Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 3


– ಶ್ರೀಧರ್ ಪ್ರಭು


ತಳಸಮುದಾಯ ಮತ್ತು ಮಹಿಳಾ ಶಿಕ್ಷಣದಿಂದ ರಾಷ್ಟ್ರೀಯತೆ ಸಂಪೂರ್ಣ ನಾಶವಾಗುತ್ತದೆ ಎಂದು ಟಿಳಕರು ಬಲವಾಗಿ ನಂಬಿದ್ದರು. ಆದ್ದರಿಂದಲೇ ಅವರು ಫುಲೆ-ಅಂಬೇಡ್ಕರರ ಶೂದ್ರ-ದಲಿತ ಮತ್ತು ಮಹಿಳಾ ಪರ ಹೋರಾಟಗಳು ರಾಷ್ಟ್ರ ವಿರೋಧಿ ಎಂಬ ಖಚಿತ ಅಭಿಪ್ರಾಯಕ್ಕೆ ಬಂದಿದ್ದರು. ಒಂದಷ್ಟು ವರ್ಷಗಳ ಕಾಲ ರಾಜಕೀಯ ಅಧಿಕಾರ ಕಳೆದುಕೊಂಡ ವೈದಿಕ ವರ್ಗಗಳು ಮದ್ದು ಗುಂಡು ಸಹಿತ ಹೋರಾಟ ಮಾಡಿದ್ದನ್ನು ಸಮರ್ಥಿಸಿಕೊಂಡ ಟಿಳಕರಿಗೆ ಸಾವಿರಾರು ವರ್ಷಗಳಿಂದ ಪಶುಗಳಿಗಿಂತ ತುಚ್ಚ ಜೀವನ ನಡೆಸಿದ ಶೂದ್ರ-ದಲಿತರ ಸಾತ್ವಿಕ ಅಕ್ರೋಶದಲ್ಲಿ ಸತ್ವ ಕಾಣಿಸಲಿಲ್ಲ.

ಹೇಗೆ ಟಿಳಕರು ಸಾಮಾಜಿಕ ಕ್ರಾಂತಿಯನ್ನು ವಿರೋಧಿಸಿದರೋ ಹಾಗೆಯೇ ಕಾರ್ಮಿಕ ಚಳುವಳಿಗಳನ್ನೂ ವಿರೋಧಿಸಿದರು. ೧೯೦೮ ರ ಮುಂಬೈ ಗಿರಣಿ ಕಾರ್ಮಿಕರ ಹೋರಾಟ ಬಿಟ್ಟರೆ ೧೯೨೦ ರ ವರೆಗೂ ಯಾವ ಕಾರ್ಮಿಕ ಹೋರಾಟಗಳನ್ನೂ ಟಿಳಕರು ಸಂಘಟಿಸಲಿಲ್ಲ. ೧೯೦೯ ರಿಂದ ೧೯೨೦ ರ ವರೆಗೆ ಕಲ್ಲು ಎಸೆದರೆ ಹೋಗಿ ಬೀಳುವಷ್ಟು ದೂರದಲ್ಲಿದ್ದ ಮುಂಬೈಗೆ ಒಂದೆರಡು ಬಾರಿ ಮಾತ್ರ ಹೋಗಿದ್ದು ಬಿಟ್ಟರೆ, bal-gangadhar-tilakಕಾರ್ಮಿಕ ಸಂಘರ್ಷಗಳ ಕುಲುಮೆಯಾಗಿದ್ದ ಮುಂಬೈ ಕಾರ್ಖಾನೆಗಳು, ಕಾರ್ಮಿಕ ಬಸ್ತಿಗಳಿಗೆ ಟಿಳಕರು ಹೋಗಲೇ ಇಲ್ಲ. ನವೆಂಬರ್ ೧೯೧೯ ನವೆಂಬರ್ ನಲ್ಲಿ ಒಮ್ಮೆ ತೀರ ಮುಲಾಜಿಗೆ ಬಿದ್ದು ಮುಂಬೈ ಗಿರಣಿ ಕಾರ್ಮಿಕರ ಪ್ರತಿಭಟನಾ ಸಭೆಗೆ ಹೋದ ಟಿಳಕರು ಕಾರ್ಮಿಕರಿಗೆ ಉಪದೇಶ ನೀಡಿದ್ದೇನು ಗೊತ್ತೇ: ‘ಭಾರತದ ಬಂಡವಾಳಶಾಹಿಗಳ ಮೇಲೆ ಮುಷ್ಕರ ಮಾಡಬೇಡಿ. ಭಾರತದಲ್ಲಿ ಎಲ್ಲರೂ ಕಾರ್ಮಿಕರೆ, ಬ್ರಿಟಿಷರು ಮಾತ್ರ ಮಾಲೀಕರು’. ಹೀಗೆ ಕಾರ್ಮಿಕ ಚಳುವಳಿಗಳನ್ನು ಎಂದೂ ಅರ್ಥಿಕ ಸಮತೆಯ ಸಾಧನೆಗೆ ಟಿಳಕರು ಬಳಸಲೇ ಇಲ್ಲ.

ಇನ್ನು ಸ್ವತಃ ಲೆನಿನ್ ತಿಳಕರನ್ನು ಹೊಗಳಿದ್ದು ನೋಡಿದ್ದೇವೆ, ಆದರೆ ಟಿಳಕರು ೧೯೨೦ ರಲ್ಲಿ ಲೆನಿನ್ ಬಗ್ಗೆ ‘ ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಹೆದರಿಕೆ’ ಎಂಬ ಅಗ್ರ ಭಾಷಣದಲ್ಲಿ ಏನು ಹೇಳಿದರು ಎಂಬುದನ್ನೂ (ಅವರ ಜೀವನ ಚರಿತ್ರೆ ಬರೆದ ಧನಂಜಯ ಕೀರ್ ಪುಸ್ತಕದಲ್ಲಿ ದಾಖಲಾದಂತೆ) ಕೇಳೋಣ:
“ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಬಗ್ಗೆ ಭಾರತವೇನೂ ಹೆದರಬೇಕಿಲ್ಲ. ರಷ್ಯಾದ ಕ್ರಾಂತಿ ಸಮಾನತೆಗಾಗಿ ನಡೆದ ಸಮರ. ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಸಮಾನತೆ ನೆಲೆಸಿದೆ. ನಮ್ಮ ವೇದಾಂತದ ಪ್ರಕಾರ ಎಲ್ಲರೂ ಆತ್ಮ ಸ್ವರೂಪಿಗಳು. ಹಾಗಾಗಿ ನಮ್ಮ ದೇಶಕ್ಕೆ ಬೇಕಿರುವುದು ರಷ್ಯನ್ ಕ್ರಾಂತಿ ಸ್ಥಾಪಿಸುವ ಅರ್ಥಿಕ ಸಮಾನತೆಯಲ್ಲ ಅಧ್ಯಾತ್ಮಿಕ ಸಮಾನತೆ – ಅದು ನಮ್ಮ ವೇದಾಂತದಲ್ಲೇ ಇದೆ”

ತಿಳಕರ ಸಮಕಾಲೀನ ಆದರೆ ಅವರ ಪಟ್ಟ ಶಿಷ್ಯ ಜೋಸೆಫ್ ಬ್ಯಾಪ್ಟಿಸ್ಟ ಎಂಬ ಗೋವಾ ಮೂಲದ ಮುಂಬೈನ ಪ್ರಖ್ಯಾತ ವಕೀಲರು ಆಗ ಕೆಲಕಾಲ ಕಾರ್ಮಿಕರ ಅಗ್ರ ಸಂಘಟನೆಯ AITUC ನ ಆಗ್ರ ಮುಖಂಡರಾಗಿದ್ದರು. ಇವರ ಸಹಾಯದಿಂದ ಟಿಳಕರು ಭಾರತದ ಪ್ರತಿನಿಧಿಯಾಗಿ ಲಂಡನ್ ನ ಲೇಬರ್ ಪಾರ್ಟಿಗೆ ಭೇಟಿ ಇತ್ತು ತಾವೊಬ್ಬ ಮಹಾನ್ ಕಾರ್ಮಿಕ ಸಂಘಟಕ ಎಂದು ವಿದೇಶಗಳಲ್ಲಿ ಬಿಂಬಿಸಿಕೊಂಡ ಟಿಳಕರು ಸ್ವದೇಶದಲ್ಲಿ ಮಾತ್ರ ಕಾರ್ಮಿಕರಿಗೆ ಭಾರತದ ಬಂಡವಾಳಶಾಹಿಗಳ ವಿರುದ್ದ ಹೋರಾಟ ಮಾಡಬೇಡಿ ಎಂಬ ಹಿತವಚನ ನೀಡುತ್ತಾರೆ. ಇಷ್ಟಾದರೂ ನಮ್ಮ ದೇಶದ ಕಮ್ಯುನಿಸ್ಟ್ ಚಳುವಳಿಗಳು ತಿಲಕರನ್ನು ಒಬ್ಬ ಕ್ರಾಂತಿಕಾರಿ ಎಂದು ಬಿಂಬಿಸುತ್ತವೆ. ಇದೇ ನೈಜ ದುರಂತ.

ಇಲ್ಲೊಂದು ಮಾತು ಹೇಳಲೇ ಬೇಕು. ಬಾಬಾಸಾಹೇಬ್ ರನ್ನು ಕಮ್ಯುನಿಸ್ಟರು ಮತ್ತು ತಿಳಕರಂಥ ತಥಾಕಥಿತ ಕ್ರಾಂತಿಕಾರಿಗಳು lokmanya-tilakಸಮಾನವಾಗಿ ವಿರೋಧಿಸುತ್ತಿದ್ದರು. ಆದರೆ ಇವೆರಡೂ ವಿರೋಧಗಳಲ್ಲಿ ಒಂದು ಗಮನಾರ್ಹ ವ್ಯತ್ಯಾಸವಿದೆ. ಕಮ್ಯುನಿಸ್ಟರು ಸಮಗ್ರ ಪರಿವರ್ತನೆ ಬರಲು ಅರ್ಥಿಕ ಪರಿವರ್ತನೆ ಆಗಲೇ ಬೇಕು ಎಂದು ನಂಬಿ ಬೇರೆಲ್ಲ ಹೋರಾಟಗಳನ್ನು ವಿರೋಧಿಸಿದರು. ಇದು ಶೂದ್ರ ಅಥವಾ ದಲಿತರ ಮೇಲಿನ ದ್ವೇಷದಿಂದಲ್ಲ; ಬದಲಿಗೆ ಭಾರತದಲ್ಲಿ ಜಾತಿಯೇ ವರ್ಗ ಎಂದು ಗ್ರಹಿಸದೇ ಹೋದ ಬಹುದೊಡ್ಡ ಐತಿಹಾಸಿಕ ತಪ್ಪಿನಿಂದಾಗಿ. ಭಾರತದ ಮಟ್ಟಿಗೆ ದಲಿತರೇ ಸರ್ವಹರಾ (proletariat) ಎಂದು ಕಮ್ಯುನಿಸಂ ಒಪ್ಪಲಿಲ್ಲ.ಇದು ಅಧುನಿಕ ಭಾರತದ ದೊಡ್ಡ ದುರಂತ. ಆದರೆ ಮಾರ್ಕ್ಸ್ ವಾದಿ ಚಳುವಳಿಯಿಂದಾಗಿಯೇ ದಲಿತ ಶೂದ್ರರು ನಗರ ಪ್ರದೇಶಗಳಲ್ಲಿ ಅಷ್ಟಿಷ್ಟು ಅರ್ಥಿಕ ಸ್ವಾವಲಂಬನೆ ಸಾಧಿಸಿದರು ಮತ್ತು ಹಳ್ಳಿಗಳಲ್ಲಿ ಭೂಸುಧಾರಣೆಗಳಾದವು. ಆದರೆ ತಿಳಕರಂಥವರು ಅತ್ತ ಅರ್ಥಿಕ ಸಮಾನತೆಗೂ ವಿರೋಧಿ ಇತ್ತ ಸಾಮಾಜಿಕ ಸಮಾನತೆಗೂ ವೈರಿ. ಅತ್ತ ವೈದಿಕಶಾಹಿಗಳನ್ನೂ ಸಂಘಟಿಸಿದರು; ಇತ್ತ ಸ್ವದೇಶಿ ಚಾಕುವಿನಿಂದ ಘಾಸಿಗೊಂಡ ಕಾರ್ಮಿಕರನ್ನು ವೇದಾಂತದ ಕಾಲ್ಪನಿಕ ಮುಲಾಮು ಹಚ್ಚಿ ಮೆತ್ತಗೆ ಮಾಡಿದರು.

ಇನ್ನು ಈ ದೇಶದಲ್ಲಿ ದೇಶಭಕ್ತಿಯನ್ನು ಮೂರ್ತಿ ಪೂಜೆಗೆ ಸಮೀಕರಿಸಿ ಕಡೆಗೆ ಭಕ್ತಿಯ ಹೆಸರಿನಲ್ಲಿ ಕೋಮು ಉನ್ಮಾದಕ್ಕೇರಿಸಿದ ಖ್ಯಾತಿ ಸೇರಬೇಕಿರುವುದು ತಿಳಕರಿಗೆ. ಇದನ್ನು ನಂತರದಲ್ಲಿ ಗಾಂಧಿ ಮತ್ತು ಇನ್ನೂ ವಿಕೃತ ಸ್ವರೂಪದಲ್ಲಿ ಹಿಂದೂ ಕೋಮುವಾದಿಗಳು ಬಳಸಿಕೊಂಡರು. MKGandhiಸಾರ್ವಜನಿಕ ಮೂರ್ತಿಪೂಜೆ ದೇಶವೆಂದರೆ ಒಂದು ಧರ್ಮದ ಜಹಗೀರು ಎಂದು ಜನರ ತಲೆಯಲ್ಲಿ ಬಿತ್ತಿದ್ದು ಟಿಳಕರ ಸಾಧನೆ. ಇವರ ಸಾರ್ವಜನಿಕ ದೇಶಭಕ್ತಿಯನ್ನು ಒಂದು ಇಂದ ಮೂರ್ತಿಪೂಜೆಯನ್ನಾಗಿ ಪರಿವರ್ತಿಸಿದ್ದರಿಂದ ಇಡೀ ದೇಶದಲ್ಲಿ ಯೋಚಿಸಿ ರಾಜಕಾರಣ ಮಾಡುವ ಸಂಸ್ಕೃತಿಯೇ ನಾಶವಾಯಿತು. ಒಂದು ಕಡೆ ಪುರೋಹಿತ ಶಾಹಿಗಳಿಂದ ಇನ್ನೊಂದೆಡೆ ಬ್ರಿಟೀಷರಿಂದ ಬೆಂದು ಬಳಲಿದ್ದ ನಗರ ಪ್ರದೇಶಗಳ ಶೂದ್ರ-ದಲಿತ ಕಾರ್ಮಿಕರಿಗೆ ಸಮಗ್ರ ಕ್ರಾಂತಿಯ ಬದಲು ತಿಳಕರ ಮೂರ್ತಿಪೂಜೆಯ ಭ್ರಾಂತಿಯೇ ಹೆಚ್ಚು ರುಚಿಸಿತು. ಫುಲೆ-ಅಂಬೇಡ್ಕರ್, ಮಾರ್ಕ್ಸ್ – ಲೆನಿನ್ ರನ್ನು ಅನುಸರಿಸಬೇಕಾದರೆ ಅವರ ಚಿಂತನೆಯ ಅಧ್ಯಯನ ಅತ್ಯಗತ್ಯ. ಆದರೆ ಮೂರ್ತಿ ಪೂಜೆಗೆ ಇದೇನೂ ಬೇಡ; ಬರಿಯ ಉನ್ಮಾದವೇ ಸಾಕು. ಹೀಗೆ ರಾಜಕೀಯ ಮತ್ತು ಧರ್ಮವನ್ನು ಬೆರೆಸುವ ಕಲೆಯನ್ನು ಟಿಳಕರು ಕಲಿಸಿಕೊಟ್ಟರು.

ಶೂದ್ರ-ದಲಿತ-ರೈತ-ಕಾರ್ಮಿಕರ ಹೋರಾಟಗಳ ಹಾದಿ ತಪ್ಪಿಸಿದ ಟಿಳಕರು ಕಾಂಗ್ರೆಸ್ ನಲ್ಲಿ ಸಂಪೂರ್ಣ ಅರಿಶಿಣ ಕುಂಕುಮದ ಸಂಸ್ಕೃತಿ ಹರಡಿ ಬಿಟ್ಟರು.

ಕೊನೆಯದಾಗಿ ತಿಳಕರ ಸಂಪೂರ್ಣ ವ್ಯಕ್ತಿತ್ವವನ್ನು ಬಿಚ್ಚಿಡುವ ಇದೊಂದು ಘಟನೆಯನ್ನು ಹೇಳಲೇ ಬೇಕು. ೧೯೮೧ ರಲ್ಲಿ ಟಿಳಕರು ಒಂದು ಅತ್ಯಂತ ಘನಂದಾರಿ ಹೋರಾಟವನ್ನು ಸಂಘಟಿಸಿದರು. ಆ ವರ್ಷ ಬ್ರಿಟಿಷ್ ಸರಕಾರ ‘Age of Consent Act ಎಂಬ ಒಂದು ಕಾನೂನು ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ ಹನ್ನೆರಡು ವರ್ಷಕ್ಕೆ ಕಡಿಮೆಯಿರುವ ಯಾವ ಮಗುವಿನ ಮೇಲೆ ಜೊತೆ ಲೈಂಗಿಕ ಸಂಪರ್ಕ ಮಾಡಿದರೂ ಅದು ಬಲಾತ್ಕಾರಕ್ಕೆ ಸಮ ಮತ್ತು ಶಿಕ್ಷಾರ್ಹ ಅಪರಾದ ಎಂಬ ಕಾನೂನು ಜಾರಿಗೆ ತಂದಿತು.

ಈ ಕಾನೂನು ಬರಲು ಒಂದು ಬಲವಾದ ಕಾರಣವಿತ್ತು ೧೮೮೯ ರಲ್ಲಿ ಫುಲ್ ಮಣಿ ಎಂಬ ಹನ್ನೊಂದು ವರ್ಷದ ಹಸುಳೆಯ ಮೇಲೆ child-rapeಹರಿ ಮೋಹನ ಮೈತಿ ಎಂಬ ೩೫ ವರ್ಷದ ವ್ಯಕ್ತಿ ಲೈಂಗಿಕ ಸಂಪರ್ಕ ಮಾಡಿದ ಪರಿಣಾಮ ರಕ್ತಪಾತವಾಗಿ ಆ ಹೆಣ್ಣು ಮಗು ಸತ್ತು ಹೋಯಿತು. ಈ ಹರಿ ಮೋಹನನಿಗೆ ಅತ್ಯಾಚಾರ ಶಿಕ್ಷೆ ಆಗಲೇ ಇಲ್ಲ; ಏಕೆಂದರೆ ಈ ಮಗು ಅವನ ಪತ್ನಿ!

ಇದನ್ನು ಕಂಡ ವಿದೇಶಿ ಸರಕಾರ ಹೆಣ್ಣು ಮಗುವಿನ ಪ್ರಾಣ ರಕ್ಷಣೆ ಮಾಡುವ ಈ ಕಾನೂನು ತಂದರೆ ನಮ್ಮ ಸ್ವದೇಶೀ ಟಿಳಕರು ಇದರ ವಿರುದ್ಧ ಅತ್ಯಂತ ಭಯಂಕರ ಹೋರಾಟ ಸಂಘಟಿಸಿಬಿಟ್ಟರು. ಇದು ನಮ್ಮ ಹಿಂದೂ ಧಾರ್ಮಿಕ ವಿಚಾರಗಳಲ್ಲಿ ಮೂಗು ತೋರಿಸುವ ಪ್ರಯತ್ನ ಎಂದು ತಮ್ಮ ಪತ್ರಿಕೆಗಳಲ್ಲಿ ಗುಡುಗಿ ಸಂಪಾದಕೀಯ ಬರೆದದ್ದಲ್ಲದೇ, ಸಮಾನ ಮನಸ್ಕ ಧರ್ಮಭೀರುಗಳ ಜೊತೆ ದೇಶವ್ಯಾಪಿ ಬೀದಿ ಹೋರಾಟವನ್ನು ಸಂಘಟಿಸಿದರು.

ಹನ್ನೊಂದು ವರ್ಷದ ಹಸುಳೆಯ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿ ಹೋರಾಟ ಮಾಡಿದ ಟಿಳಕರು ಒಬ್ಬ ಲೋಕಮಾನ್ಯ; ಆದರೆ ಮಹಿಳೆಯರ ಅಸ್ತಿ ಹಕ್ಕನ್ನು ಕಾಪಾಡಬೇಕು ಎಂದು ಸಂಪುಟಕ್ಕೆ ರಾಜಿನಾಮೆ ಇತ್ತ ಬಾಬಾಸಾಹೇಬ್ ಒಬ್ಬ ಬ್ರಿಟಿಷ್ ಏಜೆಂಟ್!

ಮೇರಾ ಭಾರತ್ ಮಹಾನ್!

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book

ಭಾರತದ ಕುಲ ತಿಲಕರ ಪರಾಮರ್ಶೆ : ಭಾಗ 1


– ಶ್ರೀಧರ್ ಪ್ರಭು


 

“In spite of the verdict of the Jury, I maintain that I am innocent. There are higher powers that rule the destiny of men and nations and it may be the will of providence that the cause which I represent may prosper more by my suffering than my remaining free.”

(“ಜೂರಿಗಳ ತೀರ್ಮಾನವೇನೆ ಇರಲಿ, ನನ್ನ ಪ್ರಕಾರ ನಾನೊಬ್ಬ ನಿರಪರಾಧಿ. ಮಾನವರ ಮತ್ತು ದೇಶಗಳ ಭವಿಷ್ಯವನ್ನು ತೀರ್ಮಾನಿಸುವದು ಮಹಾನ್ ಶಕ್ತಿಗಳು. ನಾನು ನಂಬಿದ ಅದರ್ಶಗಳನ್ನು ಸಿದ್ದಿಸಲು, ನಾನು ಮುಕ್ತವಾಗಿ ಬದುಕುವುದಕ್ಕಿಂತ ಸಂಘರ್ಷ ಪಟ್ಟು ಬಂಧನದಲ್ಲಿರರುವುದರಿಂದಲೇ ಹೆಚ್ಚು ಸೂಕ್ತವೆಂದು ಆ ವಿಧಿಯೇ ತೀರ್ಮಾನಿಸಿರಬೇಕು.” )

ಬಾಂಬೆ ಹೈ ಕೋರ್ಟ್‌ನ ಹೃದಯ ಭಾಗದಲ್ಲಿರುವ ನ್ಯಾಯಂಗಣ ಕೊಠಡಿಯ ೪೬ ರ ಹೊರ ಪಾರ್ಶ್ವದಲ್ಲಿರುವ ಒಂದು ಆಕರ್ಷಕ ಫಲಕದ ಮೇಲೆ ಈ ವಾಕ್ಯಗಳನ್ನು ಕೆತ್ತಲಾಗಿದೆ. ಒಂದು ನ್ಯಾಯಾಲಯದಲ್ಲಿ ಒಬ್ಬ ಆರೋಪಿ ನೀಡಿದ ಹೇಳಿಕೆಗಳನ್ನು lokmanya-tilakಅದೇ ನ್ಯಾಯಾಲಯದ ಆವರಣದಲ್ಲಿ ಕೆತ್ತಿದ ಉದಾಹರಣೆ ಪ್ರಾಯಶಃ ಇಡೀ ವಿಶ್ವದಲ್ಲೇ ಇರಲಿಕ್ಕಿಲ್ಲ.

ಈ ವಾಕ್ಯಗಳನ್ನು ಹೇಳಿದ ರಾಷ್ಟ್ರೀಯ ಅಸಂತುಷ್ಟಿಯ ಜನಕ (Father of the Indian unrest), ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ, ಸ್ವರಾಜ್ಯವೇ ತನ್ನ ಜನ್ಮ ಸಿದ್ಧ ಹಕ್ಕೆಂದು ಸಾರಿದ ಲೋಕಮಾನ್ಯ ಬಾಳ ಗಂಗಾಧರ ತಿಲಕರು ಸರ್ವತ್ರ ಮನ್ನಣೆ ಮತ್ತು ಗೌರವಕ್ಕೆ ಪಾತ್ರರಾದವರು. ಅವರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಭಾರತಾದ್ಯಂತ ಆಚರಿಸಲಾಗುತ್ತಿದೆ.

ಬಹುಷಃ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಬಹು ಮುಖ್ಯವಾಗಿ ಸಂಘ ಪರಿವಾರದವರು ಮನ:ಪೂರ್ವಕವಾಗಿ ಮತ್ತು ಸಮಾನವಾಗಿ ಗೌರವಿಸುವ ಕೆಲವೇ ರಾಷ್ಟ್ರೀಯ ನಾಯಕರಲ್ಲಿ ತಿಲಕರೊಬ್ಬರು. ಕಾಂಗ್ರೆಸ್ ಮತ್ತು ಸಂಘ ಪರಿವಾರ ಅವರನ್ನು ಒಬ್ಬ ಅಪ್ಪಟ ರಾಷ್ಟ್ರವಾದಿಯಾಗಿ ಗೌರವಿಸಿದರೆ, ಕ್ರಾಂತಿಕಾರಿ ಮಾರ್ಗವನ್ನು ಬೆಂಬಲಿಸಿ, ೧೯೧೭ ರ ಸೊವಿಯಟ್ ಕ್ರಾಂತಿಯನ್ನು ಮತ್ತು ಅದರ ರೂವಾರಿ ಲೆನಿನ್ ರನ್ನು ಹಾರ್ದಿಕವಾಗಿ ಹಾಡಿ ಹೊಗಳಿದ ತಿಲಕರ ಬಗ್ಗೆ ಕಮ್ಯುನಿಸ್ಟರಿಗೆ ಅತೀವ ಅಭಿಮಾನವಿದೆ. ಸ್ವತಹ ಲೆನಿನ್ ಒಂದು ಕಡೆ ತಿಲಕರ ಬಗ್ಗೆ ‘ಅತ್ಯಂತ ಸುಸ್ಥಿರ ಮತ್ತು ಪುರೋಗಾಮಿ ನಾಯಕ…” (“…the most consistent and forward-looking leader”) ಎಂದಿದ್ದಾರೆ. ತಿಲಕರ ಮೇಲೆ ದೇಶದ್ರೋಹದ ಮೊಕದ್ದಮೆ ನಡೆದಾಗ ತಿಲಕರ ಪರ ವಕಾಲತ್ತು ನಡೆಸಿದ್ದು ಸ್ವತಹ ಮೊಹಮ್ಮದ್ ಅಲಿ ಜಿನ್ನಾ. ಜಿನ್ನಾ ಮತ್ತು ತಿಲಕರ ಸ್ನೇಹ ಮತ್ತು ಸಾಂಗತ್ಯ (comradeship) ಬಗ್ಗೆ ಪ್ರಸಿದ್ದ ಲೇಖಕ ಎ. ಜಿ. ನೂರಾನಿ “Tilak and Jinna – Comrades in Freedom Struggle” ಎಂಬ ಬಹು ಚರ್ಚಿತ ಪುಸ್ತಕವನ್ನೇ ಬರೆದಿದ್ದಾರೆ. ಮುಸ್ಲಿಂ ಸಮುದಾಯವೂ ತಿಲಕರನ್ನು ತೀಕ್ಷ್ಣವಾಗಿ ವಿರೋಧಿಸಿದ ನಿದರ್ಶನಗಳಿಲ್ಲ. ಹೀಗೆ ಸಾರ್ವತ್ರಿಕ ಮನ್ನಣೆಯಿರುವ ತಿಲಕರನ್ನು ವಿಮರ್ಶೆಗೊಳಪಡಿಸುವುದು ಹಿಂದೆಯೂ ಮತ್ತು ಇಂದಿಗೂ ಸಾಕಷ್ಟು ‘ರಾಷ್ಟ್ರೀಯ ಅಸಂತುಷ್ಟಿ’ ಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಾಯಶಃ ತಿಲಕರನ್ನು ಮೊಟ್ಟ ಮೊದಲ ಬಾರಿ ವಿಮರ್ಶೆ ಮಾಡಿದ್ದು ಮಹಾತ್ಮಾ ಫುಲೆ. ತಮ್ಮ ಕೇಸರಿ ಪತ್ರಿಕೆ ಪ್ರಾರಂಭಿಸಲು Jyotirao Phuleನಿಧಿ ಸಂಗ್ರಹ ಮಾಡಲೋಸುಗ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದಾಗ ಮೊಟ್ಟ ಮೊದಲ ಬಾರಿಗೆ ಫುಲೆ ತಿಲಕರ ಐತಿಹಾಸಿಕ ಆಕರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು.

ಹಂಟರ್ ಆಯೋಗದ ಮುಂದೆ ಫುಲೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಮನವಿ ಸಲ್ಲಿಸಿದರು. ಇದು ತಿಲಕರೂ ಸೇರಿದಂತೆ ಅನೇಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು.

ತಿಲಕರು “ಮರಾಠ” ಎಂಬ ತಮ್ಮ ಇಂಗ್ಲಿಷ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಮತ್ತು ಸಂಪಾದಕೀಯಗಳನ್ನು ಬರೆದು ಶೂದ್ರ ಮತ್ತು ದಲಿತ ವಿದ್ಯಾರ್ಥಿಗಳು ಅಧುನಿಕ ಶಿಕ್ಷಣ ಪಡೆಯುವುದನ್ನು ಉಗ್ರವಾಗಿ ವಿರೋಧಿಸಿ ಲೇಖನ ಬರೆದರು. ಇದರ ಸಾರಾಂಶವೆಂದರೆ: ಕುಂಬಾರ, ಕುಣಬಿ, ಚಮ್ಮಾರ ಇತ್ಯಾದಿ ಜನಾಂಗಗಳ ತಮ್ಮ ವೃತ್ತಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಶೂದ್ರರ ಮಕ್ಕಳು ಅಧುನಿಕ ಶಿಕ್ಷಣ ಪಡೆದರೆ ಅವರು ತಮ್ಮ ತಂದೆ ತಾಯಿಯರನ್ನೇ ತುಚ್ಚವಾಗಿ ಕಂಡು ಅಧುನಿಕತೆಯನ್ನೇ ಆರಾಧಿಸ ತೊಡಗುತ್ತಾರೆ. ಇತಿಹಾಸ, ಗಣಿತ, ಭೂಗೋಳ ಇತ್ಯಾದಿ ವಿಷಯಗಳನ್ನು ಓದಿದರೆ ಈ ಕೆಳಜಾತಿಯ ಜನಕ್ಕೆ ಪ್ರಯೋಜನವಾದರೂ ಏನು? ಇನ್ನು ಇಂಥವರ ಮಕ್ಕಳೆಲ್ಲ ಓದಿ ವಿದ್ಯಾವಂತರಾದರೆ ಹೊಲಗಳಲ್ಲಿ ದುಡಿಯುವವರು ಯಾರು? ತೆರಿಗೆದಾರರ ಸಾವಿರಗಟ್ಟಲೆ ಹಣವನ್ನು ಈ ರೀತಿ ಅಪಾತ್ರರ ಮೇಲೆ ಖರ್ಚು ಮಾಡಲು ಸರಕಾರಕ್ಕೆ ನಾಚಿಗೆಯಾಗಬೇಕು ತಮ್ಮ ತಮ್ಮ ಕುಲ ಕಸುಬಿನಲ್ಲೇ ಶೂದ್ರ ಮತ್ತು ದಲಿತರ ಅವರ ಮುಕ್ತಿ ಇರುವುದು.

ಹಾಗೆಯೇ, ತಿಲಕರು ಇಂತಹುದೇ ಕಾರಣಗಳಿಗಾಗಿ ಮಹಿಳೆಯರು ವಿದ್ಯಾವಂತರಾಗುವುದನ್ನು ಕೂಡ ವಿರೋಧಿಸಿದರು. ಮಹಿಳೆ ಅಧುನಿಕ ಶಿಕ್ಷಣ ಪಡೆದರೆ ತನ್ನ ತಂದೆ ತಾಯಿ ಮತ್ತು ಗಂಡಂದಿರಿಗೆ ವಿಧೇಯಳಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಲಿತ ಶೂದ್ರರ ಮಕ್ಕಳು ಸವರ್ಣೀಯ ಮಕ್ಕಳ ಜೊತೆ ಓದುವುದನ್ನೂ ಕೂಡ ತಿಲಕರು ಉಗ್ರವಾಗಿ ಟೀಕಿಸಿದರು. ಸ್ವತಃ ದಲಿತ ಶೂದ್ರರೇ ತಮ್ಮ ಮಕ್ಕಳನ್ನು ಸವರ್ಣೀಯರ ಜತೆ ವ್ಯಾಸಂಗ ಮಾಡಲು ಕಳುಹಿಸುತ್ತಿಲ್ಲ ಅಂಥದ್ದರಲ್ಲಿ ಕೆಲವು ಮೂರ್ಖ ಬ್ರಿಟಿಷ್ ಅಧಿಕಾರಿಗಳು ನಮ್ಮವರೇ ಆದ ಕೆಲ ನಿಷ್ಪ್ರಯೋಜಕ ಸಮಾಜ ಸುಧಾರಕರ ಮಾತು ಕಟ್ಟಿಕೊಂಡು ಈ ತರಹದ ‘ಅಪ್ರಯೋಜಕ ಮತ್ತು ಕಾರ್ಯಸಾಧುವಲ್ಲದ’ ಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಬ್ರಿಟಿಷರ ಮೇಲಧಿಕಾರಿಗಳಿಗೆ ದೂರು ಸಹ ಸಲ್ಲಿಸಿದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಲೇ ಫುಲೆ ಮತ್ತವರ ಸಂಗಡಿಗರ ಮೇಲೆ ಚಾಡಿ ಚುಚ್ಚಲು ತಿಲಕರಿಗೆ ಯಾವ ದೇಶಪ್ರೇಮವೂ ಅಡ್ಡಿ ಬರಲಿಲ್ಲ.

ತಿಲಕರು ಇಷ್ಟೆಲ್ಲಾ ದ್ವೇಷ ಸಾಧಿಸಿದರೂ ಮಹಾತ್ಮಾ ಫುಲೆ ತಿಲಕರನ್ನು ಹೇಗೆ ನಡೆಸಿಕೊಂಡರು ಎಂಬುದು ಬಹು ಮುಖ್ಯ.

೧೮೮೨ ರಲ್ಲಿ, ಶಿವಾಜಿ ಮಹಾರಾಜರ ವಂಶದವರಿಗೆ ಬ್ರಿಟಿಷ್ ಸರಕಾರ ಅನ್ಯಾಯವೆಸಗಿದೆ ಎಂದು (ತಿಲಕರು ಶಾಹು ಮಹಾರಾಜರಿಗೆ ಅಪಮಾನ ಮಾಡಿದಷ್ಟೇನೂ ಬ್ರಿಟಿಷರು ಮಾಡಿರಲಿಕ್ಕಿಲ್ಲ), ತಿಲಕರು ಮತ್ತು ಅಗರ್ಕರ್ ಎಂಬ ಇನ್ನೊಬ್ಬ ಮುಖಂಡರ ಜೊತೆ ಸೇರಿಕೊಂಡು ಒಂದು ಚಳುವಳಿ ಸಂಘಟಿಸಿದರು. ಇದರಿಂದ ಕಾನೂನು ಭಂಗವಾಯಿತೆಂಬ ಆರೋಪ ಹೊರಿಸಿ ಬ್ರಿಟಿಷರು ಇವರಿಬ್ಬರನ್ನೂ ಮುಂಬೈನಲ್ಲಿನ ಡೊಂಗ್ರಿಯಲ್ಲಿ ಬಂಧಿಸಿದರು. ಆಗ ನ್ಯಾಯಾಲಯದಲ್ಲಿ ೧೦೦೦೦ ರೂಪಾಯಿಗಳ ಜಾಮೀನು ಕೊಡಬೇಕೆಂಬ ಶರತ್ತನ್ನು ವಿಧಿಸಲಾಯಿತು. ಅಷ್ಟು ಆಗುವಾಗ ತಿಲಕರ ಹಿಂದೆ ಓಡಾಡಿಕೊಂಡಿದ್ದ ಸುಧಾರಕರೆಲ್ಲ ದಿಕ್ಕಾ ಪಾಲಾಗಿ ಓಡಿದ್ದರು. ಮಹಾತ್ಮಾ ಫುಲೆ ತಾವೇ ಸ್ವಯಂ ಪ್ರೇರಣೆಯಿಂದ ಸತ್ಯಶೋಧಕ ಸಮಾಜದ ವತಿಯಿಂದ ಹಳ್ಳಿ ಹಳ್ಳಿಗೆ ತಿರುಗಿ ವಂತಿಗೆ ಸಂಗ್ರಹ ಮಾಡಿ ತಿಲಕ ಮತ್ತು ಅವರ ಸಂಗಡಿಗರನ್ನು ಬೇಲ್ ಹಣ ಕೊಟ್ಟು ಬಿಡಿಸಿದರು.ನಂತರ ನಡೆದ ತಿಲಕರ ಮೇಲೆ ಹೂಡಲಾದ ಮೊಕದ್ದಮೆಯಲ್ಲಿ ತಿಲಕರಿಗೆ ಮೂರು ತಿಂಗಳ ಕಾರಾವಾಸ ಶಿಕ್ಷೆಯಾಯಿತು. ತಿಲಕರ ಬಿಡುಗಡೆಗೆ ಒತ್ತಾಯಿಸಿ ನಂತರದಲ್ಲಿ ತಿಲಕರ ಬಂಧನವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ ಮಹಾತ್ಮಾ ಫುಲೆ ಒಂದು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮದಿಂದಾಗಿಯೇ ಮುಂಬೈ ಪ್ರಾಂತ್ಯದಲ್ಲೆಲ್ಲ ತಿಲಕರು ಪ್ರಸಿದ್ದಿಗೆ ಬಂದರು.

ಇದಾದ ನಂತರ, ತಿಲಕರು ಫುಲೆ ಮಹಾತ್ಮರಿಗೆ ‘ನಿಮ್ಮ ಈ ಮಹದುಪಕಾರ ಹೇಗೆ ತೀರಿಸಲಿ’ ಎಂದು ಕೇಳಿದಾಗ bal-gangadhar-tilakಮಹಾತ್ಮರು ಒಂದೇ ಒಂದು ಮಾತು ಹೇಳಿದರು ” ತಿಲಕ್, ನೀವು ಒಬ್ಬ ಮಹಾನ್ ನಾಯಕನಾಗಿ ಬೆಳೆದು ನಿಲ್ಲುವ ಸರ್ವ ಸಾಧ್ಯತೆಗಳನ್ನೂ ನಾನು ನೋಡಬಲ್ಲೆ. ನಿಮ್ಮಲ್ಲಿ ಒಂದೇ ಒಂದು ದೋಷವಿದೆ; ಕೇವಲ ಬ್ರಾಹ್ಮಣರನ್ನು ಸಂಘಟಿಸುವುದನ್ನು ಬಿಟ್ಟುಬಿಡಿ. ಸಮಾಜದ ಎಲ್ಲ ವರ್ಗಗಳಿಗೂ ನೇತೃತ್ವ ಕೊಡಿ. ಇಷ್ಟೇ ನಿಮ್ಮಲ್ಲಿ ನಾನು ಕೇಳಿಕೊಳ್ಳುವುದು”.

ದುರ್ದೈವವೆಂದರೆ, ಹೀಗೆ ತಮ್ಮನ್ನು ಸಲುಹಿದ ಮಹಾತ್ಮಾ ಫುಲೆ ಹುತಾತ್ಮರಾದಾಗ ತಮ್ಮ ದೈನಿಕದಲ್ಲಿ ಮಹಾತ್ಮರ ನಿಧನದ ಕುರಿತು ಒಂದೇ ಒಂದು ಚಿಕ್ಕ ಸಾಲನ್ನು ಸುದ್ದಿಯ ರೂಪದಲ್ಲಿ ಕೂಡ ಕೂಡ ಬರೆಯಲಿಲ್ಲ! ಇನ್ನು ತಿಲಕರ ಸಂಗಡಿಗ ಅಗರ್ಕರ್ ಕೂಡ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತಮ್ಮ ಪತ್ರಿಕೆ “ಸುಧಾರಕ” (!?) ದಲ್ಲಿ ಮಹಾತ್ಮರ ನಿಧನದ ಬಗ್ಗೆ ಒಂದು ಅಕ್ಷರವನ್ನೂ ಬರೆಯಲಿಲ್ಲ. ಇದೇ ತಿಲಕರು ಮಹಾತ್ಮರಿಗೆ ಸಲ್ಲಿಸಿದ ಕಾಣಿಕೆ!

ಇನ್ನು ತಿಲಕರು ಶಾಹು ಮಹಾರಾಜ್ ಮತ್ತು ಬಾಬಾ ಸಾಹೇಬರನ್ನು ನಡೆಸಿಕೊಂಡ ರೀತಿ ಇನ್ನೂ ಆಸಕ್ತಿಕರವಾಗಿದೆ.

(ಮುಂದುವರೆಯುತ್ತದೆ…)

ಜೀವೋ ಜೀವಸ್ಯ ಜೀವನಂ – ಮಾಂಸಾಹಾರದ ಮೀಮಾಂಸೆ


– ಶ್ರೀಧರ್ ಪ್ರಭು


 

ಸಸ್ಯವನ್ನು ಕೊಲ್ಲುವುದೂ ಮಹಾಪಾಪ

ಬರೋಬ್ಬರಿ ಒಂದು ಶತಮಾನದ ಹಿಂದಿನ ಘಟನೆ. ೧೯೧೫ ರಲ್ಲಿ ಬ್ರಿಟಿಷ್ ಇಂಡಿಯಾದ ಭಾಗವಾಗಿದ್ದ (ಇಂದು ಬಾಂಗ್ಲಾದೇಶದಲ್ಲಿರುವ) ಬಿಕ್ರಮಪುರದಲ್ಲೆಲ್ಲ ಬಹು ದೊಡ್ಡ ಸಂಭ್ರಮ ಆವರಿಸಿತ್ತು. ಬಿಕ್ರಮಪುರದಲ್ಲಿ ಹುಟ್ಟಿದ ಒಬ್ಬ ಹುಡುಗ ವಿಶ್ವಮಾನ್ಯ ವಿಜ್ಞಾನಿಯಾಗಿ ಬೆಳೆದು ಈ ಊರಿನ ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ. ಈ ವಿಜ್ಞಾನಿ ಬಿಕ್ರಮಪುರದ ಜನತೆಯನ್ನು ಉದ್ದೇಶಿಸಿ ಹೇಳಿದ ಮಾತುಗಳಿವು:

“ನನ್ನ ಬಾಲ್ಯದಲ್ಲಿ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವುದೇ ಒಂದು ಪ್ರತಿಷ್ಠೆಯ ಪ್ರತೀಕವಾಗಿತ್ತು. ಅಲ್ಲಿ ರಾಜ ಮಹಾರಾಜರ ಇಲ್ಲವೇ ಪ್ರತಿಷ್ಟಿತ ಮನೆತನದ ಮಕ್ಕಳು ಮಾತ್ರ ಓದಲು ಸಾಧ್ಯವಿತ್ತು. ನನ್ನ ತಂದೆಗೆ ಇಂಗ್ಲಿಷ್ ಶಾಲೆಗೆ ಹಾಕಲು ಸಾಧ್ಯವಿತ್ತಾದರೂ ನನ್ನನ್ನು ಸಾಮಾನ್ಯ ಜನರ ಮಕ್ಕಳು ಓದುತ್ತಿದ್ದ ಮಾತೃಭಾಷೆಯ ಶಾಲೆಗೇ ಕಳುಹಿಸಿದರು. ಅಲ್ಲಿ ನನ್ನ ಎಡಗಡೆ ಒಬ್ಬ ಮುಸಲ್ಮಾನ ಜವಾನನ ಮಗ ಕುಳಿತುಕೊಳ್ಳುತ್ತಿದ್ದರೆ ಬಲಗಡೆ ಒಬ್ಬ ಮೀನುಗಾರನ ಮಗ ಕುಳಿತುಕೊಳ್ಳುತ್ತಿದ್ದ. ಈ ನೆಲದ ಗುಣವನ್ನು ಹೀರಿ ಬೆಳೆದ ಮಕ್ಕಳೊಂದಿಗೆ ನಾನು ಬೆರೆತು ಅವರು ಹೇಳುತ್ತಿದ್ದ ಪಶು, ಪಕ್ಷಿಗಳ, ಮೀನು-ಏಡಿಗಳ ಕಥೆಗಳನ್ನು ನಾನು ಇನ್ನಿಲ್ಲದ ಕುತೂಹಲದಿಂದ ಆಲಿಸುತ್ತಿದ್ದೆ. ಹೀಗಾಗಿಯೇ ನನ್ನಲ್ಲಿ ಪ್ರಕೃತಿಯ ಕುರಿತು ಅತೀವ ಆಸಕ್ತಿ ಬೆಳೆಯಿತು. ನನ್ನ ತಾಯಿ ಒಬ್ಬ ಸಂಪ್ರದಾಯಸ್ಥ ಹಿನ್ನೆಲೆಯಿಂದ ಬಂದವರಾಗಿದ್ದರೂ, ಶಾಲೆಯಿಂದ ಆಟವಾಡಿ ನನ್ನೊಂದಿಗೆ ಬಂದ ನನ್ನೆಲ್ಲ ಸ್ನೇಹಿತರಿಗೆ ತುಂಬು ಪ್ರೀತಿಯಿಂದ ಕೈತುತ್ತು ನೀಡುತ್ತಿದ್ದರು. ಅಸ್ಪೃಶ್ಯತೆ ಎಂಬುದು ಅವರಿಗೆ ಇರಲೇ ಇಲ್ಲ. ಇನ್ನೊಂದು ಜೀವವನ್ನು ಅಥವಾ ವ್ಯಕ್ತಿಯನ್ನು “ಕೀಳು” ಅಥವಾ ಅಸ್ಪೃಶ್ಯ ಎಂದು ಪರಿಗಣಿಸುವುದು ನನ್ನ ಕಲ್ಪನೆಗೆ ಕೂಡ ಎಟುಕುತ್ತಿರಲಿಲ್ಲ.”

ಈ ಮಹಾನ್ ವ್ಯಕ್ತಿ ಇನ್ಯಾರೂ ಅಲ್ಲ “ಸಸ್ಯಗಳಿಗೆ ಜೀವವಿದೆ” ಎಂದು Jagadish_Chandra_Boseತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್.

ಸಸ್ಯಗಳಿಗೆ ಜೀವವಿದೆ ಎಂಬ ಕಾಣ್ಕೆ ಅನೇಕ ಮಹಾನ್ ವೈಜ್ಞಾನಿಕ ಸಂಶೋಧನೆಗಳಿಗೆ ದಾರಿಯಾಯಿತು. ಹಾಗೆಯೇ ಈ ಸಂಶೋಧನೆ ಸಾಮಾಜಿಕ ಪರಿಸರದ ಮೇಲೂ ಅಗಾಧ ಪರಿಣಾಮ ಬೀರಿದೆ. ಸಸ್ಯ ಜನ್ಯ ಆಹಾರದಿಂದ ಯಾವುದೇ ಹಿಂಸೆಯಾಗದು ಎಂಬ ಸಾವಿರಾರು ವರ್ಷಗಳ ಗೊಡ್ಡು ವಾದಕ್ಕೆ ಈ ಸಂಶೋಧನೆ ಕೊಡಲಿ ಪೆಟ್ಟು ಕೊಟ್ಟಿತು. ಹಿಂಸೆಯಾಗುತ್ತದೆ ಎಂಬ ಕಾರಣದಿಂದ ಒಂದು ಪ್ರಾಣಿಯನ್ನು ಕೊಲ್ಲಬಾರದಾದರೆ, ಒಂದು ಸಸ್ಯವನ್ನು ಏಕೆ ನೋಯಿಸಬೇಕು – ಎಂಬುದಕ್ಕೆ ಯಾರಲ್ಲೂ ಉತ್ತರ ಹುಟ್ಟಲಿಲ್ಲ, ಈ ಸಂಶೋಧನೆಯ ನಂತರ.

ತಮ್ಮದೇ ವೈಜ್ಞಾನಿಕ ಸಂಶೋಧನೆಗೆ ಪುರಸ್ಕಾರ ಸ್ವೀಕರಿಸಲು ತಮ್ಮದೇ ಪ್ರತ್ಯೇಕ ರೈಲು ಚೊಂಬಿನ ನೀರು ಮಾತ್ರ ಕುಡಿದು ಬರುವ ವಿಜ್ಞಾನಿಗಳು ಇಂದಿಗೂ ಇದ್ದಾರಾದರೂ ಆ ಕಾಲದಲ್ಲಿ ಅವರೇ ತುಂಬಿದ್ದರು. ಅಂಥವರ ಕಾಲದಲ್ಲಿ ಅಂತ ವಿಷಮತೆಯ ಮಧ್ಯೆ ಒಬ್ಬ ನೈಜ ವೈಜ್ಞಾನಿಕನಾಗಿ ಬದುಕಿದ ಮಹಾನುಭಾವ ಬೋಸ್.

ನಮ್ಮ ಸಮಾಜದಲ್ಲಿ ಪ್ರಾಣಿಜನ್ಯ ಆಹಾರಕ್ಕೆ ಒಂದು ಬಗೆಯ ವಿಚಿತ್ರವಾದ “ದೋಷ” ಅಂಟಿಕೊಂಡಿದೆ. ಪ್ರಾಣಿಜನ್ಯ ಆಹಾರವನ್ನು ತುಚ್ಚೀಕರಣ ಮಾಡುವ ಪರಿಪಾಠ ಬೆಳೆದು ಬಂದು ಪ್ರಾಣಿಜನ್ಯ ಆಹಾರದಿಂದ ತಮೋ ಗುಣ ಬರುತ್ತದೆ ಇತ್ಯಾದಿ ರೂಪದ, ರೂಪಾಂತರದ ವಾದಗಳು ಇಂದಿಗೂ ಪ್ರಚಲಿತವಿವೆ.

ಶ್ರದ್ಧೆಯಿಂದ ಶ್ರೀ ಕೃಷ್ಣನ ದರ್ಶನ ಮಾಡಲು ಎಲ್ಲ ಜಾತಿಗಳ ಭಕ್ತಾದಿಗಳು ವಿಶ್ವದ ಎಲ್ಲೆಡೆಯಿಂದ ಸಂಪಾದಿಸಿ ಭಕ್ತಿಯಿಂದ ಹರಿಸಿದ ಹಣವನ್ನು ಪಡೆಯಲು ಎಂದಿಗೂ ಸಂಕೋಚ ಪಡದ (ಕೇವಲ ಅನ್ನದಲ್ಲಿ ಮಾತ್ರ ಪಂಕ್ತಿ ಭೇದ ಮಾಡುವ) ವಿಶ್ವ ಹಿಂದೂಗಳೆಲ್ಲರ ನೇತಾರರಾದ ಪೇಜಾವರ ಶ್ರೀಗಳು ಮೇ ೨೦೧೨ ರಲ್ಲಿ ಮಾಂಸಾಹಾರ ಸೇವಿಸುವ ಜನರೊಂದಿಗೆ ಸಹಭೋಜನ ಮಾಡಿದರೆ ತಾಮಸೀ ಗುಣಗಳು ಬರುತ್ತವೆಂದು ಅಪ್ಪಣೆ ಕೊಡಿಸಿದ್ದರು. ದಲಿತ ಕೇರಿಗಳಿಗೆ ಹೋಗಿ ಬಂದ ಮೇಲೆ ಪ್ರಾಣಿಜನ್ಯವಾದ ಪಂಚಗವ್ಯ ಪ್ರೋಕ್ಷಣೆ ಎಷ್ಟು ’ಶಾಸ್ತ್ರ ಸಮ್ಮತ’ ವೆಂದೂ ಅವರೇ ಹೇಳಬೇಕು. ಆ ವಿಷಯ ಹಾಗಿರಲಿ.

ವೈದಿಕಶಾಹಿಗಳ ಅನ್ನಕೋಶ ಮತ್ತು ಭಾವಕೋಶಗಳಲ್ಲಿ ಇನ್ನಿಲ್ಲದಂತೆ ಬೇರುಬಿಟ್ಟು ಕೊಂಡಿದ್ದ ಆದರೆ ಅಂದೊಮ್ಮೆ ಇಂದೊಮ್ಮೆ ಮೇಲಕ್ಕೆ ಬರುತ್ತಿದ್ದ ಈ ರೀತಿಯ ಧರ್ಮ ಸೂಕ್ಷ್ಮಗಳು ಇಂದು ರಾಜಕೀಯವನ್ನು ಢಾಳಾಗಿ ಪ್ರವೇಶಿಸಿ ಜನರ ಜೀವನ ಕೋಶವನ್ನೇ ಮುಕ್ಕಿ ಬಿಟ್ಟಿವೆ. ಧರ್ಮದ ದೃಷ್ಟಿಯಿಂದ ಯಾವುದು ಅಸಮ್ಮತವಾದದ್ದೋ ಅದು ಕಾನೂನಿನ ದೃಷ್ಟಿಯಲ್ಲಿಯೂ ಅಪರಾಧ ಎನ್ನುವ ಪರಸರದಲ್ಲಿ ನಾವಿದ್ದೇವೆ.

‘ಜೀವೋ ಜೀವಸ್ಯ ಜೀವನಂ’

ಒಂದು ಜೀವವೇ ಇನ್ನೊಂದು ಜೀವಕ್ಕೆ ಜೀವನ. ಸಂಸ್ಕೃತದ ಈ ಮಾತು ಬಹು ಅರ್ಥಗರ್ಭಿತ. ಜೀವವಿಲ್ಲದ spinach-fieldಅಥವಾ ಜೀವಜನ್ಯವಾದದ್ದೇ ಇನ್ನೊಂದು ಜೀವಕ್ಕೆ ಜೀವನ ನೀಡಬಲ್ಲದು. ಹಿಂದೂ ಧರ್ಮದ ಸುಮಾರು ತೊಂಬತ್ತು ಪ್ರತಿಶತ ಜನ ಇಂದು ಮಾಂಸಾಹಾರ ಸೇವಿಸುತ್ತಾರೆ. ಪೇಜಾವರ ಶ್ರೀಗಳ ಮಠಗಳಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತು ಊಟ ಮಾಡಲು ಶಾಸ್ತ್ರೋಕ್ತವಾಗಿ ಹಕ್ಕಿರುವ ಸಾರಸ್ವತ ಮತ್ತು ಗೌಡ ಸಾರಸ್ವತ ಬ್ರಾಹ್ಮಣರು ಶಾಸ್ತ್ರಗಳನ್ನು ಆಧರಿಸಿಯೇ ಮೀನು ತಿನ್ನುತ್ತಾರೆ. ಅಂದ ಹಾಗೆ ಮಹಾರಾಷ್ಟ್ರ ಸರಕಾರ ಬಾಂಬೆ ಹೈಕೋರ್ಟ್ ಗೆ ಅಫಿಡವಿಟ್ ನೀಡಿ ಹೇಳಿದಂತೆ ಮೀನನ್ನು ಕೊಲ್ಲುವುದಿಲ್ಲವಲ್ಲ; ಹಾಗಾಗಿ ಅದು ಕಾನೂನಿನ ಪ್ರಕಾರ ಮಾಂಸಾಹಾರ ಅಲ್ಲ. ಮಾಂಸಾಹಾರಿಗಳ ಓಟಿನಿಂದ ತಮ್ಮಲ್ಲಿ ತಮೋ ಗುಣ ಬರುವುದೆಂದು ‘ನಮೋ’ ರವರು ಹೇಳಿ ಮಾಂಸಾಹಾರ ಸೇವಿಸುವ ಯಾರೂ ಕೂಡ ತಮಗೆ ಓಟು ಕೊಡಬಾರದೆಂದು ಫಾರ್ಮಾನು ಹೊರಡಿಸಿಬಿಟ್ಟರೆ ಏನಾಗುವುದೋ, ಅವರ ಗುರುಗಳೇ ಹೇಳಬೇಕು.

ಇಂದು ನಡೆಯುತ್ತಿರುವ ಮಾಂಸಾಹಾರ ನಿಷೇಧ ಪ್ರಹಸನ ಕೇವಲ ಜನರ ಆಹಾರದ ಹಕ್ಕಿನ ಮೇಲಿನ ದಬ್ಬಾಳಿಕೆ ಅಲ್ಲ. milking-cowಇದರ ಬೇರು ಇನ್ನೂ ಅಳದಲ್ಲಿದೆ. ತಮ್ಮ ಅಸಹಿಷ್ಣುತೆಯ ಅಜೆಂಡಾವನ್ನೇ ಧರ್ಮವೆಂದು ಮೊದಲು ಘೋಷಿಸುವುದು, ನಂತರದಲ್ಲಿ ಆ “ಧರ್ಮ” ಕ್ಕೆ ಕಾನೂನಿನ ಕವಚ ತೊಡಿಸುವ ಹುನ್ನಾರವಿದೆ. ಮನುಷ್ಯನ ಪ್ರತಿ ನಡೆ ನುಡಿಯನ್ನು ಧರ್ಮ ಬೆರೆಸಿ ನಿಯಂತ್ರಿಸುವ ಇವರ ಅಲಿಖಿಕ ‘ಸಂವಿಧಾನ’ ಕ್ಕೆ ಅತೀ ದೊಡ್ಡ ಕೊಡಲಿ ಪೆಟ್ಟು ಕೊಟ್ಟ ಲಿಖಿತ ಸಂವಿಧಾನವನ್ನು ಸೋಲಿಸಲು ಇವರ ಕಾರ್ಖಾನೆ ಗಳಲ್ಲಿ ಒಂದಲ್ಲ ಒಂದು ಸಂಚು ತಯಾರಿ ಯಾಗುತ್ತಲೇ ಇರುತ್ತದೆ. ಒಮ್ಮೆ ಪಟೇಲರನ್ನು ಬಳಸಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿದರೆ ಮತ್ತೊಮ್ಮೆ ಜೈನರನ್ನು ಬಳಸಿ ಆಹಾರದಲ್ಲಿ ಧರ್ಮ ಬೆರೆಸಿ ನೋಡುತ್ತಾರೆ.

ಗಣವೇಶದ ಬೆಲ್ಟ್ ಮತ್ತು ಬೂಟು ತಯಾರಿ ಮಾಡುವ ಚರ್ಮ ಉದ್ಯಮ

ಇನ್ನು ಇವರದ್ದೇ ದೃಷ್ಟಿಯಲ್ಲಿ ನೋಡಿದರೆ ಜೈನರ ಪ್ರಕಾರ ಮಾಂಸಾಹಾರ ಕೇವಲ ಹಬ್ಬಗಳಲ್ಲಿ ಮಾತ್ರವಲ್ಲ ಎಲ್ಲ ದಿನವೂ ನಿಷಿದ್ಧವೇ. ಜೈನ ಧರ್ಮವನ್ನು ಅತಿಯಾಗಿ ಪ್ರೀತಿಸುವ ಜನ ಅದೇಕೆ ಮಾಂಸಾಹಾರವನ್ನು ಸಂಪೂರ್ಣ ನಿಷೇಧಿಸಬಾರದು? ಸೂರ್ಯಾಸ್ಥದ ನಂತರ ಊಟವೇ ಮಾಡಬಾರದು ಎಂದು ಕಾನೂನು ಏಕೆ ತರಬಾರದು? ಇನ್ನು ಪ್ರಾಣಿಜನ್ಯವಾದ ಹಾಲು, ಜೇನು, ಮೊಸರು, ಮಜ್ಜಿಗೆ, ಪಂಚಾಮೃತ, ರೇಷ್ಮೆ ಇತ್ಯಾದಿ ಎಲ್ಲವನ್ನೂ ನಿಷೇಧಿಸಬಾರದು? ಇಷ್ಟೆಲ್ಲಾ ಮಾತನಾಡುವ ಈ ಜನರು ಇಂದು ಯಂತ್ರಗಳ ಮೂಲಕ ದಿನನಿತ್ಯ ಹಸುಗಳ ಕೆಚ್ಚಲಿನಿಂದ ತನ್ನ ಕರುವಿಗೆ ಸೇರಬೇಕಾದ ಹಾಲನ್ನು ಬಲಪ್ರಯೋಗದಿಂದ ತೆಗೆದು ಹಸುವಿಗೆ ಹಿಂಸಿಸಿ ಬೃಹತ್ ಪ್ರಮಾಣದಲ್ಲಿ ವಂಚಿಸಿ ಮಾನವರು ಕುಡಿಯುವುದರಿಂದ ಹಾಲನ್ನೂ ಮತ್ತು ಹಾಲಿನ ಎಲ್ಲ ಉತ್ಪನ್ನಗಳನ್ನೂ ನಿಷೇಧಿಸಬೇಕು. ಹಾಗೆಯೇ ಪ್ರಾಣಿ ಹಿಂಸೆಯಿರುವ ರೇಷ್ಮೆ ಉದ್ಯಮ, ಔಷಧಿ ಉದ್ಯಮ, ಕುಕ್ಕುಟ ಉದ್ಯಮ, ಮೀನುಗಾರಿಕೆ, ಪ್ರಾಣಿಗಳನ್ನು ಬಳಸಿ ನಡೆಸುವ ಕೃಷಿ, ಸಂಚಾರ, ಸಾಮಾನು-ಸರಂಜಾಮು ಸಾಗಾಣಿಕೆ, chicken-curryಚರ್ಮ ಉದ್ಯಮ, ಮುಖ್ಯವಾಗಿ ಗಣವೇಶದ ಬೆಲ್ಟ್ ಮತ್ತು ಬೂಟು ತಯಾರಿ ಮಾಡುವ ಚರ್ಮ ಉದ್ಯಮ ಇತ್ಯಾದಿಗಳ ಮೇಲೂ ನಿಷೇಧ ಹೇರಬೇಕು. ಇದೆಲ್ಲ ಬಿಟ್ಟು ಬರೀ ಒಂದೆರಡು ದಿನ ಮಾಂಸ ತಿನ್ನಬಾರದು ಅಂದರೆ ಹೇಗೆ?

ನಮ್ಮ ದೇಶದ ಸಂವಿಧಾನದಲ್ಲಿರುವ ಬದುಕಿನ ಸ್ವಾತಂತ್ರ್ಯ ಆಹಾರದ ಸ್ವಾತಂತ್ರ್ಯವನ್ನೂ ಒಳಗೊಂಡಿದೆ. ಕಾನೂನಿನ ಪ್ರಕಾರ, ಯಾರು ಏನು ತಿಂದು ಬದುಕಬೇಕು ಎಂಬುದನ್ನು ತೀರ್ಮಾನಿಸಲು ಮತ್ತೊಬ್ಬರಿಗೆ ತೀರ್ಮಾನಿಸಲು ಹಕ್ಕಿಲ್ಲ. ಸಸ್ಯಾಹಾರಿಗಳಿಗೆ ನೋವಾಗುವುದೆಂದು ಬಹುಜನರು ಮಾಂಸಾಹಾರ ತ್ಯಾಗ ಮಾಡಬೇಕಿದ್ದರೆ, ಸಸ್ಯಾಹಾರಿಗಳು ಮಾಂಸಾಹಾರಿಗಳ ಮೇಲೆ ಪ್ರೀತಿ ತೋರಿಸಿ ಒಂದೇ ಒಂದು ದಿನ ಮಾಂಸಾಹಾರ ತಿನ್ನಲು ಸಾಧ್ಯವೇ? ಇನ್ನು ಇವರ ಆಹಾರ ಭಯೋತ್ಪಾದನೆಯನ್ನು ಯಾವ ಜೈನರೂ, ಇತರೇ ಸಸ್ಯಾಹಾರಿಗಳೂ ಇದನ್ನು ಒಪ್ಪುವುದಿಲ್ಲ. ಇದು ಕೆಲವರನ್ನು ಹಲವರ ಮೇಲೆ ಎತ್ತಿ ಕಟ್ಟಿ ಪಡುವ ವಿಘ್ನ ಸಂತೋಷ; ಜನರನ್ನು ಆಹಾರದ ಹೆಸರಿನಲ್ಲೂ ಒಡೆದು ಆಳುವ ಹುನ್ನಾರ.

‘ಮ್ಲೇಚ್ಚ’ ರಿಂದ ಐದು ಬಿಲಿಯನ್ ಡಾಲರ್ – ಮೇಕ್ ಇನ್ ಇಂಡಿಯಾ

ಇಂದು ಕೋಟಿಗಟ್ಟಲೆ ಮನುಷ್ಯ ಜೀವಿಗಳನ್ನು ಬಳಸಿ , ಜೀತಮಾಡಿಸಿ ದಿನವೂ ಅವರ ರಕ್ತ ಕುಡಿದರೆ ಪರವಾಗಿಲ್ಲ baadoota-nonveg-meals-served-to-thousandsಆದರೆ ಕೋಳಿ ಕುರಿ ಮಾತ್ರ ತಿನ್ನಬಾರದು. ಹಾಗೆಯೇ ಮುಂಬೈ ಕಾಮಾಟಿಪುರದ ಹೆಣ್ಣುಮಕ್ಕಳ ‘ಮಾಂಸದ’ ಧಂದೆ (ಅಲ್ಲಿ ಧರ್ಮ ಜಾತಿ ಏನೂ ಇಲ್ಲ) ಅವ್ಯಾಹತವಾಗಿ ಸಾಗಬಹುದು; ಅದರಿಂದ ಸ್ತ್ರೀಯನ್ನು ಮಾತೆಯೆಂದು ಪೂಜಿಸುವ ಯಾವ ಧರ್ಮೀಯರಿಗೂ ನೋವಾಗುವುದಿಲ್ಲ. ಆದರೆ ಪ್ರಾಣಿಗಳ ಮಾಂಸದ ಮೇಲೆ ಮಾತ್ರ ನಿಷೇಧ. ಗೋವನ್ನು ಮಾತೆಯೆಂದು ಪೂಜಿಸುವ ನಮ್ಮ ದೇಶದಿಂದ ಗೋಮಾಂಸವನ್ನು “ಮ್ಲೇಚ್ಚ” ದೇಶಗಳಿಗೆ ರಫ್ತು ಮಾಡಿ ಪ್ರತಿ ವರ್ಷ ಐದು ಬಿಲಿಯನ್ ಡಾಲರ್ ಸಂಪಾದಿಸಬಹುದು; ಆದರೆ ಧರ್ಮವನ್ನು ರಕ್ಷಿಸಲು ನಮ್ಮ ಜನ ಐದು ದಿನ ತಮ್ಮ ದುಡ್ಡು ಕೊಟ್ಟು ತಮ್ಮ ಮನೆಗಳಲ್ಲಿ ಮಾಂಸ ತಿಂದು ಜೀವಿಸುವಂತಿಲ್ಲ.

ಇದನ್ನೇ ಬಹುಶಃ “ನಂಬಲಾಗದ (Incredible) ಇಂಡಿಯಾ” ಎನ್ನುವುದು!

ಸಿರಿಯಾ : ಬದುಕಬೇಕು ಮತ್ತು ಬದುಕಲು ಬಿಡಬೇಕು


– ಡಾ.ಎಸ್.ಬಿ. ಜೋಗುರ


ಸಿರಿಯಾ ಹೊತ್ತಿ ಉರಿಯುತ್ತಿದೆ. ಐಸಿಸ್ ಉಗ್ರರು ಮತ್ತು ಕುದ್ರಿಸ್‌ಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸಿರಿಯಾ ಬದುಕು ನರಕಸದೃಶವಾಗುತ್ತಿದೆ. ಸೇಡು ಮತ್ತು ಕ್ರೌರ್ಯ ಎನ್ನುವುದು ಕೇವಲ ಜನಜೀವನದ ಮೇಲೆ ಮಾತ್ರ ಬಯಲಾಗದೇ ಅಲ್ಲಿರುವ ಐತಿಹಾಸಿಕ ಸ್ಮಾರಕಗಳ ಮೇಲೂ ಬಯಲಾಗಿದೆ. ಅಲ್ಲಿರುವ ಅನೇಕ ಸ್ಮಾರಕಗಳನ್ನು ಪುಡಿ ಪುಡಿ ಮಾಡಲಾಗಿದೆ. ಅಲ್ಲಿಯ ಜನರಂತೂ ಎಲ್ಲಾದರೂ ಬೇರೆಡೆ ಬದುಕನಡೆ ಜೀವವೇ ಎಂದು ಸುತ್ತಮುತ್ತಲಿನ ಇತರೆ ಪ್ರದೇಶಗಳಿಗೆ ತೆರಳಿ ಹೊಸ ಜೀವನ ರೂಪಿಸಿಕೊಳ್ಳುವ ಭರಾಟೆಯಲ್ಲಿ ತಮ್ಮ ನೆಲೆಯನ್ನು ತೊರೆದು ಗ್ರೀಕ್ ನಡುಗಡ್ಡೆಗಳಿಗೆ ಸಮುದ್ರ ಮಾರ್ಗವಾಗಿ ತೆರಳುತ್ತಿದ್ದಾರೆ. ಹೀಗೆ ತೆರಳುವ ತವಕದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತಿವೆ. migrant-child-dead-beach-turkeyಹೇಗಾದರೂ ಮಾಡಿ ಆ ಸಂಘರ್ಷಮಯ ಪರಿಸರದಿಂದ ದೂರ ತೆರಳಿ ನೆಮ್ಮದಿಯ ನಿಟ್ಟುಸಿರು ಬಿಡಬೇಕೆಂದರೂ ಸಾಧ್ಯವಾಗುತ್ತಿಲ್ಲ. ಹೀಗೆ ಅಪಾರ ಪ್ರಮಾಣದಲ್ಲಿ ನಿರಾಶ್ರಿತರಾಗಿ ಹರಿದು ಬರುವದನ್ನು ನೆರೆಯ ರಾಷ್ಟ್ರಗಳು ಖುಷಿಯಿಂದ ಬರಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗೆ ತಂಡತಂಡವಾಗಿ ತಮ್ಮ ನೆಲೆಗಳನ್ನು ನಿರಾಶ್ರಿತರಾಗಿ ನುಗ್ಗುವ ಕ್ರಮದ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅನೇಕ ಬಗೆಯ ರೋಗರುಜಿನಗಳಿಗೆ ಈ ಬಗೆಯ ನಿರಾಶ್ರಿತರ ವಲಸೆ ಕಾರಣವಾಗಲಿದೆ ಎನ್ನುವದು ನೆರಯ ರಾಷ್ಟ್ರಗಳ ಅಭಿಮತ. ಈಚೆಗೆ ಗ್ರೀಕ್ ನಡುಗಡ್ಡೆ ಕೋಸ್ ನ್ನು ತಲುಪುವ ಬರಾಟೆಯಲ್ಲಿ ಸುಮಾರು 12 ಜನ ನಿರಾಶ್ರಿತರು ನೀರಲ್ಲಿ ಮುಳುಗಿ ಅಸುನೀಗಿರುವದಿದೆ. ಅದರಲ್ಲಿ 3 ವರ್ಷದ ಒಬ್ಬ ಬಾಲಕ ಮತ್ತು 5 ವರ್ಷದ ಇನ್ನೊಬ್ಬ ಬಾಲಕ ಇಬ್ಬರೂ ಸಹೋದರರು ಅಸುನೀಗಿದ್ದು ಮನಕಲಕುವಂತಿದೆ. ಬಾಲ್ಯದ ಖುಷಿಯ ಪರಿಚಯವೂ ಆಗದೇ ಅಸು ನೀಗಿದ ಆ ಮಕ್ಕಳು ಯಾವ ತಪ್ಪಿಗಾಗಿ ಈ ಬಗೆಯ ಸ್ಥಿತಿಯನ್ನು ಅನುಭವಿಸಬೇಕಾಯಿತು..? ಈ ಬಗೆಯ ಸನ್ನಿವೇಶಗಳನ್ನು ಮುಂದಿಟ್ಟುಕೊಂಡೇ ಬರ್ಟಂಡ್ ರಸಲ್ ರಂಥಾ ಚಿಂತಕರು ದೇವರ ಅಸ್ಥಿತ್ವದ ಬಗ್ಗೆ ಸಂಶಯ ಪಡುವದಿತ್ತು. ಯಾವ ತಪ್ಪನ್ನೂ ಮಾಡದ ಈ ಮಕ್ಕಳಿಗೇಕೆ ಶಿಕ್ಷೆ ಎಂದು ರಸಲ್ ಮತ್ತೆ ಮತ್ತೆ ಕೇಳುವದಿತ್ತು.ಆತನ ನಾಸ್ತಿಕತೆಗೆ ಈ ಬಗೆಯ ಘಟನೆಗಳು ಇನ್ನಷ್ಟು ಪುಷ್ಟಿ ಕೊಟ್ಟಂತಿತ್ತು. ಹೇಗಾದರೂ ಮಾಡಿ ಬೇರೆ ಎಲ್ಲಾದರೂ ತೆರಳಿ ಬದುಕಿ siriya-migrantsಉಳಿಯಬೇಕೆಂದು ಬಯಸಿ ದಡದಲ್ಲಿ ಸಿಕ್ಕ ದೋಣಿಗಳನ್ನು ಹತ್ತಿ ಪ್ರಯಾಣ ಬೆಳೆಸಿದ ಇವರು ಮೂಲತ: ಉತ್ತರ ಸಿರಿಯಾದ ಪಟ್ಟಣ ಕೊಬಾನಿಯ ನಿವಾಸಿಗಳು. ಅಲ್ಲಿಯ ಪರಿಸ್ಥಿತಿ ಈ ಮಕ್ಕಳನ್ನು ಅಲ್ಲಿಂದ ಕಾಲು ಕೀಳುವಂತೆ ಮಾಡಿತ್ತು. ದುರಂತವೆಂದರೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಹಂಬಲದಲ್ಲಿ ಊರು ತೊರೆದ ಈ ಬಾಲಕರು ತಲುಪಬೇಕೆಂದುಕೊಂಡ ನೆಲೆಯನ್ನು ತಲುಪಲಾಗದೇ ಗ್ರೀಕ್ ನಡುಗಡ್ಡೆ ಕೊಸ್ ನ್ನು ತಲುಪಲಾಗದೇ ನೀರಲ್ಲಿ ಮುಳುಗಿ ಅಸುನೀಗಿರುವದಿದೆ.

ಸಿರಿಯಾದಲ್ಲಿ ಆವೃತವಾಗಿರುವ ಯುದ್ಧದ ವಾತಾವರಣ ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡುವ ಸ್ಥಿತಿಯಲ್ಲಿಲ್ಲ. ಐಶಿಷ ಉಗ್ರರು ಇಡೀ ಸಿರಿಯಾ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸುವದು ಮಾತ್ರವಲ್ಲದೇ ಅಲ್ಲಿಯ ಬದುಕನ್ನೇ ರೌರವ ನರಕ ಮಾಡಹೊರಟಿದ್ದಾರೆ. ಅದರ ಭೀಕರತೆಯನ್ನು ಸಹಿಸಲಾಗದೇ ತಮ್ಮ ನೆಲೆಯನ್ನು ಬಿಟ್ಟು ನಿರಾಶ್ರಿತರಾಗಿ ಬೇರೆಡೆ ತೆರಳುತ್ತಿದ್ದಾರೆ. ದಿನಾಲು ಈ ನಡುಗಡ್ಡೆಗಳಿಗೆ ನಿರಾಶ್ರಿತರಾಗಿ ಬರುವವರ ಪ್ರಮಾಣ ಸಾವಿರ ಸಾವಿರ ಮಟ್ಟದಲ್ಲಿದೆ. ಲೆಸ್ಬೊಸ್ ಎನ್ನುವ ಪ್ರಾಂತದಲ್ಲಿಯೇ ಸುಮಾರು 15 ಸಾವಿರಕ್ಕಿಂತಲೂ ಹೆಚ್ಚಿನ ಪ್ರಮಾಣದ ನಿರಾಶ್ರಿತರಿದ್ದಾರೆ. ಮೆಸಿಡೋನಿಯಾ, ಸರ್ಬಿಯಾ, ಹಂಗೇರಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿಯೂ ಇದೇ ರೀತಿಯ ನಿರಾಶ್ರಿತರ ತಲೆನೋವು ಆರಂಭವಾಗಿದೆ. ಗ್ರೀಸ್ ನಡುಗಡ್ಡೆಗಳ ಮೇಲೆ ಅಸಂಖ್ಯಾತ ಪ್ರಮಾಣದ ನಿರಾಶ್ರಿತರು ವಲಸೆ ಬರುತ್ತಿದ್ದಾರೆ. ಹೀಗೆ ನಿರಾಶ್ರಿತರಾಗಿ ಬರುವವರಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದು ಕೂಡಾ ಸಾಧ್ಯವಾಗುತ್ತಿಲ್ಲ ಹೀಗಾಗಿ ನಿರಾಶ್ರಿತರ ಜನಜಂಗುಳಿ ಅನಾರೋಗ್ಯಕರ ಪರಿಸರದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಜೊತೆಗೆ ಮೆಡಿಟರೇನಿಯನ್ ಮೂಲಕ ಯುರೋಪಗೆ ತೆರಳುವಾಗ ಸುಮಾರು 2500 ರಷ್ಟು ನಿರಾಶ್ರಿತರು ಅಸುನೀಗಿರುವದಿದೆ ಎಂದು ಗಾರ್ಡಿಯನ್ ಎಂಬ ಪತ್ರಿಕೆ ವರದಿ ಮಾಡಿರುವದಿದೆ. siriya-tragedyಕಾಸ್ ಮತ್ತು ಲೆಸ್ಬಾಸ್ ನಡುಗಡ್ದೆಯಲ್ಲಿ ಬಂದಿಳಿಯುವ ನಿರಾಶ್ರಿತರಾಗಿ ಅನೇಕ ಬಗೆಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಲ್ಲಿಯ ಸರಕಾರಗಳು ಯತ್ನಿಸುತ್ತಿವೆಯಾದರೂ ಸಂಪೂರ್ಣವಾಗಿ ಅವರಿಗೆ ಅವಶ್ಯಕತೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

ಸಿರಿಯಾದಂಥಾ ನೆಲೆಗಳು ಮನುಷ್ಯರಾದವರು ವಾಸಿಸಲು ಯೋಗ್ಯವಲ್ಲ ಎನ್ನುವ ಸ್ಥಿತಿಯನ್ನು ತಲುಪಿದಂತಾಗಿದೆ. ಇಲ್ಲಿಯ ಜನರಿಗೆ ಎಲ್ಲಾದರೂ ನೆರೆಯ ಪ್ರದೇಶಗಳಲ್ಲಿ ಬದುಕಿ ಉಳಿಯುವದೇ ಒಂದು ಜೀವನದ ಮಹತ್ತರವಾದ ಗುರಿಯಂತಾಗಿದೆ. ಆ ಬದಿಯ ದಡ ತಲುಪುವ ಬಗ್ಗೆ ಯಾವ ಭರವಸೆಗಳೂ ಇಲ್ಲದಿರುವಾಗಲೂ ರಿಶ್ಕ್ ತೆಗೆದುಕೊಂಡು ತೆರಳುತ್ತಿದ್ದಾರೆ. ಹಾಗೆ ತೆರಳುವಾಗ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತಿವೆ. ಪ್ರಥಮ ಮತ್ತು ದ್ವಿತೀಯ ಜಾಗತಿಕ ಮಹಾಯುದ್ಧಗಳ ಸಂದರ್ಭದಲ್ಲಿ ಜರ್ಮನಿಯಿಂದ ನಿರಾಶ್ರಿತರಾಗಿ ವಲಸೆ ಹೋಗುವವರಿಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಬರ ಮಾಡಿಕೊಂಡವು. ಆಗಿನ ಸಂದರ್ಭವನ್ನು ಈಗ ನೆನೆಪಿಸಿ ಜರ್ಮನಿ ಮತ್ತು ಇತರ ಯುರೋಪಿನ ನೆಲೆಗಳಿಗೆ ನೀವು ಹಾಗೆ ಸಿರಿಯಾದಿಂದ ನಿರಾಶ್ರಿತರಾಗಿ ಬರುವವರನ್ನು ಯಾಕೆ ಸ್ವಾಗತಿಸಬಾರದು ಎಂದು ಕೇಳುವ ಪರಿಸ್ಥಿತಿಯೂ ಈಗ ಉಳಿದಿಲ್ಲ. ವಲಸೆ ಬರುವವರ ಧರ್ಮ, ಭಾಷೆ, ಜನಾಂಗಗಳು ಈಗ ತೀರಾ ಮುಖ್ಯವಾಗತೊಡಗಿವೆ. ಮುಂಚಿನಂತೆ ಮಾನವೀಯ ನೆಲೆಯಲ್ಲಿ ನಿರಾಶ್ರಿತರನ್ನು ಬರಮಾಡಿಕೊಳ್ಳುವಷ್ಟು ಸದ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಅಷ್ಟೊಂದು ಸಲೀಸಾಗು ಉಳಿದಿಲ್ಲ. ಧರ್ಮ ಎನ್ನುವುದು ಈಗ ಕೇವಲ ಆಚರಣೆ ಮತ್ತು ಅನುಸರಣೆಯ ಮಾರ್ಗವಾಗಿ ಮಾತ್ರ ಉಳಿಯದೇ ಆ ಮಿತಿಯನ್ನು ಮೀರುವ ಮೂಲಕ ಸಂದಿಗ್ದವಾದ ಸ್ಥಿತಿಯನ್ನು ಅವು ತಲುಪುತ್ತಿವೆ. ಇಂದು ಧರ್ಮಗಳು ಮಾನವೀಯ ಪ್ರೀತಿ ಮತ್ತು ದಯೆಯನ್ನು ಹಂಚುವ ಬದಲಾಗಿ ದ್ವೇಷ ಮತ್ತು ಭಯವನ್ನು ಸೃಷ್ಟಿಸುವ ಸಂಗತಿಗಳಾಗಿ ಕೆಲಸ ಮಾಡುತ್ತಿವೆ. ಮನುಷ್ಯ ಎಷ್ಟೇ ಉನ್ನತವಾದ ಮಾರ್ಗವಾಗಿ ಮಾತ್ರ ಉಳಿಸಾಧನೆಯನ್ನು ಮಾಡಿದ ಮೇಲೂ ನೆಮ್ಮದಿಯಿಂದ ಬದುಕುವ ಮತ್ತು ಬದುಕಲು ಬಿಡುವ ಗುಣವನ್ನು ಮಾತ್ರ ಕಲಿಯಲಿಲ್ಲ.