– ಜೀವಿ
ಅನ್ನದ ಮಡಿಕೆ ಹುಡುಕಾಡಿ ಮಡಿಕೆ ಎಂಬ ಅಡ್ಡ ಹೆಸರನ್ನೇ ಗಟ್ಟಿ ಮಾಡಿಕೊಂಡಿದ್ದ ಗೆಳೆಯ ಮಹೇಶನಿಗೆ ಹಸಿದವರಿಗೆ ಅನ್ನ ಕೊಡಿಸುವುದೆಂದರೆ ಇಷ್ಟದ ಕೆಲಸ. ಕಬ್ಬು ಕಡಿಯುವ ಕೆಲಸದ ಮೇಸ್ತ್ರಿಯಾಗಿದ್ದ ಆತನಿಗೆ ಜಾತಿ ರಹಿತವಾಗಿ ಸ್ನೇಹಿತರಿದ್ದರು. ಆತನ ಜೇಬು ಯಾವಾಗಲೂ ಗಟ್ಟಿಯಾಗಿರುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ಬಂದ ಆದಾಯದಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಸ್ನೇಹಿತರಿಗೆ ಕಳೆಯುತ್ತಿದ್ದ. ಒಂದು ವರ್ಷದ ಹಿಂದೆ ಅತ ಆಕಸ್ಮಿಕವಾಗಿ ಸಾವಪ್ಪಿದ.
33 ವರ್ಷ ವಯಸ್ಸಿನಲ್ಲೇ ಬಂದ ಸಾವು ಆತನನ್ನು ನಂಬಿದ್ದವರ ಬದುಕನ್ನು ಮಸುಕಾಗಿಸಿದೆ. ಮೇಲ್ಜಾತಿಯ ಹಲವರು ’ನಮಗೆ ಅದೆಷ್ಟು ದಿನ ಅನ್ನ ಹಾಕಿದ್ದ’ ಎಂದು ಸಾವಿನ ದಿನ ಕಣ್ಣೀರಿಟ್ಟರು. ಅಂತ್ಯಕ್ರಿಯೆ ಮುಗಿಸಿದ ನಂತರ ಊರಿನವರು ಮತ್ತು ನೆಂಟರಿಷ್ಟರು ಸೇರಿ ತಿಥಿ ಕಾರ್ಯ ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆಗಳು ಆರಂಭಿಸಿದರು. ಬದುಕಿದ್ದಾಗ ಎಲ್ಲರಿಗೂ ಅನ್ನ ಹಾಕಿದ್ದಾನೆ. ಅವನ ತಿಥಿ ದಿನ ಇಡೀ ಊರಿಗೆ ಅನ್ನ ಹಾಕಬೇಕು ಎಂದು ಅವನ ಅಪ್ಪ, ಇಬ್ಬರು ಸಹೋದರರು ಹಾಗೂ ನಾನೂ ಸೇರಿ ಹಲವರು ಬಯಸಿದೆವು. ದಲಿತ ಕೇರಿಯ ಯಾವುದೇ ಮದುವೆ-ತಿಥಿ ನಡೆದರೂ ಮೇಲ್ಜಾತಿಯವರಿಗೆ ಊಟ ಹಾಕಿರುವ ಉದಾಹರಣೆ ಇಲ್ಲ. ಆದರೆ ಇಡೀ ಊರಿಗೆ ಊಟ ಹಾಕಬೇಕು ಎಂಬ ಆಸೆ ಆತನ ಆಪ್ತ ಬಳಗಕ್ಕೆ ಇತ್ತು. ಅಲ್ಲೆ ಇದ್ದ ನಾಲ್ಕೈದು ಮಂದಿ ಮೇಲ್ಜಾತಿಯವರು ಆಗಬಹುದು ಎಂದು ತಲೆಯಾಡಿಸಿದರು. ಆದರೆ ಊಟದ ವ್ಯವಸ್ಥೆ ಪ್ರತ್ಯೇಕವಾಗಿರಬೇಕು ಎಂದು ಷರತ್ತು ಮುಂದಿಟ್ಟರು.
ಅಕ್ಕಿ, ರಾಗಿ, ಮಾಂಸ ಸೇರಿದಂತೆ ಊಟದ ಎಲೆಯ ಸಮೇತ ಎಲ್ಲವನ್ನೂ ಕೊಡಿಸಬೇಕು. ಪ್ರತ್ಯೇಕವಾಗಿ ಅಡುಗೆ ಮಾಡಿಸಿಕೊಂಡು ನಮ್ಮ ಕೇರಿಯಲ್ಲೇ ಊಟ ಮಾಡಿಕೊಳ್ಳುತ್ತೇವೆ. ಆ ಊಟಕ್ಕೆ ನೀವು ಬರಬೇಡಿ, ನೀವು ಮಾಡಿಕೊಳ್ಳುವ ಊಟಕ್ಕೆ ನಾವು ಬರುವುದಿಲ್ಲ. ಹಾಗಿದ್ದರೆ ಮಾತ್ರ ನಾವು ಊಟ ಮಾಡುತ್ತೇವೆ. ಇಲ್ಲದಿದ್ದರೆ ಬೇಡ ಎಂದರು. ಆ ತನಕ ಸುಮ್ಮನಿದ್ದ ನಾನು ನನ್ನ ಅಭಿಪ್ರಾಯ ಮುಂದಿಟ್ಟೆ. ಮಹೇಶ ಇರುವ ತನಕ ಎಲ್ಲರಿಗೂ ಊಟ ಹಾಕಿದ್ದಾನೆ. (ಹೋಟೆಲ್ಗಳಲ್ಲಿ ಮಾತ್ರ, ಎಷ್ಟೇ ಸ್ನೇಹಿತರಿದ್ದರೂ ಮೇಲ್ಜಾತಿಯವರು ಅವನ ಮನೆ ಊಟ ಮಾಡಿರಲಿಲ್ಲ.) ಅವನ ಸಾವು ಎಲ್ಲರಿಗೂ ನೋವು ತಂದಿದೆ. ಊಟ ಹಾಕುವುದೆಂದರೆ ಅವನಿಗೆ ಸಂತೋಷದ ವಿಷಯ. ಅದಕ್ಕಾಗಿ ಊಟ ಬೇಡ ಎನ್ನಬೇಡಿ. ಆದರೆ ನಿಮ್ಮ ಷರತ್ತು ಒಪ್ಪಿಕೊಳ್ಳಲು ನಾವು ಸಿದ್ದರಿಲ್ಲ. ಒಂದೇ ಕಾರ್ಯಕ್ಕೆ ಪ್ರತ್ಯೇಕ ಅಡುಗೆ ಮಾಡುವುದು ಬೇಡ. ಮೇಲ್ಜಾತಿ ಅಡುಗೆ ಭಟ್ಟರನ್ನೇ ಕರೆಸಿ ನಾವೇ ಮಾಡಿಸುತ್ತೇವೆ. ಇಡೀ ಊರಿನ ಜನ ಬಂದು ಊಟ ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ಮೇಲ್ಜಾತಿ ಕೇರಿಯಲ್ಲೇ ನೀವೇ ನೇತೃತ್ವ ವಹಿಸಿಕೊಂಡು ಅಡುಗೆ ಮಾಡಿಸಿ ದಲಿತ ಕೇರಿಯ ಎಲ್ಲರೂ ನೆಂಟರಿಷ್ಟರೊಂದಿಗೆ ಅಲ್ಲೇ ಬಂದು ಊಟ ಮಾಡುತ್ತೇವೆ ಎಂದೆ. (ಇದು ಆಗದಿರುವ ಕೆಲಸ ಎಂಬುದು ಮೊದಲೇ ಗೊತ್ತಿದ್ದರೂ ನನ್ನ ಅಭಿಪ್ರಾಯವನ್ನು ಮಂಡಿಸಿದೆ.) ಯಾವುದೇ ಕಾರಣಕ್ಕೂ ಅದು ಆಗದಿರುವ ಕೆಲಸ. ನೀವು ಮಾಡಿಸುವ ಅಡುಗೆಯನ್ನು ನಾವು ಊಟ ಮಾಡಲು ಸಾಧ್ಯವಿಲ್ಲ. ನಾವು ಮಾಡಿಸಿದ ಜಾಗಕ್ಕೆ ನೀವೂ ಬರುವಂತಿಲ್ಲ ಎಂದು ಮೇಲ್ಜಾತಿವರು ಕಡಾ ಖಂಡಿತವಾಗಿ ಹೇಳಿದರು.
ದಲಿತರ ಮನೆಯ ಅಕ್ಕಿ, ರಾಗಿ, ಮಾಂಸ, ಮೆಣಸಿನ ಕಾಯಿ ಎಲ್ಲವನ್ನೂ ಪಡೆದು ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ಊಟ ಮಾಡಲು ಮೇಲ್ಜಾತಿವರು ಸಿದ್ದರಿದ್ದಾರೆ. ದಲಿತರು ಮಾಡಿದ ಅಥವಾ ಮೇಲ್ಜಾತಿ ಅಡುಗೆ ಭಟ್ಟರಿಂದ ಮಾಡಿಸಿದ ಊಟ ಮಾಡಲು ಸಿದ್ದರಿಲ್ಲ. ನೀವೇ ಮಾಡಿಸಿ ನಾವು ಬಂದು ಊಟ ಮಾಡುತ್ತೇವೆ ಎಂದರೂ ಒಪ್ಪುತ್ತಿಲ್ಲ. ದಲಿತರೊಂದಿಗೆ ಸಹಪಂಕ್ತಿ ಭೋಜನ ಮಾಡಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಅಲ್ಲಿದ್ದ ನಾಲ್ಕೈದು ಮಂದಿ ಮೇಲ್ಜಾತಿವರು ಹೋಗಿ ಊರ ಮುಂದೆ ವಿಷಯ ತಿಳಿಸಿದರು. ಕೆಲವರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳಲು ಒಪ್ಪಲಿಲ್ಲ. ಕೊನೆಗೂ ಇಡೀ ಊರಿಗೆ ಊಟ ಹಾಕುವ ಮಹೇಶನ ಮನೆಯವರು ಮತ್ತು ಆಪ್ತರ ಆಸೆ ಈಡೇರಲಿಲ್ಲ.
ಇದೀಗ ಅದೇ ಮಹೇಶನ ತಮ್ಮನಿಗೊಂದು ಚಿಂತೆ ಎದುರಾಗಿದೆ. ಈ ವರ್ಷ ಮದುವೆ ಮಾಡಿಕೊಳ್ಳುವ ಸಿದ್ದತೆಯಲ್ಲಿದ್ದಾನೆ. ಈವರೆಗೆ ದಲಿತರ ಮನೆ ಮದುವೆಗಳಿಗೆ ಮೇಲ್ಜಾತಿಯವರು ಬಂದಿದ್ದರೆ, ಆದರೆ ಊಟ ಮಾತ್ರ ಮಾಡಿಲ್ಲ. ದಲಿತ ಕೇರಿಯಲ್ಲೇ ಮದುವೆ ನಡೆದರೆ ಅಲ್ಲಿ ಬಹುತೇಕ ದಲಿತರೇ ಅಡುಗೆ ಮಾಡಿರುತ್ತಾರೆ ಎಂಬ ಕಾರಣಕ್ಕೆ ಊಟ ಮಾಡುವುದಿಲ್ಲ. ಆದರೆ ಇತ್ತೀಚೆಗೆ ದಲಿತರ ಮನೆ ಮದುವೆಗಳು ಕೂಡ ನಗರ ಮತ್ತು ಪಟ್ಟಣದ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿವೆ. ಅಲ್ಲಿ ಎಲ್ಲರಂತೆ ಊಟದ ಅಡುಗೆ ಗುತ್ತಿಗೆ ಪಡೆದವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಕ್ಲೀನಿಂಗ್ ಕೆಲಸದಲ್ಲಿ ಮಾತ್ರ ಕೆಳ ಜಾತಿಯವರಿಗೆ ಅವಕಾಶ ಸಿಗುತ್ತಿದೆ. ಅಡುಗೆ ಮಾಡುವ ಗುತ್ತಿಗೆದಾರರು ಬಹುತೇಕ ಮೇಲ್ವರ್ಗದವರೇ ಅಗಿರುತ್ತಾರೆ. ದಲಿತರ ಮದುವೆಗೆ ಬೇರೆ, ಮೇಲ್ಜಾತಿಯವರ ಮದುವೆಗೆ ಬೇರೆ ಅಡುಗೆ ಗುತ್ತಿಗೆದಾರರು ಇಲ್ಲ. ಆದರೂ ಕಲ್ಯಾಣ ಮಂಟಪದಲ್ಲಿ ನಡೆಯುವ ದಲಿತರ ಮನೆಯ ಮದುವೆ ಊಟವನ್ನು ಮೇಲ್ಜಾತಿವರು ಮಾಡಿಲ್ಲ. ಮದುವೆಗೆ ಬರುವ ಮೇಲ್ಜಾತಿವರಿಗೆ ಹೋಟೆಲ್ಗಳಲ್ಲಿ ಊಟ ಕೊಡಿಸುವುದು ಮದುವೆ ಮನೆಯವರ ಜವಾಬ್ದಾರಿ. ಮದುವೆ ಮನೆಯವರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ಮಾವಿನಕೆರೆ ಬೆಟ್ಟದಲ್ಲಿ ನನ್ನೂರಿನ ದಲಿತ ಯುವತಿ ಸವಿತಾಳ ಮದುವೆ ನಡೆಯಿತು. ಬೆಂಗಳೂರು ಮೂಲದ ಮೇಲ್ಜಾತಿ ಯುವಕನೊಂದಿಗೆ ಪ್ರೀತಿ ಬೆಳೆದಿತ್ತು. ಅಪ್ಪ-ಅಮ್ಮ ಇಲ್ಲದ ಯುವಕ ದಲಿತ ಯುವತಿಯೊಂದಿಗೆ ಮದುವೆಯಾಗಲು ಒಪ್ಪಿದ್ದ. ಸಂಬಂಧಿಕರು ಸೇರಿ ಮಾವಿನಕೆರೆ ಬೆಟ್ಟದಲ್ಲಿ ಮದುವೆ ಮಾಡಿದರು. ಸವಿತಾಳ ಅಣ್ಣ ಮಂಜ ಸಮೀಪದ ಪಟ್ಟಣದಲ್ಲಿ ಊಟದ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ. ಮದುವೆ ಗಂಡಿನ ಸಂಬಂಧಿಕರು ಊಟ ಮಾಡಿದರು. ಈ ಮದುವೆಗೆ ಬಂದಿದ್ದ ನನ್ನೂರಿನ ಮೇಲ್ಜಾತಿಯ ಜನರಲ್ಲಿ ಒಬ್ಬರೂ ಊಟ ಮಾಡಲಿಲ್ಲ. ಊರಿನ ಮೇಲ್ಜಾತಿವರಿಗೆ ಹೋಟೆಲ್ನಲ್ಲಿ ಊಟ ಕೊಡಿಸುವುದಿಲ್ಲ ಎಂದು ಮಂಜ ಮೊದಲೇ ನಿರ್ಧಾರ ಮಾಡಿದ್ದ. ಅಡುಗೆ ಕ್ಯಾಟರಿಂಗ್ ವ್ಯವಸ್ಥೆಯನ್ನು ಬ್ರಹ್ಮಾಣರಿಗೆ ಕೊಟ್ಟಿದ್ದೇನೆ. ಅಲ್ಲೂ ಊಟ ಮಾಡಲು ನಮ್ಮೂರಿನ ಮೇಲ್ಜಾತಿಯವರು ಹಿಂಜರಿದರೆ ನನ್ನದೇನು ತಪ್ಪಿಲ್ಲ ಎಂದ. ಊಟ ಆರಂಭವಾದ ಸಂದರ್ಭದಲ್ಲಿ ನನ್ನೆದುರಿಗೆ ಸಿಕ್ಕಿದ ಪಟೇಲರಿಗೆ ಊಟ ಮಾಡಿ ಎಂದೆ, ಸುಮ್ಮನೆ ನಕ್ಕು ಹೊರಟರು. ಯಾರೊಬ್ಬರೂ ಊಟ ಮಾಡಲಿಲ್ಲ.
ಕಲ್ಯಾಣ ಮಂಟಪದಲ್ಲಿ ಅಡುಗೆ ಮಾಡುವವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿಲ್ಲ. ಅಡುಗೆಯವರ ಕಾರಣಕ್ಕೆ ಮೇಲ್ಜಾತಿವರು ಊಟ ಮಾಡಲು ನಿರಾಕರಿಸುತ್ತಿಲ್ಲ. ದಲಿತರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಲು ಮೇಲ್ಜಾತಿ ಮನಸ್ಸುಗಳು ಒಪ್ಪುತ್ತಿಲ್ಲ.
ಒಂದೇ ಊರಿನವರು ಎಂಬ ಕಾರಣಕ್ಕೆ ಮದುವೆಗೆ ಕರೆಯುತ್ತೇವೆ. ಅವರ ಮನೆ ಮದುವೆಯಲ್ಲಿ ನಾವು ಹಾಕಿರುವ ಮುಯ್ಯಿ (ಹಣದ ರೂಪದ ಗಿಫ್ಟ್) ತೀರಿಸುವ ಸಲುವಾಗಿಯಾದರೂ ಬಂದೇ ಬರುತ್ತಾರೆ. ಅವರಿಗೆ ಪ್ರತ್ಯೇಕವಾಗಿ ಹೋಟೆಲ್ನಲ್ಲಿ ಊಟ ಕೊಡಿಸಲು ನಾನು ಅವಕಾಶ ಕೊಡುವುದಿಲ್ಲ ಎಂದು ಮಹೇಶನ ತಮ್ಮ ನಾಗರಾಜ ಹೇಳುತ್ತಿದ್ದಾನೆ. ಕಲ್ಯಾಣ ಮಂಟಪದಲ್ಲಿ ಮಾಡಿರುವ ಊಟ ಮಾಡಿದರೆ ಮಾಡಲಿ ಇಲ್ಲದಿದ್ದರೆ, ಹಾಗೇ ಹೋಗಲಿ ಎನ್ನುತ್ತಿದ್ದಾನೆ. ಅವನ ನಿರ್ಧಾರವನ್ನು ನಾನೂ ಒಪ್ಪುತ್ತಿದ್ದೇನೆ. ಆದರೂ ನಾಗರಾಜನ ಅಪ್ಪ ನಮಗ್ಯಾರಿಗೂ ಗೊತ್ತಾಗದಂತೆ ಹೋಟೆಲ್ಗೆ ಕರೆದೊಯ್ಯಬಹುದು.