Category Archives: ರವಿ ಕೃಷ್ಣಾರೆಡ್ಡಿ

ಕಾವೇರಿ ನದೀ ಕಣಿವೆಯ ಸಾಕ್ಷ್ಯಚಿತ್ರ

ಸ್ನೇಹಿತರೇ,

ನಿಮಗೆ ಕೇಸರಿ ಹರವೂರವರು ಗೊತ್ತೇ ಇರುತ್ತಾರೆ. ಅವರು ನಿರ್ದೇಶಿಸಿದ ಮೊದಲ ಚಲನಚಿತ್ರ “ಭೂಮಿಗೀತ” ಕ್ಕೆ 1998ರಲ್ಲಿ ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ತದನಂತರದಲ್ಲಿ ಅವರು ಉತ್ತರ ಕನ್ನಡದಲ್ಲಿ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಅಲ್ಲಿಯ ಪರಿಸರಕ್ಕೆ ಹೇಗೆ ಮಾರಕ kesari-haravooಮತ್ತು ಆಘನಾಶಿನಿ ನದಿ ಸಮುದ್ರಕ್ಕೆ ಸೇರುವ ಕೊಲ್ಲಿ ಪ್ರದೇಶದ ಜನಜೀವನ ಹೇಗೆ ದುರ್ಗತಿ ಕಾಣುತ್ತದೆ ಎನ್ನುವುದರ ಕುರಿತು “ಅಘನಾಶಿನಿ ಮತ್ತದರ ಮಕ್ಕಳು” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಅದೇ ರೀತಿ ಸಕಲೇಶಪುರದ ಬಳಿಯ ಶಿರಾಡಿ ಘಟ್ಟ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಗುಂಡ್ಯ ಜಲವಿದ್ಯುತ್ ಸ್ಥಾವರದ ನಿರ್ಮಾಣದಿಂದ ಅಲ್ಲಿಯ ಪರಿಸರಕ್ಕೆ ಮತ್ತು ಜೈವಿಕ ವೈವಿಧ್ಯತೆಗೆ ಹೇಗೆ ಮಾರಕವಾಗುತ್ತದೆ ಎನ್ನುವುದರ ಕುರಿತು “ನಗರ ಮತ್ತು ನದೀಕಣಿವೆ” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕೇಸರಿಯವರು ಕೇವಲ ಸಿನೆಮಾ ಮತ್ತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡವರಲ್ಲ. ಬಾಗೂರು-ನವಿಲೆ ಕಾಲುವೆ ನಿರ್ಮಾಣ ಉಂಟುಮಾಡಿದ್ದ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಸರ ವಿನಾಶದ ಬಗ್ಗೆ ಅಲ್ಲಿಯ ರೈತರೊಡನೆ ಜೊತೆಗೂಡಿ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರೂ ಹೌದು.

ಈಗ ಇವರು ಕಾವೇರಿ ಕಣಿವೆ ಮತ್ತು ನದಿ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಿರ್ಮಾಣಕ್ಕೆ ಸಮಾನಮನಸ್ಕರ ಮತ್ತು ಸಮುದಾಯದ ಬೆಂಬಲ ಬೇಕಿದೆ. ಇಂತಹ ಚಟುವಟಿಕೆಗಳು ಆಗಬೇಕಿರುವುದೇ ಹಾಗೆ. ಒಂದು ಜವಾಬ್ದಾರಿಯುತ ಮತ್ತು ಪ್ರಬುದ್ಧ ಸಮಾಜದಲ್ಲಿ ಇಂತಹ ಯೋಜನೆಗಳಿಗೆ ಬೆಂಬಲ ಹರಿದುಬರಬೇಕು. ಕಾಳಜಿಯುಳ್ಳ ಮತ್ತು ಜಾಗೃತಿ ಮೂಡಿಸುವ ಕೆಲಸಗಳಲ್ಲಿ ನಮ್ಮೆಲ್ಲರ ಪಾಲೂ ಇರಬೇಕು. ಕೇಸರಿ ಹರವೂರವರು ಈ ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರದರ್ಶನದ ಕಾರ್ಯಯೋಜನೆಯಲ್ಲಿ ಅಂತಹ ಅವಕಾಶ ಕಲ್ಪಿಸುತ್ತಿದ್ದಾರೆ. ಅದನ್ನು ಬೆಂಬಲಿಸುವವರಲ್ಲಿ ನಾವೂ ಒಬ್ಬರಾಗಬೇಕು.

ದಯವಿಟ್ಟು ಅವರು ಬರೆದಿರುವ ಕೆಳಗಿನ ಈ ಪುಟ್ಟ ಟಿಪ್ಪಣಿಯನ್ನು ಓದಿ, ಅವರ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ನಿಮ್ಮ ಕೈಲಾದಷ್ಟು ದೇಣಿಗೆ ಅಥವ ಪ್ರಾಯೋಜಕತ್ವ ನೀಡಿ. ನಾನು ವೈಯಕ್ತಿಕವಾಗಿ “Supporter : Rs. 5000+ / $100” ದೇಣಿಗೆ ನೀಡಿ ಬೆಂಬಲಿಸಿದ್ದೇನೆ. ನಮ್ಮ ವರ್ತಮಾನದ ಓದುಗ ಬಳಗ ಕನ್ನಡದಲ್ಲಿ ನಡೆಯುತ್ತಿರುವ ಇಂತಹ ಮೊದಲ ಸಮುದಾಯ ಬೆಂಬಲಿತ ಸಾಕ್ಷ್ಯಚಿತ್ರ ಮತ್ತು ಜಾಗೃತಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತದೆ ಎಂದು ಆಶಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಆತ್ಮೀಯರೇ,

ಕಾವೇರಿ ಕಣಿವೆ ಮತ್ತು ನದೀ ವ್ಯವಸ್ಥೆಯ ಸಾಮಾಜಿಕತೆ, ಆರ್ಥಿಕತೆ ಹಾಗೂ ಪರಿಸರದ ಪ್ರಸ್ತುತ ವಸ್ತುಸ್ಥಿತಿ ಮತ್ತು ಈ ನದೀ ವ್ಯವಸ್ಥೆಯು ದಿನೇ ದಿನೇ ಹೇಗೆ ಕ್ಷೀಣಿಸುತ್ತಿದೆ ಎನ್ನುವ ವಿಷಯಗಳನ್ನೊಳಗೊಂಡ ಪೂರ್ಣಪ್ರಮಾಣದ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸುವ ಸಲುವಾಗಿ ನಾನು ಈ ಎರಡು-ಮೂರು ವರ್ಷಗಳಿಂದ ತುಸು ಅಧ್ಯಯನ ನಿರತನಾಗಿರುವುದು ತಮಗೆ ತಿಳಿದೇ ಇದೆ. ಇದಕ್ಕಾಗಿ ಒಂದೆರಡು ರಿಸರ್ಚ್ ಸಂಸ್ಥೆಗಳು ಹಾಗೂ ಹಲವು ಅಧ್ಯಯನ ನಿರತರು ನನ್ನ ಬೆನ್ನ ಹಿಂದಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿ, ಕಾವೇರೀ ಕಣಿವೆಯ ಉದ್ದಕ್ಕೂ, ಅಲ್ಲದೇ ಕಣಿವೆಯನ್ನು ಅವಲಂಬಿಸಿರುವ ಇತರ ಪ್ರದೇಶಗಳಿಗೂ ಕೊಂಡೊಯ್ದು ಕಡೇಪಕ್ಷ ಐದುನೂರು ಪ್ರದರ್ಶನಗಳನ್ನಾದರೂ ಉಚಿತವಾಗಿ ನಡೆಸಿ, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕೆನ್ನುವ ಹಂಬಲ, ಯೋಜನೆ ನಮ್ಮದು.

ಈ ಕೆಲಸವು ಸಾಮಾಜಿಕ ದೇಣಿಗೆಯ ಮೂಲಕವೇ ಆಗಬೇಕೆನ್ನುವುದು ನಮ್ಮ ಆಶಯ. ದಕ್ಷಿಣ ಭಾರತದ ಜನ ಈ ಕಾರ್ಯದಲ್ಲಿ ತಮ್ಮ ಪಾಲು, ಜವಾಬ್ದಾರಿಯೂ ಇದೆ ಎಂದು ಮನಗಂಡು ದೇಣಿಗೆ ನೀಡುತ್ತಾರೆಂದು ನಾನು ನಂಬಿರುತ್ತೇನೆ. ಚಿತ್ರ ನಿರ್ಮಾಣ, ಚಿತ್ರದ ವಸ್ತುವಿಸ್ತಾರ, ಸಂಗ್ರಹವಾದ ದೇಣಿಗೆಯ ಹಣ ಮತ್ತು ಅದರ ಸಮರ್ಪಕ ಆಯವ್ಯಯ – ಈ ಮುಂತಾದ ವಿಷಯಗಳನ್ನು ಪರಾಮರ್ಶಿಸುವ ಸಲುವಾಗಿ ಸಾಮಾಜಿಕ ಘನತೆಯುಳ್ಳ ಪ್ರಾಮಾಣಿಕ, ಧೀಮಂತ ವ್ಯಕ್ತಿಗಳ ಒಂದು ಸಮಿತಿಯನ್ನು ರಚಿಸಲಾಗುತ್ತಿದೆ.

ಈ ಯೋಜನೆಗೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ಈ ಬಗ್ಗೆ ನಿಮ್ಮ ಗೆಳೆಯರಿಗೂ ತಿಳಿಸಿ. ನೀವು ದಯವಿಟ್ಟು www.kesariharvoo.com ಗೆ ಭೇಟಿ ನೀಡಿ, ಪ್ರೋತ್ಸಾಹಿಸಿ.

ನಿರೀಕ್ಷೆಯಲ್ಲಿ,
ತಮ್ಮ ವಿಶ್ವಾಸಿ,
ಕೇಸರಿ ಹರವೂ

ಆಶಾವಾದ ಮೂಡಿಸುತ್ತಲೇ, ಎಡವುತ್ತಿರುವ ಸರ್ಕಾರ…

– ರವಿ ಕೃಷ್ಣಾರೆಡ್ಡಿ

ಸಂಪುಟ ರಚನೆಯ ನಂತರ ಸಿದ್ದರಾಮಯ್ಯನವರ ಹೊಸ ಸರ್ಕಾರದ ಬಗ್ಗೆ ಒಂದಷ್ಟು ಭರವಸೆ ಮತ್ತು ಆಶಾವಾದ ಇಟ್ಟುಕೊಳ್ಳಬಹುದು ಎನ್ನಿಸಿತ್ತು. siddaramaiah-cmಸಂಪುಟಕ್ಕೆ ಸೇರಿದ ಎಲ್ಲರೂ ಅರ್ಹರು ಮತ್ತು ಪ್ರಾಮಾಣಿಕರು ಎನ್ನುವುದು ಆ ಆಶಾವಾದಕ್ಕೆ ಕಾರಣವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಂಡ (ಇದ್ದುದರಲ್ಲಿ) ಉತ್ತಮ ಎನ್ನಬಹುದಾದ ಸಂಪುಟ ಇದು ಎನ್ನುವುದು ಆ ಭರವಸೆಗೆ ಕಾರಣ ಆಗಿತ್ತು. ಇದಕ್ಕೆ ಮತ್ತು ಕೆಲವರನ್ನು ಹೊರಗಿಟ್ಟ ರೀತಿ ಮತ್ತು ನೀತಿಗಳಿಗೆ ಖಂಡಿತವಾಗಿ ಸಿದ್ಧರಾಮಯ್ಯನವರು ಅಭಿನಂದನಾರ್ಹರು.

ಆದರೆ, ಖಾತೆಗಳ ಹಂಚಿಕೆಯ ನಂತರ ಪರಿಸ್ಥಿತಿ ಬದಲಾಗಿದೆ. ಕೆಲವು ಖಾತೆ ಮತ್ತು ಸಚಿವರ ಬಗ್ಗೆ ಭರವಸೆ ಇಟ್ಟುಕೊಳ್ಳುವಂತೆ, ಮತ್ತಷ್ಟು ಖಾತೆಗಳ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳು ಖಂಡಿತವಾಗಿ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ.

ಕೃಷ್ಣ ಭೈರೇಗೌಡರಿಗೆ ಖಂಡಿತವಾಗಿ ಬೇರೆ ಖಾತೆ ಕೊಡಬಹುದಿತ್ತು. ಅವರಿಗೆ ಕೃಷಿ ಖಾತೆಯನ್ನು ನಿಭಾಯಿಸಲಾಗುವುದಿಲ್ಲ ಎಂದು ಈ ಮಾತಿನ ಅರ್ಥವಲ್ಲ. ಅವರ ತಂದೆ ಭೈರೇಗೌಡರೂ ಕೃಷಿ ಸಚಿವರಾಗಿ ಒಳ್ಳೆಯ ಹೆಸರು ತೆಗೆದುಕೊಂಡಿದ್ದರು. ಕೃಷ್ಣ ಭೈರೇಗೌಡ ಖಂಡಿತವಾಗಿ ಅದನ್ನು ಆಧುನಿಕ ದೃಷ್ಟಿಕೋನದಿಂದ ನಿಭಾಯಿಸಲಿದ್ದಾರೆ. ಸ್ವತಃ ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಅವರು ಈಗಾಗಲೆ ಅದನ್ನು ಅವರ ಪ್ರಥಮ ಪತ್ರಿಕಾಗೊಷ್ಟಿಯಲ್ಲಿ ನಿರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ಭೈರೇಗೌಡರ ಖಾತೆ ನಿರ್ವಹಣೆ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದು. krishnabyregowdaಆದರೆ, ಕೃಷ್ಣರಂತಹ ಆಧುನಿಕ ಶಿಕ್ಷಣ ಮತ್ತು ಜಾಗತಿಕ ಉದ್ಯೋಗದ ಅನುಭವ ಇದ್ದವರು ಸಶಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದ್ದ ಹಲವು ಖಾತೆಗಳು ಇದ್ದವು. ಉದಾಹರಣೆಗೆ, ಮಾಹಿತಿ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೈಗಾರಿಕೆ, ನಗರಾಭಿವೃದ್ಧಿ, ಇತ್ಯಾದಿ. ಕೃಷಿ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಹಲವರು ಈ ಸಂಪುಟದಲ್ಲಿ ಇದ್ದಾರೆ. ಆದರೆ, ನಾನು ಈಗ ಉಲ್ಲೇಖಿಸಿದ ಹಲವು ಖಾತೆಗಳನ್ನು ಭ್ರಷ್ಟಾಚಾರಕ್ಕೆ ಆಸ್ಪದವೀಯದೆ ಮತ್ತು ಅಧಿಕಾರಿಗಳ ಜ್ಞಾನದ ಮೇಲೆ ಅವಲಂಬಿಸದೆ ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ನಿಭಾಯಿಸಬಲ್ಲವರು ಕೆಲವರೇ ಇದ್ದಾರೆ. ಹಾಗಾಗಿ ಕೃಷ್ಣ ಭೈರೇಗೌಡರಂತಹವರನ್ನು ಎಲ್ಲಿ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಸಿದ್ಧರಾಮಯ್ಯನವರು ಮತ್ತಷ್ಟು ಗಂಭೀರವಾಗಿ ಯೋಚಿಸಬೇಕು.

ಎಚ್.ಕೆ.ಪಾಟೀಲರಿಗೆ ಸಹಜವಾಗಿ ಎಂಬಂತೆ ಗ್ರಾಮೀಣಾಭಿವೃಧ್ಹಿ ದೊರಕಿದೆ. ಇವರು ಆ ಖಾತೆಯಲ್ಲಿ ಮಾಡಲಿರುವ ಕೆಲಸಗಳ ಬಗ್ಗೆ ಅಪಾರವಾದ ನಿರೀಕ್ಷೆಗಳಿವೆ. ಶ್ರೀನಿವಾಸ ಪ್ರಸಾದರಿಗೆ ಕಂದಾಯ ಖಾತೆ ದೊರಕಿದೆ. ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರರಿಗೆ ಪ್ರಾಥಮಿಕ ಶಿಕ್ಷಣ ದೊರಕಿದೆ. ಇಲ್ಲಿಯವರೆಗೂ ಗಂಭೀರವಾದ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳಿಲ್ಲದ ಸಿದ್ಧರಾಮಯ್ಯನವರ ಹಲವಾರು ಆಪ್ತರಿಗೆ ಒಳ್ಳೆಯ ಖಾತೆಗಳೇ ಲಭಿಸಿವೆ. ಆದರೆ, ಅವರು ಎಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಮತ್ತು ಜನಮುಖಿಯಾದ ಆಡಳಿತ ನಡೆಸುತ್ತಾರೆ ಎನ್ನುವುದು ಬರಲಿರುವ ದಿನಗಳಲ್ಲಿ ಮಾತ್ರವೇ ಗೊತ್ತಾಗಲಿರುವ ವಿಷಯ.

ರಾಜ್ಯದ ರಾಜಕೀಯ ವಲಯದಲ್ಲಿ ಅಷ್ಟೇನೂ ಪರಿಚಿತರಲ್ಲದ ಕೆ.ಜೆ. ಜಾರ್ಜ್‌ರಿಗೆ ಗೃಹ ಖಾತೆಯಂತಹ ಪ್ರಮುಖ ಖಾತೆ ಕೊಡಲಾಗಿದೆ. ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗಂಭೀರ ಚಿಂತನೆಗಳಿಲ್ಲದ, ಪೋಲಿಸ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಮನಸ್ಥಿತಿಯಿಲ್ಲದ ಯಾರಾದರೂ ಗಟ್ಟಿಜೀವ ಈ ಖಾತೆಯನ್ನು ವಹಿಸಿಕೊಳ್ಳುವ ತನಕ ರಾಜ್ಯದ ಪೋಲಿಸ್ ವ್ಯವಸ್ಥೆ ಸುಧಾರಿಸುವುದಿಲ್ಲ ಮತ್ತು ಜನಸ್ನೇಹಿಯಾಗುವುದಿಲ್ಲ. ಜಾರ್ಜ್‌ರ ಬಗ್ಗೆ ಯಾವ ರೀತಿಯ ಭರವಸೆ ಇಟ್ಟುಕೊಳ್ಳಬಹುದೊ ಗೊತ್ತಾಗುತ್ತಿಲ್ಲ.

ಕೆಲವರನ್ನು ಉಲ್ಲೇಖಿಸುವುದಕ್ಕೆ ಮೊದಲು ಎಂದೋ ಓದಿದ ಮತ್ತು ಅಷ್ಟಿಷ್ಟು ಜ್ಞಾಪಕದಲ್ಲಿರುವ ಈ ಉಪಕತೆ ಹೇಳುತ್ತೇನೆ. ಒಬ್ಬ ಪರಮಾತಿಭ್ರಷ್ಟ ಇರುತ್ತಾನೆ. ಯಾವ ಜಾಗದಲ್ಲಿ ಹಾಕಿದರೂ ಅವನು ಲಂಚ ಹೊಡೆಯುವುದರಲ್ಲಿ ನಿಸ್ಸೀಮ. ತಲೆಕೆಟ್ಟ ಅವನ ಮೇಲಧಿಕಾರಿಗಳು ಅವನಿಗೆ ಬೇರೆ ಯಾವ ಕೆಲಸವೂ ಬೇಡ ಎಂದು, ಸಮುದ್ರದಲ್ಲಿ ಅಲೆಗಳನ್ನು ಎಣಿಸುವ ಕೆಲಸ ಮಾಡು ಎಂದು ಅಲ್ಲಿಗೆ ವರ್ಗ ಮಾಡುತ್ತಾರೆ. ಕೆಲವು ದಿನಗಳ ನಂತರ ಆತನ ಮೇಲಧಿಕಾರಿಗಳಿಗೆ ಗೊತ್ತಾಗುತ್ತದೆ, ಸಮುದ್ರದ ಅಲೆಗಳನ್ನು ಎಣಿಸುವ ಕೆಲಸದಲ್ಲೂ ಆತ ಲಂಚ ಹೊಡೆಯುತ್ತಿದ್ದಾನೆ ಎಂದು. ಹೇಗೆ ಎಂದು ವಿಚಾರಿಸಿದರೆ ಗೊತ್ತಾದ ಸಂಗತಿ, ಆತ ಸಮುದ್ರದ ಮುಂದೆ ಕುರ್ಚಿ ಹಾಕಿಕೊಂಡು ಅಲೆಗಳನ್ನು ಎಣಿಸುತ್ತಿರುತ್ತಾನೆ. ಸಮುದ್ರದಲ್ಲಿ ಸಹಜವಾಗಿ ಅತ್ತಿಂದಿತ್ತ ದೋಣಿಗಳು ಮತ್ತು ಹಡಗುಗಳು ಸಂಚರಿಸುತ್ತಿರುತ್ತವೆ. ಇವನು ಅವುಗಳನ್ನು ತಡೆದು ನಿಲ್ಲಿಸಿ, ತನ್ನ ಅಲೆಗಳನ್ನು ಎಣಿಸುವ ಸರ್ಕಾರಿ ಕೆಲಸಕ್ಕೆ ನಿಮ್ಮಿಂದ ತೊಂದರೆಯಾಗಿತ್ತಿದೆ, ಇದು ಕಾನೂನು ವಿರೋಧಿ ಎನ್ನುತ್ತಾನೆ. ದೋಣಿಗಳವರು ಆತನಿಗೆ ಲಂಚ ಕೊಡುವುದನ್ನು ಆರಂಭಿಸುತ್ತಾರೆ.

ಇಂತಹ ಮನಸ್ಥಿತಿಯ ಹಲವು ಜನ ಈ ಸಂಪುಟದಲ್ಲಿದ್ದಾರೆ. ಇವರಿಗೆ ಭಾರೀ ಖಾತೆಗಳೇ ಸಿಗಬಹುದು ಎಂದು ನಿರೀಕ್ಷಿಸಿದ್ದರೂ ಸಿದ್ಧರಾಮಯ್ಯನವರು ಆ ವಿಷಯದಲ್ಲಿ ಅವರಿಗೆ ಸದ್ಯಕ್ಕೆ ಅಷ್ಟೇನೂ ಗಣನೀಯವಲ್ಲದ ಖಾತೆಗಳನ್ನು ನೀಡಿದ್ದಾರೆ. ಆದರೆ ಅವರ ಚಾಳಿ ಹೇಗೆ ಮುಂದುವರೆಯುತ್ತದೆ ಎನ್ನುವುದು ಒಂದಾರು ತಿಂಗಳಿನಲ್ಲಿಯೇ ಗೊತ್ತಾಗಲಿದೆ. ಮತ್ತೆ ಕೆಲವು ಸಚಿವರು ಉದಾಸೀನದಿಂದ ವರ್ತಿಸುವ ನಡವಳಿಕೆಗಳೂ ಹೆಚ್ಚಾಗಲಿವೆ. ನಿನ್ನೆ ಖಾಸಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಡನೆ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹಾಗೂ ವೈದ್ಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನಡೆದುಕೊಂಡ ರೀತಿ. ಸಭೆಗೆ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಬರದ ಸಚಿವರ ಬಗ್ಗೆ ಇಂದಿನ ವಿಜಯ ಕರ್ನಾಟಕದಲ್ಲಿ ಉಲ್ಲೇಖವಿದೆ. ದೇಶಪಾಂಡೆಯಂತಹವರು ವಿದ್ಯಾರ್ಥಿಗಳ ಮತ್ತು ಜನಸಾಮಾನ್ಯರ ಹಿತಾಸಕ್ತಿಗಳನ್ನು ಕಾಯುತ್ತಾರೆ ಎಂದು ಭಾವಿಸುವುದು ಮುಗ್ಧತೆಯಾಗುತ್ತದೆ.

ಆರಂಭದ ಪ್ಯಾರಾದಲ್ಲಿ ಮುಖ್ಯಮಂತ್ರಿಗಳು ಕೆಲವು ಖಾತೆಗಳನ್ನು ಹಂಚುವ ವಿಚಾರದಲ್ಲಿ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದೆ. ಇದು ಎರಡು ಖಾತೆಗಳ ವಿಚಾರವಾಗಿ ಎದ್ದು ಕಾಣುತ್ತದೆ. ಒಂದು, ಸತೀಶ್ ಜಾರಕಿಹೊಳಿಯವರಿಗೆ ನೀಡಿರುವ ಅಬಕಾರಿ ಖಾತೆ ಮತ್ತು ಪ್ರಕಾಶ್ ಹುಕ್ಕೇರಿಯವರಿಗೆ ನೀಡಿರುವ ಸಕ್ಕರೆ ಖಾತೆ. ಸತೀಶ್ ಜಾರಕಿಹೊಳಿಯವರ ತಂದೆ ಬೈಲಹೊಂಗಲದ ಲಕ್ಷ್ಮಣ ಜಾರಕಿಹೊಳಿಯವರು ಎಷ್ಟು ದೊಡ್ಡ ಅಬಕಾರಿ ಗುತ್ತಿಗೆದಾರರಾಗಿದ್ದರು ಎನ್ನುವುದು ಬೆಳಗಾವಿ ಮತ್ತು ಬಿಜಾಪುರದ ಸೀಮೆಯಲ್ಲಿ ಜನಸಾಮಾನ್ಯರಿಗೂ ತಿಳಿದ ವಿಷಯ. ಜಾರಕಿಹೊಳಿಯವರ ಕುಟುಂಬದ ಮೂಲ ಉದ್ಯೋಗ ಮತ್ತು ಆದಾಯ ಅಬಕಾರಿ ಗುತ್ತಿಗೆಗಳದ್ದು. ಇತ್ತೀಚಿನ ವರ್ಷಗಳಲ್ಲಿ ಜಾರಕಿಹೊಳಿ ಸಹೋದರರು ತಮ್ಮ ವ್ಯವಹಾರಗಳನ್ನು Diversify ಮಾಡಿಕೊಂಡಿರಬಹುದು. ಆದರೆ ಅವರಿಗೆ ಅಬಕಾರಿಯಲ್ಲಿ ಆಸಕ್ತಿ ಮತ್ತು ಆದಾಯ ಇದ್ದೇ ಇರುತ್ತದೆ. ಹೀಗಿರುವಾಗ ಸತೀಶ್ ಜಾರಕಿಹೊಳಿಯವರಿಗೆ ಅಬಕಾರಿ ಖಾತೆ ನೀಡಿರುವುದು ಅಸಮಂಜಸ. ಸತೀಶರು ಭ್ರಷ್ಟಾಚಾರ ಎಸಗದೇ ಕಾರ್ಯ ನಿರ್ವಹಿಸಿದರೂ ಇದು “Conflict of Interest” (ಅನೈತಿಕವಾಗಿ ಸ್ವಲಾಭ ಮಾಡಿಕೊಳ್ಳುವ ಸಾಧ್ಯತೆ) ಗೆ ಉದಾಹರಣೆ. ಹಾಗೆಯೇ, ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಮತ್ತವರ ಕುಟುಂಬದವರು ಹಲವಾರು ಸಕ್ಕರೆ ಕಾರ್ಖಾನೆಗಳ ಉದ್ಯಮದಲ್ಲಿ ಪಾಲುದಾರರು. ಇವರು ತಮ್ಮ ಖಾತೆಯನ್ನು ನಿಭಾಯಿಸುವಾಗ ತಮ್ಮ ಮತ್ತು ತಮ್ಮವರ ಹಿತಾಸಕ್ತಿಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಆಧಾರಗಳೇನಿದೆ?

ಇಂತಹುದಕ್ಕೆ ಆಧಾರಗಳು ಬೇಕಿಲ್ಲ. ಆದರೆ, ಇಂತಹ ಸಂಶಯಗಳು ಬರದೇ ಇರುವಂತೆ ಸೂಕ್ಷ್ನತೆಯಿಂದ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಇದು ಸಿದ್ಧರಾಮಯ್ಯನವರಿಗೆ, ಸತೀಶ್ ಜಾರಕಿಹೊಳಿಯವರಿಗೆ, ಪ್ರಕಾಶ್ ಹುಕ್ಕೇರಿಯವರಿಗೆ, ಮತ್ತು ಆಡಳಿತ ಪಕ್ಷವಾದ ಕಾಂಗ್ರೆಸ್‌ನವರಿಗೆ ಅರ್ಥವಾಗದೇ ಹೋಗಿದ್ದರೆ ಅದು ಅವರ ತಿಳಿವಳಿಕೆ ಮತ್ತು ಪ್ರಬುದ್ಧತೆಯನ್ನು ತೋರಿಸುತ್ತದೆ. ಅರ್ಥವಾಗಿಯೂ ಇದನ್ನು ಮಾಡಿದ್ದರೆ ಅದು ಅಕ್ಷಮ್ಯವಾಗುತ್ತದೆ.

ಒಟ್ಟಿನಲ್ಲಿ. ಸಿದ್ಧರಾಮಯ್ಯನವರ ಸರ್ಕಾರ ಭರವಸೆಗಳನ್ನು ಹುಟ್ಟಿಸುತ್ತಲೇ ಬರಲಿರುವ ದಿನಗಳ ಭ್ರಷ್ಟಾಚಾರ, ದುರಾಡಳಿತ ಮತ್ತು ಸ್ವಜನಪಕ್ಷಪಾತದ ಬೀಜಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವುದನ್ನು ಕಾಣಿಸುತ್ತಿದೆ.


ಪೂರಕ ಓದಿಗೆ: ಹಿಂದೆ 2009ರಲ್ಲಿ “ವಿಕ್ರಾಂತ ಕರ್ನಾಟಕ”ಕ್ಕೆ “Conflict of Interest” ಹಿನ್ನೆಲೆಯಲ್ಲಿ “ದೊಡ್ಡ ಹಗರಣಗಳಿಲ್ಲ; ಅಕ್ರಮವಾಗಿ ಶ್ರೀಮಂತರಾಗುತ್ತಿರುವ ರಾಜಕಾರಣಿಗಳಿಗೆ ಕಮ್ಮಿ ಇಲ್ಲ.” ಎಂಬ ಲೇಖನ ಬರೆದಿದ್ದೆ. ತಮ್ಮ ಹಿತಾಸಕ್ತಿಗೆ ಹೇಗೆ ಅಧಿಕಾರಸ್ಥರು ತಮ್ಮ ಸ್ಥಾನದ ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಮಾರ್ಥಾ ಸ್ಟುವರ್ಟ್ ಮತ್ತು ಕೃಷ್ಣಯ್ಯ ಶೆಟ್ಟಿಯ ಉದಾಹರಣೆಯೊಂದಿಗೆ ಅದನ್ನು ಚರ್ಚಿಸಲಾಗಿದೆ. ಆಸಕತರು ಅದನ್ನು ಇಲ್ಲಿ ಗಮನಿಸಬಹುದು.

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ…

-ರವಿ ಕೃಷ್ಣಾರೆಡ್ಡಿ

ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ್ಸೈಡ್‌‌ನ ಅಂಶ ವಾತಾವರಣದಲ್ಲಿ ಯಾವ ಮಟ್ಟದಲ್ಲಿ ಇದೆ ಎನ್ನುವುದಕ್ಕೆ ಸಂಬಂಧಿಸಿದ್ದು. ಅಂದ ಹಾಗೆ, ಇಂಗಾಲದ ಡೈಆಕ್ಸೈಡ್ ಶಾಖವನ್ನು ಹಿಡಿದಿಟ್ಟುಕೊಳ್ಳುವ, ಮತ್ತದನ್ನು ಹೆಚ್ಚಿಸುವ ಹಸಿರುಮನೆ ಅನಿಲಗಳಲ್ಲಿ ಒಂದು.

ಕಳೆದ ಲಕ್ಷಾಂತರ, ಕೋಟ್ಯಾಂತರ ವರ್ಷಗಳಲ್ಲಿ ಭೂಮಿಯ ಮೇಲೆ ಇಂಗಾಲದ ಡೈಆಕ್ಸೈಡ್ ಈ ಪ್ರಮಾಣದಲ್ಲಿ ಇರಲಿಲ್ಲ. ಮನುಷ್ಯ ಭೂಮಿಯ ಮೇಲೆ ವಿಕಾಸವಾಗುವುದಕ್ಕಿಂತ ಲಕ್ಷಾಂತರ ವರ್ಷಗಳ ಮೊದಲು ಇತ್ತು, ಅದರೆ ಆತ ಓಡಾಡಲು ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅದು ಶೇಖರಣೆಯಾಗಿದೆ.

ಕೈಗಾರಿಕಾ ಯುಗಕ್ಕೂ ಮೊದಲು ಭೂಮಿಯ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ದಶಲಕ್ಷಕ್ಕೆ ಕೇವಲ 280 ಅಂಶಗಳಲ್ಲಿತ್ತು (280 parts per million). carbon-atmosphere-440-ppmಕಳೆದ ಎರಡು-ಮೂರು ಶತಮಾನಗಳ ಕೈಗಾರಿಕಾ ಕ್ರಾಂತಿಯಿಂದಾಗಿ ಕಲ್ಲಿದ್ದಲು ಮತ್ತು ತೈಲವನ್ನು ಉಪಯೋಗಿಸಲು ಆರಂಭಿಸಿದಾಗಿನಿಂದ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ವಾತಾವರಣದಲ್ಲಿ ವಿಪರೀತ ಗತಿಯಲ್ಲಿ ಏರುತ್ತಲೇ ಬಂದಿದೆ. 1958ರಲ್ಲಿ ಫೆಸಿಫಿಕ್ ಸಾಗರದ ಹವಾಯಿ ದ್ವೀಪದಲ್ಲಿ ಈ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಅಳೆಯಲು ಆರಂಭಿಸಿದಾಗ ಅದು 318 ppm ಇತ್ತು. 1990ರ ದಶಕದ ಆರಂಭದಲ್ಲಿ ಅದು 350 ppm ದಾಟಿತು. ಕಳೆದ ವಾರ ಅದು ಸರಾಸರಿ 400 ppm ದಾಟಿದೆ.

ಈ 400 ppm ಸಂಖ್ಯೆ ಗಂಭೀರವಾದದ್ದು ಏಕೆಂದರೆ ಹವಾಮಾನ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಈ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಈ ಹಂತದಲ್ಲಿಯೇ ನಿಯಂತ್ರಣ ಮಾಡಿದರೆ ಮಾತ್ರ ಭೂಮಿಯ ಮೇಲಿನ ಶಾಖವನ್ನು ಕೈಗಾರಿಕಾ ಪೂರ್ವ ದಿನಗಳ ಸರಾಸರಿ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಪ್ರಮಾಣದ ಒಳಗೇ ನಿಯಂತ್ರಿಸಲು ಸಾಧ್ಯ. ಅದು ಸಾಧ್ಯವಾಗದೆ ಭೂಮಿಯ ಮೇಲಿನ ತಾಪಮಾನ ಸರಾಸರಿ 2 ಸೆಲ್ಸಿಯಸ್ ಹೆಚ್ಚಾಗಿದ್ದೇ ಆದರೆ, ಭೂಮಿಯ ಮೇಲಿನ ಪ್ರತಿಯೊಂದು ಜೀವಸಂಕುಲದ ಮೇಲೆ ತೀವ್ರವಾದ ಪರಿಣಾಮಗಳಾಗಲಿವೆ ಮತ್ತು ಅದು ಬಹುಪಾಲು ಮಾರಣಾಂತಿಕವಾಗಲಿದೆ.

ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗದೇ ಹೋದರೆ ಮುಂದಿನ ಬೇಸಿಗೆಗಳ ಉರಿಬಿಸಿಲು ಹೆಚ್ಚುತ್ತದೆ. ಬರಗಾಲಗಳ ಪುನರಾವರ್ತನೆ ಹೆಚ್ಚಾಗಲಿವೆ. ಅನಾವೃಷ್ಟಿ ಮಾತ್ರವಲ್ಲ, ಅಕಾಲಿಕ ಅತಿವೃಷ್ಟಿಗಳೂ ಘಟಿಸಿ ನೂರು-ವರ್ಷಕ್ಕೊಮ್ಮೆಯ ಪ್ರವಾಹಗಳು ಜರುಗಲಿವೆ. ಸಮುದ್ರದ ನೀರಿನ ಮಟ್ಟ ಹೆಚ್ಚಿ ಸಮುದ್ರ ದಂಡೆಯ ಭೂಭಾಗಗಳು ಮುಳುಗಲಿವೆ.

ಇಂದು ಪ್ರಪಂಚದ ಅತಿ ದೊಡ್ಡ ಮಾಲಿನ್ಯ ಉತ್ಪಾದಕರಾದ ಅಮೆರಿಕ, ಚೀನಾ, ಯೂರೋಪ್‌ಗಳಿಗೆ ಮಾತ್ರ ಗಂಭೀರ ವಿಷಯವಲ್ಲ. ಭಾರತದಂತಹ ಸಂಕೀರ್ಣ ಮತ್ತು ವೈವಿಧ್ಯತೆಯ ನಾಡಿನ ಜನರ ಉಳಿವಿನ ಪ್ರಶ್ನೆಯೂ ಆಗಲಿದೆ. ಹವಾಮಾನ ವೈಪರೀತ್ಯದ ಪರಿಣಾಮ ಮೊದಲು ತಟ್ಟುವುದೇ ಬಡವರನ್ನು ಮತ್ತು ದುರ್ಬಲರನ್ನು. ಇದು ಅಳಿವು-ಉಳಿವಿನ ಪ್ರಶ್ನೆಯಾಗುವುದಕ್ಕಿಂತ ಮುಂಚೆ ಪ್ರಪಂಚದ ಬಡ ಮತ್ತು ಹಿಂದುಳಿದ ದೇಶಗಳ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಿಜ್ಞಾನಿಗಳು ಮತ್ತು ಸಾಮಾಜಿಕ ಹೋರಾಟಗಾರರು ಇದನ್ನು ಪ್ರಸ್ತುತವಾಗಿಸಲು ಪ್ರಯತ್ನಿಸಬಹುದು, ಆದರೆ ರಾಜಕೀಯ ನಾಯಕರಿಗೆ ಇಂತಹ ವಿಷಯಗಳು ಅರ್ಥವಾಗುವಷ್ಟು ಯೋಗ್ಯತೆ ಮತ್ತು ಕಳಕಳಿಗಳಾಗಲಿ, ಚಿತ್ತಶುದ್ಧಿ ಇದೆಯೇ ಎನ್ನುವುದು ಪ್ರಶ್ನೆ.

ಪ್ರಪಂಚದಾದ್ಯಂತ ಬರಲಿರುವ ದಿನಗಳ ರಾಜಕೀಯ ಮತ್ತು ಸಾಮಾಜಿಕ ಹೋರಾಟ ಬೇರೆ ಬಗೆಯದೇ ಇರುತ್ತದೆ. ಆದರೆ ಆ ವಿಷಮ ಘಟ್ಟ ಎಂದಿನಿಂದ ಆರಂಭವಾಗುತ್ತದೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಹಾಗಾಗಿಯೇ, ಜಾಗತಿಕ ನಾಯಕತ್ವವೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ, ಬೇಗ ಎಚ್ಚತ್ತುಕೊಂಡು ತಾಪಮಾನದ ಪ್ರಮಾಣವನ್ನು ತಹಬಂದಿಗೆ ತರದೇ ಹೋದರೆ ಏನಾಗಲಿದೆಯೋ ಅದು ಆಗಲಿದೆ.

ಕರ್ನಾಟಕದ ಜನತೆಗೆ ಮತ್ತು ಸಿದ್ಧರಾಮಯ್ಯನವರಿಗೆ ಅಭಿನಂದಿಸುತ್ತ…

– ರವಿ ಕೃಷ್ಣಾರೆಡ್ಡಿ

ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಇಂದು ಅಧಿಕಾರ ವಹಿಸಿಕೊಂಡಿದೆ. ಬಿಡಿಬಿಡಿಯಾಗಿ ನೋಡುವುದಕ್ಕಿಂತ ಒಟ್ಟಾರೆಯಾಗಿ ಮತ್ತು ಅಂಕಿಸಂಖ್ಯೆಗಳ ದೃಷ್ಟಿಕೋನದಲ್ಲಿ ನೋಡಿದಾಗ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಸರ್ಕಾರ ನಡೆಸಲು ಚುನಾಯಿಸಿದ್ದಾರೆ. ಹಾಗೆಯೇ ಅದು ಬಹುಮತದ ನಿರ್ಣಯವಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ದ್ವಂದ್ವಗಳಿಲ್ಲದ ನಿರ್ಣಯ ಕೊಟ್ಟ ರಾಜ್ಯದ ಜನತೆಯನ್ನು ನಾವು ಅಭಿನಂದಿಸಲೇಬೇಕು.

ಮತ್ತು, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. siddaramaiah-cmಕರ್ನಾಟಕ ಕಂಡ ಅನೇಕ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಲು ಹಲವರಿಗಿಂತ ಹೆಚ್ಚು ಅರ್ಹರಿದ್ದರು. ಈ ಹಿನ್ನೆಲೆಯಲ್ಲಿಯೇ ಅವರು ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಹುದ್ದೆ ತಮ್ಮ ಹಕ್ಕೆಂಬಂತೆ ಪ್ರತಿಪಾದಿಸುತ್ತ ಬಂದಿದ್ದರು ಸಹ. ಈಗ ಅನೇಕ ರಾಜಕೀಯ ಏಳುಬೀಳಾಟಗಳ, ತಂತ್ರಗಾರಿಕೆಯ, ಜನಾಭಿಪ್ರಾಯದ ನಂತರ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೂ ಅಭಿನಂದನೆಗಳು.

ಕಳೆದೆರಡು ದಿನಗಳಲ್ಲಿ ನಡೆದ ಅಪ್ಯಾಯಮಾನವಾದಂತಹ ಘಟನಾವಳಿಗಳೆಂದರೆ, ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ನಿಯೋಜಿತ ಮುಖ್ಯಮಂತ್ರಿಯಾಗಿ ಘೋಷಿತವಾದ ಮೇಲೆ ಸಿದ್ಧರಾಮಯ್ಯನವರು ನಡೆದುಕೊಂಡ ರೀತಿ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದವರೆಲ್ಲ, ಆ ಬಗ್ಗೆ ಘೋಷಣೆ ಆಗುತ್ತಿದ್ದಂತೆ ಮಾಡುತ್ತಿದ್ದ ಮೊದಲ ಕೆಲಸ ಮಠಗಳಿಗೆ ಹೋಗಿ ಮಠಾಧೀಶರ ಕಾಲುಗಳಿಗೆ ಎರಗುತ್ತಿದ್ದದ್ದು, ಮತ್ತು ನಂತರ ದೇವಸ್ಥಾನಗಳಿಗೆ, ಅದರಲ್ಲೂ ರಾಜ್ಯದ ಹೊರಗಿನ (ಜಮ್ಮು, ಆಂಧ್ರ, ಕೇರಳ) ದೇವಳಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಮಾಡಿ ಬರುತ್ತಿದ್ದದ್ದು. ಅಂತಹ ಒಂದು ದಾಸ್ಯದ ಮತ್ತು ಅವೈಚಾರಿಕ ಮನೋಭಾವನ್ನು ಬದಿಗೊತ್ತಿ, ನಾಡಿನಲ್ಲಿ ಈಗಲೂ ಅಷ್ಟಿಷ್ಟು ಸಾಕ್ಷಿಪ್ರಜ್ಞೆಯಾಗಿ ಬಿಂಬಿತವಾಗಿರುವ ಹೋರಾಟಗಾರರ, ಚಿಂತಕರ, ಕವಿಗಳ ಮನೆಗೆ ಹೋಗಿ ಅವರನ್ನು ಭೇಟಿಯಾಗಿದ್ದು. ಇದು ಬಹುಶಃ ಕರ್ನಾಟಕದ ಮುಂದಿನ ನಾಯಕರ ನಡವಳಿಕೆಗಳಿಗೆ ಮುನ್ನುಡಿ ಬರೆದಂತಿದೆ. ಸಿದ್ಧರಾಮಯ್ಯವನರ ಈ ನಡೆಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಆಶಿಸೋಣ. ಒಬ್ಬ ರಾಜಕೀಯ ನಾಯಕ ನಾಡಿನ ಎಲ್ಲಾ ರಂಗಗಳನ್ನು ಪ್ರಭಾವಿಸಬೇಕು, ಮೇಲಕ್ಕೆತ್ತಬೇಕು. ಅಂತಹ ಒಂದು ಸಾಧ್ಯತೆ ಮತ್ತು ಅವಕಾಶ ಸಿದ್ಧರಾಮಯ್ಯನವರಿಗಿದೆ.

ಆದರೆ, ಇದೇ ಸಂದರ್ಭದಲ್ಲಿ ನಾಡಿನ ಭವಿಷ್ಯದ ಬಗ್ಗೆ ಮತ್ತು ಈ ಸಲದ ಸರ್ಕಾರ ತರಲಿರುವ ಗುಣಾತ್ಮಕ ಬದಲಾವಣೆಗಳ ಬಗ್ಗೆ ನಾನು ಆಶಾವಾದಿಯಾಗಿಲ್ಲ. ಸಿದ್ಧರಾಮಯ್ಯನವರ ಜೀವನದ ಮಹತ್ವಾಕಾಂಕ್ಷೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದಾಗಿತ್ತು. ಅದನ್ನವರು ವೈಯಕ್ತಿಕ ಸಾಮರ್ಥ್ಯ ಮತ್ತು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಪ್ರತಿಪಾದಿಸುತ್ತ ಬಂದಿದ್ದರು. ಆದರೆ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಇಂತಿಂತಹ ಬದಲಾವಣೆಗಳನ್ನು ಮತ್ತು ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದಾಗಲಿ, ಈ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಕಲ್ಪನೆಗಳು ಎಂತಹವಿವೆ ಎಂದಾಗಲಿ ಅವರು ಸ್ಪಷ್ಟವಾಗಿ ಜನರ ಮುಂದೆ ಹಂಚಿಕೊಂಡ ಉದಾಹರಣೆಗಳಿಲ್ಲ. ಅವರು ಈ ಹಿಂದೆ ತಮಗೆ ವಹಿಸಿದ್ದ ಖಾತೆಗಳನ್ನು ದಕ್ಷವಾಗಿ ನಿಭಾಯಿಸಿದ ಉದಾಹರಣೆಗಳಿವೆಯೇ ವಿನಃ ಕ್ರಾಂತಿಕಾರಕ ಸಾಧನೆಗಳನ್ನು ಮಾಡಿದ ಉದಾಹರಣೆಗಳಿಲ್ಲ. ಮತ್ತು ಸಿದ್ಧರಾಮಯ್ಯನವರು ಆಲಸಿ ಮತ್ತು ವಿಲಾಸಿ ಎಂಬ ಆರೋಪಗಳಿವೆ. ಹೀಗಿರುವಾಗ ಸಿದ್ಧರಾಮಯ್ಯನವರು ಜೆ.ಎಚ್.ಪಟೇಲರಂತೆ ಒಬ್ಬ well-meaning ಮುಖ್ಯಮಂತ್ರಿಯಾಗುವ ಸಾಧ್ಯತೆಗಳೇ ಹೆಚ್ಚಿವೆ. ಇಂತಹ ಸಂಶಯಗಳನ್ನು ಸುಳ್ಳು ಮಾಡಿ ಸಿದ್ಧರಾಮಯ್ಯನವರು ನಾಡು ಉತ್ತಮ ವಿಚಾರಗಳಿಗೆ ನೆನಪಿಟ್ಟುಕೊಳ್ಳುವಂತಹ ನಾಯಕತ್ವ ನೀಡಲಿ ಎಂದು ಆಶಿಸುತ್ತೇನೆ.

ಇನ್ನು, ಸಿದ್ಧರಾಮಯ್ಯನವರ ಮಂತ್ರಿಮಂಡಲದ ಬಗ್ಗೆ. ಅದು ಮುಖ್ಯಮಂತ್ರಿ ಆಯ್ಕೆಯಾದಷ್ಟು ಸರಳವಾಗಿ ಆಗುತ್ತದೆ ಎಂದು ಹೇಗೆ ಹೇಳುವುದು? Siddaramaiahಹೇಗೋ ಮಂತ್ರಿಮಂಡಲ ರಚನೆಯಾಗುತ್ತದೆ. ಹಿಂದಿನ ಮೂರ್ನಾಲ್ಕು ಸರ್ಕಾರಗಳಿಗೆ ಹೋಲಿಸಿದರೆ ಸರ್ಕಾರಕ್ಕೆ ಗೌರವ ಮತ್ತು ಘನತೆ ತರಬಲ್ಲಂತಹ, ವೈಯಕ್ತಿಕ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಬಹುಶಃ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆ ಮಂತ್ರಿಮಂಡಲದಲ್ಲಿ ಖಂಡಿತವಾಗಿ ಪರಮಭ್ರಷ್ಟರು, ಗೂಂಡಾ-ಗಣಿ-ಭೂಮಾಫಿಯಾದ ಹಿನ್ನೆಲೆಯಿಂದ ಬಂದವರು, ಕೆಲಸ ಮಾಡಲಾಗದ ಮುದುಕರು, ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳಿಲ್ಲದ ಯುವಕರು, ಅಸಮರ್ಥರೂ, ಇದ್ದೇ ಇರುತ್ತಾರೆ. ಜೊತೆಗೆ ಮಂತ್ರಿಯಾಗಲಾಗದೆ ಉಳಿದ ಅತೃಪ್ತ ಶಾಸಕರೂ, ಅವರಿಗೊಬ್ಬ ನಾಯಕ, ಅವರ ಬೇಕುಬೇಡಗಳು, ಈ ಪರಂಪರೆ ಖಂಡಿತ ಮುಂದುವರೆಯುತ್ತದೆ. (ಮತ್ತು, ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅವರನ್ನು ಅಭಿನಂದಿಸಲು ಅಟ್ಟವೇರಿದ ಮುಖಗಳನ್ನು ನೀವು ನೋಡಿದ್ದರೆ ಕಳ್ಳರ ಮತ್ತು ಸುಳ್ಳರ ದೊಡ್ದ ಗುಂಪೇ ಸಿದ್ಧರಾಮಯ್ಯನವರನ್ನು ಸುತ್ತುವರೆಯಲಿದ್ದಾರೆ ಎನ್ನುವ ಸಂಶಯ ಬರುವುದು ಸಹಜ.) ಸರ್ಕಾರ ನಡೆಸುವ ಪಕ್ಷ ಬದಲಾಗಿದೆ. ಅನೇಕ ಹೊಸ ಶಾಸಕರು ಬಂದಿದ್ಡಾರೆ. ಆದರೆ, ಇವರೆಲ್ಲ ಬಹುತೇಕ ವಿಷಯಗಳಲ್ಲಿ ಅವರ ಹಿಂದಿನವರಿಗಿಂತ ಭಿನ್ನವಾಗೇನೂ ಇಲ್ಲ. ಹೆಚ್ಚುಕಮ್ಮಿ ಒಂದೇ ರೀತಿಯ ಆಟಗಾರರಿರುವ ತಂಡದಿಂದ ಹೊಸ ರೀತಿಯ ಆಟ ನಿರೀಕ್ಷಿಸುವುದು ಅಸಹಜ.

ಒಂದು ವಿಷಯದಲ್ಲಿ ಸಿದ್ಧರಾಮಯ್ಯನವರ ಮೇಲೆ ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಒತ್ತಡ ಕಡಿಮೆ ಇರುತ್ತದೆ. ಅದು ಕೇಂದ್ರದ ಕಾಂಗ್ರೆಸ್ ಘಟಕಕ್ಕೆ ಸಂಪನ್ಮೂಲ (ಹಣ ಎಂದು ಓದಿಕೊಳ್ಳುವುದು) ಒದಗಿಸುವ ವಿಚಾರಕ್ಕೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದ್ದು, ದೇಶದ ಹಲವು ಕಡೆಗಳಲ್ಲಿಯೂ ಕಾಂಗ್ರೆಸ್ ಸರ್ಕಾರಗಳು ಇರುವುದರಿಂದ ಎಸ್.ಎಮ್.ಕೃಷ್ಣರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಇದ್ದಷ್ಟು ಒತ್ತಡಗಳು ಸಿದ್ಧರಾಮಯ್ಯನವರಿಗೆ ಇರುವುದಿಲ್ಲ. ಆದರೆ, ಕಾಂಗ್ರೆಸ್ ಕಬಂಧಬಾಹುಗಳಿಗೆ ಮತ್ತು ಆಕ್ಟೋಪಸ್‌ನಷ್ಟು ಅನೇಕ ಹಸ್ತಗಳಿಗೆ ಹೆಸರಾದದ್ದು. ಯಾರು ಯಾರ ಹೆಸರಿನಲ್ಲಿ ಡಿಮಾಂಡ್ ಇಡುತ್ತಾರೆ ಮತ್ತು ವಸೂಲಿ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಹೈಕಮಾಂಡ್ ನೇರವಾಗಿ ಬೇಡಿಕೆ ಇಡದೆ ಅನೇಕ ಮಧ್ಯವರ್ತಿಗಳ ಕೈಯ್ಯಲ್ಲಿ ಈ ಕೆಲಸಗಳನ್ನು ಮಾಡಿಸುವುದರಿಂದಲೇ ಕಾಂಗ್ರೆಸ್‌ ಪಕ್ಷದಲ್ಲಿ ಭ್ರಷ್ಟಾಚಾರ ಸಾಂಸ್ಥಿಕವಾಗಿರುವುದು. ಸಿದ್ಧರಾಮಯ್ಯನವರು ವೈಯಕ್ತಿಕವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೆ ಈ ಕಪ್ಪ-ಕಾಣಿಕೆಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಒಂದು ಗಂಭೀರ ಪ್ರಶ್ನೆ.

ಮತ್ತು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆಡಳಿತ ಪಕ್ಷಗಳು ತಮ್ಮ ಆಡಳಿತ ಮಾದರಿ ಮತ್ತು ನ್ಯಾಯ ಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಎದುರಿಸುವುದಕ್ಕಿಂತ ವಾಮಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಗೆಲ್ಲಲು ಯತ್ನಿಸುವುದು ಚಾರಿತ್ರಿಕವಾಗಿ ಕಂಡುಬರುವ ಅಂಶ. ಇನ್ನಾರು ತಿಂಗಳ ಒಳಗೆ ಬಿಬಿಎಂ‌ಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಎರಡು ನಗರಸಭೆ ಸ್ಥಾನಗಳಿಗೆ ಮತ್ತು ಸಂಸದರು ಶಾಸಕರಾಗಿ ಆಯ್ಕೆಯಾಗಿರುವ ಎರಡು ಸಂಸತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತದೆ. ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿಸಬೇಕಾದ ಒತ್ತಡದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದರ ಮೇಲೆ ಈ ಪಕ್ಷದ ಮುಂದಿನ ದಿನಗಳ ನಡೆಯೂ, ಕರ್ನಾಟಕದ ಮುಂದಿನ ದಿನಗಳೂ, ಇರುತ್ತದೆ.

ಇವೆಲ್ಲದಕ್ಕಿಂತ ಮುಖ್ಯವಾಗಿ, ರಾಜ್ಯದಲ್ಲಿ ಈಗಾಗಲೆ ಬರಗಾಲ ಕಾಲಿಟ್ಟು ಎರಡು-ಮೂರು ವರ್ಷ ಕಳೆದಿದೆ. ಇನ್ನೂ ಒಂದೆರಡು ವರ್ಷ ಇದು ಮುಂದುವರೆಯುತ್ತದೆ. droughtಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಆದರೆ ರೈತರ ಮತ್ತು ಕೃಷಿಕಾರ್ಮಿಕರ ಬಡತನ ಹೆಚ್ಚಾಗಲಿದೆ. ನೀರಿನ ಮತ್ತು ವಿದ್ಯುತ್‌ನ ಸಮಸ್ಯೆಗಳು ಎಲ್ಲಾ ವರ್ಗದ ಜನರನ್ನು ಬಾಧಿಸಲಿದೆ. ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಶಿಕ್ಷಣ ತುಟ್ಟಿಯಾಗುತ್ತಿದೆ. ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ರಾಜಕಾರಣಿಗಳಿಂದ ನಾಯಕತ್ವ ಮತ್ತು ಕೆಲಸಗಳನ್ನು ಅಪೇಕ್ಷಿಸುವ ಜನರೂ ಕ್ರಿಯಾಶೀಲರಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ನಾಯಕತ್ವ ಮತ್ತು ಪರಿಹಾರ ನೀಡಬಲ್ಲ ಸಾಮರ್ಥ್ಯ ಸಿದ್ಧರಾಮಯ್ಯನವರಿಗಿದ್ದರೂ, ನಮ್ಮ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಇರುತ್ತದೆಯೇ ಎನ್ನುವುದರ ಮೇಲೆ ಈ ಸರ್ಕಾರದ ಭದ್ರತೆ ಅವಲಂಬಿಸಿದೆ.

ಹಾಗೆಯೇ, ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೂ ಇದು ಸೂಕ್ಷ್ಮ ಕಾಲ. ಹೆಚ್ಚೇನೂ ಬದಲಾಗದ ರಾಜಕೀಯ-ಸಾಮಾಜಿಕ ಸಂದರ್ಭದಲ್ಲಿ ತಮ್ಮ ನಡೆಯನ್ನು ಮತ್ತು ಹೋರಾಟವನ್ನು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಮುಂದುವರೆಸುವದಷ್ಟೇ ಅವರು ಮಾಡಬೇಕಾದ ಕೆಲಸ. ಆದರೆ, ಹಲವು ಸ್ತರದ ಜನರೊಡನೆ ಮತ್ತು ಸಮಾನ ಮನಸ್ಕ ಗುಂಪುಗಳೊಡನೆ ಕೆಲಸ ಮಾಡುವುದನ್ನು ಮತ್ತು ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದನ್ನು ಅವರು ಆದಷ್ಟು ಬೇಗ ಕಲಿಯಬೇಕಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇನ್ನಾರು ತಿಂಗಳ ಒಳಗೇ ಈ ಸರ್ಕಾರದ ಮೌಲ್ಯಮಾಪನ ಆರಂಭವಾಗುತ್ತದೆ ಮತ್ತು ಅದರ ಭವಿಷ್ಯದ ಸಾಧನೆಗಳು ಬರೆಯಲ್ಪಡುತ್ತವೆ.

ಚುನಾವಣೋತ್ತರ ಸಂದರ್ಭದಲ್ಲಿ “ವರ್ತಮಾನ.ಕಾಮ್”ನ ದಾರಿ…

ಸ್ನೇಹಿತರೇ,

ಕಳೆದ ಒಂದು-ಒಂದೂವರೆ ತಿಂಗಳು ದಿನಕ್ಕೆ ಸರಾಸರಿ ಏಳೆಂಟು ಕಿ.ಮೀ. ನಡೆದು, ನೂರಾರು ಜನರ ಕೈಕುಲುಕಿ, ಮಾತನಾಡಿಸಿ, ಕಷ್ಟಸುಖ ಹಂಚಿಕೊಂಡು, ಬೆವರು ಸುರಿಸಿ, ಕೊಬ್ಬು ಕರಗಿಸಿ, ಬಹಳ ಸಂತಸದಿಂದ ಕಳೆದೆ. ಜೊತೆಯಾದದ್ದು ಹಲವರು. ಹಣಸಹಾಯದಿಂದ ಹಿಡಿದು, ಸಾಧ್ಯವಾದಾಗಲೆಲ್ಲ ಜೊತೆಗೂಡಿ ಪ್ರಚಾರ ಮಾಡಿದ ಅನೇಕರಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು. ಸುಮಾರು ನೂರಕ್ಕೂ ಹೆಚ್ಚು ಜನ ಕೂಡಿ ಸುಮಾರು ಐದೂವರೆ ಲಕ್ಷ ರೂಪಾಯಿಯಷ್ಟು ದೇಣಿಗೆ ನೀಡಿದ್ದಾರೆ. ನಾನು ನನ್ನ ಕಡೆಯಿಂದ ಸುಮಾರು ಮೂರ್ನಾಲ್ಕು ಲಕ್ಷ ರೂಪಾಯಿ ಹಾಕಿಕೊಂಡಿದ್ದೇನೆ.

ಬಿಟಿಎಮ್ ಲೇಔಟ್‌ನ 6596 ಮತದಾರರು ಯಾವುದೇ ಪ್ರಲೋಭನೆಗೊಳಗಾಗದೆ ಒಂದು ಗುಂಪಾಗಿ ಮತ ಹಾಕಿದ್ದಾರೆ BTMLayout-2013ಎಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಈ ಕ್ಷೇತ್ರದಲ್ಲಿ ನಡೆದ ಅಕ್ರಮ, ಆಮಿಷ, ಮತ್ತು ಜಾತಿರಾಜಕಾರಣದ ನಡುವೆಯೂ ಇಷ್ಟೊಂದು ಜನ ಅವೆಲ್ಲವನ್ನೂ ಮೀರಿ ವರ್ತಿಸಿದ್ದು ಪ್ರಶಂಸನೀಯ. ನಾನು ಚುನಾವಣೆಯ ಸಂದರ್ಭದಲ್ಲಿ ಬಹಿರಂಗ ಭಾಷಣಗಳಲ್ಲಿ ಹೇಳುತ್ತಿದ್ದಂತೆ, ನಮಗೆ ಬೀಳುವ ಪ್ರತಿಯೊಂದು ಮತವೂ ಅನಾಚಾರ-ಅಕ್ರಮದ ವಿರುದ್ಧ ಬಿದ್ದ ಮತ ಮತ್ತು ಅರ್ಹತೆ-ಪ್ರಾಮಾಣಿಕತೆಯ ಪರ ಬಿದ್ದ ಮತ, ಮತ್ತು ಒಂದೊಂದು ಮತವೂ ಮುಖ್ಯ. ಈ ಚುನಾವಣೆ ಇಲ್ಲಿಯ ಜನರಿಗೆ ಒಂದು ಹಂತದವರೆಗೆ ಜಾಗೃತಿ ಮೂಡಿಸಿದೆ ಮತ್ತು ಇಲ್ಲಿಯ ಅನೇಕ ಜನ ನಮ್ಮ ಹೋರಾಟವನ್ನು ಮತ್ತು ಪ್ರತಿಪಾದಿಸಿದ ವಿಚಾರಗಳನ್ನು ಮತ ಹಾಕದಿದ್ದರೂ ಒಪ್ಪಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮದು ಗೆಲುವೇ.

ಅಂದ ಹಾಗೆ, ಇಡೀ ಕ್ಷೇತ್ರದಲ್ಲಿ ನನ್ನಷ್ಟು ಸುತ್ತಾಡಿದ, ಜನರಿಗೆ ಮುಖ ತೋರಿಸಿದ, ಮತ್ತು ಮತದಾರರ ಕೈಯ್ಯಲ್ಲಿ ಬೈಯಿಸಿಕೊಂಡ ಇನ್ನೊಬ್ಬ ಅಭ್ಯರ್ಥಿ ಇಲ್ಲ. ಅವರು ಬೈದದ್ದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮುಖ ತೋರಿಸುವ ರಾಜಕಾರಣಿಗಳನ್ನು. ವಿಷಾದದ ಸಂಗತಿ ಏನೆಂದರೆ, ಹಾಗೆ ಬೈದ ಬಹುಪಾಲು ಜನ ಓಟು ಹಾಕಿರುವುದಿಲ್ಲ ಅಥವ ಮತ್ಯಾವುದೋ ಆಮಿಷಕ್ಕೆ ಒಳಗಾಗಿ ಅವರ ಬೈಗುಳಕ್ಕೆ ಅರ್ಹವಾಗಿದ್ದವರಿಗೇ ಮತ ಹಾಕಿರುತ್ತಾರೆ.

ನಾನು ಪ್ರತಿನಿಧಿಸಿದ್ದ ಲೋಕ್‌ಸತ್ತಾ ಪಕ್ಷ ಮಾಡಿದ ಪ್ರಚಾರ ಮತ್ತು ಪಾಲ್ಗೊಂಡ ರೀತಿ ಮುಂದಿನ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಚುನಾವಣಾ ರಾಜಕೀಯ ಹೇಗಿರುತ್ತದೆ Ravi-SripadBhat-Sriharshaಎನ್ನುವುದಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ನಿಸರ್ಗ ಅತ್ತಲೇ ಕ್ರಮಿಸುತ್ತಿದೆ. ಐದು ವರ್ಷದ ಹಿಂದೆ, ಸಾಂಕೇತಿಕವಾಗಿ ಎಂದು ಪ್ರತಿಭಟನೆಯ ಸ್ಪರ್ಧೆ ಮಾಡಿ, ಜನರಿಂದ ಹಣಸಂಗ್ರಹಿಸಿ, ಸಾಧ್ಯವಾದಷ್ಟು ಪ್ರಚಾರ ಮಾಡಿದವನು ಬಹುಶಃ ನಾನೊಬ್ಬನೆ. ಆದರೆ, ಈ ಸಲ ನಮ್ಮ ಪಕ್ಷದಿಂದಲೇ 24 ಜನ ಇದ್ದರು. ಮತ್ತು ಅದೇ ರೀತಿ ಮಾಡಿದ ಇತರೆ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ಅನೇಕರಿದ್ದರು. ಇನ್ನೈದು ವರ್ಷಗಳಲ್ಲಿ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮಂತೆ ಚುನಾವಣೆಗೆ ಸ್ಪರ್ಧಿಸುವ ಒಬ್ಬರಾದರೂ ಇರುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಅದು ಇತರೆ ಪಕ್ಷಗಳ ಮೇಲೆ ಮತ್ತು ಪ್ರತ್ರಿನಿಧಿಗಳಾಗಬೇಕೆಂದು ಬಯಸುವವರ ನಡವಳಿಕೆಗಳ ಮೇಲೆ ನೇರ ಪ್ರಭಾವ ಬೀರಲಿದೆ.

ಈ ಚುನಾವಣೆಯಲ್ಲಿ ನಮಗೆ ಗೆಲುವಿನ ಸಮೀಪ ಹೋಗಲಾಗಿಲ್ಲ. ಆದರೆ ನಾವು ಸರಾಸರಿ ಸುಮಾರು ಮೂರು ಸಾವಿರ ಓಟು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ಸ್ಪರ್ಧಿಸಿದ ಎರಡು ಕಡೆ ಮೂರನೇ ಸ್ಥಾನದಲ್ಲಿದ್ದರೆ, ಬಹುತೇಕ ಕಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತರದ ಸ್ಥಾನದಲ್ಲಿದ್ದೇವೆ. ಇದು ಕಡಿಮೆ ಸಾಧನೆಯಲ್ಲ. ಇದನ್ನು ನಾವು ಹೆಚ್ಚುಹೆಚ್ಚು ಪ್ರಚುರಗೊಳಿಸಿದಷ್ಟೂ ಇಂತಹ ಪ್ರಯತ್ನಗಳಿಗೆ ಮುಂದಾಗುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಮತ್ತು ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೆ ಸ್ಫೂರ್ತಿಯೂ ಆಗುತ್ತದೆ.

ಚುನಾವಣೆಗೆ ಸಂಬಧಿಸಿದಂತೆ ಇನ್ನೊಮ್ಮೆ ಬರೆಯುತ್ತೇನೆ. ಈಗ ವರ್ತಮಾನ.ಕಾಮ್ ವಿಚಾರವಾಗಿ ಒಂದಿಷ್ಟು ಹಂಚಿಕೊಳ್ಳುತ್ತೇನೆ.

ನಿಮಗೆ ಗೊತ್ತಿದೆ, ಇಲ್ಲಿ ನಾನೂ ಸೇರಿದಂತೆ ನಮ್ಮ ಅನೇಕ ಬರಹಗಾರ ಮಿತ್ರರು ನಿರ್ಭಯ ಮತ್ತು ನಿರ್ಭೀತಿಯಿಂದ ನಮ್ಮ ವರ್ತಮಾನದ ಸಾಮಾಜಿಕ-ರಾಜಕೀಯ-ಮಾಧ್ಯಮ ವಿಷಯಗಳ ಬಗ್ಗೆ ಸತ್ಯವನ್ನು ಹೇಳಬೇಕೆಂಬ ತುಡಿತದಲ್ಲಿ ಬರೆದಿದ್ದಾರೆ. ಬೇರೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗದ ಮತ್ತು ಚರ್ಚೆಯಾಗದ ವಿಷಯಗಳು ಇಲ್ಲಿ ಚರ್ಚೆಯಾಗಿವೆ. ಇದರಲ್ಲಿ ಕನಿಷ್ಟ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇನ್ನು ನಿರ್ಬಂಧ ಹಾಕಿಕೊಳ್ಳಲಾಗುತ್ತದೆ. ಅದು, ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಕ್ಕೆ.

ನನಗೆ ಕಳೆದ ಒಂದೂವರೆ ತಿಂಗಳಿನಿಂದ ಈ ಮೂರ್ನಾಲ್ಕು ದಿನಗಳಿಂದ ಯೊಚಿಸಲು ಸಿಕ್ಕಷ್ಟು ಸಮಯ ಸಿಕ್ಕಿರಲಿಲ್ಲ. ನಿಮ್ಮಲ್ಲಿ ಈಗಾಗಲೆ ಕೆಲವರು ಗಮನಿಸಿರಬಹುದು. ರಾಜಧಾನಿಯ ಹಲವು ಪ್ರಮುಖ ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಗಳಿಗೆ ನನ್ನ ಬಗ್ಗೆ (ವರ್ತಮಾನ.ಕಾಮ್‌ನ ಕಾರಣವಾಗಿ) ಸಿಟ್ಟಿದೆ. ನಾನು ಅಥವ ನಮ್ಮ ವರ್ತಮಾನ.ಕಾಮ್‌ನ ಲೇಖಕರು ಅವರನ್ನು ಅಥವ ಅವರ ಮಾಧ್ಯಮ ಸಂಸ್ಥೆಗಳನ್ನು ವಿಮರ್ಶಿಸಿದ್ದು ಮತ್ತು ಟೀಕಿಸಿದ್ದೇ ಅದಕ್ಕೆ ಬಹುತೇಕ ಕಾರಣ. ಅದರಲ್ಲಿ ನಮಗೆ ವೈಯಕ್ತಿಕ ದ್ವೇಷವೇನೂ ಇರಲಿಲ್ಲ. ತಪ್ಪಾಗಿದ್ದು ಸರಿಯಾಗಬೇಕು ಎನ್ನುವ ಸಕಾರಣವೇ ಆ ವಿಮರ್ಶೆಗಳಿಗೆ ಕಾರಣ. ಆದರೆ ವಿಮರ್ಶೆಗೊಳಪಟ್ಟವರು ಹಾಗೆ ಅಂದುಕೊಂಡಿಲ್ಲ. ಹಾಗಾಗಿಯೆ, ಚುನಾವಣೆಯ ಸಂದರ್ಭದಲ್ಲಿ ನನ್ನ ಹೆಸರು ಪ್ರಸ್ತಾಪವಾಗಬೇಕಿದ್ದ ಅನೇಕ ಕಡೆ ಅದು ಪ್ರಸ್ತಾಪವಾಗಿಲ್ಲ, ಮತ್ತು ಆದರೂ ಅದು ನಗಣ್ಯ ರೀತಿಯಲ್ಲಿ ಇರುತ್ತಿತ್ತು. ಯಾಕೆ ಯಾವ ಮಾಧ್ಯಮದಲ್ಲೂ (ಒಂದೆರಡು ಕಡೆ ಬಿಟ್ಟು) ನಿಮ್ಮ ಪ್ರಸ್ತಾಪವಿಲ್ಲ ಎಂಬ ಸ್ನೇಹಿತರ ಪ್ರಶ್ನೆಗಳನ್ನು ಕೇಳಿಕೇಳಿ ನನಗೆ ಸಾಕಾಗಿ ಹೋಗಿತ್ತು.

ಇದರಿಂದ ದೊಡ್ದ ಹೊಡೆತ ಬಿದ್ದದ್ದು ನಾನು ಪ್ರತಿಪಾದಿಸಬೇಕೆಂದುಕೊಂಡಿದ್ದ ವಿಚಾರಗಳಿಗೆ.

ಈಗ ನಾನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ತೊಡಗಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ಹೊರೆ ಅನಗತ್ಯ ಮತ್ತು ಅನಾನುಕೂಲಕರ. ವರ್ತಮಾನ.ಕಾಮ್‌ನಿಂದ ಹಣಕಾಸಿನ ನಷ್ಟವಿದೆಯೇ ಹೊರತು ನಮಗ್ಯಾರಿಗೂ ಲಾಭವಿಲ್ಲ. ಬದ್ದತೆಯ ಮತ್ತು ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಇದನ್ನು ನಿಭಾಯಿಸುತ್ತಿದ್ದೇವೆಯೇ ಹೊರತು ಇಲ್ಲಿ ಹಣ ಮಾಡುವ ಸಾಧ್ಯತೆಗಳೇ ಇಲ್ಲ. ಹೀಗಿರುವಾಗ, ಮಾಧ್ಯಮಕ್ಕೆ ಸಂಬಂಧಿಸಿದ ನಮ್ಮ ವಿಮರ್ಶೆಗಳು ಇಲ್ಲಿಯವರೆಗೆ ಬಹುಪಾಲು ಸಮಯದಲ್ಲಿ ವರ್ತಮಾನ.ಕಾಮ್‌‌ನ ಬೆಳವಣಿಗೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆಯೇ ಹೊರತು ಪರವಾಗಿ ಅಲ್ಲ. ಇಲ್ಲಿ ಲೇಖನ ಬರೆದರೆ ನಮ್ಮ ಲೇಖನಗಳು ಬೇರೆಡೆ ಪ್ರಕಟವಾಗುವುದಿಲ್ಲ ಮತ್ತು ಪ್ರಕಟಣೆಗೆ ಅವಕಾಶಗಳು ಸಿಗುವುದಿಲ್ಲ ಎನ್ನುವ ತನಕ ಯೋಚಿಸಿರುವ ಅನೇಕ ಮಿತ್ರರು ನಮಗೆ ಬರೆಯಲು ಹೋಗಲೇ ಇಲ್ಲ, ಮತ್ತು ಒಂದೆರಡು ಸಲ ಬರೆದವರು ಬರೆಯುವುದನ್ನೇ ನಿಲ್ಲಿಸಿದ ಉದಾಹರಣೆಗಳಿವೆ.

ಈ ಚುನಾವಣೆ ಆ ನಿಟ್ಟಿನಲ್ಲಿ ನನಗೆ ಪಾಠ ಕಲಿಸಿದೆ. ನಾವು ಒಂದು ಸಶಕ್ತ ಮಾಧ್ಯಮವಾಗದ ಹೊರತು ಅಂತಹ “ಧೈರ್ಯ” ಅನಗತ್ಯ. ಸಮಾಜ ಮತ್ತು ವರ್ತಮಾನ ತನಗೆ ಅಗತ್ಯವಾದದ್ದನ್ನು ಉಳಿಸಿಕೊಳ್ಳುತ್ತದೆ ಮತ್ತು ಬೇಡವಾದದ್ದನ್ನು ಬಿಸಾಕುತ್ತದೆ. ನಾವು ನಮ್ಮ ಗುರಿಯನ್ನು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಿಗೆ ಇಟ್ಟಿರುವ ಸಂದರ್ಭದಲ್ಲಿ ಮಾಧ್ಯಮಗಳಿಂದ “ಬಹಿಷ್ಕೃತ”ರಾಗುವುದು counter-productive. ಬರೆದರೆ ಮಾಧ್ಯಮಗಳ ಸಕಾರಾತ್ಮಕ ವಿಷಯಗಳ ಬಗ್ಗೆ ಬರೆಯುತ್ತೇವೆಯೇ ಹೊರತು ಅವರ ನಕಾರಾತ್ಮಕ ವಿಷಯಗಳನ್ನು ಎತ್ತಿ ತೋರಿಸಲು ಹೋಗುವುದಿಲ್ಲ. ಸಮುದಾಯಕ್ಕೆ ಆ ರಂಗದ ವಿಮರ್ಶೆ ಅಗತ್ಯವಿದೆ ಎಂದಾದಾಗ ಅದಕ್ಕೆ ಅನೇಕ ವೇದಿಕೆಗಳಿವೆ ಮತ್ತು ದಾರಿಗಳಿವೆ.

ಈ ವಾರ ಬಹುಶಃ ವರ್ತಮಾನ ಬಳಗದ ಹಲವು ಸ್ನೇಹಿತರನ್ನು ಮುಖತಃ ಭೇಟಿಯಾಗಲಿದ್ದೇನೆ. ಮತ್ತೆ ಎಂದಿನಂತೆ ನಿಯತಕಾಲಿಕವಾಗಿ ಲೇಖನಗಳನ್ನು ಪ್ರಕಟಿಸಲು ಮಾಡಬೇಕಾದ ಕೆಲಸಗಳ ಕಡೆ ಗಮನ ಕೊಡಲಿದ್ದೇವೆ. ವರ್ತಮಾನ.ಕಾಮ್‌ನ ಪ್ರಸ್ತುತತೆ ಬಗ್ಗೆ ನಮಗ್ಯಾರಿಗೂ ಸಂದೇಹಗಳಿಲ್ಲ. ಆದರೆ ಎಲ್ಲಿ ಬದಲಾವಣೆಗಳಾಗಬೇಕು ಎನ್ನುವುದರ ಬಗ್ಗೆ ಬದಲಾದ ಸಂದರ್ಭದಲ್ಲಿ ಸ್ಪಷ್ಟವಾಗಬೇಕಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ