Category Archives: ಜೀವನದಿಗಳ ಸಾವಿನ ಕಥನ

ಜೀವನದಿಗಳ ಸಾವಿನ ಕಥನ – 5

-ಡಾ.ಎನ್.ಜಗದೀಶ್ ಕೊಪ್ಪ

ಆಧುನಿಕ ಜಗತ್ತನ್ನು ಅಭಿವೃದ್ಧಿಯ ಯುಗ ಎಂದು ಕರೆಯುತ್ತಿರುವ ಈ ಸಂದರ್ಭದಲ್ಲಿ “ಅಭಿವೃದ್ಧಿ” ಕುರಿತಂತೆ ನಿರ್ವಚಿಸುತ್ತಿರುವ ಕ್ರಮ ಕೂಡ ವಿವಾದಕ್ಕೆ ಒಳಗಾಗಿದ್ದು ಈ ಕುರಿತ ನಮ್ಮ ಗ್ರಹಿಕೆ ಬದಲಾಗಬೇಕಾಗಿದೆ. ಎಲ್ಲವನ್ನೂ ವಿಶಾಲ ದೃಷ್ಟಿಕೋನದಿಂದ ನೋಡುವ ಬದಲು, ಸೂಕ್ಷ್ಮ ದೃಷ್ಟಿಕೋನದಿಂದ ನೋಡುವ, ಗ್ರಹಿಸುವ ನೆಲೆಗಟ್ಟು ಇದೀಗ ಅತ್ಯಗತ್ಯವಾಗಿದೆ. ವರ್ತಮಾನದ ಅರ್ಥಶಾಸ್ತ್ರ ಪರಿಭಾಷೆಯಲ್ಲಿ ವ್ಯವಹರಿಸುತ್ತಿರುವ ಜಗತ್ತು, ಸಾಮಾಜಿಕ ಹಾಗೂ ಚಾರಿತ್ರಿಕ ದೃಷ್ಟಿಕೋನದಿಂದಲೂ ತನ್ನನ್ನು ತಾನು ವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.

ಜಗತ್ತಿನ ಯಾವುದೇ ರಾಷ್ಟ್ರವಿರಲಿ, ನದಿಗಳ ಇಂದಿನ ನೈಜಸ್ಥಿತಿಯನ್ನು ಅರಿತಾಗ ನಮ್ಮ ಅಭಿವೃದ್ಧಿ ಕುರಿತಂತೆ ಗ್ರಹಿಕೆಯ ನೆಲೆಗಟ್ಟು ಖಂಡಿತಾ ಬದಲಾಗಬೇಕೆನಿಸುತ್ತದೆ. ಯಾಕೆಂದರೆ, ಯಾವ ಅಡೆ-ತಡೆ ಇಲ್ಲದೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳೆಂಬ ತಡೆಗೋಡೆ ನಿರ್ಮಾಣವಾಗುತ್ತಿದ್ದಂತೆ ನದಿಪಾತ್ರದ ಪರಿಸರವಷ್ಟೇ ಅಲ್ಲ, ನದಿಗಳ ಮೂಲ ಸ್ವರೂಪ ಹೇಳ ಹೆಸರಿಲ್ಲದಂತೆ ನಾಶವಾಯಿತು. ಅಣೆಕಟ್ಟುಗಳ ನಿರ್ಮಾಣದಿಂದಾಗಿ ಜಗತ್ತಿನಾದ್ಯಂತ ಬಹುತೇಕ ನದಿಗಳಿಗೆ ಸಮುದ್ರ ಸೇರುವ ಸಾಧ್ಯತೆ ಇಲ್ಲವಾಯಿತು. ಅಮೆರಿಕದಲ್ಲಿ ಹರಿಯುವ ಕೊಲರಾಡೊ ನದಿ 1960ರಿಂದೀಚೆಗೆ ತನ್ನ ಸುದೀರ್ಘ 50 ವರ್ಷಗಳಲ್ಲಿ ಪ್ರವಾಹ ಬಂದಾಗ ಎರಡು ಬಾರಿ ಸಮುದ್ರ ಸೇರಿದ್ದು ಬಿಟ್ಟರೆ, ಉಳಿದಂತೆ ಅಣೆಕಟ್ಟುಗಳ ಕೆಳಭಾಗದಲ್ಲೇ ಬತ್ತಿ ಹೋಗುತ್ತಿದೆ. ಇದು ಅಮೆರಿಕಾದ ನದಿಯೊಂದರ ವಸ್ತು ಸ್ಥಿತಿ ಮಾತ್ರವಲ್ಲ, ಜಗತ್ತಿನ ಎಲ್ಲಾ ನದಿಗಳ ಶೋಚನೀಯ ಸ್ಥಿತಿಯೂ ಇದೇ ಆಗಿದೆ.

ಅಣೆಕಟ್ಟುಗಳ ನಿರ್ಮಾಣವಾದ ಮೇಲೆ, ನದಿಗಳ ನೈಜ ಹರಿವಿನ ವೇಗ ಕುಂಠಿತಗೊಂಡು, ಅವುಗಳ ಇಕ್ಕೆಲಗಳ ಮುಖಜಭೂಮಿಯಲ್ಲಿ ಮಣ್ಣಿನ ಫಲವತ್ತತೆಗೆ ಧಕ್ಕೆಯುಂಟಾಯಿತು. ಅಲ್ಲದೆ ನದಿಗಳಲ್ಲಿ ಮೀನುಗಾರಿಕೆಯನ್ನೇ ಕುಲ ಕಸುಬಾಗಿ ಬದುಕುತ್ತಿದ್ದ ಅಸಂಖ್ಯಾತ ಕುಟುಂಬಗಳು ತಮ್ಮ ವೃತ್ತಿ ಬದುಕಿನಿಂದ ವಂಚಿತವಾದವು. ಅಮೆರಿಕಾದಲ್ಲಿ ನದಿಯ ಮಕ್ಕಳೆಂದು ಕರೆಯಲ್ಪಡುತ್ತಿದ್ದ, ಶತಮಾನದ ಹಿಂದೆ 1200 ಕುಟುಂಬಗಳಿದ್ದ ಕಿಕಾಪೂ ಜನಾಂಗ, ಈಗ 40 ಕುಟುಂಬಗಳಿಗೆ ಇಳಿದಿದ್ದು, ಈ ಆದಿವಾಸಿಗಳು ಮೀನುಗಾರಿಕೆಯಿಂದ ವಂಚಿತರಾಗಿ ಗೆಡ್ಡೆ-ಗೆಣಸುಗಳನ್ನು ನಂಬಿ ಬದುಕುತ್ತಿದ್ದಾರೆ.

ಜಗತ್ತಿನ ಯಾವುದೇ ನದಿಯಿರಲಿ, ಪ್ರತಿ ನದಿಗೂ ಹರಿಯುವಿಕೆಯಲ್ಲಿ, ನೀರಿನ ಗುಣದಲ್ಲಿ, ಉದ್ದ-ವಿಸ್ತಾರದಲ್ಲಿ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಕೆಲವು ನದಿಗಳು ಕೆಂಪಾಗಿ ರಭಸದಿಂದ ಹರಿಯುವ ಗುಣ ಹೊಂದಿದ್ದರೆ, ಇನ್ನು ಕೆಲವು ನದಿಗಳು ಅತ್ಯಂತ ವಿಶಾಲವಾಗಿ (ಇವುಗಳ ಅಗಲ 2 ರಿಂದ 4 ಕಿ.ಮೀ.) ನಿಧಾನವಾಗಿ ಹರಿಯುವ ಗುಣ ಹೊಂದಿವೆ. ಭಾರತದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಗೆ ಇರುವ ವೇಗ, ಗಂಗೆ ಅಥವಾ ಕಾವೇರಿಗೆ ಇಲ್ಲ. ಇಂತಹ ವಿಶಿಷ್ಠ ಗುಣಗಳಿಗೆ ಅನುಗುಣವಾಗಿ ನದಿಪಾತ್ರದಲ್ಲಿ ಜೈವಿಕ ವೈವಿಧ್ಯತೆ, ಪರಿಸರ, ಕೃಷಿ ಚಟುವಟಿಕೆ ರೂಪುಗೊಂಡಿರುತ್ತದೆ.

ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣದಿಂದ ಆದ ಅತ್ಯಂತ ದೊಡ್ಡ ಅನಾಹುತವೆಂದರೆ, ಹಲವಾರು ಜಾತಿಯ ಮೀನುಗಳ ವಿನಾಶ. ವಂಶಾಭಿವೃದ್ಧಿಗಾಗಿ ನದಿಗಳಲ್ಲಿ ಸಾವಿರಾರು ಕಿ.ಮೀ. ಈಜಿ, ಮೊಟ್ಟೆ ಇಟ್ಟು ಮರಿ ಮಾಡುತ್ತಿದ್ದ ಮೀನುಗಳ ಸಂತತಿ ಹಾಗೂ ಸಮುದ್ರದ ಉಪ್ಪು ನೀರಿನಿಂದ ನದಿಗಳ ಸಿಹಿ ನೀರಿಗೆ ಆಗಮಿಸಿ, ವಂಶವನ್ನು ವೃದ್ಧಿಸುತ್ತಿದ್ದ ಅನೇಕ ಮೀನುಗಳ ಸಂತತಿ ಈಗ ಕೇವಲ ನೆನಪು ಮಾತ್ರ.

ಇತ್ತೀಚೆಗೆ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಕುರಿತಂತೆ ಗಂಭೀರ ಅಧ್ಯಯನ ನಡೆಯುತ್ತಿದ್ದು, ಸಂಗ್ರಹವಾದ ನೀರಿನ ಗುಣ, ಉಷ್ಣಾಂಶಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದು ದೃಢಪಟ್ಟಿದೆ. ಅಲ್ಲದೆ ಜಲಾಶಯದ ನೀರು ಹಲವಾರು ತಿಂಗಳ ಕಾಲ ಶೇಖರವಾಗುವುದರಿಂದ, ನೀರಿನ ಕೊಳೆಯುವಿಕೆಯ ಪ್ರಕ್ರಿಯೆಯಿಂದಾಗಿ ಅನೇಕ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.

ಸ್ಪೀಡನ್ ಮೂಲದ ಪರಿಸರ ತಜ್ಞರು, ಏಷ್ಯಾ, ಅಮೆರಿಕಾ, ಆಫ್ರಿಕಾ ಖಂಡಗಳು ಸೇರಿದಂತೆ ಜಗತ್ತಿನಾದ್ಯಂತ ನೂರಾರು ನದಿಗಳಲ್ಲಿ ಈ ಕುರಿತು ಅಧ್ಯಯನ ಕೈಗೊಂಡು, ನೀರಿನ ಮೂಲ ಗುಣದ ಬದಲಾವಣೆಯ ಬಗ್ಗೆ ಖಚಿತಪಡಿಸಿದ್ದಾರೆ. ಇದರಿಂದಾಗಿ ನಿಖರವಾದ ಪರಿಣಾಮ ಅರಿಯಬೇಕಾದರೆ ನಾವು ಕನಿಷ್ಠ 75 ರಿಂದ 90 ವರ್ಷ ಕಾಯಬೇಕು ಎಂದಿದ್ದಾರೆ. ಈಗಾಗಲೇ ಸಂಗ್ರಹವಾದ ನದಿನೀರಿನಲ್ಲಿರುವ ಖನಿಜಾಂಶಗಳು ಜಲಾಶಯದಲ್ಲಿ ಕರಗುವುದರಿಂದ ಲವಣಾಂಶ ಹೆಚ್ಚುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಅಣೆಕಟ್ಟು ಮತ್ತು ಜಲಾಶಯಗಳಿಂದ ಆದ ಮತ್ತೊಂದು ನೈಸರ್ಗಿಕ ದುರಂತವೆಂದರೆ, ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋದ ಅರಣ್ಯ ಹಾಗೂ ಅಪರೂಪದ ಗಿಡ ಮೂಲಿಕೆಯ ಸಸ್ಯ ಸಂತತಿ. ಈಗಾಗಲೇ ವಿಶ್ವದಾದ್ಯಂತ 45 ಸಾವಿರ ಚ.ಕಿ.ಮೀ. ಅರಣ್ಯ ಪ್ರದೇಶ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಗಿದೆ.

ಶ್ರೀಲಂಕಾದಲ್ಲಿ ನಿರ್ಮಿಸಿದ 5 ಜಲಾಶಯಗಳಿಂದಾಗಿ 8 ಅಪರೂಪದ ಜೀವಿಗಳ ಸಂತತಿ ವಿನಾಶದ ಅಂಚಿಗೆ ತಲುಪಿವೆ. ಇವುಗಳಲ್ಲಿ ಕೆಂಪುಮೂತಿಯ ಲಂಗೂರ್(ಮಂಗ ಪ್ರಭೇದ) ಸಹ ಸೇರಿದೆ. ಜೊತೆಗೆ 800 ಆನೆಗಳಿಗೆ ವಲಸೆ ಹೋಗುವ ದಾರಿ ಬಂದ್‌ ಆಗಿ ಅವುಗಳು ಅತಂತ್ರವಾಗಿವೆ. ಇವು ಪರಿಸರ ಮತ್ತು ಪ್ರಾಣಿಗಳ ಕುರಿತ ಕತೆಯಾದರೆ, ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದ ಜನತೆಯ ನೋವು ಜಗತ್ತಿನಾದ್ಯಂತ ಅರಣ್ಯರೋದನವಾಗಿದೆ. ಇಂತಹ ಯೋಜನೆಗಳ ಫಲವಾಗಿ ಸ್ಥಳೀಯರನ್ನು ಒಕ್ಕಲೆಬ್ಬಿಸಿ, ಬೇರೆಡೆ ನಿವೇಶನ, ಭೂಮಿ ನೀಡಿದ್ದರೂ ಸಹ ಅವೆಲ್ಲಾ ಅರಣ್ಯ ಪ್ರದೇಶವೇ ಆಗಿವೆ. ಒಂದೆಡೆ ಹಿನ್ನೀರಿನಲ್ಲಿ, ಮತ್ತೊಂದೆಡೆ ಜನವಸತಿ ಪ್ರದೇಶದ ನೆಪದಲ್ಲಿ ಅರಣ್ಯ ಭೂಮಿಯ ವಿಸ್ತಾರ ಕುಗ್ಗುತ್ತಿದ್ದು, ಅರಣ್ಯಜೀವಿಗಳೆಲ್ಲಾ ನಾಡಿನತ್ತ ಮುಖಮಾಡತೊಡಗಿವೆ. ಇವುಗಳ ಜೊತೆ ನಿಸರ್ಗದ ಮಡಿಲಲ್ಲಿ, ಸ್ವಚ್ಛಂದವಾಗಿ ಧುಮ್ಮಿಕ್ಕಿ ಹರಿವ ನದಿಗಳ ಜಲಧಾರೆಯಿಂದ ಕಂಗೊಳಿಸುತ್ತಿದ್ದ ಜಲಪಾತಗಳೆಲ್ಲಾ ಈಗ ಕಣ್ಮರೆಯಾಗುತ್ತಿವೆ. ಮಳೆಗಾಲದಲ್ಲಿ ನದಿಯ ಪ್ರವಾಹದ ಪರಿಣಾಮ, ಜಲಾಶಯದಿಂದ ಬಿಡುಗಡೆಗೊಂಡ ನೀರಿನಿಂದಾಗಿ ಕೆಲವು ಕಾಲ ಜೀವಂತವಾಗಿರುವ ಇವು ಉಳಿದ ಋತುಮಾನಗಳಲ್ಲಿ ಅವಶೇಷಗಳಂತೆ ಕಾಣುತ್ತವೆ. ಇಂದು ಬಹುತೇಕ ಜಲಪಾತಗಳು ತಮ್ಮ ಹಿಂದಿನ ವೈಭವವನ್ನು ಕಳೆದುಕೊಂಡಿವೆ.

ಜಲಾಶಯಗಳ ನಿರ್ಮಾಣದಿಂದಾಗಿ ನದಿ ನೀರಿನಲ್ಲಿದ್ದ ಖನಿಜ ಮತ್ತು ಲವಣಾಂಶಗಳ ನಷ್ಟ ಮತ್ತೊಂದು ಬಗೆಯ ದುರಂತ. ಪರ್ವತ ಗಿರಿ ಶ್ರೇಣಿಗಳಿಂದ ಹರಿಯುತ್ತಿದ್ದ ನೀರಿನಲ್ಲಿದ್ದ ಖನಿಜ, ಲವಣಾಂಶಗಳು ಜಲಚರಗಳಿಗೆ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ ನದಿ ತೀರಗಳಿಗೆ ಗಟ್ಟಿತನವನ್ನು ಒದಗಿಸಿ, ಭೂ ಸವೆತವನ್ನು ತಡೆಗಟ್ಟುತ್ತಿತ್ತು. ಯಾವಾಗ ಜಲಾಶಯಗಳು ನಿರ್ಮಾಣವಾದವೋ, ನದಿ ನೀರಿನ ಖನಿಜ, ಲವಣಾಂಶಗಳೆಲ್ಲಾ ಜಲಾಶಯದ ತಳಭಾಗ ಸೇರಿ, ಶೇಖರವಾಗುತ್ತಿರುವ ಹೂಳಿನಲ್ಲಿ ಮಿಶ್ರವಾಗಿ, ಸಿಹಿ ನೀರನ್ನು ಉಪ್ಪು ನೀರನ್ನಾಗಿ ಪರಿವರ್ತಿಸಿದವು. ಇದಲ್ಲದೆ ಅಣೆಕಟ್ಟು ನಿರ್ಮಾಣದಿಂದ ನದಿಯ ತೀರಗಳು ಶಿಥಿಲಗೊಂಡವಲ್ಲದೆ, ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಹೊರಬಿಟ್ಟ ನೀರಿನ ಜೊತೆ ಹೂಳೂ ಸೇರಿ ನದಿಯ ಇಕ್ಕೆಲಗಳ ಫಲವತ್ತಾದ ಭೂಮಿಯನ್ನು ಚೌಳುಭೂಮಿಯನ್ನಾಗಿ ಮಾಡಿದವು. ಅಣೆಕಟ್ಟು ನಿರ್ಮಾಣಕ್ಕೆ ಮೊದಲು ನದಿಗಳು ನೀರಿನ ಜೊತೆ ತಂದು ಹಾಕುತ್ತಿದ್ದ ಮೆಕ್ಕಲು ಮಣ್ಣಿನಿಂದ ಈ ಭೂಮಿಗಳು ವಂಚಿತವಾದವು.

ಅಮೆರಿಕಾದ ಕೊಲರಾಡೊ ನದಿಗೆ ಕಟ್ಟಿದ ಹೂವರ್ ಅಣೆಕಟ್ಟಿನ ಜಲಾಶಯದ ಕೆಳಭಾಗದ 145 ಕಿ.ಮೀ. ಉದ್ದಕ್ಕೂ 110 ದಶಲಕ್ಷ ಕ್ಯೂಬಿಕ್ ಮೀಟರ್ ಸವಕಲು ಮಣ್ಣು ಸಮುದ್ರ ಸೇರಿದೆ. ಅಲ್ಲದೆ ನದಿಯ ಆಳ ಕೇವಲ 12 ಅಡಿಗೆ ಸೀಮಿತಗೊಂಡಿದೆ. ಈಜಿಪ್ಟ್‌ನ ನೈಲ್ ನದಿ ಅಲ್ಲಿನ ಕೃಷಿಕರ ಪಾಲಿಗೆ ವರದಾನವಾಗಿತ್ತು. ಪ್ರತಿ ವರ್ಷ ಪ್ರವಾಹದ ವೇಳೆ ಅದು ಹೊತ್ತು ತರುತ್ತಿದ್ದ ಫಲವತ್ತಾದ ಮೆಕ್ಕಲು ಮಣ್ಣು ಕೃಷಿ ಚಟುವಟಿಕೆಗೆ ಯೋಗ್ಯ ಗೊಬ್ಬರದಂತೆ ಬಳಕೆಯಾಗುತ್ತಿತ್ತು. ಆದರೆ ಈ ನದಿಗೆ ನಾಸರ್ ಅಣೆಕಟ್ಟು ನಿರ್ಮಾಣವಾದ ನಂತರ, ನದಿ ನೀರಿನಲ್ಲಿ ಹರಿಯುವ ಖನಿಜ, ಲವಣಾಂಶದ ಬದಲು, ಜಲಾಶಯದ ನೀರಿನಲ್ಲಿರುವ ಅಲ್ಯುಮಿನಿಯಂ ಮತ್ತು ಕಬ್ಬಿಣಾಂಶ ರೈತರ ಕೃಷಿಭೂಮಿಗೆ ಜಮೆಯಾಗತೊಡಗಿವೆ. ಕೃಷಿ ಭೂಮಿಯಲ್ಲಿನ ಈ ಅಂಶಗಳನ್ನು ತಗ್ಗಿಸಲು ರೈತರು ವಿವಿಧ ರಾಸಾಯನಿಕಗಳನ್ನು ಬಳಸುತ್ತಾ ಬಸವಳಿದಿದ್ದಾರೆ. ಭೂಮಿ ಕೂಡ ಬಂಜರಾಗಿ ಪರಿವರ್ತನೆಯಾಗುತ್ತಿದೆ.

ಅಮೆರಿಕಾದಲ್ಲಿ ಹರಿಯುವ ಮಿಸಿಸಿಪ್ಪಿ ನದಿಗೆ ಮಿಸ್ಸಾರಿ ಎಂಬಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ, 1953ರಿಂದ ಇಲ್ಲಿಯವರೆಗೆ ಈ ಅಣೆಕಟ್ಟಿನ ಪ್ರಭಾವದಿಂದಾಗಿ ಲೂಸಿಯಾನ, ಅಂದರೆ ಜಲಾಶಯದ ಕೆಳಗಿನ ಪ್ರಾಂತ್ಯದಲ್ಲಿ, ಜಲಾಶಯದಿಂದ ಬಿಡುಗಡೆ ಮಾಡಿದ ನೀರಿನ ರಭಸಕ್ಕೆ 10 ಸಾವಿರ ಹೆಕ್ಟೇರ್ ಭೂಮಿ ನದಿ ನೀರಿನಲ್ಲಿ ಕೊಚ್ಚಿಹೋಗುವುದರ ಜೊತೆಗೆ ಇದರಲ್ಲಿ ಅರ್ಧದಷ್ಟು ಭೂಮಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದಿದೆ.

ಸಹಜವಾಗಿ ಸಮುದ್ರ ಸೇರುತ್ತಿದ್ದ ನದಿಗಳ ಸಹಜ ಪ್ರಕ್ರಿಯೆ ಸ್ಥಗಿತಗೊಂಡ ನಂತರ, ಅನೇಕ ಕಡಲ ತೀರಗಳು ತಮ್ಮ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಂಡು ವಿಕೃತ ರೂಪ ತಾಳಿವೆ. ಇವುಗಳ ಸೌಂದರ್ಯೀಕರಣಕ್ಕಾಗಿ ಸರಕಾರಗಳು ಕೋಟ್ಯಾಂತರ ಡಾಲರ್ ವ್ಯಯ ಮಾಡುತ್ತಿವೆ.

(ಮುಂದುವರಿಯುವುದು)

Three Gorges Dam

ಜೀವನದಿಗಳ ಸಾವಿನ ಕಥನ – 4

– ಡಾ.ಎನ್.ಜಗದೀಶ್ ಕೊಪ್ಪ

ಎರಡನೇ ಮಹಾಯುದ್ಧದ ನಂತರ ರಷ್ಯಾದಲ್ಲಿ ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ, ರಷ್ಯಾ ಮತ್ತು ಉಕ್ರೇನ್ ಪ್ರದೇಶಗಳಲ್ಲಿ ಜಲವಿದ್ಯುತ್ಗಾಗಿ ಅಸಂಖ್ಯಾತ ಅಣೆಕಟ್ಟುಗಳು ನಿರ್ಮಾಣಗೊಂಡವು. ರಷ್ಯಾದ ಮಹಾನದಿಯಾದ ವೋಲ್ಗಾ ನದಿಯೊಂದಕ್ಕೇ ಆರು ಅಣೆಕಟ್ಟೆಗಳನ್ನು ನಿರ್ಮಿಸಲಾಯಿತು.

ಯೂರೋಪ್, ಅಮೆರಿಕಾ, ರಷ್ಯಾವನ್ನು ಹೊರತುಪಡಿಸಿದರೆ, ಏಷ್ಯಾದ ಬಹುತೇಕ ರಾಷ್ಟ್ರಗಳು 19 ಮತ್ತು 21ನೇ ಶತಮಾನದಲ್ಲಿ ಬ್ರಿಟೀಷ್ ವಸಾಹತು ಪ್ರದೇಶಗಳಾಗಿದ್ದ ಕಾರಣ, ಇಲ್ಲಿ ಬ್ರಿಟೀಷರ ಅವಶ್ಯಕತೆಗೆ ತಕ್ಕಂತೆ (ಭಾರತವೂ ಸೇರಿ) ಹಲವು ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

ಬ್ರಿಟೀಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ, ಒಣ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಿ, ರೈತರಿಗೆ ಕಬ್ಬು ಮತ್ತು ಹತ್ತಿ ಬೆಳೆಯಲು ಪ್ರೋತ್ಸಾಹಿಸಿದರು. ಇದರಲ್ಲಿ ಅವರ ಸ್ವ-ಹಿತಾಸಕ್ತಿಯೂ ಅಡಗಿತ್ತು. ಇಂಗ್ಲೆಂಡ್‌ನ ಕೈಗಾರಿಕೆಗಳಿಗೆ ತಮ್ಮ ವಸಾಹತು ಪ್ರದೇಶಗಳಿಂದ ಕಚ್ಛಾ ವಸ್ತುಗಳನ್ನು ಸರಬರಾಜು ಮಾಡುವುದು ಅವರ ಗುರಿಯಾಗಿತ್ತು.

1902ರಲ್ಲಿ ಇದೇ ಬ್ರಿಟೀಷರು ಈಜಿಪ್ಟ್‌ನ ನೈಲ್ ನದಿಗೆ ಐಸ್ವಾನ್ ಅಣೆಕಟ್ಟು ನಿರ್ಮಿಸಿ, ಅಲ್ಲಿ ಹತ್ತಿ ಬೆಳೆಯುವಂತೆ ಪ್ರೋತ್ಸಾಹಿಸಿ, ಲಂಕಾಷ್ವರ್ ಮಿಲ್‌ಗಳಿಗೆ ಹತ್ತಿ ಪೂರೈಕೆಯಾಗುವಂತೆ ನೋಡಿಕೊಂಡರು.

ಎರಡನೇ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ಉಂಟಾದ ರಾಜಕೀಯ ವಿದ್ಯಾಮಾನಗಳಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಬ್ರಿಟೀಷರಿಂದ ಮುಕ್ತಿ ಪಡೆದವು. ಅಷ್ಟರ ವೇಳೆಗೆ ರಷ್ಯಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಅಣೆಕಟ್ಟುಗಳ ನಿರ್ಮಾಣವೊಂದೇ ಮಾರ್ಗ ಮತ್ತು ಮುಕ್ತಿ ಎಂಬ ಪರಿಕಲ್ಪನೆ ಚಾಲ್ತಿಯಲ್ಲಿದ್ದ ಕಾರಣ, ಇದು ಸ್ವಾತಂತ್ರ್ಯಾ ನಂತರ ಭಾರತದ ನಾಯಕರ ಮೇಲೂ ಪ್ರಭಾವ ಬೀರಿತು. ಈ ಕಾರಣಕ್ಕಾಗಿಯೇ 1947 ರಿಂದ 1980 ರವರೆಗೆ ರಾಷ್ಟ್ರದ ಒಟ್ಟು ಖರ್ಚಿನಲ್ಲಿ ಶೇ.15 ರಷ್ಟನ್ನು ಭಾರತ ಸರಕಾರ ಅಣೆಕಟ್ಟುಗಳ ನಿರ್ಮಾಣಕ್ಕೇ ಮೀಸಲಾಗಿಟ್ಟಿತು. 1980 ರ ವೇಳೆಗೆ ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಮಧ್ಯಮ ಹಾಗೂ ಬೃಹತ್ ಗಾತ್ರದ ಅಣೆಕಟ್ಟುಗಳು ನಿರ್ಮಾಣಗೊಂಡವು.

ಇದರ ಪರಿಣಾಮವೆಂದರೆ, ರಷ್ಯಾ ಮತ್ತು ಅಮೆರಿಕಾದ ತಂತ್ರಜ್ಞರಿಗೆ ಅಣೆಕಟ್ಟುಗಳ ನಿರ್ಮಾಣ ಕುರಿತಂತೆ ಸಲಹೆ, ತಂತ್ರಜ್ಞಾನ ನೀಡುವ ವೃತ್ತಿ ಒಂದು ಬೃಹತ್ ದಂಧೆಯಾಗಿ ಬೆಳೆಯಿತು. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಿಸಿರುವ ಚೀನಾ ದೇಶಕ್ಕೆ 1949 ರವರೆಗೆ ರಷ್ಯಾ, ಹಾಗೂ 1960 ರವರೆಗೆ ಅಮೆರಿಕಾದ ಇಂಜಿನಿಯರ್ಗಳು ಸಲಹೆ ನೀಡಿದ್ದಾರೆ.

ಚೀನಾದಲ್ಲಿ 1960 ರಿಂದ 1990 ರವರೆಗೆ ವರ್ಷವೊಂದಕ್ಕೆ 600 ಅಣೆಕಟ್ಟುಗಳು ನಿರ್ಮಾಣಗೊಂಡವು. ಅಲ್ಲಿನ ಹಳದಿ ನದಿಗೆ ನಿರ್ಮಿಸಲಾದ ಜಗತ್ತಿನ ಬೃಹತ್ ಅಣೆಕಟ್ಟು 2005 ರಲ್ಲಿ ಪೂರ್ಣಗೊಂಡಿತು.

ಜಗತ್ತಿನಾದ್ಯಂತ ಅಣೆಕಟ್ಟುಗಳ ನಿರ್ಮಾಣಕ್ಕೆ ವಿಶ್ಚಬ್ಯಾಂಕ್ ಆರ್ಥಿಕ ನೆರವು ನೀಡುವ ಸಂಸ್ಥೆಯಾಗಿದೆ. ಇಂದು ವಿಶ್ವದಾದ್ಯಂತ 100 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಣೆಕಟ್ಟುಗಳ ನಿರ್ಮಾಣಕ್ಕಾಗಿ 75 ಶತಕೋಟಿ ಡಾಲರ್ ಹಣವನ್ನು ವಿಶ್ವಬ್ಯಾಂಕ್ ಸಾಲವಾಗಿ ನೀಡಿದೆ. ಇದಲ್ಲದೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಆಹಾರ ಮತ್ತು ಕೃಷಿ ಸಂಘಟನೆ(ಎಫ್.ಎ.ಒ.), ವಿಶ್ವ ಸಂಸ್ಥೆ ಅಭಿವೃದ್ಧಿ ಯೋಜನೆಯಡಿ(ಯು.ಎನ್.ಡಿ.ಪಿ.), ಅಮೆರಿಕಾದ ವಿಎಸ್.ಎ.ಐ.ಡಿ. ಸಂಸ್ಥೆ, ಇಂಗ್ಲೆಡ್ನ ಓವರ್ ಸೇಸ್ ಡೆವಲಪ್ಮೆಂಟ್ ಏಡ್ ಸಂಸ್ಥೆಗಳು ಸಹ ಸಾಲದ ನೆರವು ನೀಡುತ್ತಿವೆ.

ಈ ರೀತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಾಯ ನೀಡುತ್ತಿರುವ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು, ಅಣೆಕಟ್ಟುಗಳ ಕಾಮಗಾರಿಯಲ್ಲಿ ತೊಡಗಿಕೊಳ್ಳುವುದು ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಅಣೆಕಟ್ಟುಗಳ ನಿರ್ಮಾಣ ವೆಚ್ಚ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ಆಗುತ್ತಿರುವುದು  ಸಹ ಟೀಕೆಗೆ ಗುರಿಯಾಗಿದೆ.

ಬ್ರೆಜಿಲ್, ಪೆರುಗ್ವೆ ರಾಷ್ಟ್ರಗಳ ಗಡಿಭಾಗದಲ್ಲಿ ನದಿಯೊಂದಕ್ಕೆ 12,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಒಂದು ಅಣೆಕಟ್ಟು (ಇದರ ವೆಚ್ಚ 20 ಶತಕೋಟಿ ಡಾಲರ್) ಹಾಗೂ ಚೀನಾದಲ್ಲಿ 18,200 ಮೆಗಾವ್ಯಾಟ್ ವಿದ್ಯುತ್ ಉತ್ಫಾದನೆಗೆ ನಿರ್ಮಿಸಿದ ಮೂರು ಅಣೆಕಟ್ಟುಗಳು (ಇವುಗಳ ವೆಚ್ಚ 50 ಶತಕೋಟಿ ಡಾಲರ್), ಇವುಗಳ ಹಿಂದೆ ವ್ಯಾಪಕ ಭ್ರಷ್ಟಾಚಾರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಎಂದು ಆರೋಪಗಳು ಕೇಳಿಬಂದಿವೆ. ಆಯಾ ರಾಷ್ಟ್ರಗಳ ರಾಜಕೀಯ ಅಸ್ಥಿರತೆ, ಬದಲಾಗುವ ಸರಕಾರದ ಜನಪ್ರತಿನಿಧಿಗಳ ಮನೋಭಾವದಿಂದಾಗಿ ಯಾವುದೇ ಅಣೆಕಟ್ಟು ನಿಗದಿತ ವೇಳೆಗೆ ಪೂರ್ಣಗೊಂಡ ಇತಿಹಾಸವೇ ಇಲ್ಲ. ಈಗಾಗಿ ಅಂದಾಜು ವೆಚ್ಚ ಮಿತಿಮೀರಿ, ಸಾಲದ ಮೇಲಿನ ಬಡ್ಡಿಯಿಂದಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕೂಡ ಮಿತಿ ಮೀರುತ್ತಿದೆ.

ಹಿಂದೊಮ್ಮೆ ಅಣೆಕಟ್ಟುಗಳು ಭಾರತದ ಪಾಲಿನ ಗುಡಿ-ಗೋಪುರಗಳು ಎಂದು ಹಾಡಿ ಹೊಗಳಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ “ಬೃಹತ್ ಅಣೆಕಟ್ಟುಗಳ ಬಗ್ಗೆ ನಾನು ಮರುಚಿಂತನೆ ನಡೆಸುತ್ತಿದ್ದೇನೆ ಎಂದಿದ್ದರಲ್ಲದೇ, ನಾವು ದೊಡ್ಡ ಕಾರ್ಯ ಯೋಜನೆಗಳನ್ನು ನಿರ್ಮಿಸಬಲ್ಲೆವು ಅಷ್ಟೆ. ಆದರೆ ಇವುಗಳಿಂದ ಅರ್ಧದಷ್ಟು ಪ್ರಮಾಣದ ಪ್ರತಿಫಲವಿಲ್ಲ ಎಂಬುದು ಮನದಟ್ಟಾಗಿದೆ” ಎಂದು ಸಂಸತ್ತಿನಲ್ಲಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು (1958).

ಇಂತಹದ್ದೇ ಭಾವನೆಯನ್ನು ರಷ್ಯಾದ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿಕಿತಾ ಕೃಶ್ನೇವ್ ವೋಲ್ಗಾ ನದಿಗೆ ಕಟ್ಟಲಾದ ಅಣೆಕಟ್ಟನ್ನು ನಾಡಿಗೆ ಅರ್ಪಿಸುವ ಸಂದರ್ಭದಲ್ಲಿ “ಇಂತಹ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳಿಗಿಂತ, ನದಿಗಳ ನೈಜ ಸ್ಥಿತಿಯನ್ನು ನಾಶ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನೈಸರ್ಗಿಕ ವಿನಾಶಕ್ಕೆ ಬೆಲೆಕಟ್ಟಲಾಗದು” ಎಂದು ನೋವನ್ನು ವ್ಯಕ್ತಪಡಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರವಾದಿಗಳಿಂದ ಹುಟ್ಟಿಕೊಂಡ ಪ್ರತಿಭಟನೆಯಿಂದಾಗಿ  ಬೃಹತ್ ಅಣೆಕಟ್ಟುಗಳ ಭ್ರಮೆ ನಿಧಾನವಾಗಿ ಕಳಚತೊಡಗಿದೆ. ಪರಿಸರವಾದಿಗಳ ಉಗ್ರ ಹೋರಾಟದ ಫಲವಾಗಿ ಆಸ್ಟ್ರೇಲಿಯಾದ ಪ್ರಾಂಕ್ಲಿನ್ ಅಣೆಕಟ್ಟು, ಥೈಲಾಂಡ್ನ ನಾಮ್ ಚೊಹಾನ್, ಹಂಗೇರಿಯ ನ್ಯಾಗಿ ಮರೇಗ್, ಭಾರತದ ಕೇರಳ ರಾಜ್ಯದ ಮೌನ ಕಣಿವೆಯ ಅಣೆಕಟ್ಟು, ಬ್ರೆಜಿಲ್ನ ಬಾಬಾಕ್ಸರ್, ರಷ್ಯಾದ ಕಟೂನ್, ಪ್ರಾನ್ಸ್ನ ಸರ್ರೆಡಿ-ಲ-ಪೆರ್ರೆ ಹೀಗೆ ಅನೇಕ ಅಣೆಕಟ್ಟುಗಳ ನಿರ್ಮಾಣ ಯೋಜನೆ ರದ್ದಾಗಿ, ಅಲ್ಲಿನ ಜೀವನದಿಗಳ ಸಹಜ ಹರಿಯುವಿಕೆಗೆ ವರದಾನವಾಗಿದೆ.

ನಮ್ಮ ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನ ಬಗೆಗಿನ ವಿರೋಧ ಜಾಗತಿಕ ಮಟ್ಟದಲ್ಲಿ ಬಿಂಬಿತವಾಗಿ (ನರ್ಮದಾ ಬಚಾವ್ ಆಂಧೋಲನ-ಮೇಧಪಾಟ್ಕರ್ ನೇತೃತ್ವದಲ್ಲಿ), ಈ ಯೋಜನೆಗೆ ಹಣಕಾಸಿನ ನೆರವು ನೀಡಿದ್ದ ವಿಶ್ವಬ್ಯಾಂಕ್ ಯೋಜನೆ ಕುರಿತಂತೆ ಮರುಚಿಂತನೆ ನಡೆಸಿದೆ. ಇದೇ ರೀತಿ ನೇಪಾಳದಲ್ಲಿ ಕೂಡ ಅರುಣ್ ಎಂಬ ಅಣೆಕಟ್ಟು ಯೋಜನೆ ರದ್ದಾಯಿತು.

ಅಣೆಕಟ್ಟುಗಳ ನಿರ್ಮಾಣದಿಂದ ಪರಿಸರದ ಏರು-ಪೇರು, ಅರಣ್ಯನಾಶ, ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಪ್ರದೇಶ, ಅಲ್ಲಿನ ಜೈವಿಕ ವೈವಿಧ್ಯತೆ, ಸಸ್ಯ ಪ್ರಭೇದಗಳು, ಯೋಜನೆಯಿಂದ ನಿರ್ವಸತಿಗರಾಗುವ ಲಕ್ಷಾಂತರ ಕುಟುಂಬಗಳ ಬದುಕು, ಅವರ ಪುನರ್ವಸತಿಯ ಸವಾಲುಗಳು ಇವೆಲ್ಲವೂ ಬೃಹತ್ ಅಣೆಕಟ್ಟಿನ ವಿರೋಧಕ್ಕೆ ಕಾರಣವಾಗಿರುವ ಪ್ರಧಾನ ಅಂಶಗಳು.

1950 ರಿಂದ 70 ರ ದಶಕದವರೆಗೆ ವಿಶ್ವಬ್ಯಾಂಕ್ ನೆರವಿನಿಂದ ಜಾಗತಿಕವಾಗಿ ವರ್ಷವೊಂದಕ್ಕೆ ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗುತ್ತಿದ್ದವು. ಈಗ ಇದರ ಪ್ರಮಾಣ 200 ಕ್ಕೆ ಕುಸಿದಿದೆ. ಅಂದರೆ ಬೃಹತ್ ಅಣೆಕಟ್ಟುಗಳ ಬಗೆಗಿನ ಭ್ರಮೆ ಕಳಚುತ್ತಿದ್ದು, ವಾಸ್ತವಿಕ ಕಟು ಸತ್ಯಗಳು ಮನದಟ್ಟಾಗುತ್ತಿವೆ.

ಅಣೆಕಟ್ಟಿನಿಂದಾಗಿ ಜಲಾಶಯದಲ್ಲಿ ಶೇಖರವಾಗುವ ನೀರಿನ ಪ್ರಮಾಣ, ಅದರಲ್ಲಿನ ಬದಲಾವಣೆ, ಉಷ್ಣಾಂಶದ ಏರಿಳಿತ, ಅಲ್ಲಿನ ಜಲಚರಗಳ ಸ್ಥಿತಿ-ಗತಿ ಮತ್ತು ಅಣೆಕಟ್ಟು ನಿರ್ಮಾಣದಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಗಬಹುದಾದ ನೈಸರ್ಗಿಕ ಬದಲಾವಣೆ ಕುರಿತಂತೆ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಅಧ್ಯಯನಗಳು ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ.

ಇಂತಹ ಅಣೆಕಟ್ಟುಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಹಾಗೂ ನದಿ ನೀರಿನ ಸಹಜ ಹರಿಯುವಿಕೆಗೆ ಅಡ್ಡಿಯಾಗದ ಸಣ್ಣ-ಸಣ್ಣ ಅಣೆಕಟ್ಟು ಮತ್ತು ಜಲಾಶಯಗಳ ಬಗ್ಗೆ ಚಿಂತನೆ ಆರಂಭವಾಗಿದೆ. ಅಲ್ಲದೆ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಜೀವ ವೈವಿಧ್ಯತೆ ಹಾಗೂ ನದಿಗಳ ನೈಜ ಸ್ವರೂಪವನ್ನು ಕಾಪಾಡುವ ಉದ್ದೇಶದಿಂದ ಹಲವಾರು ನದಿಗಳನ್ನು ಅಣೆಕಟ್ಟು ಮುಕ್ತ ನದಿಗಳೆಂದು ಘೋಷಿಸಲಾಗಿದೆ.

ಸ್ಪೀಡನ್ ಮತ್ತು ನಾರ್ವೆ ರಾಷ್ಟ್ರಗಳು ಈ ದಿಶೆಯಲ್ಲಿ ದೃಢ ಹೆಜ್ಜೆ ಇಟ್ಟ ಪ್ರಥಮ ರಾಷ್ಟ್ರಗಳಾಗಿವೆ. ಈಗ ಅಮೆರಿಕಾ ಕೂಡ ಕೆಲವು ನದಿಗಳ 16 ಸಾವಿರ ಕಿ.ಮೀ. ಉದ್ದದ ಮಾರ್ಗದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಿಷೇಧ ಹೇರಿದೆ. ಬೃಹತ್ ಅಣೆಕಟ್ಟು ಎಂಬ ಪರಿಕಲ್ಪನೆ ಹುಟ್ಟುಹಾಕಿ, ಅಂತಹ ಸಾಹಸಕ್ಕೆ ಚಾಲನೆ ನೀಡಿದ್ದ ಅಮೆರಿಕಾ ದೇಶವೇ ಈಗ, ನದಿಗಳು ಮತ್ತು ಅಣೆಕಟ್ಟು ನಿರ್ಮಾಣ ಕುರಿತಂತೆ ತನ್ನ ಆಲೋಚನಾ ದಿಕ್ಕನ್ನೇ ಬದಲಿಸತೊಡಗಿರುವುದು ಸಧ್ಯದ ಸ್ಥಿತಿಯಲ್ಲಿ ಒಂದು ರೀತಿಯ ಸಮಾಧಾನಕರ ಸಂಗತಿ.

(ಚಿತ್ರಕೃಪೆ: ವಿಕಿಪೀಡಿಯ)

ಜೀವನದಿಗಳ ಸಾವಿನ ಕಥನ – 3

ಡಾ.ಎನ್. ಜಗದೀಶ್ ಕೊಪ್ಪ

ಪೃಥ್ವಿಯ ಮೇಲಿನ ಭೂವಿನ್ಯಾಸದಲ್ಲಿ ನದಿಗಳ ಪಾತ್ರ ಅನನ್ಯವಾದುದು. ಪರ್ವತಗಳ ಗಿರಿಶ್ರೇಣಿಯಲ್ಲಿ ಹುಟ್ಟಿ ಹರಿಯುವ ನದಿಗಳು, ಸಮುದ್ರ ಸೇರುವ ಮುನ್ನ, ತಾವು ಕ್ರಮಿಸುವ ಹಾದಿಯುದ್ದಕ್ಕೂ ತಮ್ಮ ಇಕ್ಕೆಲಗಳ ಭೂಮಿಯನ್ನು ಫಲವತ್ತಾಗಿಸುತ್ತಾ, ಸುತ್ತ ಮುತ್ತಲಿನ ಪ್ರದೇಶಗಳ ಅಂತರ್ಜಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ನದಿಗಳು, ಮಂಜಿನಿಂದ ಆವೃತ್ತವಾಗಿರುವ ಹಿಮಾಲಯದಂತಹ ಪರ್ವತಶ್ರೇಣಿಗಳಲ್ಲಿ, ಬೇಸಿಗೆ ಕಾಲದಲ್ಲಿ ಹೆಚ್ಚಿನ ಒಳಹರಿವಿನಿಂದ ಪ್ರವಾಹದ ರೀತಿಯಲ್ಲಿ ಹರಿದರೆ, ಇತರೆ ಸಾಮಾನ್ಯ ದಿನಗಳಲ್ಲಿ ಸೂರ್ಯನ ಶಾಖಕ್ಕೆ ಕರಗುವ ಮಂಜುಗೆಡ್ಡೆಯಿಂದಾಗಿ ಸಹಜವಾಗಿ ಹರಿಯುತ್ತವೆ. ನದಿಪಾತ್ರದಲ್ಲಿ ಬೀಳುವ ಮಳೆ, ಹಳ್ಳ-ಕೊಳ್ಳಗಳಲ್ಲಿ ಜಿನುಗುವ ನೀರು ಇವೆಲ್ಲವನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುವ ಪ್ರಕ್ರಿಯೆ ನದಿಗೆ ಸಹಜವಾದುದು.

ಈ ನದಿಗಳಲ್ಲಿ ಹರಿಯುವ ನೀರು ಬರೀ ನೀರಷ್ಟೇ ಅಲ್ಲ, ಪರ್ವತ, ಗುಡ್ಡಗಾಡುಗಳ ಇಳಿಜಾರಿನಲ್ಲಿ ಹರಿಯುವ ನೀರು ಅನೇಕ ಗಿಡ-ಮೂಲಿಕೆಗಳನ್ನು ತೋಯಿಸಿ ಹರಿಯುವುದರಿಂದ ಈ ನೀರಿನಲ್ಲಿ ಅನೇಕ ಔಷದೀಯ ಅಂಶಗಳು, ಖನಿಜಾಂಶಗಳು ಮಿಳಿತವಾಗಿರುತ್ತವೆ. ಜೊತೆಗೆ ಈ ನೀರು ಸಿಹಿ ನೀರಾಗಿರುತ್ತದೆ.

ಇಂತಹ ಜೀವ ನದಿಗಳಿಗೆ ಅಣೆಕಟ್ಟು ನಿರ್ಮಿಸುವುದರ ಮೂಲಕ ಅವುಗಳ ಸಹಜ ಹರಿವಿಗೆ ಅಡೆ-ತಡೆ ನಿರ್ಮಿಸಿ ಮಣಿಸುವ ಪ್ರಯತ್ನಕ್ಕೆ 8 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

ಮೆಸಪೊಟೋಮಿಯ ಈಶಾನ್ಯ ಭಾಗದ ಜಾರ್ಗೊಸ್ ಪರ್ವತಶ್ರೇಣಿಗಳ ತಪ್ಪಲಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಿಸಿ, ಕಾಲುವೆ ಮುಖಾಂತರ ನೀರು ಹರಿಸಿರುವುದು ಮೆಸಪಟೋಮಿಯಾ ನಾಗರೀಕತೆಯ ಪ್ರಾಚೀನ ಅವಶೇಷಗಳಿಂದ ದೃಢಪಟ್ಟಿದೆ.

ಸುಮಾರು 6500 ವರ್ಷಗಳ ಹಿಂದೆ ಸುಮೇರಿಯನ್ ಜನಾಂಗ ಟಿಗ್ರಿಸ್ ಮತ್ತು ಯುಪ್ರಟಿಸ್ ನದಿಗಳಿಗೆ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದ್ದರೂ ಕೂಡ, ಇದು ಪ್ರವಾಹ ನಿಯಂತ್ರಿಸಲು ಸುಮರಿಯನ್ನರು ಕಂಡುಕೊಂಡಿದ್ದ ಪ್ರಾಚೀನವಾದ ದೇಸಿ ತಂತ್ರಜ್ಞಾನ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಎರಡು ಕುರುಹುಗಳನ್ನು ಹೊರತುಪಡಿಸಿದರೆ, ಕ್ರಿ.ಪೂ.3500 ರಲ್ಲಿ ಈಗಿನ ಜೋರ್ಡಾನ್ ದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಜಾವಾ ಎಂಬ ಪಟ್ಟಣಕ್ಕೆ ಕಾಲುವೆ ಮುಖಾಂತರ ನೀರು ಹರಿಸಲು ನದಿಯೊಂದಕ್ಕೆ 600 ಅಡಿಗಳ ಉದ್ದದ, ವಿಶಾಲವಾದ ಅಣೆಕಟ್ಟು ನಿರ್ಮಿಸಿರುವುದರ ಜೊತೆಗೆ, ನದಿಯುದ್ದಕ್ಕೂ 10 ಸಣ್ಣ ಸಣ್ಣ ಜಲಾಶಯಗಳನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ.

ಪ್ರಾಚೀನ ಇತಿಹಾಸದಲ್ಲಿ ಅತಿದೊಡ್ಡ ಅಣೆಕಟ್ಟಿನ ನಿರ್ಮಾಣವೆಂದರೆ, ಕ್ರಿ.ಪೂ. 2600 ರಲ್ಲಿ 14 ಮೀಟರ್ ಎತ್ತರ, 113 ಮೀಟರ್ ಉದ್ದದ ಅಣೆಕಟ್ಟು ಈಜಿಪ್ಟ್‌ನ ಕೈರೊ ನಗರದ ಬಳಿ ನಿರ್ಮಾಣಗೊಂಡಿರುವುದು. ಈಜಿಪ್ಟ್‌ನಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರೇ ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ ಎಂದು ಇತಿಹಾಸಕಾರರು ಊಹಿಸಿದ್ದಾರೆ. ಏಕೆಂದರೆ ಈಜಿಪ್ಟ್‌ನ ಮೊದಲ ಪಿರಮಿಡ್ ರಚಿತವಾದ ಕಾಲದಲ್ಲೇ ಈ ಅಣೆಕಟ್ಟು ನಿರ್ಮಾಣಗೊಂಡಿದೆ. 10 ವರ್ಷಕ್ಕೂ ಹೆಚ್ಚು ಕಾಲ ನಡೆದ ಈ ಅಣೆಕಟ್ಟಿನ ಕಾಮಗಾರಿಗೆ 17 ಸಾವಿರ ಬೃಹದಾಕಾರದ ಕತ್ತರಿಸಿಲ್ಪಟ್ಟ ಕಲ್ಲುಗಳನ್ನು ಬಳಸಲಾಗಿದೆ. ದುರಂತವೆಂದರೆ, ಈ ಅಣೆಕಟ್ಟಿನ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಣೆಕಟ್ಟಿನ ಒಂದು ಭಾಗ ನೈಲ್ ನದಿಯ ಪ್ರವಾಹದಲ್ಲಿ ಕೊಚ್ಚಿಹೋಯಿತು. ಈ ಅಣೆಕಟ್ಟಿನ ನಿರ್ಮಾಣದ ಉದ್ದೇಶ ಕುಡಿಯುವ ನೀರಿಗಾಗಿ ಮಾತ್ರ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಧೃಡಪಟ್ಟಿದೆ. ಅಣೆಕಟ್ಟು ನಿರ್ಮಾಣಕ್ಕೆ ಮುನ್ನವೇ ನೈಲ್ ನದಿಯ ಪ್ರಾಂತ್ಯಗಳಲ್ಲಿ ಕೃಷಿ ಪದ್ಧತಿ ಆಚರಣೆಯಲ್ಲಿತ್ತು.

ಕ್ರಿ.ಪೂ. ಒಂದನೇ ಶತಮಾನಕ್ಕೆ ಮುನ್ನ ಮಧ್ಯಪ್ರಾಚ್ಯದ ಮೆಡಿಟೇರಿಯನ್ ಪ್ರದೇಶದಲ್ಲಿ ಕಲ್ಲು ಮತ್ತು ಅಗಾಧ ಪ್ರಮಾಣದ ಮಣ್ಣು ಬಳಸಿ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದೆ. ಇಂತಹದೇ ಕುರುಹುಗಳು ಚೀನಾ ಹಾಗೂ ಮಧ್ಯ ಅಮೆರಿಕಾ ದೇಶಗಳಲ್ಲೂ ಕಂಡುಬಂದಿದೆ.

ಅಣೆಕಟ್ಟುಗಳ ನಿರ್ಮಾಣದಲ್ಲಿ ಸುಧಾರಿತ ತಂತ್ರಜ್ಞಾನ ಪ್ರಥಮಬಾರಿಗೆ ರೋಮನ್ನರ ಯುಗದಲ್ಲಿ ಬಳಕೆಯಾಯಿತು. ಅಂದಿನ ಕಾಲದಲ್ಲಿ ರೋಮ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದ ಸ್ಪೇನ್‌ನಲ್ಲಿ ರೋಮನ್ನರು ನಿರ್ಮಿಸಿದ್ದ ಅನೇಕ ಅಣೆಕಟ್ಟುಗಳು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದವು. 15 ನೇ ಶತಮಾನದಲ್ಲಿ ಅಲಿಕಾಂಟ್ ಬಳಿ ಕಲ್ಲಿನಿಂದ ನಿರ್ಮಿಸಿದ ಅಣೆಕಟ್ಟು ಸುಮಾರು 3 ಶತಮಾನಗಳ ಕಾಲ ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿತ್ತು.

ದಕ್ಷಿಣ ಏಷ್ಯಾ ಕೂಡ ಅಣೆಕಟ್ಟು ನಿರ್ಮಾಣ ಮತ್ತು ತಂತ್ರಜ್ಞಾನದ ಬಗ್ಗೆ ದೊಡ್ಡ ಇತಿಹಾಸವನ್ನು ಹೊಂದಿದೆ. ಕ್ರಿ.ಪೂ. 4ನೇ ಶತಮಾನದಲ್ಲಿ ಶ್ರೀಲಂಕಾದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ 34 ಮೀಟರ್ ಉದ್ದದ ಅಣೆಕಟ್ಟು ಆ ಕಾಲಕ್ಕೆ ಅತಿದೊಡ್ಡ ಅಣೆಕಟ್ಟಾಗಿತ್ತು. 12ನೇ ಶತಮಾನದ ಶ್ರೀಲಂಕಾದ ದೊರೆ ಪರಾಕ್ರಮಬಾಹು ಅವಧಿಯಲ್ಲಿ ಶ್ರೀಲಂಕಾದಲ್ಲಿ 15 ಮೀಟರ್ ಎತ್ತರದ ಸುಮಾರು 4 ಸಾವಿರ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತಿವೆ. ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ ಬಳಕೆಗಾಗಿ ಲಂಕನ್ನರು ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಒಂದು ಅಣೆಕಟ್ಟು 15 ಮೀಟರ್ ಎತ್ತರ ಮತ್ತು 1.4 ಕಿ.ಮೀ. ಉದ್ದ ಇದ್ದ ಬಗ್ಗೆ ಸಮಾಜಶಾಸ್ತ್ರಜ್ಞ ಎಡ್ಮಂಡ್ ಲೀಚ್ ದಾಖಲಿಸಿದ್ದಾನೆ.

ಅಣೆಕಟ್ಟುಗಳ ನಿರ್ಮಾಣ ಮತ್ತು ತಂತ್ರಜ್ಞಾನ ಕೇವಲ ಕುಡಿಯುವ ನೀರು ಅಥವಾ ಕೃಷಿ ಬಳಕೆಗೆ ಸೀಮಿತವಾಗದೆ ಆಧುನಿಕ ಯುಗದ ಕೈಗಾರಿಗಳ ಸ್ಥಾಪನೆಗೆ ನಾಂದಿಯಾಯಿತು.

ಅಣೆಕಟ್ಟುಗಳ ಮೂಲಕ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಇಳಿಜಾರಿನಲ್ಲಿ ನಿರ್ಮಿಸಿದ ಚಕ್ರಗಳ ಮೇಲೆ ಕೊಳವೆಗಳ ಮೂಲಕ ಹಾಯಿಸಿ, ತಿರುಗುವ ಚಕ್ರಗಳ ಮುಖಾಂತರ ಮೆಕ್ಕೆಜೋಳವನ್ನು ಹಿಟ್ಟು ಮಾಡುವ ಪದ್ಧತಿ ಈಜಿಪ್ಟ್, ರೋಮನ್, ಸುಮೇರಿಯನ್ನರ ಕಾಲದಲ್ಲಿ ಬಳಕೆಯಲ್ಲಿತ್ತು.

ಈ ತಂತ್ರಜ್ಙಾನವನ್ನೇ ಮೂಲವನ್ನಾಗಿಟ್ಟುಕೊಂಡು ಪ್ರಾನ್ಸ್ ಮೂಲದ ಟರ್ಬೈನ್ ಎಂಬ ಇಂಜಿನಿಯರ್ 1832ರಲ್ಲಿ ಯಂತ್ರವೊಂದನ್ನು ಆವಿಷ್ಕರಿಸಿ, ವಿದ್ಯುತ್ ಉತ್ಪಾದನೆಗೆ ತಳಹದಿ ಹಾಕಿದ. ಆತ ಕಂಡುಹಿಡಿದ ಯಂತ್ರಕ್ಕೆ ಅವನ ಹೆಸರನ್ನೇ ಇಡಲಾಯಿತು.

17ನೇ ಶತಮಾನದ ವೇಳೆಗೆ ಇಂಗ್ಲೆಂಡ್, ಜರ್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಅಣೆಕಟ್ಟುಗಳ ಕೆಳಭಾಗದಲ್ಲಿ ನಿರ್ಮಿಸಿದ ವಾಟರ್ ಮಿಲ್ ತಂತ್ರಜ್ಞಾನದಿಂದ ಕಬ್ಬಿಣ ಕುಟ್ಟುವುದು, ಜೋಳದ ಹಿಟ್ಟಿನ ತಯಾರಿಕೆ, ಕಾಗದ ಉತ್ಪಾದನೆಗೆ ಬೇಕಾದ ಪಲ್ಪ್ ತಯಾರಿಕೆ ಮುಂತಾದ ಕಾರ್ಯಗಳು ನಡೆಯುತ್ತಿದ್ದವು.

19ನೇ ಶತಮಾನದ ಪೂರ್ವದಲ್ಲಿ ಕೈಗಾರಿಕೆಗಳ ಬಳಕೆಗಾಗಿ 200 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. 20ನೇ ಶತಮಾನದ ಪ್ರಾರಂಭದವರೆಗೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟುಗಳಿಗೆ ಕಲ್ಲು, ಇಟ್ಟಿಗೆ, ಗಾರೆ ಬಳಸುತ್ತಿದ್ದರೂ ಕೂಡ, ಇವುಗಳ ನಿರ್ಮಾಣದ ವ್ಯವಸ್ಥೆಯಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇರುತ್ತಿರಲಿಲ್ಲ.

ಈ ದಿಶೆಯಲ್ಲಿ, ಅಲ್ಲಿಯತನಕ ನಿರ್ಮಿಸಲಾಗಿದ್ದ ಅಣೆಕಟ್ಟುಗಳ ಸಫಲತೆ-ವಿಫಲತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ, 1930 ರಲ್ಲಿ ಪ್ರಥಮವಾಗಿ ನದಿಯ ನೀರಿನ ಹರಿವು, ಅಣೆಕಟ್ಟು ನಿರ್ಮಿಸುವ ಸ್ಥಳದ ಮಣ್ಣಿನ ಪರೀಕ್ಷೆ, ಭೂಗರ್ಭದಲ್ಲಿನ ಕಲ್ಲುಗಳು, ಅಣೆಕಟ್ಟಿನ ನೀರಿನ ಸಂಗ್ರಹ ಹಾಗೂ ಅದರ ಒತ್ತಡದಿಂದಾಗುವ ಭೂಗರ್ಭದಲ್ಲಾಗುವ ಪರಿವರ್ತನೆ ಮುಂತಾದವುಗಳ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ವೈಜ್ಞಾನಿಕ ಹಾಗೂ ಕೂಲಂಕುಷ ಅಧ್ಯಯನಗಳ ನಡುವೆ ಕೂಡ ಅಣೆಕಟ್ಟುಗಳ ದುರಂತ ಸಾಮಾನ್ಯವಾಗಿತ್ತು. ಪ್ರತಿ 10 ಅಣೆಕಟ್ಟುಗಳಲ್ಲಿ ಒಂದು ಅಣೆಕಟ್ಟು ದುರಂತದಲ್ಲಿ ಪರ್ಯಾವಸಾನಗೊಳ್ಳುತ್ತಿತ್ತು.

ಪ್ರಾನ್ಸ್‌ನ ಇಂಜಿನಿಯರ್ ಟರ್ಬೈನ್ ಆವಿಷ್ಕರಿಸಿದ ವಿದ್ಯುತ್ ಯಂತ್ರದಿಂದಾಗಿ ಜಲ ವಿದ್ಯುತ್‌ಗೆ ಭಾರಿ ಬೇಡಿಕೆ ಉಂಟಾದ ಕಾರಣ ಅಮೆರಿಕಾ, ಯೂರೋಪ್ ಖಂಡಗಳಲ್ಲಿ ಸಾಕಷ್ಟು ಅಣೆಕಟ್ಟುಗಳು ನಿರ್ಮಾಣವಾದವು. 1900ರಲ್ಲಿ 30ರಷ್ಟಿದ್ದ ಅಣೆಕಟ್ಟುಗಳ ಸಂಖ್ಯೆ 1930ರ ವೇಳೆಗೆ 200ಕ್ಕೆ ತಲುಪಿತ್ತು.

ಅಮೆರಿಕಾದಲ್ಲಿ ವಿಶಾಲವಾದ ಬೃಹತ್ ಹುಲ್ಲುಗಾವಲು ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದರೂ, ನಂತರ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗುವಂತೆ, ಜಲ ವಿದ್ಯುತ್ ಯೋಜನೆಗೆ ಒತ್ತು ನೀಡಿ ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು.

ಅಮೆರಿಕಾ ಸರಕಾರ ಸೇನಾಪಡೆಯ ತಂತ್ರಜ್ಞರನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಈ ತಂಡದ ಮೂಲಕ ಜಲ ವಿದ್ಯುತ್‌ಗಾಗಿ ಕಬ್ಬಿಣ-ಸಿಮೆಂಟ್ ಬಳಸಿ, 1930ರವರೆಗೆ 50 ಅಣೆಕಟ್ಟುಗಳನ್ನು ನಿರ್ಮಿಸಿ 1931 ರಲ್ಲಿ ಜಗತ್ತಿನ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೊಲರ್‍ಯಾಡೊ ನದಿಯ ಹೂವರ್ ಅಣೆಕಟ್ಟೆಯನ್ನು ನಿರ್ಮಾಣಮಾಡಿತು.

ಅಮೆರಿಕಾದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ಉತ್ಪಾದಿಸಿದ ಜಲ ವಿದ್ಯುತ್ ಕೈಗಾರಿಕಾ ಕ್ರಾಂತಿಗೆ ನಾಂದಿಯಾಗುವುದರ ಜೊತೆಗೆ, ವಿಶ್ವದ ಮಹಾ ಯುದ್ಧಕ್ಕೆ ಬೇಕಾದ ಯುದ್ಧ ಸಾಮಗ್ರಿ, ವಿಮಾನಗಳ ತಯಾರಿಕೆಗೂ ಸಹಕಾರಿಯಾಯಿತು. 1945ರವರೆಗೆ ಕಲ್ಲಿದ್ದಲು ಆಧಾರಿತ ಹಾಗೂ ಅಣು ವಿದ್ಯುತ್ ಪ್ರಾರಂಭವಾಗುವವರೆಗೆ ಅಮೆರಿಕ ಸರಕಾರ ವಿದ್ಯುತ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿತ್ತು.

ರಷ್ಯಾ ಕೂಡ ಅಣೆಕಟ್ಟುಗಳ ನಿರ್ಮಾಣದಲ್ಲಿ ಹಿಂದೆ ಬಿದ್ದಿರಲಿಲ್ಲ. ಇಲ್ಲಿ ಅಣೆಕಟ್ಟುಗಳ ನಿರ್ಮಾಣದ ಗುರಿ ಜಲ ವಿದ್ಯುತ್‌ಗಿಂತ, ನದಿಗಳ ಹುಚ್ಚು ಪ್ರವಾಹವನ್ನು ನಿಯಂತ್ರಿಸುವುದೇ ಆಗಿತ್ತು.

ರಷ್ಯಾದ ಗೂಢಾಚಾರ ಸಂಸ್ಥೆ ಕೆ.ಜಿ.ಬಿ.ಯ ನಿಯಂತ್ರಣದಲ್ಲಿ ಡೈಪಿರ್ ನದಿಗೆ 1932ರಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ತಯಾರಿಕೆಗೆ ನಾಂದಿ ಹಾಡಿತು. 1970 ರವೇಳೆಗೆ ರಷ್ಯಾದಲ್ಲಿ ಬಹುತೇಕ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ಪ್ರವಾಹ ನಿಯಂತ್ರಣದೊಂದಿಗೆ 1 ಲಕ್ಷದ 20 ಸಾವಿರ ಚ.ಕಿ.ಮೀ. ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಯಿತು.

ಚಿತ್ರಗಳು : ವಿಕಿಪೀಡಿಯ

ಜೀವನದಿಗಳ ಸಾವಿನ ಕಥನ – 2

ಡಾ.ಎನ್. ಜಗದೀಶ್ ಕೊಪ್ಪ

ಪರಿಸರ ಕುರಿತಂತೆ ಅಪಾರ ಕಾಳಜಿ ಹೊಂದಿದ್ದ, ದುಡಿಯುವ ವರ್ಗದ ಆರಾಧ್ಯ ದೈವವಾಗಿದ್ದ ಚಿಂತಕ, ದಾರ್ಶನಿಕ ಕಾರ್ಲ್‌ಮಾರ್ಕ್ಸ್ ತನ್ನ “ಎಕನಾಮಿಕ್ ಅಂಡ್ ಪಿಲಾಸಫಿಕ್ ಮಾನ್ಯುಸ್ಕ್ರಿಪ್ಟ್” ಕೃತಿಯಲ್ಲಿ “ಮಾನವ ಪ್ರಕೃತಿಯೊಡನೆ ಜೀವಿಸುತ್ತಾನೆ. ಪ್ರಕೃತಿಯೆಂಬುದು ಅವನಲ್ಲಿ ಅಂತರ್ಗತವಾಗಿದೆ. ಅವನು ಈ ಭೂಮಿಯ ಮೇಲೆ ಬದುಕುಳಿಯಬೇಕಾದರೆ ಪ್ರಕೃತಿಯೊಡನೆ ನಿರಂತರವಾಗಿ ಸಂವಾದದಲ್ಲಿ ಇರಬೇಕು”, ಎಂದಿದ್ದ. ಮಾರ್ಕ್ಸ್‌ನ ಸಂಗಾತಿ ಏಂಗಲ್ಸ್ ಕೂಡ “ನಮ್ಮ ಬದುಕಿನ ಮೂಲಭೂತ ಅಗತ್ಯವಾದ ಭೂಮಿಯನ್ನು, ಅದರ ಕೊಡುಗೆಗಳನ್ನು ವ್ಯಾಪಾರದ ಸರಕನ್ನಾಗಿ ಮಾಡಿದ್ದೇ ಆದರೆ ಅಂದೇ ಮನುಕುಲದ ಅವನತಿ ಪ್ರಾರಂಭ” ಎಂದು ಎಚ್ಚರಿಸಿದ್ದ. ವಿಷಾದದ ಸಂಗತಿ ಎಂದರೆ ಈ ಮಹಾನ್ ದಾರ್ಶನಿಕರು ಎಚ್ಚರಿಸುವ ಮೊದಲೇ ಅವನತಿಯ ಅಧ್ಯಾಯ ಆರಂಭವಾಗಿತ್ತು.

ಕಳೆದ 50 ವರ್ಷಗಳ ಅವಧಿಯಲ್ಲಿ ಈ ಭೂಮಿಯ ಮೇಲಿನ ಅನೇಕ ಅಪರೂಪದ ಜೈವಿಕ ಸಂತತಿಗಳು ನಾಶವಾಗಿವೆ. ಸಾವಿರಾರು ಪ್ರಭೇಧಗಳು ವಿನಾಶದ ಅಂಚಿನಲ್ಲಿವೆ. ನಮ್ಮ ನದಿ, ಬೆಟ್ಟ, ಸರೋವರ ಇವೆಲ್ಲವೂ ತಮ್ಮ ನೈಜ ಸ್ವರೂಪವನ್ನು ಕಳೆದುಕೊಂಡು ವಿರೂಪಗೊಂಡಿವೆ. ಆಧುನಿಕ ಜಗತ್ತಿನ ಮೂಲ ಮಂತ್ರವಾದ “ಅಭಿವೃದ್ಧಿ” ಎಂಬ ರಕ್ಕಸನ ಬಾಯಿಗೆ ದಿನ ನಿತ್ಯದ ಆಹಾರವಾಗತೊಡಗಿವೆ.

ಅಷ್ಟೇ ಏಕೆ 40 ವರ್ಷಗಳ ಹಿಂದೆ ನನ್ನ ತಲೆಮಾರು ಬಾಲ್ಯದಲ್ಲಿ ಕಂಡ ತುಂಬೆ, ತುಳಸಿ, ಸಂಪಿಗೆ, ಜಾಜಿಮಲ್ಲಿಗೆ, ತಾವರೆ, ಬಣ್ಣ ಬಣ್ಣದ ಚಿಟ್ಟೆ – ಪತಂಗ, ದೇಸಿ ಸಂತತಿಯ ಹಸು, ಕರು, ಎಮ್ಮೆ, ನಮ್ಮ ನಾಟಿ ತಳಿಗಳ ಬಿತ್ತನೆ ಬೀಜಗಳು, ನಮ್ಮ ಹಬ್ಬ, ಹಸೆ, ಹಾಡು, ಇವೆಲ್ಲವೂ ಮರೆಯಾಗಿ ನಮ್ಮ ಸ್ಮೃತಿಯೆಂಬ ಕಪಾಟಿನೊಳಗೆ ಜೀವಂತವಿರುವ ಕನವರಿಕೆಗಳು ಮಾತ್ರವಾಗಿವೆ.

20 ಮತ್ತು 21 ನೇ ಶತಮಾನವೆಂದರೆ ಮನುಕುಲವೆಂಬುದು ಉನ್ಮಾದದಿಂದ ಪ್ರಕೃತಿಯ ಮೇಲೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಮತ್ತು ವಿಫಲತೆಗಳ ಯುಗ ಎಂಬಂತಾಗಿದೆ. ಇದಕ್ಕೆ ಇತ್ತೀಚಿನ ಸಾಕ್ಷಿ ಎಂದರೆ ಜಪಾನ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪ ಮತ್ತು ಸುನಾಮಿ.

ಪ್ರಕೃತಿಯಲ್ಲಿನ ಜೀವಜಾಲವೆಂಬುದು ಮಾನವನ ಪ್ರತಿಸ್ಪರ್ಧಿಯಲ್ಲ. ಅದರಲ್ಲಿ ಅವನೂ ಒಂದು ಭಾಗ ಎಂಬ ಈ ನೆಲದ ಮೂಲ ಸಂಸ್ಕೃತಿಯನ್ನು, ಕಾಳಜಿಯನ್ನು ಮರೆತ ಆಧುನಿಕ ಜಗತ್ತಿನ ನಾಗರೀಕತೆಗೆ ಕಬಳಿಕೆಯೊಂದೇ ಗುರಿಯಾಗಿದೆ. ಬದಲಾದ ನಮ್ಮ ಬದುಕಿನ ಕ್ರಮ ಹಾಗೂ ಚಿಂತನಾ ಲಹರಿಗಳಿಂದ ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿದ್ದ “ಅವಿಭಕ್ತ ಕುಟುಂಬ” ಪದ್ಧತಿ ಸಧ್ಯ ಛಿದ್ರಗೊಂಡಿದ್ದು, ಹೆಚ್ಚಿದ ಉಪಭೋಗ ಪ್ರಕೃತಿ ಮೇಲಿನ ದಾಳಿಗೆ ಪರೋಕ್ಷ ಕಾರಣವಾಗಿದೆ.

ಕೇವಲ ಅರ್ಧ ಶತಮಾನದ ಹಿಂದಿನ ಸಮಾಜದ ಕುಟುಂಬಗಳಲ್ಲಿ ಮೂಲಭೂತ ಬೇಡಿಕೆಗಳಾದ ಆಹಾರ, ನೀರು, ವಿದ್ಯುತ್, ಉರುವಲು ಮುಂತಾದ ಅಗತ್ಯತೆಗಳು ಮಿತಿಯಲ್ಲಿದ್ದವು. ಪ್ರಕೃತಿಯಿಂದ ಒಂದನ್ನು ಪಡೆದರೆ, ಅದೇ ಪ್ರಕೃತಿಗೆ ಹಿಂತಿರುಗಿ ಎರಡನ್ನು ನೀಡುವ ಪದ್ಧತಿ ನಮ್ಮ ಜನಪದರಲ್ಲಿ ಚಾಲ್ತಿಯಲ್ಲಿತ್ತು.

ಏಕ ಕುಟುಂಬ ಪದ್ಧತಿ ಜೊತೆಗೆ ಅಮೆರಿಕಾ ದೇಶ ಜಗತ್ತಿಗೆ ಕಲಿಸಿದ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮನುಕುಲದ ಬೇಡಿಕೆಗಳಿಗೆ ಇತಿ-ಮಿತಿ ಇಲ್ಲದಂತಾಗಿದೆ.

ಜಗತ್ತಿನ ಜನ ಸಂಖ್ಯೆಯಲ್ಲಿ ಶೇ.4ರಷ್ಟು ಇರುವ ಅಮೆರಿಕಾದ ಜನತೆ, ನೈಸರ್ಗಿಕ ಕೊಡುಗೆಗಳಲ್ಲಿ ಶೇ.40ರಷ್ಟು ಪಾಲನ್ನು ಕಬಳಿಸುತ್ತಿದ್ದಾರೆ. ವಾತಾವರಣ ಕಲುಷಿತಗೊಳಿಸುವುದರಲ್ಲಿ ಅವರ ಪಾಲು ಶೇ.27ರಷ್ಟು. ಇಂತಹ ನಾಗರೀಕತೆಯ ಅತಿಲಾಲಸೆ, ವ್ಯಾಪಾರೀಕರಣಗೊಂಡ ಜಗತ್ತು, ಭೋಗ ಸಂಸ್ಕೃತಿ ಇವುಗಳಿಂದ ಪಕೃತಿ ನಲುಗಿ ಹೋಗಿದೆ.

ವರ್ತಮಾನದ ಜಗತ್ತಿನಲ್ಲಿ ದೊರೆಯುತ್ತಿರುವ 1.4 ಬಿಲಿಯನ್ ಕ್ಯೂಬಿಕ್ ಮೀಟರ್ ನೀರಿನಲ್ಲಿ ಶೇ 3ರಷ್ಟು ಮಾತ್ರ ಶುದ್ಧ ನೀರಾಗಿದೆ. ಶೇ.3ರಷ್ಟು ಪಾಲಿನ ಈ ನೀರಿನಲ್ಲಿ ಶೇ.77.2ರಷ್ಟು ಮಂಜುಗೆಡ್ಡೆರೂಪದಲ್ಲಿ, ಶೇ.0.35ರಷ್ಟು ಸರೋವರಗಳಲ್ಲಿ, ಶೇ.0.1ರಷ್ಟು ನದಿ-ಕೊಳ್ಳಗಳಲ್ಲಿ ನಮಗೆ ಲಭ್ಯವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನೀರಿನ ಅಭಾವ ಕಾಣಿಸಿಕೊಂಡದ್ದು 1980ರ ದಶಕದಲ್ಲಿ. ಕುಡಿಯುವ ನೀರಿನ ಮೂಲಗಳಾಗಿದ್ದ ನಮ್ಮ ನದಿಗಳು, ಜಲಾಶಯಗಳು ಅರಣ್ಯ ನಾಶ ಮತ್ತು ಅಕ್ರಮ ಗಣಿಗಾರಿಕೆಯಿಂದ ಕಲುಷಿತಗೊಂಡವು.

ನಮ್ಮ ಪೂರ್ವಿಕರು ಸಾಮಾನ್ಯವಾಗಿ ದೇಗುಲಗಳನ್ನು ನದಿತೀರಗಳಲ್ಲಿ ನಿರ್ಮಿಸಿ, ನದಿಗಳಿಗೆ ಅರ್ಪಿಸಿರುವುದನ್ನು ನಾವು ದೇಶದ ಎಲ್ಲೆಡೆ ಕಾಣಬಹುದು. ನಮ್ಮ ಪೂರ್ವಜರು ನದಿ ನೀರಿನ ಬಳಕೆ ಕುರಿತಂತೆ ನಿರ್ಮಿಸಿದ ದೇಸಿ ತಂತ್ರಜ್ಞಾನ ಇಂದಿನ ನೀರಾವರಿ ತಂತ್ರಜ್ಞಾನಕ್ಕೆ ಮೂಲವಾಗಿದೆ ಎಂದು ನೀರಾವರಿ ತಜ್ಞ ಅರ್ಥರ್ ಕಾಟನ್ 1874ರಲ್ಲಿ ದಾಖಲಿಸಿದ್ದಾನೆ. ನಮ್ಮ ದಕ್ಷಿಣ ಭಾರತದ ಕೃಷ್ಣ, ಕಾವೇರಿ ನದಿ ಪಾತ್ರಗಳಲ್ಲಿ ನಿರ್ಮಿಸಿದ ಕಿರು ಜಲಾಶಯ, ಅಣೆಕಟ್ಟುಗಳು ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪೂರಕವಾಗಿವೆ. ದೆಹಲಿ ಮೂಲದ “ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್” ಸಂಸ್ಥೆಯ ಸ್ಥಾಪಕ ದ.ಅನಿಲ್ ಅಗರ್‌ವಾಲ್ 90ರ ದಶಕದಲ್ಲಿ ಭಾರತದ ಪರಿಸರ ಕುರಿತಂತೆ “ಸಿಟಿಜನ್ ರಿಪೋರ್ಟ್ಸ್” ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದು ಇದೇ ಸಂದರ್ಭದಲ್ಲಿ “ಡೈಯಿಂಗ್ ವಿಸಡಮ್” ಹೆಸರಿನ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನೀರಾವರಿ ಪದ್ಧತಿ, ಕೆರೆ-ಕಟ್ಟೆ, ಕಾಲುವೆಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಇದ್ದು ಓದುಗರಲ್ಲಿ ವಿಸ್ಮಯ ಮೂಡಿಸುತ್ತದೆ. ಅಂದಿನ ವಿಜಯನಗರದ ಸಾಮಂತರು, ತಮಿಳುನಾಡಿನ ಚೋಳರು, ಪಾಂಡ್ಯರು ಮುಂತಾದವರ ಆಳ್ವಿಕೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಬಳಸುವ ನೀರು ಇವುಗಳ ಕುರಿತಂತೆ ಅಳವಡಿಸಿಕೊಂಡಿದ್ದ ದೇಸಿ ತಂತ್ರಜ್ಞಾನ ಇಂದಿಗೂ ಮಾದರಿಯಾಗಿದೆ.

ಆಧುನಿಕ ಯುಗದ ನದಿಗಳೆಂದರೆ ನಮ್ಮೆಲ್ಲರ ಮಲ-ಮೂತ್ರಗಳನ್ನು, ನಗರ, ಪಟ್ಟಣಗಳಿಂದ ಹೊರಹಾಕುವ ತ್ಯಾಜ್ಯ ವಸ್ತುಗಳನ್ನು ಸಮುದ್ರಕ್ಕೆ ಸಾಗಿಸುವ ವಾಹಕಗಳು ಎಂಬಂತಾಗಿವೆ. ನದಿಯೆಂದರೆ ಅದು ಕೇವಲ ನೀರಿನ ಹರಿವಲ್ಲ. ಅದಕ್ಕೆ ಅದರದೇ ಆದ ಮಾತೃತ್ವ ಗುಣವಿದೆ. ನದಿನೀರಿಗೆ ವಿಷವನ್ನಾದರೂ ಬೆರೆಸಿ, ಅಮೃತವನ್ನಾದರೂ ಬೆರೆಸಿ ಅದೆಲ್ಲವನ್ನೂ ತನ್ನದಗಿಸಿಕೊಳ್ಳುವ ಗುಣ ನದಿಯ ಒಡಲೊಳಗೆ ಅಂತರ್ಗತವಾಗಿದೆ. ನದಿಯ ನೀರಿನ ಮೇಲೆ ಹಣತೆ ಹಚ್ಚಿಟ್ಟು ತೇಲಿ ಬಿಟ್ಟಾಗ ನದಿ ಸಂಭ್ರಮಿಸುವುದಿಲ್ಲ. ಅದೇ ರೀತಿ ಉರಿವ ಕೊಳ್ಳಿಯ ಜೊತೆ ಅರೆಬೆಂದ ಶವಗಳನ್ನು ನದಿಗೆ ಎಸೆದಾಗ ಅದು ಬೇಸರಗೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು “ನದಿಗೆ ನೆನಪಿನ ಹಂಗಿಲ್ಲ” ಎಂದಿದ್ದರು. ನದಿಗಳು ಮನುಕುಲದೊಂದಿಗೆ ಥಳಕು ಹಾಕಿಕೊಂಡು ಮನುಷ್ಯನ ಜೊತೆ ಅವಿನಾಭಾವ ಸಂಬಂಧ ಇರುವುದರಿಂದಲೇ ಮಾನವ ಜನಾಂಗಕ್ಕೆ ನದಿಯೆಂದರೆ ಅದು ಮಾತೃ ಸ್ವರೂಪಿಣಿ ಎಂಬ ಪರಿಕಲ್ಪನೆ ಮೂಡಿತು.

ಜಗತ್ತಿನ ಯಾವುದೇ ಪುರಾಣವಿರಲಿ, ಮಹಾಕಾವ್ಯವಿರಲಿ ಅಲ್ಲಿ ನದಿಗಳ ಪಾತ್ರ ಇದ್ದೇ ಇರುತ್ತದೆ. ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನ “ರಿವರ್‍ಸ್ ಆಫ್ ಎಂಪೈರ್” ಕೃತಿಯಲ್ಲಿ ನದಿ ಅಥವಾ ನೀರಿನ ಇತಿಹಾಸವಿಲ್ಲದೆ ಯಾವುದೇ ಮನುಕುಲದ ಇತಿಹಾಸ ಪೂರ್ಣವಾಗಲಾರದು ಎಂದಿದ್ದಾನೆ.

ಜಗತ್ತಿನ ಪ್ರ-ಪ್ರಥಮ ಮಹಾಕಾವ್ಯ ಎನಿಸಿಕೊಂಡ ಮೆಸಪೊಟೋಮಿಯಾ ನಾಗರೀಕತೆಯಲ್ಲಿ ಸೃಷ್ಟಿಯಾಗಿ ಹಲವಾರು ಶತಮಾನಗಳ ಕಾಲ ಮಣ್ಣಿನ ಹಲಗೆಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಬಂದ “ಗಿಲ್ಗಮೇಶನ ಮಹಾಕಾವ್ಯ” ದಲ್ಲಿ ನದಿಗಳ ಪ್ರವಾಹ ಪ್ರಧಾನ ಅಂಶವಾಗಿ ಮೂಡಿಬಂದಿದೆ. ಭಾರತದ ಗಂಗಾನದಿ, ಈಜಿಪ್ಟ್‌ನ ನೈಲ್‌ನದಿ, ರಷ್ಯಾದ ಓಲ್ಗಾ, ದಕ್ಷಿಣ ಅಮೆರಿಕಾದ ಅಮೆಜಾನ್, ಚೀನಾದ ಹಳದಿನದಿ, ಇಥಿಯೋಪಿಯಾದ ಐನಾಸ್ ಹೀಗೆ ನದಿ ಪಾತ್ರಗಳಲ್ಲಿನ ಜನಜೀವನ, ಸಂಸ್ಕೃತಿ, ಸಾಮ್ರಾಜ್ಯಗಳ ಉದಯ-ಪತನ, ಐತಿಹ್ಯ ಪುರಾಣ, ಸಾಂಸ್ಕೃತಿಕ ಆಚರಣೆ ಎಲ್ಲವುಗಳೂ ನದಿಗಳ ಇತಿಹಾಸದ ಜೊತೆ ಮಿಳಿತಗೊಂಡಿವೆ.

20ನೇ ಶತಮಾನದ ಆದಿಯಿಂದ ಬೃಹತ್ ಅಣೆಕಟ್ಟುಗಳ ನೆಪದಲ್ಲಿ ನದಿಗಳನ್ನು ಮಣಿಸಿ, ಅವುಗಳ ಸಹಜ ಹರಿವಿಗೆ ತಡೆಯೊಡ್ಡಿ ಸಾವಿಗೆ ಕಾರಣೀಭೂತನಾದ ಆಧುನಿಕ ಯುಗದ ನವ ನಾಗರೀಕನಿಗೆ ನಮ್ಮ ಪೂರ್ವಿಕರ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಗಮನಿಸುವ ತಾಳ್ಮೆ ಮತ್ತು ವಿವೇಚನೆ ಇಲ್ಲ. ಅವನ ಪಾಲಿಗೆ ಇದು ಅರ್ಥಹೀನ ಸಂಗತಿ. ಒಬ್ಬನ ಹಿತಕ್ಕೆ ಹತ್ತು ಜನರ ಹಿತವನ್ನು ಬಲಿಕೊಡುವ ಇಂದಿನ ವ್ಯವಸ್ಥೆಯಲ್ಲಿ ಇತಿಹಾಸ ಕುರಿತ ಕಾಳಜಿ, ಪರಿಸರದ ಬಗೆಗಿನ ಪ್ರೀತಿ ಯಾರಿಗೂ ಬೇಡವಾದ ಸಂಗತಿಗಳು.

(ಮುಂದುವರಿಯುವುದು)

(ಚಿತ್ರಕೃಪೆ : ವಿಕಿಪೀಡಿಯ)

ಜೀವನದಿಗಳ ಸಾವಿನ ಕಥನ – 1

ಡಾ.ಎನ್. ಜಗದೀಶ್ ಕೊಪ್ಪ

ಇದು ಜೀವನದಿಗಳ ಸಾವಿನ ಕಥನವಷ್ಟೇ ಅಲ್ಲ, ಮನುಕುಲದ ಅವಸಾನದ ಕಥನ ಕೂಡ ಹೌದು. ಒಬ್ಬನ ಹಿತಕ್ಕಾಗಿ ಹಲವರ ಬದುಕನ್ನು ಬಲಿಕೊಡುವ ವಿಕೃತ ದುರಂತಗಾಥೆ. ಯಾವ ಜಾಗದಲ್ಲಿ ಮನುಕುಲದ ನಾಗರೀಕತೆ ಜನ್ಮತಾಳಿತೋ, ಅದೇ ಜಾಗದಲ್ಲಿ ಸಂಸ್ಕೃತಿ ಅವಸಾನಗೊಳ್ಳುತ್ತಿರುವ ನೋವಿನ ಕಥೆ.

ಹರಿಯುವ ನೀರಿಗೆಲ್ಲಾ ಗಂಗೆಯೆಂದು ಹೆಸರಿಟ್ಟು ಪೂಜಿಸಿದ ಈ ನೆಲದಲ್ಲಿ ಮಾತೃ ಸ್ವರೂಪದ ನದಿ ಎಂಬಾಕೆಯ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಹಂತ-ಹಂತವಾಗಿ ನಡೆಯುತ್ತಿರುವ ಅತ್ಯಾಚಾರ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಪೃಥ್ವಿಯ ಎಲ್ಲೆಡೆ ಇತಿಹಾಸದುದ್ದಕ್ಕೂ ನಿರಂತರವಾಗಿ ಅಡೆ ತಡೆಯಿಲ್ಲದೆ ಸಾಗಿದ ಅವಿರತ ಅನಾಚಾರ.

ಮನುಷ್ಯನ ಜ್ಞಾನ ವಿಕಾಸವಾದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾದಂತೆ, ಆಧುನಿಕ ಜಗತ್ತಿನ ಮಾನವನಲ್ಲಿ ಪ್ರಕೃತಿಯನ್ನು ಮಣಿಸಬೇಕೆಂಬ ಅಹಂಕಾರ ತಲೆ ಎತ್ತಿದೆ. ಇದರ ಫಲವಾಗಿ ನಿಸರ್ಗದ ಕೊಡುಗೆಗಳ ಜೊತೆಜೊತೆಯಲ್ಲಿ ಪ್ರಕೃತಿ ವಿಕೋಪಗಳನ್ನೂ ಅವನು ಅನುಭವಿಸಬೇಕಾಗಿದೆ.

ನಾವು ಈ ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ. ಅದನ್ನು ರಕ್ಷಿಸಿ ಮುಂದಿನ ತಲೆಮಾರಿಗೂ ಉಳಿಸಬೇಕಾದದ್ದು ನಮ್ಮ ಹೊಣೆ ಎಂಬ ಪ್ರಜ್ಞೆ ವಿಸ್ಮೃತಿಗೆ ಜಾರಿರುವುದೇ ಪರಿಸರದ ದುರಂತಕ್ಕೆ ಮೂಲ ಕಾರಣವಾಗಿದೆ.

ನಾಗರೀಕ ಸಮಾಜದಲ್ಲಿ ಹೆಚ್ಚಿದ ಅನುಭೋಗ ಪ್ರವೃತ್ತಿ ಪರಿಸರದ ಮೇಲಿನ ಪೈಶಾಚಿಕ ದಾಳಿಗೆ ಮೂಲವಾಗಿದ್ದು,  ಕಳೆದ 20 ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆಗಿದ್ದ ನಷ್ಟದಷ್ಟು ಪ್ರಮಾಣ ಈಗ ಕೇವಲ 50 ವರ್ಷಗಳಲ್ಲಿ ಜರುಗಿದೆ.

ಮನುಷ್ಯ ಕಾಲಿಟ್ಟ ಜಾಗ ಅದು ಅರಣ್ಯವಿರಲಿ, ಪರ್ವತವಿರಲಿ, ನದಿಯಿರಲಿ ಸುರಕ್ಷಿತವಾಗಿಲ್ಲ. ಮನುಕುಲದ ವಾರಸುದಾರರೆಂದು ಹೇಳಿಕೊಳ್ಳುವ ನಾವು ಕಾಲಿಟ್ಟ ಸ್ಥಳಗಳಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯಲಾರದು ಎಂಬ ವಾಸ್ತವಿಕ ಕಟು ಸತ್ಯವನ್ನು ನೆನಪಿಗೆ ತಂದುಕೊಳ್ಳಲಾಗದಷ್ಟು ಅಹಂಕಾರದ ಅಟ್ಟಕ್ಕೆ ದೂಡಲ್ಪಟ್ಟಿದ್ದೇವೆ.

ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು, ಬದುಕುವ ಪರಿಸರ ಎಲ್ಲವನ್ನೂ ವಿಷಮಯಗೊಳಿಸಿ, ಭೂಮಿಯನ್ನು ಸುಡುಗಾಡನ್ನಾಗಿ ಮಾಡಿ ನಾಗರೀಕತೆಯ ಸೋಗಿನಲ್ಲಿ ಅನಾಗರೀಕತೆಯ ಬದುಕು ನಡೆಸುತ್ತಿದ್ದೇವೆ.

ಈ ಭೂಮಿಯ ಮೇಲೆ ಪ್ರಾಣಿಗಳ ಜೊತೆ ಜೊತೆಯಲ್ಲಿ ಮನುಷ್ಯ ಜೀವಿ ಅಸ್ತಿತ್ವಕ್ಕೆ ಬಂದಿದ್ದು 20 ಸಾವಿರ ವರ್ಷಗಳ ಹಿಂದೆ. ಪ್ರಾರಂಭಿಕ ದಿನಗಳಲ್ಲಿ ಪ್ರಾಣಿಯಂತೆ ಬದುಕಿದ್ದ ಆತನ ಮೆದುಳೊಳಗೆ ವಿವೇಚನೆ ಮೂಡಿ, ಪ್ರಕೃತಿಯ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸುವ ಬುದ್ಧಿ ಮೊಳೆತದ್ದು ಕೇವಲ 10 ಸಾವಿರವರ್ಷಗಳ ಹಿಂದೆ. ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿ, ಗುಡುಗು-ಸಿಡಿಲು, ಮಳೆ-ಗಾಳಿಗೆ ಅಂಜಿ ಗುಹೆಗಳಲ್ಲಿ ವಾಸವಾಗಿದ್ದ ಅವನ ಕೈಗೆ ಕಬ್ಬಿಣದ ಲೋಹ ಯಾವಾಗ ಆಯುಧವಾಗಿ ದೊರೆಯಿತೊ, ಅಂದೇ ನಾಗರೀಕತೆಯ ಅಧ್ಯಾಯ  ಕೂಡ ಪ್ರಾರಂಭವಾಯಿತು.

ಶಿಲಾಯುಗದಿಂದ ಲೋಹಯುಗಕ್ಕೆ ಸ್ಥಿತ್ಯಂತರಗೊಂಡ ಮಾನವನ ಬದುಕಿನಲ್ಲಿ ನಾಗರೀಕತೆಯ ಬೀಜ ಮೊಳಕೆಯೊಡೆದದ್ದೇ ತಡ, ತನ್ನ ಜೊತೆಯಲ್ಲಿ ಬದುಕಿದ್ದ ಸಾಧು ಪ್ರಾಣಿಗಳನ್ನು ಪಳಗಿಸಿ, ಗೆಡ್ಡೆ-ಗೆಣಸುಗಳನ್ನು ಆರಿಸುವ ಬದುಕಿಗೆ ವಿದಾಯ ಹೇಳಿ, ತಾನಿದ್ದ ಜಾಗದಲ್ಲೇ ಉತ್ತಿ, ಬಿತ್ತಿ ಬೆಳೆಯಬಾರದೇಕೆ ಎಂಬ ಪ್ರಶ್ನೆಯ ಮಿಂಚು ಅವನ ತಲೆಯೊಳಗೆ ಸುಳಿದಾಗ ಪ್ರಕೃತಿಯ ಮೇಲಿನ ದಾಳಿಯ ಮೊದಲ ಅಧ್ಯಾಯಕ್ಕೆ ನಾಂದಿಯಾಯಿತು.

ಜಗತ್ತಿನ ಯಾವುದೇ ನಾಗರೀಕತೆಯ ಹುಟ್ಟು ಮತ್ತು ಅವಸಾನಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲವೂ ನದಿ ತೀರದಲ್ಲಿಯೇ ಜನಿಸಿ, ಅಲ್ಲೇ ಅವಸಾನಗೊಂಡಿವೆ. ಹಾಗಾಗಿ ನದಿಗಳೆಂದರೆ ಕೇವಲ ನೀರಿನ ಮೂಲವಲ್ಲ, ಅವು ಮನುಕುಲದ ಹುಟ್ಟು-ಸಾವಿನ ತೊಟ್ಟಿಲುಗಳು ಕೂಡ ಹೌದು.

ಐದು ಸಾವಿರ ವರ್ಷಗಳ ಹಿಂದೆ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ತೀರದಲ್ಲಿ ಹುಟ್ಟಿದ ಮೆಸಪೊಟೋಮಿಯಾ ನಾಗರೀಕತೆ, ಈಜಿಪ್ಟ್‌ನ ನೈಲ್ ನದಿ ಬಳಿ ಜನಿಸಿದ ಈಜಿಪ್ಟ್ ನಾಗರೀಕತೆ, ದಕ್ಷಿಣ ಅಮೆರಿಕದ ಇಂಕಾ ಮತ್ತು ಮಾಯಾ ನಾಗರೀಕತೆ, ಗ್ರೀಕ್‌ನ ರೋಮ್ ನಾಗರೀಕತೆ, ಭಾರತದ ಸಿಂಧೂ ನದಿ ತೀರದ ಹರಪ್ಪ, ಮೆಹಂಜೋದಾರೊ ನಾಗರೀಕತೆ ಇವುಗಳ ಮೂಲ ಬೇರುಗಳು ಜಗತ್ತಿನ ಹಲವಾರು ನದಿಗಳಲ್ಲಿ ಅಡಕವಾಗಿದೆ. ಮನುಷ್ಯ ಸಂಸ್ಕೃತಿಯ ಜನನಕ್ಕೆ ಕಾರಣವಾದ ಇದೇ ಜೀವ ನದಿಗಳು ಅವನ ಸಂಸ್ಕೃತಿ ಮತ್ತು ನಾಗರೀಕತೆಯ ಅವಸಾನಕ್ಕೂ ಕಾರಣವಾಗಿವೆ. ಈ ಸಂದರ್ಭದಲ್ಲಿ ಲೆವಿಸ್ ಮಮ್‌ಪೆಡ್ ಎಂಬ ಲೇಖಕ ತನ್ನ “ಟೆಕ್ನಿಕ್ ಅಂಡ್ ಸಿವಿಲೈಜೇಷನ್” ಕೃತಿಯಲ್ಲಿ “ಕಬ್ಬಿಣ ಮತ್ತು ಕಲ್ಲಿದ್ದಲಿನ ಆವಿಷ್ಕಾರ ನಾಗರೀಕತೆ ವಿಕಾಸ ಮತ್ತು ವಿನಾಶಕ್ಕೆ ಕಾರಣಮಯ” ಎನ್ನುವ ಮಾತು ಇಲ್ಲಿ ಪ್ರಸ್ತುತ.

ಹುಟ್ಟು, ವಿನಾಶ, ಮರುಹುಟ್ಟುಗಳ ಹೋರಾಟದಲ್ಲಿ ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲಿನ ಅವಲಂಬನೆ ಮತ್ತು ಅದರ ದುರ್ಬಳಕೆ ಕೂಡ ಹೆಚ್ಚಾಯಿತು. ಪ್ರಕೃತಿಯ ಒಂದು ಭಾಗವಾಗಿಯೇ ಬದುಕಿದ ನಮ್ಮ ಮೂಲನಿವಾಸಿಗಳು, ಪರಿಸರಕ್ಕೆ ಧಕ್ಕೆಯಾಗದ ರೀತಿ ಬದುಕಿದ್ದರು. ಇಂದಿಗೂ ಕೂಡ ಅರಣ್ಯವಾಸಿಗಳಲ್ಲಿ ಇಂತಹ ಸಂಸ್ಕೃತಿಯನ್ನು ನಾವು ನೋಡಬಹುದು. ಅವರು ಒಂದು ಮರ ಕಡಿಯುವ ಮುನ್ನ ಅದಕ್ಕೆ ಪ್ರತಿಯಾಗಿ ಎರಡು ಸಸಿ ನೆಡುವ ಸಂಸ್ಕೃತಿ ಹಾಗೂ ಬೇಸಾಯ ಮಾಡಿದ ಭೂಮಿಯನ್ನು ಹಲವಾರು ವರ್ಷ ತೊರೆದು ಬೇರೆಡೆ ಬೇಸಾಯ ಮಾಡುವ ಕ್ರಮವನ್ನು ನಾವು ಆದಿವಾಸಿಗಳ ಬದುಕಿನಲ್ಲಿ ಇಂದೂ ಸಹ ಕಾಣಬಹುದಾಗಿದೆ. ಪ್ರಕೃತಿಯ ಕುರಿತಾದ ಈ ಜ್ಞಾನ ಪರಂಪರೆಯನ್ನು ಅವರಿಗೆ ಯಾರೂ ಧಾರೆ ಎರೆಯಲಿಲ್ಲ. ಪರಿಸರದ ಮಕ್ಕಳಂತೆ ಬದುಕಿದ ಅವರ ಎದೆಯೊಳಗೆ ಈ ಜ್ಞಾನ ತಾನಾಗಿಯೇ ಮೊಳೆತದ್ದು. ಈ ನೆಲದ ನಿಜ ಮಕ್ಕಳನ್ನು ನಾಗರೀಕ ಸೋಗಿನ ನಾವು “ಅನಾಗರೀಕರೆಂದು” ಕರೆಯುವ ಪ್ರವೃತ್ತಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕ್ ದಾರ್ಶನಿಕ ಸಾಕ್ರೆಟೀಸ್ “ಪ್ರಕೃತಿ ಜೀವ ಸಂಕುಲಗಳನ್ನು ಪೋಷಿಸಿಕೊಂಡು ಬಂದಿರುವುದು ಮಾನವನ ಒಳಿತಿಗಾಗಿ ಇದರ ದುರುಪಯೋಗ ಸಲ್ಲದು” ಎಂದಿದ್ದ.

ಎಲ್ಲವೂ ತನ್ನ ಕಾಲಡಿಯಲ್ಲಿರಬೇಕು ಎಂಬ ಭ್ರಮೆಯನ್ನು ಬೆನ್ನತ್ತಿರುವ ಮನುಕುಲ ತಾನು ಸವೆಸಿದ ಹಾದಿಯನ್ನು, ನಡೆದ ಹೆಜ್ಜೆ ಗುರುತುಗಳನ್ನು ಹಿಂತಿರುಗಿ ನೋಡಲಾರದ ಸೊಕ್ಕನ್ನು ಬೆಳೆಸಿಕೊಂಡಿದೆ.

ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ “ಹ್ಯೂಮನಿಟಿ ಅಂಡ್ ನೇಚರ್” ಕೃತಿಯಲ್ಲಿ 15ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು 17ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬಾತ “ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ” ಎಂದು ವಾದಿಸಿದ್ದಾನೆ.

ಇಂತಹ ಅಪಕ್ವ ಪಾಶ್ಚಿಮಾತ್ಯ ಚಿಂತನೆಯ ಧಾರೆಗಳನ್ನು ನಿರಾಕರಿಸಿದ್ದ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ “ಯೂರೋಪಿಯನ್ನರು ಯಾವ ನೆಲವನ್ನು ಮೆಟ್ಟಲಿ, ಸಾವು ಆ ನೆಲವನ್ನು, ಆ ನೆಲದ ಪರಿಸರವನ್ನು ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಬೆನ್ನಟ್ಟುತ್ತದೆ” ಎಂದು ಮಾರ್ಮಿಕವಾಗಿ ನುಡಿದಿದ್ದಾನೆ.

ಮನುಕುಲದ ಇಂತಹ ನಿರಂತರ ದಾಳಿಯ ಚರಿತ್ರೆಯನ್ನು ಅವಲೋಕಿಸಿರುವ ಇತಿಹಾಸ ತಜ್ಞ ಎಲಿಂಗ್‌ಟನ್ ಮನುಕುಲದ ಐದು ಶತಮಾನಗಳನ್ನು “ಸಾಮ್ರಾಜ್ಯಶಾಹಿ, ವಸಹಾತುಶಾಹಿ, ಕೈಗಾರಿಕಾಶಾಹಿ, ಬಂಡವಾಳಶಾಹಿ, ಜನಾಂಗಶಾಹಿ ಯುಗ” ಎಂದು ವಿಂಗಡಿಸಿದ್ದು, ಈಗ ಮನುಕುಲ ಹಾಗೂ ಪರಿಸರದ ಉಳಿವಿಗಾಗಿ ಪರಿಸರಶಾಹಿ ಯುಗ ರೂಪುಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾನೆ.

ಪಾಶ್ಚಿಮಾತ್ಯ ಪ್ರೇರಿತ ಅಭಿವೃದ್ಧಿ ಹಾಗೂ ಆರ್ಥಿಕ ಸಿದ್ಧಾಂತಗಳು ಇದೀಗ ಮನುಕುಲವನ್ನು ಭೋಗದ ಹುಚ್ಚುಕುದುರಯನ್ನೇರುವಂತೆ ಮಾಡಿವೆ. ಎಲ್ಲವನ್ನೂ ವ್ಯಾಪಾರದ ಸರಕುಗಳಂತೆ ನೋಡುವ ನಮ್ಮ ಆರ್ಥಿಕ ತಪ್ಪು ಪರಿಕಲ್ಪನೆಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಕೃತಿ ಮೇಲಿನ ಪೈಶಾಚಿಕ ದಾಳಿ ವರ್ತಮಾನದ ಜಗತ್ತನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ.

(ಮುಂದುವರಿಯುವುದು)