ಎಸ್. ಸದಾನಂದ
ಕೆಲ ವರ್ಷಗಳ ಹಿಂದೆ ಮಧ್ಯಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ನಡೆದ ಘಟನೆ ಇದು.
ಆಗ ನಿವೃತ್ತಿ ಅಂಚಿನಲ್ಲಿದ್ದ ಶಿಕ್ಷಕರೊಬ್ಬರು ಪ್ರತಿ ದಿನ ವಾಕಿಂಗ್ ನಲ್ಲಿ ಆ ಪತ್ರಿಕೆಯ ವರದಿಗಾರರನ್ನು ಭೇಟಿಯಾಗಿ ವಿಷ್ ವಿನಮಯ ಮಾಡಿಕೊಳ್ಳುತ್ತಿದ್ದರು. ಒಂದು ದಿನ ವರದಿಗಾರರನ್ನು ತಡೆದು ನಿಲ್ಲಿಸಿ “ದಯವಿಟ್ಟು ನಾಳೆಯಿಂದ ನಿಮ್ಮ ಪತ್ರಿಕೆ ನಮ್ಮ ಮನೆಗೆ ಹಾಕುವುದನ್ನು ನಿಲ್ಲಿಸಬೇಕು. ನಿಮ್ಮ ಪ್ರಸರಣ ವಿಭಾಗದವರಿಗೆ ತಿಳಿಸಲು ಸಾಧ್ಯವೇ” ಎಂದರು. ಮನವಿಯನ್ನು ಸ್ವೀಕರಿಸಿದ ವರದಿಗಾರ ಸಂಬಂಧಪಟ್ಟವರಿಗೆ ಮಾಹಿತಿ ತಲುಪಿಸಿ ಅವರ ಮನೆಗೆ ಪತ್ರಿಕೆ ಹೋಗುವುದು ನಿಂತಿತು.
ಮತ್ತೆ ಕೆಲ ದಿನಗಳ ನಂತರ ಅಂತಹದೇ ವಾಕಿಂಗ್ ಸಂದರ್ಭವೊಂದರಲ್ಲಿ ಭೇಟಿಯಾದ ವರದಿಗಾರರನ್ನು ಆ ಶಿಕ್ಷಕರು ಮತ್ತೆ ನಿಲ್ಲಿಸಿದರು. “ನಿಮ್ಮ ಪತ್ರಿಕೆಯನ್ನು ನಿಲ್ಲಿಸಿದ್ದಕ್ಕೆ ನಿಮಗೆ ಬೇಸರ ಆಗಿರಬಹುದು. ಆದರೆ ನಿಮ್ಮೊಂದಿಗೆ ಆ ನನ್ನ ತೀರ್ಮಾನಕ್ಕೆ ಕಾರಣವನ್ನು ತಿಳಿಸಿಬೇಕಿದೆ” ಎಂದು ಮಾತು ಮುಂದುವರಿಸಿದರು… “ನನಗೆ ಕಾಲೇಜು ಓದುವ ಮಗನಿದ್ದಾನೆ. ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಕೆಲ ಅಂಕಣಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ನೆರೆಹೊರೆಯವರನ್ನು ಅನುಮಾನದಿಂದ ನೋಡುವ ಸನ್ನಿವೇಶ ಸೃಷ್ಟಿಯಾಗಲು ಪ್ರಚೋದನಕಾರಿಯಾಗಿವೆ. ಇನ್ನೂ ಎಳೆಯ ಹರೆಯದಲ್ಲಿರುವ ಮಗ ಅವನ್ನು ಓದಿ, ದಿಕ್ಕು ತಪ್ಪಿ ಮತಾಂಧನಾಗಿ ಯಾವುದೋ ಕೃತ್ಯದಲ್ಲಿ ಭಾಗಿಯಾಗಿ ಜೈಲುಪಾಲಾದರೆ ಏನು ಗತಿ? ನಾನೀಗ ನಿವೃತ್ತಿ ಅಂಚಿನಲ್ಲಿದ್ದೇನೆ. ನಿವೃತ್ತಿ ನಂತರ ನಾನು ನೆಮ್ಮದಿಯಾಗಿ ಮನೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯನ್ನು ನೋಡಿಕೊಂಡು ಇರಬೇಕೆಂದು ಬಯಸುತ್ತೇನೆ. ಜೈಲಿಗೆ ಹೋದ ಮಗನಿಗೆ ನಾನು ಬುತ್ತಿ ತೆಗೆದುಕೊಂಡು ಜೈಲಿನ ಬಾಗಿಲು ಕಾಯುವ ಕಾಯಕ ಬೇಡ..ಹಾಗಾಗಿ ನಿಮ್ಮ ಪತ್ರಿಕೆ ನಿಲ್ಲಿಸಿದೆ. ನೀವು ಬೇಸರ ಮಾಡಿಕೊಳ್ಳಬೇಡಿ,” ಎಂದು ಆ ಶಿಕ್ಷಕರು ಮುಂದೆ ಹೋದರು.
ಈ ಘಟನೆಯ ಪರಿಚಯ ಇರುವ ಅನೇಕರಿಗೆ ಇದು ಮತ್ತೆ ಮತ್ತೆ ನೆನಪಾಗಿ ಕಾಡುವುದುಂಟು. ಈ ಹೊತ್ತು ಮೂಡಬಿದ್ರೆಯಲ್ಲಿ ಕೊಲೆಯಾದ ಯುವಕ, ಮಂಗಳೂರಿನಲ್ಲಿ ಕೋಮು ಸಂಘಟನೆಗಳ ಪ್ರಚೋದನೆಗೆ ಮರುಳಾಗಿ ವಿವಿಧ ಗಲಭೆಗಳಲ್ಲಿ ಸಿಲುಕಿ ಜೈಲುಪಾಲಾಗಿರುವ ಹತ್ತಾರು ಯುವಕರು, ಯಾರದೋ ಜಯಂತಿ, ಮತ್ತಾರದೋ ಮೆರವಣಿಗೆ ಎಂದಾಕ್ಷಣ ಬೀದಿಗೆ ಬಂದು ಕಲ್ಲು, ಬಾವುಟ ಹಿಡಿದು ನಿಲ್ಲುವ ಮಂದಿಯನ್ನು ನೋಡಿದಾಗಲೆಲ್ಲಾ ಈ ಮೇಲಿನ ಘಟನೆ ನೆನಪಾಗದೆ ಇರದು.
ಕೊಡಗಿನಲ್ಲಿ ಒಬ್ಬರು ಹತ್ಯೆಯಾದರೆ, (ಅದು ಯಾವ ಕಾರಣಕ್ಕೆ ಎಂಬುದು ಇನ್ನೂ ಸ್ಪಷ್ಟವಿಲ್ಲ) ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಅಲ್ಲಿಯ ಶಾಸಕ ಹೇಳಿಕೆ ನೀಡುತ್ತಾರೆ. ಇಡೀ ರಾಜ್ಯದ ನಾಯಕರೆಲ್ಲಾ ಆ ಊರಿಗೆ ಹೋಗಿ ಬಾಯಿಗೆ ಬಂದ ಹಾಗೆ ಮಾತನಾಡಿ ಹಿಂಸೆಯನ್ನು ವ್ಯಾಪಕಗೊಳಿಸುತ್ತಾರೆ. ಏಕೆ ಶಾಂತಿ ಬೇಡ? ಅವರಿಗೆ ಅಶಾಂತಿ ನೆಲೆಸಿದಷ್ಟೂ ಲಾಭವೇ? ಎದುರಿಗಿದ್ದು ನೋಡಿದವರಂತೆ, ಕೆಳಗೆ ಬೀಳಿಸಿ ಕಲ್ಲಿನಿಂದ ಜಜ್ಜಿ ಕೊಂದರು ಎಂದು ಹೇಳಿಕೆ ನೀಡುತ್ತಾರೆ ಕೆಲವರು. ಇವರಿಗೇಕೆ ಜವಾಬ್ದಾರಿ ಬಾರದು?
ನಮ್ಮಲ್ಲಿರುವ ವೈವಿಧ್ಯತೆಯನ್ನು ಧಿಕ್ಕರಿಸುವ, ಶೋಷಣೆಯನ್ನು ಪೋಷಿಸುವ ಹಾಗೂ ಇನ್ನೊಂದು ಧರ್ಮದವರನ್ನು ಶತ್ರುವಂತೆ ಕಾಣುವ ಮನಸುಗಳ ಮಧ್ಯೆ ಬದುಕಬೇಕಿರುವುದನ್ನು ನನೆಸಿಕೊಂಡರೆ ಆತಂಕವಾಗುತ್ತದೆ. ಪುಟ್ಟ ಪುಟ್ಟ ಮಕ್ಕಳಿರುವ ಕೆಲ ಪೋಷಕರಂತೂ ಮಕ್ಕಳು ಎದುರಿಸಬೇಕಿರುವ ನಾಳೆಗಳ ಬಗ್ಗೆ ಸಾಕಷ್ಟು ಚಿಂತಿತರಾಗಿದ್ದಾರೆ. ಹೀಗೆ ಮಾಧ್ಯಮದ ಕೆಮರಾಗಳ ಮುಂದೆ, ಪತ್ರಿಕೆಗಳ ಅಂಕಣಗಳಲ್ಲಿ ಕಿಡಿ ಹಚ್ಚುವವರು ನೆಮ್ಮದಿಯಾಗೇ ಇರುತ್ತಾರೆ. ಸಂದರ್ಭ ಬಂದಾಗ ಪಕ್ಷಾಂತರ ಮಾಡಿ ‘ಕ್ರಾಂತಿಕಾರಿ’ ಪೋಸು ಕೊಟ್ಟು ಮ್ಯಾಗಜೀನ್ ಗಳಿಗೆ ಮುಖಪುಟದ ರೂಪದರ್ಶಿಯಾಗುತ್ತಾರೆ! ಆದರೆ ಬಲಿಪಶುವಾಗುವುದು ಅಮಾಯಕರು. ಬಡವರ ಮಕ್ಕಳು ಹಾಗೂ ಅನಾಥರಾಗುವವರು ವೃದ್ಧ ಪೋಷಕರು.
ಬುದ್ಧಿ ಹೇಳಬೇಕಾದ ಜೀವಿಗಳು ಪ್ರಶಸ್ತಿ, ಸನ್ಮಾನ, ಸ್ಥಾನಮಾನಗಳಲ್ಲಿ ಮೈಮರೆತು ಭಾಷಣಗಳಿಗೆ ಸೀಮಿತರಾಗಿ ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವರು ಆಕ್ಟಿವ್. ಇಲ್ಲವಾದಲ್ಲಿ ಯಾವುದೋ ಸಿನಿಮಾದ ವಿಲನ್ ಪಾತ್ರಗಳಲ್ಲಷ್ಟೇ ದರ್ಶನ. ಈ ದೇಶ ಪ್ರಪಂಚದಲ್ಲಿ ನಂಬರ್ 1 ಪಟ್ಟ ಪಡೆದುಕೊಂಡು ಏನೂ ಆಗಬೇಕಿಲ್ಲ. ಮನುಷ್ಯನ ಮೆದುಳು ವಿಕಾಸ ಗೊಳ್ಳದೆ, ಅಭಿವೃದ್ಧಿ ಏನಾದರೇನು? ಬಿಹಾರದ ನೆಲದಲ್ಲಿ ನಿಂತು, ನೀವು ನಮಗೆ ಓಟು ಹಾಕಿ ಗೆಲ್ಲಿಸದಿದ್ದರೆ, ಪಾಕಿಸ್ತಾನದಲ್ಲಿ ಪಟಾಕಿ ಹಚ್ಚುತ್ತಾರೆ ಅಂತ ಒಬ್ಬ. ಮತ್ತೊಬ್ಬ ನಿಮ್ಮ ಮೀಸಲಾತಿಯನ್ನು ಅಲ್ಪಸಂಖ್ಯಾತರು ತಿನ್ನುತ್ತಿದ್ದಾರೆ ಎಂದು ಹಲ್ಲು ಮಸೆಯುತ್ತಾನೆ. ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕಾರ್ಯನಿರ್ವಹಿಸಿ ಹೀಗೆ ಓಟಿಗಾಗಿ ಸಮಾಜ ಒಡೆಯುವ ಮಾತನಾಡಿದವನ ಹೆಸರು ಪ್ರಧಾನಿ! ಈ ಕಡಿ-ಕೊಲ್ಲು ಮಾತುಗಳಿಗೆ ಸಾಮಾಜಿಕ ತಾಣಗಳಲ್ಲಿ ಜಯಕಾರಗಳು.
ದೇಶವು ಇಂದು ನಿಧಾನವಾಗಿ ಫ್ಯಾಸಿಸಂ ಕಡೆಗೆ ಚಲಿಸುತ್ತಿದೆ. ಇದಕ್ಕೆ ಪೂರಕವಾಗಿ ಒಂದು ಸಂಘಟನೆಯ ಶಾಖೆಗಳಲ್ಲಿ ಹೆಚ್ಚಳ ಆಗುತ್ತಿದೆ. ಕೇಂದ್ರದಲ್ಲಿ ಮೂಲಭೂತವಾದಿಗಳ ಪರವಾಗಿರುವ ಸರಕಾರ ಬಂದಿರುವುದು ಈ ಸಂಘಟನೆಗಳಿಗೆ ಆನೆ ಬಲ ಬಂದಂತಾಗಿದೆ. ಹೀಗಾಗಿ ವಿಪರೀತ ಅಸಹನೆ, ಅಸಹಿಷ್ಣುತೆ ಕಂಡುಬರುತ್ತಿದೆ. ಒಬ್ಬ ಸಾಹಿತಿ ಹೇಳಿದ ಮಾತಿಗೆ ಈ ಪರಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾದ ಅಗತ್ಯ ಇದೆಯೇ? ಒಬ್ಬ ಸಾಹಿತಿಯನ್ನು ಗಡಿಪಾರು ಮಾಡಬೇಕೆಂದು ಬೊಬ್ಬೆ ಹಾಕುವುದು ಅಸಹಿಷ್ಣುತೆಯನ್ನು ತೋರಿಸುತ್ತದೆ. ಸಾಹಿತಿಗಳು ಇನ್ನು ಮುಂದೆ ಮೂಲಭೂತವಾದಿ ಸಂಘಟನೆಗಳ ಅಪ್ಪಣೆ ಪಡೆದು ನಂತರ ಮಾತನಾಡಬೇಕಾದ ಪರಿಸ್ಥಿತಿ ಬರುವ ಸಂಭವ ಕಾಣುತ್ತಿದೆ. ಸ್ವಾತಂತ್ರ್ಯಾನಂತರ ಪ್ರಥಮ ಬಾರಿಗೆ ಇಂಥ ಅಸಹನೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಯಾರು ಹೊಣೆ? ಕೇಂದ್ರದಲ್ಲಿ ಮೂಲಭೂತವಾದಿಗಳ ಸರ್ಕಾರವನ್ನು ತಂದಿರುವ ಜನರೇ ಇದರ ಹೊಣೆ ಹೊರಬೇಕಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮೋಸಹೋದ ನಮ್ಮ ಜನರ ವಿವೇಚನೆಯ ಕೊರತೆ ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗದಂತೆ ದೇಶಾದ್ಯಂತ ಸಾಹಿತಿಗಳು, ಬುದ್ಧಿಜೀವಿಗಳು, ವಿಜ್ಞಾನಿಗಳು ವ್ಯಾಪಕ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ಭ್ರಷ್ಟಾಚಾರ ಹಾಗೂ ಮೂಲಭೂತವಾದ ಇವುಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ ಎಂದು ನಿರ್ಧರಿಸಲಾಗದ ನಮ್ಮ ಜನರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯವಾಗುವಂಥ ವ್ಯವಸ್ಥೆಯನ್ನು ತಾವೇ ಮತದಾನದ ಮೂಲಕ ತಂದುಕೊಂಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಯಾರನ್ನು ದೂರುವುದು?
ಹೌದು ಆನಂದ ಪ್ರಸಾದ್, ಕರ್ನಾಟಕ ರಾಜ್ಯವು ಫ್ಯಾಸಿಸಂನತ್ತ ಧಾವಿಸುತ್ತಿರುವುದು ತಲ್ಲಣವನ್ನು ಹುಟ್ಟಿಸುತ್ತಿದೆ. ಕನ್ನಡದ ಧೀಮಂತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಾಡಿನ ಪ್ರಬಲ ಜಾತಿಯೊಂದರ ನಾಯಕರ ಹಾಗೂ ಸಂಘಟನೆಗಳ ಪ್ರತಿಭಟನೆಗೆ ಹೆದರಿ ಕ್ಷಮೆ ಕೇಳಿದ್ದು ಸರಿಯಲ್ಲ. ಕಾರ್ನಾಡ್ ಅವರಂತಹ ಬ್ರಾಹ್ಮಣ್ಯ ವಿರೋಧಿ ಸಾಹಿತಿಗಳ ಮೇಲೆ ಬ್ರಾಹ್ಮಣೇತರ ಜಾತಿಗಳು ಪ್ರತಿಭಟಿಸುವುದೂ ಸರಿಯಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ನಾಡ್ ಅವರೇನು ಪೇಜಾವರ ಸ್ವಾಮಿಗಳ ಹೆಸರನ್ನಾಗಲಿ ಅಥವಾ ಉಡುಪಿಯ ಕೃಷ್ಣ ದೇವಸ್ಥಾನದ ಕನಕನ ಕಿಂಡಿಯ ಖ್ಯಾತಿಯ ಕನಕದಾಸರ ಹೆಸರನ್ನಾಗಲಿ ಇಡಬೇಕು ಅಂತ ಆಗ್ರಹ ಪಡಿಸಿಲ್ಲ. ಟಿಪ್ಪೂ ಸುಲ್ತಾನ್ ಹುಟ್ಟಿನಿಂದ ಸಾವಿನವರೆಗೆ ಬ್ರಾಹ್ಮಣ್ಯ ವಿರೋಧಿಯಾಗಿದ್ದ ಅಂತ ಅವನ ಅಭಿಮಾನಿಗಳೂ ವಿರೋಧಿಗಳೂ ಇಬ್ಬರೂ ಒಮ್ಮತದಿಂದ ಹೇಳುತ್ತಾರೆ. ಆದುದರಿಂದ ಕಾರ್ನಾಡ್ ಅವರು ಟಿಪ್ಪೂ ಸುಲ್ತಾನನ ಹೆಸರನ್ನು ವಿಮಾನ ನಿಲ್ದಾಣಕ್ಕೆಇಡಬೇಕಿತ್ತು ಎಂದು ಹೇಳಿದ್ದು ಸರಿಯಾಗಿಯೇ ಇತ್ತು. ಟಿಪ್ಪೂ ಅತ್ಯಂತ ಕ್ರೂರಿ ಹಾಗೂ ದಮನಕಾರಿ ನಾಯಕನಾಗಿದ್ದ ಅಂತ ಇತಿಹಾಸ ಹೇಳುತ್ತದೆ. ಆದರೆ ರಾಷ್ಟ್ರದ ರಾಜಧಾನಿಯ ವಿಮಾನ ನಿಲ್ದಾಣಕ್ಕೆ ಎಪ್ಪತ್ತರ ದಶಕದಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದಮನ ಮಾಡಿದ ನಾಯಕರ ಹೆಸರನ್ನು ಇಡಲಾಗಿದೆಯಲ್ಲವೇ? ನೆರೆಯ ರಾಜ್ಯವೊಂದರ ವಿಮಾನ ನಿಲ್ದಾಣಕ್ಕೆ ೧೯೮೪ರಲ್ಲಿ ಸಿಖ್ ಸಮುದಾಯದ ಮೇಲೆ ದೌರ್ಜನ್ಯವೆಸಗಿದವರ ನಾಯಕರ ಹೆಸರನ್ನು ಇಡಲಾಗಿದೆಯಲ್ಲವೇ? ಹಾಗೆಯೇ ಬೆಂಗಳೂರಿನ ವಿಮಾನ ನಿಲ್ದಾಣಕ್ಕೂ ಟಿಪ್ಪೂವಿನ ಹೆಸರನ್ನಿಟ್ಟರೆ ತಪ್ಪೇನಿಲ್ಲ! ಕೊಡಗು ಜಿಲ್ಲೆಯ ಹೆಸರನ್ನೂ ಟಿಪ್ಪೂನಗರ ಅಂತ ಬದಲಿಸಿದರೆ ಚೆನ್ನಾಗಿರುತ್ತದೆ.
ಒಬ್ಬ ಸಾಹಿತಿ ತನಗೆ ಅನಿಸಿದ್ದನ್ನು ಹೇಳಿದ ಮಾತ್ರಕ್ಕೆ ಈಗಾಗಲೇ ಹೆಸರು ಇಟ್ಟು ಆಗಿರುವ ವಿಮಾನ ನಿಲ್ದಾಣದ ಹೆಸರು ಬದಲಾಯಿಸುವ ಸಾಧ್ಯತೆ ಇಲ್ಲ, ಇದಕ್ಕಾಗಿ ರಾದ್ಧಾಂತ, ಪ್ರತಿಭಟನೆ ವ್ಯಕ್ತಪಡಿಸುವ ಅವಶ್ಯಕತೆಯೇ ಕಂಡುಬರುವುದಿಲ್ಲ. ಇದು ಉಪೆಕ್ಷಿಸಬಹುದಾದ ಒಬ್ಬ ಸಾಹಿತಿಯ ಅಭಿಪ್ರಾಯ. ಇದಕ್ಕಾಗಿ ಜನ ಉರಿದುಬೀಳಬೇಕಾದ ಅಗತ್ಯ ಇಲ್ಲ.
ಕೇಂದ್ರದಲ್ಲಿ ಮೂಲಭೂತವಾದಿ ಸಂಘಟನೆಗಳ ಬೆಂಬಲದಿಂದ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಮೇಲೆ ಆ ಮೂಲಭೂತವಾಗಿ ಮನೋಸ್ಥಿತಿಯ ಸಂಘಟನೆಗಳು ಸವಾರಿ ಮಾಡಲು ಆರಂಭಿಸಿವೆ. ಹೀಗಾಗಿ ಮೋದಿ ಸರ್ಕಾರ ಇಂಥ ಸಂಘಟನೆಗಳ ವಿರುದ್ಧ ದನಿ ಎತ್ತಲಾರದ ಅಸಹಾಯತೆಗೆ ಸಿಲುಕಿದೆ. ಅದೂ ಅಲ್ಲದೆ ಆ ಸಂಘಟನೆಯ ಗರಡಿಯಲ್ಲೇ ಪಳಗಿದ ಹಾಗೂ ಎಳೆಯ ವಯಸ್ಸಿನಿಂದಲೇ ಆ ಸಂಘಟನೆಯ ಪ್ರಭಾವಲಯದಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಮೋದಿಗೆ ಆ ಸಂಘಟನೆಯ ಸಿದ್ಧಾಂತಗಳು ವೇದವಾಕ್ಯವಾಗಿರುವ ಕಾರಣ ಇದರ ವಿರುದ್ಧ ಅವರು ಧ್ವನಿ ಎತ್ತುವ ಸಂಭವ ಇಲ್ಲ. ಇದೇ ಅವಕಾಶವನ್ನು ಬಳಸಿಕೊಂಡು ಆ ಸಂಘಟನೆ ದೇಶದಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದೆ.
ದೇಶದಲ್ಲಿ ಇಂದು ಅಸಹಿಷ್ಣುತೆ ಹೆಚ್ಚಿದೆ ಎಂದು ಪ್ರಶಸ್ತಿ ವಾಪಸ್ ಮಾಡುತ್ತಿರುವವರೆಲ್ಲ ಉದಾರವಾದಿ ಹಾಗೂ ಪ್ರಗತಿಪರ ಚಿಂತನೆಯ ಸಾಹಿತಿಗಳು, ವಿಜ್ಞಾನಿಗಳು, ಕಲಾವಿದರಾಗಿದ್ದಾರೆ. ಇದನ್ನು ವಿರೋಧಿಸಿ ಮೋದಿ ಸರ್ಕಾರದ ಬೆಂಬಲಕ್ಕೆ ಬಂದಿರುವ ಸಾಹಿತಿಗಳು, ಕಲಾವಿದರು ಯಥಾಸ್ಥಿತಿವಾದಿಗಳು ಮಾತ್ರ ಆಗಿದ್ದಾರೆ. ಹೀಗಾಗಿ ಇವರ ಮಾತು ಸಮಾಜದ ಮೇಲೆ ಪ್ರಭಾವ ಬೀರಲಾರದು.
” ಇದು ಉಪೆಕ್ಷಿಸಬಹುದಾದ ಒಬ್ಬ ಸಾಹಿತಿಯ ಅಭಿಪ್ರಾಯ. ಇದಕ್ಕಾಗಿ ಜನ ಉರಿದುಬೀಳಬೇಕಾದ ಅಗತ್ಯ ಇಲ್ಲ.”
ಹೌದು ಆನಂದ ಪ್ರಸಾದ್, ಕಾರ್ನಾಡ್ ಅವರು ಕ್ಷಮೆ ಕೇಳಿದ್ದು ತಪ್ಪು ಹಾಗೂ ಖೇದನೀಯ. ಸರಕಾರವೂ ಕಾರ್ನಾಡರ ಪರ ನಿಲ್ಲಲಿಲ್ಲ, ಕಾರ್ನಾಡರ ಅಭಿಪ್ರಾಯ ವೈಯಕ್ತಿಕವಾದದ್ದು ಹಾಗೂ ಅದು ಸರಕಾರದ ಅಭಿಪ್ರಾಯವಲ್ಲ ಅಂತ ಮುಖ್ಯಮಂತ್ರಿಗಳೇ ಹೇಳಿಬಿಟ್ಟರು. ಪ್ರಾಚಾರ್ಯ ಕೆ. ಎಸ್. ಭಗವಾನ್ ಅವರೂ ಕಾರ್ನಾಡ್ ಅವರ ಅಭಿಪ್ರಾಯ ತಪ್ಪು ಎಂಬ ರೀತಿಯಲ್ಲಿ ಹೇಳಿಕೆ ಕೊಟ್ಟರು. ಒಟ್ಟಿನಲ್ಲಿ ಕಾರ್ನಾಡ್ ಅವರ ಪರ ವಹಿಸಬೇಕಾಗಿದ್ದವರೇ ಅವರನ್ನು ನಡುನೀರಿನಲ್ಲಿ ಕೈಬಿಟ್ಟರು.