಜಾವಂತರಲ್ಲಿ ಹೇಸಿಗೆ ಮತ್ತು ಸಿನಿಕತನವನ್ನು ಮೂಡಿಸಿತ್ತು, ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದೇ ಅಪ್ರಸ್ತುತ ಮತ್ತು ಗೇಲಿಯ ವಿಷಯವಾಗಿತ್ತು. ರಾಜಕೀಯ ರಂಗ ತನ್ನ ಕನಿಷ್ಟ ಮಟ್ಟದ ಪ್ರಬುದ್ಧತೆ, ಸೂಕ್ಷ್ಮತೆ, ಮತ್ತು ಜನಪರ ಕಾಳಜಿಗಳನ್ನು ಕಳೆದುಕೊಂಡಿತ್ತು. ರಾಜ್ಯದ ಕುಖ್ಯಾತ ಗಣಿ ಮಾಫಿಯಾದವರು, ರಿಯಲ್ ಎಸ್ಟೇಟ್ ಏಜೆಂಟರು, ಭ್ರಷ್ಟ ಮಾರ್ಗಗಳಿಂದ ಅತಿಶ್ರೀಮಂತರಾಗಿ ಹೋಗಿದ್ದ ರಾಜಕಾರಣಿಗಳು ಆಗಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಿ ರಾಜ್ಯದ ಪ್ರಜಾಪ್ರಭುತ್ವದ ನೆಲೆಯನ್ನೇ ಅಲ್ಲಾಡಿಸಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತರ ವಿರೋಧ ಇರಬೇಕು ಎಂದು ಭಾವಿಸಿ ನಾನು ರಾಜ್ಯದ ಹಲವು ಪ್ರಗತಿಪರ ಮಿತ್ರರೊಂದಿಗೆ ಮತ್ತು ಲೇಖಕರೊಂದಿಗೆ ಚರ್ಚಿಸಿ, ಅವರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಅದೇ ಸಂದರ್ಭದಲ್ಲಿ ನಮ್ಮ ರಾಜ್ಯದ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ ಮೂರು ದಿನಗಳ ಕಾಲ “ಮೌಲ್ಯಾಗ್ರಹ”ದ ಹೆಸರಿನಲ್ಲಿ ಗಾಂಧಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆ. ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ಸಮಾನ ಮನಸ್ಕರು ಆ ಪ್ರತಿಭಟನೆ ಮತ್ತು ಉಪವಾಸದಲ್ಲಿ ಪಾಲ್ಗೊಂಡಿದ್ದು ಇಲ್ಲಿ ಎಲ್ಲವೂ ಕಳೆದುಹೋಗಿಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು. ಚುನಾವಣೆಗಾಗಿ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ, ಅಷ್ಟರಲ್ಲೇ ಗೆದ್ದು ಬಂದು ಸ್ವಚ್ಛ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸಿದ ರಾಜ್ಯದ ಹೆಮ್ಮೆಯ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಆದರ್ಶವನ್ನು ಇಟ್ಟುಕೊಂಡು ಅದೇ ಮಾದರಿಯಲ್ಲಿ ಚುನಾವಣೆ ನಡೆಸಿದೆ. ನಾನು ಹೇಳಲು ಬಯಸಿದ ವಿಚಾರಗಳಿಗೆ ಜಯನಗರದ ಶಿಕ್ಷಿತ ಮತ್ತು ಮಧ್ಯಮವರ್ಗದ ಮತದಾರರು ಸ್ಪಂದಿಸುತ್ತಾರೆ ಎಂದು ಭಾವಿಸಿ ಆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೆ, ಸುಮಾರು 4.25 ಲಕ್ಷವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಅಷ್ಟನ್ನೇ ಚುನಾವಣಾ ಪ್ರಚಾರಕ್ಕೆ ಉಪಯೋಗಿಸಿ ಹದಿನೈದು ದಿನಗಳ ಪ್ರಚಾರ ಮಾಡಿದ್ದೆ. ಚುನಾವಣಾ ಆಯೋಗಕ್ಕೆ ಆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಸಲ್ಲಿಸಿದ ಖರ್ಚಿನ ಮಾಹಿತಿಯ ಪ್ರಕಾರ ಅತಿ ಹೆಚ್ಚು ಖರ್ಚು ಮಾಡಿದ ಅಭ್ಯರ್ಥಿ ನಾನೇ ಆಗಿದ್ದೆ. ಗೆದ್ದ ಅಭ್ಯರ್ಥಿ ತೋರಿಸಿದ ಲೆಕ್ಕ ಮೂರು ಲಕ್ಷಕ್ಕೂ ಕಡಿಮೆ.

ಕರ್ನಾಟಕದ ಇಂದಿನ ರಾಜಕಾರಣದ ಬಗ್ಗೆ ನಿಮಗೆ ವಿಶೇಷವಾಗಿ ಹೇಳುವಂತಹುದೇನಿಲ್ಲ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕ ಇಂದಿಗಿಂತ ನೆನ್ನೆಯೇ ವಾಸಿ ಎನ್ನುವ ಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ. ನಮ್ಮ ಸಾಮಾಜಿಕ ಮತ್ತು ರಾಜಕೀಯ ಮೌಲ್ಯಗಳು ಅಧೋಗತಿಯಲ್ಲಿಯೇ ಸಾಗುತ್ತಿವೆ. ಐದು ವರ್ಷದ ಹಿಂದಿನ ಸಂದರ್ಭಕ್ಕಿಂತ ಕರ್ನಾಟಕ ಈಗ ಇನ್ನೂ ಕೆಟ್ಟಿದೆ. ಇನ್ನು ಎರಡು-ಮೂರು ತಿಂಗಳಿನಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಾದರೂ ಈಗಿನ ಹಾಲಿ ವಿಧಾನಸಭಾ ಸದಸ್ಯರಿಗಿಂತ ಉತ್ತಮವಾದವರು ಆರಿಸಿಬರುತ್ತಾರೆ ಎನ್ನುವ ವಿಶ್ವಾಸ ಯಾರಲ್ಲಿಯೂ ಇಲ್ಲವಾಗಿದೆ.

ಎರಡು ವರ್ಷದ ಹಿಂದೆ ಅಮೆರಿಕದಿಂದ ವಾಪಸ್ಸಾದ ನಾನು ಅಂದಿನಿಂದ ನನ್ನದೇ ನೆಲೆಯಲ್ಲಿ, ಸಮಾನಮನಸ್ಕರೊಡನೆ ಹಲವು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿಯವರೆಗೆ ನನ್ನ ಲೇಖನ, ಅನುವಾದಗಳ ನಾಲ್ಕು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದೇನೆ, ಮತ್ತು ವರ್ಷದ ಹಿಂದೆ “ಭೂಮಿ ಹುಟ್ಟಿದ್ದೆ ಹೇಗೆ?” ಎಂಬ ಕನ್ನಡ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚಿಸುವ www.vartamaana.com ಎನ್ನುವ ವೆಬ್‌ಸೈಟ್ ಅನ್ನು ನಡೆಸುತ್ತಿದ್ದೇನೆ. ಈ ವೆಬ್‌ಸೈಟ್‌ಗೆ ರಾಜ್ಯದ ಹಲವು ಸಮಾನಮನಸ್ಕ ಮತ್ತು ಪ್ರಗತಿಪರ ಲೇಖಕರು ಬರೆಯುವ ಮೂಲಕ ಕೈಜೋಡಿಸಿದ್ದಾರೆ.

ಇದೆಲ್ಲದರ ಜೊತೆಗೆ, ನಾನು ಪ್ರತಿಪಾದಿಸುವಂತಹ ಆಂತರಿಕ ಪ್ರಜಾಪ್ರಭುತ್ವ, ಸ್ವಚ್ಛ ಹಣ, ಸೈದ್ಧಾಂತಿಕ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿನಿಧಿಸುವ “ಲೋಕಸತ್ತಾ ಪಕ್ಷ“ದ ಸದಸ್ಯನಾಗಿ ಈಗ ಸಕ್ರಿಯನಾಗಿದ್ದೇನೆ. ಈ ಚಟುವಟಿಕೆಯ ಮುಂದುವರಿಕೆಯಾಗಿ ಈ ಬಾರಿಯೂ ಚುನಾವಣಾ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇನೆ, ಕಳೆದ ಬಾರಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆಗ ನಾನು ಅಮೆರಿಕದಲ್ಲಿದ್ದೆ ಮತ್ತು ನನ್ನೂರಿನ ಆನೇಕಲ್ ಕ್ಷೇತ್ರ ಮೀಸಲು ಕ್ಷೇತ್ರವಾದ ಕಾರಣ, ನಾನು ಹೇಳಲು ಬಯಸಿದ ವಿಚಾರಗಳಿಗೆ ಜಯನಗರದ ಶಿಕ್ಷಿತ ಮತ್ತು ಮಧ್ಯಮವರ್ಗದ ಮತದಾರರು ಸ್ಪಂದಿಸುತ್ತಾರೆ ಎಂದು ಭಾವಿಸಿ ಆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೆ. ಈಗ ಅಮೆರಿಕದಿಂದ ಬಂದ ಎರಡು ವರ್ಷಗಳಿಂದಲೂ BTM_Layout_Const_Mapಬಿಟಿಎಮ್ ಬಡಾವಣೆಯಲ್ಲಿ ನೆಲೆಸಿದ್ದೇನೆ, ಹಾಗಾಗಿ ಈ ಬಾರಿ ಬಿಟಿಎಮ್‌ನಿಂದ ಸ್ಪರ್ಧಿಸುವುದು ಸಮಂಜಸ ಎಂದು ಭಾವಿಸಿ ಇಲ್ಲಿಂದ “ಲೋಕಸತ್ತಾ ಪಕ್ಷ”ದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಬೆಂಗಳೂರು ನಗರದ ಬಿಟಿಎಂ ಲೇಔಟ್, ಕೋರಮಂಗಲ, ಮಡಿವಾಳ, ಜಕ್ಕಸಂದ್ರ, ಆಡುಗೋಡಿ, ಈಜಿಪುರ, ಸುದ್ದುಗುಂಟೆಪಾಳ್ಯ, ಮತ್ತು ಲಕ್ಕಸಂದ್ರ ವಾರ್ಡುಗಳು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

ಮತ್ತು ಈ ಬಾರಿಯದು ಸಾಂಕೇತಿಕವಲ್ಲ. ನಾನು ನಂಬಿದ ಸಿದ್ಧಾಂತಗಳ ಮತ್ತು ಮೌಲ್ಯಗಳ ಅಡಿಯಲ್ಲಿ ಎಷ್ಟೆಲ್ಲ ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತೇನೆ ಎಂದು ಈ ಮೂಲಕ ನಿಮಗೆ ತಿಳಿಸಬಯಸುತ್ತೇನೆ. ಜೊತೆಗೆ ಈಗಾಗಲೆ ನಮ್ಮ ಪಕ್ಷದ ವತಿಯಿಂದ ಬೆಂಗಳೂರಿನ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ತೀರ್ಮಾನವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯಾಗಲಿದೆ. ಈ ನಿಟ್ಟಿನಲ್ಲಿ ಇದು ಸಾಂಘಿಕ ಪ್ರಯತ್ನವೂ ಹೌದು.

ಈ ಹಿನ್ನೆಲೆಯಲ್ಲಿ ನಿಮ್ಮ ಬೆಂಬಲ, ಸಹಾಯ, ಮತ್ತು ಸಹಕಾರವನ್ನು ಕೋರಬಯಸುತ್ತೇನೆ. ಸಾರ್ವಜನಿಕರ ಬೆಂಬಲದಿಂದಲೇ ಚುನಾವಣೆ ನಡೆಸುವ ಆದರ್ಶ ಮಾದರಿಗೆ ತಮ್ಮ ಹೃತ್ಪೂರ್ವಕ ಬೆಂಬಲ ನಿಡಬೇಕೆಂದು ವಿನಂತಿಸುತ್ತೇನೆ. ನಾವು ಸಂಗ್ರಹಿಸುವ ಹಣದ ಪ್ರತಿಯೊಂದು ವಿವರವನ್ನೂ ಲೆಕ್ಕ ಇಡಲಾಗುತ್ತದೆ ಮತ್ತು ಈ ವೆಬ್‌ಸೈಟ್‌ನಲ್ಲಿ (www.ravikrishnareddy.com) ಪ್ರಕಟಿಸಲಾಗುತ್ತದೆ. ಹಾಗೆಯೇ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡುವ ಪ್ರತಿಯೊಂದು ವಿವರವೂ ಅಲ್ಲಿ ದಾಖಲಾಗುತ್ತದೆ. ತಾವು ಧನಸಹಾಯ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಬೇಕೆಂದು ಪ್ರಾರ್ಥಿಸುತ್ತೇನೆ. ಇದರ ಜೊತೆಗೆ, ನೀವೂ ಸಹ ಬಂದು ನಮ್ಮ ಜೊತೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಾಧ್ಯವಾದರೆ, ನನ್ನ ಮತ್ತು ನಮ್ಮ ತಂಡದ ಹುಮ್ಮಸ್ಸು ಮತ್ತು ಕಾರ್ಯಕ್ಷಮತೆ ನೂರ್ಮಡಿಯಾಗುತ್ತದೆ.

ಹಣವನ್ನು ‘Loksatta Party‘ ಹೆಸರಿಗೆ ಚೆಕ್ ಬರೆದು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು: (ರಾಜಕೀಯ ಪಕ್ಷಕ್ಕೆ ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಇರುತ್ತದೆ)

ರವಿ ಕೃಷ್ಣಾರೆಡ್ಡಿ
ನಂ.400, 23ನೇ ಮುಖ್ಯರಸ್ತೆ,
ಬಿಟಿಎಮ್ ಲೇಔಟ್ 2ನೇ ಹಂತ,
ಬೆಂಗಳೂರು – 560076

ನಿಮ್ಮ ವಿಶ್ವಾಸಿ,
ರವಿ…

ಒಂದು ಜಾಹೀರಾತು : ಅನುವಾದಿತ ಸಣ್ಣಕತೆ

[ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಬರಗಾಲ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ-ರಾಗಿಯ ಬೆಲೆ ಶೇ.50 ಹೆಚ್ಚಿದೆ. ಚುನಾವಣೆಗಳು ಹತ್ತಿರ ಬರುತ್ತಿವೆ. ನಾನಾ ತರಹದ ನಾಟಕಗಳು ರಾಜ್ಯದ ರಂಗಸ್ಥಳದಲ್ಲಿ ಆಡಲ್ಪಡಲಿವೆ. ಆದರೆ ಈ ನಾಟಕಗಳ ವ್ಯಂಗ್ಯದ ಆಹಾರ ತಾವೇ ಎಂದು ಜನಸಾಮಾನ್ಯರಿಗೆ ಅನ್ನಿಸದ ಹಾಗೆ ನಟಿಸಲಿದ್ದಾರೆ ರಾಜಕಾರಣಿಗಳು ಮತ್ತು ಅವರ ಚೇಲಾಗಳು. ನಾನು ದಶಕದ ಹಿಂದೆ ತೆಲುಗಿನಿಂದ ಅನುವಾದಿಸಿದ್ದ ಈ ಸಣ್ಣಕತೆ ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಮತ್ತು ಈಗಲೂ ಪ್ರಸ್ತುತ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದು 2003 ರಲ್ಲಿ ದಟ್ಸ್‌ಕನ್ನಡ.ಕಾಮ್‌ನಲ್ಲಿ ಪ್ರಕಟವಾಗಿತ್ತು. ರವಿ…]

– ತೆಲುಗು ಮೂಲ: ಶಿವಂ
– ಕನ್ನಡಕ್ಕೆ : ರವಿ ಕೃಷ್ಣಾರೆಡ್ಡಿ

“ಎಲ್ಲಿ ಒಂದು ನಗು ನಗಿ!” ದಿನಪತ್ರಿಕೆಯಲ್ಲಿನ ಒಂದು ಟೂತ್‌ಪೇಸ್ಟ್ ಜಾಹೀರಾತು ಕೇಳುತ್ತಿದೆ.

ನಗು! ಎಷ್ಟು ದಿನಗಳಾದವು ಅವನು ನಕ್ಕು! ಬಹುಶಃ ಹದಿನೈದು ವರ್ಷವಾದರೂ ಆಗಿರಬೇಕು. ಹೌದು. ಹದಿನೈದು ವರ್ಷಗಳು.

ಅವನಿಗೆ ಹದಿನೇಳು ಇದ್ದಾಗ ಶಾಲಾಮಾಸ್ತರ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಜಾರಿ ಬಿದ್ದು ಬಿಟ್ಟ. ವೆಂಕಟರಾವು ಇರಬಹುದು, ಮಾಸ್ತರರನ್ನು ಹಿಡಿದು ನಿಲ್ಲಿಸಲು ಹೋದ. ಮಾಸ್ತರು ಕ್ರೋಧದಿಂದ ವೆಂಕಟರಾವಿನ ಬೆನ್ನಿನ ಮೇಲೆ ಬೆತ್ತವನ್ನು ಚೂರು ಚೂರು ಮಾಡಿದ್ದರು. ಎಲ್ಲರೂ ನಕ್ಕಿದ್ದರಾಗ. ಅವನೂ ನಕ್ಕಿದ್ದ ಎಲ್ಲರ ಜೊತೆಗೆ. ಅವನ ಕಣ್ಣಲ್ಲಿ ನೀರು ತುಳುಕಿತ್ತು ಆ ನಗುವಿಗೆ.

ಅದೇ ಕೊನೆಯ ಸಾರಿ ನಕ್ಕಿದ್ದು ಗುರುತಿರುವುದು. ಆಮೇಲೆ ಅವನಿಗೆ ಈ ಪ್ರಪಂಚದಲ್ಲಿ ಏನನ್ನು ನೋಡಿ ನಗಬೇಕೊ ತಿಳಿದಿದ್ದಿಲ್ಲ. ಕಾಂಗ್ರೆಸ್‌ನವರು ಲಾಠಿಛಾರ್ಜ್‌ಗಳನ್ನು ತಿನ್ನುವುದನ್ನು ನೋಡಿದ. ಹೆಂಡತಿ ಮಕ್ಕಳನ್ನು ಬಿಟ್ಟು ಜೈಲಿನಲ್ಲಿ ಕೊಳೆಯುವುದನ್ನು ನೋಡಿದ. drought-dead-cowಅನಾರೋಗ್ಯದಿಂದ ತನ್ನ ತಂದೆ ವೈದ್ಯೋಪಚಾರಕ್ಕೆ ಸಹ ಗತಿಯಿಲ್ಲದೆ ಬಾಧೆ ಪಡುತ್ತಾ ಸಾಯುವುದನ್ನು ನೋಡಿದ. ಬಂಗಾಳ ಬರಗಾಲದಲ್ಲಿ ಜನರು ಎಲೆಗಳನ್ನು ಆಯ್ದು ತಿನ್ನುವುದನ್ನು ನೋಡಿದ.

ಯಾರೂ ಆತನನ್ನು ಆ ದಿನಗಳಲ್ಲಿ ನಗು ಎಂದು ಕೇಳದೆ ಹೋದರು. ಕೊನೆಗೆ ಟೂತ್‌ಪೇಸ್ಟ್ ಕಂಪನಿಯವರೂ ಕೂಡಾ.

“ಆತನು ಯಾವಾಗಲೂ ನಗುತ್ತಲೇ ಇರುತ್ತಾನೆ.” ಎನ್ನುತ್ತಿತ್ತು, ಎನ್ನುತ್ತಿದೆ ಈ ಟೂತ್‌ಪೇಸ್ಟ್ ಜಾಹೀರಾತು.

ಜಾಹೀರಾತಿನಲ್ಲಿನ ಚಿತ್ರದ ಮುಖ ಅವನ ಮುಖದ ಹಾಗೆ ಇಲ್ಲ. ಥೇಟು ಅವನ ಆಫೀಸರ್ ಮುಖದ ರೀತಿ ಶುಭ್ರವಾಗಿ, ನುಣ್ಣಗೆ ಇದೆ. ಅವನ ಆಫೀಸರ್ ಮುಖದ ಹಾಗೆ ನಗುತ್ತಾ ಇದೆ.

ಅವನ ಆಫೀಸರ್‌ಗೆ ಏಳು ನೂರು ರೂಪಾಯಿಗಳ ಸಂಬಳ. ಆಫೀಸಿಗೆ ಕಾರಿನಲ್ಲಿ ಬರುತ್ತಾರೆ. ಕಲ್ಲು-ಮಣ್ಣು ಇಲ್ಲದ ಅಚ್ಚ ಬಿಳಿಯ ಮಲ್ಲಿಗೆ ಹೂವಿನಂತಹ ಅಕ್ಕಿ ರೇಷನಿಂಗ್ ದಿನಗಳಲ್ಲಿ ಸಹ ಚೀಲಗಳಲ್ಲಿ ಅವರ ಮನೆಗೆ ಬರುತ್ತದೆ. ಅವರಿಗೆ ಕಾಯಿಲೆ ಬಂದರೆ ಡಿ.ಎಂ.ಒ. ಮನೆಗೆ ಬಂದು ಸ್ವತಃ ಔಷಧ ಕೊಟ್ಟು ಹೋಗುತ್ತಾನೆ. ಅದಕ್ಕೇ ಅವರು ಯಾವಾಗಲೂ ನಗುತ್ತಿರುತ್ತಾರೆ ಮತ್ತೆ.

“ಒಳ್ಳೆಯ ದಂತಪಂಕ್ತಿಯಿಂದ ನಗುವ ಆ ನಗು ಆರೋಗ್ಯ.” ಮತ್ತೇ ಜಾಹಿರಾತು. ಅವನದು ಒಳ್ಳೆಯ ಹಲ್ಲುವರಸೆ. ಅವನಿಗೆ ಆರೋಗ್ಯವಾಗಿರುವುದು ಎಂದರೆ ಬಹಳ ಇಷ್ಟ. ಹದಿನೈದು ವರ್ಷದ ಹಿಂದೆ ನಗುತ್ತಿದ್ದ. ಮತ್ತೆ ನಕ್ಕು ಆರೋಗ್ಯವಾಗಿ ಇರೋಣ ಎಂದು ಅವನ ಉದ್ದೇಶ. ಆದರೆ ಅವನಿಗೆ ನಗು ಬರುತ್ತಿಲ್ಲ. ಎರಡನೇ ಪ್ರಪಂಚ ಯುದ್ಧ ಮುಗಿದ ತಕ್ಷಣ ನಗೋಣ ಎನ್ನಿಸಿತ್ತು ಅವನಿಗೆ. ಯುದ್ಧದಲ್ಲಿ ಗಂಡಂದಿರನ್ನು, ತಂದೆಯರನ್ನು ಕಳೆದುಕೊಂಡ ಅಮಾಯಕ ಜನರು ಜ್ಞಾಪಕ ಬಂದರು. ಅವರ ಶೋಕಗಳು ಅವನ ಕಿವಿಯಲ್ಲಿ ಗಿಂಗುರುಗುಟ್ಟಿದವು. ನಗಲಾರದೆ ಹೋದನವನು.

ಭಾರತ ದೇಶ ಸ್ವತಂತ್ರ ದೇಶ ಆಗಲಿದೆ ಎಂದರು. ತುಟಿಗಳು ಬಿರಿದವು. ಆನಂದದಿಂದ ಪ್ರಪಂಚ ಪ್ರತಿಧ್ವನಿಸುವ ಹಾಗೆ ಗಹಗಹಿಸಿ ನಗಬೇಕೆಂದು ಅವನ ಉದ್ದೇಶ. ಭಾರತ ಮಾತೆ ಎರಡು ಭಾಗಗಳಾಗಿ ಕತ್ತರಿಸಲ್ಪಟ್ಟಳು. ಹಿಂದೂಗಳು ಮುಸಲ್ಮಾನರನ್ನು, ಮುಸಲ್ಮಾನರು ಹಿಂದೂಗಳನ್ನು ಕತ್ತರಿಸುತ್ತ ಸಾಗಿದರು. ರಕ್ತ ಪ್ರವಾಹದಂತೆ ಹರಿಯಿತು. ಅವನ ತುಟಿಗಳು ವಿಷಾದಕರವಾಗಿ ಕೊಂಕು ತಿರುಗಿ ಮುದುಡಿಕೊಂಡವು.

ಪ್ರಜಾಪ್ರಭುತ್ವವೆಂದರು. ತಿನ್ನುವುದಕ್ಕೆ ತಿಂಡಿ, ಇರುವುದಕ್ಕೆ ಮನೆ ಇರುತ್ತದೆ ಎಂದುಕೊಂಡನು ಅವನು. ಹೊಟ್ಟೆ ತುಂಬಾ ತಿಂದು, ಬಿಡುವಿದ್ದಾಗಲೆಲ್ಲ ತಣ್ಣನೆಯ ಅಂಗಳದ ಚಪ್ಪರದ ಕೆಳಗೆ ಕುಳಿತುಕೊಂಡು ಹೊಟ್ಟೆ ಬಿರಿಯುವ ಹಾಗೆ ತಾವೆಲ್ಲ ನಗುವುದೇ ಇನ್ನು ಮುಂದೆ ಎಂದುಕೊಂಡನು. ಬಂದಿತು ಅವರ ಪ್ರಭುತ್ವ. ಕೆರೆಯ ಬಳಿ ಗುಡಿಸಲಲ್ಲಿ ಇದ್ದ ರೌಡಿ ಸುಬ್ಬಯ್ಯ ತಮ್ಮನ್ನು ಆಳುವವರ ಗುಂಪಿಗೇರಿದ; ಕಿರುನಗೆ ನಗುತ್ತ ಸಾಗಿದ. ಇವನು ಮಾತ್ರ ಇಲ್ಲಿಯವರೆಗೂ ಸಂಬಳ-ಜೀತ ಎನ್ನುತ್ತಾ, ಆರೋಗ್ಯ ಅನ್ನುತ್ತಾ, ಮುಕ್ಕುತ್ತ ಮುಲುಗುತ್ತಲೆ ಇದ್ದಾನೆ.

“ನಿರ್ಮಲವಾದ, ಶುಭ್ರವಾದ ಆ ಕಿರುನಗೆ ಈಗಲೇ ನಿಮ್ಮದಾಗುತ್ತದೆ.” toothpaste-smile-2ಮಾತುಗಳು, ಒಣಮಾತುಗಳು. ನಿರ್ಮಲವಾದವು, ಶುಭ್ರವಾದವು ಯಾವೂ ತಮ್ಮದಲ್ಲ. ಕಿರುನಗೆ ಮಾತ್ರ ತಮ್ಮದು ಹೇಗೆ ಆಗುತ್ತದೆ? ಶುಭ್ರವಾದದ್ದೇನಾದರು ತಮಗೆ ಉಳಿದಿದ್ದರೆ ಅದು ಖಂಡಿತ ಮನಸ್ಸು ಮಾತ್ರವೆ. ಅದೂ ಕೂಡ ಉಳಿಯದೆ ಹೋಗಿದ್ದರೆ, ಎಂದೋ ಅವನು ನಕ್ಕಿರಬಹುದಿತ್ತು. ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೃದಯಕ್ಕೆ ಇಷ್ಟು ಬಾಧೆ ಏತಕ್ಕೆ ಕೊಡಬೇಕು?

ನಿರ್ಮಲವೂ, ಶುಭ್ರವೂ? ಏನ್ ಮಾತವು? ಆ ಮಾತುಗಳಿಗೆ ಅಸಲು ಅರ್ಥವೇ ಹೋಗಿದೆ ಅವನಿಗೆ. ಅವರು ಬಳಸುವ ತುಪ್ಪವೇ ಶುದ್ಧವಾದದ್ದಲ್ಲ. ತಾವು ತಿನ್ನುವ ತಿಂಡಿಕಾಳು ಪುಷ್ಠಿಕರವಾದುವು ಅಲ್ಲ. ತಮ್ಮ ಮಕ್ಕಳು ಕುಡಿಯುವ ಹಾಲು, ಮಜ್ಜಿಗೆ ಶುದ್ಧವಾದದ್ದಲ್ಲ. ತಾವು ಉಸಿರಾಡುವ ಗಾಳಿ ಶುಭ್ರವೇ, ನಿರ್ಮಲವೆ?

ಮನೆಗಳ ಹತ್ತಿರ ಕಾರ್ಖಾನೆಗಳು ಇರಬಾರದಂತೆ. ಅವನ ಮನೆಯ ಪಕ್ಕವೇ ಒಂದು ಕಾರ್ಖಾನೆ. ರಾತ್ರಿಯೆಲ್ಲಾ ಭುಕ್, ಭುಕ್, ಭುಕ್, ಭುಕ್ ಎಂದು ಒಂದೇ ಕೂಗು. ಬೆಳಿಗ್ಗೆ ಏಳುವಷ್ಟರಲ್ಲಿ ಅವನ ಮನೆಯ ತುಂಬಾ ಫ್ಯಾಕ್ಟರಿಯ ಕೆಟ್ಟಗಾಳಿಗೆ ಆ ಧೂಳು ಯಾವಾಗಲೂ ಹಾರುತ್ತಲೇ ಇರುತ್ತವೆ. ಕಣ್ಣಿಗೆ ಕಾಣದ ಆ ಧೂಳನ್ನು ಅವರು ಯಾವಾಗಲೂ ಒಳಗೆ ಕರೆಯುತ್ತಲೆ ಇರುತ್ತಾರೆ. ತಮ್ಮ ಆರೋಗ್ಯ ಸರಿಯಾಗಿ ಇರುವುದಿಲ್ಲ. ತಾವೆಂದೂ ಕಿರುನಗೆ ನಗುವುದಿಲ್ಲ.

ಅಸಲಿಗೆ, ಪದಗಳಿಗೆ ಬೆಲೆಯೇ ಹೋಗಿದೆ. ‘ಶುಭ್ರವೂ’, ‘ನಿರ್ಮಲವೂ’ ಎಂಬ ಎರಡು ಪದಗಳಿಗೇ ಅಲ್ಲ. ಬಹಳ ಪದಗಳಿಗೆ. ‘ದಯೆ’, ‘ಸತ್ಯ’, ‘ನೀತಿ’, ‘ವಿಚಕ್ಷಣೆ’, ‘ವಿವೇಕ’, ‘ನ್ಯಾಯ’ ಮೊದಲಾದ ಪದಗಳು ಅಸಲಿಗೆ ಮುಗ್ಗು ಹಿಡಿದುಹೋಗಿವೆ. ರಾಜಕಾರಣಿಗಳು ಚುನಾವಣೆಗಳಿಗೆ ಮೊದಲು ಪ್ರಚಾರಕ್ಕೆ ಉಪಯೋಗಿಸುವ ಆಯುಧಗಳವು ಇವತ್ತಿನ ಸಂದರ್ಭದಲ್ಲಿ. ಚುನಾವಣೆ ಮುಗಿದಾಕ್ಷಣವೆ ಈ ಪದಗಳು ಅವರ ಸ್ವಂತ ಆಸ್ತಿಗಳ ಹಾಗೆ ಭದ್ರವಾಗಿ ಮುಚ್ಚಿಡಲ್ಪಡುತ್ತವೆ. ಹೇಗೆ ನಗು ಬರುತ್ತದೆ ಅವನಿಗೆ? ಹೇಗೆ ಅವನದಾಗುತ್ತದೆ ಆ ನಗು?

“ಹೇಗೆ ಎನ್ನುವಿರಾ? ಇಂದೇ ಯಾವ ಅಂಗಡಿಯಲ್ಲಾದರೂ ಕೇಳಿ…”

ಬಹಳ ತಾಳ್ಮೆ ಈ ವಿದೇಶಿ ವ್ಯಾಪಾರಿಗಳಿಗೆ. ತಮ್ಮಂತಹ ಮೂಢರಿಗೆ ಅಪಾರವಾದ ವಿಜ್ಞಾನದಿಂದ ಕಿರುನಗೆಯನ್ನು ಕೊಳ್ಳುವುದನ್ನು ಕಲಿಸುತ್ತಾರೆ. “ನಮ್ಮ ಹೊಟ್ಟೆ ಸುಡುತ್ತಿವೆ. ನಮ್ಮ ದೇಶವನ್ನು ಗೆದ್ದಲುಹುಳುಗಳು ಹಿಂಡಿ ಹಿಪ್ಪೆ ಮಾಡುತ್ತಿವೆ. ನಿಮಗೇನಾದರು ತಿಳಿದರೆ ನಮ್ಮ ದೇಶದಿಂದ ಗೆದ್ದಲುಹುಳುಗಳನ್ನು ನಿವಾರಿಸುವುದನ್ನು ತಿಳಿಸಿಕೊಡಿ. ನಮ್ಮ ಹೊಟ್ಟೆ ಉರಿ ಆರುವ ಮಾರ್ಗ ಹೇಳಿ. ನಮ್ಮ ದೇಶವನ್ನು ಸಾರವಂತ ಮಾಡಿಕೊಳ್ಳುತ್ತೇವೆ.” ಎಂದು ಕೇಳಿದರೆ ಒಂದು ಟೂತ್‌ಪೇಸ್ಟ್ ಕಿರುನಗೆಯನ್ನು ಬಿಡುತ್ತಾರೆ. “ನಿಮ್ಮ ದೇಶದ ಸಂಪತ್ತು ನಮಗೆ ಬೇಕು.” ಅನ್ನರು. “ಆನಂದವೇ ಆರೋಗ್ಯ! ಆನಂದಕ್ಕೆ ಚಿಹ್ನೆ ಈ ಕಿರುನಗೆ. ಎಲ್ಲಿ, ಕೊಳ್ಳಿರಿ, ನಗುತ್ತಿರಿ.” ಅಂತಾರೆ.

ಹೇಗೆ ಕೊಳ್ಳುವುದು ಆ ಟೂತ್‌ಪೇಸ್ಟು? ಹೇಗೆ ನಗುವುದು ಆ ನಗುವನ್ನು? ಅವನ ಸಂಬಳ 72 ರೂಪಾಯಿಗಳು. colgate-adಅವನ ತಾಯಿಗೆ ಮುವ್ವತ್ತೆರಡು ಹಲ್ಲುಗಳು. ಅವನ ಹೆಂಡತಿ ಸೀರೆ ಉಡುತ್ತಾಳೆ. ಅವನ ತಮ್ಮ ಶಾಲೆಯಲ್ಲಿ ಫೀಸು ಕಟ್ಟುತ್ತಿದ್ದಾನೆ. ಅವನಾ? ಅವನು! ನಗಬೇಕಿನಿಸುತ್ತದೆ ಆದರೆ ಶಕ್ತಿಯಿಲ್ಲದೆ ಹೋಗಿದೆ.

“ಚಿಕ್ಕ ಟ್ಯೂಬು ಹದಿನೆಂಟಾಣೆ ಮಾತ್ರವೆ.” ಕೈನಿಂದ ಜಾರಿಬಿದ್ದ ಪತ್ರಿಕೆಯಲ್ಲಿನ ಆ ಜಾಹೀರಾತು ಕೆಳಗೆ ಬಿದ್ದರೂ ಚೀರುತ್ತಿದೆ. ಹದಿನೆಂಟಾಣೆ ಮಾತ್ರವೆ! ಈ ‘ಮಾತ್ರವೆ’ ಎನ್ನುವ ಪದವೆ ಬಹಳ ಚೆನ್ನಾಗಿದೆ. ಎರಡು ವರ್ಷದಿಂದ ‘ಮಾತ್ರವೆ’ ಅವನು ಚಪ್ಪಲಿ ಸಹಾ ಇಲ್ಲದೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಹಿರೋಷಿಮಾ ನಾಗಸಾಕಿಗಳ ಮೇಲೆ ‘ಮಾತ್ರವೆ’ ಅಣುಬಾಂಬುಗಳನ್ನು ಸುರಿಯಲಾಗಿದೆ. ಕೊರಿಯಾದಲ್ಲಿ ಯುದ್ಧ 12 ತಿಂಗಳಿನಿಂದ ‘ಮಾತ್ರವೆ’ ಜರುಗುತ್ತಿದೆ. ಆಂಧ್ರದ ಜನರಿಗೆ ತಿಂಡಿಕಾಳಿನ ಬರ ಐದು ವರ್ಷದಿಂದ ‘ಮಾತ್ರವೆ’. ಭಾರತದೇಶದಲ್ಲಿ ಜೀವನ್ಮೃತರು ಹೊಸಾ ಲೆಕ್ಕದ ಪ್ರಕಾರ 37 ಕೋಟಿ ‘ಮಾತ್ರವೆ’.

ನಗಬಹುದಾದವರು ಇನ್ನು ನಗಬಹುದು!

ನವೀನ್ ಸೂರಿಂಜೆ ಮೇಲಿನ ಆರೋಪಗಳನ್ನು ಕೈಬಿಡಲು ಸರ್ಕಾರದ ನಿರ್ಧಾರ

ಸ್ನೇಹಿತರೆ,

ನಮ್ಮ ಹಲವು ಓದುಗರಿಗೆ ಮತ್ತು ವರ್ತಮಾನ.ಕಾಮ್‌ನ ಫೇಸ್‌ಬುಕ್ ವಲಯದವರಿಗೆ (http://www.facebook.com/vartamaana) ಈ ವಿಷಯ ನೆನ್ನೆಯೇ ಗೊತ್ತಾಗಿತ್ತು. ನೆನ್ನೆ (31/1/13) ನಡೆದ ರಾಜ್ಯ ಸಚಿವ-ಸಂಪುಟದ ಸಭೆಯಲ್ಲಿ ನವೀನ್ ಸೂರಿಂಜೆಯವರ ವಿರುದ್ಧ  ಹೂಡಲಾಗಿದ್ದ ಆರೋಪಗಳನ್ನು ಹಿಂದೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.

ರಾಜ್ಯದ ಪತ್ರಕರ್ತರು, ಲೇಖಕರು, ಪ್ರಗತಿಪರ ಹೋರಾಟಗಾರರು ಜನವರಿ 5 ರಿಂದ 7 ರವರೆಗೆ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದ ಎರಡನೇ ದಿನದ ಸಂಜೆ ಗೃಹಸಚಿವ ಆರ್.ಅಶೋಕ್ ಸ್ಥಳಕ್ಕೆ ಆಗಮಿಸಿ ನವೀನ್ ಸೂರಿಂಜೆಯವರ ಮೇಲಿನ ಆರೋಪಗಳನ್ನು ಕೈಬಿಡಲು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ಕೊಟ್ಟಿದ್ದದ್ದು ನಿಮಗೆ ತಿಳಿದಿರುವಂತಹುದೆ. ಆದರೆ, ಈ ಪ್ರಕ್ರಿಯೆ ಸಂಪುಟದ ಮುಂದೆ ಬರಲು ಮೂರು-ನಾಲ್ಕು ವಾರಗಳ ಸುದೀರ್ಘ ಸಮಯವನ್ನೇ ತೆಗೆದುಕೊಂಡಿತು. naveen-soorinjeಹಲವು ಸಂದರ್ಭಗಳಲ್ಲಿ ಅದೃಷ್ಟವೂ (ಸಮಯ) ನಮ್ಮ ಕಡೆ ಇರಲಿಲ್ಲ.  ಮಧ್ಯೆಮಧ್ಯೆ ಬಂದ  ದೀರ್ಘ ರಜೆಗಳು, ಅಧಿಕಾರಶಾಹಿಯ ನಿಧಾನಗತಿ,  ಸಂಬಂಧಪಟ್ಟ ಅಧಿಕಾರಿಗಳು ರಜೆ ಮೇಲೆ ಹೋಗಿದ್ದು, ಹೀಗೇ ಏನೇನೊ ಆಗಿ ನಮ್ಮೆಲ್ಲರ ತಾಳ್ಮೆ ಮತ್ತು ಪ್ರಯತ್ನವನ್ನೇ ಪ್ರಶ್ನಿಸಿಕೊಳ್ಳುವಂತೆ ಆಗಿಬಿಟ್ಟಿತ್ತು. ಆದರೂ ಹತ್ತಾರು ಜನರ ಎಡಬಿಡದ ಪ್ರಯತ್ನಗಳಿಂದ ಸೂರಿಂಜೆ ಪ್ರಕರಣದ ಕಡತ ಎಲ್ಲಾ ಅಧಿಕಾರಶಾಹಿಯ ಹಂತಗಳನ್ನು ದಾಟಿ ನೆನ್ನೆ ಸಂಪುಟ-ಸಭೆಯ ಮುಂದೆ ಬಂದಿತು. ಸರ್ಕಾರದ ಹಲವು ಸಚಿವರ ಪ್ರಯತ್ನದ ಫಲವಾಗಿ ಪ್ರಕರಣ ಹಿಂದೆಗೆದುಕೊಳ್ಳಬೇಕೆಂಬ ತೀರ್ಮಾನವೂ ಆಯಿತು.

ಆದರೆ, ನವೀನ್ ಸೂರಿಂಜೆ ತಕ್ಷಣವೇ ಬಿಡುಗಡೆ ಆಗುವುದಿಲ್ಲ. ಕಾನೂನು ಪ್ರಕ್ರಿಯೆಗಳು ಮುಗಿಯಲು ಇನ್ನೂ ಒಂದು ವಾರ ಹಿಡಿಯಬಹುದು. ಬಹುಶಃ ಮುಂದಿನ ವಾರದಲ್ಲಿ ನವೀನ್ ಜೈಲಿನಿಂದ ಹೊರಬರುವ ನಿರೀಕ್ಷೆ ಇದೆ.

ಈ ಇಷ್ಟೂ ದಿನಗಳಲ್ಲಿ ಹಲವಾರು ಜನ ನೇರವಾಗಿ ಕೆಲಸ ಮಾಡಿದ್ದರೆ, ಮತ್ತೂ ಹಲವರು ಪರೋಕ್ಷವಾಗಿ ಸಹಾಯಹಸ್ತ ಚಾಚಿದ್ದರು. ಈ ಒಂದು ತಿಂಗಳಿನಲ್ಲಿ ಸಂಬಂಧಪಟ್ಟವರು ಪರಸ್ಪರ ಕರೆ ಮಾಡಿರುವ ಮತ್ತು ಸಂದೇಶಗಳನ್ನು ಕಳುಹಿಸಿರುವ ಸಂಖ್ಯೆ ಲೆಕ್ಕವಿಲ್ಲದಷ್ಟು. ಮಾಡುವ ಕೆಲಸ ಇನ್ನೂ ಇದೆ. ಆದರೆ ಒಂದು ಪ್ರಮುಖ ಘಟ್ಟ ದಾಟಿಯಾಗಿದೆ.

ಮತ್ತೊಮ್ಮೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ  ಈ ತಾರ್ಕಿಕ ಹಂತ ಮುಟ್ಟಿಸಲು ನೆರವಾದ ಎಲ್ಲರಿಗೂ, ಶರಣು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಇದು ನೆನ್ನೆಯ ಸಚಿವ ಸಂಪುಟದ ತೀರ್ಮಾನದ ಬಗ್ಗೆ ಇಂದು ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು:

ವಿಜಯ ಕರ್ನಾಟಕ:
vijaykarnataka_020113

ಪ್ರಜಾವಾಣಿ:
prajavani_020113

The Hindu:
hindu_010213

₹ 16 ಲಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಬಹುದೇ?


– ರವಿ ಕೃಷ್ಣಾರೆಡ್ಡಿ


 

ಇಂದು ದೇಶದ ಬಹುತೇಕ ಕಡೆ ಚುನಾವಣೆಗಳನ್ನು ಹಣ ನಿರ್ಧರಿಸುತ್ತಿದೆ. ಜಾತಿಯೂ ನಿರ್ಧರಿಸುತ್ತದೆ. ಆದರೆ, ಈಗಲೂ ಬಹುತೇಕ ಕ್ಷೇತ್ರಗಳಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಗೆಲ್ಲಬಲ್ಲ, ಬಹುಸಂಖ್ಯಾತ ಜಾತಿಯ ಅಭ್ಯರ್ಥಿಗೇ ಟಿಕೆಟ್ ನೀಡುವುದರಿಂದ ಕೊನೆಗೂ ಮುಖ್ಯವಾಗುವುದು ಯಾರು ಹೆಚ್ಚು ಹಣ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಹೆಚ್ಚು ಶಿಸ್ತುಬದ್ಧವಾಗಿ ವಿನಿಯೋಗಿಸುತ್ತಾರೆ ಎನ್ನುವುದು.

ಅಮೇರಿಕದಂತಹ ದೇಶಗಳಲ್ಲಿ ಚುನಾವಣಾ ವೆಚ್ಚದ ಮಿತಿಗಳಿಲ್ಲ. ಆಭ್ಯರ್ಥಿ ತನ್ನ ದುಡ್ಡನ್ನೇ ಬಳಸಬಹುದು ಅಥವ ಆತನಿಗೆ ಬಲವಿದ್ದಷ್ಟು ಹಣವನ್ನು ಜನರಿಂದ, ಸಂಘ-ಸಂಸ್ಥೆಗಳಿಂದ ಕೂಡಿಸಿ ಅಷ್ಟನ್ನೂ ಖರ್ಚು ಮಾಡಬಹುದು. ಅಲ್ಲಿ ಕೆಲವೊಂದು ನಿಬಂಧನೆಗಳಿವೆ, ಉದಾಹರಣೆಗೆ, ಒಬ್ಬ ಪ್ರಜೆ ಒಬ್ಬ ಆಭ್ಯರ್ಥಿಗೆ ಇಂತಿಷ್ಟು ಮೊತ್ತಕ್ಕಿಂತ ಹೆಚ್ಚಿಗೆ ನೀಡುವ ಹಾಗಿಲ್ಲ.

ನಮ್ಮ ದೇಶದಲ್ಲಿ ಆಯಾಯ ರಾಜ್ಯಗಳಿಗೆ ಸಂಬಂಧಿಸಿದಂತೆ ಅಭ್ಯ್ರರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿ ಇದೆ. ಪರಿಷ್ಕೃತ ಪಟ್ಟಿಯ ಪ್ರಕಾರ ರಾಜ್ಯದlincolnಲೋಕಸಭಾ ಅಭ್ಯರ್ಥಿ 40 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವ ಹಾಗೆ ಇಲ್ಲ. ವಿಧಾನಸಭಾ ಅಭ್ಯರ್ಥಿಯ ಮಿತಿ 16 ಲಕ್ಷ ರೂಗಳು. ಆದರೆ, ಪ್ರಮುಖ ಅಭ್ಯರ್ಥಿಗಳು ಖರ್ಚು ಮಾಡಲಿರುವ ಹಣ ಹತ್ತಾರು ಕೋಟಿಗಳನ್ನು ದಾಟಲಿದೆ. ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ರಾಜ್ಯದ ಹಲವಾರು ಕಡೆ ಅನೇಕ ಅಭ್ಯರ್ಥಿಗಳು ಸುಮಾರು ಐವತ್ತು ಕೋಟಿಗೂ ಹೆಚ್ಚು ಖರ್ಚು ಮಾಡಿದ್ದರು ಎಂಬ ಸುದ್ದಿಗಳಿದ್ದವು. ಆದರೆ ಅವರಲ್ಲಿ ಯಾರೊಬ್ಬರದೂ ತಮ್ಮ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗಕ್ಕೆ ಕೊಟ್ಟಾಗ ಅದು ಹತ್ತು ಲಕ್ಷಕ್ಕೆ ಮೀರಿದ (ಆಗಿನ ಮಿತಿ) ಉದಾಹರಣೆಗಳಿಲ್ಲ. ಬರಲಿರುವ ಚುನಾವಣೆಯಲ್ಲಿ ನೂರು ಕೋಟಿಯ ತನಕ ಖರ್ಚು ಮಾಡುವ ಒಬ್ಬಿಬ್ಬರಾದರೂ ನಮ್ಮಲ್ಲಿದ್ದಾರೆ. ಅಂದಹಾಗೆ, ನನ್ನೂರಿನ ಗ್ರಾಮಪಂಚಾಯಿತಿಯ ಸದಸ್ಯನೊಬ್ಬ ಸುಮಾರು 75 ಲಕ್ಷ ರೂಪಾಯಿಗಳನ್ನು ಕೇವಲ ಸಾವಿರ ಚಿಲ್ಲರೆ ಓಟಿಗೆ (ಆದರಲ್ಲಿ ಆತ ಪಡೆದದ್ದು ಸುಮಾರು ಐದಾರು ನೂರು ಓಟು ಇರಬಹುದು) ಖರ್ಚು ಮಾಡಿ ಗೆದ್ದ ಎನ್ನುತ್ತಾರೆ ನನ್ನೂರಿನ ಜನ. ಇನ್ನು ಅದರ ನೂರಿನ್ನೂರು ಪಟ್ಟು ದೊಡ್ಡದಾದ ಅಸೆಂಬ್ಲಿ ಕ್ಷೇತ್ರಕ್ಕೆ ನೂರು ಕೋಟಿ ಹೆಚ್ಚೇನೂ ಅಲ್ಲ.

ಆದರೆ ಇದು, ನ್ಯಾಯ ಸಮ್ಮತವೇ? ಕಾನೂನು ಸಮ್ಮತವೇ? ಕಾನೂನು ಬರೆಯುವವರ ಮೊದಲ ಅರ್ಹತೆಯೇ ಕಾನೂನು ಮುರಿಯುವುದಾದರೆ–ಇಷ್ಟು ಸ್ವಚ್ಚಂದವಾಗಿ–ಈ ದೇಶದ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿದೆಯೇ? ಇದೆಲ್ಲ ಗೊತ್ತಿರುವ ಜನ ಸುಮ್ಮನಿರುವುದಾದರೆ, ಅವರ ಆತ್ಮಸಾಕ್ಷಿ ಬದುಕಿದೆಯೇ?

ಇನ್ನು, ಕೇವಲ 16 ಲಕ್ಷಗಳಲ್ಲಿ ಚುನಾವಣಾ ಖರ್ಚು ನಿಭಾಯಿಸುವುದು ಸಾಧ್ಯವೇ?

ಬೇರೆಯೆಲ್ಲ ವಿಚಾರಗಳನ್ನು ಬದಿಗಿಟ್ಟು, ಕೇವಲ ಮೇಲಿನ ಈ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಒಂದೇ ಪದದ ಉತ್ತರ, ಹೌದು? ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕೇವಲ ಹದಿನಾರು ಲಕ್ಷ ರೂಪಾಯಿಗಳಿಗೆ ನೀವು ಒಂದು ಉತ್ತಮ ಚುನಾವಣಾ ಪ್ರಚಾರ ಮಾಡಬಹುದು.

ಹೇಗೆ?

ಮೊದಲಿಗೆ, ಯಾರೊಬ್ಬರಿಗೂ ಓಟಿಗಾಗಿ ದುಡ್ಡು ಕೊಡುವುದಿಲ್ಲ, ಹೆಂಡ ಕುಡಿಸುವುದಿಲ್ಲ, ಬಾಡೂಟ-ಮೃಷ್ಟಾನ್ನ ಭೋಜನಗಳ ಪಾರ್ಟಿ ಇಲ್ಲ, ಮತದಾರರಿಗೆ ಇನ್ಯಾವುದೇ ತರಹದ ಸೀರೆ-ರವಿಕೆ-ಉಂಗುರ-ವಾಚು-ಅಕ್ಕಿ-ಬೇಳೆಗಳ ಚುನಾವಣಾ ಹಿಂದಿನ ದಿನದ ಕಾಣಿಕೆಗಳಿಲ್ಲ. ಈ ಷರತ್ತುಗಳ ಮೇಲೆ ಪ್ರಚಾರ ಮಾಡಿದ್ದೇ ಆದರೆ, ಆ ಹದಿನಾರು ಲಕ್ಷ ರೂಪಾಯಿಗಳಲ್ಲಿ ಒಂದಷ್ಟು ಉಳಿಯಲೂ ಬಹುದು.

ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಎರಡು ಲಕ್ಷ ಮತದಾರರಿದ್ದಾರೆ. ಒಂದು ಮನೆಯಲ್ಲಿ ಸರಾಸರಿ ಎರಡೂವರೆ ಓಟಿದೆ ಎಂದುಕೊಂಡರೆ, gandhi1ಸುಮಾರು 80000 ಮನೆಗಳಿರುತ್ತವೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನೀವು ಸುಮಾರು 4 ಲಕ್ಷ ರೂಪಾಯಿಗಳಿಗೆ A-4 ಸೈಜಿನ, ಎರಡೂ ಬದಿಯ ಕಲರ್ ಪ್ರಿಂಟ್ ಇರುವ 8 ಲಕ್ಷ ಕರಪತ್ರಗಳನ್ನು ಮುದ್ರಿಸಬಹುದು. ಅಂದರೆ, ಸರಾಸರಿ ಒಂದು ಮನೆಗೆ ಹತ್ತು ಸಲ ಹಂಚಬಹುದಾದಷ್ಟು. ಇನ್ನು ಚುನಾವಣೆಗೆ ಒಂದು ತಿಂಗಳ ಕಾಲ ಸುಮಾರು ಮುವ್ವತ್ತು ಕಾರ್ಯಕರ್ತರನ್ನು ಸರಾಸರಿ ಹತ್ತರಿಂದ-ಹದಿನೈದು ಸಾವಿರ ರೂಗಳ ಸಂಬಳಕ್ಕೆ ತೆಗೆದುಕೊಂಡರೆ, ಅದು ಸುಮಾರು 4 ಲಕ್ಷಗಳ ಖರ್ಚಿನದು. ಈ ಕಾರ್ಯಕರ್ತರ ಓಡಾಟಕ್ಕೆ, ಬಸ್ ಚಾರ್ಜಿಗೆ, ಗಾಡಿಗಳಿಗೆ, ಡೀಸೆಲ್‌ಗೆ, ಮತ್ತು ಊಟತಿಂಡಿಗೆ ಸುಮಾರು 2.5 ಲಕ್ಷ ರೂಪಾಯಿ (ಸುಮಾರು ನಲವತ್ತು ಜನರಿಗೆ ದಿನಕ್ಕೆ ಸರಾಸರಿ 200 ರೂಗಳು, ಸಂಬಳದ ಹೊರತಾಗಿ). ಸುಮಾರು ಒಂದು ಲಕ್ಷ ರೂಪಾಯಿಗೆ ಎರಡು ಜೀಪ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಅದಕ್ಕೆ ಮೈಕ್ ಅದು ಇದೂ ಎಂತಾದರೆ ಅದಕ್ಕೆ 1 ಲಕ್ಷ. ಇಡೀ ಕ್ಷೇತ್ರಕ್ಕೆ ಸುಮಾರು ಎರಡು ನೂರು ಬ್ಯಾನರ್‌ಗಳಿಗೆ ಐವತ್ತು ಸಾವಿರ. ಈ ಲೆಕ್ಕದಲ್ಲಿ ನೀವು ಒಂದು ತಿಂಗಳ ಕಾಲ ಸುಮಾರು ಮುವ್ವತ್ತು-ನಲವತ್ತು ಜನ ಕಾರ್ಯಕರ್ತರನ್ನಿಟ್ಟುಕೊಂಡು ಇಡೀ ಕ್ಷೇತ್ರದ ತುಂಬ ಪ್ರಚಾರ ಮಾಡಬಹುದು. ಸುಮಾರು 12 ಲಕ್ಷ ರೂಗಳಲ್ಲಿ.

ಅಭ್ಯರ್ಥಿ ಮಾತ್ರ ಪ್ರತಿದಿನ ಬೆಳಗ್ಗೆ ಆರರಿಂದ ರಾತ್ರಿ ಹತ್ತರ ತನಕ ತಿಂಗಳು ಪೂರ್ತಿ ಪ್ರಚಾರದಲ್ಲಿ ತೊಡಗಬೇಕಾಗುತ್ತದೆ. ಒಂದಿಬ್ಬರು ಉತ್ತಮ ಸಹಾಯಕರನ್ನಿಟ್ಟುಕೊಳ್ಳಬೇಕಾಗುತ್ತದೆ. ಇನ್ನು ಸಂಬಳ ತೆಗೆದುಕೊಳ್ಳದೇ ಪ್ರಚಾರಕ್ಕೆ ಬರಬಲ್ಲ ಸ್ನೇಹಿತರ, ಸಮಾನಮನಸ್ಕರ, ಹಿತೈಷಿಗಳ, ನೆಂಟರ ಪಡೆ ಜೊತೆಯಾದರಂತೂ ಮೂರ್ನಾಲ್ಕು ಲಕ್ಷಗಳ ಉಳಿತಾಯವೇ ಆಗುತ್ತದೆ ಮತ್ತು ಪ್ರಚಾರಕ್ಕೆ ಬಲವೂ ಸಿಗುತ್ತದೆ.

ಇನ್ನು ಚುನಾವಣೆಯ ದಿನ: ಒಂದು ಕ್ಷೇತ್ರದಲ್ಲಿ ಸರಾಸರಿ ಎರಡುನೂರು ಬೂತ್‌ಗಳಿರುತ್ತವೆ. ನಿಮಗೆ ಆ ದಿನ ಕನಿಷ್ಟ ಐದುನೂರರಿಂದ ಸಾವಿರ ಕಾರ್ಯಕರ್ತರು ಬೇಕು. ಒಂದು ಬೂತ್‌ಗೆ ಎರಡು ಸಾವಿರ ಖರ್ಚು ಇಟ್ಟುಕೊಂಡರೆ 4 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದೇ ಸ್ವಲ್ಪ ಕಷ್ಟದ ಕೆಲಸ. ನಿಮ್ಮ ಒಂದು ತಿಂಗಳ ಪರಿಶ್ರಮ ಎದ್ದು ಕಾಣಿಸುವುದು ಮತ್ತು ನಿರ್ಣಾಯಕವಾಗುವುದು ಅಂದೇ.

ಹೀಗೆ 16 ಲಕ್ಷ ರೂಗಳಲ್ಲಿ ಒಬ್ಬ ಅಭ್ಯರ್ಥಿ, ತಾನು ಯಾರು, ತನ್ನ ಪಕ್ಷ ಯಾವುದು, ತಾನು ಮಾಡಲಿರುವುದೇನು, ಅವರು ಯಾತಕ್ಕಾಗಿ ಆತನಿಗೆ ಮತ ಕೊಡಬೇಕು, ಇತ್ಯಾದಿಗಳ ಬಗ್ಗೆ ಕ್ಷೇತ್ರದ ಬಹುತೇಕ ಮತದಾರರಿಗೆ ಖಂಡಿತವಾಗಿ ತಿಳಿಸಬಹುದು. ಅಲ್ಲಿಗೆ ಆತನ ಕರ್ತವ್ಯ ಮುಗಿಯುತ್ತದೆ.

ಇನ್ನು, ಓಟು ಹಾಕುವುದು ಬಿಡುವುದು ಜನರಿಗೆ ಬಿಟ್ಟ ವಿಚಾರ. ಅಭ್ಯರ್ಥಿ ತಾನು ನೈತಿಕವಾಗಿ ಮತ್ತು ಕಾನೂನಿನ ಮಿತಿಯಲ್ಲಿ ಮಾತ್ರ ತನ್ನ ಕೆಲಸ ಮಾಡಬಲ್ಲ. ಜನರ ತೀರ್ಮಾನ ಅವರದು. ಅದು ಎಲ್ಲಾ ಸಮಯದಲ್ಲೂ ಜವಾಬ್ದಾರಿಯುತವಾಗಿರುತ್ತದೆ ಅಂತೇನಿಲ್ಲ. ನಮ್ಮ ಪ್ರಯತ್ನ ಮಾಡಲೇಬೇಕಾಗಿದ್ದದ್ದು ಮತ್ತು ಮೌಲ್ಯಯುತವಾದದ್ದು ಎಂದು ಅಭ್ಯರ್ಥಿಯ ಆತ್ಮಸಾಕ್ಷಿಗೆ ಅನ್ನಿಸುವುದೇ ಎಲ್ಲಕ್ಕಿಂತ ದೊಡ್ಡದು.

ಹಾಗೆಯೇ, ಈ ಹದಿನಾರು ಲಕ್ಷ ಹೊಂದಿಸುವುದು ಹೇಗೆ? ಅಭ್ಯರ್ಥಿಯಾದಾತ ತನ್ನ ದುಡ್ಡಿಗಿಂತ ತನ್ನ ಕ್ಷೇತ್ರದ ಪ್ರಜ್ಞಾವಂತ ಮತದಾರರಿಂದಲೇ ಇದನ್ನು ಶೇಖರಿಸುವುದು ನ್ಯಾಯವಾದುದು ಮತ್ತು ಜವಾಬ್ದಾರಿಯುತವಾದುದು. ಅಷ್ಟಕ್ಕೂ ತಮಗೆ ಬೇಕಾದ, ಅರ್ಹನಾದ, ಯೋಗ್ಯನಾದ, ಪ್ರತಿನಿಧಿಯನ್ನು ಆರಿಸಿಕೊಳ್ಳುವುದು ಜನರ ಜವಾಬ್ದಾರಿ. ಅದಕ್ಕೆ ಬೇಕಾದ ಖರ್ಚುಗಳನ್ನು ಭರಿಸುವುದೂ ಆ ಜವಾಬ್ದಾರಿಯ ಭಾಗ. ಆದರೆ, ಅದು ವಾಸ್ತವವೇ? ಅದು ಬೇರೆ ವಿಷಯ ಮತ್ತು ಅದರಲ್ಲಿ ಹೆಚ್ಚಿನ ಭಾಗ ಅಭ್ಯರ್ಥಿಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರಜಾಪ್ರಭುತ್ವ ಹೇಗಿರಬೇಕು ಮತ್ತು ನಾವು ಏನು ಮಾಡಬೇಕು ಎನ್ನುವುದು ಪ್ರಜ್ಞಾವಂತರ ಜವಾಬ್ದಾರಿ. ಚುನಾವಣಾ ಸೋಲು-ಗೆಲುವು ನಂತರದ್ದು. ಇಂತಹ ಸಮುದ್ರ ಮಂಥನದಿಂದ ಇನ್ನೊಬ್ಬರ ದುಷ್ಟತನ ಕಡಿಮೆಯಾಗಿ, ಎಲ್ಲರಿಗಿಂತಲೂ ಯೋಗ್ಯನಾದ ಅಭ್ಯರ್ಥಿ ಆರಿಸಿಬಂದರೆ, ಅದೇ ಇಂತಹ ಪ್ರಯತ್ನಗಳ ಯಶಸ್ಸು ಮತ್ತು ಪ್ರಜಾಪ್ರಭುತ್ವದ ಸೊಗಸು.

ರಾಜ್ಯದಾದ್ಯಂತ ಈಗಿನ ಕೊಳಕು ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ, ತಮ್ಮ ಪಾತ್ರವೇನು ಮತ್ತು ತಾವು ಏನು ಮಾಡಬೇಕು-ಮಾಡಬಹುದುgandhi2ಎಂದುಕೊಳ್ಳುತ್ತಿರುವ ಪ್ರಜ್ಞಾವಂತರಿಗೆ, ಹೀಗೂ ಒಂದು ಪ್ರಯತ್ನ ಮಾಡಬಹುದು ಎಂದು ಇಷ್ಟನ್ನು ಬರೆದಿದ್ದೇನೆ. ಒಳ್ಳೆಯ ರಾಜಕೀಯ ಪಕ್ಷದಲ್ಲಿ ಅವಕಾಶ ಸಿಕ್ಕರೆ, ಪ್ರಯತ್ನಿಸಿ. ಇಲ್ಲವಾದರೆ, ಪಕ್ಷೇತರರಾಗಿಯಾದರೂ ನಿಂತು ಇಂದಿನ ಭ್ರಷ್ಟ ವ್ಯವಸ್ಥೆಯನ್ನು ವಿರೋಧಿಸಿ. ಹಾಗೆ ಮಾಡಲು ನೀವು ಹಾಕಿಕೊಳ್ಳಬೇಕಾದ ಒಂದೇ ಗಂಭೀರ ಪ್ರಶ್ನೆ, “ನನ್ನ ಕ್ಷೇತ್ರದ ಇತರೆ ಅಭ್ಯರ್ಥಿಗಳಿಗಿಂತ ಪ್ರಾಮಾಣಿಕತೆಯಲ್ಲಿ, ಕೆಲಸದಲ್ಲಿ, ಕಾಳಜಿಯಲ್ಲಿ, ಅಧ್ಯಯನದಲ್ಲಿ, ನಾನು ಉತ್ತಮನೋ ಅಲ್ಲವೋ?” ಎಂಬುದಷ್ಟೇ.

ನೀವು ನಿಲ್ಲದೇ ಇದ್ದರೂ, ಅಂತಹ ಒಬ್ಬ ವ್ಯಕ್ತಿಗೆ ಬೆಂಬಲಿಸುವ ಮೂಲಕ ನಿಮ್ಮ ರಾಜಕೀಯ ಸಕ್ರಿಯತೆಯನ್ನು ತೋರಿಸಬಹುದು ಮತ್ತು ಆ ಮೂಲಕ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬಹುದು.

ಗಾಂಧಿ, ನೆಹರೂ, ಪಟೇಲ್, ಜೇಪಿ, ಗೋಪಾಲಗೌಡ, ಲಿಂಕನ್, ಮಂಡೇಲಾ, ಒಬಾಮ, ಇವರೆಲ್ಲ ಆರಿಸಿಕೊಂಡ, ದುಡಿದ ಈ ರಾಜಕೀಯ ಕ್ಷೇತ್ರ ಹೊಲಸಲ್ಲ. ನಾವು ಹಾಗಾಗಲು ಬಿಟ್ಟಿದ್ದೇವೆ; ನಮ್ಮ ನಿಷ್ಕ್ರಿಯೆ, ಆಲಸ್ಯ, ಕೃತಘ್ನತೆಯಿಂದ. ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಇತರೆ ಎಲ್ಲಾ ಕ್ಷೇತ್ರಗಳಿಗಿಂತ ಪವಿತ್ರವಾದದ್ದು, ಆದರ್ಶನೀಯವಾದದ್ದು. ಹಾಗೆಯೇ ಕಠಿಣವಾದದ್ದು. ಅದನ್ನು ಎದುರಿಸಬಲ್ಲ ಛಲ ಮತ್ತು ನ್ಯಾಯನಿಷ್ಟೆ ನಿಮಗಿದ್ದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಜೀವನ ಈಗಿನದಕ್ಕಿಂತ ಸಹನೀಯವೂ, ಶ್ರೀಮಂತವೂ, ಅರ್ಥಪೂರ್ಣವೂ ಆಗಿರುತ್ತದೆ. ಹಾಗೆ ಮಾಡುವುದು ಮತ್ತು ಇರುವುದು ನಮ್ಮೆಲ್ಲರ ಜವಾಬ್ದಾರಿಯೂ ಅಲ್ಲವೇ?

ಒಬ್ಬ ವ್ಯಕ್ತಿಗೆ ಜೀವಮಾನದಲ್ಲಿ ಕೆಲವೇ ಸಂದರ್ಭಗಳಲ್ಲಿ ಎದುರಾಗುವ ಇಂತಹ ಒಂದು ಸವಾಲಿಗೆ ನಮ್ಮ ಸಮಾಜದಲ್ಲಿ ಎಷ್ಟು ಜನ ಉತ್ತರಿಸಬಹುದು?

“ವರ್ತಮಾನ”ಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ…

ಸ್ನೇಹಿತರೇ,

ಇತ್ತೀಚೆಗೆ ನಮ್ಮ ವರ್ತಮಾನ.ಕಾಮ್ ನಿಯಮಿತವಾಗಿ “ಅನಿಯಮಿತ”ವಾಗುತ್ತಿರುವುದನ್ನು ನೀವು ಗಮನಿಸಿಯೇ ಇರುತ್ತೀರ. ದಿನಕ್ಕೆ ಕನಿಷ್ಟ ಒಂದಾದರೂ ಲೇಖನ ಇರಬೇಕು ಮತ್ತು ಹಾಗಿದ್ದಲ್ಲಿ ಮಾತ್ರ ಅದು ತನ್ನ ಓದುಗವಲಯವನ್ನು ಹಿಡಿದಿಟ್ಟುಕೊಂಡಿರುತ್ತದೆ ಮತ್ತು ವಿಸ್ತರಿಸಿಕೊಳ್ಳುತ್ತದೆ ಎನ್ನುವ ನಂಬಿಕೆ ನನ್ನದು. ಆದರೆ, ಇತ್ತೀಚಿನ ದಿನಗಳಲ್ಲಿ ಅದು ಆಗುತ್ತಿಲ್ಲ. ಕಾರಣಗಳು ಅನಗತ್ಯ.

ಕರ್ನಾಟಕದ ರಾಜಕಾರಣ ಮತ್ತೊಮ್ಮೆ ಪಾತಾಳದಿಂದ ಪಾತಾಳಕ್ಕೆ ಜಾರುತ್ತಿದೆ. ಇದನ್ನೊಂದು ಅಸಂಗತ ನಾಟಕದಂತೆ ನೋಡುತ್ತ ಖುಷಿ ಪಡುವವರಿಗೆ ಬರಲಿರುವ ದಿನಗಳು ಇನ್ನೂ ಮಜಾ ಕೊಡಲಿವೆ. ನಮ್ಮ ಬಹುಪಾಲು ಸಮಸ್ಯೆಗಳಿಗೆ ಸಹನೀಯ ಪರಿಹಾರ ನೀಡಬಲ್ಲ ಪ್ರಜಾಪ್ರಭುತ್ವದ ರಾಜಕಾರಣ ಒಂದು ಒಳ್ಳೆಯ ಸಸ್ಪೆನ್ಸ್-ಥ್ರಿಲ್ಲರ್ ಸಿನೆಮಾದ ಚಿತ್ರಕತೆಯಂತೆ ರೋಚಕವಾಗೇನೋ ಸಾಗುತ್ತಿದೆ.

ಆದರೆ, ಜನತೆಯ ಜೀವನ ಮತ್ತು ಸಾಮಾಜಿಕ ಮೌಲ್ಯಗಳ ಸ್ಥಿತಿಗತಿಗಳೇನು? ರೋಚಕತೆಯ ಅಡ್ಡ ಪರಿಣಾಮಗಳೇನು? ಈಗಾಗಲೆ ರಾಗಿ ಕೆಜಿಗೆ ರೂ.30 ದಾಟಿದೆ. ಅಕ್ಕಿಯೂ ಗಗನಮುಖಿಯಾಗಿದೆ, ಮಧ್ಯಮವರ್ಗವೇನೋ ಬಚಾವಾಗಬಹುದು. ಆದರೆ, ಪಡಿತರ ವ್ಯವಸ್ಥೆಯಿಂದ ಹೊರಗಿರುವ ಬಡವರಿಗೆ ಮತ್ತು ಕೆಳಮಧ್ಯಮವರ್ಗದ ಬಡವರಿಗೆ ಈ ಬೇಸಿಗೆಯಲ್ಲಿ ನೀರೂ ಸಿಗದು. ಚಳಿಗಾಲದ ಮಧ್ಯಾಹ್ನಗಳು ಈಗಾಗಲೆ ಬೇಸಿಗೆಯ ಭಯ ಹುಟ್ಟಿಸುತ್ತಿವೆ. ಅಕ್ಕಿಬೇಳೆ, ನೀರು, ವಿದ್ಯುತ್; ಇವು ಮುಂದಿನ ದಿನಗಳಲ್ಲಿ ಬೇರೆಲ್ಲ ವಿಚಾರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿವೆ ಮತ್ತು ಬಹುಶಃ ಅದೇ ನಮ್ಮ ಮುಂದಿನ ದಿನಗಳ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳನ್ನು ಪ್ರಭಾವಿಸಲಿವೆ.

ಆದರೆ, ಸದ್ಯದ ಮಟ್ಟಿಗೆ ಇವು ಅಂತಹ ಗಂಭೀರ ವಿಷಯಗಳಲ್ಲ. ಮುಂದಿನ ಮೂರು-ನಾಲ್ಕು ತಿಂಗಳು ಕರ್ನಾಟಕದ ಜನರನ್ನು ರಾಜಕೀಯ ಮತ್ತು ಚುನಾವಣೆಗಳು ಆವರಿಸಿಕೊಳ್ಳಲಿವೆ. ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು vartamaana-reqನಮ್ಮ ಮುಂದಿನ ದಿನಗಳನ್ನು ನಿರ್ಧರಿಸುತ್ತವೆ ಎಂಬ ಪರಿವೆ ಇಲ್ಲದೆ ಬಹುಪಾಲು ಜನ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ. ಯಾರೇನು ಮಾಡಬಹುದು?

ವೈಯಕ್ತಿಕವಾಗಿ ಹೇಳುವುದಾದರೆ, ಮುಂದಿನ ಮೂರ್ನಾಲ್ಕು ತಿಂಗಳು ನನ್ನೆಲ್ಲ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಮೀಸಲಿಡಲಿದ್ದೇನೆ. ಅಪ್ರಿಯವಾದರೂ ಹೇಳಬೇಕಾದ, ನ್ಯಾಯವಾದ, ಪ್ರಸ್ತುತವಾದ ವಿಷಯಗಳನ್ನು ನನ್ನ ಕೈಲಾದ ಮಟ್ಟಿಗೆ ಹೇಳುವ ಪ್ರಯತ್ನ ಮಾಡುತ್ತೇನೆ. ಏನು ಮಾಡಿದರೆ ಅದು ಪರಿಣಾಮಕಾರಿಯಾಗಬಲ್ಲುದು ಎನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಫಲ-ನಿಷ್ಫಲಗಳ ಬಗ್ಗೆ ಯೋಚನೆಯಿಲ್ಲ. ಪ್ರಯತ್ನದ ಬಗ್ಗೆಯಷ್ಟೇ ನನ್ನ ಬದ್ಧತೆ.

ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ಗೆ ಎಷ್ಟು ಕೆಲಸ ಮಾಡಬಲ್ಲೆನೋ ಗೊತ್ತಿಲ್ಲ. ಹಾಗಾಗಿ ನಮ್ಮ ಬಳಗದ ಎಲ್ಲಾ ಲೇಖಕರಲ್ಲಿ ಮತ್ತು ಬೆಂಬಲಿಗರಲ್ಲಿ ಈ ಮೂಲಕ ವಿನಂತಿ ಮಾಡುವುದೇನೆಂದರೆ, ದಯವಿಟ್ಟು ಹೆಚ್ಚುಹೆಚ್ಚು ಬರೆಯಿರಿ ಮತ್ತು ಈ ವೇದಿಕೆ ಇನ್ನಷ್ಟು ಸಶಕ್ತವಾಗಿಸಲು ನಿಮ್ಮ ಕೈಲಾದುದನ್ನು ಮಾಡಿ. ಬರಹ ನಿಲ್ಲಿಸಿರುವವರು ಮತ್ತೆ ಆರಂಭಿಸಿ, ಕಡಿಮೆ ಬರೆಯುತ್ತಿರುವವರು ಹೆಚ್ಚು ಮಾಡಿ, ಬರೆಯದೇ ಇದ್ದವರು ಬರೆಯಲು ಆರಂಭಿಸಿ. ಬರೆಯಲು ವಿಷಯಗಳಿಗೇನೂ ಕೊರತೆಯಿಲ್ಲ. ಮತ್ತು ವರ್ತಮಾನ.ಕಾಮ್‌ನ ಆಶಯ ಮತ್ತು ಕಾಳಜಿಗಳು, ಅದರಲ್ಲಿ ಎತ್ತಲ್ಪಡುವ ವಿಷಯಗಳು, ಅದಕ್ಕಿರುವ ಓದುಗವಲಯ, ಮತ್ತು ಅದರ ಹಿಗ್ಗುತ್ತಲೇ ಇರುವ ಪ್ರಸ್ತುತತೆ; ಇವೆಲ್ಲ ನಿಮಗೆ ಗೊತ್ತಿರುವಂತಹುದೇ.

ಮತ್ತು, ಚುನಾವಣೆ ಮುಗಿದ ನಂತರ ಕನಿಷ್ಟ ಕೆಲವು ತಿಂಗಳುಗಳನ್ನು ವರ್ತಮಾನ.ಕಾಮ್‌ಗೆ ಮೀಸಲಿಡುತ್ತೇನೆ. ಅದಕ್ಕೆ ಪೂರಕವಾಗಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಮತ್ತು ಇತರೆ ಆಯಾಮಗಳತ್ತಲೂ ಆಲೋಚಿಸಬೇಕಿದೆ. ಈ ವರ್ಷ ವರ್ತಮಾನ.ಕಾಮ್‌ಗೂ ನಿರ್ಣಾಯಕ ವರ್ಷವಾಗಲಿದೆ. ಇಲ್ಲಿಯತನಕ ಕೈಹಿಡಿದವರು ಕೈಬಿಡಲಾರರು ಎನ್ನುವ ನಿರೀಕ್ಷೆಯಲ್ಲಿ…

ನಮಸ್ಕಾರ,
ರವಿ ಕೃಷ್ಣಾರೆಡ್ಡಿ