ಕೊನೆಗೂ ನವೀನ್ ಸೂರಿಂಜೆ ಜಾಮೀನಿನ ಮೇಲೆ ಬಿಡುಗಡೆ

– ರವಿ ಕೃಷ್ಣಾರೆಡ್ಡಿ

ರಾಜ್ಯ ಸರ್ಕಾರದ ಸಚಿವ ಸಂಪುಟ ಪತ್ರಕರ್ತ ನವೀನ್ ಸೂರಿಂಜೆಯ ಮೇಲಿನ ಆರೋಪಗಳನ್ನು ಕೈಬಿಡಲು ನಿರ್ಧರಿಸಿ ಒಂದೂವರೆ Photo Captionತಿಂಗಳಾದರೂ ನಮ್ಮ ರಾಜ್ಯದ ಘನತೆವೆತ್ತ ಅಂಜುಗುಳಿ ಮುಖ್ಯಮಂತ್ರಿ ಆ ನಿರ್ಧಾರದ ಕಡತಕ್ಕೆ ಸಹಿ ಮಾಡದ ಕಾರಣ ನವೀನ್ ಸೂರಿಂಜೆ ಆ ಪ್ರಕ್ರಿಯೆ ಅಡಿಯಲ್ಲಿ ಬಿಡುಗಡೆಯಾಗಲಿಲ್ಲ. ಕೊನೆಗೂ ಬದಲಾದ ಪರಿಸ್ಥಿತಿಯ ಅಡಿಯಲ್ಲಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲು ಹತ್ತಿ, ಕಳೆದ ಸೋಮವಾರವಷ್ಟೇ (18-03-13) ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್‌ನ ಆದೇಶ ಪತ್ರ ಕೈಗೆ ಸಿಗಲು ಸುಮಾರು ನಾಲ್ಕು ದಿನ ತೆಗೆದುಕೊಂಡ ಕಾರಣ ನೆನ್ನೆ ಶನಿವಾರವಷ್ಟೇ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದು  ಸೂರಿಂಜೆ ಜೈಲಿನಿಂದ ಹೊರಬಂದಿದ್ದಾರೆ, ನಗುಮುಖದಿಂದ. ಮಿಕ್ಕೆಲ್ಲ ವಿಷಯಗಳು ಏನೇ ಇರಲಿ, ಕನಿಷ್ಟ ಒಂದು ನಿಟ್ಟುಸಿರಿನ ಸಮೇತದ ನಿರಾಳದ ನಗು ಬೀರುವ ಸಮಯ ಇದು:

ಇಂದು ಕೆಲವು ಪತ್ರಿಕೆಗಳಲ್ಲಿ ಬಂದ ಸೂರಿಂಜೆ ಬಿಡುಗಡೆಯ ವರದಿಗಳು:

ವಿಜಯ ಕರ್ನಾಟಕ :
naveen-released-vijaykarnataka-24-03-13

ಉದಯವಾಣಿ :
naveen-released-udayavani-24-03-13

ಸುಡುಹಗಲ ಸೊಲ್ಲು : ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ


– ಸರ್ಜಾಶಂಕರ ಹರಳಿಮಠ


 

[ದಿ.23 ಮತ್ತು 24 ರಂದು ಧಾರವಾಡದಲ್ಲಿ ಕರ್ನಾಟಕ ಜನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಆತ್ಮವಿಮರ್ಶೆಯ ಮಾತುಗಳು.]

ಈ ಹೊತ್ತು, ನೆರಳೇ ಇಲ್ಲದ ಸುಡು ಹಗಲಿನಲ್ಲಿ ನಿಂತಿರುವಂತೆ ನನಗೆ ಭಾಸವಾಗುತ್ತಿದೆ. ನೀರಿಲ್ಲದೆ ಒಣಗಿರುವ ಬಾಯಲ್ಲಿ ನಾನಾಡುವ ಈ ಕೆಳಗಿನ ಮಾತುಗಳು ನಿಮಗೆ ಕರ್ಕಶವೆನಿಸಬಹುದು, ಹೇಳದೆ ನನಗೆ ಬೇರೆ ದಾರಿಯಿಲ್ಲ.

ಎಲ್ಲಾ ಕಾಲವೂ ಬಿಕ್ಕಟ್ಟಿನದೇ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ಮಾತು ಸ್ವಲ್ಪ ಸಮಸ್ಯಾತ್ಮಕವಾದದ್ದು ಎಂದು ಅನ್ನಿಸುತ್ತಿದೆ. ಕಾಲಕ್ಕೆ ಸ್ಪಂದಿಸುವ ರೀತಿಯಲ್ಲಿ ಕಾಲ ಕೆಲವರಿಗೆ ಬಿಕ್ಕಟ್ಟಿನದಾಗಿಯೂ ಹಲವರಿಗೆ ಬಿಕ್ಕಟ್ಟಿಲ್ಲದ ನೆಮ್ಮದಿಯದ್ದಾಗಿಯೂ ಕಾಣಬಹುದು. ಒಂದು ಪತ್ರಿಕಾಗೋಷ್ಟಿಯಲ್ಲಿ janasahitya-samaveshaರೈತನಾಯಕರೊಬ್ಬರಿಗೆ ಪತ್ರಕರ್ತರು ರೈತಸಂಘದ ನಿಮ್ಮ ಬಣವೇಕೆ ಯಾವುದೇ ಹೋರಾಟ ಮಾಡುತ್ತಿಲ್ಲ ಎಂದು ಕೇಳಿದಾಗ ಅವರು ತಣ್ಣಗೆ ಉತ್ತರಿಸಿದ್ದೇನೆಂದರೆ ‘ರೈತರಿಗೆ ಸದ್ಯ ಯಾವುದೇ ಸಮಸ್ಯೆಯಿಲ್ಲ, ಅದಕ್ಕೆ ಹೋರಾಟವನ್ನೂ ಹಮ್ಮಿಕೊಂಡಿಲ್ಲ.’ ಆದರೆ ಅವರು ಈ ಮಾತು ಆಡುವಾಗಲೂ ವಿದ್ಯುತ್ ಸಮಸ್ಯೆಯಿಂದ, ಕುಸಿತಗೊಂಡ ಬೆಲೆಗಳಿಂದಾಗಿ ರೈತರು ತತ್ತರಿಸುತ್ತಿದ್ದರು, ದೊಡ್ಡ ಉದ್ಯಮಿಗಳಿಗಾಗಿ ಇವರ ಕೃಷಿಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿತ್ತು, ಮತ್ತು ಸಾಲದಿಂದ ದಿಕ್ಕೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ರೈತಮುಖಂಡರು ಈ ಕಾರಣಗಳನ್ನಿಟ್ಟುಕೊಂಡು ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿದ್ದರು. ಆದರೀಗ ಅವರು ನೆಮ್ಮದಿಯಾಗಿದ್ದರು. ಏಕೆಂದರೆ ಸರ್ಕಾರ ಅವರಿಗೆ ತಿಂಗಳಿಗೆ ಲಕ್ಷ ರೂಪಾಯಿ ಆದಾಯದ ನಿಗಮವೊಂದರ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿತ್ತು.

ಹಾಗೆಯೇ, ನಮ್ಮ ನಾಡಿನ ಗಾಳಿಯಾಡುವ ಪ್ರತಿಸ್ಥಳದಲ್ಲೂ ಸಮಸ್ಯೆಗಳಿವೆ, ಸಂಕಟಗಳಿವೆ. ಧರ್ಮದ ಕಾರಣಕ್ಕೆ ಕೊಲೆಗಳು, ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು, ಕೃಷಿಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ರೈತರು, ಬಿಗಿಯಾಗುತ್ತಿರುವ ಜಾತಿ ಸಂಕೋಲೆಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ಅಗೋಚರವಾದ ಆಕೆಯ ಮೇಲಿನ ಕುಟುಂಬದೊಳಗಿನ ಹಿಂಸೆಗಳು… ಇಂತಹ ನೂರು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಆದರೆ ಇದನ್ನು ತಮ್ಮ ಸಮಸ್ಯೆಯೆಂದು ತಮ್ಮೊಳಗೆ ತೆಗೆದುಕೊಳ್ಳುವವರಿಗೆ ಮಾತ್ರ ಇದು ಸಮಸ್ಯೆ. ಈ ಎಲ್ಲಾ ಸಂಕಟಗಳಿಗೆ ಎಷ್ಟು ಜನ ಮಿಡಿಯುತ್ತಾರೆಂಬುದನ್ನು ಅಂದಾಜಿಸುವುದೂ ಒಂದು ಬಗೆಯಲ್ಲಿ ಕಷ್ಟದ ಕೆಲಸ. ಈ ಸಂಕಟಗಳಿಗೆ ಮರುಗುವವರ ಸಂಖ್ಯೆ ಸಾಕಷ್ಟಿರಬಹುದು. ಆದರೆ ಇವರ ಮರುಗುವಿಕೆ ಸಂಕಟದ ನಿವಾರಣೆಯ ದಿಕ್ಕಿನಲ್ಲಿ ಕ್ರಿಯಾತ್ಮಕವಾಗದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಈ ಕ್ರಿಯೆ ಎನ್ನುವುದು ಕೂಡ ಹಲವು ಬಗೆಯದ್ದು. ಈ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಅದನ್ನು ನಿವಾರಿಸಲು ಹೋರಾಟಗಾರ ಪ್ರಯತ್ನಿಸುತ್ತಾನೆ. ಸಂವೇದನಾಶೀಲ ಲೇಖಕ ತನ್ನ ಬರವಣಿಗೆಯಲ್ಲಿ ಅದನ್ನು ಎದುರುಗೊಳ್ಳುತ್ತಾನೆ. ತನ್ನ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಲು ಲೇಖಕ ಹೋರಾಟಗಾರನಿಗೆ ನೆರವು ನೀಡಿದ್ದು ಇತಿಹಾಸದುದ್ಧಕ್ಕೂ ನಡೆದಿದೆ. ಕುವೆಂಪು ಅವರ ಸಾಹಿತ್ಯ ಕರ್ನಾಟಕದಲ್ಲಿ ಶೂದ್ರ ಚಳುವಳಿಯನ್ನು ನಿರ್ದೇಶಿಸಿದ್ದನ್ನು ಇಲ್ಲಿ ನಾವು ಗಮನಿಸಬಹುದು. ಲಂಕೇಶ್ ಪತ್ರಿಕೆ ಈ ನಿಟ್ಟಿನಲ್ಲಿ ದೊಡ್ಡ ಕೆಲಸವನ್ನೇ ಮಾಡಿತು. ದಲಿತ ಚಳವಳಿ, ರೈತ ಚಳವಳಿ ಈ ನಾಡಿನಲ್ಲಿ ಒಂದು ಕಾಲಘಟ್ಟದ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಇದರಲ್ಲೆಲ್ಲ ಲೇಖಕ ಸಮೂಹದ ಪಾತ್ರವೂ ಮುಖ್ಯವಾಗಿದೆ. ಆದರಿಂದು ಲೇಖಕರಾದ ನಾವು ಎಷ್ಟು ಜನ ಲೋಕದ ನಿತ್ಯಸಂಕಟಗಳಿಗೆ ಸ್ಪಂದಿಸುತ್ತಿದ್ದೇವೆ ಎನ್ನುವುದು ಪ್ರಶ್ನೆ.

ಈ ಕಾಲಘಟ್ಟ ಒಬ್ಬ ಲೇಖಕನಿಂದ ಸಮಾಜಕ್ಕೆ ಸ್ಪಂದಿಸುವ, ಅದನ್ನು ತಿದ್ದುವ ಬರವಣಿಗೆಯನ್ನು ಮಾತ್ರವಲ್ಲ, ಆತನಿಂದ ಹೋರಾಟವನ್ನೂ ನಿರೀಕ್ಷಿಸುತ್ತಿದೆ ಎನಿಸುತ್ತಿದೆ. ‘ಸುಮ್ಮನೆ ಬರೆದುಕೊಂಡಿದ್ದರೆ ಸಾಲದು, ಬರೆದಿದ್ದನ್ನು ಸಾಧಿಸಲು ಬೀದಿಗಿಳಿಯಿರಿ’ ಎಂದು ಹೋರಾಟಗಾರರ ಬಾಯಲ್ಲಿ ಸಮಾಜವೇ ಹೇಳಿಸುತ್ತಿದೆ ಎನಿಸುತ್ತಿದೆ.

ಬಂಡಾಯ ಸಾಹಿತ್ಯ ಸಂಘಟನೆ ಅಥವಾ ಜಾಗೃತ ಸಾಹಿತ್ಯ ಸಮ್ಮೇಳನ ಅಂತಿಮವಾಗಿ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರೂ ಅದು ನೇರವಾಗಿ ಸಾಹಿತ್ಯದ ಉದ್ದೇಶವನ್ನು ಪ್ರಶ್ನಿಸುತಿತ್ತು. ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಕುರಿತು ಮರುಚಿಂತನೆ ಮತ್ತು ಹೊಸ ಸಮಾಜ ನಿರ್ಮಾಣಕ್ಕೆ ಬೇಕಾದ ನೆಲೆ ಹಾಗೂ ಪ್ರೇರಣೆಗಳ ಕುರಿತು ಕರ್ನಾಟಕ ಜನಸಾಹಿತ್ಯ ಸಮಾವೇಶ ನಡೆಯುತ್ತಿದೆಯೆಂದು ನಾವಿಲ್ಲಿ ಹೇಳಿಕೊಂಡರೂ ಅದಕ್ಕಿಂತಲೂ ಮಿಗಿಲಾದ ನಮ್ಮೆದುರಿನ ಬಿಕ್ಕಟ್ಟುಗಳನ್ನು ನಾವು ಮುಖಾಮುಖಿಯಾಗಲೇಬೇಕಾಗಿದೆ. ಸಾಹಿತ್ಯಕ್ಷೇತ್ರವನ್ನೊಳಗೊಂಡು ಎಲ್ಲ ಕ್ಷೇತ್ರಗಳೂ ಭ್ರಷ್ಟಗೊಂಡಿರುವ, ಸಾಹಿತಿಗಳನ್ನೂ ಒಳಗೊಂಡಂತೆ ಸಂವೇದನಾರಹಿತ ಸಮಾಜ ರೂಪುಗೊಳ್ಳುತ್ತಿರುವ, ಒಂದು ರೀತಿಯಲ್ಲಿ ಸಾಹಿತಿಗಳನ್ನೂ ಒಳಗೊಂಡಂತೆ ಎಲ್ಲರಲ್ಲೂ ಜಾತಿಪ್ರಜ್ಞೆ ಹರಳುಗಟ್ಟುತ್ತಿರುವ ಅತ್ಯಂತ ಸಂಕೀರ್ಣ ಕಾಲಘಟ್ಟವಿದು. ಈ ಕಾಲವನ್ನು ಮುಖಾಮುಖಿಯಾಗಲು ಬಾಹ್ಯ ಸಮಾಜಕ್ಕೆ ಮಾತ್ರವಲ್ಲ ಸ್ವತಃ ನಮಗೂ ಆತ್ಮವಿಮರ್ಶೆಯ ಚಿಕಿತ್ಸೆ ಬೇಕಾಗಿದೆ. ನಮ್ಮ ಮಿತಿಗಳನ್ನು ಮೀರುತ್ತ ಹೊಸ ದಿಗಂತದೆಡೆಗೆ ನೋಡಬೇಕಾಗಿದೆ.

“…ಸಾಹಿತಿ ಪ್ರತ್ಯೇಕ ಜೀವಿಯಾಗಿ ಉಳಿದು ಉಪಯೋಗವಿಲ್ಲ. ತನ್ನ ಜನತೆಯ ಸುಖ ದುಃಖಗಳಲ್ಲಿ, ರಾಗ ದ್ವೇಷಗಳಲ್ಲಿ, ಧಾರ್ಮಿಕತೆಯಲ್ಲಿ, ಕನಸು ಮನಸುಗಳಲ್ಲಿ, ಕೊನೆಗೆ ಅಂಧಶ್ರದ್ಧೆಗಳಲ್ಲಿ ಕೂಡ ಅವನು ಒಂದಾಗಬೇಕು. ಈ ಸಂಗತಿ ಸಾಹಿತ್ಯದ ಆದರ್ಶವಾಗಿರದೆ ಅದರ ಮೂಲಭೂತ ಅವಶ್ಯಕತೆಯಾಗಿದೆ…” [ಲಂಕೇಶ್]. ಆದರೆ ಸಾಹಿತಿಗಳ ಜವಾಬ್ದಾರಿ ಈಗ ಇನ್ನೂ ಹೆಚ್ಚಿದೆ.

ಜಾಗೃತ ಸಾಹಿತ್ಯ ಸಮ್ಮೇಳನದ ತಮ್ಮ ಉದ್ಘಾಟನಾ ಭಾಷಣದಲ್ಲಿ lankeshಲಂಕೇಶ್ ಅವರು ಈ ಸಮ್ಮೇಳನ ಸಂಘಟಿಸಲು ಕಾರಣವಾದ ಅಂಶಗಳನ್ನು ಪ್ರಸ್ತಾಪಿಸುತ್ತ ಸಾಹಿತ್ಯಿಕ ಕಾರಣಗಳನ್ನು ವಿವರವಾಗಿ ಚರ್ಚಿಸುತ್ತ “ಅಗತ್ಯ ಬಿದ್ದರೆ” ಒಟ್ಟಾಗಿ ಜನವಿರೋಧಿ ಘಟನೆಗಳ ವಿರುದ್ಧ ಪ್ರತಿಭಟಿಸುವ ವಾತಾವರಣ ಮೂಡಿಸುವುದು ಅನಿವಾರ್ಯವಾಗಿತ್ತು ಎಂದು, ಇದು ಸಾಹಿತ್ಯದ ಅಂತಹ ಪ್ರಧಾನವಾದ ಕೆಲಸವಲ್ಲ ಎಂಬ ದನಿಯಲ್ಲಿ ಹೇಳುತ್ತಾರೆ. ಬಹುಶಃ ಆ ಕಾಲವೂ ಸಾಹಿತಿಗಳಿಂದ ಹೋರಾಟವನ್ನು ನಿರೀಕ್ಷಿಸುತ್ತಿರಲಿಲ್ಲವೇನೋ. ಆದರೆ ಪ್ರತಿಕ್ಷಣವೂ ಜನವಿರೋಧಿ ಕೃತ್ಯಗಳು ಜರುಗುವ ಈ ಹೊತ್ತಿನಲ್ಲಿ ಇಂತಹವುಗಳನ್ನು ಪ್ರತಿಭಟಿಸುವ ಮತ್ತು ಪ್ರತಿಭಟಿಸುವ ವಾತಾವರಣವನ್ನು ಮೂಡಿಸುವುದೇ ಸಾಹಿತಿಗಳ ಮತ್ತು ಸಾಹಿತ್ಯದ ಆದ್ಯತೆಯ ಜವಾಬ್ದಾರಿ ಎಂದು ನನಗನ್ನಿಸುತ್ತಿದೆ.

ಆದರೆ ಬಹುತೇಕ ಸಾಹಿತಿಗಳು ಹೋರಾಟದ ಬಗ್ಗೆ ಕಳಕಳಿ ತೋರಿದರೂ ಅದು ವಿಶ್ವಾಸಾರ್ಹ ಎನಿಸುತ್ತಿಲ್ಲ. ಪ್ರಧಾನವೆಂದು ತೋರುವ ಸಾಹಿತ್ಯಲೋಕ ಹೋರಾಟಗಾರರನ್ನು ಮತ್ತು ಹೋರಾಟನಿರತ ಲೇಖಕಮಿತ್ರರನ್ನು ಒಂದು ಬಗೆಯ ಅಸ್ಪೃಶ್ಯ ಭಾವನೆಯಲ್ಲಿ ನೋಡುವುದನ್ನು ಗಮನಿಸಬಹುದು. ಮೂಲಭೂತವಾಗಿ ಹೋರಾಟಗಳ ಬಗ್ಗೆಯೇ ಸಾಹಿತ್ಯವಲಯಕ್ಕೆ ಅಸ್ಪೃಶ್ಯ ಭಾವನೆಯಿರುವಂತಿದೆ. ಹೋರಾಟಗಳು ಕಣ್ಮರೆಯಾಗಿವೆ ಎಂದು ಮತ್ತೆ ಮತ್ತೆ ದುಃಖಗೊಂಡವರಂತೆ ಗೊಣಗುವ ಸಾಹಿತಿಗಳು ಸದ್ಯ ಚಾಲ್ತಿಯಲ್ಲಿರುವ ಮಹಿಳಾಪರ ಹೋರಾಟ, ಕೋಮು ಸೌಹಾರ್ದ ಚಳವಳಿ, ಎಡಪಂಥೀಯ ಚಳವಳಿಗಳಲ್ಲಿ ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದ್ದಾರೆ? ಗಣಿದೊರೆಗಳ ಅಟ್ಟಹಾಸಕ್ಕೆ, ಭ್ರಷ್ಟ ರಾಜಕಾರಣಿಗಳ ಸ್ವಜನಪಕ್ಷಪಾತವನ್ನು ಎದುರಿಸಲಾರದೆ ಚಳವಳಿಗಳೂ ಕಳೆಗುಂದುತ್ತಿದ್ದಾಗ ಕಾನೂನು ಹೋರಾಟದ ಮೂಲಕ ಇವರನ್ನೆಲ್ಲ ಜೈಲಿಗಟ್ಟಿದ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ ಇದೇ ಧಾರವಾಡದ ಎಸ್.ಆರ್.ಹಿರೇಮಠರನ್ನು ಸಾಹಿತ್ಯಲೋಕದ ಎಷ್ಟು ಜನ ಬೆಂಬಲಿಸಿದ್ದೇವೆ? ಚಳವಳಿಗಳಿಗೆ ಪೂರಕವಾಗಿ ಎಷ್ಟು ಸಾಹಿತ್ಯ ರಚಿಸಿದ್ದೇವೆ? ಹೋರಾಟಗಾರರು ನಮ್ಮ ಬೆಂಬಲ ಕೇಳಿದಾಗ ಎಷ್ಟರಮಟ್ಟಿಗೆ ಸ್ಪಂದಿಸಿದ್ದೇವೆ?

ಸರ್ಕಾರಿ ಹುದ್ದೆಯಲ್ಲಿರುವ ಸಾಹಿತಿಗಳು ಆ ಕಾರಣಕ್ಕೆ ನೇರವಾಗಿ ಚಳುವಳಿಗಲ್ಲಿ ಭಾಗವಹಿಸಲಾಗದೆಂದು ನೀಡುವ ಕಾರಣ ಹುರುಳಿಲ್ಲದ್ದು. ಹೀಗಿದ್ದರೂ ಪರೋಕ್ಷವಾಗಿ ಚಳುವಳಿಗಳಲ್ಲಿ ಭಾಗವಹಿಸಲು ಸಾಧ್ಯವಿದೆ. ಬ್ರಿಟೀಷ್ ಸರ್ಕಾರದ ವಿರುದ್ಧ ನಾಟಕಗಳನ್ನು ಮಾಡುತ್ತ ಸ್ವಾತಂತ್ರ್ಯ ಚಳುವಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದ ಕನ್ನಡ ಮತ್ತು ಮರಾಠಿ ರಂಗಭೂಮಿಯ ಕಲಾವಿದರು ಸರ್ಕಾರ ಇಂತಹ ನಾಟಕಗಳನ್ನು ನಿಷೇಧಿಸಿದಾಗ ಪುರಾಣದ ಘಟನೆಗಳನ್ನು ನೆಪವಾಗಿರಿಸಿಕೊಂಡು ಚಳುವಳಿಗೆ ಪ್ರೇರಕವಾದ ನಾಟಕಗಳನ್ನಾಡುತ್ತಿದ್ದುದನ್ನು ಇತ್ತೀಚೆಗೆ ಬಿಡುಗಡೆಗೊಂಡ karnataki“ಅಮೀರ್ ಬಾಯಿ ಕರ್ನಾಟಕಿ” ಕೃತಿ ಹೃದಯಂಗಮವಾಗಿ ಚಿತ್ರಿಸುತ್ತದೆ. ಪ್ರಭುತ್ವವನ್ನು ಜಾಣತನದಿಂದ ಮರೆಮಾಚಿ ಹೋರಾಟಕ್ಕೆ ಬೆಂಬಲಿಸುವ ಇಂತಹ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಇದೂ ಸಾಧ್ಯವಾಗದಿದ್ದರೆ ಕನಿಷ್ಟ ಹೋರಾಟಗಳಿಗೆ ಆರ್ಥಿಕ ನೆರವನ್ನಂತೂ ನೀಡಲು ಸಾಧ್ಯವಿದೆ. ಆದರೆ ವೈಯುಕ್ತಿಕವಾಗಿ ಉತ್ತಮ ಆದಾಯ ತರುವ ನೌಕರಿಗಳಲ್ಲಿರುವ ಸಾಹಿತಿಗಳು ಹೋರಾಟಗಳಿಗೆ ಎಷ್ಟರಮಟ್ಟಿನ ಹಣಕಾಸಿನ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರ ನಿರಾಶಾದಾಯಕವಾಗಿದೆ.

ನಾವು ಇಲ್ಲಿ ಏಕೆ ಸೇರುತ್ತಿದ್ದೇವೆ? ಸಾಹಿತ್ಯ ಜನರಿಂದ ದೂರ ಹೋಗುತ್ತಿದೆ ಅಥವಾ ಸಾಹಿತ್ಯ ಕ್ಷೇತ್ರವನ್ನು ಕಾರ್ಪೋರೆಟ್ ವಲಯ ಕಬ್ಜಾ ಮಾಡಿಕೊಳ್ಳುತ್ತಿದೆ, ಇದನ್ನು ತಪ್ಪಿಸಿ ಜನರತ್ತ ಸಾಹಿತ್ಯವನ್ನು ಕೊಂಡೋಯ್ಯಬೇಕು ಎಂಬ ಉದ್ದೇಶದಿಂದ ತಾನೇ? ಆದರೆ ಇಂತಹ ಕಾಳಜಿಯ ಬಗ್ಗೆ ನೈಜ ಪ್ರಾಮಾಣಿಕತೆ ನಮ್ಮೆಲ್ಲರಲ್ಲೂ ಇದೆಯೇ?

ನಾವು ನಮ್ಮ ಬೆನ್ನು ತಿರುಗಿಸಿ ನೋಡಿದಾಗ ಹಿಂದೆಯೂ ಆ ಕಾಲಘಟ್ಟದ ಒಟ್ಟಾರೆ ಇಂತಹುದೇ ಉದ್ದೇಶಗಳಿಗಾಗಿಯೇ ಹುಟ್ಟಿದ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಜಾಗೃತ ಸಾಹಿತ್ಯ ಸಮಾವೇಶದೊಳಗೆ ಸೇರಿದವರು ಏನೇನಾದರು? ಸಾಮುದಾಯಿಕವಾಗಿ ಈ ಸಂಘಟನೆಗಳು ಆ ಕಾಲಘಟ್ಟದ ತುರ್ತಿಗೆ ಸ್ಮಂದಿಸಿದ್ದನ್ನು ಮರೆಯಲಾಗುವುದಿಲ್ಲ. ಆದರೆ ಈ ಸಮ್ಮೇಳನಗಳಲ್ಲಿ ಒಟ್ಟಾದವರು ಎಷ್ಟು ಜನ ತಮ್ಮ ವಿಚಾರಗಳಿಗೆ ಬದ್ಧರಾಗಿ ಉಳಿದಿದ್ದಾರೆ? ಕೆಲವರು ಅಧಿಕಾರ ಸ್ಥಾನಗಳಿಗಾಗಿ ರಾಜಕಾರಣಿಗಳನ್ನೂ ಮೀರಿಸುವ ಕೆಲಸಗಳಲ್ಲಿ ತೊಡಗಿದರು. ಸಾಹಿತ್ಯ ಸಮ್ಮೇಳನಗಳಲ್ಲಿ ಮೆರವಣಿಗೆ ವಿರೋಧಿಸಿದ್ದ ದೊಡ್ಡ ಸಾಹಿತಿಗಳು ತಾವು ಅಧ್ಯಕ್ಷರಾದಾಗ ಮುತ್ತೈದೆಯರ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಇನ್ನೊಬ್ಬರು ನಾಲ್ಕು ಜನ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಸಂಭ್ರಮಿಸಿದರು. ನಾಳೆ ನಾವುಗಳು ಕೂಡ ಇಲ್ಲಿ ಮಾಡುವ ಭಾಷಣಗಳ ವಿರುದ್ಧ ಹೋದರೂ ನನಗೆ ಅಚ್ಚರಿಯಿಲ್ಲ. ಯಾಕೆಂದರೆ ನಾವೆಲ್ಲಾ ಈ ಆಕಾಂಕ್ಷೆಗಳಿಂದ ದೂರವಾಗಿ ನಮ್ಮನ್ನು ನಾವೇ ಮೀರಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಸಾಕ್ಷಿಗಳೆಲ್ಲಿದೆ?

ಈ ಐಡೆಂಟಿಟಿ ಕ್ರೈಸಿಸ್ ಎಲ್ಲರ ಸಮಸ್ಯೆ. ಬಹುಶಃ ನಮ್ಮಲ್ಲಿ ಒಂದಷ್ಟು ಜನ ಪ್ರಶಸ್ತಿ, ಸನ್ಮಾನ, ಬೇರೆ ವೇದಿಕೆಗಳಲ್ಲಿ ಸ್ಥಾನಮಾನಗಳು ದೊರಕಿದ್ದರೆ ಇಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎನಿಸುತ್ತದೆ. ಅದನ್ನು ಇನ್ನಷ್ಟು ವಿವರವಾಗಿ ಹೇಳಬಯಸುತ್ತೇನೆ.

ಇಂದು ಪತ್ರಿಕೆಗಳು ಬಂಡವಾಳಶಾಹಿಗಳ ಕೈಯಲ್ಲಿವೆ. ಇವು ಜನಪರ ಪತ್ರಿಕೆಗಳು, ಇವು ಜನವಿರೋಧಿ ಪತ್ರಿಕೆಗಳು ಎಂದು ಸರಳವಾಗಿ ವಿಂಗಡಿಸಲಾಗದಂತೆ ಇವುಗಳ ಸ್ವರೂಪವಿದೆ. ಇಲ್ಲಿ ಎಲ್ಲಿ ತಾನು ಬರೆಯಬೇಕು ಎನ್ನುವುದನ್ನು ನಿರ್ಧರಿಸಿಕೊಳ್ಳಲಾಗದಷ್ಟು ನಾವಿಂದು ಅಸಹಾಯಕರಿದ್ದೀವಿ. ಆದರೆ ಪ್ರಚ್ಚನ್ನ ಕೋಮುವಾದಿಯಾಗಿರುವ ಪತ್ರಿಕೆಗಳಲ್ಲಿ ನಾವೇಕೆ ಕಾಣಿಸಿಕೊಳ್ಳುತ್ತಿದ್ದೇವೆ? ಯಥಾಸ್ಥಿತಿವಾದಿಗಳಾದ ಮಠಗಳು, ಕರಾವಳಿಯಲ್ಲಿ ರಾಕ್ಷಸನಂತೆ ಬೆಳೆದ ಹಿಂದೂ ಕೋಮುವಾದ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಸಣ್ಣ ಪ್ರಮಾಣದಲ್ಲಿ ಮೂಡಿದ ಮುಸ್ಲಿಂ ಮೂಲಭೂತವಾದಕ್ಕೆ ಮೂಲವಾದವರು ನಡೆಸುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಭ್ರಮದಿಂದ ಭಾಗವಹಿಸಲು ನಮಗೆ ಹೇಗೆ ಸಾಧ್ಯವಾಗುತ್ತದೆ?

ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು, ಸಮಾರಂಭಗಳಲ್ಲಿ ಸನ್ಮಾನಿಸಿಕೊಳ್ಳುವುದು ಬಹುಶಃ ಎಲ್ಲರಲ್ಲಿಯೂ ಇರುವ ದೌರ್ಬಲ್ಯವಿರಬೇಕು.

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ’ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ, ಅದನ್ನು ಬೇಕಾದರೆ ವಾಪಸು ಕೊಡುತ್ತೇನೆ’ ಎಂದಿದ್ದ ಗೊಪಾಲಕೃಷ್ಣ ಅಡಿಗರು ಇನ್ನೊಂದು ಪ್ರಶಸ್ತಿ ಬಂದಾಗ ಖುಷಿಯಿಂದ ಪಡೆದಿದ್ದರು. ಇದನ್ನು ಪ್ರಶ್ನಿಸಿದರೆ ‘ನಾನೂ ಮನುಷ್ಯನೇ ಅಲ್ಲವೆ’ ಎಂದು ಸಣ್ಣದನಿಯಲ್ಲಿ ಸಮರ್ಥಿಸಿಕೊಂಡಿದ್ದರು. ಇದನ್ನು ಮೀರದೆ ನಮಗೆ ಗತ್ಯಂತರವಿಲ್ಲ. ನಾವು ಪ್ರಕಟವಾಗುವ ಮತ್ತು ನಾವು ಮಾತನಾಡಲು ನಿಲ್ಲುವ ಜಾಗದ ಬಗ್ಗೆ ನಾವು ಖಚಿತವಾಗಿರದಿದ್ದರೆ ನಾವಾಡುವ ಮಾತೂ ವಿಶ್ವಾಸಾರ್ಹತೆ ಪಡೆಯುವುದಿಲ್ಲ.

ಇನ್ನೊಂದು ನಮ್ಮನ್ನು ಇನ್ನೂ ನಿಯಂತ್ರಿಸುತ್ತಿರುವ ಜಾತಿಪ್ರಜ್ಞೆ. ನಿಜವಾಗಿಯೂ ನಾವು ಜಾತ್ಯಾತೀತರಾಗಿದ್ದೇವೆಯೇ ಅಥವಾ ಹೊರನೋಟಕ್ಕೆ ಹಾಗೆ ನಟಿಸುತ್ತಿದ್ದೇವೆಯೇ ಎಂಬ ಅನುಮಾನ ಬರುತ್ತಿದೆ.

ಇನ್ನು ನಮ್ಮನ್ನು ಆವರಿಸಿರುವ ‘ದಾಹ’.

ಒಂದು ಘಟನೆ ನೆನಪಾಗುತ್ತಿದೆ. ಶಿವಮೊಗ್ಗದಲ್ಲಿ ಹಲವು ಕಾಲ ನೆಲೆಸಿದ್ದ ಸಾಹಿತಿಗಳೊಬ್ಬರು ಯಾವುದೋ ಕಾರಣಕ್ಕೆ ಬೇರೆ ಜಿಲ್ಲೆಗೆ ಹೋಗಿ ನೆಲೆಸಿದರು. ಅವರು ಇಲ್ಲಿಂದ ಹೋಗಿ ಅನೇಕ ವರ್ಷಗಳಾದ ನಂತರದ ಈ ಕಾಲದಲ್ಲಿ ಶಿವಮೊಗ್ಗದಲ್ಲಿ ತಲೆ ತಿರುಗಿಸುವಂತಹ ಬದಲಾವಣೆಗಳಾಗಿವೆ. ಭೂದಾಹದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಿಂದಾಗಿ ಹತ್ತು ಸಾವಿರವಿದ್ದ ಕನಿಷ್ಟ ಅಳತೆಯ ನಿವೇಶನದ ಬೆಲೆ ಹದಿನೈದು-ಇಪ್ಪತ್ತು ಲಕ್ಷಕ್ಕೇರಿದೆ. ಸಾಮಾನ್ಯರಿರಲಿ, ಮೇಲ್ಮಧ್ಯಮ ವರ್ಗದವರೂ ನಿವೇಶನದ ಕನಸು ಕಾಣದಂತಾಗಿದೆ. ಕಡಿಮೆ ದರದಲ್ಲಿ ಸಿಗುವ ನಗರಸಭೆಯ ನಿವೇಶನಕ್ಕೆ ಅನೇಕ ವರ್ಷ ಕಾಯಬೇಕಾಗಿದೆ. ಅದೂ ಸಿಗುತ್ತದೆಂಬ ಗ್ಯಾರಂಟಿಯಿಲ್ಲ. ಈ ಸಮಯದಲ್ಲಿಯೇ ಸಾಹಿತಿಗಳಿಗೆ ಹದಿನೈದು ವರ್ಷದ ಹಿಂದೆ ತಾವು ಶಿವಮೊಗ್ಗದಲ್ಲಿದ್ದಾಗ ಅಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಕ್ಕೆ ಅರ್ಜಿ ಹಾಕಿದ್ದು ನೆನಪಾಗಿದೆ. ಸೀನಿಯಾರಿಟಿ ಬೇರೆ ಇದ್ದುದರಿಂದ ಅವರು ಅರ್ಜಿ ಹಾಕಿದ್ದಾರೆ. ಅವರಿಗದು ಸಿಕ್ಕಿದೆ ಕೂಡ. ಆದರೆ ಅವರಿಗೆ ಅವರು ನೆಲೆನಿಂತ ಊರಲ್ಲಿಯೇ ಸ್ವಂತ ಮನೆಯಿದೆ. ಮಕ್ಕಳು ಇವರಿಗೆ ಪ್ರೀತಿಯಿಂದ ಇನ್ನೊಂದು ನಿವೇಶನವನ್ನು ಕೊಂಡುಕೊಟ್ಟಿದ್ದಾರೆ. ಶಿವಮೊಗ್ಗದ ನಿವೇಶನದಲ್ಲೇನೂ ಮನೆ ಕಟ್ಟುವುದಿಲ್ಲ. ಇದನ್ನರಿತು ಇನ್ನೂ ನಿವೇಶನ ಇರದ ಬಾಡಿಗೆ ಮನೆಯಿಲ್ಲಿರುವ shimoga-udaಅವರ ಪರಿಚಿತರೊಬ್ಬರು ಅವರನ್ನು ನೀವೀಗ ಮಂಜೂರಾದ ನಿವೇಶನವನ್ನು ಮಾರುತ್ತೀರಾ ಎಂದು ಕೇಳಿದ್ದಾರೆ. ಹೌದು ಎನ್ನುವ ಉತ್ತರ ಬಂದಿದೆ. ಉತ್ಸಾಹಗೊಂಡ ಇವರು ಬೆಲೆ ಕೇಳಿದ್ದಾರೆ. ಅವರು ಹೇಳಿದ ಬೆಲೆ ಕೇಳಿ ಇವರು ಭೂಮಿಗಿಳಿದು ಹೋಗಿದ್ದಾರೆ. ಆದರೆ ಸಾಹಿತಿಗಳೇನೂ ಇಲ್ಲದ ಬೆಲೆ ಹೇಳಿರಲಿಲ್ಲ. ಆ ನಿವೇಶನದ ಈಗಿನ ಮಾರುಕಟ್ಟೆ ದರ ಇಪ್ಪತ್ತೈದು ಲಕ್ಷ. ಅಷ್ಟನ್ನೇ ಅವರು ಹೇಳಿದ್ದು. ಅವರು ಆ ನಿವೇಶನ ಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೊಟ್ಟ ಹಣ ಮೂರು ಲಕ್ಷ ಮಾತ್ರವಾಗಿತ್ತು.!

ಈ ದಾಹಕ್ಕೆ ಏನೆನ್ನುವುದು? ಇಂತಹ ದಾಹವೇ ನಮ್ಮನ್ನು ಜನರತ್ತ ಹೋಗದಿರುವಂತೆ ತಡೆದಿರುವುದು. ಜಾಗತೀಕರಣದ ಪರಿಣಾಮವಾದ ಈ ಮೇರೆಯಿಲ್ಲದ ದಾಹವೇ ಎಲ್ಲರಂತೆ ನಮ್ಮನ್ನೂ ಕೆಟ್ಟ ಲೋಭಿಗಳನ್ನಾಗಿ ಮಾಡಿದೆ. ಇಂತಹ ದಾಹಗಳನ್ನು ಮೀರದಿದ್ದರೆ ನಾವು ಈ ಸಮಾವೇಶದಲ್ಲಿ ಮಾತನಾಡುವುದೆಲ್ಲ ಹಾಸ್ಯಗೋಷ್ಟಿಯ ರಂಜನೆಯ ಮಾತಾಗುತ್ತದೆ.

ಇಷ್ಟೆಲ್ಲಾ ಒಂದು ರೀತಿಯ ಉಪದೇಶಾತ್ಮಕವಾಗಿ ಹೇಳಿದ ನಾನೂ ಈ ತಲೆಮಾರಿನ ಸಾಹಿತಿಗಳು ಮೀರಬೇಕಾದ ಈವರೆಗೆ ಹೇಳಿದ ಮಿತಿಗಳನ್ನು ಹೊಂದಿರಬಹುದು. ಕಡು ಆತ್ಮವಿಮರ್ಶೆಯಲ್ಲಿ ಧ್ಯಾನಿಸದಿದ್ದರೆ, ಎಲ್ಲರಂತೆ ನಮ್ಮನ್ನೂ ಆವರಿಸಿರುವ ‘ದಾಹ’ವನ್ನು ನೀಗಿಕೊಳ್ಳದಿದ್ದರೆ, ನಮ್ಮ ಆಳದಲ್ಲಿರಬಹುದಾದ ಜಾತಿಕುರುಹುಗಳನ್ನು ಮೀರದಿದ್ದರೆ, ನಾಡನ್ನು ಬಾಧಿಸುತ್ತಿರುವ ಸಂಕಟಗಳ ನಿವಾರಣೆಯ ಹೋರಾಟಗಳಿಗೆ ಕೈಜೋಡಿಸದಿದ್ದರೆ, ಪ್ರಶಸ್ತಿ ಸನ್ಮಾನಗಳ ಗುಂಗಿನಿಂದ ಹೊರಬರದಿದ್ದರೆ, ನಮ್ಮಿಂದ ನಮ್ಮ ಜನಕ್ಕೆ ಏನೂ ದಕ್ಕುವುದಿಲ್ಲ. ಮಾತ್ರವಲ್ಲ ನಮ್ಮಿಂದ ಒಳ್ಳೆಯ ಸಾಹಿತ್ಯ ನಿರ್ಮಾಣವೂ ಸಾಧ್ಯವಾಗುವುದಿಲ್ಲ.

ಮುಸುಕಿನ ಗುದ್ದಾಟ ತಂದೀತು ಅತಂತ್ರ ವಿಧಾನಸಭೆ

– ಆನಂದ ಪ್ರಸಾದ್

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಕಳೆದ ಒಂದು ದಶಕದಿಂದ ಕರ್ನಾಟಕವು ಅತಂತ್ರ ವಿಧಾನಸಭೆಯನ್ನು ಹೊಂದಿ ಬಹಳಷ್ಟು ತೊಂದರೆಯನ್ನು ಅನುಭವಿಸಿದೆ. ಹೀಗಾಗಿ ಅತಂತ್ರ ವಿಧಾನಸಭೆಯನ್ನು ತಂದರೆ ಮತ್ತೆ ರಾಜಕೀಯ ಸಮಯಸಾಧಕತನ ಹಾಗೂ ಚೌಕಾಸಿ ರಾಜಕೀಯ ಮೇಲುಗೈ ಪಡೆದು ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗುವುದು ನಿಶ್ಚಿತ. ಹಾಗಾಗಿ ಇದನ್ನು ತಡೆಗಟ್ಟಬೇಕಾದರೆ ಸ್ಥಿರ ವಿಧಾನಸಭೆಯನ್ನು ರೂಪಿಸುವ ರೀತಿಯಲ್ಲಿ ಜನ ಮತದಾನ ಮಾಡಬೇಕಾದುದುದು ಅನಿವಾರ್ಯ. ಸದ್ಯದ ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯಬಹುದು ಎಂಬ ಸೂಚನೆಯನ್ನು ನೀಡಿವೆಯಾದರೂ ಇದರಿಂದ ಮೈಮರೆತು ಮುಸುಕಿನ ಗುದ್ದಾಟಕ್ಕೆ ಕಾಂಗ್ರೆಸ್ಸಿಗರು ಇಳಿದರೆ ಫಲಿತಾಂಶ ಅತಂತ್ರವಾಗಬಹುದು. ಕಾಂಗ್ರೆಸ್ ಜಯಗಳಿಸಿದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬುದು ನಿರ್ಧರಿತವಾಗಿಲ್ಲ. ಕಾಂಗ್ರೆಸ್ಸಿನ ಒಮ್ಮತದ ಕೊರತೆಯಿಂದ ಹಾಗೂ ಕಚ್ಚಾಟ ಅತಿರೇಕಕ್ಕೆ ಹೋಗುವುದನ್ನು ತಡೆಯುವ ಉಪಾಯವಾಗಿ ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗುವುದು ನಡೆದುಬಂದಿರುವ ಸಂಪ್ರದಾಯ. ಹೀಗಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಣಯಿಸುವುದು ಹೈಕಮಾಂಡ್.

ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಹುದ್ಧೆಗೆ ಪ್ರಧಾನ ಆಕಾಂಕ್ಷಿಗಳು siddaramaiah_dharam_khargeಸಿದ್ಧರಾಮಯ್ಯ, ಪರಮೇಶ್ವರ್ ಹಾಗೂ ಖರ್ಗೆ ಮೂವರು ಇದ್ದಾರೆ. ಇವರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳಿತಾಗಬಹುದು. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪಗಳಿಲ್ಲದ, ಸೋಗಲಾಡಿತನವಿಲ್ಲದ, ನೇರ, ನಿಷ್ಠುರ ನಡೆನುಡಿಯ, ಕುಟುಂಬ ಸದಸ್ಯರು ರಾಜಕೀಯ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿರದ ಸಮಾಜವಾದಿ ಹಿನ್ನೆಲೆಯೇ ಸಿದ್ಧರಾಮಯ್ಯನವರ ಧನಾತ್ಮಕ ಅಂಶ. ಆಡಳಿತಾತ್ಮಕವಾಗಿಯೂ ಅಧಿಕಾರಿಗಳ ಮೇಲೆ ಬಿಗಿಯಾದ ಹಿಡಿತ ಸಾಧಿಸುವ ಸಾಮರ್ಥ್ಯ ಇವರಿಗೆ ಇದೆ. ಹೀಗಾಗಿ ಇವರು ಮುಖ್ಯಮಂತ್ರಿಯಾದರೆ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಆದರೆ ಕಾಂಗ್ರೆಸ್ಸಿನ ಒಳಸುಳಿಗಳು ಇವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತವೆಯೋ ಎಂಬುದು ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ.

ಮಲ್ಲಿಕಾರ್ಜುನ ಖರ್ಗೆಯೂ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಇವರು ತಮ್ಮ ಪುತ್ರನನ್ನು ರಾಜಕೀಯದಲ್ಲಿ ತೊಡಗಿಸಿದ ಆರೋಪ ಹೊಂದಿದ್ದಾರೆ ಹಾಗೂ ಇವರ ಪುತ್ರ ಪಕ್ಷದಲ್ಲಿ ಹಸ್ತಕ್ಷೇಪ ನಡೆಸುವ ಹಾಗೂ ಇತರರನ್ನು ಮೂಲೆಗುಂಪು ಮಾಡುವ ವ್ಯಕ್ತಿತ್ವ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಖರ್ಗೆಯವರು ವಿಚಾರಶೀಲ, ಕಂದಾಚಾರಗಳಿಗೆ ಮಹತ್ವ ಕೊಡದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರಿಗೂ ಆಡಳಿತದಲ್ಲಿ ಹಿಡಿತ ಸಾಧಿಸುವ ಕಲೆ ಕರಗತವಾಗಿದೆ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸರಾಸರಿ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಇವರ ಮಾತುಗಾರಿಕೆ ಮಾತ್ರ ಆಕರ್ಷಕವಾಗಿಲ್ಲ ಮತ್ತು ಬಹಳ ನಿಧಾನವಾಗಿ ಬಾವಿಯ ಆಳದಿಂದ ಮಾತಾಡಿದಂತೆ ಇವರ ಮಾತುಗಳು ಕಂಡುಬರುತ್ತವೆ.

ಇನ್ನೊಬ್ಬ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಜಿ. ಪರಮೇಶ್ವರ್. ಇವರು ಕೂಡ ಕಾಂಗ್ರೆಸ್ಸಿನಲ್ಲಿ ದೀರ್ಘ ರಾಜಕೀಯ ಅನುಭವ ಹೊಂದಿದವರೇ. ಭ್ರಷ್ಟಾಚಾರದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗೆಯೇ ಕುಟುಂಬದ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸಾಮಾನ್ಯ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಮಾಜಿ ಮುಖ್ಯಮಂತ್ರಿ smkrsihwigಎಸ್ಸೆಂ ಕೃಷ್ಣ ಒಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಇವರು ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಹುದ್ಧೆ, ರಾಜ್ಯಪಾಲ ಹುದ್ಧೆ ಹೀಗೆ ಉನ್ನತ ಸ್ಥಾನಗಳನ್ನು ಏರಿರುವುದರಿಂದ ಹಾಗೂ ವಯಸ್ಸೂ ಆಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದು ಯೋಗ್ಯವಲ್ಲ ಹಾಗೂ ಜನರೂ ಅದನ್ನು ಮೆಚ್ಚುವುದಿಲ್ಲ. ಹೀಗಾಗಿ ಅವರು ರಾಜಕೀಯದಿಂದ ನಿವೃತ್ತಿಯಾಗುವುದು ಸೌಜನ್ಯದ ಹಾಗೂ ಸಜ್ಜನಿಕೆಯ ನಡವಳಿಕೆ ಆದೀತು.

ಕಾಂಗ್ರೆಸ್ಸಿನ ಪ್ರಧಾನ ಮುಖ್ಯಮಂತ್ರಿ ಆಕಾಂಕ್ಷಿಗಳು ಹೈಕಮಾಂಡ್ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಒಬ್ಬರ ಕಾಲನ್ನು ಒಬ್ಬರು ಎಳೆಯದೆ, ಭಿನ್ನಮತ ತೋರದೆ ಸಿಕ್ಕಿದ ಹುದ್ಧೆಯಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿರುವುದು ರಾಜ್ಯದ ಇಂದಿನ ಅತೀ ಅಗತ್ಯಗಳಲ್ಲೊಂದು. ಇಲ್ಲದೆ ಹೋದರೆ ರಾಜ್ಯದ ಜನ ಮತ್ತೆ ಅತಂತ್ರ ವಿಧಾನಸಭೆಯಂಥ ಪರಿಣಾಮಗಳನ್ನೇ ನೀಡಬಹುದು. ಕಾಂಗ್ರೆಸ್ಸಿಗರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಹಾಗೂ ಚುನಾವಣಾಪೂರ್ವ ಸಮೀಕ್ಷೆಗಳ ಅಭಿಪ್ರಾಯದಿಂದ ಮೈಮರೆತು ಕಚ್ಚಾಟದಲ್ಲಿ ತೊಡಗಿದರೆ ರಾಜ್ಯದ ಜನ ಮತ್ತೆ ಅತಂತ್ರ ಫಲಿತಾಂಶ ನೀಡುವ ಸಾಧ್ಯತೆ ದಟ್ಟವಾಗಿದೆ. ಜನರ ಅಭಿಪ್ರಾಯವನ್ನು ಕಡೆಗಣಿಸಿದರೆ, ತಮ್ಮನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂಬ ಅಹಂಕಾರದಿಂದ ನಡೆದುಕೊಂಡರೆ ಅತಂತ್ರ ವಿಧಾನಸಭೆಯ ಫಲಿತಾಂಶವೇ ಬಂದೀತು. ಸ್ಥಳೀಯ ಸಂಸ್ಥೆ ಚುನಾವಣಾ ವಿಜಯವನ್ನು ಕಾಂಗ್ರೆಸ್ಸಿಗರು ಅಲ್ಲಲ್ಲಿ ಅದ್ಧೂರಿಯಾಗಿ ಆಚರಿಸಿದುದು ಕಂಡುಬಂದಿದೆ. ಇಂಥ ಆಚರಣೆಗಳ ಅಗತ್ಯವಿಲ್ಲ. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ದೊಡ್ಡ ದೊಡ್ಡ ಬ್ಯಾನರುಗಳನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಕಿರುವುದು ಕೂಡ ಕಂಡುಬರುತ್ತದೆ. ಇಂಥ ತೋರಿಕೆ ಹಾಗೂ ಆಡಂಬರದ ಅಗತ್ಯ ಇಲ್ಲ. ಇಂಥವುಗಳನ್ನು ತಡೆದು ಜನರಿಗಾಗಿ ಕೆಲಸ ಮಾಡುವುದನ್ನು ಪ್ರವೃತ್ತಿಯನ್ನು ಕಾಂಗ್ರೆಸ್ಸಿಗರು ಬೆಳೆಸಿಕೊಳ್ಳುವುದು ಅಗತ್ಯ.

ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕ

– ಆನಂದ ಪ್ರಸಾದ್

ಬಿಜೆಪಿ ಅಂತರಿಕ ಪ್ರಜಾಪ್ರಭುತ್ವವಿರುವ ಪಕ್ಷ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿಲ್ಲ. ಅದು ತಾನು ಬೇರೆ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಉಳಿದ ಪಕ್ಷಗಳಿಗಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕವಾಗಿದೆ. BJP-RSS-Gadkariಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದವರು ಆಡಳಿತ ನಡೆಸಬೇಕಾದುದು ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ಬಿಜೆಪಿಯಲ್ಲಿ ಜನರಿಂದ ಚುನಾಯಿತರಾದವರ ಮೇಲೆ ಅಧಿಕಾರ ಚಲಾಯಿಸುವ ಜನರಿಂದ ಚುನಾಯಿತವಾಗಿರದ ಸಂಘದ ಮುಖಂಡರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಸಂವಿಧಾನಬಾಹಿರ ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಅಧ್ಯಕ್ಷರನ್ನು ಪಕ್ಷದ ಸದಸ್ಯರು ಚುನಾವಣೆಯ ಮೂಲಕ ಆರಿಸಬೇಕಾದುದು ಸರಿಯಾದ ಕ್ರಮ. ಆದರೆ ಬಿಜೆಪಿಯಲ್ಲಿ ಸಂಘದ ಮುಖಂಡರು ಅಧ್ಯಕ್ಷರನ್ನು ಹೇರುವುದನ್ನು ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವೇ? ತಮಗೆ ನಿಷ್ಠರಾಗಿರುವವರನ್ನು, ತಮ್ಮ ಆಜ್ಞೆ ಪಾಲಿಸುವವರನ್ನು ಸಂಘದ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬರುವಂತೆ ಮಾಡಿ ರಾಜ್ಯದ ಆಡಳಿತದ ಮೇಲೆ ತಮ್ಮ ಪ್ರಭಾವ ಬೀರುವುದನ್ನು ನಮ್ಮ ರಾಜ್ಯದಲ್ಲಿ ಕಾಣುತ್ತಿದ್ದೇವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಪಾಳೇಗಾರಿಕೆ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಇದನ್ನು ಪ್ರಜೆಗಳು ಮತದಾನ ಮಾಡುವಾಗ ಗಂಭೀರವಾಗಿ ಯೋಚಿಸಬೇಕಾಗಿದೆ. ಬಿಜೆಪಿಯ ಈ ನಡವಳಿಕೆಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರವಾದ ಅಪಾಯ ಉಂಟಾಗುವ ಸಂಭವ ಇದೆ. ಎಲ್ಲಿ ಸಂಘ ಪರಿವಾರದ ಪ್ರಭಾವ ಹೆಚ್ಚಾಗಿದೆಯೋ ಅಲ್ಲೆಲ್ಲ ಸರಕಾರಿ ಯಂತ್ರ ಸಂಘದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಂಡುಬರುತ್ತದೆ. ಯಾರು ಸಂಘದ ನಿಲುವುಗಳನ್ನು ವಿರೋಧಿಸುತ್ತಾರೆಯೋ ಅವರ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುವ ಪ್ರವೃತ್ತಿ ಕಂಡುಬರುತ್ತಾ ಇದೆ. ಇದು ಬಿಜೆಪಿ ಹಾಗೂ ಸಂಘ ಪರಿವಾರ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದೇಶ ಯಾವ ರೀತಿ ಸರ್ವಾಧಿಕಾರಕ್ಕೆ ಒಳಗಾಗಬೇಕಾಗಿ ಬರಬಹುದು ಎಂಬುದರ ಸ್ಪಷ್ಟ ಮುನ್ಸೂಚನೆಯಾಗಿದೆ.

ನಿಜ, ದೇಶದಲ್ಲಿರುವ ಪ್ರಧಾನ ಪಕ್ಷವಾದ ಕಾಂಗ್ರೆಸ್ ಪಕ್ಷದಲ್ಲಾಗಲೀ, ಇತರ ಇತರ ಪ್ರಾದೇಶಿಕ ಪಕ್ಷಗಳಲ್ಲಾಗಲೀ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಅವುಗಳು ಬಿಜೆಪಿಯಷ್ಟು ದಬ್ಬಾಳಿಕೆಯ ವಾತಾವರಣವನ್ನು ದೇಶದಲ್ಲಿ ಇದುವರೆಗೆ ಉಂಟುಮಾಡಿಲ್ಲ. ಬಿಜೆಪಿಯ ಹಲವು ನಾಯಕರಿಗೆ ಸೌಮ್ಯವಾಗಿ ಮಾತಾಡುವುದೇ ಗೊತ್ತಿಲ್ಲ. ಇತರರ ಮೇಲೆ ಹಾರಿ ಆಕ್ರಮಣ ಮಾಡುವ ರೀತಿಯಲ್ಲಿ ಉಗ್ರ ಸ್ವರದಲ್ಲಿ ಮಾತಾಡುವುದನ್ನು ನಾವು ಕಾಣಬಹುದು. ಇದು ಪ್ರಜಾಪ್ರಭುತ್ವಕ್ಕೆ ಯೋಗ್ಯವಾದ ನಡವಳಿಕೆಯಲ್ಲ. ಬಿಜೆಪಿಯ ಒಂದು ರಾಜ್ಯದ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಆ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ಒಡ್ಡೋಲಗದ ರೀತಿಯಲ್ಲಿ ನೆರೆಯುವುದನ್ನು ನೋಡಿದರೆ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪಕ್ವವಾದ ನಡವಳಿಕೆಯನ್ನು ರೂಢಿಸಿಕೊಂಡಿಲ್ಲ ಎಂಬುದು ಕಂಡುಬರುತ್ತದೆ. ಕಾಂಗ್ರೆಸ್ ಪಕ್ಷವಾಗಲಿ ಬೇರಾವುದೇ ಪಕ್ಷವಾಗಲೀ ಈ ರೀತಿ ರಾಜಪ್ರಭುತ್ವದ ಶೈಲಿಯನ್ನು ಅಳವಡಿಸಿಕೊಂಡಿಲ್ಲ.

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪುರೋಹಿತಶಾಹಿ ಕಂದಾಚಾರಗಳನ್ನು ಸರ್ಕಾರೀ ಮಟ್ಟದಲ್ಲಿ ಹೆಚ್ಚು ಹೆಚ್ಚು ಜಾರಿಗೆ ತರಲಾಗುತ್ತಿರುವುದು ಕೂಡ ಉತ್ತಮ ಬೆಳವಣಿಗೆಯಲ್ಲ. ಮಂತ್ರಿಗಳು, ಮುಖ್ಯಮಂತ್ರಿಗಳು ತಮ್ಮ ಅಧಿಕಾರ ವಹಿಸಿಕೊಳ್ಳುವಾಗ ಪೂಜೆ, ಹೋಮ ಹವನಗಳನ್ನು ಮಾಡಿಸುವುದು, ವಾಸ್ತುವಿನ ಹೆಸರಿನಲ್ಲಿ ಸರ್ಕಾರಿ ನಿವಾಸಗಳನ್ನು, ಕಟ್ಟಡಗಳನ್ನು ಬೇಕಾಬಿಟ್ಟಿಯಾಗಿ ಜನತೆಯ ತೆರಿಗೆಯ ಹಣದಲ್ಲಿ ನಿರ್ಲಜ್ಜವಾಗಿ ಬದಲಾಯಿಸುವುದು ಇವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಯೋಗ್ಯರಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಇಂದು ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಪ್ರಬಲವಾದ ರಾಷ್ಟ್ರೀಯ ಪಕ್ಷವೊಂದರ ಅವಶ್ಯಕತೆ ಇರುವುದು 750px-BJP-flag.svg[1]ನಿಜವಾದರೂ ಆ ಸ್ಥಾನವನ್ನು ತುಂಬಲು ಬಿಜೆಪಿ ಯೋಗ್ಯವಾದ ಪಕ್ಷವಾಗಿ ಕಂಡುಬರುತ್ತಿಲ್ಲ. ಏಕೆಂದರೆ ಬಿಜೆಪಿ ಜನಪರ ಹೋರಾಟಗಳ ಮೂಲಕ ದೇಶವ್ಯಾಪಿ ಬೆಳೆದ ಪಕ್ಷವಲ್ಲ. ಬಿಜೆಪಿ ಜನತೆಯ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸುಲಭವಾಗಿ ಬೆಳೆದಿರುವ ಕಾರಣ ಆ ಪಕ್ಷದವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಶ್ಯಕತೆಗಳು ಏನು ಎಂಬುದೇ ತಿಳಿದಿಲ್ಲ. ಬಿಜೆಪಿ ಈ ರೀತಿ ಅಸಹಜವಾಗಿ ಬೆಳೆದ ಕಾರಣ ಬೇರೆ ರಾಷ್ಟ್ರೀಯ ಪಕ್ಷವೊಂದರ ಬೆಳವಣಿಗೆ ಆಗುವುದು ಕಷ್ಟ. ಏಕೆಂದರೆ ಈಗಾಗಲೇ ಎರಡು ಬಲಿಷ್ಠ ಪಕ್ಷಗಳು ಇರುವಲ್ಲಿ ಮೂರನೆಯ ಪಕ್ಷವೊಂದನ್ನು ಬೆಳೆಸುವುದು ನಮ್ಮ ದೇಶದಲ್ಲಿ ಬಹಳ ಕಷ್ಟವಿದೆ. ಜನರಲ್ಲಿ ಹೊಸ ಚಿಂತನೆಗಳಾಗಲೀ, ಯೋಚಿಸಿ ಮತ ನೀಡುವ ಪ್ರಭುದ್ಧತೆಯಾಗಲೀ ಬೆಳೆದಿರದ ಕಾರಣ ಹೀಗಾಗುತ್ತದೆ. ಜನರಲ್ಲಿ ಹೊಸ ಚಿಂತನೆಗಳಿಗೆ ಸ್ಪಂದಿಸುವ ವಿಚಾರಶೀಲತೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅಸ್ತಿತ್ವದಲ್ಲಿ ಇರುವ ಪಕ್ಷಗಳು ಯೋಗ್ಯವಾಗಿಲ್ಲ ಎಂದು ಕಂಡುಬಂದರೆ ಹೊಸ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಅದನ್ನು ನಮ್ಮ ಜನ ಉಪಯೋಗಿಸಿಕೊಂಡು ಪ್ರಭುದ್ಧರಾಗಿ ಒಗ್ಗಟ್ಟಿನಿಂದ ಮತದಾನವನ್ನು ಹೊಸ ವ್ಯವಸ್ಥೆಯ ಪರವಾಗಿ ಮಾಡಿದರೆ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸಬಹುದು. ಹೊಸ ಪ್ರಯೋಗಗಳಿಗೆ ನಾವು ಸ್ಪಂದಿಸುತ್ತಾ ಬಂದರೆ ಕಾಲಾನುಕ್ರಮದಲ್ಲಿ ವ್ಯವಸ್ಥೆ ಬದಲಾಗಿಯೇ ಆಗುತ್ತದೆ ಅದಕ್ಕಾಗಿ ನಾವು ಎಚ್ಚತ್ತುಕೊಂಡು ಪ್ರಜಾಪ್ರಭುತ್ವಕ್ಕೆ ಮಾರಕವಾದ ಪಕ್ಷಗಳನ್ನು ತಿರಸ್ಕರಿಸಿ ಹೊಸ ಪಕ್ಷಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಬೇಕಾದ ಅಗತ್ಯ ಇದೆ.

ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಗೆ ಜಾಮೀನು

– ರವಿ ಕೃಷ್ಣಾರೆಡ್ಡಿ

ಅಂತೂ ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಯವರಿಗೆ ನೆನ್ನೆ ಜಾಮೀನು ಸಿಕ್ಕಿತು. ಕ್ಷುಲ್ಲಕ ಒತ್ತಡಗಳಿಗೆ ತಲೆಬಾಗದ ನ್ಯಾಯಪ್ರಜ್ಞೆಯ ಮುಖ್ಯಮಂತ್ರಿ ಇದ್ದಿದ್ದರೆ ಈ ಇಡೀ ಪ್ರಸಂಗವೇ ಅನಗತ್ಯವಾಗಿತ್ತು. ಕೊನೆಗೂ ಹೋ‌ಮ್‌ಸ್ಟೇಯಲ್ಲಿ ದಾಳಿಗೊಳಗಾದ ವ್ಯಕ್ತಿಯೇ ಬಂದು ಹೈಕೋರ್ಟ್‌ನಲ್ಲಿ ನವೀನ್ ಪರವಾಗಿ ಮಾತನಾಡಿದ ಕಾರಣಕ್ಕಾಗಿ ಜಾಮೀನು ಸಿಕ್ಕಿತು. ನವೀನ್ ವಿರುದ್ದದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇದು ಎಂದಾದರೂ ಕೋರ್ಟ್‌ನ ಛೀಮಾರಿಗೆ ಒಳಗಾಗಿ ಬಿದ್ದು ಹೋಗುವ ಕೇಸೇ ಆಗಿತ್ತು. ಆದರೂ ಕೆಲವು ದುಷ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಮತಾಂಧ ನೀಚರ ಕುತಂತ್ರದ ಫಲವಾಗಿ, ಪೋಲಿಸರ ಕಾರ್ಯದಲ್ಲಿ ಅನಗತ್ಯ ಹಸ್ತಕ್ಷೇಪ ಮತ್ತು ಪ್ರಭಾವದಿಂದಾಗಿ ಒಬ್ಬ ನಿರಪರಾಧಿ ಜೈಲಿನಲ್ಲಿರುವಂತಾಗಿದ್ದು ಪ್ರಜ್ಞಾವಂತರಿಗೆಲ್ಲ ಗೊತ್ತಿರುವುದೆ. ಅದು ಈ ನಾಡಿನ ಮುಖ್ಯಮಂತ್ರಿಗೂ ತಿಳಿದಿದೆ. ಅಷ್ಟಾದರೂ, ಸಂಪುಟವೇ ತೀರ್ಮಾನ ತೆಗೆದುಕೊಂಡಿದ್ದರೂ, ಅದಕ್ಕೆ ನಾಮಕಾವಸ್ಥೆ ಸಹಿ ಮಾಡದೆ ಕುಳಿತು, ಅಮಾಯಕರು ಮತ್ತು ನಿರಪರಾಧಿಗಳು ಹೈಕೋರ್ಟ್‌ನ ಮೆಟ್ಟಿಲು ಹತ್ತುವಂತೆ ಮಾಡಿದ ಈ ಮುಖ್ಯಮಂತ್ರಿಯ ಬಗ್ಗೆ ಯಾವ ರೀತಿಯ ಗೌರವ ತೋರುವುದೋ ನನಗಂತೂ ತಿಳಿಯುತ್ತಿಲ್ಲ. ಇಡೀ ಪ್ರಸಂಗವೇ ನಮ್ಮಲ್ಲಿನ ಅನೇಕರಿಗೆ ಅಸಹಾಯಕತೆ, ಆಕ್ರೋಶ, ತಿರಸ್ಕಾರ ಹುಟ್ಟಿಸಿದ ಪ್ರಸಂಗ.

ಹೈಕೋರ್ಟ್‌ನ ಜಾಮೀನು ವಿಚಾರದಲ್ಲಿ ಪ್ರಮುಖವಾಗಿ ಇಬ್ಬರು ಅಭಿನಂದನಾರ್ಹರು: ವಕೀಲ ನಿತಿನ್ ಮತ್ತು ಮಂಗಳೂರಿನ ವಿಜಯ್‌ಕುಮಾರ್. ಇನ್ನೂ ಅನೇಕ ಜನ ಈ ಇಡೀ ಪ್ರಕ್ರಿಯೆಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಸಾಂಘಿಕ ಪ್ರಯತ್ನ ಇಲ್ಲದಿದ್ದರೆ ಬಹುಶಃ ಈ ಸರ್ಕಾರ ವಜಾಗೊಳ್ಳುವ ತನಕ ಇಷ್ಟು ಮಾತ್ರದ ಬೆಳವಣಿಗೆಗೆ ಕಾಯಬೇಕಿತ್ತೇನೊ.

ಅಂದ ಹಾಗೆ, ಬಹುಶಃ ನಾಳೆ ಅಥವ ನಾಡಿದ್ದು ನವೀನ್ ಜೈಲಿನಿಂದ ಹೊರಬರಬಹುದು. ಹೈಕೋರ್ಟ್‌ನ ಆದೇಶದ ಪ್ರತಿ ಇಂದು ದೊರೆತರೆ ಮತ್ತು ಬಾಂಡ್ ನಾಳೆಗೆ ಸಿದ್ದವಾದರೆ, ನವೀನ್ ನಾಳೆ ಬಿಡುಗಡೆ ಆಗಬಹುದು. ಸಣ್ಣಪುಟ್ಟ ವಿಳಂಬವಾದರೂ ಈಗ ಮೊದಲಿನಂತೆ ಅನಿಶ್ಛಿತತೆ ಇಲ್ಲ. ನವೀನ್ ಈ ವಾರದಲ್ಲಿ ಜೈಲಿನಿಂದ ಹೊರಬರುವುದು ನಿಶ್ಚಿತ. ಮತ್ತು ಇಂದಲ್ಲ ನಾಳೆ ಸಂಪುಟದ ನಿರ್ಧಾರಕ್ಕೆ ಸಹಿಯೂ ಬಿದ್ದು ಆರೋಪ ಪಟ್ಟಿಯಿಂದ ನವೀನ್ ಹೆಸರು ಕೈಬಿಡುವುದೂ ನಿಶ್ಚಿತ. ಆದರೆ, ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವುದು ಹೇಗೆ ಎನ್ನುವುದೆ ಮುಂದಿನ ದಿನಗಳಲ್ಲಿಯ ಸವಾಲಿನ ಪ್ರಶ್ನೆ.

ಇವು ನವೀನ್ ಸೂರಿಂಜೆ ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು:

The Hindu:
Hindu_1_19_03_13
Hindu_2_19_03_13

ವಿಜಯ ಕರ್ನಾಟಕ:
VijayKarnataka_19_03_13

ಪ್ರಜಾವಾಣಿ:
prajavani_19_03_13

ಉದಯವಾಣಿ:
udayavani_19_03_13

ಕನ್ನಡ ಪ್ರಭ:
kannadaprabha_19_03_13