Tag Archives: ಮಾಧ್ಯಮ

ಪತ್ರಕರ್ತರು ಅಥವ ಸಮನ್ಸೂ ಇಷ್ಯು ಮಾಡುವ, ದೂರೂ ಕೊಟ್ಟು, ಅಟ್ಟಾಡಿಸಿ ಹಿಡಿವ…

– ರಾಜೇಶ್ ದೇವನಹಳ್ಳಿ

ಪತ್ರಕರ್ತರು ಇತ್ತೀಚೆಗೆ ತಮ್ಮ ವೃತ್ತಿ ಬಿಟ್ಟು ಅಥವಾ ತಮ್ಮ ವೃತ್ತಿ ಜೊತೆಗೆ ಇತರ ಚಟುವಟಿಕೆಗಳಿಂದ ಸುದ್ದಿ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ಸುದ್ದಿವಾಹಿನಿಯ ವರದಿಗಾರನೊಬ್ಬ ಹಲವು ಆರೋಪ ಹೊತ್ತ ಸ್ವಾಮೀಜಿ ಒಬ್ಬರಿಗೆ ಸಮನ್ಸ್ ಜಾರಿ ಮಾಡುವ ಪ್ರಯತ್ನ ಮಾಡಿ ಸುದ್ದಿ ಮಾಡಿದ್ದರು. (ವಿಶಿಷ್ಟ ಎಂದರೆ, ಅದೇ ವರದಿಗಾರನ ಸಂಪಾದಕರು ಸಮನ್ಸ್ ಜಾರಿಯಾದರೂ ಕೋರ್ಟ್‌ಗೆ ಹಾಜರಾಗದೆ, ಕೊನೆಗೆ ಬಂಧನಕ್ಕೆ ಒಳಗಾಗಬೇಕಾಯಿತು. ಆದರೂ ಕನ್ನಡಪ್ರಭ ವರದಿಯಲ್ಲಿ ಮಾತ್ರ ‘ಸಮನ್ಸ್ ಸಮನ್ವಯ’ ಕೊರತೆಯಿಂದ ಹೀಗಾಯಿತು ಎಂದು ಬರೆದರು. ಸಮನ್ಸ್ ಸಮನ್ವಯ ಅಂದ್ರೇನು ಅನ್ನೋದು ಇನ್ನಷ್ಟೆ ಗೊತ್ತಾಗಬೇಕು.)

ಈಗ ಇಲ್ಲೊಂದು ಸುದ್ದಿ ಇದೆ ನೋಡಿ. ತುಮಕೂರಿನ ಇಬ್ಬರು ಪತ್ರಕರ್ತರು ಲಂಚ ತೆಗೆದುಕೊಳ್ಳುತ್ತಿದ್ದ ಎನ್ನಲಾದ ಸರಕಾರಿ ನೌಕರರೊಬ್ಬರನ್ನು ಅಟ್ಟಾಡಿಸಿ ಹಿಡಿದು ಲೋಕಾಯುಕ್ತರಿಗೆ ಒಪ್ಪಿಸಿದರಂತೆ. ಈ ಬಗ್ಗೆ ವರದಿಯೊಂದು ತುಮಕೂರು ಮೂಲದ ‘ಪ್ರಜಾ ಪ್ರಗತಿ’ಯಲ್ಲಿ ಪ್ರಕಟವಾಗಿದೆ. ಆ ನೌಕರನ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಟ್ಟದ್ದು ಪತ್ರಕರ್ತರೇ. ನಂತರ ಲೋಕಾಯುಕ್ತ ದಾಳಿಯಂತಹ ಸನ್ನಿವೇಶ ಸೃಷ್ಟಿಯಾದಾಗ ಆ ನೌಕರ ಗಲಿಬಿಲಿಯಾಗಿ ಓಡಲಾರಂಭಿಸುತ್ತಾನೆ. ಆ ನೌಕರರನ್ನು ಚಿತ್ರದಲ್ಲಿರುವ ಇಬ್ಬರು ಬೆನ್ನಟ್ಟಿ ಕೊರಳ ಪಟ್ಟಿ ಹಿಡಿದು ತರುತ್ತಾರೆ; ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸುತ್ತಾರೆ.

ಈ ಇಬ್ಬರು ಪತ್ರಕರ್ತರಲ್ಲಿ ಒಬ್ಬ ನಂಬರ್ 1 ಆಂಗ್ಲ ಭಾಷಾ ಪತ್ರಿಕೆಯ ಸ್ಥಳೀಯ ವರದಿಗಾರ, ಮತ್ತೊಬ್ಬ ಸದ್ಯ ಭಾರೀ ಸುದ್ದಿಯಲ್ಲಿರುವ ಸುದ್ದಿವಾಹಿನಿಯ ವರದಿಗಾರ.

(ಚಿತ್ರಕೃಪೆ: ಪ್ರಜಾ ಪ್ರಗತಿ)

ಡಿನೋಟಿಫಿಕೇಷನ್ ಹಗರಣದ ಸುಳಿಯಲ್ಲಿ ಪ್ರಜಾವಾಣಿ

– ರಮೇಶ್ ಅರಕಲಗೂಡು

ಪತ್ರಕರ್ತರು ಗಣಿ ಮಾಲೀಕರಿಂದ ಲಕ್ಷಗಟ್ಟಲೆ ಕಪ್ಪ ಪಡೆದದ್ದು ಬೆಳಕಿಗೆ ಬಂತು. ಅನೇಕ ಹಗರಣಗಳಲ್ಲಿ ಪತ್ರಕರ್ತರು ದಳ್ಳಾಳಿಗಳ ಕೆಲಸ ಮಾಡಿದ್ದೂ ಕಂಡುಬಂತು. ಪತ್ರಕರ್ತರು ಬರಿಯ ಪತ್ರಕರ್ತರಾಗಿ ಉಳಿಯದೆ ರಾಜಕಾರಣಿಗಳ ಅನೈತಿಕ ದಂಧೆಗಳಲ್ಲಿ ಪಾಲುದಾರರಾಗಿರುವುದು ಇವತ್ತಿನ ಕಹಿ ಸತ್ಯ. ಈಗ ಹೊರಬಂದಿದೆ ಕನ್ನಡದ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯ ಮಾಲೀಕರು ಪಾಲ್ಗೊಂಡಿರುವ ಡಿನೋಟಿಫಿಕೇಷನ್ ಹಗರಣ. ಇದು ಅತ್ಯಂತ ಆಘಾತಕಾರಿ ಸುದ್ದಿ.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಆಲಂ ಪಾಷ ಎಂಬುವವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದಾವೆಯ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ನಿರಾಣಿಗೆ ಕ್ಲೀನ್ ಚಿಟ್ ನೀಡಿದ್ದರೂ, ಈ ದೂರಿನಲ್ಲಿ ಉಲ್ಲೇಖವಾಗಿದ್ದ ಇನ್ನೆರಡು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ವರದಿ ನೀಡಿದ್ದಾರೆ.

ಲೋಕಾಯುಕ್ತ ನಗರ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ 77 ಪುಟಗಳ ತನಿಖಾ ವರದಿ ಹಾಗು 2000 ಪುಟಗಳ ದಾಖಲೆಯನ್ನು ಮೊನ್ನೆ (21/5/12) ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪಪಟ್ಟಿಯನ್ನು ಸ್ವೀಕರಿಸುವ ಸಂಬಂಧ ಇದೇ ತಿಂಗಳ 31ರಂದು ತೀರ್ಪು ನೀಡುವುದಾಗಿ ನ್ಯಾಯಮೂರ್ತಿ ಎಚ್.ಎಸ್.ಸುಧೀಂದ್ರ ರಾವ್ ತಿಳಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ.

ತನಿಖಾಧಿಕಾರಿ ನೀಡಿರುವ ವರದಿಯ ಕೆಲವು ಅಂಶಗಳು ಹೀಗಿವೆ:

“ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಹೂವಿನಾಯಕನಹಳ್ಳಿ ಗ್ರಾಮದ ಸರ್ವೆ ನಂಬರುಗಳಾದ 124, 125, 126ರಲ್ಲಿ ಒಟ್ಟು 20 ಎಕರೆ ಜಮೀನಿಗೆ ಲೇಟ್ ಶ್ರೀ ಗುರುಸ್ವಾಮಿ ಕೆ.ಎನ್., ಲೇಟ್ ಶ್ರೀ ಕೆ.ಎನ್.ನೆಟ್ಟಕಲ್ಲಪ್ಪ, ಲೇಟ್ ಶ್ರೀಮತಿ ಜಾಂಬವತಿರವರುಗಳು ಪೌತಿ ಖಾತೆದಾರರಾಗಿರುತ್ತಾರೆ. ಶ್ರೀ ಕೆ.ಎನ್.ಹರಿಕುಮಾರ್, ಶ್ರೀ ಕೆ.ಎನ್.ತಿಲಕ್ ಕುಮಾರ್ ಮತ್ತು ಶ್ರೀ ಕೆ.ಎನ್.ಶಾಂತಕುಮಾರ್ ರವರುಗಳು ಶ್ರೀಮತಿ ಜಾಂಬವತಿ ಮತ್ತು ಶ್ರೀ ಕೆ.ಎನ್.ನೆಟ್ಟಕಲ್ಲಪ್ಪರವರುಗಳ ಮಕ್ಕಳಾಗಿದ್ದು, ಶ್ರೀ ಗುರುಸ್ವಾಮಿಯವರ ಮೊಮ್ಮಕ್ಕಳಾಗಿರುತ್ತಾರೆ ಮತ್ತು ಎಂ.ಆರ್.ಸಂಖ್ಯೆ 6/1996-97 ದಿ.6-3-2009ರ ಮೂಲಕ ಸದರಿ ಸ್ಥಿರಾಸ್ತಿಗೆ ಹಕ್ಕುದಾರರಾಗಿರುತ್ತಾರೆ. ದಿ. 26-12-2006ರಂದು ಸದರಿ ಜಮೀನನ್ನು ಸರ್ಕಾರವು ಹಾರ್ಡ್‌ವೇರ್ ಪಾರ್ಕ್ ಸ್ಥಾಪನೆಗಾಗಿ ಕೆಐಎಡಿ ಆಕ್ಟ್ 1966ರ ಕಲಂ 28(1) ಪ್ರಕಾರ ಅಧಿಸೂಚನೆ ಹೊರಡಿಸಿರುತ್ತದೆ. ದಿನಾಂಕ. 31-8-2007ರಂದು ಮೇಲ್ಕಂಡ ಖಾತೆದಾರರು ಸ್ವತಃ ತಮ್ಮ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ತಿಳಿಸಿ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದೆಂದು ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ. ಆದರೂ ಸಹ ವಿಶೇಷ ಭೂಸ್ವಾಧೀನಾಧಿಕಾರಿಯು ಸದರಿ ಆಕ್ಷೇಪಣೆಗಳನ್ನು ಮಾನ್ಯ ಮಾಡದೇ ದಿ.4-3-2010ರಂದು ಕೆಐಎಡಿ ಆಕ್ಟ್ 1966ರ ಕಲಂ 28(4)ರ ಪ್ರಕಾರ ಅಂತಿಮ ಅಧಿಸೂಚನೆಗೆ ಒಳಪಡಿಸಿರುತ್ತಾರೆ. ತದನಂತರ ದಿನಾಂಕ 2-7-2008ರಂದು ಕೆಐಎಡಿ ಆಕ್ಟ್ 1966ರ ಕಲಂ 28(8)ರ ಪ್ರಕಾರ ಸದರಿ ಜಮೀನನ್ನು ಕೆಐಎಡಿಬಿಗೆ ಹಸ್ತಾಂತರಿಸುತ್ತದೆ. ಭೂಮಾಲೀಕರು ಸ್ವತಃ ಹೊಟೇಲ್ ಉದ್ದಿಮೆಯನ್ನು ಸ್ಥಾಪಿಸುವುದಾಗಿ ಸರ್ಕಾರಕ್ಕೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಿ, ತಮ್ಮ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಕೋರಿರುತ್ತಾರೆ.

“ಈ ಪ್ರಕರಣದ ತನಿಖಾ ಸಮಯದಲ್ಲಿ ವಿವಿಧ ಇಲಾಖೆಗಳಿಂದ ಪಡೆದುಕೊಂಡ ಕಡತಗಳ ಪರಿಶೀಲನೆಯಿಂದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರು ಉತ್ತರ ತಾಲ್ಲೂಕು, ಜಾಲಾ ಹೋಬಳಿ, ಹೂವಿನಾಯ್ಕನಹಳ್ಳಿ ಸರ್ವೆ ನಂ. 124, 124 ಮತ್ತು 126ರಲ್ಲಿ ಒಟ್ಟು 20 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಡಿ-ನೋಟಿಫಿಕೇಷನ್ ಮಾಡಿರುವ ಬಗ್ಗೆ ದಾಖಲಾತಿಗಳಿಂದ ಸಾಬೀತಾಗುತ್ತದೆ. ಹೇಗೆಂದರೆ, ಸದರಿ ಜಮೀನು ಕೆಐಎಡಿ ಆಕ್ಟ್ 1966ರ ಕಲಂ 28(8)ರ ಪ್ರಕಾರ ಅಧಿಸೂಚನೆಯಾಗಿತ್ತು. ಆದ ಕಾರಣ ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಹಾಗು ಅಪರ ಕಾರ್ಯದರ್ಶಿಗಳು ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಲು ಬರುವುದಿಲ್ಲವೆಂದು ಕಡತದ ಟಿಪ್ಪಣಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಶ್ರೀ ಬಿ.ಎಸ್.ಯಡಿಯೂರಪ್ಪ, ಹಿಂದಿನ ಮುಖ್ಯಮಂತ್ರಿಯವರು ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಂಡು ಕೆಐಎಡಿ ಆಕ್ಟ್ 1966ರ ಕಲಂ 4ರಡಿಯಲ್ಲಿ ಪ್ರಶ್ನಿತ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲು ಅನುಮೋದಿಸಿರುತ್ತಾರೆ. ಈ ಸಲಹೆಯನ್ನು ಆರೋಪಿ-1 ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಅನುಮೋದಿಸಿರುತ್ತಾರೆ. ಈ ಪ್ರಕಾರ ಅಧಿಕಾರಿಗಳು ಅಭಿವೃದ್ಧಿ ಶುಲ್ಕ ಮತ್ತು ಮಂಡಳಿಯ ಸೇವಾಶುಲ್ಕವನ್ನು ಲೆಕ್ಕಿಸಿ ಅಧಿಕಾರಿಗಳ ಮುಖಾಂತರ ಕಡತವು ಶ್ರೀ ಬಿ.ಎಸ್.ಯಡಿಯೂರಪ್ಪ ಹಿಂದಿನ ಮುಖ್ಯಮಂತ್ರಿಗಳಿಗೆ ಮಂಡನೆಯಾಗಿರುತ್ತದೆ. ಅಂದಿನ ಮುಖ್ಯಮಂತ್ರಿಗಳು ಇನ್ನೊಮ್ಮೆ ಚರ್ಚಿಸಲು ಸೂಚಿಸಿದಾಗ ಆಗ ಅಧಿಕಾರಿಗಳು ಅಭಿವೃದ್ಧಿ ಶುಲ್ಕವನ್ನಾಗಲೀ, ಮಂಡಳಿಯ ಸೇವಾ ಶುಲ್ಕವನ್ನಾಗಲೀ ಅಥವಾ ಭೂಮಾಲೀಕರು ತಮ್ಮ ಯೋಜನಾ ವರದಿಯನ್ನು ಎಸ್‌ಎಚ್‌ಎಲ್‌ಸಿಸಿಗೆ ಸಲ್ಲಿಸಿ ಅಲ್ಲಿಂದ ಮಂಜೂರಾತಿ ಪಡೆದರೆ ಮಾತ್ರ ಸದರಿ ಜಮೀನನ್ನು ಭೂಮಾಲೀಕರಿಗೆ ಮರುಹಂಚಿಕೆ ಮಾಡಬಹುದೆಂದು ಸಲಹೆ ನೀಡಿರುತ್ತಾರೆ. ಇದರಲ್ಲಿ ಅಂದಿನ ಮುಖ್ಯಮಂತ್ರಿಗಳು ಭೂಮಾಲೀಕರಿಂದ ತಮ್ಮ ಸ್ವಾರ್ಥಕ್ಕಾಗಿ ಯಾವುದೇ ರೀತಿಯಲ್ಲಿ ಲಂಚ ಪಡೆದ (ಪೆಕ್ಯೂನಿಯರಿ ಅಡ್ವಾಂಟೇಜ್) ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿದ್ದರೂ ಸಹ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತನ್ನ ನಿರಂಕುಶ ಹಾಗು ಸ್ವೇಚ್ಛಾನುಸಾರದ ನಿರ್ಣಯದೊಂದಿಗೆ ಭೂಮಾಲೀಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ 20 ಎಕರೆ ಜಮೀನನ್ನು ಕೆಐಎಡಿ ಕಾಯ್ದೆಯ ಉಪಬಂಧಗಳನ್ನು ವ್ಯತಿರಿಕ್ತಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಸೇವಾಶುಲ್ಕ ರೂ. 2,64,00,000-00 ಅಥವಾ ಅಭಿವೃದ್ಧಿ ಶುಲ್ಕ 6 ಕೋಟಿ ರೂಗಳನ್ನು ಮನ್ನಾ ಮಾಡಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, 1988ರ ಕಲಂ 13(1)(ಡಿ) ಸಬ್ ಕ್ಲಾಸ್ 1 ಮತ್ತು 3 ಸಹವಾಚ 13(2)ರ ಪ್ರಕಾರ ಅಪರಾಧವೆಸಗಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುತ್ತದೆ……”

ತನ್ನ ಜಮೀನು ನೋಟಿಫಿಕೇಷನ್ ಆದಾಗ ಯಾವುದೇ ಭೂಮಾಲೀಕರು ಅದನ್ನು ಸಕಾರಣಗಳಿಗೆ ಡಿನೋಟಿಫಿಕೇಷನ್ ಮಾಡಲು ಅರ್ಜಿ ಸಲ್ಲಿಸುವುದು ತಪ್ಪೇನಲ್ಲ. ಅದು ಅನೈತಿಕವೂ ಅಲ್ಲ. ಆದರೆ ಸರ್ಕಾರದ ಮೇಲೆ ಯಾವ ಪ್ರಮಾಣದ ಒತ್ತಡ ಬಿದ್ದಿದೆಯೆಂಬುದನ್ನು ಗಮನಿಸಿ. ಸ್ವತಃ ಮುಖ್ಯಮಂತ್ರಿಗಳೇ ಅಭಿವೃದ್ಧಿ ಶುಲ್ಕ ಮತ್ತು ಸೇವಾಶುಲ್ಕ ಪಡೆದು ಇನ್ನೊಮ್ಮೆ ಚರ್ಚಿಸಲು ಸೂಚಿಸುತ್ತಾರೆ. ಅದರಂತೆ ಕಡತಗಳ ಮಂಡನೆಯೂ ಆಗುತ್ತದೆ. ಆದರೆ ಅಂತಿಮವಾಗಿ ಬಿಡಿಗಾಸೂ ಪಡೆಯದೆ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟವನ್ನುಂಟುಮಾಡಿ ಡಿನೋಟಿಫಿಕೇಷನ್ ಮಾಡಲಾಗುತ್ತದೆ.

ತನಿಖಾಧಿಕಾರಿ ಪೆಕ್ಯೂನಿಯರಿ ಅಡ್ವಾಂಟೇಜ್ ಎಂಬ ಪದಬಳಕೆ ಮಾಡಿದ್ದಾರೆ. ಆ ಥರ ಹಣದ ಕೈಬದಲು ವ್ಯವಹಾರ ನಡೆಯದೇ ಇರುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಗಾಬರಿ ಹುಟ್ಟಿಸುವ ಅಂಶವೆಂದರೆ ಅರ್ಜಿದಾರರು ಕರ್ನಾಟಕದ ಎರಡು ಅತ್ಯಂತ ಪ್ರಮುಖ ದಿನಪತ್ರಿಕೆಗಳ (ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್) ಮಾಲೀಕರುಗಳು. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಯಡಿಯೂರಪ್ಪನವರು ಡಿನೋಟಿಫಿಕೇಷನ್ ಮಾಡಿರುವ ಉದ್ದೇಶದ ಹಿಂದೆ ಬೇರೆ ಅಡ್ವಾಂಟೇಜ್‌ಗಳು ಇರಬಹುದು ಎಂಬುದು ಸಾಮಾನ್ಯ ನಾಗರಿಕರೂ ಊಹಿಸಬಲ್ಲರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮೀಡಿಯಾ ಮ್ಯಾನೇಜ್‌ಮೆಂಟ್ ಹೇಗೆ ಹೇಗೆ ಮಾಡಿದರು ಎಂಬುದು ಈ ಕ್ಷೇತ್ರದಲ್ಲಿರುವವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಜನಮಾನಸದಲ್ಲಿ ಪ್ರಭಾವ ಬೀರಬಲ್ಲ ಪ್ರಜಾವಾಣಿಯಂಥ ಪತ್ರಿಕೆಯಿಂದ ಯಡಿಯೂರಪ್ಪ ಯಾವ ಸ್ವರೂಪದ ಲಾಭ ಪಡೆದಿರಬಹುದು? ಇದು ಸದ್ಯಕ್ಕೆ ಊಹೆಯ ವಿಷಯವಷ್ಟೆ. ಲೋಕಾಯುಕ್ತ ನ್ಯಾಯಾಲಯ ತೀರ್ಪಿಗೆ ಕಾದು ನೋಡಬೇಕು.

ವರ್ತಮಾನದಲ್ಲಿ ಇತ್ತೀಚಿಗೆ ಪ್ರಕಟಗೊಂಡ “ದಲಿತ ಸಂಚಿಕೆ: ಓದುಗರ ವಿಶ್ವಾಸವನ್ನು ‘ರಿಫ್ರೆಶ್’ ಮಾಡಿಕೊಳ್ಳುವ ಪ್ರಯತ್ನ” ಲೇಖನದಲ್ಲಿ ಒಂದು ವಿಷಯ ಪ್ರಸ್ತಾಪ ಮಾಡಲಾಗಿತ್ತು. ಯಡಿಯೂರಪ್ಪನವರ ಡಿನೋಟಿಫಿಕೇಷನ್ ಹಗರಣಗಳು ಒಂದರ ಮೇಲೊಂದರಂತೆ ಸರಣಿಯಾಗಿ ಪ್ರಕಟಗೊಳ್ಳುವ ಮೊದಲು ಈ ದಾಖಲೆಗಳು ಮೊದಲು ತಲುಪಿದ್ದೇ ಪ್ರಜಾವಾಣಿ ಕಚೇರಿಯನ್ನು. ಆದರೆ ಅವುಗಳನ್ನು ಸುದ್ದಿ ಮಾಡಲು ನಿರಾಕರಿಸಲಾಯ್ತು. ಸ್ವತಃ ಪತ್ರಿಕೆಯ ಮಾಲೀಕರುಗಳೇ ಡಿನೋಟಿಫಿಕೇಷನ್ ಹಗರಣವೊಂದರಲ್ಲಿ ಪಾಲ್ಗೊಂಡಿರುವಾಗ ಮುಖ್ಯಮಂತ್ರಿಗಳ ಇತರ ಹಗರಣಗಳನ್ನು ಹೇಗೆ ಬಯಲಿಗೆ ತರಲಾದೀತು?

ಪ್ರಜಾವಾಣಿ ದಶಕಗಳಿಂದ ಕನ್ನಡ ಜನರ ಅಂತಃಸಾಕ್ಷಿಯಂತೆ ಕೆಲಸ ಮಾಡಿದ ಪತ್ರಿಕೆ. ನೂರಾರು ಮಂದಿ ಜನಪರ ಪತ್ರಕರ್ತರು ಈ ಪತ್ರಿಕೆಯನ್ನು ಜನಮುಖಿಯಾಗಿ ರೂಪಿಸಿದ್ದಾರೆ. ವಿಶ್ವಾಸಾರ್ಹ ಪತ್ರಿಕೆಯೆಂಬ ಘೋಷಣೆಗೆ ಅನ್ವರ್ಥವಾಗುವಂತೆ ಪತ್ರಿಕೆ ನಡೆದುಕೊಂಡುಬಂದಿದೆ. ಆದರ್ಶಗಳಲ್ಲಿ, ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟವರು ಇವತ್ತಿಗೂ ನಂಬಬಹುದಾದ ಪತ್ರಿಕೆಯೆಂದರೆ ಅದು ಪ್ರಜಾವಾಣಿಯೇ ಹೌದು.

ಆದರೆ ಈಗ ಅಂಟಿರುವ ಕೆಸರು ಸಾಮಾನ್ಯದ್ದೇನೂ ಅಲ್ಲ. ಅಷ್ಟು ಸುಲಭವಾಗಿ ಕೊಡವಿಕೊಳ್ಳಬಹುದಾದ ಗಲೀಜೂ ಅದಲ್ಲ. ರಾಜಕಾರಣಿಗಳು ಮತ್ತು ಮಾಧ್ಯಮ ಸಂಸ್ಥೆಗಳ ಮಾಲೀಕರ ನಡುವೆ ಕೆಲ ಪತ್ರಕರ್ತರು ದಲ್ಲಾಳಿಗಳ ಕೆಲಸ ಮಾಡುತ್ತಿರುವುದು ಹೊಸದೇನೂ ಅಲ್ಲ. ಇಂಥ ದಲ್ಲಾಳಿಗಳಿಗೆ ಪ್ರಜಾವಾಣಿ ಮಾಲಿಕತ್ರಯರು ಬಲಿಯಾದರೆ?

ಯಡಿಯೂರಪ್ಪ, ನಿರಾಣಿ ಮೇಲಿರುವ ಆರೋಪಗಳಿಗೆ ಯಾರೂ ಆಘಾತಪಡುವುದೂ ಇಲ್ಲ, ಗಾಬರಿಯಾಗುವುದೂ ಇಲ್ಲ. ಆದರೆ ಪ್ರಜಾವಾಣಿಗೆ ಅಂಟಿಕೊಂಡ ಕಳಂಕ ನಿಜಕ್ಕೂ ಆಘಾತಕಾರಿ. ಸೀಜರನ ಹೆಂಡತಿ ಸಂಶಯಾತೀತಳಾಗಿರಬೇಕು ಎಂಬ ಮಾತು ಬಳಸಿ ಬಳಸಿ ಸವಕಲಾಗಿಹೋಗಿದೆ. ಕರ್ನಾಟಕದ ಹೊಸಪೀಳಿಗೆಯ ಯುವಕ-ಯುವತಿಯರಿಗೆ ಕಣ್ಣೆದುರು ಯಾವ ಆದರ್ಶವೂ ಇಲ್ಲದಂತಾಗುವುದು ಘೋರ. ಇನ್ನೂ ಏನೇನನ್ನು ನಾವು ಕಳೆದುಕೊಳ್ಳುವುದಕ್ಕಿದೆಯೋ? ಯಾರಿಗೆ ಗೊತ್ತು?

ಇದು ಇದೇ ವಿಷಯದ ಬಗ್ಗೆ ಹಿಂದು ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ:

 

Deccan Herald - Mining Payments

ಬಿ.ಎಸ್.ವೈ. ಹಫ್ತಾ ಪಟ್ಟಿ? ಬೆವರುತ್ತಿರುವ ಪತ್ರಕರ್ತರು?

– ನವೀನ್ ಸೂರಿಂಜೆ

ಗಣಿ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ತೀವ್ರಗೊಂಡಿರುವಂತೆಯೇ ಯಡಿಯೂರಪ್ಪ ಬೆವರುವ ಬದಲಾಗಿ ಕರ್ನಾಟಕದ ಪತ್ರಕರ್ತರಲ್ಲಿ ನಡುಕ ಶುರುವಾಗಿದೆ. ಯಡಿಯೂರಪ್ಪರಿಂದ ತಿಂಗಳ ಲೆಕ್ಕದಲ್ಲಿ ಹಫ್ತಾ ಪಡೆಯುತ್ತಿದ್ದ ಪತ್ರಕರ್ತರ ಪಟ್ಟಿ ಯಡಿಯೂರಪ್ಪ ಡೈರಿಯಿಂದ ಸಿಬಿಐಗೆ ಸಿಕ್ಕಿದೆ ಎಂಬ ಸುದ್ದಿ ಕೆಲವೊಂದು ಪತ್ರಕರ್ತರ ನಿದ್ದೆಗೆಡಿಸಿದೆ. ಪಟ್ಟಿ ಈಗಾಗಲೇ ಬಯಲಾಗಿದ್ದು, ಪತ್ರಕರ್ತರ ವಲಯದಲ್ಲಿ ಒಂದು ದೊಡ್ಡ ಸುದ್ಧಿಯೇ ಆಗಿದೆ.

Deccan Herald - Mining Payments
Mining Payments listed in Lokayukta Report: courtesy:Deccan Herald (19/08/11)

ಸಿಬಿಐಗೆ ಯಡಿಯೂರಪ್ಪ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಪಟ್ಟಿ ನಮ್ಮ ಬಳಿಯೂ ಇದೆ. ರಾಜ್ಯದ ವಿವಿದ ಜಿಲ್ಲೆಗಳ ಪತ್ರಕರ್ತರ ಹೆಸರುಗಳು ಇದರಲ್ಲಿ ನಮೂದಾಗಿದೆ. ‘ಮೇ 16 ರಂದು ಸಿಬಿಐ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ ನಗರದ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರ ನಿವಾಸದ ಮೇಲೆ ನಡೆಸಿದ ದಾಳಿಯ ವೇಳೆ ಮಹತ್ವದ ವಿಷಯಗಳನ್ನೊಳಗೊಂಡ ಯಡಿಯೂರಪ್ಪನವರ ಪರ್ಸನಲ್ ಡೈರಿ ಸಿಕ್ಕಿದೆ, ಅದರಲ್ಲಿ ಅವರಿಂದ ನಿಯಮಿತವಾಗಿ ಹಣ ಪಡೆಯುತ್ತಿದ್ದ ಪತ್ರಕರ್ತರ ಹೆಸರುಗಳ ಪ್ರಸ್ತಾಪವಿದೆ,’ ಎಂಬ ಸುದ್ದಿ ಪತ್ರಕರ್ತರ ವಲಯದಲ್ಲಿದೆ. ಮಂಗಳೂರಿನ ಕೆಲವೊಂದು ಪತ್ರಿಕೆಗಳು ಇದನ್ನು ಸುದ್ಧಿಯಾಗಿಯೂ ಪ್ರಕಟಿಸಿತ್ತು. ವಾಸ್ತವವಾಗಿ ಇದು ಸಿಬಿಐ ಯಡಿಯೂರಪ್ಪರಿಂದ ವಶಪಡಿಸಿಕೊಂಡ ಪಟ್ಟಿಯೇ ಅಲ್ಲ.

ಏನಿದು ಪತ್ರಕರ್ತರ ಪಟ್ಟಿ?

ಮೇ 16 ರಂದು ಯಡಿಯೂರಪ್ಪನವರ ಮನೆಯಿಂದ ಸಿಬಿಐ ಅಧಿಕಾರಿಗಳು ಪತ್ರಕರ್ತರ ಹೆಸರುಳ್ಳ ಡೈರಿಯನ್ನು ವಶಪಡಿಸಿಕೊಂಡರು ಎಂದು ಹೇಳಲಾಗುತ್ತದೆ. ಆದರೆ ನನಗೆ ಈ ಪಟ್ಟಿಯನ್ನು ಮೇ 16 ಕ್ಕೂ ಮೊದಲೇ ಬೆಂಗಳೂರಿನ ನನ್ನ ಆತ್ಮೀಯ ಪತ್ರಕರ್ತ ಮಿತ್ರ ಓದಿ ಹೇಳಿದ್ದ. ಅದೇ ಹೆಸರುಗಳುಳ್ಳ, ಅದರೆ ಕೆಲವೊಂದು ಹೆಸರುಗಳನ್ನು ಡಿಲೀಟ್ ಮಾಡಿದ ಒಂದು ಪಟ್ಟಿ ಮೇ 20 ರಂದು ನನ್ನ ಈಮೇಲ್‌ಗೆ ಬೇರೊಬ್ಬ ಪತ್ರಕರ್ತ ಮಿತ್ರ ರವಾನಿಸಿದ್ದ. ಅದೇ ಹೆಸರುಗಳು ಉಳ್ಳ ಪಟ್ಟಿ ಮೇ 16 ಕ್ಕೂ ಮೊದಲು ಬಹಿರಂಗಗೊಂಡಿತ್ತು. ಮತ್ತು ಅದು ಬಿಜೆಪಿ ಕಚೇರಿಯಿಂದ ಹೋಗುತ್ತಿದ್ದ ಹಫ್ತಾದ ಫಲಾನುಭವಿ ಪತ್ರಕರ್ತರ ಪಟ್ಟಿ ಎಂಬ ಸುದ್ಧಿ ಚಾಲ್ತಿಯಲ್ಲಿತ್ತು. ಯಾವಾಗ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಪ್ರಾರಂಭ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿತೋ ಆಗಲೇ “ಯಡಿಯೂರಪ್ಪ ಬಳಿ ಇದ್ದ ಪತ್ರಕರ್ತರ ಹಫ್ತಾ ಫಲಾನುಭವಿಗಳ ಪಟ್ಟಿ”ಯಾಗಿ ಮಾಪರ್ಾಡಾಗಿತ್ತು. ಇಷ್ಟಕ್ಕೂ ಸಿಬಿಐಗೆ ದೊರೆತ ದಾಖಲೆಯನ್ನು ಎರಡು ಮೂರು ದಿನದಲ್ಲಿ ಬಹಿರಂಗ ಮಾಡಲು ಅಥವಾ ತುರಾತುರಿಯಲ್ಲಿ ಪತ್ರಕರ್ತರಿಗೆ ನೀಡಲು ಅದೇನು ಅನ್ವರ್ ಮಾನಿಪ್ಪಾಡಿ ಆಧ್ಯಕ್ಷತೆಯ ಆಯೋಗವೇ?

ಪತ್ರಕರ್ತರ ಪಟ್ಟಿ ನಿಜವೇ?

ಗಣಿ ಹಪ್ತಾ ಪಡೆದುಕೊಂಡಿರುವ ಪತ್ರಕರ್ತರ ಪಟ್ಟಿ ಇರುವುದು ನಿಜ. ಗಣಿ ಹಗರಣ ತನಿಖೆಯ ಲೋಕಾಯುಕ್ತ ವರದಿಯಲ್ಲೂ ಪತ್ರಕರ್ತರ ಹೆಸರು ಉಲ್ಲೇಖವಾಗಿತ್ತು. ಆನಂತರ ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಸಿಬಿಐ ಮಾಡಿದ ತನಿಖೆಯಲ್ಲಿ ಇನ್ನಷ್ಟೂ ಪತ್ರಕರ್ತರ ಹೆಸರು ಸಿಬಿಐಗೆ ಕಂಡು ಬಂದಿತ್ತು. ಇದು ಲೋಕಾಯುಕ್ತ ವರದಿಯಲ್ಲಿದ್ದ ಪತ್ರಕರ್ತರ ನಡುಕಕ್ಕೆ ಕಾರಣವಾಗಿತ್ತು. ಹಾಗೆಂದು ಪತ್ರಕರ್ತರನ್ನು ಅರೆಸ್ಟ್ ಮಾಡುತ್ತಾರೆ ಎಂದು ಅವರು ಹೆದರಿಕೊಂಡಿದ್ದಾರೆ ಎಂದರೆ ಬಾಲಿಶವಾಗುತ್ತದೆ. ಜನಾರ್ದನ ರೆಡ್ಡಿಯ ಸಿಬಿಐ ಪ್ರಕರಣಕ್ಕೂ ಯಡಿಯೂರಪ್ಪ ಸಿಬಿಐ ಪ್ರಕರಣಕ್ಕೂ ಸಂಬಂಧ ಇರುವುದರಿಂದ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪವಾದ ಹೆಸರುಗಳು ಮತ್ತು ಜನಾರ್ದನ ರೆಡ್ಡಿ ತನಿಖೆಯಲ್ಲಿ ಪ್ರಸ್ತಾಪವಾದ ಹೆಸರುಗಳು ಮತ್ತೆ ಯಡಿಯೂರಪ್ಪ ವಿರುದ್ಧದ ಸಿಬಿಐ ವರದಿಯಲ್ಲಿ ಉಲ್ಲೇಖವಾಗುವ ಸಾಧ್ಯತೆ ಇದೆ. ಇದು ಕಾನೂನು ಸಮಸ್ಯೆಗಿಂತಲೂ ಪತ್ರಕರ್ತರ ಮಾನದ ಪ್ರಶ್ನೆಯಾಗಿರುತ್ತದೆ. ಇದನ್ನು ತಪ್ಪಿಸಲೆಂದೇ ಕೆಲವೊಂದು ಪ್ರಾಮಾಣಿಕರ ಹೆಸರನ್ನೂ ಸೇರಿಸಿ  ಪಟ್ಟಿಯನ್ನು  ಯಾರೋ ಸೃಷ್ಠಿಸಿ ಪಸರಿಸಿದ್ದಾರೆ.

ಪ್ರಾಮಾಣಿಕರ ಹೆಸರೂ ಯಡ್ಡಿ ಹಫ್ತಾ ಲಿಸ್ಟ್‌ನಲ್ಲಿ:

ರಾಜ್ಯದ ಕೆಲವೊಂದು ಪ್ರಾಮಾಣಿಕ ಪತ್ರಕರ್ತರ ಹೆಸರನ್ನೂ ಈಗ ಬಹಿರಂಗಗೊಂಡ ಪಟ್ಟಿಯಲ್ಲಿ ಸೇರಿಸಲಾಗಿದೆ. ಲೋಕಾಯುಕ್ತ ವರದಿ ಮತ್ತು ಜನಾರ್ದನ ರೆಡ್ಡಿ ವಿರುದ್ಧದ ತನಿಖಾ ವರದಿಯಲ್ಲಿ ಉಲ್ಲೇಖವಾದ ಪತ್ರಕರ್ತರ ಹೆಸರಿನ ಮಧ್ಯೆ ರಾಜ್ಯದ ಸಭ್ಯ ಪತ್ರಕರ್ತರ ಹೆಸರನ್ನೂ ಸೇರಿಸಿದರೆ ಒಂದೋ “ಆ ವರದಿಯೇ ಸುಳ್ಳು” ಎಂದು ಎಲ್ಲರೂ ವರದಿಯನ್ನು ತಳ್ಳಿ ಹಾಕಬಹುದು. ಅಥವಾ “ಎಲ್ಲಾ ಪತ್ರಕರ್ತರೂ ಹಣ ಮಾಡುವವರೇ. ಅವರು ಇವರು ಅಂತ ಯಾಕೆ ಒಬ್ಬೊಬ್ಬರನ್ನು ಟಾರ್ಗೆಟ್ ಮಾಡೋದು” ಅಂತ ಸುಮ್ಮನಿರಬಹುದು. ಈ ಎರಡೂ ಸಾಧ್ಯತೆಗಳು ಭ್ರಷ್ಠ ಪತ್ರಕರ್ತರಿಗೆ ವರದಾನವಾಗಿ ಪರಿಣಮಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಾಯುಕ್ತ ಪಟ್ಟಿಯಲ್ಲಿದ್ದ ಹಪ್ತಾ ಪಡೆಯುತ್ತಿದ್ದ ಪತ್ರಕರ್ತರು ಇಂತಹುದೊಂದು ಪಟ್ಟಿಯಲ್ಲಿ ತಮ್ಮ ಹೆಸರನ್ನು ಸಭ್ಯ ಪತ್ರಕರ್ತರ ಜೊತೆ ಸೇರಿಸಿ ಪಟ್ಟಿ ಮಾಡಿರಬಹುದು ಎನ್ನಲಾಗುತ್ತಿದೆ. ಲೋಕಾಯುಕ್ತ ಹೆಸರಿಸಿದ ಮತ್ತು ಪತ್ರಿಕಾ ಲೋಕಕ್ಕೆ ಗೊತ್ತಿರುವ ಭ್ರಷ್ಠ ಪತ್ರಕರ್ತರ ಹೆಸರಗಳು ಪಟ್ಟಿಯಲ್ಲಿ ಇರುವುದರ ಜೊತೆ ಪತ್ರಿಕಾ ಕ್ಷೇತ್ರ ಗುರುತಿಸಿದಂತಹ ಕೆಲವೊಂದು ಪ್ರಾಮಾಣಿಕರ ಹೆಸರನ್ನೂ ಪಟ್ಟಿ ಮಾಡಿರುವುದರಿಂದ ಇದು ಸಿಬಿಐ ಕೈಯಲ್ಲಿರುವ ಪಟ್ಟಿ ಅಲ್ಲ ಎನ್ನಬೇಕಾಗುತ್ತದೆ ಮತ್ತು ಅದು ಅಧಿಕೃತ ಎನ್ನುವುದಕ್ಕೆ ಯಾವ ದಾಖಲೆಗಳೂ ಇಲ್ಲವಾಗಿದೆ. ರಾಜ್ಯವನ್ನು ಲೂಟಿ ಹೊಡೆದಿರುವ ಭ್ರಷ್ಠ ರಾಜಕಾರಣಿಗಳ ಜೊತೆ ಕೈ ಜೋಡಿಸಿರೋ ಭ್ರಷ್ಠ ಪತ್ರಕರ್ತರು ಬಚಾವ್ ಆಗೊದಕ್ಕೆ ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಎನ್ನುವುದಷ್ಟೆ ಈ ಉದಾಹರಣೆಗಳ ಮೂಲಕ ಗೊತ್ತಾಗುತ್ತದೆ.


[ಸ್ನೇಹಿತರೆ,  ನವೀ‌ನ್‌ರವರು ಮೇಲೆ ಹೇಳಿರುವಂತೆ ಈ ಪಟ್ಟಿ ಪತ್ರಕರ್ತರ ವಲಯದಲ್ಲಿ ಹರಿದಾಡುತ್ತಿದೆ ಮತ್ತು ಅದೇ ಸಮಯದಲ್ಲಿ ಅದು ಸಿಬಿಐ ವಶಪಡಿಸಿಕೊಂಡ ಡೈರಿಯ ಪ್ರತಿ ಎನ್ನುವುದಕ್ಕೆ ಅಧಿಕೃತ ದಾಖಲೆ ಇಲ್ಲವಾಗಿದೆ. ಹಾಗಾಗಿ ನಾವು ಪಟ್ಟಿ ಲಭ್ಯವಿದ್ದರೂ ಅದನ್ನು ಪ್ರಕಟಿಸುವುದು ಸಮಂಜಸವಲ್ಲ. ಆದರೆ ಹೀಗೊಂದು ಪಟ್ಟಿ ಇರುವುದು ನಿಜವೇ ಆಗಿದ್ದು ಮತ್ತು ಅದು ಅಧಿಕೃತವೆಂದು ಗೊತ್ತಾಗಿದ್ದೇ ಆದರೆ ಅದನ್ನು ವರ್ತಮಾನ.ಕಾಮ್‌ನಲ್ಲಿ ಖಂಡಿತ ಪ್ರಕಟಿಸುತ್ತೇವೆ. ರಾಜಕಾರಣಿಗಳ ಭ್ರಷ್ಟತೆಗಿಂತ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರ ಭ್ರಷ್ಟತೆ ನೀಚವೂ ಸಮಾಜಕ್ಕೆ ಹೆಚ್ಚು ಹಾನಿಕಾರಿಯಾಗಿಯೂ ಸಾಗುತ್ತಿದೆ. ಮತ್ತು ಈ ಭ್ರಷ್ಟರು ಸಿಕ್ಕಿಹಾಕಿಕೊಳ್ಳುವ ಹಾಗೂ ನ್ಯಾಯಾಲಯದಲ್ಲಾಗಲಿ, ಜನತಾ ನ್ಯಾಯಾಲಯದಲ್ಲಾಗಲಿ ಶಿಕ್ಷೆಗೆ ಒಳಗಾಗುವ ಸಾಧ್ಯತೆಯೂ ಇಲ್ಲವಾಗಿದೆ. ಹೀಗಿರುವಾಗ ಮಾಧ್ಯಮದ, ಅದರಲ್ಲೂ ಕನ್ನಡ ಮಾಧ್ಯಮಲೋಕದ ಭ್ರಷ್ಟತೆಯನ್ನು ತಡೆಯಲು ನಮ್ಮ ಕೈಲಾಗುವ ಎಲ್ಲವನ್ನೂ ನಾವು ಈ ಮೂಲಕ ಮುಂದುವರೆಸುತ್ತೇವೆ. – ರವಿ ಕೃಷ್ಣಾರೆಡ್ಡಿ]

ವಕೀಲರು, ಪತ್ರಕರ್ತರು ಮತ್ತು ಫ್ಯಾಂಟಮ್ ಭೂತ


– ಪರಶುರಾಮ ಕಲಾಲ್


 

ಮಾಧ್ಯಮಗಳು ಮತ್ತು ವಕೀಲರ ನಡುವೆ ನಡೆದ ಯುದ್ಧವನ್ನು ನಾವು ಎಲ್ಲರೂ ನೋಡಿದ್ದೇವೆ. ನೋಡಿದ್ದೇವೆ ಏನು ಬಂತು ರೇಸಿಗೆಯಾಗುವಷ್ಟು ದೃಶ್ಯಮಾಧ್ಯಮಗಳು ಉಣ ಬಡಿಸಿವೆ. ವಕೀಲರದು ಸರಿಯೇ ? ಮಾಧ್ಯಮದ್ದು ಸರಿಯೇ ಈ ಪ್ರಶ್ನೆಯನ್ನು ನಾವು ಹಾಕಿಕೊಳ್ಳುವುದಕ್ಕಿಂತ ಇದು ಯಾಕೇ ನಡೆಯಿತು ? ಏನು ಸಮಸ್ಯೆ ಇದಕ್ಕೆ ಕಾರಣ ಎಂದು ಎಲ್ಲರೂ ಯೋಚಿಸಬೇಕಿದೆ.

ಈ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಕುಸಿದ ಸಂದರ್ಭದಲ್ಲಿ ನ್ಯಾಯಾಂಗ ಒಂದಿಷ್ಟು ಮಾನವಂತ ಕೆಲಸ ಮಾಡಿತು ಎನ್ನುವದನ್ನು ಒಪ್ಪುವ ಒಂದು ವರ್ಗ ಇದೆ. ಚರ್ಚೆಯನ್ನು ಇಲ್ಲಿಂದಲೇ ಆರಂಭಿಸೋಣ. ಅಣ್ಣಾ ಹಜಾರೆ ಭೃಷ್ಠಾಚಾರದ ವಿರುದ್ಧ ಹೋರಾಟದವರೆಗೆ ಇದನ್ನು ಎಳೆದುಕೊಂಡು ಹೋಗಬಹುದು. ಗಣಿ ಹಗರಣ ಕುರಿತಂತೆ ಆಂಧ್ರ ಹಾಗೂ ಕರ್ನಾಟಕದಲ್ಲಿ  ಸಿಬಿಐ ತನಿಖೆ ನಡೆಸುತ್ತಿರುವುದು. ಯಡಿಯೂರಪ್ಪ ಗಣಿ ಕಪ್ಪ ಪಡೆದ ಪ್ರಕರಣದ ಬಗ್ಗೆಯೂ ಸಿಬಿಐ ತನಿಖೆ ನಡೆಸಲು ಸಾಧ್ಯವೇ ವರದಿ ನೀಡಲು ಸಿಇಸಿ (ಕೇಂದ್ರ ಉನ್ನತಾಧಿಕಾರಿಗಳ ತಂಡ) ಸೂಚಿಸಿದೆ. ಇಲ್ಲಿ ಮಾಧ್ಯಮಗಳಿಗಿಂತ ನ್ಯಾಯಾಂಗ ಇಡೀ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಂಗವೆಂದರೆ ನ್ಯಾಯಾಧೀಶರು ಮಾತ್ರವಲ್ಲ, ಅಲ್ಲಿ ವಕೀಲರು ಇರುತ್ತಾರೆ. ಅವರ ಪಾತ್ರವೂ ಸಹ ಬಹಳ ಮುಖ್ಯ.

ಮತ್ತೊಂದು; ನಾವು ದೃಶ್ಯ ಮಾಧ್ಯಮಗಳ ಕಡೆ ನೋಡೋಣ. ದೃಶ್ಯಮಾಧ್ಯಮಗಳು ಸುದ್ದಿ ಮಾಧ್ಯಮವಾಗಿ ಬಂದ ಮೇಲೆ ರೋಚಕ ಸುದ್ದಿಗಳಿಗೆ ಹೆಚ್ಚು ಗಮನ ಕೊಟ್ಟವು. ಮತ್ತೊಂದು ಕಡೆ ಇವೇ ನ್ಯಾಯಾಲಯಗಳಾಗಿ ಕೆಲಸ ಮಾಡ ತೊಡಗಿದವು. ಆರೋಪಿಗಳನ್ನು ಆರೋಪಿಗಳೆಂದು ಕರೆಯದೇ ಈ ಕೃತ್ಯವೆಸಗಿದ ಪಾತಕಿಗಳು, ದುಷ್ಟರು, ಖೂಳರು ಎಂದೇ ಚಿತ್ರಿಸಿದವು. ಎಷ್ಟೋ ಸಾರಿ ಇವರೇ ನ್ಯಾಯಾಧೀಶರಾಗಿ ತೀರ್ಪು ನೀಡಿದ ರೀತಿಯಲ್ಲಿ ವರದಿ ಮಾಡಿದ್ದು ಇದೆ. ಇದು ಸಾಲದು ಎಂಬಂತೆ ಚಿತ್ರನಟಿಯರನ್ನು ಕುಳ್ಳರಿಸಿ, ಕುಟುಂಬ ನ್ಯಾಯಾಲಯವನ್ನು ತೆರೆದು ಗಂಡ-ಹೆಂಡತಿ ಜಗಳ ಬಿಡಿಸುವ ನ್ಯಾಯಾಧೀಶರ ಪಾತ್ರ ನೀಡಿದರು. ಜನರಿಗೆ ಮನರಂಜನೆ ನೀಡುತ್ತಾ ಕೆಳ ಮಧ್ಯಮವರ್ಗದವರ ಬದುಕು ಬೀದಿಪಾಲಾಗಿಸಿ, ಎಷ್ಟೋ ಪ್ರಕರಣಗಳಲ್ಲಿ ನೇರವಾಗಿ ಹೊಡೆದಾಡಿಸುವ ದೃಶ್ಯಗಳನ್ನು ಸಹ ಲೈವ್ ಆಗಿಯೇ ಬಿತ್ತರಿಸಿದವು. ಈಗ ಕುಟುಂಬ ಜಗಳವಿರಲಿ, ಏನೋ ಸಮಸ್ಯೆ ಇರಲಿ ಎಲ್ಲರೂ ಈ ದೃಶ್ಯಮಾಧ್ಯಮಗಳ ಬಾಗಿಲು ತಟ್ಟುವಂತೆ ಮಾಡಿ ಬಿಟ್ಟಿವೆ. ಯಾರಿಗೂ ನಾವು ಹೆದುರುವುದಿಲ್ಲ. ನಾವು ಮಾಧ್ಯಮದವರು. ಏನು ಬೇಕಾದರೂ ಮಾಡುತ್ತೇವೆ ಎಂಬ ದುಸ್ಸಾಹಸದ ಮಾತುಗಳನ್ನು ಆಡಿದವು.

ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ವಕೀಲರೂ ಇದೇ ದುಸ್ಸಾಹಸದ ಮಾತುಗಳನ್ನು ಖಾಸಗಿಯಾಗಿ ಆಡುತ್ತಾರೆ. ಆಡಿಕೊಳ್ಳಲಿ ಬಿಡಿ. ಎಷ್ಟೇ ಆಗಲಿ, ಅದು ಅವರ ಖಾಸಗಿ ಮಾತು ಎನ್ನಬಹುದು. ದೃಶ್ಯ ಮಾಧ್ಯಮದವರು, ಮುದ್ರಣ ಮಾಧ್ಯಮದವರು ಇದೇ ಮಾತನ್ನು ಆಡಿದಾಗ ಭಯ ಆವರಿಸುತ್ತೆ . ಯಾಕೆಂದರೆ ಅದು ಸಾರ್ವಜನಿಕವಾಗಿ ಆಡಿ ಬಿಟ್ಟಾಗ. ಖಾಸಗಿಯಾಗಿ ಏನೋ ಬೇಕಾದರೂ ಹೇಳಿಕೊಳ್ಳಲಿ, ಆದರೆ ಅದನ್ನು ಪತ್ರಿಕೆಗಳಲ್ಲಿ ಬರೆದು, ದೃಶ್ಯಮಾಧ್ಯಮದಲ್ಲಿ ಆಡಿ ತೋರಿಸಿದಾಗ ಇವರೆಲ್ಲಾ ಏನು ಮಾಡುತ್ತಿದ್ದಾರೆ ? ಏನು ಮಾಡಬೇಕು ಎಂದುಕೊಂಡಿದ್ದಾರೆ ? ವಕೀಲರು ಹಾಗೂ ಮುಖ್ಯವಾಗಿ ದೃಶ್ಯ ಮಾಧ್ಯಮದವರು ಇವರಿಬ್ಬರಿಗೆ ಸುಪ್ರಮಸಿ ಸಮಸ್ಯೆ ಕಾಡುತ್ತಿದೆ. ಇದು ಒಂದು ರೀತಿಯ ಫ್ಯಾಂಟಮ್ ಭೂತ ಆವರಿಸಿಕೊಂಡಿದೆ. ನಾವೇ ಸೂಪರ್ ಮ್ಯಾನ್ ಎನ್ನುವ ಎರಡು ಸೂಪರ್ ಮ್ಯಾನ್‌ಗಳ ನಡುವೆ ನಡೆಯುತ್ತಿರುವ ಯುದ್ಧವಿದು. ಇದಕ್ಕಿಂತ ಬೇರೇನೂ ಇದರ ಹಿಂದೆ ಇಲ್ಲ.

ಇದಕ್ಕೆ ಮುದ್ರಣ ಮಾಧ್ಯಮವೂ ಕೈಗೊಡಿಸಿದೆ. ಮುದ್ರಣ ಮಾಧ್ಯಮವೂ ಈಗ ರೋಚಕ ಸುದ್ದಿಗೆ, ಟ್ಯಾಬ್ಲಾಯ್ಡ್  ಭಾಷೆಗೆ ಒಳಗಾಗಿರುವ ಹೊತ್ತಿನಲ್ಲಿ ಅದನ್ನೇ ದೊಡ್ಡ ತನಿಖೆ ವರದಿ ಎಂದು ಬಿಂಬಿಸಿಕೊಳ್ಳುತ್ತಿರುವಾಗ ಅವರು ಬೆಂಬಲಿಸಲೇಬೇಕು. ಬೆಂಬಲಿಸಿದ್ದಾರೆ. ಅವರು ಯುದ್ಧವನ್ನು ಘೋಷಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್  ಕೋರ್ಟ್ ಆವರಣ ಬಿಟ್ಟು ದೃಶ್ಯಮಾಧ್ಯಮದ ಕಣ್ಣು ಬೇರೆ ಕಡೆ ಹೋಗಲೇ ಇಲ್ಲ. ಇಡೀ ದಿನ ಕರ್ನಾಟಕವೇ  ಹತ್ತಿ ಉರಿಯುತ್ತಿದೆ ಎಂಬ ಚಿತ್ರಣವನ್ನು ನೀಡಿದರು. ರೆಡ್ಡಿಯನ್ನು ಅದುವರೆಗೆ ಹೊಸ ಬಟ್ಟೆ, ಧರಿಸಿದ್ದರು. ಇಡ್ಲಿ ತಿಂದರು, ಕಾಫಿ ಕುಡಿದರು ಎಂದೆಲ್ಲಾ ವರ್ಣಿಸುತ್ತಿದ್ದ  ದೃಶ್ಯ ಮಾಧ್ಯಮಗಳು ರೆಡ್ಡಿಯನ್ನು ಕೈ ಬಿಟ್ಟು ಬಿಟ್ಟರು. ಇದು ರೆಡ್ಡಿ ಗ್ಯಾಂಗ್ಗೂ, ಸರ್ಕಾರಕ್ಕೂ  ಸ್ವಲ್ಪ ಖುಷಿಯ ವಿಷಯ. ಈ ಘಟನೆಯಾಗದಿದ್ದರೆ ಗಣಿ ಹಗರಣದಲ್ಲಿ ಯಾರಿರಬಹುದು ಎಂದು ಎಲ್ಲರ ಹೆಸರನ್ನು ಇರಬಹುದು ಎಂದು ಹೇಳಲಾಗುತ್ತಿದೆ ಎಂದು ಅವರೇ ತೀರ್ಪು  ನೀಡಿ ಬಿಡುತ್ತಿದ್ದರು.

ಕೊನೆ ಗುಟುಕು : ಒಬ್ಬ ಪೊಲೀಸ್ ಪೇದೆ ಮಹದೇವಯ್ಯ ವಕೀಲರ ಕಲ್ಲು ತೂರಾಟದಿಂದ ಗಾಯಗೊಂಡು ಸರಿಯಾದ ಚಿಕಿತ್ಸೆ ಸಿಗದೇ ಸತ್ತು ಹೋಗಿ ಬಿಟ್ಟ ಎಂದೇ ಬಹುತೇಕ ದೃಶ್ಯ ಮಾಧ್ಯಮಗಳು ಹೇಳಿಯೇ ಬಿಟ್ಟವು. ಅದು ಸುಳ್ಳಾಗಿತ್ತು. ಸುಳ್ಳಾಗಿದ್ದರ ಬಗ್ಗೆ ಯಾವ ಕ್ಷಮೆಯನ್ನೂ ಕೇಳದೇ ಇರುವುದನ್ನು ನೋಡಿದರೆ ಇದು ನಿರ್ಲಜ್ಜೆಯ  ಪರಮಾವಧಿ ಎನ್ನದೇ ಬೇರೆ ಪದವೇ ಇಲ್ಲ.

ಹೊಸ ಪತ್ರಿಕೆಯ ಸುತ್ತಮುತ್ತ..


– ಪರಶುರಾಮ ಕಲಾಲ್    


ವಿಜಯ ಸಂಕೇಶ್ವರರ ಹೊಸ ಪತ್ರಿಕೆ ರಂಗಕ್ಕಿಳಿಯಲು ದಿನಗಣನೆ ಆರಂಭವಾಗಿವೆ. ಪತ್ರಿಕೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಜಿಲ್ಲಾ ವರದಿಗಾರರು, ಸುದ್ದಿ ಸಂಪಾದಕರು, ಉಪ ಸಂಪಾದಕರು ಎಲ್ಲರೂ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಸುದ್ದಿ ಕಳಿಸುವುದು. ತಿದ್ದುವುದು. ಪೇಜು ಸಿದ್ಧಪಡಿಸುವುದು ಎಲ್ಲಾ ನಡೆಯುತ್ತಿದೆ. ತಾವು ರೂಪಿಸಿದ ಪತ್ರಿಕೆಯನ್ನು ತಾವೇ ನೋಡಿಕೊಂಡು ಡೆಸ್ಕಿನಲ್ಲಿರುವವರು ಸಂತೋಷ ಪಡುತ್ತಿದ್ದಾರೆ.

ಜಿಲ್ಲಾ ವರದಿಗಾರರು, ಹಿರಿಯ ವರದಿಗಾರರು ಯುದ್ಧ ಎದುರಿಸಲು ಸಜ್ಜಾಗಿ ಸೇನಾನಿಗಳಂತೆ ಪೆನ್ನು ಚಾಚಿಯೇ ಕುಳಿತುಕೊಂಡಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಪತ್ರಿಕೆಗಳನ್ನು ಹೇಗೆ ಎದುರಿಸಬೇಕೆಂದು ಯೋಜಿಸಲಾಗಿದೆ. ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ ಬರೆಯುವ ‘ಬೆತ್ತಲೆ ಜಗತ್ತು’ ರೀತಿಯಲ್ಲಿ ಹೊಸ ದಿಗಂತ ಪತ್ರಿಕೆಯಲ್ಲಿ ‘ಮೇರಾ ಭಾರತ್ ಮಹಾನ್’ ಎಂಬ ಅಂಕಣ ಬರೆಯುತ್ತಿದ್ದ ರವೀಂದ್ರ ದೇಶಮುಖ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿರಿಯ ಉಪ ಸಂಪಾದಕ ಸ್ಥಾನ ನೀಡಲಾಗಿದ್ದು, ಪ್ರತಿವಾರ ಅಂಕಣ ಹಾಗೂ ಸಂಪಾದಕೀಯ ಬರೆಯುವ ಕೆಲಸ ಒಪ್ಪಿಸಿದ್ದಾರೆ. ಆರೆಸೆಸ್ಸ್ ಪತ್ರಿಕೆಯಲ್ಲಿ ಬರುವ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿ ‘ಮೇರಾ ಭಾರತ್ ಮಹಾನ್’ ಎಂದು ತಮ್ಮ ಬೈಲೈನ್ ಹಾಕಿಕೊಳ್ಳುತ್ತಿದ್ದರು ರವೀಂದ್ರ ದೇಶಮುಖ್. ಈಗ ಸ್ವತಂತ್ರವಾಗಿ ಮತ್ತೊಂದು ಬೆತ್ತಲೆ ಜಗತ್ತು ಅವರು ಅನಾವರಣ ಮಾಡಬೇಕಿದೆ.

ವಿಜಯ ಕರ್ನಾಟಕ ಮಾತ್ರ ಬರಲಿರುವ ಹೊಸ ಪತ್ರಿಕೆಯನ್ನು ಎದುರಿಸಲು ಸಜ್ಜಾಗಿ, ಕೋಟೆಯನ್ನು ಭದ್ರ ಪಡಿಸಿಕೊಳ್ಳುವ ಕೆಲಸ ನಡೆಸಿದೆ. ಯುವ ಘರ್ಜನೆ ಎನ್ನುವುದು ಅದರ ಅಂತಹ ಒಂದು ಪ್ರಯತ್ನದ ಭಾಗ. ಪ್ರಜಾವಾಣಿಯು ಇಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರೂ ಆಪಾಯ ಎದುರಿಸಲು ಅದು ಪ್ರಯತ್ನ ಮಾಡುತ್ತಿದೆ. ಸಾಪ್ತಾಹಿಕ ಪುರವಣಿ ಜೊತೆ ದೇಶಕಾಲದ ಜೊತೆಗೆ ನೀಡುತ್ತಿದ್ದ ಸಾಹಿತ್ಯ ಪುರವಣಿಯನ್ನು ಈಗ ತಾನೇ ನಿರ್ವಹಿಸುತ್ತಾ ಉಳಿಸಿಕೊಂಡಿದೆ. ಯುವಜನರಿಗಾಗಿ ಕಾಮನ ಬಿಲ್ಲು ಎಂಬ ಸಣ್ಣ ಪುರವಣಿಯನ್ನು ಹೊರ ತರುತ್ತಿದೆ. ಕನ್ನಡ ಪ್ರಭದ ಸ್ಥಿತಿಯಂತೂ ಶೋಚನೀಯವಾಗಿದೆ. ಅದರ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ‘ನೋಡುತ್ತಾ ಇರಿ, ಏನೋ ಮಾಡುತ್ತೇವೆ’ ಅಂತಾ ಎಂದು ಸಂಪಾದಕ ವಿಶ್ವೇಶ್ವರ ಭಟ್ರು, ಹಾವಾಡಿಗರು ತಮ್ಮ ತೆರೆಯದ ಬುಟ್ಟಿ ತೋರಿಸಿ “ಧರ್ಮಸ್ಥಳದಿಂದ ಹಿಡಿದುಕೊಂಡು ಬಂದಿರುವ ಹಾವು ಇದೆ, ತೋರಿಸುತ್ತೇವೆ” ಎಂದು ಆಟದಲ್ಲಿ ಹೇಳುತ್ತಾ ಕೊನೆಗೂ ಹಾವು ತೋರಿಸುವುದಿಲ್ಲ, ಹಾಗೇ ಆಗಿ ಬಿಟ್ಟಿದೆ ಅವರ ಹೇಳಿಕೆ.

ಉದಯವಾಣಿ, ಸಂಯುಕ್ತ ಕರ್ನಾಟಕ  ತಮ್ಮ ಲೇಔಟ್ ಚೇಂಜ್ ಮಾಡಿಕೊಂಡಿದ್ದು ಬಿಟ್ಟರೆ ಉಳಿದಂತೆ ಆದರ ಪ್ರಯತ್ನ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಈಗ್ಗೆ 12 ವರ್ಷದ ಹಿಂದೆ ವಿಜಯ ಕರ್ನಾಟಕದಲ್ಲಿ ಹುಟ್ಟಿದಾಗ ಏನಿತ್ತು ಪರಿಸ್ಥಿತಿ. ಇವತ್ತಿನ ಪರಿಸ್ಥಿತಿ ಏನಿದೆ ಎನ್ನುವುದು ಪರಿಶೀಲಿಸುವುದು ಇಲ್ಲಿ ಬಹಳ ಮುಖ್ಯ ಸಂಗತಿಯಾಗಿದೆ. ಪ್ರಜಾವಾಣಿ ಕನ್ನಡದ ಅತ್ಯಂತ ಜನಪ್ರಿಯ ದಿನ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿ, ನಂದಿಯಂತೆ ವಿರಾಜಮಾನವಾಗಿತ್ತು. ಕನ್ನಡ ಪ್ರಭ ಎರಡನೇಯ ಸ್ಥಾನದಲ್ಲಿತ್ತು. ಉದಯವಾಣಿ, ಸಂಯುಕ್ತ ಕರ್ನಾಟಕ ಬೆಂಗಳೂರಿನಲ್ಲಿ ಕಚೇರಿ, ಎಡಿಷನ್ ಹೊಂದಿದ್ದರೂ ಅವು ಪ್ರಾದೇಶಿಕ ಪತ್ರಿಕೆಗಳಾಗಿಯೇ ಇದ್ದವು.

ಪ್ರಜಾವಾಣಿಯ ಏಜೆನ್ಸಿ ತೆಗೆದುಕೊಳ್ಳುವುದು ಎಂದರೆ ಪೆಟ್ರೂಲ್ ಬಂಕ್ ಪಡೆಯುವಂತೆ ಕಷ್ಟ ಪಡಬೇಕಿತ್ತು. ಅಷ್ಟು ಡಿಮ್ಯಾಂಡ್ ಆಗ. ಕನ್ನಡ ಪ್ರಭದ ಏಜೆಂಟ್ರು ಹತ್ತು ಪತ್ರಿಕೆ ಹೆಚ್ಚು ಮಾಡಲು ಹರ ಸಾಹಸ ಮಾಡಬೇಕಿತ್ತು. ಆಗ ಕನ್ನಡ ಪ್ರಭದ ಪ್ರಸರಣ ವಿಭಾಗದವರು ಪತ್ರಿಕೆ ಸಂಖ್ಯೆ ಹೆಚ್ಚಿಸಬೇಡಿ, ಇದ್ದಷ್ಟೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳುತ್ತಿದ್ದರು. ಕಳೆದ 20 ವರ್ಷದಲ್ಲಿ ಕನ್ನಡ ಓದುಗರ ಸಂಖ್ಯೆ ಹೆಚ್ಚಿದೆ. ಅವರನ್ನು ತಲುಪಬೇಕೆಂಬ ಉದ್ದೇಶ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಪ್ರಸರಣ ಹೆಚ್ಚಾದರೆ ಲಾಭವಿಲ್ಲ. ಬದಲು ನಷ್ಠವೇ ಹೆಚ್ಚು ಎಂಬ ಲೆಕ್ಕಾಚಾರ ಎಲ್ಲರದ್ದೂ ಆಗಿತ್ತು. ಬೆಲೆ ಏರಿಕೆ ನಡೆಯುತ್ತಾ ಹೋಗುತ್ತಿರುವ ಲೆಕ್ಕದಲ್ಲಿ ಹೋದರೆ ಇವತ್ತು ಕನ್ನಡ ದಿನ ಪತ್ರಿಕೆಗಳ ಬೆಲೆಯು 8 ರೂ. ಮುಟ್ಟಬೇಕಿತ್ತು.

ಇಂತಹ ಸಂದರ್ಭದಲ್ಲಿಯೇ ವಿಜಯ ಕರ್ನಾಟಕ ಕಾಲಿಟ್ಟಿತು. ಎಲ್ಲಾ ಕಡೆ ಎಡಿಷನ್ ಮಾಡುವ ಮೂಲಕ ಎಲ್ಲರಿಗೂ ಪತ್ರಿಕೆ ಮುಟ್ಟಿಸುವ ಕೆಲಸ ಆರಂಭಿಸಿತು. ಹಳ್ಳಿಗಳಲ್ಲಿ ಬೆಳಿಗ್ಗೆ 10, 11ಕ್ಕೆ ಸಿಗುತ್ತಿದ್ದ ಪ್ರಜಾವಾಣಿಯ ಬದಲು ಬೆಳಿಗ್ಗೆ 6ಕ್ಕೆಲ್ಲಾ ಸಿಗುವಂತಾಯಿತು. ಪತ್ರಿಕೆ ಏಜೆನ್ಸಿ ಅನ್ನುವುದು ಇಷ್ಟು ಸುಲಭ ಎನ್ನುವುದನ್ನು ತೋರಿಸಿ ಬಿಟ್ಟರು. ಹಳ್ಳಿ ಹಳ್ಳಿಗೂ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಒಂದು ಊರಿನಲ್ಲಿ ಎಷ್ಟು ಬೇಕು ಅಷ್ಟು ಏಜೆನ್ಸಿ ಕೊಡುವ ಮೂಲಕ ಪತ್ರಿಕೆ ಪ್ರಸರಣವನ್ನು ವಿಸ್ತರಿಸಿಬಿಟ್ಟರು. ದರ ಸಮರವನ್ನು ಸಾರಿ ಬಿಟ್ಟರು. ಉಳಿದ ಪತ್ರಿಕೆಗಳು ಎಚ್ಚೆತ್ತುಕೊಂಡು ಪ್ರಸರಣ ವಿಸ್ತರಿಸುವ ಪ್ರಯತ್ನಗಳ ನಡುವೆ ವಿಜಯಕರ್ನಾಟಕ ನಂಬರ್ ವನ್ ಆಗಿಯೇ ಬಿಟ್ಟಿತು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ತ್ರಿವಳಿ ಮಂತ್ರವನ್ನು ಜಪಿಸಲಾರಂಭಿಸಲಾಯಿತೋ ಆಗ ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಪಡೆಯಲು ಎಬಿಸಿ ಎನ್ನುವ ಪ್ರಸರಣ ಸಂಖ್ಯೆಯ ಪಟ್ಟಿ ಮುಖ್ಯವಾಗಿ ಹೊಯಿತು. ಪತ್ರಿಕೆಗಳ ಸರಕಾಗಲು ತುದಿಗಾಲಿನ ಮೇಲೆ ನಿಂತವು. ಈಗಾಗಿ ಪತ್ರಿಕೆಗೆ ಮೌಲಿಕ ಓದುಗರಗಿಂತ ಗ್ರಾಹಕ ಓದುಗರು ಮುಖ್ಯವಾದರು. ಅಥವಾ ಓದುಗರನ್ನು ಗ್ರಾಹಕರನ್ನಾಗಿ ಮಾಡಲು ಪೈಪೋಟಿಗೆ ಇಳಿಯಬೇಕಾಯಿತು. ವಿಜಯ ಕರ್ನಾಟಕ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಈಗ ಎಲ್ಲಾ ದಿನ ಪತ್ರಿಕೆಗಳು ಎಡಿಷನ್ ಮಾಡಿ, ತಮ್ಮ ಪತ್ರಿಕೆಯ ವಿಸ್ತರಣೆ ಕೆಲಸಕ್ಕೆ ಕೈ ಹಾಕಿವೆ. ಪ್ರಜಾವಾಣಿ ಎಡಿಷನ್ ಮಾಡಿ, ಏಜೆನ್ಸಿಯ ಬಿಗಿ ನೀತಿ ಸಡಿಲಿಸಿ, ಅದು ಹಳ್ಳಿ ಹಳ್ಳಿಗೂ ಏಜೆನ್ಸಿಯನ್ನು ನೀಡಿ ಪ್ರಸರಣಕ್ಕೆ ಅದ್ಯತೆ ನೀಡುತ್ತಿದೆ. ಇದೇ ಸಾಲಿನಲ್ಲಿ ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ನಡೆಸಿವೆ. ಇವುಗಳ ಜೊತೆಗೆ ಈಗ ಹೊಸ ದಿಗಂತವೂ ಸೇರಿಕೊಂಡಿದೆ.

ಮುಖ ಪುಟದಲ್ಲಿ ಪದಗಳ ಜೊತೆ ಆಟ, ಅದೇ ದೊಡ್ಡದು ಎನ್ನುವ ರೀತಿಯ ವಿಜೃಂಭಣೆ, ಟ್ಯಾಬ್ಲೊಯಿಡ್ ಪತ್ರಿಕೆಗಳ ಭಾಷೆ ಬಳುಸುವುದು, ಇಂತಹ ಸರ್ಕಸ್ ನಡೆಸುವ ಮೂಲಕ ಸಂಪಾದಕರು ಎನ್ನುವವರು ಈಗ ಸರ್ಕಸ್ ಕಂಪನಿಯ ಮ್ಯಾನೇಜರ್ ಆಗಿ ಬಿಟ್ಟಿದ್ದಾರೆ. ಅದೇ ಸಂಪಾದಕರ ಚಹರೆ ಹಾಗೂ ಮಾನದಂಡವಾಗಿ ಬಿಟ್ಟಿದೆ. ಪತ್ರಿಕೆಯನ್ನು ಅಗ್ಗದ ಸರಕಾಗಿ ಮಾರಾಟ ಮಾಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಇಂತಹ ವಾತಾವರಣದಲ್ಲಿ ಹೊಸ ಪತ್ರಿಕೆ ವಿಜಯ ವಾಣಿಯ ನಡಿಗೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಎಲ್ಲರೂ ಈಗ ಓಡುತ್ತಿದ್ದಾರೆ. ಈ ಓಟದ ಸಾಲಿನಲ್ಲಿ ವಿಜಯವಾಣಿ ಸೇರಿಕೊಳ್ಳಬೇಕಾಗಿದೆ. ಅನ್ಯಮಾರ್ಗವೇ ಇಲ್ಲ.