ಪೋಸ್ಕೊ ಕ೦ಪನಿಯ ರಾಜಕಾರಣ – ಹೋರಾಟದ ದಾರಿಯಲ್ಲಿ ಹಲವು ಪ್ರಶ್ನೆಗಳು – ಕೆಲವೇ ಉತ್ತರಗಳು

ಹು.ಬಾ.ವಡ್ಡಟ್ಟಿ

ಪೋಸ್ಕೊ ಸ್ಟೀಲ್ ಕ೦ಪನಿಯ ಸ್ಥಾಪನೆಯು ಗದಗ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೊರಕವಾಗಿರುತ್ತದೆ. ಅಭಿವೃದ್ಧಿಯ ನಕ್ಷೆಯಲ್ಲಿ ಗದಗ ಜಿಲ್ಲೆ ಗುರುತಿಸಲ್ಪಡುತ್ತದೆ. ಅಭಿವೃದ್ದಿ ನಾಗಾಲೋಟವು ಯಾವುದೇ ಅಡೆ-ತಡೆಯಿಲ್ಲದೇ ಸಾಗುತ್ತದೆ ಅನ್ನುವ ಪು೦ಕಾನುಪು೦ಕವಾದ ತಲೆ ಬುಡವಿಲ್ಲದ ವಾದಗಳನ್ನು ಬಿಜೆಪಿ ಪರವಾಗಿರುವ ದಲ್ಲಾಳಿಗಳು ಬಿಡತೊಡಗಿದರು. ಗದಗ ಜಿಲ್ಲೆಯಲ್ಲಿ ಕಳೆದ 50 ವರ್ಷಗಳಲ್ಲಿ ದೊಡ್ಡ ಗಾತ್ರದ ಕೈಗಾರಿಕೆಗಳು ಸ್ಧಾಪಿಸಲ್ಪಟ್ಟಿರಲಿಲ್ಲ. ಪೋಸ್ಕೊ ಕ೦ಪನಿಯಿ೦ದಾಗಿ ಕೈಗಾರಿಕಾ ಬೆಳವಣಿಗೆ ಹಾಗೂ ಜನರ ಜೀವನಮಟ್ಟ ಸುಧಾರಿಸುತ್ತದೆ. 2-3 ಚೀಲ ಗೋಧಿ-ಜೋಳ ಬೆಳೆಯುವ ಭೊಮಿಯನ್ನು ಮಾರಿದರೆ ಲಕ್ಷ-ಲಕ್ಷಗಟ್ಟಲೇ ಹಣವನ್ನು ಪಡೆದುಕೊ೦ಡು ಆರಾಮವಾಗಿ ಐಷಾರಾಮಿ ಜೀವನ ಸಾಗಿಸಬಹುದೆ೦ಬ ಕಲ್ಪನೆಯನ್ನು ಬಡ ರೈತರಲ್ಲಿ ಕನಸೆ೦ಬ೦ತೆ ದಲ್ಲಾಳಿಗಳು, ಪುಡಿ ರಾಜಕಾರಣಿಗಳು ಬಿತ್ತ ತೊಡಗಿದರು.

ಜಿಲ್ಲೆಯಲ್ಲಿಯೇ ದೊಡ್ಡ ಕೈಗಾರಿಕೆಗಳು ಎ೦ದರೆ ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್, ಲಕ್ಷ್ಮೇಶ್ವರದ ನೂಲಿನ ಗಿರಣಿ, ಮತ್ತು ಮು೦ಡರಗಿ ತಾಲ್ಲೂಕಿನಲ್ಲಿರುವ ವಿಜಯನಗರ ಶುಗರ್‍ಸ ಸಕ್ಕರೆ ಕಾರ್ಖಾನೆ. ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್ ಮತ್ತು ಲಕ್ಷ್ಮೇಶ್ವರದ ನೂಲಿನ ಗಿರಣಿ ಸಹಕಾರಿ ಸ೦ಘದ್ದು ಆಗಿದ್ದರೆ, ವಿಜಯನಗರ ಶುಗರ್‍ಸ ಖಾಸಗಿ ಒಡೆತನದಲ್ಲಿದೆ. ಹೀಗಾಗಿ ಪೋಸ್ಕೊ ಸ್ಟೀಲ ಉತ್ಪಾದನಾ ಕ೦ಪನಿಯು ದೊಡ್ಡ ಸ೦ಚಲನವನ್ನು ಉ೦ಟು ಮಾಡುತ್ತದೆ ಅನ್ನುವ ಭ್ರಮೆಗಳು ಯುವ ರೈತರಲ್ಲಿ ಪುಟಿಯ ತೊಡಗಿದವು.

ಆದರೆ ವಾಸ್ತವಾ೦ಶಗಳೇ ಬೇರೆಯಾಗಿರುವದನ್ನು ಕಾಣಬಹುದಾಗಿದೆ . 50 ವರ್ಷಗಳಲ್ಲಿ ಮಾಡದಿರುವ ಅಭಿವೃದ್ದಿಯನ್ನು ಸರಕಾರ ಈಗಲೆ ಕೈಗೆತ್ತಿಕೊ೦ಡಿದ್ದು ಏಕೆ? ಎಂಬ ಸಹಜ ಪ್ರಶ್ನೆಯು ತಾನಾಗಿಯೇ ಬರುತ್ತದೆ. ಹಾಗಾದರೇ, ಅದರ ಹಿನ್ನೆಲೆಯ ಕುರಿತಾಗಿ ನೋಡಬೇಕಿದೆ.

ಮು೦ಡರಗಿ ತಾಲ್ಲೂಕಿನ ಹಳ್ಳಿಗುಡಿ, ಜ೦ತ್ಲಿ-ಶಿರೊರು, ಹರ್ಲಾಪುರ ಗ್ರಾಮಗಳು ಮಳೆಯಾಧಾರಿತ ಫಲವತ್ತಾದ ಕೃಷಿ ಭೂಮಿಯನ್ನು ಹೊ೦ದಿದೆ. ಕಪ್ಪು ಮಣ್ಣಿನ ಫಲವತ್ತಾದ ಈ ನೆಲವು ರೈತರ ಬದುಕಿಗೆ ಸಾವಿರಾರು ವರ್ಷಗಳಿ೦ದ ಅನ್ನ ನೀಡಿ ಸಲಹುತ್ತಾ ಬ೦ದಿದೆ. ಇಲ್ಲಿಯೇ ಪೋಸ್ಕೊ ಸ್ಧಾಪಿಸಲು ಸರಕಾರ ಹೊರಟ್ಟಿದ್ದು ಏಕೆ? ಈ ಪ್ರದೇಶದ ಹಳ್ಳಿಗುಡಿಯನ್ನು ಹೊರತುಪಡಿಸಿದರೆ ಜ೦ತ್ಲಿ-ಶಿರೊರು, ಹರ್ಲಾಪುರ ಪೇಠಾಲೊರು ಮತ್ತು ಮೇವು೦ಡಿ ಶಿ೦ಗಟಾಲೊರು ಏತ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಏತ ನೀರಾವರಿಯ ಕಾಮಗಾರಿಯು ತೀವ್ರಗತಿಯಲ್ಲಿ ಇರುವದರಿ೦ದ ನೀರಾವರಿಗೆ ಪೈಪಲೈನ ಮೂಲಕ ತರುತ್ತಿರುವ ನೀರನ್ನು ಪೋಸ್ಕೊ ಕ೦ಪನಿಗೆ.ಯಾವದೇ ಅಡೆ-ತಡೆಯಿಲ್ಲದೆ ಕೊಡಬಹುದು. ಇದು ನೀರಾವರಿ ಹೆಸರಲ್ಲಿ ಕ೦ಪನಿಗೆ ನೀರು ಕೊಟ್ಟರೆ ಯಾರೂ ಗಮನಿಸುವದಿಲ್ಲಾ, ಹೇಗೊ ನಡೆಯುತ್ತದೆ, ಅನ್ನುವ ಹುನ್ನಾರ ಸರಕಾರದ ಮನ:ಪಟಲದಲ್ಲಿ ಇತ್ತು ಅನಿಸುತ್ತದೆ.

ಅಲ್ಲದೇ. ನೀರಾವರಿಯ ಕಾಮಗಾರಿಯ ತೀವ್ರತೆಯು ರೈತರಿಗೆ ನೀರು ಕೊಡುವ ಕಡೆಗಿ೦ತಲು ಕ೦ಪನಿಗೆ.ನೀರು ನೀಡುವ ಹುನ್ನಾರವನ್ನು ಸರಕಾರವು ನಡೆಸಿತ್ತೆ? ಎಂಬ ಸ೦ಶಯವೂ ಈ ಸಂದರ್ಭದಲ್ಲಿ ಕಾಡದೇ ಇರದು?

ಬರಿ ನೀರಿನ ಪ್ರಶ್ನೆಯೋ? ರೈತನ ಬದುಕಿನ ಪ್ರಶ್ನೆಯೋ?
ಶಿ೦ಗಟಾಲೊರು ಎತ ನೀರಾವರಿಯ ಬ್ಯಾರೇಜನಲ್ಲಿ ನೀರಿನ ಸ೦ಗ್ರಹಣಾ ಸಾಮರ್ಥ್ಯವು 18.5 ಟಿಎ೦ಸಿಯುಷ್ಟು ಇದ್ದು, ಇದರಲ್ಲಿ 2 ಟಿಎ೦ಸಿ ಕುಡಿಯುವ ನೀರಿನ ಬಳಕೆಗೆ ಎ೦ದು ಅ೦ದಾಜು ಮಾಡಲಾಗಿದೆ. ಉಳಿದ 7.5 ಟಿಎ೦ಸಿ ನೀರಿನಲ್ಲಿ ಹೊವಿನಹಡಗಲಿ, ಮು೦ಡರಗಿ, ಕೊಪ್ಪಳ, ಹಗರಿಬೊಮ್ಮನಹಳ್ಳಿಯ ತಾಲ್ಲೂಕಿನ ರೈತರ ಕೃಷಿ ಭೂಮಿಗೆ ನೀರಾವರಿ ಮಾಡಲು ಬಳಸಬಹುದಾಗಿದೆ. ಇದರಿ೦ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಗದಗ ಜಿಲ್ಲೆಯ ಮು೦ಡರಗಿ ತಾಲ್ಲೂಕು, ಮತ್ತು ಕೊಪ್ಪಳ ಜಿಲ್ಲೆಯ ರೈತರ ಹೊಲಗಳಿಗೆ 2.5 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಆಗುತ್ತದೆ.

ಪೋಸ್ಕೊ ಕ೦ಪನಿಯ ಸ್ಥಾಪನೆ ಆಗುವ ಸಾಧ್ಯತೆಯಿದ್ದರೆ ಕನಿಷ್ಠ 2 ರಿ೦ದ 3 ಟಿಎ೦ಸಿ ನೀರನ್ನು ಪೋಸ್ಕೊ ಕ೦ಪನಿಯು ಬಳಸುತ್ತಿತ್ತು. ರೈತರ ಭೂಮಿಯ ನೀರಾವರಿ ಸಲುವಾಗಿ ಇರುವ 7.5 ಟಿಎ೦ಸಿ ನೀರಿನಲ್ಲಿ 2 ರಿ೦ದ 3 ಟಿಎ೦ಸಿ ನೀರಿಗೆ ಕನ್ನ ಬಿದ್ದಿದ್ದರೆ ರೈತರ ಭೂಮಿ ನೀರಾವರಿ ಮಾಡಲು ಬರೀ 4.5 ಟಿಎ೦ಸಿಯಷ್ಟೇ ನೀರು ಉಳಿಯುತ್ತಿತ್ತು. ಅಭಿವೃದ್ದಿಯ ಕುರಿತು ಮಾತನಾಡುವವರು ಒ೦ದೆಡೆ ರೈತರ ಸಾವಿರಾರು ಎಕರೆ ಭೂಮಿಯುನ್ನು ಕಸಿದುಕೊಳ್ಳುತ್ತಿದ್ದರೆ ಅದರ ಜೊತೆ-ಜೊತೆಯಲ್ಲಿಯೇ ರೈತರ ಭೂಮಿಗೆ ಬೇಕಿರುವ ನೀರನ್ನೂ ಕಸಿದುಕೊ೦ಡಿದ್ದರೆ ರೈತರ ಬದುಕಿಗೆ ಕ೦ಬ ಮತ್ತು ಕೈಯ ಹೊಡೆತಗಳು ಏಕಕಾಲಕ್ಕೆ ಬೀಳುತ್ತಿತು. ರೈತರ ಬದುಕು ಮತ್ತಷ್ಟು ಹೈರಾಣ ಆಗುವ ದು:ಸ್ಧಿತಿಗೆ ತ೦ದೊಡ್ಡುತ್ತಿತ್ತು. ಇದು ರೈತರನ್ನು ದ್ವಿಮುಖವಾಗಿ ಕೊಳ್ಳೆ ಹೊಡೆಯುವ ತ೦ತ್ರವಾಗಿ ಸರಕಾರವು ಯೋಚಿಸುತ್ತಿರಬಹುದೇ ಅನಿಸದೇ ಇರಲಾರದು. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು “ಪೋಸ್ಕೊಗೆ ನೀರು ಕೊಡುವದಿಲ್ಲ” ಎನ್ನುವ ಹೇಳಿಕೆ, “ಆಲಮಟ್ಟಿ ನೀರು ಕೋಡುತ್ತೇವೆ” ಎಂಬ ಮರುಹೇಳಿಕೆ, “ನೀರೇ ಕೊಡುವದಿಲ್ಲ” ಎನ್ನುವ ಮರುಮರುಹೇಳಿಕೆ ಕ೦ಪನಿಯು ಮಳೆಯನ್ನು ಆಶ್ರಯಿಸಿ ಅ೦ತರ್ಜಲವನ್ನು ಬಳಸಿಕೊಳ್ಳಲಿ ಅನ್ನುವದು ಸರಕಾರದ ದ್ವಂದ್ವ ನೀತಿಯನ್ನು ಪ್ರತಿಪಾದಿಸುತ್ತದೆ.

ಎರಿ ಇದ್ದವ ದೊರೆ.
ಎಷ್ಟೆಲ್ಲಾ ತಾಪಪ್ರಯ, ಮಳೆಯಿಲ್ಲದೆ ಬ೦ದ ಬೆಳೆಯಲ್ಲಿಯೇ ಸ೦ತೃಪ್ತಿ ಕಾಣುವ ರೈತರ ಬದುಕು, ಸಮೃದ್ಧಿಯಿಲ್ಲದೇ ಇದ್ದರೂ ಸಮಾಧಾನದ ಬದುಕು ಸಾಗಿಸಲು ಅಡ್ಡಿಯಿಲ್ಲಾ ಎಂಬ ಭಾವದಲ್ಲಿ ಬದುಕು ಸಾಗಿಸುತ್ತಾರೆ. ಕಪ್ಪು ನೆಲದ ಎರಿ ಮಣ್ಣು ಫಲವತ್ತತ್ತೆಯನ್ನು ಹೊ೦ದಿದ್ದು, ಇದು ಭಾರತದಲ್ಲಿ ಫಲವತ್ತಾದ ಮಣ್ಣು ಎ೦ದು ಕೃಷಿ ತಜ್ಞರು ಗುರುತಿಸುತ್ತಾರೆ. ಜನಪದಗಾರರು ಹಳ್ಳಿಗಾಡಿನ ಸೊಗಡಿನಲ್ಲಿ “ಎರಿ ಇದ್ದಾ೦ದ ದೊರಿ” ಅನ್ನುವ ನುಡಿಗಟ್ಟು ಕಪ್ಪುಮಣ್ಣು ಸುಖ-ಸಮೃದ್ಧಿ ಫಸಲನ್ನು ತರುತ್ತದೆ, ಇದರಿ೦ದ ರಾಜಮಹಾರಾಜರ೦ತೆ ಬಾಳಬಹುದು ಎಂದು ಪ್ರತಿಪಾದಿಸುತ್ತದೆ. ವಾಸ್ತವವಾಗಿ ಅದು ನಿಜ ಕೂಡಾ ಆಗಿದೆ.

ಇ೦ತಹ ಸಮೃದ್ದಿಯಾಗಿ ಬೆಳೆ ಬೆಳೆಯಲು ಯೋಗ್ಯವಾದ ಭೂಮಿಗೆ ಕೈಗಾರಿಕಾ ಸಚಿವ ನಿರಾಣಿಯವರ ಹಳ್ಳಿಗುಡಿಯಲ್ಲಿ ಭೂಸ್ವಾಧೀನಕ್ಕೆ ಒಳಪಡಲಿರುವ ಭೂಮಿಯು ಬ೦ಜರು ಆಗಿದೆ ಎಂಬ ಹೇಳಿಕೆಯು ಅವರ ಕೃಷಿ ಭೂಮಿಯ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಅದು  ಹಾಸ್ಯಾಸ್ಪದ ಕೂಡಾ ಆಗಿದೆ. ಅದಕ್ಕೆ ಉತ್ತರವೆ೦ಬ೦ತೆ ಜಗದ್ಗುರು ಡಾ|| ತೊ೦ಟದ ಸಿದ್ದಲಿ೦ಗ ಮಹಾಸ್ವಾಮಿಗಳು, ಪೋಸ್ಕೊ ಕ೦ಪನಿಯ ಭೂಸ್ವಾಧೀನಕ್ಕೆ ವಶಪಡಿಸಿಕೊಳ್ಳಲಿದ್ದ ಹಳ್ಳಿಗುಡಿ ಭೂಮಿಯಲ್ಲಿ ಅಡ್ಡಾಡಿ, “ಈ ಭೂಮಿ ಬ೦ಜರು ಅಲ್ಲ, ಫಲವತ್ತಾದ ಭೂಮಿಯನ್ನು ಹೊ೦ದಿದೆ, ಸಮೃದ್ಧ ಬೆಳೆ ಬರುತ್ತದೆ,” ಎನ್ನುವದನ್ನು ಮಾಧ್ಯಮದವರ ಎದುರು ತೋರಿಸಿಕೊಟ್ಟರು,

ಆನ೦ತರವೇ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರಿಗೆ ಭೂಮಿಯ ಬಗೆಗಿನ ಅಜ್ಞಾನದ ಅರಿವು ಉ೦ಟಾಗಿ “ಇಲ್ಲಾ, ಇಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿ೦ದ ಬ೦ಜರು ಎಂಬ ಪದ ಬಳಕೆ ಮಾಡಿದ್ದೇನೆ. ಅದರ ಬದಲು ಅದು ನೀರಾವರಿ ಭೂಮಿ ಅಲ್ಲ,” ಎಂದು ಒತ್ತಿ ಹೇಳ ತೊಡಗಿದರು.

(ಮುಂದುವರೆಯುವುದು…)

ಚಿತ್ರಗಳು : ಲೇಖಕರವು

ಕನ್ನಡ ಚಿತ್ರರಂಗದ ‘ಒಳ ಮನಸ್ಸು’ ಅನಾವರಣಗೊಂಡಿದೆ

ಭೂಮಿ-ಭಾನು

ಕನ್ನಡ ಚಿತ್ರರಂಗ ಪುರುಷ ಪ್ರಾಧಾನ್ಯ ಕ್ಷೇತ್ರ ಎನ್ನುವುದನ್ನು ಕನ್ನಡ ನಿರ್ಮಾಪಕರು ನಿರೂಪಿಸಿದ್ದಾರೆ. ವಿಜಯಲಕ್ಷ್ಮಿ ಆರೋಪ ಆಧಾರದ ಮೇಲೆ ನಿರ್ಮಾಪಕರ ಸಂಘ ನಟಿ ನಿಖಿತಾ ಅವರನ್ನು ಮೂರು ವರ್ಷಗಳ ಕಾಲ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಲು ಅವಕಾಶ ನೀಡಬಾರದೆಂದು ನಿರ್ಧಿರಿಸಿದೆ. ದರ್ಶನ್ ಕುಟುಂಬ ಕಲಹಕ್ಕೆ ಆತನಿಗೆ ನಟಿ ನಿಖಿತಾ ಜೊತೆ ‘ಸಖ್ಯ’ (?) ಕಾರಣ ಎಂದು ಕೇಳಿ ಬರುತ್ತಿದ್ದ ಗುಸುಗುಸುಗೆ ಈಗ ನಿರ್ಮಾಪಕ ಸಂಘದ ನಿರ್ಧಾರದಿಂದ ‘ಹುಸಿ ಅಧಿಕೃತತೆ’ ಸಿಕ್ಕಿಬಿಟ್ಟಿದೆ. ಇನ್ನುಮುಂದೆ ಯಾರು ಬೇಕಾದರೂ ನಿಖಿತ ಬಗ್ಗೆ ಕೇವಲವಾಗಿ ಮಾತನಾಡಬಹುದು!

ಕನ್ನಡ ಚಿತ್ರರಂಗ ಎಂತಹ ಮೂಲಭೂತವಾದಿ, ಅಜ್ಷಾನಿ, ದುಷ್ಟ, ಕ್ರೂರ ನಿರ್ಮಾಪಕರ ಕೈಯಲ್ಲಿ ಬಳಲುತ್ತಿದೆ ಎನ್ನವುದಕ್ಕೆ ಇದು ಸಣ್ಣ ಉದಾಹರಣೆ.

ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ಟಿವಿ ವಾಹಿನಿ ಚರ್ಚೆಯೊಂದರಲ್ಲಿ ಮಾತನಾಡುತ್ತ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ವಿಚಿತ್ರ ನೋಡಿ, ಅದೇ ದೂರನ್ನು ಮಾನ್ಯ ವಿಜಯಲಕ್ಷ್ಮಿಯವರು ಅದೇ ಸಂಜೆ ಹೊತ್ತಿಗೆ ಹಿಂಪಡೆದರು. ತಾವು ಬಾತ್ ರೂಂನಲ್ಲಿ ಬಿದ್ದದ್ದು ಎಂದು ನ್ಯಾಯಾಧೀಶರ ಮುಂದೆ ಹೇಳಿದರು. ಹಾಗಾದರೆ ವಿಜಯಲಕ್ಷ್ಮಿ ಬಾತ್ ರೂಂನಲ್ಲಿ ಬೀಳುವುದಕ್ಕೂ, ನಿಖಿತ ಕಾರಣವಾ?

ಮುನಿರತ್ನ ಮುಂದುವರೆದು ಮಾತನಾಡುತ್ತ ದರ್ಶನ್ ತುಂಬಾ ಒಳ್ಳೆಯವರು. ಅವರ ಜೊತೆ ಚಿತ್ರ ಮಾಡುವಾಗ ನಮಗೆ ಯಾವುದೇ ಕಿರಿಕಿರಿ ಇರುವುದಿಲ್ಲ ಎಂದು ದರ್ಶನ್ ಗೆ ಪ್ರಶಂಸ ಪತ್ರ ನೀಡಿದರು. ಸಿಗರೇಟಿನಿಂದ ಹೆಂಡತಿಯನ್ನು ಸುಟ್ಟ ನಟ, ಕುಡಿದು ಹೆಂಡತಿಯನ್ನು ಹೊಡೆಯುವ ನಟ (ಪೊಲೀಸ್ ಗೆ ನೀಡಿದ ಹೇಳಿಕೆಯಲ್ಲಿ ದರ್ಶನ್ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ) ಇವರಿಗೆ ಒಳ್ಳೆಯವನು.

ಮತ್ತೊಬ್ಬ ನಿರ್ಮಾಪಕ ಸೂರಪ್ಪ ಬಾಬು ಸಂಘದ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ ‘ನಮ್ಮ ಮನೆಯ ಹೆಣ್ಣು ಮಗಳ ಹಿತ ಮುಖ್ಯ’ ಎನ್ನುತ್ತಾರೆ. ಅವರು ‘ನಮ್ಮ ಮಗಳ ಹೆಣ್ಣು ಮಗಳು’ ಎನ್ನುತ್ತಿರುವುದು ವಿಜಯಲಕ್ಷ್ಮಿ ಬಗ್ಗೆ. ಅವರು ಮಾತು ಮುಂದುವರೆಸುತ್ತ ‘ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಾಗ ಅನೇಕರು ಟೀಕೆ ಮಾಡುವುದು ಸಹಜ. ಕೆಲವು ಬಹಿರಂಗ ಪಡಿಸಲಾಗದ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದರು.

ಇದೇ ಚರ್ಚೆಯಲ್ಲಿ ನಟಿ ಸುಷ್ಮಾ ಒಂದು ಸೂಕ್ತ ಪ್ರಶ್ನೆ ಎತ್ತಿದರು. ನಿಖಿತ ಏನು ದರ್ಶನ್ ನ್ನು ರೇಪ್ ಮಾಡಿಲ್ಲ. ದರ್ಶನ್ ಏನು ಸಣ್ಣ ಹುಡುಗನಲ್ಲ. ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣ ಆತನೇ. ಆದರೆ ಶಿಕ್ಷೆ ಬೇರೆಯವರಿಗೆ ಕೊಡ್ತೀರಲ್ಲ? ನಿರ್ಮಾಪಕರಿಂದ ಈ ಪ್ರಶ್ನೆಗೆ ಉತ್ತರ ಇಲ್ಲ.

ವಿಜಯಲಕ್ಷ್ಮಿ ಮೊದಲು ಗಂಡ ಹೊಡೆದ, ಸಿಗರೇಟಿನಿಂದ ಸುಟ್ಟ, ಗನ್ ತೋರಿಸಿ ಹೆದರಿಸಿದ ಎಂದೆಲ್ಲಾ ದೂರು ಕೊಟ್ಟರು. ಅವಲ್ಲಿ ಕೆಲವನ್ನು ಮಾಡಿದ್ದಾಗಿ ದರ್ಶನ್ ಒಪ್ಪಿಕೊಂಡದ್ದೂ ಆಗಿದೆ (ವರದಿಗಳ ಪ್ರಕಾರ). ಆದರೆ ಆತನಿಗೆ ಶಿಕ್ಷೆ ಆಗದಂತೆ ತಡೆಯಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅಂಬರೀಷ್ ಸೇರಿದಂತೆ ಅನೇಕರು ಮಾಧ್ಯಮದ ಎದುರು ಮಾತನಾಡುತ್ತಾ ‘ಗಂಡ-ಹೆಂಡತಿ ಮನಸ್ತಾಪ ಎಲ್ಲಾ ಮನೆಗಳಲ್ಲೂ ಕಾಮನ್’ ಎಂದರು. ಹೌದಾ, ಹೀಗೆ ಹೇಳಿಕೆ ನೀಡಿದವರೆಲ್ಲರ ಮನೆಯಲ್ಲೂ ಹೀಗೆ ನಡೆಯುತ್ತಿದೆಯಾ? ಅವರೆಲ್ಲಾ ಹೆಂಡತಿಗೆ ಸಿಗರೇಟಿನಿಂದ ಸುಡುತ್ತಾರಾ? ಕಿವಿ ಹರಿಯುತ್ತಾರ? ಅಥವಾ ಆಗಾಗ ಅವರ ಹೆಂಡತಿಯರು ಬಚ್ಚಲು ಮನೆಯಲ್ಲಿ ಬೀಳುತ್ತಿರುತ್ತಾರ?

ಕನ್ನಡ ಚಿತ್ರರಂಗದ ಒಳ ಮನಸ್ಸು ಈ ಘಟನೆಯಿಂದ ಅನಾವರಣಗೊಳ್ಳುತ್ತಿದೆ.

Gwangyang Steelworks

ಕೂಡ್ಲಿಗಿಗೆ ಪೋಸ್ಕೊ ಬೇಡ, ಗುಡಿಕೈಗಾರಿಕೆಗಳು ಬೇಕು.

ಪ್ರಜಾವಾಣಿ (ವಾಚಕರವಾಣಿ 24.08.2011)ಯ ಬಿ.ಎಂ ಪ್ರಭುದೇವ ಎಂಬುವವರ ಪತ್ರದಲ್ಲಿ ಪೋಸ್ಕೊ ಕೂಡ್ಲಿಗಿಗೆ ಬರಲಿ ಎಂಬ ಆಶಯ ವ್ಯಕ್ತವಾಗಿತ್ತು. ಕೂಡ್ಲಿಗಿಗೆ ಪೋಸ್ಕೋ ಕಂಪನಿ ಬರುತ್ತದೆಯಂತೆ, ಅದಕ್ಕಾಗಿ ಭೂಮಿಯನ್ನು ಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆಯಂತೆ ಮುಂತಾದ ಗಾಳಿ ಮಾತುಗಳು ಈ ಭಾಗದಲ್ಲಿ ಪ್ರಚಲಿತದಲ್ಲಿವೆ. ಅದೇನೇ ಇರಲಿ, ಈಗ ಪ್ರಶ್ನೆ ಏಳುವುದು ಪೋಸ್ಕೊ ಬಂದಾಕ್ಷಣ ಕೂಡ್ಲಿಗಿಯ ಸಮಗ್ರ ಅಭಿವೃದ್ಧಿಯಾಗುತ್ತದೆಯೆ ಎನ್ನುವುದು. ಹಾಗೆ ಅಂದುಕೊಂಡರೆ ಅದೊಂದು ಭ್ರಮೆ. ಕಾರಣ ಆ ಬೃಹತ್ ಕಂಪನಿ ಸ್ಥಳೀಯ ಉತ್ಪಾದನೆಯನ್ನಾಧರಿಸಿ ನಡೆಯುವುದಿಲ್ಲ. ಬದಲಾಗಿ ಇಲ್ಲಿಯ ಭೂಮಿ, ನೀರು, ವಿದ್ಯುತ್, ಮಾನವ ಸಂಪನ್ಮೂಲ ಬಳಸಿಕೊಂಡು ತನ್ನ ರಾಕ್ಷಸೀ ಹೊಟ್ಟೆಯನ್ನು ತುಂಬಿಸಿಕೊಳ್ಳುವಂತದ್ದು.

ಹಾಗಾಗಿ ಕಾರ್ಖಾನೆ ಸ್ಥಾಪನೆಯಾದರೆ, ಸ್ಥಾಪಿತ ಸ್ಥಳದ ಸುತ್ತಮತ್ತ ಒಂದಷ್ಟು ಅಂಗಡಿ ಮುಗ್ಗಟ್ಟುಗಳು, ಕೆಲವು ಜನರಿಗೆ ಗೇಟು ಕಾಯುವ ಕೆಲಸ, ಉGwangyang Steelworksಳಿದಂತೆ ಒಂದಷ್ಟು ಕೆಳದರ್ಜೆಯ ಕೆಲಸಗಳು ಸಿಗುವುದನ್ನು ಬಿಟ್ಟರೆ ಅದರಿಂದ ಕೂಡ್ಲಿಗಿ ತಾಲೂಕಿಗೆ ದೊಡ್ಡ ಉಪಕಾರವಾಗದು. ಆದರೆ ಅದು ಉಂಟು ಮಾಡುವ ದಮನಕಾರಿ ಪರಿಣಾಮಗಳನ್ನು ಮಾತ್ರ ಕೂಡ್ಲಿಗಿ ಜನತೆ ಸಮಾನವಾಗಿ ಅನುಭವಿಸಬೇಕಾಗುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಬಳ್ಳಾರಿ ಜಿಲ್ಲೆ ತೋರಣಗಲ್ಲು ಸಮೀಪದ ಜಿಂದಾಲ್‌ನ ಸುತ್ತಮುತ್ತಲ ಹಳ್ಳಿಗಳು ರೋಗಿಷ್ಟಗಳಾಗಿ ನರಳುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ.

ಈ ಹೊತ್ತು ಕೂಡ್ಲಿಗಿಗೆ ಬೇಕಾಗಿರುವುದು ಪೋಸ್ಕೊದಂತಹ ರಾಕ್ಷಸಿ ಕಂಪನಿಗಳಲ್ಲ, ಬದಲಾಗಿ ಗಾಂಧೀಜಿ ಹೇಳಿದ ಗುಡಿ ಕೈಗಾರಿಕೆಗಳು. ಈ ನೆಲೆಯಲ್ಲಿ ಕೂಡ್ಲಿಗಿಯ ನಿಧಾನಗತಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು. ಕೂಡ್ಲಿಗಿ ಹಿಂದುಳಿದ ತಾಲೂಕುಗಳಲ್ಲಿ ಒಂದು. ಇದು ಎರಡೂವರೆ ಲಕ್ಷ ಜನಸಂಖ್ಯೆ, 217 ಹಳ್ಳಿಗಳ, ಬೆರಳೆಣಿಕೆಯ ಪಟ್ಟಣಗಳ ತಾಲೂಕು. ಇಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಈ ಚರ್ಚೆ ಇಂದು ಅಗತ್ಯ.

ತಾಲೂಕಿನ ಹೊಸಹಳ್ಳಿ ಜೋಗಿಹಳ್ಳಿ ಭಾಗದಲ್ಲಿ ಶೇಂಗ ಪ್ರಮುಖ ಬೆಳೆ. ಸರಕಾರ ಎಣ್ಣೆ ಮಿಲ್ಲುಗಳನ್ನು ಸ್ಥಾಪಿಸಿದರೆ ಶೇಂಗ, ಸೂರ್ಯಕಾಂತಿ, ಎಳ್ಳು, ಮುಂತಾದ ಎಣ್ಣೆಕಾಳುಗಳ ಬೆಳೆಗಾರರನ್ನೂ ಒಳಗೊಂಡಂತಾಗುತ್ತದೆ. ಅಂತೆಯೇ ನಿಂಬಳಗೆರೆ ಮುಂತಾದ ಕಡೆ ರೇಶ್ಮೆ ಬೆಳೆ ಹೆಚ್ಚಾಗಿದೆ. ಇಲ್ಲಿ ರೇಶ್ಮೆ ಗೂಡುಗಳನ್ನು ಮಾರಲು ದೂರದ ರಾಮನಗರಕ್ಕೆ ಒಯ್ಯುತ್ತಾರೆ. ಈ ರೇಶ್ಮೆ ಬೆಳೆಗಾರರನ್ನು ಆಶ್ರಯಿಸಿ ರೇಶ್ಮೆ ನೂಲು ತೆಗೆವ, ರೇಶ್ಮೆ ಸೀರೆಗಳನ್ನು ನೇಯುವ ಗುಡಿ ಕೈಗಾರಿಕೆಯನ್ನು ಸ್ಥಾಪಿಸಬೇಕಿದೆ. ಅಂತೆಯೇ ಕೂಡ್ಲಿಗಿಯಲ್ಲಿ ಎಥೇಚ್ಚವಾಗಿ ಹತ್ತಿ ಬೆಳೆಗಾರರಿದ್ದಾರೆ. ಹಾಗಾಗಿ ಸರಕಾರ ಹತ್ತಿ ಗಿರಣಿಗಳನ್ನು ಸ್ಥಾಪಿಸುವ ಅಗತ್ಯವಿದೆ. ಉಜ್ಜಿನಿ ಮುಂತಾದ ಭಾಗಗಳಲ್ಲಿ ಕುರಿ ಸಾಕಣೆಯೂ, ಕುರಿ ಹುಣ್ಣೆಯಿಂದ ಕಂಬಳಿ ನೇಯ್ಗೆಯೂ ಇದೆ. ಇಲ್ಲಿ ಕಂಬಳಿ ನೇಕಾರರಿಗೆ ಅನುಕೂಲವಾಗುವಂತಹ ಕೈಮಗ್ಗಗಳನ್ನು ಸ್ಥಾಪಿಸಬೇಕಿದೆ. ಅಂತೆಯೇ ಕಂಬಳಿ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆಯನ್ನು ರೂಪಿಸಬೇಕಿದೆ.

ಕೂಡ್ಲಿಗಿ ತಾಲೂಕು ಹುಣಸೆ ವ್ಯಾಪಾರಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿ. ಈ ಹುಣಸೆ ವ್ಯಾಪಾರದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕಿದೆ. ಗುಡೇಕೋಟೆ ಭಾಗದ ಸೀತಾಫಲ ಹಣ್ಣುಗಳು ದೇಶವಿದೇಶಗಳಿಗೆ ರಪ್ತಾಗುತ್ತಿವೆ. ಈ ಸೀತಾಫಲದ ಬೆಳೆಯ ಅಭಿವೃದ್ದಿಗಾಗಿ ತೋಟಗಾರಿಕೆ ಇಲಾಖೆಯವರು ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಗುಡೇಕೋಟೆಯ ಜೇನು ತುಂಬಾ ಪ್ರಸಿದ್ಧ. ಇದನ್ನು ಆಧರಿಸಿ ಜೇನು ಸಾಕಣೆಕೇಂದ್ರವಾಗಲಿ ಇದಕ್ಕೆ ಪೂರವಾದ ವಾತವರಣವನ್ನು ಸೃಷ್ಟಿಸಬೇಕು. ಈಗ ಮೆಕ್ಕೆಜೋಳದ ಬೆಳೆ ಹೆಚ್ಚಾಗಿದೆ. ಮೆಕ್ಕೆಜೋಳದ ಉಪ ಉತ್ಪನ್ನಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಕೊಟ್ಟೂರಿನ ಮಂಡಕ್ಕಿ (ಪುರಿ) ಹೆಚ್ಚು ಪ್ರಸಿದ್ಧಿ. ಹಾಗಾಗಿ ಸರಕಾರ ಮಂಡಕ್ಕಿ ಭಟ್ಟಿಗಳನ್ನು ಸ್ಥಾಪಿಸಿ, ಪೂರಕವಾದ ಮಾರುಕಟ್ಟೆಯನ್ನು ಸೃಷ್ಠಿಸಬೇಕು.

ಈಗ ಕೂಡ್ಲಿಗಿಯಲ್ಲಿ ಹೈನುಗಾರಿಕೆ ಹೆಚ್ಚಾಗುತ್ತದೆ. ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನೆರವಾಗುವಂತಹ ಯೋಜನೆಗಳನ್ನು ಸರಕಾರ ಕೈಗೊಳ್ಳಬೇಕಿದೆ.  ಚರ್ಮೊಧ್ಯವನ್ನು ಅವಲಂಬಿಸಿದವರೂ ಹೆಚ್ಚಿದ್ದಾರೆ, ಹಾಗಾಗಿ ಚರ್ಮೊದ್ಯಮವನ್ನೂ ಅಭಿವೃದ್ಧಿಪಡಿಸಬೇಕಿದೆ. ಹೀಗೆ ವೃತ್ತಿ ಕಸಬನ್ನು ಆಶ್ರಯಿಸಿದ ನೇಕಾರರು, ಬಡಿಗೇರರು, ಕಂಬಾರರು, ಕಮ್ಮಾರರು, ಬುಟ್ಟಿ ಎಣೆವ ಕೊರವರು, ವಡ್ಡರು (ಬೋವಿಗಳು), ಜೀರರು(ಹೂಮಾರುವವರು), ಮಡಿವಾಳರು ಮುಂತಾದ ವೃತ್ತಿ ಕಸಬಿನವರು ಆಯಾ ಕಸಬನ್ನು ನಂಬಿ ಬದುಕುವಂತಹ ಯೋಜನೆಗಳನ್ನು ರೂಪಿಸಬೇಕಿದೆ. ಹಾಗಾದಲ್ಲಿ ಕೂಡ್ಲಿಗಿ ತಾಲೂಕಿನ ಸಮಗ್ರ ಅಭಿವೃದ್ಧಿ ನಿಧಾನಗತಿಯಲ್ಲಿ ಆಗುವ ಸಾದ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇಲ್ಲಿ ಹೇಳಿದ ಅಭಿವೃದ್ಧಿಯ ಮಾದರಿ ಕೇವಲ ಕೂಡ್ಲಿಗಿ ತಾಲೂಕಿಗೆ ಮಾತ್ರ ಅನ್ವಯವಾಗದೆ, ಎಲ್ಲಾ ತಾಲೂಕುಗಳ ಅಭಿವೃದ್ಧಿಯ ನೆಲೆಯಲ್ಲೂ ಅನ್ವಯಿಸಬಹುದು. ಈ ಬಗೆಯ ಅಭಿವೃದ್ಧಿಯ ಮಾದರಿಯಿಂದ ಜನರು ತಾವು ನಂಬಿದ, ತಮಗೆ ತಿಳಿದ ವೃತ್ತಿ ಕಸಬುಗಳಲ್ಲಿ ಹೊಸ ನಂಬಿಕೆ ಬರುತ್ತದೆ. ಅವರುಗಳಲ್ಲಿ ತಮ್ಮ ಬದುಕಿನ ಕ್ರಮದ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ತಮ್ಮ ಮಕ್ಕಳನ್ನು ಆಯಾ ಕಸಬುಗಳಲ್ಲಿ ಮುಂದುವರೆಸಲು ದೈರ್ಯವೂ ಬರುತ್ತದೆ. ಅವರುಗಳಿಗೆ ಅದಕ್ಕಾಗಿ ಪ್ರತ್ಯೇಕ ತರಬೇತಿಗಳ ಅಗತ್ಯವೂ ಇರುವುದಿಲ್ಲ, ಅದು ಅವರ ಬದುಕಿನ ಭಾಗವೇ ಆಗಿರುತ್ತದೆ. ಈ ಬಗೆಯ ಯೋಜನೆಗಳಲ್ಲಿ ಜನರು ಸ್ವತಃ ಪಾಲುದಾರರಾಗುತ್ತಾರೆ. ಕೇವಲ ಗುಡಿಕೈಗಾರಿಕೆಯಲ್ಲಿ ಕೆಲಸ ಮಾಡುವವರಲ್ಲದೆ, ಆ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವವರೂ ಸಹ ಆ ಕೈಗಾರಿಕೆಯ ಫಲಾನುಭವಿಗಳಾಗುತ್ತಾರೆ. ಆಗ ಆಯಾ ಬೆಳೆ, ಆಯಾ ಕಸುಬನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ.

ಮುಖ್ಯವಾಗಿ ಇಲ್ಲಿ ಹೇಳಿದ್ದನ್ನು ಸರಕಾರ ಮಾಡಲು ಕಾನೂನು ರೀತ್ಯವಾಗಿಯೇ ಹಲವಾರು ಅವಕಾಶಗಳಿವೆ.  ಅಂತೆಯೇ ಇದಕ್ಕಾಗಿ ಕೆಲವು ಹೊಸ ಕಾನೂನು ಕಾಯ್ದೆಗಳನ್ನೂ ಮಾರ್ಪಡಿಸುವ ಅಗತ್ಯವೂ ಇದೆ. ಹೀಗೆ ಹೇಳಿದ ಎಲ್ಲಾ ಬಗೆಯ ಗುಡಿ ಕೈಗಾರಿಕೆಗಳು ಇದ್ದಾಗಲೂ ಅವುಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಜನರೊಂದಿಗೆ ಬೆರೆಯುವ, ಜನರ ಶ್ರಮಸಂಸ್ಕೃತಿಯನ್ನು ಗೌರವಿಸುವ ಮತ್ತು ಆ ಮೂಲಕ ಕ್ರಿಯಾಶೀಲವಾಗಿ ದುಡಿವ ಮನಸ್ಸು ಇಲ್ಲದಿದ್ದರೆ ಅವೂ ಸಹ ಜಿಡ್ಡುಗಟ್ಟುತ್ತವೆ.

ಕೂಡ್ಲಿಗಿಯಲ್ಲಿ ಯಾವುದೇ ಗುಡಿ ಕೈಗಾರಿಕೆಗಳು ಇಲ್ಲವೆಂತಲ್ಲ. ಇದ್ದರೂ ಇಲ್ಲದಂತಿರುವುದು ಇಂದಿನ ಸಮಸ್ಯೆ. ಅಂತೆಯೇ ಅವುಗಳ ವ್ಯಾಪ್ತಿಯೂ ಬಹುಜನರನ್ನು ಒಳಗೊಳ್ಳುವಷ್ಟು ಹಿರಿದಾಗಿಲ್ಲ. ಅದರಲ್ಲೂ ಇದ್ದ ಕೆಲವಾದರೂ ಎಣ್ಣೆ ಗಿರಣಿ, ಹತ್ತಿ ಗರಣಿಗಳು ಖಾಸಗಿ ಧಣಿಗಳ ಕೈವಶದಲ್ಲಿವೆ. ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚಿನ ಅರಣ್ಯ ಭೂಮಿಯಿದೆ, ಅದನ್ನು ಪುಡಾರಿ ನಾಯಕರುಗಳು ರೈತರ ಹೆಸರಲ್ಲಿ ಸಾಗುವಳಿ ಭೂಮಿಯನ್ನಾಗಿ ಸೃಷ್ಟಿಸಿ ಕೊಳ್ಳೆಹೊಡೆಯುತ್ತಿದ್ದಾರೆ. ಇದನ್ನು ತಪ್ಪಿಸಿ ಕುರುಚಲು ಕಾಡಿನಂತಿರುವ ಅರಣ್ಯ ಭೂಮಿಯನ್ನು ಸಮೃದ್ಧ ಕಾಡನ್ನಾಗಿ ಬೆಳೆಸಬೇಕಿದೆ. ನೀರು ತಡೆಯ ಗೋಕಟ್ಟೆಗಳನ್ನು ಹೆಚ್ಚಾಗಿ ನಿರ್ಮಿಸಿ, ಆ ಮೂಲಕ ಅಂತರ್ಜಲ ಹೆಚ್ಚಿಸುವ ಅಗತ್ಯವಿದೆ.

ಈ ಮಾತುಗಳನ್ನು ತಾಲೂಕಿನ ಶಾಸಕರಾದ ಬಿ.ನಾಗೇಂದ್ರ ಅವರು, ತಹಶೀಲ್ದಾರರು, ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು, ಸದಸ್ಯರುಗಳು, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಕಿವಿಯಲ್ಲಿ ಹಾಕಿಕೊಂಡು ಕ್ರಿಯಾಶೀಲವಾಗಬೇಕೆನ್ನುವುದು ನನ್ನ ಆಶಯ. ಹೀಗೆ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಮಾತ್ರ ಕೂಡ್ಲಿಗಿ ತಾಲೂಕು ಭವಿಷ್ಯದಲ್ಲಿ ಅಭಿವೃದ್ಧಿಯಾಗಲು ಸಾದ್ಯವಿದೆ. ಇದಾಗದ ಹೊರತು ಇನ್ನೂ ಒಂದು ಶತಮಾನ ಕಳೆದರೂ ಹಿಂದುಳಿದ ತಾಲೂಕಿನ ಅಣೆಪಟ್ಟಿಯನ್ನು ಅಳಿಸಲಾಗದು.

-ಅರುಣ್ ಜೋಳದಕೂಡ್ಲಿಗಿ.
ಸಂಪರ್ಕ: ಜೋಳದಕೂಡ್ಲಿಗಿ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ ಪಿನ್-583134 ಮೊ:9901445702

ಚಿತ್ರಕೃಪೆ : ವಿಕಿಪೀಡಿಯ

ಜೀವನದಿಗಳ ಸಾವಿನ ಕಥನ – 2

ಡಾ.ಎನ್. ಜಗದೀಶ್ ಕೊಪ್ಪ

ಪರಿಸರ ಕುರಿತಂತೆ ಅಪಾರ ಕಾಳಜಿ ಹೊಂದಿದ್ದ, ದುಡಿಯುವ ವರ್ಗದ ಆರಾಧ್ಯ ದೈವವಾಗಿದ್ದ ಚಿಂತಕ, ದಾರ್ಶನಿಕ ಕಾರ್ಲ್‌ಮಾರ್ಕ್ಸ್ ತನ್ನ “ಎಕನಾಮಿಕ್ ಅಂಡ್ ಪಿಲಾಸಫಿಕ್ ಮಾನ್ಯುಸ್ಕ್ರಿಪ್ಟ್” ಕೃತಿಯಲ್ಲಿ “ಮಾನವ ಪ್ರಕೃತಿಯೊಡನೆ ಜೀವಿಸುತ್ತಾನೆ. ಪ್ರಕೃತಿಯೆಂಬುದು ಅವನಲ್ಲಿ ಅಂತರ್ಗತವಾಗಿದೆ. ಅವನು ಈ ಭೂಮಿಯ ಮೇಲೆ ಬದುಕುಳಿಯಬೇಕಾದರೆ ಪ್ರಕೃತಿಯೊಡನೆ ನಿರಂತರವಾಗಿ ಸಂವಾದದಲ್ಲಿ ಇರಬೇಕು”, ಎಂದಿದ್ದ. ಮಾರ್ಕ್ಸ್‌ನ ಸಂಗಾತಿ ಏಂಗಲ್ಸ್ ಕೂಡ “ನಮ್ಮ ಬದುಕಿನ ಮೂಲಭೂತ ಅಗತ್ಯವಾದ ಭೂಮಿಯನ್ನು, ಅದರ ಕೊಡುಗೆಗಳನ್ನು ವ್ಯಾಪಾರದ ಸರಕನ್ನಾಗಿ ಮಾಡಿದ್ದೇ ಆದರೆ ಅಂದೇ ಮನುಕುಲದ ಅವನತಿ ಪ್ರಾರಂಭ” ಎಂದು ಎಚ್ಚರಿಸಿದ್ದ. ವಿಷಾದದ ಸಂಗತಿ ಎಂದರೆ ಈ ಮಹಾನ್ ದಾರ್ಶನಿಕರು ಎಚ್ಚರಿಸುವ ಮೊದಲೇ ಅವನತಿಯ ಅಧ್ಯಾಯ ಆರಂಭವಾಗಿತ್ತು.

ಕಳೆದ 50 ವರ್ಷಗಳ ಅವಧಿಯಲ್ಲಿ ಈ ಭೂಮಿಯ ಮೇಲಿನ ಅನೇಕ ಅಪರೂಪದ ಜೈವಿಕ ಸಂತತಿಗಳು ನಾಶವಾಗಿವೆ. ಸಾವಿರಾರು ಪ್ರಭೇಧಗಳು ವಿನಾಶದ ಅಂಚಿನಲ್ಲಿವೆ. ನಮ್ಮ ನದಿ, ಬೆಟ್ಟ, ಸರೋವರ ಇವೆಲ್ಲವೂ ತಮ್ಮ ನೈಜ ಸ್ವರೂಪವನ್ನು ಕಳೆದುಕೊಂಡು ವಿರೂಪಗೊಂಡಿವೆ. ಆಧುನಿಕ ಜಗತ್ತಿನ ಮೂಲ ಮಂತ್ರವಾದ “ಅಭಿವೃದ್ಧಿ” ಎಂಬ ರಕ್ಕಸನ ಬಾಯಿಗೆ ದಿನ ನಿತ್ಯದ ಆಹಾರವಾಗತೊಡಗಿವೆ.

ಅಷ್ಟೇ ಏಕೆ 40 ವರ್ಷಗಳ ಹಿಂದೆ ನನ್ನ ತಲೆಮಾರು ಬಾಲ್ಯದಲ್ಲಿ ಕಂಡ ತುಂಬೆ, ತುಳಸಿ, ಸಂಪಿಗೆ, ಜಾಜಿಮಲ್ಲಿಗೆ, ತಾವರೆ, ಬಣ್ಣ ಬಣ್ಣದ ಚಿಟ್ಟೆ – ಪತಂಗ, ದೇಸಿ ಸಂತತಿಯ ಹಸು, ಕರು, ಎಮ್ಮೆ, ನಮ್ಮ ನಾಟಿ ತಳಿಗಳ ಬಿತ್ತನೆ ಬೀಜಗಳು, ನಮ್ಮ ಹಬ್ಬ, ಹಸೆ, ಹಾಡು, ಇವೆಲ್ಲವೂ ಮರೆಯಾಗಿ ನಮ್ಮ ಸ್ಮೃತಿಯೆಂಬ ಕಪಾಟಿನೊಳಗೆ ಜೀವಂತವಿರುವ ಕನವರಿಕೆಗಳು ಮಾತ್ರವಾಗಿವೆ.

20 ಮತ್ತು 21 ನೇ ಶತಮಾನವೆಂದರೆ ಮನುಕುಲವೆಂಬುದು ಉನ್ಮಾದದಿಂದ ಪ್ರಕೃತಿಯ ಮೇಲೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಮತ್ತು ವಿಫಲತೆಗಳ ಯುಗ ಎಂಬಂತಾಗಿದೆ. ಇದಕ್ಕೆ ಇತ್ತೀಚಿನ ಸಾಕ್ಷಿ ಎಂದರೆ ಜಪಾನ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪ ಮತ್ತು ಸುನಾಮಿ.

ಪ್ರಕೃತಿಯಲ್ಲಿನ ಜೀವಜಾಲವೆಂಬುದು ಮಾನವನ ಪ್ರತಿಸ್ಪರ್ಧಿಯಲ್ಲ. ಅದರಲ್ಲಿ ಅವನೂ ಒಂದು ಭಾಗ ಎಂಬ ಈ ನೆಲದ ಮೂಲ ಸಂಸ್ಕೃತಿಯನ್ನು, ಕಾಳಜಿಯನ್ನು ಮರೆತ ಆಧುನಿಕ ಜಗತ್ತಿನ ನಾಗರೀಕತೆಗೆ ಕಬಳಿಕೆಯೊಂದೇ ಗುರಿಯಾಗಿದೆ. ಬದಲಾದ ನಮ್ಮ ಬದುಕಿನ ಕ್ರಮ ಹಾಗೂ ಚಿಂತನಾ ಲಹರಿಗಳಿಂದ ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿದ್ದ “ಅವಿಭಕ್ತ ಕುಟುಂಬ” ಪದ್ಧತಿ ಸಧ್ಯ ಛಿದ್ರಗೊಂಡಿದ್ದು, ಹೆಚ್ಚಿದ ಉಪಭೋಗ ಪ್ರಕೃತಿ ಮೇಲಿನ ದಾಳಿಗೆ ಪರೋಕ್ಷ ಕಾರಣವಾಗಿದೆ.

ಕೇವಲ ಅರ್ಧ ಶತಮಾನದ ಹಿಂದಿನ ಸಮಾಜದ ಕುಟುಂಬಗಳಲ್ಲಿ ಮೂಲಭೂತ ಬೇಡಿಕೆಗಳಾದ ಆಹಾರ, ನೀರು, ವಿದ್ಯುತ್, ಉರುವಲು ಮುಂತಾದ ಅಗತ್ಯತೆಗಳು ಮಿತಿಯಲ್ಲಿದ್ದವು. ಪ್ರಕೃತಿಯಿಂದ ಒಂದನ್ನು ಪಡೆದರೆ, ಅದೇ ಪ್ರಕೃತಿಗೆ ಹಿಂತಿರುಗಿ ಎರಡನ್ನು ನೀಡುವ ಪದ್ಧತಿ ನಮ್ಮ ಜನಪದರಲ್ಲಿ ಚಾಲ್ತಿಯಲ್ಲಿತ್ತು.

ಏಕ ಕುಟುಂಬ ಪದ್ಧತಿ ಜೊತೆಗೆ ಅಮೆರಿಕಾ ದೇಶ ಜಗತ್ತಿಗೆ ಕಲಿಸಿದ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮನುಕುಲದ ಬೇಡಿಕೆಗಳಿಗೆ ಇತಿ-ಮಿತಿ ಇಲ್ಲದಂತಾಗಿದೆ.

ಜಗತ್ತಿನ ಜನ ಸಂಖ್ಯೆಯಲ್ಲಿ ಶೇ.4ರಷ್ಟು ಇರುವ ಅಮೆರಿಕಾದ ಜನತೆ, ನೈಸರ್ಗಿಕ ಕೊಡುಗೆಗಳಲ್ಲಿ ಶೇ.40ರಷ್ಟು ಪಾಲನ್ನು ಕಬಳಿಸುತ್ತಿದ್ದಾರೆ. ವಾತಾವರಣ ಕಲುಷಿತಗೊಳಿಸುವುದರಲ್ಲಿ ಅವರ ಪಾಲು ಶೇ.27ರಷ್ಟು. ಇಂತಹ ನಾಗರೀಕತೆಯ ಅತಿಲಾಲಸೆ, ವ್ಯಾಪಾರೀಕರಣಗೊಂಡ ಜಗತ್ತು, ಭೋಗ ಸಂಸ್ಕೃತಿ ಇವುಗಳಿಂದ ಪಕೃತಿ ನಲುಗಿ ಹೋಗಿದೆ.

ವರ್ತಮಾನದ ಜಗತ್ತಿನಲ್ಲಿ ದೊರೆಯುತ್ತಿರುವ 1.4 ಬಿಲಿಯನ್ ಕ್ಯೂಬಿಕ್ ಮೀಟರ್ ನೀರಿನಲ್ಲಿ ಶೇ 3ರಷ್ಟು ಮಾತ್ರ ಶುದ್ಧ ನೀರಾಗಿದೆ. ಶೇ.3ರಷ್ಟು ಪಾಲಿನ ಈ ನೀರಿನಲ್ಲಿ ಶೇ.77.2ರಷ್ಟು ಮಂಜುಗೆಡ್ಡೆರೂಪದಲ್ಲಿ, ಶೇ.0.35ರಷ್ಟು ಸರೋವರಗಳಲ್ಲಿ, ಶೇ.0.1ರಷ್ಟು ನದಿ-ಕೊಳ್ಳಗಳಲ್ಲಿ ನಮಗೆ ಲಭ್ಯವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನೀರಿನ ಅಭಾವ ಕಾಣಿಸಿಕೊಂಡದ್ದು 1980ರ ದಶಕದಲ್ಲಿ. ಕುಡಿಯುವ ನೀರಿನ ಮೂಲಗಳಾಗಿದ್ದ ನಮ್ಮ ನದಿಗಳು, ಜಲಾಶಯಗಳು ಅರಣ್ಯ ನಾಶ ಮತ್ತು ಅಕ್ರಮ ಗಣಿಗಾರಿಕೆಯಿಂದ ಕಲುಷಿತಗೊಂಡವು.

ನಮ್ಮ ಪೂರ್ವಿಕರು ಸಾಮಾನ್ಯವಾಗಿ ದೇಗುಲಗಳನ್ನು ನದಿತೀರಗಳಲ್ಲಿ ನಿರ್ಮಿಸಿ, ನದಿಗಳಿಗೆ ಅರ್ಪಿಸಿರುವುದನ್ನು ನಾವು ದೇಶದ ಎಲ್ಲೆಡೆ ಕಾಣಬಹುದು. ನಮ್ಮ ಪೂರ್ವಜರು ನದಿ ನೀರಿನ ಬಳಕೆ ಕುರಿತಂತೆ ನಿರ್ಮಿಸಿದ ದೇಸಿ ತಂತ್ರಜ್ಞಾನ ಇಂದಿನ ನೀರಾವರಿ ತಂತ್ರಜ್ಞಾನಕ್ಕೆ ಮೂಲವಾಗಿದೆ ಎಂದು ನೀರಾವರಿ ತಜ್ಞ ಅರ್ಥರ್ ಕಾಟನ್ 1874ರಲ್ಲಿ ದಾಖಲಿಸಿದ್ದಾನೆ. ನಮ್ಮ ದಕ್ಷಿಣ ಭಾರತದ ಕೃಷ್ಣ, ಕಾವೇರಿ ನದಿ ಪಾತ್ರಗಳಲ್ಲಿ ನಿರ್ಮಿಸಿದ ಕಿರು ಜಲಾಶಯ, ಅಣೆಕಟ್ಟುಗಳು ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪೂರಕವಾಗಿವೆ. ದೆಹಲಿ ಮೂಲದ “ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್” ಸಂಸ್ಥೆಯ ಸ್ಥಾಪಕ ದ.ಅನಿಲ್ ಅಗರ್‌ವಾಲ್ 90ರ ದಶಕದಲ್ಲಿ ಭಾರತದ ಪರಿಸರ ಕುರಿತಂತೆ “ಸಿಟಿಜನ್ ರಿಪೋರ್ಟ್ಸ್” ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದು ಇದೇ ಸಂದರ್ಭದಲ್ಲಿ “ಡೈಯಿಂಗ್ ವಿಸಡಮ್” ಹೆಸರಿನ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನೀರಾವರಿ ಪದ್ಧತಿ, ಕೆರೆ-ಕಟ್ಟೆ, ಕಾಲುವೆಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಇದ್ದು ಓದುಗರಲ್ಲಿ ವಿಸ್ಮಯ ಮೂಡಿಸುತ್ತದೆ. ಅಂದಿನ ವಿಜಯನಗರದ ಸಾಮಂತರು, ತಮಿಳುನಾಡಿನ ಚೋಳರು, ಪಾಂಡ್ಯರು ಮುಂತಾದವರ ಆಳ್ವಿಕೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಬಳಸುವ ನೀರು ಇವುಗಳ ಕುರಿತಂತೆ ಅಳವಡಿಸಿಕೊಂಡಿದ್ದ ದೇಸಿ ತಂತ್ರಜ್ಞಾನ ಇಂದಿಗೂ ಮಾದರಿಯಾಗಿದೆ.

ಆಧುನಿಕ ಯುಗದ ನದಿಗಳೆಂದರೆ ನಮ್ಮೆಲ್ಲರ ಮಲ-ಮೂತ್ರಗಳನ್ನು, ನಗರ, ಪಟ್ಟಣಗಳಿಂದ ಹೊರಹಾಕುವ ತ್ಯಾಜ್ಯ ವಸ್ತುಗಳನ್ನು ಸಮುದ್ರಕ್ಕೆ ಸಾಗಿಸುವ ವಾಹಕಗಳು ಎಂಬಂತಾಗಿವೆ. ನದಿಯೆಂದರೆ ಅದು ಕೇವಲ ನೀರಿನ ಹರಿವಲ್ಲ. ಅದಕ್ಕೆ ಅದರದೇ ಆದ ಮಾತೃತ್ವ ಗುಣವಿದೆ. ನದಿನೀರಿಗೆ ವಿಷವನ್ನಾದರೂ ಬೆರೆಸಿ, ಅಮೃತವನ್ನಾದರೂ ಬೆರೆಸಿ ಅದೆಲ್ಲವನ್ನೂ ತನ್ನದಗಿಸಿಕೊಳ್ಳುವ ಗುಣ ನದಿಯ ಒಡಲೊಳಗೆ ಅಂತರ್ಗತವಾಗಿದೆ. ನದಿಯ ನೀರಿನ ಮೇಲೆ ಹಣತೆ ಹಚ್ಚಿಟ್ಟು ತೇಲಿ ಬಿಟ್ಟಾಗ ನದಿ ಸಂಭ್ರಮಿಸುವುದಿಲ್ಲ. ಅದೇ ರೀತಿ ಉರಿವ ಕೊಳ್ಳಿಯ ಜೊತೆ ಅರೆಬೆಂದ ಶವಗಳನ್ನು ನದಿಗೆ ಎಸೆದಾಗ ಅದು ಬೇಸರಗೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು “ನದಿಗೆ ನೆನಪಿನ ಹಂಗಿಲ್ಲ” ಎಂದಿದ್ದರು. ನದಿಗಳು ಮನುಕುಲದೊಂದಿಗೆ ಥಳಕು ಹಾಕಿಕೊಂಡು ಮನುಷ್ಯನ ಜೊತೆ ಅವಿನಾಭಾವ ಸಂಬಂಧ ಇರುವುದರಿಂದಲೇ ಮಾನವ ಜನಾಂಗಕ್ಕೆ ನದಿಯೆಂದರೆ ಅದು ಮಾತೃ ಸ್ವರೂಪಿಣಿ ಎಂಬ ಪರಿಕಲ್ಪನೆ ಮೂಡಿತು.

ಜಗತ್ತಿನ ಯಾವುದೇ ಪುರಾಣವಿರಲಿ, ಮಹಾಕಾವ್ಯವಿರಲಿ ಅಲ್ಲಿ ನದಿಗಳ ಪಾತ್ರ ಇದ್ದೇ ಇರುತ್ತದೆ. ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನ “ರಿವರ್‍ಸ್ ಆಫ್ ಎಂಪೈರ್” ಕೃತಿಯಲ್ಲಿ ನದಿ ಅಥವಾ ನೀರಿನ ಇತಿಹಾಸವಿಲ್ಲದೆ ಯಾವುದೇ ಮನುಕುಲದ ಇತಿಹಾಸ ಪೂರ್ಣವಾಗಲಾರದು ಎಂದಿದ್ದಾನೆ.

ಜಗತ್ತಿನ ಪ್ರ-ಪ್ರಥಮ ಮಹಾಕಾವ್ಯ ಎನಿಸಿಕೊಂಡ ಮೆಸಪೊಟೋಮಿಯಾ ನಾಗರೀಕತೆಯಲ್ಲಿ ಸೃಷ್ಟಿಯಾಗಿ ಹಲವಾರು ಶತಮಾನಗಳ ಕಾಲ ಮಣ್ಣಿನ ಹಲಗೆಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಬಂದ “ಗಿಲ್ಗಮೇಶನ ಮಹಾಕಾವ್ಯ” ದಲ್ಲಿ ನದಿಗಳ ಪ್ರವಾಹ ಪ್ರಧಾನ ಅಂಶವಾಗಿ ಮೂಡಿಬಂದಿದೆ. ಭಾರತದ ಗಂಗಾನದಿ, ಈಜಿಪ್ಟ್‌ನ ನೈಲ್‌ನದಿ, ರಷ್ಯಾದ ಓಲ್ಗಾ, ದಕ್ಷಿಣ ಅಮೆರಿಕಾದ ಅಮೆಜಾನ್, ಚೀನಾದ ಹಳದಿನದಿ, ಇಥಿಯೋಪಿಯಾದ ಐನಾಸ್ ಹೀಗೆ ನದಿ ಪಾತ್ರಗಳಲ್ಲಿನ ಜನಜೀವನ, ಸಂಸ್ಕೃತಿ, ಸಾಮ್ರಾಜ್ಯಗಳ ಉದಯ-ಪತನ, ಐತಿಹ್ಯ ಪುರಾಣ, ಸಾಂಸ್ಕೃತಿಕ ಆಚರಣೆ ಎಲ್ಲವುಗಳೂ ನದಿಗಳ ಇತಿಹಾಸದ ಜೊತೆ ಮಿಳಿತಗೊಂಡಿವೆ.

20ನೇ ಶತಮಾನದ ಆದಿಯಿಂದ ಬೃಹತ್ ಅಣೆಕಟ್ಟುಗಳ ನೆಪದಲ್ಲಿ ನದಿಗಳನ್ನು ಮಣಿಸಿ, ಅವುಗಳ ಸಹಜ ಹರಿವಿಗೆ ತಡೆಯೊಡ್ಡಿ ಸಾವಿಗೆ ಕಾರಣೀಭೂತನಾದ ಆಧುನಿಕ ಯುಗದ ನವ ನಾಗರೀಕನಿಗೆ ನಮ್ಮ ಪೂರ್ವಿಕರ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಗಮನಿಸುವ ತಾಳ್ಮೆ ಮತ್ತು ವಿವೇಚನೆ ಇಲ್ಲ. ಅವನ ಪಾಲಿಗೆ ಇದು ಅರ್ಥಹೀನ ಸಂಗತಿ. ಒಬ್ಬನ ಹಿತಕ್ಕೆ ಹತ್ತು ಜನರ ಹಿತವನ್ನು ಬಲಿಕೊಡುವ ಇಂದಿನ ವ್ಯವಸ್ಥೆಯಲ್ಲಿ ಇತಿಹಾಸ ಕುರಿತ ಕಾಳಜಿ, ಪರಿಸರದ ಬಗೆಗಿನ ಪ್ರೀತಿ ಯಾರಿಗೂ ಬೇಡವಾದ ಸಂಗತಿಗಳು.

(ಮುಂದುವರಿಯುವುದು)

(ಚಿತ್ರಕೃಪೆ : ವಿಕಿಪೀಡಿಯ)

ಬಲಪಂಥೀಯ ಕೋಮುವಾದಿ ನೆಲೆ ಹಾಗೂ ಎಂ. ಗೋಪಾಲಕೃಷ್ಣ ಅಡಿಗರ “ಮತ್ತೆ ಮೊಳಗಲಿ ಪಾಂಚಜನ್ಯ” : ಭಾಗ – 2

– ಡಾ. ಎಂ.ಡಿ. ಒಕ್ಕುಂದ

ಭಾಗ – 1

(ಮುಂದುವರೆದುದು…)

ಅಭಿವ್ಯಕ್ತಿ ವಿಧಾನ – ಸ್ಮೃತಿಕೋಶದ ಬಳಕೆ
ಕಾವ್ಯ ಪರಂಪರೆಯ ಸ್ಮೃತಿಕೋಶಗಳಿಗೆ ಹೋಗಿ ಅಲ್ಲಿಯ ನುಡಿ, ನುಡಿಗಟ್ಟು ಮತ್ತು ಅಲಂಕಾರಗಳನ್ನು ಕವಿಗಳು ತಮ್ಮ ಕವಿತೆಗಳಲ್ಲಿ ಬಳಸಿಕೊಳ್ಳುತ್ತಾರೆ. ತನ್ನ ಚಿಂತನೆ, ಸಂವೇದನೆಗಳಿಗೆ ಪರಂಪರೆಯಿಂದ ನ್ಯಾಯಬದ್ಧತೆಯನ್ನು ಪಡೆಯುವ ಒತ್ತಡದಲ್ಲಿ ಈ ಬಗೆಯ ಅಭಿವ್ಯಕ್ತಿಯ ದಾರಿಗಳು ತೆರೆದುಕೊಂಡಂತಿವೆ. ಅಡಿಗರ ಕವಿತೆಯ “ಮತ್ತೆ ಮೊಳಗಲಿ ಪಾಂಚಜನ್ಯ” ಎಂಬ ತಲೆಬರಹವೇ ಕನ್ನಡ ಕಾವ್ಯಪರಂಪರೆಯ ಸ್ಮೃತಿಕೋಶವನ್ನು ಕೆದಕುತ್ತದೆ. ಭಾರತದ ಎಲ್ಲ “ಹಿಂದೂ”ಗಳು ಒಟ್ಟಾಗಿ ವೀರಾವೇಶದಿಂದ ಮುಸ್ಲಿಮರನ್ನು ಸರ್ವನಾಶಮಾಡುವ, ಮೂಲೋತ್ಪಾಟನೆ ಮಾಡುವ, ಬರ್ಬರ ಹಿಂಸೆಯನ್ನು ಪ್ರಚೋದಿಸುವ ಕೋಮುವಾದಿ ಚಿಂತನೆಯ ಪ್ರತಿಪಾದನೆಗೆ ಪರಂಪರೆಯಿಂದ ನ್ಯಾಯಬದ್ಧತೆಯನ್ನು ಪಡೆಯುವ ಹುನ್ನಾರದ ಭಾಗವಾಗಿ ಅಡಿಗರು ಈ ದಾರಿಯನ್ನು ಅನುಸರಿಸಿದಂತಿದೆ. ಕೌರವ, ಪಾಂಡವರ ನಡುವೆ ನಡೆದ ಭೀಕರ ಕುರುಕ್ಷೇತ್ರ ಯುದ್ಧಕ್ಕೆ ಕೃಷ್ಣ ಪಾಂಚಜನ್ಯವನ್ನು ಊದಿ ಯುದ್ಧ ಘೋಷಣೆ ಮಾಡಿದ್ದ. ಈ ಸ್ಮೃತಿಯನ್ನು ಕಾವ್ಯದಲ್ಲಿ ಬಳಸುವ ಮೂಲಕ ಅಡಿಗರು ಹಿಂದೂ-ಮುಸ್ಲಿಂ ಧಾರ್ಮಿಕ ಸಮುದಾಯಗಳನ್ನು ಪಾಂಡವರು ಮತ್ತು ಕೌರವರು ಎಂದು ವರ್ಗೀಕರಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದು ಧರ್ಮಯುದ್ಧ. ಈ ಯುದ್ಧದಲ್ಲಿ ಮುಸ್ಲಿಮರ ನಾಶ ಶತಃಸಿದ್ಧವೆಂಬ ದನಿಯನ್ನೂ ಹೊರಡಿಸುತ್ತಾರೆ. ದಾಯಾದಿ ಅರಸುಗಳ ಅರಸೊತ್ತಿಗೆಯ ಕಾಳಗದ ರೂಪಕವನ್ನು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸಾಮರಸ್ಯದಿಂದ ಬದುಕುತ್ತಿರುವ ಎರಡು ಧಾರ್ಮಿಕ ಸಮುದಾಯಗಳ ಮಧ್ಯದಲ್ಲಿ ಹಿಂಸೆಗೆ ಪ್ರಚೋದನೆ ನೀಡಲು ಬಳಸಿಕೊಳ್ಳುತ್ತಾರೆ. ಕುವೆಂಪು ಕೂಡ “ಪಾಂಚಜನ್ಯ” ಕವಿತೆ ಬರೆದಿದ್ದರು. ವಸಾಹತುಶಾಹಿ ರಕ್ಕಸರ ನಿರ್ನಾಮಕ್ಕಾಗಿ ಅವರಿಂದ ಬಿಡುಗಡೆ ಪಡೆಯಲು ಭಾರತದ ಎಲ್ಲ ಜಾತಿಮತ ಪಂಥಗಳ ಸಮುದಾಯಗಳು ಸಾಮರಸ್ಯದಿಂದ ಒಗ್ಗೂಡಿ ಹೋರಾಡುವ ಕರೆಯನ್ನು ಕೊಟ್ಟಿದ್ದರು. ಅಲ್ಲಿಯ ಆವೇಶ, ಪ್ರಚೋದನೆಗಳಿಗೆ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ಭಕ್ತಿಗಳ ರಾಷ್ಟ್ರೀಯವಾದಿ ನೈತಿಕತೆಯ ಚೌಕಟ್ಟಿತ್ತು. ಅಡಿಗರು ಆ “ಪಾಂಚಜನ್ಯ”ವನ್ನು ಮತ್ತೆ ಮೊಳಗಿಸಿದ್ದು ವಸಾಹತೋತ್ತರ ಭಾರತದಲ್ಲಿ ಜಾತ್ಯಾತೀತ ಸಂವಿಧಾನದಡಿಯಲ್ಲಿ ಕೂಡಿಬಾಳುತ್ತಿರುವ ಬಹುಸಂಖ್ಯಾತ ಧಾರ್ಮಿಕ ಸಮುದಾಯವು ಅಲ್ಪಸಂಖ್ಯಾತ-ಧಾರ್ಮಿಕ ಸಮುದಾಯದ ಮೇಲೆ ಆಕ್ರಮಣ ಮಾಡುವ ಕರೆಯನ್ನು ನೀಡಲು. “ಹಿಂದೂಗಳು ಮಾತ್ರ ಭಾರತೀಯರು, ಉಳಿದ ಧರ್ಮದವರು ಪರಕೀಯರು ಅವರನ್ನು ದೇಶಬಿಟ್ಟು ಓಡಿಸಬೇಕು”5 ಎಂಬ ಸಂಘಪರಿವಾರ ತಾತ್ವಿಕತೆಯನ್ನು ಪ್ರತಿಪಾದಿಸಲು. ಬ್ರಿಟಿಷರಂತೆ ಮುಸ್ಲಿಮರೂ ಹೊರಗಿನವರು ಎಂಬುದು ಇಲ್ಲಿಯ ಚಿಂತನೆ. ಮುಸ್ಲಿಂ ಧರ್ಮದ ಅರಸರು ಭಾರತದಲ್ಲಿ ಅರಸೊತ್ತಿಗೆಗಳನ್ನು ಸ್ಥಾಪಿಸಿ ಭಾರತೀಯರೇ ಆಗಿ ಹೋದ ಚಾರಿತ್ರಿಕ ವಾಸ್ತವವನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ವಿಧಾನವಿದು. ವಸಾಹಾತುಶಾಹಿ ದೌರ್ಜನ್ಯ ಹಾಗೂ ಲೂಟಿಗಳಿಗೆ ಅನ್ಯಧರ್ಮದವರೆಂಬ ಕಾರಣಕ್ಕೆ ದೇಶೀ ಅರಸೊತ್ತಿಗೆಗಳನ್ನು ಸಮೀಕರಿಸುವ ಉದ್ದೇಶಪೂರ್ವಕ ಯತ್ನ ಇಲ್ಲಿದೆ. ಸಮಕಾಲೀನ ಸಮಾಜದ ಬಹುಸಂಖ್ಯಾತ ಧರ್ಮದ ಸಮುದಾಯಗಳನ್ನು ಕೋಮುವಾದೀಕರಿಸುವ ಪ್ರಕ್ರಿಯೆಯ ಭಾಗವಾಗಿ ಅಡಿಗರು “ಪಾಂಚಜನ್ಯ”ದ ರೂಪಕವನ್ನು ಪರಂಪರೆಯ ಸ್ಮೃತಿಯಿಂದ ಬಳಸಿಕೊಳ್ಳುತ್ತಾರೆ. ಮೂಲದಲ್ಲಿ ಬಳಕೆಯಾದ ಅರ್ಥಕ್ಕಿಂತ ಭಿನ್ನವಾದ ಮಾತ್ರವಲ್ಲ ವಿರುದ್ಧವಾದ ಆಶಯಗಳಿಗೆ “ಪಾಂಚಜನ್ಯ” ಬಳಕೆಯಾಗಿದೆ. ಪರಂಪರೆಯ ನುಡಿಗಟ್ಟು ರೂಪಕಗಳು ಕವಿಯೊಬ್ಬನ ತಾತ್ವಿಕ ನಿಲುವುಗಳ ಕಾರಣಕ್ಕೆ ಕಾಲದಿಂದ ಕಾಲಕ್ಕೆ ಬೇರೆ ಬೇರೆ ಅರ್ಥಗಳನ್ನು ಪಡೆಯುತ್ತವೆ. ಕುವೆಂಪು ಕಾವ್ಯದಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆಯ ಪರವಾಗಿದ್ದ “ಪಾಂಚಜನ್ಯ”ದ ರೂಪಕ ಇಲ್ಲಿ ಧಾರ್ಮಿಕ ಹಿಂಸೆಯ ಪ್ರಚೋದನಾತ್ಮಕ ರೂಪಕವಾಗಿ ಪರಿವರ್ತನೆಯಾಗಿದೆ. “ಪಾಂಚಜನ್ಯ” ಎಂಬುದು ಸಂಘ ಪರಿವಾರದ ಮುಖವಾಣಿ ಪತ್ರಿಕೆಯ ಹೆಸರಾಗಿರುವದು ಕೂಡ ಆಕಸ್ಮಿಕವಿರಲಾರದು.

ಸಿದ್ಧಾಂತ ಪ್ರತಿಪಾದನೆ ಮತ್ತು ಸರಳೀಕರಣ
ಒಂದು ನಿರ್ದಿಷ್ಟವಾದ ಸಿದ್ಧಾಂತವನ್ನು ಪ್ರತಿಪಾದಿಸುವ ಏಕೈಕ ಕಾರಣಕ್ಕೆ ಕವಿತೆಯನ್ನು ಬರೆಯಲು ಹೊರಟರೆ ಕವಿತೆ ಸಹಜವಾಗಿ ರೂಪದ ದೃಷ್ಟಿಯಿಂದ ಸರಳೀಕರಣಕ್ಕೆ ಒಳಗಾಗುತ್ತದೆ. ಸಮಕಾಲೀನ ಬದುಕನ್ನು ಅರ್ಥೈಸಿಕೊಳ್ಳಲು, ವ್ಯಾಖ್ಯಾನಿಸಲು, ಸಂವೇದಿಸಲು ಸಿದ್ಧಾಂತ ಒಂದು ದೃಷ್ಟಿಕೋನವಾಗುವದು ಬೇರೆ. ಸಿದ್ಧಾಂತದ ಪ್ರತಿಪಾದನೆಗಾಗಿಯೇ ಕಾವ್ಯದ ರೂಪವನ್ನು ಬಳಸಿಕೊಳ್ಳುವದು ಬೇರೆ. ಹೀಗಾಗಿ ಅಡಿಗರ ಈ ಕವಿತೆ ಬಲಪಂಥೀಯ ಸಿದ್ಧಾಂತ ಪ್ರತಿಪಾದನೆಯ ಕಾರಣದಿಂದ ಬಲಪಂಥೀಯ ರಾಜಕೀಯ ಪಕ್ಷದ ಪಾಂಪ್ಲೆಟ್ಟಿನಂತೆ ಭಾಸವಾಗುತ್ತದೆ. ಕಾವ್ಯದ ಸಹಜ ಬಂಧ, ಬಿಗುವು ರೂಪಕಾತ್ಮಕತೆಗಳೆಲ್ಲ ಕಳೆದುಹೋಗುತ್ತವೆ. ಅಡಿಗರು ಸಂಘಪರಿವಾರದ ತಾತ್ವಿಕತೆಯ ಹಲವಾರು ವಿಧಾನಗಳನ್ನು ಉದ್ದೇಶಪೂರ್ವಕವಾಗಿಯೇ ಕ್ರೋಢೀಕರಿಸುವ ಯತ್ನ ಮಾಡಿರುವದರಿಂದ ಕವಿತೆಯು ಹೆಚ್ಚು ಮಾಹಿತಿ ಹಾಗೂ ಚಿಂತನೆಗಳನ್ನು ಒಳಗೊಳ್ಳುವ ಹಂಬಲವನ್ನು ಪ್ರಕಟಿಸುತ್ತದೆ. ಇಲ್ಲಿ ಚಿಂತನೆ ಮುಖ್ಯವೇ ಹೊರತು ಕಾವ್ಯವಲ್ಲ. ರಾಜಕೀಯ ಪಕ್ಷಗಳು ಹಾಗೂ ಸಾಸ್ಕೃತಿಕ ಸಂಘಟನೆಗಳಿಗಿರುವಂತೆ ಕಾವ್ಯದ ರೂಪಕ್ಕೂ ತನ್ನದೇ ಪ್ರಣಾಳಿಕೆ ಇರಬಹುದೆಂಬ ಸೂಕ್ಷ್ಮವನ್ನು ಮರೆತಾಗ ಕಾವ್ಯ ಕಣ್ಮರೆಯಾಗಿ ತತ್ತ್ವವೇ ವಿಜೃಂಭಿಸಿಬಿಡುವ ಅಪಾಯವನ್ನು ಈ ಕವಿತೆಯಲ್ಲಿ ಗಮನಿಸಬಹುದಾಗಿದೆ. ಯಾವುದೇ ಸಾಹಿತ್ಯ ಪ್ರಕಾರದ ಪ್ರಣಾಳಿಕೆಯೆಂದರೆ, ಮಾನವೀಯತೆಯ ಪ್ರತಿಪಾದನೆ. ಜೀವಪರಚಿಂತನೆಗಳ ಪ್ರತಿಪಾದನೆ. ಬದುಕನ್ನು ಸುಂದರಗೊಳಿಸುವ ಹಂಬಲ. ಆದರೆ ಇದಕ್ಕೆ ವಿರುದ್ಧವಾಗಿ ಹಿಂಸೆಯನ್ನು ಕೊಲೆಗಡುಕತನವನ್ನು ಪ್ರತಿಪಾದಿಸುವ ಸಿದ್ಧಾಂತದ ಪ್ರಣಾಳಿಕೆ ಕಾವ್ಯದಲ್ಲಿ ಪ್ರತಿಪಾದನೆಗೊಂಡಾಗ ಅದು ಕಾವ್ಯವಾಗಿರುವುದೇ ಇಲ್ಲ. ಆ ದೃಷ್ಟಿಯಿಂದ ಅಡಿಗರ ಈ ಬರಹವನ್ನು ಸಾಹಿತ್ಯ ಅಥವಾ ಕವಿತೆ ಎಂದು ಒಪ್ಪಿಕೊಳ್ಳುವದೇ ಕಷ್ಟ. “ಮನುಷ್ಯನನ್ನು ಮನುಷ್ಯನನ್ನಾಗಿ ಜೀವಂತ ಇಡುವ ಕೆಲಸವನ್ನು ಕಾವ್ಯ ಮಾಡುತ್ತದೆ” ಎಂಬ ಎಲಿಯಟ್‌ನ ಮಾತನ್ನು ನೆನಪಿಸಿಕೊಂಡರೆ ಮನುಷ್ಯರನ್ನು ರಾಕ್ಷಸರನ್ನಾಗಿ ಪರಿವರ್ತಿಸುವ ಬರವಣಿಗೆಗಳು ಸಾಹಿತ್ಯವೆಂಬ ಪ್ರಕಾರದಾಚೆಗೆ ಇಡಲು ಯೋಗ್ಯವಾದವುಗಳಾಗಿರುತ್ತವೆ.

ಯಾವ ಸಿದ್ಧಾಂತವನ್ನು ಕವಿತೆಯಲ್ಲಿ ಪ್ರತಿಪಾದಿಸುತ್ತೇವೆ ಎಂಬುದರ ಆಧಾರದ ಮೇಲೆ ಕೂಡ ಕಾವ್ಯದ ರೂಪ ಮೈದಾಳುತ್ತದೆ. ಮಾರ್ಕ್ಸ, ಅಂಬೇಡ್ಕರ್, ಲೋಹಿಯಾ, ಗಾಂಧಿ, ಬುದ್ಧ, ಬಸವ ಮುಂತಾದ ಜೀವಪರಚಿಂತಕರ ಚಿಂತನೆಗಳನ್ನು ಪ್ರತಿಪಾದಿಸುವಾಗ ಕೂಡ ಕಾವ್ಯದ ರೂಪ ಸರಳೀಕರಣಕ್ಕೊಳಗಾಗಬಹುದು. ಆದರೆ ಅಲ್ಲಿಯ ಆಶಯದ ನೈತಿಕತೆಯ ಕಾರಣಕ್ಕೆ ಅಂಥ ಬರಹಗಳಿಗೆ ಸಾಹಿತ್ಯದಾಚೆಗೆ ನಿಲ್ಲುವ ಅಗತ್ಯ ಕಂಡು ಬರುವುದಿಲ್ಲ. ಶೋಷಿತ ಜನತೆಯ ಪರವಾದ ಸೈದ್ಧಾಂತಿಕತೆ ಒಂದು ದೃಷ್ಟಿಕೋನ ಮಾತ್ರವಾಗಿ ಬದುಕಿನ ವಾಸ್ತವಗಳನ್ನು ಮನುಷ್ಯನ ಅಂತರಂಗ ಬಹಿರಂಗಗಳನ್ನು ಶೋಧಿಸುವ ದಾರಿಯಾದಾಗ ಉತ್ತಮ ಕಾವ್ಯ ಹುಟ್ಟಬಹುದು. ಜನಪರ ಸಿದ್ಧಾಂತವು ಕಾವ್ಯಕ್ಕೆ ಶತ್ರುವೂ ಅಲ್ಲ. ಮಿತ್ರನೂ ಅಲ್ಲ. ಆದರೆ ಕವಿಯೊಬ್ಬ ಬದುಕಿನ ಸಂದರ್ಭದಲ್ಲಿ ಅದನ್ನು ಶೋಧನೆಗೆ ಒಡ್ಡುವದರ ಮೇಲೆ ಅವಲಂಭಿಸಿರುತ್ತದೆ. ಮಾರ್ಕ್ಸವಾದಿ ಸೈದ್ಧಾಂತಿಕತೆ ಕೂಡ ಕಳಪೆ ಸಾಹಿತ್ಯ ಸೃಷ್ಟಿಗೆ ಕಾರಣವಾಗಿರಬಹುದು. ಆದರೆ ಅಲ್ಲಿ ಶ್ರೇಷ್ಠ ಸಾಹಿತ್ಯವೂ ಹುಟ್ಟಬಲ್ಲದು. ಆದರೆ ಶೋಷಕಪರ ಸಿದ್ಧಾಂತ ಮೂಲದಲ್ಲಿಯೇ ಅಮಾನವೀಯವಾಗಿರುವದಿಂದ ಅದರಿಂದ ಯಾವದೇ ಅತ್ಯುತ್ತಮ ಬರಹವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅಡಿಗರ ಈ ಕವಿತೆಯ ಅಭಿವ್ಯಕ್ತಿ ಕ್ರಮ ಕೂಡ ಧಾರ್ಮಿಕ ಹಿಂಸೆಯ ಪ್ರತಿಪಾದನೆಯ ಕಾರಣಕ್ಕೆ “ಕಾವ್ಯ”ವೆಂಬ ರೂಪದಾಚೆಯ ಬರಹವಾಗಿದೆ.

ಸೈನಿಕ ಭಾಷೆ
ಈ ಕವಿತೆಯ ಭಾಷೆಯನ್ನು ಗಮನಿಸಬೇಕು. ಅದು ಸೈನಿಕ ಭಾಷೆಯಲ್ಲಿದೆ. ವೈರಿ ಸಂಹಾರಕ್ಕೆ ಸೈನಿಕಮುಖ್ಯಸ್ಥ ಆಜ್ಞೆ ನೀಡುವ ರೀತಿಯಲ್ಲಿದೆ. ಆವೇಶ ಉನ್ಮಾದಗಳು ತುಂಬಿ ತುಳುಕುತ್ತವೆ. ದ್ವೇಷವೇ ಮೈವೆತ್ತಂತಿದೆ. ಈ ಕವಿತೆಯ ಶಬ್ದಶಬ್ದ ಅಕ್ಷರಕ್ಷರದಲ್ಲೂ ಮತಾಂಧತೆ ಮತ್ತು ಧಾರ್ಮಿಕ ಹಿಂಸೆಯ ಉನ್ಮಾದ ತುಂಬಿ ತುಳುಕುತ್ತದೆ. ಇದೊಂದು ಬಗೆಯ ಸರ್ವಾಧಿಕಾರಿ ಭಾಷೆಯಾಗಿದೆ. ಸಂಘಪರಿವಾರದ ನಾಯಕರು ತಮ್ಮ ಭಾಷಣಗಳಲ್ಲಿ ಹಿಂದೂ ಸಮುದಾಯವನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಬಳಸುವ ಉದ್ರೇಕಕಾರಿ ಪ್ರಚೋದನಾತ್ಮಕ ಭಾಷೆಗಿಂತಲೂ ಕೆಟ್ಟ ಭಾಷೆ ಇಲ್ಲಿದೆ. ಸಂಸ್ಕೃತದ ಪಾರಮ್ಯದಲ್ಲಿ ಅದರ ಕೊಲೆಗಡುಕತನ ಸಂವಹನವಾಗುವದಿಲ್ಲ. ರುಂಡತೆಗೆಯುವ, ಕೈಕತ್ತರಿಸುವ, ಕಣ್ಣುಕೀಳುವ ಚಿತ್ರ ಹಿಂಸೆಯ ಭಾಷೆಗಿಂತಲೂ ಅಮೂಲಾಗ್ರ ಮೂಲೋತ್ಪಾಟನೆಯ ಉದ್ದೇಶದ ಈ ಭಾಷೆ ಹೆಚ್ಚು ಕ್ರೌರ್‍ಯವನ್ನು ಒಳಗೊಂಡಿದೆ. ಪ್ರಾಚೀನ ಕನ್ನಡ ಕವಿಗಳು ಎರಡು ರಾಜಮನೆತನಗಳ ನಡುವಿನ ಭಯಂಕರ ಯುದ್ಧವನ್ನು ವರ್ಣಿಸುವಾಗಲೂ ಎಲ್ಲೋ ಆಳದಲ್ಲಿ ಯುದ್ಧದ ಹಿಂಸೆಗೆ ಬೇಸತ್ತು ಯುದ್ಧ ವಿರೋಧಿ ನಿಲುವನ್ನು ಸೂಕ್ಷ್ಮವಾಗಿ ಪ್ರತಿಪಾದಿಸುತ್ತಿದ್ದರು. ರಾಜಪ್ರಭುತ್ವದ ಕಾಲದಲ್ಲಿ ಯುದ್ಧಗಳ ಹೆಸರಿನಲ್ಲಿ ನಡೆಯುವ ಸಾಮಾನ್ಯ ಜನತೆಯ ಮಾರಣ ಹೋಮಕ್ಕೆ ಕವಿಗಳ ಅಂತಃಕರಣ ಸ್ಪಂದಿಸುತ್ತಿತ್ತು. ಆದರೆ ಪ್ರಜಾಪ್ರಭುತ್ವ ಯುಗದಲ್ಲಿ ಜನತೆಯ ನಡುವಿನ ಭಯಂಕರ ಹಿಂಸೆಗೆ ಪ್ರಚೋದಿಸುವ ಅಡಿಗರಂಥವರ ಅಂತಃಕರಣ ಸಿದ್ಧಾಂತದ ಕಣ್ಣುಪಟ್ಟಿಯ ಕಾರಣದಿಂದ ಜಾಗೃತವಾಗದೇ ಹೋಗಿದೆ.

ಲಂಕೇಶ್, ಅಡಿಗರ ಕಾವ್ಯವನ್ನು ಕುರಿತು ಬರೆಯುತ್ತ ಅವರ ಭಾಷೆಯ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ನೀಡಿದ್ದಾರೆ. “ಅಡಿಗರ ಪದ್ಯಗಳನ್ನು ಓದುವಾಗ ನನಗೆ ವಿಚಿತ್ರ ಅನ್ನಿಸುವದು ಅವರ ಭಾಷೆ ಮತ್ತು ಪ್ರತಿಮೆಗಳು. ಶಂಕರಾಚಾರ್‍ಯರಂತೆ ತಮ್ಮ ಧರ್ಮವನ್ನು ಚೇತರಿಸುವ ಗೀಳು… ಮತ್ತೆ ಮತ್ತೆ ಬರುವ ಅಶ್ವತ್ಥ ವಿವರ್ತ, ಪುತ್ರಕಾಮೇಷ್ಠಿ, ಪಿತೃಪಿತಾಮಹರು ಇತ್ಯಾದಿ.”6 “ಅಡಿಗರು ಕವಿಯಾಗಿ ಬೆಳೆದಂತೆ ಸಮಾಜದ ಪರಿಸರದ ಬಗೆಗಿನ ಧೋರಣೆಗಳನ್ನು ಪ್ರಜಾತಂತ್ರ, ಜಾತಿವ್ಯವಸ್ಥೆ, ರಾಜಕೀಯ ಇತ್ಯಾದಿಗಳನ್ನು ಕುರಿತಾದ ಅವರು ಗ್ರಹಿಸಿರುವ ರೀತಿಯನ್ನು ಅವರ ಒಟ್ಟಾರೆ ಸಂಸ್ಕೃತ-ವೈದಿಕ ವಾಙ್ಮಯದ ಜೊತೆ ಅಭ್ಯಸಿಸಿದರೆ ಅವರ ಮನಃಸ್ಥಿತಿ ಮತ್ತು ಅವರ ಕಾವ್ಯದ ಮೌಲ್ಯಮಾಪನ ಸಾಧ್ಯವಾಗುತ್ತದೆ.”7 ಅಡಿಗರ ಕಾವ್ಯವನ್ನಾವರಿಸಿರುವ ಅವರ ಕಾವ್ಯದ ರೂಪವನ್ನು ವ್ಯಾಪಿಸಿರುವ ಸಂಸ್ಕೃತ ಭಾಷಾ ಕೋಶ, ಪ್ರತಿಮಾ ರೂಪಕಗಳು ಅವರ ಸಂವೇದನಾಕ್ರಮವನ್ನು ವಿವರಿಸುತ್ತವೆ.

“ಮತ್ತೆ ಮೊಳಗಲಿ ಪಾಂಚಜನ್ಯ” ಕವಿತೆಯಲ್ಲಿ ಸುಮಾರು ಶೇಕಡಾ ತೊಂಬತ್ತು ಸಂಸ್ಕೃತ ಪದಗಳೇ ಇವೆ. ಪಾಂಚಜನ್ಯ, ದಧೀಚಿ ಕಶೇರು, ರಾಮಬಾಣ, ಅಸಂದಿಗ್ಧ, ಹಿಂದುತ್ವ, ಮಹಾಸಿಂಧುತ್ವ, ಭೋರ್ಗರೆ, ಪರಿಶುದ್ಧ, ಆಕಾಶ, ಶ್ಯಾಮಲ, ಶತಕೋಟಿ ತಾರೆ, ಭರತವರ್ಷ, ಸ್ವರ್ಗಂಗೆಧಾರೆ, ಶುದ್ಧ ನಿರ್ಮಲ ಮಾನಸ ಸರೋವರ, ಅಷ್ಟದಳ ಕಮಲ, ಪರಮ ಪುರುಷಾರ್ಥ, ಪರಾತ್ಪರ ಇತ್ಯಾದಿ. ಅಡಿಗರಿಗೆ ಯಾಕಿಷ್ಟು ಸಂಸ್ಕೃತ ಪ್ರೇಮ? ಮಾರ್ಗಕವಿಗಳಿಗೆ ಸಂಸ್ಕೃತದೊಂದಿಗೆ ಸೆಣಿಸಿ ಗೆಲ್ಲುವ ಒತ್ತಡವಿತ್ತು. ಕುವೆಂಪು ಆಧುನಿಕ ಕಾಲದಲ್ಲೂ ಅಂಥ ಒತ್ತಡಕ್ಕೀಡಾಗಿದ್ದರು. ಆದರೆ ಅಡಿಗರು ಸಂಸ್ಕೃತದಲ್ಲಿಯೇ ಉಸಿರಾಡುವಂತೆ ಭಾಸವಾಗುತ್ತದೆ. ಅಡಿಗರ ಸಂಸ್ಕೃತ ಭಾಷಾಲೋಕ ಕೇವಲ ಕಾವ್ಯಸಂಬಂಧಿಯಾದದ್ದಲ್ಲ. ಅದು ವೈದಿಕ ಪುರಾಣ ಮತ್ತು ಧಾರ್ಮಿಕ ಆವರಣಕ್ಕೆ ಸಂಬಂಧಿಸಿದ್ದು, ವೈದಿಕ ಸಂಸ್ಕೃತಿ ನಶಿಸಿ ಹೋಗುತ್ತಿರುವದರ ಬಗೆಗಿನ ಅಡಿಗರ ಗಾಢವಾದ ವಿಷಾದಕ್ಕೂ ಅವರು ಕಾವ್ಯದಲ್ಲಿ ಸಂಸ್ಕೃತವನ್ನು ಅತಿಯಾಗಿ ಬಳಸುವದಕ್ಕೂ ಆಂತರಿಕ ಸಂಬಂಧವಿದೆ. ಅದು ವೈದಿಕ ಸಂಸ್ಕೃತಿಯ ಪುನರುತ್ಥಾನದ ಭಾಗವೇ ಆಗಿದೆ. ಹಿಂದುತ್ವದ ಪ್ರತಿಪಾದನೆಯನ್ನು ಸಂಸ್ಕೃತ ಭೂಯಿಷ್ಠವಾದ ಭಾಷೆಯಲ್ಲಿ ಮಾತ್ರ ಸಮರ್ಥವಾಗಿ ಅಭಿವ್ಯಕ್ತಿಸಲು ಸಾಧ್ಯವಿರಬಹುದು. ಸಂಘಪರಿವಾರದ ಚಿಂತನೆ ಬರವಣಿಗೆಗಳಲ್ಲಿ ಕೂಡ ಈ ಸಂಸ್ಕೃತದ ಬಳಕೆಯನ್ನು ಗಮನಿಸಬಹುದು. ಸಂಸ್ಕೃತಭೂಯಿಷ್ಠವಾದ ಪದಗಳ ಬಳಕೆ, ವೈದಿಕ ಪುರಾಣ ಪ್ರತಿಮೆಗಳ ಬಳಕೆ ಹಾಗೂ ಹಿಂದುತ್ವ ಪ್ರತಿಪಾದನೆಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಸನಾತನವಾದಿ ಚಿಂತನಾಕ್ರಮ ಹಾಗೂ ಕೋಮುವಾದಿ ಆಶಯಗಳು ಸಂಸ್ಕೃತ ಭಾಷೆಯ ಸಹಜ ಸಂವೇದನೆಗಳಾಗಿರುವದರಿಂದ ನವ ಬ್ರಾಹ್ಮಣ್ಯದ ಪ್ರತಿಪಾದನೆಗೆ ಪ್ರಾಚೀನ ಬ್ರಾಹ್ಮಣ ಭಾಷೆಯನ್ನು ಬಳಸುವದು ಅಡಿಗರಂಥವರಿಗೆ ಅನುಕೂಲಕರವಾಗಿರಬಹುದು. ಧಾರ್ಮಿಕ ಹಿಂಸೆಯ ಪ್ರತಿಪಾದನೆಗೆ ಅಡಿಗರು ಸಂಸ್ಕೃತದ ಸನಾತನವಾದಿ, ಮೂಲಭೂತವಾದಿ, ಭಾಷಾಕೋಶವನ್ನು ಈ ಕವಿತೆಯಲ್ಲಿ ಉಪಯೋಗಿಸಿದ್ದಾರೆ.

ವೈದಿಕ ಮೂಲದ ಪ್ರತಿಮೆಗಳು
ಅಡಿಗರು ಉಪಮೆ ರೂಪಕ ಪ್ರತಿಮೆಗಳನ್ನು ವೈದಿಕ ಮೂಲದಿಂದಲೇ ಎತ್ತಿಕೊಳ್ಳುತ್ತಾರೆ. “ದಧೀಚಿ ಕಶೇರುವಿನಂತೆ, ದೃಢ ರಾಮಬಾಣದಂತೆ, ಅಸಂದಿಗ್ಧ”, “ಮತ್ತೆ ಮೊಳಗಲಿ ಪಾಂಚಜನ್ಯ”, “ಭರತವರ್ಷದ ಮೇಲೆ ಸ್ವರ್ಗಂಗೆ ಧಾರೆ ಶುದ್ಧ ನಿರ್ಮಲ ಮಾನಸ ಸರೋವರದ ಮೇಲೆ”, “ಅಷ್ಟದಳ ಕಮಲದ ನಿರಾಳ”, “ಕೋಟೆಕೋಟೆಗಳೆಲ್ಲ ಮತ್ತೆ ವಶವಾಗಿ ಶಿಖರ ಶಿಖರಗಳೆಲ್ಲ ಆಗಿ ಸ್ವಾಧೀನ”, “ಪ್ರತಿಪಾಣಿಪೀಠಕ್ಕೂ ಅಷ್ಟಬಂಧ”. ಮುಸ್ಲಿಮರನ್ನು ಸಂಹಾರ ಮಾಡಿ, ಅವರ ಮೂಲೋತ್ಪಾಟನೆಯ ನಂತರ ಹಿಂದುತ್ವವನ್ನು ಸ್ಥಾಪಿಸುವ ಆಶಯವನ್ನು ಪ್ರತಿಪಾದಿಸಲು ಅಡಿಗರು “ದಧೀಚಿಕಶೇರು” “ರಾಮಬಾಣ” “ಪಾಣಿಪೀಠ” “ಅಷ್ಟಬಂಧ”ದಂಥ ಶುದ್ಧ ವೈದಿಕ-ಧಾರ್ಮಿಕ ಪ್ರತಿಮೆಗಳನ್ನು ಸಂಯೋಜಿಸುವದು ಆ ಭಾಷೆಯಲ್ಲಿ ಸಹಜವಾಗಿಯೇ ಮಡುಗಟ್ಟಿರುವ “ಹಿಂಸೆ”ಯ ನೆಲೆಯನ್ನು ಸೂಚಿಸುತ್ತದೆ. ವೈದಿಕ ಸಂಸ್ಕೃತಿಯ ದೇವರುಗಳೆಲ್ಲ “ಶಸ್ತ್ರಾಸ್ತ್ರ ಪಾಣಿಗಳು” “ಸಂಹಾರ ಪ್ರಿಯರು” ಕೊಲೆಪಾತಕತನದಲ್ಲಿ ಪ್ರವೀಣರು. ವರ್ಣಧರ್ಮವನ್ನು ಮೀರುವವರ ವಿರುದ್ಧ ಆ ಶಸ್ತ್ರಾಸ್ತ್ರಗಳು ಪ್ರಯೋಗವಾಗುತ್ತಿದ್ದವು. ಅಡಿಗರು ಈಗ ಮುಸ್ಲಿಮರ ಮೇಲೆ ಅವುಗಳ ಪ್ರಯೋಗಕ್ಕೆ ಕರೆ ನೀಡುತ್ತಾರೆ. ದಲಿತ ಮತ್ತು ಕೆಳವರ್ಗಗಳನ್ನು ಹಿಂಸಿಸಿದ ರೂಪಕಗಳೇ ಅಲ್ಪಸಂಖ್ಯಾತರನ್ನು ಹಿಂಸಿಸಲು ಕಾವ್ಯದಲ್ಲಿ ಬಳಕೆಗೊಳ್ಳುತ್ತವೆ.

ಕವಿಯ ಗೆಲ್ಲುವ ಕಾವ್ಯ
ಅತ್ಯಂತ ಕುತೂಹಲದ ಸಂಗತಿಯೆಂದರೆ ಅಡಿಗರು ಹಿಂದೂ ಮತ್ತು ಮುಸ್ಲಿಮರನ್ನು ಶತ್ರುಗಳಾಗಿ ಎದುರು ಬದರು ನಿಲ್ಲಿಸಿ ಹಿಂದೂಗಳನ್ನೂ ಹಿಂದೂ ಸಂಸ್ಕೃತಿಯನ್ನೂ ವರ್ಣಿಸುವಾಗ ಸಂಪೂರ್ಣ ಸಂಸ್ಕೃತ ಭಾಷೆಯನ್ನು ಬಳಸಿದರೆ ಮುಸ್ಲಿಮರನ್ನು ಅವರ ಸಂಸ್ಕೃತಿಯನ್ನು ಅವಮಾನಿಸಲು ಹೆಚ್ಚು ಕನ್ನಡ ಪದಗಳನ್ನು ಬಳಸುತ್ತಾರೆ. ಉದಾ: ಅವರ ಕಲ್ಪನೆಯ ಹಿಂದೂ ಸಾಮ್ರಾಜ್ಯದ ವಿವರಣೆ ಹೀಗಿದೆ-
ಇಕ್ಕಟ್ಟು ಬಿಕ್ಕಟ್ಟುಗಳ ಕೆಟ್ಟ ಪಟ್ಟಣಗಳ ಜನಾರಣ್ಯ
ದಲ್ಲಿಯೂ ಪ್ರತಿ ಮನೆ ಕೂಡ ಋಷ್ಯಾಶ್ರಮ
ಮುಂದಕ್ಕೆ ಬಹುಭಾಷಾ ಸರಸ್ವತಿಯ ಸದ್ಗ್ರಂಥ ರಾಶಿ
ಹಿಂದೆ ಕೈಚಾಚಿದರೆ ಬಾರುಮಾಡಿಟ್ಟು ಬಂದೂಕು ಲಾಠಿ ಕಠಾರಿ
ವಜ್ರಕಾಯದೊಳಕ್ಕೆ ಆದಿಶೇಷ ಸ್ನಾಯುಗಳ ಮಣಿತ
ಆಕಾಶ ಶಾಮಲನೆಲ ಶತಕೋಟಿತಾರೆ
ಭರತ ವರ್ಷದ ಮೇಲೆ ಸ್ವರ್ಗಂಗೆ ಧಾರೆ
ಶುದ್ಧ ನಿರ್ಮಲ ಮಾನಸ ಸರೋವರದ ಮೇಲೆ
ಅಷ್ಟದಳ ಕಮಲದ ನಿರಾಳ

ಮುಸ್ಲಿಂರನ್ನು ಕುರಿತು
ದುರ್ಮತದ ಮತಾಂಧತೆಯ ಮರಳದಿನ್ನೆ, ದಿಬ್ಬ, ಚಾಕು, ಚೈನು, ಕೈಬಾಂಬು
ನಡುಗಡ್ಡೆಗಳು ನೆಗೆದು ಬೀಳಲಿ ಸಮೂಲ
ತಾತ್ಕಾಲಿಕದ ಕೋಟೆ ಬುರುಜುಗಲ್ಲಿ ನೊರಜು ಬುರುಜುಗಳಲ್ಲಿ
ತೊಳೆದು ಹೋಗಲಿ ಒಂದೇ ಸಲ
ಜಿಗಣೆ, ಚೇಳು, ಹೆಡೆಎತ್ತಿ ಬಡಿದ ಘಟಸರ್ಪ
ಮಕ್ಕಳನ್ನೆತ್ತಿಕೊಂಡು ಹೋಗಿ ತಿನ್ನುವ ತೋಳ ಮನೆಗೆ ಬೆಂಕಿ
ಹಚ್ಚಿ ಗಹಗಹಿಸಬಲ್ಲ ಮಾನವ ಪಿಶಾಚಿ ಸೈಕಲ್ ಚೈನು
ಅಲಗು ತಾಗಿಸಿ ತಿವಿದ ಸಾಯಿಸುವ ನಿಶಾಚರ ನಿಕರ

ಅಡಿಗರ ಆಶಯಗಳಿಗೆ ವಿರುದ್ಧವಾಗಿ ಅವರ ಭಾಷಾಕೋಶ ಹಾಗೂ ಕಾವ್ಯದ ಆಕೃತಿ ಬೇರೆಯದೇ ಸತ್ಯವನ್ನು ಹೇಳುತ್ತದೆ. ಸಂಸ್ಕೃತದ ದಟ್ಟ ವಿವರಗಳ ಹಿಂದುತ್ವ, ಭಾಷಿಕವಾಗಿ ಅನ್ಯವೆನ್ನಿಸಿದರೆ, ಕನ್ನಡದಲ್ಲಿ ನಿರೂಪಿತವಾಗುವ “ಮುಸ್ಲಿಂ ಸಂಸ್ಕೃತಿ” ದೇಶೀ ಎನ್ನಿಸಿಕೊಳ್ಳುತ್ತದೆ. ಅದು ಆರ್‍ಯ-ದ್ರಾವಿಡ ದೇವ-ದಾನವ ಸಂಘರ್ಷದ ಪೌರಾಣಿಕತೆ ಮತ್ತು ಚಾರಿತ್ರಿಕತೆಗಳೊಂದಿಗೆ ಸಂಬಂಧ ಪಡೆಯುತ್ತದೆ. ಭಾರತದ ಮೇಲ್ಜಾತಿ ಮೇಲ್ವರ್ಗ ಮತ್ತು ಕೆಳಜಾತಿ ಕೆಳವರ್ಗಗಳ ಸಂಬಂಧವನ್ನು ಶಕ್ತಿ ರಾಜಕಾರಣದ ಕೇಂದ್ರ ಸ್ಥಾನದಲ್ಲಿರುವ ಪುರೋಹಿತರೂ ಪ್ರಭುಗಳೂ ನಿರೂಪಿಸಿದಂತೆ ಕಂಡು ಬರುತ್ತದೆ. ಇದು ಕಾವ್ಯದ ಶಕ್ತಿ. ಕವಿಯ ಪ್ರಣಾಳಿಕೆಯಾಚೆ ಕಾವ್ಯ ತಮ್ಮ ಪ್ರಣಾಳಿಕೆಯನ್ನು ಸ್ಥಾಪಿಸುವ ಕ್ರಮವೂ ಆಗಿದೆ.

(ಚಿತ್ರಕೃಪೆ: www.kamat.com )


 

ಟಿಪ್ಪಣಿಗಳು :
5. ಪಿ. ಲಂಕೇಶ್, ಅಡಿಗರ ಪಥ, ಸಾಹಿತಿ-ಸಾಹಿತ್ಯ-ವಿಮರ್ಶೆ, ಪು. 68
6. ಅದೇ, ಪು. 68
7. ಅಸ್ಘರ್ ಅಲಿ ಇಂಜಿನಿಯರ್, ಮುಸ್ಲಿಂ ಪ್ರತ್ಯೇಕತಾವಾದ ಮತ್ತು ವಿಭಜನೆಯ ಬೇರುಗಳು, ಹೇ ರಾಮ್, ಪು. 24