Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಸಂಘ ಪರಿವಾರ – ಹಿಂದೂ, ಹಿಂದುತ್ವ, ಹಿಂದೂಯಿಸಂ: ಮತೀಯವಾದಿ ಕುಟುಂಬ

ಟಿ ಬಿ.ಶ್ರೀಪಾದ ಭಟ್

ಹಿಂದುಸ್ತಾನದ ಈ ಮಾತೃಭೂಮಿಯನ್ನು ಯಾರು ಪಿತೃಭೂಮಿ ಮತ್ತು ಪವಿತ್ರಭೂಮಿಯನ್ನಾಗಿ ಮಾಡಿಕೊಂಡಿರುತ್ತಾರೋ ಅವರು ಮಾತ್ರ ಹಿಂದೂಗಳು.ಈ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳದ ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರು ಹಿಂದುಸ್ತಾನಕ್ಕೆ ಸೇರಿದವರಲ್ಲ– ವಿ.ಡಿ.ಸಾವರ್ಕರ್

ಹಿಂದುಸ್ತಾನದಲ್ಲಿರುವ ವಿದೇಶಿ ಜನಾಂಗಗಳು ( ಮುಸ್ಲಿಂರು,ಕ್ರೈಸ್ತರು) ಇಲ್ಲಿನ ಹಿಂದೂ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಹಿಂದೂ ಧರ್ಮಕ್ಕೆ ಗೌರವ ತೋರಿಸಬೇಕು. ಒಂದು ಧ್ವಜ,ಒಬ್ಬನೇ ನಾಯಕ,ಒಂದೇ ಸಿದ್ಧಾಂತ ಇದು ಆರೆಸೆಸ್ ಮೂಲಮಂತ್ರ. ಇದು ದೇಶದ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ– ಗೋಲ್ವರ್ಕರ್.

ಇಂಗ್ಲೆಂಡ್ ನ ನಿವಾಸಿಗಳು ಇಂಗ್ಲೀಷರು, ಜರ್ಮನಿಯ ನಿವಾಸಿಗಳು ಜರ್ಮನ್ನರು, ಅಮೇರಿಕಾದ ನಿವಾಸಿಗಳು ಅಮೇರಿಕನ್ನರು ಎಂದು ಒಪ್ಪಿಕೊಳ್ಳಬಹುದಾದರೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು…ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲದಿದ್ದರೆ ಭಾರತೀಯರೆಲ್ಲರೂ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜದ ನಿರ್ಮಾಣ ಅತ್ಯಗತ್ಯ — ಮೋಹನ್ ಭಾಗವತ್.

ಬಜರಂಗದಳವು ಹಿಂದೂಗಳನ್ನು ರಕ್ಷಿಸುವ ಸಂದರ್ಭದಲ್ಲಿ ಅವಶ್ಯಕತೆ ಉಂಟಾದಗಲೆಲ್ಲ ಹಿಂಸೆಯನ್ನು ಬಳಸಿಕೊಳ್ಳುತ್ತದೆ. ಹಾವು ನಮ್ಮನ್ನು ಕಚ್ಚಿದಾಗ ನಾವು ಅದನ್ನು ಸಾಯಿಸುವುದಿಲ್ಲವೇ? –ಸುಭಾಷ್ ಚೌಹಾಣ್, ಬಜರಂಗದಳದ ನಾಯಕ.

ಯುಪಿಎ ಸರ್ಕಾರವು ಬೀಫ್ ರಫ್ತಿನ ಮೂಲಕ ಪಿಂಕ್ ರೆವಲ್ಯೂಷನ್ ಅನ್ನು ಜಾರಿಗೊಳಿಸುತ್ತಿದೆ – ನರೇಂದ್ರ ಮೋದಿ.

ಒಂದು ವೇಳೆ ಹಿಂದೂ ರಾಜ್ ಎನ್ನುವ ಸಿದ್ಧಾಂತ ಅನುಷ್ಠಾನಗೊಂಡರೆ ಇದು ಈ ದೇಶದ ಬಲು ದೊಡ್ಡ ದುರ್ಘಟನೆ. ಹಿಂದೂಗಳು ಏನಾದರೂ ಹೇಳಿಕೊಳ್ಳಲಿ ಹಿಂದೂಯಿಸಂ ಸ್ವಾತಂತ್ರಕ್ಕೆ, ಸಮಾನತೆಗೆ, ಸಹೋದರತ್ವಕ್ಕೆ ಬಲು ದೊಡ್ಡ ಅಪಾಯ. ಹಿಂದೂ ರಾಜ್ ಅನ್ನು ಯಾವುದೇ ಬೆಲೆ ತೆತ್ತಾದರೂ ತಡೆಗಟ್ಟಬೇಕು– ಡಾ.ಬಿ.ಆರ್.ಅಂಬೇಡ್ಕರ್

ಮೇ 6, 1945ರಂದು ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಷನ್ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡುತ್ತಾ ಅಂಬೇಡ್ಕರ್ ಅವರು ಹೇಳುತ್ತಾರೆ “ಇಂಡಿಯಾದಲ್ಲಿ ಬಹುಸಂಖ್ಯಾತರೆಂದರೆ ರಾಜಕೀಯ ಬಹುಸಂಖ್ಯಾತರಲ್ಲ. ಇಂಡಿಯಾದಲ್ಲಿ ಬಹುಸಂಖ್ಯಾತ ತತ್ವವನ್ನು ವ್ಯಕ್ತಿಯ ಹುಟ್ಟಿನ ನೆಲೆಯಿಂದ ನಿರ್ಧರಿಸಲಾಗುತ್ತದೆ. ಇದು ರಾಜಕೀಯ ಬಹುಸಂಖ್ಯಾತರು ಮತ್ತು ಮತೀಯ ಬಹುಸಂಖ್ಯಾತರು ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ರಾಜಕೀಯ ಬಹುಸಂಖ್ಯಾತ ತತ್ವವು ಶಾಶ್ವತವಲ್ಲ. ಅದು ತಾತ್ಕಾಲಿಕವಾಗಿರುತ್ತದೆ. ಈ ಮಾದರಿಯ ಬಹುಸಂಖ್ಯಾತ ತತ್ವವು ಕಟ್ಟಲ್ಪಡುತ್ತದೆ, ಮುರಿಯಲ್ಲಡುತ್ತದೆ, ಮರಳಿ ಕಟ್ಟಲ್ಪಡುತ್ತದೆ. ಆದರೆ ಮತೀಯ ಬಹುಸಂಖ್ಯಾತ ತತ್ವವು ಒಂದು ನಿರ್ದಿಷ್ಟ ಗ್ರಹಿಕೆಯ ನೆಲೆಯಲ್ಲಿ ರೂಪಿಸಲಾಗುತ್ತದೆ ಮತ್ತು ಇದು ಶಾಶ್ವತವಾಗಿರುತ್ತದೆ. ಇದನ್ನು ನಾಶಪಡಿಸಬಹುದು. ಆದರೆ ಪರಿವರ್ತಿಸಲಾಗುವುದಿಲ್ಲ. ನಿರಂಕುಶ (absolute) ಮಾದರಿಯ ಬಹುಸಂಖ್ಯಾತ ತತ್ವವನ್ನು ತಿರಸ್ಕರಿಸಿ ಸಾಪೇಕ್ಷತೆಯ (relative) ಆಧಾರದ ಬಹುಸಂಖ್ಯಾತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ನಾನು ಹಿಂದೂಗಳನ್ನು ಕೇಳಿಕೊಳ್ಳುತ್ತೇನೆ. ಇದನ್ನು ಒಪ್ಪಿಕೊಳ್ಳದೆ ಹೋದರೆ ಅಲ್ಪಸಂಖ್ಯಾತರು ಇಂಡಿಯಾದ ಸ್ವಾತಂತ್ರವನ್ನು ತಡೆಹಿಡಿದಿದ್ದಾರೆ ಎನ್ನುವ ವಾದಕ್ಕೆ ಸಮರ್ಥನೆ ದೊರಕುವುದಿಲ್ಲ. ಈ ಮಾದರಿಯ ತಪ್ಪಾದ ಪ್ರಚಾರವು ಫಲ ಕೊಡಲಾರದು.”

ಸಂಘ ಪರಿವಾರ

ಆರೆಸ್ಸಸ್ – ಹಿಂದುತ್ವ ಐಡಿಯಾಜಿಯ ಮಾತೃ ಸಂಘಟನೆ. ( ಹೈಕಮಾಂಡ್)

ಬಿಜೆಪಿ – ರಾಜಕೀಯ ಪಕ್ಷ, ವಿ ಎಚ್ ಪಿ – ಧಾರ್ಮಿಕ ಘಟಕ, ಬಜರಂಗದಳ – ಮಿಲಿಟೆಂಟ್ ಘಟಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ – ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್- ಸಾಹಿತ್ಯ ಕ್ಷೇತ್ರ, ದೀನ ದಯಾಳ್ ಸಂಶೋಧನ ಸಂಸ್ಥೆ, ಸೇವಾ ಭಾರತಿ, ವಿದ್ಯಾ ಭಾರತಿ, ಶಿಕ್ಷ ಭಾರತಿ, ಸರಸ್ವತಿ ವಿದ್ಯಾಮಂದಿರ, ಸರಸ್ವತಿ ಶಿಶುಮಂದಿರ, ವನವಾಸಿ ಕಲ್ಯಾಣ ಆಶ್ರಮ – ಬುಡಕಟ್ಟು ಜನರಿಗಾಗಿ, ಏಕಲ ವಿದ್ಯಾಲಯ, ವಿಕಾಸ ಭಾರತಿ, ಸಂಸ್ಕೃತ ಭಾರತಿ, ಜನಸೇವಾ ವಿದ್ಯಾಕೇಂದ್ರ, ಭಾರತೀಯ ಇತಿಹಾಸ ಸಂಕಲನಾ ಯೋಜನೆ, ರಾಷ್ಟ್ರೋತ್ಥಾನ ಸಾಹಿತ್ಯ, ವಿವೇಕಾನಂದ ಕೇಂದ್ರ, ಸ್ವದೇಶಿ ಜಾಗರಣ ಮಂಚ್, ಹಿಂದೂ ಜಾಗರಣ ಮಂಚ್, ಭಾರತ ವಿಕಾಸ್ ಪರಿಷತ್, ಭಾರತೀಯ ಮಜ್ದೂರ ಸಂಘ, ಭಾರತೀಯ ಕಿಸಾನ ಸಂಘ, ರಾಷ್ಟ್ರೀಯ ಸೇವಿಕಾ ಸಮಿತಿ.

ಅನಿವಾಸಿ ಭಾರತೀಯರಿಗಾಗಿ

ಭಾರತೀಯ ಸ್ವಯಂ ಸೇವಕ ಸಂಘ, ಹಿಂದೂ ಸ್ವಯಂ ಸೇವಕ ಸಂಘ, Overseas Friends of the BJP, ವಿ ಎಚ್ ಪಿ ಅಮೇರಿಕ, IDR

ಮೇಲ್ನೋಟಕ್ಕೆ ಅಬ್ಬರದಿಂದ ಸದಾ ದ್ವೇಷದ ಧ್ವನಿಯಲ್ಲಿ ಮಾತನಾಡುವ ಆರೆಸ್ಸಸ್ ಗೆ ಯಾವುದೇ ರೀತಿಯ ಜನ ಬೆಂಬಲವಿಲ್ಲ. RSS_meeting_1939ಆರೆಸ್ಸಸ್ ನಲ್ಲಿ ಜನನಾಯಕರಿಲ್ಲ. ಇತಿಹಾಸದ ಅನ್ಯಾಯಗಳಿಗೆ ಪ್ರತೀಕಾರವನ್ನು ತೀರಿಸಿಕೊಳ್ಳಬೇಕು ಎಂದು ದ್ವೇಷದ ಚಿಂತನೆಯನ್ನು ಬೋಧಿಸುವ ಆರೆಸ್ಸಸ್ ಹೊಸತನ್ನು ಚಿಂತಿಸಲು ನಿರಾಕರಿಸುತ್ತದೆ. ಜೀವಪರ ಆಧುನಿಕ ಚಿಂತನೆಗಳನ್ನು, ಅರ್ಥಪೂರ್ಣ ಬದಲಾವಣೆಗಳನ್ನು ತಿರಸ್ಕರಿಸುವ ಆರೆಸ್ಸಸ್ ಸ್ವತಃ ತನ್ನ ದೇಶದಲ್ಲಿಯೇ ಯಾವುದೇ ನೆಲೆಯಿಲ್ಲದ ಒಂದು ಮತೀಯವಾದಿ ಸಂಘಟನೆ. ಜನಸಾಮಾನ್ಯರ ಪಾಲಿಗೆ ಎಂದೋ ತಿರಸ್ಕೃತಗೊಂಡ ಗೋಳ್ವಲ್ಕರ್, ಸಾವರ್ಕರ್ರಂತಹವರ ಫ್ಯಾಸಿಸ್ಟ್ ಚಿಂತನೆಯನ್ನು ಎಂಬತ್ತು ವರ್ಷಗಳಿಂದ ಆರಾಧಿಸುತ್ತಿರುವ ಆರೆಸ್ಸಸ್ ತನ್ನೊಳಗೆ ಸಂಪೂರ್ಣವಾಗಿ ಟೊಳ್ಳಾದ, ದಿವಾಳಿಯಾದ, ಕೇವಲ ಕರ್ಮಠ ನೀತಿಗಳನ್ನು ನಂಬುವ ಬೌದ್ಧಿಕ ವಲಯವನ್ನು ಬೆಳೆಸಿಕೊಂಡಿದೆ. ವ್ಯಕ್ತಿ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯಾತೀತತೆ, ಧರ್ಮನಿರಪೇಕ್ಷತೆ ಎನ್ನುವ ಪದಗಳು ಮತ್ತು ಜೀವನ ಕ್ರಮವನ್ನು ಆರೆಸ್ಸಸ್ ತಿರಸ್ಕರಿಸುತ್ತದೆ ಮತ್ತು ಸಂಪೂರ್ಣವಾಗಿ ನಿಷೇದಿಸುತ್ತದೆ. ಮಾತೃಭೂಮಿಯ ಕುರಿತಾಗಿ ಭಾವೋದ್ರೇಕದಿಂದ ಮಾತನಾಡುವ ಆರೆಸ್ಸಸ್ ಮಾತೃಭೂಮಿಯನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಲು ನಡೆದ ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೇ ಇಲ್ಲ. ಆ ಸಂದರ್ಭದಲ್ಲಿ ವಿತಂಡವಾದದಿಂದ ವರ್ತಿಸಿದ ಆರೆಸ್ಸಸ್ ಹಿಟ್ಲರ್ ನ ನಾಜಿ ಪಕ್ಷವನ್ನು ಬೆಂಬಲಿಸಿತು.

ಆರೆಸ್ಸಸ್ ಸಂಘಟನೆಯು ‘ಭಗವದ್ವಜ’ವನ್ನು ತನ್ನ ಅಧಿಕೃತ ಧ್ವಜವನ್ನಾಗಿ ಆರಿಸಿಕೊಂಡಿದೆ. ಓಂ, ಸ್ವಸ್ತಿಕ್, ಖಡ್ಗದ ಚಿತ್ರವಿರುವ ಕೇಸರಿ ಧ್ವಜವೇ ಹಿಂದೂ ರಾಷ್ಟ್ರದ ಧ್ವಜವಾಗಲಿದೆ. ಅದು ವೇದ ಕಾಲಗಳ ಸನಾತನ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ಸಾವರ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದರು. ಬೇರೆ ಸಮುದಾಯಗಳಿಗೆ, ಅನ್ಯಧರ್ಮೀಯರಿಗೆ ವಂದೇ ಮಾತರಂ ಹಾಡಬೇಕೆಂದು ಆಗ್ರಹಿಸುವ ಆರೆಸ್ಸಸ್ ತನ್ನ ಬೈಠಕ್ ಗಳಲ್ಲಿ, ಪ್ರತಿಯೊಂದು ಸಭೆಗಳಲ್ಲಿ, ಚಿಂತನಮಂಥನಗಳಲ್ಲಿ ಹಾಡುವುದು ಹೆಡ್ಗೇವಾರ್, ಗೋಳ್ವಲ್ಕರ್ ಮಾರ್ಗದರ್ಶನದಲ್ಲಿ ನಾರಾಯಣ ಭಿಡೆ ಸಂಸ್ಕೃತದಲ್ಲಿ ರಚಿಸಿದ ನಮಸ್ತೆ ಸದಾ ವತ್ಸಲೆ, ಮಾತೃಭೂಮಿ, ತ್ವಯಾ ಹಿಂದೂಭೂಮಿ ಎಂದು ಪ್ರಾರಂಭವಾಗುವ ಮತೀಯವಾದಿ ಪ್ರಾರ್ಥನಾ ಗೀತೆಯನ್ನು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರೆಸ್ಸಸ್ ಮೂರು ಬಾರಿ ನಿಷೇಧಕ್ಕೆ ಒಳಗಾಗಿತ್ತು.

1948ರಲ್ಲಿ ಮಹಾತ್ಮ ಗಾಂಧಿಯನ್ನು ಇದರ ಸಹಯೋಗಿ ಸಂಘಟನೆ ‘ಹಿಂದೂ ಮಹಾ ಸಭಾ’ದ ಸದಸ್ಯ ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದಾಗ 1948 ಇದರ ಚಟುವಟಿಕೆಗಳನ್ನು ನಿಷೇಧಿಸಲಾಯಿತು.

1975-1977 ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆರೆಸ್ಸಸ್ ನಿಷೇಧಕ್ಕೆ ಒಳಗಾಗಿತ್ತು.

1993ರ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ನಿಷೇಧಕ್ಕೆ ಒಳಗಾಗಿತ್ತು.

2006ರಲ್ಲಿ ಮಾಲೆಗಾವ್ ನಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ( 30 ಜನರ ಸಾವು), 2007ರಲ್ಲಿ ಸಂಜೋತ ಎಕ್ಸಪ್ರೆಸ್ ಸ್ಪೋಟ ( 60 ಜನರ ಸಾವು), 2007ರಲ್ಲಿ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಪೋಟ (24 ಜನರ ಸಾವು), 2007ರಲ್ಲಿ ಅಜ್ಮೀರ ದರ್ಗಾ ಸ್ಪೋಟ( 3 ಜನರ ಸಾವು) ಈ ಎಲ್ಲಾ ಭಯೋತ್ಪಾದನೆಯ ದುಷ್ಕೃತ್ಯಗಳ ಹಿಂದೆ ಆರೆಸ್ಸಸ್ ನ ಕೈವಾಡವಿದೆ, ಇದರೊಂದಿಗೆ ಇತರೆ ಹಿಂದುತ್ವ ಗುಂಪುಗಳು ಕೈಜೋಡಿಸಿವೆ ಎಂದು ಆರೆಸ್ಸಸ್ನ ಹಿರಿಯ ಸದಸ್ಯ ಸ್ವಾಮಿ ಅಸ್ಸೀಮಾನಂದ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೆಯ ಹೇಳಿಕೆ ಕೊಟ್ಟಿದ್ದ. ಈ ದುಷ್ಕೃತ್ಯಗಳ ತನಿಖೆ ನಡೆಸುತ್ತಿರುವ ತನಿಖಾ ತಂಡ ಈ ಭಯೋತ್ಪಾದನೆಯ ಆರೋಪಕ್ಕೆ ಗುರಿಯಾಗಿರುವ ಅಸ್ಸೀಮಾನಂದ, ಸಾಧ್ವಿ ಪ್ರಜ್ಞಾಸಿಂಗ್, ಲೆ.ಕರ್ನಲ್ ಪುರೋಹಿತ್, ಚಂದ್ರಪ್ರತಾಪ್ ಸಿಂಗ್ ಠಾಕೂರ್ ಇನ್ನೂ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದೆ. ವಿಚಾರಣೆ ಮುಂದುವರೆಯುತ್ತಿದೆ.

ಇನ್ನು ಕಳೆದ ಐವತ್ತು ವರ್ಷಗಳಲ್ಲಿ ಆರೆಸಸ್ ನ ಬಲಿಷ್ಠ ಅಂಗ ಪಕ್ಷಗಳಾದ ಬಿಜೆಪಿ, ಬಜರಂಗದಳ, ವಿ ಎಚ್ ಪಿಗಳು ನಡೆಸಿದ ಹಿಂಸಾಚಾರ, ಮತೀಯ ಗಲಭೆಗಳು, ಹತ್ಯಾಕಾಂಡಗಳ ಕುರಿತಾಗಿ ತನಿಖೆ ನಡೆಸಿದ, ನಡೆಸುತ್ತಿರುವ ಕೆಲವು ಆಯೋಗಗಳ ವಿವರ ಈ ರೀತಿ ಇದೆ

1969ರಲ್ಲಿ ಅಹಮದಾಬಾದ್ನಲ್ಲಿ ನಡೆದ ಗಲಭೆೆಗಳ ತನಿಖೆಗಾಗಿ ಜಗಮೋಹನ್ ರೆಡ್ಡಿ ಕಮಿಷನ್, 1970ರಲ್ಲಿ ಭಿವಂಡಿಯಲ್ಲಿ ನಡೆದ ಕೋಮು ಗಲಭೆಗಳ ತನಿಖೆಗಾಗಿ ಮದನ್ ಕಮಿಷನ್, 1971ರಲ್ಲಿ ತೆಲ್ಲಿಚೆರಿ ಕೋಮು ಗಲಭೆಗಳ ತನಿಖೆಗಾಗಿ ವಿಠ್ಯಾತಿಲ್ ಕಮಿಷನ್, 1979ರಲ್ಲಿ ಜೆಮ್ಶೆಡ್ಪುರನಲ್ಲಿ ನಡೆದ ಗಲಭೆಗಳ ತನಿಖೆಗಾಗಿ ಜಿತೇಂದ್ರ ನಾರಾಯಣ ಕಮಿಷನ್, 1982ರಲ್ಲಿ ಕನ್ಯಾಕುಮಾರಿಯಲ್ಲಿ ನಡೆದ ಕೋಮು ಗಲಬೆಗಳ ತನಿಖೆಗಾಗಿ ಪ.ವೇಣುಗೋಪಾಲ್ ಕಮಿಷನ್, ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಹತ್ಯಾಕಾಂಡದ ಸಂಬಂಧ ಲಿಬರ್ ಹಾನ್ ಕಮಿಷನ್ ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನು ಮತ್ತು 2002ರ ಗುಜರಾತ್ ಹತ್ಯಾಕಾಂಡದ ಸಂಬಂಧದ ತನಿಖೆಗಳು ಇಂದಿಗೂ ಪ್ರಗತಿಯಲ್ಲಿವೆ.

ಈ ಆರೆಸ್ಸಸ್ ಸಂಘಟನೆಯನ್ನು ಒಂದು ಸೀಕ್ರಟ್ ಸೊಸೈಟಿ ಎಂದು ಹೇಳಿದ ನೆಹರೂ ಅವರು ಮುಂದುವರೆದು ಆರೆಸ್ಸಸ್ ಮೂಲಭೂತವಾಗಿ ಸಾರ್ವಜನಿಕ ಮುಖವಾಡವನ್ನು ಹೊಂದಿದ ಒಂದು ಸೀಕ್ರೆಟ್ ಸಂಸ್ಥೆ. ಈ ಆರೆಸ್ಸಸ್ ಸಂಸ್ಥೆಯಲ್ಲಿ ಸದಸ್ಯರಿಲ್ಲ, ನೊಂದಣಿ ಇಲ್ಲ, ಅಸಂಖ್ಯಾತ ದೇಣಿಗೆಯನ್ನು ಪಡೆಯುತ್ತಿದ್ದರೂ ಅಲ್ಲಿ ಲೆಕ್ಕಪತ್ರಗಳಿಲ್ಲ, ಆರೆಸ್ಸಸ್ ಸಂಘಟನೆಗೆ ಶಾಂತಿಯುತ ವಿಧಾನಗಳಲ್ಲಿ ನಂಬಿಕೆ ಇಲ್ಲ ಇದು ಸತ್ಯಾಗ್ರಹ ನೀತಿಗೆ ವಿರೋಧಿ. ಸಾರ್ವಜನಿಕವಾಗಿ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗಿ ಖಾಸಗಿಯಾಗಿ ನಡೆದುಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ನಿಜಕ್ಕೂ ಆರೆಸ್ಸಸ್ ಒಂದು ಸೀಕ್ರೆಟ್ ಸೊಸೈಟಿ. ಹಿಂದೂ ರಾಷ್ಟ್ರ ನಿರ್ಮಾಣ ಎನ್ನುವುದು ಆರೆಸ್ಸಸ್ ನ ಸಾರ್ವಜನಿಕ ಅಜೆಂಡವಾದರೆ ಅದರ ಗುಪ್ತ ಅಜೆಂಡ ಇಂದಿಗೂ ರಹಸ್ಯಮಯವಾಗಿದೆ. ವರ್ಣಾಶ್ರಮದ ಶ್ರೇಣೀಕೃತ ಸಮಾಜದ ಕನಸನ್ನು ಕಾಣುತ್ತಿರುವ ಆರೆಸ್ಸಸ್ ಅದರ ಅನುಷ್ಠಾನಕ್ಕಾಗಿ ಕಳೆದ ಎಂಬತ್ತು ವರ್ಷಗಳ ಕಾಲ ತನ್ನ ಇಡೀ ಸಂಘಟನೆಯನ್ನು ಒಂದು ಸೀಕ್ರೆಟ್ ಸೊಸೈಟಿ ಮಾದರಿಯಲ್ಲಿ ರೂಪಿಸಿತು. ಇಂದಿಗೂ ಆರೆಸ್ಸಸ್ ನ ಪ್ರಮುಖ ಸಂಚಾಲಕರು, ಮುಖ್ಯಸ್ಥರು ತಮ್ಮ ವ್ಯಕ್ತಿತ್ವದ ಆಳದಲ್ಲಿ ಅತ್ಯಂತ ನಿಗೂಢವಾಗಿ ವರ್ತಿಸುತ್ತಾರೆ. ಇಂಡಿಯಾದ ಸಂವಿಧಾನವನ್ನು ತಿರಸ್ಕರಿಸುವುದು ಸಹ ಇವರ ಸೀಕ್ರೆಟ್ ಅಜೆಂಡಾಗಳಲ್ಲೊಂದು.

ಇದಕ್ಕೆ ಇತಿಹಾಸವಿದೆ.

ಮಾನವೀಯತೆಯನ್ನು, ಜನಪರ ತತ್ವಗಳನ್ನು, ಅಹಿಂಸೆಯನ್ನು ಬೋಧಿಸಿದ ಬೌದ್ಧ ಧರ್ಮವನ್ನು ನಂತರ ಬಂದ ಭ್ರಾಹ್ಮಣ್ಯದ, ಸನಾತನವಾದಿ ಶಂಕರಾಚಾರ್ಯ ಬೇರು ಸಮೇತ ಕಿತ್ತು ಹಾಕಲು ನಿರ್ಧರಿಸಿ ಇದಕ್ಕೆ ಮುನ್ನುಡಿಯಾಗಿ ಶೂದ್ರರಿಗೆ ಶಿಕ್ಷಣವನ್ನು ನಿರಾಕರಿಸಿದ (ಆಗ ಈ ಹಿಂದೂ ಧರ್ಮ ಎನ್ನುವುದು ಇರಲಿಲ್ಲ.RSS ವರ್ಣಾಶ್ರಮ ಪದ್ಧತಿ ಆಚರಣೆಯಲ್ಲಿತ್ತು). ದಕ್ಷಿಣದಲ್ಲಿ ಪಲ್ಲವರು ಮತ್ತು ಉತ್ತರದಲ್ಲಿ ಚಾಲುಕ್ಯ ರಾಜಮನೆತನವನ್ನು ಬಳಸಿಕೊಂಡು ಬೌದ್ಧ ಧರ್ಮವನ್ನು ನಿರ್ಣಾಮ ಮಾಡಿದ್ದು ಈ ಶಂಕರಾಚಾರ್ಯ. ಬೌಧ್ಧರ ನಾಗಾರ್ಜುನಕೊಂಡವನ್ನು ತನ್ನ ಅನುಯಾಯಿಗಳ ಮತ್ತು ಮೇಲ್ಕಾಣಿಸಿದ ರಾಜಮನೆತನಗಳ ಬೆಂಬಲದಿಂದ ಧ್ವಂಸಗೊಳಿಸಿದ. ಅಲ್ಲಿನ ಸ್ತೂಪಗಳು, ಬೌದ್ಧ ವಿಗ್ರಹಗಳನ್ನು ಧ್ವಂಸ ಮಾಡಿದ ಕೀರ್ತಿ ಈ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಇದು ಮುಂದುವರೆದು ಉತ್ತರ ಭಾರದಾದ್ಯಾಂತ ಬೌದ್ಧ ಧರ್ಮದ ಎಲ್ಲಾ ಸ್ತೂಪಗಳು, ಸ್ಮಾರಕ, ಗ್ರಂಥಗಳನ್ನು ನಾಶಪಡಿಸಲಾಯಿತು. ಈ ಶಂಕರಾಚಾರ್ಯರಿಂದ ಪ್ರಾರಂಭಗೊಂಡ ಅನ್ಯ ಧರ್ಮೀಯರ ವಿರುದ್ಧದ ದಾಳಿ ಮತ್ತು ಹಲ್ಲೆ ಇಪ್ಪತ್ತನೇ ಶತಮಾನದ ಚರ್ಚ ಮತ್ತು ಮಸೀದಿಗಳ ಧ್ವಂಸದವರೆಗೂ ಮುಂದುವರೆದು ಡಿಸೆಂಬರ್ 3, 2014ರಲ್ಲಿ ದೆಹಲಿಯ ಸೇಂಟ್ ಸೆಬಾಸ್ಟಿಯನ್ ಚರ್ಚ ಅನ್ನು ಧ್ವಂಸಗೊಳಿಸಲಾಗಿದೆ. ಡಿಸೆಂಬರ್ 11 2014ರಂದು ಲೂಧಿಯಾನದ ಕಲವರಿ ಚರ್ಚನ ಮೇಲೆ ದಾಳಿ ಮಾಡಲಾಗಿದೆ. ಕಂಧಮಾಲ್ ನಲ್ಲಿ ಹಿಂದೂ ಸ್ವಾಮಿಯೊಬ್ಬರನ್ನು ಭೂಗತ ಹೋರಾಟಗಾರರು ಹತ್ಯೆ ಮಾಡಿದರೆ ಸಂಘ ಪರಿವಾರ ಪ್ರತೀಕಾರವಾಗಿ ಅಲ್ಲಿನ ಚರ್ಚಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿತು. ಕ್ರಿಶ್ಚಿಯನ್ನರ ಮೇಲೆ ಪ್ರಾಣಾಂತಿಕ ಹಲ್ಲೆ ನಡೆಸಿತು. ಮೂಲಭೂತವಾಗಿ ‘ಭ್ರಾಹ್ಮಣ್ಯ’ದ ಧರ್ಮವನ್ನು ಹಿಂದೂಯಿಸಂನ ಐಡೆಂಟಿಟಿಯಾಗಿ ರೂಪಿಸಿದ್ದು ಆರೆಸ್ಸಸ್. ಈ ಭ್ರಾಹ್ಮಣ್ಯದ ಐಡೆಂಟಿಟಿಯನ್ನು ತೊಬತ್ತರ ದಶಕದವರೆಗೂ ಕಾಯ್ದುಕೊಂಡು ಬರಲಾಯಿತು. ಆದರೆ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಶೂದ್ರ ಸಮುದಾಯದ ಶಕ್ತಿ ರಾಜಕಾರಣವನ್ನು ಸಂಪೂರ್ಣವಾಗಿ ಬಳಸಿಕೊಂಡ ಆರೆಸ್ಸಸ್ ಇಂದು ಅನುಕೂಲಸಿಂಧು ರಾಜಕಾರಣದ ನೆಲೆಯಲ್ಲಿ ಒಳಗೊಳ್ಳುವಿಕೆಯ ಮಾತನಾಡುತ್ತಿದೆ.

ಆರೆಸ್ಸಸ್ ರಾಜಕೀಯ ಪಕ್ಷವಾದ ಬಿಜೆಪಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಕೊಡುವುದಿಲ್ಲ. ಆರೆಸ್ಸಸ್ ಬಯಸುವುದು ತನ್ನ ಐಡಿಯಾಜಿಯನ್ನು ರಾಜಕೀಯ ನೆಲೆಯಲ್ಲಿ ವಿಸ್ತರಿಸುವುದಕ್ಕಾಗಿ ಬಿಜೆಪಿ ಪಕ್ಷ ಕಾನೂನುಗಳನ್ನು ರೂಪಿಸಬೇಕು. ತಾನು ಸ್ವತಃ ರಾಜಕೀಯವನ್ನು ಪ್ರವೇಶಿಸಲು ನಿರಾಕರಿಸುವ ಆರೆಸ್ಸಸ್ ‘ನಮ್ಮ ಸಾಂಸ್ಕೃತಿಕ ನೀತಿಗಳೇ ನಮ್ಮ ರಾಜಕೀಯ’ ಎಂದು ಹೇಳುತ್ತದೆ. ತನ್ನ ಐಡಿಯಾಲಜಿಯನ್ನು ಪ್ರಶ್ನಿಸುವುದಿರಲಿ, ಚರ್ಚೆಗೆ ಎಳೆದುತಂದವರನ್ನು ನಿರ್ದಾಕ್ಷೀಣ್ಯವಾಗಿ ಹೊರ ತಳ್ಳುತ್ತದೆ ಆರೆಸ್ಸಸ್. ಉದಾಹರಣೆಗೆ ಜನಸಂಘ ರಾಜಕೀಯ ಪಕ್ಷವಾಗಿದ್ದ ಎಪ್ಪತ್ತರ ದಶಕದಲ್ಲಿ ಆಗಿನ ಅಧ್ಯಕ್ಷ ಬಲರಾಜ್ ಮಾಧೋಕ್ ಅವರು ಜನಸಂಘದ ಪಧಾದಿಕಾರಿಗಳನ್ನು ಆರೆಸ್ಸಸ್ ಸಂಘಟನೆಯಿಂದ ಹೇರುವುದನ್ನು ನಿಲ್ಲಿಸಿ ಜನಸಂಘದ ಒಳಗಡೆಯಿಂದಲೇ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದರು. ಆ ಕೂಡಲೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಡ್ವಾನಿ ಜಿನ್ನಾ ಅವರನ್ನು ಪ್ರಶಂಸಿದ ಕಾರಣಕ್ಕೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಪದಚ್ಯುತಿಗೊಳಿಸಲಾಯಿತು. ತೀರಾ ಇತ್ತೀಚೆಗೆ ಆರೆಸ್ಸಸ್ ವಿರುದ್ಧ ಭಿನ್ನ ರಾಗ ಹಾಡಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಯಿತು.

ಇತಿಹಾಸಕಾರ ಡಿ.ಆರ್.ಗೋಯಲ್ ಅವರು ‘ಒಂದು ಕಾಲದ ಜನಸಂಘ ಅಥವಾ ಇಂದಿನ ಬಿಜೆಪಿ ಅದು ಬೆಳವಣಿಗೆ ಕಂಡುಕೊಳ್ಳುವುದು ರಾಜಕೀಯವಾಗಿ ಅಲ್ಲ, ಆರೆಸ್ಸಸ್ ಸಂಘಟನೆಯಲ್ಲಿ ಮಾತ್ರ. ಏಕೆಂದರೆ ಆರೆಸ್ಸಸ್ ಅದಕ್ಕೆ ಜನ್ಮ ನೀಡಿದ್ದು, ಹೀಗಾಗಿ ಆರೆಸ್ಸಸ್ ಗೆ ಶರಣಾಗಲೇಬೇಕು. ಬಿಜೆಪಿ ಪಕ್ಷವು ನಾವು ವಿಭಿನ್ನ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಹೇಳಿದರೂ ವಾಸ್ತವದಲ್ಲಿ ಆರೆಸ್ಸಸ್ ಅನ್ಯ ಸಂಸ್ಕೃತಿಯನ್ನು ಮಾನ್ಯ ಮಾಡಿರುವುದೇ ಇಲ್ಲ. ಸಾರ್ವಜನಿಕ ಹೇಳಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗುತ್ತದೆ, ಆಚರಣೆಗೆ ಆಲ್ಲ. ಉದಾಹರಣೆಗೆ ಗುಜರಾತ್ ಹತ್ಯಾಕಾಂಡ ನಡೆದ 2002ರ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಾರ್ವಜನಿಕವಾಗಿ ರಾಜಧರ್ಮ ಪಾಲಿಸುವಂತೆ ಹೇಳಿಕೆ ಇತ್ತರು. ಆದರೆ ಆಚರಣೆಯಲ್ಲಿ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿಲ್ಲ. ತನ್ನ ಐಡಿಯಾಲಜಿಯನ್ನು ಸಹಿಸಿಕೊಳ್ಳುವ ನಾಯಕ ಇರುವವರೆಗೂ ಆರಸ್ಸಸ್ ಸಂತುಷ್ಟದಿಂದಿರುತ್ತದೆ’ ಎಂದು ಹೇಳುತ್ತಾರೆ. ಇದು ನಿಜ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಸರ್ಕಾರವು ಯಾವುದೇ ಬಗೆಯ ಅಸಹನೆ, ಹಲ್ಲೆಗಳನ್ನು ಸಹಿಸುವುದಿಲ್ಲ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ’ ಎಂದು ಹೇಳಿಕೆ ಇತ್ತರು. ಆರೆಸ್ಸಸ್ ಅದನ್ನು ಹೇಳಿಕೆ ಮಟ್ಟದಲ್ಲಿಯೇ ಇರಲು ಬಯಸುತ್ತದೆ. ಆಚರಣೆಯಲ್ಲಿ ಅಲ್ಲ.ಇದು 56 ಇಂಚಿನ ಎದೆಯ ಮೋದಿಗೂ ಸಹ ಗೊತ್ತು. ಇದು ಕೋಮುವಾದದ ಮನಸ್ಥಿತಿ, ಚಹರೆ, ಸ್ವರೂಪ.

ಕೋಮುವಾದವೆಂದರೆ ಅದು ಒಂದು ಐಡೆಂಟಿಟಿ ರಾಜಕೀಯ. ದ್ವೇಷದ,ಹಗೆತನದ ರಾಜಕೀಯ. ಇಲ್ಲಿ ಈ ಐಡೆಂಟಿಟಿಯು ಸ್ಪಷ್ಟವಾಗಿ ಧಾರ್ಮಿಕ ನೆಲೆಯನ್ನು ಅವಲಂಬಿಸುತ್ತದೆ. ಈ ಕೋಮುವಾದವು ‘ನಾವು’ ಮತ್ತು ‘ಅವರು’ ಎಂದು ಎರಡು ಧರ್ಮಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಕೋಮುವಾದ ಶಕ್ತಿಗಳು ಬಲಿಷ್ಠಗೊಂಡಂತೆ ಈ ಗೆರೆಯು ಒಂದು ಗೋಡೆಯಾಗಿ ಬೆಳೆಯುತ್ತ ಹೋಗುತ್ತದೆ. ಈ ಕೋಮುವಾದವು ತನ್ನ ಧಾರ್ಮಿಕ ಶ್ರೇಷ್ಠತೆಯನ್ನು ವೈಭವೀಕರಿಸುತ್ತಲೇ ಅನ್ಯ ಧರ್ಮ ಮತ್ತು ಅನ್ಯ ಧರ್ಮೀಯರನ್ನು ದ್ವೇಷಿಸುತ್ತಾ ಬಹುಸಂಖ್ಯಾತ ತತ್ವವನ್ನು ಸಾರ್ವಜನಿಕವಾಗಿ ಬಿತ್ತುತ್ತಿರುತ್ತದೆ. ಸಮಾಜದಲ್ಲಿ ಕೋಮುಗಲಭೆಗಳನ್ನು ಹುಟ್ಟು ಹಾಕುವುದರ ಮೂಲಕ ಅಧಿಕಾರವನ್ನು ಪಡೆದುಕೊಳ್ಳುವುದು ಈ ಕೋಮುವಾದದ ಮತ್ತೊಂದು ಮಾದರಿಗಳಲ್ಲೊಂದು. ಚಿಂತಕರು ಇಂಡಿಯಾದಲ್ಲಿ ಹಿಂದೂ ಕೋಮುವಾದವನ್ನು ಫ್ಯಾಸಿಸ್ಟ್ ನ ಮತ್ತೊಂದು ಮುಖವೆಂದೇ ಬಣ್ಣಿಸುತ್ತಾರೆ. ತನ್ನ ಧರ್ಮವನ್ನು ಶ್ರೇಷ್ಠವೆಂದು ಪರಿಗಣಿಸುವ ಈ ಧಾರ್ಮಿಕ ಐಡೆಂಟಿಟಿಯನ್ನು ಒಂದು ಫ್ಯಾಸಿಸ್ಟ್ ಶಕ್ತಿಯಾಗಿ ಕ್ರೋಢೀಕರಿಸಿದ್ದು ಸಾವರ್ಕರ್. ಸಾವರ್ಕರ್ರ ಹಿಂದುತ್ವದ ಕೋಮುವಾದವನ್ನೊಳಗೊಂಡ ಫ್ಯಾಸಿಸ್ಟ್ ಚಿಂತನೆಗಳನ್ನು ತನ್ನ ಸೀಕ್ರೆಟ್ ಕಾರ್ಯಸೂಚಿಯನ್ನಾಗಿಸಿಕೊಂಡ ಆರೆಸ್ಸಸ್ ದಶಕಗಳ ಕಾಲ ಸಾರ್ವಜನಿಕವಾಗಿ ಕೇವಲ ಹಿಂದುತ್ವವನ್ನು ಪ್ರಚಾರ ಮಾಡಿತು. ಇಂದು ಕೇಂದ್ರದಲ್ಲಿ ಅಧಿಕಾರ ಗಳಿಸಿದ ನಂತರ ತನ್ನೊಳಗೆ ಮಡುಗಟ್ಟಿಕೊಂಡ ಫ್ಯಾಸಿಸಂನ ಮುಖಗಳನ್ನು ಸಹ ಬಹಿರಂಗಗೊಳಿಸತೊಡಗಿದೆ.

ಆರಂಭದಲ್ಲಿ ಇಟಲಿಯ ಮುಸಲೋನಿಯ ಆಡಳಿತವನ್ನು ತನ್ನ ಸ್ವಯಂಸೇವಕರಿಗೆ ತರಬೇತಿ ಕೊಡಬೇಕೆಂದು ಕೊಂಡಾಡಿದ್ದ ಆರೆಸ್ಸಸ್ ನಂತರ ಹಿಟ್ಲರ್ ನನ್ನೂ ಪ್ರಶಂಸಿತ್ತು. ಇಂದಿಗೂ ರಾಷ್ಟ್ರ ಮತ್ತು ಅದರ ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯ ವ್ಯವಸ್ಥೆಯ ಕುರಿತಾಗಿ ಅಸಹನೆಯಿಂದಿರುವ ಆರೆಸ್ಸಸ್ ಅದಕ್ಕೆ ಪರ್ಯಾಯವಾಗಿ ಹಿಂದೂರಾಷ್ಟ್ರವೆಂದು ಹೇಳುತ್ತಿದೆಯಾದರೂ ಅದರ ಸ್ವರೂಪದ ಕುರಿತಾಗಿ ಅವರಲ್ಲೇ ಗೊಂದಲಗಳಿವೆ. ಆದರೆ 2014ರ ಚುನಾವಣೆಯ ಸಂದರ್ಭದಿಂದ ಇಡೀ ಸಂಘ ಪರಿವಾರದ ನಾಯಕರು ಬಳಸಿದ ಫೆನಟಿಸಂನ, ಹಿಂಸಾಚಾರದ ಭಾಷೆಗಳು ಹಿಟ್ಲರ್ ನ ನಾಜಿ ಪಾರ್ಟಿಯ ಫ್ಯಾಸಿಸಂ ಅನ್ನು ಹೋಲುತ್ತವೆ. ಚುನಾವಣೆಯ ಸಂದರ್ಭದಲ್ಲಿ ಕೋಮುವಾದವನ್ನು ಹುಟ್ಟು ಹಾಕುವುದು, ಜಾತಿಗಳ ಧೃವೀಕರಣ ಸಾಧಿಸುವುದು, ದೇಶ ವಿಭಜನೆಯ ಸಂದರ್ಭದ ಹಿಂಸಾಚಾರವನ್ನು ನೆನಪಿಸುತ್ತ ಸಿಖ್ಖರನ್ನು ಮುಸ್ಲಿಂರ ವಿರುದ್ಧ ಸಂಘಟಿಸುವುದು, ಮತಾಂತರದ ವಿರುದ್ಧ ಸಂಘಟಿತರಾಗುತ್ತಲೇ ಮರು ಮತಾಂತರ ಪ್ರಕ್ರಿಯೆ ಜಾರಿಗೊಳಿಸುವುದು, ಅನ್ಯ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸುವುದು, ಇವೆಲ್ಲವೂ ಕೋಮುವಾದದ ಫ್ಯಾಸಿಸಂ ಅಜೆಂಡಾಗಳು. ತನ್ನ ಪ್ರಣಾಳಿಕೆಯಲ್ಲಿ ಹಿಂದೂಯಿಸಂನ ಕುರಿತಾಗಿ ಸಮರ್ಥಿಸಿಕೊಂಡರೆ ಆಚರಣೆಯಲ್ಲಿ ಕೇವಲ ಎಲೈಟ್ ವರ್ಗಗಳ ಹಿತಾಸಕ್ತಿಯನ್ನು ಮತ್ತು ಭ್ರಾಹ್ಮಣ ಜಾತಿಯ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ.

ಮೇಲ್ಜಾತಿಗಳ ಅಧಿಪತ್ಯದಲ್ಲಿ ವರ್ಣಾಶ್ರಮ ಸಮಾಜವನ್ನು ಸ್ಥಾಪಿಸಲು ಹಿಂದೂ ಧರ್ಮದ ಇತರೇ ಜಾತಿಗಳನ್ನು ಬಳಸಿಕೊಳ್ಳುತ್ತದೆ. ಇದು ಕೋಮುವಾದದ ಫ್ಯಾಸಿಸಂ ಮುಖ. ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಬೋಧಿಸುತ್ತ ಮುಸ್ಲಿಂರ ದೇಶ ಇದಲ್ಲ ಎಂದು ಮತೀಯವಾದಿ ನುಡಿಕಟ್ಟಿನಲ್ಲಿ ಮಾತನಾಡುವುದು, ಮುಸ್ಲಿಂರ ಏಜೆಂಟ್ ಎಂದು ಗಾಂಧೀಜಿಯನ್ನು ಹತ್ಯೆಗೈಯುವುದು ಕೋಮುವಾದ, ಫ್ಯಾಸಿಸಂ ಒಂದಕ್ಕೊಂದು ಬೆರೆತುಕೊಂಡ ಮುಖ. ರಾಮ ಜನ್ಮ ಭೂಮಿ ನಿರ್ಮಾಣಕ್ಕಾಗಿ ಹಿಂದೂ ಧರ್ಮದ ವಿವಿಧ ಜಾತಿಗಳನ್ನು ಒಗ್ಗೂಡಿಸಿ, ಶಿಲಾನ್ಯಾಸಕ್ಕಾಗಿ ಇಟ್ಟಿಗೆಗಳನ್ನು ಸಾಗಿಸುವುದು, ಅಯೋಧ್ಯೆಗೆ ರಥಯಾತ್ರೆ ಮತ್ತು ಇದೆಲ್ಲದರ ಮೂಲಕ ದೇಶಾದ್ಯಾಂತ ಗಲಭೆ,ಹಿಂಸಾಚಾರವನ್ನು ಸೃಷ್ಟಿಸುವುದು, ಇದೆಲ್ಲದರ ತಾರ್ಕಿಕ ಅಂತ್ಯವೆನ್ನುವಂತೆ ಹಿಂಸಾತ್ಮಕವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕೋಮುವಾದ ಮತ್ತು ಫ್ಯಾಸಿಸಂನ ಬೆರೆತುಕೊಂಡ ಮುಖ.

ಗುಜರಾತ್ ನ ಗೋಧ್ರಾ ದುರಂತದ ನಂತರ ನಡೆದ ಮುಸ್ಲಿಂ ಸಮುದಾಯದ ಹತ್ಯಾಕಾಂಡದಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳುnarender_modi_rss ಸಮಾನವಾಗಿರುತ್ತವೆ ಎಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಕೋಮುವಾದವಾದರೆ ನಂತರ ಹೆಣ್ಣುಮಕ್ಕಳು, ಮಕ್ಕಳನ್ನು ಇರಿದು ಹಲ್ಲೆ ಮಾಡಿ, ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದು ಫ್ಯಾಸಿಸಂನ ಮುಖ. ಹಿಂದೂ ಧರ್ಮದ ಜಾತೀಯತೆ ಮತ್ತು ಅಸಮಾನತೆಯ ದೌರ್ಜನ್ಯಕ್ಕೆ ಬಲಿಯಾದ ತಳಸಮುದಾಯಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡಿದ್ದನ್ನು ಕಟುವಾಗಿ ಟೀಕಿಸುವ ಆರೆಸ್ಸಸ್ ಈ ರೀತಿ ಮತಾಂತರಗೊಂಡವರನ್ನು ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಸ್ಲೋಗನ್ ಅಡಿಯಲ್ಲಿ ಮರು ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ಆದರೆ ಪೂರ್ವ ಮತ್ತು ಈಶಾನ್ಯ ಭಾರತದ ಆದಿವಾಸಿ ಸಮುದಾಯ ಸುಮಾರು ಮೂರು ತಲೆಮಾರುಗಳ ಹಿಂದಿನ ಕಾಲದಿಂದಲೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿವೆ. ಅವರ ಧಾರ್ಮಿಕ ನಂಬಿಕೆ, ಅವೈದಿಕ ಆಚರಣೆಗಳು ಈ ಹಿಂದೂ ಧಾರ್ಮಿಕತೆಗಿಂತಲೂ ಸಂಪೂರ್ಣ ಭಿನ್ನವಾಗಿದೆ. ಆದರೆ ಮತೀಯವಾದಿ ಸಂಘ ಪರಿವಾರ ‘ಘರ್ ವಾಪಸಿ’ ಹೆಸರಿನಲ್ಲಿ ಅವರಿಗೆ ಪರಕೀಯವಾದ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಇಡೀ ಪ್ರಕ್ರಿಯೆಯೇ ಹಿಂಸಾಚಾರದಿಂದ ರೂಪುಗೊಂಡಿದೆ. ಎಂಬತ್ತರ ದಶಕದಲ್ಲಿ ತಮಿಳುನಾಡಿನ ಮೀನಾಕ್ಷಿಪುರಂ ಮತಾಂತರದ ಹಿಂಸೆಯಿಂದ ಮೊದಲುಗೊಂಡು ಇತ್ತೀಚಿನ ಅಗ್ರಾದಲ್ಲಿ ನಡೆದ ಮರು ಮತಾಂತರದ ಪ್ರಹಸನದವರೆಗೂ ಸಂಘ ಪರಿವಾರದ ಹಿಂಸೆ ವಿಜೃಂಭಿಸಿದೆ. ಹೀಗೆ ಕೋಮುವಾದ ಮತ್ತು ಫ್ಯಾಸಿಸಂ ಎರಡನ್ನೂ ಒಂದುಗೂಡಿಸಿದ ಆರೆಸ್ಸಸ್ ತನ್ನ ಸಂಘಟನೆಗೆ ವಿ ಎಚ್ ಪಿ ಮತ್ತು ಬಜರಂಗದಳ ಗುಂಪುಗಳ ಮೂಲಕ ಮಿಲಿಟೆಂಟ್ ಸ್ವರೂಪವನ್ನು ಪಡೆದುಕೊಂಡಿದೆ.

ಸಂಘಪರಿವಾರದ ಫ್ಯಾಸಿಸಂ ಮತ್ತು ಕೋಮುವಾದ ಒಟ್ಟಿಗೆ ಮೇಳೈಸಿದ ತೀರಾ ಇತ್ತೀಚಿನ ಉದಾಹರಣೆ ಎಂದರೆ ಗೋಹತ್ಯೆ ನಿಷೇಧ ಕಾನೂನು. 2015ರಲ್ಲಿ ದನ, ಎಮ್ಮೆ, ಗೋವುಗಳ ಹತ್ಯೆ ನಿಷೇಧ ಮಸೂದೆಯನ್ನು ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದುಕೊಂಡ ನಂತರ ಮಹರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಇನ್ನು ಮುಂದೆ ಆ ರಾಜ್ಯದಲ್ಲಿ ಬೀಫ್ ಮಾರಾಟ ಮಾಡಿದರೆ, ಸೇವಿಸಿದರೆ, ಅದರ ತುಂಡನ್ನು ಕೈಯಲ್ಲಿ ಹಿಡಿದರೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಗೋ ಹತ್ಯೆ ನಿಷೇಧವನ್ನು ಜಾರಿಗೊಳಿಸಲು ತುದಿಗಾಲಲ್ಲಿರುವ ಮಧ್ಯಪ್ರದೇಶ ಸರ್ಕಾರವು ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳಿಗೆ ನಿಗದಿಪಡಿಸಲು ನಿರ್ಧರಿಸಿದೆ. ಹರ್ಯಾಣ ರಾಜ್ಯವು 9 ವರ್ಷಗಳ ಶಿಕ್ಷೆಯನ್ನು ಜಾರಿಗೊಳಿಸಲು ಚಿಂತಿಸುತ್ತಿದೆ. 2004ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿ ಗೋಹತ್ಯಾ ನಿಷೇಧಕ್ಕೆ ಸಂಬಂಧಪಟ್ಟಂತೆ ಮಸೂದೆಯನ್ನು ಜಾರಿಗೊಳಿಸಿದ್ದರು.

ಆ ಮಸೂದೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಕಾರಣ ಕೊಡುತ್ತ ‘ಮನುಸ್ಮುತಿಯಲ್ಲಿ ಗೋ ಹತ್ಯೆಯನ್ನು ಅಕ್ಷಮ್ಯ ಅಪರಾಧವೆಂದು ಅದನ್ನು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಬರೆಯಲಾಗಿದೆ’ ಅದಕ್ಕೇ ಈ ಮಸೂದೆ ಎಂದು ಸಮರ್ಥಿಸಿಕೊಳ್ಳಲಾಗಿದೆ. ಬಿಜೆಪಿ ಪಕ್ಷವು ಸಂವಿಧಾನಿಕ ಮಸೂದೆಯೊಂದನ್ನು ಜಾರಿಗೊಳಿಸಲು ಮನುಸ್ಮುತಿಯನ್ನು ಬಳಸಿಕೊಂಡಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೆಯದಾಗಿತ್ತು. ಆರೆಸ್ಸಸ್ ಮತ್ತು ಅದರ ಎಲ್ಲಾ ಪರಿವಾರ ಸಂಘಟನೆಗಳು ಈ ಗೋಹತ್ಯೆ ನಿಷೇಧಗೊಂಡ ಭಾರತವನ್ನು ನೆನಪಿಸಿಕೊಂಡು, ಸನಾತನ ಹಿಂದೂ ಧರ್ಮದ ಭಾರತವನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತಾ ಈ ಸನಾತನ ಭಾರತದಲ್ಲಿ ಮನುಷ್ಯರಿಗಿಂತ ಗೋವುಗಳು ಮುಖ್ಯ ಎಂದು ಎಚ್ಚರಿಸುತ್ತಿದ್ದಾರೆ. ಹೌದು ಇದು ನಿಜ. ಅಕ್ಟೋಬರ್ 12,2002 ರಂದು ಹರ್ಯಾಣ ರಾಜ್ಯದ ಜಾಜ್ಜರ್ ಪಟ್ಟಣದ ದುಲಿನಾ ಪೋಲಿಸ್ ಚೌಕಿಯ ಬಳಿ ದನಗಳನ್ನು ಸಾಗಿಸುತ್ತಿದ್ದಾರೆ ಎನ್ನುವ ಆಪಾದನೆಯ ಮೇಲೆ ಬಂಧಿತರಾಗಿದ್ದ 5 ದಲಿತರನ್ನು ಸುಮಾರು ಐನೂರು ಜನರ ಲುಂಪೆನ್ ಗುಂಪು ಕೊಚ್ಚಿ ಕೊಂದು ಹಾಕಿತು.

ಕೆಲವು ತಿಂಗಳುಗಳ ಹಿಂದೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗಾಂಧೀಜಿ ಹಂತಕ, ಚಿತ್ಪಾವನ್ ಭ್ರಾಹ್ಮಣ, ಹಿಂದೂ ಮಹಾಸಭಾದ ಸದಸ್ಯ ಗೋಡ್ಸೆಯನ್ನು ಒಬ್ಬ ದೇಶಭಕ್ತ ಎಂದು ಬಣ್ಣಿಸಿದ್ದರು. ಹಿಂದೂ ಮಹಾಸಭಾದ ಅಧ್ಯಕ್ಷ ಚಂದ್ರ ಪ್ರಸಾದ್ ಕೌಶಿಕ್ ‘ ಗಾಂಧಿ ಹತ್ಯೆಗೆ ಸಂಬಂಧಪಟ್ಟಂತೆ ನಡೆದ ಘಟನೆಗಳನ್ನು ಕೂಲಂಕುಶ ತನಿಖೆ ಆಗಬೇಕಿದೆ. ಗೋಡ್ಸೆಯವರು ನಿಜಕ್ಕೂ ಹಂತಕನಲ್ಲ, ಆದರೆ ಗಾಂಧಿಯನ್ನು ಕೊಲ್ಲುವಂತೆ ಪ್ರೇರೇಪಿಸಲಾಗಿತ್ತು’ ಎಂದು ಹೇಳುತ್ತಾರೆ. ಈ ಹಿಂದೂ ಮಹಾ ಸಭಾ ದೇಶದ ಹದಿಮೂರು ಜಿಲ್ಲೆಗಳಲ್ಲಿ ಈ ಹಂತಕ ಗೋಡ್ಸೆ ಮೂರ್ತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈಗಾಗಲೇ ಗಾಂಧಿ ಲೆಗಸಿಯನ್ನು ಮಣ್ಣುಗೂಡಿಸಿ ಸ್ವಚ್ಛ ಭಾರತ ಎನ್ನುವ ಸವಕಲು ಸ್ಲೋಗನ್ನಿನ ಮೂಲಕ ಗಾಂಧಿಯನ್ನು ಹಿಂದೂಯಿಸಂನ ಜಠರದೊಳಗೆ ಜೀರ್ಣಿಸಿಕೊಳ್ಳಲಾಗಿದೆ.ಮುಂದುವರೆದ ಭಾಗವಾಗಿ ತಪ್ಪುದಾರಿಗೆಳೆಯಲ್ಪಟ್ಟ ದೇಶಭಕ್ತ ಎಂದು ಈ ಗೋಡ್ಸೆಯ ವೈಭವೀಕರಣದ ಮೂಲಕ ಸೆಕ್ಯುಲರಿಸಂ, ಮಾನವತವಾದದ ತತ್ವಗಳನ್ನು ಮಣ್ಣುಗೂಡಿಸಿ ನವಫ್ಯಾಸಿಸಂ ಮಾದರಿಯ ‘ಗೋಡ್ಸೆ ಸಿದ್ಧಾಂತ’ವನ್ನು ತೇಲಿ ಬಿಡುತ್ತಾ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಬಿತ್ತಲಾಗುತ್ತಿದೆ.

ಈ ಮತೀಯವಾದಿ ಆರೆಸ್ಸಸ್ ನ ಸೀಕ್ರೆಟ್ ಸೊಸೈಟಿಯ ಗುಪ್ತ ಅಜೆಂಡಾದ ಮತ್ತೊಂದು ಸಾರ್ವಜನಿಕ ಅವತಾರ ‘ಹಿಂದೂ ರಾಷ್ಟ್ರೀಯತೆ’. 1909ರಲ್ಲಿ ‘ಹಿಂದೂ ಸಾಯುತ್ತಿರುವ ಧರ್ಮ’ ಹೆಸರಿನ ಕರಪತ್ರದಲ್ಲಿ ‘ಮುಂದಿನ ಕೆಲವು ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ, ಮುಸ್ಲಿಂರು ಬಹುಸಂಖ್ಯಾರಾಗುತ್ತಾರೆ’ ಎಂದು ಪ್ರಚೋದನಾತ್ಮಕವಾಗಿ ಬರೆಯಲಾಗಿತ್ತು. 1923ರಲ್ಲಿ ‘ಹಿಂದೂ ಎಂದರೆ ಏನು’ ಎನ್ನುವ ಲೇಖನದಲ್ಲಿ ಸಾವರ್ಕರ್ ಅವರು ‘ಹಿಮಾಲಯದ ತಪ್ಪಲಿನಿಂದ ಹಿಂದೂ ಮಹಾಸಾಗರದವರೆಗಿನ ಭೂಖಂಡವನ್ನು ಪಿತೃಭೂಮಿ, ಪವಿತ್ರ ಭೂಮಿ ಎಂದು ಪೂಜಿಸುವ ಹಿಂದೂ, ಜೈನ ಧರ್ಮಗಳ ಅನುಯಾಯಿಗಳು ಇಲ್ಲಿನ ನಾಗರಿಕರು. ಇತರೇ ಧರ್ಮೀಯರು ಬೇರೆ ಭೂಖಂಡವನ್ನು ಹುಡುಕಿಕೊಳ್ಳಬೇಕು’ ಎಂದು ಬರೆಯುತ್ತಾರೆ. ಅದೇ ಕಾಲದಲ್ಲಿ ‘ಮುಸ್ಲಿಂರು, ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ನಾಗರಿಕರೆಂದು ಕರೆದ ಗೋಲ್ವಲ್ಕರ್ ಮುಂದುವರೆದು ಇವರನ್ನು ದೇಶದ ಅಂತರಿಕ ಶತೃಗಳೆಂದು ಜರೆದರು. ಗೋಳ್ವಲ್ಕರ್, ಸಾವರ್ಕರರಿಂದ ಮೊದಲುಗೊಂಡು ಇಂದಿನ ಮೋಹನ್ ಭಾಗವತ್ವರೆಗೂ ಎಲ್ಲರೂ ಭಾರತವನ್ನು ಅದರ ಧಾರ್ಮಿಕತೆಯನ್ನು ‘ಹಿಂದೂ ರಾಷ್ಟ್ರೀಯತೆ’ಯೊಂದಿಗೆ ನಂಟು ಹಾಕುತ್ತ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯದ ಮಾಡೆಲ್ ಅನ್ನು ತಿರಸ್ಕರಿಸುತ್ತಾರೆ.

ಕಲೋನಿಯಲ್ ಆಡಳಿತ ವಿರೋಧಿಸಿದ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಇಪ್ಪತ್ತು ಮತ್ತು ಮೂವತ್ತರ ದಶಕಗಳಲ್ಲಿRSS-mohanbhagwat ‘ಸೆಕ್ಯುಲರಿಸಂ’ ಅನ್ನು ‘ರಾಷ್ಟ್ರೀಯತೆ’ಯೊಂದಿಗೆ ಸಮೀಕರಿಸಿದರೆ ಈ ಸಮೀಕರಣವನ್ನೇ ಹೈಜಾಕ್ ಮಾಡಿದ ಆರೆಸ್ಸಸ್ ರಾಷ್ಟ್ರೀಯತೆಯನ್ನು ಕೋಮುವಾದದೊಂದಿಗೆ ಸಮೀಕರಿಸಿಬಿಟ್ಟಿತು. ನೆಹರೂ ಯುಗ ಪ್ರಾರಂಭಗೊಂಡು ಇಂದಿರಾಗಾಂಧಿ ತೀರಿಕೊಳ್ಳುವುವರೆಗೂ ಆರೆಸ್ಸಸ್ ನ ಈ ‘ಹಿಂದೂ ರಾಷ್ಟ್ರೀಯತೆ’ ತನ್ನ ಹೆಡೆ ಬಿಚ್ಚಲಿಕ್ಕೆ ಸಾಧ್ಯವಾಗಲಿಲ್ಲ. ತೊಂಬತ್ತರ ದಶಕದ ಜಾಗತೀಕರಣ ಈ ‘ಹಿಂದೂ ರಾಷ್ಟ್ರೀಯತೆ’ ಮರಳಿ ಮುಖ್ಯಧಾರೆಯಲ್ಲಿ ಚರ್ಚೆಗೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಮೂಲಭೂತವಾಗಿ ತಮ್ಮ ಚಹರೆಗಳಲ್ಲಿ, ನಡುವಳಿಕೆಗಳಲ್ಲಿ, ವ್ಯಕ್ತಿತ್ವದಲ್ಲಿ ಧಾರ್ಮಿಕ ನಂಬಿಕೆಯನ್ನು ಶ್ರದ್ಧಾಪೂರ್ವಕವಾಗಿ ವ್ಯಕ್ತಪಡಿಸುತ್ತಿದ್ದ ಇಂಡಿಯಾದ ಮಧ್ಯಮವರ್ಗ ಕಳೆದ ಎರಡು ದಶಕಗಳಲ್ಲಿ ‘ಮುಸ್ಲಿಂ ಭಯೋತ್ಪಾದನೆ’ ಎನ್ನುವ ಫೋಬಿಯಾಗೆ ಬಲಿಯಾಗಿ ಅದನ್ನು ವಿರೋಧಿಸಲು ಈ ಹಿಂದೂ ರಾಷ್ಟ್ರೀಯತೆಯ ಕಡೆಗೆ ಚಲಿಸತೊಡಗಿದರು. ಇಂದು ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಆರೆಸ್ಸಸ್ ನ ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆ ಎಲ್ಲೆಲ್ಲೂ ಪ್ರತ್ಯಕ್ಷಗೊಳ್ಳತೊಡಗಿದೆ. ಮೊಟ್ಟ ಮೊದಲ ಬಾರಿಗೆ ಇಂದಿನ ದಿನಗಳಲ್ಲಿ ದಸರಾ, ಗಣೇಶನ ಹಬ್ಬ, ದೀಪಾವಳಿಗಳಂತಹ ಹಿಂದೂ ಹಬ್ಬಗಳು ರಾಷ್ಟ್ರೀಯ ಹಬ್ಬಗಳಾಗಿ ಆಚರಿಸಲಾಗುತ್ತಿದೆ. ಮಧ್ಯಮವರ್ಗಗಳೂ ಸಹ ಈ ಸೋಕಾಲ್ಡ್ ರಾಷ್ಟ್ರೀಯ ಹಬ್ಬಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಹಿಂದೂ ರಾಷ್ಟ್ರೀಯತೆಯಲ್ಲಿ ಹಿಂದುತ್ವದ ಹೊರತಾಗಿ ಬೇರೆ ಪರ್ಯಾಯ ಪಠ್ಯಗಳು, ಧರ್ಮಗಳು, ಸಂಸ್ಕೃತಿಗಳಿಗೆ ಸ್ಥಾನ ಇರುವುದೇ ಇಲ್ಲ.

ಈ ಸೀಕ್ರೆಟ್ ಸೊಸೈಟಿ ಆರೆಸ್ಸಸ್ ನ ಬಿಜೆಪಿ ಪಕ್ಷ ಇಂದು ರಾಜಕೀಯವಾಗಿ ಅಧಿಕಾರದಲ್ಲಿದೆ. ಸಧ್ಯದ ಪರಿಸ್ಥಿಯಲ್ಲಿ ಏಕಾಏಕಿ ಸಂವಿಧಾನವನ್ನು ಧಿಕ್ಕರಿಸಿ ಮರಳಿ ವರ್ಣಾಶ್ರಮಕ್ಕೆ ಮರಳಲು ಸಾಧ್ಯವಿಲ್ಲ ಎಂದು ಅರಿತಿರುವ ಆರೆಸ್ಸಸ್ ಇದಕ್ಕಾಗಿ ದೂರಗಾಮಿ ಯೋಜನೆಗಳನ್ನು ಹಾಕಿಕೊಂಡಿದೆ. 56 ಇಂಚಿನ ಎದೆಯ ನರೇಂದ್ರ ಮೋದಿ ಎಲ್ಲರ ವಿಕಾಸ, ಆಡಳಿತ ಮತ್ತು ಅಭಿವೃದ್ಧಿಯ ಸ್ಲೋಗನ್ ಅನ್ನು ತಮ್ಮ ಸರ್ಕಾರದ ಆದ್ಯತೆ ಎನ್ನುತ್ತಿರುವಾಗಲೇ ಮತ್ತೊಂದೆಡೆ ಆರೆಸ್ಸಸ್ ತನ್ನ ಸೀಕ್ರೆಟ್ ಅಜೆಂಡಾಗಳನ್ನು ಕ್ಷಣವೂ ವ್ಯರ್ಥ ಮಾಡದೆ ಏಕಕಾಲಕ್ಕೆ ಕಾರ್ಯರೂಪಕ್ಕೆ ತರುತ್ತಿದೆ. ಈ ಹಿಂದೆ ಧಾರ್ಮಿಕ ವ್ಯಕ್ತಿಗಳನ್ನು ಮಾಡಿಕೊಂಡಂತೆ ರಾಜಕೀಯ, ಸಾಮಾಜಿಕ ನಾಯಕರನ್ನು (ವಿವೇಕಾನಂದ, ವಲ್ಲಭಾಯಿ ಪಟೇಲ್, ಗಾಂಧಿ, ಅಂಬೇಡ್ಕರ್, ಪುಲೆ ದಂಪತಿಗಳು) ತನ್ನ ಹಿಂದುತ್ವಕ್ಕೆ appropriation ಮಾಡಿಕೊಳ್ಳುವುದು ಆರೆಸ್ಸೆಸ್ ನ ಪ್ರಮುಖ ಕಾರ್ಯಸೂಚಿ. ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರದ ಹಿಂದೂ ಮಹಾ ಸಭಾ ಇಂದು ಅಕ್ಟೋಬರ್ 2 ಗಾಂಧಿ ಹುಟ್ಟಿದ ದಿನವನ್ನು appropriation ಮಾಡಿಕೊಂಡು ಗೋಡ್ಸೆ ಗಾಂಧಿಯನ್ನು ಕೊಂದ ಜನವರಿ 30 ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿತ್ತು. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿತ್ತು. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.

ತೊಂಬತ್ತರ ದಶಕದಲ್ಲಿ ಬಿಎಸ್ಪಿ ಪಕ್ಷವು ಮೇಲ್ಮುಖ ಚಲನೆಯಾಗಿ ‘ಬಹುಜನ’ರಿಂದ ‘ ಸರ್ವಜನ’ ಎನ್ನುವ ಘೋಷಣೆಯೊಂದಿಗೆ ರಾಜಕೀಯ ರೂಪಿಸಿದ್ದರೆ ಇಂದು ಅದನ್ನು ಬುಡಮೇಲು ಮಾಡಿರುವ ಆರೆಸ್ಸಸ್ ‘ಸರ್ವಜನ’ ರಿಂದ ‘ಬಹುಜನ’ರ ಕಡೆಗೆ ಎನ್ನುವ ಸಿದ್ಧಾಂತವನ್ನು ರೂಪಿಸುತ್ತಿದೆ. ತಳಸಮುದಾಯಗಳನ್ನು, ಆದಿವಾಸಿಗಳನ್ನು ಬಹುಸಂಖ್ಯಾತ ಎನ್ನುವ ತತ್ವದಲ್ಲಿ appropriation ಮಾಡಿಕೊಳ್ಳುವುದು ಈ ಆರೆಸ್ಸಸ್ ನ ಬಲು ಮುಖ್ಯ ಅಜೆಂಡಾಗಳಲ್ಲೊಂದು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ನಿರಂತರವಾಗಿ ನಡೆದ ಅಭಿವ್ಯಕ್ತಿ ಸ್ವಾತಂತ್ರದ ದಮನ, ಕೋಮು ಗಲಭೆಗಳು, ಅನ್ಯ ಧರ್ಮೀಯರ ಮೇಲಿನ ಹಲ್ಲೆಗಳು, ಪಠ್ಯ ಪುಸ್ತಕಗಳ ಮತೀಯವಾದಿಕರಣ, ಇತಿಹಾಸವನ್ನು ಪುನ ರಚನೆಗಳಂತಹ ಸಂಗತಿಗಳನ್ನು ಅವಲೋಕಿಸಿದಾಗ ಸಂವಿಧಾನದ ಕಲಮು 15(1) ಅನುಸಾರ ಜಾತಿ, ಧರ್ಮ, ಬಣ್ಣ, ಲಿಂಗ ಆಧಾರದ ಮೇಲೆ ತಾರತಮ್ಯ ನೀತಿಯನ್ನು ನಿಷೇಧಿಸಲಾಗಿದೆ ಎನ್ನುವ ತತ್ವವು ಇನ್ನು ಮುಂದಿನ ದಿನಗಳಲ್ಲಿ ಅಪ್ರಸ್ತುತಗೊಳ್ಳುತ್ತದೆ.

ಇದು ಆರೆಸಸ್ ಮತ್ತು ಅದರ ಕುಟುಂಬದ ಮತೀಯವಾದದ ಶೈಲಿ. ಅಪ್ಪಟ ಫ್ಯಾಸಿಸ್ಟ್ ಶೈಲಿ.

ನೆಲದ ಭಾಷೆ ಮತ್ತು ಕಲಿಕೆಯ ಮಾಧ್ಯಮ

– ಪ್ರಸಾದ್ ರಕ್ಷಿದಿ

ಭಾರತದ ಸರ್ವೋಚ್ಛ ನ್ಯಾಯಾಲಯ ‘ಮಕ್ಕಳಿಗೆ ಯಾವ ಭಾಷಾ ಮಾಧ್ಯಮದಲ್ಲಿ ವಿದ್ಯೆ ನೀಡಬೇಕೆನ್ನುವುದನ್ನು ನಿರ್ಧರಿಸುವ ಹಕ್ಕು ಪೋಷಕರದ್ದು’ ಎಂದು ತೀರ್ಪು ನೀಡಿದೆ. ಈ ತೀರ್ಪು ಭಾರತದ ಸಂವಿಧಾನದ ಅಡಿಯಲ್ಲಿ ಮಾತ್ರವಲ್ಲ ಯಾವುದೇ ಪ್ರಜಾಪ್ರಭುತ್ವ ದೇಶದ ನ್ಯಾಯಾಲಯ ನೀಡಬಹುದಾದ, ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಹಜವಾದ ತೀರ್ಪಿನಂತೇ ಇದೆ. Supreme Courtಆದರೆ ಇದರ ಸಾಧಕ ಭಾಧಕಗಳ ಚರ್ಚೆಯಾಗಬೇಕಾಗಿರುವುದು, ಭಾರತದಂತಹ ಬಹುಭಾಷಾ, ಬಹುಜಾತೀಯ ಮತ್ತು ಬಹು ಸಂಸ್ಕೃತಿಯ ಸಮಾಜದ ಹಿನ್ನೆಲೆಯಲ್ಲಿ.

ಇಲ್ಲಿ ಕನ್ನಡದ ಸಂದರ್ಭವನ್ನು ಮಾತ್ರ ಪರಿಗಣಿಸಿ ಈವಿಚಾರಗಳನ್ನು ಹೇಳುತ್ತಿದ್ದೇನಾದರೂ ಹಿಂದಿ ಭಾಷೆಯನ್ನಾಡುವ ಪ್ರದೇಶಗಳನ್ನುಳಿದು ಬೇರೆ ಎಲ್ಲಾ ಪ್ರಾದೇಶಿಕ ಭಾಷೆಗಳ ಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಹಿಂದಿ ಭಾಷೆಯು ಕೇಂದ್ರ ಸರ್ಕಾರದಿಂದ ವಿಶೇಷ ಪೋಷಣೆಯನ್ನು ಪಡೆಯುತ್ತಿದ್ದರೂ ಸಹ ಕಲಿಕಾ ಮಾಧ್ಯಮದ ವಿಚಾರಕ್ಕೆ ಬಂದಾಗ ಇಂಗ್ಲಿಷ್‌ನೊಂದಿಗೆ ಅವರಿಗೂ ಸಮಸ್ಯೆಗಳಿವೆ.

ಸಾಮಾನ್ಯವಾಗಿ ನಾವು ಮಾತನಾಡುವಾಗ, ನಮ್ಮ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸಲು, ಸಹಜವಾಗಿ ಯೋಚಿಸಲು, ಪ್ರಪಂಚದ ಎಲ್ಲ ಅನುಭವಗಳನ್ನು ಮತ್ತು ಅದರ ಮೂಲಕ ದೊರೆಯುವ ಜ್ಞಾನವನ್ನು ಸ್ವೀಕರಿಸಿ ಗ್ರಹಿಸಲು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳುತ್ತಲೇ ಇರುತ್ತೇವೆ. ಇದಕ್ಕೊಂದು ತಮಾಷೆಯ ಉದಾಹರಣೆಯನ್ನು ನೀಡುತ್ತೇನೆ. ಸುಮಾರು ಮೂವತ್ತು ವರ್ಷಗಳಕಾಲ ಆಸ್ಟೇಲಿಯಾದಲ್ಲಿ ವಿಜ್ಞಾನಿಯಾಗಿದ್ದು ಇದೀಗ ವಾಪಸ್ ಬಂದು ಹಳ್ಳಿಯಲ್ಲಿ ನೆಲೆಸಿದವರೊಬ್ಬರು ಇತ್ತೀಚೆಗೆ ಪರಿಚಯವಾದರು. ಅವರು ಆಸ್ಟೇಲಿಯಾದಲ್ಲಿನ ಅನುಭವಗಳ ಬಗ್ಗೆ ಮಾತನಾನಾಡುತ್ತ ಒಂದು ವಿಚಾರವನ್ನು ಹೇಳಿದರು. Kavi_kannadaಅವರು ಅಲ್ಲಿದ್ದಾಗ ಯಾರಿಗಾದರೂ ಬಯ್ಯುತ್ತಿದ್ದರೆ ಮಾತು ತನ್ನಷ್ಟಕ್ಕೆ ಕನ್ನಡ ಭಾಷೆಗೆ ಹೊರಳುತ್ತಿತ್ತಂತೆ!. ಅಂದರೆ ನಾವು ಕಲಿತ ಭಾಷೆಯಲ್ಲಿ ಪೂರ್ಣ ಅಭಿವ್ಯಕ್ತಿ ಕಷ್ಟ ಎನ್ನುವುದನ್ನವರು ಪರೋಕ್ಷವಾಗಿ ತಿಳಿಸಿದರು. ಆದರೆ ನಾವು ವ್ಯಾವಹಾರಿಕ ಜಗತ್ತಿಗೆ ಬಂದಾಗ ಇಂಗ್ಲಿಷ್ ಭಾಷೆಯೇ ನಮ್ಮ ಆದ್ಯತೆಯಾಗಿಬಿಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ.

ಮಾತೃಭಾಷೆ ಎನ್ನುವ ಪದವೇ ಸ್ವಲ್ಪ ಗೊಂದಲವುಂಟುಮಾಡುವಂಥದ್ದು ಕರ್ನಾಟಕದಲ್ಲೇ, ತುಳು, ಕೊಡವ, ಮುಂತಾದ ಪ್ರಾದೇಶಿಕ ಭಾಷೆಗಳಿದ್ದ ಹಾಗೆ ಬಂಜಾರ, ಅರೆಗನ್ನಡ, ಹೈಗ, ಬೋವಿ, ಬ್ಯಾರಿ ಮುಂತಾದ ಜನಾಂಗೀಯ ಭಾಷೆಗಳಿವೆ. ತಮಿಳು, ತೆಲುಗು, ಉರ್ದು, ಕೊಂಕಣಿ. ಮಲೆಯಾಳಂ, ಭಾಷಿಕರಿದ್ದಾರೆ. ನಾವು ಮನೆಯಲ್ಲಿ ಆಡುವ ಮಾತನ್ನು ಮಾತೃಭಾಷೆ ಎಂದುಕೊಂಡರೆ, ಮಧ್ಯ ಕರ್ನಾಟಕದ ಅಚ್ಚಕನ್ನಡದ ನೆಲದಲ್ಲೂ ನಾವು ಹೊರಗೆ ಮಾತನಾಡುವ ಕನ್ನಡಕ್ಕೂ ಮನೆ ಮಾತಿಗೂ ತುಂಬ ವ್ಯತ್ಯಾಸಗಳಿವೆ. ಇವರೆಲ್ಲರಿಗೂ ತಮ್ಮ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಕ್ಕು ಸಂವಿಧಾನಾತ್ಮಕವಾಗಿ, ಇದೀಗ ನ್ಯಾಯಾಲಯದ ಮೂಲಕ ದೊರೆತಿದೆ. ಈಗ ಅಧಿಕೃತವಲ್ಲದ ಭಾಷೆಗಳವರೂ ತಮ್ಮ ಭಾಷೆಗಳನ್ನು ಅಧಿಕೃತಗೊಳಿಸಿ ಶಿಕ್ಷಣ ಸೌಲಭ್ಯವನ್ನು ಕೊಡಿ ಎಂದು ಕೇಳಬಹುದು. ಆದ್ದರಿಂದ ಮಾತೃಭಾಷೆಯೆಂಬ ಸುಂದರವಾದ ಪದವನ್ನು ಪಕ್ಕಕ್ಕಿಟ್ಟು, ಪರಿಸರದ ಭಾಷೆ ಅಥವಾ ಆ ರಾಜ್ಯದಲ್ಲಿ ಅಧಿಕೃತವಾಗಿ ಆಡಳಿತ- ವ್ಯವಹಾರಗಳಲ್ಲಿರುವ ಪ್ರಾದೇಶಿಕ ಭಾಷೆ ಎಂಬ ಪದವನ್ನು ಬಳಸಿದರೆ ಸ್ವಲ್ಪಮಟ್ಟಿನ ಖಚಿತತೆ ಬಂದೀತು.

ಈಗ ನಮ್ಮ ಪ್ರಾದೇಶಿಕ ಭಾಷೆಗಳಿಗೆ ನ್ಯಾಯಾಲಯದ ತೀರ್ಪಿನಿಂದ ಬಂದ ಕುತ್ತಿನ ಬಗ್ಗೆ ಚರ್ಚಿಸುವ ಮೊದಲು ಎರಡು ಉದಾಹರಣೆಗಳನ್ನು ಕೊಡುತ್ತೇನೆ.

ಕೆಲವು ವರ್ಷಗಳ ಹಿಂದೆ ನಮ್ಮೂರು ಸಕಲೇಶಪುರದಲ್ಲಿ ಒಬ್ಬರು ಶಿಕ್ಷಣಾಧಿಕಾರಿಗಳಿದ್ದರು. kannada-schoolತುಂಬ ದಕ್ಷರೆಂದೂ ಸಜ್ಜನರೆಂದೂ ಹೆಸರಾದವರು. ಆ ಕಾಲದಲ್ಲೇ ಸಕಲೇಶಪುರದಲ್ಲಿ ಎರಡು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿದ್ದವು. ಸರ್ಕಾರಿ ಪ್ರೌಡಶಾಲೆಯಲ್ಲೂ ಇಂಗ್ಲಿಷ್ ಮಾಧ್ಯಮ ಇತ್ತು. ಸಕಲೇಶಪುರದ ಬೇರೆಲ್ಲ ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದರು. ಆದರೆ ಈ ಶಿಕ್ಷಣಾಧಿಕಾರಿಯವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದರು. ಯಾರೋ ಈಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಅವರೆಂದರು, “ನಾನೇ ಶಿಕ್ಷಣಾಧಿಕಾರಿಯಾಗಿ ನನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲೆ? ನನ್ನ ಮಕ್ಕಳು ಕನ್ನಡಲ್ಲೇ ಕಲಿತು ಒಳ್ಳೆಯವರಾಗಿ ಬಾಳಿದರೆ ಸಾಕು.” ಈ ಮಾತು ಇಂದಿಗೆ ಸ್ವಲ್ಪ ಅಪ್ರಸ್ತುತವೆನಿಸಿಕೊಳ್ಳುವ ಆದರ್ಶದ ಸ್ಥಿತಿಯೆನಿಸಿದರೂ ಇಂಥವರು ಈಗಲೂ ಇದ್ದಾರೆ. ಆದರೆ ಇಂತಹ ಉದಾಹರಣೆಯನ್ನು ಸಾರ್ವತ್ರಿಕವಾಗಿ ನಾವು ಕಾಣಲು ಸಾಧ್ಯವಿಲ್ಲ.

ಎರಡನೆಯದು; ಇತ್ತೀಚೆಗೆ ಸಕಲೇಶಪುರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅಂದಿನ ಗೋಷ್ಟಿಯೊಂದರಲ್ಲಿ ಬ್ಯಾಂಕಿನ ಅಧಿಕಾರಿಯೊಬ್ಬರು ಮಾತನಾಡುತ್ತಾ “ನಾವು ಕನ್ನಡ ಉಳಿಯಬೇಕೆನ್ನುತ್ತೇವೆ, ಆದರೆ ಉಳಿಸುವ ಪ್ರಯತ್ನವಾಗಿ ನಮ್ಮಲ್ಲಿ ಈಗ ಇರುವ ಸೌಲಭ್ಯಗಳನ್ನೂ ಬಳಸಿಕೊಳ್ಳದಿದ್ದರೆ ಹೇಗೆ?” ಎಂದು ಹೇಳಿ “ಈಗ ಎಲ್ಲ ಎ.ಟಿ.ಎಂ.ಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದರೆ ಅದನ್ನು ಬಳಸುವವರ ತೀರ ಕಡಿಮೆ (ಗ್ರಾಹಕ ಯಾವ ಭಾಷೆಯನ್ನು ಬಳಸುತ್ತಾನೆಂಬ ಅಂಕಿ ಅಂಶವೂ ಎ.ಟಿ.ಎಂ. ಮೂಲಕವೇ ಬ್ಯಾಂಕಿಗೆ ತಿಳಿಯುತ್ತದೆ) ಕನ್ನಡ ಭಾಷಾ ಸೌಲಭ್ಯವನ್ನು ಬಳಸುವವರ ಸಂಖ್ಯೆ ಹೆಚ್ಚಾದರೆ ಇತರ ವ್ಯವಹಾರಗಳಿಗೂ ಕನ್ನಡ ಭಾಷಾ ಸೌಲಭ್ಯ ಕಲ್ಪಿಸುವುದು ಬ್ಯಾಂಕುಗಳಿಗೆ ಅನಿವಾkannada_Kuvempuರ್ಯವಾಗುತ್ತದೆ. ಅದಕ್ಕಾಗಿ ಕನ್ನಡ ತಂತ್ರಾಂಶಗಳ ನಿರ್ಮಾಣ ಮಾಡಬೇಕಾಗುತ್ತದೆ. ಕನ್ನಡ ಉದ್ಯೋಗಗಳು ಹೆಚ್ಚುತ್ತವೆ” ಎಂದರು. ಖಂಡಿತವಾಗಿಯೂ ಇದು ಅತ್ಯಂತ ಪ್ರಾಕ್ಟಿಕಲ್ ಆದಂತಹ ಆದರ್ಶ. ಸಾರ್ವತ್ರಿಕವಾಗಿ ನಾವು ಮಾಡಬಹುದಾದದ್ದು.

ಆದರೆ ಇಂಗ್ಲಿಷ್‌ ಜ್ಞಾನ ಅಷ್ಟಾಗಿ ಇಲ್ಲದೆ ಇರುವವರೂ ಸಹ ಹೆಚ್ಚಾಗಿ ಎ.ಟಿ.ಎಂ.ಗಳಲ್ಲಿ. ಬ್ಯಾಂಕಿನ ಇತರ ವ್ಯವಹಾರಗಳಲ್ಲಿ ಇಂಗ್ಲಿಷನ್ನೇ ಬಳಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವರಲ್ಲಿ ಅನೇಕರು (ತೀರ ಕಡಿಮೆ ಶಾಲಾವಿದ್ಯಾಭ್ಯಾಸ ಇರುವವರು) ಇಂಗ್ಲಿಷ್ ಬಳಸದಿದ್ದರೆ ಇತರರು ತಮ್ಮನ್ನು ಕೀಳಾಗಿ ಕಾಣುತ್ತಾರೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಇಂಗ್ಲಿಷ್ ಸುಲಭವೆಂದೋ ಇಲ್ಲವೇ ಆ ಮೂಲಕ ನಾವು ಇಂಗ್ಲಿಷ್ ಕಲಿಯುತ್ತಿದ್ದೇವೆಂದೋ ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಎಷ್ಟೋ ಕಡೆಗಳಲ್ಲಿ ಸರಿಯಾದ ತಂತ್ರಾಂಶ ಮತ್ತು ಭಾಷೆ ಬಳಕೆಯಾಗದೆ ಕನ್ನಡದ ವಿವರಣೆಗಳೇ ಗೊಂದಲಮಯವಾಗಿವೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಮಾನ, ಪ್ರಾದೇಶಿಕ ಭಾಷೆಗಳು ಮತ್ತು ಜನಸಾಮಾನ್ಯರ ನಡವಳಿಕೆಗಳ ಬಗ್ಗೆ ಯೋಚಿಸೋಣ.

ಎಲ್ಲ ಜನರೂ ಸಾಮಾನ್ಯರೇ. ಆದರೆ ಕಲಿತ ವಿದ್ಯೆ-ಸಂಸ್ಕಾರಗಳಿಂದ, ಜೀವನಾನುಭವದಿಂದ ಅಸಾಮಾನ್ಯರಾಗಿ ಬೆಳೆಯುತ್ತಾರೆ. ಅಂತಹವರಲ್ಲಿ ಅನೇಕ ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು, ಜನಪರ ಹೋರಾಟಗಾರರೂ ಇರುತ್ತಾರೆ. ಇವರಲ್ಲಿ ತಮಗೆ ಮಾತ್ರವಲ್ಲ ಸಮಾಜಕ್ಕೆ ಯಾವುದು ಒಳಿತು ಎನ್ನುವುದರ ಬಗ್ಗೆ ತಮ್ಮದೇ ಆದ ಖಚಿತ ನಿಲುವು- ಅಭಿಪ್ರಾಯಗಳಿವೆ. ಹಾಗೆಯೇ ಜನಸಾಮಾನ್ಯರು ಎನಿಸಿಕೊಂಡವರಲ್ಲೂ ಹೆಚ್ಚಿನವರು ಸಜ್ಜನರೂ ತಮ್ಮ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಪ್ರೀತಿಗಳನ್ನಿಟ್ಟುಕೊಂಡವರೂ ಇದ್ದಾರೆ. ಆದರೆ ಇದರೊಂದಿಗೆ ಇವರಿಗೆ ಬದುಕು ಕಲಿಸಿಕೊಟ್ಟಂತಹ ವಿವೇಕವಿದೆ. ಪ್ರತಿಕ್ಷಣವೂ ಬದುಕಿನ ಹೋರಾಟವಿದೆ. ಇಂದು ನಾಳೆಯ ಕನಸುಗಳಿವೆ ಒಂದುಕಾಲದಲ್ಲಿ ಕನಸು ಕಾಣಲೂ ಸಾಧ್ಯವಿಲ್ಲದಿದ್ದ ಜನಾಂಗಗಳು ಇಂದು ಕನಸು ಕಾಣುವ ಮಟ್ಟಿಗಾದರೂ ಬೆಳೆದಿವೆ. ಇವೆಲ್ಲದರ ನಡುವೆ ಹಗಲುಗನಸನ್ನು ಮಾರುವ ಮಾಧ್ಯಮಗಳಿವೆ.

ಇದಕ್ಕೆ ಎರಡು ಉದಾಹರಣೆಗಳನ್ನು ನೀಡುತ್ತೇನೆ. ನಮ್ಮೂರಿನಲ್ಲಿ ಗಾರೆಕೆಲಸ ಮಾಡುತ್ತಿದ್ದವರ ಮಗನೊಬ್ಬ ಮುಂಬೈಗೆ ಹೋದ ಅಲ್ಲಿ ಅಡಿಗೆ ಕೆಲಸ ಕಲಿತು ವೆಸ್ಟ್ ಇಂಡೀಸ್‌ನ ಹಡಗೊಂದರಲ್ಲಿ ಕೆಲಸಕ್ಕೆ ಸೇರಿದ. ಅಲ್ಲೀಗ ಮುಖ್ಯ ಬಾಣಸಿಗನಾಗಿದ್ದಾನೆ. government_schoolಆಗಾಗ ಊರಿಗೂ ಬರುತ್ತಾನೆ. ಇಲ್ಲಿ ಒಳ್ಳೆಯ ಮನೆಯೊಂದನ್ನು ಕಟ್ಟಿಸಿದ್ದಾನೆ. ಆತನ ಸಂಸಾರವೂ ಇಲ್ಲೇ ನೆಲೆಸಿದೆ. ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯತ್ತಿದ್ದಾರೆ. ಹಲವಾರು ದೇಶ ಸುತ್ತಿರುವ ಈತ ಬಂದಾಗಲೆಲ್ಲ ಊರಿನ ಮಕ್ಕಳಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿ ಎಂದು ಸಲಹೆ ನೀಡುತ್ತಾನೆ. ಅವನ ಅನುಭವ ಸುಳ್ಳಲ್ಲ.

ನಮ್ಮ ತಾಲ್ಲೂಕಿನ ಹುಡುಗಿಯೊಬ್ಬಳು ಕಷ್ಟದಿಂದ ಕನ್ನಡ ಶಾಲೆಯಲ್ಲಿ ಕಲಿತು ಮುಂದೆ ಎಂ.ಎಸ್‌ಸಿ ಓದಿ ಇಲ್ಲೇ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಳು. ಇದೀಗ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಬೆಂಗಳೂರಿನ ಯಾವ ಕಾಲೇಜಿನಲ್ಲೂ ಅವಳಿಗೆ ಕೆಲಸ ಸಿಗಲಿಲ್ಲ. ಕಾರಣ ಸಂದರ್ಶನಕ್ಕೆ ಹೋದಲ್ಲೆಲ್ಲ “ನೀನು ಪಾಠವೇನೋ ಮಾಡುತ್ತೀಯಾ, ಆದರೆ ಮಾತನಾಡುವಾಗ ನಿನ್ನ ಇಂಗ್ಲಿಷ್ ಸರಿಯಾಗಿಲ್ಲ” ಎನ್ನುತ್ತಿದ್ದರಂತೆ. ಈಗ ಇಂಗ್ಲಿಷ್ ಕ್ಲಾಸಿಗೆ ಸೇರಿದ್ದಾಳೆ ಮತ್ತು ಊರಿಗೆ ಬಂದಾಗಲೆಲ್ಲ ಬೇರೆಯವರಿಗೆ ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೇ ಕಳುಹಿಸಿ ಎನ್ನುತ್ತಾಳೆ.

ಪ್ರಾದೇಶಿಕ ಭಾಷೆಗಳು ಇದುವರೆಗೂ ಉಳಿದು ಬಂದಿರುವುದು ಹಳ್ಳಿಗಳಲ್ಲಿ ಅದೂ ಸ್ಥಿತಿವಂತರಲ್ಲದ ಕೆಳವರ್ಗದ ಜನರಿಂದ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರೂ ಅವರ ಮಕ್ಕಳೇ. (ಗ್ರಾಮೀಣ ಪ್ರದೇಶದ ಮೇಲ್ವರ್ಗದ-ಶ್ರೀಮಂತರ ಮನೆಗಳಲ್ಲಿ ಈಗಾಗಲೇ ಇಂಗ್ಲಿಷ್ ಆಡುಭಾಷೆಯಾಗಿಯೇ ಪ್ರವೇಶಿಸಿದೆ.) ಪ್ರಪಂಚದ ಅನೇಕ ಮುಂದುವರೆದ ದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಲ್ಲ. ಹಾಗೇ ಹಲವು ದೇಶಗಳಲ್ಲಿ ಇಂಗ್ಲಿಷ್ ಇಲ್ಲವೇ ಇಲ್ಲ ಎಂದು ಯಾರೆಷ್ಟೇ ಹೇಳಿದರೂ ಸಾಮಾನ್ಯರಿಗೆ ಇಂಗ್ಲಿಷ್ ಇಂದು ಪ್ರಪಂಚದ ಹೆಬ್ಬಾಗಿಲಾಗಿಯೇ ಕಾಣುತ್ತಿದೆ. ಮತ್ತು ಆ ಮೂಲಕ ಒಳ್ಳೆಯ ಉದ್ಯೋಗಾವಕಾಶ ಮತ್ತು ಬದುಕಿನ ಕನಸನ್ನು ಕಾಣುತ್ತಿದ್ದಾರೆ. ಇಂಗ್ಲಿಷ್ ಕಲಿಯದಿದ್ದರೆ ನಾವು ಎರಡನೆ ದರ್ಜೆ ಪ್ರಜೆಗಳಾಗಿಯೇ ಉಳಿದುಬಿಡುತ್ತೇವೆನ್ನುವ ಭಯವೂ ಕೆಳವರ್ಗದ ಜನರಲ್ಲಿ ವ್ಯಾಪಕವಾಗಿದೆ.

ಆದರೆ ನಾವು ಅಸಾಮಾನ್ಯರೆಂದು ಹೇಳುವ ಅನೇಕರಲ್ಲೂ ಈ ರೀತಿಯ ಭಾವನೆ ಮತ್ತು ಸಾಮಾನ್ಯನ ಕನಸುಗಳಿವೆ. ಅವರಲ್ಲಿ ನೆಲ-ಜಲ-ಭಾಷೆಗಳಿಗೆ ಸಂಬಂಧಪಟ್ಟಂತೆ ಖಚಿತ ನಿಲುವು, ಸಿದ್ಧಾಂತ ಏನೇ ಇದ್ದರೂ ಸ್ವಂತದ ವಿಷಯಕ್ಕೆ ಬಂದಾಗ ಸಾಮಾನ್ಯನ ವಿವೇಕದ ಕಡೆಗೆ ವಾಲುತ್ತಾರೆ ಮತ್ತು ಪರಿಸ್ಥಿತಿಯೊಡನೆ ರಾಜಿ ಮಾಡಿಕೊಳ್ಳುತ್ತಾರೆ. ಆದ್ದರಿಂದಲೇ ನಾವು ಅನೇಕ ಬಾರಿ ’ಈ ಬುದ್ಧಿವಂತರು- ಹೋರಾಟಗಾರರು ನಮ್ಮ ಮಕ್ಕಳಿಗೆ ಮಾತ್ರ ಕನ್ನಡ ಶಾಲೆಯ ಉಪದೇಶಮಾಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಿದ್ದಾರೆ’ ಎಂಬ ದೂರು ಕೇಳಿಬರುತ್ತದೆ

ಈ ಎಲ್ಲ ಕಾರಣಗಳಿಂದಾಗಿ ಇಂದು ನಗರ- ಹಳ್ಳಿ ಎರಡೂ ಕಡೆಗಳಲ್ಲೂ ನಾನಾ ರೀತಿಯ ಇಂಗ್ಲಿಷ್ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಇವುಗಳ ಗುಣಮಟ್ಟದಲ್ಲಿ ಕೂಡಾ ಅಪಾರ ವೆತ್ಯಾಸಗಳಿವೆ. ಆದರೂ ಜನ ತಮ್ಮ ಅನುಕೂಲಕ್ಕೆ ತಕ್ಕಂತ ಇಂಗ್ಲಿಷ್ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ಹಳೆಯ ತಾರತಮ್ಯದ ಸಮಾಜವೇ ಹೊಸ ವೇಷದಲ್ಲಿ ಮುಂದುವರಿಯುತ್ತಿದೆ.

ಇವುಗಳ ಮಧ್ಯೆ ಕನ್ನಡವೇ ಅಥವಾ ಮಾತೃಭಾಷೆಯೇ ಎಂಬ ವಿವಾದ ಹುಟ್ಟಿಕೊಂಡಿದೆ. ಭಾಷಾ ಅಲ್ಪಸಂಖ್ಯಾತರ ಹೆಸರಿರಲಿ ಇನ್ನೇನೇ ಇರಲಿ, ಎಲ್ಲ ಶಾಲೆಗಳಲ್ಲೂ ಭಾರತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವುದು ಇಂಗ್ಲಿಷ್ ಭಾಷೆಯೇ. ಅನೇಕ ಉರ್ದು ಶಾಲೆಗಳೂ ಸಹ ಸರ್ಕಾರಿ ಕನ್ನಡ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿವೆ.

ನನಗೆ ಪರಿಚಯದರೊಬ್ಬರ ಮಗ ಇತ್ತೀಚೆಗೆ ಚೆನ್ನೈನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ. private-schoolಅತ್ಯಲ್ಪ ಕಾಲದಲ್ಲೇ ಭಡ್ತಿಯನ್ನೂ ಪಡೆದ. ಅವನ ಮೇಲಧಿಕಾರಿಯೊಬ್ಬರು (ಅವರು ತಮಿಳರು) ಅವನನ್ನು ಕರೆದು ’ನಿನ್ನ ಬಗ್ಗೆ ನನಗೆ ತುಂಬಾಹೆಮ್ಮೆ, ನೀನು ಇಲ್ಲಿ ಎಲ್ಲರೊಡನೆ ಬೆರೆತು ಖುಷಿಯಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಇಲ್ಲಿನ ಭಾಷೆ ನಿನಗೆ ಅರ್ಥವಾಗಬೇಕು, ಜೋಕುಗಳಿಗೆ ನಗಬೇಕು, ಇತರರು ನಿನ್ನ ಬಗ್ಗೆ ಆಡಿದ ಮಾತು ನಿನಗೆ ತಿಳಿಯಬೇಕು, ಆದ್ದರಿಂದ ನೀನು ತಮಿಳು ಕಲಿಯಬೇಕು. ಇಂದಿನಿಂದ ನಾನು ನಿನ್ನೊಡನೆ ತಮಿಳಿನಲ್ಲಿ ಮಾತ್ರ ಮಾತನಾಡುತ್ತೇನೆ’ ಎಂದು ಹೇಳಿ ಅದರಂತೆ ನಡೆದು, ಮೂರು ತಿಂಗಳಲ್ಲಿ ಆತ ತಮಿಳಿನಲ್ಲಿ ಮಾತನಾಡುವಂತೆ ಮಾಡಿದ್ದಾರೆ.

ಎಲ್ಲಿ ನಮ್ಮ ದಿನ ನಿತ್ಯದ ಬದುಕಿಗೆ ಯಾವ ಭಾಷೆ ಅನಿವಾರ್ಯವೋ ಆ ಭಾಷೆಯನ್ನು ಜನರು ಸ್ವೀಕರಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ. ಇತ್ತೀಚೆಗೆ ಕಾಫಿ ತೋಟಗಳಿಗೆ ಕೆಲಸಕ್ಕಾಗಿ ಬರುತ್ತಿರುವ ಅಸ್ಸಾಮಿಗಳೆಂದುಕೊಳ್ಳುತ್ತಿರುವ ಕೃಷಿ ಕಾರ್ಮಿಕರು, ಬಂದು ವರ್ಷವಾಗುವಷ್ಟರಲ್ಲೇ ಇವರಲ್ಲಿ ಸಾಕಷ್ಟು ಮಂದಿ ಕನ್ನಡದಲ್ಲಿ ವ್ಯವಹರಿಸುವಷ್ಟು ಕಲಿತಿದ್ದಾರೆ. ಬ್ಯಾಂಕುಗಳಲ್ಲಿರುವ ಉತ್ತರ ಬಾರತೀಯರೂ ಇಲ್ಲಿ ಬಂದು ಸಾಕಷ್ಟು ಕನ್ನಡ ಕಲಿತಿದ್ದಾರೆ. ಆದರೆ ತಲೆಮಾರುಗಳಿಂದ ಇಲ್ಲೇ ನೆಲಸಿದ್ದ ತಮಿಳು ಕಾರ್ಮಿಕರು ಇತ್ತೀಚೆಗಷ್ಟೇ ಕನ್ನಡ ಮಾತನಾಡುತ್ತಿದ್ದಾರೆ. ಈ ಬದಲಾವಣೆಗೆ ತಮಿಳರಲ್ಲ, ಕೆಲಮಟ್ಟಿಗೆ ಬದಲಾದ ಕನ್ನಡಿಗರ ಮನೋಭಾವವೂ ಕಾರಣ. ಆದರೆ ಈ ಮೇಲಿನ ಎರಡು ಸಂದರ್ಭದ ನಡವಳಿಕೆಗಳಿಂದ ಇಂಗ್ಲಿಷಿನ ವಿರುದ್ಧ ತಮಿಳಿಗಾಗಲೀ ಕನ್ನಡಕ್ಕಾಗಲೀ ಬಹಳ ದೊಡ್ಡ ಲಾಭವೇನೂ ಆಗಲಾರದು.

ಎಲ್ಲಿಯವರೆಗೆ ಯಾವುದೇ ಭಾಷೆ ಜನಪದರ ಅನ್ನ ಮತ್ತು ಅಭಿವ್ಯಕ್ತಿ ಎರಡರ ಭಾಷೆಯೂ ಆದಾಗ ಮಾತ್ರ ಅದು ಉಳಿದು ಬೆಳೆಯಬಲ್ಲದು. ಅನೇಕ ವರ್ಷಗಳ ಹಿಂದೆಯೇ ಲಂಕೇಶರು “ಆಧುನಿಕ ಸಮಸ್ಯೆಗಳನ್ನು, ಪ್ರಜ್ಞೆಯನ್ನು ಹೇಳಲಾಗದಿದ್ದರೆ ಕನ್ನಡ ಕೂಡಾ ಬೇಡವಾಗುತ್ತದೆ” ಎಂದದ್ದು ಈ ಅರ್ಥದಲ್ಲಿಯೇ.

ಈ ಎಲ್ಲ ವಿಚಾರಗಳನ್ನೂ ಗಮನಿಸಿ ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕಾದ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವಾಗಲೀ ಕನ್ನಡ ಸಾಹಿತ್ಯ ಪರಿಷತ್ತಾಗಲೀ ಏನು ಮಾಡಬಹುದೆಂಬ ವಿಚಾರಕ್ಕೆ ಬರೋಣ. ಯಾವುದೇ ಸರ್ಕಾರವಾಗಲೀ ಜನರಿಂದ ಬಲವಾದ ಒತ್ತಡ ಬಾರದೆ ಯಾವ ಕೆಲಸವನ್ನೂ ಮಾಡಲಾರದು. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಅನಿವಾರ್ಯವಾದ್ದರಿಂದ ಮತ್ತು ಆಕಾರಣಕ್ಕಾಗಿಯೇ ಹೆಚ್ಚಿನ ಎಲ್ಲಾ ರಾಜಕಾರಣಿಗಳೂ ಎಲ್ಲವನ್ನೂ ಓಟಿನ ಸಂಖ್ಯೆಗಳಾಗಿ ನೋಡುವುದರಿಂದ ಬಲವಾದ ಚಳುವಳಿಯ ರೂಪದ ಸಂಘಟನೆಗಳ ಮೂಲಕ- ಆಂದೋಲನಗಳ ಮೂಲಕ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಮಾಡಬೇಕಾಗಿದೆ.

ಆದರೆ ಆ ರೀತಿಯ ಸಂಚಲನವನ್ನು ಉಂಟುಮಾಡಬಲ್ಲ ವ್ಯಕ್ತಿಗಳ ಬಗೆಗೇ ಜನ devanurಇಂದು ನಂಬಿಕೆ ಕಳೆದುಕೊಂಡಿದ್ದಾರೆ. ದೇವನೂರು ಮಹಾದೇವರಂತೆ, ಸುಂದರಲಾಲ್ ಬಹುಗುಣರಂತೆ, ಆದಷ್ಟೂ ನಡೆ-ನುಡಿಗೆ ಹತ್ತಿರವಾಗಿ ಬದುಕುತ್ತಿರುವವರು ಅನೇಕರು ಇಂದೂ ಇದ್ದಾರೆ. ಆದರೆ ವೈಯಕ್ತಿಕ ಪ್ರಯತ್ನಗಳು ಒಂದು ರೀತಿಯ ಸರ್ವಾಧಿಕಾರಿ ನಡೆಯತ್ತ ಚಲಿಸಬಲ್ಲುದೆಂಬ ಅರಿವೇ ಇಂದು ದೇವನೂರು ಮಹಾದೇವರಂತವರನ್ನು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗೆ, ಒಂದು ರೀತಿಯ ‘ಶಾಕ್ ಟ್ರೀಟ್‌ಮೆಂಟ್’ ನೀಡುವುದಕ್ಕೆ ಪ್ರೇರೇಪಿಸಿರಬೇಕು. ಆ ಕಾರಣಕ್ಕಾಗಿಯೇ ಅವರು “ಕನ್ನಡ ಸಾಹಿತ್ಯ ಪರಿಷತ್ತು ಪೊರೆ ಕಳಚಿ ನಿಲ್ಲಲಿ, ನಾನೂ ನಿಮ್ಮೊಡನಿರುವೆ” ಎಂದಿದ್ದಾರೆ ಎನಿಸುತ್ತದೆ.

ಇದನ್ನೇ ಇನ್ನೊಂದು ರೀತಿಯಲಿ ಹೇಳುವುದಾದರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದದ್ದೇ “ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ” ಎಂಬ ಘೋಷವಾಕ್ಯದೊಡನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಥಿಕ ರಚನೆಯೂ ಅದಕ್ಕೆ ಅನುಗುಣವಾಗಿ ಪ್ರಜಾಸತ್ತಾತ್ಮಕವಾಗಿ ಇದೆ. ಆದರೆ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿರುವ “ಸಾಹಿತ್ಯ” ಎಂಬುದನ್ನು ವಾಙ್ಮಯ ಸಾಹಿತ್ಯ ಎಂಬುದಕ್ಕೆ ಸೀಮಿತಗೊಳಿಸಿಕೊಂಡದ್ದರಿಂದಲೇ, ಇಂದು ಅನೇಕ ಗೊಂದಲಗಳಿಗೆ ಕಾರಣವಾಗಿದೆ ಎನಿಸುತ್ತದೆ. ಸಾಹಿತ್ಯ ಅಕಾಡೆಮಿ ಮಾಡಬಲ್ಲಂತ ಅನೇಕ ಕೆಲಸಗಳನ್ನು ಮಾಡುತ್ತ ನಿಜವಾದ ಕನ್ನಡದ ಕೆಲಸವನ್ನು ಮಾಡಬೇಕಿದ್ದ ಸಂಸ್ಥೆ ಭಾವನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡಿದೆ. ಇದರಿಂದಲೇ ವಿಜ್ಞಾನ ಪರಿಷತ್ತು, ರಂಗಭೂಮಿ ಪರಿಷತ್ತು ಇತ್ಯಾದಿ ಹೆಸರುಗಳೂ ಇತ್ತೀಚೆಗೆ ಕೇಳಿಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಈಗಲಾದರೂ ತನ್ನ ಮೂಲ ಉದ್ದೇಶಕ್ಕೆ ಮರಳಿ ಕನ್ನಡದ ಸಮಗ್ರತೆಯನ್ನು ಕನ್ನಡ ನೆಲದ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಸಂಸ್ಥೆಯಾಗಬೇಕಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ ಅದರ ಸಾಂಸ್ಥಿಕ ನಿಯಮದಂತೆ, kannada-sahithya-sammelanaಕನ್ನಡ ಬಲ್ಲ ಅಂದರೆ ಕನ್ನಡದಲ್ಲಿ ಮಾತಾಡಬಲ್ಲ, ವ್ಯವಹರಿಸಬಲ್ಲ ಯಾರು ಬೇಕಾದರೂ ಅದರ ಸದಸ್ಯರಾಗಬಹುದು. ಅಂದರೆ ಇದು ಕೇವಲ ಸಾಹಿತಿಗಳ, ಕಲಾವಿದರ ಸಂಸ್ಥೆ ಅಲ್ಲ, ಸಮಸ್ತ ಕನ್ನಡಿಗರ ಸಂಸ್ಥೆ. (ಮನೆಮಾತು ಬೇರೆ ಯಾವುದಿದ್ದರೂ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಯಾವ ಅಡ್ಡಿಯೂ ಇಲ್ಲ, ಸಾವಿರಾರು ಜನರು ಸದಸ್ಯರಾಗಿ ಇದ್ದಾರೆ) ಇದರ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಘಟಕಗಳ ಅಧ್ಯಕ್ಷರು ನೇರವಾಗಿ ಜನರಿಂದ ಚುನಾಯಿತರಾಗಿರುತ್ತಾರೆ. ಒಂದುವೇಳೆ ಕನ್ನಡದ ನೆಲದ ಶೇ. ೪೦ ರಷ್ಟು ಜನ ಇದರ ಸದಸ್ಯರಾಗಿದ್ದರೆ ಹಾಗೂ ಇದರ ಚುನಾಯಿತ ಪದಾಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡುವಷ್ಟು ಮತ್ತು ಅದನ್ನು ಅನುಷ್ಟಾನಗೊಳಿಸುವಂತೆ ಒತ್ತಡ ತರುವಷ್ಟು ಶಕ್ತರಾದರೆ ಏನಾದರೂ ಕೆಲಸ ಆಗಬಹುದು. ಸಮಾನ ಶಿಕ್ಷಣ ವ್ಯವಸ್ಥೆಯ ಜೊತೆಗೆ, ಕನ್ನಡ ಭಾಷೆಯ ಮೂಲಕವೇ ಉದ್ಯೋಗ ಸೃಷ್ಟಿ ಮಾಡಬಲ್ಲಂತ ವಾತಾವರಣ ನಿರ್ಮಾಣವಾದರೆ ಆಗ ಕನ್ನಡ ಜನರಿಗೆ ಅಗತ್ಯದ ಭಾಷೆಯಾಗುತ್ತದೆ, ಅನಿವಾರ್ಯವಾಗುತ್ತದೆ.

ಈಗ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ (ಪ್ರಾದೇಶಿಕ ಭಾಷೆಗಳ) ಸಾಂಸ್ಕೃತಿಕ ಲೋಕ ಮಾತ್ರ ಕನ್ನಡವನ್ನೇ (ಪ್ರಾದೇಶಿಕ ಭಾಷೆಗಳನ್ನೇ) ಹಿಡಿದುಕೊಂಡಿದೆ. (ಇಲ್ಲೂ ಕೂಡಾ ಕೆಲವು ಪ್ರಾದೇಶಿಕ ಭಾಷೆಗಳ ಮೇಲೆ, ರಾಷ್ರ್ಟೀಯತೆ- ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿಯ ಹೇರಿಕೆಯೂ ನಡೆಯುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ರಾಷ್ಟ್ರೀಯ ನಾಟಕ ಶಾಲೆಗೆ ಪ್ರವೇಶ ಪಡೆಯಲು ಹಿಂದಿಜ್ಞಾನವನ್ನು ಕಡ್ಡಾಯಗೊಳಿಸಿರುವುದು). ಇದಕ್ಕೆ ಕಾರಣ ನಮ್ಮ ಅದು ನಮ್ಮ ಅಭಿವ್ಯಕ್ತಿಯ ಅತ್ಯಂತ ಸಹಜ ಸಾಧನವೆಂಬುದಷ್ಟೇ ಅಲ್ಲ, ಅದಕ್ಕೆ ಸಂಬಂಧಪಟ್ಟ ಎಲ್ಲ ಜ್ಞಾನವೂ ಆ ಭಾಷೆಗಳಲ್ಲಿರುವದು.

ಇದರೊಂದಿಗೆ ನಮ್ಮ ಕೃಷಿ ಮತ್ತು ಇನ್ನೂ ಉಳಿದಿರುವ ಕೃಷಿಸಂಬಂಧಿ ಕಸುಬುಗಳಾದ ಕಮ್ಮಾರಿಕೆ, ಬಡಗಿ, ಇತ್ಯಾದಿಗಳು, ಮತ್ತು ನೇಕಾರಿಕೆ, ಕುಂಭಕಲೆ, ಶಿಲ್ಪಕಲೆ, ಮುಂತಾದ ನಮ್ಮ ಅನೇಕ ಪಾರಂಪರಿಕ ವಿದ್ಯೆಗಳು. ನಾಟಿ ಮತ್ತು ಆಯುರ್ವೇದ ವೈದ್ಯ ಪದ್ಧತಿಗಳು. ಇವುಗಳ ಜ್ಞಾನವೆಲ್ಲ ಹೆಚ್ಚಾಗಿ ಅವರವರ ಮನೆಮಾತು ಮತ್ತು ಪರಿಸರದ ಭಾಷೆಗಳಲ್ಲಿ ಇದೆ. ಅವರ ಪಾರಂಪರಿಕ ಜ್ಞಾನದ ಭಾಷೆಯ ಮೂಲಕ ಈ ವಿದ್ಯೆಯನ್ನವರು ಮುಂದಿನ ಪೀಳಿಗೆಗೆ ದಾಟಿಸುತ್ತಾ ಬಂದಿದ್ದಾರೆ. ಅವರು ಅದರ ಮೂಲಕವೇ ಅನ್ನ ಗಳಿಸುತ್ತ ವ್ಯವಹಾರಕ್ಕೆ ತಕ್ಕಷ್ಟು ರಾಜ್ಯ ಭಾಷೆಯ ಜ್ಞಾನವನ್ನು ಪಡೆದಿದ್ದಾರೆ. ಆದ್ದರಿಂದ ನಮ್ಮ ಯಾವುದೇ ಪ್ರಾದೇಶಿಕ ಭಾಷೆಯೂ ಜನರಿಗೆ ಬದುಕಿಗೆ ನೆಮ್ಮದಿ ತರುವಷ್ಟು ಶಕ್ತವಾಗುವಂತೆ ಮಾಡುತ್ತಲೇ ವ್ಯವಹಾರ ಸಂಪರ್ಕಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನೋ ಇನ್ನಾವುದೇ ಭಾಷೆಯನ್ನು ಚೆನ್ನಾಗಿ ಕಲಿಯುವದು ಕಷ್ಟವಲ್ಲ. ಅದಕ್ಕಾಗಿ ಆ ಭಾಷೆಯ ಮಾಧ್ಯಮದಲ್ಲೇ ಕಲಿಯುವ ಅಗತ್ಯವೂ ಇಲ್ಲ. ಈ ವಿಚಾರ ಜನರಿಗೆ ಮನದಟ್ಟಾಗುವಂತಹ, ಅದರಲ್ಲಿ ನಂಬಿಕೆ ಬರುವಂತಹ ಕೆಲಸವನ್ನು ವ್ಯಾಪಕವಾಗಿ ಮಾಡದೆ, ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹೇಳುತ್ತ-ಚರ್ಚಿಸುತ್ತಾ ಕುಳಿತರೆ ಪ್ರಯೋಜನವಾಗಲಾರದು.

ಇದರಿಂದಲೇ ನಮ್ಮ ಬದುಕಿನ ಎಲ್ಲಾ ವಿಭಾಗಗಳ ಅಂದರೆ ಸಾಹಿತ್ಯ ಕಲೆಗಳ ಜೊತೆಯಲ್ಲಿ ವಿಜ್ಞಾನ, ಗಣಿತ, ಲೆಕ್ಕ ಪತ್ರಗಳ ವ್ಯವಹಾರಗಳು, ತಂತ್ರಜ್ಞಾನ, ಕೃಷಿ, ವೈದ್ಯಕೀಯ ಸಂಬಂಧಿತ ಎಲ್ಲ ತಿಳುವಳಿಕೆಯನ್ನು ಕನ್ನಡದಲ್ಲಿ ದೊರಕಿಸಿಕೊಡುವ ಕೆಲಸವನ್ನು ಸಾಹಿತ್ಯ ಪರಿಷತ್ತು ಸರ್ಕಾರದ ಮೂಲಕ ಮಾಡಿಸುವ ಕೆಲಸಕ್ಕೆ ತೊಡಗಿಕೊಳ್ಳಬೇಕು. ಪರಿಷತ್ತಿಗೆ ಸಮ್ಮೇಳನ, ಜಾತ್ರೆ, ಉತ್ಸವಗಳು, ಗೋಷ್ಟಿಗಳಿಗಿಂತ ಈ ಕೆಲಸಗಳು ಪ್ರಥಮ ಆದ್ಯತೆಯದ್ದಾಗಬೇಕು.

ನಮಗೆ ಇಂಗ್ಲಿಷಿನ ಮೂಲಕ ಮಾತ್ರ ಬರಬಹುದಾದ ಜ್ಞಾನದಲ್ಲಿ ಸಾಕಷ್ಟನ್ನು ಕೇವಲ ಪ್ರಾದೇಶಿಕ ಭಾಷೆಗೆ ತರ್ಜುಮೆ ಮತ್ತು ಡಬ್ಬಿಂಗ್ ಮೂಲಕ ಪಡೆಯಬಹುದಾಗಿದೆ. ಟಿ.ವಿ. ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ವಿಷಾದದ ಸಂಗತಿಯೆಂದರೆ ಕೃಷಿಯಲ್ಲಿ ನಮ್ಮ ಪಾರಂಪರಿಕ ಮತ್ತು ಆಧುನಿಕ ಜ್ಞಾನಗಳೆರಡೂ ಸಾಕಷ್ಟಿದ್ದರೂ ಕೃಷಿ ವಿದ್ಯಾಲಯಗಳೂ ಇಂಗ್ಲಿಷಿನಲ್ಲಿ ಬೋಧಿಸುತ್ತಿರುವುದು.

ಇಂಗ್ಲಿಷಿನ ಅಥವಾ ಇನ್ನಾವುದೇ ಭಾಷೆಯನ್ನು ಅಗತ್ಯವಿದ್ದಷ್ಟು ಕಲಿಯತ್ತಲೇ ಕನ್ನಡವನ್ನು ನಮ್ಮ ಸಹಜ ಅಭಿವ್ಯಕ್ತಿ ಮತ್ತು ಅನ್ನಗಳಿಕೆಯ ಭಾಷೆಯನ್ನಾಗಿಸಿ, ಅದರಿಂದ ಬರುವ ಜ್ಞಾನದಮೂಲಕ ಕಟ್ಟದಬಹುದಾದ ಬದುಕಿನ ವೈವಿದ್ಯಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡಲು. ಅದಕ್ಕಾಗಿ ನ್ಯಾಯಾಲಯದ ಯಾವುದೇ ಆದೇಶಕ್ಕೆ ವಿರುದ್ಧವಾಗದಂತೆ ಕಾರ್ಯಕ್ರಮ ರೂಪಿಸಲು ಪ್ರಜಾಪ್ರಭುತ್ವದಲ್ಲಿ ಯಾವುದೇ ಚುನಾಯಿತ ಸರ್ಕಾರಕ್ಕೆ ಸಾಧ್ಯವಿದೆ. ಸರ್ಕಾರವನ್ನು ಎಚ್ಚರಿಸುವ, ತಿದ್ದುವ, ಜನರತ್ತ ನೋಡುವಂತೆ ಮಾಡುವ ಕೆಲಸವನ್ನು, ಕನ್ನಡ ಸಾಹಿತ್ಯ ಪರಿಷತ್ತಾಗಲೀ ಇನ್ನಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ಮಾಡಲಿ ಅದರೊಂದಿಗೆ ಸೇರಿ ಕೆಲಸ ಮಾಡತೊಡಗುವುದನ್ನು ಬಿಟ್ಟು ದೇವನೂರರ ಸಾತ್ವಿಕ ಸಿಟ್ಟಿಗಾಗಲೀ, ನಮ್ಮಂತವರ ತುಡಿತಕ್ಕಾಗಲೀ ಸಧ್ಯಕ್ಕೆ ಅನ್ಯಮಾರ್ಗವಿಲ್ಲವೆನಿಸುತ್ತದೆ.

ಎಚ್.ಎಸ್.ದೊರೆಸ್ವಾಮಿ : ವರ್ತಮಾನ.ಕಾಮ್‌ನ (2014) ವರ್ಷದ ವ್ಯಕ್ತಿ

ವರ್ತಮಾನ ಬಳಗ

ವಯಸ್ಸು 96 ದಾಟಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಪ್ರಯಾಣಿಸಿ ಆಯಾಸಗೊಂಡಿರಬಹುದು. ಸಿರಿಮನೆ ನಾಗರಾಜ್ ಹಾಗೂ ನೂರ್ ಜುಲ್ಫಿಕರ್ ಅವರನ್ನು ಮುಖ್ಯವಾಹಿನಿಗೆ ಕರೆತರುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಮಾತುಕತೆ, ಸಭೆಗಳು, ಪತ್ರಿಕಾ ಗೋಷ್ಟಿಗಳು, ನೆರೆದಿದ್ದ ನೂರಾರು ಜನ.. – ಈ ಎಲ್ಲಾ ಕಾರಣಗಳಿಂದಾಗಿ ಹಿರಿಯ ಜೀವ ಸುಸ್ತಾಗಿರಬಹುದು. ಅವರನ್ನು ಆದಷ್ಟು ಬೇಗ ಬೆಂಗಳೂರಿನಲ್ಲಿ ಅವರ ಮನೆಗೆ ತಲುಪಿಸಿ doreswamy-ex-naxalsವಿಶ್ರಾಂತಿ ತೆಗೆದುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಜೊತೆಗಾರರು ಯೋಚಿಸುತ್ತಿದ್ದರೆ, ಅವರು ಇತರೆ ಗೆಳೆಯರೊಂದಿಗೆ ಬಳ್ಳಾರಿಗೆ ಹೊರಟು ನಿಂತಿದ್ದಾರೆ! “ನನಗೆ ಅಲ್ಲೊಂದು ಕಾರ್ಯಕ್ರಮವಿದೆ. ಬರುತ್ತೇನೆ ಎಂದು ಹೇಳಿದ್ದೇನೆ..” ಎಂದು ಬೆಂಗಳೂರಿನ ಸ್ನೇಹಿತರನ್ನು ಗೊಂದಲಕ್ಕೀಡುಮಾಡಿದವರು ಎಚ್.ಎಸ್.ದೊರೆಸ್ವಾಮಿ.

ಕರ್ನಾಟಕದ ಮಟ್ಟಿಗೆ ‘ನಮ್ಮ ನಡುವೆ ಇರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ’ ಎಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ದೊರೆಸ್ವಾಮಿ. ವಯಸ್ಸು, ಅನಾರೋಗ್ಯ ಎಂಬೆಲ್ಲಾ ಕಾರಣಗಳಿಗೆ ವಿಶ್ರಾಂತಿ ಜೀವನದ ಮೊರೆಹೋಗಿದ್ದರೆ, ಅವರನ್ನು ಯಾರೂ ಬೇಡ ಎನ್ನುತ್ತಿರಲಿಲ್ಲ. ಬದಲಿಗೆ ಅವರು ಬೀದಿ ಹೋರಾಟಕ್ಕೆ ಇಳಿದು ದುರ್ಬಲ ವರ್ಗಗಳಿಗೆ ದನಿಯಾಗುತ್ತಾರೆ. 2014ರಲ್ಲಿ ನಡೆದ ಪ್ರಮುಖ ಮೂರು ಹೋರಾಟ/ಬೆಳವಣಿಗೆಗಳಲ್ಲಿ ದೊರೆಸ್ವಾಮಿಯವರ ಪಾತ್ರ ದೊಡ್ಡದು. ಮಂಡೂರಿನ ಜನ ತಮ್ಮ ಊರಿಗೆ ಕಸ ಹಾಕಬಾರದೆಂದು ಧರಣಿ ಕೂತಾಗ ಅವರೊಟ್ಟಿಗೆ ಇವರು ನಿಂತರು. Doreswamy-mandurಇತರರು ಬಂದರು. ಸರಕಾರ ಮಾತು ಕೇಳಬೇಕಾಯಿತು. ಒಂದು ಹಂತಕ್ಕೆ ಸರಕಾರ ಜನರ ಮಾತಿಗೆ ಬೆಲೆ ಕೊಟ್ಟು ಹಂತಹಂತವಾಗಿ ಆ ಊರಿಗೆ ಕಸ ಸಾಗಿಸುವುದನ್ನು ಕಡಿಮೆ ಮಾಡಿತು. ಆ ಮಟ್ಟಿಗೆ ಜನರ ಹೋರಾಟ ಯಶಸ್ವಿ.

ಹಲವು ವರ್ಷಗಳಿಂದ ಬೆಂಗಳೂರಿನ ಭೂಗಳ್ಳರ ವಿರುದ್ಧ ಹೋರಾಟ ನಡೆದೇ ಇತ್ತು. ಈ ವರ್ಷ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿ ಕೋಟಿಗಟ್ಟಲೆ ಮೌಲ್ಯದ ಭೂಮಿ ಸರಕಾರಕ್ಕೆ ಹಿಂತಿರುಗಲು ದೊರೆಸ್ವಾಮಿ ನೇತೃತ್ವದಲ್ಲಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮತ್ತಿತರರು ಬೆಂಗಳೂರಿನಲ್ಲಿ ನಡೆಸಿದ ಹೋರಾಟ ಕಾರಣ. ಭೂಗಳ್ಳರ ವಿರುದ್ಧ ಕಠಿಣ ಕ್ರಮ ಹಾಗೂ ಆ ಸಂಬಂಧದ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಮಾಡಲು ಅಗತ್ಯ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಪಟ್ಟ ಕಾನೂನು ತಿದ್ದುಪಡಿ ವಿಧೇಯಕ ಸರಕಾರದಿಂದ ಅಂಗೀಕಾರವಾಗಿ ರಾಷ್ಟ್ರಪತಿಯವರ ಮುಂದೆ ಬಹಳ ಕಾಲದಿಂದ ಹಾಗೇ ಉಳಿದಿತ್ತು. ಈ ಹೋರಾಟದ ಫಲವಾಗಿ ಕೇಂದ್ರ ಸರಕಾರ ರಾಷ್ಟ್ರಪತಿ ಅಂಗೀಕಾರ ಪಡೆಯಿತು. ಅಷ್ಟೇ ಅಲ್ಲ ಭೂಗಳ್ಳರ ಪಾಲಾಗಿದ್ದ ಸಾವಿರಾರು ಕೋಟಿ ರೂ ಮೌಲ್ಯದ ಸರಕಾರಿ ಭೂಮಿಯನ್ನು ಸರಕಾರ ಹಿಂದಕ್ಕೆ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಆಗಬೇಕಿರುವ ಕಾರ್ಯ ಇನ್ನೂ ಬಹಳಷ್ಟಿದೆ.doreswamy-anti-land-grabbing

ಬಹಳ ಕಾಲದಿಂದ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಿಂತಿತ್ತು. ಸಿರಿಮನೆ ನಾಗರಾಜು ಮತ್ತು ಜುಲ್ಫಿಕರ್ ಅವರು ಸೈದ್ಧಾಂತಿಕ ಕಾರಣಗಳಿಗಾಗಿ ಸಶಸ್ತ್ರ ಹೋರಾಟದಿಂದ ಹಿಂದೆ ಸರಿದಿದ್ದರೂ ಮುಖ್ಯವಾಹಿನಿಗೆ ಬರಲಾಗಿರಲಿಲ್ಲ. ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಅವರೇನು ಸರಕಾರದ ಯಾವ ಪ್ಯಾಕೇಜನ್ನೂ ಬಯಸಿದವರಲ್ಲ. ಶಾಂತಿಗಾಗಿ ನಾಗರಿಕರ ವೇದಿಕೆಯ ಗೌರಿ ಲಂಕೇಶ್, ಶಿವಸುಂದರ್ ಮತ್ತಿತರರ ಪ್ರಯತ್ನದಿಂದ ಸರಕಾರ ಇತ್ತ ಕಡೆ ಸ್ವಲ್ಪ ಗಮನ ಹರಿಸಲು ಸಾಧ್ಯವಾಗಿತ್ತು. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ನಾಗರಿಕರನ್ನು, ಅಧಿಕಾರಿಗಳನ್ನು ಒಳಗೊಂಡ ಸಮಿತಿ ನೇಮಕವಾಯಿತು. ಆ ಸಮಿತಿಯಲ್ಲಿ ನಾಗರಿಕರ ಪ್ರತಿನಿಧಿಯಾಗಿ ನೇತೃತ್ವ ವಹಿಸಿದರು ದೊರೆಸ್ವಾಮಿ, ಗೌರಿ ಲಂಕೇಶ್ ಹಾಗೂ ಎ.ಕೆ.ಸುಬ್ಬಯ್ಯ. ಮೊದಲ ಹಂತವಾಗಿ ಇಬ್ಬರು ಮುಖ್ಯವಾಹಿನಿಗೆ ಬಂದಿದ್ದಾರೆ. ಇದೇ ಸಮಿತಿಯ ಮುಂದೆ ಸಶಸ್ತ್ರ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಇನ್ನು ಮೂರು ಜನ ಮುಖ್ಯವಾಹಿನಿಗೆ ಬರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯವಾಹಿನಿಗೆ ಬಂದವರಾರೂ, ಹೋರಾಟದಿಂದ ದೂರ ಸರಿಯುತ್ತಿಲ್ಲ. ಬದಲಿಗೆ ಸಾಮಾಜಿಕ ನ್ಯಾಯಕ್ಕಾಗಿ ಮತ್ತಷ್ಟು ಗಟ್ಟಿಯಾಗಿ ಹೋರಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮುಖ್ಯವಾಹಿನಿಯಲ್ಲಿರುವ ಸಂಗಾತಿಗಳಿಗೆ ಇದು ಆಶಾದಾಯಕ ಬೆಳವಣಿಗೆ.

2014ರಲ್ಲಿ ಪಟ್ಟಿ ಮಾಡಬಹುದಾದ ಈ ಮೇಲಿನ ಪ್ರಮುಖ ಘಟನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ ದೊರೆಸ್ವಾಮಿಯವರನ್ನು hiremath-doreswamyವರ್ತಮಾನ ವರ್ಷದ ವ್ಯಕ್ತಿ ಎಂದು ಗುರುತಿಸಲು ಹೆಮ್ಮೆ ಪಡುತ್ತದೆ. ಬಲಾಢ್ಯರ ವಿರುದ್ಧ, ದುರ್ಬಲರ ಪರ ದನಿ ಎತ್ತುವ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಗುರುತಿಸುವುದು ವರ್ತಮಾನದ ಉದ್ದೇಶ. ಕಳೆದ ವರ್ಷ ವರ್ತಮಾನ ಈ ಸ್ಥಾನಕ್ಕೆ ಎಸ್.ಆರ್.ಹಿರೇಮಠರನ್ನು ಆಯ್ಕೆ ಮಾಡಿದ್ದು ಓದುಗರಿಗೆ ನೆನಪಿರಬಹುದು. ಹಿರೇಮಠರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ನಡೆಯುತ್ತಿದ್ದಾರೆ. ದೊರೆಸ್ವಾಮಿಯವರು ನೇತೃತ್ವ ವಹಿಸಿದ್ದ ಭೂಗಳ್ಳರ ವಿರುದ್ಧ ಹೋರಾಟದಲ್ಲಿ ಇವರೂ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.

ದೇವನೂರ ಮಹಾದೇವರಿಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ

-ದೇವನೂರ ಮಹಾದೇವ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೀತಿಯ ಶ್ರೀ ಪುಂಡಲೀಕ ಹಾಲಂಬಿಯವರಿಗೆ ವಂದನೆಗಳು.

ಭಾರತದ ಸಂವಿಧಾನವು ಅಂಗೀಕರಿಸಲ್ಪಟ್ಟ ೨೨ ದೇಶೀ ಭಾಷೆಗಳು ಹಾಗೂ ದೇಶದಾದ್ಯಂತ ಇರುವ ಅನೇಕಾನೇಕ ಅಲ್ಪಸಂಖ್ಯಾತ ಭಾಷೆಗಳು ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕಾಲು ಕತ್ತರಿಸಿಕೊಂಡು ಚಲನೆ ಇಲ್ಲದ ಸ್ಥಿತಿಗೆ ತಲುಪಿರುವ ಈ ಸಂದರ್ಭದಲ್ಲಿ ಏನು ಹೇಳುವುದು? ಹೇಗೆ ಹೇಳುವುದು?

ಯಾಕೆಂದರೆ ಸುಪ್ರೀಂಕೋರ್ಟ್‌ನಲ್ಲಿ ಭಾಷಾಮಾಧ್ಯಮದ ವಾದ-ವಿವಾದ ನಡೆಯುತ್ತಿದ್ದಾಗ ನ್ಯಾಯಾಧೀಶರೊಬ್ಬರು “ಡೆಲ್ಲಿಗೆ ಬಂದಿದ್ದ ಜಪಾನ್ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಇಂಗ್ಲಿಷ್‌ನಲ್ಲಿ ಮಾತಾಡಿದರು, ಅವರು ಇಂಗ್ಲಿಷ್‌ನಲ್ಲಿ ಮಾತಾಡದೇ ಹೋಗಿದ್ದರೆ ಯಾರಿಗೂ ತಿಳಿಯುತ್ತಿರಲಿಲ್ಲ, ಭಾಷೆಯ ಕುರಿತು ಮಡಿವಂತಿಕೆ ಹೊಂದಿದ್ದ ಚೈನಾದೇಶವೂ ಈಗೀಗ ಇಂಗ್ಲಿಷ್‌ನ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ” ಎಂದದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಬಹಳ ಹಿಂದೆ ಕನ್ನಡಿಗರೊಬ್ಬರು ಇಂಗ್ಲೆಂಡ್‌ಗೆ ಹೋಗಿ ಬಂದು ‘ಅಬ್ಬಬ್ಬಾ ಇಂಗ್ಲೆಂಡ್‌ನಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಕೂಡ ಇಂಗ್ಲಿಷ್‌ನಲ್ಲಿ ಮಾತಾಡ್ತಾರೆ’ ಅಂದಿದ್ದ ಆ ಮುಗ್ಧತೆಯಂತೆಯೇ ಇದೂ ಕಾಣಿಸುತ್ತದೆ. ಇದರ ಬದಲು ಆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ‘ತಾನು ಭಾರತದ ಸರ್ವೋಚ್ಛ ನ್ಯಾಯಾಧೀಶ, ಅವರೂ ಜಪಾನ್‌ನ ಸರ್ವೋಚ್ಛ ನ್ಯಾಯಾಧೀಶರು, ಈಗ ತಮ್ಮ ಮುಂದೆ ಪ್ರಾಥಮಿಕ ಶಿಕ್ಷಣ ಮಾಧ್ಯಮ ವಿಚಾರ ಚರ್ಚೆಗೆ ಬಂದಿದೆ. ಜಪಾನ್‌ನಲ್ಲಿ ಹೇಗಿರಬಹುದು?’ ಎಂಬ ಕೂತೂಹಲಕ್ಕಾದರೂ ಚರ್ಚಿಸಿದ್ದರೆ. ಆಗ ಜಪಾನ್‌ನಲ್ಲಿರುವುದು ಜಪಾನಿ ಭಾಷಾ ಶಿಕ್ಷಣ ಮಾಧ್ಯಮ ಎಂಬುದಾದರೂ ತಿಳಿದುಬರುತ್ತಿತ್ತು. ಜಗತ್ತಿನ ಯಾವುದೇ ಭಾಷೆಯ ಶ್ರೇಷ್ಠ ಕೃತಿಯು ಪ್ರಕಟವಾದ ಒಂದು ವಾರದೊಳಗೆ ಅದು ಜಪಾನಿ ಭಾಷೆಗೆ ಅನುವಾದಗೊಂಡು ಪ್ರಕಟಗೊಳ್ಳುವ ವಿದ್ಯಮಾನವೂ ತಿಳಿದುಬರುತ್ತಿತ್ತು. ಹಾಗೇ ಚೈನಾದಲ್ಲೂ ಶಿಕ್ಷಣ ಮಾಧ್ಯಮವು ಚೈನೀಸ್ ಭಾಷೆಯಲ್ಲಿ ಇದ್ದು ಚೈನಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಭಾಷೆಯಾಗಿ ಇಂಗ್ಲಿಷ್, ಸ್ಪಾನಿಷ್ ಹೀಗೆ ಮಾರ್ಕೆಟ್‌ನ ಪ್ರಮುಖ ಭಾಷೆಗಳನ್ನೆಲ್ಲಾ ಕಲಿಸಲು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿರುವುದು ಗೋಚರಿಸುತ್ತಿತ್ತು. ಹೀಗೇ ದಕ್ಷಿಣ ಕೊರಿಯಾ, ಥೈಲಾಂಡ್, ಸ್ಕಾಂಡಿನೇವಿಯನ್ ದೇಶಗಳು, ಜಿ-೮ ದೇಶಗಳು ಹೀಗೆ ಸ್ವತಂತ್ರವಾಗಿರುವ ದೇಶಗಳಲ್ಲೆಲ್ಲಾ ಅವರವರ ಮಾತೃಭಾಷೆಯ ಶಿಕ್ಷಣ ಮಾಧ್ಯಮ ಸಹಜ ಆಯ್ಕೆಯಾಗಿದೆ. ಇಸ್ರೇಲ್‌ನಲ್ಲೂ ಯಹೂದಿಗಳ ಹೀಬ್ರೂ ಮಾತೃಭಾಷೆಯೇ ಶಿಕ್ಷಣಮಾಧ್ಯಮ. ಉನ್ನತ ಶಿಕ್ಷಣದಲ್ಲಿ ಕೆಲವು ಕಡೆ ಅಲ್ಪಸ್ವಲ್ಪ ಬದಲಾವಣೆ ಇರಬಹುದಷ್ಟೇ. ಅಷ್ಟೇಕೆ, ಮಲೇಷಿಯಾದ ರಾಷ್ಟ್ರೀಯ ಶಾಲೆಗಳಲ್ಲಿ ’ಬಹಾಸ ಮಲೇಷಿಯಾ’ ಮತ್ತು ಸ್ಥಳೀಯ ಶಾಲೆಗಳಲ್ಲಿ ಚೈನೀಸ್ ಮತ್ತು ತಮಿಳು ಭಾಷಾಮಾಧ್ಯಮದಲ್ಲಿ ಗಣಿತ ಮತ್ತು ವಿಜ್ಞಾನಗಳನ್ನು ಬೋಧಿಸಲಾಗುತ್ತಿದೆ. ಇಲ್ಲಿ ಭಾರತದಲ್ಲಿ ತಮಿಳರು ’ತಮಿಳ್ ತಮಿಳ್’ ಎಂದು ಎದೆಚಚ್ಚಿಕೊಂಡು ತಮಿಳು ಪದ ಉಚ್ಛಾರಣೆ ಮಾಡುವುದರಲ್ಲೇ ಸಂತೋಷಪಡುತ್ತಿದ್ದಾರೆ. ತಮಿಳು ಶಿಕ್ಷಣ ಮಾಧ್ಯಮವಾಗಿ ಬೆಳೆದಿದ್ದರೆ ಆ ನೆರಳಲ್ಲಿ ನಾವೂ ಬೆಳೆಯಬಹುದಿತ್ತು.

ಒಟ್ಟಿನಲ್ಲಿ ಯಾವ ಸ್ವತಂತ್ರ ದೇಶವೂ ತನ್ನ ಮಾತೃಭಾಷೆಗಳನ್ನು ಕೊಂದು ಪರಭಾಷೆಯನ್ನು ಸ್ವೀಕರಿಸಿಲ್ಲ. ತಮ್ಮ ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮ ಕೇಂದ್ರ ಮಾಡಿಕೊಂಡು ಪರಭಾಷೆಯನ್ನು ಒಂದು ಭಾಷೆಯಾಗಿ ಒಳಗೊಂಡು ಒಟ್ಟಾಗಿ ಜೊತೆಗೂಡಿ ಬೆಳೆಯುವ ಪ್ರಕ್ರಿಯೆ ಜಗತ್ತಿನಾದ್ಯಂತ ಜರುಗುತ್ತಿದೆ.

ಹಾಗಾದರೆ ಭಾರತಕ್ಕೇನಾಗಿದೆ? ನಾವು ಗುಲಾಮಗಿರಿಯಿಂದ ಭೌತಿಕವಾಗಿ ಬಿಡುಗಡೆ ಹೊಂದಿದ್ದರೂ ಮಾನಸಿಕ ಗುಲಾಮಗಿರಿ ಸೋಂಕು ಇನ್ನೂ ಗುಣವಾಗಿಲ್ಲವೇನೋ. devanurಇಂದು ಈ ಜಗತ್ತಿನ ಓಟ ಅಂದರೆ ಅಭಿವೃದ್ಧಿ ಮತ್ತು ಸ್ಪರ್ಧೆ – ಈ ದೃಷ್ಟಿಯಲ್ಲಿ ನೋಡಿದರೂ ಈ ಓಟದಲ್ಲಿ ದಾಪುಗಾಲು ಹಾಕುತ್ತಿರುವ ಚೈನಾ, ಜಪಾನ್, ಕೊರಿಯಾ, ಥಾಯ್‌ಲೆಂಡ್ ದೇಶಗಳಲ್ಲಿ ಸಮಾನ ಮತ್ತು ಮಾತೃಭಾಷಾ ಶಿಕ್ಷಣ ಮಾಧ್ಯಮ ಇರುವುದಕ್ಕೂ ಅವುಗಳ ಅಭಿವೃದ್ಧಿ ಮತ್ತು ಸ್ಪರ್ಧೆ ಓಟಕ್ಕೂ ಸಂಬಂಧವಿರಬೇಕೇನೋ ಅನ್ನಿಸುತ್ತದೆ. ಯಾಕೆಂದರೆ ಮಾತೃಭಾಷಾ ಸಮಾನ ಶಿಕ್ಷಣದಲ್ಲಿ ಇಡೀ ಸಮುದಾಯದೊಳಗಿಂದ ಎಲ್ಲೆಲ್ಲಿಂದಲೋ ಯಾರ್‍ಯಾರೋ ಪ್ರತಿಭಾವಂತರು ಕುಶಲಿಗಳು ಹುಟ್ಟಿಕೊಂಡು ದೇಶದ ಸಂಪತ್ತಾಗುತ್ತಾರೆ. ಮನೆಮನೆಯಲ್ಲೂ ಜ್ಞಾನಾಧಾರಿತ ಕೌಶಲ್ಯ ಉಳ್ಳವರ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ಇಂಥವು ಯಾಕೆ ನಮ್ಮ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಕಾಣುತ್ತಿಲ್ಲ? ಇದು ದೇಶಕೋಶ ತಿರುಗುವ ಐಟಿಬಿಟಿ ಮಂದಿಗಾದರೂ ಅವರ ಲಾಭದ ದೃಷ್ಟಿಯಿಂದಲಾದರೂ ಯಾಕೆ ಕಾಣಲಿಲ್ಲ? ಇದು ಚಿದಂಬರ ರಹಸ್ಯವೇನೂ ಅಲ್ಲ. ಭಾರತವು ಹಿಂದೆ ಶೂದ್ರ ಸಮುದಾಯಕ್ಕೆ ಶಿಕ್ಷಣವನ್ನೇ ಕೊಡಬಾರದು ಎಂಬ ನಿರಾಕರಣೆಯನ್ನು ಮೀರಿ ಈಗ ಎಲ್ಲರಿಗೂ ಶಿಕ್ಷಣ ಎಂಬ ಮಾತನ್ನೇನೋ ಹೇಳುತ್ತಿದೆ. ಆದರೆ ಶಿಕ್ಷಣದೊಳಗೇ ತಾರತಮ್ಯದ ಜಾತಿ-ವರ್ಗ ರೋಗದ ಪಂಚವರ್ಣ ಪದ್ಧತಿ ಅಳವಡಿಸಿಕೊಂಡಿದೆ, ಚಾತುರ್ವರ್ಣದ ಸ್ವಭಾವವಾದ ಪ್ರತ್ಯೇಕತೆ, ತಾರತಮ್ಯ ಉಳಿಸಿಕೊಂಡಿದೆ. ೧೯೬೩-೬೪ ರ ಕೊಠಾರಿ ಶಿಕ್ಷಣ ಆಯೋಗವು ಹೇಳಿದ್ದ “ಸಮಾನ ಶಿಕ್ಷಣ ಅನುಷ್ಠಾನ ಮಾಡದಿದ್ದರೆ ಶಿಕ್ಷಣವೇ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಹೆಚ್ಚಿಸಿ ಮತ್ತಷ್ಟು ಕಂದರ ಉಂಟುಮಾಡುತ್ತದೆ” ಎಂಬ ಮಾತು ನಮ್ಮೆದುರು ಇದ್ದೂ ಕೂಡಾ ಭಾರತ ಪಂಚವರ್ಣ ಶಿಕ್ಷಣವನ್ನು ನೀಡುತ್ತಿರುವುದು ಏನನ್ನು ಹೇಳುತ್ತದೆ? ಬಹುಶಃ ಭಾರತಕ್ಕೆ ತಾರತಮ್ಯ ಪ್ರತ್ಯೇಕತೆ ಮೇಲುಕೀಳು ಇಲ್ಲದಿದ್ದರೆ ನಿದ್ದೆ ಬರುವುದಿಲ್ಲವೇನೋ. ಒಂದು ಕಡೆ ಗುಲಾಮಗಿರಿಯ ಸೋಂಕು, ಇನ್ನೊಂದು ಕಡೆ ವರ್ಗ-ಜಾತಿಯ ಸೋಂಕು, ಇದು- ಕಾರ್‍ಯಾಂಗ, ರಾಜ್ಯಾಂಗ, ನ್ಯಾಯಾಂಗ ಅಂತ ಏನೇನು ಇದೆಯೋ ಅಲ್ಲೆಲ್ಲಾ ಈ ಅಂಟುರೋಗ ಅಂಟಿರಬೇಕು.

ಹಾಗಾಗೇ ಭಾರತದಲ್ಲಿ ಇಂದು ’ಪಂಕ್ತಿಭೇದ ಶಿಕ್ಷಣಪದ್ಧತಿ’ ನಮ್ಮ ಮುಂದಿದೆ. ಜಾತಿ ತಾರತಮ್ಯದ ಭಾರತದಲ್ಲಿ ಎಳೆಯ ಮಕ್ಕಳ ಮನಸ್ಸು ಆಕಾರ ಪಡೆಯುವಾಗಲಿನ ಪ್ರಾಥಮಿಕ ಶಿಕ್ಷಣದಲ್ಲಿ ನಮ್ಮ ಎಲ್ಲಾ ಜಾತಿ ಜನಾಂಗ ಧರ್ಮ ವರ್ಗಗಳ ಎಳೆಯರು ಜೊತೆಗೂಡಿ ಒಡನಾಡುವುದೇ ಭಾರತಕ್ಕೆ ಬಲುದೊಡ್ಡ ಶಿಕ್ಷಣ ಎಂಬುದನ್ನು ಮನಗಾಣದೆ ಸೋಲುತ್ತಿದ್ದೇವೆ. ನೆರೆಹೊರೆ ಸಮಾನ ಮಾತೃಭಾಷಾ ಮಾಧ್ಯಮ ಶಿಕ್ಷಣ ಪದ್ಧತಿ ಪ್ರಾಥಮಿಕದಲ್ಲಿಲ್ಲದ ಕಾರಣವಾಗಿ – ಸರ್ಕಾರಿ ಶಾಲೆಗಳ ಗುಣಮಟ್ಟ ದಿನದಿನಾ ಕುಸಿಯುತ್ತಿದೆ. ಕಾರಣವನ್ನು ಬೇರೆಲ್ಲೋ ಹುಡುಕುತ್ತಿದ್ದೇವೆ. ನೆರೆಹೊರೆಯ ಸಮಾನ ಶಿಕ್ಷಣ ಪದ್ಧತಿ ಅನುಷ್ಠಾನಗೊಂಡರೆ ಆ ಶಾಲೆಗೆ ಹೇಳುವವರು ಕೇಳುವವರು ಸುತ್ತಲೂ ಹುಟ್ಟಿಕೊಂಡು ಆ ಕಳಪೆ ಶಾಲೆಯೂ ತಂತಾನೆ ಉನ್ನತೀಕರಣಗೊಳ್ಳುತ್ತದೆ. ಕಳಪೆ ಶಾಲಾ ಉನ್ನತೀಕರಣಕ್ಕೆ ಯಾವ ತರಬೇತಿ ಅನುಕೂಲಗಳೂ ಬೇಕಾಗಿಲ್ಲ. ಇಂಥ ಪ್ರಾಥಮಿಕ ಶಿಕ್ಷಣದಲ್ಲಿ, ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆಯನ್ನು ಅಳವಡಿಸಿಕೊಂಡರೆ ಅದಷ್ಟೇ ಸಾಕು. ಯಾಕೆಂದರೆ ಈ ಅರೆಮನಸ್ಸಿನ ಅಸಮಾನ ಶಿಕ್ಷಣದಿಂದಾಗಿ ಹಳ್ಳಿ ಮಕ್ಕಳು, ಗಲ್ಲಿ ಮಕ್ಕಳು, ತಳಸಮುದಾಯಗಳ ಮಕ್ಕಳು ಶಿಕ್ಷಣದಿಂದಲೇ ಉದುರಿ ಬೀಳುತ್ತಿದ್ದಾರೆ. ಹಾಗಾಗಿ ಈ ಶಿಕ್ಷಣ ಪದ್ಧತಿಯು ’ಒಳಗೊಂಡು ಹೊರಹಾಕುವಿಕೆ’ಯ (Inclusive Exclusion) ಜಾತಿ-ವರ್ಗ ಸೋಂಕಿನ ಶಿಕ್ಷಣ ಪದ್ಧತಿಯಾಗಿಬಿಟ್ಟಿದೆ. ಇದು ಸೌಲಭ್ಯವಂಚಿತ ಮಕ್ಕಳು ಶಿಕ್ಷಣದಲ್ಲಿ ಮುಂದೆ ದಾಟದಂತೆ ಉದುರಿಸುತ್ತಿದೆ. ಈ ಫಿಲ್ಟರ್ ಕೆಲಸದಲ್ಲಿ ಇಂಗ್ಲಿಷ್ ಒಂದು ದೊಡ್ಡ ಫಿಲ್ಟರ್ ಆಗಿ ಭಾಗಿಯಾಗಿದೆ.

ಈಗ ನ್ಯಾಯದ ಕಡೆ ನೋಡಿದರೂ ಆಸೆ ಭರವಸೆಗಳು ಕ್ಷೀಣವಾಗಿವೆ. ಪ್ರಾಥಮಿಕ ಶಿಕ್ಷಣ ಮಾಧ್ಯಮದ ತೀರ್ಪು ನೀಡುತ್ತ ನಮ್ಮ ಸರ್ವೋಚ್ಛ ನ್ಯಾಯಾಲಯವು ‘ಅಭಿವ್ಯಕ್ತಿ ಸ್ವಾತಂತ್ರ್ಯವು ಮಾತಿನ ಮಾಧ್ಯಮದ ಆಯ್ಕೆಯನ್ನು ಒಳಗೊಂಡಿರುತ್ತದೆ ಹಾಗೂ ತರಗತಿಗಳು ಅಭಿವ್ಯಕ್ತಿಯ ಜಾಗಗಳಾಗಿರುತ್ತವೆ ಎಂದಿದೆ. ಮೂಲಭೂತ ಹಕ್ಕನ್ನು ಕಿತ್ತುಹೋಗುವಷ್ಟು ಹಿಗ್ಗಾಮುಗ್ಗಾ ಎಳೆದುಬಿಟ್ಟಿದೆ ಹಾಗೂ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ಗೆರೆಯನ್ನು ಮಸುಕಾಗಿಸಿದೆ. ತಮಾಷೆ ನೋಡಿ-ಶಿಷ್ಟವಾಗಿ ಕಲಿಯುವ ಮುನ್ನ, ಮಗು ತಾನು ಹುಟ್ಟಿದ ಪರಿಸರದೊಳಗಿಂದ ಒಡಮೂಡಿಸಿಕೊಂಡ ಭಾಷೆಯೇ ಮಾತೃಭಾಷೆ- ಎಂಬ ಪ್ರಾಥಮಿಕ ಭಾಷಾ ಜ್ಞಾನಕ್ಕೆ ನಮ್ಮ ನ್ಯಾಯಾಲಯ ಕತ್ತು ಹಿಸುಕಿದಂತಿದೆ. ಶಿಕ್ಷಣ ಮಾಧ್ಯಮದ ಆಯ್ಕೆ ಮಗುವಿಗೆ ಆ ಮಗುವಿನ ಪರವಾಗಿ ಪೋಷಕರಿಗೆ ಸೇರಿದೆ ಅನ್ನುತ್ತದೆ. ಆಯ್ಕೆ ಪ್ರಶ್ನೆ ಬರುವುದು ಯಾವಾಗ? ಎರಡು ಮೂರು ಇದ್ದಾಗ ಮಾತ್ರ. ಒಂದೇ ಇದ್ದಾಗ ಆಯ್ಕೆ ಎಲ್ಲಿ ಬರುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೂ ಇರುವುದನ್ನು ಅಭಿವ್ಯಕ್ತಿಗೊಳಿಸುವುದು ತಾನೇ? ಇದೂ ಇರಲಿ – ಗೊತ್ತಿಲ್ಲದಿರುವುದರಿಂದ ಗೊತ್ತಿಲ್ಲದ ಕಡೆಗೆ ಕ್ರಮಿಸುವುದು- ಇದು ಶಿಕ್ಷಣದ ಪ್ರಾಥಮಿಕ ತಿಳಿವಳಿಕೆ. ಇದನ್ನಾದರೂ ನಮ್ಮ ನ್ಯಾಯಾಲಯ ಲಕ್ಷಿಸಬೇಕಾಗಿತ್ತು. ಹಾಗೆಯೇ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಮುಂಬರುವ ಅಪಾಯವನ್ನೂ ಮನಗಂಡು ಅಂದರೆ ರಾಜ್ಯಭಾಷೆಗಳು ಪಾಳೆಗಾರರಂತೆ ವರ್ತಿಸುತ್ತಾ ಆಯಾ ರಾಜ್ಯದೊಳಗೆ ಬರುವ ಹತ್ತಾರು ಮಾತೃಭಾಷೆ (ಉದಾ: ಕರ್ನಾಟಕದಲ್ಲಿ ತುಳು, ಉರ್ದು, ಕೊಂಕಣಿ, ಮರಾಠಿ, ತಮಿಳು, ತೆಲುಗು, ಕೊಡವ ಇತ್ಯಾದಿ)ಗಳನ್ನು ಕತ್ತು ಹಿಸುಕಿ ಬಿಡುತ್ತವೆ ಎಂಬ ಆತಂಕದಿಂದ ಅಲ್ಪಸಂಖ್ಯಾತ ಭಾಷೆಗಳ ರಕ್ಷಣೆಗೆ ಕತ್ತಿಯಂತೆ ಕೊಟ್ಟ ವಿಧಿಗಳನ್ನು ಬಳಸಿಯೇ ಆ ಅಲ್ಪಸಂಖ್ಯಾತ ಭಾಷೆಗಳನ್ನೂ ಜೊತೆಗೇ ಎಲ್ಲಾ ದೇಶಿ ಭಾಷೆಗಳನ್ನು ಕೊಲ್ಲಲು ಬಳಸಿದಂತಾಗಿಬಿಟ್ಟಿದೆ! ಉಳಿಗಾಲವಿಲ್ಲ.

ಹೀಗಿರುವಾಗ ನಾವು ಯಾವ ಕಡೆ ನೋಡಬೇಕು? ಈಗ ಪಾರ್ಲಿಮೆಂಟ್‌ಗೇ ಚಾಟಿ ಬೀಸಬೇಕಾಗಿದೆ. ಜನಾಂದೋಲನ, ರಾಜಕೀಯದ ಮೇಲೆ ಒತ್ತಡ ವ್ಯಾಪಕವಾಗಬೇಕಾಗಿದೆ. ಸಾಹಿತ್ಯ ಪರಿಷತ್‌ನಿಂದಲೂ ಈ ನಡೆಯನ್ನೇ ನಿರೀಕ್ಷಿಸುತ್ತೇನೆ. ಪರಿಷತ್ತಿಗೆ ನೂರು ವರ್ಷಗಳ ಹಿರಿಮೆ ಜತೆ ನೂರು ವರ್ಷದ ಜಡ್ಡೂ ಇರಬಹುದು. ಆದರೆ ಜೀವವಿದೆ. ಪೊರೆ ಕಳಚಬೇಕಾಗಿದೆ ಅಷ್ಟೇ. ಆಗ ಮಾತ್ರ – ಗುಣಮುಖವಾಗಿಸಲು ಕರೆಂಟ್ ಷಾಕ್ ಕೊಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ಯವಾಗಬಹುದು.

ಸಾಹಿತ್ಯ ಪರಿಷತ್ ಹೊಸ ಹುಟ್ಟು ಪಡೆದರೆ ಅದಕ್ಕೆ ಪೂರಕ ವಾತಾವರಣ ಈಗ ಕರ್ನಾಟಕ ರಾಜ್ಯದಲ್ಲಿ ಇದೆ. ಯಾಕೆಂದರೆ ನನ್ನಷ್ಟೇ ಅಥವಾ ನಿಮ್ಮಷ್ಟೆ ಮಾತೃಭಾಷೆ ಪ್ರಾಥಮಿಕ ನೆರೆಹೊರೆ ಸಮಾನಶಿಕ್ಷಣದ ಕಳಕಳಿ ಇರುವ ಮುಖ್ಯಮಂತ್ರಿಗಳನ್ನು ಈ ರಾಜ್ಯ ಈಗ ಪಡೆದಿದೆ. ಬಹುಶಃ ಹಿಂದೆ ಇಂಥ ಸಂದರ್ಭ ಇರಲಿಲ್ಲ ಎನ್ನಬಹುದು. ಹಾಗೇ ಮುಂದೆ ಗೊತ್ತಿಲ್ಲ. ಶ್ರೀ ಸಿದ್ದರಾಮಯ್ಯ, ಶ್ರೀ ನಿತೀಶ್‌ಕುಮಾರ್‌ರಂಥ ಮುಖ್ಯಮಂತ್ರಿಗಳು ಮುಖವಾಡ ಇಲ್ಲದವರು, ಹೃತ್ಪೂರ್ವಕತೆ ಇರುವವರು ಜೊತೆಗೆ ಧೈರ್ಯವಂತರೂ ಕೂಡ. ಹಾಗಾಗಿ ಈ ರಾಜಕಾರಣದೊಳಗೂ ಇಂಥವರಿಂದ ಒಂದಿಷ್ಟು ನಿರೀಕ್ಷಿಸಬಹುದು. ಇಂಥವರಿಗೆ ಪಂಕ್ತಿಬೇಧವೂ ಗೊತ್ತು. ನೆರೆಹೊರೆ ಸಮಾನ ಮಾತೃಭಾಷಾ ಪ್ರಾಥಮಿಕ ಶಿಕ್ಷಣವಿಲ್ಲದ ಕಾರಣವಾಗಿ ಹಳ್ಳಿಮಕ್ಕಳು, ಗಲ್ಲಿಮಕ್ಕಳು, ತಳಸಮುದಾಯದ ಮಕ್ಕಳು ಶಿಕ್ಷಣದಿಂದಲೇ ಉದುರಿಹೋಗುತ್ತಿರುವುದೂ ಗೊತ್ತು. ಈ ಸಂದರ್ಭದಲ್ಲಿ ಈಗ ಸಾಹಿತ್ಯ ಪರಿಷತ್ ಧೈರ್ಯ ಮಾಡಿ ಹೊಸ ಹುಟ್ಟು ಪಡೆದು ಸರ್ಕಾರಕ್ಕೆ ಸವಾಲೆಸೆದರೆ ಒಂದಿಷ್ಟು ಬದಲಾವಣೆ ಆಗಲೂಬಹುದು. ಹೊಸ ಸಾಧ್ಯತೆಗಳು ಗೋಚರಿಸಲೂ ಬಹುದು.

ಅದಕ್ಕಾಗಿ, ಸಂವಿಧಾನ ತಿದ್ದುಪಡಿಗೆ ರಾಜಕೀಯ ಒತ್ತಡವನ್ನು ನಿರಂತರವಾಗಿ ಉಂಟು ಮಾಡುತ್ತಾ, ಜೊತೆಗೆ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದಲೇ ಒಂದು ಕಲಿಕೆಯ ಭಾಷೆಯಾಗಿ ಒಪ್ಪಿಕೊಂಡು ಚರ್ಚಿಸಬಹುದಾದ ಒಂದಿಷ್ಟು ವಿಚಾರಗಳನ್ನು ತಮ್ಮ ಮುಂದಿಡುವೆ:

  1. ಭಾರತವನ್ನು ಐಕ್ಯಗೊಳಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ಉನ್ನತಗೊಳಿಸಲು ಪೂರಕವಾದ ನೆರೆಹೊರೆ ಶಿಕ್ಷಣವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಇದಕ್ಕಾಗಿ ಮಕ್ಕಳ ಪ್ರವೇಶಾತಿಯನ್ನು ಆಯಾ ಶಿಕ್ಷಣ ಸಂಸ್ಥೆಗಳಿಗೆ ವಹಿಸಿಕೊಟ್ಟು ದಂಧೆಗೆ ಅವಕಾಶ ನೀಡಬಾರದು. ಬದಲಿಗೆ ಆ ಪ್ರದೇಶದ ಶಿಕ್ಷಣ ಅಧಿಕಾರಿ, ಚುನಾಯಿತ ಪ್ರತಿನಿಧಿ ಹಾಗೂ ಪೋಷಕರ ಸಮಿತಿ ಸಮ್ಮುಖದಲ್ಲಿ – ಲಾಟರಿ ವ್ಯವಸ್ಥೆ ಮೂಲಕ ನಿರ್ಧರಿಸಬೇಕು.
  2. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ ೫೧ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಇರುವಂತೆ ತಿದ್ದುಪಡಿಯಾಗಬೇಕು.
  3. ಖಾಸಗಿ (ಅನುದಾನ ಸಹಿತ-ರಹಿತ) ಶಿಕ್ಷಣ ಸಂಸ್ಥೆಗಳು ಸರ್ಕಾರದ ಏಜೆನ್ಸಿಯಂತೆ ಕಾರ್‍ಯನಿರ್ವಹಿಸುವಂತಹ ಕಾನೂನು ರೂಪಿಸಲು ಒತ್ತಾಯಿಸಬೇಕು.
  4. ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ -ಕಲಂ ೨೯ (ಎಫ್)ನಲ್ಲಿ medium of instructions shall, as for as practicable, be in child`s mother tongue; -ಎಂದಿದೆ. ಇಲ್ಲಿ as for as practicable ಎಂದು ಇರುವುದು ಮಾತೃಭಾಷಾ ಶಿಕ್ಷಣ ಮಾಧ್ಯಮಕ್ಕೆ ತೊಡರುಗಾಲಾಗಿದೆ. ಆದ್ದರಿಂದ as for as practicable ಅನ್ನುವುದನ್ನು ಕಿತ್ತು ಹಾಕಿ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ ಇಪ್ಪತ್ತೆರಡು ಭಾಷೆಗಳಲ್ಲಿ ಯಾವುದಾದರೂ ಎಂದು ಆಯ್ಕೆ ನೀಡುವ ಕಾನೂನು ರೂಪಿಸುವಂತಾಗಲು ನಮ್ಮ ಶಾಸಕಾಂಗವನ್ನು ಒತ್ತಾಯಿಸಬೇಕಾಗಿದೆ.
  5. ಮಕ್ಕಳ ಮನಸ್ಸು ಆಕಾರ ಪಡೆಯುವ ಅಂಗನವಾಡಿಯಿಂದ ಮೂರನೇ ತರಗತಿಯವರೆಗೆ ಆಯಾ ರಾಜ್ಯದ ಮಾತೃಭಾಷೆಗಳಲ್ಲಿ ಅಂದರೆ ಮಗುವಿನೊಳಗೆ ಪರಿಸರದಿಂದ ಒಡಮೂಡಿ ಉಂಟಾದ ಭಾಷೆಗಳಲ್ಲಿ (ಉದಾ : ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭಾಷೆಗಳಾದ ತುಳು, ಕೊಂಕಣಿ, ಮರಾಠೀ, ಉರ್ದು, ತಮಿಳು, ಇತ್ಯಾದಿಗಳೊಡನೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆ ಕನ್ನಡವೂ ಸೇರಿದಂತೆ) ಶಿಕ್ಷಣ ಮಾಧ್ಯಮ; ಮುಂದಿನ ಪ್ರಾಥಮಿಕ ಶಿಕ್ಷಣದಲ್ಲಿ ಅಪೇಕ್ಷೆ ಪಟ್ಟವರಿಗೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆಗಳಲ್ಲಿ ಶಿಕ್ಷಣಮಾಧ್ಯಮವನ್ನು -ಮೊದಲ ಹೆಜ್ಜೆಯಾಗಿ ಜಾರಿಯಾಗಿಸಲು ಒತ್ತಾಯಿಸಬೇಕು.
  6. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಮುಚ್ಚಿರುವ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಹಿಸಿಕೊಡುವುದು ಅಥವಾ ಪರಭಾರೆ ಮಾಡಬಾರದು. ಇನ್ನು ಮುಂದೆ ಖಾಸಗಿ ಶಿಕ್ಷಣಸಂಸ್ಥೆಗಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಅನುಮತಿ ನೀಡದೇ ಸಾರ್ವಜನಿಕ ಶಾಲೆಗಳನ್ನೇ ಹೆಚ್ಚು ಮಾಡಬೇಕು. ಭಾರತದ ಐಕ್ಯತೆಯ ದೃಷ್ಟಿಯಿಂದ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ತಿದ್ದುಪಡಿ ತಂದು ಪ್ರಾಥಮಿಕ ಶಿಕ್ಷಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಕೋಟಾವನ್ನು ಶೇಕಡಾ ೫೦ಕ್ಕೆ ಏರಿಸಿ ಎಲ್ಲಾ ಜಾತಿ, ವರ್ಗ, ಧರ್ಮಗಳ ಮಕ್ಕಳು ಒಡನಾಡುವಂತಾಗಲು ಕಾನೂನು ರೂಪಿಸಲು ಒತ್ತಾಯಿಸಬೇಕು.

ಇಂಥವು. ಇವುಗಳೇ ಅಂಥೇನಲ್ಲ. ಆದರೆ ಮನವಿ ಮಾಡಿದರೆ ತಂತಾನೇ ಯಾವುದೂ ಈಡೇರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಪೊರೆ ಕಳಚಿಕೊಂಡು ಎಲ್ಲರನ್ನು ಒಡಗೂಡಿ ಹೋರಾಡಿದರೆ ಒಂದಿಷ್ಟು ಈಡೇರಬಹುದು. ಹೀಗಿರುವಾಗ ಯಥಾಸ್ಥಿತಿಯಲ್ಲಿ ಯಾಂತ್ರಿಕವಾಗಿ ಜರುಗುತ್ತಿರುವ ಸಮ್ಮೇಳನಗಳಲ್ಲಿ ಭಾಗವಹಿಸುವುದಕ್ಕೆ ನನ್ನ ಮನಸ್ಸು ಹಿಂದೆಗೆಯುತ್ತದೆ. ಪರಿಷತ್ ಪೊರೆ ಕಳಚಿ ನಿಂತರೆ ನಾನೂ ಜೊತೆಗೂಡುತ್ತೇನೆ. ಅಷ್ಟೇ ಅಲ್ಲ ಭಾರತದ ಅನಾಥ ಅಬ್ಬೇಪಾರಿ ದೇಶೀ ಭಾಷೆಗಳ ಪ್ರಜ್ಞಾವಂತರೂ ತಮ್ಮೊಡನೆ ಜೊತೆಗೂಡುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಲು ನಾನು ಸಮ್ಮತಿಸುತ್ತಿಲ್ಲ. ಇದರಿಂದ ಸಾಹಿತ್ಯ ಪರಿಷತ್‌ನ ಒಂದು ಹಲ್ಲಿಗೆ ನೋವು ಮಾಡಿಬಿಟ್ಟಿರುವೆ! ಈ ನೋವಿನ ಕಡೆಗೆ ಪರಿಷತ್‌ನ ಹಾಗೂ ದೇಶಿ ಭಾಷಿಗರ ನಾಲಿಗೆಯು ಆಗಾಗಲಾದರೂ ಹೊರಳುತ್ತಿರಲಿ ಎಂಬ ಆಸೆಯಿಂದ. ಇದರಿಂದಲೂ ಒಂದಿಷ್ಟು ಸಾಧ್ಯತೆಗಳು ಹುಟ್ಟಬಹುದೇನೋ ಎಂಬ ಆಸೆಯಿಂದ.

ದೇವನೂರ ಮಹಾದೇವ
೧೮/೧೨/೨೦೧೪

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ನಾಳೆಯೇ ಕೊನೆಯ ದಿನ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2014(ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2014

ಸೆಪ್ಟೆಂಬರ್ katha spardhe inside logo 2014 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ