Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಬಲಪಂಥೀಯ ಕೋಮುವಾದಿ ನೆಲೆ ಹಾಗೂ ಎಂ. ಗೋಪಾಲಕೃಷ್ಣ ಅಡಿಗರ “ಮತ್ತೆ ಮೊಳಗಲಿ ಪಾಂಚಜನ್ಯ” : ಭಾಗ – 1

– ಡಾ. ಎಂ.ಡಿ. ಒಕ್ಕುಂದ

ಬಲಪಂಥೀಯ ಕೋಮುವಾದಿ ನೆಲೆ
ಕನ್ನಡದ ಬಹುಪಾಲು ಲೇಖಕರು ಕೋಮುವಾದಿ ಚಿಂತನೆಗಳನ್ನು ತಾತ್ವಿಕವಾಗಿ ವಿರೋಧಿಸಿದ್ದಾರೆ. ಇಲ್ಲವೇ ಅದನ್ನು ನಿರ್ಲಕ್ಷಿಸಿದ್ದಾರೆ. ಆ ಕುರಿತು ಮೌನವಹಿಸಿದವರಿದ್ದಾರೆ. ಮುಕ್ತವಾಗಿ ಅದನ್ನು ಬೆಂಬಲಿಸದೇ ಕೋಮುವಾದಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾರದ ಹಾಡುಗಳನ್ನು ಗುಪ್ತವಾಗಿ ಬರೆದುಕೊಟ್ಟವರಿದ್ದಾರೆ. ಬೆರಳೆಣಿಕೆಯ ಸಂಶೋಧಕರು ಕಾದಂಬರಿಕಾರರು ಬಲಪಂಥೀಯ ಕೋಮುವಾದದ ಪ್ರತಿಪಾದನೆಗೆ ತಮ್ಮ ಸಾಹಿತ್ಯಕ ಮಾಧ್ಯಮವನ್ನು ಸಮರ್ಥವಾಗಿ ಬಳಸುತ್ತಿದ್ದಾರೆ. ಎಂ. ಗೋಪಾಲಕೃಷ್ಣ ಅಡಿಗರಂಥ ಏಕೈಕ ಕವಿ ಕೋಮುವಾದಿ ಸಿದ್ಧಾಂತವನ್ನು ಮುಕ್ತವಾಗಿ ಬೆಂಬಲಿಸಿ ಬರೆದಂತಿದೆ. 1925ರಿಂದ ಆರ್.ಎಸ್.ಎಸ್. ಸ್ಥಾಪನೆಯಿಂದ ಹಿಡಿದು ಇಂದಿನ ತನಕ ಭಾರತದ ಬಲಪಂಥೀಯ ಕೋಮುವಾದಿ ಸಂಘಟನೆಗಳು ಕೆಲವು ವಿಚಾರಧಾರೆಗಳನ್ನು ವ್ಯವಸ್ಥಿತವಾಗಿ ಸೃಷ್ಟಿಮಾಡುತ್ತ ಬಂದಿವೆ. ಭಾರತದಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರಂಥ ಭಿನ್ನ ಧರ್ಮೀಯರನ್ನು ಕಲ್ಪಿತ ಶತ್ರುಗಳೆಂದು ಭಾವಿಸಿ ಅವರನ್ನು ದೇಶ ಬಿಟ್ಟು ಓಡಿಸಿ ಹಿಂದೂಗಳು ಮಾತ್ರ ಇರುವ ಸಾಂಸ್ಕೃತಿಕ ರಾಷ್ಟ್ರೀಯತೆಯ ಭಾರತವನ್ನು ನಿರ್ಮಿಸಲು ಬಯಸುತ್ತವೆ, ಹಿಂಸೆಯನ್ನು ಪ್ರಚೋದಿಸುತ್ತವೆ. ಹೊರನೋಟಕ್ಕೆ ಮುಸ್ಲಿಂ ವಿರೋಧಿಗಳಂತೆ ಕಂಡರೂ ಅದು ಕೇವಲ ಒಂದು ತಂತ್ರವಾಗಿ ಆಳದಲ್ಲಿ ಭಾರತದ ಕೆಳವರ್ಗಗಳು, ದಲಿತರು ಹಾಗೂ ಮಹಿಳೆಯರ ಸಬಲೀಕರಣ ಮತ್ತು ಸಮಾನತೆಯ ವಿರೋಧಿಗಳೂ ಆಗಿವೆ. ಪುರೋಹಿತಶಾಹಿ ವರ್ಗದ ಪ್ರಭುತ್ವವನ್ನು, ಊಳಿಗಮಾನ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಅದರ ಚೌಕಟ್ಟಿನಲ್ಲಿಯೇ ಭಾರತದ ಕೆಳವರ್ಗದ ಸಮುದಾಯಗಳನ್ನು ನಿಯಂತ್ರಿಸುವದು ಈ ಸಿದ್ಧಾಂತದ ಮುಖ್ಯ ತಿರುಳು.

ಮತೀಯ ರಾಷ್ಟ್ರೀಯವಾದಿ ನೆಲೆಗೂ ಕೋಮುವಾದಿ ನೆಲೆಗೂ ವ್ಯತ್ಯಾಸವಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸಂದರ್ಭದಲ್ಲಿ ರಾಷ್ಟ್ರೀಯತೆಯ ಭರದಲ್ಲಿ ಅಂದಿನ ಚಾರಿತ್ರಿಕ ಒತ್ತಡದಲ್ಲಿ ಕೆಲವು ತಪ್ಪು ಗ್ರಹಿಕೆಗಳ ಮೂಲಕ ಮತೀಯ ರಾಷ್ಟ್ರೀಯವಾದಿ ನೆಲೆ ಸಿದ್ಧವಾಗಿತ್ತು. ಬ್ರಿಟಿಷ್ ಚರಿತ್ರೆಯ ಓದು, ಪಾಶ್ಚಾತ್ಯವಾದಿ ವಿದ್ವಾಂಸರ ಮಧ್ಯಯುಗೀನ ಚರಿತ್ರೆಯ ಸಂಕಥನ, ಗಾಂಧಿ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ಸಿನ ಹೋರಾಟದಲ್ಲಿಯೇ ಸುಳಿದ ಕೆಲವು ಮತೀಯ ಚಿಂತನಾಕ್ರಮಗಳ ಪರಿಣಾಮದಿಂದ ಮತೀಯ ರಾಷ್ಟ್ರೀಯವಾದಿ ನೆಲೆ ರೂಪುಗೊಂಡಿತ್ತು. ಕನ್ನಡದಲ್ಲಿ ಸಮಾನತೆ ಸಾಮರಸ್ಯಗಳನ್ನು ಪ್ರತಿಪಾದನೆ ಮಾಡಿದ ಮಹತ್ವದ ಕವಿಗಳ ಕಾವ್ಯದ ಒಂದು ಸಣ್ಣತೊರೆಯಾಗಿ ರಾಷ್ಟ್ರೀಯತೆ ಕಂಡುಬರುತ್ತದೆ. ಆದರೆ ಕೋಮುವಾದಿ ನೆಲೆ ಒಂದು ವ್ಯವಸ್ಥಿತ ಸಿದ್ಧಾಂತ. ಹಿಂದೂ ಕೋಮುವಾದಿ ಸಂಘಟನೆಗಳು ರೂಪಿಸಿದ ತಾತ್ವಿಕತೆಯನ್ನು ಪ್ರಣಾಳಿಕೆಯೋಪಾದಿಯಲ್ಲಿ ಅದು ಮಂಡಿಸುತ್ತದೆ. ಮತೀಯ ರಾಷ್ಟ್ರೀಯತೆ ನೆಲೆಯ ಕವಿತೆ ಬರೆದ ಮೇಲೂ ಕುವೆಂಪು ಶ್ರೇಷ್ಠ ಕಾವ್ಯರಚಿಸಲು ಸಾಧ್ಯವಾಯಿತು. ಆದರೆ ಕೋಮುವಾದಿ ನೆಲೆಗೆ ತಲುಪಿದ ಅಡಿಗರಿಗೆ ಅದು ಸಾಧ್ಯವಾಗಲಿಲ್ಲ.

ಎಂ.ಗೋಪಾಲಕೃಷ್ಣ ಅಡಿಗರ “ಮತ್ತೆ ಮೊಳಗಲಿ ಪಾಂಚಜನ್ಯ” ಕನ್ನಡದಲ್ಲಿ ಬಲಪಂಥೀಯ ಕೋಮುವಾದವನ್ನು ಅದರಲ್ಲಿ ಉಗ್ರ ತಾತ್ವಿಕ ಚೌಕಟ್ಟುಗಳು ಹಾಗೂ ಹಿಂಸಾತ್ಮಕ ಕಾರ್‍ಯಾಚರಣೆಯ ವಿಧಾನಗಳೊಂದಿಗೆ ಪ್ರತಿಪಾದಿಸುವ ಕವಿತೆಯಾಗಿದೆ. ಸಾವರ್ಕರ್ ಗೋಳ್ವಾಳ್ಕರ್‌ರಿಂದ ಹಿಡಿದು ಲಾಲ್‌ಕೃಷ್ಣ ಅದ್ವಾನಿ, ಅಟಲ್ ಬಿಹಾರಿ ವಾಜಪೇಯಿಗಳವರೆಗೆ ಬಲಪಂಥೀಯ ಕೋಮುವಾದಿ ಸಂಘಟನೆಗಳ ವಕ್ತಾರರು ರೂಪಿಸಿದ, ಚಾರಿತ್ರಿಕವಾಗಿ ರೂಪಾಂತರಿಸಿದ ವೈಚಾರಿಕ ವಿನ್ಯಾಸಗಳನ್ನೂ ರಾಜಕೀಯ ತಾಂತ್ರಿಕತೆಗಳನ್ನೂ ಕಾವ್ಯದ ಚೌಕಟ್ಟಿಗೆ ತಂದು ಪ್ರಣಾಳಿಕೆಯೋಪಾದಿಯಲ್ಲಿ ರಚಿತವಾಗಿದೆ. ಕನ್ನಡ ಕಾವ್ಯಲೋಕಕ್ಕೆ ಅಸ್ಪೃಶ್ಯವಾಗಿ ಉಳಿದಿದ್ದ ತಿರಸ್ಕಾರಕ್ಕೆ ಬಾಧ್ಯಸ್ತವಾಗಿದ್ದ ಮುಕ್ತವಾಗಿ ಅಭಿವ್ಯಕ್ತಿಸಲು (ಆಳದಲ್ಲಿ ಸಹಮತವಿದ್ದವರೂ) ಮುಜುಗರ ಹಾಗೂ ಅಪಮಾನದ ಸಂಗತಿಯಾಗಿದ್ದ ಹಿಂಸಾತ್ಮಕ ಕೋಮುವಾದಿ ಚಿಂತನಾಕ್ರಮವನ್ನು ಅಡಿಗರು ಕಾವ್ಯದಂಥ ಜೀವನ್ಮುಖಿ ಪ್ರಕಾರದಲ್ಲಿ ಅಭಿವ್ಯಕ್ತಿಸಿ ಸಾಹಿತ್ಯಕ ನ್ಯಾಯಬದ್ಧತೆಯನ್ನು ಒದಗಿಸಿದರು. ಇದು ಅಡಿಗರಿಗೆ ಮಾತ್ರವಲ್ಲ ಕನ್ನಡ ಕಾವ್ಯಕ್ಕೆ ಒಂದು ಕಲಂಕದ ಸಂಗತಿಯಾಗಿದೆ. ಜಾಗತೀಕರಣದ ನಂತರ ಕೋಮುವಾದಿ ರಾಜಕಾರಣ ತೀವ್ರ ಸ್ವರೂಪವನ್ನು ತಾಳಿದ ಮೇಲೆ ಕನ್ನಡ ಸಾಂಸ್ಕೃತಿಕ ಲೋಕದ ಕೆಲವು ಪ್ರಮುಖ ಹೆಸರುಗಳು ಕೋಮುವಾದಿ ರಾಜಕಾರಣದೊಂದಿಗೆ ಮುಕ್ತವಾಗಿ ಗುರುತಿಸಿಕೊಳ್ಳುವ ಧೈರ್ಯವನ್ನು ತೋರಿಸಿದ್ದರ ಹಿನ್ನೆಲೆಯಲ್ಲಿ ಅಡಿಗರಂಥ ಮಹತ್ವದ ಕವಿಯ ರಾಜಕೀಯ ಪ್ರತಿಗಾಮಿ ನಿಲುವು ಪ್ರೇರಣೆ ನೀಡಿರುವ ಸಾಧ್ಯತೆ ಇದೆ. ಕನ್ನಡ ಕಾವ್ಯಕ್ಕೆ ವಾಸ್ತವದ ರಕ್ತದಾನ ಮಾಡುವ ಹಾಗೂ ಮಣ್ಣಿನ ವಾಸನೆಯನ್ನು ತುಂಬುವ ಘೋಷಣೆಯನ್ನು ಮಾಡಿದ ಕವಿ ಬಲಪಂಥೀಯ ಕೋಮುವಾದದ ಹಿಂಸಾತ್ಮಕ ರಾಜಕಾರಣದ ಮಲಿನ ರಕ್ತವನ್ನು ದಾನಮಾಡಿದರು. ಮತಾಂಧತೆಯ ದುರ್ವಾಸನೆಯನ್ನು ತುಂಬಿದರು. ಅಡಿಗರ ಈ ಚಲನೆ ಕನ್ನಡದ ಸಂವೇದನಾಶೀಲ ಮನಸ್ಸುಗಳನ್ನು ಬೆಚ್ಚಿಬೀಳಿಸಿದೆ. ಸೌಹಾರ್ದತೆಯ ಆಶಯದ ಬೇರುಗಳನ್ನೇ ಅಲುಗಾಡಿಸಿದೆ. ಜಿ.ರಾಜಶೇಖರ ಅವರು “ಸುವರ್ಣಪುತ್ಥಳಿ”ಗೆ ಮುನ್ನುಡಿ ಬರೆಯುತ್ತ “ಇಂಥ ಕವಿತೆಗಳನ್ನು ಅಡಿಗರು ಬರೆದರೇ?” ಎಂದು ಸಂಕಟದಿಂದ ಉದ್ಗರಿಸಿದ್ದು ಅಡಿಗರ ಪ್ರತಿಗಾಮಿ ರಾಜಕೀಯ ತಿರುವಿಗೆ ನೀಡಿದ ನೈತಿಕ ಪ್ರತಿಕ್ರಿಯೆಯಾಗಿದೆ.

ಮುಸ್ಲಿಮರ ರಾಕ್ಷಸೀಕರಣ
ಅಡಿಗರ ಶ್ರೇಷ್ಠಕವಿತೆಗಳು ಸದಾ ದ್ವಂದ್ವಕ್ಕೆ ಮುಖಾಮುಖಿಯಾಗುತ್ತವೆ, ವೈರುಧ್ಯಗಳನ್ನು ಗ್ರಹಿಸುತ್ತವೆ. ಮನುಷ್ಯನಲ್ಲಿಯೇ ಇರುವ ಮಾನವ-ದಾನವ ಪ್ರವೃತ್ತಿಗಳನ್ನು ಎದುರುಬದುರಾಗಿಸುತ್ತವೆ. ಆದರೆ ಅಡಿಗರು “ಮತ್ತೆ ಮೊಳಗಲಿ ಪಾಂಚಜನ್ಯ” ಮತ್ತು ಈ ಮಾದರಿಯ ಕವಿತೆಯಲ್ಲಿ ಆ ಸಂವೇದನಾಕ್ರಮವನ್ನು ಬಿಟ್ಟು ಕೊಡುತ್ತಾರೆ. ಹಿಂದೂ ಮತ್ತು ಮುಸ್ಲಿಮರನ್ನು, ಹಿಂದೂ-ಮುಸ್ಲಿಂ ಧರ್ಮ, ಸಂಸ್ಕೃತಿ, ಸಮುದಾಯ ಹಾಗೂ ಅನನ್ಯತೆಗಳನ್ನು, ದೇವರು-ದಾನವ, ಪಾಂಡವ-ಕೌರವ, ಮನುಷ್ಯ-ರಾಕ್ಷಸ, ಆಕ್ರಮಣಕಾರಿ-ಸಹಿಷ್ಣು, ಸದ್ಗುಣ-ದುರ್ಗುಣ, ಹಿಂಸ್ರಕ-ಅಹಿಂಸ್ರಕ ಮುಂತಾದ ಕಪ್ಪು ಬಿಳುಪು ಮಾದರಿಯಲ್ಲಿ ವರ್ಗೀಕರಿಸಲಾಗುತ್ತದೆ. ಹಿಂದೂಗಳಿಗೆ ಅವರ ಸಾಂಸ್ಕೃತಿಕ ಅನನ್ಯತೆಗಳಿಗೆ ದೈವತ್ವದ ಶ್ರೇಷ್ಠತೆಯ, ನೈತಿಕತೆಯ ಹಾಗೂ ಶೋಷಿತ ನೆಲೆಯನ್ನು ಒದಗಿಸಿದರೆ ಮುಸ್ಲಿಮರನ್ನು ರಾಕ್ಷಸೀಕರಿಸಲಾಗುತ್ತದೆ. ಮುಸ್ಲಿಂ ಸಮುದಾಯವನ್ನು “ದುರ್ಮತದ ಮತಾಂಧತೆಯ ಮರುಳು ದಿನ್ನೆ, ಚಾಕು, ಚೈನು, ಕೈಬಾಂಬುಗಳ ನಡುಗಡ್ಡೆ”, “ಜಿಗಣೆ, ಚೇಳು, ಘಟಸರ್ಪ, ಪಿಶಾಚಿ, ನಿಶಾಚರ, ರಾಕ್ಷಸಕುಲ” ಮುಂತಾಗಿ ಚಿತ್ರಿಸಲಾಗಿದೆ. ಹಿಂದೂಗಳು ಪರಮ ಸಹಿಷ್ಣುಗಳು, ಭಾತೃತ್ವ ಬಂಧುತ್ವದ ಹರಿಕಾರರೂ, ಜಾತಿಕಾರಣಕ್ಕೆ ಹೋಳಾಗಿ ಹಿಂಸೆಗೆ ಗುರಿಯಾದ ಪಾಪದ ಪ್ರಾಣಿಗಳು ಎಂಬಂತೆ ಚಿತ್ರಿಸಲಾಗಿದೆ. ಈ ಬಗೆಯ ಚಿತ್ರೀಕರಣದ ಉದ್ದೇಶವೇ ಎರಡು ಸಮುದಾಯಗಳಲ್ಲಿ ಒಂದನ್ನು ದ್ವೇಷಿಸಿಕೊಳ್ಳಲು ಮತ್ತು ಸರ್ವನಾಶವಾಗಲು ಅರ್ಹರನ್ನಾಗಿಸುವದು ಹಾಗೂ ಇನ್ನೊಂದಕ್ಕೆ ದ್ವೇಷಿಸಲು, ಹಿಂಸಿಸಲು, ಸರ್ವನಾಶಮಾಡಲು ನೈತಿಕ ಹಕ್ಕನ್ನು ನೀಡುವದು. ಸಾವಿರಾರು ವರುಷಗಳಿಂದ ಎರಡು ಧರ್ಮಗಳ ಜನಸಮುದಾಯ ಸಣ್ಣ ಪುಟ್ಟ ಅಸಮಾಧಾನಗಳ ಮಧ್ಯದಲ್ಲಿಯೂ ರೂಪಿಸಿಕೊಂಡು ಬಂದ ಸಾಮರಸ್ಯದ ಬದುಕನ್ನು ಹಾಗೂ ಮೌಲ್ಯಗಳನ್ನು ಸರ್ವನಾಶಮಾಡುವದರ ಮೂಲಕವೇ ರಾಜಕೀಯ ಅಧಿಕಾರ ಪಡೆಯುವ ಹಿಂದುತ್ವದ ಪ್ರಮುಖ ಅಜೆಂಡಾಕ್ಕೆ ಇಲ್ಲಿ ಮಣೆ ಹಾಕಲಾಗಿದೆ.

ಧಾರ್ಮಿಕ ಹಿಂಸೆಗೆ ಕರೆ
ಈ ಕವಿತೆಯಲ್ಲಿ ಅಮಾನುಷವೂ ಬರ್ಬರವೂ ಆದ ಹಿಂಸೆಗೆ ಪ್ರೇರಣೆ ನೀಡಲಾಗಿದೆ. ರಾಕ್ಷಸರ ಸಂಹಾರಕ್ಕೆ ದೇವಕುಲವನ್ನು ಸಿದ್ಧಗೊಳಿಸಲಾಗಿದೆ. ಮುಸ್ಲಿಮರನ್ನು ಕೊಲ್ಲಲು ಮತ್ತು ಮೂಲೋತ್ಪಾಟನೆ ಮಾಡಲು ಅಥವಾ ದೇಶ ಬಿಟ್ಟು ತೊಲಗಿಸಲು ಎಲ್ಲ ಬಗೆಯ ಹಿಂಸಾಕೃತ್ಯಗಳಿಗೂ ಹಿಂದೂಗಳನ್ನು ಪ್ರೇರೇಪಿಸಲಾಗಿದೆ. ಕವಿತೆಯಲ್ಲಿ ಹಿಂಸೆ, ಪ್ರತಿ ಹಿಂಸೆಯ ಪರಿಕಲ್ಪನೆಗಳನ್ನು ತಂತ್ರವಾಗಿ ಬಳಸಲಾಗಿದೆ. ಮಧ್ಯಯುಗೀನ ಕಾಲದಿಂದಲೂ ಮುಸ್ಲಿಮರು ಪರಮಸಹಿಷ್ಣುಗಳಾದ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತ ಬಂದಿದ್ದಾರೆ. ಇಂದಿಗೂ ಆ ಹಿಂಸೆಯನ್ನು ಮುಂದುವರಿಸಿದ್ದಾರೆ. ಹೀಗಾಗಿ “ಅಹಿಂಸೆ” ಇಂಥ ಸಂದರ್ಭದಲ್ಲಿ ಹೇಡಿತನವಾಗುತ್ತದೆ. “ಒಂದು ಹೆಣಕ್ಕೆ ನೂರು ಹೆಣ ಕೆಡವುವುದೇ” ಆತ್ಯಂತಿಕ ಮಾರ್ಗವೆಂದು ಕವಿತೆ ಪ್ರತಿಪಾದಿಸುತ್ತದೆ.

ಹಿಂದೂ ಫ್ಯಾಸಿಸ್ಟ್ ಸಾಮ್ರಾಜ್ಯದ ಕನಸು
ಮುಸ್ಲಿಮರನ್ನು ಕೊಂದು ಇಲ್ಲವೇ ಓಡಿಸಿದ ಮೇಲೆ ಅವರ ಸಾಂಸ್ಕೃತಿಕ ಧಾರ್ಮಿಕ ಅನನ್ಯತೆಗಳನ್ನು ಅವರ ವಾಸಸ್ಥಳಗಳನ್ನು ಕೋಟೆ ಶಿಲ್ಪಗಳನ್ನು ನುಚ್ಚುನೂರು ಮಾಡಿ ಅವುಗಳ ಸ್ಥಾನದಲ್ಲಿ ಹಿಂದೂಗಳು ಹಿಂದುತ್ವದ ಸಂಕೇತಗಳು ಅವತರಿಸಬೇಕೆಂಬುದು ಕವಿತೆಯ ಆಶಯ. ಭಾರತದಲ್ಲಿ ಮುಸ್ಲಿಮರು ಹೊಂದಿರುವ ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ಥಾನಮಾನಗಳನ್ನು ಆಕ್ರಮಿಸಿಕೊಳ್ಳುವ ಭಯಂಕರ ಉತ್ಸಾಹ ಕವಿತೆಯಲ್ಲಿ ಮಡುಗಟ್ಟಿದೆ. ಕೊನೆಗೆ ಅದರ ಸ್ಥಾನದಲ್ಲಿ ವೈಭವ ಪೂರ್ಣವಾದ ಫ್ಯಾಸಿಸ್ಟ್ ಆದ ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಕನಸನ್ನು ಬಿತ್ತುತ್ತದೆ. ಮುಸ್ಲಿಮರು, ಅವರ ಧರ್ಮ, ಸಂಸ್ಕೃತಿ, ಆಸ್ತಿ-ಪಾಸ್ತಿಗಳ ಗೋರಿಯ ಮೇಲೆ ಭವ್ಯ ಹಿಂದೂ ಸಾಮ್ರಾಜ್ಯದ ಪ್ರತಿಷ್ಠಾಪನೆಯ ಕನಸಿನೊಂದಿಗೆ ಕವಿತೆ ಮುಗಿಯುತ್ತದೆ. ಹಿಂದೂಗಳನ್ನು “ಮಹಾನಾರಾಯಣೀ ಸೇನೆ” ಎಂದು ಕರೆದು ಯುದ್ಧಕ್ಕೆ ಆಹ್ವಾನ ನೀಡಲಾಗಿದೆ. ಯಾವುದೇ ಸಂವೇದನಾಶೀಲ ಮಾನವೀಯ ಮನಸ್ಸು ಭಯಂಕರ ತಲ್ಲಣವನ್ನು ಅನುಭವಿಸುವಂಥ ಹಿಂಸಾರತಿಯ ಕಾವ್ಯವಿದು. ಧಾರ್ಮಿಕ ಹಿಂಸೆಯನ್ನು ಹಿಂಸಾರತಿಯಾಗಿ ಪ್ರತಿವಾದಿಸುವ ಕವಿತೆ ಇದು.

ಚಾರಿತ್ರಿಕ ಸಂದರ್ಭ
ಅಡಿಗರ ಈ ಕವಿತೆ 1987ರ “ಚಿಂತಾಮಣಿಯಲ್ಲಿ ಕಂಡ ಮುಖ” ಎಂಬ ಸಂಕಲನದಲ್ಲಿ ಪ್ರಕಟವಾಗಿದೆ. 80ರ ದಶಕ ಭಾರತದಲ್ಲಿ ಕೋಮುವಾದಿ ಸಂಘಟನೆಗಳು ತಮ್ಮ ಬಲವನ್ನು ಕ್ರೋಢೀಕರಿಸಿಕೊಳ್ಳುತ್ತಿದ್ದ ಕಾಲ; 90ರ ದಶಕದ ಮುಕ್ತಮಾರುಕಟ್ಟೆಯ ಆರ್ಥಿಕತೆ ಹಾಗೂ ಕೋಮುವಾದೀ ರಾಜಕಾರಣದ ಮತೀಯತೆಗಳು ರೂಪು ಪಡೆಯುತ್ತಿದ್ದ ಕಾಲ. ಜಾಗತೀಕರಣದ ಒಪ್ಪಂದ ಹಾಗೂ ಅಧ್ವಾನಿಯವರ ರಥಯಾತ್ರೆ ಮತ್ತು ಬಾಬ್ರಿ ಮಸೀದಿ ನಾಶದ ನೀಲನಕ್ಷೆಗಳು ಸಿದ್ಧವಾಗುತ್ತಿದ್ದ ಸನ್ನಿವೇಶ. 90ರ ದಶಕದ ಸಾಮ್ರಾಜ್ಯವಾದಿ ಹಾಗೂ ಕೋಮುವಾದಿ ಸ್ಫೋಟಗಳಿಗೆಲ್ಲ ಸ್ಫೋಟಕಗಳನ್ನು ಗರ್ಭೀಕರಿಸಿಕೊಳ್ಳುತ್ತಿದ್ದ ಕಾಲ. ಅಡಿಗರ ಈ ಕವಿತೆ ಕೂಡ ಒಂದು ಸ್ಫೋಟಕವೇ ಆಗಿದೆ. ಅಷ್ಟೊತ್ತಿಗಾಗಲೇ ಅಡಿಗರು ಸಂಪೂರ್ಣವಾಗಿ ಬಲಪಂಥೀಯ ಕೋಮುವಾದದ ಉಗ್ರ ಪ್ರತಿಪಾದಕರಾಗಿ ಮಾರ್ಪಟ್ಟಿರುವದನ್ನು ಈ ಕವಿತೆ ಶೇಕಡಾ ನೂರರಷ್ಟು ಸಾಬೀತುಪಡಿಸುತ್ತದೆ. ಭೈರಪ್ಪನವರು 2000ದ ದಶಕದಲ್ಲಿ “ಆವರಣ”ದಲ್ಲಿ ಪ್ರತಿಪಾದಿಸಿದ ಸಕಲ ಕೋಮುವಾದಿ ಸಿದ್ಧಾಂತದ ಆಯಾಮಗಳನ್ನು ಈ ಕವಿತೆ ಒಳಗೊಂಡಿದೆ. ಇದು ಅಡಿಗರ ಸಹಜ ಕಾವ್ಯವಲ್ಲ, “ಕೋಮುವಾದಿ ಸಿದ್ಧಾಂತ”ವನ್ನು ಅತ್ಯಂತ ಗಂಭೀರವಾಗಿ ಓದಿ ಅಧ್ಯಯನ ಮಾಡಿ ಅರಗಿಸಿಕೊಂಡು ಅದರ ಎಲ್ಲ ಆಯಾಮಗಳನ್ನು ಪರಿಪೂರ್ಣವಾಗಿ ಒಳಗೊಳ್ಳುವ ಹಂಬಲದ ಉದ್ದೇಶಪೂರ್ವಕ ರಚನೆಯಂತೆ ಕಾಣುತ್ತದೆ. ಆದರೆ ಅಡಿಗರು ಆ ಸಿದ್ಧಾಂತವನ್ನು ತಮ್ಮ ನರನಾಡಿಗಳಲ್ಲೂ ಆವಾಹಿಸಿಕೊಂಡಿದ್ದರೆಂಬುದಕ್ಕೆ ಕವಿತೆಯ ಆವೇಶವೇ ಸಾಕ್ಷಿಯಾಗಿದೆ.

ಕನ್ನಡ ಸಾಂಸ್ಕೃತಿಕ ಲೋಕದ ಪ್ರತಿಕ್ರಿಯೆ
ಭೈರಪ್ಪನವರ ಆವರಣಕ್ಕೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಒಂದು ದೊಡ್ಡ ಪ್ರತಿರೋಧವೇ ವ್ಯಕ್ತವಾಯಿತು. ಅದು ಸಮುದಾಯವನ್ನು ಕೋಮುವಾದೀಕರಣಗೊಳಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿರಬಹುದು. ಆದರೆ ಅದರಲ್ಲಿ ಪ್ರತಿಪಾದನೆಗೊಂಡಿರುವದು “ದ್ವೇಷ ಮತ್ತು ಹಿಂಸೆಯ ಬರ್ಬರ ಫ್ಯಾಸಿಸ್ಟ್ ರಾಜಕೀಯ ನಿಲುವು” ಎಂಬ ಪ್ರತಿ ಚಿಂತನೆಯೂ ಪ್ರಚಾರ ಪಡೆಯಿತು. ಆದರೆ ಇದಕ್ಕಿಂತ ಮೊದಲು ಧಾರ್ಮಿಕ ಹಿಂಸೆಯನ್ನು ಇಷ್ಟೊಂದು ವ್ಯವಸ್ಥಿತವಾಗಿ ಪ್ರತಿಪಾದಿಸಿದ ಅಡಿಗರ ಕವಿತೆಗೆ ಕನ್ನಡ ಸಾಂಸ್ಕೃತಿಕ ಲೋಕದ ಪ್ರತಿಕ್ರಿಯೆ ಯಾಕೆ “ಮೌನ”ದ ಧಾಟಿಯಲ್ಲಿದೆ? ಲಕ್ಷ್ಮೀನಾರಾಯಣ ಭಟ್ಟರು ಹಾಗೂ ಕಿ.ರಂ. ನಾಗರಾಜ ಅವರು ಮುನ್ನುಡಿಗಳಲ್ಲಿ ಯಾಕೆ ಈ ಸಂಗತಿಯನ್ನು ಕುರಿತು ಮೌನವಹಿಸುತ್ತಾರೆ? ಜಿ.ರಾಜಶೇಖರ ಕೂಡ “ಸುವರ್ಣಪುತ್ಥಳಿ”ಯ ಮುನ್ನುಡಿಯಲ್ಲಿ ಅಡಿಗರ ಈ ಪ್ರತಿಗಾಮಿ ರಾಜಕಾರಣವನ್ನು ಪ್ರಸ್ತಾಪಿಸಿಯೂ ಯಾಕೆ ರಕ್ಷಣಾತ್ಮಕವಾಗಿ ಮಾತನಾಡುತ್ತಾರೆ? ಆ ಕಾಲದ ದಲಿತ ಬಂಡಾಯ ಸಾಹಿತ್ಯ ವಿಮರ್ಶೆಗೆ ಇದು ಒಂದು ಮುಖ್ಯ ಪ್ರಶ್ನೆಯಾಗಿ ಕಾಡಲಿಲ್ಲವೇಕೆ? ಈ ಮೌನ ಕೂಡ ಪ್ರಶ್ನಾರ್ಹವಾಗುತ್ತದೆ. ಅಡಿಗರ ಕವಿವ್ಯಕ್ತಿತ್ವ ಕೊನೆಗಾಲದಲ್ಲಿ ತಲುಪಿದ ಈ ಅಪಾಯಕಾರಿ ಬದಲಾವಣೆಗೆ ಮರುಕವೂ ಅವರ ಬಗೆಗಿನ ಗೌರವವೂ ಕಾರಣವಾಗಿರಬಹುದು. “ಕೋಮುವಾದ” ಆ ಕಾಲದಲ್ಲಿ ಸಾಂಸ್ಕೃತಿಕ ಚರ್ಚೆಯ ಮುನ್ನೆಲೆಗೆ ಇನ್ನೂ ಬಂದಿರಲಿಕ್ಕಿಲ್ಲ. ಬಂಡಾಯ ದಲಿತ ಚಳುವಳಿಗಳು ನಿಷ್ಕ್ರಿಯತೆ ಆರಂಭವಾಗಿರಬಹುದು. ಕನ್ನಡದಲ್ಲಿ ಹೊಸದಾಗಿ ರೂಪತಾಳತೊಡಗಿದ “ಸಂಸ್ಕೃತಿ ವಿಮರ್ಶೆ”ಯ ಉದಾರವಾದಿ ನೆಲೆ ಕೂಡ ನಿರ್ಲಕ್ಷಿಸಿರಬಹುದು. “ಕಾವ್ಯ”ಕ್ಕೆ ಇರುವ ಸೀಮಿತ ವರ್ಗದ ಓದುಗರ ಕಾರಣದಿಂದಲೂ ಇದನ್ನೊಂದು ಮುಖ್ಯ ಸಮಸ್ಯೆ ಎಂದು ಪರಿಗಣಿಸಿರಲಿಕ್ಕಿಲ್ಲ. ಭೈರಪ್ಪನವರ “ಕಾದಂಬರಿ” ಕೋಮುವಾದಿ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ ಪ್ರಮಾಣಕ್ಕೆ ಹೋಲಿಸಿದರೆ ಅಡಿಗರ ಕವಿತೆಯ ಪ್ರಭಾವ ತೀರ ಕಡಿಮೆ ಪ್ರಮಾಣದ್ದು. ಮುಸಲ್ಮಾನ ಸಮುದಾಯದ ಅಶಿಕ್ಷಿತತೆ ಮತ್ತು ಶಿಕ್ಷಿತ ಸಮುದಾಯ ಹಾಗೂ ಬುದ್ಧಿಜೀವಿವರ್ಗದ “ಮೌನ” ಕೂಡ ಇದನ್ನೊಂದು ಮುಖ್ಯ ಸಾಂಸ್ಕೃತಿಕ ಸಮಸ್ಯೆಯನ್ನಾಗಿಸದಂತೆ ನೋಡಿಕೊಂಡಿದೆ. ಮೂಲಭೂತವಾದಿ ಮುಸಲ್ಮಾನರು ಈ ಕವಿತೆಯನ್ನು ಓದಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ಏನೋ. ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಅಂಧವಾಗಿ ವರ್ತಿಸುವ ಈ ಶಕ್ತಿಗಳು ತಮ್ಮ ಅಸ್ತಿತ್ವವನ್ನೇ ನಾಶ ಮಾಡಲು ಹವಣಿಸಿದ ಸಾಂಸ್ಕೃತಿಕ ರಾಜಕೀಯ ಶಕ್ತಿಗೆ ಪ್ರತಿಕ್ರಿಯಿಸುವಲ್ಲಿ ವಿಫಲರಾದದ್ದು, ಅವರ ಆದ್ಯತೆಯನ್ನು ತೋರಿಸುತ್ತದೆ. “ಧರ್ಮಕಾರಣ” “ಮಹಾಚೈತ್ರ”ದಂಥ ಕೃತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹೋರಾಡಿದ ಕರ್ನಾಟಕದಲ್ಲಿ “ಮುಟ್ಟುಗೋಲಿಗೆ” ಯೋಗ್ಯವಾದ ಕೃತಿಯೊಂದನ್ನು ಮೌನವಾಗಿ ಸಹಸಿಕೊಂಡಿರುವದಕ್ಕೆ ಹಿಂದೂ ಕೋಮುವಾದಕ್ಕೆ ಇರುವ ಉದಾರವಾದ ಬೆಂಬಲ ಹಾಗೂ ಅಲ್ಪಸಂಖ್ಯಾತರ ಸಂಕಟವನ್ನು ಮುಖ್ಯವೆಂದು ಪರಿಗಣಿಸಲಾಗದ ಸಾಮಾಜಿಕ ಸ್ಥಿತಿಗತಿಗಳು ಕಾರಣವಾದಂತೆ ತೋರುತ್ತದೆ. ಇಂದಿಗೂ ಈ ಕವಿತೆಯ ಆಶಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬಹುದಾಗಿದೆ.

ಆಧುನಿಕ ಕನ್ನಡ ಸಾಹಿತ್ಯದ ಮಾರ್ಗಕವಿಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ಅಡಿಗರಂಥ ಬಹುದೊಡ್ಡ ಲೇಖಕ ಯಾಕೆ ಇಂಥ ಕೊಲೆಗಡುಕ ಸಿದ್ಧಾಂತವನ್ನು ತಮ್ಮ ಕಾವ್ಯದಲ್ಲಿ ಪ್ರತಿಪಾದಿಸಿದರೆಂಬುದು ಮುಖ್ಯವಾದ ಪ್ರಶ್ನೆ. ಈ ಪ್ರಶ್ನೆಗೆ ಹಲವು ನೆಲೆಗಳಿಂದ ಕಾರಣಗಳನ್ನು ಶೋಧಿಸಬಹುದಾಗಿದೆ. ಮೊದಲನೆಯದಾಗಿ ಭೈರಪ್ಪನವರಂತೆ ಅಡಿಗರಿಗೂ “ಬ್ರಾಹ್ಮಣ್ಯ” ಆಳದಲ್ಲಿ ಒಪ್ಪಿತ ಮೌಲ್ಯವಾಗಿದ್ದು, ಆ ಅಂತಃಸತ್ವ ಸಮಯ ಬಂದಾಗ ಅಭಿವ್ಯಕ್ತಿಯನ್ನು ಪಡೆದಿರಬಹುದು. ಎರಡನೆಯದಾಗಿ, 1971ರಲ್ಲಿ ಅಡಿಗರು ಕಾಂಗ್ರೆಸ್ ವಿರೋಧಿ ರಾಜಕಾರಣದ ಭರದಲ್ಲಿ ಜನಸಂಘದಿಂದ ಲೋಕಸಭೆಗೆ ಸ್ಪರ್ಧಿಸಿದ ಮೇಲೆ ಆ ಸಿದ್ಧಾಂತದೊಂದಿಗಿನ ಒಡನಾಟ ಹೆಚ್ಚಾಗಿ ಅದನ್ನು ಒಪ್ಪಿಕೊಂಡಿರಬಹುದು. ಮೂರನೆಯದಾಗಿ ಲಂಕೇಶ್ ಗುರುತಿಸುವಂತೆ “ಪ್ರತಿ ತಿಂಗಳೂ ಅಡಿಗರಿಗೆ ಆರ್ಥಿಕ ಸಂಕಟದ ಗಳಿಗೆಯಲ್ಲಿ ಕೇಶವ ಕೃಪಾದಿಂದ ಸಂದಾಯವಾದ ಆರ್ಥಿಕ ಸಹಾಯ”1 ಕೂಡ ಕಾರಣವಾಗಿ ಅದಕ್ಕೆ ಕೃತಜ್ಞತಾ ರೂಪದಲ್ಲಿ ಈ ಕವಿತೆಯನ್ನು ಬರೆಸಿರಬಹುದು. ಅಥವಾ ಅಲ್ಲಿಂದ ಇಂಥ ಕವಿತೆಗಳನ್ನು ಬರೆಯುವ ಒತ್ತಡವೂ ಬಂದಿರಬಹುದು. ನಾಲ್ಕನೆಯದಾಗಿ ಶೂದ್ರ, ದಲಿತ ಅಲ್ಪಸಂಖ್ಯಾತ ಮತ್ತು ಮಹಿಳಾ ವರ್ಗಗಳ ಸಬಲೀಕರಣ ಬ್ರಾಹ್ಮಣ ವರ್ಗದಲ್ಲಿ ಹುಟ್ಟಿಸಿದ ಆತಂಕ ಕ್ಷೆಭೆಗಳು ಕಾರಣವಾಗಿರಬಹುದು. ಸ್ವಾತಂತ್ರೋತ್ತರ ಭಾರತದಲ್ಲಿ ಶೂದ್ರಶಕ್ತಿಗಳು ರಾಜಕೀಯವಾಗಿ ಪ್ರಬಲವಾದವು. ಪ್ರಾದೇಶಿಕ ಪಕ್ಷಗಳು ಸಮಾಜವಾದಿ ಹೋರಾಟಗಳು ಶೂದ್ರಶಕ್ತಿಯ ಪ್ರಾಬಲ್ಯವನ್ನು ಹೆಚ್ಚಿಸಿದವು. ಮೀಸಲಾತಿಯ ಮೂಲಕ ದಲಿತ ಮತ್ತು ಹಿಂದುಳಿದ ವರ್ಗಗಳು ಶೈಕ್ಷಣಿಕ ಹಕ್ಕನ್ನು ಉದ್ಯೋಗದ ಹಕ್ಕನ್ನು ಪಡೆದು ಸಬಲೀಕರಣಗೊಂಡವು. ಅಲ್ಪಸಂಖ್ಯಾತ ಮತ್ತು ಮಹಿಳಾ ಸಮುದಾಯ ಕೂಡ ಮುಮ್ಮುಖವಾಗಿ ಚಲಿಸತೊಡಗಿತು. ಇಲ್ಲಿಯವರೆಗೆ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದ್ದ ಉದ್ಯೋಗಾವಕಾಶ ರಾಜಕೀಯ ಸಾಂಸ್ಕೃತಿಕ ಅವಕಾಶಗಳಲ್ಲಿ ಅವರೆಲ್ಲ ಪಾಲು ಬೇಡತೊಡಗಿದರು. ಆಗ ಭಾರತದ ಬ್ರಾಹ್ಮಣವರ್ಗ ಆತಂಕಕ್ಕೊಳಗಾಯಿತು. ವೀಣಾಶಾಂತೇಶ್ವರ ಅವರ ಕಥೆಯೊಂದರಲ್ಲಿ ಆ ಕ್ಷೆಭೆ ವ್ಯಕ್ತವಾಗಿದೆ. ಆದರೆ ಅಡಿಗರು ಆ ಕ್ಷೆಭೆಯನ್ನು ಕಾವ್ಯದಲ್ಲಿ ವಿವರಿಸುವದಿಲ್ಲ. ಬದಲಾಗಿ ಹಿಂದುತ್ವದ ಚಿಂತನೆಗೆ ಬಲಿಯಾಗುತ್ತಾರೆ. “ಹಿಂದುತ್ವವು ಮೇಲ್ಜಾತಿ ಮೇಲ್ವರ್ಗಗಳಿಗೆ ಸೇರಿದ ಸುಶಿಕ್ಷಿತ ಹಿಂದೂಗಳ ಹಿತಕಾಯುವ ರಾಜಕೀಯವಾಗಿದೆ. ಆದ್ದರಿಂದ ನಮ್ಮ ಸಮಾಜದಲ್ಲಿರುವ ಜಾತಿ ಮತ್ತು ಲಿಂಗ ಅಸಮಾನತೆಯನ್ನು ಜತನವಾಗಿಡುವದು ಅದರ ರಾಜಕೀಯ ಮುಖ್ಯ ಉದ್ದೇಶ. ಆದರೆ ಅದನ್ನು ಬಹಿರಂಗದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವನ್ನು ಕೆರಳಿಸುವ ರಾಜಕೀಯ ರೂಪದಲ್ಲಿ ಪ್ರಕಟಿಸುತ್ತದೆ.”2 ಹಿಂದುತ್ವದ ಈ ತಂತ್ರ ಅಡಿಗರ ಕಾವ್ಯದಲ್ಲಿ ನುಸುಳಿದೆ.

ಅಡಿಗರ ಕಾವ್ಯದ ಚಾರಿತ್ರಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಾಗೂ ಅಡಿಗರ ಕವಿ ವ್ಯಕ್ತಿತ್ವದ ಪಲ್ಲಟಗಳ ನೆಲೆಗಳೊಂದಿಗೆ ಧಾರ್ಮಿಕ ಹಿಂಸೆ ಅವರ ಕಾವ್ಯದಲ್ಲಿ ಪ್ರವೇಶಪಡೆದ ಹಾಗೂ ಅಭಿವ್ಯಕ್ತಿಗೊಂಡ ಬಗೆಗಳನ್ನು ಚರ್ಚಿಸಬಹುದಾಗಿದೆ. 1946 ರಿಂದ 1954ರವರೆಗಿನ (“ಭಾವತರಂಗ”ದಿಂದ “ಚಂಡಮದ್ದಳೆ”ವರೆಗೆ) ಅಡಿಗರ ಕಾವ್ಯದಲ್ಲಿ ನಿರ್ಮತೀಯ ರಾಷ್ಟ್ರೀಯವಾದದ ಝರಿ ಇದೆ. ಮಾರ್ಕ್ಸವಾದದ ಪ್ರಗತಿಶೀಲ ಸಿದ್ಧಾಂತದ ಪ್ರತಿಪಾದನೆಯ ಆಶಯಗಳಿವೆ. ಮತೀಯ ಮಾಲಿನ್ಯವಿಲ್ಲದ ಜಾತಿಮತಪಂಥಗಳ ಸಾಮರಸ್ಯದ ತುಡಿತಗಳಿವೆ. ಯುದ್ಧಗಳನ್ನು ಧರ್ಮಾತೀತವಾಗಿ ನೋಡುವ ಸೆಕ್ಯೂಲರ್ ದೃಷ್ಟಿ ಇದೆ. “ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ” ಆದರ್ಶವಿದೆ. “ಸುಲಿಗೆಯೆಂಬ ಯಾಗ”ದಲ್ಲಿ ಧಾರ್ಮಿಕ ಹಿಂಸೆಯನ್ನು ಕಟುವಾಗಿ ವಿರೋಧಿಸುತ್ತಾರೆ. “ಇದು ಮೊದಲು” ಕವಿತೆಯಲ್ಲಿ ಹಸಿವು ದಾರಿದ್ರ್ಯಗಳ ಮುಂದೆ ಜಾತಿಮತ ಪಂಥಗಳನ್ನು ನಿರಾಕರಿಸಲಾಗಿದೆ. “ಎಂದು ಕೊನೆ” ಪದ್ಯದಲ್ಲಿ, ಒಬ್ಬರೊಬ್ಬರನು ಕೊಲ್ಲುವ ಹಬ್ಬಕ್ಕೆ ಕೊನೆ ಹಾಡಿ “ಒಬ್ಬರೊಬ್ಬರನು ನಂಬುವ ತುಂಬುವ ಹಬ್ಬದ” ಅಗತ್ಯವನ್ನು ಹೇಳಲಾಗಿದೆ. “ಸ್ವಾತಂತ್ರ್ಯ ಗೀತ”ದಲ್ಲಿ ಬ್ರಿಟೀಷರ ಗುಲಾಮರಾದ ಹಿಂದೂ ಮುಸ್ಲಿಂ ಮತಾಂಧ ಶಕ್ತಿಗಳನ್ನು “ಅವರು” ಎಂದು ವರ್ಗೀಕರಿಸಿ ಬರೆದಿದ್ದಾರೆ. ಗಾಂಧಿ ಕುರಿತಾದ ಕವಿತೆಗಳಲ್ಲಿ ಒಂದು “ಸಾಮರಸ್ಯ”ದ ಆಕೃತಿ ಇದೆ. “ಒಲವೇ ಸುಧೆ, ಹಗೆಯೇ ಹಾಲಾಹಲ” ಎನ್ನುವದು ಅವರ ಕಾವ್ಯನೀತಿ. ಚಂಡಮದ್ದಳೆಯ ಕವಿತೆಗಳಲ್ಲಿ ನಾಗರಿಕ ಪ್ರಪಂಚದ ಹಿಂಸೆ ಅನಾಥಪ್ರಜ್ಞೆಗಳು ವ್ಯಕ್ತವಾಗಿದ್ದು, ಜಾತಿ, ಸಮಾಜ ಧರ್ಮಗಳೆಲ್ಲ ಅಲ್ಲಿ ಸ್ಥಾನ ಪಡೆಯುವದೇ ಇಲ್ಲ. ಅಡಿಗರ ಕಾವ್ಯಜೀವನದ ಅಷ್ಟೇನೂ ಮಹತ್ತರವಲ್ಲದ ಕಾಲಘಟ್ಟದ ಈ ಕವಿತೆಗಳು ಒಬ್ಬ ಸೆಕ್ಯೂಲರ್ ಆದ ಕವಿಯನ್ನು ಕಾಣಬಹುದಾಗಿದೆ.

1959 ರಿಂದ 1980 ರವರೆಗಿನ ಕಾಲದಲ್ಲಿ ಅಡಿಗರು ಮಹತ್ವದ ಕಾವ್ಯ ಸೃಷ್ಟಿಸಿದರು. “ಭೂತ” “ರಾಮನವಮಿಯ ದಿವಸ” “ವರ್ಧಮಾನ” “ಆನಂದತೀರ್ಥರಿಗೆ” “ಅಜ್ಜನೆಟ್ಟಾಲ”…. ಮೊದಲಾದ ಕವಿತೆಗಳಲ್ಲಿ ಅವರು ಪರಂಪರೆಯೆಡೆಗೆ ಮುಖ ಮಾಡುತ್ತಾರೆ. “ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳ ಬಗೆಯಬೇಕು.” “ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು” ಎಂದು ಭೂತಮುಖಿಯಾಗುತ್ತಾರೆ. ಅಡಿಗರ ಭಾರತೀಯ ಪರಂಪರೆಯ ಕಲ್ಪನೆಯಲ್ಲಿಯೇ ಮತೀಯ ವಾಸನೆ ಇದೆ. ಅವರ ಪಾಲಿಗೆ ಭಾರತೀಯ ಪರಂಪರೆಯೆಂದರೆ ವೈದಿಕ ಪರಂಪರೆ ಮಾತ್ರ. ಪ್ರಾಚೀನತೆಯೆಂದರೆ ಸನಾತನತೆ ಮಾತ್ರ. ಅವರ ಬಹಳಷ್ಟು ಕವಿತೆಗಳಲ್ಲಿ ವೈದಿಕ ಪರಂಪರೆಯ ಸನಾತನ ಚೌಕಟ್ಟು ಕುಸಿದು ಹೋಗುತ್ತಿರುವದರ ಬಗ್ಗೆ ಗಾಢವಾದ ವಿಷಾದವಿದೆ. ಒಂದು ಬಗೆಯ ರೋದನವೂ ಇದೆ.
“ವರ್ಣಾಶ್ರಮದ ಸ್ಥಿರೆಯ ಮೇಲೆ ಕಟ್ಟಿದ ಮಠ
ದ್ವೀಪವಾಗಿದೆ ಮಣ್ಣು ಕುಸಿಯುತ್ತಿದೆ” (ಆನಂದತೀರ್ಥರಿಗೆ)
“ಮುತ್ತಜ್ಜ ಕಟ್ಟಿದ ಮನೆಯಲ್ಲಿ ದೀಪ ಹಚ್ಚುವರಿಲ್ಲ” (ವರ್ಧಮಾನ) ಇತ್ಯಾದಿ. ಗೆರೆಮಿರಿವ ಚಿನ್ನದದಿರನ್ನು ಹೆಕ್ಕಿ ತೆಗೆಯುವ ಅಡಿಗರ “ಭೂತ”ಮೂಲ ಚಿಂತನೆ ಕೊನೆಗೆ ಸನಾತನವಾದುದೆಲ್ಲವನ್ನೂ ಒಪ್ಪಿ ಸ್ವೀಕರಿಸುವ ನೆಲೆಗೆ ಬಂದು ತಲುಪುತ್ತದೆ. ಮುಕ್ತವಾಗಿ ಅವರು ಗದ್ಯ-ಪದ್ಯಗಳೆರಡರಲ್ಲೂ ಜಾತಿ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಕನ್ನಡ ನವ್ಯ ವಿಮರ್ಶೆ ಯಾವ ಕಾಲದಲ್ಲಿ ಅಡಿಗರನ್ನು ಶ್ರೇಷ್ಠ ಕವಿಯೆಂದು ಎತ್ತಿಕಟ್ಟಿತೋ, ಯಾವ ಕವಿತೆಗಳು ಕನ್ನಡದ ಶ್ರೇಷ್ಠ ಕಾವ್ಯವೆಂದು ವಿಮರ್ಶಿಸಲ್ಪಟ್ಟವೋ, ಅದೇ ಕಾಲದಲ್ಲಿ ಕವಿ ಅಡಿಗರು ಸನಾತನ ಸಂಸ್ಕೃತಿಯ ಪ್ರತಿಪಾದಕರಾದರು. ಅಡಿಗರ ವ್ಯಕ್ತಿತ್ವದ ಬಹು ದೊಡ್ಡ ಪಲ್ಲಟವಿದು. ಕನ್ನಡ ಕಾವ್ಯದಲ್ಲಿ ಅಡಿಗರ ಪ್ರಾಬಲ್ಯ ಮತ್ತು ಪ್ರತಿಷ್ಠಾಪನೆಗೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮರಳಿ ಸನಾತನಾವಾದಿ ಮೌಲ್ಯಗಳ ಪ್ರತಿಷ್ಠಾಪನೆಯ ಆಯಾಮವೂ ಇದೆ. ಲಂಕೇಶ್ ತಡವಾಗಿ ಗುರುತಿಸುವಂತೆ “ಶ್ರೀರಾಮನವಮಿಯ ದಿವಸದ ರಾಮನಿಗೂ ಅದ್ವಾನಿಯವರ ರಥದಲ್ಲಿರುವ ಕೋದಂಡರಾಮನಿಗೂ ಅಷ್ಟೇನೂ ವ್ಯತ್ಯಾಸವಿಲ್ಲ.”3 ಅಡಿಗರ ಕವಿವ್ಯಕ್ತಿತ್ವದಲ್ಲಾದ ಈ ಪಲ್ಲಟಕ್ಕೆ ಅರವತ್ತು-ಎಪ್ಪತ್ತರ ದಶಕಗಳಲ್ಲಿ ಕರ್ನಾಟಕದಲ್ಲಿ ರೂಪತಾಳಿದ ಪ್ರಗತಿಪರ ಹೋರಾಟಗಳು ಕಾರಣವಾದಂತಿವೆ. ಸಮಾಜವಾದಿ ಯುವಜನಸಭಾ, ಬರಹಗಾರರ ಒಕ್ಕೂಟದಂಥ ಶೂದ್ರವರ್ಗದ ಸಾಂಸ್ಕತಿಕ ಸಂಘಟನೆಗಳು ಬ್ರಾಹ್ಮಣ್ಯದ ಸಾಂಸ್ಕೃತಿಕ ಹೇರಿಕೆಯನ್ನು ಪ್ರತಿಭಟಿಸಿದವು. 70ರ ದಶಕದಲ್ಲಿ ಕರ್ನಾಟಕದಲ್ಲಿ ಹುಟ್ಟಿದ ರೈತ ಚಳುವಳಿ, ದಲಿತ ಚಳುವಳಿ, ಬಂಡಾಯ ಚಳುವಳಿ, ಮಹಿಳಾ ಚಳುವಳಿಗಳೆಲ್ಲವೂ “ಬ್ರಾಹ್ಮಣ್ಯ” ವನ್ನೇ ತಮ್ಮ ಪ್ರಥಮ ಶತ್ರುವೆಂದು ಭಾವಿಸಿದ್ದವು. ಆರಂಭದ ಹಂತದಲ್ಲಿ ಅವು “ಬ್ರಾಹ್ಮಣ” ವಿರೋಧಿಗಳೂ ಆಗಿದ್ದವು. ಅಲ್ಪಸಂಖ್ಯಾತ ಸಮುದಾಯ ಕೂಡ ಸಾಂಸ್ಕೃತಿಕ ಚಿಂತನೆಯ ಮುಖ್ಯವಾಹಿನಿಗೆ ಪ್ರವೇಶ ಪಡೆಯಿತು. ದಲಿತರು, ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ತಮ್ಮ ಸಂಕಟಗಳಿಗೆ ಅಕ್ರೋಶದಿಂದ ಪ್ರತಿಕ್ರಿಯೆ ನೀಡಿದರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಕಂಡು ಬಂದ “ಬ್ರಾಹ್ಮಣ್ಯ ವಿರೋಧಿ” ಚಳುವಳಿಗಳ ಸಂದರ್ಭದಲ್ಲಿಯೇ ಅಡಿಗರು ದೊಡ್ಡ ಪ್ರಮಾಣದಲ್ಲಿ ಸನಾತನತೆಯ ಹೆಸರಿನಲ್ಲಿ ಪರಂಪರೆಯನ್ನು ಬಗೆದು ನೋಡುವ ಮುಖವಾಡದಲ್ಲಿ ಬ್ರಾಹ್ಮಣ್ಯವನ್ನು ಮರಳಿ ಪ್ರತಿಷ್ಠಾಪಿಸಲು ಯತ್ನಿಸಿರುವದು ಕಂಡುಬರುತ್ತದೆ.

60-70ರ ದಶಕದಲ್ಲಿ ಬಲಪಂಥೀಯ ಕೋಮುವಾದ ಬಹಿರಂಗದಲ್ಲಿ ಭಾತೃತ್ವ ಸೋದರತ್ವಗಳನ್ನು ಪ್ರತಿಪಾದಿಸುತ್ತಲೇ ಅಂತರಂಗದಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಬಲಪಡಿಸುವ ಆಶಯವನ್ನು ಒಳಗೊಂಡಿತ್ತು. ಅದಕ್ಕೆ ಉಗ್ರರೂಪ ತಾಳಲು, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿರಲಿಲ್ಲ. ಆ ಕಾಲದ ಹಿಂದುತ್ವದ ಸ್ವರೂಪಕ್ಕೂ ಅಡಿಗರ ಕಾವ್ಯದ ಸ್ವರೂಪಕ್ಕೂ ಆಂತರಿಕ ಸಂಬಂಧವಿದ್ದಂತೆ ತೋರುತ್ತದೆ. ಅಡಿಗರ ಆರಂಭದ ಕಾವ್ಯ ರಾಷ್ಟ್ರೀಯತೆ, ಸಮಾಜವಾದ, ಆಧುನಿಕತೆ, ವ್ಯಕ್ತಿನಿಷ್ಠತೆಗಳ ಬಹಿರಂಗದ ಪ್ರಭಾವಕ್ಕೊಳಗಾಗಿದ್ದರೂ ಅದು ಅವರ ಮುಖ್ಯ ಸಂವೇದನೆಯಾದಂತೆ ತೋರುವದಿಲ್ಲ. ಆದರೆ 60-70ರ ದಶಕದಲ್ಲಿ ಅವರ ಅಂತಸ್ಥ ಹಿಂದುತ್ವದ ಸಂವೇದನೆ ಜಾಗೃತವಾಗುವುದರೊಂದಿಗೆ ಅವರ ನಿಜವಾದ ಕಾವ್ಯ ರೂಪತಾಳುತ್ತದೆ.

ಈ ಕಾಲದ ಅಡಿಗರ ರಾಜಕೀಯ ಕವಿತೆಗಳು ನೆಹರೂ, ಇಂದಿರಾ ರಾಜಕಾರಣವನ್ನು ಕಠೋರವಾಗಿ ವಿಡಂಬಿಸುತ್ತವೆ. ಸರ್ವಾಧಿಕಾರದ ವಿರುದ್ಧದ ವಿರೋಧ ಪಕ್ಷದ ದನಿಯಂತೆ ಭಾಸವಾಗುತ್ತವೆ. ರಷಿಯಾ ಮತ್ತು ಸಮಾಜವಾದಿ ಸಿದ್ಧಾಂತದೊಂದಿಗೆ ನೆಹರು ನಂಟನ್ನು ಕಠೋರವಾಗಿ ಹೀಗಳೆಯುತ್ತವೆ. ಆದರೆ ಅಡಿಗರ ಈ ರಾಜಕೀಯ ಕವಿತೆಗಳಿಗೆ ಇನ್ನೂ ಒಂದು ಮುಖವಿದೆ. ಅವು ಸನಾತನವಾದ ರಾಜಕೀಯದ ಮಾರ್ಗವನ್ನು ಆಧುನಿಕ ಕಾಲದಲ್ಲಿ ಪ್ರಚಲಿತಗೊಳಿಸಲು ಹವಣಿಸುತ್ತವೆ. “ಪಟ್ಟಭದ್ರರ ಸಿಂಹಾಸನದ ಮೇಲೆ” ಕವಿತೆಯಲ್ಲಿ ಶೂದ್ರರಾಜಕಾರಣಕ್ಕೆ ವೈದಿಕರು ಬಲಿಯಾಗುತ್ತಿರುವ ದುರಂತವನ್ನು ಪುರಾಣ ಪ್ರತಿಮೆಗಳಲ್ಲಿ ಸೆರೆಹಿಡಿಯುತ್ತದೆ. “ದೆಹಲಿ” ಎಂಬ ಕವಿತೆಯಲ್ಲಿ ದೆಹಲಿಯ ರಾಜಕಾರಣವನ್ನು ಅದರ ಬೂಟಾಟಿಕೆ ಭ್ರಷ್ಟತೆ, ಸರ್ವಾಧಿಕಾರಿ ಧೋರಣೆಗಳನ್ನು ವಿಡಂಬಿಸುತ್ತ ಅದಕ್ಕೆ ಪರ್‍ಯಾಯವನ್ನು ಅಡಿಗರು “ಸನಾತನ ಮಗುವ ಅಂತರಂಗದಲ್ಲಿಟ್ಟು ಕಾಪಿಟ್ಟು ರಕ್ಷಿಸುವದರಲ್ಲಿ” ಕಂಡುಕೊಳ್ಳುತ್ತಾರೆ. “ಕೆಸರು ತೆಗೆಯುವದು” ಕವಿತೆಯಲ್ಲಿ ಪರಶುರಾಮನ ಕೊಡಲಿ ಹಿಡಿದು ಸಂಹಾರಮಾಡುವ ತ್ರಾಣವನ್ನು ಬಯಸುತ್ತಾರೆ. ಅಡಿಗರ ರಾಜಕೀಯ ಕವಿತೆಗಳೂ ಕೂಡ ನೇರವಾಗಿ “ಮನುಸ್ಮೃತಿ”ಯ ಹೊಸ ಆವೃತ್ತಿಯನ್ನು ಆಧುನಿಕ ಕಾಲಕ್ಕೆ ಪುನರ್ರೂಪಿಸುವ ಹಂಬಲವನ್ನು ವ್ಯಕ್ತಪಡಿಸುತ್ತವೆ.

80ರ ದಶಕದ ಆರಂಭದಿಂದಲೇ ಅಡಿಗರ ಕಾವ್ಯ ಹಿಂದೂ ಕೋಮುವಾದದ ತಂತ್ರಗಾರಿಕೆಗಳನ್ನು ಒಳಗೊಳ್ಳುತ್ತ ಸಾಗುತ್ತದೆ. ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ಸಂಘ ಪರಿವಾರವು ಬಾಂಗ್ಲಾ ನಿರಾಶ್ರಿತರ ಸಮಸ್ಯೆಯನ್ನು ಉಪಯೋಗಿಸಿಕೊಂಡಿತು. ಅಡಿಗರು ಅಸ್ಸಾಂ ನರಮೇಧದ ಬಗ್ಗೆ ಕವಿತೆ ಬರೆದರು. ಕೇಂದ್ರದಲ್ಲಿ ಮೊರಾರ್ಜಿದೇಸಾಯಿ ಸರಕಾರದಲ್ಲಿ ಅಧಿಕಾರದ ಮೊದಲ ಸವಿಪಡೆದ ಸಂಘ ಪರಿವಾರವು, ಅಧಿಕಾರಕ್ಕಾಗಿ ತನ್ನ ತಂತ್ರವನ್ನು ಬದಲಾಯಿಸಿತು. “ದಲಿತರ ಬೃಹತ್ ಸಮುದಾಯದ ಬೆಂಬಲವಿಲ್ಲದೆ ರಾಜಕೀಯ ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ಇತಿಹಾಸದುದ್ದಕ್ಕೂ ದಲಿತರ ದಮನ ಮಾಡಿದ ಶಕ್ತಿಗಳೇ ಈಗ ದಲಿತರ ಪ್ರತಿನಿಧಿಗಳೆಂದು ಓಲೈಸತೊಡಗಿತು.”4 ಈ ಅವಧಿಯಲ್ಲಿ “ಅಂಬೇಡ್ಕರ ಭೀಮರಾಯರಿಗೆ” ಎಂಬ ಕವಿತೆ ರಚಿಸಿದ ಅಡಿಗರು, ಅಂಬೇಡ್ಕರ ಅವರನ್ನು “ಆಧುನಿಕ ಹಿಂದುತ್ವದ ಅಪ್ರತಿಮ ಮಾದರಿ” ಎಂದು ಹೊಗಳುತ್ತಾರೆ. ಅಂಬೇಡ್ಕರ್ ಅವರು ದೇಶವಿಭಜನೆಯ ಚಾರಿತ್ರಿಕ ಸಂದರ್ಭದಲ್ಲಿ ತನ್ನದೇ ಕಾರಣಕ್ಕೆ, ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕೆಂಬ ವಿಚಾರ ಮಂಡಿಸಿದ್ದನ್ನು ಪ್ರಸ್ತಾಪಿಸಿ, ಅಂಬೇಡ್ಕರ್ ಅವರನ್ನು ಗಾಂಧಿ ವಿರುದ್ಧ ಎತ್ತಿಕಟ್ಟುತ್ತಾರೆ. ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಕೋಮುವಾದಿ ಚಿಂತನೆಗಳ ಮಸಿ ಬಳಿಯುತ್ತಾರೆ. ಆ ಕಾಲದಲ್ಲಿ ಸಂಘ ಪರಿವಾರ ದಲಿತರನ್ನು ಓಲೈಸಲು “ಆದಿವಾಸಿ ಕಲ್ಯಾಣ ಯೋಜನೆ”ಯನ್ನು ಹಾಕಿಕೊಂಡಿದ್ದು, ದಲಿತರನ್ನು ಬಂಧುಗಳೆಂದು ಕರೆದು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿದ್ದು ಮೊದಲಾದ ಕೋಮುವಾದಿ ತಂತ್ರಗಳ ಸಾಂಸ್ಕೃತಿಕ ಚಟುವಟಿಕೆಯಾಗಿ ಅಡಿಗರು ಅಂಬೇಡ್ಕರ ಕವಿತೆಯನ್ನು ಬರೆದಂತಿದೆ. “ಗಾಂಧಿ 1985” ಎಂಬ ಕವಿತೆಯಲ್ಲಿ ಅಡಿಗರು ಗಾಂಧಿ ಹಿಂಸಾತ್ಮಕ ಸಾವಿಗೆ ಅರ್ಹನಾಗಿದ್ದ “ಹಿಂಸಾತ್ಮಕ ವ್ಯಕ್ತಿ”ಯೆಂದು ಪ್ರತಿಪಾದಿಸುತ್ತ “ಗೋಡ್ಸೆ ಗಾಂಧಿಯ ನಡುವೆ ಸಮತೂಕ” ಎಂದು ಕವಿತೆ ಮುಗಿಸುತ್ತಾರೆ. ಈ ಚಾರಿತ್ರಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಡಿಗರ “ಮತ್ತೆ ಮೊಳಗಲಿ ಪಾಂಚಜನ್ಯ” ಇವೆಲ್ಲವುಗಳಿಗೆ ಕಳಸವಿಟ್ಟಂತೆ ರಚಿತವಾಗಿದೆ. ಆ ನಂತರದಲ್ಲಿ ಕೂಡ ಅಡಿಗರು ಇಂಥ ಹಲವಾರು ಕವಿತೆಗಳನ್ನು ರಚಿಸಿದ್ದಾರೆ. ಒಟ್ಟಾರೆ ಅಡಿಗರು 60-70ರ ದಶಕದಿಂದಲೇ ಕೋಮುವಾದಿ ತಾತ್ವಿಕತೆಯೊಂದಿಗೆ ತಮ್ಮ ಕಾವ್ಯಪಯಣವನ್ನು ಮುಂದುವರೆಸಿಕೊಂಡು ಬಂದಿರಬಹುದು ಎನ್ನಿಸುತ್ತದೆ.

(ಮುಂದುವರೆಯುವುದು…)

(ಚಿತ್ರಕೃಪೆ: www.kamat.com)


ಟಿಪ್ಪಣಿಗಳು :
1. ಪಿ. ಲಂಕೇಶ್, ನೆನಪಿನ ಡೋಣಿಯಿಂದ ಅಗೆದದ್ದೇನು? ಸಾಹಿತಿ, ಸಾಹಿತ್ಯ ವಿಮರ್ಶೆ, ಪು. 74
2. ರಾಮಪುನಿಯಾನಿ, 2002ರ ಗುಜರಾತಿನ ಮುಸ್ಲಿಮರ ಹತ್ಯಾಕಾಂಡದಲ್ಲಿ ದಲಿತರ ಪಾತ್ರ ಮತ್ತು ಹಿಂದುತ್ವದ ಸಾಮಾಜಿಕ ಕಾರ್‍ಯವ್ಯೂಹ, ಹಿಂದುತ್ವ ಮತ್ತು ದಲಿತರು, ಪು. 115
3. ಪಿ. ಲಂಕೇಶ್, ಅಡಿಗರ ಪಥ, ಸಾಹಿತಿ-ಸಾಹಿತ್ಯ-ವಿಮರ್ಶೆ, ಪು. 68
4. ಕೆ.ಎಂ.ಪಣಿಕ್ಕರ್, ಆಶಯ ಮಾತು, ಹಿಂದುತ್ವ ಮತ್ತು ದಲಿತರು, ಪು. 11

ವರ್ತಮಾನದ ಕವಿ ಫೈಜ್ ಅಹ್ಮದ್ ಫೈಜ್

ಭಾರತ ಉಪಖಂಡದ ಆಧುನಿಕ ಉರ್ದು  ಸಾಹಿತ್ಯದ ಪಿತಾಮಹ ಎನಿಸಿದ ಕವಿ, ಲೇಖಕ, ಪತ್ರಕರ್ತ ಫೈಯಾಜ್ ಅಹಮದ್ರವರ ಶತಮಾನತ್ಸೋವ ವರ್ಷ ಇದು. ಆದರೆ, ತಾನೇ ಹುಟ್ಟು ಹಾಕಿದ ಭಯೋತ್ಪಾದನೆಯ ಸುಳಿಯೊಳಗೆ ಸಿಲುಕಿ ನಲುಗಿರುವ ಪಾಕಿಸ್ತಾನಕ್ಕಾಗಲಿ ಅಥವಾ ಹಲವು ಹಗರಣಗಳ ಕೆಸರಿನೊಳಗೆ ಮುಳುಗಿ ಏಳುತ್ತಿರುವ ಭಾರತಕ್ಕಾಗಲಿ ಈ ಕವಿಯ ಸ್ಮರಣೆ ಮಾಡುವಷ್ಟು ವ್ಯವಧಾನವಿಲ್ಲ. ಆದರೂ ಫೈಯಾಜ್ ಉರ್ದು ಸಾಹಿತ್ಯ ಪ್ರಿಯರ ಎದೆಯಲ್ಲಿ ಹಸಿರಾಗಿದ್ದಾರೆ.

ವಿಭಜನೆ ಪೂರ್ವ ಭಾರತದ ಉರ್ದು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯ್ಯಾಡಿಸಿ, ಉರ್ದು ಸಾಹಿತ್ಯಕ್ಕೆ ಆಧುನಿಕತೆಯ ಸ್ಪರ್ಶ ತಂದುಕೊಟ್ಟ ಫೈಜ್ ಅಹಮದ್ ನಿಜ ಜೀವನದಲ್ಲಿ ಹುಟ್ಟು ಹೋರಾಟಗಾರ. ಎಡಪಂಥೀಯ ಚಿಂತನೆಗಳ ಮೂಲಕ ಗಝಲ್ ಪ್ರಕಾರದಲ್ಲಿ ನಿಂತ ನೀರಾಗಿದ್ದ ಕಾವ್ಯಕ್ಕೆ ಹೊಸ ಮಜಲನ್ನು ನೀಡಿದವರು. ಹೆಣ್ಣಿನ ಸೌಂದರ್ಯ, ಅವಳ ಕಣ್ಣು, ತುಟಿ, ಸೊಂಟ ಮುಂಗುರುಳು ಹಾಗೂ ಬೆಳದಿಂಗಳು ಮತ್ತು ಮಧುರಸ ಇವುಗಳ ಸುತ್ತ ಗಿರಕಿ ಹೊಡೆಯುತಿದ್ದ ಉರ್ದು ಕಾವ್ಯಕ್ಕೆ ನಾವು ಯೋಚಿಸಬಹುದಾದ ವರ್ತಮಾನದ ಬೇಗುದಿಗಳಿವೆ ಎಂದು ತೋರಿಸಿಕೊಟ್ಟ ಮಹಾನ್ ಕವಿ ಫೈಜ್.

1930 ರ ದಶಕದಲ್ಲಿ ಪ್ರಗತಿಪರ ಲೇಖಕರ ಸಂಘವನ್ನು ಹುಟ್ಟು ಹಾಕಿದ ಉರ್ದು ಸಾಹಿತ್ಯದ ಮಹನೀಯರಲ್ಲಿ ಇವರು ಒಬ್ಬರು. 1911ರಲ್ಲಿ ಪಾಕಿಸ್ತಾನದ ಸಿಯಾಲ್ಕೋಟ್ ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ಉತ್ತಮ ಪಂಡಿತರಿಂದ ಸಾಂಪ್ರದಾಯಿಕ ಉರ್ದು ಶಿಕ್ಷಣ ಪಡೆದರು. ಇವರ ತಂದೆ ಅಂದಿನ ಆಪ್ಘಾನಿಸ್ತಾನದ ದೊರೆಗೆ ಮುಖ್ಯ ಕಾರ್ಯದರ್ಶಿಯಾಗಿದ್ದರು. ಮುಂದೆ ಅದೇ ನಗರದ ಸ್ಕಾಟಿಶ್ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಣ ಪಡೆದು, ಮುರ್ರೆ ಕಾಲೇಜಿನಲ್ಲಿ ಪದವಿ ಹಾಗು ಲಾಹೋರ್ನ  ಸರಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು, ಕೆಲವು ಕಾಲ ಅಮೃತಸರದ ಕಾಲೇಜಿನಲ್ಲಿ  ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ 1941ರಲ್ಲಿ ಲಾಹೋರ್ಗೆ  ತೆರಳಿ ಸ್ಥಳೀಯ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಲಾಹೋರ್ನಲ್ಲಿ ಇದ್ದಾಗಲೇ ಇವರ ಪ್ರಥಮ ಕವನ ಸಂಕಲನ ನಕ್ಷ್ಪರ್ಯಾದಿ ಪ್ರಕಟವಾಯಿತು. ಉರ್ದು ಸಾಹಿತ್ಯದಲ್ಲಿ ಸಾಂಪ್ರದಾಯಕವಾಗಿ ಕಾವ್ಯದ ವಸ್ತು ಪ್ರೀತಿ, ಪ್ರೇಮ ಇದ್ದ ಸಂಧರ್ಭದಲ್ಲಿ ಕಾವ್ಯಕ್ಕೆ ಹೊಸ ಪ್ರತಿಮೆ, ರೂಪಕ, ವಸ್ತುಗಳನ್ನು ನೀಡಿದ ಕೀರ್ತಿ ಇವರದು. ಇವರ ಕಾವ್ಯದಲ್ಲಿ ಹೊಸದಾಗಿ ಮೂಡಿಬಂದ ಪ್ರತಿಭಟನೆ, ನೊಂದವರ ನೋವು ಇವರಿಗೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತು. ಉರ್ದು ಸಾಹಿತ್ಯದಲ್ಲಿ ಆವರೆಗೆ ಇದ್ದ ಪ್ರಾಸ, ಪುರಾಣ ವಸ್ತುಗಳನ್ನು ತ್ಯಜಿಸಿ ಕ್ರಾಂತಿಯನ್ನು ಪರಿಚಯಿಸಿದ ಫಯಾಜ್ ಪ್ರಗತಿಪರ ಕಾವ್ಯದಲ್ಲಿ ಕಟು ವಾಸ್ತವಗಳು ಇರಬೇಕೆ ಹೊರತು ಭ್ರಮೆ, ಕನಸು, ಕನವರಿಕೆಗಳಲ್ಲ ಎಂದು ಪ್ರತಿಪಾದಿಸಿದವರು.

ಆಧುನಿಕ ಉರ್ದು ಸಾಹಿತ್ಯ ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಇಟ್ಟುಕೊಂಡಿದ್ದ ಪಯಾಜ್ ಅಹಮದ್ ತಮ್ಮ ಜೀವಿತಾವಧಿಯಲ್ಲಿ 18 ಕವನ ಸಂಕಲನ, ಮತ್ತು 12ಕ್ಕೂ ಮಿಗಿಲಾದ ಗದ್ಯ ಕೃತಿಗಳನ್ನು ರಚಿಸಿದರು. ಇವರ ಗದ್ಯಕೃತಿಗಳೆಲ್ಲವೂ ಉರ್ದು ಸಾಹಿತ್ಯ ಕುರಿತ ಚಿಂತನೆಗಳೇ ಆಗಿರುವುದು ವಿಶೇಷ. ಸಾಹಿತ್ಯದ ಪ್ರಶ್ನೆಗಳು ಸಾಹಿತ್ಯ ಮತ್ತು ಅಸ್ತಿತ್ವ ಕಾವ್ಯ ಮತ್ತು ಪ್ರಜ್ಞೆ ಲೇಖಕ ನೀನೆಲ್ಲಿ ನಿಂತಿದ್ದೀಯಾ? ಗಝಲ್ ಭವಿಷ್ಯ ಒಂದು ಚಿಂತನೆ ಕಾವ್ಯ ಮತ್ತು ಪ್ರಜಾಪ್ರಭುತ್ವ ಸಾಹಿತ್ಯ ಮತ್ತು ಸಂಸ್ಕೃತಿ ಸಾಹಿತ್ಯ ಮತ್ತು ಲೇಖಕ ಸೌಂದರ್ಯ ಮತ್ತು ಪರಿಕಲ್ಪನೆ ಮುಂತಾದ ಕೃತಿಗಳನ್ನು ಇಂಗ್ಲೀಷ್ ಮತ್ತು ಉರ್ದು ಭಾಷೆಗಳಲ್ಲಿ ರಚಿಸುವುದರ ಮೂಲಕ ಆಧುನಿಕ ಉರ್ದು ಸಾಹಿತ್ಯ ಲೋಕಕ್ಕೆ ಹೊಸ ಲೇಖಕರನ್ನು ಕವಿಗಳನ್ನು ನೀಡಿದ ಕೀರ್ತಿ ಇವರದು. ಹಾಗಾಗಿ ಇವರನ್ನ ಆಧುನಿಕ ಉರ್ದುಸಾಹಿತ್ಯದ ಪಿತಾಮಹ ಎಂದೇ ಇಂದಿಗೂ ಗೌರವಿಸಲಾಗುತ್ತಿದೆ.

ಸಾಹಿತ್ಯ ಚಟುವಟಿಕೆಯ ಜೊತೆಗೆ ಅಪ್ಪಟ ಸ್ವಾತಂತ್ರ್ಯ ಪ್ರೇಮಿಯಾಗಿದ್ದ ಫೈಜ್ರವರು ಬ್ರಿಟೀಷರಿಂದ ಅಖಂಡ ಭಾರತದ ಬಿಡುಗಡೆಗಾಗಿ ಹಂಬಲಿಸಿದವರು. ಈ ಕಾರಣಕ್ಕಾಗಿ  ತಮ್ಮ ಹುದ್ದೆಯನ್ನು ತ್ಯಜಿಸಿ ಎರಡನೇ ಮಹಾಯುದ್ಧದಲ್ಲಿ ಬ್ರಿಟೀಷ್ ಸೇನೆಯಲ್ಲಿ ಎರಡು ವರ್ಷಗಳ ಕಾಲ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸಿದರು.

1947ರಲ್ಲಿ ಅವರು ಹಂಬಲಿಸಿದ್ದ ಸ್ವಾತಂತ್ರ್ಯ ಭಾರತಕ್ಕೆ ಸಿಕ್ಕಿತು. ಆದರೆ ಅದು ಅವರು ಕನಸಿದ್ದ ಸ್ವಾತಂತ್ರ್ಯವಾಗಿರಲಿಲ್ಲ. ವಿಭಜನೆಯ ಹೆಸರಿನಲ್ಲಿ ಭಾರತ ಮತ್ತು ಪಾಕ್ ಎರಡು ರಾಷ್ಟ್ರಗಳಾಗಿ ಉದಯಿಸಿದ್ದು ಅವರಿಗೆ ಅಪಾರ ನೋವನ್ನುಂಟುಮಾಡಿತ್ತು. ಈ ಸಂದರ್ಭದಲ್ಲಿ ಅವರೇ ಬರೆದ

ನಾನು ಕನಸಿದ ಈ ಮುಸುಕಿನ ಮುಂಜಾವು ಇದಲ್ಲ
ನಾನು ಯಾವುದರ ನಿರೀಕ್ಷೆಯಲ್ಲಿದ್ದೆನೊ ಆ ನಿರೀಕ್ಷೆಯೂ ಇದಲ್ಲ

ಎಂಬ ಕಾವ್ಯ ಇಂದಿಗೂ ಪ್ರಸಿದ್ಧವಾಗಿದೆ.

ಆ ಕಾಲಘಟ್ಟದ ವಿಭಜನೆಯ ನೋವು ಎಲ್ಲ ಲೇಖಕರ ಎದೆಯ ಮೇಲೆ ಬರೆ ಎಳೆದ ಮಾಯದ ಗಾಯದಂತಿದೆ. ಫೈಜ್ರವರ ಕವಿತೆಗಳೂ ಸೇರಿದಂತೆ, ಗುಲ್ಜಾರ್ ಬರೆದ

ಆ ಕೋಮು ದಳ್ಳುರಿಯಲ್ಲಿ
ಅಳಿಸಿ ಹಾಕಿದ್ದು ಮನುಷ್ಯರನ್ನಲ್ಲ
ಕೇವಲ ಹೆಸರುಗಳನ್ನು ಮಾತ್ರ
ಅವರು ತರಿದು ಹಾಕಿದ್ದು ತಲೆಗಳನ್ನಲ್ಲ
ಕೇವಲ ಟೊಪ್ಪಿಗಳನ್ನು ಮಾತ್ರ

ಅಕಸ್ಮಾತ್ತಾಗಿ ಟೊಪ್ಪಿಯೊಳಗೆ ತಲೆಗಳಿದ್ದವು ಅಷ್ಟೆ ಎಂಬ ಕವಿತೆಯೊಂದಿಗೆ ಖುಷವಂತ್ ಸಿಂಗ್ ರ “ಟ್ರೈನ್ ಟು ಪಾಕಿಸ್ತಾನ್” ಕಾದಂಬರಿ, ಭೀಷ್ಮಸಾಹನಿಯವರ ತಮಸ್ ಕಾದಂಬರಿ ಹಾಗೂ ಯಾವ ಓದುಗನೂ ಕಟು ವಾಸ್ತವವನ್ನು ಜೀರ್ಣಿಸಿಕೊಳ್ಳಲಾಗದಷ್ಟು ಮಟ್ಟದಲ್ಲಿ ಸಾದತ್ ಹಸನ್ ಮಾಂಟೊ ಬರೆದ ಕತೆಗಳು ವಿಭಜನೆಯ ನೋವಿಗೆ ಸಾಕ್ಷಿಯಾಗಿವೆ. ಈ ಎಲ್ಲಾ ಲೇಕಕರು ವಿಭಜನೆಯ ಸಂದರ್ಭದಲ್ಲಿ ಸಂಭವಿಸಿದ ಹಿಂಸೆಯಲ್ಲಿ ಹರಿದ ಬಿಸಿ ನೆತ್ತರಿನೊಳಗೆ ತಮ್ಮ ಲೇಖನಿಯನ್ನು ಅದ್ದಿ ಈ ಸಾಹಿತ್ಯ ಸೃಷ್ಟಿಸಿದ್ದಾರೇನೊ ಎಂಬ ಭಾವನೆ ಮೂಡುತ್ತದೆ.

ಸ್ವಾತಂತ್ರ್ಯ ನಂತರ ಕರಾಚಿಯಲ್ಲಿ ನೆಲೆಸಿದ ಫಯಾಜ್ರವರು ಪಾಕಿಸ್ತಾನ್ ಟೈಮ್ಸ್ ಎಂಬ ಇಂಗ್ಲೀಷ್ ಪತ್ರಿಕೆಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಆ ನಂತರ 1962ರಲ್ಲಿ ಪಾಕಿಸ್ತಾನದ ಸಾಂಸ್ಕೃತಿಕ ರಾಯಭಾರಿಯಾಗಿ ಲಂಡನ್ನಲ್ಲೂ ಕೂಡ ಸೇವೆ ಸಲ್ಲಿಸಿದರು. ಜಾತಿ ಧರ್ಮದ ಗಡಿ ರೇಖೆಗಳನ್ನು ದಾಟಿದ್ದ ಫೈಜ್ ಬ್ರಿಟೀಷ್ ಮಹಿಳೆಯೊಬ್ಬಳನ್ನು ವಿವಾಹವಾಗಿದ್ದರು. ಕಟ್ಟಾ ಎಡಪಂಥೀಯರಾಗಿದ್ದ ಫಯಾಜ್ ಅಹಮದ್ ಸೂಫಿ ಸಂತರನ್ನು ಹಾಗೂ ಸೂಫಿ ತತ್ವಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಜಗತ್ತಿನಲ್ಲಿ ನಿಜವಾದ ಕಾಮ್ರೇಡ್ಗಳೆಂದರೆ ಸೂಫಿ ಸಂತರು ಎಂಬುದು ಅವರ ನಂಬಿಕೆಯಾಗಿತ್ತು.

ಸ್ವಾತಂತ್ರ್ಯಾನಂತರ ಸರಕಾರದ ವಿರುದ್ಧ ಪಿತೂರಿ ನಡೆಸಿದರು ಎಂಬ ಆಪಾದೆನೆಯಿಂದ 4 ವರ್ಷಗಳ ಕಾಲ ಜೈಲು ವಾಸವನ್ನೂ ಕೂಡ ಅನುಭವಿಸಿದರು. ಮನುಷ್ಯನ ಮುಕ್ತ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸುತ್ತಿದ್ದ ಈ ಮಹಾನ್ ಕವಿ ಫೈಜ್ ಬರೆದ

ಕಸಿದುಕೊಂಡರೇನು ನನ್ನ ಲೇಖನಿ ಮತ್ತು ಕಾಗದ
ಅದ್ದಿಕೊಂಡಿದ್ದೇನೆ ಬೆರಳುಗಳನ್ನು
ನನ್ನೆದೆಯ ಬಿಸಿ ರಕ್ತದಲ್ಲಿ
ನಾಲಿಗೆಗೆ ಬೀಗ ಹಾಕಿ ಬಾಯಿ ಹೊಲಿದರೇನು
ಇಟ್ಟಿದ್ದೇನೆ ಪ್ರತಿಯೊಂದು ಸರಪಳಿಯ ಕೊಂಡಿಯಲ್ಲಿ
ಮಾತನಾಡುವ ನಾಲಿಗೆಗಳನ್ನು

ಈ ಕವಿತೆ ಅವರ ಪ್ರಖರ ಚಿಂತನೆಗೆ, ಆಧುನಿಕ ಮನೋಭಾವಕ್ಕೆ ಹಿಡಿದ ಕನ್ನಡಿಯಂತಿದೆ. ಇಂತಹ ಮಹಾನ್ ಕವಿ 1984ರಲ್ಲಿ ಇಲ್ಲವಾದರೂ, ನಮ್ಮ ನಡುವೆ ಕಾವ್ಯದ ಮೂಲಕ ಜೀವಂತವಾಗಿದ್ದಾರೆ.

-ಡಾ.ಎನ್.ಜಗದೀಶ್ ಕೊಪ್ಪ

ಮುಂಗಾರು ಮಳೆ ಹೀರೋ ಕೊಡಗು ಹುಡುಗಿಯನ್ನು ಏಕೆ ಮದುವೆಯಾಗಲಿಲ್ಲ..?

1962ರಲ್ಲಿ ಬಿಡುಗಡೆಯಾದ ಕಿತ್ತೂರು ಚೆನ್ನಮ್ಮ ಚಿತ್ರ ಹೆಸರೇ ಹೇಳುವಂತೆ ಬೆಳವಾಗಿ ಭಾಗದ ಕಿತ್ತೂರಿನ ರಾಣಿ ಚೆನ್ನಮ್ಮನ ಸಾಹಸಗಾಥೆ ಹೇಳುವ ಚಿತ್ರ. ಆ ಚಿತ್ರದಲ್ಲಿ ಚೆನ್ನಮ್ಮ ಪಾತ್ರಧಾರಿ ಮಾತನಾಡುವುದು ಹಳೇ ಮೈಸೂರು ಭಾಗದ ಕನ್ನಡವನ್ನು. ಆದರೆ ಚೆನ್ನಮ್ಮನಿಗೆ ಮೋಸ ಮಾಡಿ ಬ್ರಿಟಿಷರಿಗೆ ನೆರವು ನೀಡುವ ಮಂತ್ರಿಗಳ ಪಾತ್ರಧಾರಿಗಳದು ಬೆಳಗಾವಿ ಕನ್ನಡ.

ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರ ವಿಮರ್ಶಕ ಎಂ.ಕೆ ರಾಘವೇಂದ್ರ ಕನ್ನಡ ಸಿನಿಮಾಗಳ ಟಾರ್ಗೆಟ್ ಆಡಿಯನ್ಸ್ ಕೇವಲ ಹಳೇ ಮೈಸೂರು ಭಾಗದ ಜನರಷ್ಟೇ ಪ್ರೇಕ್ಷಕರು ಎಂದು ವಿಶ್ಲೇಷಿಸುವಾಗ ಈ ಮೇಲಿನ ಉದಾಹರಣೆ ನೀಡುತ್ತಾರೆ.

ಹಳೇ ಮೈಸೂರು ಅಂದರೆ – ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ಶಿವಮೊಗ್ಗ. ಕನ್ನಡ ಸಿನಿಮಾ ಹಿರೋಗಳೆಲ್ಲ ಸಾಮಾನ್ಯವಾಗಿ ಇದೇ ಭಾಗದವರಾಗಿರುತ್ತಾರೆ. ಅವರ ಜೊತೆಗಾತಿಯರೂ ಸಹಜವಾಗಿ ಇದೇ ಭಾಗಕ್ಕೆ ಸೇರಿದವರು. ಹಳೇ ಮೈಸೂರು ಭಾಗದ ಹೀರೋಗೆ ರಾಯಚೂರು ಅಥವಾ ಬೆಳಗಾವಿಯ ಹುಡುಗಿ ಜೊತೆ ಸರಸ ಸಾಧ್ಯವಿಲ್ಲ.

ಮುಂಗಾರು ಮಳೆ ಹಿರೋ ಕೊಡಗು ಮೂಲದ ಹುಡುಗಿಯನ್ನು ಮದುವೆಯಾಗದಿರಲು ಇದೇ ಕಾರಣಕ್ಕೆ. ಮುಂದುವರೆದು ರಂಗದೇ ಬಸಂತಿ ಚಿತ್ರದಲ್ಲಿ ಅಮೀರ್ ಖಾನ್ ಕೂಡಾ ವಿದೇಶಿ ಹುಡುಗಿಯನ್ನು ಮದುವೆಯಾಗದೇ ಉಳಿಯಲು ಇಂತಹದೇ ಒಂದು ಕಾರಣಕ್ಕೆ!

ಇಂತಹದೇ ಹೊಸ ಹೊಳಹುಗಳಿಗಾಗಿ ರಾಘವೇಂದ್ರ ಅವರ ಸಂದರ್ಶನವನ್ನು Frontline ನಲ್ಲಿ ಓದಿ. ವಿಖಾರ್ ಅಹ್ಮದ್ ಸಯೀದ್ ಸಂದರ್ಶನ ನಡೆಸಿದ್ದಾರೆ. ಓದಿದ ನಂತರ ಸಿನಿಮಾ ನೋಡುವ ನಿಮ್ಮ ಬಗೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಖಂಡಿತ.

photo courtesy – indianauteur.com

“ವರ್ತಮಾನ”ಕ್ಕೊಂದು ಪೀಠಿಕೆ…

ಸ್ನೇಹಿತರೆ,

ಕರ್ನಾಟಕದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಇಂದು ಒಂದು ವಿಶಿಷ್ಟವಾದ ಚಲನಾವಸ್ಥೆಯಲ್ಲಿರುವುದು ತಮಗೆಲ್ಲ ತಿಳಿದಿರುವ ಸಂಗತಿಯೇ. ಪ್ರಪಂಚದಾದ್ಯಂತ ಅನೇಕ ದೇಶಗಳು ಮತ್ತು ಸಮುದಾಯಗಳು ಆಧುನಿಕತೆಯತ್ತ ಮತ್ತು ಒಂದು ಉತ್ತಮ ಆಡಳಿತ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ ಅದು ಸಹಜವಾದದ್ದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಘಟನೆಗಳು ನಮ್ಮ ಮಧ್ಯೆ ಪ್ರತಿನಿತ್ಯ ನಡೆಯುತ್ತಿವೆ. ವೈಯಕ್ತಿಕ ನೈತಿಕತೆ ಉಳಿಸಿಕೊಳ್ಳುವುದೇ ಈ ಸಂದರ್ಭದಲ್ಲಿ ಒಂದು ಸವಾಲಾಗಿ ಹೋಗಿದೆ. ಹಾಗೆಯೇ, ಆಶಾವಾದವನ್ನೂ ಸಹ.

ಹೀಗಿರುವಾಗಲೂ, ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಅನೇಕ ಪ್ರಾಮಾಣಿಕ ಜನರು ತಮ್ಮದೇ ನೆಲೆಯಲ್ಲಿ ಸಮಾಜ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಕೆಲಸಗಳನು ಮಾಡುತ್ತಲೇ ಇದ್ದಾರೆ. ಆದರೆ ಸಮಾಜ ಇಂದು ಅಂತಹ ಕೆಲಸಗಳನ್ನು ಪ್ರಶಂಸಿಸುತ್ತಿದೆಯೇ ಎನ್ನುವುದು ಸಂಶಯಕ್ಕೂ ಆಸ್ಪದವಿಲ್ಲದಷ್ಟು ನಿರಾಶಾದಾಯಕವಾಗಿದೆ. ಸಂಪತ್ತಿನ ಮತ್ತು ದೊಡ್ಡಸ್ತಿಕೆಯ ಹುಡುಕಾಟದಲ್ಲಿ ಇಂದಿನ ಸಮಾಜ ನ್ಯಾಯಾನ್ಯಾಯದ ವಿವೇಚನೆಯಿಲ್ಲದೆ ಸುಲಭಮಾರ್ಗಗಳ ಹುಡುಕಾಟದಲ್ಲಿದೆ. ಭ್ರಷ್ಟಾಚಾರ ಎಲ್ಲಿಯೋ ಕೆಲವರಿಗೆ ಸಂಬಂಧಪಟ್ಟ ವಿಷಯವಾಗಿ, ಬಹುತೇಕ ಜನ ಅದರೊಡನೆ ರಾಜಿ ಮಾಡಿಕೊಂಡುಬಿಟ್ಟಿದ್ದಾರೆ. “ಭ್ರಷ್ಟರು ಯಾರಿಲ್ಲ?” ಎನ್ನುವ ಘೋಷ ವಾಕ್ಯವೇ ಇಂದು ಎಲ್ಲಾ ಜನರು ತಮ್ಮನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿರುವ ವಾದವಾಗಿದೆ. ಹಾಗೆ ಹೇಳುವುದೇ ಒಂದು ನೈತಿಕ ಅಧ:ಪತನ ಎಂದು ಹೇಳುವವರಾಗಲಿ ಮತ್ತು ಅದನ್ನು ಕೇಳಿಸಿಕೊಂಡು ಒಪ್ಪಿಕೊಳ್ಳುವವರಿಗಾಗಲಿ ಅರ್ಥವಾಗುತ್ತಿಲ್ಲ. ಅಥವ ಅವರು ಬೇಕೆಂತಲೇ ಅದನ್ನು ನಿರಾಕರಿಸುತ್ತಿದ್ದಾರೆ. ಇದೆಲ್ಲ ಹೇಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ, ಪ್ರಗತಿ, ಸಮಾನತೆಯ ಸಾಧನೆಗೆ ಮಹಾಗೋಡೆಯಾಗಿ ನಿಂತಿವೆ ಎಂದು ವಿವರಿಸುವುದೇ ಇಂದಿನ ಬಹುಮುಖ್ಯ ಸವಾಲಾಗಿದೆ.

ಹಾಗೆಯೇ ಹೇಳಿದ ಹಾಗೆ, ನಮ್ಮ ವ್ಯವಸ್ಥೆಯಲ್ಲಿನ ದುಷ್ಟಶಕ್ತಿಗಳ ಜೊತೆ ಇಂದು ನಮ್ಮ ಸಮಾಜ ರಾಜಿ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿ ಹೋಗಿದೆ ಎಂದರೆ ಇಂದಿನ ನಮ್ಮ ಬಹುತೇಕ ಸಮೂಹ ಮಾಧ್ಯಮಗಳೂ ಇಂದು ಆ ದುಷ್ಟಶಕ್ತಿಗಳ ಪೋಷಕರಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ. ಎಂತಹ ಗಂಭೀರ ವಿಷಯವನ್ನೂ ರಂಜನೀಯ ಮಾಡುವಲ್ಲಿ ಮತ್ತು ತನ್ಮೂಲಕ ತಾವು ಪ್ರಸ್ತುತತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಕೆಲಸ ನಡೆದಿದೆ. ಮತ್ತು ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಾಗಬೇಕಿದ್ದ ನಮ್ಮ ಅನೇಕ ಪ್ರಗತಿಪರ ಚಿಂತಕರೂ ಇಂದು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಮುಟ್ಟಿದ್ದಾರೆ. ಗುಂಪಿನಲ್ಲಿರುವಾಗಲಾದರೂ ನೈತಿಕತೆ ಉಳಿಸಿಕೊಳ್ಳುವ ಮತ್ತು ಅದರ ಅವಶ್ಯಕತೆ ಬಗ್ಗೆ ಮಾತನಾಡುವ ಈ ಜನರೂ ಇಂದು ಕಮ್ಮಿಯಾಗುತ್ತಾ ಹೋಗುತ್ತಿದ್ದಾರೆ. ಇದು ನಮ್ಮ ಸಮಕಾಲೀನ ಸಂದರ್ಭದ ಮಹಾದುರಂತಗಳಲ್ಲೊಂದು.

ಇಂತಹ ಸಂದರ್ಭದಲ್ಲಿ ನಮ್ಮ ವರ್ತಮಾನದ ಆಗುಹೋಗುಗಳನ್ನು ಮತ್ತು ಸವಾಲುಗಳನ್ನು ಗಂಭೀರವಾಗಿ ವಿಶ್ಲೇಷಿಸಿ ಮತ್ತು ವಿಮರ್ಶಿಸಿ, ಹಾಗೆಯೇ ಭವಿಷ್ಯದ ದಿನಗಳು ಮತ್ತು ಕಾರ್ಯಗಳು ಹೇಗಿರಬೇಕು ಎಂದು ಸ್ಪಷ್ಟವಾಗಿ ಹೇಳುವ ತುರ್ತು ಇಂದಿನ ನಮ್ಮ ಸಮಾಜಕ್ಕಿದೆ ಎಂದು ನನಗನ್ನಿಸಿತು. ಆ ನಿಟ್ಟಿನಲ್ಲಿ ಒಂದು ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ಅದು ಸ್ಪಷ್ಟವಾಯಿತು. ಅದು ಇಂಟರ್ನೆಟ್ ಮಾಧ್ಯಮದಲ್ಲಿ ಹಲವಾರು ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದ ಸಾಧ್ಯ ಎನ್ನಿಸಿತು. ಅದರ ಕಾರ್ಯರೂಪವೇ “ವರ್ತಮಾನ”.

ಯಾರು ಒಪ್ಪಲಿ ಬಿಡಲಿ, ಕಳೆದ ನಾಲ್ಕೈದು ಸಾವಿರ ವರ್ಷಗಳ ತನ್ನ ವಿಕಾಸದ ಹಾದಿಯಲ್ಲಿ ಮನುಷ್ಯ ಕೆಲವೊಂದು ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಬಂದಿದ್ದಾನೆ. ವ್ಯಕ್ತಿ ಮತ್ತು ಸಮುದಾಯಗಳ ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ, ಪ್ರಜಾಪ್ರಭುತ್ವ; ಇತ್ಯಾದಿ. ಇಲ್ಲಿ “ವರ್ತಮಾನ”ದಲ್ಲಿಯೂ ಅಂತಹ ಮೌಲ್ಯಗಳನ್ನು ಒಪ್ಪಿಕೊಂಡವರಿಗೆ ಮಾತ್ರ ಸ್ಥಾನವಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನ, ಸಮಾನತೆ ಮತ್ತು ಅದನ್ನು ನಮ್ಮ ಕಾಲಘಟ್ಟದಲ್ಲಿ ಸಾಧಿಸಿಕೊಳ್ಳಲು ಯತ್ನಿಸುವ ಸಾಮಾಜಿಕ ನ್ಯಾಯ; ಇವು ನಾವು ಒಪ್ಪಿಕೊಂಡ ಸಾರ್ವಜನಿಕ ಮೌಲ್ಯಗಳು. ವೈಯಕ್ತಿಕ ಜೀವನದಲ್ಲಿ ಮೌಲ್ಯಗಳಿಗೆ ಬದ್ಧವಾಗಿ ಜೀವನ ಸಾಗಿಸುವುದು ಮತ್ತು ಪ್ರಾಮಾಣಿಕತೆ ಉಳಿಸಿಕೊಳ್ಳುವುದು ನಮ್ಮ ಜೀವನ ಮೌಲ್ಯಗಳಾಗಬೇಕು. ಈ ಒಟ್ಟೂ ನೆಲೆಯಲ್ಲಿ ನಮಗೆ ಬಹುಶಃ ಗಾಂಧಿಗಿಂತ ಮತ್ತೊಬ್ಬ ಆದರ್ಶಪ್ರಾಯರಿಲ್ಲ. ಇಂತಹ ಒಂದು ಸಮಾನಮನಸ್ಕರ ಕ್ರಿಯಾಶೀಲ ಗುಂಪಿನಿಂದ ಏನೂ ಸಾಧ್ಯವಿದೆ ಎನ್ನುವುದು ನನ್ನ ನಂಬಿಕೆ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ, ನಮ್ಮ ವರ್ತಮಾನದ ಸಂದಿಗ್ಧ ಸ್ಥಿತಿಯನ್ನು ನಮ್ಮದೇ ನೆಲೆಯಲ್ಲಿ ಅವಲೋಕಿಸುತ್ತ, ಭವಿಷ್ಯದ ದಿನಗಳು ಹೇಗಿರಬೇಕು ಎಂದು ಪರಿಭಾವಿಸುತ್ತ, ಅದರ ಕಾರ್ಯಸಾಧನೆಗೆ ಕ್ರಿಯಾಶೀಲರಾಗಲು ದಾರಿಗಳನ್ನು ಹುಡುಕುವ ಈ “ವರ್ತಮಾನ”ದ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನಿರಿಕ್ಷಿಸುತ್ತೇವೆ. ಕನ್ನಡ ಮತ್ತು ಕರ್ನಾಟಕದ ನೆಲೆಯಲ್ಲಿ ಪರ್ಯಾಯ ಸಮೂಹ ಮಾಧ್ಯಮವೊಂದರ ಕಾರ್ಯಸಾಧ್ಯತೆಯ ಈ ಪ್ರಯತ್ನದಲ್ಲಿ ನಮ್ಮ ಜೊತೆ ನೀವು ಹಲವಾರು ರೀತಿಯಲ್ಲಿ ತೊಡಗಿಸಿಕೊಳ್ಳಬಹುದು.

  • ಈ “ವರ್ತಮಾನ”ದ ಚೌಕಟ್ಟಿನಲ್ಲಿ ಸೇರುವ ಯಾವುದೇ ವಿಷಯದ ಬಗ್ಗೆ ನಿಮ್ಮ ಲೇಖನ, ಆಡಿಯೋ, ಅಥವ ವಿಡಿಯೋವನ್ನು ನಮಗೆ ಕಳುಹಿಸಬಹುದು.
  • ಇಲ್ಲಿರುವ ಲೇಖನಗಳ ಕುರಿತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
  • ಓದಿ, ನೋಡಿ, ಮೆಚ್ಚಿಗೆಯಾದದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
  • ತಮಗೆ ಸಾಧ್ಯವಾದಲ್ಲಿ ಕೆಲವೊಂದು ಕಾರ್ಯಗಳಿಗೆ ಅನುಕೂಲವಾಗುವಂತೆ ಹಣದ ಸಹಾಯ ಸಹ ಮಾಡಬಹುದು.

ಲೇಖನಗಳನ್ನು ಕಳುಹಿಸಲು ಅಥವ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

editor@vartamaana.com

ಅಥವ

“ವರ್ತಮಾನ”
ನಂ. ೨೨೨, B4, ತುಂಗಭದ್ರ ಬ್ಲಾಕ್,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ
ಬೆಂಗಳೂರು – ೫೬೦೦೪7

ದೂ: ೯೬೮೬೦೮೦೦೦೫

 

 

ತಮ್ಮ ವಿಶ್ವಾಸಿ,
ರವಿ ಕೃಷ್ಣಾ ರೆಡ್ಡಿ