Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

Elephant Corridor…ಎಂಬ ಆನೆ ದಾರಿ

-ಪ್ರಸಾದ್ ರಕ್ಷಿದಿ

ಕಾಡಾನೆಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.  ಪ್ರತಿನಿತ್ಯವೆಂಬಂತೆ ಪತ್ರಿಕೆಗಳಲ್ಲಿ ಆನೆಗಳಿಂದ ಗಾಯಗೊಂಡಿರುವವರ, ಸತ್ತುಹೋದವರ ವರದಿಗಳು ಬರುತ್ತಿವೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಪ್ರದೇಶಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಮೂವತ್ತನ್ನು ದಾಟಿದೆ. ಆದರೆ ನಗರ ಪ್ರದೇಶಕ್ಕೆ ಆನೆಗಳು ಬಂದು ದಾಂಧಲೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ವ್ಯಾಪಕ ಪ್ರಚಾರ ಮಾತ್ರ ರೈತರು ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಮಾಮೂಲಿನಂತೆ ಜನರು ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಆಕ್ರೋಶ ತೋರುತ್ತಾರೆ. ಅವರೂ ಕೂಡಾ ತೇಪೆ ಹಚ್ಚಿದಂತೆ ಆ ಆನೆಯನ್ನು ಬೆದರಿಸಿಯೋ ಅರಿವಳಿಕೆ ನೀಡಿಯೋ ಇನ್ನೊಂದೆಡೆ ಸಾಗಹಾಕಿ ಸಧ್ಯದ ಮಟ್ಟಿಗೆ ಬಚಾವಾದೆವೆಂದು ಸುಮ್ಮನಾಗುತ್ತಾರೆ.

ಕೇವಲ ಇಪ್ಪತ್ತು ವರ್ಷಗಳ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಆನೆಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದ ಆನೆಗಳು ಮಾಡಿದ ಹಾವಳಿಯೋ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಆನೆಗಳು ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ ಹತ್ತು ವರ್ಷಗಳಿಂದ ಆನೆಗಳ ಉಪಟಳ ಪ್ರಾರಂಭವಾಯಿತು.

ನಮ್ಮ ತಾಲ್ಲೂಕಿನಲ್ಲಿ ಆನೆಗಳಿಂದ ತೊಂದರೆ ಅನುಭವಿಸಿದ ಇಬ್ಬರು ರೈತರ ಮಾತುಗಳೊಂದಿಗೆ ಮುಂದಿನ ವಿಚಾರವನ್ನು ವಿವರಿಸುತ್ತೇನೆ. ಒಬ್ಬರು ಹಿರಿಯ ರೈತರು-ವಿದ್ಯಾವಂತರು, ಒಂದು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದವರು. ಅವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆಬೆಳೆಯನ್ನು ನಾಶಮಾಡಿದ್ದವು, ಕಾಫಿ ತೋಟವೂ ಹಾನಿಗೊಳಗಾಗಿತ್ತು ಯಂತ್ರೋಪಕರಣಗಳು ಜಖಂಗೊಂಡಿದ್ದವು. ಆ ಸಂದರ್ಭದಲ್ಲಿ ನಾನೊಮ್ಮೆ ಅವರನ್ನು ಭೇಟಿಯಾಗಿದ್ದೆ. ಅವರಿಗುಂಟಾದ ನಷ್ಟದ ಬಗ್ಗೆ ಮಾತನಾಡುತ್ತ, ಸರ್ಕಾರದಿಂದ ಏನಾದರೂ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೀರಾ ಎಂದು ಅವರನ್ನು ಕೇಳಿದೆ. ಅದಕ್ಕವರು ಅದೆಲ್ಲ ಸರಿ ಆದರೆ ಏನು ಮಾಡೋದು ಅವರು (ಆನೆಗಳು) ನಮಗಿಂತ ಸಾವಿರಾರು ವರ್ಷ ಮೊದಲೇ ಭೂಮಿಗೆ ಬಂದವರು.  ಅವರ ಜಾಗದಲ್ಲಿ ನಾವು ಬಂದು ಕೂತಿದ್ದೀವಿ, ತಪ್ಪು ನಮ್ಮದೇ ಅನುಭವಿಸಬೇಕು ಎಂದರು.

ಇನ್ನೊಂದು ಘಟನೆ ಇತ್ತೀಚಿನದ್ದು. ಆನೆ ಧಾಳಿಯಿಂದ ರೈತರೊಬ್ಬರು ಮೃತಪಟ್ಟಿದ್ದರು. ಮೃತ ದೇಹದ ಪಕ್ಕದಲ್ಲಿ ಕುಳಿತಿದ್ದ ಅವರ ಮಗ ನಾವು ಗಣಪತೀನ ಇಷ್ಟೊಂದು ಪೂಜೆ ಮಾಡ್ತೀವಿ ಏನನ್ಯಾಯ ಮಾಡ್ದ ಅಂತ ಗಣಪತಿ ನಮ್ಮಪ್ಪನ್ನ ಕರ್ಕೊಂಡು ಹೋದ… ಎಂದು ಬಂದವರೆಲ್ಲರ ಮುಂದೆ ಹೇಳುತ್ತ ರೋಧಿಸುತ್ತಿದ್ದ.

ಮೊದಲನೆಯವರದು ಸಂಪೂರ್ಣ ಅರಿವಿನೊಂದಿಗೆ ಬಂದಂತಹ  ಪ್ರತಿಕ್ರಿಯೆಯಾದರೆ, ಎರಡನೆಯವರದ್ದು ಮುಗ್ಧ ಭಾವುಕ ಅಳಲು. ಆದರೆ ಗಮನಿಸಬೇಕಾದ ಅಂಶವೆಂದರೆ, ಇಷ್ಟೆಲ್ಲ ಅನುಭವಿಸಿದ ಮೇಲೂ ಇಬ್ಬರಲ್ಲೂ ಆನೆಗಳ ಬಗ್ಗೆ ಸಿಟ್ಟಾಗಲೀ ದ್ವೇಷವಾಗಲೀ ಇಲ್ಲದಿರುವುದು.

ಇದು ನಮ್ಮ ರೈತರ ಸಾಮಾನ್ಯ ಮನೋಧರ್ಮವನ್ನು ತೋರಿಸುತ್ತದೆ. ಕೆಲವರು ದುಷ್ಕರ್ಮಿಗಳೋ, ದಂತ ಚೋರರೋ ಆನೆಗಳನ್ನು ಕೊಂದಿದ್ದಾರಲ್ಲದೆ, ರೈತರು ಆನೆಗಳನ್ನು ಕೊಂದಿರುವ ಪ್ರಕರಣಗಳು ಬಹಳ ಕಡಿಮೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಧಾರ್ಮಿಕ ಭಾವನೆಗಳು ಮತ್ತು ಹಾಗೂ ಕಾನೂನಿನ ಭಯ ಕಾರಣವಾಗಿದೆ. ( ಕಾನೂನಿನ ಭಯವಿದ್ದಾಗಲೂ ಆಹಾರಕ್ಕೆ ಬಳಸುವ ಕಾಡು ಪ್ರಾಣಿಗಳ ಬೇಟೆ ಇಂದಿಗೂ ನಡೆದೇ ಇದೆ) ಆದರೆ ರೈತರು ಆನೆಗಳನ್ನು ಕೊಲ್ಲದಿರಲು ಅದೊಂದೇ ಕಾರಣವಲ್ಲ.

ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧವಾದ ಆನೆಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪಿಗೆ ಸೇರಿದವುಗಳು. ಇವು ಬಯಲು ಸೀಮೆಗೂ ಧಾಳಿ ಮಾಡುತ್ತವೆ. ಹಗಲೆಲ್ಲ ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆಯುತ್ತವೆ. ಇವುಗಳನ್ನು ಪುಂಡಾನೆಗಳೆಂದು ಕರೆಯತ್ತಾರೆ. ಇವು ಸತತವಾಗಿ ಹಳ್ಳಿಗಳತ್ತ ಬಂದು, ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿರುವ ಈ ಆನೆಗಳು ತುಂಬಾ ಅಪಾಯಕಾರಿಯಾಗಿವೆ. (ಸಾಮಾನ್ಯವಾಗಿ ಒಂದು ಕಾಡಾನೆ ತನ್ನ ಆಹಾರಕ್ಕಾಗಿ ಅರಣ್ಯದಲ್ಲಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತದೆ), ಹಾಸನ-ಕೊಡಗಿನ ಗಡಿ ಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆ ನಾಶಮಾಡಿ ತಿಂದು ಬೆಳಗಿನ ಜಾವ ತಮ್ಮ ಅಡಗುತಾಣ ಸೇರುತ್ತವೆ. ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ನಡೆಸುತ್ತವೆ. ಯಂತ್ರೋಪಕರಣಗಳನ್ನೂ ಹಾಳುಗೆಡವುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ಧಾಳಿಗೊಳಗಾಗಿದ್ದಾರೆ. ಇವುಗಳನ್ನು ಮತ್ತೆ ಕಾಡಿಗೆ ಅಟ್ಟಿದರೂ ಅವು ಹೋಗಲಾರವು. ಆದ್ದರಿಂದ ಈ ಆನೆಗಳನ್ನು ಹಿಡಿದು, ಸಾಧ್ಯವಾದರೆ ಪಳಗಿಸುವುದು-ಇಲ್ಲವೇ ಆನೆಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸಾಗಿಸುವುದೊಂದೇ ಪರಿಹಾರದ ದಾರಿ.

ಎರಡನೆ ವಿಧದ ಆನೆಗಳು ಈ ರೀತಿಯವಲ್ಲ. ದಟ್ಟ ಅರಣ್ಯಗಳಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡು ಹಿಂದಿರುಗುವ ಈ ಆನೆಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶ ಮಾಡುವುದು ಕಡಿಮೆ.  ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿತಪ್ಪಿಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ದಾಳಿ ಮಾಡುವುದಿಲ್ಲ. ಕೆಲವು ಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ  ರೊಚ್ಚಿಗೆದ್ದು ದಾಳಿ ಮಾಡಿವೆ. ಈ ರೀತಿಯ ಆನೆಗಳು ಅನೇಕ ವರ್ಷಗಳಿಂದಲೂ  ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿಯಾಗಿತ್ತು. ಸಾಮಾನ್ಯವಾಗಿ ಮಲೆನಾಡಿನ ಜನ  ಈ ರೀತಿಯ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ.  ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಇದೀಗ ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತಿವೆ. ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ.  ಪರಂಪರಾಗತ ಆನೆದಾರಿಗಳು ತುಂಡರಿಸಿಹೋಗಿವೆ.

ಆನೆ ನಡೆದದ್ದೇ ದಾರಿ ಎಂಬ ಗಾದೆ ಮಾತಿದೆ. ಅದು ಆನೆಯ ಶಕ್ತಿ ಸಾಮಥ್ರ್ಯಗಳನ್ನು ಪರಿಚಯಿಸಲು ಹೇಳುವ ಮಾತು. ಆನೆಗಳು ಯಾವತ್ತೂ ಶಿಸ್ತಿನಿಂದ, ಶತಮಾನಗಳಷ್ಟು ಕಾಲದಿಂದ ಪಶ್ಚಿಮಘಟ್ಟಗಳಲ್ಲಿ ಸಂಚರಿಸುತ್ತಾ ತಾವಾಗಿಯೇ ನಿರ್ಮಿಸಿಕೊಂಡಿರುವ  ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಬಯಸುತ್ತವೆ. ಇವುಗಳನ್ನೇ ‘ಆನೆದಾರಿ’ಗಳೆನ್ನುವುದು. ಆದರೆ ಮನುಷ್ಯನೇ ಅವುಗಳ ದಾರಿಯಲ್ಲಿ ಅಡ್ಡ ನಿಂತಿದ್ದಾನೆ. ಆದ್ದರಿಂದಲೇ ತಮ್ಮ ನೆಲೆಯಿಂದ ಕದಲಿ ಹೋಗಿರುವ ಆನೆಗಳು ಮಾತ್ರವಲ್ಲ ಅನೇಕ ಕಾಡು ಪ್ರಾಣಿಗಳು ಸಹ ಇಂದು ಎಲ್ಲೆಂದರಲ್ಲಿ ಜನವಸತಿಗಳತ್ತ ನುಗ್ಗಿ ಬರುತ್ತಿವೆ.

ಈ ಎಲ್ಲ ಅನಾಹುತಗಳು ನಡೆಯುತ್ತಿರುವಾಗ ಸುಮ್ಮನಿದ್ದ ಸರ್ಕಾರಗಳು, ಇತ್ತೀಚಿನ ದಿನಗಳಲ್ಲಿ ಪರಿಸರನಾಶ ಮತ್ತು ಆನೆಗಳ ಉಪಟಳಗಳ ಬಗ್ಗೆ ವ್ಯಾಪಕವಾದ ಪ್ರಚಾರ ಮತ್ತು ಜನರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಕಂಡುಬರುತ್ತಿರುವುದರಿಂದ ಎಚ್ಚೆತ್ತುಕೊಂಡಂತೆ ಮಾತನಾಡುತ್ತಿವೆ. ಕೇಂದ್ರ-ರಾಜ್ಯ ಸರ್ಕಾರಗಳು ಪರಸ್ಪರ ದೂಷಣೆ ಮಾಡುತ್ತ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಕಾಲಹರಣ ಮಾಡಿ ಇದೀಗ ಆನೆದಾರಿಯನ್ನು ನಿರ್ಮಿಸುವ ಯೋಜನೆಯನ್ನು ಜನರ ಮುಂದಿಡುತ್ತಿವೆ. ಆನೆಗಳು ಪರಂಪರಾಗತವಾಗಿ ಬಳಸುತ್ತಿರುವ ಹಲವಾರು ‘ಆನೆದಾರಿ’ಗಳನ್ನು ಮತ್ತೆ ಆನೆಗಳಿಗೆ ಮುಕ್ತಗೊಳಿಸುವ ಮಾತನ್ನು ಯಾವ ಸರ್ಕಾರವೂ ಆಡುತ್ತಿಲ್ಲ. ಬದಲಿಗೆ  elephant corridor ಗಳನ್ನು ‘ನಿರ್ಮಿಸುವ’ ಮಾತನಾಡುತ್ತಿವೆ. ವಿದ್ಯುತ್ ಕೊರತೆಯಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ದೂರಿದರೆ, ಕೇಂದ್ರ ಸಚಿವರೊಬ್ಬರು ರಾಜ್ಯದ ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರವೇ ಹೊಣೆ, ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅರುವತ್ತು ಕಡತಗಳಿಗೆ ರಾಜ್ಯ ಸಕಾರ ಇನ್ನೂ ಅನುಮತಿ ನೀಡದಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಗತಿ ಕುಂಠಿತವಾಗಿದೆ ಎನ್ನುತ್ತಾರೆ. ಈಗ ಅನುಮತಿ ಸಿಕ್ಕಿರುವ ಕಂಪೆನಿಗಳು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಘಟ್ಟಪ್ರದೇಶವನ್ನು ಹಾಳುಗೆಡವಿರುವುದರ ಬಗ್ಗೆ, ಮತ್ತು ಆ ಅರುವತ್ತು ಯೋಜನೆಗಳೂ ಮತ್ತದೇ ದಟ್ಟಅರಣ್ಯ ಪ್ರದೇಶದಲ್ಲಿ ಬರುತ್ತದೆಂಬ ವಿಚಾರದ ಬಗ್ಗೆ, ಜಾಣ ಕಿವುಡುತನ ತೋರುತ್ತಾರೆ.

ಕೆಲವು ದಿನಗಳ ಹಿಂದೆ ರಾಜ್ಯದ ಸಚಿವರೊಬ್ಬರು ಆನೆಗಳಿಂದ ತೊಂದರೆಗೊಳಗಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸಾಕಷ್ಟು ವಿವರವಾಗಿಯೇ ಮಾಹಿತಿಗಳನ್ನು ಸಂಗ್ರಹಿಸಿದರು. ಅವರೆದುರಿನಲ್ಲೇ ಆನೆಗಳು ಕೂಲಿಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದ ಘಟನೆಯೂ ನಡೆಯಿತು. ಮತ್ತದೇ ಆನೆದಾರಿ ನಿರ್ಮಾಣ ಭರವಸೆಯನ್ನು ನೀಡಿ ಸಚಿವರು ವಾಪಸ್ಸಾದರು.

ಇವರೆಲ್ಲ ನಿರ್ಮಾಣ ಮಾಡಲು ಬಯಸುವ ಆನೆದಾರಿ  ಅವುಗಳ ಪರಂಪರಾಗತ ಮಾರ್ಗದಲ್ಲಿ ಇಲ್ಲ, ಬದಲಿಗೆ ಇವರು ಹೇಳುವಂತೆ ಆನೆದಾರಿಗಳಲ್ಲಿ ಕೃಷಿ ಮಾಡಿಕೊಂಡಿರುವ  ರೈತರನ್ನೆಲ್ಲ ಪರಿಹಾರ ನೀಡಿ ಸ್ಥಳಾಂತರಿಸಿ ಮಾಡಲಿರುವ ಹೊಸ ಆನೆದಾರಿಗಳಿವು. ಆದರೆ ಹೆಚ್ಚಿನ ಹಳೆಯ ಆನೆ ದಾರಿಗಳಲ್ಲಿ ಯಾರೂ ಕೃಷಿ ಮಾಡಿಕೊಂಡಿಲ್ಲ. ಕೃಷಿಕರು ನೆಲೆಸಿದ್ದ ಒಂದೆರಡು ಆನೆದಾರಿಗಳಲ್ಲಿ ಕೂಡಾ ಆನೆಗಳು ಉಪಟಳ ಕೊಟ್ಟದ್ದಿಲ್ಲ. ಸಾಮಾನ್ಯವಾಗಿ  ವರ್ಷಕ್ಕೆರಡು ಬಾರಿ ಅವು ಅಲ್ಲಿ ಹಾದು ಹೋಗುತ್ತಿದ್ದವು. ಆಗೆಲ್ಲ ಒಂದೆರಡು ಬಾಳೆಯನ್ನೋ ಬೈನೆಯನ್ನೋ ಮುರಿದು ತಿಂದಿರುತ್ತಿದ್ದವು. ಆನೆ ಬಂದು ಹೋದದ್ದೇ ಮಹಾಪ್ರಸಾದವೆಂದು ರೈತರು ನಂಬಿ ನಡೆದು ಸಹಬಾಳ್ವೆ ಸಾಧಿಸಿದ್ದರು. ಆದರೆ ಈಗ ಅಭಿವೃದ್ದಿಯ ಹೆಸರಿನಲ್ಲಿ ನಾಶ ಮಾಡಿದ ಆನೆದಾರಿಗಳಿಗೆ ಬದಲಾಗಿ ಇನ್ನೆಲ್ಲೋ ದಾರಿ ನಿರ್ಮಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಆನೆ ದಾರಿ ನಿರ್ಮಿಸುತ್ತೇವೆಂದು ಅರಣ್ಯದ ಅಂಚಿನಲ್ಲಿರುವ ಕೃಷಿಕರನ್ನು ಹೊರದಬ್ಬಿ ಮತ್ತಷ್ಟು ಅಭಿವೃದ್ಧಿ ಗಾಗಿ ಜಲವಿದ್ಯುತ್ ಕಂಪೆನಿಗಳಿಗೆ ಭೂಮಿನೀಡುವ ಹುನ್ನಾರದ ಭಾಗವಷ್ಟೇ ಆಗಿದೆ.

ಆನೆ ದಾರಿಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲು ಅನೇಕ ರೈತರು ಸಿದ್ಧರಿದ್ದಾರೆಂದು ಸ್ಥಳ ಪರಿಶೀಲನೆ ನಡೆಸಿದ ರಾಜ್ಯದ ಸಚಿವರು ಹೇಳಿಕೆಯಿತ್ತರು. ಆನೆ ದಾರಿಯೇನು ವಿದ್ಯುತ್ ಯೋಜನೆಯಿರಲಿ, ಗಣಿಗಾರಿಕೆಯಿರಲಿ, ಯಾವುದೇ ಉದ್ಯಮಕ್ಕಾದರೂ ಸರಿ ದೇಶದ ಪ್ರಗತಿಯನ್ನು ಬಯಸುವ ಆಭಿವೃಧ್ಧಿಪರ ರೈತರು ತಮ್ಮ ಜಮೀನನ್ನು ಬಿಟ್ಟು ಕೊಡಲು ತಯಾರಿದ್ದಾರೆಂಬ ಹೇಳಿಕೆಯನ್ನು ಆಧಿಕಾರದಲ್ಲಿರುವ ಪ್ರತಿಯೊಂದು ಸರ್ಕಾರವೂ (ಪಕ್ಷಬೇಧವಿಲ್ಲದೆ) ನೀಡುತ್ತಲೇ ಇರುತ್ತವೆ. ರೈತರು ತಮ್ಮ ಕಣ್ಣೆದುರೇ ಇರುವ ದುರಂತವನ್ನು ತಿಳಿದೂ ಈ ನಿಧರ್ಾರಕ್ಕೆ ಬರಲು ಅನೇಕ ಕಾರಣಗಳಿವೆ. ಇದು ವ್ಯಾಪಾರೀ ಸಂಸ್ಕೃತಿಯ ಕೊಡುಗೆಯಾದ ಜಾಗತಿಕ ವಿದ್ಯಮಾನ. ಆದರೆ ಈ ವಿಚಾರವನ್ನು ಆನೆದಾರಿ ನಿರ್ಮಾಣದ ಯೋಜನೆಯ ಪ್ರಸ್ತಾಪವಾಗುತ್ತಿರುವ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತ ಗೊಳಿಸಿ ಹೇಳುವುದಾದರೆ, ಮುಖ್ಯವಾಗಿ ಅಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ.  ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಘಟ್ಟ ಪ್ರದೇಶದ ಈ ಭಾಗದಲ್ಲಿರುವ ರೈತ ಇಲ್ಲಿನ ಪಾರಂಪರಿಕ ಬೆಳೆಗಳನ್ನೂ ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೂಲಿಕಾರ್ಮಿಕರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ.  ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ನಿರಾಶನಾಗಿ ಕುಳಿತಿದ್ದಾನೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ.  ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿ ಪಡೆಯಬಹುದು, (ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ) ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಹಿಡಿದು, ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು. ದೊಡ್ಡ ಕೈಗಾರಿಕೆಗಳಿಗೆ ಹಾಗೂ ಐ.ಟಿ.-ಬಿ.ಟಿ ಕಂಪೆನಿಗಳಿಗೆ ಸರ್ಕಾರಗಳು ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು ಉದಾಹರಣೆಗೆ ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರ. ಇದೀಗ ಆನೆ ದಾರಿ ನಿರ್ಮಾಣಕ್ಕೆಂದು ಇವರು ನೀಡುತ್ತೇವೆಂದು ಹೇಳುತ್ತಿರುವ ಮೊತ್ತವೂ ಅಷ್ಟೇ ಸಣ್ಣದು.

ಇನ್ನು ಇಲ್ಲಿರುವ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ, ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಮಕ್ಕಳಿಗೆ ನಾನಾ ಕಾರಣಗಳಿಂದ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲಾಗದ, ಅಥವಾ ಇನ್ನಿತರ ಯಾವುದೇ ಕಸುಬನ್ನು ಅರಿಯದ ರೈತರೂ ಇದ್ದಾರೆ. ಇವರಿಗೆ ತಾವು ಜಮೀನನ್ನು ಕೊಟ್ಟು ಇಲ್ಲಿಂದ ಹೊರನಡೆದರೆ ಮುಂದೆ ಗತಿಯೇನೆಂಬ ಆತಂಕವೂ ಇದೆ. ಅವರಲ್ಲಿ ಕೆಲವರು ಇಲ್ಲಿನ ಜಮೀನನ್ನು ಕೊಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ಅಥವಾ ಬೇರೆಕಡೆಯಲ್ಲಿ ಬದಲಿಯಾಗಿ ಉತ್ತಮ ಜಮೀನು ಸಿಕ್ಕಿದರೆ ಮಾತ್ರ ಇಲ್ಲಿಂದ ಹೊರಡುವ ಯೋಚನೆಯಲ್ಲಿದ್ದಾರೆ. ಆದರೆ ಇದುವರೆಗಿನ ಯಾವುದೇ ಸರ್ಕಾರವೂ ಈರೀತಿ ಸ್ಥಳಾಂತರಗೊಂಡ ರೈತರಿಗೆ ಸಮರ್ಪಕವಾಗಿ ಜಮೀನು ನೀಡಿದ ಉದಾಹರಣೆಗಳಿಲ್ಲ. ಜಮೀನಿಗೆ ಬದಲಾಗಿ ನೀಡುವ ಪರಿಹಾರದ ಹಣ ರೈತನ ಕೈ ಸೇರಿದೊಡನೆ ಖರ್ಚಾಗಿ ಹೋಗಲು ನೂರೆಂಟು ದಾರಿಗಳಿವೆ. ಒಂದು ವೇಳೆ ರೈತರು ವಿವೇಕಶಾಲಿಗಳಾಗಿ ಜಮೀನು ಕೊಳ್ಳಲು ಹುಡುಕಾಡಿದರೂ ಆ ವೇಳೆಗೆ ಇವರು ಕೊಳ್ಳಬಯಸುವ ಜಮೀನಿನ ಬೆಲೆ ಹಲವುಪಟ್ಟು ಏರಿರುತ್ತದೆ.

ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ನಮ್ಮ ‘ಅಭಿವೃದ್ಧಿ ಯೋಜನೆ’ ಗಳ ಪರಿಣಾಮವಾಗಿ ಅಂಡಲೆಯುತ್ತಿರುವ ಆನೆಗಳು ಹೀಗೇ ಉಳಿದರೆ ಪುಂಡಾನೆಗಳಾಗಿ ಪರಿವರ್ತನೆಯಾಗುವ ಅಪಾಯವಂತೂ ಇದ್ದೇ ಇದೆ. ಆದರೆ ಈಗ ಸರ್ಕಾರ ಆನೆದಾರಿ ನಿರ್ಮಿಸುತ್ತೇನೆಂದು ಹೇಳುತ್ತಾ ಅರಣ್ಯದ ಅಂಚಿನಲ್ಲಿರುವ ನೂರಾರು ಕೃಷಿಕರ ಜಮೀನನ್ನು ವಶಪಡಿಸಿಕೊಳ್ಳುವ ಮಾತನಾಡುತ್ತಿದೆ. ಇವರಲ್ಲೂ ಸರಿಯಾದ ದಾಖಲೆಗಳಿರುವವರು, ಇಲ್ಲದವರು, ಒತ್ತುವರಿದಾರರು. ಎಲ್ಲರೂ ಇದ್ದಾರೆ. ಅರಣ್ಯ ಭೂಮಿಯಾಗಲೀ ಕಂದಾಯ ಭೂಮಿಯಾಗಲೀ ಒತ್ತುವರಿಯಾಗಿ ಕೃಷಿಗೊಳಪಟ್ಟಿರುವ ವಿದ್ಯಮಾನ ನಾಲ್ಕೈದು ದಶಕಗಳಿಂದ ನಡೆದೇ ಇದೆ. (ಒತ್ತುವರಿ ಸರಿಯೆಂದು ನನ್ನ ವಾದವಲ್ಲ, ತನ್ನ ಜಮೀನನ್ನು ಕಾಯ್ದುಕೊಳ್ಳುವುದು ಯಾವುದೇ ಸರ್ಕಾರದ ಕರ್ತವ್ಯ ಕೂಡಾ) ಆದರೆ ಆಗ ಇರದಿದ್ದ ಆನೆಗಳ ಹಾವಳಿ ಈಗೇಕೆ ಉಲ್ಬಣವಾಗಿದೆಯೆಂಬ ಸರಳ ಸತ್ಯ, ಯಾರಿಗಾದರೂ ತಿಳಿಯುವಂತಹದ್ದೇ ಆಗಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ,  ಕೆಲವೊಮ್ಮೆ ಮೋಟಾರ್ ರ್‍ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಇವೂ ಕೂಡಾ ವನ್ಯಜೀವಿಗಳಿಗೆ ತೊಂದರೆಯನ್ನುಂಟುಮಾಡಿವೆ.

ಸರ್ಕಾರ ತುರ್ತಾಗಿ ಪುಂಡಾನೆಗಳಿಗಾಗಿ ಶ್ರೀಲಂಕಾದ ಮಾದರಿಯಲ್ಲಿ ಆನೆಧಾಮವನ್ನು ನಿರ್ಮಿಸಬೇಕು. ಇವು ಸೀಮಿತ ಪ್ರದೇಶದಲ್ಲಿ ಆನೆಗಳಿಗೆ ಆಹಾರಸಹಿತ ನೀಡುವ ಆಶ್ರಯತಾಣಗಳಾಗಿರುತ್ತವೆ. ಇನ್ನುಳಿದ ಆನೆಗಳಿಗಾಗಿ ನಾವು ಏನನ್ನೂ ಮಾಡಬೇಕಾಗಿಲ್ಲ. ನಮ್ಮ ಆಭಿವೃದ್ಧಿ ಕಾರ್ಯಗಳನ್ನೆಲ್ಲ ಪಶ್ಚಿಮ ಘಟ್ಟದ ಅರಣ್ಯ ಪದೇಶದಿಂದ ಶಾಶ್ವತವಾಗಿ ದೂರಮಾಡಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ. ಇದರೊಂದಿಗೆ ಸ್ವಇಚ್ಛೆಯಿಂದ ಅಲ್ಲಿಂದ ತೆರಳಲು ಬಯಸುವವರಿಗೆ (ಅನೇಕ ವರ್ಷಗಳಿಂದ ಅಲ್ಲಿ ನೆಲೆಸಿರುವ ಭೂರಹಿತ ಕೃಷಿಕಾರ್ಮಿಕರೂ ಸೇರಿದಂತೆ) ಉತ್ತಮ ಪರಿಹಾರ ನೀಡಿ ಸ್ಥಳಾಂತರಿಸಬೇಕು. ಆದರೆ ಸರ್ಕಾರಗಳು ಅಲ್ಲಿನ ಯಾವುದೇ ವಿದ್ಯುತ್ ಯೋಜನೆಯನ್ನಾಗಲಿ, ಇನ್ನಿತರ ಕಾಮಗಾರಿಗಳನ್ನಾಗಲೀ ನಿಲ್ಲಿಸುವ ಮಾತನಾಡುತ್ತಿಲ್ಲ. ಒಂದೊಮ್ಮೆ ಆನೆದಾರಿಯ ನೆಪದಲ್ಲಿ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡರೆ ಆ ನೆಲವೂ ಕೂಡಾ ಈ ಯೋಜನೆಗಳ ಪಾಲಾಗುವ ಅನುಮಾನ ಕಂಡುಬರುತ್ತಿದೆ. ಇದರಿಂದಾಗಿಯೇ ಕೆಲವು ‘ಅಭಿವೃದ್ಧಿಪರ’ ಹಿತಾಸಕ್ತಿಗಳು ಪಶ್ಚಿಮ ಘಟ್ಟ ಪ್ರದೇಶವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ವಿರೋಧಿಸುತ್ತಿರುವುದು. ನಮ್ಮ ಶಾಸಕಾಂಗ ಮತ್ತು ನಮ್ಮ ನೀತಿ ನಿರೂಪಕರುಗಳು ಸರಿದಾರಿಗೆ ಬರುವ ತನಕ ಆನೆದಾರಿಯ ಸಮಸ್ಯೆಗೆ ಉತ್ತರ ದೊರೆಯಲಾರದು.

ಕೊನೆಗೂ ಪರಿಸರಾಸಕ್ತರ, ರೈತರ, ಹೋರಾಟಕ್ಕೆ ಸಣ್ಣ ಜಯವೊಂದು ದೊರೆತ ಸುದ್ದಿ ಬಂದಿದೆ. ಜನರ ಒತ್ತಡಕ್ಕೆ ಮಣಿದು ಘಟ್ಟಪ್ರದೇಶದಲ್ಲಿ ಅನಾಹುತ ನಡೆಸಿದ್ದ ಜಲವಿದ್ಯುತ್ ಕಂಪೆನಿಯೊಂದರ ಕೆಲಸವನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ನೀಡಿದೆ (ಅದಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿಲ್ಲ). ಹಾಗೇ ಪುಂಡಾನೆಗಳನ್ನು ಹಿಡಿದು ದೂರದ ಮಧ್ಯಪ್ರದೇಶಕ್ಕೆ ಸಾಗಿಸುವಂತಹ ಅವೈಜ್ಞಾನಿಕ ಕ್ರಮವನ್ನು ಕೂಡಾ ತಜ್ಞರ ಮಾತಿಗೆ ಮಣಿದು ಹಿಂತೆಗೆದುಕೊಂಡು ಕಾವೇರಿನದಿಯ ಪಕ್ಕದಲ್ಲೇ ಆಶ್ರಯತಾಣ ನಿರ್ಮಿಸಲು ಮುಂದಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು. ಬೇರೆ ದಾರಿ….. ನಮಗೂ ಇಲ್ಲ-ಆನೆಗಳಿಗೂ ಇಲ್ಲ.

ಫೋಟೋ ಕೃಪೆ: sheldrickwildlifetrust.org

ಜೀವನದಿಗಳ ಸಾವಿನ ಕಥನ – 11

– ಡಾ.ಎನ್. ಜಗದೀಶ್ ಕೊಪ್ಪ

ಅಣೆಕಟ್ಟು ಅಥವಾ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾದವರಿಗೆ ಆಯಾ ಸರ್ಕಾರಗಳು ನೀಡುತ್ತಿರುವ ಪರಿಹಾರವೆಂಬುದು ಕಪಟ ನಾಟಕ ಎನ್ನುವುದು ಜಗತ್ತಿನೆಲ್ಲೆಡೆ ಸ್ಥಳಪರೀಕ್ಷೆಯಿಂದ ಧೃಡಪಟ್ಟಿದೆ. ವಿಸ್ಮಯವೆಂತೆ  ಈ ಅಣೆಕಟ್ಟುಗಳ ತಾಯಿ ಎನಿಸಿದ ವಿಶ್ವ ಬಾಂಕ್ ಕೂಡ ಹಲವಾರು ಬಾರಿ ತನ್ನ ವಾರ್ಷಿಕ ವರದಿಯಲ್ಲಿ ಸತ್ಯಾಂಶವನ್ನು ಮರೆಮಾಚದೆ ಬಿಚ್ಚಿಟ್ಟಿದೆ.

1986ರಿಂದ 1996ರವರೆಗೆ ತಾನು ಸಾಲ ನೀಡಿರುವ ರಾಷ್ಟ್ರಗಳ ಅಣೆಕಟ್ಟು ಕಾಮಗಾರಿ ಮತ್ತು ಪರಿಹಾರ ಯೋಜನೆಗಳನ್ನು ಪರಾಮರ್ಶಿಸಲು ನೇಮಕಮಾಡಿರುವ ಆಯೋಗದ ವರದಿಯನ್ನು ಆಧರಿಸಿ, ವಿಶ್ವಬಾಂಕ್ ತನ್ನ ವೈಫಲ್ಯತೆಯನ್ನು ತಾನೇ ಎತ್ತಿ ತೋರಿಸಿದ್ದು, ಅದು ಹೀಗಿದೆ:
“ವಿಶ್ವಬ್ಯಾಂಕ್‌ನ ಮೂಲಭೂತ ಗುರಿಗಳಲ್ಲಿ ಅಣೆಕಟ್ಟುಗಳಿಂದ ಸಂತ್ರಸ್ತರಾಗುವ ಜನತೆಯ ಬದುಕನ್ನು ಉನ್ನತಿಗೊಳಿಸಬೇಕೆಂಬುದು ಬ್ಯಾಂಕ್‌ನ ಗುರಿಯಾಗಿತ್ತು. ಆದರೆ ದೊರೆತಿರುವ ಅಂಕಿ ಅಂಶಗಳಿಂದ ಬ್ಯಾಂಕ್ ಈ ದಿಶೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಲು ವಿಷಾಧವಾಗುತ್ತಿದೆ.”

ಬಹುತೇಕ ಕಡೆ ಸಂತ್ರಸ್ತರಾದವರ ಬಡತನ ಮತ್ತೆ ಶೇ.40ರ ಪ್ರಮಾಣದಷ್ಟು ಹೆಚ್ಚಿರುವುದನ್ನು ಬ್ಯಾಂಕ್ ತನ್ನ ಸಮೀಕ್ಷೆಯಲ್ಲಿ ಧೃಡಪಡಿಸಿದೆ.

1994ರವರೆಗೆ ಜಗತ್ತಿನಾದ್ಯಂತ ಬ್ಯಾಂಕ್ ನೆರವು ನೀಡಿದ್ದ 192 ಅಣೆಕಟ್ಟು ಯೋಜನೆಗಳಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ಕೇವಲ ಹಣದ ರೂಪದಲ್ಲಿ ನೀಡಲಾಗಿದೆಯೆ ಹೊರತು ಅವರಿಗೆ ಪರ್ಯಾಯವಾದ ಭೂಮಿ ಅಥವಾ ನಿವೇಶನವನ್ನು ನೀಡದಿರುವುದು ಕಂಡುಬಂದಿದೆ. ಶೇ.70 ಮಂದಿಗೆ ಪರಿಹಾರ ರೂಪದಲ್ಲಿ ಹಣ, ಶೇ.15 ಮಂದಿಗೆ ಭೂಮಿ ನೀಡಿದ್ದರೆ, ಉಳಿದ ಶೆ. 15ರಷ್ಟು ನಿರಾಶ್ರಿತರಿಗೆ ದಾಖಲೆಗಳ ಕೊರತೆಯಿಂದ ಏನನ್ನೂ ನೀಡಲಾಗಿಲ್ಲ ಎಂಬುದನ್ನು ಪರಿಶೀಲನಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಪರಿಹಾರಕ್ಕಿಂತ ಮತ್ತೊಂದು ದೊಡ್ಡ ವಂಚನೆ ನಡೆದಿರುವುದು ಅಣೆಕಟ್ಟು ಯೋಜನೆಗೆ ಮುನ್ನ. ನಿರಾಶ್ರಿತರಾಗುವವರ ಕುರಿತು ತಯಾರಿಸಿದ ವರದಿಯಲ್ಲಿ. 192 ಅಣೆಕಟ್ಟುಗಳಿಂದ ಸಂತ್ರಸ್ತರಾಗುವವರ ಸಂಖ್ಯೆ 1 ಕೋಟಿ 34 ಲಕ್ಷ ಎಂದು ತಿಳಿಸಲಾಗಿದೆ. ಆದರೆ ನೈಜವಾಗಿ ಸಂತ್ರಸ್ತರಾದವರ ಸಂಖ್ಯೆ 1 ಕೋಟಿ 96 ಲಕ್ಷದ 50 ಸಾವಿರ. ಇದು ಕೇವಲ ವಿಶ್ವಬ್ಯಾಂಕ್‌ನಿಂದ ಸಾಲದ ನೆರವು ಪಡೆದ ಯೋಜನೆಗಳ ಸಂತ್ರಸ್ತರ ಅಂಕಿ ಅಂಶ. ಆದರೆ ವಿಶ್ವಬ್ಯಾಂಕ್ ಹೊರತುಪಡಿಸಿ, ಇನ್ನಿತರೆ ಹಣಕಾಸು ಸಂಸ್ಥೆ ಹಾಗೂ ಕೆಲವು ಸರಕಾರಗಳು ಸ್ವತಃ ಬಂಡವಾಳ ಹೂಡಿ ನಡೆಸಿದ ಅಣೆಕಟ್ಟು ಯೋಜನೆಗಳಿಂದ ಸ್ಥಳಾಂತರಗೊಂಡವರು ಜಗತ್ತಿನಾದ್ಯಂತ 6 ಕೋಟಿ 25 ಲಕ್ಷ.

ಇಂತಹ ಸುಳ್ಳು ಅಂಕಿ ಅಂಶಗಳನ್ನು ನೀಡುವ ಹಿಂದೆ ಸರಕಾರಗಳ ದೊಡ್ಡ ಹುನ್ನಾರವೇ ಅಡಗಿದೆ. ಅಣೆಕಟ್ಟು ಯೋಜನೆಗಳಿಂದ ಆಗಬಹುದಾದ ಪರಿಣಾಮಗಳು ಅತ್ಯಲ್ಪ ಹಾಗೂ ಯೋಜನೆಗಳಿಂದ ಉಂಟಾಗುವ ಲಾಭವೇ ಅಪಾರ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಉದ್ದೇಶಗಳಿಂದಲೇ ಇಂತಹ ಪೊಳ್ಳು ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ ಜನತೆಯ ಸ್ಥಳಾಂತರಕ್ಕಿಂತ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ವ್ಯವಸ್ಥಿತವಾಗಿ ಮರೆ ಮಾಚಲಾಗುತ್ತದೆ.

1984 ರಲ್ಲಿ ಆಫ್ರಿಕಾದ ರುವಾಂಡ ದೇಶದಲ್ಲಿ ನಿರ್ಮಿಸಿದ ರುಜಿಜಿ ಎಂಬ ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ತರಾಗುವವರು ಕೇವಲ 137 ಮಂದಿ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ವಾಸ್ತವವಾಗಿ ಸಂತ್ರಸ್ತರಾದವರ ಸಂಖ್ಯೆ 15 ಸಾವಿರ ಮಂದಿ. ಅದೇ ರೀತಿ ಕೀನ್ಯಾದಲ್ಲಿ ಟಾನಾ ನದಿಗೆ ಕಟ್ಟಿದ ಅಣೆಕಟ್ಟಿನಿಂದ 1 ಸಾವಿರ ಮಂದಿ ನಿರ್ವಸತಿಗರಾಗುತ್ತಾರೆ ಎಂದು ಸರಕಾರ ತನ್ನ ವರದಿಯಲ್ಲಿ ತಿಳಿಸಿತ್ತು. ವಿಶ್ವಬ್ಯಾಂಕ್ ಪರಿಶಿಲನೆ ಮಾಡಿದಾಗ 7 ಸಾವಿರ ಜನ  ಸ್ಥಳಾಂತರಗೊಂಡಿದ್ದರು.

ಭಾರತದ ಯೋಜನೆಗಳನ್ನು ಅವಲೋಕಿಸಿದಾಗ, ವರದಿಯಲ್ಲಿ ಅಂದಾಜಿಸಿದ್ದ ಸಂಖ್ಯೆಗಿಂತ ಹೆಚ್ಚು ಮಂದಿ ಸ್ಥಳಾಂತರಗೊಂಡಿರುವುದನ್ನು ನಾವು ಕಾಣಬಹುದು.

ಅಂದಾಜು ಸಂಖ್ಯೆ  ಸ್ಥಳಾಂತರಗೊಂಡವರು
ಆಲಮಟ್ಟಿ ಜಲಾಶಯ – ಕರ್ನಾಟಕ 20,000 2,40,000
ಸರ್ದಾರ್ ಸರೋವರ –
ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್
33,000 3,20,000
ಶ್ರೀಶೈಲಂ ನೀರಾವರಿ ಯೋಜನೆ 63,000 1,50,000
ಮಧ್ಯಪ್ರದೇಶ ನೀರಾವರಿ ಯೋಜನೆ 8,000 19,000
ಗುಜರಾತ್ ನೀರಾವರಿ ಯೋಜನೆ 63,600 1,40,370
ಮಹಾರಾಷ್ಟ್ರ ನೀರಾವರಿ ಯೋಜನೆ 8,031 16,080

ವಾಸ್ತವ ಸಂಗತಿಗಳನ್ನು ಹೇಗೆ ಮರೆಮಾಚಬಲ್ಲರು ಎಂಬುದಕ್ಕೆ ಈ ಕೋಷ್ಟಕ ಸಾಕ್ಷಿಯಾಗಿದೆ.

ಅಣೆಕಟ್ಟುಗಳ ನಿರ್ಮಾಣದಿಂದ ಉದ್ಭವಿಸುವ ಸಮಸ್ಯೆ ಕೇವಲ ಪರಿಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಜಲಾಶಯಗಳು ಸೃಷ್ಟಿಸುತ್ತಿರುವ ಹಲವಾರು ಮಾರಕ ರೋಗಗಳು ಸಂತ್ರಸ್ತರು ಹಾಗೂ ಜಲಾಶಯದ ಸುತ್ತ ಮುತ್ತಲಿನ ಜನಗಳ ಪಾಲಿಗೆ ನರಕ ಸದೃಶವಾಗಿದೆ. ಹಾಗಾಗಿ ಅಣೆಕಟ್ಟುಗಳನ್ನು ಹಾಗೂ ಜಲಾಯಗಳನ್ನು ರೋಗ ರುಜಿನಗಳ ತೊಟ್ಟಿಲು ಎಂದು ಕರೆದರೂ ಅತಿಶಯೋಕ್ತಿಯಾಗಲಾರದು.

Three Gorges Dam

Three Gorges Dam

ಜನತೆಯ ಆರೋಗ್ಯಕ್ಕೆ ಮಾರಕವಾಗಿರುವ ರೋಗವೆಂದರೆ ಕಳೆದ 3 ದಶಕಗಳಿಂದ ಮನುಕುಲವನ್ನು ಬಾಧಿಸುತ್ತಿರುವ ಏಡ್ಸ್ ಮಹಾಮಾರಿ. ಅಣೆಕಟ್ಟುಗಳ ನಿರ್ಮಾಣದ ಜೊತೆಜೊತೆಗೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಏಡ್ಸ್ ಖಾಯಿಲೆಗೆ ಅಗ್ರ ಸ್ಥಾನ. ಸಾಮಾನ್ಯವಾಗಿ ಅಣೆಕಟ್ಟು ಕಾಮಗಾರಿ ಕೆಲಸಗಳಲ್ಲಿ ಶೇ.80ರಷ್ಟು ಮಂದಿ ಯಾವುದೇ ಕುಶಲ ಕಲೆಯಿಲ್ಲದೆ ದುಡಿಯುವ ಶ್ರಮ ಜೀವಿಗಳು. ಇವರು ದಿನಗೂಲಿ ಆಧಾರದ ಮೇಲೆ ದೇಶದ ವಿವಿಧ ಸ್ಥಳಗಳಿಂದ ಅಣೆಕಟ್ಟು ಸ್ಥಳಕ್ಕೆ ಬಂದು ಕಾರ್ಮಿಕರಾಗಿ ದುಡಿಯುತ್ತಾ ಒಟ್ಟಾಗಿ ವಸತಿ ಕಾಲೋನಿಗಳಲ್ಲಿ ವಾಸಿಸುವುದು ವಾಡಿಕೆ. ಇವರುಗಳು ವಿವಿಧ ವಾತಾವರಣದ ಪ್ರದೇಶಗಳಿಂದ ಬರುವ ಕಾರಣ ಯಾವ ವ್ಯಕ್ತಿ ಯಾವ ರೋಗವನ್ನು ಹೊತ್ತು ತಂದಿರುತ್ತಾನೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಸಾಮಾನ್ಯವಾಗಿ ಒಂದೆಡೆ ವಾಸಿಸುವ ಕಾರ್ಮಿಕರಲ್ಲಿ ಕಾಣ ಬರುವ ಖಾಯಿಲೆಗಳೆಂದರೆ, ಸಿಫಿಲಿಸ್(ಲೈಂಗಿಕ ರೋಗ), ಕ್ಷಯ, ಸಿಡುಬು, ಜ್ವರ ಮತ್ತು ಏಡ್ಸ್ ಖಾಯಿಲೆಗಳು ಪ್ರಮುಖವಾದವು.

ಅಣೆಕಟ್ಟು ಕಾಮಗಾರಿ ವರ್ಷಾನುಗಟ್ಟಲೆ ಜರುಗುವುದರಿಂದ ಈ ಕಾರ್ಮಿಕರು ಸ್ಥಳೀಯ ಜನರ ಜೊತೆ ಒಡನಾಟವಿರಿಸಿಕೊಳ್ಳುವುದು ಸಹಜ. ಇದರಿಂದಾಗಿ ಸ್ಥಳೀಯ ನಿವಾಸಿಗಳೂ ಕೂಡ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ 1978 ರಲ್ಲಿ ಬ್ರೆಜಿಲ್ – ಪೆರುಗ್ವೆ ಗಡಿಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಅಣೆಕಟ್ಟೊಂದರ ಕಾರ್ಮಿಕರ ಬಗ್ಗೆ ಸಮೀಕ್ಷೆ ಮಾಡಿ ವರದಿಯೊಂದನ್ನು ಸಿದ್ಧಪಡಿಸಿತ್ತು. ಕಾಮಗಾರಿ ಸ್ಥಳದಲ್ಲಿ 38 ಸಾವಿರ ಮಂದಿ ದುಡಿಯುತ್ತಿದ್ದು ಪ್ರತಿದಿನ 2 ಸಾವಿರದಷ್ಟು ಕಾರ್ಮಿಕರು ಒಳಹೋಗುವುದು ಅಥವಾ ಹೊರಬರುವುದನ್ನು ಸಮೀಕ್ಷಾ ವರದಿ ಧೃಡಪಡಿಸಿದೆ. ಜೊತೆಗೆ ಇವರೆಲ್ಲಾ ಕಿಕ್ಕಿರಿದ ಕೊಳಚೆಗೇರಿಗಳಂತಹ ಕಾಲೋನಿಗಳಲ್ಲಿ ವಾಸಿಸುತ್ತಿರುವುದನ್ನು ವರದಿ ಉಲ್ಲೇಖಿಸಿತ್ತು. ಇಂತಹ ಸ್ಥಳಗಳಲ್ಲಿ ದುಡಿಮೆಗಾಗಿ ತನ್ನ ಸಂಸಾರವನ್ನು ತೊರೆದು ಹಲವಾರು ತಿಂಗಳುಗಳ ಕಾಲ ಏಕಾಂಗಿಯಾಗಿ ಜೀವಿಸುತ್ತಾ ದುಡಿಯುವ ಕಾರ್ಮಿಕರು ಅತಿ ವೇಗದಲ್ಲಿ ಕುಡಿತ ಮತ್ತು ವೇಶ್ಯಾವಾಟಿಕೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.

ಏಡ್ಸ್ ರೋಗದ ತವರಾದ ಆಫ್ರಿಕಾ ಖಂಡದ ಹಲವಾರು ರಾಷ್ಟ್ರಗಳಲ್ಲಿ 1990ರ ದಶಕದಲ್ಲಿ ನಿರ್ಮಾಣ ಪ್ರಗತಿಯಲ್ಲಿದ್ದ ಅಣೆಕಟ್ಟು ಕಾರ್ಮಿಕರಲ್ಲಿ ಶೇ.30ರಷ್ಟು ಮಂದಿ ಏಡ್ಸ್ ಖಾಯಿಲೆಗೆ ತುತ್ತಾಗಿದ್ದರು. ಇದಲ್ಲದೆ ಕಾಮಗಾರಿ ಸ್ಥಳಗಳಲ್ಲಿ ನಡೆಯುವ ಅವಘಡಗಳಿಂದಾಗಿ ಅನೇಕ ಕಾರ್ಮಿಕರು ಮೃತಪಡುತ್ತಿದ್ದಾರೆ. ಇಂತಹ ದುರಂತಗಳು ಹೊರಲೋಕಕ್ಕೆ ಸುದ್ದಿಯಾಗುವ ಸಾಧ್ಯತೆ ಬಹುತೇಕ ಕಡಿಮೆ. ಇವರಿಗೆ ಸಿಗುವ ಪರಿಹಾರ ಕೂಡ ಶೂನ್ಯ. ಭಾರತದ ನಾಗಾರ್ಜುನಸಾಗರ ಜಲಾಶಯ ನಿರ್ಮಾಣದಲ್ಲಿ 154 ಮಂದಿ, 1983ರಲ್ಲಿ ಕೊಲಂಬಿಯಾದ ಅಣೆಕಟ್ಟಿನ ಮಣ್ಣಿನ ಕುಸಿತದಿಂದಾಗಿ 300 ಕಾರ್ಮಿಕರು, ಹೀಗೆ ವಾರ್ಷಿಕವಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಅಣೆಕಟ್ಟುಗಳ ನಿರ್ಮಾಣದಲ್ಲಿ ತಮ್ಮ ಜೀವವನ್ನು ಬಲಿಕೊಡುತ್ತಿದ್ದಾರೆ. ದೊಡ್ಡ ಅಣೆಕಟ್ಟುಗಳ ಕುರಿತಂತೆ ಅಧ್ಯಯನ ನಡೆಸಿರುವ ಫ್ರಾನ್ಸ್ ಸಂಸ್ಥೆಯೊಂದರ ಪ್ರಕಾರ ಈವರೆಗೆ 2 ಲಕ್ಷ ಮಂದಿ  ಕಾರ್ಮಿಕರು ಅಣೆಕಟ್ಟು ನಿರ್ಮಾಣದಲ್ಲಿ ಅಸುನೀಗಿದ್ದಾರೆ.

ಅಣೆಕಟ್ಟುಗಳಲ್ಲಾಗುವ ಅವಘಡಗಳ ಸಾವಿಗಿಂತ ಭೀಕರವಾದ ಮತ್ತೊಂದು ಸಂಗತಿಯೆಂದರೆ, ಜಲಾಶಯಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಕ್ರಿಮಿ ಹಾಗೂ ಜಂತುಗಳು ತಂದು ಹರಡುತ್ತಿರುವ ಸಾಂಕ್ರಾಮಿಕ ಖಾಯಿಲೆಗಳು ಜಾಗತಿಕ ಮಟ್ಟದಲ್ಲಿ ಮನುಕುಲದ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

1977ರಿಂದ ವಿಶ್ವ ಆರೋಗ್ಯ ಸಂಘಟನೆ ನೀರಿನಿಂದ ಹರಡುವ ಖಾಯಿಲೆಗಳ ನಿಯಂತ್ರಣಕ್ಕೆ ಹಲವಾರು ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ವಿಶ್ವಸಂಸ್ಥೆ ಕೂಡ ಧನಸಹಾಯ ನೀಡುತ್ತಲೇ ಬಂದಿದೆ.

ನೀರಿನಲ್ಲಿ ಕೊಳೆತ ಪ್ರಾಣಿ, ಮರಗಳು ಮತ್ತು ಇನ್ನಿತರ ವಸ್ತುಗಳಿಂದ ಸೃಷ್ಟಿಯಾಗುವ ಹಲವಾರು ಜಂತುಗಳು ನೀರಿನಲ್ಲಿರುವ ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದು, ನೀರಿನ ಮೂಲಕ ಮನುಷ್ಯನ ದೇಹಕ್ಕೆ ಪ್ರವೇಶ ಪಡೆಯುತ್ತವೆ. ಇವುಗಳಲ್ಲಿ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಪ್ರದೇಶದ ಜಲಾಶಯದಲ್ಲಿ ಕಂಡುಬಂದಿರುವ ಸ್ಕಿಸ್ಟೊಸೇಮ ಹೆಮೆಟೋಬಿಯಮ್ ಹಾಗೂ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಾಣಿಸಿಕೊಂಡಿರುವ ಎಸ್.ಮನ್ಸೋನಿ ಎಂಬ ಬ್ಯಾಕ್ಟೀರಿಯಾಗಳು ಪ್ರಮುಖವಾದವು. ಈ ಹುಳುಗಳು ಮನುಷ್ಯನ ಜಠರ ಸೇರಿ ಅಲ್ಲಿ ಪ್ರೌಢವಸ್ಥೆಗೆ ಬಂದು ನಂತರ ದಿನವೊಂದಕ್ಕೆ 3 ಸಾವಿರ ಮೊಟ್ಟೆ ಇಡುವ ಶಕ್ತಿ ಹೊಂದಿವೆ. ಇದೇ ಜಂತು ಮನುಷ್ಯನ ಎಲ್ಲಾ ಅಂಗಾಂಗಳಿಗೆ ಪ್ರವೇಶ ಮಾಡುವುದರ ಜೊತೆಗೆ ಮತ್ತೆ ಆತ ವಿಸರ್ಜಿಸುವ ಮಲದ ಮೂಲಕ ಹೊರಬಂದು ನೀರಿನಲ್ಲಿ ಆಶ್ರಯ ಪಡೆದು, ಮತ್ತೆ ಬೇರೊಬ್ಬ ವ್ಯಕ್ತಿಯ ದೇಹ ಪ್ರವೇಶಿಸುತ್ತವೆ. ಇವುಗಳಿಂದ ಮನುಷ್ಯನ ಮೇಲೆ ಆಗುವ ನೇರ ಪರಿಣಾಮಗಳೆಂದರೆ ವಿವಿಧ ರೀತಿಯ ಅಲರ್ಜಿ, ಜ್ವರ, ಕೆಮ್ಮು, ಚರ್ಮದಖಾಯಿಲೆ, ಕಿಡ್ನಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು. ಈಗಾಗಲೇ ಜಗತ್ತಿನಾದ್ಯಂತ 37 ಕೋಟಿ ಜನರು ನೀರಿನಲ್ಲಿರುವ ಈ ರೀತಿಯ ಬ್ಯಾಕ್ಟೀರಿಯಾಗಳಿಂದ ಹಲವು ಬಗೆಯ ರೋಗಕ್ಕೆ ತುತ್ತಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತದಂತಹ ಉಷ್ಣ ಪ್ರದೇಶದಲ್ಲಿ ಈ ಖಾಯಿಲೆಗಳು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿಲ್ಲ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸಮಾಡುವ ಕಾರ್ಮಿಕರಿಂದಾಗಿ ಈ ರೋಗಗಳು ಸಣ್ಣ ಪ್ರಮಾಣದಲ್ಲಿ ಭಾರತದಲ್ಲೂ ಹರಡಿವೆ. ಭಾರತದಂತಹ ರಾಷ್ಟ್ರಗಳಿಗೆ ಅಣೆಕಟ್ಟಿನ ಪ್ರಭಾವದಿಂದ ಹರಡಿರುವ ಮಲೇರಿಯಾ ದೊಡ್ಡ ಸವಾಲಾಗಿದೆ.

ಜಾಗತಿಕ ಮಟ್ಟದಲ್ಲಿ ಮಲೇರಿಯಾ ರೋಗವನ್ನು ಹೋಗಲಾಡಿಸಲು, ವಿಶ್ವ ಆರೋಗ್ಯ ಸಂಘಟನೆ ಸಮರೋಪಾದಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ, ಈ ಪಿಡುಗು ಹಲವು ರೂಪದಲ್ಲಿ ಜಗತ್ತಿನಾದ್ಯಂತ ಜನರನ್ನು ಕಾಡುತ್ತಲೇ ಇದೆ. 1990ರ ದಶಕದಲ್ಲಿ 30ಕೋಟಿ ಜನ ಮಲೇರಿಯಾಕ್ಕೆ ತುತ್ತಾಗಿ, ಇದರಲ್ಲಿ 10 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇಂದಿಗೂ ಕೂಡ ಈ ಮಲೇರಿಯಾ ಖಾಯಿಲೆ ಜಗತ್ತಿನ ಒಂದು ದೊಡ್ಡ ಪಿಡುಗು ಎಂದು ವಿಶ್ವ ಆರೋಗ್ಯ ಸಂಘಟನೆಯ ತಜ್ಞ ಡಾ.ಹಿರೋಷಿವಕಜಿಮ ಅಭಿಪ್ರಾಯ ಪಡುತ್ತಾರೆ.

ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಯಿಂದ ಹರಡುವ ಈ ರೋಗದ ಲಕ್ಷಣಗಳು 1970ರಲ್ಲಿ ಮೊದಲಬಾರಿಗೆ ಕೀನ್ಯಾದಲ್ಲಿ ಕಾಣಿಸಿಕೊಂಡಿತು. ಕೀನ್ಯಾದ ನೈರುತ್ಯ ಭಾಗದಲ್ಲಿ ನಿರ್ಮಿಸಿರುವ ಅಣೆಕಟ್ಟುಗಳ ನೀರಾವರಿ ಪ್ರದೇಶಗಳಲ್ಲಿ ಸೊಳ್ಳೆಗಳ ಪ್ರಮಾಣ 4 ಪಟ್ಟು ಹೆಚ್ಚಿರುವುದು ತನಿಖೆಯಿಂದ ಧೃಡಪಟ್ಟಿದೆ.

ಅನಾಫಿಲಿಸ್ ಜಾತಿಗೆ ಸೇರಿದ ಸೊಳ್ಳೆಗಳಲ್ಲಿ 4 ವಿಧಗಳಿದ್ದು, ಇವುಗಳಲ್ಲಿ ಗ್ಯಾಂಬಿಯಾ ಎಂಬ ಸೊಳ್ಲೆ ಆಫ್ರಿಕಾದಲ್ಲಿ, ಅರಣ್ಯನಾಶದ ಫಲವಾಗಿ ಇಮ್ಮಡಿಗೊಂಡು ಹಲವಾರು ರಾಷ್ಟ್ರಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಸೂಡಾನ್ ಮೂಲಕ ಈಜಿಪ್ಟಿಗೂ ವ್ಯಾಪಿಸಿದ ಮಲೇರಿಯಾ 1 ಲಕ್ಷದ 30 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿದೆ.

ಗ್ಯಾಂಬಿಯಾ ಹೆಸರಿನ ಈ ಸೊಳ್ಳೆ ಸಾಮಾನ್ಯವಾಗಿ ಆಶ್ರಯ ಪಡೆಯುತ್ತಿದ್ದುದು ಅರಣ್ಯಗಳಲ್ಲಿ. ಇದು ಜಾನುವಾರು ಹಾಗು ಕಾಡಿನ ಪ್ರಾಣಿಗಳ ಶರೀರದಲ್ಲಿ ಆಶ್ರಯ ಪಡೆದು ಜೀವಿಸುತ್ತಿತ್ತು. ಯಾವಾಗ ಅರಣ್ಯಪ್ರದೇಶಗಳ ನಡುವೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳು ನಿರ್ಮಾಣವಾದವೋ ಆಗ ಹಿನ್ನೀರಿನ ಪ್ರದೇಶದಲ್ಲಿ ಮುಳುಗಿಹೋದ ಅರಣ್ಯ ಮತ್ತು ಜನವಸತಿ, ರಸ್ತೆ, ಕಾಲುವೆಗಳಿಗಾಗಿ ನೆಲಸಮವಾದ ಅರಣ್ಯ ಪ್ರದೇಶ, ಹೀಗೆ ಅರಣ್ಯ ನಾಶದಿಂದಾಗಿ ಅಂತಿಮವಾಗಿ ಈ ಸೊಳ್ಳೆ ಮಾನವನ ರಕ್ತವನ್ನು ಆಶ್ರಯಿಸಿತು. ಕೀನ್ಯಾ ಮತ್ತು ಶ್ರೀಲಂಕಾದಲ್ಲಿ ನಿರ್ಮಿಸಿದ ಅಣೆಕಟ್ಟುಗಳಿಂದಾಗಿ ವಿವಿಧ ಜಾತಿಯ ಸೊಳ್ಳೆಗಳಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಅವುಗಳು ಹಳದಿ ಜ್ವರ, ಡೆಂಗ್ಯೂ ಜ್ವರ ಮುಂತಾದ ರೂಪವನ್ನು ತಾಳುತ್ತಿದೆ. ಸೊಳ್ಳೆಗಳ ನಿರ್ಮೂಲನಕ್ಕೆ ಡಿ.ಡಿ.ಟಿ. ಪೌಡರ್ ಸಿಂಪಡಿಸುವ ಪ್ರಕ್ರಿಯೆ ಈಗ ವಿಫಲವಾಗಿದ್ದು, ಈ ಕೀಟನಾಶಕ ಪುಡಿಯನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಸೊಳ್ಳೆಗಳು ವೃದ್ಧಿಸಿಕೊಂಡಿವೆ.

ಇವುಗಳ ಜೊತೆ ನದಿ ಹಾಗೂ ಕಡಲ ತೀರದಲ್ಲಿನ ಸೊಳ್ಳೆಗಳಿಂದ ಹರಡುವ ಆನೆಕಾಲು ರೋಗ ಜಗತ್ತಿಗೆ ಸವಾಲಾಗಿದೆ. ವಿಶೇಷವಾಗಿ ಏಷ್ಯಾ ರಾಷ್ಟ್ರಗಳಲ್ಲಿ ಜನತೆ ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ.

ನೀರಿನಲ್ಲಿ ವಾಸಿಸುತ್ತಿರುವ ಬ್ಲಾಕ್ ಪೈ ಎಂಬ ಜಾತಿಯ ಸೊಳ್ಳೆಯಿಂದಾಗಿ ಕುರುಡುತನ ಆವರಿಸಿಕೊಳ್ಳುವ ಖಾಯಿಲೆಯೊಂದು ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಂಡಿದೆ. ಅಲ್ಲಿನ 26 ರಾಷ್ಟ್ರಗಳಲ್ಲಿ 3 ಕೋಟಿ ಜನ ಈ ಖಾಯಿಲೆಗೆ ತುತ್ತಾಗಿದ್ದು, 16 ಲಕ್ಷ ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.

ಇದಕ್ಕಿಂತ ಭಿನ್ನವಾದ ಮತ್ತೊಂದು ಸಾಮಾನ್ಯ ಖಾಯಿಲೆಯೆಂದರೆ ಜಲಾಶಯದಲ್ಲಿ ಕೊಳೆತ ಪ್ರಾಣಿಗಳು ಹಾಗೂ ಮರಗಳಿಂದ ಕಲುಷಿತವಾದ ನೀರು ರಾಸಾಯನಿಕ ಸಿಂಪಡಿಸಿದ ಕೃಷಿ ಪ್ರದೇಶಗಳಲ್ಲಿ ಕಾಲುವೆ ಮೂಲಕ ಹಲವಾರು ನಗರಗಳಿಗೆ ಕುಡಿಯಲು ಬಳಕೆಯಾಗುತ್ತಿದ್ದು ಅನೇಕ ಮಂದಿ ಚರ್ಮ ರೋಗಗಳಿಗೆ ತುತ್ತಾಗಿದ್ದಾರೆ. ರಾಜಸ್ಥಾನದ ಒಣ ಪ್ರದೇಶದಲ್ಲಿ ಹರಿಯುತ್ತಿರುವ ಇಂದಿರಾಗಾಂಧಿ ಕಾಲುವೆಯ ನೀರು ಕುಡಿದ ಅಲ್ಲಿನ ಮಕ್ಕಳು ಕರುಳು ಬೇನೆಯಿಂದ ಬಳಲುತ್ತಿದ್ದಾರೆ. ಈ ಕುರಿತಂತೆ ವಿಸ್ತೃತ ಅಧ್ಯಯನ ನಡೆಸಿದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯ ನೀರಿನಲ್ಲಿರುವ ಕಲ್ಮಶ ಹಾಗೂ ಮನುಷ್ಯನ ಮಲ ಮೂತ್ರಗಳು ಇದಕ್ಕೆ ಕಾರಣ ಎಂದು ತಿಳಿಸಿದೆ. ಇದೀಗ ನಿರ್ಮಾಣವಾಗುತ್ತಿರುವ ಸರದಾರ್ ಸರೋವರದ ಕುಡಿಯುವ ನೀರಿನ ಯೋಜನೆಗೆ ಇಂತಹದ್ದೇ ಭೀತಿ ಎದುರಾಗಿದೆ. ಒಟ್ಟಾರೆ ಜಲಾಶಯ ಮತ್ತು ಕಾಲುವೆಗಳೆಂದರೆ ಸಾಂಕ್ರಾಮಿಕ ರೋಗಗಳ ವಾಹಕಗಳು ಎಂಬಂತಾಗಿದೆ.

(ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ

ಕೊಡಗಿನಲ್ಲಿ ಅಕ್ರಮ ಅರಣ್ಯ ಲೂಟಿಗೆ ಪಾಲುದಾರನಾದ ಸರ್ಕಾರ

ವಿ. ಪ್ರಶಾಂತ್ ಮಿರ್ಲೆ
ವಕೀಲರು

ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಹೊಂದಿರುವ ಕೊಡಗು ಜಿಲ್ಲೆಯು, ನೆಚ್ಚಿನ ಪ್ರವಾಸತಾಣವಾಗಿ ನಿಸರ್ಗದ ರಸದೌತಣವನ್ನು ನೀಡುತ್ತಿದೆ. ಈ ಪ್ರದೇಶಗಳಲ್ಲಿ ಕಂಡುಬರುವ ಜಮ್ಮಾ ಮತ್ತು ಬಾಣೆ ಜಮೀನುಗಳು ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳಾಗಿರುತ್ತವೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಸಾಗುವಳಿದಾರರಿಗೆ ವಹಿಸಿಕೊಟ್ಟವುಗಳಾಗಿರುತ್ತವೆ, ಈ ಪ್ರದೇಶಗಳಲ್ಲಿ ನಿಯಮಗಳ ಅನುಸಾರವಾಗಿ ಸಾಗುವಳಿದಾರರಿಗೆ ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಉಪಯೋಗಿಸುವ ಅವಕಾಶವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಮಹಾರಾಜರೇ (ಅಂದರೆ ಸರ್ಕಾರವೇ) ಕಾಯ್ದಿರಿಸಿಕೊಂಡಿದ್ದರು. ಪ್ರತಿ ಸಾಗುವಳಿದಾರನ ಕೃಷಿ ಜಮೀನಿಗೆ ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಷ್ಟು ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಇಮ್ದು ಇಂತಹ ಅರಣ್ಯ ಪ್ರದೇಶಗಳಲ್ಲಿ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶವು ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಅದರಲ್ಲಿ ಸಾಕಷ್ಟು ಪ್ರದೇಶವು ಬೇರೆಯವರಿಗೆ ಪರಭಾರೆಯೂ ಆಗಿದೆ.

ಇದಕ್ಕೂ ಮಿಗಿಲಾಗಿ, ನೂರಾರು ಹೆಕ್ಟೆರ್ ಪ್ರದೇಶಗಳು ಜಮ್ಮಾ-ಬಾಣೆ ಜಮೀನಿನ ಹೆಸರಿನಲ್ಲಿ ಸಾಗುವಳಿದಾರರಿಂದಲೇ ಒತ್ತುವರಿಯಾಗಿ, ಆಸುಪಾಸಿನ ಹೇರಳ ಪ್ರಮಾಣದ ಅರಣ್ಯ ಪ್ರದೇಶವನ್ನು ಬರಿದು ಮಾಡಲು ಹೊರಟಿರುವುದು ಆಘಾತಕಾರಿ ಬೆಳವಣಿಗೆ!.

ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿದಾರರ ಗುಂಪಿನ ಹಕ್ಕೊತ್ತಾಯದಿಂದಾಗಿ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಪ್ರಸ್ತುತ ಸರ್ಕಾರವು ಸದರಿ ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಸಕ್ರಮಗೊಳಿಸಿ ಹಿಡುವಳಿದಾರರಿಗೆ ಹಕ್ಕನ್ನು ಪ್ರಾಪ್ತಿಮಾಡುವ ಹೊಸ ನಿಯಮವನ್ನು ಜಾರಿಗೆ ತರುವ ನಡೆ ಸಂಶಯಾಸ್ವದವಾಗಿದೆ. ಮುಖ್ಯವಾದ ಸಂಗತಿಗಳೆಂದರೆ, ರಾಜ್ಯದ ಭೂ ಸುಧಾರಣೆ ಕಾಯಿದೆಯ ಅಡಿಯಲ್ಲಿ ಸಾಮಾನ್ಯನು ಹೊಂದುವ ಗರಿಷ್ಟ ವ್ಯವಸಾಯದ ಭೂಮಿತಿಯು 54 ಎಕರೆಗಳು ; ಇದಕ್ಕಿಂತ ಹೆಚ್ಚಿನ ಭೂಮಿಯು ಸರ್ಕಾರಕ್ಕೆ ನಿಹಿತವಾಗುತ್ತದೆ. ಆದರೆ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಇದು ಸರ್ಕಾರ ಉಳ್ಳವರ ಪರವಾದ ಧೋರಣೆ ಅಲ್ಲವೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳು, ಪರಿಸರ ಕಾಳಜಿ ನಿಯಮಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಮಾಲಿನ್ಯಕ್ಕೆ ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದಕ್ಕೆ ಸರ್ಕಾರದ ಉತ್ತರವೇನು?

ಹಿಂದಿನ ಮಹಾರಾಜರಿಂದ ಇಂದಿನ ಸರ್ಕಾರಗಳು ತಮ್ಮ ಸ್ವಾಮ್ಯಕ್ಕೆ ಒಳಪಟ್ಟ ಅರಣ್ಯ ಪ್ರದೇಶಗಳನ್ನು ಜನರ ಅವಶ್ಯಕತೆಗಳನ್ನು ಮೀರಿ ದುರ್ಬಳಕೆ ಮಾಡದಂತೆ ತಡೆಯುವುದಕ್ಕಾಗಿ ಹಲವು ನಿಯಮಗಳನ್ನು ಜಾರಿಗೆ ತಂದಿವೆ. ಪ್ರಾದೇಶಿಕವಾಗಿ ತಮ್ಮ ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳನ್ನು ಗುರ್ತಿಸಿ ಸೀಮಿತ ನಿರ್ಬಂಧಿತ ಹಕ್ಕುಗಳೊಂದಿಗೆ, ಅಂದರೆ 1) ಕಂದಾಯ ಮುಕ್ತವಾಗಿ,  2) ಜಾನುವಾರುಗಳ ಮೇವಿಗಾಗಿ,, 3) ಮರಗಳಿಂದ  ಎಲೆ ಗೊಬ್ಬರವನ್ನು  ತೆಗೆದುಕೊಳ್ಳಲು, 4) ಕೃಷಿ ಉತ್ಪನ್ನ  ಮತ್ತು ಗೃಹ ಉಪಯೋಗಕ್ಕಾಗಿ ಕಟ್ಟಿಗೆ  ಮತ್ತು  ಮರ ಮುಟ್ಟುಗಳನ್ನು  ತೆಗೆದುಕೊಳ್ಳುಲು ಕೃಷಿಕರಿಗೆ ಅವಕಾಶ, ಇವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಸರ್ಕಾರವೇ ಕಾಯ್ದಿರಿಸಿಕೊಂಡಿರುತ್ತದೆ. ಇಂತಹ  ಅರಣ್ಯ ಪ್ರದೇಶಗಳನ್ನು ನಮ್ಮ ರಾಜ್ಯದಲ್ಲಿ  ಪ್ರಾದೇಶಿಕವಾಗಿ ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮ್ಕಿ, ಕಾನೆ ಮತ್ತು ಬಾಣೆ ಜಮೀನುಗಳೆಂತಲು; ಉತ್ತರ ಕನ್ನಡ  ಜಿಲ್ಲೆಯಲ್ಲಿ ಹಾಡಿ ಮತ್ತು ಬೆಟ್ಟದ ಜಮೀನು  ಜಮೀನುಗಳೆಂತಲೂ; ಮೈಸೂರು ಪ್ರದೇಶದಲ್ಲಿ ಕಾನೆ ಮತ್ತು ಸೊಪ್ಪಿನ ಬೆಟ್ಟದ ಜಮೀನುಗಳೆಂತಲೂ; ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮತ್ತು ಬಾಣೆ ಜಮೀನುಗಳೆಂತಲೂ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೋತ್ಸಾಲ್ ಜಮೀನುಗಳೆಂತಲೂ ಅನ್ನುತ್ತಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ-1964ರ ಕಲಮು 79(2)ರ ಅಡಿಯಲ್ಲಿ ಈ ಅರಣ್ಯ ಪ್ರದೇಶಗಳ ಮೇಲಿನ ನಿಬಂಧಿತ ಉನ್ಮುಕ್ತಿಗಳ ಅನುಭೋಗವನ್ನು ಮಾನ್ಯಮಾಡಿದೆ.

ಪ್ರಸ್ತುತದಲ್ಲಿ, ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಕೊಡಗು ಜಿಲ್ಲೆಯೇ ಹೊಂದಿದೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಜಮ್ಮಾ ಸೇವಕರಿಗೆ, ಕೆಲಸದಾಳುಗಳಿಗೆ ನಂತರದ ಕಾಲದಲ್ಲಿ ಬ್ರಿಟಿಷರ ಆಡಳಿತದಲ್ಲಿ ತಮ್ಮ ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ದಾನವಾಗಿ ಅಥವಾ ಉಂಬಳಿಯಾಗಿ ಸಾಗು ಭೂಮಿಯನ್ನು ನೀಡಿ, ಅದರಲ್ಲೂ ಮುಖ್ಯವಾಗಿ ಸಾಗುವಳಿಗೆ (ಕೃಷಿಗೆ) ಒಳಪಟ್ಟ ಜಮೀನಿಗೆ ಒತ್ತಾಗಿ ಸುತ್ತುವರೆದಿರುವ ಕಾಡು ಪ್ರದೇಶವನ್ನು ಆಯಾ ಸಾಗುವಳಿದಾರರಿಗೆ ಮೇಲ್ವಿಚಾರಣೆ ನೀಡಿ ಆ ಪ್ರದೇಶಗಳನ್ನು ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಬಳಸಿಕೊಳ್ಳುವ ಅವಕಾಶವನ್ನು ಹೊರತುಪಡಿಸಿ ಮಿಕ್ಕ ಹಕ್ಕುಗಳನ್ನು  ಮಹಾರಾಜರೇ ಕಾಯ್ದಿರಿಸಿಕೊಂಡಿದ್ದರು. ಇಂದಿಗೂ ಸಹ ಇವುಗಳ ಹಕ್ಕುಗಳನ್ನು (ಸಾರ್ವಭೌಮಿಕೆಯನ್ನು) ಸರ್ಕಾರವೇ ಕಾಯ್ದಿರಿಸಿಕೊಂಡಿದೆ.

ಆದರೇ, ಇತ್ತೀಚಿನ ದಿನಗಳಲ್ಲಿ ಕಾಫಿ ಅಥವಾ ಕಾರ್ಡಮಾಮ್ (ಏಲಕ್ಕಿ) ಅಥವಾ ಇತರೇ ಬೆಳೆಗಳನ್ನು ಬೆಳೆಯುವ ಅತೀ ಆಸೆಯಿಂದ ತಮ್ಮ ಕೃಷಿ ಜಮೀನಿಗೆ ಸುತ್ತುವರೆದ ಜಮ್ಮಾ-ಬಾಣೆ ಪ್ರದೇಶಗಳನ್ನು ಸಾಗುವಳಿಗೆ ಪರಿವರ್ತಿಸುವ ಕಾರಣ ನೀಡಿ ಕಂದಾಯ ಇಲಾಖೆಯಿಂದ ಅಕ್ರಮವಾಗಿ ಪ್ರಮಾಣ ಪತ್ರಗಳನ್ನು (ಸಿ.ಆರ್.ಸಿ ಮತ್ತು ಸಿ.ಡಿ.ಆರ್.ಸಿ) ಪಡೆದು ಕರನಿರ್ಧರಣೆಗೆ ಒಳಪಡಿಸಿ ಕಂದಾಯ ಪಾವತಿಸುವ ಮೂಲಕ ಹಕ್ಕು ಸಾಧಿಸುವುದು ಮತ್ತು ಮಾರಾಟ ಮಾಡುವುದನ್ನು ಮಾಡಲಾಗಿದೆ. (ಕಾನೂನುಬದ್ದವಾಗಿ ಈ ಬಾಣೆ ಜಮೀನುಗಳನ್ನು ವರ್ಗಾಯಿಸುವಂತಿಲ್ಲ). ಹಲವುಬಾರಿ ಇಂತಹ ಅಕ್ರಮಗಳ ವಿರುದ್ದ ಪರಿಸರವಾದಿಗಳ ಪ್ರತಿಭಟನೆಗಳು ನಡೆದೂ ಇದ್ದವು.

ಕಾರಣ, ಜಮ್ಮಾ-ಬಾಣೆ ಜಮೀನುಗಳು ಸೇರಿದಂತೆ ಸುಮಾರು 1,34,657 ಹೆಕ್ಟೆರ್ ವಿಸ್ತೀರ್ಣದಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಜಮ್ಮಾ-ಬಾಣೆಗಳ ಹಿಡುವಳಿದಾರರಿಂದ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶ ಅರಣ್ಯಪ್ರದೇಶದ ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯ ಅಕ್ರಮ-ಸಕ್ರಮ ಮಾಡಿಸಿಕೊಳ್ಳುವ ಪ್ರಯತ್ನದಿಂದ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಉದಾಹರಣೆಗೆ ದಿನಾಂಕ 31.10.2006ರಲ್ಲಿ ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಗಳು ಸುತ್ತೋಲೆಯನ್ನು ಹೊರಡಿಸಿ, “ಕೊಡಗು ಜಿಲ್ಲೆಯಲ್ಲಿನ ಬಾಣೆ  ಜಮೀನುಗಳ ಬಗ್ಗೆ ನೀಡಿರುವ ವಿಶೇಷಾಧಿಕಾರ ಸೀಮಿತವಾಗಿದ್ದು, ಈ ಜಮೀನುಗಳ ಪರಿವರ್ತನೆಗೆ ಅವಕಾಶವಿಲ್ಲ. ಆದ್ದರಿಂದ, ಈ ಜಮೀನುಗಳನ್ನು ಪರಿವರ್ತನೆಗಳನ್ನು ಕೋರಿ ಬರುವ ಪ್ರಸ್ತಾವನೆಗಳನ್ನು ಪರಿಗಣಿಸದಿರುವಂತೆ,” ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಆ ಜಿಲ್ಲೆಯ ಎಲ್ಲಾ ಸಂಬಂಧಿತ ಕಂದಾಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಬಾಣೆ ಜಮೀನುಗಳಿಗೆ ಈಗಾಗಲೇ ಅನುಮತಿಯನ್ನು ನೀಡಿದ್ದಲ್ಲಿ ಅದನ್ನು ರದ್ದುಪಡಿಸಿ ಆ ಜಮೀನುಗಳನ್ನು ಬಾಣೆ ಜಮೀನುಗಳನ್ನಾಗಿಯೆ ಮುಂದುವರೆಸಲೂ ಸಹ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು.

Karnataka High Court

Karnataka High Court

ಇಷ್ಟಲ್ಲದೆ, ಕರ್ನಾಟಕದ ಉಚ್ಛ ನ್ಯಾಯಾಲಯ ದಿನಾಂಕ 22-10-1993ರಂದು ನೀಡಿದ  ತೀರ್ಪನ್ನು ಉಲ್ಲೇಖಿಸುತ್ತಾ, ಜಮ್ಮಾ ಬಾಣೆ ಜಮೀನನ್ನು ಹೊದಿರುವವರು ಅದರ ಒಡೆಯರಾಗಲು ಸಾಧ್ಯವಿಲ್ಲ. ಆದ್ದರಿಂದ, ಅವರು ಬರೀ ವಿಶೇಷಾಧಿಕಾರಗಳಿಗೆ ಮಾತ್ರ ಅರ್ಹರು ಮತ್ತು ಸದರಿ ಬಾಣೆ ಜಮೀನನ್ನು ಮಾರಾಟ ಮಾಡುವ ಹಕ್ಕು ಅವರಿಗಿರುವುದಿಲ್ಲ. ಕರ್ನಾಟಕ ಭೂಕಂದಾಯ ಅಧಿನಿಯಮದ ಪರಿಛ್ಛೇದ 79 ರಲ್ಲಿಯೂ ಈ ವಿಶೇಷಾಧಿಕಾರಗಳನ್ನು ರಕ್ಷಿಸಲಾಗಿದ್ದು ಅನುಭವದಾರರು ಬಾಣೆ ಜಮೀನಿನ ಮಾಲೀಕತ್ವದ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಇದು ಕರ್ನಾಟಕದ ಉಚ್ಛ ನ್ಯಾಯಾಲಯದ ಪೂರ್ಣಪೀಠದ ತೀರ್ಪಾಗಿದ್ದು. ಇದನ್ನು ಯಾರೂ ಪ್ರಶ್ನಿಸಿಲ್ಲವಾದ್ದರಿಂದ ಇಂದಿಗೂ ನಿರ್ಣಾಯಕವಾಗಿದೆ ಎಂದು ಹೇಳಲಾಗಿತ್ತು.

ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಇದೇ ಸಮಯವನ್ನರಿತ ಕೆಲವು ಕೊಡವ ರಾಜಕಾರಣಿಗಳು ಈ ವಿಷಯವನ್ನು ರಾಜಕೀಯಗೊಳಿಸಿದರು. ಕೆಲವು ರಾಜಕಾರಣಿಗಳು ಕೊಡಗನ್ನು ಅರಣ್ಯ ಪ್ರದೇಶವಾಗಿ ಗುರ್ತಿಸಿ ಅಮೇರಿಕಾಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ ಎಂದು ತರ್ಕಕ್ಕೆ ನಿಲ್ಲದ ಹೇಳಿಕೆ ನೀಡಿ ಜನತೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರೆ, ಇನ್ನೂ ಕೆಲವರು ಪ್ರತ್ಯೇಕ ರಾಜ್ಯದ ಬೇಡಿಕೆಗಳಿಗೆ ಈ ವಿಷಯವನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿದರು, ಮತ್ತು ಈಗಲೂ ಪ್ರಯತ್ನಿಸುತ್ತ ಇದ್ದಾರೆ. ಇವುಗಳ ಪರಿಣಾಮವೆ ಕೊಡಗಿನಲ್ಲಿ 2006ನೇ ಇಸವಿಯ ನವೆಂಬರ್ ಒಂದರಂದು ನಡೆದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಘಟಿಸಿದ ಅನುಚಿತ ಘಟನೆಗಳು.

ಆದರೆ ಹಾಲಿ ಸರ್ಕಾರವು ಸಮಯಸಾಧಕನಂತೆ ತನ್ನ ಆಡಳಿತ ಅವಧಿಯ ಪ್ರಾರಂಭದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಜಮ್ಮಾ ಬಾಣೆಗೆ ಜಮೀನಿನ ಒಡೆತನ ಸರ್ಕಾರಕ್ಕೆ ಸೇರಿದೆ ಎಂದು ಹೊರಡಿಸಲಾಗಿರುವ ಸುತ್ತೋಲೆಯನ್ನು ರದ್ದುಗೊಳಿಸಿ ದಿನಾಂಕ 31.10.2006ಕ್ಕಿಂತ ಮುಂಚಿತವಾಗಿ ಪರಿವರ್ತಿಸಲ್ಪಟ್ಟ ಜಮೀನುಗಳಿಗೆ ಹಕ್ಕು ಪ್ರಾಪ್ತಿ ಮಾಡಿ ಸಕ್ರಮಗೊಳಿಸಿತ್ತು. ಈಗ, ಮತ್ತೂ ಮುಂದುವರಿದು ದಿನಾಂಕ 04.11.2011ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮ್ಮಾ ಬಾಣೆ ಅರಣ್ಯ ಇಲಾಖೆಗೆ ಸೇರಿದ್ದಲ್ಲ: ಬದಲಿಗೆ ಹಿಡುವಳಿದಾರರಿಗೆ ಸೇರಿದ್ದು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸರ್ಕಾರದ ಈ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿಯವರು ಕೊಡಗಿನ ಬೆ.ಜೆ.ಪಿ.ಯ ಶಾಸಕರ ಮತ್ತು ಅವರ ಬೆಂಬಲಿತ ಜಮ್ಮಾ ಬಾಣೆ ಹಿಡುವಳಿದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು, ತಮ್ಮ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ಎಳ್ಳು-ನೀರು ಬಿಟ್ಟಿದ್ದು, ಇದು ಸಂಪೂರ್ಣವಾಗಿ ಭೂಮಾಲೀಕರ ಹಿತಕಾಯುವ ವಿವೇಚನೆಯಿಲ್ಲದ ಕ್ರಮವಾಗಿದೆ. ಅರಣ್ಯ ರಕ್ಷಣೆಯ ಜವಾಬ್ದಾರಿ ಹೊತ್ತ ಸರ್ಕಾರ ಸ್ವಷ್ಟ ಕಾರಣವಿಲ್ಲದೆ ಕೇವಲ ತಮ್ಮ ಬೆಂಬಲಿತ ಮತದಾರರ ಹಿತಕಾಯುವುದು, ಅದೂ ಅಕ್ರಮವೆಂದು ತೋರಿದ ಕ್ರಮದಿಂದ, ಎಷ್ಟು ಸರಿ?

ಇಲ್ಲಿ ಈಗ ಮುಖ್ಯವಾಗಿ, ಕಂದಾಯ ದಾಖಲೆಗಳಲ್ಲಿ ತೋರಿಸಿರುವ ವಿಸ್ತೀರ್ಣಕ್ಕಿಂತ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಪ್ರದೇಶದ ಹಿಡಿತವನ್ನು ತಪ್ಪಿಸಿ, ಅದರ ದುರ್ಬಳಕೆಯನ್ನು ರಕ್ಷಿಸಬೇಕಾಗಿದೆ. ಹಾಗೂ ಮುಖ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತಿರುವ ಬಾಣೆ ಜಮೀನುಗಳನ್ನು ಅಥವಾ ಅರಣ್ಯ ಪ್ರದೇಶಗಳನ್ನು ರೆಸಾರ್ಟ್‌ಗಳಿಗಾಗಿ, ಅಪಾರ್ಟ್‌ಮೆಂಟ್‌ಗಳಿಗಾಗಿ, ನಿವೇಶನಗಳಿಗಾಗಿ ಮತ್ತು ವಿಲ್ಲಾಸ್‌ಗಳಿಗಾಗಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ಕೆಲವು ಜಾಗಗಳಲ್ಲಿ ಅಕ್ರಮವಾಗಿ ಗಣಿಗಾರಿಕೆಯನ್ನೂ ನೆಡೆಸುತ್ತಿದ್ದಾರೆ. ಇವುಗಳನ್ನು ಸಹ ನಿಯಂತ್ರಿಸಬೇಕಿದೆ.

ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಹೊಂದಿರಹುದಾದ ಕೃಷಿಭೂಮಿಯ ಭೂಮಿತಿಯು ಗರಿಷ್ಟ 54 ಎಕರೆಗಳನ್ನು ಮೀರುವಂತಿಲ್ಲ. ಆದರೆ, ಕೊಡಗಿನ ಪ್ರದೇಶದಲ್ಲಿ ಪ್ರತಿ ಸಾಗುವಳಿದಾರು ತನ್ನ ಕೃಷಿ ಜಮೀನಿಗೆ (ಕೃಷಿ ಜಮೀನನ್ನು ಹೊರತುಪಡಿಸಿ) ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಿಗಿಂತ ಮಿಗಿಲಾಗಿ (ಅಂದರೆ 100 ರಿಂದ 500 ಎಕರೆಗಳಿಗೂ ಮಿಗಿಲಾಗಿ) ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಈ ಹಿಡುವಳಿಯನ್ನು ಕಾನೂನುಬದ್ದಗೊಳಿಸಿದಾಗ ನಿಯಮಬದ್ಧನಾಗಿ ರಾಜ್ಯದಲ್ಲಿ ಸಾಮಾನ್ಯನ ಹಿಡುವಳಿ ಹೊಂದುವ ಭೂಮಿಯ ಪ್ರಮಾಣಕ್ಕಿಂತ ಹೆಚ್ಚಾಗಿ ಇರುವುದರಿಂದ ಬಾಣೆ ಜಮೀನಿನ ಒಡೆತನ ಕಾನೂನಿಗೇ ವಿರುದ್ಢವಾಗಿರುತ್ತದೆ.

ಈ ಎಲ್ಲಾ ಕಾರಣಗಳಿಂದಲೇ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳನ್ನು, ನಿಯಮಗಳನ್ನು, ಪರಿಸರ ಸಂಬಂಧಿ ವಿಷಯಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಈ ಎಲ್ಲಾ ಅಕ್ರಮಗಳಿಗೆ  ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದು ಸರಿಯೇ?

(ಚಿತ್ರಕೃಪೆ: ವಿಕಿಪೀಡಿಯ)

ಶಿಕ್ಷಣ ಖಾಸಗಿಕರಣದ ಕರಾಳ ಮುಖಗಳು

– ರೂಪ ಹಾಸನ

ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶವನ್ನು ವಿರೋಧಿಸಿ ರಾಜ್ಯದೆಲ್ಲೆಡೆಯಿಂದ ಪ್ರತಿರೋಧ ಬಂದುದನ್ನು ಗಮನಿಸಿದ ಸರ್ಕಾರ ಈಗ, ಶಾಲೆಗಳನ್ನು ಮುಚ್ಚುತ್ತಿಲ್ಲ, ಆದರೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುತ್ತಿದ್ದೇವಷ್ಟೇ ಎಂದು ನಾಜೂಕಾಗಿ ಜಾಣತನದ ಮಾತನಾಡುತ್ತಿದೆ. ಒಂದರೊಳಗೆ ಇನ್ನೊಂದು ಶಾಲೆ ಸೇರಿಕೊಂಡರೆ ಉಳಿದ ಇನ್ನೊಂದು ಶಾಲೆ ತಾನಾಗಿಯೇ ಮುಚ್ಚಿಕೊಳ್ಳುತ್ತದೆ ಎಂಬ ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜನ ಮೂರ್ಖರಲ್ಲ.

ಶೈಕ್ಷಣಿಕ ನಿಯಮಗಳನ್ನು ಪಾಲಿಸದ, ಅದನ್ನು ಲಾಭದ ವ್ಯಾಪಾರವಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದೇ  ಪರವಾನಗಿ ನೀಡಿ, ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ, ಒಂದೆಡೆ ಖಾಸಗಿಯವರ ತೊಟ್ಟಿಲನ್ನು ತೂಗುತ್ತಾ, ಇನ್ನೊಂದೆಡೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲವೆಂದು, ಗ್ರಾಮೀಣ-ಬಡ ಮಕ್ಕಳನ್ನು ಚಿವುಟಿ ಅಳಿಸುವ ಪ್ರಯತ್ನವನ್ನು ಏಕಕಾಲಕ್ಕೆ ಮಾಡುತ್ತಿದೆ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆವಷ್ಟೇ ಅಮಾನವೀಯ.

ಡಿಸ್ಟ್ರಿಕ್ಟ್ ಇನಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ [ಡೈಸ್]ನ ಅಧ್ಯಯನವನ್ನು ಆಧರಿಸಿ ರೂಪುಗೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ಕುತೂಹಲಕ್ಕಾಗಿ ಗಮನಿಸಿದರೆ ಸಾಕು ಗಾಬರಿಗೊಳಿಸುವಂತಹ ಹಲವಾರು ಅಂಕಿ-ಅಂಶಗಳು ಕಾಣಸಿಗುತ್ತವೆ. 2009-10ನೇ ಸಾಲಿನ ಅಧ್ಯಯನದಂತೆ 46288 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 54,45,484 ಮಕ್ಕಳು ಓದುತ್ತಿದ್ದರೆ, 11884 ಖಾಸಗಿ ಶಾಲೆಗಳಲ್ಲಿ 24,76,484 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಖಾಸಗಿ ಶಾಲೆಯ ಪ್ರಮಾಣ ಕಡಿಮೆ ಎಂದೆನಿಸಿದರೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಇದಕ್ಕೆ ಕಾರಣ ಒಂದು ಖಾಸಗಿ ಶಾಲೆಗೆ ಅನುಮತಿ ಪಡೆದರೆ ಸಾಕು ಪ್ರತಿಯೊಂದು ತರಗತಿಯ 3-4 ವಿಭಾಗಗಳನ್ನಾದರೂ ಮಾಡಿ ತಮ್ಮ ಶಾಲಾ ಕಟ್ಟಡ ಮೀರುವಷ್ಟು ಮಿತಿಯಲ್ಲಿ ಮಕ್ಕಳನ್ನು ತುಂಬಿಕೊಳ್ಳಬಹುದು! ಜೊತೆಗೆ ವಂತಿಗೆ, ಶುಲ್ಕದ ಹೆಸರಿನಲ್ಲಿ ತಮ್ಮ ಖಜಾನೆಯನ್ನೂ ಭರ್ತಿ ಮಾಡಿಕೊಳ್ಳಬಹುದು. ಶಿಕ್ಷಣ ಸೇವೆಗಾಗಿ ಅಲ್ಲದೇ ಲಾಭಕ್ಕಾಗಿ ಆದಾಗ ಅದು ಭ್ರಷ್ಟತೆಯ ಇನ್ನೊಂದು ಕರಾಳ ಮುಖವಷ್ಟೇ. ಅದೇ ಸರ್ಕಾರಿ ಶಾಲೆಗಳಲ್ಲಾದರೆ ಪ್ರತಿ ತರಗತಿಗೆ ಒಂದು, ಅಪರೂಪಕ್ಕೆ ಎರಡು ವಿಭಾಗ. ಈಗ ಒಂದು ವಿಭಾಗಕ್ಕೇ ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ! ಹೀಗೆಂದೇ ಒಂದು ಸರ್ಕಾರಿ ಶಾಲೆಯಲ್ಲಿ ಸರಾಸರಿ 120 ಮಕ್ಕಳು ಓದುತ್ತಿದ್ದರೆ, ಒಂದು ಖಾಸಗಿ ಶಾಲೆಯಲ್ಲಿ ಸರಾಸರಿ 229 ಮಕ್ಕಳು ಓದುತ್ತಿದ್ದಾರೆ!

ಮಾನ್ಯ ಶಿಕ್ಷಣ ಸಚಿವರು ಹಳ್ಳಿಗಳಲ್ಲಿ ಮಕ್ಕಳಿಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ 2007-08 ರ ಡೈಸ್‌ನ ಅಧ್ಯಯನದಂತೆ, ಗ್ರಾಮೀಣ ಪ್ರದೇಶದಲ್ಲಿರುವ 5724 ಖಾಸಗಿ ಶಾಲೆಗಳು, ಅಲ್ಲಿ ಕಲಿಯುತ್ತಿರುವ 7,37,017 ಮಕ್ಕಳು, ಎಲ್ಲಿಂದ ಬಂದರು? ಮಕ್ಕಳಿದ್ದರೂ ಅವರಿಗೆ ಉಚಿತ ಶಿಕ್ಷಣ ನೀಡುವ ಮನಸ್ಸು ಸರ್ಕಾರಕ್ಕಿಲ್ಲವಷ್ಟೇ.

ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸುವ ಉದ್ದೇಶದಿಂದ 2004 ರಿಂದ ಆದಾಯ ತೆರಿಗೆಯಲ್ಲಿ ಶೇಕಡಾ 2 ರಷ್ಟು ಶಿಕ್ಷಣ ಕರವನ್ನು ವಿಧಿಸುತ್ತಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 4000-5000 ಕೋಟಿ ಆದಾಯ ಲಭಿಸುತ್ತಿದೆ. ಇದರಿಂದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅನೇಕ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಕೋಟಿಗಟ್ಟಲೆ ಹಣ ವಿತರಣೆಯಾಗುತ್ತಿದೆ. ಇಷ್ಟೂ ಸಾಲದೇ ಇನ್ಫೋಸಿಸ್, ಇಸ್ಕಾನ್, ಜಿಂದಾಲ್, ಅಜೀಮ್ ಪ್ರೇಮ್ಜಿ ಫೌಂಡೇಶನ್ ಸೇರಿದಂತೆ ಇಪ್ಪತ್ತು ಖಾಸಗಿ ಸಂಸ್ಥೆ-ವ್ಯಕ್ತಿಗಳು ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ಆರ್ಥಿಕವಾಗಿ ಕೈ ಜೋಡಿಸಿವೆ! ಈ ರೀತಿಯಲ್ಲಿ ಸರ್ಕಾರ, ಈಗಾಗಲೇ ಸರ್ಕಾರಿ ಶಾಲೆಗಳನ್ನೂ ಸದ್ದಿಲ್ಲದೇ ಖಾಸಗಿಯವರಿಗೆ ದತ್ತು ನೀಡಿ ಆಗಿದೆ!

ಪ್ರಾಥಮಿಕ ಶಿಕ್ಷಣಕ್ಕಾಗಿ 2010-11ನೇ ಸಾಲಿನ ಬಜೆಟ್‌ನಲ್ಲಿ 7700 ಕೋಟಿ, ಅಂದರೆ ಒಟ್ಟು ಬಜೆಟ್‌ನ ಶೇಕಡಾ 15 ರಷ್ಟು ಮೀಸಲಿರಿಸಲಾಗಿದೆ. ಇಷ್ಟೆಲ್ಲಾ ಆರ್ಥಿಕ ಸಬಲತೆ ಇದ್ದರೂ ಗುಣಾತ್ಮಕ ಶಿಕ್ಷಣವನ್ನು ತಾವೇಕೆ ಕೊಡಲಾಗುತ್ತಿಲ್ಲ? ಸರ್ಕಾರಿ ಶಾಲೆಗೆ ಮಕ್ಕಳೇಕೆ ಬರುತ್ತಿಲ್ಲ? ಎಂದು ಸರ್ಕಾರ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ತನ್ನ ಖಾಸಗಿ ಹುಳುಕು ತನ್ನ ಮುಖಕ್ಕೇ ರಾಚುವಷ್ಟು ಸ್ಪಷ್ಟವಾದ ಉತ್ತರಗಳು ಹೊಳೆಯುತ್ತವೆ.

ಕಡ್ಡಾಯ ಮತ್ತು ಉಚಿತ ಶಿಕ್ಷಣದ ಉದಾತ್ತ ಆಶಯ ಹೊತ್ತ, ಕೇಂದ್ರ ಸರ್ಕಾರ 2009 ರಲ್ಲೇ ರೂಪಿಸಿದ  ಶಿಕ್ಷಣ ಹಕ್ಕು ಕಾಯ್ದೆ ಯನ್ನು ಜಾರಿಗೊಳಿಸಿದರೆ ರಾಜ್ಯದ 6-14 ವರ್ಷದವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯೇ ಆಗುತ್ತದೆ. ಈಗಾಗಲೇ ಶಿಕ್ಷಣ ಖಾಸಗಿಕರಣಕ್ಕೆ ಅನಧಿಕೃತವಾಗಿ ತನ್ನನ್ನೇ ದತ್ತು ನೀಡಿಕೊಂಡಿರುವ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳುವುದಕ್ಕೇ ಮೀನಮೇಷ ಎಣಿಸುತ್ತಿದೆ. ಸಾರ್ವಜನಿಕರ-ತಜ್ಞರ ಚರ್ಚೆಗೆ ವಿಷಯವನ್ನಿಡದೇ ನಿರ್ದಾಕ್ಷಿಣ್ಯವಾಗಿ ನೂರಾರು ಶಾಲೆಗಳನ್ನು ಮುಚ್ಚುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಶಿಕ್ಷಣವನ್ನು ಖಾಸಗಿಯಾಗಿ ಕೊಳ್ಳಲಾಗದ ಗ್ರಾಮೀಣ, ತಳ ಸಮುದಾಯದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವಂತೆ ಯೋಜನೆ ರೂಪಿಸುತ್ತಿದೆ.

2011ರ ಜನಗಣತಿಯಂತೆ ಈಗಲೂ ಇನ್ನೂ 1,08,542 ಮಕ್ಕಳು ಶಾಲೆಯಿಂದ ಹೊರಗೇ ಇದ್ದಾರೆ. ಅವರಿಗೂ ಕಡ್ಡಾಯ ಶಿಕ್ಷಣ ನೀಡುವಂತಾದರೆ ಇನ್ನೂ ನೂರಾರು ಶಾಲೆಗಳನ್ನು ಸರ್ಕಾರವೇ ಪ್ರಾರಂಭಿಸಬೇಕಿದೆ. ಗ್ರಾಮೀಣ ಪ್ರದೇಶದ ಶಾಲೆಗಳನ್ನು ಇದೇ ರೀತಿ ಮುಚ್ಚುತ್ತಾ ಹೋದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುತ್ತದೆ. ಮನೆ ಮುಂದಲ ಶಾಲೆಗಳಿಗೇ ಹೆಣ್ಣುಮಕ್ಕಳನ್ನು ಕಳಿಸಲು ಅನುಮಾನಿಸುವ ಗ್ರಾಮೀಣ ಪೋಷಕರು, ಶಾಲೆಗಳು ದೂರವಾದಷ್ಟೂ ಮಕ್ಕಳನ್ನು ಅದರಿಂದ ಇನ್ನಷ್ಟು ದೂರ ಉಳಿಸುತ್ತಾರೆ.

ಕಡಿಮೆ ಮಕ್ಕಳಿರುವ ಶಾಲೆಯ ಅಭಿವೃದ್ಧಿಯ ಹೊಣೆ ಹೊರುವವರಿಗೆ ಶಾಲೆಯನ್ನು ದತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವರು ಹೊರಡಿಸಿರುವ ಫರ್ಮಾನು ನಾಚಿಕೆಗೇಡಿನದಾಗಿದೆ. ಸರ್ವಜನರ ಹಿತವನ್ನು ಬಯಸುವ ಮಾತೃಸ್ವರೂಪಿಯಾದ ಯಾವುದೇ ಸರ್ಕಾರ, ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗದ ಜವಾಬ್ದಾರಿಯನ್ನು ತಾನೇ ಹೊರಬೇಕೇ ಹೊರತು ಅದನ್ನು ಖಾಸಗಿಯವರಿಗೆ ದತ್ತು ನೀಡಿ, ತನ್ನ ನೈತಿಕಶಕ್ತಿಯನ್ನು ಮಾರಿಕೊಳ್ಳವುದಿಲ್ಲ!

ಸಾರ್ವಜನಿಕ ಶಿಕ್ಷಣದ ಬೇರುಗಳಿಗೆ ಹಿಡಿದಿರುವ ಖಾಸಗಿ ಗೆದ್ದಲನ್ನು ಕೊಡವಿ, ಬೇರುಗಳು ಗಟ್ಟಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಮತ್ತು ಸಮಾನತೆಯ ಆಧಾರದ ಸಮಾನಶಾಲೆಗಳನ್ನು ಇನ್ನಾದರೂ ಸರ್ಕಾರ ಪುನರ್ ರೂಪಿಸಬೇಕಿದೆ. ಶಿಕ್ಷಣ ವ್ಯಾಪಾರಿಕರಣವಾಗದಂತೆ ಖಾಸಗಿವಲಯವನ್ನು ಹತ್ತಿಕ್ಕಿ, ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದ ಸಮಸ್ಯೆ ಬರಲು ಸಾಧ್ಯವೇ ಇಲ್ಲ.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 9

-ಡಾ.ಎನ್.ಜಗದೀಶ್ ಕೊಪ್ಪ

ಅಣೆಕಟ್ಟುಗಳು ಜಗತ್ತಿನೆಲ್ಲೆಡೆ ನದಿಗಳನ್ನು ಮಾತ್ರ ಕೊಲ್ಲಲಿಲ್ಲ. ಇದರ ಜೊತೆಜೊತೆಗೆ ಮನುಕುಲದ ಪೂವರ್ಿಕರು ಎಂದೇ ಜಾಗತಿಕ ಸಮುದಾಯ ನಂಬಿಕೊಂಡು ಬಂದಿದ್ದ, ಅರಣ್ಯವಾಸಿಗಳಾದ ಆದಿವಾಸಿ ಬುಡಕಟ್ಟು ಜನಾಂಗವನ್ನು ಕೂಡ ಹೇಳ ಹಸರಿಲ್ಲದಂತೆ ನಿರ್ನಾಮ ಮಾಡಿದವು.

ಅಣೆಕಟ್ಟುಗಳ ನಿಮರ್ಾಣದ ಇತಿಹಾಸದಲ್ಲಿ, ಗ್ವಾಟೆಮಾಲದಲ್ಲಿ ನಡೆದ ನರಮೇಧ ನಾಗರಿಕ ಜಗತ್ತು ತಲೆ ತಗ್ಗಿಸುವಂತಹದ್ದು. 1980ರ ದಶಕದಲ್ಲಿ ನಡೆದ ಈ ದುರಂತ ಘಟನೆ, ಅಭಿವೃದ್ಧಿಯ ವಾರಸುದಾರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿ ದಾಖಲಾಗಿದೆ.

ಗ್ವಾಟೆಮಾಲದ ರಿಯೊನಿಗ್ರೊ ಎಂಬ ಅರಣ್ಯದಲ್ಲಿನ ಆದಿವಾಸಿಗಳ ವಸತಿ ಪ್ರದೇಶದಲ್ಲಿ ನಡೆದ 376 ಮಂದಿಯ (ಮಹಿಳೆಯರೂ, ಪುರುಷರು, ಮಕ್ಕಳೂ ಸೇರಿದಂತೆ) ನರಮೇಧ ಅಲ್ಲಿನ ಮಾಯ ಅಚಿ ಎಂಬ ಬುಡಕಟ್ಟು ಜನಾಂಗಕ್ಕೆ ಇಂದಿಗೂ ದುಸ್ವಪ್ನವಾಗಿ ಕಾಡುತ್ತಿದೆ.

ವಿಶ್ವಬ್ಯಾಂಕ್, ಇಂಟರ್ ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಇಟಲಿ ಸರಕಾರದ ಧನ ಸಹಾಯದೊಂದಿಗೆ ಗ್ವಾಟೆಮಾಲ ಸರಕಾರ ಚಿಕ್ಸೊಯ್ ಅಣೆಕಟ್ಟು ನಿಮರ್ಿಸಲು 1976 ರಲ್ಲಿ ಯೋಜನೆ ರೂಪಿಸಿದಾಗ ನರಮೇಧದ ಅಧ್ಯಾಯ ಪ್ರಾರಂಭವಾಯಿತು.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe1976 ರಲ್ಲಿ ಸರಕಾರದ ಅಧಿಕಾರಿಗಳು ಹಾಗೂ ವಿದ್ಯುತ್ ಇಲಾಖೆಯ ಇಂಜಿನಿಯರ್ಗಳು ನೇರವಾಗಿ ಹೆಲಿಕಾಪ್ಟರ್ನಲ್ಲಿ ರಿಯೊನಿಗ್ರೊ ಗ್ರಾಮಕ್ಕೆ ಬಂದಿಳಿದು, ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಎಲ್ಲರೂ ಜಾಗ ಖಾಲಿ ಮಾಡಬೇಕು ಎಂದು ಹೇಳಿದಾಗಲೇ ಸರಕಾರ ಮತ್ತು ಆದಿವಾಸಿಗಳ ನಡುವೆ ಸಂಘರ್ಷ ಶುರುವಾಯಿತು. ಸರಕಾರವು ಇವರಿಗೆ ಕೊಡಲು ನಿರ್ಧರಿಸಿದ ಪರಿಹಾರದ ಮೊತ್ತ, ಹೊಸದಾಗಿ ತೋರಿಸಿದ ಸ್ಥಳದ ಬಗ್ಗೆ ಅತೃಪ್ತಿಗೊಂಡ ಅಲ್ಲಿನ ಮೂಲನಿವಾಸಿಗಳು ಸ್ಥಳಾಂತರಗೊಳ್ಳಲು ನಿರಾಕರಿಸಿದರು. ಹಲವಾರು ಬಾರಿ ನಡೆದ ಸಂಧಾನ ಸಭೆಗಳು ವಿಫಲಗೊಂಡ ನಂತರ ಸರಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಯಿತು. ಇದಕ್ಕಾಗಿ ಸರಕಾರ ತುಳಿದ ಹಾದಿ ಮಾತ್ರ ಅನೈತಿಕ ಮಾರ್ಗವಾಗಿತ್ತು. ನಿರಂತರ 4 ವರ್ಷಗಳ ಸಂಘರ್ಷಣೆಯ ನಂತರ, ಸರಕಾರ ಗ್ವಾಟೆಮಾಲದಲ್ಲಿ ನಡೆಯುತ್ತಿದ್ದ ಗೆರಿಲ್ಲಾ ಬಂಡುಕೋರರಿಗೆ ಆಹಾರ, ಆಶ್ರಯ ನೀಡುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಮೂಲನಿವಾಸಿಗಳಿಗೂ ಬಂಡುಕೋರರು ಎಂಬ ಹಣೆಪಟ್ಟಿ ಹಚ್ಚಿತು.

1980ರ ಮಾರ್ಚ್ ತಿಂಗಳಲ್ಲಿ ಆದಿವಾಸಿಗಳ ಗ್ರಾಮಕ್ಕೆ ಬಂದ ಮೂವರು ಮಿಲಿಟರಿ ಪೋಲೀಸರು, ಅಣೆಕಟ್ಟು ನಿಮರ್ಾಣದ ಸ್ಥಳದಿಂದ ಕಬ್ಬಿಣ ಕಳುವಾಗಿದೆ ಎಂಬ ನೆಪದಲ್ಲಿ ಕೆಲವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಬಂಧನಕ್ಕೆ ವಿರೋಧ ವ್ಯಕ್ತ ಪಡಿಸಿದ ನಿವಾಸಿಗಳು ಪ್ರತಿದಾಳಿ ನಡೆಸಿದರು. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳುವ ಭಯದಲ್ಲಿ ಓರ್ವ ಪೋಲೀಸ್ ನದಿಯಲ್ಲಿ ಮುಳುಗಿ ಸತ್ತ.

ಈ ಘಟನೆಯ ನಂತರ, ನಾಲ್ಕು ತಿಂಗಳ ಕಾಲ ತಣ್ಣಗಿದ್ದ ಸರಕಾರ ಮತ್ತೆ ಸಂಧಾನದ ನೆಪದಲ್ಲಿ, ಇಬ್ಬರು ಬುಡಕಟ್ಟು ಜನಾಂಗದ ನಾಯಕರನ್ನು ತಮ್ಮ ದಾಖಲೆಗಳ ಸಮೇತ ಅಣೆಕಟ್ಟು ಸ್ಥಳಕ್ಕೆ ಬರಲು ಆಹ್ವಾನಿಸಿತು. ಅವರಿಂದ ಬಲವಂತವಾಗಿ ಸಹಿ ಪಡೆದ ಸರಕಾರ, ಆ ಇಬ್ಬರು ನಾಯಕರನ್ನು ಒಂದುವಾರ ಕಾಲ ಗುಪ್ತ ಸ್ಥಳದಲ್ಲಿ ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿ ಕೊಂದು ಹಾಕಿತು.

ಈ ಘಟನೆ ನಡೆದ ಎರಡು ವರ್ಷಗಳ ನಂತರ ಸರಕಾರ, 1982ರ ಫೆಬ್ರವರಿ ತಿಂಗಳಿನಲ್ಲಿ 73 ಮಂದಿ ಮಹಿಳೆಯರು, ಪುರುಷರು, ಎಕ್ಯೂಕ್ ಎಂಬ ನಗರಕ್ಕೆ ಬಂದು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಆದೇಶ ಹೊರಡಿಸಿತು. ರಿಯೊನಿಗ್ರೊ ಹಳ್ಳಿಯಿಂದ ಮಿಲಿಟರಿ ಪೋಲೀಸರ ಕಛೇರಿಗೆ ಹೋದ 73 ಮಂದಿಯಲ್ಲಿ ಬದುಕುಳಿದು, ಹಳ್ಳಿಗೆ ಹಿಂದಿರುಗಿದ್ದು ಏಕೈಕ ಮಹಿಳೆ ಮಾತ್ರ. ಗ್ವಾಟೆಮಾಲ ಸರಕಾರದ ಸಿವಿಲ್ ಡಿಫೆನ್ಸ್ ಪೆಟ್ರೊಲ್ ಎಂಬ ಮಿಲಿಟರಿ ಪೋಲಿಸ್ ಪಡೆ ಎಲ್ಲರನ್ನೂ ನಿರ್ಧಕ್ಷಿಣ್ಯವಾಗಿ ಕೊಂದುಹಾಕಿತು. ಇದು ಸಾಲದೆಂಬಂತೆ ಅದೇ 1982ರ ಮಾರ್ಚ್ 13 ರಂದು 10 ಸೈನಿಕರು ಹಾಗೂ 25 ಪೋಲೀಸ್ ತುಕಡಿಯೊಂದಿಗೆ ಬಂದಿಳಿದ ನರಹಂತಕರು ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಬೇಟೆಯಾಡಿದರು. ಗಂಡಸರು ಮತ್ತು ಮಹಿಳೆಯರನ್ನು ಬಂದೂಕಿನ ಹಿಡಿಯಿಂದ, ಲಾಠಿಯಿಂದ ಬಡಿದು ಕೊಂದರೆ, ಮಕ್ಕಳ ಕೊರಳಿಗೆ ಹಗ್ಗ ಹಾಕಿ ಮರಕ್ಕೆ ನೇತುಹಾಕುವುದರ ಮೂಲಕ ಕೊಂದರು. 107 ಹಸುಳೆಗಳನ್ನು ಈ ಸಂದರ್ಭದಲ್ಲಿ ಹೊಸಕಿ ಹಾಕಲಾಯಿತು. ಈ ನರಮೇಧದಲ್ಲಿ ಬದುಕುಳಿದದ್ದು ಇಬ್ಬರು ಮಹಿಳೆಯರು ಮಾತ್ರ.

ನಾಗರಿಕ ಜಗತ್ತಿನ ಸಂಪರ್ಕವಿರಲಿ, ಕಾನೂನು ಮತ್ತು ಮಾನವ ಹಕ್ಕುಗಳ ಬಗ್ಗೆ ಅರಿವಿರದ ಅಮಾಯಕ ಮೂಲನಿವಾಸಿಗಳ ನೋವಿನ ದೌರ್ಜನ್ಯಕ್ಕೆ ಪ್ರತಿಭಟಿಸಿ ಆಗ ಗ್ವಾಟೆಮಾಲದಲ್ಲಿ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಸರಕಾರವನ್ನು ಎದುರು ಹಾಕಿಕೊಳ್ಳುವ ಶಕ್ತಿ ಯಾರಿಗೂ ಇರಲಿಲ್ಲ. ಈ ನರಮೇಧ ಘಟನೆ ಸಂಭವಿಸಿದ ಎರಡು ತಿಂಗಳ ನಂತರ, ಮತ್ತೆ ದಾಳಿನಡೆಸಿದ ಮಿಲಿಟರಿ ಪೋಲಿಸರು 35 ಮಕ್ಕಳು ಸೇರಿದಂತೆ, 95 ಮಂದಿ ಆದಿವಾಸಿಗಳನ್ನು, ತಾವು ಬದುಕಿದ್ದ  ಹಳ್ಳಿಯಲ್ಲೇ ಸಾಲಾಗಿ ನಿಲ್ಲಿಸಿ ಹಣೆಗೆ ಗುಂಡಿಕ್ಕಿ ಕೊಂದರು. ಕೊನೆಗೆ ಗ್ವಾಟೆಮಾಲ ಸರಕಾರದ ವಿರುದ್ಧ ದನಿ ಎತ್ತಿದ ಎಡಪಂಥೀಯ ಪಕ್ಷದ ಕಾರ್ಯಕರ್ತರು, ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿ ಈ ನರಮೇಧದ ಬಗ್ಗೆ ವಿಶ್ವದ ಗಮನ ಸೆಳೆದರು. ಈ ಸಂದರ್ಭದಲ್ಲಿ ಅಮೆರಿಕಾದ ಸ್ವಯಂ ಸೇವಾ ಸಂಸ್ಥೆ ವಿಟ್ನೆಸ್ ಫಾರ್ ದಿ ಪೀಪಲ್ಸ್ ರಂಗಪ್ರವೇಶ ಮಾಡಿ ಈ ಅಣೆಕಟ್ಟು ಯೋಜನೆಗೆ ಹಣಕಾಸಿನ ನೆರವು ನೀಡಿದ ವಿಶ್ವಬ್ಯಾಂಕ್ ಸೇರಿದಂತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ವೇಳೆಗಾಗಲೇ ಹತ್ಯೆಯಾದ 369 ಆದಿವಾಸಿಗಳು ಸೇರಿದಂತೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ 72 ಸಾವಿರ ನಾಗರೀಕರು 1980ರಿಂದ 1984ರ ಅವಧಿಯೊಳಗೆ ಹತ್ಯೆಯಾಗಿದ್ದರು, ಇಲ್ಲವೆ ಕಾಣೆಯಾಗಿದ್ದರು. ಸ್ವಯಂ ಸೇವಾ ಸಂಸ್ಥೆ ನಡೆಸಿದ ತನಿಖೆಯ ಮೂಲಕ ಧೃಡಪಟ್ಟ ಅಸಲಿ ಸಂಗತಿಯೆಂದರೆ ಈ ನರಮೇಧ ಮತ್ತು ಸಂಘರ್ಷದ ಹಿಂದೆ ಸರಕಾರದ ಹಲವಾರು ಅಧಿಕಾರಿಗಳ ಕೈವಾಡವಿದ್ದು, ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾಗುವ ಮಂದಿಗೆ ನೀಡಲಾಗುವ ಪರಿಹಾರವನ್ನು ತಮ್ಮದಾಗಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಗಳೇ ಗಲಾಟೆಗೆ ಪ್ರಚೋದನೆ ನೀಡಿ ಫಲಾನುಭವಿಗಳನ್ನು ಹತ್ಯೆಗೈದಿದ್ದರು.

ಮೂಲತಃ ಈ ಅಣೆಕಟ್ಟು ಯೋಜನೆಯ ರೂಪು ರೇಷೆ ಸುಳ್ಳಿನ ಕಂತೆಗಳ ಮೇಲೆ ರೂಪುಗೊಂಡಿತ್ತು. ಈ ಅಣೆಕಟ್ಟಿನ ನೀಲಿ ನಕಾಶೆಯನ್ನು ಸಿದ್ದಪಡಿಸಿದ್ದು ಜರ್ಮನಿ ಮೂಲದ ಲ್ಯಾಮ್ ಕನ್ಸಾರ್ಟಿಯಮ್ ಎಂಬ ಸಂಸ್ಥೆ. ಇದರ ಅಂಗ ಸಂಸ್ಥೆಯಾದ ಲ್ಯಾಮಿಯರ್ ಇಂಟರ್ನ್ಯಾಷನಲ್ ಎಂಬ ಸಂಸ್ಥೆ ಪರಿಸರ ಹಾನಿ ಹಾಗೂ ಯೋಜನೆಯಿಂದ ನಿರ್ಗತಿಕರಾಗುವ ಸಂಖ್ಯೆ ಕುರಿತಂತೆ ವರದಿ ಸಿದ್ಧಪಡಿಸಿತ್ತು. ಈ ವರದಿಯ ಪ್ರಕಾರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಹಳ್ಳಿಗಳಿಂದ ನಿರ್ವಸತಿಗರಾಗುವ ಸಂಖ್ಯೆ ಕೇವಲ 1,500 ಆದಿವಾಸಿಗಳು ಮಾತ್ರ. ವಾಸ್ತವವಾಗಿ 18 ಸಾವಿರ ಮಂದಿ ಆದಿವಾಸಿಗಳು ಅರಣ್ಯದಲ್ಲಿ ವಾಸವಾಗಿದ್ದರು. ವರದಿಯಲ್ಲಿ ಕೆಲವು ಗ್ರಾಮಗಳಲ್ಲಿ ಜನವಸತಿ ಇಲ್ಲ ಎಂದು ನಮೂದಿಸಲಾಗಿತ್ತು.

ಈ ಅಣೆಕಟ್ಟಿನ ವಿವಾದದಿಂದಾಗಿ ಚಿಕ್ಸೊಯ್ ನರಮೇಧ ಹೆಸರಿನಿಂದ ಪ್ರಸಿದ್ಧವಾದ ಈ ಘಟನೆಯ ಕುರಿತಂತೆ 1979ರಿಂದ 1991ರವರೆಗೆ ಸುಮಾರು 12 ವರ್ಷಗಳ ಕಾಲ ವಿಶ್ವಬ್ಯಾಂಕ್ ಆಗಲಿ ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ ಆಗಲಿ ಇಟಲಿ ಸರಕಾರವಾಗಲಿ ತುಟಿ ಬಿಚ್ಚಲಿಲ್ಲ.

ಅಣೆಕಟ್ಟು ಕಾಮಗಾರಿ ನಡೆದ ಸಮಯದಲ್ಲಿ ವರ್ಷವೊಂದರಲ್ಲಿ ಕನಿಷ್ಠ 3 ತಿಂಗಲ ಕಾಲ ವಿಶ್ವಬ್ಯಾಂಕ್ನ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಕಾಮಗಾರಿಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಆದಿವಾಸಿಗಳ ನರಮೇಧಕ್ಕೆ ಮೌನ ಸಾಕ್ಷಿಯಾಗಿದ್ದರು. 1985ರಲ್ಲಿ ಈ ಅಣೆಕಟ್ಟು ಯೋಜನೆಗೆ ಹಣ ಸಾಲದಾದಾಗ ಇಷ್ಟೆಲ್ಲ ಘಟನೆಗಳು ಸಂಭವಿಸಿದ್ದರೂ ಕೂಡ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ನೀಡಿತು. ಈ ಸಾಲ ನೀಡಿಕೆಯ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿತ್ತು. ಏಕೆಂದರೆ ತಾಂತ್ರಿ ಸಹಾಯ ಮತ್ತು ನಿರ್ಮಾಣ ಗುತ್ತಿಗೆಯನ್ನು ಸ್ವಿಡ್ಜರ್‌ಲ್ಯಾಂಡ್ ಮೂಲದ ಮೋಟಾರ್ ಕೊಲಂಬಸ್ ಹಾಗೂ ಅಮೆರಿಕಾದ ಇಂಟರ್ನ್ಯಾಷನಲ್ ಎಂಬ ಬಹು ರಾಷ್ಟ್ರೀಯ ಕಂಪನಿಗಳು ವಹಿಸಿಕೊಂಡಿದ್ದವು.

ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರೆ 1991ರಲ್ಲಿ ಅಣೆಕಟ್ಟು ಕಾಮಗಾರಿ ಮುಕ್ತಾಯಗೊಂಡಾಗ ಸಾಲ ನೀಡಿದ್ದ ವಿಶ್ವಬ್ಯಾಂಕ್ ತಾನು ನೀಡಿದ್ದ ಮುಕ್ತಾಯ ಪ್ರಮಾಣ ಪತ್ರದಲ್ಲಿ “ಗ್ವಾಟೆಮಾಲದ ಚಿಕ್ಸೊಯ್ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದ 1,500 ಮಂದಿ ಆದಿವಾಸಿಗಳು ಘರ್ಷಣೆಯಲ್ಲಿ ಮೃತಪಟ್ಟಿದ್ದು, ಯೋಜನೆ ವಿಳಂಬವಾಗಲು ಸ್ಥಳೀಯರ ಪ್ರತಿರೋಧ ಕಾರಣ,” ಎಂದು ತಿಳಿಸಿ, ಸಂಘರ್ಷದಲ್ಲಿ ಮೃತಪಟ್ಟ ಪುನರ್ವಸತಿ ಉಸ್ತುವಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳಿಗೆ ಶ್ರದ್ಧಾಂಜಲಿ ಕೂಡ ಅರ್ಪಿಸಿತ್ತು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಅಮೆರಿಕಾದ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ “ವಿಟ್ನೆಸ್ ಫಾರ್ ದಿ ಪೀಪಲ್ಸ್” 1996ರ ತನ್ನ ವಾರ್ಷಿಕ ವರದಿಯಲ್ಲಿ ಘಟನೆಯ ಬಗ್ಗೆ ಹೀಗೆ ನಮೂದಿಸಿತ್ತು: “ಗ್ವಾಟೆಮಾಲ ದುರಂತದ ಬಗ್ಗೆ ವಿಶ್ವಬ್ಯಾಕ್ಗೆ ಅರಿವಿತ್ತು. ಸಾಲವನ್ನು ವಿಸ್ತರಿಸುವ ಸಮಯದಲ್ಲಿ ಅಲ್ಲಿ ನಡೆದ ಹಿಂಸೆ, ನರಮೇಧದ ಬಗ್ಗೆ ಗೊತ್ತಿಲ್ಲವೆಂದರೆ ಇದು ವಿಶ್ವಬ್ಯಾಂಕ್ನ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ. ಈ ಹಿಂಸೆಯ ಹಿಂದೆ ವಿಶ್ವಬ್ಯಾಂಕ್ನ ಕೈವಾಡವಿತ್ತು ಎಂದು ನಾವು ನಂಬಬೇಕಾಗುತ್ತದೆ.”

ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಕನಸಿನ ಯೋಜನೆಗೆ ಅಡ್ಡಿಯಾಗುವ ಅಮಾಯಕರನ್ನು ಹೊಸಕಿ ಹಾಕಲು ಸೂತ್ರದಾರನಂತೆ ತೆರೆಯ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅಮೆರಿಕಾದ ಕೈಗೂಸಿನಂತೆ ವರ್ತಿಸುವ ವಿಶ್ವಬ್ಯಾಂಕಿನ ವಿಶ್ವ ರೂಪಕ್ಕೆ ಗ್ವಾಟೆಮಾಲ ದುರಂತಕ್ಕಿಂತ ಬೇರೊಂದು ಪುರಾವೆ ಬೇಕಿಲ್ಲ.

(ಮುಂದುವರಿಯುವುದು)