Category Archives: ಜೀವನದಿಗಳ ಸಾವಿನ ಕಥನ

ಜೀವನದಿಗಳ ಸಾವಿನ ಕಥನ – 10

– ಡಾ.ಎನ್. ಜಗದೀಶ್ ಕೊಪ್ಪ

ಇದು ಉತ್ಪ್ರೇಕ್ಷೆಯ ಮಾತಲ್ಲ. ಇಂದು ಜಗತ್ತಿನೆಲ್ಲೆಡೆ ಅಣೆಕಟ್ಟಿನ ಯೋಜನೆಯಿಂದ ಸಂತ್ರಸ್ತರಾದ ಬಹುತೇಕ ಮಂದಿ ಹೇಳಹಸರಿಲ್ಲದಂತೆ ಕಣ್ಮರೆಯಾಗಿದ್ದಾರೆ. ಹಲವರನ್ನು ನಗರದ ಕೊಳೆಗೇರಿಗಳು ನುಂಗಿಹಾಕಿದರೆ, ಮತ್ತೆ ಕೆಲವರು ನಗರದಿಂದ ನಗರಕ್ಕೆ ವಲಸೆ ಹೋಗುವ ಕಾರ್ಮಿಕರಾಗಿ ಪರಿವರ್ತನೆ ಹೊಂದಿದ್ದಾರೆ.

ಪುನರ್ವಸತಿ ಪ್ರದೇಶದಲ್ಲಿ ಸರಕಾರಗಳು ನೀಡಿದ ಪರಿಹಾರ ಧನದಿಂದ ಹೊಸ ಬದುಕನ್ನು ರೂಪಿಸಿಕೊಂಡವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವು ಪುನರ್ವಸತಿ ಪ್ರದೇಶಗಳಲ್ಲಿ ಸಂತ್ರಸ್ತರ ಬದಲು ಹೊರಗಿನಿಂದ ಬಂದವರೇ ಬದುಕುತ್ತಿದ್ದಾರೆ. ಒರಿಸ್ಸಾದ ರೆಂಗಿಲಿ ಅಣೆಕಟ್ಟಿನ ಪುನರ್ವಸತಿ ಪ್ರದೇಶದಲ್ಲಿ ಒಂದೇ ಒಂದು ಕುಟುಂಬವೂ ಇಲ್ಲದಿರುವುದು ಸಮೀಕ್ಷೆಯಿಂದ ಧೃಡಪಟ್ಟಿದೆ. ಇಲ್ಲಿನ ಬಹುತೇಕ ಫಲಾನುಭವಿಗಳು ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ.

ಚೀನಾ ಸರಕಾರ ಅಧಿಕೃತವಾಗಿ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ ಚೀನಾದಲ್ಲಿ ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದವರ ಪೈಕಿ ಶೇ.30ರಷ್ಟು ಮಂದಿ ಪರಿಹಾರ ಧನದಿಂದ ಹೊಸಬದುಕು ರೂಪಿಸಿಕೊಂಡಿದ್ದರೆ, ಶೇ.30 ರಷ್ಟು ಮಂದಿ ಸಂತೃಪ್ತ ಬದುಕು ರೂಪಿಸಲು ಹೆಣಗುತ್ತಿದ್ದಾರೆ. ಉಳಿದ ಶೇ.40 ರಷ್ಟು ಮಂದಿ ನಗರಗಳ ಕೊಳಗೇರಿಯಲ್ಲಿ ಬಡತನದ ರೇಖೆಯ ಕೆಳಗೆ ಬದುಕು ದೂಡುತ್ತಿದ್ದಾರೆ.

ಜಾಗತಿಕ ಮಟ್ಟದ ಸಮೀಕ್ಷೆಯಿಂದ ದೃಢ ಪಟ್ಟಿರುವ ಅಸಲಿ ಸಂಗತಿಯೆಂದರೆ, ಈವರೆಗೆ ಅಣೆಕಟ್ಟು ಯೋಜನೆಗಳಿಂದ ನೆಲೆ ಕಳೆದುಕೊಂಡವರ ಪೈಕಿ ಶೆ.80 ರಷ್ಟು ಅರಣ್ಯವಾಸಿಗಳು, ಕೃಷಿ ಕಾರ್ಮಿಕರು, ಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಇವರೆಲ್ಲಾ ಅರಣ್ಯದಲ್ಲಿ ದೊರೆಯುತ್ತಿದ್ದ ಪುಕ್ಕಟೆ ಉರುವಲು ಕಟ್ಟಿಗೆ, ಹಣ್ಣು ಹಂಪಲು, ಗೆಡ್ಡೆ-ಗೆಣಸು, ತಮ್ಮ ಜಾನುವಾರುಗಳಿಗೆ ಯಥೇಚ್ಛವಾಗಿ ದೊರೆಯುತ್ತಿದ್ದ ಮೇವು ಮತ್ತು ನೀರಿನಿಂದ ಬಡತನದ ನಡುವೆಯೂ ಸರಳ ಸಂತೃಪ್ತ ಜೀವನ ಸಾಗಿಸುತ್ತಿದರು. ಆದರೆ ಪರಿಹಾರ ಧನ ಪಡೆದು ಹೊಸ ಸ್ಥಳಗಳಿಗೆ ಸ್ಥಳಾಂತರಗೊಂಡ ನಂತರ ಪ್ರತಿಯೊಂದಕ್ಕೂ ಹಣ ತೆರಬೇಕಾದ ಅಸಹಾಯಕ ಸ್ಥಿತಿಯಲ್ಲಿ, ಇತ್ತ ಬದುಕಲೂ ಆಗದೆ, ಅತ್ತ ಸಾಯಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ.

ಅಣೆಕಟ್ಟು ಯೋಜನೆಗಳಿಂದ ಭೂಮಿ ಕಳೆದುಕೊಂಡವರಲ್ಲಿ ಬಹುತೇಕ ಅನಕ್ಷರಸ್ಥ ರೈತರೇ ಆಗಿರುವುದರಿಂದ, ಭ್ರಷ್ಟ ಅಧಿಕಾರಿಗಳು, ವಕೀಲರು, ರಿಯಲ್ ಎಸ್ಟೇಟ್ ಏಜೆಂಟರುಗಳ ದೊಡ್ಡ ಭೂಮಾಫಿಯಾವೊಂದು ಜಗತ್ತಿನೆಲ್ಲೆಡೆ ಈಗ ತಲೆಯೆತ್ತಿದೆ. ಯೋಜನೆಗಾಗಿ ಸರಕಾರ ನಿಗದಿ ಪಡಿಸಿದ ಭೂ ವಿಸ್ತೀರ್ಣ ಕುರಿತಂತೆ ಅಧಿಸೂಚನೆ ಹೊರಬೀಳುತ್ತಿದ್ದಂತೆ, ಅಣೆಕಟ್ಟು ಸ್ಥಳದ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಆಗಮಿಸುವ ಈ ಮಾಫಿಯಾ ತಂಡದ ಸದಸ್ಯರು, ರೈತರಿಗೆ ಹಣ ನೀಡಿ, ಅವರಿಂದ ಭೂಮಿ ಖರೀದಿಸಿ, ಅಧಿಕಾರಿಗಳೊಂದಿಗೆ ಶಾಮೀಲಾಗಿ, ಬಂಜರು ಭೂಮಿಯನ್ನು ಕೃಷಿ ಭೂಮಿಯೆಂದು ದಾಖಲೆಗಳನ್ನು ಪರಿವರ್ತಿಸಿ, ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.

Almatti-Dam

Almatti Dam

ಆಲಮಟ್ಟಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಬಾಗಲಕೋಟೆ ಸುತ್ತ-ಮುತ್ತ ಈ ರೀತಿ ದಂಧೆ ನಡೆದು ನೂರಾರು ವಕೀಲರು ಕೋಟ್ಯಾಧೀಶರಾಗಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಿಶ್ವಬ್ಯಾಂಕ್, ಕರ್ನಾಟಕ ಮತ್ತು ಕೇಂದ್ರ ಸರಕಾರಕ್ಕೆ ಯೋಜನೆ ಮುಗಿಯುವವರೆಗೂ, ಪುನರ್ವಸತಿ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಬಿ.ಎಂ.ಜಾಮ್‌ದಾರ್ ಎಂಬ ಪ್ರಾಮಾಣಿಕ ಅಧಿಕಾರಿಯನ್ನು ಬದಲಾಯಸಬಾರದೆಂದು ಷರತ್ತು ವಿಧಿಸಿತ್ತು. ಜಾಮ್‌ದಾರ್ ಅವಧಿಯಲ್ಲಿ ನಿಜವಾದ ಫಲಾನುಭವಿಗಳಿಗೆ ಪರ್ಯಾಯ ಭೂಮಿ ಹಾಗೂ ಪರಿಹಾರ ದೊರೆಯಿತು. ಇಂದಿಗೂ ಬಾಗಲಕೋಟೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಎಸ್.ಎಮ್. ಜಾಮ್‌ದಾರ್ ಎಂಬ ಪರಿಶುದ್ಧ ಹಸ್ತದ, ಜಿಗಟು ವ್ಯಕ್ತಿತ್ವದ ಐ.ಎ.ಎಸ್. ಅಧಿಕಾರಿ ದಂತಕತೆಯಾಗಿದ್ದಾರೆ.(ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಇವರ ಪಾತ್ರ ಮಹತ್ವದ್ದು.)

ನೆರೆಯ ಆಂದ್ರದ ಶ್ರೀಶೈಲ ಅಣೆಕಟ್ಟು ಯೋಜನೆಯ ಸಂದರ್ಭದಲ್ಲಿ (1981ರಲ್ಲಿ) ಭೂಮಿ ಕಳೆದುಕೊಂಡ 1 ಲಕ್ಷ ರೈತರಲ್ಲಿ ಪರ್ಯಾಯ ಕೃಷಿ ಭೂಮಿ ಸಿಗದೆ, ಶೇ.80 ರಷ್ಟು ರೈತರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ದೆಹಲಿ ಮೂಲದ ಲೋಕಾಯಣ್ ಸ್ವಯಂ ಸೇವಾ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ.

ಮಧ್ಯ ಪ್ರದೇಶದಲ್ಲಿಯೂ ಹರಿಯುವ ನರ್ಮದಾ ನದಿಗೆ 1980 ರಲ್ಲಿ ಬಾರ್ಗಿ ಅಣೆಕಟ್ಟು ನಿರ್ಮಿಸುವ ಸಂದರ್ಭದಲ್ಲಿ ಅಲ್ಲಿನ ಸರಕಾರ, ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಪ್ರತಿಯೊಂದು ಆದಿವಾಸಿ ಕುಟುಂಬಕ್ಕೆ 5 ಎಕರೆ ಪರ್ಯಾಯ ಭೂಮಿ ಒದಗಿಸುವುದಾಗಿ ಭರವಸೆ ನೀಡಿತ್ತು, ಇದನ್ನು ನಂಬಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಸರಕಾರ ನೀಡಿದ್ದು ಒಂದು ನಿವೇಶನ, ಒಂದಿಷ್ಟು ಹಣ ಸಹಾಯ ಮಾತ್ರ. ಯೋಜನೆಯಿಂದ ಮುಳುಗಡೆಯಾಗುವುದು 29 ಸಾವಿರ ಹೆಕ್ಟೇರ್ ಪ್ರದೇಶ ಎಂದು ಹೇಳಲಾಗಿತ್ತು. ಯೋಜನೆ ಪೂರ್ಣಗೊಂಡು ಜಲಾಶಯದಲ್ಲಿ ನೀರು ಸಂಗ್ರಹವಾದಾಗ, ಅರಣ್ಯ ಹಾಗೂ ಕೃಷಿ ಭೂಮಿ ಸೇರಿ ಮುಳುಗಡೆಯಾದದ್ದು ಒಟ್ಟು 87 ಸಾವಿರ ಹೆಕ್ಟೇರ್ ಪ್ರದೇಶ. ಸರಕಾರದ ಸುಳ್ಳು ಆಶ್ವಾಸನೆಗಳಿಂದ 1 ಲಕ್ಷ 14 ಸಾವಿರ ಮಂದಿ ನಿರ್ಗತಿಕರಾದರು.

ಪುನರ್ವಸತಿಗಾಗಿ ಗೋರಕ್‌ಪುರ ಎಂಬಲ್ಲಿ ಭೂಮಿ ನಿಗದಿ ಪಡಿಸಿ, ಅಲ್ಲಿ ವಸತಿ, ಶಾಲೆ, ಸಮುದಾಯಭವನ, ಆಸ್ಪತ್ರೆ ಎಲ್ಲವೂ ನಿರ್ಮಾಣವಾದವು. ಆದರೆ ಅಲ್ಲಿ ಬಂದು ವಾಸಿಸಿದವರು, ಇತರೆಡೆಯಿಂದ ಬಂದ ವಲಸೆ ಕಾರ್ಮಿಕರು.

ಒಟ್ಟಾರೆ ಈ ಯೋಜನೆಗಳಿಂದ ಸಂತ್ರಸ್ತರಾದವರು ಮತ್ತು ನಿರ್ಗತಿಕರಾದವರು ಕೆಳ ಮಧ್ಯಮ ವರ್ಗದ ರೈತರು, ಆದಿವಾಸಿಗಳು ಮಾತ್ರ. 1994 ರಲ್ಲಿ ತಾನು ಕೈಗೆತ್ತುಕೊಂಡಿದ್ದ 192 ಯೋಜನೆಗಳ ಕುರಿತಂತೆ, ಪುನರ್ವಸತಿ ಕುರಿತು ಪರಾಮರ್ಶಿಸಿದ ವಿಶ್ವಬ್ಯಾಂಕ್, ಪರಿಹಾರ ಹಾಗೂ ಪುನರ್ವಸತಿ ವಿಷಯಗಳಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಂಡಿದೆ. ಆದರೆ ಇದರ ಹೊಣೆಗಾರಿಕೆಯನ್ನು ಸ್ಥಳೀಯ ಸರಕಾರಗಳ ಮೇಲೆ ಹಾಕಿದೆ.

ಸ್ಥಳಾಂತರಗೊಂಡ ರೈತರ ದೊಡ್ಡ ಬವಣೆಯೆಂದರೆ ತಾವು ಪಾರಂಪರಿಕವಾಗಿ ತಮ್ಮ ಕೃಷಿಭೂಮಿಯಲ್ಲಿ ಬೆಳೆಯುತ್ತಿದ್ದ ಬೆಳೆಗಳನ್ನು ಬೆಳೆಯಲಾರದ ಅಸಹಾಯಕ ಸ್ಥಿತಿ. ಇವರಿಗೆ ಸರಕಾರಗಳು ಪರ್ಯಾಯವಾಗಿ ಭೂಮಿ ನೀಡಿದ್ದರೂ ಕೂಡ ಬಹುತೇಕ ಎಲ್ಲಾ ಭೂಮಿಗಳು ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಗಳು.

1992 ರಲ್ಲಿ ವಿಯೆಟ್ನಾಂನ ಹೊಯಾಬಿನ್ ಅಣೆಕಟ್ಟು ಕಟ್ಟಿದ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ಬೆಳೆಯಾಗಿದ್ದ ಭತ್ತದ ಬೆಳೆಯಿಂದ ರೈತರು ವಂಚಿತರಾದರು. ಅವರಿಗೆ ನೀಡಿದ್ದ ಬಂಜರು ಭೂಮಿಯಲ್ಲಿ ಮೆಕ್ಕೆಜೋಳ ಮಾತ್ರ ಬೆಳೆಯಲು ಸಾಧ್ಯವಾಗಿತ್ತು. ಅನ್ನವೇ ಅವರಿಗೆ ಪ್ರಮುಖ ಆಹಾರವಾಗಿದ್ದ ಸಂದರ್ಭದಲ್ಲಿ ಈ ಸಂತ್ರಸ್ತರು ಮೆಕ್ಕೆಜೋಳವನ್ನೇ ತಿಂದು ಬದುಕಬೇಕಾಯಿತು.

ಬಹುತೇಕ ಜಗತ್ತಿನೆಲ್ಲೆಡೆ ಕಂಡು ಬಂದಿರುವ ಒಂದು ಸಾಮ್ಯತೆಯೆಂದರೆ, ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದ ಜನತೆ ಹೊಸ ಜಾಗದ ಪರಿಸರ, ನೀರು, ಆಹಾರಕ್ಕೆ ಹೊಂದಿಕೊಳ್ಳಲಾಗದೆ ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿರುವುದು. ಈ ಕುರಿತಂತೆ ನಮ್ಮ ನರ್ಮದಾ ಅಣೆಕಟ್ಟು ಯೋಜನೆಯ ನಿರಾಶ್ರಿತರ ಕುರಿತ ವರದಿ ಚಿಂತಾಜನಕ ಮಾತ್ರವಲ್ಲ ಭಯಾನಕವೂ ಆಗಿದೆ. ಕರಿಬಾ ಎಂಬ ಮೂಲ ಗ್ರಾಮದಿಂದ ಸ್ಥಳಾಂತರಗೊಂಡ ಜನತೆ, ಕೇವಲ 2 ತಿಂಗಳ ಅವಧಿಯಲ್ಲಿ ನಿದ್ರಾಹೀನತೆ, ಸಿಡುಬುರೋಗಗಳಿಗೆ ತುತ್ತಾಗಿ ಒಂದು ವರ್ಷದಲ್ಲಿ 121 ಮಂದಿ ಮೃತಪಟ್ಟರು. ಇವರಲ್ಲಿ ಬಹಳಷ್ಟು ಮಂದಿ ಮಕ್ಕಳು ಮತ್ತು ವೃದ್ಧರೇ ಆಗಿದ್ದರು.  1984 ರಲ್ಲಿ ಪರ್ವೆಟ ಎಂಬ ಪುನರ್ವಸತಿ ಶಿಬಿರದಲ್ಲಿ 17 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 11 ಮಕ್ಕಳು 4 ವರ್ಷಗಳ ಒಳಗಿನವರಾಗಿದ್ದರು. ಇವುಗಳ ಜೊತೆಗೆ ಬಹುತೇಕ ನಿರಾಶ್ರಿತರಿಗೆ ಅಣೆಕಟ್ಟು ಕೆಳಗಿನ ನದಿ ಪಾತ್ರದ ದಡದಲ್ಲಿ ಪುನರ್ವಸತಿ ಕಲ್ಪಿಸಿದ್ದು, ಜಲಾಶಯದಿಂದ ನೀರು ಹೊರಬಿಟ್ಟ ವೇಳೆ ಉಂಟಾಗುವ ಪ್ರವಾಹದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

The Sardar Sarovar Dam, partially completed in August 2008

ಸ್ಥಳಾಂತರದಿಂದ ಆದ ಮತ್ತೊಂದು ದೊಡ್ಡ ಅನಾಹುತವೆಂದರೆ ಅಗೋಚರವಾಗಿ ಸಂಭವಿಸಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳು. ಇಂದಿಗೂ ಕೂಡ ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದೆ. ಆದರೆ  ಸಂತ್ರಸ್ತರಿಗೆ ಪರಿಹಾರದ ಹಣವನ್ನು ನೀಡುವಾಗ ಪುರುಷರನ್ನು ಮಾತ್ರ ಗಣನೆಗೆ ತೆಗೆದುಕೊಂಡ ಪರಿಣಾಮವಾಗಿ, ಕೆಲವೊಮ್ಮೆ ಯಜಮಾನನ ದುಶ್ಚಟ, ವ್ಯಸನಗಳ ಕಾರಣದಿಂದ ಕುಟುಂಬದ ಮಹಿಳೆಯರು, ಮಕ್ಕಳು ಹಸಿವಿನಿಂದ ಬಳಲುವಂತಾಗಿದೆ. ಜೊತೆಗೆ ತಾವು ಬದುಕಿದ್ದ ಹಳ್ಳಿಯಲ್ಲಿ ಆಚರಿಸುತ್ತಿದ್ದ ಹಬ್ಬ, ಸಾಂಸ್ಕೃತಿಕ ಆಚರಣೆಗಳನ್ನು ಬಿಟ್ಟು, ಹೊಸಜಾಗದಲ್ಲಿ ಇವರಂತಯೇ ಸ್ಥಳಾಂತರಗೊಂಡ ಬೇರೆ ಹಳ್ಳಿಗಳ, ಬೇರೆ ಧರ್ಮ, ಜಾತಿಯ ಅಪರಿಚಿತ ಜನರ ಜೊತೆ ಒಟ್ಟಿಗೆ ಬದುಕಬೇಕಾದ ಸಂದರ್ಭದಲ್ಲಿ ಆವರಿಸಿಕೊಂಡ ಖಿನ್ನತೆಯಿಂದ ಬಳಲುತ್ತಿದ್ದಾರೆ.

ಈ ಕುರಿತಂತೆ ಒರಿಸ್ಸಾದ ರೆಂಗಿಲಿ ಅಣೆಕಟ್ಟು ಯೋಜನೆಯ ನಿರಾಶ್ರಿತರ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿರುವ ಒರಿಸ್ಸಾದ ಸಮಾಜ ಶಾಸ್ತ್ರಜ್ಞರಾದ ಎನ್.ಕೆ. ಬೆಹುರ ಮತ್ತು ಪಿ.ಕೆ.ನಾಯಕ್, ಪರಿಹಾರದ ಹಣ ಹಂಚಿಕೆಯ ಸಂಬಂಧ ಕುಟುಂಬ ಸದಸ್ಯರಲ್ಲಿ ಕಲಹ, ಒಡೆದುಹೋದ ಅವಿಭಕ್ತ ಕುಟುಂಬ ಪದ್ಧತಿ, ಹೊಸ ಪರಿಸರದಲ್ಲಿ ಪೋಷಿಸಿಕೊಂಡು ಬಂದಿದ್ದ ಜಾತಿ ಪದ್ಧತಿಯನ್ನು ಮುಂದುವರಿಸಲಾಗದ ಅಸಹಾಯಕತೆ, ಪತನಗೊಂಡ ಅವರ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಇವೆಲ್ಲವನ್ನೂ ಗುರುತಿಸಿದ್ದಾರೆ. ಹಾಗಾಗಿ ಒಂದು ಯೋಜನೆಯ ಸಫಲತೆಯ ಹಿಂದೆ ಅನೇಕ ವಿಕಾರ ಮತ್ತು ವಿಷಾದದ ಮುಖಗಳಿವೆ ಎಂಬುದನ್ನು ಅಭಿವೃದ್ಧಿಯ ಬಾಲ ಬಡುಕರು ಚಿಂತಿಸಬೇಕಾಗಿದೆ.

 (ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ ಮತ್ತು ರವಿ ಕೃಷ್ಣಾರೆಡ್ಡಿ

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 9

-ಡಾ.ಎನ್.ಜಗದೀಶ್ ಕೊಪ್ಪ

ಅಣೆಕಟ್ಟುಗಳು ಜಗತ್ತಿನೆಲ್ಲೆಡೆ ನದಿಗಳನ್ನು ಮಾತ್ರ ಕೊಲ್ಲಲಿಲ್ಲ. ಇದರ ಜೊತೆಜೊತೆಗೆ ಮನುಕುಲದ ಪೂವರ್ಿಕರು ಎಂದೇ ಜಾಗತಿಕ ಸಮುದಾಯ ನಂಬಿಕೊಂಡು ಬಂದಿದ್ದ, ಅರಣ್ಯವಾಸಿಗಳಾದ ಆದಿವಾಸಿ ಬುಡಕಟ್ಟು ಜನಾಂಗವನ್ನು ಕೂಡ ಹೇಳ ಹಸರಿಲ್ಲದಂತೆ ನಿರ್ನಾಮ ಮಾಡಿದವು.

ಅಣೆಕಟ್ಟುಗಳ ನಿಮರ್ಾಣದ ಇತಿಹಾಸದಲ್ಲಿ, ಗ್ವಾಟೆಮಾಲದಲ್ಲಿ ನಡೆದ ನರಮೇಧ ನಾಗರಿಕ ಜಗತ್ತು ತಲೆ ತಗ್ಗಿಸುವಂತಹದ್ದು. 1980ರ ದಶಕದಲ್ಲಿ ನಡೆದ ಈ ದುರಂತ ಘಟನೆ, ಅಭಿವೃದ್ಧಿಯ ವಾರಸುದಾರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿ ದಾಖಲಾಗಿದೆ.

ಗ್ವಾಟೆಮಾಲದ ರಿಯೊನಿಗ್ರೊ ಎಂಬ ಅರಣ್ಯದಲ್ಲಿನ ಆದಿವಾಸಿಗಳ ವಸತಿ ಪ್ರದೇಶದಲ್ಲಿ ನಡೆದ 376 ಮಂದಿಯ (ಮಹಿಳೆಯರೂ, ಪುರುಷರು, ಮಕ್ಕಳೂ ಸೇರಿದಂತೆ) ನರಮೇಧ ಅಲ್ಲಿನ ಮಾಯ ಅಚಿ ಎಂಬ ಬುಡಕಟ್ಟು ಜನಾಂಗಕ್ಕೆ ಇಂದಿಗೂ ದುಸ್ವಪ್ನವಾಗಿ ಕಾಡುತ್ತಿದೆ.

ವಿಶ್ವಬ್ಯಾಂಕ್, ಇಂಟರ್ ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಇಟಲಿ ಸರಕಾರದ ಧನ ಸಹಾಯದೊಂದಿಗೆ ಗ್ವಾಟೆಮಾಲ ಸರಕಾರ ಚಿಕ್ಸೊಯ್ ಅಣೆಕಟ್ಟು ನಿಮರ್ಿಸಲು 1976 ರಲ್ಲಿ ಯೋಜನೆ ರೂಪಿಸಿದಾಗ ನರಮೇಧದ ಅಧ್ಯಾಯ ಪ್ರಾರಂಭವಾಯಿತು.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe1976 ರಲ್ಲಿ ಸರಕಾರದ ಅಧಿಕಾರಿಗಳು ಹಾಗೂ ವಿದ್ಯುತ್ ಇಲಾಖೆಯ ಇಂಜಿನಿಯರ್ಗಳು ನೇರವಾಗಿ ಹೆಲಿಕಾಪ್ಟರ್ನಲ್ಲಿ ರಿಯೊನಿಗ್ರೊ ಗ್ರಾಮಕ್ಕೆ ಬಂದಿಳಿದು, ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಎಲ್ಲರೂ ಜಾಗ ಖಾಲಿ ಮಾಡಬೇಕು ಎಂದು ಹೇಳಿದಾಗಲೇ ಸರಕಾರ ಮತ್ತು ಆದಿವಾಸಿಗಳ ನಡುವೆ ಸಂಘರ್ಷ ಶುರುವಾಯಿತು. ಸರಕಾರವು ಇವರಿಗೆ ಕೊಡಲು ನಿರ್ಧರಿಸಿದ ಪರಿಹಾರದ ಮೊತ್ತ, ಹೊಸದಾಗಿ ತೋರಿಸಿದ ಸ್ಥಳದ ಬಗ್ಗೆ ಅತೃಪ್ತಿಗೊಂಡ ಅಲ್ಲಿನ ಮೂಲನಿವಾಸಿಗಳು ಸ್ಥಳಾಂತರಗೊಳ್ಳಲು ನಿರಾಕರಿಸಿದರು. ಹಲವಾರು ಬಾರಿ ನಡೆದ ಸಂಧಾನ ಸಭೆಗಳು ವಿಫಲಗೊಂಡ ನಂತರ ಸರಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಯಿತು. ಇದಕ್ಕಾಗಿ ಸರಕಾರ ತುಳಿದ ಹಾದಿ ಮಾತ್ರ ಅನೈತಿಕ ಮಾರ್ಗವಾಗಿತ್ತು. ನಿರಂತರ 4 ವರ್ಷಗಳ ಸಂಘರ್ಷಣೆಯ ನಂತರ, ಸರಕಾರ ಗ್ವಾಟೆಮಾಲದಲ್ಲಿ ನಡೆಯುತ್ತಿದ್ದ ಗೆರಿಲ್ಲಾ ಬಂಡುಕೋರರಿಗೆ ಆಹಾರ, ಆಶ್ರಯ ನೀಡುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಮೂಲನಿವಾಸಿಗಳಿಗೂ ಬಂಡುಕೋರರು ಎಂಬ ಹಣೆಪಟ್ಟಿ ಹಚ್ಚಿತು.

1980ರ ಮಾರ್ಚ್ ತಿಂಗಳಲ್ಲಿ ಆದಿವಾಸಿಗಳ ಗ್ರಾಮಕ್ಕೆ ಬಂದ ಮೂವರು ಮಿಲಿಟರಿ ಪೋಲೀಸರು, ಅಣೆಕಟ್ಟು ನಿಮರ್ಾಣದ ಸ್ಥಳದಿಂದ ಕಬ್ಬಿಣ ಕಳುವಾಗಿದೆ ಎಂಬ ನೆಪದಲ್ಲಿ ಕೆಲವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಬಂಧನಕ್ಕೆ ವಿರೋಧ ವ್ಯಕ್ತ ಪಡಿಸಿದ ನಿವಾಸಿಗಳು ಪ್ರತಿದಾಳಿ ನಡೆಸಿದರು. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳುವ ಭಯದಲ್ಲಿ ಓರ್ವ ಪೋಲೀಸ್ ನದಿಯಲ್ಲಿ ಮುಳುಗಿ ಸತ್ತ.

ಈ ಘಟನೆಯ ನಂತರ, ನಾಲ್ಕು ತಿಂಗಳ ಕಾಲ ತಣ್ಣಗಿದ್ದ ಸರಕಾರ ಮತ್ತೆ ಸಂಧಾನದ ನೆಪದಲ್ಲಿ, ಇಬ್ಬರು ಬುಡಕಟ್ಟು ಜನಾಂಗದ ನಾಯಕರನ್ನು ತಮ್ಮ ದಾಖಲೆಗಳ ಸಮೇತ ಅಣೆಕಟ್ಟು ಸ್ಥಳಕ್ಕೆ ಬರಲು ಆಹ್ವಾನಿಸಿತು. ಅವರಿಂದ ಬಲವಂತವಾಗಿ ಸಹಿ ಪಡೆದ ಸರಕಾರ, ಆ ಇಬ್ಬರು ನಾಯಕರನ್ನು ಒಂದುವಾರ ಕಾಲ ಗುಪ್ತ ಸ್ಥಳದಲ್ಲಿ ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿ ಕೊಂದು ಹಾಕಿತು.

ಈ ಘಟನೆ ನಡೆದ ಎರಡು ವರ್ಷಗಳ ನಂತರ ಸರಕಾರ, 1982ರ ಫೆಬ್ರವರಿ ತಿಂಗಳಿನಲ್ಲಿ 73 ಮಂದಿ ಮಹಿಳೆಯರು, ಪುರುಷರು, ಎಕ್ಯೂಕ್ ಎಂಬ ನಗರಕ್ಕೆ ಬಂದು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಆದೇಶ ಹೊರಡಿಸಿತು. ರಿಯೊನಿಗ್ರೊ ಹಳ್ಳಿಯಿಂದ ಮಿಲಿಟರಿ ಪೋಲೀಸರ ಕಛೇರಿಗೆ ಹೋದ 73 ಮಂದಿಯಲ್ಲಿ ಬದುಕುಳಿದು, ಹಳ್ಳಿಗೆ ಹಿಂದಿರುಗಿದ್ದು ಏಕೈಕ ಮಹಿಳೆ ಮಾತ್ರ. ಗ್ವಾಟೆಮಾಲ ಸರಕಾರದ ಸಿವಿಲ್ ಡಿಫೆನ್ಸ್ ಪೆಟ್ರೊಲ್ ಎಂಬ ಮಿಲಿಟರಿ ಪೋಲಿಸ್ ಪಡೆ ಎಲ್ಲರನ್ನೂ ನಿರ್ಧಕ್ಷಿಣ್ಯವಾಗಿ ಕೊಂದುಹಾಕಿತು. ಇದು ಸಾಲದೆಂಬಂತೆ ಅದೇ 1982ರ ಮಾರ್ಚ್ 13 ರಂದು 10 ಸೈನಿಕರು ಹಾಗೂ 25 ಪೋಲೀಸ್ ತುಕಡಿಯೊಂದಿಗೆ ಬಂದಿಳಿದ ನರಹಂತಕರು ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಬೇಟೆಯಾಡಿದರು. ಗಂಡಸರು ಮತ್ತು ಮಹಿಳೆಯರನ್ನು ಬಂದೂಕಿನ ಹಿಡಿಯಿಂದ, ಲಾಠಿಯಿಂದ ಬಡಿದು ಕೊಂದರೆ, ಮಕ್ಕಳ ಕೊರಳಿಗೆ ಹಗ್ಗ ಹಾಕಿ ಮರಕ್ಕೆ ನೇತುಹಾಕುವುದರ ಮೂಲಕ ಕೊಂದರು. 107 ಹಸುಳೆಗಳನ್ನು ಈ ಸಂದರ್ಭದಲ್ಲಿ ಹೊಸಕಿ ಹಾಕಲಾಯಿತು. ಈ ನರಮೇಧದಲ್ಲಿ ಬದುಕುಳಿದದ್ದು ಇಬ್ಬರು ಮಹಿಳೆಯರು ಮಾತ್ರ.

ನಾಗರಿಕ ಜಗತ್ತಿನ ಸಂಪರ್ಕವಿರಲಿ, ಕಾನೂನು ಮತ್ತು ಮಾನವ ಹಕ್ಕುಗಳ ಬಗ್ಗೆ ಅರಿವಿರದ ಅಮಾಯಕ ಮೂಲನಿವಾಸಿಗಳ ನೋವಿನ ದೌರ್ಜನ್ಯಕ್ಕೆ ಪ್ರತಿಭಟಿಸಿ ಆಗ ಗ್ವಾಟೆಮಾಲದಲ್ಲಿ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಸರಕಾರವನ್ನು ಎದುರು ಹಾಕಿಕೊಳ್ಳುವ ಶಕ್ತಿ ಯಾರಿಗೂ ಇರಲಿಲ್ಲ. ಈ ನರಮೇಧ ಘಟನೆ ಸಂಭವಿಸಿದ ಎರಡು ತಿಂಗಳ ನಂತರ, ಮತ್ತೆ ದಾಳಿನಡೆಸಿದ ಮಿಲಿಟರಿ ಪೋಲಿಸರು 35 ಮಕ್ಕಳು ಸೇರಿದಂತೆ, 95 ಮಂದಿ ಆದಿವಾಸಿಗಳನ್ನು, ತಾವು ಬದುಕಿದ್ದ  ಹಳ್ಳಿಯಲ್ಲೇ ಸಾಲಾಗಿ ನಿಲ್ಲಿಸಿ ಹಣೆಗೆ ಗುಂಡಿಕ್ಕಿ ಕೊಂದರು. ಕೊನೆಗೆ ಗ್ವಾಟೆಮಾಲ ಸರಕಾರದ ವಿರುದ್ಧ ದನಿ ಎತ್ತಿದ ಎಡಪಂಥೀಯ ಪಕ್ಷದ ಕಾರ್ಯಕರ್ತರು, ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿ ಈ ನರಮೇಧದ ಬಗ್ಗೆ ವಿಶ್ವದ ಗಮನ ಸೆಳೆದರು. ಈ ಸಂದರ್ಭದಲ್ಲಿ ಅಮೆರಿಕಾದ ಸ್ವಯಂ ಸೇವಾ ಸಂಸ್ಥೆ ವಿಟ್ನೆಸ್ ಫಾರ್ ದಿ ಪೀಪಲ್ಸ್ ರಂಗಪ್ರವೇಶ ಮಾಡಿ ಈ ಅಣೆಕಟ್ಟು ಯೋಜನೆಗೆ ಹಣಕಾಸಿನ ನೆರವು ನೀಡಿದ ವಿಶ್ವಬ್ಯಾಂಕ್ ಸೇರಿದಂತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ವೇಳೆಗಾಗಲೇ ಹತ್ಯೆಯಾದ 369 ಆದಿವಾಸಿಗಳು ಸೇರಿದಂತೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ 72 ಸಾವಿರ ನಾಗರೀಕರು 1980ರಿಂದ 1984ರ ಅವಧಿಯೊಳಗೆ ಹತ್ಯೆಯಾಗಿದ್ದರು, ಇಲ್ಲವೆ ಕಾಣೆಯಾಗಿದ್ದರು. ಸ್ವಯಂ ಸೇವಾ ಸಂಸ್ಥೆ ನಡೆಸಿದ ತನಿಖೆಯ ಮೂಲಕ ಧೃಡಪಟ್ಟ ಅಸಲಿ ಸಂಗತಿಯೆಂದರೆ ಈ ನರಮೇಧ ಮತ್ತು ಸಂಘರ್ಷದ ಹಿಂದೆ ಸರಕಾರದ ಹಲವಾರು ಅಧಿಕಾರಿಗಳ ಕೈವಾಡವಿದ್ದು, ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾಗುವ ಮಂದಿಗೆ ನೀಡಲಾಗುವ ಪರಿಹಾರವನ್ನು ತಮ್ಮದಾಗಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಗಳೇ ಗಲಾಟೆಗೆ ಪ್ರಚೋದನೆ ನೀಡಿ ಫಲಾನುಭವಿಗಳನ್ನು ಹತ್ಯೆಗೈದಿದ್ದರು.

ಮೂಲತಃ ಈ ಅಣೆಕಟ್ಟು ಯೋಜನೆಯ ರೂಪು ರೇಷೆ ಸುಳ್ಳಿನ ಕಂತೆಗಳ ಮೇಲೆ ರೂಪುಗೊಂಡಿತ್ತು. ಈ ಅಣೆಕಟ್ಟಿನ ನೀಲಿ ನಕಾಶೆಯನ್ನು ಸಿದ್ದಪಡಿಸಿದ್ದು ಜರ್ಮನಿ ಮೂಲದ ಲ್ಯಾಮ್ ಕನ್ಸಾರ್ಟಿಯಮ್ ಎಂಬ ಸಂಸ್ಥೆ. ಇದರ ಅಂಗ ಸಂಸ್ಥೆಯಾದ ಲ್ಯಾಮಿಯರ್ ಇಂಟರ್ನ್ಯಾಷನಲ್ ಎಂಬ ಸಂಸ್ಥೆ ಪರಿಸರ ಹಾನಿ ಹಾಗೂ ಯೋಜನೆಯಿಂದ ನಿರ್ಗತಿಕರಾಗುವ ಸಂಖ್ಯೆ ಕುರಿತಂತೆ ವರದಿ ಸಿದ್ಧಪಡಿಸಿತ್ತು. ಈ ವರದಿಯ ಪ್ರಕಾರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಹಳ್ಳಿಗಳಿಂದ ನಿರ್ವಸತಿಗರಾಗುವ ಸಂಖ್ಯೆ ಕೇವಲ 1,500 ಆದಿವಾಸಿಗಳು ಮಾತ್ರ. ವಾಸ್ತವವಾಗಿ 18 ಸಾವಿರ ಮಂದಿ ಆದಿವಾಸಿಗಳು ಅರಣ್ಯದಲ್ಲಿ ವಾಸವಾಗಿದ್ದರು. ವರದಿಯಲ್ಲಿ ಕೆಲವು ಗ್ರಾಮಗಳಲ್ಲಿ ಜನವಸತಿ ಇಲ್ಲ ಎಂದು ನಮೂದಿಸಲಾಗಿತ್ತು.

ಈ ಅಣೆಕಟ್ಟಿನ ವಿವಾದದಿಂದಾಗಿ ಚಿಕ್ಸೊಯ್ ನರಮೇಧ ಹೆಸರಿನಿಂದ ಪ್ರಸಿದ್ಧವಾದ ಈ ಘಟನೆಯ ಕುರಿತಂತೆ 1979ರಿಂದ 1991ರವರೆಗೆ ಸುಮಾರು 12 ವರ್ಷಗಳ ಕಾಲ ವಿಶ್ವಬ್ಯಾಂಕ್ ಆಗಲಿ ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ ಆಗಲಿ ಇಟಲಿ ಸರಕಾರವಾಗಲಿ ತುಟಿ ಬಿಚ್ಚಲಿಲ್ಲ.

ಅಣೆಕಟ್ಟು ಕಾಮಗಾರಿ ನಡೆದ ಸಮಯದಲ್ಲಿ ವರ್ಷವೊಂದರಲ್ಲಿ ಕನಿಷ್ಠ 3 ತಿಂಗಲ ಕಾಲ ವಿಶ್ವಬ್ಯಾಂಕ್ನ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಕಾಮಗಾರಿಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಆದಿವಾಸಿಗಳ ನರಮೇಧಕ್ಕೆ ಮೌನ ಸಾಕ್ಷಿಯಾಗಿದ್ದರು. 1985ರಲ್ಲಿ ಈ ಅಣೆಕಟ್ಟು ಯೋಜನೆಗೆ ಹಣ ಸಾಲದಾದಾಗ ಇಷ್ಟೆಲ್ಲ ಘಟನೆಗಳು ಸಂಭವಿಸಿದ್ದರೂ ಕೂಡ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ನೀಡಿತು. ಈ ಸಾಲ ನೀಡಿಕೆಯ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿತ್ತು. ಏಕೆಂದರೆ ತಾಂತ್ರಿ ಸಹಾಯ ಮತ್ತು ನಿರ್ಮಾಣ ಗುತ್ತಿಗೆಯನ್ನು ಸ್ವಿಡ್ಜರ್‌ಲ್ಯಾಂಡ್ ಮೂಲದ ಮೋಟಾರ್ ಕೊಲಂಬಸ್ ಹಾಗೂ ಅಮೆರಿಕಾದ ಇಂಟರ್ನ್ಯಾಷನಲ್ ಎಂಬ ಬಹು ರಾಷ್ಟ್ರೀಯ ಕಂಪನಿಗಳು ವಹಿಸಿಕೊಂಡಿದ್ದವು.

ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರೆ 1991ರಲ್ಲಿ ಅಣೆಕಟ್ಟು ಕಾಮಗಾರಿ ಮುಕ್ತಾಯಗೊಂಡಾಗ ಸಾಲ ನೀಡಿದ್ದ ವಿಶ್ವಬ್ಯಾಂಕ್ ತಾನು ನೀಡಿದ್ದ ಮುಕ್ತಾಯ ಪ್ರಮಾಣ ಪತ್ರದಲ್ಲಿ “ಗ್ವಾಟೆಮಾಲದ ಚಿಕ್ಸೊಯ್ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದ 1,500 ಮಂದಿ ಆದಿವಾಸಿಗಳು ಘರ್ಷಣೆಯಲ್ಲಿ ಮೃತಪಟ್ಟಿದ್ದು, ಯೋಜನೆ ವಿಳಂಬವಾಗಲು ಸ್ಥಳೀಯರ ಪ್ರತಿರೋಧ ಕಾರಣ,” ಎಂದು ತಿಳಿಸಿ, ಸಂಘರ್ಷದಲ್ಲಿ ಮೃತಪಟ್ಟ ಪುನರ್ವಸತಿ ಉಸ್ತುವಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳಿಗೆ ಶ್ರದ್ಧಾಂಜಲಿ ಕೂಡ ಅರ್ಪಿಸಿತ್ತು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಅಮೆರಿಕಾದ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ “ವಿಟ್ನೆಸ್ ಫಾರ್ ದಿ ಪೀಪಲ್ಸ್” 1996ರ ತನ್ನ ವಾರ್ಷಿಕ ವರದಿಯಲ್ಲಿ ಘಟನೆಯ ಬಗ್ಗೆ ಹೀಗೆ ನಮೂದಿಸಿತ್ತು: “ಗ್ವಾಟೆಮಾಲ ದುರಂತದ ಬಗ್ಗೆ ವಿಶ್ವಬ್ಯಾಕ್ಗೆ ಅರಿವಿತ್ತು. ಸಾಲವನ್ನು ವಿಸ್ತರಿಸುವ ಸಮಯದಲ್ಲಿ ಅಲ್ಲಿ ನಡೆದ ಹಿಂಸೆ, ನರಮೇಧದ ಬಗ್ಗೆ ಗೊತ್ತಿಲ್ಲವೆಂದರೆ ಇದು ವಿಶ್ವಬ್ಯಾಂಕ್ನ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ. ಈ ಹಿಂಸೆಯ ಹಿಂದೆ ವಿಶ್ವಬ್ಯಾಂಕ್ನ ಕೈವಾಡವಿತ್ತು ಎಂದು ನಾವು ನಂಬಬೇಕಾಗುತ್ತದೆ.”

ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಕನಸಿನ ಯೋಜನೆಗೆ ಅಡ್ಡಿಯಾಗುವ ಅಮಾಯಕರನ್ನು ಹೊಸಕಿ ಹಾಕಲು ಸೂತ್ರದಾರನಂತೆ ತೆರೆಯ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅಮೆರಿಕಾದ ಕೈಗೂಸಿನಂತೆ ವರ್ತಿಸುವ ವಿಶ್ವಬ್ಯಾಂಕಿನ ವಿಶ್ವ ರೂಪಕ್ಕೆ ಗ್ವಾಟೆಮಾಲ ದುರಂತಕ್ಕಿಂತ ಬೇರೊಂದು ಪುರಾವೆ ಬೇಕಿಲ್ಲ.

(ಮುಂದುವರಿಯುವುದು)

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 8

ಡಾ.ಎನ್.ಜಗದೀಶ್ ಕೊಪ್ಪ

ಅಭಿವೃದ್ಧಿ ಮತ್ತು ಆಧುನಿಕತೆ ಮನುಷ್ಯನನ್ನು ನೆಲದ ಸಂಸ್ಕೃತಿಯಿಂದ ದೂರ ಮಾಡಿದ್ದು ಮಾತ್ರವಲ್ಲದೆ, ಪ್ರಕೃತಿಯ ಕೊಡುಗೆಗಳಾದ ನೆಲ- ಜಲ, ಗಾಳಿ, ಗಿಡ-ಮರ ಇವೆಲ್ಲವೂ ತನ್ನ ಉಪಭೋಗಕ್ಕಾಗಿ ಇರುವ ಪುಕ್ಕಟೆ ಸವಲತ್ತುಗಳು ಎಂಬ ಅಹಂ ಅನ್ನು ಅವನೆದೆಗೆ ಕಸಿ ಮಾಡಿಬಿಟ್ಟವು. ಹೀಗಾಗಿ 21 ನೇ ಶತಮಾನದ ನಾಗರಿಕರಿಗೆ ಕಾಡು, ಬೆಟ್ಟ, ಗುಡ್ಡ, ಕಣಿವೆ, ಕಂದರಗಳಲ್ಲಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ನಿಸರ್ಗದ ಮಕ್ಕಳಾದ ಆದಿವಾಸಿಗಳೆಂದರೆ ತಾತ್ಸಾರ.

ಇವತ್ತಿನ ಮೂಲ ಮಂತ್ರವಾಗಿರುವ ಅಭಿವೃದ್ಧಿಯ ನಾಗಾಲೋಟಕ್ಕೆ ಸಿಕ್ಕಿ ತತ್ತರಿಸಿದವರೇ ಈ ಮಣ್ಣಿನ ಮಕ್ಕಳು. ಜಗತ್ತಿನೆಲ್ಲೆಡೆ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಚರಿತ್ರೆಯಲ್ಲಿ ಈ ಮೂಕ ಮಕ್ಕಳ ಅರಣ್ಯ ರೋದನವಿದೆ, ರಕ್ತ ಸಿಕ್ತ ಅಧ್ಯಾಯದ ಭಾಗಗಳಿವೆ.

ಭಾರತ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಈವರೆಗೆ ಅಣೆಕಟ್ಟು ಯೋಜನೆಗಳಿಂದ ನಿರ್ವಸತಿಗರಾದವರಲ್ಲಿ ಶೇ.40 ರಷ್ಟು ಆದಿವಾಸಿ ಜನರಿದ್ದಾರೆ. ನಾವು ಅರಿಯಬೇಕಾದ ಸತ್ಯವೇನೆಂದರೆ, ಭಾರತದ ಜನಸಂಖ್ಯೆಯ ಶೇ.6 ರಷ್ಟು ಮಂದಿ ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳಿದ್ದಾರೆ. ಇಂದಿನ ಬಹುತೇಕ ಅಭಿವೃದ್ಧಿ ಯೋಜನೆಗೆ ಬಲಿಪಶುಗಳಾಗುತ್ತಿರುವವರಲ್ಲಿ ಈ ನತದೃಷ್ಟರು ಮುಂಚೂಣಿಯಲ್ಲಿದ್ದಾರೆ. ಇಂತಹ ದುರಂತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಪಿಲಿಫೈನ್ಸ್ ದೇಶದಲ್ಲಿರುವ 47 ಲಕ್ಷ ಆದಿವಾಸಿಗಳಲ್ಲಿ 58 ಸಾವಿರ ಮಂದಿಯನ್ನು ಹಾಗೂ ವಿಯೆಟ್ನಾಂನಲ್ಲಿ 1 ಲಕ್ಷದ 22 ಸಾವಿರ ಮಂದಿಯನ್ನು ಅಣೆಕಟ್ಟು ಪ್ರದೇಶಗಳಿಂದ ಒಕ್ಕಲೆಬ್ಬಿಸಲಾಗಿದೆ.

ನಾಗರೀಕತೆಯ ಸೋಂಕಿಲ್ಲದೆ, ಆಧುನಿಕ ಬದುಕಿನ ಕ್ರಮಗಳಿಗಿಂತ ವಿಭಿನ್ನವಾಗಿ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಈ ಜನತೆ ತಮ್ಮ ಮೂಲ ನೆಲೆಗಳಿಂದ ಪಲ್ಲಟಗೊಂಡ ನಂತರ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಆಧುನಿಕ ಬದುಕಿನ ಆಹಾರ, ಉಡುಗೆ-ತೊಡುಗೆ, ಆಚಾರ-ವಿಚಾರಗಳಿಗೆ ಹೊಂದಿಕೊಳ್ಳಲಾಗದ ಬುಡಕಟ್ಟುಗಳ ಸಂತತಿ ನಶಿಸಿ ಹೋಗುತ್ತಿದೆ. ಅನೇಕ ಸರಕಾರಗಳು ಇವರಿಗೆ ಮನೆ, ಕೃಷಿಭೂಮಿ ಮುಂತಾದ ಸವಲತ್ತುಗಳನ್ನು ನೀಡಿದ್ದರೂ ತಾವು ಹಿಂದೆ ವಾಸಿಸುತ್ತಿದ್ದ ಭೂಮಿಯ ಬಗ್ಗೆ, ಅಲ್ಲಿನ ಗಿಡ-ಮರಗಳ ಬಗೆಗಿನ ವಿಚಿತ್ರ ಆಕರ್ಷಣೆಯ ಜೊತೆಗೆ ಪ್ರತಿಯೊಂದಕ್ಕೂ ದೈವಿಕ ಶಕ್ತಿ ಇದೆ ಎಂದು ನಂಬಿ ಪೂಜಿಸಿಕೊಂಡು ಬಂದಿದ್ದ ಪದ್ಧತಿ ಇವುಗಳಿಂದ ವಂಚಿತರಾದದ್ದೇ ಬುಡಕಟ್ಟು ಜನಾಂಗಕ್ಕೆ ದೊಡ್ಡ ಆಘಾತವಾಗಿದೆ. ಮಾನಸಿಕ ಒತ್ತಡ ಮತ್ತು ರೋಗ, ಅನೇಕ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿರುವ ಈ ಜನತೆ ನಿಸರ್ಗದಲ್ಲಿ ದೊರೆಯುತ್ತಿದ್ದ ಗಿಡ ಮೂಲಿಕೆಗಳಿಂದ ವಂಚಿತರಾಗಿ ಸಾವಿಗೆ ಶರಣಾಗುತ್ತಿದ್ದಾರೆ.

ಇದಕ್ಕೊಂದು ಜ್ವಲಂತ ಉದಾಹರಣೆ ಎಂದರೆ ಬ್ರೆಜಿಲ್ ದೇಶದ ಮೂಲ ನಿವಾಸಿಗಳ ಅವಸಾನದ ಕಥನ.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boeದಕ್ಷಿಣ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಬ್ರೆಜಿಲ್ ಇಂದಿಗೂ ಮೂಲ ನಿವಾಸಿಗಳ ಸಂಸ್ಕೃತಿಯಿಂದ ಪ್ರೇರಿತವಾದ ನಾಡು. ಅಲ್ಲಿನ ಜನತೆಯ ನಡೆ-ನುಡಿ, ಆಹಾರ, ಉಡುಪು ಎಲ್ಲವುಗಳಲ್ಲಿ ಬುಡಕಟ್ಟು ಜನಾಂಗದ ಸಂಸ್ಕೃತಿ ಮತ್ತು ಆಚರಣೆಗಳು ಮಿಳಿತಗೊಂಡಿವೆ. ಕಳೆದ 40 ವರ್ಷಗಳ ಅವಧಿಯಲ್ಲಿ ಬ್ರೆಜಿಲ್‌ನಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಫಲವಾಗಿ ಉದ್ಭವಿಸಿದ ಸಾಮಾಜಿಕ ಕ್ಷೊಭೆಯೊಂದು ಅಲ್ಲಿನ ಸರಕಾರಕ್ಕೆ ಸವಾಲಾಗಿದೆ.

ಯೂರೋಪಿಯನ್ನರ ಆಕ್ರಮಣ ಹಾಗೂ ವಸಾಹತುಶಾಹಿಯ ದಬ್ಬಾಳಿಕೆ ಇವುಗಳಿಂದ ಪಾರಾಗಿ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷ ಬದುಕಿದ್ದ ವೈಮಿರಿ-ಅಟ್ರೋರಿ ಬುಡಕಟ್ಟು ಜನಾಂಗ ಜಲಾಶಯ ಮತ್ತು ಅಣೆಕಟ್ಟುಗಳಿಂದಾಗಿ ಅತಂತ್ರವಾಗಿದೆ. 1905 ರಲ್ಲಿ 6 ಸಾವಿರದಷ್ಟಿದ್ದ ವೈಮಿರಿ ಮತ್ತು ಅಟ್ರೋರಿ ಜನಾಂಗದ ಜನಸಂಖ್ಯೆ 1985 ರ ವೇಳೆಗೆ ಕೇವಲ 374 ಕ್ಕೆ ಇಳಿದಿತ್ತು. ಈ ಜನಾಂಗವನ್ನು ಉಳಿಸಲು ಬ್ರಜಿಲ್ ಸರಕಾರ ಕಾಡಿನಲ್ಲಿ ಅವರ ಬದುಕಿಗೆ ಪೂರಕವಾಗುವಂತೆ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರೂ ಪ್ರತಿಫಲ ಮಾತ್ರ ಶೂನ್ಯವಾಗಿದೆ. ನದಿಗಳಲ್ಲಿ ದೊರೆಯುತ್ತಿದ್ದ ಮೀನು, ಆಮೆ ಮತ್ತು ಅವುಗಳ ಮೊಟ್ಟೆ ಈ ಜನಾಂಗದ ಪ್ರಮುಖ ಆಹಾರವಾಗಿತ್ತು. ಈಗ ಬದುಕುಳಿದವರ ಸಂಖ್ಯೆ ಬರಿ 97 ಮಾತ್ರ.

ಇದಕ್ಕಿಂತ ಭಿನ್ನವಾದ ಕತೆ ಬಾಂಗ್ಲಾ ದೇಶದ ಚಕ್ಮಾ ಬುಡಕಟ್ಟು ಜನಾಂಗದ್ದು. ಈ ಜನರ ಸಮಸ್ಯೆ ಕೇವಲ ಬಾಂಗ್ಲಾಕ್ಕೆ ಸೀಮಿತವಾಗಿರದೆ ಭಾರತಕ್ಕೂ ಸಮಸ್ಯೆಯಾಗಿದೆ. ಬಾಂಗ್ಲಾದ ಆಗ್ನೇಯ ಪ್ರಾಂತ್ಯದ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದಲ್ಲಿ ಹರಿಯುತ್ತಿರುವ ನದಿಯೊಂದಕ್ಕೆ ಅಮೆರಿಕಾದ ನೆರವಿನೊಂದಿಗೆ ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಿದ ಕಪ್ಟಾಯ್ ಅಣೆಕಟ್ಟಿನಿಂದಾಗಿ 1 ಲಕ್ಷ ಚಕ್ಮಾ ಬುಡಕಟ್ಟು ಜನಾಂಗ ನೆಲೆ ಕಳೆದುಕೊಂಡಿತು. ಸರಕಾರ ಇವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಎಡವಿದ ಪರಿಣಾಮವಾಗಿ ನಗರಕ್ಕೆ ವಲಸೆ ಬಂದ, ಮೂಲತಃ ಬೌದ್ಧ ಧರ್ಮವನ್ನು ಆಚರಿಸಿಕೊಂಡು ಬಂದಿದ್ದ ಚಕ್ಮಾ ಜನಾಂಗಕ್ಕೂ ಮತ್ತು ಸ್ಥಳೀಯ ಮುಸ್ಲಿಮರಿಗೂ ಘರ್ಷಣೆ ಏರ್ಪಟ್ಟು ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಚಕ್ಮಾ ನಿವಾಸಿಗಳು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿ ಬಂದಿದ್ದು ಇವರನ್ನು ವಾಪಸ್ ಕಳಿಸಲಾಗದೆ ಇತ್ತ ಪುನರ್ವಸತಿಯನ್ನು ಕಲ್ಪಿಸಲಾಗದ ಸ್ಥಿತಿಯನ್ನು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಎರಡು ಸರಕಾರಗಳೂ ಎದುರಿಸುತ್ತಿವೆ. ಬಾಂಗ್ಲಾ ಮತ್ತು ಬ್ರೆಜಿಲ್‌ನ ಬುಡಕಟ್ಟು ಜನಾಂಗದ ಕತೆಗಿಂತ ಬೇರೆಯದೇ ಆದ ನೋವಿನ ಕತೆ ಅಮೆರಿಕಾದ ಇತಿಹಾಸದಲ್ಲಿ ದಾಖಲಾಗಿದೆ.

ನಗರದ ಜನತೆಗೆ ಕುಡಿಯುವ ನೀರಿಗಾಗಿ ಅಮೆರಿಕಾದ ಉತ್ತರ ಡಕೋಟ ಪ್ರದೇಶದಲ್ಲಿ ನಿರ್ಮಿಸಿದ ಗ್ಯಾರಿಸನ್ ಅಣೆಕಟ್ಟಿನಿಂದಾಗಿ ಅಮೆರಿಕನ್ ಮೂಲನಿವಾಸಿಗಳಾದ ಮಂಡಾನ್ಸ್, ಅರಿಕಾಸ್, ಹಿಡಸ್ಟಾಸ್ ಜನಾಂಗಗಳನ್ನು ಅಮೆರಿಕಾ ಸರಕಾರ ಅಪೋಷನ ತೆಗೆದುಕೊಂಡಿದೆ.

ಜಲಾಶಯ ನಿರ್ಮಾಣವಾದ ನದಿ ಪಾತ್ರದಲ್ಲಿ ಜಾನುವಾರು ಸಾಕಾಣಿಕೆ ಹಾಗೂ ಮೀನುಗಾರಿಕೆಯನ್ನು ನಂಬಿ ಬದುಕಿದ್ದ ಈ ಜನಾಂಗ ತನ್ನ ಅಸಹಾಯಕ ಸ್ಥಿತಿಯಲ್ಲಿ ಜಲಾಶಯದ ಹಿನ್ನೀರಿನ ಪಕ್ಕದಲ್ಲಿ ವಾಸಿಸಲು ಅನುಮತಿ ಕೇಳಿತು. ಜೊತೆಗೆ ಹಿನ್ನೀರಿನಲ್ಲಿ ಮುಳುಗುವ ಮರಗಳನ್ನು ಕಡಿದು ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಪ್ರಾರ್ಥಿಸಿಕೊಂಡಿತು. ಎಲ್ಲಾ ಬೇಡಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ ಅಮೆರಿಕನ್ ಸರಕಾರ ಬುಡಕಟ್ಟು ಜನಾಂಗದ ಪ್ರತಿನಿಧಿಯಿಂದ ಬಲವಂತವಾಗಿ ಸಹಿ ಪಡೆದು ಅಲ್ಲಿನ ನಿವಾಸಿಗಳನ್ನು, ಜಾನುವಾರುಗಳನ್ನು ಹೊರದಬ್ಬಿತು.

1948 ರಲ್ಲಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ಕಛೇರಿಯಲ್ಲಿ ಅಂದಿನ ಆಂತರಿಕ ಆಡಳಿತ ಕಾರ್ಯದರ್ಶಿ ಕ್ಯಾಪ್‌ ಕೃಗ್ ಎದುರು ತಮ್ಮೆಲ್ಲ ವಸತಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಾರ್ವಭೌಮ ಹಕ್ಕು ಸರಕಾರಕ್ಕಿದೆ ಎಂದು ಬುಡಕಟ್ಟು ಜನಾಂಗದ ನಾಯಕ ಜಾರ್ಜ್ ಗಿಲ್ಲೆಟ್ ಸಹಿ ಮಾಡಿದ ಸನ್ನಿವೇಶವನ್ನು ರೆಸಿನಾರ್ ಎಂಬ ಲೇಖಕ ತನ್ನ “ದಿ ಅಮೆರಿಕನ್ ವೆಸ್ಟ್ ಅಂಡ್ ಇಟ್ಸ್ ಡಿಸಪ್ಪಿಯರಿಂಗ್ ವಾಟರ್” ಎಂಬ ಕೃತಿಯಲ್ಲಿ ಈ ರೀತಿ ಬಣ್ಣಿಸಿದ್ದಾನೆ. “ಕಾರ್ಯದರ್ಶಿ ಕೃಗ್ ಎದುರು ತಲೆ ಬಗ್ಗಿಸಿ ನಿಂತಿದ್ದ ದೃಢವಾದ ಮೈಕಟ್ಟಿನ ಬುಡಕಟ್ಟು ಜನಾಂಗದ ನಾಯಕ ಒಪ್ಪಂದ ಪತ್ರಕ್ಕೆ ಭಾರವಾದ ಹೃದಯದಿಂದ ಸಹಿ ಮಾಡಿದನು. ಸಹಿಗೆ ಮುನ್ನ ಇಂದಿನಿಂದ ನಮ್ಮ ಜನಾಂಗದ ಭವಿಷ್ಯಕ್ಕೆ ಬೆಳಕೆಂಬುದು ಕನಸಿನ ಮಾತು ಎಂದು ನೊಂದು ನುಡಿದನು. ಸಹಿ ಮಾಡಬೇಕಾದ ಮೇಜಿನ ಮೇಲೆ ಡಜನ್‌ ಗಟ್ಟಲೆ ಪೆನ್‌ಗಳನ್ನು ಇಡಲಾಗಿತ್ತು. ಅವುಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ತನ್ನ ಎಡಗೈ ಹಸ್ತದಿಂದ ಮುಖವನ್ನು ಮುಚ್ಚಿಕೊಂಡು ಬಿಕ್ಕಿ-ಬಿಕ್ಕಿ ಅಳುತ್ತಾ ಬಲಗೈನಲ್ಲಿ ಪತ್ರಕ್ಕೆ ಸಹಿ ಮಾಡಿದನು”.

ಮೊಂಟಾನ್ ವಿಶ್ವವಿದ್ಯಾಲಯದ ಅಮೆರಿಕನ್ ಮೂಲ ನಿವಾಸಿಗಳ ಅಧ್ಯಯನ ಕೇಂದ್ರದ ನಿರ್ದೇಶಕ ಪ್ಯಾಟ್ರಿಕ್ ಮೋರಿಸ್, ಅಮೆರಿಕನ್ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಉತ್ತರ ಡಕೋಟ ಪ್ರಾಂತ್ಯದಲ್ಲಿ ಹರಿಯುವ ಮಿಸ್ಸೊರಿ ನದಿ ಶೇ.70 ರಷ್ಟು ಮೂಲನಿವಾಸಿಗಳಿಗೆ ಮೀನುಗಾರಿಕೆ ಹಾಗೂ ಜಾನುವಾರು ಸಾಕಾಣಿಕೆ ಮೂಲಕ ಉದ್ಯೋಗ ಒದಗಿಸಿತ್ತು ಎಂದಿದ್ದಾರೆ.

ಕೊಲಂಬಿಯಾ ಪ್ರಾಂತ್ಯದಲ್ಲಿ ಅಮೆರಿಕನ್ನರು ಸಾಲ್ಮನ್ ಜಾತಿಯ ಮೀನುಗಳ ಸಂತತಿ ನಾಶದ ಪಾಪಕ್ಕೂ ಹೊಣೆಯಾಗಿದ್ದಾರೆ. ಶಿಲ್ಲಿನ ನದಿಯೊಂದಕ್ಕೆ ಕಟ್ಟಲಾದ ಗ್ರ್ಯಾಂಡ್ ಕೌಲಿ ಎಂಬ ಅಣೆಕಟ್ಟಿನಿಂದಾಗಿ ಮೀನಿನ ಸಂತತಿ ನಶಿಸಿಹೋಯಿತು.

1940 ರ ಜೂನ್ 17 ರಂದು ಪ್ರಥಮ ಬಾರಿಗೆ ಅಣೆಕಟ್ಟಿನಿಂದ ನೀರು ಹರಿಸಿದಾಗ, ತಾವು ಹಿಂದೆ ಮೀನಿನ ಶಿಕಾರಿ ಮಾಡುತ್ತಿದ್ದ ಕೆಟಲ್ ಜಲಪಾತದ ಬಳಿ ನೆಲದ ಮೂಲ ನಿವಾಸಿಗಳು ಕಳೆದುಹೋದ ತಮ್ಮ ಬದುಕನ್ನು ನೆನೆಯುತ್ತಾ ನದಿಗೆ ಅಶ್ರುಧಾರೆಯನ್ನು ಅರ್ಪಿಸಿದರು.

ಇದು ಬದುಕಿನ ವ್ಯಂಗ್ಯವೋ ಅಥವಾ ದುರಂತವೊ ನೀವೇ ನಿರ್ಧರಿಸಿ. 1951 ರಲ್ಲಿ ಅಮೆರಿಕಾ ಸರಕಾರ ಮೂಲನಿವಾಸಿಗಳಿಗೆ ಪರಿಹಾರವಾಗಿ ದಾಖಲೆಯ 5 ಕೋಟಿ 40 ಲಕ್ಷ ಡಾಲರ್ ಹಣ ಹಾಗೂ ವಾರ್ಷಿಕ ಪರಿಹಾರವಾಗಿ 1.5 ಕೋಟಿ ಡಾಲರ್ ನೆರವು ಘೋಷಿಸಿತ್ತು. ನೋವಿನ ಸಂಗತಿಯೆಂದರೆ ಈ ಪರಿಹಾರವನ್ನು ಪಡೆಯಲು ಬುಡಕಟ್ಟು ಜನಾಂಗದ ಒಂದೇ ಒಂದು ಜೀವ ಕೂಡ ಉಳಿದಿರಲಿಲ್ಲ.

(ಚಿತ್ರಕೃಪೆ: ವಿಕಿಪೀಡಿಯ)

(ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 7

ಡಾ.ಎನ್.ಜಗದೀಶ್ ಕೊಪ್ಪ

ಇದು ಗುಜರಾತ್‌ನ ನರ್ಮದಾ ಸರೋವರ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸ್ಥಳಾಂತರಗೊಂಡ ಸ್ಥಳೀಯ ನಿವಾಸಿಗಳ ನೋವಿನ ಕಥನ.

“ಅಣೆಕಟ್ಟು ನಿರ್ಮಾಣಕ್ಕಾಗಿ ಸರಕಾರ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿತು. ನಾವು ಬದುಕಿ ಬಾಳಿದ್ದ ಪವರ್ಟ ಎಂಬ ಗ್ರಾಮದಿಂದ ನೂರಾರು ಕಿ.ಮೀ. ದೂರದ ಮಣಿಬೇಲಿ ಎಂಬ ಪ್ರದೆಶಕ್ಕೆ ನಮ್ಮ ಕುಟುಂಬಗಳನ್ನು ಸ್ಥಳಾಂತರಿಸಿದೆ. ನದಿ, ಅರಣ್ಯಗಳಿಂದ ಸುತ್ತುವರೆದಿದ್ದ ನಮ್ಮ ಗ್ರಾಮಕ್ಕೆ ತೀರ ವಿರುದ್ಧವಾದ ಪ್ರಾದೇಶಿಕ ಲಕ್ಷಣಗಳುಳ್ಳ ಅಪರಿಚಿತ ಗುಡ್ಡ ಗಾಡು ಪ್ರದೇಶ ಈ ಮಣಿಬೇಲಿ. ನಮ್ಮ ಮಕ್ಕಳು ನದಿಯಲ್ಲಿ ಈಜಾಡಿ, ದನ ಕರುಗಳನ್ನು ಮೇಯಿಸಿಕೊಂಡು, ಅರಣ್ಯದಿಂದ ಉರುವಲು ಕಟ್ಟಿಗೆಗಳನ್ನು ತರುತ್ತಿದ್ದರು. ನಾವಿದ್ದ ಪವರ್ಟ ಗ್ರಾಮದ ಭೂಮಿ ಫಲವತ್ತಾಗಿತ್ತು. ಆ ಭೂಮಿ ಯಾವುದೇ ಗೊಬ್ಬರ ಬೇಡುತ್ತಿರಲಿಲ್ಲ.

“ಈಗ ಇಲ್ಲಿ ಈ ಹೊಸ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹಿಡಿದು ದನಕರುಗಳಿಗೂ ಸಹ ನಾವು ಕೊಳವೆ ಬಾವಿಯನ್ನು ಆಶ್ರಯಿಸಬೇಕಾಗಿದೆ.

“ನಾವಿದ್ದ ಗ್ರಾಮದಲ್ಲಿ ದೊರೆಯುತ್ತಿದ್ದ ಬಿದಿರು, ನಾರು, ಗಿಡ ಮೂಲಿಕೆ ಸಸ್ಯಗಳು, ಕಾಡು ಪ್ರಾಣಿಗಳು ನಮ್ಮ ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಈಗ ಈ ಅಪರಿಚಿತ ಸ್ಥಳದಲ್ಲಿ ಎಲ್ಲದಕ್ಕೂ ಹಣ ತೆರಬೇಕಾಗಿದೆ. ಮೊದಲೇ ಅನಕ್ಷರಸ್ಥ, ಬಡವರಾದ ನಾವು ಹಣ ಎಲ್ಲಿಂದ ತರಬೇಕು? ಇಲ್ಲಿಗೆ ಬಂದ ಮೊದಲ ವರ್ಷದಲ್ಲೇ 38 ಮಕ್ಕಳು ಸಾವನ್ನಪ್ಪಿದವು. ಹತ್ತಿರದ ಪಟ್ಟಣಕ್ಕೆ ಹೋಗಬೇಕಾದರೆ ಬಸ್ ಹಿಡಿದು ಹೋಗಬೇಕು. ಪುನರ್ವಸತಿ ಪ್ರದೇಶದಲ್ಲಿ ನಮಗೆ ನೀಡಲಾಗುತ್ತಿದೆ ಎಂದು ಹೇಳಿದ್ದ ಭೂಮಿ, ನಿವೇಶನ, ರಸ್ತೆ, ನೀರು, ವಿದ್ಯುತ್ ಇವಲ್ಲಾ ಕನಸಿನ ಮತಾಗಿದೆ. ಸರಕಾರವನ್ನು ಎದುರಿಸಲಾಗದ ಅಸಹಾಯಕ ಸ್ಥಿತಿಯಲ್ಲಿರುವ ನಾವು ಒಂದು ರೀತಿಯ ಬಯಲು ಬಂಧೀಖಾನೆಯ ಖೈದಿಗಳು.”

ಇದು 1992 ರಲ್ಲಿ ಪುನರ್ವಸತಿ ಪ್ರದೇಶಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಗ್ರಾಮಸ್ಥರು ಹೇಳಿಕೊಂಡ ನೋವಿನ ಕತೆ. ಇಂತಹ ದುರಂತ ಕೇವಲ ಭಾರತಕ್ಕೆ ಅಥವಾ ಗುಜರಾತ್‌ಗೆ ಸೀಮಿತವಾಗಿಲ್ಲ. ಇದು ಜಗತ್ತಿನೆಲ್ಲೆಡೆ ಅಣೆಕಟ್ಟು ನಿರ್ಮಾಣದ ನೆಪದಲ್ಲಿ ಅತಂತ್ರರಾದವರ ಆಕ್ರಂದನ.

ಕಳೆದ 70 ವರ್ಷಗಳ ಅವಧಿಯಲ್ಲಿ ಈ ರೀತಿ ನಿರಾಶ್ರಿತರಾದವರಲ್ಲಿ ಬಹುತೇಕ ಮಂದಿ ಅರಣ್ಯವಾಸಿಗಳು ಕೃಷಿಕಾರ್ಮಿಕರು ಮತ್ತು ಬಡ ಗ್ರಾಮಸ್ಥರು. ಯಾವುದೇ ರಾಜಕೀಯ ಇಲ್ಲವೆ ಹೋರಾಟದ ಬಲವಿಲ್ಲದವರು.

ಮೇಲ್ನೋಟಕ್ಕೆ ನಮಗೆ ಕಾಣಸಿಗುವವರು ಇಂತಹವರು ಮಾತ್ರ. ಪರೋಕ್ಷವಾಗಿ, ಅಣೆಕಟ್ಟು ನಿರ್ಮಾಣವಾದ ನಂತರ ಸಿಬ್ಬಂದಿ ವಸತಿಗಾಗಿ ನಿರ್ಮಿಸಿದ ಪಟ್ಟಣಕ್ಕೆ, ರಸ್ತೆಗೆ, ವಿದ್ಯುತ್ ಕಂಬ ಮತ್ತು ವಿದ್ಯುತ್ ಸರಬರಾಜು ಮುಂತಾದ ವ್ಯವಸ್ಥೆಗಳಿಗೆ ಭೂಮಿ ಕಳೆದುಕೊಂಡ ನತದೃಷ್ಟರು ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದವರ ಪಟ್ಟಿಯಲ್ಲಿ ಬರುವುದಿಲ್ಲ. ಇವರೆಲ್ಲ ಈಗ ನಗರದಿಂದ ನಗರಕ್ಕೆ ಚಲಿಸುವ ವಲಸೆ ಕಾರ್ಮಿಕರಾಗಿ ಇಲ್ಲವೇ ಕೊಳೆಗೇರಿಗಳ ನಿವಾಸಿಗಳಾಗಿ ಬದುಕು ದೂಡುತ್ತಿದ್ದಾರೆ. ನಿಸರ್ಗದ ಕೊಡುಗೆಗಳಾದ ನೀರು, ನದಿಯಲ್ಲಿ ದೊರೆಯುವ ಮೀನು, ತಮ್ಮ ದನ ಕರುಗಳಿಗೆ ದೊರೆಯುತ್ತಿದ್ದ ಹಸಿರು ಮೇವು, ಕಾಡಿನಲ್ಲ ಸಿಗುತ್ತಿದ್ದ ಹಲವು ಬಗೆಯ ಹಣ್ಣುಗಳಿಂದ ವಂಚಿತರಾದ ಇವರ ಬದುಕಿನ ನೋವು, ಕಣ್ಣೀರು ಆಧುನಿಕ ಯುಗದ ಅಬ್ಬರದ ನಡುವೆ ನಿಶ್ಯಬ್ಧವಾಗಿದೆ.

ಈವರೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಅಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾಗಿರುವ ಕುಟುಂಬಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ ಖಚಿತ ಮಾಹಿತಿಯನ್ನು ಯಾವುದೇ ಸರಕಾರಗಳು ಬಹಿರಂಗಗೊಳಿಸಿಲ್ಲ.  ಇವರು ನೀಡುವ ಸಂಖ್ಯೆಗೂ, ನಿಜವಾಗಿ ನಿರ್ವಸತಿಗರಾದವರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಭಾರತ ಮತ್ತು ಚೀನಾ ದೇಶಗಳಲ್ಲಿ ಅತಂತ್ರರಾದಷ್ಟು ಜನ ಬೇರಾವ ದೇಶಗಳಲ್ಲೂ ಆಗಿಲ್ಲ. ದೆಹಲಿ ಮೂಲದ ಸಾಮಾಜಿಕ ಅಧ್ಯಯನ ಸಂಸ್ಥೆಯ ಸಮೀಕ್ಷೆ ಪ್ರಕಾರ 1947 ರಿಂದ 2000 ಇಸವಿಯವರೆಗೆ ಭಾರತದಲ್ಲಿ ಒಂದೂವರೆ ಕೋಟಿ ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಕಳೆದ 10 ವರ್ಷಗಳಿಂದೀಚೆಗೆ ಅಂದಾಜು 50 ಲಕ್ಷ ಜನತೆ ನಿರಾಶ್ರಿತರಾಗಿದ್ದಾರೆ. ವಿಶ್ವಬ್ಯಾಂಕ್‌ಗೆ ಚೀನಾ ಸರಕಾರ ನೀಡಿದ ಮಾಹಿತಿಯಂತೆ 1950 ರಿಂದ 1989 ರವರೆಗೆ 1 ಕೋಟಿ 20 ಲಕ್ಷ ಜನರು ಚೀನಾದಲ್ಲಿ ಅತಂತ್ರರಾಗಿದ್ದಾರೆ ಎಂದು ತಿಳಿಸಿದೆ. ಆದರೆ ಚೀನಾದಲ್ಲಿ ಈ ಕುರಿತಂತೆ ಹಲವು ದಶಕಗಳ ಕಾಲ ಅಧ್ಯಯನ ನಡೆಸಿರುವ ಸಮಾಜ ಶಾಸ್ತ್ರಜ್ಞ ಡೈಕ್ವಿಂಗ್, 4 ರಿಂದ 6 ಕೋಟಿ ಜನತೆ ಚೀನಾದಲ್ಲಿ ಅಣೆಕಟ್ಟು ನಿರ್ಮಾಣದಿಂದ ಅತಂತ್ರರಾಗಿದ್ದಾರೆ ಎಂದು ದೃಢಪಡಿಸಿದ್ದಾನೆ.

ಸಾಮಾನ್ಯವಾಗಿ ಅಣೆಕಟ್ಟು ನಿರ್ಮಾಣವಾಗುವ ಅರಣ್ಯ ಅಥವಾ ನದಿಯ ಇಕ್ಕೆಲಗಳ ಸರಕಾರಿ ಭೂಮಿಯಲ್ಲಿ ವಾಸಿಸುವ ಅಥವಾ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಂದಿ ಬಡವರಾಗಿದ್ದು, ಅವರ ಬಳಿ ಈ ಭೂಮಿಯ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿರುವುದಿಲ್ಲ. ಹಾಗಾಗಿ ಇವರು ಯಾವುದೇ ಪರಿಹಾರದಿಂದ ವಂಚಿತರಾಗಿದ್ದು, ಸರಕಾರದ ನಿರ್ವಸತಿಗರ ಪಟ್ಟಿಯಲ್ಲಿ ಇವರು ಸೇರುವುದಿಲ್ಲ. ಇಂತಹ ನತದೃಷ್ಟ ಕುಟುಂಬಗಳ ಅಂಕಿ-ಅಂಶ ಈವರೆಗೆ ನಿಖರವಾಗಿ ಎಲ್ಲಿಯೂ ಸಿಗದ ಕಾರಣ ಖಚಿತ ಅಂಕಿ-ಅಂಶಗಳಿಗೆ ತೊಡಕಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ ಗುಜರಾತ್‌ನ ನರ್ಮದಾ ಅಣೆಕಟ್ಟಿನ ಯೋಜನೆ.

1961 ರಲ್ಲಿ ಅಣೆಕಟ್ಟು ಕಾಮಗಾರಿ ಸಿಬ್ಬಂದಿ ವಸತಿ ನಿರ್ಮಾಣಕ್ಕಾಗಿ ಜಾಗ ತೆರವುಗೊಳಿಸಿದ 800 ಕುಟುಂಬಗಳಿಗೆ ಇಂದಿಗೂ ಪರಿಹಾರ ದೊರೆತಿಲ್ಲ. ಅವರು ವಾಸಿಸುತ್ತಿದ್ದ ನಿವೇಶನ-ಮನೆಗೆ ಹಕ್ಕು ಪತ್ರ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಅಭಯಾರಣ್ಯದಲ್ಲಿ ಕಾಡಿನ ಕಿರು ಉತ್ಪನ್ನಗಳನ್ನೇ ನಂಬಿ ಬದುಕಿದ್ದ 10 ಸಾವಿರ ಆದಿವಾಸಿಗಳನ್ನು ಯಾವುದೇ ಪರಿಹಾರ ಅಥವಾ ನಿವೇಶನ ನೀಡದೆ ಒಕ್ಕಲೆಬ್ಬಿಸಲಾಯಿತು.

1 ಲಕ್ಷದ 40 ಸಾವಿರ ರೈತರು ನರ್ಮದಾ ಅಣೆಕಟ್ಟು ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿದ್ದಾರೆ. ಇವರಲ್ಲಿ 25 ಸಾವಿರ ರೈತರ ಜಮೀನು 5 ಎಕರೆಗಿಂತ ಕಡಿಮೆ. ಇವರನ್ನು ನಂಬಿ ಬದುಕಿದ್ದ ಕೃಷಿ ಕಾರ್ಮಿಕರು ನಗರಗಳತ್ತ ವಲಸೆ ಹೋದರು. ಕೃಷಿಭೂಮಿಯಲ್ಲದೆ ಅನೇಕ ನಗರ-ಪಟ್ಟಣಗಳು, ಹಳ್ಳಿಗಳೂ ನರ್ಮದಾ ಸರೋವರದ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ನಗರ- ಪಟ್ಟಣಗಳಲ್ಲಿ ಬದುಕಿದ್ದ ಅನೇಕ ವ್ಯಾಪಾರಿಗಳು, ಕಾರ್ಮಿಕರು ಯಾವುದೇ ಪರಿಹಾರಕ್ಕೆ ಅನರ್ಹರಾಗಿದ್ದರು. ಜಲಾಶಯ ನಿರ್ಮಾಣವಾದ ನಂತರ ನದಿ ನೀರು ಸಮುದ್ರ ಸೇರುವವರೆಗಿನ ನದಿ ಇಕ್ಕೆಲಗಳಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವಿಸಿದ್ದ ಮೀನುಗಾರರ ಕುಟುಂಬಗಳೂ ಸಹ ಈ ವೃತ್ತಿಯಿಂದ ವಂಚಿತರಾಗಿ, ಅನಿವಾರ್ಯವಾಗಿ ಬೇರೆ ವೃತ್ತಿಯನ್ನು ಆಯ್ಕೆ ಮಾಡಕೊಳ್ಳಬೇಕಾಯಿತು. 1985 ರಲ್ಲಿ ವಿಶ್ವಬ್ಯಾಂಕ್ ನರ್ಮದಾ ಅಣೆಕಟ್ಟು ಯೋಜನೆಗೆ ಸಾಲ ನೀಡುವ ಸಂದರ್ಭದಲ್ಲಿ, ಯೋಜನೆಯಿಂದ ನಿರಾಶ್ರಿತವಾಗುವ ಕುಟುಂಬಗಳ ಸಂಖ್ಯೆ 6,603 ಎಂದು ತಿಳಿಸಿತ್ತು. 1996 ರಲ್ಲಿ ಇದೇ ವಿಶ್ವಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಈ ಯೋಜನೆಯಿಂದ 41,500 ಕುಟುಂಬಗಳು ತಮ್ಮ ಮನೆ, ಜಮೀನುಗಳನ್ನು ಕಳೆದುಕೊಂಡಿವೆ ಎಂದು ತಿಳಿಸಿತು.

ಇವೆಲ್ಲವೂ ಮೇಲ್ನೋಟಕ್ಕೆ ತಕ್ಷಣದ ಪರಿಣಾಮವೆನಿಸಿದರೂ, ದೀರ್ಘಾವಧಿ ಕಾಲದಲ್ಲಾಗುವ ಸಾಮಾಜಿಕ ಪರಿಣಾಮಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ದೀರ್ಘಕಾಲಿಕ ಸಾಮಾಜಿಕ ಪರಿಣಾಮಗಳಿಂದ ಬಳಲುವವರು ಜಲಾಶಯ ಅಥವಾ ಅಣೆಕಟ್ಟುಗಳ ಕೆಳಗಿನ ನದಿಪಾತ್ರದ ಜನರು.

ಆಫ್ರಿಕಾ ಖಂಡದ ನೈಜೀರಿಯಾದಲ್ಲಿ ನದಿಯ ಪ್ರವಾಹವನ್ನು ತಡೆಗಟ್ಟುವ ಉದ್ದೇಶದಿಂದ ನೈಜಿರ್ ನದಿಗೆ ಕಟ್ಟಲಾದ ಕ್ವೆಂಜೆ (kainji) ಅಣೆಕಟ್ಟಿನಿಂದ, ನದಿಯ ನೀರಿನ ಹರಿಯುವಿಕೆ ಸ್ಥಗಿತಗೊಂಡ ಪರಿಣಾಮ 50 ಸಾವಿರ ಮಂದಿ ಅನಾಥರಾಗುವ ಸ್ಥಿತಿ ಬಂತು. ನದಿಯ ಇಕ್ಕೆಲಗಳಲ್ಲಿ ವ್ಯವಸಾಯ, ಜಾನುವಾರು ಸಾಕಾಣಿಕೆ, ಮೀನುಗಾರಿಕೆ ವೃತ್ತಿಯಿಂದ ಬದುಕಿದ್ದ ಈ ಜನತೆ ತಮ್ಮ ಮೂಲ ಕಸುಬುಗಳಿಂದ ವಂಚಿತರಾದರು. ಈ ಪ್ರದೇಶವೊಂದರಲ್ಲೇ ವರ್ಷವೊಂದಕ್ಕೆ 1 ಲಕ್ಷ ಟನ್ ಕುರಿ, ಮೇಕೆ, ದನದ ಮಾಂಸ ಯೂರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. 1968 ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ಈ ಪ್ರಮಾಣ ಕೇವಲ 30 ಸಾವಿರ ಟನ್‌ಗೆ ಕುಸಿಯಿತು.

ಇದೇ ನೈಜೀರಿಯಾದಲ್ಲಿ ಸೊಕೊಟೊ ನದಿಗೆ ಕಟ್ಟಲಾದ ಬಕಲೋರಿ ಅಣೆಕಟ್ಟಿನಿಂದಾಗಿ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಭತ್ತ ಹಾಗೂ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಮೆಕ್ಕೆಜೋಳ, ಹತ್ತಿ ಇತರೆ ಬೆಳೆಗಳ ಚಟುವಟಿಕೆ ಸ್ತಬ್ಧಗೊಂಡವು.

ಇದಕ್ಕಿಂತ ಭಿನ್ನವಾದ ಸಾಮಾಜಿಕ ಹಾಗೂ ನೈಸರ್ಗಿಕ ದುರಂತವೆಂದರೆ ಬ್ರೆಜಿಲ್ ದೇಶದ್ದು. ವಿಶ್ವಬ್ಯಾಂಕ್ ನೆರವಿನಿಂದ ನಿರ್ಮಿಸಲಾದ ಸೊಬ್ರಾಡಿನೊ ಅಣೆಕಟ್ಟಿನ ಹಿನ್ನೀರಿನಿಂದ 70 ಸಾವಿರ ಮಂದಿ ಸ್ಥಳಾಂತರಗೊಂಡರೆ, 25 ಸಾವಿರ ಹೆಕ್ಟೇರ್ ಕೃಷಿಭೂಮಿ ಮುಳುಗಡೆಯಾಯಿತು.

ಸಾವೊ ಪ್ರಾನ್ಸಿಸ್ಕೊ ನದಿಗೆ ಕಟ್ಟಿದ ಅಣೆಕಟ್ಟಿನ ಕೆಳಗೆ 800 ಕಿ.ಮೀ. ಉದ್ದದ ನದಿ ಪಾತ್ರದಲ್ಲಿ ಬೆಳೆಯಲಾಗುತ್ತಿದ್ದ ಭತ್ತದ ಬೆಳೆಗೆ ಸಮರ್ಪಕ ನೀರಿಲ್ಲದೆ, ಭತ್ತದ ಕೃಷಿಯನ್ನೇ ರೈತರು ಕೈ ಬಿಡಬೇಕಾಯಿತು. ಇದರಿಂದಾಗಿ 50 ಸಾವಿರ ಮಂದಿ ಕೃಷಿಕರು, ಮತ್ತು ಕೃಷಿ ಕೂಲಿ ಕಾರ್ಮಿಕರು ಅತಂತ್ರರಾದರು. ಇವರಿಗೆ ಬೇರೆಡೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ನೀಡಲಾಗುವುದೆಂದು ವಿಶ್ವಬ್ಯಾಂಕ್ ಮತ್ತು ಬ್ರೆಜಿಲ್ ಸರಕಾರ ಜಂಟಿಯಾಗಿ ನೀಡಿದ್ದ ಆಶ್ವಾಸನೆ ಕೇವಲ ಭರವಸೆಯಾಗಿಯೇ ಉಳಿಯಿತು.

ಅಣೆಕಟ್ಟು ನಿರ್ಮಾಣವಾಗಿ, ಜಲಾಶಯದಿಂದ ಹೊರಬಿದ್ದ ನೀರಿನ ಪರಿಣಾಮ 6 ವರ್ಷಗಳ ನಂತರ ಕಾಣಿಸಿಕೊಂಡು, 40 ಸಾವಿರ ಮಂದಿ ವಿವಿಧ ರೋಗಗಳಿಂದ ಬಳಲಿದರು. ಈ ನೀರನ್ನು ಕುಡಿದ ಬಹುತೇಕ ಮಂದಿ ಹೊಟ್ಟೆನೋವಿನಿಂದ, ಚರ್ಮದ ಖಾಯಿಲೆಯಿಂದ ನರಳಿದರೆ, ಸಾವಿರಾರು ಮಕ್ಕಳು ನಿರಂತರ ಬೇಧಿಯಿಂದ ನಿತ್ರಾಣರಾಗಿ ಅಸುನೀಗಿದರು. ಇವೆಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀಯರ ಗುಪ್ತಾಂಗಗಳಲ್ಲಿ ಉಂಟಾದ ತುರಿಕೆ, ಗಾಯದಿಂದ ರಕ್ತ, ಕೀವು ಸೋರುವಂತಾಯಿತು. ಈ ಜನತೆಯ ಮುಖ್ಯ ಆಹಾರವಾಗಿದ್ದ ಮೀನು, ಸೀಗಡಿಗಳಿಂದ ಸಿಗುತ್ತಿದ್ದ ಪ್ರೋಟೀನ್‌ನಿಂದ ಮತ್ತು ವಿಟಮಿನ್‌ಗಳಿಂದ  ಸಶಕ್ತರಾಗಿದ್ದ ಇವರು, ತಾವು ಯಾವ ಖಾಯಿಲೆಯಿಂದ, ಯಾವ ಕಾರಣಕ್ಕಾಗಿ ಬಳಲುತ್ತಿದ್ದೇವೆ ಎಂಬುದನ್ನು ಅರಿಯಲಾಗದೆ ಅಸುನೀಗಿದರು.

(ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 6

– ಡಾ.ಎನ್.ಜಗದೀಶ್ ಕೊಪ್ಪ

ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ನಡೆಯುವ ತೀವ್ರತರವಾದ ರಾಸಾಯನಿಕ ಕ್ರಿಯೆಯಿಂದಾಗಿ ನೀರಿನ ಗುಣಮಟ್ಟದ ಬದಲಾವಣೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಜಲಾಶಯಗಳಲ್ಲಿ ತಿಂಗಳು ಇಲ್ಲವೆ ವರ್ಷಾನುಗಟ್ಟಲೆ ಶೇಖರವಾಗುವ ನೀರು ಜಲಚರಗಳಿಗಷ್ಟೇ ಅಲ್ಲ, ಅದು ಕುಡಿಯಲು ಹಾಗೂ ಕೃಷಿಚಟುವಟಿಕೆಗೆ ಬಳಸುವ ಗುಣಮಟ್ಟ ಹೊಂದಿರುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.

ಸಾಮಾನ್ಯವಾಗಿ ಜಲಾಶಯದಿಂದ ಬಿಡುಗಡೆಯಾಗಿ ಹರಿಯುವ ನೀರು ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಬೆಚ್ಚಗಿನ ಉಷ್ಣಾಂಶವನ್ನು ಹೊಂದಿರುತ್ತದೆ. ಈ ರೀತಿಯ ಪ್ರಕ್ರಿಯೆ ನೀರಿನಲ್ಲಿ ಬಿಡುಗಡೆಯಾಗುವ ಆಮ್ಲಜನಕದ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಈ ವ್ಯತ್ಯಾಸದಿಂದಾಗಿ ಸಿಹಿ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತಿದ್ದ ಸೀಗಡಿ ಹಾಗೂ ಅನೇಕ ಜಲಚರ ಪ್ರಭೇದಗಳಿಗೆ ಮಾರಕವಾಗಿದೆ.

ಜಲಾಶಯದಲ್ಲಿ ಮೊದಲ ವರ್ಷ ಶೇಖರಗೊಳ್ಳುವ ನೀರು, ಅತ್ಯಂತ ಹೆಚ್ಚಿನ ರೀತಿಯಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಭೂಮಿ, ಅಲ್ಲಿನ ಅರಣ್ಯ ಪ್ರದೇಶ, ಗಿಡ-ಮರ, ನೀರಿನಲ್ಲಿ ಸತ್ತ ಪ್ರಾಣಿಗಳ ಅವಶೇಷಗಳ ಕೊಳೆಯುವಿಕೆಯಿಂದಾಗಿ ನೀರಿನಲ್ಲಿ ಅತ್ಯಧಿಕ ಮಟ್ಟದ ಮಿಥೇನ್ ಅನಿಲ ಮತ್ತು ಇಂಗಾಲಾಮ್ಲ ಬಿಡುಗಡೆಯಾಗುತ್ತದೆ.

1964ರಲ್ಲಿ ದಕ್ಷಿಣ ಅಮೆರಿಕಾದ ಬ್ರೊಕೊಪಾಂಡೊ ಎಂಬ ಅಣೆಕಟ್ಟು ನಿರ್ಮಾಣವಾದಾಗ, ಸುರಿನಾಮ್ ಪ್ರದೇಶದ 1,500 ಚ.ಕಿ.ಮೀ. ಮಳೆಕಾಡು ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಯಿತು. ಜಲಾಶಯದಲ್ಲಿ ಮೊದಲ ವರ್ಷ ಶೇಖರವಾದ ನೀರಿನಲ್ಲಿ ಹೈಡ್ರೊಜನ್ ಸಲ್ಫೈಡ್ ಅತ್ಯಧಿಕ ಮಟ್ಟದಲ್ಲಿ ಉತ್ಪಾದನೆಯಾದ್ದರಿಂದ ನೀರಿನ ದುರ್ವಾಸನೆಯಿಂದಾಗಿ, ಮೊದಲ ಎರಡು ವರ್ಷಗಳ ಕಾಲ ಅಣೆಕಟ್ಟು ನಿರ್ವಹಣಾ ಸಿಬ್ಬಂಧಿ ಮುಖವಾಡ ತೊಟ್ಟು ಕಾರ್ಯ ನಿರ್ವಹಿಸಬೇಕಾಯಿತು. ಜೊತೆಗೆ ವಿದ್ಯುತ್ ಉತ್ಪಾದನೆಗಾಗಿ ಟರ್ಬೈನ್ ಇಂಜಿನ್ನಿಗೆ ಕೊಳವೆ ಮೂಲಕ ನೀರು ಹಾಯಿಸಿದ ಪ್ರಯುಕ್ತ, ಕೊಳವೆ ಹಾಗೂ ಇಂಜಿನ್ಗಳು ತುಕ್ಕು ಹಿಡಿದು 1971 ರಲ್ಲಿ ಇವುಗಳ ದುರಸ್ತಿಗೆ 40 ದಶಲಕ್ಷ ಡಾಲರ್ ಹಣ ಖರ್ಚಾಯಿತು. ಇದು ಅಣೆಕಟ್ಟು ನಿರ್ಮಾಣ ವೆಚ್ಚದ ಶೇ.1.7 ರಷ್ಟಿತ್ತು. ನಂತರ ಜಲಾಶಯದ ಕೆಳಭಾಗದ 110 ಕಿ.ಮೀ. ದೂರದಲ್ಲಿ ಹರಿವ ನೀರಿನಲ್ಲಿ ಆಮ್ಲಜನಕ ಉತ್ಪತ್ತಿಯಾಗಿ ನೀರಿನ ಗುಣ ಮಟ್ಟ ಸುಧಾರಿಸಿತು.

ಇಂತಹದೇ ನೈಸರ್ಗಿಕ ದುರಂತ ಬ್ರೆಜಿಲ್‌ನಲ್ಲೂ ಸಹ ಸಂಭವಿಸಿತು. ಬಲ್ಖಿನಾ ಅಣೆಕಟ್ಟು ನಿರ್ಮಾಣದಿಂದಾಗಿ ಅಲ್ಲಿನ 2,250 ಚ.ಕಿ.ಮೀ. ಅರಣ್ಯ(ಮಳೆಕಾಡು) ಪ್ರದೇಶ ಜಲಾಶಯದಲ್ಲಿ ಮುಳುಗಿತು. ಇದರಿಂದಾಗಿ ಅಣೆಕಟ್ಟು ನಿರ್ವಹಣಾ ವೆಚ್ಚ ಶೇ. 9ರಷ್ಟು ಅಧಿಕಗೊಂಡಿತು.

ಅರ್ಜೆಂಟೈನಾ, ಪೆರುಗ್ವೆ ದೇಶಗಳ ನಡುವೆ ಯುಕ್ರಿಟಾ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಜಲಾಶಯದ ನೀರಿನ ರಾಸಾಯನಿಕ ಕ್ರಿಯೆಯಿಂದ 1,200ರಷ್ಟು ಜಲಚರ ಪ್ರಬೇಧಗಳು ಸತ್ತುಹೋದವು.  ಕೆನಡಾ, ಫಿನ್ಲ್ಯಾಂಡ್, ಥಾಯ್ಲೆಂಡ್ ದೇಶಗಳ ಜಲಾಶಯಗಳಲ್ಲಿ ಬೆಳೆದ ಮೀನುಗಳಲ್ಲಿ ಹೆಚ್ಚಿನ ಮಟ್ಟದ ಪಾದರಸದ ಅಂಶವಿರುವುದು ಕಂಡುಬಂದಿತು.

ಇವೆಲ್ಲವುಗಳಿಗಿಂತ ಗಂಭೀರ ಸಂಗತಿಯೆಂದರೆ, ಜಲಾಶಯದ ನೀರು ಆವಿಯಾಗುವಿಕೆಯ ಪ್ರಮಾಣ ಆತಂಕವನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಸೂರ್ಯನ ಪ್ರಖರ ಬಿಸಿಲಿನ ಶಾಖದಿಂದ ಜಲಾಶಯದ ನೀರು ಆವಿಯಾಗುವ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದೆ. ಜಗತ್ತಿನ ಎಲ್ಲಾ ಜಲಾಶಯಗಳಲ್ಲಿ ಶೇಖರವಾಗಿರುವ ನೀರಿನಲ್ಲಿ 170 ಘನ ಚ.ಕಿ.ಮೀ.ನಷ್ಟು ನೀರು ವಾರ್ಷಿಕವಾಗಿ ಆವಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ಜಗತ್ತಿನಲ್ಲಿ ಬಳಕೆಯಾಗುತ್ತಿರುವ ಕುಡಿಯುವ ನೀರಿನ ಪ್ರಮಾಣದ ಶೇ.7 ರಷ್ಟು. ಈಜಿಪ್ಟ್ನ ನೈಲ್ ನದಿಯ ನಾಸರ್ ಜಲಾಶಯದಿಂದ ಆವಿಯಾಗುವ ನೀರಿನ ಪ್ರಮಾಣ 11.2 ಘನ ಚ.ಕಿ.ಮೀ. ಅಂದರೆ ಈ ನೀರು ಆಫ್ರಿಕಾ ಖಂಡದ ಎಲ್ಲಾ ರಾಷ್ಟ್ರಗಳು ಗೃಹ ಬಳಕೆಗೆ ಉಪಯೋಗಿಸುತ್ತಿರುವ ಪ್ರಮಾಣದಷ್ಟು.

ಮೀನು ಸಂತತಿಯ ಅವಸಾನ

ಅಭಿವೃದ್ಧಿ ಯುಗದ ರಭಸದ ಬೆಳವಣಿಗೆಯಲ್ಲಿ, ನಮ್ಮಗಳ ಚಿಂತನಾ ಲಹರಿ ನಾಗಾಲೋಟದಲ್ಲಿ ಓಡುತ್ತಿರುವಾಗ, ಅಭಿವೃದ್ಧಿಯ ಯೋಜನೆಯಿಂದಾಗುವ ಸಾಫಲ್ಯದ ಜೊತೆ ಅನಾಹುತಗಳ ಕಡೆಗೂ ನಮ್ಮ ಗಮನವಿರಬೇಕು. ಜೀವಜಾಲದ ಸೂಕ್ಷ್ಮತೆಯನ್ನು ಸಾವಧಾನವಾಗಿ ಅವಲೋಕಿಸುವ ಗುಣವೇ ನಮ್ಮಿಂದ ದೂರವಾಗಿದೆ. ಅಣೆಕಟ್ಟು, ಜಲಾಶಯ, ಅವುಗಳಿಂದ ದೊರೆಯುವ ನೀರು, ವಿದ್ಯುತ್ ಮಾತ್ರ ನಮ್ಮ ಕೇಂದ್ರ ಗುರಿಯಾಗಿದೆ. ನದಿಯ ನೀರಿನ ಓಟಕ್ಕೆ ತಡೆಯೊಡ್ಡಿದ ಪರಿಣಾಮ ಸಾವಿರಾರು ಜಾತಿಯ ಮೀನುಗಳ ಸಂತತಿಗೆ ನಾವು ಅಡ್ಡಿಯಾಗಿದ್ದೇವೆ ಎಂಬ ಅಂಶವೇ ನಮಗೆ ಮರೆತು ಹೋಗಿರುವುದು ವರ್ತಮಾನದ ದುರಂತ.

ಅಮೆರಿಕಾದ ಕೊಲಂಬಿಯಾ ನದಿಯೊಂದರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮೊದಲು 10 ರಿಂದ 16 ದಶಲಕ್ಷದಷ್ಟಿದ್ದ ಸಾಲ್ಮನ್ ಜಾತಿಯ ಮೀನುಗಳ ಸಂಖ್ಯೆ ನಂತರದ ದಿನಗಳಲ್ಲಿ 1.5 ದಶಲಕ್ಷಕ್ಕೆ ಇಳಿಯಿತು. ಈ ನದಿಯುದ್ದಕ್ಕೂ 30 ಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ಮೀನುಗಾರಿಕೆಯಿಂದ ದೊರೆಯುತ್ತಿದ್ದ 6.5 ಶತಕೋಟಿ ಡಾಲರ್ ಆದಾಯಕ್ಕೆ ಧಕ್ಕೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಪಾಕಿಸ್ತಾನದಲ್ಲಿ ಹಲ್ಸಾ ಎಂಬ ಅಪರೂಪದ ಮೀನಿನ ಸಂತತಿ ಸೇರಿದಂತೆ ಮೊಸಳೆ, ಡಾಲ್ಫಿನ್, ಸೀಗಡಿ ಇವುಗಳ ಸಂತಾನೋತ್ಪತ್ತಿ ಕುಂಠಿತಗೊಂಡಿದೆ.

ಇವುಗಳ ಸಂತಾನೋತ್ಪತ್ತಿಗಾಗಿ ಹಾಗೂ ನದಿ ಮತ್ತು ಜಲಾಶಯಗಳ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಜಗತ್ತಿನ ಬಹುತೇಕ ರಾಷ್ಟ್ರಗಳು ವಾರ್ಷಿಕವಾಗಿ ಕೋಟ್ಯಾಂತರ ಹಣವನ್ನು ವ್ಯಯಿಸುತ್ತಿವೆ.

ಅಮೆರಿಕಾ ದೇಶವೊಂದೆ ಸಾಲ್ಮನ್ ಜಾತಿಯ ಮೀನಿನ ರಕ್ಷಣೆಗಾಗಿ ಕೊಲಂಬಿಯಾ ನದಿ ಪಾತ್ರದಲ್ಲಿ 350 ದಶಲಕ್ಷ ಡಾಲರ್ ಹಣವನ್ನು ಪ್ರತಿ ವರ್ಷ ಖರ್ಚು ಮಾಡುತ್ತಿದೆ.

ಸರಕಾರಗಳು ಏನೇ ಕಸರತ್ತು ನಡೆಸಿದರೂ ಮೀನುಗಳ ಸಂತಾನೋತ್ಪತ್ತಿ ಯೋಜನೆ ವಿಫಲವಾಗಿದೆ. ಸಮುದ್ರದ ಉಪ್ಪು ನೀರಿನಿಂದ ಹೊರ ಬರುತ್ತಿದ್ದ ಹಲವು ಜಾತಿಯ ಮೀನುಗಳು, 15 ದಿನಗಳ ಕಾಲ ಸತತವಾಗಿ ನದಿಗಳಲ್ಲಿ ಈಜಿ, ಸಿಹಿನೀರಿನಲ್ಲಿ ಸಂತಾನೋತ್ಪತ್ತಿ ನಡೆಸಿ ಮತ್ತೆ ತಮ್ಮ ಮರಿಗಳೊಂದಿಗೆ ಸಮುದ್ರ ಸೇರುತ್ತಿದ್ದವು. ಅವುಗಳ ಸರಾಗ ಹಾಗೂ ಸುದೀರ್ಘ ಪಯಣಕ್ಕೆ ಅಣೆಕಟ್ಟು ಅಡ್ಡ ಬಂದ ಪ್ರಯುಕ್ತ ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆಗೆ ಕುತ್ತು ಬಂದಿತು. ಕೆಲವು ರಾಷ್ಟ್ರಗಳಲ್ಲಿ ಅಣೆಕಟ್ಟು ಪ್ರದೇಶದ ಪಕ್ಕದಲ್ಲಿ ನದಿಗೆ ಬೈಪಾಸ್ ರೀತಿಯಲ್ಲಿ ಕೃತಕ ನದಿ ನಿರ್ಮಿಸಿ ಮೀನುಗಳ ಸಂತಾನೋತ್ಪತ್ತಿಗೆ ಪ್ರಯತ್ನಿಸಿದರೂ ಕೂಡ ಈ ಯೋಜನೆ ವಿಫಲವಾಯ್ತು.

ಇಷ್ಟೆಲ್ಲಾ ಅನಾಹುತಗಳ ಹಿಂದೆ, ಅಣೆಕಟ್ಟು ನಿರ್ಮಾಣಕ್ಕೆ ಮುನ್ನ, ಪರಿಸರದ ಮೇಲಿನ ಪರಿಣಾಮ, ಯೋಜನೆಯ ಸಾಧ್ಯತೆಗಳ ಬಗ್ಗೆ ಸಮೀಕ್ಷಾ ವರದಿ ತಯಾರಿಸುವ ಅಂತರಾಷ್ಟ್ರೀಯ ಮಾಫಿಯಾ ಒಂದಿದೆ. ಇದು ಬಹುರಾಷ್ಟ್ರ ಕಂಪನಿಗಳ, ಸಾಲನೀಡುವ ವಿಶ್ವಬ್ಯಾಂಕ್ನ ಕೈಗೊಂಬೆಯಂತೆ ವರ್ತಿಸುತ್ತಿದೆ.

ಪರಿಸರದ ಮೇಲಿನ ಪರಿಣಾಮ ಕುರಿತು ನಡೆಸಲಾಗುವ ಬಹುತೇಕ ಅಧ್ಯಯನಗಳು ಅಮೆರಿಕಾದ ಪ್ರಭಾವದಿಂದ ಪ್ರೇರಿತಗೊಂಡು, ಅಣೆಕಟ್ಟುಗಳ ನಿರ್ಮಾಣದಿಂದ ಆಗಬಹುದಾದ ವಾಸ್ತವ ಚಿತ್ರಣವನ್ನು ಮರೆಮಾಚಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಅಣೆಕಟ್ಟು ಕುರಿತಾದ ನೈಸರ್ಗಿಕ ಪರಿಣಾಮ ಹಾಗೂ ಸಾಧಕ-ಬಾಧಕ ಕುರಿತ ವರದಿ ನೀಡುವ ಹಾಗೂ ಅಣೆಕಟ್ಟು ನಿರ್ಮಾಣ ಕಾಮಗಾರಿ ಕುರಿತು ಸಲಹೆ ನೀಡುವ ವೃತ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪ್ರಮಾಣದ ದಂಧೆಯಾಗಿ ಬೆಳೆದಿದೆ. 1990ರ ದಶಕದಲ್ಲಿ ಬ್ರಿಟೀಷ್ ಕನ್ಸಲ್ಟೆಂಟ್ ಬ್ಯೂರೊ ಎನ್ನುವ ಸಂಸ್ಥೆ 2.5 ಬಿಲಿಯನ್ ಡಾಲರ್ ಹಣವನ್ನು ಕೇವಲ ವರದಿ ಮತ್ತು ಸಲಹೆ ನೀಡುವುದರ ಮೂಲಕ ಗಳಿಸಿತ್ತು.

ಕಳೆದ ಒಂದು ದಶಕದಿಂದ ಅಣೆಕಟ್ಟು ಕಾಮಗಾರಿ ನಿರ್ವಹಿಸುವ ಬೃಹತ್ ಕಂಪನಿಗಳು ತಾವೇ ಇಂತಹ ಸಲಹಾ ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದು, ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ನೀಡುವ ವರದಿ ಅಣೆಕಟ್ಟು ನಿರ್ಮಾಣಕ್ಕೆ ಪೂರವಾಗಿರುತ್ತವೆ. ವರದಿಯಲ್ಲಿ ಕಾಣಿಸುವ ಮುಳುಗಡೆಯಾಗುವ ಪ್ರದೇಶ, ಅರಣ್ಯ, ಒಕ್ಕಲೆಬ್ಬಿಸುವ ಜನವಸತಿ ಪ್ರದೇಶ, ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ರೂಪಿಸುವ ಅಂದಾಜು ವೆಚ್ಚ ಇವೆಲ್ಲವೂ ನೈಜ ಸ್ಥಿತಿಯಿಂದ ದೂರವಾಗಿರುತ್ತವೆ. ಸರಕಾರಗಳು, ಅದರ ಮಂತ್ರಿಗಳು, ಅಧಿಕಾರಿಶಾಹಿ ಹೀಗೆ ಎಲ್ಲವನ್ನೂ, ಎಲ್ಲರನ್ನೂ ಏಕ ಕಾಲಕ್ಕೆ ನಿಭಾಯಿಸುವ ಕುಶಲತೆಯನ್ನು ಹೊಂದಿರುವ ಈ ಸಲಹಾ ಸಂಸ್ಥೆಗಳು, ಮಾಧ್ಯಮಗಳನ್ನು ದಿಕ್ಕು ತಪ್ಪಿಸುವ ಕಲೆಯನ್ನೂ ಸಹ ಕರಗತ ಮಾಡಿಕೊಂಡಿವೆ.

ಇದಕ್ಕೆ ಸ್ಪಷ್ಟ ಉದಾಹರಣೆಗಳೆಂದರೆ, ಥಾಯ್ಲೆಂಡ್‌ನ ನ್ಯಾಮ್ ಚೋಆನ್ ಅಣೆಕಟ್ಟು ನಿರ್ಮಾಣದ ಸಮಯ ಜೈವಿಕ ಪರಿಸರ ನಾಶವಾಗುವ ಪ್ರಮಾಣ ಕುರಿತಂತೆ ನೀಡಿದ ವರದಿಯಲ್ಲಿ 122 ಜಾತಿ ವನ್ಯ ಮೃಗಗಳ ಸಂತತಿಗೆ ಧಕ್ಕೆಯಾಗಲಿದೆ ಎಂದು ಹೇಳಲಾಗಿತ್ತು. ವಾಸ್ತವವಾಗಿ ರಾಯಲ್ ಫಾರೆಸ್ಟ್ ಡಿಪಾರ್ಟ್‌ಮೆಂಟ್ ನಡೆಸಿದ ಸಮೀಕ್ಷೆಯಲ್ಲಿ 338 ಜೈವಿಕ ವೈವಿಧ್ಯತೆಗಳಿಗೆ ಅಪಾಯವಾಗುವ ಸೂಚನೆ ಕಂಡು ಬಂತು,.

ಭಾರತದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಈ ಮೂರು ರಾಜ್ಯಗಳಲ್ಲೂ ಹರಿಯುವ ನರ್ಮದಾ ನದಿಗೆ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದಕ್ಕೆ ವಿಶ್ವಬ್ಯಾಂಕ್ ಹಣಕಾಸಿನ ನೆರವು ನೀಡಿದೆ. ಅಣೆಕಟ್ಟು ನಿರ್ಮಾಣದ ನೈಸರ್ಗಿಕ ಪರಿಣಾಮ ಕುರಿತಂತೆ ವಿಶ್ವಬ್ಯಾಂಕ್ ತಾನೇ ನಿಯೋಜಿಸಿದ್ದ ಸಂಸ್ಥೆಯಿಂದ ವರದಿ ತಯಾರಿಸಿದ್ದು, ಈವರೆಗೆ ಈ ವರದಿಯನ್ನು ಸಾರ್ವಜನಿಕವಾಗಿ ಇರಲಿ ಭಾರತ ಸರಕಾರಕ್ಕೂ ನೀಡಿಲ್ಲ.

ಹೀಗೆ ಅಣೆಕಟ್ಟು ನಿರ್ಮಾಣದ ಹಿಂದೆ ಅಗೋಚರ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಎಲ್ಲಾ ಅಡೆ-ತಡೆಗಳನ್ನು ಧ್ವಂಸ ಮಾಡುವಷ್ಟು ದೈತ್ಯ ಶಕ್ತಿಯನ್ನು ಪಡೆದಿವೆ.

(ಮುಂದುವರಿಯುವುದು)

ಈ ಸರಣಿಯ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ