Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಸೋತು ಗೆದ್ದ ಹಳೆಯ ಜಾತ್ಯಾತೀತ ಪಕ್ಷವೊಂದರ ಕಥೆ, ವ್ಯಥೆ?

– ಬಿ.ಶ್ರೀಪಾದ ಭಟ್

ಕಟ್ಟ ಕಡೆಗೂ ಕಾಂಗ್ರೆಸ್ ಗೆದ್ದಿದೆ. ತಾನು ಗೆದ್ದಿದ್ದು ನಿಜವೇ ಎಂದು ಖಾತರಿಪಡಿಸಿಕೊಳ್ಳಲು ಪದೇ ಪದೇ ಮೈ ಚಿವುಟಿಕೊಳ್ಳುತ್ತಿದೆ. ಕಷ್ಟಪಟ್ಟು, ಅಯಾಸದಿಂದ ಬೆಟ್ಟವನ್ನೇರಿದ ರೀತಿಯಲ್ಲಿ ಸುಧಾರಿಸಿಕೊಳ್ಳುತ್ತಿದೆ. ಕಳೆದು ಏಳು ವರ್ಷಗಳ ಸತತ ಸೋಲಿನಿಂದ ಕಂಗೆಟ್ಟಿದ, ಹೆಚ್ಚೂ ಕಡಿಮೆ ಆತ್ಮವಂಚನೆಯ ಮಟ್ಟಕ್ಕೆ ತಳ್ಳಲ್ಟಟ್ಟಿದ್ದ ಈ ಕಾಂಗ್ರೆಸ್ ಪಕ್ಷ, ಮತ್ತು ಕಳೆದ ಏಳು ವರ್ಷಗಳಲ್ಲಿ ಯಾವುದೇ ಸೈದ್ಧಾಂತಿಕ ಬದ್ಧತೆಗಳಿಲ್ಲದ, ಭವಿಷ್ಯದ ಕುರಿತಾದ ನಿಖರವಾದ ವ್ಯಾಖ್ಯಾನಗಳಿಲ್ಲದ, ಆಧುನಿಕ ಕರ್ನಾಟಕದ ರೂಪುರೇಷಗಳ ಬಗೆಗೆ ಕೊಂಚವೂ ತಿಳುವಳಿಕೆಗಳಿಲ್ಲದ ಈ ಕಾಂಗ್ರೆಸ್‌ನ ನೇತಾರರ ಪ್ರತಿಯೊಂದು ಮಾತುಗಳು ನಗೆಪಾಟಲಿಗೀಡಾಗುತ್ತಿತು, ತಿರಸ್ಕಾರಕ್ಕೆ ಗುರಿಯಾಗುತ್ತಿತ್ತು. ಬಿಜೆಪಿಯ ಕಡು ಭ್ರಷ್ಟಾಚಾರದ ಆಡಳಿತಕ್ಕೆ, ಅವರ ದುರಹಂಕಾರದ, ಮತಾಂಧತೆಯ ಬಿರುಗಾಳಿಗೆ, ಮತೀಯ ರಾಷ್ತ್ರೀಯತೆಗೆ ಈ 125 ವರ್ಷಗಳ ಇತಿಹಾಸವಿರುವ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಬಳಿ ನೇರವಾಗಿ ಮುಖಾಮುಖಿಯಾಗುವಂತಹ ಯಾವುದೇ ಬಗೆಯ ಬೌದ್ಧಿಕ ಗಟ್ಟಿತನದ ಕಸುವಿನ ಶಕ್ತಿಯಾಗಲೀ, ರಾಜಕೀಯ ಮುತ್ಸದ್ದಿತನವಾಗಲೀ, ಒಂದು ಕಾಲಕ್ಕೆ ತಮಗೆ ಊರುಗೋಲಾಗಿದ್ದ ಸಮಾಜವಾದದ ಹತಾರಗಳಾಗಲಿ ಇರಲೇ ಇಲ್ಲ. ಹಾಗೂ ಹೆಚ್ಚೂ ಕಡಿಮೆ ಅದರ ಆಸ್ತಿತ್ವವೇ ನಾಶವಾಗಿತ್ತು.

ಇಂತಹ ದಿಕ್ಕೆಟ್ಟ ಸ್ಥಿತಿಯಿಂದ ಹಠಾತ್ತಾಗಿ ಅಧಿಕಾರದ ಗದ್ದುಗೆಯ ಹತ್ತಿರಕ್ಕೆ ತಲುಪಿದ ಈ ಕಾಂಗ್ರೆಸ್‌ಗೆ ಈ ಕ್ಷಣಕ್ಕೆ ತನ್ನ Siddaramaiahಈ ಗೆಲುವಿನ ಕಾರಣಕ್ಕೆ ಹರ್ಷೋದ್ಗಾರದಿಂದ ಕುಣಿದಾಡುವಂತಹ ಸ್ಥಿತಿಯೇನು ಇಲ್ಲದಿದ್ದರೂ, ಮಂದಹಾಸ ಬೀರುತ್ತಾ, ಮುಗುಳುನಗೆಯಿಂದ ವಿ ಆಕಾರದಲ್ಲಿ ಕೈಯನ್ನು ಎತ್ತಬಹುದು ಯಾವ ಮುಲಾಜಿಲ್ಲದೆ. ಏಕೆಂದರೆ ಬೇರೆಯವರ ಮಾತು ಬಿಡಿ, ತಮ್ಮ ಗೆಲುವೆನ್ನುವ ಗೆಲುವು ಹೆಚ್ಚೂ ಕಡಿಮೆ ಋಣಾತ್ಮಕ ಮತಗಳಿಂದ ಬಂದಿದ್ದು, ಈ ಗೆಲುವು ಕೋಮುವಾದಿ, ಭ್ರಷ್ಟ ಬಿಜೆಪಿ ವಿರುದ್ಧದ ಆಡಳಿತ ವಿರೋಧ ಅಲೆಯ ಮೇಲೆ ತೇಲಿ ಬಂದಿದ್ದು ಎಂದು ಸ್ವತಃ ಕಾಂಗ್ರೆಸ್ಸಿಗರಿಗೇ ಗೊತ್ತು. ಕರಾವಳಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಪುಂಡಾಟಿಕೆಯಿಂದ, ವಿಷಮಯವಾದ ಹಿಂದುತ್ವದ ಅಜೆಂಡಾದಿಂದ ಅಲ್ಲಿನ ಜನತೆ ಸಂಪೂರ್ಣ ರೋಸಿ ಹೋಗಿದ್ದು ಆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಿದ್ದಕ್ಕೆ ಮೂಲಭೂತ ಕಾರಣ. ಇದೇ ಮಾತನ್ನು ಹೈದರಾಬಾದ್ ಕರ್ನಾಟಕ, ಬಿಜಾಪುರ, ಬಾಗಲಕೋಟೆ ಹಾಗೂ ಇತರೇ ಜಿಲ್ಲೆಗಳಿಗೂ ಅನ್ವಯಿಸುತ್ತದೆ. ಇವೆಲ್ಲ ಕಾಂಗ್ರೆಸ್‌ನ್ನು ಕೈ ಹಿಡಿದೆತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಬೆರಳಣಿಕೆಯಷ್ಟು ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರೇ ಬಹುಪಾಲು ಕಾಂಗ್ರೆಸ್ಸಿಗರು ಬಿಜೆಪಿಯ ವಿರೋಧಿ ಅಲೆಯ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುತ್ತವೆ ಎಂಬ ಆತ್ಮ ವಿಶ್ವಾಸದಿಂದ, ಅತ್ಯಂತ ನಿರ್ಲಕ್ಷ್ಯ ಮತ್ತು ಉಢಾಫೆಯಿಂದಲೇ ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದರು.

ಹಾಗೆಯೇ ಕರ್ನಾಟಕವನ್ನು ದೇಶದಲ್ಲಿಯೇ ಭ್ರಷ್ಟ ರಾಜ್ಯವನ್ನಾಗಿಸಿದ, ಮುಖ್ಯಮಂತ್ರಿ, ಮಂತ್ರಿ, ಶಾಸಕರು ಭ್ರಷ್ಟಾಚಾರದ ಅಪಾದನೆಯ ಮೇಲೆ ಜೈಲು ಸೇರಬೇಕಾದಂತಹ ದುರಂತಕ್ಕೆ ತಳ್ಳಲ್ಪಟ್ಟ, ಕರ್ನಾಟಕವನ್ನು ದಿನನಿತ್ಯ ಹಗರಣಗಳ ಗೂಡನ್ನಾಗಿಸಿದ, ಹಿಂದುತ್ವದ ಅಜೆಂಡವನ್ನು ಅತ್ಯಂತ ನೀಚ ಮಟ್ಟದಲ್ಲಿ ಪ್ರಯೋಗಿಸಿ ಅಲ್ಪಸಂಖ್ಯಾತರ ಜೀವನವನ್ನು ನರಕವನ್ನಾಗಿಸಿದ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲು, ಸಂಘ ಪರಿವಾರವನ್ನು ಕಸದ ಬುಟ್ಟಿಗೆ ತಳ್ಳಲು ಕನ್ನಡದ ಪ್ರಜ್ಞಾವಂತ ಜನತೆ ನಿರ್ಧಾರ ಮಾಡಿಯಾಗಿತ್ತು. ಇದಕ್ಕೆ ಪರ್ಯಾಯ ಪಕ್ಷದ ಅವಶ್ಯಕತೆಯಾಗಿ ಮೂಡಿ ಬಂದದ್ದೇ ಕಾಂಗ್ರೆಸ್. ಏಕೆಂದರೆ ಕನ್ನಡಿಗರು ತಂದೆ, ಮಕ್ಕಳ ಪಕ್ಷ ಮತ್ತವರ ಆಸ್ತಿಯಂತಾಗಿರುವ ಜನತಾ ದಳವನ್ನು ನಂಬಲು ಸುತಾರಾಂ ಸಿದ್ಧರಿರಲಿಲ್ಲ. ಅವರ ಎಲ್ಲಾ ರಾಜಕೀಯ ನಡೆಗಳೂ, ಪಟ್ಟುಗಳೂ ಸ್ವಹಿತಾಸಕ್ತಿಯ, ಕುಟಂಬದ ನೆಲೆಯಲ್ಲಿಯೇ ನಿರ್ಧರಿಲ್ಪಡುತ್ತವೆ. ಅಲ್ಲದೆ ಸರ್ವಜನರನ್ನೂ ತುಳಿಯುವ, ಹತ್ತಿಕ್ಕುವ ಈ ಕುಟುಂಬದ ಸರ್ವಾಧಿಕಾರದ ಧೋರಣೆಯ ಗುಣಗಳನ್ನು ಕನ್ನಡಿಗರು ೨೦೦೮ರಲ್ಲಿಯೇ ತಿರಸ್ಕರಿಸಿದ್ದರು. ಇನ್ನು ಹಾಳೂರಿಗೆ ಉಳಿದವನೇ ರಾಜ ಎಂಬಂತೆ ಅನಿವಾರ್ಯವಾಗಿ ಪರಿಗಣಿತವಾಗಿದ್ದು ಈಗಾಗಲೇ ಸೋತು ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷ. ಅಲ್ಲದೆ ಎಷ್ಟೇ ಭ್ರಷ್ಟಗೊಂಡರೂ ಕಾಂಗ್ರೆಸ್‌ನೊಳಗಿರುವ ಜಾತ್ಯಾತೀತತೆಯ ಮೂಲ ಸೆಲೆ ಇನ್ನೂ ಬತ್ತಿರಲಿಲ್ಲ ಎನ್ನುವ ಜನರ ನಂಬಿಕೆ ಹಾಗೂ ಏನಿಲ್ಲದಿದ್ದರೂ ಸಂಘ ಪರಿವಾರದ ಮತಾಂಧತೆ ಮತ್ತು ಧರ್ಮದ ಆಧಾರದ ಮೇಲಿನ ಸಮಾಜವನ್ನು ಛಿದ್ರವಾಗಿಸುವ ಅತಿರೇಕ ಘಟನೆಗಳು ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ನಡೆಯಲಾರವು ಎನ್ನುವ ವಿಶ್ವಾಸವು ಪ್ರಜ್ಞಾವಂತ, ಪ್ರಗತಿಪರ ಕನ್ನಡಿಗರು ಕಾಂಗ್ರಸ್‌ನ ಪರ ನಿಲ್ಲಲು ಮುಖ್ಯ ಕಾರಣವಾಗಿತ್ತು. ಅಷ್ಟರ ಮಟ್ಟಿಗೆ ಕರ್ನಾಟಕವನ್ನು ನರಕವನ್ನಾಗಿಸಿದ್ದರು ಈ ಮತಾಂಧ, ಭ್ರಷ್ಟ ಸಂಘ ಪರಿವಾರದವರು.

ಈ ಎಲ್ಲ ಹಿನ್ನೆಲೆಯಲ್ಲಿ ಇಂದಿನ ರಾಜಕಾರಣವನ್ನು ಅವಲೋಕಿಸಿದಾಗ ಇಂದಿನ 2013 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ, ಮೂವತ್ತು ವರ್ಷಗಳಷ್ಟು ಹಿಂದಿನ 1983 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ ಬಹಳ ಸಾಮ್ಯತೆಗಳಿವೆ. ಆಗ ಸಂಜಯ್ ಬ್ರಿಗೇಡ್ ಗುಂಪಿಗೆ ಸೇರಿದ್ದ, ಅಪಕ್ವ ರಾಜಕಾರಣಿಯಾಗಿದ್ದ ಗುಂಡೂರಾವ್ ನೇತೃತ್ವದಲ್ಲಿ ಅಂಧಾದುಂಧಿ, ಭ್ರಷ್ಟ, ಕ್ಲಬ್ ಮಟ್ಟದ ಆಡಳಿತ ನೀಡಿದ್ದ ಕಾಂಗ್ರೆಸ್ ಪಕ್ಷವು ಕನ್ನಡಿಗರ ತಿರಸ್ಕಾರಕ್ಕೆ ಗುರಿಯಾಗಿತ್ತು. ಕಂಡ ಕಂಡಲ್ಲಿ ಜನತೆ ಕಾಂಗ್ರೆಸ್ಸಿಗರನ್ನು ಉಗಿಯುತ್ತಿದ್ದರು. ಕಾಂಗ್ರೆಸ್‌ನ್ನು ಕಸದ ಬುಟ್ಟಿಗೆ ಎಸೆಯಲು ಕನ್ನಡಿಗರು ತುದಿಗಾಗಲಲ್ಲಿ ನಿಂತಿದ್ದರು. ಕಾಂಗ್ರೆಸ್ ಪಕ್ಷದ ಆಗಿನ ಸ್ಥಿತಿಯು ಇಂದಿನ ಬಿಜೆಪಿ ಸ್ಥಿತಿಯಂತಿತ್ತು. ಆಗ ಉತ್ತುಂಗ ಸ್ಥಿತಿಯಲ್ಲಿದ್ದ ರೈತ ಚಳುವಳಿ, ದಲಿತ ಚಳುವಳಿ ಮತ್ತು ಪ್ರಜ್ಞಾವಂತರ ಪತ್ರಿಕೆಯಾದ ಲಂಕೇಶ್ ಪತ್ರಿಕೆಯ ಸಂಯುಕ್ತ ಮತ್ತು ಸತತ ಹೋರಾಟದ ಫಲವಾಗಿ ಕಾಂಗ್ರೆಸ್ ಧೂಳೀಪಟವಾಗಿತ್ತು. ಸಂಭಾವಿತರಂತೆ ಕಂಗೊಳಿಸುತ್ತಿರುವ ಈಗಿನ ಬಹುಪಾಲು ಕಾಂಗ್ರೆಸ್ ರಾಜಕಾರಣಿಗಳು ಆಗ ವಿಲನ್‌ಗಳಾಗಿ ಮೂಲೆಗುಂಪಾಗಿದ್ದರು. ಅದರ ಫಲವಾಗಿಯೇ ಕರ್ನಾಟಕ ರಾಜಕೀಯದಲ್ಲಿ ಹೊಸ ಪಲ್ಲಟ,ಹೊಸ ಯುಗ ಪ್ರಾರಂಭವಾಗಿತ್ತು. ಆಗ ಈ ಹೊಸ ಯುಗದ ನಾಯಕರಾಗಿ, ಬದಲಾವಣೆಯ ಹರಿಕಾರರಾಗಿ ಮೂಡಿಬಂದಿದ್ದು ಎಂ.ಪಿ.ಪ್ರಕಾಶ್, ಸಿಂಧ್ಯ, ಜೆ.ಹೆಚ್.ಪಟೇಲ್, ನಜೀರ್ ಸಾಬ್, ಬಿ.ರಾಚಯ್ಯ, ಜಾಲಪ್ಪ, ಜೀವಿಜಯ, ದೇವೇಗೌಡ, ಬಿ.ಎಲ್.ಗೌಡ, ಲಕ್ಮೀಸಾಗರ್, ಬಂಗಾರಪ್ಪ, ವೈ.ಕೆ.ರಾಮಯ್ಯ, ಬೈರೇಗೌಡ, ಸಿದ್ದರಾಮಯ್ಯ, ಬಿ.ಆರ್.ಯಾವಗಲ್, ಎಂ.ಚಂದ್ರಶೇಖರ್ ಮುಂತಾದ ಜನತಾ ಪರಿವಾರದ ರಾಜಕಾರಣಿಗಳು. ಇವರೆಲ್ಲರೂ ಶಾಸಕರಾಗಿ ಆಯ್ಕೆಯಾಗಿದ್ದು ಕರ್ನಾಟಕದಲ್ಲಿ ಆಗ ತಂಗಾಳಿಯನ್ನು ಬೀಸಿದಂತಿತ್ತು. ಆಗ ಒಂದು ಬಗೆಯ ಹೊಸ ಗುಣಲಕ್ಷಣಗಳು ನಿಧಾನವಾಗಿ ಮೈದಾಳುತ್ತಿತ್ತು. ಆದರೆ ಚಲಾವಣೆಯಲ್ಲಿ ಇಲ್ಲದ, ಕುತಂತ್ರ ರಾಜಕಾರಣಿ ರಾಮಕೃಷ್ಣ ಹೆಗಡೆ ದೆಹಲಿಯಿಂದ ನೇರವಾಗಿ ಕರ್ನಾಟಕದ ಮೇಲೆರೆಗಿ ಬಿಲ ಹೊಕ್ಕ ಹಾವಿನಂತೆ ಜನತಾ ಪರಿವಾರದಲ್ಲಿ ಸೇರಿಕೊಂಡು, ಭಟ್ಟಂಗಿ, ಜಾತಿವಾದಿ ಪತ್ರಕರ್ತರ ಕುಮ್ಮಕ್ಕಿನಿಂದ ಮುಖ್ಯಮಂತ್ರಿಯೂ ಆಗಿ ಬಿಟ್ಟರು.

ಆದರೂ ಸಹ ಎಂಬತ್ತರ ದಶಕದ ಜನತಾ ಪರಿವಾರದ ಆಡಳಿತದಲ್ಲಿ ಕಂಡುಬಂದ, ಜಾರಿಗೊಂಡ ಹೊಸ ಸಂಕೇತಗಳು, ಅನೇಕ ಗುಣಾತ್ಮಕ ಬದಲಾವಣೆಗಳನ್ನು ನಾವು ಮರೆಯುವಂತಿಲ್ಲ. ಸೀಮಿತ ನೆಲೆಯಲ್ಲಿಯೇ ಆದರೂ ರಾಜ್ಯದ ಆಡಳಿತವು ವಿಕೇಂದ್ರೀಕರಣಗೊಂಡಿದ್ದು ಈ ಜನತಾ ಪರಿವಾರದ ಕಾಲಘಟ್ಟದಲ್ಲಿ. ಭಿನ್ನವಾದ ರಾಜಕೀಯ ಮಾದರಿಗೆ ಜನತಾ ಪರಿವಾರ ಉದಾಹರಣೆಯಂತಿದ್ದದ್ದೂ ಸಹ ನಿಜ.ಹೊಸ ನುಡಿಕಟ್ಟಿನ ಬಳಕೆಗಾಗಿ ಹೊಸ ವೇದಿಕೆಗಳು ನಿರ್ಮಾಣಗೊಂಡಿದ್ದೂ ನಿಜ. ಆದರೆ ಇದೇ ಪರಿವಾರದ ಆಡಳಿತದ ಕಾಲಘಟ್ಟದಲ್ಲಿ ನಡೆದ ಕುದುರೆಮೋತಿ ಸ್ವಾಮಿ ಅತ್ಯಾಚಾರ, ಬೆಂಡಿಗೇರಿ ಪ್ರಕರಣ, ಬದನವಾಳು ಪ್ರಕರಣಗಳು ಶೋಷಿತ ವರ್ಗಗಳನ್ನು, ತಳ ಸಮುದಾಯಗಳನ್ನು ಅತಂತ್ರ ಸ್ಥಿತಿಗೆ, ಮತ್ತಷ್ಟು ದಯನೀಯ ಸ್ಥಿತಿಗೆ ತಳ್ಳಿತು. ಅನೇಕ ಭೂ ಹಗರಣಗಳು ಬಯಲಿಗೆ ಬಂದವು. ಹೆಗಡೆಯ ಕಾಲದಲ್ಲೇ ಬೆಂಗಳೂರು ನಗರ ತನ್ನ ಹಸಿರು ಪಟ್ಟಿಯನ್ನು ಕಳೆದುಕೊಂಡು ರಾಕ್ಷಸ ರೂಪದಲ್ಲಿ ಬೆಳದದ್ದು. ಈ ರಿಯಲ್ ಎಸ್ಟೇಟ್‌ನ ಭೂಗತ ವ್ಯವಹಾರಕ್ಕೆ ಆಗಲೇ ನಾಂದಿ ಹಾಡಿದ್ದು. ಇಂತಹ ಸ್ಥಿತ್ಯಂತರ ಕಾಲದಲ್ಲಿ ಹೆಗಡೆಯವರ ಗುಳ್ಳೇನರಿಯ ತಂತ್ರಗಳು, ಆಸೆಬುರುಕತನ, ಜಾತೀಯತೆಯ ಪ್ರಯೋಗಗಳು, ಇಂದಿನ ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಅಪಾದನೆಗಳಿಗೆ ಸಾಮ್ಯತೆ ಇರುವ ಆಗಿನ ಹೆಗಡೆಯವರ ಮೇಲಿನ ಭ್ರಷ್ಟಾಚಾರದ ಆರೋಪಗಳು, ರಶೀದ್ ಕೊಲೆ ಪ್ರಕರಣ, ಒಳ ಜಗಳ, ತನ್ನೊಳಗೆ ಹರಡಿಕೊಂಡಿದ್ದ ಜಾತೀಯತೆಯ ರೋಗ ಮುಂತಾದ ಅನಿಷ್ಟಗಳೆಲ್ಲ ಜನತಾ ಪಕ್ಷಕ್ಕೇ ಉರುಳಾಗಿದ್ದು ಹಾಗೂ ನಂತರ ನಡೆದದ್ದೆಲ್ಲಾ ಇಂದು ಇತಿಹಾಸ.

ಮೂವತ್ತು ವರ್ಷಗಳ ನಂತರ 1983 ರಲ್ಲಿ ಜನತಾ ಪರಿವಾರ ನಿಂತ ನೆಲೆಯಲ್ಲಿ ಇಂದು ೨೦೧೩ರಲ್ಲಿ ಕಾಂಗ್ರೆಸ್ ಬಂದು ನಿಂತಿದೆ. ಮೇಲ್ನೊಟಕ್ಕಂತೂ ಈ ಬಾರಿ ಆಯ್ಕೆಯಾದ ಬಹುಪಾಲು ಕಾಂಗ್ರೆಸ್ ಶಾಸಕರನ್ನು ಆ ಕಾಲದ ಜನತಾ ಪರಿವಾರದ ನಾಯಕರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇದು ಕಾಂಗ್ರೆಸ್ ಪಕ್ಷದ ಬಲು ದೊಡ್ಡ ಮಿತಿ ಹಾಗು ಸರಿಯಾಗಿ ಮಟ್ಟ ಹಾಕದಿದ್ದರೆ ಪಕ್ಷಕ್ಕೇ ಮುಂದೆ ಉರುಳಾಗುವ ಸಾಧ್ಯತೆಗಳಿವೆ. ಆದರೆ ಇದನ್ನು ಹೊರತುಪಡಿಸಿ ಇಂದು ಬದಲಾವಣೆಯ ಜವಬ್ದಾರಿಯನ್ನು, ಹಿಂದುಳಿದ ವರ್ಗಗಳ ಮತ್ತು ದಲಿತರ ನಡುವೆ ಹೊಸ ಧ್ರುವೀಕರಣದ ಆಶಯಗಳನ್ನು, ಕರ್ನಾಟಕವನ್ನು ಮತೀಯವಾದದ, ಹಿಂದುತ್ವದ ಫೆನೆಟಿಸಂನಿಂದ ಬಿಡುಗಡೆಗೊಳಿಸುವ ಅತ್ಯಂತ ಭಾರವಾದ ಆದರೆ ಅತ್ಯಂತ ಗುರುತರವಾದ ಜವಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಈಗಿನ ಕಾಂಗ್ರೆಸ್ ಪಕ್ಷ ಇದನ್ನೆಲ್ಲ ಹೇಗೆ ನಿಭಾಯಿಸುತ್ತದೆ?? ಕರ್ನಾಟಕವನ್ನು ಪ್ರಗತಿಪರ, ಜಾತ್ಯಾತೀತ ರಾಜ್ಯವಾಗಿ ಕಟ್ಟುವ ಸುವರ್ಣಾವಕಾಶವನ್ನು ಪಡೆದುಕೊಂಡ ಕಾಂಗ್ರೆಸ್‌ನ ನಾಯಕರಲ್ಲಿ ಬಳಿ ಕನಿಷ್ಟ ಇವುಗಳ ಕುರಿತಾಗಿ ಕನಸುಗಳಿವೆಯೇ?? ಕನಸುಗಳಿದ್ದರೆ ಅದನ್ನು ಅನುಷ್ಟಾನಗೊಳಿಸಲು ಇಚ್ಛಾಶಕ್ತಿಯ ಕ್ರೋಢೀಕರಣ ಯಾವ ಮಟ್ಟದಲ್ಲಿದೆ?? ಕ್ರೂರ ಮತ್ತು ಅರಾಜಕತೆಯಿಂದ ಕೂಡಿದ ವ್ಯವಸ್ಥೆಯನ್ನು ಸಹನೀಯಗೊಳಿಸಲು ಒಗ್ಗಟ್ಟಾಗಿ ದುಡಿಯುವ ಧೃಢ ಸಂಕಲ್ಪವನ್ನು ಹೊಂದಿದ್ದಾರೆಯೇ?? ಸಂಘ ಪರಿವಾರದ ಕ್ರೂರ ಸಂತತಿಗಳನ್ನು ಹೆಕ್ಕಿ, ಹೆಕ್ಕಿ ತೆಗೆದು ಶಿಕ್ಷೆಗೆ ಗುರಿಪಡಿಸುತ್ತೇವೆ, ಕರ್ನಾಟಕವನ್ನು ಉಸಿರುಗಟ್ಟಿಸುತ್ತಿರುವ ಭ್ರಷ್ಟಾಚಾರ ಮತ್ತು ಅಪಾಯಕಾರಿ ಹಿಂದುತ್ವದ ಕಬಂಧ ಬಾಹುಗಳಿಂದ ಬಿಡುಗಡೆಗೊಳಿಸುತ್ತೇವೆ ಎಂದು ತುಂಬಾ ಸೂಕ್ಷ್ಮಮತಿಗಳಾಗಿ, ಪ್ರಜ್ಞಾಪೂರ್ವಕವಾಗಿ ಕಾಂಗ್ರೆಸ್ಸಿಗರು ಪಣ ತೊಡಬಲ್ಲರೇ?? ಭೀಕರ ವಾಸ್ತವತೆಯನ್ನು ಮುಖಾಮುಖಿಯಾಗುವ ಎದೆಗಾರಿಕೆ ಮತ್ತು ಮಾನಸಿಕ ಸಿದ್ದತೆಯನ್ನು ಕರ್ನಾಟಕದ ಜನತೆಯ ಮುಂದೆ ಪ್ರಾಮಾಣಿಕವಾಗಿ ನಿವೇದಿಸಿಕೊಳ್ಳಬಲ್ಲರೇ ಈ ಕಾಂಗ್ರೆಸ್ಸಿಗರು?? ಇಂದು ಓಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಸಂಪೂರ್ಣ ಬೆಂಬಲ ಗಳಿಸಿ ಆ ಮೂಲಕ ತನ್ನ ಹಳೇ ಓಟ್ ಬ್ಯಾಂಕ್ ಅನ್ನು ಮರಳಿ ಗಳಿಸಿರುವ ಕಾಂಗ್ರೆಸ್ ಈ ಓಟ್ ಬ್ಯಾಂಕ್ ಅನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ, ತನ್ನ ಅವಕಾಶವಾದಿತನದ ಮುಖವಾಡ ಕಳಚಿ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯಬಲ್ಲದೇ?? ಅಲ್ಲದೆ ಮುಖ್ಯವಾಗಿ ಈ ಕಾಂಗ್ರೆಸ್ ಡಿ.ಕೆ.ಶಿವಕುಮಾರ್, ದೇವರಾಜ್ ರಂತಹ ಹಾಗೂ ಇನ್ನಿತರ ಅವಾಂತಕಾರಿ ರಾಜಕಾರಣಿಗಳನ್ನು ಹೇಗೆ ನಿಭಾಯಿಸುತ್ತದೆ??

ಕೊನೆಯದಾಗಿ, ಈಗಿನ ಚುನಾವಣಾ ಫಲಿತಾಂಶಗಳು ಕರ್ನಾಟಕ ರಾಜಕೀಯವನ್ನು ಒಂದು ನಿರ್ಣಾಯಕ ಹಂತದಲ್ಲಿ ತಂದು ನಿಲ್ಲಿಸಿದೆ. ಅದೇನೆಂದರೆ ಇನ್ನು ಮುಂದಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣವು ತನ್ನ ಪಕ್ಕದ ತಮಿಳುನಾಡು, ಕೇರಳದ ಜಾಡಿಗೆ ಹೊರಳುತ್ತಿದೆ ಎಂಬುದು. ಈ ಅವಕಾಶವಾದಿ, ಭ್ರಷ್ಟ ಕೆಜೆಪಿ ಪಕ್ಷ ಸಂಪೂರ್ಣವಾಗಿ ಮುಗ್ಗರಿಸಿ ನಾಮಾವಶೇಷವಾಗಿದೆ. ಇನ್ನು ಭವಿಷ್ಯದಲ್ಲಿ ತಂದೆ ಮಕ್ಕಳ ಪಕ್ಷ ಜನತಾ ದಳದ ಪ್ರಭಾವ ಮತ್ತು ಬಲಾಬಲ ಮತ್ತಷ್ಟು ಕುಗ್ಗುವ ಸಾಧ್ಯತೆಗಳಿವೆ. ಕಡೆಗೆ ತಮಿಳುನಾಡಿನ ಡಿ.ಎಂ.ಕೆ ಮತ್ತು ಏಐಡಿಎಂಕೆ, ಕೇರಳದ ಯುಡಿಎಫ್ ಮತ್ತು ಎಲ್‌ಡಿಫ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು. ಅದಕ್ಕೆ ೨೦೧೩ರ ಚುನಾವಣೆ ಮುನ್ನುಡಿಯನ್ನು ಬರೆದಂತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸುಳ್ಳು ಮಾಡಲು ಮುಂದಿನ ಐದು ವರ್ಷಗಳ ಅವಕಾಶವಿದೆ.

ಮೇಲಿನ ಸಾಧ್ಯತೆಗಳನ್ನು ಸುಳ್ಳು ಮಾಡಲು ಇಂದಿನ ಚುನಾವಣೆಯಲ್ಲಿ ನಮ್ಮ ಪ್ರೀತಿಯ, ಪ್ರಗತಿಪರ ನಾಯಕ ಪುಟ್ಟಣ್ಣಯ್ಯ ಗೆದ್ದಿದ್ದಾರೆ. ಇದು ಭವಿಷ್ಯದ ಕುರಿತಾಗಿ ಹೊಸ ಭರವಸೆ. ಲೋಕಸತ್ತಾ ಪಕ್ಷದಿಂದ ಸ್ಪಧಿಸಿದ್ದ ರವಿ ಕೃಷ್ಣಾರೆಡ್ಡಿ 6596 ರಷ್ಟು ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿಯೂ, ಅಶ್ವಿನ್ ಮಹೇಶ್ 11915 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿಯೂ, ಶಾಂತಲಾ ದಾಮ್ಲೆ 9071 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದು ಇವರೆಲ್ಲ ಹಣ ಹಂಚದೆ, ಬದಲಾಗಿ ಜನತೆಯಿಂದಲೇ ಹಣ ಪಡೆದು ಪ್ರಾಮಾಣಿಕ ಚುನಾವಣೆ ನಡೆಸಿದವರು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಲೋಕಸತ್ತಾ ಪಕ್ಷ, ಮತ್ತು ಕಮ್ಯುನಿಷ್ಟ್ ಪಕ್ಷ ಇವರೆಲ್ಲರೂ ಒಗ್ಗಟ್ಟಾಗಿ ಧ್ರವೀಕರಣಗೊಳ್ಳಬೇಕಾಗಿದೆ. ಆ ಮೂಲಕ ಪರ್ಯಾಯ ರಾಜಕಾರಣಕ್ಕೆ ಒಂದು ಮುನ್ನುಡಿಯನ್ನು ಬರೆಯಬಾರದೇಕೆ??

ಇದು ಕತ್ತಲ ದಾರಿಯೇ ನಿಜ, ಆದರೆ ಇಚ್ಛಾಶಕ್ತಿಯ ಬಲ, ಪ್ರಾಮಾಣಿಕತೆಯ, ನೈತಿಕತೆಯ ಬಲ ಎಂದಿಗೂ ಬೆಳಕಿನ ಹಣತೆಗಳೇ. ಇದನ್ನು ಹಚ್ಚಬೇಕಷ್ಟೇ.

ಹರ್ಷ ಮಂದೇರ್ ಬರಹ 5: ಹಸಿವಿನ ಒಂಟಿತನ

Harsha Manderಮೂಲ ಲೇಖನ: ಹರ್ಷ ಮಂದೇರ್

ಕನ್ನಡಕ್ಕೆ: ರಾಜಲಕ್ಷ್ಮಿ ಕೋಡಿಬೆಟ್ಟು

ಒರಿಸ್ಸಾದ ಬೊಲಾಂಗೀರ್ ಎಂಬ ಹಳ್ಳಿ. ಹಸಿವು ತಾಂಡವ ಆಡುತ್ತಿರುವ ಆ ಹಳ್ಳಿಯಲ್ಲಿ ಉಮರ್ಿಳಾ ಎಂಬ ಬೆಳ್ಳಿಕೂದಲ ಹೆಂಗಸನ್ನು ನಾವು ಭೆಟ್ಟಿಯಾದೆವು. ಅದು ಸಣ್ಣದೊಂದು ಹುಲ್ಲಿನ ಗುಡಿಸಲು. ಅಂಗಳದಲ್ಲಿ ನಿಧಾನಕ್ಕೆ ಹೆಜ್ಜೆಯಿಡುತ್ತಾ ಓಡಾಡುವ ಹೇಂಟೆ.

ನೋಡು ಈ ಹೇಂಟೆಯನ್ನು. ಕೊಡಲು ನನ್ನಲ್ಲಿ ಏನೂ ಇಲ್ಲ ಅಂತ ಗೊತ್ತಿದ್ದರೂ ಅದು ನನ್ನ ಬಳಿ ಬರುತ್ತದೆ. ಮೂರ್ಖ ಹೇಂಟೆ. ಶುಶ್ಶೂ ಅಂತ ಅವಳನ್ನು ಓಡಿಸಬೇಡಿ. ಅವಳು ನನಗಿರುವ ಒಬ್ಬಳೆ ಅತಿಥಿ ಅಲ್ವ…
ಉಮರ್ಿಳಾ ಮಾತಿನಲ್ಲಿ ಏಕಾಂಗಿತನದ ಭಾರವಿತ್ತು. ನನಗೆ ಆಹಾರ ಬೇಕು ಎನ್ನುವ ಹಸಿವು ಮಾತ್ರ ಅಲ್ಲ. ಪ್ರೀತಿಯ ಹಸಿವೂ ಹೌದು. ಆದರೆ ವಿಪರ್ಯಾಸವೆಂದರೆ ಉಮರ್ಿಳಾಗೆ ಜನರೆಂದರೆ ಹೆದರಿಕೆಯೂ ಹೌದು. ಅದಕ್ಕಾಗಿ ಹೆಚ್ಚಾಗಿ ಅವಳು ಮನೆಯಲ್ಲಿಯೇ ಇರುತ್ತಾಳೆ. ಸ್ನಾನಕ್ಕೆಂದು ನದಿಗೆ ಹೋಗುವಾಗಲೂ ಅವಳು ಮುಖ್ಯರಸ್ತೆಯಲ್ಲಿ ಓಡಾಡುವುದಿಲ್ಲ. ನಾನು ಒಬ್ಬಳೇ ಬದುಕುತ್ತೇನಲ್ಲಾ ಅದಕ್ಕೇ ನನಗೆ ಹೆದರಿಕೆ !.
ಹಸಿವಿನ ಅನುಭವ ತುಂಬ ಸಂಕೀರ್ಣವಾದುದು. ಶರೀರಕ್ಕೆ ಸಂಬಂಧಿಸಿದ ತೀವ್ರವಾದ ನಷ್ಟದ ಭಾವದ ಜತೆಗೆ ಹತಾಶೆ ಮತ್ತು ಅವಮಾನವೂ ಸೇರಿರುತ್ತದೆ. ಅದು ತುತರ್ಾಗಿ ಆಹಾರಕ್ಕಾಗಿ ಉಂಟಾಗುವ ಹಾಹಾಕಾರ. ಅದೇವೇಳೆ ತೀವ್ರವಾದ ಆಯಾಸ, ದೌರ್ಬಲ್ಯ ಮತ್ತು ತುಸು ಓಲೈಕೆಯನ್ನು ಬಯಸುವ ಆಶಯ ಅಂತರಂಗದಲ್ಲಿರುತ್ತದೆ. ಅದರಲ್ಲಿ ಏಕಾಂಗಿತನವಿದೆ, ಸಾಮಾಜಿಕ ಅಪಮೌಲ್ಯಗೊಳ್ಳುವಿಕೆ ಮತ್ತು ಆತ್ಮಗೌರವದಿಂದಕುಸಿಯುವ ನೋವಿದೆ.

ಪ್ರತಿದಿನವೂ ಅಗ್ನಿಪರೀಕ್ಷೆ

ನಾವು ಭೇಟಿಯಾಗುವ ಹೆಚ್ಚಿನ ನಿರ್ಗತಿಕರು ದೀರ್ಘಕಾಲದ ಹಸಿವಿನ ಕ್ಲೇಶವನ್ನಷ್ಟೇ ಅಲ್ಲ, ಪ್ರತಿದಿನವೂ ಏಕಾಂಗಿತನದ ಕಡುನೋವನ್ನೂ ಉಣ್ಣುತ್ತ ಬದುಕುತ್ತಾರೆ. ಹತ್ತು ಹಲವು ವಿಧಗಳಲ್ಲಿ ಅವರು ಸಾಮಾಜಿಕವಾಗಿ ಪ್ರತ್ಯೇಕಗೊಂಡಿರುತ್ತಾರೆ. ಅವರ ಭಾವಗಳಿಗೆ ಕಿಂಚಿತ್ ಬೆಲೆ ಇಲ್ಲದಂತಾಗಿರುತ್ತದೆ. ಕಾವಾ ಮನತ್ ಎಂಬ ಈ ವ್ಯಕ್ತಿಗೆ ಹುಟ್ಟಿನಿಂದ ಅಂಗವೈಕಲ್ಯ. ತನ್ನ ದೊರಗಾದ ಕೈಗಳ ಮೂಲಕ ದೇಹವನ್ನು ಎಳೆದುಕೊಂಡು ಸಾಗುತ್ತಾನೆ. ಮದುವೆ ಮಕ್ಕಳು ಅಂತ ತನ್ನದೇ ಸಂಸಾರ ಮಾಡಿಕೊಳ್ಳಲಿಕ್ಕೆ ಆಗಲಿಲ್ಲವಲ್ಲಾಎಂಬುದು ಆತನ ಬದುಕಿನ ದೊಡ್ಡ ವಿಷಾದ. ಜತೆಗೊಬ್ಬಳು ಸಂಗಾಗತಿ ಇದ್ದಿದ್ದರೆ ತನ್ನ ನೋವು, ಖುಷಿಯನ್ನು ಹಂಚಿಕೊಳ್ಳಬಹುದಿತ್ತು ಎಂದೆನಿಸುತ್ತದೆ ಆತನಿಗೆ. ಸಂಗಾತಿಯ ಬೆಂಬಲದೊಂದಿಗೆ ಆತ್ಮಗೌರವದೊಂದಿಗೆ ಬದುಕಿನಲ್ಲಿ ಕೊಂಚ ದೂರ ಸಾಗಬಹುದಿತ್ತಲ್ಲ ಎನ್ನುವುದು ಅವನ ಆಶಯ. ಆಗ ತನ್ನ ಭವಿಷ್ಯದ ಬಗ್ಗೆ ಅವನು ವಿಪರೀತ ಆತಂಕಗೊಳ್ಳುತ್ತಿರಲಿಲ್ಲ. ಬಡತನ ಮತ್ತು ಹಸಿವು ಮನುಷ್ಯನನ್ನು ಕೊಲ್ಲುವುದಷ್ಟೇ ಅಲ್ಲ, ಆತ್ಮಗೌರವವನ್ನೂ ನಾಶ ಮಾಡುತ್ತವೆ.

ಆಂಧ್ರಪ್ರದೇಶದಲ್ಲಿ ಓರ್ವ ಅಜ್ಜಿ ಅಂತಮ್ಮ. ತನ್ನ ಮಕ್ಕಳನ್ನು ಕಷ್ಟಪಟ್ಟು ಸಾಕಿ ಬೆಳೆಸಿ ಬದುಕಿನ ನೋವುಂಡವಳು. ಆದರೆ ಕೊನೆಗಾಲದಲ್ಲಿ ಆಕೆಯನ್ನು ಮಕ್ಕಳು ಕೈಬಿಟ್ಟಿದ್ದಾರೆ. ಒಂಟಿಬದುಕಿನಲ್ಲಿ ಹಬ್ಬಹರಿದಿನಗಳನ್ನು ಹೇಗೆ ಆಚರಿಸುವುದು? ಸಣ್ಣಪುಟ್ಟ ಹಬ್ಬಗಳನ್ನು ನಾನು ಆಚರಿಸುವುದಿಲ್ಲ. ದೀಪಾವಳಿ, ಹೋಳಿ,ಸಂಕ್ರಾಂತಿ ಮುಂತಾದ ದೊಡ್ಡ ಹಬ್ಬಗಳನ್ನು ಒಬ್ಬಳೇ ತನಗೆ ತೋಚಿದಂತೆ, ತನ್ನ ಕೈಲಾದಂತೆ ಆಚರಿಸುತ್ತಾಳೆ. ಒಂದು ಹಿಡಿ ಅನ್ನ ಹೆಚ್ಚು ಊಟ ಮಾಡುವುದು, ಅಥವಾ ಇಷ್ಟು ತರಕಾರಿ ತಂದು ಒಂದೊಳ್ಳೆ ಸಾಂಬಾರು ಮಾಡುವುದು. . . ಇಷ್ಟಕ್ಕೆ ಮುಗಿಯುತ್ತದೆ ಆಕೆಯ ಹಬ್ಬ. ವಯಸ್ಸಾದ ಮತ್ತೋರ್ವ ವಿಧವೆ ಅಜ್ಜಿ ಸಜ್ನಾ ನಾಗ್ ಮನೆಯವರಿಂದ ದೂರಾಗಿದ್ದಾಳೆ. ಹಬ್ಬಗಳು ಯಾವಾಗ ಬರುತ್ತವೋ, ಹೋಗುತ್ತವೋ ನನಗೆ ಗೊತ್ತಾಗುವುದಿಲ್ಲ. ಆದರೆ ನನ್ನ ಗಂಡ ಇದ್ದಾಗ ಹಬ್ಬಗಳಿಗಾಗಿ ಕಾತರದಿಂದ ಕಾಯುತ್ತಿದ್ದೆ ಎಂದು ಆಕೆ ನೆನಪಿಸಿಕೊಳ್ಳುತ್ತಾಳೆ.

ಲಕ್ಷ್ಮನ್ನ ಎಂಬ ಅಜ್ಜಿಗೆ ಮಕ್ಕಳು ತನ್ನ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಅಪಾರ ಸಿಟ್ಟಿದೆ. ಹಬ್ಬದ ಸಮಯದಲ್ಲಿ ಆಕೆ ಯಾವುದಾದರೂ ಹೊಲದ ಬಳಿ ಹೋಗಿ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ.. ಮಕ್ಕಳನ್ನು ಶಪಿಸುತ್ತಾಳೆ. ಹಳೇ ನೆನಪುಗಳು ಕಣ್ಣೀರು ತರುತ್ತವೆ. ಕಣ್ಣೀರು ಕೊಂಚ ಸಮಾಧಾನ ತರುತ್ತದೆ.

ಲೈಬನಿ ಮಂಝಿ ಎಂಬಾಕೆಗೆ ಗಾಯಿಟರ್ ಕಾಯಿಲೆ ಬಂತೆಂದು ಆಕೆಯನ್ನು ಗಂಡ ತೊರೆದು ಹೋದ. ಅನಂತರ ಲೈಬನಿ ಯಾವುದೇ ಹಬ್ಬ ಹರಿದಿನ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ತನ್ನ ಊದಿದ ಗಂಟಲಿನ ಬಗ್ಗೆ ಯಾರಾದರೂ ಆಡಿಕೊಂಡಾರೆಂದು ಅಥವಾ ತನ್ನನ್ನು ಗಂಡ ಬಿಟ್ಟು ಹೋದ ಬಗ್ಗೆ ಯಾರಾದರೂ ಜರೆದಾರು ಎನ್ನುವ ಅಳುಕು.
ಇನ್ನು ಕುಷ್ಟ ರೋಗದಿಂದ ಬಳಲುವ ವಾಲಿ ಮತ್ತು ಧನು ಎಂಬ ಹಿರಿಯ ನಾಗರಿಕರನ್ನು ಯಾರೂ ಯಾವುದೇ ಕಾರ್ಯಕ್ರಮಗಳಿಗೂ ಕರೆಯುವುದಿಲ್ಲ. ಧಾನು ಎಂಬ ಅಜ್ಜನಿಗೆ ಜನಸಂದಣಿ ನೋಡಿದರೆ ನಾಚಿಕೆ. ತನ್ನ ಆಡುಕುರಿಗಳನ್ನು ಮೇಯಿಸಲು ಮನೆಯಿಂದ ಹೊರ ಬೀಳುತ್ತಾನೆಯೇ ವಿನಃ ಸಾಮಾಜಿಕ ಕಾರ್ಯಕ್ರಮಗಳಿಗೆ ಆಕೆ ಬರುವುದೇ ಇದಲ್ಲ. ನೌಟಂಕಿ ಮುಂತಾದ ಮನರಂಜನೆಯಲ್ಲಿ ಭಾಗವಹಿಸುವುದಿಲ್ಲ. ಅಷ್ಟೇ ಏಕೆ, ಅವನು ನಡೆದು ಹೋಗುವಾಗ ಹೆಂಗಸರ ತಮ್ಮ ಮಕ್ಕಳನ್ನು ಸರಕ್ಕನೆ ಪಕ್ಕಕ್ಕೆ ಎಳೆದುಕೊಂಡು ದೂರ ಸರಿಯುತ್ತಾರೆ.
ಒಂಟಿಯಾಗಿ ಬದುಕುವ ಹಿರಿಯನಾಗರಿಕರು ಕೆಲವೊಮ್ಮೆ ಯಾರ ಬಳಿಯೂ ಮಾತನಾಡದೆಯೇ ದಿನವಿಡೀ ಕಳೆಯುತ್ತಾರೆ. ತನ್ನಪಾಲಿಗೆ ಮಾತ್ರವೇ ಅಡುಗೆ ಮಾಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆ. ಅದರಲ್ಲಿಯೂ ಗಂಡಸರು ಅಡುಗೆ ಮಾಡುವುದು ರೂಢಿಯಿಲ್ಲದ ಗಂಡಸರು ಹೆಚ್ಚು ಪರದಾಡುತ್ತಾರೆ. ಕೊನೆಗೆ ಅವರು ರಾತ್ರಿಗಳಲ್ಲಿ ಹೊಟ್ಟೆತುಂಬ ನೀರು ಕುಡಿದು ಮಲಗಿಬಿಡುತ್ತಾರೆ. ಇಳಿವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡ ಪುರುಷರು ಉಣ್ಣುವ ವಿಷಯದಲ್ಲಿ ತುಂಬ ಒಂಟಿಯಾಗಿಬಿಡುತ್ತಾರೆ. ವಯಸ್ಸಾಗುತ್ತಿದ್ದಂತೆಯೇ ಅಜ್ಜ ಅಜ್ಜಿಯರು ಜತೆಯಾಗಿ ಇರುವುದೇ ಉತ್ತಮ. ಆದರೆ ರಾಜಸ್ಥಾನಿ ಅಜ್ಜಿಯೊಬ್ಬರು ಹೇಳುವ ಪ್ರಕಾರ, ಈ ಅಜ್ಜ ಅಜ್ಜಿಯರು ತಮ್ಮ ಹಳೇ ದಿನಗಳನ್ನು ಜ್ಞಾಪಿಸಿಕೊಂಡು ಎಷ್ಟು ಅಂತ ಮಾತಾಡಬಹುದು. ತನ್ನ ಸಂಗಾತಿಎಲ್ಲಿ ಕಾಯಿಲೆಬಿಳುತ್ತಾನೋ, ಅಥವಾ ಇದ್ದಕ್ಕಿದ್ದಂತೆಯೇ ಸತ್ತುಬಿಡುತ್ತಾರೋ ಎಂಬ ಆತಂಕ ಪ್ರತಿಕ್ಷಣ ಅವರನ್ನು ಕಾಡುತ್ತದೆ. ಅಥವಾ ಸಂಗಾತಿ ತನ್ನನ್ನು ತಾನು ನಿಭಾಯಿಸಲಾರದ ಸ್ಥಿತಿ ತಲುಪಿ ಇತರರಿಗೆ ಹೊರೆಯಾಗುತ್ತಾರೋ ಎಂಬ ಆತಂಕವೂ ಇಲ್ಲದಿಲ್ಲ. ತಮ್ಮ ಕೈ ಕಾಲು ಅಲ್ಲಾಡುವವರೆಗೆ ಏನೇ ಪರಿಸ್ಥಿತಿ ಬಂದರೂ ನಿಭಾಯಿಸಬಹುದೇನೋ, ಆದರೆ ಹಾಸಿಗೆ ಹಿಡಿದುಬಿಟ್ಟರೆ ಮತ್ತೇನು ಮಾಡುವುದು ಎಂಬಭಯ ಇದ್ದದ್ದೇ.

ಇದೊಂದು ಅವಕಾಶವಲ್ಲ
ಜೀವನ ಸಾಗಿಸಲು ದುಡಿಮೆ ಹುಡುಕಿಕೊಂಡು ನಗರಗಳಿಗೆ ಹೋಗುವುದು ಹಿರಿಯ ನಾಗರಿಕರಿಗೆ ಸಾಧ್ಯವಿಲ್ಲದ ಮಾತು. ವಯಸ್ಸು ಮತ್ತು ಅಶಕ್ತತೆ ಅವರಿಗೆ ವಲಸೆ ಅವಕಾಶವನ್ನು ಕೊಡುವುದಿಲ್ಲ. ಆದರೆ ಮಕ್ಕಳು ವಲಸೆ ಹೋದ ಮೇಲೆ ಊರಿನಲ್ಲಿಯೇ ಉಳಿದುಬಿಡುವ ಹಿರಿಯ ನಾಗರಿಕರನ್ನು ನಾವು ಭೇಟಿಯಾದೆವು. ವಲಸೆ ಹೋದ ಮಕ್ಕಳು ಅವರನ್ನು ನೋಡಿಕೊಂಡರೂ, ಏಕಾಂಗಿತನದ ನೋವು ಹಾಗೇ ಉಳಿದಿತ್ತು.

ಬೊಲಾಂಗೀರ್ ಎನ್ನುವ ಊರಿನಲ್ಲಿರುವ ಅಜ್ಜ ಇಂದ್ರದೀಪ್ ಅಂಗವಿಕಲರೂ ಹೌದು. ಮಗ ಸಾಧು ತನ್ನ ಪತ್ನಿಯೊಂದಿಗೆ ದುಡಿಮೆಗಾಗಿ ಪ್ರತಿ ವರ್ಷ ಹೈದರಾಬಾದ್ಗೆ ವಲಸೆ ಹೋಗುತ್ತಾನೆ. ಇಟ್ಟಿಗೆ ಕೆಲಸಗಳನ್ನು ನಿರ್ವಹಿಸುತ್ತಾನೆ. ಮಗ ಕಳುಹಿಸಿದ ದುಡ್ಡಿನಲ್ಲಿ ಇಂದ್ರದೀಪಜ್ಜನ ಜೀವನ ಸಾಗಬೇಕು. ತಮಗೆ ಕೆಲಸ ಕೊಡುವ ಗುತ್ತಿಗೆದಾರನಿಂದ ಮುಂಚಿತವಾಗಿಯೇ 8000 ರೂ. ಮುಂಗಡ ಪಡೆಯುತ್ತಾರೆ. ಕಳೆದ ವರ್ಷ ದಂಪತಿಗಳು ಅಜ್ಜನಿಗೆ 500 ರೂ. ಕೊಟ್ಟಿದ್ದರು. ನಂತರ ಊರಿನ ಲೇವಾದೇವಿದಾರನಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿ ಅಮ್ಮನಿಗೆ ಕೊಟ್ಟರು. ಆದರೆ ಇಂದ್ರದೀಪಜ್ಜ ಮತ್ತು ಆತನ ಪತ್ನಿಗೆ ಆಸರೆಯಾಗಿ ಮಕ್ಕಳು ಜತೆಯಲ್ಲಿಲ್ಲ. ಅಶಕ್ತರಾಗಿದ್ದಾಗ ಕೈ ನೀಡಿ ಎಬ್ಬಿಸುವ ಕೈಗಳು ಮನೆಯಲ್ಲಿಲ್ಲ.

ಕೆಲವು ಸಂದರ್ಭಗಳಲ್ಲಿ ದೀರ್ಘಕಾಲದ ವಲಸೆ, ಅಗಲುವಿಕೆ ಕುಟುಂಬದ ನಂಟನ್ನೂ ಸಡಿಲು ಮಾಡಿಬಿಡುತ್ತದೆ. ಮಾಲ್ತಿ ಬರಿಹಾ ಎಂಬ ಅಜ್ಜಿಯ ವಿಚಾರವನ್ನೇ ತೆಗೆದುಕೊಳ್ಳೋಣ. ಆರಂಭದಲ್ಲಿ ವಲಸೆ ಹೋದ ಮಗ ಕಳುಹಿಸುವ 300 ರೂ. ಮನಿ ಆರ್ಡರು ಅಜ್ಜಿಯ ಕೈ ತಲುಪುತ್ತಿತ್ತು. ಆದರೆ ಸ್ವಲ್ಪ ಸಮಯದ ನಂತರ ಮನಿ ಆರ್ಡರ್ ನಿಂತಿತು. ಮಗನ ಸಂಸಾರ ಮನೆಗೆ ಬರುವುದೂ ಕಡಿಮೆಯಾಯಿತು. ಗಂಡ ತೀರಿಕೊಂಡ ಸಂದರ್ಭದಲ್ಲಿಯೂ ಮಗ ಜತೆಗಿರಲಿಲ್ಲ ಎಂದು ಮಾಲ್ತಿಅಜ್ಜಿ ಕಣ್ಣಲ್ಲಿ ನೀರಾಡುತ್ತದೆ. ರಾಜಸ್ಥಾನಿ ಮತ್ತೋರ್ವ ವಿಧವೆ ಸೋಮಿ ಕೂಡ ಇದನ್ನೇ ಹೇಳುತ್ತಾಳೆ – ಮಗ ತನ್ನ ಹೆಂಡತಿಯೊಂದಿಗೆ ಗುಜರಾತ್ಗೆ ವಲಸೆ ಹೋಗಿ, ಮತ್ತೆ ವಾಪಸ್ ಬರಲಿಲ್ಲ. ಮನೆಯ ನಂಟನ್ನೂ, ಹಳ್ಳಿಯ ನಂಟನ್ನೂ ತೊರೆದಿದ್ದಾನೆ. ತನ್ನ ಅಮ್ಮನ ನೋವನ್ನೂ ಮರೆತಿದ್ದಾನೆ.

ಸ್ಥಳೀಯ ಸಮುದಾಯಗಳು ನಿರ್ಗತಿಕರ ಬಗ್ಗೆ ತೀರಾ ನಿರ್ಲಕ್ಷ್ಯದ ಧೋರಣೆ ಹೊಂದಿರುತ್ತಾರೆ. ಮಾನಸಿಕವಾಗಿ ಸ್ವಲ್ಪ ನಿಧಾನವಾಗಿ ಯೋಚಿಸುವ ಬೆಟ್ಕಾಯಿ ಟಂಡಿ ಎಂಬ ಹೆಂಗಸನ್ನು ಮೂರ್ಖ ಹುಚ್ಚಿ ಎಂದೇ ಎಲ್ಲರೂ ಸಂಬೋಧಿಸುತ್ತಾರೆ. ಆಕೆ ಬೇಸರಿಂದ ಕೇಳುತ್ತಾಳೆ ನಾನು ಮೂರ್ಖಳ ಹಾಗೆ ಕಾಣುತ್ತೇನಾ ? ಅಲ್ಲ ನೀವೇ ಹೇಳಿ..ನಾನು ಹುಚ್ಚಿಯಾ ? ಮತ್ತೆ ಈ ಊರಿನವರು ಯಾಕೆ ನನ್ನನ್ನು ಹೀಗೆ ನೋಡುತ್ತಾರೆ. ಹಾಗೆ ಟೀಕಿಸುವವರ ಮಕ್ಕಳು ಕಲ್ಲು ಬಿಸಾಡುವುದು ಯಾಕೆ ? -ಒಂಟಿಯಾಗುವ ಬದುಕುವ ಅವಳ ಏಕಾಂಗಿ ಲೋಕದಲ್ಲಿ ಸುತ್ತ ಭೂತ ಪಿಶಾಚಿಗಳಂತೆ ಈ ಪ್ರಶ್ನೆಗಳು ಕಾಡುತ್ತವೆ.

ನಾವು ಅಧ್ಯಯನ ಮಾಡಿದ ಮೂರು ರಾಜ್ಯಗಳಲ್ಲಿ ಇಂತಹ ನಿರ್ಗತಿಕರಿಗೆ ನೆರವಾಗುವ ಯಾವುದೇ ಸಾಂಸ್ಥಿಕ ಸಮುದಾಯದ ಬೆಂಬಲ ಇರುವುದು ಗೋಚರಿಸಲಿಲ್ಲ. ಕೆಲವು ಹಳ್ಳಿಗಳಲ್ಲಿ ಚಂದಾ ಸಂಗ್ರಹಿಸಿ ಅಥವಾ ಸ್ವಯಂ ಇಚ್ಛೆಯಿಂದ ಕೊಟ್ಟ ಹಣ ಸಂಗ್ರಹಿಸಿ ಅಂಗವಿಕಲರ ಮಕ್ಕಳ ಮದುವೆಗೆ ಅಥವಾ ದುರ್ಬಲ ವಿಧವೆಯರ ಮಕ್ಕಳ ಮದುವೆಗೆ ನೆರವಾಗುವ ಪದ್ಧತಿ ಮಾತ್ರ ಕೆಲವೆಡೆ ಕಾಣ ಸಿಕ್ಕಿತು. ವಯಸ್ಸಾದವರಿಗೆ, ಒಂಟಿ ಹೆಂಗಸರಿಗೆ ಒಂದಿಷ್ಟು ಕೆಲಸ ಕಾರ್ಯಗಳನ್ನು ಹಚ್ಚುವುದೇ ಇಲ್ಲಿನ ದೊಡ್ಡ ಪರೋಪಕಾರಿ ಧೋರಣೆ. ಕೊಡುವ ಸಂಬಳ ಮೂರು ಕಾಸಾದರೂ, ಕೆಲಸದ ಅವಧಿಗೆ ಮಿತಿಯಿಲ್ಲದೇ ಇದ್ದರೂ, ಅಂತಹವರಿಗೆ ಕೆಲಸ ಕೊಟ್ಟಿರುವುದೇ ಮಹಾನ್ ಎಂಬಂತೆ ವರ್ತಿಸಲಾಗುತ್ತದೆ.

ಯಾಕೆ ಈ ಸಾಮಾಜಿಕ ನಿರ್ಲಕ್ಷ್ಯವಿದೆ ? ಏನನ್ನೂ ಉತ್ಪಾದನೆ ಮಾಡಲಾರದವರು, ಗಳಿಕೆ ಸಾಧ್ಯವಾಗದ ಕೈಲಾಗದ ವ್ಯಕ್ತಿಗಳು ಎಂಬ ಧೋರಣೆ ಇರುವುದರಿಂದ ಹೀಗೆ ನಿರ್ಲಕ್ಷ್ಯ ಮಾಡಲಾಗುತ್ತದೆ ಎನಿಸುತ್ತದೆ. ಗಳಿಸಲಾರದವರು ಎನ್ನುವುದು ನಿಜವೇ ಇರಬಹುದು. ಆದರೆ ನಿರ್ಲಕ್ಷ್ಯ ಸಮಂಜಸ ಎನಿಸುವುದಿಲ್ಲ. ಚಳಿಗಾಲದ ರಾತ್ರಿಯಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳಲು ಹೊತ್ತಿಮುಗಿದ ಅಗ್ಗಿಷ್ಟಿಕೆ ಮುಂದೆ ಕುಳಿತವರನ್ನು ನೋಡಿದ್ದೀರಾ.. ಕೆಂಡವಾರಿ, ಬೂದಿ ತಣ್ಣಗಾಗಿದ್ದರೂ ಅವರು ಒಂದಿಷ್ಟು ಬೆಚ್ಚನೆಯ ಭಾವಕ್ಕೆ ಹಾತೊರೆಯುತ್ತಿರುತ್ತಾರೆ.

ಆಕಾಂಕ್ಷೆಗಳು ಮತ್ತು ಕನಸುಗಳು
ಉದಿಯಾ ಬರಿಹಾ ಎಂಬಾಕೆಯ ಬಾಲ್ಯ ಏಕಾಂಗಿತನದ್ದು. ಆಕೆಯನ್ನು ಶಾಲೆಗೂ ಕಳುಹಿಸಿಲ್ಲ. ಯಾಕೆಂದರೆ ಆಕೆಗೆ ಕಣ್ಣುಗಳು ಕಾಣುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಒಂಟಿಯಾಗಿ ಆಡುತ್ತಿರುತ್ತಾಳೆ. ಆ ಹಳ್ಳಿಯಲ್ಲಿ ಇನ್ನೂ ಕೆಲವರು ಅಂಧ ಮಕ್ಕಳಿದ್ದರು. ಆದರೆ ಅವರೆಲ್ಲರೂ ಪರಸ್ಪರ ಭೇಟಿಯಾಗೇ ಇಲ್ಲ. ದೊಡ್ಡವಳಾದಂತೆಯೇ ಅವಳಿಗೆ ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದುಕೊಂಡಿದ್ದಳು. ಇದ್ದಕ್ಕಿದ್ದಂತೆಯೇ ಆಕೆಯ ತಂದೆ ತಾಯಿ ಯಾವುದೋ ಜ್ವರ ಬಂದು ತೀರಿಕೊಂಡುಬಿಟ್ಟರು.

ಆಮೇಲೆ ಅವಳು ಒಂಟಿಯಾಗಿಯೇ ಜೀವನ ಕಳೆಯಬೇಕಾಯಿತು. 15ನೇ ವರ್ಷಕ್ಕೆ ಒಂಟಿಯಾದ ಅವಳು ಮುಂದಿನ 60 ವರ್ಷಗಳ ವರೆಗೆ ಒಂಟಿ ಬದುಕು ಸವೆಸಿ, ಕೊನೆಗಾಲದಲ್ಲಿ ಭಿಕ್ಷೆ ಬೇಡುವುದು ಕೂಡ ಅನಿವಾರ್ಯವಾಯಿತು. ಆಕೆಯನ್ನು ಯಾರೂ ಭೇಟಿಯಾಗಲಿಲ್ಲ. ಹೇಗಿದ್ದೀರಾ… ಖುಷಿಯಾಗಿದ್ದೀರಾ.. ಎಂದು ಆಕೆಯನ್ನು ನಾವು ಪ್ರಶ್ನಿಸುತ್ತಲೇ `ಹೌದು ಖುಷಿಯಾಗಿದ್ದೇನೆ’ ಎಂದು ಥಟ್ಟನೆ ಉತ್ತರಿಸುತ್ತಾಳೆ. ಏನೇನು ಆಕಾಂಕ್ಷೆಗಳಿವೆ ನಿಮ್ಮದು ಎಂಬ ಮಾತು ಬಂದಾಗ ತುಂಬ ಹೊತ್ತು ಮೌನವಾಗಿ… ನಂತರ ಉತ್ತರಿಸುತ್ತಾಳೆ. ಯೋಚನೆಗಳೂ ಮರೆತು ಹೋದಂತೆ, ತುಂಬ ನಿಧಾನವಾಗಿ. ಒಂದೊಳ್ಳೆ ಮನೆ, ಉಡೋಕೆ, ಉಣ್ಣೋಕೆ ಸಾಕಷ್ಟು ದೊರೆತಿದ್ದರೆ..ನೆಮ್ಮದಿಯಾಗಿರಬಹುದಿತ್ತೇನೋ..

ಅನುವಾದಕರ ಪರಿಚಯ: ರಾಜಲಕ್ಷ್ಮಿ ಕೋಡಿಬೆಟ್ಟು ಲೇಖಕಿ, ಕತೆಗಾರ್ತಿ ಮತ್ತು ಪತ್ರಕರ್ತೆ. “ಒಂದು ಮುಷ್ಟಿ ನಕ್ಷತ್ರ” ಅವರ ಪ್ರಕಟಿತ ಕಥಾ ಸಂಕಲನ. ಇದೇ ಕೃತಿಗೆ ಸಾರಾ ಅಬೂಬ್ಕರ್ ಪ್ರಶಸ್ತಿ ಲಭಿಸಿದೆ. ದಟ್ಸ್ ಕನ್ನಡ, ವಿಕ್ರಾಂತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಮಂಗಳೂರಿನಲ್ಲಿ ವಿಜಯ ಕರ್ನಾಟಕ ವರದಿಗಾರರಾಗಿದ್ದಾರೆ.

ಪಕ್ಷೇತರ ಶಕ್ತಿ ಕೇಂದ್ರ ಉಗಮ!

-ಚಿದಂಬರ ಬೈಕಂಪಾಡಿ

ಸಾಕಪ್ಪಾ ಸಾಕು, ಬೇಕಪ್ಪಾ ಬೇಕು ಎನ್ನುವ ಎರಡು ಭಿನ್ನ ಹಾಗೂ ಪರಸ್ಪರ ಸಮರ್ಥಿಸಿಕೊಳ್ಳುವ ಮತದಾರರ ಮನವೊಲಿಕೆಯ ಕಸರತ್ತನ್ನು ಮಾಧ್ಯಮಗಳಲ್ಲಿ ಗಮನಿಸಿರಬಹುದು. ಸಾಮಾನ್ಯ ಮತದಾರ ಯಾಕೆ ಸಾಕು, ಯಾಕೆ ಬೇಕು ಎನ್ನುವುದಕ್ಕಿಂತ ನೀವಿಬ್ಬರೂ ನಮಗೆ ಅನಿವಾರ್ಯವಲ್ಲ ಎನ್ನುವ ಸಂದೇಶ ನೀಡಿದರೆ ಹೇಗೆ ಎಂದು ಯೋಚಿಸುವುದು ಅಪರಾಧವೇ?1111111
ಒಂದು ರಾಜಕೀಯ ಪಕ್ಷ ಸಾಕು ಎನ್ನಲು, ಮತ್ತೊಂದು ಬೇಕು ಎನ್ನಲು  ಅವರದ್ದೇ ಆದ ಕಾರಣಗಳನ್ನು ಕೊಡಬಹುದು. ಇವರಿಬ್ಬರನ್ನೂ ನಿರಾಕರಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ನೀವೇ ಯಾಕೆ ಬೇಕು ? ಅವರೇ ಯಾಕೆ ಬೇಡ ? ಎನ್ನುವುದಕ್ಕಿಂತಲೂ ನೀವಿಬ್ಬರೂ ನಮಗೆ ಬೇಡದವರು ಎನ್ನುವುದೇ ಲೇಸು.
ಅಧಿಕಾರ ನಡೆಸುವ ಅವಕಾಶ ಕೊಟ್ಟರೂ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದ ಪಕ್ಷ, ಪ್ರತಿಪಕ್ಷದ ಸಾಲಲ್ಲಿ ಕುಳಿತು ಆಡಳಿತ ನಡೆಸುವವರ ಮೇಲೆ ಕಣ್ಣಿಡಿ ಎನ್ನುವ ಅಧಿಕಾರ ಕೊಟ್ಟರೆ ಕಣ್ಣಿದ್ದೂ ಕುರುಡಾದ ಇಬ್ಬರೂ ಮತದಾರರ ಮಟ್ಟಿಗೆ ದೋಷಿಗಳು. ಒಂದು ಆಡಳಿತಾರೂಢ ಪಕ್ಷ ಎಷ್ಟರಮಟ್ಟಿಗೆ ವಿಫಲವಾಗಿದೆಯೋ ಅಷ್ಟೇ ವೈಫಲ್ಯದ ಹೊಣೆ ಪ್ರತಿಪಕ್ಷಕ್ಕೂ ಇದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿಲ್ಲ. ಆದ್ದರಿಂದ ನಿಜಕ್ಕೂ ಈಗ ಅತಂತ್ರ ಮತದಾರ.
ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಬೇರೆ ಆಯಾಮಗಳಿಂದ ಮಾಡಿವೆ. ಮತದಾರರ ನಾಡಿಮಿಡಿತವನ್ನು ಆಧಾರವಾಗಿಟ್ಟುಕೊಂಡು ಫಲಿತಾಂಶದ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿವೆ. ರಾಜಕೀಯ ಪಂಡಿತರು ವಿದ್ಯುನ್ಮಾನ ಮಾಧ್ಯಮಗಳ ಮುಂದೆ ಕುಳಿತು ಚರ್ಚೆ ಮಾಡಿದ್ದಾರೆ. ಅಂಕಣಕಾರರು ತಮ್ಮ ಅನುಭವದ ಮೂಸೆಯಿಂದ ಮತದಾರರ ಮನದಾಳವನ್ನು ಹೆಕ್ಕಿತೆಗೆದು ಹೇಳಿದ್ದಾರೆ. ಎಲ್ಲರ ಗಮನ ಪಕ್ಷಗಳು ಗಳಿಸುವ ಸ್ಥಾನಗಳು, ಯಾರಿಗೆ ಮುನ್ನಡೆ-ಹಿನ್ನಡೆ ಮತ್ತು ಯಾಕೆ ಎನ್ನುವ ಕುರಿತು ವಿಶ್ಲೇಷಣೆ ಕುರಿತೇ ಆಗಿದೆ. ಆದರೆ ಮಾಧ್ಯಮಗಳು ಅಷ್ಟೊಂದು ಗಂಭೀರವಾಗಿ ಅವಲೋಕಿಸದ ಪಕ್ಷೇತರರ ಸ್ಪರ್ಧೆಯನ್ನು ಗಂಭೀರವಾಗಿ ಗಮನಿಸಬೇಕಾದ ಅನಿವಾರ್ಯತೆ ಬಂದಿದೆ.
ಸಾಮಾನ್ಯವಾಗಿ ಪಕ್ಷೇತರರ ಪಾತ್ರ ಯಾರನ್ನು ಸೋಲಿಸುವುದು ಮತ್ತು ಯಾರಿಗೆ ಲಾಭ ಮಾಡಿಕೊಡುವುದು ಎನ್ನುವಷ್ಟಕ್ಕೆ ಸೀಮಿತವಾಗಿತ್ತು ಒಂದು ಕಾಲದಲ್ಲಿ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ 2008ರ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂದಿದ್ದ ಪಕ್ಷೇತರರು ನಿರ್ಣಾಯಕರಾಗುವಷ್ಟರ ಮಟ್ಟಿಗೆ ಬೆಳೆದುಬಿಟ್ಟರು. ಪಕ್ಷ ರಾಜಕಾರಣದಲ್ಲಿ ಪಕ್ಷೇತರರು ಒಂಥರಾ `ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಿದ್ದರು. ಬಿಜೆಪಿ ಸರಕಾರಕ್ಕೆ  ಜೀವತುಂಬಿದವರು ಇದೇ ಪಕ್ಷೇತರರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇಲ್ಲಿಂದ ಪಕ್ಷೇತರರಿಗೂ ರಾಜಕೀಯದಲ್ಲಿ ಮಹತ್ತರ ಪಾತ್ರನಿರ್ವಹಿಸುವುದು ಸಾಧ್ಯ ಎನ್ನುವಂತಾಗಿದೆ.
2013ರ  ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಪಕ್ಷೇತರರ ಸಂಖ್ಯೆಯನ್ನು ಗಮನಿಸಿದರೆ ರಾಜಕೀಯ ಪಂಡಿತರ ಲೆಕ್ಕಾಚಾರಗಳು ನಿಶ್ಚಿತಕ್ಕೂ ಉಲ್ಟಾಪಲ್ಟಿಯಾಗಲಿವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಾಡಿಸಿದರೆ ಒಂದು ಜಿಲ್ಲೆಯಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಖಂಡಿತಕ್ಕೂ ಗೆಲ್ಲುವಂಥ ಸಾಧ್ಯತೆಗಳು ಕಂಡುಬರುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಎರಡರಿಂದ ಮೂರು ಮಂದಿ ಪಕ್ಷೇತರರು ಆರಿಸಿಬಂದರೂ ಅಚ್ಚರಿಯಿಲ್ಲ ಎನ್ನುವಂಥ ಸ್ಥಿತಿ ಗೋಚರಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಈ ಬಾರಿ ಪಕ್ಷೇತರರ ಹವಾ ಜೋರಾಗಿಯೇ ಇದೆ.
ಯಾಕೆ ಇಂಥ ವಾತಾವರಣ ನಿಮರ್ಾಣವಾಯಿತು ಎನ್ನುವುದಕ್ಕೆ ಕಾರಣಗಳು ಸುಲಭವಾಗಿ ಅರಿವಿಗೆ ಬರುತ್ತಿವೆ. ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಮತದಾರರ ಒಲವಿದ್ದವರನ್ನು ಕಡೆಗಣಿಸಿರುವುದು, ಹಣ ಬಲದ ಮೂಲಕ ಟಿಕೆಟ್ ಗಿಟ್ಟಿಸಿಕೊಂಡಿರುವವರು, ಸ್ವಹಿತಾಸಕ್ತಿಗಾಗಿ ನಾಯಕರು ತಮ್ಮ ಪ್ರಭಾವ ಬೀರಿ ತಮಗೆ ಬೇಕಾದವರನ್ನು ಕಣಕ್ಕಿಳಿಸಿರುವುದು ಹೀಗೆ ಪಟ್ಟಿ ಮಾಡಬಹುದು. ಮತ್ತೆ ಮತ್ತೆ ಹಳೇ ಮುಖಗಳನ್ನೇ ಕಣಕ್ಕಿಳಿಸುವಂಥ ಕೆಟ್ಟ ಪ್ರಯೋಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಶರಣಾಗಿರುವುದು ಕೂಡಾ ಪಕ್ಷೇತರರ ಹಾದಿಯನ್ನು ಸುಗಮಗೊಳಿಸಿದಂತಿದೆ.
ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಮಂದಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಿಂದ ಬೀಗುತ್ತಿದೆ. ಅದಕ್ಕೆ ಮುಖ್ಯಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಅದು ಮಾಡಿದ ಸಾಧನೆ ಅಂದುಕೊಂಡಿರಬಹುದು. ವಾಸ್ತವ ಅದಲ್ಲ. ಬಿಜೆಪಿ ವಿಭಜನೆ, ಕೆಜೆಪಿ ಉದಯ ಕಾಂಗ್ರೆಸ್ ಪರ ಜನರು ವಾಲುವಂತೆ ಮಾಡಿತು. ಆದರೆ ಇದನ್ನು ಬಳಕೆ ಮಾಡುವಲ್ಲಿ ಕಾಂಗ್ರೆಸ್ ಮುಖಂಡರು ಸಂಪೂರ್ಣವಾಗಿ ವಿಫರಾದರು. ಮುಖ್ಯಮಂತ್ರಿ ಹುದ್ದೆಗೇರುವ ಕುರಿತೇ ಚಿಂತಿಸಿದರೇ ಹೊರತು  ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಳಿಸುವ ಸಾಮೂಹಿಕ ಚಿಂತನೆ ಮಾಡಲಿಲ್ಲ. ಮೂರು-ನಾಲ್ಕು ಮಂದಿ ನಾಯಕರು ತಮ್ಮ ಅಧಿಕಾರದ ಆಸೆ ಈಡೇರಿಸಿಕೊಳ್ಳಲು ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಗಮನಹರಿಸಿದರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇದರಿಂದಾಗಿಯೇ ಸರಿ ಸುಮಾರು 20 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಬಿಜೆಪಿಗೆ ನಾಯಕತ್ವದ ಕೊರತೆ ಎದುರಾಗಿದೆ. ಬಿ.ಎಸ್.ಯಡಿಯೂರಪ್ಪ ಅವರಷ್ಟು ಗಟ್ಟಿಯಾಗಿ ನಾಯಕತ್ವ ಕೊಡುವಂಥ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಹೈಕಮಾಂಡ್ ಅವಕಾಶವನ್ನೇ ಕೊಟ್ಟಿರಲಿಲ್ಲ. ನಾಯಕರೊಳಗಿನ ಗುಂಪುಗಾರಿಕೆಯಿಂದಾಗಿ ನಾಯಕತ್ವ ಮೂರು ನಾಲ್ಕು ಗುಂಪುಗಳಾಗಿ ಹಂಚಿಹೋಯಿತು. ಇದರ ಪೂರ್ಣ ಲಾಭ ಪಡೆದುಕೊಂಡಿರುವುದು ಕೆಜೆಪಿ. ಬಿಜೆಪಿ ಸೋತರೆ ಅದಕ್ಕೆ ಸಿಂಹಪಾಲು ಕೆಜೆಪಿಯ ಯಡಿಯೂರಪ್ಪ ಅವರ ವರ್ಚಸ್ಸೇ ಕಾರಣ ಹೊರತು ಅದು ಕಾಂಗ್ರೆಸ್ ಸಾಧನೆಯಲ್ಲ, ಕಾರಣವೂ ಅಲ್ಲ.
ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದರೆ ಕೆಜೆಪಿಗೇನು ಲಾಭ ಎನ್ನುವ ಪ್ರಶ್ನೆ ಎದುರಾದರೆ ಉತ್ತರ ಸುಲಭ. ಯಡಿಯೂರಪ್ಪ ಇಲ್ಲದ ಬಿಜೆಪಿಯ ಬಲ ಎಷ್ಟೆಂದು ಹೈಕಮಾಂಡ್ ಗೆ ತೋರಿಸುವುದೇ ಸಿಂಗಲ್ ಪಾಯಿಂಟ್ ಅಜೆಂಡಾ ಯಡಿಯೂರಪ್ಪ ಅವರಿಗೆ, ಅದು ಸಾಕಾರಗೊಳಿಸಿದ ಸಂತೃಪ್ತಿ ಸಿಗಬಹುದು.
ಜೆಡಿಎಸ್ ವಿಚಾರಕ್ಕೆ ಬಂದರೆ ಅದು ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರುವಂಥ ಸ್ಥಿತಿ ಕರ್ನಾಟಕದಲ್ಲಿ ಖಂಡಿತಕ್ಕೂ ಇಲ್ಲ. ರಾಮಕೃಷ್ಣ ಹೆಗಡೆ ನಿರ್ಗಮಿಸಿದ ಕ್ಷಣದಿಂದಲೇ ರಾಜ್ಯದಲ್ಲಿ ಜೆಡಿಎಸ್ ಬಲ ಕುಗ್ಗಿತು. ಈಗಲೂ ಅದಕ್ಕಿರುವ ಶಕ್ತಿಯೆಂದರೆ ಯಾವುದೇ ಸರಕಾರ ಬಂದರೂ ನಿರ್ಣಾಯಕ ಪಾತ್ರ ನಿರ್ವಹಿಸುವಂಥ ಅನಿವಾರ್ಯವಾದ ಶಕ್ತಿ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಷ್ಟರಮಟ್ಟಿಗೆ ಅದು ಸಾಮರ್ಥ್ಯ ಹೊಂದಿದೆ.
ಹಾಗಾದರೆ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಅಚ್ಚರಿಪಡಬೇಕಾಗಿಲ್ಲ. ಈಗಿನ ಲೆಕ್ಕಾಚಾರಗಳನ್ನು ಗಮನಿಸಿದರೆ ಕನಿಷ್ಠ 20 ರಿಂದ 25 ಸ್ಥಾನಗಳನ್ನು ಗೆಲ್ಲುವ ಪಕ್ಷೇತರರು ರಾಜ್ಯದಲ್ಲಿ ಸರಕಾರ ರಚನೆಗೆ ನಿರ್ಣಾಯಕರಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾದಾಗ ಪಕ್ಷೇತರರ ಶಕ್ತಿಕೇಂದ್ರ ಕರ್ನಾಟಕದಲ್ಲಿ  ಉಗಮವಾಗಲಿದೆ. ಇದು ರಾಜಕೀಯದ ಮಹತ್ತರ ಬೆಳವಣಿಗೆಯಾಗಲಿದೆ, ಕರ್ನಾಟಕವೇ ಇಂಥ ಶಕ್ತಿ ಕೇಂದ್ರದ ಮೂಲಬೇರಾಗಲಿದೆ.

ಕರ್ನಾಟಕದ ಮುಂದಿನ ದಿನಗಳಿಗೆ ಮುನ್ನುಡಿ…

ಸ್ನೇಹಿತರೇ,

ಇನ್ನೊಂದೆರಡು ವಾರ, ಮತ್ತೆ ವರ್ತಮಾನ.ಕಾಮ್ ನಿಧಾನವಾಗಿ ಪ್ರತಿದಿನ ನಿಯತಕಾಲಿಕವಾಗುತ್ತದೆ ಎನ್ನುವ ವಿಶ್ವಾಸವಿದೆ.

ನಿಮಗೆ ಗೊತ್ತಿರುವಂತೆ, ನಾನು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಲೋಕ್‌ಸತ್ತಾ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಇಲ್ಲಿ ಕೊನೆಯ ಗಳಿಗೆಯವರೆಗೂ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ. ನಿಲ್ಲಲು ಯಾರೂ ಇಲ್ಲದಂತಹ ಪರಿಸ್ಥಿತಿ ಅಲ್ಲಿತ್ತು. ಜೆಡಿಎಸ್ ಇಲ್ಲಿ ಎಂದೂ ಲೆಕ್ಕಕ್ಕಿರಲಿಲ್ಲ, ಮತ್ತು ಅಂತಹುದರಲ್ಲಿ ಈಗ ಬಂಡಾಯ ಅಭ್ಯರ್ಥಿ ಬೇರೆ ಕಣದಲ್ಲಿದ್ದಾರೆ. ಕಾಂಗ್ರೆಸ್ ನಾವೇ ಗೆಲ್ಲುತ್ತೇವೆ ಎನ್ನುವ ಅತೀವ ವಿಶ್ವಾಸದಲ್ಲಿದೆ, ಆದರೆ, ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಸಾಧ್ಯವಾದರೆ ನಾನು ಆಯ್ಕೆಯಾಗಲಿ ಎನ್ನುವಷ್ಟು ನನ್ನ ಬಗ್ಗೆ ಮತ್ತು ನಮ್ಮ ಪಕ್ಷದ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿದೆ.

ಸುಮಾರು ಎರಡೂವರೆ ತಿಂಗಳಿನಿಂದ ನಾವು ಪ್ರಚಾರ ಮಾಡುತ್ತಿದ್ದೇವೆ, ಇಷ್ಟೂ ದಿನಗಳ ನಮ್ಮ ಪ್ರಚಾರಕ್ಕೆ ಇಲ್ಲಿಯವರೆಗೆ ಸುಮಾರ 5+ ಲಕ್ಷ ರೂಪಾಯಿ ಖರ್ಚಾಗಿದೆ. ಅದು ಕೇವಲ ಕರಪತ್ರಗಳ ಮುದ್ರಣಕ್ಕೆ ಮತ್ತು ಹಂಚಲು ನಮ್ಮ ಕಾರ್ಯಕರ್ತರಿಗೆ ಕೊಡಲಾಗಿರುವ ಸಂಬಳದ ಖರ್ಚು, ಅಷ್ಟೇ. ಸುಮಾರು ನಾಲ್ಕು ಲಕ್ಷ ಕರಪತ್ರಗಳನ್ನು ಹಂಚಲಾಗಿದೆ. ನಾನು ಈ ಹಿಂದೆ ಬರೆದಿದ್ದೆ: ಒಳ್ಳೆಯ ಚುನಾವಣೆ ನಡೆಸಲು ಹದಿನಾರು ಲಕ್ಷ ಸಾಕು ಎಂದು. ನಾನು ಹತ್ತು ಲಕ್ಷದ ಮಿತಿಯನ್ನೂ ದಾಟುವಂತೆ ಕಾಣುತ್ತಿಲ್ಲ. ಈ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳಿಗೆ ಅಭ್ಯರ್ಥಿಗಳು Ravi-SripadBhat-Sriharshaಸಲ್ಲಿಸಿರುವ ಖರ್ಚಿನ ಲೆಕ್ಕದ ಪ್ರಕಾರ ನಾವು ಕಾಂಗ್ರೆಸ್ ಮತ್ತು ಬಿಜೆಪಿಯವರಿಗಿಂತ ಹೆಚ್ಚು ಖರ್ಚು ಮಾಡಿದ್ದೇವೆ, ನಾಮಪತ್ರ ಸಲ್ಲಿಸಿದ ದಿನದಿಂದ (ಏಪ್ರಿಲ್ 15) ತೋರಿಸಬೇಕಾದ ಲೆಕ್ಕದ ಪ್ರಕಾರ ನಮ್ಮ ಖರ್ಚು ಮೂರು ಲಕ್ಷ ದಾಟಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿಯವರದು ಒಂದು ಲಕ್ಷವನ್ನೂ ದಾಟಿಲ್ಲ. ಇವರ ಲೆಕ್ಕಗಳಂತಹ ಸುಳ್ಳಿನ, ಮೋಸದ, ಅಪ್ರಾಮಾಣಿಕತೆಯ ನಡವಳಿಕೆಗಳು ನಮ್ಮಲ್ಲಿ ಆಕ್ರೋಶ ಹುಟ್ಟಿಸಬೇಕು.

ಅಂದ ಹಾಗೆ, ಇಲ್ಲಿಯವರೆಗೆ ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ನಮ್ಮ ಚುನಾವಣಾ ಪ್ರಚಾರಕ್ಕೆಂದು ರೂ 4,83,902 ಹಣ ಸಂಗ್ರಹವಾಗಿದೆ. ನನ್ನ ಕಡೆಯಿಂದ 2 ಲಕ್ಷ ಹಣ ಹಾಕಿಕೊಂಡಿದ್ದೇನೆ. ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಜನ ಈ ಪ್ರಯತ್ನಕ್ಕೆ ತಮ್ಮ ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.

ಉಳಿದಿರುವ ಈ ವಾರದ ಪ್ರಚಾರಕ್ಕೆ ಕನಿಷ್ಟ 4-5 ಲಕ್ಷ ರೂಪಾಯಿಯಾದರೂ ಬೇಕು. ಆಗ ನಾವು ಇನ್ನೂ ಪ್ರಭಾವಶಾಲಿ ಪ್ರಚಾರ ಕೈಗೊಳ್ಳಬಹುದು. ಬೆಂಬಲಿಸಬೇಕು ಎಂದು ನಿಮಗನ್ನಿಸಿದಲ್ಲಿ ದಯವಿಟ್ಟು ಮನಸ್ಸು ಮಾಡಿ ಮತ್ತು ಬೆಂಬಲಿಸಿ. ನೀವಲ್ಲದಿದ್ದರೆ ಇನ್ಯಾರು? ಈಗಲ್ಲದಿದ್ದರೆ ಇನ್ಯಾವಾಗ?

ದೇಣಿಗೆ ಕೊಟ್ಟವರ ಮತ್ತು ಹೇಗೆ ಕೊಡಬೇಕು ಎನ್ನುವ ವಿವರಗಳು ಈ ಪುಟದಲ್ಲಿವೆ: http://wp.me/P3aJQl-h

ನಮ್ಮಲ್ಲಿ ಅನೇಕ ಜನ ಸಭೆಗಳಲ್ಲಿ ಮತ್ತು ಖಾಸಗಿ ಚರ್ಚೆಗಳಲ್ಲಿ ಆದರ್ಶ, ನ್ಯಾಯ, ನೀತಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಕ್ರಿಯೆಯ ಸಂದರ್ಭ ಬಂದಾಗ ಆಷಾಢಭೂತಿಗಳಾಗುತ್ತಾರೆ. ನನಗೆ ಗೊತ್ತಿರುವ ಜನರಲ್ಲಿ ಹತ್ತಕ್ಕು ಒಬ್ಬರು ಧನಸಹಾಯ ಮಾಡಿದ್ದರೂ ನಮ್ಮ ಹಣ ಸಂಗ್ರಹ ಹತ್ತು ಲಕ್ಷ ಮೀರಬೇಕಿತ್ತು. ಪ್ರಚಾರಕ್ಕೆ ಬರುತ್ತೇವೆ ಎಂದವರೆಲ್ಲ ಬಂದಿದ್ದರೆ ಇಷ್ಟೊತ್ತಿಗೆ ಈ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿತ್ತು. ವಿಚಾರ ಗೊತ್ತಿರುವವರಿಗೆ ನಾನು ಪದೇಪದೇ ನೆನಪಿಸುವುದಿಲ್ಲ ಮತ್ತು ಕೇಳುವುದಿಲ್ಲ. ಮಾಡಬೇಕು ಎನ್ನುವುದು ಅವರ ಮನದಾಳದಿಂದ ಬರಬೇಕು, ಬಲವಂತದಿಂದಾಗಲಿ, ಮುಲಾಜಿಗಾಗಲಿ ಅಲ್ಲ.

ನನಗೆ ನಾನು ಏನು ಮಾಡುತ್ತಿದ್ದೇನೆ ಮತ್ತು ಏಕೆ ಮಾಡುತ್ತಿದ್ದೇನೆ ಎನ್ನುವುದು ಸ್ಪಷ್ಟವಾಗಿರುವುದರಿಂದ ಬಹಳ ಆತ್ಮತೃಪ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಈ ಒಂದು ತಿಂಗಳಿನಷ್ಟು ದೈಹಿಕ ಶ್ರಮ ಹಿಂದೆಂದೂ ಹಾಕಿರಲಿಲ್ಲ. ಆದರೆ ಹುಮ್ಮಸ್ಸು ಮತ್ತು ಸಂತೋಷ ಇಮ್ಮಡಿಗೊಳ್ಳುತ್ತಲೇ ಇದೆ. ಕರ್ನಾಟಕದ ಮುಂದಿನ ದಿನಗಳ ಚುನಾವಣಾ ಪದ್ದತಿ ಹೇಗಿರಬೇಕು ಎನ್ನುವುದಕ್ಕೆ ಈ ಚುನಾವಣೆ ಮುನ್ನುಡಿ ಬರೆಯುತ್ತದೆ ಎನ್ನುವ ವಿಶ್ವಾಸವಿದೆ.

ಆದರೆ, ಈ ಚುನಾವಣೆ ಮತ್ತದೇ ಭ್ರಷ್ಟ, ಅಸಮರ್ಥ, ಅನೀತಿಯ ರಾಜಕಾರಣಿಗಳನ್ನೇ ವಿಧಾನಸಭೆಗೆ ಕಳುಹಿಸುತ್ತದೆ ಮತ್ತು ಕರ್ನಾಟಕದ ಮುಂದಿನ ನಾಲ್ಕೈದು ವರ್ಷಗಳು ಹಿಂದಿನ ನಾಲ್ಕೈದು ವರ್ಷಗಳಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಅದಕ್ಕೆ ನಮ್ಮ ಪ್ರಜ್ಞಾವಂತರ (?) ನಿಷ್ಕ್ರಿಯತೆ, ಸಣ್ಣತನ, ನಿರಾಶಾವಾದಗಳೇ ಕಾರಣವಾಗಬಹುದೇ ಹೊರತು ಬೇರೆ ಅಲ್ಲ. ಒಳ್ಳೆಯ, ಸಮರ್ಥ, ಪ್ರಜ್ಞಾವಂತ ಜನ ರಾಜಕೀಯಕ್ಕೆ ಬರುವುದಕ್ಕೆ ಮತ್ತು ಬೆವರು ಹರಿಸುವುದಕ್ಕೆ (ತಮಗಾಗಿ ಅನ್ನುವುದಕ್ಕಿಂತ ತಾವು ನಂಬಿದ ಸಾರ್ವಕಾಲಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ) ಇದು ಸೂಕ್ತ ಸಮಯವೂ ಆಗುತ್ತದೆ.

ಅಂದ ಹಾಗೆ, ನಮ್ಮ ಪ್ರಚಾರದ ಫೋಟೊಗಳು ಮತ್ತಿತರ ವಿವರಗಳು ನನ್ನ ವೆಬ್‍‌ಸೈಟ್‌ನಲ್ಲಿವೆ: www.ravikrishnareddy.com

ನಮಸ್ಕಾರ,
ರವಿ…

ನಿಮ್ಮ ಒಂದು ಮತವೂ ನಿರ್ಣಾಯಕ.. ಯೋಚಿಸಿ.. ಚಲಾಯಿಸಿ.

 12ss1-ಡಾ.ಎಸ್.ಬಿ.ಜೋಗುರ

ಸ್ವಾತಂತ್ರ್ಯೋತ್ತರ ಭಾರತದ  ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿ ಉಂಟಾದ ಅನೇಕ ಬಗೆಯ ರಾಜಕೀಯ ಸ್ಥಿತ್ಯಂತರಗಳು ನೈತಿಕವಾಗಿ ಹದಗೆಡುತ್ತಾ ಬಂದ ರಾಜಕೀಯ ಸನ್ನಿವೇಶವನ್ನು ಅನಾವರಣ ಮಾಡುವ ಜೊತೆಜೊತೆಗೆ,  ಮೌಲ್ಯಾಧಾರಿತ ರಾಜಕೀಯ ಎನ್ನುವುದು ಹೇಗೆ ಅಪಮೌಲೀಕರಣದ ಸಹವಾಸದಲ್ಲಿಯೇ ಸುಖ ಅನುಭವಿಸುವ ಖಯಾಲಿಯಾಗಿ ಪರಿಣಮಿಸಿತು ಎನ್ನುವ ಬಗ್ಗೆ ಒಂದು ಸ್ಥೂಲವಾದ ನೋಟವೊಂದನ್ನು ನಮಗೆ ಪರಿಚಯಿಸುತ್ತದೆ. 80 ರ ದಶಕದ ಮುಂಚಿನ ಅರ್ಧದಷ್ಟಾದರೂ ರಾಜಕೀಯ ಪ್ರಭೃತಿಗಳು ತಕ್ಕ ಮಟ್ಟಿಗಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಸತ್ತೆಯನ್ನು ನಿರ್ವಹಿಸುತ್ತಿದ್ದರು. 80 ರ ದಶಕದ ನಂತರ  ರಾಜಕಾರಣವೆನ್ನುವದು ಮೌಲ್ಯ ಮತ್ತು ನೈತಿಕತೆಯ ಸಹವಾಸದಿಂದ ಗಾವುದ ಗಾವುದ ದೂರ ಎನ್ನುವ ಹಾಗೆ ಮಾರ್ಪಟ್ಟಿದ್ದು ದೊಡ್ಡ ವಿಷಾದ.  ಆನಂತರದ ದಿನಗಳಲ್ಲಿ ನೈತಿಕ ಅಧಃಪತನದ ಮಾರ್ಗದಲ್ಲಿ ನಡೆದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಣಕಿಸುವ ಹಾಗೆ ರಾಜಕಾರಣ ಮಾಡುವವರು ಮಾತ್ರ ಇಲ್ಲಿ ಸಲ್ಲುತ್ತಾರೆ ಎನ್ನುವ ಹಾಗೆ ರಾಜಕೀಯ ಪರಿಸರ ಕಲುಷಿತಗೊಂಡದ್ದು ಈ ದೇಶದ ಬಹುದೊಡ್ಡ ದುರಂತ. ಸ್ವಾತಂತ್ರ್ಯ ಹೋರಾಟದ ಯಾವ ಗಂಧ-ಗಾಳಿಯ ಸೋಂಕಿಲ್ಲದ ವರ್ತಮಾನದ ರಾಜಕಾರಣಿಗಳು ಬ್ರಹ್ಮಾಂಡ ಭ್ರಷ್ಟ ವ್ಯವಸ್ಥೆಯನ್ನು ರೂಪಿಸುವ ಮೂಲಕ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೇ ತಪ್ಪಾಯಿತಲ್ಲ..! ಎನ್ನುವ ಹತಾಶೆಯ ಭಾವನೆ ಮೂಡುವಂತೆ ಮಾಡುವಲ್ಲಿ ಅತ್ಯಂತ ನಿರ್ಣಾಯಕರಾದರು. ರಾಜಕಾರಣ ಎನ್ನುವುದು ಒಂದು ಮೌಲಿಕವಾದ ಕೆಲಸ ಎನ್ನುವ ಭಾವನೆ, ಅಭಿಪ್ರಾಯಗಳನ್ನು ದಾಟಿ ನಾವು ಹಿಂದೆ ಹೊರಳಿ ನೋಡಲಾಗದ ದೂರವನ್ನು  ಕ್ರಮಿಸಿದ್ದೇವೆ. ಗಂಭೀರವಾದ ತಾತ್ವಿಕವಾದ, ಬದ್ಧತೆಯನ್ನಿಟ್ಟುಕೊಂಡು ಮಾಡಬಹುದಾದ ರಾಜಕಾರಣ, ರಾಜಕಾರಣಿಗಳನ್ನು ನೋಡುವದೇ ದುಸ್ತರ ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ. ಮತದಾರ ಇಂದು ಸರಿ ತಪ್ಪುಗಳ, ಯುಕ್ತಾಯುಕ್ತತೆಯ ತೀರ್ಮಾನಗಳ ಗೊಂದಲದಲ್ಲಿದ್ದಾನೆ. ಒಳ್ಳೆಯವರಿಗೆ ಇದು ಕಾಲವಲ್ಲ ಎಂದು ಹೇಳುತ್ತಲೇ ಮತದಾನ ಮಾಡುವ ಸಂದಿಗ್ದದ ನಡುವೆ ಎಂಥವನನ್ನು ನಮ್ಮ ಜನನಾಯಕನನ್ನಾಗಿ ಆಯ್ಕೆ ಮಾಡಬೇಕು ಎನ್ನುವುದೇ ಬಹುದೊಡ್ಡ ತೊಡಕಾಗಿದೆ.
ತೀರಾ ಸಾತ್ವಿಕನಾದವನು, ಶುದ್ಧ ಹಸ್ತನು ರಾಜಕೀಯ ಅಖಾಡದಲ್ಲಿ ಇರುವದನ್ನು ಸದ್ಯದ ರಾಜಕೀಯ ಪರಿಸರ ಸಹಿಸುವದಿಲ್ಲ ಎನ್ನುವ ವಾಸ್ತವವನ್ನು ನಾವು ಮರೆಯುವದಾದರೂ ಹೇಗೆ..? ಒಂದು ಅವಧಿಗೆ ಶಾಸಕನಾದರೂ ಸಾಕು ಕೋಟಿಗಟ್ಟಲೆ ಹಣ ಕಮಾಯಿಸುವ ಇವರ ದುಡಿಮೆಯಾದರೂ ಎಂಥದ್ದು..? ಎನ್ನುವ ಪ್ರಶ್ನೆ ನಮ್ಮ ಜನಸಾಮಾನ್ಯನ ಒತ್ತಡದ ಬದುಕಿನ ನಡುವೆ ಉದ್ಭವವಾಗಲೇ ಇಲ್ಲ. ಇದೇ ಭ್ರಷ್ಟ ರಾಜಕಾರಣಿಗಳಿಗೆ ವರವಾಗುತ್ತಿದೆ. ಇಂದು ಬಹುತೇಕ ರಾಜಕೀಯ ಪಕ್ಷಗಳು, ರಾಜಕಾರಣಿಗಳು ನಮ್ಮ ಜನಸಮುದಾಯವನ್ನು ದುಡಿಮೆಯಿಂದ ವಂಚಿಸುವ ಜೊತೆಗೆ ಅವರನ್ನು ಆಲಸಿಗಳನ್ನಾಗಿಸುವ, ಪರಾವಲಂಬಿ ಪ್ರಜೆಗಳನ್ನಾಗಿಸುವ ಸಕಲ ಷಂಡ್ಯಂತ್ರಗಳನ್ನೂ ಹೊಸೆಯುತ್ತಿವೆ. 1 ರೂ ಗೆ 1 ಕಿಲೊ ಅಕ್ಕಿ ಕೊಡುವ ಭರವಸೆಯನ್ನು ನೋಡಿದರೆ ನನ್ನ ಮಾತಿನ ತಾತ್ಪರ್ಯ ನಿಮಗಾಗುತ್ತದೆ. ಎಲ್ಲೋ ಒಂದು ಕಡೆ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನು ದಿವಾಳಿ ಎಬ್ಬಿಸುವ ದಿವಾಳಿಕೋರತನದ ನೀತಿ ಇಂದಿನ ರಾಜಕಾರಣಿಗಳ ತಲೆ ಹೊಕ್ಕಂತಿದೆ. ಇಂದು ನಾವು ಯಾರಿಗೆ ಮತ ನೀಡಬೇಕು ಎನ್ನುವುದು ಅತ್ಯಂತ ಜಟಿಲವಾದ ಪ್ರಶ್ನೆ. ಎರಡು ದಶಕಗಳ ಹಿಂದೆ ನಮ್ಮ ಎದುರಲ್ಲಿ ಕೊನೆಯ ಪಕ್ಷ ಆಯ್ಕೆಗಳಾದರೂ ಇದ್ದವು. ಈಗ ಹಾಗಿಲ್ಲ. ನೀವು ಎಷ್ಟೇ ಸಾರಾಸಾರ ವಿವೇಚಿಸಿ ಮತದಾನ ಮಾಡಿದರೂ ನಿಮ್ಮ ಜನನಾಯಕ ಬ್ರಹ್ಮಾಂಡ ಭ್ರಷ್ಟ ಎನ್ನುವುದು ಆಯ್ಕೆಯಾದ ಕೆಲವೇ ತಿಂಗಳಲ್ಲಿ ಬಟಾಬಯಲಾಗಿ ಪಶ್ಚಾತ್ತಾಪ ಪಡುವ ಸ್ಥಿತಿ ಎದುರಾಗುತ್ತದೆ.
ಪ್ಲೇಟೊ ರಂಥಾ ದಾರ್ಶನಿಕರು ಆದರ್ಶ ರಾಜ್ಯದ ನಿಮರ್ಾಣದ ಬಗ್ಗೆ ಮಾತನಾಡುವಾಗ ರಾಜಕೀಯ ನಾಯಕರಾಗುವವರು ತತ್ವಜ್ಞಾನಿಗಳಾಗಿರಬೇಕು ಇಲ್ಲವೇ ತತ್ವಜ್ಞಾನಿಗಳಾದವರು ರಾಜರಾಗಬೇಕು ಎಂದಿರುವದಿತ್ತು. ಇಂಥಾ ಯಾವುದೇ ಮಾನದಂಡಗಳು ನಮ್ಮಲ್ಲಿಲ್ಲ. ಅವನು ಶತಪಟಿಂಗ, ಶತದಡ್ಡ ಇಂಥಾ ನೂರಾರು ಶತ ಅನಿಷ್ಟಗಳ ನಡುವೆಯೂ ಆತ ಆಯ್ಕೆಯಾಗುವ ಸಾಧ್ಯತೆಗಳಿವೆ. ನಮ್ಮಲ್ಲಿ ರಾಜಕಾರಣಿಯಾಗಲು ಕನಿಷ್ಟ ವಿದ್ಯಾರ್ಹತೆ ಇಲ್ಲ, ನಿವೃತ್ತಿಯ ವಯಸ್ಸಿಲ್ಲ ಅವನಿಗೆ ನಡೆದಾಡಲಾಗದಿದ್ದರೂ ಅವನು ನಮ್ಮ ಜನನಾಯಕ. ಕೋಟಿ ಕೋಟಿ ಕಮಾಯಿಸಿದರೂ ಯಾರೂ ಕಿಮಿಕ್ ಅನ್ನುವಂಗಿಲ್ಲ. ಇಂಥಾ ಪರಿಸರದ ನಡುವೆ ರಾಜಕಾರಣಿಯಾಗುವುದು ಯಾರಿಗೆ ಬೇಡ..? ಜಾಗತೀಕರಣದ ಸಂದರ್ಭದಲ್ಲಿಯ ಮುಕ್ತ ಮಾರುಕಟ್ತೆಯ ಸೂತ್ರಕ್ಕೆ ಅಳವಡಿಕೆಯಾದಂತೆ ಇಂದಿನ ರಾಜಕಾರಣದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಸುವಂತಾಗಿದೆ. ಎಲ್ಲ ವಲಯಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಆತನ ಅನುಭವವನ್ನು ಪರಿಶೀಲಿಸಲಾಗುತ್ತದೆ. ಇಲ್ಲಿ ಅಂಥಾ ಯಾವ ಅನುಭವವೂ ಬೇಕಿಲ್ಲ. ಆಯ್ಕೆಯಾದ ನಂತರ ಆತನ ಅನುಭವ ಸಂಪಾದನೆ ಆರಂಭವಾಗುತ್ತದೆ. ತಂದೆ ಇಲ್ಲವೇ ತಾಯಿ ಈಗಾಗಲೇ ರಾಜಕಾರಣಿಯಾಗಿ ಅಪಾರ ಪ್ರಮಾಣದ ಆಸ್ತಿಯನ್ನು ಸಂಪಾದಿಸಿರುವದೇ ಅವರ ಮಕ್ಕಳ ಪಾಲಿಗೆ ರಾಜಕೀಯ ಪ್ರವೇಶ ಪಡೆಯಲಿರುವ ವಿಶೇಷ ಅರ್ಹತೆ. ಜಾತಿ, ಧರ್ಮ, ಹಣ, ಹೆಂಡ ಮುಂತಾದವುಗಳನ್ನೇ ಆಧರಿಸಿ ರಾಜಕೀಯ ಅಖಾಡಕ್ಕೆ ಧುಮುಕುವವರಿಂದ ಮತದಾರ ನಿರೀಕ್ಷಿಸುವದಾದರೂ ಏನನ್ನು..?
ಇಂದು ರಾಜಕೀಯ ವಿದ್ಯಮಾನಗಳ ಬಗ್ಗೆ ತೀರಾ ಗಹನವಾದ ತಿಳುವಳಿಕೆಯಿದ್ದು ರಾಜಕೀಯ ಪ್ರವೇಶ ಮಾಡುವವರು ಅಪರೂಪವಾಗುತ್ತಿದ್ದಾರೆ. ರಾಜಕೀಯ ಸತ್ತೆಯ ಭಾಗವಾಗಿ ಗೂಟದ ಕಾರಲ್ಲಿ ಮೆರೆಯುವ ಖಯಾಲಿ, ಮಕ್ಕಳು ಮೊಮ್ಮಕ್ಕಳು ಅನಾಮತ್ತಾಗಿ ದುಡಿಯದೇ ಬದುಕುವ ಹಾಗೆ ಹಣ ಕೂಡಿ ಹಾಕುವ ಹಪಾಪಿತನ, ಖುರ್ಚಿಗಾಗಿ ಕಿತ್ತಾಟ, ಹುಚ್ಚಾಟ ಮತ್ತೆಲ್ಲಾ ಆಟಗಳನ್ನು ಆಡುವದೇ ರಾಜಕಾರಣ ಎಂದು ಬಗೆದಿರುವ ತೀರಾ ಹಗುರಾಗಿರುವ ರಾಜಕೀಯ ನಾಯಕರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಅನೇಕ ಬಗೇಯ ಕ್ರಿಮಿನಲ್ ಆರೋಪಗಳನ್ನು ಹೊತ್ತವರು ಕೂಡಾ  ತಮಗೊಂದು ಅವಕಾಶ ಕೊಡಿ ಎಂದು ಮತ ಕೇಳುವುದು ಬಹುಷ: ಈ ದೇಶದಲ್ಲಿ ಮಾತ್ರ ಸಾಧ್ಯ. ಇಂಥವರೇ ಹೆಚ್ಚಾಗಿರುವ ಸದ್ಯದ ರಾಜಕೀಯ ಸಂದರ್ಭದಲ್ಲಿ ಜನ ಸಾಮಾನ್ಯನಿಗೆ ಎಂಥವನಿಗೆ ಮತ ಚಲಾಯಿಸಬೇಕು ಎನ್ನುವುದು ಬಹುದೊಡ್ಡ ತೊಡಕಾಗಿದೆ. ಯಾವದೋ ಒಬ್ಬ ರಾಜಕಾರಣಿ ಕೊಡುವ ಒಂದಷ್ಟು ಚಿಲ್ಲರೆ ಹಣ, ಒಂದು ದರಿದ್ರ ಮದ್ಯದ ಬಾಟಲ್ ಗಳಿಗೆ ನಮ್ಮ ಮತವನ್ನು, ನಮ್ಮತನವನ್ನು ಒತ್ತೆಯಿಟ್ಟು ರಾಜ್ಯವನ್ನು ಲೂಟಿಕೋರರ ಕೈಗೆ ಕೊಡುವುದು ಬೇಡ. ಸಾರಾಸಾರ ವಿವೇಚಿಸಿ ಮತ ಚಲಾಯಿಸಿ. ನೀವು ತೆಗೆದುಕೊಳ್ಳುವ ತೀರ್ಮಾನದಲ್ಲಿಯೇ ಈ ರಾಜ್ಯದ ನಾಯಕತ್ವ ಅಡಗಿದೆ. ಭ್ರಷ್ಟರಿಗೆ ಮತ ಚಲಾಯಿಸದಿರಿ. ನಿಮ್ಮ ಒಂದು ಮತವೂ ನಿರ್ಣಾಯಕವಾಗಲಿದೆ. ಸರಿಯಾದ ಅಭ್ಯರ್ಥಿಯನ್ನು ಗುರುತಿಸಿ ಮತ ಚಲಾಯಿಸಿ.