Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಗಾಂಧಿ ಎಂಬ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ”


– ಶ್ರೀಧರ್ ಪ್ರಭು


ಫೆಬ್ರವರಿ ೧೯೪೮ ರ ಸಂದರ್ಭ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿ ಹತ್ತು ಹದಿನೈದು ದಿನಗಳು ಸಂದಿರಬೇಕು. ಪ್ರಧಾನಿ ನೆಹರು ಮತ್ತು ಉಪ ಪ್ರಧಾನಿ ಪಟೇಲರು ಅಧೀರರಾಗಿದ್ದರು. ಭಾರತದಲ್ಲಂತೂ ಸೂತಕದ ಛಾಯೆ. ಇಡೀ ಪ್ರಪಂಚದಾದ್ಯಂತ ಮಹಾತ್ಮರ ಹತ್ಯೆಯನ್ನು ಖಂಡಿಸಿ ಸಾವಿರಾರು ಶ್ರದ್ಧಾಂಜಲಿ ಸಭೆ ಸಮಾರಂಭಗಳು ನಡೆದಿದ್ದವು.

ಕೇವಲ ಎರಡು ಮೂರು ದಿನಗಳ ಅಂತರದಲ್ಲಿ, ಅತ್ಯಂತ ವಿಭಿನ್ನ ಹಿನ್ನೆಲೆಯ ಇಬ್ಬರು ಭಾರತೀಯ ಗಣ್ಯರು, gandhi_dead_bodyದೇಶವೆಂದೂ ಮರೆಯದ ಶ್ರದ್ಧಾಂಜಲಿ ಅರ್ಪಿಸಿದರು.

ಒಬ್ಬರು, ನಲವತ್ತರ ಅಂಚಿನ ಸರ್ವ ಸಂಗ ಪರಿತ್ಯಾಗಿ ಮತ್ತು ಅಂದು ಕರಾಚಿಯಲ್ಲಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ – ಸ್ವಾಮಿ ರಂಗನಾಥನಂದ.

ಇನ್ನೊಬ್ಬರು, ವರ್ಲಿ ರೈತ ದಂಗೆ, ತೆಲಂಗಾಣ ಸಶಸ್ತ್ರ ಹೋರಾಟ ಮತ್ತು ಮಹಾರಾಷ್ಟ್ರ ರಾಜ್ಯ ರಚನೆಯ ಸುಡುಬಿಸಿಯ ಹೋರಾಟಗಳ ನಡುಮಧ್ಯದಲ್ಲಿದ್ದ ಅರವತ್ತರ ಹರೆಯದ ಕಮ್ಯುನಿಸ್ಟ್ ನಾಯಕ – ಶ್ರೀಪಾದ ಅಮೃತ ಡಾಂಗೆ.

ಎಂತಹ ಅಗಾಧ ಭಿನ್ನತೆ ಮತ್ತು ಅಸಾಮ್ಯತೆ!

ವ್ಯಕ್ತಿಗಳ ಹಿನ್ನೆಲೆಗಳ ಅಗಾಧ ಭಿನ್ನತೆಯತೆಗಳ ಜೊತೆ ಜೊತೆಯಲ್ಲೇ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಗಾಂಧಿಯವರೂ ಕೂಡ ಅಗಾಧ ವೈರುಧ್ಯ ಮತ್ತು ವಿರೋಧಬಾಸಗಳ ಮೊತ್ತವಾಗಿದ್ದರು. ಹೀಗಾಗಿ ಗಾಂಧಿಯನ್ನು ಕುರಿತು ಒಂದೇ ಹಿನ್ನೆಲೆಯ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಮಾತನಾಡುವುದು ಸಾಧ್ಯವಿದೆಯೇ? ಸಾಧ್ಯವಾಯಿತು ನೋಡಿ!

ಇನ್ನೊಂದು ವಿಶೇಷತೆ ಗಮನಿಸಿ. ವಿವೇಕಾನಂದರಾಗಲಿ, ಅವರ ಗುರುಭಾಯಿಗಳಾಗಲಿ ಅಥವಾ ಆಶ್ರಮವಾಗಲಿ, ನೇರ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಹೋರಾಟ (ಸಾಮಾಜಿಕ ಹೋರಾಟಗಳಲ್ಲಿ ಕೂಡ) ಭಾಗಿಯಾಗಿರಲಿಲ್ಲ. ಏನಿದ್ದರೂ, ರಂಗನಾಥನಂದರಾಗಲಿ ಅವರ ಅಶ್ರಮವಾಗಲಿ ಗಾಂಧಿವಾದದ ಆಸುಪಾಸು ಎನ್ನುವಂತೆ ಕೂಡ ಇರಲಿಲ್ಲ.

ಇನ್ನು ಡಾಂಗೆಯವರಂತೂ ಗಾಂಧೀಜಿಯವರನ್ನು ಉದ್ದಕ್ಕೂ ವಿರೋಧಿಸಿದವರು. ಗಾಂಧಿ ಪ್ರೇರಿತ ಸಮಾಜವಾದ ಕಮ್ಯುನಿಸ್ಟ್ ರ ಮಟ್ಟಿಗೆ ಒಂದು ಕಾಗಕ್ಕ ಗುಬ್ಬಕ್ಕ ಕಥೆಗಿಂತ ಹೆಚ್ಚು ಮಹತಿಯದ್ದೇನಲ್ಲ.

ಹಾಗಿದ್ದರೆ, ಗಾಂಧಿಯವರ ಬದುಕು ಇವರನ್ನು ಒಟ್ಟು ಗೂಡಿಸಿತಲ್ಲದೆ, ಸಾವು ಕೂಡ ಹೇಗೆ ಸಾಮ್ಯತೆ ಬೆಸೆಯಿತು?

ಇವರಿಬ್ಬರ ಮಾತುಗಳಲ್ಲಿ ಅಗಾಧ ಸಾಮ್ಯತೆ ಇತ್ತು ಎಂದರೆ ಆಶ್ಚರ್ಯವಾಗುತ್ತದೆ. ಎಷ್ಟರ ಮಟ್ಟಿಗೆಂದರೆ, Gandhi's Funeralಇವರಿಬ್ಬರ ಭಾಷಣದ ವಾಕ್ಯಗಳನ್ನು ಬಿಡಿಯಾಗಿ ಉದಹರಿಸಿದರೆ, ಯಾವುದನ್ನು ಯಾರು ಹೇಳಿದ್ದು ಎಂದು ಹೇಳುವುದು ಕಷ್ಟ. ಇದಕ್ಕಿಂತ ಜಾಸ್ತಿ, ಹಂತಕ ಗೋಡ್ಸೆಯ ಕುರಿತಾದ ಇವರಿಬ್ಬರ ನಿಲುಮೆಯಲ್ಲಿ ಕೂಡ ಒಂದಿನಿತೂ ಭಿನ್ನತೆಗಳಿರಲಿಲ್ಲ. ಗೋಡ್ಸೆಯನ್ನು ಕ್ಷಮಿಸಿ ಬಿಡಬೇಕು ಎಂದು ಕೆಲವರು ರಾಗ ತೆಗೆದಿದ್ದನ್ನು ತಮ್ಮದೇ ರೀತಿಯಲ್ಲಿ ಇಬ್ಬರೂ ವಿರೋಧಿಸುತ್ತಾರೆ. ಡಾಂಗೆ ವಿಧಾನ ಸಭೆಯಲ್ಲಿ ಮಾತನಾಡಿದ್ದಕ್ಕೂ, ರಂಗನಾಥನಂದರು ಭಕ್ತರಿಗೆಂದು ಮೀಸಲಾದ ಸಂಜೆಯ ಪ್ರವಚನದಲ್ಲಿ ಹೇಳಿದ್ದೂ ಏಕಸೂತ್ರ ದಂತಿದೆ!

ಹಾಗೆಂದು ಸ್ವಾಮಿ ರಂಗನಾಥನಂದರು ನಮ್ಮ ಇಂದಿನ ಕೆಲವು ಪ್ರಗತಿಪರ ಮಠಾಧೀಶರ ಸಾಲಿನವರೇನಲ್ಲ. ರಂಗನಾಥನಂದರು ನಾಲ್ಕು ಕಂತುಗಳಲ್ಲಿ ಬರೆದ ಬರೆದ ಬೃಹತ್ ಮತ್ತು ಪ್ರಸಿದ್ಧ ಪುಸ್ತಕ “Eternal Values for a Changing Society” ವೇದ, ವೇದಾಂತ ಇತ್ಯಾದಿ ಕುರಿತೇ ಇರುವಂಥಹದ್ದು.

ಇದಕ್ಕಿಂತ ವಿಶೇಷ ಏನು ಗೊತ್ತೇ? ರಂಗನಾಥನಂದರ ಕರಾಚಿ ಆಶ್ರಮದಲ್ಲಿ ಅತ್ಯಂತ ಭೀಕರ ಕೋಮು ಭೀತಿಯ ವಾತಾವರಣ ಇತ್ತು. ಇಂಥ ಸಂದರ್ಭದಲ್ಲೂ ಗಾಂಧಿಯನ್ನು ಧೇನಿಸುವ ತಿಳಿ ಮನಸ್ಸು ನೋಡಿ!

ಇನ್ನೊಂದು ವಿಶೇಷವೆಂದರೆ ಕರಾಚಿ ರಾಮಕೃಷ್ಣ ಆಶ್ರಮದಲ್ಲಿ ಜರುಗುತ್ತಿದ್ದ ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮಗಳಿಗೆ ಸದಾ ಬರುತ್ತಿದ್ದವರಲ್ಲಿ ಒಬ್ಬ ವಿಶೇಷ ವ್ಯಕ್ತಿ ಕೂಡ ಇದ್ದರು. ಈ ವ್ಯಕ್ತಿ ಇಂದಿಗೂ ಸ್ವಾಮೀಜಿಯವರ ವ್ಯಕ್ತಿತ್ವ ಮತ್ತು ಅವರ ಅಧ್ಯಾತ್ಮಿಕತೆ ಕುರಿತ ಅವರ ಉಪನ್ಯಾಸ ಗಳನ್ನು ನೆನೆದುಕೊಳ್ಳುತ್ತಾರೆ. ಆದರೆ ಈ ವ್ಯಕ್ತಿ ಗಾಂಧಿ ಹತ್ಯೆ ಕುರಿತ ಸ್ವಾಮಿಜಿಯವರ ಈ ಉಪನ್ಯಾಸ ಕೇಳಿಸಿಕೊಂಡಿದ್ದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಯಾರು ಗೊತ್ತೇ ಆ ವ್ಯಕ್ತಿ? ಲಾಲಕೃಷ್ಣ ಅಡ್ವಾಣಿ!

ಅಂದು ಮತ್ತೆ ಇಂದು, ಅಡ್ವಾಣಿಯವರಿಗಾಗಲಿ ಅಥವಾ ಸಂಘ ಪರಿವಾರಕ್ಕಾಗಲಿ ಗಾಂಧಿ ತತ್ವವನ್ನು ವಿರೋಧಿಸುವ ಮನಸ್ಸೇನೋ ತುಂಬಾ ಇದೆ Advaniಆದರೆ ಸ್ವಾಮಿ ರಂಗನಾಥನಂದರಂಥ ಸಂತರು ಗಾಂಧಿಯನ್ನು ಗೌರವಿಸುವಾಗ ಸಂಘ ಪರಿವಾರಕ್ಕೆ ಎಷ್ಟು ಇರುಸು ಮುರುಸು ಉಂಟಾಗುತ್ತದೆ ಗಮನಿಸಿ.

ಆ ವಿಷಯ ಹಾಗಿರಲಿ; ಗಾಂಧಿ ಎರಡಾಣೆ ಶುಲ್ಕ ಕೊಟ್ಟು ಕಾಂಗ್ರೆಸ್ ನ ಸದಸ್ಯರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಅವರು ಗಾಂಧಿ ಟೊಪ್ಪಿ ಎಂದೂ ತೊಡಲಿಲ್ಲ. ಎಂದಿಗೂ ಯಾವುದೇ ಮಠ ಮಾನ್ಯ ಗಳ ಬಾಗಿಲಿಗೆ ಹೋಗಲಿಲ್ಲ; ದೇವಸ್ಥಾನ, ಆಶ್ರಮ ಇತ್ಯಾದಿಗಳ ಗೋಜಿಗೂ ಹೋಗಲಿಲ್ಲ. ಬೆಳಗಾವಿಯಲ್ಲಿ ಜರುಗಿದ ಅಧಿವೇಶನ ಬಿಟ್ಟು ಬೇರೆಲ್ಲೂ ಕಾಂಗ್ರೆಸ್ ಅಧ್ಯಕ್ಷರಾಗಿರಲಿಲ್ಲ.

ಗಾಂಧಿ, ಭಾರತದ ಅತ್ಯಂತ ಪ್ರಭಾವಿ ಶಕ್ತಿ ಕೇಂದ್ರವಾಗಿದ್ದರೂ, ಯಾವ ವ್ಯಕ್ತ ಅಥವಾ ಪ್ರಕಟ ಸ್ವರೂಪದ ಅಧಿಕಾರವನ್ನು ಸ್ವೀಕರಿಸಲಿಲ್ಲ. ಭಾರತದ ಸ್ವಾಯತ್ತತೆ ಮತ್ತಿತರೇ ಮಹತ್ತರ ತೀರ್ಮಾನ ಗಳನ್ನು ಕೈಗೊಳ್ಳಲು ೧೯೪೫ ರಲ್ಲಿ ಅಂದಿನ ವೈಸ್ ರಾಯ್ ಮೌಂಟ್ ಬ್ಯಾಟನ್ ಶಿಮ್ಲಾದಲ್ಲಿ ಕರೆದ ಸಭೆಯನ್ನು ಗಾಂಧಿ ನಿರ್ದೇಶಿದ ರೀತಿ ನೋಡಿ. ಸಭೆಯ ಮುನ್ನಾ ದಿನ ಶಿಮ್ಲಾಗೆ ಬಂದಿಳಿಯುವ ಗಾಂಧಿ, ಸಭೆಗೆ ಹಾಜರಾಗುವುದಿಲ್ಲವಾದರೂ, ಸಭೆಗೆ ಹಾಜರಾಗುವ ಕಾಂಗ್ರೆಸ್ಸನ ಎಲ್ಲ ನಾಯಕರಿಗೆ ನೀತಿ ನಿರ್ದೇಶನ ನೀಡುತ್ತಾರೆ.

ಗಾಂಧಿ ಹಾಗೆಂದು ರಿಮೋಟ್ ಕಂಟ್ರೋಲ್ ನಾಯಕರಲ್ಲ. ಸ್ವಾತಂತ್ರ್ಯ ಬಂದ ಹೊಸ್ತಿಲಿನಲ್ಲಿ ಕೋಮು ದಳ್ಳುರಿ ತಣಿಸಲು ಗಾಂಧೀ ನೌಖಾಲಿಗೆ ಹೊರಡುತ್ತಾರೆ. ಅಲ್ಲಿ ಕೆಲವು ದುಷ್ಟರು ಗಾಂಧೀಜಿ ಉಳಿದುಕೊಂಡ ಗ್ರಾಮಗಳಲ್ಲಿ ಸಾಗುವ ದಾರಿಯುದ್ದಕ್ಕೂ ಮಲವನ್ನು ಮೂತ್ರ ಹರಡಿರುತ್ತಾರೆ. ಗಾಂಧೀಜಿಯ ಮೊಮ್ಮಗಳು ಮನು ಗಾಂಧಿ ಬೇಗನೆ ಮುಂದೆ ತೆರಳಿ ಅದನ್ನು ಸ್ವಚ್ಛ ಗೊಳಿಸುತ್ತಾರೆ. ಇದನ್ನು ಅರಿತ ಗಾಂಧಿ ಹೇಳುತ್ತಾರೆ “ಇಂದು ಶ್ರೇಷ್ಠ ವಾದದ್ದನ್ನು ನನ್ನಿಂದ ಕಸಿದುಕೊಂಡೆ”!

ಗಾಂಧಿಯ ಸಂವಹನ ಪ್ರಕ್ರಿಯೆ ತುಂಬಾ ಸೂಕ್ಷ್ಮ ಆದರೆ ತೀಕ್ಷ್ಣ ಮಟ್ಟದ್ದು. ಗಾಂಧಿ ಮೆಲ್ಪದರಿನ ರಾಜಕಾರಣ ಮಾಡಲೇ ಇಲ್ಲ. ದೇಶದ ವಿಭಜನೆಯೂ ಸೇರಿದಂತೆ, ಸರಕಾರದ ಅಥವಾ ಕಾಂಗ್ರೆಸ್ಸ್ ನ ಅನೇಕ ಮಹತ್ತರ ತೀರ್ಮಾನಗಳಲ್ಲಿ ಗಾಂಧಿ ನೇರವಾಗಿ ಭಾಗಿಯಲ್ಲ. ನೇತಾಜಿ – ಪಟ್ಟಾಭಿ ಸ್ಪರ್ಧೆಯ ಸಂದರ್ಭ ಬಿಟ್ಟರೆ ಗಾಂಧಿ ಕಾಂಗ್ರೆಸ್ಸನ ಸಂಘಟನೆಯ ಒಳಗಿನ ಸೋಲು ಗೆಲುವನ್ನು ತಮ್ಮ ಸೋಲು – ಗೆಲುವು ಎಂದು ಭಾವಿಸಲಿಲ್ಲ – ಕನಿಷ್ಠ ಬಿಂಬಿಸಲಂತೂ ಇಲ್ಲ .

ಹಾಗಿದ್ದಾಗ್ಯೂ, ಗೋಡ್ಸೆ ಕೊಲ್ಲುವುದು ಗಾಂಧಿಯನ್ನು; ಪ್ರಧಾನಿ ನೆಹರು ಅಥವಾ ಇತರ ಕಾಂಗ್ರೆಸ್ ನ ನಾಯಕರನ್ನಲ್ಲ. ಇನ್ನೊಂದು ಕಡೆಯಿಂದ ನೋಡಿದರೆ, ವರ್ಣಾಶ್ರಮವನ್ನು ಸಂಪೂರ್ಣವಾಗಿ ಒಪ್ಪುವ ಹಿಂದೂ ಆಗಿದ್ದ ಗಾಂಧಿಯನ್ನು ಕೊಂದದ್ದು ಇನ್ನೊಬ್ಬ ‘ಹಿಂದೂ’ – ಅದರಲ್ಲೂ ಬ್ರಾಹ್ಮಣ!

ಯುಗ ಯುಗಾಂತರದಿಂದ ಶೋಷಣೆ ಸಾಧನ ಮಾಡಿಕೊಂಡ ವೈದಿಕ ಧರ್ಮವನ್ನು ಸಮರ್ಥವಾಗಿ ಬೀದಿಯಲ್ಲಿ ಬೆತ್ತಲೆ ಮಾಡಿದ Young_Ambedkarಅಂಬೇಡ್ಕರರನ್ನು ಕಡೆಗಣಿಸಿದ ಸಾತ್ವಿಕ ಸಿಟ್ಟಿನ ಕಾರಣ ಯಾವ ದಲಿತನೂ ಗಾಂಧಿಯನ್ನು ಕೊಲ್ಲಲಿಲ್ಲ. ಪಾಕಿಸ್ತಾನದ ಮುಸ್ಲಿಂ ಉಗ್ರಪಂಥೀಯರಾಗಲಿ ಅಥವಾ ಸರ್ವಸ್ವ ಕಳೆದುಕೊಂಡ ವರಳಿಯ-ತೆಲಂಗಾಣದ ಕಮ್ಯುನಿಸ್ಟ್ ರೈತರಾಗಲಿ ಗಾಂಧಿಯನ್ನು ಕೊಲ್ಲಲಿಲ್ಲ. ಗಾಂಧಿಯನ್ನು ಕೊಂದದ್ದು ಒಬ್ಬ ‘ಹಿಂದೂ’ ಬ್ರಾಹ್ಮಣ! ಗಾಂಧಿಯ ರಾಮನ ಬಾಣ ಯಾರನ್ನು ಹೆಚ್ಚು ಚುಚ್ಚುತ್ತಿತ್ತು ಎಂದು ಇದರಿಂದಲೇ ವೇದ್ಯ ವಾಗುತ್ತದೆ.

ದಲಿತರಿಗೆ ಗಾಂಧೀ ಬಗೆಗಿನ ವಿರೋಧಕ್ಕೆ, ಅಂಬೇಡ್ಕರರ ವಿದ್ವತ್ ಪೂರ್ಣ ಸಿದ್ಧಾಂತ, ಬರಹ – ಭಾಷಣಗಳ ತಳಹದಿ ಇತ್ತು. ಕಮ್ಯುನಿಸ್ಟ್ ರಿಗೆ ಗಾಂಧಿವಾದದ ಎದುರು ಮಾರ್ಕ್ಸ್ ವಾದವೆಂಬ ವಿಶ್ವ ವಿಶಾಲ ತತ್ವದ ಆಸರೆಯಿತ್ತು. ಆದರೆ ವೈದಿಕಶಾಹಿಗಳಿಗೆ ಯಾವ ಸೈದ್ಧಾಂತಿಕ ತಲೆ ಬುಡವೂ ಇರಲಿಲ್ಲ. ಅವರ ಗರ್ಭಗುಡಿಯೊಳಗೇ ನಿಂತು ಅವರ ಮಂತ್ರ ಗಳನ್ನೂ ಉಚ್ಚರಿಸಿಯೇ ಅವರ ಭೂತವನ್ನು ಉಚ್ಚಾಟನೆ ಮಾಡುತ್ತಿದ್ದ ಗಾಂಧಿಯನ್ನು ದೈಹಿಕ ಹಲ್ಲೆ / ಕೊಲೆ ಮಾಡದೆ ಬೇರೆ ಮಾರ್ಗವೇ ಇರಲಿಲ್ಲ.

ಆದರೆ ಇಂದು ಹಿಂದುತ್ವ ಪರಿವಾರ ಗಾಂಧಿಯನ್ನು ಮತ್ತು ಗಾಂಧಿಯ ಅಂತರಂಗದ ಶಿಷ್ಯ ಪಟೇಲ್ ರನ್ನು ನುಂಗುತ್ತಿದೆ. ಸಂಘ ಪರಿವಾರವನ್ನು ನೆಹರುಗಿಂತ ಒಂದು ಕೈ ಹೆಚ್ಚೇ ವಿರೋಧಿಸುತ್ತಿದ್ದ ಪಟೇಲರು ಇಂದು ಗಣ ವೇಷ ತೊಟ್ಟು ನಡು ನೀರಿನಲ್ಲಿ ಮೂರ್ತಿಯಾಗಿ ನಿಂತಿದ್ದರೆ, ನೆಹರು ಇನ್ನೊಂದು ಐದು ವರ್ಷಕ್ಕೆ “ನಮಸ್ತೆ ಸದಾ ವತ್ಸಲೇ….” ಶುರು ಮಾಡಿಕೊಳ್ಳಬಹುದು. ಇನ್ನು ಅಂಬೇಡ್ಕರ್ ರಂತೂ “ಸಾಮಾಜಿಕ ಕ್ರಾಂತಿ ಸೂರ್ಯ” ರಾಗಿ ಹಿಂದೂ ಧರ್ಮದ ರಕ್ಷಣೆಗೆ ಕಂಕಣ ತೊಟ್ಟು ನಿಂತಾಗಿದೆ!

ಇಂಥದ್ದರಲ್ಲಿ, ಸಂಘ ಪರಿವಾರದ ಬದ್ಧ ವಿರೋಧಿಗಳಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ‘ಮಹಾತ್ಮಾ ಗಾಂಧಿ ಬ್ರಿಟಿಷರ ಏಜೆಂಟ್’ ಎಂದು ಇತ್ತೀಚಿಗೆ ಅಪ್ಪಣೆ ಕೊಡಿಸಿದ್ದಾರೆ. ಅರುಂಧತಿ, ಗಾಂಧಿಯನ್ನು ಹಿಗ್ಗಾ ಮುಗ್ಗಾ ಖಂಡಿಸಿ, ನವಯಾನ ಪ್ರಕಟಿಸಿದ ಬಾಬಾ ಸಾಹೇಬರ “Annihilation of Caste” ನಲ್ಲಿ ಮುನ್ನುಡಿ ಬರೆದಿದ್ದಾರೆ. ಇದೆಲ್ಲದುರಿಂದ ಯಾರಿಗೆ ಯಾವ ರಾಜಕೀಯ ಲಾಭ ಸಿಗುತ್ತದೆ ಎಂದು ಗೊತ್ತಾಗದಷ್ಟು ಅಮಾಯಕರೇ ಇವರೆಲ್ಲ ಎಂದು ಅಚ್ಚರಿಯಾಗುತ್ತದೆ!

ಬುದ್ಧ- ಬಸವ-ಮಾರ್ಕ್ಸ್-ಫುಲೆ-ಅಂಬೇಡ್ಕರ್ ವಾದಿಗಳು ಗಾಂಧಿಯನ್ನು ಹೀಗೆ ದೂರ ಮಾಡಿಕೊಂಡಿದ್ದ ಪರಿಣಾಮ ಇಂದು ಗಾಂಧಿಯನ್ನು ಸಂಘಿಗಳು ಹೈಜಾಕ್ ಮಾಡಿಕೊಂಡಿದ್ದಾರೆ. ನಿಮಗೆ ಗೊತ್ತಿರಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪ್ರಾತಃ ಸ್ಮರಣೀಯರ ಪಟ್ಟಿ ಒಂದಿದೆ; ಅದರಲ್ಲಿ ಗಾಂಧಿ ಕೂಡ ಒಬ್ಬರು. ೧೯೯೨ ರ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಕೈಗೆತ್ತಿ ಕೊಂಡ ಅಜೆಂಡಾ ಗಾಂಧಿಯ “ಸ್ವದೇಶೀ”. ಸಂಘ ಪರಿವಾರದ ಬೆನ್ನೆಲಬು ಎನಿಸಿಕೊಂಡ ವ್ಯಾಪಾರಸ್ಹರು ತಾವು ವಿದೇಶಿ ಸರಕು ಅಂಗಡಿಯಲ್ಲಿ ಇಟ್ಟುಕೊಂಡೇ “ಸ್ವದೇಶೀ ಸಾಮಗ್ರಿ ಕೊಳ್ಳಿ” ಎಂದು ಪ್ರಚಾರ ಶುರು ಮಾಡಿದರು. ಹೀಗೆ, ಗಾಂಧಿಯನ್ನು ಕಾಪಿ ಹೊಡೆಯದೆ ಇದ್ದಿದ್ದರೆ ಸಂಘಿಗಳಿಗೆ ಸಂಸತ್ತಿನಲ್ಲಿ “೩೫ ಮಾರ್ಕು” ದಾಟುತ್ತಿರಲಿಲ್ಲ.

ಇನ್ನು ಗಾಂಧಿಯನ್ನು ದೊಡ್ಡ ದೊಡ್ಡ ‘ಸೈದ್ಧಾಂತಿಕ’ ಕಾರಣಗಳಿಗೆ ವಿರೋಧಿಸಿದವರು ಇಂದು ಬೋರ್ಡಿಗಿಲ್ಲದೆ ಹೋದರು. ಏನೇ ಆದರೂ ಗಾಂಧಿ ವಿರೋಧದಿಂದ ಒಂದು ಪೈಸೆಯ ಲಾಭವಂತೂ ಇಲ್ಲ; ಉಲ್ಟಾ ನಷ್ಟವೇ ಜಾಸ್ತಿ. ಇಂದು ವಿದೇಶಗಳಲ್ಲಿ ಭಾರತ ಪ್ರತಿಮೆ ಎಂದರೆ ಗಾಂಧಿ ಪ್ರತಿಮೆ. ವಿದೇಶಗಳಲ್ಲಿ ಗಾಂಧಿಯನ್ನು ಬೈದುಕೊಂಡು ತಿರುಗಿದರೆ ಭಾರತ ವನ್ನೇ ಬೈದಂತೆ. ಉಗ್ರ ನಾಸ್ತಿಕವಾದಿ ಗೊ.ರಾ ಮತ್ತು ಹೆಚ್. ನರಸಿಂಹಯ್ಯನವರು ಎಷ್ಟು ಗಾಂಧಿವಾದಿಯೊ ಅಷ್ಟೇ ಸ್ವಮೂತ್ರ ಪಾನ ಮಾಡುವ ಕಟ್ಟಾ ಸಂಪ್ರದಾಯವಾದಿ ಮೊರಾರ್ಜಿ ಕೂಡ ಅಷ್ಟೇ ಗಾಂಧಿವಾದಿ. JP, ಲೋಹಿಯಾರಷ್ಟೇ ಗಾಂಧಿಯನ್ನು ಸರದಾರ್ ಪಟೇಲ್ ಮತ್ತು ಕೆ. ಎಲ್. ಮುನ್ಷಿ ಇಷ್ಟ ಪಟ್ಟಿದ್ದರು. ಇನ್ನು ತೆಲಂಗಾಣದಲ್ಲಿ ಪಟೇಲರ ಗುಂಡು ಎದುರಿಸುತ್ತಲೇ, ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸುವ ಡಾಂಗೆಯ ವೈಶಿಷ್ಟ್ಯ ನೋಡಿ! ತತ್ವ ಸಿದ್ಧಾಂತಗಳ ಎಲ್ಲೆ ಮೀರಿ ಎಲ್ಲ ಹಂತದ ಮತ್ತು ಭಿನ್ನ ಒಲವಿನ ವ್ಯಕ್ತಿ ಗಳನ್ನೂ ಆಕರ್ಷಿಸುವ ಶಕ್ತಿ ಮತ್ತು ಸತ್ವ ಗಾಂಧಿಯಲ್ಲಿತ್ತು.

ಗೋಡೆಗೆ ಬಣ್ಣ ಹಚ್ಚುವ ಮೊದಲು ಪುಟ್ಟಿ ಹಚ್ಚುವ ಮಾದರಿಯಲ್ಲಿ ರಾಜಕೀಯ ಹೋರಾಟಕ್ಕೆ ಮುನ್ನ ಮತ್ತು ನಂತರ ವಯಕ್ತಿಕ ಮತ್ತು MKGandhiಸಾಮಾಜಿಕ ಸನ್ನದ್ಧತೆ ತಂದು ಕೊಳ್ಳಬೇಕಾದ ಅಗತ್ಯತೆಯನ್ನು ಗಾಂಧಿಯಷ್ಟು ಪ್ರಖರವಾಗಿ ಪ್ರತಿಪಾದಿಸಿದವರೇ ಇಲ್ಲ. ಎಲ್ಲ ಪಕ್ಷ ಗಳಿಗೆ ರಾಜಕೀಯವೆಂದರೆ ಚುನಾವಣೆ ಮಾತ್ರ. ಆದರೆ ಸಂಘ ಪರಿವಾರಕ್ಕೆ ಚುನಾವಣಾ ಸೋಲು ಗೆಲವು ಗೌಣ. ಸಂಘ ಪರಿವಾರದ್ದು “ವಾಲ್ ಪುಟ್ಟಿ” ರಾಜಕಾರಣ. ಬಣ್ಣ ಯಾವುದಾದರೂ ಆದೀತು ತಳಹದಿ ಭದ್ರವಾಗಿರಬೇಕು. ಇದನ್ನೇ ಅವರು ಗಾಂಧಿಯಿಂದ ಕಲಿತದ್ದು ಮತ್ತು ಉಳಿದವರು ಬಿಟ್ಟಿದ್ದು. ಗಾಂಧಿಯನ್ನು ಪ್ರಗತಿಪರರು ತುಚ್ಚೀಕರಿಸಿದರೆ ಕೋಮುವಾದಿಗಳು ಗುರುವಾಗಿ ಸ್ವೀಕರಿಸಿದರು. ಇಂದು ಅದೇ ಗುರುವನ್ನು ಮುಂದಿಟ್ಟುಕೊಂಡು ಪ್ರಗತಿಪರರ ಹೆಬ್ಬೆಟ್ಟು ಕಿತ್ತಿದ್ದಾರೆ. ರಾಜಕೀಯದ ಇಸ್ಪೀಟ್ ಆಟದಲ್ಲಿ ನಮಗೆ ಬೇಡ ಎಂದು ಪ್ರಗತಿಪರರು ಎಸೆದ ಕಾರ್ಡ್ ಇಂದು ಸಂಘಿಗಳಿಗೆ ಟ್ರಂಪ್ ಕಾರ್ಡ್ ಆಗಿದೆ!

ಕಾಂಗ್ರೆಸ್ ಗೆ ಚುನಾವಣಾ ರಾಜಕಾರಣ ಬಿಟ್ಟರೆ ಬೇರೆ ಗೊತ್ತಿಲ್ಲ. ಸಿದ್ಧಾಂತದ ಗೋಜು ಏನಾದರೂ ಇದ್ದರೆ ಸಿಪಿಐ / ಸಿಪಿಎಂ ಮತ್ತು ಬಿ‌ಎಸ್‌ಪಿ ಗಳಿಗೆ. ಆದರೆ ಈ ಸೈದ್ಧಾಂತಿಕ ಪಕ್ಷಗಳ ಗತಿ ಏನಾಗಿದೆ? ಇಂದು ಸಂಘಿಗಳ ‘ರಾಮ’ನನ್ನು ಎದುರಿಸುವ ಶಕ್ತಿ ಏನಾದರೂ ಇದ್ದರೆ ಅದು ಗಾಂಧಿಯ ರಾಮನಿಗೆ ಮಾತ್ರ ಹೊರತು (ಯೆಚೂರಿ) ಸೀತರಾಮನಿಗಲ್ಲ ಅಥವಾ (ಕಾನ್ಷಿ) ರಾಮನನ್ನು ತೊರೆದ ಮಾಯಾವತಿಗೂ ಅಲ್ಲ. ಸತ್ವಹೀನ ಕಾಲರ ಕೀಟಾಣು ಗಳು ಕಾಲರ ರೋಗಕ್ಕೆ ಮದ್ದು. ಹಾಗೆಯೇ ಸಂಘಿಗಳ ಕೋಮುವಾದಕ್ಕೆ ಹಿಂದೂಧರ್ಮ ಮತ್ತು ವರ್ಣಾಶ್ರಮ ‘ಪ್ರತಿಪಾದಿಸುವ’ ಗಾಂಧಿಯೇ ಮದ್ದು. ಗಾಂಧಿಯಷ್ಟು ರಾಜಕಾರಣ ದಲ್ಲಿ ‘ಧರ್ಮವನ್ನು’ ಬೇರೆಸಿದವರೇ ಇಲ್ಲ. ಆದರೆ ಗಾಂಧಿ ಧರ್ಮವನ್ನು ಬಳಸಿದ್ದು ವಿಷವನ್ನು ವಿಷ ಕೊಳ್ಳುವಂತೆ ಗಾಂಧಿ ಬಿಡಿಸಿದ ಒಂದೊಂದೇ ಚಿತ್ರವು ವಿಚಿತ್ರವಾಗಿ ಕಂಡರೂ ಒಟ್ಟಿನ ಕೊಲಾಜ್ ಅರ್ಥಪೂರ್ಣವಾಗಿಸುವ ಗಾಂಧಿ ಭಾರತವನ್ನು ಒಟ್ಟು ಗೂಡಿಸಿದ ಶಕ್ತಿ.

ಗಾಂಧಿ, ಎರಡಲ್ಲ, ನಾಲ್ಕು ಧ್ರುವಗಳನ್ನು (ಹಿಂದೂ-ಮುಸ್ಲಿಂ-ಎಡ-ಬಲ) ಸಮಗ್ರವಾಗಿ ಸಮನ್ವಯಗೊಳಿಸಿದ ಶಕ್ತಿ. ಸಂವಿಧಾನ ರಚನೆಗೆ ಬಾಬಾ ಸಾಹೇಬರನ್ನೇ ನೇಮಿಸಬೇಕು ಎಂದು ನೆಹರುಗೆ ಒತ್ತಾಯಿಸಿದ್ದು ಗಾಂಧಿಯೇ. ಅಂಬೇಡ್ಕರ್ ಮತ್ತು ಗಾಂಧಿ ನಡುವಣ ಬಿನ್ನತೆಗಳು ಹೊರಪದರಿನ ಹೊಂದಾಣಿಕೆ ಸಮಸ್ಯೆಗಳೇ ವಿನಃ ಅಂತರಂಗದ ಸರಿಹೋಗಲು ಸಾಧ್ಯವೇ ಇಲ್ಲದ ವೈರುಧ್ಯಗಳಲ್ಲ. ಅಂಬೇಡ್ಕರ್, ಗಾಂಧಿಗಿಂತ ಹೆಚ್ಚು ವಿದ್ವತ್ಪೂರ್ಣ ಮತ್ತು ಪ್ರಖರ ಶಕ್ತಿ. ನಿಜ. ಆದರೆ, ಗಾಂಧಿಯನ್ನು ನಂಜಿಕೊಳ್ಳಲು ಒಲ್ಲದ ಅಂಬೇಡ್ಕರ್ ವಾದಕ್ಕೆ ನಂಜು ತಗಲುವ ಭಯವಿದೆ. ಹಾಗೆಯೇ, ಮಾರ್ಕ್ಸ್‌ವಾದ ಭಾರತದ ಸಂದರ್ಭಕ್ಕೆ ಗಾಂಧೀ ಸತ್ವ ಮತ್ತು ಅಂಬೇಡ್ಕರ್‌ರ ಕಾಣ್ಕೆಯನ್ನು ಅಂತರ್ಗತಗೊಳಿಸಿಕೊಳ್ಳಲೇಬೇಕು. ಹಾಗೆಯೇ ಮಾರ್ಕ್ಸ್ ಪ್ರತಿಪಾದಿಸಿದ ಅಂತರರಾಷ್ಟ್ರೀಯ ಶೋಷಿತರ ಭ್ರಾತೃತ್ವ, ಅರ್ಥಿಕ ಸಮಾನತೆಯ ತತ್ವ ಅಂಬೇಡ್ಕರ್ ಸಿದ್ಧಾಂತಕ್ಕೆ ಅತಿ ಮುಖ್ಯ.

ಈ ತತ್ವ ಸಮನ್ವಯ ಇಂದಿನ ಸಾಮಾಜಿಕ ಮತ್ತು ರಾಜಕೀಯ ತುರ್ತುಗಳಲ್ಲಿ ಒಂದು ಎಂದಾದ ಮೇಲೆ ಗಾಂಧಿ ಇಂದಿನ ತುರ್ತು ಎಂದು ಬೇರೆ ಹೇಳಬೇಕಿಲ್ಲ. ಏಕೆಂದರೆ ಈ ತತ್ವ ಸಮನ್ವಯ ಸಾಧ್ಯವಾಗುವುದು ಗಾಂಧಿ ಎಂಬ ಸಮಾನಾಂತರ ಕೇಂದ್ರ ಬಿಂದುವಿನಿಂದ.

ಇಂದು, ಅಂಬೇಡ್ಕರ್ ವಾದಿಗಳು, ಲೋಹಿಯಾ ಮತ್ತು ಮಾರ್ಕ್ಸ್ ವಾದಿಗಳು ಸೇರಿದಂತೆ ಎಲ್ಲ ಸಮಾಜಪರ ಪ್ರಗತಿಪರ ಶಕ್ತಿಗಳು, ನಮ್ಮ- ನಮ್ಮಲ್ಲಿ ೧೦೦-೫ ಎಂಬ ಭೇದ ಬೆಳೆಸಿಕೊಂಡರೂ, ಬೇರೆಯವರನ್ನು ೧೦೫ ರ ಶಕ್ತಿಯಿಂದ ಎದುರಿಸಬೇಕಾದ ಅಗತ್ಯವಿದೆ. ಈ ಒಗ್ಗಟ್ಟಿನ ಸಾಧ್ಯವಾಗಿಸುವ ಅತ್ಯಂತ ಸರಳ ಸಂವಹನ ಸಾಧನ ಇಂದಿಗೆ ಗಾಂಧಿ ಮಾತ್ರ.

ಗಾಂಧಿಯ ಕುರಿತ ಬಿಡಿ ಬಿಡಿ facts ಗಳು ಸತ್ಯವೆನಿಸಿಕೊಳ್ಳುವುದಿಲ್ಲ. ಇಂದಿಗೆ ಇದನ್ನೆಲ್ಲಾ ಕೆದಕಿ ಕೊಂಡು ಇದ್ದೊಂದು ಗುಡಿಸಲನ್ನೂ gandhi2ಮೈಮೇಲೆ ಕೆಡವಿಕೊಳ್ಳಲು ಇದು ಸಂದರ್ಭವೂ ಅಲ್ಲ. ಇನ್ನು ಈ ಎಲ್ಲ ಅಂತರ್ ಕಲಹದ ಲಾಭ ಯಾರಿಗೆ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೂ ಇಲ್ಲ.

ವಿಚಿತ್ರವೆಂದರೆ, ಇಂದು ಬಿಜೆಪಿಯಲ್ಲಿನ ಅಡ್ವಾಣಿ ಮತ್ತು ಬ್ರಾಹ್ಮಣಶಾಹಿ ನಾಯಕತ್ವಕ್ಕೆ ಮೋದಿ ಮೇಲೆ ಇರುವಷ್ಟು ಸಿಟ್ಟು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ರ ಮೇಲೂ ಇಲ್ಲ. ಆದರೂ ಹೇಗೆ ತೆಪ್ಪಗೆ ನುಂಗಿಕೊಂಡು ಕೂತಿದ್ದಾರೆ ನೋಡಿ. ಇಂತಹದ್ದರಲ್ಲಿ ನಾವು ನಾವುಗಳೇ ಇಲ್ಲ ಸಲ್ಲದ ರಾದ್ದಾಂತ ಮಾಡಿಕೊಂಡು ಹೋಗುತ್ತಿದ್ದೇವೆ. ಹಾಗೆಂದು ಪ್ರಗತಿಪರರ ವಿವಿಧ ಬಣಗಳು ತಮ್ಮ ಎಲ್ಲ ತಾತ್ವಿಕ ಭಿನ್ನಾಭಿಪ್ರಾಯಗಳನ್ನೂ ಸುಮ್ಮ ಸುಮ್ಮನೆ ಬಿಟ್ಟು ಬಿಡಬೇಕು ಸಕಾರಣವಿಲ್ಲದೆ ಸುಟ್ಟು ಬಿಡಬೇಕು ಎಂದಲ್ಲ. ಹೀಗೆ ಮಾಡಿದರೆ ಅದು ತುಂಬಾ ತಾತ್ಕಾಲಿಕ ಮತ್ತು ಕೃತ್ರಿಮವಾದೀತು.

ಅಭಿಪ್ರಾಯ ಮತ್ತು ಸೈದ್ಧಾಂತಿಕ ಭೇದಗಳು ಇರಲಿ. ಅವುಗಳನ್ನು ಮನಸ್ಸಿನ ಒಂದು ಒಳ ಕೊಣೆಯಲ್ಲಿ ಇಟ್ಟುಕೊಂಡೇ ಗಾಂಧಿ ಎಂಬ ಅಂಗಳದಲ್ಲಿ ಒಟ್ಟು ಸೇರೋಣ. ನಮ್ಮ ನಮ್ಮ ಕಾರ್ಯಕ್ರಮ ನಮಗಿರಲಿ; ಗಾಂಧಿ ಮಾತ್ರ ನಮ್ಮೆಲ್ಲರ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ” ವಾಗಿರಲಿ.

ಆರ್‌ಎಸ್‌ಎಸ್ ಮತ್ತು ಅಂಬೇಡ್ಕರ್ : ಐಡಿಯಾಲಜಿಯ ವಾಸ್ತವೀಕರಣ, ವಾಸ್ತವದ ಆದರ್ಶೀಕರಣ

– ಬಿ.ಶ್ರೀಪಾದ ಭಟ್

ಇತಿಹಾಸವನ್ನು ತಮ್ಮ ಮತೀಯವಾದಿ ಸಿದ್ಧಾಂತಗಳಿಗೆ ಅನುಗುಣವಾಗಿ ಉತ್ಪಾದಿಸುವುದರಲ್ಲಿ ಸಿದ್ಧಹಸ್ತರಾದ ಸಂಘ ಪರಿವಾರ ಮತ್ತು ಮುಖ್ಯವಾಗಿ ಆರೆಸ್ಸೆಸ್ ಇಂದು ಡಾ.ಬಿ.ಆರ್.ಆಂಬೇಡ್ಕರ್ ಅವರನ್ನು appropriation ಮಾಡಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ. ಅಂಬೇಡ್ಕರ್ ’ಘರ್ ವಾಪಸಿ’ ನೀತಿಯನ್ನು ಬೆಂಬಲಿಸಿದ್ದರು ಎನ್ನುವ ಸುಳ್ಳನ್ನು ಉತ್ಪಾದಿಸುತ್ತಿದ್ದಾರೆ. ಗೋಬೆಲ್ಸ್ ತಂತ್ರವನ್ನು ಅನುಸರಿಸುತ್ತಿರುವ ಸಂಘ ಪರಿವಾರ ಸಾವಿರ Young_Ambedkarಸುಳ್ಳುಗಳನ್ನು ಹೇಳುತ್ತಿದೆ. ಅಂಬೇಡ್ಕರ್ ಅವರ ೧೨೫ನೇ ಜನ್ಮ ದಿನದ ಸಂದರ್ಭದಲ್ಲಿ ೨೦೦ ಪುಟಗಳ ಅಂಬೇಡ್ಕರ್ ಕುರಿತಾದ ಕೃತಿಗಳನ್ನು ತನ್ನ ಪ್ರಕಾಶನದ ಮೂಲಕ ಹೊರತರಲು ಆರೆಸ್ಸೆಸ್ ನಿರ್ಧರಿಸಿದೆ. ಈ ಪುಸ್ತಕಗಳಲ್ಲಿ ಅಂಬೇಡ್ಕರ್ ಅವರು ಇಸ್ಲಾಮಿಕ್ ಅಗ್ರೆಶನ್, ಮತಾಂತರ, ಆರ್ಟಿಕಲ್ ೩೭೦ ಗಳ ಕುರಿತಂತೆ ಸಂಘ ಪರಿವಾರದ ಚಿಂತನೆಗಳನ್ನೆ ಹೊಂದಿದ್ದರು ಎಂದು ವಿವರಿಸಲಾಗಿದೆ. ಅವರೊಬ್ಬ ರಾಷ್ಟ್ರೀಯವಾದಿ ಎಂದೇ ಹೇಳುವ ಸಂಘ ಪರಿವಾರದ ಮುಖವಾಣಿ ’ಆರ್ಗನೈಸರ್‌’ನ ಸಂಪಾದಕ ಪ್ರಫುಲ್ಲ ಕೇಟ್ಕರ್ ’ಪಾಕಿಸ್ತಾನದ ಹೈದರಾಬಾದನಲ್ಲಿ ಪರಿಶಿಷ್ಟ ಜಾತಿಯ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಿದಾಗ ಅದನ್ನು ಕಟುವಾಗಿ ಟೀಕಿಸಿದ ಅಂಬೇಡ್ಕರ್ ಮತಾಂತರಗೊಂಡ ಹಿಂದೂಗಳು ಮರಳಿ ತಮ್ಮ ಧರ್ಮಕ್ಕೆ ಬಂದರೆ ತಾವು ಸ್ವಾಗತಿಸುತ್ತೇವೆ ಎಂದು ಹೇಳಿದರು. ಈ ಮೂಲಕ ಅವರು ’ಘರ್ ವಾಪಸಿ’ಯನ್ನು ಬೆಂಬಲಿಸಿದರು’ ಎಂದು ಹೇಳುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾ ’ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪೃಶ್ಯತೆಯಿಂದ ಬಿಡುಗಡೆಗೊಳಿಸಬೇಕಾಗಿದೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಂಬೇಡ್ಕರ್‌ಗೆ ಆದ ಅನ್ಯಾಯವನ್ನು ನಾವು ಸರಿಪಡಿಸುತ್ತೇವೆ’ ಎಂದು ಹೇಳಿದ್ದಾರೆ. narender_modi_rssಮಹಾರಾಷ್ಟ್ರದ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ತಮ್ಮ ಐಡಿಯಾಲಜಿ ಗೋಳ್ವಲ್ಕರ್, ಸಾವರ್ಕರ್ ಹೆಸರನ್ನು ಸ್ಮರಿಸದೆ ತಾನು ಅಂಬೇಡ್ಕರ್ ಮತ್ತು ಜೋತಿಬಾ ಫುಲೆ ಮಾರ್ಗದಲ್ಲಿ ಮುನ್ನಡೆಯುತ್ತೇನೆ ಎಂದು ಹೇಳಿದರು. ಇತ್ತೀಚೆಗೆ ಮುಂದಿನ ಒಂದು ವರ್ಷದ ಕಾಲ ಅಂಬೇಡ್ಕರ್ ಅವರ ಕುರಿತಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದ್ದಾರೆ. ಇಡೀ ಸಂಘ ಪರಿವಾರವೇ ಅಂಬೇಡ್ಕರ್ ಮೂಲಕ ತಳ ಸಮುದಾಯಗಳ ಓಟ್ ಬ್ಯಾಂಕ್‌ಗೆ ಲಗ್ಗೆ ಇಟ್ಟಿದೆ ಎನ್ನುವುದು ಮಾತ್ರ ಇವೆಲ್ಲದರ ಒಟ್ಟು ಸಾರಾಂಶ. ಏಕೆಂದರೆ ದಲಿತರ ಬೆಂಬಲವಿಲ್ಲದೆ ರಾಜಕೀಯ ಅಧಿಕಾರ ಸಾಧ್ಯವಿಲ್ಲ ಎಂದು ಈ ಮತೀಯವಾದಿಗಳಿಗೆ ಅರಿವಾಗಿದೆ.

ಸುಮಾರು ೧೩೦ ವರ್ಷಗಳ ಹಿಂದೆ ಆರ್ಯ ಸಮಾಜ ಪ್ರಾರಂಬಿಸಿದ “ಜಾತ್-ಪಾತ್-ತೋಡಕ್ ಮಂಡಲ್” ಎನ್ನುವ ಒಕ್ಕೂಟ ಮೂಲಭೂತವಾಗಿ ಹಿಂದೂ ಧರ್ಮದಲ್ಲಿ ಸುಧಾರಣೆಯನ್ನು ತರಲು ಬಹುಪಾಲು ಬ್ರಾಹ್ಮಣರು ಕಟ್ಟಿಕೊಂಡ ಒಂದು ಸಂಸ್ಥೆ. ಹಿಂದೂ ಧರ್ಮದ ಜಾತಿ ಪದ್ಧತಿಯಲ್ಲಿ ಸುಧಾರಣೆ ಬಯಸುವ ಈ ಮೇಲ್ಜಾತಿಗಳ ಗುಂಪಿನಲ್ಲಿ ಒಬ್ಬ ದಲಿತನೂ ಸದಸ್ಯನಾಗಿರಲಿಲ್ಲ. ೧೯೩೫ರಲ್ಲಿ ತಮ್ಮ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಅಂಬೇಡ್ಕರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿರುತ್ತಾರೆ. ಮೊದಲು ಈ ಆಹ್ವಾನವನ್ನು ತಿರಸ್ಕರಿಸುವ ಅಂಬೇಡ್ಕರ್ ನಂತರ ತಮ್ಮ ಮಾತುಗಳನ್ನು ಸೆನ್ಸಾರ್ ಮಾಡಕೂಡದು ಎನ್ನುವ ಕರಾರಿನೊಂದಿಗೆ ಸಮ್ಮತಿಸುತ್ತಾರೆ. ತಮ್ಮ ಭಾಷಣದ ಸಾವಿರ ಪ್ರತಿಗಳನ್ನು ಮುದ್ರಿಸಿ “Annihilation of Caste” ತಲೆಬರಹದ ಅಡಿಯಲ್ಲಿ ತಮ್ಮ ಭಾಷಣದ ಪ್ರತಿಯನ್ನು “ಜಾತ್-ಪಾತ್-ತೋಡಕ್ ಮಂಡಲ್”ಗೆ ಕಳುಹಿಸಿಕೊಡುತ್ತಾರೆ. ಆದರೆ ತಮ್ಮ ಈ ಲೇಖನಗಳಲ್ಲಿ ಅಂಬೇಡ್ಕರ್ ಅವರು ಮಂಡಲ್‌ನ ಈ ಸುಧಾರಣ ತಂತ್ರವನ್ನು ನಿರಾಕರಿಸಿ ಇಂಡಿಯಾದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ’ಜಾತಿ ವಿನಾಶ’ ಒಂದೇ ಉಳಿದಿರುವ ಮಾರ್ಗ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಮನುನೀತಿಯನ್ನು, ವರ್ಣಾಶ್ರಮ ಪದ್ಧತಿಯನ್ನು, ಬ್ರಾಹ್ಮಣ್ಯದ ಕುಟಿಲತೆಯನ್ನು ಕಟುವಾಗಿ ಟೀಕಿಸುತ್ತಾರೆ. ಈ ಮಂಡಲ್‌ನ ನೇತೃತ್ವವನ್ನು ವಹಿಸಿರುವ ಬ್ರಾಹ್ಮಣರಿಂದ ಜಾತಿ ಸುಧಾರಣೆ ಸಾಧ್ಯವೆ ಎಂದು ಪ್ರಶ್ನಿಸುವ ಅಂಬೇಡ್ಕರ್, ಬ್ರಾಹ್ಮಣರ ನಾಯಕತ್ವದಲ್ಲಿ ಜಾತಿ ವಿನಾಶ ಸಾಧ್ಯವಿಲ್ಲ ಎಂದು ಎಚ್ಚರಿಸುತ್ತಾರೆ. ’ನಿಮ್ಮಲ್ಲಿ ಸುಧಾರಣವಾದಿ ಬ್ರಾಹ್ಮಣರು ಇರಬಹುದು. ಆದರೆ ಇವರೆಲ್ಲ ಸಂಪ್ರದಾಯವಾದಿ ಬ್ರಾಹ್ಮಣರ ವಿರುದ್ಧ ಸಂಘಟನೆ ನಡೆಸುತ್ತಾರೆ ಎನ್ನುವುದನ್ನು ನಾನಂತೂ ನಂಬುವುದಿಲ್ಲ ಮತ್ತು ಇದು ಸಾಧ್ಯವೂ ಇಲ್ಲ’ ಎಂದು ಅಂಬೇಡ್ಕರ್ ಸ್ಪಷ್ಟ ಮಾತುಗಳಲ್ಲಿ ಮಂಡಲ್‌ನ ಒಕ್ಕೂಟವನ್ನು ಉದ್ದೇಶಿಸಿ ಹೇಳುತ್ತಾರೆ. ಅಂಬೇಡ್ಕರ್ ಅವರ ನೇರವಾದ, ಸತ್ಯನಿಷ್ಠ ಮಾತುಗಳಿಂದ ಹಿಂಜರಿದ ಬ್ರಾಹ್ಮಣರ ನೇತೃತ್ವದ ಜಾತ್-ಪಾತ್-ತೋಡಕ್ ಮಂಡಲ್ ಕೊನೆಗೂ ಆ ಸಮ್ಮೇಳವನ್ನು ನಡೆಸುವುದೇ ಇಲ್ಲ. ಅಂಬೇಡ್ಕರ್ ಅವರು ತಮ್ಮ ಭಾಷಣದ ಪ್ರತಿಯನ್ನು “Annihilation of Caste” ಹೆಸರಿನಲ್ಲಿ ಪುಸ್ತಕರೂಪದಲ್ಲಿ ಮುದ್ರಿಸುತ್ತಾರೆ.

ಹಿಂದೂ ಧರ್ಮದಲ್ಲಿನ ಜಾತಿ ವಿನಾಶವು ಅದರ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಿರುವ ಮೇಲ್ಜಾತಿಗಳ ಜವಾಬ್ದಾರಿ ಎನ್ನುವುದು ಅಂಬೇಡ್ಕರ್ ಮತ್ತು ಪುಸ್ತಕದ ಒಟ್ಟಾರೆ ಆಶಯವಾಗಿತ್ತು. ಸಾವಿರಾರು ವರ್ಷಗಳಿಂದ ದೌರ್ಜನ್ಯ ನಡೆಸುತ್ತಾ ಬಂದಿರುವ ಮೇಲ್ಜಾತಿಗಳು ಸ್ವತಃ ತಾವೇ ಈ ಜಾತಿ ಪದ್ಧತಿಯನ್ನು ಕೊನೆಗೊಳಿಸಬೇಕು ಎಂದು ಅಂಬೇಡ್ಕರ್ ಚಿಂತನೆಗಳು ಆಶಿಸುತ್ತವೆ. ಆದರೆ ೧೯೩೬ರಿಂದ ಇಂದಿನವರೆಗೂ ಜಾತಿ ವಿನಾಶದ ಕುರಿತಾಗಿ ಮೇಲ್ಜಾತಿಗಳಲ್ಲಿ ಯಾವುದೇ ಬಗೆಯ ಹೊಸ ಚಿಂತನೆಗಳು ಕಂಡು ಬರುತ್ತಿಲ್ಲ. ಜಾತಿ ವಿನಾಶಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ಮೇಲ್ಜಾತಿಯ ಸಮಾಜ ಸಂಪ್ರದಾಯಸ್ಥರ ಮೂಲಕ ನೇರವಾಗಿ ಮತ್ತು ಸುಧಾರಣವಾದಿಗಳ ಮೂಲಕ ಪರೋಕ್ಷವಾಗಿ ಜಾತಿ ಪದ್ಧತಿಯನ್ನು ಪೋಷಿಸುತ್ತಿದೆ. ಬ್ರಾಹ್ಮಣರಿಂದ ಮೊದಲುಗೊಂಡು ಮುಟ್ಟಿಸಿಕೊಳ್ಳುವ ಎಲ್ಲಾ ಜಾತಿಗಳಲ್ಲಿಯೂ ಬ್ರಾಹ್ಮಣ್ಯದ ಜಾತೀಯತೆ ಮತ್ತು ಸನಾತನವಾದವು ಬೆರೆತು ಹೋಗಿದೆ. ಮೇಲ್ಜಾತಿಯ ಸಂಪ್ರದಾಯನಿಷ್ಠರು ಮತ್ತು ಸುಧಾರಣವಾದಿಗಳು ತಮ್ಮ ಜಾತಿ ಐಡೆಂಟಿಟಿಯನ್ನು ಕಳಚಿಕೊಳ್ಳಲು ವಿಫಲರಾಗಿದ್ದಾರೆ. ಇದು ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾದದ್ದು. ಜಾತಿ ಐಡೆಂಟಿಟಿಯಿಂದ ಸಂಪೂರ್ಣವಾಗಿ ಹೊರಬರದೆ, ಜಾತಿ ವಿನಾಶದ ಪರಿಕಲ್ಪನೆಗೆ ಹೆಗಲು ಕೊಡದೆ ಅಂಬೇಡ್ಕರ್ ಲೆಗಸಿಯ ಉತ್ತರದಾಯಿತ್ವವನ್ನು ಹೆಗಲಗೇರಿಸಿಕೊಳ್ಳುವುದು ಕೇವಲ ಆತ್ಮವಂಚನೆ ಎನಿಕೊಳ್ಳುತ್ತದೆ. ಇವರ ಈ ಮರೆ ಮೋಸದ ಫಲವಾಗಿ ತಳ ಸಮುದಾಯಗಳು ಈ ಸುಧಾರಣವಾದಿಗಳಿಂದಲೂ ಮತ್ತಷ್ಟು ಅಂತರ ಕಾಯ್ದುಕೊಳ್ಳುತ್ತಾ ಹೊಸ ಸಾಮಾಜಿಕ-ರಾಜಕೀಯ ಪಲ್ಲಟಗಳಿಗಾಗಿ ಸಂಘಟಿತರಾಗುತ್ತಿದ್ದಾರೆ. ಆದರೆ ಸುಧಾರಣಾವಾದಿಗಳನ್ನು ಹೊರತುಪಡಿಸಿ ಹಿಂದೂ ಧರ್ಮದ ಅಡಿಯಲ್ಲಿ ರಾಜಕೀಯವಾಗಿ ಒಂದಾಗುವ ಈ ಸಂಪ್ರದಾಯನಿಷ್ಠ ಜಾತಿ ಸಮೂಹಗಳು ಇಂದು ಬಿಜೆಪಿ ಮತ್ತು ಆರೆಸ್ಸೆಸ್‌ನ ಶಕ್ತಿಕೇಂದ್ರಗಳಾಗಿವೆ. ಈ ಜಾತಿಸಂಘಟನೆಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡಿರುವ ಬಿಜೆಪಿ ಪಕ್ಷ ತಳ ಸಮುದಾಯಗಳನ್ನು ಸೆಳೆಯಲು ಮುಂದಾಗಿದೆ. ಅದಕ್ಕೆ ಸಂಘ ಪರಿವಾರ ಬಳಸಿಕೊಳ್ಳುತ್ತಿರುವುದು ಅಂಬೇಡ್ಕರ್ ಅವರ ಲೆಗಸಿಯನ್ನು. ಆದರೆ ಅಂಬೇಡ್ಕರ್ ಅವರ ಎಲ್ಲಾ ಹೋರಾಟಗಳು, ಸಂಘಟನೆಗಳು, ಚಿಂತನೆಗಳು ಸಂಪೂರ್ಣವಾಗಿ ಹಿಂದೂ ಧರ್ಮದ ವಿರುದ್ಧವಾಗಿತ್ತು. ಅಂಬೇಡ್ಕರ ಅವರ ಬರಹಗಳು, ಭಾಷಣಗಳಲ್ಲಿ ಇದು ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ.

ಆದರೆ ಮೂವತ್ತು ಮತ್ತು ನಲವತ್ತರ ದಶಕಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಮತ್ತು ಮುಸ್ಲಿಂ ಲೀಗ್‌ನ ಮತೀಯವಾದಿ ರಾಜಕಾರಣವನ್ನು ತೀವ್ರವಾಗಿ ಖಂಡಿಸಿದ್ದರು. ೧೯೪೦ರಲ್ಲಿ ಅಂಬೇಡ್ಕರ್ ಅವರು ಬರೆದ “ಪಾಕಿಸ್ತಾನ ಅಥವಾ ವಿಭಜನೆಗೊಂಡ ಇಂಡಿಯಾ” ಪುಸ್ತಕದಲ್ಲಿ ಎಲ್ಲಾ ಮಾದರಿಯ ಮೂಲಭೂತವಾದಿಗಳನ್ನು, ಕೋಮುವಾದಿ ಶಕ್ತಿಗಳನ್ನು ವಿರೋಧಿಸಿದ್ದರು ಮತ್ತು ಕಟುವಾದ ಶಬ್ದಗಳಿಂದ ಟೀಕಿಸಿದ್ದರು. ಆ ಪುಸ್ತಕದಿಂದ ಆಯ್ದ ಭಾಗಗಳು:

“ಒಂದು ವೇಳೆ ಹಿಂದೂ ರಾಜ್ ಎನ್ನುವ ತತ್ವವು ಜಾರಿಗೊಂಡರೆ, ನಿಜಕ್ಕೂ ಅದು ಈ ದೇಶದ ಬಲು ದೊಡ್ಡ ದುರ್ಘಟನೆ ಎಂದೇ ನಾನು ಭಾವಿಸುತ್ತೇನೆ. ಇದರಲ್ಲಿ ಸಂಶಯವಿಲ್ಲ. ಇದು ದುರಹಂಕಾರದ ಚಿಂತನೆಗಳು. ಈ ಕುರಿತಾಗಿ ಹಿಂದೂಗಳು ಏನೇ ಹೇಳಿಕೊಂಡರೂ ಸ್ವಾತಂತ್ರ, ಸಮಾನತೆಗೆ ಹಿಂದೂಯಿಸಂ ಒಂದು ವಿಪತ್ತು. ಈ ಹಿನ್ನೆಲೆಯಲ್ಲಿ ಈ ಮಾದರಿಯ ಚಿಂತನೆಗಳಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರ್ಹತೆ ಇಲ್ಲ. ಹಿಂದೂ ರಾಜ್ ಅನ್ನು ನಾವು ಯಾವುದೇ ಬೆಲೆ ತೆತ್ತಾದರೂ ಸರಿ, ತಡೆಯಬೇಕಾಗಿದೆ.

“ಮೇಲ್ಜಾತಿ ಹಿಂದೂಗಳು ಹಿಂದುತ್ವದ ಹೆಸರಿನಲ್ಲಿ ಸ್ವತಃ ಹಿಂದೂಗಳನ್ನು ನಾಶಮಾಡುವಂತಹ ವಿಶೇಷ ಗುಣಲಕ್ಷಣಗಳನ್ನು ಅವರು ಹೊಂದಿದ್ದಾರೆ. ಸಂಪತ್ತು ಮತ್ತು ಶಿಕ್ಷಣದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಿದ ಈ ಮೇಲ್ಜಾತಿ ಹಿಂದೂಗಳಿಗೆ ಈ ಏಕಸ್ವಾಮ್ಯತೆಯನ್ನು ಮುಂದುವರೆಸಿಕೊಂಡು ಹೋಗುವುದು ಅವರ ಮುಖ್ಯ ಗುರಿಯಾಗಿತ್ತು. ತಮ್ಮ ಈ ಸ್ವಾರ್ಥದ ಗುಣದಿಂದಾಗಿ ತಳ ಸಮುದಾಯಗಳಿಗೆ ಶಿಕ್ಷಣ ಮತ್ತು ಆರ್ಥಿಕ ಸುಭದ್ರತೆಯಂದ ವಂಚನೆಗೊಳಿಸಿದರು. ತಳಸಮುದಾಯಗಳೊಂದಿಗೆ ಬೆಳೆಸಿದ ಪ್ರತ್ಯೇಕತೆ ಮತ್ತು ತಾರತಮ್ಯ ತತ್ವವನ್ನು ಈ ಮೇಲ್ಜಾತಿ ಹಿಂದೂಗಳು ಮುಸ್ಲಿಂ ಸಮುದಾಯಕ್ಕೂ ವಿಸ್ತರಿಸುತ್ತಿದ್ದಾರೆ. ಇವರು ಮುಸ್ಲಿಂರನ್ನು ಸಹ ಶಿಕ್ಷಣ ಮತ್ತು ಸಂಪತ್ತಿನಿಂದ ದೂರವಿಡಲು ಬಯಸುತ್ತಿದ್ದಾರೆ.

“ಮೇಲ್ನೋಟಕ್ಕೆ ಆಶ್ಚರ್ಯವೆನಿಸಿದರೂ ಸಾವರ್ಕರ್ ಮತ್ತು ಜಿನ್ನಾ ಒಂದು ರಾಷ್ಟ್ರ ವರ್ಸಸ್ ದ್ವಿರಾಷ್ಟ್ರದ ತತ್ವದ ವಿರುದ್ಧ ಪರಸ್ಪರ ವಿರೋಧಿಸುವುದರ ಬದಲು ಇಬ್ಬರೂ ಅದರ ಕುರಿತಾಗಿ ಸಮ್ಮತದಿಂದಿದ್ದಾರೆ. ಅಲ್ಲದೆ ಒಂದು ಮುಸ್ಲಿಂ ರಾಷ್ಟ್ರ ಮತ್ತು ಇನ್ನೊಂದು ಹಿಂದೂ ರಾಷ್ಟ್ರ ಎಂದು ಒಪ್ಪಿಕೊಂಡಿದ್ದಾರೆ.

“ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ನೀತಿಯ ಆಧಾರದಲ್ಲಿ ಸಮಾನಮನಸ್ಕ ಸಮ್ಮಿಶ್ರ ರಾಜಕೀಯ ಪಕ್ಷಗಳು ಧೃವೀಕರಣಗೊಳ್ಳಬೇಕಾಗಿದೆ. ಈ ಮೂಲಕ ಈ ಹಿಂದೂ ರಾಜ್ ಮತ್ತು ಮುಸ್ಲಿಂ ರಾಜ್ ತತ್ವಗಳಿಗೆ ಅಂತ್ಯ ಹೇಳಬೇಕಾಗಿದೆ.ಇಂಡಿಯಾದಲ್ಲಿ ತಳ ಸಮುದಾಯಗಳು ಮತ್ತು ಮುಸ್ಲಿಂ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಒಂದೇ ಆಗಿರುವುದರಿಂದ ತಮ್ಮನ್ನು ಶತಮಾನಗಳ ಕಾಲ ಅವಕಾಶವಂಚಿತರಾಗಿ ಮಾಡಿದ ಈ ಮೇಲ್ಜಾತಿ ಹಿಂದೂಗಳ ವಿರುದ್ಧ ಒಂದಾಗಬೇಕಿದೆ.”

ಹಿಂದೂಗಳ ಕುರಿತಾಗಿ ಅಂಬೇಡ್ಕರ್ ಅವರು “Annhilation of CVaste” ಪುಸ್ತಕದಲ್ಲಿ ಬರೆದ ಕೆಲವು ಭಾಗಗಳು:

“ಹಿಂದೂಗಳು ತಮ್ಮನ್ನು ತಾವು ಸಹನಾಶೀಲರೆಂದು ಕೊಚ್ಚಿಕೊಳ್ಳುತ್ತಾರೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು ಗ್ರಹಿಕೆ. ಬಹುತೇಕ ಸಂದರ್ಭಗಳಲ್ಲಿ ಅಸಹನೀಯ ಮತ್ತು ಉದ್ರೇಕಿತರಾಗಿ ವರ್ತಿಸುವ ಹಿಂದೂಗಳು ತಾವು ಬಲಹೀನರಾಗಿದ್ದಾಗ ಮಾತ್ರ ಸೈರಣೆಯಿಂದ ವರ್ತಿಸುತ್ತಾರೆ. ಹಿಂದೂಗಳು ಮುಸ್ಲಿಂರು ತಮ್ಮ ಧರ್ಮವನ್ನು ವಿಸ್ತರಿಸಿದ್ದಕ್ಕಾಗಿ ಅವರನ್ನು ಟೀಕಿಸುತ್ತಾರೆ. ಇದಕ್ಕಾಗಿ ಖಡ್ಗವನ್ನು ಬಳಸಿದ್ದಾರೆಂದು ಮುಸ್ಲಿಂರನ್ನು ದೂರುತ್ತಾರೆ. ಇದೇ ಮಾದರಿಯಲ್ಲಿ ಕ್ರಿಶ್ಚಿಯನ್ನರನ್ನು ದೂರುತ್ತಾರೆ. ಹಿಂದೂ ಆದವನು ಬೆಳಕನ್ನು ಕೊಡದಿದ್ದರೆ, ಬೇರೆಯವರನ್ನು ಶಾಶ್ವತವಾಗಿ ಕತ್ತಲಲ್ಲಿಟ್ಟರೆ, ತನ್ನ ಜ್ಞಾನವನ್ನು ಹಂಚಿಕೊಳ್ಳದಿದ್ದರೆ ಮುಸ್ಲಿಂ ಅವರ ಕುತ್ತಿಗೆಯನ್ನು ಹಿಡಿದಿದ್ದರಲ್ಲಿ ನನಗೆ ತಪ್ಪೇನು ಕಾಣುತ್ತಿಲ್ಲ. ಏಕೆಂದರೆ ಹಿಂದೂವಿನ ಈ ಸಂಕುಚಿತ ಮನೋಭಾವ ಮತ್ತು ಬೌದ್ಧಿಕ ಸರ್ವಾಧಿಕಾರ ಮುಸ್ಲಿಂನ ದಾಳಿಗಿಂತಲೂ ಕ್ರೂರವೆಂದು ನಾನು ನಂಬಿದ್ದೇನೆ.

“ಸಮಾಜ ಶಾಸ್ತ್ರಜ್ಞರು ಹಿಂದೂಗಳನ್ನು ’ಕರುಣೆಯ ಪ್ರಜ್ಞಾರೂಪ’ ಎಂದು ಕರೆಯುತ್ತಾರೆ. ಆದರೆ ಇದನ್ನು ತಿರಸ್ಕರಿಸುತ್ತೇನೆ. ಹಿಂದೂನಲ್ಲಿ ಕರುಣೆಯ ಪ್ರಜ್ಞೆ ಇಲ್ಲ. ಪ್ರತಿಯೊಬ್ಬ ಹಿಂದೂವಿನಲ್ಲಿರುವುದು ಜಾತಿಯ ಪ್ರಜ್ಞೆ. ಈ ಕಾರಣಕ್ಕಾಗಿಯೇ ಹಿಂದೂಗಳನ್ನು ಸಮಾಜ ಅಥವಾ ದೇಶವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಿಂದೂ ಸಮಾಜವು ಒಂದು ಮಿಥ್ಯೆ ಎಂದು ನಾನು ಖಚಿತವಾಗಿ ನಂಬಿದ್ದೇನೆ. ಹಿಂದೂ ಎನ್ನುವ ಪದವೇ ವಿದೇಶಿ ಮೂಲದ್ದು. ಸ್ಥಳೀಯರನ್ನು ಗುರುತಿಸಲು ಮುಸ್ಲಿಂರು ಕೊಟ್ಟ ಪದ. ಮುಸ್ಲಿಂ ಸಾಮ್ರಾಜ್ಯಕ್ಕಿಂತಲೂ ಮೊದಲು ಸಂಸ್ಕೃತ ಪಠ್ಯಗಳಲ್ಲಿ ಈ ಪದಬಳಕೆ ಇಲ್ಲ. ಹಿಂದೂ ಸಮಾಜ ಎನ್ನುವುದೇ ಆಸ್ತಿತ್ವದಲ್ಲಿ ಇಲ್ಲ. ಇದು ಜಾತಿಗಳ ಒಂದು ಗುಂಪು ಅಷ್ಟೇ. ಪ್ರತಿಯೊಂದು ಜಾತಿಗೂ ಅದರ ಕುರಿತಾದ ಪ್ರಜ್ಞೆ ಜಾಗೃತವಾಗಿರುತ್ತದೆ.

“ಇಂದು ಧರ್ಮವೆಂದು ಕರೆಯಲ್ಪಡುವ ಹಿಂದೂ ಧರ್ಮ ಕೇವಲ ಪ್ರತಿಬಂಧನೆಗಳ, ನಿಷೇಧಗಳ, ಆಜ್ಞೆಗಳ ಒಂದು ಗೂಡು.”

ಅಂಬೇಡ್ಕರ್ ಅವರು ಬರೆದ “ಹಿಂದೂಯಿಸಂನ ಫಿಲಾಸಫಿ, ಇಂಡಿಯಾ ಮತ್ತು ಕಮ್ಯುನಿಸಂನ ಪೂರ್ವ ಕರಾರುಗಳು. ಕ್ರಾಂತಿ ಮತ್ತು ಪ್ರತಿ ಕ್ರಾಂತಿ, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್” ಪುಸ್ತಕದಿಂದ ಆಯ್ದ ಭಾಗಗಳು (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ೩ನೇ ಸಂಪುಟ):

“ಆದರೆ ನನ್ನ ಮೂಲಭೂತ ಪ್ರಶ್ನೆ ಏನೆಂದರೆ ಹಿಂದೂಗಳು ಬದುಕಿನ ಸುಖ ಮತ್ತು ದುಖಗಳನ್ನು ಹಂಚಿಕೊಳ್ಳಲು ಏಕೆ ನಿರಾಕರಿಸುತ್ತಾರೆ? ಇದಕ್ಕೆ ಉತ್ತರವೂ ಸಹ ಸರಳ ಮತ್ತು ಸ್ಪಷ್ಟ. ಹಿಂದೂಗಳು ಹಂಚಿಕೊಳ್ಳಲು ನಿರಾಕರಿಸುತ್ತಾರೆ ಏಕೆಂದರೆ ಅವರ ಧರ್ಮವು ಹಂಚಿಕೊಳ್ಳಬಾರದೆಂದು ಬೋಧಿಸುತ್ತದೆ. ಹಾಗಿದ್ದರೆ ಹಿಂದೂಯಿಸಂ ಏನನ್ನು ಬೋಧಿಸುತ್ತದೆ? ಅದು ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡಬಾರದು, ಅಂತರ್ಜಾತಿ ವಿವಾಹ ಆಗಬಾರದು, ಗೆಳೆತನ ಬೆಳೆಸಬಾರದು ಇಂತಹ ತತ್ವಗಳನ್ನು ಬೋಧಿಸುತ್ತದೆ. ಭ್ರಾತೃತ್ವದ ನೇರವಾದ ನಿರಾಕರಣೆಯೇ ಹಿಂದೂಯಿಸಂನ ಫಿಲಾಸಫಿ.

“ಸಾಮಾಜಿಕ ನ್ಯಾಯದ ನೆಲೆಯಿಂದ ಹಿಂದೂಯಿಸಂ ಫಿಲಾಸಫಿಯನ್ನು ಅಧ್ಯಯನ ಮಾಡಿದಾಗ ಅದು ಸಮಾನತೆಯ ದ್ವೇಷ, ಸ್ವಾತಂತ್ರದ ಪ್ರತಿರೋಧಿ, ಭ್ರಾತೃತ್ವದ ವಿರೋಧಿ ತತ್ವಗಳನ್ನು ಬೋಧಿಸುತ್ತದೆ.

“ಸಮಾನತೆ ಮತ್ತು ಮಾನವ ಘನತೆಯ ಗೌರವಗಳಿಗೆ ಭ್ರಾತೃತ್ವ ಮತ್ತು ಲಿಬರ್ಟಿ ತತ್ವಗಳು ಅಡಿಪಾಯಗಳು. ಮೂಲ ಬೇರುಗಳು. ಸಮಾನತೆಯನ್ನು ನಿರಾಕರಿಸಿದರೆ ಬಾಕಿ ಎಲ್ಲಾ ತತ್ವಗಳನ್ನೂ ನಿರಾಕರಿಸಿದಂತೆ. ನನಗೆ ಸಂಪೂರ್ಣ ಮನವರಿಕೆ ಆದಂತೆ ಹಿಂದೂಯಿಸಂನಲ್ಲಿ ಸಮಾನತೆ ಇಲ್ಲ.

“ಹಿಂದೂಯಿಸಂನಲ್ಲಿ ಅಸಮಾನತೆ ಎನ್ನುವುದು ಧಾರ್ಮಿಕ ಸಿದ್ಧಾಂತ ಮತ್ತು ಇದನ್ನು ಅತ್ಯಂತ ಪಾವಿತ್ರ ಎಂದು ಬೋಧಿಸಲಾಗುತ್ತದೆ ಮತ್ತು ಪ್ರಜ್ಞಾಪೂರ್ವಕವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಸಮಾನತೆ ಎನ್ನುವುದು ಹಿಂದೂಗಳ ಜೀವನ ಕ್ರಮ. ಅಸಮಾನತೆ ಹಿಂದೂಯಿಸಂನ ಆತ್ಮ.

“ಜಾತಿ ಎನ್ನುವ ಆದರ್ಶ ಮತ್ತು ಕೇವಲ ಆದರ್ಶ ಮಾತ್ರವಲ್ಲ. ಜಾತಿಯನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಜರ್ಮನ್ ಫಿಲಾಸಫರ್ ನೀಟ್ಸೆ ಹೇಳಿದಂತೆ ’ಆದರ್ಶವನ್ನು ವಾಸ್ತವೀಕರಿಸು ಮತ್ತು ವಾಸ್ತವವನ್ನು ಆದರ್ಶೀಕರಿಸು’ ಎನ್ನುವ ನೀತಿಯನ್ನು ಚಾತುವರ್ಣದ ಜಾತಿಪದ್ಧತಿಯಲ್ಲಿ ಹಿಂದೂಗಳು ಶ್ರದ್ಧೆಯಿಂದ ಆದರಿಸುತ್ತಾರೆ ಮತ್ತು ಪಾಲಿಸುತ್ತಾರೆ

“ಆದರೆ ಹಿಂದೂಯಿಸಂನ ಈ ಆದರ್ಶದ ಮೌಲ್ಯವನ್ನು ಅದರ ಪರಿಣಾಮಗಳನ್ನು ವಿಮರ್ಶಿಸುವುದರ ಮೂಲಕ ಪರೀಕ್ಷಿಸಬೇಕು. ಪರಿಶುದ್ಧವಾದ ಸಾಮಾಜಿಕ ಹಿನ್ನೆಲೆಯಲ್ಲಿ ಈ ಚಾತುವರ್ಣ ಜಾತಿಪದ್ಧತಿಯನ್ನು ಖಂಡಿಸಬೇಕು. ಉತ್ಪಾದಕರ ಸಂಸ್ಥೆಯಾಗಿ ಅದರ ನಿಲುವುಗಳ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಬೇಕು. ಈ ಚಾತುವರ್ಣ ಜಾತಿ ಪದ್ಧತಿಯು ಸಮಾನ ಹಂಚಿಕೆ ಎನ್ನುವ ಆದರ್ಶದ ನೆಲೆಯಲ್ಲಿ ಸಂಪೂರ್ಣವಾಗಿ ಸೋತಿದೆ. ಒಂದು ವೇಳೆ ಈ ಹಿಂದೂಯಿಸಂ ಒಂದು ಆದರ್ಶ ಸಂಸ್ಥೆ ಎನ್ನುವುದಾದರೆ ಅದು ಸಾಮಾನ್ಯ ಪ್ಲಾಟ್‌ಫಾಮ್ ಅನ್ನು ಕಟ್ಟಲು ಅಸಮರ್ಥವಾಗಿರುವುದೇಕೆ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಈ ಹಿಂದೂಯಿಸಂ ಉತ್ಪಾದನೆಯ ನೆಲೆಯ ಆದರ್ಶ ಎನ್ನುವುದಾದರೆ ಅದರ ತಂತ್ರಜ್ಞಾನವು ಆದಿಮಾನವನ ಕಾಲದಿಂದ ಯಾತಕ್ಕೆ ಹೊರಬಂದಿಲ್ಲ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಇದು ಹಂಚಿಕೆಯ ನೆಲೆಯಲ್ಲಿ ಆದರ್ಶ ಎನ್ನುವುದಾದರೆ ಅದು ಹೇಗೆ ಸಂಪತ್ತಿನ ಅಸಮಾನ ಕ್ರೋಢೀಕರಣ ಮತ್ತು ಶ್ರೀಮಂತ ಮತ್ತು ಬಡವರ ನಡುವೆ ಅಗಾಧ ಕಂದಕ ಸೃಷ್ಟಿಸಿತು ಎನ್ನುವುದಕ್ಕೆ ಉತ್ತರಿಸಬೇಕು.

“ಜಾತಿ ಪದ್ಧತಿಯ ವ್ಯವಸ್ಥೆಗೆ ಅಪಾರವಾದ ಮೌಲಿಕತೆಯನ್ನು, ಮಹತ್ವವನ್ನು ಪ್ರತಿಪಾದಿಸುವ ಬಹುಪಾಲು ಹಿಂದೂಗಳು ಈ ಜಾತಿ ಪದ್ಧತಿಗೆ ಧಾರ್ಮಿಕ ಚೌಕಟ್ಟನ್ನು ವಿಧಿಸಿದ ಮನುವನ್ನು ಪ್ರಶಂಸಿಸುತ್ತಾರೆ.

“ಸಮಾಜವನ್ನು ತುಂಡು ತುಂಡಾಗಿ ವಿಭಜಿಸುವ, ಕೂಲಿ ಕಾರ್ಮಿಕನಿಂದ ಜ್ಞಾನದ ಕೊಂಡಿಯನ್ನು ಕತ್ತರಿಸಿ ಪ್ರತ್ಯೇಕಿಸುವ ಈ ಹಿಂದೂಯಿಸಂ ಫಿಲಾಸಫಿಯನ್ನು ಸಾಮಾಜಿಕ ಉಪಯುಕ್ತತೆಗೆ ಪೂರಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.ಈ ಹಿಂದೂಯಿಸಂ ಫಿಲಾಸಫಿ ಸಾಮಾಜಿಕ ಉಪಯುಕ್ತತೆಯ ಅಗತ್ಯವನ್ನು ಮತ್ತು ವೈಯಕ್ತಿಕ ನೆಲೆಯ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ತಿರಸ್ಕರಿಸುತ್ತದೆ.”

೧೯೩೪ರಲ್ಲಿ ಯೆರವಾಡ ಜೈಲಿನಲ್ಲಿರುವ ಸಂದರ್ಭದಲ್ಲಿ ಗಾಂಧೀಜಿಯವರು ಸುಬ್ರಮಣ್ಯನ್ ಅವರ ದೇವಸ್ಥಾನ ಪ್ರವೇಶ ಮಸೂದೆಗೆ ಬೆಂಬಲ ಸೂಚಿಸುವಂತೆ ಅಂಬೇಡ್ಕರ್ ಅವರನ್ನು ಕೇಳಿಕೊಳ್ಳುತ್ತಾರೆ. ಆದರೆ ವೈಯಕ್ತಿಕ ನೆಲೆಯಲ್ಲಿ ಈ ಕೋರಿಕೆಯನ್ನು ತಿರಸ್ಕರಿಸುವ ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ಕಾನೂಬಾಹಿರ ಎಂದು ಘೋಷಿಸುವುದನ್ನು ಬಿಟ್ಟು ಕೇವಲ ದೇವಸ್ಥಾನ ಪ್ರವೇಶವನ್ನು ಕೈಗೆತ್ತಿಕೊಂಡಿರುವುದು ಪ್ರಾಯೋಗಿಕವಲ್ಲ ಎಂದು ಟೀಕಿಸುತ್ತಾರೆ. ನಂತರ ಗಾಂಧಿಯವರಿಗೆ ಒಂದು ಪತ್ರವನ್ನು ಸಹ ಬರೆಯುತ್ತಾರೆ. ಅದರ ಒಂದು ಭಾಗ ಹೀಗಿದೆ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಕೆಲಕಾಲದ ಹಿಂದೆ ಇಂಡಿಯಾದಲ್ಲಿ ಯುರೋಪಿಯನ್ನರ ಕ್ಲಬ್‌ಗಳು, ಸಾಮಾಜಿಕ ಮನರಂಜನ ಕೂಟಗಳ ಹೊರ ಬಾಗಿಲಲ್ಲಿ ’ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎನ್ನುವ ಫಲಕ ನೇತಾಡುತ್ತಿತ್ತು. ಇಂದಿನ ದಿನಗಳಲ್ಲಿ ಹಿಂದೂ ದೇವಸ್ಥಾನಗಳ ಬಾಗಿಲಲ್ಲಿ ಇದೇ ಮಾದರಿಯ ಫಲಕಗಳು ನೇತಾಡುತ್ತಿರುತ್ತವೆ. ಆದರೆ ಒಂದು ಬದಲಾವಣೆ ಇರುತ್ತದೆ ಮತ್ತು ಆ ಫಲಕ ಹೀಗಿರುತ್ತದೆ: ’ಅಸ್ಪೃಶ್ಯರನ್ನು ಹೊರತುಪಡಿಸಿ ಎಲ್ಲಾ ಹಿಂದೂಗಳು ಮತ್ತು ಪ್ರಾಣಿಗಳಿಗೆ ದೇವಸ್ಥಾನದಲ್ಲಿ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ.’ ಮೇಲಿನ ಎರಡೂ ಉದಾಹರಣೆಗಳಲ್ಲಿ ಸಂದರ್ಭದ ವಿಷಯದಲ್ಲಿ ಸಾಮ್ಯತೆ ಇದೆ. ಆದರೆ ಯುರೋಪಿಯನ್ನರ ಎದುರು ಹಿಂದೂಗಳು ತಮಗೆ ಕ್ಲಬ್‌ಗಳಲ್ಲಿ ಪ್ರವೇಶ ಕೊಡಿರೆಂದು ಬಿಕ್ಷೆ ಬೇಡಿರಲಿಲ್ಲ, ಹಾಗಿದ್ದ ಪಕ್ಷದಲ್ಲಿ ಅಸ್ಪೃಶ್ಯರೇಕೆ ದುರಹಂಕಾರದ ಹಿಂದೂಗಳ ಮುಂದೆ ದೇವಸ್ಥಾನ ಪ್ರವೇಶಕ್ಕೆ ಬಿಕ್ಷೆ ಬೇಡಬೇಕು? ಶಿಕ್ಷಣ, ಉನ್ನತ ಉದ್ಯೋಗ, ಉತ್ತಮ ಬದುಕಿಗಾಗಿ ದಲಿತ ಸಮುದಾಯದ ವ್ಯಕ್ತಿ ಆಶಿಸುತ್ತಾನೆ. ದಲಿತ ವ್ಯಕ್ತಿಯು ಹಿಂದೂಗಳಿಗೆ ನಿಮ್ಮ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಕೊಡುತ್ತೀರೋ, ಇಲ್ಲವೋ ಎನ್ನುವುದು ನಿಮಗೆ ಸಂಬಂಧಪಟ್ಟ ವಿಷಯ. ಇದು ನನಗೆ ಪ್ರತಿಭಟನೆಯ ಸಂಗತಿಯಲ್ಲ. ನಿಮಗೆ ಜ್ಞಾನೋದಯವಾಗಿ ಪ್ರಜ್ಞಾವಂತರಾದರೆ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಅಮಾನವೀಯ ಎಂದು ಮನವರಿಕೆಯಾದಲ್ಲಿ ನಮಗೆ ಪ್ರವೇಶ ಕೊಡಿ. ಆದರೆ ನೀವು ಕೇವಲ ಹಿಂದೂ ಮಾತ್ರ, ಪ್ರಜ್ಞಾವಂತನಲ್ಲ ಎನ್ನುವುದಾದರೆ ನಿಮ್ಮ ದೇವಸ್ಥಾನದ ಬಾಗಿಲುಗಳನ್ನು ಶಾಶ್ವತಾಗಿ ಮುಚ್ಚಿಕೊಳ್ಳಿ. ನಾನು ಇದಕ್ಕೆ ತಲೆ ಕೆಡಿಸಿಕೊಳ್ಳಲಾರೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾನೆ.”

೧೯೩೦ರಲ್ಲಿ ಅಂಬೇಡ್ಕರ್ ನೇತೃತ್ವದಲ್ಲಿ ಕಲಾರಾಮ್ ದೇವಸ್ಥಾನ ಪ್ರವೇಶದ ಸತ್ಯಾಗ್ರಹಕ್ಕೆ ಸಿದ್ಧತೆಗಳು ಪ್ರಾರಂಭಗೊಂಡಿರುತ್ತವೆ. ಅದರ ಉದ್ಘಾಟನ ಭಾಷಣ ಮಾಡುವ ಅಂಬೇಡ್ಕರ್ ನಂತರ ಸತ್ಯಾಗ್ರಹವನ್ನು ವಿರೋಧಿಸಿ ಇದಕ್ಕೆ ಸಂಬಂಧಪಟ್ಟಂತೆ ೩ ಮಾರ್ಚ್, ೧೯೩೪ರಂದು ಬಾಬುರಾವ್ ಗಾಯಕವಾಡರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಅದರ ಒಂದು ಭಾಗ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಬರುವ ರಾಮನವಮಿಯ ದಿನದಂದು ನಾಸಿಕ್‌ನ ಕಲರಾಮ ದೇವಸ್ಥಾನ ಪ್ರವೇಶ ಕುರಿತಂತೆ ಸತ್ಯಾಗ್ರಹದ ಕುರಿತಾಗಿ ನೀವು ನನ್ನ ಅಭಿಪ್ರಾಯವನ್ನು ಕೇಳಿದ್ದೀರಿ. ನನ್ನ ಅಭಿಪ್ರಾಯದಲ್ಲಿ ಇದು ಬೇಕೆ, ಬೇಡವೇ, ಸಾಧುವೇ ಎಂದು ಚರ್ಚಿಸುವುದಕ್ಕಿಂತಲೂ ಈ ಸತ್ಯಾಗ್ರಹವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳಿತು. ಆದರೆ ಈ ಸತ್ಯಾಗ್ರಹದ ನೇತೃತ್ವ ವಹಿಸಿದವನಿಂದ ಈ ಮಾತುಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ಹಿಂಜರಿಕೆಯಿಂದಲೆ ನನ್ನ ಬದಲಾದ ನಿಲುವನ್ನು ಪ್ರಕಟಿಸುತ್ತಿದ್ದೇನೆ. ನಾನು ದೇವಸ್ಥಾನ ಪ್ರವೇಶ ಸತ್ಯಾಗ್ರಹವನ್ನು ಒಪ್ಪಿಕೊಳ್ಳಲಾರೆ. ದಲಿತರು ಮೂರ್ತಿಗಳನ್ನು ಪೂಜಿಸಲಿ ಎನ್ನುವ ಕಾರಣಕ್ಕೋಸ್ಕರ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಿಲ್ಲ ಅಥವಾ ದೇವಸ್ಥಾನ ಪ್ರವೇಶದಿಂದ ದಲಿತರು ಹಿಂದೂ ಸಮಾಜದಲ್ಲಿ ಸಮಾನರಾಗಿ ಬದುಕುತ್ತಾರೆ ಎನ್ನುವ ಕಾರಣದಿಂದಲೂ ಅಲ್ಲ. ಆದರೆ ’ಹಿಂದೂ ಧರ್ಮವು ಸಂಪೂರ್ಣವಾಗಿ ಸುಧಾರಣೆಯಾಗಬೇಕು, ಪ್ರಗತಿಪರವಾಗಬೇಕು. ನಂತರವಷ್ಟೇ ನಾವು ಹಿಂದೂ ಧರ್ಮದ ಭಾಗವಾಗುತ್ತೇವೆ’ ಎಂದು ಹೇಳಿರೆಂದು ತಳಸಮುದಾಯಗಳಿಗೆ ಸೂಚಿಸುತ್ತಿದ್ದೇನೆ. ತಳಸಮುದಾಯಗಳು ಚೈತನ್ಯಶೀಲರಾಗಲಿ ಮತ್ತು ಅವರ ಸ್ಥಾನದ ಕುರಿತಾದ ವಾಸ್ತವ ಪ್ರಜ್ಞೆ ಅವರಲ್ಲಿ ಮೂಡಲಿ ಎನ್ನುವ ಒಂದೇ ಕಾರಣಕ್ಕೆ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೆ. ಈಗ ನನ್ನ ಈ ಉದ್ದೇಶ ಈಡೇರಿದೆ ಎಂದು ನನಗೆ ಮನವರಿಕೆಯಾಗಿದೆ. ಇನ್ನು ದೇವಸ್ಥಾನ ಪ್ರವೇಶದ ಅವಶ್ಯಕತೆ ಇಲ್ಲ. ನಾನು ತಳಸಮುದಾಯಗಳು ಶಿಕ್ಷಣ, ರಾಜಕೀಯ ಕಡೆಗೆ ಹೆಚ್ಚು ಗಮನ ಹರಿಸಲಿ ಎಂದು ಆಶಿಸುತ್ತೇನೆ.”

ನ್ಯಾಯವಾದಿ ಸಂಜಯ ಹೆಗ್ಡೆ “ದೇಶವು ಧಾರ್ಮಿಕ ನೆಲೆಯಲ್ಲಿ ವಿಭಜನೆಗೊಂಡ ನಂತರ ತಳ ಸಮುದಾಯಗಳು ಹಿಂದೂಗಳೆಂದು ಪರಿಗಣಿಸಬೇಕೇ ಬೇಡವೇ ಎನ್ನುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿತು. ಬಿ.ಶಾಮಸುಂದರ್ ರಂತಹ ದಲಿತ ನಾಯಕರು ’ನಾವು ಹಿಂದೂಗಳಲ್ಲ, ನಮಗೆ ಹಿಂದುಗಳ ಜಾತಿಪದ್ಧತಿಯೊಂದಿಗೆ ಯಾವ ಸಂಬಂಧವೂ ಇಲ್ಲ, ಆದರೂ ಹಿಂದೂಗಳು ತಮಗಾಗಿ ನಮ್ಮನ್ನು ಅಲ್ಲಿ ಸೇರಿಸಿದ್ದಾರೆ’ ಎಂದು ಪ್ರತಿಪಾದಿಸಿದ್ದರು ಎಂದು ಹೇಳುತ್ತಾರೆ.

ಹಿಂದೂ ಎನ್ನುವ ವಿಶಾಲ ವೇದಿಕೆಯಲ್ಲಿ ತಳ ಸಮುದಾಯಗಳನ್ನು ಒಳಗೊಳ್ಳುವುದರ ಮೂಲಕ ಹಿಂದುತ್ವದ ಸಬಲೀಕರಣ ಮತ್ತು ವಿಸ್ತರಣೆ ಆರೆಸ್ಸೆಸ್‌ನ ಮುಖ್ಯ ಉದ್ದೇಶ. ಈಗಾಗಲೇ ಒಡಿಸ್ಸಾ ಮತ್ತು ಛತ್ತೀಸ್‌ಗಡ್ ರಾಜ್ಯಗಳಲ್ಲಿ ಆದಿವಾಸಿ ಸಮುದಾಯಗಳನ್ನು ತನ್ನ ವಿವಿಧ ಸಹಯೋಗಿ ಸಂಘಟನೆಗಳಾದ ’ವನವಾಸಿ ಕಲ್ಯಾಣ ಕೇಂದ್ರ’, ’ಏಕಲವ್ಯ ವಿದ್ಯಾ ಕೇಂದ್ರ’ಗಳ ಮೂಲಕ ತನ್ನೊಳಗೆ ಜೀರ್ಣಿಸಕೊಳ್ಳತೊಡಗಿದೆ. ಇದರ ಫಲವಾಗಿ ಛತ್ತೀಸಘಡ್ ರಾಜ್ಯದಲ್ಲಿ ಸತತವಾಗಿ ಅಧಿಕಾರಕ್ಕೆ ಮರಳಿರುವುದು ಆರೆಸ್ಸೆಸ್‌ಗೆ ಇಂದು ತಳ ಸಮುದಾಯಗಳೊಂದಿಗೆ ಹಿಂದುತ್ವದ ಜೊತೆ ಸಂಧಾನ ನಡೆಸಲು ಹುಮ್ಮಸ್ಸನ್ನು ನೀಡಿದೆ.

ಕೆ.ಎನ್.ಪಣಿಕ್ಕರ್ ಅವರು “ಅಂಬೇಡ್ಕರ್ ನಂತರದ ದಲಿತ ರಾಜಕಾರಣದ ಪ್ರಕ್ರಿಯೆಗಳೆಲ್ಲವೂ ಅಂತಿಮವಾಗಿ ಕೂಡಿದ ಸ್ತರದ ಫಲವಾಗಿ ಇಂದು ಹಿಂದುತ್ವದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ದಲಿತ ರಾಜಕಾರಣದಲ್ಲಿ ಐಡೆಂಟಿಟಿ ರಾಜಕಾರಣ, ಚಳುವಳಿಗಳ ರಾಜಕಾರಣ, ಹೊಂದಾಣಿಕೆ ರಾಜಕಾರಣ ಮತ್ತು ಹಿತಾಸಕ್ತಿಗಳ ರಾಜಕಾರಣ ಎಂಬ ನಾಲ್ಕು ಹಂತಗಳನ್ನು ಕಾಂಬ್ಳೆಯವರು ಗುರುತಿಸುತ್ತಾರೆ. ಅಂಬೇಡ್ಕರ್ ನಂತರ ಈ ನಾಲ್ಕೂ ಮುಖಗಳ ನಡುವೆ ಸಮತೋಲನವಿಲ್ಲದಂತಾದ್ದರಿಂದಲೇ ಹಿಂದುತ್ವ ಶಕ್ತಿಗಳು ದಲಿತರನ್ನು ಸಮೀಪಿಸಲು ಸಾಧ್ಯವಾಗಿದೆ. ಗೋಪಾಲ ಗುರು ತಮ್ಮ ಲೇಖನದಲ್ಲಿ ದಲಿತ ರಾಜಕಾರಣದ ಅಂತರಿಕ ಪಲ್ಲಟಗಳು ಮತ್ತು ಆರ್ಥಿಕ ಪೇಚಾಟಗಳಿಂದಾಗಿ ಅದು ಹಿಂದುತ್ವ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವ ನೈತಿಕ ಬಲವನ್ನು ಕಳೆದುಕೊಂಡಿದೆ ಎಂಬ ಮತ್ತೊಂದು ಪ್ರಮುಖ ಅಂಶವನ್ನು ಮುಂದಿಟ್ಟಿದ್ದಾರೆ. ದಲಿತರ ಸಾಮಾಜಿಕ ವಿಧಿ ವಿಧಾನಗಳನ್ನು ಪೂಜಾ ವಿಧಾನಗಳನ್ನು ಸಂಸ್ಕೃತೀಕರಣಗೊಳಿಸುವುದರ ಮೂಲಕ ಸಂಘ-ಪರಿವಾರವು ಅವರ ಸಾಂಸ್ಕೃತಿಕ ಬಯಕೆಯನ್ನು ಹಿಂದುತ್ವ ರಾಜಕಾರಣದ ಬಲಸಂವರ್ಧನೆಗೆ ಬಳಸಿಕೊಳ್ಳುತ್ತಿದೆ. ಹಿಂದುತ್ವದ ಪ್ರಭಾವಿ ಯಜಮಾನ್ಯೀಕರಣಕ್ಕೆ ಒಳಗಾಗುತ್ತಿರುವ ದಲಿತರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳುತ್ತಿರುವುದರ ಜೊತೆಗೆ ಅಂತಿಮವಾಗಿ ಅವರದಲ್ಲದ, ದಮನಕಾರಿ ಸಾಂಸ್ಕೃತಿಕ ಪರಂಪರೆಗೆ ದಾರಿ ಮಾಡಿಕೊಡುತ್ತಿರುವ ಈ ಪ್ರಕ್ರಿಯೆಯ ಅಂತರಾಳವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎನ್ನಿಸುತ್ತದೆ” ಎಂದು ವಿವರಿಸುತ್ತಾರೆ. (ಹಿಂದುತ್ವ ಮತ್ತು ದಲಿತರು, ಚಿಂತನ ಪ್ರಕಾಶನ)

ಮನುಸ್ಮೃತಿಯನ್ನು ಸುಟ್ಟ ಡಾ.ಅಂಬೇಡ್ಕರ್ ಅವರನ್ನು ಮನುಸ್ಮೃತಿಯನ್ನು ಆರಾಧಿಸುತ್ತಿರುವ ಆರೆಸ್ಸೆಸ್ ತನ್ನ ಐಡಿಯಾಲಜಿಯಲ್ಲಿ ಸೇರಿಸಿಕೊಳ್ಳಲು ಯತ್ನಗಳನ್ನು ನಡೆಸಿದೆ. ಈ ಆತಂಕಕಾರಿ ಪ್ರಕ್ರಿಯನ್ನು ವಿಫಲಗೊಳಿಸಲು ಸಿದ್ಧ ಮಾದರಿಗಳನ್ನು ಹುಡುಕುತ್ತಾ ಹೊರಟರೆ ನಾವು ಪ್ರಾರಂಭಿಸಿದ ಜಾಗಕ್ಕೆ ಮರಳಿ ತಲುಪುತ್ತೇವೆ ಅಷ್ಟೆ.

ಕೇಜ್ರಿ ಕ್ರಾಂತಿ 2.0 : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

ಯುವ ಪತ್ರಕರ್ತ ಪ್ರಶಾಂತ್ ಹುಲ್ಕೋಡುprashant-hulkodu ನಮ್ಮ ವರ್ತಮಾನ.ಕಾಮ್ ಓದುಗರಿಗೆ ಪರಿಚಿತರು. ಈ ವರ್ಷದ ಅರಂಭದಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಎರಡು ವಾರ ಇದ್ದ ಅವರು ನಿಯಮಿತವಾಗಿ ಆಗ ವರ್ತಮಾನ.ಕಾಮ್‌ಗೆ ಬರೆದರು. ಆ ಚುನಾವಣೆಯ ಬಗ್ಗೆ ನಮ್ಮ ಕನ್ನಡದ ಯಾವ ಮಾಧ್ಯಮಗಳಲ್ಲೂ ಪ್ರಕಟವಾಗದೇ ಇದ್ದ ಮಾಹಿತಿಗಳನ್ನು ಆ ಲೇಖನಗಳು ನಮ್ಮ ಓದುಗರಿಗೆ ಒದಗಿಸಿದವು. ಬಹಳ ಮೆಚ್ಚುಗೆ ಪಡೆದ ಲೇಖನಗಳವು.

ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ನಂತರ ಈ ಯುವ ಪತ್ರಕರ್ತ ಮಿತ್ರ “ಕೇಜ್ರಿ ಕ್ರಾಂತಿ 2.0” ಎಂಬ ಸಾಕಷ್ಟು ದೀರ್ಘವಾದ ಪುಸ್ತಕವನ್ನೇ ಬರೆದಿದ್ದಾರೆ. ಅಣ್ಣಾ ಹಜಾರೆ ಹೋರಾಟದಿಂದ ಆರಂಭವಾಗಿ, ಆಮ್ ಆದ್ಮಿ ಪಕ್ಷದ ಉದಯ, ಅದು ಎದುರಿಸಿದ ಮೂರು ಚುನಾವಣೆಗಳು, ಆಂತರಿಕ ಮತ್ತು ಬಾಹ್ಯ ಸವಾಲುಗಳು, ಇತ್ಯಾದಿಗಳನ್ನು ಇಟ್ಟುಕೊಂಡು ಇಲ್ಲಿಯವರೆಗೆ ಹೊರಗೆ ಎಲ್ಲೂ ದಾಖಲಾಗದ ಪಕ್ಷದ ಮತ್ತು ಅದರ ಮುಖಂಡರ ಅನೇಕ ಆಂತರಿಕ kejri-kranti-2.0-invitationವಿಚಾರಗಳು ಮತ್ತು ವಿವರಗಳನ್ನು ಈ ಪುಸ್ತಕದಲ್ಲಿ ಪ್ರಶಾಂತ್ ದಾಖಲಿಸಿದ್ದಾರೆ. ನಮ್ಮ “ಮೌಲ್ಯಾಗ್ರಹ ಪ್ರಕಾಶನ”ದಿಂದ ಇದು ಪ್ರಕವಾಗುತ್ತಿದೆ. ಕನ್ನಡಕ್ಕೆ ಬಹಳ ಅಪರೂಪದ ಪುಸ್ತಕ ಇದು ಎನ್ನುವ ಹೆಮ್ಮೆಯ ಭಾವನೆ ನನ್ನದು.

ಈ ಪುಸ್ತಕ ಅಧಿಕೃತವಾಗಿ ನಾಡಿದ್ದು ಶುಕ್ರವಾರ ಸಂಜೆ 5:30 ಕ್ಕೆ ಫ್ರೀಡಂ ಪಾರ್ಕಿನಲ್ಲಿರುವ ಓವಲ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ನಮ್ಮೆಲ್ಲಾ ವರ್ತಮಾನ ಬಳಗದ ಪರವಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ಕಾರ್ಯಕ್ರಮದ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ.

ನಿಮ್ಮ ಬರುವಿನ ನಿರೀಕ್ಷೆಯಲ್ಲಿ,
ರವಿ


kejri-kranti-2.0-coverpage

ಹುತಾತ್ಮ ಭಗತ್‌ಸಿಂಗ್‌ನ ಆದರ್ಶಗಳು

– ಎಚ್.ಆರ್.ನವೀನ್‌ಕುಮಾರ್

1919 ಏಪ್ರಿಲ್ 13 ರಂದು ಪಂಜಾಬಿನ ಅಮೃತಸರದಲ್ಲಿ ಸುಗ್ಗಿ ಹಬ್ಬ ಬೈಶಾಕಿ, “ಆಳುವವರು ಯಾರನ್ನು ಬೇಕಾದರೂ ವಿಚಾರಣೆಯಿಲ್ಲದೆ ಬಂಧಿಸಿಡುವ ಅಧಿಕಾರ”ವನ್ನು ನೀಡುವ ರೌಲಟ್ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಲು ಅಂದು ಪಂಜಾಬಿನ ಅಮೃತ್‌ಸರದ ಉಧ್ಯಾನವನದಲ್ಲಿ ಸುಮಾರು 20 ಸಾವಿರ ಮಂದಿ ಜಮಾಯಿಸಿದ್ದರು. ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ಕರಾಳತೆಯನ್ನು ಸಾಬೀತುಪಿಡಿಸುವಂತೆ ಬ್ರಿಗೇಡಿಯರ್ ಜನರಲ್ ರೇಜಿನಾಲ್ಡ್ ಡಯರ್ ತನ್ನ ಸೈನ್ಯದೊಂದಿಗೆ ಶಸ್ತ್ರ ಸಜ್ಜಿತನಾಗಿ ಉಧ್ಯಾನವನವನ್ನು ಸುತ್ತುವರೆದು ಯಾವುದೇ ಸೂಚನೆ ನೀಡದೆ ಗುಂಡಿನ ಮಳೆಗರೆದ. Bhagat-Singhಸುಮಾರು 1950 ಬಾರಿ ಗುಂಡು ಹಾರಿಸಿ ಅಲ್ಲಿ ನೆರದಿದ್ದವರ ಮಾರಣ ಹೋಮಮಾಡಿ ರಕ್ತದ ಹೊಳೆಯನ್ನೇ ಹರಿಸಿದ್ದ. ಈ ಸುದ್ದಿ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿತು.

ಈ ಘಟನೆಯಿಂದ ಮನಸ್ಸು ತುಂಬ ಶೋಭೆಗೊಂಡಿದ್ದ ಹನ್ನೆರಡು ವರ್ಷದ ಬಾಲಕನೊಬ್ಬ ಹತ್ಯಾಕಾಂಡ ನಡೆದ ಮಾರನೇ ದಿನ ಅವನು ಶಾಲೆಮುಗಿದ ಮೇಲೆ ಮನೆಗೆ ಹೋಗಲಿಲ್ಲ. ಮನೆಯವರು ಅವನಿಗಾಗಿ ಕಾದರು, ಆತಂಕಗೊಂಡರು. ಅವತ್ತು ಶಾಲೆಗೆ ಹೋಗುವುದಕ್ಕೆ ಬದಲಾಗಿ ಅವನು ನೇರವಾಗಿ ಹೋದದ್ದು ಜಲಿಯನ್‌ವಾಲಾಭಾಗ್‌ಗೆ. ಅದು ಹೇಗೋ ಅವನು ಅಲ್ಲಿ ಕಾವಲಿದ್ದ ಸೆಂಟ್ರಿಗಳ ಕಣ್ಣು ತಪ್ಪಿಸಿ ಉಧ್ಯಾನದೊಳಕ್ಕೆ ನುಗ್ಗಿ ಒಂದು ಸಣ್ಣ ಪಾತ್ರೆಯ ತುಂಬ ಭಾರತೀಯರ ರಕ್ತದಿಂದ ಇನ್ನೂ ಒದ್ದೆ ಒದ್ದೆಯಾಗಿದ್ದ ಒಂದಿಷ್ಟು ಮಣ್ಣನ್ನು ತುಂಬಿಕೊಂಡ. ಕಡೆಗೆ ಮನೆಗೆ ಹೋದಾಗ ಅವನ ತಂಗಿ ಇದುವರೆಗು ಎಲ್ಲಿದ್ದೆ? ಅಮ್ಮ ನಿಂಗೆ ತಿಂಡಿ ಕೊಡಬೇಕೆಂದು ಕಾದಿದ್ದಾಳೆ ಎಂದಳು. ಆದರೆ ಆ ಭಾಲಕ ತಿಂಡಿ ತಿನ್ನುವುದರ ಬಗ್ಗೆ ಯೋಚಿಸುತ್ತಿರಲಿಲ್ಲ. ರಕ್ತಸಿಕ್ತವಾದ ಮಣ್ಣನ್ನು ತುಂಬಿದ್ದ ಆ ಪಾತ್ರೆಯನ್ನು ತೋರಿಸುತ್ತಾ, ‘ನೋಡಿಲ್ಲಿ, ಇದು ಬ್ರಿಟೀಷರು ಕೊಂದುಹಾಕಿದ ನಮ್ಮ ಜನರ ರಕ್ತ. ಇದಕ್ಕೆ ನಮಸ್ಕಾರ ಮಾಡು’ ಎಂದ. ಆಮೇಲೆ ಆ ಪಾತ್ರೆಯನ್ನು ಒಂದು ಗೂಡಿನೊಳಗಿಟ್ಟು ಹೂವುಗಳಿಂದ ಪೂಜಿಸಿದ.

ಇಂತಹ ಅಪ್ರತಿಮ ದೇಶಪೇಮವನ್ನು ಮೆರೆದ ಆ ಬಾಲಕ ಮತ್ತಾರು ಅಲ್ಲ, ಬ್ರಿಟೀಷ್ ಸಾಮ್ರಾಜ್ಯಶಾಹಿಗಳಿಗೆ ಸಿಂಹ ಸ್ವಪ್ನವಾಗಿ, ದೇಶದ ಸ್ವಾಸಂತ್ರಕ್ಕಾಗಿ ತನ್ನ 23 ನೇ ವಯಸ್ಸಿನಲ್ಲೇ ನಗುನಗುತ್ತ ನೇಳುಗಂಬವನ್ನೇರಿದ ಭಗತ್‌ಸಿಂಗ್. ಹೌದು ಈ ಹೆಸರನ್ನು ಕೇಳಿದಾಕ್ಷಣ ಯುವಜನರಲ್ಲಿ ಏನೋ ಒಂದು ರೀತಿಯ ಮಿಂಚಿನ ಸಂಚಲನವಾಗುತ್ತದೆ.
23 ಮಾರ್ಚ್ 1931 ಅಂದರೆ ಇಲ್ಲಿಗೆ ಸರಿಯಾಗಿ 84 ವರ್ಷಗಳ ಹಿಂದೆ ಲಾಹೋರ್‌ನ ಜೈಲಿನೊಳಗೆ ನೀರವ ಮೌನ ಆವರಿಸಿದ್ದರೆ, ಜೈಲಿನ ಹೊರಗೆ ಮತ್ತು ದೇಶದ ತುಂಬೆಲ್ಲ ಆತಂಕ ಮತ್ತು ಆಕ್ರೋಶ ಮಡುಗಟ್ಟಿತ್ತು. ಅಂದು ಕ್ರಾಂತಿಕಾರಿ ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳಾಗಿದ್ದ ಸುಖದೇವ್ ಮತ್ತು ರಾಜ್‌ಗುರುರವರನ್ನು ಬ್ರಟೀಷರು ನೇಣಿಕೇರಿಸಿದ ದಿನ.

ದೇಶದ ಸ್ವಾತಂತ್ರಕ್ಕಾಗಿ ಹುತಾತ್ಮನಾದಾಗ ಭಗತ್‌ಸಿಂಗ್‌ಗೆ ಕೇವಲ 23 ವರ್ಷ, ಇವತ್ತಿನ ಕಾಲಘಟ್ಟದಲ್ಲಿ ಈ ವಯಸ್ಸಿನಲ್ಲಿ ಜೀವನದ ಯಾವುದೇ ಜವಾಬ್ದಾರಿಗಳಿಲ್ಲದೆ, ಸಮಾಜದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ, ತಾವು ಮತ್ತು ತಮ್ಮ ಬದುಕು ಎಂದು ಯೋಜಿಸಿವ ಯುವಜನರು ಹೆಚ್ಚಾಗುತ್ತಿರುವ ಇಂದಿನ ಫ್ಯಾಷನ್ ಯುಗದ ಸಂದರ್ಭದಲ್ಲಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ ಹೋರಾಟಗಾರನಾಗಿ, ಸ್ಪಷ್ಟ ರಾಜಕೀಯ ಕಣ್ಣೋಟವನ್ನು ಬೆಳೆಸಿಕೊಂಡಿದ್ದ ಭಗತ್‌ಸಿಂಗ್ ನಿಜವಾದ ಅರ್ಥದಲ್ಲಿ ಯುವಕರಿಗೆ ಆದರ್ಶವಾಗಲೇಬೇಕಾಗಿದೆ.

ಭಗತ್‌ಸಿಂಗ್ ಇಷ್ಟು ದೃಡವಾಗಿ ಬೆಳೆಯಲು ಮುಖ್ಯವಾಗಿ ಎರಡು ಕಾರಣಗಳಿವೆ ಒಂದನೆಯದು ಅವನ ಕುಟುಂಬ ಮೂಲತಹ ಸ್ವತಂತ್ರ ಹೋರಾಟಗಾರರ ಕುಟುಂಬವಾಗಿದ್ದದ್ದು, ತಂದೆ ಕಿಷನ್‌ಸಿಂಗ್ ಮತ್ತು ತಾಯಿ ವಿದ್ಯಾವತಿ ಕೌರ್ ರವರಿಗೆ 1907 ಸೆಪ್ಟೆಂಬರ್ 28 ರಂದು ಜನಿಸಿದ. Rajguru with Bhagat Singh and Sukhdevಸಕ್ರೀಯ ಹೋರಾಟಗಾರರಾಗಿದ್ದ ಅವರ ಚಿಕ್ಕಪ್ಪನ ಮಾತುಗಳು ಮತ್ತು ಹೋರಾಟಗಳೇ ಭಗತ್‌ಗೆ ಸ್ಪೂರ್ತಿಯಾಗಿದ್ದವು. ಹಾಗಾಗಿಯೇ ಭಗತ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾಂಧಿಯ ಅಸಹಕಾರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ, ನಂತರ ಗಾಂಧಿ ಈ ಹೋರಾಟವನ್ನು ಹಿಂಪಡೆದಾಗ ಅತ್ಯಂತ ಅಸಮಧಾನಗೊಂಡಿದ್ದ. ಭಗತ್ ಒಂದು ಸ್ಪಷ್ಟ ರಾಜಕೀಯ ಕಣ್ಣೋಟವನ್ನು ಬೆಳಸಿಕೊಳ್ಳಲು ಕಾರಣವಾಗಿದ್ದು ಅವನ ಓದು. ಈತ ಜಗತ್ತಿನಲ್ಲಿ ನಡೆದ, ನಡೆಯುತ್ತಿದ್ದ ಎಲ್ಲ ಕ್ರಾಂತಿಗಳ ಬಗ್ಗೆ ಹೋದಲು ಪ್ರಾರಂಬಿಸಿದ ಇದರಲ್ಲಿ ಅವನಿಗೆ ಮಾರ್ಕ್ಸ್‌ವಾದ ಮತ್ತು ಲೆನಿನ್‌ರವರ ಸಾಹಿತ್ಯ, ಕಮ್ಯೂನಿಸಂ ಮತ್ತು ಕ್ರಾಂತಿಕಾರಿ ದರ್ಶನಗಳು ಅತ್ಯಂತ ಘಾಡವಾದ ಪ್ರಭಾವವನ್ನು ಬೀರಿದ್ದವು ಎಂಬುದಕ್ಕೆ ಅವನ ಮಾತುಗಳೇ ಪುಷ್ಟಿಕೊಡುತ್ತವೆ. ಇದೇ ಅವನಿಗೆ ಶಕ್ತಿಯನ್ನು, ನಂಬಿಕೆಯ ಸ್ತೈರ್ಯವನ್ನು ನೀಡಿತು.

ಭಗತ್‌ಸಿಂಗ್ ದೃಷ್ಟಿಯಲ್ಲಿ ‘ಬಡತನವನ್ನು ನಿರ್ಮೂಲನೆಗೊಳಿಸದ ಸ್ವತಂತ್ರ ಭಾರತ ಕೇವಲ ಹೆಸರಿಗಷ್ಟೇ ಸ್ವತಂತ್ರ. ಒಂದು ಯಥಾಸ್ಥಿತಿ ಇನ್ನೊಂದು ಯಥಾಸ್ಥಿತಿಗೆ ಪರ್ಯಾಯವಲ್ಲ. ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರಕ್ಕೆ ಏನು ಅರ್ಥ? ಬಡವರು ಬಡವರಾಗಿಯೇ ಉಳಿಯುವಂತಾದರೆ ಅಂಥ ಸ್ವಾತಂತ್ರದಿಂದ ಏನು ಪ್ರಯೋಜನ?’. ಆತ ಜೈಲಿನಿಂದ ತನ್ನ ತಾಯಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ. ‘ಅಮ್ಮಾ, ನನ್ನ ದೇಶ ಒಂದಲ್ಲಾ ಒಂದು ದಿನ ಸ್ರತಂತ್ರವಾಗುವುದೆಂಬ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಬಿಳಿಯ ಸಾಹೇಬರು ಖಾಲಿ ಮಾಡಿದ ಕುರ್ಚಿಗಳಲ್ಲಿ ಕರಿಯ ಸಾಹೇಬರು ಕುಳಿತುಕೊಳ್ಳುತ್ತಾರೆಂಬ ಭಯ ನನಗೆ.’ ಹೌದು ಸುಮಾರು 80 ವರ್ಷಗಳ ಹಿಂದೆ ಭಗತ್ ಸಿಂಗ್ ತನ್ನ ತಾಯಿಗೆ ಹೇಳಿದ ಮಾತುಗಳು ಇಂದು ಅಕ್ಷರಶ: ಸತ್ಯವಾಗಿದೆ. ಅಂದು ಭಗತ್‌ನ ಆತಂಕ ಇಂದು ದೇಶದ ಎಲ್ಲ ಬಡವರ ಆತಂಕವಾಗಿ ಮಾರ್ಪಾಟಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆಯುತ್ತಿದ್ದರೂ ಸ್ವತಂತ್ರ ಹೋರಾಟಗಾರರ ಕನಸಾಗಿದ್ದ ಬಡತನ ನಿರ್ಮೂಲನೆ, ಸಾಕ್ಷರತೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಇಂದಿಗೂ ಸಾಧ್ಯವಾಗಿಲ್ಲ. ಬದಲಾಗಿ ಬಡವ ಮತ್ತು ಸಿರಿವಂತರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಭಗತ್‌ಸಿಂಗ್‌ಗೆ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಾಗಿಸಬೇಕೆಂಬ ಲಜಪತ್‌ರಾಯ್ ಅವರ ವಿಚಾರವೇನಾದರು ಕಾರ್ಯಗತವಾದರೆ ಅದು ವಿನಾಶಕಾರಿಯಾಗುವುದೆಂಬ ಭಯ. ಅದರಿಂದ ರಕ್ತಪಾತವಾಗಬಹುದು. ಹಿಂದೂ ಮತ್ತು ಮುಸ್ಲಿಂ ದೇಶಗಳು ಸದಾ ಯುದ್ಧದಲ್ಲಿ ತೊಡಗುವಂತಾಗಬಹುದು. ಹಾಗಾದಲ್ಲಿ ಅವರ ಗಮನ ಹಾಗೂ ಸಂಪನ್ಮೂಲ ಪರಸ್ಪರ ಹೊಡೆದಾಡಲು ಆಯುಧಗಳನ್ನು ಕೊಳ್ಳುವುದಕ್ಕೇ ಮೀಸಲಾಗಬಹುದು Statues_of_Bhagat_Singh,_Rajguru_and_Sukhdevಎನ್ನುವ ಭಯ ಭಗತ್‌ನನ್ನು ಯಾವಾಗಲೂ ಕಾಡುತ್ತಿತ್ತು. ಅವರ ಅನುಮಾನಗಳಿಗೆ ನಾವುಗಳೇ ಇಂದು ಸಾಕ್ಷಿಗಳಾಗಿದ್ದೇವೆ. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ತಮ್ಮ ದೇಶಗಳ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದೇ ಪರಸ್ಪರ ದೇಶಗಳ ನಡುವಣ ಯುದ್ದಕ್ಕೆ ಹಾತೊರೆದು ನಿರಂತರ ಸಜ್ಜುಗೊಳ್ಳುತ್ತಿವೆ.

ಭಗತ್ ಧರ್ಮದ ಕುರಿತಾಗಿಯೂ ಒಂದು ಸ್ಪಷ್ಟ ಕಣ್ಣೋಟವನ್ನು ಬೆಳೆಸಿಕೊಂಡಿದ್ದ. ಅವನೇ ಹೇಳುವ ಪ್ರಕಾರ “ಧರ್ಮವೆನ್ನುವುದು ಇನ್ನೂ ಪರಿಪೂರ್ಣನಾಗಿರದ ಮನುಷ್ಯನಿಗೊಂದು ಆಸರೆ ಇದ್ದಂತೆ”. ಇಂದು ಭಾತರದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಗಲಭೆಗಳು ಮತ್ತು ಮಾರಣಹೋಮಗಳನ್ನು ನೋಡಿದರೆ ಭಗತ್‌ನ ಈ ಮುಂದಿನ ಮಾತುಗಳು ನೆನಪಿಗೆ ಬರುತ್ತವೆ. ಭಗತ್ ಮತ್ತು ಆತನ ಸಂಗಡಿಗರು 1925 ಏಪ್ರಿಲ್‌ನಲ್ಲಿ ಸ್ಥಾಪಿಸಿದ್ದ ನೌಜವಾನ್ ಭಾರತ್ ಸಭಾ ಸಂಘಟನೆಯ ಪ್ರಣಾಳಿಕೆಯಲ್ಲಿ ಒಂದು ಮಾತು ಇದೆ ಅದೇನೆಂದರೆ. ಮನುಷ್ಯನಿಗೆ ಪ್ರಾಣಿಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಇರಬೇಕು. ಆದರೂ ಈ ಭಾರತದಲ್ಲಿ ಜನರು ಪವಿತ್ರ ಪ್ರಾಣಿಗಳ ಹೆಸರಿನಲ್ಲಿ ಪರಸ್ಪರ ರುಂಡ ಚಂಡಾಡುತ್ತಾರೆ. ನೌಜವಾನ್ ಭಾರತ್ ಸಭಾದ ಪ್ರತಿಯೊಬ್ಬ ಸದಸ್ಯನೂ ಸದಸ್ಯತ್ವ ಹೊಂದುವ ಮುಂಚೆ ಸಮುದಾಯದ ಹಿತಕ್ಕಿಂತ ದೇಶದ ಹಿತವೇ ಮಿಗಿಲಾದದ್ದು ಎಂಬ ಪ್ರತಿಜ್ಞೆಗೆ ಸಹಿ ಹಾಕಬೇಕಿತ್ತು. ಹಲಾಲ್ ಮತ್ತು ಝಟ್ಕ ಮಾಂಸವನ್ನು ಒಟ್ಟಿಗೆ ಬೇಯಿಸಿ ಹಿಂದೂಗಳು, ಮುಸ್ಲಿಮರು, ಸಿಕ್ಕರು ತಿನ್ನುತ್ತಿದ್ದರು. ಇದರಿಂದ ಸ್ಪಷ್ಟವಾಗುವ ಒಂದು ಅಂಶವೆಂದರೆ ಭಗತ್ ಮತ್ತು ಸಂಗಡಿಗರು ಕೋಮು ಸೌಹಾರ್ಧತೆ ಮತ್ತು ಸಾಮರಸ್ಯಕ್ಕೆ ಕೊಡುತ್ತಿದ್ದ ಮಹತ್ವ ಮತ್ತು ಅದನ್ನು ಸ್ವತಃ ಕಾರ್ಯಗತಗೊಳಿಸಿದ ವಿಧಾನ ಇವೆಲ್ಲವುಗಳು ಇಂದು ಧರ್ಮದ ಅಮಲಿನಲ್ಲಿರುವ ಎಲ್ಲ ಧರ್ಮದ ಯುವಜನತೆಗು ಮಾದರಿಯಾಗಬೇಕಾದದ್ದು.

ಭಗತ್ ಸಿಂಗ್ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದ ಅವನ ಪ್ರಕಾರ ಕ್ರಾಂತಿಕಾರಿಯಾದವನಿಗೆ ಮಾನವೀಯ ಭಾವನೆಗಳೇ ಇರಬಾರದೆಂದಿಲ್ಲ. ಹಾಗೆ ನೋಡಿದರೆ ಆ ಭಾವನೆಗಳಿಂದಲೇ ಅವನು ಭಯೋತ್ಪಾದಕನಿಂದ ಬೇರೆಯಾಗುವುದು. ಅಂಥವನ ದೃಷ್ಟಿಯಲ್ಲಿ ಸಂವೇಧನೆಯ, ಅನುಕಂಪದ ಸ್ವಭಾವವೇ ಪ್ರತಿಗಾಮಿಗಳನ್ನು ತಡೆಹಿಡಿದು ಅವರು ಅನರ್ಥಕಾರಿ ಹಿಂಸೆಯಲ್ಲಿ ತೊಡಗದಂತೆ ಮಾಡಬಲ್ಲದು. ಅವನ ಈ ಮಾತುಗಳು ಪ್ರಸ್ತುತ ಸಮಾಜದಲ್ಲಿ ಕ್ರಾಂತಿಕಾರಿಗಳನ್ನು ಮಾನವೀಯತೆಯಿಲ್ಲದವರು ಮತ್ತು ಭಯೋತ್ಪಾದಕರು ಎಂದು ಬಿಂಬಿಸುತ್ತಿರುವ ವ್ಯವಸ್ಥಿತ ಅಪಪ್ರಚಾರಕ್ಕೆ ಉತ್ತರವಾಗಬಲ್ಲದು.

ಭಗತ್ ಸ್ವಾಮಿ ವಿವೇಕಾನಂದ ಮತ್ತು ರಾಮತೀರ್ಥರಿಂದಲೂ ಸ್ಪೂರ್ಥಿ ಪಡೆದಿದ್ದನು. ಅವನ ಪ್ರಕಾರ ’ರಾಮತೀರ್ಥ ಮತ್ತು ವಿವೇಕಾನಂದ ಇಬ್ಬರಿಗೂ ಮನುಷ್ಯ ನಿರ್ಧಾರದಲ್ಲಿ ನಂಬಿಕೆಯಿತ್ತೇ ಹೊರತು ಅವನ ಸ್ವಾರ್ಥದಲ್ಲಲ್ಲ. ನಿಜವಾದ ಪ್ರಗತಿಯಾಗುವುದು ನಿಜಕ್ಕೂ ಪ್ರತಿಯೊಬ್ಬ ವ್ಯಕ್ತಿಗೂ ಇಡೀ ಸಮುದಾಯದ ಒಳಿತಿಗಾಗಿ ವಿಕಾಸಗೊಳ್ಳಲು ಒಂದು ಅವಕಾಶ ದೊರೆತಾಗ ಮಾತ್ರ. ಎಂದು ತಿಳಿದಿದ್ದವನು ಭಗತ್‌ಸಿಂಗ್. ವ್ಯಕ್ತಿಯೊಬ್ಬ ತನ್ನ ಕ್ಷುಲ್ಲಕ ಆಸೆಗಳನ್ನು ಬದಿಗೊತ್ತಿ ಎಲ್ಲರ ಒಳಿತನ್ನು ಯೋಚಿಸುವುದಕ್ಕೆ ಯಾವ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಸಿದ್ದಾಂತ ಅವನಿಗೆ ನೆರವಾಗುತ್ತದೆ ಎಂಬುದೇ ನಿಜವಾದ ಒರೆಗಲ್ಲು.’ ಭಗತ್‌ನ ಈ ಆಲೋಜನೆ ಜಾಗತೀಕರಣ ಮತ್ತು ಉಧಾರೀಕರಣದ ಘಾಡ ಪ್ರಭಾವಕ್ಕೆ ಒಳಗಾಗಿ ಸ್ವಾರ್ಥವನ್ನೇ ತಮ್ಮ ಜೀವನದ ಪರಮಗುರಿಯನ್ನಾಗಿಸಿಕೊಳ್ಳುತ್ತಿರುವ, ಕೊಳ್ಳುಬಾಕ ಸಂಸ್ಕೃತಿಯನ್ನು ಮೈಗೋಡಿಸಿಕೊಳ್ಳುತ್ತಿರುವ, ಸಮಾಜದ ಬಗ್ಗೆ ಕಿಂಚಿತ್ತು ಆಲೋಚನೆ ಮಾಡದಂತಹ ಸ್ಥಿತಿಗೆ ತಲುಪುತ್ತಿರುವ ಇಂದಿನ ಯುವಜನತೆ ಕಲಿಯ ಬೇಕಾದ ಪಾಠ ಇದು.

“ನಾವು ದೇಶದ ಸ್ವಾತಂತ್ರಕ್ಕಾಗಿ ಹೋರಾಡ ಬಯಸಿದರೆ ಕಾರ್ಮಿಕರನ್ನು ರೈತರನ್ನು, ಸಾಮಾನ್ಯ ಜನರನ್ನು ಅಗ್ರಪಂಕ್ತಿಗೆ ತರಬೇಕು ಮತ್ತು ಈಗ ವಿದೇಶಿ ಆಳ್ವಿಕೆಯ ನೊಗದಿಂದ ಅಷ್ಟೇ ಅಲ್ಲ, ಆಸೆಬುರುಕ ಮಾಲೀಕರಿಂದ ಹಾಗೂ ನಿರುದ್ವಿಗ್ನ ಜಮೀನ್ದಾರರಿಂದ ಕೂಡಾ ಕಾರ್ಮಿಕರನ್ನು ಮತ್ತು ರೈತರನ್ನು ಬಿಡುಗಡೆಗೊಳಿಸುವ ಹೊಣೆ ಕ್ರಾಂತಿಕಾರಿಗಳ ಹೆಗಲ ಮೇಲಿದೆ” ಎಂದು ಭಗತ್‌ಸಿಂಗ್ ಯಾವಾಗಲೂ ಪ್ರತಿಪಾದಿಸುತ್ತಿದ್ದ.

“ಪ್ರಜಾಪ್ರಭುತ್ವವೆನ್ನುವುದು ಸೈದ್ದಾಂತಿಕವಾಗಿ ರಾಜಕೀಯ ಹಾಗೂ ಕಾನೂನುಗಳ ಸಮಾನತೆಗೆ ಸಂಬಂಧಿಸಿದ ಒಂದು ವ್ಯವಸ್ಥೆ. Bhagat_Singh_1922ಆದರೆ ಕಾರ್ಯ ಸಾಧನೆಯ ದೃಷ್ಟಿಯಿಂದ ನೋಡಿದಾಗ ಅದು ಅಸಮರ್ಪಕವೇ. ಎಲ್ಲಿಯವರೆಗೆ ಎದ್ದುಕಾಣುವ ಆರ್ಥಿಕ ಅಸಮಾನತೆ ಇರುವುದೋ ಅಲ್ಲಿಯವರೆಗೆ ರಾಜಕೀಯದಲ್ಲಾಗಲೀ ಕಾನೂನಿನ ಇದಿರಿನಲ್ಲಾಗಲಿ ಸಮಾನತೆಯಿರುವುದು ಸಾಧ್ಯವಿಲ್ಲ. ಎಲ್ಲಿಯವರೆಗೆ ಆಳುವ ವರ್ಗ ದೇಶದ ನೌಕರಿಗಳನ್ನು, ಪತ್ರಿಕಾರಂಗವನ್ನು, ಶಾಲೆಗಳನ್ನು ಮತ್ತು ಸಾರ್ವಜನಿಕ ಅಭಿಪ್ರಾಯದ ಅಂಗಗಳನ್ನು ನಿಯಂತ್ರಿಸುತ್ತದೋ, ಎಲ್ಲಿಯವರೆಗೆ ಅದು ತರಬೇತಿ ಪಡೆದ ಸಾರ್ವಜನಿಕ ಅಧಿಕಾರಿಗಳನ್ನು ಜಮಾಯಿಸಿಕೊಂಡು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಅಪಾರ ಹಣ ಖರ್ಚುಮಾಡುತ್ತದೋ, ಎಲ್ಲಿಯವರೆಗೆ ಖಾಸಗಿಯಾಗಿ ಪ್ರಾಕ್ಟೀಸು ಮಾಡುವ ಲಾಯರುಗಳು ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ತಮ್ಮ ಪರಿಣಿತಿಯನ್ನು ಮಾರಿಕೊಳ್ಳುತ್ತಾರೋ, ತತ್ಪರಿಣಾಮವಾಗಿ ಮೊಕದ್ದಮೆಗಳು ಪ್ರತ್ತೇಕವಾಗಿ ದುಬಾರಿಯಾಗುತ್ತವೆಯೋ ಅಲ್ಲಿಯವರೆಗೆ ಕಾನೂನಿನ ಮುಂದೆ ಕೇವಲ ಕನಿಷ್ಠ ಪ್ರಮಾಣದ ಸಮಾನತೆಯಷ್ಟೆ ಇರಲಿಕ್ಕೆ ಸಾಕು.” ಹೀಗೆಂದು ಭಗತ್‌ಸಿಂಗ್ ಮತ್ತು ಅವನ ಸಂಗಡಿಗರು, ಕ್ರಾಂತಿಕಾರಿಗಳು ನಂಬಿದ್ದರು ಮತ್ತು ಮಾತನಾಡುತ್ತಿದ್ದರು.

ಭಗತ್‌ಸಿಂಗ್ ಮತ್ತು ಆತನ ಸಂಗಡಿಗರ ಜೀವನ ವಿಧಾನ ಮತ್ತು ವಿಚಾರಗಳು ಇಂದಿನ ಯುವಜನತೆಗೆ ಸ್ಪೂರ್ತಿದಾಯಕವಾಗಿವೆ. ಅವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದರೆ, ಭಗತ್‌ಸಿಂಗ್ ಕಂಡ ಸಮಾನತೆಯ ಕನಸನ್ನು ನನಸು ಮಾಡಲು ದುಡಿದರೆ ಇದೇ ದೇಶಕ್ಕಾಗಿ ಹೋರಾಡಿ ನಗುನಗುತ್ತಲೇ ನೇಣುಗಂಬಕೆ ಪ್ರಾಣವ ನೀಡಿದ ಭಗತ್‌ಸಿಂಗ್, ಸುಖದೇವ್ ಮತ್ತು ರಾಜ್‌ಗುರುರವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಮತ್ತು ಶ್ರದ್ದಾಂಜಲಿ.

ಸತ್ತದ್ದು ಅಂತಃಸಾಕ್ಷಿ: ಕೊಲ್ಲಲ್ಪಟ್ಟದ್ದು ಲೇಖಕ

                                                                                                             ಪಿ.ಭಾರತೀ ದೇವಿ

ತಮಿಳು ಲೇಖಕ ಪೆರುಮಾಳ್ ಮುರುಗನ್ ತಮ್ಮೊಳಗಿನ ಲೇಖಕ ಸತ್ತಿದ್ದಾನೆ ಎಂದು ಘೋಷಿಸಿಕೊಂಡರು. ಅವರು 2010ರಲ್ಲಿ ಬರೆದ ಕೃತಿ ‘ಮಾದೋರುಬಾಗನ್’ ಗೆ ಎದುರಾದ ವಿರೋಧ ಅವರೊಳಗಿನ ಬರಹಗಾರನ ಚೈತನ್ಯವನ್ನು ಉಡುಗಿಸಿತು. ಈ ಬಗೆಯಲ್ಲಿ ಆಕ್ಷೇಪಾರ್ಹವಾದ ಸಂಗತಿ ಈ ಕೃತಿಯಲ್ಲಿ ಏನಿದೆ ಎಂಬ ಕುತೂಹಲದಿಂದ ಓದಿದರೆ ಅಲ್ಲಿ ವಿಮರ್ಶೆಗೊಳಗಾಗುವುದು ಕಟ್ಟುಪಾಡುಗಳಿಂದ ವ್ಯಕ್ತಿಯ ಜೀವಚೈತನ್ಯವನ್ನು ಉಡುಗಿಸುವ ವ್ಯವಸ್ಥೆ. ಹೀಗೆ ಸಹಜ, ಸ್ವತಂತ್ರ ಬದುಕಿಗೆ ಕೋಳ ತೊಡಿಸುವ ಕಟ್ಟಳೆಗಳು ಅದರಿಂದಾದ ಗಾಯಕ್ಕೆ ತಾವೇ ಮುಲಾಮು ಕೂಡಾ ಸವರುತ್ತವೆ. ಆದರೆ ಈ ಮುಲಾಮು ಗಾಯವನ್ನು ಗುಣಪಡಿಸುವ ಬದಲು ಹುಣ್ಣಾಗಿಸುತ್ತದೆ. ಈ ಬಗೆಯ ಹುಣ್ಣಿಗೆ ಕನ್ನಡಿ ಹಿಡಿದದ್ದಕ್ಕೇ ಎನಿಸುತ್ತದೆ ಇಂತಹ ಕೃತಿ ನಿಷೇಧಾರ್ಹ ಎನಿಸುವುದು.

ಈ ಕೃತಿ ಮತ್ತು ಅದರ ಹೆಸರಿನಲ್ಲಿ ನಡೆದ ವಿವಾದ ಆಧುನಿಕ ಎನ್ನುವ ಸಂದರ್ಭದಲ್ಲೂ ನಮ್ಮ ಕುರೂಪವನ್ನು ನೋಡುವ ಕನ್ನಡಿ ಇಟ್ಟಾಗ ಅದನ್ನು ಮುಖಾಮುಖಿಯಾಗಲು ಸಿperumalದ್ಧರಿಲ್ಲದ ನಾವು ಎಂತಹ ನಾಗರಿಕರು? ಎನ್ನುವ ಪ್ರಶ್ನೆಯನ್ನು ಎಲ್ಲರ ಮುಂದಿಡುತ್ತದೆ. ಕೆಲವು ದಿನಗಳ ಹಿಂದೆ ‘ಇಂಡಿಯಾಸ್ ಡಾಟರ್’ ಡಾಕ್ಯುಮೆಂಟರಿಗೆ ವ್ಯಕ್ತವಾದ ಅಭಿಪ್ರಾಯವೂ ನಮ್ಮನ್ನು ಆವರಿಸಿರುವ ಕೇಡನ್ನು ಒಪ್ಪಿಕೊಳ್ಳಲು, ಅದಕ್ಕೆ ಎದುರಾಗಲು ಸಿದ್ಧವಿರದ ಮನಸ್ಥಿತಿಯನ್ನು ತೋರಿಸುತ್ತದೆ. ಯಥಾಸ್ಥಿತಿಯನ್ನು ಸುಂದರ ಮಾತುಗಳಲ್ಲಿ ಬಣ್ಣಿಸಿ ಮುಂದುವರೆಸಿಕೊಂಡು ಹೋಗುವವರಿಗೆ, ಸಂಸ್ಕೃತಿಯ ಹಿರಿಮೆಯನ್ನು ಕೊಂಡಾಡಲು ಹಿಂದಿನದನ್ನು ತಿರುಚುವ ಜನರಿಗೆ ಅಪಥ್ಯವಾಗುವ ಕಹಿ ಇದು.

*************

ಮಾದೋರುಬಾಗನ್ ಎತ್ತುವ ಪ್ರಶ್ನೆ ವ್ಯಕ್ತಿಯ ಬದುಕಿನ ಖಾಸಗಿ ವಲಯದಲ್ಲೂ ಅನಪೇಕ್ಷಿತವಾಗಿ ಮೂಗು ತೂರಿಸಿ ಬದುಕನ್ನು ಅಸಹನೀಯಗೊಳಿಸುವ ಸಾಮಾಜಿಕ ವಿಷಮತೆಯನ್ನು ಎಳೆಯಾಗಿ ಹೊಂದಿದೆ. ಈ ಕೃತಿಯನ್ನು ಜಾತಿ, ವರ್ಗ, ಲಿಂಗಗಳ ಹಿನ್ನೆಲೆಗಳಲ್ಲಿ ಅಭ್ಯಸಿಸಬಹುದಾದರೂ ಸದ್ಯಕ್ಕೆ ನಾನು ಇದನ್ನು ವ್ಯಕ್ತಿಯ ಖಾಸಗಿ ಬದುಕಿನ ಜೀವಂತಿಕೆಯನ್ನು ಕಸಿಯುವ ವ್ಯವಸ್ಥೆಯ ಮಧ್ಯಪ್ರವೇಶ ಎಂಬ ನೆಲೆಯಲ್ಲಿ ಗಮನಿಸುತ್ತಿದ್ದೇನೆ.

ತಮಿಳುನಾಡಿನಲ್ಲಿ ವ್ಯವಸಾಯದ ಕೆಲಸ ಮಾಡುತ್ತಾ ಬಂದಿರುವ ಗೌಂಡರ್ ಸಮುದಾಯದ ಪೊನ್ನ ಮತ್ತು ಕಾಳಿ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಿಲ್ಲದೆ ಬಳಲುವ ಕತೆ ಇದು. ಇವರಿಗೆ ಮಕ್ಕಳಿಲ್ಲ ಎನ್ನುವ ಸಣ್ಣ ಕೊರಗು ಇದ್ದರೂ ಅದು ಅವರ ನಡುವಣ ಪ್ರೀತಿಗೆ ಅಡ್ಡಿಯಾಗಿರುವುದಿಲ್ಲ. ಆದರೆ ಅವರ ದಿನನಿತ್ಯದ ಸನ್ನಿವೇಶಗಳಲ್ಲೆಲ್ಲ ಇದನ್ನು ಎತ್ತಿ ಆಡುವ ಸಮಾಜ ಅವರು ಬದುಕಿನ ಸಣ್ಣ ಸಂತೋಷಗಳಿಗೂ ಎರವಾಗುವ ಹಾಗೆ ಮಾಡುತ್ತದೆ. ಮದುವೆಯಾಗಿ ತಮ್ಮ ಬದುಕು ಹೇಗೆ ಸಾಗುತ್ತದೆ ಎಂದು ಅರಿವಾಗುವ ಮೊದಲೇ ಮಕ್ಕಳನ್ನು ಹೊತ್ತು, ಗೊತ್ತು ಗುರಿಯೇ ಇಲ್ಲದಂತೆ ಒಂದಾದ ಮೇಲೆ ಒಂದರಂತೆ ಹುಟ್ಟಿಸಿ, ಸಾಕಲು ಪಡಿಪಾಟಲು ಪಡುವವರೂ ಒಂದಿಷ್ಟೂ ಸ್ವ ಅವಲೋಕನ ಮಾಡಿಕೊಳ್ಳದಂತೆ ಇದೇ ಪರಮಸತ್ಯ ಎಂಬಂತೆ ಬದುಕುತ್ತಿರುತ್ತಾರೆ. ಇಂಥ ಎಲ್ಲರೂ ಕಾಳಿ ಮತ್ತು ಪೊನ್ನನ ಬದುಕು ಮಕ್ಕಳಿಲ್ಲದೇ ಅರ್ಥಹೀನ ಎಂದು ನಿರ್ಧರಿಸಿಬಿಡುತ್ತಾರೆ.

ಕೃಷಿಯ ಸಂದರ್ಭದಲ್ಲಿ ಬೀಜ ಬಿತ್ತಲು ನೆರವಾಗಲು ಹೋದ ಪೊನ್ನ, ಬಂಜೆ ಬಿತ್ತಿದರೆ ಇಳುವರಿ ಹೇಗೆ ಬರಲು ಸಾಧ್ಯ ಎಂಬ ಮಾತಿನಿಂದ ನೋಯುತ್ತಾಳೆ. ಯಾರ ಮಕ್ಕಳೇ ಆಗಲಿ ಮನೆಗೆ ಬಂದಾಗ ಪೊನ್ನಳಿಗೆ ಸಂಭ್ರಮ. ಅದೇ ಅವರು ಆಡುವಾಗ ತುಸು ಗಾಯ ಮಾಡಿಕೊಂಡರೂ ಮಕ್ಕಳೇ ಇಲ್ಲದ ಪೊನ್ನಳಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಗೊತ್ತಿದ್ದರೆ ತಾನೇ? ಎಂಬ ಚುಚ್ಚುಮಾತು ಅವಳನ್ನು ಘಾಸಿಗೊಳಿಸುತ್ತದೆ. ಶುಭಸಮಾರಂಭಗಳಿಗೆ ಹೋದರೂ ಅವಳ ಬಗ್ಗೆ ತಿರಸ್ಕಾರ ಅಥವಾ ಅನುಕಂಪ. ಹತ್ತು ವರ್ಷಗಳಿಂದಲೂ ಇವನ್ನೆಲ್ಲ ಅನುಭವಿಸಿ ಅನುಭವಿಸಿ ಪೊನ್ನ ಕುಗ್ಗುತ್ತಾ ಹೋಗುತ್ತಾಳೆ. ದಿನದಿಂದ ದಿನಕ್ಕೆ ಜನರೊಂದಿಗೆ ಬೆರೆಯುವುದನ್ನು ಕಡಿಮೆ ಮಾಡುತ್ತಾ ಒಂಟಿಯಾಗುತ್ತಾಳೆ.

ಆಕೆಯ ಗಂಡ ಕಾಳಿ ತನ್ನ ಗೆಳೆಯರ ಮಧ್ಯೆ ಕೈಲಾಗದವನು ಎಂಬ ಮಾತುಗಳಿಗೆ ಈಡಾಗಬೇಕಾಗುತ್ತದೆ. ಅವನಿಗೆ ಮಕ್ಕಳಿಲ್ಲದಿರುವುದರಿಂದ ಅವನ ನಂತರ ಆಸ್ತಿ ನಮ್ಮದಾಗಬೇಕು ಎಂದು ಹುಸಿ ಕಾಳಜಿ ತೋರಿಸುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಮಕ್ಕಳಿಲ್ಲದಿರುವುದರಿಂದ ನಿಮಗೇನು ಚಿಂತೆ, ಇರುವುದನ್ನು ಖರ್ಚು ಮಾಡಿ ಹಾಯಾಗಿದ್ದೀರಿ ಎನ್ನುವ ಭರ್ತ್ಸನೆಯ ಮಾತುಗಳು ನಿರಂತರ ಅವನನ್ನು ತಾಕುತ್ತಿರುತ್ತವೆ.

ಮಕ್ಕಳನ್ನು ಪಡೆಯುವುದಕ್ಕೆ ಇವರಿಬ್ಬರೂ ಯಾವ್ಯಾವ ಪೂಜೆ ಸಾಧ್ಯವೋ, ಯಾವ್ಯಾವ ಹರಕೆ ಸಾಧ್ಯವೋ ಎಲ್ಲವನ್ನೂ ಮಾಡುತ್ತಾರೆ. ತಮ್ಮ ಜೀವವನ್ನು ಪಣಕ್ಕೊಡ್ಡಿ ಕಷ್ಟಕರವಾದ ಹರಕೆಗಳನ್ನು ಪೂರೈಸುತ್ತಾರೆ. ಆದರೆ ಯಾವುದೂ ಪೊನ್ನಳ ಮಡಿಲನ್ನು ತುಂಬುವುದಿಲ್ಲ. ಪ್ರತಿತಿಂಗಳೂ ತಪ್ಪದೆ ಬರುವ ಸ್ರಾವ ಅವಳನ್ನು ಖಿನ್ನತೆಗೆ ದೂಡುತ್ತದೆ.

ಮನೆಯಲ್ಲಿ, ಮನೆಯ ಹೊರಗೆ ಎಲ್ಲ ಕಡೆಯಲ್ಲೂ ನಿರಂತರವಾದ ಇವೇ ಮಾತುಗಳಿಂದ ಇವರಿಬ್ಬರೂ ರೋಸಿ ಹೋಗುತ್ತಾರೆ. ಅದರಲ್ಲೂ ಹೆಚ್ಚು ಮಾತಿಗೆ ಆಹಾರವಾಗುವವಳು ಪೊನ್ನ. ಮಕ್ಕಳಿಲ್ಲದಿದ್ದರೆ ಅದಕ್ಕೆ ಹೆಣ್ಣೇ ಕಾರಣ ಎಂದು ದೂಷಿಸುವವರೇ ಜಾಸ್ತಿ. ಕೃಷಿ ಇಳುವರಿ ಚೆನ್ನಾಗೇ ಬರುತ್ತಿದ್ದರೂ ಕುರಿ ಕೋಳಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಮನೆಯಲ್ಲಿ ಮಾತ್ರ ಮಗುವಿನ ಕೇಕೆ ಇಲ್ಲವಲ್ಲ ಎಂಬ ಕೊರಗು ಎಲ್ಲ ಸಂದರ್ಭಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಇಣುಕಿ ಬದುಕಿಗೇ ಗ್ರಹಣ ಬಡಿದಂತಾಗುತ್ತದೆ.

ಆದರೆ ವೈಯಕ್ತಿಕವಾಗಿ ನೋಡಿದರೆ ಪೊನ್ನ-ಕಾಳಿಯರ ದಾಂಪತ್ಯದ ಬಿಸುಪು ಅಂದಿನಿಂದಲೂ ಕಾವು ಕಳೆದುಕೊಂಡಿಲ್ಲ. ಇಂದಿಗೂ ಪೊನ್ನಳ ನೆನಪೇ ಕಾಳಿಯಲ್ಲಿ ಹೊಸ ಹುರುಪು ತುಂಬುತ್ತದೆ. ಕಾಳಿಯ ಪ್ರತಿಯೊಂದು ಚಲನೆಯನ್ನೂ ಪೊನ್ನ ಬಲ್ಲಳು. ಅವರಿಗೆ ತಮ್ಮ ಸಂಬಂಧದಲ್ಲಿ ಯಾವ ಕೊರತೆಯೂ ಇಲ್ಲ, ಸುಖವಾಗಿಯೇ ಇದ್ದೇವೆ, ಯಾಕೆ ಅವರಿವರ ಮಾತಿಗೆ ಕಟ್ಟುಬಿದ್ದು ಮಕ್ಕಳಿಲ್ಲ ಎಂದು ಕೊರಗುವುದು ಎನಿಸುತ್ತದೆ. ಆದರೆ ಸುತ್ತಣ ಸಮಾಜ ಅವರು ಅವರ ಪಾಡಿಗೆ ಸುಖವಾಗಿ ಇರುವುದಕ್ಕೂ ಬಿಡುವುದಿಲ್ಲ.

ತಿರುಚಂಗೋಡಿನ ಅರ್ಧನಾರೀಶ್ವರ ದೇವಸ್ಥಾನದ ಜಾತ್ರೆಯ 14ನೇ ದಿನ ಮಕ್ಕಳಿಲ್ಲದವರಿಗೆ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಅಲ್ಲೆಲ್ಲ ಹಬ್ಬಿತ್ತು. ಮಕ್ಕಳಿಲ್ಲದ ಮಹಿಳೆಯರು ಆ ದಿನ ಮಟ್ಟಿಗೆ ಮಕ್ಕಳನ್ನು ಪಡೆಯುವ ಸಲುವಾಗಿ ದೇವರ ರೂಪವೇ ಎಂಬಂತೆ ಕಾಣುವ ಪುರುಷರ ಜೊತೆಗಿದ್ದು ಮಕ್ಕಳನ್ನು ಪಡೆಯುವ ಅವಕಾಶ ಅದು. ಅನೇಕ ಜನ ಮಕ್ಕಳಿಲ್ಲದವರು ಆ ದಿನ ಮಕ್ಕಳನ್ನು ಪಡೆದು ಆ ಮಕ್ಕಳು ದೇವರ ಮಕ್ಕಳೆನಿಸಿಕೊಂಡಿದ್ದರು.

ಕಾಳಿಯ ತಾಯಿ ಮತ್ತು ಪೊನ್ನಳ ಅತ್ತೆ ಸೇರಿ ಪೊನ್ನಳನ್ನು ಈ ಬಾರಿ ಜಾತ್ರೆಯ 14ನೇ ದಿನ ಕಳುಹಿಸಬೇಕು ಎಂದು ಅಂದುಕೊಳ್ಳುತ್ತಾರೆ. ಕಾಳಿಯ ತಾಯಿ ಅದನ್ನು ಮಗನ ಜೊತೆ ಯಾಚನೆಯ ರೀತಿಯಲ್ಲಿ ಹೇಳಿಕೊಳ್ಳುತ್ತಾಳೆ. ಆದರೆ ಆ ಯೋಚನೆಯೇ ಕಾಳಿಯ ನಿದ್ದೆ ಕೆಡಿಸುತ್ತದೆ. ಕೊರತೆಯಿಲ್ಲದ ತಮ್ಮ ಸಾಂಗತ್ಯಕ್ಕೆ ಬಿರುಕಾಗಬಹುದಾದ ಅದು ಕಾಳಿಗೆ ಸಹ್ಯವಾಗುವುದಿಲ್ಲ. ಕೊನೆಯಲ್ಲಿ ಕಾಳಿ ಒಪ್ಪಿದ್ದಾನೆ ಎಂದು ಪೊನ್ನಳನ್ನು ನಂಬಿಸಿ, ಕಾಳಿಯನ್ನು ಉಪಾಯದಿಂದ ಬೇರೆಡೆಗೆ ಕರೆದೊಯ್ದು ಅವಳನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ.

ನಿದ್ದೆ ತಿಳಿದು ಪೊನ್ನಳನ್ನು ಜ್ಞಾಪಿಸಿಕೊಂಡು ಮನೆಗೆ ಬಂದ ಕಾಳಿ ಮನೆಯ ಮುಂದೆ ಇರುವ ಗಾಡಿ ಕಾಣದಿರುವುದನ್ನು ಕಂಡು ತಾನು ಇವರೆಲ್ಲರ ಮೋಸಕ್ಕೆ ಬಲಿಯಾದೆ ಎಂದು ರೋದಿಸುತ್ತಾನೆ. ತಮ್ಮ ಪ್ರೀತಿಯ ಬದುಕು ಒಡೆಯಿತು ಎಂದು ಆಕ್ರೋಶದಿಂದ ‘ಕೊನೆಗೂ ಮೋಸ ಮಾಡಿದ್ಯಲ್ಲೆ, ಹಾದರಗಿತ್ತಿ…’ ಎಂದು ಹತಾಶನಾಗಿ ಕಿರುಚುತ್ತಾನೆ. ಈ ಸಂಚಿಗೆ ಪೊನ್ನ-ಕಾಳಿಯರ ಬೆಚ್ಚನೆಯ ಬದುಕು ಛಿದ್ರವಾಗುತ್ತದೆ.

************

ಮಾದೋರುಬಾಗನ್ ಕೃತಿಯನ್ನು ವಿರೋಧಿಸುವವರಲ್ಲಿ ಬಹಳ ಜನ ಅವರೇ ಒಪ್ಪಿಕೊಳ್ಳುವ ಹಾಗೆ ಅದನ್ನು ಸರಿಯಾಗಿ ಓದಿಕೊಂಡಿಲ್ಲ. ಕೃತಿಯ ಕೊನೆಯಲ್ಲಿ ತಿರುಚಂಗೋಡ್ ದೇವಸ್ಥಾನದ ಜಾone partತ್ರೆಯ ಹದಿನಾಲ್ಕನೇ ದಿನ ಮಕ್ಕಳಿಲ್ಲದ ಹೆಂಗಸರು ಆ ದಿನದ ಮಟ್ಟಿಗೆ ಮಕ್ಕಳನ್ನು ಪಡೆಯುವ ಸಲುವಾಗಿ ಪರಪುರುಷನ ಜೊತೆಗೆ ಸೇರಬಹುದಾದ ಸಡಿಲಿಕೆ ಇತ್ತು ಎನ್ನುವ ಸಂಗತಿಯನ್ನು ಮುಂದಿಟ್ಟುಕೊಂಡು ಒಂದಷ್ಟು ಜನ ಇದನ್ನು ವಿರೋಧಿಸಿದರು. ಮಾನವಶಾಸ್ತ್ರೀಯ ಅಧ್ಯಯನ ದೃಷ್ಟಿಯಿಂದ ಮಹತ್ವವಾದ ಈ ವಿಚಾರವನ್ನು ತಮ್ಮ ಅಧ್ಯಯನ ಮೂಲಕ ಕಂಡುಕೊಂಡ ಸೃಜನಶೀಲ ಲೇಖಕ ಪೆರುಮಾಳ್ ಮುರುಗನ್ ಅದನ್ನು ಸಮಾಜದ ವಿಷಮತೆಯೊಂದಿಗೆ ಸೂಕ್ಷ್ಮವಾಗಿ ಹೆಣೆದಿದ್ದಾರೆ. ಆದಿಮ ಸಂಸ್ಕೃತಿ ಎಂದು ಗುರುತಿಸಲಾಗುವ ಬುಡಕಟ್ಟು ಜನರ ಆಚರಣೆಗಳನ್ನು ಗಮನಿಸಿದಾಗ ವರ್ಷದ ನಿರ್ದಿಷ್ಟ ದಿನದಲ್ಲಿ ಗಂಡು-ಹೆಣ್ಣುಗಳ ಮುಕ್ತ ಸಮಾಗಮದ ಕುರುಹುಗಳು ಸಿಗುತ್ತವೆ. ಅಲ್ಲದೆ, ಫಲವಂತಿಕೆಯ ಆಶಯವೇ ಪ್ರಮುಖವಾಗಿರುವ ಕಡೆಗಳಲ್ಲಿ ಹೇಗಾದರೂ ಸರಿ, ವಂಶವನ್ನು ಮುಂದುವರಿಸಲು ಉತ್ತರಾಧಿಕಾರಿಯನ್ನು ಪಡೆಯುವುದು ಮುಖ್ಯವಾಗುತ್ತದೆ. ಮಹಾಭಾರತದ ನಿಯೋಗ ಪದ್ಧತಿ, ಮಲೆಮಾದೇಶ್ವರ ಕಾವ್ಯದಲ್ಲಿ ಬರುವ ಸಂಕವ್ವ ಮಗುವನ್ನು ಪಡೆಯುವ ಪ್ರಸಂಗ ಮುಂತಾದ ಹಲವು ಉದಾಹರಣೆಗಳು ಸಿಗುತ್ತವೆ.

ಮದುವೆ ಎನ್ನುವುದು ಪರಿಪೂರ್ಣವಾಗುವುದು ವರ್ಷದೊಳಗೆ ಮಗುವನ್ನು ಹೆರುವ ಮೂಲಕ ಎಂದು ಇಂದಿಗೂ ಬಹುತೇಕರು ನಂಬಿಕೊಂಡಿರುವ ಸಮಾಜ ನಮ್ಮದು. ಹೆಣ್ಣಿನ ಹೆಣ್ತನ ಪರಿಪೂರ್ಣವಾಗುವುದೇ ಗರ್ಭಾಶಯದ ಮೂಲಕ; ಗಂಡಿನ ಗಂಡಸುತನ ಸಾಬೀತು ಮಾಡುವುದಕ್ಕೆ ಅವನು ಹೇಗೆ ಹೆಣ್ಣನ್ನು ಆಳುತ್ತಾನೆ ಎಂಬುದೇ ಮಾನದಂಡ; ಅವನು ಎಷ್ಟು ಮಕ್ಕಳನ್ನು ಹುಟ್ಟಿಸುತ್ತಾನೆ ಎಂಬುದೇ ಅವನ ಪೌರುಷದ ದ್ಯೋತಕ ಎಂದಾದಾಗ ರೂಪುಗೊಳ್ಳುವ ಹೆಣ್ಣು-ಗಂಡಿನ ಮಾದರಿಗಳು ಎಂಥವಾಗಿರುತ್ತವೆ? ಅವು ಎಷ್ಟು ಅಪಾಯಕಾರಿ?

ಫಲವಂತಿಕೆಯ ಆಶಯವೇನೇ ಇರಲಿ, ಆದರೆ ವ್ಯಕ್ತಿತ್ವದ ಪರಿಪೂರ್ಣತೆಯನ್ನು ಕೇವಲ ವಂಶಾಭಿವೃದ್ಧಿ ಮಾಡುವ ಶಕ್ತಿಯಿಂದಲೇ ನಿರ್ಧರಿಸುವುದು ಲೈಂಗಿಕತೆ ಮತ್ತು ವ್ಯಕ್ತಿತ್ವದ ಸಮಗ್ರತೆಯ ಸಾಧ್ಯತೆಗಳನ್ನೇ ಕುಗ್ಗಿಸುವುದಿಲ್ಲವೇ? ಈ ದೃಷ್ಟಿಕೋನ ಮಹಿಳೆಯನ್ನು ಭೋಗಿಸಲು ಮತ್ತು ವಂಶೋದ್ಧಾರಕನನ್ನು ಹೆತ್ತುಕೊಡಲು ಇರುವ ಉಪಕರಣ ಎಂಬಂತೆ ಮಾತ್ರ ನೋಡುತ್ತದೆ. ತನ್ನೆಲ್ಲ ಶಕ್ತಿಯ ಆಚೆಗೆ ಹೆಣ್ಣನ್ನು ಬಸಿರು ಮಾಡದ ಗಂಡನ್ನು ನಿಷ್ಪ್ರಯೋಜಕನೆಂಬಂತೆ ನೋಡುತ್ತದೆ. ಈ ಮನೋವೃತ್ತಿ ತನ್ನ ಅತಿಯಲ್ಲಿ ಹೆಣ್ಣಿನ ದೇಹದ ಮೇಲೆ ಆಕ್ರಮಣ ಮಾಡುತ್ತದೆ. ಆಕ್ರಮಣ ಮಾಡಲಾಗದವನನ್ನು ಹೇಡಿ ಎಂದು ಝಂಕಿಸುತ್ತದೆ. ಇದು ಅತ್ಯಾಚಾರಕ್ಕೆ ಪ್ರೇರೇಪಿಸುವ ಮನೋವೃತ್ತಿಯತ್ತ ಒಯ್ಯುತ್ತದೆ.

ಇಂತಹ ಅನಾರೋಗ್ಯಕರ ಸ್ಥಿತಿಯನ್ನು ಮಾದೋರುಭಾಗನ್ ತೀವ್ರತೆಯೊಂದಿಗೆ ಚಿತ್ರಿಸುತ್ತದೆ ಅಷ್ಟೆ, ತೀರ್ಮಾನ ಕೊಡುವುದಿಲ್ಲ. ಆದರೆ ಸೂಕ್ಷ್ಮ ಓದುಗನಿಗೆ ಪೊನ್ನ-ಕಾಳಿಯರ ಬದುಕಿನ ಸಹಜ ಲಯ ತಪ್ಪಿ ಅವರು ಬದುಕಿನ ಎಲ್ಲ ಸಂಗತಿಗಳಲ್ಲೂ ಉತ್ಕಟತೆಯಿಂದ ತೊಡಗಿಕೊಳ್ಳುವ ಶಕ್ತಿ ಇದ್ದೂ ಎಲ್ಲವನ್ನೂ ಕಳಕೊಂಡವರಂತೆ ನಿಸ್ತೇಜರಾಗುವುದು ಕಾಡುತ್ತಾ ಹೋಗುತ್ತದೆ. ಕೊನೆಗೂ ಇಂತಹ ವಿಷವರ್ತುಲದಲ್ಲಿ ಅವರನ್ನು ಎಳೆದ ಸಮಾಜ ಅದಕ್ಕೆ ಪರಿಹಾರವಾಗಿ ಒದಗಿಸುವ ಸಂದರ್ಭ ಇವರ ಬದುಕಿನ ಮೂಲಸೆಲೆಯನ್ನೇ ಬತ್ತಿಸಿಬಿಡುತ್ತದೆ. ತಿರುಚಂಗೋಡಿಗೆ ಹೋದ ಪೊನ್ನ, ಮೋಸ ಹೋದ ಕಾಳಿ ಇಬ್ಬರೂ ಮಗುವನ್ನು ಪಡೆದರೂ ಬದುಕನ್ನು ಮುನ್ನಡೆಸುವ ಪ್ರೀತಿಯ ಸೆಲೆಯನ್ನೇ ಕಳೆದುಕೊಂಡಿರುತ್ತಾರೆ. ತಾನೇ ಸೃಷ್ಟಿಸಿದ ಸಮಸ್ಯೆಗೆ ತಾನೇ ನೀಡುವ ಪರಿಹಾರ ಸಮಸ್ಯೆಯನ್ನು ಆಳವಾಗಿಸಿ ಜೀವನಪ್ರೀತಿಯ ಎರಡು ಜೀವಗಳ ಉಲ್ಲಾಸವನ್ನು ಕಸಿಯುವಲ್ಲಿ ಕೊನೆಗೊಳ್ಳುತ್ತದೆ.

ಈ ಕೃತಿ 2010ರಲ್ಲೇ ಬಂದಿದ್ದರೂ ಯಾಕೆ 2015ರಲ್ಲಿ ಈ ಮಟ್ಟಿಗಿನ ವಿರೋಧಕ್ಕೆ ಈಡಾಯಿತು ಎಂದು ನೋಡಲು ಹೋದರೆ ಬಿಜೆಪಿ ನೇತೃತ್ವದ ಎನ್.ಡಿ.ಎ ಬಹುಮತ ಪಡೆದು ಸರ್ಕಾರ ರೂಪಿಸಿದ ಹಿನ್ನೆಲೆಯಲ್ಲಿಯೇ ದೇಶದ ಎಲ್ಲೆಡೆ ಮತೀಯ ಶಕ್ತಿಗಳು ಬಲಪಡೆದುಕೊಂಡವು. ತಮಿಳು ನಾಡಿನಲ್ಲಿಯೂ ಬಲಪಡೆದುಕೊಂಡ ಇಂತಹುದೇ ಶಕ್ತಿಗಳು ಲೇಖಕ ಪೆರುಮಾಳ್ ಮುರುಗನ್ ಅವರನ್ನು ಗುರಿಯಾಗಿಸಿಕೊಂಡವು. ಅವರು ಈ ಕೃತಿಗೆ ತೋರಿದ ವಿರೋಧವನ್ನು ತಾರ್ಕಿಕವಾಗಿಯೇ ವಿವರಿಸಬಹುದು. ದೇಶದ ಉದ್ಧಾರಕ್ಕಾಗಿ ನಾಲ್ಕು ಮಕ್ಕಳನ್ನು ಹೆರಬೇಕು ಎನ್ನುವವರಿಗೆ, ಮಹಿಳೆಯ ಲೈಂಗಿಕತೆಯ ಮೇಲೆ ಮಾತ್ರ ಕಡಿವಾಣ ಹಾಕುವವರಿಗೆ, ಪೌರುಷವನ್ನು ವಿಜೃಂಭಿಸುವವರಿಗೆ ಈ ಕೃತಿ ಎತ್ತುವ ಪ್ರಶ್ನೆ ತಮ್ಮನ್ನೇ ಪ್ರಶ್ನಿಸಿದಂತೆ ಅನಿಸಿದರೆ ಅಚ್ಚರಿಯೇನಿಲ್ಲ್ಲ. ಸಮಾಜವೇ ಎತ್ತಿ ತೋರಿಸಿ, ವಿಜೃಂಭಿಸಿದ ಕೊರತೆಗೆ ಅದೇ ಸೂಚಿಸುವ ಪರಿಹಾರ ವಿಕೃತ ಎನಿಸಿದರೆ, ಚರಿತ್ರೆಯ ಕೊಳಕು ಎನಿಸಿದರೆ ಅವರನ್ನೇ ಕೇಳಬೇಕು, ಹೆಣ್ಣು ಗರ್ಭಪಾತ್ರೆ ಎನ್ನುವಂತೆ ಇಂದಿಗೂ ನೀವು ಮಾತಾಡುತ್ತಿರುವುದು ಏಕೆ? ಅವಳನ್ನು ಆಡಿ ಆಡಿ ಹಿಂಸಿಸುವ ಸಮಾಜ ಅವಳು ಒಮ್ಮೆ ಇವರ ಬಾಯಿಯಿಂದ ಪಾರಾದರೆ ಸಾಕು ಎಂಬಂತೆ ಲಭ್ಯವಿರುವ ಆಸರೆಗಳ ಮೊರೆ ಹೋದರೆ ಅನೈತಿಕ ಏಕಾಗುತ್ತದೆ? ಫಲವಂತಿಕೆಯ ಅಶಯವೇ ಪ್ರಧಾನವಾಗುಳ್ಳ ಪ್ರಾಚೀನ ಸಮುದಾಯಗಳು ಮಕ್ಕಳನ್ನು ಪಡೆಯಲು ಇದ್ದ ಅವಕಾಶಗಳನ್ನು ಮಾನವಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಬೇಕೇ ಹೊರತು ಅದರ ಚಿತ್ರಣ ಪರಂಪರೆಗೆ ಮಾಡಿದ ಅಪಚಾರ ಎನ್ನುವುದು ಚರಿತ್ರೆಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಒತ್ತಾಯದಿಂದ ಹೊರಟಿದೆ.

ಬದುಕಿನಲ್ಲಿ ಯಾರಿಗೂ ಇರಬಹುದಾದ ಹಲವು ಕೊರತೆಗಳಂತೆ ಇದೂ ಒಂದು ಕೊರತೆ ಎನ್ನುವಷ್ಟಕ್ಕೇ ಬಿಡದೆ ವ್ಯಕ್ತಿಗಳನ್ನು ಬೆಂಬಿಡದೆ ಕಾಡುವ ಸಮಾಜದ ಹುಳುಕಿಗೆ ಕನ್ನಡಿ ಹಿಡಿದ ಲೇಖಕ ಪೆನ್ನನ್ನೇ ಕೆಳಗಿಡುವ ಸಂದರ್ಭ ಬಂದಿದೆ ಎಂದರೆ ಇಲ್ಲಿ ಸತ್ತಿರುವುದು ಸ್ವವಿಮರ್ಶೆ ಮಾಡಿಕೊಳ್ಳಬೇಕಾದ ಸಮಾಜದ ಅಂತಃಸಾಕ್ಷಿ, ಕೊಲ್ಲಲ್ಪಟ್ಟಿರುವುದು ಲೇಖಕ.