Category Archives: ಆನಂದ ಪ್ರಸಾದ್

ಮೂಢನಂಬಿಕೆ ನಿಷೇಧ ಕಾನೂನು – ವಿರೋಧ ಪಕ್ಷಗಳ ಅಪಪ್ರಚಾರ

– ಆನಂದ ಪ್ರಸಾದ್

ಭಾರತದಲ್ಲಿ ಸರ್ಕಾರ ವೇಶ್ಯಾವಾಟಿಕೆಯನ್ನು ನಿಷೇಧಿಸಿದೆ. ವೇಶ್ಯಾವಾಟಿಕೆಗೆ ಹೋಗುವುದು ಜನರಿಗೆ ನೆಮ್ಮದಿ ಹಾಗೂ ಸಂತೋಷ ಕೊಡುತ್ತದೆ ಮತ್ತು ಜನ ತಮ್ಮ ಇಚ್ಛೆಯಿಂದಲೇ ವೇಶ್ಯಾವಾಟಿಕೆಗಳಿಗೆ ಹೋಗುತ್ತಾರೆ ಹಾಗಾಗಿ ಇದನ್ನು ನಿಷೇಧಿಸಬೇಡಿ, ಇದು ಜನರ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕಿದರೆ ಇದನ್ನು ನಿಷೇಧಿಸುವುದು ಸಾಧ್ಯವಿತ್ತೇ? ಅದೇ ರೀತಿ ಭಾರತದಲ್ಲಿ ಮಾದಕ ದ್ರವ್ಯಗಳನ್ನು drugsಮಾರಾಟ ಮಾಡುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ತಮ್ಮ ದುಡ್ಡಿನಲ್ಲಿ ಮಾದಕ ಪದಾರ್ಥ ಸೇವಿಸಿ ಜನ ನೆಮ್ಮದಿ ಹಾಗೂ ಸಂತೋಷ ಪಡೆಯುವುದಾದರೆ ಅದನ್ನು ತಡೆಯಲು ನೀವು ಯಾರು ಎಂದು ರಾಜಕಾರಣಿಗಳು ಅಬ್ಬರಿಸಿದ್ದಿದ್ದರೆ ಇಂಥ ಕಾನೂನು ತರುವುದು ಸಾಧ್ಯವಿತ್ತೇ? ಅಥವಾ ಭಾರತದಲ್ಲಿ ಥಿಯೇಟರುಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನೀಲಿ ಚಿತ್ರ ತೋರಿಸುವುದನ್ನು ನಿಷೇಧಿಸಲಾಗಿದೆ. ಜನ ತಮ್ಮ ದುಡ್ಡಿನಲ್ಲಿ ಥಿಯೇಟರಿಗೆ ಹೋಗಿ ನೀಲಿ ಚಿತ್ರ ನೋಡಿ ಸಂತೋಷ ಪಡೆಯುವುದಾದರೆ ಅದನ್ನು ತಡೆಯುವುದು ಜನರ ಸ್ವಾತಂತ್ರ್ಯ ಹರಣ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆದಿದ್ದರೆ ಹೀಗೆ ಮಾಡಲು ಸಾಧ್ಯವಾಗುತ್ತಿತ್ತೇ?

ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವ ಕಾನೂನು ಮಾಡುವುದು ಬೇಡ, ಜನ ಜಾಗೃತಿ ಮಾಡಿ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಒಳ್ಳೆಯದು ಎಂದು ಹೇಳಿದರೆ ಅದನ್ನು ಒಪ್ಪಬಹುದೇ? ಅಮಾಯಕ ಜನರಿಗೆ ರುಚಿ ಹಿಡಿಸಿ ಅವರನ್ನು ಮಾದಕ ದ್ರವ್ಯಗಳ ಗುಲಾಮರಾಗುವಂತೆ ಮಾಡಿ ತಮ್ಮ ವ್ಯಾಪಾರ ಕುದುರಿಸಿಕೊಂಡು ದುಡಿಯದೆ ದುಡ್ಡು ಮಾಡಿ ಐಶಾರಾಮದಲ್ಲಿ ಮೆರೆಯುವ ಮಂದಿಯನ್ನು ತಡೆಯುವ, ಅಂಥವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸದೆ ಕೇವಲ ಜಾಗೃತಿಯಿಂದ ಇದನ್ನು ತಡೆಯಬೇಕು ಎಂದು ಹೇಳುವುದು ಎಷ್ಟು ಅಸಂಗತವೋ ಅದೇ ರೀತಿ ಮೂಢ ನಂಬಿಕೆಗಳನ್ನು ತಡೆಯುವ ಶಾಸನ ಮಾಡುವುದು ಬೇಡ, ಅವುಗಳನ್ನು ಜಾಗೃತಿ ಮೂಡಿಸಿ ತಡೆಯಬೇಕು ಎಂದು superstitionsಹೇಳುವುದೂ ಅಷ್ಟೇ ಅಸಂಗತ ಧೋರಣೆಯಾಗುತ್ತದೆ. ಯೋಚನಾಶಕ್ತಿಯಿಲ್ಲದ ಅಮಾಯಕ ಜನರನ್ನು ಪರೋಕ್ಷವಾಗಿ ದೇವರು, ಧರ್ಮ, ಗ್ರಹಚಾರ, ಜ್ಯೋತಿಷ್ಯ, ವಾಸ್ತುಗಳ ಹೆಸರಿನಲ್ಲಿ ನಂಬಿಸಿ ತಾವು ಐಶಾರಾಮದಲ್ಲಿ ಮೆರೆಯುವ ವ್ಯಕ್ತಿಗಳ ನಡವಳಿಕೆ ಮಾದಕ ದ್ರವ್ಯಗಳ ವ್ಯಸನ ಹಿಡಿಸಿ ತಮ್ಮ ಸರಕನ್ನು ಮಾರಿ ಹಣ ಮಾಡುವ ವ್ಯಕ್ತಿ ಗಳಂತೆ ಸಮಾಜದ ಹಾಗೂ ದೇಶದ ಹಿತಕ್ಕೆ ಮಾರಕವಾಗಿದೆ.

ಅಮಾಯಕ ಜನರಿಗೆ ತಿಳುವಳಿಕೆ ಕೊಡಬೇಕಾದ ವಿದ್ಯಾವಂತರು ಇಂದು ಮೂಢನಂಬಿಕೆಗಳ ದಾಸರಾಗಿ ಇತರರನ್ನೂ ವಾಸ್ತು, ಜ್ಯೋತಿಷ್ಯ, ಅರ್ಥಹೀನ ಆಚರಣೆಗಳ ದಾಸರನ್ನಾಗಿ ಮಾಡಲು ಹವಣಿಸುತ್ತಿದ್ದಾರೆ. ಮೂಢನಂಬಿಕೆಗಳನ್ನು ಹಬ್ಬಿಸುವ ಹಾಗೂ ಸಮರ್ಥಿಸುವ ಕೆಲಸದಲ್ಲಿ made-snanaಕೆಲವು ರಾಜಕೀಯ ಪಕ್ಷಗಳು ಹಾಗೂ ದೇಶಭಕ್ತ ಎಂದು ಹೇಳುವ ಸಂಘಟನೆಗಳು ಹೆಚ್ಚಿನ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದು ದೇಶದ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿಯ ಮೂಲೋತ್ಪಾಟನೆ ಮಾಡಿ ಎಂದು ಕರೆ ನೀಡಿದ್ದರೆ ಇಂದು ಅದಕ್ಕೆ ತದ್ವಿರುದ್ಧವಾಗಿ ವಿವೇಕಾನಂದರ ವಾರಿಸುದಾರರು ತಾವೇ ಎಂದು ಬೊಬ್ಬೆ ಹೊಡೆಯುವ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪುರೋಹಿತಶಾಹೀ ವ್ಯವಸ್ಥೆಯನ್ನು ಬಲಪಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ? ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ಸಮಾಜದಲ್ಲಿ ಪುರೋಹಿತಶಾಹಿ ಹಿಡಿತವನ್ನು ದುರ್ಬಲಗೊಳಿಸುವುದು ಅನಿವಾರ್ಯ. ಸಮಾಜದಲ್ಲಿ ಪುರೋಹಿತಶಾಹಿ ಹಿಡಿತ ಬಲವಾಗಿದ್ದರೆ ಅಲ್ಲಿ ಊಳಿಗಮಾನ್ಯ ವ್ಯವಸ್ಥೆ ಹಾಗೂ ಪಾಳೇಗಾರಿ ವ್ಯವಸ್ಥೆಗಳು, ದಬ್ಬಾಳಿಕೆ ನೆಲೆಯೂರುತ್ತದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳವಣಿಗೆ ಆಗಬೇಕಾದರೆ ಪುರೋಹಿತಶಾಹೀ ಹಿಡಿತವನ್ನು ಸಮಾಜದಲ್ಲಿ ದುರ್ಬಲಗೊಳಿಸ ಬೇಕಾಗಿರುವುದು ಅತೀ ಅಗತ್ಯ. ಇಂದು ಜ್ಯೋತಿಷ್ಯ, ವಾಸ್ತು, ಪವಾಡಗಳ ಹೆಸರಿನಲ್ಲಿ ಮಾಧ್ಯಮಗಳ ಮೂಲಕ ಪುರೋಹಿತಶಾಹಿ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಆಧುನಿಕ ದೇಶದ ನಿರ್ಮಾಣಕ್ಕೆ ಬಹಳ ದೊಡ್ಡ ಅಡ್ಡಿಯಾಗಿದೆ.

ಇತ್ತೀಚಿಗೆ ಒಂದು ಟಿವಿ ವಾಹಿನಿಯ ಜ್ಯೋತಿಷ್ಯ ಸಲಹೆ ಕಾರ್ಯಕ್ರಮದಲ್ಲಿ ಒಬ್ಬ ರೈತರು ತಾವು ಎಷ್ಟೇ ಪ್ರಯತ್ನಪಟ್ಟು ಬೆಳೆ ಬೆಳೆದರೂ ಸೂಕ್ತ ಉತ್ಪನ್ನ ಬರುತ್ತಿಲ್ಲ ಎಂದು ಅದನ್ನು ಸರಿಪಡಿಸಲು ತನ್ನ ಜನ್ಮ ದಿನಾಂಕ ಹಾಗೂ ಹುಟ್ಟಿದ ವೇಳೆಯನ್ನು ತಿಳಿಸಿ ಸೂಕ್ತ ಸಲಹೆಯನ್ನು ಕೇಳಿದರು. ಅದಕ್ಕೆ ಪಂಡಿತರು ಎಂದು ಕರೆಯಲ್ಪಡುವ ಜ್ಯೋತಿಷಿಗಳು ನೀವು ಎಷ್ಟೇ ಪ್ರಯತ್ನ ಪಟ್ಟರೂ ಬೆಳೆ ಚೆನ್ನಾಗಿ ಬರದೆ ಇರಲು ನಿಮ್ಮಲ್ಲಿ ಇರುವ idiotic-brahmandaದೋಷ ಹಾಗೂ ದೇಶದ ಆಳುವವರ ದೋಷ ಎರಡೂ ಕಾರಣ. ಇದರಲ್ಲಿ ನಿಮ್ಮ ದೋಷವನ್ನು ಸರಿಪಡಿಸಲು ಭೂವರಾಹ ಪೂಜೆ ಮಾಡಿಸಿ ಎಂದು ಸಲಹೆ ಕೊಟ್ಟರು. ವಾಸ್ತವವಾಗಿ ಇಲ್ಲಿ ಪ್ರಶ್ನೆ ಕೇಳಿದ ರೈತನಿಗೆ ಅನುಭವೀ ಪ್ರಗತಿಪರ ಕೃಷಿಕರಿಗೆ ತನ್ನ ಭೂಮಿಯನ್ನು ತೋರಿಸಿ ಬೆಳೆ ಬರದೆ ಇರಲು ಇರಬಹುದಾದ ಕಾರಣಗಳನ್ನು ತಿಳಿದುಕೊಂಡು ಅವರಿಂದ ಸಲಹೆ ಪಡೆಯಲು ತಿಳಿಸುವುದು ಸೂಕ್ತವಾಗುತ್ತಿತ್ತು ಅಥವಾ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಕೊರತೆಯನ್ನು ಸರಿಪಡಿಸಲು ಕೃಷಿ/ತೋಟಗಾರಿಕೆ ತಜ್ಞರಿಂದ ಮಾಹಿತಿ ಪಡೆಯಲು ತಿಳಿಸುವುದು ವೈಜ್ಞಾನಿಕ ಸಲಹೆಯಾಗುತ್ತಿತ್ತು. ಅಂಥ ಸಲಹೆ ಕೊಡದೆ ಭೂವರಾಹ ಪೂಜೆ ಮಾಡಿದರೆ ರೈತನ ಕೃಷಿ ವಿಧಾನದಲ್ಲಿರುವ ನ್ಯೂನತೆ ಅಥವಾ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಕೊರತೆ ನೀಗುತ್ತದೆಯೇ? ಇಂಥ ಸಲಹೆ ಕೊಡುವುದರಿಂದ ಪುರೋಹಿತಶಾಹಿಗಳ ವ್ಯಾಪಾರ ಹೆಚ್ಚಿ ಅವರಿಗೆ ಹೆಚ್ಚಿನ ಲಾಭ ಆಗಬಹುದೇ ಹೊರತು ಕೃಷಿಕನಿಗೆ ಮೂರು ಕಾಸಿನ ಪ್ರಯೋಜನವೂ ಆಗಲಿಕ್ಕಿಲ್ಲ ಬದಲಿಗೆ ಪೂಜೆ ಪುನಸ್ಕಾರ ಎಂದು ಹೆಚ್ಚಿನ ಹಣ ಕೈಬಿಡಬಹುದು ಅಷ್ಟೇ. ಮಾಧ್ಯಮಗಳು ಅಮಾಯಕ ಜನರಿಗೆ ಯಾವ ರೀತಿ ಜ್ಯೋತಿಷ್ಯದ ಹೆಸರಿನಲ್ಲಿ ಮೋಸ ಮಾಡುತ್ತಿವೆ ಎಂಬುದಕ್ಕೆ ಇದು ಒಂದು ಉದಾಹರಣೆ. ಟಿವಿ ಮಾಧ್ಯಮ ಇಂದು ಮೂಢ ನಂಬಿಕೆಗಳನ್ನು ಮಾರುವ ಜ್ಯೋತಿಷಿಗಳಿಗೆ, ವಾಸ್ತು ಹೆಸರಿನಲ್ಲಿ ವ್ಯಾಪಾರ ನಡೆಸಿ ಹಣ ದೋಚುವ ಕಪಟಿಗಳಿಗೆ ಮಧ್ಯವರ್ತಿಗಳಂತೆ ಕೆಲಸ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವುದು ದೇಶದ ಹಿತದೃಷ್ಟಿಯಿಂದ ಅತೀ ಅಗತ್ಯವಾಗಿದೆ.

ಇತ್ತೀಚಿಗೆ ಮಾಜಿ ಪ್ರಧಾನಿ ಗೌಡರು ನಾನು ನಾಸ್ತಿಕರ ಬಗ್ಗೆ ಮಾತಾಡುವುದಿಲ್ಲ , ಅವರಿಗೆ ಹೇಳಿ ಪ್ರಯೋಜನ ಇಲ್ಲ ಎಂದು ನಾಸ್ತಿಕರು ಎಂದರೆ ಕೀಳು, ನಾಸ್ತಿಕತೆ ಎಂದರೆ ಅಪರಾಧ ಎಂಬ ಅರ್ಥವನ್ನು ಧ್ವನಿಸುವ ರೀತಿಯಲ್ಲಿ ಹೇಳಿದ್ದಾರೆ. ಗೌಡರ ಈ ಅಭಿಪ್ರಾಯ ಒಪ್ಪತಕ್ಕದ್ದಲ್ಲ. 12Fir16.qxpನಾಸ್ತಿಕರು ಅಪರಾಧಿಗಳೇನೂ ಅಲ್ಲ. ದೇವರನ್ನು ನಂಬದವರು ಕೀಳೇನೂ ಅಲ್ಲ. ದೇವರನ್ನು ನಂಬದೆ ವಾಸ್ತವವನ್ನು ಎದುರಿಸಿ ಬದುಕುವ ನಾಸ್ತಿಕರಾಗಲು ಹೆಚ್ಚಿನ ಮನೋಸ್ಥೈರ್ಯ ಬೇಕಾಗುತ್ತದೆ. ಹೀಗಾಗಿ ನಾಸ್ತಿಕರನ್ನು ಕೀಳಾಗಿ ಕಾಣುವುದು ಸಮಂಜಸವಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ವಾಸ್ತವವನ್ನು ಎದುರಿಸಿ ಯಾವುದೇ ನಂಬಿಕೆಗಳಿಗೆ ಜೋತು ಬೀಳದೆ ವೈಚಾರಿಕತೆಯಿಂದ ಸಮಸ್ಯೆಯನ್ನು ಎದುರಿಸುವ ನಾಸ್ತಿಕರ ಸಂಖ್ಯೆ ಬೆಳೆಸುವುದು ಅಗತ್ಯ ಕೂಡ ಹೌದು. ರಾಜ್ಯದಲ್ಲಿ ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ತರುವ ಪ್ರಗತಿಪರ ಹೆಜ್ಜೆಗೆ ವಿರೋಧ ಪಕ್ಷಗಳು ಅನಗತ್ಯವಾಗಿ ಜನರನ್ನು ಕೆರಳಿಸುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿರುವುದು ಸಮಂಜಸವಲ್ಲ. ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ತಂದರೆ ಜನರ ನಂಬಿಕೆಗೆ ಯಾವ ರೀತಿಯಲ್ಲಿಯೂ ತೊಂದರೆ ಆಗಲಾರದು. ದೇವರನ್ನು ನಂಬಲು ಎಲ್ಲರೂ ಸ್ವತಂತ್ರರು. ನಂಬಿಕೆಗಳ ಹೆಸರಿನಲ್ಲಿ ಜ್ಯೋತಿಷ್ಯ, ವಾಸ್ತುವಿನಂಥ ಅವೈಚಾರಿಕ ಆಚರಣೆಗಳು ಮಾನವನನ್ನು ದುರ್ಬಲನನ್ನಾಗಿ ಮಾಡುತ್ತವೆ. ದೇವರನ್ನು ನಂಬಿ ಯಾವುದೇ ಕೆಲಸ ಮಾಡುವುದು ದುರ್ಬಲ ಮನಸ್ಸಿಗೆ ಧೈರ್ಯ ತುಂಬಲು ಧಾರಾಳ ಸಾಕಾಗಿರುವಾಗ ಜ್ಯೋತಿಷ್ಯ, ವಾಸ್ತುವಿನಂಥ ಅವೈಜ್ಞಾನಿಕ ಅಂಶಗಳನ್ನು ಟಿವಿ ಮಾಧ್ಯಮದಲ್ಲಿ ವೈಭವೀಕರಿಸಿ ಜನರನ್ನು ಅವುಗಳಿಗೆ ದಾಸರನ್ನಾಗಿ ಮಾಡುವುದು ದೇಶ ಹಿತದೃಷ್ಟಿಯಿಂದ ಮಾರಕ. ಹೀಗಾಗಿ ನೀಲಿ ಚಿತ್ರಗಳ ಪ್ರಸಾರವನ್ನು tv-mediaಯಾವ ರೀತಿಯಲ್ಲಿ ಟಿವಿ ಮಾಧ್ಯಮದಲ್ಲಿ ದೇಶದ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆಯೋ ಅದೇ ರೀತಿ ಜ್ಯೋತಿಷ್ಯ, ವಾಸ್ತುವಿನಂಥ ದೌರ್ಬಲ್ಯ ಅಥವಾ ಗೀಳನ್ನು ಜನರಲ್ಲಿ ಬೆಳೆಸುವುದನ್ನು ತಡೆಯಲು ಟಿವಿ ಮಾಧ್ಯಮದಲ್ಲಿ ಜ್ಯೋತಿಷ್ಯ, ವಾಸ್ತು ಸಂಬಂಧಿ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕಾನೂನಿನ ಮೂಲಕ ನಿಷೇಧಿಸಬೇಕಾದ ಅಗತ್ಯ ಇದೆ. ಇವುಗಳಲ್ಲಿ ಶ್ರದ್ಧೆ ಇರುವವರು ಖಾಸಗಿಯಾಗಿ ಹೋಗಿ ಸಂಬಂಧಪಟ್ಟ ಜ್ಯೋತಿಷಿಗಳನ್ನು ಕಂಡು ಮಾತಾಡಿದರೆ ಸಾಕು. ಇವುಗಳನ್ನು ಸಾರ್ವಜನಿಕವಾಗಿ ಟಿವಿ ಮಾಧ್ಯಮದಲ್ಲಿ ಬಿತ್ತರಿಸಿ ಅಮಾಯಕ ಜನರಲ್ಲಿ ಗೀಳನ್ನು ಬೆಳೆಸಬೇಕಾದ ಅಗತ್ಯವಿಲ್ಲ.

ಸೌಜನ್ಯ ಕೊಲೆಯ ತನಿಖೆ ಬಗೆಗಿನ ಕೆಲವು ಸಂದೇಹಗಳು

– ಆನಂದ ಪ್ರಸಾದ್

ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆಯ ಆರೋಪಿಯಾಗಿ ಮಾನಸಿಕ ಅಸ್ವಸ್ಥ ಸಂತೋಷ್ ರಾವ್ ಎಂಬಾತನನ್ನು ಕೊಲೆ ನಡೆದ ಕೆಲವು ದಿನಗಳ ನಂತರ ಬಂಧಿಸಲಾಗಿದೆ. ಈ ಘಟನೆಯಲ್ಲಿ ಸಂತೋಷ್ ರಾವ್ ಒಬ್ಬನೇ ಕೊಲೆ ನಡೆಸಿದ್ದಾನೆ ಎಂಬುದು ಪೋಲೀಸರ ಆರೋಪ. ಸೌಜನ್ಯ ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಹೆಣ್ಣುಮಗಳು. ಆಕೆಯನ್ನು ಸಂತೋಷ್ ರಾವ್ ಒಬ್ಬನೇ ಹಿಡಿದು ಕಟ್ಟಿ ಹಾಕಿ ಅತ್ಯಾಚಾರ ನಡೆಸಿ ಕೊಲ್ಲುವುದು ಸಾಧ್ಯವೇ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಹಿಡಿದರೆ ಆತನ ಕೈಯನ್ನು ಕೊಸರಿ ಅಥವಾ ಕಚ್ಚಿ ಓಡಿ ಹಾಗೂ ಬೊಬ್ಬೆ Sowjanya-Rape-Murderಹಾಕಿ ಪಾರಾಗಲು ಸೌಜನ್ಯಳಂಥ ಗಟ್ಟಿಮುಟ್ಟಾಗಿರುವ ಹೆಣ್ಣುಮಗಳಿಗೆ ಸಾಧ್ಯ ಎಂಬುದು ಸ್ಪಷ್ಟವಾಗಿ ತೋರುತ್ತದೆ. ಅತ್ಯಾಚಾರ ಹಾಗೂ ಕೊಲೆ ನಡೆಸಲು ಒಂದಕ್ಕಿಂತ ಹೆಚ್ಚಿಗೆ ಜನ ಭಾಗಿಯಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಒಬ್ಬ ಹೆಣ್ಣುಮಗಳನ್ನು ಬಲಾತ್ಕಾರವಾಗಿ ಹಿಡಿದುಕೊಂಡರೆ ಆಕೆ ರಕ್ಷಣೆಗಾಗಿ ಬೊಬ್ಬೆ ಹಾಕುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಬೊಬ್ಬೆ ಹಾಕದಂತೆ ಬಾಯಿಯನ್ನು ಬಲವಂತವಾಗಿ ಮುಚ್ಚಿರುವ ಮತ್ತು ಹೀಗೆ ಮಾಡಲು ಒಂದಕ್ಕಿಂಥ ಹೆಚ್ಚು ಜನ ಬೇಕಾಗುತ್ತದೆ. ಒಬ್ಬನೇ ಹಿಡಿದು ಒಬ್ಬ ಹೆಣ್ಣಿನ ಬಾಯಿ ಮುಚ್ಚಿಸುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಆಕೆ ಕೈಯನ್ನು ಕಚ್ಚಿ ಓಡಿ ತಪ್ಪಿಸಿಕೊಂಡು ಬೊಬ್ಬೆ ಹಾಕುವ ಸಾಧ್ಯತೆ ಇರುತ್ತದೆ. ಸೌಜನ್ಯಳ ಶವ ಒಂದು ಕಾಲು ಹಾಗೂ ಒಂದು ಕೈಯನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ರೀತಿ ಒಬ್ಬ ಗಟ್ಟಿಮುಟ್ಟಾದ ಹೆಣ್ಣನ್ನು ಒಬ್ಬನೇ ಕಟ್ಟಿಹಾಕಲು ಸಾಧ್ಯವಿದೆಯೇ? ಇಲ್ಲವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ನಿಟ್ಟಿನಿಂದ ಯೋಚಿಸಿದಾಗಲೂ ಇದು ಒಬ್ಬನೇ ನಡೆಸಿದ ಕೃತ್ಯ ಅಲ್ಲವೆಂದು ಕಂಡುಬರುತ್ತದೆ.

ಪೊಲೀಸರು ಸಂತೋಷ್ ರಾವ್ ಎಂಬ ವಿಕೃತ ಕಾಮಿ ಕೊಲೆ ಮಾಡಿದ್ದಾನೆ ಎಂದು ಆತನಿಗೆ ವಿಕೃತ ಕಾಮಿಯ ಪಟ್ಟ ಕಟ್ಟಿದ್ದಾರೆ. ಈ ಸಂತೋಷ್ ರಾವ್ ಎಂಬಾತ ಯಾರು, ಆತನ ಊರು, ಮನೆ, ತಂದೆ ತಾಯಿ, ಬಂಧು ಬಳಗದ ಅಧ್ಯಯನ ಮಾಡಿ ಮಾಧ್ಯಮಗಳು ವರದಿ ಕೊಡಬೇಕಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚಿನ ವರದಿ ಬಂದ ಹಾಗೆ ಇಲ್ಲ. ಸಂತೋಷ್ ರಾವ್ ವಿಕೃತ ಕಾಮಿ ಆಗಿದ್ದರೆ ಅವನು ಇದಕ್ಕಿಂಥ ಮೊದಲು ಎಷ್ಟು ಅತ್ಯಾಚಾರ ಮಾಡಿದ್ದಾನೆ ಮತ್ತು ಎಷ್ಟು ಕೊಲೆ ಮಾಡಿದ್ದಾನೆ ಎಂದು ಆತನ ಊರಿನ ಜನರನ್ನು ವಿಚಾರಿಸಬೇಕಾದ ಅಗತ್ಯ ಇದೆ. ಇದಕ್ಕಿಂಥ ಮೊದಲು ಆತ sowjanya-murderedವಿಕೃತ ಕಾಮಿಯ ರೀತಿಯಲ್ಲಿ ನಡೆದುಕೊಂಡಿದ್ದಾನೆಯೇ ಎಂದು ಕೂಡ ಆತನ ಊರಿನ ಸುತ್ತಮುತ್ತ ವಿಚಾರಿಸಿ ಕಂಡುಕೊಳ್ಳಬೇಕಾಗಿದೆ. ಪೊಲೀಸರು ಸಿಐಡಿ ವರದಿಯಲ್ಲಿ ಸೌಜನ್ಯ್ಲ ಮೇಲೆ ಅತ್ಯಾಚಾರ ನಡೆದಿಲ್ಲ, ಸಂತೋಷ್ ರಾವ್ ಫಿಮೊಸಿಸ್ ಎಂಬ ಶಿಶ್ನದ ಚರ್ಮ ಬಿಗಿಯಾಗಿರುವ ಹಾಗೂ ಹಿಂದಕ್ಕೆ ಸರಿಯದಿರುವ ದೈಹಿಕ ತೊಂದರೆಯನ್ನು ಹೊಂದಿದ್ದ ಎಂದು ವರದಿಯಲ್ಲಿ ಹೇಳಿದ್ದಾರೆ. ಫಿಮೊಸಿಸ್ ತೊಂದರೆ ಇರುವವರು ಸಂಭೋಗ ನಡೆಸಲು ಅಸಮರ್ಥರೇನೂ ಅಲ್ಲ ಎಂದು ಇಂಟರ್ನೆಟ್ ಮಾಹಿತಿಯಿಂದ ತಿಳಿದುಬರುತ್ತದೆ. ಹೀಗಾಗಿ ಸಂತೋಷನೇ ಅಪರಾಧಿಯಾಗಿದ್ದರೆ ಆತನು ಅತ್ಯಾಚಾರ ಮಾಡಿರುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಅತ್ಯಾಚಾರ ನಡೆದಿಲ್ಲ ಎಂಬುದು ಸುಳ್ಳು ಎಂದು ಕಂಡುಬರುತ್ತದೆ. ಸೌಜನ್ಯಳ ಯೋನಿಯೊಳಗೆ ಮಣ್ಣು ಹಾಕಿದ್ದಾರೆ ಎಂದು ಹೇಳಲಾಗುತ್ತದೆ. ಯೋನಿಯೊಳಗೆ ಮಣ್ಣು ತುಂಬಿಸಿ ಅತ್ಯಾಚಾರದಿಂದ ಅಲ್ಲಿ ಸಿಗಬಹುದಾದ ವೀರ್ಯಾಣುಗಳು ಸಿಗದಂತೆ ಮಾಡಲು ಅತ್ಯಾಚಾರಿಗಳು ಮಣ್ಣು ತುಂಬಿಸುತ್ತಾರೆ ಎಂದು ಹೇಳಲಾಗುತ್ತದೆ. ಮಾನಸಿಕ ಅಸ್ವಸ್ಥನಿಗೆ ಈ ರೀತಿಯ ವಿವೇಕ ಇರುವ ಸಾಧ್ಯತೆ ಇಲ್ಲ. ಹಾಗಾಗಿ ಇದು ಸ್ಪಷ್ಟವಾದ ವೈಜ್ಞಾನಿಕ ಮಾಹಿತಿ ಇರುವ ವ್ಯಕ್ತಿಗಳೇ ಮಾಡಿದ ಅತ್ಯಾಚಾರ ಎಂಬ ಸಂಶಯ ಬರುತ್ತದೆ. ಅತ್ಯಾಚಾರ ಮಾಡಿದ ನಂತರ ಯೋನಿಯೊಳಗೆ ಮಣ್ಣು ತುಂಬಿಸಿದರೂ ವೀರ್ಯಾಣುಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆ ಮಾಡಿ ಅಪರಾಧಿಯ ಪತ್ತೆ ಹಚ್ಚಿ ನಿಖರ ಸಾಕ್ಷ್ಯ ಒದಗಿಸಲು ಸಾಧ್ಯವಿದೆ. ಪೊಲೀಸರು ಈ ಕೆಲಸವನ್ನು ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಪೊಲೀಸರು ಉತ್ತರಿಸಬೇಕಾಗುತ್ತದೆ.

ಇನ್ನೂ ಒಂದು ಅಂಶವಿದೆ. ಸಂತೋಷನ ಮುಖ ಹಾಗೂ ಬೆನ್ನಿನ ಮೇಲೆ ಗಾಯದ ಗುರುತು ಇದೆ. ಈ ಗಾಯ ಅತ್ಯಾಚಾರ ಮಾಡುವಾಗ ಅತ್ಯಾಚಾರಕ್ಕೊಳಗಾದ ಹೆಣ್ಣು ಅತ್ಯಾಚಾರಿಯನ್ನು ಪರಚುವುದರಿಂದ ಉಂಟಾದದ್ದು ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ. ಹೀಗಿರುವಾಗ ಆರೋಪಿಯ ರಕ್ತ ಸೌಜನ್ಯಳ ಕೈಯ ಉಗುರುಗಳಲ್ಲಿ ಹಾಗೂ ಬೆರಳುಗಳಿಗೆ ಅಂಟಿಕೊಂಡಿರಲೇಬೇಕು. ಈ ಅಂಟಿಕೊಂಡ ರಕ್ತದಿಂದಲೇ sowjanya-rape-murderಡಿಎನ್ಎ ಪರೀಕ್ಷೆ ಮಾಡಿ ಅಪರಾಧಿ ಸಂತೋಷ್ ಎಂದು 100% ನಿಖರವಾಗಿ ಹೇಳಲು ಸಾಧ್ಯವಿರುವಾಗ ಪೊಲೀಸರು ಆ ರಕ್ತದ ಕಲೆಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಯಾಕೆ ಕಳುಹಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಈ ಪರೀಕ್ಷೆ ಮಾಡಿದ್ದರೆ ಕೋರ್ಟುಗಳಲ್ಲಿ ಇದನ್ನು ಬಲವಾದ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಪೋಲೀಸರ ತನಿಖೆ ಸರಿಯಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ರಕ್ತದ ಕಲೆ ಅಲ್ಲದೆ ಕಿತ್ತು ತೆಗೆದ (ರೋಮಕೂಪ ಇರುವ) ಕೂದಲುಗಳಿಂದಲೂ ಡಿಎನ್ಎ ಪರೀಕ್ಷೆ ನಡೆಸಿ ಅಪರಾಧಿಯನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯ. ಸಂತೋಷನ ಮುಖ, ಬೆನ್ನಿಗೆ ಪರಚಿದ ಗಾಯ ಆಗಿದೆ ಎಂದರೆ ಆತನ ಕೂದಲನ್ನೂ ಅತ್ಯಾಚಾರಕ್ಕೊಳಗಾದ ವ್ಯಕ್ತಿ ಕಿತ್ತುಹಾಕುವ ಸಂಭವ ಇದೆ. ಇಂಥ ಕಿತ್ತ ಕೂದಲುಗಳಿಂದಲೂ ಡಿಎನ್ಎ ಪರೀಕ್ಷೆ ಮಾಡಲು ಸಾಧ್ಯವಿರುವಾಗ ಇಂಥ ಸಾಕ್ಷ್ಯಗಳನ್ನು ಪೊಲೀಸರು ಏಕೆ ಸಂಗ್ರಹಿಸಿಲ್ಲ ಎಂದು ತನಿಖೆ ನಡೆಸಿದವರನ್ನು ಪ್ರಜ್ಞಾವಂತರು ಕೇಳಬೇಕಾಗಿದೆ. ಪೊಲೀಸರು ಅತ್ಯಾಚಾರ ಹಾಗೂ ಕೊಲೆ ನಡೆದದ್ದು ಮೃತದೇಹ ಸಿಕ್ಕಿದ ಜಾಗದಲ್ಲೇ ಎಂದು ಹೇಳುತ್ತಾರೆ. ಸೌಜನ್ಯಳ ಕೊಲೆ ಆದ ದಿನ ಜೋರು ಮಳೆ ಬಂದಿದೆ. ಹೀಗಿದ್ದರೂ ಸೌಜನ್ಯಳ ಮೃತ ದೇಹ ಪತ್ತೆಯಾದಾಗ ದೇಹ ಹಾಗೂ ಕೈಚೀಲ ಹಾಗೂ ಪುಸ್ತಕಗಳು ಒದ್ದೆಯಾಗಿರಲಿಲ್ಲ ಎಂದು ಸೌಜನ್ಯ ಪೋಷಕರು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ತನಿಖೆ ನಡೆಸಿದ ತಜ್ಞ ಪೋಲೀಸರ ಉತ್ತರ ಏನು ಎಂದು ಜನರಿಗೆ ತಿಳಿಯಬೇಕಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

 – ಆನಂದ ಪ್ರಸಾದ್

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು.  ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗೆಯ ಕೊಡುಗೆಗಳನ್ನು ನೀಡಿ ಮತವನ್ನು ಖರೀದಿಸುವ ವ್ಯವಹಾರವಾಗಿ ಮಾರ್ಪಾಟಾಗಿದೆ.  ಇಂಥ ವ್ಯವಸ್ಥೆಯಲ್ಲಿ ಹೆಚ್ಚು ಹಣ ಹೊಂದಿದವರೇ ಗೆದ್ದು ಮತ್ತೆ ದೇಶವನ್ನು ಐದು ವರ್ಷಗಳ ಕಾಲ ಲೂಟಿ ಮಾಡಿ ಪುನಃ ಆ ಹಣದ ಒಂದಂಶವನ್ನು ಚುನಾವಣೆಗಳಲ್ಲಿ ಹಂಚಿ ಗೆದ್ದು ಬರುವ ಪರಿಸ್ಥಿತಿ ಬಂದಿದೆ.  ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುಡ್ಡಿರುವವರ ಕಾಲಿನಡಿಯಲ್ಲಿ ಬಿದ್ದು ನರಳುತ್ತಿದೆ ಮತ್ತು ಊಳಿಗಮಾನ್ಯ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ಇದಕ್ಕೆ ಯಾರು ಹೊಣೆ?  ಇದಕ್ಕೆ ಹಣ, ಹೆಂಡ, ಸೀರೆ ಹಾಗೂ ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಮತವನ್ನು ಮಾರಿಕೊಳ್ಳುವ ಮತದಾರರೇ ಕಾರಣ.  ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ತೆಗೆದುಕೊಳ್ಳುವವರು ಇದ್ದಾಗ ಮಾತ್ರ ಹಣವಂತರು ಇಂಥ ಅಡ್ಡದಾರಿಯನ್ನು ಹಿಡಿದು ಗೆಲ್ಲಲು ಸಾಧ್ಯವಾಗುತ್ತದೆ.  ಸ್ವಾಭಿಮಾನ ಉಳ್ಳ ಮತದಾರರು ಇದ್ದರೆ ಇಂಥ ಆಮಿಷಗಳನ್ನು ಖಡಾಖಂಡಿತವಾಗಿ ವಿರೋಧಿಸಿ ತರಾಟೆಗೆ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದರೆ ಆಮಿಷ ಒಡ್ಡಿ ಓಟು ಖರೀದಿಸುವ ಧೈರ್ಯ ಯಾವ ಹಣವಂತನಿಗೂ ಬpillars_of_democracyರುತ್ತಿರಲಿಲ್ಲ.  ಹೀಗಾಗಿ ಇಂಥ ಪ್ರವೃತ್ತಿ ಬೆಳೆಯಲು ನಮ್ಮ ಮತದಾರರೇ ಹೆಚ್ಚು ಜವಾಬ್ದಾರರು.  ಇದನ್ನು ಆರಂಭದಲ್ಲೇ ವಿರೋಧಿಸಿ ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ನೀಡುವ ಅಭ್ಯರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ  ಇಂಥ ಕೆಟ್ಟ ಪ್ರವೃತ್ತಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಬಡತನ ಹಾಗೂ ಅಜ್ಞಾನ ಈ ರೀತಿ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂದು ಹೇಳಿ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ.  ನಮ್ಮ ಮತದಾರರ ನೈತಿಕ ಅಧಃಪತನವೇ ಇದಕ್ಕೆ ಕಾರಣ.  ಕೇವಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರವೇ ಭ್ರಷ್ಟವಾಗಿಲ್ಲ ಮತದಾರರೂ ಭ್ರಷ್ಟರಾಗಿದ್ದಾರೆ, ನೈತಿಕ ಅಧಃಪತನವನ್ನು ಹೊಂದಿದ್ದಾರೆ ಎಂಬುದನ್ನು ಈ ಪ್ರವೃತ್ತಿ ಎತ್ತಿ ತೋರಿಸುತ್ತದೆ.  ಇತ್ತೀಚೆಗೆ ಟಿವಿ ವಾಹಿನಿಯೊಂದರಲ್ಲಿ ಈ ರೀತಿ ಹಣ ತೆಗೆದುಕೊಂಡು ಓಟು ಹಾಕುವುದನ್ನು ಮತದಾರರು ಸಮರ್ಥಿಸಿದ್ದು ಹೇಗೆಂದರೆ ಜನಪ್ರತಿನಿಧಿಗಳು ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲವೇ, ಹೀಗಿರುವಾಗ ನಾವು ಓಟಿಗಾಗಿ ಹಣ ತೆಗೆದುಕೊಂಡರೆ ಏನು ತಪ್ಪು ಎಂಬುದಾಗಿತ್ತು.  ಇಂಥ ಮತದಾರರು ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಉದ್ಧಾರವಾಗುವುದಾದರೂ ಹೇಗೆ?  ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಗುವುದು.  ಮತದಾರರು ಚುನಾವಣಾ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿ ಅನೈತಿಕತೆಯನ್ನು ಪ್ರೋತ್ಸಾಹಿಸುತ್ತಿರುವ ಕಾರಣವೇ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗೇ ಗಂಡಾಂತರಕಾರಿಯಾಗಿಬೆಳೆಯುತ್ತಿದೆ.  ಹೀಗಾಗಿ ನಮ್ಮ ಚುನಾವಣಾ ವ್ಯವಸ್ಥೆ ಭ್ರಷ್ಟವಾಗಿದೆ ಎಂದಾದರೆ ಅದಕ್ಕೆ ಮತದಾರರು ಹೆಚ್ಚು ಜವಾಬ್ದಾರರು.  ಏಕೆಂದರೆ ಮತದಾರರು ಬಹುಸಂಖ್ಯಾತರು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಅವರು ಅಲ್ಪಸಂಖ್ಯಾತರು.  ಬಹುಸಂಖ್ಯಾತ ಇರುವ ಮತದಾರರು ಅಲ್ಪಸಂಖ್ಯೆಯಲ್ಲಿ ಇರುವ ಅಭ್ಯರ್ಥಿಗಳು ಹಣ, ಹೆಂಡ ಹಾಗೂ ಇನ್ನಿತರ ಕೊಡುಗೆಗಳನ್ನು ಹಂಚಲು ಬರುವಾಗ ತರಾಟೆಗೆ ತೆಗೆದುಕೊಳ್ಳಲು ಅವಕಾಶ ಇದೆ.  ಹೀಗೆ ಎಲ್ಲ ಮತದಾರರೂ ಇಂಥ ಅನೈತಿಕ ಕೆಲಸವನ್ನು ತರಾಟೆಗೆ ತೆಗೆದುಕೊಂಡರೆ ಯಾವುದೇ ಅಭ್ಯರ್ಥಿಗೂ ಇಂಥವುಗಳನ್ನು ಹಂಚುವ ಧೈರ್ಯ ಬರಲಾರದು.

ಚುನಾವಣಾ ಆಯೋಗ ಹಣ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡುವವರು ಹಾಗೂ ಅವುಗಳನ್ನು ತೆಗೆದುಕೊಳ್ಳುವವರು ಇಬ್ಬರ ಮೇಲೂ ಜಾಮೀನುರಹಿತ ಬಂಧನಕ್ಕೆ ಅವಕಾಶ ನೀಡುವ ಕಾನೂನು ತರಲು ಯೋಚಿಸುತ್ತಿದ್ದು ಇದನ್ನು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿದೆ ಎಂದು ತಿಳಿದುಬಂದಿದೆ.  ಇಂಥ ಕಾನೂನು ತಂದರೂ ಮತದಾರರು ನೈತಿಕವಾಗಿ ಬೆಳೆಯದಿದ್ದರೆ ಹೆಚ್ಚಿನ ಪ್ರಯೋಜನ ಆಗಲಾರದು ಏಕೆಂದರೆ ಇದೆಲ್ಲ ಮತದಾರರು ಹಾಗೂ ಅಭ್ಯರ್ಥಿಗಳು ಜೊತೆಗೂಡಿ ನಡೆಸುತ್ತಿರುವ ಅನೈತಿಕ ಕಾರ್ಯವಾದುದರಿಂದ ಇದು ಕಾನೂನಿನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ನಡೆಯುವ ವ್ಯವಹಾರವಾಗಿದೆ.  ಹೀಗಾಗಿ ಇದನ್ನು ಮತದಾರರು ವಿರೋಧಿಸದ ಹೊರತು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಅಸಾಧ್ಯ.  ಮತದಾರರೇ ನೈತಿಕವಾಗಿ ಅಧಃಪತನ ಹೊಂದಿದ್ದಾಗ ಈ ಕದ್ದುಮುಚ್ಚಿ ನಡೆಯುವ ವ್ಯವಹಾರ ನಡೆಯುತ್ತಿರುವ ಬಗ್ಗೆ ಆಯೋಗಕ್ಕೆ ಸಾಕ್ಷ್ಯ ಸಹಿತ ದೂರು ನೀಡುವವರಾದರೂ ಯಾರು?

 
ಮತದಾರರು ನೈತಿಕವಾಗಿ ದೃಢತೆ ಬೆಳೆಸಿಕೊಂಡರೆ ಹಣ ಹಾಗೂ ಇನ್ನಿತರ ಕೊಡುಗೆ ನೀಡಿ ಓಟು ಖರೀದಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಊಳಿಗಮಾನ್ಯ ವ್ಯವಸ್ಥೆಯಾಗಿ ಪರಿವರ್ತಿಸುತ್ತಿರುವ ಕೆಟ್ಟ ಪ್ರವೃತ್ತಿಯನ್ನು ತಡೆಯಲು ಸಾಧ್ಯ.  ಮತದಾರರೇ ಭ್ರಷ್ಟರಾದರೆ ನಮ್ಮ ನಾಗರಿಕತೆಯ ಅಧಃಪತನ ತಡೆಯುವುದು ಸಾಧ್ಯವಿಲ್ಲ.  ಬಡತನ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂಬುದು ಒಪ್ಪತಕ್ಕ ಮಾತಲ್ಲ.  ಬಡತನವಿದ್ದರೂ ದುಡಿದು ತಿನ್ನುವ ಸ್ವಾಭಿಮಾನ ಬೆಳೆಸಿಕೊಂಡವರು ಎಂಜಲು ಕಾಸಿಗೆ ಕೈಯೊಡ್ಡುವುದಿಲ್ಲ.  ಸ್ವಾಭಿಮಾನವಿಲ್ಲದ, ದೇಶದ ಬಗ್ಗೆ ಕಾಳಜಿ ಇಲ್ಲದ ಮತದಾರರು ಮಾತ್ರ ಈ ರೀತಿ ಎಂಜಲು ಕಾಸಿಗೆ ಕೈಯೊಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವಲು ಮುಖ್ಯ ಕಾರಣರಾಗುತ್ತಿದ್ದಾರೆ.  ಇಂಥ ಪ್ರವೃತ್ತಿಯನ್ನು ಸಾಮೂಹಿಕವಾಗಿ ವಿರೋಧಿಸುವ, ತರಾಟೆಗೆ ತೆಗೆದುಕೊಳ್ಳುವ ಎಚ್ಚರ ಬೆಳೆದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ.  ಇಲ್ಲದಿದ್ದರೆ ಇದು ಉಳ್ಳವರ, ಭ್ರಷ್ಟರ ಪ್ರಭುತ್ವವಾಗಿ ಮಾತ್ರ ಮುಂಬರುವ ದಿನಗಳಲ್ಲಿ ಪರಿವರ್ತನೆಯಾಗಲಿದೆ.  ಹಾಗಾದರೆ ಅದಕ್ಕೆ ನಮ್ಮ ಮತದಾರರೇ ಜವಾಬ್ದಾರರು.  ಹಾಗಾಗದಂತೆ ತಡೆಯುವ ಹಕ್ಕು ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿದೆ.  ಅದನ್ನು ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಅವರ ಕೈಯಲ್ಲಿಯೇ ಇದೆ.

ಗುಜರಾತ್ ಲೋಕಾಯುಕ್ತ ಕಾಯ್ದೆ ತಿದ್ದುಪಡಿ – ಲೋಕಾಯುಕ್ತ ದುರ್ಬಲಗೊಳಿಸುವ ಯತ್ನ

– ಆನಂದ ಪ್ರಸಾದ್

ಗುಜರಾತ್ ವಿಧಾನಸಭೆಯಲ್ಲಿ ಆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಅಧಿಕಾರಸ್ಥರ ಕೈಗೊಂಬೆಯನ್ನಾಗಿ ಮಾಡುವ ಪ್ರಯತ್ನ ಮುಖ್ಯಮಂತ್ರಿ ಮೋದಿಯವರಿಂದ ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ಗುಜರಾತಿನಲ್ಲಿ ಲೋಕಾಯುಕ್ತ ಹುದ್ಧೆಯನ್ನು ಖಾಲಿ ಬಿಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪಾರದರ್ಶಕ ಆಡಳಿತ ನೀಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಇದು ತದ್ವಿರುದ್ಧವಾಗಿದೆ. Narendra_Modiಮುಖ್ಯಮಂತ್ರಿಯ ಈ ನಿಲುವಿನಿಂದ ಬೇಸತ್ತ ಗುಜರಾತಿನ ರಾಜ್ಯಪಾಲರು ನೂತನ ಲೋಕಾಯುಕ್ತರನ್ನು ನೇಮಿಸಿದ್ದರೂ ಅದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ರಾಜ್ಯ ಸರ್ಕಾರದ ನಿಲುವನ್ನು ಅವೆರಡೂ ತಳ್ಳಿಹಾಕಿ ಲೋಕಾಯುಕ್ತರ ನೇಮಕ ಸಿಂಧು ಎಂದು ತೀರ್ಪು ನೀಡಿವೆ. ಈ ಮಧ್ಯೆ ಮೋದಿ ಸರ್ಕಾರ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದೆ. ಇದೀಗ ಲೋಕಾಯುಕ್ತರ ನೇಮಕದ ಅಧಿಕಾರವನ್ನು ರಾಜ್ಯ ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದೆ.

ಲೋಕಾಯುಕ್ತ ಕಾಯ್ದೆಗೆ ತಂದಿರುವ ನೂತನ ತಿದ್ದುಪಡಿಯ ಪ್ರಕಾರ ಲೋಕಾಯುಕ್ತರ ನೇಮಕದ ಅಧಿಕಾರ ರಾಜ್ಯ ಸರ್ಕಾರದ ಪರಮಾಧಿಕಾರವನ್ನಾಗಿ ಮಾಡಲಾಗಿದೆ. ಲೋಕಾಯುಕ್ತರ ನೇಮಕ ಸಮಿತಿಯೊಂದರ ಮೂಲಕ ಮಾಡಲಾಗುತ್ತದೆ. ಅದಕ್ಕೆ ಸದಸ್ಯರಾಗಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆಯ ಸ್ಪೀಕರ್, ವಿರೋಧ ಪಕ್ಷದ ನಾಯಕ, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಸೂಚಿಸುವ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ರಾಜ್ಯದ ವಿಜಿಲೆನ್ಸ್ ಕಮಿಷನರ್ ಹೀಗೆ ಆರು ಜನರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ನೂತನ ತಿದ್ದುಪಡಿಯ ಪ್ರಕಾರ ರಾಜ್ಯಪಾಲರ ಲೋಕಾಯುಕ್ತ ನೇಮಕದ ಅಧಿಕಾರವನ್ನು ತೆಗೆದುಹಾಕಲಾಗಿದೆ. ರಾಜ್ಯಪಾಲರು ಸಮಿತಿಯು ಸೂಚಿಸಿದ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ಮಾಡಬೇಕಾಗುತ್ತದೆ.

ಲೋಕಾಯುಕ್ತ ನೇಮಕ ಸಮಿತಿಯಲ್ಲಿ ರಾಜ್ಯ ಸರ್ಕಾರದ ಹಿಡಿತ ಅಧಿಕವಾಗಿದೆ ಹೇಗೆಂದರೆ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆ ಸ್ಪೀಕರ್ ಹೀಗೆ ಮೂರು ಜನ ಸೇರಿ 50% ಹಿಡಿತ ರಾಜ್ಯ ಸರ್ಕಾರದಲ್ಲಿರುತ್ತದೆ. ಅದಲ್ಲದೆ ರಾಜ್ಯ ವಿಜಿಲೆನ್ಸ್ ಕಮಿಷನರ್ ಕೂಡ ರಾಜ್ಯ ಸರ್ಕಾರದ ನೇಮಕವಾಗಿರುವ ಕಾರಣ ಈ ಹಿಡಿತ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನುಳಿದಿರುವುದು ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ವಿರೋಧ ಪಕ್ಷದ ನಾಯಕರು. ಇವರು ಅಲ್ಪಸಂಖ್ಯಾತರಾಗಿರುವ ಕಾರಣ ಬಹುಸಂಖ್ಯಾತ ಸದಸ್ಯರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಹೀಗೆ ಅಧಿಕಾರಸ್ಥರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಇವರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಹೀಗೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಇದರ ಬದಲು ಹೈಕೋರ್ಟಿನ ನ್ಯಾಯಾಧೀಶರು, ವಿರೋಧ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿ graft-corruptionಹೀಗೆ ಮೂವರಿಗೂ ಒಪ್ಪಿಗೆಯಾಗುವ ವ್ಯಕ್ತಿ ಅಥವಾ ಈ ಮೂವರಲ್ಲಿ ಇಬ್ಬರಿಗೆ ಒಪ್ಪಿಗೆಯಾಗುವ ವ್ಯಕ್ತಿ ಲೋಕಾಯುಕ್ತರಾದರೆ ಅದನ್ನು ನಿಷ್ಪಕ್ಷಪಾತ ನೇಮಕ ಎಂದು ಹೇಳಬಹುದು. ಮೋದಿ ಸರ್ಕಾರದ ಕ್ರಮ ಇದಕ್ಕೆ ಪೂರಕವಾಗಿಲ್ಲ. ಹೀಗಾಗಿ ಮೋದಿ ಸರ್ಕಾರಕ್ಕೆ ನಿಷ್ಪಕ್ಷಪಾತ ನೇಮಕ ಬೇಕಾಗಿಲ್ಲ, ತನ್ನ ಕೈಗೊಂಬೆಯಾಗುವ ವ್ಯಕ್ತಿಯ ನೇಮಕ ಬೇಕಾಗಿದೆ ಎಂದು ಹೇಳಬಹುದು. ಕೇಂದ್ರ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐ ಅನ್ನು ಕೈಗೊಂಬೆಯ ರೀತಿ ಬಳಸುತ್ತದೆ ಎಂದು ವ್ಯಂಗ್ಯವಾಡುವ ಮೋದಿಯವರು ಅಥವಾ ಬಿಜೆಪಿಯವರು ಈಗ ಗುಜರಾತಿನಲ್ಲಿ ಮಾಡಲು ಹೊರಟಿರುವುದು ಇದನ್ನೇ ಅಲ್ಲವೇ? ಹೀಗಾದರೆ ಇವರಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡದೆ ಇರಲಾರದು.

ಗುಜರಾತಿನ ವಿಧಾನಸಭೆಯಲ್ಲಿ ಮಂಡಿಸಿದ 2009-2010 ಹಾಗೂ 2010-2011ನೇ ಸಾಲಿನ ಸಿಎಜಿ ವರದಿ ರಾಜ್ಯ ಸರ್ಕಾರ 17,000 ಕೋಟಿ ಅವ್ಯವಹಾರ ನಡೆಸಿದೆ ಹಾಗೂ ಬೊಕ್ಕಸಕ್ಕೆ ನಷ್ಟವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನು ನೋಡುವಾಗ ಮೋದಿ ಸರ್ಕಾರದಲ್ಲಿ ಅವ್ಯವಹಾರಗಳು ನಡೆದಿರುವ ಮತ್ತು ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತರ ನೇಮಕ ಮಾಡಲಾಗಿಲ್ಲ ಮತ್ತು ತಮ್ಮ ಕೈಗೊಂಬೆಯಾಗುವ ಲೋಕಾಯುಕ್ತರ ನೇಮಕ ಮೋದಿ ಸರ್ಕಾರಕ್ಕೆ ಬೇಕಾಗಿದೆ ಎಂಬ ಅಭಿಪ್ರಾಯ ಜನತೆಯಲ್ಲಿ ಮೂಡಿದರೆ ಅಚ್ಚರಿ ಇಲ್ಲ. ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ಸಾಧ್ಯ ಎಂಬ ಪ್ರಚಾರ ಬಂಡವಾಳಶಾಹಿಗಳು ವ್ಯವಸ್ಥಿತವಾಗಿ ನಡೆಸುವ ಅಬ್ಬರದ ಪ್ರಚಾರ ಎಂದು ಇದರಿಂದ ಜನರಿಗೆ ಅನಿಸುವ ಸಾಧ್ಯತೆ ಹೆಚ್ಚಾಗಿದೆ.

ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?

– ಆನಂದ ಪ್ರಸಾದ್

ನಮ್ಮ ದೇಶದಲ್ಲಿ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರವನ್ನು ಪ್ರೇರೇಪಿಸಿದ ಬಲಪಂಥೀಯರಿಗೆ ಶಿಕ್ಷೆ ಆಗುವುದು ಕಂಡುಬರುವುದು ಬಹಳ ಕಡಿಮೆ. ಕಾನೂನು ಕೈಗೆತ್ತಿಕೊಂಡು ಸಶಸ್ತ್ರ ಹೋರಾಟದ ಹಾದಿ ಹಿಡಿದಿರುವ ನಕ್ಸಲರಿಗೆ ಹೆಚ್ಚಾಗಿ ಶಿಕ್ಷೆಯಾಗುತ್ತದೆ. ನ್ಯಾಯಾಲಯದಲ್ಲಿ ನಕ್ಸಲರು ಸಾಕ್ಷ್ಯಗಳಿಲ್ಲದೆ ಬಿಡುಗಡೆಯಾಗಬಹುದೆಂದು ಪೊಲೀಸರೇ ಎಷ್ಟೋ ನಕ್ಸಲ್ ನಾಯಕರನ್ನು ಯಾವುದೇ ವಿಚಾರಣೆಯಿಲ್ಲದೆ ನಕಲಿ ಎನ್ಕೌಂಟರ್ ಹೆಸರಿನಲ್ಲಿ ಕೊಂದುಹಾಕುತ್ತಾರೆ. ನಕ್ಸಲರು ಹಿಂಸೆಯ communal-clashಹಾದಿ ಹಿಡಿದಿರುವ ಕಾರಣ ಇದರ ಬಗ್ಗೆ ಜನರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ನ್ಯಾಯಾಲಯವು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದು ಅವರಿಗೆ ಕ್ಷಮಾದಾನ ನೀಡಬೇಕು, ನೀಡಬಾರದು ಎಂಬ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ಕಾನೂನು ಎಲ್ಲರಿಗೂ ಒಂದೇ, ಅದರಲ್ಲಿ ಭೇದ ಇರಬಾರದು. ಇದೇ ರೀತಿ ಬಲಪಂಥೀಯ ಹಿಂಸಾಚಾರ ಪ್ರೇರೇಪಿಸಿದ ನಾಯಕರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ. ಹಾಗಾದಾಗ ಮಾತ್ರ ಧಾರ್ಮಿಕ ವಿಷಯಗಳನ್ನು ರಾಜಕೀಯ ಅಧಿಕಾರಸಾಧನೆಗಾಗಿ ದುರ್ಬಳಕೆ ಮಾಡಿ ದುರಾಡಳಿತ ನೀಡುವ ದುಷ್ಟರಿಗೆ ಪಾಠ ಕಲಿಸಿದಂತೆ ಆಗುತ್ತದೆ ಹಾಗೂ ಅಂಥವರು ಮತ್ತೆ ಮತ್ತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ವಿಷಯಗಳನ್ನು ಉಪಯೋಗಿಸಿಕೊಳ್ಳುವುದನ್ನು ನಿಯಂತ್ರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯ.

1992ರಲ್ಲಿ ಬಾಬ್ರಿ ಮಸೀದಿಯನ್ನು ನ್ಯಾಯಾಲಯದ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು ಎಂಬ ಆದೇಶದ ಹೊರತಾಗಿಯೂ ಬಲಪಂಥೀಯ ಹಿಂದುತ್ವವಾದಿಗಳು ಕರಸೇವೆಯ ನೆಪದಲ್ಲಿ ಉರುಳಿಸಿದರು.್ ಇದು ಹಾಡಹಗಲೇ ನಡೆದ ಬಲಪಂಥೀಯರು ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡ ಕೃತ್ಯವಾದರೂ ಈವರೆಗೂ ಈ ಕೇಸಿನಲ್ಲಿ ಸಂಬಂಧಪಟ್ಟ ಯಾರಿಗೂ ಶಿಕ್ಷೆ ಆಗಿಲ್ಲದಿರುವುದು ಏನನ್ನು ಸೂಚಿಸುತ್ತದೆ ಇದು ಸೂಚಿಸುವುದು ಏನೆಂದರೆ ಬಲಪಂಥೀಯರು ಕಾನೂನನ್ನು ಉಲ್ಲಂಘಿಸಿದರೆ ಅವರಿಗೆ ಕ್ಷಮಾದಾನ ಇದೆಯೆಂದು ಅಲ್ಲವೇ? ಬಲಪಂಥೀಯರ ಈ ದ್ವಂದ್ವ ನೀತಿಯನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾದ ಅಗತ್ಯ ಇದೆ. ಬಾಬ್ರಿ ಮಸೀದಿಯ ಜಾಗದಲ್ಲಿ ಹಿಂದೆ ರಾಮನ ದೇವಾಲಯ ಇತ್ತು, ಅದನ್ನು ಹಿಂದೆ ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿ ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದರು ಎಂಬುದು ಬಲಪಂಥೀಯರ ವಾದ ಹಾಗೂ ಅಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬುದು ಅವರ ವಾದ. ಇದು ನಿಜವಾಗಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇರುವ ನಮ್ಮ ದೇಶದಲ್ಲಿ ಅದಕ್ಕೊಂದು ನಾಗರಿಕ ವಿಧಾನ ಇದೆ ಅಲ್ಲವೇ? ಅಂಥ ನಾಗರಿಕ ವಿಧಾನಗಳಲ್ಲಿ ಒಂದು ನ್ಯಾಯಾಲಯದ ಮೊರೆ ಹೋಗಿ ತೀರ್ಪು ಬರುವವರೆಗೂ ಕಾಯುವುದು. ಇಲ್ಲವಾದರೆ ಇದೇ ವಿಷಯವನ್ನು ಮುಖ್ಯ ಚುನಾವಣಾ ವಿಷಯವಾಗಿ ಎತ್ತಿಕೊಂಡು ಸ್ಪರ್ಧಿಸಿ ಮೂರನೇ ಎರಡು ಬಹುಮತವನ್ನು ಪಡೆದು ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಿ ಅದನ್ನು ಅಗತ್ಯ ಮೂರನೇ ಎರಡು ಬಹುಮತದ ಮೂಲಕ ಪಾಸು ಮಾಡಿಸಿಕೊಂಡು ನಂತರ ಮುಂದುವರಿದಿದ್ದರೆ ಬಾಬ್ರಿ ಮಸೀದಿ ನಾಶದಿಂದ ದೇಶದಲ್ಲಿ ಉಂಟಾದ ಭೀಕರ ಗಲಭೆಗಳು ನಡೆಯುತ್ತಿರಲಿಲ್ಲ. ಹೀಗಾಗಿ ಬಲಪಂಥೀಯ ಹಿಂದುತ್ವವಾದಿಗಳು ದೇಶದ ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡು assam_violenceಮಹಾ ಹಿಂಸಾಚಾರಕ್ಕೆ ಕಾರಣರಾದುದು ಸ್ಪಷ್ಟ. ಈ ಸಂದರ್ಭದಲ್ಲಿ ನಡೆದ ಗಲಭೆಗಳಲ್ಲಿ 2000 ಸಾವಿರಕ್ಕೂ ಅಧಿಕ ಜನ ಸಾವಿಗೀಡಾದರು. ಇದರಿಂದ ದೇಶಕ್ಕೆ ಉಂಟಾದ ರಾಷ್ಟ್ರೀಯ ನಷ್ಟ 20,000 ಕೋಟಿ ರೂಪಾಯಿಗಳು ಎಂದು ಮಾಧ್ಯಮಗಳು ವರದಿ ಮಾಡಿವೆ. ಗುಜರಾತಿನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ 10,000 ಕೋಟಿ ರೂಪಾಯಿಗಳ ರಾಷ್ಟ್ರೀಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಯೆಲ್ಲಾ ಗಲಭೆಗಳು ಮತೀಯವಾದಿಗಳು ಅಧಿಕಾರ ಪಡೆಯಲು ನಡೆಸಿದ ಕಸರತ್ತಿನ ಫಲವಾಗಿ ಉಂಟಾಗಿವೆ. ಇದು ಬಲಪಂಥೀಯರ ದೇಶಭಕ್ತಿಯ ಒಂದು ಸ್ಯಾಂಪಲ್. ದೇಶಭಕ್ತಿಯ ಬಗ್ಗೆ ಬಹಳ ಬೊಬ್ಬೆ ಹಾಕುವ ಬಲಪಂಥೀಯರು ವಿವೇಕ ಹಾಗೂ ವಿವೇಚನೆಯಿಂದ ವರ್ತಿಸಿದ್ದಿದ್ದರೆ ಈ ಎಲ್ಲ ಗಲಭೆಗಳನ್ನು ತಡೆಯಬಹುದಿತ್ತು. 1992ರ ಮುಂಬೈ ಗಲಭೆಯಲ್ಲಿ ತನಿಖಾ ಆಯೋಗ ಪಾತ್ರವಿದೆ ಎಂದು ಸೂಚಿಸಿದ ಬಲಪಂಥೀಯರಿಗೂ ಯಾವುದೇ ಶಿಕ್ಷೆ ಆಗಿಲ್ಲ. ಇದರಿಂದಾಗಿ ನಮ್ಮ ದೇಶದ ನ್ಯಾಯನಿರ್ಣಯ ವ್ಯವಸ್ಥೆ ಹಾಗೂ ಅದನ್ನು ಜಾರಿಮಾಡಬೇಕಾದ ಆಡಳಿತ ವ್ಯವಸ್ಥೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪನಂಬಿಕೆ ಮೂಡುವುದರಲ್ಲಿ ಸಂಶಯವಿಲ್ಲ.

ದೇಶಕ್ಕೆ ಈ ಮಟ್ಟದ ಹಾನಿ ಮಾಡಿದವರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಬಾಬ್ರಿ ಮಸೀದಿಯ ನಾಶಕ್ಕೆ ಕಾರಣರಾದ ಮತೀಯವಾದಿಗಳು ಯಾರು, ಅವರು ಮಾಡಿದ ಜನರನ್ನು ಉದ್ರೇಕಿಸುವ ಭಾಷಣಗಳು, ವೀಡಿಯೊಗಳು ಇವುಗಳ ಆಧಾರದ ಮೇಲೆ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿದೆ, ಆದರೂ ಅವರಿಗೆ ಶಿಕ್ಷೆ ಆಗುವುದಿಲ್ಲ ಎಂದರೆ ಅವರನ್ನು ಶಿಕ್ಷಿಸಲು ಆಡಳಿತ ಹಾಗೂ ನ್ಯಾಯಾಂಗ ವಿಫಲವಾಗಿದೆ ಎಂದಲ್ಲವೇ? ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಕಾನೂನು ಕೈಗೆತ್ತಿಕೊಳ್ಳುವ ಎಲ್ಲರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ.