Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ದಲಿತರು ಮತ್ತು ಉದ್ಯಮಶೀಲತೆ…

ಸ್ನೇಹಿತರೇ,

ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ ಆಶಯದಂತೆ ವರ್ತಮಾನ.ಕಾಮ್ ಬಳಗ ಇತರೆ ಸಮಾನಮನಸ್ಕ ಗುಂಪು ಮತ್ತು ಸಂಘಟನೆಗಳ ಜೊತೆಗೂಡಿ ರಾಜ್ಯದ ಹಲವು ಕಡೆ ಸಂವಾದ ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಮೊದಲ ಕಾರ್ಯಕ್ರಮ ಹಾಸನದಲ್ಲಿ ಇದೇ ಶನಿವಾರ (07-09-2013) ನಡೆಯುತ್ತಿದೆ. ವಿಷಯ: “ದಲಿತರು ಮತ್ತು ಉದ್ಯಮಶೀಲತೆ”.

ದಲಿತರು ಉದ್ಯಮಿಗಳಾಗಬೇಕೆ ಬೇಡವೆ, ಅವರೂ ಅಂತಿಮವಾಗಿ ಬಂಡವಾಳಶಾಹಿಯ ಶೋಷಕವರ್ಗದ ಪಾಲುದಾರರಾಗಬೇಕೆ, ಎನ್ನುವುದರಿಂದ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಉದ್ಯಮಿಗಳಾಗಲು ಇರುವ ಅಡೆತಡೆಗಳೇನು, ಬಂಡವಾಳ ಹೂಡಿಕೆ ಯಾರಿಂದ, ಇತ್ಯಾದಿ ವಿಷಯಗಳ ಬಗ್ಗೆ ಇಂದು ದೇಶದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಅನೇಕ ದಲಿತರು ಉದ್ಯಮಿಗಳಾಗಿ ಯಶಸ್ಸನ್ನೂ ಪಡೆಯುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದರೆ ಸರ್ಕಾರ ಮತ್ತು ಸಮಾಜದಲ್ಲಿ ಆಗಬೇಕಾದ ನೀತಿನಿರೂಪಣೆಗಳು, ಸುಧಾರಣೆಗಳು, ಮನಸ್ಥಿತಿಯ ಬದಲಾವಣೆ, ಇತ್ಯಾದಿಗಳ ಬಗ್ಗೆ ಮತ್ತು ಉದ್ಯಮಿಗಳಾಗಿ ಪರಿವರ್ತಿತರಾಗುವ ದಲಿತರ ಮೇಲಿರುವ ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಮಾಜ ಅವರಿಂದ ಬಯಸುವ ಅತಿಯಾದ ಜವಾಬ್ದಾರಿತನ ಮತ್ತು ನೈತಿಕತೆ, ಇತ್ಯಾದಿಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ, ಸಂವಾದಗಳು ಆಗಬೇಕಿದೆ. ಅಂತಿಮವಾಗಿ ಉದ್ಯಮಕ್ಷೇತ್ರದಲ್ಲಿ ಅವರಿಗಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ವರ್ತಮಾನ.ಕಾಮ್ ಹಾಸನದ “ಸಹಮತ ವೇದಿಕೆ”ಯ ಜೊತೆಗೂಡಿ ಈ ಕಾರ್ಯಕ್ರಮ ಆಯೋಜಿಸಿದೆ. vartamaana-sahamata-invitationಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿದ ಮತ್ತು ದಲಿತಪರ ಹೋರಾಟಗಾರ ಕೆ.ಟಿ..ಶಿವಪ್ರಸಾದ್ ವಹಿಸುತ್ತಾರೆ. ಸಾಹಿತಿಗಳೂ, ಮಾಜಿ ವಿಧಾನಪರಿಷತ್ ಸದಸ್ಯರೂ, ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ಎಲ್.ಹನುಮಂತಯ್ಯನವರು ಮತ್ತು ಉದ್ಯಮಿಗಳೂ, Dalit Indian Chamber of Commerce & Industry (DICCI)ಯ ರಾಜ್ಯಾಧ್ಯಕ್ಷರೂ ಆದ ರಾಜಾ ನಾಯಕರು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ದಯವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಕಾರ್ಯಾಧ್ಯಕ್ಷರಾದ ಸಿ.ಜಿ.ಶ್ರೀನಿವಾಸನ್‌‌ರು, ನಮ್ಮ ವರ್ತಮಾನ.ಕಾಮ್ ಬಳಗದ  ಬಿ.ಶ್ರೀಪಾದ್ ಭಟ್ಟರೂ ಸಹ ಬರಲಿದ್ದಾರೆ.

ಹಾಸನದ “ಸಹಮತ ವೇದಿಕೆ”ಯ ಬಗ್ಗೆ ಒಂದೆರಡು ಮಾತು. ಹಾಸನದಲ್ಲಿರುವ ಕೆಲವು ಸಮಾನಮಸ್ಕ ಸ್ನೇಹೊತರು ಸೇರಿ ಕಟ್ಟಿಕೊಂಡಿರುವ ಈ ವೇದಿಕೆ ಅವರೇ ಹೇಳುವಂತೆ: “ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಬದುಕಿನಲ್ಲಿ ಉಳಿವಿಗಾಗಿ ತುರುಸಿನ ಪೈಪೋಟಿ ನಡೆಸುತ್ತಲೇ ತಮ್ಮೊಡಲಿನ ಜೀವದ್ರವ್ಯವನ್ನು ಜತನದಿಂದ ಕಾಯ್ದುಕೊಳ್ಳುವ ತುಡಿತವಿರುವ ಕೆಲವು ಸ್ನೇಹಿತರು ಸೇರಿ ಹಾಸನದಲ್ಲಿ ಹುಟ್ಟುಹಾಕಿದ ‘ಸಹಮತ ವೇದಿಕೆ’ ಸಾಹಿತ್ಯ, ಸಿನಿಮಾ, ನಾಟಕ ಮತ್ತು ವಿಚಾರ ಮಂಥನಗಳಂತಹ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ.” ಅವರ ಇತ್ತೀಚಿನ ತಿಂಗಳುಗಳ ಕಾರ್ಯಕ್ರಮಗಳ ವಿವರಗಳು ಅವರ ಬ್ಲಾಗಿನಲ್ಲಿ ಇವೆ (sahamathasana.blogspot.in). ಪ್ರಾಮಾಣಿಕರೂ, ಬದ್ಧತೆಯುಳ್ಳ ಸಮಾಜಮುಖಿಗಳೂ ಆದ “ಸಹಮತ ವೇದಿಕೆ”ಯ ಸ್ನೇಹಿತರೊಡನೆಗೂಡಿ ವರ್ತಮಾನ.ಕಾಮ್‌ನ ಈ ತರಹದ ಮೊದಲ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ನಿಜಕ್ಕೂ ಸಂತೋಷವಿದೆ.

ಇನ್ನು ಇದೇ ಸಂದರ್ಭದಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಿದಲ್ಲಿ ಪ್ರಕಟಿಸಲಾಗುವುದು. ದಯವಿಟ್ಟು ಬರೆಯಿರಿ ಎಂದು ನಮ್ಮ ಬಳಗದ ಲೇಖಕರಲ್ಲಿ ಮತ್ತು ಓದುಗರಲ್ಲಿ ವಿನಂತಿಸುತ್ತೇನೆ. ಹಾಗೆಯೇ, ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸಿ. ಮತ್ತು, ಸಂವಾದದಲ್ಲಿ ನಿಮ್ಮ ಪರವಾಗಿ ಏನಾದರೂ ಪ್ರಶ್ನೆಗಳನ್ನು ಎತ್ತಬೇಕಿದ್ದಲ್ಲಿ ಅವನ್ನೂ ಕಾಮೆಂಟ್‌ ರೂಪದಲ್ಲಿ ಹಾಕಿ. ಅವನ್ನು ಕಾರ್ಯಕ್ರಮದಲ್ಲಿ ಮತ್ತು ಸಂವಾದದಲ್ಲಿ ಪಾಲ್ಗೊಂಡವರಿಗೆ ತಲುಪಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಸಂಪಾದಕ, vartamaana.com

 

ಹಸಿವು ಹಿಂಗಿಸೋ ತಾಕತ್ತಿರುವ ಮಸೂದೆ…


– ಡಾ.ಎಸ್.ಬಿ. ಜೋಗುರ


ದೇಶದ 67 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಾದರೂ ನಾವು ಇಲ್ಲಿಯ ನಾಗರಿಕರ ಆಹಾರ ಸುಭದ್ರತೆಯ ಬಗೆಗೆ ಯೋಚಿಸುತ್ತಿರುವದು ಸಮಾಧಾನಕರ ಸಂಗತಿಯಾಗಿದೆ. ಆದರೆ ಲೋಕಸಭೆಯಲ್ಲಿ ಈ “ರಾಷ್ಟ್ರೀಯ ಆಹಾರ ಸುಭದ್ರತೆಯ ಮಸೂದೆ”ಗೆ ಸಂಬಂಧಿಸಿದ ಚರ್ಚೆಯ ಸಂದರ್ಭದಲ್ಲಿ ಟಿ.ಡಿ.ಪಿ. ಪಕ್ಷದ ಹುಯಿಲಿನಿಂದಾಗಿ ಆಹಾರ ಸಚಿವ ಕೆ.ವಿ.ಥಾಮಸ್ ಕಕ್ಕಾಬಿಕ್ಕಿಯಾಗಬೇಕಾಯಿತು. ಮತ್ತೂ ರಾಷ್ಟ್ರೀಯ ಆಹಾರ ಸುಭದ್ರತಾ ಬಿಲ್ ಮಂಡನೆಯಾಗುವ ಬದಲು ಯತಾಸ್ಥಿತಿಯಲ್ಲಿಯೇ ಉಳಿಯುವಂತಾಗಿತ್ತು. Food Security Billಆದರೆ ಈಗ ಆಹಾರ ಮಸ್ಸೊದೆಗೆ ಅಂಗೀಕಾರ ದೊರೆಯುವ ಮೂಲಕ ದೇಶದ 67 ಪ್ರತಿಶತ ಜನರಿಗೆ ಇದರಿಂದ ಪ್ರಯೋಜನವಾಗಲಿದೆ. 1.25 ಲಕ್ಷ ಕೊಟಿ ಹಣ ಇದಕ್ಕಾಗಿ ವ್ಯಯವಾಗಲಿದೆ.

ಮಾಹಿತಿ ಹಕ್ಕು, ಉದ್ಯೋಗದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ಸಾಲಿನಲ್ಲಿ ಈ ಆಹಾರ ಸುಭದ್ರತೆಯ ಹಕ್ಕು ಕೂಡಾ ತುರ್ತಾಗಿ ಸೇರಬೇಕಿತ್ತು. ಆದರೆ ಈ ಬಿಲ್ ಬಗ್ಗೆ ಒಮ್ಮತ ಬಾರದ ಕಾರಣ ಬರೀ ಚರ್ಚೆಯ ಹಂತದಲ್ಲಿಯೇ ಅದು ಉಳಿದಿತ್ತು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಹಾರದ ಸುಭದ್ರತೆ, ಶಿಕ್ಷಣ ಹಾಗೂ ಉದ್ಯೋಗಕ್ಕಿಂತಲೂ ಹೆಚ್ಚು ನಿರ್ಣಾಯಕವಾಗಲಿದೆ.

ಆಹಾರದ ವಿಷಯವಾಗಿ ನಮ್ಮ ದೇಶದಲ್ಲಿ ಕಪ್ಪು ಬಿಳುಪು ಚಿತ್ರಣವಿದೆ. ಸಾಕಷ್ಟು ಆಹಾರ ಉತ್ಪಾದನೆಯಾಗುತ್ತಿರುವದು, ಯೋಗ್ಯ ಸಂಗ್ರಹಾಗಾರ ಇಲ್ಲದ ಕಾರಣ ಕೊಳೆಯುವದು.. ಹುಳ ಹಿಡಿಯುವದೂ ಇದೆ. ಇನ್ನೊಂದು ಬದಿ ಹಸಿವಿನಿಂದ ಸಾಯುವ, ಪೌಷ್ಟಿಕಾಂಶದಿಂದ ಬಳಲುವ ಮಕ್ಕಳ ಪ್ರಮಾಣವೇನೂ ಕಡಿಮೆಯಾಗಿಲ್ಲ. ಅತ್ಯಂತ ವೈಭವಯುತ ಬದುಕು ಸಾಗಿಸುವ, ತಿಂದದ್ದನ್ನು ಅರಗಿಸಿಕೊಳ್ಳುವದೇ ದೊಡ್ಡ ಕಿರಿಕಿರಿಯಾಗಿ ಪರಿತಪಿಸುವ ಔಷಧಿ, ಮಾತ್ರೆಯ ಮೂಲಕ ಆಹಾರ ಜೀರ್ಣವಾಗುವಂತೆ ಮಾಡಿ ನಿಟ್ಟುಸಿರು ಬಿಡುವವರು ಒಂದೆಡೆಯಾದರೆ, starved-peopleಹೊಟೆಲುಗಳಲ್ಲಿ ರೇಟ್ ಬೋರ್ಡ್ ನೋಡಿ, ಕೇಳಿ ಅರ್ಧಂಬರ್ಧ ಹೊಟ್ಟೆಯಲ್ಲಿ ಊಟ ಮಾಡಿ ಬೇಗ ಕರಗದಿರಲಿ ಎಂದು ತವಕಿಸುವ ದೊಡ್ಡ ಸಮೂಹ ಇನ್ನೊಂದೆಡೆ. 2012 ರ ಸಂದರ್ಭದಲ್ಲಿ ‘ಜಾಗತಿಕ ಹಸಿವಿನ ಸೂಚ್ಯಾಂಕ’ ಮಾಡಿದ ಸಮೀಕ್ಷೆಯಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗಮನಹರಿಸಿ ಅದು ಅಧ್ಯಯನ ಮಾಡಿತ್ತು. ಒಂದನೆಯದು ಸತ್ವಭರಿತ ಆಹಾರದ ಕೊರತೆಯ ಜನಸಮೂಹದ ಪ್ರಮಾಣ, ಎರಡನೆಯದು ಶಿಶುವಿನ ಮರಣ ಪ್ರಮಾಣ, ಮೂರನೇಯದು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ. ಈ ಮೂರು ಸಂಗತಿಗಳನ್ನು ಆದರಿಸಿ ಮಾಡಲಾದ ಸಮೀಕ್ಷೆಯ ಪ್ರಕಾರ 79 ರಾಷ್ಟ್ರಗಳ ಪೈಕಿ ಭಾರತ 65 ನೇ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದೆ.

2008 ರ ಸಂದರ್ಭದಲ್ಲಿ ಭಾರತೀಯ ರಾಜ್ಯಗಳ ಹಸಿವಿನ ಸೂಚ್ಯಾಂಕದ ಪ್ರಕಾರ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿ ಬೇರೆ ಬೇರೆಯಾಗಿದೆ. ದೇಶದ ಸುಮಾರು 12 ರಾಜ್ಯಗಳು ಆಹಾರದ ವಿಷಯವಾಗಿ ಸಂಕಷ್ಟದಲ್ಲಿವೆ. ಅದರಲ್ಲೂ ಮಧ್ಯಪ್ರದೇಶ ತೀರ ಗಂಭೀರವಾದ ಸ್ಥಿತಿಯಲ್ಲಿದೆ ಎಂದು ವರದಿ ಆಗಿರುವದಿದೆ. ಸತ್ವಭರಿತ ಆಹಾರ ಮತ್ತು ಅಭಿವೃದ್ಧಿ ಸೂಚ್ಯಾಂಕದ ವಿಷಯದಲ್ಲಿ ದೇಶದ 12 ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಹತ್ತು ರಾಜ್ಯಗಳ ಶ್ರೇಣಿ ಹೀಗಿದೆ. ಮೊದಲ ಸ್ಥಾನದಲ್ಲಿ ಕೇರಳ, ಎರಡನೆಯ ಸ್ಥಾನ ಹರಿಯಾಣಾ, ಮೂರನೇಯ ಸ್ಥಾನ ತಮಿಳುನಾಡು, ನಾಲ್ಕನೇಯ ಸ್ಥಾನದಲ್ಲಿ ಗುಜರಾತ, ಐದನೇಯ ಸ್ಥಾನದಲ್ಲಿ ಮಹಾರಾಷ್ಟ್ರ, ಆರನೇಯ ಸ್ಥಾನದಲ್ಲಿ ಕರ್ನಾಟಕ, ಏಳನೇ ಸ್ಥಾನದಲ್ಲಿ ಆಂದ್ರಪ್ರದೇಶ, ಎಂಟನೆಯ ಸ್ಥಾನದಲ್ಲಿ ಆಸ್ಸಾಂ, ಒಂಬತ್ತನೇಯ ಸ್ಥಾನದಲ್ಲಿ ಓಡಿಸ್ಸಾ, ಹತ್ತನೇಯ ಸ್ಥಾನದಲ್ಲಿ ರಾಜಸ್ಥಾನ ಇದೆ. ನಮ್ಮ ದೇಶದಲ್ಲಿ ಸುಮಾರು 42 ಪ್ರತಿಶತ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವವರಿದ್ದಾರೆ.

ಆಹಾರದ ವಿಷಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮೂರು ರೀತಿಯ ಸಮೂಹಗಳನ್ನು ಗುರುತಿಸಿರುವದಿದೆ. food_securityಒಂದನೆಯದಾಗಿ ವರ್ಷವಿಡೀ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದಿರುವ ಕುಟುಂಬಗಳು, ಎರಡನೆಯದಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ತೊಂದರೆಯನ್ನು ಎದುರಿಸುವ ಕುಟುಂಬಗಳು, ಮೂರನೆಯದು ವರ್ಷದುದ್ದಕ್ಕೂ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದದೇ ಇರುವವರು. ಇನ್ನು ಈ ಮೇಲಿನ ಮೂರು ಪ್ರಕಾರಗಳು ದೇಶದ ಉದ್ದಗಲಕ್ಕೂ ಕಂಡು ಬರುವ ಸಮೂಹಗಳು. ಮೊದಲನೆಯ ಸಮೂಹಗಳಿಗೆ ಈ ಆಹಾರ ಸುಭದ್ರತೆಯ ಪ್ರಶ್ನೆಯೇ ಬರುವದಿಲ್ಲ. ಇನ್ನು ಎರಡನೆಯವರಿಗೆ ಸಂಕಟ ಬಂದಾಗ ವೆಂಕಟರಮಣ. ನಿಜವಾಗಿಯೂ ಆಹಾರದ ಸುಭದ್ರತೆ ಮತ್ತು ಹಕ್ಕಿನ ಪ್ರಶ್ನೆ ಇದ್ದದ್ದೇ ಮೂರನೇಯ ಜನಸಮೂಹದವರಿಗಾಗಿ. ಇವರು ಹಸಿವು ಮತ್ತು ಕೊರತೆಗಳ ನಡುವೆಯೇ ದಿನದೂಡುವವರು. ಎರಡನೆಯ ಮತ್ತು ಮೂರನೇಯ ಪ್ರರೂಪದ ಕುಟುಂಬದ ವಿಷಯಗಳ ಪ್ರಶ್ನೆ ಬಂದರೆ ವರ್ಷದ ಕೆಲವು ತಿಂಗಳುಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ವಿಷಯವಾಗಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿದ್ದರೆ, ವರ್ಷವಿಡೀ ಆಹಾರ ಧಾನ್ಯಗಳ ಕೊರತೆ ಎದುರಿಸುವ ರಾಜ್ಯಗಳ ಸಾಲಲ್ಲಿ ಆಸ್ಸಾಂ ಮೊದಲ ಸ್ಥಾನದಲ್ಲಿದೆ.

ಭಾರತದಲ್ಲಿ ಪೌಷ್ಟಿಕತೆಯ ಕೊರತೆ ಮತ್ತು ಕಡಿಮೆ ತೂಕದ ಮಕ್ಕಳ ವಿಷಯವಾಗಿ ಮಾತನಾಡುವದಾದರೆ ಭಾರತದಲ್ಲಿ 21.7 ಕೋಟಿ ಜನಸಂಖ್ಯೆಯಷ್ಟು ಜನ (ಹೆಚ್ಚೂ ಕಡಿಮೆ ಇಂಡೊನೇಷಿಯಾದ ಒಟ್ಟು ಜನಸಂಖೆಯಷ್ಟು) ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಗ್ಗೆ ಸಮೀಕ್ಷೆಯಲ್ಲಿ ವರದಿಯಾಗಿದೆ. food-security-wasted-grainsಹಸಿರು ಕ್ರಾಂತಿಗಿಂತಲೂ ಮೊದಲು ದೇಶದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಜನ ಅಪಾರವಾಗಿ ಸಾಯುತ್ತಿದ್ದರು. ಆಗ ಮರಣ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತಿತ್ತು. ಈಗ ಅಂಥ ಬರಗಾಲಗಳಿಲ್ಲ. ಆದರೆ ಈ ಬಗೆಯ ಸತ್ವಭರಿತ ಆಹಾರದ ಕೊರತೆಯಿಂದಾಗಿ ಸಾಯುವವರ ಪ್ರಮಾಣ ಆಗಿನ ಬರಗಾಲಗಳಿಗಿಂತಲೂ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಜನೆವರಿ 2011 ರ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರವರು ‘ನಮ್ಮಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎನ್ನುವದು ರಾಷ್ಟ್ರ ತಲೆತಗ್ಗಿಸುವಂತಿದೆ’ ಎಂದಿದ್ದರು. ಅದನ್ನು ಗಮನದಲ್ಲಿರಿಸಿಕೊಂಡೇ ‘ರಾಷ್ಟ್ರೀಯ ಆಹಾರ ಸುಭದ್ರತಾ ಬಿಲ್’ ಅನ್ನು ಮಂಡಿಸುವ ಯೋಚನೆಗೆ ಯು.ಪಿ.ಎ ಸರಕಾರ ಬಂದಿದ್ದು. ಈ ಮಸೂದೆಯ ಮೂಲಕ ಜನತೆಯ ಕಲ್ಯಾಣವನ್ನು ಜನರ ಹಕ್ಕಿನಲ್ಲಿ ಬದಲಾಯಿಸುವ ಒಳ್ಳೆಯ ಆಶಯವಿತ್ತು. ಅಂತೂ ಆ ಆಶಯವೂ ಈಡೇರಿದಂತಾಯಿತು.

ವಿರೋಧಿಸಲಿಕ್ಕಾಗಿಯೇ ಇತರೆ ಕರಡುಗಳಿವೆ. ಅವುಗಳಿಗೆ ಬೇಕಾದರೆ ಅಡೆತಡೆ ಒಡ್ಡಲಿ. ಆಹಾರ ಸುಭದ್ರತೆಯನ್ನು ಜನತೆಯ ಹಕ್ಕಾಗಿಸುವ ಮೂಲಕ ಹಸಿದ ಹೊಟ್ಟೆಗೆ ಖಾತ್ರಿಯಾಗಬಹುದಾದ ಆಹಾರಧಾನ್ಯಗಳನ್ನು rationshop-PDSಒದಗಿಸಲಿರುವ ಇಂಥಾ ಕರಡನ್ನು ವಿರೋಧಿಸಬಾರದು. ಈ ಬಿಲ್ ಅತಿ ಮುಖ್ಯವಾಗಿ ಮಹಿಳೆ ಮತ್ತು ಮಕ್ಕಳನ್ನೂ ಗಮನದಲ್ಲಿರಿಸಿಕೊಂಡಿದೆ. ಹೆರಿಗೆಯ ಸಂದರ್ಭದಲ್ಲಿ ಮಹಿಳೆಗೆ ಪೌಷ್ಟಿಕ ಆಹಾರದ ಜೊತೆಯಲ್ಲಿ 6000 ರೂ ಮಾತೃತ್ವ ಧನವನ್ನೂ ಆಕೆ ಪಡೆಯಲಿದ್ದಾಳೆ. ಅಪೌಷ್ಟಿಕತೆಯಿಂದ ಬಳಲುವ 14 ವರ್ಷದ ಮಕ್ಕಳು ಪೌಷ್ಟಿಕ ಆಹಾರವನ್ನು ಕಡ್ಡಾಯವಾದ ಶಿಕ್ಷಣದ ರೀತಿಯಲ್ಲಿಯೇ ಪಡೆಯಲಿದ್ದಾರೆ. ಹಾಗಾಗಿ ಹಸಿವು ಹಿಂಗಿಸುವ ತಾಕತ್ತು, ಈಗ ಪರಿಚಯಿಸಲಾಗಿರುವ ಈ ರಾಷ್ಟ್ರೀಯ ಆಹಾರ ಸುಭದ್ರತಾ ಮಸೂದೆಗಿದೆ. ಈ ಮಸೂದೆಯನ್ನು ನಾವೆಲ್ಲರೂ ಮನಸಾರೆ ಸ್ವಾಗತಿಸಬೇಕು.

ಆ ರಾತ್ರಿ ಚಿನು ಎಲ್ಲಿದ್ದಳು ?

– ಬಿ. ಶ್ರೀಪಾದ ಭಟ್

ಎಂಬತ್ತರ ದಶಕದಲ್ಲಿ ದೂರದರ್ಶನ ಪ್ರತಿ ಶುಕ್ರವಾರ ರಾತ್ರಿಯಂದು ಭಾರತೀಯ ಭಾಷೆಗಳ ಕ್ಲಾಸಿಕ್ ಸಿನಿಮಾಗಳನ್ನು ಪ್ರದರ್ಶಿಸುತ್ತಿತ್ತು. ಆಗ ಕಾಲೇಜು ವಿಧ್ಯಾರ್ಥಿಗಳಾಗಿದ್ದ ನಾವೆಲ್ಲ ನೋಡಿದ್ದ ಹಲವಾರು ಶ್ರೇಷ್ಠ ಚಿತ್ರಗಳಲ್ಲಿ “ಏಕ್ ದಿನ್ ಪ್ರತಿದಿನ್” ಸಿನಿಮಾ ಕೂಡ ಒಂದು. ನಮಗೆಲ್ಲ ಭಾರತೀಯ ಸಿನಿಮಾರಂಗದ ಹೊಸ ಲೋಕವನ್ನೇ ತೋರಿಸಿದ ದೂರದರ್ಶನವನ್ನು ನಮ್ಮ ತಲೆಮಾರು ಮರೆಯಲು ಸಾಧ್ಯವೇ ಇಲ್ಲ.

“ಏಕ್ ದಿನ್ ಪ್ರತಿದಿನ್” 1979ರಲ್ಲಿ ತೆರೆಕಂಡ, ಮೃಣಾಲ್ ಸೇನ್ ನಿರ್ದೇಶನದ ಬೆಂಗಾಲಿ ಸಿನೆಮಾ. Ek_Din_Pratidin_DVD_coverಬೆಂಗಾಲಿ ಲೇಖಕ ಅಮಲೇಂದು ಚಕ್ರವರ್ತಿ ಅವರ ಸಣ್ಣ ಕತೆಯನ್ನಾಧರಿಸಿ ಮೃಣಾಲ್‌ದ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರ ಕತೆ ಸ್ಥೂಲವಾಗಿ ಹೀಗಿದೆ: ಎಪ್ಪತ್ತರ ದಶಕದಲ್ಲಿ ಕೊಲ್ಕತ್ತ ( ಆಗಿನ ಕಲ್ಕತ್ತ) ದಲ್ಲಿ ವಾಸಿಸುತ್ತಿರುವ ಏಳು ಜನ ಸದಸ್ಯರ ಮಧ್ಯಮವರ್ಗದ ಕುಟುಂಬ. ಇದರಲ್ಲಿ ತಂದೆ, ತಾಯಿ ಮತ್ತು ಐವರು ಹೆಣ್ಣು ಮಕ್ಕಳು ಮತ್ತಿಬ್ಬರು ಗಂಡು ಮಕ್ಕಳು. ಇಡೀ ಕುಟುಂಬದ ಹೊರೆ ಹೊತ್ತುಕೊಂಡಿದ್ದು ಹಿರಿಯಕ್ಕ ಚಿನು (ಮಮತಾ ಶಂಕರ್). ಕಛೇರಿಯೊಂದರಲ್ಲಿ ಕೆಲಸ ಮಾಡುತ್ತ ತನ್ನ ಉಳಿದ ಆರು ಜನರ ಬದುಕನ್ನು ನಿಭಾಯಿಸುತ್ತಿರುತ್ತಾಳೆ ಹಿರಿಯಕ್ಕ ಚಿನು. ಅದರೊಂದು ದಿನ ರಾತ್ರಿಯಾದರೂ ಹಿರಿಯಕ್ಕ ಚಿನು ಮನೆಗೆ ಮರಳುವುದಿಲ್ಲ. ಬಹುಶಃ ಕಛೇರಿಯಲ್ಲಿ ಹೆಚ್ಚಿದ ಕೆಲಸದಿಂದಾಗಿ ತಡವಾಗಬಹುದೆಂದು ಕುಟುಂಬದ ಇತರೆ ಮಂದಿ ಭಾವಿಸಿರುತ್ತಾರೆ. ಕಿರಿಯ ತಂಗಿ ಮಿನು ( ಅದ್ಭುತವಾಗಿ ನಟಿಸಿದ್ದಾಳೆ. ಹೆಸರು ಮರೆತಿದೆ) ಅಕ್ಕನ ಆಫೀಸಿಗೆ ಫೋನ್ ಮಾಡಿದಾಗ ತನ್ನಕ್ಕ ಆಫೀಸಿನಲ್ಲಿ ಇರದಿರುವುದು ಗೊತ್ತಾಗಿ ಕಳವಳಪಡುತ್ತಾಳೆ.

ನಿಶ್ಚಿಂತೆಯಿಂದ ಇದ್ದ ಈ ಕುಟುಂಬವು ಕ್ಷಣ ಮಾತ್ರದಲ್ಲಿ ಆತಂಕಕ್ಕೆ ದೂಡಲ್ಪಡುತ್ತದೆ. ತೀವ್ರ ದುಗುಡದಿಂದ ಅಪ್ಪ ಬಸ್ ಸ್ಟಾಪಿನ ಬಳಿ ಬಂದು ಕಡೆಯ ಬಸ್ ಬರುವವರೆಗೂ ಕಾಯುತ್ತಾನೆ. ಆದರೆ ಮಗಳು ಕಾಣುವುದಿಲ್ಲ. ಇಡೀ ಅಪಾರ್ಟಮೆಂಟಿನಲ್ಲಿ ಚಿನುವಿನ ನಾಪತ್ತೆಯ ಸುದ್ದಿ ಕ್ಷಣ ಮಾತ್ರದಲ್ಲಿ ಹಬ್ಬುತ್ತದೆ. ನೆರೆಹೊರೆಯ ಜನ ತಲೆಗೊಬ್ಬರಂತೆ ಮಾತನಾಡಲಾರಂಬಿಸುತ್ತಾರೆ. ಕೆಲವರು ಸಹಾನುಭೂತಿಯಿಂದ, ಕೆಲವರು ಕುಹುಕದಿಂದ, ಬಹುಪಾಲು ಜನ ವಿಚಿತ್ರವಾದ ಮಾತುಗಳಿಂದ ಇಡೀ ಘಟನೆಯನ್ನು ವಿಶ್ಲೇಷಿಸುತ್ತಾರೆ. ಇದನ್ನು ಮೃಣಾಲ್‌ದ ಅತ್ಯಂತ ಸಂಯಮದಿಂದ ಆದರೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕಡೆಗೆ ಪೋಲೀಸರಿಗೂ ದೂರು ನೀಡಲಾಗುತ್ತದೆ. ನಾಪತ್ತೆಯಾದ ಚಿನುವಿನ ತಮ್ಮ ಮತ್ತವನ ಸ್ನೇಹಿತನೊಂದಿಗೆ ಕಡೆಗೆ ಹತಾಶೆಯಿಂದ ಶವಾಗಾರಕ್ಕೆ ತೆರಳಿ ತನ್ನಕ್ಕ ಶವವನ್ನು ಹುಡುಕುತ್ತಾನೆ. ಮತ್ತೊಂದು ಕಡೆ ಚಿನುವಿನ ಚಹರೆಯನ್ನು ಹೋಲುವ ಮಹಿಳೆಯೊಬ್ಬಳು ಅಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾಳೆಂದು ಸುದ್ದಿ ತಿಳಿದು ಆಕೆಯ ಅಪ್ಪ ಕೂಡಲೆ ಆಸ್ಪತ್ರೆಗೆ ಧಾವಿಸುತ್ತಾನೆ. ekdin-pratidinಆದರೆ ಆಕೆ ತನ್ನ ಮಗಳಲ್ಲವೆಂದು ಖಚಿತವಾದ ನಂತರ ಅರ್ಧ ನಿರಾಸೆ, ಇನ್ನರ್ಧ ನಿರಾಳತೆಯಿಂದ ಮನೆಗೆ ಮರಳುತ್ತಾನೆ. ಚಿನುವಿನ ಕುಟುಂಬವು ಇಡೀ ರಾತ್ರಿಯನ್ನು ಆತಂಕ, ತಲ್ಲಣಗಳಿಂದ ಎದುರಿಸುತ್ತದೆ. ಮರುದಿನದ ಮುಂಜಾನೆಯ ನಸುಕತ್ತಲಿನಲ್ಲಿ ಕುಟುಂಬದ ಕಿರಿಯ ಹೆಣ್ಣುಮಗಳು ಕಾಣೆಯಾಗಿದ್ದ ಚಿನು ನಿಧಾನವಾಗಿ ಮೆಟ್ಟಿಲೇರುತ್ತ ಬರುತ್ತಿರವುದನ್ನು ಗುರುತಿಸಿ ಸಂತೋಷದಿಂದ ಕಿರುಚುತ್ತ ಇಡೀ ಕುಟುಂಬವನ್ನು ಎಚ್ಚರಿಸುತ್ತಾಳೆ. ಮೆಟ್ಟಲೇರಿ ಬರುತ್ತಿದ್ದ ಮಗಳನ್ನು ಕುಟುಂಬದ ಸದಸ್ಯರು ಮಾತನಾಡಿಸದೇ ವಿಲಕ್ಷಣ ಮೌನದಲ್ಲಿ, ಹೇಳಿಕೊಳ್ಳಲಾಗದ ಶಂಕೆಯಲ್ಲಿ, ಹೊಯ್ದಾಟದ ಮನಸ್ಸಿನಲ್ಲಿ ಎದುರುಗೊಳ್ಳುತ್ತಾರೆ. ಹಿಂದಿನ ರಾತ್ರಿ ಎಲ್ಲಿದ್ದೆ ಎಂದು ಕೇಳಲಾಗದೆ ವಿಚಿತ್ರ ತೊಳತಾಟದಲ್ಲಿರುತ್ತದೆ ಚಿನುವಿನ ಕುಟುಂಬ. ಆಗ ಅಪಾರ್ಟಮೆಂಟಿನ ಮಾಲೀಕ ಎಂದಿನಂತೆ ಅಪ್ಪನನ್ನು ದಬಾಯಿಸುತ್ತಾ ಇದು ಮರ್ಯಾದಸ್ಥರು ಇರುವ ಜಾಗವೆಂತಲೂ ಈ ಕೂಡಲೇ ನಿಮ್ಮ ಕುಟುಂಬ ಇಲ್ಲಿಂದ ಜಾಗ ಬದಲಿಸಬೇಕೆಂತಲೂ ತಾಕೀತು ಮಾಡುತ್ತಾನೆ. ಕಡೆಗೆ ಇದಾವುದಕ್ಕೂ ಮೈಟ್ ಮಾಡದ ಚಿನುವಿನ ಹಾಗೂ ಕುಟುಂಬದ ಅಮ್ಮ ಎಂದಿನಂತೆ ತನ್ನ ದಿನನಿತ್ಯದ ಮನೆಗೆಲಸವನ್ನು ಶುರು ಮಾಡುವದರೊಂದಿಗೆ ಈ ಸಿನಿಮಾ ಮುಗಿಯುತ್ತದೆ.

’ಏಕ್ ದಿನ್ ಪ್ರತಿದಿನ್’ ಮೃಣಾಲ್ ಸೇನ್ ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಈ ಚಿತ್ರಕ್ಕಾಗಿ 1980 ರಲ್ಲಿ ಅತ್ಯುತ್ತಮ ನಿರ್ದೇಶಕನೆಂದು ರಾಷ್ಟ್ರ ಪ್ರಶಸ್ತಿ ಗಳಿಸುತ್ತಾರೆ.

ಅವರ ಈ ಮುಂಚಿನ ಮಹತ್ವದ ಚಿತ್ರಗಳಾದ ಪ್ರತಿನಿಧಿ, ಭುವನ್ ಶೋಮ್, ಏಕ್ ಅಧೂರಿ ಕಹಾನಿ, ಮೃಗಯಾಗಳಿಗೆ ಹೋಲಿಸಿದರೆ ಕಥಾ ಹಂದರದಲ್ಲಿ ಅತ್ಯಂತ ಸರಳವಾದ ಆದರೆ ಸಂವೇದನೆಯ ಮಟ್ಟದಲ್ಲಿ ಇವೆಲ್ಲಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಸಿನಿಮಾ ಏಕ್ ದಿನ್ ಪ್ರತಿದಿನ್. mrinal-senಇಂಡಿಯಾದ ಬದಲಾಗುತ್ತಿರುವ ನಗರ, ಈ ಬದಲಾವಣೆಯ ಮೂಲಧಾತು ನಗರಗಳ ವಾಣಿಜ್ಯೀಕರಣ ಮತ್ತು ಈ ಅನಿರೀಕ್ಷಿತ ಬದಲಾವಣೆಗಳೊಂದಿಗೆ ನೇರವಾಗಿ ಮುಖಾಮುಖಿಯಾಗುತ್ತಿರುವ ನಗರದ ಎಪ್ಪತ್ತರ ದಶಕದ ಮಧ್ಯಮ ವರ್ಗ, ಇವೆಲ್ಲವನ್ನು ಕೇಂದ್ರವಾಗಿಟ್ಟುಕೊಂಡು ಮೊಟ್ಟ ಮೊದಲಬಾರಿಗೆ ಮೃಣಾಲ್‌ದ ನಿರ್ದೇಶಿಸಿದ ಸಿನಿಮಾ ಇದು. ಕಥಾ ನಾಯಕಿ ಆ ಒಂದು ರಾತ್ರಿ ಎಲ್ಲಿದ್ದಳು ಎಂಬುದನ್ನೇ ಗೌಣವಾಗಿಸಿ ಅದು ಅವಳ ವೈಯುಕ್ತಿಕ ಬದುಕು ಎಂದು ಪರೋಕ್ಷವಾಗಿ ಆದರೆ ಅತ್ಯಂತ ಘನತೆಯಿಂದ ತೋರಿಸುತ್ತಾರೆ ಮೃಣಾಲ್‌ದ. ಇಲ್ಲಿ ಅವರು ಕೇಂದ್ರೀಕರಿಸುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಗರದ ಮಧ್ಯಮ ವರ್ಗದ ಹಿಪೋಕ್ರೆಸಿ, ಆಧುನಿಕ ಶಿಕ್ಷಣವನ್ನು ಪಡೆದೂ ಜಡಗಟ್ಟಿದ ಮನಸ್ಸನ್ನು ಕಳೆದು ಹಾಕಲು ನಿರಾಕರಿಸುವ ಈ ವರ್ಗಗಳ ಕ್ಷುದ್ರತೆ ಮತ್ತು ತಾನು ಪರಂಪರೆಯನ್ನು ಪಾಲಿಸುತ್ತಿರುವ ಭಾರತೀಯ ನಾರಿಯೋ ಅಥವಾ ಬದಲಾವಣೆಗೆ ತೆತ್ತುಕೊಂಡ ಈ ಶತಮಾನದ ಮಾದರಿ ಹೆಣ್ಣೋ ಎಂಬುದರ ಕುರಿತಾಗಿ ದಿಟ್ಟತೆಯನ್ನು ಪ್ರದರ್ಶಿಸುವ ಮನೋಭೂಮಿಕೆಗಳ ಹುಡುಕಾಟದಲ್ಲಿರುವ ಹೊರಗೆ ದುಡಿದು ಕುಟುಂಬವನ್ನು ಸಾಕುವ ಅವಿವಾಹಿತ ಹೆಣ್ಣುಮಗಳು.

ಚಿತ್ರದ ಕ್ಲೈಮಾಕ್ಸ ಅನ್ನು ನೋಡಿ. ಕಡೆಗೆ ಕುಟುಂಬದ ಸದಸ್ಯರು ಒಬ್ಬರನ್ನೊಬ್ಬರು ಹತಾಶೆಯಿಂದ ದೂಷಿಸಿಕೊಳ್ಳುತ್ತಿರುತ್ತಾರೆ. ತಮಗೆಲ್ಲ ದುಡಿದು ಹಾಕುತ್ತಿರುವ ಚಿನುವಿನ ಕುರಿತಾಗಿ ನಾವ್ಯಾರು ಗಮನವೇ ಹರಿಸಿಲ್ಲ, ಅವಳಿಗೇನು ಮಾಡಿದ್ದೇವೆ? ಎಂಬ ಪಾಪ ನಿವೇದನೆಯಲ್ಲಿರುತ್ತಾರೆ. ಆಗ ಕೂಡಲೆ ಹೊರಗಡೆ ಕಾರು ಭರ್ರನೆ ಬಂತು ನಿಂತ ಶಬ್ದ ಕೇಳಿಸುತ್ತದೆ. (ಇದು ದೌರ್ಜ್ಯನ್ಯದ, ಅಧಿಕಾರದ, ದೈಹಿಕ ಹಲ್ಲೆಯ ಸಂಕೇತವೇ??) ಕೂಡಲೆ ಕುಟುಂಬದ ಕಿರಿಯ ಹುಡುಗಿ ಬಾಗಿಲ ಬಳಿ ಧಾವಿಸುತ್ತಾಳೆ. ಮನೆ ಪ್ರವೇಶಿಸುವ ಚಿನು ‘ನೀವೆಲ್ಲ ರಾತ್ರಿಯೆಲ್ಲ ಮಲಗಲಿಲ್ಲವೇ?’ ಎಂದು ನಿರ್ಲಿಪ್ತಳಾಗಿ ಪ್ರಶ್ನಿಸುತ್ತಾಳೆ.

ಆದರೆ ಚಿತ್ರ ಬಿಡುಗಡೆಯ ನಂತರ ಬಹುತೇಕ ಪ್ರೇಕ್ಷಕರು ಮೃಣಾಲ್‌ದ ಅವರನ್ನು ಪ್ರಶ್ನಿಸುವುದು ಚಿನು ಆ ರಾತ್ರಿ ಎಲ್ಲಿದ್ದಳು? ಇದಕ್ಕೆ ಉತ್ತರಿಸುತ್ತಾ ಮೃಣಾಲ್‌ದ ಹೇಳುತ್ತಾರೆ, “ಹಿಂದೆ ವೇಟಿಂಗ್ ಫಾರ್ ಗೋಡೋ ನಾಟಕವನ್ನು ಬರೆದ ನಾಟಕಕಾರ ಬೆಕೆಟ್‌ನನ್ನು ಕೂಡ ಹೀಗೆಯೇ ಪ್ರಶ್ನಿಸಿದ್ದರು, ಯಾರಿಗಾಗಿ ಕಾಯುತ್ತಿರುವುದು? ಯಾರು ಈ ಗೋಡೋ? ಅದಕ್ಕೆ ಬೆಕೆಟ್ ಹೇಳಿದ್ದು ನನಗೆ ಗೊತ್ತಿದ್ದರೆ ನಾನದನ್ನು ನಾಟಕದಲ್ಲಿ ಹೇಳುತ್ತಿರಲಿಲ್ಲವೇ!! ಹಾಗೆಯೇ ಚಿನು ಆ ರಾತ್ರಿ ಎಲ್ಲಿದ್ದಳೆಂದು ನನಗೆ ಗೊತ್ತಿದ್ದರೆ ನಾನು ಹೇಳುತ್ತಿರಲಿಲ್ಲವೇ!!”

ಅದರೆ ಇಡೀ ಚಿತ್ರಕ್ಕೆ ಒಂದು ನಿಜವಾದ ಭಾಷ್ಯೆ ಬರೆವುದು ಮತ್ತು ಇಡೀ ಚಿತ್ರದ ದಿಟ್ಟತೆ ಮತ್ತು ಹೆಣ್ಣಿನ ಆತ್ಮ ಗೌರವವು ತನ್ನ ಮೇರುತನವನ್ನು mrinal-sen2ಮುಟ್ಟುವ ಕ್ಷಣವೆಂದರೆ ಅಲ್ಲಿಯವರೆಗೂ ಅನಾರೋಗ್ಯದಿಂದ ನರಳುತ್ತ ಹಿನ್ನೆಲೆಯಲ್ಲಿ ಉಳಿದುಕೊಳ್ಳುವ ಕುಟುಂಬದ ತಾಯಿ ( ಮೃಣಾಲ್‌ದ ಪತ್ನಿ ಗೀತಾ ಸೇನ್) ಕ್ಲೈಮಾಕ್ಸಿನಲ್ಲಿ ಧಿಡೀರನೆ ಮುನ್ನಲೆಗೆ ಬಂದು ಇದಾವುದು ತನಗೆ ಸಂಬಂಧವಿಲ್ಲವೆಂಬಂತೆ ತನ್ನ ಮುಂಜಾವಿನ ಕಾರ್ಯಗಳಲ್ಲಿ ತೊಡಗುವುದರ ಮೂಲಕ ಇದು ನನ್ನ ಬದುಕು ಇದಕ್ಕೆ ನಾನೇ ಯಜಮಾನಿ, ಹಾಗೇಯೇ ಚಿನು ರಾತ್ರಿ ಎಲ್ಲಿದ್ದಳೆಂಬುದು ಅವಳ ವೈಯುಕ್ತಿಕ ಬದುಕು, ಅದಕ್ಕೆ ಅವಳು ಮಾತ್ರ ಯಜಮಾನಿ, ಅದನ್ನು ಪ್ರಶ್ನಿಸಲು ನಮಗಾರಿಗೂ ಹಕ್ಕಿಲ್ಲ ಎಂದು ಮೌನವಾಗಿಯೇ ಒಂದು ಶಬ್ದವನ್ನಾಡದೇ ಇಡೀ ವ್ಯವಸ್ಥೆಗೆ ದಿಟ್ಟ ಉತ್ತರ ನೀಡುತ್ತಾಳೆ. ಇಲ್ಲಿಯೇ “ಏಕ್ ದಿನ್ ಪ್ರತಿದಿನ್” ಗೆಲ್ಲುವುದು. ಇದೇ ಅದರ ಮಾನವೀಯತೆ. ಇದೇ ನಿರ್ದೇಶಕನ ಜೀವಪರ ಮನಸ್ಸು.

ಇದು ಈಗ ಮತ್ತೆ ನೆನಪಾಗಲಿಕ್ಕೆ ಕಾರಣ ಮೊನ್ನೆ ಮುಂಬೈನಲ್ಲಿ ಜರುಗಿದ ಮತ್ತೊಂದು ಅತ್ಯಾಚಾರದ ಪ್ರಕರಣವನ್ನು ಕೇಳಿದಾಗ, ಓದಿದಾಗ. ಇಂತಹ ಹತ್ತಾರು ಅತ್ಯಾಚಾರದ ಪ್ರಕರಣಗಳು ಇಂದು ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಆದರೆ ಹಳ್ಳಿಗಳ, ಪಟ್ಟಣಗಳ ಮಟ್ಟದಲ್ಲಿ ನಡೆಯುವ india-rapeಅತ್ಯಾಚಾರಗಳು ಬೆಳಕಿಗೇ ಬರುತ್ತಿಲ್ಲ. ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಜಡ್ಡುಗಟ್ಟಿದೆಯೆಂದರೆ ಮಾಧ್ಯಮಗಳು ಯಾವುದಾದರೊಂದು ಅತ್ಯಾಚಾರದ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು. ಆಗಲೇ ನಾವು ಕೂಡ ಸ್ಪಂದಿಸುವುದು. ಆಗಲೇ ಮೂಲೆ ಸೇರಿದ್ದ ನಮ್ಮ ಮೊಂಬತ್ತಿಗಳು ಬೆಳಕು ಕಾಣುವುದು. ಇಲ್ಲದಿದ್ದರೆ ನಮ್ಮ ಪುಟ ತಿರುವಿ ನೋಡಿ ಮನಸ್ಥಿತಿ ನಿರಂತರವಾಗಿರುತ್ತದೆ. ಮಧ್ಯಮವರ್ಗದ ಈ ಅಮಾನವೀಯ ಹಿಪೋಕ್ರಸಿಯೇ ಇಂದಿಗೂ ನಮ್ಮನ್ನು ಕಾಡುತ್ತಿರುವುದು. ಇಂದು ಪ್ರತಿ ಅತ್ಯಾಚಾರದ ಸಂದರ್ಭದಲ್ಲೂ ಚಿನು ನಮ್ಮನ್ನು ಕಾಡತೊಡಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಚಿನುವಿನಂತೆಯೇ ಮೌನಕ್ಕೆ ಶರಣಾಗಬೇಕಾಗುತ್ತದೆ. ಅತ್ಯಾಚಾರಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇವೆ, ಅದನ್ನು ತಡೆಗಟ್ಟಲು ಮಾರ್ಗೋಪಾಯಗಳ ಕುರಿತಾಗಿ ಆ ಕ್ಷಣಕ್ಕೆ ನೂರಾರು ಚರ್ಚೆಯಾಗುತ್ತದೆ. ಮತ್ತೆ ಕಾನೂನು ವೈಫಲ್ಯ, ವೋಟ್ ಬ್ಯಾಂಕ್ ರಾಜಕಾರಣ, ಲೈಂಗಿಕ ಅನಾಗರಿಕತೆಯನ್ನು ಹುಟ್ಟು ಹಾಕುವ ಸಾಮಾಜಿಕ ಹಾಗೂ ಮಾನಸಿಕ ಸ್ಥಿತಿ ಒಟ್ಟಲ್ಲಿ ಎಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆಯೇ?

ಆದರೆ ನಗರೀಕರಣದ ಅಪಾಯಕಾರಿ ಬದುಕು ಮತ್ತು ಇದಕ್ಕೆ ಮೂಲಭೂತ ಕಾರಣಕರ್ತರಾದ ನಾವು, ಇದರ ಕುರಿತಾಗಿ ಚರ್ಚೆ ಆಗುತ್ತಿಲ್ಲ. stop-rapes-bombayಅತ್ಯಂತ ಸಂಕೀರ್ಣಗೊಳ್ಳುತ್ತಿರುವ, ಮಾನಗೆಡುತ್ತಿರುವ ಇಂದಿನ ಬದುಕನ್ನು ನಾವೇ ಸ್ವತಃ ಕಟ್ಟಿಕೊಂಡಿದ್ದು. ನಾವು ಕಟ್ಟಿದ ಈ ಕೊಳ್ಳುಬಾಕ ಸಂಸ್ಕೃತಿಯಿಂದಲೇ ಅತ್ಯಾಚಾರಿಗಳು ಹುಟ್ಟಿಕೊಳ್ಳುತ್ತಾರೆ. ಸಹಜವಾಗಿಯೇ ಇವರೆಲ್ಲ ಲುಂಪೆನ್ ಗುಂಪಿನಿಂದ ಬಂದವರಾಗಿರುತ್ತಾರೆ. ವ್ಯವಸ್ಥೆಯೊಂದರಲ್ಲಿ ಉಳ್ಳವರು ಮತ್ತು ಮತ್ತು ನಿರ್ಗತಿಕರ ನಡುವಿನ ಕಂದಕ ದೊಡ್ಡದಾದಷ್ಟು ಈ ಲುಂಪೆನ್ ಗುಂಪು ಬೆಳೆಯುತ್ತಾ ಹೋಗುತ್ತದೆ. ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಇತರ ವಸ್ತುಗಳಂತೆಯೇ ಹೆಣ್ಣು ಸಹ ಒಂದು ಕಮಾಡಿಟಿ ಅಷ್ಟೇ. ಹೆಣ್ಣು ಭ್ರೂಣಾವಸ್ಥೆಯಲ್ಲಿದ್ದಾಗ ಹತ್ಯೆ ಮಾಡುವ ನಾಗರಿಕ ಸಮಾಜ ಬೆಳೆದ ನಂತರ ಎಡನೇ ದರ್ಜೆಯ ನಾಗರಿಕಳನ್ನಾಗಿರುಸುತ್ತದೆ. ಆಗಲೇ ಆಕೆಯನ್ನು ಕೇವಲ ಒಂದು ಭೋಗದ ವಸ್ತುವಾಗಿ ನೋಡಲು ಶುರು ಮಾಡುವುದು. ಟಿವಿ, ಫ್ರಿಜ್ ಕೊಂಡಂತೆ, ವರ್ಷಕ್ಕೊಮ್ಮೆ ಬದಲಾಯಿಸುವಂತೆ ಹೆಣ್ಣನ್ನು ಕೊಳ್ಳಲು, ಬದಲಾಯಿಸಲು ಪ್ರಯತ್ನಿಸುತ್ತದೆ ಈ ನಾಗರೀಕತೆ. ಅತ್ಯಾಚಾರದ ದೈಹಿಕ ಕ್ರೌರ್ಯ ಒಂದು ಕಡೆಯಾದರೆ ಮುಂದೇನು? ಮನೆಯ ಮಾಲೀಕ ಇದು ಮರ್ಯಾದಸ್ಥರು ವಾಸಿಸುವ ಸ್ಥಳವೆಂದು ಗೊಣಗಲು ಶುರು ಮಾಡಿದಾಗ ನಮ್ಮ ನೂರಾರು ಚಿನುಗಳು ಮುಂದೇನು ಮಾಡಬೇಕು??

’ವರ್ತಮಾನ’ಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ…

ಸ್ನೇಹಿತರೇ,

ಇಂದಿಗೆ ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬುತ್ತದೆ. ಹೋದ ವರ್ಷಕ್ಕಿಂತ ಈ ವರ್ಷ ವರ್ತಮಾನ.ಕಾಮ್ ಹಲವು ಏರುಪೇರುಗಳನ್ನು ಕಂಡಿತು. ಸರಾಸರಿಯಾಗಿ ಲೆಕ್ಕ ಹಾಕುವುದಾದರೆ ಅತಿ ಹೆಚ್ಚು ಹಿಟ್ಸ್ (ವೆಬ್‌ಸೈಟ್ ಸಂದರ್ಶಿಸುವವರ) ಮತ್ತು ಅತಿ ಕಡಿಮೆ ಹಿಟ್ಸ್ ಪಡೆದುಕೊಂಡ ತಿಂಗಳುಗಳು ಈ ವರ್ಷದ ಅವಧಿಯಲ್ಲಿಯೇ ಇದ್ದವು. 2012 ರ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ಈ ವೇದಿಕೆ ಅತಿ ಹೆಚ್ಚು ಸಕ್ರಿಯವಾಗಿದ್ದರೆ vartamaana-2-yearsಈ ವರ್ಷದ ಮೇ-ಜೂನ್ ತಿಂಗಳಿನಲ್ಲಿ ಅದು ಇಳಿಯುತ್ತಾ ಬಂದಿತ್ತು. ಕಳೆದ ತಿಂಗಳಿನಿಂದೀಚೆಗೆ ಮತ್ತೆ ಅದು ಏರುತ್ತಿದೆ.

ಆದರೆ, ಹಲವು ವಿಚಾರಗಳಲ್ಲಿ ವರ್ತಮಾನ.ಕಾಮ್ ಅದೇ ಅನನ್ಯತೆ ಮತ್ತು ಪರಿಣಾಮವನ್ನು ಉಳಿಸಿಕೊಂಡು ಬಂದಿದೆ ಮತ್ತು ಬೆಳೆಸಿಕೊಂಡಿಯೂ ಇದೆ. ನಾನು ರಾಜಕೀಯವಾಗಿ ಸಕ್ರಿಯವಾದ ಕಾರಣದಿಂದಾಗಿ ಹೊಸ ಲೇಖಕರನ್ನು ಈ ವೇದಿಕೆಗೆ ಕರೆದುಕೊಂಡುಬರುವ ಮತ್ತು ಪರಿಚಯಿಸುವ ಕಾರ್ಯ ಬಹಳ ಹಿನ್ನೆಲೆಗೆ ಸರಿದುಬಿಟ್ಟಿತು. ಆದರೂ ಹಲವಾರು ಲೇಖಕರು ಈ ವರ್ಷ ಮೊದಲ ಬಾರಿಗೆ ನಮಗೆ ಬರೆದರು. ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪರ “ನಕ್ಸಲ್ ಕಥನ”ದ ಎರಡನೆಯ ಭಾಗ “ಪ್ರಜಾ ಸಮರ” 19 ವಾರಗಳ ಕಾಲ ಸರಣಿಯಾಗಿ ಈ ವರ್ಷ ಪ್ರಕಟವಾಯಿತು. ಮಂಗಳೂರಿನ ಹೋಮ್‌ಸ್ಟೇ ದಾಳಿಯ ಪ್ರಕರಣದಲ್ಲಿ ನವೀನ್ ಸೂರಿಂಜೆಯವರ ಬಂಧನವಾಗಿದ್ದನ್ನು ವಿರೋಧಿಸಿ ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ನಡೆದ ಒಂದು ಮಟ್ಟಿನ ಪ್ರಯತ್ನದಲ್ಲಿ ವರ್ತಮಾನ.ಕಾಮ್‌ನ ಸಂಪೂರ್ಣ ಬಳಗ ಮತ್ತು ಓದುಗರು-ಹಿತೈಷಿಗಳು ಪಾಲ್ಗೊಂಡರು. ವರ್ತಮಾನ.ಕಾಮ್‌ನ ಓದುಗರ ಸಂಖ್ಯೆಯ ಏರಿಕೆ ಮಾತ್ರವಲ್ಲ, ಇಂತಹ ಪ್ರಯತ್ನವೊಂದರ ಬಗ್ಗೆ ಗುಣಾತ್ಮಕವಾಗಿ ಸ್ಪಂದಿಸಿ ಬೆಂಬಲಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಇನ್ನು, ನಾವು ಯಾವುದೇ ಲೇಖಕರಿಗೆ ಬಲವಂತ ಪಡಿಸದೆ ಮತ್ತು ಅವರ ಬರವಣಿಗೆಗೆ ಯಾವುದೇ ರೀತಿಯ ಸಂಭಾವನೆಯನ್ನೂ ಕೊಡದೆ ಮಾಧ್ಯಮ ವಲಯದಲ್ಲಿ ಸೀಮಿತವಾದರೂ ಒಂದು ಗುರುತಿಸಬಹುದಾದ ಅಸ್ಮಿತೆ ಸಾಧಿಸಿದ್ದೇವೆ ಎಂದರೆ ಅದು ಕಮ್ಮಿ ಅಲ್ಲ ಎಂದು ನಾನು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಮಗೆ ಲೇಖನ ಬರೆದ ಪ್ರತಿಯೊಬ್ಬರೂ ಇದರಲ್ಲಿ ಸಮಾನ ಪಾಲುದಾರರೇ. ನಮಗೆ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿಯೇ ಕಳುಹಿಸಬೇಕಾದ ಸಂದರ್ಭದಲ್ಲಿಯೂ ಇಷ್ಟೊಂದು ಸಮಾನಮನಸ್ಕ ಮತ್ತು ಬದ್ಧತೆಯುಳ್ಳ ಲೇಖಕರು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ ಎಂದರೆ ಕರ್ನಾಟಕದಲ್ಲಿ ಪ್ರಗತಿಪರ ಮನೋಧರ್ಮದ ಚಿಂತಕ ಮತ್ತು ಲೇಖಕರ ಗುಂಪು ಎಷ್ಟು ದೊಡ್ಡದಿದೆ ಎಂದು ನಿಮಗೆ ಅರಿವಾಗುತ್ತದೆ.

ಅಂದ ಹಾಗೆ ಈ ವರ್ಷದಲ್ಲಿ ಕರ್ನಾಟಕದ ವಿಧಾನಸಭೆಗೆ ಚುನಾವಣೆಯೂ ನಡೆದು ರಾಜ್ಯದ ರಾಜಕೀಯ ಇನ್ನೊಂದು ಮಗ್ಗುಲಿಗೆ ಹೊರಳಿದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ನಿಜಕ್ಕೂ ಅಧ್ವಾನವಾಗಿತ್ತು; ಅವಮಾನಕಾರಿಯಾಗಿತ್ತು; ಹೇಸಿಗೆ ಪಟ್ಟುಕೊಳ್ಳುವಂತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅಷ್ಟು ಕೆಳಹಂತಕ್ಕೆ ಜಾರುವುದಿಲ್ಲ ಎಂಬ ವಿಶ್ವಾಸ ಬಹುತೇಕರಲ್ಲಿದೆ. ಆದರೆ ಗುಣಾತ್ಮಕವಾದ ಬದಲಾವಣೆಗಳು ಆಗುತ್ತವೆಯೇ ಎನ್ನುವುದರ ಬಗ್ಗೆ ಗಟ್ಟಿಯಾದ ವಿಶ್ವಾಸ ಮೂಡುತ್ತಿಲ್ಲ. ಆಡಳಿತ ನಿರ್ವಹಣೆ ಉತ್ತಮವಾಗಬಹುದಾದರೂ ನಮ್ಮ ರಾಜ್ಯದ ರಾಜಕೀಯ ವಾತಾವರಣ ಉತ್ತಮಗೊಳ್ಳುತ್ತದೆ ಎನ್ನುವ ವಿಶ್ವಾಸ ನನಗಿಲ್ಲ. ಎರಡು ಲೋಕಸಭೆ ಮತ್ತು ಮೂರು ವಿಧಾನಪರಿಷತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರು ನಿಲ್ಲಿಸಿರುವ ಆಭ್ಯರ್ಥಿಗಳನ್ನು ನೋಡಿದರೆ ಈ ರಾಜಕೀಯ ವಾತಾವರಣ ಈ ಪಕ್ಷಗಳಿಂದ ಮತ್ತು ಇವುಗಳ ನಾಯಕರುಗಳಿಂದ ಒಳ್ಳೆಯದರ ಕಡೆಗೆ ಬದಲಾಗುತ್ತದೆ ಎಂದು ಹೇಳಲಾಗುತ್ತದೆಯೇ? ಹಾಗೆಯೇ ಸಾಮಾಜಿಕವಾಗಿ ಪ್ರಗತಿಪರ ವಿಚಾರಗಳಿಗೆ ಬಲ ಮತ್ತು ಬೆಂಬಲ ಸಿಗಬೇಕಿದ್ದರೆ ನಮ್ಮ ರಾಜಕಾರಣಿಗಳು ಅದರ ಬಗ್ಗೆ ಒಂದು ಸ್ಪಷ್ಟತೆ ಮತ್ತು ನಿಲುವು ಬೆಳೆಸಿಕೊಂಡು ಅದನ್ನು ಬೇರೆಬೇರೆ ವೇದಿಕೆಗಳಲ್ಲಿ ಎತ್ತಿ, ಜನರ ಬಳಿಗೆ ತೆಗೆದುಕೊಂಡು ಹೋಗದಿದ್ದಲ್ಲಿ ಕಷ್ಟವಿದೆ. ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ಮತ್ತು ಬದ್ಧತೆಯ ಲೇಖಕರ, ಮಾಧ್ಯಮ ಸಂಸ್ಥೆಗಳ ಮತ್ತು ವರ್ತಮಾನ.ಕಾಮ್‌ನಂಥ ಸ್ವತಂತ್ರ ವೇದಿಕೆಗಳ ಜವಾಬ್ದಾರಿ ಮತ್ತು ಅವಶ್ಯಕತೆಯೂ ಹೆಚ್ಚುತ್ತದೆ ಎಂಬ ಭಾವನೆ ನನಗಿದೆ.

ಇಡೀ ವಿಶ್ವದಲ್ಲಿ ಇಂದು ಮುದ್ರಣ ಮಾಧ್ಯಮ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತ ಬರುತ್ತಿದೆ. ಮುದ್ರಣ ಮಾಧ್ಯಮದ ಪರಿಣಾಮಕಾರತೆಯನ್ನು ಮತ್ತು ಜನರ ಜ್ಞಾನದ ನೆಲೆಗಳನ್ನು ವಿಸ್ತರಿಸುವ ಸಾಧ್ಯತೆಗಳನ್ನು ಟಿವಿ ಮಾಧ್ಯಮ ಪಡೆದುಕೊಳ್ಳಲು ಅಸಾಧ್ಯ. ಹಾಗಾಗಿ ಮುದ್ರಣ ಮಾಧ್ಯಮದ ಪುನರಾವತಾರ ಇಂಟರ್ನೆಟ್ ಮಾಧ್ಯಮದ ರೂಪದಲ್ಲಿ ಆಗಲಿದೆ. ಅಮೆರಿಕದಲ್ಲಿ ನಾಲ್ಕಾರು ದಶಕಗಳ ಕಾಲ ಪ್ರಭಾವಶಾಲಿಯಾಗಿದ್ದ ’ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗಿಂತ ಏಳೆಂಟು ವರ್ಷಗಳ ಹಿಂದೆ ಆರಂಭವಾದ ’ದಿ ಹಫ್ಫಿಂಗ್ಟನ್ ಪೋಸ್ಟ್’ ವೆಬ್‍ಸೈಟ್ ಇಂದು ಹೆಚ್ಚು ಪ್ರಭಾವಶಾಲಿಯೂ, ಹೆಚ್ಚು ಬೆಲೆಯುಳ್ಳದ್ದೂ, ಹೆಚ್ಚು ಲಾಭದಾಯಕವಾದದ್ದೂ ಆಗಿದೆ. ಕಳೆದ ವಾರ ಅಮೆಜಾನ್.ಕಾಮ್‌ನ ಮುಖ್ಯಸ್ಥ ಜೆಫ್ ಬೆಜೋಸ್ ನಷ್ಟದಲ್ಲಿದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯನ್ನು 25 ಕೋಟಿ ಡಾಲರ್‌ಗೆ ಕೊಂಡುಕೊಂಡ. ಆದರೆ ಏಳೆಂಟು ವರ್ಷಗಳ ಹಿಂದೆ ಆರಂಭವಾದ ‘ದಿ ಹಫ್ಫಿಂಗ್ಟನ್ ಪೋಸ್ಟ್’ ಅನ್ನು ಎರಡು ವರ್ಷಗಳ ಹಿಂದೆಯೇ AOL ಕಂಪನಿ 31.5 ಕೋಟಿ ಡಾಲರ್‌ಗೆ ಕೊಂಡುಕೊಂಡಿತ್ತು.

ಆದರೆ ಇಂತಹ ಬದಲಾವಣೆಗಳನ್ನು ಭಾರತದ ಸಂದರ್ಭದಲ್ಲಿ ನೋಡಲು ಇನ್ನೂ ಹಲವಾರು ವರ್ಷ ಕಾಯಬೇಕಿದೆ. vartamaana-2 years-verticalಭಾರತೀಯ ಭಾಷಾ ಪತ್ರಿಕೆಗಳ ವಿಚಾರಕ್ಕೆ ಬಂದರೆ ಅದು ಇನ್ನೂ ನಿಧಾನವಾಗಬಹುದು ಮತ್ತು ಅಮೆರಿಕದಲ್ಲಿ ಮುದ್ರಣ ಮಾಧ್ಯಮದಲ್ಲಿ ಆಗುತ್ತಿರುವಷ್ಟು disruptive ಆಗದೇ ಇರಬಹುದು. ಆದರೂ, ಭಾರತದ ಮಾಧ್ಯಮ ಜಗತ್ತು ಇನ್ನೊಂದು ದಶಕದೊಳಗೆ ಇಂದು ಇರುವುದಕ್ಕಿಂತ ಬಹಳ ಭಿನ್ನವಾಗಿರುತ್ತದೆ ಮತ್ತು ಆ ಬದಲಾವಣೆ ವೇಗವಾಗಿಯೂ ಇರುತ್ತದೆ. ವರ್ತಮಾನ.ಕಾಮ್ ಎಲ್ಲಿಯವರೆಗೆ ಇರುತ್ತದೆ ಎನ್ನುವುದು ಗೊತ್ತಿಲ್ಲ ಮತ್ತು ಅದು ಮುಖ್ಯವೂ ಅಲ್ಲ. ಆದರೆ, ಇಂತಹ ವೇದಿಕೆಗಳು ಮತ್ತು ಪ್ರಯತ್ನಗಳು ಬಹುಶಃ ಇನ್ನೂ ದೊಡ್ಡ ನೆಲೆಯಲ್ಲಿ ಮತ್ತು ವ್ಯವಸ್ಥಿತವಾಗಿ, ಇನ್ನೂ ಹೆಚ್ಚಿನ ಸಂಪನ್ಮೂಲಗಳೊಂದಿಗೆ ಆರಂಭವಾಗುವುದನ್ನು ನಾವು ಬರಲಿರುವ ವರ್ಷಗಳಲ್ಲಿ ನೋಡಲಿದ್ದೇವೆ.

ಅಂದ ಹಾಗೆ, ಈ ವರ್ಷ ಹೋದ ವರ್ಷ ಆದಷ್ಟು ಹಣ ವ್ಯಯವಾಗಿಲ್ಲ. ಒಬ್ಬ ಸಹಾಯಕರಿಗೆ ಕೊಟ್ಟ ಐದಾರು ತಿಂಗಳುಗಳ ಅಲ್ಪಮೊತ್ತದ ಸಂಬಳ ಮತ್ತು ವೆಬ್‌‍ಸೈಟ್‌ನ ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟ ಶುಲ್ಕ, ಎಲ್ಲವೂ ಸೇರಿ ಸುಮಾರು ರೂ. 35000 ಖರ್ಚಾಗಿರಬಹುದು. ಆದರೆ ಈ ವರ್ಷ ಅದು ಹೆಚ್ಚಾಗುತ್ತದೆ, ಹೆಚ್ಚಾಗಲೇಬೇಕು. ಆ ನಿಟ್ಟಿನಲ್ಲಿ ಕೆಲವೊಂದು ಖರ್ಚುಗಳನ್ನು ವಹಿಸಿಕೊಳ್ಳಲು ಸಮಾನಮನಸ್ಕ ಪ್ರಾಯೋಜಕರು ಮುಂದೆ ಬಂದರೆ ಅವರಿಗೆ ಖಂಡಿತ ಸ್ವಾಗತವಿದೆ.

ಮತ್ತು ಈ ವರ್ಷ ಒಂದಷ್ಟು ಸೆಮಿನಾರ್ ತರಹದ ಕಾರ್ಯಕ್ರಮಗಳನ್ನು ವರ್ತಮಾನ.ಕಾಮ್ ವತಿಯಿಂದ ಇತರ ಸಮಾನಮನಸ್ಕ ಗುಂಪು/ಸಂಸ್ಥೆಗಳ ಜೊತೆಗೂಡಿ ಆಯೋಜಿಸಬೇಕು ಎಂಬ ಯೋಜನೆಗಳಿವೆ. ಬರಹಗಾರರ ಬಳಗವನ್ನು ವಿಸ್ತರಿಸಲು ಕೆಲವೊಂದು ಸಭೆ ಮತ್ತು ಪ್ರವಾಸಗಳನ್ನು ಮಾಡಬೇಕೆಂತಲೂ ಅಂದುಕೊಳ್ಳುತ್ತಿದ್ದೇನೆ. ನನ್ನ ಹಲವು ವೈಯಕ್ತಿಕ ಅಶಿಸ್ತು ಮತ್ತು ನಿರಾಸಕ್ತಿಯ ಫಲವಾಗಿ ಹಲವಾರು ಯೋಜನೆಗಳು ಕಾರ್ಯರೂಪಕ್ಕೇ ಬರುತ್ತಿಲ್ಲ. ಕೆಲವೊಮ್ಮೆ ಮಾತನಾಡಲೇಬೇಕಾದವರ ಜೊತೆಯೂ, ಸಂಪರ್ಕದಲ್ಲಿರಬೇಕಾದವರ ಜೊತೆಯೂ ಫೋನ್ ಸಹ ಮಾಡದೆ ಇನ್ನೇತರದಲ್ಲಿಯೋ ವ್ಯಸ್ತನಾಗಿರುತ್ತೇನೆ. ಆ ವೈಯಕ್ತಿಕ ಅಶಿಸ್ತು ಮತ್ತು ದೌರ್ಬಲ್ಯಗಳನ್ನು ಕಳೆದುಕೊಂಡರೆ ವರ್ತಮಾನ.ಕಾಮ್ ಇನ್ನೂ ಸಕ್ರಿಯವಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಈ ಪ್ರಯತ್ನಕ್ಕೆ ಪೂರಕವಾಗಿರುವವರು ಮತ್ತು ನಮ್ಮ ಲೇಖಕ ಬಳಗದ ಮಿತ್ರರು–ವಿಶೇಷವಾಗಿ ನನಗಿರುವಂತಹ ದೌರ್ಬಲ್ಯಗಳಿಲ್ಲದವರು–ಹೆಚ್ಚು ಸಕ್ರಿಯರಾದರೆ ಇದು ತನ್ನಂತಾನೆ ವಿಸ್ತರಿಸಿಕೊಳ್ಳುತ್ತದೆ. ನೀವೆಲ್ಲರೂ ನಿಮ್ಮ ಸಕ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುತ್ತೀರ ಎನ್ನುವ ನಂಬುಗೆಯಲ್ಲಿ ಇದ್ದೇನೆ.

ಕೊನೆಯದಾಗಿ, ಈ ವರ್ಷದ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಧನ್ಯವಾದ ಮತ್ತು ಕೃತಜ್ಞತೆ ಹೇಳಬೇಕಾಗಿರುವುದು. ಹಲವಾರು ಜನರಿದ್ದಾರೆ. ಕೆಲವರ ಹೆಸರು ತೆಗೆದುಕೊಳ್ಳಬಹುದು, ಕೆಲವರದು ಆಗದು. ಹಾಗಾಗಿ ಈ ವರ್ಷ ಅನೇಕ ಸಂದರ್ಭಗಳಲ್ಲಿ ಜೊತೆನಿಂತ, ಕೈಜೋಡಿಸಿದ ಮಿತ್ರರಾದ ಶ್ರೀಪಾದ್ ಭಟ್ಟರನ್ನು ಎಲ್ಲರಿಗೂ ಪ್ರಾತಿನಿಧಿಕವಾಗಿ ಇಟ್ಟುಕೊಂಡು ಧನ್ಯವಾದ ಅರ್ಪಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ವರ್ತಮಾನ.ಕಾಮ್ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬರೆದಿದ್ದ ಲೇಖನ : ವರ್ಷ ತುಂಬಿದ ಸಂದರ್ಭದಲ್ಲಿ ವರ್ತಮಾನದ ಪ್ರಸ್ತುತತೆ….

www.vartamaana.com 1st-anniversary

ಸಮುದಾಯ ಕಾಲೇಜುಗಳಲ್ಲಿ ಗ್ರಾಮೀಣ ಕಸಬುಗಳಿಗೆ ಜೀವ ಬರಲಿ

– ಅರುಣ್ ಜೋಳದಕೂಡ್ಲಿಗಿ

ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ (ಎಂ.ಎಚ್.ಆರ್.ಡಿ) ಮುಂದಾಗಿರುವುದು ಸ್ವಾಗತಾರ್ಹ. ಇನ್ನು ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹೇರ್‌ಕಟಿಂಗ್ ಮುಂತಾದ ಕೋರ್ಸುಗಳು ಶುರುವಾಗುವುದಾಗಿಯೂ ವರದಿಯಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಅಳವಡಿಸುವ ಬಗ್ಗೆ ಪೂರ್ವಭಾವಿಯಾಗಿ ಕೆಲವು ಚರ್ಚೆಗಳು ನಡೆಯಬೇಕಾಗಿದೆ. ಇದನ್ನು ರಾಜ್ಯದ ಆಯಾ ಪ್ರಾದೇಶಿಕ ನೆಲೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ.

ಸಮುದಾಯ ಕಾಲೇಜುಗಳಲ್ಲಿ ಜನಪದ ಕಸಬುಗಳಿಗೆ ಮರುಜೀವ ನೀಡುವಂತಾಗಬೇಕು. ಹಾಗೆಯೇ ಒಂದು naaru-udyamaಕಸಬು ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದಿರುವಲ್ಲಿಯೂ ಎಚ್ಚರ ವಹಿಸಬೇಕಿದೆ. ಇಲ್ಲವೆಂದರೆ ಆಯಾ ಕಸುಬುಗಳ ನೆಲೆಯಲ್ಲಿ ಜಾತಿ ಪ್ರಜ್ಞೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗುತ್ತದೆ. ಇದು ಸರಕಾರವೇ ಜಾತಿ ತರತಮವನ್ನು ಬಲಪಡಿಸಲು ಮುಂದಾದಂತಾಗುತ್ತದೆ. ಅಥವಾ ಆಯಾ ಸಮುದಾಯವನ್ನು ಒಂದೇ ಕಸುಬಿಗೆ ಕಟ್ಟಿಹಾಕಿದಂತೆಯೂ ಆಗುತ್ತದೆ. ಹಾಗಾಗಿ ಸಮುದಾಯ ಕಾಲೇಜುಗಳನ್ನು ರಾಜ್ಯ ಸರಕಾರ ತುಂಬಾ ಎಚ್ಚರದಿಂದ ಕರ್ನಾಟಕದ ಸಂದರ್ಭಕ್ಕೆ ಅಗತ್ಯ ಬದಲಾವಣೆಯೊಂದಿಗೆ ಮರು ರೂಪಿಸಬೇಕಾಗಿದೆ.

ಮುಖ್ಯವಾಗಿ ಸಮುದಾಯ ಕಾಲೇಜುಗಳನ್ನು ಪ್ರಾದೇಶಿಕ ವೈಶಿಷ್ಟ್ಯ ಮತ್ತು ಅಗತ್ಯಗಳನ್ನು ಆಧರಿಸಿ ಅಭಿವೃದ್ಧಿಪಡಿಸಬೇಕಿದೆ. ಕಾರಣ ಪ್ರಾದೇಶಿಕವಾಗಿ ಆಯಾ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಕಿನ್ನಾಳ ಮತ್ತು ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಯಾಗಿದೆ, ಹಾಗಾಗಿ ಕೊಪ್ಪಳ ಮತ್ತು ಚನ್ನಪಟ್ಟಣಗಳಲ್ಲಿ ಈ ಕಲೆಯನ್ನು ಆಧರಿಸಿಯೇ ಸಮುದಾಯ ಕಾಲೇಜನ್ನು ಸ್ಥಾಪಿಸಬಹುದು. channapatna-toysಚಳ್ಳಕೆರೆ, ಬಳ್ಳಾರಿ, ಹಿರಿಯೂರು ಮುಂತಾದ ಕಡೆ ಕಂಬಳಿ ನೇಯುವಿಕೆ ಇದೆ. ಉತ್ತರ ಭಾರತದಿಂದ ಕಂಬಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಚಳ್ಳಕೆರೆಯಲ್ಲಿ ನಡೆಯುವ ಕಂಬಳಿ ಸಂತೆಯಲ್ಲಿ ಪ್ರತಿವಾರವೂ ಲಕ್ಷಾಂತರ ರೂಗಳ ವಹಿವಾಟು ಇದೆ. ಹೀಗಾಗಿ ಈ ಭಾಗದಲ್ಲಿ ಕಂಬಳಿ ನೇಯ್ಗೆಯ ತರಬೇತಿಯನ್ನು ಕೊಡುವ ಸಮುದಾಯ ಕಾಲೇಜುಗಳನ್ನು ನಿರ್ಮಿಸಬಹುದಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕತ್ತಾಳೆಯನ್ನು ಬಳಸಿ ನಾರು ಮಾಡುವಲ್ಲಿ ಲಂಬಾಣಿ ತಾಂಡಗಳು ಕ್ರಿಯಾಶೀಲವಾಗಿದೆ. ಈ ಉದ್ದಿಮೆಯನ್ನು ಆಧರಿಸಿ ಈ ಭಾಗದ ಹೊಲದ ಬದುವುಗಳಲ್ಲಿ ದೊಡ್ಡಮಟ್ಟದಲ್ಲಿ ಕತ್ತಾಳೆ ಬೆಳೆಯುತ್ತಾರೆ. ಇಂತಹ ಕಡೆ ಕತ್ತಾಳೆ ನಾರನ್ನು ಮಾಡುವ ಕಲೆಯನ್ನು ಆಧರಿಸಿ ಕೋರ್ಸುಗಳನ್ನು ತೆರೆಯುವ ಅಗತ್ಯವಿದೆ. ಅಂತೆಯೇ ತುಮಕೂರು, ತಿಪಟೂರು ಮುಂತಾದ ಕಡೆ ತೆಂಗು ಬೆಳೆ ಹೆಚ್ಚಾಗಿದೆ. ಇಂತಹ ಕಡೆಗಳಲ್ಲಿ ತೆಂಗನ್ನು ಆಧರಿಸಿದ ಉಪ ಉತ್ಪನ್ನಗಳನ್ನು ತಯಾರಿಸುವ ತರಬೇತಿ ಕೋರ್ಸನ್ನು ಈ ಭಾಗದ ಸಮುದಾಯ ಕಾಲೇಜುಗಳಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ. ಹೀಗೆ ಕರ್ನಾಟಕದ ಆಯಾ ಪ್ರಾದೇಶಿಕ ಉತ್ಪನ್ನಗಳನ್ನು ಆಧರಿಸಿ ಕೋರ್ಸಗಳನ್ನು ಆರಂಭಿಸುವುದು ಸೂಕ್ತವಾಗಿದೆ.

ಇನ್ನು ಸಿವಿಲ್ ಎಂಜಿನೀಯರಿಂಗ್ ಪದವೀಧರರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಲಕ್ಷಾಂತರ ಜನ ಮನೆಕಟ್ಟುವ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅನಕ್ಷರಸ್ತರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಆಧರಿಸಿ ಕಟ್ಟಡ ನಿರ್ಮಾಣದ ಕೋರ್ಸನ್ನು ತೆರೆಯುವ ಅಗತ್ಯವಿದೆ. ಅಂತೆಯೇ ಪ್ರಾದೇಶಿಕವಾಗಿ ಕೃಷಿಯ ಭಿನ್ನ ಪ್ರಯೋಗಗಳು ಆಯಾ ಭಾಗದಲ್ಲಿವೆ. ಈ ವೈಶಿಷ್ಟಗಳೂ ಕೂಡ ಕೋರ್ಸಗಳನ್ನು ರೂಪಿಸುವಂತಾಗಬೇಕು. ಇಂದು ಸಾಂಪ್ರಾದಾಯಿಕ ಕೃಷಿಯ ಜತೆ ಆಧುನಿಕ ಕೃಷಿಯ ಪ್ರಯೋಗಗಳು ನಡೆಯುತ್ತಿವೆ. ಹಾಗಾಗಿ ಇಂತಹ ಆಧುನಿಕ ಕೃಷಿಗೆ ಸಂಬಂಧಿಸಿದಂತೆ ಗ್ರಾಮೀಣ ಯುವಕರಿಗೆ ಅನುಕೂಲವಾಗುವ ಕೋರ್ಸುಗಳನ್ನು ಆರಂಭಿಸಬೇಕಿದೆ. ಅದರಲ್ಲಿ ಮುಖ್ಯವಾಗಿ ಕೋಳಿ, ಕುರಿ, ಹಂದಿ, ಜಾನುವಾರು ಸಾಕಣೆಯನ್ನು ಆಧರಿಸಿದ ತರಬೇತಿಗಳನ್ನು ಆರಂಭಿಸಬಹುದು.

ಕೃಷಿಯ ಬೆಳೆಗಳನ್ನು ಬಳಸಿಕೊಂಡು ಉಪ ಉತ್ಪನ್ನಗಳನ್ನು ಮಾಡುವ ನೆಲೆಯಲ್ಲಿ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ತರಬೇತಿ ನೀಡುವಂತಹ ಕೋರ್ಸಗಳನ್ನು ಮಾಡಬಹುದಾಗಿದೆ. ಉದಾ: ಉತ್ತರ ಕರ್ನಾಟಕ ಮತ್ತು ಹೈದರಬಾದ್ ಕರ್ನಾಟಕದಲ್ಲಿ ಮುಸುಕಿನ ಜೋಳದ ಬೆಳೆ ಪ್ರಮಾಣ ಹೆಚ್ಚಾಗಿದೆ. ಈ ಮುಸುಕಿನ ಜೋಳವನ್ನು ಬಳಸಿಕೊಂಡಿ ಹಳ್ಳಿಗಳಲ್ಲಿಯೇ ಉಪ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಆರಂಭಿಸುವ ಅಗತ್ಯವಿದೆ. ಹತ್ತಿ, ಸೂರ್ಯಕಾಂತಿ, ಶೇಂಗ ಮುಂತಾದ ಬೆಳೆಗಳ ಉಪ ಉತ್ಪನ್ನಗಳನ್ನು ತಯಾರಿಸುವ ಕೋರ್ಸುಗಳನ್ನು ಆರಂಭಿಸಬಹುದು. ಇದರಿಂದಾಗಿ ಗ್ರಾಮೀಣ ಯುವ ಜನತೆಗೆ ದೊಡ್ಡಮಟ್ಟದಲ್ಲಿ ಉದ್ಯೋಗ ನಿರ್ಮಿಸಿದಂತಾಗುತ್ತದೆ.

ಹಳ್ಳಿಗಳು ಇಂದು ವೃದ್ಧರ ತಾಣಗಳಾಗಿವೆ. ಅದೇ ಹೊತ್ತಿಗೆ ನಗರಗಳು ಯುವಕ ಯುವತಿಯರ ಆಕರ್ಷಕ ಕೇಂದ್ರಗಳಾಗಿವೆ. construction-workersಇದಕ್ಕೆ ಕಾರಣ ಯುವ ಜನಾಂಗ ಹಳ್ಳಿಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಬೇಕಾದ ಉದ್ಯೋಗಗಳ ಕೊರತೆ ಇರುವುದು. ಸಮುದಾಯ ಕಾಲೇಜುಗಳ ಮೂಲಕ ಹಳ್ಳಿಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸಾದ್ಯವಾದರೆ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವನ್ನು ಉಳಿಸಿಕೊಳ್ಳುವ ಆಕರ್ಷಣೆಯನ್ನು ಹೆಚ್ಚಿಸಬಹುದಾಗಿದೆ. ಈ ಕೋರ್ಸುಗಳಿಗೆ ವಿದ್ಯಾರ್ಹತೆಯ ವಿಷಯದಲ್ಲಿ ಕೆಲವು ವಿನಾಯಿತಿಗಳು ಬೇಕಾಗುತ್ತದೆ. ಅರೆ ವಿದ್ಯಾವ0ತ ಮತ್ತು ಅನಕ್ಷರಸ್ತ ಯುವ ಸಮುದಾಯವನ್ನು ಒಳಗೊಳ್ಳುವ ಹಾಗೆ ವಿದ್ಯಾರ್ಹತೆಗಳಲ್ಲಿ ಸಡಿಲ ನಿಲುವಿರಬೇಕು. ಕೌಶಲ್ಯವನ್ನು ಆಧರಿಸಿಯೂ ವಿದ್ಯಾರ್ಹತೆಯನ್ನು ನಿಗದಿಪಡಿಸುವಂತಾಗಬೇಕು. ಇನ್ನು ಇಂತಹ ಎಲ್ಲಾ ಕೋರ್ಸುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತರನ್ನೂ, ದೇವದಾಸಿಯರನ್ನೂ ಒಳಗೊಂಡಂತೆ ಧ್ವನಿ ಇಲ್ಲದ ಅಂಚಿನ ಸಮುದಾಯಗಳಿಗೆ ಆಧ್ಯತೆ ಕೊಡಬೇಕಿದೆ.

ಮುಖ್ಯವಾಗಿ ಈ ಕೋರ್ಸಗಳನ್ನು ಮುಗಿಸಿಕೊಂಡು ಹೊರ ಹೋದಾಗ ಸ್ವತಃ ಉದ್ಯೋಗ ಸೃಷ್ಟಿಸಿಕೊಳ್ಳಲು ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕಿದೆ. ಇಂತಹ ಸಮರ್ಪಕ ಯೋಜನೆಗಳಿರದೆ ಈ ಕೋರ್ಸುಗಳಿಗೆ ಯುವ ಸಮುದಾಯವನ್ನು ಸೆಳೆಯುವುದು ಸರಿಯಾಗಲಾರದು. ಕಾರಣ ಹೊಸ ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುತ್ತದೆ. ಈ ನೆಲೆಯಲ್ಲಿ ಸಮುದಾಯ ಕಾಲೇಜುಗಳಲ್ಲಿ ಆರಂಭಿಸುವ ಯಾವುದೇ ಕೋರ್ಸುಗಳಲ್ಲಿ ತರಬೇತಿ ಪಡೆದವರು ಮುಂದೆ ಜೀವನ ನಿರ್ವಹಣೆಗೆ ಇದು ಹೇಗೆ ನೆರವಾಗಬಹುದು ಎನ್ನುವ ಬಗ್ಗೆ ಖಚಿತತೆ ಮತ್ತು ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಿದೆ.