Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು?

– ಬಿ. ಶ್ರೀಪಾದ ಭಟ್

ನಮ್ಮ ಡಾ.ರಾಜ್ ತೀರಿಕೊಂಡಾಗ ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ’ಎನ್‌ಟಿಆರ್, ಎಂಜಿಆರ್, ಎಎನ್‌ಆರ್, ಶಿವಾಜಿ ಗಣೇಶನ್ ಅವರನ್ನು ಪ್ರಸ್ತಾಪಿಸದೆ ಡಾ.ರಾಜ್ ಕುರಿತು ಮಾತನಾಡಲು ಸಾಧ್ಯವಿಲ್ಲ’ ಎಂದು ನಾನು ಹೇಳಿದ್ದು ಮತ್ತೆ ನೆನಪಾಗಿದ್ದು ಮೊನ್ನೆ ಬಾಲು ಮಹೇಂದ್ರ ತೀರಿಕೊಂಡ ಸುದ್ದಿ ಬಂದಾಗ. balumahendraಹೌದು ಕೆ.ಬಾಲಚಂದರ್, ಭಾರತೀರಾಜ, ಭಾಗ್ಯರಾಜ ಇವರನ್ನು ಪ್ರಸ್ತಾಪಿಸದೆ ಬಾಲು ಮಹೇಂದ್ರ ಅವರನ್ನು ಕುರಿತು ಮಾತನಾಡಲು ಸಾಧ್ಯವಿಲ್ಲ. ಈ ನಾಲ್ಕೂ ’ಭಾ’ ಗಳು ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಇಡೀ ತಮಿಳು ಚಿತ್ರರಂಗವನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆದಿದ್ದರು. ಕೇವಲ ಸಿನಿಮಾ ನಿರ್ದೇಶನವಷ್ಟೇ ಅಲ್ಲ ಜೊತೆಜೊತೆಗೆ ಸೃಜನಶೀಲತೆಯನ್ನು, ಹೊಸ ದಾರಿಗಳನ್ನು, ನಿರಂತರ ಪ್ರಯೋಗಗಳನ್ನು ಕಟ್ಟಿದರು. ಆ ದಶಕಗಳ, ಈ ನಾಲ್ಕು ’ಭಾ’ಗಳ Legacy ಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಇಂದು ತಮ್ಮ ಹೆಗಲ ಮೇಲೆ ಹೊತ್ತು ನಡೆಯುತ್ತಿರುವುವವರು ಸಸಿಕುಮಾರ್, ಪಾಂಡಿರಾಜ್, ಬಾಲಾಜಿ ಸಕ್ತಿವೇಲು, ಬಾಲಾ, ಛೇರನ್, ವೆಟ್ರಿಮಾರನ್, ಮಿಷ್ಕಿನ್, ಸಮುದ್ರಖಣಿ, ಪ್ರಭು ಸಾಲೋಮನ್, ಸರ್ಕುನಮ್, ಸುಸೀನ್‌ತಿರನ್, ವಸಂತಬಾಲನ್ ರಂತಹ ಹೊಸ ತಲೆಮಾರಿನ ನಿರ್ದೇಶಕರು ಮತ್ತು ನಟರು. ಈ ಮಟ್ಟದ ಹೊಸ ಆಯಾಮಗಳನ್ನು, ನಿರಂತರವಾದ ಸೃಜನಶೀಲತೆಯ ಫಸಲನ್ನು, ಅಗಣಿತ ಸಾಧ್ಯತೆಗಳನ್ನು, ಎಂದಿಗೂ ಬತ್ತದ ಸಿಹಿನೀರಿನ ಬುಗ್ಗೆಗಳನ್ನು ಕಟ್ಟಲು ಸಾಧ್ಯವಾಗಿದ್ದು ತಮಿಳು ಚಿತ್ರರಂಗಕ್ಕೆ ಮಾತ್ರವೇ ಹೊರತು ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ಭಾಷೆಯ ಚಿತ್ರರಂಗಕ್ಕೂ ಇದು ಸಾಧ್ಯವಾಗಿಲ್ಲ ಎಂದು ನಾನು ಅತ್ಮವಿಶ್ವಾಸದಿಂದ ಹೇಳುತ್ತೇನೆ. ನೆನಪಿರಲಿ ಮೇಲ್ಕಾಣಸಿದ ಹೊಸ ತಲೆಮಾರಿನ ನಿರ್ದೇಶಕ, ನಟರಾರೂ ಮೇಲ್ಜಾತಿಗೆ ಸೇರಿದವರಲ್ಲ. ಹಿಂದುಳಿದ, ತಳಸಮುದಾಯಗಳಿಂದ ಬಂದವರು.

ಜನಪ್ರಿಯ ಕವಿತೆ ’ಏಳು ಸುತ್ತಿನ ಕೋಟೆ’ಯಲ್ಲಿ ಇದ್ದಕಿದ್ದ ಹಾಗೆ ಕವಿ ’ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು’ ಎಂದು ಪ್ರಶ್ನಿಸಿ ಓದುಗನನ್ನು ಚಕಿತಗೊಳಿಸುತ್ತಾನೆ. ಹಾಗೆಯೇ ಈ ಸೃಜನಶೀಲತೆ, ಸಮಸ್ಯೆಯ ಆಳವನ್ನು ತಲಪುವ ಸೂಕ್ಷ್ಮತೆ ಮತ್ತು ಕುಶಲತೆ, ವ್ಯಕ್ತಿಗತ ನೆಲೆಯಲ್ಲಿನ ಮನುಷ್ಯನ ಸಣ್ಣತನದ ನಡುವಳಿಕೆಗಳಿಂದ ಶುರುವಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆವರೆಗೆ, ಮದ್ರಾಸ್, ಮಧುರೈ, ಕೊಯಮತ್ತೂರಿನಿಂದ ತಮಿಳು ನಾಡಿನ ಸಣ್ಣ, ಸಣ್ಣ ಹಳ್ಳಿಗಳವರೆಗೆ ಸಮೂಹ ಪ್ರಜ್ಞೆಯ ಈ ನಿರಂತರ ಪ್ರಯಾಣ ಇದೆಲ್ಲಾ ತಮಿಳು ಚಿತ್ರರಂಗಕ್ಕೆ ದಕ್ಕಿದ ಗಳಿಗೆ ಯಾವಾಗ?

ಎಪ್ತತ್ತರ ದಶಕ ಆರಂಭವಾಗುವಷ್ಟರಲ್ಲಿ ಶಿವಾಜಿ ಗಣೇಶನ್‌ರವರ ಹೊಕ್ಕಳಿನಿಂದ ಧ್ವನಿಯನ್ನು ತೆಗೆದು ಇಡೀ ಪರದೆಯ ಮೇಲೆ ಆಕ್ರಮಿಸುವಂತಹ ನಟನೆಯ ಶೈಲಿ ಕ್ರಮೇಣ ಮೂಲೆ ಗುಂಪಾಗತೊಡಗಿತು. ಕಾದಲ್ ಮನ್ನನ್ ಜೆಮಿನಿ ಗಣೇಶನ್‌ಗೆ ಏರುತ್ತಿದ್ದ ವಯಸ್ಸು ಪ್ರೇಮಿಯಾಗಲು ನಿರಾಕರಿಸುತ್ತಿತ್ತು. ಇನ್ನು ಎಂಜಿಆರ್‌ಗೆ ಸ್ವತಃ ಸಿನಿಮಾರಂಗದಲ್ಲಿ ಆಸಕ್ತಿ ಕಡಿಮೆಯಾಗತೊಡಗಿ ರಾಜಕೀಯದ ಕಡೆಗೆ ಮುಖ ಮಾಡಿದ್ದರು. ಒಟ್ಟಾರೆ ಇಡೀ ತಮಿಳು ಚಿತ್ರರಂಗ ಆಯಾಸದಿಂದ ಬಸವಳಿದಿತ್ತು. ಹೊಸ ಘಮಲಿಗೆ, ಹೊಸದಾದ ಅಭಿವ್ಯಕ್ತಿಯ ಶೈಲಿಗೆ, ತಂಗಾಳಿಯಂತಹ ದೃಶ್ಯಕಾವ್ಯಕ್ಕೆ, ಸಂಪೂರ್ಣ ಹೊಸ ಚಿಗುರಿಗೆ, ಸಾಧ್ಯವಾದರೆ ಸೈರಿಸಿಕೊಳ್ಳಬಲ್ಲ ತಿಕ್ಕಲುತನಕ್ಕೆ ತಮಿಳು ಪ್ರೇಕ್ಷಕರು ಕಾಯುತ್ತಿದ್ದರು. ಅಂತಹದೇ ಒಂದು ದಿನ ಎಪ್ಪತ್ತರ ದಶಕದ ಆರಂಭದಲ್ಲಿ ಕೆ.ಬಾಲಚಂದರ್ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶಿಸಿದ ’ ಅರಂಗೇಟ್ರಂ’ ಸಿನಿಮಾ ಬಿಡುಗಡೆಯಾಯಿತು. arangetramಎಂಟು ಜನ ಅಣ್ಣ, ತಂಗಿಯರ ಕರ್ಮಠ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನಾಯಕಿ ಇಡೀ ಸಂಸಾರದ ಜವಬ್ದಾರಿಯನ್ನು ಹೊತ್ತುಕೊಂಡು ಕಡೆಗೆ ವೇಶ್ಯಾವೃತ್ತಿಗೆ ಸೇರಿಕೊಳ್ಳುತ್ತಾಳೆ. ತನ್ನ ವೇಶ್ಯಾವೃತ್ತಿಯಿಂದ ಗಳಿಸಿದ ಹಣದಿಂದ ಅಣ್ಣ, ತಂಗಿಯರ ಮದುವೆ ಮಾಡುತ್ತಾಳೆ. ಹೀಗೆ ಸಂಪೂರ್ಣ ಹೊಸಬರನ್ನು ಹಾಕಿಕೊಂಡು ಮಾಡಿದ ’ಅರಂಗೇಟ್ರಂ’ ಸಿನಿಮಾ ಆ ಕಾಲದಲ್ಲಿ ಈ ವಿವಾದಾತ್ಮಕ ಕಥಾವಸ್ತುವಿನಿಂದಾಗಿ, ಕೆಲವು ಬೋಲ್ಡ್ ದೃಶ್ಯಗಳಿಂದಾಗಿ, ಹರಿತ ಸಂಭಾಷಣೆಗಳಿಂದಾಗಿ ತಮಿಳುನಾಡಿನಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆದರೆ ಬಾಕ್ಸ್ ಆಫೀಸಿನಲ್ಲಿ ದುಡ್ಡನ್ನೂ ಮಾಡಿತು. ಪ್ರಶಸ್ತಿಯನ್ನೂ ಗಳಿಸಿತು. ಎಲ್ಲಕ್ಕಿಂತಲೂ ಮಿಗಿಲಾಗಿ ನಾಯಕಿ ಪ್ರಧಾನ ಸಿನಿಮಾದ ಹೊಸ ಅಲೆಯನ್ನೇ ಮರುಸೃಷ್ಟಿಸಿತ್ತು. ’ಅರಂಗೇಟ್ರಂ’ನ ನಾಯಕಿ ಪ್ರೇಮಲೀಲ ಎಲ್ಲಿಯೂ ’ಶರಪಂಜರ’ದ ಕಲ್ಪನಾಳಂತೆ ನಾನು ಕಳಕೊಂಡೆ, ನಾನು ಕಳಕೊಂಡೆ ಎಂದು ಹಿಸ್ಟಾರಿಕ್ ಆಗಿ ಚೀರಾಡುವುದಿಲ್ಲ, ಬದಲಾಗಿ ಘನತೆಯಿಂದ ಸಮಾಜವನ್ನು ಎದುರಿಸುತ್ತಾಳೆ. (ಬಾಲಚಂದರ್ ಏತಕ್ಕೆ ಪುಟ್ಟಣ್ಣ ಕಣಗಾಲರಿಗಿಂತ ವೈಚಾರಿವಾಗಿ, ಸಾಮಾಜಿಕವಾಗಿ ನೂರಾರು ಮೈಲಿ ಮುಂದಿದ್ದರು ಎನ್ನುವುದಕ್ಕೆ ಇದು ಒಂದು ಸಣ್ಣ ಉದಾಹರಣೆ. ಇಂತಹ ನೂರಾರು ಉದಾಹರಣೆಗಳಿವೆ.)

1974 ರಲ್ಲಿ ಕೆ.ಬಾಲಚಂದರ್ ಮತ್ತೆ ಕತೆ ಬರೆದು “ಅವಳ್ ಒರು ತೊಡರ್ ಕಥೈ” ಎನ್ನುವ ಮತ್ತೊಂದು ನಾಯಕಿ ಪ್ರಧಾನ ಸಿನಿಮಾ ನಿರ್ದೇಶಿಸಿದರು. ಇದು ಆ ಕಾಲಕ್ಕೆ ಸೂಪರ್ ಹಿಟ್ ಸಿನಿಮಾ. ನಟಿ ಸುಜಾತಗೆ ಹೊಸ ಇಮೇಜನ್ನು, ಜನಪ್ರಿಯತೆಯನ್ನು ತಂದುಕೊಟ್ಟ, ಕಮಲ್‌ಹಾಸನ್ ಮತ್ತು Avaloruthodarರಜನೀಕಾಂತ್‌ಗೆ ನಟನೆಯ ಆಭಿವ್ಯಕ್ತಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಈ ಸಿನಿಮಾದಲ್ಲಿ ಮತ್ತೊಮ್ಮೆ ನಾಯಕಿ ತನ್ನ ಕುಟುಂಬಕ್ಕಾಗಿ ತನ್ನ ವಯುಕ್ತಿಕ ಜೀವನವನ್ನೇ ಮೀಸಲಿಡುತ್ತಾಳೆ. ಅಲ್ಲದೆ Middle class working women ನ ದೈನಂದಿನ ಬದುಕನ್ನು ವಿಭಿನ್ನ ಕೋನಗಳಿಂದ, ಹೊಸ ನಿರೂಪಣೆಯ ಮೂಲಕ ಮೊಟ್ಟ ಮೊದಲ ಬಾರಿಗೆ ಪ್ರೇಕ್ಷಕ ನೋಡುತ್ತಾನೆ. (ಅರವತ್ತರ ದಶಕದಲ್ಲಿ ಮೇಘಾ ಡಾಕೆ ಡಾಗೆ ಸಿನಿಮಾದ ಮೂಲಕ ರುತ್ವಿಕ್ ಘಟಕ್ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದರು, ಹಿಂದಿಯಲ್ಲಿ ಅದೇ ವೇಳೆ ಬಸು ಚಟರ್ಜಿ, ಗುಲ್ಜಾರ್, ಹೃಶಿಕೇಶ್ ಮುಖರ್ಜಿ, ಇದೇ ಮಾದರಿಯಲ್ಲಿ ಬ್ರಿಜ್ ಸಿನಿಮಾಗಳ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದರು.) ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಈ ಸಿನಿಮಾ ನಂತರ ತೆಲುಗು, ಕನ್ನಡ (ಬೆಂಕಿಯಲ್ಲಿ ಅರಳಿದ ಹೂ), ಹಿಂದಿಗೂ ಸಹ ರೀಮೇಕ್ ಆಯಿತು.

ನಂತರ ಕೆ.ಬಾಲಚಂದರ್ ಬರೆದು ನಿರ್ದೇಶಿಸಿದ “ಅಪೂರ್ವ ರಾಗಂಗಳ್” ಸಿನಿಮಾ ತಮಿಳು ಸಿನಿಮಾದಲ್ಲಿ ಹೊಸ ಮೆಲೋಡಿಯನ್ನೇ ಬರೆಯಿತು. ಕಿರಿಯ ವಯಸ್ಸಿನ ಕಮಲ್ ಹಾಸನ್ ತನಗಿಂತ ಹಿರಿಯಳಾದ ಶ್ರೀವಿದ್ಯಾಳನ್ನು ಪ್ರೇಮಿಸಿದರೆ, ಹಿರಿಯ ವಯಸ್ಸಿನ, ಕಮಲ್‌ನ ತಂದೆ (ಹೆಸರು ಮರೆತು ಹೋಗಿದೆ) ಕಿರಿಯ ವಯಸ್ಸಿನ ಶ್ರೀವಿದ್ಯಾಳ ಮಗಳು ಜಯಸುಧಾಳಲ್ಲಿ ಪ್ರೀತಿ ಹುಡುಕುತ್ತಾನೆ. ಇಲ್ಲಿ ಶ್ರೀವಿದ್ಯಾ ವಿವಾಹಕ್ಕಿಂತಲೂ ಮೊದಲು ಜಯಸುಧಾಳಿಗೆ ಜನ್ಮ ನೀಡಿರುತ್ತಾಳೆ. ಈ ಎಲ್ಲಾ ಸಂಕೀರ್ಣ ಸಂಬಂಧಗಳು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ ಎನ್ನುವಷ್ಟರಲ್ಲಿ ಶ್ರೀವಿದ್ಯಾಳ ಹಳೆಯ ಪ್ರೇಮಿ ರಜನೀಕಾಂತ್ ರಂಗ ಪ್ರವೇಶ ಮಾಡುತ್ತಾನೆ. ಆ ಕಾಲಕ್ಕೆ ಇದು ಎಷ್ಟೊಂದು ವಿಲಕ್ಷಣ ಕತೆಯೆಂದರೆ ಎಲ್ಲರೂ ನಿರ್ದೇಶಕನ ವಿಭಿನ್ನ ನಿರೂಪಣೆಗೆ ಮಾರು ಹೋಗುತ್ತಾರೆ. ಕೇವಲ ಕ್ಯಾಮಾರಾದಿಂದ ಮಾತ್ರ ಸಿನಿಮಾ ಸಾಧ್ಯವಿಲ್ಲ, ಬಿಗಿಯಾದ ಕತೆ, ಚಿತ್ರಕತೆ ಒಂದು ಯಶಸ್ವೀ ಸಿನಿಮಾಕ್ಕೆ ಬೆನ್ನೆಲೆಬಾಗಿರುತ್ತವೆ ಎಂದು ಬಾಲಚಂದರ್ ’ಅಪೂರ್ವ ರಾಗಂಗಳ್’ ಮೂಲಕ ತೋರಿಸಿಕೊಟ್ಟರು. ಇದೂ ಸಹ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿತು.

ಇದೇ ವೇಳೆ ಮೂವತ್ತರ ಹರೆಯದ, ಕಡು ಕಪ್ಪು ಬಣ್ಣದ ಯುವ ನಿರ್ದೇಶಕ ಭಾರತೀ ರಾಜ “16 ವಯದಿನಿಲೆ” ಸಿನಿಮಾದ ಮೂಲಕ ತಮಿಳು ಚಿತ್ರರಂಗದಲ್ಲಿ ಗ್ರಾಮೀಣ ಹಿನ್ನೆಲೆಯ ಸಿನಿಮಾಗಳಿಗೆ ಅದುವರೆಗೆ ಇದ್ದಂತಹ ಸಾಂಪ್ರದಾಯಿಕ ಚೌಕಟ್ಟನ್ನೇ 16-vayathinelaeಮುರಿದು ಹಾಕಿ ಮತ್ತೊಂದು ಮಗ್ಗುಲನ್ನೇ ತೆರೆದಿಟ್ಟರು. ಆಧುನಿಕ ತಮಿಳು ಚಿತ್ರರಂಗದ ಗತಿಯನ್ನೇ ಬದಲಿಸಿದ ಸಿನಿಮಾವೆಂದೇ “16 ವಯದಿನಿಲೆ” ಚಿತ್ರವನ್ನು ನೆನೆಸಿಕೊಳ್ಳುತ್ತಾರೆ. ಇದು ಶ್ರೀದೇವಿಗೆ ನಾಯಕಿಯ ಪಾತ್ರದ ಮೂಲಕ ಜನಪ್ರಿಯತೆಯನ್ನು ತಂದು ಕೊಟ್ಟರೆ ಕಮಲ್ ಮತ್ತು ರಜನಿಯ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿದ್ದದ್ದು ಭಾರತೀರಾಜ.

ಇದೇ ಸಂದರ್ಭದಲ್ಲಿ ಪುಣೆ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಸಿನಿಮಾಟಾಗ್ರಫಿಯಲ್ಲಿ ಶಿಕ್ಷಣ ಪಡೆದು ಹಲವಾರು ಮಲಯಾಳಿ ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡಿ ಪ್ರಶಸ್ತಿಯನ್ನು ಗಳಿಸಿದ ಬಾಲು ಮಹೇಂದ್ರ ಕನ್ನಡದಲ್ಲಿ ತಮ್ಮ ಮೊಟ್ಟಮೊದಲ ಸಿನಿಮಾ ’ಕೋಕಿಲಾ’ ನಿರ್ದೇಶಿಸುವುದರ ಮೂಲಕ, ನಂತರ ತಮಿಳು ಸಿನೆಮಾ ’ಮೂನ್ರು ಮಲರಂ’ದ ಛಾಯಾಗ್ರಹಣದ ಮೂಲಕ ಗಮನ ಸೆಳೆಯುತ್ತಾರೆ. ನಂತರ ಶೋಭಾ ಅಭಿನಯದ ’ಅದಿಯಾದ ಕೋಲೈಂಗಳ್’ ನಿರ್ದೇಶನದ ಮೂಲಕ ತಮಿಳು ಚಿತ್ರರಂಗದ ನಿರ್ದೇಶಕರಾಗುವ ಬಾಲು ಮಹೇಂದ್ರ ನಂತರ ನಿರ್ದೇಶಿಸಿದ ” ಮೂನ್ರಾಂ ಪಿರ್ರೈ” ಚಿತ್ರ ಸೂಪರ್ ಹಿಟ್ ಆಗುತ್ತದೆ.

ನಂತರ ಎಂಬತ್ತರ ದಶಕದ ಆರಂಭದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ತೆರೆಕಂಡ “ವರುಮೈ ನೇರಂ ಸಿಗಪ್ಪು” ಸಿನಿಮಾ ವಿದ್ಯಾವಂತ, ನಿರುದ್ಯೋಗ ಯುವಕರ ಕತೆಯನ್ನು ಪರಿಣಾಮಕಾರಿಯಾಗಿ, ಬಿಗಿಯಾದ ಚಿತ್ರಕತೆಯಿಂದ ನಿರೂಪಿಸುತ್ತದೆ.

ಇದೇ ವೇಳೆ ಬಿಡುಗಡೆಗೊಂಡ ಕೆ.ಬಾಲಚಂದರ್ ನಿರ್ದೇಶನದ ” ತಣ್ಣೀರ್ ತಣ್ಣೀರ್” ಸಿನಿಮಾ ಮತ್ತೊಂದು Path breaking ಚಿತ್ರ. ಬರ, ನೀರಿನ ಅಭಾವ, ರಾಜಕೀಯ ಭ್ರಷ್ಟತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುವ ಈ ಸಿನಿಮಾದ ಮೂಲಕ ಬಾಲಚಂದರ್ ತಮ್ಮ ದಾರಿಯನ್ನೇ ಬದಲಿಸಿ ಸಾಮಾಜಿಕ, Thanneer-Thanneer-Sarithaರಾಜಕೀಯ ಶೋಷಣೆಯ ಕತೆಗೆ ಹೊರಳಿಕೊಂಡರು. ಭ್ರಮಾತ್ಮಕ ಮನೋರಂಜನೆಯ ಜನಪ್ರಿಯ ರಂಗವನ್ನು ಕೈಬಿಟ್ಟು ಪ್ರಯೋಗಾತ್ಮಕ ಸಾಮಾಜಿಕ ನೆಲೆಗೆ ದಾಪುಗಾಲಿನ ಈ ನಡಿಗೆ ಕೆ.ಬಾಲಚಂದರ್‌ನಂತಹ ಕ್ರಿಯಾಶೀಲ ನಿರ್ದೇಶಕನಿಗೆ ಮಾತ್ರ ಸಾಧ್ಯವೇನೋ. ಸಿನಿಮಾವೆಂದರೆ ಕೇವಲ ತಂತ್ರಜ್ಞಾನದ ಹೆಗ್ಗಳಿಕೆಯಲ್ಲ, ಅದು ಮನುಕುಲದ ಪ್ರಾಮಾಣಿಕ ಇತಿಹಾಸವೂ ಹೌದು ಎಂದು ಈ ಸಿನಿಮಾದ ಮೂಲಕ ನಮಗೆ ನೆನಪಿಸಿಕೊಟ್ಟವರು ಬಾಲಚಂದರ್. ಇನ್ನು ಈ “ತಣ್ಣೀರ್ ತಣ್ಣೀರ್” ಸಿನಿಮಾದ ನಾಯಕಿ ಸರಿತ, Marvelous. ಕಪ್ಪು ಬಣ್ಣದ ಸರಿತಾಳ ಮನೋಜ್ಞ ಅಭಿನಯ ಮರೆಯಲು ಸಾಧ್ಯವೇ ಇಲ್ಲ. ಜೀವಮಾನದ ಶ್ರೇಷ್ಠ ಅಭಿನಯ ಕೊಟ್ಟ ಸರಿತಾಳಿಗೆ ಸ್ವಲ್ಪದರಲ್ಲಿಯೇ ರಾಷ್ಟ್ರಪ್ರಶಸ್ತಿ ತಪ್ಪಿತು. ಆದರೆ ಸರಿತ ಸಿನಿಮಾ ರಸಿಕರ ಮನಗೆದ್ದಿದ್ದಕ್ಕೆ ಪುರಾವೆ ಈ “ತಣ್ಣೀರ್ ತಣ್ಣೀರ್”ಚಿತ್ರದಲ್ಲಿನ ಅಭಿನಯ.

ನಂತರ ಕೆ.ಬಾಲಚಂದರ್ ನಿರ್ದೇಶನದ “ಅಚ್ಚಮಿಲ್ಲೈ ಅಚ್ಚಮಿಲ್ಲೈ” ಸಿನಿಮಾ ಕೂಡ ರಾಜಕೀಯ ಹಿನ್ನೆಲೆಯಲ್ಲಿ ವಯುಕ್ತಿಕ ಬದುಕಿನ ಪಲ್ಲಟಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಮತ್ತೊಮ್ಮೆ ಸರಿತ ಅತ್ಯುತ್ತಮವಾಗಿ ಅಭಿನಯಿಸಿದ್ದಳು.

ಎಂಬತ್ತರ ದಶಕದ ಮಧ್ಯಭಾಗದಲ್ಲಿ ತೆರೆಕಂಡ ಭಾರತೀರಾಜ ನಿರ್ದೇಶನದ “ಅಲೈಗಳ್ ಓವದಿಲ್ಲೈ”, “ಮಣ್ ವಾಸನೈ” ಸಿನಿಮಾಗಳು ಗಟ್ಟಿಯಾದ ಕತೆ, ಚಿತ್ರಕತೆ ಮತ್ತು ಹೊಸ ಬಗೆಯ ನಿರೂಪಣೆಯ ಮೂಲಕ ಯಶಸ್ಸನ್ನು ಸಾಧಿಸಿದರೆ, ಭಾರತೀರಾಜ ನಿರ್ದೇಶನದ “ವೇದಂ ಪುದಿದು” ಸಿನಿಮಾ ಜಾತೀಯ ಸಮಾಜವನ್ನು ನೇರವಾಗಿ, ನಿರ್ಭಿಡೆಯಿಂದ ಟೀಕಿಸುತ್ತದೆ. ಈ ಸಿನಿಮಾದಲ್ಲಿ ಬ್ರಾಹ್ಮಣರ ಕರ್ಮಠತನವನ್ನು, ಜಾತಿವಾದವನ್ನು ಟೀಕಿಸುವ ಕಣ್ಣನ್‌ರವರ ಸಂಭಾಷಣೆ ದೊಡ್ಡ ಹೈಲೈಟ್.

ಇದೇ ಸಂದರ್ಭದಲ್ಲಿ ತಮಿಳು ಚಿತ್ರರಂಗ ಮತ್ತೊಮ್ಮೆ ತನ್ನ ಹಳೆಯ ಕಮರ್ಶಿಯಲ್ ಜಾಳು ಜಾಳು ಹಾದಿಗೆ ಜಾರುತ್ತಿದೆ ಎನ್ನುವಾಗ, Mudhal-Mariyadhaiಭಾರತೀರಾಜ ನಿರ್ದೇಶನದ “ಮೊದಲ್ ಮರ್ಯಾದೈ” ಸಿನಿಮಾ ಮತ್ತೊಮ್ಮೆ ಗ್ರಾಮೀಣ ಸಮಾಜವನ್ನು ಲವಲವಿಕೆಯಿಂದ, ಚೇತೋಹಾರಿಯಾಗಿ ನಮ್ಮನ್ನು ಖುಷಿಗೊಳಿಸುತ್ತದೆ. “ಮೊದಲ್ ಮರ್ಯಾದೈ” ಚಿತ್ರದ ಮೂಲಕ ರಾಧ ಮತ್ತು ಶಿವಾಜಿ ಗಣೇಶನ್ ಅವರು ತಮಗೆ ಅನೀರೀಕ್ಷಿತವಾಗಿ ದೊರೆತ ವಿಭಿನ್ನವಾದ, ಸತ್ವಶಾಲಿಯಾದ ಹೊಸ ಇಮೇಜ್‌ನಲ್ಲಿ ಅತ್ಯಂತ ಸರಳವಾಗಿ, ಸಂಯಮವಾಗಿ ಮತ್ತು ಪರಿಣಾಮಾಕಾರಿಯಾಗಿ ನಟಿಸಿರುವುದು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಇಂದಿಗೂ ಇವರಿಬ್ಬರ ಜೋಡಿ ಮನಸ್ಸಿಗೆ ಅಹ್ಲಾದವನ್ನುಂಟು ಮಾಡುವುದಂತೂ ನಿಜ.

ಇದಿಷ್ಟೂ ಕೆಲವು ಉದಾಹರಣೆಗಳು ಮಾತ್ರ. ಇನ್ನೂ ಹೆಸರಿಸಬೇಕಾದ ಹಲವಾರು ಸಿನಿಮಾಗಳಿವೆ.

ಈ “ಭಾ” ಗಳ ಉತ್ತರಾಧಿಕಾರಿಗಳಾಗಿ ತಮಿಳು ಸಿನಿಮಾದ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಮುಂದುವರೆಸುತ್ತಿರುವವರು ಸಸಿಕುಮಾರ್ (ಸುಬ್ರಮಣ್ಯಪುರಂ), ಪಾಂಡಿರಾಜ್ (ವಂಶಮ್, ಮರಿನಾ), ಬಾಲಾಜಿ ಸಕ್ತಿವೇಲು (ಕಾದಲ್), ಬಾಲಾ (ಸೇತು, ನಾನ್ ಕಡವಳ್, ಪಿತಾಮಗನ್), ಛೇರನ್ (ಆಟೋಗ್ರಾಫ್, ಭಾರತಿ ಕಣ್ಣಮ್ಮ, ಪೋರ್ಕಾಲಂ, ಪಾಂಡವರ್ ಭೂಮಿ), ವೆಟ್ರಿಮಾರನ್ (ಆಡುಕುಳ್ಂ), ಮಿಷ್ಕಿನ್ (ಯುದ್ಧ್ಂ ಸೆಯ್ಯಿ, ಅಂಜಾತೆ), ಸಮುದ್ರಖಣಿ (ನಾಡೋಡಿಗಳ್, ಪೋರಾಲಿ), ಪ್ರಭು ಸಾಲೋಮನ್ (ಮೈನಾ), ಸರ್ಕುನಮ್ (ವಾಗೈ ಸುಡವ), ಸುಸೀನ್‌ತಿರನ್ (ಅಜಗಿರಿಸ್ವಾಮಿಯಿನ್ ಕುದರೈ), ವಸಂತಬಾಲನ್ (ಅಂಗಡಿ ತೆರು).

ಕ್ಯಾಮರಾವೇ ಸಿನಿಮಾ ಮಾಡುವಂತಿದ್ದರೆ ಈ ಕಾಲಘಟ್ಟದ ಅನೇಕ ಸಿನಿಮಾ ನಿರ್ದೇಶಕರು ಜಾಬ್‌ಲೆಸ್ ಆಗುತ್ತಿದ್ದರು ಎಂದು ಗೆಳೆಯ ಶಾಂತರಾಜು ಹೇಳುತ್ತಿದ್ದ. ಇದು ನಿಜ. ಕೇವಲ ತಂತ್ರಜ್ಞಾನ, ದೃಶ್ಯ ವೈಭವದ ಸುವರ್ಣ ಚೌಕಟ್ಟು ಕಡೆಗೆ ಪ್ರೇಕ್ಷಕನಿಗೆ ಕೊಡುವುದು ಕೇವಲ ಭ್ರಮಾತ್ಮಕ ಮನೋರಂಜನೆ. ಇಲ್ಲಿ ಉಳ್ಳವರು ಮಾತ್ರ ಶಿವಾಲಯ ಮಾಡುತ್ತಾರೆ. ದುಡ್ಡಿದ್ದವನೇ ದೊಡ್ಡಪ್ಪ. ಇದು ಸೃಷ್ಟಿಸುವುದು ವಿಕೃತವಾದ ಸಮೂಹಸನ್ನಿಯನ್ನು ಮಾತ್ರ. ಇಲ್ಲಿ ರಿಯಲ್ ಎಸ್ಟೇಟ್‌ನ ಕಬಂಧಬಾಹುವಿಗೆ ಸಿಕ್ಕಿಕೊಳ್ಳುವುದು ತೀರಾ ಸಹಜ.

ಆದರೆ ಕ್ರಿಯಾಶೀಲತೆ, ವೈಚಾರಿಕತೆ, ಹೊಸ ಚಿಂತನೆಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡಿದ್ದರೆ ನಾವೂ ಸಹ ಜಗತ್ತೇ ಬೆರಗಾಗುವಂತೆ, ಮನಸ್ಸನ್ನು ಮುದಗೊಳಿಸುವ,ಈ ನೆಲದ ಸತ್ವವನ್ನು ಹೀರಿಕೊಂಡು ಬದುಕುವ ಅಪಾರ ಸಾಧ್ಯತೆಗಳನ್ನು ಪ್ರೇಕ್ಷಕನಿಗೆ ಕಟ್ಟಿಕೊಡಲು ಸಾಧ್ಯವೆಂದು ಈ ’ಭಾ’ಗಳು ಮತ್ತು ಮೇಲಿನ ಹೊಸ ತಲೆಮಾರಿನ ನಿರ್ದೇಶಕರು ನಮಗೆ ತೋರಿಸಿಕೊಟ್ಟಿದ್ದಾರೆ.

ನೆನಪಿರಲಿ ಇವರಾರೂ ಕಲಾತ್ಮಕ ಚಿತ್ರಗಳನ್ನು ಮಾಡಿದವರಲ್ಲ. ಇವರು ಮಾಡಿದ್ದೆಲ್ಲ ಕಮರ್ಶಿಯಲ್ ಚಿತ್ರಗಳು. ಬೌದ್ಧಿಕ ಅಹಂಕಾರದಿಂದ ನೂರಾರು ಮೈಲಿ ದೂರವಿರುವ ಈ ಎಲ್ಲಾ ಚಿತ್ರಗಳು ತುಂಬಾ ಸರಳ ಸಿನಿಮಾಗಳು. ಇವುಗಳ ಶಕ್ತಿ ಏನೆಂದರೆ ಇವ ನಮ್ಮವ, ಇವ ನಮ್ಮವ ಎನ್ನುವ ಆತ್ಮೀಯತೆ.

ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟ ಈ ಎಲ್ಲಾ ಸಿನಿಮಾಗಳು ಹಣ ಮಾಡಿವೆ. ಅವಾರ್ಡ್ ಗಳಿಸಿವೆ.

12 Years a Slave – ಮೈಮನಗಳನ್ನು ಗಾಯಗೊಳಿಸುವ ಕಥಾನಕ

– ಬಿ. ಶ್ರೀಪಾದ ಭಟ್

2013 ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಬ್ರಿಟೀಶ್-ಅಮೇರಿಕನ್ ಹಾಲಿವುಡ್ ಸಿನಿಮಾ 12 Years a Slave ನಮ್ಮಲ್ಲಿ ಈ ತಿಂಗಳು ಬಿಡುಗಡೆಯಾಯ್ತು. 12-years-a-slave-book“Solomon Northup” ಬರೆದ “1853 Memoir” ಆತ್ಮಕಥೆಯನ್ನಾಧರಿಸಿ ಈ ಸಿನಿಮಾ ತಯಾರಾಗಿದೆ. ಇದರ ನಿರ್ದೇಶಕರು Steve McQueen. 1841 ರಲ್ಲಿ ಅಮೇರಿಕಾದಲ್ಲಿ ಜರಗುವ ಇದರ ಕತೆ ಸ್ಥೂಲವಾಗಿ ಹೀಗಿದೆ: Solomon Northup> (Chiwetel Ejiofor) ನ್ಯೂಯಾರ್ಕನ ನೀಗ್ರೋ ಪ್ರಜೆ. ಹೆಂಡತಿ ಮತ್ತು ಇಬ್ಬರು ಮಕ್ಕಳ ಸಂಸಾರ ಈತನದು. ವೃತ್ತಿಯಿಂದ ಕಾರ್ಪೆಂಟರ್ ಆಗಿರುವ ಈ ಸೋಲೋಮನ್‌ಗೆ ವಯೋಲಿನ್ ನುಡಿಸುವುದು ಒಂದು ಹವ್ಯಾಸ. ಒಂದು ದಿನ ಕೆಲವು ಆಗುಂತಕರು ಬಂದು ನಿನಗೆ ವಾಷಿಂಗ್ಟನ್‌ನಲ್ಲಿ ಏಳು ದಿನಗಳ ಕಾಲ ಸಂಗೀತಗಾರನ ಉದ್ಯೋಗವನ್ನು ಕೊಡಿಸುತ್ತೇವೆ ಎಂದು ನಂಬಿಸಿ ಸೋಲೋಮನ್‌ಗೆ ಮೋಸದಿಂದ ಮತ್ತು ಬರುವ ಔಷದಿಯನ್ನು ಕುಡಿಸುತ್ತಾರೆ. ಡ್ರಗ್‌ನ ಪ್ರಭಾವದಿಂದ ಚೇತರಿಸಿಕೊಂಡ ಸೋಲೋಮನ್ ಎಚ್ಚೆತ್ತಾಗ ಸರಪಳಿಯಲ್ಲಿ ಬಂಧಿತನಾಗಿರುತ್ತಾನೆ. ಜೀತದಾಳಾಗಿ ಸೋಲೋಮನ್ ಮಾರಾಟವಾಗಿರುತ್ತಾನೆ. ತನ್ನ ಊರಿನಲ್ಲಿ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದಿದ್ದ ನೀಗ್ರೋ ಸೋಲೋಮನ್‌ನನ್ನು ಕೆಲವೇ ನಿಮಿಷಗಳಲ್ಲಿ ಗಲೀಜಾದ ಸೆಲ್‌ನ ಗೋಡೆಗಳ ನೆರಳುಗಳಿಂದ ಆವೃತನಾಗಿ, ಸರಪಳಿಯಿಂದ ಬಂಧಿತನಾಗಿರುವುದನ್ನು ಕಂಡು ಸ್ವತಃ ಸೋಲೋಮನ್‌ನಂತೆಯೇ ಪ್ರೇಕ್ಷಕನೂ ಸಹ ಅಘಾತಗೊಳ್ಳುತ್ತಾನೆ. ಈ ದೃಶ್ಯದಲ್ಲಿ ಆತನನ್ನು ಜೀತದಾಳನ್ನಾಗಿಸಿದ ಅಪಹರಣಕಾರ ನೀಗ್ರೋ ಸೋಲೋಮನ್‌ನ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಾನೆ. ಪ್ರಾಣಿಗಳಿಗಿಂತಲೂ ಹಿನಾಯವಾಗಿ ನಡೆಸಿಕೊಳ್ಳುತ್ತಾನೆ. (ಈ ಹಲ್ಲೆಯ ಕ್ರೌರ್ಯ ನಮ್ಮನ್ನು ಇಡೀ ಚಿತ್ರದುದ್ದಕ್ಕೂ ಕಾಡುತ್ತದೆ. ಬೆಚ್ಚಿಬೀಳಿಸುತ್ತದೆ. ಕರಿಯರ ಮೇಲಿನ ಹಿಂಸೆ ನಮ್ಮ ನರನಾಡಿಗಳನ್ನು ತಣ್ಣಗಾಗಿಸುತ್ತದೆ. ಚಿತ್ರಮಂದಿರದಿಂದ ಹೊರಬಂದ ನಂತರವೂ ನಮಗೆ ಈ ಹಿಂಸೆಯಿಂದ ಬಿಡುಗಡೆ ಸಿಗುವುದಿಲ್ಲ. ಇಲ್ಲಿ ನಿರ್ದೇಶಕ ನಮ್ಮನ್ನು ಕೇವಲ ಶಾಕ್‌ಗೊಳಿಸುವ ಉದ್ದೇಶದಿಂದ, ರೋಚಕತೆಗೋಸ್ಕರ ಹಿಂಸೆಯನ್ನು ಪರದೆಯ ಮೇಲೆ ಜಾಳು ಜಾಲಾಗಿ ಚೆಲ್ಲಾಡುವುದಿಲ್ಲ, ಬದಲಾಗಿ ನಮ್ಮಲ್ಲಿನ ಸವರ್ಣೀಯ ಜಾತಿಗಳು ತಳಸಮುದಾಯಗಳ ಮೇಲೆ ದಾಳಿ ನಡೆಸುವ ಹಾಗೆಯೇ 19ನೇ ಶತಮಾನದ ಪಶ್ಚಿಮ ರಾಷ್ಟ್ರಗಳು ಅದರಲ್ಲೂ ಅಮೇರಿಕಾ ಅತ್ಯಂತ ಅಸೂಕ್ಷ್ಮವಾಗಿ, ಫ್ಯೂಡಲ್ ಮನಸ್ಥಿತಿಯಿಂದ ವರ್ತಿಸಿದೆ ಎಂದು ಪ್ರೇಕ್ಷಕನ ಮುಂದೆ ಸೈದ್ಧಾಂತಿಕ ಬದ್ಧತೆಯಿಂದ, ವೈಚಾರಿಕತೆಯಿಂದ ಬಿಚ್ಚಿಡುತ್ತಾನೆ. ಇಲ್ಲಿ ಹಿಂಸೆಯ ವೈಭವೀಕರಣವಿಲ್ಲ, ಆದರೆ ಅದರ ಕ್ರೌರ್ಯ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ.) ಜೀತದಾಳುಗಳ ವ್ಯಾಪಾರಿ ಫ್ರೀಮನ್ ಈತನಿಗೆ “ಪ್ಲಾಟ್” ಎಂದು ಮರುನಾಮಕರಣ ಮಾಡಿ ಲೂಸಿಯಾನಾದ ಪ್ಲಾಂಟೇಶನ್ ಮಾಲೀಕ ವಿಲಿಯಮ್ ಫೋರ್ಡಗೆ ಮಾರಾಟ ಮಾಡುತ್ತಾನೆ.

ಸೋಲೋಮನ್ ತನ್ನ ಸಜ್ಜನಿಕೆಯಿಂದ, ಕಾರ್ಪೆಂಟರ್ ವೃತ್ತಿಯ ಕುಶಲತೆಯಿಂದ ಪೋರ್ಡನ ಮೆಚ್ಚುಗೆ ಗಳಿಸುತ್ತಾನೆ, ಹಾಗೆಯೇ ಆತನಿಂದ ವೈಯೋಲಿನ್ ಅನ್ನು ಕಾಣಿಕೆಯಾಗಿ ಪಡೆಯುತ್ತಾನೆ. ಆದರೆ ಇಲ್ಲಿಯೂ ಸೋಲೋಮನ್‌ಗೆ ಕೆಟ್ಟದಿನಗಳು ಬೆನ್ನು ಹತ್ತುತ್ತವೆ. 12-years-a-slaveಇಲ್ಲಿ ಜನಾಂಗೀಯವಾದಿ ಕಾರ್ಪೆಂಟರ್ ಜಾನ್ ಟಿಬೇಟ್ಸ್ ಸೋಲೋಮನ್‌ನ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿರುತ್ತಾನೆ. ಈ ಟಿಬೇಟ್ಸ್ ಎನ್ನುವ ಜನಾಂಗೀಯವಾದಿ ಬಾಯಲ್ಲಿ ಕೋಳಿಯನ್ನು ಕಚ್ಚಿ ಹಿಡಿದು ಪೌಲ್ಟ್ರಿ ಫಾರ್ಮನಿಂದ ಹೊರ ಬರುವ ದೃಶ್ಯವೇ ನಮಗೆ ಆತನ ಕ್ರೌರ್ಯದ ಮನಸ್ಥಿತಿಯನ್ನು ಪರಿಚಯ ಮಾಡಿಕೊಡುತ್ತದೆ. ಆದರೆ ಧ್ರತಿಗಡೆದ ಸೋಲೋಮನ್ (ಫ್ಲಾಟ್) ತಿರುಗಿಬೀಳುತ್ತಾನೆ. ಪ್ರತಿರೋಧಿಸುತ್ತಾನೆ. ಕಡೆಗೆ ಮಾಲೀಕ ಫೋರ್ಡ ಸೋಲೋಮನ್‌ನನ್ನು ಈ ಲುಂಪೆನ್ ಗುಂಪಿಂದ ರಕ್ಷಿಸುತ್ತಾನೆ. ಆದರೆ ಬಹುದಿನಗಳ ಕಾಲ ಈ ಲುಂಪೆನ್ ಗುಂಪಿನಿಂದ ರಕ್ಷಿಸಲು ಸಾಧ್ಯವಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸುವ ಫೋರ್ಡ ಕಡೆಗೆ ಸೋಲೋಮನ್ ಅನ್ನು ಜೀವರಕ್ಷಣೆಯ ಸಲುವಾಗಿ ಮತ್ತೊಬ್ಬ ಫ್ಯೂಡಲಿಸ್ಟ್ ಎಡ್ವಿನ್ ಎಪ್ಸ್‌ಗೆ ಮಾರುತ್ತಾನೆ. ಈ ಎಪ್ಸ್ ಒಬ್ಬ ಸಾಡಿಸ್ಟ್, ವಿಕೃತವಾದಿ. ಕರಿಯರನ್ನು ಹಿಂಸಿಸುವುದು ತನ್ನ ಹಕ್ಕೆಂಬಂತೆ ವರ್ತಿಸುವ ಎಪ್ಸ್ ತನ್ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರಿಯ ಜೀತದಾಳು ದಿನಕ್ಕೆ ಕನಿಷ್ಟ 200 ಪೌಂಡ್ ಹತ್ತಿಯನ್ನು ಸಂಗ್ರಹಿಸಬೇಕೆಂದು ಆಜ್ಞೆ ವಿಧಿಸುತ್ತಾನೆ. ಕಡಿಮೆ ಸಂಗ್ರಹಿಸಿದರೆ ಹೊಡೆತಗಳು ಗ್ಯಾರಂಟಿ. ಹೆಣ್ಣು ಜೀತದಾಳು ’ಪೇಸ್ಟೆ’ (Lupita Nyong’o) ದಿನವೊಂದಕ್ಕೆ 500 ಪೌಂಡ್ ಹತ್ತಿಯನ್ನು ಸಂಗ್ರಹಿಸುತ್ತಾಳೆ. ಸಾಡಿಸ್ಟ್ ಏಪ್ಸ್‌ನ ಕಣ್ಣು ಈಕೆಯ ಮೇಲೆ ಬೀಳುತ್ತದೆ. ಈತನ ಕಾಮನೆಯ ಅತಿರೇಕ ಯಾವ ಮಟ್ಟದ್ದೆಂದರೆ ಪೇಸ್ಟೆಯನ್ನು ಕಾಮನೆಯಿಂದ ಹಿಂಸಿಸುವ ದೃಶ್ಯ ನಮ್ಮನ್ನು ಅಲ್ಲಾಡಿಸುತ್ತದೆ. ಅವಳ ಮೇಲೆ ಅತ್ಯಾಚಾರ ನಡೆಸುತ್ತಾನೆ. ಇಲ್ಲಿ ನಿರ್ದೇಶಕ Slavery and racism ಅನ್ನು ತೆರೆಯ ಮೇಲೆ ಬರೆಯುವಾಗ ಎಲ್ಲಿಯೂ ಕಪ್ಪುಬಿಳುಪಿನ ಮನಸ್ಥಿಯನ್ನು ತೋರಿಸುವುದಿಲ್ಲ. ಬದಲಾಗಿ ಇತಿಹಾಸದ ಪುಟಗಳು ತಂತಾನೆ ನೈಜವಾಗಿ ಹೊಸ ಭಾಷ್ಯೆಯೊಂದಿಗೆ ತೆರೆಯ ಮೇಲೆ ಮೂಡತೊಡಗುತ್ತವೆ. ಅಮೇರಿಕಾ ಇನ್ನು ಮುಂದೆ ಶತಮಾನಗಳ ಕಾಲದ ತನ್ನ ಗ್ಲುಲಾಮಗಿರಿ ಮತ್ತು ವರ್ಣಭೇದವನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಕಲಾವಂತಿಕೆ ಮತ್ತು ನೈಜತೆಯ ಸಂಯೋಜನೆ ಯಶಸ್ಸನ್ನು ಸಾಧಿಸಿದೆ. ಈ ಫ್ಯೂಡಲ್ ಏಪ್ಸ್ ಪ್ಲಾಂಟೇಶನ್‌ನಲ್ಲಿ ಹಬ್ಬುವ ಪ್ಲೇಗ್ ಮಾದರಿಯ ರೋಗಕ್ಕೆ ಈ Slaves ಕಾರಣವೆಂದು ನಿರ್ಧರಿಸಿ ಪಕ್ಕದ ಪ್ಲಾಂಟರ್‌ಗೆ ಲೀಸ್‌ನ ಮೇಲೆ ಮಾರಿಬಿಡುತ್ತಾನೆ. ಅಲ್ಲಿಯೂ ಸಹ ಸೋಲೋಮನ್ ತನ್ನ ಸರಳತೆ ಮತ್ತು ಕುಶಲತೆಯಿಂದ ಪ್ಲಾಂಟರ್‌ನ ವಿಶ್ವಾಸ ಗಳಿಸಿ ಈ ಪ್ಲಾಂಟರ್‌ನ ಶಿಫಾರಸ್ಸಿನ ಮೂಲಕ ಮದುವೆ ಮನೆಗಳಲ್ಲಿ ವಯೋಲಿನ್ ನುಡಿಸುವ ಅವಕಾಶ ಗಿಟ್ಟಿಸುತ್ತಾನೆ. ನಂತರದ ದೃಶ್ಯಗಳಲ್ಲಿ ಸೋಲೋಮನ್, ಪೇಟ್ಸೆ ಮರಳಿ ಏಪ್ಸ್‌ಗೆ ಮಾರಲ್ಪಡುವ, ಅಲ್ಲಿನ ದೌರ್ಜನ್ಯಗಳ ವಿವರಣೆಯಿದೆ. ಕಡೆಗೆ 12 ವರ್ಷಗಳ ಜೀತದಿಂದ ಮುಕ್ತಿಗೊಂಡು ಸೋಲೋಮನ್ 1853ರಲ್ಲಿ ಮರಳಿ ತನ್ನ ಹೆಂಡತಿ ಮಕ್ಕಳೊಂದಿಗೆ ಕೂಡಿಕೊಳ್ಳುತ್ತಾನೆ. ತನ್ನನ್ನು ಹಾಗೂ ಇತರೇ ನೀಗ್ರೋ ಜನರ ಮೇಲೆ ನಡೆ ದೌರ್ಜನ್ಯದ ವಿರುದ್ಧ ಕಾನೂನು ಸಮರ ನಡೆಸುವ ವಿಫಲ ಪ್ರಯತ್ನ ಮಾಡುತ್ತಾನೆ.

ಚಿತ್ರಕತೆಯಲ್ಲಿ ಹಿಡಿತವನ್ನು ಸಾಧಿಸಿರುವ ನಿರ್ದೇಶಕ ಸ್ಟೀವ್ ಮೆಕ್ವೀನ್ ನಿರೂಪಣೆಯಲ್ಲಿ ಆಧುನಿಕ ತಾಂತ್ರಿಕ ನೈಪುಣ್ಯತೆಯನ್ನು, ಅದು ಕಟ್ಟಿಕೊಡಬಹುದಾದ ಮನಮೋಹಕ ಸುವರ್ಣ ಚೌಕಟ್ಟನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಮ್ಮ ಪರ್ಯಾಯ ಸಿನಿಮಾಗಳ ಕ್ಲಾಸಿಕ್ ಎನ್ನಬಹುದಾದ ತಂತ್ರವನ್ನು ಅನುಸರಿಸಿದ್ದಾನೆ. ಅಂದರೆ rawness ಅನ್ನು ಅದರ ಎಲ್ಲಾ ತಾಜಾತನದೊಂದಿಗೆ ಮನಮುಟ್ಟುವ ಕಥಾನಕವಾಗಿಸುತ್ತಾನೆ. (ಉದಾಹರಣೆ – ಗೋವಿಂದ ನಿಹಾಲನಿ ನಿದೇಶನದ ” ಆಕ್ರೋಶ್”, ಗೌತಮ್ ಘೋಷ್ ನಿರ್ದೇಶನದ “ಪಾರ್” ಸಿನಿಮಾಗಳು.) ಯಾರ ವಿರುದ್ಧವೂ ಆರೋಪದ, ಅಪಾದನೆಯ ಬೆರಳು ತೋರಿಸಲು ನಿರ್ದೇಶಕ ನಿರಾಕರಿಸುತ್ತಾನೆ. twelve-years-a-slave-michael-fassbenderಇಡೀ ಸಿನಿಮಾದ ಪಯಣವೇ ನಮ್ಮನ್ನು ಒಳಗೊಳ್ಳುತ್ತಾ, ಸಿನಿಮಾ ನೋಡುತ್ತಾ ಸೋಲೋಮನ್‌ನೊಂದಿಗೆ ಸ್ವಾತಂತ್ರ್ಯದ ಹುಡುಕಾಟದಲ್ಲಿ, ಬದುಕುವ ದಾರಿಗಾಗಿ ನಾವೂ ಪಯಣಿಸುತ್ತಿರುತ್ತೇವೆ.

ಸೋಲೋಮನ್ ಆಗಿ Ejiofor ನ ನಟನೆ ಅದ್ಭುತ. ಕರಿಯ ನೀಗ್ರೋನ ಪಾತ್ರವೇ ತಾನಾಗಿರುವ (ಭಕ್ತ ಕುಂಬಾರದಲ್ಲಿ ನಮ್ಮ ಡಾ.ರಾಜ್‌ರಂತೆ) ಇಜಿಯೋಫರ್‌ನ ನಟನೆಯ ಕುರಿತಾದ ಕಾಮನ್‌ಸೆನ್ಸ್ ನಮ್ಮನ್ನು ಚಕಿತಗೊಳಿಸುತ್ತದೆ. ಉದಾಹರಣೆಗೆ, ಅಪಹರಣಗೊಂಡು ಒಂದು ಪ್ಲಾಂಟೇಶನ್‌ನಿಂದ ಮತ್ತೊಂದು ಪ್ಲಾಂಟೇಶನ್‌ಗೆ ಮಾರಾಟಗೊಂಡು ಬೋಟಿನಲ್ಲಿ ಪಯಣಿಸುತ್ತಿದ್ದಾಗ ಈತನ ಜೊತೆಗಿರುವ ನೀಗ್ರೋ ಒಬ್ಬ “ನಾವು ಈ ಬಿಳಿಯ ಅಪಹರಣಕಾರರ ವಿರುದ್ಧ ಹೋರಾಡೋಣ” ಎನ್ನುತ್ತಾನೆ. ಮತ್ತೊಬ್ಬ ನೀಗ್ರೋ ಇದನ್ನು ತಿರಸ್ಕರಿಸಿ “ಹೋರಾಡಿ ಸಾಯುವುದು ಬದುಕುಳಿಯುವ ಲಕ್ಷಣವಲ್ಲ, ನಾವು ತಲೆತಗ್ಗಿಸಿ ಬದುಕಲೇಕು” ಎಂದು ವಾದಿಸಿದಾಗ ಇವರಿಬ್ಬರ ನಡುವೆ ಕುಳಿತಿದ್ದ ಸೋಲೋಮನ್ ಉದ್ಗರಿಸುತ್ತಾನೆ “You tell me all is lost?” For me, I don’t want to survive, I want to live.” ಇದೇ ಈ ಸಿನಿಮಾದ ಹೆಗ್ಗಳಿಕೆ. ಇಲ್ಲಿ ಮಾನವತಾವಾದ ಯಾವುದೇ ಚೀರುವಿಕೆಗಳಿಲ್ಲದೆ ಗೆಲ್ಲುತ್ತದೆ.

ಇನ್ನು ಸ್ಯಾಡಿಸ್ಟ್ ಜಮೀನ್ದಾರ ಎಪ್ಸ್ ಆಗಿ ನಟಿಸಿರುವ ಫಾಸ್‌ಬೆಂಡರ್ ನಮ್ಮನ್ನು ಅಲ್ಲಾಡಿಸಿಬಿಡುತ್ತಾನೆ. ದಶಕಗಳ ಕಾಲ, ಶತಮಾನಗಳ ಕಾಲ ಅಮೇರಿಕಾದ ಈ Slavery & Racism ನ ಇತಿಹಾಸವನ್ನು ತನ್ನ ನಟನೆಯ ಮೂಲಕ ನಮ್ಮ ಮುಂದೆ ಇಂಚಿಂಚೂ ಮಂಡಿಸುತ್ತಾನೆ. ಅನೇಕ ಕಡೆ ಫಾಸ್‌ಬೆಂಡರ್ ಅಮರೀಶ್‌ ಪುರಿಯ ಮೊಗ್ಯಾಂಬೋ ಶೈಲಿಗೆ ಜಿಗಿತ ಪಡೆದುಕೊಂಡು ನಿರ್ದೇಶಕನ ಸಾರ್ಥಕತೆಯನ್ನೇ, ಆಶಯಗಳನ್ನೇ ಮಣ್ಣುಗೂಡಿಸಿಬಿಡುತ್ತಾನಲ್ಲ ಎನ್ನುವ ಆತಂಕವುಂಟಾಗುವಷ್ಟರಲ್ಲಿ ಇದೇ ಫಾಸ್‌ಬೆಂಡರ್ ಇಡೀ ಚಿತ್ರದ ಗತಿಯನ್ನು ಮರಳಿ ಹಳಿಯ ಮೇಲೆ ತಂದು ನಿಲ್ಲಿಸುತ್ತಾನೆ. ಇದು ಈ ಸಿನಿಮಾದ ಮತ್ತೊಂದು ಗೆಲವು. ಕಡೆಗೆ ದೈಹಿಕವಾಗಿ, ಮಾನಸಿಕವಾಗಿ ಗಾಯಗೊಂಡ ಪ್ರೇಕ್ಷಕ ಚಿತ್ರಮಂದಿರದಿಂದ ಹೊರಬರುತ್ತಾನೆ

ಉತ್ತಮ ಸಿನಿಮಾ, ಶ್ರೇಷ್ಠ ನಾಯಕ ನಟ (Ejiofor), ಶ್ರೇಷ್ಠ ನಿರ್ದೇಶಕ (Steve McQueen), ಶ್ರೇಷ್ಠ ಪೋಷಕ ನಟ (Fassbender) ಜೊತೆಗೆ ಇನ್ನೂ ಇತರ ಕೆಲವು ವಿಭಾಗಗಳಲ್ಲಿ ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದೆ.

ಕ್ಯಾಮರಾ ಕಣ್ಣಲ್ಲಿ ರಾಜ್ ಮತ್ತು ಜಯ : ಎರಡು ನಿರೂಪಣೆಗಳು

– ಸಂಕಲ್ಪ

ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಸಿನಿಮಾಗಳ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹೀಗೆ ಮಾತನಾಡಿದ್ದ ನೆನಪು. “ಚಿತ್ರರಂಗ ಲಕ್ಷಾಂತರ ಜನರಿಗೆ ಅನ್ನ, ಆಶ್ರಯ ನೀಡಿದೆ. ಇಂತಹದೊಂದು ಕ್ಷೇತ್ರ ಇಲ್ಲದೆ ಹೋಗಿದ್ದರೆ ನಿರುದ್ಯೋಗ ಸಮಸ್ಯೆ ಇನ್ನೂ ತೀವ್ರವಾಗಿರುತ್ತಿತ್ತು”. ಹೀಗೆ ಲಕ್ಷಾಂತರ ಕೈಗಳಿಗೆ ಕೆಲಸ ಕೊಟ್ಟ ಉದ್ಯಮ ಪರಿಶ್ರಮದ ಹಾಗೂ ಸೃಜನಶೀಲತೆಯನ್ನು ಬೇಡುತ್ತದೆ. ಸಾವಿರಾರು ನಟ, ನಟಿಯರು, ತಂತ್ರಜ್ಞರು, shashidhar-lakshminarayanಕಲಾವಿದರು ಕನ್ನಡ ಚಿತ್ರರಂಗದಲ್ಲಿ ದುಡಿದು ಹೋಗಿದ್ದಾರೆ. ಆದರೆ ಕೆಲವರ ಸಾಧನೆ, ಕೊಡುಗೆಗಳು ಮಾತ್ರ ದಾಖಲಾಗುತ್ತವೆ. ಉಳಿದವರು ತೆರೆಮರೆಯಲ್ಲಿಯೇ ಉಳಿದು ಬಿಡುತ್ತಾರೆ.

ತಮ್ಮ ಕೊಡುಗೆಗಳ ಮೂಲಕ ಮರೆಯಲ್ಲಿಯೇ ಉಳಿದಿದ್ದ ಎರಡು ವ್ಯಕ್ತಿತ್ವಗಳನ್ನು ಪರಿಚಯಿಸುವ ಪುಸ್ತಕಗಳನ್ನು ಪತ್ರಕರ್ತ ಶಶಿಧರ ಚಿತ್ರದುರ್ಗ ಹೊರತಂದಿದ್ದಾರೆ. ಒಬ್ಬರು ಛಾಯಾಗ್ರಾಹಕ ಲಕ್ಷ್ಮೀನಾರಾಯಣ, ಮತ್ತೊಬ್ಬರು ಲಂಗಮ್ಮ ಎಂದೇ ಇತ್ತೀಚೆಗೆ ಪ್ರಸಿದ್ಧರಾಗಿರುವ ಹಿರಿಯ ಕಲಾವಿದೆ ಜಯಾ. ಎರಡು ಪುಸ್ತಕಗಳು ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಬಿಡುಗಡೆಯಾದವು.

ಕ್ಯಾಮರಾ ಕಣ್ಣಲ್ಲಿ ರಾಜ್: ಇದು ಒದುವ ಕಂ ನೋಡುವ ಪುಸ್ತಕ. ಅಪರೂಪದ ಫೋಟೋಗಳು ಈ ಪುಸ್ತಕದ ವಿಶೇಷ ಆಕರ್ಷಣೆ. ರಾಜಕುಮಾರ್ ಅವರ ವಿವಿಧ ಭಂಗಿಗಳು ಇಲ್ಲಿವೆ. ಫೋಟೋಗಳ ಜೊತೆ ಜೊತೆಗೆ ರಾಜ್ ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾ ಕೆರಿಯರ್ ಪರಿಚಯವಾಗುತ್ತದೆ. ಅಪರೂಪದ ಫೋಟೋಗಳನ್ನ ಕ್ಲಿಕ್ಕಿಸಿದ ಸಂದರ್ಭಗಳನ್ನು ಲಕ್ಷ್ಮೀನಾರಾಯಣ್ ಹಂಚಿಕೊಂಡಿದ್ದಾರೆ. ಶಶಿ ನಿರೂಪಿಸಿದ್ದಾರೆ. ರಾಜ್ ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗದ ಪ್ರೇಕ್ಷಕ ಸಮುದಾಯಕ್ಕೆ ಈ ಫೋಟೋ-ಕೃತಿ ಇಷ್ಟವಾಗುತ್ತದೆ.

ಜಯ: ಇದು ನಟಿ ಬಿ.ಜಯ ಅವರ ಬದುಕು-ಅಭಿನಯ ವೃತ್ತಿ ಕುರಿತ ಪುಸ್ತಕ. ಜಯಾ ತಮ್ಮ ವೃತ್ತಿ ಜೀವನದ ಅಮೂಲ್ಯ actress-jayaಕ್ಷಣಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಓದುಗರನ್ನು ಒಂದು ಕಾಲು ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ದು ಅಂದಿನ ಚಿತ್ರರಂಗವನ್ನು ಈ ಪುಸ್ತಕ ನಿರೂಪಿಸುತ್ತದೆ. ಮುಖ್ಯವಾಗಿ ಜಯರಂತಹ ಅಪರೂಪದ ಕಲಾವಿದರ ಪರಿಚಯವಾಗುತ್ತದೆ. ಈ ಪುಸ್ತಕದ ವಿಶೇಷ ಆಕರ್ಷಣೆ ಮತ್ತೊಬ್ಬ ಹಿರಿಯ ನಟಿ ಲೀಲಾವತಿಯವರು ಬರೆದಿರುವ ಬೆನ್ನುಡಿ.

ಇನ್ನು ಶಶಿಯ ಬಗ್ಗೆ ನಾಕು ಮಾತು:
ಅವರ ಹೆಸರೇ ಹೇಳುವಂತೆ ಶಶಿ, ಚಿತ್ರದುರ್ಗದ ಹುಡುಗ. ಸಿನಿಮಾ ಬಗ್ಗೆ ಆಸಕ್ತಿ. ಅದರಲ್ಲೂ ಕನ್ನಡ ಸಿನಿಮಾ ಬಗ್ಗೆ ವಿಶೇಷ ಪ್ರೀತಿ. ಚಿಕ್ಕಂದಿನಿಂದಲೂ ಬಹಳ ಸಿನಿಮಾ ನೋಡುತ್ತಿದ್ದರು. ತಾನು ನೋಡಿ ಬಂದ ಮೇಲೆ, ಇತರರಿಗೂ ತೋರಿಸುವ ಅಭ್ಯಾಸ. ತೀರಾ ಸಾಮಾನ್ಯವಾಗಿರುವ ಚಿತ್ರವನ್ನು ಅತ್ಯದ್ಭುತ ಎಂದು ಸ್ನೇಹಿತರಿಗೆ ಬಣ್ಣಿಸಿ, ಅವರನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿ ಟೀಕೆಗಳನ್ನು ಎದುರಿಸಿದ ಎಷ್ಟೋ ಉದಾಹರಣೆಗಳಿವೆ.

ಅಷ್ಟೇ ಅಲ್ಲ… ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆಯಲ್ಲಿ ಕುಳಿತು ಫೋಟೋಗ್ರಫಿಯಲ್ಲಿ ನಾನಾ ಸಾಹಸ ಮಾಡುತ್ತಿದ್ದಾಗ, shashidhar-kamal-hassanಅವರಿಗೊಂದು ಪತ್ರ ಬರೆದು ಉತ್ತರ ಪಡೆದಿದ್ದ. ತೇಜಸ್ವಿಯವರು ಫೋಟೋಗ್ರಫಿ ಕಲಿಯೋಕೆ ಬೇಕಾದರೆ ಮೂಡಿಗೆರೆಗೆ ಬಾ ಎಂದು ಕರೆದಿದ್ದರು. ತೇಜಸ್ವಿಯವರಿಂದ ಅಂತಹದೊಂದು ಆಹ್ವಾನ ಪಡೆದ ಈ ರಾಜ್ಯದ ಕೆಲವೇ ಕೆಲವರಲ್ಲಿ ಶಶಿ ಕೂಡ ಒಬ್ಬ. ಇಂತಹ ವಿಶಿಷ್ಟ ಆಸಕ್ತಿಗಳು ಇರುವ ಕಾರಣ ಭವಾನಿ ಲಕ್ಷ್ಮೀನಾರಾಯಣರಂತಹ, ಜಯಾ ಅಂತಹವರ ಬದುಕು-ಕಲೆಯನ್ನು ಅಕ್ಷರಗಳಲ್ಲಿ ದಾಖಲಿಸಲು ಸಾಧ್ಯವಾಯಿತು.


ಕ್ಯಾಮರಾ ಕಣ್ಣಲ್ಲಿ ರಾಜ್
– ಭವಾನಿ ಲಕ್ಷ್ಮೀನಾರಾಯಣ
– ನಿರೂಪಣೆ: ಶಶಿಧರ ಚಿತ್ರದುರ್ಗ.
ಪ್ರಕಾಶಕರು: ಪಲ್ಲವ ಪ್ರಕಾಶನ
ಪುಟಗಳು: 128, ಬೆಲೆ: ರೂ. 160
ಪ್ರತಿಗಳಿಗಾಗಿ ಸಂಪರ್ಕಿಸಿ: 94803-53507

ಜಯ
ಕಲಾವಿದೆ ಬಿ.ಜಯ ಅವರ ರಂಗಭೂಮಿ, ಸಿನಿಮಾ, ಕಿರುತೆರೆ, ಸಾಧನೆ
ಲೇಖಕ:ಶಶಿಧರ ಚಿತ್ರದುರ್ಗ
ಪ್ರಕಾಶನ: ಅವಿರತ ಪ್ರಕಾಶನ
ಪುಟಗಳು 92; ಬೆಲೆ: ರೂ.100
ಪ್ರತಿಗಳಿಗಾಗಿ: 94499-35103

ದೇಡ್ ಇಶ್ಕಿಯಾ : ಮನಸ್ಸು ಮಗುವಿನಂತಿದೆ, ಸ್ವಲ್ಪ ಹಸಿಹಸಿಯಾಗಿದೆ

– ಬಿ.ಶ್ರೀಪಾದ ಭಟ್

ಅಭಿಷೇಕ್ ಚುಬೆ ನಿರ್ದೇಶನದ “ದೇಡ್ ಇಶ್ಕಿಯಾ” ಸಿನಿಮಾ ನೋಡಲು ಹೋಗುವಾಗ ಮನಸ್ಸಿನಲ್ಲಿ ಅದರ ಮೊದಲ ಭಾಗ “ಇಶ್ಕಿಯಾ” ಚಿತ್ರದ ರೀಲುಗಳು ಕಾಡುತ್ತಿದ್ದವು. ವಿದ್ಯಾ ಬಾಲನ್‌ಳ oomph ಹಾಗೂ bold and lust ಅನ್ನು ಮೈಗೂಡಿಸಿಕೊಂಡಂತಹ ನಟನೆಯ ನೆನಪು ಎದೆಯನ್ನು ಬೆಚ್ಚಗಾಗಿಸುತ್ತಿತ್ತು. ರಾಹತ್ ಫತೇ ಅಲಿ ಖಾನ್ ಹಾಡಿದ ವಿಶಾಲ್ ಭಾರಧ್ವಾಜ್ ಭೈರವಿ ರಾಗದಲ್ಲಿ ಕಾಂಪೋಸ್ ಮಾಡಿದ ಹಾಡು “ದಿಲ್ ತೊ ಬಚ್ಚಾ ಹೈ ಜೀ, ಥೋಡ ಕಚ್ಚಾ ಹೈ ಜೀ” ನಾಲ್ಕು ವರ್ಷಗಳ ನಂತರವೂ ಕಾಡುತ್ತಿತ್ತು. ಮನಸ್ಸನ್ನು ತೇವಗೊಳಿಸುತ್ತಿತ್ತು.

ಇಶ್ಕಿಯಾದಲ್ಲಿನ ಗಲಭೆಗ್ರಸ್ಥ, rustic ಗೋರಖ್‌ಪುರನಿಂದ ನವಾಬರ ನಾಡಾದ ಅವಧ್‌ನ ಮಹಮುದಾಬಾದ್‌ಗೆ “ದೇಡ್ ಇಶ್ಕಿಯಾ” dedh-ishqiyaಸಿನಿಮಾ ಸ್ಥಳಾಂತರಗೊಂಡಿದೆ. ಇಲ್ಲಿ ಷೇರ್, ಶಾಯರಿ, ಮುಶಾಯರಿ, ಘಜಲ್‌ಗಳು ಮತ್ತು ಕವ್ವಾಲಿಗಳು ಅಚ್ಚರಿಗೊಳಿಸುವಷ್ಟರ ಮಟ್ಟಿಗೆ ಹೃದಯಂಗಮವಾಗಿವೆ. ನಮ್ಮನ್ನು ಬೆಂಬಿಡದೆ ನಶೆಯೇರಿಸುತ್ತವೆ. ಬಹಳ ವರ್ಷಗಳ ನಂತರ ಈ ಸಿನಿಮಾದಲ್ಲಿ ಉರ್ದು ಭಾಷೆ ತನ್ನೆಲ್ಲ ತಾಜಾತನದೊಂದಿಗೆ ನಮ್ಮನ್ನು ಬೆರಗುಗೊಳಿಸುತ್ತದೆ. ಮನಮುಟ್ಟುವ, ಚಕಿತಗೊಳಿಸು, ಅನೇಕ ಬಾರಿ ಧಿಗ್ಭಮೆಗೊಳಿಸುವಂತಹ ಸಂಭಾಷಣೆಯನ್ನು ಬರೆದ ವಿಶಾಲ್ ಭಾರದ್ವಜ್‌ಗೆ ಥಾಂಕ್ಸ್ ಹೇಳಲೇಬೇಕು. ಇಡೀ ಚಿತ್ರದ ಆತ್ಮ ಮತ್ತು ಶಕ್ತಿಯೇ ಈ ಬೆರಗುಗೊಳಿಸುವ ಸಂಭಾಷಣೆಗಳು .

ಕಲ್ಲೂಜಾನ್ ಮತ್ತು ಬಬ್ಬನ್ ಪಾತ್ರಗಳನ್ನು ತಮ್ಮ ಸ್ವಂತ ಕ್ಯಾರೆಕ್ಟರ್ ಆಗಿಯೇ ಘನೀಭವಿಸಿಕೊಂಡ ನಾಸಿರುದ್ದೀನ್ ಶಾ ಮತ್ತು ಅರ್ಶದ್ ವಾರ್ಸಿ ಇವರಿಬ್ಬರ ಕಾಮ್ರೇಡ್‌ಶಿಪ್ ಇಲ್ಲಿಯೂ ಗೆಲ್ಲುತ್ತದೆ. ಸಣ್ಣ ಮಟ್ಟದ thieves ಗಳಾದ ಇವರಿಬ್ಬರೂ ನವಾಬ್ ಮತ್ತವನ ಸೇವಕನ ವೇಷದಲ್ಲಿ ವಜ್ರದ ಹಾರದ ಕಳ್ಳತನಕ್ಕೆ ಕೈ ಹಾಕಿ ಪೋಲೀಸರ ಕೈಗೆ ಸಿಕ್ಕಿಕೊಂಡು ನಂತರ ಅಲ್ಲಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಇಬ್ಬರೂ ಬೇರ್ಪಡುತ್ತಾರೆ. ಮಹುಮುದಾಬಾದ್‌ನ ವಿಧವೆ ಬೇಗಂ ಬೇಗಂ ಪಾರ ( ಮಾಧುರಿ ದೀಕ್ಷಿತ್) ಏರ್ಪಡಿಸಿರುವ ಮುಶಾಯಿರದಲ್ಲಿ ಭಾಗವಹಿಸಲು ಚಾಂದ್‌ಪುರ್‌ನ ನವಾಬನ ವೇಷದಲ್ಲಿ ಬಂದಂತಹ ಕಲ್ಲೂಜಾನ್ ( ಶಾ) ನನ್ನು ಬಬ್ಬನ್ ( ವಾರ್ಸಿ) ಮುಖಾಮುಖಿಯಾಗುತ್ತಾನೆ. ಶಾಯರಿ, ಮುಶಾಯರಿಯ ಸ್ಪರ್ಧೆಯನ್ನು ಏರ್ಪಡಿಸಿ ಅದರಲ್ಲಿ ಗೆದ್ದವನನ್ನು ನಿಖಾ ಮಾಡಿಕೊಂಡು ಮುಂದೆ ಆತನನ್ನೇ ಮಹುಮುದಾಬಾದ್‌ನ ನವಾಬನನ್ನಾಗಿ ಪಟ್ಟಕ್ಕೇರಿಸುಬೇಕೆಂದು ಆಶಿಸಿದ ತನ್ನ ತೀರಿಕೊಂಡ ನವಾಬನಿಗೆ ವಾಗ್ದಾನ ನೀಡಿದ್ದ ಬೇಗಂ ಪಾರ ಸ್ವಯಂವರದ ರೂಪದಲ್ಲಿ ಆ ಸ್ಪರ್ಧೆಯನ್ನು ಏರ್ಪಡಿಸಿರುತ್ತಾಳೆ. ಆಕೆಯ ಸಹವರ್ತಿ, ಸೇವಕಿ, ಜೀವದ ಗೆಳತಿಯಾಗಿ ಮುನಿರಾ (ಹುಮಾ ಖುರೇಷಿ) ಈ ಸ್ವಯಂವರದ ಎಲ್ಲಾ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿರುತ್ತಾಳೆ.

ನಂತರ ಎರಡು ಗಂಟೆಗಳ ಕಾಲ ನಮ್ಮ ನಿರೀಕ್ಷೆಗೂ ಮೀರಿ ನಡೆಯುವ twists and turns ಗಳು ಇಡೀ ಚಿತ್ರದ ಕಥೆಯನ್ನು ಸ್ವಲ್ಪವೂ ನಿರಾಸೆಗೊಳಿಸದೆ Dedh-Ishqiya-Madhuri-Dixitಕ್ಲೈಮ್ಯಾಕ್ಸ್‌ಗೆ ತಲುಪಿಸುತ್ತವೆ. ಇಲ್ಲಿ ಅಪಹರಣವಿದೆ, ಪ್ರೇಮವಿದೆ, violence ಇದೆ, ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಳ್ಳುವಂತಹ ನೈಪುಣ್ಯತೆಯನ್ನು ಸಾಧಿಸಲು ನಿರ್ದೇಶಕ ಅಭಿಷೇಕ್ ಚುಬೆ ಯಶಸ್ವಿಯಾಗಿದ್ದಾನೆ. ಈ ಪಯಣದಲ್ಲಿ ಕಲ್ಲೂಜಾನ್ ಮತ್ತು ಬಬ್ಬನ್‌ರ ಕಾಮ್ರೇಡ್‌ಶಿಪ್‌ನಷ್ಟೇ ಮನೋಜ್ಞವಾದದ್ದು ಬೇಗಂ ಪಾರ ಮತ್ತು ಮುನೀರಾಳ ಕಾಮ್ರೇಡ್‌ಶಿಪ್. ಇವರಿಬ್ಬರ ಗೆಳತನದ ಅಪ್ತತೆಯ ದೃಶ್ಯಗಳು ಇಡೀ ಚಿತ್ರದ ಅದ್ಭುತ ಕ್ಷಣಗಳಲ್ಲೊಂದು. ಇದನ್ನು ಸಾಧ್ಯವಾಗಿಸಿದ್ದು ಮಾಧುರಿ ದೀಕ್ಷಿತ್ ಮತ್ತು ಹುಮಾ ಖುರೇಷಿ. ಬೇಗಂ ಪಾರ ಮತ್ತು ಮುನೀರಾ ಇಡೀ ಸಿನಿಮಾವನ್ನು ತಮ್ಮ ಹೆಗಲಿಗೇರಿಸಿಕೊಂಡದ್ದು ಹಿಂದಿ ಸಿನಿಮಾರಂಗದ ಇತ್ತೀಚಿನ ವರ್ಷಗಳ ಅಚ್ಚರಿಗಳಲ್ಲೊಂದು. ಮತ್ತೊಮ್ಮೆ ಫೆಮಿನಿಸಂ ಮೇಲುಗೈ ಸಾಧಿಸಿದೆ. ಹಾಗೆಯೇ ಲೋಕಲ್ ಶಾಸಕ, ಗ್ಯಾಂಗ್‌ಸ್ಟರ್, ಜಾನ್ ಮಹಮದ್‌ನ ಪಾತ್ರದಲ್ಲಿ ನಟಿಸಿರುವ ವಿಜಯ್ ರಾಜ್ ಮೇಲಿನ ಕಲಾವಿದರಿಗೆ ಸಮಸಮನಾಗಿ ಹೆಗಲು ಕೊಟ್ಟಿದ್ದಾನೆ. ಹಾಗೆಯೇ ನೂರ್ ಮಹಮ್ಮದ್ ಇಟಾವಿಯಾಗಿ ನಟಿಸಿದ ಮನೋಜ್ ಫಾವಾ ನಮ್ಮೆಲ್ಲರ ಮೆಚ್ಚುಗೆ ಗಳಿಸುತ್ತಾನೆ.

ಕಡೆಗೆ ಯಾವುದೇ ಬಗೆಯ ಮಹಾತ್ವಾಕಾಂಕ್ಷೆಯನ್ನು ತನ್ನೊಡಲೊಳಗೆ ಇಟ್ಟುಕೊಳ್ಳಲು ನಿರಾಕರಿಸುವ “ದೇಡ್ ಇಶ್ಕಿಯಾ” ಸಿನಿಮಾಕ್ಕೆ ಈ ಬಗೆಯ ನಿರಾಕರಣೆಯೇ ಒಂದು ಮಿತಿಯಾಗಿಬಿಟ್ಟಿದೆ. ಥಿಯೇಟರ್‌ನಿಂದ ಹೊರಬಂದ ನಂತರ ಈ ಸಿನಿಮಾ ಒಂದು ಭಾಷ್ಯೆಯಾಗಿ, ಒಂದು ಮೆಟಫರ್ ಆಗಿ, ಗುಂಗಾಗಿ, ಸದಾ ಹಿಂಬಾಲಿಸುವ ವಿಷಾದದ ಛಾಯೆಯಾಗಿ ನಮ್ಮನ್ನು ಕಾಡುವುದಿಲ್ಲ. ಆದರೆ ಆ ರೀತಿ ಕಾಡಲೇಬೇಕೆಂಬ ಹಠವಾದರೂ ಏಕಿರಬೇಕು, ಅಲ್ಲವೇ??

ಫರೂಕ್ ಶೇಖ್ – ತೀರಿಕೊಂಡ ಪಕ್ಕದಮನೆ ಹುಡುಗ

–  ಬಿ.ಶ್ರೀಪಾದ ಭಟ್

ಹಿಂದಿ ಚಿತ್ರ ನಟ ಫರೂಕ್ ಶೇಖ್ ಹೃಧಯಾಘಾತದಿಂದ ದುಬೈನಲ್ಲಿ ತೀರಿಕೊಂಡಿದ್ದಾನೆ. ಮೊನ್ನೆ ತಾನೆ ಕೋಮು ಸಾಮರಸ್ಯದ ಅಗತ್ಯತೆಯ ಕುರಿತಾಗಿ ಅತ್ಯಂತ ಕಳಕಳಿಯಿಂದ ಮಾತನಾಡಿದ ಫರೂಕ್ ಶೇಖ್ ಎಲ್ಲಾ ಧರ್ಮಗಳ ಮೂಲಭೂತವಾದವನ್ನು ಖಂಡಿಸಿದ್ದ. ಸೋ ಕಾಲ್ಡ್ ಬಾಲಿವುಡ್‌ನ ಮೆಗಾಸ್ಟಾರ್‌ಗಳು, ಬಿಗ್‌ಬಿಗಳು ಎಲ್ಲ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಸಾರ್ವಜನಿಕವಾಗಿ ಖಂಡಿಸಲು ಹಿಂಜರಿಯುತ್ತಿದ್ದರೆ, ಸೋಗಲಾಡಿತನದಿಂದ ತಲೆತಪ್ಪಿಸಿಕೊಳ್ಳುತ್ತಿದ್ದರೆ, ಫರೂಕ್ ಶೇಖ್ ನೇರವಾಗಿ ಮುಸ್ಲಿಂ ಮೂಲಭೂತವಾದಿಗಳ ಧರ್ಮಾಂದತೆಯನ್ನು ಖಂಡಿಸಿದ್ದ. 2002ರ ಗುಜರಾತ್‌ನ ಹತ್ಯಾಕಾಂಡವನ್ನು ವಿರೋಧಿಸಿ ಫ್ಯಾಸಿಸಂನ ಅಪಾಯಗಳ ಕುರಿತು ಮಾರ್ಮಿಕವಾಗಿ ಮಾತನಾಡಿದ್ದ. farooq-sheikh“ಸರ್ಕಾರಗಳು ಉಪವಾಸ ಮುಷ್ಕರಗಳನ್ನು ನಡೆಸುತ್ತ ಸಾಯುವವರೆಗೂ ಹೋರಾಡುತ್ತೇವೆ ಅಥವಾ ಬಂದೂಕು ಹಿಡಿದು ಹಿಂಸಾತ್ಮಕ ಹೋರಾಟದ ಮೂಲಕ ಬದಲಾವಣೆ ತರುತ್ತೇವೆ ಎನ್ನುವ ವಿಭಿನ್ನ ದೃವಗಳ ಗುಂಪಿಗೆ ತಲೆಬಾಗುತ್ತದೆ ಆದರೆ moderate ಜನರಿಗೆ ಜಾಗವೆಲ್ಲಿ?” ಎಂದು ನೋವಿನಿಂದ ಪ್ರಶ್ನಿಸಿದ್ದ ಫರೂಕ್ ಶೇಖ್ ನಟನಾಗಿಯೂ ಇದೇ ರೀತಿ. ಎಪ್ಪತ್ತರ ಮತ್ತು ಎಂಬತ್ತರ ದಶಕಗಳಲ್ಲಿ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್‌ಗಳು, ಆಂಗ್ರಿ ಯಂಗ್ ಮ್ಯಾನ್‌ಗಳು ದೇಶಾದ್ಯಾಂತ ಸೂಪರ್ ಮ್ಯಾನ್‌ಗಳಾಗಿ, ಕೈಗೆಟುಕದ ತಾರೆಗಳಾಗಿ ಅಬ್ಬರಿಸುತ್ತಿದ್ದರೆ ನಮ್ಮ ಫರೂಕ್ ಶೇಖ್ ಆ ದೇಶದೊಳಗಿನ ಸಾಮಾನ್ಯ ಜನರ ಪಾತ್ರವಾಗಿ ಈ ನೆಲದೊಳಗೆ ಬೇರು ಬಿಟ್ಟು ತಣ್ಣಗೆ ನಟಿಸುತ್ತಿದ್ದ. ಅಮೊಲ್ ಪಾಲೇಕರ್‌ನೊಂದಿಗೆ ಸೇರಿ ಜನಸಾಮಾನ್ಯರಿಗೆ ಐಡೆಂಟಿಟಿ ತಂದುಕೊಟ್ಟಿದ್ದ. ಆತನ Underplay ಶೈಲಿಯ ನಟನೆ ಜನಸಾಮಾನ್ಯ ಪ್ರೇಕ್ಷಕರನ್ನು ಗೆದ್ದಿತ್ತು. ಪ್ರೇಮವನ್ನು ನಿವೇದಿಸಲು ಮರ ಸುತ್ತಬೇಕಾಗಿಲ್ಲ, ಕುಣಿಯಬೇಕಿಲ್ಲ, ವ್ಯವಸ್ತೆಯೊಂದಿಗೆ ಹೋರಾಡಬೇಕಿಲ್ಲ, ಸುಂದರಾಂಗನಾಗಬೇಕಿಲ್ಲ, ಬದಲಾಗಿ ನನ್ನ ಹಾಗೆ ಖುಜುತ್ವದಿಂದ Underplay ಗುಣದಿಂದ, ತೊದಲು ನುಡಿಯಿಂದ ಗೆಳತಿಯ ಅಪ್ತ ಮತ್ತು ಮನದಾಳದ ಪ್ರೇಮಿಯಾಗಬಹುದು ಎಂದು ತೋರಿಸಿಕೊಟ್ಟಿದ್ದು ಫರೂಕ್ ಶೇಖ್. ರಾಜೇಶ್ ಖನ್ನಾನಿಗೆ ರಕ್ತದಲ್ಲಿ ಪ್ರೇಮ ಪತ್ರವನ್ನು ಬರೆಯುವಂತ ಹುಡುಗಿಯರ ಆರಾಧ್ಯ ದೈವವಾಗಿರಲಿಲ್ಲ ಫರೂಕ್ ಶೇಖ್. ಆದರೆ ನನಗೂ ಇಂತಹ ಜೊತೆಗಾರ ಸಿಕ್ಕರೆ ಎಷ್ಟು ಚೆನ್ನ ಎಂದು ಯುವತಿಯರು ಮನದಲ್ಲಿ ಹುಡುಕಾಟ ನಡೆಸುವಂತಹ ಅಪ್ತತೆಯನ್ನು ತಂದು ಕೊಟ್ಟದ್ದು ಫರೂಕ್ ಶೇಖ್‌ನ ಯಶಸ್ಸು.

“ಗರಂ ಹವಾ” ಚಿತ್ರದಲ್ಲಿ ಬಲರಾಜ್ ಸಾಹ್ನಿಯ ಮಗನಾಗಿ ಸಿಕಂದರ್ ಮಿರ್ಜಾ ಪಾತ್ರದಲ್ಲಿ ಮನಸೆಳೆಯುವಂತೆ ನಟಿಸಿದ್ದ ಫರೂಕ್ ಶೇಖ್ ಮುಸ್ಲಿಂರ ತಲ್ಲಣಗಳನ್ನು ಮನೋಜ್ಞವಾಗಿ ವ್ಯಕ್ತಪಡಿಸಿ ಮನದಲ್ಲಿ ನೋವು ಮೂಡಿಸಿದ್ದ. “ಗಮನ್” ಚಿತ್ರದಲ್ಲಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಕ್ಕೆ ಗುಳೇ ಬರುವ ಯುವಕನ ಪಾತ್ರದಲ್ಲಿ ಆತನ Underplay ಶೈಲಿಯ ನಟನೆಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ನಗರದ ದೌರ್ಜ್ಯನ್ಯಕ್ಕೆ,ಕ್ರೂರತೆಗೆ ಗೋಳಾಡಿ,ನರಳಾಡಿ ನಟಿಸುವ ಅವಶ್ಯಕತೆ ಇಲ್ಲ, ನನ್ನಂತೆ ಪಾತ್ರದೊಳಗೆ ಸೇರಿಕೊಂಡು Underplay ಶೈಲಿಯ ನಟನೆ ಎಲ್ಲವನ್ನೂ ಹೇಳಿಬಿಡುತ್ತದೆ ಎಂದು ಹೇಳುವಂತೆ ನಟಿಸಿದ್ದ ಫರೂಕ್ ಶೇಖ್. ಅಲ್ಲಿ ಅವನು ನಮ್ಮಲ್ಲಿ ಮೂಡಿಸಿದ್ದು ವಿಷಾದದ ಛಾಯೆ. ಇದು ಸ್ಮಿತಾ ಪಾಟೀಲ್ ಶೈಲಿ. ಸತ್ಯಜಿತ್ ರಾಯ್ ಅವರ “ಶತರಂಜ್‌ಕೆ ಖಿಲಾಡಿ”ಯಲ್ಲಿ ಅಕೀಲ್ ನ ಪಾತ್ರದಲ್ಲಿ ನಟಿಸಿದ್ದ.

“ನೂರಿ” ಚಿತ್ರದಲ್ಲಿ ಪೂನಂ ಧಿಲ್ಲೋನ್‌ಳೊಂದಿಗೆ ಯುವ ಪ್ರೇಮಿಯಾಗಿ ನಟಿಸಿದ್ದ ಫರೂಕ್ ಶೇಖ್ ಆ ಸಿನಿಮಾದ ಯಶಸ್ಸಿನಿಂದ ಬಾಲಿವುಡ್‌ನ ಗಲಭೆಯಲ್ಲಿ ಕಳೆದು ಹೋಗುವ ಅಪಾಯದಿಂದ ಸ್ವತಃ ತನ್ನ ವಿವೇಚನೆಯಿಂದ, ಕಾಮನ್‌ಸೆನ್ಸ್‌ನಿಂದ ಪಾರಾಗಿದ್ದ. ಆಗ ಈತನಿಗೆ ಸಾಥ್ ನೀಡಿದ್ದು ನಟಿ ದೀಪ್ತಿ ನಾವೆಲ್. ಇವರಿಬ್ಬರು ನಟಿಸಿದ “ಚಸ್ಮೆ ಬದ್ದೂರ್”,”ಸಾಥ್ ಸಾಥ್”,ಕಥಾ”,”ರಂಗ್ ಬಿರಂಗಿ”,”ಬಾಜಾರ್” ನಂತಹ ಸಿನಿಮಾಗಳು ಹೊಸ ಬಗೆಯ ಅಹ್ಲಾದವನ್ನು, ಹಾಯ್ ಎನ್ನಿಸುವಂತಹ ಸಮಾಧಾನವನ್ನು, ಅರೇ ಅಲ್ಲಿರುವವರು ನಾವಲ್ಲವೇ ಎನ್ನುವಂತಹ ಐಡೆಂಟಿಟಿಯನ್ನು ತಂದುಕೊಟ್ಟವು. ಫರೂಕ್ ಶೇಖ್ ಇದನ್ನೆಲ್ಲಾ ಸಾಧಿಸಿದ್ದು ಮುಗ್ಧತೆಯಿಂದ,ನೆಲದೊಳಗೆ ಬೇರು ಬಿಟ್ಟು ಆಕಾಶದ ನಕ್ಷತ್ರಕ್ಕೆ ಕೈಚಾಚದೆ ಹಾಗೆ ಸುಮ್ಮನೆ ಎನ್ನುವ ಗುಣದಿಂದ.

ಲಾ ಅನ್ನು ಓದಿಕೊಂಡಿದ್ದ ಫರೂಕ್ ಶೇಖ್ ನಾಟಕದೆಡೆಗೆ ಆಕರ್ಷಿತನಾಗಿ ತಾರುಣ್ಯದಲ್ಲಿ ಇಪ್ಟಾ ತಂಡದೊಂದಿಗೆ ಗುರುತಿಸಿಕೊಂಡಿದ್ದ. ಗರಂ ಹವಾ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ. ನಾಟಕದ ದಿನಗಳ ಸಹನಟಿ ರೂಪ ಅವರನ್ನು ಪ್ರೇಮಿಸಿ ಮದುವೆ ಆದ. 2010 ರಲ್ಲಿ “ಲಾಹೋರ್” ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅವಾರ್ಡ ಪಡೆದಿದ್ದ.

ದೀಪ್ತಿ ನಾವೆಲ್, ಫರೂಕ್ ಶೇಖ್, ಸ್ಮಿತಾ ಪಟೇಲ್, ಶಬನಾ ಅಜ್ಮಿ, ನಾಸಿರುದ್ದೀನ್ ಶಾ, ಓಂಪುರಿ ಇವರ ಕಾಲ ನಿಜಕ್ಕೂ ಹಿಂದಿ ಚಿತ್ರರಂಗದ ಗೋಲ್ಡನ್ ಯುಗ. ಏಕೆಂದರೆ ಇವರು ತಮ್ಮದೇ ರೀತಿಯಲ್ಲಿ ಒಂದು ತಲೆಮಾರನ್ನು ರೂಪಿಸಿದರು. ಅದು ನಮ್ಮ ತಲೆಮಾರು. ಏನಾದರೂ ಆಗದಿದ್ದರೂ ಪರವಾಗಿಲ್ಲ, ಸ್ವಂತಿಕೆಯನ್ನು ಬಿಟ್ಟುಕೊಟ್ಟು ಕಳೆದು ಹೋಗಬೇಡ ಎಂದು ಹೇಳಿಕೊಟ್ಟ ಇವರಿಗೆ ನಾವೆಲ್ಲ  “ಥ್ಯಾಂಕ್ಸ್ ಸರ್,ಥ್ಯಾಂಕ್ಸ್ ಮೇಡಂ” ಎಂದು ಹೇಳುತ್ತೇವೆ.