Category Archives: ಚಿದಂಬರ ಬೈಕಂಪಾಡಿ

ರಾಜಕಾರಣದಲ್ಲಿ ನಿಷ್ಠೆ ಮತ್ತು ಬದ್ಧತೆ ಶಾಶ್ವತವೇ?


– ಚಿದಂಬರ ಬೈಕಂಪಾಡಿ


 

ರಾಜಕೀಯದಲ್ಲಿ ಬದ್ಧತೆ ಮತ್ತು ನಿಷ್ಠೆ ಅತ್ಯಂತ ಹೆಚ್ಚು ಮಾನ್ಯವಾಗುವಂಥ ಮೌಲ್ಯಗಳು. ಬದ್ಧತೆ ಮತ್ತು ನಿಷ್ಠೆ ತನ್ನ ನಾಯಕರಿಗೆ, ಸಮೂಹಕ್ಕೆ ಮತ್ತು ಪಕ್ಷಕ್ಕೆ. ಇದು ಸರಳ ವ್ಯಾಖ್ಯಾನ. ಪ್ರಸುತ ರಾಜಕೀಯ ಸ್ಥಿತಿಯಲ್ಲಿ ಅಥವಾ ಈಗಿನ ಬದಲಾಗಿರುವ ವಾತಾವರಣದಲ್ಲಿ ಬದ್ಧತೆ ಮತ್ತು ನಿಷ್ಠೆಯನ್ನು ಕನ್ನಡಕ ಹಾಕಿಕೊಂಡು ಹುಡುಕಬೇಕಾಗಿದೆ. ಮೌಲ್ಯಗಳು ಅಪಮೌಲ್ಯಗಳಾಗಿರುವುದೇ ಹೆಚ್ಚು. ಮೌಲ್ಯಾಧಾರಿತ ರಾಜಕಾರಣದ ಹೆಸರು ಹೇಳುವುದು ಕೂಡಾ ರಾಜಕಾರಣಿಗಳಿಗೆ ಗೊತ್ತಿಲ್ಲವೋ ಅಥವಾ ಹಾಗೆ ಹೇಳಿ ಅದನ್ನು ಯಾಕೆ ಅಪಮೌಲ್ಯ ಮಾಡುವುದು ಎನ್ನುವ ತಿಳುವಳಿಕೆಯ ಕಾರಣವೋ ಗೊತ್ತಿಲ್ಲ. ಅಂತೂ “ಮೌಲ್ಯಾಧಾರಿತ ರಾಜಕಾರಣ” ಎನ್ನುವ ಪದ ಬಳಕೆ ಕಡಿಮೆಯಾಗಿದೆ. ರಾಮಕೃಷ್ಣ ಹೆಗಡೆ ಅವರಿಗೆ ಈ ಪದ ಬಳಕೆ ಬಿಟ್ಟು ಭಾಷಣವೇ ಇರುತ್ತಿರಲಿಲ್ಲ. ಎಲ್ಲ ಸಂದರ್ಭದಲ್ಲೂ ಅವರ ಬಾಯಿಂದ ಒಂದೆರಡು ಸಲವಾದರೂ ‘ಮೌಲ್ಯಾಧಾರಿತ’Ramakrishna-Hegdeಎನ್ನುವ ಪದ ಬಳಕೆಯಾಗುತ್ತಿತ್ತು. ಹಾಗೆಯೇ ನಜೀರ್ ಸಾಬ್ ಅವರಿಗೆ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಪದ ಬಳಕೆ ಇಷ್ಟವಾಗಿತ್ತು. ಸಾರ್ವಜನಿಕ ಸಭೆಯಾಗಲೀ, ಅಧಿಕಾರಿಗಳ ಜೊತೆ ನಡೆಸುವ ಪ್ರಗತಿ ಪರಿಶೀಲನಾ ಸಭೆಯಾಗಲೀ ನಜೀರ್ ಸಾಬ್ ಅವರು ಸಹಜವಾಗಿಯೇ ಈ ಪದ ಬಳಕೆ ಮಾಡುತ್ತಿದ್ದರು. ಇದರ್ಥ ಅವರಿಗೆ ಆ ಪದಗಳ ಮೇಲಿದ್ದ ಬದ್ಧತೆ ಅದೆಷ್ಟು ಎನ್ನುವುದು ಅರಿವಾಗುತ್ತದೆ.

ಈ ಉದಾಹರಣೆಯನ್ನು ಯಾಕೆ ಕೊಡಬೇಕಾಯಿತೆಂದರೆ ಈಗಿನ ರಾಜಕಾರಣದಲ್ಲಿ ಬದ್ಧತೆ ಮತ್ತು ನಿಷ್ಠೆ ಎರಡೂ ಇಲ್ಲ ಎನ್ನುವುದು ಸರ್ವರಿಗೂ ಗೊತ್ತಿದೆ. ಹಾಗೆಯೇ ಇವು ಇರಬೇಕೇ? ಅವುಗಳ ಅನಿವಾರ್ಯತೆ ಇದೆಯೇ? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಪಕ್ಷಾಂತರ ನಡೆಯುತ್ತಿರುವುದನ್ನು ಮತ್ತು ಆಪರೇಷನ್ ಕಮಲ, ಆಪರೇಷನ್ ಕಾಂಗ್ರೆಸ್ ಅಥವಾ ಆಪರೇಷನ್ ಜೆಡಿಎಸ್ ಹೀಗೆ ಈ ಆಪರೇಷನ್‌ಗಳು ಬದ್ಧತೆ ಮತ್ತು ನಿಷ್ಠೆ ಎರಡೂ ಅನಿವಾರ್ಯವಲ್ಲ ಎನ್ನುವುದಕ್ಕೆ ಸಾಕ್ಷಿ.

ರಾಜಕೀಯವಾಗಿ, ಸೈದ್ಧಾಂತಿಕವಾಗಿ ಕಡು ವಿರೋಧಿಯಾದ ಬಿಜೆಪಿ ಮತ್ತು ಜೆಡಿಎಸ್ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಡೆಸುತ್ತವೆ ಎನ್ನುವುದಾದರೆ ಸೈದ್ಧಾಂತಿಕ ಬದ್ಧತೆಯನ್ನು ಎಲ್ಲಿ ಹುಡುಕುವಿರಿ? ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೋದ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತೆ ಯುಪಿಎ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡುತ್ತವೆ, ಸಂಪುಟದಲ್ಲಿ ಭಾಗಿಯಾಗುತ್ತವೆ ಅಂತಾದರೆ ಸೈದ್ಧಾಂತಿಕ ಚೌಕಟ್ಟಿಗೆ ಎಲ್ಲಿದೆ ಬದ್ಧತೆ?

ಆದ್ದರಿಂದ ಬದ್ಧತೆ ಮತ್ತು ನಿಷ್ಠೆ ಎರಡೂ ಈಗಿನ ರಾಜಕಾರಣಕ್ಕೆ ಅನಿವಾರ್ಯವಲ್ಲ. ನಾಯಕರಿಗೂ ಬದ್ಧತೆ ಇರಬೇಕಾಗಿಲ್ಲ, ನಾಯಕರೆಂದು ಒಪ್ಪಿಕೊಂಡವರಿಗೂ ಬದ್ಧತೆ ಮತ್ತು ನಿಷ್ಠೆ ಇರಲೇಬೇಕೆನ್ನುವ ಕಟ್ಟುಪಾಡು ಬೇಕಾಗಿಲ್ಲ.

ಕರ್ನಾಟಕದ ರಾಜಕೀಯ ಸ್ಥಿತಿಯನ್ನೇ ಅವಲೋಕಿಸಿದರೆ ನಾಲ್ಕು ದಶಕಗಳ ಕಾಲ ಹಿಂದುತ್ವ, ಬಿಜೆಪಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ರಾಜಕೀಯದಲ್ಲಿ ನೆಲೆ, ಬೆಲೆ ಗಳಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ತೊರೆದ ಮೇಲೆ ತಾವು ಯಾರಿಗೆ ನಿಷ್ಠೆ ತೋರಿಸುತ್ತಿದ್ದರೋ, ಯಾವ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ, ನಿಷ್ಠರಾಗಿದ್ದರೋ ಅವರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದರೇ? ತಮ್ಮನ್ನು ಪದಚ್ಯುತಗೊಳಿಸಿದ ಕಾರಣಕ್ಕೆ ಆಕ್ರೋಶಗೊಂಡು ಪರ್ಯಾಯ ಪಕ್ಷ ಸ್ಥಾಪಿಸಿದ ಯಡಿಯೂರಪ್ಪ ಪ್ರತಿಪಾದಿಸುವ ಮೌಲ್ಯಗಳು ಯಾವುವು? yeddyurappa_rssಸಂಘ ಪರಿವಾರ ಕಲಿಸಿದ ನೀತಿ ಪಾಠ, ಬಿಜೆಪಿ ಕಲಿಸಿದ ತತ್ವ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ಈಗ ಕೆಜೆಪಿ ಕಟ್ಟಿಲ್ಲ. ಅವರು ಈಗ ಯಾವ ಸಿದ್ಧಾಂತವನ್ನೂ ಪ್ರತಿಪಾದಿಸುತ್ತಿಲ್ಲ. ಅವರು ಆಡುತ್ತಿರುವ ಮಾತು, ಮಾಡುತ್ತಿರುವ ಭಾಷಣದ ತುಣುಕುಗಳನ್ನು ಅವಲೋಕಿಸಿದರೆ ನಿಮಗೆ ಅವರು ನಾಲ್ಕು ದಶಕಗಳಿಂದ ನಂಬಿಕೊಂಡು, ಪಾಲಿಸಿಕೊಂಡು ಬಂದ ತತ್ವ, ಸಿದ್ಧಾಂತ, ನಿಷ್ಠೆಯ ಲವಲೇಶವೂ ಗೋಚರಿಸುವುದಿಲ್ಲ. ನಿಜವಾಗಿಯೂ ಅವರು ಕಾಂಗ್ರೆಸ್ ಪಕ್ಷ ಅಥವಾ ಬಿಜೆಪಿಗಿಂತಲೂ ಹೆಚ್ಚು ಸೆಕ್ಯೂಲರ್ ಎನ್ನುವ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ, ಮಾತು, ನಡವಳಿಕೆ ಮೂಲಕ. ಯಾಕೆಂದರೆ ಅದು ಈಗ ಅವರಿಗೆ ಅನಿವಾರ್ಯ. ಅವರು ತೋರಿಸಿದ ಪಕ್ಷ ನಿಷ್ಠೆಯಾಗಲೀ, ಬದ್ಧತೆಯಾಗಲೀ ಈಗ ಅವರ ನೆರವಿಗೆ ಬಂದಿಲ್ಲ ಆ ಪಕ್ಷ ಮತ್ತು ನಾಯಕರಿಂದ. ಆದ್ದರಿಂದಲೇ ಈಗ ಅವರು ಜನರಿಗೆ ಬದ್ಧರಾಗಿ, ಜನರಿಗೆ ನಿಷ್ಠರಾಗಿ, ಅಭಿವೃದ್ಧಿ ಮಾಡುವ ಕನಸು ನನಸು ಮಾಡುವುದಕ್ಕಾಗಿ ಹೆಚ್ಚಾಗಿ ಈ ನಾಡನ್ನು ಕಲ್ಯಾಣ ಕರ್ನಾಟಕ ಮಾಡುವುದಕ್ಕಾಗಿ ಕೆಜೆಪಿ ಕಟ್ಟಿದ್ದಾರಂತೆ. ಇವರೊಂದಿಗೆ ಹೆಜ್ಜೆ ಹಾಕಿರುವ ವಿ.ಧನಂಜಯ ಕುಮಾರ್ ಕೂಡಾ ಕಟ್ಟಾ ಸಂಘ ಪರಿವಾರ, ಹಿಂದುತ್ವ ಪ್ರತಿಪಾದನೆ ಮಾಡಿಕೊಂಡೇ ರಾಜಕೀಯದಲ್ಲಿ ತಮ್ಮ ನಿರೀಕ್ಷೆಗೂ ಮೀರಿದ ಸ್ಥಾನ ಪಡೆದಿದ್ದರು. ಅಟಲ್, ಅಡ್ವಾಣಿ, ರಾಜನಾಥ್ ಸಿಂಗ್ ಅವರ ಕಣ್ಣಿಗೆ ಯಡಿಯೂರಪ್ಪ, ಧನಂಜಯ ಕುಮಾರ್ ಭವಿಷ್ಯದ ಬೆಳಕಾಗಿದ್ದವರು, ಅವರುಗಳ ಒಡನಾಟದಲ್ಲಿ ಬೆಳೆದವರು. ಅಂಥ ಬದ್ಧತೆ, ನಿಷ್ಠೆಯನ್ನೂ ತೊರೆಯುವುದು ಸಾಧ್ಯವಾಗುವುದು ರಾಜಕೀಯದಲ್ಲಿ ಮಾತ್ರ, ಅದರಲ್ಲೂ ಅಧಿಕಾರಕ್ಕಾಗಿ ಮಾತ್ರ.

ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಸುಷ್ಮಾ ಅವರಿಗೆ ತೋರಿಸಿದ ನಿಷ್ಠೆ, ಬಿಜೆಪಿಗೆ ವ್ಯಕ್ತಪಡಿಸಿದ್ದ ಬದ್ಧತೆಯನ್ನು ನಿರಾಕರಿಸಲು ಸಾಧ್ಯವೇ? ಬಳ್ಳಾರಿಯಲ್ಲಿ ಹೆಸರಿರದಿದ್ದ ಬಿಜೆಪಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ್ದವರು ರೆಡ್ಡಿ ಬ್ರದರ್ಸ್. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಗಣಿನಾಡಿನಲ್ಲಿ ಕಮಲ ಕಲರವಕ್ಕೆ ಕಾರಣರು ಎನ್ನುವುದು ವಾಸ್ತವ ಸತ್ಯ. ಹೆತ್ತ ತಾಯಿಗಿಂತಲೂ ಹೆಚ್ಚು ನಿಷ್ಠೆ ತೋರಿಸುತ್ತಿದ್ದ ಶ್ರೀರಾಮುಲು, ಮಗನಿಗಿಂತೇನೂ ಕಡಿಮೆ ಪ್ರೀತಿ ಹರಿಸದ ಸುಷ್ಮಾ ಈ ಇಬ್ಬರಲ್ಲಿ ಯಾವ, ಬದ್ಧತೆ, ಯಾರಿಗೆ ಬದ್ಧತೆ, ಯಾವ ನಿಷ್ಠೆ, ಯಾರಿಗೆ ನಿಷ್ಠೆ ಹುಡುಕುತ್ತೀರಿ?

ಬದ್ಧತೆ ಮತ್ತು ನಿಷ್ಠೆ ಕಾಣೆಯಾಗುತ್ತಿರುವ ಹಿನ್ನೆಲೆಯನ್ನು ವಿವರಿಸಲು ಮಾತ್ರ ಕೆಲವೇ ಕೆಲವು ಹೆಸರುಗಳನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದೆ ಹೊರತು ಇವಿಷ್ಟೇ ಹೆಸರೆಂದು ಯಾರೂ ಭಾವಿಸಬೇಕಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮರುಕ್ಷಣದಿಂದಲೇ ಮಹಾತ್ಮಾ ಗಾಂಧಿ ಅವರಿಗೂ ಬದ್ಧತೆ ಮತ್ತು ನಿಷ್ಠೆ ನಿರಂತರವಾಗಿ ಉಳಿಯಲಾರವು ತನ್ನ ಒಡನಾಡಿಗಳಲ್ಲಿ ಎನ್ನುವ ಸುಳಿವು ಸಿಕ್ಕಿತ್ತು. ಆದ್ದರಿಂದಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷ ವೇದಿಕೆ ಮಾತ್ರ, ಅದರ ಕೆಲಸ ಮುಗಿಯಿತು, ಅದನ್ನು ವಿಸರ್ಜಿಸುವುದೇ ಸೂಕ್ತವೆಂದು ಹೆಳಿದ್ದರು. ಅಲ್ಲಿಂದಲೇ ಪಕ್ಷ ವಿಭಜನೆಯ ಆರಂಭ ಎನ್ನುವುದನ್ನು ಮರೆಯುವಂತಿಲ್ಲ.

ಆಗಲೇ ಹೊಸ ಪಕ್ಷ, ಅವರವರ ಬದ್ಧತೆ, ನಿಷ್ಠೆಗೆ ಅನುಗುಣವಾಗಿ ಸ್ಥಾಪನೆಯಾದವು, ಅವುಗಳಲ್ಲಿ ನಂಬಿಕೆಯುಳ್ಳವರು, ವಿಶ್ವಾಸವಿರುವವರು ಸೇರಿಕೊಂಡರು. ಆಡಳಿತ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್ ಹೀಗೆ ವಿಭಜನೆಯಾಗುತ್ತಾ 70ರ ದಶಕದಲ್ಲಿ ಮತ್ತಷ್ಟು ಹೊಸ ಹೊಸ ಪಕ್ಷಗಳು ಜನ್ಮ ತಳೆದವು.

ಕಾಂಗ್ರೆಸ್ ಪಕ್ಷದ ಮೇಲೆ, ಇಂದಿರಾ ಗಾಂಧಿ ಮೇಲೆ ದೇವರಾಜ ಅರಸು ಅವರಿಗಿದ್ದ ಬದ್ಧತೆ, Devaraj Arasನಿಷ್ಠೆಯನ್ನು ಪ್ರಶ್ನೆ ಮಾಡಲು ಸಾಧ್ಯವಿತ್ತೇ? ಆದರೆ ಅವರೂ ತಮ್ಮ ಹಾದಿ ಬದಲಿಸಿಕೊಂಡರು ಅಧಿಕಾರಕ್ಕಾಗಿ. ಆದ್ದರಿಂದ ಬದ್ಧತೆ, ನಿಷ್ಠೆ ನಾಪತ್ತೆಯಾಗುತ್ತಿರುವುದು ಈಗಷ್ಟೇ ಎನ್ನುವಂತಿಲ್ಲ, ಅದರ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ವೀರೇಂದ್ರ ಪಾಟೀಲ್ ಇಂದಿರಾ ವಿರುದ್ಧವೇ ಚಿಕ್ಕಮಗಳೂರಲ್ಲಿ ಸ್ಪರ್ಧಿಸಿದ್ದರು. ಮತ್ತೆ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಮೂಲಕವೇ ಮುಖ್ಯಮಂತ್ರಿಯಾದರು. ಹಾಗಾದರೆ ನಿಷ್ಠೆ, ಬದ್ಧತೆಗೆ ಯಾವ ವ್ಯಾಖ್ಯಾನ ಕೊಡುತ್ತೀರಿ.

ಎಸ್.ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಹೇಗೆ ಜರೆದಿದ್ದರು. ನರಸಿಂಹ ರಾವ್ ಅವರನ್ನು ಚೇಳು ಎಂದಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಎಲ್ಲವು ಕಳೆದುಹೋದ ಅಧ್ಯಾಯವೆಂದಿದ್ದರು.

ಹೀಗೆ ವಿಶ್ಲೇಷಿಸುತ್ತಾ ಹೋದರೆ ಬದ್ಧತೆ ಮತ್ತು ನಿಷ್ಠೆಯ ಪಲ್ಲಟಗಳ ಪರಾಕಾಷ್ಠೆ ಇನ್ನು ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿಸಿದ ಮರುದಿನವೇ ತಾವು ಬದುಕಿನುದ್ದಕ್ಕೂ ಹೇಳುತ್ತಲೇ ಬಂದ ಸಿದ್ಧಾಂತ, ತೋರಿಸುತ್ತಾ ಬಂದ ನಿಷ್ಠೆ, ಬದ್ಧತೆಯನ್ನು ಬಿಟ್ಟು ಯಾರು ಯಾವ ಪಕ್ಷದ ಕದ ತಟ್ಟುತ್ತಾರೆಂದು ನೋಡುತ್ತಿರಿ. ಈ ಹಿಂದೆ ಎಂದೂ ಆಗದಿದ್ದಷ್ಟು ವಲಸೆ ನಡೆಯಲಿವೆ. ನಿಷ್ಠೆ, ಬದ್ಧತೆ ಅನಿವಾರ್ಯವಲ್ಲವೆಂದು ಸಾರಿ ಹೇಳಿರುವ ಯಡಿಯೂರಪ್ಪ ಟಿಕೆಟ್ ಸಿಗದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೊರೆದು ಬರುವವರಿಗೆ ಮಣೆ ಹಾಕಲಿದ್ದಾರೆ. ಆಗ ಟಿಕೆಟ್ ಕೊಟ್ಟರೆ ಯಡಿಯೂರಪ್ಪ ಅವರಿಗೆ ಬದ್ಧತೆ, ಅವರ ಕೆಜೆಪಿ ಪಕ್ಷಕ್ಕೆ ನಿಷ್ಠೆ. ಯಡಿಯೂರಪ್ಪ ಹೇಳುವ ಸಿದ್ಧಾಂತಕ್ಕೆ ಬದ್ಧರು ಮತ್ತು ನಿಷ್ಠರು. ಅಂತಿಮವಾಗಿ ಉಳಿದು ಬಿಡುವ ಪ್ರಶ್ನೆ ಇಲ್ಲೂ ಬದ್ಧತೆ, ನಿಷ್ಠೆ ಶಾಶ್ವತವೇ?

ರಾಜಕಾರಣದ ಭ್ರಷ್ಟ ಸುಳಿಗಳ ನೋಟ


– ಚಿದಂಬರ ಬೈಕಂಪಾಡಿ


 

ಜಾಗತಿಕವಾಗಿ ಮಲೇಶಿಯಾಕ್ಕೆ ಭ್ರಷ್ಟಾಚಾರದಲ್ಲಿ ಅಗ್ರಪಟ್ಟ. ನಂತರದ ಸ್ಥಾನ ಮೆಕ್ಸಿಕೋ, ಕಡೆಯ ಸ್ಥಾನ ಜಪಾನ್ ಎನ್ನುವುದು ಅಧ್ಯಯನ ವರದಿಯ ತಿರುಳು. ಭ್ರಷ್ಟಾಚಾರ ವಿಶ್ವಮಾನ್ಯವಾಗಿದೆ. ಭಾರತದಲ್ಲಿ ರಾಜಕಾರಣದ ಮೂಲಕವೇ ಭ್ರಷ್ಟಾಚಾರ ಹುಟ್ಟಿಕೊಂಡಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪಕ್ಷ ಮುನ್ನಡೆಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹ ಭ್ರಷ್ಟಾಚಾರದ ಮೂಲ. ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿದಾಗ ಅರಿವಿಗೆ ಬರುವ ಸಂಗತಿಯೆಂದರೆ 60 ರ ದಶಕದಲ್ಲಿ ರಾಜಕೀಯ ಪಕ್ಷಗಳಿಗೆ ಸಂಪನ್ಮೂಲ ಸಂಗ್ರಹಿಸುವ ಅನಿವಾರ್ಯತೆ ಇರಲಿಲ್ಲ. 70 ರ ದಶಕದಲ್ಲಿ ಇದರ ಉಗಮ. ಕಾರ್ಪೊರೇಟ್ ಸಂಸ್ಥೆ ತಾನಾಗಿಯೇ ಪಾರ್ಟಿ ಫಂಡ್‌ಗೆ ದೇಣಿಗೆ ನೀಡುವ ಸಂಪ್ರದಾಯ ಆರಂಭ ಮಾಡಿತು. ಅದಕ್ಕೆ ಪ್ರತಿಯಾಗಿ ಗುತ್ತಿಗೆ ಪಡೆಯುವುದಕ್ಕೆ ಪರ್ಸೆಂಟೇಜ್ ವ್ಯವಹಾರ. ಇದು ಯಾವ ಮಟ್ಟಕ್ಕೆ ಬೆಳೆಯಿತೆಂದರೆ ಈಗ ತಳಮಟ್ಟದ ಗ್ರಾಮಪಂಚಾಯತ್ ಗುತ್ತಿಗೆ ಪಡೆಯುವುದಕ್ಕೂ ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿದೆ. ಇದನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ?

70 ರ ದಶಕದಲ್ಲಿ ಒಂದು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ 50 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗಿತ್ತು. ಅಷ್ಟೊಂದು ಸಂಪನ್ಮೂಲ ಹೊಂದಿಸಿಕೊಳ್ಳುವುದಕ್ಕೆ ಅಭ್ಯರ್ಥಿಗೆ ಅಸಾಧ್ಯವಾಗುತ್ತಿತ್ತು. ಈ ಕಾರಣಕ್ಕೆ ಪಕ್ಷದ ವತಿಯಿಂದ ಇಂತಿಷ್ಟು ಫಂಡ್ ಕೊಡುವ ಸಂಪ್ರದಾಯ ಬೆಳೆಯಿತು. ಆ ಕಾಲದಲ್ಲಿ ಗರಿಷ್ಠ ಒಂದು ಲೋಕಸಭಾ ಕ್ಷೇತ್ರದ ಸಿರಿವಂತ ಅಭ್ಯರ್ಥಿ 2 ಕೋಟಿ ರೂಪಾಯಿ ವೆಚ್ಚ ಮಾಡಿದ್ದು ದಾಖಲೆ, ಈಗ?

ಒಂದು ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗೆ ಅಭ್ಯರ್ಥಿಗಳು ಮಾಡುವ ಖರ್ಚು ಹುಬ್ಬೇರಿಸುವಂತೆ ಮಾಡುತ್ತದೆ. ಯಾವುದೇ ದೇಶ ಆರ್ಥಿಕವಾಗಿ ಬಲಿಷ್ಠವಾಗಿದ್ದರೂ ಭ್ರಷ್ಟವಾಗಿದ್ದರೆ ಆ ದೇಶ ಬಲಿಷ್ಠವಲ್ಲ ಎನ್ನುವುದು ಆರ್ಥಿಕ ಥಿಯರಿ. ಆದರಿಂದಲೇ ಭಾರತ ಶ್ರೀಮಂತಿಕೆಯಿದ್ದರೂ ಬಡ ದೇಶ.

ಭ್ರಷ್ಟಾಚಾರವನ್ನು ಹುಟ್ಟು ಹಾಕಿದ ದೇಣಿಗೆ ಸಂಸ್ಕೃತಿ ಈಗ ರಾಜಕಾರಣವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿದೆ. ಹಿಂದೆ ಆಡಳಿತ ಪಕ್ಷಗಳಿಗೆ ಮಾತ್ರ ಸಾಧ್ಯವಿದ್ದ ದೇಣಿಗೆ ಪಡೆಯುವ ಸಾಮರ್ಥ್ಯ ಈಗ ವಿರೋಧ ಪಕ್ಷಗಳಿಗೂ ಸಾಧ್ಯವಾಗಿದೆ. ಯಾಕೆಂದರೆ ತಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭರವಸೆಯಿಂದ. ಈಗಲೂ ಪಕ್ಷಗಳು ನಿಧಿ ಸಂಗ್ರಹಿಸುವ ಸಂಪ್ರದಾಯವಿದೆ. ಹಿಂದೆಯೂ ಬಿ-ಫಾರಂ ಪಡೆಯಲು ಅಭ್ಯರ್ಥಿಗಳು ಹಂತಹಂತವಾಗಿ ಹಣಕೊಡಬೇಕಾಗಿತ್ತು, ಈಗಲೂ ಅದು ಮುಂದುವರಿದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಕರ್ನಾಟಕದ ಮಟ್ಟಿಗೆ ರಾಜಕಾರಣವನ್ನು ಭ್ರಷ್ಟಾಚಾರ ಆವರಿಸಿಕೊಂಡುಬಿಟ್ಟಿದೆ. ರಾಜಕಾರಣದಲ್ಲಿ ಶುದ್ಧ ಹಸ್ತ ಎನ್ನುವ ಮಾತಿಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ವ್ಯಾಖ್ಯಾನಿಸುತ್ತಾರೆ. ಅತೀ ಭ್ರಷ್ಟ, ಇದ್ದವರಲ್ಲಿಯೇ ಕಡಿಮೆ ಭ್ರಷ್ಟ ಎನ್ನುವ ಮಟ್ಟಿಗೆ ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಭ್ರಷ್ಟಾಚಾರ ಮಾಡಿಯೂ ಜಾಣತನದಿಂದ ನಿಭಾಯಿಸುವವರಿದ್ದಾರೆ. ಭ್ರಷ್ಟಾಚಾರವನ್ನು ಅರಗಿಸಿಕೊಳ್ಳುವಂಥ ಸಾಮರ್ಥ್ಯವನ್ನು ಗಳಿಸಿದವರೂ ಇದ್ದಾರೆ. ಚುನಾವಣೆ ಕಾಲಘಟ್ಟದಲ್ಲಿ ಮಾತ್ರ ಕೇಳಿ ಬರುವ ಭ್ರಷ್ಟಾಚಾರದ ಆರೋಪಗಳಿಗೆ ಅಷ್ಟೊಂದು ಮಹತ್ವ ಕೊಡಬೇಕಾಗಿಲ್ಲ ಅಂದುಕೊಂಡರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರ ಬಗ್ಗೆ ಆರೋಪ ಬಂದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಮೇಲೆ ಅಬಕಾರಿ ಸಚಿವ ರೇಣುಕಾಚಾರ್ಯ ಮಾಡಿರುವ ಆರೋಪ ತಾಜಾ. ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಕಾಲದಲ್ಲಿ ತಾವು ಸದಾನಂದ ಗೌಡರ ಕೋರಿಕೆಯಂತೆ ಹಣಕೊಟ್ಟಿದ್ದೆ ಎಂದಿದ್ದಾರೆ. ತಮ್ಮಲ್ಲಿ ಹಣಕೊಟ್ಟಿರುವುದಕ್ಕೆ ದಾಖಲೆಗಳಿವೆ, ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಒಂದು ವೇಳೆ ದಾಖಲೆ ಇಟ್ಟುಕೊಂಡಿದ್ದರೆ ನಿಜಕ್ಕೂ ರೇಣುಕಾಚಾರ್ಯ ಬುದ್ಧಿವಂತ ರಾಜಕಾರಣಿ. ಹಣಪಡೆದು ದಾಖಲೆ ಮೂಲಕ ಸಿಕ್ಕಿಹಾಕಿಕೊಂಡರೆ ಸದಾನಂದ ಗೌಡರು ದಡ್ಡ ರಾಜಕಾರಣಿ ಎನ್ನುವುದು ಇಲ್ಲಿ ಮುಖ್ಯವಲ್ಲ. ರಾಜಕಾರಣದ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅತೀ ಮುಖ್ಯ.

ಕರ್ನಾಟಕದಲ್ಲಿ ರಾಜಕಾರಣಿಗಳ ಮೇಲೆ ಅದರಲ್ಲೂ ಗುರುತರವಾದ ಜವಾಬ್ದಾರಿ ನಿಭಾಯಿಸುವಂಥವರ ವಿರುದ್ಧ ಆರೋಪಗಳು ಹೊಸತೇನೂ ಅಲ್ಲ. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ಧರಂ ಸಿಂಗ್, ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹೀಗೆ ಎಲ್ಲರ ವಿರುದ್ಧವೂ ಒಂದಲ್ಲ ಒಂದು ಆರೋಪ ಥಳುಕು ಹಾಕಿಕೊಂಡಿದೆ.

ಅತ್ಯಂತ ಮುಖ್ಯವಾಗಿ ಎರಡು ಕಾರಣಗಳಿಂದಾಗಿ ರಾಜಕಾರಣ ಭ್ರಷ್ಟಾಚಾರದ ಸುಳಿಗೆ ಸಿಲುಕಿದೆ. ಅಧಿಕಾರದ ಮೇಲೆ ಕುಳಿತ ವ್ಯಕ್ತಿ ಪಕ್ಷ ಮುನ್ನಡೆಸಲು ಸಂಪನ್ಮೂಲ ಒದಗಿಸಬೇಕು ಎನ್ನುವುದು ಮೊದಲ ಕಾರಣವಾದರೆ ಸಹಜವಾಗಿಯೇ ಮತ್ತೊಂದು ಕಾರಣ ಸ್ವಹಿತಾಸಕ್ತಿ. ರಾಜಕಾರಣಿ ಸನ್ಯಾಸಿಯಲ್ಲ, ಸನ್ಯಾಸಿಗಳೆಲ್ಲರೂ ಭ್ರಷ್ಟಾಚಾರದಿಂದ ಹೊರತಲ್ಲ ಎನ್ನುವುದು ಬೇರೆಯೇ ಮಾತು.

ಚುನಾವಣೆ ಎನ್ನುವುದು ಯಾವಾಗ ದುಬಾರಿಯಾಯಿತೋ ಆ ಕ್ಷಣದಿಂದಲೇ ಭ್ರಷ್ಟಾಚಾರದ ವೇಗ ಮತ್ತು ವ್ಯಾಪ್ತಿ ಹೆಚ್ಚಾಯಿತು. corruption-india-democracyಯಾವುದೇ ಮುಖ್ಯಮಂತ್ರಿ ಒಂದು ಪಕ್ಷದ ಹಿನ್ನೆಲೆಯಿಂದಾಗಿ ಅಧಿಕಾರಕ್ಕೇರಿದರೂ ಸಂಪನ್ಮೂಲಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಅಲಿಖಿತ ನಿಯಮ ಈಗಿನ ರಾಜಕಾರಣದಲ್ಲಿ. ಈ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೊಂದು ವೇಳೆ ಅಲ್ಲಗಳೆದರೆ ಆತ್ಮವಂಚನೆಯಾಗುತ್ತದೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಮಿತಿಯೂ ಇಲ್ಲ, ಮಾನದಂಡವೂ ಇಲ್ಲ. ಪೊಲೀಸ್ ಠಾಣೆ ಸ್ಥಾಪನೆಯಾಯಿತೆಂದರೆ ಅಲ್ಲಿ ಕಳವು, ಹೊಡೆದಾಟ, ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಯಾಕೆಂದರೆ ಆ ಠಾಣೆಯವರಿಗೂ ಕೆಲಸಬೇಕಲ್ಲ. ಹಾಗೆಯೇ ಭ್ರಷ್ಟಾಚಾರ ತಡೆಗೆ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕಾರಣಿಗಳು, ಅಧಿಕಾರಸ್ಥರು ಸಾಲುಗಟ್ಟಿ ಕೋರ್ಟು ಕಚೇರಿಗೆ ಎಡತಾಕುವಂತಾಗಿದೆ. ಯಾಕೆಂದರೆ ಅದು ಕೆಲಸ ಮಾಡುತ್ತಿದೆ, ಮಾಡಲೇ ಬೇಕು.

ಚುನಾವಣಾ ವೆಚ್ಚವನ್ನು ನಿಯಂತ್ರಣ ಮಾಡುವ ಮೊದಲೇ ಅಭ್ಯರ್ಥಿಗಳು ಮಾಡುತ್ತಿದ್ದ ವೆಚ್ಚಕ್ಕಿಂತೇನೂ ಈಗ ಕಡಿಮೆಯಾಗಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ವೆಚ್ಚ ಮಾಡುವ ವಿಧಾನಗಳು ಮಾತ್ರ ಬದಲಾಗಿವೆ. ಅತ್ಯಂತ ಮಹತ್ವದ ಅಂಶವೆಂದರೆ ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ ತನ್ನ ಸ್ವಂತ ದುಡಿಮೆಯನ್ನು ಹೂಡಿಕೆ ಮಾಡಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ, ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಸಾಧ್ಯ. ಸಂಪನ್ಮೂಲ ಹೊಂದಿಸಿಕೊಳ್ಳುತ್ತಾರೆ, ಹೊಂದಿಸಿಕೊಳ್ಳಲೇ ಬೇಕು. ಇಂಥ ವ್ಯವಸ್ಥೆಯ ಭಾಗವಾಗಿ ರಾಜಕಾರಣದಲ್ಲಿ ಭ್ರಷ್ಟಾಚಾರ ಬೆಳೆದುಬಂದಿದೆ. ಚುನಾವಣಾ ವ್ಯವಸ್ಥೆಯಲ್ಲೇ ಬದಲಾವಣೆಯಾಗಬೇಕು ಎನ್ನುವುದು ನಿರೀಕ್ಷೆಯಾದರೂ ಅಂಥ ಮಾನಸಿಕ ಸ್ಥಿತಿ ರಾಜಕಾರಣಿಗಳಲ್ಲಿ ಬೆಳೆಯುವುದು ಯಾವಾಗ? ಸೈಕಲ್ ತುಳಿದುಕೊಂಡೇ ರಾಜಕೀಯಕ್ಕೆ ಇಳಿದ ವ್ಯಕ್ತಿ ಅದೇ ಸೈಕಲ್‌ಗೆ ತನ್ನನ್ನು ಸೀಮಿತಗೊಳಿಸಿಕೊಳ್ಳುವಂಥ ಮನಸ್ಥಿತಿ ಉಳಿಸಿಕೊಳ್ಳಲು ಸಾಧ್ಯವೇ? ಸಾಧ್ಯವಾಗಲಿ ಎನ್ನುವುದು ಈ ಕ್ಷಣದ ಆಶಯ.

ನಿಮ್ಮ ಮನೆ ಬಾಗಿಲಿಗೆ ಬರುವವರನ್ನು ನೋಡಿ


– ಚಿದಂಬರ ಬೈಕಂಪಾಡಿ


 

ಕರ್ನಾಟಕದ ವಿಧಾನಸಭೆಯ 224 ಸ್ಥಾನಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಮತದಾರ ಪ್ರಭುಗಳು ಆಯ್ಕೆ ಮಾಡಬೇಕಾಗಿದೆ. ತಮಗೆ ಬೇಕಾದವರನ್ನು, ತಮ್ಮ ಉದ್ಧಾರ ಮಾಡುವವರನ್ನು ಹೆಕ್ಕಿ ತೆಗೆದು ವಿಧಾನಸೌಧಕ್ಕೆ ಕಳುಹಿಸಬೇಕಾಗಿದೆ. ಇದು ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಆಯ್ಕೆ ಪ್ರಕ್ರಿಯೆ. ನಮ್ಮನ್ನು ಯಾರು ಆಳಬೇಕು ಎನ್ನುವುದನ್ನು ನಾವೇ ನಿರ್ಧರಿಸುವಂಥ ಸದವಕಾಶ. ನಮ್ಮ ಮನೆ ಮುಂದೆ ಬಂದು ನಿಲ್ಲುವ, ಮತ ಹಾಕಿರೆಂದು ಕೈಮುಗಿದು ದೈನ್ಯತೆಯಿಂದ ಕೇಳುವ ಆ ಮುಖವನ್ನು ನಾವೂ-ನೀವು ಎಷ್ಟು ಬಾರಿ ಕಂಡಿದ್ದೇವೆ? ಆ ವ್ಯಕ್ತಿಯಿಂದ ಸಮಾಜಕ್ಕೆ ಎಷ್ಟು ಒಳಿತಾಗಿದೆ? ಸಮಾಜದಿಂದ ಆ ವ್ಯಕ್ತಿಗೆಷ್ಟು ಲಾಭವಾಗಿದೆ? ಆ ವ್ಯಕ್ತಿಯ ಜೊತೆಗೆ ಮತ ಯಾಚಿಸಲು ಬಂದವರು ಯಾವ ವ್ಯಕ್ತಿತ್ವ ಹೊಂದಿದವರು? ಮತಹಾಕಿ ಆರಿಸಿ ಕಳುಹಿಸಿದ ಮೇಲೆ ಅವರನ್ನು ನೋಡಲು, ಅವರಿಂದ ನಮ್ಮ ಕೆಲಸ ಮಾಡಿಸಿಕೊಳ್ಳಲು ಸುಲಭವೇ? ಕೆಲಸ ಮಾಡಿಕೊಡಬಲ್ಲರೇ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡರೆ ಆಯ್ಕೆ ಮಾಡುವುದು ಸುಲಭವಾಗುತ್ತದೆ. ಯಾಕೆಂದರೆ ನಿಮ್ಮ ಮುಂದೆ ಹಲವು ಮಂದಿ ಇರುತ್ತಾರೆ. ಪಕ್ಷದ ಹಿನ್ನೆಲೆ, ಮನೆತನದ ಪೂರ್ವಇತಿಹಾಸ, ಅವರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, election_countingಕಾರ್ಯಕ್ಷಮತೆ ಇತ್ಯಾದಿಗಳೆಲ್ಲವನ್ನೂ ಅಳೆದು ತೂಗಿ ಆಯ್ಕೆ ಮಾಡಬೇಕೇ, ಬೇಡವೇ ಎನ್ನುವ ನಿರ್ಧಾರಕ್ಕೆ ಬರಲು ಅವಕಾಶವಿದೆ.

ಹಿಂದಿನ ಚುನಾವಣೆಯಲ್ಲಿ ಹೀಗೆಯೇ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಿ ನಿಮ್ಮ ಮತ ಪಡೆದು ಆಯ್ಕೆಯಾದ ಮೇಲೆ ಮಾಡಿದ್ದೇನು? ಸಮಾಜಕ್ಕೆ ಕೊಟ್ಟ ಕೊಡುಗೆಯೇನು? ಮತ್ತೆ ಕಣಕ್ಕಿಳಿದಿರುವ ಈ ವ್ಯಕ್ತಿಗೆ ಮತ್ತೆ ವಿಧಾನ ಸೌಧದ ಮೆಟ್ಟಿಲೇರಲು ಅವಕಾಶ ಮಾಡಿಕೊಡಬೇಕೇ? ಎನ್ನುವುದನ್ನು ನಿರ್ಧರಿಸುವವರು ನೀವೇ ಆಗಿರುತ್ತೀರಿ. ಇಷ್ಟೆಲ್ಲಾ ಅಂಶಗಳನ್ನು ವಿಚಾರ ವಿಮರ್ಶೆ ಮಾಡಿ ಮತದಾರ ಮತ ಹಾಕುತ್ತಿದ್ದಾನೆಯೇ? ಇಂಥ ಅಳೆದು, ತೂಗಿ ಆಯ್ಕೆ ಮಾಡಲು ಅವಕಾಶವಾಗಿದೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಿದರೆ ಭ್ರಷ್ಟರು, ಅಪ್ರಾಮಾಣಿಕರು ಸಾಲುಗಟ್ಟಿ ಜೈಲು ಸೇರುತ್ತಿರುವವರು ನಮ್ಮವರೇ ಅಲ್ಲವೇ? ನಾವೇ ಆರಿಸಿ ಕಳುಹಿಸಿದವರಲ್ಲವೇ? ಎನ್ನುವ ಉತ್ತರ ಸುಲಭವಾಗಿ ಸಿಗುತ್ತದೆ.

ರಾಜಕಾರಣ ಭ್ರಷ್ಟವಾಗಿದೆ ಎನ್ನುವ ಮಾತಿನ ಹಿಂದಿರುವ ಸತ್ಯ ವ್ಯಕ್ತಿ ಭ್ರಷ್ಟನಾಗಿದ್ದಾನೆ ಎನ್ನುವುದು. ಭ್ರಷ್ಟಾಚಾರದ ಬಗ್ಗೆ ವಾಹಿನಿಗಳಲ್ಲಿ ಕುಳಿತು ಮಾತನಾಡುವವರು ಭ್ರಷ್ಟಾಚಾರ ಎನ್ನುವುದನ್ನು ರಾಜಕಾರಣದ ಅವಿಭಾಜ್ಯ ಅಂಗ ಎನ್ನುವಂತೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ಭ್ರಷ್ಟಾಚಾರ ಮಾಡಿದವನೇ ಮಾತನಾಡುವುದಕ್ಕೆ ನೈತಿಕತೆಯಾದರೂ ಎಲ್ಲಿದೆ? ಭ್ರಷ್ಟಾಚಾರ ತಾನಾಗಿಯೇ ಹುಟ್ಟಿಕೊಂಡದ್ದಲ್ಲ, ವ್ಯಕ್ತಿಯಿಂದ ಹುಟ್ಟು ಪಡೆದುಕೊಂಡಿದೆ, ಆದ್ದರಿಂದ ಭ್ರಷ್ಟಾಚಾರ ಹುಟ್ಟು ಹಾಕಿದ ವ್ಯಕ್ತಿಯೇ ಭ್ರಷ್ಟ ಹೊರತು ರಾಜಕಾರಣವಲ್ಲ. ರಾಜಕಾರಣಿ ಪ್ರಾಮಾಣಿಕನಾಗಿದ್ದರೂ ಅವನೂ ಆ ವ್ಯವಸ್ಥೆಯ ಭಾಗವಾಗಿ ಹೋಗುತ್ತಿರುವುದು ದುರಂತ. ಆದ್ದರಿಂದಲೇ ನಿಮ್ಮ ಮತಯಾಚನೆಗೆ ಬರುವವರು ರಾಜಕಾರಣದಲ್ಲಿ ಶುದ್ಧ ಹಸ್ತರಾಗಿದ್ದರೂ ಆ ವ್ಯವಸ್ಥೆಯನ್ನು ಸೇರಿದ ಮೇಲೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಭ್ರಷ್ಟರಾಗುತ್ತಿದ್ದಾರೆ. ಇದಕ್ಕೆ ಒಂದು ಪಕ್ಷ ಮಾತ್ರ ಸೀಮಿತವಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಎದುರಾಳಿಯನ್ನು ಮಣಿಸಲು ಅದೇ ತಂತ್ರ ಅನುಸರಿಸುತ್ತವೆ, ಅವುಗಳಿಗೆ ಅದು ಅನಿವಾರ್ಯವಾಗಿದೆ. ಇಂಥ ಅನಿವಾರ್ಯತೆ ಮತದಾರನಿಗೆ ಇರಬೇಕೇ? ಯಾಕೆ ತಾವು ಆಯ್ಕೆ ಮಾಡುವ ವ್ಯಕ್ತಿಯನ್ನು ಇಂಥ ಅನಿವಾರ್ಯತೆಯ ಒತ್ತಡಕ್ಕೆ ಒಳಗಾಗಿ ಆಯ್ಕೆ ಮಾಡಬೇಕು?

ಭ್ರಷ್ಟರನ್ನು ಆಯ್ಕೆ ಮಾಡಲೇ ಬೇಕು ಎನ್ನುವ ಅನಿವಾರ್ಯತೆ ಮತದಾರನಿಗೆ ಖಂಡಿತಕ್ಕೂ ಇಲ್ಲ. ಆದರೆ ಅಂಥ ಪ್ರಬುದ್ಧತೆ ಮತದಾರನಿಗೆ ಬಂದಿಲ್ಲ. ಅಣ್ಣಾ ಹಜಾರೆ ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ. ಯಾಕೆಂದರೆ ಅವರು ರಾಜಕೀಯ ಪಕ್ಷ ಸ್ಥಾಪಿಸಿದರೆ ಚುನಾವಣೆ ಎದುರಿಸಲು ಬಂಡವಾಳ ಹೊಂದಿಸಿಕೊಳ್ಳಬೇಕು. ಬಂಡವಾಳವಿಲ್ಲದಿದ್ದರೆ ಅವರು ಸ್ಪರ್ಧೆಗೆ ಇಟ್ಟ ಠೇವಣಿಯೂ ಸಿಗುವುದಿಲ್ಲ ಎನ್ನುವ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಜನರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸಿ ಗೆಲ್ಲುವಂಥ ರಾಜಕಾರಣವೇ ಈಗ ನಡೆಯುತ್ತಿರುವುದು. ಮತದಾರ ತಾನಾಗಿಯೇ ಮತಗಟ್ಟೆಗೆ ಬಂದು ಮತ ಚಲಾಯಿಸುವಂಥ ವ್ಯವಸ್ಥೆ ಖಂಡಿತಕ್ಕೂ ಇದೆ. INDIA-ELECTIONಆದರೆ ಹೀಗೆ ಸ್ವಪ್ರೇರಣೆಯಿಂದ ಮತಚಲಾಯಿಸುವವರ ಸಂಖ್ಯೆ ಶೇ.10 ರಿಂದ 15 ಮಾತ್ರ. ಶೇ. 20 ರಷ್ಟು ಮಂದಿ ಮತದಾನದಿಂದ ದೂರವೇ ಉಳಿಯುತ್ತಾರೆ. ಶೇ.20 ರಷ್ಟು ಮಂದಿ ಜಾತಿ ಹಿನ್ನೆಲೆಯಲ್ಲಿ ಮತ ಚಲಾಯಿಸುತ್ತಾರೆ. ಶೇ.20 ರಷ್ಟು ಮಂದಿ ಅಭ್ಯರ್ಥಿಯ ಹಣಬಲದ ಪ್ರಭಾವಕ್ಕೆ ಒಳಗಾಗುತ್ತಾರೆ. ಶೇ.20 ಮಂದಿ ಹಣ ಮತ್ತು ಪ್ರಭಾವ ಎರಡನ್ನೂ ಅವಲಂಬಿಸಿ ಆಯ್ಕೆ ಮಾಡುತ್ತಾರೆ. ಶೇ.5 ರಷ್ಟು ಮಂದಿ ಅತಂತ್ರರು. ಅವರಿಗೆ ಹಣ ಸಿಗಬಹುದು, ಸಿಗದೆಯೂ ಇರಬಹುದು. ಸಿಕ್ಕಿದರೆ ಖುಷಿ, ಸಿಗದಿದ್ದರೆ ಅಸಹಾಯಕತೆ ಅಷ್ಟೇ.

ಇಂಥ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುವಾಗ ಯಾರನ್ನು ದೂಷಿಸಬೇಕು? ಯಾಕೆ ದೂಷಿಸಬೇಕು?

ಅವಕಾಶವಾದಿ ರಾಜಕಾರಣ, ಹಣಬಲದ ರಾಜಕಾರಣ, ಸಾಮಾಜಿಕ ಬದ್ಧತೆಯ ರಾಜಕಾರಣ; ಹೀಗೆ ಮೂರು ಗುಂಪುಗಳನ್ನಾಗಿ ಮಾಡಿದರೆ ಪಾರುಪತ್ಯ ಮೆರೆಯುವುದು ಮೊದಲ ಎರಡು ಗುಂಪೇ ಹೊರತು ಮೂರನೆಯ ಗುಂಪು ಮೂಲೆಗುಂಪಾಗುತ್ತದೆ. ಅಣ್ಣಾ ಹಜಾರೆಯನ್ನು ಮೂರನೇ ಗುಂಪಿಗೆ ನಾಯಕ ಅಂದುಕೊಂಡರೆ ಸಾಮಾಜಿಕ ಬದ್ಧತೆಯ ರಾಜಕಾರಣ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತದೆ. ಈ ಸತ್ಯ ಅಣ್ಣಾನಿಗೂ ಗೊತ್ತು. ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಮಂದಿ ಅಣ್ಣಾನ ಭಾಷಣ ಕೇಳಲು ಬರುತ್ತಾರೆ, ಆದರೆ ಅವರೆಲ್ಲರೂ ಅಣ್ಣಾನ ಬೆನ್ನಿಗೆ ನಿಲ್ಲುವುದಿಲ್ಲ, ನಿಲ್ಲಲು ವ್ಯವಸ್ಥೆ ಬಿಡುವುದಿಲ್ಲ. ಆದ್ದರಿಂದಲೇ ಅಣ್ಣಾ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಶರಣಾದರು.

ಈ ದೇಶದ ರಾಜಕೀಯ ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ರೈತಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಮಂಡಿಯೂರಲೇ ಬೇಕು. vote-participate-democracyಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಿದ್ದರೂ ರೈತಶಕ್ತಿಯೇ ಬಲಿಷ್ಠ. ಆದರೆ ರೈತಶಕ್ತಿಯನ್ನು ಮುಷ್ಟಿಯಲ್ಲಿಟ್ಟುಕೊಂಡಿರುವ ಶಕ್ತಿ ಯಾವುದು? ಮಹೇಂದ್ರ ಸಿಂಗ್ ಟಿಕಾಯತ್ ಈ ದೇಶ ಕಂಡ ಸಮರ್ಥ ರೈತ ನಾಯಕ. ಅವರ ಒಂದು ಕರೆಗೆ ರಾಜಧಾನಿ ದೆಹಲಿ ಜನಸಾಗರವಾಗುತ್ತಿತ್ತು, ಸರ್ಕಾರ ನಡುಗುತ್ತಿತ್ತು. ಪ್ರೊ.ನಂಜುಂಡಸ್ವಾಮಿ ಈ ರಾಜ್ಯ ಕಂಡ ಮೇಧಾವಿ, ಚಿಂತಕ, ರೈತ ನಾಯಕ. ವಿಧಾನಸಭೆಯೊಳಗೆ ಅವರು ಮಾತಿಗೆ ನಿಂತರೆ ಕಂಚಿನಕಂಠ ಮೊಳಗುತ್ತಿತ್ತು. ಕೆಂಟುಕಿ ಚಿಕನ್ ವಿರುದ್ಧ ಎರಡು ದಶಕಗಳ ಹಿಂದೇಯೇ ಧ್ವನಿ ಎತ್ತಿದ್ದ ಪ್ರೊಫೆಸರ್ ಈಗ ಇಲ್ಲ, ಆದರೆ ಅವರ ಮಾತುಗಳು ಇಂದಿಗೂ ಪ್ರಸ್ತುತ. ಅವರು ಕಟ್ಟಿ ಬೆಳೆಸಿದ ರೈತ ಸಂಘಟನೆ ಈಗ ಏನಾಗಿದೆ?

ಆದ್ದರಿಂದ ಈ ಚುನಾವಣೆಯ ಕಾಲಘಟ್ಟದಲ್ಲಿ ಜನ ಚಿಂತನೆ ಮಾಡಬೇಕು ಎನ್ನುವುದು ಕಳಕಳಿ ಮಾತ್ರ. ಅದು ಆಗುತ್ತದೆ ಎನ್ನುವ ನಂಬಿಕೆ ಇಡುವಂತಿಲ್ಲ. ಜನ ತಾವಾಗಿಯೇ ಎಚ್ಚೆತ್ತುಕೊಳ್ಳಬೇಕು ಹೊರತು ಅಣ್ಣಾ ಎಚ್ಚೆತ್ತಿಸಬೇಕು ಎನ್ನುವುದು ನಿರೀಕ್ಷೆಯಾಗಬಾರದು. ಬಹಳ ಜನ ಯಾವಾಗ ಮಲಗುವುದು ಎನ್ನುವುದನ್ನೇ ನಿರೀಕ್ಷೆ ಮಾಡುತ್ತಾರೆ ಹೊರತು ನಿದ್ದೆ ಮಾಡಿದ್ದು ಸಾಕು ಬೇಗ ಏಳಬೇಕು ಎನ್ನುವುದನ್ನು ಬಯಸುವುದಿಲ್ಲ. ಈಗ ಜನ ಮಲಗಿದರೆ ರಾಜಕಾರಣಿಗಳು ಅಂಥ ಸಂದರ್ಭವನ್ನೇ ಕಾಯುತ್ತಿರುತ್ತಾರೆ. ಜನ ರಾಜಕಾರಣಿಗಳನ್ನು ಕಾಯುವ ವ್ಯವಸ್ಥೆ ನಿಲ್ಲಬೇಕು, ರಾಜಕಾರಣಿಗಳು ಜನರನ್ನು ಕಾಯುವಂತಾಗಬೇಕು. ಈ ಕಾಯುವಿಕೆ ಚುನಾವಣೆ ಕಾಲದಲ್ಲಿ ಮಾತ್ರವಲ್ಲ, ಚುನಾವಣೆ ನಂತರವೂ.

ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆ


– ಚಿದಂಬರ ಬೈಕಂಪಾಡಿ


 

ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದುಹೋಯಿತು. ಈಗ ಯಾರ ಗೆಲುವು- ಯಾರ ಸೋಲು ಎನ್ನುವ ಕುತೂಹಲ. ಅಧಿಕಾರಕ್ಕೆ ಏರಲು ಬೇಕಾಗುವಷ್ಟು ಸಂಖ್ಯಾಬಲ ಸಿಗುವುದೇ? ಒಂದು ವೇಳೆ ಸಿಗದಿದ್ದರೆ ಮುಂದೇನು? ಎನ್ನುವಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ನಾಯಕರು ಮುಂದಾಗುವ ಕಾಲ.

ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ನಿಜಕ್ಕೂ ಸೆಮಿಫೈನಲ್. ಇದರಲ್ಲಿ ಮತದಾರರ ನಾಡಿ ಮಿಡಿತ ಸಿಗಬಹುದೇ ಹೊರತು ಫಲಿತಾಂಶವಲ್ಲ. ಯಾಕೆಂದರೆ ಈಗ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾದವೀ ಕಲಹವೇ ಹೆಚ್ಚು ನಡೆದಿದೆ. ಒಂದೇ ಪಕ್ಷದವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದ್ದಾರೆ. ನಾಯಕರು ತಮ್ಮ ಅನುಕೂಲಕ್ಕೆ ತಮಗೆ ಬೇಕಾದವರನ್ನಿ ಬೆಂಬಲಿಸಿ, ತಮಗಾಗದವರನ್ನು ಸದೆ ಬಡಿಯಲು ಬಳಸಿಕೊಂಡಿರುವಂಥ ಸಾಧ್ಯತೆಯೂ ಇದೆ. voteಕೆಲವೊಮ್ಮೆ ತಮ್ಮೊಳಗೇ ಪೈಪೋಟಿ ನಡೆಸಿ ಜನರ ಮನ ಗೆಲ್ಲುವ ಸಾಹಸವನ್ನೂ ಮಾಡಿದ್ದಾರೆ. ಆದ್ದರಿಂದ ಇಲ್ಲಿ ಬರುವ ಫಲಿತಾಂಶ ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವವರ ಮೇಲೆ ಪರಿಣಾಮ ಬೀರಬಹುದು ನಿಶ್ಚಿತವಾಗಿಯೂ. ಆದರೆ ಸ್ಥಳೀಯ ಸಂಸ್ಥೆಯಲ್ಲಿ ಒಂದೇ ಪಕ್ಷದಿಂದ ಸ್ಪರ್ಧಿಸಿ ಸೋತವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸೋಲನ್ನು ಒಪ್ಪಿಕೊಂಡು ವಿಧಾನಸಭೆಗೆ ಸ್ಪರ್ಧಿಸುವವರಿಗೆ ಮನಸಾರೆ ಬೆಂಬಲಿಸುವರೇ ಎನ್ನುವುದೂ ಕೂಡಾ ಬಹಳ ಮುಖ್ಯವಾಗುತ್ತದೆ. ಈ ಕಾರಣದಿಂದ ಸೋತವರನ್ನು ಸಮಾಧಾನಪಡಿಸಿಕೊಂಡು ಹಿಡಿತದಲ್ಲಿಟ್ಟುಕೊಳ್ಳುವ ಕೆಲಸವನ್ನು ವಿಧಾನಸಭೆಗೆ ಸ್ಪರ್ಧಿಸುವವರು ಮೊದಲು ಮಾಡಬೇಕಾಗುತ್ತದೆ.

ಬಹುತೇಕ ಚರ್ಚೆ ಮಾಡದಿರುವ ಅಂಶವೆಂದರೆ ಸ್ಥಳೀಯ ಸಂಸ್ಥೆಯಲ್ಲಿ ಬರುವ ಫಲಿತಾಂಶದ ಹಿನ್ನೆಲೆ ಏನು ಎನ್ನುವುದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಣಬಲ, ತೋಳ್ಬಲ, ಅಧಿಕಾರ ಬಲ, ವೈಯಕ್ತಿಕ ವರ್ಚಸ್ಸು ಹೀಗೆ ಹಲವು ಆಯಾಮಗಳಲ್ಲಿ ಫಲಿತಾಂಶವನ್ನು ವಿಶ್ಲೇಷಿಸಬೇಕಾಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆ ಯಾವುದೇ ಪಕ್ಷದ ಮೂಲ ಸೈದ್ಧಾಂತಿಕ ನೆಲೆಯಲ್ಲಿ ನಡೆದಿಲ್ಲ. ಪಕ್ಷದ ಸೈದ್ಧಾಂತಿಕ ಚೌಕಟ್ಟಿನಿಂದ ಹೊರಗೆ ಕದನ ನಡೆದಿದೆ. ಪಕ್ಷದ ಸೈದ್ಧಾಂತಿಕ ನೆಲೆಗಟ್ಟಿನಲ್ಲೇ ಚುನಾವಣೆ ನಡೆದಿದ್ದರೆ ಅದನ್ನು ಮುಂದಿನ ವಿಧಾನಸಭಾ ಚುನಾವಣೆಯ ಪರಿಪೂರ್ಣ ಮುನ್ಸೂಚನೆ ಎನ್ನಬಹುದಿತ್ತು. ಹಾಗೆ ಆಗದಿರುವ ಕಾರಣ ಈ ಫಲಿತಾಂಶವನ್ನೇ ಗಟ್ಟಿಯಾಗಿ ಯಾವುದೇ ಪಕ್ಷ ಅಥವಾ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿ ಅಪ್ಪಿಕೊಳ್ಳುವಂತಿಲ್ಲ. ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆ ತೀರಾ ವೈಯಕ್ತಿಕ ಪ್ರತಿಷ್ಠೆ, ಪ್ರಭಾವದ ರೂಪ. ಅದು ವಿಧಾನಸಭೆ ಚುನಾವಣೆ ಕಾಲಕ್ಕೆ ಬೇರೆಯೇ ರೂಪ ತಳೆಯಬಹುದು ಅಥವಾ ಪಲ್ಲಟವಾಗಲೂ ಬಹುದು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಜನರ ಭಾವನೆಗಳನ್ನು ಈ ಫಲಿತಾಂಶದ ಮೂಲಕ ಅರ್ಥಮಾಡಿಕೊಳ್ಳಬಹುದು ಎನ್ನುವ ಸ್ಥೂಲವಾದ ಅಂಶವನ್ನು ಬಿಟ್ಟರೆ ಅದೇ ಅಂತಿಮ ಎನ್ನುವಂತಿಲ್ಲ. ಸ್ಥಳೀಯ ಮಟ್ಟದಲ್ಲಿ ಮತಗಳು ಹರಿದು ಹಂಚಿಹೋಗುವುದರಿಂದ ಬಹುಮತ ಎನ್ನುವುದು ಸ್ಥಳೀಯವಾಗಿಯೇ ನಿರ್ಧಾರವಾಗುವ ಅನಿವಾರ್ಯತೆ ಬರುತ್ತದೆ. ನಿಚ್ಚಳ ಬಹುಮತವನ್ನು ಯಾವುದೇ ಪಕ್ಷ ನಿರೀಕ್ಷೆ ಮಾಡಬಹುದೇ ಹೊರತು ಬರದಿದ್ದರೆ ಆಘಾತಗೊಳ್ಳಬೇಕಾಗಿಲ್ಲ. ಯಾಕೆಂದರೆ ಈ ಚುನಾವಣೆಯ ಹಿನ್ನೆಲೆಯೇ ಆಗಿದೆ. ಹೀಗಾದಾಗ ಅನುಕೂಲಸಿಂಧು ರಾಜಕಾರಣವೇ ಮುಖ್ಯವಾಗುತ್ತದೆ. ಮೌಲ್ಯಾಧಾರಿತ ರಾಜಕಾರಣವನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೆ ಪಕ್ಷ ಮಾಡಿಲ್ಲ ಮತ್ತು ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಹಾಗಾದರೆ ಅಧಿಕಾರ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಮತ್ತೆ ಹೊಂದಾಣಿಕೆ ಸೂತ್ರಕ್ಕೆ ರಾಜಕೀಯ ಪಕ್ಷಗಳು ಮನಸ್ಸು ಮಾಡಬೇಕಾಗುತ್ತದೆ. ಯಾವುದೇ ಪಕ್ಷ ತನ್ನ ಮೌಲ್ಯ, ಸೈದ್ಧಾಂತಿಕ ನೆಲೆಗಟ್ಟನ್ನು ಇಟ್ಟುಕೊಂಡೇ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರಕ್ಕೇರುವುದು ಸಾಧ್ಯವಿಲ್ಲ. ಸಮಾನಮನಸ್ಕರು ಎನ್ನುವುದೂ ಕೂಡಾ ಸುಳ್ಳು ಮತ್ತು ಆತ್ಮವಂಚನೆಯ ಮಾತಾಗುತ್ತದೆ. ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು 20 ತಿಂಗಳು ಅಧಿಕಾರ ನಡೆಸಿದ್ದಾಗಲೇ ರಾಜಕೀಯದಲ್ಲಿ ಸೈದ್ಧಾಂತಿಕ ನೆಲೆಗಟ್ಟು ಎನ್ನುವುದು ಕೇವಲ ರಾಜಕೀಯ ಪಂಡಿತರ ವ್ಯಾಖ್ಯೆಗೆ ಮಾತ್ರ ಸೀಮಿತವೆನಿಸಿತು. ಆನಂತರದ ರಾಜಕೀಯ ಬೆಳವಣಿಗೆಗಳು, ಆಪರೇಷನ್ ಕಮಲ ರಾಜಕೀಯದ ಸೈದ್ಧಾಂತಿಕ ನೆಲೆಗಟ್ಟನ್ನೇ ಸುಳ್ಳು ಮಾಡಿದವು. ಸೆಕ್ಯೂಲರ್ ಎನ್ನುವ ಪದಕ್ಕೆ ಡಿಕ್ಷನರಿಯಲ್ಲಿ ಅರ್ಥ ಹುಡುಕಬೇಕೇ ಹೊರತು ರಾಜಕೀಯದಲ್ಲಿ ಅದನ್ನು ಮಾನದಂಡವಾಗಿ ಬಳಕೆ ಮಾಡಬಾರದು ಎನ್ನುವಷ್ಟರಮಟ್ಟಿಗೆ ಅರ್ಥ ಕಳಕೊಂಡಿತು. ‘ಸೂಡೋ ಸೆಕ್ಯೂಲರಿಸಂ’ ಎನ್ನುವ ಪದವನ್ನು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಅನೇಕ ವರ್ಷಗಳ ಕಾಲ ಬಳಸಿದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಅವರೂ ಈ ಪದವನ್ನು ಬಳಕೆ ಮಾಡುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಫಲಿತಾಂಶದ ನಂತರ ಯಾರು ಅಧಿಕಾರಕ್ಕೇರಬಹುದು ಎನ್ನುವ ಪ್ರಶ್ನೆ ಹಾಕಿಕೊಂಡರೆ ಯಾರು ಬೇಕಾದರೂ ಅಧಿಕಾರಕ್ಕೇರಲು ಸಾಧ್ಯ ಎನ್ನಬಹುದೇ ಹೊರತು ಇಂಥವರು ಮಾತ್ರ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೇರುತ್ತಾರೆ ಎನ್ನುವುದು ಅರ್ಥಹೀನ. ಆದ್ದರಿಂದ ಹೀಗೆಯೇ ಆಗುತ್ತದೆ, ಆಗಬೇಕು ಎನ್ನುವ ಊಹೆಯೇ ತಪ್ಪು ಈಗಿನ ರಾಜಕೀಯದಲ್ಲಿ. ಸೈದ್ಧಾಂತಿಕ ನೆಲೆಯನ್ನು ಹುಡುಕದೆ, ಈ ಕ್ಷಣದ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ಹೊಂದಾಣಿಕೆ ರಾಜಕೀಯ ಮೇಲುಗೈ ಸಾಧಿಸುತ್ತದೆ. ಇದನ್ನು ರಾಜಕೀಯದ ಅಪಮೌಲ್ಯ ಎಂದೂ ಕರೆಯಬಹುದು ಆದರೆ ಅದು ಅನಿವಾರ್ಯವಾಗಿತ್ತು ಎನ್ನುವ ಘಟ್ಟಕ್ಕೆ ಬಂದು ನಿಲ್ಲುತ್ತದೆ.

ಜನ ಕೂಡಾ ರಾಜಕೀಯ ಅಪಮೌಲ್ಯದ ಭಾಗವಾಗಿಯೋ, ಅನಿವಾರ್ಯವಾಗಿಯೋ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಬಿಟ್ಟಿದ್ದಾರೆ. ಅದು ಅವರಿಗೂ ಅನಿವಾರ್ಯ. election_countingಇಂಥ ಅನಿವಾರ್ಯತೆಯೇ ಅನಿಶ್ಚಿತ ರಾಜಕೀಯಕ್ಕೆ, ಫಲಿತಾಂಶಕ್ಕೆ ಕಾರಣವಾಗಿದೆ. ಹಣ, ಹೆಂಡವನ್ನು ಅನುಭವಿಸುತ್ತಲೇ ಅದರ ವಿರುದ್ಧ ಮಾತನಾಡುವುದು ಆತ್ಮವಂಚನೆ. ರಾಜಕೀಯದಲ್ಲಿ ಅಪವಿತ್ರ ಮೈತ್ರಿಯನ್ನು ಅನಿವಾರ್ಯತೆಯ ಹೆಸರಲ್ಲಿ ಒಪ್ಪಿಕೊಳ್ಳುವುದೂ ಕೂಡಾ ಅನೈತಿಕತೆ. ಆದ್ದರಿಂದ ಈ ಎಲ್ಲಾ ವ್ಯವಸ್ಥೆಗಳ ಉತ್ಪನ್ನವಾಗಿರುವ ಜನ, ರಾಜಕಾರಣಿಗಳು, ರಾಜಕಾರಣ, ಸಿದ್ಧಾಂತವನ್ನು ಬೇರ್ಪಡಿಸಿಕೊಂಡು ಬಿಡಿಬಿಡಿಯಾಗಿ ನೋಡುವುದು ಸಾಧ್ಯವಿಲ್ಲ. ಹೀಗಾಗಿ ಈ ಸ್ಥಳೀಯ ಸಂಸ್ಥೆಗೆಳ ಚುನಾವಣೆ ಫಲಿತಾಂಶದ ಮುಂದುವರಿದ ಭಾಗ ಅಧಿಕಾರ ಗ್ರಹಣ ಇಂಥದ್ದೇ ಸಮೀಕರಣಗಳ ಉಪಉತ್ಪನ್ನಗಳು ಎಂದಷ್ಟೇ ಕರೆಯಬಹುದು.

ಸ್ಥಳೀಯ ಸಂಸ್ಥೆ : ಮತಗಟ್ಟೆಯತ್ತ ಮುಖ ಮಾಡಬೇಕು


-ಚಿದಂಬರ ಬೈಕಂಪಾಡಿ


 

ರಾಜ್ಯದ ಸ್ಥಳೀಯ ಸಂಸ್ಥೆಗಳ ಆಡಳಿತದ ಚುಕ್ಕಾಣಿಯನ್ನು ಯಾರು ಹಿಡಿಯಬೇಕು ಎನ್ನುವುದನ್ನು ನಿರ್ಧರಿಸಲು ಜನತೆಗೆ ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರ ಸಿಕ್ಕಿದೆ. ಅದನ್ನು ಈಗ ಚಲಾಯಿಸುವ ಹೊಣೆಗಾರಿಕೆ ಜನರದ್ದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ತಮ್ಮನ್ನು ಯಾರು ಆಳಬೇಕು ಎನ್ನುವುದನ್ನು ಮತದಾರ ಮತ ಚಲಾಯಿಸುವ ಮೂಲಕ ನಿರ್ಧರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಜನರ ದಿನನಿತ್ಯದ ಬದುಕಿಗೆ ತೀರ ಹತ್ತಿರವಾದವು. ವಿಧಾನಸಭೆ, ಲೋಕಸಭೆ ಚುನಾವಣೆಗಿಂತಲೂ ಹೆಚ್ಚು ಜನರಿಗೆ ಹತ್ತಿರವಾದವು. ಜನಸಾಮಾನ್ಯರು ತಮ್ಮ ದೈನಂದಿನ ಆವಶ್ಯಕತೆಗಳಿಗೆ ಅವಲಂಬಿಸಿರುವುದೂ ಕೂಡಾ ಸ್ಥಳೀಯ ಸಂಸ್ಥೆಗಳನ್ನೇ. ಆದ್ದರಿಂದ ಈ ಚುನಾವಣೆಯನ್ನು ಅವಗಣನೆ ಮಾಡುವಂತಿಲ್ಲ.

ಮತದಾರರ ಮುಂದೆ ಅಭ್ಯರ್ಥಿಗಳು ಕಾಣಿಸಿಕೊಂಡಿದ್ದಾರೆ. ಹಿಂದಿನವರ್ಷವೂ ಇವರೇ ಕಾಣಿಸಿಕೊಂಡಿರಬಹುದು, voteಈ ವರ್ಷವೂ ಅವರೇ ಮತ್ತೆ ನಿಮ್ಮ ಮತಗಳಿಗಾಗಿ ಕಾತುರರಾಗಿರಬಹುದು. ಆದರೆ ಅವರ ಭವಿಷ್ಯ ನಿರ್ಧರಿಸುವವರು ನೀವು. ನಿಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲ, ನಿಮಗೆ ಸಾದಾ ನೆರಳಾಗಿ ನಿಲ್ಲಬಲ್ಲವರೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಜನ ಸಾಮಾನ್ಯರಿಗೆ ಬೇಕಾಗಿರುವುದು ಜನರ ಸೇವೆ ಮಾಡುವಂಥ ಉತ್ಸಾಹಿಗಳು. ಕುಡಿಯುವ ನೀರು, ನಡೆದಾಡಲು ವ್ಯವಸ್ಥಿತ ರಸ್ತೆ, ದಾರಿದೀಪ, ಚರಂಡಿ ವ್ಯವಸ್ಥೆ, ನೈರ್ಮಲ್ಯ ಕಾಪಾಡುವುದು ಹೀಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರೆ ಸಾಕು, ಜನ ಮತ್ತೇನನ್ನೂ ಕೇಳುವುದಿಲ್ಲ. ಕೇವಲ ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವಂಥ ಸುಲಲಿತ ವ್ಯವಸ್ಥೆಗಳನ್ನು ಜನಪ್ರತಿನಿಧಿ ಮಾಡಿದರೆ ಜನ ನಿಶ್ಚಿತಕ್ಕೂ ಬೆಂಬಲಿಸುತ್ತಾರೆ, ಬೆಂಬಲಿಸಬೇಕು.

ಜನರಿಗೆ ಸದಾಕಾಲ ಬಯಸಿದಾಗ ಸಿಗುವಂಥ ಮನುಷ್ಯ ಜನರ ಒಲವು ಗಳಿಸುತ್ತಾನೆ. ಸಾಮಾನ್ಯವಾಗಿ ಮತದಾರ ಇಂಥ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅನಾಸಕ್ತಿಯೇ ಹೆಚ್ಚು. ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದೆಂದರೆ ಆಲಸ್ಯ. ಇದು ಕೇವಲ ಸ್ಥಳೀಯ ಸಂಸ್ಥೆಗಳಿಗೆ ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯಲ್ಲೂ ಇದನ್ನೇ ಕಾಣುತ್ತಿದ್ದೇವೆ. ಮತದಾರನ ನಿರಾಸಕ್ತಿಗೂ ಕಾರಣವಿರಬಹುದು. ಅದೇನೆಂದರೆ ತಮ್ಮ ಜನಸೇವೆ ಮಾಡುವವನು ಅಸಮರ್ಥ ಅಥವಾ ನಿರುಪಯುಕ್ತ ಎನ್ನುವ ಕಾರಣವೋ, ಅಭ್ಯರ್ಥಿಯನ್ನು ಬೆಂಬಲಿಸುವ ಬದಲು ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು ಎನ್ನುವ ಕಾರಣವೋ ಏನೋ? ಅಂತೂ ಮತದಾರ ತಾನು ಚಲಾಯಿಸುವ ಮತದ ಬಗ್ಗೆ ಗಂಭೀರವಾಗಿ ಯೋಚಿಸದಿರುವುದು ಅಪಾಯಕಾರಿ.

ಯಾವುದೇ ಚುನಾವಣೆಯನ್ನು ಗಮನಿಸಿ ಚಲಾವಣೆಯಾಗುವ ಮತಗಳ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಮತದಾರರ ನಿರಾಸಕ್ತಿ ಅರಿವಿಗೆ ಬರುತ್ತದೆ. ಸರಾಸರಿ 55 ರಿಂದ 60 ಶೇ. ಮತದಾನವಾಗುವ ಪರಂಪರೆ ಅನೇಕ ದಶಕಗಳಿಂದ ಕಂಡು ಬರುತ್ತಿದೆ. ಸ್ಥಳೀಯ ಸಂಸ್ಥೆಯಾಗಲೀ, ವಿಧಾನಸಭೆ, ಲೋಕಸಭೆ, ಯಾವುದೇ ಚುನಾವಣೆಯಲ್ಲೂ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ. ಆದರೆ ಮತದಾರರ ಸಂಖ್ಯೆ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಮತದಾರರ ಸಂಖ್ಯೆಯ ಅನುಪಾತದಲ್ಲಿ ಮತದಾನ ಆಗದಿರುವುದು ಕಳವಳಕಾರಿ.

ಮತಗಟ್ಟೆ ಹೋಗಿ ಮತ ಚಲಾಯಿಸುವುದು ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡಾ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸಿಕ್ಕಿರುವ ಪರಮಾಧಿಕಾರವನ್ನು ಚಲಾಯಿಸದಿರುವುದೇ ಈಗಿನ ಎಲ್ಲಾ ಅವಾಂತರಗಳಿಗೆ ಮೂಲ ಕಾರಣ. ನಮಗೆ ಯಾರು ಹಿತವರು ಎನ್ನುವುದನ್ನು ಜನಸೇವೆಗೆ ಮುಂದಾಗುವವರಿಗೆ ತಿಳಿಸಿ ಹೇಳಲು ಇದೊಂದೇ ಸೂಕ್ತ ಅವಕಾಶ. ಯಾರೇ ಕಣಕ್ಕಿಳಿದರೂ, ಎಷ್ಟೇ ಆಮಿಷ ಒಡ್ಡಿದರೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುವ ಚುನಾವಣೆಯಲ್ಲಿ ಮತದಾರ ಮೌನವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಅಪಾಯವಿದೆ.

ಶೇ. 55 ಮಂದಿ ಮಾತ್ರ ಮತ ಚಲಾಯಿಸಿ ಶೇ.45 ರಷ್ಟು ಮಂದಿ ದೂರ ಉಳಿದರೆ ಅದು ಅನರ್ಹರು ಆಯ್ಕೆಯಾಗಲು ಕಾರಣವಾಗುತ್ತದೆ. ಅದಕ್ಕೆ ಆಯ್ಕೆಯಾದವನು ಹೊಣೆಯಲ್ಲ, ಮತ ಹಾಕದವರೇ ಹೊಣೆಯಾಗುತ್ತಾರೆ. ಮತದಾನ ಮಾಡದಿರುವುದರಿಂದ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವವರಿದ್ದಾರೆ. ತಾನೊಬ್ಬ ಮತ ಹಾಕದಿದ್ದರೆ ಅವನು ಗೆದ್ದು ಬರುವುದಿಲ್ಲವೇ? ಎನ್ನುವವರೂ ಇದ್ದಾರೆ. ಹೀಗೆಯೇ ಶೇ. 45 ರಷ್ಟು ಮಂದಿ ಯೋಚಿಸಿದರೆ ಪರಿಣಾಮ ಏನಾಗಬಹುದು ಊಹಿಸಿ.

ಪಕ್ಷ ವ್ಯಕ್ತಿಗಳನ್ನು ದೂರುವುದು ಸುಲಭ. ಆದರೆ ಅವರನ್ನು ಸರಿದಾರಿಗೆ ತರಬಲ್ಲ ಅಸ್ತ್ರ ಚುನಾವಣೆ, ಜನರಿಗಿರುವ ಮತದಾನದ ಹಕ್ಕು. ಅದನ್ನು ಚಲಾಯಿಸದಿದ್ದಾಗ ಸಹಜವಾಗಿಯೇ ಉತ್ತಮ ಅಭ್ಯರ್ಥಿ ಆರಿಸಿ ಬರದೇ ಹೋಗಬಹುದು, ಅದಕ್ಷ, ಅಪ್ರಾಮಾಣಿಕ ಆರಿಸಿ ಬರಬಹುದು. ಮತ್ತೆ ಐದು ವರ್ಷ ಅವರ ದುರಾಡಳಿತವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಜನರದ್ದಾಗುತ್ತದೆ.

18 ರಿಂದ 30 ರ ಒಳಗಿನ ಯುವಕ, ಯುವತಿಯರು ಈಗ ಮತಚಾಲಾಯಿಸಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. INDIA-ELECTION35 ರಿಂದ 45 ರೊಳಗಿನವರಲ್ಲಿ ನಿರಾಸಕ್ತಿಯೇ ಹೆಚ್ಚು. 50 ರ ಮೇಲ್ಪಟ್ಟವರು ತಮ್ಮ ಹಕ್ಕು ಚಲಾಯಿಸುತ್ತಾರೆ. ಅದರಲ್ಲೂ ಆತಂಕಕಾರಿ ಅಂಶವೆಂದರೆ ಸುಶಿಕ್ಷಿತರು, ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ ದುಡಿಯುವ ಮಧ್ಯಮವರ್ಗದ ಜನ ಮತಗಟ್ಟೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಮತದಾನ ಮಾಡಲೆಂದೇ ಕಚೇರಿಗಳಿಗೆ ರಜೆ ಸೌಲಭ್ಯವಿದ್ದರೂ ಆದಿನ ಮನೆಯಲ್ಲಿ ಆಯಾಗಿ ವಿಶ್ರಾಂತಿ ತೆಗೆದುಕೊಂಡು ಮೋಜು, ಮಸ್ತಿಯಲ್ಲಿ ಕಾಲ ಕಳೆಯಲು ಹಾತೊರೆಯುವಂಥ ಪ್ರವೃತ್ತಿ ಹೆಚ್ಚಾಗಿ ಕಾಣುತ್ತಿದೆ. ಮತದಾನಕ್ಕೆ ಸಿಕ್ಕ ರಜೆಯನ್ನು ಉಂಡು ಮಲಗುವುದಕ್ಕೆ ಬಳಕೆ ಮಾಡುವವರಿದ್ದಾರೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಈ ಪ್ರವೃತ್ತಿ ಅತ್ಯಂತ ಅಪಾಯಕಾರಿಯಾದುದು.

ಪಕ್ಷ, ಪಂಗಡವನ್ನು ಬೆಂಬಲಿಸುವುದು, ವ್ಯಕ್ತಿಯನ್ನು ಗುರುತಿಸುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದು ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಕೊಟ್ಟಿರುವ ಹಕ್ಕನ್ನು ಚಲಾಯಿಸದಿರುವುದು ಅನರ್ಹ ಆಯ್ಕೆಯಾಗುವುದಕ್ಕಿಂತಲೂ ಅಪಾಯಕಾರಿ. ಆದ್ದರಿಂದ ಈ ಸಲವಾದರೂ ಗರಿಷ್ಠ ಮತದಾನವಾಗಬೇಕು. ಜನ ಮತಗಟ್ಟೆಯತ್ತ ಮುಖಮಾಡಿದರೆ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯ.