ಶಾಪವಿಮೋಚನೆಯತ್ತ ಕರ್ನಾಟಕ

– ಆನಂದ ಪ್ರಸಾದ್

ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ಧಾರ್ಮಿಕ ಮೂಲಭೂತವಾದಿ ಬಿಜೆಪಿ ಹಾಗೂ ಸಂಘ ಪರಿವಾರದ ರೂಪದಲ್ಲಿ ವಕ್ಕರಿಸಿದ್ದ ಶಾಪ ವಿಮೋಚನೆಯಾಗುವ ದಿನಗಳು ಹತ್ತಿರುವಾಗುತ್ತಿವೆಯೇ ಎಂದು ಇತ್ತೀಚೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನೋಡಿದಾಗ ಅನಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಇಂಥ ದಿನಗಳಿಗಾಗಿ ಕರ್ನಾಟಕದ ಪ್ರಜ್ಞಾವಂತರು ಹಾಗೂ ಪ್ರಗತಿಪರ ನಿಲುವಿನ ಜನ ಕಾಯುತ್ತಿದ್ದಾರೆ. ಏನೆಲ್ಲಾ ಕಸರತ್ತು, ಅಧಿಕಾರದ ದುರುಪಯೋಗ, election_countingಧಾರ್ಮಿಕ ವೇಷ ತೊಟ್ಟು ಕುಣಿದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಎರಡನೇ ಸ್ಥಾನಕ್ಕೆ ಬಿಜೆಪಿ ತಳ್ಳಲ್ಪಟ್ಟಿದೆ. ಇದು ಸಂಘ ಪರಿವಾರದ ಕಪಿಮುಷ್ಟಿಯಿಂದ ರಾಜ್ಯ ಮುಕ್ತಿಪಡೆಯುವ ಆಶಾಭಾವನೆಯನ್ನು ಮೂಡಿಸಿದೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಹಸ್ತಕ್ಷೇಪ ಆಡಳಿತದ ಎಲ್ಲಾ ಹಂತಗಳಲ್ಲೂ ಆವರಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಮಂಕಾಗಿತ್ತು. ಇದರಿಂದ ಈ ಭಾಗ ಬಿಡುಗಡೆಯಾಗುವ ಲಕ್ಷಣಗಳು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಕಂಡುಬಂದಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಧಾರ್ಮಿಕ ಮೂಲಭೂತವಾದದ ಪ್ರಯೋಗಶಾಲೆಯಾಗಿ ಈ ಎರಡು ಜಿಲ್ಲೆಗಳಲ್ಲಿ ಪ್ರಜ್ಞಾವಂತರಿಗೆ ಸಂಘ ಪರಿವಾರ ಹಾಗೂ ಬಿಜೆಪಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುತ್ತಿದ್ದದ್ದು ಇಲ್ಲಿ ಮುಕ್ತ ಚಿಂತನೆಗೆ ಅವಕಾಶವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಆಡಳಿತದಲ್ಲೂ ಹಸ್ತಕ್ಷೇಪ ನಡೆಸಲಾರಂಭಿಸಿದ ಸಂಘದ ಮುಖಂಡರು ಚುನಾವಣೆಗೆ ನಿಂತು ಗೆಲ್ಲದೆಯೇ ತಮ್ಮ ಸರ್ವಾಧಿಕಾರ ಮನೋಭಾವನೆಯನ್ನು ಆಡಳಿತದಲ್ಲಿ ತೋರಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಸಮರ್ಪಕ ಪರ್ಯಾಯ ರಾಜಕೀಯ ಇಲ್ಲದೆ ಹೋದುದೇ ಇಂಥ ಒಂದು ಅಪಾಯಕಾರೀ ಬೆಳವಣಿಗೆಗೆ ಕಾರಣವಾಗಿದೆ. ಧಾರ್ಮಿಕವಾಗಿ ಹೆಚ್ಚು ನಂಬಿಕೆ ಉಳ್ಳ ಕರ್ನಾಟಕದ ಜನ ಧಾರ್ಮಿಕತೆಯ ವೇಷ ತೊಟ್ಟ ಬಿಜೆಪಿ ಹಾಗೂ ಸಂಘ ಪರಿವಾರದ ಆಡಳಿತ ಬಂದರೆ ಹೆಚ್ಚು ಉತ್ತಮ ಆಡಳಿತ ನೀಡಬಹುದೇನೋ ಎಂಬ ಭ್ರಮೆಗೆ ಸಿಲುಕಿ ಇಡೀ ರಾಜ್ಯವೇ ಐದು ವರ್ಷಗಳ ಕಾಲ ಮೇರೆ ಇಲ್ಲದ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆಯ ಹಗಲುದರೋಡೆಗೆ ಒಳಗಾಗಿ ನರಳುವಂತೆ ಆಯಿತು.srhiremath ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರ ಪ್ರಯತ್ನ ಇಲ್ಲದೆ ಇದ್ದಿದ್ದರೆ ಗಣಿಧಣಿಗಳು ಜೈಲಿಗೆ ಹೋಗದೆ ಈಗಲೂ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರು. ಸದ್ಯ ಅವರು ಜೈಲಿನಲ್ಲಿರುವ ಕಾರಣ ರಾಜ್ಯದ ರಾಜಕೀಯ ಸ್ವಲ್ಪವಾದರೂ ಸುಧಾರಿಸಿದೆ. ರೆಡ್ಡಿಯ ಅಕ್ರಮ ಗಣಿಗಾರಿಕೆಯ ಹಣದ ಬಲದಲ್ಲಿ ಕಟ್ಟಿದ ಬಿ.ಎಸ್. ಆರ್. ಕಾಂಗ್ರೆಸ್ ಪಕ್ಷದ ಗೋಮುಖವ್ಯಾಘ್ರತನವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳ್ಳಾರಿಯ ಜನ ಹಿಮ್ಮೆಟ್ಟಿಸಿರುವುದು ಇಡೀ ರಾಜ್ಯವೇ ನಿಟ್ಟುಸಿರುಬಿಡುವ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಪಕ್ಷವು ಚುನಾವಣೆಗಳಲ್ಲಿ ಬಿಜೆಪಿಯ ಸಮಬಲಕ್ಕೆ ಬರುವಷ್ಟು ಸ್ಥಾನಗಳನ್ನು ಗಳಿಸಿರುವುದು ರಾಜ್ಯದ ಮಟ್ಟಿಗೆ ಇನ್ನೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಮುಂಬರುವ ದಿನಗಳಲ್ಲಿ ಬಿಜೆಪಿಯಂಥ ಧಾರ್ಮಿಕ ಮೂಲಭೂತವಾದಿ ಪಕ್ಷದ ಜೊತೆ ಕೈ ಜೋಡಿಸದೆ ಅವಕಾಶವಾದಿ ರಾಜಕಾರಣದಿಂದ ದೂರ ಉಳಿದರೆ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬೆಳೆಯುವ ಸಂಭವ ಇದೆ. ಒಂದು ವೇಳೆ ಅಧಿಕಾರದ ಆಸೆಗೆ ಧಾರ್ಮಿಕ ಮೂಲಭೂತವಾದಿ ಪಕ್ಷವಾದ ಬಿಜೆಪಿ ಜೊತೆ ಕೈ ಜೋಡಿಸಿದರೆ ಅದರ ಬೆಳವಣಿಗೆ ಸ್ಥಗಿತವಾಗಲಿದೆ.

ಯಡಿಯೂರಪ್ಪ ಯಡಿಯೂರಪ್ಪ ನೇತೃತ್ವದ ಕೆಜೆಪಿಯೂ ಮಹತ್ವದ ಸಾಧನೆ ತೋರಿಸುವಲ್ಲಿ ವಿಫಲವಾಗಿದೆ. ಯಾವುದೇ ತತ್ವ, ಸಿದ್ಧಾಂತ ಇಲ್ಲದ ಭ್ರಷ್ಟತೆಯ ಗರ್ಭದಿಂದ ಮೂಡಿಬಂದ ಕೆಜೆಪಿಯೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆ ತೋರಿಸುವ ಸಂಭವ ಇಲ್ಲ. ಇದು ಕೊನೆಗೆ ಬಿಜೆಪಿಯಲ್ಲಿ ವಿಲೀನವಾಗುವ ಸಂಭವವೇ ಹೆಚ್ಚು. ಪಕ್ಷೇತರರು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿಸಿ ಬಂದಿರುವುದು ಪ್ರಮುಖ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆ ಕಳೆದುಕೊಂಡಿರುವುದರ ದ್ಯೋತಕವಾಗಿ ಕಾಣುತ್ತದೆ. ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಭವ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತೋರಿಸುತ್ತಿವೆ. ಇದು ನಿಜವಾಗುವ ಸಂಭವವೇ ಹೆಚ್ಚು ಏಕೆಂದರೆ ಸದ್ಯಕ್ಕೆ ಬೇರೆ ಪರ್ಯಾಯ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪರ್ಯಾಯ ಶಕ್ತಿಯಾಗುವಷ್ಟು ಬೆಳೆದಿಲ್ಲ. ಸಮೀಕ್ಷೆಗಳು ಜೆಡಿಎಸ್ ವಿಧಾನಸಭಾ ಚುನಾವಣೆಗಳಲ್ಲಿ ಮೊದಲು ಇದ್ದಷ್ಟೇ ಸ್ಥಾನಗಳನ್ನು ಗಳಿಸಬಹುದು ಎಂದು ಹೇಳುತ್ತವೆಯಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಬಿಜೆಪಿಗೆ ಸಮನಾಗಿ ಸಾಧನೆ ಮಾಡಿರುವುದು ನೋಡಿದರೆ ಅದು ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಮೂಲಭೂತವಾದಿ ಬಿಜೆಪಿ ಜೊತೆಗೂಡದೆ ಸಮರ್ಥ voteಪ್ರತಿಪಕ್ಷವಾಗಿ ಕೆಲಸ ಮಾಡಿದರೆ ಐದು ವರ್ಷಗಳ ನಂತರ ಜೆಡಿಎಸ್ ಅಧಿಕಾರಕ್ಕೆ ಬರುವಷ್ಟು ಬೆಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿಗೆ ಒಂದು ಅವಕಾಶ ಕೊಟ್ಟು ನೋಡಿರುವ ಜನ ಅದರ ಭ್ರಷ್ಟತೆ, ಅಧಿಕಾರದಾಹ, ಸರ್ವಾಧಿಕಾರಿ ಮನೋಭಾವ, ಅದರ ಸಂಘ ಪರಿವಾರಕ್ಕೆ ಸಂವಿಧಾನಬಾಹಿರವಾಗಿ ಗುಲಾಮನಂತೆ ನಡೆದುಕೊಳ್ಳುವ ರೀತಿಯಿಂದ ರೋಸಿಹೊಗಿರುವುದು ಸ್ಪಷ್ಟ. ಹೀಗಾಗಿ ಇದು ಮೊದಲಿನಂತೆ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಂಭವ ಅಧಿಕವಾಗಿದೆ ಮತ್ತು ಹಾಗಾದರೆ ಕನ್ನಡನಾಡಿಗೆ ಒಳಿತಾಗಲಿದೆ. ಕನ್ನಡನಾಡು ಮೊದಲಿನಿಂದಲೂ ಮೂಲಭೂತವಾದಿಗಳ ತವರು ಆಗಿರಲಿಲ್ಲ. ಇಲ್ಲಿ ಸಾಕಷ್ಟು ಪ್ರಗತಿಪರ ನಿಲುವಿನ ಶಕ್ತಿಗಳು ಹಾಗೂ ಮಾಧ್ಯಮಗಳು ಇವೆ. ಜನ ಧಾರ್ಮಿಕತೆಯ ವೇಷ ಹಾಕಿದ ಕಪಟಿಗಳ ಬಗ್ಗೆ ಎಚ್ಚತ್ತುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಹಾಗೂ ಇದು ಅಗತ್ಯವಾಗಿ ಆಗಬೇಕಾಗಿರುವ ಬೆಳವಣಿಗೆಯೂ ಹೌದು.

ತಮ್ಮಂತೆ ಎಲ್ಲರೂ ಜಾತಿರೋಗಿಗಳಾಗಬೇಕೆಂದು ಬಯಸುವ ಜಾತಿ ಸಂಘಗಳು

– ರವಿ ಕೃಷ್ಣಾರೆಡ್ಡಿ

ಫೆಬ್ರವರಿ.24, 2013 ರಂದು ಹಾಸನದಲ್ಲಿ ಅಲ್ಲಿಯ ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿದ್ದದ್ದು, ಅಲ್ಲಿ ಮಾಂಸಾಹಾರದ ತಿನಿಸುಗಳ ಮಾರಾಟಕ್ಕಿಟ್ಟದ್ದು, ಮತ್ತು ತದನಂತರದ ಕೆಲವು ವಾದವಿವಾದಗಳು ನಮ್ಮ ಓದುಗರಿಗೆ “ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!” ಲೇಖನದ ಮೂಲಕ ಗೊತ್ತಿರುವಂತಹುದೆ. ಒಂದು ಕೀಳುಮಟ್ಟದ ಅಪ್ರಪ್ರಚಾರ ಮತ್ತು ಅನೈತಿಕ ಪತ್ರಿಕೋದ್ಯಮಕ್ಕೆ ಮಾದರಿ ಈ ಘಟನೆಗಳು.

ಹಾಗೆಯೇ, ತಮಗೆ ಸಂಬಂಧಪಟ್ಟಿಲ್ಲದ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಜಾತ್ಯತೀತ ಲೇಖಕಿ “ತಮ್ಮ ಜಾತಿ-ಮತದವಳು” ಎಂಬ ಒಂದೇ ಕಾರಣಕ್ಕೆ ಅವರ ಮೇಲೆ ಹಕ್ಕುಸ್ವಾಮ್ಯ ಮಾಡಹೊರಟ ಅಲ್ಲಿಯ ಜೈನ ಸಂಘದ ವರ್ತನೆ ಅಪ್ರಬುಧ್ಹತೆಯುಳ್ಳದ್ದು ಮತ್ತದು ಖಂಡನೀಯ. ಮಾಂಸಾಹಾರದ ಬಗ್ಗೆ ತಮ್ಮ ತಕರಾರುಗಳಿದ್ದರೆ ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಈ ಜೈನ ಸಂಘ ತನ್ನ ಅಭಿಪ್ರಾಯ ಪ್ರಕಟಿಸಬೇಕಿತ್ತೇ ಹೊರತು ಕೇವಲ ರೂಪ ಹಾಸನರ ಹೇಳಿಕೆಯನ್ನು ಖಂಡಿಸಿದ್ದು, ಆದಕ್ಕಾಗಿ ಖಂಡನಾ ನಿರ್ಣಯಗಳನ್ನು ಕೈಗೊಳ್ಳುವುದು, ಕ್ಷಮೆ ಕೇಳಿ, ವಿಷಾದ ವ್ಯಕ್ತಪಡಿಸಿ ಎನ್ನುವುದು ಆ ಸಂಘದಲ್ಲಿರುವ ಮತಾಂಧರ ಮನಸ್ಥಿತಿಯನ್ನು ತೋರಿಸುತ್ತದೆ.

ರೂಪ ಹಾಸನರು ಜೈನ ಸಂಘದ ಪದಾಧಿಕಾರಿಗಳೇ ಅಥವ ಜೈನ ಮತದ ಪ್ರತಿನಿಧಿಯೇ? ಅಲ್ಲವೇ ಅಲ್ಲ. ಹಾಗಾಗಿ, ಕೇವಲ ರೂಪ ಹಾಸನರ ಹೇಳಿಕೆ ಖಂಡಿಸಿ ನಿರ್ಣಯ ತೆಗೆದುಕೊಂಡ ಈ ಸಂಘ ತನ್ನ ವ್ಯಾಪ್ತಿಯನ್ನು ಮೀರಿದೆ ಮತ್ತು ಪಾಳೇಗಾರಿಕೆ ಮನೋಭಾವದಿಂದ, ಸಂಕುಚಿತ ಜಾತಿಪ್ರಜ್ಞೆಯಿಂದ ನರಳುತ್ತಿದೆ. ಹಾಗೆಯೇ, ತಾನೆಷ್ಟು ಪ್ರತಿಗಾಮಿ ಮತ್ತು ತಮ್ಮ ಪದಾಧಿಕಾರಿಗಳು ಎಷ್ಟು ದಡ್ಡರು, ಅವಿವೇಕಿಗಳು, ಎಂದು ಜಾಹೀರು ಪಡಿಸಿಕೊಂಡಿದೆ. ಈ ಜಾತಿ ಸಂಘಟನೆಗಳಲ್ಲಿ ಒಂದಿಷ್ಟಾದರೂ ಕಾಮನ್ ಸೆನ್ಸ್ ಇರುವವರು ಇರುವುದಿಲ್ಲವೇ? ಯಾರಾದರೂ ಇಂತಹ ನಿರ್ಣಯಗಳ ವಿರುದ್ಧ ಕೋರ್ಟಿಗೆ ಹೋಗಿ ಇವರ ಅಧಿಕಾರದ ಅಥವ ಅಜ್ಞಾನದ ಮಿತಿಯನ್ನು ತಿಳಿಯಪಡಿಸಬೇಕು.

ಹೀಗೆ ಜಾತ್ಯತೀತರ ಮೇಲೆಲ್ಲ ಅವರು ನಮ್ಮನಮ್ಮ ಜಾತಿಗೆ ಸೇರಿದವರು ಎಂದು ಭಾವಿಸಿಕೊಂಡು ಈ ಲೇಖಕರು-ಚಿಂತಕರು ನಮ್ಮಂತೆ ಕೀಳು ಜಾತಿಮನೋಭಾವನೆಯ ಕಾಯಿಲೆಗೆ ಒಳಗಾಗಿಲ್ಲ, ಅವರೂ ಈ ಕಾಯಿಲೆ ಹತ್ತಿಸಿಕೊಂಡು ಓಡಾಡಾಬೇಕು ಎಂದು ಜಾತಿ ಸಂಘಟನೆಗಳೆಲ್ಲ ಹೇಳಿಕೆ ಕೊಡುತ್ತ ಹೊರಟರೆ, ಅವರು ನಗೆಪಾಟಲಿಗೀಡಾಗುತ್ತಾರಷ್ಟೇ ಅಲ್ಲ, ಅವರೆಲ್ಲರ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ.

ಜೈನ ಸಂಘದ ಹೇಳಿಕೆಗೆ ರೂಪ ಹಾಸನರು ಪ್ರತಿಕ್ರಿಯಿಸಿ “ಜನಮಿತ್ರ”ಕ್ಕೆ ಪತ್ರ ಬರೆದಿದ್ದಾರೆ ಮತ್ತು ಅದು ಆ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜೈನ ಸಂಘದ ನಿರ್ಣಯ, ಮತ್ತು “ಜನಮಿತ್ರ”ದಲ್ಲಿ ಪ್ರಕಟಗೊಂಡ ಪತ್ರಗಳು ಇಲ್ಲಿವೆ. ಪತ್ರಿಕೆಗಳ ಮತ್ತು ಸಂಘಟನೆಗಳ ಪ್ರತಿನಿಧಿಗಳು ಜವಾಬ್ದಾರಿಯಿಂದ ಮತ್ತು ಪ್ರಗತಿಪರ ಮನೋಭಾವದಿಂದ ಕಾರ್ಯನಿರ್ವಹಿಸಲಿ ಎಂದು ಆಶಿಸೋಣ.

jain-sangh-rupa-hassan
rupa-hassan-janamitra

ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!

– ತ್ರಿಲೋಕನಾಥ್ ಹೊಸಗದ್ದೆ

ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದ ಆವರಣದಲ್ಲಿ ದಿನಾಂಕ ಫೆ.24 ರಂದು ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿತ್ತು. ಮೇಳದ ಪ್ರಯುಕ್ತ ಜೋಳದ ರೊಟ್ಟಿ, ಹೋಳಿಗೆ, ವಿವಿಧ ಕಾಳಿನ ಸಾರು, ಚಿಕನ್, ಮಟನ್, ಹಂದಿ ಮಾಂಸದ ವಿವಿಧ ಖಾದ್ಯಗಳು ಪ್ರದರ್ಶನದಲ್ಲಿದ್ದವು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಇಚ್ಚೆಗನುಗುಣವಾಗಿ ಆಹಾರ ಪದಾರ್ಥ ಸೇವಿಸಿದರು, ಕೊಂಡು ಹೋದರು.

ಸದ್ಯ ಆಹಾರ ಮೇಳದ ಹಿನ್ನೆಲೆಯಲ್ಲಿ ಹಾಸನದಲ್ಲಿ ವಿವಾದ ಎದ್ದಿದೆ. ಕವಿ, ಲೇಖಕಿ ಹಾಗೂ ಸಮಾನ ಶಿಕ್ಷಣಕ್ಕಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ನಡೆಯುವ ಹೋರಾಟಗಳಲ್ಲಿ ಭಾಗಿಯಾಗಿರುವ ರೂಪಾ ಹಾಸನ ಅವರು ಜೈನ ಸಮಾಜದ ಮುಖಂಡರಿಂದ ವಿರೋಧ, ಕ್ಷಮಾಪಣೆಗೆ ಆಗ್ರಹಗಳನ್ನು ಎದುರಿಸಬೇಕಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಗೆ ಒಂದಿಷ್ಟು ಹಿನ್ನೆಲೆ ಇಲ್ಲಿದೆ. ಆಹಾರ ಮೇಳದ ಕಾರ್ಯಕ್ರಮದ ದಿನವೇ ಹಾಸನದ ಪತ್ರಿಕೆ ‘ಜನಮಿತ್ರ’ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಪದಾರ್ಥಗಳ ವ್ಯವಸ್ಥೆ ಮಾಡುವ ಕ್ರಮವನ್ನು ಪ್ರಶ್ನಿಸಿ ಒಂದು ಸುದ್ದಿಯನ್ನು ಪ್ರಮುಖವಾಗಿ ಪ್ರಕಟಿಸಿತ್ತು. ಸುದ್ದಿ ಬರೆದ ಪತ್ರಿಕೆಯ ಮುಖ್ಯ ಸಂಪಾದಕ ಕೆ.ಪಿ.ಎಸ್. ಪ್ರಮೋದ್, ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಸೇವನೆ, ಮಾರಾಟವನ್ನು ಟೀಕಿಸಿದ್ದರು. ನಂತರ ಅನೇಕರು ಪತ್ರಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಾದದ ಸರಣಿಯಲ್ಲಿ ಕೆಲ ಪ್ರಜ್ಞಾವಂತರು ಜಾನಪದ ಆಹಾರ ಮೇಲ್ವರ್ಗದವರ ಖಾದ್ಯಗಳಿಗಷ್ಟೇ ಸೀಮಿತವಾದದ್ದು ಸರಿಯಲ್ಲ ಎಂದರು. ಜಾನಪದ ಪರಿಷತ್ತು ದನದ ಮಾಂಸವನ್ನು ‘ಆಹಾರ’ ಎಂದು ಏಕೆ ಗ್ರಹಿಸಲಿಲ್ಲ ಎಂದು ಸರಿಯಾಗಿಯೇ ಪ್ರಶ್ನೆ ಮಾಡಿದ್ದರು.

ಜಿಲ್ಲಾ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡರು ಇನ್ನೊಂದು ಪ್ರಮುಖ ದಿನಪತ್ರಿಕೆ ‘ಜನತಾ ಮಾಧ್ಯಮ’ದಲ್ಲಿ ಲೇಖನವೊಂದನ್ನು ಬರೆದು ಆಹಾರ ಮೇಳದಲ್ಲಿ ಮಾಂಸಾಹಾರದ ಪ್ರಸ್ತುತತೆಯನ್ನು ಪ್ರಶ್ನಿಸಿದವರನ್ನು ಖಾರವಾಗಿಯೇ ಟೀಕಿಸಿದರು. ‘ಮಾಂಸಾಹಾರದ ವ್ಯವಸ್ಥೆ ಮಾಡಿದ್ದು ತಪ್ಪಲ್ಲ, ಸಾಹಿತ್ಯ ಪರಿಷತ್ತೇನು ಶಂಕರ ಮಠ ಅಲ್ಲ’ ಎಂದು ಉತ್ತರಿಸಿದರು. ಮುಂದಿನ ಆಹಾರ ಮೇಳಗಳಲ್ಲಿ ದನದ ಮಾಂಸವನ್ನೂ ಸೇರಿಸುವ ಮಾತುಗಳನ್ನಾಡಿದರು.

ವಿಜಯವಾಣಿ ದಿನಪತ್ರಿಕೆಯ ಹಾಸನ ವರದಿಗಾರರು ತಮ್ಮ ವಾರದ ಅಂಕಣ ‘ಲೌಡ್ ಸ್ಪೀಕರ್’ ಗೆ ಚರ್ಚಾ ವಿಶೇಷವಾಗಿ ಇದೇ ವಿವಾದವನ್ನು ಆಯ್ದುಕೊಂಡು ದಿನಾಂಕ ಮಾ.5 ರಂದು ಕೆಲವರ ಅಭಿಪ್ರಾಯ ಪ್ರಕಟಿಸಿದರು. ಹೀಗೆ ಪತ್ರಿಕೆಯ ಕೋರಿಕೆ ಮೇರೆಗೆ ಪ್ರತಿಕ್ರಿಯಿಸಿದವರಲ್ಲಿ ರೂಪಾ ಹಾಸನ ಕೂಡಾ ಒಬ್ಬರು. ಅವರ ಅಭಿಪ್ರಾಯ ಹೀಗಿತ್ತು -“ಆಹಾರದಲ್ಲಿ ಅದು ಪವಿತ್ರ, ಇದು ಅಪವಿತ್ರ ಎನ್ನುವ ಭಾವನೆ ಸರಿಯಲ್ಲ. ಆಹಾರಕ್ಕೆ ಯಾವ ದೋಷವೂ ಇಲ್ಲ. ಸಾಹಿತ್ಯ ಪರಿಷತ್ ಭವನದಲ್ಲಿ ಮಾಂಸಾಹಾರ reactionಮಾರಾಟ ಮಾಡಿದ್ದರಲ್ಲಿ ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ.” ಅಭಿಪ್ರಾಯದ ಕೊನೆಯಲ್ಲಿ ರೂಪಾ ಹಾಸನ ಅವರನ್ನು ‘ಲೇಖಕಿ’ ಎಂದು ಗುರುತಿಸಲಾಗಿತ್ತು.

ತಲೆ ಸರಿಯಿರುವ, ಸಮಚಿತ್ತದಿಂದ ಎಲ್ಲಾ ತೆರನ ಅಭಿಪ್ರಾಯಗಳನ್ನು ಸ್ವೀಕರಿಸುವ ಮನಸ್ಥಿತಿಯಿರುವ ಯಾರಿಗೇ ಆಗಲಿ, ರೂಪಾ ಹಾಸನ ಅವರ ಮಾತುಗಳಲ್ಲಿ ಯಾವ ತಪ್ಪೂ ಕಾಣುವುದಿಲ್ಲ, ವಿವಾದವನ್ನಾಗಿ ಲಂಬಿಸಬಲ್ಲ ಯಾವ ಅಂಶವೂ ಸಿಗುವುದಿಲ್ಲ. ಆದರೆ ‘ಜನಮಿತ್ರ’ ಪತ್ರಿಕೆಗೆ ಅವರ ಹೇಳಿಕೆ ‘ಜೈನ ಧರ್ಮದ ಅವಹೇಳನವಾಗಿ’ ಕಂಡಿತ್ತು.

ರೂಪಾ ಹಾಸನ ಅವರ ಪರಿಚಯ ಇರುವ ಅನೇಕರಿಗೆ ಅವರು ಜೈನ ಧರ್ಮದಲ್ಲಿ ಹುಟ್ಟಿದವರು ಎಂದು ಗೊತ್ತಿರಲಿಕ್ಕಿಲ್ಲ. ವಿಜಯವಾಣಿ ಪತ್ರಿಕೆ ಸಿಬ್ಬಂದಿ ಕೂಡಾ ಅವರನ್ನು ಜೈನ ಧರ್ಮದವರು ಎಂಬ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಕೇಳಿಲ್ಲ. ಅವರು ಲೇಖಕಿ ಎಂಬ ಕಾರಣಕ್ಕೆ ಅಭಿಪ್ರಾಯ ಕೇಳಿದ್ದಾರೆ.

“ಜನಮಿತ್ರ” ಪತ್ರಿಕೆ ತನ್ನ ಮಾ.6 ರ ಸಂಚಿಕೆಯಲ್ಲಿ ‘ಜೈನಧರ್ಮ ಮಾಂಸಾಹಾರವನ್ನು ಪ್ರಚೋದಿಸುತ್ತದೆಯೇ?’ ಎಂಬ ತಲೆಬರಹದಡಿಯಲ್ಲಿ ರೂಪಾ ಹಾಸನ ಅವರು ಮತ್ತೊಂದು ಪತ್ರಿಕೆಗೆ ನೀಡಿದ ಅಭಿಪ್ರಾಯವನ್ನು ಟೀಕಿಸುವ ಲೇಖನವನ್ನು ಪ್ರಕಟಿಸಿತು. ಅದನ್ನು ಬರೆದವರೂ ಪತ್ರಿಕೆಯ ಮುಖ್ಯ ಸಂಪಾದಕ ಪ್ರಮೋದ್ ಅವರೆ.

ಲೇಖನದ ಕೆಲ ವಾಕ್ಯಗಳಂತೂ ಅದರ ಹಿಂದೆ ಯಾವುದೋ ದುರುದ್ದೇಶ ಇದೆ ಎಂಬುದನ್ನು ಒತ್ತಿ ಹೇಳುತ್ತಿದ್ದವು. ಅಹಿಂಸೆ ತತ್ವವನ್ನು ತಲತಲಾಂತರದಿಂದ ಪ್ರತಿಪಾದಿಸಿಕೊಂಡು ಬಂದಂತಹ ಜೈನ ಸಮುದಾಯ ಮಾಂಸಾಹಾರವನ್ನು ಪ್ರಚೋದಿಸುತ್ತಾರೆಯೇ ಎಂದು ಪ್ರಶ್ನಿಸಿದರೆ ಖಂಡಿತ ಇಲ್ಲ ಎಂದು ಹೇಳಿಬಿಡಬಹುದು. ಆದರೆ ಅದೇ ಜೈನ ಸಮುದಾಯಕ್ಕೆ ಸೇರಿದ ಲೇಖಕಿ ಪ್ರಖ್ಯಾತ ಸಾಹಿತಿ ರೂಪಾ ಹಾಸನ ಮಾತ್ರ ಮಾಂಸಾಹಾರ ಸೇವನೆಯೇ ಸರಿ ಎಂದು ಪ್ರತಿಪಾದಿಸಲು ಹೊರಟಿದ್ದಾರೆ… – ಹೀಗೆ ಆರಂಭವಾಗುತ್ತದೆ ಪತ್ರಿಕೆಯ ಬರಹ.

ಜೈನ ಧರ್ಮದಲ್ಲಿ ಹುಟ್ಟಿರುವ ಕಾರಣಕ್ಕೆ, ಆ ಧರ್ಮದ ಎಲ್ಲರಿಗೂ ಮಾಂಸಾಹಾರ ಅಪವಿತ್ರವಾಗಿ ಕಾಣಬೇಕು ಎಂಬ ದನಿ ಈ ಲೇಖನದಲ್ಲಿದೆ. ಹಾಗಾದರೆ ಪತ್ರಿಕೆಯ ಎಲ್ಲಾ ಸಂಪಾದಕೀಯ ಬರಹಗಳನ್ನು, ಸುದ್ದಿ ವಿಶ್ಲೇಷಣೆಗಳನು ಆ ಮಾಲೀಕರ ಜಾತಿ, ಧರ್ಮಕ್ಕೆ ಸೀಮಿತವಾಗಿ ಗ್ರಹಿಸಲು ಸಾಧ್ಯವೇ?

ಲೇಖಕಿಯವರ ಎರಡು ಸಾಲಿನ ಅಭಿಪ್ರಾಯಕ್ಕೆ (ಅದೂ ಮತ್ತೊಂದು ಪತ್ರಿಕೆಯಲ್ಲಿ ಪ್ರಕಟವಾದದ್ದಕ್ಕೆ) ಧರ್ಮದ ಲೇಪ ಹಚ್ಚಿ ಟೀಕೆ ಮಾಡುವುದು ಅದ್ಯಾವ ಪತ್ರಿಕಾ ಧರ್ಮ? ರೂಪ ಅವರು ಜೈನಧರ್ಮೀಯರಾಗಿ ಪ್ರತಿಕ್ರಿಯೆ ನೀಡಿದ್ದಾರೆಯೆ? ಅಷ್ಟನ್ನೂ ಗ್ರಹಿಸಲಾಗದವರು ಒಂದು ಸುದೀರ್ಘ ಇತಿಹಾಸ ಇರುವ ಘನ ಪತ್ರಿಕೆಯ ಮುಖ್ಯ ಸಂಪಾದಕರಾಗಿಬಿಟ್ಟರೆ?
ಈ ಅಪ್ರತಿಮ ಪತ್ರಕರ್ತರ ಬುದ್ಧಿವಂತಿಕೆ ಅಲ್ಲಿಗೆ ನಿಲ್ಲುವುದಿಲ್ಲ.

ರೂಪ ಅವರ ಅಭಿಪ್ರಾಯ ಸ್ಪಷ್ಟ ಕನ್ನಡದಲ್ಲಿದೆ. ಕನ್ನಡ ಓದಬಲ್ಲ ಯಾರೇ ಆಗಲಿ, ಅದರಲ್ಲಿ ಅವರು ಎಲ್ಲಿಯಾದರೂ ಪರಿಷತ್ತು ಭವನ ಮಾಂಸಾಹಾರಕ್ಕೆ ಸೂಕ್ತ ಎಂದು ಹೇಳಿದ್ದಾರೆಯೆ? ಅಥವಾ ಅವರು ತಾನು ಜೈನ ಧರ್ಮೀಯಳಾಗಿ ಹೀಗೆ ಅಭಿಪ್ರಾಯ ಪಟ್ಟಿದ್ದೇನೆ ಎಂದು ಹೇಳಿದ್ದಾರೆಯೆ? ಅವರ ಮಾತು ಜೈನ ಧರ್ಮದ ಅಭಿಪ್ರಾಯವಾಗಲು ರೂಪಾ ಹಾಸನರೇನು ಜೈನ ಧರ್ಮದ ಪೀಠಾಧ್ಯಕ್ಷರೇನು? ಇಡೀ ಜೈನ ಸಮುದಾಯವನ್ನು ಅವಮಾನಗೊಳಿಸುವ ಸಂಗತಿ ಅದರಲ್ಲೇನಿದೆ? ಕಿಡಿ ಹತ್ತಿಸಿ ತಮಾಷೆ ನೋಡುವ ಅಥವಾ ಬೆಂಕಿ ಕಾಯಿಸಿಕೊಳ್ಳುವ ಕುತ್ಸಿತ ಮನಸ್ಸು ಈ ಮುಖ್ಯ ಸಂಪಾದಕರಿಗೇಕೆ?

ಇವರು ಕಿಡಿ ಹಚ್ಚಿದ್ದುದರ ಪರಿಣಾಮ ಹಾಸನದ ಜೈನ ಸಂಘದ ಸದಸ್ಯರು ದಿನಾಂಕ 6 ರಂದು ಸಭೆ ಸೇರಿ, ಪತ್ರಿಕೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯದಂತೆಯೇ, ಲೇಖಕಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ರೂಪಾ ಹಾಸನ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಅಂತಹ ಹೇಳಿಕೆ ನೀಡಿದಕ್ಕಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಈ ಬೆಳವಣಿಗೆಯ ನಂತರ ಜನಮಿತ್ರದ ಪತ್ರಕರ್ತ ಶಿರೋಮಣಿಗಳು ‘ಜನಮಿತ್ರ ಫಲಶೃತಿ’ ಎಂದು ಲೇಬಲ್ ಹಾಕಿಕೊಂಡು ಆ ಸುದ್ದಿಯನ್ನೂ ಪ್ರಕಟಿಸಿ ಕಾಲರ್ ಹಾರಿಸಿದರೂ ಅಚ್ಚರಿ ಪಡಬೇಕಿಲ್ಲ.

ಸಮಾಜದ ಮುಖಂಡರಿಗೇನು ಕನ್ನಡ ಅರ್ಥವಾಗುವುದಿಲ್ಲವೇ? ಅವರ ಹೇಳಿಕೆಯಲ್ಲಿ ಧರ್ಮದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ ಎಂದು ಎಲ್ಲಿಯಾದರೂ ಮತನಾಡಿದ್ದಾರ ಎನ್ನುವುದನ್ನು ತೆರೆದ ಮನಸ್ಸಿನಿಂದ ಗ್ರಹಿಸುವಷ್ಟೂ ಪ್ರೌಢಿಮೆ ಅವರಿಗಿಲ್ಲವೆ?

ಹಾಸನದ ಗಲ್ಲಿಗಳಲ್ಲಿ ಸದ್ಯ ಹಬ್ಬಿರುವ ಗುಲ್ಲೆಂದರೆ ಇಡೀ ಪ್ರಕರಣದ ಹಿಂದೆ ಕೀಳು ಮಟ್ಟದ ರಾಜಕೀಯ ಇದೆ. ಈ ಲೇಖನಗಳನ್ನು ಬರೆದವರು ಮುಖ್ಯ ಸಂಪಾದಕರಲ್ಲ. ಅವರಿಗೆ ಹೀಗೆಲ್ಲಾ ಬರೆದು ಅಭ್ಯಾಸವಿಲ್ಲ. ಕನ್ನಡದ ಅನೇಕ ಸಂಪಾದಕರಂತೆ ಅವರು ‘ಬರೆಯುವ ಸಂಪಾದಕರಲ್ಲ’. ಆದರೆ ಅದೇ ಪತ್ರಿಕೆಯಲ್ಲಿ ಸಂಪಾದಕ ಹುದ್ದೆಯಲ್ಲಿರುವ ಎಚ್. ಬಿ. ಮದನ್ ಗೌಡ ಅವರ ದುರುದ್ದೇಶ ಪೂರಿತ ಪ್ರಲಾಪಗಳಿವು.

ಈ ಹಿಂದಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಇದೇ ಮದನ್ ಗೌಡ. ಅವರ ಕಾಲಾನುಕ್ರಮದಲ್ಲಿ ಪರಿಷತ್‍ನ ಕಾರ್ಯಚಟುವಟಿಕೆಗಳನ್ನು ನಡೆಸುವಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಲಿಲ್ಲ ಮತ್ತು ಮೇಲಾಗಿ ಅವರ ಕಾಲಾವಧಿ ಮೂರು ವರ್ಷ ಮುಗಿದಿದ್ದ ಕಾರಣ, ಹಂಪನಹಳ್ಳಿ ತಿಮ್ಮೇಗೌಡರನ್ನು ಪರಿಷತ್‍ನ ರಾಜ್ಯ ಘಟಕ ನೇಮಿಸಿದೆ. ಆದರೆ ಹೀಗೆ ನೇಮಕ ಮಾಡುವಾಗ ಮದನ್ ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆ ಕಾರಣಕ್ಕಾಗಿಯೇ ಆಹಾರ ಮೇಳದ ಬಗ್ಗೆ ವಿವಾದ ಹುಟ್ಟು ಹಾಕಿದರು. ಅದನ್ನು ಮುಂದುವರಿಸುತ್ತಾ ರೂಪಾ ಹಾಸನ ಅವರ ಅಭಿಪ್ರಾಯವನ್ನು ವಿವಾದವನ್ನಾಗಿ ಪರಿವರ್ತಿಸಿ ಜೈನ ಸಮಾಜವನ್ನು ಎತ್ತಿಕಟ್ಟಿ ತಮಾಷೆ ನೋಡುವ ವಿಕೃತ ಮನಸ್ಸು ಇಲ್ಲಿ ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾದಿನ (ಗುರುವಾರ) ಒಬ್ಬ ಕವಿ, ಲೇಖಕಿಗೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿ roopa-hassanಒಂದು ಧರ್ಮದವರು ಕ್ಷಮಾಪಣೆಗೆ ಆಗ್ರಹಿಸಿದ್ದಾರೆ. ಇದೆಲ್ಲದರ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಿರುವ ಪತ್ರಿಕಾ ಮಾಧ್ಯಮದ ಕೆಲ ಕೊಳಕು ಮನಸುಗಳು ಕಾರಣವಾಗಿರುವುದು ವಿಪರ್ಯಾಸ. ಇಂದು ಮಹಿಳಾ ದಿನ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸದಾ ದನಿ ಎತ್ತುವ ರೂಪಾ ಹಾಸನ ಅವರ ಬೆಂಬಲಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಎಲ್ಲಾ ಪ್ರಜ್ಞಾವಂತ ಮನಸುಗಳು ಅವರೊಂದಿಗೆ ನಿಲ್ಲಬೇಕಿದೆ.

ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆ


– ಚಿದಂಬರ ಬೈಕಂಪಾಡಿ


 

ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದುಹೋಯಿತು. ಈಗ ಯಾರ ಗೆಲುವು- ಯಾರ ಸೋಲು ಎನ್ನುವ ಕುತೂಹಲ. ಅಧಿಕಾರಕ್ಕೆ ಏರಲು ಬೇಕಾಗುವಷ್ಟು ಸಂಖ್ಯಾಬಲ ಸಿಗುವುದೇ? ಒಂದು ವೇಳೆ ಸಿಗದಿದ್ದರೆ ಮುಂದೇನು? ಎನ್ನುವಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ನಾಯಕರು ಮುಂದಾಗುವ ಕಾಲ.

ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ನಿಜಕ್ಕೂ ಸೆಮಿಫೈನಲ್. ಇದರಲ್ಲಿ ಮತದಾರರ ನಾಡಿ ಮಿಡಿತ ಸಿಗಬಹುದೇ ಹೊರತು ಫಲಿತಾಂಶವಲ್ಲ. ಯಾಕೆಂದರೆ ಈಗ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾದವೀ ಕಲಹವೇ ಹೆಚ್ಚು ನಡೆದಿದೆ. ಒಂದೇ ಪಕ್ಷದವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದ್ದಾರೆ. ನಾಯಕರು ತಮ್ಮ ಅನುಕೂಲಕ್ಕೆ ತಮಗೆ ಬೇಕಾದವರನ್ನಿ ಬೆಂಬಲಿಸಿ, ತಮಗಾಗದವರನ್ನು ಸದೆ ಬಡಿಯಲು ಬಳಸಿಕೊಂಡಿರುವಂಥ ಸಾಧ್ಯತೆಯೂ ಇದೆ. voteಕೆಲವೊಮ್ಮೆ ತಮ್ಮೊಳಗೇ ಪೈಪೋಟಿ ನಡೆಸಿ ಜನರ ಮನ ಗೆಲ್ಲುವ ಸಾಹಸವನ್ನೂ ಮಾಡಿದ್ದಾರೆ. ಆದ್ದರಿಂದ ಇಲ್ಲಿ ಬರುವ ಫಲಿತಾಂಶ ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವವರ ಮೇಲೆ ಪರಿಣಾಮ ಬೀರಬಹುದು ನಿಶ್ಚಿತವಾಗಿಯೂ. ಆದರೆ ಸ್ಥಳೀಯ ಸಂಸ್ಥೆಯಲ್ಲಿ ಒಂದೇ ಪಕ್ಷದಿಂದ ಸ್ಪರ್ಧಿಸಿ ಸೋತವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸೋಲನ್ನು ಒಪ್ಪಿಕೊಂಡು ವಿಧಾನಸಭೆಗೆ ಸ್ಪರ್ಧಿಸುವವರಿಗೆ ಮನಸಾರೆ ಬೆಂಬಲಿಸುವರೇ ಎನ್ನುವುದೂ ಕೂಡಾ ಬಹಳ ಮುಖ್ಯವಾಗುತ್ತದೆ. ಈ ಕಾರಣದಿಂದ ಸೋತವರನ್ನು ಸಮಾಧಾನಪಡಿಸಿಕೊಂಡು ಹಿಡಿತದಲ್ಲಿಟ್ಟುಕೊಳ್ಳುವ ಕೆಲಸವನ್ನು ವಿಧಾನಸಭೆಗೆ ಸ್ಪರ್ಧಿಸುವವರು ಮೊದಲು ಮಾಡಬೇಕಾಗುತ್ತದೆ.

ಬಹುತೇಕ ಚರ್ಚೆ ಮಾಡದಿರುವ ಅಂಶವೆಂದರೆ ಸ್ಥಳೀಯ ಸಂಸ್ಥೆಯಲ್ಲಿ ಬರುವ ಫಲಿತಾಂಶದ ಹಿನ್ನೆಲೆ ಏನು ಎನ್ನುವುದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಣಬಲ, ತೋಳ್ಬಲ, ಅಧಿಕಾರ ಬಲ, ವೈಯಕ್ತಿಕ ವರ್ಚಸ್ಸು ಹೀಗೆ ಹಲವು ಆಯಾಮಗಳಲ್ಲಿ ಫಲಿತಾಂಶವನ್ನು ವಿಶ್ಲೇಷಿಸಬೇಕಾಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆ ಯಾವುದೇ ಪಕ್ಷದ ಮೂಲ ಸೈದ್ಧಾಂತಿಕ ನೆಲೆಯಲ್ಲಿ ನಡೆದಿಲ್ಲ. ಪಕ್ಷದ ಸೈದ್ಧಾಂತಿಕ ಚೌಕಟ್ಟಿನಿಂದ ಹೊರಗೆ ಕದನ ನಡೆದಿದೆ. ಪಕ್ಷದ ಸೈದ್ಧಾಂತಿಕ ನೆಲೆಗಟ್ಟಿನಲ್ಲೇ ಚುನಾವಣೆ ನಡೆದಿದ್ದರೆ ಅದನ್ನು ಮುಂದಿನ ವಿಧಾನಸಭಾ ಚುನಾವಣೆಯ ಪರಿಪೂರ್ಣ ಮುನ್ಸೂಚನೆ ಎನ್ನಬಹುದಿತ್ತು. ಹಾಗೆ ಆಗದಿರುವ ಕಾರಣ ಈ ಫಲಿತಾಂಶವನ್ನೇ ಗಟ್ಟಿಯಾಗಿ ಯಾವುದೇ ಪಕ್ಷ ಅಥವಾ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿ ಅಪ್ಪಿಕೊಳ್ಳುವಂತಿಲ್ಲ. ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆ ತೀರಾ ವೈಯಕ್ತಿಕ ಪ್ರತಿಷ್ಠೆ, ಪ್ರಭಾವದ ರೂಪ. ಅದು ವಿಧಾನಸಭೆ ಚುನಾವಣೆ ಕಾಲಕ್ಕೆ ಬೇರೆಯೇ ರೂಪ ತಳೆಯಬಹುದು ಅಥವಾ ಪಲ್ಲಟವಾಗಲೂ ಬಹುದು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಜನರ ಭಾವನೆಗಳನ್ನು ಈ ಫಲಿತಾಂಶದ ಮೂಲಕ ಅರ್ಥಮಾಡಿಕೊಳ್ಳಬಹುದು ಎನ್ನುವ ಸ್ಥೂಲವಾದ ಅಂಶವನ್ನು ಬಿಟ್ಟರೆ ಅದೇ ಅಂತಿಮ ಎನ್ನುವಂತಿಲ್ಲ. ಸ್ಥಳೀಯ ಮಟ್ಟದಲ್ಲಿ ಮತಗಳು ಹರಿದು ಹಂಚಿಹೋಗುವುದರಿಂದ ಬಹುಮತ ಎನ್ನುವುದು ಸ್ಥಳೀಯವಾಗಿಯೇ ನಿರ್ಧಾರವಾಗುವ ಅನಿವಾರ್ಯತೆ ಬರುತ್ತದೆ. ನಿಚ್ಚಳ ಬಹುಮತವನ್ನು ಯಾವುದೇ ಪಕ್ಷ ನಿರೀಕ್ಷೆ ಮಾಡಬಹುದೇ ಹೊರತು ಬರದಿದ್ದರೆ ಆಘಾತಗೊಳ್ಳಬೇಕಾಗಿಲ್ಲ. ಯಾಕೆಂದರೆ ಈ ಚುನಾವಣೆಯ ಹಿನ್ನೆಲೆಯೇ ಆಗಿದೆ. ಹೀಗಾದಾಗ ಅನುಕೂಲಸಿಂಧು ರಾಜಕಾರಣವೇ ಮುಖ್ಯವಾಗುತ್ತದೆ. ಮೌಲ್ಯಾಧಾರಿತ ರಾಜಕಾರಣವನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೆ ಪಕ್ಷ ಮಾಡಿಲ್ಲ ಮತ್ತು ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಹಾಗಾದರೆ ಅಧಿಕಾರ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಮತ್ತೆ ಹೊಂದಾಣಿಕೆ ಸೂತ್ರಕ್ಕೆ ರಾಜಕೀಯ ಪಕ್ಷಗಳು ಮನಸ್ಸು ಮಾಡಬೇಕಾಗುತ್ತದೆ. ಯಾವುದೇ ಪಕ್ಷ ತನ್ನ ಮೌಲ್ಯ, ಸೈದ್ಧಾಂತಿಕ ನೆಲೆಗಟ್ಟನ್ನು ಇಟ್ಟುಕೊಂಡೇ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರಕ್ಕೇರುವುದು ಸಾಧ್ಯವಿಲ್ಲ. ಸಮಾನಮನಸ್ಕರು ಎನ್ನುವುದೂ ಕೂಡಾ ಸುಳ್ಳು ಮತ್ತು ಆತ್ಮವಂಚನೆಯ ಮಾತಾಗುತ್ತದೆ. ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು 20 ತಿಂಗಳು ಅಧಿಕಾರ ನಡೆಸಿದ್ದಾಗಲೇ ರಾಜಕೀಯದಲ್ಲಿ ಸೈದ್ಧಾಂತಿಕ ನೆಲೆಗಟ್ಟು ಎನ್ನುವುದು ಕೇವಲ ರಾಜಕೀಯ ಪಂಡಿತರ ವ್ಯಾಖ್ಯೆಗೆ ಮಾತ್ರ ಸೀಮಿತವೆನಿಸಿತು. ಆನಂತರದ ರಾಜಕೀಯ ಬೆಳವಣಿಗೆಗಳು, ಆಪರೇಷನ್ ಕಮಲ ರಾಜಕೀಯದ ಸೈದ್ಧಾಂತಿಕ ನೆಲೆಗಟ್ಟನ್ನೇ ಸುಳ್ಳು ಮಾಡಿದವು. ಸೆಕ್ಯೂಲರ್ ಎನ್ನುವ ಪದಕ್ಕೆ ಡಿಕ್ಷನರಿಯಲ್ಲಿ ಅರ್ಥ ಹುಡುಕಬೇಕೇ ಹೊರತು ರಾಜಕೀಯದಲ್ಲಿ ಅದನ್ನು ಮಾನದಂಡವಾಗಿ ಬಳಕೆ ಮಾಡಬಾರದು ಎನ್ನುವಷ್ಟರಮಟ್ಟಿಗೆ ಅರ್ಥ ಕಳಕೊಂಡಿತು. ‘ಸೂಡೋ ಸೆಕ್ಯೂಲರಿಸಂ’ ಎನ್ನುವ ಪದವನ್ನು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಅನೇಕ ವರ್ಷಗಳ ಕಾಲ ಬಳಸಿದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಅವರೂ ಈ ಪದವನ್ನು ಬಳಕೆ ಮಾಡುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಫಲಿತಾಂಶದ ನಂತರ ಯಾರು ಅಧಿಕಾರಕ್ಕೇರಬಹುದು ಎನ್ನುವ ಪ್ರಶ್ನೆ ಹಾಕಿಕೊಂಡರೆ ಯಾರು ಬೇಕಾದರೂ ಅಧಿಕಾರಕ್ಕೇರಲು ಸಾಧ್ಯ ಎನ್ನಬಹುದೇ ಹೊರತು ಇಂಥವರು ಮಾತ್ರ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೇರುತ್ತಾರೆ ಎನ್ನುವುದು ಅರ್ಥಹೀನ. ಆದ್ದರಿಂದ ಹೀಗೆಯೇ ಆಗುತ್ತದೆ, ಆಗಬೇಕು ಎನ್ನುವ ಊಹೆಯೇ ತಪ್ಪು ಈಗಿನ ರಾಜಕೀಯದಲ್ಲಿ. ಸೈದ್ಧಾಂತಿಕ ನೆಲೆಯನ್ನು ಹುಡುಕದೆ, ಈ ಕ್ಷಣದ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ಹೊಂದಾಣಿಕೆ ರಾಜಕೀಯ ಮೇಲುಗೈ ಸಾಧಿಸುತ್ತದೆ. ಇದನ್ನು ರಾಜಕೀಯದ ಅಪಮೌಲ್ಯ ಎಂದೂ ಕರೆಯಬಹುದು ಆದರೆ ಅದು ಅನಿವಾರ್ಯವಾಗಿತ್ತು ಎನ್ನುವ ಘಟ್ಟಕ್ಕೆ ಬಂದು ನಿಲ್ಲುತ್ತದೆ.

ಜನ ಕೂಡಾ ರಾಜಕೀಯ ಅಪಮೌಲ್ಯದ ಭಾಗವಾಗಿಯೋ, ಅನಿವಾರ್ಯವಾಗಿಯೋ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಬಿಟ್ಟಿದ್ದಾರೆ. ಅದು ಅವರಿಗೂ ಅನಿವಾರ್ಯ. election_countingಇಂಥ ಅನಿವಾರ್ಯತೆಯೇ ಅನಿಶ್ಚಿತ ರಾಜಕೀಯಕ್ಕೆ, ಫಲಿತಾಂಶಕ್ಕೆ ಕಾರಣವಾಗಿದೆ. ಹಣ, ಹೆಂಡವನ್ನು ಅನುಭವಿಸುತ್ತಲೇ ಅದರ ವಿರುದ್ಧ ಮಾತನಾಡುವುದು ಆತ್ಮವಂಚನೆ. ರಾಜಕೀಯದಲ್ಲಿ ಅಪವಿತ್ರ ಮೈತ್ರಿಯನ್ನು ಅನಿವಾರ್ಯತೆಯ ಹೆಸರಲ್ಲಿ ಒಪ್ಪಿಕೊಳ್ಳುವುದೂ ಕೂಡಾ ಅನೈತಿಕತೆ. ಆದ್ದರಿಂದ ಈ ಎಲ್ಲಾ ವ್ಯವಸ್ಥೆಗಳ ಉತ್ಪನ್ನವಾಗಿರುವ ಜನ, ರಾಜಕಾರಣಿಗಳು, ರಾಜಕಾರಣ, ಸಿದ್ಧಾಂತವನ್ನು ಬೇರ್ಪಡಿಸಿಕೊಂಡು ಬಿಡಿಬಿಡಿಯಾಗಿ ನೋಡುವುದು ಸಾಧ್ಯವಿಲ್ಲ. ಹೀಗಾಗಿ ಈ ಸ್ಥಳೀಯ ಸಂಸ್ಥೆಗೆಳ ಚುನಾವಣೆ ಫಲಿತಾಂಶದ ಮುಂದುವರಿದ ಭಾಗ ಅಧಿಕಾರ ಗ್ರಹಣ ಇಂಥದ್ದೇ ಸಮೀಕರಣಗಳ ಉಪಉತ್ಪನ್ನಗಳು ಎಂದಷ್ಟೇ ಕರೆಯಬಹುದು.

ನೀಚ ಪತ್ರಕರ್ತರು ಹೆಚ್ಚಾಗುತ್ತಲೇ ಇದ್ದಾರೆ

ರವಿ ಕೃಷ್ಣಾರೆಡ್ಡಿ

ಇಂದಿಗೆ ನವೀನ್ ಸೂರಿಂಜೆ ಜೈಲಿಗೆ ಹೋಗಿ ನಾಲ್ಕು ತಿಂಗಳಾಯಿತು. ಒಬ್ಬ ಅಯೋಗ್ಯ ಮತ್ತು ನ್ಯಾಯಪ್ರಜ್ಞೆ ಇಲ್ಲದ ಮುಖ್ಯಮಂತ್ರಿಯ ಕಾರಣದಿಂದಾಗಿ ಸೂರಿಂಜೆ ಇನ್ನೂ ಬಿಡುಗಡೆ ಆಗಿಲ್ಲ. ಅಮೇಧ್ಯದಲ್ಲಿ ಅಧಿಕಾರ ಮತ್ತು ದುಡ್ಡು ಸಿಕ್ಕರೂ ಅದನ್ನು ನಾಲಿಗೆಯಲ್ಲಿ ನೆಕ್ಕಿ ಬಾಚಿಕೊಳ್ಳುವವರೆಲ್ಲ ನಮ್ಮ ರಾಜಕೀಯ ನಾಯಕರಾಗಿರುವಾಗ ಬಹುಶಃ ಇದಕ್ಕಿಂತ ಬೇರೆಯದನ್ನು ನಿರೀಕ್ಷಿಸುವುದು ಅಸಮಂಜಸವೇನೊ.

ಇದೇ ಸಮಯದಲ್ಲಿ ರಾಜ್ಯದ ಪತ್ರಕರ್ತರ ಸಂಘಟನೆಗಳೂ ಮಾಡಬೇಕಾದಷ್ಟು ಮಾಡಲೇ ಇಲ್ಲ. naveen-soorinjeನಾಯಕತ್ವ ತೆಗೆದುಕೊಳ್ಳುವುದಕ್ಕೆ ಸಿದ್ದರಿಲ್ಲದವರೇ ಅಲ್ಲಿ ತುಂಬಿಕೊಂಡಿರುವಾಗ ಇನ್ನೇನನ್ನು ನಿರೀಕ್ಷಿಸಬಹುದು? ಹಾಗೆಂದು ಇವರ್ಯಾರಿಗೂ ಅಧಿಕಾರ ಇಲ್ಲವೆಂದಾಗಲಿ, ಸಂಪರ್ಕಜಾಲ ಇಲ್ಲವೆಂದಾಗಲಿ ಅಲ್ಲ. ಈ ಸಂಘಟನೆಗಳ ಅಧಿಕಾರ ಸ್ಥಾನದಲ್ಲಿರುವ ಬಹುತೇಕರು ಬಹಳ ಶಕ್ತಿಶಾಲಿಗಳು, ನೇರವಾಗಿ ಒಬ್ಬ ಮಂತ್ರಿ ಅಥವ ಮುಖ್ಯಮಂತ್ರಿಯ ಬಳಿಗೆ ಹೋಗಿ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡು ಬರುವವರು. ಆದರೆ, ತಮ್ಮವನೇ ಆದ ಒಬ್ಬ ಪತ್ರಕರ್ತ ನಿರಪರಾಧಿಯಾಗಿದ್ದರೂ ಜೈಲಿನಲ್ಲಿ ಕೊಳೆಯುತ್ತಿರುವಾಗ, ಆತನ ಮೇಲಿನ ಸುಳ್ಳು ಆರೋಪಗಳನ್ನು ಕ್ಯಾಬಿನೆಟ್ ಕೈಬಿಡುವ ನಿರ್ಧಾರ ಮಾಡಿದ ಮೇಲೂ ಮುಖ್ಯಮಂತ್ರಿ ಅದಕ್ಕೆ ನಾಮಕಾವಸ್ಥೆ ಸಹಿ ಮಾಡುವುದನ್ನು ಮಾಡದೇ ಇರುವಾಗ ಈ ಸಂಘಟನೆಗಳಿಗೆ ಮುಖ್ಯಮಂತ್ರಿಯ ಮೇಲೆ ಒತ್ತಡ ತರಲಾಗುವುದಿಲ್ಲ ಎಂದರೆ, ಅದು ಅವರಿಗೆ ಬೇಕಾಗಿಲ್ಲ ಎಂದೇ ಅರ್ಥ. ನಮ್ಮ ಸಮಾಜದಲ್ಲಿ ರಾಜಕೀಯ ಕ್ಷೇತ್ರ ಮಾತ್ರವೇ ಕೆಟ್ಟಿಲ್ಲ. ಸಮಾಜದ ಪ್ರತಿಯೊಂದು ವಿಭಾಗದಲ್ಲೂ ಅರ್ಬುದ ರೋಗ ಒಳಗಿನಿಂದಲೇ ಕೊಲ್ಲುತ್ತಿದೆ.

ಹಾಸನದ “ದಿ ಹಿಂದೂ” ಪತ್ರಿಕೆಯ ವರದಿಗಾರರಾದ ಸತೀಶ ಜಿ.ಟಿ. ನನಗೆ ವೈಯಕ್ತಿವಾಗಿಯೂ ಪರಿಚಿತರು. ಸಾಮಾಜಿಕ ಕಳಕಳಿಯುಳ್ಳ ಪ್ರಾಮಾಣಿಕ ಮತ್ತು ಆದರ್ಶವಾದಿ ಪತ್ರಕರ್ತ. ಈ ಹಿಂದೆ ಅವರು ಡೆಕ್ಕನ್ ಹೆರಾಲ್ಡ್‌ನಲ್ಲಿದ್ದಾಗ ಬಿಡಿಎದ ಅಕ್ರಮ ಜಿ-ಕೆಟಗರಿ ಸೈಟುಗಳ ಬಗ್ಗೆ, ಮನೆ-ಸೈಟು ಇರುವ ಶಾಸಕ-ಸಂಸದರೆಲ್ಲ ನಮಗೆ ಬೆಂಗಳೂರಿನಲ್ಲಿ ಮನೆ-ಸೈಟಿಗೆ ಗತಿ ಇಲ್ಲ ಎಂದು ಅಕ್ರಮ ಅಫಿಡವಿಟ್ ಸಲ್ಲಿಸಿ ನಾಲ್ಕೈದು ಕೋಟಿ ರೂಪಾಯಿ ಬೆಲೆಯ ಸೈಟುಗಳನ್ನು ಏಳೆಂಟು ಲಕ್ಷಗಳಿಗೆ ಹೊಡೆದುಕೊಂಡಿದ್ದರ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಉತ್ತರ ಕರ್ನಾಟಕದಲ್ಲಿ ಅಸಾಮಾನ್ಯವಾದ ಮಳೆ ಬಂದು ಪ್ರವಾಹ ಉಕ್ಕೇರಿ ಜನರ ಬದುಕುಗಳು ನೆರೆಯಲ್ಲಿ ಕೊಚ್ಚಿ ಹೋದಾಗ ಅದರ ಬಗ್ಗೆ ವಾರಗಟ್ಟಲೆ ಪ್ರವಾಸ ಮಾಡಿ ವರದಿ ಮಾಡಿದ್ದರು. ಈಗ ಸುಮಾರು ಎರಡು ವರ್ಷಗಳಿಂದ ಈ ಪ್ರತಿಭಾವಂತ ಪತ್ರಕರ್ತ ಹಾಸನದಲ್ಲಿದ್ದಾರೆ. ಇಂತಹ ಒಬ್ಬ ಪತ್ರಕರ್ತ ತಮ್ಮ ನಡುವೆ ಇರುವುದೇ ಒಂದು ಹೆಮ್ಮೆ ಎಂದು ಭಾವಿಸದ ಅಲ್ಲಿನ ಪತ್ರಕರ್ತರ ಸಂಘ ಮತ್ತು ಅದರ ಅಧ್ಯಕ್ಷರು ಸತೀಶ್ ತಮ್ಮ ವಿರುದ್ದ ಸಕಾರಣವಾಗಿ ನೀಡಿದ ದೂರಿನ ಕಾರಣಕ್ಕೆ ವೈಯಕ್ತಿಕ ದ್ವೇಷದಿಂದ ಸಂಘವನ್ನು ದುರುಪಯೋಗಪಡಿಸಿಕೊಂಡು ನೋಟಿಸ್ ಕೊಡುತ್ತಾರೆ. ಸತ್ಯ ಹೇಳಿದ್ದಕ್ಕೆ ಬೇಷರತ್ತಾಗಿ ಕ್ಷಮೆ ಕೇಳಬೇಕು ಎನ್ನುತ್ತಾರೆ. Satish_GTಒಬ್ಬ ಪತ್ರಕರ್ತನಿಗೆ ಪತ್ರಿಕಾಗೋಷ್ಟಿಗೆ ಬರಬೇಡಿ ಎನ್ನುವ ಅಹಂಕಾರ ಮತ್ತು ದರ್ಪ ತೋರಿಸುತ್ತಾರೆ. ಬಹಿಷ್ಕಾರದ ಮಾತನ್ನಾಡುತ್ತಾರೆ. ಇವರೆಂತಹ ಪತ್ರಕರ್ತರು? ಈ ಮನೋಭಾವವೊಂದೇ ಸಾಕು ಈ ಅಧ್ಯಕ್ಷೆ ಪ್ಯಾಕೇಜ್-ನ್ಯೂಸ್, ಪೇಯ್ಡ್ ನ್ಯೂಸ್‌ನಲ್ಲಿ ಮುಂದಿದ್ದಾರೆ ಎಂದು ಭಾವಿಸಿಕೊಳ್ಳಲು. ಅಷ್ಟೇ ಅಲ್ಲ, ಇವರಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಾಗ ಅದನ್ನು ಮತ್ತಷ್ಟು ಬಯಲುಗೊಳಿಸಿಕೊಳ್ಳದೇ ಪಶ್ಚಾತ್ತಾಪದ ಮೂಲಕವೇ ಸರಿಪಡಿಸಿಕೊಳ್ಳೋಣ ಎನ್ನುವ ಜ್ಞಾನವಿಲ್ಲದ ಮತಿಹೀನರೆಲ್ಲ ಸಂಘಗಳ ಮುಖ್ಯಸ್ಥರಾಗಿಬಿಡುತ್ತಾರೆ, ಪದಾಧಿಕಾರಿಗಳಾಗಿಬಿಡುತ್ತಾರೆ.

ಇನ್ನು ಈ ಹಾಸನದ ಪತ್ರಕರ್ತರ ಸಂಘದ ಉಳಿದ ಪದಾಧಿಕಾರಿಗಳಾದರೂ ಎಂತಹವರು? ಅವರೂ ತಮ್ಮ ಅಧ್ಯಕ್ಷೆಯ ಅಭಿಪ್ರಾಯವನ್ನು ಅನುಮೋದಿಸುವವರೇ ಆದರೆ, ಅವರೂ ನಾಚಿಕೆಪಟ್ಟುಕೊಳ್ಳಬೇಕು. ಹಾಗೆಯೇ, ಆ ಸಂಘದ ಸದಸ್ಯರು ಕಟು ಪ್ರತಿಭಟನೆಯ ಮೂಲಕ ಸಂಘದ ಅಯೋಗ್ಯ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಂದ ರಾಜೀನಾಮೆ ಕೊಡಿಸಿ ತಮ್ಮ ಪ್ರಾಮಾಣಿಕತೆ, ವೃತ್ತಿಪರತೆ, ನ್ಯಾಯಪರತೆಯನ್ನು ನಿರೂಪಿಸಬೇಕು. ಆ ಜವಾಬ್ದಾರಿ ಅಲ್ಲಿಯ ಸಂಘದ ಸದಸ್ಯರ ಮೇಲೆಯೇ ಇದೆ.

ಇನ್ನು, ವಿಷುಯಲ್ ಮೀಡಿಯಾದ ಪತ್ರಕರ್ತರ ಬಗ್ಗೆ. ನಮ್ಮ ಭಾಷೆಯ ಅನೇಕ ಟಿವಿ ನಿರೂಪಕರು ಅಹಂಕಾರಿಗಳು, ಅಜ್ಞಾನಿಗಳು, ಭ್ರಷ್ಟರು. ಇದು ಬಹುತೇಕರಿಗೆ ಗೊತ್ತಿರುವ ವಿಚಾರವೇ. ಆದರೆ ಇದಿಷ್ಟೇ ಅಲ್ಲ. ಇವರಲ್ಲಿ ಕೆಲವರು ಕೊಲೆ ಮಾಡಿಸಲು ಸುಪಾರಿ ಕೊಡುವಂತಹ ಕ್ರಿಮಿನಲ್‌ಗಳೂ ಇದ್ದಾರೆ. ಈ ವಿಚಾರ ನೆನ್ನೆಯ “ದಿ ಹಿಂದೂ” ಪತ್ರಿಕೆಯಲ್ಲಿ ಬಂದಿದೆ. ಅವರು ಆ ವ್ಯಕ್ತಿಯ ಹೆಸರು ಮತ್ತು ಆತ ಕೆಲಸ ಮಾಡುತ್ತಿದ್ದ ಚಾನಲ್‌ನ ಬಗ್ಗೆ ಹೇಳಿಲ್ಲ. ಆದರೆ ಈ ವಿಷಯ ಬಹುಶಃ ಕನ್ನಡದ ಯಾವುದೇ ಪತ್ರಿಕೆಯಲ್ಲಿ ಬಂದ ಹಾಗೆ ಕಾಣುವುದಿಲ್ಲ. ನಮ್ಮ ಕನ್ನಡ ಪತ್ರಿಕೆಗಳಿಗೆ ಏಕಿಷ್ಟು ಭಯವೋ ಅರ್ಥವಾಗುತ್ತಿಲ್ಲ.

ನನಗೆ ಗೊತ್ತಾದ ಹಾಗೆ ಆ ಕ್ರಿಮಿನಲ್ ಪತ್ರಕರ್ತನ ಕ್ರೌರ್ಯದ ಕೈಗಳು ಬಹಳ ಉದ್ದವಿವೆ. ಆತನಿಗೆ ಮಾಜಿ ಮುಖ್ಯಮಂತ್ರಿ, ಹಾಲಿ ಮಂತ್ರಿಗಳೆಲ್ಲ ಆಪ್ತರಂತೆ. ಈತನ ಅಪ್ಪನಿಗೆ ಈ ಪತ್ರಕರ್ತ ತಮ್ಮ ಚೇಲಾ ಎಂಬ ಕಾರಣಕ್ಕೆ, ತನ್ನ ಜಾತಿಯವ ಎನ್ನುವ ಕಾರಣಕ್ಕೆ ಮಾಜಿ hindu_tv_anchor_060313ಮುಖ್ಯಮಂತ್ರಿ ಜಿ-ಕೆಟಗರಿ ಸೈಟು ಕೊಟ್ಟು ಪುರಸ್ಕರಿಸಿದ್ದಾರಂತೆ. ಇಲ್ಲೆಲ್ಲ ನಾನು “ಅಂತೆ” ಎಂದು ಬರೆಯುತ್ತಿದ್ದರೂ ಇವೆಲ್ಲ ಅಂತೆಕಂತೆಗಳೇನೂ ಅಲ್ಲ. ಇಂತಹ ಕ್ರಿಮಿನಲ್ ಪತ್ರಕರ್ತ ನಮ್ಮ ರಾಜ್ಯದ ನಂಬರ್ ಒನ್ ಚಾನಲ್‌ನಲ್ಲಿ ಮುಖ್ಯ ನಿರೂಪಕನಾಗಿ ಕಾಣಿಸಿಕೊಳ್ಳುತ್ತಾನೆ ಎಂದರೆ ಅದು ನಮ್ಮ ಮಾಧ್ಯಮಲೋಕದ ಅಧೋಗತಿಗೆ ಸಾಕ್ಷಿ. ಈತ ಇಷ್ಟರಲ್ಲೇ ಸೆರೆ ಆಗಬಹುದು ಎನ್ನುತ್ತವೆ ಮೂಲಗಳು. ಆದರೆ ಆತ ಬಚಾವಾಗಲೂಬಹುದು, ಅಷ್ಟು ಪ್ರಭಾವಶಾಲಿ ಎನ್ನುತ್ತಾರೆ ನನಗೆ ತಿಳಿದವರು.

ನಮ್ಮ ರಾಜಕೀಯ ಕ್ಷೇತ್ರದ ಬಹುಶಃ ಇನ್ನೊಂದು ಐದು-ಹತ್ತು ವರ್ಷಗಳಲ್ಲಿ ಶುದ್ಧವಾಗಬಹುದು ಎನ್ನುವ ನಂಬಿಕೆ ನನಗಿದೆ. ಆದರೆ, ರಾಜ್ಯದ ಮಾಧ್ಯಮಲೋಕ ಶುದ್ದವಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಬಹುಶಃ ಇಲ್ಲಿಯೇ ವರ್ತಮಾನ.ಕಾಮ್‌ನ ಹೆಚ್ಚುವರಿ ಜವಾಬ್ದಾರಿ ಇದೆ ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಲೋಕದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ನಮ್ಮಷ್ಟು ಕನ್ನಡಿ ಹಿಡಿದವರು ಯಾರೂ ಇರಲಿಕ್ಕಿಲ್ಲ. ಪ್ರಾಮಾಣಿಕ ಪತ್ರಕರ್ತರು ಸಾಂಘಿಕವಾಗಿ ಈ ಕೆಲಸಕ್ಕೆ ಕೈಜೋಡಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನೀಚ ಪತ್ರಕರ್ತರನ್ನು ವ್ಯವಸ್ಥೆಯಿಂದ ನಿವಾರಿಸಿಕೊಳ್ಳುವ ಅನಿವಾರ್ಯತೆ ಈ ಸಮಾಜಕ್ಕೆ ಸೃಷ್ಟಿಯಾಗಿದೆ.