ನಾಡೋಜ ಗೌರವ: ಆಯ್ಕೆಯಾದವರ ಸಾಧನೆಗಳೇನು?

-ಶಿವರಾಜ್

ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಈ ವರ್ಷದ ನಾಡೋಜ ಪ್ರಶಸ್ತಿಗೆ ಆಯ್ಕೆ ಮಾಡಿದವರಲ್ಲಿ ಇಬ್ಬರ ಹೆಸರು ಕುತೂಹಲ ಹುಟ್ಟಿಸುತ್ತವೆ. ಅವರು – ಬೆಂಗಳೂರು ದೂರದರ್ಶನ ಕೇಂದ್ರ ನಿರ್ದೇಶಕ ಮಹೇಶ್ ಜೋಶಿ ಮತ್ತು ಕರ್ನಾಟಕ ಲೋಕ ಸೇವಾ ಆಯೋಗ ಅಧ್ಯಕ್ಷ ಗೋನಾಳ ಭೀಮಪ್ಪ.

ಮಹೇಶ್ ಜೋಶಿ ಸದ್ಯ ಕೇಂದ್ರ ಸರಕಾರದ ನೌಕರ. ಅವರ ಕೆಲಸವೇ ದೂರದರ್ಶನವನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವುದು. mahesh-joshiಆದರೆ ಇಂದಿಗೂ ನಿಜ ಅರ್ಥದಲ್ಲಿ ದೂರವೇ ಉಳಿದಿರುವುದು ಈ ದೂರದರ್ಶನ ಮಾತ್ರ. ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ, ಆಯ್ದ ವೀಕ್ಷಕರನ್ನು ಆಹ್ವಾನಿಸಿ ಜೋಶಿಯವರು ತಮ್ಮ ಶೋ ನಡೆಸುವುದು ಎಲ್ಲರಿಗೂ ಗೊತ್ತು. ಅವರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವುದರ ಬಗ್ಗೆ ತೀವ್ರ ಮೋಹ. ಗಣ್ಯ ಅತಿಥಿಗಳನ್ನು ಅವರು ಅಪ್ಪಿ ಸಭೆಗೆ ಬರಮಾಡಿಕೊಳ್ಳುವಾಗ ಒಬ್ಬ ಕೆಮರಾಮನ್ ಬಾಗಿಲಲ್ಲೇ ಇರಬೇಕು. ಅವರು ಮಾತು ಎಲ್ಲಿಯೂ ಎಡಿಟ್ ಆಗದೆ ಪ್ರಸಾರ ಆಗಬೇಕು. ಇನ್ನೂ ವಿಶಿಷ್ಟ ಅಂದರೆ ಬಹುತೇಕ ಫ್ರೇಮ್ ಗಳಲ್ಲಿ ಅವರು ಖಾಯಂ ಆಬ್ಜೆಕ್ಟ್!

ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಪ್ರಶಸ್ತಿ ಘೋಷಣೆ ಆದ ದಿನ ಅವರ ಸುದ್ದಿ ಸಮಯದಲ್ಲಿ ಅವರದೇ ದೊಡ್ಡ ಸುದ್ದಿ. ಅಷ್ಟೇ ಅಲ್ಲ, ಇತರ ಸುದ್ದಿ ಸಂಸ್ಥೆಗಳ ನೌಕರರಿಗೆ ಅವರ ಆಪ್ತರು ಸಂಪರ್ಕಮಾಡಿ ಅವರ ಫೋಟೋ ಪ್ರಕಟ ಮಾಡಲು ವಿನಂತಿಸಿಕೊಂಡಿದ್ದು ಅನೇಕರಿಗೆ ಗೊತ್ತು. ನಾಡೋಜ ಅಂದರೆ, ನಾಡಿನ ಗುರು ಎಂದರ್ಥ. ಯಾವ ಕೋನದಿಂದಲೂ ಮಹೇಶ ಜೋಶಿಯವರನ್ನು ಗುರು ಎಂದು ಒಪ್ಪಿಕೊಳ್ಳಲು ಮನಸ್ಸಾಗುತ್ತಿಲ್ಲ.

ಇನ್ನೊಬ್ಬರು gonal-bhimappaಗೋನಾಳ್ ಭೀಮಪ್ಪ. ಕೆಎಎಸ್ ಅಧಿಕಾರಿಯಾಗಿ ಸರಕಾರಿ ಸೇವೆ ಸೇರಿದರು. ನಂತರ ಐಎಎಸ್ ದರ್ಜೆಗೆ ಏರಿ ಹಲವು ಇಲಾಖೆಗಳಲ್ಲಿ ದುಡಿದಿದ್ದಾರೆ. ಸದ್ಯ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರು. ಇತ್ತೀಚೆಗೆ ಅವರ ನೇತೃತ್ವದಲ್ಲಿ ಕೆ.ಪಿ.ಎಸ್.ಸಿ. ಮಾಡಿರುವ ಘನಕಾರ್ಯವಾದರೂ ಏನು ಅಂತ ಘನ ವಿಶ್ವವಿದ್ಯಾನಿಲಯದ ಕುಲಪತಿಯವರು ವಿವರಿಸಬೇಕು.

ಮಾನ್ಯರು ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದವರು. ಅವರು ಅಂತಹ ಉನ್ನತ ಹುದ್ದೆಗೆ ಹೋಗಿದ್ದಾರೆ. ಅದು ನಿಜಕ್ಕೂ ಸಾಧನೆಯೇ. ಅನುಮಾನವಿಲ್ಲ. ಕೆ.ಪಿ.ಎಸ್.ಸಿ ಸುತ್ತ-ಮುತ್ತ ಅಲೆದಾಡುವ ಪಕ್ಷಿ, ಕ್ರಿಮಿ, ಕೀಟ, ನಾಯಿಕುನ್ನಿಗಳಿಗೂ ಗೊತ್ತು, ಅಲ್ಲಿಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಇಲ್ಲ, ಪಾರದರ್ಶಕ ವ್ಯವಸ್ಥೆಯನ್ನಂತೂ ಕೇಳಲೇಬೇಡಿ. ಅವರನ್ನು ಈ ಹುದ್ದೆಗೆ ನೇಮಕ ಮಾಡಿದ್ದನ್ನು ತಮ್ಮ ದಲಿತ-ಪರ ಧೋರಣೆಗೆ ದ್ಯೋತಕ ಎಂಬಂತೆ ಆಗಾಗ ಜಾತ್ಯತೀತ ಜನತಾದಳ ನಾಯಕರು ಹೇಳಿಕೊಳ್ಳುವುದುಂಟು. (ಈ ಹಿಂದಿನ ಅಧ್ಯಕ್ಷರು, ಇದೇ ಪಕ್ಷದವರಿಗೆ ನಿಷ್ಠರಾಗಿದ್ದವರು, H-N-Krishnaನಂತರ ಕೆಲದಿನ ಜೈಲು ಕಂಡು ಬರಬೇಕಾಯಿತು.)

ಕೆ.ಪಿ.ಎಸ್.ಸಿ ಅಧ್ಯಕ್ಷರಾದ ನಂತರ ಅವರ ಮಹತ್ತರ ಸಾಧನೆ ಏನು ಎಂಬುದು ಸಮಾಜಕ್ಕೆ ಗೊತ್ತಾಗಿಲ್ಲ. ಭೀಮಪ್ಪನವರ ಅಭಿಮಾನಿಗಳು ಕೇಳಬಹುದು ಅವರು ಅಧ್ಯಕ್ಷರಾದಾಗಿನಿಂದ ಎಷ್ಟು ದಲಿತ ಹುಡುಗರಿಗೆ ಕಾಸು-ಕರಿಮಣಿ ಇಲ್ಲದೆ ಕೆಲಸ ಸಿಕ್ಕಿದೆ ಅಂತ ನಿಮಗೇನು ಗೊತ್ತು? ಆ ರೀತಿ ದಲಿತ ಹುಡುಗರಿಗೆ ಅನುಕೂಲ ಆಗಿದ್ದರೆ ಸಂತೋಷ. ಆದರೆ, ಅದು ಸಾಧನೆಯೆ?

ಆಯೋಗದಿಂದ ಭರ್ತಿಯಾಗುವ ಹುದ್ದೆಗಳಲ್ಲಿ ಶೇ 50 ರಷ್ಟು ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗಳಿಗೆ. ಈ ಹಿಂದಿನ ಅಧ್ಯಕ್ಷರು ಈ ಹುದ್ದೆಗಳನ್ನು ತುಂಬುವಾಗ ಒಂದು ಜಾತಿಯ ಅಭ್ಯರ್ಥಿಗಳನ್ನೇ ಓಲೈಸಿದ್ದಾರೆ ಎಂಬ ಆರೋಪ ಇದೆ. ಆದರೆ, ಎಷ್ಟೇ ಅರ್ಹತೆ ಇದ್ದರೂ ಹಿಂದುಳಿದ ಮತ್ತು ದಲಿತ ಅಭ್ಯರ್ಥಿಗಳು ತಮ್ಮ ಮೀಸಲಾತಿ ಹೊರತಾಗಿ ಸಾಮಾನ್ಯ ಅಭ್ಯರ್ಥಿಗಳ ಜೊತೆ ಪೈಪೋಟಿ ಮಾಡಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿರುವುದು ಅಪರೂಪ. ಗೋನಾಳ್ ಭೀಮಪ್ಪನವರು ಆ ಹುದ್ದೆಗೆ ಬಂದಾಗಿನಿಂದ ಈ ನಿಟ್ಟಿನಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ? ಬಲ್ಲವರು ಹೇಳಬೇಕು.

ಹಂಪಿ ವಿಶ್ವವಿದ್ಯಾನಿಲಯದ ಮಾತಷ್ಟೇ ಏಕೆ? ಬೇರೆ ವಿ.ವಿ.ಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಮೊನ್ನೆ ಮೊನ್ನೆ ಧಾರವಾಡ ವಿ.ವಿ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೂ ಗೌರವ ಡಾಕ್ಟರೇಟ್ ಘೋಷಿಸಿತು. ಅಲ್ಲಲ್ಲಿ ವಿರೋಧ ವ್ಯಕ್ತವಾಯಿತು. ಮುಜುಗರ ಎದುರಿಸಲಾಗದೆ, ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ವಿದೇಶದ ವಿ.ವಿಯೊಂದು ಗೌರವ ಡಾಕ್ಟರೇಟ್ ನೀಡಿತ್ತು. ತಮ್ಮ ಹೆಸರಿನ ಮುಂದೆ ಡಾ ಎಂದು ಬರೆಸಿಕೊಂಡಿದ್ದ ಯಡಿಯೂರಪ್ಪ ಕೆಲವೇ ದಿನಗಳ ನಂತರ ಅದನ್ನು ತೆಗೆಸಿದರು.

ವಿಶ್ವವಿದ್ಯಾನಿಲಯಗಳು ಜ್ಞಾನದ ಕೇಂದ್ರಗಳು. ಆ ಘನತೆಗೆ ತಕ್ಕಂತೆ ನಡೆದುಕೊಂಡರೆ ಗೌರವ ಗಳಿಸುತ್ತವೆ. ಆಯ್ಕೆಗಳು ಹಳ್ಳ ಹಿಡಿದಲ್ಲಿ, ಅಪರೂಪಕ್ಕೊಮ್ಮೆ ಇಂತಹ ಮನ್ನಣೆ ಗಳಿಸುವ ಉತ್ತಮರಿಗೂ ಕಳಂಕ ತಗುಲುವ ಅಪಾಯ ಇದೆ. ಜೊತೆಗೆ ಅರ್ಹರು ನಮ್ಮ ಸಮಾಜದಲ್ಲಿ ಇಲ್ಲವೇ ಎಂಬ ಪ್ರಶ್ನೆಯೂ ಏಳಬಹುದು.

ಇದೇ ಕಾರಣಕ್ಕೆ ಅನೇಕರಿಗೆ ಪ್ರಶ್ನೆ ಕಾಡುತ್ತಿದೆ – ದೇವನೂರು ಮಹದೇವ ಅವರನ್ನು ನಾಡೋಜ ಗೌರವಕ್ಕೆ ಆಯ್ಕೆ ಮಾಡಲು ಇಷ್ಟು ವರ್ಷ ಬೇಕಾಯಿತೆ?

ಅಮೀನ್ ಮಟ್ಟುರವರ ಲೇಖನಕ್ಕೆ ಒಂದು ಮಾರುತ್ತರ

ದಿನೇಶ್ ಅಮೀನ್ ಮಟ್ಟುರವರಿಗೆ ನಮಸ್ಕಾರಗಳು,

ಕನ್ನಡ ಮಾಧ್ಯಮ ಲೋಕದ ಜನಪ್ರಿಯ ಅಂಕಣ “ಅನಾವರಣ”ದ 04/02/2013 ಲೇಖನದಲ್ಲಿ ತಾವು ಆಶಿಶ್ ನಂದಿಯವರ ವಿವಾದಾತ್ಮಕ ಮಾತುಗಳ ಬಗ್ಗೆ ಬರೆದಿದ್ದೀರಿ. ಕನ್ನಡದ ಸಹಸ್ರಾರು ಓದುಗರಂತೆ ನಾನೂ ಕೂಡಾ ತಮ್ಮ ಅನಾವರಣ ಅಂಕಣದ ಓದುಗ. ಅದರಲ್ಲಿ ತಾವು ಕೊಡುವ ವಿಚಾರ, ಮಾಹಿತಿ, ವಿಶ್ಲೇಷಣೆ, ಒಳನೋಟ ನನ್ನಂತಹ ಹಲವು ರಾಜಕೀಯ, ಸಾಮಾಜಿಕ ಕಾರ್ಯಕರ್ತರಿಗೆ ದಾರಿದೀಪ. ಆದರೆ ಆಶಿಶ್ ನಂದಿಯವರ ವಿವಾದಾತ್ಮಕ ಹೇಳಿಕೆಯನ್ನು aminmattu-prajavaniಆಧರಿಸಿ ತಾವು ಕಳೆದ ಸೋಮವಾರ ಬರೆದ ಬರಹವನ್ನು ಓದಿದ ನಂತರ ನನ್ನಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗಿವೆ. ನೀವು ಆಶಿಶ್ ನಂದಿಯವರನ್ನು ನಿಮ್ಮಂತಹ ಲಕ್ಷಾಂತರ ಏಕಲವ್ಯರು ವೈಚಾರಿಕ ಸ್ಪಷ್ಟತೆಯನ್ನು ರೂಪಿಸಿಕೊಳ್ಳಲು ನೆರವಾದ ಗುರು ಎಂದು ಸಂಬೋಧಿಸಿದ್ದೀರಿ. ಗುರುಭಕ್ತಿಯ ಕಾರಣಕ್ಕಾಗಿ ಅವರಾಡಿದ ಮಾತುಗಳನ್ನು ವಿಮರ್ಶೆ ಇಲ್ಲದೆ ಬಾಯಿ ಮುಚ್ಚಿಕೊಂಡು ಅನುಮೋದಿಸುವುದನ್ನು ಆಶಿಶ್ ನಂದಿ ಒಪ್ಪಿಕೊಳ್ಳಲಾರರು ಎಂದು ಕೂಡಾ ಬರೆದಿದ್ದೀರಿ. ಹಾಗೆಯೇ ನಿಮ್ಮ ಬರಹಗಳಿಂದ ಪ್ರೇರಿತರಾದ ಏಕಲವ್ಯರು ಕನ್ನಡ ನಾಡಿನಲ್ಲಿ ತುಂಬಾ ಮಂದಿಯಿದ್ದಾರೆ. ಅವರಲ್ಲಿ ನಾನೂ ಕೂಡ ಒಬ್ಬ ಗುರುಭಕ್ತಿಯ ಕಾರಣಕ್ಕಾಗಿ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳುವುದನ್ನು ತಾವು ಕೂಡ ಒಪ್ಪಿಕೊಳ್ಳಲಾರಿರಿ ಎಂದು ಭಾವಿಸುತ್ತಾ ತಮ್ಮ ಬರಹದ ಬಗ್ಗೆ ಒಂದೆರೆಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

ಆಶಿಶ್ ನಂದಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಿಪಿಐ(ಎಮ್)‌ನಂತಹ ಒಂದು ರಾಜಕೀಯ ಪಕ್ಷದ ಒಬ್ಬ ಸದಸ್ಯನಾಗಿ ನಾನು ಒಪ್ಪಿಕೊಳ್ಳುವುದಿಲ್ಲ. ಅದೇ ಸಂದರ್ಭದಲ್ಲಿ ಆಶಿಶ್ ನಂದಿಯವರನ್ನು ಬಂಧಿಸಬೇಕು, ಜೈಲಿಗೆ ತಳ್ಳಬೇಕು ಎಂಬಿತ್ಯಾದಿ ಅತಿರೇಕದ ಅಭಿಪ್ರಾಯಗಳೂ ನನ್ನಲ್ಲಿಲ್ಲ. ಇದು ನನ್ನ ಹಾಗೂ ನಾನು ಕೆಲಸ ಮಾಡುವ ಪಕ್ಷದ ನಿಲುವು.

ಆಶಿಶ್ ನಂದಿಯವರ ಹೇಳಿಕೆಯ ಕೊನೆಯ ಭಾಗವನ್ನು ಇಟ್ಟುಕೊಂಡು ಆಧರಿಸಿ ಬರೆದ ನಿಮ್ಮ ಅಂಕಣದ ಕೊನೆಯ ಭಾಗದಲ್ಲಿ ಸಿಪಿಐ(ಎಮ್) ಪಕ್ಷದ ಪ್ರಾಮಾಣಿಕತೆಯನ್ನು ವಿಮರ್ಶೆಗೆ ಒಡ್ಡಿದ್ದೀರಿ. ಪಶ್ಚಿಮ ಬಂಗಾಳ ಭ್ರಷ್ಟಾಚಾರ ಮುಕ್ತ ಸ್ವಚ್ಛ ರಾಜ್ಯವಾಗಿರಲು ಅಲ್ಲಿ ಒಬಿಸಿ, ಎಸ್ಸಿ, ಎಸ್ಟಿಗಳು ಅಧಿಕಾರಕ್ಕೆ ಬರದೇ ಇರುವುದು ಕಾರಣ ಎಂಬ ಆಶಿಶ್ ನಂದಿಯವರು ಮಾತು ಖಂಡಿತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿನ ವ್ಯವಸ್ಥೆ ಭ್ರಷ್ಟಾಚಾರದಿಂದ ಮುಕ್ತವಾಗಿದ್ದರೆ ಅದಕ್ಕೆ ಅಲ್ಲಿನ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಚಳವಳಿ ಮತ್ತು ಮೂರುವರೆ ದಶಕಗಳ ನಿರಂತರ ಆಡಳಿತ ಕಾರಣ ಅನ್ನುವುದು ನಿಷ್ಪಕ್ಷಪಾತಿಗಳು ಒಪ್ಪಲೇಬೇಕಾದ ಸತ್ಯ. ತಾವೂ ಕೂಡಾ “ಅಲ್ಲಿನ ಶೇಕಡಾ 90ರಷ್ಟು ಎಡಪಕ್ಷಗಳ ಜನಪ್ರತಿನಿಧಿಗಳು ಪ್ರಾಮಾಣಿಕರೆನ್ನುವುದು ನಿರ್ವಿವಾದ” ಎಂದು ಅಭಿಪ್ರಾಯ ಪಟ್ಟಿದ್ದೀರಿ.. ಆದರೆ ಮುಂದುವರಿದು, “ಅಲ್ಲಿನ ಸಿಪಿಎಂನ ಪದಾಧಿಕಾರಿಗಳು, ಪಕ್ಷದ ಲೋಕಲ್ ಕಮಿಟಿ ಸೆಕ್ರೆಟರಿಗಳು ಭ್ರಷ್ಟರು. ಅವರ ಆದಾಯ ವೃದ್ಧಿಯ ಬಗ್ಗೆ ಯಾರಾದರೂ ತನಿಖೆ ನಡೆಸಿದರೆ ಸ್ವಚ್ಛ ರಾಜ್ಯದ ಬಣ್ಣ ಬಯಲಾಗಬಹುದು” ಎಂದು ಬರೆದಿದ್ದೀರಿ. (ತಾವು ಬಹಳ ಸಲ ಕಮ್ಯುನಿಸ್ಟ್ ಆಡಳಿತ ಕಾಲದಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದೀರಿ, ಚುನಾವಣಾ ಸಮೀಕ್ಷೆಗಾಗಿ ಬಂಗಾಳದ ಹಳ್ಳಿ, ಹಳ್ಳಿ ತಿರುಗಿದ್ದೀರಿ, ತುಂಬಾ ಸಲ ಬಂಗಾಳದ ಬಗ್ಗೆ ಬರೆದಿದ್ದೀರಿ, ಆದರೆ ಯಾವತ್ತೂ ಸಿಪಿಐ(ಎಮ್) ಪಕ್ಷದ ಪದಾಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದು ಬರೆದದ್ದು ನೆನಪಿಲ್ಲ.)

ಸಿಪಿಐ(ಎಮ್) ಪಕ್ಷದಲ್ಲಿ ಜನಪ್ರತಿನಿಧಿಗಳು ಸ್ವಯಂಭೂಗಳಲ್ಲ, ಬದಲಿಗೆ ಅದೇ ಪಕ್ಷದ ಪದಾಧಿಕಾರಿಗಳು ಹಾಗೂ ಲೋಕಲ್ ಕಮಿಟಿ ಸೆಕ್ರೆಟರಿಗಳ ಮಧ್ಯದಿಂದಲೇ ಆಯ್ಕೆಯಾಗಿ ಬಂದಿರುತ್ತಾರೆ. ಹೀಗಿರುವಾಗ ಜನಪ್ರತಿನಿಧಿಗಳು ಪ್ರಾಮಾಣಿಕರಾಗಿರುವುದು, ಪದಾಧಿಕಾರಿಗಳು ಮಾತ್ರ ಭ್ರಷ್ಟರಾಗುವುದು ಹೇಗೆ ಸಾಧ್ಯ? ನಮ್ಮ ಬಂಡವಾಳಶಾಹಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟರಾಗಲು ಅತೀ ಹೆಚ್ಚು ಸಾಧ್ಯತೆ, ಅವಕಾಶ, ಆಮಿಶಗಳು ಇರುವುದು ಜನಪ್ರತಿನಿಧಿಗಳಿಗೇ ಆಗಿದೆ. ಆದಾಗ್ಯೂ ಸಿಪಿಐ(ಎಮ್) ಜನಪ್ರತಿನಿಧಿಗಳು ಪ್ರಾಮಾಣಿಕರಾಗಿ ಉಳಿದಿದ್ದಾರೆ ಎಂದಾದಲ್ಲಿ ಅದೇ ಪಕ್ಷದ ಪದಾಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದರೆ ಅರ್ಥ ಏನು?

ಇನ್ನು ಪಶ್ಚಿಮ ಬಂಗಾಳದ ಮೇಲ್ಜಾತಿಯ ಜಮೀನ್ದಾರರು ಸಾವಿರಾರು ಎಕರೆ ಜಮೀನನ್ನು ಸ್ವ-ಇಚ್ಛೆಯಿಂದ ಗೇಣಿದಾರರಿಗೆ ಬಿಟ್ಟುಕೊಟ್ಟಿದ್ದಾರೆ ಎಂಬ ಮಾತಿನ್ನು ಪಶ್ಚಿಮ ಬಂಗಾಳದ ಇತಿಹಾಸವನ್ನು ಬಲ್ಲವರಾರೂ ಒಪ್ಪಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಜಮೀನ್ದಾರ ಪದ್ಧತಿ ಅಳಿದು, ಭೂಹೀನರಿಗೆ ಭೂಮಿಯ ಒಡೆತನ ಸಿಕ್ಕಿದ್ದು ಸಿಪಿಐ(ಎಮ್) ನೇತೃತ್ವದ ಐತಿಹಾಸಿಕ ಸಮರಶೀಲ ಹೋರಾಟ ಮತ್ತು ಜ್ಯೋತಿ ಬಸು ನಾಯಕತ್ವದ ಎಡಪಕ್ಷಗಳ ಸರಕಾರ ಜಾರಿಗೆ ತಂದ ಪ್ರಬಲ ಭೂಮಸೂದೆ ಕಾಯ್ದೆಯಿಂದಾಗಿಯೇ ಹೊರತು ಭೂಮಾಲೀಕರ ಸ್ವಇಚ್ಛೆಯಿಂದಲ್ಲ ಎಂಬುದು ಕಮ್ಯುನಿಸ್ಟ್ ಪಕ್ಷಗಳ ಪ್ರಬಲ ವಿರೋಧಿಗಳು ಸಹ ಒಪ್ಪುವ ಮಾತು. (ಕಮ್ಯುನಿಸ್ಟ್ ವಿಚಾರಧಾರೆಯಿಂದ ಪ್ರಭಾವಿತರಾಗಿ, ಕಮ್ಯುನಿಸ್ಟ್ ಪಕ್ಷದ ಚಳುವಳಿಯ ಭಾಗವಾದ ಕೆಲವು ಭೂಮಾಲಕರು ತಾವು ಒಪ್ಪಿಕೊಂಡ ಆದರ್ಶದ ಭಾಗವಾಗಿ ಸ್ವಇಚ್ಛೆಯಿಂದ ಭೂಮಿಯನ್ನು ಗೇಣಿದಾರರಿಗೆ ಹಂಚಿದ ಪ್ರಕರಣಗಳನ್ನು ಬಿಟ್ಟು.)

ಹಾಗೆಯೇ ಜಮೀನು ಬಿಟ್ಟುಕೊಟ್ಟ ಮೇಲ್ಜಾತಿಗಳಿಗೆ ಅಧಿಕಾರ ಸಿಕ್ಕಿದೆ, ಅದಿನ್ನೂ ಅವರ ಕೈಯಲ್ಲಿ ಭದ್ರವಾಗಿ ಉಳಿದಿದೆ ಎಂಬ ಅಭಿಪ್ರಾಯವನ್ನು ಕೂಡಾ ಒಪ್ಪುವುದು ಸಾಧ್ಯವಿಲ್ಲ. jyothi-basuಜ್ಯೋತಿ ಬಸುವಿನಂತಹ ನಾಯಕ 23 ವರ್ಷ ಅರ್ಹವಾಗಿಯೇ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ್ದನ್ನು ಅವರ ಜಾತಿಯ ಕಾರಣಕ್ಕಾಗಿ ಮೇಲ್ಜಾತಿಗಳ ಆಡಳಿತ ಎಂಬ ಅಭಿಪ್ರಾಯಕ್ಕೆ ಬರಲು ಹೇಗೆ ಸಾಧ್ಯ? ಪಶ್ಚಿಮ ಬಂಗಾಳ ಸೇರಿ ಕಮ್ಯುನಿಸ್ಟ್ ಚಳುವಳಿ ಬೆಳೆದು ಬಂದದ್ದೇ ಮೇಲ್ಜಾತಿಗಳ ಕಪಿಮುಷ್ಟಿಯಲ್ಲಿದ್ದ ಆಳುವ ವರ್ಗಗಳ ವಿರುದ್ಧದ ಹೋರಾಟಗಳ ಮೂಲಕವೇ ಎಂಬುದು ತಮಗೆ ತಿಳಿದಿಲ್ಲಾ ಎಂದು ಭಾವಿಸುವುದು ಹೇಗೆ? ಪಶ್ಚಿಮ ಬಂಗಾಳದಲ್ಲಿ ಮೂರುವರೆ ದಶಕಗಳ ಕಾಲ ರಾಜಕೀಯ ಅಧಿಕಾರ ಇದ್ದದ್ದು ಮೇಲ್ಜಾತಿಗಳ ಕೈಯಲ್ಲಿ ಅಲ್ಲ. ಕಾರ್ಖಾನೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಭೂಹೀನರು, ಗೇಣಿದಾರರು, ಕೃಷಿ ಕೂಲಿ ಕಾರ್ಮಿಕರು, ಹೀಗೆ ಬಹುತೇಕ ಕೆಳಜಾತಿಗಳೇ ಇರುವ ಶೋಷಿತ ಜನ ವಿಭಾಗವನ್ನು ಪ್ರತಿನಿಧಿಸುವ ಸಿಪಿಐ(ಎಮ್) ಪಕ್ಷದ ಕೈಯಲ್ಲಿ. ಜ್ಯೋತಿ ಬಸು ಸೇರಿ ಅಧಿಕಾರ ಸ್ಥಾನದಲ್ಲಿದ್ದ ಮೇಲ್ಜಾತಿಗೆ ಸೇರಿದ ಕಾಮ್ರೇಡುಗಳು ತಮ್ಮ ಸ್ವಜಾತಿಯಲ್ಲಿದ್ದ ಜಾತಿವಾದ, ಶೋಷಣೆಯ ವಿರುದ್ಧ ಸಿಡಿದೆದ್ದು ಶೋಷಿತ ಜಾತಿಯ ಜನತೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಪಕ್ಷದ ಆಡಳಿತದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೇಲ್ಜಾತಿಯಿಂದ ಬಂದವರಾಗಿದ್ದರೂ ಮಂತ್ರಿಮಂಡಲ, ಜನಪ್ರತಿನಿಧಿಗಳಲ್ಲಿ ಕೆಳಜಾತಿಗಳು, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಚ್ಚಿನ ಪ್ರಭಾವಶಾಲಿ ಪ್ರತಿನಿಧಿಗಳು ಇದ್ದರು ಮತ್ತು ಪಕ್ಷದ ಒಳಗಡೆ ಅವರು ಪ್ರಭಾವಶಾಲಿಗಳಾಗಿದ್ದರು (ಲೋಕಲ್ ಕಮಿಟಿ ಸೆಕ್ರೆಟರಿಗಳಲ್ಲಿ ಕೆಳಜಾತಿಗೆ ಸೇರಿದವರೇ ಅಧಿಕ) ಎಂಬುದನ್ನು ನೀವು ಕಡೆಗಣಿಸಿದ್ದೀರಿ.

ಇದಕ್ಕಿಂತಲೂ ಮುಖ್ಯ ವಿಚಾರವನ್ನು ನೀವು ಚರ್ಚೆಗೆ ಒಳಪಡಿಸಿಲ್ಲ. ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಮ್) ಪಕ್ಷ ಸಾಮಾನ್ಯ ಕ್ಷೇತ್ರದಲ್ಲಿಯೂ ಸಹ ಪರಿಶಿಷ್ಟ ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿದೆ. ಇದು ಬೇರೆ ಪಕ್ಷಗಳಲ್ಲಿ, ಬೇರೆ ರಾಜ್ಯಗಳಲ್ಲಿ ಸಾಧ್ಯವಿದೆಯೇ? ನಮ್ಮದೇ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯಂತಹ ಪ್ರಭಾವಿ ನಾಯಕ ಸತತ ಏಳೆಂಟು ಬಾರಿ ಗೆದ್ದ ಮೀಸಲು ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಾಗ ಇನ್ನೊಂದು ಮೀಸಲು ಕ್ಷೇತ್ರಕ್ಕೆ ವಲಸೆ ಹೋದದ್ದನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ. ದಲಿತರು ಮಾತ್ರವಲ್ಲ ಇತರೆ ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲಾ ವರ್ಗಗಳ ದಮನಿತರಿಗೆ ಭೂಮಿ, ರಾಜಕೀಯ ಅಧಿಕಾರವನ್ನು ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಮ್) ಪಕ್ಷ ನೀಡಿದೆ. ಹೀಗಿರುವಾಗ ಪಕ್ಷದ ಆಡಳಿತವನ್ನು ಜಾತಿವಾದಿ ಎನ್ನಲು ಸಾಧ್ಯವೇ? ಅಂತೆಯೇ, ಇಷ್ಟೆಲ್ಲಾ ವಾಸ್ತವಾಂಶಗಳು ಇರುವಾಗ ತಮ್ಮ ಅಂಕಣ ಬರಹದಲ್ಲಿ ಆಶಿಶ್ ನಂದಿಯವರ ಹೇಳಿಕೆಯನ್ನು ಮುಂದಿಟ್ಟು ಪಶ್ಚಿಮ ಬಂಗಾಳದ ಸಿಪಿಐ(ಎಮ್) ಪಕ್ಷದ ಬಗ್ಗೆ ತಾವು ಬರೆದ ಬರಹದ ಹಿನ್ನಲೆಯಲ್ಲಿ ಆಶಿಶ್ ನಂದಿಯವರೇ ಪ್ರತಿಪಾದಿಸುತ್ತಾ ಬಂದ ಆಧುನಿಕೋತ್ತರವಾದ ಮತ್ತು ಅದರ ಉಪವಾದ ಅನನ್ಯತೆಯ ವಾದ ಪ್ರಭಾವವೂ ಒಂದು ಕಾರಣ ಆಗಿರಬಹುದು ಎಂಬುದು ನನ್ನ ಅಭಿಪ್ರಾಯ.

ಇತೀ ತಮ್ಮ ಪ್ರೀತಿಯ,
ಮುನೀರ್ ಕಾಟಿಪಳ್ಳ

ಒಂದು ಜಾಹೀರಾತು : ಅನುವಾದಿತ ಸಣ್ಣಕತೆ

[ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಬರಗಾಲ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ-ರಾಗಿಯ ಬೆಲೆ ಶೇ.50 ಹೆಚ್ಚಿದೆ. ಚುನಾವಣೆಗಳು ಹತ್ತಿರ ಬರುತ್ತಿವೆ. ನಾನಾ ತರಹದ ನಾಟಕಗಳು ರಾಜ್ಯದ ರಂಗಸ್ಥಳದಲ್ಲಿ ಆಡಲ್ಪಡಲಿವೆ. ಆದರೆ ಈ ನಾಟಕಗಳ ವ್ಯಂಗ್ಯದ ಆಹಾರ ತಾವೇ ಎಂದು ಜನಸಾಮಾನ್ಯರಿಗೆ ಅನ್ನಿಸದ ಹಾಗೆ ನಟಿಸಲಿದ್ದಾರೆ ರಾಜಕಾರಣಿಗಳು ಮತ್ತು ಅವರ ಚೇಲಾಗಳು. ನಾನು ದಶಕದ ಹಿಂದೆ ತೆಲುಗಿನಿಂದ ಅನುವಾದಿಸಿದ್ದ ಈ ಸಣ್ಣಕತೆ ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಮತ್ತು ಈಗಲೂ ಪ್ರಸ್ತುತ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದು 2003 ರಲ್ಲಿ ದಟ್ಸ್‌ಕನ್ನಡ.ಕಾಮ್‌ನಲ್ಲಿ ಪ್ರಕಟವಾಗಿತ್ತು. ರವಿ…]

– ತೆಲುಗು ಮೂಲ: ಶಿವಂ
– ಕನ್ನಡಕ್ಕೆ : ರವಿ ಕೃಷ್ಣಾರೆಡ್ಡಿ

“ಎಲ್ಲಿ ಒಂದು ನಗು ನಗಿ!” ದಿನಪತ್ರಿಕೆಯಲ್ಲಿನ ಒಂದು ಟೂತ್‌ಪೇಸ್ಟ್ ಜಾಹೀರಾತು ಕೇಳುತ್ತಿದೆ.

ನಗು! ಎಷ್ಟು ದಿನಗಳಾದವು ಅವನು ನಕ್ಕು! ಬಹುಶಃ ಹದಿನೈದು ವರ್ಷವಾದರೂ ಆಗಿರಬೇಕು. ಹೌದು. ಹದಿನೈದು ವರ್ಷಗಳು.

ಅವನಿಗೆ ಹದಿನೇಳು ಇದ್ದಾಗ ಶಾಲಾಮಾಸ್ತರ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಜಾರಿ ಬಿದ್ದು ಬಿಟ್ಟ. ವೆಂಕಟರಾವು ಇರಬಹುದು, ಮಾಸ್ತರರನ್ನು ಹಿಡಿದು ನಿಲ್ಲಿಸಲು ಹೋದ. ಮಾಸ್ತರು ಕ್ರೋಧದಿಂದ ವೆಂಕಟರಾವಿನ ಬೆನ್ನಿನ ಮೇಲೆ ಬೆತ್ತವನ್ನು ಚೂರು ಚೂರು ಮಾಡಿದ್ದರು. ಎಲ್ಲರೂ ನಕ್ಕಿದ್ದರಾಗ. ಅವನೂ ನಕ್ಕಿದ್ದ ಎಲ್ಲರ ಜೊತೆಗೆ. ಅವನ ಕಣ್ಣಲ್ಲಿ ನೀರು ತುಳುಕಿತ್ತು ಆ ನಗುವಿಗೆ.

ಅದೇ ಕೊನೆಯ ಸಾರಿ ನಕ್ಕಿದ್ದು ಗುರುತಿರುವುದು. ಆಮೇಲೆ ಅವನಿಗೆ ಈ ಪ್ರಪಂಚದಲ್ಲಿ ಏನನ್ನು ನೋಡಿ ನಗಬೇಕೊ ತಿಳಿದಿದ್ದಿಲ್ಲ. ಕಾಂಗ್ರೆಸ್‌ನವರು ಲಾಠಿಛಾರ್ಜ್‌ಗಳನ್ನು ತಿನ್ನುವುದನ್ನು ನೋಡಿದ. ಹೆಂಡತಿ ಮಕ್ಕಳನ್ನು ಬಿಟ್ಟು ಜೈಲಿನಲ್ಲಿ ಕೊಳೆಯುವುದನ್ನು ನೋಡಿದ. drought-dead-cowಅನಾರೋಗ್ಯದಿಂದ ತನ್ನ ತಂದೆ ವೈದ್ಯೋಪಚಾರಕ್ಕೆ ಸಹ ಗತಿಯಿಲ್ಲದೆ ಬಾಧೆ ಪಡುತ್ತಾ ಸಾಯುವುದನ್ನು ನೋಡಿದ. ಬಂಗಾಳ ಬರಗಾಲದಲ್ಲಿ ಜನರು ಎಲೆಗಳನ್ನು ಆಯ್ದು ತಿನ್ನುವುದನ್ನು ನೋಡಿದ.

ಯಾರೂ ಆತನನ್ನು ಆ ದಿನಗಳಲ್ಲಿ ನಗು ಎಂದು ಕೇಳದೆ ಹೋದರು. ಕೊನೆಗೆ ಟೂತ್‌ಪೇಸ್ಟ್ ಕಂಪನಿಯವರೂ ಕೂಡಾ.

“ಆತನು ಯಾವಾಗಲೂ ನಗುತ್ತಲೇ ಇರುತ್ತಾನೆ.” ಎನ್ನುತ್ತಿತ್ತು, ಎನ್ನುತ್ತಿದೆ ಈ ಟೂತ್‌ಪೇಸ್ಟ್ ಜಾಹೀರಾತು.

ಜಾಹೀರಾತಿನಲ್ಲಿನ ಚಿತ್ರದ ಮುಖ ಅವನ ಮುಖದ ಹಾಗೆ ಇಲ್ಲ. ಥೇಟು ಅವನ ಆಫೀಸರ್ ಮುಖದ ರೀತಿ ಶುಭ್ರವಾಗಿ, ನುಣ್ಣಗೆ ಇದೆ. ಅವನ ಆಫೀಸರ್ ಮುಖದ ಹಾಗೆ ನಗುತ್ತಾ ಇದೆ.

ಅವನ ಆಫೀಸರ್‌ಗೆ ಏಳು ನೂರು ರೂಪಾಯಿಗಳ ಸಂಬಳ. ಆಫೀಸಿಗೆ ಕಾರಿನಲ್ಲಿ ಬರುತ್ತಾರೆ. ಕಲ್ಲು-ಮಣ್ಣು ಇಲ್ಲದ ಅಚ್ಚ ಬಿಳಿಯ ಮಲ್ಲಿಗೆ ಹೂವಿನಂತಹ ಅಕ್ಕಿ ರೇಷನಿಂಗ್ ದಿನಗಳಲ್ಲಿ ಸಹ ಚೀಲಗಳಲ್ಲಿ ಅವರ ಮನೆಗೆ ಬರುತ್ತದೆ. ಅವರಿಗೆ ಕಾಯಿಲೆ ಬಂದರೆ ಡಿ.ಎಂ.ಒ. ಮನೆಗೆ ಬಂದು ಸ್ವತಃ ಔಷಧ ಕೊಟ್ಟು ಹೋಗುತ್ತಾನೆ. ಅದಕ್ಕೇ ಅವರು ಯಾವಾಗಲೂ ನಗುತ್ತಿರುತ್ತಾರೆ ಮತ್ತೆ.

“ಒಳ್ಳೆಯ ದಂತಪಂಕ್ತಿಯಿಂದ ನಗುವ ಆ ನಗು ಆರೋಗ್ಯ.” ಮತ್ತೇ ಜಾಹಿರಾತು. ಅವನದು ಒಳ್ಳೆಯ ಹಲ್ಲುವರಸೆ. ಅವನಿಗೆ ಆರೋಗ್ಯವಾಗಿರುವುದು ಎಂದರೆ ಬಹಳ ಇಷ್ಟ. ಹದಿನೈದು ವರ್ಷದ ಹಿಂದೆ ನಗುತ್ತಿದ್ದ. ಮತ್ತೆ ನಕ್ಕು ಆರೋಗ್ಯವಾಗಿ ಇರೋಣ ಎಂದು ಅವನ ಉದ್ದೇಶ. ಆದರೆ ಅವನಿಗೆ ನಗು ಬರುತ್ತಿಲ್ಲ. ಎರಡನೇ ಪ್ರಪಂಚ ಯುದ್ಧ ಮುಗಿದ ತಕ್ಷಣ ನಗೋಣ ಎನ್ನಿಸಿತ್ತು ಅವನಿಗೆ. ಯುದ್ಧದಲ್ಲಿ ಗಂಡಂದಿರನ್ನು, ತಂದೆಯರನ್ನು ಕಳೆದುಕೊಂಡ ಅಮಾಯಕ ಜನರು ಜ್ಞಾಪಕ ಬಂದರು. ಅವರ ಶೋಕಗಳು ಅವನ ಕಿವಿಯಲ್ಲಿ ಗಿಂಗುರುಗುಟ್ಟಿದವು. ನಗಲಾರದೆ ಹೋದನವನು.

ಭಾರತ ದೇಶ ಸ್ವತಂತ್ರ ದೇಶ ಆಗಲಿದೆ ಎಂದರು. ತುಟಿಗಳು ಬಿರಿದವು. ಆನಂದದಿಂದ ಪ್ರಪಂಚ ಪ್ರತಿಧ್ವನಿಸುವ ಹಾಗೆ ಗಹಗಹಿಸಿ ನಗಬೇಕೆಂದು ಅವನ ಉದ್ದೇಶ. ಭಾರತ ಮಾತೆ ಎರಡು ಭಾಗಗಳಾಗಿ ಕತ್ತರಿಸಲ್ಪಟ್ಟಳು. ಹಿಂದೂಗಳು ಮುಸಲ್ಮಾನರನ್ನು, ಮುಸಲ್ಮಾನರು ಹಿಂದೂಗಳನ್ನು ಕತ್ತರಿಸುತ್ತ ಸಾಗಿದರು. ರಕ್ತ ಪ್ರವಾಹದಂತೆ ಹರಿಯಿತು. ಅವನ ತುಟಿಗಳು ವಿಷಾದಕರವಾಗಿ ಕೊಂಕು ತಿರುಗಿ ಮುದುಡಿಕೊಂಡವು.

ಪ್ರಜಾಪ್ರಭುತ್ವವೆಂದರು. ತಿನ್ನುವುದಕ್ಕೆ ತಿಂಡಿ, ಇರುವುದಕ್ಕೆ ಮನೆ ಇರುತ್ತದೆ ಎಂದುಕೊಂಡನು ಅವನು. ಹೊಟ್ಟೆ ತುಂಬಾ ತಿಂದು, ಬಿಡುವಿದ್ದಾಗಲೆಲ್ಲ ತಣ್ಣನೆಯ ಅಂಗಳದ ಚಪ್ಪರದ ಕೆಳಗೆ ಕುಳಿತುಕೊಂಡು ಹೊಟ್ಟೆ ಬಿರಿಯುವ ಹಾಗೆ ತಾವೆಲ್ಲ ನಗುವುದೇ ಇನ್ನು ಮುಂದೆ ಎಂದುಕೊಂಡನು. ಬಂದಿತು ಅವರ ಪ್ರಭುತ್ವ. ಕೆರೆಯ ಬಳಿ ಗುಡಿಸಲಲ್ಲಿ ಇದ್ದ ರೌಡಿ ಸುಬ್ಬಯ್ಯ ತಮ್ಮನ್ನು ಆಳುವವರ ಗುಂಪಿಗೇರಿದ; ಕಿರುನಗೆ ನಗುತ್ತ ಸಾಗಿದ. ಇವನು ಮಾತ್ರ ಇಲ್ಲಿಯವರೆಗೂ ಸಂಬಳ-ಜೀತ ಎನ್ನುತ್ತಾ, ಆರೋಗ್ಯ ಅನ್ನುತ್ತಾ, ಮುಕ್ಕುತ್ತ ಮುಲುಗುತ್ತಲೆ ಇದ್ದಾನೆ.

“ನಿರ್ಮಲವಾದ, ಶುಭ್ರವಾದ ಆ ಕಿರುನಗೆ ಈಗಲೇ ನಿಮ್ಮದಾಗುತ್ತದೆ.” toothpaste-smile-2ಮಾತುಗಳು, ಒಣಮಾತುಗಳು. ನಿರ್ಮಲವಾದವು, ಶುಭ್ರವಾದವು ಯಾವೂ ತಮ್ಮದಲ್ಲ. ಕಿರುನಗೆ ಮಾತ್ರ ತಮ್ಮದು ಹೇಗೆ ಆಗುತ್ತದೆ? ಶುಭ್ರವಾದದ್ದೇನಾದರು ತಮಗೆ ಉಳಿದಿದ್ದರೆ ಅದು ಖಂಡಿತ ಮನಸ್ಸು ಮಾತ್ರವೆ. ಅದೂ ಕೂಡ ಉಳಿಯದೆ ಹೋಗಿದ್ದರೆ, ಎಂದೋ ಅವನು ನಕ್ಕಿರಬಹುದಿತ್ತು. ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೃದಯಕ್ಕೆ ಇಷ್ಟು ಬಾಧೆ ಏತಕ್ಕೆ ಕೊಡಬೇಕು?

ನಿರ್ಮಲವೂ, ಶುಭ್ರವೂ? ಏನ್ ಮಾತವು? ಆ ಮಾತುಗಳಿಗೆ ಅಸಲು ಅರ್ಥವೇ ಹೋಗಿದೆ ಅವನಿಗೆ. ಅವರು ಬಳಸುವ ತುಪ್ಪವೇ ಶುದ್ಧವಾದದ್ದಲ್ಲ. ತಾವು ತಿನ್ನುವ ತಿಂಡಿಕಾಳು ಪುಷ್ಠಿಕರವಾದುವು ಅಲ್ಲ. ತಮ್ಮ ಮಕ್ಕಳು ಕುಡಿಯುವ ಹಾಲು, ಮಜ್ಜಿಗೆ ಶುದ್ಧವಾದದ್ದಲ್ಲ. ತಾವು ಉಸಿರಾಡುವ ಗಾಳಿ ಶುಭ್ರವೇ, ನಿರ್ಮಲವೆ?

ಮನೆಗಳ ಹತ್ತಿರ ಕಾರ್ಖಾನೆಗಳು ಇರಬಾರದಂತೆ. ಅವನ ಮನೆಯ ಪಕ್ಕವೇ ಒಂದು ಕಾರ್ಖಾನೆ. ರಾತ್ರಿಯೆಲ್ಲಾ ಭುಕ್, ಭುಕ್, ಭುಕ್, ಭುಕ್ ಎಂದು ಒಂದೇ ಕೂಗು. ಬೆಳಿಗ್ಗೆ ಏಳುವಷ್ಟರಲ್ಲಿ ಅವನ ಮನೆಯ ತುಂಬಾ ಫ್ಯಾಕ್ಟರಿಯ ಕೆಟ್ಟಗಾಳಿಗೆ ಆ ಧೂಳು ಯಾವಾಗಲೂ ಹಾರುತ್ತಲೇ ಇರುತ್ತವೆ. ಕಣ್ಣಿಗೆ ಕಾಣದ ಆ ಧೂಳನ್ನು ಅವರು ಯಾವಾಗಲೂ ಒಳಗೆ ಕರೆಯುತ್ತಲೆ ಇರುತ್ತಾರೆ. ತಮ್ಮ ಆರೋಗ್ಯ ಸರಿಯಾಗಿ ಇರುವುದಿಲ್ಲ. ತಾವೆಂದೂ ಕಿರುನಗೆ ನಗುವುದಿಲ್ಲ.

ಅಸಲಿಗೆ, ಪದಗಳಿಗೆ ಬೆಲೆಯೇ ಹೋಗಿದೆ. ‘ಶುಭ್ರವೂ’, ‘ನಿರ್ಮಲವೂ’ ಎಂಬ ಎರಡು ಪದಗಳಿಗೇ ಅಲ್ಲ. ಬಹಳ ಪದಗಳಿಗೆ. ‘ದಯೆ’, ‘ಸತ್ಯ’, ‘ನೀತಿ’, ‘ವಿಚಕ್ಷಣೆ’, ‘ವಿವೇಕ’, ‘ನ್ಯಾಯ’ ಮೊದಲಾದ ಪದಗಳು ಅಸಲಿಗೆ ಮುಗ್ಗು ಹಿಡಿದುಹೋಗಿವೆ. ರಾಜಕಾರಣಿಗಳು ಚುನಾವಣೆಗಳಿಗೆ ಮೊದಲು ಪ್ರಚಾರಕ್ಕೆ ಉಪಯೋಗಿಸುವ ಆಯುಧಗಳವು ಇವತ್ತಿನ ಸಂದರ್ಭದಲ್ಲಿ. ಚುನಾವಣೆ ಮುಗಿದಾಕ್ಷಣವೆ ಈ ಪದಗಳು ಅವರ ಸ್ವಂತ ಆಸ್ತಿಗಳ ಹಾಗೆ ಭದ್ರವಾಗಿ ಮುಚ್ಚಿಡಲ್ಪಡುತ್ತವೆ. ಹೇಗೆ ನಗು ಬರುತ್ತದೆ ಅವನಿಗೆ? ಹೇಗೆ ಅವನದಾಗುತ್ತದೆ ಆ ನಗು?

“ಹೇಗೆ ಎನ್ನುವಿರಾ? ಇಂದೇ ಯಾವ ಅಂಗಡಿಯಲ್ಲಾದರೂ ಕೇಳಿ…”

ಬಹಳ ತಾಳ್ಮೆ ಈ ವಿದೇಶಿ ವ್ಯಾಪಾರಿಗಳಿಗೆ. ತಮ್ಮಂತಹ ಮೂಢರಿಗೆ ಅಪಾರವಾದ ವಿಜ್ಞಾನದಿಂದ ಕಿರುನಗೆಯನ್ನು ಕೊಳ್ಳುವುದನ್ನು ಕಲಿಸುತ್ತಾರೆ. “ನಮ್ಮ ಹೊಟ್ಟೆ ಸುಡುತ್ತಿವೆ. ನಮ್ಮ ದೇಶವನ್ನು ಗೆದ್ದಲುಹುಳುಗಳು ಹಿಂಡಿ ಹಿಪ್ಪೆ ಮಾಡುತ್ತಿವೆ. ನಿಮಗೇನಾದರು ತಿಳಿದರೆ ನಮ್ಮ ದೇಶದಿಂದ ಗೆದ್ದಲುಹುಳುಗಳನ್ನು ನಿವಾರಿಸುವುದನ್ನು ತಿಳಿಸಿಕೊಡಿ. ನಮ್ಮ ಹೊಟ್ಟೆ ಉರಿ ಆರುವ ಮಾರ್ಗ ಹೇಳಿ. ನಮ್ಮ ದೇಶವನ್ನು ಸಾರವಂತ ಮಾಡಿಕೊಳ್ಳುತ್ತೇವೆ.” ಎಂದು ಕೇಳಿದರೆ ಒಂದು ಟೂತ್‌ಪೇಸ್ಟ್ ಕಿರುನಗೆಯನ್ನು ಬಿಡುತ್ತಾರೆ. “ನಿಮ್ಮ ದೇಶದ ಸಂಪತ್ತು ನಮಗೆ ಬೇಕು.” ಅನ್ನರು. “ಆನಂದವೇ ಆರೋಗ್ಯ! ಆನಂದಕ್ಕೆ ಚಿಹ್ನೆ ಈ ಕಿರುನಗೆ. ಎಲ್ಲಿ, ಕೊಳ್ಳಿರಿ, ನಗುತ್ತಿರಿ.” ಅಂತಾರೆ.

ಹೇಗೆ ಕೊಳ್ಳುವುದು ಆ ಟೂತ್‌ಪೇಸ್ಟು? ಹೇಗೆ ನಗುವುದು ಆ ನಗುವನ್ನು? ಅವನ ಸಂಬಳ 72 ರೂಪಾಯಿಗಳು. colgate-adಅವನ ತಾಯಿಗೆ ಮುವ್ವತ್ತೆರಡು ಹಲ್ಲುಗಳು. ಅವನ ಹೆಂಡತಿ ಸೀರೆ ಉಡುತ್ತಾಳೆ. ಅವನ ತಮ್ಮ ಶಾಲೆಯಲ್ಲಿ ಫೀಸು ಕಟ್ಟುತ್ತಿದ್ದಾನೆ. ಅವನಾ? ಅವನು! ನಗಬೇಕಿನಿಸುತ್ತದೆ ಆದರೆ ಶಕ್ತಿಯಿಲ್ಲದೆ ಹೋಗಿದೆ.

“ಚಿಕ್ಕ ಟ್ಯೂಬು ಹದಿನೆಂಟಾಣೆ ಮಾತ್ರವೆ.” ಕೈನಿಂದ ಜಾರಿಬಿದ್ದ ಪತ್ರಿಕೆಯಲ್ಲಿನ ಆ ಜಾಹೀರಾತು ಕೆಳಗೆ ಬಿದ್ದರೂ ಚೀರುತ್ತಿದೆ. ಹದಿನೆಂಟಾಣೆ ಮಾತ್ರವೆ! ಈ ‘ಮಾತ್ರವೆ’ ಎನ್ನುವ ಪದವೆ ಬಹಳ ಚೆನ್ನಾಗಿದೆ. ಎರಡು ವರ್ಷದಿಂದ ‘ಮಾತ್ರವೆ’ ಅವನು ಚಪ್ಪಲಿ ಸಹಾ ಇಲ್ಲದೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಹಿರೋಷಿಮಾ ನಾಗಸಾಕಿಗಳ ಮೇಲೆ ‘ಮಾತ್ರವೆ’ ಅಣುಬಾಂಬುಗಳನ್ನು ಸುರಿಯಲಾಗಿದೆ. ಕೊರಿಯಾದಲ್ಲಿ ಯುದ್ಧ 12 ತಿಂಗಳಿನಿಂದ ‘ಮಾತ್ರವೆ’ ಜರುಗುತ್ತಿದೆ. ಆಂಧ್ರದ ಜನರಿಗೆ ತಿಂಡಿಕಾಳಿನ ಬರ ಐದು ವರ್ಷದಿಂದ ‘ಮಾತ್ರವೆ’. ಭಾರತದೇಶದಲ್ಲಿ ಜೀವನ್ಮೃತರು ಹೊಸಾ ಲೆಕ್ಕದ ಪ್ರಕಾರ 37 ಕೋಟಿ ‘ಮಾತ್ರವೆ’.

ನಗಬಹುದಾದವರು ಇನ್ನು ನಗಬಹುದು!

ಬದಲಾಗುತ್ತಿರುವ ಭ್ರಷ್ಟಾಚಾರದ ವಾಖ್ಯಾನಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಜಾಗತೀಕರಣದ ವ್ಯವಸ್ಥೆಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ ಅಟ್ಟಕ್ಕೇರಿಸಿದವರ ಮುಖವಾಡಗಳು ಇತ್ತೀಚೆಗೆ ಒಂದೊಂದಾಗಿ ಕಳಚಿ ಬೀಳುತ್ತಿವೆ. ಭಾರತದಲ್ಲಿ ಅನಾವರಣಗೊಳ್ಳತ್ತಿರುವ ಭ್ರಷ್ಟಾಚಾರದ ಪ್ರಕರಣಗಳು ನಾವು ಈವರೆಗೆ ಕಾಣದೆ ಉಳಿದಿದ್ದ ಜಾಗತೀಕರಣದ ಮತ್ತೊಂದು ಕರಾಳ ಮುಖವನ್ನು ನಮ್ಮೆದುರು ಪ್ರದರ್ಶನಕ್ಕಿಟ್ಟಿವೆ. ಇವುಗಳ ಜೊತೆಯಲ್ಲಿಯೆ ಭ್ರಷ್ಟಾಚಾರ ಕುರಿತಂತೆ ನಮ್ಮ ವಾಖ್ಯಾನಗಳು ಕೂಡ ಬದಲಾಗುತ್ತಿವೆ. ಈ ವಾಖ್ಯಾನ್ಯಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಬೇಕಾದ ಸಾಂಸ್ಕೃತಿಕ ಜಗತ್ತು ಗರಬಡಿದಂತೆ ನಿಸ್ತೇಜನಗೊಂಡಿದೆ. ಇದರ ಹಲವು ವಾರಸುದಾರರು, ಭ್ರಷ್ಟರಾಜಕಾರಣಿಗಳ ಮತ್ತು ಅಧಿಕಾರಿಗಳ ಆಸ್ಥಾನದಲ್ಲಿ ವಿದ್ವಾಂಸರಾಗಿ ಪ್ರತಿಷ್ಟಾಪನೆಗೊಂಡು, ವಿದೂಷಕರಾಗಿ ನಾಡಿನ ಜನಕ್ಕೆ ಮನರಂಜನೆ ಒದಗಿಸುತ್ತಿದ್ದಾರೆ.

ಇತ್ತೀಚೆಗೆ ಬೆಳಕಿಗೆ ಬಂದ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭಾರತದ ವಾಯುಪಡೆಯ helicopterಮಾಜಿ ಮುಖ್ಯಸ್ಥನೊಬ್ಬನ ಹೆಸರು ನೇರವಾಗಿ ಪ್ರಸ್ತಾಪವಾಗಿದೆ. ಇಟಲಿ ಮೂಲದ ವೆಸ್ಟ್ ಲ್ಯಾಂಡ್ ಕಂಪನಿಯ ಈ ವ್ಯವಹಾರ ನಿಜಕ್ಕೂ ಬೆಚ್ಚಿ ಬೀಳಿಸುವಂತಹದ್ದು. ಈಗಾಗಲೆ ತನಿಖೆಯಾಗಿ ಮಣ್ಣು ಸೇರಿದ ಬೋಫೋರ್ಸ್ ಪಿರಂಗಿ ಹಗರಣದಲ್ಲಿ ಕೂಡ ಇದೇ ಇಟಲಿ ಮೂಲದ ಕ್ವಟ್ರಾಚಿ ಎಂಬಾತ ಸೂತ್ರಧಾರನಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು.

ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನೀಡಲಾದ ಲಂಚವನ್ನು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ “ಇದೊಂದು ಉದ್ಯಮದ ಭಾಗ,” ಎಂದು ಬಣ್ಣಿಸುವುದರ ಮೂಲಕ ಜಾಗತೀಕರಣದ ವಾಹಕಗಳಾದ ಬಹುರಾಷ್ಟ್ರೀಯ ಕಂಪನಿಗಳ ಕರಾಳ ಮುಖವನ್ನು ಅನಾವರಣಗೊಳಿಸಿ, ಭ್ರಷ್ಟಾಚಾರಕ್ಕೆ ಹೊಸವಾಖ್ಯಾನ ನೀಡಿದ್ದಾರೆ.
ಚಿಲ್ಲರೆ ಮಾರುಕಟ್ಟೆಯ ದೈತ್ಯ ಕಂಪನಿಯಾದ ವಾಲ್‌ಮಾರ್ಟ್ ಈ ಭ್ರಷ್ಟಾಚಾರವನ್ನು “ಲಾಬಿ” ಎಂದು ಹೆಸರಿಸಿದೆ. ಅಮೇರಿಕಾ ಮೂಲದ ಈ ಬಹುರಾಷ್ಟ್ರೀಯ ಕಂಪನಿ ಅಲ್ಲಿನ ಸಂಸತ್ತಿಗೆ ಸಲ್ಲಿಸಿರುವ ವಿವರಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಒಳಗೊಂಡಂತೆ ಹಲವು ರಾಷ್ಟ್ರಗಳಲ್ಲಿ ಲಂಚಕ್ಕಾಗಿ 25 ದಶಲಕ್ಷ ಡಾಲರ್ ಹಣ ವಿನಿಯೋಗಿಸಿರುವುದಾಗಿ ಹೇಳಿಕೊಂಡಿದೆ.Wal-Mart ಭಾರತದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೋಜು ಮಸ್ತಿಗಾಗಿ ವರ್ಷವೊಂದಕ್ಕೆ 11,500 ಡಾಲರ್ ಖರ್ಚುಮಾಡಲಾಗಿದೆ ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದೆ.

ಇಪ್ಪತ್ತೊಂದನೇ ಶತಮಾನದ ಮಹಾನ್ ಪ್ರವಾದಿಗಳಂತೆ ಮಾತನಾಡುತ್ತಿರುವ ರಾಜಕಾರಣಿಗಳು ಮತ್ತು ಕಂಪನಿಯ ವಕ್ತಾರರ ಪ್ರಕಾರ ಲಂಚವೆಂಬುದು ಉದ್ಯಮದ ಒಂದು ಭಾಗವಾದರೆ, ವೇಶ್ಯಾವೃತ್ತಿ ಕೂಡ ವೃತ್ತಿಯ ಒಂದು ಭಾಗವಾಗುತ್ತದೆ. ತಲೆಹೊಡೆಯುವುದು, ಕೊಲೆ ಮಾಡುವುದು ದರೋಡೆಕಾರನ ವೃತ್ತಿಯ ಒಂದು ಭಾಗವಾಗುತ್ತದೆ. ಹಣ, ಹೆಂಡ ಮತ್ತು ಹೆಣ್ಣು, ಈ ಮೂರು ಅಂಶಗಳು ಆಧುನಿಕ ಜಗತ್ತು ಮತ್ತು ಸಮಾಜವನ್ನು ಮಲೀನಗೊಳಿಸುತ್ತಿರುವ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜನಬಳಕೆಯ ನಡುವೆ ಇರುವ ಮಾತುಗಳಿಗೆ ಹೊಸ ಅರ್ಥವನ್ನು ಕಂಡುಕೊಳ್ಳಬೇಕಿದೆ. ಏಕೆಂದರೆ ಇತ್ತೀಚೆಗೆ ಕಡು ಭ್ರಷ್ಟಾಚಾರ ಕುರಿತು ಮಾತನಾಡುವುದು ಅಥವಾ ವ್ಯಾಖ್ಯಾನಿಸುವುದು ಕೂಡ ಸಿನಿಕತನದ ಒಂದು ಭಾಗವೇನೊ ಎಂಬಂತಾಗಿದೆ.

ಭ್ರಷ್ಟಾಚಾರದ ಹಗರಣಗಳು ಭಾರತೀಯರಿಗೆ ಹೊಸದೇನಲ್ಲ. ಅವರು ಈಗಾಗಲೇ ಅವುಗಳ ಬಗ್ಗೆ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹಳ್ಳ ಹಿಡಿದ ಲಾಲು ಪ್ರಸಾದ್ ಅವರ ಮೇವು ಖರೀದಿ ಹಗರಣ, ಜಯಲಲಿತ, ಮಾಯಾವತಿ, ಮುಲಾಯಂಸಿಂಗ್ ಯಾದವ್ ಮತ್ತು ಯಡಿಯೂರಪ್ಪ ಇವರ ಅಕ್ರಮ ಆಸ್ತಿ ಹಗರಣ, ಬೊಫೋರ್ಸ್ ಪಿರಂಗಿ ಖರೀದಿ ಹಗರಣ, ಮೋಬೈಲ್ ತರಾಂಗಾಂತರ ಹಂಚಿಕೆ ಹಗರಣ, ಗಣಿ ವಿವಾದ, ಇತ್ತೀಚೆಗಿನ ಹೆಲಿಕಾಪ್ಟರ್ ಹಗರಣ, ಇವೆಲ್ಲವೂ ಸಮಯಕ್ಕೆ ತಕ್ಕಂತೆ ರಾಜಕೀಯ ಚದುರಂಗದಾಟದಲ್ಲಿ ಬಳಕೆಯಾಗುವ ರಾಜ, ರಾಣಿ, ಮಂತ್ರಿ, ಕುದುರೆ, ಸಿಪಾಯಿಗಳೆಂಬ ಆಟದ ಕಾಯಿಗಳು. ಇದನ್ನು ನೋಡುವ ಮತ್ತು ಫಲಿತಾಂಶಕ್ಕಾಗಿ ಕಾಯುವ ನಾವುಗಳು ಮಾತ್ರ ನಿಜವಾದ ಅರ್ಥದಲ್ಲಿ ಮೂರ್ಖರು.

ದೆಹಲಿ ಮೂಲದ ನೀರಾ ರಾಡಿಯ ಎಂಬ ಅಸಾಮಾನ್ಯರಿಗಷ್ಟೇ ಗೊತ್ತಿದ್ದ ಮಹಿಳೆ ಅಕ್ರಮ ವ್ಯವಹಾರಗಳಿಗೆ ದಲ್ಲಾಳಿಯಾಗಿದ್ದು, nira raadiaತನ್ನ ವೃತ್ತಿಯನ್ನು ಲಾಬಿ ಎಂದು ಕರೆದುಕೊಂಡಿದ್ದಾಳೆ. ದೆಹಲಿಯ ಪ್ರತಿಷ್ಟಿತರಲ್ಲಿ ಮುಖ್ಯಳಾಗಿರುವ ಈಕೆ ಈಗ ಸಾವಿರಾರು ಕೋಟಿ ರೂಪಾಯಿಗಳ ಒಡತಿ. ದೆಹಲಿ ಹೊರವಲಯದ ತೋಟದ ಮನೆಯಲ್ಲಿ ರಾಜಕಾರಣಿಗಳು, ಕಂಪನಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ನಿತ್ಯ ಪಾರ್ಟಿ ಏರ್ಪಡಿಸುವ ಇವಳನ್ನು ನಮ್ಮ ಪರಮ ಪೂಜ್ಯ ಶ್ರಿ.ಶ್ರೀ.ಶ್ರೀ. (ಇನ್ನೊಂದಷ್ಟು ಶ್ರೀಗಳನ್ನು ಸೇರಿಸಿಕೊಳ್ಳಿ) ಪೇಜಾವರ ಸ್ವಾಮಿಗಳು ತನ್ನ ಪರಮಶಿಷ್ಯೆ ಎಂದು ಘೊಷಿಸಿಕೊಂಡಿದ್ದಾರೆ. ಇವಳು ಸಂಪಾದಿಸಿದ ಪಾಪದ ಹಣವನ್ನು ಯಾವ ಆತ್ಮ ಸಾಕ್ಷಿಯೂ ಇಲ್ಲದೆ ದೇಣಿಗೆಯಾಗಿ ಸ್ವೀಕರಿಸಿದ್ದಾರೆ. ನಮ್ಮ ಯಡಿಯೂರಪ್ಪ ತಾನು ತಿಂದ ಎಂಜಲನ್ನು ನಮ್ಮ ಮಠಾಧೀಶರ ಬಾಯಿಗೆ ಒರೆಸಲಿಲ್ಲವೆ?ಅದೇ ರೀತಿ ನೀರಾ ರಾಡಿಯ ಕೂಡ ತಾನು ಬೆಳೆಯುತ್ತಿರುವ ಪಾಪದ ಫಸಲನ್ನು ಮಠಗಳಿಗೂ ಹಂಚುತ್ತಿದ್ದಾಳೆ. ದುರಂತದ ಸಂಗತಿಯೆಂದರೆ, ವರ್ತಮಾನದ ಸಮಾಜಕ್ಕೆ ಆವರಿಸಿಕೊಳ್ಳತ್ತಿರುವ ವೈಚಾರಿಕತೆಯ ಶೂನ್ಯತೆಯಿಂದಾಗಿ ಹೊಸ ರೂಪ ಪಡೆಯುತ್ತಿರುವ ಸಾಮಾಜಿಕ ಅನಿಷ್ಟಗಳಿಗೆ ನಾವೀಗ ಸಾಕ್ಷಿಯಾಗಬೇಕಾಗಿದೆ.

ಟಿ.ಆರ್.ಪಿ. ಎಂಬ ಭೂತ ರಾಷ್ಟ್ರಹಿತಕ್ಕೆ ಮಾರಕ

-ಆನಂದ ಪ್ರಸಾದ್

ಟಿವಿ ವಾಹಿನಿಗಳ ವೀಕ್ಷಕರು ಯಾವ ವಾಹಿನಿಗಳನ್ನು ಹಾಗೂ ಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂದು ಸಮೀಕ್ಷೆ ನಡೆಸಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿ.ಆರ್.ಪಿ.) ನಿರ್ಣಯಿಸುವ ಈಗಿನ ವಿಧಾನ ಜನಹಿತಕ್ಕೆ ಹಾಗೂ ರಾಷ್ಟ್ರಹಿತಕ್ಕೆ ಮಾರಕವಾಗಿದೆ. ಈಗಿನ ವಿಧಾನದಲ್ಲಿ ಆಯ್ದ ಕೆಲವು ನಗರಗಳ ಕೆಲವು ಮನೆಗಳಲ್ಲಿ ಪೀಪಲ್ ಮೀಟರ್ ಎಂಬ ಉಪಕರಣವನ್ನು ಅಳವಡಿಸಿ ಅದು ವೀಕ್ಷಕರ ಟಿವಿ ವೀಕ್ಷಣೆಯ ಪ್ರವೃತ್ತಿಯನ್ನು ನಿರ್ಣಯಿಸಿ ವಾರಕ್ಕೊಮ್ಮೆ ಟಿ.ಆರ್.ಪಿ. ಪ್ರಕಟಿಸುತ್ತದೆ. ಇದು ಅತ್ಯಂತ ಅವೈಜ್ಞಾನಿಕ ವಿಧಾನವಾಗಿದ್ದು ಶೇಕಡಾ 60ರಷ್ಟಿರುವ ಗ್ರಾಮೀಣ ಜನರ ಟಿವಿ ವೀಕ್ಷಣೆಯ ಪ್ರವೃತ್ತಿಯನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಹೀಗಾಗಿಯೇ ಅತ್ಯಂತ ಬೇಜವಾಬ್ದಾರಿಯುತ, ಕ್ಷುಲ್ಲಕ ಕಾರ್ಯಕ್ರಮಗಳು ಜಾಹೀರಾತುಗಳಿಗೋಸ್ಕರವಾಗಿಯೇ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುತ್ತವೆ. ಜನಹಿತ, ಮಾಧ್ಯಮ ಧರ್ಮ, ಪತ್ರಿಕಾಧರ್ಮವೆಂಬುದು ಟಿವಿ ವಾಹಿನಿಗಳ ಮಟ್ಟಿಗೆ ಗತಕಾಲದ ಅಪ್ರಸ್ತುತ ವಿಷಯವಾಗಿದೆ. ಜಾಹೀರಾತುಗಳ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿರುವ ಟಿವಿ ವಾಹಿನಿಗಳ ಈ ರೋಗಕ್ಕೆ ಮದ್ದೇ ಇಲ್ಲವೇ? ಪ್ರಸ್ತುತ ಇರುವ ಟಿ.ಆರ್.ಪಿ. ವಿಧಾನದಲ್ಲಿ ಈ ರೋಗಕ್ಕೆ ಮದ್ದು ಇಲ್ಲ.

ಟಿವಿ ವಾಹಿನಿಗಳನ್ನು ಜನಪರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ಬದಲಾಯಿಸಬೇಕಾದರೆ ಟಿ.ಆರ್.ಪಿ. ನಿರ್ಣಯಿಸುವ ಈಗಿನ ವಿಧಾನವನ್ನು ಸಂಪೂರ್ಣ ಬದಲಾಯಿಸಬೇಕಾದ ಅಗತ್ಯ ಇದೆ. ಇಂದು ಹಲವಾರು ವಾಹಿನಿಗಳು ಲಭ್ಯವಾಗುವ ಕೇಬಲ್ ಹಾಗೂ ಡಿಟಿಎಚ್ ಪ್ರಸಾರ ವ್ಯವಸ್ಥೆ tv-mediaಬಂದಿರುವ ಕಾರಣ ಜಾಹೀರಾತುಗಳನ್ನು ನೋಡಬೇಕಾದ ಅನಿವಾರ್ಯತೆ ವೀಕ್ಷಕರಿಗೆ ಇಲ್ಲ. ಜಾಹೀರಾತು ಬಂದ ಕೂಡಲೇ ಜಾಹೀರಾತು ಪ್ರಸಾರ ಆಗುತ್ತಿರದ ಬೇರೆ ವಾಹಿನಿಗಳಿಗೆ ವೀಕ್ಷಕರು ಬದಲಾಯಿಸುವುದು ಸಾಮಾನ್ಯ. ಇದನ್ನು ಮನಗಂಡ ಟಿವಿ ವಾಹಿನಿಗಳು ಒಂದೇ ಸಮಯದಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ತಂತ್ರ ಅನುಸರಿಸಿದರೂ ಬೇರೆ ಭಾಷೆಗಳ ವಾಹಿನಿಗಳಿಗೆ ಬದಲಾಯಿಸುವ ಪ್ರವೃತ್ತಿಯನ್ನೂ ವೀಕ್ಷಕರು ಬೆಳೆಸಿಕೊಂಡಿದ್ದಾರೆ. ಕೆಲವು ವೀಕ್ಷಕರು ಜಾಹೀರಾತು ಪ್ರಸಾರವಾಗುವ ಸಮಯದಲ್ಲಿ ಟಿವಿಯ ಬುಡದಲ್ಲಿ ಕೂರುವ ಬದಲು ಬೇರೆ ಕೆಲಸ ಇದ್ದರೆ ಅದನ್ನು ಮಾಡಲು ತೆರಳುತ್ತಾರೆ. ಜಾಹೀರಾತು ಮುಗಿದ ನಂತರ ಮತ್ತೆ ಟಿವಿ ನೋಡಲು ಬರುತ್ತಾರೆ. ವಾಹಿನಿ ಬದಲಾಯಿಸದವರು ಅಥವಾ ಬೇರೆ ಕೆಲಸಗಳಿಗೆ ಹೋಗದವರು ಜಾಹೀರಾತು ಬಂದ ಕೂಡಲೇ ಪರಸ್ಪರ ಹರಟೆ ಹೊಡೆಯಲು ತೊಡಗುತ್ತಾರೆ. ಹೀಗಾಗಿ ಜಾಹೀರಾತುಗಳನ್ನು ನೋಡುವವರು ಬಹಳ ಕಡಿಮೆ ಇರಬಹುದು. ಈ ಕಾರಣದಿಂದ ಟಿ.ಆರ್.ಪಿ. ಎಂಬ ವೀಕ್ಷಕರ ಟಿವಿ ವೀಕ್ಷಣೆಯ ಪ್ರವೃತ್ತಿಯ ಮಾನದಂಡವನ್ನು ನಿರ್ಣಯಿಸುವ ವಿಧಾನ ಅಪ್ರಸ್ತುತ ಹಾಗೂ ಅನವಶ್ಯಕ. ಈ ವಿಧಾನವನ್ನೇ ತೊಡೆದುಹಾಕಬೇಕಾದ ಅಗತ್ಯ ಇದೆ.

ಯಾವ ರೀತಿ ಪತ್ರಿಕೆಗಳ ಪ್ರಸರಣ ಸಂಖ್ಯೆಯನ್ನು ಆರು ತಿಂಗಳಿಗೊಮ್ಮೆ ಲೆಕ್ಕ ಹಾಕಿ ಅಂಕೆ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುತ್ತದೆಯೋ ಅದೇ ರೀತಿ ಟಿವಿ ವಾಹಿನಿಗಳ ವೀಕ್ಷಕರ ಅಂಕೆ ಸಂಖ್ಯೆಗಳನ್ನು ಮೂರು ತಿಂಗಳಿಗೊಮ್ಮೆ ಸಮೀಕ್ಷೆ ನಡೆಸಿ ಬಿಡುಗಡೆ ಮಾಡುವುದರಿಂದ ಟಿ.ಆರ್.ಪಿ.ಗಾಗಿ ಟಿವಿ ವಾಹಿನಿಗಳ ನಡುವೆ ನಡೆಯುವ ಅನಾರೋಗ್ಯಕರ ಪೈಪೋಟಿಯನ್ನು ಕಡಿಮೆ ಮಾಡಬಹುದು. ಗ್ರಾಮೀಣ ಹಾಗೂ ನಗರ ಪ್ರದೇಶ ಹೀಗೆ ಎರಡೂ ಪ್ರದೇಶಗಳ ಜನತೆಯ ಟಿವಿ ವೀಕ್ಷಣೆಯ ಪ್ರವೃತ್ತಿಯ ಸಮೀಕ್ಷೆ ನಡೆಸಿ ಯಾವ ವಾಹಿನಿಯನ್ನು ಜನ ಸಾಮಾನ್ಯವಾಗಿ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಹೆಚ್ಚು ಜನ ಯಾವ ರೀತಿಯ ಕಾರ್ಯಕ್ರಮಗಳನ್ನು ನೋಡುತ್ತಾರೆ ನಿರ್ಧರಿಸಿ ಅದಕ್ಕನುಗುಣವಾಗಿ ಜಾಹೀರಾತುಗಳ ದರವನ್ನು ಹಾಗೂ ಅವುಗಳ ಹಂಚಿಕೆಯನ್ನು ಮಾಡುವುದರಿಂದ ತೀರಾ ಅನಾರೋಗ್ಯಕರ ಪೈಪೋಟಿಯನ್ನು ತಪ್ಪಿಸಿ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಪ್ರಸಾರವಾಗುವಂತೆ ಮಾಡಲು ಸಾಧ್ಯ. ಈ ಬಗ್ಗೆ ಸರ್ಕಾರ ಸೂಕ್ತ ಸಂಸ್ಥೆಗಳನ್ನು ಗುರುತಿಸಿ ಸೂಕ್ತ ನಿಯಮಗಳನ್ನು ಜಾರಿಗೊಳಿಸಬೇಕಾದ ಅಗತ್ಯ ಇದೆ.

ಇಂದು ನೂರಾರು ಖಾಸಗಿ ಟಿವಿ ವಾಹಿನಿಗಳು ಪ್ರಸಾರವಾಗುತ್ತಿದ್ದರೂ ಇವುಗಳು ಶೇಕಡಾ  60 ರಷ್ಟಿರುವ ಗ್ರಾಮೀಣ ಜನರ ಬದುಕಿನ ಬಗ್ಗೆಯಾಗಲೀ, ಕೃಷಿಯ ಬಗ್ಗೆಯಾಗಲೀ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಂಡುಬರುವುದಿಲ್ಲ. ಖಾಸಗಿ ಟಿವಿ ವಾಹಿನಿಗಳಲ್ಲಿ ಈ ಟಿವಿ ಕನ್ನಡ ಮಾತ್ರ ಬೆಳಗಿನ 6:30 ರಿಂದ 7 ರವರೆಗೆ ಕೃಷಿ ಸಂಬಂಧಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆಯಾದರೂ ಅದನ್ನು ನೋಡುವ ಕೃಷಿಕರು ಬಹಳ ಕಡಿಮೆ ಏಕೆಂದರೆ ಪ್ರಸಾರದ ಸಮಯ ಕೃಷಿಕರಿಗೆ ಅನುಕೂಲಕರವಾಗಿಲ್ಲ. ಆ ಹೊತ್ತಿಗೆ ಒಂದೋ ಅವರು ಎದ್ದಿರುವುದಿಲ್ಲ ಅಥವಾ ಎದ್ದಿರುವವರು ಕೃಷಿ/ಹೈನುಗಾರಿಕೆ ಸಂಬಂಧಿ ಕೆಲಸಗಳಲ್ಲಿ ತೊಡಗಿರುತ್ತಾರೆ.

ಟಿವಿ ವಾಹಿನಿಗಳು ದೇಶದಲ್ಲಿ ಜನಜಾಗೃತಿಯನ್ನು ರೂಪಿಸುವ ಅಗಾಧ ಸಾಮರ್ಥ್ಯ ಹೊಂದಿದ್ದರೂ ಟಿ.ಆರ್.ಪಿ. ಎಂಬ ಭೂತ ಅವುಗಳ ಕಾರ್ಯಕ್ರಮಗಳನ್ನು ನಿರ್ಧರಿಸುತ್ತಿರುವುದರಿಂದ ಅವುಗಳ ನೈಜ ಸಾಮರ್ಥ್ಯದ ಶೇಕಡಾ 5 ರಷ್ಟೂ ಜನಹಿತ ಸಾಧನೆ ಹಾಗೂ ದೇಶಹಿತ ಸಾಧನೆಗಾಗಿ ಬಳಕೆಯಾಗುತ್ತಿಲ್ಲ. ಇದನ್ನು ಬದಲಿಸಬೇಕಾದರೆ ಟಿ.ಆರ್.ಪಿ. ಎಂಬ ಭೂತವನ್ನು ನಿವಾರಿಸಬೇಕಾದ ಅಗತ್ಯ ಇದೆ.