Category Archives: ರವಿ ಕೃಷ್ಣಾರೆಡ್ಡಿ

“ಮಲೆನಾಡ ಗಾಂಧಿ”ಯೊಡನೆಯ ಭೇಟಿ ಹುಟ್ಟಿಸಿದ ಪ್ರಶ್ನೆಗಳು, ಹೆಚ್ಚಿಸಿದ ಭರವಸೆಗಳು..

– ರವಿ ಕೃಷ್ಣಾರೆಡ್ಡಿ

ಮೊನ್ನೆ ಸೋಮವಾರ, ಸಂಕ್ರಾಂತಿಯಂದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಹೋಗಿದ್ದೆ. ಕೊಪ್ಪದಲ್ಲಿ ವಕೀಲರಾಗಿರುವ ಗೆಳೆಯ ಸುಧೀರ್ ಕುಮಾರ್ ಮುರೊಳ್ಳಿಯವರೊಡನೆ ಅಲ್ಲಿಯ ಮಾಜಿ ಶಾಸಕ ಮತ್ತು ಕರ್ನಾಟಕದ ಮಾಜಿ ಸಚಿವ, ನಿವೃತ್ತ ರಾಜಕಾರಣಿ ಹೆಚ್.ಜಿ.ಗೋವಿಂದ ಗೌಡರನ್ನು ಭೇಟಿಯಾಗಿದ್ದೆ. ನನ್ನೊಡನೆ ಇದ್ದ ಇನ್ನೊಬ್ಬ ಗೆಳೆಯ ಸತೀಶ್, ಗೌಡರನ್ನು ಸಂದರ್ಶನ ಮಾಡಿದರು.

ರಾಜ್ಯದ ಇನ್ನೊಬ್ಬ ದೇಶಪ್ರಸಿದ್ಧ ಗೌಡರು ನಮಗೆಲ್ಲಾ ಗೊತ್ತು. ಇತ್ತೀಚೆಗೆ ಅವರು ಮಾತನಾಡುತ್ತ, ಪಕ್ಕದ ರಾಜ್ಯದ ಕರುಣಾನಿಧಿಯವರಿಗೊದಗಿರುವ ಕೌಟುಂಬಿಕ ವಿಷಮ ಪರಿಸ್ಥಿತಿಯನ್ನು ತಾನು ತನ್ನ ಇಳಿಕಾಲದಲ್ಲಿ ನೊಡಲು ಇಚ್ಚಿಸುವುದಿಲ್ಲ ಎಂತಲೊ, ಹಾಗಾಗಲು ಬಿಡುವುದಿಲ್ಲ ಎಂತಲೋ ಅಂದಿದ್ದರು. ಅದು ಅವರ ಮತ್ತೊಬ್ಬ ಸೊಸೆ ರಾಜಕೀಯಕ್ಕೆ ಬರುವ ವಿಷಯಕ್ಕೆ ಮತ್ತು ಅವರ ಕುಟುಂಬದಲ್ಲಿ ನಡೆಯುತ್ತಿರುವ ಮೇಲಾಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸಿದ ರೀತಿ.

“ಮಲೆನಾಡ ಗಾಂಧಿ” ಎಂದೇ ಗುರುತಿಸಲಾಗುವ ಕೊಪ್ಪದ ಗೋವಿಂದ ಗೌಡರು ರಾಜಕೀಯ ನಿವೃತ್ತಿ ಘೋಷಿಸಿ ಸುಮಾರು 13 ವರ್ಷವಾಯಿತು. govindagowdaಅವರು ಜನತಾ ದಳದ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ, ಅಂದರೆ 1999 ರಲ್ಲಿ ನಡೆದ ರಾಜಕೀಯ ಕಚ್ಚಾಟಗಳನ್ನು ನೋಡಿ, ಇದು ತಮಗೆ ತರವಲ್ಲ ಎಂದು ಮತ್ತೊಮ್ಮೆ ಚುನಾವಣೆಗೆ ನಿಲ್ಲಲಿಲ್ಲ. ಆಗ ಅವರಿಗೆ ಬಹುಶಃ 73 ವರ್ಷವಾಗಿತ್ತೇನೊ. ಈಗ ಅವರಿಗೆ 87; ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ 88 ತುಂಬುತ್ತದೆ. ಆರೋಗ್ಯವಾಗಿದ್ದಾರೆ. ಈಗಲೂ ಪತ್ರಿಕೆ-ಪುಸ್ತಕಗಳನ್ನು ಓದುತ್ತಾರೆ. ಅವರ ಶ್ರೀಮತಿಯವರಾದ ಶಾಂತಕ್ಕನವರಿಗೆ 82 ಇರಬಹುದು. ಬಹಳ ಹಸನ್ಮುಖದ ಅವರೂ ಆರೋಗ್ಯದಿಂದಿದ್ದಾರೆ. ತಮ್ಮ ಮತ್ತು ತಮ್ಮ ಪತಿಯ ಬಟ್ಟೆಗಳನ್ನು ಅವರೇ ಒಗೆಯುತ್ತಾರೆ.

ಬಹುಶಃ ಅರವತ್ತು-ಎಪ್ಪತ್ತು ದಾಟಿದ ಕರ್ನಾಟಕದ ಯಾವೊಬ್ಬ ಮಾಜಿ ಸಚಿವನೂ ಗೋವಿಂದ ಗೌಡರಷ್ಟು ನೆಮ್ಮದಿಯ, ಸಂತೋಷದ, ಮತ್ತು ವೈಯಕ್ತಿಕ ವಿಷಾದಗಳಿಲ್ಲದ ಜೀವನ ನಡೆಸುತ್ತಿರುವುದು ಸಂದೇಹ. ಇಂತಹ ಮುಪ್ಪಿನ ಜೀವನ ಗಳಿಸಿಕೊಳ್ಳಲಾಗದೆ ಏನೆಲ್ಲಾ ಸಾಧಿಸಿದರೂ ಏನು ಪ್ರಯೋಜನ?

ಇತ್ತೀಚಿನ ಯುವಕರಿಗೆ ಗೋವಿಂದ ಗೌಡರ ಪರಿಚಯ ಇಲ್ಲದಿರಬಹುದು. ಆದರೆ, 1996 ರ ನಂತರದಲ್ಲಿ ಸರ್ಕಾರಿ ಶಾಲೆಗಳ ಅಧ್ಯಾಪಕರಾಗಿ ನೇಮಕಗೊಂಡ ಪ್ರತಿಯೊಬ್ಬ ಅಧ್ಯಾಪಕನಿಗೂ ಗೋವಿಂದ ಗೌಡರ ಹೆಸರು ಗೊತ್ತಿರಲೇಬೇಕು. ಸರಿಯಾಗಿ ಒಂದು ಲಕ್ಷ ಐದು ಸಾವಿರ ಅಧ್ಯಾಪಕರು (1,05,000) ಯಾವುದೇ ಸಂದರ್ಶನಗಳಿಲ್ಲದೆ, ಲಂಚ ಕೊಡದೆ, ವಶೀಲಿ-ಪ್ರಭಾವಗಳನ್ನು ಬಳಸದೆ, ಅತ್ಯಂತ ಪಾರದರ್ಶಕವಾಗಿ ತಮ್ಮ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಅಧ್ಯಾಪಕರಾಗಿ ನೇಮಕಗೊಂಡರು. ಅದನ್ನು ಮಾಡಿದ್ದು ಆಗಿನ ಶಿಕ್ಷಣ ಸಚಿವರಾಗಿದ್ದ ಹೆಚ್.ಜಿ.ಗೋವಿಂದ ಗೌಡರು. ಆಗ ಅವರಿಗೆ ನೆರವಾದವರು ರಾಜ್ಯದ ಐಎ‌ಎಸ್ ಅಧಿಕಾರಿಗಳಾದ ಎಸ್.ವಿ.ರಂಗನಾಥ್ (ಈಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು) ಮತ್ತು ಹರೀಶ್‌ ಗೌಡ.

ಗೋವಿಂದ ಗೌಡರು ಮಾತನಾಡುತ್ತ ಹೇಳಿದ್ದು, ಸಂದರ್ಶನಗಳ ಮೂಲಕ ನೇಮಿಸುವ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಮನಗಂಡೇ ತಾನು ಸಂದರ್ಶನ-ರಹಿತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು. ಸಚಿವರೂ ಒಳ್ಳೆಯವರಿದ್ದರು. ತಮ್ಮ ಕೈಕೆಳಗಿನ ಅಧಿಕಾರಿಗಳೂ ಒಳ್ಳೆಯವರಿರುವಂತೆ ನೋಡಿಕೊಂಡರು. ಯಾವುದೋ ಒಂದು ಗತಕಾಲದ ಸಂದರ್ಭದಲ್ಲಾದರೂ (ಹದಿನೈದು ವರ್ಷಗಳ ಹಿಂದೆ) ಕರ್ನಾಟಕದಲ್ಲಿ ಭ್ರಷ್ಟತೆಯ ಯಾವೊಂದು ಕುರುಹುಗಳೂ ಇಲ್ಲದೆ ಸರ್ಕಾರಿ ನೇಮಕಾತಿಗಳಾದವು.

ನಿಮಗೆ ಗೊತ್ತಿರಲಿ, ಸರ್ಕಾರಿ ಕೆಲಸಗಳಿಗೆಂದು ನಡೆಸುವ ಸಂದರ್ಶನಗಳಷ್ಟು ಶುದ್ದ ಮೋಸದ, ಅಕ್ರಮದ, ಭ್ರಷ್ಟಾಚಾರದ ವ್ಯವಸ್ಥೆ ಇನ್ನೊಂದಿಲ್ಲ. ಅಪಾಯಕಾರಿ ಹುಚ್ಚುನಾಯಿಗಳೆಲ್ಲ ಈ ಸಂದರ್ಶನದ ಪ್ಯಾನೆಲ್‌ಗಳಲ್ಲಿ ಇರುತ್ತಾರೆ. ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆಯುವಷ್ಟು ಭ್ರಷ್ಟತೆಗೆ ಹೋಲಿಕೆಗಳೇ ಇಲ್ಲವೇನೋ. ಪ್ರತಿಯೊಬ್ಬ ಜಾತಿಯ ಪ್ರಭಾವಿ ಮುಖಂಡನೂ ತಮ್ಮ ಜಾತಿಯವನೊಬ್ಬ ಕೆಪಿಎಸ್‍ಸಿ ಸದಸ್ಯನಾಗಬೇಕೆಂದು ಬಯಸುತ್ತಾರೆ ಮತ್ತು ಅದು ದುಡ್ಡು ಮಾಡಲೆಂದೇ ಇರುವ ಸದಸ್ಯತ್ವ. ರಾಜ್ಯದ ಯಾವೊಬ್ಬ ಘನತೆವೆತ್ತ ಅಧಿಕಾರಸ್ಥ ರಾಜಕೀಯ ಮುಖಂಡನೂ ಈ ಕ್ರಮವನ್ನು ಬದಲಿಸಲು ಹೋಗಿಲ್ಲ.

ನನಗೆ ಇತ್ತೀಚೆಗೆ ಗೊತ್ತಾದ ಈ ಉದಾಹರಣೆಯ ಮೂಲಕ ಕೆಪಿಎಸ್‌ಸಿಯಲ್ಲಿ ನಡೆಯುವ ಸಂದರ್ಶನ ಎಂಬ ಮಹಾನ್ ಭ್ರಷ್ಟತೆಯನ್ನು ವಿವರಿಸಲು ಯತ್ನಿಸುತ್ತೇನೆ. ನಾಲ್ಕೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಅನೇಕ ಸರ್ಕಾರಿ ಕಾಲೇಜುಗಳಿಗೆ ಸಾವಿರಾರು ಅಧ್ಯಾಪಕರನ್ನು ನೇಮಿಸಲಾಯಿತು. ಒಬ್ಬ ಅಭ್ಯರ್ಥಿಗೆ ಎಲ್ಲಾ ಲಿಖಿತ ಪರೀಕ್ಷೆಗಳಲ್ಲಿ ಅತ್ಯುತ್ತಮ ಎನ್ನಬಹುದಾದಷ್ಟು, 85% ಅಂಕಗಳು ಬಂದಿದ್ದವು. ಸಂದರ್ಶನಕ್ಕೆಂದು ಇರುವುದು 25 ಅಂಕಗಳು. ಆ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ ಮೂರೇ ಮೂರು ಅಂಕಗಳು (ಅಂದರೆ ಸುಮಾರು 12%) ಬಂದರೂ ಲಿಖಿತ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ಕೆಲಸ ಖಚಿತ. ಆ ಅಭ್ಯರ್ಥಿ ಯಾವುದೇ ಜಾತಿ ವಶೀಲಿಬಾಜಿ ಮಾಡಲಿಲ್ಲ, ಹಣ ಕೊಟ್ಟು ಕೆಲಸ ಖಚಿತಪಡಿಸಿಕೊಳ್ಳುವ ಸಂಪ್ರದಾಯವನ್ನೂ ಪಾಲಿಸಲಿಲ್ಲ. ಆದರೆ ಸಂದರ್ಶನ ನಡೆಸಿದ ಅಧಮರು, ಹೊಟ್ಟೆಗೆ ಅನ್ನ ತಿನ್ನದ ಕೊಳಕರು, ನೀಚರು, ಲೋಫರ್‌ಗಳು, ಉತ್ತಮವಾಗಿ ಪ್ರಶ್ನೆಗಳಿಗೆ ಉತ್ತರಿಸಿದ ಆ ಅರ್ಹ ಅಭ್ಯರ್ಥಿಗೆ ಕೊಟ್ಟ ಅಂಕಗಳು ಕೇವಲ ಎರಡು. ಶೇ.ಹತ್ತಕ್ಕೂ ಕಡಿಮೆ. ಆ ಅಭ್ಯರ್ಥಿ ಎರಡನೇ ಸಲ ಅರ್ಜಿ ಹಾಕಿದಾಗಲೂ ಇದೇ ಪುನರಾವರ್ತನೆ. ಈ ಸಂದರ್ಶನ ನಡೆಸುವ ಹುಚ್ಚು-ಕಜ್ಜಿ ನಾಯಿಗಳನ್ನು ಏನು ಮಾಡಬೇಕು? ಅದನ್ನು ಈಗಲೂ ಮುಂದುವರೆಸುತ್ತಿರುವ ನಮ್ಮ ರಾಜಕಾರಣಿಗಳನ್ನು ಮತ್ತು ಅಧಿಕಾರಶಾಹಿಯನ್ನು ಹೇಗೆ ಶಿಕ್ಷಿಸಬೇಕು? ಒಳ್ಳೆಯತನವನ್ನು, ಯೋಗ್ಯತೆಯನ್ನು, ಪ್ರಾಮಾಣಿಕತೆಯನ್ನು ಶಿಕ್ಷಿಸುವ ಈ ಸಮಾಜಕ್ಕೆ ಭವಿಷ್ಯವುಂಟೆ?

ಈ ಹಿನ್ನೆಲೆಯಲ್ಲಿ ನೋಡಿದಾಗ ಕೇವಲ ಹದಿನೈದು ವರ್ಷದ ಹಿಂದೆ ಗೋವಿಂದ ಗೌಡರು ಮಾಡಿದ ಕಾರ್ಯ ನಮಗೆ ಗತಕಾಲದ್ದೆಂದು ಅನ್ನಿಸುತ್ತದೆ. ಈ ಹತ್ತು-ಹದಿನೈದು ವರ್ಷಗಳಲ್ಲಿ ಸಮಾಜ ಈ ಪರಿ ಸಂಪೂರ್ಣವಾಗಿ ಕೆಟ್ಟಿದ್ದಾದರೂ ಹೇಗೆ?

ಗೋವಿಂದ ಗೌಡರು ಹೇಳಿದ ಇನ್ನೊಂದು ಮಾತು: ಅವರಿಗೆ ಐವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಅವರ ಯಾವೊಬ್ಬ ಅಳಿಯನಾಗಲಿ ಮತ್ತು ಮಗನಾಗಲಿ, ಅವರು ಸಚಿವರಾಗಿರುವ ತನಕವೂ ತಾನು ಇಂತಹವರ ಮಗ ಅಥವ ಅಳಿಯ ಎಂದುಕೊಂಡು ವಿಧಾನಸೌಧದ ಒಳಗೆ ಕಾಲಿಡಲಿಲ್ಲ. ಅವರು ರಾಜಕೀಯದಲ್ಲಿರುವ ತನಕವೂ ಅವರ ಮಗ ರಾಜಕೀಯಕ್ಕೆ ಬರಲು ಬಿಡಲಿಲ್ಲ. ಈಗ ಅವರ ಮಗನಿಗೆ ಸುಮಾರು 57 ವರ್ಷ ಇರಬಹುದು. ಇತ್ತೀಚೆಗೆ ಕಾಂಗ್ರೆಸ್ ಸೇರಿಕೊಂಡಿರುವ ಅವರಿಗೆ ಅಪ್ಪನ ಕಡೆಯಿಂದ ಯಾವೊಂದು ರಾಜಕೀಯ ಬೆಂಬಲವೂ, ವಶೀಲಿಬಾಜಿಯೂ ಇಲ್ಲ. ಆತ ರಾಜಕೀಯ ಮಾಡಬೇಕಿದ್ದರೆ ಆತನೇ ಹೆಸರು ಸಂಪಾದಿಸಿಕೊಂಡು ತನ್ನ ಸ್ವಂತ ಯೋಗ್ಯತೆಯ ಮೇಲೆ ರಾಜಕೀಯ ಮಾಡಲಿ ಎನ್ನುವುದು ಅಪ್ಪನ ನಿಲುವು. ತಮ್ಮ ಹೆಂಡತಿಯರನ್ನು, ಮಕ್ಕಳನ್ನು, ಅಳಿಯರನ್ನು, ಮೊಮ್ಮಕ್ಕಳನ್ನು, ಕೊನೆಗೆ ಪ್ರೇಯಸಿಯರನ್ನೂ ಸಹ, ಅನೈತಿಕ ಮಾರ್ಗಗಳಿಂದ ರಾಜಕೀಯ ನಾಯಕರನ್ನಾಗಿ ಪ್ರತಿಷ್ಠಾಪಿಸಲು ಯತ್ನಿಸುತ್ತಿರುವ ನಮ್ಮ ರಾಜಕೀಯ ನಾಯಕರು ಗೋವಿಂದ ಗೌಡರ ಜೀವನಾಚರಣೆಯನ್ನು ಗಮನಿಸಿ ತಮ್ಮ ಕುಕೃತ್ಯಗಳಿಗೆ ನೇಣು ಹಾಕಿಕೊಳ್ಳಬೇಕು.

ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ನಮ್ಮೆಲ್ಲರಿಗೂ ಇರುವಷ್ಟೇ ಅಸಮಾಧಾನ ಈ ವಯಸ್ಸಿನಲ್ಲಿಯೂ ಗೋವಿಂದ ಗೌಡರಿಗೆ ಇದೆ. ಹಾಗೆಂದು ಅವರು ನಮಗೆ ಕೇವಲ ನಿರಾಶೆಯ ಮಾತನಾಡಿ ಕಳುಹಿಸಲಿಲ್ಲ. ಬದಲಿಗೆ ಇನ್ನಷ್ಟು ಉತ್ಸಾಹ ತುಂಬಿ, ಜೀವನಪ್ರೀತಿಯನ್ನು ಹೆಚ್ಚಿಸಿ ಕಳುಹಿಸಿದರು.

ಕರ್ನಾಟಕದಲ್ಲಿ ಈಗ ಬದುಕಿರುವ ಎಷ್ಟು ಹಿರಿಯ ರಾಜಕಾರಣಿಗಳ ಬಗ್ಗೆ ನಾವು ಹೀಗೆ ಪ್ರೀತಿಯಿಂದ ಮತ್ತು ಗೌರವದಿಂದ ಮಾತನಾಡಲು ಸಾಧ್ಯ?

ಮಹೇಶಪ್ಪರಂತಹ “ಕುಲಪತಿ”ಗಳು ತೊಲಗಲಿ…

– ರವಿ ಕೃಷ್ಣಾರೆಡ್ಡಿ

ನಮ್ಮ ಸಾರ್ವಜನಿಕ ಜೀವನದಲ್ಲಿ ಇಂದು ಲಜ್ಜೆ ಮತ್ತು ಸಂಕೋಚಗಳೇ ಇಲ್ಲವಾಗಿವೆ. ವೈಯಕ್ತಿಕವಾಗಿ ಜನ ಲಜ್ಜೆ ಕಳೆದುಕೊಳ್ಳಬಹುದು, ಆದರೆ ಈ ಮಟ್ಟದಲ್ಲಿ ಇಡೀ ಸಮಾಜವೇ ವಿಕೃತ ಸಂವೇದನೆಗಳಿಂದ, ಸಣ್ಣದಷ್ಟೂ ಮಾನ-ಮರ್ಯಾದೆ-ನಾಚಿಕೆಗಳಿಲ್ಲದೇ ವರ್ತಿಸುವುದು ಅಧಮತನ.

ಇತ್ತೀಚೆಗೆ ಕೆಲವು ದಿನಗಳಿಂದ ಕನ್ನಡದ ನ್ಯೂಸ್ ಚಾನಲ್‌ಗಳಲ್ಲಿ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ”ದ ಜಾಹೀರಾತೊಂದು ಬರುತ್ತಿದೆ. ಸುಮಾರು ಒಂದು-ಒಂದೂವರೆ ನಿಮಿಷದ ಸುದೀರ್ಘ ಜಾಹೀರಾತಿದು. ಮೊದಲಿಗೆ, ಈ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ” ಜಾಹೀರಾತು ನೀಡುವ ಅಗತ್ಯ ಏನಿದೆ? ಮತ್ತು, ಇದು ಕೊಡುತ್ತಿರುವ ಜಾಹೀರಾತಂತೂ ಅತ್ಯಂತ ಕೀಳುಮಟ್ಟದ್ದಾಗಿದ್ದು, ಒಬ್ಬ ಅಯೋಗ್ಯ, ಕೀಳು ಅಭಿರುಚಿಯ, ಪುಡಾರಿಯೊಬ್ಬ ಕೊಟ್ಟುಕೊಳ್ಳುವ ಸ್ವಯಂಜಾಹೀರಾತಿನಂತಿದೆ.

ಇಡೀ ಜಾಹೀರಾತು ಈ ವಿಶ್ವವಿದ್ಯಾಲಯದ ಕುಲಪತಿಯ ಹೆಸರನ್ನು ಮತ್ತು ಅವರ ಸಾಧನೆಗಳನ್ನು, ಪವಾಡಗಳನ್ನು, ದೈವಾಂಶಸಂಭೂತತ್ವವನ್ನು ರಾಜ್ಯದ ಜನತೆಗೆ ಸಾರಿ ಹೇಳುವ ಅಗತ್ಯದಿಂದ ಕೂಡಿದೆ. “ಮಹೇಶಪ್ಪ” ಎನ್ನುವ ಈ ವಿಶ್ವವಿದ್ಯಾಲಯದ ಕುಲಪತಿಯ ಚಿತ್ರ ಬಂದಾಕ್ಷಣ ಈ ಜಾಹೀರಾತಿನಲ್ಲಿ ಅವರ ಮುಖದ ಹಿಂದೆ ಪ್ರಭೆ ಕಾಣಿಸುತ್ತದೆ; ದೇವರ ಪೋಟೋಗಳ ಹಿಂದೆ ಕಾಣಿಸುವ ಪ್ರಭೆಯಂತೆ. ಮತ್ತು ಇಡೀ ಜಾಹೀರಾತು ಈ ವ್ಯಕ್ತಿಯ ಏಕಮೇವ ತಿಕ್ಕಲು ಪ್ರಚಾರಕ್ಕಾಗಿ ನಿರ್ಮಾಣಗೊಂಡಂತಿದೆ.

ರಾಜ್ಯದ ಅಕಡೆಮಿಕ್ ಮತ್ತು ಶಿಕ್ಷಣ ವಲಯದಲ್ಲಿ ಮಹೇಶಪ್ಪ ನಿಜಕ್ಕೂ ಖ್ಯಾತಿವಂತರು. ಆದರೆ ಅದು ಪ್ರಖ್ಯಾತಿ ಅಲ್ಲ. maheshappaಅವರು ಕುಲಪತಿಗಳಾಗಿ ಆಯ್ಕೆಯಾದಂದಿನಿಂದ ಅವರ ಸ್ವಯಾಂಕೃತಾಪರಾಧಗಳಿಂದಾಗಿ, ಸುಳ್ಳು ಘೋಷಣೆಗಳಿಂದಾಗಿಯೇ ಹೆಚ್ಚು ಪ್ರಸಿದ್ದರಾದವರು. ಈ ವಿಷಯಕ್ಕೆ ಹೆಚ್ಚಿನ ವಿವರಗಳು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈ ಪುಟದಲ್ಲಿವೆ. ಇಷ್ಟೆಲ್ಲ ಆರೋಪ, ಕುಖ್ಯಾತಿ, ತೆಗಳಿಕೆಗಳು ಮನುಷ್ಯನನ್ನು ಇನ್ನೂ ಭಂಡನನ್ನಾಗಿ, ನಿರ್ಲಜ್ಜನನ್ನಾಗಿ ಮಾಡಿಬಿಡುತ್ತದೆಯೆ?

ಮತ್ತು, ಸಮಾಜವೂ ಇಷ್ಟು ನಿರ್ಲಜ್ಜವೂ, ಸಂವೇದನಾರಹಿತವೂ ಆಗಿಬಿಟ್ಟಿದೆಯೆ? ಬಹುಶಃ ಒಂದು ವಾರದಿಂದ ಬರುತ್ತಿರುವ ಈ ಜಾಹೀರಾತಿನ ಬಗ್ಗೆ ಎಲ್ಲೂ ಸುದ್ದಿಯಿಲ್ಲ. ಒಂದು ವಿಶ್ವವಿದ್ಯಾಲಯ, ಅದೂ ತನ್ನ ಕುಲಪತಿಯ ವೈಯಕ್ತಿಕ ತೆವಲಿಗೋಸ್ಕರ, ಈ ರೀತಿ ಮಾಡುವುದು ಸರಿಯೇ ಎಂದು ಒಂದು ಪತ್ರಿಕೆಯಾಗಲಿ, ರಾಜಕಾರಣಿಯಾಗಲಿ, ಹಾಲಿ ಮತ್ತು ಮಾಜಿ ಅಕಡೆಮೀಷಿಯನ್‌ಗಳಾಗಲಿ ಉಸಿರೆತ್ತಿದ ಸುದ್ದಿಯೇ ಇಲ್ಲ.

ಇಂದು ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆ ಸಂಪೂರ್ಣವಾಗಿ ರಾಜಕೀಯ ನೇಮಕಾತಿಗಳಾಗಿಬಿಟ್ಟಿವೆ. ಯಾವ ಮನುಷ್ಯನಿಗೆ ಜಾತಿ ಮತ್ತು ಹಣದ ಪ್ರಭಾವ ಇದೆಯೋ ಆತ ಮಾತ್ರ ಇಂದು ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಯಾಗಬಲ್ಲ. ಇದು ನಮ್ಮ ವಿಶ್ವವಿದ್ಯಾಲಯಗಳನ್ನು ಕೀಳು ಮಟ್ಟದ, ಭ್ರಷ್ಟಾಚಾರದಿಂದ ಕೂಡಿದ, ಯಾವುದೇ ರೀತಿಯ ಶೈಕ್ಷಣಿಕ-ಜ್ಞಾನದ ಕೊಡುಗೆಗಳಿಲ್ಲದ, ರಾಜಕಾರಣಿಗಳ ಮತ್ತು ಭ್ರಷ್ಟ ಅಧಿಕಾರಿಗಳ ಕುಟಿಲ ಕಾರಸ್ಥಾನಗಳನ್ನಾಗಿ ಪರಿವರ್ತಿಸಿವೆ.

ನಿಮಗೆ ನೆನಪಿರಬಹುದು; ಕಳೆದ ಶುಕ್ರವಾರ ನಮ್ಮಲ್ಲಿ ““ದೊಡ್ಡವರು” ಎಂಬ ಕುಲದೈವ!” ಲೇಖನ ಪ್ರಕಟವಾಗಿತ್ತು. ಅಂದು ರಾಜ್ಯದ ಹಲವು ಪತ್ರಿಕೆಗಳಲ್ಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ”ದ ಪರೀಕ್ಷೆಗಳಲ್ಲಿ ನಡೆಯುವ “ಮುಕ್ತ ನಕಲು” ಬಗ್ಗೆ ಫೋಟೋ ಸಮೇತ ವರದಿಗಳು ಪ್ರಕಟವಾಗಿದ್ದವು. KSOU_OpenCopying_Jan1113ಅದರ ಹಿಂದಿನ ದಿನ ಅದೇ ಪರೀಕ್ಷೆಗಳ ಬಗ್ಗೆ ಕೆಲವು ಟಿವಿ ಮಾಧ್ಯಮಗಳಲ್ಲಿ “ಕುಟುಕು ಕಾರ್ಯಾಚರಣೆ”ಯ ವರದಿಗಳೂ ಪ್ರಸಾರವಾಗಿದ್ದವು. ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಇಂತಹ “ಪ್ರಬುದ್ಧ ಮತ್ತು ಉನ್ನತಮಟ್ಟದ ಶಿಕ್ಷಣ”ಕ್ಕಾಗಿ ಅದರ ಕುಲಪತಿಗಳನ್ನು ಬೆಂಗಳೂರಿಗೇ ಕರೆಸಿಕೊಂಡ ರಾಜ್ಯದ ರಾಜ್ಯಪಾಲ, ಈ ಕುಲಪತಿಗಳನ್ನು ಇನ್ನೂ ದೊಡ್ದದಾದ, ಹಲವು ಪಟ್ಟು ಯೋಜನೆಗಳ, ನೂರಾರು-ಸಾವಿರಾರು ಶಿಕ್ಷಕರ ನೇಮಕಾತಿ ಬೇಡುವ “ಮೈಸೂರು ವಿಶ್ವವಿದ್ಯಾಲಯ”ದ ಕುಲಪತಿಗಳನ್ನಾಗಿ ನೇಮಿಸಿ ಆದೇಶ ಪತ್ರ ಕೊಟ್ಟು ಕಳುಹಿಸಿಕೊಟ್ಟರು. ನಿಮಗೆ ಗೊತ್ತಿರಲಿ, ಇದಕ್ಕಿಂತ ಒಳ್ಳೆಯ ಮುಂಭಡ್ತಿ ಇವತ್ತಿನಂತಹ ನೀಚ ಸಂದರ್ಭದಲ್ಲಿಯೂ ಸಾಧ್ಯವಿಲ್ಲ.

ಇವೆಲ್ಲದಕ್ಕಿಂತ ನಾಚಿಕೆ ಪಡಬಹುದಾದ ಸಂಗತಿ ನಡೆದದ್ದು ಅಂದು ಸಂಜೆ. ಬೆಂಗಳೂರಿನಿಂದ ನೇಮಕಾತಿ ಹಿಡಿದು ವಾಪಸಾದ ನಿಯುಕ್ತ ಕುಲಪತಿಗಳು ಅಂದೇ ಸಂಜೆ ಆತುರಾತುರದಲ್ಲಿ ಅಧಿಕಾರ ವಹಿಸಿಕೊಂಡೂ ಬಿಟ್ಟರು. ಆದು ಘಟಿಸುತ್ತಿದ್ದಂತೆ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಅಲ್ಲಿಯವರೆಗೂ ಘಟಿಸದ್ದೇ ಇದ್ದದ್ದು ಆಗ ನಡೆಯಿತು. ಅದು ಪಟಾಕಿ ಸದ್ದು. ಒಳಗೆ ಕುಲಪತಿಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‌ನ ಹೊರಗೆ ಹೊಸ ಕುಲಪತಿಗಳ ಅಭಿಮಾನಿಗಳು, ಚೇಲಾಗಳು, ಬಹುಶಃ ಅವರಿಂದ ಲಾಭ ಮಾಡಿಕೊಂಡ ಅಥವ ಲಾಭ ಮಾಡಿಕೊಳ್ಳಲಿರುವ ಭ್ರಷ್ಟರು, ಚುನಾವಣೆಯೊಂದರಲ್ಲಿ ಗೆದ್ದ ಪುಡಾರಿಯ ಹಿಂಬಾಲಕರು ಮಾಡುವಂತೆ ಪಟಾಕಿ ಸಿಡಿಸಿ ಸಂಭ್ರಮೋತ್ಸವ ಆಚರಿಸಿದರು.

ಈ ವಿಷಯ ಮಾರನೆ ದಿನದ ಪತ್ರಿಕೆಗಳಲ್ಲಿ ಬಂತು. ಅಂದು ಏನಾದರೂ ಮೈಸೂರಿನ ಬರಹಗಾರರ, ಅಧ್ಯಾಪಕರ, ಪ್ರಜ್ಞಾವಂತರ ಮನಸ್ಸು ಅಸಹನೆ ಮತ್ತು ಸಂಕೋಚದಿಂದ ಮಿಡುಕಿಲ್ಲ ಎಂದಾದರೆ ಮೈಸೂರಿನ ಸಾಕ್ಷಿಪ್ರಜ್ಞೆ ಸತ್ತಿದೆ ಎಂದರ್ಥ. ಮತ್ತು, ರಾಜ್ಯದ್ದೂ.

ಮೊದಲೇ ಪ್ರಸ್ತಾಪಿಸಿದ ಹಾಗೆ, ನಮ್ಮ ರಾಜ್ಯದ ಯಾವ ವಿಶ್ವವಿದ್ಯಾಲಯದ ಕುಲಪತಿಗಳೂ ಇಂದು ಹಣ ಅಥವ ಜಾತಿಯ ಪ್ರಭಾವ ಇಲ್ಲದೆ ಆಯ್ಕೆಯಾಗುತ್ತಿಲ್ಲ. ಮತ್ತು ಅದೇ ಆ ಹುದ್ದೆಗೆ ಬೇಕಾದ ಮಾನದಂಡ ಎಂದು ನಮ್ಮ ನೀಚ ಆಡಳಿತಗಾರರು ಕಾನೂನು ಬದಲಾಯಿಸಿಬಿಟ್ಟಿದ್ದಾರೆ. ಹಿರಿಯ ಅಧ್ಯಾಪಕನೊಬ್ಬ ಸರ್ಕಾರಿ ಅಧ್ಯಾಪಕನ ಕೆಲಸ ಕೊಡಿಸುವುದಾಗಿ ಒಬ್ಬನ ಹತ್ತಿರ ಕಮಿಟ್ ಆಗಿಬಿಟ್ಟಿದ್ದಾನೆ. ಅಭ್ಯರ್ಥಿ ತನ್ನ ಸಂದರ್ಶನಕ್ಕೆ ತನ್ನ ಪ್ರಕಟಿತ ಸಂಶೋಧನೆಗಳನ್ನೊ, ಶೈಕ್ಷಣಿಕ ವರದಿಗಳನ್ನೋ ಒಯ್ಯಬೇಕಾಗಿರುತ್ತದೆ. ಆತನ ಬಳಿ ಅಂತಹವು ಯಾವುದೂ ಇಲ್ಲ. ಆದರೆ ಆತ ಪತ್ರಿಕೆಯೊಂದರ ವರದಿಗಾರ. ತನ್ನ ಪತ್ರಿಕಾ ವರದಿಗಳನ್ನೇ/ಸುದ್ದಿಗಳನ್ನೇ ಒಯ್ದಿರುತ್ತಾನೆ. ಈ ಹಿರಿಯ ಅಧ್ಯಾಪಕ ಹೇಗಾದರೂ ಮಾಡಿ ಈತನಿಗೆ ಕೆಲಸ ಕೊಡಿಸಬೇಕು. ಈ ಪತ್ರಿಕಾ ವರದಿಗಳನ್ನೇ ಶೈಕ್ಷಣಿಕ ವರದಿಗಳೆಂದು ಪರಿಗಣಿಸಿ ಆತನನ್ನು ಆಯ್ಕೆ ಮಾಡಿ ಎಂದು ಆಯ್ಕೆ ಸಮಿತಿಯ ಮೇಲೆ ಒತ್ತಡ ತರುತ್ತಾನೆ. ಇಂದು ಅದೇ ಹಿರಿಯ ಅಧ್ಯಾಪಕ ನೂರಾರು ಕೋಟಿ ರೂಗಳ ಕೆಲಸಗಳು ನಡೆಯುತ್ತಿರುವ, ನೂರಾರು ಸಿಬ್ಬಂದಿಯನ್ನು, ಅಧ್ಯಾಪಕರನ್ನು, ನೇಮಿಸಿಕೊಳ್ಳುತ್ತಿರುವ ವಿಶ್ವವಿದ್ಯಾಲಯದ ಕುಲಪತಿ. ಹಾಗೆಂದು ನೀವು ಆ ವ್ಯಕ್ತಿ ರಾಜ್ಯದ ಬಲಿಷ್ಟ ಜಾತಿಗೆ ಸೇರಿದವರು ಎಂದುಕೊಳ್ಳಬೇಡಿ. ಮೀಸಲಾತಿ ಸೌಲಭ್ಯ ದೊರೆಯದ ಸಮುದಾಯದಿಂದ ಬಂದವರವರು.

ಮತ್ತು ಈಗಿನ ಸರ್ಕಾರವಂತೂ ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಹೆಚ್ಚು ಲಂಪಟರಿಂದ ಕೂಡಿದೆ. ನೇಮಕಾತಿಗಳಲ್ಲಿ, ಹಂಗಾಮಿ ನೌಕರರನ್ನು ಕಾಯಂ ಗೊಳಿಸುವುದರಲ್ಲಿ, ವರ್ಗಾವಣೆಗಳಲ್ಲಿ, ಆಡಳಿತದ ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಹಪ್ತಾ ವಸೂಲು ಮಾಡಲು ಟೇಬಲ್ ಹಾಕಿಕೊಂಡು ಕುಳಿತಿದೆ. (ಮಂತ್ರಿಗಳು ಕೇಳುವ “ಮಾಮೂಲಿ” ಕೊಡಲಾಗದೆ ಸಭ್ಯರೊಬ್ಬರು ತಮ್ಮ ಕುಲಪತಿ ಅಧಿಕಾರಾವಧಿ ಇನ್ನೂ ಇರುವಾಗಲೇ ರಾಜೀನಾಮೆ ಕೊಟ್ಟು ಹೋದ ಉದಾಹರಣೆಯೂ ಒಂದಿದೆಯಂತೆ.)  ಕೆಲವರು ಹೇಳುವ ಪ್ರಕಾರ ರಾಜ್ಯದ ಅತ್ಯುನ್ನತ ಸಂವಿಧಾನಿಕ ಸ್ಥಾನದಲ್ಲಿ ಇರುವವರೂ ಹೀಗೆ ಬಟ್ಟೆ ಹರಡಿಕೊಂಡು ಕುಳಿತಿದ್ದಾರೆ. ಅದು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಮತ್ತು ಮುಂದುವರಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಮತ್ತು ಎಲ್ಲಾ ಭ್ರಷ್ಟರೂ ಒಂದಾಗಿ ತಮಗೆ ಅನುಕೂಲವಾಗುವ ಹಾಗೆ ಆದೇಶಗಳನ್ನು ಹೊರಡಿಸುವ, ಸುಗ್ರೀವಾಜ್ಞೆಗಳನ್ನು ತರುವ ಆತುರವನ್ನೂ ತೋರಿಸುತ್ತಿದ್ದಾರೆ. ರಾಜ್ಯದ ಹಲವು ಮಾನ್ಯ, ಘನತೆವೆತ್ತ ಕುಲಪತಿಗಳಿಗೆ ಅನುಕೂಲ ಮಾಡಿಕೊಡುವುದು ಇಂತಹ ಸುಗ್ರೀವಾಜ್ಞೆಯೊಂದರ ಹಿಂದಿರುವ ಹುನ್ನಾರ ಎಂದು ಪ್ರಜಾವಾಣಿಯ ಇಂದಿನ ಈ ವರದಿ ಹೇಳುತ್ತದೆ.

ನಮ್ಮಲ್ಲಿಯ ನೈತಿಕ ಅಧಃಪತನಕ್ಕೆ ಜಾತಿ, ಲಿಂಗ, ವಯಸ್ಸು, ಶಿಕ್ಷಣ, ಪ್ರದೇಶವಾರು ಭೇದಗಳಿಲ್ಲ.

ಹೀಗಿರುವಾಗ, ಇವುಗಳಿಗೆ ತಡೆ ಒಡ್ಡುವುದು ಹೇಗೆ? ಸುಮ್ಮನಿರುವುದಾದರೂ ಹೇಗೆ?

(ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್, ದಿ ಹಿಂದು.)

ಸಿನಿಕರಿಗೆ ಸಂಜೀವಿನಿಯಂಥಾ ಕೃತಿ : ಏನೇ ಆಗಲಿ…

– ಡಾ.ಎಸ್.ಬಿ.ಜೋಗುರ

ಏನೂ ಕಳೆದುಕೊಳ್ಳದಿರುವಾಗಲೂ ಎಲ್ಲವೂ ಕಳೆದುಕೊಂಡವರಂತೆ ತಡಕಾಡುವ, ಹುಡುಕಾಡುವ ಸಂದರ್ಭದಲ್ಲಿ ರವಿ ಕೃಷ್ಣಾರೆಡ್ದಿಯವರು ಕೆಂಟ್ ಎಂ. ಕೀತ್ ಎನ್ನುವ ಲೇಖಕರ ಕೃತಿಯನ್ನು “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ” ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಓದುಗರ ಕೈಗಿಟ್ಟಿರುವದು ಒಂದು ಸದ್ಯದ ಅವಶ್ಯಕತೆಯೇ ಹೌದು. ಅದರಲ್ಲೂ ಸದಾ ಸಿನಿಕರಾಗಿಯೇ ಮಾತನಾಡುವವರಿಗೆ ವ್ಯವಹರಿಸುವವರಿಗೆ ಈ ಕೃತಿ ಒಂದು ಹೊತ್ತಿಗೊದಗಿದ ಸಂಜೀವಿನಿಯಂತೆ ನೆರವಾಗಲಿದೆ. ಹಿಂದೆ ಗುರು ಮುಂದೆ ಗುರಿ ಇಲ್ಲದೇ ತಾವು ನಡೆದದ್ದೇ ದಾರಿ ಎಂದು ಹೆಜ್ಜೆಯೂರುತ್ತಿರುವ ಯುವಕರ ಪಾಲಿಗೆ ಒಂದು ಉತ್ತಮ ಮೆನಿಫ಼ೆಸ್ಟೊ ಥರಾ ಈ ಕೃತಿ ಇದೆ.

ಇಲ್ಲಿರುವ ಪ್ರತಿಯೊಂದು ಕಟ್ಟಳೆಯೂ ತಾಯಿ ತೊಡೆಯ ಮೇಲೆ ಮಲಗಿಸಿಕೊಂಡು ಹೆಳುವ ಕಿವಿ ಮಾತಿನಂತಿವೆ. anyway-partial-coverಅದರಲ್ಲೂ ಆರನೆಯ ಕಟ್ಟಳೆಯಂತೂ ಹುಡುಗಿಯೊಬ್ಬಳು ಮದುವೆಯಾಗಿ ಗಂಡನಮನೆಗೆ ತೆರಳುವಾಗ ತಾಯಿಯಾದವಳು ಆಪ್ತವಾಗಿ ಹೇಳುವಂತಿದೆ. ದೊಡ್ದ ಆಲೋಚನೆಗಳು, ಕನಸುಗಳು ನಮ್ಮನ್ನು ಹೇಗೆ ರೂಪಿಸಬಲ್ಲವು ಎನ್ನುವದನ್ನು ಕೆಲವು ಮಹಾನ್ ಸಾಧಕರ ಕನಸುಗಳು, ತಲುಪಿರುವ ಗುರಿಗಳನ್ನು ಚಿತ್ರರೂಪಕ ಶಕ್ತಿಯ ಹಾಗೆ ಮನಮುಟ್ಟುವಂತೆ ರೆಡ್ದಿಯವರು ಅನುವಾದಿಸಿದ್ದಾರೆ. ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಜನರು ಮರೆಯುತ್ತಾರೆ ಎಂದು ಯೋಚಿಸಿ ಮಾಡದಿರುವದು ಸರಿಯಲ್ಲ, ನಮ್ಮ ಮನಸಿನ ಆನಂದಕ್ಕಾಗಿಯಾದರೂ ಆ ಕೆಲಸ ನಿರಂತರವಾಗಿರಲಿ ಎನ್ನುವ ವಿಚಾರದ ಶಕ್ತಿ ಮತ್ತು ಸತ್ವದಂತೆಯೇ, ಯಾರೋ ಒಬ್ಬರು ನಮ್ಮನ್ನು ಹೊಗಳಲಿ ಎನ್ನುವ ಕಾರಣಕ್ಕಾಗಿಯೂ ನಾವು ಕೆಲಸ ಮಾಡಬಾರದು, ಹಾಗಾದಾಗ ನಾವು ಹೊಗಳುವವರ ಮರ್ಜಿ ಕಾಯಲು ಕೆಲಸ ಮಾಡಬೇಕಾಗುತ್ತದೆ ಎನ್ನುವ ಸತ್ಯವನ್ನು ಕೂಡಾ ತುಂಬಾ ಸೊಗಸಾಗಿ ಸಾದರಪಡಿಸಲಾಗಿದೆ.

ನನ್ನ ಪ್ರಕಾರ ಈ ಪುಟ್ಟ ಹೊತ್ತಿಗೆ ಸದ್ಯದ ಸಂದರ್ಭದ ಮಾನಸಿಕ ಜಂಜಾಟಗಳಿಗೆ ಮತ್ತು ಬದುಕಿನ ಬಿಕ್ಕಟ್ಟುಗಳಿಗೆ ಪರಿಹಾರದ ರೂಪದಲ್ಲಿ ಮೂಡಿಬಂದಿದೆ. ಮೂಲ ಲೇಖಕ ಕೇಂಟ್ ಎಂ. ಕೀತ್‌ರ ವಿಚಾರಧಾರೆಗಳಿಗೆ ಧಕ್ಕೆ ಬಾರದ ಹಾಗೆ, ನಮ್ಮ ನೆಲದ ಸಂಸ್ಕೃತಿಯ ಭಾಷೆಗೆ ಸಮ್ಮತಿಯಾಗಬಹುದಾದ ರೀತಿಯಲ್ಲಿ, ಓದುಗನಿಗೆ ಗೊಂದಲವಾಗದ ಹಾಗೆ ರೆಡ್ದಿಯವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಇದೊಂದು ಒಳ್ಳೆಯ ಕೃತಿಯೂ ಹೌದು. ಅನುವಾದಕನ ಒಳ್ಳೆಯ ಕೆಲಸವೂ ಹೌದು.


ಕೃತಿ : “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ”
ಆಂಗ್ಲ ಮೂಲ : ಕೆಂಟ್ ಎಂ. ಕೀತ್
ಕನ್ನಡಕ್ಕೆ: ರವಿ ಕೃಷ್ಣಾ ರೆಡ್ದಿ
ಪ್ರಕಾಶಕರು : ಮೌಲ್ಯಾಗ್ರಹ ಪ್ರಕಾಶನ, ನಂ.400, 23ನೇ ಮುಖ್ಯ ರಸ್ತೆ, ಕುವೆಂಪು ನಗರ ಎರಡನೇ ಹಂತ, ಬೆಂಗಳೂರು – 560076
ಪುಟ :112
ಬೆಲೆ: ರೂ. 75

ಉಪವಾಸ ಸತ್ಯಾಗ್ರಹ – ಮೂರು ದಿನಗಳಲ್ಲಿ ಏನೇನಾಯಿತು…

ಸ್ನೇಹಿತರೇ,

ನವೀನ್ ಬಂಧನವಾದ ಆರಂಭದ ದಿನಗಳಲ್ಲಿಯೇ ಒಮ್ಮೆ ನಾನು ಬರೆದಿದ್ದೆ: “ದಾರಿ ಬಲು ದೂರ“. ಅದು ಸುಳ್ಳಾಗದೇ ಇರುವುದಕ್ಕೆ ಖಂಡಿತ ಬೇಸರವಾಗುತ್ತಿದೆ.

ಕಳೆದ ಬುಧವಾರ ಮತ್ತು ಗುರುವಾರ ಸಮಾನಮನಸ್ಕರ ಜೊತೆ ಮತ್ತು ಪತ್ರಕರ್ತರ ಹಲವು ಸಂಘಟನೆಗಳ ಜೊತೆ ಮಾತನಾಡಿ ಶನಿವಾರದಿಂದ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡುವುದೆಂದು ತೀರ್ಮಾನಿಸಿದೆವು. ಆ ಬಗ್ಗೆ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಒಂದು ಪತ್ರಿಕಾಗೋಷ್ಟಿ ಸಹ ನಡೆಯಿತು. “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ” ಅಡಿಯಲ್ಲಿ ನಡೆದ ಈ ಗೋಷ್ಟಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಂಗಾಧರ ಮೊದಲಿಯಾರ್, ಪ್ರೆಸ್‌ಕ್ಲಬ್‌ನ ಉಪಾಧ್ಯಕ್ಷ ವೈ.ಜಿ.ಅಶೋಕ್‌ ಕುಮಾರ್, ಪತ್ರಕರ್ತರ ಪರವಾಗಿ ಭಾಗೇಶ್ರೀ ಸುಬ್ಬಣ್ಣ, ದಿನೇಶ್ ಕುಮಾರ್, ಮಹಿಳಾ ಸಂಘಟನೆಗಳ ಪರವಾಗಿ ಕೆ.ಎಸ್.ಲಕ್ಷ್ಮಿ, ಮತ್ತು ನಾನು ಭಾಗವಹಿಸಿದ್ದೆವು. ಅಂದಿನ ಪತ್ರಿಕಾಗೋಷ್ಟಿಗೆ ಸಂಬಂಧಿಸಿದ ಕೆಲವು ಪತ್ರಿಕಾ ವರದಿಗಳು ಈ ಪುಟದಲ್ಲಿ ಇವೆ.

ಮಾರನೆಯ ದಿನ, ಅಂದರೆ ಶನಿವಾರದಂದು ಉಪವಾಸ ಸತ್ಯಾಗ್ರಹ ಆರಂಭವಾಯಿತು. ನಮ್ಮ ವರ್ತಮಾನ ಬಳಗದ ಶ್ರೀಪಾದ್ ಭಟ್ ಮತ್ತು ಲೋಕಸತ್ತಾ ಪಕ್ಷದ ನನ್ನ ಸಹೋದ್ಯೋಗಿಯಾದ ದೀಪಕ್ ನಾಗರಾಜ್, ಫ್ರೀಡಂ ಪಾರ್ಕ್‌ನಲ್ಲಿಯ ಎಲ್ಲಾ ವ್ಯವಸ್ಥೆಗಳ ಉಸ್ತುವಾರಿ ತೆಗೆದುಕೊಂಡಿದ್ದರು. ಸುಮಾರು 9:30 ಕ್ಕೆಲ್ಲ ವೇದಿಕೆ ಸಿದ್ಧವಾಗಿ ನಾವೊಂದಿಷ್ಟು ಜನ ಧರಣಿ ಕುಳಿತೆವು. ಶ್ರೀಪಾದ್ ಭಟ್, ಬಸವರಾಜು ಮತ್ತು ಸಂಜ್ಯೋತಿ ದಂಪತಿಯರು, ಪ್ರಜಾ ರಾಜಕೀಯ ವೇದಿಕೆಯ ಮನೋಹರ್ ಎಳವರ್ತಿ, ಮತ್ತು ನಾನು ಉಪವಾಸ ಕುಳಿತೆವು. ದೇವನಹಳ್ಳಿಯಿಂದ ಬೆಳಗ್ಗೆಯೇ ಬಂದ ಬೆಂಗಳೂರು ಗ್ರಾಮಾಂತರ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತಮ್ಮ ಬ್ಯಾನರ್ ಕಟ್ಟಿ ನಮ್ಮೊಡನೆ ಧರಣಿ ಕೂತರು. ಹತ್ತರ ಸುಮಾರಿಗೆಲ್ಲ ’ಜನಶ್ರೀ’ ಟಿವಿಯ ಅನಂತ ಚಿನಿವಾರ ಮತ್ತು ’ಟಿವಿ-9’ ನ Photo Captionಲಕ್ಷಣ ಹೂಗಾರ್ ನಮ್ಮ ಜೊತೆಗೂಡಿದರು. ಅದಾದ ಸ್ವಲ್ಪ ಸಮಯಕ್ಕೆ ಪಬ್ಲಿಕ್ ಟಿವಿಯ ಎಚ್. ರಂಗನಾಥ್ ಸಹ ಜೊತೆಯಾದರು. ನೋಡನೋಡುತ್ತಿದ್ದಂತೆ ಹನ್ನೊಂದರ ಸುಮಾರಿಗೆ ವೇದಿಕೆ ತುಂಬ ಪತ್ರಕರ್ತರು, ಲೇಖಕರು, ವಕೀಲರು, ಸಾಮಾಜಿಕ ಹೋರಾಟಗಾರರು ಜೊತೆಯಾದರು. ಸುವರ್ಣ ನ್ಯೂಸ್‌ನ ರಂಗನಾಥ್ ಭಾರದ್ವಾಜ್ ಮತ್ತು ಅಜಿತ್ ಹನುಮಕ್ಕನವರ್, ಕಸ್ತೂರಿ ಟಿವಿಯ ಬದ್ರುದ್ದೀನ್, ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾಧರ್ ಮೊದಲಿಯಾರ್, ಪ್ರಜಾವಾಣಿಯ ಪದ್ಮರಾಜ್ ದಂಡಾವತಿ, ಪ್ರೆಸ್‌ಕ್ಲಬ್‌ನ ಉಪಾಧ್ಯಕ್ಷ ವೈ.ಜಿ.ಅಶೋಕ್‌ ಕುಮಾರ್, ಖ್ಯಾತ ವಕೀಲರಾದ ಬಿ.ಟಿ.ವೆಂಕಟೇಶ್, ಕೋಡಿಹಳ್ಳಿ ಚಂದ್ರಶೇಖರ್, ನಗರಿ ಬಾಬಯ್ಯ, ನಗರಗೆರೆ ರಮೇಶ್, ಭಾಗೇಶ್ರೀ, ಗೌರಿ ಲಂಕೇಶ್, ಪಾರ್ವತೀಶ ಬಿಳಿದಾಳೆ, ಕೆ.ಎಸ್.ಲಕ್ಷ್ಮಿ, ದಿನೇಶ್ ಕುಮಾರ್, ಮಂಗಳೂರು ವಿಜಯ, ’ದ ಹಿಂದೂ’ ಪತ್ರಿಕೆಯ ಅನೇಕ ವರದಿಗಾರರು, ಇಂಗ್ಲಿಷ್ ಚಾನಲ್‌ಗಳ ಮತ್ತು ಇಂಗ್ಲಿಷ್ ಪತ್ರಿಕೆಗಳ ಹಲವರು, ಜಯ ಕರ್ನಾಟಕ ಸಂಘಟನೆಯವರು, ಸಂವಾದ ಸಂಸ್ಥೆಯ ಮಾಧ್ಯಮ ವಿದ್ಯಾರ್ಥಿಗಳು, ಇನ್ನೂ ಅನೇಕರು ಮತ್ತು ವಿವಿಧ ಸಂಘಟನೆಗಳ ಅನೇಕ ಮುಖಂಡರು ಅಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ನಮ್ಮ ವೇದಿಕೆಯ ಪಕ್ಕ ನಡೆದ ಟಿಬೇಟಿಯನ್ನರ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ದಿನೇಶ್ ಗುಂಡೂರಾವ್ ನಮ್ಮ ವೇದಿಕೆಗೂ ಬಂದು ಸತ್ಯಾಗ್ರಹ ನಿರತರೊಡನೆ ಮಾತನಾಡಿ, ಬೆಂಬಲ ವ್ಯಕ್ತಪಡಿಸಿ ಹೋದರು. ಬಂದ ಎಲ್ಲರಿಗೂ ನವೀನ್ ಸೂರಿಂಜೆಯ ವಿರುದ್ಧ ಹತ್ತು-ಹನ್ನೊಂದು ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಆರೋಪಗಳು ಧಿಗ್ಭ್ರಾಂತಿ ಉಂಟು ಮಾಡಿದವು. ಸಂವಾದ ಸಂಸ್ಥೆಯ ಮಾಧ್ಯಮ ವಿದ್ಯಾರ್ಥಿಗಳು ಇಡೀ ದಿನ ಹೋರಾಟದ ಹಾಡುಗಳನ್ನು ಮತ್ತು ಭಾವಗೀತೆಗಳನ್ನು ಹಾಡುವ ಮೂಲಕ ಧರಣಿಗೆ ಸಾಂಸ್ಕೃತಿಕ ಆಯಾಮ ನೀಡಿದರು. ಕೆಲವರು ಕವನ ವಾಚನ ಮಾಡಿದರು. ಮೊದಲ ದಿನದ ಸತ್ಯಾಗ್ರಹಕ್ಕೆ ಹರಿದು ಬಂದ ಬೆಂಬಲ ನಮಗೆ ಅಪಾರ ಭರವಸೆ ನೀಡಿತು.

ಅಂದು ರಾತ್ರಿ ನಾವು ಹತ್ತು ಜನ ಅಲ್ಲಿಯೇ ಉಳಿದು ಧರಣಿ ಮುಂದುವರೆಸಿದೆವು. ಉಪವಾಸ ಮಾಡುತ್ತಿದ್ದ ಸಂಜ್ಯೋತಿ ಮತ್ತು ತೇಜಸ್ವಿನಿ ಮನೆಗೆ ಹೋದರೆ, ಉಪವಾಸ ಮುಂದುವರೆಸಿದ ಶ್ರೀಪಾದ್ ಭಟ್, ಮನೋಹರ್ ಎಳವರ್ತಿ, ಬಸವರಾಜ್, ಆನಂದ್ ಯಾದವಾಡ್, ಮತ್ತು ನಾನು ಅಂದು ರಾತ್ರಿ ಅಲ್ಲಿಯೇ ಉಳಿದೆವು. ನಮ್ಮೊಡನೆ ಹಿರಿಯ ಕವಿ-ಪತ್ರಕರ್ತ-ಲೇಖಕರಾದ ಆದಿಮದ ಕೋಟಗಾನಹಳ್ಳಿ ರಾಮಯ್ಯ ಸಹ ಉಳಿದರು. ಸಂವಾದದ ಮುರಳಿ ಮೋಹನ್ ಕಾಟಿ ಮತ್ತವರ ತಂಡದ ನಾಲ್ಕೈದು ಜನ ಸಹ ಅಲ್ಲಿಯೇ ಉಳಿದರು. ಅಂದ ಹಾಗೆ, ನಮ್ಮ ಪಕ್ಕದ ವೇದಿಕೆಯಲ್ಲಿ ಧರಣಿ ನಿರತರಾಗಿದ್ದ ದಾವಣಗೆರೆಯ ರೈತರು ನಮ್ಮಲ್ಲಿ ಉಪವಾಸ ಮಾಡದೇ ಇದ್ದವರಿಗೆ ತಾವು ತಯಾರಿಸಿದ ಊಟವನ್ನು ಹಂಚಿಕೊಂಡದ್ದೇ ಅಲ್ಲದೆ, ನಮ್ಮ ವೇದಿಕೆಯಲ್ಲಿ ಮಲಗಲು ಕೆಲವರಿಗೆ ಸ್ಥಳ ಸಾಲದೇ ಬಂದದ್ದರಿಂದ ಅವರ ವೇದಿಕೆಯಲ್ಲಿ ಸ್ಥಳವನ್ನೂ ಕೊಟ್ಟರು. KIADB ಎಂಬ ಕರ್ನಾಟಕ ಸರ್ಕಾರದ ರಿಯಲ್ ಎಸ್ಟೇಟ್ ಏಜೆಂಟ್ ಸಂಸ್ಥೆ ತಮ್ಮ ಕೃಷಿ ಜಮೀನುಗಳನ್ನು ಕಿತ್ತುಕೊಂಡಿರುವುದರ ವಿರುದ್ಧ ಈ ರೈತರು ಸಂಸಾರ ಸಮೇತರಾಗಿ (ಸುಮಾರು ನಲವತ್ತೈವತ್ತು ಜನ, ಹೆಚ್ಚಿನವರು ಹೆಂಗಸರೇ) ಅಲ್ಲಿಯೇ ಸುಮಾರು ಹದಿನೈದು ದಿನಗಳಿಂದ ಧರಣಿಯಲ್ಲಿ ನಿರತರಾಗಿದ್ದಾರೆ. ತಾವೇ ಸಂತ್ರಸ್ತರಾಗಿದ್ದರೂ ನಮ್ಮೊಡನೆ ಅವರು ತೋರಿದ ಪ್ರೀತಿ-ವಿಶ್ವಾಸ ದೊಡ್ದದು.

ಮಾರನೆಯ ದಿನ ಭಾನುವಾರ ಸಹ ನಮ್ಮ ಉಪವಾಸ ಮತ್ತು ಧರಣಿ ಮುಂದುವರೆಯಿತು. ಅಂದೂ ಸಹ ಬೆಳಗ್ಗೆಯೇ ಅನಂತ ಚಿನಿವಾರ್ ಮತ್ತು ಲಕ್ಷ್ಮಣ್ ಹೂಗಾರ್ ಬಂದರು. ಅಷ್ಟೊತ್ತಿಗೆ ಸತ್ಯಮೂರ್ತಿ ಆನಂದೂರು ಸಹ ಜೊತೆಯಾಗಿದ್ದರು. ಸ್ವಲ್ಪ ಸಮಯದ ನಂತರ ಬರಗೂರು ರಾಮಚಂದ್ರಪ್ಪ, ಗಂಗಾಧರ ಮೊದಲಿಯಾರ್ ಬಂದು ಕೂಡಿಕೊಂಡರು. ಮಧ್ಯಾಹ್ನಕ್ಕೆ ಶಿವಸುಂದರ್, ಎಸ್.ಜಿ.ಸಿದ್ದರಾಮಯ್ಯ ಮತ್ತು ಚಂಪಾ ಬಂದಿದ್ದರು. ಮಧ್ಯಾಹ್ನಕ್ಕೆ ಕಚೇರಿಗೆ ತೆರಳಿದ್ದ ಜನಶ್ರೀಯ ಅನಂತ ಚಿನಿವಾರರು ಪತ್ರಕರ್ತರ ಮತ್ತು ಪ್ರಜಾಪ್ರಭುತ್ವವಾದಿಗಳ ಈ ಧರಣಿಯ ಬಗ್ಗೆ ಗೃಹಸಚಿವ ಆರ್.ಅಶೋಕರೊಡನೆ ಪ್ರಸ್ತಾಪ ಮಾಡಿದ್ದರು.Photo Caption ಅವರಿಗೆ ಸಂಜೆ ಆರಕ್ಕೆ ಬಂದು ಧರಣಿ ನಿರತರೊಡನೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿದ್ದರಂತೆ. ಸಂಜೆಯ ನಾಲ್ಕೂವರೆ ಸುಮಾರಿಗೆ ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನಮ್ಮ ಧರಣಿಯ ಸ್ಥಳಕ್ಕೆ ಬಂದು, ನವೀನ್ ಸೂರಿಂಜೆಯ ವಿರುದ್ಧ ದಾಖಲಾಗಿರುವ ಆರೋಪಗಳನ್ನು ನೋಡಿ ದಂಗಾದರು. ಕೂಡಲೇ ನಮ್ಮ ಮನವಿಗೆ ಓಗೊಟ್ಟು ಅವರೂ ಸಹ ಗೃಹ ಸಚಿವರೊಡನೆ ಮಾತನಾಡಿದರು. ಅವರ ಮನವಿಗೂ ಸ್ಪಂದಿಸಿದ ಸಚಿವರು ಸಂಜೆ ಆರಕ್ಕೆ ಬರುವುದಾಗಿ ತಿಳಿಸಿದರು. ಅಂದು ರಾತ್ರಿ ಹೊಸಪೇಟೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಬೇಕಿದ್ದ ವಿ.ಆರ್.ಸುದರ್ಶನ್‌ರವರು ಸಚಿವರು ಬರುವ ತನಕವೂ ಎರಡು ಘಂಟೆಗಳ ಕಾಲ ನಮ್ಮೊಡನೆ ಧರಣಿ ಕೂತರು. ಅದೇ ಸಮಯಕ್ಕೆ ಈ ಹೋರಾಟಕ್ಕೆ ಬೆಂಬಲವಾಗಿ IDL BLIND BAND ನವರು ಆಗಮಿಸಿ ತಮ್ಮ ಹಾಡುಗಳ ಮೂಲಕ ಬೆಂಬಲಿಸಿದರು.

ಕತ್ತಲಾವರಿಸಿದ ನಂತರ, ಅಂದರೆ 6:45 ಕ್ಕೆ ಸಚಿವರು ಬಂದರು. ಅಷ್ಟೊತ್ತಿಗೆ ಮಾಧ್ಯಮದ ಬಹುತೇಕ ಹಿರಿಯರು ಸ್ಥಳಕ್ಕೆ ಬಂದಿದ್ದರು. ಗಂಗಾಧರ ಮೊದಲಿಯಾರ್, ಲಕ್ಷ್ಮಣ್ ಹೂಗಾರ್, ಅನಂತ ಚಿನಿವಾರ ಎಲ್ಲರೂ ಬಂದರು. ಸಚಿವರು ಬಂದು ಧರಣಿ ನಿರತರೊಡನೆ ತಾವೂ ಕುಳಿತು ವಿ.ಆರ್.ಸುದರ್ಶನರಿಗೆ ಮತ್ತು ಮಾಧ್ಯಮ ಮಿತ್ರರಿಗೆ ’ಪೋಲಿಸರ ಕಡೆಯಿಂದ ತಪ್ಪಾಗಿದೆ, ನವೀನರ ವಿರುದ್ಧ ಹಾಕಲಾಗಿರುವ ಕೇಸುಗಳನ್ನು ಹಿಂಪಡೆಯುವುದಾಗಿ Photo Captionತಾನು ಸದನದಲ್ಲಿ ಮಾತು ಕೊಟ್ಟಿದ್ದೇನೆ, ಅದೇ ರೀತಿ ನಾಲ್ಕೈದು ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ, ಅದು ವಿವಿಧ ಹಂತಗಳಲ್ಲಿ ಇದೆ, ಮತ್ತು ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಲು ಆ ಕಡತ ಹೀಗೀಗೆ ಸಾಗಬೇಕಾಗಿದೆ,’ ಎಂದು ಎಲ್ಲವನ್ನೂ ವಿವರಿಸಿದರು. ಸಚಿವರಿಗೆ ಧರಣಿ ನಿರತರ ಪರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಸಂಜ್ಯೋತಿಯವರು ಮನವಿ ಪತ್ರ ಸಲ್ಲಿಸಿದರು. ತಾವು ಈಗಾಗಲೇ ನವೀನ್ ಸೂರಿಂಜೆಯವರ ವಿರುದ್ಧ ಹಾಕಲಾಗಿರುವ ಸುಳ್ಳು ಆರೋಪಗಳನ್ನು ಕೈಬಿಡಲು ಕ್ರಮ ಕೈಗೊಂಡಿರುವುದಾಗಿಯೂ, ನಾಳೆಯಿಂದ ನೀವುಗಳೂ ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಮುಗಿಯಲು ಅದನ್ನು ಹಿಂಬಾಲಿಸಿ ಎಂತಲೂ, ತಾವು ನವೀನರ ಮೇಲಿನ ಕೇಸುಗಳನ್ನು ಹಿಂಪಡೆಯಲು ಕಟಿಬದ್ದರಾಗಿದ್ದೇವೆ, ಹಾಗಾಗಿ ನೀವುಗಳೂ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಅದನ್ನೇ ಅವರು ಮಾಧ್ಯಮಗಳ ಮುಂದೆಯೂ ನಂತರ ಹೇಳಿದರು.

ನವೀನ್ ಸೂರಿಂಜೆಗೆ ಆಗಿರುವ ಅನ್ಯಾಯವನ್ನು ಜನರ ಮುಂದೆ ಇಡಬೇಕು, ಕಾರ್ಯನಿರತ ಪತ್ರಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹಾಕಿ ಪತ್ರಿಕಾ ಸ್ವಾತಂತ್ರ್ಯವನ್ನು ಸರ್ಕಾರ ದಮನ ಮಾಡಲು ಬಿಡಬಾರದು, ನವೀನ್ ಸೂರಿಂಜೆಯ ವಿಷಯಕ್ಕೆ ಸರ್ಕಾರ ತನ್ನ ನಿಲುವನ್ನು ಬಹಿರಂಗಗೊಳಿಸಬೇಕು, ಆದಷ್ಟು ಬೇಗ ನವೀನ್ ಸೂರಿಂಜೆಯನ್ನು ಕಾನೂನು ರೀತ್ಯ ಬಿಡುಗಡೆ ಮಾಡಲು ಈ ಕೂಡಲೇ ಕ್ರಮಕೈಗೊಳ್ಳಬೇಕು, ಎಂದಿದ್ದ ನಮ್ಮ ಒತ್ತಾಯಗಳು ಒಂದು ಹಂತಕ್ಕೆ ಈಡೇರಿದ ಕಾರಣಕ್ಕೆ ನಾವು ಮೂರು ದಿನದ ಉಪವಾಸವನ್ನು ಎರಡನೇ ದಿನ ರಾತ್ರಿ ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆವು. ನಮ್ಮೊಡನೆ ಕೊನೆಯ ತನಕವೂ ಇದ್ದ ವಿ.ಆರ್.ಸುದರ್ಶನ್ ಇಂದಿನ ರಾಜಕಾರಣಿಗಳಲ್ಲಿ ತಾವೊಬ್ಬ ಅಪರೂಪದ ವ್ಯಕ್ತಿ ಎಂದು ತೋರಿಸಿ ನಮ್ಮೆಲ್ಲರ ಕೃತಜ್ಞತೆಗೆ ಪಾತ್ರರಾದರು. ರಾತ್ರಿ ಎಂಟರ ನಂತರ ನಮ್ಮವರೆಲ್ಲ ಮನೆಗಳಿಗೆ ವಾಪಸಾದರು.

(ಈ ಎರಡೂ ದಿನಗಳ ಉಪವಾಸ ಸತ್ಯಾಗ್ರಹದ ಕೆಲವು ಪತ್ರಿಕಾ ವರದಿಗಳು ಈ ಪುಟದಲ್ಲಿವೆ.)

ಈ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಮತ್ತು ಕೃತಜ್ಞತೆಗಳನ್ನು ತಿಳಿಸುತ್ತೇನೆ. ಪತ್ರಕರ್ತರ, ಅವರ ಸಂಘಟನೆಗಳ, ಸಮಾನ-ಮನಸ್ಕರ ಸಂಘಟಿತ ಬೆಂಬಲದಿಂದ ಮಾತ್ರ ನಾವು ಇಷ್ಟಾದರೂ ಸಾಧಿಸಲು ಸಾಧ್ಯವಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಮತ್ತು ಪರೋಕ್ಷವಾಗಿ ನಮ್ಮೊಡನೆ ನಿಂತ ಎಲ್ಲರಿಗೂ ವೇದಿಕೆಯ ಪರವಾಗಿ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ. ಹಾಗೆಯೇ ಎರಡು ಹಗಲು ಮತ್ತು ಒಂದು ರಾತ್ರಿ ನಮ್ಮೊಡನೆ ಇದ್ದ ಪೋಲಿಸರಿಗೂ ನಮ್ಮ ಧನ್ಯವಾದಗಳು.

ಮತ್ತು, ಎರಡೂ ದಿನ ಉಪವಾಸ ಮಾಡಿದ ತೇಜಸ್ವಿನಿ, ಶ್ರೀಪಾದ್ ಭಟ್, ಮನೋಹರ್ ಎಳವರ್ತಿ, ಸಂಜ್ಯೋತಿ, ಬಸವರಾಜ್, ಆನಂದ್ ಯಾದವಾಡ್, ಶಿವಸುಂದರ್, ಮತ್ತು ಗೊತ್ತಾಗದೇ ಉಳಿದ ಎಲ್ಲರಿಗೂ ಧನ್ಯವಾದಗಳು. ಹಾಗೂ, ಕಾರ್ಯಕ್ರಮ ವ್ಯವಸ್ಥೆಯ ವಿಚಾರದಲ್ಲಿ ಅನೇಕ ರೀತಿಯಲ್ಲಿ ಸಹಕರಿಸಿ ನಮ್ಮೊಡನೆ ನಿಂತ ದೀಪಕ್ ನಾಗರಾಜರಿಗೂ ಸಹ.

ಮೊನ್ನೆ ಸೋಮವಾರದಿಂದಲೇ ನಮ್ಮ ಪರವಾಗಿ ಸಂಜ್ಯೋತಿ ಮತ್ತು ಬಸವರಾಜ್‌ರವರು ಈ ಕೇಸಿನ ಹಿಂದೆ ಬಿದ್ದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಕಡತ ಆದಷ್ಟು ಬೇಗ ಸಂಪುಟ ಸಭೆಗೆ ಬರುವ ನಿಟ್ಟಿನಲ್ಲಿ ನಮ್ಮವರು ಕಾರ್ಯಪ್ರವೃತ್ತರಾಗಿದ್ದಾರೆ.

ಆದರೆ ನವೀನ್ ಸೂರಿಂಜೆಯ ಮೇಲಿನ ಆರೋಪಗಳನ್ನು ಕೈಬಿಟ್ಟು, ಆತ ಜೈಲಿನಿಂದ ಹೊರಬರುವ ತನಕವೂ ನಮಗೆ ನ್ಯಾಯ ಸಿಗುವುದಿಲ್ಲ ಮತ್ತು ಅದು ಇಷ್ಟೇ ಅವಧಿಯಲ್ಲಿ ಆಗುತ್ತದೆ ಎನ್ನುವುದಕ್ಕೆ ಆಗುವುದಿಲ್ಲ. ಮತ್ತು, ಇಲ್ಲಿಯವರೆಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಯೂ ಹಾಗೆಯೇ ಇದೆ.

ಇದೇ ಸಂದರ್ಭದಲ್ಲಿ ಇದೇ ಕೇಸಿಗೆ ಸಂಬಂಧಪಟ್ಟಂತೆ ಶರಣ್ ಎನ್ನುವ ಕ್ಯಾಮೆರಾಮನ್‌ನನ್ನು ಸಹ ಮಂಗಳೂರಿನ ಪೋಲಿಸರು ಕಳೆದ ವಾರ ಬಂಧಿಸಿದ್ದಾರೆ. ಅವರ ಮೇಲೆಯೂ ನವೀನರ ಮೇಲಿರುವ ಆರೋಪಗಳನ್ನೇ ಹೊರೆಸಿದ್ದಾರೆ ಎನ್ನುವ ಸುದ್ಧಿಯಿದೆ. ಹಾಗಿದ್ದ ಪಕ್ಷದಲ್ಲಿ ಸರ್ಕಾರ ಅವರ ಮೇಲೆಯೂ ಹಾಕಿರುವ ಕೇಸುಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು. ಪೋಲಿಸರಿಗೆ ಈ ಸುಳ್ಳು ಆರೋಪಗಳ ಹೊರತಾಗಿ ಬೇರೆಯದೇ ಆದ ಸಬೂತುಗಳಿದ್ದಲ್ಲಿ ಆ ಆಧಾರದ ಮೇಲೆ ಕೇಸುಗಳನ್ನು ಹಾಕಬೇಕೇ ಹೊರತು ಸುಳ್ಳುಸುಳ್ಳು ಆರೋಪಗಳನ್ನು ಹೊರೆಸಿ ಬಂಧಿಸುವುದು ಅಕ್ಷಮ್ಯ. ಶರಣರಿಗೆ ನನ್ನ ನೈತಿಕ ಬೆಂಬಲ ಹಿಂದೆ.

ಇಂತಹ ಸಂದರ್ಭದಲ್ಲಿಯೇ ವೃತ್ತಿಪರ ಸಂಘಟನೆಗಳ ಅಗತ್ಯ ಮತ್ತು ಅವುಗಳು ನಿಭಾಯಿಸಬೇಕಾದ ಜವಾಬ್ದಾರಿಗಳ ಪರೀಕ್ಷೆ ನಡೆಯುವುದು. ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ಮಾಧ್ಯಮಗಳ ಬಗ್ಗೆ, ಅದರಲ್ಲೂ ದೃಶ್ಯ ಮಾಧ್ಯಮಗಳ ಬಗ್ಗೆ ಜನರಿಗೆ ಗೌರವ, ಭಯ, ತಿರಸ್ಕಾರ ಎಲ್ಲವೂ ಇದೆ. ಈ ತಿರಸ್ಕಾರದ ಭಾಗವೇ ನವೀನ್ ಸೂರಿಂಜೆಯವರ ವಿಷಯಕ್ಕೆ ಅವರು ನಿರಪರಾಧಿಯಾಗಿದ್ದರೂ ಪ್ರತಿಕೂಲವಾಗಿ ಪರಿಣಮಿಸಿದ್ದು. ಹಾಗಾಗಿ, ಮಾಧ್ಯಮ ರಂಗ ನಿರಂತರವಾಗಿ ಆತ್ಮಶೋಧನೆಯಲ್ಲಿ ಮತ್ತು ಸರಿಪಡಿಸಿಕೊಳ್ಳುವ ಕ್ರಿಯೆಯಲ್ಲಿ ತೊಡಗಬೇಕಿದೆ. ಹಾಗೆಯೇ, ಕಾರ್ಯನಿರತ ಪತ್ರಕರ್ತರಿಗೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಡುವ ಒಂದು ಉತ್ತಮ ವೃತ್ತಿಪರ ಸಂಘಟನೆಯೊಂದರ ಅಗತ್ಯ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರಿಗೆ ಬೇಕಾಗಿದ್ದು, ಅದನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತರು ಆಲೋಚಿಸಿ ಕಾರ್ಯೋನ್ಮುಖರಾಗುತ್ತಾರೆ ಎಂದು ಭಾವಿಸುತ್ತೇನೆ. ಈಗ ನಾವು ಕಟ್ಟಿಕೊಂಡ “ಪತ್ರಕರ್ತ ಅಕ್ರಮ ಬಂಧನ ವಿರೋಧಿ ವೇದಿಕೆ”ಯಲ್ಲಿ ಪತ್ರಕರ್ತರು, ಸಂಘಟನೆಗಳು, ಪತ್ರಕರ್ತರಲ್ಲದವರು, ಎಲ್ಲರೂ ಇದ್ದಾರೆ. ಆದರೆ, ಪತ್ರಕರ್ತರೇ ಇರುವ ಒಂದು ಸಂಘಟನೆಯ ಅಗತ್ಯತೆ ತೀರಾ ಇದೆ, ಇಲ್ಲದಿದ್ದರೆ, ಮೊನ್ನೆ ನವೀನ್ ಸೂರಿಂಜೆ, ನೆನ್ನೆ ಶರಣ್, ಇಂದು ಮತ್ತೊಬ್ಬರು, ತಾವು ಮಾಡದ ತಪ್ಪುಗಳಿಗಾಗಿ ಶಿಕ್ಷೆ ಅನುಭವಿಸುವಂತಾಗುತ್ತದೆ ಮತ್ತು ಅದು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಗೌರವ ತರುವಂತಹುದೂ ಅಲ್ಲ ಮತ್ತು ನೈತಿಕವಾಗಿ ಉತ್ತಮವೂ ಅಲ್ಲ, ಮಾಧ್ಯಮ ಮಿತ್ರರು ಇದರ ಬಗ್ಗೆ ಯೋಚಿಸುತ್ತಾರೆ ಎಂದು ಭಾವಿಸುತ್ತೇನೆ. ಈ ಕೂಡಲೆ ಪತ್ರಕರ್ತರ ಸಂಘಟನೆಗಳು ಶರಣರ ಪರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲು ಕೋರುತ್ತೇನೆ. “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ”ಯ ಪರವಾಗಿಯೂ ಪತ್ರಿಕಾ ಪ್ರಕಟಣೆ ನೀಡಲು ಸಿದ್ಧತೆಗಳಾಗುತ್ತಿವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಸೂರಿಂಜೆ ಕುರಿತ ನಿರಶನ ಅಂತ್ಯ, ಗೃಹಮಂತ್ರಿ ಭರವಸೆ… ಪತ್ರಿಕಾ ವರದಿಗಳು

[ಇವು ಇಂದು (7/1/13) ಮತ್ತು ನೆನ್ನೆ (6/1/13)  ವಿವಿಧ ಪತ್ರಿಕೆಗಳಲ್ಲಿ ಬಂದ ಕೆಲವು ವರದಿಗಳು. ನೆನ್ನೆ ರಾತ್ರಿ ನಿರಶನ ಹಿಂತೆಗೆದುಕೊಂಡ ನಂತರ ವಿಷಯದ ಬಗ್ಗೆ ನಾನು ಕ್ಲುಪ್ತವಾಗಿ ಬರೆದ ಪೋಸ್ಟ್ ಇಲ್ಲಿದೆ.  – ರವಿ ಕೃಷ್ಣಾರೆಡ್ಡಿ]

ಉದಯವಾಣಿ :
udayavani-7-1-13

ಪ್ರಜಾವಾಣಿ :
prajavani-7-1-13

ವಿಜಯವಾಣಿ :
vijayavani-7-1-13

ಕನ್ನಡಪ್ರಭ :
kannadaprabha-7-1-13

ವಿಜಯ ಕರ್ನಾಟಕ :
vijaykarnataka-7-1-13

The Hindu :
thehindu-7-1-13

newzfirst : Home-stay attack: Karnataka Home Minister assures withdrawal of cases against journalist


6/1/13 ರಂದು ಪ್ರಕಟವಾದ ಕೆಲವು ವರದಿಗಳು.

ಪ್ರಜಾವಾಣಿ :
prajavani-6-1-13

ಉದಯವಾಣಿ :
udayavani-6-1-13

ಕನ್ನಡಪ್ರಭ :
kannadaprabha-6-1-13

ವಿಜಯ ಕರ್ನಾಟಕ :
vijaykarnataka-6-1-13

The Hindu :
thehindu-6-1-13

Deccan Chronicle :
deccanchronicle-6-1-13