Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ…

-ರವಿ ಕೃಷ್ಣಾರೆಡ್ಡಿ

ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ್ಸೈಡ್‌‌ನ ಅಂಶ ವಾತಾವರಣದಲ್ಲಿ ಯಾವ ಮಟ್ಟದಲ್ಲಿ ಇದೆ ಎನ್ನುವುದಕ್ಕೆ ಸಂಬಂಧಿಸಿದ್ದು. ಅಂದ ಹಾಗೆ, ಇಂಗಾಲದ ಡೈಆಕ್ಸೈಡ್ ಶಾಖವನ್ನು ಹಿಡಿದಿಟ್ಟುಕೊಳ್ಳುವ, ಮತ್ತದನ್ನು ಹೆಚ್ಚಿಸುವ ಹಸಿರುಮನೆ ಅನಿಲಗಳಲ್ಲಿ ಒಂದು.

ಕಳೆದ ಲಕ್ಷಾಂತರ, ಕೋಟ್ಯಾಂತರ ವರ್ಷಗಳಲ್ಲಿ ಭೂಮಿಯ ಮೇಲೆ ಇಂಗಾಲದ ಡೈಆಕ್ಸೈಡ್ ಈ ಪ್ರಮಾಣದಲ್ಲಿ ಇರಲಿಲ್ಲ. ಮನುಷ್ಯ ಭೂಮಿಯ ಮೇಲೆ ವಿಕಾಸವಾಗುವುದಕ್ಕಿಂತ ಲಕ್ಷಾಂತರ ವರ್ಷಗಳ ಮೊದಲು ಇತ್ತು, ಅದರೆ ಆತ ಓಡಾಡಲು ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅದು ಶೇಖರಣೆಯಾಗಿದೆ.

ಕೈಗಾರಿಕಾ ಯುಗಕ್ಕೂ ಮೊದಲು ಭೂಮಿಯ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ದಶಲಕ್ಷಕ್ಕೆ ಕೇವಲ 280 ಅಂಶಗಳಲ್ಲಿತ್ತು (280 parts per million). carbon-atmosphere-440-ppmಕಳೆದ ಎರಡು-ಮೂರು ಶತಮಾನಗಳ ಕೈಗಾರಿಕಾ ಕ್ರಾಂತಿಯಿಂದಾಗಿ ಕಲ್ಲಿದ್ದಲು ಮತ್ತು ತೈಲವನ್ನು ಉಪಯೋಗಿಸಲು ಆರಂಭಿಸಿದಾಗಿನಿಂದ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ವಾತಾವರಣದಲ್ಲಿ ವಿಪರೀತ ಗತಿಯಲ್ಲಿ ಏರುತ್ತಲೇ ಬಂದಿದೆ. 1958ರಲ್ಲಿ ಫೆಸಿಫಿಕ್ ಸಾಗರದ ಹವಾಯಿ ದ್ವೀಪದಲ್ಲಿ ಈ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಅಳೆಯಲು ಆರಂಭಿಸಿದಾಗ ಅದು 318 ppm ಇತ್ತು. 1990ರ ದಶಕದ ಆರಂಭದಲ್ಲಿ ಅದು 350 ppm ದಾಟಿತು. ಕಳೆದ ವಾರ ಅದು ಸರಾಸರಿ 400 ppm ದಾಟಿದೆ.

ಈ 400 ppm ಸಂಖ್ಯೆ ಗಂಭೀರವಾದದ್ದು ಏಕೆಂದರೆ ಹವಾಮಾನ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಈ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಈ ಹಂತದಲ್ಲಿಯೇ ನಿಯಂತ್ರಣ ಮಾಡಿದರೆ ಮಾತ್ರ ಭೂಮಿಯ ಮೇಲಿನ ಶಾಖವನ್ನು ಕೈಗಾರಿಕಾ ಪೂರ್ವ ದಿನಗಳ ಸರಾಸರಿ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಪ್ರಮಾಣದ ಒಳಗೇ ನಿಯಂತ್ರಿಸಲು ಸಾಧ್ಯ. ಅದು ಸಾಧ್ಯವಾಗದೆ ಭೂಮಿಯ ಮೇಲಿನ ತಾಪಮಾನ ಸರಾಸರಿ 2 ಸೆಲ್ಸಿಯಸ್ ಹೆಚ್ಚಾಗಿದ್ದೇ ಆದರೆ, ಭೂಮಿಯ ಮೇಲಿನ ಪ್ರತಿಯೊಂದು ಜೀವಸಂಕುಲದ ಮೇಲೆ ತೀವ್ರವಾದ ಪರಿಣಾಮಗಳಾಗಲಿವೆ ಮತ್ತು ಅದು ಬಹುಪಾಲು ಮಾರಣಾಂತಿಕವಾಗಲಿದೆ.

ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗದೇ ಹೋದರೆ ಮುಂದಿನ ಬೇಸಿಗೆಗಳ ಉರಿಬಿಸಿಲು ಹೆಚ್ಚುತ್ತದೆ. ಬರಗಾಲಗಳ ಪುನರಾವರ್ತನೆ ಹೆಚ್ಚಾಗಲಿವೆ. ಅನಾವೃಷ್ಟಿ ಮಾತ್ರವಲ್ಲ, ಅಕಾಲಿಕ ಅತಿವೃಷ್ಟಿಗಳೂ ಘಟಿಸಿ ನೂರು-ವರ್ಷಕ್ಕೊಮ್ಮೆಯ ಪ್ರವಾಹಗಳು ಜರುಗಲಿವೆ. ಸಮುದ್ರದ ನೀರಿನ ಮಟ್ಟ ಹೆಚ್ಚಿ ಸಮುದ್ರ ದಂಡೆಯ ಭೂಭಾಗಗಳು ಮುಳುಗಲಿವೆ.

ಇಂದು ಪ್ರಪಂಚದ ಅತಿ ದೊಡ್ಡ ಮಾಲಿನ್ಯ ಉತ್ಪಾದಕರಾದ ಅಮೆರಿಕ, ಚೀನಾ, ಯೂರೋಪ್‌ಗಳಿಗೆ ಮಾತ್ರ ಗಂಭೀರ ವಿಷಯವಲ್ಲ. ಭಾರತದಂತಹ ಸಂಕೀರ್ಣ ಮತ್ತು ವೈವಿಧ್ಯತೆಯ ನಾಡಿನ ಜನರ ಉಳಿವಿನ ಪ್ರಶ್ನೆಯೂ ಆಗಲಿದೆ. ಹವಾಮಾನ ವೈಪರೀತ್ಯದ ಪರಿಣಾಮ ಮೊದಲು ತಟ್ಟುವುದೇ ಬಡವರನ್ನು ಮತ್ತು ದುರ್ಬಲರನ್ನು. ಇದು ಅಳಿವು-ಉಳಿವಿನ ಪ್ರಶ್ನೆಯಾಗುವುದಕ್ಕಿಂತ ಮುಂಚೆ ಪ್ರಪಂಚದ ಬಡ ಮತ್ತು ಹಿಂದುಳಿದ ದೇಶಗಳ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಿಜ್ಞಾನಿಗಳು ಮತ್ತು ಸಾಮಾಜಿಕ ಹೋರಾಟಗಾರರು ಇದನ್ನು ಪ್ರಸ್ತುತವಾಗಿಸಲು ಪ್ರಯತ್ನಿಸಬಹುದು, ಆದರೆ ರಾಜಕೀಯ ನಾಯಕರಿಗೆ ಇಂತಹ ವಿಷಯಗಳು ಅರ್ಥವಾಗುವಷ್ಟು ಯೋಗ್ಯತೆ ಮತ್ತು ಕಳಕಳಿಗಳಾಗಲಿ, ಚಿತ್ತಶುದ್ಧಿ ಇದೆಯೇ ಎನ್ನುವುದು ಪ್ರಶ್ನೆ.

ಪ್ರಪಂಚದಾದ್ಯಂತ ಬರಲಿರುವ ದಿನಗಳ ರಾಜಕೀಯ ಮತ್ತು ಸಾಮಾಜಿಕ ಹೋರಾಟ ಬೇರೆ ಬಗೆಯದೇ ಇರುತ್ತದೆ. ಆದರೆ ಆ ವಿಷಮ ಘಟ್ಟ ಎಂದಿನಿಂದ ಆರಂಭವಾಗುತ್ತದೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಹಾಗಾಗಿಯೇ, ಜಾಗತಿಕ ನಾಯಕತ್ವವೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ, ಬೇಗ ಎಚ್ಚತ್ತುಕೊಂಡು ತಾಪಮಾನದ ಪ್ರಮಾಣವನ್ನು ತಹಬಂದಿಗೆ ತರದೇ ಹೋದರೆ ಏನಾಗಲಿದೆಯೋ ಅದು ಆಗಲಿದೆ.

ಕರ್ನಾಟಕದ ಜನತೆಗೆ ಮತ್ತು ಸಿದ್ಧರಾಮಯ್ಯನವರಿಗೆ ಅಭಿನಂದಿಸುತ್ತ…

– ರವಿ ಕೃಷ್ಣಾರೆಡ್ಡಿ

ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಇಂದು ಅಧಿಕಾರ ವಹಿಸಿಕೊಂಡಿದೆ. ಬಿಡಿಬಿಡಿಯಾಗಿ ನೋಡುವುದಕ್ಕಿಂತ ಒಟ್ಟಾರೆಯಾಗಿ ಮತ್ತು ಅಂಕಿಸಂಖ್ಯೆಗಳ ದೃಷ್ಟಿಕೋನದಲ್ಲಿ ನೋಡಿದಾಗ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಸರ್ಕಾರ ನಡೆಸಲು ಚುನಾಯಿಸಿದ್ದಾರೆ. ಹಾಗೆಯೇ ಅದು ಬಹುಮತದ ನಿರ್ಣಯವಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ದ್ವಂದ್ವಗಳಿಲ್ಲದ ನಿರ್ಣಯ ಕೊಟ್ಟ ರಾಜ್ಯದ ಜನತೆಯನ್ನು ನಾವು ಅಭಿನಂದಿಸಲೇಬೇಕು.

ಮತ್ತು, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. siddaramaiah-cmಕರ್ನಾಟಕ ಕಂಡ ಅನೇಕ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಲು ಹಲವರಿಗಿಂತ ಹೆಚ್ಚು ಅರ್ಹರಿದ್ದರು. ಈ ಹಿನ್ನೆಲೆಯಲ್ಲಿಯೇ ಅವರು ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಹುದ್ದೆ ತಮ್ಮ ಹಕ್ಕೆಂಬಂತೆ ಪ್ರತಿಪಾದಿಸುತ್ತ ಬಂದಿದ್ದರು ಸಹ. ಈಗ ಅನೇಕ ರಾಜಕೀಯ ಏಳುಬೀಳಾಟಗಳ, ತಂತ್ರಗಾರಿಕೆಯ, ಜನಾಭಿಪ್ರಾಯದ ನಂತರ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೂ ಅಭಿನಂದನೆಗಳು.

ಕಳೆದೆರಡು ದಿನಗಳಲ್ಲಿ ನಡೆದ ಅಪ್ಯಾಯಮಾನವಾದಂತಹ ಘಟನಾವಳಿಗಳೆಂದರೆ, ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ನಿಯೋಜಿತ ಮುಖ್ಯಮಂತ್ರಿಯಾಗಿ ಘೋಷಿತವಾದ ಮೇಲೆ ಸಿದ್ಧರಾಮಯ್ಯನವರು ನಡೆದುಕೊಂಡ ರೀತಿ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದವರೆಲ್ಲ, ಆ ಬಗ್ಗೆ ಘೋಷಣೆ ಆಗುತ್ತಿದ್ದಂತೆ ಮಾಡುತ್ತಿದ್ದ ಮೊದಲ ಕೆಲಸ ಮಠಗಳಿಗೆ ಹೋಗಿ ಮಠಾಧೀಶರ ಕಾಲುಗಳಿಗೆ ಎರಗುತ್ತಿದ್ದದ್ದು, ಮತ್ತು ನಂತರ ದೇವಸ್ಥಾನಗಳಿಗೆ, ಅದರಲ್ಲೂ ರಾಜ್ಯದ ಹೊರಗಿನ (ಜಮ್ಮು, ಆಂಧ್ರ, ಕೇರಳ) ದೇವಳಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಮಾಡಿ ಬರುತ್ತಿದ್ದದ್ದು. ಅಂತಹ ಒಂದು ದಾಸ್ಯದ ಮತ್ತು ಅವೈಚಾರಿಕ ಮನೋಭಾವನ್ನು ಬದಿಗೊತ್ತಿ, ನಾಡಿನಲ್ಲಿ ಈಗಲೂ ಅಷ್ಟಿಷ್ಟು ಸಾಕ್ಷಿಪ್ರಜ್ಞೆಯಾಗಿ ಬಿಂಬಿತವಾಗಿರುವ ಹೋರಾಟಗಾರರ, ಚಿಂತಕರ, ಕವಿಗಳ ಮನೆಗೆ ಹೋಗಿ ಅವರನ್ನು ಭೇಟಿಯಾಗಿದ್ದು. ಇದು ಬಹುಶಃ ಕರ್ನಾಟಕದ ಮುಂದಿನ ನಾಯಕರ ನಡವಳಿಕೆಗಳಿಗೆ ಮುನ್ನುಡಿ ಬರೆದಂತಿದೆ. ಸಿದ್ಧರಾಮಯ್ಯವನರ ಈ ನಡೆಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಆಶಿಸೋಣ. ಒಬ್ಬ ರಾಜಕೀಯ ನಾಯಕ ನಾಡಿನ ಎಲ್ಲಾ ರಂಗಗಳನ್ನು ಪ್ರಭಾವಿಸಬೇಕು, ಮೇಲಕ್ಕೆತ್ತಬೇಕು. ಅಂತಹ ಒಂದು ಸಾಧ್ಯತೆ ಮತ್ತು ಅವಕಾಶ ಸಿದ್ಧರಾಮಯ್ಯನವರಿಗಿದೆ.

ಆದರೆ, ಇದೇ ಸಂದರ್ಭದಲ್ಲಿ ನಾಡಿನ ಭವಿಷ್ಯದ ಬಗ್ಗೆ ಮತ್ತು ಈ ಸಲದ ಸರ್ಕಾರ ತರಲಿರುವ ಗುಣಾತ್ಮಕ ಬದಲಾವಣೆಗಳ ಬಗ್ಗೆ ನಾನು ಆಶಾವಾದಿಯಾಗಿಲ್ಲ. ಸಿದ್ಧರಾಮಯ್ಯನವರ ಜೀವನದ ಮಹತ್ವಾಕಾಂಕ್ಷೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದಾಗಿತ್ತು. ಅದನ್ನವರು ವೈಯಕ್ತಿಕ ಸಾಮರ್ಥ್ಯ ಮತ್ತು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಪ್ರತಿಪಾದಿಸುತ್ತ ಬಂದಿದ್ದರು. ಆದರೆ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಇಂತಿಂತಹ ಬದಲಾವಣೆಗಳನ್ನು ಮತ್ತು ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದಾಗಲಿ, ಈ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಕಲ್ಪನೆಗಳು ಎಂತಹವಿವೆ ಎಂದಾಗಲಿ ಅವರು ಸ್ಪಷ್ಟವಾಗಿ ಜನರ ಮುಂದೆ ಹಂಚಿಕೊಂಡ ಉದಾಹರಣೆಗಳಿಲ್ಲ. ಅವರು ಈ ಹಿಂದೆ ತಮಗೆ ವಹಿಸಿದ್ದ ಖಾತೆಗಳನ್ನು ದಕ್ಷವಾಗಿ ನಿಭಾಯಿಸಿದ ಉದಾಹರಣೆಗಳಿವೆಯೇ ವಿನಃ ಕ್ರಾಂತಿಕಾರಕ ಸಾಧನೆಗಳನ್ನು ಮಾಡಿದ ಉದಾಹರಣೆಗಳಿಲ್ಲ. ಮತ್ತು ಸಿದ್ಧರಾಮಯ್ಯನವರು ಆಲಸಿ ಮತ್ತು ವಿಲಾಸಿ ಎಂಬ ಆರೋಪಗಳಿವೆ. ಹೀಗಿರುವಾಗ ಸಿದ್ಧರಾಮಯ್ಯನವರು ಜೆ.ಎಚ್.ಪಟೇಲರಂತೆ ಒಬ್ಬ well-meaning ಮುಖ್ಯಮಂತ್ರಿಯಾಗುವ ಸಾಧ್ಯತೆಗಳೇ ಹೆಚ್ಚಿವೆ. ಇಂತಹ ಸಂಶಯಗಳನ್ನು ಸುಳ್ಳು ಮಾಡಿ ಸಿದ್ಧರಾಮಯ್ಯನವರು ನಾಡು ಉತ್ತಮ ವಿಚಾರಗಳಿಗೆ ನೆನಪಿಟ್ಟುಕೊಳ್ಳುವಂತಹ ನಾಯಕತ್ವ ನೀಡಲಿ ಎಂದು ಆಶಿಸುತ್ತೇನೆ.

ಇನ್ನು, ಸಿದ್ಧರಾಮಯ್ಯನವರ ಮಂತ್ರಿಮಂಡಲದ ಬಗ್ಗೆ. ಅದು ಮುಖ್ಯಮಂತ್ರಿ ಆಯ್ಕೆಯಾದಷ್ಟು ಸರಳವಾಗಿ ಆಗುತ್ತದೆ ಎಂದು ಹೇಗೆ ಹೇಳುವುದು? Siddaramaiahಹೇಗೋ ಮಂತ್ರಿಮಂಡಲ ರಚನೆಯಾಗುತ್ತದೆ. ಹಿಂದಿನ ಮೂರ್ನಾಲ್ಕು ಸರ್ಕಾರಗಳಿಗೆ ಹೋಲಿಸಿದರೆ ಸರ್ಕಾರಕ್ಕೆ ಗೌರವ ಮತ್ತು ಘನತೆ ತರಬಲ್ಲಂತಹ, ವೈಯಕ್ತಿಕ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಬಹುಶಃ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆ ಮಂತ್ರಿಮಂಡಲದಲ್ಲಿ ಖಂಡಿತವಾಗಿ ಪರಮಭ್ರಷ್ಟರು, ಗೂಂಡಾ-ಗಣಿ-ಭೂಮಾಫಿಯಾದ ಹಿನ್ನೆಲೆಯಿಂದ ಬಂದವರು, ಕೆಲಸ ಮಾಡಲಾಗದ ಮುದುಕರು, ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳಿಲ್ಲದ ಯುವಕರು, ಅಸಮರ್ಥರೂ, ಇದ್ದೇ ಇರುತ್ತಾರೆ. ಜೊತೆಗೆ ಮಂತ್ರಿಯಾಗಲಾಗದೆ ಉಳಿದ ಅತೃಪ್ತ ಶಾಸಕರೂ, ಅವರಿಗೊಬ್ಬ ನಾಯಕ, ಅವರ ಬೇಕುಬೇಡಗಳು, ಈ ಪರಂಪರೆ ಖಂಡಿತ ಮುಂದುವರೆಯುತ್ತದೆ. (ಮತ್ತು, ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅವರನ್ನು ಅಭಿನಂದಿಸಲು ಅಟ್ಟವೇರಿದ ಮುಖಗಳನ್ನು ನೀವು ನೋಡಿದ್ದರೆ ಕಳ್ಳರ ಮತ್ತು ಸುಳ್ಳರ ದೊಡ್ದ ಗುಂಪೇ ಸಿದ್ಧರಾಮಯ್ಯನವರನ್ನು ಸುತ್ತುವರೆಯಲಿದ್ದಾರೆ ಎನ್ನುವ ಸಂಶಯ ಬರುವುದು ಸಹಜ.) ಸರ್ಕಾರ ನಡೆಸುವ ಪಕ್ಷ ಬದಲಾಗಿದೆ. ಅನೇಕ ಹೊಸ ಶಾಸಕರು ಬಂದಿದ್ಡಾರೆ. ಆದರೆ, ಇವರೆಲ್ಲ ಬಹುತೇಕ ವಿಷಯಗಳಲ್ಲಿ ಅವರ ಹಿಂದಿನವರಿಗಿಂತ ಭಿನ್ನವಾಗೇನೂ ಇಲ್ಲ. ಹೆಚ್ಚುಕಮ್ಮಿ ಒಂದೇ ರೀತಿಯ ಆಟಗಾರರಿರುವ ತಂಡದಿಂದ ಹೊಸ ರೀತಿಯ ಆಟ ನಿರೀಕ್ಷಿಸುವುದು ಅಸಹಜ.

ಒಂದು ವಿಷಯದಲ್ಲಿ ಸಿದ್ಧರಾಮಯ್ಯನವರ ಮೇಲೆ ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಒತ್ತಡ ಕಡಿಮೆ ಇರುತ್ತದೆ. ಅದು ಕೇಂದ್ರದ ಕಾಂಗ್ರೆಸ್ ಘಟಕಕ್ಕೆ ಸಂಪನ್ಮೂಲ (ಹಣ ಎಂದು ಓದಿಕೊಳ್ಳುವುದು) ಒದಗಿಸುವ ವಿಚಾರಕ್ಕೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದ್ದು, ದೇಶದ ಹಲವು ಕಡೆಗಳಲ್ಲಿಯೂ ಕಾಂಗ್ರೆಸ್ ಸರ್ಕಾರಗಳು ಇರುವುದರಿಂದ ಎಸ್.ಎಮ್.ಕೃಷ್ಣರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಇದ್ದಷ್ಟು ಒತ್ತಡಗಳು ಸಿದ್ಧರಾಮಯ್ಯನವರಿಗೆ ಇರುವುದಿಲ್ಲ. ಆದರೆ, ಕಾಂಗ್ರೆಸ್ ಕಬಂಧಬಾಹುಗಳಿಗೆ ಮತ್ತು ಆಕ್ಟೋಪಸ್‌ನಷ್ಟು ಅನೇಕ ಹಸ್ತಗಳಿಗೆ ಹೆಸರಾದದ್ದು. ಯಾರು ಯಾರ ಹೆಸರಿನಲ್ಲಿ ಡಿಮಾಂಡ್ ಇಡುತ್ತಾರೆ ಮತ್ತು ವಸೂಲಿ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಹೈಕಮಾಂಡ್ ನೇರವಾಗಿ ಬೇಡಿಕೆ ಇಡದೆ ಅನೇಕ ಮಧ್ಯವರ್ತಿಗಳ ಕೈಯ್ಯಲ್ಲಿ ಈ ಕೆಲಸಗಳನ್ನು ಮಾಡಿಸುವುದರಿಂದಲೇ ಕಾಂಗ್ರೆಸ್‌ ಪಕ್ಷದಲ್ಲಿ ಭ್ರಷ್ಟಾಚಾರ ಸಾಂಸ್ಥಿಕವಾಗಿರುವುದು. ಸಿದ್ಧರಾಮಯ್ಯನವರು ವೈಯಕ್ತಿಕವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೆ ಈ ಕಪ್ಪ-ಕಾಣಿಕೆಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಒಂದು ಗಂಭೀರ ಪ್ರಶ್ನೆ.

ಮತ್ತು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆಡಳಿತ ಪಕ್ಷಗಳು ತಮ್ಮ ಆಡಳಿತ ಮಾದರಿ ಮತ್ತು ನ್ಯಾಯ ಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಎದುರಿಸುವುದಕ್ಕಿಂತ ವಾಮಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಗೆಲ್ಲಲು ಯತ್ನಿಸುವುದು ಚಾರಿತ್ರಿಕವಾಗಿ ಕಂಡುಬರುವ ಅಂಶ. ಇನ್ನಾರು ತಿಂಗಳ ಒಳಗೆ ಬಿಬಿಎಂ‌ಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಎರಡು ನಗರಸಭೆ ಸ್ಥಾನಗಳಿಗೆ ಮತ್ತು ಸಂಸದರು ಶಾಸಕರಾಗಿ ಆಯ್ಕೆಯಾಗಿರುವ ಎರಡು ಸಂಸತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತದೆ. ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿಸಬೇಕಾದ ಒತ್ತಡದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದರ ಮೇಲೆ ಈ ಪಕ್ಷದ ಮುಂದಿನ ದಿನಗಳ ನಡೆಯೂ, ಕರ್ನಾಟಕದ ಮುಂದಿನ ದಿನಗಳೂ, ಇರುತ್ತದೆ.

ಇವೆಲ್ಲದಕ್ಕಿಂತ ಮುಖ್ಯವಾಗಿ, ರಾಜ್ಯದಲ್ಲಿ ಈಗಾಗಲೆ ಬರಗಾಲ ಕಾಲಿಟ್ಟು ಎರಡು-ಮೂರು ವರ್ಷ ಕಳೆದಿದೆ. ಇನ್ನೂ ಒಂದೆರಡು ವರ್ಷ ಇದು ಮುಂದುವರೆಯುತ್ತದೆ. droughtಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಆದರೆ ರೈತರ ಮತ್ತು ಕೃಷಿಕಾರ್ಮಿಕರ ಬಡತನ ಹೆಚ್ಚಾಗಲಿದೆ. ನೀರಿನ ಮತ್ತು ವಿದ್ಯುತ್‌ನ ಸಮಸ್ಯೆಗಳು ಎಲ್ಲಾ ವರ್ಗದ ಜನರನ್ನು ಬಾಧಿಸಲಿದೆ. ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಶಿಕ್ಷಣ ತುಟ್ಟಿಯಾಗುತ್ತಿದೆ. ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ರಾಜಕಾರಣಿಗಳಿಂದ ನಾಯಕತ್ವ ಮತ್ತು ಕೆಲಸಗಳನ್ನು ಅಪೇಕ್ಷಿಸುವ ಜನರೂ ಕ್ರಿಯಾಶೀಲರಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ನಾಯಕತ್ವ ಮತ್ತು ಪರಿಹಾರ ನೀಡಬಲ್ಲ ಸಾಮರ್ಥ್ಯ ಸಿದ್ಧರಾಮಯ್ಯನವರಿಗಿದ್ದರೂ, ನಮ್ಮ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಇರುತ್ತದೆಯೇ ಎನ್ನುವುದರ ಮೇಲೆ ಈ ಸರ್ಕಾರದ ಭದ್ರತೆ ಅವಲಂಬಿಸಿದೆ.

ಹಾಗೆಯೇ, ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೂ ಇದು ಸೂಕ್ಷ್ಮ ಕಾಲ. ಹೆಚ್ಚೇನೂ ಬದಲಾಗದ ರಾಜಕೀಯ-ಸಾಮಾಜಿಕ ಸಂದರ್ಭದಲ್ಲಿ ತಮ್ಮ ನಡೆಯನ್ನು ಮತ್ತು ಹೋರಾಟವನ್ನು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಮುಂದುವರೆಸುವದಷ್ಟೇ ಅವರು ಮಾಡಬೇಕಾದ ಕೆಲಸ. ಆದರೆ, ಹಲವು ಸ್ತರದ ಜನರೊಡನೆ ಮತ್ತು ಸಮಾನ ಮನಸ್ಕ ಗುಂಪುಗಳೊಡನೆ ಕೆಲಸ ಮಾಡುವುದನ್ನು ಮತ್ತು ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದನ್ನು ಅವರು ಆದಷ್ಟು ಬೇಗ ಕಲಿಯಬೇಕಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇನ್ನಾರು ತಿಂಗಳ ಒಳಗೇ ಈ ಸರ್ಕಾರದ ಮೌಲ್ಯಮಾಪನ ಆರಂಭವಾಗುತ್ತದೆ ಮತ್ತು ಅದರ ಭವಿಷ್ಯದ ಸಾಧನೆಗಳು ಬರೆಯಲ್ಪಡುತ್ತವೆ.

ಸುಭದ್ರ ಸರಕಾರದ ನಿರೀಕ್ಷೆಯಲ್ಲಿ. . . .

– ಡಾ. ಅಶೋಕ್. ಕೆ. ಆರ್.

ಮತ್ತೊಂದು ಚುನಾವಣೆ ಮುಗಿದಿದೆ. ಹತ್ತು ವರುಷದ ನಂತರ ಕಾಂಗ್ರೆಸ್ ಸಂಪೂರ್ಣ ವಿಜಯ ಸಾಧಿಸಿದೆ. ಧರ್ಮಸಿಂಗ್ ಸರಕಾರದ ಪತನದ ನಂತರ ಜೆಡಿಎಸ್ ಮತ್ತು ಬಿಜೆಪಿ ಜೊತೆಗೂಡಿ ಸರಕಾರ ರಚಿಸಿದಾಗಿನಿಂದಲೂ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿತ್ತು. ಇಪ್ಪತ್ತು ತಿಂಗಳ ಕುಮಾರಸ್ವಾಮಿ ನೇತೃತ್ವದ ಸರಕಾರ, ತದನಂತರ ಕೆಲವೇ ದಿನಗಳ ಯಡಿಯೂರಪ್ಪ ಸರಕಾರ; ವಚನಭಂಗದ ನೆಪದಲ್ಲಿ ಬಹುಮತದ ಸಮೀಪಕ್ಕೆ ಬಂದ ಬಿಜೆಪಿ. ಪಕ್ಷೇತರರ ನೆರವಿನಿಂದ ಬಿಜೆಪಿ ಯಡಿಯೂರಪ್ಪನವರ ಮುಖ್ಯಮಂತ್ರಿತ್ವದ ಅಡಿಯಲ್ಲಿ ಸರಕಾರ ರಚಿಸಿತು. ನಂತರ ನಡೆದಿದ್ದು ಕರ್ನಾಟಕ ಇದುವರೆಗೂ ಕಂಡರಿಯದ ರಾಜಕೀಯ ನೈತಿಕತೆಯ ಅಧಃಪತನ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನವನ್ನೋದಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತೀರ ಈ ಮಟ್ಟಿಗೆ ಆಡಳಿತ ನಡೆಸುತ್ತದೆಂಬುದನ್ನು ಬಿಜೆಪಿಯ ಕಡುವೈರಿಗಳೂ ಊಹಿಸಿರಲಿಲ್ಲ! ದಶಕಗಳ ಕಾಲ ವಿರೋಧ ಪಕ್ಷದ ನಾಯಕನಾಗಿ ಬೆಳೆದು, ಹತ್ತು ಹಲವು ಆಡಳಿತ ಪಕ್ಷಗಳ ವಿರುದ್ಧದ ಹೋರಾಟಗಳ ಮುಂಚೂಣಿಯಲ್ಲಿದ್ದವರು ಯಡಿಯೂರಪ್ಪ. ಹಿಂದಿ ಭಾಷಿಕ ಪ್ರದೇಶಗಳ ಪಕ್ಷ ಎಂಬ ಹಣೆಪಟ್ಟಿಯನ್ನು ಪಡೆದಿದ್ದ ಬಿಜೆಪಿ ಪಕ್ಷ, ನಗರಗಳಿಗಷ್ಟೇ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿ ಪಡೆದಿದ್ದ ಬಿಜೆಪಿ ಪಕ್ಷ ದಕ್ಷಿಣ ಭಾರತದ ಹಿಂದಿಯೇತರ ರಾಜ್ಯವೊಂದರಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು ಸಾಧನೆಯೇ ಸರಿ. ಈ ಗೆಲುವಿನ ಹಿಂದೆ ಕುಮಾರಸ್ವಾಮಿ ಮತ್ತವರ ಜೆಡಿಎಸ್ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದೂ ಕಾರಣವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಜೊತೆಗೆ ಸಹವರ್ತಿಗಳ ಕಾಲೆಳೆಯುತ್ತಲೇ ಕಾಲಹರಣ ಮಾಡಿದ ಕಾಂಗ್ರೆಸ್ ಧುರೀಣರ ಪಾಲೂ ಸಾಕಷ್ಟಿತ್ತು. ಗೆಲುವಿಗೆ ಕಾರಣಗಳೇನೆ ಇದ್ದರೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ನೊಗವಿಡಿದ ಬಿಜೆಪಿ ಕನಿಷ್ಟ ದಕ್ಷಿಣದ ಇತರ ರಾಜ್ಯಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲಾದರೂ ಅತ್ಯುತ್ತಮವಲ್ಲದಿದ್ದರೂ ಕೊನೇ ಪಕ್ಷ ಸಾಧಾರಣ ಮಟ್ಟದ ಆಡಳಿತವನ್ನಾದರೂ ನೀಡಬಹುದು ಎಂಬ ನಿರೀಕ್ಷೆಯಿತ್ತು.

ಆದರೆ ಕಳೆದ ಐದು ವರ್ಷಗಳಲ್ಲಿ ನಡೆದಿದ್ದು ನೈತಿಕತೆಯ ಮೇಲಿನ ರಾಜಕೀಯ ಅತ್ಯಾಚಾರ. ಏಕಪಕ್ಷವೇ ಅಧಿಕಾರದಲ್ಲಿದ್ದಾಗ್ಯೂ ಮೂರು ಬಾರಿ ಮುಖ್ಯಮಂತ್ರಿಯ ಬದಲಾವಣೆ. yeddyurappa-SirigereTaralabaluಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರ ಜೈಲುವಾಸ – ಭ್ರಷ್ಟಾಚಾರದ ಕಾರಣದಿಂದ. ತತ್ವ ಸಿದ್ಧಾಂತಗಳು ಮರೆಯಾಗಿ ಹಣದ ರುದ್ರನರ್ತನ ಹೆಚ್ಚಾಗಿ ನಡೆದಿದ್ದೂ ಈ ಅವಧಿಯಲ್ಲೇ. ಆಪರೇಷನ್ ಕಮಲದಂತ ಅನೈತಿಕ ದಂಧೆಗೆ ಅಧಿಕೃತ ರೂಪುರೇಷೆಗಳನ್ನು ನಿರ್ಮಿಸಿದ ಕೀರ್ತಿ “ವಿಭಿನ್ನ ಪಕ್ಷ”ವೆಂದೇ ಪ್ರಚಾರ ಗಿಟ್ಟಿಸುವ ಬಿಜೆಪಿಗೆ ಸೇರಬೇಕು. ಇದರೊಟ್ಟಿಗೆ ಯಥಾ ರಾಜ ತಥಾ ಮಂತ್ರಿಯೆಂಬಂತೆ ಯಡಿಯೂರಪ್ಪನವರ ಹಿಂದೆ ಮುಂದೆ ಅನೇಕ ಮಂತ್ರಿ ಶಾಸಕರು ಜೈಲುವಾಸಿಗಳಾದರು. ಕೆಲವರು ಇನ್ನೂ ಜೈಲಿನಲ್ಲೇ ಇದ್ದಾರೆ. ವೈಯಕ್ತಿಕ ನೆಲೆಯಲ್ಲೂ ಬಿಜೆಪಿಯ ಶಾಸಕರನೇಕರು ಅನೈತಿಕತೆಯಲ್ಲೇ ಶ್ರೇಷ್ಟತೆ ಕಂಡುಕೊಂಡರು. ಅತ್ಯಾಚಾರ, ಮಡದಿಯ ನಿಗೂಢ ಸಾವು, ಸದನದಲ್ಲೇ ಪೋಲಿ ಚಿತ್ರಗಳ ವೀಕ್ಷಣೆ, ನರ್ಸ್ ಪ್ರಕರಣ, ಸಿಡಿ ಪ್ರಕರಣ …. ಸಂಸ್ಕೃತಿ ರಕ್ಷಿಸುವ ಪಕ್ಷದಲ್ಲಿ ಅಸಂಸ್ಕೃತರೇ ಹೆಚ್ಚಾಗಿ ಬಿಟ್ಟಿದ್ದರು. ಕಾಂಗ್ರೆಸ್ ಐವತ್ತು ಚಿಲ್ಲರೆ ವರುಷಗಳಲ್ಲಿ ಮಾಡಿದ ಭ್ರಷ್ಟಾಚಾರವನ್ನು ಐದೇ ವರ್ಷದಲ್ಲಿ ಮಾಡಿ ತೋರಿಸಿದ್ದು ಬಿಜೆಪಿಯ ನಿಜವಾದ “ಸಾಧನೆ”!! ಕರ್ನಾಟಕದ ರಾಜಕೀಯ ಪ್ರಹಸನ ರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗುವಂತೆ ಮಾಡಿದ್ದೂ ಸಾಧನೆಯೇ ಸರಿ!

ಇನ್ನು ಸಾಮಾಜಿಕವಾಗಿಯೂ ಬಹಳಷ್ಟು ಹಾನಿಯುಂಟುಮಾಡುವಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ! ಹಿಂದುತ್ವವನ್ನಷ್ಟೇ ಮುಖ್ಯ ಅಜೆಂಡವನ್ನಾಗಿರಿಸಿಕೊಂಡ ಬಿಜೆಪಿ ತಾನು ನಂಬಿದ “ಹಿಂದುತ್ವ”ದ ಮಾದರಿಯನ್ನು ನೇರವಾಗಲ್ಲದಿದ್ದರೂ ಹತ್ತಲವು ಹಿಂದೂ ಸಂಘಟನೆಗಳ ಮುಖಾಂತರ ಸಮಾಜದ ಮೇಲೆ ಹೇರುವ ದುಸ್ಸಾಹಸ ಮಾಡುವುದರಲ್ಲಿ ಅನುಮಾನವಿರಲಿಲ್ಲ. ಹಿಂದೂ ಧರ್ಮದ ಒಳಗಿನ ಹುಳುಕಗಳೇ ಹಿಂದೂ ಧರ್ಮದ ನಿಜವಾದ ವೈರಿ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಈ ಹಿಂದುತ್ವ ಮಾದರಿ ಮುಸ್ಲಿಂ, ಕ್ರಿಶ್ಚಿಯನ್ನರಿಂದಷ್ಟೇ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬುದನ್ನು ಹರಡುತ್ತ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದಕ್ಕೆ ಮುಂದಾಯಿತು. ಹಿಂದೂ ಧರ್ಮದ ಜಾತಿ ವ್ಯವಸ್ಥೆಯಲ್ಲಿ ನಲುಗಿದ ಜನರನ್ನೇ ತನ್ನ ಅಸ್ತ್ರಗಳನ್ನಾಗಿ ಬಳಸಿಕೊಂಡು ಅನ್ಯಧರ್ಮೀಯರ ಮೇಲೆ ಹಲ್ಲೆ ನಡೆಸಿದ ಕೀರ್ತಿ ಈ ಹಿಂದುತ್ವ ಮಾದರಿಯದು. ಈ ಹಿಂದುತ್ವ ಮಾದರಿ ಅತಿ ಹೆಚ್ಚು ಪ್ರಯೋಗಕ್ಕೊಳಗಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ. ಸಹಪಾಠಿಗಳೊಂದಿಗೆ ಸಹೋದ್ಯೋಗಿಗಳೊಂದಿಗೆ ಮಾತನಾಡಲೂ ಭಯವಾಗುವಂತಹ ವಾತಾವರಣ ಈ ಜಿಲ್ಲೆಗಳಲ್ಲಿ ಸೃಷ್ಟಿಯಾಗಿರುವುದು ಸುಳ್ಳಲ್ಲ. ಕೆಲವೊಂದು ಪ್ರಕರಣಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸವೂ ಇತ್ತು. ಮುಸ್ಲಿಂ ಮತ್ತು ಹಿಂದೂ ಮೂಲಭೂತವಾದಿಗಳ ಮುಖ್ಯ ಉದ್ದೇಶ ಎರಡೂ ಕೋಮಿನ ಜನತೆ ಮಾನಸಿಕವಾಗಿ ದೂರವಾಗಬೇಕು, ಅನ್ಯ ಮತದ ಜನರ ಬಗ್ಗೆ ಅಸಮಾನ್ಯ ದ್ವೇಷ ಕಾರಬೇಕು. ಆ ಉದ್ದೇಶ “ಬುದ್ಧಿವಂತರ” ಜಿಲ್ಲೆಗಳಲ್ಲೇ ಅತ್ಯಂತ ಯಶಸ್ವಿಯಾಗಿದ್ದು ನಮ್ಮ ಶೈಕ್ಷಣಿಕ ವಿಧಾನದ ಸೋಲೆಂದರೆ ತಪ್ಪಿಲ್ಲ. ಅದೃಷ್ಟವಶಾತ್ ಇತರ ಜಿಲ್ಲೆಗಳಲ್ಲಿ ಈ “ಪ್ರಯೋಗ”ಗಳಿಗೆ ಜನಬೆಂಬಲ ಹೆಚ್ಚಾಗಿ ಸಿಗಲಿಲ್ಲ. ಬ್ರಹ್ಮಾಂಡದಂಥ ಕಾರ್ಯಕ್ರಮಗಳು, ಜ್ಯೋತಿಷ್ಯ, ವಾಸ್ತು, ಕಂದಾಚಾರ ಇದೇ ಸಮಯದಲ್ಲಿ ಹೆಚ್ಚಾಗಿದ್ದು ಕಾಕತಾಳೀಯವಾ?! ಮುಖ್ಯಮಂತ್ರಿಯ ವರ್ತನೆ ಇಡೀ ರಾಜ್ಯದ ಜನರ ಮೇಲೆ ಪರಿಣಾಮ ಬೀರಿದ ಕಾರಣಕ್ಕೆ ಇವೆಲ್ಲವೂ ಹೆಚ್ಚಾದವಾ ಎಂಬುದರ ಸಾಮಾಜಿಕ ಅಧ್ಯಯನ ನಡೆದರೆ ಆಸಕ್ತಿಕರ ಅಂಶಗಳು ಹೊರಬೀಳಬಹುದು!

ತನ್ನದೇ ಸಾವಿರ ತಪ್ಪುಗಳಿಂದ ಚುನಾವಣೆಯಲ್ಲಿ ಸೋಲುಂಡಿರುವ ಬಿಜೆಪಿ ಈಗ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲಾಗದ ಸ್ಥಿತಿಗೆ ತಲುಪಿದೆ. ಯಡಿಯೂರಪ್ಪ, ಶ್ರೀರಾಮುಲು ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದಲೇ ಹೊಸಪಕ್ಷವನ್ನು ಕಟ್ಟಿ ತಮ್ಮ ಉದ್ದಿಶ್ಯದಲ್ಲಿ ತಕ್ಕಮಟ್ಟಿಗಿನ ಯಶಸ್ಸು ಗಳಿಸಿದ್ದಾರೆ. ಅವರು ಪಕ್ಷ ತೊರೆಯದಿದ್ದರೆ ಸೋಲನ್ನು ತಪ್ಪಿಸಿಕೊಳ್ಳಲಾಗದಿದ್ದರೂ ಇನ್ನೊಂದಷ್ಟು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿತ್ತು. ಜೆಡಿಎಸ್ ಪಡೆದಷ್ಟೇ ಸ್ಥಾನಗಳನ್ನು (40) ಪಡೆದಿರುವ ಬಿಜೆಪಿ ಗಿಟ್ಟಿಸಿದ ಮತಗಳ ಸಂಖ್ಯೆಯ ಆಧಾರದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಪಡೆವ ಸಾಧ್ಯತೆ ಕಡಿಮೆ.

ರಾಜಕೀಯ ಅನಿಶ್ಚಿತತೆ ಅನೈತಿಕತೆ ಶಿಖರ ತಲುಪಿ ಕುಳಿತಿದೆ. ಬಿಜೆಪಿಯಿಂದ ರೋಸತ್ತ ಜನ ಮತ್ಯಾವುದೇ ಪಕ್ಷವೂ ಇಲ್ಲದ ಕಾರಣ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ನೀಡಿದ್ದಾರೆ. Siddaramaiahಈ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ಸಿಗರ ಶ್ರಮ ಕಡಿಮೆಯೆಂದೇ ಹೇಳಬೇಕು. ಕಳೆದ ಐದು ವರ್ಷದಲ್ಲಿ ಅಧಿಕೃತ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ತನ್ನ ಕರ್ತವ್ಯವನ್ನು ನಿಭಾಯಿಸಲೇ ಇಲ್ಲ. ಅಧಿಕೃತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಜೆಡಿಎಸ್. ಅದರ ಕಾರ್ಯ ಯಡಿಯೂರಪ್ಪನವರ ಪತನದ ನಂತರ ಅಚಾನಕ್ಕಾಗಿ ನಿಂತು ಹೋಗಿದ್ದು ಅದರ ಉದ್ದೇಶಗಳ ಬಗ್ಗೆ ಅನುಮಾನ ಮೂಡಿಸುತ್ತದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಸೊಲ್ಲೆತದಿದುದಕ್ಕೆ ಕಾರಣ ಅದರದೇ ನೇತೃತ್ವದ ಯುಪಿಎ ಸರಕಾರ ನಡೆಸುತ್ತಿರುವ ಅಗಾಧ ಹಗರಣಗಳು! ಉತ್ತರ ಕರ್ನಾಟಕದಲ್ಲಿ ಮತ್ತೆ ತನ್ನ ಅಸ್ತಿತ್ವ ಕಂಡುಕೊಳ್ಳುವಲ್ಲಿ “ವಿಶೇಷ ಸ್ಥಾನಮಾನ” ನೀಡಿದ್ದು ನೆರವಿಗೆ ಬಂತು. “ಹಿಂದುತ್ವದ ಪ್ರಯೋಗಶಾಲೆ” ಬಿಜೆಪಿಯ ಶಕ್ತಿಕೇಂದ್ರದಂತಿದ್ದ ಕರಾವಳಿ ಜಿಲ್ಲಿಯ ಬಹುತೇಕ ಕಡೆ ಬಿಜೆಪಿಗೆ ಸೋಲುಂಟಾಗಿದ್ದು ಧರ್ಮಾಧಾರಿತವಾಗಿ ಪಕ್ಷ ಕಟ್ಟಲೊರಡುವ ಎಲ್ಲರಿಗೂ ಒಂದು ಎಚ್ಚರಿಕೆಯ ಪಾಠ. ಧರ್ಮಾಂಧರು ಹೆಣ್ಣು ಮಕ್ಕಳ ಮೇಲೆ ಕೈಮಾಡಿದ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚೆಚ್ಚು ನಡೆದಷ್ಟೂ ಬಿಜೆಪಿಯಿಂದ ಮತಗಳು ದೂರವಾದವು. ಸುಳ್ಯ ಹೊರತು ಪಡಿಸಿ ಮತ್ಯಾವುದೇ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಕಾಣಲಿಲ್ಲ. ಭ್ರಷ್ಟಾಚಾರ, ಅನೈತಿಕತೆಯಲ್ಲೇ ಮುಳುಗಿಹೋಗಿದ್ದ ಅನೇಕರು ಈ ಚುನಾವಣೆಯಲ್ಲಿ ಸೋಲುಂಡಿದ್ದು ಆರೋಗ್ಯಕರ ಬೆಳವಣಿಗೆ.

ಕಾಂಗ್ರೆಸ್ ಸುಭದ್ರ, ಸ್ವಚ್ಛ ಆಡಳಿತ ನೀಡುವಲ್ಲಿ ಯಶ ಕಾಣಬಲ್ಲದೆ? ಇತಿಹಾಸದ ಪುಟಗಳನ್ನು ನೋಡಿದರೆ ಆಶಾದಾಯಕ ಭವಿಷ್ಯವೇನೂ ಕಾಣುವುದಿಲ್ಲ. ರಾಜಕೀಯ ಅನಿಶ್ಚಿತತೆ, ಅನೈತಿಕತೆ, ಭ್ರಷ್ಟಾಚಾರಕ್ಕೆ ಕರ್ನಾಟಕದ ಜನತೆ ಕೊಡುವ ಉತ್ತರವೆಂತದೆಂಬುನ್ನು ಈ ಚುನಾವಣೆ ಮಗದೊಮ್ಮೆ ಸಾಬೀತುಪಡಿಸಿದೆ. ಈ ಐದು ವರುಷಗಳ ಪಾಠದಿಂದ ಕಾಂಗ್ರೆಸ್ ಏನಾದರೂ ಕಲಿತಿದೆಯಾ? ಆ ಕಲಿಕೆಯ ಆಧಾರದಲ್ಲಿ ಮುನ್ನಡೆಯುತ್ತದೆಯಾ? ಕಾದು ನೋಡಬೇಕಷ್ಟೇ.

ಸಿದ್ಧರಾಮಯ್ಯ ಮತ್ತು ಜನರ ನಿರೀಕ್ಷೆ

-ಚಿದಂಬರ ಬೈಕಂಪಾಡಿ

ಸಹಜವಾಗಿಯೇ ನಾಡಿನ ಜನರ ಕುತೂಹಲ ನಿಯೋಜಿತ ಮುಖ್ಯಮಂತ್ರಿ ಸಿದ್ಧರಾಮಯ ಅವರತ್ತ ನೆಟ್ಟಿದೆ, ಇದೇ ಅವರ ವಿಶೇಷತೆ. ಭ್ರಷ್ಟಾಚಾರ, ಹಗರಣಗಳು, ಹಳಿತಪ್ಪಿದ ಅರ್ಥವ್ಯವಸ್ಥೆ, ಹಿಡಿತ ಕಳೆದುಕೊಂಡಿರುವ ಆಡಳಿತ, ನಿರುದ್ಯೋಗ, ಗಗನಕ್ಕೇರುತ್ತಿರುವ ಬೆಲೆ, ಕೃಷಿ ದಿನದಿನಂದ ದಿನಕ್ಕೆ ಕಳೆಕಳೆದುಕೊಳ್ಳುತ್ತಿರುವುದು, ಗ್ರಾಮೀಣ ಭಾಗದ ಜನರ ನೀರಿನ ಬವಣೆ, ವಿದ್ಯುತ್ ಸಮಸ್ಯೆ ಹೀಗೆ ನಾಡಿನ ಜನರನ್ನು ಚಿಂತೆಗೀಡುಮಾಡಿವೆ. ಹಾಗೆಂದು ಸಿದ್ಧರಾಮಯ್ಯ ಮ್ಯಾಜಿಕ್ ಮಾಡಿಬಿಡುತ್ತಾರೆ ಎನ್ನುವ ಅರ್ಥವಲ್ಲ. ಎಲ್ಲವನ್ನು ಹತೋಟಿಗೆ ತರುತ್ತಾರೆ ಎನ್ನುವ ಬಲವಾದ ನಿರೀಕ್ಷೆ, ಆಶಾವಾದ.

ಇಂಥ ನಿರೀಕ್ಷೆ ಇಟ್ಟುಕೊಳ್ಳಲು ಕಾರಣ ಅವರು ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿ ಇಟ್ಟಿರುವ ಹೆಜ್ಜೆಗಳು ಮತ್ತು ಸ್ವಾಭಿಮಾನ ಉಳಿಸಿಕೊಂಡು ಕೈಶುದ್ಧವಾಗಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು. ಸಿದ್ಧರಾಮಯ್ಯ ಅವರಂಥ ವ್ಯಕ್ತಿಗೆ ಇಂಥ ಅವಕಾಶ ಒಂದು ಸವಾಲು. ಹಿಂದುಳಿದವರ ಮತ್ತು ಬಹುಸಂಖ್ಯಾತರ ಬದುಕಿನಲ್ಲಿ ಈಗಲೂ ದೇವರಾಜ ಅರಸು ನೆನಪಿನಲ್ಲಿ ಉಳಿದಿರುವುದಕ್ಕೆ ಕಾರಣಗಳು ಅನೇಕ. ಆಗಿನ ಕಾಲಘಟ್ಟವನ್ನು ಅವಲೋಕಿಸಿದರೆ ಈಗಿನ ಪರಿಸ್ಥಿತಿ ಮತ್ತು ರಾಜಕಾರಣದ ಮುಂದಿರುವ ಸವಾಲುಗಳು ತೀರಾ ಭಿನ್ನ. ಅರಸು ಅವರಿಗೆ ಈಗಿನ ಸವಾಲುಗಳಿರಲಿಲ್ಲ ಆದರೆ ರಾಜಕೀಯ ಒತ್ತಡಗಳಿದ್ದವು. ಅಸ್ಪ್ರಷ್ಯತೆ ಹಾಗೂ ಬಡತನ ತಾಂಡವವಾಡುತ್ತಿದ್ದವು. ರೈತ, ರೈತನ ಮಕ್ಕಳು ಧಣಿಯ ಮನೆಯಲ್ಲಿ ಜೀತ ಮಾಡುತ್ತಿದ್ದರು. ತಮ್ಮ ಬೆವರು ಸುರಿಸಿ ಭೂಮಾಲೀಕನ ಭೂಮಿಯನ್ನು ಉತ್ತು, ಬಿತ್ತಿದರೂ ತಾನು ಮಾತ್ರ ಕೃಷಿ ಕಾರ್ಮಿಕನಾಗಿದ್ದ. ಅಂಥವರ ಬದುಕಿಗೆ ಬೆಳಕು ನೀಡಿದವರು ಅರಸು. ಆಗ ಬಹುಷ ಈಗಿನ ಸಮಸ್ಯೆಗಳಿರುತ್ತಿದ್ದರೆ ಖಂಡಿತಕ್ಕೂ ಅರಸು ಅವುಗಳಿಗೆ ಪರಿಹಾರ ಸೂಚಿಸುವಷ್ಟು ಸಮರ್ಥರಿದ್ದರು. ಅಂಥ ಸಾಮರ್ಥ್ಯವನ್ನು ಸಿದ್ಧರಾಮಯ್ಯ ಅವರಲ್ಲಿ ಜನ ಹುಡುಕುವುದು ನಿಶ್ಚಿತಕ್ಕೂ ಅಪರಾಧವೆನಿಸುವುದಿಲ್ಲ. ಯಾಕೆಂದರೆ ಸಿದ್ಧರಾಮಯ್ಯ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುತ್ತಲೇ ರಾಜಕೀಯದಲ್ಲಿ ಬೆಳೆದವರು.

ಸಿದ್ಧರಾಮಯ್ಯ ಅವರಿಗಿರುವ ಕಾಳಜಿಯ ನೆಲೆಗಳನ್ನು ಗಮನಿಸುವುದಾದರೆ ಯಾವುದೇ ಬಲಿಷ್ಠ ರಾಜಕೀಯ ಹಿನ್ನೆಲೆಯಿಂದ ಬರದಿದ್ದ ಕಾರಣವೇ Siddaramaiahಅವರು ಈಗಲೂ ಜನರ ಜೊತೆ ಹೆಜ್ಜೆ ಹಾಕುತ್ತಿರುವುದು ಅನ್ನಿಸದಿರದು. ಒಂದು ವೇಳೆ ಅವರು ಬಲಿಷ್ಠ ರಾಜಕೀಯ ಹಿನ್ನೆಲೆ, ಬಲಾಢ್ಯ ಆರ್ಥಿಕ ಶಕ್ತಿಯ ಮೂಲದಿಂದ ಬಂದಿದ್ದರೆ ಅವರಿಂದ ಜನ ಓರ್ವ ಹೈಪ್ರೊಫೈಲ್ ರಾಜಕೀಯ ನೇತಾರರನ್ನು ಮಾತ್ರ ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಅವರು ಹಳ್ಳಿಯಿಂದ ಪಟ್ಟಣಕ್ಕೆ ಬಂದವರು, ಹಳ್ಳಿ ಹೈಕಳ ಜೊತೆ ಬೆರೆತು ಬದುಕನ್ನು ಅರಳಿಸಿಕೊಂಡವರು, ಆದ್ದರಿಂದಲೇ ಅವರ ನಡೆ, ನುಡಿ, ಚಿಂತನೆಗಳು ಇನ್ನೂ ಹಳ್ಳಿಯ ಸೊಗಡಿನಿಂದ ಬೆರ್ಪಟ್ಟಿಲ್ಲ, ಬೇರ್ಪಡುವುದೂ ಬೇಡ. ಹಳ್ಳಿ ಮತ್ತು ಸಿದ್ಧರಾಮಯ್ಯ ಅವರ ನಡುವಿನ ಸಂಬಂಧ ತಾಯಿ ಮಗುವಿನ ಕರುಳು ಬಳ್ಳಿಯ ಸಂಬಂಧವಿದ್ದಂತೆ.

ಸಿದ್ಧರಾಮಯ್ಯ ಒಂದು ವೇಳೆ ರಾಜಕೀಯಕ್ಕೆ ಬರದೇ ಇರುತ್ತಿದ್ದರೆ ಓರ್ವ ನ್ಯಾಯವಾದಿಯಾಗಿ ಅಪಾರ ಸಂಪಾದನೆ ಮಾಡಿ ನಾಡಿನ ಜನರ ಕಣ್ಣಿಗೆ ಕಾಣಿಸಿಕೊಳ್ಳದ ಕೋಟ್ಯಾಂತರ ಮಂದಿಯಲ್ಲಿ ಒಬ್ಬರಾಗುತ್ತಿದ್ದರು. ಅವರು ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಕಣ್ಣಿಗೆ ಬಿದ್ದು ಹೋರಾಟಗಳಲ್ಲಿ ತೊಡಗಿಸಿಕೊಂಡು ಜನರು ಬಯಸುವ ನಾಯಕನಾದರು. ಚುನಾವಣೆಯಲ್ಲಿ ಸ್ಪರ್ಧಿಸಲು ಠೇವಣಿ ಕಟ್ಟಲು ಹಣವಿಲ್ಲದ ಸಿದ್ಧರಾಮಯ್ಯ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿರುವವರು ಜನರು ಎನ್ನುವುದು ಸುಲಭ, ಆದರೆ ಅದರೊಂದಿಗೆ ಅವರು ಪಾಲಿಸಿಕೊಂಡು ಬಂದ ಸಿದ್ಧಾಂತಗಳ ಪಾಲೂ ಇದೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲವನ್ನೂ ಸುಲಭವಾಗಿ ಮತ್ತು ಭಾವನಾತ್ಮಕವಾಗಿ ಅಪ್ಪಿಕೊಳ್ಳುವವರೂ ಅಲ್ಲ, ಪ್ರತಿಷ್ಠೆಗಾಗಿ ಎಲ್ಲವನ್ನೂ ನಿರಾಕರಿಸುವಂಥ ಮನಸ್ಥಿತಿಯವರೂ ಅಲ್ಲ. ಅಪ್ಪಿಕೊಳ್ಳುವ ಮತ್ತು ಸಕಾರಣ ಸಹಿತ ನಿರಾಕರಿಸುವ ಎರಡೂ ಗುಣಗಳು ಅವರಲ್ಲಿವೆ. ಅಧಿಕಾರಕ್ಕಾಗಿ ತಮ್ಮ ನಿಲುವುಗಳನ್ನು ಒತ್ತಯಿಡುವಂಥ ರಾಜಕೀಯ ಸ್ವಾರ್ಥಿಯಲ್ಲ ಎನ್ನುವುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು.

ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೇಲಕ್ಕೇರಲು ಪಟ್ಟಶ್ರಮ, ಅನುಭವಿಸಿದ ಯಾತನೆಯನ್ನು ಸಿದ್ಧರಾಮಯ್ಯ ಅವರೂ ಅನುಭವಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಅತ್ಯಂತ ನಿಷ್ಠುರವಾದಿಯಾದ ದೇವೇಗೌಡರು ರಾಮಕೃಷ್ಣ ಹೆಗಡೆ ಅವರ ರಾಜಕೀಯ ಚಾಣಕ್ಷತೆಯಿಂದ ಭಾರೀ ಯಾತನೆ ಅನುಭವಿಸಿದರೂ ಮತ್ತೆ ಅವರನ್ನು ಮೆಟ್ಟಿ ನಿಲ್ಲಲು ರಾಜಿಮಾಡಿಕೊಂಡು ಹೆಗಡೆ ಕೈಹಿಡಿದರು. ಆನಂತರ ತಮ್ಮ ತಂತ್ರಗಾರಿಕೆಯಿಂದ ಹೆಗಡೆಯವರನ್ನು ರಾಜಕೀಯವಾಗಿ ಮಣಿಸಿ ಮೂಲೆಗುಂಪುಮಾಡಿದರು. ಹಾಗೆಯೇ ಸಿದ್ಧರಾಮಯ್ಯ ಅವರೂ ಕೂಡಾ ದೇವೇಗೌಡರಿಂದ ರಾಜಕೀಯವಾಗಿ ಹಿಂಸೆ ಅನುಭವಿಸಿದ್ದಾರೆ, ಅವಕಾಶ ಕಳೆದುಕೊಂಡಿದ್ದಾರೆ, ಆದರೆ ದೇವೇಗೌಡರಂತೆ ತಂತ್ರಗಾರಿಕೆ ಮಾಡಲು ಅವಕಾಶವಿದ್ದರೂ ಮಾಡದೆ ಜನತಾ ಮನೆಯಿಂದಲೇ ಹೊರನಡೆದರು. ಸಿದ್ಧರಾಮಯ್ಯ ಅವರು ಈಗಿನ ಈ ಸ್ಥಾನಕ್ಕೇರಲು ಪ್ರೊ.ನಂಜುಂಡಸ್ವಾಮಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರ ಕೊಡುಗೆಯಿದೆ, ಅವರು ಕೊಟ್ಟ ಅವಕಾಶಗಳನ್ನು ನಿರಾಕರಿಸುವಂತಿಲ್ಲ. ಹಾಗೆಯೇ ದೇವೇಗೌಡರ ಜೊತೆ ಹೆಜ್ಜೆ ಹಾಕಿದ್ದರಿಂದಲೂ ಸಿದ್ಧರಾಮಯ್ಯ ಅವರಿಗೆ ಸಾಕಷ್ಟು ಅನುಭವ ಸಿಕ್ಕಿದೆ.

ಜನತಾ ದಳದಿಂದ ಹೊರನಡೆಯುವುದು ಖಚಿತವಾಗಿದ್ದರೂ ಸಿದ್ಧರಾಮಯ್ಯ ಕಾಂಗ್ರೆಸ್ ಸೇರಬೇಕೆಂದು ಜನರ ಒತ್ತಡವಿತ್ತೇ ಹೊರತು ಸಿದ್ಧರಾಮಯ್ಯ ಅವರಿಗೆ ವೈಯಕ್ತಿಕವಾಗಿ ಒಲವಿರಲಿಲ್ಲ. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿ. ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ನಡೆಗಳನ್ನು, ಪಕ್ಷದ ಒಳಗಿನ ಆಂತರಿಕ ಸ್ವಾತಂತ್ರ್ಯಗಳ ಸ್ಪಷ್ಟ ಅರಿವುದು ಸಿದ್ಧರಾಮಯ್ಯ ಅವರಿಗಿತ್ತು. ಆದರೆ ಸಿದ್ಧರಾಮಯ್ಯ ಅವರ ನಾಯಕತ್ವ, ಅವರ ಬದ್ಧತೆ, ಜನರಿಗಿರುವ ಸಿದ್ಧರಾಮಯ್ಯ ಅವರ ಮೇಲಿನ ಒಲವನ್ನು ಕಾಂಗ್ರೆಸ್ ನಾಯಕರು ಗುರುತಿಸಿದ್ದರು ಮತ್ತು ಸೋನಿಯಾ ಗಾಂಧಿ ಅವರೂ ಮನವರಿಕೆ ಮಾಡಿಕೊಂಡಿದ್ದರು.

ಒಬ್ಬ ಹಿಂದುಳಿದ ನಾಯಕ ರಾಜಕೀಯದಿಂದ ದೂರವಾಗುತ್ತಾನೆ, ತುಳಿತಕ್ಕೊಳಗಾಗಿ ನೇಪಥ್ಯಕ್ಕೆ ಸರಿಯುತ್ತಿದ್ದಾನೆ ಎನ್ನುವ ನೋವು ಅನುಭವಿಸಿದ ಎಚ್.ವಿಶ್ವನಾಥ್ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಮನೆಗೆ ಕರೆತರಲು ಮಾಡಿದ ದೊಡ್ಡ ಮನಸ್ಸನ್ನು ಜನರು ಮೆಚ್ಚಲೇ ಬೇಕು. ತಮ್ಮನ್ನು ಹಿಂದಿಕ್ಕಿ ಬೆಳೆಯುವ ಸಾಮರ್ಥ್ಯ ಸಿದ್ಧರಾಮಯ್ಯ ಅವರಿಗಿದೆ ಎನ್ನುವ ಸ್ಪಷ್ಟ ಕಲ್ಪನೆಯಿದ್ದರೂ ವಿಶ್ವನಾಥ್ ತಳೆದ ನಿಲುವು ಇಂದು ಈ ನಾಡಿಗೆ ಓರ್ವ ಸಮರ್ಥ ನಾಯಕನ ಕೈಗೆ ಅಧಿಕಾರ ಸಿಗುವಂತಾಗಿದೆ.

ಸಿದ್ಧರಾಮಯ್ಯ ಅವರು ಗುಟ್ಟಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿಲ್ಲ. ಬಹುಷ ರಾಜಕೀಯ ಇತಿಹಾಸದಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಸಭೆ ಮೂಲಕ ಕಾಂಗ್ರೆಸ್ ಸೇರಿದವರಲ್ಲಿ siddaramaiah_dharam_khargeಸಿದ್ಧರಾಮಯ್ಯ ಅವರೂ ವಿರಳರಲ್ಲಿ ವಿರಳರು. ಇದಕ್ಕೂ ಕಾರಣವಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂಥ ಸ್ವಾಗತ ತೀರಾ ಅಪರೂಪ ಎನ್ನುವುದು ಆ ಪಕ್ಷದ ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಚಿರಂಜೀವಿ ಕಾಂಗ್ರೆಸ್ ಸೇರಿದ ಸನ್ನಿವೇಶ ಮತ್ತು ಸಿದ್ಧರಾಮಯ್ಯ ಕಾಂಗ್ರೆಸ್ ಸೇರಿದ ಕ್ಷಣವನ್ನು ಕಣ್ಣಮುಂದಿಟ್ಟುನೋಡಿ. ಚಿರುಗೂ ಅಪಾರವಾದ ಬೆಂಬಲಿಗರಿದ್ದಾರೆ ಓರ್ವ ನಟನಾಗಿ. ಆದರೆ ಅವರು ಅತ್ಯಂತ ಸರಳವಾಗಿ ಕಾಂಗ್ರೆಸ್ ಸೇರಿದರು. ಬೆಂಗಳೂರಲ್ಲಿ ಐತಿಹಾಸಿಕ ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರನ್ನು ಸ್ವತ: ಸೋನಿಯಾ ಗಾಂಧಿ ಪಕ್ಷಕ್ಕೆ ಬರಮಾಡಿಕೊಂಡರು. ಅಂದು ಸೋನಿಯಾ ಗಾಂಧಿ ಮಾಡಿದ್ದ ಭಾಷಣದಲ್ಲಿ ಸಿದ್ಧರಾಮಯ್ಯ ಅವರು ದೊಡ್ಡ ಶಕ್ತಿ, ಅವರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಬೇಕಿತ್ತು, ಅವರಿಂದ ಕಾಂಗ್ರೆಸ್ ಬಲಗೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದರು. ಅವರ ನಿರೀಕ್ಷೆ ಖಂಡಿತಕ್ಕೂ ಸುಳ್ಳಾಗಲಿಲ್ಲ.

ಹೀಗೆ ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳು, ಅವರು ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಸಾರಿಗೆ ಸಚಿವರಾಗಿ, ಪಶುಸಂಗೋಪನಾ ಸಚಿವರಾಗಿ ಕಾರ್ಯನಿವಹಿಸಿರುವುದು, ಇತ್ತೀಚಿನವರೆಗೂ ಪ್ರತಿಪಕ್ಷದ ನಾಯಕರಾಗಿ ಅಧಿಕಾರ ನಿಭಾಯಿಸಿದ ವೈಖರಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿವೆ.

ಮುಖ್ಯಮಂತ್ರಿ ಹುದ್ದೆ ಸುಖದ ಸುಪ್ಪತ್ತಿಗೆಯಲ್ಲ, ಮುಳ್ಳಿನ ಹಾಸಿಗೆ ಎಂದು ಸಿದ್ಧರಾಮಯ್ಯ ಹೇಳಿರುವುದು ಹಾಗಾದರೆ ಇವರಿಗೆ ಯಾಕೆ ಬೇಕಿತ್ತು ಈ ಹುದ್ದೆ ಎಂದು ಕೇಳಲು ಅವಕಾಶವಿದೆ. ನೋವಿನಲ್ಲೂ ಸುಖವಿದೆ, ಆದರೆ ಆ ಸುಖವನ್ನು ಅನುಭವಿಸಲು ಬಯಸುವವರು ತೀರಾ ಕಡಿಮೆ. ನೋವಿರದ ಸುಖವೇ ಬೇಕು ಎನ್ನುವವರೇ ಹೆಚ್ಚು. ಈ ಜಗತ್ತಿನಲ್ಲಿ ಹೆರಿಗೆಯ ನೋವಿನಷ್ಟು ಯಾತನೆ ಬೇರೆ ಇರಲಾರದು, ಆದರೆ ಅಂಥ ನೋವನ್ನು ಸಹಿಸಿಕೊಂಡು ಮಗುವನ್ನು ಹೆರುವ ತಾಯಿ ತಾನು ನೋವು ಅನುಭವಿಸಿ ಹಡೆದ ಮಗುವನ್ನು ನೋಡಿ ಅನುಭವಿಸಿದ ನೋವನ್ನು ಮರೆತುಬಿಡುತ್ತಾಳೆ. ಒಂದು ದಿನವೂ ನಿನ್ನಿಂದಾಗಿ ನಾನು ನೋವು ಅನುಭವಿಸಿದೆ ಎನ್ನುವ ಆರೋಪ ಮಾಡುವುದಿಲ್ಲ. ಅಂಥ ಪರಿಕಲ್ಪನೆಯನ್ನು ಸಿದ್ಧರಾಮಯ್ಯ ಅವರ ಆಡಳಿತದಿಂದ ನಿರೀಕ್ಷೆ ಮಾಡಬಹುದು ಎನ್ನುವುದೇ ನಾಡಿನ ಜನರದ್ದಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ.

ಸಿದ್ಧರಾಮಯ್ಯ ಅವರ ಹೆಗ್ಗುರುತು ಅವರ ನಂಬಿಕೆ ಮತ್ತು ಅವರು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುವ ಸಿದ್ಧಾಂತಗಳು ನಿಜ. ಸಿದ್ಧರಾಮಯ್ಯ ಅವರಿಗಿರುವ ಬಹುಮುಖ್ಯ ದೌರ್ಬಲ್ಯ ಮುಂಗೋಪ ಮತ್ತು ನಿಷ್ಠುರ ಮಾತು. ಇವುಗಳಿಗೆ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಅವರು ಅಂದುಕೊಂಡದ್ದನ್ನು ಸಾಧಿಸಲು, ಜನರ ನಿರೀಕ್ಷೆಗಳನ್ನು ನಿಜಗೊಳಿಸಲು ಸುಲಭವಾಗುತ್ತದೆ.

ಚುನಾವಣೋತ್ತರ ಸಂದರ್ಭದಲ್ಲಿ “ವರ್ತಮಾನ.ಕಾಮ್”ನ ದಾರಿ…

ಸ್ನೇಹಿತರೇ,

ಕಳೆದ ಒಂದು-ಒಂದೂವರೆ ತಿಂಗಳು ದಿನಕ್ಕೆ ಸರಾಸರಿ ಏಳೆಂಟು ಕಿ.ಮೀ. ನಡೆದು, ನೂರಾರು ಜನರ ಕೈಕುಲುಕಿ, ಮಾತನಾಡಿಸಿ, ಕಷ್ಟಸುಖ ಹಂಚಿಕೊಂಡು, ಬೆವರು ಸುರಿಸಿ, ಕೊಬ್ಬು ಕರಗಿಸಿ, ಬಹಳ ಸಂತಸದಿಂದ ಕಳೆದೆ. ಜೊತೆಯಾದದ್ದು ಹಲವರು. ಹಣಸಹಾಯದಿಂದ ಹಿಡಿದು, ಸಾಧ್ಯವಾದಾಗಲೆಲ್ಲ ಜೊತೆಗೂಡಿ ಪ್ರಚಾರ ಮಾಡಿದ ಅನೇಕರಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು. ಸುಮಾರು ನೂರಕ್ಕೂ ಹೆಚ್ಚು ಜನ ಕೂಡಿ ಸುಮಾರು ಐದೂವರೆ ಲಕ್ಷ ರೂಪಾಯಿಯಷ್ಟು ದೇಣಿಗೆ ನೀಡಿದ್ದಾರೆ. ನಾನು ನನ್ನ ಕಡೆಯಿಂದ ಸುಮಾರು ಮೂರ್ನಾಲ್ಕು ಲಕ್ಷ ರೂಪಾಯಿ ಹಾಕಿಕೊಂಡಿದ್ದೇನೆ.

ಬಿಟಿಎಮ್ ಲೇಔಟ್‌ನ 6596 ಮತದಾರರು ಯಾವುದೇ ಪ್ರಲೋಭನೆಗೊಳಗಾಗದೆ ಒಂದು ಗುಂಪಾಗಿ ಮತ ಹಾಕಿದ್ದಾರೆ BTMLayout-2013ಎಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಈ ಕ್ಷೇತ್ರದಲ್ಲಿ ನಡೆದ ಅಕ್ರಮ, ಆಮಿಷ, ಮತ್ತು ಜಾತಿರಾಜಕಾರಣದ ನಡುವೆಯೂ ಇಷ್ಟೊಂದು ಜನ ಅವೆಲ್ಲವನ್ನೂ ಮೀರಿ ವರ್ತಿಸಿದ್ದು ಪ್ರಶಂಸನೀಯ. ನಾನು ಚುನಾವಣೆಯ ಸಂದರ್ಭದಲ್ಲಿ ಬಹಿರಂಗ ಭಾಷಣಗಳಲ್ಲಿ ಹೇಳುತ್ತಿದ್ದಂತೆ, ನಮಗೆ ಬೀಳುವ ಪ್ರತಿಯೊಂದು ಮತವೂ ಅನಾಚಾರ-ಅಕ್ರಮದ ವಿರುದ್ಧ ಬಿದ್ದ ಮತ ಮತ್ತು ಅರ್ಹತೆ-ಪ್ರಾಮಾಣಿಕತೆಯ ಪರ ಬಿದ್ದ ಮತ, ಮತ್ತು ಒಂದೊಂದು ಮತವೂ ಮುಖ್ಯ. ಈ ಚುನಾವಣೆ ಇಲ್ಲಿಯ ಜನರಿಗೆ ಒಂದು ಹಂತದವರೆಗೆ ಜಾಗೃತಿ ಮೂಡಿಸಿದೆ ಮತ್ತು ಇಲ್ಲಿಯ ಅನೇಕ ಜನ ನಮ್ಮ ಹೋರಾಟವನ್ನು ಮತ್ತು ಪ್ರತಿಪಾದಿಸಿದ ವಿಚಾರಗಳನ್ನು ಮತ ಹಾಕದಿದ್ದರೂ ಒಪ್ಪಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮದು ಗೆಲುವೇ.

ಅಂದ ಹಾಗೆ, ಇಡೀ ಕ್ಷೇತ್ರದಲ್ಲಿ ನನ್ನಷ್ಟು ಸುತ್ತಾಡಿದ, ಜನರಿಗೆ ಮುಖ ತೋರಿಸಿದ, ಮತ್ತು ಮತದಾರರ ಕೈಯ್ಯಲ್ಲಿ ಬೈಯಿಸಿಕೊಂಡ ಇನ್ನೊಬ್ಬ ಅಭ್ಯರ್ಥಿ ಇಲ್ಲ. ಅವರು ಬೈದದ್ದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮುಖ ತೋರಿಸುವ ರಾಜಕಾರಣಿಗಳನ್ನು. ವಿಷಾದದ ಸಂಗತಿ ಏನೆಂದರೆ, ಹಾಗೆ ಬೈದ ಬಹುಪಾಲು ಜನ ಓಟು ಹಾಕಿರುವುದಿಲ್ಲ ಅಥವ ಮತ್ಯಾವುದೋ ಆಮಿಷಕ್ಕೆ ಒಳಗಾಗಿ ಅವರ ಬೈಗುಳಕ್ಕೆ ಅರ್ಹವಾಗಿದ್ದವರಿಗೇ ಮತ ಹಾಕಿರುತ್ತಾರೆ.

ನಾನು ಪ್ರತಿನಿಧಿಸಿದ್ದ ಲೋಕ್‌ಸತ್ತಾ ಪಕ್ಷ ಮಾಡಿದ ಪ್ರಚಾರ ಮತ್ತು ಪಾಲ್ಗೊಂಡ ರೀತಿ ಮುಂದಿನ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಚುನಾವಣಾ ರಾಜಕೀಯ ಹೇಗಿರುತ್ತದೆ Ravi-SripadBhat-Sriharshaಎನ್ನುವುದಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ನಿಸರ್ಗ ಅತ್ತಲೇ ಕ್ರಮಿಸುತ್ತಿದೆ. ಐದು ವರ್ಷದ ಹಿಂದೆ, ಸಾಂಕೇತಿಕವಾಗಿ ಎಂದು ಪ್ರತಿಭಟನೆಯ ಸ್ಪರ್ಧೆ ಮಾಡಿ, ಜನರಿಂದ ಹಣಸಂಗ್ರಹಿಸಿ, ಸಾಧ್ಯವಾದಷ್ಟು ಪ್ರಚಾರ ಮಾಡಿದವನು ಬಹುಶಃ ನಾನೊಬ್ಬನೆ. ಆದರೆ, ಈ ಸಲ ನಮ್ಮ ಪಕ್ಷದಿಂದಲೇ 24 ಜನ ಇದ್ದರು. ಮತ್ತು ಅದೇ ರೀತಿ ಮಾಡಿದ ಇತರೆ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ಅನೇಕರಿದ್ದರು. ಇನ್ನೈದು ವರ್ಷಗಳಲ್ಲಿ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮಂತೆ ಚುನಾವಣೆಗೆ ಸ್ಪರ್ಧಿಸುವ ಒಬ್ಬರಾದರೂ ಇರುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಅದು ಇತರೆ ಪಕ್ಷಗಳ ಮೇಲೆ ಮತ್ತು ಪ್ರತ್ರಿನಿಧಿಗಳಾಗಬೇಕೆಂದು ಬಯಸುವವರ ನಡವಳಿಕೆಗಳ ಮೇಲೆ ನೇರ ಪ್ರಭಾವ ಬೀರಲಿದೆ.

ಈ ಚುನಾವಣೆಯಲ್ಲಿ ನಮಗೆ ಗೆಲುವಿನ ಸಮೀಪ ಹೋಗಲಾಗಿಲ್ಲ. ಆದರೆ ನಾವು ಸರಾಸರಿ ಸುಮಾರು ಮೂರು ಸಾವಿರ ಓಟು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ಸ್ಪರ್ಧಿಸಿದ ಎರಡು ಕಡೆ ಮೂರನೇ ಸ್ಥಾನದಲ್ಲಿದ್ದರೆ, ಬಹುತೇಕ ಕಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತರದ ಸ್ಥಾನದಲ್ಲಿದ್ದೇವೆ. ಇದು ಕಡಿಮೆ ಸಾಧನೆಯಲ್ಲ. ಇದನ್ನು ನಾವು ಹೆಚ್ಚುಹೆಚ್ಚು ಪ್ರಚುರಗೊಳಿಸಿದಷ್ಟೂ ಇಂತಹ ಪ್ರಯತ್ನಗಳಿಗೆ ಮುಂದಾಗುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಮತ್ತು ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೆ ಸ್ಫೂರ್ತಿಯೂ ಆಗುತ್ತದೆ.

ಚುನಾವಣೆಗೆ ಸಂಬಧಿಸಿದಂತೆ ಇನ್ನೊಮ್ಮೆ ಬರೆಯುತ್ತೇನೆ. ಈಗ ವರ್ತಮಾನ.ಕಾಮ್ ವಿಚಾರವಾಗಿ ಒಂದಿಷ್ಟು ಹಂಚಿಕೊಳ್ಳುತ್ತೇನೆ.

ನಿಮಗೆ ಗೊತ್ತಿದೆ, ಇಲ್ಲಿ ನಾನೂ ಸೇರಿದಂತೆ ನಮ್ಮ ಅನೇಕ ಬರಹಗಾರ ಮಿತ್ರರು ನಿರ್ಭಯ ಮತ್ತು ನಿರ್ಭೀತಿಯಿಂದ ನಮ್ಮ ವರ್ತಮಾನದ ಸಾಮಾಜಿಕ-ರಾಜಕೀಯ-ಮಾಧ್ಯಮ ವಿಷಯಗಳ ಬಗ್ಗೆ ಸತ್ಯವನ್ನು ಹೇಳಬೇಕೆಂಬ ತುಡಿತದಲ್ಲಿ ಬರೆದಿದ್ದಾರೆ. ಬೇರೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗದ ಮತ್ತು ಚರ್ಚೆಯಾಗದ ವಿಷಯಗಳು ಇಲ್ಲಿ ಚರ್ಚೆಯಾಗಿವೆ. ಇದರಲ್ಲಿ ಕನಿಷ್ಟ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇನ್ನು ನಿರ್ಬಂಧ ಹಾಕಿಕೊಳ್ಳಲಾಗುತ್ತದೆ. ಅದು, ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಕ್ಕೆ.

ನನಗೆ ಕಳೆದ ಒಂದೂವರೆ ತಿಂಗಳಿನಿಂದ ಈ ಮೂರ್ನಾಲ್ಕು ದಿನಗಳಿಂದ ಯೊಚಿಸಲು ಸಿಕ್ಕಷ್ಟು ಸಮಯ ಸಿಕ್ಕಿರಲಿಲ್ಲ. ನಿಮ್ಮಲ್ಲಿ ಈಗಾಗಲೆ ಕೆಲವರು ಗಮನಿಸಿರಬಹುದು. ರಾಜಧಾನಿಯ ಹಲವು ಪ್ರಮುಖ ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಗಳಿಗೆ ನನ್ನ ಬಗ್ಗೆ (ವರ್ತಮಾನ.ಕಾಮ್‌ನ ಕಾರಣವಾಗಿ) ಸಿಟ್ಟಿದೆ. ನಾನು ಅಥವ ನಮ್ಮ ವರ್ತಮಾನ.ಕಾಮ್‌ನ ಲೇಖಕರು ಅವರನ್ನು ಅಥವ ಅವರ ಮಾಧ್ಯಮ ಸಂಸ್ಥೆಗಳನ್ನು ವಿಮರ್ಶಿಸಿದ್ದು ಮತ್ತು ಟೀಕಿಸಿದ್ದೇ ಅದಕ್ಕೆ ಬಹುತೇಕ ಕಾರಣ. ಅದರಲ್ಲಿ ನಮಗೆ ವೈಯಕ್ತಿಕ ದ್ವೇಷವೇನೂ ಇರಲಿಲ್ಲ. ತಪ್ಪಾಗಿದ್ದು ಸರಿಯಾಗಬೇಕು ಎನ್ನುವ ಸಕಾರಣವೇ ಆ ವಿಮರ್ಶೆಗಳಿಗೆ ಕಾರಣ. ಆದರೆ ವಿಮರ್ಶೆಗೊಳಪಟ್ಟವರು ಹಾಗೆ ಅಂದುಕೊಂಡಿಲ್ಲ. ಹಾಗಾಗಿಯೆ, ಚುನಾವಣೆಯ ಸಂದರ್ಭದಲ್ಲಿ ನನ್ನ ಹೆಸರು ಪ್ರಸ್ತಾಪವಾಗಬೇಕಿದ್ದ ಅನೇಕ ಕಡೆ ಅದು ಪ್ರಸ್ತಾಪವಾಗಿಲ್ಲ, ಮತ್ತು ಆದರೂ ಅದು ನಗಣ್ಯ ರೀತಿಯಲ್ಲಿ ಇರುತ್ತಿತ್ತು. ಯಾಕೆ ಯಾವ ಮಾಧ್ಯಮದಲ್ಲೂ (ಒಂದೆರಡು ಕಡೆ ಬಿಟ್ಟು) ನಿಮ್ಮ ಪ್ರಸ್ತಾಪವಿಲ್ಲ ಎಂಬ ಸ್ನೇಹಿತರ ಪ್ರಶ್ನೆಗಳನ್ನು ಕೇಳಿಕೇಳಿ ನನಗೆ ಸಾಕಾಗಿ ಹೋಗಿತ್ತು.

ಇದರಿಂದ ದೊಡ್ದ ಹೊಡೆತ ಬಿದ್ದದ್ದು ನಾನು ಪ್ರತಿಪಾದಿಸಬೇಕೆಂದುಕೊಂಡಿದ್ದ ವಿಚಾರಗಳಿಗೆ.

ಈಗ ನಾನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ತೊಡಗಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ಹೊರೆ ಅನಗತ್ಯ ಮತ್ತು ಅನಾನುಕೂಲಕರ. ವರ್ತಮಾನ.ಕಾಮ್‌ನಿಂದ ಹಣಕಾಸಿನ ನಷ್ಟವಿದೆಯೇ ಹೊರತು ನಮಗ್ಯಾರಿಗೂ ಲಾಭವಿಲ್ಲ. ಬದ್ದತೆಯ ಮತ್ತು ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಇದನ್ನು ನಿಭಾಯಿಸುತ್ತಿದ್ದೇವೆಯೇ ಹೊರತು ಇಲ್ಲಿ ಹಣ ಮಾಡುವ ಸಾಧ್ಯತೆಗಳೇ ಇಲ್ಲ. ಹೀಗಿರುವಾಗ, ಮಾಧ್ಯಮಕ್ಕೆ ಸಂಬಂಧಿಸಿದ ನಮ್ಮ ವಿಮರ್ಶೆಗಳು ಇಲ್ಲಿಯವರೆಗೆ ಬಹುಪಾಲು ಸಮಯದಲ್ಲಿ ವರ್ತಮಾನ.ಕಾಮ್‌‌ನ ಬೆಳವಣಿಗೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆಯೇ ಹೊರತು ಪರವಾಗಿ ಅಲ್ಲ. ಇಲ್ಲಿ ಲೇಖನ ಬರೆದರೆ ನಮ್ಮ ಲೇಖನಗಳು ಬೇರೆಡೆ ಪ್ರಕಟವಾಗುವುದಿಲ್ಲ ಮತ್ತು ಪ್ರಕಟಣೆಗೆ ಅವಕಾಶಗಳು ಸಿಗುವುದಿಲ್ಲ ಎನ್ನುವ ತನಕ ಯೋಚಿಸಿರುವ ಅನೇಕ ಮಿತ್ರರು ನಮಗೆ ಬರೆಯಲು ಹೋಗಲೇ ಇಲ್ಲ, ಮತ್ತು ಒಂದೆರಡು ಸಲ ಬರೆದವರು ಬರೆಯುವುದನ್ನೇ ನಿಲ್ಲಿಸಿದ ಉದಾಹರಣೆಗಳಿವೆ.

ಈ ಚುನಾವಣೆ ಆ ನಿಟ್ಟಿನಲ್ಲಿ ನನಗೆ ಪಾಠ ಕಲಿಸಿದೆ. ನಾವು ಒಂದು ಸಶಕ್ತ ಮಾಧ್ಯಮವಾಗದ ಹೊರತು ಅಂತಹ “ಧೈರ್ಯ” ಅನಗತ್ಯ. ಸಮಾಜ ಮತ್ತು ವರ್ತಮಾನ ತನಗೆ ಅಗತ್ಯವಾದದ್ದನ್ನು ಉಳಿಸಿಕೊಳ್ಳುತ್ತದೆ ಮತ್ತು ಬೇಡವಾದದ್ದನ್ನು ಬಿಸಾಕುತ್ತದೆ. ನಾವು ನಮ್ಮ ಗುರಿಯನ್ನು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಿಗೆ ಇಟ್ಟಿರುವ ಸಂದರ್ಭದಲ್ಲಿ ಮಾಧ್ಯಮಗಳಿಂದ “ಬಹಿಷ್ಕೃತ”ರಾಗುವುದು counter-productive. ಬರೆದರೆ ಮಾಧ್ಯಮಗಳ ಸಕಾರಾತ್ಮಕ ವಿಷಯಗಳ ಬಗ್ಗೆ ಬರೆಯುತ್ತೇವೆಯೇ ಹೊರತು ಅವರ ನಕಾರಾತ್ಮಕ ವಿಷಯಗಳನ್ನು ಎತ್ತಿ ತೋರಿಸಲು ಹೋಗುವುದಿಲ್ಲ. ಸಮುದಾಯಕ್ಕೆ ಆ ರಂಗದ ವಿಮರ್ಶೆ ಅಗತ್ಯವಿದೆ ಎಂದಾದಾಗ ಅದಕ್ಕೆ ಅನೇಕ ವೇದಿಕೆಗಳಿವೆ ಮತ್ತು ದಾರಿಗಳಿವೆ.

ಈ ವಾರ ಬಹುಶಃ ವರ್ತಮಾನ ಬಳಗದ ಹಲವು ಸ್ನೇಹಿತರನ್ನು ಮುಖತಃ ಭೇಟಿಯಾಗಲಿದ್ದೇನೆ. ಮತ್ತೆ ಎಂದಿನಂತೆ ನಿಯತಕಾಲಿಕವಾಗಿ ಲೇಖನಗಳನ್ನು ಪ್ರಕಟಿಸಲು ಮಾಡಬೇಕಾದ ಕೆಲಸಗಳ ಕಡೆ ಗಮನ ಕೊಡಲಿದ್ದೇವೆ. ವರ್ತಮಾನ.ಕಾಮ್‌ನ ಪ್ರಸ್ತುತತೆ ಬಗ್ಗೆ ನಮಗ್ಯಾರಿಗೂ ಸಂದೇಹಗಳಿಲ್ಲ. ಆದರೆ ಎಲ್ಲಿ ಬದಲಾವಣೆಗಳಾಗಬೇಕು ಎನ್ನುವುದರ ಬಗ್ಗೆ ಬದಲಾದ ಸಂದರ್ಭದಲ್ಲಿ ಸ್ಪಷ್ಟವಾಗಬೇಕಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ