Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -3)

– ಡಾ.ಎನ್.ಜಗದೀಶ ಕೊಪ್ಪ

ನೈನಿತಾಲ್ನಲ್ಲಿ ಕಾರ್ಬೆಟ್  ಜನಿಸಿದ್ದು 1875ರ ಜುಲೈ25ರಂದು. ಆತನ ತಾಯಿ ಮೇರಿಗೆ ಇದು 12ನೇ ಹೆರಿಗೆ (ಆಕೆಯ ಮೊದಲ ಪತಿಯ ನಾಲ್ಕು ಮಕ್ಕಳು ಸೇರಿ) ಮೇರಿಯ 38 ನೆ ವಯಸ್ಸಿಗೆ ಜನಿಸಿದ ಈತನ ನಿಜ ನಾಮಧೇಯ ಎಡ್ವರ್ಡ್  ಜೇಮ್ಸ್ ಕಾರ್ಬೆಟ್  ಎಂದು. ಆದರೆ ಕುಟುಂಬದ ಸದಸ್ಯರೆಲ್ಲಾ ಪ್ರೀತಿಯಿಂದ ಕರೆಯತೊಡಗಿದ ಜಿಮ್ ಎಂಬ ಹೆಸರು ಆತನಿಗೆ ಶಾಶ್ವತವಾಗಿ ಉಳಿದುಹೋಯಿತು.   ತಾಯಿಯ ಹೆರಿಗೆಗೆ ಸೂಲಗಿತ್ತಿ ಗಿತ್ತಿಯಾಗಿ ಕೆಲಸ ಮಾಡಿದವಳು ಕಾರ್ಬೆಟ್‌ನ ಮೊದಲನೇ ಮಲ ಅಕ್ಕ ಎಂಜಿನಾ. ಹೆರಿಗೆ ವೇಳೆಯಲ್ಲಿ ಈತನ ತಾಯಿ ಬದುಕುವ ಸಂಭವವೇ ಇರಲಿಲ್ಲ. ಚೇತರಿಸಿಕೊಂಡ ಈಕೆ ಮತ್ತೇ ಎರಡು ವರ್ಷದಲ್ಲಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದಳು.

ಇಡೀ ಕಾರ್ಬೆಟ್  ಕುಟುಂಬವೇ ಒಂದು ಶಾಲೆಯ ಮಾದರಿಯಲ್ಲಿ ಇತ್ತು. ಕುಟುಂಬದಲ್ಲಿ ಈ ದಂಪತಿಗಳ ಮೊದಲ ವಿವಾಹದ ಮಕ್ಕಳೂ ಸೇರಿದಂತೆ 14 ಮಕ್ಕಳನ್ನು ಸಾಕುವ ಸಲುಹುವ ಹೊಣೆಗಾರಿಕೆಯಿತ್ತು. ಅದನ್ನು ಇ ದಂಪತಿಗಳು ಸಮರ್ಥವಾಗಿ ನಿರ್ವಹಿಸಿದರು. ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ವಿಲಿಯಮ್ಸ್ ನ ಮೊದಲ ಮಗ ಥಾಮಸ್ ತಂದೆಯ ಕಚೇರಿಯಲ್ಲೇ  ಜ್ಯೂನಿಯರ್ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದರಿಂದ ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಎಲ್ಲರೂ ವೈದ್ಯ ಮತ್ತು ಇಂಜಿನಿಯರ್ ವೃತ್ತಿಯಲ್ಲಿ ಪದವಿಗಳಿಸಿ ದೇಶ ವಿದೇಶಗಳಲ್ಲಿ ಉದ್ಯೋಗ ದೊರಕಿಸಿಕೊಂಡರು.

ಕ್ರಿಸ್ಟೊಫರ್‌ನ ಅಕ್ಕಳ ಪತಿ ಅನಿರೀಕ್ಷಿತವಾಗಿ ತೀರಿ ಹೋದ್ದರಿಂದ ಆಕೆಯು ಸೇರಿದಂತೆ ನಾಲ್ವರು ಮಕ್ಕಳನ್ನು ಸಲುಹುವ ಜವಬ್ದಾರಿ ಕಾರ್ಬೆಟ್  ಕುಟುಂಬದ ಮೇಲೆ ಬಿತ್ತು. ಆ ವೇಳೆಗೆ ಕಾರ್ಬೆಟ್  ನ ತಂದೆ ಕ್ರಿಸ್ಟೊಫರ್‌ಗೆ  ನಿವೃತ್ತಿಯಾಗಿ ಪಿಂಚಣಿ ಹಣದಲ್ಲಿ ಸಂಸಾರ ಸಾಕುವ ಸವಾಲು ಎದುರಾಯಿತು. ಈ ಸಂದರ್ಭದಲ್ಲಿ ಕುಟುಂಬಕ್ಕೆ ಆಧಾರ ಸ್ಥಂಭವಾಗಿ ನಿಂತವಳು ಕಾರ್ಬೆಟ್  ತಾಯಿ ಮೇರಿ.

ತನ್ನ ಮೊದಲ ವಿವಾಹದಲ್ಲಿ ಪತಿಯನ್ನು ಕಳೆದುಕೊಂಡು ನಾಲ್ವರು ಮಕ್ಕಳ ಜೊತೆ ಹೋರಾಟದ ಬದುಕನ್ನ ಕಟ್ಟಿಕೊಂಡಿದ್ದ ಮೇರಿಗೆ ಸವಾಲುಗಳನ್ನು ಎದುರಿಸುತ್ತಾ ಜೀವನ ನಿರ್ವಹಣೆ ಮಾಡುವ ಅನುಭವ ಇದ್ದುದರಿಂದ ಆಕೆ ಎದೆಗುಂದಲಿಲ್ಲ. ಆಗ ತಾನೆ ಹೊರಜಗತ್ತಿಗೆ ತೆರೆದುಕೊಳ್ಳುತಿದ್ದ ನೈನಿತಾಲ್ನಲ್ಲಿ ಖಾಲಿ ನಿವೇಶನಗಳನ್ನ ಖರೀದಿಸಿ ಅಲ್ಲಿ ಮನೆಗಳನ್ನ ನಿರ್ಮಿಸಿ ಮಾರುವ ವ್ಯವಹಾರಕ್ಕೆ ಇಳಿದಳು. ಅಲ್ಪ ಕಾಲದಲ್ಲೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಶಸ್ವಿಯಾದಳು. ಲಾಭದ ಹಣವನ್ನು ಮತ್ತೆ ಭೂಮಿಗೆ ಹಾಕುತಿದ್ದ ಮೇರಿ, ಮನೆಗಳು ಮಾರಾಟವಾಗದಿದ್ದ ಸಮಯದಲ್ಲಿ ಅವುಗಳನ್ನು ಬೇಸಿಗೆಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅಲ್ಪ ಸಮಯಕ್ಕೆ ಬಾಡಿಗೆ ನೀಡುತಿದ್ದಳು. ಅಲ್ಲದೆ, ನೈನಿತಾಲ್ನಲ್ಲಿ ಮನೆಗಳನ್ನು ಹೊಂದಿ ಉದ್ಯೋಗದ ಮೇಲೆ ಹೊರ ಜಾಗಗಳಿಗೆ ಹೋಗಿರುವ ಆಂಗ್ಲರ ಮನೆಗಳನ್ನು ಪಡೆದು ಕಮಿಷನ್ ಆಧಾರದ ಮೇಲೆ ಬಾಡಿಗೆಗೆ ನೀಡುತಿದ್ದಳು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ಮೇರಿಯ ರಿಯಲ್ ಎಸ್ಟೇಟ್ ವ್ಯವಹಾರ ಕಾರ್ಬೆಟ್  ಕುಟುಂಬಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿತು.

ನಿವೇಶನಗಳ ಜೊತೆಗೆ ಹಳೆಯ ಮನೆಗಳನ್ನು ಖರೀದಿಸಿ ಅವುಗಳನ್ನು ನವೀಕರಿಸಿ ಮಾರಾಟ ಮಾಡುತಿದ್ದಳು. ಮನೆ ನಿರ್ಮಾಣದ  ಕಚ್ಚಾ ಸಾಮಾಗ್ರಿಗಳನ್ನು ದೂರದ ಊರುಗಳಿಂದ ಕೊಂಡು ತರುವುದನ್ನು ತಪ್ಪಿಸಲು ತಾನೇ ನೈನಿತಾಲ್ನಲ್ಲಿ ಅಂಗಡಿಯೊಂದನ್ನು ತೆರೆದಳು. ಈಕೆಯ ವ್ಯವಹಾರ ಕುಶಲತೆ, ಮತ್ತು ಸ್ಥಳೀಯ ಆಂಗ್ಲರಿಗೆ ನೆರವಾಗುವ ಶೈಲಿ ಇವೆಲ್ಲವೂ ಮೇರಿಯನ್ನು ನೈನಿತಾಲ್ ಗಿರಿಧಾಮದ ಪಟ್ಟಣದ ಗೌರವಾನ್ವಿತ ಮಹಿಳೆಯಾಗಿ ರೂಪಿಸಿದವು.

ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಕೂಡ ನೈನಿತಾಲ್ ಪಟ್ಟಣದ ಹಿರೀಯ ಹಾಗೂ ಗೌರವಾನ್ವಿತ ನಾಗರೀಕನಾಗಿ, ಅಲ್ಲಿನ ಪುರಸಭೆಯ ಪ್ರಾರಂಭಕ್ಕೆ ಕಾರಣನಾದುದಲ್ಲದೆ ಹಲವಾರು ವರ್ಷಗಳ ಕಾಲ ಸದಸ್ಯನಾಗಿ, ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದನು. ಅಲ್ಲಿನ ಮನೆಗಳಿಂದ ಹೊರಬೀಳುವ ಕೊಳಚೆ ನೀರು ನೈನಿತಾಲ್ ಸರೋವರಕ್ಕೆ ಸೇರಿ ಕಲ್ಮಶವಾಗದಂತೆ ತಡೆಗಟ್ಟಲು ಪ್ರಥಮವಾಗಿ ಆಲೋಚಿಸಿದವನು ಕ್ರಿಸ್ಟೊಫರ್. ( ನಂತರ ಮುಂದಿನ ದಿನಗಳಲ್ಲಿ ಮಗ ಜಿಮ್ ಕಾರ್ಬೆಟ್  ಇದೇ ಪುರಸಭೆಯ ಉಪಾಧ್ಯಕ್ಷನಾದ ಸಂದರ್ಭದಲ್ಲಿ ಭಾರತದಲ್ಲೇ ಪ್ರಥಮಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಿದನು.)

ಕಾರ್ಬೆಟ್   ಕುಟುಂಬ ನೈನಿತಾಲ್ ನಲ್ಲಿ ಸುಖಮಯ ಜೀವನ ಸಾಗಿಸುತಿದ್ದಾಗಲೇ, 1880ರಲ್ಲಿ ನೈಸರ್ಗಿಕ  ದುರಂತವೊಂದು ಸಂಭವಿಸಿತು. ಆ ವರ್ಷದ ಸೆಪ್ಟಂಬರ್ 16 ರಂದು ಸತತ 40 ಗಂಟೆಗಳ ಕಾಲ ಬಿದ್ದ ಮಳೆಯಿಂದಾಗಿ ಇವರು ವಾಸವಾಗಿದ್ದ ನೈನಿತಾಲಿನ  ಕೇಂದ್ರ ಭಾಗದ ಬಝಾರ್ ರಸ್ತೆ ಸಮೀಪದ  ಗುಡ್ಡದ ಬಹುಭಾಗ ಕುಸಿದುಬಿತ್ತು. ಇದರಿಂದಾಗಿ ಕಾರ್ಬೆಟ್   ಕುಟುಂಬಕ್ಕೆ ಆದಾಯ ತರುತಿದ್ದ ಅನೇಕ ಬಾಡಿಗೆ ಮನೆಗಳು ನೆಲಸಮವಾದವು. ಇದರಿಂದ ವಿಚಲಿತರಾದ ಕಾರ್ಬೆಟ್   ತಂದೆ ತಾಯಿ ಅಲ್ಲಿದ್ದ ತಮ್ಮ ಮನೆಯನ್ನು ಮಾರಿ ಸರೋವರದ ಪೂರ್ವ ದಿಕ್ಕಿನಲ್ಲಿದ್ದ ಎತ್ತರದ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸತೊಡಗಿದರು. ಇಲ್ಲಿ ಸೂರ್ಯನ ಉದಯವಾಗಲಿ ಅಥವಾ ಬಿಸಿಲಾಗಲಿ ಇವುಗಳ ದರ್ಶನವಾಗುವುದೇ ಕಷ್ಟಕರವಾಗಿತ್ತು. ಆನಂತರ ಅದೇ ಪ್ರದೇಶದ ಬಹು ದೂರ ದಕ್ಷಿಣ ದಿಕ್ಕಿನಲ್ಲಿದ್ದ ಪುರಾತನ ಮನೆಯೊಂದನ್ನ ಖರೀದಿಸಿ, ಸಂಪೂರ್ಣ ನವೀಕರಿಸಿ ಅದಕ್ಕೆ ಗಾರ್ನ್ ಹೌಸ್ ಎಂದು ನಾಮಕರಣ ಮಾಡಿ ಹೊಸ ಬಂಗಲೆಗೆ ಸ್ಥಳಾಂತರಗೊಂಡರು. ಮುಂದೆ ಕಾರ್ಬೆಟ್  ಕುಟುಂಬಕ್ಕೆ ಇದೇ ಶಾಶ್ವತ ನೆಲೆಯಾಯಿತು.

ಕಾರ್ಬೆಟ್  ಜನಿಸಿದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಬಡತನವಿರಲಿಲ್ಲ. ಆತನ ತಾಯಿ ತನ್ನ ವ್ಯವಹಾರ ಕುಶಲತೆಯಿಂದ ಇಡೀ ಕುಟುಂಬ ನೆಮ್ಮದಿಯಿಂದ ಬದುಕುವ ಹಾಗೆ ಆದಾಯದ ಮಾರ್ಗಗಳನ್ನ ರೂಪಿಸಿದ್ದಳು. ಕಾರ್ಬೆಟ್  ಪುಟ್ಟ ಬಾಲಕನಾಗಿದ್ದಾಗ ಅವನ ಮಲ ಸಹೋದರರು, ಸಹೋದರಿಯರು, ಪ್ರೌಢವಸ್ಥೆಗೆ ತಲುಪಿದ್ದರು. ಅವನ ಸ್ವಂತ ಸಹೋದರರು ಅವನಿಗಿಂತ 10-12 ವರ್ಷ ಹಿರಿಯರಾಗಿದ್ದರು ಹಾಗಾಗಿ ಅವನ ಬಾಲ್ಯದ ಒಡನಾಟವಲ್ಲಾ ಅವನಿಗಿಂತ ಒಂದು ವರ್ಷ ಹಿರಿಯವಳಾದ ಅಕ್ಕ ಮ್ಯಾಗಿ ಜೊತೆ ಸಾಗುತಿತ್ತು. ಅಕ್ಕನಿಗೂ ತಮ್ಮ ಜಿಮ್ ಎಂದರೆ ಎಲ್ಲಿಲ್ಲದ ಅಕ್ಕರೆ. ದಿನದ 24 ಗಂಟೆಯೂ ಒಬ್ಬರಿಗೊಬ್ಬರು ಅಂಟಿಕೊಂಡು ಇರುತಿದ್ದರು. ಹಾಗಾಗಿ ಇವರ ತಾಯಿ ಮೇರಿ ಇವರಿಬ್ಬರಿಗೂ ಬ್ರೆಡ್- ಜಾಮ್ ಎಂದು ಅಡ್ಡ ಹೆಸರೊಂದನ್ನು ಇಟ್ಟಿದ್ದಳು. ಸೋಜಿಗವೆಂಬಂತೆ ಇವರಿಬ್ಬರೂ ತಮ್ಮ ಕಡೆಯ ಉಸಿರು ಇರುವ ತನಕ ಹಾಗೆಯೇ ಉಳಿದರು. ತಮ್ಮನ ಮೇಲಿನ ಪ್ರೀತಿಯಿಂದ ಅಕ್ಕ ಅವಿವಾಹಿತಳಾಗಿ ಅವನ ಆಸರೆಗೆ ನಿಂತಳು. ತಮ್ಮ ಕಾರ್ಬೆಟ್   ಕೂಡ ಅಕ್ಕನ ತ್ಯಾಗಕ್ಕೆ ಮನಸೋತು ತಾನೂ ಕೂಡ ಅವಿವಾಹಿತನಾಗಿ ಉಳಿದು ಬದುಕಿನುದ್ದಕ್ಕೂ ಆಕೆಯ ನೆರಳಿನಂತೆ ಬದುಕಿದ.

ನೈನಿತಾಲ್ ಹಾಗು ಕಲದೊಂಗಿಯಲ್ಲಿ ವಾಸವಾಗಿದ್ದ ಆಂಗ್ಲ ಮನೆತನಗಳ ಪೈಕಿ ಸುಸಂಸ್ಕೃತ ಕುಟುಂಬವಾಗಿದ್ದ ಕಾರ್ಬೆಟ್‌ನ  ಮನೆಯಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಬಾಲ್ಯದಲ್ಲಿ ಅವನ ಪಾಲನೆ, ಪೋಷಣೆ ನೋಡಿಕೊಳ್ಳಲು ಅವನ ತಾಯಿ ಮನೆತುಂಬಾ ಸೇವಕಿಯರನ್ನ ನೇಮಿಸಿದ್ದಳು. ಕಾರ್ಬೆಟ್  ಗೆ ಬಾಲ್ಯದಿಂದಲೇ ಏಕಕಾಲಕ್ಕೆ ಎರಡು ಸಂಸ್ಕೃತಿಯನ್ನು ಗ್ರಹಿಸಲು ಸಾಧ್ಯವಾಯಿತು. ತನ್ನ ಮನೆಯ ವಾತಾವರಣ ಸಂಪೂರ್ಣ ಇಂಗ್ಲೀಷ್ಮಯವಾಗಿತ್ತು. ಅವನ ಆಹಾರ ಉಡುಪು ಎಲ್ಲವೂ ಆಂಗ್ಲ ಮಕ್ಕಳಂತೆ ಇದ್ದವು ನಿಜ. ಆದರೆ ಅವನು ಬೆಳೆದಂತೆ ಅವನಿಗೆ ಅರಿವಿಲ್ಲದಂತೆ ಭಾರತೀಯ ಸಂಸ್ಕೃತಿಯ ಬೀಜಗಳು ಅವನೆದೆಯಲ್ಲಿ ನೆಲೆಯೂರಿದ್ದವು. ಕಾರ್ಬೆಟ್   ಗೆ  ಭಾರತೀಯರು, ಅದರಲ್ಲೂ ಹಳ್ಳಿಗಾಡಿನ ಬಡಜನತೆಯ ಬಗ್ಗೆ ಅಷ್ಟೋಂದು ಅಕ್ಕರೆ ಏಕೆ? ಎಂಬುದಕ್ಕೆ ನಮಗೆ ಉತ್ತರ ಸಿಗುವುದು ಇಲ್ಲೇ.

ಕಾರ್ಬೆಟ್  ನ ತಾಯಿ ಮೇರಿಯ  ರಿಯಲ್ಎಸ್ಟೇಟ್ ವೈವಹಾರ ದೊಡ್ಡದಾಗುತಿದ್ದಂತೆ ಆಕೆ ಮಕ್ಕಳ ಪಾಲನೆಗೆ ಸ್ಥಳೀಯ ಬಡ ಹೆಣ್ಣುಮಕ್ಕಳನ್ನು. ನೇಮಕ ಮಾಡಿಕೊಂಡಿದ್ದಳು. ಇವರೆಲ್ಲಾ ಬಾಲಕ ಕಾರ್ಬೆಟ್   ಅತ್ತಾಗ ಕಣ್ಣೀರು ಒರೆಸಿ, ಹಸಿವಾದಾಗ ಅನ್ನ ತಿನ್ನಿಸಿ, ತಮ್ಮ ಮಾತೃ ಬಾಷೆಯಾದ ಕುಮಾವನ್ ವೈಖರಿಯ ಹಿಂದಿ ಭಾಷೆಯಲ್ಲಿ ಅವನಿಗೆ ಜೋಗುಳವಾಡಿದರು. ಮಲ ವಿಸರ್ಜಿಸಿದಾಗ  ಹೆತ್ತ ತಾಯಿಯಂತೆ ಬೇಸರಿಸದೆ ಅವನ ಅಂಡು ತೊಳೆದರು, ಆಟವಾಡುತ್ತಾ ಮೈ ಕೈ ಕೊಳೆ ಮಾಡಿಕೊಂಡಾಗ ಅವನಿಗೆ ಸ್ನಾನ ಮಾಡಿಸಿ ಹೊಸ ಪೋಷಾಕು ಹಾಕಿದರು. ಇದರಿಂದಾಗಿ ತನ್ನ ಮನೆಯ ಸಂಸ್ಕೃತಿಯ ಜೊತೆ ಜೊತೆಗೆ ಇನ್ನೋಂದು ಭಾಷೆ ಮತ್ತು ಸಂಸ್ಕೃತಿಗೆ ಕಾರ್ಬೆಟ್   ತನಗರಿವಿಲ್ಲದಂತೆ ತೆರೆದುಕೊಂಡ. ಆ ಬಡ ಹೆಣ್ಣುಮಕ್ಕಳ ಪ್ರೀತಿ ಅವನೆದೆಯಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು ಇದು ಅವನ ಬದುಕಿನುದ್ದಕ್ಕೂ ಬಡವರಿಗೆ ನೆರವಾಗಲು ಪ್ರೇರಣೆಯಾಯಿತು.

ಕಾರ್ಬೆಟ್   ನ ಪ್ರಾಥಮಿಕ ವಿದ್ಯಾಭ್ಯಾಸ ನೈನಿತಾಲ್ನಲ್ಲೇ ನಡೆಯಿತು. ಮನೆಯಲ್ಲಿ ಹಿರಿಯವರಾಗಿದ್ದ ಆತನ  ಅಣ್ಣಂದಿರು, ಅಕ್ಕಂದಿರು ಅವನಿಗೆ ಪಾಠ ಹೇಳುವಲ್ಲಿ ನೆರವಾದರು. ಮನೆಯೊಳಗೆ ಭಾರತ ಮತ್ತು ಇಂಗ್ಲೇಂಡ್ ಇತಿಹಾಸದ ಕೃತಿಗಳು, ಛಾಸರ್ನ ಜಾನಪದ ಶೈಲಿಯ ಕೌತುಕದ ಕಥಾ ಮತ್ತು ಕವಿತೆಯ ಪುಸ್ತಕ ಮತ್ತು ವಿಲಿಯಮ್ ಷೇಕ್ಷ್ ಪಿಯರ್ನ ನಾಟಕಗಳು, ಇವೆಲ್ಲಕಿಂತ ಹೆಚ್ಚಾಗಿ ಆರ್ಯವೇದ ಮತ್ತು ಅಲೊಪತಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಸದಾ ಕೈಗೆಟುಕುವಂತೆ ಇರುತಿದ್ದವು. ಪಕ್ಷಿ ಪ್ರಾಣಿ ಕುರಿತಾದ ಸಚಿತ್ರ ಮಾಹಿತಿ ಪುಸ್ತಕಗಳು ಹೆಚ್ಚಾಗಿ ಅವನ ಗಮನ ಸೆಳೆದವು.

ಕಾರ್ಬೆಟ್  ಮೂರು ವರ್ಷದ ಬಾಲಕನಾಗಿದ್ದಾಗಲೇ ತನ್ನ ಹಿರಿಯಣ್ಣಂದಿರಲ್ಲಿ ಒಬ್ಬನಾಗಿದ್ದ ಜಾನ್ ಕ್ವಿಂಟಾನ್ ಕೈಹಿಡಿದು ನೈನಿ ಸರೋವರ, ಅಲ್ಲಿರುವ ನೈನಾದೇವಿಯ ದೇಗುಲ, ಬಝಾರ್ ರಸ್ತೆ ಇವುಗಳನ್ನ ಸುತ್ತು ಹಾಕುತಿದ್ದ. ತನ್ನ ಮನೆಗೆ ಅತಿ ಸನೀಹದಲ್ಲಿದ್ದ ಸರೋವರಕ್ಕೆ ಬರುವ ಬಗೆ ಬಗೆಯ ಪಕ್ಷಿಗಳೆಂದರೆ ಕಾರ್ಬೆಟ್ಗೆ ಎಲ್ಲಿಲ್ಲದ ಆಸಕ್ತಿ. ರಾತ್ರಿಯ ವೇಳೆ ತನ್ನ ಮನೆಯ ಸಮೀಪದ ಅರಣ್ಯದಲ್ಲಿನ ಹುಲಿ, ಚಿರತೆಗಳ ಘರ್ಜನೆಯ ಶಬ್ದಗಳನ್ನು ಕುತೂಹಲದಿಂದ ಆಲಿಸುತಿದ್ದ. ಅಪರೂಪಕ್ಕೆ ಅರಣ್ಯದಲ್ಲಿ ಆನೆಗಳ ಹಿಂಡು ಸಾಗುವ ದೃಶ್ಯವೂ ಅವನಿಗೆ ಲಭ್ಯವಾಗುತಿತ್ತು. ಹೀಗೆ ಬಾಲ್ಯದಿಂದ ನಿಸರ್ಗವನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದ ಕಾರ್ಬೆಟ್  ನಿಗೆ ಮುಂದೆ ಅದು ಅವನ ಜೀವನದ ಹವ್ಯಾಸವಾಗಿ ಬೆಳೆದುಹೋಯಿತು.

ಕಾರ್ಬೆಟ್‌ನ ತಂದೆ ತಾಯಿಗಳಾದ ಕ್ರಿಸ್ಟೊಫರ್‌ ವಿಲಿಯಮ್ಸ್ ಹಾಗು ಮೇರಿಜನ್ ಇವರಿಗೆ ಕುಟುಂಬ ಕುರಿತಂತೆ ಯಾವುದೇ ಅಸ್ತಿರತೆ ಇರಲಿಲ್ಲ. ಕ್ರಿಸ್ಟೊಫರ್‌ ತನ್ನ ಮೊದಲ ಪತ್ನಿಯಿಂದ ಪಡೆದಿದ್ದ ಇಬ್ಬರು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೇಂಡ್ನಲ್ಲಿ ನೆಲೆಯೂರಿದ್ದರು. ಅದೇ ರೀತಿ ಮೇರಿ ತನ್ನ ಮೊದಲ ಪತಿಯಿಂದ ಪಡೆದು ಉಳಿದುಕೊಂಡಿದ್ದ ಏಕೈಕ ಪುತ್ರಿ ಎಂಜಿನಾಮೇರಿ ಶುಶ್ರೂಷಕಿಯಾಗಿ ಬ್ರಿಟಿಷ್ ಸಕರ್ಾರದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಳು. ಉಳಿದ ಮಕ್ಕಳ ಶಿಕ್ಷಣ ಕೂಡ ಯಾವುದೇ ಅಡೆ ತಡೆಯಿಲ್ಲದೆ ಸಾಗುತಿತ್ತು.

ಕಾರ್ಬೆಟ್   ಕುಟುಂಬ ನೆಮ್ಮದಿಯ ಜೀವನ ಸಾಗಿಸುತಿದ್ದಾಗಲೇ 1881ರಲ್ಲಿ ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಹೃದಯಾಪಘಾತದಿಂದ ಮರಣ ಹೊಂದಿದ. ಕೇವಲ 59ನೆ ವಯಸ್ಸಿಗೆ ತೀರಿ ಹೋದ ಪತಿಯ ಸಾವು ಪತ್ನಿ ಮೆರಿಯ ಪಾಲಿಗೆ ಅನಿರೀಕ್ಷಿತ ಆಘಾತವಾಯಿತು.

ನೈನಿತಾಲ್ ಪಟ್ಟಣವನ್ನು ರೂಪಿಸುವಲ್ಲಿ ಅಪಾರ ಶ್ರಮ ವಹಿಸಿ, ಅಲ್ಲಿ ಪುರಸಭೆಯ ಸಂಸ್ಥಾಪಕಕನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ  ಕ್ರಿಸ್ಟೊಫರ್‌ ವಿಲಿಯಮ್ಸ್ ಬಗ್ಗೆ ಪಟ್ಟಣದ ನಾಗರೀಕರಲ್ಲಿ ಮತ್ತು ಅಲ್ಲಿ ವಾಸವಾಗಿದ್ದ ಆಂಗ್ಲರ ಕುಟುಂಬಗಳಲ್ಲಿ ವಿಶೇಷ ಗೌರವಗಳಿದ್ದವು. ಹಾಗಾಗಿ ನೈನಿತಾಲ್ ಹೃದಯ ಭಾಗದಲ್ಲಿದ್ದ ಚರ್ಚ್ ನಲ್ಲಿ ಆತನ ಪಾರ್ಥಿವ ಶರೀರಕ್ಕೆ ಎಲ್ಲಾ ಗಣ್ಯರು ಪ್ರಾರ್ಥನೆ ಮತ್ತು ಗೌರವ ಸಲ್ಲಿಸಿ ಸಮೀಪದಲ್ಲಿ ಇದ್ದ ಕ್ರೈಸ್ತ ಸಮುದಾಯದ ಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಲಾಯಿತು. ಈಗ ಮುಚ್ಚಲ್ಪಟ್ಟಿರುವ ಆ ಸ್ಮಶಾನ ಭೂಮಿಯ ಮುಖ್ಯಬಾಗಿಲಿನ ಬಲಭಾಗದಲ್ಲಿ ಈಗಲೂ ಅವನ ಸಮಾಧಿಯನ್ನು ನಾವು ನೋಡಬಹುದು.

(ಮುಂದುವರೆಯುವುದು)

2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ…

 -ರವಿ ಕೃಷ್ಣಾರೆಡ್ಡಿ

ಕಳೆದ ವರ್ಷದ ಜಾಗತಿಕ ಮತ್ತು ರಾಷ್ಟ್ರ ಮಟ್ಟದ ವಿದ್ಯಮಾನಗಳ ಬಗ್ಗೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ದಿನೇಶ್ ಅಮಿನ್ ಮಟ್ಟುರವರು ಉತ್ತಮವಾಗಿ ಬರೆದು ವಿಶ್ಲೇಷಿಸಿದ್ದರು. ಓದದೇ ಇದ್ದವರು ದಯವಿಟ್ಟು ಅದನ್ನು ಓದಿ. ಅವರು 2011 ನ್ನು ಬೆಳಕಿನ ವರ್ಷ ಎನ್ನುತ್ತಾ, ಮನುಕುಲದ ಮುನ್ನಡೆಯ ಹಾದಿಗೆ ಬೆಳಕು ತೋರಿದ ಭರವಸೆಯ ವರ್ಷವೂ ಹೌದು ಎನ್ನುತ್ತಾರೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡುತ್ತಾರೆ.

ಕಳೆದ ವರ್ಷ ಪ್ರಪಂಚದ ಬೇರೆಬೇರೆ ಕಡೆ ಹೊತ್ತಿಕೊಂಡ ಪ್ರಜಾಪ್ರಭುತ್ವದ ಕಿಡಿಗಳು ಮತ್ತು ಜನಹೋರಾಟದ ಕಾರಣವಾಗಿಯೇ ಪತನಗೊಂಡ ಸರ್ವಾಧಿಕಾರಿ ಆಡಳಿತಗಳು ಒಬ್ಬ ಪ್ರಜಾಪ್ರಭುತ್ವ ಪ್ರೇಮಿಯಾಗಿ ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿಗಳು. ಈ ವರ್ಷವೂ ಅದು ಮುಂದುವರೆದು ಇಡೀ ಅರೇಬಿಯಾದಲ್ಲಿ, ರಷ್ಯದಲ್ಲಿ, ಬರ್ಮಾದಲ್ಲಿ, ಉತ್ತರ ಕೊರಿಯಾದಲ್ಲಿ, ಮಧ್ಯ-ದಕ್ಷಿಣ ಅಮೇರಿಕಾಗಳಲ್ಲಿ ಮತ್ತು ಎಲ್ಲೆಲ್ಲಿ ರಾಜಪ್ರಭುತ್ವ, ಹುಸಿಪ್ರಜಾಪ್ರಭುತ್ವ, ಸೇನಾಡಳಿತ, ಸರ್ವಾಧಿಕಾರಿಗಳ ಆಡಳಿತ ಇದೆಯೋ ಅಲ್ಲೆಲ್ಲಾ, ಅಲ್ಲಿಯ ಸ್ಥಳೀಯ ಜನರ ನೈಜ ಬೇಡಿಕೆ ಮತ್ತು ಹೋರಾಟವಾಗಿ ಪಸರಿಸಿ ಗಟ್ಟಿಯಾದ ಜನತಂತ್ರಗಳು ನೆಲೆಯೂರಲಿ ಎಂದು ಆಶಿಸುತ್ತೇನೆ.

ನಮ್ಮದೇ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕಳೆದ ವರ್ಷ ಬಹಳ ಮಹತ್ತರವಾದುದಾಗಿತ್ತು. ಜನ ತಮ್ಮ ನಾಗರಿಕ ಜವಾಬ್ದಾರಿಗಳಿಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ ಎನಿಸುತ್ತದೆ. ನಮ್ಮ ರಾಜ್ಯದ ಸ್ಥಿತಿ ನೋಡಿದರೆ ಅದು ಹುಸಿ ಅಂತಲೂ ಭಾಸವಾಗುತ್ತದೆ. ಅಯೋಗ್ಯ, ಅಪ್ರಬುದ್ದ, ಕಳ್ಳ, ವಂಚಕ, ಭ್ರಷ್ಟ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಜೈಲಿಗೆ ಹೋದದ್ದನ್ನು ನೋಡಿದರೆ ವ್ಯವಸ್ಥೆಯಲ್ಲಿ ಅಷ್ಟಿಷ್ಟು ನಂಬಿಕೆಯೂ ಹುಟ್ಟುತ್ತದೆ. ಮತ್ತೆ ಕೆಲವು ಘಟನೆಗಳನ್ನು ಗಮನಿಸಿದರೆ, ಅವೆಲ್ಲಾ ಮೇಲ್ನೋಟಕ್ಕೆ ಮಾತ್ರ ಎಂತಲೂ ಅನ್ನಿಸುತ್ತದೆ. ವಾಸ್ತವದಲ್ಲಿ ದುಷ್ಟರಿಗೆ ಎಂದೂ ಪ್ರಾಯಶ್ಚಿತ್ತವಾಗಲಿ, ಮನ:ಪರಿವರ್ತನೆಯಾಗಲಿ ಆಗುವುದಿಲ್ಲ ಎನ್ನುವ ಮಾತಿಗೆ ಸಾಕಷ್ಟು ಪುರಾವೆ ಸಿಗುತ್ತವೆ.

ವೈಯಕ್ತಿಕವಾಗಿ ನೋಡುವುದಾದರೆ ನನಗೆ ಕಳೆದ ವರ್ಷ ಅನೇಕ ಅನುಭವಗಳ, ಚಟುವಟಿಕೆಗಳ ವರ್ಷ. ಹತ್ತು ವರ್ಷಗಳ ನಂತರ ವರ್ಷಪೂರ್ತಿ (ನಡುವೆ ಒಂದು ತಿಂಗಳನ್ನು ಹೊರತುಪಡಿಸಿ) ದೇಶದಲ್ಲಿಯೇ ಉಳಿದ ವರ್ಷ. ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರ್ ಸುತ್ತಿ, ಕರ್ನಾಟಕದ ಹಲವಾರು ಪ್ರದೇಶ, ಜನರನ್ನು ಕಂಡ ವರ್ಷ. ಕೆಲವರ ಬಗ್ಗೆ ಭರವಸೆ ಬೆಳೆಸಿಕೊಂಡ, ಮತ್ತು ಹಲವರ ಬಗ್ಗೆ ಭ್ರಮನಿರಸನಗೊಂಡ ವರ್ಷ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಉತ್ತರಾರ್ಧದಲ್ಲಿ ಮಾತು-ಕೃತಿಯ ಭಾಗವಾಗಿ ವರ್ತಮಾನ.ಕಾಮ್ ಆರಂಭಿಸಿದ ಸಮಯ.

ಕನ್ನಡದಲ್ಲಿ ಈಗಾಗಲೆ ಅನೇಕ ವೆಬ್‌ಸೈಟುಗಳಿವೆ. ಆದರೆ ಸಾಮಾಜಿಕ-ರಾಜಕೀಯ-ಆರ್ಥಿಕ-ಮಾಧ್ಯಮ ವಿಚಾರಗಳನ್ನು ಇಟ್ಟುಕೊಂಡು, ಪರ್ಯಾಯ ಮಾಧ್ಯಮದ ಸಾಧ್ಯತೆಗಳ ಹುಡುಕಾಟದಲ್ಲಿ ನಾನು ಮತ್ತು ಒಂದಷ್ಟು ಜನ ಸಮಾನಮನಸ್ಕರು ಆರಂಭಿಸಿದ ನಮ್ಮ ವೆಬ್‍ಸೈಟ್ ಆ ದೃಷ್ಟಿಯಲ್ಲಿ ಕನ್ನಡಕ್ಕೆ ವಿಭಿನ್ನವಾದದ್ದು. ಇಲ್ಲಿಯವರೆಗೂ ನಾವು ಖರ್ಚು ಮಾಡಿದ್ದು ಬಹುಶಃ ಐದು ಸಾವಿರ ರೂಪಾಯಿಗಳಿಗಿಂತ ಕಡಿಮೆ, ಆದರೆ ಸಾಮೂಹಿಕವಾಗಿ ನಾವೆಲ್ಲ (ನಮ್ಮ ಬಳಗ ಮತ್ತು ಲೇಖಕರು) ಕೊಟ್ಟ ಸಮಯ ಮತ್ತು ಶ್ರಮ ಮಾತ್ರ ಹೆಚ್ಚಿದೆ. ವರ್ಷಾಂತ್ಯದಲ್ಲಿ ನಾನು ಅನಾರೋಗ್ಯಪೀಡಿತನಾಗಿದ್ದು ಮತ್ತು ಸ್ವಲ್ಪ ವಿಶ್ರಾಂತಿ ಬಯಸಿ ಓಡಾಟ ನಿಲ್ಲಿಸಿದ್ದರಿಂದ ಮತ್ತೂ ಒಂದಷ್ಟು ಬೆಳವಣಿಗೆ ಕಮ್ಮಿಯಾಯಿತು ಎನ್ನಬಹುದೇನೊ. ಆದರೆ, ನಮಗೆಲ್ಲ ಈ ಪ್ರಯತ್ನದ ಬಗ್ಗೆ ತೃಪ್ತಿ ಇದೆ. ಈ ವರ್ಷ ಸಮಯದ ಜೊತೆಗೆ ಸಮುದಾಯಿಕವಾಗಿ ಒಂದಷ್ಟು ಹಣ ಸಂಗ್ರಹಿಸಿ, ಅದನ್ನು ಹೂಡಿ, ವರ್ತಮಾನ.ಕಾಮ್ ಅನ್ನು ಹೆಚ್ಚುಹೆಚ್ಚು ಪ್ರಸ್ತುತ ಪಡಿಸುತ್ತ, ವಿಸ್ತಾರಗೊಳಿಸುತ್ತ, ಬೇರೆ ಆಯಾಮಗಳಿಗೂ ಹೊರಳಿಸಬೇಕು ಎನ್ನುವ ಯೋಜನೆ ನಮ್ಮದು.

ನನ್ನ ಪ್ರಕಾರ 2012 ಅನೇಕ ವಿಚಾರಗಳಿಗೆ ನಿರ್ಣಾಯಕವಾಗಲಿದೆ. ಈ ವರ್ಷವೂ ನಾವು ಜಾಗತಿಕವಾಗಿ ಅನೇಕ ಪಲ್ಲಟಗಳನ್ನು ಕಾಣಲಿದ್ದೇವೆ, ಅಮೆರಿಕ ಮತ್ತು ರಷ್ಯದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ನಡೆಯಲಿವೆ. ಒಬಾಮ ಎರಡನೆ ಅವಧಿಗೆ ಚುನಾಯಿತನಾಗುವುದು ಕಷ್ಟಸಾಧ್ಯವೇನಲ್ಲ-ಅನಿರೀಕ್ಷಿತ ಘಟನೆಗಳು ಜರುಗದೇ ಇದ್ದಲ್ಲಿ. ಆದರೆ ರಷ್ಯದಲ್ಲಿ ಪುಟಿನ್ ಬಗ್ಗೆ ಅದೇ ಮಾತನ್ನು ಹೇಳುವ ಹಾಗೆ ಇಲ್ಲ. ನನ್ನ ಸಹೋದ್ಯೋಗಿಯಾಗಿದ್ದ ಉಕ್ರೇನ್ ಮೂಲದ ಸ್ನೇಹಿತನ ಮಾತನ್ನು ನಂಬುವುದಾದರೆ ಅಲ್ಲಿಯ ಈಗಿನ ಪ್ರಧಾನಿ ವ್ಲಾಡಿಮಿರ್ ಪುಟಿನ್ ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಸರ್ವಾಧಿಕಾರಿ ರೀತಿಯ ಆಡಳಿತ ನಡೆಸಿರುವುದೇ ಅಲ್ಲದೆ ಭ್ರಷ್ಟ ಮಾರ್ಗಗಳಿಂದ ಬಿಲಿಯನ್ ಗಟ್ಟಲೆ ಮೌಲ್ಯದ ಸಾಮ್ರಾಜ್ಯವನ್ನೂ ಸ್ಥಾಪಿಸಿಕೊಂಡಿದ್ದಾನೆ. ಅಲ್ಲಿಯ ವಿರೋಧ ಪಕ್ಷಗಳು ಹೇಳುವ ಪ್ರಕಾರ ಆತ ಆ ದೇಶದ ಅತಿ ಶ್ರೀಮಂತ ವ್ಯಕ್ತಿ. ಅಲ್ಲಿ ನಿಜಕ್ಕೂ ಹೇಳಿಕೊಳ್ಳುವಂತಹ ಪ್ರಜಾಪ್ರಭುತ್ವ ಇಲ್ಲ. ಕಳೆದ ತಿಂಗಳು ಅಲ್ಲಿ ನಡೆದ ಸಂಸತ್ ಚುನಾವಣೆಗಳು ಮೋಸದಿಂದ ಕೂಡಿದ್ದವು. ಅಲ್ಲಿಯ ಈಗಿನ ಅಧ್ಯಕ್ಷ ಪುಟಿನ್‌ನ ಕೈಗೊಂಬೆ. ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಪುಟಿನ್ ಮತ್ತೆ ಸ್ಪರ್ಧಿಸುತ್ತಿದ್ಡಾನೆ. ಅವನ ಸೋಲು-ಗೆಲುವು ಕೇವಲ ರಷ್ಯಕ್ಕಷ್ಟೇ ಅಲ್ಲ, ಜಾಗತಿಕವಾಗಿಯೂ, ನಮಗೂ, ಮುಖ್ಯವಾಗಲಿದೆ. ಯಾಕೆಂದರೆ, ಶಕ್ತಿ ಉತ್ಪಾದನೆಯಲ್ಲಿ ರಷ್ಯ ಪ್ರಪಂಚದ ಸೂಪರ್‌ಪವರ್ (energy superpower of the world). ತೈಲ ಉತ್ಪಾದನೆಯಲ್ಲಿ ಅದು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಮೂರು ವರ್ಷಗಳೇ ಆದವು. ಇವೆಲ್ಲವುಗಳಿಂದಾಗಿ, ಜಾಗತಿಕ ತಾಪಮಾನ ಕಾರಣಗಳಿಗಾಗಿ, ಸೌರ ಅಲೆಗಳು, ಹುಚ್ಚು ಪ್ರಳಯದ ಭೀತಿ, ಪ್ರವಾಹ ಮತ್ತು ಬರಗಾಲಗಳು, ಹೀಗೆ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಘಟನಾವಳಿಗಳಿಂದ ಕೂಡಿರುತ್ತದೆ.

ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ, ಉತ್ತರ ಪ್ರದೇಶದ ಜೊತೆಗೆ ಇನ್ನೂ ಐದು ರಾಜ್ಯದ ಚುನಾವಣೆಗಳು ನಡೆಯಲಿವೆ. ಲೋಕಪಾಲ್ ಮಸೂದೆ ಅಂಗೀಕಾರವಾಗಬಹುದು. ಅಣ್ಣಾ ತಂಡ ಅಥವ ಮತ್ತೊಂದು ನಾಗರಿಕರ ತಂಡ ಇದನ್ನು ಮೀರಿ ಚುನಾವಣಾ ಸುಧಾರಣೆಗಳಿಗಾಗಿ ಹೋರಾಡಬಹುದು. ದೇಶದಾದ್ಯಂತ ಇನ್ನಷ್ಟು ರಾಜಕಾರಣಿಗಳು ಜೈಲಿಗೆ ಹೋಗುವ ಸಾಧ್ಯತೆಗಳು ಈ ಭ್ರಷ್ಟಾಚಾರದ ಯುಗದಲ್ಲಿ ಹೆಚ್ಚೇ ಇದೆ. ಭ್ರಷ್ಟಾಚಾರ ಈ ವರ್ಷವೂ ಬಹುಮುಖ್ಯ ವಿಷಯವಾಗಿರುತ್ತದೆ. ಜಯಾ-ಮಾಯಾ-ಮಮತಾರಿಂದಾಗಿ, ಅಥವಾ ಕಾಂಗ್ರೆಸ್‌ನ ನಾಯಕರ ಅಹಂಕಾರದ ಫಲವಾಗಿ ರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ಬಂದರೆ ಅದೇನೂ ಅನಿರೀಕ್ಷಿತವಲ್ಲ. ಮಮತಾರ ಒಂದೇ ಕಾರಣದಿಂದ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ಲೋಕಪಾಲ್ ಮಸೂದೆ ವಿಚಾರವಾಗಿ ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಯಿತು. ಹಾಗಾಗಿ ಮನಮೋಹನ್ ಸಿಂಗ್, ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ಮುಂದಿನ ವರ್ಷಗಳನ್ನು ನಿರ್ಧರಿಸುವ ವರ್ಷ ಇದು. ದೇಶದಲ್ಲಿ ಮತ್ತೆ ತೃತೀಯ ರಂಗ ಪ್ರಸ್ತುತವಾದರೆ ನನಗೇನೂ ಆಶ್ಚರ್ಯವಿಲ್ಲ. ಆದರೆ ಅದು ಕಾಂಗ್ರೆಸ್ ಅಥವ ಬಿಜೆಪಿಯ ಬೆಂಬಲ ಇಲ್ಲದೆ ಅಧಿಕಾರಕ್ಕೆ ಬರಲಾಗದು.

ಕರ್ನಾಟಕದಲ್ಲಿ ಈ ವರ್ಷವೂ ಒಂದಷ್ಟು ಹಾಲಿ ಮಂತ್ರಿಗಳು ಮತ್ತು ರಾಜಕಾರಣಿಗಳು ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋಗುವ ಸಾಧ್ಯತೆಗಳಿವೆ. ಯಡಿಯೂರಪ್ಪನವರು ಯಾವುದೋ ಒಂದು ಕೇಸಿನಲ್ಲಾದರೂ ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸಿದರೂ ತೀರ್ಮಾನಿಸಿತು. ಅವರ ವಿರುದ್ಧ ಅಷ್ಟೊಂದು ಕೇಸುಗಳಿವೆ. ಲೋಕಾಯುಕ್ತ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕಾರಣವಾಗಿ ಮತ್ತೂ ಒಂದಿಬ್ಬರು ಸಚಿವರು ರಾಜೀನಾಮೆ ಕೊಡಬೇಕಾಗಿ ಬರಬಹುದು. ನೋಡುತ್ತಿದ್ದರೆ ಈ ಸರ್ಕಾರ ಅದಕ್ಕೆ ಮುಂಚೆ ಬಿದ್ದರೂ ಬಿದ್ದೀತು. ಏನೇ ಆಗಲಿ ಈ ವರ್ಷದ ಅಂತ್ಯದ ಒಳಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ಆಗುತ್ತದೆ, ಇಲ್ಲದಿದ್ದರೆ ರಾಷ್ಟ್ರಪತಿ ಆಡಳಿತ ಬರುತ್ತದೆ. ಕರ್ನಾಟಕದ ಜನ ಏನು ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಯಡ್ಡಯೂರಪ್ಪನವರು ಜೈಲಿನಿಂದ ಬಂದಾಗ ಜನ ವರ್ತಿಸಿದ ರೀತಿ, ಕಳೆದ ವರ್ಷ ಪ್ರತಿ ಉಪಚುನಾವಣೆಯಲ್ಲಿ ಮತ ಹಾಕಿದ ಪರಿ, ಮುಂದುವರೆದ ಜಾತಿ ಮತ್ತು ಹಣದ ಪ್ರಭಾವ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳ ಬಿಜೆಪಿಗಿಂತ ಭಿನ್ನವಾಗಿಲ್ಲದ ರಾಜಕಾರಣ, ಮತ್ತು ಅಲ್ಲಿಯವರಿಗಿಂತ ಬೇರೆ ರೀತಿ ಕಾಣಿಸುತ್ತಿಲ್ಲದ ಈ ಪಕ್ಷಗಳ ಶಾಸಕರು-ನಾಯಕರು, ಯಾವುದೂ ಏನನ್ನೂ ಬಿಟ್ಟುಕೊಡುತ್ತಿಲ್ಲ. ಆದರೆ ಈ ವರ್ಷದ ಅತಿವೃಷ್ಟಿ ಮತ್ತು ಅನಾವೃಷ್ಟಿ 2011 ಕ್ಕಿಂತ ಹೆಚ್ಚೇ ಇರುತ್ತದೆ. ರಾಜ್ಯಕ್ಕೆ ಬರಗಾಲ ಈಗಾಗಲೆ ಉತ್ತರದಲ್ಲಿ ಒಂದು ಕಾಲನ್ನು ಇಟ್ಟಿದೆ.

ಇವೆಲ್ಲವೂ ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಬೇಕು. ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ. ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)

Hope good sense dawn on all media men in 2012

Kariyappa Gudadahalli

The role of media began this year (2011) with exposing corruption of unimaginable magnitude and ended with attracting strong criticism from the present chairman of Press Council of India. Besides, a few powerful media people had embarrassing days for having friendship with Niira Radia, a PR person interested in setting up the cabinet as per the wishes of her clients.

‘Sensationalising’, ‘trivialising’, ‘ignoring’ and sometimes ‘glorifying’ are some of the charges generally levelled against media. Media’s role this year was no different. It sensationalised violence on its late evening crime bulletins, trivialised ‘news’ by giving undue importance to incidents worth ignoring. It also ignored the issues worth an in-depth coverage. On top of all these, the one thing which vast media never failed to perform was ‘glorifying’. No doubt, this is in reference to Anna movement in general and Anna Hazare in particular.

A group of five people claimed to have conducted consultations with crores of people over a draft bill consisting innumerable clauses and sub-clauses. And, the media believed it. Hardly made any attempts to question the process of consultation. Needless to state that Anna movement, despite many follies within, succeeded to evoke conscience of public against corruption. But the impact has not yet reached the grassroots. Nobody can state that earnings of a traffic police inspector or an RTO or a sub registrar in Revenue Department or a minister/MLA have come down following the Anna movement. There are no instances of the educated class, which rallied behind Anna, taking up a fight against corrupt officer on demanding bribe either.

Forget the government establishments, the media which gave the possible widest coverage to anti-corruption movement, has not been able to throw out the corrupt within. Journalists, better known as lobbyists, continue to enjoy good will of the management and get regular hikes and promotions.

A Kannada news channel, whose owner was actively identified with Anna movement, attracted attention of other media people by changing its approach in reporting charges of corruption, misuse of office faced by former Chief Minister B.S Yeddyurappa. Any layman regularly watching the channel could notice ‘the change’ within days of Yeddyurappa’s release from the central prison. The change was well displayed in his two-hour long interview with two anchors and a journalist. Anchors generally known for conducting media trial were on a different mission that day. Except the bloggers and websites, no media house raised a voice demanding an inquiry into reports of ‘top journalists’ receiving huge cash from Bellary brothers, accused of illegal mining.

In simple terms, media houses glorified Anna movement against corruption and ignored blatant corruption within. No editor has come forward to declare his assets voluntarily. But they ask their reporters to file a story if the new Lokayukta fails to do it soon after assuming his office. Let the veterans come out with sites, houses they own and declare whether the property they own is in proportionate to their known sources of income.

Nobody would dare to object to the comment that media have continued with their attempts to take society backwards this year too. They gave undue time and space for astrologers and soothsayers. Husbands of women named Lakshmi had a nightmarish experience when a Kannada news channel shamelessly aired a programme professing that whoever married women named Lakshmi had to face hardships throughout their life. The channel people seemed to have not understood the impact the programme had on innocent viewers, particularly girls named Lakshmi.

Going by the present trend one can’t be hopeful of a better year ahead. Of course, the same people continue to hold positions, continue with sermons on objectivity, honesty and many other virtues in their columns. Columns by a couple of senior journalists, committed to democratic principles and diversity are an exception. One can hope a better year in prompt efforts aimed at working out alternatives to mainstream media. Such efforts do not demand huge investment and need to compromise with values. Though their audience is limited it can expand through continuous effort.

Hope good sense prevail upon all media men and media houses in 2012.

ಬಂಗಾರಪ್ಪ ನಿಧನ: ತಣ್ಣಗಾದ ತಹತಹ

– ವಿ.ವಿ.ಸಾಗರ್

ರಾಜ್ಯ ರಾಜಕಾರಣದಲ್ಲಿ ಸಮಾಜವಾದದ ನೆಲೆಯಿಂದ ರಾಜಕಾರಣ ಆರಂಭಿಸಿ ಗಟ್ಟಿಯಾಗಿ ಕಾಲೂರಿದ್ದ ಒಂದೊಂದೇ ಕೊಂಡಿಗಳು ಕಳಚುತ್ತಿವೆ. ಕೆಲವೇ ದಿನಗಳ ಹಿಂದೆ ಬುದ್ಧಪ್ರಜ್ಞೆಯ ಕೆ.ಎಚ್.ರಂಗನಾಥ್, ಈಗ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಇನ್ನಿಲ್ಲ.

ಬಂಗಾರಪ್ಪ ಎಂಬ ಹೆಸರೇ ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯ ಆಕರ್ಷಣೆ, ತಲ್ಲಣ, ಗೊಂದಲ ಎಲ್ಲವೂ ಆಗಿತ್ತು. ಅದು ವಯಕ್ತಿಕ ಲಾಭಕ್ಕೊ ಅಥವಾ ಬೇರ್ಯಾವ ಕಾರಣಕ್ಕೊ ತಮ್ಮ ರಾಜಕೀಯ ಬದುಕನ್ನು ನಿರಂತರ ಪ್ರಯೋಗಕ್ಕೆ ಒಡ್ಡುತ್ತಲೇ ಒಂದು ಶಕ್ತಿಯಾಗಿ ಉಳಿದಿದ್ದು, ವರ್ಣ ರಂಜಿತ ರಾಜಕಾರಣಿ ಎಂದೆಲ್ಲಾ ಬಿರುದು ಗಳಿಸಿದ್ದು, ಕೆಲವೇ ವರ್ಷ ಮಾತ್ರ ಅಧಿಕಾರದಲ್ಲಿದ್ದರೂ ನಿರಂತರವಾಗಿ ಅಧಿಕಾರ ಗದ್ದುಗೆಯಲ್ಲಿ ಕುಳಿತವರು ಕೂಡ ಗಳಿಸಲಾರದಷ್ಟು ಜನಪ್ರಿಯತೆ ಪಡೆದಿದ್ದು, ಮಾಸ್ ಲೀಡರ್ ಎನಿಸಿಕೊಂಡಿದ್ದು ಎಲ್ಲವೂ ಅವರ ರಾಜಕೀಯ ಬದುಕಿನ ಅಕೌಂಟಿನ ಖಾತೆಯಲ್ಲಿ ಠೇವಣಿಯಾಗಿರುವುದು ಗೋಚರಿಸುತ್ತದೆ.

ನಮ್ಮಂತಹ ಕಿರಿಯರಲ್ಲಿ ರಾಜಕೀಯ ಪ್ರಜ್ಞೆ ಮೂಡುವ ಹೊತ್ತಿಗಾಗಲೇ ಬಂಗಾರಪ್ಪ ಅವರ ರಾಜಕೀಯ ದಿನಗಳ ವೈಭವ ಅಂತ್ಯಕ್ಕೆ ಸರಿಯುತ್ತಿತ್ತು. ಸಮಾಜವಾದಿ ನೆಲೆಯಿಂದ ರಾಜಕೀಯ ಆರಂಭಿಸಿ ಈಗ ಯಾವುದೇ ಪಕ್ಷಗಳಲ್ಲಿ ನೆಲೆಗೊಂಡಿದ್ದರೂ ಆ ರಾಜಕಾರಣಿಗಳ ಬಗ್ಗೆ ನಮ್ಮಂತವರಿಗೆ ಒಂದು ಸಣ್ಣ ಕುತೂಹಲ ಇದ್ದಿದ್ದರಿಂದ ಬಂಗಾರಪ್ಪ ಅವರ ಬಗ್ಗೆಯೂ ಕೇಳಿ ತಿಳಿದುಕೊಳ್ಳುವುದರೊಟ್ಟಿಗೆ ಅವರನ್ನು ಗಮನಿಸುವುದು ನಡೆದಿತ್ತು.

`ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು’ ಎಂಬ ಕವಿವಾಣಿಯಂತೆ ಸದಾ ತಹತಹದಿಂದ ಹಾರಾಡಿದ ರಾಜಕಾರಣಿ ಇವರು. ಕಾಂಗ್ರೆಸ್ ಬಿಡುವುದು, ಸೇರುವುದು, ತನ್ನದೇ ಪಕ್ಷ ಕಟ್ಟಿದ್ದು, ಕಮಲ ಮುದ್ದಿಸಿದ್ದು, ಸೈಕಲ್ ತುಳಿದಿದ್ದು, ಅಂತ್ಯದಲ್ಲಿ ತೆನೆ ಹೊತ್ತು ನಡೆದಿದ್ದು ಎಲ್ಲವೂ ಇದಕ್ಕೆ ತಾಜಾ ಸಾಕ್ಷಿ.

ಬಹುಶಃ ಕರ್ನಾಟಕದಲ್ಲಿ ಸ್ವಂತ ಪಕ್ಷ ಕಟ್ಟಿ ಒಂದಿಷ್ಟು ಕೊಂಚ ಯಶಸ್ಸು ಗಳಿಸಿ `ಭರವಸೆ ಹುಟ್ಟಿಸಿದವರಲ್ಲಿ ಮೊದಲಿಗರು. ದೇವರಾಜ ಅರಸು ಅಂತಹ ಗಟ್ಟಿ ವ್ಯಕ್ತಿತ್ವದ ರಾಜಕಾರಣಿಗೂ ಸಿಗದ ಫಲವನ್ನು ಈ ವಿಷಯದಲ್ಲಿ ಅವರು ಪಡೆದಿದ್ದರು. ಇವರು ಕಾಂಗ್ರೆಸ್ ಬಿಟ್ಟಾಗ ಪ್ರತಿ ಸಾರಿಯೂ ಈ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಸವಾಲಿನ ಎದುರು ಶಿವಮೊಗ್ಗ ಉಪ ಚುನಾವಣೆಯಲ್ಲಿ ಸೈಕಲ್ ಸವಾರಿ ಹೊರಟು ವಿಜಯ ಪತಾಕೆ ಹಾರಿಸಿದ್ದು ಎಲ್ಲವೂ ಅವರಿಗಿದ್ದ ರಾಜಕೀಯ ಶಕ್ತಿಯ ಕನ್ನಡಿ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಸಿಡಿದು ಪಕ್ಷ ಬಿಡುವ ಸಂದರ್ಭ ಎದುರಾಯಿತು. ಆ ವೇಳೆ ಸಂಪುಟ ಸಭೆಯ ನಂತರ ಅಂದು ಮಂತ್ರಿಯಾಗಿದ್ದ ವಿಶ್ವನಾಥ್(ಈಗ ಸಂಸದ) ಲೋಕಾಭಿರಾಮವಾಗಿ ಈ ವಿಷಯ ಚರ್ಚಿಸಿ ಬಂಗಾರಪ್ಪ ಅವರನ್ನು ಪಕ್ಷ ಬಿಡದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಹಿತದಷ್ಟಿಯಿಂದ ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ.

ಆದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದಾಗ, ನೋಡಿ ನಾವೆಲ್ಲಾ ಕೇವಲ ಮಂತ್ರಿಗಳಷ್ಟೇ, ಆದರೆ ಬಂಗಾರಪ್ಪ ಜನನಾಯಕ, ಅದರಲ್ಲೂ ಹಿಂದುಳಿದ ಸಮುದಾಯವಾದ ಈಡಿಗರ ಏಕಮಾತ್ರ ನಾಯಕ ಎಂದು ಹೇಳಿದಾಗ ಅದಕ್ಕೆ ದೊಡ್ಡ ಆಕ್ಷೇಪಣೆಗಳೇ ಏಳುತ್ತವೆ. ಆದರೆ ನಿಜಕ್ಕೂ ಬಂಗಾರಪ್ಪ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಕೆ.ಎಚ್.ರಂಗನಾಥ್ ಕೂಡ ವಿಶ್ವನಾಥ್ ಮಾತಿಗೆ ಬೆಂಬಲಿಸುತ್ತಾರೆ. ಆದರೆ ಇತರೆಯವರು ಒಪ್ಪಲು ತಯಾರಿರಲಿಲ್ಲ. ಅದರ ಫಲ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆಯುತ್ತದೆ. ಈ ವಿಷಯವನ್ನು ವಿಶ್ವನಾಥ್ ತಮ್ಮ ಆತ್ಮಕಥನ ಹಳ್ಳಿಹಕ್ಕಿಯ ಹಾಡು ಕೃತಿಯಲ್ಲಿ ದಾಖಲಿಸಿದ್ದಾರೆ. ಹಾಗೆ ನೋಡಿದರೆ ಬರೀ ಕಾಂಗ್ರೆಸ್ ಅಷ್ಟೇ ಅಲ್ಲ ಅವರ ಶಕ್ತಿಯನ್ನು ಇಡಿಯಾಗಿ ಅವರು ಕಾಲಿಟ್ಟ ಯಾವ ಪಕ್ಷವೂ ಬಳಸಿಕೊಳ್ಳಲಿಲ್ಲ.

ಇವೆಲ್ಲಾ ಅವರ ರಾಜಕೀಯ ಶಕ್ತಿಯ ನಿದರ್ಶನಗಳು. ಇದೆಲ್ಲದರ ಆಚೆ ಅವರಲ್ಲಿ ಎಂತಹ ಸಂದರ್ಭವನ್ನು ಹಾಸ್ಯದಿಂದ ತಿಳಿಗೊಳಿಸುವ ಮತ್ತೊಂದು ಮುಖವಿತ್ತು. ಭದ್ರಾವತಿಯಲ್ಲೊಮ್ಮೆ ಒಂದು ಪತ್ರಿಕೆ ಕಚೇರಿ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಭಾಷಣದ ನಂತರ ಅಲ್ಲಿನ ಪತ್ರಕರ್ತರು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಮನವಿ ಪಡೆದ ಅವರು ಅದು, ಇದು ಕೇಳುತ್ತಲೇ ‘ಬಂಗಾರಪ್ಪ ಅವರು ಒಳ್ಳೆಯವರು ಎಂದು ಬರೆಯಿರಿ, ಅನುದಾನ ಕೊಡೋಣ’ ಎಂದು ನಗುತ್ತಲೇ ಕಾರು ಹತ್ತಿ ಹೊರಟೇ ಬಿಟ್ಟರು.

ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ ನಂತರ ಪಕ್ಷ ಕಟ್ಟಲು ರಾಜ್ಯಾದ್ಯಂತ ಸೈಕಲ್ ತುಳಿಯುತ್ತಿದ್ದರು. ಈ ವೇಳೆ ಚಿತ್ರದುರ್ಗದಲ್ಲಿ ಸಭೆ ಆಯೋಜಿಸಲಾಗಿತ್ತು. ನಿಜಕ್ಕೂ ಆ ಸಭೆಗೆ ಬೆರಗಾಗುವಷ್ಟು ಜನ ಸೇರಿದ್ದರು. ವೇದಿಕೆ ಮೇಲೆ ಕೂತೇ ಇವರು ಎಲ್ಲವನ್ನು ನಿಯಂತ್ರಿಸುತ್ತಿದ್ದರು. ಜಾನಪದ ಕಲಾ ತಂಡವೊಂದು ಪ್ರದರ್ಶನ ನೀಡಿ ವೇದಿಕೆ ಇಳಿದು ಹೋಗುತ್ತಿತ್ತು. ಆಗ ಎದ್ದು ನಿಂತ ಬಂಗಾರಪ್ಪ, ಯಾರೂ ಗಲಾಟೆ ಮಾಡಬಾರದು, ಅವರು ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ನೀವ್ಯಾರು ಸರಿಯಾಗಿ ನೋಡ್ಲಿಲ್ಲ ಎಂದು ಆ ಕಲಾ ತಂಡವನ್ನು ವೇದಿಕೆ ಕರೆದು ಮತ್ತೊಮ್ಮೆ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು.

ಕಾರ್ಯಕ್ರಮ ಆರಂಭವಾದಾಗ ಮುಖಂಡರೊಬ್ಬರು ಬಂಗಾರಪ್ಪ ಅವರನ್ನು ಯರ್ರಾಬಿರ್ರಿ ಹೊಗಳಿ ಭಾಷಣ ಬಿಡುತ್ತಿದ್ದರು. ಕ್ಷಣ ಹೊತ್ತು ಕೇಳಿಸಿಕೊಂಡ ಇವರು, ನೀವು ಮಾತನಾಡಿದ್ದು ಸಾಕು ಬನ್ನಿ ಎಂದು ವಾಪಾಸು ಕರೆದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಮುಖಂಡನನ್ನು ಹೋಗಿ ನೀವು ಮಾತನಾಡಿ ಎಂದು ಕಳುಹಿಸಿದ್ದು ನೋಡಿ ನಾವು ಬಿದ್ದು, ಬಿದ್ದು ನಕ್ಕಿದ್ದೆವು.

ತಮ್ಮ ತವರಾದ ಶಿವಮೊಗ್ಗ ಸೇರಿದಂತೆ ಕರಾವಳಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇವರ ಪ್ರಭಾವದ ಗಾಢತೆ ಕಾಣಬಹುದು. ಅದಕ್ಕೆ ಜಾತಿಯ ಬೆಂಬಲವೂ ಒಂದು ಕಾರಣವಾದರೆ, ಅದರಾಚೆಗೂ ಅವರಿಗಿದ್ದ ಬಡ ಜನರೆಡೆಗಿನ ಕಾಳಜಿಯೂ ಒಂದಾಗಿತ್ತು. ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಎಂಬಂತೆ ಗುರುತಿಸಿಕೊಂಡಿದ್ದ ಬಂಗಾರಪ್ಪ ಅವರ ಸ್ಥಾನವನ್ನು ತುಂಬುವವರು ಯಾರು ? ರಾಜಕೀಯ ಬದುಕಿನ ಅಕೌಂಟಿನಲ್ಲಿ ಇಂತಹ ದೊಡ್ಡ ಠೇವಣಿಯಿದೆ. ಇದನ್ನು ಯಾರು ನಗದೀಕರಿಸಿಕೊಳ್ಳುತ್ತಾರೆ ಎಂಬುದನ್ನು ಕಾಲ ನಿರ್ಧರಿಸಬೇಕಿದೆ.

ಸಮಾಜವಾದಿ ನೆಲೆಯಿಂದ ಬಂದರೂ ಅವರ ರಾಜಕೀಯ ಬದುಕಿನಲ್ಲಿ ಸಮಾಜವಾದದ ಶಿಸ್ತು ಅಳವಡಿಸಿಕೊಳ್ಳದೆ ಚೆಲ್ಲಿದಂತೆ ಬದುಕಿದರು. ಆದರೆ ಅವರು ನಡೆ, ನುಡಿ ಸೇರಿದಂತೆ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದ ಅನೇಕ ಯೋಜನೆಗಳಲ್ಲಿ ಸಮಾಜವಾದದ ಅಂಶಗಳಿದ್ದವು. ಹಿಂದುಳಿದ ಸಮುದಾಯದ ರಾಜಕಾರಣಿಯೊಬ್ಬ ಇಲ್ಲಿನ ಎಲ್ಲ ತರತಮಗಳ ನಡುವೆ ಶಕ್ತಿಯಾಗಿ ಬೆಳೆದಿದ್ದು ಅನೇಕರಿಗೆ ಮಾದರಿ. ಜನರಿಗೆ ಹತ್ತಿರಾಗುವ ಮೂಲಕ ರಾಜಕೀಯ ಶಕ್ತಿ ಗಳಿಸಿಕೊಳ್ಳಬಹುದು ಎಂಬುದನ್ನು ಸಾರೆಕೊಪ್ಪದ ಬಂಗಾರಪ್ಪ ಸಾಧಿಸಿ ತೋರಿಸಿದ್ದರು.

ಬದಲಾಗುತ್ತಿರುವ ಕಾಲಮಾನದಲ್ಲಿ ಶಾಸ್ತ್ರೀಯ ಸಂಗೀತ

 -ಶ್ರೀಮತಿ ದೇವಿ

“ಸಂಗೀತ ಎನ್ನುವುದು ಮನುಷ್ಯನ ಪ್ರಜ್ನೆಯನ್ನು ವಿಕಾಸಗೊಳಿಸುವ ಕಲೆಗಳಲ್ಲಿ ಒಂದಾಗಿರುವುದು ಮಾತ್ರವಲ್ಲ, ಅದು ಆ ಕಲಾಕಾರನ ಸೃಜನಶೀಲತೆಯ ಅಭಿವ್ಯಕ್ತಿಗಾಗಿ ಇರುವ ಮಾಧ್ಯಮವೂ ಆಗಿರುತ್ತದೆ. ಇದರಿಂದಾಗಿದೆಯೇ ಕಾಲ ಬದಲಾಗುತ್ತಾ ಮುಂದೆ ಸಾಗಿದಂತೆ, ಹೇಗೆ ಪರಿವರ್ತಿತವಾಗುವ ಸಮಾಜದೊಂದಿಗೆ ಬದುಕುತ್ತಿರುವ ವ್ಯಕ್ತಿಗಳ ಜೀವನವೂ, ಆಲೋಚನಾ ವಿಧಾನವೂ, ವ್ಯಕ್ತಿತ್ವವೂ, ಸಮಾಜದ ಬದಲಾವಣೆಗೆ ಸ್ಪಂದಿಸುವ ರೀತಿಯೂ ಬದಲಾಗುತ್ತದೋ ಹಾಗೆಯೇ ಅದರೊಂದಿಗೆ ಸಮಾನಾಂತರವಾಗಿ ಸಂಗೀತಾದಿ ಕಲೆಗಳು ಬದಲಾಗುತ್ತವೆ, ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತವೆ.” ಎಂಬ ಈ ಆಸಕ್ತಿದಾಯಕವಾದ ವಿಚಾರದೆಡೆಗೆ ಇತ್ತೀಚೆಗೆ ನನ್ನ ಗಮನವನ್ನು ಸೆಳೆದು ಆಲೋಚನೆಗೆ ಹಚ್ಚಿದವರು, ಬಹುದೊಡ್ಡ ಸಂಗೀತಗಾರರೂ ನನ್ನ ಗುರುಗಳೂ ಆದ ಪಂ. ನಾರಾಯಣ ಪಂಡಿತರು.

ಪಂಡಿತರು, ದ್ರುಪದ್ ಗಾಯನದ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲದ ವರೆಗಿನ ಸಂಗೀತದ ಪ್ರವಾಸವನ್ನು ಸುಂದರವಾಗಿ “ಸ್ಥೂಲತೆಯಿಂದ ಸೂಕ್ಷ್ಮತೆಯೆಡೆಗಿನ ಪ್ರವಾಸ” ಎಂದು ಕರೆಯುತ್ತಾರೆ.

ದ್ರುಪದ್ ಎಂಬುದು ಇಂದಿನ ಖ್ಯಾಲ್ ಗಾಯನಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಗಾಯನಪ್ರಕಾರ. ಬಹಳ ಧೀಮಂತವಾಗಿ, ಗಂಭೀರವಾಗಿ ಸಾಗುವ ಈ ಪಧ್ಧತಿಯಲ್ಲಿ ರಾಜ ಗಾಂಭೀರ್ಯವಿದೆ. ಹಾಗೆಯೇ ಇದು ಎಲ್ಲೂ ಗಮಕ್, ಖಟ್ಗಾ, ಮುರ್ಕಿಗಳು ಎಂಬಂತಹ ಉಪರಸ್ತೆಗಳ ಕಡೆ ತಿರುಗಿಯೂ ನೋಡದೇ ರಾಜಮಾರ್ಗದಲ್ಲಿ ಸಾಗುತ್ತದೆ.

ದೇವರ ವರ್ಣನೆ, ಆಶ್ರಯದಾತನಾದ ರಾಜನ ಹಿರಿಮೆಯನ್ನು ಹೊಗಳುವ ವಿಚಾರಗಳನ್ನುಳ್ಳ ದ್ರುಪದ್ ರಚನೆಯಲ್ಲಿ ಸಾಮಾನ್ಯ ಮಾನವನ ದೈನಂದಿನ ಜೀವನ, ತುಮುಲ, ಆತನ ಭಾವನೆಗಳು ಇವನ್ನೆಲ್ಲಾ ಕಾಣಲು ಸಾಧ್ಯವಿಲ್ಲ. ಇದಕ್ಕೆ ಸಾಥಿಗಾಗಿ ಬಳಸಲಾಗುತ್ತಿದ್ದ ಪಖವಾಜನ್ನು ಗಮನಿಸಿದಾಗಲು ಈ ಅಂಶಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಪಖವಾಜ್ ನೋಡಲು ಮೃದಂಗದಂತಹ ತಾಳವಾದ್ಯವಾಗಿದ್ದು, ಇದರಲ್ಲಿ ಖುಲ್ಲಾಬಾಜ್ ನ ಬೋಲ್ ಗಳನ್ನು ಬಾರಿಸಲಾಗುತ್ತದೆ. ’ಧಾ, ಧಿಂ, ತಿಟತಕ’ ಮೊದಲಾದ ಪದಗಳನ್ನು ದೊಡ್ಡ ಸ್ವರದೊಂದಿಗೆ ಗಂಭೀರವಾಗಿ ಬಾರಿಸಲಾಗುತ್ತದೆ.

ಕಾಲ ಸರಿದಂತೆ, ದ್ರುಪದ್ ಗಾಯನದಿಂದ ಖ್ಯಾಲ್ ಗಾಯನದೆಡೆಗೆ ಜನರ ಒಲವು ಬೆಳೆದಂತೆ ಸಂಗೀತದಲ್ಲಿ ಬದಲಾವಣೆಯ ಗಾಳಿ ಸಣ್ಣದಾಗಿ ಬೀಸಲು ಆರಂಭವಾಯಿತು. ಇದನ್ನು ಪಂಡಿತರು, “objectivity ಇಂದ subjectivity ಯ ಕಡೆಗೆ” ಎಂದು ಗುರುತಿಸುತ್ತಾರೆ. ಖ್ಯಾಲ್ ರಚನಾಕಾರನು ಇಲ್ಲಿ “ತನಗೇನು ಅನಿಸುತ್ತಿದೆ, ಹೇಗೆ ಕಾಣುತ್ತಿದೆ” ಎಂಬುದನ್ನು ಹೇಳಲೇಬೇಕಾದ ಒತ್ತಡವನ್ನು ಕಂಡುಕೊಂಡ. ಇದರಿಂದಾಗಿಯೇ ಸ್ವಲ್ಪಮಟ್ಟಿಗೆ ಜಾಸ್ತಿಯೇ ಎನ್ನಬಹುವಾದ ಶೃಂಗಾರ, ವಿರಹಮಯವಾದ ರಚನೆಗಳು ಬರಲು ಕಾರಣವಾಯಿತು. ಆದರೆ ಇವುಗಳೊಂದಿಗೆ ಗೆಳೆತನ, ಮಾತೃವಾತ್ಸಲ್ಯ, ಮಗುವಿನ ತುಂಟಾಟ, ಈ ಎಲ್ಲಾ ಭಾವನೆಗಳ ಅಭಿವ್ಯಕ್ತಿಗೂ ಆಸ್ಪದದೊರಕುವಂತಾಯಿತು.

ಖ್ಯಾಲ್ ಗಾಯನದಲ್ಲಿ, ದ್ರುಪದ್ ಗಾಯನದಲ್ಲಿ ಇರುವುದಕ್ಕಿಂತ ಹೆಚ್ಚು ಹಾಡುಗಾರನಿಗೆ ಸ್ವಾತಂತ್ರ್ಯವಿರುವುದರಿಂದ ಆತನೂ ಈ ರಚನೆ ” ನನ್ನ ಕಣ್ಣಿಗೆ ಹೇಗೆ ಕಾಣುತ್ತಿದೆ” ಎಂದು ತಿಳಿದು ಹಾಡಲು ಆರಂಭಿಸಿದ. ಪಂಡಿತರು ಹೇಳುವಂತೆ ಈ ರೀತಿಯಾಗಿ ಸಂಗೀತದಲ್ಲಿ “humanizing process” ಆರಂಭವಾಯಿತು. ಪಖವಾಜ್ ಗಿಂತ ಬೇರೆಯಾದ ತಬಲ ಸಾಥ್, ಸೂಕ್ಷ್ಮವಾದ ಬೋಲ್ ಗಳೊಂದಿಗೆ ಸಂಗೀತಕ್ಕೆ ಮತ್ತಷ್ಟು ತರಲತೆಯನ್ನು ನೀಡತೊಡಗಿತು. ಅಭಿವೃದ್ಧಿಯೆಡೆಗೆ ಧಾಪುಗಾಲು ಇಟ್ಟು ಸಾಗುತ್ತಿದ್ದ ಸಮಾಜದಲ್ಲಿ ಮೈಕ್ರೋಫೋನ್ ಇತ್ಯಾದಿಗಳ ಆವಿಷ್ಕಾರದಿಂದ, ಹಾಡಲು ಹಿಂದೆ ಬೇಕಾಗಿದ್ದ ಶಾರೀರಿಕ ಶ್ರಮ ಕಡಿಮೆಯಾಗಿ ಮನಸ್ಸಿನ ಪಿಸುಮಾತುಗಳನ್ನು ಹೇಳಲು ಸಾಧ್ಯವಾಯಿತು. ಇದನ್ನೇ ಪಂಡಿತರು “expressionism in music”ಎನ್ನುತ್ತಾರೆ.

ಗಾಯಕರ ಕೇಳುಗರ ಕಿವಿಗಳು ಸೂಕ್ಷ್ಮವಾಗುತ್ತಾ ಸಾಗಿದಂತೆ, ಒಂದುಕಾಲದಲ್ಲಿ “ಕೋಟೆ ಸಂಗೀತ” ಎಂದು ಮಡಿವಂತರಿಂದ ದೂರ ಇರಿಸಲ್ಪಟ್ಟಿದ್ದ ಠುಮ್ರಿ ಮೊದಲಾದ ಪ್ರಕಾರಗಳು ವೇದಿಕೆಯ ಮೇಲೆ ಸ್ಥಾನ ಪಡೆದುಕೊಳ್ಳತೊಡಗಿದವು. ರಚನೆಯ ಸಾಹಿತ್ಯಕ್ಕೂ ಗಮನ ನೀಡಲಾಯಿತು. ಹಲವು ರೀತಿಯ ಭಾವನೆಗಳಿಗೆ ಅಭಿವ್ಯಕ್ತಿ ನೀಡಲು ರಚನೆಯ ಶಬ್ದಗಳ ನೆರವು ಪಡೆಯಲಾಯಿತು. ಶಾಸ್ತ್ರೀಯ ಸಂಗೀತ ತಿಳಿಯದ ಸಾಮಾನ್ಯರ ಮನಸ್ಸನ್ನು ತಲುಪುವಂತಹ ಈ ರಚನೆಗಳು ಬಹುಬೇಗ ಜನಪ್ರಿಯತೆ ಗಳಿಸಿದವು. ಅಂತೆಯೇ, ಹಿಂದೊಮ್ಮೆ ದ್ರುಪದ್ ಪ್ರಭಾವದ ಖ್ಯಾಲ್ ಸಂಗೀತವನ್ನು ನೋಡಿದಂತೆ ಇಂದು ಠುಮ್ರಿ ಸಂಗೀತದ ಪ್ರಭಾವದಲ್ಲಿರುವ ಖ್ಯಾಲ್ ಗಾಯನವನ್ನು ನೋಡಬಹುದಾಗಿದೆ. ಠುಮ್ರಿಯಲ್ಲಿ ಹೇಳುವ ಭಾವನೆಗಳನ್ನೇ ಮತ್ತಷ್ಟು ಧ್ರುತ್ ಆಗಿ ಟಪ್ಪಾ ದಲ್ಲಿ ಹೇಳಲಾಗುತ್ತದೆ.

ಒಂದು ರಾಗದ ಚೌಕಟ್ಟಿನ ಒಳಗೇ, ಸ್ವರಗಳ ಚಲನೆ ಹಾಗೂ ಸ್ಪಂದನೆಗಳನ್ನು ನೋಡಬಹುದಾದ ಸೂಕ್ಷ್ಮತೆಯ ಎಡೆಗೆ ಇಂದು ನಾವು ಸಾಗುತ್ತಿದ್ದೇವೆ. ಶಾಸ್ತ್ರದ ಬಿಗಿ ಕಟ್ಟುಪಾಡು ಇಲ್ಲದೆ ಬಹಳ aggressive ಆಗಿ ಮನಸ್ಸಿನ ಭಾವನೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಹೊರಹಾಕಲು ಇಲ್ಲಿ ಸಾಧ್ಯವಿದೆ ಹಾಗೂ ಅದು ಕೇಳುಗರನ್ನೂ ತಟ್ಟುತ್ತದೆ ಎಂಬ ಕಾರಣವೂ ಇಂದು ಉಪಶಾಸ್ತ್ರೀಯ ಸಂಗೀತ, fusion ಇತ್ಯಾದಿಗಳ ಜನಪ್ರಿಯತೆಯ ಹಿಂದಿದೆ ಎಂದು ಅನಿಸುತ್ತದೆ.

ನಾರಾಯಣ ಪಂಡಿತರು ಪರಿಭಾವಿಸುವಂತೆ ಸಿನಿಮಾದ ಅಥವಾ ಯಾವುದೇ ಬಹುಜನಪ್ರಿಯವಾದ ಹಾಡಿನ ಧಾಟಿಯನ್ನು ಗಮನಿಸಿದಾಗ ಅದು ಹೆಚ್ಚಾಗಿ ನಮ್ಮ ಮಣ್ಣಿನ folk tune ಇಂದ ಬಂದಿರುತ್ತದೆ. ಶಾಸ್ತ್ರೀಯ ಸಂಗೀತಗಾರರು ತಮ್ಮ ಸಂಗೀತವನ್ನು ಬಹು ಶಿಷ್ಟವಾದದ್ದು ಎಂದು ಪರಿಗಣಿಸುವುದರಿಂದ ಇಂತಹ tune ಕಡೆಗೆ ನಿರ್ಲಕ್ಷ್ಯವನ್ನು ತಾಳಿರುತ್ತಾರೆ. ಈ ಅಂಶವನ್ನು ಗಮನಿಸಿದಾಗ ನಮಗೆ ಅನಾಯಾಸವಾಗಿ ನೆನೆಪಾಗುವುದು ಪಂ. ಕುಮಾರ ಗಂಧರ್ವರು ಮಾಡಿದ ಮಹತ್ಕಾರ್ಯ. ಅವರು ಮಧ್ಯಪ್ರದೇಶದ ಜನಪದ ಗೀತೆಗಳನ್ನು ಅಭ್ಯಸಿಸಿ, ಅವುಗಳಿಂದ ಸುಂದರವಾದ tune ಗಳನ್ನು ಎತ್ತಿಕೊಂಡು ಅವುಗಳನ್ನು ರಾಗಗಳನ್ನಾಗಿ ಮಾಡಿದರು. ಆಧುನಿಕ ಕಾಲದ ಸಂಗೀತದ ಹರಿಕಾರರಾದ ಕುಮಾರ್ ಜೀಯವರು ಸಂಗೀತದ ಸೂಕ್ಷ್ಮತೆಯೆಡೆಗಿನ ಪ್ರವಾಸದ ಬಹುದೊಡ್ಡ ನೇತಾರರು.

ರಾಗವೆಂದರೆ, ಕೆಲವು ನಿರ್ದಿಷ್ಟ ಸ್ವರಗಳನ್ನೊಳಗೊಂಡ ಆರೋಹ ಅವರೋಹದಿಂದ ಕೂಡಿದ ಅಸ್ಥಿಪಂಜರವಲ್ಲ; ಇದು ರಾಗದ ಚೌಕಟ್ಟಿನ ಒಳಗೆ ಇದ್ದುಕೊಂಡೇ, ಹಲವು ಮಧುರವಾದ ಸಂಚಾರಗಳಿಂದ ಆದ ಭಾವಭಿವ್ಯಕ್ತಿಗಾಗಿ ಇರುವ ಮಾಧ್ಯಮ. ಅಂತೆಯೇ ರಾಗದ ಗುರುತಿಸುವಿಕೆ, ಸ್ವರಗಳ ಆಧಾರದ ಮೇಲಲ್ಲ, ಭಾವದ ಆಧಾರದಲ್ಲಿ ಎಂಬುದು ಪಂಡಿತರ ನಿಲುವು.

ಹಾಗೆಯೇ ಇಂದು ಠುಮ್ರಿ, ಟಪ್ಪಾ, ದಾದ್ರಾ ಗಾಯನಗಳಲ್ಲಿ ರಾಗದ ಒಳಗಿನ ಸ್ವರಗಳ ವಿವಿಧ ರೀತಿಯ ಸಂಯೋಜನೆಯ ಜೊತೆಗೆ ಹಲವು ಅನ್ಯಸ್ವರಗಳ ಬಳಕೆಯೂ ಆಗುತ್ತದೆ. ಉದಾ., ಕಾಫಿ ರಾಗದಲ್ಲಿ ಕೋಮಲ ದೈವತ ಹಾಗೂ ಶುದ್ಧ ನಿಶಾದದ ಬಳಕೆ ಇತ್ಯಾದಿ.

ಪಂಡಿತರು ಗಮನಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಯಾವುದೇ ಒಂದು ರಾಗದಲ್ಲಿ ಬರುವ ರಚನೆ – ಅದರ ಸಾಹಿತ್ಯ – ತಾಳದ ರೂಪ ಬದಲಾದಂತೆ ಆ ರಾಗದ ರೂಪವೂ ಬದಲಾಗುತ್ತದೆ ಎನ್ನುವುದು. ಆ ನಿರ್ದಿಷ್ಟ ರಚನೆಗೆ ನ್ಯಾಯನೀಡಲು ಬೇಕಾದ ರೀತಿಯಲ್ಲಿ ರಾಗವು ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಆ ನಿರ್ದಿಷ್ಟ ರಚನೆಯಲ್ಲಿ ಬರುವ ಸಾಹಿತ್ಯಕ್ಕೆ ನ್ಯಾಯ ನೀಡಲು ಬೇಕಾದ ರಸವನ್ನು ನೀಡಲು ರಾಗ ಸಮರ್ಥವಾಗುತ್ತದೆ. ಅಂತೆಯೇ ಯಾವ ರಾಗಗಳಿಗೂ ನಿರ್ದಿಷ್ಟ ರಸಗಳು ಎನ್ನುವುದು ಇಲ್ಲ. ಎಲ್ಲಾ ರಾಗಗಳ ಹಿಂದೆ ಸ್ಥಾಯೀ ಆಗಿರುವುದು ಒಂದೇ ರಸ, ಅದೆಂದರೆ ಶಾಂತ ರಸ. ಇದಕ್ಕೆ ಉದಾಹರಣೆಯಾಗಿ ಅವರು ಸಂಗೀತ ಕ್ಷೇತ್ರದಲ್ಲಿ ಅತಿ ಗಂಭೀರರಾಗವೆಂದು ಪರಿಗಣಿತವಾದ ದರ್ಬಾರಿ ಕಾನಡದ ’ಅನೋಖಾ ಲಾಡಲಾ ಮಾಯಿ’ ಎಂಬ ಪಾರಂಪರಿಕ ರಚನೆಯನ್ನು ನೀಡುತ್ತಾರೆ. ಇದು ಸಣ್ಣ ಮಕ್ಕಳ ಆಟದ ವರ್ಣನೆ ಇರುವ ರಚನೆಯಾಗಿದೆ.

ಬಹಳ ಹಿಂದಿನ ಸಮಯದಿಂದ ಆರೋಪಿತವಾಗಿರುವ ಇಂತಹ ಕೆಲವು sterotype ವಿಚಾರಗಳನ್ನು ಇಟ್ಟುಕೊಳ್ಳದೆ, ಸಂಗೀತಕ್ಕೆ ಯಾವುದೇ ಚ್ಯುತಿಬಾರದಂತೆ ವಿಚಾರಗಳನ್ನು ಚಿಂತನೆಯ ಒರೆಗೆ ಹಚ್ಚಿ ’ಇದು ನನಗೆ ಹೇಗೆ ಕಾಣುತ್ತಿದೆ’ ಎಂಬುದಕ್ಕೆ ಗಮನಕೊಡುವುದು ಇಂದಿಗೆ ಅಗತ್ಯವಾಗಿದೆ.

ಇವತ್ತು ಹೊಸ ಹೊಸ ಆವಿಷ್ಕಾರಗಳ ಮೂಲಕ ತಂತ್ರಜ್ನಾನ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ಸೂಕ್ಷ್ಮತೆಯೆಡೆಗೆ ಸಾಗುತ್ತಿದ್ದೇವೆ. ನ್ಯಾನೊ ಟೆಕ್ನಾಲಜಿ, ಪಾಮ್ ಟಾಪ್, ಇತ್ಯಾದಿಗಳು ಇನ್ನೂ ಸೂಕ್ಷ್ಮತೆಯತ್ತ ಚಲಿಸುತ್ತಲೇ ಇವೆ. ಆದರೆ ಈ ಸೂಕ್ಷ್ಮತೆ ನಮ್ಮ ಪ್ರಜ್ಞೆಯ ಭಾಗವಾಗಿ ಆಗಬೇಕಾಗಿದೆ. ಕೇವಲ ಬೌದ್ಧಿಕ ಮಟ್ಟದಲ್ಲಿ ಎಲ್ಲವನ್ನು ಸೀಳಿ ಪರೀಕ್ಷಿಸಿ ಒಳಹೊಕ್ಕು ನೋಡಬೇಕು ಎಂಬ ಬರಿಯ ಅಹಂಕಾರದ ಬುಧ್ಧಿವಂತಿಕೆ ಬಿಟ್ಟು ಭಾವನಾತ್ಮಕವಾಗಿ ಅಧ್ಯಾತ್ಮಿಕವಾಗಿ ಸೂಕ್ಷ್ಮತೆಯೆಡೆಗೆ ಸಾಗಿದಾಗ ಮಾತ್ರ ಈ ಬೆಳವಣಿಗೆಗೆ ನಿಜವಾದ ಅರ್ಥ ಬಂದೀತು.