ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆ


– ಚಿದಂಬರ ಬೈಕಂಪಾಡಿ


 

ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದುಹೋಯಿತು. ಈಗ ಯಾರ ಗೆಲುವು- ಯಾರ ಸೋಲು ಎನ್ನುವ ಕುತೂಹಲ. ಅಧಿಕಾರಕ್ಕೆ ಏರಲು ಬೇಕಾಗುವಷ್ಟು ಸಂಖ್ಯಾಬಲ ಸಿಗುವುದೇ? ಒಂದು ವೇಳೆ ಸಿಗದಿದ್ದರೆ ಮುಂದೇನು? ಎನ್ನುವಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ನಾಯಕರು ಮುಂದಾಗುವ ಕಾಲ.

ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ನಿಜಕ್ಕೂ ಸೆಮಿಫೈನಲ್. ಇದರಲ್ಲಿ ಮತದಾರರ ನಾಡಿ ಮಿಡಿತ ಸಿಗಬಹುದೇ ಹೊರತು ಫಲಿತಾಂಶವಲ್ಲ. ಯಾಕೆಂದರೆ ಈಗ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾದವೀ ಕಲಹವೇ ಹೆಚ್ಚು ನಡೆದಿದೆ. ಒಂದೇ ಪಕ್ಷದವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದ್ದಾರೆ. ನಾಯಕರು ತಮ್ಮ ಅನುಕೂಲಕ್ಕೆ ತಮಗೆ ಬೇಕಾದವರನ್ನಿ ಬೆಂಬಲಿಸಿ, ತಮಗಾಗದವರನ್ನು ಸದೆ ಬಡಿಯಲು ಬಳಸಿಕೊಂಡಿರುವಂಥ ಸಾಧ್ಯತೆಯೂ ಇದೆ. voteಕೆಲವೊಮ್ಮೆ ತಮ್ಮೊಳಗೇ ಪೈಪೋಟಿ ನಡೆಸಿ ಜನರ ಮನ ಗೆಲ್ಲುವ ಸಾಹಸವನ್ನೂ ಮಾಡಿದ್ದಾರೆ. ಆದ್ದರಿಂದ ಇಲ್ಲಿ ಬರುವ ಫಲಿತಾಂಶ ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವವರ ಮೇಲೆ ಪರಿಣಾಮ ಬೀರಬಹುದು ನಿಶ್ಚಿತವಾಗಿಯೂ. ಆದರೆ ಸ್ಥಳೀಯ ಸಂಸ್ಥೆಯಲ್ಲಿ ಒಂದೇ ಪಕ್ಷದಿಂದ ಸ್ಪರ್ಧಿಸಿ ಸೋತವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸೋಲನ್ನು ಒಪ್ಪಿಕೊಂಡು ವಿಧಾನಸಭೆಗೆ ಸ್ಪರ್ಧಿಸುವವರಿಗೆ ಮನಸಾರೆ ಬೆಂಬಲಿಸುವರೇ ಎನ್ನುವುದೂ ಕೂಡಾ ಬಹಳ ಮುಖ್ಯವಾಗುತ್ತದೆ. ಈ ಕಾರಣದಿಂದ ಸೋತವರನ್ನು ಸಮಾಧಾನಪಡಿಸಿಕೊಂಡು ಹಿಡಿತದಲ್ಲಿಟ್ಟುಕೊಳ್ಳುವ ಕೆಲಸವನ್ನು ವಿಧಾನಸಭೆಗೆ ಸ್ಪರ್ಧಿಸುವವರು ಮೊದಲು ಮಾಡಬೇಕಾಗುತ್ತದೆ.

ಬಹುತೇಕ ಚರ್ಚೆ ಮಾಡದಿರುವ ಅಂಶವೆಂದರೆ ಸ್ಥಳೀಯ ಸಂಸ್ಥೆಯಲ್ಲಿ ಬರುವ ಫಲಿತಾಂಶದ ಹಿನ್ನೆಲೆ ಏನು ಎನ್ನುವುದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಣಬಲ, ತೋಳ್ಬಲ, ಅಧಿಕಾರ ಬಲ, ವೈಯಕ್ತಿಕ ವರ್ಚಸ್ಸು ಹೀಗೆ ಹಲವು ಆಯಾಮಗಳಲ್ಲಿ ಫಲಿತಾಂಶವನ್ನು ವಿಶ್ಲೇಷಿಸಬೇಕಾಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆ ಯಾವುದೇ ಪಕ್ಷದ ಮೂಲ ಸೈದ್ಧಾಂತಿಕ ನೆಲೆಯಲ್ಲಿ ನಡೆದಿಲ್ಲ. ಪಕ್ಷದ ಸೈದ್ಧಾಂತಿಕ ಚೌಕಟ್ಟಿನಿಂದ ಹೊರಗೆ ಕದನ ನಡೆದಿದೆ. ಪಕ್ಷದ ಸೈದ್ಧಾಂತಿಕ ನೆಲೆಗಟ್ಟಿನಲ್ಲೇ ಚುನಾವಣೆ ನಡೆದಿದ್ದರೆ ಅದನ್ನು ಮುಂದಿನ ವಿಧಾನಸಭಾ ಚುನಾವಣೆಯ ಪರಿಪೂರ್ಣ ಮುನ್ಸೂಚನೆ ಎನ್ನಬಹುದಿತ್ತು. ಹಾಗೆ ಆಗದಿರುವ ಕಾರಣ ಈ ಫಲಿತಾಂಶವನ್ನೇ ಗಟ್ಟಿಯಾಗಿ ಯಾವುದೇ ಪಕ್ಷ ಅಥವಾ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿ ಅಪ್ಪಿಕೊಳ್ಳುವಂತಿಲ್ಲ. ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆ ತೀರಾ ವೈಯಕ್ತಿಕ ಪ್ರತಿಷ್ಠೆ, ಪ್ರಭಾವದ ರೂಪ. ಅದು ವಿಧಾನಸಭೆ ಚುನಾವಣೆ ಕಾಲಕ್ಕೆ ಬೇರೆಯೇ ರೂಪ ತಳೆಯಬಹುದು ಅಥವಾ ಪಲ್ಲಟವಾಗಲೂ ಬಹುದು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಜನರ ಭಾವನೆಗಳನ್ನು ಈ ಫಲಿತಾಂಶದ ಮೂಲಕ ಅರ್ಥಮಾಡಿಕೊಳ್ಳಬಹುದು ಎನ್ನುವ ಸ್ಥೂಲವಾದ ಅಂಶವನ್ನು ಬಿಟ್ಟರೆ ಅದೇ ಅಂತಿಮ ಎನ್ನುವಂತಿಲ್ಲ. ಸ್ಥಳೀಯ ಮಟ್ಟದಲ್ಲಿ ಮತಗಳು ಹರಿದು ಹಂಚಿಹೋಗುವುದರಿಂದ ಬಹುಮತ ಎನ್ನುವುದು ಸ್ಥಳೀಯವಾಗಿಯೇ ನಿರ್ಧಾರವಾಗುವ ಅನಿವಾರ್ಯತೆ ಬರುತ್ತದೆ. ನಿಚ್ಚಳ ಬಹುಮತವನ್ನು ಯಾವುದೇ ಪಕ್ಷ ನಿರೀಕ್ಷೆ ಮಾಡಬಹುದೇ ಹೊರತು ಬರದಿದ್ದರೆ ಆಘಾತಗೊಳ್ಳಬೇಕಾಗಿಲ್ಲ. ಯಾಕೆಂದರೆ ಈ ಚುನಾವಣೆಯ ಹಿನ್ನೆಲೆಯೇ ಆಗಿದೆ. ಹೀಗಾದಾಗ ಅನುಕೂಲಸಿಂಧು ರಾಜಕಾರಣವೇ ಮುಖ್ಯವಾಗುತ್ತದೆ. ಮೌಲ್ಯಾಧಾರಿತ ರಾಜಕಾರಣವನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೆ ಪಕ್ಷ ಮಾಡಿಲ್ಲ ಮತ್ತು ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಹಾಗಾದರೆ ಅಧಿಕಾರ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಮತ್ತೆ ಹೊಂದಾಣಿಕೆ ಸೂತ್ರಕ್ಕೆ ರಾಜಕೀಯ ಪಕ್ಷಗಳು ಮನಸ್ಸು ಮಾಡಬೇಕಾಗುತ್ತದೆ. ಯಾವುದೇ ಪಕ್ಷ ತನ್ನ ಮೌಲ್ಯ, ಸೈದ್ಧಾಂತಿಕ ನೆಲೆಗಟ್ಟನ್ನು ಇಟ್ಟುಕೊಂಡೇ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರಕ್ಕೇರುವುದು ಸಾಧ್ಯವಿಲ್ಲ. ಸಮಾನಮನಸ್ಕರು ಎನ್ನುವುದೂ ಕೂಡಾ ಸುಳ್ಳು ಮತ್ತು ಆತ್ಮವಂಚನೆಯ ಮಾತಾಗುತ್ತದೆ. ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು 20 ತಿಂಗಳು ಅಧಿಕಾರ ನಡೆಸಿದ್ದಾಗಲೇ ರಾಜಕೀಯದಲ್ಲಿ ಸೈದ್ಧಾಂತಿಕ ನೆಲೆಗಟ್ಟು ಎನ್ನುವುದು ಕೇವಲ ರಾಜಕೀಯ ಪಂಡಿತರ ವ್ಯಾಖ್ಯೆಗೆ ಮಾತ್ರ ಸೀಮಿತವೆನಿಸಿತು. ಆನಂತರದ ರಾಜಕೀಯ ಬೆಳವಣಿಗೆಗಳು, ಆಪರೇಷನ್ ಕಮಲ ರಾಜಕೀಯದ ಸೈದ್ಧಾಂತಿಕ ನೆಲೆಗಟ್ಟನ್ನೇ ಸುಳ್ಳು ಮಾಡಿದವು. ಸೆಕ್ಯೂಲರ್ ಎನ್ನುವ ಪದಕ್ಕೆ ಡಿಕ್ಷನರಿಯಲ್ಲಿ ಅರ್ಥ ಹುಡುಕಬೇಕೇ ಹೊರತು ರಾಜಕೀಯದಲ್ಲಿ ಅದನ್ನು ಮಾನದಂಡವಾಗಿ ಬಳಕೆ ಮಾಡಬಾರದು ಎನ್ನುವಷ್ಟರಮಟ್ಟಿಗೆ ಅರ್ಥ ಕಳಕೊಂಡಿತು. ‘ಸೂಡೋ ಸೆಕ್ಯೂಲರಿಸಂ’ ಎನ್ನುವ ಪದವನ್ನು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಅನೇಕ ವರ್ಷಗಳ ಕಾಲ ಬಳಸಿದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಅವರೂ ಈ ಪದವನ್ನು ಬಳಕೆ ಮಾಡುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಫಲಿತಾಂಶದ ನಂತರ ಯಾರು ಅಧಿಕಾರಕ್ಕೇರಬಹುದು ಎನ್ನುವ ಪ್ರಶ್ನೆ ಹಾಕಿಕೊಂಡರೆ ಯಾರು ಬೇಕಾದರೂ ಅಧಿಕಾರಕ್ಕೇರಲು ಸಾಧ್ಯ ಎನ್ನಬಹುದೇ ಹೊರತು ಇಂಥವರು ಮಾತ್ರ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೇರುತ್ತಾರೆ ಎನ್ನುವುದು ಅರ್ಥಹೀನ. ಆದ್ದರಿಂದ ಹೀಗೆಯೇ ಆಗುತ್ತದೆ, ಆಗಬೇಕು ಎನ್ನುವ ಊಹೆಯೇ ತಪ್ಪು ಈಗಿನ ರಾಜಕೀಯದಲ್ಲಿ. ಸೈದ್ಧಾಂತಿಕ ನೆಲೆಯನ್ನು ಹುಡುಕದೆ, ಈ ಕ್ಷಣದ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ಹೊಂದಾಣಿಕೆ ರಾಜಕೀಯ ಮೇಲುಗೈ ಸಾಧಿಸುತ್ತದೆ. ಇದನ್ನು ರಾಜಕೀಯದ ಅಪಮೌಲ್ಯ ಎಂದೂ ಕರೆಯಬಹುದು ಆದರೆ ಅದು ಅನಿವಾರ್ಯವಾಗಿತ್ತು ಎನ್ನುವ ಘಟ್ಟಕ್ಕೆ ಬಂದು ನಿಲ್ಲುತ್ತದೆ.

ಜನ ಕೂಡಾ ರಾಜಕೀಯ ಅಪಮೌಲ್ಯದ ಭಾಗವಾಗಿಯೋ, ಅನಿವಾರ್ಯವಾಗಿಯೋ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಬಿಟ್ಟಿದ್ದಾರೆ. ಅದು ಅವರಿಗೂ ಅನಿವಾರ್ಯ. election_countingಇಂಥ ಅನಿವಾರ್ಯತೆಯೇ ಅನಿಶ್ಚಿತ ರಾಜಕೀಯಕ್ಕೆ, ಫಲಿತಾಂಶಕ್ಕೆ ಕಾರಣವಾಗಿದೆ. ಹಣ, ಹೆಂಡವನ್ನು ಅನುಭವಿಸುತ್ತಲೇ ಅದರ ವಿರುದ್ಧ ಮಾತನಾಡುವುದು ಆತ್ಮವಂಚನೆ. ರಾಜಕೀಯದಲ್ಲಿ ಅಪವಿತ್ರ ಮೈತ್ರಿಯನ್ನು ಅನಿವಾರ್ಯತೆಯ ಹೆಸರಲ್ಲಿ ಒಪ್ಪಿಕೊಳ್ಳುವುದೂ ಕೂಡಾ ಅನೈತಿಕತೆ. ಆದ್ದರಿಂದ ಈ ಎಲ್ಲಾ ವ್ಯವಸ್ಥೆಗಳ ಉತ್ಪನ್ನವಾಗಿರುವ ಜನ, ರಾಜಕಾರಣಿಗಳು, ರಾಜಕಾರಣ, ಸಿದ್ಧಾಂತವನ್ನು ಬೇರ್ಪಡಿಸಿಕೊಂಡು ಬಿಡಿಬಿಡಿಯಾಗಿ ನೋಡುವುದು ಸಾಧ್ಯವಿಲ್ಲ. ಹೀಗಾಗಿ ಈ ಸ್ಥಳೀಯ ಸಂಸ್ಥೆಗೆಳ ಚುನಾವಣೆ ಫಲಿತಾಂಶದ ಮುಂದುವರಿದ ಭಾಗ ಅಧಿಕಾರ ಗ್ರಹಣ ಇಂಥದ್ದೇ ಸಮೀಕರಣಗಳ ಉಪಉತ್ಪನ್ನಗಳು ಎಂದಷ್ಟೇ ಕರೆಯಬಹುದು.

Leave a Reply

Your email address will not be published. Required fields are marked *