Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

ಕಾಶ್ಮೀರ ಪ್ರತ್ಯೇಕತಾವಾದ, ಪಾಕಿಸ್ತಾನ್ ಜಿಂದಾಬಾದ್ ಮತ್ತು ಸಂವಿಧಾನ

Naveen Soorinje


ನವೀನ್ ಸೂರಿಂಜೆ


 

 

ಒಂದು ವೇಳೆ ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆದಲ್ಲಿ ಅದು ದೇಶದ್ರೋಹ ಆಗುತ್ತದೆಯೇ? ಅಷ್ಟಕ್ಕೂJNU ಪಾಕಿಸ್ತಾನವು ಭಾರತದ ಅಧಿಕೃತ ಶತ್ರು ರಾಷ್ಟ್ರ ಎಂದು ಭಾರತದ ಸಂವಿಧಾನವೇನೂ ದಾಖಲಿಸಿಲ್ಲ. ಅಂತಹ ಕಾನೂನುಗಳೂ ಇಲ್ಲ. ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಸಮಸ್ಯಾತ್ಮಕವಾಗಿದೆ ಎಂಬುದೇನೋ ನಿಜ. ಅಂದಮಾತ್ರಕ್ಕೆ ಆ ದೇಶ ಶಾಶ್ವತವಾಗಿ ನಮ್ಮ ಅಹಿತ ನೆರೆಹೊರೆಯಾಗಿಯೇ ಇರುತ್ತದೆ ಎಂದು ಕಲ್ಪಿಸಿಕೊಳ್ಳುವುದು ಕೇವಲ ಭ್ರಾಂತಿಯಾಗುತ್ತದೆ. ಸುಧಾರಣೆಗೆ ಅವಕಾಶಗಳು ಇದ್ದೇ ಇರುತ್ತವೆ. ಪ್ರಧಾನಿ ಮೋದಿಯವರು ಪಾಕ್ ನೇತಾರ ನವಾಜ್ ಶರೀಫರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹಠಾತ್ತನೆ ಆ ದೇಶಕ್ಕೆ ಭೇಟಿ ನೀಡಿರುವುದು ಅಂತಹ ಸಹಜ ಭವಿಷ್ಯದ ಅಪೇಕ್ಷೆಯಿಂದಲೇ.

ಒಂದುವೇಳೆ ಸಧ್ಯೋಭವಿಷ್ಯದಲ್ಲಿ ಸಂಬಂಧಗಳು ಸುಧಾರಣೆಗೊಂಡು, ಸಹಜತೆ ನೆಲೆಸಿದಲ್ಲಿ ಮತ್ತು ಅಂತಹ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳು ಕೂಗಲ್ಪಟ್ಟರೆ ಅವುಗಳ ಸ್ವೀಕರಣೆ ಹೇಗಿರುತ್ತದೆ? ನಮ್ಮಲ್ಲಿ ಅಮೇರಿಕಾ ಪರ, ಇಸ್ರೇಲ್ ಪರ ಅಥವಾ ಇಂಗ್ಲಂಡ್ ಪರ ಘೋಷಣೆ ಕೂಗಿದ್ದು ಎಂದಾದರೂ ದೇಶದ್ರೋಹವೆಂದು ಪರಿಗಣಿತವಾಗಿದ್ದಿದೆಯೇ? ಬೇರೆ ದೇಶಗಳ ಮಾನವ ಹಕ್ಕುಗಳಿಗೆ ಧಕ್ಕೆಯಾದಾಗ ಭಾರತ ಸೇರಿದಂತೆ ಯಾವುದೇ ರಾಷ್ಟ್ರವು ಸಂತ್ರಸ್ತ ದೇಶದ ಪರ ವಹಿಸುವುದು ವಾಡಿಕೆಯಲ್ಲವೇ? ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಾಸೀಂ ಅಕ್ರಮ್ ಅಥವಾ ಶಾಹಿದ್ ಅಫ್ರೀದಿ ಮಿಂಚುತಿದ್ದಾಗ ಅಭಿಮಾನದಿಂದ ಚಪ್ಪಾಳೆ ತಟ್ಟುವುದು, ಘೋಷಣೆ ಕೂಗುವುದು ಅಥವಾ ಕೇಕೆ ಹಾಕುವುದು ದೇಶದ್ರೋಹವಾಗುತ್ತದೆಯೇ? ಕೆಲ ದಿನಗಳ ಹಿಂದೆ ಭಾರತದ ಕ್ರಿಕೆಟಿಗ ವಿರಾಟ್ ಕೋಹ್ಲಿಯ ಪಾಕ್ ಅಭಿಮಾನಿಯೊಬ್ಬ ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಅಭಿಮಾನ ವ್ಯಕ್ತಪಡಿಸಿದ್ದಕ್ಕಾಗಿ ಪೋಲಿಸರಿಂದ ಬಂಧಿಸಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದು ಜೆ.ಎನ್.ಯು ಕ್ಯಾಂಪಸ್ಸಿನಲ್ಲಿ ನಮ್ಮ ಪೋಲೀಸರು ವರ್ತಿಸಿದ ರೀತಿ ಅಥವಾ ನಂತರದಲ್ಲಿ ಇಲ್ಲಿಯ ಬಲಪಂಥೀಯ ಸಂಘಟನೆಗಳು ಮತ್ತು ಅರ್ನಾಬ್ ಗೋಸ್ವಾಮಿ ಥರದ ಹೈಪರ್ ರಾಷ್ಟ್ರೀಯವಾದಿಗಳ ಅತಿರೇಕದ ವರ್ತನೆಗಳಿಗಿಂತ ಭಿನ್ನವಾಗಿದೆಯೇ? ಅಂದರೆ ಒಂದು ಘೋಷಣೆಗೆ ಕುಸಿದು ಬೀಳುವಷ್ಟು ದುರ್ಬಲವಾಗಿವೆಯೇ ಆಧುನಿಕ ರಾಷ್ಟ್ರಗಳು?

ಅಷ್ಟಕ್ಕೂ ಒಂದು ದೇಶದಲ್ಲಿ ಮತ್ತೊಂದು ದೇಶದ ಪರ ಘೋಷಣೆ ಕೂಗುವ ಕನಿಷ್ಠ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ? ಯಾವುದೇ ದೇಶದKanhaiya-Kumar-JNU ಆಡಳಿತೆ ನಡೆಯುವುದು ಆ ನೆಲದ ಕಾನೂನಿಗೆ ಅನುಗುಣವಾಗಿಯೇ ಹೊರತು ಅಲ್ಲಿಯ ಯಾವುದೇ ಪುಂಡು ದೇಶಭಕ್ತರ ಅಥವಾ ಮೀಡಿಯಾ ಜಡ್ಜುಗಳ ಖಯಾಲಿಗೆ ಅನುಗುಣವಾಗಿ ಅಲ್ಲ. ಮಾನಹಾನಿ, ರಾಷ್ಟ್ರದ್ರೋಹ ಅಥವಾ ಭಾವನೆಗಳಿಗೆ ಘಾಸಿ ಮೊದಲಾದ ನೆಪಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಂವಿಂಧಾನಿಕ ಉಪಬಂಧಗಳನ್ನು ಮೀರಿ ಮಿತಿಗಳನ್ನು ಹೇರುವ ಪ್ರಯತ್ನಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇವೆ. ಜೆ.ಎನ್.ಯು ಪ್ರಕರಣವೂ ಅಂತಹದ್ದೇ ಪ್ರಯತ್ನದ ಒಂದು ಭಾಗವಾಗಿದೆ. ದೇಶದ ಖ್ಯಾತ ಕಾನೂನು ತಜ್ಞ ಮತ್ತು ಮಾಜಿ ಅಟಾರ್ನಿ ಜನರಲ್ ಶ್ರೀ ಸೋಲಿ ಸೊರಾಬ್ಜಿಯವರು ಜೆ.ಎನ್.ಯು ಕ್ಯಾಂಪಸ್ಸಿನಲ್ಲ ಕೂಗಲ್ಪಟ್ಟ ಘೋಷಣೆಗಳು ಸಮಸ್ಯಾತ್ಮಕವಾಗಿದ್ದರೂ ಅವು ದೇಶದ್ರೋಹದ ಆಪಾದನೆಯ ಪರಿಧಿಯಲ್ಲಿ ಬರುವುದಿಲ್ಲ ಎಂಬುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಕೇದಾರನಾಥ್ ಪ್ರಕರಣ (1962) ದಲ್ಲಿ ಸೆಕ್ಷನ್ ೧೨೪ ರ ಸಾಂವಿಧಾನಿಕ ಅನ್ವಯಿಕತೆಯನ್ನು ಸ್ಪಷ್ಟಪಡಿಸಿದೆ. ಅಲ್ಲಿಯ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಲಯವು ಸೆಡೀಶನ್ ವಿಧಿಯ ವ್ಯಾಪ್ತಿಯನ್ನು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆjnu-kanhaiya-kumar-arrest-protest ಮತ್ತು ಹಿಂಸೆಗೆ ಪ್ರಚೋದನೆ ನೀಡಬಲ್ಲ ಮಾತು ಅಥವಾ ಕೃತ್ಯಗಳಿಗೆ ಮಾತ್ರವೇ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಅಂದರೆ, ಸೋರಾಬ್ಜಿಯವರು ಅಭಿಪ್ರಾಯ ಪಡುವಂತೆ, ಕೇವಲ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗುವುದು ನಾವೇ ಒಪ್ಪಿಕೊಂಡಿರತಕ್ಕಂತಹ ಕಾನೂನು ಕಟ್ಟಳೆಗಳ ಪ್ರಕಾರ ರಾಷ್ಟ್ರದ್ರೋಹ ಅಲ್ಲ. ಹೆಚ್ಚೆಂದರೆ ಅದು ಒಂದು ಗುಂಪಿಗೆ ಸಿಟ್ಟು ತರಬಹುದಾದ, ಅಸಮಾಧಾನ ಉಂಟುಮಾಡಬಹುದಾದ ಆದರೆ ಸಹಜವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಸ್ವರೂಪ ಅಷ್ಟೇ. ‘ನೋವುಂಟುಮಾಡುತ್ತದೆ’ ಎಂಬುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯ ನಿರ್ಧಾರಕ್ಕೆ ಒಂದು ಮಾನದಂಡ ಅಗುವುದು ಸ್ಪಷ್ಟವಾಗಿ ಅಪ್ರಜಾಸತ್ತಾತ್ಮಕ. ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಹೇಳಿಕೆಯೊಂದನ್ನು ಘನವೆತ್ತ ಕಾನೂನು ಚಿಂತಕ ಫಾಲಿ ಎಸ್ ನಾರಿಮನ್ ಹೀಗೆ ಉಲ್ಲೇಖಿಸುತ್ತಾರೆ: “Speech is really free only when it hurts”.

ಪ್ರಜೆಗಳು ತಮ್ಮ ರಾಷ್ಟ್ರದ ವಿರುದ್ಧ ಘೋಷಣೆ ಕೂಗುವಂತಹ ಘಟನೆಗಳು, ಚಳುವಳಿಗಳು ವಿಶ್ವದಾದ್ಯಂತ ನಡೆಯುತ್ತಲೇ ಇವೆ. ಅದನ್ನು ಜಗತ್ತಿನ ನಾಗರಿಕ ರಾಷ್ಟ್ರಗಳು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಬಂದಿವೆ. ಅಂಥ ವರ್ತನೆಗಳನ್ನು ಅಭಿವ್ಯಕ್ತಿ ಸ್ವಾಂತಂತ್ರ್ಯದ ಭಾಗವಾಗಿಯೇ ಅವು ಪರಿಗಣಿಸುತ್ತಿವೆ. ಸ್ಕಾಟ್ಲಂಡ್ ಪ್ರಾಂತ್ಯದಲ್ಲಿ ಅದು ಬ್ರಿಟನ್ ದೇಶದಿಂದ ಪ್ರತ್ಯೇಕವಾಗುವ ದಿಕ್ಕಿನಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಕೆನಾಡದಿಂದ ಕ್ಯೂಬೆಕ್, ಸ್ಪೇಯ್ನ್ ದೇಶದಿಂದ ಬಾಷ್ಕ್ ಪ್ರಾಂತ್ಯ ಬೇರೆಯಾಗಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ಆ ದೇಶಗಳು ವರ್ತಿಸುತ್ತಿರುವ ರೀತಿ ಭಾರತಕ್ಕೆ ಒಂದು ಮಾದರಿ. ಆ ದೇಶಗಳು ಸೆಡೀಷನ್ ವಿಧಿಯನ್ನು ನಮ್ಮಂತೆ ಸ್ವೇಚ್ಚೆಯಿಂದ ಬಳಸುತ್ತಿವೆಯೇ ಎಂಬುವುದನ್ನು ನಮ್ಮ ಮೀಡಿಯಾದ ಪ್ರಭೃತಿಗಳು,jnu-agitation ಬಲಪಂಥೀಯ ಸಂಘಟನೆಗಳು ನೋಡಬೇಕು. ಸ್ಕಾಟ್ಲೆಂಡ್ ಚಳುವಳಿಯ ಮಾದರಿಯಲ್ಲಿ, ನಮ್ಮ ದೇಶದಲ್ಲಿ ಕಾಶ್ಮೀರ ಪ್ರಾಂತ್ಯವು ಪ್ರತ್ಯೇಕವಾಗಬೇಕೆಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಅಂತಹ ಸಂಧರ್ಭದಲ್ಲಿ ಸ್ಕಾಟ್ಲಂಡಿನಲ್ಲಿ ಬ್ರಿಟನ್ ವಿರುದ್ಧ ಘೋಷಣೆಗಳು ಮೊಳಗಿದಂತೆ ಇಲ್ಲಿ ಭಾರತ ವಿರೋಧಿ ಕೂಗುಗಳು ಕೇಳಬಹುದು. ಮತ್ತು ಅದು ಪ್ರತ್ಯೇಕತಾ ಚಳುವಳಿಗಳ ಸಹಜ ಪ್ರವೃತ್ತಿಯೇ ಆಗಿರುತ್ತದೆ. ಪ್ರತ್ಯೇಕತೆಯ ಬೇಡಿಕೆಗಳನ್ನು, ಅಲ್ಲಿಯ ಜನರ ಆಶೋತ್ತರಗಳನ್ನು ನಾವು ವಸ್ತುನಿಷ್ಠ ನೆಲೆಯಲ್ಲಿ ನಾವು ಅನುಸಂಧಾನ ಮಾಡಬೇಕೇ ಹೊರತು ರಾಷ್ಟ್ರದ್ರೋಹದ ಪ್ರಕರಣಗಳಂತಹ ಕ್ಷುಲ್ಲಕ ವಿಧಾನಗಳಿಂದ ಅಲ್ಲ. ಅಂತಹ ಪ್ರಾಂತ್ಯದ ಸರ್ವತೋಮುಖ ಅಭಿವೃಧ್ಧಿಗೆ ನಾವು ಮಾಡಿರುವ, ಮಾಡುತ್ತಿರುವ ಅಥವಾ ಮಾಡಬಹುದಾದ ನಮ್ಮ ಪ್ರಯತ್ನಗಳು ಪ್ರತ್ಯೇಕತಾ ಬೇಡಿಕೆಗಳಿಗೆ ಉತ್ತರವಾಗಬೇಕು. ಅವಾಗಲೇ ಸ್ಕಾಟ್ಲಂಡ್ ನಲ್ಲಿ ನಡೆದ ಜನಮತಗಣನೆಯಲ್ಲಿ ಹೇಗೆ ಬಹು ಸಂಖ್ಯೆಯ ಸ್ಕಾಟಿಷ್ ಜನರು ಪ್ರತ್ಯೇಕತೆಯ ವಿರುದ್ಧ ಮತ ಹಾಕಿದರೋ ಅಂತಹ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತವೆ. ಆದರೆ ಕಾಶ್ಮೀರ ಪ್ರಾಂತ್ಯದ ಅಭಿವೃದ್ಧಿ ಹಾಗೂ ಅಲ್ಲಿಯ ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಅಂತಹ ಕಲ್ಪನೆಗಳನ್ನು ಇಟ್ಟುಕೊಳ್ಳಬಹುದೇ?

ಸದ್ಯ, ‘ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ, ಅಫ್ಜಲ್ ಪರ ಘೋಷಣೆ ಕೂಗಿಲ್ಲ’ ಎಂದು ಮಾನವ ಹಕ್ಕು ಕಾರ್ಯಕರ್ತರು, ಪ್ರಗತಿಪರರು ಮತ್ತು ಚಿಂತಕರು ವಾದಿಸುತ್ತಿದ್ದಾರೆ. ಅದಕ್ಕಾಗಿ ಬಂಧಿತ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯರ ಭಾಷಣವನ್ನು ಮತ್ತೆ ಮತ್ತೆ ಪ್ರಸ್ತುತಪಡಿಸಿ “ನೋಡಿ, ಇದರಲ್ಲಿ ದೇಶವಿರೋಧಿ ಘೋಷಣೆ ಏನಿದೆ? ಪಾಕ್ ಪರ ಘೋಷಣೆ ಇದರಲ್ಲಿ ಇಲ್ಲ. ಅಫ್ಜಲ್ ಗುರು ಬಗ್ಗೆ ಭಾಷಣದಲ್ಲಿ ಉಲ್ಲೇಖವೇ ಇಲ್ಲ” ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಇದು ಬಹಳ ಅಪಾಯಕಾರಿಯಾದ ವಾದ. ಅಂತಹ ಪ್ರತಿಪಾದನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಕುಗ್ಗಿಸುವ ಬಲಪಂಥೀಯರ ಪಿತೂರಿಗೆ ಇಂಬು ಕೊಟ್ಟಂತೆ. ಜೆ.ಎನ್.ಯು ಹೋರಾಟ ಬಲಪಂಥೀಯರನ್ನು ಹಿಮ್ಮೆಟ್ಟುವ ವಿಚಾರದಲ್ಲಿ ತಕ್ಕ ಮಟ್ಟಿಗೆABVP ಯಶಸ್ವಿಯಾಗಬಹುದು. ಆದರೆ ಪ್ರತ್ಯೇಕತೆಯ ಬಗ್ಗೆ ಅಥವಾ ಘೋಷಣೆಯಂತಹ ಕ್ಷುಲ್ಲಕ ವಿಚಾರಗಳಲ್ಲಿ ಬಲಪಂಥೀಯ ಸಂಘಟನೆಗಳು ನಿರ್ಣಯಿಸಿರುವ ಕುತ್ಸಿತ ಸ್ವರೂಪದ ರಾಷ್ಟ್ರೀಯತೆಯ ವ್ಯಾಖ್ಯಾನಗಳಿಗೆ ಮಾನ್ಯತೆ ದೊರತಂತೆ ಕಾಣುತ್ತದೆ. ಇದು ಆತಂಕದ ವಿಚಾರ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದರ ಪೂರ್ಣ ಸಾಂವಿಧಾನಿಕ ನೆಲೆಯಲ್ಲಿ ಸಾಕ್ಷತ್ಕರಿಸುವ ದಿಶೆಯಲ್ಲಿ ಕಾರ್ಯಶೀಲರಾಗುವುದು ಅವಶ್ಯ. ಅದನ್ನು ಹರಣಮಾಡುವ, ಮಿತಿಗೊಳಿಸುವ ಪ್ರತಿಗಾಮಿಗಳ ಟ್ರ್ಯಾಪ್ ಗೆ ಬೀಳಲೇಬಾರದು. ಯಾವುದೇ ದೇಶದಲ್ಲಿ ಆ ದೇಶದ ಪ್ರಭುತ್ವ ಜೀವ ವಿರೋಧಿಯಾಗಿ ವರ್ತಿಸಿದಾಗ ಅದನ್ನು ಪ್ರಶ್ನಿಸುವ, ಅದರ ವಿರುದ್ಧ ಗಟ್ಟಿ ದ್ವನಿಯಲ್ಲಿ ಮಾತನಾಡುವ ಸ್ವಾತಂತ್ರ್ಯ ಇರಲೇಬೇಕು. ಕಾಶ್ಮೀರ ಸ್ವಾತಂತ್ರ್ಯವಾಗಬೇಕು ಎಂಬಂಥ ಅಹಿಸಾತ್ಮಕ ಘೋಷಣೆಗಳು ಅಥವಾ ಅಂತಹ ವಿಚಾರದ ಕುರಿತಾದ ಕಮ್ಮಟ, ಶಿಬಿರ ಹಾಗೂ ಚರ್ಚಾಕೂಟಗಳು ಕೂಡಾ ಸದ್ಯದ ಕಾನೂನುಗಳ ಪ್ರಕಾರ ದೇಶವಿರೋಧಿ ಆಗೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನ ಮತೀಯರಿಗೆ ನಿರ್ಭೀತ ಅವಕಾಶ ಸಹಜವಾಗಿಯೇ ಇರುತ್ತದೆ. ಮುಕ್ತ ಸಮಾಜಗಳು ಅಹಿಂಸಾತ್ಮಕ ಪ್ರತ್ಯೇಕತಾವಾದಿಗಳನ್ನು ಜೈಲಿಗೆ ಹಾಕುವುದಿಲ್ಲ (Free societies do not jail non-violent secessionists) ಎಂದು ಖ್ಯಾತ ಅರ್ಥ ಶಾಸ್ತ್ರಜ್ಞ ಮತ್ತು ಚಿಂತಕ ಸ್ವಾಮಿನಾಥನ್ ಅಯ್ಯರ್ ಅಭಿಪ್ರಾಯ ಪಡುತ್ತಾರೆ. ಅಂತಹ ಮುಕ್ತ ಸಮಾಜದ ನಿರ್ಮಾಣಕ್ಕೆ ನಾವು ತುಡಿಯಬೇಕು. ಇಲ್ಲವಾದಲ್ಲಿ ಮುಂದೆ ಕಾಶ್ಮೀರದ ಬಗ್ಗೆ ಮಾತಾಡುವ ಪ್ರತಿಯೊಬ್ಬ ಚಿಂತಕನೂ ದೇಶದ್ರೋಹದ ಅಪಾದನೆಯ ಅಡಿಯಲ್ಲಿ, ಪ್ರಭುತ್ವದ ಕೈಯಲ್ಲಿ ಬಂಧಿಯಾಗುವ ಅಪಾಯವಿರುತ್ತದೆ. ಮತ್ತು ಅಂತಹ ಸಂದರ್ಭದಲ್ಲಿ ಇಂದಿನ ನಮ್ಮ ವರ್ತನೆ ವಿರೋಧಾಭಾಸವಾಗಿ ಅಂದು ನಮ್ಮನ್ನು ಭೂತದಂತೆ ಕಾಡುತ್ತದೆ.

 

ಉಮರ್ ಖಾಲಿದ್ ಭಾಷಣದ ಬರಹ ರೂಪ

Naveen Soorinje


-ಅನುವಾದ : ನವೀನ್ ಸೂರಿಂಜೆ


 

 

ಲಾಲ್ ಸಲಾಂ, ಲಾಲ್ ಸಲಾಂ, ವೀರ್ ಸೆಲ್ಯೂಟ್, ರೆಡ್ ಸೆಲ್ಯೂಟ್, ರೆಡ್ ಸೆಲ್ಯೂಟ್ ಟು ಕಾಮ್ರೇಡ್ ಎಂದು ವಿದ್ಯಾರ್ಥಿಗಳ ಭಾರೀ ಉದ್ಘೋಷದ ಜೊತೆ ದೇಶದ್ರೋಹಿ ಆರೋಪ ಹೊತ್ತ ಜೆ ಎನ್ ಯು ವಿದ್ಯಾರ್ಥಿ ಉಮ್ಮರ್ ಖಾಲಿದ್ ಮಾತನಾಡುತ್ತಿದ್ದಾರೆ. ಕೇಳಿ.

ಸ್ನೇಹಿತರೇ,

ನನ್ನ ಹೆಸರು ಉಮರ್ ಖಾಲಿದ್. ಆದರೆ ನಾನು ಭಯೋತ್ಪಾದಕ ಅಲ್ಲ.

ಮೊದಲನೆಯದಾಗಿ ಈ ಹೋರಾಟದಲ್ಲಿ ಭಾಗವಹಿಸಿದ ಮತ್ತು ವಿದ್ಯಾರ್ಥಿಗಳಾದ ನಮಗೆ ಬೆಂಬಲವನ್ನು ನೀಡಿದ ಪ್ರತಿಯೊಬ್ಬ ಜೆಎನ್ ಯು ಪ್ರಾಧ್ಯಾಪಕರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಈ ಹೋರಾಟ ಕೇವಲ ನಮ್ಮ ನಾಲ್ಕೈದು ಜನರದ್ದಾಗಿರಲಿಲ್ಲ. ಈ ಹೋರಾಟ ನಮ್ಮೆಲ್ಲರ ಹೋರಾಟವಾಗಿದೆ. ಈ ಹೋರಾಟ ಕೇವಲ ಈ ಜೆಎನ್ ಯು ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವೇ ಇಲ್ಲ, ಇದೊಂದು ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳ ಹೋರಾಟವಾಗಿದೆ. ಅಷ್ಟಕ್ಕೇ ಸೀಮಿತವಾಗದೆ ಇದು ಇಡೀಯ ಸಮಾಜದ ಹೋರಾಟವಾಗಿದೆ. ಮುಂದಿನ ಪೀಳಿಗೆಯ ಸಮಾಜ ಹೇಗಿರಬೇಕೆಂಬುದರ ಸೂಚಕ ಈ ಹೋರಾಟ.

ಗೆಳೆಯರೇ

ಈ ಕೆಲ ದಿನಗಳಲ್ಲಿ ನನ್ನ ಬಗ್ಗೆ ನನಗೇ ಗೊತ್ತಿಲ್ಲದ ಹಲವಾರು ವಿಷಯಗಳನ್ನು ತಿಳಿದುಕೊಂಡೆ. ನಾನು ಎರಡು ಬಾರಿ ಪಾಕಿಸ್ತಾನ ಹೋಗಿ ಬಂದಿದ್ದೇನೆ ಎಂದು ನನಗೇ ಇತ್ತಿಚೆಗೆೆ ತಿಳಿಯಿತು. ನನ್ನ ಬಳಿ ಪಾಸ್ ಪೋರ್ಟೇ ಇಲ್ಲ. ಹಾಗಿದ್ದರೂ ನಾನು ಪಾಕಿಸ್ತಾನ ಹೋಗಿ ಬಂದೆ ಎಂಬುದು ನನಗೇ ಆಶ್ಚರ್ಯ ತರುವ ವಿಚಾರ. ನನಗೆ ಆನಂತರ ಮತ್ತೊಂದು ವಿಚಾರವೂ ತಿಳಿಯಿತು. ನಾನು ಮಾಸ್ಟರ್ ಮೈಂಡ್ ಎಂದು. ಜೆಎನ್ ಯು ವಿದ್ಯಾರ್ಥಿಗಳೇ ವಂಡರಫುಲ್ ಮೈಂಡ್ ಇರುವವರು. ಅವರಲ್ಲೇ ನಾನು ಮಾಸ್ಟರ್ ಮೈಂಡ್. ಇದು ತುಂಬಾ ಚೆನ್ನಾಗಿದೆ. ನಾನು ಇಂತಹ ಕಾರ್ಯಕ್ರಮವನ್ನು ದೇಶದ 70 ರಿಂದ 80 ವಿಶ್ವವಿದ್ಯಾನಿಲಯಗಳಲ್ಲಿ ಆಯೋಜಿಸಲು ಪ್ಲ್ಯಾನ್ ಮಾಡಿದ್ದೆನಂತೆ. ನಿಜವಾಗಲೂ ನನ್ನ ಲೀಡರ್ ಶಿಫ್ ಇಷ್ಟೊಂದು ವಿಸ್ತಾರವಾಗಿ ಬೆಳೆದಿದ್ದು ನನಗೇ ಗೊತ್ತಿರಲಿಲ್ಲ. ಈ ಕಾರ್ಯಕ್ರಮ ಆಯೋಜಿಸಲು ನಾವು ನಾಲ್ಕೈದು ತಿಂಗಳು ತಯಾರಿ ಮಾಡಿದ್ದೆವಂತೆ. ಜೆಎನ್ ಯು ನಲ್ಲಿ ಒಂದೊಂದು ಕಾರ್ಯಕ್ರಮ ಸಂಘಟಿಸಲು ಐದು-ಹತ್ತು ತಿಂಗಳು ಪಡೆದುಕೊಂಡರೆ ಜೆಎನ್ ಯು ಕತೆ ಏನಾಗಬಹುದು? ಅದೂ ಇರಲಿ. ನಾನು ಕೆಲ ದಿನಗಳಿಂದ 800 ಕರೆಗಳನ್ನು ಮಾಡಿದ್ದೇನಂತೆ. ಈ ಮಾಧ್ಯಮಗಳಿಗೆ ಯಾವ ನಾಚಿಕೆಯೂ ಇಲ್ಲ. ಸುದ್ದಿ ಪ್ರಸಾರಕ್ಕೆ ಮುನ್ನ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ದಾಖಲೆಯಿಲ್ಲದೆ, ಸತ್ಯಾಂಶವಿಲ್ಲದ ಸುದ್ದಿಗಳನ್ನು ಮಾಡಿದ್ರು. ನನಗೆ ಜೈಶ್ ಎ ಮಹಮ್ಮದ್ ಸಂಘಟನೆಯ ಕೈವಾಡ ಇದೆ ಎಂದು ಹೇಳಿದ್ರು. ಅದಕ್ಕೂ ಯಾವುದೇ ದಾಖಲೆ ಇಲ್ಲ. ನನಗೆ ನಿಜಕ್ಕೂ ಆಗ ನಗು ಬಂದಿತ್ತು. ನಿಜವಾಗಿಯೂ ಆ ಸಂಧರ್ಭದಲ್ಲಿ ಜೈಶ್ ಎ ಮಹಮ್ಮದ್ ಸಂಘಟನೆಯವರು ಪ್ರತಿಭಟನೆ ಮಾಡಬೇಕಿತ್ತು. ನನ್ನಂತವನನ್ನು ಅವರ ಸಂಘಟನೆಯವನು ಎಂದು ಹೇಳಿದ್ದಕ್ಕಾದರೂ ಅವರು ಪ್ರತಿಭಟಿಸಬೇಕಿತ್ತು. ಕೊನೆಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯೇ ಸ್ಪಷ್ಟಪಡಿಸಿ, ಜೈಶ್ ಎ ಮಹಮ್ಮದ್ ಸಂಘಟನೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ ಎಂದು ಹೇಳಿದರೂ ಮಾಧ್ಯಮಗಳು ಕ್ಷಮೆ ಕೇಳಲಿಲ್ಲ. ಈ ಮೀಡಿಯಾಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿವೆ. ಮೀಡಿಯಾಗಳು ಪೂರ್ವನಿರ್ಧರಿತವಾಗಿ ನಮ್ಮನ್ನು ಮಿಡಿಯಾ ಟ್ರಯಲ್ ಗೆ ಒಳಪಡಿಸಿದ್ವು. ಯಾವ ನಾಚಿಕೆಯೂ ಇಲ್ಲದೆ ವರ್ತಿಸಿದ್ರು.

ಮಾಧ್ಯಮಗಳ ಈ ರೀತಿಯ ವರ್ತನೆ ಇದೇ ಮೊದಲಲ್ಲ. ಅವುಗಳು ಏನು ಮಾಡಿದ್ರೂ ನಡೀತದೆ ಅಂದುಕೊಂಡಿದ್ದಾರೆ. ಮುಸ್ಲೀಮರನ್ನು ಭಯೋತ್ಪಾದಕರನ್ನಾಗಿಯೂ, ಆದಿವಾಸಿಗಳನ್ನು ನಕ್ಸಲರನ್ನಾಗಿಯೂ ಚಿತ್ರಿಸಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಈ ಬಾರಿ ನೀವು ತಪ್ಪು ಜನರಿಗೆ ತಗಳ್ಳಾಕ್ಕೊಂಡಿದ್ದೀರಿ. ನಾವು ಪ್ರತೀ ಚಾನೆಲ್ ಗಳು ನಮ್ಮ ಬಗ್ಗೆ ಮಾಡಿದ ಸುದ್ದಿಗೆ ವಿವರಣೆ ನೀಡುವಂತಹ ಸಂಧರ್ಭ ಸೃಷ್ಠಿ ಮಾಡುತ್ತೇವೆ.

ಈ ಪ್ರಕರಣ ಈ ರೀತಿ ಸುದ್ದಿಯಾದ ನಂತರ ನಂತರ ನನ್ನ ತಂಗಿ, ತಂದೆಗೆ ಬೆದರಿಕೆ ಒಡ್ಡಲಾಯ್ತು. ತಂಗಿಗೆ ಅತ್ಯಾಚಾರದ ಬೆದರಿಕೆ ಒಡ್ಡಲಾಯ್ತು. ಕೊಲೆ ಬೆದರಿಕೆಯನ್ನೂ ನೀಡಲಾಯ್ತು. ಈ ಜನಗಳು ಏನೂ ಮಾಡಲೂ ಹೇಸದವರು. ತಂಗಿಗೆ ಅತ್ಯಾಚಾರದ ಬೆದರಿಕೆ ನೀಡಿದ ಈ ದೇಶಪ್ರೇಮಿಗಳ ಕಂದಮಾಲ್ ಘಟನೆ ಆ ಸಂಧರ್ಭ ನನಗೆ ನೆನಪಿಗೆ ಬಂದಿತ್ತು. ನಿಮಗೂ ನೆನಪಿರಬಹುದು. ಕಂದಮಾಲ್ ನಲ್ಲಿ ಭಜರಂಗದಳದವರು ಕ್ರಿಶ್ಚಿಯನ್ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆದುದರಿಂದ ನನಗೆ ತಂಗಿಯ ಬಗ್ಗೆ ಆತಂಕ ಉಂಟಾಗಿತ್ತು. ಇವರು ಅತ್ಯಾಚಾರ ಮಾಡಿಯೂ ಭಾರತ ಮಾತೆಗೆ ಜೈ ಎನ್ನುವವರು. ಇಂತಹ ಮಾತೆ ನಮಗೆ ಬೇಕಾಗಿಲ್ಲ. ಇಂತಹ ಮಾತೆ ನಮ್ಮದಲ್ಲ.

ನನ್ನ ತಂದೆಯನ್ನು ಕೆಲವು ಮಾಧ್ಯಮಗಳು ಮಾತನಾಡಿಸಿದ್ವು. ಅದನ್ನು ಸಂದರ್ಶನ ಅನ್ನೋದಕ್ಕಿಂತ ಮಾಧ್ಯಮಗಳ ವಿಚಾರಣೆ ಅನ್ನಬಹುದು. ನಮ್ಮಲ್ಲಿ ಕೆಲವು ಪತ್ರಕರ್ತರಿದ್ದಾರೆ. ಟೈಮ್ಸ್ ನೌ ನಲ್ಲಿ ಒಬ್ಬ ಪತ್ರಕರ್ತ ಇದ್ದಾರೆ. ಅವರ ಹೆಸರು ಹೇಳಲು ನಾನು ಬಯಸೋದಿಲ್ಲ. ಈ ಪತ್ರಕರ್ತರಿಗೆಲ್ಲಾ ನಮ್ಮ ವಿಚಾರದಲ್ಲಿ ಇಷ್ಟೊಂದು ಕೋಪ ಯಾಕೆ ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗ್ತಾ ಇಲ್ಲ. ಆ ರೀತಿಯಲ್ಲಿ ಮಾಧ್ಯಮಗಳ ಕೋರ್ಟ್ ನಡೆಸಿದ್ವು.

ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲೀಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲೀಮರು ಮಾತ್ರ ದಮನಕ್ಕೊಳಗಾಗ್ತಿಲ್ಲ. ಆದಿವಾಸಿಗಳು, ದಲಿತರು ಈ ಸಮಾಜದ ಶೋಷಿತರಾಗಿದ್ದಾರೆ. ನಾನು ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ದಲಿತರು, ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲೀಮರ ಪರವಾಗಿ ಮಾತನಾಡಿದ್ದೇನೆ. ಆದರೆ ಕಳೆದ ಹತ್ತು ದಿನಗಳಿಂದ ನಾನು ಮುಸ್ಲೀಂ ಎಂದು ನನಗೆ ಗೊತ್ತಾಯಿತು. ಈ ಮಾಧ್ಯಮಗಳಿಗೆ ನಾಚಿಕೆಯಾಗಬೇಕು.

ನಾನು ಪಾಕಿಸ್ತಾನಿ ಏಂಜೆಂಟ್ ಅಂತ ಹೇಳಿದ್ರು. ಈ ಸಂಧರ್ಭದಲ್ಲಿ ನನಗೆ ಒಂದು ಶಾಹಿರಿ ನೆನಪಾಗ್ತಿದೆ.

ಹಿಂದೂಸ್ತಾನವೂ ನನ್ನದೇ,
ಪಾಕಿಸ್ತಾನವೂ ನನ್ನದೇ….
ಹಿಂದೂಸ್ತಾನ ಪಾಕಿಸ್ತಾನದಲ್ಲಿ ಅಮೇರಿಕಾ ಟೆಂಟ್ ಹಾಕಲು ಬಯಸುತ್ತಿದೆ.
ನೀವೆಲ್ಲರೂ ಆ ಅಮೇರಿಕಾದ ಏಜೆಂಟರು.

ನಮ್ಮ ಸರಕಾರ ಕೂಡಾ ಅಮೇರಿಕಾದ ಏಜೆಂಟರಂತೆ ವರ್ತಿಸುತ್ತಿದೆ. ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಜನ ಪೂರೈಸೋ ಕೆಲಸವನ್ನು ಸರಕಾರ ಮಾಡುತ್ತಿದೆ. ಅದಕ್ಕಾಗಿ ಶಿಕ್ಷಣವನ್ನು ಸರಕಾರ ಮಾರಿದೆ. ಅದನ್ನು ಪ್ರಶ್ನಿಸಿದ್ರೆ ನಾವು ದೇಶದ್ರೋಹಿಗಳಾಗ್ತಿವೆ. ಈಗ ನಾವು ನೀವೆಲ್ಲಾ ದೇಶದ್ರೋಹಿಗಳು. ಜನರನ್ನು ಅಗಾಧವಾಗಿ ಪ್ರೀತಿಸುವ ನಾವುಗಳು ದೇಶದ್ರೋಹಿಗಳು. ನಮ್ಮ ಪ್ರೀತಿಗೆ ಗಡಿಗಳು ಇಲ್ಲ. ಈ ದೇಶ ಮಾತ್ರ ಅಲ್ಲ. ಇಡೀನ ಜಗತ್ತಿನ ಜನರನ್ನು ನಾವು ಪ್ರೀತಿಸುತ್ತೇವೆ. ನಾನು ಈ ನ್ಯಾಶನಿಲಿಸಂ ಅನ್ನು ನಂಬೋದಿಲ್ಲ. ಭಾರತದ ನ್ಯಾಶನಲಿಸಂ ಮಾತ್ರವಲ್ಲ. ಅಮೇರಿಕಾ ಸೇರಿದಂತೆ ಯಾವುದೇ ದೇಶದ ನ್ಯಾಶನಲಿಸಂ ಅನ್ನು ನಾನು ಒಪ್ಪೋದಿಲ್ಲ. ಇಡೀ ವಿಶ್ವವೇ ನಮ್ಮದು. ವಿಶ್ವದ ಎಲ್ಲರೂ ನಮ್ಮವರು.

ನಾವು ಈ ಜನರಿಗೆಲ್ಲಾ ಹೆದರಬೇಕಿಲ್ಲ. ಅವರ ಬಳಿ ಬಹುಮತ ಇರಬಹುದು. ಮೀಡಿಯಾಗಳೂ, ಪೊಲೀಸರೂ ಇರಬಹುದು. ಆದರೆ ಅವರು ಹೆದರುಪುಕ್ಕಲರು. ಅವರು ನಮ್ಮ ಜನರಿಗೆ ಹೆದರುತ್ತಾರೆ. ಆವರು ನಮ್ಮ ಹೋರಾಟಗಳಿಗೆ ಹೆದರುತ್ತಾರೆ. ಅದಕ್ಕಾಗಿಯೇ ನೀವು ಜನರ ಪರವಾಗಿ ಯೋಚಿಸಲು ಶುರು ಮಾಡಿದ್ರೆ ನಿಮ್ಮನ್ನು ದೇಶದ್ರೋಹಿ ಎನ್ನುವ ಮೂಲಕ ಹೆದರಿಸಲಾಗ್ತಿದೆ.

ನಮ್ಮ ಜನರಿಗೆ ಹೆದರಿಯೇ ಈ ಜನರು ಹಲವು ವಿಶ್ವವಿದ್ಯಾನಿಲಯಗಳಿಗೆ ತೆರಳಿ ಗಲಭೆ ಎಬ್ಬಿಸಲು ಯಶಸ್ವಿಯಾದ್ರು. ಆದರೆ ಈ ವಿದ್ವವಿದ್ಯಾಲಯಕ್ಕೆ ಮಾತ್ರ ತಪ್ಪಾಗಿ ಬಂದ್ರಿ. ಇಲ್ಲಿ ನಿಮ್ಮ ಆಟ ನಡೆಯಲ್ಲ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೆಮೂಲ ಹತ್ಯೆಯಾಯ್ತು. ಬನರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂದೀಪ್ ಪಾಂಡೆ ಮೇಲೆ ದೌರ್ಜನ್ಯವಾಯಿತು. ಅ ಸಂಧರ್ಭದಲ್ಲಿ ನಡೆದ ಪ್ರತೀ ಹೋರಾಟದಲ್ಲಿ ಜೆ ಎನ್ ಯು ವಿದ್ಯಾರ್ಥಿಗಳು ಹೆಗಲು ಕೊಟ್ಟು ಸಾಥ್ ನೀಡಿದ್ದೇವೆ. ಅದು ನಮ್ಮ ಜವಾಬ್ದಾರಿ ಕೂಡಾ. ನೀವೇನಾದ್ರೂ ಜೆಎನ್ ಯು ವನ್ನು ಮುಗಿಸುತ್ತೇವೆ ಎಂದು ಒಂದಿರೋದಾದ್ರೆ ಒಂದಂತೂ ತಿಳಿದುಕೊಳ್ಳಿ. ಈ ಹಿಂದೆಯೂ ಈ ರೀತಿ ಯೋಚನೆ ಇಟ್ಟುಕೊಂಡು ತುಂಬಾ ಜನ ಇಲ್ಲಿಗೆ ಬಂದಿದ್ದರು. ಅಂತಹ ಹಲವು ಪ್ರಯತ್ನಗಳಾಗಿತ್ತು. ಅದನ್ನು ಅಷ್ಟೇ ನಾಜೂಕಾಗಿ ನಾವು ನಿಭಾಯಿಸಿ ನಾವು ಗೆದ್ದಿದ್ದೇವೆ.

ಬಹುಶಃ ನೀವು ಇಂದಿರಾಗಾಂಧಿಯನ್ನು ಮರೆತಿದ್ದೀರಿ. ತುರ್ತು ಪರಿಸ್ಥಿತಿ ನಂತರ ಅವರು ಜೆ ಎನ್ ಯು ಕಡೆಗೆ ಬಂದಿದ್ದರು. ನಾವು ಅವರನ್ನು ಬರಲು ಬಿಟ್ಟಿರಲಿಲ್ಲ. ನಂತರ ನೀವು ಮನಮೋಹನ ಸಿಂಗ್ ರನ್ನೂ ಮರೆತಿದ್ದೀರಿ. ದೇಶವನ್ನು ಮಾರಾಟ ಮಾಡಲು ಹೊರಟ ಮನಮೋಹನ ಸಿಂಗ್ ಇಲ್ಲಿಗೆ ಬಂದಾಗ ಅವರಿಗೂ ಕಪ್ಪು ಬಾವುಟ ತೋರಿಸಿದ್ವಿ. ನಂತರ ಚಿದಂಬರಂ ಬಂದ್ರು. ಆಗ ಇಲ್ಲಿನ ವಿದ್ಯಾರ್ಥಿಗಳು ಚಿದಂಬರಂ ಅನ್ನು ಸ್ವಾಗತ ಮಾಡ್ತಾರೆ ಅಂದುಕೊಂಡಿದ್ರು. ಆದರೆ ಇಲ್ಲಿನ ವಿದ್ಯಾರ್ಥಿಗಳು ಯಾರ ಜೊತೆ ಇರ್ತೀವಿ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿನ ವಿದ್ಯಾರ್ಥಿಗಳು ಯಾವತ್ತೂ ಶೋಷಿತ ಜನರ ಜೊತೆ ಇರ್ತಾರೆ. ಈಗಿನ ಸರಕಾರ ನಾವು ಹೆದರುತ್ತೇವೆಯೋ ಎಂದು ಪರೀಕ್ಷೆ ಮಾಡುತ್ತಿದೆ. ನಾವು ಹೆದರುವುದಿಲ್ಲ. ನಾವು ಸಂಘರ್ಷ ಮಾಡುತ್ತೇವೆ.

ಗೆಳೆಯರೇ,

ನಾವು ಈ ಜನಗಳಿಗೆಲ್ಲಾ ಹೆದರುವ ಅಗತ್ಯವೇ ಇಲ್ಲ. ಈ ಕ್ಯಾಂಪಸ್ಸಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಂಬ ವಾನರ ಸೇನೆ ಇದೆ. ಇಲ್ಲೂ ಕೂಡಾ ಹೈದರಾಬಾದ್ ನ ದತ್ತಾತ್ರೆಯ ರೀತಿಯವರು ಇದ್ದಾರೆ. ಆದರೆ ಇಲ್ಲಿ ಮತ್ತೊಬ್ಬ ರೋಹಿತನನ್ನು ನಾವು ನಿಮ್ಮ ಕೈಗೆ ಕೊಡೋದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ನಾವು ಸಂಘರ್ಷಕ್ಕೆ ಸಿದ್ದರಿದ್ದೇವೆ. ರೋಹಿತನ ಸಾವಿಗೆ ಉತ್ತರ ಕೊಡಲು ಸಿದ್ದರಿದ್ದೇವೆ.

ಅವರಿಗೆ ಜನರ ಬಳಿ ಹೋಗಿ ಸಂಘಟನೆ ಮಾಡಲು ಆಗುವುದಿಲ್ಲ. ಅವರೇನಿದ್ದರೂ ಮಧ್ಯಮಗಳನ್ನು ಬಳಸಿಕೊಂಡು ದೇಶಪ್ರೇಮ ಉಕ್ಕುವಂತೆ ಮಾಡುತ್ತಾರೆ. ಅಷ್ಟೊಂದು ಮಾಧ್ಯಮಗಳನ್ನು ಬಳಸಿಯೂ ಅವರು ಸಾವಿರ ಜನ ಸೇರಿಸಲು ಕಷ್ಟಪಟ್ಟರು. ಆದರೆ ಇಲ್ಲಿ ನಮ್ಮವರು 15 ಸಾವಿರಕ್ಕೂ ಮಿಕ್ಕಿ ಜಮಾವಣೆಗೊಂಡರು. ಆದರೆ ಚೀ ನ್ಯೂಸ್ ಮಾತ್ರ ಸುಳ್ಳೇ ಸುದ್ದಿ ಪ್ರಸಾರ ಮಾಡ್ತು. ನಾಚಿಗೆ ಇಲ್ಲದೆ ಸುಳ್ಳು ಹೇಳ್ತಾರೆ ಈ ಜನಗಳು.

ಜೆ ಎನ್ ಯು ನಲ್ಲಿ ಅವರು ನಡೆಸಿದ ದೌರ್ಜನ್ಯಕಾರಿ ತಂತ್ರಗಾರಿಕೆಯನ್ನು ಬೇರೆಡೆಯಲ್ಲೂ ಯಶಸ್ವಿಯಾಗಿ ಮಾಡಿದ್ದಾರೆ. ಈ ರೀತಿಯ ತಂತ್ರಗಾರಿಕೆ ನಮ್ಮಲ್ಲಿ ನಡೆಯಲ್ಲ. ಇದೇ ರೀತಿಯ ದೌರ್ಜನ್ಯವನ್ನು ಹೋಂಡಾ ಕಾರ್ಮಿಕರ ಮೇಲೆ, ಸೋನಿ ಸೋರಿ ಆದಿವಾಸಿ ಮೇಲೆ ಪ್ರಯೋಗಿಸಿದ್ರು. ಇವೆಲ್ಲವನ್ನೂ ನೋಡಿದ್ರೆ ಇದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವಲ್ಲ. ಈ ಹೋರಾಟವು ಇಡೀ ದೇಶದ ಹೋರಾಟವನ್ನು ಸಂಧಿಸಬೇಕು.

ಧನ್ಯವಾದಗಳು
ಇಂಕ್ವಿಲಾಬ್ ಜಿಂದಾಬಾದ್

ರೋಹಿತ್ ಸಾವು: ಸಾಲು ಸಾಲು ಅಪರಾಧಿಗಳು!

-ಶಿವರಾಂ

ಪ್ರತಿಯೊಬ್ಬರೂ ಹುಟ್ಟೂ ಆಕಸ್ಮಿಕ. ಆದರೆ ‘ತನ್ನ ಹುಟ್ಟು ಮಾರಣಾಂತಿಕ ಅವಘಡ’ ಎಂದು ಬರೆದಿಟ್ಟು ನೇಣು ಹಾಕಿಕೊಂಡ ರೋಹಿತ್ ವೇಮುಲ ಮಾತ್ರ ಭಾರತದ ಪ್ರಜ್ಞೆಯನ್ನು ಬಹುವಾಗಿ ಬಹಳ ಕಾಲ ಕಾಡುತ್ತಾನೆ. ಜಾತಿಯ ಅಹಂ ಮತ್ತು ಅಸ್ಪೃಶ್ಯತೆಯನ್ನು ಪೋಷಿಸುವ ರಾಜಕಾರಣ ರೋಹಿತ್ ನನ್ನು ನೇಣಿಗೆ ಏರಿಸಿ, ತಮ್ಮದೇನೂ ತಪ್ಪೇ ಇಲ್ಲದಂತೆ ಬೀಗುತ್ತಿವೆ. ದೇಶದ ಕಾನೂನಿನಲ್ಲಿ ಮರಣ ದಂಡನೆಯಂತಹ ಘೋರ ಶಿಕ್ಷೆ ಇರಬಾರದು ಎಂದು ಪ್ರತಿಭಟಿಸಿದ್ದ ವೇಮುಲ ಈಗ ತಾನೇrohit-2 ನೇಣಿನ ಕುಣಿಕೆಗೆ ತಲೆ ಒಡ್ಡಿದ. ತನ್ನ ಸುತ್ತಲ ವ್ಯವಸ್ಥೆಯ ತಪ್ಪಿಗೆ, ತನಗೆ ತಾನೇ ಶಿಕ್ಷೆ ವಿಧಿಸಿಕೊಂಡ.
ಕಳೆದ ಡಿಸೆಂಬರ್ 16 ರಂದು ವಿಶ್ವವಿದ್ಯಾನಿಲಯ ರೋಹಿತ್ ಸೇರಿದಂತೆ ಐವರನ್ನು ಹಾಸ್ಟೆಲ್ನಿಂದ ಉಚ್ಚಾಟನೆ ಮಾಡಿತು. ಪ್ರತಿಭಾನ್ವಿತ ವಿದ್ಯಾರ್ಥಿಯಾದ ರೋಹಿತ್ ಮತ್ತು ಗೆಳೆಯರು ವಿದ್ಯಾರ್ಥಿ ವೇತನ ಪಡೆದು ಸಂಶೋಧನೆಗೆಂದು ವಿ.ವಿಗೆ ಬಂದವರು. ಅವರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಅಂತಹವರಿಗೆ ಇರಲು ಜಾಗ ಕೊಡದೆ, ಹೊರಗೆ ನೂಕುವುದು ಘೋರ. ಅವರ ಮೇಲಿರುವ ಆರೋಪ (ಸುಳ್ಳು) ಗಳ ಕಾರಣಕ್ಕೆ ಪೊಲೀಸರು ಬಂಧಿಸಿದ್ದರೂ, ಆತನಿಗೆ ಅನ್ನ, ಆಶ್ರಯಕ್ಕೆ ತೊಂದರೆ ಮಾಡುತ್ತಿರಲಿಲ್ಲ. ಆದರೆ ಶಿಕ್ಷಣ ಪಡೆಯಲು ಸೇರಿಕೊಂಡಿದ್ದ ಸಂಸ್ಥೆಯೇ ಅವರನ್ನು ಹೊರಹಾಕಿತು. ನಿರ್ಧಾರವನ್ನು ಪ್ರತಿಭಟಿಸಿ ಉಪವಾಸ ಕುಂತರೂ, ಕುಲಪತಿಗೆ ಕರುಣೆ ಬಾರಲಿಲ್ಲ.
ವಿಶ್ವವಿದ್ಯಾನಿಲಯ ಈ ವಿದ್ಯಾರ್ಥಿಗಳ ಪ್ರವೇಶ ನಿರ್ಬಂಧಿಸಿದ್ದು – ಸಾಮಾಜಿಕವಾಗಿ ಇತರರೊಂದಿಗೆ ಬೆರೆಯಬಹುದಾದ ಎಲ್ಲಾ ಪ್ರದೇಶಗಳಿಗೆ. (ಹಾಸನ ಜಿಲ್ಲೆಯ ಸಿಗರನಹಳ್ಳಿ ಗ್ರಾಮದಲ್ಲಿ ದಲಿತರಿಗೆ ವಿಧಿಸಲಾಗಿರುವ ಸಾrohit-1ಮಾಜಿಕ ಬಹಿಷ್ಕಾರಕ್ಕೂ, ಈ ವಿ.ವಿ. ನಿರ್ಧಾರಕ್ಕೂ ಏನಾದರೂ ವ್ಯತ್ಯಾಸ ಇದೆಯೆ?) ಇತರರೊಂದಿಗೆ ಮಾತನಾಡಲು ಕನಿಷ್ಟ ಅವಕಾಶಗಳಿರುವ ತರಗತಿ ಹಾಗೂ ಲೈಬ್ರರಿಗೆ ಮಾತ್ರ ಪ್ರವೇಶ ಅವಕಾಶ ಇತ್ತು. ಮೇಲಾಗಿ, ವಿದ್ಯಾರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇಂತಹ ನಿರ್ಧಾರಕ್ಕೆ ಇದ್ದ ಮೂಲ ಕಾರಣವಾದರೂ ಏನು – ತಮ್ಮನ್ನು ಗೂಂಡಾಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದ ಎಬಿವಿಪಿ ಹುಡುಗರ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪ. ವಿಚಿತ್ರ ಎಂದರೆ, ಅಂತಹದೊಂದು ‘ಹಲ್ಲೆ’ ಗೆ ಒಳಗಾದ ವಿದ್ಯಾರ್ಥಿಯ ಮೇಲೆ ಯಾವುದೇ ಗಾಯದ ಕುರುಹುಗಳಿಲ್ಲ ಎಂದು ಪರೀಕ್ಷಿಸಿದ ವೈದ್ಯರು ವರದಿ ನೀಡಿದ್ದರು. ಅದೇ ವರದಿ ಆಧರಿಸಿ ವಿ.ವಿ ನೇಮಿಸಿದ್ದ ಮೊದಲ ಸಮಿತಿ ತನ್ನ ನಿರ್ಧಾರ ತಿಳಿಸಿತ್ತು.

 
ಆದರೆ, ತನಗೆ ಒಪ್ಪಿತವಾಗದ ವರದಿಯನ್ನು ವಿ.ವಿ ತಿರಸ್ಕರಿಸಿ ಮತ್ತೊಂದು ವ್ಯತಿರಿಕ್ತ ವರದಿಗೆಂದೇ ಇನ್ನೊಮ್ಮೆ ಇನ್ನೊಂದು ಸಮಿತಿ ನೇಮಿಸಿ ತನಿಖೆಗೆ ಆದೇಶಿಸಿತು. ಕುಲಪತಿ ಅಪ್ಪಾರಾವ್ ಹೇಳುತ್ತಾರೆ, ಮೊದಲಿನದ್ದು ಮಧ್ಯಂತರ ವರದಿಯಂತೆ, ಎರಡನೆಯದು ಅಂತಿಮ ಅಂತೆ. ಮೊದಲನೆಯ ವರದಿ ಮಧ್ಯಂತರ ಆಗಿದ್ದರೆ, ಆರೋಪ ಹೊತ್ತಿರುವ ಹುಡುಗರ ಮೇಲೆ ಯಾವುದೇ ಶಿಕ್ಷೆಯ ಕ್ರಮಗಳು ಬೇಡ ಎಂದೇಕೆ ಶಿಫಾರಸ್ಸು ಮಾಡುತ್ತಿದ್ದರು? ಹೀಗೆ ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡಿ, ತಮ್ಮ ತಪ್ಪುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಕುಲಪತಿ. ಸನ್ನಿವೇಶ ಎಷ್ಟು ಕ್ರೂರವಾಗಿದೆ ಎಂದರೆ, ಈಗಲೂ ಕುಲಪತಿ ಹುಡುಗರ ಜೊತೆ ಮಾತುಕತೆಗೆ ಮುಂದಾಗಿಲ್ಲ, ಮೃತನ ಕುಟುಂಬದವರ ಜೊತೆ ಸಾಂತ್ವನದ ಮಾತುಗಳನ್ನಾಡಿಲ್ಲ. ಹುಡುಗರ ಉಪವಾಸ, ಪ್ರತಿಭಟನೆಗಳಿಗೆ ಬೆಲೆ ಇಲ್ಲವೆ?

 
ಭಾರತದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಸುಖದೇವ್ ತೋರಟ್ ಅಧ್ಯಯನ ನಡೆಸಿ (2007ರಲ್ಲಿ) ವರದಿ ಸಲ್ಲಿಸಿದ್ದರು. ಅವರ ಶಿಫಾರಸ್ಸಿನ ಪ್ರಮುಖ ಅಂಶಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ, ಶೋಷಣೆ ತಡೆಯಲು ಸೂಕ್ತ ಕಾನೂನಿನ ಅಗತ್ಯ ಇದೆ, ಸದ್ಯ ಚಾಲ್ತಿಯಲ್ಲಿರುವ ಎಸ್ಸಿ-ಎrohit-3ಸ್ಟಿ ಕಾಯ್ದೆ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿಲ್ಲ ಎನ್ನುವುದು ಅವರ ಅನಿಸಿಕೆ. ಹಾಗೇ ಶಿಕ್ಷಣ ಸಂಸ್ಥೆಯ ಎಲ್ಲಾ ಆಯಕಟ್ಟಿನ ಸ್ಥಾನಗಳಲ್ಲಿ ನಿಮ್ನ ವರ್ಗದ ಪ್ರತಿನಿಧಿಗಳಿಗೆ ಸೂಕ್ತ ಅವಕಾಶ ಬೇಕು. ಜೊತೆಗೆ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಸಿವಿಕ್ ಎಜುಕೇಶನ್ ನೀಡುವುದು ಅಗತ್ಯ. ಜಾತಿ, ವರ್ಣ, ಲಿಂಗ, ವರ್ಗ ಆಧಾರಿತ ತಾರತಮ್ಯಗಳ ಬಗ್ಗೆ ಸೂಕ್ತ ತಿಳವಳಿಕೆ ನೀಡುವುದರಿಂದ ವಿದ್ಯಾರ್ಥಿ ಸಮೂಹ ಸಮಾನತೆಯನ್ನು ಬಯಸುತ್ತಾ ಎಲ್ಲರನ್ನೂ ಒಂದೇ ರೀತಿ ನೋಡವ ಮನೋಭಾವ ಬೆಳೆಸಲು ಈ ಕ್ರಮ ಅಗತ್ಯವಾಗಿತ್ತು.

 

ಆದರೆ, ಈ ಯಾವ ಶಿಫಾರಸ್ಸುಗಳ ಬಗೆಯೂ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆ ಕಾರಣ ಅಂಬೇಡ್ಕರ್ ಅಥವಾ ಪೆರಿಯಾರ್ ಹೆಸರಿಟ್ಟುಕೊಂಡು ಚಟುವಟಿಕೆ ನಡೆಸುವವರನ್ನೆಲ್ಲಾ ದೇಶದ್ರೋಹಿಗಳೆಂದು ಕೆಲವರು ದೂರುತ್ತಾರೆ, ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ಹುಡುಗರ ಮೇಲೆ ಕ್ರಮ ಜರುಗಿಸಲೆಂದು ಪದೇ ಪದೇ ಪತ್ರ ಬರೆದೂ, ತನ್ನದೇನೂ ಪಾತ್ರವಿಲ್ಲ ಎನ್ನುತ್ತಾರೆ. ಆದರೆ ರೋಹಿತ್ ಮಾತ್ರ ಯಾರನ್ನೂ ದೂಷಿಸಬೇಡಿ ಎಂದು ಸಾವಿಗೆ ಶರಣಾಗಿದ್ದಾನೆ. ಅವನ ಸಾವಿಗೆ ಯಾರನ್ನೇ ಆಗಲಿ ದೂಷಿಸಿ, ಇಂದಿನ ಕಾನೂನಿನಡಿ ‘ಆತ್ಮಹತ್ಯೆಗೆ ಪ್ರಚೋದನೆ’ ಎಂದು ತೀರ್ಪು ಪಡೆಯುವುದು ದೀರ್ಘದ ಪ್ರಕ್ರಿಯೆ ಇರಬಹದುದು. ಆದರೆ ಒಂದಂತೂ ಸತ್ಯ, ಆತನನ್ನು ಸಾವಿಗೆ ದೂಡಿದ್ದು, ಈ ದೇಶ, ವ್ಯವಸ್ಥೆ, ಶಿಕ್ಷಣ, ಮಧ್ಯಮ ವರ್ಗದ ಮೀಸಲಾತಿ-ವಿರೋಧಿ, ದಲಿತ-ವಿರೋಧಿ ಆಲೋಚನೆ ಹಾಗೂ ಎಲ್ಲಡೆ ಹೇರಳವಾಗಿ ಹಬ್ಬುತ್ತಿರುವ ‘ಮೇಲ್ವರ್ಗ ಕೇಂದ್ರಿತ ರಾಜಕಾರಣ’.

ಸರ್ಕಾರೇತರ ವಲಯಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ


– ಶ್ರೀಧರ್ ಪ್ರಭು


 

ಸುಮಾರು ವರ್ಷಗಳಿಂದ ಜನಪರ ಕಾಳಜಿಯ ಪತ್ರಕರ್ತ ಪಿ. ಸಾಯಿನಾಥ್ ತಮ್ಮ ಲೇಖನಗಳಲ್ಲಿ ನಮ್ಮ ದೇಶದ ಸರಕಾರಗಳು ಬೃಹತ್ ಉದ್ದಿಮೆಗಳಿಗೆ ನೀಡಿರುವ ಸಬ್ಸಿಡಿ ಹಣದ ಬಗ್ಗೆ ಬರೆಯುತ್ತಿದ್ದಾರೆ. ಜುಲೈ ೨೮, ೨೦೧೪ ರಲ್ಲಿ ಔಟ್ಲುಕ್ ಪತ್ರಿಕೆಗೆ ಬರೆದ ‘How Much Can We Forgo To India Inc?’ ಎಂಬ ತಮ್ಮ ಲೇಖನದಲ್ಲಿ ಒಂದು ಆಸಕ್ತಿಕರ ವಿಚಾರವನ್ನು ಸಾಯಿನಾಥ್ ಬರೆದರು:

ನಮ್ಮ ದೇಶದ ಉದ್ಯೋಗಪತಿಗಳಿಗೆ ಸರಕಾರ ಕೊಟ್ಟ ಸಬ್ಸಿಡಿ ಹಣ ಸರಾಸರಿ ಪ್ರತಿ ಒಂದು ಗಂಟೆಗೆ ಏಳು ಕೋಟಿ ರೂಪಾಯಿಗಳು, ಪ್ರತಿ ದಿನಕ್ಕೆ ೧೬೮ ರೂಪಾಯಿಗಳು ಹಾಗೆ ಒಟ್ಟಾರೆ ೨೦೧೩-೨೦೧೪ ರ ಅರ್ಥಿಕ ವರ್ಷದಲ್ಲಿ ನಮ್ಮ ದೇಶದ ಸರಕಾರ ಬಂಡವಾಳಶಾಹಿಗಳಿಗೆ ಒಟ್ಟಾರೆಯಾಗಿ ಕೊಟ್ಟ ನೇರ ಸಬ್ಸಿಡಿ ಮೊತ್ತ ರೂ.೫.೩೨ ಲಕ್ಷ ಕೋಟಿಗಳು (ರೂ. ೫,೩೨,೦೦೦,೦೦೦೦೦೦೦). ಈ ಮೊತ್ತವು ೨೦೧೦-೨೦೧೧ ರ ಅರ್ಥಿಕ ವರ್ಷದಲ್ಲಿ ರೂ. ೩.೭೩ ಲಕ್ಷ ಕೋಟಿ ರೂಪಾಯಿ (ರೂ. ೫,೩೨,೦೦೦,೦೦೦೦೦೦೦) ಆಗಿದ್ದಿತು. ಯು ಪಿ ಎ ಸರಕಾರ ಆಡಳಿತದಲ್ಲಿದ್ದ 2005-06 ರಿಂದ 2013-14 ವರೆಗಿನ ಅರ್ಥಿಕ ವರ್ಷಗಳಲ್ಲಿ ಒಟ್ಟಾರೆಯಾಗಿ ೩೬.೫ ಲಕ್ಷ ಕೋಟಿ ಗಳಷ್ಟು ಔದ್ಯಮಿಕ ಸಾಲ ಮನ್ನಾ ಮಾಡಲಾಗಿದೆ.

ನಮ್ಮ ದೇಶದಲ್ಲಿ ಔದ್ಯೋಗಿಕ ಪ್ರಗತಿ, ನಿರುದ್ಯೋಗ ನಿವಾರಣೆ ಇತ್ಯಾದಿ ಸಾಧ್ಯವಾಗಿದ್ದರೆ outlookindia-how-much-can-we-forgo-to-india-inc-psainathಉದ್ದಿಮೆಗಳಿಗೆ ಸಬ್ಸಿಡಿ ಕೊಡುವುದನ್ನು ಸಮರ್ಥಸಿಕೊಳ್ಳಲು ಸಾಧ್ಯವಿದೆ. ಆದರೆ ಇವ್ಯಾವೂ ಸಾಧ್ಯವಾಗಿಲ್ಲ. ೨೦೧೧-೧೪ ವರೆಗಿನ ಮೂರು ಅರ್ಥಿಕ ವರ್ಷಗಳಲ್ಲಿ ಸುಮಾರು ೧.೬೭ ಲಕ್ಷ ಕೋಟಿಗಳಷ್ಟು ಹಣವನ್ನು ಬಂಗಾರ ಬೆಳ್ಳಿಗಳ ಮೇಲಿನ ಕಸ್ಟಮ್ ಸುಂಕ ಮನ್ನಾ ರೂಪದಲ್ಲಿ ಕೊಡಲಾಗಿದೆ. ಬೆಳ್ಳಿ ಬಂಗಾರ ಕೊಳ್ಳಲು ಸಬ್ಸಿಡಿ ಕೊಟ್ಟರೆ ಉದ್ಯೋಗಗಳು ಹುಟ್ಟಿಕೊಳ್ಳುವುದಿಲ್ಲ. ಇದರಿಂದ ಬಂಡವಾಳಶಾಹಿಗಳ ಹೊಟ್ಟೆ ಮಾತ್ರ ತುಂಬುತ್ತದೆ.

ತಳ ಸಮುದಾಯಗಳ ಜಮೀನು ಮತ್ತು ಬದುಕು ಕಿತ್ತುಕೊಂಡು ಜನರು ದುಡಿದ ಹಣವನ್ನು ಅವ್ಯಾಹತವಾಗಿ ಭಿಕ್ಷೆರೂಪದಲ್ಲಿ ಸ್ವೀಕರಿಸುತ್ತಿರುವ ಕಾರ್ಪೊರೇಟ್ ವರ್ಗಕ್ಕೆ ಜನರಿಗೆ ಈವರೆಗೆ ಯಾವುದೇ ಪಾಪ ಪ್ರಜ್ಞೆ ಕಾಡಿಲ್ಲ. ಕಾರ್ಪೊರೇಟ್ ವಲಯಗಳಲ್ಲಿ ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಈವರೆಗೆ ಯಾವ ಸರಕಾರಗಳಿಗೂ ಎನ್ನಿಸಿಲ್ಲ. ಜನರ ಹಣವನ್ನು ಉದ್ದಿಮೆದಾರರಿಗೆ ಸಬ್ಸಿಡಿ ರೂಪದಲ್ಲಿ ಕೊಡುವಾಗ ಯಾವ ಹಂತದಲ್ಲಾದರೂ ಸರಿ ದುಡಿಯುವ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಯಾವ ಸರಕಾರಗಳಿಗೂ ಎನ್ನಿಸಲಿಲ್ಲ.

ಒಂದು ಉದ್ದಿಮೆಯ ಒಡೆತನ ಹೇಗೆ ನಿರ್ಧರಿತವಾಗುತ್ತದೆ? ಆ ಉದ್ದಿಮೆಯಲ್ಲಿ ಯಾರ ಹಣ ಹೆಚ್ಚು ಹೂಡಿಕೆಯಾಗಿದೆಯೋ ಅವರೇ ಅದರ ಮಾಲೀಕರು. ಯಾವ ರೀತಿಯಲ್ಲಿ ನೋಡಿದರೂ ನಮ್ಮ ಉದ್ದಿಮೆಗಳಲ್ಲಿ ಸರಕಾರದ ಮತ್ತು ಸರಕಾರಿ ವಲಯದ ಬ್ಯಾಂಕುಗಳ ಹಣವೇ ಹೂಡಿಕೆಯಾಗಿದೆ. ನಮ್ಮ ಮನೆಗಳಿಗೆ ಹಾಕಿಸಿಕೊಳ್ಳುವ ಸೌರ ವಿದ್ಯುತ್ ಯಂತ್ರಗಳನ್ನು ಅಳವಡಿಸಲು Industrial_Mangaloreಹತ್ತು ಸಾವಿರ ಸಾಲ ಕೊಡುವಾಗ ಕೂಡ ಈ ಬ್ಯಾಂಕುಗಳು ನೂರಾರು ಪುಟಗಳಷ್ಟು ಕಾಗದದ ಮೇಲೆ ಏನೇನೂ ಬರೆಸಿದುಕೊಂಡು ನಮ್ಮ ಸಹಿ ಹಾಕಿಸುತ್ತವೆ. ಕಣ್ಣ ಮುಚ್ಚಿ ಸಹಿ ಹಾಕುವುದು ಬಿಟ್ಟರೆ ನಮ್ಮ ಬಳಿ ಯಾವುದೇ ಅನ್ಯ ಮಾರ್ಗವಿರುವುದಿಲ್ಲ. ಉದ್ದಿಮೆದಾರರಿಗೆ ಇಷ್ಟೊಂದು ಷರತ್ತು ಕರಾರುಗಳನ್ನು ವಿಧಿಸುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಈ ಉದ್ದಿಮೆಗಳಲ್ಲಿ ತಳಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಒಂದೇ ಒಂದು ಕರಾರು ವಿಧಿಸಿಲ್ಲ. ಪ್ರತಿ ಸಾಲ ಪತ್ರದಲ್ಲಿ ಒಂದೇ ಒಂದು ಇಂಥಹ ಕರಾರು ವಿಧಿಸಿದರೆ ಯಾವ ಸಾಲಗಾರ ಉದ್ದಿಮೆದಾರ ಅದನ್ನು ನಿರಾಕರಿಸಲು ಸಾಧ್ಯ? ಅದು ಹೋಗಲಿ ಪ್ರಾತಿನಿಧ್ಯ ಕಲ್ಪಿಸಿದರೆ ಬಡ್ಡಿ ದರದಲ್ಲಿ ವಿನಾಯತಿ ನೀಡುವ ಪ್ರಸ್ತಾವನೆ ಇದ್ದರೆ ಯಾವ ಉದ್ದಿಮೆದಾರ ಇಂದು ಪ್ರಾತಿನಿಧ್ಯ ಕಲ್ಪಿಸುವುದಿಲ್ಲ. ಒಬ್ಬ ಅಥವಾ ಕೆಲವೇ ದಲಿತ-ಹಿಂದುಳಿದ ಉದ್ದಿಮೆದಾರರಿಗೆ ನೇರ ಸಬ್ಸಿಡಿ ಕೊಡುವ ಬದಲು ಒಬ್ಬ ಉದ್ದಿಮೆದಾರ ಎಷ್ಟು ದಲಿತ- ಹಿಂದುಳಿದ ವರ್ಗದ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾನೆ/ಳೆ ಎಂಬುದರ ಮೇಲೆ ಸಬ್ಸಿಡಿ ನಿರ್ಧಾರಿತವಾದರೆ ಹೆಚ್ಚು ಸೂಕ್ತ.

ಒಟ್ಟಿನಲ್ಲಿ ಸರಕಾರ ಮನಸ್ಸು ಮಾಡಿದರೆ ಯಾವುದೇ ಕಾನೂನು ಸರ್ಜರಿ ಅಗತ್ಯವಿಲ್ಲದೇ ಸೂಕ್ತ ಪ್ರಾತಿನಿಧ್ಯ ಸುಲಭ ಸಾಧ್ಯ. ಇದ್ದ ಕಾನೂನಿಗೆ ಸಣ್ಣ ಪುಟ್ಟ ಬದಲಾವಣೆ ಮಾಡಿದರೆ ಹೆಚ್ಚಿನದನ್ನು ಕೆಲವೇ ವರ್ಷಗಳಲ್ಲಿ ಸಾಧಿಸಬಹುದು. ಪ್ರಾತಿನಿಧಿಕವಾಗಿ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸೋಣ:

  • ಒಂದು ಕಂಪನಿ ಮತ್ತು ಒಂದು ಸಹಕಾರ ಸಂಘಕ್ಕೆ ಅತ್ಯಂತ ಹತ್ತಿರದ ‘ಸಂಬಂದಿ’ ಎಂದು ಹೇಳಬಹುದು. ಹಾಗಾಗಿ ಕಾರ್ಪೊರೇಟ್ ವಲಯದ ಪ್ರಾತಿನಿಧ್ಯದ ಸೂತ್ರವನ್ನು ಹೊಸದಾಗಿ ಹುಡುಕಿಕೊಳ್ಳುವ ಅಗತ್ಯವಿಲ್ಲ. ಸಹಕಾರ ಸಂಘಗಳಲ್ಲಿ ಕಲ್ಪಿಸಿದ ಮಹಿಳಾ ಮತ್ತು ದಲಿತ ಪ್ರಾತಿನಿಧ್ಯದ ಸೂತ್ರವನ್ನೇ ಕಂಪನಿಗಳಿಗೆ ವಿಸ್ತರಿಸಬಹುದು. ಸಹಕಾರ ಸಂಘಗಳಿಗೆ ಸಂಬಂದಿಸಿದ ಹೊಸ ಕಾನೂನನ್ನು ತಂದ ಸಂದರ್ಭದಲ್ಲಿ ಸಂವಿಧಾನದಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಯಿತು. ಇದೇ ಮಾದರಿಯನ್ನು ಕಂಪನಿವಲಯಕ್ಕೆ ವಿಸ್ತರಿಸುವುದು ಸುಲಭ ಸಾಧ್ಯ. ಹಾಗೆ ನೋಡಿದರೆ ಕಂಪನಿಗಳಿಗೆ ಹೋಲಿಸಿದರೆ ಸಾಮಾಜಿಕ ಮೇಲ್ವರ್ಗಗಳ ಹಿಡಿತದಲ್ಲಿರುವ ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದೇ ಅತ್ಯಂತ ಕಷ್ಟಕರವಾಗಿತ್ತು. ಇದು ಸಾಧ್ಯವಾದ ಮೇಲೆ ಕಂಪನಿಗಳಲ್ಲಿ ಪ್ರಾತಿನಿಧ್ಯ ಸುಲಬವಾಗಿ ಸಾಧಿಸಬಹುದು.
  • ೨೦೧೩ ರಲ್ಲಿ ಬಂದ ಹೊಸ ಕಂಪನಿ ಕಾಯಿದೆಯ ಪ್ರಕಾರ ಐನೂರು ಕೋಟಿಗಳಷ್ಟು ನಿವ್ವಳ ಸಂಪತ್ತಿರುವ (net worth) ಅಥವಾ ಒಂದು ಸಾವಿರ ಕೋಟಿಗಳಷ್ಟು ವಾರ್ಷಿಕ ವಹಿವಾಟಿರುವ (turnover) ಒಂದು ಕಂಪನಿ ತನ್ನ ಕಳೆದ ಮೂರು ವರ್ಷಗಳ ನಿವ್ವಳ ಆದಾಯದ ೨% ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಖರ್ಚು ಮಾಡಲೇಬೇಕು. ಇದೇ ಕಾನೂನಿನಡಿಯಲ್ಲಿ ತಮ್ಮ ಕಂಪನಿಗಳಲ್ಲಿ ಎಲ್ಲ ಹಂತದಲ್ಲೂ, ಅದರಲ್ಲೂ ಉನ್ನತ ಹುದ್ದೆಗಳಲ್ಲಿ ಸೂಕ್ತ ಸಾಮಾಜಿಕ ಪ್ರಾತಿನಿಧ್ಯ ಕಲ್ಪಿಸಿದ ಕಂಪನಿಗಳಿಗೆ ಸಾಮಾಜಿಕ ಜವಾಬ್ದಾರಿಯಿಂದ ಸೂಕ್ತ ವಿನಾಯತಿ ಕಲ್ಪಿಸಿದರೆ ಅನೇಕ ಕಂಪನಿಗಳು ತಾವೇ ಮುಂದೆ ಬಂದು ಸೂಕ್ತ ಪ್ರಾತಿನಿಧ್ಯ ಕಲ್ಪಿಸಬಹುದು.
  • ನಮ್ಮ ದೇಶದ ಎಲ್ಲಾ ಬ್ಯಾಂಕುಗಳು ನಡೆಯುವದು ರಿಸರ್ವ್ ಬ್ಯಾಂಕ್ ನೀಡುವ ಪರವಾನಗಿಯ ಮೇಲೆ. ಹೀಗಾಗಿ ಬ್ಯಾಂಕುಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳು ಎಂದು ವಿಂಗಡಣೆ ಮಾಡುವುದು ಅಸಮಂಜಸ. ೧೬-೧೨-೨೦೧೫ ರಲ್ಲಿ ಬಂದ ರಿಸರ್ವ್ ಬ್ಯಾಂಕ್ ಮತ್ತು ಜಯಂತಿಲಾಲ್ ಮಿಸ್ತ್ರಿ ಪ್ರಕರಣದಲ್ಲಿ ಖಾಸಗಿ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳೂ ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು (Public Authority) ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕ ಹಿತಾಸಕ್ತಿ ಇರುವ ಯಾವುದೇ ಮಾಹಿತಿಯನ್ನು ಕೊಡಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹೀಗಾಗಿ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಎಲ್ಲ ಬ್ಯಾಂಕುಗಳನ್ನೂ ಸಮಾನವಾಗಿ ನೋಡಬೇಕಿದೆ.
  • ವಿದ್ಯುತ್ ಉತ್ಪಾದನೆ, ನೀರಾವರಿ, ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಯೋಗದ (Private Public Partnership – PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಿಜಕ್ಕೂ ನೋಡಿದರೆ ಖಾಸಗಿ ಸಹಭಾಗಿತ್ವ ಇಲ್ಲಿ ನಗಣ್ಯ. ಯೋಜನೆಗಳಿಗೆ ಬೇಕಾದ ಭೂಮಿಯನ್ನು ಸರಕಾರವೇ ಕೊಡಮಾಡುತ್ತದೆ. ಈ ಯೋಜನೆಗಳಲ್ಲಿ ಭೂಮಿಯೇ ೨೦%-೩೦% ಮೂಲ ಬಂಡವಾಳವೆಂದು ತೋರಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕು ಮತ್ತು ಹಣಕಾಸು ಸಂಸ್ಥೆ ಗಳಿಂದ ೭೦%-೮೦% ರಷ್ಟು ಸಾಲ ಪಡೆಯಲಾಗುತ್ತದೆ. ಅದರೊಂದಿಗೆ ಈ ಯೋಜನೆಗಳಿಗೆ ಕಡಿಮೆ ಬಡ್ಡಿ ದರದ ಸಾಲ, ತೆರಿಗೆ ವಿನಾಯತಿ ರೂಪದಲ್ಲಿ ಪರೋಕ್ಷ ಮತ್ತು ಪ್ರತ್ಯಕ್ಷ ರೂಪದಲ್ಲಿ ಸಾಕಷ್ಟು ಹಣಕಾಸಿನ ನೆರವು ನೀಡುತ್ತದೆ. ಅನೇಕ ಬಾರಿ ಈ ಯೋಜನೆಗಳಿಗೆ ಸರಕಾರವೇ ಮುಖ್ಯ ಗ್ರಾಹಕನಾಗಿ ಹೆಚ್ಚಿನ ಬೆಂಬಲ ಬೆಲೆ ಕೊಟ್ಟು ಸಿದ್ಧ ವಸ್ತುಗಳನ್ನು ಖರೀದಿ ಮಾಡುತ್ತದೆ. ಉದಾಹರಣೆಗೆ ನವೀಕೃತ ಮೂಲಗಳ ವಿದ್ಯುತ್ ಉತ್ಪಾದನೆ ಯೋಜನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸರಕಾರವೇ ತನ್ನ ಒಡೆತನದ ಕಂಪನಿಗಳ ಮೂಲಕ ಹೆಚ್ಚಿನ ಬೆಲೆಗೆ ಖರೀದಿಸುತ್ತದೆ, ಪವನ ವಿದ್ಯುತ್ ಮತ್ತು ಸೌರ ಶಕ್ತಿ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ತಿಗೆ ಸಾಮಾನ್ಯವಾಗಿ ೩೦-೩೦% ಹೆಚ್ಚಿನ ದರ ನಿಗದಿಯಾಗಿರುತ್ತದೆ. ಇದನ್ನು ಸರಕಾರವೇ ತನ್ನ ಕಂಪನಿಗಳ ಮುಖೇನ ಖರೀದಿಸಿ ಯೋಜನೆಗಳಿಗೆ ೩೦ ವರ್ಷಗಳವರೆಗೆ ದರ ಖಾತರಿ ನೀಡುತ್ತದೆ. ಸರಕಾರಿ ಒಡೆತನದ ಸಂಸ್ಥೆಗಳೇ ಈ ಯೋಜನೆಗಳಿಗೆ ಬೇಕಾಗುವ ನಾನಾ ಪರವಾನಗಿಗಳನ್ನು ತೆಗೆಸಿಕೊಡುತ್ತವೆ. ಕಂದಾಯ ಇಲಾಖೆಯ ಸರಕಾರಿ ಭೂಮಿ ಅಥವಾ ಅರಣ್ಯ ಭೂಮಿಯನ್ನು ಉಪಯೋಗಿಸಿಕೊಂಡು ಇಷ್ಟೆಲ್ಲಾ ಸವಲತ್ತುಗಳನ್ನೂ ಪಡೆಯುವ ಈ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಿ ಉದ್ಯೋಗ ಮತ್ತು ಒಡೆತನಗಳಲ್ಲಿ ತಳ ಸಮುದಾಯಗಳು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ ಉದಾಹರಣೆಗಳೇ ಇಲ್ಲ.
  • ಸರಕಾರಿ ಮಾನ್ಯತೆ ಮತ್ತು ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ. ಸಮಾನ ಶಿಕ್ಷಣವನ್ನು ಜಾರಿಗೊಳಿಸಿದ ಸರಕಾರ (ಕನಿಷ್ಟ ಕಾಗದದಲ್ಲಾದರೂ ಸರಿ) ಪ್ರಾತಿನಿಧ್ಯವನ್ನು ಜಾರಿಗೊಳಿಸದಿರುವುದಕ್ಕೆ ಯಾವ ಸಕಾರಣಗಳೂ ಇಲ್ಲ. ಪ್ರಾಥಮಿಕ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದಾದರೆ ಅದನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತಿರುವ ವಿದ್ಯಾ ಸಂಸ್ಥೆಗಳು ಸರಕಾರದ ಕೆಲಸವನ್ನೇ ಮಾಡುತ್ತಿವೆ. ಅದಕ್ಕಾಗಿ ಸರಕಾರ ಅನುದಾನವನ್ನೂ ಕೊಡುತ್ತಿದೆ ಎಂದಾದರೆ ಅವು ಸರಕಾರದ ನಿಯಂತ್ರಣಕ್ಕೆ ಒಳಪಡಲೇಬೇಕಲ್ಲವೇ?
  • ನಮ್ಮ ದೇಶದ ಮೂರು ಔದ್ಯೋಗಿಕ ಸಂಘಟನೆಗಳಾದ ಸಿಐಐ, ಫಿಕ್ಕಿ ಮತ್ತು ಅಸ್ಹೊಚೆಮ್ ಗಳು ಪ್ರಾತಿನಿಧ್ಯದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸುತ್ತಲೇ ತಾವೇ ಸ್ವಯಂ ಪ್ರೇರಿತವಾಗಿ ದಲಿತ ಪ್ರಾತಿನಿಧ್ಯ ಕೊಡುವುದಾಗಿ ಹೇಳಿಕೊಂಡು ಮುಂದೆ ಬಂದಿವೆ. ಪ್ರಾತಿನಿಧ್ಯವನ್ನು ಕಲ್ಪಿಸಲು ತಾವೇ ಸ್ವಯಂ ಪ್ರೇರಿತ ನಿಯಮಗಳನ್ನು (Voluntary Code of Conduct) ಮಾಡಿಕೊಂಡಿರುವುದಾಗಿ ಘೋಷಿಸಿ ೨೦೧೪ ಡಿಸೆಂಬರನಲ್ಲಿ ಅವುಗಳೇ ಕೆಲವು ಅಂಕಿ ಅಂಶಗಳ ಪ್ರಕಟಿಸಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿವೆ. ಅವರೇ ಘೋಶಿಸಿಕೊಂಡಂತೆ ದೇಶದ ಮೂರೂ ಬೃಹತ್ ಸಂಘಟನೆಗಳು ಸೇರಿ ದೇಶದ ಎಂಟು ಜಿಲ್ಲೆಗಳನ್ನು ದತ್ತು ಪಡೆದಿವೆ. ೬೭೬ ಜಿಲ್ಲೆಗಳಿರುವ ಈ ಬೃಹತ್ ದೇಶದಲ್ಲಿ ಏಳೆಂಟು ಜಿಲ್ಲೆಗಳಲ್ಲಿ ಕೆಲಸ ಮಾಡಿದರೆ ಸಾಕೇ? ಇನ್ನು ಉದ್ದಿಮೆಗಳಿಗೆ ಸ್ವಯಂ ನಿಯಂತ್ರಣ ಸಾಧ್ಯವಾಗಿರುತ್ತಿದ್ದರೆ ನಮ್ಮ ದೇಶದಲ್ಲಿ ಕಾನೂನು ಕಟ್ಟಳೆಗಳು ಬೇಕಿತ್ತೇ? ಉದ್ದಿಮೆಗಳು ಸ್ವಯಂ ಪ್ರೇರಣೆಯಿಂದ ಸರಿಯಾದ ಸಮಯದಲ್ಲಿ ಕಾನೂನು ರೀತ್ಯಾ ತೆರಿಗೆ, ಸಾಲಪಾವತಿ ಮತ್ತು ವಿದ್ಯುತ್ ದರ ಕಟ್ಟಿದ್ದರೆ ನಮ್ಮ ದೇಶ ಇಂದು ಅಮೇರಿಕಾವನ್ನೂ ಮೀರಿಸುತ್ತಿತ್ತು. ಹೀಗಾಗಿ ಪ್ರಾತಿನಿಧ್ಯದ ವಿಚಾರದಲ್ಲಿ ಸ್ವಯಂ ನಿಯಂತ್ರಣದಿಂದ ಸಾರ್ವಜನಿಕ ನಿಯಂತ್ರಣಕ್ಕೆ ನಾವು ಸಾಗಬೇಕಿದೆ.
  • ಮಠಮಾನ್ಯಗಳಿಗೆ ಸಾಕಷ್ಟು ಸರಕಾರಿ ಅನುದಾನ ಸಂದಿದೆ. ಧರ್ಮಬೇದವಿಲ್ಲದೆ ಸರಕಾರದ ಹಣ / ಅನುದಾನ ಪಡೆಯುತ್ತಿರುವ ಎಲ್ಲ ಜಾತಿ ಧರ್ಮಗಳ ಮಠ- ಮದರಸ- ಇಗರ್ಜಿಗಳಲ್ಲಿ ಮತ್ತು ಮುಖ್ಯವಾಗಿ ಅವರು ನಡೆಸುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಬೇಕಿದೆ. ಮಠಗಳನ್ನು ನಡೆಸುವುದು ಧಾರ್ಮಿಕ ಕಾರ್ಯ ಅದರಲ್ಲಿ ಸರಕಾರದ ಹಸ್ತಕ್ಷೇಪವಿರಬಾರದು ಎಂಬುದು ದಿಟ. ಆದರೆ ಮಠಮಾನ್ಯಗಳು ಲಾಭಕ್ಕಾಗಿ ನಡೆಸುವ ಸಂಸ್ಥೆಗಳನ್ನು ಇತರ ವಾಣಿಜ್ಯ ಸಂಸ್ಥೆಗಳ ಜೊತೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ. ತಮ್ಮ ಧರ್ಮದ ಮೂಲ ಆಶಯ ಸಮಾನತೆ ಎಂದು ಸಾರುವ ಧಾರ್ಮಿಕ ಮುಖಂಡರು ಧಾರ್ಮಿಕ ಸಂಸ್ಥೆಗಳು ನಡೆಸುವ ವಾಣಿಜ್ಯ ಚಟುವಟಿಕೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದನ್ನು ಸ್ವಾಗತಿಸಬೇಕಿದೆ. ಸಾಚಾರ್ ಆಯೋಗದ ಶಿಫಾರಸ್ಸನ್ನು ಮೊದಲ್ಗೊಂಡು ಮುಸ್ಲಿಂ ಸಮುದಾಯದ ಸಂಸ್ಥೆಗಳಲ್ಲಿ ವರದಿಯಲ್ಲಿ ತಿಳಿಸಿರುವ ಅಶ್ರಫ್, ಅಜ್ಲಫ಼್ ಮತ್ತು ಅರ್ಜಲ್ ಸಮುದಾಯಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವ ಕುರಿತು ಮಾಡಿರುವ ಪ್ರಸ್ತಾವನೆಗಳನ್ನು ಮುಸ್ಲಿಂ ಸಮುದಾಯದ ನಡೆಸುತ್ತಿರುವ ಸಂಸ್ಥೆಗಳಲ್ಲೇ ಮೊದಲಿಗೆ ಜಾರಿಗೆ ತರಬೇಕಿದೆ. ಹಾಗೆಯೇ ದಲಿತ ಕ್ರೈಸ್ತರ ವಿಚಾರದಲ್ಲಿ ಕ್ರೈಸ್ತ ಧರ್ಮದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಬೇಕಿದೆ.
  • ಇಂದು ಎಲ್ಲ ಕ್ಷೇತ್ರಗಳಿಗಿಂತ ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ. ಇದರ ಸಂಬಂಧವಾಗಿ ಇದೇ ಲೇಖಕ ಬರೆದ “ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ” ಎಂಬ ಲೇಖನದ ಕೆಲ ಅಂಶಗಳನ್ನು ಇಲ್ಲಿ ಗಮನಿಸಬಹುದು:

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ Supreme Courtಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ?

ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. ಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು. ೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ. ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ: ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ? ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್,ಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ. ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ. ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ.

ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು ಅಂಬೇಡ್ಕರ್ ಪಟವಿದೆ! ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ. ೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?”

*******

ವಿಷಯದ ವ್ಯಾಪ್ತಿ ಅಗಾಧವಾಗಿರುವ ಕಾರಣ ಇಲ್ಲಿ ಕೆಲವೇ ಕೆಲವು ನಿದರ್ಶನಗಳನ್ನು ಚರ್ಚಿಸಲಾಗಿದೆ. ಇದು ಕೇವಲ ಚರ್ಚೆಗೆ ಅನುವಾಗುವ ರೀತಿಯಲ್ಲಿನ ಒಂದು ಪ್ರಾಥಮಿಕ ಪ್ರಯತ್ನ ಮಾತ್ರ. ಇಲ್ಲಿರುವ ಸಲಹೆಗಳು ಕಾರ್ಯಸಾಧುವೇ ಅಲ್ಲವೇ ಎಂಬುದು ವಿಸ್ತ್ರತ ಚರ್ಚೆಗೆ ಒಳಪಡಬೇಕಾದ ವಿಚಾರ.

ಸಾಮಾಜಿಕ ಪ್ರಾತಿನಿಧ್ಯದ ಜೊತೆಯಲ್ಲೇ ಚರ್ಚೆಗೆ ಒಳಪಡಬೇಕಾದ ವಿಚಾರ ಅನುಷ್ಥಾನದ್ದು. ಇಂದು ಸರಕಾರಿ ವಲಯದಲ್ಲೇ ಬ್ಯಾಕ್ ಲಾಗ್ ಸಮಸ್ಯೆ ಬೃಹತ್ತಾಗಿ ಬೆಳೆದು ನಿಂತಿರುವಾಗ ಸರ್ಕಾರೇತರ ವಲಯಗಳಲ್ಲಿ ಪ್ರಾತಿನಿಧ್ಯವನ್ನು ಸಮರ್ಪಕವಾಗಿ ಅನುಷ್ಥಾನಗೊಳಿಸಬಹುದೇ? ಸಮಸ್ಯೆಗಳು ಮತ್ತು ಸವಾಲುಗಳು ಸಾಕಷ್ಟಿವೆ. ಸರಕಾರೇತರ ವಲಯದಲ್ಲಿ ಅರ್ಥಿಕ ಹಿಂಜರಿತ, ಲಾಭ ಹೆಚ್ಚಿಸುವ ಒತ್ತಡಗಳು, ಉದ್ಯೋಗ ಕಳೆದುಕೊಳ್ಳುವ ಭಯ, ಅಸಂಘಟಿತ ಕಾರ್ಮಿಕರ ಶೋಷಣೆ ಅತ್ಯಂತ ಹೆಚ್ಚಾಗಿದೆ. ವಿಶೇಷ ವಿತ್ತ ವಲಯಗಳಿಗೆ ಮತ್ತು ಸಾಫ್ಟ್ವೇರ್ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳೂ ಸೇರಿದಂತೆ ದೇಶದ ಕಲ್ಯಾಣದ ಸದುದ್ದೇಶವುಳ್ಳ ಅನೇಕ ಕಾನೂನುಗಳು (Welfare Legislation) ಅನ್ವಯಿಸುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ಯಾವುದೇ ಕಾರ್ಮಿಕ ಸಂಘಟನೆಗಳಿಗೆ ಅವಕಾಶವಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲವರ್ಗಗಳಿಗೆ ಸೇರಿದವರಿಗೆ ಸಹ ಇನ್ನೂ ನ್ಯಾಯ ದೊರೆತಿಲ್ಲ. ಅದರಲ್ಲಿ ತಳ ಸಮುದಾಯಗಳ ಪ್ರಾತಿನಿಧ್ಯವನ್ನು ಅರಗಿಸಿಕೊಳ್ಳುವಷ್ಟು ನಮ್ಮ ಸಮಾಜ ಇನ್ನೂ ಬೆಳೆದಿಲ್ಲ ಎನ್ನುವುದು ಸತ್ಯವೇ.

ಆದರೆ ಸಣ್ಣ ಪುಟ್ಟ ವಿಚಾರಗಳಿಗೆ ಒಂದು ಆಯೋಗ ರಚಿಸುವ ಸರಕಾರಗಳು ಸರಕಾರೇತರ ವಲಯಗಳ ಪ್ರಾತಿನಿಧ್ಯದ ವಿಶ್ಲೇಷಣೆಗೆ ಯಾವುದೇ ಒಂದು ಆಯೋಗವನ್ನು ರಚಿಸದಿರುವುದು ವಿಷಾದನೀಯ. ರಾಜ್ಯ ಮತ್ತು ರಾಷ್ಟ್ರದ ಕಾನೂನು ಅಯೋಗಗಳೂ (Law Commissions) ಕೂಡ ಈ ಬಗ್ಗೆ ಕಣ್ಣು ಹರಿಸಿಲ್ಲ. ಸಧ್ಯದ ಸಂವಿಧಾನದ ಮತ್ತು ಕಾನೂನುಗಳ ಚೌಕಟ್ಟಿನಲ್ಲೇ ಅಥವಾ ಅವುಗಳನ್ನು ವಿಸ್ತರಿಸಿ ಪ್ರಾತಿನಿಧ್ಯವನ್ನು ಕಲ್ಪಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಸಾಗಬೇಕಿದೆ.

ಇಂಥಹ ಒಂದು ಪ್ರಾಮಾಣಿಕ ಪ್ರಯತ್ನ ನಮ್ಮ ರಾಜ್ಯದ ‘ಅಹಿಂದ’ ಸರಕಾರದಿಂದಲೇ ಪ್ರಾರಂಭವಾದರೆ ತುಂಬಾ ಸಂತೋಷ.

“ನನ್ನ ಮಕ್ಕಳು ವಿಧಾನಸೌಧದ ಕಡೆ ತಲೆಹಾಕಲಿಲ್ಲ” – ಗೋವಿಂದ ಗೌಡರು

– ಸ್ವಾಮಿ ದುರ್ಗ

ಮಾಜಿ ಮಂತ್ರಿ ಎಚ್.ಜಿ.ಗೋವಿಂದ ಗೌಡರು ನಿನ್ನೆ (ಬುಧವಾರ) ಪಯಣ ಮುಗಿಸಿದರು. ಅನೇಕ ಮಾಜಿ ಮಂತ್ರಿ, ಶಾಸಕರು ಸಾವನ್ನಪ್ಪಿರುವ ಸುದ್ದಿ ಆಗಾಗ ಪತ್ರಿಕೆಗಳ ಮೂಲೆಯಲ್ಲಿ ಅಥವಾ ತಳದಲ್ಲಿ ನಿಧನ ವಾರ್ತೆಯಾಗಿ ಬರುವುದುಂಟು. ಆದರೆ, ಗೋವಿಂದ ಗೌಡರದು ಹಾಗಲ್ಲ. ಅವರು ರಾಜಕೀಯ ನಿವೃತ್ತಿ ಪಡೆದ ಹದಿನೇಳು ವರ್ಷಗಳ ನಂgovindagowdaತರವೂ, ಅವರನ್ನು ತಂಪು ಹೊತ್ತಲ್ಲಿ ನೆನಪಿಸಿಕೊಳ್ಳುವ ಬಹುದೊಡ್ಡ ವರ್ಗ ನಮ್ಮ ಮಧ್ಯೆ ಇದೆ. ಅವರೆಲ್ಲರೂ ಇಂದು ತಪ್ಪದೇ ಈ ಮಾಜಿ ಶಿಕ್ಷಣ ಮಂತ್ರಿಯನ್ನು ನೆನಪಿಸಿಕೊಳ್ಳುತ್ತಾರೆ. ಕೊಪ್ಪ ಸುತ್ತ ಮುತ್ತಲಿನ ನೂರಾರು ಶಿಕ್ಷಕರು ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದು ಸುಖಾ ಸುಮ್ಮನೆ ಬಂದ ಮನ್ನಣೆ ಅಲ್ಲ.
ಕೊಪ್ಪದ ಮುಖ್ಯರಸ್ತೆಯನ್ನು ತೋರಿಸಿ, ಆ ಊರಿನ ಒಬ್ಬರು ಒಮ್ಮೆ ಹೇಳುತ್ತಿದ್ದರು, “ನೋಡಿ ಈ ರಸ್ತೆ ಗೋವಿಂದ ಗೌಡರ ಕಾಲದ್ದು. ಅದು ಈಗಲೂ ಗಟ್ಟಿ ಮುಟ್ಟಾಗಿದೆ, ಆದರೆ ಈಗಿನವರು ಮೊನ್ನೆಯಷ್ಟೆ ಮಾಡಿಸಿದ್ದು ಈಗಾಗಲೇ ಗುಂಡಿ ಕಂಡಿದೆ”. ಪ್ರಾಮಾಣಿಕತೆ ಮತ್ತು ಬದ್ಧತೆ ಇರುವ ವ್ಯಕ್ತಿ ಆಡಳಿತಕ್ಕೆ ಬಂದರೆ ಏನಾಗಬಹುದು ಎನ್ನುವುದಕ್ಕೆ ಆ ಊರಿನ ಅದೊಂದು ಸಣ್ಣ ರಸ್ತೆಯ ಉದಾಹರಣೆ ಸಾಕು.
1926 ರಲ್ಲಿ ಜನಿಸಿದ ಗೌಡರು ಹರೆಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ನಂತರ ಮೈಸೂರು ಚಲೋ. ಸ್ವತಂತ್ರ ಭಾರತದಲ್ಲಿ ರಾಜಕೀಯ ಅವರನ್ನು ಆಕರ್ಷಿಸಿತು. 1952 ರಲ್ಲಿ ಮೊದಲ ಬಾರಿಗೆ ಅವರು ಕೊಪ್ಪ ಪುರಸಭೆಗೆ ಆಯ್ಕೆಯಾದರು. ನಂತರ ಅವರು ಶಾಸಕರಾಗಿದ್ದು 1983 ರಲ್ಲಿ. ಮೂರು ಬಾರಿ ಶಾಸಕರಾಗಿ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಶಿಕ್ಷಣ ಇಲಾಖೆಯಲ್ಲಿನ ಬಹುಚರ್ಚಿತ ಹಾಗೂ ಅಪಾರ ಮನ್ನಣೆ ಗಳಿಸಿದ ಕಾರ್ಯಕ್ರಮಗಳ ಮೂಲಕ ಅವರು ಅಪಾರ ಜನಪ್ರಿಯತೆ ಹೊಂದಿದ ಸಂದರ್ಭದಲ್ಲಿಯೇ ಅವರು ರಾಜಕಾರಣಕ್ಕೆ ವಿದಾಯ ಹೇಳಿದರು. ಹಾಗೆ ಹೇಳಿದ ಅನೇಕರು ತಮ್ಮ ಮನೆ ಮಕ್ಕಳನ್ನು ರಾಜಕೀಯಕ್ಕೆ ತಂದಿರುತ್ತಾರೆ. ಆದರೆ, ಇವರು ಹಾಗೂ ಮಾಡಲಿಲ್ಲ. ಹಾಗಾಗಿ ಅವರು ಅಪರೂಪದ ರಾಜಕಾರಣಿ.
ಅವರು ಮೈಸೂರಿಗೆ ಭೇಟಿ ನೀಡಿದಾಗೊಮ್ಮೆ ಕೆಲ ವಿದ್ಯಾರ್ಥಿಗಳು ಭೇಟಿ ನೀಡಿ, ತಾವು ಅಂದಾಜಿಸಿದ್ದಕ್ಕಿಂತ ಕಡಿಮೆ ಅಂಕಗಳು ಬಂದಿವೆ ಎಂದು ದೂರಿದರು. ಸಚಿವರು ತಕ್ಷಣ ಅಂದಿನ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಹಾಗೂ ಹಿರಿಯ ಅಧಿಕಾರಿ ಹರೀಶ್ ಗೌಡರನ್ನು ಸಂಪರ್ಕಿಸಿ ಇದಕ್ಕೊಂದು ಪರಿಹಾರವೆಂಬಂತೆ ಉತ್ತರ ಪತ್ರಿಕೆಗಳ ಛಾಯಾಪ್ರತಿ ನೀಡುವ ವ್ಯವಸ್ಥೆ ಜಾರಿಗೆ ತಂದರು. ಅದು ಇಂದು ಅನೇಕ ಸಂಸ್ಥೆ, ವಿಶ್ವ ವಿದ್ಯಾನಿಲಯಗಳಿಗೆ ಅನುಕರಣನೀಯವಾಗಿದೆ.
ಮೊದಲು ಶಿಕ್ಷಕರನ್ನು ನೇಮಿಸಲು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳಿರುತ್ತಿದ್ದವು. ಸಮಿತಿಗಳಲ್ಲಿ ಕೆಲವೊಮ್ಮೆ ಪ್ರಾಮಾಣಿಕವಾಗಿ ನೇಮಕಾತಿ ಆದರೂ, ಬಹುತೇಕ ಸಂದರ್ಭಗಳಲ್ಲಿ ಜಾತಿ, ಹಣ, ಪ್ರಭಾವಗಳು ಕೆಲಸ ಮಾಡುತ್ತಿದ್ದವು. ಗೌಡರು ಆ ಪದ್ಧತಿಗೆ ಇತಿಶ್ರೀ ಹಾಡಿ, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನೇಮಕ ಮಾಡುವ ವ್ಯವಸ್ಥೆ ಜಾರಿಗೆ ತಂದರು. ಆ ಮೂಲಕ ಪರಿಶ್ರಮದಿಂದ ಅಭ್ಯಾಸ ಮಾಡಿದ್ದ ಅಭ್ಯರ್ಥಿಗಳಿಗೆ ಯಾವುದೇ ಲಂಚ, ಪ್ರಭಾವಗಳ ಅಗತ್ಯ ಬೀಳದೆ ಕೆಲಸ ಸಿಗುವಂತಾಯ್ತು.
ಸಚಿವರಾಗಿ ಉತ್ತಮ ಆಡಳಿತ ಅಂದ್ರೇನು ಎನ್ನುವುದನ್ನೂ ತೋರಿಸಿದರು. ಯಾವುದೇ ವ್ಯಕ್ತಿ, ಅಧಿಕಾರಿ ತಪ್ಪು ಮಾಡಿದ್ದಾರೆ ಎಂದು ಗೊತ್ತಾದರೆ, ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದರು. ಹತ್ತಿರದ ಸಂಬಂಧಿ ಎಂದೋ, ಪ್ರಭಾವಿ ಸಚಿವರಿಗೆ ಬೇಕಾದವರೆಂದೋ ಸುಮ್ಮನಾದವರಲ್ಲ.
ಅವರು ಒಮ್ಮೆ ಹೇಳಿದ್ದ ನೆನಪು, “ನಾನು ವಿಧಾನಸೌಧದಲ್ಲಿರುವ ತನಕ, ನನ್ನ ಆರು ಮಕ್ಕಳಲ್ಲಿ ಯಾರೊಬ್ಬರೂ ಒಮ್ಮೆಯೂ ಆಕಡೆ ತಲೆ ಹಾಕಲಿಲ್ಲ”. ಈಗಿನ ಯಾವುದೇ ಮಂತ್ರಿ ಇಂತಹ ಮಾತನ್ನು ವಿಶ್ವಾಸದಿಂದ ಹೇಳಲು ಸಾಧ್ಯವಿದೆಯೇ?
ಮೂರು ವರ್ಷಗಳ ಹಿಂದೆ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌತಾಲ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿ ಜೈಲಿಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಗೌಡರು ಮಾತನಾಡುತ್ತಾ, “ನಾನು ಇಂದು ನೆಮ್ಮದಿಯಾಗಿ ನನ್ನ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಅದರರ್ಥ, ನಾನು ನನಗೆ ಸಿಕ್ಕ ಅಧಿಕಾರವನ್ನು ತಪ್ಪಾಗಿ ಎಲ್ಲಿಯೂ ಬಳಸಿಕೊಂಡಿಲ್ಲ”.