Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಪೂತಾತ್ಮ-ಹೂತಾತ್ಮ ಹುತಾತ್ಮ- ಮಹಾತ್ಮ : ದ.ರಾ.ಬೇಂದ್ರೆಯವರ ಕವನ

– ದ.ರಾ.ಬೇಂದ್ರೆ

[“ಗಾಂಧಿ ಸಾವು ಮತ್ತು ಬೇಂದ್ರೆ ಕವನ” ಲೇಖನದಲ್ಲಿ ಚರ್ಚಿಸಿದ ಕವನದ ಪೂರ್ಣಪಾಠ ]


ಓ ಮಹಾತ್ಮ! ಶತಸಾಂವತ್ಸರಿಕಕ್ಕೆ
ಸತ್ಯ ವರದಿ ಮಾಡೋಣ
ನೀನು ಹೋದ ಮೇಲೆ, ನಾವು
ತಿನ್ನುವ ಭಿಕ್ಷೆ ಅನ್ನ, ಪರದೇಶಿ
ಬಳಸುವ ಕಳ್ಳ ಹೊನ್ನು, ಪರದೇಶಿ
ಸಿಂಗರಿಸುವ ಮಳ್ಳ ಹೆಣ್ಣು, ಪರದೇಶಿ
ಕಲಿಸುವ ಮಂತ್ರ, ಯಂತ್ರ, ತಂತ್ರ, ವಿದ್ಯೆ, ಪರದೇಶಿ.


ಅಹಿಂಸಾ ಯಜ್ಞದಂತೆ, ಪರ್ಜನ್ಯ ಮಳೆ
ಮಳೆಯಂತೆ ಬೆಳೆ
ಅನ್ನದಂತೆ ಪ್ರಜೆ
ಪ್ರಜೆಯಂತೆ ರಾಜ್ಯ.


ಪಶುಯಜ್ಞ ಅಡಗಿ, ನರಯಜ್ಞ ದಿನದ ಪಾಕವಾಗಿದೆ
ನೀನು ಅಮರ ನಿಜ! ನಿನಗೆ ಗೊತ್ತಿಲ್ಲದ್ದೇನು?
ನಿನ್ನ ಕಣ್ಣಿಗೆ ಇದೆಲ್ಲಾ ಬಿದ್ದಿಲ್ಲಾ- ಎಂದಲ್ಲಾ
ಊದೋ ಶಂಖ ಊದಬೇಕು!


ಭಾರತದ ಅಪೂರ್ವ ಪುಣ್ಯಪುಂಜ
ಎಂದಿನಿಂದಲೋ ಹುದುಗಿತ್ತು, ಎಲ್ಲೋ ಹೂಳಿ ಹೋಗಿತ್ತು
ಮೋಹನದಾಸ ಹೂತನು, ಪರಮ ಪೂತನು.DRBendre
“ಬೆಂಕಿ ಬೇರೆ! ಬೆಳಕು ಬೇರೆ! ಬಣ್ಣ ಬೇರೆ!”
ಬಿಡಿಬಿಡಿಸಿ ಹೇಳಿದ ಮಹಾತ್ಮ.


ಹಸಿವು, ಕಸಿವಿಸಿ, ಕಿಚ್ಚು
ಒಂದರಿಂದೊಂದು ದೂರ ಇಲ್ಲ
ಒಂದನ್ನು ಹೊತ್ತಿಸಿ, ಇನ್ನೊಂದನ್ನು ನಂದಿಸುವುದು
ತೂಕದ ಕೆಲಸ.


ಯಜ್ಞವೇ ಹಿಂಸೆ ಆಗುತ್ತದೆ
ಹಿಂಸೆ ನುಂಗಿದರೆ, ಅಹಿಂಸೆ ಹುಟ್ಟುವುದಿಲ್ಲ.
ಮಾನವರು ದಾಯಾದಿಗಳು, ದೈತ್ಯರು
ಪಾಲಿನ ನ್ಯಾಯ ಇನ್ನೂ ತೀರಿಯೇ ಇಲ್ಲ
ಅಹಿಂಸೆಯು ಸತ್ಯದ ತಪಸ್ಸು!
ಹಿಂಸೆ ಅನಿವಾರ್‍ಯ ತಾಪ
ಹೊತ್ತಿದ ಬೆಂಕಿ ಹೊತ್ತಿಸದವನನ್ನೂ ನೆಕ್ಕುವುದು
ಹೊತ್ತಿಸಿದವರನ್ನೂ ಮುಕ್ಕುವುದು.
ಯಾರು ಹುಟ್ಟಿಸಿದರೋ ಈ ಅವಳಿ-ಜವಳಿ ಮಾತು
ಹಿಂಸೆ – ಅಹಿಂಸೆ.


ಈ ಅದಲು-ಬದಲು- ತೊದಲು ಮಾತು
ಪಂಜು ಹೊತ್ತಿಸಿ ಹಿಲ್ಲಾಲು ಹಿಡಿದವರೆಲ್ಲಾ
ಶಾಂತಿಃ ಶಾಂತಿಃ! ಅಹಿಂಸೆಗೆ ಜಯ ಜಯಕಾರ!
ಕೂಗಿದ್ದೇ ಕೂಗಿದ್ದು,
ಕೊನೆಗೆ ಊರೆಲ್ಲಾ ಬೂದಿ.
ಹೇಳಿದ್ದು- ಅಹಿಂಸಾ- ಪುರಾಣ
ತಿಂದದ್ದು ಹಿಂಸೆಯ ಯಮ- ಬದನೆಕಾಯಿ!
ಅಹಿಂಸೆ ಹುಸಿ ಹೋಗುತ್ತದೆ
ಹಿಂಸೆ ಹೇಸಿಗೆಗೆ ಹೇಸುವುದಿಲ್ಲ
’ದಯಾ ಧರ್ಮಕಾ ಮೂಲ ಹೈ’
ಎಂದು ಡಂಗುರ ಸಾರಿಸುವುದು
ಮತ್ತೆ ಏನೂ ಮಾಡದವರಂತೆ, ಗಪ್ಪು ಗಡದ್ದು
ಹೊಸ ಲೆಕ್ಕ, ಹೊಸ ಲೆಕ್ಚರು!


’ಹಿಂಸೆ’ ಮಹಾತ್ಮರ ಮುಂಚೆಯೇ ಹುಟ್ಟಿತ್ತು
ಅಹಿಂಸೆ ಅವರ ಮುಂಚೆಯೇ ಅರೆ ಸತ್ತಿತ್ತು gandhi_dead_body
ಅವರು ಊದಿದ ಮಂತ್ರದಿಂದ
ಅಹಿಂಸೆಗೆ ಬಹಳಷ್ಟು ತ್ರಾಣ ಬರಲಿಲ್ಲ
ಹಿಂಸೆಗಂತೂ ಲಂಗೂ ಲಗಾಮು ಇರಲೇ ಇಲ್ಲ.
ದಯೆಯಿಲ್ಲದ ನಿರ್ದಯರೂ
ಇನ್ನೊಬ್ಬರಿಂದ ದಯೆ ಅಪೇಕ್ಷಿಸುತ್ತಾರೆ!


ಬುದ್ಧಿಗೇಡಿಗೂ ಆಗ್ರಹ ಗೊತ್ತಿದೆ
ಎಂಥ ಬುದ್ಧಿವಂತನಿಗೂ ಸತ್ಯ ಸರಿಯಾಗಿ ತಿಳಿದಿಲ್ಲ,
ಸತ್ಯಾಗ್ರಹದಲ್ಲಿ ಸತ್ಯ ಕಡಿಮೆಯಾಗಿ
ಆಗ್ರಹ ಹೆಚ್ಚಾಗುತ್ತಲೆ,
ಅಹಿಂಸೆಯ ಹಚ್ಚಿದ ಬಣ್ಣ ಉದರಿ,
ಹಿಂಸೆಯ ಉಗ್ರರೂಪ ಉರಿದೇಳುತ್ತದೆ.

೧೧
ತಗಲು, ತಂಟೆ, ಉಪವಾಸ! ಮೋಸಂಬಿ ರಸ!
ಮೋಸ, ದೋಷ, ಉಪದೇಶ!
ದೇಶದ ತುಂಬೆಲ್ಲಾ ಸುದ್ದಿ
ಯಾವುದು ನಿಜವೋ?
ಯಾವುದು ಸುಳ್ಳೋ?
ವರ್ತಮಾನ ಪತ್ರಕ್ಕೆ ಹೊಟ್ಟೆತುಂಬ ಸುದ್ದಿ!
ನಮಗೆ ಬೇಕಾಗಿದ್ದುದು ಶುದ್ಧಿ.
ಓಹೋ ಹೂತಾತ್ಮ ! ಹಾಹಾ ಹುತಾತ್ಮ !

೧೧
ಹೂವಿಗೆ ಬೇಗೆ ಹಚ್ಚಿದರು
ಅದರ ಸೌಂದರ್‍ಯ ಮೆಚ್ಚಿದರು
ಸಂಸ್ಕೃತಿಯ ಜಂಭ ಕೊಚ್ಚಿದರು
ಕೊನೆಗೆ ಸುಟ್ಟವನ ಬೂದಿ
ಹಣೆಗೆ ಹಚ್ಚಿಕೊಂಡರು.
ಮತ್ತೆ ಹಣೆಬರಹದ ಹಣೆ, ಬರಿದೋ ಬರಿದು.
ಮಾರ್ಟಿನ್ ಲೂಥರ್ ಕಿಂಗ್!
ಅದೇ ಹಾದಿ ಹಿಡಿಸಿದರು ಹಿಂಸಾ ಭಕ್ತರು,
ಅಹಿಂಸೆ ಎಂಬುದು ಗೋಡೆ
ಹಿಂಸೆ ಎಂಬುದು ಚಿತ್ರ
ಮತ್ತೆ ಮತ್ತೆ ಜನ ಓದುವುದು- ಅದೇ ವಿಚಿತ್ರ !!

ಗಾಂಧಿ ಸಾವು ಮತ್ತು ಬೇಂದ್ರೆ ಕವನ

– ಜಯಪ್ರಕಾಶ್ ಶೆಟ್ಟಿ

ಇದು ‘ಸಂಭವಾಮಿ ಯುಗೇಯುಗೇ..’ ಎಂದು ನಂಬಿಸುತ್ತಲೇ ಬಂದ ದೇಶ. ಯಾವ ಯಾವುದೋ ಹೊಸಹೊಸ ಹರಿಕಾರರು, ಅವತಾರಪುರುಷರು, ಏನೇನನ್ನೋ ಮಾರುವವರು, ಕೊಳ್ಳುವವರು, ಬಿಡುಗಡೆಯ ಭಾಗ್ಯದಾತರುಗಳನ್ನು ಎದುರಿಗಿಟ್ಟು ಮತ್ತದೇ ಯುಗ ಯುಗದ ಅವತಾರದ ಕಥನಗಳನ್ನು ಪಠಿಸುತ್ತಲೇ ಬರುತ್ತಿರುವ ದೇಶವೂ ಹೌದು. ಆದರೆ ಏನೆಲ್ಲಾ ಕಸರತ್ತುಗಳ ನಡುವೆಯೂ ದೇಶದ ನರನಾಡಿಗಳಲ್ಲಿ ಬೆರೆತುಹೋದ ಗಾಂಧಿ ಮತ್ತು ಅಂಬೇಡ್ಕರ್ ಎಂಬೆರಡು ಹೆಸರುಗಳನ್ನು ಪ್ರಾಯಶಃ ಇನ್ನೂ ಕೆಲಕಾಲದವರೆಗೆ ಅಳಿಸಿ ಹಾಕಲಾಗದು. ಪ್ರಕಾಶಿಸುವ ಭಾರತದ ಕೋರೈಸುವ ಬೆಳಕಾಗಲೀ, ಗೆಲ್ಲಬೇಕಾದ ಭಾರತದ ಆರ್ಭಟವಾಗಲೀ ಗಾಂಧಿ ಮತ್ತು ಅಂಬೇಡ್ಕರರನ್ನು ನಾಪತ್ತೆ ಮಾಡುವಷ್ಟು ಎಂದಿಗೂ ಸಶಕ್ತವಲ್ಲ. ಆದರೆ ಇವರುಗಳಲ್ಲೊಬ್ಬರಾದ ಗಾಂಧಿಯನ್ನು ಈ ದೇಶದ ಕೆಟ್ಟಮನಸ್ಸೊಂದು “ಬಲಿ” ಪಡೆಯಿತು. gandhi_dead_bodyಅದು ಒಬ್ಬ ವ್ಯಕ್ತಿ ಮಾಡಿದ ಕೊಲೆಯಲ್ಲ. ಅಸಹನೆಯ ಮನೋಧರ್ಮವೊಂದರ ಹಿಂಸೆ. ಆದರೆ ಅದರ ಹೊಣೆ ಅಷ್ಟಕ್ಕೇ ಸೀಮಿತವಲ್ಲ. ಮೌನಸಮ್ಮತಿ ನೀಡುತ್ತಲೇ ಬಂದ “ಸಜ್ಜನಿಕೆಯ” ಭಾರತೀಯರೆಲ್ಲರೂ ಅದರ ಹೊಣೆಗಾರರು. ಅದು ನಾವೇ ಮಾಡಿದ ಕೊಲೆ. ಹೀಗಾಗಿ ಪ್ರತೀವರ್ಷದ ಫೆಬ್ರವರಿಗೆ ಕಾಲಿಡುತ್ತಿದ್ದಂತೆಯೇ, ಉತ್ತರಾಯಣದ ಆದಿಯಲ್ಲಿನ ಈ ನರಳಾಟದಿಂದ ನಮಗೆ ಬಿಡುಗಡೆಯಿಲ್ಲ. ದೇಶಸಮಸ್ತವೂ ತಲೆತಗ್ಗಿಸಬೇಕಾದ ಈ “ಪಾಪದಹೂರಣ” ನಮಗೆ ಅಂಟಿ ಕೂತಿರುವ ಬಿಡುಗಡೆಯೇ ಇಲ್ಲದ “ಹತ್ಯೆಯಕೆಸರು”. ರಾಷ್ಟ್ರಪಿತನನ್ನು ಗುಂಡಿಟ್ಟುಕೊಂದ ಕೊಲೆಯ ಕಪ್ಪುಕಲೆಯನ್ನು ಹೀಗೆ ಬೆತ್ತಲಾಗಿ ಒಪ್ಪಿಕೊಳ್ಳಲೇಬೇಕಾದುದರಿಂದ “ಗಾಂಧೀ ಸಾವಿನ” ಈ ನೋವಿನಿಂದ ಯಾರಿಗೂ ಮುಕ್ತಿ ಇಲ್ಲದಾಗಿದೆ.

ದೇಶಸ್ಮೃತಿಯ ಭಾಗವೇ ಆಗಿಹೋದ ಆ ಅರೆಬೆತ್ತಲೆಯ ಫಕೀರನ ಕೊಲೆ, ಯಾವ ಗಂಗೆಯಲ್ಲಿಯೂ ತೊಳೆದು ತೀರದ ಪಾಪ. ಇದಕ್ಕೂ ಸಿಹಿ ಹಂಚಿ ಸಂಭ್ರಮಿಸಿದವರಿದ್ದರೆಂಬುದು ಕೇಳಬಾರದ ಮಾತು. ಅದು ಬೇರೆ ಸಂಗತಿ. ಆದರೆ “ರಕ್ತ-ಮಾಂಸ ಸಹಿತವಾಗಿ ಇಂತಹದ್ದೊಂದು ಜೀವ ಲೋಕದಲ್ಲಿ ಓಡಾಡಿಕೊಂಡಿತ್ತೇ?” ಎಂಬುದು ಈ ಜೀವದ ಕುರಿತು ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟಿನ್ ತೆಗೆದ ಉದ್ಗಾರ. ಆದರೆ ಆ ಜೀವವೂ ನರಳಿ ನೆಲಕ್ಕುರುಳಿದ್ದು, “ಹೇ ರಾಮ್” ಎಂಬ ಸೊಲ್ಲಿನೊಂದಿಗೇ. ಅದು “ದೇವರೇ, ಕ್ಷಮೆ ಮಾಡು, ಕೊಲೆಗಡುಕರಾರೇ ಇರಲಿ; ಸರ್ವೇಜನರು ಸುಖವಾಗಿರಲಿ ಎಂದು ರಾಮನಲಿ ಮೊರೆಯಿಟ್ಟು” (ಔದುಂಬರಗಾಥೆ,ಸಂ-1,ಪು.446) ಪ್ರಾಣಬಿಟ್ಟಿತ್ತು. ವಿಚಿತ್ರವೆಂದರೆ ಕೊಂದವನ ಹೆಸರಲ್ಲಿಯೂ ರಾಮನೇ ಅಂಟಿಕೊಂಡಿತ್ತು! Gandhi's Funeralಅವನೂ ರಾಮನೇ! ಕೊಲೆಗಾರ ನಾಥೂರಾಮ. ಸ್ವತಂತ್ರಭಾರತದ ಮೊತ್ತಮೊದಲ ಭಯೋತ್ಪಾದಕ. ಮೊಟ್ಟೆ ಮಾಂಸವನ್ನೂ ತಿನ್ನದ ಶುದ್ಧ ಶಾಖಾಹಾರಿ! ಸಾತ್ವಿಕ ಆಹಾರದೊಳಗಿಂದಲೇ ತೂರಿಬಂದ ನೆತ್ತರ ಹಸಿಹಸಿವು. ಆದರೆ ನಾಥೂರಾಮನ ಮೂಲಕ ಸಿಡಿದ ಗುಂಡು, ಅದನ್ನು ಹೊರಚಲ್ಲಿದ ಕೋವಿಯ ನಳಿಕೆ, ಕುದುರೆಯನ್ನು ಅಮುಕಿದ ಗೋಡ್ಸೆಯ ಕೈಗಳು ಕೇವಲ ಬಹಿರಂಗಕ್ಕೊದಗಿದ ಸಾಕ್ಷಿಗಳು. ಇದು ಲೋಕಕ್ಕೇ ಗೊತ್ತಿದೆ. ಆತ ಸಾಧನ ಅಷ್ಟೇ. ಸೂತ್ರವಾದರೋ “ಹಿಂಸೆಯ ಹೆಪ್ಪು”. ಆ ಹೆಪ್ಪೇ, ಅಹಿಂಸೆಯೆಂಬ ಗೋಡೆಯ ಮೇಲೆ ಮತ್ತೆಮತ್ತೆ ಅರಳಿ ಉದುರುತ್ತಲೇ ಇರುವ ಹೊಸಚಿತ್ರಗಳ ಮೂಲಬಿಂದು. ಆ ಹೆಪ್ಪಿನ್ನೂ ಕರಗಿಲ್ಲ. ಗಟ್ಟಿಯಾಗಿಯೇ ಉಳಿದು ಚಿಗುರೊಡೆಯುತ್ತಲೇ ಇದೆ.

ಕನ್ನಡದಲ್ಲಿ ಗಾಂಧೀ ಕುರಿತ ತೀವ್ರಾನುಭವಕ್ಕೆ ತುತ್ತಾದವರಲ್ಲಿ ವರಕವಿ ಬೇಂದ್ರೆಯವರೊಬ್ಬರು. ಹಿಂಸೆಯ ಮಾಸದ ವಿಕರಾಳ ಚಿತ್ರವಾಗುಳಿದ ಗಾಂಧೀ ಸಾವನ್ನೇ ಕೇಂದ್ರೀಕರಿಸಿ ಬೇಂದ್ರೆಯವರ ಸುಮಾರು ಹದಿನೆಂಟು ಕವಿತೆಗಳಿವೆ. ಅವು ಆ ಕಾಲದ ಕನ್ನಡಕವಿತೆಗಳಲ್ಲಿ ಕಾಣಸಿಗದ ತಾತ್ವಿಕ ಖಚಿತತೆಯೊಂದಿಗೆ ಗಾಂಧೀ ಸಾವನ್ನು ಮುಖಾಮುಖಿಯಾಗುತ್ತವೆ. ಗಾಂಧಿ ಕೊಲೆಯನ್ನು ತಮ್ಮ ವಿಜಯವೆಂದೇ ಭಾವಿಸಿ ಇಂದಿಗೂ ಒಳಗೊಳಗೇ ಗುಟ್ಟಾಗಿ ಸಂಭ್ರಮಿಸುತ್ತಿರುವ ನೀಚ ಮನಸ್ಸುಗಳನ್ನು ತೀಕ್ಷ್ಣವಾಗಿ ಇರಿಯುತ್ತವೆ. ಬೇಂದ್ರೆ ಈ ಕೊಲೆಯನ್ನು ಒಂದು ಘಟನೆಯಂದಷ್ಟೇ ನೋಡಿಲ್ಲ. ಅವರ ಪಾಲಿಗೆ ಅದೊಂದು ವಿದ್ಯಮಾನ. ಗುಂಡು ಹಾರಿಸಿದ ಕೈಗಿಂತ ಮಿಗಿಲಾಗಿ ಅವರು ಎದುರಾಗುವುದು ಆಯುಧವಾಗಿಸಿಕೊಂಡ ಮನಸ್ಸುಗಳನ್ನು. ಅವರ ಕವನಗಳಲ್ಲಿರುವುದು ಆ ಮನಸ್ಸುಗಳ ನಿರಂತರ ಸೋಲಿನ ಗೇಲಿಯ ಚಿತ್ರ.. ಸತ್ತೂ ಸಶಕ್ತವಾದ ಗಾಂಧಿ. DRBendreಪ್ರಸ್ತುತ ಲೇಖನವು “ಪೂತಾತ್ಮ-ಹೂತಾತ್ಮ-ಹುತಾತ್ಮ-ಮಹಾತ್ಮ” ಕವನದ ವಿವರಗಳನ್ನು ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಚರ್ಚೆಗೊಡ್ಡಿದೆ.

ರಾಷ್ಟ್ರೀಯ ಹೋರಾಟದ ಉರುಬಿನ ಕಾಲವೇ ಕನ್ನಡ ನವೋದಯದ ಕಾಲವೂ ಹೌದು. ಆಧುನಿಕ ಕನ್ನಡಕಾವ್ಯದ ಈ ಯುಗ ಗಾಂಧೀಯುಗದ ಜೊತೆಗೇ ಆರಂಭಗೊಂಡಿತ್ತು. ಇದರಿಂದಾಗಿ ಈ ಯುಗ ಗಾಂಧಿ ಕುರಿತು ಪ್ರತಿಕ್ರಿಯಿಸಲೇಬೇಕಾದ ಒತ್ತಡವನ್ನು ಅನುಭವಿಸಿತು. 20ನೇ ಶತಮಾನದ ಆರಂಭದ ದಶಕಗಳಲ್ಲಿ ಬದುಕಿದ ಕವಿಯೊಬ್ಬನಿಗೆ ಗಾಂಧಿಯೊಂದಿಗಿನ ಮುಖಾಮುಖಿ ಎಂಬುದು ತಪ್ಪಿಸಿಕೊಳ್ಳಲಾಗದ ವಾಸ್ತವ ಎನಿಸಿತು. ಆದರೆ ಹೀಗೆ ಗಾಂಧಿಯನ್ನು ಆವಾಹಿಸಿಕೊಳ್ಳುವಲ್ಲಿ ಅಲ್ಲಿ ಮೈತಳೆದುದು ಏಕಾಕಾರಿ ಮಾದರಿಯ ಗಾಂಧಿ ಅಲ್ಲ ಎಂಬುದನ್ನೂ ಮರೆಯಲಾಗದು. ಜೊತೆಗೆ ಗಾಂಧೀಜಿ ಅಲ್ಲಿ ಕೇವಲ ಒಬ್ಬ ವ್ಯಕ್ತಿಯಾಗದೆ, ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಳ್ಳಲಾದ ಮಾದರಿಯೊಂದರ ಪ್ರತಿನಿಧಿಯಾಗಿಯೇ ದಾಖಲಾಗುತ್ತಾರೆ. ಹೀಗೆ ಒಂದು ಶಕ್ತಿಯಂತೆ ದೇಶದ ಮನಸ್ಸನ್ನು ಆವರಿಸಿಕೊಂಡಿದ್ದ ಕಾಲದಲ್ಲೇ ಹಠಾತ್ತಾಗಿ ಗಾಂಧೀಕೊಲೆ ಸಂಭವಿಸಿತ್ತು. ಅವರು ಕೊಲೆಗಡುಕನ ಗುಂಡಿಗೆ ಬಲಿಯಾಗಿ ಸಾಯಬಾರದ ಸಾವು ಸತ್ತಿದ್ದರು. “ಬೆಳಗುಜಾವಕೆ ಬಿದಿರು ಸಿಳ್ಳುಹಾಕಿದ ಹಾಗೆ” ಬಂದ ಈ ದುರಂತ ಸಾವಿನ ಸುದ್ದಿ ಆಧುನಿಕ ಕನ್ನಡಕಾವ್ಯವನ್ನು ವಿಶೇಷವಾಗಿ ಬಾಧಿಸಿತ್ತು. ಇದು ನವೋದಯ ಕಾಲದ ಕನ್ನಡ ಕಾವ್ಯದಲ್ಲಿ ದಾಖಲಾದ ಘಟನೆಗಳಲ್ಲಿಯೇ ಅತಿಮುಖ್ಯ ಘಟನೆ ಎನಿಸಿತು.

ಗಾಂಧಿಯನ್ನು ಒಪ್ಪಿಕೊಳ್ಳುವುದೆಂದರೆ ಮತೀಯವಾದಿ, ಅಸಹಿಷ್ಣುತೆಯ ಮಾದರಿಯ ರಾಷ್ಟ್ರೀಯತೆಯ ನಿರಾಕರಣವೂ ಹೌದು. ಯಾಕೆಂದರೆ ರಾಷ್ಟ್ರೀಯತೆಯ ಪರಿಭಾಷೆಯನ್ನು ಗಾಂಧಿ ವಿವರಿಸಿಕೊಂಡ ಬಗೆಗೂ, ರಾಷ್ಟ್ರೀಯ ಹೋರಾಟದ ಇತರ ಮುಂಚೂಣಿ ನಾಯಕರು ವಿವರಿಸಿಕೊಂಡ ಬಗೆಗೂ ಮೂಲಭೂತ ವ್ಯತ್ಯಾಸವೊಂದಿದೆ. gandhiಈ ಎರಡು ಕವಲುಗಳು ಭಾರತದ ರಾಷ್ಟ್ರೀಯತೆಯನ್ನು ಮರುಸಂಘಟಿಸಿಕೊಳ್ಳುವಲ್ಲಿ, ಗತ ಅಥವಾ ಮಧ್ಯಯುಗೀನ ಭಾರತವನ್ನು ವಿವರಿಸಿಕೊಂಡ ಕ್ರಮದಲ್ಲಿ ಅಗಾಧ ವ್ಯತ್ಯಾಸವಿದೆ. ಡಿ.ಆರ್.ನಾಗರಾಜ ಅವರು ಗುರುತಿಸುವಂತೆ, ಈ “ಪರಕೀಯ ಸಾಮ್ರಾಜ್ಯದ ಗರ್ಭದಲ್ಲಿದ್ದವರಿಗೆ ತಮ್ಮ ಗತಕಾಲದ ‘ಸಾಮ್ರಾಜ್ಯ’ದ ಬಗೆಗೆ ತೀವ್ರ ಹಂಬಲ, ಭಾರತೀಯ ರಾಷ್ಟ್ರೀಯವಾದಿಗಳಲ್ಲಿ ಗಾಂಧಿ ಒಬ್ಬರಿಗೆ ಬಿಟ್ಟರೆ ಇನ್ನುಳಿದವರಿಗೆ ಬಲಿಷ್ಠ ಸಾಮ್ರಾಜ್ಯ ರಾಷ್ಟ್ರೀಯತೆಯ ಹುಚ್ಚು” (ಡಿ.ಆರ್.ನಾಗರಾಜ, ಸಾಹಿತ್ಯ ಕಥನ, ಪು.257). ಮತೀಯ ನೆಲೆಯಲ್ಲಿ ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಂಡ ಗುಂಪು ಗತವನ್ನು ವೀರ್‍ಯವತ್ತಾದ ಕ್ಷಾತ್ರ ಮಾದರಿಯಲ್ಲಿ ವಿವರಿಸಿಕೊಂಡಿತು. ಅದು ಹೆಣ್ಣಿಗನಲ್ಲದ ವೀರಭಾರತವನ್ನು ಸಂಘಟಿಸಿಕೊಂಡಿತು. ಅಹಿಂಸೆ ಈ ಪಥಕ್ಕೆ ಕ್ಲೈಬ್ಯದ ಮಾದರಿಯಾಗಿ ಕಂಡಿತ್ತು, ಹೇಡಿತನದ ಲಕ್ಷಣವಾಗಿತ್ತು. ದೇಶದ ಬಹುಸಂಖ್ಯಾತರ ವಕ್ತಾರನಂತೆ ಮಾತನಾಡುವ, ಸಾಂಸ್ಕೃತಿಕ ರಾಷ್ಟ್ರೀಯತೆಯೆಂದು ಕರೆಯಲಾಗುವ ಇದನ್ನು ತಿಲಕ್‌ ಮಾದರಿಯ ರಾಷ್ಟ್ರೀಯತೆ ಎಂದೇ ಗುರುತಿಸಲಾಗುತ್ತದೆ. ವೀರಭಾರತವನ್ನು ಸಂಘಟಿಸಿಕೊಳ್ಳಬಯಸುವ ಈ ಮತೀಯನೆಲೆಯ ರಾಷ್ಟ್ರೀಯತೆ ಸಹಜವಾಗಿ ಹಿಂಸಾಮಾದರಿಯದು. ಈ ಹಿಂಸಾ ಮಾದರಿಗೆ ಪ್ರತಿಯಾಗಿ ಗಾಂಧಿಯದು ಅಹಿಂಸೆ ಮತ್ತು ಒಳಗೊಳ್ಳುವ ಮಾದರಿಯ ರಾಷ್ಟ್ರೀಯತೆಯಾಗಿತ್ತು.

ಗಾಂಧಿ ಮಾದರಿಗೆ ಬಲಕ್ಕಿಂತ ಸಾಮರಸ್ಯ, ಆಯ್ಕೆ ಮತ್ತು ಪ್ರತ್ಯೇಕತೆಗಿಂತ ಸಹಬಾಳ್ವೆಯ ಒಡಬದುಕು ಮುಖ್ಯವಾಗಿತ್ತು. ಭಾರತದ ಸಂಕರಶೀಲ ಸಾಂಸ್ಕೃತಿಕ ಸಂದರ್ಭದ ಸಹಜ ಸಾಹಚರ್‍ಯ ಹೊಂದಿದ್ದ ಈ ಮಾದರಿ ಬಲಿಷ್ಠ ಸಾಮ್ರಾಜ್ಯದ ಹುಚ್ಚಿನಿಂದ ತನ್ನನ್ನು ದೂರವಿರಿಸಿಕೊಂಡಿತ್ತು. ತಿಲಕ್‌ ಮಾದರಿಯಲ್ಲಿ ಮಧ್ಯಕಾಲೀನ ಚರಿತ್ರೆಯ ವಲಸೆಯ ಮೂಲಕ ಕೋಮುವಾರು ವಿಂಗಡಣೆಯಲ್ಲಿ ರೂಪುಪಡೆದ ‘ಸ್ವ’ ಮತ್ತು ‘ಅನ್ಯ’ವೆಂಬ ಸಮುದಾಯ ವಿಘಟನೆಯ ಶಕ್ತಿಗಳು ಸಕ್ರಿಯವಾಗಿದ್ದವು. ಅಲ್ಲಿ ಮತೀಯ ಅಂತಃಕಲಹವನ್ನು ಹುಟ್ಟುಹಾಕುವ ಅಪಾಯವಿತ್ತು. ಆದರೆ ಗಾಂಧೀಜಿ ಉಪವಾಸಗಳ ಮೂಲಕ ಅವುಗಳನ್ನು ಮೆಟ್ಟಿನಿಂತವರು. ಈ ಮಾದರಿಗಳು ಒಂದನ್ನೊಂದು ಅನುಸರಿಸಲಿಲ್ಲ, ಒಂದನ್ನೊಂದು ಆಂತರಿಕವಾವಾಗಿ ವಿರೋಧಿಸಿದುವು. ಹೀಗೆ ಭಾರತದ ರಾಷ್ಟ್ರೀಯ ಹೋರಾಟಕ್ಕೆ ಕೋಮುವಾದ ಮತ್ತು ಗಾಂಧಿವಾದದ ನಡುವಿನ ಸಂಘರ್ಷದ ಆಂತರಿಕ ಆಯಾಮವಿದೆ. ಈ ಸಂಘರ್ಷದ ಹೇತುವಾದ ಕ್ಷಾತ್ರದ ಹುಚ್ಚೇ ಆತ್ಯಂತಿಕವಾಗಿ ಗಾಂಧಿಯನ್ನು ಬಲಿಪಡೆದಿತ್ತು.

ಪ್ರಸ್ತುತ ಚರ್ಚಿಸಲಾಗಿರುವ ಬೇಂದ್ರೆಯವರ ಈ ಕವನವು ಮರಣೋತ್ತರವಾಗಿ ಗಾಂಧೀಜಿಯನ್ನು ಆವಾಹಿಸಿಕೊಳ್ಳುತ್ತದೆ. ಮಹಾತ್ಮನನ್ನು ನೆನೆಯುತ್ತಲೇ, ಗಾಂಧಿಯನ್ನು ತಾತ್ವಿಕವಾಗಿ ವಿರೋಧಿಸಿದ ರಾಷ್ಟ್ರೀಯತೆಯ ಅನ್ಯಧಾರೆಯ ಜೊತೆಗಿನ ಮುಖಾಮುಖಿಯಲ್ಲಿ ವಿಶಿಷ್ಟವಾಗುತ್ತದೆ. ಸಾವಿನ ನೋವಿನಲ್ಲೂ, “ಅಹಿಂಸೆ ಎಂಬುದು ಗೋಡೆ ಹಿಂಸೆ ಎಂಬುದು ಚಿತ್ರ” da.ra.bendreಎನ್ನುವ ಮೂಲಕ ಗಾಂಧೀಯತೆಯ ಯಶವನ್ನು ಭಿನ್ನನೆಲೆಯಲ್ಲಿ ದಾಖಲಿಸುತ್ತದೆ. ಮರಣಿಸಿದ ಗಾಂಧಿಯನ್ನು ಜೀವಂತ ಗಾಂಧಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ವಿವರಿಸಿಕೊಳ್ಳುವ ಅವರ “ಶೃದ್ಧಾಂಜಲಿ” ಕವನವಂತೂ ಗಾಂಧೀ ತರುವಾಯ ದೇಶ ಕತ್ತಲೆಯಲ್ಲಿ ಮುಳುಗಿತೆಂಬ ರಾಷ್ಟ್ರನಾಯಕರುಗಳ ನೈರಾಶ್ಯಕ್ಕೆ ಪ್ರತಿಕ್ರಿಯೆಯಂತೆಯೇ ಇದೆ. ಗೋವಿಂದ ಪೈ ಅವರಲ್ಲಿರುವ ‘ಮಹಾತ್ಮ ನೀನು ಇನ್ನೂ ಒಂದಿಷ್ಟು ಕಾಲ ಬದುಕಬೇಕಿತ್ತೆ’ನ್ನುವ ಶೂನ್ಯತೆ, ನಿರ್ವಾತದ ದನಿ ಬೇಂದ್ರೆಯವರಲ್ಲಿಲ್ಲ. ಅದರ ಬದಲಿಗೆ ಉದಾರವಾದಿ ನಿಲುವಿನಲ್ಲಿ ತಿಲಕ ಮಾದರಿಯ ರಾಷ್ಟ್ರೀಯತೆಯನ್ನು ಧಿಕ್ಕರಿಸುವ ಬೇಂದ್ರೆಯವರ ಕವನಗಳು, ಕೋಮುವಾದದ ಖಚಿತ ವಿರೋಧದಲ್ಲಿ ಗಾಂಧೀಜಿಯ ಸಂಕರಶೀಲ ರಾಷ್ಟ್ರೀಯತೆಯ ಪರವಾಗಿ ನಿಲ್ಲುತ್ತವೆ. ಅಲ್ಲಿ ಗಾಂಧಿ ಎನ್ನುವುದು ವ್ಯಕ್ತಿಯಾಗದೆ ಒಂದು ತತ್ವವಾಗುತ್ತದೆ. ಕೊಲೆಯ ಆಪಾದನೆ ವ್ಯಕ್ತಿಯ ನೆಲೆಗೆ ಸೀಮಿತಗೊಳ್ಳದೆ, ಒಂದು ವಿದ್ಯಮಾನವಾಗಿ ಗಣಿತವಾಗುತ್ತದೆ. ಅವರ “ಮಹಾತ್ಮಾ” ಕವನವಾದರೋ, “ಕೊಂದರೋ ಲೋಕಕಾಶೀರ್ವಾದ ಪ್ರಾರ್ಥಿಸುವ ಸಮಯಕ್ಕೆ” ಎಂದೆನ್ನುವ ಮೂಲಕ ಅದನ್ನೊಂದು ಕಾಲವಲ್ಲದ ಕಾಲದಲ್ಲಿ ನಡೆದ ಕೂಟವೊಂದರ ಕಾರ್‍ಯಾಚರಣೆಯೆಂದೇ ಪರಿಗಣಿಸುತ್ತದೆ. ಹಾಗಾಗಿ ಪೈ ಅವರಲ್ಲಿರುವ ಆಪಾದಿತರಪರ ಸಹಾನುಭೂತಿ ಬೇಂದ್ರೆ ಅವರಲ್ಲಿಲ್ಲ.

ಈ ಕವನ ಆರಂಭವಾಗುವುದೇ “ಓ ಮಹಾತ್ಮ! ಶತಸಾಂವತ್ಸರಿಕಕ್ಕೆ ಸತ್ಯ ವರದಿ ಮಾಡೋಣ” ಎಂದು. ಮಹಾತ್ಮನಿಲ್ಲದ ಜಗತ್ತಿನಿಂದ ಮಹಾತ್ಮನಿಗೆ ವರದಿಯೊಪ್ಪಿಸುವ ಮಾದರಿಯಲ್ಲಿ. ಗಾಂಧೀತತ್ವಗಳಿಗೆ ಬೆನ್ನುಹಾಕಿ ನಡೆಯುತ್ತಿರುವ ಭಾರತದ ಪರದೇಶಿಸ್ಥಿತಿ ಹಾಗೂ gandhi-art“ಪಶುಯಜ್ಞ ಅಡಗಿ, ನರಯಜ್ಞ ದಿನದ ಪಾಕ”ವಾದ ಹಿಂಸೆಯ ವಿಸ್ತರಣೆಗೆ ಹೇಸಿ. ಆದರೆ ಈ ನೈರಾಶ್ಯವೇ ಕವನದ ಸ್ಥಾಯಿ ಅಲ್ಲ. ಯಾಕೆಂದರೆ ಅಲ್ಲಿಯ ನಿರೂಪಣೆ ಮುಂಬರಿಯುವುದು “ನಿನಗೆ ಗೊತ್ತಿಲ್ಲದ್ದೇನು? ನಿನ್ನ ಕಣ್ಣಿಗೆ ಇವೆಲ್ಲಾ ಬಿದ್ದಿಲ್ಲಾ-ಎಂದಲ್ಲಾ” ಎಂದು, ನಮ್ಮ ನಡುವೆಯೇ ಇರುವ ಗಾಂಧೀಜಿಗೆ ಮಾಡುವ ವರದಿಯಾಗಿ. ಇಲ್ಲಿ ಗಾಂಧಿ ಒಂದು ತಾತ್ವಿಕತೆಯಾಗಿ, ನಮ್ಮೊಳಗಿನ ನಾವಾಗುತ್ತದೆ. ನಮ್ಮೊಳ:ಗಿನ ತಿಳುವಳಿಕೆಯಾಗುತ್ತದೆ. ಗಾಂಧಿ ಬಿತ್ತಿದ ಅರಿವಿನ ಬೆಳಕನ್ನು ಪ್ರಸ್ತಾಪಿಸಿ, “ಬೆಂಕಿ ಬೇರೆ! ಬೆಳಕು ಬೇರೆ! ಬಣ್ಣ ಬೇರೆ! ಬಿಡಿಬಿಡಿಸಿ, ತಿಳಿತಿಳಿಸಿ ಹೇಳಿದ ಮಹಾತ್ಮ” ಎಂದು ಕೃತಜ್ಞತೆ ಸೂಚಿಸುವ ಕವನ, ನಮ್ಮೊಳಗಡೆಯೇ ಉಳಿದು ಹೋದ ಗಾಂಧಿಗೆ ನಾವೇ ಸಲ್ಲಿಸುವ ವರದಿಯಾಗುತ್ತದೆ. ಈ ನೆನಕೆ ಒಂದು ಕಡೆಯಿಂದ ಗುರುವಿನಂತೆ ಎಚ್ಚರವನ್ನು ಬೋಧಿಸಿದ ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತದೆ. ಇನ್ನೊಂದು ಕಡೆಯಿಂದ ಗಾಂಧಿ ಬಿತ್ತಿದ ಅರಿವಿನಲ್ಲಿರುವ ಗೊಂದಲವಿಲ್ಲದ ಖಚಿತತೆಯ ಹೂರಣವನ್ನು ದಾಖಲಿಸುತ್ತದೆ.

ಗಾಂಧೀ ಕೊಲೆಯನ್ನು ಆ ಹೊತ್ತಿನ ಅಗತ್ಯವೆಂದವರೂ, ಎನ್ನುತ್ತಿರುವವರೂ ಇಂದಿಗೂ ಇದ್ದಾರೆ. ಆ ಸಮರ್ಥನೆಯ ಭಾಗವಾಗಿ ಒದಗಿಬಂದದ್ದು ಅಖಂಡ ಭಾರತದ ವಿಭಜನೆಯ ನೆಪ. ಆದರೆ ಕವನ ಆ ಸಮರ್ಥನೆಯನ್ನೇ ಕೆಣಕಿ ಲೇವಡಿ ಮಾಡುವಂತೆ, “ಪಾಲಿನ ನ್ಯಾಯ ಇನ್ನೂ ತೀರಿಯೇ ಇಲ್ಲ” ಎನ್ನುತ್ತದೆ. ಹೀಗೆ ಕೊಲೆಯ ಘೋಷಿತ ಕಾರಣವನ್ನು ನಿರಾಕರಿಸಿ, ಅದನ್ನೊಂದು ಸುದೀರ್ಘ ಕಾರ್‍ಯಾಚರಣೆಯ ಭಾಗವೆಂದೇ ಸೂಚಿಸುತ್ತದೆ. ಬೇಂದ್ರೆಯವರ ಕವನದಲ್ಲಿ ಭಾರತ ವಿಭಜನೆಯ ಕಾರಣದೊಂದಿಗೆ Mahatma-Gandhiಗಾಂಧೀ ಕೊಲೆಯನ್ನು ವಿವರಿಸಿಕೊಳ್ಳುವ ಯತ್ನವಿಲ್ಲ. ಹಾಗೆಯೇ ಅದು ಯಾವುದೋ ಒಂದು ಕಾಲದ ಉರುಬಿನ ಫಲಿತವೆಂಬ ಪರಿಭಾವನೆಯೂ ಇಲ್ಲ. ಅಲ್ಲಿರುವುದು ಅಹಿಂಸೆಯ ಗೋಡೆಯನ್ನೆ ಬಳಸಿ ಬರೆಯುತ್ತಾ ಬಂದ ಕೊಲೆಯ ಈ ’ಚಿತ್ರ’ಗಳಿಗೆ ಶತಮಾನಗಳ ಇತಿಹಾಸವಿದೆ ಎಂಬ ಅರಿವು. ಹಾಗಾಗಿಯೇ ಗೋವಿಂದ ಪೈ ಅವರಂತೆ ಬೇಂದ್ರೆಗೆ ಅದೊಂದು ವ್ಯಕ್ತಿಗತ ಮಟ್ಟದ ಹತ್ಯಾಯತ್ನವಲ್ಲ. ಅವರಲ್ಲಿ ಅದು ಭಿನ್ನ ಬಗೆಯ ಅಲೋಚನೆಗಳ ಸಂಘರ್ಷ. ಹಿಂಸೆ-ಅಹಿಂಸೆಗಳ ಮುಖಾಮುಖಿ. ಅಹಿಂಸೆಯ ಸ್ಥಿರಭಿತ್ತಿಯಲ್ಲಿ ಮಾನವವಿಕೃತಿ ಬಿಡಿಸಿದ ಹಿಂಸೆ ಎಂಬ ಕೃತಕಚಿತ್ರ. ಆ ಕಾರ್‍ಯಾಚರಣೆ ಇನ್ನೂ ನಿಂತಿಲ್ಲ ಎಂಬಂತೆ ಅವರಲ್ಲಿ ಹಿಂಸೆ-ಅಹಿಂಸೆಗಳು ಅವಳಿ ವೈರುಧ್ಯಗಳಾಗಿ ಎದುರು-ಬದುರು ನಿಲ್ಲುತ್ತವೆ. ಆದರೆ ಅಷ್ಟೇ ರಾಜಕೀಯ ಖಚಿತತೆಯೊಂದಿಗೆ ಹಿಂಸೆಯ ವಿಜಯದ ನಿರಾಕರಣೆಯೂ ಅವರಲ್ಲಿದೆ. ಅಹಿಂಸೆಯ ಎದುರು ಯುದ್ಧ ಹೂಡುವ ಹಿಂಸೆಗೆ ಪ್ರತೀಬಾರಿಯೂ ನೆತ್ತರು ಸಿಗಬಹುದಲ್ಲದೆ, ಜಯವಲ್ಲ ಎಂಬ ಖಚಿತ ಸಂದೇಶ ರವಾನಿಸುವಂತೆ, “ಹೊತ್ತಿಸಿದ ಬೆಂಕಿ ಹೊತ್ತಿಸದವನನ್ನೂ ನೆಕ್ಕುವುದು, ಹೊತ್ತಿಸಿದವರನ್ನೂ ಮುಕ್ಕುವುದು” ಎಂದು ಅವರು ಕೋಮುವಾದಿ ಅಸಹಿಷ್ಣುತೆಯ ರಾಜಕಾರಣದ ವಿನಾಶಮುಖೀ ಗುಣವನ್ನು ದಾಖಲಿಸುತ್ತಾರೆ. ವಿಶ್ವದ ವಿನಾಶ ನಾಯಕರುಗಳಾದ ಹಿಟ್ಲರ್, ಮುಸೋಲಿನಿಯರುಗಳ ಲೋಕನಾಶ ಮತ್ತು ಸ್ವನಾಶಗಳೆರಡನ್ನೂ ಒಟ್ಟೊಟ್ಟಿಗೇ ಧ್ವನಿಸುತ್ತಾರೆ.

ಈ ಕವನವು ಗಾಂಧೀವಿರೋಧಿ ಸ್ವಘೋಷಿತ ದೇಶಪ್ರೇಮಿ ರಾಷ್ಟ್ರೀಯವಾದಿಗಳ ಪೊಳ್ಳುತನವನ್ನು ಎಳೆ ಎಳೆಯಾಗಿ ಬಯಲಿಗಿಡುತ್ತದೆ. “ಅಹಿಂಸೆಯ ಹಚ್ಚಿದಬಣ್ಣ ಉದುರಿ, ಹಿಂಸೆಯ ಉಗ್ರರೂಪ ಉರಿದೇಳುವ” ಅದರ ನಯವಂಚಕತೆಯನ್ನು ವಿವರವಾಗಿ ಬಿಡಿಸಿಡುತ್ತದೆ. ಪಂಜು ಹೊತ್ತಿಸಿ ಹಿಲ್ಲಾಲು ಹಿಡಿದವರೂ ಅಹಿಂಸೆ, ಶಾಂತಿ ಮಂತ್ರವನ್ನು ಪಠಿಸುವ ವಿಸಂಗತಿಯನ್ನು ಎದುರಿಗಿಡುತ್ತದೆ. ಕೋಮುವಾದಿ ರಾಜಕಾರಣದ ವಿರುದ್ಧದ ನಿರ್ಣಾಯಕ ಪ್ರತಿದಾಳಿಯ ಭಾಗವಾಗಿ, “ಹೇಳಿದ್ದು-ಅಹಿಂಸಾ-ಪುರಾಣ ತಿಂದದ್ದು ಹಿಂಸೆಯ ಯಮ-ಬದನೆಕಾಯಿ” ಎಂದು ನಡೆಗೂ- ನುಡಿಗೂ ಸಂಬಂಧವಿರದ ಬಿರುಕನ್ನು ತೋರುತ್ತದೆ. ಜೀವದಯೆಯ ಉಪನ್ಯಾಸ ನೀಡುತ್ತಲೇ ಕೊಲೆಯ ಕಲೆಯಲ್ಲಿ ಪಳಗಿರುವ ಅದರ ಸಂಸ್ಕೃತಿ ಪ್ರೀತಿಯನ್ನು, “ಹೂವಿಗೆ ಬೇಗೆ ಹಚ್ಚಿದರು, ಅದರ ಸೌಂದರ್‍ಯ ಮೆಚ್ಚಿದರು, ಸಂಸ್ಕೃತಿ ಜಂಭ ಕೊಚ್ಚಿದರು” ಎಂದು ಸ್ಪಷ್ಟವಾಗಿಯೇ ವ್ಯಾಖ್ಯಾನಕ್ಕೊಳಪಡಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆ ಗುಂಪನ್ನು ಹಿಂಸಾಭಕ್ತರೆಂದೇ ಹೆಸರಿಸುತ್ತದೆ. ಗಾಂಧಿಯನ್ನು ಕುರಿತ ಅವರ “ಮಹಾತ್ಮಾ” ಕವನವಾದರೋ, ಈ ಕೊಲೆಗಡುಕ ಮಂದಿಯನ್ನು “ಮುಗಿದ ಕೈಗಳಲಿ ಮುಚ್ಚಿದ ದೊಣ್ಣಿ!”, “ರೇಸಿಮೆಯ ತೊಟ್ಟವರು, ಬಂಗಾರ ಇಟ್ಟವರು, ಬೆರಳಾಡಿಸಿದಲ್ಲಲ್ಲಿ ’ವಂದೇ ಮಾತರಂ’ ಗೀತ” ಎಂದು ನಿಖರವಾಗಿ ವಿವರಿಸಿಕೊಡುತ್ತದೆ. ಗಾಂಧಿಯನ್ನು ಇಲ್ಲವಾಗಿಸಿದ ಈ ಅವಿವೇಕಿ ಗುಂಪನ್ನು “ಆ ಜನ ದನ, ತಾಯಿ” ಎಂಬ ಸೊಲ್ಲಂತೂ “ಮಹಾತ್ಮ” ಕವನದುದ್ದಕ್ಕೂ ಪಲ್ಲವಿಯಂತೆ ಅನುರಣಿಸುತ್ತದೆ.

ಚಾರಿತ್ರಿಕವಾಗಿ ಗಾಂಧೀಜಿಯ ರಾಜಕೀಯ ಪ್ರವೇಶ ಕಾಂಗ್ರೆಸಿನೊಳಗಿನ ಹಿಂದೂ ಮೂಲಭೂತವಾದಿ ಶಕ್ತಿಗಳಿಗೊಂದು ಹಿನ್ನಡೆಯೇ. 200px-MKGandhi[1]ಕೋಮುವಾದವು ನಿರೂಪಿಸಿದ ಧರ್ಮಾಧಾರಿತ ರಾಷ್ಟ್ರೀಯತೆಗೆ ಪ್ರತಿಯಾಗಿ ಗಾಂಧಿ ಎಲ್ಲ ಮತೀಯರನ್ನು ಸಮಾನವಾಗಿ ಒಳಗೊಳ್ಳುವ ಚಿಂತನೆಗಾಗಿ ತಮ್ಮ ಜೀವಿತವನ್ನೇ ಪಣಕ್ಕಿಟ್ಟವರು. ಆದರೆ ಮುಸ್ಲಿಂ ಮೂಲಭೂತವಾದವೂ ಇಷ್ಟೇ ಅಪಾಯಕಾರಿಯಾಗಿ ಬೆಳೆದು, ಅಸಹಾಯಕತೆಯ ಕಟ್ಟಕಡೆಯಲ್ಲಿ ಗಾಂಧಿ ದೇಶವಿಭಜನೆಗೆ ಸಮ್ಮತಿಸಬೇಕಾಗಿ ಬಂದುದು ಚಾರಿತ್ರಿಕ ಸತ್ಯ. ‘ಭಾರತದ ವಿಭಜನೆಯಲ್ಲಿ ನಾನೂ ಪಾಲುಗಾರನೆಂದು ಜನ ಹೇಳದಿದ್ದರೆ ಸಾಕು’ (ಬೊಳುವಾರು ಮಹಮ್ಮದ್ ಕುಂಞಿ, ಪಾಪು ಗಾಂಧಿ ಆದ ಕಥೆ,ಪು.173)ಎಂದು ಸಂಕಟಪಟ್ಟ ಗಾಂಧೀ ಕೈಮೀರಿ ವಿಭಜನೆ ಸಂಭವಿಸಿತ್ತು. ಅದು ಗಾಂಧೀ ಕನಸಿನ “ಸಾಮರಸ್ಯ ಪರಂಪರೆ”ಗೆ ಕೊಟ್ಟ ದೊಡ್ಡ ಏಟಾಗಿತ್ತು. ಗಾಂಧಿಯನ್ನು ಖಳನಾಯಕನಂತೆ ಬಿಂಬಿಸಲು ಒದಗಿದ ಕಾರಣವಾಗಿತ್ತು. ಮತೀಯವಾದಿ ರಾಷ್ಟ್ರೀಯತೆಯ ಪ್ರಸರಣಕ್ಕೆ ಒದಗಿದ ನೀರು ಗೊಬ್ಬರವಾಗಿತ್ತು. ವಿಭಜನೆಯನ್ನೇ ಬಯಸಿದ್ದ ವಿಭಜಕವಾದಿಗಳು ಹೇಳುತ್ತಲೇ ಬಂದ ತೋರಿಕೆಯ ಅಖಂಡ ಭಾರತವು ಗಾಂಧಿ ಪಾಲಿಗೆ ಬರಿಯ ಭೂಖಂಡವಾಗಿರಲಿಲ್ಲ. ಅದು ಮನುಷ್ಯರ ನಡುವಿನ ಸಾಮರಸ್ಯವನ್ನು ಉಳಿಸಿಕೊಡಬಲ್ಲ ಸೌಹಾರ್ದತೆಯ ಮನುಷ್ಯ ಸಂಬಂಧವಾಗಿತ್ತು. ಈ ಸೌಹಾರ್ದತೆಯನ್ನು ವಿರೋಧಿಸಿಕೊಂಡೇ ಬಂದ ಮತೀಯವಾದ ಗಾಂಧಿಯನ್ನೇನೋ ಬಲಿಪಡೆಯಿತು. ಆದರೆ ಅದಕ್ಕೆ ಗಾಂಧೀವಾದವನ್ನು ಬಲಿಪಡೆಯಲಾಗಿಲ್ಲ. ಇದು ಬೇಂದ್ರೆ ಕವನದ ಕೇಂದ್ರಧ್ವನಿಯೂ ಹೌದು.

ಮುಸ್ಲಿಂ ಸಮುದಾಯದಲ್ಲಿರುವ ಕೆಲವು ಶೋಷಕ ಮನಸ್ಥಿತಿಗಳ ವಿರುದ್ಧ ಧನಿಯೆತ್ತಬೇಕಿದೆ

– ಇರ್ಷಾದ್

ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಸೌಜನ್ಯ ನಗರಕ್ಕೆ ಸುದ್ದಿ ಮಾಡುವ ಉದ್ದೇಶದಿಂದ ಕೆಲ ಸಂಗಾತಿಗಳೊಂದಿಗೆ ಭೇಟಿ ಕೊಟ್ಟಿದ್ದೆ . ನಿವೇಶನ ರಹಿತ ಬಡವರು ಭಾರತೀಯ ಕಮ್ಯುನಿಷ್ಟ್ ಪಕ್ಷ ( ಮಾರ್ಕಿಸ್ಟ್ ) ನೇತೃತ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಜೋಪುಡಿಯನ್ನು ಕಟ್ಟಿಕೊಂಡು ಅಲ್ಲೇ ವಾಸ್ತವ್ಯ ಹೂಡಿ ಹೋರಾಟ ನಡೆಸುತ್ತಿದ್ದಾರೆ. ಹಾಗೆ ಸೌಜನ್ಯ ನಗರಕ್ಕೆ ಒಂದು ಸುತ್ತು ಹಾಕಿದಾಗ ನನ್ನ ಕಣ್ಣಿಗೆ ಇಬ್ಬರು ಮುಸ್ಲಿಂ ಮಹಿಳೆಯರು ತಮ್ಮ ಪುಟಾಣಿ ಮಕ್ಕಳ ಜೊತೆಯಲ್ಲಿ ಕಂಡರು. ನಿವೇಶನ ರಹಿತ ಸುಮಾರು 60 ಬಡವರು ಕಟ್ಟಿದ ಜೋಪಡಿಯ ಪೈಕಿ ಆ ಎರಡು ಜೋಪಡಿಗಳ ಸ್ಥಿತಿ ಶೋಚನೀಯವಾಗಿತ್ತು. ಉಡುವ ಸೀರೆಯೇ ಜೋಪಡಿಯ ಗೋಡೆಯಾಗಿತ್ತು. ಹಾಗೆ ಹತ್ತಿರ ಹೋಗಿ ಮಾತನಾಡಿಸಿದಾಗ ಆ ಮಹಿಳೆ ಭಾವುಕಳಾಗಿ ತನ್ನ ಕಥೆಯನ್ನು ಬಿಚ್ಚಿಡತೊಡಗಿದಳು. ಆಕೆಯ ಹೆಸರು ಜೊಹರಾ. ಕಡು ಬಡತನದಲ್ಲೇ ಹುಟ್ಟಿ ಬೆಳೆದವಳು. ವಯಸ್ಸಿಗೆ ಬಂದಾಗ ಸಹಜವಾಗಿ ಎಲ್ಲಾ ಹೆಣ್ಣು ಮಕ್ಕಳು Indian-Povertyಕಾಣುವ ಕನಸನ್ನು ಕಣ್ತುಂಬಾ ಕಂಡವಳು. ಬಡತನ, ವರದಕ್ಷಿಣೆಯ ಭೂತದ ನಡುವೆಯೂ ತಾನು ಕನಸಲ್ಲಿ ಕಂಡ ಇನಿಯನಿಗಾಗಿ ಕಾಯುತಿದ್ದ ಆಕೆಯನ್ನು ಅದಾಗಲೇ ಮದುವೆಯಾಗಿದ್ದ ಪುರುಷನೊಬ್ಬನ ಜೊತೆ ಮನೆ ಮಂದಿ ಮದುವೆಮಾಡಿಕೊಟ್ಟರು. ಜೊಹರಾಳನ್ನು ಮದುವೆಯಾದ ಆ ಪುಣ್ಯಾತ್ಮ ಆಕೆಗೆ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾದ. ಜೊಹರಾಳ ನೋವಿನ ಕಥೆಯನ್ನು ದೂರದಲ್ಲೇ ನಿಂತುಕೊಂಡು ಗಮನಿಸುತಿದ್ದ ಆಕೆಯ ಸಹೋದರಿ ನಸೀಮಾ ಬಾನು ಬಳಿ ಹೋಗಿ ಮಾತಿಗಿಳಿದಾಗ ಆಕೆಯದ್ದೂ ಇಂಥಹದ್ದೇ ಕಣ್ಣೀರ ಕಥೆ. ಅಕ್ಕನ ಪಾಡೇ ಆಕೆಯ ಜೀವನದಲ್ಲಿ ಕೂಡಾ. ಮದುವೆಯಾದ ಗಂಡ ನಸೀಮಾಳಿಗೂ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾಗಿದ್ದಾನೆ. ಇದೀಗ ಈ ಇಬ್ಬರೂ ಸಣ್ಣ ವಯಸ್ಸಿನ ಯುವತಿಯರು ಬಡತನದಲ್ಲೇ ಬದುಕುತ್ತಿದ್ದಾರೆ. ಗಂಡನಿಗಾಗಿ ಹುಡುಕಾಡಿ ಸುಸ್ತಾಗಿದ್ದಾರೆ. ಸಮಾಜಕ್ಕೆ ಅಂಜಿ ತಮ್ಮ ಆಸೆ ಆಕಾಂಕ್ಷೆಗಳನ್ನು ಒತ್ತಿಟ್ಟು ಪುಟ್ಟ ಮಕ್ಕಳ ಹೊಟ್ಟೆತುಂಬಿಸಲೂ ಕಷ್ಟಪಡುತಿದ್ದಾರೆ.

ಜೊಹರಾ ಹಾಗೂ ನಸೀಮಾ ಬಾನು ಕೇವಲ ಉದಾಹರಣೆಗಳಷ್ಟೇ. ಇಂಥಹಾ ನೂರಾರು ಮುಸ್ಲಿಂ ಹೆಣ್ಣುಮಕ್ಕಳ ಪರಿಸ್ಥಿತಿ ಇವರಿಗಿಂತ್ತ ಭಿನ್ನವೇನಿಲ್ಲಾ. ಇಸ್ಲಾಂ ಧರ್ಮ ಪುರುಷನಿಗೆ ನಾಲ್ಕು ಮದುವೆಯಾಗಲು ಅವಕಾಶ ನೀಡಿದೆ ಎಂಬ ಅವಕಾಶವನ್ನು ಅಸ್ತ್ರವಾಗಿಟ್ಟುಕೊಂಡು ಅನೇಕ ಹೆಣ್ಣುಬಾಕ ಪುರುಷರು ಬಡ ಮುಸ್ಲಿಂ ಹೆಣ್ಣುಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಬಡ ಹೆಣ್ಣುಮಕ್ಕಳನ್ನು ಮದುಯೆಯಾಗೋದು, ಮಕ್ಕಳನ್ನು ಕರುಣಿಸಿ ಕಣ್ಮರೆಯಾಗೋದು, ಕ್ಷುಲ್ಲಕ ಕಾರಣ ನೀಡಿ ತಲಾಕ್ ನೀಡುವುದು ಮಾಮೂಲಾಗಿದೆ. (ತಲಾಕ್ ನೀಡಲು ಕೆಲವೊಂದು ಕಠಿಣ ನಿಯಮಾವಳಿಗಳು ಇಸ್ಲಾಂ ಧರ್ಮದಲ್ಲಿದೆ ಆದರೆ ಅದರ ದುರುಪಯೋಗ ಹೆಚ್ಚಿನ ಸಂಧರ್ಭದಲ್ಲಿ ನಡೆಯುತ್ತಿದೆ.) ವರದಕ್ಷಿಣೆ, ಹುಟ್ಟು ಬಡತನ, ಮನೆಯಲ್ಲಿ ಐದಾರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಒಟ್ನಲ್ಲಿ ಹೆಣ್ಣು ಮದುವೆಯಾದಲ್ಲಿ ಸಾಕು ಎಂದು ಮದುವೆ ಮಾಡಿಸಿ ಕೊಡುತ್ತಾರೆ ಪೋಷಕರು. inidan-muslim-womanಆತನ ಹಿನ್ನೆಲೆ ಹೆಣ್ಣಿನ ಪೋಷಕರಿಗೆ ಅಗತ್ಯವಿಲ್ಲ, ಆತ ಎಲ್ಲಿಂದ ಬಂದ, ಏನು ಉದ್ಯೋಗ, ಆತನ ಚಾರಿತ್ರ ಎಂಥಹದ್ದು ಇದ್ಯಾವುದು ಮುಖ್ಯವಲ್ಲ. ವಯಸ್ಸಿಗೆ ಬಂದ ಹೆಣ್ಣು ಮಗಳು ಗಂಡನ ಮನೆಗೆ ಸೇರುವುದು ಈ ಬಡ ಪೋಷಕರಿಗೆ ಮುಖ್ಯವಾಗಿದೆ. ಇಂಥಹಾ ಅಸಹಾಯಕತೆಯನ್ನೇ ಬಳಸಿಕೊಂಡು ಬಡ ಮುಗ್ದ ಹೆಣ್ಣುಮಕ್ಕಳನ್ನು ಮದುವೆಯಾಗಿ ಮಕ್ಕಳನ್ನು ಕರುಣಿಸಿ ಮಾಯವಾಗುವ ಪುರುಷರ ಸಂಖ್ಯೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯದ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಕೆ.ಶರೀಫಾ ಬರೆದಂತಹಾ ಅನೇಕ ಪುಸ್ತಕಗಳಲ್ಲಿ, ಲೇಖನಗಳಲ್ಲಿ ತಲಾಕ್ ದುರ್ಬಳಕೆ ಹಾಗೂ ಬಹುಪತ್ನಿತ್ವದಿಂದಾಗಿ ಮುಸ್ಲಿಂ ಸಮುದಾಯದ ಬಡ ಮಹಿಳೆಯರು ಅನುಭವಿಸುತ್ತಿರುವ ನೋವಿನ ಕುರಿತಾಗಿ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಇದೊಂದು ರೀತಿಯ ಶೋಷಣೆಯಾದರೆ ಇನ್ನೊಂದು ಶೋಷಣೆ ನೋಡಿ.

ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಸರ್ಕಾರಿ ಶಾಲೆಯ ಮುಸ್ಲಿಂ ಹೆಣ್ಣು ಮಕ್ಕಳು ಸ್ಕೂಲ್ ಡೇ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಫತ್ವಾ ಹೊರಡಿಸಲಾಗಿತ್ತು. ಕೊಡಿಪ್ಪಾಡಿ ಮದರಸಾವೊಂದರ ಧಾರ್ಮಿಕ ಶಿಕ್ಷಕ ಈ ಅಲಿಖಿತ ಫತ್ವಾ ಹೊರಡಿಸಿದ್ದರು. ಯಾಕಾಗಿ ಹೆಣ್ಣು ಮಕ್ಕಳು ಡಾನ್ಸ್ ಮಾಡಬಾರದು ಎಂದು ಕೇಳಿದಾಗ “ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ನೋಡುವುದು ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡುವುದು ಹರಾಮ್. ಹೆಣ್ಣು 15 ತುಂಬಿದಾಗ ಆಕೆ ದೊಡ್ಡವಳಾಗುತ್ತಾಳೆ. ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದು ಡಾನ್ಸ್ ಮಾಡುವುದು ಹರಾಮ್. ಜಿಲ್ಲಾದ್ಯಂತ ಸ್ಕೂಲ್ ಡೇ ಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ಹರಾಮ್. ನಮ್ಮ ಮದರಸಾದ ವಿದ್ಯಾರ್ಥಿಗಳನ್ನು ಸ್ಕೂಲ್ ಡೇ ಯಲ್ಲಿ ಡಾನ್ಸ್ ಮಾಡಬಾರದು ಎಂದು ಕಡ್ಡಾಯವಾಗಿ ಹೇಳಿದ್ದೇವೆ. ತಂದೆ ತಾಯಿಯಂದಿರು ಪ್ರೋತ್ಸಾಹ mosque-mangaloreಕೊಡಬಾರದು ಎಂದಿದ್ದೇವೆ. ಸಣ್ಣ ಮಕ್ಕಳೂ ಡಾನ್ಸ್ ಮಾಡಿದರೂ ದೊಡ್ಡ ಮಕ್ಕಳು ಡಾನ್ಸ್ ಮಾಡಿದ್ರೂ ಹರಾಮ್ ಹರಾಮೇ. ಸಣ್ಣದಲ್ಲೇ ಪ್ರೋತ್ಸಾಹ ಕೊಟ್ಟರೆ ಅವರು ದೊಡ್ಡರವಾದ ಮೇಲೂ ಅಂಥಹಾ ತಪ್ಪು ಮಾಡುತ್ತಾರೆ. ಇದು ಕಮಿಟಿಯ ತೀರ್ಮಾನ ಕೂಡಾ ಹೌದು” ಎಂದರು. ಇಷ್ಟೇ ಅಲ್ಲ, ಚೆಸ್ ಬಿಟ್ಟು ಇತರ ಆಟೋಟಗಳನ್ನು ಆಡುವುದು ನಿಷಿದ್ದ ಅಂದರು.

ಧಾರ್ಮಿಕ ಶಿಕ್ಷಕರ ಮಾತನ್ನು ಆಲಿಸಿದ ನಾವು ಶಾಲೆಗೆ ಹೋಗಿ 5 ನೇ ತರಗತಿಯ ಹೆಣ್ಣು ಮಗಳೊಬ್ಬಳಲ್ಲಿ ಮಾತನಾಡಿದಾಗ ಆಕೆಯ ಕಣ್ತಂಚಿನಲ್ಲಿ ಕಣ್ಣೀರಿತ್ತು. ಡಾನ್ಸ್ ಮಾಡಬೇಕು ಎಂದು ಆಸೆ ಇದ್ಯಾ ಪುಟ್ಟೀ ಅಂದಾಗ ’ಹೂಂ ಆಸೆ ಇದೆ ಆದ್ರೆ ಉಸ್ತಾದ್ (ಧಾರ್ಮಿಕ ಶಿಕ್ಷಕ) ಬೇಡ ಅಂದಿದ್ದಾರೆ. ಉಸ್ತಾದ್ ಮಾತು ಮೀರಬಾರದು ಎಂದು ಅಮ್ಮ ಅಪ್ಪ ಹೇಳಿದ್ದಾರೆ ಅದಕ್ಕಾಗಿ ಡಾನ್ಸ್ ಮಾಡಿಲ್ಲ’ ಎಂದು ಪುಟ್ಟ ಹೆಣ್ಣು ಮಗು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿತು. ಈ ಪುಟಾಣಿ ಹೆಣ್ಣು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿರುವ ಇತರ ಧರ್ಮೀಯ ಹೆಣ್ಣುಮಕ್ಕಳಿಗಿಂತ ಯಾವುದರಲ್ಲೂ ಕಡಿಮೆಯೇನಿಲ್ಲ. ಪ್ರತಿಭಾವಂತೆಯರಾಗಿದ್ದ ಆ ಹೆಣ್ಣು ಮಕ್ಕಳು ಧಾರ್ಮಿಕ ಗುರುವಿನ ಅಂಧಾ ಫತ್ವಾದಿಂದಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಮರೆಮಾಚಿ ಪ್ರೇಕ್ಷಕರ ಜೊತೆ ಕುಳಿತು ಸಹಪಾಠಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಖುಷಿಪಟ್ಟರು.

ಈ ಎರಡೂ ಪ್ರಕರಣಗಳನ್ನು ನೋಡಿದಾಗ ಇಲ್ಲಿ ಶೋಷಿತಳು ಹೆಣ್ಣು. ಧರ್ಮದ ಕಟ್ಟುಪಾಡುಗಳಿಗೆ ಒಳಗಾಗುವವಳು ಹೆಣ್ಣು. ಗಂಡಿನ ಆಸೆಬರುಕುತನಕ್ಕೆ ಬಲಿಯಾಗುವವಳು ಹೆಣ್ಣು. ಪ್ರತಿಭೆ, ಆಸೆ, ಅಭಿಲಾಶೆಗಳನ್ನು ವ್ಯಕ್ತಪಡಿಸಲಾಗದೆ ಧರ್ಮವಿಧಿಸಿದೆ ಎನ್ನಲಾಗುತ್ತಿರುವ ನಿರ್ಬಂಧಗಳೊಳಗೆ ಆಕೆ ಬಂಧಿಯಾಗುತ್ತಿದ್ದಾಳೆ. ಇಸ್ಲಾಂ ಧರ್ಮ ಖಂಡಿತವಾಗಿಯೂ ಹೆಣ್ಣಿಗೆ ಇತರ ಧರ್ಮಗಳಿಗಿಂತ ಹೆಚ್ಚಾಗಿ ಸ್ವಾತಂತ್ರವನ್ನು ಕಲ್ಪಿಸಿದೆ. ಆದರೆ ಇದು ಆಚರಣೆಯಲಿಲ್ಲ. ಧರ್ಮದ ಕೆಲವೊಂದು ಅವಕಾಶಗಳನ್ನು ಒಳಸಿಕೊಂಡು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳನ್ನು ಪುರುಷನ ಹದ್ದುಬಸ್ಥಿನಲ್ಲಿಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರಪಂಚ ಬದಲಾಗುತ್ತಿದ್ದರೂ ಮುಸ್ಲಿಂ ಸಮುದಾಯದ ಕೆಲವರ ಮನಸ್ಥಿತಿ ಇನ್ನೂ ಬದಲಾಗಲಿಲ್ಲ. ಹೆಣ್ಣು ಇವರ ಪಾಲಿಗೆ ಮನೆಯಲ್ಲಿರಬೇಕಾದ ವಸ್ತು. ಆಕೆ ಜೋರಾಗಿ ನಗಬಾರದು, ಸುಗಂಧ ದೃವ್ಯಗಳನ್ನು ಹಚ್ಚಿಕೊಳ್ಳಬಾರದು, ಗಂಡನ ಮಾತನ್ನು ಮೀರಿ ನಡೆಯಬಾರದು. ಈ ಮನಸ್ಥಿತಿಯೇ ಮುಸ್ಲಿಂ ಸಮುದಾಯದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳನ್ನು ಇನ್ನೂ ಮನೆಯಿಂದ ಹೊರಗಡೆ ಕಾಣಿಸಿಕೊಳ್ಳದಂತೆ ಮಾಡಿದೆ. ಧರ್ಮ, ಸಂಸ್ಕೃತಿ ಆಚರಣೆ ಹೆಸರಲ್ಲಿ ಹೆಣ್ಣು ಮಕ್ಕಳ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? School_childrenದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವವರು ಮುಸ್ಲಿಂ ಸಮುದಾಯದ ಯುವಕರೇ ಹೆಚ್ಚು. ಇವರಿಗೆ ಅನ್ವಯವಾಗದ ಕಟ್ಟುಪಾಡುಗಳು ಹೆಣ್ಮಕ್ಕಳಿಗೆ ಮಾತ್ರ ಯಾಕೆ? ಪುಟಾಣಿ ಹೆಣ್ಣು ಮಕ್ಕಳ ನೃತ್ಯದಲ್ಲೂ ಅಶ್ಲೀಲತೆಯನ್ನು ಹುಡುಕುವುದು ಕ್ರೂರ ಮನಸ್ಥಿತಿ. ಅದೇ ರೀತಿ ಹಿಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಜಾರಿಗೆ ಬಂದ ಬಹುಪತ್ನಿತ್ವವನ್ನು ಅಸ್ತ್ರವನ್ನಾಗಿಟ್ಟುಕೊಂಡು ಬಡ ಕುಟುಂಬದ ಅಸಾಯಕತೆಯನ್ನು ಬಳಸಿ ಒಂದಿಷ್ಟು ಹೆಣ್ಣು ಮಕ್ಕಳನ್ನು ಮದುವೆಯಾಗಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿ ಅವರನ್ನು ಶೋಷಣೆ ಮಾಡುವುದು ಕೂಡಾ ಅಷ್ಟೇ ಕ್ರೂರತನ.

ಈ ಕುರಿತು ಮುಸ್ಲಿಂ ಸಮಾಜ ಹೋರಾಟ ನಡೆಸಬೇಕಾಗಿದೆ. ವಿಪರ್ಯಾಸವೆಂದರೆ ಮುಸ್ಲಿಂ ಸಮುದಾಯದಲ್ಲಿರುವ ಇಂಥಹಾ ಶೋಷಕ ಮನಸ್ಥಿತಿಗಳ ವಿರುದ್ಧ ಧ್ವನಿ ಎತ್ತುವ ಲೇಖಕಿ ಸಾರಾ ಅಬೂಬಕ್ಕರ್, ಕೆ. ಶೆರೀಫಾ, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಜೊಹರಾ ನಿಸಾರ್ ಅಹಮ್ಮದ್, ಧರ್ಮ ವಿರೋಧಿಗಳಾಗಿ ಬಿಂಬಿತರಾಗುತ್ತಾರೆ. ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ. ಇದು ಸಲ್ಲ. ಬದಲಾಗಿ ಮುಸ್ಲಿಂ ಸಮುದಾಯದ ಸುಧಾರಣಾ ಸಂಘಟನೆಗಳು ಈ ಕುರಿತು ಚಿಂತಿಸಬೇಕಾಗಿದೆ. Sara-Abubakarಭಾರತದಲ್ಲಿ ಅಲ್ಪಸಂಖ್ಯಾತವಾಗಿರುವ ಮುಸ್ಲಿಂ ಸಮುದಾಯದ ಮೇಲೆ ಕೋಮುವಾದಿಗಳಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ನಿಜ. ಅದರ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಸಮುದಾಯದಲ್ಲಿ ಕೆಲ ಧಾರ್ಮಿಕ ಮೂಲಭೂತವಾದಿ ಹಾಗೂ ಅಜ್ಞಾನಿ ಮನಸ್ಥಿತಿಗಳಿಂದ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಮುಸ್ಲಿಂ ಸಮುದಾಯ ಜಾಗೃತಗೊಂಡು ಧ್ವನಿ ಎತ್ತಲೇಬೇಕಾಗ ಅವಶ್ಯಕತೆ ಇದೆ.

ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು?

– ಬಿ. ಶ್ರೀಪಾದ ಭಟ್

ನಮ್ಮ ಡಾ.ರಾಜ್ ತೀರಿಕೊಂಡಾಗ ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ’ಎನ್‌ಟಿಆರ್, ಎಂಜಿಆರ್, ಎಎನ್‌ಆರ್, ಶಿವಾಜಿ ಗಣೇಶನ್ ಅವರನ್ನು ಪ್ರಸ್ತಾಪಿಸದೆ ಡಾ.ರಾಜ್ ಕುರಿತು ಮಾತನಾಡಲು ಸಾಧ್ಯವಿಲ್ಲ’ ಎಂದು ನಾನು ಹೇಳಿದ್ದು ಮತ್ತೆ ನೆನಪಾಗಿದ್ದು ಮೊನ್ನೆ ಬಾಲು ಮಹೇಂದ್ರ ತೀರಿಕೊಂಡ ಸುದ್ದಿ ಬಂದಾಗ. balumahendraಹೌದು ಕೆ.ಬಾಲಚಂದರ್, ಭಾರತೀರಾಜ, ಭಾಗ್ಯರಾಜ ಇವರನ್ನು ಪ್ರಸ್ತಾಪಿಸದೆ ಬಾಲು ಮಹೇಂದ್ರ ಅವರನ್ನು ಕುರಿತು ಮಾತನಾಡಲು ಸಾಧ್ಯವಿಲ್ಲ. ಈ ನಾಲ್ಕೂ ’ಭಾ’ ಗಳು ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಇಡೀ ತಮಿಳು ಚಿತ್ರರಂಗವನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆದಿದ್ದರು. ಕೇವಲ ಸಿನಿಮಾ ನಿರ್ದೇಶನವಷ್ಟೇ ಅಲ್ಲ ಜೊತೆಜೊತೆಗೆ ಸೃಜನಶೀಲತೆಯನ್ನು, ಹೊಸ ದಾರಿಗಳನ್ನು, ನಿರಂತರ ಪ್ರಯೋಗಗಳನ್ನು ಕಟ್ಟಿದರು. ಆ ದಶಕಗಳ, ಈ ನಾಲ್ಕು ’ಭಾ’ಗಳ Legacy ಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಇಂದು ತಮ್ಮ ಹೆಗಲ ಮೇಲೆ ಹೊತ್ತು ನಡೆಯುತ್ತಿರುವುವವರು ಸಸಿಕುಮಾರ್, ಪಾಂಡಿರಾಜ್, ಬಾಲಾಜಿ ಸಕ್ತಿವೇಲು, ಬಾಲಾ, ಛೇರನ್, ವೆಟ್ರಿಮಾರನ್, ಮಿಷ್ಕಿನ್, ಸಮುದ್ರಖಣಿ, ಪ್ರಭು ಸಾಲೋಮನ್, ಸರ್ಕುನಮ್, ಸುಸೀನ್‌ತಿರನ್, ವಸಂತಬಾಲನ್ ರಂತಹ ಹೊಸ ತಲೆಮಾರಿನ ನಿರ್ದೇಶಕರು ಮತ್ತು ನಟರು. ಈ ಮಟ್ಟದ ಹೊಸ ಆಯಾಮಗಳನ್ನು, ನಿರಂತರವಾದ ಸೃಜನಶೀಲತೆಯ ಫಸಲನ್ನು, ಅಗಣಿತ ಸಾಧ್ಯತೆಗಳನ್ನು, ಎಂದಿಗೂ ಬತ್ತದ ಸಿಹಿನೀರಿನ ಬುಗ್ಗೆಗಳನ್ನು ಕಟ್ಟಲು ಸಾಧ್ಯವಾಗಿದ್ದು ತಮಿಳು ಚಿತ್ರರಂಗಕ್ಕೆ ಮಾತ್ರವೇ ಹೊರತು ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ಭಾಷೆಯ ಚಿತ್ರರಂಗಕ್ಕೂ ಇದು ಸಾಧ್ಯವಾಗಿಲ್ಲ ಎಂದು ನಾನು ಅತ್ಮವಿಶ್ವಾಸದಿಂದ ಹೇಳುತ್ತೇನೆ. ನೆನಪಿರಲಿ ಮೇಲ್ಕಾಣಸಿದ ಹೊಸ ತಲೆಮಾರಿನ ನಿರ್ದೇಶಕ, ನಟರಾರೂ ಮೇಲ್ಜಾತಿಗೆ ಸೇರಿದವರಲ್ಲ. ಹಿಂದುಳಿದ, ತಳಸಮುದಾಯಗಳಿಂದ ಬಂದವರು.

ಜನಪ್ರಿಯ ಕವಿತೆ ’ಏಳು ಸುತ್ತಿನ ಕೋಟೆ’ಯಲ್ಲಿ ಇದ್ದಕಿದ್ದ ಹಾಗೆ ಕವಿ ’ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು’ ಎಂದು ಪ್ರಶ್ನಿಸಿ ಓದುಗನನ್ನು ಚಕಿತಗೊಳಿಸುತ್ತಾನೆ. ಹಾಗೆಯೇ ಈ ಸೃಜನಶೀಲತೆ, ಸಮಸ್ಯೆಯ ಆಳವನ್ನು ತಲಪುವ ಸೂಕ್ಷ್ಮತೆ ಮತ್ತು ಕುಶಲತೆ, ವ್ಯಕ್ತಿಗತ ನೆಲೆಯಲ್ಲಿನ ಮನುಷ್ಯನ ಸಣ್ಣತನದ ನಡುವಳಿಕೆಗಳಿಂದ ಶುರುವಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆವರೆಗೆ, ಮದ್ರಾಸ್, ಮಧುರೈ, ಕೊಯಮತ್ತೂರಿನಿಂದ ತಮಿಳು ನಾಡಿನ ಸಣ್ಣ, ಸಣ್ಣ ಹಳ್ಳಿಗಳವರೆಗೆ ಸಮೂಹ ಪ್ರಜ್ಞೆಯ ಈ ನಿರಂತರ ಪ್ರಯಾಣ ಇದೆಲ್ಲಾ ತಮಿಳು ಚಿತ್ರರಂಗಕ್ಕೆ ದಕ್ಕಿದ ಗಳಿಗೆ ಯಾವಾಗ?

ಎಪ್ತತ್ತರ ದಶಕ ಆರಂಭವಾಗುವಷ್ಟರಲ್ಲಿ ಶಿವಾಜಿ ಗಣೇಶನ್‌ರವರ ಹೊಕ್ಕಳಿನಿಂದ ಧ್ವನಿಯನ್ನು ತೆಗೆದು ಇಡೀ ಪರದೆಯ ಮೇಲೆ ಆಕ್ರಮಿಸುವಂತಹ ನಟನೆಯ ಶೈಲಿ ಕ್ರಮೇಣ ಮೂಲೆ ಗುಂಪಾಗತೊಡಗಿತು. ಕಾದಲ್ ಮನ್ನನ್ ಜೆಮಿನಿ ಗಣೇಶನ್‌ಗೆ ಏರುತ್ತಿದ್ದ ವಯಸ್ಸು ಪ್ರೇಮಿಯಾಗಲು ನಿರಾಕರಿಸುತ್ತಿತ್ತು. ಇನ್ನು ಎಂಜಿಆರ್‌ಗೆ ಸ್ವತಃ ಸಿನಿಮಾರಂಗದಲ್ಲಿ ಆಸಕ್ತಿ ಕಡಿಮೆಯಾಗತೊಡಗಿ ರಾಜಕೀಯದ ಕಡೆಗೆ ಮುಖ ಮಾಡಿದ್ದರು. ಒಟ್ಟಾರೆ ಇಡೀ ತಮಿಳು ಚಿತ್ರರಂಗ ಆಯಾಸದಿಂದ ಬಸವಳಿದಿತ್ತು. ಹೊಸ ಘಮಲಿಗೆ, ಹೊಸದಾದ ಅಭಿವ್ಯಕ್ತಿಯ ಶೈಲಿಗೆ, ತಂಗಾಳಿಯಂತಹ ದೃಶ್ಯಕಾವ್ಯಕ್ಕೆ, ಸಂಪೂರ್ಣ ಹೊಸ ಚಿಗುರಿಗೆ, ಸಾಧ್ಯವಾದರೆ ಸೈರಿಸಿಕೊಳ್ಳಬಲ್ಲ ತಿಕ್ಕಲುತನಕ್ಕೆ ತಮಿಳು ಪ್ರೇಕ್ಷಕರು ಕಾಯುತ್ತಿದ್ದರು. ಅಂತಹದೇ ಒಂದು ದಿನ ಎಪ್ಪತ್ತರ ದಶಕದ ಆರಂಭದಲ್ಲಿ ಕೆ.ಬಾಲಚಂದರ್ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶಿಸಿದ ’ ಅರಂಗೇಟ್ರಂ’ ಸಿನಿಮಾ ಬಿಡುಗಡೆಯಾಯಿತು. arangetramಎಂಟು ಜನ ಅಣ್ಣ, ತಂಗಿಯರ ಕರ್ಮಠ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನಾಯಕಿ ಇಡೀ ಸಂಸಾರದ ಜವಬ್ದಾರಿಯನ್ನು ಹೊತ್ತುಕೊಂಡು ಕಡೆಗೆ ವೇಶ್ಯಾವೃತ್ತಿಗೆ ಸೇರಿಕೊಳ್ಳುತ್ತಾಳೆ. ತನ್ನ ವೇಶ್ಯಾವೃತ್ತಿಯಿಂದ ಗಳಿಸಿದ ಹಣದಿಂದ ಅಣ್ಣ, ತಂಗಿಯರ ಮದುವೆ ಮಾಡುತ್ತಾಳೆ. ಹೀಗೆ ಸಂಪೂರ್ಣ ಹೊಸಬರನ್ನು ಹಾಕಿಕೊಂಡು ಮಾಡಿದ ’ಅರಂಗೇಟ್ರಂ’ ಸಿನಿಮಾ ಆ ಕಾಲದಲ್ಲಿ ಈ ವಿವಾದಾತ್ಮಕ ಕಥಾವಸ್ತುವಿನಿಂದಾಗಿ, ಕೆಲವು ಬೋಲ್ಡ್ ದೃಶ್ಯಗಳಿಂದಾಗಿ, ಹರಿತ ಸಂಭಾಷಣೆಗಳಿಂದಾಗಿ ತಮಿಳುನಾಡಿನಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆದರೆ ಬಾಕ್ಸ್ ಆಫೀಸಿನಲ್ಲಿ ದುಡ್ಡನ್ನೂ ಮಾಡಿತು. ಪ್ರಶಸ್ತಿಯನ್ನೂ ಗಳಿಸಿತು. ಎಲ್ಲಕ್ಕಿಂತಲೂ ಮಿಗಿಲಾಗಿ ನಾಯಕಿ ಪ್ರಧಾನ ಸಿನಿಮಾದ ಹೊಸ ಅಲೆಯನ್ನೇ ಮರುಸೃಷ್ಟಿಸಿತ್ತು. ’ಅರಂಗೇಟ್ರಂ’ನ ನಾಯಕಿ ಪ್ರೇಮಲೀಲ ಎಲ್ಲಿಯೂ ’ಶರಪಂಜರ’ದ ಕಲ್ಪನಾಳಂತೆ ನಾನು ಕಳಕೊಂಡೆ, ನಾನು ಕಳಕೊಂಡೆ ಎಂದು ಹಿಸ್ಟಾರಿಕ್ ಆಗಿ ಚೀರಾಡುವುದಿಲ್ಲ, ಬದಲಾಗಿ ಘನತೆಯಿಂದ ಸಮಾಜವನ್ನು ಎದುರಿಸುತ್ತಾಳೆ. (ಬಾಲಚಂದರ್ ಏತಕ್ಕೆ ಪುಟ್ಟಣ್ಣ ಕಣಗಾಲರಿಗಿಂತ ವೈಚಾರಿವಾಗಿ, ಸಾಮಾಜಿಕವಾಗಿ ನೂರಾರು ಮೈಲಿ ಮುಂದಿದ್ದರು ಎನ್ನುವುದಕ್ಕೆ ಇದು ಒಂದು ಸಣ್ಣ ಉದಾಹರಣೆ. ಇಂತಹ ನೂರಾರು ಉದಾಹರಣೆಗಳಿವೆ.)

1974 ರಲ್ಲಿ ಕೆ.ಬಾಲಚಂದರ್ ಮತ್ತೆ ಕತೆ ಬರೆದು “ಅವಳ್ ಒರು ತೊಡರ್ ಕಥೈ” ಎನ್ನುವ ಮತ್ತೊಂದು ನಾಯಕಿ ಪ್ರಧಾನ ಸಿನಿಮಾ ನಿರ್ದೇಶಿಸಿದರು. ಇದು ಆ ಕಾಲಕ್ಕೆ ಸೂಪರ್ ಹಿಟ್ ಸಿನಿಮಾ. ನಟಿ ಸುಜಾತಗೆ ಹೊಸ ಇಮೇಜನ್ನು, ಜನಪ್ರಿಯತೆಯನ್ನು ತಂದುಕೊಟ್ಟ, ಕಮಲ್‌ಹಾಸನ್ ಮತ್ತು Avaloruthodarರಜನೀಕಾಂತ್‌ಗೆ ನಟನೆಯ ಆಭಿವ್ಯಕ್ತಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಈ ಸಿನಿಮಾದಲ್ಲಿ ಮತ್ತೊಮ್ಮೆ ನಾಯಕಿ ತನ್ನ ಕುಟುಂಬಕ್ಕಾಗಿ ತನ್ನ ವಯುಕ್ತಿಕ ಜೀವನವನ್ನೇ ಮೀಸಲಿಡುತ್ತಾಳೆ. ಅಲ್ಲದೆ Middle class working women ನ ದೈನಂದಿನ ಬದುಕನ್ನು ವಿಭಿನ್ನ ಕೋನಗಳಿಂದ, ಹೊಸ ನಿರೂಪಣೆಯ ಮೂಲಕ ಮೊಟ್ಟ ಮೊದಲ ಬಾರಿಗೆ ಪ್ರೇಕ್ಷಕ ನೋಡುತ್ತಾನೆ. (ಅರವತ್ತರ ದಶಕದಲ್ಲಿ ಮೇಘಾ ಡಾಕೆ ಡಾಗೆ ಸಿನಿಮಾದ ಮೂಲಕ ರುತ್ವಿಕ್ ಘಟಕ್ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದರು, ಹಿಂದಿಯಲ್ಲಿ ಅದೇ ವೇಳೆ ಬಸು ಚಟರ್ಜಿ, ಗುಲ್ಜಾರ್, ಹೃಶಿಕೇಶ್ ಮುಖರ್ಜಿ, ಇದೇ ಮಾದರಿಯಲ್ಲಿ ಬ್ರಿಜ್ ಸಿನಿಮಾಗಳ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದರು.) ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಈ ಸಿನಿಮಾ ನಂತರ ತೆಲುಗು, ಕನ್ನಡ (ಬೆಂಕಿಯಲ್ಲಿ ಅರಳಿದ ಹೂ), ಹಿಂದಿಗೂ ಸಹ ರೀಮೇಕ್ ಆಯಿತು.

ನಂತರ ಕೆ.ಬಾಲಚಂದರ್ ಬರೆದು ನಿರ್ದೇಶಿಸಿದ “ಅಪೂರ್ವ ರಾಗಂಗಳ್” ಸಿನಿಮಾ ತಮಿಳು ಸಿನಿಮಾದಲ್ಲಿ ಹೊಸ ಮೆಲೋಡಿಯನ್ನೇ ಬರೆಯಿತು. ಕಿರಿಯ ವಯಸ್ಸಿನ ಕಮಲ್ ಹಾಸನ್ ತನಗಿಂತ ಹಿರಿಯಳಾದ ಶ್ರೀವಿದ್ಯಾಳನ್ನು ಪ್ರೇಮಿಸಿದರೆ, ಹಿರಿಯ ವಯಸ್ಸಿನ, ಕಮಲ್‌ನ ತಂದೆ (ಹೆಸರು ಮರೆತು ಹೋಗಿದೆ) ಕಿರಿಯ ವಯಸ್ಸಿನ ಶ್ರೀವಿದ್ಯಾಳ ಮಗಳು ಜಯಸುಧಾಳಲ್ಲಿ ಪ್ರೀತಿ ಹುಡುಕುತ್ತಾನೆ. ಇಲ್ಲಿ ಶ್ರೀವಿದ್ಯಾ ವಿವಾಹಕ್ಕಿಂತಲೂ ಮೊದಲು ಜಯಸುಧಾಳಿಗೆ ಜನ್ಮ ನೀಡಿರುತ್ತಾಳೆ. ಈ ಎಲ್ಲಾ ಸಂಕೀರ್ಣ ಸಂಬಂಧಗಳು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ ಎನ್ನುವಷ್ಟರಲ್ಲಿ ಶ್ರೀವಿದ್ಯಾಳ ಹಳೆಯ ಪ್ರೇಮಿ ರಜನೀಕಾಂತ್ ರಂಗ ಪ್ರವೇಶ ಮಾಡುತ್ತಾನೆ. ಆ ಕಾಲಕ್ಕೆ ಇದು ಎಷ್ಟೊಂದು ವಿಲಕ್ಷಣ ಕತೆಯೆಂದರೆ ಎಲ್ಲರೂ ನಿರ್ದೇಶಕನ ವಿಭಿನ್ನ ನಿರೂಪಣೆಗೆ ಮಾರು ಹೋಗುತ್ತಾರೆ. ಕೇವಲ ಕ್ಯಾಮಾರಾದಿಂದ ಮಾತ್ರ ಸಿನಿಮಾ ಸಾಧ್ಯವಿಲ್ಲ, ಬಿಗಿಯಾದ ಕತೆ, ಚಿತ್ರಕತೆ ಒಂದು ಯಶಸ್ವೀ ಸಿನಿಮಾಕ್ಕೆ ಬೆನ್ನೆಲೆಬಾಗಿರುತ್ತವೆ ಎಂದು ಬಾಲಚಂದರ್ ’ಅಪೂರ್ವ ರಾಗಂಗಳ್’ ಮೂಲಕ ತೋರಿಸಿಕೊಟ್ಟರು. ಇದೂ ಸಹ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿತು.

ಇದೇ ವೇಳೆ ಮೂವತ್ತರ ಹರೆಯದ, ಕಡು ಕಪ್ಪು ಬಣ್ಣದ ಯುವ ನಿರ್ದೇಶಕ ಭಾರತೀ ರಾಜ “16 ವಯದಿನಿಲೆ” ಸಿನಿಮಾದ ಮೂಲಕ ತಮಿಳು ಚಿತ್ರರಂಗದಲ್ಲಿ ಗ್ರಾಮೀಣ ಹಿನ್ನೆಲೆಯ ಸಿನಿಮಾಗಳಿಗೆ ಅದುವರೆಗೆ ಇದ್ದಂತಹ ಸಾಂಪ್ರದಾಯಿಕ ಚೌಕಟ್ಟನ್ನೇ 16-vayathinelaeಮುರಿದು ಹಾಕಿ ಮತ್ತೊಂದು ಮಗ್ಗುಲನ್ನೇ ತೆರೆದಿಟ್ಟರು. ಆಧುನಿಕ ತಮಿಳು ಚಿತ್ರರಂಗದ ಗತಿಯನ್ನೇ ಬದಲಿಸಿದ ಸಿನಿಮಾವೆಂದೇ “16 ವಯದಿನಿಲೆ” ಚಿತ್ರವನ್ನು ನೆನೆಸಿಕೊಳ್ಳುತ್ತಾರೆ. ಇದು ಶ್ರೀದೇವಿಗೆ ನಾಯಕಿಯ ಪಾತ್ರದ ಮೂಲಕ ಜನಪ್ರಿಯತೆಯನ್ನು ತಂದು ಕೊಟ್ಟರೆ ಕಮಲ್ ಮತ್ತು ರಜನಿಯ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿದ್ದದ್ದು ಭಾರತೀರಾಜ.

ಇದೇ ಸಂದರ್ಭದಲ್ಲಿ ಪುಣೆ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಸಿನಿಮಾಟಾಗ್ರಫಿಯಲ್ಲಿ ಶಿಕ್ಷಣ ಪಡೆದು ಹಲವಾರು ಮಲಯಾಳಿ ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡಿ ಪ್ರಶಸ್ತಿಯನ್ನು ಗಳಿಸಿದ ಬಾಲು ಮಹೇಂದ್ರ ಕನ್ನಡದಲ್ಲಿ ತಮ್ಮ ಮೊಟ್ಟಮೊದಲ ಸಿನಿಮಾ ’ಕೋಕಿಲಾ’ ನಿರ್ದೇಶಿಸುವುದರ ಮೂಲಕ, ನಂತರ ತಮಿಳು ಸಿನೆಮಾ ’ಮೂನ್ರು ಮಲರಂ’ದ ಛಾಯಾಗ್ರಹಣದ ಮೂಲಕ ಗಮನ ಸೆಳೆಯುತ್ತಾರೆ. ನಂತರ ಶೋಭಾ ಅಭಿನಯದ ’ಅದಿಯಾದ ಕೋಲೈಂಗಳ್’ ನಿರ್ದೇಶನದ ಮೂಲಕ ತಮಿಳು ಚಿತ್ರರಂಗದ ನಿರ್ದೇಶಕರಾಗುವ ಬಾಲು ಮಹೇಂದ್ರ ನಂತರ ನಿರ್ದೇಶಿಸಿದ ” ಮೂನ್ರಾಂ ಪಿರ್ರೈ” ಚಿತ್ರ ಸೂಪರ್ ಹಿಟ್ ಆಗುತ್ತದೆ.

ನಂತರ ಎಂಬತ್ತರ ದಶಕದ ಆರಂಭದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ತೆರೆಕಂಡ “ವರುಮೈ ನೇರಂ ಸಿಗಪ್ಪು” ಸಿನಿಮಾ ವಿದ್ಯಾವಂತ, ನಿರುದ್ಯೋಗ ಯುವಕರ ಕತೆಯನ್ನು ಪರಿಣಾಮಕಾರಿಯಾಗಿ, ಬಿಗಿಯಾದ ಚಿತ್ರಕತೆಯಿಂದ ನಿರೂಪಿಸುತ್ತದೆ.

ಇದೇ ವೇಳೆ ಬಿಡುಗಡೆಗೊಂಡ ಕೆ.ಬಾಲಚಂದರ್ ನಿರ್ದೇಶನದ ” ತಣ್ಣೀರ್ ತಣ್ಣೀರ್” ಸಿನಿಮಾ ಮತ್ತೊಂದು Path breaking ಚಿತ್ರ. ಬರ, ನೀರಿನ ಅಭಾವ, ರಾಜಕೀಯ ಭ್ರಷ್ಟತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುವ ಈ ಸಿನಿಮಾದ ಮೂಲಕ ಬಾಲಚಂದರ್ ತಮ್ಮ ದಾರಿಯನ್ನೇ ಬದಲಿಸಿ ಸಾಮಾಜಿಕ, Thanneer-Thanneer-Sarithaರಾಜಕೀಯ ಶೋಷಣೆಯ ಕತೆಗೆ ಹೊರಳಿಕೊಂಡರು. ಭ್ರಮಾತ್ಮಕ ಮನೋರಂಜನೆಯ ಜನಪ್ರಿಯ ರಂಗವನ್ನು ಕೈಬಿಟ್ಟು ಪ್ರಯೋಗಾತ್ಮಕ ಸಾಮಾಜಿಕ ನೆಲೆಗೆ ದಾಪುಗಾಲಿನ ಈ ನಡಿಗೆ ಕೆ.ಬಾಲಚಂದರ್‌ನಂತಹ ಕ್ರಿಯಾಶೀಲ ನಿರ್ದೇಶಕನಿಗೆ ಮಾತ್ರ ಸಾಧ್ಯವೇನೋ. ಸಿನಿಮಾವೆಂದರೆ ಕೇವಲ ತಂತ್ರಜ್ಞಾನದ ಹೆಗ್ಗಳಿಕೆಯಲ್ಲ, ಅದು ಮನುಕುಲದ ಪ್ರಾಮಾಣಿಕ ಇತಿಹಾಸವೂ ಹೌದು ಎಂದು ಈ ಸಿನಿಮಾದ ಮೂಲಕ ನಮಗೆ ನೆನಪಿಸಿಕೊಟ್ಟವರು ಬಾಲಚಂದರ್. ಇನ್ನು ಈ “ತಣ್ಣೀರ್ ತಣ್ಣೀರ್” ಸಿನಿಮಾದ ನಾಯಕಿ ಸರಿತ, Marvelous. ಕಪ್ಪು ಬಣ್ಣದ ಸರಿತಾಳ ಮನೋಜ್ಞ ಅಭಿನಯ ಮರೆಯಲು ಸಾಧ್ಯವೇ ಇಲ್ಲ. ಜೀವಮಾನದ ಶ್ರೇಷ್ಠ ಅಭಿನಯ ಕೊಟ್ಟ ಸರಿತಾಳಿಗೆ ಸ್ವಲ್ಪದರಲ್ಲಿಯೇ ರಾಷ್ಟ್ರಪ್ರಶಸ್ತಿ ತಪ್ಪಿತು. ಆದರೆ ಸರಿತ ಸಿನಿಮಾ ರಸಿಕರ ಮನಗೆದ್ದಿದ್ದಕ್ಕೆ ಪುರಾವೆ ಈ “ತಣ್ಣೀರ್ ತಣ್ಣೀರ್”ಚಿತ್ರದಲ್ಲಿನ ಅಭಿನಯ.

ನಂತರ ಕೆ.ಬಾಲಚಂದರ್ ನಿರ್ದೇಶನದ “ಅಚ್ಚಮಿಲ್ಲೈ ಅಚ್ಚಮಿಲ್ಲೈ” ಸಿನಿಮಾ ಕೂಡ ರಾಜಕೀಯ ಹಿನ್ನೆಲೆಯಲ್ಲಿ ವಯುಕ್ತಿಕ ಬದುಕಿನ ಪಲ್ಲಟಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಮತ್ತೊಮ್ಮೆ ಸರಿತ ಅತ್ಯುತ್ತಮವಾಗಿ ಅಭಿನಯಿಸಿದ್ದಳು.

ಎಂಬತ್ತರ ದಶಕದ ಮಧ್ಯಭಾಗದಲ್ಲಿ ತೆರೆಕಂಡ ಭಾರತೀರಾಜ ನಿರ್ದೇಶನದ “ಅಲೈಗಳ್ ಓವದಿಲ್ಲೈ”, “ಮಣ್ ವಾಸನೈ” ಸಿನಿಮಾಗಳು ಗಟ್ಟಿಯಾದ ಕತೆ, ಚಿತ್ರಕತೆ ಮತ್ತು ಹೊಸ ಬಗೆಯ ನಿರೂಪಣೆಯ ಮೂಲಕ ಯಶಸ್ಸನ್ನು ಸಾಧಿಸಿದರೆ, ಭಾರತೀರಾಜ ನಿರ್ದೇಶನದ “ವೇದಂ ಪುದಿದು” ಸಿನಿಮಾ ಜಾತೀಯ ಸಮಾಜವನ್ನು ನೇರವಾಗಿ, ನಿರ್ಭಿಡೆಯಿಂದ ಟೀಕಿಸುತ್ತದೆ. ಈ ಸಿನಿಮಾದಲ್ಲಿ ಬ್ರಾಹ್ಮಣರ ಕರ್ಮಠತನವನ್ನು, ಜಾತಿವಾದವನ್ನು ಟೀಕಿಸುವ ಕಣ್ಣನ್‌ರವರ ಸಂಭಾಷಣೆ ದೊಡ್ಡ ಹೈಲೈಟ್.

ಇದೇ ಸಂದರ್ಭದಲ್ಲಿ ತಮಿಳು ಚಿತ್ರರಂಗ ಮತ್ತೊಮ್ಮೆ ತನ್ನ ಹಳೆಯ ಕಮರ್ಶಿಯಲ್ ಜಾಳು ಜಾಳು ಹಾದಿಗೆ ಜಾರುತ್ತಿದೆ ಎನ್ನುವಾಗ, Mudhal-Mariyadhaiಭಾರತೀರಾಜ ನಿರ್ದೇಶನದ “ಮೊದಲ್ ಮರ್ಯಾದೈ” ಸಿನಿಮಾ ಮತ್ತೊಮ್ಮೆ ಗ್ರಾಮೀಣ ಸಮಾಜವನ್ನು ಲವಲವಿಕೆಯಿಂದ, ಚೇತೋಹಾರಿಯಾಗಿ ನಮ್ಮನ್ನು ಖುಷಿಗೊಳಿಸುತ್ತದೆ. “ಮೊದಲ್ ಮರ್ಯಾದೈ” ಚಿತ್ರದ ಮೂಲಕ ರಾಧ ಮತ್ತು ಶಿವಾಜಿ ಗಣೇಶನ್ ಅವರು ತಮಗೆ ಅನೀರೀಕ್ಷಿತವಾಗಿ ದೊರೆತ ವಿಭಿನ್ನವಾದ, ಸತ್ವಶಾಲಿಯಾದ ಹೊಸ ಇಮೇಜ್‌ನಲ್ಲಿ ಅತ್ಯಂತ ಸರಳವಾಗಿ, ಸಂಯಮವಾಗಿ ಮತ್ತು ಪರಿಣಾಮಾಕಾರಿಯಾಗಿ ನಟಿಸಿರುವುದು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಇಂದಿಗೂ ಇವರಿಬ್ಬರ ಜೋಡಿ ಮನಸ್ಸಿಗೆ ಅಹ್ಲಾದವನ್ನುಂಟು ಮಾಡುವುದಂತೂ ನಿಜ.

ಇದಿಷ್ಟೂ ಕೆಲವು ಉದಾಹರಣೆಗಳು ಮಾತ್ರ. ಇನ್ನೂ ಹೆಸರಿಸಬೇಕಾದ ಹಲವಾರು ಸಿನಿಮಾಗಳಿವೆ.

ಈ “ಭಾ” ಗಳ ಉತ್ತರಾಧಿಕಾರಿಗಳಾಗಿ ತಮಿಳು ಸಿನಿಮಾದ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಮುಂದುವರೆಸುತ್ತಿರುವವರು ಸಸಿಕುಮಾರ್ (ಸುಬ್ರಮಣ್ಯಪುರಂ), ಪಾಂಡಿರಾಜ್ (ವಂಶಮ್, ಮರಿನಾ), ಬಾಲಾಜಿ ಸಕ್ತಿವೇಲು (ಕಾದಲ್), ಬಾಲಾ (ಸೇತು, ನಾನ್ ಕಡವಳ್, ಪಿತಾಮಗನ್), ಛೇರನ್ (ಆಟೋಗ್ರಾಫ್, ಭಾರತಿ ಕಣ್ಣಮ್ಮ, ಪೋರ್ಕಾಲಂ, ಪಾಂಡವರ್ ಭೂಮಿ), ವೆಟ್ರಿಮಾರನ್ (ಆಡುಕುಳ್ಂ), ಮಿಷ್ಕಿನ್ (ಯುದ್ಧ್ಂ ಸೆಯ್ಯಿ, ಅಂಜಾತೆ), ಸಮುದ್ರಖಣಿ (ನಾಡೋಡಿಗಳ್, ಪೋರಾಲಿ), ಪ್ರಭು ಸಾಲೋಮನ್ (ಮೈನಾ), ಸರ್ಕುನಮ್ (ವಾಗೈ ಸುಡವ), ಸುಸೀನ್‌ತಿರನ್ (ಅಜಗಿರಿಸ್ವಾಮಿಯಿನ್ ಕುದರೈ), ವಸಂತಬಾಲನ್ (ಅಂಗಡಿ ತೆರು).

ಕ್ಯಾಮರಾವೇ ಸಿನಿಮಾ ಮಾಡುವಂತಿದ್ದರೆ ಈ ಕಾಲಘಟ್ಟದ ಅನೇಕ ಸಿನಿಮಾ ನಿರ್ದೇಶಕರು ಜಾಬ್‌ಲೆಸ್ ಆಗುತ್ತಿದ್ದರು ಎಂದು ಗೆಳೆಯ ಶಾಂತರಾಜು ಹೇಳುತ್ತಿದ್ದ. ಇದು ನಿಜ. ಕೇವಲ ತಂತ್ರಜ್ಞಾನ, ದೃಶ್ಯ ವೈಭವದ ಸುವರ್ಣ ಚೌಕಟ್ಟು ಕಡೆಗೆ ಪ್ರೇಕ್ಷಕನಿಗೆ ಕೊಡುವುದು ಕೇವಲ ಭ್ರಮಾತ್ಮಕ ಮನೋರಂಜನೆ. ಇಲ್ಲಿ ಉಳ್ಳವರು ಮಾತ್ರ ಶಿವಾಲಯ ಮಾಡುತ್ತಾರೆ. ದುಡ್ಡಿದ್ದವನೇ ದೊಡ್ಡಪ್ಪ. ಇದು ಸೃಷ್ಟಿಸುವುದು ವಿಕೃತವಾದ ಸಮೂಹಸನ್ನಿಯನ್ನು ಮಾತ್ರ. ಇಲ್ಲಿ ರಿಯಲ್ ಎಸ್ಟೇಟ್‌ನ ಕಬಂಧಬಾಹುವಿಗೆ ಸಿಕ್ಕಿಕೊಳ್ಳುವುದು ತೀರಾ ಸಹಜ.

ಆದರೆ ಕ್ರಿಯಾಶೀಲತೆ, ವೈಚಾರಿಕತೆ, ಹೊಸ ಚಿಂತನೆಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡಿದ್ದರೆ ನಾವೂ ಸಹ ಜಗತ್ತೇ ಬೆರಗಾಗುವಂತೆ, ಮನಸ್ಸನ್ನು ಮುದಗೊಳಿಸುವ,ಈ ನೆಲದ ಸತ್ವವನ್ನು ಹೀರಿಕೊಂಡು ಬದುಕುವ ಅಪಾರ ಸಾಧ್ಯತೆಗಳನ್ನು ಪ್ರೇಕ್ಷಕನಿಗೆ ಕಟ್ಟಿಕೊಡಲು ಸಾಧ್ಯವೆಂದು ಈ ’ಭಾ’ಗಳು ಮತ್ತು ಮೇಲಿನ ಹೊಸ ತಲೆಮಾರಿನ ನಿರ್ದೇಶಕರು ನಮಗೆ ತೋರಿಸಿಕೊಟ್ಟಿದ್ದಾರೆ.

ನೆನಪಿರಲಿ ಇವರಾರೂ ಕಲಾತ್ಮಕ ಚಿತ್ರಗಳನ್ನು ಮಾಡಿದವರಲ್ಲ. ಇವರು ಮಾಡಿದ್ದೆಲ್ಲ ಕಮರ್ಶಿಯಲ್ ಚಿತ್ರಗಳು. ಬೌದ್ಧಿಕ ಅಹಂಕಾರದಿಂದ ನೂರಾರು ಮೈಲಿ ದೂರವಿರುವ ಈ ಎಲ್ಲಾ ಚಿತ್ರಗಳು ತುಂಬಾ ಸರಳ ಸಿನಿಮಾಗಳು. ಇವುಗಳ ಶಕ್ತಿ ಏನೆಂದರೆ ಇವ ನಮ್ಮವ, ಇವ ನಮ್ಮವ ಎನ್ನುವ ಆತ್ಮೀಯತೆ.

ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟ ಈ ಎಲ್ಲಾ ಸಿನಿಮಾಗಳು ಹಣ ಮಾಡಿವೆ. ಅವಾರ್ಡ್ ಗಳಿಸಿವೆ.

ಕ್ಯಾಮರಾ ಕಣ್ಣಲ್ಲಿ ರಾಜ್ ಮತ್ತು ಜಯ : ಎರಡು ನಿರೂಪಣೆಗಳು

– ಸಂಕಲ್ಪ

ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಸಿನಿಮಾಗಳ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹೀಗೆ ಮಾತನಾಡಿದ್ದ ನೆನಪು. “ಚಿತ್ರರಂಗ ಲಕ್ಷಾಂತರ ಜನರಿಗೆ ಅನ್ನ, ಆಶ್ರಯ ನೀಡಿದೆ. ಇಂತಹದೊಂದು ಕ್ಷೇತ್ರ ಇಲ್ಲದೆ ಹೋಗಿದ್ದರೆ ನಿರುದ್ಯೋಗ ಸಮಸ್ಯೆ ಇನ್ನೂ ತೀವ್ರವಾಗಿರುತ್ತಿತ್ತು”. ಹೀಗೆ ಲಕ್ಷಾಂತರ ಕೈಗಳಿಗೆ ಕೆಲಸ ಕೊಟ್ಟ ಉದ್ಯಮ ಪರಿಶ್ರಮದ ಹಾಗೂ ಸೃಜನಶೀಲತೆಯನ್ನು ಬೇಡುತ್ತದೆ. ಸಾವಿರಾರು ನಟ, ನಟಿಯರು, ತಂತ್ರಜ್ಞರು, shashidhar-lakshminarayanಕಲಾವಿದರು ಕನ್ನಡ ಚಿತ್ರರಂಗದಲ್ಲಿ ದುಡಿದು ಹೋಗಿದ್ದಾರೆ. ಆದರೆ ಕೆಲವರ ಸಾಧನೆ, ಕೊಡುಗೆಗಳು ಮಾತ್ರ ದಾಖಲಾಗುತ್ತವೆ. ಉಳಿದವರು ತೆರೆಮರೆಯಲ್ಲಿಯೇ ಉಳಿದು ಬಿಡುತ್ತಾರೆ.

ತಮ್ಮ ಕೊಡುಗೆಗಳ ಮೂಲಕ ಮರೆಯಲ್ಲಿಯೇ ಉಳಿದಿದ್ದ ಎರಡು ವ್ಯಕ್ತಿತ್ವಗಳನ್ನು ಪರಿಚಯಿಸುವ ಪುಸ್ತಕಗಳನ್ನು ಪತ್ರಕರ್ತ ಶಶಿಧರ ಚಿತ್ರದುರ್ಗ ಹೊರತಂದಿದ್ದಾರೆ. ಒಬ್ಬರು ಛಾಯಾಗ್ರಾಹಕ ಲಕ್ಷ್ಮೀನಾರಾಯಣ, ಮತ್ತೊಬ್ಬರು ಲಂಗಮ್ಮ ಎಂದೇ ಇತ್ತೀಚೆಗೆ ಪ್ರಸಿದ್ಧರಾಗಿರುವ ಹಿರಿಯ ಕಲಾವಿದೆ ಜಯಾ. ಎರಡು ಪುಸ್ತಕಗಳು ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಬಿಡುಗಡೆಯಾದವು.

ಕ್ಯಾಮರಾ ಕಣ್ಣಲ್ಲಿ ರಾಜ್: ಇದು ಒದುವ ಕಂ ನೋಡುವ ಪುಸ್ತಕ. ಅಪರೂಪದ ಫೋಟೋಗಳು ಈ ಪುಸ್ತಕದ ವಿಶೇಷ ಆಕರ್ಷಣೆ. ರಾಜಕುಮಾರ್ ಅವರ ವಿವಿಧ ಭಂಗಿಗಳು ಇಲ್ಲಿವೆ. ಫೋಟೋಗಳ ಜೊತೆ ಜೊತೆಗೆ ರಾಜ್ ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾ ಕೆರಿಯರ್ ಪರಿಚಯವಾಗುತ್ತದೆ. ಅಪರೂಪದ ಫೋಟೋಗಳನ್ನ ಕ್ಲಿಕ್ಕಿಸಿದ ಸಂದರ್ಭಗಳನ್ನು ಲಕ್ಷ್ಮೀನಾರಾಯಣ್ ಹಂಚಿಕೊಂಡಿದ್ದಾರೆ. ಶಶಿ ನಿರೂಪಿಸಿದ್ದಾರೆ. ರಾಜ್ ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗದ ಪ್ರೇಕ್ಷಕ ಸಮುದಾಯಕ್ಕೆ ಈ ಫೋಟೋ-ಕೃತಿ ಇಷ್ಟವಾಗುತ್ತದೆ.

ಜಯ: ಇದು ನಟಿ ಬಿ.ಜಯ ಅವರ ಬದುಕು-ಅಭಿನಯ ವೃತ್ತಿ ಕುರಿತ ಪುಸ್ತಕ. ಜಯಾ ತಮ್ಮ ವೃತ್ತಿ ಜೀವನದ ಅಮೂಲ್ಯ actress-jayaಕ್ಷಣಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಓದುಗರನ್ನು ಒಂದು ಕಾಲು ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ದು ಅಂದಿನ ಚಿತ್ರರಂಗವನ್ನು ಈ ಪುಸ್ತಕ ನಿರೂಪಿಸುತ್ತದೆ. ಮುಖ್ಯವಾಗಿ ಜಯರಂತಹ ಅಪರೂಪದ ಕಲಾವಿದರ ಪರಿಚಯವಾಗುತ್ತದೆ. ಈ ಪುಸ್ತಕದ ವಿಶೇಷ ಆಕರ್ಷಣೆ ಮತ್ತೊಬ್ಬ ಹಿರಿಯ ನಟಿ ಲೀಲಾವತಿಯವರು ಬರೆದಿರುವ ಬೆನ್ನುಡಿ.

ಇನ್ನು ಶಶಿಯ ಬಗ್ಗೆ ನಾಕು ಮಾತು:
ಅವರ ಹೆಸರೇ ಹೇಳುವಂತೆ ಶಶಿ, ಚಿತ್ರದುರ್ಗದ ಹುಡುಗ. ಸಿನಿಮಾ ಬಗ್ಗೆ ಆಸಕ್ತಿ. ಅದರಲ್ಲೂ ಕನ್ನಡ ಸಿನಿಮಾ ಬಗ್ಗೆ ವಿಶೇಷ ಪ್ರೀತಿ. ಚಿಕ್ಕಂದಿನಿಂದಲೂ ಬಹಳ ಸಿನಿಮಾ ನೋಡುತ್ತಿದ್ದರು. ತಾನು ನೋಡಿ ಬಂದ ಮೇಲೆ, ಇತರರಿಗೂ ತೋರಿಸುವ ಅಭ್ಯಾಸ. ತೀರಾ ಸಾಮಾನ್ಯವಾಗಿರುವ ಚಿತ್ರವನ್ನು ಅತ್ಯದ್ಭುತ ಎಂದು ಸ್ನೇಹಿತರಿಗೆ ಬಣ್ಣಿಸಿ, ಅವರನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿ ಟೀಕೆಗಳನ್ನು ಎದುರಿಸಿದ ಎಷ್ಟೋ ಉದಾಹರಣೆಗಳಿವೆ.

ಅಷ್ಟೇ ಅಲ್ಲ… ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆಯಲ್ಲಿ ಕುಳಿತು ಫೋಟೋಗ್ರಫಿಯಲ್ಲಿ ನಾನಾ ಸಾಹಸ ಮಾಡುತ್ತಿದ್ದಾಗ, shashidhar-kamal-hassanಅವರಿಗೊಂದು ಪತ್ರ ಬರೆದು ಉತ್ತರ ಪಡೆದಿದ್ದ. ತೇಜಸ್ವಿಯವರು ಫೋಟೋಗ್ರಫಿ ಕಲಿಯೋಕೆ ಬೇಕಾದರೆ ಮೂಡಿಗೆರೆಗೆ ಬಾ ಎಂದು ಕರೆದಿದ್ದರು. ತೇಜಸ್ವಿಯವರಿಂದ ಅಂತಹದೊಂದು ಆಹ್ವಾನ ಪಡೆದ ಈ ರಾಜ್ಯದ ಕೆಲವೇ ಕೆಲವರಲ್ಲಿ ಶಶಿ ಕೂಡ ಒಬ್ಬ. ಇಂತಹ ವಿಶಿಷ್ಟ ಆಸಕ್ತಿಗಳು ಇರುವ ಕಾರಣ ಭವಾನಿ ಲಕ್ಷ್ಮೀನಾರಾಯಣರಂತಹ, ಜಯಾ ಅಂತಹವರ ಬದುಕು-ಕಲೆಯನ್ನು ಅಕ್ಷರಗಳಲ್ಲಿ ದಾಖಲಿಸಲು ಸಾಧ್ಯವಾಯಿತು.


ಕ್ಯಾಮರಾ ಕಣ್ಣಲ್ಲಿ ರಾಜ್
– ಭವಾನಿ ಲಕ್ಷ್ಮೀನಾರಾಯಣ
– ನಿರೂಪಣೆ: ಶಶಿಧರ ಚಿತ್ರದುರ್ಗ.
ಪ್ರಕಾಶಕರು: ಪಲ್ಲವ ಪ್ರಕಾಶನ
ಪುಟಗಳು: 128, ಬೆಲೆ: ರೂ. 160
ಪ್ರತಿಗಳಿಗಾಗಿ ಸಂಪರ್ಕಿಸಿ: 94803-53507

ಜಯ
ಕಲಾವಿದೆ ಬಿ.ಜಯ ಅವರ ರಂಗಭೂಮಿ, ಸಿನಿಮಾ, ಕಿರುತೆರೆ, ಸಾಧನೆ
ಲೇಖಕ:ಶಶಿಧರ ಚಿತ್ರದುರ್ಗ
ಪ್ರಕಾಶನ: ಅವಿರತ ಪ್ರಕಾಶನ
ಪುಟಗಳು 92; ಬೆಲೆ: ರೂ.100
ಪ್ರತಿಗಳಿಗಾಗಿ: 94499-35103