Category Archives: ಪರಶುರಾಮ್ ಕಲಾಲ್

ಟಿ.ಆರ್.ಸಿ ಅಮಾನತು: ಯಾರ ಮಸಲತ್ತು?

-ಪರುಶುರಾಮ ಕಲಾಲ್
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದವರಲ್ಲಿ ಟಿ.ಆರ್. ಚಂದ್ರಶೇಖರ್ ಒಬ್ಬರು. ಅವರನ್ನು ಈಗ ತಾಂತ್ರಿಕ ಕಾರಣವೊಂದರ ನೆಪದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ  ಅಮಾನತ್ತುಗೊಳಿಸಿದೆ. ಕನ್ನಡ ವಿವಿಯಲ್ಲಿ ಇದೊಂದು ಕೆಟ್ಟ ಬೆಳವಣಿಗೆ. ಕುತ್ಸಿತ ಮನಸ್ಸುಗಳು ಹಾಗೂ ವಿಘ್ನ ಸಂತೋಷಿಗಳು ಮಾತ್ರ ಇಂತಹ ನಿರ್ಣಯ ಕೈಗೊಳ್ಳಬಲ್ಲರು.

ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಿದ ಅಭಿವೃದ್ಧಿ ಯೋಜನೆಯಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆಯದೆ ಚಂದ್ರಶೇಖರ್ ಅವರು ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಕನ್ನಡ ವಿಶ್ವವಿದ್ಯಾಲಯ ಕಾರ್ಯ ಕಾರಿ ಸಮಿತಿ ಅಮಾನತ್ತುಗೊಳಿಸಿದೆ. ವಾಸ್ತವವೆಂದರೆ ಅದನ್ನು ಯಾರ ಗಮನಕ್ಕೂ ತಂದಿಲ್ಲ ಎನ್ನುವುದು ಮಾತ್ರ ಅಪ್ಪಟ ಸುಳ್ಳಾಗಿದೆ.
ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ ಯೋಜನೆ (ಟುವರ್ಡ್ಸ್ ಎ ಚೈಲ್ಡ್ ಫ್ರೆಂಡ್ಲಿ ಡಿಸ್ಟಿಕ್ಟ್-ವಿಲೇಜ್ ಲೆವೆಲ್ ಮೈಕ್ರೋ ಪ್ಲಾನಿಂಗ್ ಅಂಡ್ ಕನ್ವರ್ಜೆಂಟ್ ಮಾನಿಟರಿಂಗ್ ಆಫ್ ಬೇಸಿಕ್ ಸರ್ವೇಸ್ ಇನ್ ರಾಯಚೂರು ಡಿಸ್ಟಿಕ್) ಈ ಯೋಜನೆಯಲ್ಲಿ ಪಾಲ್ಗೊಳ್ಳುವ ತಮ್ಮ ಇರಾದೆಯನ್ನು ಪ್ರಸ್ತಾಪವೊಂದರ ಮೂಲಕ ವಿಭಾಗದ ಗಮನಕ್ಕೆ ತಂದಿದ್ದಾರೆ. 2008 ನವೆಂಬರ್ 26ರಂದು ನಡೆದ ವಿಭಾಗದ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ಈ ಯೋಜನೆಯ ಬಗ್ಗೆ ವಿಭಾಗದ ಅನುಮತಿಯನ್ನು ಪಡೆದಿದ್ದಾರೆ. ಈ ಸಭೆಯ ನಡಾವಳಿಯ ಪ್ರತಿಯನ್ನು ಆಡಳಿತಾಂಗಕ್ಕೂ ಕಳಿಸಲಾಗಿದೆ.
2008-09ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ಅದೇ ವರ್ಷ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಯೋಜನೆ ಪೂರ್ಣಗೊಳಿಸಿರುವುದನ್ನು ವಿವಿ ಗಮನಕ್ಕೆ ತಂದಿದ್ದಾರೆ. ವಿವಿ ಗಮನಕ್ಕೆ ತರದೇ ಈ ಯೋಜನೆಯ ಜವಾಬ್ದಾರಿ ನಿರ್ವಹಿಸುವ ಉದ್ದೇಶ ಟಿ.ಆರ್. ಚಂದ್ರಶೇಖರ್ ಅವರಿಗಿದ್ದರೆ ಯೋಜನೆ ಪ್ರಸ್ತಾವನೆಯನ್ನೇ ವಿಭಾಗಕ್ಕೆ ಸಲ್ಲಿಸುತ್ತಿರಲಿಲ್ಲ. ವಾರ್ಷಿಕ ವರದಿಯಲ್ಲಿ ಇದನ್ನು ದಾಖಲಿಸುತಲೂ ಇರಲಿಲ್ಲ.
ತಪ್ಪಿತಸ್ಥ ವ್ಯಕ್ತಿ ಮುಂದೆ ನಡೆಯಲಿರುವ ತನಿಖೆಯನ್ನು ಪ್ರಭಾವಿಸಬಹುದೆನ್ನುವ ಕಾರಣಕ್ಕಾಗಿ ತನಿಖೆಗೆ ಮುನ್ನ ವ್ಯಕ್ತಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವ ಕ್ರಮವಿದೆ. ಟಿ.ಆರ್. ಚಂದ್ರಶೇಖರ್ ಅವರು ವಿವಿ ಆಡಳಿತಾಂಗದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಅವರು ಅಧ್ಯಾಪಕರು ಮಾತ್ರ. ತನಿಖೆ ನಡೆಸಿ, ತಪ್ಪಿತಸ್ಥರೆಂದು ತೀರ್ಮಾನವಾಗುವ ಮುಂಚೆಯೇ ಅಮಾನತ್ತು ಮಾಡಿರುವುದರ ಹಿಂದಿನ ಉದ್ದೇಶ ಏನು?
1996ರಲ್ಲಿ ಕನ್ನಡ ವಿವಿಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ ಸ್ಥಾಪನೆಗೊಂಡಾಗ ವಿಭಾಗದ ಉದ್ದೇಶವೇ ಅಭಿವೃದ್ಧಿ ಸಿದ್ಧಾಂತ ಮತ್ತು ಆಚರಣೆಯನ್ನು ಅಧ್ಯಯನ ಮಾಡುವುದು. ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು. ಅಭಿವೃದ್ಧಿ ತಜ್ಞರ ರೂಪದಲ್ಲಿ ವಿವಿಧ ಸಂಘ, ಸಂಸ್ಥೆಗಳಿಗೆ ನೆರವು ನೀಡುವುದೇ ಆಗಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಮುಂಬಯಿ ಕರ್ನಾಟಕದ  ಪ್ರದೇಶಗಳ ಜಿಲ್ಲಾ ಪಂಚಾಯತ್ಗಳೊಂದಿಗೆ ಸೇರಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ, ಜನಯೋಜನೆ ಸಿದ್ದಪಡಿಸುವುದು, ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇಲ್ಲೂ ಕೂಡ ವಿಭಾಗದ ಉದ್ದೇಶದ ಭಾಗವಾಗಿಯೇ ಡಾ. ಟಿ.ಆರ್. ಚಂದ್ರಶೇಖರ್ ಯುನಿಸೆಫ್ ಯೋಜನೆಯಲ್ಲಿ ಪಾಲ್ಗೊಂಡಿದ್ದರು. ಯುನಿಸೆಫ್ ಮತ್ತು ಜಿಲ್ಲಾ ಪಂಚಾಯ್ತಿಯು ಜಂಟಿಯಾಗಿ ಕೈಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವು ಎರಡೂ ಸರ್ಕಾರಿ  ಸಂಸ್ಥೆಗಳೇ ಆಗಿವೆ. ಲೆಕ್ಕಪತ್ರಗಳನ್ನು ಐ.ಎ.ಎಸ್. ಅಧಿಕಾರಿಗಳು ಧೃಢೀಕರಿಸಿದ್ದಾರೆ. ಅವರು ಯಾವ ಆರೋಪವನ್ನೂ ಸಹ ಮಾಡಿಲ್ಲ. ಟಿ.ಆರ್.ಚಂದ್ರಶೇಖರ್ ಅವರೇ ಸಲ್ಲಿಸಿದ ವಾರ್ಷಿಕ  ವರದಿಯನ್ನು ಉಲ್ಲೇಖಿಸಿಯೇ ಅಮಾನತ್ತು ಶಿಕ್ಷೆ ನೀಡಲಾಗಿದೆ.
ಯೊಜನೆಗಳ ನಿರ್ವಹಣೆಗಾಗಿ ವಿಶ್ವವಿದ್ಯಾಲಯದ ಧನ ಸಹಾಯ ಪಡೆದುಕೊಂಡು ಯೋಜನೆಯನ್ನು ಪೂರ್ಣಗೊಳಿಸದಿರುವ, ಯೋಜನೆಗಾಗಿ ಪಡೆದ ಹಣದ ಹೊಂದಾಣಿಕೆಯನ್ನು ವರ್ಷಾನುಗಟ್ಟಲೆ ಮಾಡದಿರುವ ಹಲವಾರು ಪ್ರಕರಣಗಳು ಕನ್ನಡ ವಿವಿಯಲ್ಲಿ ಇವೆ. ಈ ಬಗ್ಗೆ ಹಲವಾರು ಬಾರಿ ಕನ್ನಡ ವಿವಿ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಗಳೂ ಆಗಿವೆ. ಇವುಗಳ ಬಗ್ಗೆ ವಿವಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎನ್ಜಿಓಗಳೊಂದಿಗೆ ಯೋಜನೆಯನ್ನು ಹಂಚಿಕೊಂಡು ಅಲ್ಲೂ ಇಲ್ಲೂ ಲಾಭ ಮಾಡಿಕೊಂಡವರೂ  ವಿ.ವಿ.ಯಲ್ಲಿ ಇದ್ದಾರೆ. ಸರ್ಕಾರಿ ಸಾರ್ವಜನಿಕ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಯೋಜನೆ ಪೂರ್ಣಗೊಳಿಸಿದವರಿಗೆ ಮಾತ್ರ ಈ ಶಿಕ್ಷೆ ನೀಡಲಾಗಿದೆ.
ಟಿ.ಆರ್. ಚಂದ್ರಶೇಖರ್ ಅವರ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಸಮಾಜೋಮುಖಿ ಅಭಿವೃದ್ಧಿ ಬರಹಗಳು ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ನೇರ ಟೀಕೆಯಿಂದ ಕೂಡಿರುತ್ತಿದ್ದವು. ಅವರು ಕನ್ನಡ ವಿವಿಯ 80 ಏಕರೆ ಭೂಮಿಯ ಪರಭಾರೆ ವಿರುದ್ಧ ಹೋರಾಟದ ಮಂಚೂಣಿಯಲ್ಲಿದ್ದರು. ಆಡಳಿತಾಂಗದ ನಿರ್ಣಯವನ್ನು ಸದಸ್ಯರಾಗಿ ತಡೆ ಹಿಡಿಯುವ ಕೆಲಸ ಮಾಡಿದರು. ಆತ್ಮ ಸಾಕ್ಷಿಯಂತೆ ಕೆಲಸ ಮಾಡಿದ್ದ ಅವರ ನಿಲುವಿನಿಂದಾಗಿ ಭಗ್ನಗೊಂಡಿದ್ದ ಮನಸ್ಸುಗಳು ತಾಂತ್ರಿಕ ಕಾರಣವನ್ನು ಹೆಕ್ಕಿ ತೆಗೆದು, ಅವರ 17 ವರ್ಷದ ವಿವಿಯ ಸೇವೆಯನ್ನು ಪರಿಗಣಿಸಿದೇ ಅಮಾನತ್ತು ಎನ್ನುವ ಘೋರ ಶಿಕ್ಷೆಯನ್ನು ನೀಡಿ ಕೇಕೇ ಹಾಕಿ ನಕ್ಕಿವೆ. ಕನ್ನಡ ವಿವಿಯಲ್ಲಿ ಚೂರುಪಾರು ಮಾನ ಮರ್ಯಾದೆಯಿಂದ ಕೂಡಿದವರು ಕನ್ನಡ ವಿವಿಯ ಗೌರವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಅಂತವರ ಮನಸ್ಸುಗಳನ್ನು ಜಡಗೊಳಿಸಿ, ಅಧ್ಯಾಪಕರನ್ನು  ಗುಮಾಸ್ತರನ್ನಾಗಿ ಮಾಡಿ ಹಾಕಲಿದೆ ಈ ಅಮಾನತ್ತು ಎಂಬ ನಿರ್ಣಯ. ಇದೊಂದು ಯಕಶ್ಚಿತ ಘಟನೆ ಎಂಬಂತೆ ವಿಶ್ವವಿದ್ಯಾಲಯದ ಅಧ್ಯಾಪಕರು ಯೋಚಿಸುತ್ತಿದ್ದಾರೆ. ಅವರು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಬಲಿಗಳು ಅವರೇ ಆಗಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ  ಕಾರ್ಯಕಾರಿ ಸಮಿತಿಯು ಕೂಡಲೇ ಅಮಾನತ್ತು ಹಿಂತೆಗೆದುಕೊಳ್ಳುವ ಮೂಲಕ ವಿವಿಯ ಘನತೆ ಉಳಿಸಿಕೊಳ್ಳಬೇಕು.

ಬಳ್ಳಾರಿ (ಗ್ರಾ) ಉಪ ಚುನಾವಣೆ: ಗಣಿ ಎಂಜಲೆಲೆಯ ಮೇಲೆ ಉರುಳಾಡಿದ ರಾಜಕಾರಣಿಗಳು

-ಪರುಶುರಾಮ ಕಲಾಲ್

ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಕೊಳಕುತನವನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ.

ಗಣಿಯ ಕಪ್ಪ ಪಡೆಯದ ರಾಜಕಾರಣಿ ಯಾರು? ಎನ್ನುವಂತೆ ಎಲ್ಲಾ ಪಕ್ಷಗಳು ಗಣಿಧಣಿಗಳೊಂದಿಗೆ ಗುರುತಿಸಿಕೊಂಡೆ ಉಪ ಚುನಾವಣೆಯನ್ನು ಎದುರಿಸಿದರು. ಹೆಚ್ಚು ಗಣಿ ಹಣ ಖರ್ಚು ಮಾಡಿದ ಬಿ. ಶ್ರೀರಾಮುಲು ಬಿಜೆಪಿಯನ್ನು ಅವರೇ ಸೃಷ್ಠಿಸಿಕೊಂಡ “ಆಪರೇಷನ್ ಕಮಲ”ದ ತಂತ್ರದ ಮೂಲಕವೇ ಆಪರೇಷನ್ ಮಾಡಿ, ಚಿಂದಿ ಮಾಡಿ ಹಾಕಿದರು.

ಬಳ್ಳಾರಿ ಉಪ ಚುನಾವಣೆಯ ಮತದಾರರಿಗೆ ಆಯ್ಕೆಗಳೇ ಇರಲಿಲ್ಲ. ಅವರಾದರೂ ಏನು ಮಾಡಿಯಾರು? ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಪೈಕಿ ಯಾರನ್ನಾದರೂ ಆಯ್ಕೆ ಮಾಡಲೇ ಬೇಕಿತ್ತು. ಅವರಿಗೆ ರಾಮುಲು ಹೆಚ್ಚು ಸಭ್ಯನಾಗಿ ಕಂಡಿರಬೇಕು.

ಈ ಚುನಾವಣೆಯಲ್ಲಿ ಮತದಾರರು ಕುಕ್ಕೆ ಸುಬ್ರಮಣ್ಯಂ ದೇವಾಲಯದ ಮಲೆಕುಡಿಯರಂತೆ ಆಗಿದ್ದರು. ಗಣಿಯ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳನ್ನೇ ನೋಡಿದ ಮೇಲೆ ನಾವು ಅದರಲ್ಲಿ ಉರುಳಾಡಿದರೆ ತಪ್ಪೇನೂ ಇಲ್ಲ ಎಂದೇ ಅನ್ನಿಸಿಬಿಟ್ಟಿತು. ಬೇರೆ ಆಯ್ಕೆಯೇ ಇಲ್ಲದಾಗ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇಳಿಯುತ್ತಾರೆ. ಮತದಾರರು ಕೂಡಾ ಇದೇ ಹಾದಿ ತುಳಿದರು. ರಾಮುಲು ಮತ್ತೊಮ್ಮೆ ಗೆದ್ದರು. ಮತದಾರರು ಮಾತ್ರ ಸೋತು ಸುಣ್ಣವಾದರು.

ಬಿ.ಶ್ರೀರಾಮುಲು ಗೆಲುವಿಗೆ ನಾಲ್ಕು ಮುಖ್ಯ ಕಾರಣಗಳು ಇವೆ. ಮೊದಲನೆಯದು ಹಣದ ಬಲ, ತೋಳ್ಬಲ. ಈ ಚುನಾವಣೆಯಲ್ಲಿ ಬರೊಬ್ಬರಿ 120 ಕೋಟಿಯಷ್ಟು ಹಣವನ್ನು ಅವರು ಖರ್ಚು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿ ಹಳ್ಳಿಗಳಿಗೆ ತೆರಳಿ ಹಣದ ಬಟವಾಡೆಯನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಎಲ್ಲವೂ ಎಷ್ಟು ವ್ಯವಸ್ಥಿತವಾಗಿ ಮಾಡಲಾಯಿತು ಎಂದರೆ ಮತದಾರರ ಸಹಿ ಮೂಲಕವೇ ಹಣ ವಿತರಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಸಹಿ, ಹೆಬ್ಬಟ್ಟಿನ ಗುರುತು ಅಂದರೆ ಅದಕ್ಕೆ ಬಹಳ ಮಹತ್ವವಿದೆ. ಆಸ್ತಿ ಮಾರಾಟ, ಕೊಟ್ಟ ಮಾತು ಎಲ್ಲವನ್ನೂ ಅದು ಧ್ವನಿಸುತ್ತದೆ. ಸಹಿ ಮಾಡಿದ ಮೇಲೆ ಅದಕ್ಕೆ ಅವರು ಬದ್ಧ ಎನ್ನುವ ಸಂದೇಶವೊಂದನ್ನು ಅದು ರವಾನಿಸುತ್ತದೆ. ಊಳಿಗಮಾನ್ಯ ಸಮಾಜದ ಗುಣಲಕ್ಷಣಗಳನ್ನು ಮೈಗೊಡಿಸಿಕೊಂಡಿರುವ ಈ ಕ್ಷೇತ್ರದ ಮತದಾರರು ರಾಮುಲುಗೆ ಬದ್ಧತೆ ತೋರಿಸಬೇಕಿತ್ತು.

ಎರಡನೆಯ ಕಾರಣವೆಂದರೆ ವಾಲ್ಮೀಕಿ ನಾಯಕ ಸಮಾಜದ ಮತದಾರರು (ಇದು ಪರಿಶಿಷ್ಟ ಪಂಗಡದ ಕ್ಷೇತ್ರವೂ ಹೌದು) ರಾಮುಲು ಅವರನ್ನು ಪಕ್ಷಾತೀತವಾಗಿ ತಮ್ಮ ನಾಯಕನೆಂದು ಒಪ್ಪಿಕೊಂಡರು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಒಬ್ಬರೇ ನಾಯಕರಿಲ್ಲ. ಆದರೆ ರಾಮುಲು ಗಣಿಧಣಿಗಳ ಜೊತೆ ಗುರುತಿಸಿಕೊಂಡು ತಮ್ಮದೇ ಆದ ಪ್ರಭಾವ ಗಳಿಸಿಕೊಂಡಿದ್ದಾರೆ. ರಾಮುಲು ಪವರ್ ಏನೆಂದು ಇವರಿಗೆ ಗೊತ್ತು. ಹೀಗಾಗಿ ಇತನೇ ನಮ್ಮ ನಾಯಕ ಎಂದು ಮತದಾರರು ಭಾವಿಸಿದರು. ಇವರ ಜೊತೆಗೆ ಭೋವಿ ಸಮಾಜ ಕೈಗೂಡಿಸಿತು.

ಮೂರನೆಯ ಕಾರಣ, ಬಳ್ಳಾರಿಯ ಮುಸ್ಲಿಂ ಮತದಾರರು. ಇವರು ರೆಡ್ಡಿ ಬ್ರದರ್ಸ್‌ರನ್ನು ಮೊದಲಿಂದಲೂ, ಅವರು ಬಿಜೆಪಿಯಲ್ಲಿದ್ದಾಗಲೇ ಬೆಂಬಲಿಸಿದ್ದರು. ಇದಕ್ಕೆ ಸ್ಥಳೀಯ ಕಾರಣಗಳು ಮುಖ್ಯವಾಗಿವೆ. ರೆಡ್ಡಿ ಬ್ರದರ್ಸ್ ಎಷ್ಟೇ ರಾಜಕಾರಣ ಮಾಡಲಿ, ಕೋಮುವಾದ ರಾಜಕಾರಣಕ್ಕೆ ಆಸ್ಪದ ಕೊಟ್ಟಿರಲಿಲ್ಲ. ರೆಡ್ಡಿ ಬ್ರದರ್ಸ್ ಮತ್ತು ರಾಮುಲುರವರಿಗೆ ತಾಯಿ ಸುಷ್ಮಾ ಸ್ವರಾಜ್‌ರನ್ನೇ ದರ್ಗಾಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿ, ತಲೆಯ ಮೇಲೆ ಹಸಿರು ಟವೆಲ್ ಹಾಕಿಸಿದ ಕೀರ್ತಿಯೂ ಸೇರುತ್ತದೆ. ರಾಮುಲು ಬಿಜೆಪಿಯಿಂದ ಹೊರ ಬಂದಿದ್ದು ಅವರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟ ವಿಷಯವಾಗಿತ್ತು. ಮರು ಆಲೋಚನೆ ಮಾಡದೇ ರಾಮುಲು ಅವರನ್ನು ಮತ್ತೊಮ್ಮೆ ಅಪ್ಪಿಕೊಂಡರು.

ನಾಲ್ಕನೆಯದು, ಜೆಡಿಎಸ್.

ಜೆಡಿಎಸ್ ಜಾತ್ಯಾತೀತತೆ:
ಜೆಡಿಎಸ್ ಬಿಜೆಪಿ ಮಧುಚಂದ್ರದ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹೊಸಪೇಟೆಯಲ್ಲಿ ಬೃಹತ್ ನಾಯಕ ಸಮಾಜದ ರಾಜ್ಯಮಟ್ಟದ ಸಮಾವೇಶ ನಡೆಸಿದರು. ನಾಯಕ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದಾಗ ಪ್ರಯತ್ನ ನಡೆಸಿದ್ದರು. ರಾಜ್ಯದ ರಾಜಕಾರಣದಲ್ಲಿ ಕುರುಬ ಸಮುದಾಯ ತಮ್ಮ ನಾಯಕನೆಂದೇ ಭಾವಿಸಿರುವ ಸಿದ್ಧರಾಮಯ್ಯ ಅವರನ್ನು ಹಿಂದಕ್ಕೆ ಸರಿಸಲು ಇದು ಅವರಿಗೆ ಅತ್ಯಗತ್ಯವಾಗಿತ್ತು.  “ಅಹಿಂದ”ವನ್ನು ಒಡೆಯಲು ಸಹ ಇದು ಅಗತ್ಯವಾಗಿತ್ತು. ನಾಯಕ ಸಮುದಾಯ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಕೀರ್ತಿಯನ್ನು ಈ ಹಿನ್ನೆಲೆಯಲ್ಲಿ ಪಡೆಯಲು ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಒಂದು ನೆಲೆ ಕಂಡುಕೊಳ್ಳುವುದೇ ಆಗಿತ್ತು. ಆದರೆ ನಂತರ ನಡೆದ ರಾಜಕೀಯ ಬದಲಾವಣೆಗಳು ಈ ಪ್ರಯೋಗಕ್ಕೆ ಆಸ್ಪದ ಕೊಡಲಿಲ್ಲ. ಪರಿಶಿಷ್ಟ ಪಂಗಡದ ಶಾಸಕರು ಬಿಜೆಪಿ ತೆಕ್ಕೆಗೆ ಸೇರಿಕೊಂಡರು. ನಾಯಕ, ಲಂಬಾಣಿ, ಭೋವಿ ಸಮಾಜಗಳು ಬಿಜೆಪಿಯಲ್ಲಿ ಗುರುತಿಸಿಕೊಂಡವು. ಈ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ಈ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಜೆಡಿಎಸ್ ಪ್ರಯತ್ನ ವಿಫಲವಾಗಿತ್ತು

ಈ ಉಪ ಚುನಾವಣೆಯಲ್ಲಿ ರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಂತೆ ಜೆಡಿಎಸ್ ತನ್ನ ಹಳೆಯ ಪ್ರಯೋಗವನ್ನು ಇಲ್ಲಿ ಪ್ರಯೋಗಿಸಲು ರಾಮುಲುವನ್ನೇ ಅಸ್ತ್ರ ಮಾಡಿಕೊಂಡರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ರಾಮುಲು ಹೊಸ ಪಕ್ಷ ಸ್ಥಾಪಿಸಲು ಇವರೇ ನೀರು ಎರೆಯುತ್ತಿದ್ದಾರೆ. ಜೆಡಿಎಸ್ ಪಕ್ಷ ಸೇರ್ಪಡೆಗಿಂತ ಹೊಸ ಪಕ್ಷವೇ ಅವರಿಗೆ ಖುಷಿ ಕೊಡುವ ಸಂಗತಿಯಾಗಿದೆ. ಹೊಂದಾಣಿಕೆ ಮಾಡಿಕೊಂಡು ರಾಜ್ಯದ ರಾಜಕಾರಣವನ್ನು ನಿರ್ವಹಿಸಲು ಯೋಜಿಸಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಛಿದ್ರಗೊಳಿಸುವ ಯಾವುದೇ ಶಕ್ತಿ ಇರಲಿ. ಅದು ಜೆಡಿಎಸ್ ಮಿತ್ರ ಪಕ್ಷ.

ಜೆಡಿಎಸ್ ಜಾತ್ಯಾತೀತತೆ ಅಂದರೆ ಜಾತಿ ಲೆಕ್ಕಚಾರವೇ ಆಗಿದೆ.

ಇನ್ನು, ಪಾಪ ಕಾಂಗ್ರೆಸ್ ಪಕ್ಷ ಮಾತ್ರ ಒಂದು ಶತಮಾನದಷ್ಟು ಹಿಂದಿನ ಗತ ವೈಭವದಲ್ಲಿಯೇ ಇನ್ನೂ ಲೆಕ್ಕಚಾರ ಹಾಕುತ್ತಾ ಕುಳಿತುಕೊಂಡಿದೆ.

objection-to-yeddyurappa's-approval-for-statewide-paper-page2

ಕಾಸಿಗಾಗಿ ಸುದ್ದಿ ಪ್ರಕಟಿಸದ ದಿನಪತ್ರಿಕೆಗಳು ಈಗ ಯಾವು ಉಳಿದಿವೆ?

– ಪರಶುರಾಮ ಕಲಾಲ್

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ ಇವತ್ತು ತನ್ನ ಮೂಲ ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿದೆ.

ಒಂದು ಕಡೆ 2ಜಿ ಸ್ಟೆಕ್ರಮ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಡದ ಹಗರಣಗಳು ಬಯಲಾಗುವುದಕ್ಕೆ ಕಾರಣವಾಗಿ ಆಳುವವರ ಕಣ್ಣಿಗೆ ಖಳನಾಗಿ ಕಾಣತೊಡಗಿದೆ. ಪಿ.ಸಾಯಿನಾಥ್ ಅವರ ಬರಹಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದರ್ಭ ಪ್ಯಾಕೇಜ್ ಘೋಷಿಸಿದ ಉದಾಹರಣೆಯು ನಮ್ಮ ಮುಂದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಪತ್ರಿಕಾರಂಗ ಈ ವಿಷಯಗಳಲ್ಲಿ ಕೆಲಸ ಮಾಡಿ ಸೈ ಅನ್ನಿಸಿಕೊಂಡಿದೆ.

ಇಷ್ಟು ಮಾತ್ರ ಆಗಿದ್ದರೆ ಸಮಸ್ಯೆ ಏನೋ ಇಲ್ಲ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಟು ಅವರ ಹೇಳಿಕೆಯನ್ನು ಅತ್ಯುಗ್ರವಾಗಿ ಖಂಡಿಸಿ ಬಿಡಬಹುದಿತ್ತು. ಆದರೆ ಕಾವಲು ನಾಯಿಯಾಗಿ ಕೆಲಸ ಮಾಡುವ ಜೊತೆಗೆ ರಾಜಕಾರಣಿಗಳ, ಕಾರ್ಪೊರೇಟ್ ಸಂಸ್ಥೆಗಳ ಮುದ್ದಿನ ನಾಯಿ ಆಗಿಯೂ ಕೆಲಸ ಮಾಡಿರುವ ಉದಾಹರಣೆಗಳು ಇವೆಯಲ್ಲಾ? ಇವೆಲ್ಲವಕ್ಕೂ ಏನು ಹೇಳಬೇಕು. ದೆಹಲಿಯ ಶಾಲೆಯ ಶಿಕ್ಷಕಿ ಉಮಾ ಖುರಾನ ಪ್ರಕರಣವಾಗಲಿ, ಅಥವಾ ವೈದ್ಯರ ಪುತ್ರಿ ಅರುಶಿ ಕೊಲೆ ಪ್ರಕರಣದ ಬಗ್ಗೆ ವಿದ್ಯುನ್ಮಾನ ಮಾಧ್ಯಮ ನಡೆದುಕೊಂಡು ರೀತಿ ಹೇಗಿತ್ತು? ಈ ವಿದ್ಯುನ್ಮಾನ ಮಾಧ್ಯಮಗಳ ಹುಳುಕುಗಳನ್ನು ಇವೆಲ್ಲಾ ಬಯಲುಗೊಳಿಸಿಲ್ಲವೇ? ಕಾರ್ಪೊರೇಟ್ ಕಂಪನಿಗಳು ಮತ್ತು ಪತ್ರಕರ್ತರ ನಡುವೆ ಇರುವ ಅನೈತಿಕ ಸಂಬಂಧ ನೀರಾ ರಾಡಿಯ ಪ್ರಕರಣ ಬಯಲಿಗೆ ತಂದಿತು. ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯುವವರು ಇವುಗಳನ್ನು ಕೂಡಾ ಗಮನಿಸಬೇಕಾಗುತ್ತದೆ.

ಪತ್ರಿಕೋದ್ಯಮದ ಅಲಿಖಿತ ನಿಯಮಗಳನ್ನು ಎಷ್ಟು ಪತ್ರಿಕೆಗಳು ಪಾಲಿಸುತ್ತಿವೆ? ಕೋಮು ಸಂಘರ್ಷ ನಡೆದಾಗ ಎರಡು ಕೋಮುಗಳ ಹೆಸರುಗಳನ್ನು ಬಯಲುಗೊಳಿಸಬಾರದು ಎಂದಿದೆ. ಎಷ್ಟು ಪತ್ರಿಕೆಗಳು ಈ ನಿಯಮಕ್ಕೆ ಬದ್ಧವಾಗಿವೆ? ಕೋಮು ಹೆಸರು ಹೇಳದಿದ್ದರೂ ಆಸ್ಪತ್ರೆಗೆ ದಾಖಲಾದವರು, ಬಂಧಿತರ ಹೆಸರನ್ನು ಒಂದು ಕೋಮು ದೃಷ್ಠಿಯಲ್ಲಿಟ್ಟುಕೊಂಡು ಪ್ರಕಟಿಸುತ್ತವೆಯಲ್ಲ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹೆಸರನ್ನು ಪ್ರಕಟಿಸಬಾರದು. ಆಕೆಯ ಫೋಟೋ ಹಾಕಬಾರದು ಎಂದಿದೆ. ಈಗ ಅದು ಪಾಲಿಸಲಾಗುತ್ತಿದೆಯೆ? ಕೆಲವು ಟಿವಿ ಚಾನಲ್‌ಗಳಂತೂ ಅವರನ್ನು ಸಂದರ್ಶನ ಮಾಡಿ ಅಸಹ್ಯ ಪ್ರಶ್ನೆ ಕೇಳುವ ಮೂಲಕ ಎಲ್ಲವನ್ನೂ ಬಟ್ಟಾಬಯಲಾಗಿಸಿ, ರಂಜನೆ ಒದಗಿಸುತ್ತಿಲ್ಲವೇ?

ಇನ್ನು, ಕಾಸಿಗಾಗಿ ಸುದ್ದಿ ಪ್ರಕಟಿಸದ ಕನ್ನಡ ದಿನಪತ್ರಿಕೆಗಳು ಈಗ ಯಾವು ಉಳಿದಿವೆ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಸು ತೆಗೆದುಕೊಂಡು ಚುನಾವಣೆ ಸುದ್ದಿ ಬರೆದು ಹಣ ಮಾಡಿಲ್ಲವೇ? ಪತ್ರಿಕಾ ಮಾಲೀಕರೇ ಈ ಅಡ್ಡ ಹಾದಿ ಹಿಡಿದ ಮೇಲೆ ಬಿಡಿ ಸುದ್ದಿಗಾರರು, ವರದಿಗಾರರು ಅದೇ ಹಾದಿ ತುಳಿದರೆ ಇದನ್ನು ಟೀಕಿಸುವ ನೈತಿಕತೆ ಪತ್ರಿಕಾ ಮಾಲೀಕರಿಗೆ ಎಲ್ಲಿದೆ? ಪ್ರಶ್ನಿಸುವ ಹಕ್ಕನ್ನು ಸಂಪಾದಕರು ಕಳೆದುಕೊಂಡಂತಾಗಲಿಲ್ಲವೇ?

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

ಸಂಪಾದಕರು, ಸಂಪಾದಕರ ಬಳಗ ಆಕ್ರಮವೆಸಗಿ, ಒಂದು ಪತ್ರಿಕೆಯಿಂದ ಹೊರ ಬಂದ ಮೇಲೆ ಅವರಿಗೆ ರತ್ನಗಂಬಳಿ ಹಾಸಿ ಮತ್ತೊಂದು ಪತ್ರಿಕೆ ಅವಕಾಶ ಮಾಡಿಕೊಡುತ್ತಿರುವುದನ್ನು ನೋಡಿದರೆ ಈ ಆಕ್ರಮವೆಸಗುವವರು ಪತ್ರಿಕೆಯ ಮಾಲೀಕರಿಗೆ ಬೇಕು ಎಂದಾಗುವುದಿಲ್ಲವೇ? ಅವರು ಈ ಆಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದೇ ಅರ್ಥವಲ್ಲವೇ? ಪತ್ರಿಕೋದ್ಯಮ ಇಂತಹ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿದೆ.

ಭಾರತೀಯ ಪತ್ರಿಕಾ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದ ಅನೇಕ ಉದಾಹರಣೆಗಳು ಇವೆ. ಎಷ್ಟೇ ಆಗಲಿ ಈ ಮಂಡಳಿ ಹಲ್ಲಿಲ್ಲದ ಹಾವು. ಛೀಮಾರಿ ಹಾಕುವುದನ್ನು ಬಿಟ್ಟು ಬೇರೇನೋ ಅದರಿಂದ ಸಾಧ್ಯವಿಲ್ಲ. ತಪ್ಪೊಪ್ಪಿಗೆಯನ್ನು ಸಣ್ಣದಾಗಿ ಪ್ರಕಟಿಸಿ ಕೈತೊಳೆದುಕೊಂಡು ಏನೋ ಆಗಿಲ್ಲ ಎನ್ನುವಂತೆ ವರ್ತಿಸಿಲ್ಲವೇ? ಕೆಲವರು ಸ್ವಯಂ ನೈತಿಕತೆಯ ಪಾಠ ಹೇಳುತ್ತಿದ್ದಾರೆ. ಈ ಸ್ವಯಂ ನೈತಿಕತೆಯ ಪಾಠ ಇವತ್ತು ಯಾರು ಪಾಲಿಸುತ್ತಾರೆ. ಯಾರಿಗೆ ಈ ಉಪದೇಶ? ಈ ಕುರಿತ ಮುಖಾಮುಖಿ ಮಾತ್ರ ವಸ್ತುನಿಷ್ಠತೆಗೆ ಹತ್ತಿರ ಬರಲು ಸಾಧ್ಯವಾಗುತ್ತದೆ.

ಪತ್ರಿಕೋದ್ಯಮವನ್ನು ಗುರಾಣಿ ಮಾಡಿಕೊಂಡವರ ನಡುವೆ…

– ಪರಶುರಾಮ ಕಲಾಲ್

ಪತ್ರಿಕೋದ್ಯಮ ಹಲವಾರು ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಪತ್ರಕರ್ತರಿಗೆ ಉಸಿರುಗಟ್ಟಿಸುವ ವಾತಾವರಣ ಇದೆ. ಇದು ಅರ್ಧ ಸತ್ಯ ಮಾತ್ರ. ಉಳಿದ ಅರ್ಧ ಸತ್ಯವೆಂದರೆ ಅಲ್ಲೂ ಏನಾದರೂ ಮಾಡಬಹುದು. ಅದಕ್ಕೆ ಬದ್ಧತೆ ಬೇಕು. ಜೀವನ ಪ್ರೀತಿ ಇರಬೇಕು. ಜನರಿಗೆ ಏನಾದರೂ ಮಾಡಬೇಕು ಎನ್ನುವ ಕಾಳಜಿ ಇರಬೇಕು. ಆಗ ಹೊಸ ದಾರಿಗಳು ಗೋಚರಿಸುತ್ತವೆ. ಸಿನಿಕರಾಗಿ ಮಾತನಾಡಿದರೆ ಇರುವ ದಾರಿ ಮುಚ್ಚಿ ಹೋಗುತ್ತವೆ ಅಷ್ಟೇ.

ಹಣ ಮಾಡಬೇಕೆಂದವರು ಈ ಕ್ಷೇತ್ರ ಆಯ್ದುಕೊಳ್ಳಬಾರದು. ಬೇರೆ ಕ್ಷೇತ್ರಗಳ ಕಡೆ ಹೋಗಬೇಕು. ಇದು ಪತ್ರಿಕೋದ್ಯಮಕ್ಕೆ ಒಂದಿಷ್ಟು ಮಾನ ತರಬಲ್ಲದು. ಪತ್ರಿಕೋದ್ಯಮವನ್ನೇ ಗುರಾಣಿ ಮಾಡಿಕೊಂಡು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವವರು, ಡಿನೋಟಿಪೆಕೇಷನ್ ಮಾಡಿಸಿಕೊಂಡು ಕೋತಿ ತಾನು ತಿಂದು ಮೇಕೆಯ ಮೋತಿಗೆ ಒರೆಸಿದಂತೆ ಮಾಡುವವರ ನಡುವೆ ಇದು ಮಾನ ತರಬಲ್ಲ ಕೆಲಸವಾಗುವುದು. ಇಂತಹವರನ್ನು ಮಾಡೆಲ್ ಮಾಡಿಕೊಂಡು ಹಲಬುವುದನ್ನು ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಮೊಟ್ಟ ಮೊದಲು ಬಿಡಬೇಕು. ಇವರು ಯಾರು ಮಾಡೆಲ್ ಅಲ್ಲ. ಮಾಡೆಲ್ ಆಗಿ ಕಾಣುವವರು ನಮಗೆ ತುಂಬಾ ಜನ ಇದ್ದಾರೆ.

ಪತ್ರಿಕೋದ್ಯಮ ಇವತ್ತು ಹೊರಳುವ ಹಾದಿಯಲ್ಲಿದೆ. ಒಂದು ಕಡೆ ಅದು ದೃಶ್ಯ ಮಾಧ್ಯಮಗಳನ್ನು ಎದುರಿಸಬೇಕಿದೆ. ಮತ್ತೊಂದು ಕಡೆ ಪತ್ರಿಕೆಗಳ ಪೈಪೋಟಿಯನ್ನು ಎದುರಿಸಬೇಕಿದೆ. ಇದು ಎಲ್ಲಾ ಪತ್ರಿಕೆಗಳಿಗೆ ಅನ್ವಯಿಸುತ್ತಿದೆ. ಹಳೇಯ ಶೈಲಿಯಲ್ಲಿ ಇವತ್ತು ಪತ್ರಿಕೆಯನ್ನು ನಡೆಸಲು ಆಗುವುದಿಲ್ಲ. ಬದಲಾದ ಕಾಲಮಾನಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಗೆ ಸಜ್ಜಾಗಬೇಕಿದೆ. ಈ ಪೈಪೋಟಿಯಲ್ಲಿ ತನ್ನತನ ಮರೆಯದೇ ಉಳಿಸಿಕೊಳ್ಳಬೇಕಿದೆ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಆ ಮಾತು ಬೇರೆ.

ಕ್ಷಣ ಕ್ಷಣದ ಸುದ್ದಿಗಳನ್ನು ಲೈವ್ ಆಗಿ ಬಿತ್ತರಿಸುವ ದೃಶ್ಯ ಮಾಧ್ಯಮದ ಎದುರು ಪತ್ರಿಕೆಗಳ ಸುದ್ದಿಗಳು ತಂಗಳಾಗಿ ಬಿಟ್ಟಿರುತ್ತವೆ. ಇದನ್ನೇ ಉಣಬಡಿಸಿದರೆ ಓದುಗರು ಪತ್ರಿಕೆ ಯಾಕೆ ಓದಬೇಕು? ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸುವ ಜೊತೆಗೆ ಅದನ್ನು ವಿಶ್ಲೇಷಣೆ ಮಾಡಲೇಬೇಕಾಗುತ್ತದೆ. ಈ ವಿಶ್ಲೇಷಣೆಯು ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಇರಬೇಕು. ಇಂತಹ ಸುದ್ದಿಗಳನ್ನು ಹೆಚ್ಚು ಮಾಡುವ ಮೂಲಕವೇ ದೃಶ್ಯ ಮಾಧ್ಯಮವನ್ನು ಎದುರಿಸುವ ಮೂಲಕ ಹೊಸ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಪತ್ರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಇದನ್ನು ಪತ್ರಿಕೆಗಳು ಅರ್ಥ ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ವಿನ್ಯಾಸ, ತಲೆಬರಹದಲ್ಲಿ ಅಕ್ಷರಗಳ ಆಟ ಆಡುವುದೇ ದೊಡ್ಡ ಪತ್ರಿಕೋದ್ಯಮ ಎಂದು ಕೆಲವರು ಭಾವಿಸಿದ್ದಾರೆ. ಇದು ತಪ್ಪಲ್ಲ, ಇದೇ ಪತ್ರಿಕೆಯ ಜೀವಾಳ ಆಗಲು ಸಾಧ್ಯವಿಲ್ಲ. ಕೆಲವು ಪತ್ರಿಕೆಗಳು ತಮ್ಮ ಭಾಷೆಯ ಶೈಲಿಯನ್ನು ಬದಲಿಸಿ, ಟ್ಯಾಬ್ಲಾಯ್ಡ್ ಪತ್ರಿಕೆಗಳ ಶೈಲಿಯಲ್ಲಿ ಬರೆಯಲು ಆರಂಭಿಸಿವೆ. ಇದು ಕೂಡಾ ಆಪಾಯವೇ. ಜನರಲ್ಲಿ ಗಾಢ ನಂಬಿಕೆಯನ್ನು ಕೊಡದೇ ಅವರ ನಂಬಿಕೆಯನ್ನು ಶಿಥಿಲಗೊಳಿಸುವ ಈ ಪ್ರಯತ್ನ ಸಿನಿಕರನ್ನು ಹೆಚ್ಚು ಮಾಡಬಹುದೇ ಹೊರತು ಅದು ಜನಾಭಿಪ್ರಾಯ ರೂಪಿಸಲಾರದು.

ಒಂದು ಪತ್ರಿಕೆಯು ತನ್ನನ್ನು ತಾನು ಮರುರೂಪಿಸಿಕೊಂಡು ಹೊಸ ಭಾಷೆಯಲ್ಲಿ, ಹೊಸ ಶೈಲಿಯಲ್ಲಿ ಕಾಣಿಸಿಕೊಂಡರೆ ಜನ ಅದನ್ನು ಖಂಡಿತ ಸ್ವೀಕರಿಸುತ್ತಾರೆ. ಇದಕ್ಕೆ ಯಾರ ಅಡ್ಡಿಯೂ ಇಲ್ಲ. ಜಾಹಿರಾತು ಎನ್ನುವುದು ಕೂಡಾ ಅಡ್ಡಿಯಾಗುವುದಿಲ್ಲ. ಆದರೆ ಪತ್ರಿಕೆಗಳ ಸಂಪಾದಕರು ಯಾಕೋ ಮನಸ್ಸು ಮಾಡುತ್ತಿಲ್ಲ. ಮಾಲೀಕರು ಎಂದೂ ಅಡ್ಡಿ ಬರುವುದಿಲ್ಲ. ಕೆಲವು ಸುದ್ದಿಗಳಿಗೆ ಅಡ್ಡ ಬಂದರೂ ಈ ಬದಲಾವಣೆಗೆ ಖಂಡಿತ ಅಡ್ಡ ಬರಲಾರರು. ಪತ್ರಿಕೆಗಳು ಹೊಸ ಭಾಷೆಯಲ್ಲಿ ಜನರಿಗೆ ಹತ್ತಿರವಾಗುತ್ತಾ ಹೋದರೆ ಯಾವ ಮಾಲೀಕನಿಗೆ ಇಷ್ಟ ಆಗುವುದಿಲ್ಲ ಹೇಳಿ?

ಕೊರತೆ ಇರುವುದು, ಈ ಬಗ್ಗೆ ಪತ್ರಿಕೋದ್ಯಮದಲ್ಲಿ ಗಂಭೀರವಾಗಿ ಆಲೋಚಿಸುವ ಮನಸ್ಸುಗಳದ್ದು. ಎಲ್ಲರೂ ಒಂದು ಕಡೆ ಕುಳಿತು ಈ ಬಗ್ಗೆ ಯೋಚಿಸಲು ಆರಂಭಿಸುವುದು ಸಾಧ್ಯವಾಗಬೇಕು.

ಕುಶವಂತ್ ಸಿಂಗ್ ಇಲ್ಲ್‌ಸ್ಟ್ರೇಟೆಡ್ ವೀಕ್ಲಿ ಪತ್ರಿಕೆ ಸಂಪಾದಕರಾಗಿದ್ದಾಗ ಆ ಪತ್ರಿಕೆಯ ಸರ್ಕ್ಯೂಲೇಷನ್ ತುಂಬಾ ಏರಿತು. ಪ್ರೀತೀಶ್ ನಂದಿ ಸಂಪಾದಕರಾದಾಗ ಪತ್ರಿಕೆ ಸರ್ಕ್ಯೂಲೇಷನ್ ಇಳಿಯಿತು. ಆದರೆ ಪ್ರೀತೀಶ್ ನಂದಿ ಹೆಸರು ತುಂಬಾ ಏರಿತು. ಇದು ಸುಳ್ಳು, ಸತ್ಯವೋ ಗೊತ್ತಿಲ್ಲ. ಅದು ಏನೇ ಇರಲಿ, ಕನ್ನಡ ಪತ್ರಿಕೆಗಳ ಇವತ್ತಿನ ಅರ್ಭಟ ನೋಡಿದರೆ ಈ ಕಥೆ ನೆನಪಾಗುತ್ತದೆ.

ಯಾಕ್ರೀ, ಎಷ್ಟೊಂದು ಜಾಹಿರಾತು ನೀಡಿದ್ದೇವೆ, ಇಷ್ಟೇನಾ ಸುದ್ದಿ ನಮ್ಮದು?

– ಪರಶುರಾಮ ಕಲಾಲ್

ಜಾಹಿರಾತು ಇಲ್ಲದೇ ಯಾವುದೇ ಪತ್ರಿಕೆಗಳು ಬದಕಲಾರವು. ಒಂದು ಪತ್ರಿಕೆಗೆ ನಾವು ಕೊಡುವ 3 ರೂ. ಏನೇನೂ ಅಲ್ಲ. ಪತ್ರಿಕೆಯನ್ನು ಮನೆಗೆ ಮುಟ್ಟಿಸುವ ಹುಡುಗ, ವಿತರಕರಿಗೆ, ಸಾಗಾಣಿಕೆಗೆ ಅದರ ಎಲ್ಲಾ ಖರ್ಚು ಹೆಚ್ಚುಕಡಿಮೆ ಸಾಟಿಯಾಗಿ ಬಿಡುತ್ತದೆ. ಅಂದರೆ ಪತ್ರಿಕೆಯೊಂದು ಉಚಿತವಾಗಿಯೇ ಪತ್ರಿಕೆಯನ್ನು ವಿತರಿಸುತ್ತದೆ ಎಂದೇ ಅರ್ಥ.

ಕಳೆದ 20 ವರ್ಷಗಳಲ್ಲಿ ಎಲ್ಲದರ ಬೆಲೆಯೂ ಏರಿದೆ. ಪೆಟ್ರೋಲ್ ಅಂತೂ ಜ್ವರದಂತೆ ಏರುತ್ತಲೇ ಇದೆ. ಆದರೆ ದಿನ ಪತ್ರಿಕೆಗಳು ಮಾತ್ರ ಬೆಲೆ ಏರಿಸಿಲ್ಲ. ವಿಜಯ ಕರ್ನಾಟಕ ಆರಂಭವಾದಾಗ ಬೆಲೆ ಏರಿಕೆಯ ಸಮರದಲ್ಲಿ ಎಲ್ಲಾ ಪತ್ರಿಕೆಗಳು ಬೆಲೆ ಇಳಿಸಿಕೊಂಡು ಸ್ಪರ್ಧೆ ನಡೆಸಿದ ಇತಿಹಾಸವೂ ಇದೆ. ಈಗ ಸದ್ಯ ಯಾವ ಪತ್ರಿಕೆಯೂ ಬೆಲೆ ಏರಿಸುವ ಸಾಹಸಕ್ಕೆ ಇಳಿಯುತ್ತಿಲ್ಲ. ಕಾದು ನೋಡುತ್ತಾ ಇವೆ.

ಹೊಸ ಪತ್ರಿಕೆಗಳು ಕಾಲಿಡುತ್ತಾ ಇವೆ. ಅವುಗಳ ಸ್ವರೂಪ, ಬೆಲೆ ಎಲ್ಲವೂ ಮತ್ತೊಮ್ಮೆ ದರ ಸಮರ ನಡೆದು ನಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ.

ಪತ್ರಿಕೆಗಳಿಗೆ ಸರ್ಕಾರ ನೀಡಿರುವ ಜಾಹಿರಾತು ಕುರಿತು “ವರ್ತಮಾನ” ಪ್ರಕಟಿಸಿದೆ. ಇದರ ಬಗ್ಗೆ ಇನ್ನಷ್ಟು ಚರ್ಚೆ ಬೆಳೆಸಲು ಇದನ್ನು ಪೀಠಿಕೆಯಾಗಿ ಬರೆದಿರುವೆ.

ಪತ್ರಿಕೆಗಳಿಗೆ ಜಾಹಿರಾತು ಅನಿವಾರ್ಯ ಅವಲಂಬನೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಒಂದು ಪತ್ರಿಕೆಯು ಮುಖಪುಟದಲ್ಲಿ ಕಾಲುಪುಟ ಜಾಹಿರಾತಿಗೆ ಮಾತ್ರ ಜಾಗ ಮೀಸಲಿಟ್ಟಿತ್ತು. ಒತ್ತಡ ಬಂದಾಗಲೂ ಅದು ರಾಜೀ ಆಗಿರಲಿಲ್ಲ. ಬೇರೆ ಪತ್ರಿಕೆಗಳು ಈ ನಿಯಮ ಉಲ್ಲಂಘಿಸಿ, ಮುಖಪುಟದ ತುಂಬಾ ಜಾಹಿರಾತು ಹಾಕಲು ಆರಂಭಿಸಿದರೂ. ಈಗ ಆ ಪತ್ರಿಕೆಯೂ ಕೂಡಾ ಜಾಹಿರಾತಿಗೆ ಮೈ ತೆರೆದುಕೊಂಡು ಬಿಟ್ಟಿದೆ. ಕೆಲವು ಜಾಹಿರಾತುಗಳನ್ನು ಹಾಕಲು ಈ ಹಿಂದೆ ಒಪ್ಪುತ್ತಿರಲಿಲ್ಲ. ಈಗ ಯಾವ ಜಾಹಿರಾತು ಕೊಟ್ಟರೂ ನಡೆಯುತ್ತೇ ಎಂದೇ ಎಲ್ಲಾ ಜಾಹಿರಾತು ತೆಗೆದುಕೊಳ್ಳಲಾರಂಭಿಸಲಾಗಿದೆ. ಒಂದು ಕಡೆ ಸಿಂಗಲ್ ಕಾಲಂನಲ್ಲಿ “ಜಾಹಿರಾತುವಿನಲ್ಲಿ ಪ್ರಕಟವಾದ ವಿಷಯಕ್ಕೂ ಪತ್ರಿಕೆಗೂ ಯಾವುದೇ ಸಂಬಂಧವಿಲ್ಲ,” ಎಂದು ಪ್ರಕಟಿಸಿ ಈ ಸಂಕಷ್ಟದಿಂದ ಪಾರಾಗಿ ಕೈ ತೊಳೆದುಕೊಂಡಿವೆ.

ರಾಜ್ಯ ಸರ್ಕಾರ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳ ಜಾಹಿರಾತು ಕೊಡುವುದು ಗಣ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ, ಉದಾಹರಣೆಗೆ, ಅಣೆಕಟ್ಟು ಲೋಕಾರ್ಪಣೆ, ಮೈಸೂರು ದಸರಾ ಹಬ್ಬ ಇಂತಹ ಸಂದರ್ಭದಲ್ಲಿ ಜಾಹಿರಾತು ನೀಡುತ್ತದೆ.

ಈ ಜಾಹಿರಾತು ನೀಡುವಲ್ಲಿ ಕೆಲವು ನಿಬಂಧನೆಗಳು ಇವೆ. ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮಾತ್ರ ಬಳಸಬೇಕು ಎನ್ನುವುದು. ಆದರೆ ರಾಜ್ಯ ಸರ್ಕಾರ ಈ ಎಲ್ಲಾ ನಿಬಂಧನೆಗಳನ್ನು ಉಲ್ಲಂಘಿಸಿದೆ. ಬೇಕಾಬಿಟ್ಟಿ ಜಾಹಿರಾತು ನೀಡಿದೆ. ಮುಖ್ಯಮಂತ್ರಿ, ಸಚಿವರ ನಿಂತಿರುವ, ಕುಳಿತಿರುವ ಫೋಟೋಗಳನ್ನು ಹಾಕಿದೆ. ಈ ನಿಬಂಧನೆಗಳನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಎಲ್ಲರಿಗೂ ಜಾಹಿರಾತು ಬೇಕೇ ಬೇಕು.

ಇದು ಒಂದಾದರೆ ಮತ್ತೊಂದು ಸರ್ಕಾರಿ ಇಲಾಖೆಯ ಜಾಹಿರಾತುಗಳು. ಭೂಸ್ವಾಧೀನ ಪ್ರಕ್ರಿಯೆಯ ಜಾಹಿರಾತುಗಳಂತೂ ಎರಡು ಮೂರು ಫೇಜಿಗಳಷ್ಟು ಬರುತ್ತವೆ. ಇವೆಲ್ಲವೂ ಎಲ್ಲಾ ಎಡಿಸನ್ ದರದಲ್ಲಿ ಪ್ರಕಟವಾಗುತ್ತದೆ. ಸರ್ಕಾರಿ ಇಲಾಖೆಯ ಜಾಹಿರಾತು, ಅರೆ ಸರ್ಕಾರಿ ಇಲಾಖೆಯ ಜಾಹಿರಾತುಗಳನ್ನು ಎಲ್ಲಾ ಎಡಿಷನ್‌ನಲ್ಲೂ ಮುದ್ರಿಸಲಾಗುತ್ತದೆ. ಲೋಕಲ್ ಎಡಿಷನ್‌ನಲ್ಲಿ ಹಾಕಿ ಎಂದರೂ ಯಾವ ಪತ್ರಿಕೆಗಳು ಅದನ್ನು ಒಪ್ಪುವುದಿಲ್ಲ. ಜಾಹಿರಾತು ಮುಖ್ಯಸ್ಥರು ನೇರವಾಗಿಯೇ ಎಲ್ಲಾ ಎಡಿಷನ್ ಅಂತಾ ಹೇಳ್ರಿ, ಕೊಡಲಿಲ್ಲ ಅಂದರೆ ದಬಾಯಿಸಿ ಎಂದೇ ಹೇಳುತ್ತಾರೆ.

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

ಒಂದು ಉದಾಹರಣೆಯನ್ನು ಇಲ್ಲಿ ಹೇಳುತ್ತೇನೆ. ಪ್ರಾದೇಶಿಕ ಸಾರಿಗೆ ಇಲಾಖೆಯು ತನ್ನ ಒಂದು ಹಳೇಯ ಜೀಪನ್ನು ಹರಾಜು ಹಾಕಬೇಕಾಯಿತು. ಹರಾಜಿನಲ್ಲಿ ಜೀಪು 30 ಸಾವಿರ ರೂ.ಗೆ ಹೋದರೆ ಅದೇ ಹೆಚ್ಚು. ಆದರೆ ಈ ಜೀಪು ಹರಾಜು ಜಾಹಿರಾತಿಗೆ ನೀಡಿದ ಹಣ 60 ಸಾವಿರಕ್ಕೂ ಅಧಿಕ. ಎಲ್ಲಾ ಪತ್ರಿಕೆಗಳು ಈ ಜಾಹಿರಾತು ಪಡೆಯಲು ತಮ್ಮದೇ ಆದ ಮಾರ್ಗ ಅನುಸರಿಸುತ್ತವೆ. ಬಿಡಿ ಸುದ್ದಿಗಾರರು ಈ ಜಾಹಿರಾತು ಹಿಡಿಯಲು ಹರಸಾಹಸ ಮಾಡುತ್ತಾರೆ. ಕೆಲವರು ಸರ್ಕಾರಿ ಇಲಾಖೆಯ ಗುಮಾಸ್ತರಿಗೆ ಬರುವ ಕಮೀಷನ್‌ನಲ್ಲಿ ಸ್ವಲ್ಪಪಾಲು ನೀಡುತ್ತಾರೆ. ಹಾಗೇ ನೀಡುವಂತೆ ಜಾಹಿರಾತು ಮುಖ್ಯಸ್ಥರು ಹೇಳಿ ಕೊಡುವುದು ಉಂಟು.

ರಾಜ್ಯಮಟ್ಟದ ಲೋಕಲ್ ಪೇಜ್‌ನಲ್ಲಿ ರಾಜ್ಯಮಟ್ಟದ ಸರ್ಕಾರಿ ಜಾಹಿರಾತುಗಳನ್ನು ಹಾಕಲಾಗುತ್ತದೆ. ಇದು ಲೋಕಲ್ ಜಾಹಿರಾತು ಎಂಬ ಭ್ರಮೆ ಹುಟ್ಟಿಸಲಾಗುತ್ತದೆ. ಆದರೆ ಅದು ಬೇರೆ ಎಡಿಷನ್‌ನಲ್ಲೂ ಪುನರಾವರ್ತನೆಯಾಗಿರುತ್ತದೆ. ಎಲ್ಲಾ ಎಡಿಷನ್ ಪೇಜ್‌ಗೆ ಜಾಹಿರಾತು ಬಿಲ್ ನೀಡುವಾಗ ಸಲ್ಲಿಸಲಾಗುತ್ತದೆ.

ರಾಜ್ಯಮಟ್ಟದ ದಿನ ಪತ್ರಿಕೆಯ ಜಿಲ್ಲಾ ಪೇಜುಗಳ ಜಾಹಿರಾತುಗಳ ದರವೂ ಕೂಡಾ ಸ್ಪರ್ಧಾತ್ಮಕವಾಗಿರುತ್ತದೆ. ಜಾಹಿರಾತು ಪುರವಣಿಯಂತೂ 1 ಲಕ್ಷಕ್ಕೆ ನೀಡಲಾಗುತ್ತದೆ. ಎರಡು ಪೇಜ್ ಕಲರ್, ಎರಡು ಪೇಜ್ ಕಪ್ಪು ಬಿಳಪು. ಅದರಲ್ಲಿ ಒಂದು ಪುಟ ಜಾಹಿರಾತು ಕೊಟ್ಟವರ ಗುಣಗಾನಕ್ಕೆ ಮೀಸಲಿರುತ್ತದೆ. ಜನ್ಮದಿನದ ಜಾಹಿರಾತು ಪುರಾವಣಿಯಂತೂ ಲಿಮ್ಕಾ ದಾಖಲೆಯಾಗುವ ಮಟ್ಟಕ್ಕೆ ಮುಟ್ಟಿವೆ. ತಮ್ಮ ತಂದೆ ತೀರಿಕೊಂಡು 12 ವರ್ಷಗಳ ತರುವಾಯ ಒಬ್ಬ ವ್ಯಕ್ತಿಯು ತನ್ನ ತಂದೆಯ ತಿಥಿಗೆ 24 ಪುಟಗಳ ಜಾಹಿರಾತು ನೀಡಿ ವಿಕ್ರಮ ಸ್ಥಾಪಿಸಿದನು. ಮತ್ತೊಬ್ಬರು ತಮ್ಮ ಜನ್ಮದಿನಕ್ಕಾಗಿ 63 ಪುಟಗಳ ಜಾಹಿರಾತು ಪುರವಣಿ ತಂದು ಲಿಮ್ಕಾ ದಾಖಲೆಗೆ ಹೆಸರು ಕಳಿಸಿದ್ದಾರೆ. ಇಲ್ಲಿಗೆ ಬಂದು ನಿಂತಿದೆ ಜಾಹಿರಾತು. ಜಾಹಿರಾತು ಕೊಡುವ ಶಿಕ್ಷಣ ಸಂಸ್ಥೆ, ರಾಜಕಾರಣಿ, ಉದ್ಯಮಿಯ ಬಗ್ಗೆ ವರ್ಷಪೂರ್ತಿ ಅವರ ಫೋಟೋ ಛಾಪಿಸಿ, ಅವರ ಕಾರ್ಯಕ್ರಮದ ವರದಿ, ಕರೆ ನೀಡಿದ ಸುದ್ದಿ ಬರೆಯುತ್ತಾ ಇರಬೇಕು. ಯಾಕ್ರೀ ಎಷ್ಟೊಂದು ಜಾಹಿರಾತು ನೀಡಿದ್ದೇವೆ. ಇಷ್ಟೇನಾ ಸುದ್ದಿ ನಮ್ಮದು. ನಮ್ಮ ಫೋಟೋ ಬಂದಿಲ್ಲ ಯಾಕ್ರಿ ಎಂದು ಕೇಳುವ ಅಧಿಕಾರ ಅವರಿಗೆ ಇದ್ದೇ ಇರುತ್ತದೆ. ಅವರನ್ನು ಸಮಾಧಾನ ಪಡೆಸಲೇಬೇಕು. ಈ ದೊಡ್ಡ ಪತ್ರಿಕೆಗಳ ಜಾಹಿರಾತು ಭರಾಟೆಯಲ್ಲಿ ಸ್ಥಳೀಯ ದಿನ ಪತ್ರಿಕೆಗಳು ಉಸಿರಾಡಲು ಆಗದೇ ಉಬ್ಬಸ ರೋಗಕ್ಕೆ ತುತ್ತಾಗಿ ಬಿಟ್ಟಿವೆ. ಕೆಲವೊಂದು ಸತ್ತೇ ಹೋಗಿವೆ.