Tag Archives: ಮಾಧ್ಯಮ

ಪತ್ರಿಕೋದ್ಯಮದ ಪರಿಪಾಟಲು

-ಡಾ. ಎನ್. ಜಗದೀಶ್ ಕೊಪ್ಪ

ಮಿತ್ರರೆ, ಈ ದಿನ ಅಂದರೆ, ದಿನಾಂಕ 15-12-11ರ ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯವನ್ನು ನೀವು ಓದಿರಬಹುದೆಂದು ಭಾವಿಸಿದ್ದೇನೆ. ಬೆಳಿಗ್ಗೆ ಅದನ್ನು ಓದಿದ ಮೇಲೆ ನಮ್ಮಿಬ್ಬರ ನಡುವೆ ಅಂತಹ ಗಾಢ ಸಂಬಂದ ಇಲ್ಲದಿದ್ದರೂ ಕೂಡ ಹಲವು ಭೇಟಿ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣದಲ್ಲಿ ಒಟ್ಟಾಗಿ ವೇದಿಕೆ ಹಂಚಿಕೊಂಡ ಪರಿಣಾಮ  ನನಗೆ ಮಿತ್ರರೇ ಆಗಿರುವ ವಿಶ್ವೇಶ್ವರ ಭಟ್ ಇದನ್ನು ಬರೆಯಬಾರದಿತ್ತು ಎಂದು ಆ ಕ್ಷಣದಲ್ಲಿ ನನಗನಿಸಿತು.

ಏಕೆಂದರೆ, ಮೂರು ದಶಕಗಳ ಕಾಲ ಪತ್ರಿಕೋದ್ಯಮಕ್ಕೆ ಮಣ್ಣು ಹೊತ್ತಿರುವ ನಾನು, ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷವಿಲ್ಲದೆ ನಿರ್ಭಾವುಕತನದಿಂದ ನಡೆದುಕೊಳ್ಳುವುದೇ ಪತ್ರಕರ್ತನ ಮೂಲಭೂತ ಕರ್ತವ್ಯ ಎಂದು ನಂಬಿದವನು.

ಕಳೆದ 15 ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ ಭಟ್ಟರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಗ್ಗೆ ಅವರು ತಮ್ಮ ಕನ್ನಡಪ್ರಭದ ಸಂಪಾದಕೀಯದಲ್ಲಿ ಆಕ್ರೋಶವನ್ನು ಹೊರಚೆಲ್ಲಿದ್ದಾರೆ. ಅದು ಎಲ್ಲಿಯವರೆಗೆ ಸಾಗಿದೆ ಎಂದರೆ, ಪಟ್ಟಣಶೆಟ್ಟಿಯವರ ಮೊದಲ ಪತ್ನಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಚಪ್ಪಲಿಯಲ್ಲಿ ಹೊಡೆದ ಪ್ರಸಂಗ ಕೂಡ ದಾಖಲಾಗಿದೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯವನ್ನು ಓದಿಕೊಂಡಿರುವ ಎಲ್ಲರೂ ಸಿದ್ದಲಿಂಗ ಪಟ್ಟಣಶೆಟ್ಟಿಯವರ ದಾಂಪತ್ಯದ ಕಹಿನೆನಪುಗಳನ್ನು ಬಲ್ಲರು. ಹಲವುಕಡೆ ಇದನ್ನು ಸ್ವತಃ ಅವರೇ ದಾಖಲಿಸಿದ್ದಾರೆ. ನನ್ನ ಪ್ರಶ್ನೆ ಇದಲ್ಲ, ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಸಂಪಾದಕನೊಬ್ಬ ಸಂಪಾದಕೀಯ ಪುಟವನ್ನ ಹೀಗೆ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದೆ? ಜಿಲ್ಲಾ ಮಟ್ಟದಲ್ಲಿ ಸಂಪಾದಕನೇ ಪ್ರಕಾಶಕ, ಮುದ್ರಕ, ಕಡೆಗೆ ಓದುಗ ಕೂಡ ಆಗಿರುವುದರಿಂದ ಇಂತಹ ಘಟನೆಗಳು ಸಾಮಾನ್ಯ.

ಇಡೀ ಘಟನೆಯಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟರ ತಪ್ಪು ಎದ್ದು ಕಾಣುತಿದೆ ನಿಜ. ಅವರನ್ನು ತರಾಟೆಗೆ ತೆಗೆದುಕೊಳ್ಳಲು ಭಟ್ಟರಿಗೆ ಅವರದೇ ಆದ ಬ್ಲಾಗ್, ವೆಬ್‌ಸೈಟ್, ಫೇಸ್‌ಬುಕ್ ತಾಣವಿದ್ದದ್ದರಿಂದ ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತು. ನಮ್ಮಂತಹ ಸಾರ್ವಜನಿಕರ ಜೊತೆ ಒಡನಾಡುವ ಪತ್ರಕರ್ತರಿಗೆ ಇಂತಹ ಆಪಾದನೆ, ಟೀಕೆ ಎಲ್ಲವೂ ಸಾಮಾನ್ಯ. ಇವುಗಳಿಗೆ ನಾವು ಗುರಿಯಾಗದೆ, ನಾಲ್ಕು ಗೋಡೆಯ ನಡುವೆ ಇರುವ ನಮ್ಮ ಪತ್ನಿ ಅಥವಾ ಮಕ್ಕಳು ಗುರಿಯಾಗಲು ಸಾಧ್ಯವಿಲ್ಲ. ನಾವು ತಪ್ಪು ಮಾಡದಿದ್ದಾಗ ಇಲ್ಲವೆ ಅನಾವಶ್ಯಕಕವಾಗಿ ನಮ್ಮ ಮೇಲೆ ಆರೋಪ ಹೊರಿಸಿದಾಗ ಮುಖಾ ಮುಖಿಯಾಗಿ ನಿಂತು ಝಾಡಿಸುವುದು ಉತ್ತಮ ಮಾರ್ಗವೇ ಹೊರತು ಪರೋಕ್ಷವಾಗಿ ಪತ್ರಿಕೆಯ ಮೂಲಕ ಬೆಂಕಿ ಕಾರುವುದು ಉತ್ತಮ ಬೆಳವಣಿಗೆಯಲ್ಲ.

ಕೆಲವೆಡೆ ಭಟ್ಟರ ಸಂಪಾದಕೀಯ ಸಾಲುಗಳು ಅವರ ಟೀಕಾಕಾರಿಗೆ ಎಚ್ಚರಿಕೆ ನೀಡುವಂತಿವೆ. ಇಡೀ ರಾಜ್ಯಾದ್ಯಂತ ನನ್ನ ಪತ್ರಿಕೆ, ಛಾನಲ್‌ನ ವರದಿಗಾರರಿದ್ದಾರೆ, ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಮಿತ್ರರಿದ್ದಾರೆ, ಅವರ ಮೂಲಕ ಕ್ಷಣ ಮಾತ್ರದಲ್ಲಿ ವಿಷಯ ಸಂಗ್ರಹಿಸಬಲ್ಲೆ ಎಂಬುದರ ಮೂಲಕ ಭಟ್ಟರು ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮಕ್ಕೆ ಇಳಿಯುತಿದ್ದಾರೆನೋ ಎಂಬ ಸಂಶಯ ಆತಂಕ ಕಾಡತೊಡಗಿದೆ.

ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುತ್ತಾ ಬದುಕು ಕಟ್ಟಿಕೊಂಡಿರುವ ನಾನು ಭಟ್ಟರು ಅನುಭವಿಸಿದಂತಹ ನೂರಾರು ಅಪಮಾನ, ಯಾತನೆಗಳನ್ನು ಅನುಭವಿಸಿದ್ದೇನೆ. ಎದುರಿಗೆ ಸಿಕ್ಕಾಗ ಮುಖ ಮುಸುಡಿ ನೋಡದೆ ಎದೆಗೆ ಒದ್ದ ಹಾಗೆ ಮಾತನಾಡಿದ್ದೇನೆ. ಆದರೆ, ನನ್ನನ್ನು ಟೀಕಿಸುವವರ ಬಗ್ಗೆ ದ್ವೇಷಿಸುವವರ ಬಗ್ಗೆ ಅಕ್ಷರ ರೂಪದಲ್ಲಿ ನಾನೆಂದು ಸೇಡು ತೀರಿಸಿಕೊಳ್ಳಲಾರೆ. ಏಕೆಂದರೆ, ಅಕ್ಷರ ದಾಖಲಾಗುವ ಮಾಧ್ಯಮ. ಅಲ್ಲಮನ ಈ  ವಚನದ ಸಾಲು ನಾನು ಸಿಟ್ಟಿಗೆದ್ದಾಗಲೆಲ್ಲಾ ನನ್ನನ್ನು ತಡೆಯುತ್ತದೆ. “ಬರೆಯಬಾರದು ನೋಡಾ ಅಳಿಸಬಾರದ ಲಿಪಿಯ”. ನಾವು ಬರೆದ ಲಿಪಿ ಶಾಶ್ವತವಾಗಿ ಉಳಿಯುವಂತಿರಬೇಕು. ಹಾಗಾಗ ಬೇಕೆಂದರೆ, ಲೇಖಕ, ಪತ್ರಕರ್ತನಾದವನು ಬರವಣಿಗೆಯಲ್ಲಿ ಸಂಯಮ ಕಾಪಾಡಿಕೊಳ್ಳಬೇಕು. ಇದು ನನ್ನ ನಂಬಿಕೆ.

ಮಾಧ್ಯಮ ಅಕಾಡೆಮಿಗೆ ಮಂಗಳಾರತಿ

-ಡಾ. ಎನ್. ಜಗದೀಶ್ ಕೊಪ್ಪ

ಕಳೆದ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು, ಪತ್ರಕರ್ತರು ತಮ್ಮ ವೃತ್ತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾತನಾಡಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಅಕಾಡೆಮಿಯ ನಿಷ್ಕ್ರಿಯತೆಯ ಬಗ್ಗೆ ಅಧ್ಯಕ್ಷರು ಮತ್ತು ಸದಸ್ಯರ ಮರ್ಮಕ್ಕೆ ತಾಗುವಂತೆ ಮಾತನಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಸ್ತಿತ್ವದಲ್ಲಿದೆ ಎಂದು ನನಗೆ ಗೊತ್ತಾಗಿದ್ದು ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಮಾತ್ರ. ಸರ್ಕಾರ ಕೊಟ್ಟ ಅನುದಾನವನ್ನು ಪರಿಣಾಮಾಕಾರಿಯಾಗಿ ಬಳಸಲಾರದಕ್ಕೆ, ಹಾಗೂ ಅಕಾಡೆಮಿಯ ಭವಿಷ್ಯದ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದರೂ ಸಹ ಪ್ರಸ್ತಾವನೆಯನ್ನ ಸಲ್ಲಿಸಲಾರದ ಸೋಮಾರಿತನದ ಬಗ್ಗೆ ನೇರವಾಗಿ ಮುಖ್ಯಮಂತ್ರಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಪಾಪ ನಿಷ್ಕ್ರಿಯತೆ ಮತ್ತು ಅಬ್ಬೆಪಾರಿತನದ ಪ್ರತಿರೂಪದಂತಿರುವ ಅಧ್ಯಕ್ಷ ಪರಮೇಶ್ ತಾನೆ ಏನು ಮಾಡಬಲ್ಲರು?

ಇದರಲ್ಲಿ ಸರ್ಕಾರದ ಪಾತ್ರವೂ ಇದೆ. ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನ, ಅಧ್ಯಕ್ಷರನ್ನ ನೇಮಕ ಮಾಡುವ ಪ್ರಕ್ರಿಯೆ ಗಮನಿಸಿದರೆ, ಅಕಾಡೆಮಿಯೆಂಬುದು, ನಿಶ್ಯಕ್ತ ಪತ್ರಕರ್ತರ ನಿರಾಶ್ರಿತರ ಶಿಬಿರವೇನೊ ಎಂಬಾಂತಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಮಾಧ್ಯಮಗಳ ಬಗ್ಗೆ ಗಂಭೀರ ಚರ್ಚೆ ನಡೆಯುತಿದ್ದು, ಮಾದ್ಯಮಗಳ ಭಾಷೆ, ಕಾರ್ಯವೈಖರಿ ಮುಂತಾದ ವಿಷಯಗಳ ಬಗ್ಗೆ ಪ್ರಜ್ಞಾವಂತ ಓದುಗರು, ವೀಕ್ಷಕರು ಧ್ವನಿ ಎತ್ತಿದ್ದಾರೆ. ಎತ್ತುತ್ತಿದ್ದಾರೆ. ಮಾಧ್ಯಮ ಮತ್ತು ಜನಸಾಮಾನ್ಯರ ನಡುವೆ ಸಂವಹನದ ಸೇತುವೆಯಾಗಬೇಕಿದ್ದ ಅಕಾಡಮಿ ಈ ನಿಟ್ಟಿನಲ್ಲಿ ಏನು ಕೆಲಸ ಮಾಡಿದೆ? ಈ ಕ್ಷೇತ್ರಕ್ಕೆ ಬರುತ್ತಿರುವ ಹೊಸಬರಿಗೆ ಅನುಕೂಲವಾಗುವಂತೆ ಇತ್ತೀಚೆಗೆ ಯಾವ ಕೃತಿ ಪ್ರಕಟಿಸಿದೆ? ಯಾವ ವಿಚಾರ ಸಂಕಿರಣ ಏರ್ಪಡಿಸಿದೆ? ಹಾಗೆ ನೋಡಿದರೆ, ಪ್ರೆಸ್‌ಕ್ಲಬ್ ಪುಸ್ತಕಗಳ ಪ್ರಕಟಣೆಯಲ್ಲಿ ಅಕಾಡೆಮಿಗಿಂತ ಸಾವಿರ ಪಾಲು ವಾಸಿ. ಕಳೆದ ಮೂರು ವರ್ಷಗಳಲ್ಲಿ ಅದರ ಪ್ರಕಟಣೆಗಳ ಸಂಖ್ಯೆ ಐವತ್ತು ದಾಟಿದೆ.

ಇವತ್ತು ಮಾಧ್ಯಮ ಪ್ರಶಸ್ತಿಗಳ ಮೌಲ್ಯ ಕೂಡ ಚರ್ಚೆಗೆ ಒಳಪಟ್ಟಿದೆ. ಕಳೆದ ವಾರ ಮಂಡ್ಯದಲ್ಲಿ ನಡೆದ ಪತ್ರಿಕೋದ್ಯಮ ವಿಚಾರ ಸಂಕಿರಣದ ಸಂದರ್ಭದಲ್ಲಿ ಮಾತನಾಡಿದ ಗೆಳೆಯ ದಿನೇಶ್ ಅಮಿನ್‌ಮಟ್ಟು ಪ್ರಶಸ್ತಿ ಸ್ವೀಕಾರದ ಬಗ್ಗೆ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು. “ಪ್ರಶಸ್ತಿ ಸ್ವೀಕರಿಸದಿದ್ದರೆ, ಅಹಂಕಾರ ಎನ್ನುತ್ತಾರೆ, 25 ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತನಾಗಿ ದುಡಿದ ನಾನು ಕೇವಲ ಎರಡು ವರ್ಷದಲ್ಲಿ ಪತ್ರಿಕೋದ್ಯಮಕ್ಕೆ ಬಂದು ಲಾಭಿ ಮೂಲಕ ಪ್ರಶಸ್ತಿ ಪಡೆಯುವವನ ಜೊತೆ ಕುಳಿತು ಅಕಾಡೆಮಿ ಗೌರವವನ್ನು ಹೇಗೆ ಸ್ವೀಕರಿಸಲಿ? ನನಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಿಂತ ಈಗಾಗಲೇ ಪಡೆದಿರುವ ಖಾದ್ರಿ ಶಾಮಣ್ಣ ಪ್ರಶಸ್ತಿ, ಮತ್ತು ಬೆಂಗಳೂರಿನ ಸಂಬುದ್ಧ ಟ್ರಸ್ಟ್ ನೀಡಿರುವ ಗೌರವ ಹೆಚ್ಚು ತೃಪ್ತಿ ನೀಡಿವೆ.” ಇದು ದಿನೇಶ್ ಅಮಿನ್ ಒಬ್ಬರ ಮಾತಲ್ಲ, ತನ್ನ ವೃತ್ತಿಯ ಬಗೆಗಿನ ಬದ್ಧತೆ, ಘನತೆ, ಕಾಳಜಿ ಇಟ್ಟುಕೊಂಡಿರುವ ಪ್ರತಿಯೊಬ್ಬ ಪತ್ರಕರ್ತನ ಮಾತು ಕೂಡ ಹೌದು. ಪ್ರಶಸ್ತಿಗೆ ನಾಲ್ಕು ಜನ ಯೋಗ್ಯರನ್ನ ಆಯ್ಕೆ ಮಾಡಿ, ಅವರ ಜೊತೆ ರಾಜಕಾಣಿಗಳಿಗೆ ಬಕೆಟ್ ಹಿಡಿದ ಎಂಟು ಜನ ಭಟ್ಟಂಗಿಗಳನ್ನು ಆಯ್ಕೆ ಮಾಡಿದರೆ ಪ್ರಶಸ್ತಿಯ ಮೌಲ್ಯ ವೃದ್ಧಿಸುವುದಿಲ್ಲ ಎಂಬ ವಾಸ್ತವ ಸತ್ಯವನ್ನ ಅಕಾಡೆಮಿ ಅರಿಯ ಬೇಕಾಗಿದೆ. ಬಹುತೇಕ ಪ್ರಶಸ್ತಿಗಳು ನಗರ ಕೇಂದ್ರಿತವಾಗಿದ್ದು, ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ, ನಾನು ದಕ್ಷಿಣ ಕರ್ನಾಟಕದ ಮಂಡ್ಯದವನಾಗಿದ್ದು ಪ್ರಜ್ಞಾಪೂರ್ವಕವಾಗಿ ಈ ಮಾತನ್ನು ಹೇಳುತಿದ್ದೇನೆ. ಕಳೆದ ಹತ್ತು ವರ್ಷದ ಪ್ರಶಸ್ತಿ ಪಟ್ಟಿಯನ್ನ ಅಕಾಡೆಮಿ ಪ್ರಕಟಿಸಿದರೆ, ಸತ್ಯಾಂಶ ಹೊರಬೀಳಲಿದೆ.

ಪ್ರಶಸ್ತಿಯ ಈ ಅಧ್ವಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪಾಲು ಕೂಡ ಇದೆ. ಇಂದು ಆ ಸಂಘದಲ್ಲಿ ಕಾರ್ಯನಿರತ ಪ್ರತ್ರಕರ್ತರಿಗಿಂತ ಕಾರ್ಯ ಮರೆತ ಪತ್ರಕರ್ತರು ಶೇ.90 ಮಂದಿ ಇದ್ದಾರೆ. ಎಂದೋ, ಯಾವ ದಶಕದಲ್ಲೋ, ಒಂದೆರಡು ವಾರ ಅಥವಾ ತಿಂಗಳು ಪತ್ರಿಕೆ ನಡೆಸಿ ಸಂಪಾದಕ ಎಂಬ ಮುದ್ರೆಯನ್ನ ಹಣೆಗೆ ಮತ್ತು ಎದೆಗೆ ಒತ್ತಿಕೊಂಡು ಒಡಾಡುವವರೆ ಸಂಘದಲ್ಲಿ ಹೆಚ್ಚು ಮಂದಿ ಇದ್ದಾರೆ, ಏಕೆಂದರೆ, ಈ ದೇಶದಲ್ಲಿ ರಾಜಕಾರಣಿಗೆ ಮತ್ತು ಪತ್ರಕರ್ತನಿಗೆ ನಿವೃತ್ತಿಯೇ ಇಲ್ಲ, ಅವರೆಲ್ಲರೂ ಸಾಯುವವರೆಗೂ ರಾಜಕಾರಣಿಗಳು ಮತ್ತು ಪತ್ರಕರ್ತರು. ಈ ಕುರಿತಂತೆ ಅಧ್ಯಕ್ಷರಾಗಿರುವ ಮಿತ್ರ ಗಂಗಾಧರ್ ಮೊದಲಿಯಾರ್‌ಗೆ ನಿರಂತರ ಪ್ರಕಟಣೆಯಲ್ಲಿರುವ ಹಾಗೂ ಮಾಧ್ಯಮ ಪಟ್ಟಿಯಲ್ಲಿರವ ಪತ್ರಿಕೆಗಳ ಪತ್ರಕರ್ತರಿಗೆ ಮಾತ್ರ ಸದಸ್ಯತ್ವ ನೀಡುವ ಕುರಿತು ಸಂಘದ ನಿಯಾಮಾವಳಿಗಳನ್ನು ಬದಲಿಸುವಂತೆ ನಾನೇ ಸಲಹೆ ನೀಡಿದ್ದೆ. ಈ ರೀತಿ ಪರಿಷ್ಕರಿಸಿದಾಗ ಮಾತ್ರ ನಿಜವಾದ ಪತ್ರಕರ್ತರು ವೃತ್ತಿಯಲ್ಲಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಜಿಲ್ಲಾ ಘಟಕಗಳು ಶಿಪಾರಸ್ಸು ಮಾಡುವ ಅನೇಕ ಅಪಾತ್ರರು ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಈಗ ನಡೆಯುತ್ತಿರುವುದು ಅದೇ ಆಗಿದೆ.

ನನ್ನ ಈ ಲೇಖನದ ಉದ್ದೇಶ ಯಾರನ್ನೂ ಗುರಿಮಾಡಿಕೊಂಡು ಟೀಕಿಸುವುದಲ್ಲ. ಅಕಾಡೆಮಿಯ ಅವಧಿ ಅಂತ್ಯಗೊಳ್ಳುತಿದ್ದು, ಮುಂಬರುವ ಅಧ್ಯಕ್ಷರು, ಸದಸ್ಯರು ಈ ಅಂಶಗಳತ್ತ ಗಮನ ಹರಿಸಲಿ ಎಂಬುದೇ ನನ್ನ ಆಶಯ ಮತ್ತು ಕಾಳಜಿ. ಕಳೆದ ವಾರ ಕನ್ನಡ ಭಾಷೆಯ ವಿರೋಧಿಯಾದ ಮರಾಠಿ ಪತ್ರಿಕೆಯೊಂದರ ಹುಬ್ಬಳ್ಳಿ ವರದಿಗಾರನೊಬ್ಬ ಧಾರವಾಡ ಜಿಲ್ಲಾಧ್ಯಕ್ಷರ ಶಿಪಾರಸ್ಸು ಪತ್ರ ತೆಗೆದುಕೊಂಡು ಮಾಧ್ಯಮ ಅಕಾಡೆಮಿ ಸದಸ್ಯತ್ವಕ್ಕೆ ಸಚಿವರು, ಶಾಸಕರನ್ನು ಹಿಡಿದುಕೊಂಡು ಓಡಾಡುತ್ತಿದ್ದಾನೆ. ಸದಸ್ಯರ ಗಮನಕ್ಕೆ ಬಾರದೆ ಈ ಕೃತ್ಯ ನಡೆದಿದ್ದು ಈಗ ಈ ಇಬ್ಬರ ರಾಜೀನಾಮೆಗೆ ಒತ್ತಾಯಿಸಲಾಗಿದೆ. ಇಂತಹ ಅವಾಂತರಗಳು ನಡೆಯದಂತೆ ಸರ್ಕಾರ ಕೂಡ ಎಚ್ಚರಿಕೆ ವಹಿಸಬೇಕಾಹಿದೆ.

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

– ಡಾ. ಎನ್ ಜಗದೀಶ್ ಕೊಪ್ಪ.

ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸಿದ್ಧ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಬಳಗದ ಇಂಗ್ಲೀಷ್ ಛಾನಲ್ ಟೈಮ್ಸ್ ನೌ ಅವಸರಕ್ಕೆ ಬಲಿ ಬಿದ್ದು ಮಾಡಿದ ಒಂದು ಸಣ್ಣ ಪ್ರಮಾದಕ್ಕೆ ಈಗ ತೆರಬೇಕಾಗಿರುವ ದಂಡ ಸಾಮಾನ್ಯವಾದುದಲ್ಲ. ಬರೋಬ್ಬರಿ ನೂರು ಕೋಟಿ ರೂಪಾಯಿಗಳು.

ಸುದ್ಧಿ ಚಾನಲ್ ಗಳ ಸ್ಪರ್ಧೆಯ ನಡುವೆ ಎಲ್ಲರಿಗಿಂತ ಮುಂಚಿತವಾಗಿ ಸುದ್ಧಿ ತಲುಪಿಸುವ ಭರದಲ್ಲಿ ಅದರ ಖಚಿತತೆ, ಔಚಿತ್ಯ, ಸುದ್ಧಿಮೂಲಗಳ ಪ್ರಾಮಾಣಿಕತೆ ಇವೆಲ್ಲವನ್ನು ಮರೆತು ಅವಸರವಾಗಿ ತಪ್ಪು ಮಾಹಿತಿಗಳನ್ನು ಸುದ್ಧಿಯ ನೆಪದಲ್ಲಿ ಭಿತ್ತರಿಸುವುದು ಇವತ್ತು ಭಾರತದ ಎಲ್ಲಾ ಭಾಷೆಗಳ ಛಾನಲ್ ಗಳ ಕೆಟ್ಟ ಛಾಳಿಯಾಗಿದೆ.

ಇಂತಹದೆ ತಪ್ಪನ್ನು ಟೈಮ್ಸ್ ನೌ ಕೂಡ ಮಾಡಿತು.

2008ರಲ್ಲಿ ಗಾಜಿಯಾಬಾದ್ ನ್ಯಾಯಾಲಯದ ನೌಕರರ ಭವಿಷ್ಯ ನಿಧಿಹಣ ದುರುಪಯೋಗವಾದ ಹಗರಣದಲ್ಲಿ ನ್ಯಾಯಾಧೀಶ ಪಿ.ಕೆ. ಸಮಂತ್ ಅವರ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ 2008ರ ಸೆಪ್ಟೆಂಬರ್ 10 ರಂದು ಟೈಮ್ಸ್ ನೌ ಚಾನಲ್ ಸುದ್ಧಿ ಬಿತ್ತರಿಸುತ್ತಾ ಸಮಂತರ ಭಾವಚಿತ್ರ ಎಂದು ಭಾವಿಸಿ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪುಣೆ ಮೂಲದ ಸಾವಂತ್ ರವರ ಭಾವಚಿತ್ರ ಪ್ರಕಟಿಸಿ ಪ್ರಮಾದ ಎಸಗಿತು.

ಇದರಿಂದ ಆಕ್ರೋಶಗೊಂಡ ಸಾವಂತರು ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ನೂರು ಕೋಟಿ ರೂ.ಗಳಿಗೆ ಪರಿಹಾರ ಕೋರಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದರು. ನ್ಯಾಯಲಯ ಅವರ ಮನವಿಯನ್ನು ಎತ್ತಿ ಹಿಡಿದು ಪರಿಹಾರ ನೀಡುವಂತೆ ಆದೇಶ ನೀಡಿತು. ಟೈಮ್ಸ್ ನೌ ಛಾನಲ್ ಇದರ ವಿರುದ್ಧ ಬಾಂಬೆ ಹೈಕೋರ್ಟ್  ಮೊರೆ ಹೊಕ್ಕಾಗ  ಹೈಕೋರ್ಟ್  ಸಹ ಸಾವಂತರ ಪರ ತೀರ್ಪು  ನೀಡಿ ನ್ಯಾಯಾಲಯದಲ್ಲಿ 20 ಕೋಟಿ ಠೇವಣಿ ಹಾಗೂ 80 ಕೋಟಿ ರೂ ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸೂಚಿಸಿತು.

ಅಂತಿಮವಾಗಿ ಟೈಮ್ಸ್ ಸಂಸ್ಥೆ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋದರೆ, ದ್ವಿಸದಸ್ಯ ಪೀಠದ ನ್ಯಾಯಮೂ ರ್ತಿಗಳಾದ ಜಿ. ಎಸ್. ಸಿಂಘ್ವಿ ಹಾಗು ಎಸ್. ಜೆ. ಮುಖ್ಯೋಪಾಧ್ಯಾಯ ಚಾನಲ್ನ ಅಜರ್ಿಯನ್ನು ತಿರಸ್ಕರಿಸಿ, ಹೈಕೋರ್ಟ್  ಆದೇಶಕ್ಕೆ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿತ್ತರು.

ಇಲ್ಲಿನ ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾನ ನಷ್ಟಕ್ಕೆ ಒಳಗಾದರೆ, ಅವನು ನ್ಯಾಯಾಲಯದ ಮೂಲಕ ಕೋರುವ ಪರಿಹಾರ ಮೊತ್ತದ ಶೇ.10 ರಷ್ಟು ಹಣವನ್ನು ಮೊಕದ್ದಮೆ ದಾಖಲಿಸುವಾಗ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ಅವನು ಮಾನಹಾನಿಯ ಬಗ್ಗೆ ಸಾಬೀತು ಪಡಿಸಲು ವಿಫಲನಾದರೆ, ಹಣವನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡು ಎದುರಾಳಿಯ ನ್ಯಾಯಲಯದ ವೆಚ್ಚವನ್ನು ಭರಿಸಲು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

ಹಾಗಾದರೆ, ನಿವೃತ್ತ ನ್ಯಾಯಾಧೀಶರಾದ ಸಾವಂತರಿಗೆ 100 ಕೋಟಿ ಪರಿಹಾರ ಕೇಳಲು 10 ಕೋಟಿ ಹಣ ಠೇವಣಿ ಇಡಲು ಎಲ್ಲಿಂದ ಬಂತು? ಇಲ್ಲೇ ಇರುವುದು ಕಾನೂನಿನ ಸಡಿಲವಾದ ಅಂಶ. ಠೇವಣಿ ಕುರಿತಂತೆ ಕಾನೂನಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಿಗೆ ನಿಯಮವನ್ನು ಸಡಿಲಿಸುವ ಕುರಿತಂತೆ ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯ ನೀಡುವಲ್ಲಿ ಎಲ್ಲಾ ಹಂತದಲ್ಲಿ ಕೂಡ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಬ್ಬ ನಿವೃತ್ತ ನ್ಯಾಯಾದೀಶನ ಮರ್ಯಾದೆ ನೂರು ಕೋಟಿ ಬೆಲೆ ಬಾಳಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ನಾನು ಮಾಧ್ಯಮದ ಒಂದು ಭಾಗವಾಗಿದ್ದರೂ ಕೂಡ ಇಂದಿನ ಮಾಧ್ಯಮಗಳ ವರ್ತನೆಯನ್ನು ಸಮರ್ಥಿಸಲು ಸಿದ್ಧನಿಲ್ಲ.

ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ವರದಿಯನ್ನ ಜಾಹಿರಾತು ರೂಪಕ್ಕೆ ಇಳಿಸಿದ ನೀಚವೃತ್ತಿಯ ಕಳಂಕ ಅಂಟಿ ಕೊಂಡಿರುವುದು ಟೈಮ್ಸ್ ಆಫ್ ಇಂಡಿಯಾ ಬಳಗಕ್ಕೆ. ಸ್ವಾತಂತ್ರ ಪೂರ್ವದ ಮುನ್ನ ಬ್ರಿಟೀಷರಿಂದ ಪ್ರಾರಂಭವಾದ ಈ ಪತ್ರಿಕೆ ನಂತರದ ದಿನಗಳಲ್ಲಿ ಮಾರ್ವಾ  ಮನೆತನವಾದ ಜೈನ್ ಕುಟುಂಬಕ್ಕೆ ಸೇರಿದ್ದು, ಆನಂತರ ಲಾಭಕೋರತನವನ್ನು ಗುರಿಯಾಗಿರಿಸಿಕೊಂಡು ಪತ್ರಿಕೆಯಲ್ಲಿ ಪೇಜ್ ತ್ರೀ ಎಂಬ ಮೂರನೇ ದರ್ಜೆಯ ಸಂಸ್ಕೃತಿಯ ವರದಿಯನ್ನ ಪರಿಚಯಿಸಿದ ಹೀನ ಇತಿಹಾಸ ಈ ಪತ್ರಿಕೆ ಜೊತೆ ತಳಕು ಹಾಕಿಕೊಂಡಿದೆ.

ಭಾರತದ ಪತ್ರಿಕೋದ್ಯಮ ಇಂದು ಎಂತಹ ಮಾನಗೆಟ್ಟ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಕೇವಲ ಆರು ತಿಂಗಳ ಹಿಂದೆ ದೆಹಲಿ ಮೂಲದ ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಹೊಸ ಆವೃತ್ತಿ ಪ್ರಾರಂಭಿಸಿತು. ಮೊದಲ ಸಂಚಿಕೆಯ ವರದಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತು.

ವರದಿಯ ಸಾರಾಂಶವೇನೆಂದರೆ, ಇಂದೋರ್ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಲಿಂಗ ಪರಿವರ್ತನೆ ಮಾಡಲಾಗುತ್ತದೆ ಎಂಬ ವಿಷಯ.

ಇಂತಹ ಅವೈಜ್ಞಾನಿಕ ವರದಿಯನ್ನ ಗಮನಿಸಿದ ಹಿಂದೂ ದಿನಪತ್ರಿಕೆ ಈ ಕುರಿತಂತೆ ಭಾರತದ ಮಕ್ಕಳ ತಜ್ಞರೂ ಸೇರಿದಂತೆ, ಲಂಡನ್, ನ್ಯೂಯಾರ್ಕ್ ನಗರದ ವೈದ್ಯರನ್ನು ಸಂದರ್ಶನ ಮಾಡಿ ಇದೊಂದು ಅವಿವೇಕದ, ಅವೈಜ್ಞಾನಿಕ ವರದಿ ಎಂದು ವಿಶೇಷ ವರದಿ ಪ್ರಕಟಿಸಿತು. ಜೊತೆಗೆ ಒಂದು ಅರ್ಥಪೂರ್ಣ ಟಿಪ್ಪಣಿಯನ್ನು ವರದಿಯ ಕೆಳಭಾಗದಲ್ಲಿ ಪ್ರಕಟಿಸಿತು. ಆ ಟಿಪ್ಪಣಿಯ ಸಾರಾಂಶ ಹೀಗಿತ್ತು:
ಪ್ರಿಯ ಓದುಗರೆ? ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪತ್ರಿಕೆಯ ಪ್ರತಿ ಸ್ಪರ್ಧೆ  ನಿಜ, ಆದರೆ ಈ ಪತ್ರಿಕೆ ಪ್ರಕಟಿಸಿರುವ ಒಂದು ಅವೈಜ್ಞಾನಿಕ ವರದಿಗೆ ವಿವರಣೆ ನೀಡುವುದು ನಮಗೆ ಅನಿವಾರ್ಯ. ಈ ಕಾರಣದಿಂದ ವಾಸ್ತವಿಕ ಸತ್ಯವನ್ನು ಆಧರಿಸಿದ ಈ ವರದಿನ್ನು ಪ್ರಕಟಿಸುತಿದ್ದೇವೆ.

ಕೇಂದ್ರ ಸಕರ್ಾರ ಕೂಡ ವರದಿಯಿಂದ ಬೆಚ್ಚಿ ಬಿದ್ದು ತನಿಖೆಗೆ ತಜ್ಷರ ಸಮಿತಿಯೊಂದನ್ನು ನೇಮಕಮಾಡಿತ್ತು. ಆ ಸಮಿತಿ ಇಂದೋರ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿದ ಮಕ್ಕಳ ದಿನಾಂಕ, ವೇಳೆ, ಲಿಂಗ ಇವುಗಳನ್ನು ಆಧಾರವಾಗಿಟ್ಟುಕೊಂಡು ಆ ಮಕ್ಕಳ ಪೋಷಕರನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಇದೊಂದು ಕಟ್ಟು ಕಥೆಯೆಂಬುದು ಬೆಳಕಿಗೆ ಬಂತು. ಆನಂತರ ಪತ್ರಿಕೆ ಸಾರ್ವಜನಿಕರ ಕ್ಷಮೆ ಯಾಚಿಸಿ, ಈ ಬಗ್ಗೆ ವರದಿ ಮಾಡಿದ ವರದಿಗಾರ್ತಿ ಮತ್ತು ಈ ಸುದ್ಧಿ ಪ್ರಕಟಿಸಿದ ಸ್ಥಾನಿಕ ಸಂಪಾದಕನನ್ನು ಕಿತ್ತು ಹಾಕಿತು.

ಇದು ವ್ಯಕ್ತಿಯೊಬ್ಬ ತಾನು ಮಾಡಿದ ವಾಂತಿಯನ್ನು ತಾನೇ ತಿನ್ನಬೇಕಾದ ಅನಿವಾರ್ಯದ ಸ್ಥಿತಿ. ಇಂತಹ ದಯನೀಯವಾದ ಸ್ಥಿತಿ ನಮ್ಮ ಮಾಧ್ಯಮಗಳಿಗೆ ಬೇಕೆ? ಇದು ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುವವರ ಆತ್ಮಸಾಕ್ಷಿಯ ಪ್ರಶ್ನೆ.

ನಮ್ಮ ಮಾಧ್ಯಮಕ್ಕೆ ತನ್ನ ವೃತ್ತಿಯ ಬಗ್ಗೆ ಘನತೆ, ಗಂಭೀರತೆ ಎಂಬುದು ಇದ್ದಿದ್ದರೆ, ನ್ಯಾಯಾಂಗದ ಕೈಯಲ್ಲಿ ಈ ರೀತಿ ಕಪಾಳ ಮೋಕ್ಷವಾಗುತ್ತಿರಲಿಲ್ಲ.

ಇಂತಹ ಕಪಾಳ ಮೋಕ್ಷದ ಬಿಸಿ ನಮ್ಮ ಕನ್ನಡದ ಸುದ್ಧಿ ಚಾನಲ್ ಗಳಿಗೂ ಮುಟ್ಟಬೇಕಾಗಿದೆ.

ಚೆಡ್ಡಿ ಪತ್ರಕರ್ತರ ಸಂಚಿಗೆ ಪತ್ರಕರ್ತರ ಐ.ಪಿ.ಎಸ್. ಮಗ ಬಲಿಪಶು

ಮಧುಕರ ಶೆಟ್ಟಿ ಸಂದರ್ಶನ ವಿವಾದ – ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರ ಸಂಚಿಗೆ  ಸಮಾಜವಾದಿ ಪತ್ರಕರ್ತರ ಐ.ಪಿ.ಎಸ್ ಮಗ ಬಲಿಪಶು

-ಚಂದ್ರಗಿರಿ

ದಿನಾಂಕ 13-11-2011ರ ಭಾನುವಾರ ಕಾರ್ಪೊರೇಟ್ ಎಂ.ಪಿ. ಮಲೆಯಾಳಿ ರಾಜೀವ್ ಚಂದ್ರಶೇಖರ್ ಮಾಲಿಕತ್ವದಲ್ಲಿ ಬರುವ ಕನ್ನಡ ಪ್ರಭದಲ್ಲಿ ಲೋಕಾಯುಕ್ತದಲ್ಲಿ ಕೆಲಸ ಮಾಡಿದ ಐ.ಪಿ.ಎಸ್. ಅಧಿಕಾರಿ ಮಧುಕರ ಶೆಟ್ಟಿ ಆವರ ಸಂದರ್ಶನ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕೊಳದಲ್ಲಿ ಅಪಾರವಾದ ಹೊಂಡನ್ನು ಸೃಷ್ಟಿ ಮಾಡಿದೆ. ರಜೆ ಮೇಲೆ ಅಮೆರಿಕಾಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿರುವ  ಐ.ಪಿ.ಎಸ್. ಅಧಿಕಾರಿ ಮುಗ್ಧ ಮಧುಕರ ಶೆಟ್ಟೆ ಅವರ ಸಂದರ್ಶನ ಪ್ರಾಮಾಣಿಕತೆಯಿಂದ ಕೂಡಿದ್ದರೂ ಸಮಯೋಚಿತ ಸಂಚಿಗೆ ಬಲಿಯಾಗಿದೆ.

ಈಚಿನ ದಿನಗಳಲ್ಲಿ ಕರ್ನಾಟಕದ ಜನರಿಗೆ  ಲೋಕಾಯುಕ್ತದ ಬಗ್ಗೆ ನಂಬಿಕೆಯನ್ನು ಶಿಥಿಲಗೊಳಿಸುವ ಮಧುಕರ್ ಅವರ ಈ ಸಂದರ್ಶನ ಈ ಸಂದರ್ಭದಲ್ಲಿ ಪ್ರಕಟವಾಗಿರುವುದು ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಮುಂದಾಗಿದ್ದ ಒಂದು ಸಂಸ್ಥೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಅನುಮಾನವಿದೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳು ಮತ್ತು ಕೆಲ ರಾಜಕಾರಣಿಗಳು ಮಧುಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡಿರುವ ದಟ್ಟ ಅನುಮಾನಗಳು ನನ್ನನ್ನು ಕಾಡುತ್ತಿವೆ.

ಕನ್ನಡದ ಹೆಸರಾಂತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮಶೆಟ್ಟರ ಮಗನಾದ ಶ್ರೀ ಮಧುಕರ ಶೆಟ್ಟರು ಪತ್ರಿಕಾ ವಲಯ ಹಾಗೂ ಪ್ರಗತಿಪರ ವಲಯದಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ನಾನು ಬಲ್ಲ ಅನೇಕ ಪತ್ರಿಕಾ ಸ್ನೇಹಿತರು ಅವರು ಉಡುಪಿಯಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದನ್ನು, ಲೋಕಾಯುಕ್ತದಲ್ಲಿ ಭ್ರಷ್ಟರನ್ನು ಮಟ್ಟ ಹಾಕಿದ ಬಗೆಯನ್ನು, ಅದರಲ್ಲೂ ವಿಶೇಷವಾಗಿ ಕಟ್ಟಾ ಸುಬ್ರಮಣ್ಯಾ ನಾಯ್ಡು ಅವರ ಭೂ ವಂಚನೆ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ವಿಜೃಂಭಣೆಯಿಂದ ವಿವರಿಸಿದ್ದಾರೆ.

ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿ ಐ.ಪಿ.ಎಸ್. ತರಬೇತಿ ಪಡೆದು ದಕ್ಷ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟರು ಇದ್ದಕ್ಕಿದ್ದಂತೆ ಎರಡು ವರ್ಷ ಅಮೆರಿಕದಲ್ಲಿ ಓದುವ ಸಲುವಾಗಿ ರಜೆ ಹಾಕುವ ಪ್ರಸಂಗ ಎದುರಾದಾಗ ಅವರ ಆಪ್ತ ಬಳಗ ಶೆಟ್ಟರಿಗೆ ಲೋಕಾಯುಕ್ತ ಕಾರ್ಯ ವೈಖರಿ ಬಗ್ಗೆ ಬೇಸರವಾಗಿರುವುದನ್ನು ಅಲ್ಲಲ್ಲಿ ವಿಷಾದನೀಯವಾಗಿ ವಿವರಿಸುತ್ತಿತ್ತು. ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡ ಬಗ್ಗೆಯೂ  ಗಿಲ್ಡ್ ಮತ್ತು ಕ್ಲಬ್‌ಗಳಲ್ಲಿ ಈ ಬಳಗ ಮಾತನಾಡಿದ್ದುಂಟು.

ಮಧುಕರ್ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆಯನ್ನು ಪ್ರಶ್ನಿಸಿ ಅವರ ಅತಿಯಾದ ಪ್ರಚಾರವನ್ನು ಟೀಕಿಸುತ್ತಿದ್ದುದು ಅವರ ಪತ್ರಿಕಾ ಮಿತ್ರರ ಮಾತಿನಿಂದ ನಮಗೆ ಗೊತ್ತಾಗುತ್ತಿತ್ತು. ಸಂತೋಷ ಹೆಗ್ಡೆ ಬಗ್ಗೆ ತಮಗಿರುವ ಅಸಮಾಧಾನವನ್ನು ಮಧುಕರ ಲೋಕಾಯುಕ್ತ ಸಂಸ್ಥೆಯೇನು ಸಾಚ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ವ್ಯಕ್ತ ಪಡಿಸುತ್ತಿದ್ದುದು ಅನೇಕ ಪತ್ರಕರ್ತರಿಗೆ ಗೊತ್ತಾಗಿತ್ತು. ಆದರೆ ಸಂತೋಷ ಹೆಗ್ಡೆ ಅವರ ಪ್ರಾಮಾಣಿಕತೆ ಮುಂದೆ ಮಧುಕರರ “ಗಾಸಿಪ್” ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.

ಆದರೀಗ ಲೋಕಾಯುಕ್ತ  ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆ ರೇಣುಕಾಚಾರ್ಯ, ಕುಮಾರಸ್ವಾಮಿ, ಬಿ.ಜೆ.ಪಿ. ಈಶ್ವರಪ್ಪ, ಮಾಜಿ ರೌಡಿ ಶೀಟರ್ ಬಿ.ಕೆ. ಹರಿಪ್ರಸಾದ್ ಅಂತಹವರ ಟೀಕೆಗೆ ತುತ್ತಾಗಿರುವ ಸಂದರ್ಭದಲ್ಲಿ ಮುಗ್ಧ ಮಧುಕರ  ಕನ್ನಡ ಪ್ರಭಕ್ಕೆ ದೂರವಾಣಿ ಸಂದರ್ಶನ ನೀಡಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹೂರಣವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಜೈಲಿಗೆ ಹೋಗಿ ಬರುತ್ತಿರುವಾಗ,  ಮಗನ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದಾಗ ಮಂಡಲ ಪಂಚಾಯತಿ ಸದಸ್ಯರ ರೀತಿಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಮಾಜಿ ಪ್ರಧಾನಿಗಳು ಧಮಕಿ ಹಾಕಿರುವಾಗ ಮಧುಕರರ ಮುಗ್ಧ ಹೇಳಿಕೆ ಪ್ರಾಮಾಣಿಕತೆಯ ಆದರ್ಶವನ್ನು ನಂಬಿ ಬದುಕು ನಡೆಸುವ ಕನ್ನಡಿಗರ ಪಾಲಿಗೆ ನುಂಗಲಾರದ ತುತ್ತು. ನಮಗೆ ಈಗ ಕರ್ನಾಟಕದಲ್ಲಿ ಸಂತೋಷ ಹೆಗ್ಡೆ ಬಿಟ್ಟರೆ ಬೇರಾರೂ ಪ್ರಾಮಾಣಿಕರು ಮತ್ತು ಪರಿಪಕ್ವರೂ ಕಾಣುತ್ತಿಲ್ಲದ ಈ ಸಂದರ್ಭದಲ್ಲಿ ಮಧುಕರರ ಸಂದರ್ಶನ ಪ್ರಾಮಾಣಿಕರ ಆತ್ಮಸ್ಥೈರ್ಯಕ್ಕೆ  ಸವಾಲಾಗಿ ಪರಿಣಮಿಸಿದೆ.

ಮಧುಕರ ಶೆಟ್ಟರು ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ನಮ್ಮ ಎರಡು ಮಾತಿಲ್ಲ. ಅಂತೆಯೇ ಇವರು ಸಿನಿಕರು ಎಂಬುದು ಸಂದರ್ಶನದ ಪ್ರತಿ ಹಂತದಲ್ಲೂ ವ್ಯಕ್ತವಾಗಿದೆ. ಕೆಟ್ಟು ಕೆರ ಹಿಡಿದಿರುವ ಈ ವ್ಯವಸ್ಥೆಯಲ್ಲಿ ಪರಿಸ್ಥಿತಿಯನ್ನು ನಿಧಾನಕ್ಕೆ ನಿಯಂತ್ರಣಕ್ಕೆ ತಂದುಕೊಂಡು ಸಮಾಜವನ್ನು ಸುಧಾರಣೆ ಮಾಡುವ ಹಂತಕ್ಕೆ ಹೋಗಬೇಕು. ಅದು ಬಿಟ್ಟು ತಡ ರಾತ್ರಿ ಗೋಷ್ಠಿಗಳಲ್ಲಿ ಪರಿಚಯಸ್ಥರ ಮುಂದೆ ತಾನೇ ಕೆಲಸ ಮಾಡುವ ವ್ಯವಸ್ಥೆ ಬಗ್ಗೆ ದೂರಿ ಒಳ್ಳೆಯವನಾಗಬಾರದು. ಇದು ಮೀಡಿಯಾ ಫ್ರೆಂಡ್ಲಿ ಆಫೀಸರ್ ಮನೋಭಾವನೆಗಿಂತ ಮಿಗಿಲಾಗಿ ಏನೂ ಅಲ್ಲ.

ದೂರದ ಅಮೆರಿಕೆಯಿಂದ ದೂರವಾಣಿಯಲ್ಲಿ ನೀವು ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರೊಂದಿಗೆ ಮಾತನಾಡಿದ ನಂತರ ಕನ್ನಡ ನಾಡಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹೀಗಿವೆ ನೊಡಿ ಮಧುಕರ್..:

  • ಬಿ.ಜೆ.ಪಿ ಅಧ್ಯಕ್ಷ ಈಶ್ವರಪ್ಪ ‘ಕಳ್ಳರನ್ನು ಕಳ್ಳರೇ ಹಿಡಿಯುವುದು ಎಂತಹ ಹಾಸ್ಯಾಸ್ಪದ’ ಎಂದಿದ್ದಾರೆ.
  • ‘ಮಧುಕರ್ ನನಗೆ ಈ ಹಿಂದೆಯೇ ಈ ವಿಷಯವನ್ನು ತಿಳಿಸಿದ್ದರು. ಅದಕ್ಕೆ ನಾನು ಲೋಕಾಯುಕ್ತ ಸಂಸ್ಥೆ ಬಗ್ಗೆ ಹಿಂದಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದು,’ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಇನ್ನೂ ಮುಂದೆ ಹೋಗಿ ಸಂತೋಷ ಹೆಗ್ಡೆ ಅವರನ್ನು ಮತ್ತೊಮ್ಮೆ ಟೀಕೆ ಮಾಡಿದ್ದಾರೆ.
  • ಮಧುಕರ್ ಅಮೆರಿಕಾಕ್ಕೆ ಹೋದ ಮೇಲೆ ಸಿಐಎ ಏಜೆಂಟ್ ಥರ ಮಾತನಾಡುತ್ತಾರೆ ಕಣ್ರೀ ಎಂದು ವಡ್ಡರ್ಸೆಗೆ ಆಗದ ಕೆಲವು ಕುಹಕಿ ಕಮುನಿಸ್ಟರು ಕೇಕೆ ಹಾಕುತ್ತಿದ್ದಾರೆ.

ಏನೇ ಆಗಲಿ, ಮಧುಕರ ಶೆಟ್ಟರು ಕನ್ನಡಿಗರಿಗೆ ಏನಾದರೂ ತಮ್ಮ ಸಂದೇಶ ರವಾನಿಸುವದಿದ್ದರೆ ಯೂಟ್ಯೂಬ್ ಮುಖಾಂತರ ಮಾತನಾಡಲಿ. ನಾವು ಅದನ್ನು ಡೌನ್ ಲೋಡ್ ಮಾಡಿ ಪ್ರೆಸ್ ಕ್ಲಬ್‌ನಲ್ಲಿ ಪ್ರದರ್ಶಿಸುತ್ತೇವೆ. ಇನ್ನು ಮುಂದೆ ಮಧುಕರ್ ಕಾಸಿಗಾಗಿ ಸುದ್ದಿ ಪ್ರಕಟಿಸುವ ಚೆಡ್ಡಿ ಪತ್ರಕರ್ತರಿಗೆ ಟ್ರ್ಯಾಪ್ ಆಗುವುದು ಬೇಡ.

objection-to-yeddyurappa's-approval-for-statewide-paper-page2

ಕಾಸಿಗಾಗಿ ಸುದ್ದಿ ಪ್ರಕಟಿಸದ ದಿನಪತ್ರಿಕೆಗಳು ಈಗ ಯಾವು ಉಳಿದಿವೆ?

– ಪರಶುರಾಮ ಕಲಾಲ್

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ ಇವತ್ತು ತನ್ನ ಮೂಲ ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿದೆ.

ಒಂದು ಕಡೆ 2ಜಿ ಸ್ಟೆಕ್ರಮ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಡದ ಹಗರಣಗಳು ಬಯಲಾಗುವುದಕ್ಕೆ ಕಾರಣವಾಗಿ ಆಳುವವರ ಕಣ್ಣಿಗೆ ಖಳನಾಗಿ ಕಾಣತೊಡಗಿದೆ. ಪಿ.ಸಾಯಿನಾಥ್ ಅವರ ಬರಹಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದರ್ಭ ಪ್ಯಾಕೇಜ್ ಘೋಷಿಸಿದ ಉದಾಹರಣೆಯು ನಮ್ಮ ಮುಂದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಪತ್ರಿಕಾರಂಗ ಈ ವಿಷಯಗಳಲ್ಲಿ ಕೆಲಸ ಮಾಡಿ ಸೈ ಅನ್ನಿಸಿಕೊಂಡಿದೆ.

ಇಷ್ಟು ಮಾತ್ರ ಆಗಿದ್ದರೆ ಸಮಸ್ಯೆ ಏನೋ ಇಲ್ಲ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಟು ಅವರ ಹೇಳಿಕೆಯನ್ನು ಅತ್ಯುಗ್ರವಾಗಿ ಖಂಡಿಸಿ ಬಿಡಬಹುದಿತ್ತು. ಆದರೆ ಕಾವಲು ನಾಯಿಯಾಗಿ ಕೆಲಸ ಮಾಡುವ ಜೊತೆಗೆ ರಾಜಕಾರಣಿಗಳ, ಕಾರ್ಪೊರೇಟ್ ಸಂಸ್ಥೆಗಳ ಮುದ್ದಿನ ನಾಯಿ ಆಗಿಯೂ ಕೆಲಸ ಮಾಡಿರುವ ಉದಾಹರಣೆಗಳು ಇವೆಯಲ್ಲಾ? ಇವೆಲ್ಲವಕ್ಕೂ ಏನು ಹೇಳಬೇಕು. ದೆಹಲಿಯ ಶಾಲೆಯ ಶಿಕ್ಷಕಿ ಉಮಾ ಖುರಾನ ಪ್ರಕರಣವಾಗಲಿ, ಅಥವಾ ವೈದ್ಯರ ಪುತ್ರಿ ಅರುಶಿ ಕೊಲೆ ಪ್ರಕರಣದ ಬಗ್ಗೆ ವಿದ್ಯುನ್ಮಾನ ಮಾಧ್ಯಮ ನಡೆದುಕೊಂಡು ರೀತಿ ಹೇಗಿತ್ತು? ಈ ವಿದ್ಯುನ್ಮಾನ ಮಾಧ್ಯಮಗಳ ಹುಳುಕುಗಳನ್ನು ಇವೆಲ್ಲಾ ಬಯಲುಗೊಳಿಸಿಲ್ಲವೇ? ಕಾರ್ಪೊರೇಟ್ ಕಂಪನಿಗಳು ಮತ್ತು ಪತ್ರಕರ್ತರ ನಡುವೆ ಇರುವ ಅನೈತಿಕ ಸಂಬಂಧ ನೀರಾ ರಾಡಿಯ ಪ್ರಕರಣ ಬಯಲಿಗೆ ತಂದಿತು. ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯುವವರು ಇವುಗಳನ್ನು ಕೂಡಾ ಗಮನಿಸಬೇಕಾಗುತ್ತದೆ.

ಪತ್ರಿಕೋದ್ಯಮದ ಅಲಿಖಿತ ನಿಯಮಗಳನ್ನು ಎಷ್ಟು ಪತ್ರಿಕೆಗಳು ಪಾಲಿಸುತ್ತಿವೆ? ಕೋಮು ಸಂಘರ್ಷ ನಡೆದಾಗ ಎರಡು ಕೋಮುಗಳ ಹೆಸರುಗಳನ್ನು ಬಯಲುಗೊಳಿಸಬಾರದು ಎಂದಿದೆ. ಎಷ್ಟು ಪತ್ರಿಕೆಗಳು ಈ ನಿಯಮಕ್ಕೆ ಬದ್ಧವಾಗಿವೆ? ಕೋಮು ಹೆಸರು ಹೇಳದಿದ್ದರೂ ಆಸ್ಪತ್ರೆಗೆ ದಾಖಲಾದವರು, ಬಂಧಿತರ ಹೆಸರನ್ನು ಒಂದು ಕೋಮು ದೃಷ್ಠಿಯಲ್ಲಿಟ್ಟುಕೊಂಡು ಪ್ರಕಟಿಸುತ್ತವೆಯಲ್ಲ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹೆಸರನ್ನು ಪ್ರಕಟಿಸಬಾರದು. ಆಕೆಯ ಫೋಟೋ ಹಾಕಬಾರದು ಎಂದಿದೆ. ಈಗ ಅದು ಪಾಲಿಸಲಾಗುತ್ತಿದೆಯೆ? ಕೆಲವು ಟಿವಿ ಚಾನಲ್‌ಗಳಂತೂ ಅವರನ್ನು ಸಂದರ್ಶನ ಮಾಡಿ ಅಸಹ್ಯ ಪ್ರಶ್ನೆ ಕೇಳುವ ಮೂಲಕ ಎಲ್ಲವನ್ನೂ ಬಟ್ಟಾಬಯಲಾಗಿಸಿ, ರಂಜನೆ ಒದಗಿಸುತ್ತಿಲ್ಲವೇ?

ಇನ್ನು, ಕಾಸಿಗಾಗಿ ಸುದ್ದಿ ಪ್ರಕಟಿಸದ ಕನ್ನಡ ದಿನಪತ್ರಿಕೆಗಳು ಈಗ ಯಾವು ಉಳಿದಿವೆ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಸು ತೆಗೆದುಕೊಂಡು ಚುನಾವಣೆ ಸುದ್ದಿ ಬರೆದು ಹಣ ಮಾಡಿಲ್ಲವೇ? ಪತ್ರಿಕಾ ಮಾಲೀಕರೇ ಈ ಅಡ್ಡ ಹಾದಿ ಹಿಡಿದ ಮೇಲೆ ಬಿಡಿ ಸುದ್ದಿಗಾರರು, ವರದಿಗಾರರು ಅದೇ ಹಾದಿ ತುಳಿದರೆ ಇದನ್ನು ಟೀಕಿಸುವ ನೈತಿಕತೆ ಪತ್ರಿಕಾ ಮಾಲೀಕರಿಗೆ ಎಲ್ಲಿದೆ? ಪ್ರಶ್ನಿಸುವ ಹಕ್ಕನ್ನು ಸಂಪಾದಕರು ಕಳೆದುಕೊಂಡಂತಾಗಲಿಲ್ಲವೇ?

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

ಸಂಪಾದಕರು, ಸಂಪಾದಕರ ಬಳಗ ಆಕ್ರಮವೆಸಗಿ, ಒಂದು ಪತ್ರಿಕೆಯಿಂದ ಹೊರ ಬಂದ ಮೇಲೆ ಅವರಿಗೆ ರತ್ನಗಂಬಳಿ ಹಾಸಿ ಮತ್ತೊಂದು ಪತ್ರಿಕೆ ಅವಕಾಶ ಮಾಡಿಕೊಡುತ್ತಿರುವುದನ್ನು ನೋಡಿದರೆ ಈ ಆಕ್ರಮವೆಸಗುವವರು ಪತ್ರಿಕೆಯ ಮಾಲೀಕರಿಗೆ ಬೇಕು ಎಂದಾಗುವುದಿಲ್ಲವೇ? ಅವರು ಈ ಆಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದೇ ಅರ್ಥವಲ್ಲವೇ? ಪತ್ರಿಕೋದ್ಯಮ ಇಂತಹ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿದೆ.

ಭಾರತೀಯ ಪತ್ರಿಕಾ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದ ಅನೇಕ ಉದಾಹರಣೆಗಳು ಇವೆ. ಎಷ್ಟೇ ಆಗಲಿ ಈ ಮಂಡಳಿ ಹಲ್ಲಿಲ್ಲದ ಹಾವು. ಛೀಮಾರಿ ಹಾಕುವುದನ್ನು ಬಿಟ್ಟು ಬೇರೇನೋ ಅದರಿಂದ ಸಾಧ್ಯವಿಲ್ಲ. ತಪ್ಪೊಪ್ಪಿಗೆಯನ್ನು ಸಣ್ಣದಾಗಿ ಪ್ರಕಟಿಸಿ ಕೈತೊಳೆದುಕೊಂಡು ಏನೋ ಆಗಿಲ್ಲ ಎನ್ನುವಂತೆ ವರ್ತಿಸಿಲ್ಲವೇ? ಕೆಲವರು ಸ್ವಯಂ ನೈತಿಕತೆಯ ಪಾಠ ಹೇಳುತ್ತಿದ್ದಾರೆ. ಈ ಸ್ವಯಂ ನೈತಿಕತೆಯ ಪಾಠ ಇವತ್ತು ಯಾರು ಪಾಲಿಸುತ್ತಾರೆ. ಯಾರಿಗೆ ಈ ಉಪದೇಶ? ಈ ಕುರಿತ ಮುಖಾಮುಖಿ ಮಾತ್ರ ವಸ್ತುನಿಷ್ಠತೆಗೆ ಹತ್ತಿರ ಬರಲು ಸಾಧ್ಯವಾಗುತ್ತದೆ.