Tag Archives: ಕನ್ನಡ ಸಾಕ್ಷ್ಯಚಿತ್ರ

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ-5

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


40ಕೋಟಿ ವರ್ಷಗಳು. ಇಲ್ಲಿಂದ ಮುಂದಿನ 10 ಕೋಟಿ ವರ್ಷಗಳ ಅವಧಿಯಲ್ಲಿ ಬಂಡೆಗಳು ಒಂದೆಡೆ ಸರಿಯಲು ಆರಂಭಿಸಿದವು. ಇದೇ ಸಂದರ್ಭದಲ್ಲಿ ಸಾಗರಜೀವಿಗಳು ಭೂಮಿಯ ಮೇಲೆ ಕಾಲಿಟ್ಟವು. ಓಜೋನ್ ಪದರ ಭೂಮಿಯನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತಿದ್ದರಿಂದಾಗಿ ಜೀವಿಗಳು ಸಾಗರ ತೊರೆದು ಭೂಮಿಯತ್ತ ಹೆಜ್ಜೆ ಇಟ್ಟವು.

30 ಕೋಟಿ ವರ್ಷಗಳ ಹೊತ್ತಿಗೆ ಭೂಮಿ ಜೌಗು ಪ್ರದೇಶಗಳಿಂದ ಕೂಡಿತ್ತು. 16 ದಶಲಕ್ಷ ವರ್ಷಗಳ ಕಾಲ ಇದೇ ಸ್ಥಿತಿ ಇತ್ತು. ಈ ಪರಿಸರದಿಂದಾಗಿ ಕೊಳೆತ ಸಸ್ಯಕಾಶಿ ಕಲ್ಲಿದ್ದಿಲಾಗಿ, ಸತ್ತ ಸಾಗರ ಜೀವಿಗಳು ತೈಲವಾಗಿ ಪರಿವರ್ತನೆಗೊಂಡವು.

ಈ ಹೊತ್ತಿಗೆ ಭೂಮಿಯ ಮೇಲೆ ಸಹಸ್ರಪದಿ, ಏರೋಪ್ಲೇನ್ ಚಿಟ್ಟೆ, ಸರೀಸೃಪಗಳು ಕಾಣಿಸಿಕೊಂಡಿದ್ದವು. ಜೀವಗೋಳ ರೂಪುಗೊಂಡಿತು ಎನ್ನುವ ಹೊತ್ತಿಗೆ ದೊಡ್ಡದೊಂದು ಸವಾಲು ಎದುರಾಗಿತ್ತು.

ಭೂಮಿ ತನ್ನ ಒಡಲಲ್ಲಿ ಅದೆಷ್ಟು ಬೆಂಕಿಯನ್ನಿಟ್ಟುಕೊಂಡಿತ್ತೊ ಅದು ತನ್ನ ಹುಟ್ಟಿನಿಂದಲೂ ಜ್ವಾಲಾಮುಖಿಗಳನ್ನು ಸಿಡಿಸುತ್ತಲೇ ಬಂದಿತ್ತು. ಭೂಮಿಯ ಮೇಲೆ ಇನ್ನೇನು ಜೀವವಿಕಾಸವಾಗುತ್ತಿದೆ ಎಂಬ ಕಾಲಕ್ಕೆ ಬೆಂಕಿಯುಗುಳಿ ಭೂಮಿಯನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು. ಇದು ಕೂಡ ವಿಕಾಸದ ಒಂದು ಹಂತವೇ ಆಗಿತ್ತು.

10 ಕೋಟಿ ವರ್ಷಗಳ ಕಾಲ ನಿರಾತಂಕವಾಗಿ ಜ್ವಾಲಾಮುಖಿಗಳಿಂದ ಲಾವಾರಸ ಹೊರಬೀಳುತ್ತಲೇ ಇತ್ತು. ಒಂದೆಡೆ ಶಾಖ ಮತ್ತೊಂದೆಡೆ ವಿಷಾನಿಲ ಹರಡಿ ಭೂಮಿಯ ಮೇಲಿದ್ದ ಶೇ.95ರಷ್ಟು ಜೀವಿಗಳು ನಾಶವಾದವು. ಭೂಮಿಯ ಅಲ್ಲಿಯವರೆಗಿನ ಇತಿಹಾಸದಲ್ಲಿ ಇಂಥ ವಿದ್ಯಮಾನ ಜರುಗೇ ಇರಲಿಲ್ಲ.

ಈ ವಿಚಿತ್ರ ಬೆಳವಣಿಗೆ ನಂತರ ಒಂದು ಮಹಾಖಂಡ ಸೃಷ್ಟಿ ಆಯಿತು. ಅದೇ ಪೆನ್‍ಜಿಯಾ.

24 ಕೋಟಿ ವರ್ಷಗಳು. ಭೂಮಿಯ ವಾತಾವರಣದಲ್ಲಿ ಹಲವು ಮಹತ್ವದ ಬದಲಾವಣೆ ಆಗಲಾರಂಭಿಸಿದ್ದವು. ಆಮ್ಲಜನಕ ಮತ್ತುಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಿತು. ಇತ್ತ ಲಾವಾರಸ, ವಿಷಾನಿಲದ ಪರಿಸರದಲ್ಲೂ ಬದುಕುಳಿದ ಕೆಲ ಜೀವಿಗಳು ಭಯಾನಕವಾಗಿ ಬೆಳೆದು ನಿಂತಿದ್ದವು.

ಅವೇ ಡೈನೊಸಾರ್‌ಗಳು.

ಇಂತಹ ಜೀವಿಗಳು ಭೂಮಿಯ ಮೇಲಿದ್ದವು ಎಂಬುದು ತಿಳಿದು ಬಂದಿದ್ದು ಇಂಗ್ಲೆಂಡಿನಲ್ಲಿ ಪತ್ತೆಯಾದ ಪಳೆಯುಳಿಕೆಯಿಂದ. 1822 ರಲ್ಲಿ ಮೇರಿ ಮತ್ತು ಮ್ಯಾಂಟಲ್ ಎಂಬುವವರಿಗೆ ಮೂಳೆಯೊಂದು ಸಿಕ್ಕಿತ್ತು. ಮೊದಮೊದಲು ಅದೇನು? ಯಾವ ಪ್ರಾಣಿಯ ಮೂಳೆ ಎಂಬುದು ಸ್ಪಷ್ಟವಾಗಿರಲಿಲ್ಲ. ಅಧ್ಯಯನ ಮಾಡುತ್ತ ಹೋದಂತೆ ಅದು ದೈತ್ಯ ಹಲ್ಲಿಯ ಹಲ್ಲು ಎಂದು ಕಂಡುಕೊಂಡರು.

ನಂತರದ ದಿನಗಳಲ್ಲಿ ಯೂರೋಪ್ ಮತ್ತು ಅಮೆರಿಕಾಗಳಲ್ಲಿ ದೈತ್ಯಜೀವಿಗಳ ಪಳೆಯುಳಿಕೆಗಳು ಪತ್ತೆಯಾದವು. ನಮ್ಮ ಕಾಲದ ಹಲ್ಲಿಗಳಿಗೆ ಹೋಲಿಸಿ ಇವುಗಳಿಗೆ ಡೈನೊಸಾರ್, ಅಂದರೆ ದೈತ್ಯ ಹಲ್ಲಿಗಳೆಂದು ಕರೆದರು.

18 ಕೋಟಿ ವರ್ಷಗಳಿಂದ – 10 ಕೋಟಿ ವರ್ಷಗಳ ಅವಧಿಯಲ್ಲಿ ಜ್ವಾಲಾಮುಖಿಗಳ ಚಟುವಟಿಕೆಯಿಂದ ಪೆನ್‍ಜಿಯಾ ಮಹಾಖಂಡ ಒಡೆದು ಏಳು ಖಂಡಗಳಾಗಿ ಬೇರ್ಪಟ್ಟು ಭೂಮಿಯ ಬೇರೆಬೇರೆ ಭಾಗಗಳತ್ತ ಚಲಿಸಿದವು. ಪ್ರತಿಖಂಡದಲ್ಲೂ ಡೈನೊಸಾರ್‌ಗಳು ಹಂಚಿಹೋದವು. ಜ್ವಾಲಾಮುಖಿಗಳು ಇನ್ನೂ ಕ್ರಿಯಾಶೀಲವಾಗಿದ್ದವು. ಜಾಗತಿಕ ತಾಪಮಾನ ಹೆಚ್ಚಿತು. ಇಂಗಾಲದ ಪ್ರಮಾಣ ಶೇ.500 ರಷ್ಟು ಹೆಚ್ಚಾಗಿ ಹಸಿರುಮನೆ ಪರಿಣಾಮ ಉಂಟಾಯಿತು.ಡೈನೊಸಾರ್‌ಗಳು ಅಷ್ಟು ದೈತ್ಯಾಕಾರವಾಗಿ ಬೆಳೆಯಲು ಕಾರಣ ಅವು ಈಗಿನ ಹಲ್ಲಿಗಳಂತೆ ತಂಪು ರಕ್ತದ ಜೀವಿಗಳಾಗಿರಲಿಲ್ಲ. ಬಿಸಿರಕ್ತದ ಪ್ರಾಣಿಗಳಾಗಿದ್ದವು. ಜೊತೆಗೆ ಯಥೇಚ್ಚವಾಗಿದ್ದ ಆಹಾರ, ಆಮ್ಲಜನಕದಿಂದ ಕೂಡಿದ ವಾತಾವರಣ ಡೈನೊಸಾರ್‌ಗಳು ಗಾತ್ರದಲ್ಲಿ ಅಗಾಧವಾಗಿ ಬೆಳೆಯುವಂತೆ ಮಾಡಿದವು ಎಂಬುದು ಜೀವವಿಜ್ಞಾನಿಗಳ ಅಭಿಪ್ರಾಯ.

ಇದರ ಫಲವಾಗಿ ಎಲ್ಲ ಭೂಖಂಡಗಳಲ್ಲಿ ಕಾಡು ಬೆಳೆದು ನಿಂತಿತು. ಈ ಹಸಿರಿನ ಪೋಷಣೆಯಲ್ಲಿ ಡೈನೊಸಾರ್‌ಗಳ ದೇಹ ಮತ್ತಷ್ಟು ಹಿಗ್ಗಿತು. ಆದರೆ ಈ ಸುಖದ ದಿನಗಳು ಡೈನೊಸಾರ್‌ಗಳ ಪಾಲಿಗೆ ತುಂಬಾ ದಿನಗಳ ಕಾಲ ಇರಲಿಲ್ಲ. ಅಂಥದ್ದೊಂದು ದುರಂತವೊಂದನ್ನು ಡೈನೊಸಾರ್‌ಗಳು ಎದುರಿಸಬೇಕಾಗುವ ಕಾಲ ಸನ್ನಿಹಿತವಾಗಿತ್ತು.

ಜ್ವಾಲಾಮುಖಿ ಕೊಟ್ಟ ಸಂಪತ್ತು

10ಕೋಟಿ ವರ್ಷಗಳಾದಾಗಲೂ ಭೂಮಿಯ ಬಹುತೇಕ ಎಲ್ಲಾ ಬದಲಾವಣೆಗಳಿಗೆ ಪ್ರಮುಖ ಕಾರಣವಾದ ಜ್ವಾಲಾಮುಖಿಗಳು ತಮ್ಮ ಕಾವು ಕಳೆದುಕೊಳ್ಳದೆ ಇನ್ನೂ ಜೀವಂತವಾಗಿದ್ದವು. ಶಿಲೆಗಳ ರಚನೆಗೆ, ಖಂಡಗಳ ರಚನೆಗೆ ಮತ್ತು ಅವುಗಳ ಅಲೆತಕ್ಕೆ ಕಾರಣವಾದ ಈ ಜ್ವಾಲಾಮುಖಿಗಳೇ ಅಮೂಲ್ಯವಾದ ಖನಿಜಗಳನ್ನು ಭೂಮಿಗೆ ನೀಡಿದವು. ಆ ಪೈಕಿ ಅತ್ಯಮೂಲ್ಯ ಹರಳು ವಜ್ರವೂ ಒಂದು.

ಮನುಷ್ಯ ಬಹಳ ವರ್ಷಗಳ ಕಾಲ ನದಿತಟಗಳಲ್ಲಿ ಸಿಗುತ್ತಿದ್ದ ಬೆಲೆಬಾಳುವ ಕಲ್ಲುಗಳನ್ನು ಸಂಗ್ರಹಿಸಿ ಬಳಸಿಕೊಂಡ. ಆದರೆ ಈ ಕಲ್ಲುಗಳ ಮೂಲವೆಲ್ಲಿ ಎಂಬುದು ತಿಳಿದಿರಲಿಲ್ಲ. 1869ರಲ್ಲಿ ದಕ್ಷಿಣ ಆಫ್ರಿಕಾ ಕಿಂಬರ್ಲಿಯಲ್ಲಿ ಬೃಹತ್ ಗಾತ್ರದ ವಜ್ರದ ಕಲ್ಲು ಸಿಕ್ಕಿತು. ಉದ್ದುದ್ದವಾಗಿದ್ದು ಹಳದಿ ಬಣ್ಣದಿಂದ ಕೂಡಿದ್ದ ಈ ಕಲ್ಲನ್ನು ಹೆನ್ರಿ ಕಾರ್ವಿಲ್ ಲೀವಿಸ್ ಅಧ್ಯಯನ ಮಾಡಿದರು. ಈ ವಿಶಿಷ್ಟ ಬೆಲೆಬಾಳುವ ಕಲ್ಲು ಜ್ವಾಲಾಮುಖಿಯ ಕೊಡುಗೆ ಎಂಬುದು ಆ ಅಧ್ಯಯನದಿಂದ ಸ್ಪಷ್ಟವಾಯಿತು. ಈಗ ವಜ್ರದ ಗಣಿಗಳು ಎಂದು ಕರೆಸಿಕೊಳ್ಳುತ್ತಿರುವ ಜಾಗಗಳು ಕೋಟಿ ವರ್ಷಗಳ ಹಿಂದಿದ್ದ ಪರ್ವತಗಳು ಎಂಬುದು ತಿಳಿಯಿತು.

ಆದರೆ ಇವು ಸಾಮಾನ್ಯ ಜ್ವಾಲಾಮುಖಿಗಳಾಗಿರಲಿಲ್ಲ. 100 ಮೈಲು ಆಳದ ವಿಶಿಷ್ಟ ಪರ್ವತಗಳು. ಇಲ್ಲಿ ಲಾವಾರಸ ಗಂಟೆಗೆ 3000 ಮೈಲಿ ವೇಗದಲ್ಲಿ ಹೊರಚಿಮ್ಮುತ್ತಿತ್ತು. ಅತಿಯಾದ ಶಾಖ, ವೇಗ, ಒತ್ತಡದಲ್ಲಿ ಲಾವ ವಜ್ರವಾಗಿ ರೂಪಾಂತರವಾಗಿತ್ತು. ಡೈನೊಸಾರ್‌ಗಳ ಕಾಲದಲ್ಲಿ ಸೃಷ್ಟಿಯಾದ ಈ ವಜ್ರಗಳು ಇಂದಿಗೂ ನಮ್ಮೊಂದಿಗೆ ಇವೆ. ಆದರೆ ಡೈನೊಸಾರ್‌ಗಳಿಗೆ ಅಷ್ಟು ಅದೃಷ್ಟವಿರಲಿಲ್ಲ.

65 ದಶಲಕ್ಷ ವರ್ಷಗಳು. ಹಸಿರು ಹೆಚ್ಚಿದ ಕಾಲ, ಜೀವಿಗಳು ಹಿಂದೆಂದಿಗಿಂತ ಹೆಚ್ಚು ವಿಕಾಸ ಕಂಡ ಕಾಲ. ಆದರೆ ಡೈನೊಸಾರ್‌ಗಳ ಪಾಲಿಗೆ ಕೆಟ್ಟಕಾಲ. ಕೇವಲ ಈ ದೈತ್ಯಜೀವಿಗಳಿಗಷ್ಟೇ ಅಲ್ಲ ಭೂಮಿಯ ಮೇಲಿದ್ದ ಶೇ. 70 ರಷ್ಟು ಜೀವಿಗಳೆಲ್ಲ ಕಣ್ಮರೆಯಾದಂಥ ಕಾಲ. ಇದು ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ ಬಹಳ ಕಾಲ ನಿಗೂಢವಾಗಿಯೇ ಇತ್ತು.

ಭೂಮಿ ಎಷ್ಟೊಂದು ವೈಪರೀತ್ಯಗಳ ನಡುವೆ ಒಂದು ಚೆಂದದ ಗ್ರಹವಾಗುತ್ತಿದ್ದ ಕಾಲದಲ್ಲಿ ಭಾರೀ ಅನಾಹುತವೊಂದು ಸಂಭವಿಸಿತು. ಅದೇ ಭೂಮಿಯ ಮೇಲಿದ್ದ ಅಸಂಖ್ಯ ಜೀವರಾಶಿಯನ್ನು ನಾಶಮಾಡಿಬಿಟ್ಟಿತು. ಆದರೆ ಆಪತ್ತು ಹೇಗೆ ಬಂತು? ಎಲ್ಲಿಂದ ಬಂತು? ವಾಸ್ತವವಾಗಿ ಅದು ಏನಾಗಿತ್ತು?

ಬಂದೆರಗಿದ ಆಪತ್ತು

ಈ ಪ್ರಶ್ನೆ ಹಲವಾರು ವರ್ಷಗಳ ಕಾಲ ವಿಜ್ಞಾನಿಗಳನ್ನು ಕಾಡಿತ್ತು. ಆದರೆ ಉತ್ತರ ಅಮೆರಿಕದ ಕೊಲರ‍್ಯಾಡೋದಲ್ಲಿ ಪತ್ತೆಯಾಯಿತು. ಲೂಯಿಸ್ ಮತ್ತು ವಾಲ್ಟರ್ ಅಲ್ವಾರೆಜ್ ಎಂಬ ತಂದೆ ಮಗನ ಜೋಡಿ 1980ರಲ್ಲಿ ಒಂದು ವಸ್ತುವನ್ನು ಪತ್ತೆ ಮಾಡಿದರು. ಅದರ ಹೆಸರು ಇರಿಡಿಯಂ. ಈ ಅಪೂರ್ವ ವಸ್ತು ಸಾಮಾನ್ಯವಾಗಿ ಕಂಡುಬರುವುದು ಉಲ್ಕೆಗಳಲ್ಲಿ. ಲೂಯಿಸ್ ವಾಲ್ಟರ್ ಅವರ ಅಧ್ಯಯನ ಆಧರಿಸಿ ಡೈನೊಸಾರ್‌ಗಳಿಂದ ತುಂಬಿದ್ದ ಈ ಗ್ರಹಕ್ಕೆ ಸಾವಾಗಿ ಬಂದಿದ್ದು ಉಲ್ಕೆಗಳು ಎಂದು ಪ್ರತಿಪಾದಿಸಿದರು.

ಒಂದು ಸೆಕೆಂಡಿಗೆ ಸುಮಾರು 30 ಮೈಲಿ ವೇಗದಲ್ಲಿ ಬಂದಪ್ಪಳಿಸಿದ ಉಲ್ಕೆಗಳು ಭೂಮಿಯನ್ನು ದೊಡ್ಡದೊಡ್ಡ ಕುಳಿಗಳಿಂದ ಅಗಾಧ ಧೂಳಿನಿಂದ ತುಂಬಿದವು ಎಂದು ಹೇಳಿದರು.

ಹತ್ತು ವರ್ಷಗಳ ಕಾಲ ಈ ಬಗ್ಗೆ ವಾದವಿವಾದಗಳು ನಡೆದವು. 1990ರಲ್ಲಿ 100 ಮೈಲಿ ವಿಶಾಲವಾದ ಕ್ರೇಟರ್ ಪತ್ತೆಯಾಗಿ ಲೂಯಿಸ್-ವಾಲ್ಟರ್ ಸಿದ್ಧಾಂತಕ್ಕೆ ಬಲ ಸಿಕ್ಕಿತು.

ಒಟ್ಟಾರೆ ಉಲ್ಕೆಗಳು, ಜೊತೆಜೊತೆಗೆ ಲಾವಾರಸ ಹಲವು ಸಾವಿರ ಜೀವಿಗಳನ್ನು ಕೊಂದವು.

ಲಾವಾರಸ ಮತ್ತು ಧೂಳಿನ ರಾಶಿಯಿಂದ ಶಿಲಾಪದರಗಳ ರಚನೆಯೂ ಆಯಿತು. ಭಾರತದ ಅಜಂತಾ ಎಲ್ಲೋರ ಸೇರಿದಂತೆ ಇನ್ನು ಕೆಲ ದೇವಸ್ಥಾನಗಳು ಇಂಥ ಶಿಲಾಪದರುಗಳಿರುವಲ್ಲೇ ನಿರ್ಮಾಣವಾಗಿವೆ.

ಹೀಗೆ ಭೂಮಿಯ ಮೇಲಿನ ಲಾವಾರಸ, ಮೇಲಿಂದ ಬಿದ್ದ ಉಲ್ಕೆಗಳು ದೈತ್ಯಜೀವಿಗಳನ್ನು, ಸೂಕ್ಷ್ಮಜೀವಿಗಳನ್ನು ಇಲ್ಲವಾಗಿಸಿದವು. ಆದರೆ ಹೊಸಜಗತ್ತು ಹುಟ್ಟಿಕೊಳ್ಳುತ್ತಿತ್ತು. ಅದೇ ಸಸ್ತನಿಗಳ ಮನುಷ್ಯನ ಜಗತ್ತು…

50 ದಶಲಕ್ಷ ವರ್ಷಗಳು. ಭೂಮಿ ಭಾರೀ ದುರಂತದಿಂದ ಚೇತರಿಸಿಕೊಳ್ಳುತ್ತಿತ್ತು. 4.4 ಶತಕೋಟಿ ವರ್ಷಗಳ ಬಳಿಕ ಸಸ್ತನಿಗಳು, ಮನುಷ್ಯನ ಪೂರ್ವಜರು ವಿಕಾಸ ಹೊಂದುತ್ತಿದ್ದರು.

(ಮುಂದುರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ : ಭಾಗ – 2

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


456 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಭೂಮಿ ಬೆಂಕಿ ಉಂಡೆಯಾಗಿ, ಹಿಮದ ಉಂಡೆಯಾಗಿ, ಹಾಗೇ ವಿಷಮ ವಾತಾವರಣವನ್ನು, ಉಕ್ಕುವ ಕಡಲನ್ನು ತುಂಬಿಕೊಂಡು ವಿಶಿಷ್ಟ ಗ್ರಹವಾಗಿ ರೂಪಾಂತರವಾಯಿತು.

ಸೂರ್ಯನನ್ನು ಸುತ್ತುತ್ತಿರುವ ಎಂಟು ಗ್ರಹಗಳಲ್ಲಿ ಭೂಮಿ ದೂರದ ದೃಷ್ಟಿಯಿಂದ ಮೂರನೆಯದು. ಸುಮಾರು 150 ದಶಲಕ್ಷ ಕಿ.ಮೀ. ದೂರದಲ್ಲಿ ತನ್ನ ಪಥದಲ್ಲಿ ಸುತ್ತುತ್ತಾ ಇರುವ ಈ ಗ್ರಹ ಜೀವಿಗಳಿಗೆ ನೆಲೆನೀಡಿರುವ ಸೌರಮಂಡಲದ ಏಕೈಕ ಸದಸ್ಯ.

ಕೋಟ್ಯಂತರ ವರ್ಷಗಳ ಹಿಂದೆ ನಿಹಾರಿಕೆಯಿಂದ ಸಿಡಿದ ಕಣಗಳು ಕಾಲಾನಂತರ ಧೂಳು, ಶಿಲೆ, ಅನಿಲಗಳಿಂದ ಕೂಡಿ ಆದ ಗ್ರಹಗಳಲ್ಲಿ ಭೂಮಿಯೂ ಒಂದು. ಇದು ಭೂಮಿಯ ಭ್ರೂಣಾವಸ್ಥೆಯಷ್ಟೆ.

ಇಷ್ಟನ್ನು ತಿಳಿಯುವುದಕ್ಕೂ ವಿಜ್ಞಾನಿಗಳಿಗೆ ಸಾಕಷ್ಟು ಸಮಯವೇ ಬೇಕಾಯಿತು. ಇಷ್ಟಕ್ಕೂ ಭೂಮಿ ಕುರಿತ ಅಧ್ಯಯನ ಸಂಶೋಧನೆಗಳ ಆರಂಭವಾಗಿದ್ದು ಕೇವಲ 2000 ವರ್ಷಗಳ ಹಿಂದೆ. ಈ  ಹುಡುಕಾಟಕ್ಕೆ ಸರಿಯಾದ ದಾರಿ ಸಿಕ್ಕಿದ್ದು ಸ್ಕಾಟ್‍ಲ್ಯಾಂಡಿನಲ್ಲಿ…

ಗುಟ್ಟು ಬಿಟ್ಟು ಕೊಟ್ಟ ಬಂಡೆ

1778 ರಲ್ಲಿ ಸ್ಕಾಟ್ಲೆಂಡ್ ದೇಶದ ಎಡಿನ್‍ಬರೊ ಕರಾವಳಿ ಪ್ರದೇಶದಲ್ಲಿ ಒಂದು ಬಂಡೆ ಪತ್ತೆಯಾಯಿತು. ಇದು ಭೂಮಿಯ ಜನ್ಮರಹಸ್ಯದ ಹುಡುಕಾಟಕೆ ಹೊಸತಿರುವು ನೀಡಿತು.

ಶಿಲೆಗಳು ಹೇಗಾದವು ಎಂದು ಅಧ್ಯಯನ ನಡೆಸುತ್ತಿದ್ದ ಜೇಮ್ಸ್ ಹಟ್ಟನ್ ಈ ಬಂಡೆಯನ್ನು ಪತ್ತೆ ಮಾಡಿದರು. ಆಧುನಿಕ ಭೂಗರ್ಭ ಶಾಸ್ತ್ರದ ಪಿತಾಮಹ ಎನಿಸಿಕೊಂಡ ಜೇಮ್ಸ್ ಕಲ್ಲುಗಳ ಅಧ್ಯಯನ ಮಾಡುತ್ತ ಎಡಿನ್‍ಬರೊ ಕರಾವಳಿ ಪ್ರದೇಶಕ್ಕೆ ಬಂದಾಗ ಈ ಬಂಡೆ ಅವರಲ್ಲಿ ಬೆರಗು ಹುಟ್ಟಿಸಿತು.

ಕೆಲವು ಪದರಗಳಲ್ಲಿದ್ದ ಈ ಶಿಲೆಯನ್ನು ನೋಡಿದ ಅವರು ಇದರ ರಚನೆಗೆ ಧೀರ್ಘಕಾಲ ತೆಗೆದುಕೊಂಡಿದೆ ಎಂದು ಊಹಿಸಿದರು. ತೀವ್ರ ಪರಿಶೀಲನೆ, ಅಧ್ಯಯನದ ಬಳಿಕ, ’ಶಿಲಾರಚನೆ ಅತಿ ನಿಧಾನ ಕ್ರಿಯೆ. ಈ ಬಂಡೆ ರಚನೆಗೆ ಸಾವಿರಾರು ವರ್ಷಗಳೇ ಆಗಿರಬಹುದು’ ಎಂದು ಅಂದಾಜು ಮಾಡಿದರು. ಹಾಗಾದರೆ ಈ ಭೂಮಿ ಕೂಡ ಕೆಲವೇ ವರ್ಷಗಳಲ್ಲಿ ಆಗಿಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಈ ವಿಚಾರ ಅಲ್ಲಿಯವರೆಗೆ ಚರ್ಚ್‌ಗಳು ಹೇಳುತ್ತಿದ್ದ ನಂಬಿಕೆಗೆ ವಿರುದ್ಧವಾಗಿತ್ತು.

ಬೆಂಕಿಯುಂಡೆಯಾಗಿದ್ದ ಭೂಮಿ

ಜೇಮ್ಸ್ ಹಟ್ಟನ್

ಹಲವು ಶತಮಾನಗಳ ಕಾಲ ಕ್ರೈಸ್ತ ಧರ್ಮೀಯರ ಗ್ರಂಥ ಬುಕ್ ಆಫ್ ಜೆನೆಸಿಸ್ ಜನರಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಭೂಮಿಗಳ ಬಗ್ಗೆ, ಮನುಷ್ಯನ ಹುಟ್ಟಿನ ಬಗ್ಗೆ, ಹಲವು ಅವೈಜ್ಞಾನಿಕ ವಿಚಾರಗಳನ್ನು ಬಿತ್ತಿತ್ತು. ಆ ಗ್ರಂಥದ ಪ್ರಕಾರ ಭೂಮಿಯು ಆರು ಸಾವಿರ ವರ್ಷಗಳ ಹಿಂದೆ ಹುಟ್ಟಿತ್ತು. ಕ್ರೈಸ್ತ ಗುರುಗಳು ಇದನ್ನೇ ಪ್ರಚಾರ ಮಾಡುತ್ತಿದ್ದರು. ಜೇಮ್ಸ್ ಹಟ್ಟನ್‍ನ ಸಂಶೋಧನೆ ಎತ್ತಿದ ಪ್ರಶ್ನೆ ಆ ನಂಬಿಕೆಯ ಬುಡವನ್ನೆ ಅಲ್ಲಾಡಿಸಿತು.

ಶಿಲೆಗಳನ್ನು ಅಧ್ಯಯನ ಮಾಡುತ್ತ ಭೂಮಿಯು ಆರು ಸಾವಿರ ವರ್ಷಗಳಿಗಿಂತ ಪುರಾತನವೆಂದು ಅನುಮಾನಿಸುತ್ತಿದ್ದ ಹಟ್ಟನ್‌ಗೆ ಪುರಾವೆಯಾಗಿ ಸಿಕ್ಕ ಈ ಬಂಡೆ ಭೂಮಿಯ ರಚನೆ ಹೇಗಾಗಿರಬಹುದು ಎಂಬ ಸುಳಿವನ್ನು ಬಿಟ್ಟುಕೊಟ್ಟಿತು.

ಎರಡು ಪದರಗಳಲ್ಲಿ ರಚನೆಯಾಗಿದ್ದ ಈ ಬಂಡೆ ಲಂಬವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇದು ಭೂಮಿಗೆ ಸಮಾನಾಂತರವಾಗಿಯೇ ಇದ್ದು, ಭೂಚಲನೆಯ ಪರಿಣಾಮ ಲಂಬವಾಗಿ ನಿಂತಿದ್ದವು.

ಸಾವಿರಾರು ವರ್ಷಗಳ ಅವಧಿಯಲ್ಲಿ ಇಂತಹ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದ ಈ ಬಂಡೆಯ ಅಧ್ಯಯನದ ಬಳಿಕ ಭೂಮಿಯ ಇತಿಹಾಸ ಲಕ್ಷಾಂತರ ವರ್ಷಗಳದ್ದಿರಬಹುದು ಇಲ್ಲವೇ ಅದರಾಚೆಗೂ ಇರಬಹುದು ಎಂಬ ನಿಲುವಿಗೆ ಬಂದರು ಹಟ್ಟನ್. ಇದು ಭೂಮಿಯ ಜನ್ಮರಹಸ್ಯ ಅರಿಯುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆಯಾಯಿತು. ಇಲ್ಲಿಂದ ಮುಂದೆ ಭೂಮಿಯ ಇತಿಹಾಸ ಅರಿಯಲು ಕಲ್ಲುಗಳತ್ತ ಮುಖ ಮಾಡಿದರು.

ಹಟ್ಟನ್ ಸಂಶೋಧನೆಯ ನಂತರದ 200 ವರ್ಷಗಳಲ್ಲಿ ಶಿಲಾರಚನೆ ಹಾಗೂ ವಿವಿಧ ರೀತಿಯ ಬಂಡೆಗಳ ಬಗ್ಗೆ ಅಧ್ಯಯನ ನಡೆದವು. ಈ ಮೂಲಕ ಭೂಮಿಯ ಹುಟ್ಟು ಅದರ ರಚನೆ ಕುರಿತ ಹಲವು ಅಚ್ಚರಿಯ ಅಂಶಗಳು ಹೊರಬಂದವು.

ಭಯಾನಕವಾಗಿತ್ತು ಭೂಮಿ!

ಅಕ್ಷರಶಃ ಕಲ್ಪನೆಗೂ ಮೀರಿದ ವಿದ್ಯಮಾನಗಳು ಭೂಮಿಯ ಆರಂಭಿಕ ದಿನಗಳಲ್ಲಿ ನಡೆದವು. ಇಂದು ಸುಂದರ ನೀಲಿಗ್ರಹ ಎಂದು ಕರೆಸಿಕೊಳ್ಳುವ ಈ ಭೂಮಿ ಒಂದು ಕಾಲದಲ್ಲಿ ಬೆಂಕಿಯುಂಡೆಯಾಗಿತ್ತು.

ಭೂಗ್ರಹದ ಮೇಲ್ಮೈ ಲಾವಾರಸದಿಂದ ತುಂಬಿ ತುಳುಕುತ್ತಿತ್ತು. ಮೈಲುಗಟ್ಟಲೆ ಆಳದವರೆಗೆ, ಸಾವಿರಾರು ಮೈಲು ವಿಸ್ತಾರವಾಗಿ, ವ್ಯಾಪಿಸಿಕೊಂಡಿತ್ತು. 4500 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಭೂಮಿ ಬೆಂಕಿಯ ಚೆಂಡಾಗಿತ್ತು. ಅಂತರಿಕ್ಷದಿಂದ ಅಪ್ಪಳಿಸುತ್ತಿದ್ದ ಉಲ್ಕೆಗಳ ಮಳೆ ಈ ಬೆಂಕಿಯನ್ನು ಹೆಚ್ಚಿಸುತ್ತಲೇ ಇದ್ದವು.

ಭೂಮಿ ಇಂತಹ ಸ್ಥಿತಿಯಲ್ಲಿತ್ತು ಅನ್ನೋ ಸಿದ್ಧಾಂತವನ್ನು ನಮ್ಮ ಮುಂದೆ ಇಟ್ಟಿದ್ದು ಇಂಗ್ಲೆಂಡಿನ ವಿಜ್ಞಾನಿ ಲಾರ್ಡ್ ಕೆಲ್ವಿನ್.

ಹೀಗೆ ಬೆಂಕಿಯ ಉಂಡೆಯಂತೆ ಇದ್ದ ಭೂಮಿ ನಿಧಾನವಾಗಿ ತಣ್ಣಗಾಗುತ್ತ ಬಂತು. 2 ಕೋಟಿ ವರ್ಷಗಳಲ್ಲಿ ಭೂಮಿ ತಣ್ಣಗಾಯಿತು ಎಂಬ ಲೆಕ್ಕಾಚಾರವನ್ನು ಕೆಲ್ವಿನ್ ಮುಂದಿಟ್ಟರು.

ಲಾರ್ಡ್ ಕೆಲ್ವಿನ್

ಕೆಲ್ವಿನ್ ಪ್ರತಿಪಾದಿಸಿದ ವಿಚಾರಗಳಲ್ಲಿ ಎಲ್ಲವೂ ಸರಿ ಇರಲಿಲ್ಲ. ಅವರು ಹೇಳಿದಂತೆ ಭೂಮಿ ಲಾವಾರಸದಿಂದ ತುಂಬಿ ಬೆಂಕಿ ಚೆಂಡಾಗಿತ್ತು, ನಿಜ. ಆದರೆ ಅದು ತಣ್ಣಗಾಗಲು ತೆಗೆದುಕೊಂಡ ಅವಧಿ 2 ಕೋಟಿ ವರ್ಷಗಳಷ್ಟೇ ಆಗಿರಲಿಲ್ಲ.

ಕೆಲ್ವಿನ್ ಭೂಮಿಯ ಒಡಲೊಳಗೆ ಹುಟ್ಟಿದ್ದ ಶಾಖದ ಮೂಲವನ್ನು ತಿಳಿಯುವಲ್ಲಿ ಸೋತಿದ್ದರು. ಇದೇ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿತ್ತು. ಭೂಮಿಯೊಳಗಿದ್ದ ಯುರೇನಿಯಂ, ಥೋರಿಯಂ, ರಾಸಾಯನಿಕಗಳಿಂದ ಹೊರಬೀಳುತ್ತಿದ್ದ ವಿಕಿರಣ ಭೂಮಿ ತಣ್ಣಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದವು. ಹಾಗಾಗಿ ಭೂಮಿಯ ಗರ್ಭ ಬಹುಕಾಲ ಬೆಂಕಿ ಕುಂಡದಂತೇ ಇತ್ತು.

ಭೂಮಿ ಕಾವು ಹೆಚ್ಚಿಸುತ್ತಲೇ ಇದ್ದ ಯುರೇನಿಯಂ 20ನೇ ಶತಮಾನದ ಯುದ್ಧದಲ್ಲಿ ದೊಡ್ಡ ಅಸ್ತ್ರವಾಗಿ ನಮ್ಮೆಲ್ಲರಿಗೂ ಗೊತ್ತು. ಅದು ವಿಜ್ಞಾನಿಗಳ ಭೂಮಿಯ ಇತಿಹಾಸ ಪತ್ತೆಗೆ ಸಾಧನವೂ ಆಯಿತು.

1911 ರಲ್ಲಿ 21 ವರ್ಷದ ವಿಜ್ಞಾನಿ ಆರ್ಥರ್ ಹೋಮ್ಸ್ ವಿಕಿರಣ ಬಳಸಿ ಭೂಮಿಯ ಅಧ್ಯಯನ ಮಾಡಿದರು. ಈ ಅಧ್ಯಯನದ ಬಳಿಕ ಭೂಮಿಯ ಇತಿಹಾಸವನ್ನು ಸಾವಿರ, ಲಕ್ಷ ವರ್ಷಗಳ ಲೆಕ್ಕ ಬಿಟ್ಟು ಕೋಟಿಗಳಲ್ಲಿ ಮಾತನಾಡಲಾರಂಭಿಸಿದರು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ? : ಭಾಗ -1

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಭೂಮಿಗೆ 450 ಕೋಟಿ ವರ್ಷಗಳ ಇತಿಹಾಸವಿದೆ. ಅನಂತವಾದ ವಿಶ್ವದಲ್ಲಿ ಭೂಮಿಯ ಹೊರತಾಗಿ ಮತ್ತೊಂದು  ಹಸಿರು, ಉಸಿರು, ನೀರು ಕಾಣುವ ಮತ್ತು ಜೀವಿಗಳು ವಾಸಿಸುತ್ತಿರುವ ನೆಲ ಕಾಣಿಸುವುದಿಲ್ಲ. ಆದರೆ ಹಲವು ಗೆಲಾಕ್ಸಿಗಳು, ಅಸಂಖ್ಯ ನಕ್ಷತ್ರಗಳು, ಕೋಟ್ಯಂತರ ಆಕಾಶ ಕಾಯಗಳಿವೆ. ಇಂಥ ವಿಶ್ವದಲ್ಲಿ ಭೂಮಿ ಸಣ್ಣ ಕಣವಷ್ಟೆ. ಆದರೆ ಅದರ ವೈಶಿಷ್ಟ್ಯಗಳಿಂದಾಗಿ ಭೂಮಿ ಅಸಾಮಾನ್ಯ ಗ್ರಹವಾಗಿ ನಿಲ್ಲುತ್ತದೆ. ವಿಶ್ವದಲ್ಲಿ ಹೋಲಿಕೆಗೆ ಮತ್ತೊಂದು ಗ್ರಹ ಇದುವರೆಗೂ ಸಿಕ್ಕಿಲ್ಲ. ಇಂಥ ಅನನ್ಯವಾದ ಗ್ರಹದ ಹುಟ್ಟಿನ ಮೂಲವನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನವಿದು.

ಭೂಮಿ ಇಡೀ ವಿಶ್ವದಲ್ಲಿ ಒಂದು ಸಣ್ಣ ಕಣವಷ್ಟೆ. ಭೂಮಿಯಂತೆ ವಿಶಿಷ್ಟವಾಗಿಲ್ಲದಿದ್ದರೂ, ಅಸಂಖ್ಯವೂ, ಅಗಾಧವೂ ಆದ ಕಾಯಗಳನ್ನು ವಿಶ್ವವು ಹೊಂದಿದೆ. ಒಂದು ಕಾಲಕ್ಕೆ ಈ ವಿಶ್ವ ಎನ್ನುವುದೇ ಇರಲಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ನಿಮಗೆ ಅಚ್ಚರಿಯಾಗಬಹುದು. ಸೌರವ್ಯೂಹ, ಕ್ಷೀರಪಥದಂತಹ ಗೆಲಾಕ್ಸಿಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು, ಕ್ಷುದ್ರಗ್ರಹಗಳು, ಕಪ್ಪು ಕುಳಿಗಳು, ಧೂಮಕೇತುಗಳು.. ಹೀಗೆ ಏನನ್ನೋ ಒಳಗೊಂಡಿರುವ ವಿಶ್ವ ಕೂಡ ಇರಲೇ ಇಲ್ಲ ಎನ್ನುತ್ತಾರೆ.. ಭೂಮಿ ಹುಟ್ಟುವ ಮುನ್ನ ಭೂಮಿಯ ತಾಯಿಯಂತೆ ಇರುವ ವಿಶ್ವ ಹೇಗೆ ಹುಟ್ಟಿತು?

ವಿಶ್ವದ ಉಗಮ:

ಮೊದಲಿಗೆ ಏನೂ, ಏನೇನೂ ಇರಲಿಲ್ಲ. ಒಂದು ರೀತಿಯಲ್ಲಿ ಏಕಮೇವ ಶೂನ್ಯತೆ. ಆ ಏಕಶೂನ್ಯದ ಸುತ್ತಲೂ ಏನೂ ಇರಲಿಲ್ಲ. ಅಲ್ಲಿ ಅಂತರಿಕ್ಷವಾಗಲಿ, ಖಾಲಿ ಜಾಗವಾಗಲಿ… ಕೊನೆಗೆ ಕತ್ತಲಾಗಲಿ, ಏನೂ ಇರಲಿಲ್ಲ. ಅದು ಅಂತಹ ಸ್ಥಿತಿಯಲ್ಲಿ ಹೇಗೆ ಎಷ್ಟು ದಿನ ಇತ್ತು ಅಂತಲೂ ಗೊತ್ತಿಲ್ಲ. ಏಕೆಂದರೆ ಆಗ ಕಾಲವೂ ಇರಲಿಲ್ಲ. ಹಾಗಾಗಿ ಅದಕ್ಕೆ ಭೂತಕಾಲವಾಗಲಿ, ಇತಿಹಾಸವಾಗಲಿ ಇರಲಿಲ್ಲ…

ಇಂಥ ಏನೂ ಇಲ್ಲದ ಸ್ಥಿತಿಯಲ್ಲಿ ನಮ್ಮ ಈ ಬ್ರಹ್ಮಾಂಡ ಉದಯಿಸಿತು. ಯಾವಾಗ ಎಂದು ಕೇಳಬಹುದು.  ಬ್ರಹ್ಮಾಂಡ ವಿಜ್ಞಾನಿಗಳು (ಖಗೋಳ ವಿಜ್ಞಾನಿಗಳು) ಹೇಳುವ ಪ್ರಕಾರ ಸುಮಾರು 1370 ಕೋಟಿ ವರ್ಷಗಳ ಹಿಂದೆ..

ಅದು ಆಗಿದ್ದಾದರೂ ಹೇಗೆ? ಅಂತಹ ಒಂದು ಏಕಶೂನ್ಯತೆಯಿಂದ, ಪದಗಳಲ್ಲಿ ವರ್ಣಿಸಲಾಗದ ಅಗಾಧತೆಯಲ್ಲಿ, ಅನಂತ ಆಯಾಮಗಳಲ್ಲಿ, ಕಲ್ಪಿಸಿಕೊಳ್ಳಲಾಗದಷ್ಟು ವಿಸ್ತಾರ ವ್ಯೋಮಾಕಾಶದಲ್ಲಿ ಈ ಬ್ರಹ್ಮಾಂಡ ಕ್ಷಣಾರ್ಧದಲ್ಲಿ ಅಸ್ತಿತ್ವಕ್ಕೆ ಬಂದುಬಿಟ್ಟಿತು.

ಆ ಮೊದಲ ಸೆಕೆಂಡಿನಲ್ಲಿ ಗುರುತ್ವಾಕರ್ಷಣೆ ಮತ್ತು ಇತರ ಭೌತಶಾಸ್ತ್ರದ ಪ್ರಮುಖ ಬಲಗಳು ಉದಯಿಸಿದವು. ಒಂದು ನಿಮಿಷಕ್ಕಿಂತ ಕಮ್ಮಿ ಅವಧಿಯಲ್ಲಿ ಈ ಬ್ರಹ್ಮಾಂಡ ಲಕ್ಷಾಂತರ ಕೋಟಿ ಮೈಲುಗಳ ಅಗಲದಲ್ಲಿ ಬೆಳೆದು, ವಿಸ್ತಾರವಾಗಿ ಚಾಚಿಕೊಂಡಿತು. ಅದರ ಜೊತೆಗೆ ಸಹಸ್ರ ಕೋಟಿ ಡಿಗ್ರಿಗಳ ಶಾಖವೂ ಇತ್ತು. ಅದು ಪರಮಾಣು ಪ್ರಕ್ರಿಯೆಗಳನ್ನು ಸಾಧ್ಯವಾಗಿಸುವ ಶಾಖ. ಆ ಸಮಯದ ಪರಮಾಣು ಪ್ರಕ್ರಿಯೆಗಳು ಹಗುರ ಮೂಲಧಾತುಗಳಾದ ಜಲಜನಕ ಮತ್ತು ಹೀಲಿಯಂ ಅನ್ನು ಸೃಷ್ಟಿಸಿದವು. ಹೀಗೆ ಸಾಗುವ ಸೃಷ್ಟಿಕ್ರಿಯೆ ಮುಂದಕ್ಕೆ ವಿಶ್ವದಲ್ಲಿ ಇದ್ದಿರಬಹುದಾದ ಎಲ್ಲಾ ಭೌತವಸ್ತುಗಳಲ್ಲಿ ಶೇ. 98ನ್ನು ಕೇವಲ ಮೂರೇ ನಿಮಿಷಗಳಲ್ಲಿ ಉತ್ಪನ್ನ ಮಾಡಿತು.

ಕೇವಲ ಎರಡು-ಮೂರು ನಿಮಿಷಗಳಲ್ಲಿ ಏನೂ ಇಲ್ಲದ ಸ್ಥಿತಿಯಿಂದ ಅಗಾಧ, ಅನಂತ, ಸುಂದರ, ಅಪರಿಮಿತ ಸಾಧ್ಯತೆಗಳ ಬ್ರಹ್ಮಾಂಡ ಆಸ್ತಿತ್ವಕ್ಕೆ ಬಂದಿದ್ದು. ಇದನ್ನೆ (ಖಗೋಳ) ಬ್ರಹ್ಮಾಂಡವಿಜ್ಞಾನದ ವಿಜ್ಞಾನಿಗಳು ಬಿಗ್-ಬ್ಯಾಂಗ್, ಮಹಾ ಸ್ಫೋಟ ಎಂದು ಕರೆಯುವುದು. ಅದು ಸ್ಫೋಟಕ್ಕಿಂತ ಹೆಚ್ಚಾಗಿ ಇದ್ದಕ್ಕಿದ್ದಂತೆ ಬೃಹತ್ ಪ್ರಮಾಣದಲ್ಲಿ ಘಟಿಸಿದ ಮಹಾವಿಸ್ತರಣೆ.

ಭೂಮಿ ಎಂಬ ಬೆರಗು

ಹೀಗೆ ಉದ್ಭವವಾದ ಅಗಾಧ ವಿಶ್ವದಲ್ಲಿ ಭೂಮಿಯೇನು ಏಕಾಏಕಿ ಪ್ರತ್ಯಕ್ಷವಾಗಲಿಲ್ಲ. ವಿಶ್ವವು ಕೋಟಿ ವರ್ಷಗಳ ಕಾಲ ವಿಸ್ತರಿಸಿಕೊಳ್ಳುತ್ತಾ ಇರುವಾಗಲೇ ಭೂಮಿ ನಿಧಾನವಾಗಿ ತನ್ನನ್ನು ರೂಪಿಸಿಕೊಳ್ಳುತ್ತಿತ್ತು.. ಕಲ್ಪನಾತೀತವಾದ ವಿಸ್ತಾರವಾದ ವಿಶ್ವದಲ್ಲಿ ಭೂಮಿ ಹುಟ್ಟಿದ್ದು ಒಂದು ಬೆರಗೇ…

1370 ಕೋಟಿ ವರ್ಷಗಳಷ್ಟು ಹಳೆಯದಾದ ಬ್ರಹ್ಮಾಂಡದಲ್ಲಿ ಸುಮಾರು 460 ಕೋಟಿ ವರ್ಷಗಳ ಹಿಂದೆ ನಮ್ಮ ಸೌರಮಂಡಲ ರೂಪಗೊಂಡಿತು. ಸುಮಾರು 2400 ಕೋಟಿ ಕಿಲೋಮೀಟರ್ ಗಳ ಉದ್ದಗಲದ ಅಂತರಿಕ್ಷದಲ್ಲಿ ಅನಿಲ ಮತ್ತು ಧೂಳು ಗುಂಪಾಗುತ್ತ ಬಂದು ಒಂದಾಗಿ ಸೇರಲು ಆರಂಭವಾಯಿತು.

ಅದರಲ್ಲಿ ಬಹುಪಾಲು ಎಲ್ಲವೂ ಅಂದರೆ ಶೇ. 99.9 ರಷ್ಟು ಸೂರ್ಯನ ಸೃಷ್ಟಿಗೇ ಬಳಕೆಯಾಯಿತು. ಇನ್ನೂ ತೇಲುತ್ತಿದ್ದ ಅಳಿದುಳಿದ ವಸ್ತುಗಳಲ್ಲಿ ಒಂದು ಕಣ ತನ್ನ ಹತ್ತಿರ ತೇಲುತ್ತಿದ್ದ ಇನ್ನೊಂದು ಕಣದೊಂದಿಗೆ ಎಲೆಕ್ಟ್ರೊಸ್ಟಾಟಿಕ್ ಬಲದಿಂದಾಗಿ ಕೂಡಿಕೊಳ್ಳಲು ಆರಂಭಿಸಿದವು. ಹಾಗೆ ಕೂಡಿಕೊಳ್ಳುತ್ತ ಅವೇ ಗ್ರಹಗಳಾಗಿ, ಉಪಗ್ರಹಗಳಾಗಿ ಆಕಾಶಕಾಯಗಳಾಗಿ ಬದಲಾಗುತ್ತ ಹೋದವು.

ಸೌರಮಂಡಲದ ಉದ್ದಗಲಕ್ಕೂ ಈ ವಿದ್ಯಮಾನ ದೀರ್ಘ ಕಾಲ ನಡೆಯಿತು. ಒಂದಕ್ಕೊಂದು ಡಿಕ್ಕಿಹೊಡೆದ ಧೂಳಿನ ಕಣಗಳು ಕ್ರಮೇಣ ಇನ್ನೊಂದಕ್ಕೆ ಡಿಕ್ಕಿ ಹೊಡೆದು, ಒಂದಕ್ಕೊಂದು ಅಂಟಿಕೊಳ್ಳುತ್ತ ದೊಡ್ಡವಾಗುತ್ತ ಹೋದವು. ಅವೇ ಕ್ರಮೇಣ ತಟ್ಟೆಯಾಕಾರದಲ್ಲಿ ಹರಡಿ ಕೊಂಡ ಗ್ರಹಾರಿಕೆ ಅಥವಾ ಪ್ಲಾನೆಟೆಸಿಮಲ್ಸ್ ಎಂದು ಕರೆಯಲ್ಪಡಬಲ್ಲಷ್ಟು ದೊಡ್ಡದಾದ ಧೂಳಿನ ಕಾಯಗಳಾದವು. ಇದು ಅದೇ ಗತಿಯಲ್ಲಿ ಅನಿಶ್ಚಿತ ಕ್ರಮದಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಬಹಳ ಡಿಕ್ಕಿಗಳನ್ನು ಕಂಡ ಆಕಾಶಕಾಯಗಳು ಕ್ರಮೇಣ ಎಷ್ಟು ದೊಡ್ಡವಾದವೆಂದರೆ ತಾವು ಚಲಿಸುತ್ತಿದ್ದ ಕಕ್ಷೆಯೊಳಗೆ ಕ್ರಮೇಣ ಅವೇ ಮೇಲುಗೈ ಸಾಧಿಸಿದವು.

ಇದೆಲ್ಲವೂ ಆಗಲು ಯುಗಗಳೇನೂ ಹಿಡಿಯಲಿಲ್ಲ. ವಿಜ್ಞಾನಿಗಳ ಪ್ರಕಾರ, ಸಣ್ಣ ಕಣಗಳ ಗುಂಪೊಂದು ನೂರಾರು ಮೈಲು ಅಗಲದ ಪುಟ್ಟದೊಂದು ಗ್ರಹವಾಗಿ ಬದಲಾಗಲು ಹಿಡಿದ ಅವಧಿ ಕೇವಲ ಹತ್ತಾರು ಸಾವಿರ ವರ್ಷಗಳು ಮಾತ್ರ. ನಮ್ಮ ಭೂಮಿ ಹೀಗೆ ಸುಮಾರು 20 ಕೋಟಿ ವರ್ಷಗಳಲ್ಲಿ ನಿರ್ಮಾಣವಾಯಿತು.

ಆಗಲೂ ಅದು ಬೆಂಕಿಯ ಲಾವಾರಸದಿಂದ ತುಂಬಿ ತುಳುಕುತ್ತಿತ್ತು ಮತ್ತು ಇನ್ನೂ ಸೌರಮಂಡಲದ ಅಂತರಿಕ್ಷದಲ್ಲಿ ತೇಲುತ್ತಿದ್ದ ಧೂಳು ಮತ್ತಿತರ ಆಕಾಶಕಾಯಗಳು ಅದಕ್ಕೆ ಬಂದು ಡಿಕ್ಕಿ ಹೊಡೆಯುತ್ತಲೇ ಇದ್ದವು. ಈ ಅವಧಿಯಲ್ಲಿಯೇ, ಅಂದರೆ ಸುಮಾರು 440 ಕೋಟಿ ವರ್ಷಗಳ ಹಿಂದೆ, ಈಗಿನ ಮಂಗಳ ಗ್ರಹದಷ್ಟು ದೊಡ್ಡದಾಗಿದ್ದ ಆಕಾಶಕಾಯವೊಂದು ಭೂಮಿಗೆ ಬಂದು ಡಿಕ್ಕಿ ಹೊಡೆಯಿತು. ಆ ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ ಭೂಭಾಗದ ಮೇಲ್ಪದರ ಸಾಕಷ್ಟು ಛಿದ್ರವಾಗಿ ಅಂತರಿಕ್ಷಕ್ಕೆ ಚೆಲ್ಲಿತು.

ಅದಾದ ಕೆಲವೇ ವಾರಗಳ ಅವಧಿಯಲ್ಲಿ ಭೂಮಿಯಿಂದ ಚಿಮ್ಮಿ ಹೋದ ಭಾಗಗಳೆಲ್ಲ ಆಕಾಶದಲ್ಲಿ ಒಂದಾಗಿ ಕೂಡಿಕೊಂಡವು. ಮತ್ತು ಭೂಮಿಯ ಗುರುತ್ವಾಕರ್ಷಣಾ ಬಲದಿಂದಾಗಿ ಅದು ಭೂಮಿಯನ್ನು ಸುತ್ತುಹಾಕಲು ಆರಂಭಿಸಿತು.

ಒಂದೇ ವರ್ಷದ ಅವಧಿಯಲ್ಲಿ ಅದು ಗೋಳದ ರೂಪ ಪಡೆದುಕೊಂಡಿತು. ಆ ಗೋಳವೇ ಇವತ್ತಿಗೂ ಭೂಮಿಯನ್ನು ಸುತ್ತುತ್ತ ನಮ್ಮ ಜೊತೆಗಿರುವ ಚಂದ್ರ.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – DVD ಪಡೆದುಕೊಳ್ಳುವುದು ಹೇಗೆ?


– ರವಿ ಕೃಷ್ಣಾರೆಡ್ಡಿ


ಸ್ನೇಹಿತರೆ,

ನೆನ್ನೆ ಈ ಸಾಕ್ಷ್ಯಚಿತ್ರದ ಬಗ್ಗೆ ಬರೆದಾಗಿನಿಂದ ಹಲವರು ಇದರ ಡಿವಿಡಿ ಪಡೆದುಕೊಳ್ಳುವುದು ಹೇಗೆ ಎಂದು ಫೋನಿನಲ್ಲಿ ಮತ್ತು ಕಾಮೆಂಟ್ ವಿಭಾಗಲ್ಲಿಯೂ ಕೇಳಿದ್ದಾರೆ. ಹೀಗೆ ಮಾಡಬಹುದು: ನೀವು ಬೆಂಗಳೂರಿನಲ್ಲಿ ಇದ್ದರೆ ಮತ್ತು ಕೆಳಗಿನ ವಿಳಾಸಕ್ಕೆ ಬರಬಹುದಾದರೆ ಫೋನ್ ಮಾಡಿ ಬಂದು ತೆಗೆದುಕೊಂಡು ಹೋಗಬಹುದು. ಆಗದೆ ಇದ್ದಲ್ಲಿ ಈ ಕೆಳಗಿನ ವಿಳಾಸಕ್ಕೆ “Ravi Krishna Reddy” ಹೆಸರಿಗೆ ಎಂ.ಒ./ಚೆಕ್/ಡಿಡಿ (ರೂ. 250) ಕಳುಹಿಸಿದರೆ ನಿಮಗೆ ಆದಷ್ಟು ಬೇಗ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮನಿ ಆರ್ಡರ್ ಮಾಡಿದರೆ ಸ್ಪಷ್ಟವಾಗಿ ನಿಮ್ಮ ವಿಳಾಸ ಮತ್ತು ಫೋನ್ ಸಂಖ್ಯೆ ಬರೆಯಿರಿ. ಚೆಕ್ ಅಥವ ಡಿಡಿ ಕಳುಹಿಸಿದರೆ ಒಂದು ಕಾಗದಲ್ಲಿ ನಿಮ್ಮ ಹೆಸರು, ವಿಳಾಸ, ಮತ್ತು ಫೋನ್ ಸಂಖ್ಯೆ ಬರೆದು ಪೋಸ್ಟ್ ಮಾಡಿ.

ವಿಳಾಸ:
ರವಿ ಕೃಷ್ಣಾರೆಡ್ಡಿ
೨೨೨, B೪, ತುಂಗಭದ್ರ,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ,
ಬೆಂಗಳೂರು – ೫೬೦೦೪೭
ಪೋ: ೯೬೮೬೦-೮೦೦೦೫

ಭೂಮಿ ಹುಟ್ಟಿದ್ದು ಹೇಗೆ? ಕನ್ನಡ ಸಾಕ್ಷ್ಯಚಿತ್ರ


– ರವಿ ಕೃಷ್ಣಾರೆಡ್ಡಿ


ಸ್ನೇಹಿತರೆ,

ಇಂದು ಕರ್ನಾಟಕದ ಮನೆಮನೆಯ ಒಳಗೆ ಜ್ಯೋತಿಷಿಗಳು, ಮಂತ್ರವಾದಿಗಳು, ಪೂಜಾರಿಗಳು, ಗ್ರಹ-ನಕ್ಷತ್ರಗಳ ಸುಳ್ಳು ಆಧಾರದ ಮೇಲೆ ಭವಿಷ್ಯ ಹೇಳುವವರು, ವಾಮಾಚಾರಿಗಳು, ಮೂಢರು, ದಡ್ಡರು ಟಿವಿ ಎನ್ನುವ ಪೆಟ್ಟಿಗೆಯ ಮೂಲಕ ಬೆಳ್ಳಂಬೆಳಗ್ಗೆಯ ಬಂದು ಕೂರುತ್ತಿದ್ದಾರೆ. ಕ್ರಮೇಣ ಜನರಲ್ಲಿ ಮೂಢನಂಬಿಕೆ ಹೆಚ್ಚುತ್ತಲೇ ಹೋಗುತ್ತಿದೆ.

ತಮ್ಮ ಮಕ್ಕಳು ಇಂಜಿನಿಯರ್-ಡಾಕ್ಟರ್ ಆಗಬೇಕೆಂದು ಬಯಸುವ ಅಕ್ಷರಸ್ಠರು ಸಹ ಯಾವುದೇ ರೀತಿಯ ವೈಜ್ಞಾನಿಕ ತಿಳಿವಳಿಕೆಗೆ ತೆರೆದುಕೊಳ್ಳದೆ ವಿಶೇಷ ಪೂಜೆ, ವ್ರತ, ಯಜ್ಞ-ಯಾಗಾದಿಗಳಲ್ಲಿ, ವಾಮಾಚಾರದಲ್ಲಿ ತಮ್ಮ ಅವಕಾಶ-ಯಶಸ್ಸುಗಳನ್ನು ಹುಡುಕುತ್ತಿದ್ದಾರೆ. ಹರಕೆ ಹೊತ್ತುಕೊಳ್ಳುವುದು, ಸ್ವಲ್ಪ ದುಡ್ಡು ಬರುವಷ್ಟರಲ್ಲಿ ದೂರದ ದೇವಸ್ಥಾನಗಳಿಗೆ ಹೋಗುವುದು, ಅಸಹ್ಯ ಎನ್ನಿಸುವ ರೀತಿಯಲ್ಲಿ ಕಾಣಿಕೆ ಕೊಡುವುದು ಹೆಚ್ಚಾಗುತ್ತಿದೆ.

ಇವೆಲ್ಲವಕ್ಕೂ ಕ್ಯಾಟಲಿಸ್ಟ್ ರೀತಿಯಲ್ಲಿ ನಮ್ಮ ದೃಶ್ಯ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿವೆ.

ಇದನ್ನು ಎದುರಿಸುವುದು ಹೇಗೆ. ಯಾವ ಕಡೆಯಿಂದ ಎನ್ನುವುದು ನನ್ನನ್ನು ಬಹಳ ದಿನದಿಂದ ಕಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ಼ ನಾನು ಅಮೆರಿಕದಿಂದ ಬಂದ ನಂತರ ವರ್ಷದ ಹಿಂದೆ ಕಡಿಮೆ ಖರ್ಚಿನಲ್ಲಿ ನಮ್ಮ ಬ್ರಹ್ಮಾಂಡ, ಸೂರ್ಯ, ಭೂಮಿ, ಚಂದ್ರ ರೂಪುಗೊಂಡ ಬಗ್ಗೆ ಮತ್ತು ಕಳೆದ ಕೋಟ್ಯಾಂತರ ವರ್ಷಗಳಲ್ಲಿ ಭೂಮಿ ಮತ್ತು ಇಲ್ಲಿಯ ಜೀವಗಳು ರೂಪುಗೊಂಡ ಬಗ್ಗೆ ಒಂದು ಕನ್ನಡ ಡಾಕ್ಯುಮೆಂಟರಿ ಮಾಡಬೇಕೆಂದು ತೀರ್ಮಾನಿಸಿದೆ. ಇದಕ್ಕೆ ಗೆಳೆಯರಾದ ಕುಮಾರ್, ಈಶ್ವರ್, ಶ್ರೀಮಂತ್, ಮತ್ತಿತರರು ಸಹಕರಿಸಿದರು. ಸುಮಾರು 15 ರಿಂದ 20 ಸಾವಿರ ಖರ್ಚು ಬಂತು.

45 ನಿಮಿಷಗಳ ಈ ಡಾಕ್ಯುಮೆಂಟರಿಯ ಬಹುತೇಕ ಕೆಲಸ ಮುಗಿದು ಸುಮಾರು ಐದಾರು ತಿಂಗಳಾಯಿತು. ಹತ್ತಾರು ಜನ ಸ್ನೇಹಿತರಿಗೆ ಪರಿಚಿತರಿಗೆ ನೋಡಿ ಅಭಿಪ್ರಾಯ ಹೇಳಲು ಕೊಟ್ಟಿದ್ದೆ. ಸ್ನೇಹಿತರೊಬ್ಬರು ತಾವು ಕೆಲಸ ಮಾಡುವ ವಿಜಯನಗರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೋಸ್ಕರ ಇದರ ಪ್ರದರ್ಶನ ಇಟ್ಟಿದ್ದರು. ಯುವ ವಿದ್ಯಾರ್ಥಿಗಳ ಅಂದಿನ ಪ್ರತಿಕ್ರಿಯೆ ನೋಡಿ ಇದೊಂದು ಸಾರ್ಥಕ ಪ್ರಯತ್ನ ಎಂದು ಅನ್ನಿಸಿತ್ತು.

ಈ ಸಾಕ್ಷ್ಯಚಿತ್ರದ ಪ್ರದರ್ಶನ ಇಟ್ಟು ಇದನ್ನು ಬಿಡುಗಡೆ ಮಾಡಬೇಕು ಎನ್ನಿಸಿತ್ತು. ಆದರೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಹಲವೆ ಜನ ಬಂದು ನೋಡಿದರೆ ಅದು ಒಂದು ರೀತಿಯ ಅನೈತಿಕ ವೆಚ್ಚ ಎನ್ನಿಸಿ ಸುಮ್ಮನಾದೆ. ಬದಲಿಗೆ ಇದನ್ನು ಹೆಚ್ಚು ಜನ ನೋಡಲಿ ಎಂದು ಯೂಟ್ಯೂಬ್‌ಗೆ ಸೇರಿಸಿದ್ದೇನೆ. (ಡಿವಿಡಿಯಲ್ಲಿಯ ಚಿತ್ರ-ದೃಶ್ಯದ ಗುಣಮಟ್ಟ ಇನ್ನೂ ಚೆನ್ನಾಗಿದೆ. ಇಲ್ಲಿ ಅಂತರ್ಜಾಲಕ್ಕಾಗಿ 240 ಪಿಕ್ಸೆಲ್‌ಗಳಿಗೆ ಸೀಮಿತಗೊಳಿಸಲಾಗಿದೆ.)

ಇದೊಂದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಸಾಕ್ಷ್ಯಚಿತ್ರ. ಯಾವುದೇ ಹಣಕಾಸಿನ ಲಾಭವನ್ನು ನಾನು ಇಲ್ಲಿ ಅಪೇಕ್ಷಿಸುತ್ತಿಲ್ಲ. ಯಾವುದೇ ಕಾಪಿರೈಟ್ಸ್ ಇಲ್ಲ. ಇದರ ಡಿವಿಡಿ ಪಡೆದುಕೊಂಡು ಯಾರು ಎಷ್ಟು ಕಾಪಿ ಮಾಡಿಯಾದರೂ ಹಂಚಬಹುದು.

ನಿಮ್ಮಲ್ಲಿ ಯಾರಿಗಾದರೂ ಈ ಸಾಕ್ಷ್ಯಚಿತ್ರದ ಡಿವಿಡಿ ಬೇಕಾದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಬೆಲೆ ಕೇವಲ 25 ರೂಪಾಯಿ. (ಒಂದು ಖಾಲಿ ಡಿವಿಡಿಯ ಬೆಲೆಯೆ 12 ರಿಂದ 25 ಇರುತ್ತದೆ.) ಆದರೆ ಒಂದು ಡಿವಿಡಿ ಬರ್ನ್ ಮಾಡಲು ಸಾಕಷ್ಟು ಸಮಯ ಮತ್ತು ಶ್ರಮ ಹಿಡಿಸುವುದರಿಂದ ನೀವು ಕನಿಷ್ಟ ಹತ್ತು ಕೊಳ್ಳಬೇಕಾಗುತ್ತದೆ. ಅಂದರೆ 250 ರೂಪಾಯಿ ಕೊಟ್ಟರೆ ನಿಮಗೆ ಹತ್ತು ಡಿವಿಡಿಗಳು ಸಿಗುತ್ತವೆ. ಇವುಗಳನ್ನು ನೀವು ನಿಮ್ಮ ಸ್ನೇಹಿತರಿಗೆ, ನೆಂಟರಿಗೆ, ನೀವು ಓದಿದ ಶಾಲಾಕಾಲೇಜುಗಳಿಗೆ ಉಡುಗೊರೆಯಾಗಿ ಕೊಡಬಹುದು. ಈ ಡಾಕ್ಯುಮೆಂಟರಿಯನ್ನು ಒಮ್ಮೆ ನೋಡಿದರೆ ಇದನ್ನು ಯಾರು ನೋಡಬೇಕು ಎನ್ನುವ ಕಲ್ಪನೆ ನಿಮಗಾಗುತ್ತದೆ ಎನ್ನುವ ನಂಬಿಕೆ ನನ್ನದು.

ಮೊದಲೆ ಹೇಳಿದಂತೆ ಇದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಪ್ರಯತ್ನ. ಇನ್ನೂ ಹಲವು ವೈಜ್ಞಾನಿಕ ಮತ್ತು ವೈಚಾರಿಕ ವಿಷಯಗಳ ಬಗ್ಗೆ ಇಂತಹುದೇ ಇನ್ನೂ ಕೆಲವು ಪ್ರಯತ್ನ ಮಾಡಬೇಕೆಂಬ ಆಲೋಚನೆಗಳಿವೆ. ನಿಮ್ಮಲ್ಲಿ ಯಾರಿಗಾದರೂ ಇಂತಹ ಪ್ರಯತ್ನದಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಚೆಯಿದ್ದಲ್ಲಿ ಮತ್ತು ನಿಮಗೆ ಸ್ಚ್ರಿಪ್ಟ್ ಬರೆಯುವ, ಅಥವ ವಿಡಿಯೊ ಎಡಿಟಿಂಗ್ ಮಾಡುವ ಅನುಭವವಿದ್ದಲ್ಲಿ ದಯವಿಟ್ಟು ಸಂಪರ್ಕಿಸಿ. (ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಕೆಲಸಗಳಲ್ಲಿ ತೊಡಗಿಕೊಳ್ಳುವ ಮನಸ್ಸಿರುವ volunteers ಮಾತ್ರ. ಉದ್ಯೋಗಾಕಾಂಕ್ಷಿಗಳಲ್ಲ.)

ದೂರವಾಣಿ: ೯೬೮೬೦-೮೦೦೦೫