Category Archives: ಎಚ್.ಜಯಪ್ರಕಾಶ್ ಶೆಟ್ಟಿ

ವರ್ತಮಾನದ ಕಥೆಗಳು: ಪುಸ್ತಕ ಸಮೀಕ್ಷೆ

[ವರ್ತಮಾನ.ಕಾಮ್ ನಡೆಸಿದ “ಗಾಂಧಿ ಜಯಂತಿ ಕಥಾಸ್ಪರ್ಧೆ – 2013″ಕ್ಕೆ ಬಂದ ಹಲವು ಕತೆಗಳನ್ನು ಸೇರಿಸಿ “ವರ್ತಮಾನದ ಕಥೆಗಳು” ಸಂಕಲನವಾಗಿ ಪ್ರಕಟಿಸಿರುವುದು ತಮಗೆಲ್ಲ ತಿಳಿದಿದೆ. ಇದು ಅದೇ ಪುಸ್ತಕದ ಬಗೆಗಿನ ವಿಮರ್ಶೆ-ಸಮೀಕ್ಷೆ. ರವಿ]

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಆಧುನಿಕ ಕನ್ನಡ ಸಂದರ್ಭದ ಅಭಿವ್ಯಕ್ತಿ ಪ್ರಕಾರಗಳಲ್ಲಿ ಅತ್ಯಂತ ಪರಿಣಾಮಕಾರಿ ಮಾಧ್ಯಮಗಳಲ್ಲಿ ಸಣ್ಣಕಥೆಯೂ ಒಂದು. ಈ ಮಾದರಿಯ ಕಥೆಗಳನ್ನು ಕನ್ನಡದಲ್ಲಿ ಯಾರು ಮೊದಲು ಬರೆದರು, ಕನ್ನಡದಲ್ಲಿ ಈ ಪ್ರಕಾರದಲ್ಲಿ ಸಶಕ್ತವಾಗಿ ಬರೆದವರು ಮತ್ತು ಬರೆಯುತ್ತಿರುವವರು ಯಾರು ಎನ್ನುವ ಖ್ಯಾತನಾಮರ ಚರ್ಚೆಗಳನ್ನು ಕನ್ನಡ ವಿಮರ್ಶಾಜಗತ್ತು ಸಾಕಷ್ಟು ಬಾರಿ ಚರ್ಚಿಸಿದೆ ಮತ್ತು ತನ್ನದೇ ಆದ ತೀರ್ಮಾನಗಳನ್ನೂ ದಾಖಲಿಸಿದೆ. ಆದರೆ ಈ ಸಿದ್ಧಪ್ರಸಿದ್ಧರು ಹಾಕಿಕೊಟ್ಟ ಸಣ್ಣಕಥೆ ಪ್ರಕಾರದ ಚೌಕಟ್ಟಿನ ಗಂಭೀರ ಅಭ್ಯಾಸದ ಅಗತ್ಯವಿಲ್ಲದೆಯೂ, ಕಥೆಹೇಳುವ ತುಡಿತದಿಂದಾಗಿ ಕvartamaanada-kathegalu-2013-coverನ್ನಡದಲ್ಲಿ ಮತ್ತೆ ಮತ್ತೆ ಕಥೆಗಳು ಹುಟ್ಟುತ್ತಲೇ ಇವೆ. ಹೀಗೆ ಹುಟ್ಟುತ್ತಿರುವ ಬಹುಮಟ್ಟಿನ ಕಥೆಗಳು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳದ ಹೊರವರ್ತುಲದಿಂದಲೂ ಬರುತ್ತಿವೆ. ಕಥೆ ಹೇಳುವ ತುರ್ತಿನಲ್ಲಿ ಹುಟ್ಟುತ್ತಿರುವ ಈ ಕಥೆಗಳು ಅನೇಕ ವೇಳೆ ಕಲೆಗಾರಿಕೆಗಿಂತ ಎಲ್ಲವನ್ನೂ ಹೇಳಿಬಿಡುವ ಹಪಾಹಪಿಯಲ್ಲಿ ವಾಚ್ಯವಾಗುವುದನ್ನು ತಪ್ಪಿಸಿಕೊಳ್ಳಲಾರದ ಸಂಕಟವನ್ನು ಅನುಭವಿಸುವುದಿದೆ. ಆದರೆ ಈ ಕಥೆಗಳನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಅವುಗಳಲ್ಲಿ ತಮ್ಮ ಕಾಲದ ಆಗುಹೋಗುಗಳ ಬಗೆಗೆ ತಮ್ಮದೇ ಆದ ತಾತ್ವಿಕ ಹಾಗೂ ವೈಚಾರಿಕ ಖಚಿತತೆಯನ್ನೂ ತೋರಬಲ್ಲ ಗುಣಗಳಿವೆ. ಗಾಂಧಿ ಕಥಾಸ್ಪರ್ಧೆಯ ನೆವದಲ್ಲಿ ಟಿ.ರಾಮಲಿಂಗಪ್ಪ ಬೇಗೂರು ಹಾಗೂ ರವಿ ಕೃಷ್ಣಾರೆಡ್ಡಿ ಸಂಪಾದಿಸಿ, ಕಣ್ವ ಪ್ರಕಾಶವು ಬಿಡುಗಡೆ ಮಾಡಿದ ವರ್ತಮಾನದ ಕಥೆಗಳು ಸಂಕಲನದಲ್ಲಿನ ಕಥೆಗಳು ಈ ಎಲ್ಲಾ ಮಾತುಗಳಿಗೆ ಸಾಕ್ಷಿಯಂತಿವೆ.

ಈ ಸಂಕಲನದಲ್ಲಿನ ಎಲ್ಲಾ ಕಥೆಗಳು ಸ್ಪರ್ಧೆಯ ನಿಮಿತ್ತವಾಗಿ ಬರೆದ ಕಥೆಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಮನಸ್ಥಿತಿಯ ಕಥೆಗಾರರ ಕಥೆಗಳೂ ಹೌದು. ಹಾಗೆಂದ ಮಾತ್ರಕ್ಕೆ ಅವೆಲ್ಲವೂ ಯಾಂತ್ರಿಕವಾದ ಸ್ಪರ್ಧಾಪೇಕ್ಷೆಯಿಂದಷ್ಟೇ ಹುಟ್ಟಿದವುಗಳೆಂದೇನೂ ಅಲ್ಲ. ಈ ಕಥಾಸಂಕಲವನ್ನು ಅಚ್ಚುಕಟಾಗಿ ಸಂಪಾದಿಸಿ ಅರ್ಥಪೂರ್ಣವಾದ ಮುನ್ನುಡಿಯೊಂದನ್ನು ಬರೆಯುವ ಮೂಲಕ ರಾಮಲಿಂಗಪ್ಪ ಬೇಗೂರು ಅವರು ಈ ಕಥೆಗಳನ್ನು ಓದುವ ಓದುಗರಿಗೆ ಕಥೆಗಳ ಮಿತಿ ಮತ್ತು ಸಾಧ್ಯತೆಯನ್ನು ಕುರಿತ ಕೀಲಿಕೈಯೊಂದನ್ನೂ ಒದಗಿಸಿದ್ದಾರೆ. ಈ ನಡುವೆಯೂ ಈ ಸಂಕಲದ ಮೊದಲ ಓದಿಗೆ ದಕ್ಕಿದ ಕೆಲವು ಸಂಗತಿಗಳನ್ನು ಆಧರಿಸಿ ಒಟ್ಟು ಕಥೆಗಳನ್ನು ಕುರಿತು ಕೆಲವು ಮಾತುಗಳನ್ನು ಪ್ರಸ್ತಾಪಿಸಬಹುದೆಂದುಕೊಳ್ಳುತ್ತೇನೆ.

ರಾಮಲಿಂಗಪ್ಪ ಅವರು ಸರಿಯಾಗಿಯೇ ಗುರುತಿಸಿದಂತೆ ಈ ಸಂಕಲನದ ಕಥೆಗಾರರು ಮುಖ್ಯವಾಹಿನಿಯಲ್ಲಿ ಉದ್ಧರಣ ಚಿಹ್ನೆಯೊಳಗಿಟ್ಟು ಗುರುತಿಸಲ್ಪಟ್ಟ ಕಥೆಗಾರರಲ್ಲ. ಪ್ರಭಾವಳಿಯ ರಕ್ಷಣಾಕವಚದಲ್ಲಿ ಸುಭದ್ರವಾಗಿರುವ ಕಥೆಗಾರರೂ ಅಲ್ಲ. ಆ ಪ್ರಭಾವಳಿ ಇಲ್ಲದಿರುವಿಕೆಯು ಈ ಕಥೆಗಳ ಬಗೆಗೆ ಓದುಗರಿಗೆ ಮುಜುಗರವಿಲ್ಲದೆ ಮಾತನಾಡುವ ಒಂದು ಸ್ವಾತಂತ್ರ್ಯವನ್ನೂ ಒದಗಿಸುವುದರಿಂದ ಕಥೆಗಳ ಕುರಿತಂತೆ ವಸ್ತುನಿಷ್ಠವಾದ ಪ್ರತಿಕ್ರಿಯೆಯನ್ನು ಖಂಡಿತಾ ನಿರೀಕ್ಷಿಸಬಹುದಾಗಿದೆ. ಇದರ ಜೊತೆಗೆ ಅವರೇ ಗುರುತಿಸುವಂತೆ ಇಲ್ಲಿ ಬಹುಮಟ್ಟಿನ ಕಥೆಗಳು ವಿಷಯದ ವ್ಯತ್ಯಾಸವನ್ನು ಹೊರತುಪಡಿಸಿ ಭಾಷೆಯ ನೆಲೆಯಲ್ಲಿ ಒಬ್ಬನೇ ಕಥೆಗಾರನ ಸಂಕಲನದಂತೆ ಭಾಸವಾದರೂ ಆಶ್ಚರ್‍ಯವಿಲ್ಲ. ಆ ಮಟ್ಟಿಗೆ ಅವು ಉತ್ತರಕರ್ನಾಟಕದ ಭಾಷಾಬನಿಯನ್ನು ಹೊತ್ತುಕೊಂಡೇ ಬಂದಿವೆ. ಅದರ ಜೊತೆಗೆ ಈ ಕಥೆಗಳಲ್ಲಿ ನಗರ-ಗ್ರಾಮ, ಮಧ್ಯಮವರ್ಗ-ತಳವರ್ಗ, ಮೇಲ್ಜಾತಿ-ಕೆಳಜಾತಿ ಇಂತಹ ಅವಳಿ ವೈರುಧ್ಯಗಳ ಸರಳ ಮುಖಾಮುಖಿಯಿದ್ದರೂ ಅಲ್ಲೊಂದು ಸಮಾಜಮುಖೀ ಧೋರಣೆಯಿದೆ. ಈ ಸಮಾಜಮುಖೀ ಗುಣದಿಂದಾಗಿಯೇ ಅನೇಕ ಬಾರಿ ಇಲ್ಲಿನ ಕಥೆಗಳು ವೈಚಾರಿಕ ಬಾರದಲ್ಲಿ ವಾಚ್ಯವಾಗುತ್ತವೆ. ಇನ್ನು ವಸ್ತುವಿನ ನೆಲೆಯಲ್ಲಿ ಇಲ್ಲಿನ ಬಹುಪಾಲು ಕಥೆಗಳು ಮನುಷ್ಯನ ಮೂಲಭಾವವಾದ ಲೈಂಗಿಕತೆಯನ್ನು ಒಂದಿಲ್ಲೊಂದು ನೆಲೆಯಲ್ಲಿ ಸ್ಪರ್ಶಿಸುತ್ತವೆ. ಅದರ ಜೊತೆಗೆ ಸಾಮಾಜಿಕ ಅನಿಷ್ಟಗಳಾದ ಜಾತಿ, ಊಳಿಗಮಾನ್ಯತೆ, ಲಿಂಗತಾರತಮ್ಯ ಹಾಗೂ ಸಾಂಸ್ಥಿಕವಂಚನೆಗಳನ್ನು ಬೇರೆ ಬೇರೆ ನೆಲೆಯಲ್ಲಿ ಒಳಕೊಂಡು ಬರುವ ಈ ಎಲ್ಲಾ ಕಥೆಗಳು ಒಂದಿಲ್ಲೊಂದು ಬಗೆಯಲ್ಲಿ ವ್ಯವಸ್ಥೆಯ ಲೋಪದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ. ಹಾಗಾಗಿ ಇಲ್ಲೊಂದು ಅಸಹನೆ ಮತ್ತು ಸುಧಾರಣೆಯ ತುಡಿತವಿದೆ. ಈ ತುಡಿತವನ್ನು ಇಲ್ಲಿನ ಬಹುಪಾಲು ಕಥೆಗಳು ಘಟನಾಪ್ರಧಾನವಾದ ನೆಲೆಯಲ್ಲಿಯೇ ನಿರೂಪಿಸುತ್ತವೆ.

ಒಟ್ಟೂ ಕಥೆಗಳನ್ನು ಗಮನಿಸುವಲ್ಲಿ ಸಿನೀಮಿಯಾ ಮಾದರಿಯ ಬೆಳವಣಿಗೆ ಮತ್ತು ಅಂತ್ಯವಿರುವ ಕಥೆಗಳೇ ಹೆಚ್ಚಿವೆ. vartamaanada-kathegaluಕೆಲವು ಕಥೆಗಳಂತೂ ಮೊದಲೇ ನಿರ್ಧರಿಸಿಕೊಂಡ ಟೈಟಲ್‌ಗೆ ಜೋತುಬಿದ್ದಂತೆಯೂ ಕಾಣುತ್ತವೆ. ಹೀಗೆ ಶೀರ್ಷಿಕೆಯನ್ನು ನಿರ್ಧರಿಸಿಕೊಂಡು ಒಡಲು ತುಂಬಲುಹೋಗುವಲ್ಲಿ ಎದುರಾಗುವ ಸಂಕಟದಲ್ಲಿ ಇಲ್ಲಿಯ ಅನೇಕ ಕಥೆಗಳು ತೊಳಲುತ್ತವೆ. ಹೀಗಾಗಿ ಇಲ್ಲಿನ ಅನೇಕ ಕಥೆಗಳು ತಮ್ಮ ಸೊಗಸಾದ ಭಾಷೆ ಮತ್ತು ಕಥೆಹೇಳುವ ಗುಣಗಳ ನಡುವೆಯೂ ತಾವಾಗಿಯೇ ಬೆಳೆದ ಕಥೆ ಎನಿಸುವುದಿಲ್ಲ. ಸಿದ್ಧಚೌಕಟ್ಟಿನ ಕಥೆಯಾಗಿ ಗೆರೆಹಾಕಿಕೊಂಡಲ್ಲಿಯವರೆಗೆ ವಿಸ್ತರಿಸಿ ಕೊನೆಗೊಂಡಂತೆಯೇ ಭಾಸವಾಗುತ್ತವೆ. ಈ ನಡುವೆಯೂ ಈ ಸಂಕಲನದಲ್ಲಿ ನೆನಪಿನಲ್ಲುಳಿಯುವ ಕೆಲವು ಕಥೆಗಳಿವೆ. ಅದಕ್ಕೆ ಅವುಗಳ ಕಥನಗಾರಿಕೆಯ ಜೊತೆಗೆ ಸಾಮಾಜಿಕ ಕಾಳಜಿಯ ಕಾರಣವೂ ಇದೆ. ವ್ಯಕ್ತಿಕೇಂದ್ರಿತ ಹಾಗೂ ಸಮಾಜಿಮುಖೀ ಎರಡೂ ನೆಲೆಯ ಕಥೆಗಳನ್ನು ಹೊಂದಿರುವ ಈ ಸಂಕಲನದ ಬಹುಪಾಲು ಕಥೆಗಳಿಗೆ ವ್ಯಕ್ತಿತ್ವದ ಅಂತರಂಗವನ್ನು ಶೋಧಿಸಿಕೊಳ್ಳುವ ತೀವ್ರತೆಗಿಂತ ಲೋಕವನ್ನು ನೋಡಿ ಮಾತನಾಡುವ ಆಸಕ್ತಿಯೇ ಹೆಚ್ಚಿದೆ. ಹೀಗಾಗಿ ಇಲ್ಲಿ ಬಹಿರ್ಮುಖತೆಯ ಗುಣ ಹೆಚಿದೆ. ತಾವೇ ಆರೋಪಿಸಿಕೊಂಡ ವೈಚಾರಿಕ ಆಕೃತಿಯ ಅತಿಭಾರಕ್ಕೆ ಸಿಕ್ಕಿ ಅವು ಕಲಾತ್ಮಕತೆಯನ್ನು ಮರೆತು ಬಿಡುವುದೂ ಇದೆ.

ಈ ಸಂಕಲನದ ಮಹತ್ವದ ಕಥೆಗಳ್ಲೊಂದಾದ “ಮಹಾತ್ಮ”, ಗಾಂಧಿಯನ್ನು ಆವಾಹಿಸಿಕೊಳ್ಳುವ ಮಾದರಿಯ ಕಥೆ. ಸ್ವತಂತ್ರ ಭಾರತದ ಉದ್ದಕ್ಕೂ ದೇಶದ ಮನಸ್ಸುಗಳನ್ನು ಬೆಚ್ಚಗೆ ಕಾಡುವ ಗಾಂಧಿಯನ್ನು ಈ ಕಥೆಯೂ ತನ್ನೆದುರಿಗೆ ತಂದುಕೊಂಡು ಮುಖಾಮುಖಿ ಉಜ್ಜಿ ನೋಡಿಕೊಳ್ಳತ್ತದೆ. ಬೊಳುವಾರರ “ಪಾಪು ಗಾಂಧಿಯಾದ ಕಥೆ”ಯನ್ನು ಕಿಂಚಿತ್ ಹೋಲುವಂತೆ ಕಂಡರೂ ಇಲ್ಲಿ ಗಾಂಧಿಯನ್ನು ಆವಾಹಿಸಿಕೊಳ್ಳುವ ಮನಸ್ಸಿಗೆ ಬೇರೆಯದೇ ಆದ ಒಂದು ಹಿನ್ನೆಲೆ ಇರುವಂತಿದೆ. ಅದು ಗಾಂಧಿಯ ಕುರಿತಾದ ಪೂರ್ವಗ್ರಹಗಳಿಂದ ಕೂಡಿದ ಮನಸ್ಸು. ವರ್ತಮಾನದ ರಾಜಕೀಯ ಆವರಣದಲ್ಲಿರುವ vartamaanada-kathegalu-authours1ಗಾಂಧಿ ಕುರಿತ ನಕಾರಾತ್ಮಕ ರಾಜಕೀಯ ಸಂಕಥನವನ್ನೇ ಉಸಿರಾಡಿಕೊಂಡ ಮನಸ್ಸು. ಹಾಗಾಗಿ ಸ್ಪಷ್ಟವಾಗಿ ಅದು ಸಾಂಪ್ರದಾಯಿಕ ಶಕ್ತಿಗಳು ನಿರೂಪಿಸುವ ಗಾಂಧಿಯ ಚಿತ್ರಣವನ್ನು ತುಂಬಿಕೊಂಡ ಮನಸಾಗಿಯೇ ತನ್ನನ್ನು ತೆರೆದುಕೊಳ್ಳುತ್ತದೆ. ಇಂತಹ ಮನಸೊಂದು ತಾನು ತುಂಬಿಕೊಂಡ ಗಾಂಧಿಯ ಅಚ್ಚನ್ನು ಕನಸಿನ ಗಾಂಧಿಯ ಜೊತೆಗೆ ಮುಖಾಮುಖಿ ಮಾಡಿ ಪರಿಶೀಲಿಸಿಕೊಳ್ಳುವಲ್ಲಿ ಕಥೆಯ ಬೆಳವಣಿಗೆ ಇದೆ. ಈ ಕಥೆಯಲ್ಲಿ ಕೇವಲ ಗಾಂಧಿಯಷ್ಟೇ ಪರಿಶೀಲನೆಗೊಳಗಾಗುವುದಲ್ಲ. ನೆಹರೂ, ಜಿನ್ನಾ, ಘೋಡ್ಸೆ ಹೀಗೆ ಚರಿತ್ರೆಯ ಅನೇಕರು ವರ್ತಮಾನಕ್ಕೆ ಬಂದು ತಮ್ಮ ಮುಖತೋರಿಸಿ ಹೋಗುತ್ತಾರೆ. ಗಾಂಧಿಯೂ ಎಲ್ಲ ಪ್ರಶ್ನೆಗಳಿಗೂ ತರ್ಕಬದ್ಧವಾಗಿ ಉತ್ತರಿಸುವಂತೆ ಕಟ್ಟಲ್ಪಡುತ್ತಾರೆ. ಈ ಮೂಲಕ ಚರಿತ್ರೆಯ ಹೂರಣದ ಸರಿತಪ್ಪುಗಳ ವಿವೇಚನೆಗೆ ನಿಂತು ಬಿಡುವ ನಿರೂಪಕ ಮನಸ್ಸು, ಘೋಡ್ಸೆ ಕುರಿತಂತೆ ಹೊಂದಿರುವ ಸಂಕಥನದಿಂದ ಕೊನೆಗೂ ಬಿಡುಗಡೆಗೊಂಡಂತೆ ಅನ್ನಿಸುವುದೇ ಇಲ್ಲ. ಇದು ನಿರೂಪಕನ ಸಮಸ್ಯೆ ಅಷ್ಟೇ ಅಲ್ಲ. ಸ್ವತಂತ್ರ ಭಾರತದ, ವರ್ತಮಾನ ಭಾರತದ ವಾಸ್ತವವೂ ಹೌದು. ಗಾಂಧಿಗೆ ಬಿಡುಗಡೆ ಸಿಕ್ಕಿದೆಯೋ ಇಲ್ಲವೋ? ಆದರೆ ಕನಸಿನಲ್ಲಿ ಗಾಂಧಿಯನ್ನು ಎದುರಾಗುವ ಮನಸ್ಸು ವಾಸ್ತವದಲ್ಲಿ ತಾನು ಈಗಾಗಲೇ ತುಂಬಿಕೊಂಡ ದೇಶಭಕ್ತ ಘೋಡ್ಸೆಯಿಂದ ಬಿಡುಗಡೆ ಕಾಣದೇ ಉಳಿಯುತ್ತದೆ. ಇದಕ್ಕೂ, ಗಾಂಧಿಯ ಭಾವಚಿತ್ರವು ಮಾರ್ಜಾಲದ ಆಕ್ರಮಣದಲ್ಲಿ ಒಡೆದು ಹೋಗುವದಕ್ಕೂ ಅರ್ಥಪೂರ್ಣ ಸಾಂಗತ್ಯವೊಂದು ಏರ್ಪಡುವಲ್ಲಿಯೇ ಕತೆಯ ಯಶಸ್ಸಿದೆ. ಗಾಂಧಿಯ ನಡುವೆ ಘೋಡ್ಸೆಯನ್ನಿಟ್ಟುಕೊಂಡು ಈ ದೇಶ ಮತ್ತು ಗಾಂಧಿ ಎರಡರ ಕುರಿತಾದ ಅಖಂಡ ಸಂಕಥನವೊಂದು ಅಸಾಧ್ಯವೆಂಬುದನ್ನೇ ಪರೋಕ್ಷವಾಗಿ ಕತೆ ಮನವರಿಕೆ ಮಾಡುವಂತಿದೆ. ಈ ಧ್ವನಿಯನ್ನೂ ಹೊರಡಿಸುವ ಮೂಲಕ ಆರ್‌ಎಸ್‌ಎಸ್ ಪ್ರಣೀತ ಮನಸ್ಸಿನ ಪರ ನಿರೂಪಕನನ್ನು ಬಿಡುಗಡೆಗೊಳಿಸದೆಯೂ ಅನೇಕ ಆಯಾಮದಲ್ಲಿ ಒಂದು ಗುಣಾತ್ಮಕ ಕಥೆಯೆನಿಸುತ್ತದೆ.

“ರಾಮಭಟ್ಟನ ಮದುವೆ ಪ್ರಸಂಗ” ತಾನು ಆಯ್ದುಕೊಳ್ಳುವ ವಸ್ತುವಿನ ನೆಲೆಯಿಂದ ಮುಖ್ಯವೆನಿಸಬಹುದಾದ ಕಥೆ. ಹೆಣ್ಣು ಸಿಕ್ಕದೆ ಇನ್ನೆಲ್ಲಿಂದಲೋ ಹೆಣ್ಣು ತರುವ ಔದಾರ್‍ಯವೂ ತನ್ನ ಮೂಲಛಾಯೆಯನ್ನು ಬಚ್ಚಿಟ್ಟುಕೊಳ್ಳಲಾರದೆ ಬೆತ್ತಲಾಗುವುದನ್ನು ಕಥೆ ಸೊಗಸಾಗಿಯೇ ಚಿತ್ರಿಸುತ್ತದೆ. ವೈದಿಕ ಸಮುದಾಯದೊಳಗಿನ ಜಳ್ಳ್ಳುತನವನ್ನು ನವುರಾದ ಹಾಸ್ಯದಲ್ಲಿಯೇ ಹೇಳಿಕೊಂಡು ಹೋಗುವ ಇಲ್ಲಿನ ಕಥನಗಾರಿಕೆಗೆ ಜೀವಂತಿಕೆಯಿದೆ. ರಾಮಭಟ್ಟನ ವಂಚನೆಯನ್ನು ಅರ್ಥಮಾಡಿಕೊಂಡ ಮೇಲೆ ಅದನ್ನು ಅಷ್ಟೇ ಸಮರ್ಥವಾಗಿ ಮೌನದಲ್ಲಿಯೇ ಮೊನಚಾಗಿ ಇದಿರಿಸುವ ಸರೋಜ ಮತ್ತು ಶಾಂತಿ ಕಥೆಯಲ್ಲಿ ಅಮುಖ್ಯರೆನಿಸಿಯೂ ಮುಖ್ಯವೆನಿಸಿಕೊಳ್ಳುತ್ತಾರೆ. ಮಿಕ್ಕ ಕಥೆಗಳಾದ “ಮುಗಿಲ ಮಾಯೆಯ ಕರುಣೆ” ಗ್ರಾಮ ಬದುಕನ್ನು ಆಚ್ಛಾದಿಸಿಕೊಂಡ ಜಾತಿ ವ್ಯವಸ್ಥೆಯ ಇನ್ನೊಂದು ಮುಖವನ್ನು ಹೇಳುತ್ತದೆ. ರಾಜಕಾರಣದಿಂದ ಒಡೆದು ಹೋದ ಹಳ್ಳಿಗಳು ಎಲ್ಲದರಲ್ಲೂ ಒಡೆದುಕೊಂಡು, ಜೀವಬಲಿಗಾಗಿ ಹಪಾಹಪಿಸುವುದನ್ನು ಕಥೆ ತನ್ನ ಮಿತಿಯೊಳಗೆ ಸೊಗಸಾಗಿ ಮುಟ್ಟಿಸುತ್ತದೆ. “ಗಲೀಜು” ಕಥೆ ಗ್ರಾಮಬದುಕಿನ ಗಲೀಜಿಗಿಂತ ಹೆಚ್ಚಾಗಿ ಲೈಂಗಿಕತೆಯ ನೆಲೆಯ ಮಾನುಷ ವಿಕೃತಿಯನ್ನೇ ಅತಿ ವಿಜೃಂಭಿಸಿ ಹೇಳುವ ಕಥೆ. ಹೀಗಾಗಿ ವಾಸ್ತವಕ್ಕಿಂತ ಕಿಂಚಿತ್ ದೂರವೇ ಎನಿಸಬಲ್ಲ ಕಥೆಯೂ ಹೌದು. ಮುಜುಗರವಿಲ್ಲದ ಅದರ ಭಾಷೆ ಗಲೀಜನ್ನು ಸಮರ್ಥವಾಗಿ ತೋರುತ್ತದೆಯಾದರೂ ಇಡಿಯ ಆವರಣ ಅತಿರಂಜಿತವೆನಿಸುತ್ತದೆ. “ಮಠದ ಹೋರಿ” ಕಥೆ ಗೋಸಂಕಥನದ ಬೇರೆ ಬೇರೆ ಮುಖಗಳನ್ನು ಪರಿಚಯಿಸುವ ಏಕೋದ್ದೇಶದಲ್ಲಿ ತನ್ನ ವೈಚಾರಿಕ ಹೊರೆಯಿಂದ ಬಿಡುಗಡೆ ಪಡೆಯುವುದೇ ಇಲ್ಲ. “ಪುಷ್ಪ” ಕಥೆಯೂ ಇದೇ ತೆರನಾದುದು. ಆದರೆ “ಹುಲಿ ಸಾಕಣೆ” ಮತ್ತು vartamaanada-kathegalu-authours2“ಗುಲಾಬಿ ಚೀಟಿ” ಕಥೆಗಳು ಆಧುನಿಕ ಸಂದರ್ಭದ ಅವತರಣಿಕೆಗಳಾದ ಎನ್‌ಜಿಓ ಹಾಗೂ ಎಮ್‌ಎನ್‌ಸಿಗಳ ಸೋಗಲಾಡಿತನ ಮತ್ತು ವಂಚನೆಯನ್ನು ಪರಿಚಯಿಸುತ್ತವೆ. ಇದನ್ನೂ ಮೀರಿ “ಗುಲಾಬಿ ಚೀಟಿ” ಕಥೆ, ಬದುಕು ಮತ್ತು ಕೃಷಿಗಳೆರಡರಲ್ಲೂ ವಿದೇಶದ ಆಕರ್ಷಣೆ ಮತ್ತು ಅಸಲಿ ಅನುಭವಗಳನ್ನು ತಾಳೆಹಾಕಿಕೊಳ್ಳುವಂತೆ ಒತ್ತಾಯಿಸುತ್ತದೆ. ಹೀಗೆ ವಿದೇಶಿ ಒಲವಿನ ನಕಾರಾತ್ಮಕ ಫಲಿತವನ್ನು ಚಿತ್ರಿಸುವ ಕಥೆ ಗಾಂಧಿ ಚಿಂತನೆಯಾದ ದೇಶೀಯತೆಯ ಪರನಿಲ್ಲುತ್ತದೆ. “ಹಳೇಟ್ರಂಕು” ಗ್ರಾಮ ಬದುಕಿನ ಅಮೂಲ್ಯ ಮುಗ್ದತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ನಗರೀಕರಣದ ವಾಣಿಜ್ಯೀಕೃತ ಅವಸ್ಥೆಯ ಕರಾಳತೆಯನ್ನೂ, “ಬೆಂದಕಾಳೂರು” ನಗರಗಳು ರೂಪಿಸುತ್ತಿರುವ ಮಾನವೀಯ ಸಂಬಂಧದ ಸಂದುಗಡಿದ ಸ್ಥಿತಿಯನ್ನೂ ಹೇಳುವ ಮೂಲಕ ನಗರ ವಿಮುಖತೆಯ ಪರನಿಲ್ಲುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ “ಹೊತ್ತಿಗೊದಗಿದ ಮಾತು” ಕಥೆ ನಗರವನ್ನು ಬದುಕು ಕಟ್ಟಿಕೊಳ್ಳುವ ನೆಲೆಯಾಗಿಯೇ ಗುರುತಿಸುತ್ತದೆಯಾದರೂ, ಪುಟ್ಟ ಮಗುವಿನ ಒಂದು ಮಾತೇ ಬದುಕನ್ನು ಬದಲಾಯಿಸಿತು ಎಂಬುದನ್ನು ಹೇಳುವ ಕಾತರಕ್ಕೆ ಕುದಿದಂತೆ ಅಲ್ಲಿಗೇ ನಿಂತುಬಿಡುತ್ತದೆ. “ನಡುವೆ ಸುಳಿವಾತ್ಮ” ಹಾಗೂ “ಉಮಿಯೊಳಗಿನ ಬೆಂಕಿ” ಎರಡೂ ಆಸ್ತಿ ಅಂತಸ್ತಿಗೆ ಹಾತೊರೆಯುವ ಬದುಕುಗಳು ಕಡೆಗಣಿಸುವ ಮನುಷ್ಯ ಸಂಬಂಧದ ಮೇಲೆ ಬೆಳಕು ಚಲ್ಲುತ್ತವೆ. “ಅಂಬುಳೆ ಒಂದು ಕಥಾಂತರ” ತಲೆಮಾರುಗಳ ಅಂತರವನ್ನೂ, ಅವಿಭಕ್ತ ಕುಟುಂಬಗಳ ಯಜಮಾನಿಕೆಗಳು ಉಂಟುಮಾಡುವ ಪ್ರಮಾದಗಳನ್ನೂ ಹೇಳುವ ಮೂಲಕ ಕುಟುಂಬ ಪದ್ಧತಿಯ ಬಿರುಕುಗಳನ್ನು ಶೋಧಿಸುತ್ತದೆ.

ಈ ಸಂಕಲನದ ಕಥೆಗಳು ಹೊಸ ಕಥೆಗಾರರಿಂದ ಬರೆಯಲ್ಪಟ್ಟವಾಗಿದ್ದರೂ ಅವುಗಳಲ್ಲಿ ಕನ್ನಡದ ಮಹತ್ವದ ಕಥೆಗಾರರ ನೆರಳುಗಳು ಕಾಣಿಸಿದರೆ ಅಚ್ಚರಿಯಿಲ್ಲ. ಈ ನೆಲೆಯಲ್ಲಿ ‘ಹುಡುಕಾಟ’, ‘ಡಿಪ್ರೆಶನ್’ ಹಾಗೂ ‘ರಾಮಭಟ್ಟನ ಮದುವೆ ಪ್ರಸಂಗ’ಗಳೂ ವಿಭಿನ್ನ ಎಂದೆನಿಸುತ್ತವೆ. ‘ಹುಡುಕಾಟ ಕಥೆ’ ನವ್ಯದ ಕತೆಗಳನ್ನು ನೆನಪಿಸಿಬಿಡುವಂತಿದೆ. ಕಳೆದು ಹೋದ ತನ್ನಣ್ಣನನ್ನು ಜೀವಮಾನಪೂರ್ತಿ ಹುಡುಕುವ ವಾಸುದೇವ ಮಾಸ್ತರರ ಪತ್ತೇದಾರಿಕೆಯ ಮನಸ್ಸು ತನ್ನ ಗತ ಹಾಗೂ ವರ್ತಮಾನಗಳನ್ನು ಶೋಧನೆಗೊಡ್ಡುವ ಸ್ವರೂಪದಲ್ಲಿ ಈ ನವ್ಯತೆಯ ಗುಣವಿದೆ. ಡಿಪ್ರೆಶನ್ ಕಥೆ ವೈದೇಹಿ ಅವರ ಸೌಗಂಧಿಯ ಸ್ವಗತಕ್ಕೆ ಹತ್ತಿರವಾದಂತಿದೆ. ಲೈಂಗಿಕತೆಯನ್ನು ಹೆಣ್ಣ ಕಣ್ಣೋಟದಲ್ಲಿ ಕಾಣಲು ಯತ್ನಿಸುವ ಈ ಕಥೆ ಮನೋವ್ಯಾಪಾರದ ಶೋಧಕ್ಕಿಳಿಯುತ್ತದೆ. ರಾಮಭಟ್ಟನ ಮದುವೆ ಪ್ರಸಂಗವು ಆಂಶಿಕವಾಗಿ ಮಾಸ್ತಿಕಥೆಗಳನ್ನು ಹೋಲುವಂತೆಯೂ ಇದೆಯೆನಿಸುತ್ತದೆ. ಹೀಗೆ ಇಲ್ಲಿನ ಕಥೆಗಳು ಹಾಗೂ ಕಥೆಗಾರರನ್ನು ಹಿಂದಿನವರ ನೆರಳಾಗಿಯೇ ಗುರುತಿಸಬೇಕೆಂದೇನೂ ಇಲ್ಲ. ಬಹುಮಟ್ಟಿಗೆ ಇಲ್ಲಿನ ಬಹುಪಾಲು ಕಥೆಗಾರರು ಹೊಸಬರು ಮತ್ತು ಸಾಹಿತ್ಯದ ಶಿಸ್ತುಬದ್ಧ ಅಭ್ಯಾಸ ಮಾಡದೆಯೂ ಕನ್ನಡಕ್ಕೆ ಅಗತ್ಯವಿರುವ ಬೇರೆ ಬೇರೆ ಕ್ಷೇತ್ರಗಳ ಸಂವೇದನೆಗಳನ್ನು ತುಂಬುತ್ತಿರುವವರು. ಈ ಹಿನ್ನೆಲೆಯಲ್ಲಿ ಈ ಕಥೆಗಳ ಮಿತಿಗಳ ಕುರಿತಾದ ಮಾತುಗಳಾಗಲೀ, ಹೋಲಿಕೆಗಳ ಕುರಿತಾದ ಮಾತುಗಳಾಗಲೀ ಕಥೆಗಾರರಿಗೆ ತಮ್ಮ ಮುಂದಿನ ಕಥೆಗಳನ್ನು ರೂಪಿಸಿಕೊಳ್ಳಲು ಪೂರಕವಾದ ಸಲಹೆಗಳೆಂದೇ ಭಾವಿಸಬಹುದು.

 

ಆದಿಪುರಾಣದಲ್ಲಿ ಪಂಪ ಬೆಳಗಿದ ಜಿನಾಗಮ

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಸಾದತ್ ಹಸನ್ ಮಟ್ಟೂ ಅವರ ‘ಮಿಸ್ಟೇಕ್” ಎನ್ನುವ ಕಥೆಯೊಂದಿದೆ. ಕಾರಣವಿಲ್ಲದ ಕೊಲೆಯ ತಪ್ಪನ್ನು ಸಶಕ್ತವಾಗಿ ಮುಂದಿಡುವ ಪುಟ್ಟ ಕಥೆಯದು. ಮೊನ್ನೆಮೊನ್ನೆಯಷ್ಟೇ ಪುಣೆಯ ಗಲ್ಲಿಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ನಿಷ್ಪಾಪಿ ಟೆಕ್ಕಿಯೊಬ್ಬ ಹಾಗೇ ಕಾರಣವಿಲ್ಲದೆ ಹತ್ಯೆಯಾದ. ಆತನ ಇರುವಿಕೆ ಸೂಚಿಸುತ್ತಿದ್ದ ‘ಧರ್ಮ’ದ ಹೊರತು ಅಲ್ಲಿ ಬೇರೆ ಕಾರಣಗಳಿದ್ದಿರಲಿಲ್ಲ. Saadat_Hasan_Mantoಇಂತಹ ಮತೀಯ ಅಸಹನೆ ಇಂದು ಮಾನವ ಬದುಕಿನ ಆತಂಕ ಹೆಚ್ಚಿಸುತ್ತಿದೆ. ಅದು ಮಾನವಕುಲ ಮಾರಣಹೋಮದ ಮಹಾರೂಪಕ ಹಿಟ್ಲರ್ ನನ್ನೂ ಒಳಗೊಂಡು, ಧರ್ಮದ ನೆವದಲ್ಲಿ ಸಾಮೂಹಿಕ ಇಲ್ಲವೇ ವ್ಯಕ್ತಿಗತ ನೆಲೆಯ ಹತ್ಯೆಯ ಸರದಾರರುಗಳನ್ನು ಹುಟ್ಟಿಸುತ್ತಲೇ ಇದೆ. ಆದರೆ ಇದು ಧರ್ಮದ ದೋಷವಲ್ಲ. ಕವಿರಾಜಮಾರ್ಗಕಾರ ಹೇಳುವ ಬದುಕಿನ ‘ಕಸವರ’ವಾದ ‘ಪರಧರ್ಮ ಮತ್ತು ಪರವಿಚಾರದ ಸಹನೆಯ ಆಗುವಿಕೆಯಲ್ಲಿ ಅದು ಬಾಳಿನ ಬೆಳಕೂ ಆಗಬಲ್ಲುದು. ಹಾಗಾಗಿಯೇ ಅಸಹನೆಯನು ಉದ್ದೀಪಿಸುವ ಅಮಲೆಂಬ ಅರ್ಥದಲ್ಲಿ ಧರ್ಮವನ್ನು ‘ಅಫೀಮು’ ಎಂದ ಕಾರ್ಲಮಾಕ್ಸನೂ ಅದನ್ನು ‘ಹೃದಯಹೀನ ಜಗತ್ತಿನ ಹೃದಯವೆಂದೂ, ಆತ್ಮಹೀನ ಜಗತ್ತಿನ ಆತ್ಮವೆಂದೂ’ ಕರೆದಿದ್ದಾನೆ. ಧರ್ಮ ಅಥವಾ ಧಾರ್ಮಿಕತೆ ಅವಾಸ್ತವವಲ್ಲ. ಅದೊಂದು ವಾಸ್ತವ. ಅದಕ್ಕೊಂದು ತಾಯ್ತನದ ಮುಖವೂ ಇದೆ. ಪುರೋಹಿತಶಾಹಿ ಕಾರಣಗಳಿಂದ ಅದಕ್ಕೊದಗುವ ನಿಂದನಾತ್ಮಕವಾದ ಜೀವವಿರೋಧಿ ಗುಣವಷ್ಟನ್ನೇ ಗಣಿಸಿ ಅದರ ತಾಯ್ತನದ ಗುಣವನ್ನು ಮರೆಯಲಾಗದು. ಪ್ರಾಯಶಃ ಮಾನವ ಬದುಕನ್ನು ಸಹನೀಯಗೊಳಿಸುವ ಕನಸುಳ್ಳ ಜಗತ್ತಿನ ಎಲ್ಲ ಕವಿ, ದಾರ್ಶನಿಕ, ಬರಹಗಾರರುಗಳು ವಿವರಿಸಿಕೊಂಡ ಧರ್ಮಕ್ಕೆ ಈ ಮುಖವಿದೆ. ಆ ನಿರೂಪಣೆಗಳು ಅದನ್ನೊಂದು ಆಚರಣಾತ್ಮಕ ಅನುಸಂಧಾನವಾಗಿ, ಅರಿವಿನ ಯಾನವಾಗಿ ವಿವರಿಸಿಕೊಳ್ಳುವ ಮೂಲಕವೇ ಅದರ ಶಾಶ್ವತ ಸ್ವರೂಪವನ್ನು ನಿರಾಕರಿಸಿವೆ. ಅದನ್ನೊಂದು ಒಳಗೊಳ್ಳುವಿಕೆಯ ಹಾಗೂ ಬಿಡುಗಡೆಯ ದಾರಿಯಾಗಿಯೇ ಪ್ರತಿಪಾದಿಸಿವೆ.

ಕನ್ನಡ ಸಂದರ್ಭದ ಯಾವುದೇ ಮಾತು ಪಂಪನ ಉಲ್ಲೇಖವಿಲ್ಲದೆ ಅಪೂರ್ಣವೇ. ಆತ ಅಕ್ಷರ ಪರಂಪರೆಯ ಕನ್ನಡದ ಅನೇಕ ಮೊದಲುಗಳ ಒಡೆಯ. ಕನ್ನಡದ ಮೊದಲ ಧಾರ್ಮಿಕ ಪುರಾಣಕಾರ. ಧರ್ಮ ಎಂದರೇನು, ಬದುಕಿನಲ್ಲಿ ಅದರ ಮಹತ್ವವೇನು ಎಂಬುದರ ಕುರಿತು ಗಾಢವಾಗಿ ಚಿಂತಿಸಿದಾತ. ‘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮುಮಂ’ ಎಂದು ‘ಧರ್ಮ’ ಮತ್ತು ‘ಲೌಕಿಕ’ಗೆಳೆರಡನ್ನೂ ‘ಬೆಳಗುವ’ ಮಾತಾಡಿದಾತ. ‘ಅರಿವಂ ಪೊಸಯಿಸುವುದೇ ಧರ್ಮ’ವೆಂದೂ, ಆ ‘ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪ ಫಳಂ ಅದರ್ಕೆ ರಸಮದು ಕಾಮಂ’ ಎಂದೂ ಬದುಕನ್ನು ವಿವರಿಸಿದಾತ. pampaಆತ ಹೀಗೆ ಬೆಳಗುವುದಾಗಿ ಹೇಳಿದ ಧರ್ಮ, ಅದನ್ನು ಬೆಳಗುವ ಬಗೆಯ ಕುರಿತಂತೆ ಕನ್ನಡದ ಓದು ಸಾಕಷ್ಟು ಚರ್ಚೆಸಿದೆ. ಆ ಚರ್ಚೆಯೊಳಗೆ ಮನುಕುಲಕ್ಕೆ ಆತಂಕವೊಡ್ಡುತ್ತಿರುವ ವರ್ತಮಾನದ ಮತೀಯ ಧಾರ್ಮಿಕತೆಯನ್ನು ದಾಟಲು ಬೇಕಾದ ಪಂಪ ನಿರೂಪಿತ ಧರ್ಮದೊಳಗಿನ ತಾಯ್ತನದ ಹುಡುಕಾಟವೂ ಇದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನದಲ್ಲಿ ಪಂಪನ ಆದಿಪುರಾಣವು ಬೆಳಗಿದ ಧರ್ಮ, ಅರಿವನ್ನು ಪೊಸಯಿಸುವ ಆ ಧರ್ಮದ ಸ್ವರೂಪವನ್ನು ವಿವರಿಸಿಕೊಳ್ಳುವ ಯತ್ನವಿದೆ.

ನಮ್ಮ ಬದುಕಿನ ನಡೆಯೆಡೆಯಲ್ಲಿ ಅನುರಣಿಸುವ ‘ಧರ್ಮ’ವೆಂಬ ಪದಕ್ಕೆ ನಿರ್ದಿಷ್ಟವಾದ ಅರ್ಥಸೀಮೆಯಿಲ್ಲ. ಹಾಗಿದ್ದೂ ವ್ಯಕ್ತಿಯನ್ನು ಒಳಗೊಂಡಂತೆ ಗುಂಪೊಂದರ ಶ್ರದ್ಧೆಯ ನೆಲೆಯಲ್ಲಿ ಅದಕ್ಕೊಂದು ಸಾಮೂಹಿಕತೆಯ ಚಹರೆಯಿದೆ. ಹಾಗಾಗಿ ‘ಧರ್ಮ’ ಎನ್ನುವಾಗಲೆಲ್ಲಾ ಸಮುದಾಯವೊಂದರ ಮತಶ್ರದ್ಧೆಯ ಗ್ರಹಿಕೆಗಳೇ ಸುಳಿಯುತ್ತವೆ. ಆದರೆ ಪಂಪನ ಕಾವ್ಯಗಳ ಹಿನ್ನೆಲೆಯಲ್ಲಿ ‘ಧರ್ಮ’ವೆನ್ನುವ ಪರಿಭಾಷೆಯ ಚರ್ಚೆಯು ಮತ, ಪಂಥವೆಂಬ ಏಕಾರ್ಥವನ್ನು ದಾಟಿಕೊಳ್ಳುತ್ತದೆ. ಆತನ ಕಾವ್ಯಗಳ ಧರ್ಮಜಿಜ್ಞಾಸೆಗೆ ವಿಶಾಲಾರ್ಥವಿದೆ. ಹಾಗಿದ್ದೂ ಪುರಾಣವಾಗಿ ಕರೆದುಕೊಂಡ ‘ಆದಿಪುರಾಣ’ದಲ್ಲಿ ‘ಅರಿವುದು ಧರ್ಮಮುಂ ಕಾವ್ಯಧರ್ಮಮುಂ’ ಎಂದುದನ್ನೇ ಅನುಸರಿಸಿ ಧರ್ಮ-ಕಾವ್ಯಧರ್ಮಗಳನ್ನು ಪ್ರತ್ಯೇಕವಾಗಿ ಗುರುತಿಸುವ ಯತ್ನ ನಡೆದುದಿದೆ. ಭವಾವಳಿಯೇ ಮೊದಲಾದ ಜೈನಮತಶ್ರದ್ಧೆಯ ಸಂಗತಿಗಳನ್ನೇ ಮತಾಚಾರದ ವಿವರಗಳಾಗಿ, ಜೈನೇತರರಿಗೆ ರುಚಿಸದ ಧಾರ್ಮಿಕತೆಯಾಗಿ ವಿವರಿಸಿಕೊಂಡುದಿದೆ. ಆದರೆ ಪಂಪನನ್ನು ಕುರಿತ ಓದು ಇಷ್ಟಕ್ಕೆ ಮಿತವಲ್ಲ. ಆದಿಪುರಾಣದಲ್ಲಿ ಬೆಳಗಿದ ಧರ್ಮವನ್ನು ಕುರಿತ ಚರ್ಚೆಗೆ, 1)ಜೈನೀಯವಾದ ಗ್ರಹಿಕೆ 2)ವಿಶ್ವಾತ್ಮಕಗೊಂಡ ಅಜೈನೀಯತೆ 3)ಒಳಗೊಳ್ಳುವ ವಿಕಾಸಾವಕಾಶದ ಮಾದರಿ ಎಂಬ ಮೂರು ಆಯಾಮಗಳೂ ಇವೆ.

ಜೈನೀಯವಾದ ಗ್ರಹಿಕೆ

ಜೈನೇತರರಿಗೆ ರುಚಿಸುವ ಆಯ್ದಭಾಗಗಳನ್ನು ಹೊರತುಪಡಿಸಿ, ಆದಿಪುರಾಣದಲ್ಲಿನ ಮತಸಂಬಂಧಿ ವಿವರಗಳನ್ನು ಕಾವ್ಯ ವಾಹಿನಿಯನ್ನೇ ಅದೃಶ್ಯಗೊಳಿಸಿದ ‘ಮರಳುನೆಲ’ವಾಗಿ ವಿವರಿಸಿಕೊಳ್ಳುವ ಬಗೆಯಿದು. ಈ ರಸನಿಷ್ಠ ಆಲೋಚನೆಯು ಆದಿಪುರಾಣದ ಧರ್ಮವನ್ನು ಒಂದು ಪ್ರತ್ಯೇಕ ಕಂಪಾರ್ಟ್ ಮೆಂಟ್ ಗಳಲ್ಲಿರಿಸಿಕೊಂಡೇ ವಿವರಿಸಿಕೊಳ್ಳುತ್ತದೆ. ಅದರ ಪಾಲಿಗೆ ಧರ್ಮವೆಂದರೆ ಆಯಾಯ ಧಾರ್ಮಿಕ ಶ್ರದ್ಧೆಯವರಿಗಷ್ಟೇ ಮುಖ್ಯವೆನಿಸುವ, ಸಾರ್ವತ್ರಿಕ ಆನ್ವಯಿಕತೆಯಿರದ ಶಾಸ್ತ್ರಸಂಗತಿ. ಇದು ಒಟ್ಟು ಕಾವ್ಯವನ್ನು ರಸದೃಷ್ಟಿಯಿಂದ ರಮ್ಯವಾಗಿ ನಿರೂಪಿತವಾಗಿದೆ ಎಂದು ಅಂಗೀಕರಿಸುವಾಗಲೂ, ಕಾವ್ಯವಸ್ತುವನ್ನು ‘ಜೈನಧರ್ಮ’ದ ವಸ್ತುವೆಂದೇ ಗುರುತಿಸಿಕೊಳ್ಳುತ್ತದೆ. ಆದಿಪುರಾಣವು ಧಾರ್ಮಿಕರಿಗೂ, ಲೌಕಿಕರಿಗೂ ಒಟ್ಟಿಗೇ ಆದರದ ವಸ್ತುವಾಗಿದೆ(ಪಂಪ ಒಂದು ಅಧ್ಯಯನ,ಪು.182) ಎನ್ನುವ ಎಂ.ವಿ.ಶ್ರೀನಿವಾಸಮೂರ್ತಿ, ತಿ.ನಂ.ಶ್ರೀ ಮತ್ತಿತರರಲ್ಲಿ ಪಂಪ ಬೆಳಗಿರುವುದು ಜಿನಧರ್ಮವನ್ನೇ ಎಂಬ ಭಾವವಿದೆ. ಇದು ಕಾವ್ಯಧರ್ಮ-ಧರ್ಮ ಎಂಬ ಸಮನ್ವಯ ಸಮುಚ್ಚಯವನ್ನು ಬೇಕಾದವರು ಧರ್ಮವನ್ನೂ, ಉಳಿದವರು ಕಾವ್ಯಾನುಭವವನ್ನು ಪಡೆಯಬಹುದೆಂಬ ಅರ್ಥದಲ್ಲಿಯೇ ವ್ಯಾಖ್ಯಾನಿಸಿಕೊಂಡ ಬಗೆ. ಆದಿಪುರಾಣವನ್ನು ಧಾರ್ಮಿಕವೂ, ವೈರಾಗ್ಯಪರವೂ ಆದ ಕಾವ್ಯವಾಗಿ ಸ್ಥಿರೀಕರಿಸುವ ಈ ಓದುಗಳು ‘ಜೈನ’ವನ್ನು ಅನ್ಯಧರ್ಮವೆಂದೇ ಕಂಡಿವೆ. ಆದರೂ ಇಲ್ಲಿ ಈ ಅನ್ಯತೆಯ ಗುರುತು ಮತದ್ವೇಷದ ಮಾದರಿಯ ನಿರೂಪಣೆಯಲ್ಲ.

ವಿಶ್ವಾತ್ಮಕಗೊಂಡ ಅಜೈನೀಯ ಗ್ರಹಿಕೆ

ಆದಿಪುರಾಣದ ಧರ್ಮವನ್ನು ವಿಶ್ವಮಾನವ ಧರ್ಮವಾಗಿ ಅಜೈನೀಯ ನೆಲೆಯಲ್ಲಿಯೂ ಓದಿಕೊಳ್ಳಲಾಗಿದೆ. ಮುಳಿಯ ತಿಮ್ಮಪ್ಪಯ್ಯ, ಆರ್.ಸಿ.ಹಿರೇಮಠರ ಬರಹಗಳಲ್ಲಿ, ಎಲ್.ಬಸವರಾಜು ಮುಂತಾದವರ ಮುನ್ನುಡಿಗಳಲ್ಲಿ ಈ ಉದಾರವಾದಿ ಮಾನವತಾಧರ್ಮದ ಗುಣವಿದೆ. ಆರ್.ಸಿ.ಹಿರೇಮಠರು ಹೇಳುವಂತೆ “ಈ ಭವ್ಯವಾದ ಕಾವ್ಯವನ್ನು ಓದುತ್ತಾ ಹೋದಂತೆ ಒಂದು ದಿವ್ಯಸಂದೇಶ ಕಾವ್ಯದುದ್ದಕ್ಕೂ ನಿನಾದಗೆಯ್ಯುತ್ತದೆ. ದಯೆ, ದಮ, ದಾನ, ತಪ, ಶೀಲ ಎಂಬಿವು……ಮೆಯ್ಯಾಂತುದೇ ಧರ್ಮ, ಆ ಧರ್ಮ ವಿಶ್ವಮಾನವ ಕಲ್ಯಾಣಕ್ಕಾಗಿ; ಅದಕ್ಕೆ ದೇಶ, ಕಾಲಗಳ ಎಲ್ಲೆಯಿಲ್ಲ……..ಕ್ರಿಮಿಕೀಟಾದಿಗಳಿಗೂ ಸಹ ಉಪದೇಶಮಾಡಿ ಅವನ್ನೂ ಉದ್ಧರಿಸಬೇಕೆನ್ನುವ ಪರಮಾತ್ಮನ ಅನುಕಂಪೆಗೆ ಕೊನೆಯಿಲ್ಲವೆಂದೇ ಹೇಳಬೇಕು. jain-mahaveerಅಂತಹ ಅನುಕಂಪೆಯಿಂದ ಕೂಡಿದ ಆಗಮವೇ ಜಿನಾಗಮ……ಅಂತಹ ಜಿನಾಗಮವನ್ನು ಎತ್ತಿಹಿಡಿದ ಮಹಾಕವಿಯು ಆದಿಪುರಾಣದಲ್ಲಿ ವಿಶ್ವಾಗಮವನ್ನೇ ಹೇಳುತ್ತಿರುತ್ತಾನೆ. ಹೆಸರು ಜಿನಧರ್ಮವಾದರೇನು?” (ಮಹಾಕವಿಪಂಪ ಮತ್ತು ಅವನ ಕೃತಿಗಳು,ಪು.29). ‘ಪಂಪನ ಧರ್ಮ’ವನ್ನು ಹೀಗೆಯೇ ಅರ್ಥ್ಯೆಸುವ ಮುಳಿಯ ಅವರೆನ್ನುವಂತೆ ಸಮತಾಸಂಸ್ಕೃತಿಯ ಬುನಾದಿಯಾಗಿ ಕಾರ್ಯನಿರ್ವಹಿಸುವ ಕಾವ್ಯದ ಪಾಲಿಗೆ ಧರ್ಮವೆಂದರೆ, ಅಭ್ಯಾಸಬಲದಿಂದ ಯತಿಗಳಲ್ಲಿ ಮಾತ್ರವೇ ನೆಲೆವಡೆದ ಕಠಿಣವಾದ ಇಂದ್ರೀಯ ನಿಗ್ರಹಗಳೆಂಬ ಮಹಾವ್ರತರೂಪಗಳಲ್ಲ; ವ್ಯಕ್ತಿಯ ‘ದಯೆ’, ‘ದಾನ’, ‘ಶೀಲ’ಗಳನ್ನು ಸ್ಥಿರಗೊಳಿಸಿ ಸಮಾಜವನ್ನು ಬೆಳಗಿಸಲಿರುವ ಅಣುವ್ರತರೂಪವಾದ ಸಂಸಾರಧರ್ಮಗಳೆಂಬುದನ್ನು ಮರೆಯಬಾರದು (ನಾಡೋಜ ಪಂಪ,ಪು.54). ಇದು ಜೈನರಿಗಷ್ಟೇ ಸಂಬಂಧಿಸಿದ್ದಲ್ಲ, ಮೇಲಾಗಿ ಧರ್ಮವೊಂದರ ಶ್ರೇಷ್ಠಮೌಲ್ಯವು ಕೇವಲ ಆ ಧರ್ಮದ ಆಸ್ತಿಯಲ್ಲ, ಅದು ಮನುಕುಲದ ಆಸ್ತಿ ಎನ್ನುವ ಈ ಚಿಂತನೆಗಳಿಗೆ ಆದಿಪುರಾಣದ ಧರ್ಮವು ವಿಶ್ವಾತ್ಮಕವಾದುದು.

ಇಲ್ಲಿ ನವೋದಯಕಾಲದ ಉದಾರವಾದಿ ಧೋರಣೆ ಹಾಗೂ ಸೌಹಾರ್ದತೆಯ ಗುಣವಿದೆ. ಆದರೆ ಜೈನೀಯತೆಯಿಂದ ಬಿಡುಗಡೆಪಡೆದ ಈ ಮಾದರಿ ಧರ್ಮದ ಸಾಂಸ್ಥಿಕಚಹರೆಯಿಂದ ಮುಕ್ತವಾದುದಲ್ಲ. ಇಲ್ಲಿ ಧರ್ಮವೆಂದರೆ ಕನಿಷ್ಠತೆಗಳಿಂದ ಬೇರಾದ ಶ್ರೇಷ್ಟತೆಯ ಗುಚ್ಛ. ವ್ಯಕ್ತಿಯ ಅನುಭವದಲ್ಲಿ ಸಿದ್ಧವಾಗುವುದಕ್ಕಿಂತ ಸಿದ್ಧರೂಪದ ತಾತ್ವಿಕತೆಯ ಬುತ್ತಿ. ಲೌಕಿಕಕ್ಕಿಂತ ಭಿನ್ನವಾದ, ಲೌಕಿಕದ ತೊಡಕು ಹರಿದುಕೊಂಡ ಅಮೂರ್ತರೂಪದ ಅತೀತ ಸಂಗತಿಯೆಂದೇ ಭಾವಿತವಾಗಿದೆ. ಹಾಗಾಗಿ ಇದು ಲೌಕಿಕದ ತಳಹದಿಯ ಮೇಲೆ, ಲೌಕಿಕದ ಭಾಷೆಯನ್ನೇ ಅವಲಂಬಿಸಿ ವೈರಾಗ್ಯ ಅಥವಾ ವಿರಕ್ತಿಯನ್ನು ಅಭಿವ್ಯಕ್ತಿಸಿದ ಕಾವ್ಯವಾಗಿ ಆದಿಪುರಾಣವನ್ನೂ, ಅರಿವಿನ ಹುಡುಕಾಟವಾಗಿ ಅದರಲ್ಲಿನ ಧರ್ಮವನ್ನೂ ವಿವರಿಸಿಕೊಂಡ ಬಗೆಯಲ್ಲ. ಆದರೂ ಈ ಆಲೋಚನಾಕ್ರಮವು ಪಂಪ ಬೆಳಗಿದ ಧರ್ಮದಲ್ಲಿ ಮನುಕುಲದ ಒಳಿತನ್ನು ಗುರುತಿಸುತ್ತದೆ.

ಒಳಗೊಳ್ಳುವ ವಿಕಾಸಾವಕಾಶದ ಮಾದರಿ

ಆದಿಪುರಾಣದ ಧರ್ಮವನ್ನು ಕುರಿತ ಆಧುನಿಕ ಓದುಗಳು ಬಹುಮಟ್ಟಿಗೆ ಮತೀಯಸಾಂಸ್ಥಿಕತೆಯಿಂದ ಮುಕ್ತವಾಗುತ್ತವೆ. ಇವುಗಳಿಗೆ ಆದಿಪುರಾಣವು ಧಾರ್ಮಿಕ ಚಿಂತನೆಗಳ, ಜಿನಧರ್ಮದ ಪುರಾಣಪ್ರಪಂಚದ ಕೈಪಿಡಿಯಲ್ಲ. ಅಷ್ಟೇ ಅಲ್ಲ, ಜನ್ನನಲ್ಲಿರುವಂತೆ ನಿರ್ದಿಷ್ಟ ಧಾರ್ಮಿಕ ಪ್ರಕ್ರಿಯೆಯ ಭಾಗವಾಗಿ ಕಾವ್ಯವನ್ನು ಬಳಸುವ ಕುರಿತ ಯಾವ ನಿದರ್ಶನವಿರದ ಈ ಕೃತಿಯನ್ನು ‘ಪುರಾಣಬಿತ್ತಿಯಲ್ಲಿ ಸಮಕಾಲೀನವನ್ನು ಕಂಡುಕೊಳ್ಳುವ ಯತ್ನ’ವೆಂದೇ ಅವು ಗಣಿಸಿವೆ. ಇದರಿಂದಾಗಿಯೇ ಕೃತಿ ತಾನು ನಿರಾಕರಿಸುವುದನ್ನೇ ಪ್ರತೀಹಂತದಲ್ಲಿಯೂ ವಿಸ್ತಾರವಾಗಿ ವೈಭವೀಕರಿಸುವ ಕವಿಯ ತನ್ಮಯತೆಗೆ ಒಳಗಾಗುತ್ತದೆ  ಎಂಬುದಿಲ್ಲಿಯ ನಿಲುವು. ಜ್ಞಾನ ಮತ್ತು ಮನುಷ್ಯನ ಸಂಬಂಧದ ಪ್ರಶ್ನೆಯನ್ನೆತ್ತಿಕೊಂಡು ಆದಿಪುರಾಣದ ಕಾವ್ಯಧರ್ಮವನ್ನು ಚರ್ಚಿಸುವ  ಕೆ.ವಿ.ನಾರಾಯಣ ಅವರ ‘ಪಂಪನಕೃತಿ: ಕಾವ್ಯಧರ್ಮ-ಧರ್ಮ ಸಮನ್ವಯ’ ಎನ್ನುವ ಲೇಖನ ಈ ದಿಸೆಯಲ್ಲಿ ಮುಖ್ಯವಾದುದು. ‘ಜ್ಞಾನ ಇಡಿಗಂಟಾಗಿ ಪಡೆಯತಕ್ಕದಲ್ಲವೆಂತಲೂ, ಅದನ್ನು ಆಯಾಯ ವ್ಯಕ್ತಿ ತನ್ನ ಜೀವನಾನುಭವದ ಭಾಗವಾಗಿ, ಐಂದ್ರಿಕ ಅನುಭವದ ಮೂಲಕ ಸಂಪಾದಿಸಿಕೊಳ್ಳುತ್ತಾನೆ ಎಂಬುದನ್ನು ಪ್ರಕ್ರಿಯಾತ್ಮಕವಾಗಿ ಈ ಕೃತಿ ತೋರಿದೆ’ ಎಂದೇ ಲೇಖನವು ವಾದಿಸುತ್ತದೆ. ರಸನಿಷ್ಠ ಓದುಗಳು ಕಾವ್ಯರಸವಾಗಿ, ಧರ್ಮದ ಜೊತೆಗೆ ಬೆರೆತ ಕಾವ್ಯಧರ್ಮವಾಗಿ ವಿವರಿಸಿಕೊಂಡುದನ್ನೇ, ‘ತಿಳುವಳಿಕೆಗಳು ಪಿತ್ರಾರ್ಜಿತವಲ್ಲ, ಸ್ವಯಾರ್ಜಿತ’ ಎಂಬುದನ್ನು ತೋರಲು ಕೃತಿ ಅನುಸರಿಸಿದ ಲೋಕಾನುಭವದ ನಿರೂಪಣಾಕ್ರಮವಾಗಿ ಗುರುತಿಸುತ್ತದೆ. ಪುರಾಣವಸ್ತುವಿನ ದತ್ತಾಂಶದ ಉತ್ಪನ್ನರೂಪಕ್ಕಿಂತ ಪ್ರಕ್ರಿಯೆಯಲ್ಲಿ ದಾಖಲಿಸುವ ‘ಆಗುವಿಕೆ’ಯಾಗಿ ‘ಆದಿಪುರಾಣ’ವು ಮತೀಯ ಚೌಕಟ್ಟಿನೊಂದಿಗೆ ಮುಖಾಮುಖಿಯಾಯಿತೆನ್ನುತ್ತದೆ.

ಕೆ.ವಿ.ಎನ್ ಅವರಂತೆಯೇ ಓ.ಎಲ್. ನಾಗಭೂಷಣಸ್ವಾಮಿ ಅವರ ‘ಆದಿಪುರಾಣ: ಓದಿನ ಆಯಾಮಗಳು’ ಎನ್ನುವ ಲೇಖನವೂ ಆದಿಪುರಾಣದ ಧರ್ಮವನ್ನು ‘ಸಿದ್ಧರೂಪ’ದಲ್ಲಿ ನೋಡದೆ, ಎಲ್ಲವನ್ನೂ ಒಳಗೊಳ್ಳುವ, ಪ್ರತಿಯೊಂದರ ಸಾಮರ್ಥ್ಯದ ಅಂಚಿನತನಕ ಬೆಳವಣಿಗೆಯ ಮುಕ್ತ ಅವಕಾಶವನ್ನು ಹಾಗೆಯೇ ತೆರೆದಿಟ್ಟ ಬಗೆಯಾಗಿಯೇ ಗ್ರಹಿಸುತ್ತದೆ. ಅಷ್ಟೇ ಅಲ್ಲ, ಜೈನವೆಂಬ ಪಂಥೀಯ ಸಿದ್ಧಸ್ವರೂಪದೊಂದಿಗೆ, ಧರ್ಮವೆಂದರೆ ಆಯ್ದಮೌಲ್ಯಗಳ ಗುಚ್ಛವೆಂಬ ಆದರ್ಶದ ಹೊರಾವರಣವನ್ನೂ ಕಳಚಿಹಾಕುತ್ತದೆ. ಅದನ್ನು ಜ್ಞಾನಪರಂಪರೆಯನ್ನು ಬೆಳೆಸುವ ಕ್ರಿಯೆ(ಪಂಪಾಧ್ಯಯನ,ಪು.:194) ಎಂಬರ್ಥದಲ್ಲಿ ಅರಿವನ್ನು ಪೊಸಯಿಸುವ ಮಾರ್ಗವೆನ್ನುತ್ತದೆ. ಹಾಗಾಗಿ ಅನುಭವಗಳಿಗೆ ಬೆನ್ನುಹಾಕಿ ಏಕಾಂತದಿಂದ ಲೋಕಾಂತದ ಕಡೆಗೆ ಪ್ರಯಾಣಿಸುವುದು ಅಸಾಧು ಮತ್ತು ಅಸಾಧ್ಯವೆಂದೇ ಪರಿಭಾವಿಸುವ ಈ ಓದುಗಳಿಗೆ, ವೈರಾಗ್ಯ ಮತ್ತು ಸ್ವಾತಂತ್ರ್ಯ, gommataವೈರಾಗ್ಯ ಮತ್ತು ಹಿಂಸೆಗಳು ಒಂದೇ ನಾಣ್ಯದ ಎರಡು ಮುಖಗಳು. ಲೋಕದ ಅನುಭವಗಳಲ್ಲಿ ಯಾರು ತನ್ಮಯವಾಗಿ ತೊಡಗಿಸಿಕೊಳ್ಳಬಲ್ಲರೋ ಅವರಷ್ಟೇ ಅದರಿಂದ ಬಿಡಿಸಿಕೊಳ್ಳಬಲ್ಲರೆಂಬ ತರ್ಕವನ್ನು ಮುಂದಿಡುವ ಈ ಚಿಂತನೆಗಳಿಗೆ ಆದಿಪುರಾಣವೆಂದರೆ ಇಂತಹದ್ದೊಂದು ಅರಿವಿನ ಯಾನ, ಅನುಭವದ ಪ್ರಕ್ರಿಯೆ.

ಕೆ.ವಿ.ನಾರಾಯಣ ‘ತಿಳುವಳಿಕೆ (ಜ್ಞಾನ)’ ಎಂದುದನ್ನೇ ಓ.ಎಲ್.ಎನ್. ‘ಸ್ವಯಾರ್ಜಿತ’ವಾದ ‘ಅನುಭವ’ ಎನ್ನುತ್ತಾರೆ. “ಈ ಅನುಭವವನ್ನು ಇನ್ನೊಬ್ಬರಿಗೆ ಕೊಡೋದಕ್ಕೆ ಸಾಧ್ಯವಿಲ್ಲ……… ಕೊಡಬಹುದಾದುದು ಮಾಹಿತಿ” (ಆದಿಪುರಾಣ:ಸಾಂಸ್ಕೃತಿಕ ಮುಖಾಮುಖಿ, ಪು.42) ಅಷ್ಟೇ ಎನ್ನುವುದು ಅವರ ಖಚಿತ ನಿಲುವು. ಅನುಭವಕ್ಕೆ ಯಾವುದೂ ವರ್ಜ್ಯವಲ್ಲ. ಯಾವುದೂ ಜಡವಲ್ಲ. ಅರಿವನ್ನು ಹೊಸತಾಗಿಸುವ ಕಾವ್ಯಕ್ಕೂ ಇದೇ ಗುಣವಿದೆ. ಈ ಅರ್ಥದಲ್ಲಿ ಪಂಪ ‘ಆದಿಪುರಾಣ’ದಲ್ಲಿ ಅರಿವನ್ನು ಹೊಸತಾಗಿಸುವ ‘ಧರ್ಮ’ ಮತ್ತು ‘ಕಾವ್ಯಧರ್ಮ’ಗಳೆರಡನ್ನೂ ಒಟ್ಟಿಗೇ ಎದುರಾಗಿದ್ದಾನೆಂಬುದು ಈ ಲೇಖನದ ಸಾರಾಂಶ. ಇಲ್ಲಿ ಬೆಳಗುವಿಕೆಗೆ ಬೇರೆ ಅರ್ಥ ಸಿದ್ಧಿಸಿದೆ. ಬೆಳಗು ಅನ್ನೋದು ‘ಹೊಳೆಯು’ ಅನ್ನೋ ಬದಲು ‘ಉಜ್ಜಿ ನೋಡೋದು’, ‘ಪಾತ್ರೆ ಬೆಳಗೋದು’ ಅನ್ನೋ ಕ್ರಿಯಾರ್ಥಕ್ಕೆ ಪಲ್ಲಟಗೊಂಡಿದೆ. ‘ಅರಿವು’ ಮತ್ತು ‘ಆಗುವಿಕೆಯ’ ಪ್ರಕ್ರಿಯೆಗಳು ಮುಖ್ಯವಾಗಿ, ಸಾಂಸ್ಥಿಕಧರ್ಮದ ಸ್ಥಿರಾವಸ್ಥೆ ನೆಲೆಕಳೆದುಕೊಂಡಿದೆ. ಭೋಗ ಮತ್ತು ವಿರಕ್ತಿಗಳು ಒಟ್ಟಾಗಿಯೇ ಮುಳುಗಿ-ಏಳುವ ನಿರಂತರ ಕ್ರಿಯೆಯ ಭಾಗವಾಗಿ, ಲೋಕ ಮತ್ತು ಲೋಕೋತ್ತರವೆಂಬ ವಿಭಜನೆಯೂ ಇಲ್ಲವಾಗಿದೆ. ‘ಅಂಗನಾನುರಕ್ತಿಯ’ ರೂಪಕದಲ್ಲಿ ವಿರಕ್ತಿ ಅಥವಾ ಮುಕ್ತಿಯೂ ನಿಲುಗಡೆಯಿಲ್ಲದ, ಮತ್ತೆ ಮತ್ತೆ ಹಂಬಲಿಸಿ ಪಡೆಯುವ ಅಶಾಶ್ವತವಾದ ಮೋಹದ ಜಗತ್ತಾಗಿದೆ.

‘ಧರ್ಮ’ವನ್ನು ಹೀಗೆ ‘ಅರಿವು ಪೊಸಯಿಸು’ವಿಕೆಯಾಗಿ, ಆಹ್ವಾನದೊಂದಿಗೆ ವಿಸರ್ಜಿಸಿಕೊಳ್ಳುತ್ತಾ ನಡೆವ ಬಿಡುಗಡೆಯ ಯಾನವಾಗಿ ವಿವರಿಸಿಕೊಳ್ಳುವ ಅಗತ್ಯವಿದೆ. ಯಾಕೆಂದರೆ ಇಂದು ಧರ್ಮವು ಅನುಕರಣೆಯ ಸಿದ್ಧವಸ್ತುವಿನಂತಾಗಿದೆ. ವೈಯಕ್ತಿಯ ಪಾತಳಿಯಲ್ಲಿ ಅನುಭವಗಳನ್ನು ಉಜ್ಜಿನೋಡಿಕೊಳ್ಳಬೇಕಾದ ನೈಜ  ಧಾರ್ಮಿಕತೆಯ ಕಣ್ಮರೆಯಿಂದ ಕುರುಹುಗಳೇ ಮುಖ್ಯವಾಗಿ, ಮನುಷ್ಯ ಮನುಷ್ಯರುಗಳು ಹಿಂಸೆಯ ವೇದಿಕೆಯಲ್ಲಿ ತಾಲೀಮು ನಡೆಸುವಂತಾಗಿದೆ. ಹಾಗಾಗಿ ಧರ್ಮವನ್ನು ಹಿತಾಸಕ್ತ ಪರಿಭಾಷೆಗಳಿಂದ ತೆರವುಗೊಳಿಸಬೇಕಿದೆ. ಅದರೊಳಗಣ ತಾಯ್ತನದ ಜಲಕಣ್ಣನ್ನು ತೆರೆಯಿಸಬೇಕಿದೆ. ಇದಕ್ಕೆಂದೇ ಕಲಾಕೃತಿಗಳನ್ನು ಯುದ್ಧದ ಸಾಧನಗಳಾಗಿ ಅಂದರೆ ಯುದ್ಧ ಮಾಡುವವರ ಮೇಲಿನ ಯುದ್ಧದ ಸಾಧನಗಳಾಗಿ ಬಳಸಿಕೊಳ್ಳಬೇಕಿದೆ. ಆಗ ಪಂಪನೋ ಇನ್ನಾರೋ ಬೆಳಗಿದ ಜಿನಾಗಮವು ಕೇವಲ ಜೈನವಾಗದೆ, ಕೇವಲ ಧರ್ಮವೂ ಆಗದೆ, ಲೋಕಸಮಸ್ತದ ಮನುಷ್ಯಬದುಕು ನಿತ್ಯವೂ ಎದುರಾಗುತ್ತಿರುವ ಲೋಕಾನುಭವದ ಸರಣಿಯಾಗುತ್ತದೆ. ನಿತ್ಯ ‘ಬೆಳಗಿ’ ಹೊಸತಾಗುತ್ತಾ ಹೋಗುವ ನಿರಂತರ ಜಂಗಮವಾಗುತ್ತದೆ. ಈ ‘ಅರಿವಂ ಪೊಸಯಿಸುವ’ ಸ್ವಯಾರ್ಜಿತ ತಿಳುವಳಿಕೆಯ ಯಾನವನ್ನೇ ಲೋಕಸಂಕಟಕ್ಕೆ ಕರಗಿ, ಮನಸ್ಸುಗಳನ್ನು ಬೆಸೆಯುವ ಧರ್ಮವೆನ್ನುವುದಲ್ಲವೆ? ಅಂತಹ ಧರ್ಮವೇ ಬುನಾದಿಯಾದ ಬದುಕಿನಲ್ಲಿ ‘ಮಿಸ್ಟೇಕ್’ಗಳಿಗೆ ಜಾಗವಿರದಲ್ಲವೇ?

ಮೈತೆರದುಕೊಂಡೇ ಉಳಿದ ಬದಲಾಗದ ಭಾರತ        


ಡಾ. ಜಯಪ್ರಕಾಶ್ ಶೆಟ್ಟಿ . ಹೆಚ್


ಭಾರತ ಇತ್ತೀಚೆಗೆ ಹಾದುಬಂದ ಮಹಾಚುನಾವಣೆಯ ಕಂಪನವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಈಗ ಅದರ ಪಲಿತಾಂಶವೂ ಬಂದಿದೆ. ಇಡಿಯ ದೇಶ ಬಯಸಿದ ಬದಲಾವಣೆಯನ್ನು ಕುರಿತ ವ್ಯಾಖ್ಯಾನಗಳೂ ನಡೆಯುತ್ತಿವೆ. ಜನ ಬಯಸುವ ಬದಲಾವಣೆ ಸಂಭವಿಸಿಯೇ ತೀರುತ್ತದೆ ಎಂಬಂತೆ ಮಾಧ್ಯಮಗಳೂ ದಿನಕ್ಕೊಂದರಂತೆ ಕನಸಿನ ಮಾಲೆಯ ಬಿಕರಿಯಲ್ಲಿ ತೊಡಗಿವೆ. ಸರಕು ಮಾರುಕಟ್ಟೆಯನ್ನು ಉತ್ತೇಜಿಸುತ್ತಿರುವ ಜಾಗತೀಕರಣದ ಆರ್ಥಿಕ ನೀತಿಯನ್ನೇ ಕೇಂದ್ರೀಕರಿಸಿ ತರಾವರಿ ಚರ್ಚೆಗಳು ನಡೆಯುತ್ತಿವೆ. ಆದರೆ ಆರ್ಥಿಕ ಸಂರಚನೆಯ ಪುರಾತನ ಮಾದರಿಯನ್ನಾಧರಿಸಿ ನಿರ್ಮಿತವಾದ ದೇಶವೊಂದರ ಸಾಮಾಜಿಕ ಸಂರಚನೆಯನ್ನು ಬದಲಾಯಿಸದೆ, ಸಮಷ್ಟಿಹಿತದ ಬದಲಾವಣೆಯ ಮಾತುಗಳು ಅರ್ಥಹೀನವಾದುವುಗಳೇ ಆಗುತ್ತವೆ. ಅದನ್ನೇ ಋಜುಗೊಳಿಸುವಂತೆ ‘ದೇಶಕ್ಕೆ ಒಳ್ಳೆಯ ದಿನ ಬಂದೇ ಬಿಟ್ಟಿದೆ’ ಎಂದು ಹೇಳುತ್ತಿರುವ ಹೊತ್ತಲ್ಲಿಯೇ, ದಲಿತ, ಅಪ್ರಾಪ್ತ, ಅಶಕ್ತ ಹೆಣ್ಣುಮಕ್ಕಳ ಅತ್ಯಾಚಾರದ ಸುದ್ಧಿಯಿಂದ ದೇಶ ಬೆವರಿಕೊಳ್ಳುತ್ತಲೇ ಇದೆ. ಮರ್ಯಾದಾ ಹತ್ಯೆಗಳು ಸಾಮಾನ್ಯ ಸುದ್ಧಿಗಳಾಗಿವೆ. ನಿತ್ಯದ ಈ ಘಟನೆಗಳ ವಿವರಗಳಿಗೆ ಹೋಗದೆ, ಇವುಗಳಿಗಿಂತ ಭಿನ್ನವಾದ ಆದರೆ ಬದಲಾಗದ ಭಾರತದ ವಾಸ್ತವವನ್ನು ಇನ್ನಷ್ಟು ಖಚಿತಪಡಿಸುವ ಕರ್ನಾಟಕದ ಎರಡು ಘಟನೆಗಳನ್ನಷ್ಟೇ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಈ ಮಹಾಚುನಾವಣೆಯ ಕುರಿತ ಚರ್ಚೆಯ ನಡುವೆ ಮತ್ತು ಅದರ ಪಲಿತಾಂಶದ ಆಜೂಬಾಜು ಕರ್ನಾಟಕದ ಕರಾವಳಿ ಹಾಗೂ ಉತ್ತರಕರ್ನಾಟಕದ ವಿಜಾಪುರದಲ್ಲಿ ನಡೆದ ಪ್ರತ್ಯೇಕ ಘಟನೆಗಳಿವು. ಒಂದು ಯಾರ ಒತ್ತಾಯವಿಲ್ಲದೆ ನಡೆದ ವ್ಯಕ್ತಿಗತ ನಡಾವಳಿ. ಇನ್ನೊಂದು ಬಲಾತ್ಕಾರಪೂರ್ವಕವಾದುದು. ಆದರೆ ಎರಡೂ ಘಟನೆಗಳು ಈ ದೇಶಕ್ಕೆ ‘ಒಳ್ಳೇ ದಿನ ಬಂದಿಲ್ಲ ಮತ್ತು ಬರುವುದಕ್ಕೂ ಬಿಡಲಾಗುವುದಿಲ್ಲ’ ಎಂಬುದನ್ನೇ ಸಾರಿ ಹೇಳುತ್ತಿವೆ. ಈ ಎರಡೂ ಘಟನೆಗಳು ಅತ್ಯಂತ ದುರ್ಬಲರಿಗೆ ಸಂಬಂಧಿಸಿದವುಗಳಲ್ಲ. ಆದರೆ ಅವೆರಡರ ಹೂರಣವಾಗಿ ಗುಡಿ, ಗದ್ದುಗೆ, ಮಡಿ-ಮೈಲಿಗೆಗಳಿಂದ ಸುತ್ತಿಕೊಂಡ ಈ ದೇಶದ ಸಾಮಾಜಿಕ ಸತ್ಯವಾದ ‘ಜಾತಿ’ ಎನ್ನುವ ಮಹಾಮಾಲಿನ್ಯವೇ ಇದೆ.

ಸಂವಿಧಾನದ ಕಾವಲುಗಾರನ ವಿಪರೀತ ಸಜ್ಜನಿಕೆ

ದಿನಾಂಕ 26-5-14ರ ಪ್ರಜಾವಾಣಿಯಲ್ಲಿ ವರದಿಯಾದಂತೆ ಬಿಜಾಪುರದ ಸಂಸದರು ಗುಡಿಯೊಂದರ ಒಳಪ್ರವೇಶ ಮಾಡದೆ ಹೊರನಿಂತು ಕೈಮುಗಿದು ಸಜ್ಜನಿಕೆ ಮೆರೆದಿದ್ದರು. ramesh_jigajinagiಅಷ್ಟೇ ಅಲ್ಲ ಹಿಂದೆ ಶಾಸಕ, ಸಚಿವ, ಸಂಸದನಾಗಿದ್ದ ದಿನದಿಂದಲೂ ಹೀಗೆಯೇ ಮಾಡುತ್ತಿರುವುದಾಗಿಯೂ, ಅದಕ್ಕೆ ತನ್ನ ತಾಯಿ ‘ದಲಿತರಾದ ತಾವುಗಳು ಗುಡಿಪ್ರವೇಶಮಾಡಿ ಮೇಲ್ಜಾತಿಯ ಮನಸ್ಸಿಗೆ ನೋವುಂಟುಮಾಡಬಾರದು’ ಎಂದಿದ್ದ ಸೂಚನೆಯೆ ಕಾರಣವೆಂದೂ ಸ್ಪಷ್ಟೀಕರಣ ನೀಡಿದ್ದರು. ಇದು ಸಂವಿಧಾನಬದ್ಧವಾದ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರೊಬ್ಬರು, ಅಸಮಾನತೆಯ ಸಾಮಾಜಿಕ ಚರಿತ್ರೆಗೆ ಬದಲಾವಣೆ ತರುವ ದಿಸೆಯಲ್ಲಿ ಚಿಂತಿಸಬೇಕಾದವರೊಬ್ಬರು, ಸಂವಿಧಾನದ ವೈಜ್ಞಾನಿಕ ಮನೋಧರ್ಮದ ಆಶಯಕ್ಕೆ ಬದ್ಧವಾಗಿರಬೇಕಾದವರೊಬ್ಬರು ನಡೆದುಕೊಂಡ ಬಗೆ. “ಗುಡಿ ಪ್ರವೇಶಮಾಡಿ ಸವರ್ಣಿಯರ ಮನಸ್ಸು ನೋಯಿಸಬೇಡ” ಎಂದು ತಾಯಿ ಬೋಧಿಸಿದ ಭೂತಸಂವಿಧಾನವನ್ನು ಪಾಲಿಸಿ, ದೇಶದ ಸಂವಿಧಾನ ಮತ್ತು ಪ್ರಜಾತಂತ್ರವನ್ನು ಅವರು ಧಿಕ್ಕರಿಸಿದ್ದರು. ಮಂತ್ರಿಯಾಗಿದ್ದ ದಿನದಿಂದಲೂ ಇದೇ ಸಂಭಾವಿತತನದಲ್ಲಿ ನಡೆದುಕೊಂಡುದಾಗಿ ಹೇಳಿಕೊಂಡ ಅವರ ನಡತೆ, ಊಳಿಗಮಾನ್ಯ ಮತ್ತು ಪುರೋಹಿತಶಾಹಿ ಜಂಟಿ ಒಡೆತನಕ್ಕೆ ಪ್ರಿಯವಾದ ಸನ್ನಡತೆಯೇ. ಅದರಲ್ಲಿ ಅನುಮಾನವಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳವರ್ಗಕ್ಕೆ ಸೇರಿದ ಸಂಸದನೊಬ್ಬ ತನ್ನದೇ ವರ್ಗದ ಮಿಕ್ಕವರಿಗೂ ಹಾಕಿಕೊಡುವ ಈ ಸಂಭಾವಿಕೆಯ ಮೇಲ್ಪಂಕ್ತಿ ಅಪಾಯಕಾರಿಯಾದುದು. ಇದು ಸಂವಿಧಾನವನ್ನು ಕಾಯಬೇಕಾದವನ ಸಜ್ಜನಿಕೆ ಅಲ್ಲವೇ ಅಲ್ಲ. ಇದು ಜನತಂತ್ರದ ಸಮಬಾಳಿನ ಆಶಯವನ್ನೇ ಮಣ್ಣುಪಾಲಾಗಿಸುವಂಥದ್ದು.

ಇನ್ನೊಂದು ನೆಲೆಯಲ್ಲಿ ಇದು ಗೋಡೆಯೊಡೆದು ಗರ್ಭಗುಡಿಯ ಒಳಗಿನಿಂದಲೇ ಕನಕನಿಗೆ ಮುಖತೋರಿದ ಉಡುಪಿ ಕೃಷ್ಣನ ಮಿಥ್ ಗೆ ಸಮೀಪವೂ ಇದೆ. ಕೃಷ್ಣ ಗೋಡೆಗೆKanakadasa_art ಆಧಾರವಾದ ನೆಲಗಟ್ಟಿನ ಆಯ(ಒಳಾಂಗಣ)ದಿಂದ ಕೆಳಕ್ಕಿಳಿಯದೆ, ಯಾವುದನ್ನೂ ಉಲ್ಲಂಘಿಸದೆ (ಧರ್ಮಗ್ಲಾನಿಯಾಗದಂತೆ) ಕನಕನಿಗೆ ದರ್ಶನದ ಅವಕಾಶ ಮಾಡಿಕೊಟ್ಟ. ಕನಕನೂ ಒಳಹೋಗಿಲ್ಲ. ಮಾನ್ಯ ಸಂಸದರು ಮಾಡಿದ್ದೂ ಇದನ್ನೇ. ಸಂಸದ ರಮೇಶ ಜಿಗಜಿಣಗಿ ತನಗೆ ಓಟು ಹಾಕಿದ ಮೇಲ್ಜಾತಿಯ ಜನ ಏನೂ ಅಂದುಕೊಳ್ಳಲು ಅವಕಾಶವಿರದಂತೆ ದೇಗುಲದ ಹೊರಗೇ ನಿಂತು ದೇವರು ಮತ್ತು ದೇವಸಂಜಾತರಿಬ್ಬರನ್ನೂ ಖುಷಿಪಡಿಸಿದರು. ಹೀಗೆ ದೇವರ ಸ್ಥಾನದಲ್ಲಿದ್ದ ಕೃಷ್ಣ, ಜನಪ್ರತಿನಿಧಿಯ ಸ್ಥಾನದಲ್ಲಿದ್ದ ಜಿಗಜಿಣಗಿ, ಈ ಇಬ್ಬರೂ ಒಂದೇ ರೀತಿ ನಡೆದುಕೊಳ್ಳುವಂತೆ ನಿಯಂತ್ರಿಸಿದ ಶಕ್ತಿ ಮಾತ್ರ ಎರಡೂ ಕಾಲಕ್ಕೆ ಒಂದೇ ಎಂಬುದು ಮುಖ್ಯ. ಅದಕ್ಕೆ ದೇವರು ಮತ್ತು ಜನಪ್ರತಿನಿಧಿ ಇಬ್ಬರನ್ನೂ ಧರ್ಮಸಂಸ್ಥಾಪನೆಗಾಗಿ ಹೇಗೆ ದುಡಿಸಿಕೊಳ್ಳಬೇಕೆಂಬುದು ಚನ್ನಾಗಿಯೇ ಗೊತ್ತು.

ಯಮನ ಮನುಷ್ಯರೇ ಮೇಲು

ಕಾಕತಾಳೀಯವಾಗಿ ಈ ಘಟನೆಗೆ ಸ್ವಲ್ಪ ಮೊದಲು ಉಡುಪಿಯ ಕೃಷ್ಣದೇಗುಲದಲ್ಲಿ ಯಾವಾಗಲೂ ಆಗುತ್ತಿರುವಂತೆಯೇ ಪಂಕ್ತಿಭೇದದ ಇನ್ನೊಂದು ಘಟನೆ ಸುದ್ಧಿಯಾಯಿತು. ಅದು ಊಟಕ್ಕೆ ಕುಳಿತ ಹೆಣ್ಣುಮಗಳೊಬ್ಬಳನ್ನು ಹೊರಹಾಕಿದ ಸುದ್ಧಿ. ನಮ್ಮ ನಡುವಿನ ನಂಬಿಕೆಯಂತೆ ‘ಊಟಕ್ಕೆ ಕುಳಿತವರನ್ನು ಯಮನ ಮನುಷ್ಯರೂ ಊಟಮಾಡಿ ಏಳುವ ತನಕ ಕಾಯ್ತಾರಂತೆ’. ಹಾಗೆಯೇ ಹೆಣ್ಣು ಮಕ್ಕಳಿಗೆ ಸಾರ್ವಜನಿಕವಾಗಿ ಅಪಮಾನ ಮಾಡುವುದನ್ನು ಬಹುಜನರ ನಂಬಿಕೆ ಸರಿ ಎನ್ನಲಾರದು. ಆದರೆ ಆ ನಂಬಿಕೆಗಳನ್ನೇ ಸುಳ್ಳು ಮಾಡುವಂತೆ ಕೃಷಮಠದ ಬ್ರಾಹ್ಮಣರಪಂಕ್ತಿಯಲ್ಲಿ ಊಟಕ್ಕೆ ಕುಳಿತಳೆನ್ನುವ ಕಾರಣಕ್ಕೆ ಶೂದ್ರ ಹೆಣ್ಣುಮಗಳೊಬ್ಬಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಯಿತು.

ಅಚ್ಚರಿ ಎಂದರೆ ಹಾಗೆ ಹೊರಹಾಕಿಸಿಕೊಂಡಾಕೆ ಶೂದ್ರಳಾಗಿದ್ದರೂ, ತೀರಾ ತಳವರ್ಗದವಳಲ್ಲ. ಆಕೆಯದು ಮಠವಿಲ್ಲವಾಗಿಯೂ ಮತಿಕಳೆದುಕೊಳ್ಳದ ಪ್ರಭಾವೀ ಸಮಾಜವೇ. Pankti-Bheda-alleged-at-Udupi-Sri-Krishna-Muttಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆಲೆಗಳಲ್ಲಿ ಸ್ಥಳೀಯವಾಗಿ ಬಲಾಢ್ಯ ಎನಿಸಿಕೊಂಡ ಜಾತಿಯೂ ಹೌದು. ಉಡುಪಿಯ ಕೃಷ್ಣದೇವಸ್ಥಾನವನ್ನೂ ಒಳಗೊಂಡು ಕರಾವಳಿಯ ಹೆದ್ದಾರಿಯುದ್ದಕ್ಕೂ ಇರುವ ಬಹುಸಂಖ್ಯೆಯ ಸ್ವಾಗತಗೋಪುರ ಹಾಗೂ ದೇಗುಲ ಕಟ್ಟಡಗಳ ಮೇಲಿರುವ ದಾನಿಗಳ ಹೆಸರು ಯಾವ ಜಾತಿಗೆ ಸೇರಿದೆಯೋ, ಅದೇ ಜಾತಿಗೆ ಆಕೆಯೂ ಸೇರಿದ್ದಳು! ಆಕೆ ಓದಿಕೊಂಡ ಸುಶಿಕ್ಷಿತ ಅಧ್ಯಾಪಕಿ ಬೇರೆ. ಇಷ್ಟಿದ್ದರೂ ಎಲೆ ಇಟ್ಟುಕೊಂಡು ಊಟಕ್ಕೆ ಕುಳಿತವಳನ್ನು ಏಕಾಏಕಿ ಎಬ್ಬಿಸಿ ಹೊರಕಳಿಸಲಾಗಿತ್ತು. ಪ್ರವೇಶ ನಿರಾಕರಿಸಲ್ಪಟ್ಟ ಕನಕನ ಸಂದರ್ಭದಲ್ಲಾದಂತೆ ಇಲ್ಲಿ ಕೃಷ್ಣ ಗೋಡೆಯೊಡೆಯಲಿಲ್ಲ. ಆದರೆ ಸಾರ್ವಜನಿಕವಾಗಿ ಈ ಕುರಿತು ಸಾಕಷ್ಟು ಚರ್ಚೆ, ಪ್ರತಿಭಟನೆಗಳು ನಡೆದುವು. ಊಟದ ಪಂಕ್ತಿಯಿಂದ ಹೊರಹಾಕಲ್ಪಟ್ಟ ಹೆಣ್ಣುಮಗಳ ಜಾತಿಸಂಘಟನೆಯ ನೆಲೆಯಿಂದಲೂ ಒಂದಿಷ್ಟು ಪ್ರತಿಕ್ರಿಯೆಗಳು ಬಂದುವು. ಇದೆಲ್ಲವನ್ನೂ ಮೀರಿದ ಇನ್ನೊಂದು ವಿಚಿತ್ರವೂ ನಡೆಯಿತು. ಕುಟುಂಬದ ಹಿರೀಕರಾದ ‘ಅಜ್ಜಮಾವಂದಿ’ರನ್ನೇ ತಮ್ಮಪಾಲಿನ ದೈವಗಳೆಂದು ಭಾವಿಸಿ, ಪಾದಪೂಜೆಯಂತಹ ಅನಿಷ್ಠ ಸಂಪ್ರದಾಯದಿಂದ ಮುಕ್ತವಾಗಿ, ಗುರುವಿಲ್ಲದೆಯೂ ಗುರಿತಪ್ಪದ ‘ಅಳಿಯಕಟ್ಟಿನ’ ಆ ಸಮುದಾಯದಿಂದ ಮಠಧ್ವನಿಯೊಂದು ಮೂಡಿಬಂತು!?

ವಿಚಿತ್ರವೆಂದರೆ ಆ ಧ್ವನಿ ಅಪಮಾನಿತಳಾದ ಹೆಣ್ಣಿನ ಪರ ನಿಲ್ಲುವುದಕ್ಕಿಂತ ಎಬ್ಬಿಸಿ ಕಳುಹಿದವರ ಅಮಾನವೀಯ ನಡೆಯನ್ನು ಕುರಿತ ಸಾರ್ವಜನಿಕ ಚರ್ಚೆಯನ್ನು ತಡೆಯುವ ಆಸಕ್ತಿ ತೋರಿತು! ಜೊತೆಗೆ ‘ಶೆಟ್ಟಿ ಸಮುದ್ರ’ ಎಂಬ ಹೆಮ್ಮೆಯ ಇತಿಹಾಸ ತಮ್ಮದೆಂದು ಇಂದಿಗೂ ಅಭಿಮಾನ ಪಡುತ್ತಿರುವವರ ‘ಅಭಿಮಾನದ ಸಮದ್ರ’ವನ್ನು ಮಾಯಕಮಾಡಿ ‘ಕೆರೆ’ಯಾಗಿಸಿತ್ತು. ಹೀಗೆ ಈ ಸಂದರ್ಭದಲ್ಲಿ ಆ ಅಪಮಾನಕ್ಕೆ ಸಾಂವಿಧಾನಿಕ ಪರಿಹಾರವೂ ಸಿಗಲಿಲ್ಲ. ಸಮುದಾಯದ ಧಾರ್ಮಿಕ ಮುಖವೆಂದು ಹೇಳಿಕೊಂಡು ತನ್ನ ಹುಟ್ಟಿಗೆ ಯತ್ನಿಸುತ್ತಿರುವ ಶಕ್ತಿಯೂ ತನ್ನದೇ ಮಾತೃಮೂಲೀಯ ಪರಂಪರೆಯ ಹೆಣ್ಣುಮಗಳ ಘನತೆಗೆ ಉಂಟಾದ ಕುಂದನ್ನು ಯೋಚಿಸದಂತೆ ತಡೆಯುವ ವಿಪರೀತ ಯತ್ನವನ್ನೇ ಮಾಡಿತು. ಸಮುದಾಯ ಹಿತಚಿಂತಕನೆಂದು ಘೋಷಿಸಿಕೊಳ್ಳುತ್ತಿರುವ ಈ ಮುಖ ಸಮುದಾಯದಲ್ಲಿ ಇಲ್ಲಿಯವರೆಗೆ ಇರದ ಪಾದಪೂಜೆಯ ಅನಾಗರಿಕತೆಯನ್ನು ರೂಢಿಸುತ್ತಿರುವ ಹೊತ್ತಿನಲ್ಲೇ, ಜಾತಿಶ್ರೇಷ್ಠರ ಪಂಕ್ತಿಭೇದದ ಕಾವಲಿಗೂ ಬಳಕೆಯಾಗುತ್ತಿದೆ! ಇದು ಯಾರ ಪಾಲಿನ ಒಳ್ಳೆಯ ದಿನಗಳ ಸೂಚನೆ? (ತನ್ನ ಸ್ವಾಭಾವಿಕ ಇರುವಿಕೆಯನ್ನೇ ಕಳೆದುಕೊಳ್ಳುವಂತೆ ಬಲಾತ್ಕರಿಸುತ್ತಿರುವ ಈ ಬೆಳವಣಿಗೆಯನ್ನು ಸಮುದಾಯ ಗಂಭೀರವಾಗಿ ಪ್ರಶ್ನಿಸಿಕೊಳ್ಳಬೇಕಿದೆ.)

ಹಳೆಯ ಹುಣ್ಣೂ ಹೊಸ ಪೈಲ್ವಾನರೂ

ಇವೇನೂ ಹೊಸ ಗಾಯಗಳಲ್ಲ. ಈ ಸಮಾಜದ ಹಳೆಯ ಹುಣ್ಣುಗಳೇ. ಗುಣಕಾಣದ ಈ ಹುಣ್ಣುಗಳಿಂದಾಗಿಯೇ ಸಮಾಜವು ಆಧುನಿಕಗೊಳ್ಳುತ್ತಿರುವ ಭ್ರಮೆಯ ನಡುವೆ ಗುಡಿಯ ಹೊರಗೆ ನಿಲ್ಲಬೇಕಾದವರು ಹೊರಗೇ ನಿಂತು ವಿಧೇಯತೆ ತೋರುತ್ತಿದ್ದಾರೆ. ಹೊರನಿಲ್ಲಿಸಿದ ಗುಡಿಯೊಡೆಯರಿಂದ ಸಜ್ಜನಿಕೆಯ ಶಿಪಾರಸುಪತ್ರ ಪಡೆಯುತ್ತಿದ್ದಾರೆ! ಇದಕ್ಕೆ ಬದಲಾಗಿ ಹಳೆಯದನ್ನು ಧಿಕ್ಕರಿಸಿ ಒಳಹೋದವರು ಹೊರದಬ್ಬಿಸಿಕೊಂಡು ಸಾರ್ವಜನಿಕ ಅಪಮಾನ ಅನುಭವಿಸುತ್ತಿದ್ದಾರೆ. ಈ ಹುಣ್ಣಿಗೆ ಮುಲಾಮು ಹಚ್ಚುತ್ತಾ ಆಗಾಗ ಮತ್ತೆ ಮತ್ತೆ ಗೆಬರಿ ಗುಣವಾಗದಂತೆ ಉಳಿಸುವ ತಂತ್ರಗಾರಿಕೆ ಮಾಡುವವರು ದಲಿತರ ಕೇರಿಗೆ ಭೇಟಿಕೊಡುತ್ತಾರೆ. ಕೆಳಜಾತಿಗಳಿಗೆ ದೀಕ್ಷೆಕೊಡುವ ಮಾತಾಡುತ್ತಾರೆ. ಮಾಂಸತಿನ್ನುವವರೊಂದಿಗೆ ಸಮವಾಗಿ ಕೂತು ಉಣ್ಣಲಾಗದೆಂಬುದನ್ನೂ ದ್ವಂದ್ವವಿಲ್ಲದೆ ಸಾರಿಕೊಂಡು ಬರುತ್ತಾರೆ. ನಾವೆಲ್ಲರೂ ಒಂದೇ ಎನ್ನುತ್ತಲೇ ಶಿಷ್ಟಾಚಾರದ ಪರಂಪರೆಯನ್ನು ಮೀರಲಾಗದೆಂದೂ ಅದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾರೆ. ಅಷ್ಟೇ ಅಲ್ಲ, ಅದೇ ಮಾತನ್ನು ಹೊರನಿಲ್ಲಬೇಕಾದವರ ಬಾಯಿಂದಲೂ ಅವರು ಉತ್ಪಾದಿಸಬಲ್ಲರು. ವಿಧೇಯ ಸಿಪಾಯಿಗಳನ್ನು ಬೇರೆ ಬೇರೆ ರೂಪದಲ್ಲಿ ಬಿತ್ತನೆ ಮಾಡಿ ಬೆಳೆಸಿಡಬಲ್ಲರು. ಹಾಗಾಗಿಯೇ ಸಾಂವಿಧಾನಿಕ ಧ್ವನಿಯಾಗುವ ಸಂಸದನಿರಲಿ, ತಳಮೂಲ ಸಮುದಾಯದ ಮಠೀಯ ಆವೃತ್ತಿಗಳಿರಲಿ, ಎರಡೂ ಹೇಳಿಕೊಟ್ಟ ಪಾಠವನ್ನೇ ಬೇರೆ ಬೇರೆ ರೀತಿಯಲ್ಲಿ ಒಪ್ಪಿಸಿ ಯಥಾಸ್ಥಿತಿಯ ಕಾವಲಿಗೆ ನಿಲ್ಲುತ್ತಿವೆ. ಗಣತಂತ್ರವ್ಯವಸ್ಥೆಯ ಸರ್ವಮಾನ್ಯವಾದ ಸಂವಿಧಾನದ ಸಮಕ್ಷಮದಲ್ಲೇ ಎಲ್ಲವೂ ಸಾಧ್ಯವಾಗುತ್ತಿವೆ!

ಇವು ಒಂದೋ ಎರಡೋ ಜಾತಿಗಷ್ಟೇ ಸಂಭವಿಸುವ ಅಪಮಾನದ ಬಿಡಿಘಟನೆಗಳಲ್ಲ. ಇದೊಂದು ಹರಿಗಡಿಯದ ಸರಪಣಿ. ವಿರೋಧಿಸಬೇಕಾದುದು ಈ ಸರಪಣಿಯನ್ನೇ ಅಲ್ಲದೆ ಬಿಡಿತುಂಡುಗಳನ್ನಲ್ಲ. ಹಾಗಾಗಿ ಪಟ್ಟಭದ್ರರ ಹಿಡಿತಕ್ಕೆ ಪ್ರತಿಯಾಗಿ ಬಂಟರೋ, ಇನ್ನಾರೋ ತಮಗಾದ ಅನ್ಯಾಯವನ್ನು ಪ್ರತಿಭಟಿಸುವ ವೇಳೆ ತಮ್ಮಿಂದಾಗುತ್ತಿರುವ ಅನ್ಯಾಯದ ಪ್ರಾಯಶ್ಚಿತ್ತಕ್ಕೂ ತಯಾರಿರಬೇಕು. ತಮಗಿಂತ ಕನಿಷ್ಠರೆಂದು ನೀರು, ನೆಲದಿಂದ ದೂರ ಇರಿಸಿಕೊಂಡು ಬಂದವರೊಂದಿಗೆ ಒಡನಾಡುವ ಸಹತ್ವಕ್ಕೆ ತಯಾರಾಗಬೇಕು. ಉದಾಹರಣೆಗೆ ಶತಮಾನಗಳ ಕಾಲದಿಂದ ದೈವದ ಮನೆಯ ಹೊರಗೆ ನಿಂತು ದೋಲು ಹೊಡೆಯುತ್ತಾ ಇನ್ನೂ ಅಲ್ಲೇ ಕುಂತಿರುವ ಕೊರಗರಂತಹ ಮುಗ್ದರನ್ನು ಅವರು ಆಗ್ರಹಿಸುತ್ತಿರುವಂತೆಯೇ, ದೈವದಮನೆಯ ಆವರಣದೊಳಗೆ ಕೈಪ್ರಸಾದಕೊಟ್ಟು ಕರೆದುಕೊಳ್ಳುವ ಔದಾರ್ಯ ಸಾಧ್ಯವಾಗಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕವಾದ ಪಿತ್ರಾರ್ಜಿತ ಹಕ್ಕಿನ ಯಥಾಸ್ಥಿತಿಯಲ್ಲಿ ಪಲ್ಲಟ ಸಾಧ್ಯವಾಗಬೇಕು. ಇದೆಲ್ಲವನ್ನೂ ಮರೆತು ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಓಡಿಸಬಲ್ಲ ಕಾರುಗಳಿಗಾಗಿ ಹಾಸಿಬಿದ್ದ ರಸ್ತೆಯನ್ನೋ, ಎತ್ತರಕ್ಕೇರಿ ಮತ್ತೆಂದೋ ಮುರಿದು ಬೀಳುವ ಕಟ್ಟಡಗಳ ಸಂದಣಿಯನ್ನೋ ಬದಲಾದ ಭಾರತವೆಂದುಕೊಳ್ಳಲಾಗದು. ಯಾಕೆಂದರೆ ಸಾಮಾಜಿಕ ಹೊಲಸು ಮತ್ತು ಆರ್ಥಿಕ ಅಸಮಾನತೆಯಿಂದ ಪಾರಾಗುವುದಷ್ಟೇ ಬದಲಾದ ಭಾರತವನ್ನು ಕಾಣಿಸಬಲ್ಲದು.

ಆದರೆ ಮಠೀಯತೆ ಮತ್ತು ಜಢಸಾಂಪ್ರದಾಯಿಕತೆಯಲ್ಲಿ ಇಂತಹ ಕ್ರಿಯಾಗತಿಯನ್ನು ತಡೆಯುವ ಹುನ್ನಾರಗಳೇ ಇವೆ. ಅದಕ್ಕೆಂದೇ ಮಹಾಸಂಸ್ಥಾನಗಳು, parliamentಪುನರುತ್ಥಾನ, ಜೀರ್ಣೋದ್ಧಾರಗಳೆಂಬ ಹೊಸಪೈಲ್ವಾನರುಗಳ ಪಡೆಯನ್ನು ಅವು ಅಣಿಗೊಳಿಸಿಕೊಳ್ಳುತ್ತಾ ಬರುತ್ತಿವೆ. ಮೂಲಭೂತವಾಗಿ ಯಾವುದೇ ಧರ್ಮ, ಜಾತಿಯ ಸಾಂಸ್ಥಿಕಸ್ವರೂಪವು ಪ್ರತಿಷ್ಠೆಯ ಮೇಲಾಟವನ್ನು ನಡೆಸಬಹುದಲ್ಲದೆ, ಜೀವಪರತೆ, ಸಮಬಾಳಿನ ಪರವಾದ ಹೋರಾಟವನ್ನಲ್ಲ. ಅದಕ್ಕೆಂದೇ ಕುವೆಂಪು ‘ಗುಡಿ ಚರ್ಚು ಮಸೀದಿಯನ್ನು ಬಿಟ್ಟು ಹೊರಬನ್ನಿ’ ಎಂದು ಕೂಗಿ ಹೇಳಿದರು. ಯಾಕೆಂದರೆ ಯಥಾಸ್ಥಿತಿಯ ಪರವಾದ ವಿಧೇಯತೆ, ಅದರ ವಕಾಲತ್ತಿನ ಪೀಠಗಳನ್ನು ಭದ್ರಪಡಿಸುವ ಯಾವತ್ತೂ ಚಟುವಟಿಕೆಗಳು ಈ ದೇಶವನ್ನು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಜ್ಯೋತಿಭಾಪುಲೆ ಕನಸಿನ ಸಮಷ್ಟಿಹಿತದ ಭಾರತವಾಗಿಸಲಾರವು ಎಂಬ ಖಚಿತ ಅರಿವು ಅವರಿಗಿತ್ತು. ಅಂತೆಯೇ ಮೇಲಿನ ಎರಡೂ ಘಟನೆಗಳಲ್ಲೂ ಪಟ್ಟಭದ್ರರ ಹಿತಾಸಕ್ತಿಯ ಅಚ್ಚುಕಟ್ಟಾದ ಕಾವಲುಗಾರಿಕೆ ಇದೆ. ಎರಡರಲ್ಲೂ ಅಂಟೋನಿಯೋ ಗ್ರಾಮ್ಷಿ ಹೇಳುವ ಸಬಾಲ್ಟ್ರನ್(ಕಾಲಾಳುಪಡೆ)ಗಳಿವೆ. ಈ ಕಾಲಾಳು ಪಡೆಗಳ ಗಡಿಕಾವಲಿನಲ್ಲಿ ಹಾಯಾಗಿ ಮಲಗಿರುವ ಪುರೋಹಿತಶಾಹಿಯ ಪಾವಿತ್ರ್ಯದ ನಿರಾತಂಕ ನಿದ್ರೆ ಇದೆ.

ಪಾವಿತ್ರ್ಯಕ್ಕೆ ಪರಾಶಕ್ತಿ ಇಲ್ಲ

ಈ ಪಾವಿತ್ರ್ಯವಾದರೋ ಅತ್ಯಂತ ದುರ್ಬಲವಾದುದು. ದೇವರು, ದೇಗುಲ, ನೆಲ, ನೀರು ಇವೆಲ್ಲವನ್ನೂ ಮನುಷ್ಯ ಪ್ರವೇಶದಿಂದ ಕಾಯುತ್ತಾ ತಮ್ಮ ಪಾವಿತ್ರ್ಯವನ್ನು ರಕ್ಷಿಸಿಕೊಂಡಿದ್ದೇವೆ ಎಂದು ಬೀಗುವವರು ಗಮನಿಸಲೇಬೇಕಾದ ಪುಟ್ಟ ಪ್ರಕರಣವೊಂದು ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತೆ’ ಕೃತಿಯಲ್ಲಿದೆ. ಪಾವಿತ್ರ್ಯದ ದುರ್ಬಲತೆಯ ಜೊತೆಗೆ ಅದರ ಕ್ರೌರ್ಯವನ್ನೂ ಮನಮುಟ್ಟುವಂತೆ ಹೇಳುವ ಆ ಭಾಗದಲ್ಲಿ, ಸಾಧಕ ಮುಕುಂದೂರು ಸ್ವಾಮಿಗಳಲ್ಲಿಗೆ ಬಂದ ಸಾಮಾನ್ಯನೊಬ್ಬ ಅಸ್ಪೃಶ್ಯ ಹುಡುಗ ಮಾಡಿದ ಗುಡಿಪ್ರವೇಶ, ಅದರಿಂದ ದೇವರಿಗಾದ ಮಾಲಿನ್ಯ, ಅದಕ್ಕೆ ಪರಿಹಾರವಾಗಿ ಆ ದಲಿತನಿಗೆ ಮಾಡಿದ ಶಿಕ್ಷೆ ಮತ್ತು ದೇವರಿಗೆ ಮಾಡಿದ ಶುದ್ಧೀಕರಣಗಳನ್ನು ಸಂಭ್ರಮದಿಂದಲೇ ಹೇಳಿಕೊಳ್ಳುತ್ತಾನೆ. ಹೀಗೆ ತಮ್ಮಲ್ಲಿ ಸಮಾಚಾರ ನಿವೇದಿಸಿಕೊಂಡ ಆತನಿಗೆ ಕೃಷ್ಣಶಾಸ್ತ್ರಿಗಳ ಎದುರಲ್ಲೇ, “….ಅರಿಜನ ಈಶ್ವರನ ಗುಡಿಯಾಕೆ ಓದ್ಮಾಲೆ ದೇವರಿಗೆ ಸೂತ್ಕ ಆಗೈತೆ ಬಿಡು. ಅಂತೂ ಅವಂಗೆ ದಂಡ ಹಾಕಿ, ಕತ್ತೆ ಮ್ಯಾಲೆ ಮೆರವಣಿಗೆ ಮಾಡಿ, ರುದ್ರಾಭಿಷೇಕ- ಅದೂ ಇದೂ ಮಾಡಿದ ಮ್ಯಾಲೆ ದೇವರು ಸುದ್ದಾಯ್ತು ಬಿಡು” ಎಂದೆನ್ನುತ್ತಲೇ ಬಂದವನು ಸ್ವಾಮಿಗಳ ಮಾತಿಗೆ ಸಂತೋಷಪಟ್ಟು ಹೌದೆನ್ನುವಂತೆ ಸಮ್ಮತಿಸುತ್ತಾನೆ. ಆದರೆ ಅಷ್ಟಕ್ಕೇ ಮಾತು ನಿಲ್ಲಿಸದ ಸ್ವಾಮಿಗಳು ಮತ್ತೆ ಕೃಷ್ಣಶಾಸ್ತ್ರಿಗಳ ಕಡೆಗೆ ತಿರುಗಿ ನಗುತ್ತಾ, “ನೋಡಪ್ಪಾ ಒಬ್ಬ ಅರಿಜನರ ಹುಡುಗ ದೇವರ್ ಗುಡಿಯಾಕೋದ್ರೆ ಆ ದೇವರಿಗೆ ಮೈಲಿಗೆ ಬಂದು ಸೂತ್ಕ ಆಯ್ತು ಅಂದ್ಮೇಲೆ ಆ ಇಂದುಳಿದೊನ ಪೌರು ಯಂತಾದ್ದಿರಬೇಕು! ದೇವರ ಪವರಿನಿಂದ ಅವನು ಸುದ್ದ ಆಗಿ ಚೊಕ್ಕವಾಗ್ಬೇಕಪ್ಪ. ಅದು ಬಿಟ್ಟು ಅವನ ಸಕ್ತೀನೇ ದೊಡ್ಡದಾಗಿ ದೇವರೇ ಕೆಟ್ಟೋಯ್ತು ಅಂದ್ರೆ ಅದೆಂತ ದೇವ್ರು?! ಸೋಜ್ಗ ನೋಡಪ್ಪ. ಇದಕ್ಕೇನೆನ್ನಬೇಕು!” ಎಂದು ಮತ್ತೆ ಮತ್ತೆ ನಕ್ಕರಂತೆ.(ಯೇಗ್ದಾಗೆಲ್ಲಾ ಐತೆ’ ಅಭಿನವ ಪ್ರಕಾಶನ, 2010, ಪು.100). ಶುದ್ಧಾಶುದ್ಧಗಳು ಎಂತಹ ಅಪಕಲ್ಪನೆಗಳು ಎಂಬುದನ್ನು ಇದಕ್ಕಿಂತ ಸೊಗಸಾಗಿ ಬೇರೆ ಹೇಳಬೇಕಿಲ್ಲ.

ಹೀಗೆ ಪರಿಶುದ್ಧರು ತಾವೆಂದುಕೊಳ್ಳುವವರು ಮೈಲಿಗೆಯವರನ್ನು ಶುದ್ಧಮಾಡುವ ಬದಲು ತಾವೇ ಮಲಿನವಾಗುತ್ತೇವೆ ಎಂದು ಬೆಚ್ಚಿಬೀಳುತ್ತಾರೆ. ಅಷ್ಟಕ್ಕೇ ನಿಲ್ಲದೆ ತಾವು ಮಲಿನವಾದರೆ ಲೋಕ ಕೆಡುತ್ತದೆ ಎಂದೂ ಬೆದರಿಸುತ್ತಾರೆ. ಈ ನೀಚತನ ಕೊಳೆತು ನಾರುವ ಗಂಗೆಯ ಮಾಲಿನ್ಯಕ್ಕಿಂತಲೂ ಅಪಾಯಕಾರಿ. ಈ ಕಠೋರ ಮಾಲಿನ್ಯದ ಹೂರಣ ದುರ್ಬಲವಾದ ಮಡಿಯ ಕೆಸರೇ. ಮೌಢ್ಯ ಮತ್ತು ಹಿತಾಸಕ್ತಿಗಳ ಮುಷ್ಟಿಯಲ್ಲಿ ಸಿಕ್ಕು ಕಿಲುಬುಗೊಂಡ ಪುರಾಣದ ಪರಿಶುದ್ಧ ಗಂಗೆಯಂತೆ, ಸಮಾಜಗಂಗೆಯೂ ಈ ಪಾವಿತ್ರ್ಯದಿಂದಲೇ ಪರಿತಪಿಸುತ್ತಿದೆ. ಹಾಗಾಗಿ ಗಂಗೆಯ ಪಾತ್ರವನ್ನು ತುಂಬಿಕೊಂಡ ಹೂಳೆತ್ತಿದಂತೆ ಸಮಾಜಗಂಗೆಯ ಒಡಲಿಗಂಟಿದ ‘ಮಡಿ’ ಎಂಬ ಹೊಲಸನ್ನು ಮೊದಲು ತೆರವು ಮಾಡಬೇಕಿದೆ. ಮೈಲಿಗೆಯ ಪವರಿಗೆ ಕೆಡುವ ದೇವರನ್ನೆಸೆದು ಮಡಿಯಿಲ್ಲದ ದೇವರನ್ನು ಸಾಧ್ಯವಾಗಿಸಿಕೊಳ್ಳಬೇಕಿದೆ. ಅಲ್ಲಿಯ ತನಕ ಮಡಿಯ ಕಾವಲಿಗೆ ನಿಂತ ಪಡೆಯ ಪಹರೆಯಲ್ಲಿ ಊಟದ ಪಂಕ್ತಿಯಿಂದ ಉಚ್ಛಾಟಿಸಿಕೊಳ್ಳುವ ಹಣೆಬರಹ, ಪಾರ್ಲಿಮೆಂಟ್ ಭವನವನ್ನು ಹೊಕ್ಕೂ ಗುಡಿಯಿಂದ ಹೊರಗುಳಿಯುವ ಸಜ್ಜನಿಕೆಗಳ ‘ಗತಭಾರತ’ ಹೀಗೆ ನಿರ್ಲಜ್ಜವಾಗಿ ಮೈತೆರೆದುಕೊಂಡಿರುತ್ತದೆ.

ಕೊಲುವುದುಚಿತವೇ ಹೇಳು ಕೈಸದರದವರನು…?

ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ವರ್ತಮಾನದ ಸಾಂಸ್ಕೃತಿಕ ಸಂದರ್ಭದಲ್ಲಿ ವಿಭಿನ್ನ ಕಾರಣಗಳಿಗಾಗಿ ಅತಿಹೆಚ್ಚು ಸಂವಾದಕ್ಕೆ ತೆರೆದುಕೊಳ್ಳುತ್ತಿರುವ Kanakadasa_artವ್ಯಕ್ತಿತ್ವ ಕನಕನದು. ವ್ಯಾಸಕೂಟದ ನಂಟಿನಿಂದ ದಾಸನಾಗಿ, ವೈಚಾರಿಕತೆಯಿಂದ ಜೀವಪರ ಚಿಂತಕನಾಗಿ, ಸಾಮಾಜಿಕ ಹಿನ್ನೆಲೆಯಿಂದ ಜಾತಿ ಅಸ್ಮಿತೆಯ ಐಕಾನ್ ಆಗಿ, ಹೀಗೆ ಬೇರೆ ಬೇರೆ ನೆಲೆಗಳಿಂದ ಕನಕ ವಿವೇಚನೆಗೊಳಗಾಗುತ್ತಿದ್ದಾನೆ. ಐತಿಹಾಸಿಕವಾಗಿ ಕನಕ ಬದುಕಿದ ಮಧ್ಯಕಾಲೀನಯುಗ ಮತಪರಂಪರೆಯ ನೆಲೆಯಿಂದ ಆರೂಢ, ನಾಥ, ಸೂಫಿ ಮುಂತಾದ ಜನಧರ್ಮಗಳ ಭಾಗವಾಗಿದ್ದ ಶ್ರಮಣ ಪರಂಪರೆಗಳ ನಡುವಿನ ಕೊಡುಕೊಳುಗೆಯ ಕಾಲ. ಮತಪಂಥಗಳ ಎಲ್ಲೆಕಟ್ಟುಗಳನ್ನು ಮೀರಿ ಅರಿವಿನ ಹುಡುಕಾಟದಲ್ಲಿ ನಿರತವಾದ ಈ ಅವಧೂತ ಪರಂಪರೆಯ ಬೇರುಗಳು ಬಲವಾಗಿ ಊರಿನಿಂತ ಕಾಲ. ರಾಜಕೀಯವಾಗಿ ವಿಜಯನಗರದಂತಹ ಅರಸುಪರಂಪರೆಯೊಂದು ತನ್ನೆಲ್ಲಾ ವೈಭವವನ್ನು ಅನುಭವಿಸಿಯೂ ಶಿಥಿಲಗೊಂಡ ಸಂಕ್ರಮಣ ಕಾಲ. ಅಧಿಕಾರ ಮತ್ತು ಲೋಲುಪತೆಗಾಗಿ ಜನ ಮತ್ತು ನಾಡನ್ನು ದಿಕ್ಕೆಡಿಸುವಂತೆ ಪಾಳೆಪಟ್ಟುಗಳ ನಡುವಿನ ತಿಕ್ಕಾಟಗಳ ಕಾಲ. ಇಂತಹ ಐತಿಹಾಸಿಕ ಘಟ್ಟವನ್ನು ಹಾದುಬಂದ ಕನಕ ಅಭಿವ್ಯಕ್ತಿಯ ಬಹುಪ್ರಕಾರಗಳಲ್ಲಿ ತೊಡಗಿಕೊಂಡವನು. ಕೀರ್ತನೆ, ಮುಂಡಿಗೆ, ಷಟ್ಪದಿ, ಸಾಂಗತ್ಯಗಳಲ್ಲಿ ಪುರಾಣ ಮತ್ತು ಕಲ್ಪಕತೆಗಳಿಗೆ ಕಾವ್ಯದ ರೂಪುಕೊಟ್ಟವನು. ಇಂತಹ ಕನಕನನ್ನು ನಾವಿಂದು ಬೇರೆ ತೆರನಾಗಿ ಪ್ರವೇಶಿಸಿಸಬೇಕಿದೆ. ಯಾಕೆಂದರೆ ನಾವು ಬದುಕುತ್ತಿರುವುದು ಅಧಿಕಾರದ ಏಣಿಯೇರಲು ಜೀವಹಿಂಸೆಯ ಕಸುಬನ್ನು ಕರಗತಮಾಡಿಕೊಂಡವರು ಆರ್ಭಟಿಸುತ್ತಿರುವ ಕಾಲದಲ್ಲಿ. ಅಧಿಕಾರ ಮತ್ತು ಕ್ರೌರ್ಯದ ಒಡನಾಟಗಳು ಹೆಚ್ಚು ಹೆಚ್ಚು ನಿಕಟಗೊಳ್ಳುತ್ತಿರುವ ಕಾಲದಲ್ಲಿ. ಕಾಲದ ಈ ಒತ್ತಾಸೆ ಮತ್ತು ಸಾಂಸ್ಕೃತಿಕ ಆನ್ವಯಿಕತೆಯ ಕಾರಣಕ್ಕೆ, ದಾಸತ್ವ ಹಾಗೂ ಜಾತಿಅಸ್ಮಿತೆಯ ಅಸ್ತಿತ್ವಗಳಿಂದಾಚೆ ಕನಕನಲ್ಲಿ ದೊರೆಯುವ ಜೀವಪರ ಧ್ವನಿಯನ್ನು ನಾವು ಹುಡುಕಿಕೊಳ್ಳಬೇಕಿದೆ.

ಕನಕ ವಿರಚಿತ ನಳಚರಿತೆಯನ್ನು ಗಮನಿಸುವುದಾದರೆ ಅದರ ಕಥನಹಂದರ ಪಾರಂಪರಿಕವಾದುದು. ಕೃತಿಯೇ ಹೇಳಿಕೊಂಡಂತೆ ಇದು ಸೂತಮುನಿಯಿಂದ ಅಗಸ್ತ್ಯನ ಮೂಲಕ ರೋಮಶನವರೆಗೆ ಮುನಿಕುಲದ ನಡುವೆ ಹೇಳು-ಕೇಳು ಮಾದರಿಯಲ್ಲಿ ಹರಿದುಬಂದ ಕಥೆ. ಕವಿಗೆ ಇಂತಹ ರೂಢಿ ಕಥಾನಕದ ಮೂಲವಿನ್ಯಾಸದಲ್ಲಿ ಬದಲಾವಣೆ ಇಲ್ಲವೇ ಸೇರ್ಪಡೆಯ ಸ್ವಾತಂತ್ರ ಕಡಿಮೆ. ಆದರೂ ತನ್ನ ಭಾಷಿಕ ವಿನ್ಯಾಸದಲ್ಲಿ ಆತ ತುಂಬಬಹುದಾದ ಸಮಕಾಲೀನ ಜೀವನಾನುಭವದ ಸ್ವಾತಂತ್ರ್ಯವನ್ನು ಆತನಿಂದ ಕಸಿಯಲಾಗದು. ಕೃತಿಯೊಂದನ್ನು ಓದಲಾಗುವ ಕಾಲ ಉತ್ಪಾದಿಸುವ ಅರ್ಥವನ್ನೂ ನಿರ್ಬಂಧಿಸಲಾಗದು. ಹಾಗಾಗಿ ಕೃತಿಯ ಎಲ್ಲ ವಿವರಗಳಿಗೆ ಕೃತಿಕಾರನನ್ನೇ ಹೊಣೆಗಾರನಾಗಿಸದೆ, ಚರಿತ್ರೆ ಮತ್ತು ವರ್ತಮಾನದ ಉಭಯ ನೆಲೆಗಳಲ್ಲಿ ಕೃತಿಯೊಳಗಿನ ಸಂಗತಿಗಳೊಂದಿಗೆ ಸಂವಾದದ ಮುಕ್ತ ಅವಕಾಶವು ಪ್ರತೀ ಸಾಹಿತ್ಯ ಕೃತಿಯಲ್ಲೂ ಇರುತ್ತದೆ. ಈ ಕಾರಣದಿಂದ ನಳಚರಿತೆಯು ನಳನೊಬ್ಬನ ಕಥೆಯಲ್ಲ. ಅದು ಲೋಕಸಂದರ್ಭದ ಪ್ರಭು ಚರಿತ್ರೆಯನ್ನು ವಿವರಿಸಿಕೊಳ್ಳುವ ಅವಕಾಶವೂ ಹೌದು. ಈ ಹಿನ್ನೆಲೆಯಲ್ಲಿ ‘ನಳಚರಿತೆ’ಯೊಳಗಿನ ಪ್ರಭುತ್ವದ ಸಾಂಪ್ರದಾಯಿಕ ಮುಖ ಹಾಗೂ ಜನಧ್ವನಿಗೆ ಕಿವಿಯಾಗುವ ಅದರ ಜೀವಪರಮುಖಗಳನ್ನು ಒಟ್ಟೊಟ್ಟಿಗೆ ಇರಿಸಿಕೊಂಡು ಪ್ರಭು ಚರಿತೆಯ ಕುರಿತಾದ ಕೆಲವು ಟಿಪ್ಪಣಿರೂಪದ ಮಾತುಗಳನ್ನು ಇಲ್ಲಿ ಮುಂದಿಡಲಾಗಿದೆ.

ಕೃತಿ ಕಟ್ಟಿಕೊಡುವ ರೂಢಮೂಲ ಪ್ರಭುಚರಿತೆಯ ಸ್ವರೂಪ

”ಭೂತಳೇಂದ್ರರೊಳಧಿಕಬಲ ವಿಖ್ಯಾತನಹ ನಳಚಕ್ರವರ್ತಿಯುಯು ಭೂತಳವ ಪಾಲಿಸಿದನಾತನ ವಿಮಲಚರಿತೆ”ಯೇ ತನ್ನ ಕಥಾವಸ್ತು ಎಂದು ಕೃತಿ ಘೋಷಿಸಿಕೊಳ್ಳುತ್ತದೆ. ಪಾರದರ್ಶಕತೆ, ಪರಿಶುದ್ಧತೆಯ ಅರ್ಥ ಸೂಚಿಸುವಂತೆ ಅದನ್ನು ‘ವಿಮಲಚರಿತೆ’ ಎನ್ನುತ್ತದೆ. ರಾಜಚರಿತೆಯೊಂದನ್ನು ವಿಮಲಚರಿತೆ ಎನ್ನುವಲ್ಲಿ ಯಾವ ಅಂಶಗಳಿಗೆ ಮಾನ್ಯತೆ ದಕ್ಕಿದೆ? ರಾಜಕಥನವನ್ನು ಹೀಗೆ ಕೈವಾರಿಸುವವರು ಯಾರು? ಈ ವಿಮಲಚರಿತೆಯ ಹೂರಣದಲ್ಲಿರುವ ಸಾಂಸ್ಥಿಕ ಸಂಗತಿಗಳು ಯಾವುವು? ಪಾರಂಪರಿಕ ರಾಜ ಚರಿತ್ರೆಯನ್ನು ಕಟ್ಟುತ್ತಲೇ ಕನಕನ ರಾಜ ಚರಿತೆಯು ಈ ಚೌಕಟ್ಟನ್ನು ಎಲ್ಲಿ ಮೀರುತ್ತದೆ? ಅದರ ಆಶಯಗಳಾವುವು?- ಈ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳ ಮೂಲಕ ಕೃತಿಯೊಳಗಿನ ಪ್ರಭುಚರಿತ್ರೆಯ ವಿನ್ಯಾಸವನ್ನು ನಾವು ಹುಡುಕಿಕೊಳ್ಳಬೇಕಿದೆ. ಹೀಗೆ ಹುಡುಕುವಲ್ಲಿ ಅರಸುತನದ ಸಾಂಸ್ಥಿಕ ಗುಣಗಳಾದ ಪ್ರದರ್ಶಕತೆ, ಯಥಾಸ್ಥಿತಿ ಕಾಯುವಿಕೆ, ಯುದ್ಧ, ಹಿಂಸೆ ಮತ್ತು ವ್ಯಸನಾದಿಗಳ ರೂಢಿಯ ನಿರೂಪಣೆಯೇ ನಳಚರಿತದಲ್ಲಿಯೂ ಕಾಣಿಸುತ್ತದೆ. ಇವುಗಳ ಜೊತೆಗೆ ಮಾನವೀಯ ಆಶಯದ ಭಾಗವಾಗಿ ಅದು ಅರಸನ ಕ್ರಿಯಾಚರಣೆೆಯಲ್ಲಿ ಕೇಳಿಸಿಕೊಳ್ಳುವಿಕೆ ಮತ್ತು ನಾಚುವಿಕೆಯನ್ನು ತರುತ್ತದೆ! ಹೀಗೆ ಲೋಕದ ಅರಸುತನಕ್ಕೊಂದು ಮಾನವೀಯ ಮುಖದಂತೆಯೂ ಹೊಳೆದುಬಿಡುವ ಕಾರಣಕ್ಕಾಗಿ ನಳಚರಿತೆ ವಿಮಲಚರಿತೆ ಎನಿಸಿಕೊಳ್ಳಲು ಅರ್ಹವಾಗುತ್ತದೆ.

ನಳಚರಿತೆಯಲ್ಲಿ ಅರಸೊತ್ತಿಗೆಯ ಸಮೃದ್ಧಿಯ ಕರುಹುಗಳ ಸುದೀರ್ಘ ವಿವರಗಳಿವೆ. ಖ್ಯಾತಿ, ಕೀರ್ತಿಗಳೆಂಬ ಅಭೌತಿಕ ಸಂಗತಿಗಳೊಂದಿಗೆ ಅಸಂಖ್ಯRichest-Indians ಗೋಪುರ, ದೇಗುಲ, ಬಹುಗಾತ್ರದ ಪ್ರಾಕಾರಗಳ, ಮಹತ್ತು ಬೃಹತ್ತುಗಳೆಂಬ ಭೌತಿಕರಚನೆಗಳ ಕೊಂಡಾಟವಿದೆ. ”ದಿಗಂತದವನೀಶ್ವರರು ಕಪ್ಪವ ತೆರುವರಗಣಿತ ದುರವಿಜಯ ದೋರ್ಬಲರು ಮಣಿಮಯಮಕುಟವರ್ಧನರು ಚರಣಕಾನತರಾಗಿ ನಳಭೂವರನ ಭಜಿಸುತಲಿರ್ದರು…….” ಎಂದು ಬಲ ಮತ್ತು ಸಂಪತ್ತಿನ ಕೀರ್ತನೆ ಇದೆ. ಇದು ಅರಸೊತ್ತಿಗೆಯೆಂದರೆ, ಬಲಹೀನರ ಸ್ವಾತಂತ್ರ್ಯಹರಣ ಮತ್ತು ಬಲಾಢ್ಯರ ಸಂಪತ್ತಿನ ಪ್ರದರ್ಶನ ಎಂಬ ಸಾಂಪ್ರದಾಯಿಕ ನಿರೂಪಣೆಯೇ. ಸಾಮ್ರಾಜ್ಯಶಾಹಿ ಹಾಗೂ ಧಾರ್ಮಿಕ ಗುರುತುಗಳ ವೈಭವ ಅಥವಾ ಮೆರವಣಿಗೆಯನ್ನೇ ಯಶಸ್ವೀ ಪ್ರಭುತ್ವವೊಂದರ ಹೆಗ್ಗುರುತೆಂದು ಕರೆಯುವ ಬಗೆ. ನಮ್ಮೆದುರಿಗೆ ಇಡಲಾಗುತ್ತಿರುವ ಕಾರ್ಪೋರೇಟ್ ಅಭಿವೃದ್ಧಿ ಮಾದರಿಗಿಂತ ಇದು ಭಿನ್ನವಲ್ಲ. ಜಗತ್ತಿನ ಕೋಟ್ಯಾಧಿಪತಿಗಳ ಸಾಲಿಗೆ ಸೇರಲು ಮುನ್ನುಗ್ಗುತ್ತಿರುವ ಉದ್ಯಮಪತಿಗಳು ಮತ್ತು ಅವರ ರಕ್ಷಣೆಗೆ ನಿಂತ ರಾಜಕೀಯ ಶಕ್ತಿಗಳನ್ನು ಹೊಸ ಮನ್ವಂತರದ ಹರಿಕಾರರೆಂದು ಕೀರ್ತಿಸುತ್ತಿರುವ ಇಂದಿನ ಮಾಧ್ಯಮಗಳ ಸಮೃದ್ಧಿ ನಿರೂಪಣೆಯೂ ಇದೇ ಮಾದರಿಯದು.

ಇನ್ನು ಆಡಳಿತದ ವಿವರಗಳನ್ನು ನೀಡುತ್ತಾ ಕೃತಿ ನಳಮಹಾರಾಜನ ಪ್ರಭುತ್ವವನ್ನು, ”ಕ್ರೋದಗಳಿಲ್ಲದಿಹ ಸದ್ಧರ್ಮಜೀವಿಗಳ ಮೆರೆದಾಟದ ತಾಣ” ಎನ್ನುತ್ತದೆ. ಸದ್ಧರ್ಮ ಜೀವಿಗಳ ಸದ್ಧರ್ಮದ ಸ್ವರೂಪವಾಗಿ, ”ಪತಿಯರಿಗೆ ವಂಚಿಸರು ಸತಿಯರು, ಸುತರು ಪಿತೃಗಳನುಡಿಗಳನು ತಾವತಿಗಳೆಯರಾಚಾರ ವರ್ಣಾಶ್ರಮಧರ್ಮದಲಿ ಮತಿಯುತರು. …….. ಜನಸಮ್ಮತದೊಳೊಪ್ಪುವುದು ನೈಷದನೃಪನರಾಜ್ಯದಲಿ”ಎಂಬ ವಿವರಗಳಿವೆ. ಇದು ರೂಢಮೂಲ ಆಚರಣೆಗಳ ಉಲ್ಲಂಘನೆಯಿಲ್ಲದ ಯಥಾಸ್ಥಿತಿಯ ಕಾಯ್ದುಕೊಳ್ಳುವಿಕೆ. ಪ್ರಮಾಣಬದ್ದ ರೂಪಗಳ ರಕ್ಷಣೆಯ ಮೂಲಕ ಸಾಧಿಸಿದ ಪಾರಂಪರಿಕ ಅಧಿಕಾರಕೇಂದ್ರಗಳ ಬಲವರ್ಧನೆ. ಆಳುವ ಕೇಂದ್ರಗಳು ಉಲ್ಲೇಖಿಸುವ ಸುವರ್ಣಯುಗಗಳೆಲ್ಲವೂ ಬಹುಮಟ್ಟಿಗೆ ಈ ಮಾದರಿಗಳೇ. ಇದೆಲ್ಲವನ್ನೂ ಕಾವ್ಯದೊಳಗೆ ನಿರೂಪಿಸುವವನು ರೋಮಶಮುನಿ! ಚರಿತ್ರೆಗೂ ಚರಿತೆಯ ನಿರ್ಮಾತೃಗಳಿಗೂ ಇರುವ ರಾಜಕೀಯ ಸಂಬಂಧದ ನೆಲೆಯಲ್ಲಿಯೇ ಈ ವಿವರಗಳನ್ನು ಗಮನಿಸಬೇಕು. ಆಗ ಸಾಂಸ್ಥಿಕಮೌಲ್ಯಗಳ ಪ್ರಶ್ನೆಯಿಲ್ಲದ ಅನುಸರಣೆಯನ್ನೇ ‘ಸದ್ಧರ್ಮದ ಮೆರೆದಾಟದ ತಾಣ’ವಾಗಿ ನಿರೂಪಿಸುವ ಕಾರಣಗಳು ಗೋಚರವಾಗುತ್ತವೆ. ಪ್ರಜಾಸತ್ತಾತ್ಮಕಯುಗ ಒದಗಿಸಿದ ಪ್ರಶ್ನಿಸುವ ಅವಕಾಶಗಳು ಮೂಲಭೂತವಾದಿಗಳಿಗೆ ಯಾಕೆ ಸದ್ಧರ್ಮದ ಕೇಡಿನಂತೆಯೇ ಕಾಣಿಸುತ್ತವೆ ಎಂಬುದು ಅರಿವಾಗುತ್ತದೆ. ಸಾಮಾಜಿಕನ್ಯಾಯವನ್ನು ಅನುಷ್ಠಾನಕ್ಕೆ ತರುವ ಸಾಂವಿಧಾನಿಕ ಸಂಸ್ಥೆಗಳು, ಹಕ್ಕು ಕೇಳುವ ಜನಸಾಮಾನ್ಯರ ಚಳವಳಿಗಳು ಯಾಕೆ ಧರ್ಮನಾಶಕ ಎನಿಸುತ್ತವೆ ಎನ್ನುವುದೂ ಸ್ಪಷ್ಟವಾಗುತ್ತವೆ. ಯಾಕೆಂದರೆ ಈ ಮಾದರಿಯ ಸಮ್ಮತಿ ಉತ್ಪಾದಿಸುವ ಶಕ್ತಿ ಕೇಂದ್ರದಲ್ಲಿ ಸಹಜವಾಗಿಯೇ, ‘ಮಂತ್ರಿ ಪುರೋಹಿತರೂ, ಅರಸನನ್ನು ರಂಜಿಸುವ ಮಲ್ಲಗಾಯಕರೂ,(ಗಣಿಕೆಯರಾಗಿ) ವನಿತೆಯರೂ’ ಅವಕಾಶ ಗಿಟ್ಟಿಸುತ್ತಾರೆ. ಅಧಿಕಾರ ಸ್ಥಾಪಿಸಲು ಕೊರಳುನೀಡುವ ಯೋಧರಾಗಲೀ, ಬೆವರಿನ ಬೆಲೆಯನ್ನು ತೆರಿಗೆಯಾಗಿ ನೀಡುವ ಜನರಾಗಲೀ ಅಂಚಿನಲ್ಲಿಯೇ ಉಳಿದುಬಿಡುತ್ತಾರೆ. ನಳಚರಿತೆ ಚಿತ್ರಿಸುವ ರಾಜಸಭೆಗಳು ಇದಕ್ಕಿಂತ ಭಿನ್ನವಲ್ಲ. ಎಲ್ಲ ಕಾಲಗಳ ರೋಮಶರುಗಳೂ ಸದ್ಧರ್ಮಪಾಲನೆ ಎಂದು ಕರೆದಿರುವುದು ಸಮಾನತೆ ಇಲ್ಲದ ಈ ಸಂವಿಧಾನವನ್ನೇ. ನಳಚರಿತೆಯಲ್ಲಿನ ಪ್ರಭುಚರಿತೆಗೆ ಆಳುವವರ ಕಣ್ಣಿನ ನಿರೂಪಣೆಯ ಚರಿತ್ರೆಯ ಮುಖವೂ ಒಂದಿದೆ.

ನಳಚರಿತೆ ಕಟ್ಟಿಕೊಡುವ ಪ್ರಭುತ್ವದ ಅಂತಃಕರಣದ ಮುಖವಾಗಿ ನಾಚುವಿಕೆ.

ತನ್ನ ಘೋಷಣೆಯ ನಿರ್ಮಲ ಚಾರಿತ್ರ್ಯಕ್ಕನುಸಾರವಾಗಿ ಕೃತಿಯಲ್ಲಿ ನಳಪ್ರಭುವಿನ ಮಾನವೀಯ ಮುಖವೊಂದಿದೆ. ಈ ಭಾಗ ಸಾಂಸ್ಥಿಕ ವ್ಯವಸ್ಥೆಯೊಂದು ತನ್ನ ರಾಚನಿಕ ಸ್ವರೂಪಕ್ಕನುಸಾರವಾಗಿ ಪಡೆಯಬಹುದಾದ ಅಪಮೌಲ್ಯಗಳ ನಡುವೆಯೂ ಹೊಂದಿರುವ ಮಾನವೀಯವಾಗಿಸಿಕೊಳ್ಳುವ ದಾರಿಯಂತಿದೆ. ಸಾಮಾನ್ಯ ಹಂಸವೊಂದು ಅರಸನಿಗೆ ಇಲ್ಲಿ ಮಾನವೀಯತೆಯ ಪಾಠ ಹೇಳುತ್ತದೆ! ಪಾಠವಷ್ಟೇ ಮುಖ್ಯವಲ್ಲ, ಪಾಠಕನಿಗೂ ಆ ಯೋಗ್ಯತೆ ಇರಬೇಕು. ನಳಚರಿತೆ ಪಾಠದೊಂದಿಗೆ ಪಾಠಕನನ್ನೂ ಅದಕ್ಕೆ ತಕ್ಕಂತೆಯೇ ಚಿತ್ರಿಸುತ್ತದೆ. ಅದೊಂದು ದೊಡ್ಡ ಘಟನೆ ಏನಲ್ಲ. ನಳಮಹಾರಾಜನ ಬೇಟೆಯ ನಡುವಣ ಪುಟ್ಟ ಘಟನೆ. ಕೆಲವೇ ಷಟ್ಪದಿಗಳಿಗೆ ಸೀಮಿತವಾದುದು. ಆದರೆ ಇಡಿಯ ಕೃತಿಸಂದರ್ಭದಲ್ಲಿ ಪ್ರಭುತ್ವದ ಮಾನವೀಯ ಮುಖವೊಂದನ್ನು ಅನಾವರಣ ಮಾಡುವ ಮುಖ್ಯ ಸಂದರ್ಭವದು.

ರಾಜರುಗಳ ಸಪ್ತವ್ಯಸನಗಳಲ್ಲೊಂದು ಬೇಟೆ. ಅದು ಅರಸರ ಪಾಲಿನ ಮೋಜು. ಆದರೆ ಫಲಿತಾಂಶದಲ್ಲಿ ಜೀವಹಿಂಸೆ. ನಳ ಹಂಸವನ್ನು ಬೇಟಿಯಾಗುವುದು ಈ ಕೊಲುದಾಣದಲ್ಲಿ. ಕೊಲ್ಲಲೆಂದೇ ಕಾಡಿಗೆ ದಾಳಿಯಿಟ್ಟ ತಂಡದ ನಾಯಕನಾದ ನಳನಿಗೆ ಬಲಿಪಶುವಿನ ಸ್ಥಾನದಲ್ಲಿ ನಿಂತು ಹಂಸ ಜೀವದಬೆಲೆ ಕುರಿತು ಪಾಠಹೇಳುತ್ತದೆ. ಈ ಪಾಠ ವಿನಯಪೂರ್ವಕವಾಗಿದೆ, ತೀಕ್ಷ್ಣವಾದ ಪ್ರಶ್ನೆಗಳನ್ನೂ ಒಳಗೊಂಡಿದೆ. ತನ್ನ ರೂಪಕ್ಕೆ ಮಾರುವೋಗಿ ಕೈಚಾಚಿದ ನಳನ ಕೈಯ್ಯಲ್ಲಿ ಬಂಧಿಯಾಗುವ ಹಂಸದ ಪ್ರತೀ ಮಾತೂ ರಾಜನಾದವನು ಪಾಲಿಸಬೇಕಾದ ರಾಜಧರ್ಮವನ್ನು ಎಚ್ಚರಿಸುವ ಜೊತೆಗೆ ಎಲ್ಲಾ ಮಾದರಿಯ ಅಧಿಕಾರದ ಹಿಂಸೆಯೆನ್ನು ಮೊನೆಯಲಗುಗಳಂತೆ ಇರಿಯುತ್ತವೆ.- “ಕೈಸದರದವರನು ಕೊಲುವುದುಚಿತವೆ ಹೇಳು?, ತರವೆ ಬಿಡು ಪರಹಿಂಸೆ ದೋಷವಿದು, (ನನ್ನ ಮನೆಯಲಿ) ಮಡದಿ ಸುತರುಮ್ಮಳವ ನೋಡು” ಎಂದು ಪ್ರಶ್ನೆಯ ಮೇಲೆ ಪ್ರಶ್ನೆಯ ಬಾಣ ಎಸೆಯುವ ಹಂಸವನ್ನು ಕೊಲ್ಲುವ ಉದ್ದೇಶ ನಳನಿಗಿಲ್ಲ. ಅದಕ್ಕೆಂದು ಆತ ಹಿಡಿದವನಲ್ಲ. ಆತ ಮಾಡಹೊರಡದ ಕೊಲೆಯ ಕುರಿತು ಹಂಸ ಆತನನ್ನು ಪ್ರಶ್ನಿಸುತ್ತಿದೆ. ಹಂಸದ ಪ್ರಶ್ನೆಗೆ ನಳ ಸಮರ್ಥನೆಯ ಪ್ರತ್ಯುತ್ತರ ನೀಡುವುದಿಲ್ಲ, ನಾಚುತ್ತಾನೆ. ಇದಷ್ಟೇ ಅಲ್ಲಿನ ಸಂವಾದ. ಇಲ್ಲಿನ ಹಂಸದ ಮಾತು ಮತ್ತು ನಳನ ಪ್ರತಿಕ್ರಿಯೆಗಳೆರಡೂ ಮೌಲಿಖವಾದುವು. ಹಂಸ ತನ್ನನ್ನು ಪ್ರಕಟಿಸಿಕೊಂಡು ಮಹತ್ವಪಡೆಯುತ್ತದೆ, ಆತ ಉತ್ತರಿಸದೆ, ಸಮರ್ಥಿಸಿಕೊಳ್ಳದೆ, ಮಾತನಾಡದೆ, ನಾಚುವ ಮೂಲಕ ದೊಡ್ಡವನಾಗುತ್ತಾನೆ.

ಮೊದಲನೆಯದಾಗಿ ಹಂಸದ ಪ್ರಶ್ನೆ ತನ್ನನ್ನಷ್ಟೇ ಗಮನಿಸಕೊಂಡ ವ್ಯಕ್ತಿಗತ ಅಹವಾಲಿನಂತಿದ್ದರೂ, ಅದು ಹಂಸ ಮತ್ತು ನಳನgujarat_violence_1 ನಡುವಿನ ವ್ಯಕ್ತಿಗತ ವ್ಯವಹಾರವಷ್ಟೇ ಅಲ್ಲ. ಇಲ್ಲಿ ಹಂಸಕ್ಕೊಂದು ಪ್ರತಿನಿಧೀಕರಣದ ಛಾಯೆ ಇದೆ. ಅಧಿಕಾರರಹಿತ ‘ಕೈಸದರದ’ ಜೀವಜಗತ್ತೊಂದರ ಪ್ರತಿನಿಧಿಯಾಗುವ ಮೂಲಕ ಅದರ ಪ್ರಶ್ನೆಗಳು ಜೀವಜಗತ್ತಿನ ಸಾಮಾನ್ಯರ ಪ್ರಶ್ನೆಗಳಾಗುತ್ತವೆ. ಎರಡನೆಯದಾಗಿ ನಳ ಇರುವುದು ಕೊಲುದಾಣವಾದ ಬೇಟೆಯಲ್ಲಿ. ಅದು ಆಹಾರದ ಅಗತ್ಯಕ್ಕಾಗಿ ನಡೆವ ಕಾಡುಬೇಡರ ಬೇಟೆಯಲ್ಲ. ನಾಡ ಅರಸನ ಮೋಜು. ಇನ್ನು ಬೇಟೆ ಎಂದರೆ ಜೀವಗಳ ಶಿಕಾರಿ, ಹುಡುಕಿ ಕೊಲ್ಲುವ ಕ್ರಿಯೆ. ಪ್ರತಿರೋಧಿಸಿದವರನ್ನು ಇದಿರಿಸುವ ಯುದ್ಧವಲ್ಲ. ತಮ್ಮಷ್ಟಕ್ಕೆ ಬದುಕುವವರನ್ನು ಬದುಕಲು ಬಿಡದೆ ಹುಡುಕಿಕೊಲ್ಲುವ ಪರಿ. ಬಸುರಿಯ ಒಡಲಿಗೂ ಶೂಲವಿಕ್ಕಿ ಕೇಕೆ ಹಾಕಬಲ್ಲ ಕೈಸದರದವರ ನಿಷ್ಕಾರಣವಾದ ಕೊಲೆ. ಒಂದರ್ಥದಲ್ಲಿ ಕೊಲೆಯ ವ್ಯಾಪಾರ. ಹೀಗೊಂದು ವ್ಯಾಪಾರವನ್ನೇ ಶುರುವಿಟ್ಟುಕೊಂಡಲ್ಲಿ ಪಶ್ಚಾತ್ತಾಪವೆಂಬುದು ಸಾಧ್ಯವೇ ಇಲ್ಲ. ಯಾಕೆಂದರೆ ವ್ಯಾಪಾರವೆಂಬುದು ಯಾವಾಗಲೂ ಲಾಭದ ಖುಷಿಯಲ್ಲಿ ಉಳಿದವರ ನಷ್ಠವನ್ನು ಗಣಿಸುವ ಗೋಜಿಗೆ ಹೋಗದು. ವ್ಯಾಪಾರಿಯೊಬ್ಬನಲ್ಲಿ ಕಚ್ಚಾವಸ್ತುವಿನ ಕುರಿತ ಕರುಣೆ ಇರಲು ಸಾಧ್ಯವೇ? ವ್ಯಾಪಾರಿ ವ್ಯಾಪಾರಿಯೇ ಅಲ್ಲವೇ? ಖುಷಿ ಎನ್ನುವುದು ಮಾರುಕಟ್ಟೆಯ ಮಾತು. ಇದು ಖುಷಿಯ ಬೇಟೆ. ಮೂರನೆಯದಾಗಿ ಬೇಟೆಯೊಂದು ವ್ಯಸನ. ವ್ಯಸನವೆಂದರೆ ಹುಚ್ಚು ಎಂಬ ಅರ್ಥವೂ ಇದೆ. ಹಾಗೆಂದು ಅರ್ಥೈಸಿದಲ್ಲಿ ಇದು ಕೊಂದು ಖುಷಿ ಅನುಭವಿಸುವ ಹುಚ್ಚು. ನಾಲ್ಕನೆಯದಾಗಿ ಅದು ಪ್ರಾಣಿ-ಪಕ್ಷಿಗಳ ಶಿಕಾರಿಯಾದ ಕಾಡಬೇಟೆಯಷ್ಟೇ ಅಲ್ಲ. ಮಾನವಜೀವದ ನಾಡಶಿಕಾರಿಯೂ ಹೌದು. ಯಾಕೆಂದರೆ ಆ ಹಿಂಸೆಗೆ ಕುಟುಂಬ ಬದುಕಿನ ಸಾಮಾಜಿಕಸತ್ಯಗಳು ಬೆಸೆದುಕೊಳ್ಳುತ್ತಿವೆ. ಸತ್ತವರಿಗಾಗಿ ಅಳುವವರ ಪಾಡು ನೋಡುವಂತೆ ಹೇಳುವ ಹಂಸನ ಮಾತಿನಲ್ಲಿ ಈ ಧ್ವನಿಯಿದೆ. ಆದರೆ ಲೋಕದ ಕೊಲುದಾಣಗಳೆಲ್ಲವೂ ಹಾಗೆಯೇ ಮುಂದುವೆರೆದಿವೆ. ಅಧಿಕಾರವು ತಾನು ಪ್ರಾಯೋಜಿಸುತ್ತಿರುವ ಹಿಂಸೆಯಲ್ಲಿ ನೊಂದವರ ದನಿ ಆಲಿಸುವುದನ್ನೇ ನಿರಾಕರಿಸಿಕೊಂಡಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಗುಳೆಹೊರಟ ಬಸುರಿಬಾಣಂತಿಯರ ಹೊಟ್ಟೆಗೂ ಈಟಿಯಿರಿದು ಸೀಳಿಹಾಕಿ ಚೀರಲು ಅದಕ್ಕೆ ಸಾಧ್ಯವಾಗುತ್ತಿದೆ. ಅಳುವವರ ಮುಖನೋಡಿ ಕರಗುವ ಪಶ್ಚಾತ್ತಾಪದ ಮಾನವೀಯ ಸೂಕ್ಷ್ಮತೆ ನಾಪತ್ತೆಯಾಗಿದೆ.

ನಮ್ಮೆದುರಿಗಿನ ಅಧಿಕಾರ ಮತ್ತು ಹಿಂಸೆಯ ಮಾದರಿಗಳೊಂದಿಗೆ ಶಿಕಾರಿಯ ಕಾರಣ ಮತ್ತು ನೆಲೆಗಳೂ ವೈವಿಧ್ಯವಾಗಿವೆ. ಮತೀಯವಾದಿ ರಾಷ್ಟ್ರೀಯತೆ ಪ್ರೇರೇಪಣೆಯ ಫಲಿತದ ಹಿಂಸೆ ಅಂಥ ಶಿಕಾರಿಗಳಲ್ಲೊಂದು. ಇದು ಪರಿಕಲ್ಪಿಸಿಕೊಡುತ್ತಿರುವ ‘ಸ್ವ’ ಮತ್ತು ‘ಅನ್ಯ’ದ ಮಾದರಿಗಳು ನೆಲದ್ರೋಹದ ಆರೋಪದಲ್ಲಿ ಸಮುದಾಯಗಳ ಮೂಲೋತ್ಪಾಟನೆಯನ್ನು ನೆಲಗೌರವದ ಬಿರುದಿಗೊಳಪಡಿಸುತ್ತಿದೆ. ಇನ್ನು ಅಭಿವೃದ್ಧಿಯ ಹೊಸಪರಿಭಾಷೆಗಳಡಿಗೆland accquisition ನಿರ್ಮಾಣಗೊಳ್ಳುತ್ತಿರುವ ಹೊಸ ಆರ್ಥಿಕವಲಯಗಳ ಹಿಂಸೆ ಸಮೃದ್ಧಿಯ ಸಮರ್ಥನೆ ಪಡೆಯುತ್ತಿವೆ. ಶತಮಾನಗಳ ಕಾಲದಿಂದ ಬದುಕಿದ ನೆಲೆಗಳನ್ನು ಕಳೆದುಕೊಳ್ಳುವುದು ನ್ಯಾಯಸಮ್ಮತವಾಗುತ್ತಿದೆ. ತಮ್ಮ ಹಕ್ಕು ಕೇಳುವುದು ಅಭಿವೃದ್ಧಿಯ ವಿರೋಧವೆನಿಸಿ, ಹತ್ತಿಕ್ಕಲ್ಪಡುವುದು ಕಾನೂನು ಮತ್ತು ಸುವ್ಯವಸ್ಥೆಯ ಅಗತ್ಯವಾಗುತ್ತಿದೆ. ಜಾತಿನೆಲೆಯ ಅಧಿಕಾರಶಕ್ತಿಗಳು ತಮ್ಮ ಪಾರಂಪರಿಕ ಯಜಮಾನ್ಯಕ್ಕಾಗಿ ನಡೆಸುವ ದೌರ್ಜನ್ಯಗಳಿಗೆ ಸಹಾನುಭೂತಿಯ ಕಣ್ಣುಗಳು ಸಿಗುತ್ತಿವೆ. ಇದರ ಜೊತೆಗೆ ಸಮುದಾಯ ಸಂಪತ್ತಿನ ಯಜಮಾನಿಕೆಗಾಗಿ ನಡೆಸುವ ಎಲ್ಲ ಬಗೆಯ ಭ್ರಷ್ಟಾಚಾರಗಳು ಸಾಮಾಜಿಕ ಒಪ್ಪಿಗೆಯನ್ನು ಪಡೆದುಕೊಳ್ಳುತ್ತಿವೆ. ಪ್ರಭುತ್ವವು ತನ್ನ ದುಡಿಮೆ ಅಥವಾ ಕ್ರಿಯೆಯನ್ನು ಎಲ್ಲ ಬಗೆಯ ನೈತಿಕತೆಯಿಂದ ವಿಮುಖವಾಗಿಸಿಕೊಂಡು ಉತ್ತರದಾಯಿತ್ವವನ್ನಾಗಲೀ, ನೈತಿಕಭಯವನ್ನಾಗಲೀ ಎದುರಾಗುತ್ತಲೇ ಇಲ್ಲ. ಸಂವಾದವನ್ನೇ ನಿರಾಕರಿಸುವ ಮೂಲಕ ಸಂವೇದನೆಯನ್ನೂ ಕಳೆದುಕೊಂಡಿರುವ ಈ ಅಧಿಕಾರಕೇಂದ್ರಗಳು ನಾಚುವ ಪ್ರಶ್ನೆಯನ್ನೇ ಎದುರಾಗುತ್ತಿಲ್ಲ. ಪ್ರಭುತ್ವವು ಹೀಗೆ ತನ್ನ ಎದೆಗಡಲನ್ನು ಇಂಗಿಸಿಕೊಂಡು ನಿರ್ಮಿಸಿಕೊಳ್ಳುತ್ತಿರುವ ನಾಚುವಿಕೆಯ ಮರಳುಗಾಡಿನಿಂದಾಗಿಯೇ ನೆಲೆಕಳೆದುಕೊಳ್ಳುತ್ತಿರುವ ಸಂತ್ರಸ್ತರು ಹಾಗೂ ತಲೆಕಳೆದುಕೊಳ್ಳುತ್ತಿರುವ ಗಲಬೆಗದ್ದಲದ ಬಲಿಪಶುಗಳು ಆಕಾಶನೋಡಿಕೊಂಡು ಅಳುತ್ತಾ ಕೂರುವ ಗೋಳು ಮುಂದುವರಿಯುತ್ತಲೇ ಇದೆ.

ಹೀಗೆ ಪ್ರಭುತ್ವವನ್ನು ರಾಜತ್ವದ ಸಂಸ್ಥೆಯಿಂದಾಚೆಗೆ ವಿಸ್ತರಿಸಿಕೊಂಡು ನೋಡಿದಾಗ ಕಾವ್ಯದಲ್ಲಿನ ಪ್ರಭುಚರಿತದ ಮಾನವೀಯ ಮುಖ ಮತ್ತಷ್ಟು ಜೀವಪರ ಎನಿಸುತ್ತದೆ. state-violenceರಾಷ್ಟ್ರವೆಂಬ ಕಲ್ಪಿತಾವೃತ್ತಿಯಲ್ಲಿ ಮತೀಯ ಸಂಖ್ಯಾಶಕ್ತಿಗಳೂ, ಜಾತಿ ಮತ್ತು ಆರ್ಥಿಕತೆಯ ಸಂದರ್ಭದಲ್ಲಿನ ಜಾತಿ ಹಾಗೂ ವರ್ಗಶಕ್ತಿಗಳು ಈ ನೆಲೆಯ ಜೀವಪರ ಸಂವಾದ ಸಾಧ್ಯತೆಗೆ ಹೊರಳಿಕೊಂಡಲ್ಲಿ, ಆರೋಗ್ಯಕರ ಅಧಿಕಾರದ ಚರಿತ್ರೆಯೊಂದು ಖಂಡಿತಾ ಸಾಧ್ಯವಿದೆ. ‘ಬದುಕಿ ಬದುಕಲು ಬಿಡಿ’ಯೆಂಬುದು ಎಲ್ಲ ಕಾಲದ ಅಧಿಕಾರವಂಚಿತರ ಕೂಗು ಮತ್ತು ಆಶಯ. ಅಧಿಕಾರರಹಿತರು ಮಾತಿಲ್ಲದವರೂ ಹೌದು. ಇಲ್ಲಿ ಹಂಸ ಭಾಷೆಗೆ ದನಿಯಿಲ್ಲದವರ ದನಿಯ ಸಾಂಕೇತಿಕ ಅರ್ಥವಿದೆ. ನಳನ ಪ್ರತಿಕ್ರೀಯೆ ಅಂತಹ ದಮನಿತರ ನಿರೀಕ್ಷೆಯ ಮೂರ್ತರೂಪ. ಹಿಂಸೆಯನ್ನು ಧರಿಸಿಕೊಂಡೇ ಇರುವ ಪ್ರಭುತ್ವವು ಅದನ್ನು ತ್ಯಜಿಸಿಬಿಡಬೇಕು ಎನ್ನುವುದಕ್ಕಿಂತ, ಅಶಕ್ತರ ಮೇಲೆ ಪ್ರಯೋಗಿಸಕೂಡದೆಂಬುದೇ ನಳಚರಿತೆಯ ಆಶಯ. ಆದರೆ ಬಲಪ್ರಯೋಗಿಸಿಯೂ ಅಶಕ್ತರ ಸಹನೆಯನ್ನೇ ಆಗ್ರಹಿಸುವ ಪ್ರಭುತ್ವ ಪ್ರಾಯೋಜಿತ ಹಿಂಸೆಯನ್ನೇ ಜಗತ್ತು ಮತ್ತೆ ಮತ್ತೆ ಎದುರಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಚರಿತ್ರೆಯುದ್ದಕ್ಕೂ ವಿರೋಧದ ಕೂಗುಗಳೆದ್ದಿವೆ. ಕೇಳುವ ಮತ್ತು ನಾಚುವ ಎರಡನ್ನೂ ಮರೆತ ಪ್ರಭುತ್ವದ ಕಾರ್ಖಾನೆಗಳಿಂದ ಗ್ರೆಗರಿಪತ್ರಾವೊ, ಎಸ್ಇಜೆಡ್, ರಾಷ್ಟ್ರೀಯಉದ್ಯಾನವನ, ಬೆಂಡಿಗೇರಿ, ಕಂಬಾಲಪಲ್ಲಿ, ಗ್ಯಾಸ್ಚೇಂಬರ್, ನರೋಡಾ ಪಾಟಿಯಾ, ಬೆಸ್ಟ್ ಬೇಕರಿಗಳೆಂಬ ಕೊಲುದಾಣಗಳ ಸರಣಿ ಬೆಳೆಯುತ್ತಲೇ ಇದೆ. ಸಾಕ್ಷಿನಾಶದ ಮೂಲಕ ಪಡೆಯುವ ಬಿಡುಗಡೆಯೂ ನಿರ್ದೋಷಿತನದ ಪ್ರಮಾಣ ಪತ್ರವಾಗುತ್ತಿದೆ. ಕೆಳಹಂತದ ನ್ಯಾಯಾಲಯಗಳು ವಿಧಿಸಿದ ಶಿಕ್ಷೆಯನ್ನು ಮೇಲುಹಂತದಲ್ಲಿ ಪ್ರಶ್ನಿಸಿ ಉರುಳಿಂದ ಬಚಾವಾಗುವ ಚೌಕಾಶಿ ಹೆಚ್ಚುತ್ತಿದೆ. ತಪ್ಪಾದುದುಂಟೆ? ಎಂದು ಕೇಳಿಕೊಳ್ಳುವ ಅಂತಃಕರಣವೇ ಸತ್ತು ಬಿದ್ದಿದೆ. ಹೆಣದ ಬಣವೆಯ ಮೇಲೆ ಅಧಿಕಾರದ ನೆಲೆಕಂಡುಕೊಳ್ಳುವುದನ್ನು ಕರಗತಮಾಡಿಕೊಂಡ ಅಧಿಕಾರಶಕ್ತಿಗಳ ಎದೆಯಕಡಲಲ್ಲಿ ಉಸುಕುತುಂಬಿದೆ. ಅಂತಃಸಾಕ್ಷಿಯ ನೀರಹನಿ ಬತ್ತಿಹೋಗಿದೆ. ತಮ್ಮನ್ನು ಮನುಷ್ಯರು ಎಂದುಕೊಳ್ಳುವುದಕ್ಕಿಂತ ಹುಲಿ-ಸಿಂಹಗಳೆಂದೇ ಸಾರಿಕೊಳ್ಳುವ ಈ ಟೊಳ್ಳು ಅಂತರಂಗಗಳು ಕೊಲುವುದುಚಿತವೇ? ಎಂದು ಕೇಳುತ್ತಲೇ ಇರುವ ನಿಲುಗಡೆಯಿಲ್ಲದ ಪ್ರಶ್ನೆಗೆ ನಾಚುವ ಬದಲು ನಾಲಿಗೆ ಕಸರತ್ತು ನಡೆಸುತ್ತಿವೆ. ಇವುಗಳ ಬಾಯಿ ತೆರೆದುಕೊಂಡೇ ಇದೆ. ಕೇಳುವ ಕಿವಿ ಮತ್ತು ಕರಗುವ ಎದೆಗಳಷ್ಟೇ ಸತ್ತಿವೆ. ಹೀಗೆ ಸಂವೇದನೆಯನ್ನೇ ಕಳೆದುಕೊಂಡ ಅಧಿಕಾರಚರಿತ್ರೆಯ ನಡುವೆ, ‘ಕೇಳುವ ಕಿವಿ ಮತ್ತು ನಾಚುವ ಮನಸ್ಸು’ಗಳೆರಡನ್ನೂ ಕಾಪಿಟ್ಟುಕೊಂಡ ನಳಚರಿತೆ ಅರಸೊತ್ತಿಗೆಗೂ ವಿಮಲಚರಿತೆಯನ್ನು ಸಾಧ್ಯವಾಗಿಸಿದೆ.

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ
ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ (10)

ದೇವಲೋಕದ ಅಮೃತ ಫಲವೆಂಬಂತೆ ನಂಬುವ ತೆಂಗಿನಮರದಿಂದ ಎಳನೀರು, ತೆಂಗಿನಕಾಯಿಗಳನ್ನು ಕೊಯ್ಯುವುದಲ್ಲದೆ ಸೇಂದಿ (ಮೂರ್ತೆ) ಇಳಿಸಲೂ ಬಳಸುತ್ತಾರೆ. ತೆಂಗಿನ ಸುಳಿಕೊರಕ (ಗೊಬ್ಬರದ ಕಪ್ಪುಹುಳ) ಹುಳುಗಳನ್ನು ಕೊಂದರೆ ಹತ್ತು ದೇವಸ್ಥಾನ ಕಟ್ಟಿದಷ್ಟು ಪುಣ್ಯ ಎಂದೆನ್ನುತ್ತಲೇ, ಸತ್ತ/ಜೀವಂತವಿದ್ದ ಅದೇ ತೆಂಗಿನಮರವನ್ನು ಕತ್ತರಿಸಿ ಮನೆಯ ಪಕಾಸೆ, ಜಂತಿಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ತೆಂಗಿನ ಕಾಯಿ ತಲೆಮೇಲೆ ಬಿದ್ದು ಸತ್ತರೆ ಪುಣ್ಯ ಎಂಬ ನಂಬಿಕೆಯ ನಡುವೆಯೇ ಮೂತ್ರ ವಿಸರ್ಜನೆಯನ್ನು ತೆಂಗಿನ ಬುಡದಲ್ಲಿಯೇ ಮಾಡಿದರೆ ಪ್ರಶಸ್ತವೆಂದೂ ನಂಬುತ್ತಾರೆ!. ಅದನ್ನು ಕಲ್ಪವೃಕ್ಷ ಎನ್ನುತ್ತಲೇ Indian-Cow-calfಈ ಮಾದರಿಯ ಸಂಬಂಧಗಳನ್ನು ಜನ ತಮ್ಮ ದೈನಿಕದ ಬದುಕಿನಲ್ಲಿ ಕಟಿಕೊಳ್ಳಬಲ್ಲರು. ನೇಗಿಲನ್ನು ದೇವರೆಂದೇ ಆರಾಧಿಸಿಯೂ ಹಳತಾಗಿ ಉಳಲು ಅಸಾಧ್ಯವಾದಾಗ ದೀಪಾವಳಿಯ ಎಣ್ಣೆನೀರಸ್ನಾನದ ಒಲೆಗೆ ಉರುವಲಿನಂತೆ ಬಳಸಿಕೊಳ್ಳಬಲ್ಲರು. ಉಳುಮೆ ಮಾಡುವ ಜಾನುವಾರಿಗೆ ಬಾಸುಂಡೆ ಬರುವಂತೆ ಬಾರಿಸಿಯೂ ಅರ್‍ಹೂಡಿ ಬರುವಾಗ ಅದರ ಸಿರಿಪಾದವನ್ನು ತೊಳೆಯಬಲ್ಲರು ಮತ್ತು ಮಳೆಗಾಲದ ನೇಜಿಯ ಕೊನೆಗೆ ತಮ್ಮಂತೆಯೇ ಅದಕ್ಕೂ ಬರ್ಜರಿಯಾದ ಮರದತೊಗಟೆಯ ಚಗರು ಬೆರೆಸಿದ ಗಂಜಿ ಹಾಕಿ ರಜಾ ನೀಡಬಲ್ಲರು. ಬೆಳೆದು ನಿಂತ ಕದಿರನ್ನು ಉತ್ಸವದಂತೆ ಹೊತ್ತು ತರುವ ಅದೇ ಜನ ಭತ್ತದ ಒಡ್ಡು ಮಾಡುವಲ್ಲಿ ಅದನ್ನು ಕಾಲಡಿಯೇ ಮೆಟ್ಟಿತುಳಿಯಬಲ್ಲರು. ಪಂಪನ ಆದಿಪುರಾಣದ ಕೊನೆಯಲ್ಲಿ ಈ ಧಾನ್ಯ ಸಂಗತಿಗೆ ಸಂಬಂಧಿಸಿದ ವಿವೇಕಿಗಳನ್ನು,ಸಂಸ್ಕಾರವಂತರನ್ನು ಭರತ ಕಂಡುಕೊಂಡನೆಂಬ ಸಂದರ್ಭವೊಂದಿದೆ ಎನ್ನಲಾಗಿದೆ. ಅಲ್ಲಿ ಮೊಳಕೆಯೊಡೆದ ಧಾನ್ಯಗಳನ್ನು ಮೆಟ್ಟಿಕೊಂಡು ಬರಲಾರದ ಕೆಲವು ವಿವೇಕಿಗಳು ಭರತನಲ್ಲಿಗೆ ಬರಲಾಗದೆ ದೂರವೇ ನಿಂತರಂತೆ! ಈ ವಿವೇಕಿಗಳು ಖಂಡಿತ ಧಾನ್ಯದ ಒಡನಾಟವಿದ್ದವರು ಖಂಡಿತಾ ಆಗಿರಲಾರರು. ಯಾಕೆಂದರೆ ಕೃಷಿಕನೊಬ್ಬ ಈ ಮೊಳಕೆಯನ್ನು ಸದಾಕಾಲವೂ ಪೂಜಿಸುತ್ತಲೇ ಕೂರಲಾರ. ಈ ವಿವೇಕದ ಜೊತೆಗೆ ಆತನಲ್ಲಿ ಇನ್ನೂ ಒಂದು ವಿವೇಕವಿರುತ್ತದೆ. ಅದು ಮೆಟ್ಟಬೇಕಾದಾಗ, ಮುಟ್ಟಬೇಕಾದಾಗ ಎಲ್ಲವನ್ನೂ ದಾಟಿ ಮುಂದುವರೆಯುವಂತೆ ಪ್ರಚೋದಿಸಬಲ್ಲದು. ಅದು ಆತನ ಹೊಟ್ಟೆಯ ಹಸಿವು ಕಲಿಸಿದ ವಿವೇಕ! ಈ ವಿವೇಕವೇ ಆತನ ದಾರಿದೀಪ. ಅದು ಗದ್ದೆಯನ್ನು ಪೂಜಿಸುತ್ತದೆ, ಅದೇ ಗದ್ದೆಯ ಒಡಲು ಸೀಳಿ ಬೆತ್ತಲುಗೊಳಿಸಿ ಬಿತ್ತುತ್ತದೆ. ಉಪಯೋಗದ ನೆಲೆಯ ಭೌತಿಕ ಜಗತ್ತನ್ನು ಸರಿಯಾಗಿಯೇ ವಿವರಿಸಿಕೊಂಡ ಜನಸಾಮಾನ್ಯರ ವಿವೇಕದ ಬೆಳಕಿಗಷ್ಟೇ ಸಾಧವಾಗುವ ಆಹ್ವಾನ-ವಿಸರ್ಜನದ ತಾತ್ವಿಕಭಿತ್ತಿಯೂ ಇದರೊಳಗಿದೆ ಎಂಬುದನ್ನು ಮರೆಯಬಾರದು.

ತಾವು ಬಳಸುವ ವಸ್ತುವನ್ನು ಯಾವಾಗ ಪೂಜಿಸಬೇಕು, ಹೇಗೆ ಬಳಸಬೇಕು ಎಂಬ ವ್ಯಾವಹಾರಿಕ ಸಂವಿಧಾನ ಹೊಂದಿರುವ ಕೃಷಿಕರಿಗೆ indian-cowತಾವು ಸಾಕುತ್ತಿರುವ ಗೋವೊಂದನ್ನು ಲಾಭದಾಯಕವಾಗಿ ಎಷ್ಟು ಕಾಲ ಇರಿಸಿಕೊಳ್ಳಬಹುದೆಂಬುದರ ಲೆಕ್ಕಾಚಾರವಿರುತ್ತದೆ. ಅದೇ ರೀತಿ ಅವುಗಳನ್ನು ಮಾರಲೇಬೇಕಾದ ಲೌಖಿಕ ಒತ್ತಡದ ನಡುವೆ ಯಾವ ವಯೋಮಾನದ, ಯಾವ ಗುಣಮಟ್ಟದ ಹಸುವನ್ನು ಯಾರು ಖರೀದಿಸಬಲ್ಲರು ಎಂಬ ಅರಿವೂ ಇರುತ್ತದೆ. ತಾನು ಮಾರುವುದು ಯಾಕೆ ಎಂಬುದು ಅರ್ಥವಾಗುವವನಿಗೆ ಇನ್ನೊಬ್ಬ ಕೊಂಡುಕೊಳ್ಳುತ್ತಾನೆಂದರೆ ತನಗೆ ಅನುಪಯುಕ್ತವಾದುದು ಆತನಿಗೆ ಉಪಯುಕ್ತವಾಗುವ ದಾರಿಯು ಎಂತಹುದು ಎಂಬುದೂ ಗೊತ್ತಿರುತ್ತದೆ. ಆದರೆ ಕೃಷಿಕರ ಜಗತ್ತಿನಲ್ಲಿ ಉಳಿದ ಕುರಿ, ಕೋಳಿಗಳ ಸಾಕಣೆಯ ಜತೆಗಿರದ ವಿಲಕ್ಷಣ ಸಂಬಂಧವೊಂದು ಈ ಜಾನುವಾರುಗಳ ಜತೆಗಿರುತ್ತದೆ. ಸಾಕುತ್ತಲೇ ಮೈಸವರುತ್ತಲೇ ಕುರಿ, ಕೋಳಿಗಳನ್ನು ಕಣ್ಣೆದುರಿಗೆ, ಕೊಂದು ತಿನ್ನುವುದು ಅವರಿಗೆ ಜೀವ-ಕರುಣೆ ಇಂತಹ ಯಾವ ಸಂಗತಿಯನ್ನು ಉದ್ದೀಪಿಸಬೇಕಾಗಿಲ್ಲ. ಆದರೆ ಹಸು-ಎಮ್ಮೆಗಳ ಜೊತೆಗಿನ ಸಂಬಂಧದ ಸ್ವರೂಪವನ್ನು ಹೀಗೆ ಸರಳವಾಗಿ ಅವರು ತೂಗಿಕೊಳ್ಳಲಾರರು. ಈ ಜಾನುವಾರುಲೋಕದ ಜೊತೆಗೆ ಅವರೊಳಗೆ ರೂಢಿಪ್ರಜ್ಞೆಯ ಮೂಲಕ ಭಾವನೆಯ ಆಳಕ್ಕೆ ಬೇರು ಬಿಟ್ಟ ಸಂಬಂಧದ ತಂತು ಒಂದಿರುತ್ತದೆ. ಅದರ ಪ್ರಭಾವದಿಂದಾಗಿ ತಾವು ಸಾಕಿ, ತಾವೇ ತಿನ್ನದ ಗೋವಿಗೆ ಸಂಬಂಧಿಸಿದಂತೆ ಸಾಗಹಾಕುವ ವೇಳೆ ಒಂದು ಸಣ್ಣ ಪಾಪಪ್ರಜ್ಞೆಯೂ ಕಾಡುವಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಅವರಿರುತ್ತಾರೆ ಎಂಬುದೂ ದಿಟ. ಜಾನುವಾರನ್ನು ಯಾರಿಗೇ ಮಾರುವುದಿರಲಿ, ತನ್ನ ಹಟ್ಟಿಯಿಂದ ಹೊರಹೊಡಿಸುವಾಗ ಹಣಕ್ಕಾಗಿ ತನ್ನ ಮಕ್ಕಳಂತಿರುವ ಬಂಧುತ್ವವೊಂದನ್ನು ಕಳೆದುಕೊಳ್ಳುವ ಸಂಕಟ ಅನುಭವಿಸದ ಕೃಷಿಕ ಪ್ರಾಯಶಃ ಇರಲಾರ. ತಾವೇ ಹೆರಿಗೆ ಮಾಡಿ, ತಾವೇ ಕೈತುತ್ತು ಹಾಕಿ, ತಾವೇ ಮೈತೊಳೆದು ಮಕ್ಕಳಂತೆ(?) ಸಾಕಿದವುಗಳೆನ್ನುವ ಭಾವನಾತ್ಮಕ ಸಂಬಂಧಗಳ ಕಾರಣದ ಸಂಕಟ ಅದು. ಪರಂಪರೆಯಿಂದ ಬಂದ ಕಥನಗಳು ಮತ್ತು drought-dead-cowತಾನೇ ಸಾಕಿದ್ದರ ಜೊತೆಗಿನ ಒಡನಾಟದ ಮೂಲಕ ಕಟ್ಟಿಕೊಂಡ ನಿಶ್ಚಿತ ಸಂಬಂಧಗಳನ್ನೆಲ್ಲಾ ನಿರಾಕರಿಸಿ ಮಾರಿ ಕೈತೊಳೆದುಕೊಳ್ಳುವ ಸಣ್ಣತನ ತನ್ನದೆನ್ನುವುದರಿಂದ ಹುಟ್ಟುವ ಪಾಪಪ್ರಜ್ಞೆಯದು. ಭೌತಿಕ ವ್ಯಾವಹಾರಿಕ ಸತ್ಯದ ನಡುವೆ ನುಸುಳಿಕೊಳ್ಳುವ ಈ ವಿಲಕ್ಷಣ ಸಂಬಂಧದ ಪರಿಣಾಮವಾಗಿ ಜಾನುವಾರುಗಳ ವಿಕ್ರಯವು ಸಾಕಿದಾತನಲ್ಲಿ ಒಂದು ಬಗೆಯ ಕೊಲೆಗಡುಕತನದ ಪಾಪಪ್ರಜ್ಞೆಯ ಭಾವವನ್ನೂ ಉದ್ದೀಪಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈ ಪಾಪಾತ್ಮಸ್ಥಿತಿಯನ್ನು ಬಹುವಾಗಿ ಅನುಭವಿಸುವವನು ಕೃಷಿಕನಾಗಿರುವ ಜೊತೆಗೆ ಮಧ್ಯಮ ಇಲ್ಲವೇ ಕೆಳಮಧ್ಯಮವರ್ಗಕ್ಕೆ ಸೇರಿದವನೂ ಆಗಿರುತ್ತಾನೆ. ಅಷ್ಟೇ ಅಲ್ಲದೆ ಆತ ಈ ದೇಶದ ಸಾಮಾನ್ಯ ಮಧ್ಯಮವರ್ಗವನ್ನು ಆಕ್ರಮಿಸಿಕೊಂಡಿರುವ ಕರ್ಮಸಿದ್ಧಾಂತದ ಹಿಡಿತ, ಪ್ರಭಾವಗಳಿಗೆ ಪಕ್ಕಾದವನೂ ಆಗಿರುತ್ತಾನೆ. ವರ್ತಮಾನದ ದುಸ್ಥಿತಿಯನ್ನು ತನ್ನ ಪೂರ್ವದ ಕರ್ಮಫಲವೆಂದು ನಂಬುತ್ತಾ, ತದನಂತರದ ಬದುಕಿನ ಪಾಪಗಳ ಕುರಿತು ಸದಾ ಆತಂಕದಲ್ಲಿಯೇ ಇರುವ ಮಧ್ಯಮವರ್ಗದ ಎಲ್ಲಾ ಗುಣದೋಷಗಳೂ ಈತನಲ್ಲಿರುತ್ತವೆ. ಆಯ್ಕೆಯಲ್ಲದ ಕೃಷಿಬದುಕಿನ ಹುಟ್ಟು ಮತ್ತು ವರ್ತಮಾನದಲ್ಲಿ ಅನುಭವಿಸುತ್ತಿರುವ ಭೌತಿಕ ದುರವಸ್ಥೆಯನ್ನು ಪುರಾಕೃತಕರ್ಮದ ಬಳುವಳಿಯಾಗಿಯೂ, ಆ ಕರ್ಮ ನಿಮಿತ್ತವಾದ ಈ ಬಾಳಿನ ಹೊಣೆಗಾರ ತಾನೇ ಎನ್ನುವಂತೆಯೂ ಆತ್ಮನಿಂದೆಯಲ್ಲಿ ನಿಂತುಬಿಡುವ, ಆತ್ಮದ ಆಚೆಗೆ ಪಾಪದ ಹೊಣೆಯನ್ನು ಗುರುತಿಸಲಾರದ ವರ್ಗಕ್ಕೆ ಸೇರಿದವನೀತ. ವರ್ತಮಾನದ ಸ್ಥಿತಿಗಾಗಿ ಹೀಗೆ ಗತದ ಹೊಣೆಹೊತ್ತುಕೊಳ್ಳಬೇಕಾದ ಅನಿವಾರ್‍ಯತೆಯಿಂದ ಪಾರಾಗಲಾರದ ಸಂಕಟದ ನಡುವೆಯೂ, ಸಾಕಿದ ಜೀವವನ್ನು ಕನಿಕರವಿಲ್ಲದೆ ಮಾರಬೇಕಾದ ವರ್ತಮಾನದ ಸ್ಥಿತಿಯಿಂದಾಗಿ ಮುಂದಿನ ಬಾಳಿನ ಪಾಪದ ಬುತ್ತಿಯನ್ನು ಬಲಿದುಕೊಳ್ಳುತ್ತಿದ್ದೇನೆ ಎಂಬ ತೊಳಲಾಟಕ್ಕೆ ಗುರಿಯಾಗುವವನಿವನು. ಹೀಗೆ ವ್ಯಕ್ತಿಗತ ನೆಲೆಯಲ್ಲಿ ಪಾಪದ ಹೊಣೆಹೊತ್ತು ಕೊರಗಿನಲ್ಲಿರುವವನೀತ. ಅಷ್ಟೇ ಅಲ್ಲದೆ ಈ ಕೊರಗಿನಿಂದ ಪಾರಾಗುವ ನಿರೀಕ್ಷೆ ಹೊಂದಿದವನೂ ಆಗಿ, ಪಾಪಚಕ್ರದಿಂದ ಪಾರುಗಾಣುವ ದಾರಿಕಾಣದೆ ಹತಾಶೆಯ ಮನಸ್ಥಿತಿಯಲ್ಲಿರುವವನೂ ಹೌದು.

ಕರ್ಮಚಕ್ರದ ಈ ಬದಲಾಗದ ನಿರಂತರತೆಗೆ ಸಿಕ್ಕಿ ಘಾಸಿಗೊಳಗಾಗುವ ಸಮುದಾಯದೊಳಗಿನ ಪಾಪಪ್ರಜ್ಞೆಯ ತೊಳಲಾಟ ಮತ್ತು ಅದರಿಂದ ಪಾರಾಗುವ ದಾರಿಕಾಣದೆ ಉಂಟಾಗುವ ಹತಾಶೆಗಳು ಸಮುದಾಯವನ್ನು ದಿಕ್ಕುತಪ್ಪಿಸುವ ಬಾಹ್ಯಶಕ್ತಿಯೊಂದರ ಉದ್ದೇಶಿತ ಕಾರ್‍ಯಯೋಜನೆಗೆ ಹಾಳತವಾಗಿ ಒದಗಿ ಬರುತ್ತವೆ. ಪಾಪಪ್ರಜ್ಞೆಯ ಹೊಣೆಗಾರಿಕೆಯಲ್ಲಿ ಸಣ್ಣಗೆ ನರಳುವ ಸಾಮಾನ್ಯರು ಕೊಡಮಾಡಿದ ಈ ಸಣ್ಣ ಜಾಗವನ್ನೇ ತನ್ನ ಶಕ್ತಿ ರಾಜಕಾರಣದ ಅಂಗಣವನ್ನಾಗಿ ಸ್ಥಾಪಿತ ಯಜಮಾನ್ಯವು ಬಳಸಿಕೊಳ್ಳುತ್ತದೆ. ರೈತನ ದುಸ್ಥಿತಿಗೆ ಇಡಿಯ ಸಾಮಾಜಿಕ ವ್ಯವಸ್ಥೆಯಲ್ಲಿನ ಆರ್ಥಿಕ ಅಸಮತೋಲನದ ಜೊತೆಗಿನ ಇತರ ಕಾರಣಗಳನ್ನು ಶೋಧಿಸಿ ತೋರುವ ವಾಸ್ತವಿಕ ಮಾರ್ಗಕ್ಕೆ ಬದಲಾಗಿ ಅದು ಬೇರೊಂದು ದಾರಿಯನ್ನು ಹಿಡಿಯುತ್ತದೆ. ರೈತನ ಅಸಹಾಯಕತೆಯ ಕ್ಷಣವು ಅವನ ಪಾಪೋತ್ಪಾದನೆಯ ಕ್ಷಣವಾಗಿ ಮಾರ್ಪಡುವ ಮೂಲ ಕಾರಣ ಆರ್ಥಿಕ ಆಮಿಷವೆಂದೂ, ಹಸುವನ್ನು ಸಾಕಿ ಹಸುವಿನಂತಾದ ಮುಗ್ದನನ್ನು ವಂಚನೆಯ ಬಲೆಯಲ್ಲಿ ಕೆಡವಿಹಾಕಲಾಗಿದೆಯಂತಲೂ ಅದು ವಾದಿಸುತ್ತದೆ. ತನಗೆ ನಿಜವಾಗಿಯೂ ಇಲ್ಲದ ನೆಲೆಯನ್ನು ಇರುವಂತೆ ನೋಡಿಕೊಳ್ಳುವ ಸಲುವಾಗಿಯೇ ಹೀಗೆ ಖರೀದಿದಾರರನ್ನು ಅದು ಅಪರಾಧೀಕರಣಕ್ಕಿಳಿಸಿ ರಾಕ್ಷಸೀಕರಣ ಮಾಡುತ್ತದೆ. ಪಾಪಾತ್ಮನಲ್ಲದವನಲ್ಲಿ ಪಾಪಾತ್ಮದ ಕುರಿತಾದ ಪಶ್ಚಾತ್ತಾಪ ಹುಟ್ಟಿಸುವ ಈ ಆರ್ಥಿಕ ಆಮಿಷದ ನಿವಾರಣೆಗೆ ತಾನು ಪೂರ್ಣ ನಾಯಕತ್ವವನ್ನು ವಹಿಸುವುದಾಗಿ ಹೇಳುತ್ತದೆ. ಹೀಗೆ ಸಾಮಾನ್ಯರ ದೈನಿಕದ ಬದುಕಿನ ಸಂದರ್ಭದಲ್ಲಿ ಸಿಗುವ ಇಂತಹ ಚಿಕ್ಕ ಚಿಕ್ಕ ಅವಕಾಶಗಳನ್ನೇ ತಮ್ಮ ಬೆಚ್ಚನೆಯ ಗೂಡನ್ನಾಗಿ ಸ್ಥಾಪಿತ ಯಜಮಾನಿಕೆ ಮಾರ್ಪಡಿಸಿಕೊಳ್ಳುತ್ತದೆ. brahma-cow-indiaಇಂತಹ ಸೂಕ್ಷ್ಮವಾದ ನೆಯ್ಗೆಯಲ್ಲಿರುವ ಮೂಕಪ್ರಾಣಿಯ ಕುರಿತಾದ ಕರುಣೆಯ ಪುಟ್ಟನೆಲೆಯಲ್ಲಿಯೇ ತನ್ನ ಯಶಸ್ಸಿನ ಬೀಜವನ್ನು ನೆಟ್ಟು ಹೆಮ್ಮರವಾಗಿಸಿದ ಸ್ಥಾಪಿತ ಯಜಮಾನಿಕೆ ಕೊಲೆಯ ಕಾರಣನಾದೆ ಎಂಬ ಕೃಷಿಕನ ಸ್ವ ಕರ್ಮದ ಹೊಣೆಗಾರಿಕೆಯನ್ನು ಅನ್ಯ ಮೂಲದಲ್ಲಿ ತೋರಿಸಿ, ರೈತನಿಗೆ ಪಾಪ ಮುಕ್ತಿಯ ನಿರುಮ್ಮಳತೆಯನ್ನು ನೀಡುತ್ತದೆ. ರೈತಾಪಿ ವರ್ಗ ಹಸುವನ್ನು ಯಂತ್ರವಾಗಿ ಬಳಸಿಯೂ, ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅದು ಮಾಡಬೇಕಾದ ಕೆಲಸವನ್ನು ಅದರ ಪರವಾಗಿಯೇ ತಾನು ಮಾಡುತ್ತಿರುವಂತೆ ನಂಬಿಸುತ್ತದೆ. ಹಸುವನ್ನು ವಿಕ್ರಯಿಸುವವನು ಸಾಕುವವನ ಬಡತನವನ್ನು ಬಳಸಿಕೊಂಡು ಅವನ ಭಾವನೆಗಳನ್ನು ಅತಿ ವ್ಯವಸ್ಥಿತವಾಗಿ ಧಮನಿಸುತ್ತಿದ್ದಾನೆ ಎಂಬ ವಿಚಾರವನ್ನು ವೈಚಾರಿಕ ಆಕೃತಿಯಾಗಿ ಗಟ್ಟಿಗೊಳಿಸುತ್ತಾ ಹೋಗುತ್ತದೆ. ಹೀಗೆ ಅಶಿಕ್ಷಿತ ಮತ್ತು ಅರೆಶಿಕ್ಷಿತ ಸಮುದಾಯಕ್ಕೆ ತಮ್ಮ ಪಾಪದ ಹೊಣೆಗಾರಿಕೆಯಿಂದ ಪರಿಹಾರ ನೀಡಿದ ಭ್ರಮೆಯನ್ನು ಉಂಟುಮಾಡುವ ಮುಲಕ ಈ ಸಾಂಸ್ಥಿಕ ಶಕ್ತಿಕೇಂದ್ರ ಮತ್ತಷ್ಟು ಸಾಮೀಪ್ಯವನ್ನು ಸಾಧಿಸುತ್ತದೆ.

ಈ ತಂತ್ರಯೋಜನೆ ಹಸುವಿನ ಉಳಿದೆಲ್ಲಾ ಆಯಾಮದ ಚರ್ಚೆಯನ್ನು ನಿವಾರಿಸಿ ಅದನ್ನು ಆಹಾರವಾಗಿ ಬಳಸುವ ಸಮಸ್ಯೆಯನ್ನು ಮಾತ್ರ ಮುನ್ನೆಲೆಗೆ ತರುತ್ತದೆ. ಇದು ವಾಸ್ತವಿಕವಾಗಿ ಜೀವಾತ್ಮ-ಹತ್ಯೆ-ವಧೆ-ಪಾಪಗಳೆಂಬ ಪರಿಭಾಷೆಗಳ ಚಕ್ರದಲ್ಲಿ ನಿರ್ದಿಷ್ಟವಾದ ಆಹಾರಕ್ರಮವೊಂದನ್ನು ಆಹಾರದ ಬದಲಾಗಿ ಆಕ್ರಮಣವೆಂಬ ಸಂಕಥನದಲ್ಲಿ ಬಂಧಿಸುವ ರಾಜಕಾರಣ. ಹಸಿವು ಆಹಾರಗಳ ಈ ರಾಜಕಾರಣದ ಪರಿಭಾಷೆಯು ಇಲ್ಲಿಗೆ ನಿಲ್ಲಲಾರದು. ಇದು ಮುಂದುವರೆದು ಸೂಕ್ಷ್ಮವಾಗಿ ಸಸ್ಯೇತರ ಮೂಲವನ್ನು ಆಹಾರ ಮಾದರಿಯ ಆಕರವಾಗಿ ಬಳಸುವ ಒಂದು ವಿಶಾಲ ಸಮುದಾಯವನ್ನೇ ರಾಕ್ಷಸೀಕರಣದ ಆವರಣದಲ್ಲಿ ಕಟ್ಟುವ ಕೆಲಸವನ್ನು ಚುರುಕುಗೊಳಿಸುತ್ತದೆ. ಇದರ ತಾಜಾ ಉದಾಹರಣೆಯಾಗಿಯೇ ಆಹಾರ ಸಂಸ್ಕೃತಿಯ ಬಹಿಷ್ಕೃತ ಮಾದರಿಯೆಂದು EGGS 2ವಾದಿಸಿ ಸರ್ಕಾರಿ ಶಾಲೆಯಲ್ಲಿ ಓದುವ ಬಡಮಕ್ಕಳ ಅನ್ನದ ತಟ್ಟೆಗೆ ಬೀಳಬಹುದಾಗಿದ್ದ ಮೊಟ್ಟೆಯಂತಹ ಪೌಷ್ಟಿಕ ಆಹಾರವನ್ನು ಅಪಹರಿಸಿದ್ದ ಬಗೆಯನ್ನು ನೆನೆದುಕೊಳ್ಳಬಹುದು. ಹೀಗೆ ಈ ಸಂಕಥನದ ವಿಸ್ತರಣೆಯಿಂದ ಅನ್ನವೊಂದು ಆಹಾರವಾಗುವ ಬದಲು ಅನ್ಯಗೊಂಡು ಸಾಂಸ್ಕೃತಿಕವಾಗಿ ಬಹಿಷ್ಕೃತ ಮಾದರಿಯಾಗುತ್ತದೆ. ಬಹಿಷ್ಕೃತವಾದುದನ್ನು ತಿಂದವರನ್ನು ಪಾರಂಪರಿಕ ಸಮಾಜ ಹೇಗೆ ಅಂಚಿಗೆ ಸರಿಸಿದೆಯೋ, ಅಂತೆಯೇ ಹೊಸಕಾಲದ ರಾಜಕೀಯ ಅಧಿಕಾರ ಕೇಂದ್ರದಿಂದಲೂ ಇವರನ್ನು ಅಂಚಿಗೆ ಸರಿಸುವುದೇ ಈ ಸ್ಥಾಪಿತಶಕ್ತಿಯ ಆತ್ಯಂತಿಕ ಗುರಿ. ಅದೆಲ್ಲವನೂ ಸಾಧಿಸಲು ಈ ಹಸು-ಎಮ್ಮೆಗಳ ಜಗತ್ತಿನ ಕಾರ್‍ಯಯೋಜನೆಗಳು ಪೂರಕವಾಗಿ ಒದಗಿ ಬರುತ್ತವೆ ಎಂಬುದನ್ನು ಗಮನಿಸಬೇಕು.

ಈಗಾಗಲೇ ಮೇಲೆ ಹೇಳಿದಂತೆ ಜಾನುವಾರುಗಳ ಕುರಿತ ಇಡಿಯ ರಾಜಕೀಯ ಸಂಕಥನಕ್ಕೆ ಜಾನುವಾರು ಜಗತ್ತಿನ ಇತರ ಸಮಸ್ಯೆಗಳು ಆದ್ಯತೆಯ ಪ್ರಶ್ನೆಗಳಲ್ಲ. ಹಾಗೊಂದು ವೇಳೆ ಅವುಗಳನ್ನು ಮುನ್ನೆಲೆಗೆ ತಂದು ಸಂಪನ್ಮೂಲವನ್ನು ಉಳಿಸುವುದೇ ಅದರ ಆದ್ಯತೆಗಳಾಗಿದ್ದ ಪಕ್ಷದಲ್ಲಿ, ಹಸು-ಎಮ್ಮೆಗಳ ಈ ಜಾನುವಾರು ಜಗತ್ತು ದೊಡ್ಡ ಸಂಖ್ಯೆಯಲ್ಲಿ ಕರಗುತ್ತಿರುವ ಈ ಹೊತ್ತಿನಲ್ಲಿ ಅಮೃತಸದೃಶವಾದ ಒಂದು ಲೀಟರ್ ಹಾಲು ತೆಗೆಯಲು ರೈತನಿಗೆ ಬೀಳುತ್ತಿರುವ ಖರ್ಚೆಷ್ಟು? ಆದರೆ ಆತ ನಿಜಕ್ಕೂ ಪಡೆಯುತ್ತಿರುವುದೆಷ್ಟು? ನಮ್ಮದೇ ನೆಲದೊಡಲಿನಿಂದ ತೆಗೆಯಲು ಅನುಮತಿಸಿದ ಒಂದು ಲೀಟರ್ ಖನಿಜಯುಕ್ತವೆನ್ನಲಾಗುವ ನೀರಿಗೆ ಎಷ್ಟು ಬೆಲೆಪಡೆಯಲು ಅನುಮತಿಸಲಾಗಿದೆ? ನಮ್ಮದೇ ಕಡಲಿನ ಉಪ್ಪನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ, ಅದರ ಮೇಲೆ ತೆರಿಗೆ ಸಲ್ಲದೆಂದು ಉಪವಾಸ ಕುಳಿತ ಗಾಂಧೀಜಿಯವರ ಹೋರಾಟದಿಂದ ಸ್ವಾತಂತ್ರ್ಯ ಪಡೆದ ಇದೇ ದೇಶ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಇಂದು ಒಂದು ಕೆ.ಜಿ ಉಪ್ಪನ್ನು ಎಷ್ಟು ದರದಲ್ಲಿ ಮಾರಲು ಅನುಮತಿ ನೀಡಿದೆ? ಇದೆಲ್ಲದರ ಜೊತೆಗೆ ನಮ್ಮದೇ ನಿಸರ್ಗ ಸಂಪತ್ತನ್ನು ಬಳಸುವ ದೇಶದ ಕುಭೇರರಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡುತ್ತಿರುವ ತೆರಿಗೆ ರಿಯಾಯಿತಿಗಳೆಷ್ಟು? ಎಂಬ ಪ್ರಶ್ನೆಗಳು ಮುಖ್ಯವಾಗುತ್ತಿದ್ದವು. ಇವುಗಳ ಬಗೆಗೆ ಚಕಾರವೆತ್ತದೆ ರೈತನ ದುಡಿಮೆಯ ಫಲವನ್ನು ಅಡ್ಡಾದಿಡ್ಡಿ ದರಕ್ಕೆ ಕಸಿದುಕೊಂಡು, ಆತನಿಂದ ಹೊಣೆಗಾರಿಕೆಯನ್ನು ನಿರೀಕ್ಷಿಸುವ ನಾಗರಿಕ ಸಮಾಜಕ್ಕೆ ರೈತನ ಸಮಸ್ಯೆಯ ನಿಜವಾದ ಅರಿವಾಗಲೀ, ಸಹಾನುಭೂತಿಯಾಗಲೀ ಇದೆಯೇ? ರೈತನಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ವಿಮೆಯ ಸೌಲಭ್ಯದ ವ್ಯಾಪ್ತಿಗೆ ಎಷ್ಟೊಂದು ಹಸುಗಳು ಒಳಪಟ್ಟಿವೆ? ಇದಕ್ಕೆಲ್ಲಾ ರೈತರ ಅಜ್ಞಾನವಷ್ಟೇ ಕಾರಣವೇ? cows-killed-by-droughtಬರಗಾಲದ ಹೊತ್ತಿನಲ್ಲಿ ಕುಡಿಯಲು ನೀರನ್ನೂ ಪಡೆಯದೆ ಸಾಯುವ ಜಾನುವಾರುಗಳು ಎಷ್ಟಿವೆ? ಅತ್ಯಂತ ಸಂಪದ್ಪರಿತವಾದ ನಾಟಿತಳಿ ಹಸುಗಳನ್ನು ದಾನವಾಗಿಯೂ ಸ್ವೀಕರಿಸದಿರುವಾಗ ಅದನ್ನು ಸಾಕಬೇಕಾದವರು ಯಾರು? ಹಸುವೆಂದರೆ ಬರಿಯ ಹಾಲಿನ ಉತ್ಪಾದನೆಗಷ್ಟೇ ಸೀಮಿತವಾದುದೇ? ಅದನ್ನು ಕೇಂದ್ರವಾಗಿರಿಸಿದ ಇನ್ನಿತರ ಉದ್ಯಮಗಳನ್ನು ಹೇಗೆ ವಿವರಿಸಿಕೊಳ್ಳಬೇಕು? ಆದಾಯ ಮತ್ತು ಯಜಮಾನಿಕೆಗಳ ಮಾಧ್ಯಮವಾಗಿ ದುಡಿಸಲ್ಪಟ್ಟಿರುವ ಜಾನುವಾರುಗಳ ಜಗತ್ತನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಯಾರ ಮೇಲಿದೆ? ಈ ಹೊಣೆಗಾರಿಕೆಯನ್ನು ಯಾರಿಂದ ನಿರೀಕ್ಷಿಸಲಾಗುತ್ತಿದೆ? ಯಾರ ಮೇಲೆ ಹೊರಿಸಲಾಗುತ್ತಿದೆ? ಚಲನೆ ಕಳೆದುಕೊಂಡು ಅಪ್ರಸ್ತುತಗೊಳ್ಳುತ್ತಾ ಕಣ್ಣೆದುರಿನಿಂದ ಮಾಯವಾಗುತ್ತಿದ್ದರೂ, ಭಾವನೆಯಲ್ಲಿ ಲಂಗರು ಹಾಕಿ ನಿಲ್ಲುವುದರಿಂದ ಹಸು ಮತ್ತು ಅದರ ಜೊತೆಗಿನ ಪಾರಂಪರಿಕವಾದ ಜ್ಞಾನ-ಮೌಲ್ಯಗಳನ್ನೊಳಗೊಂಡ ಸಾಂಸ್ಕೃತಿಕ ಜಗತ್ತು ಉಳಿಯುತ್ತದೆಯೇ? ಒಂದು ಸಾಂಸ್ಕೃತಿಕ ಸಂದರ್ಭವು ಜಡತ್ವಕ್ಕೆ ತಳ್ಳಲ್ಪಡುವುದರಿಂದ ಸಮಾಜದ ಮನಸ್ಥಿತಿಯ ಮೇಲೆ ಉಂಟಾಗುವ ಪರಿಣಾಮವೆಂತಹದು? ಇಂತಹ ಸಾಲು ಸಾಲು ಪ್ರಶ್ನೆಗಳನ್ನು ಅವರ ಎದುರಿಗಿಡಬೇಕಾಗಿದೆ.

ಈ ಎಲ್ಲಾ ಹುನ್ನಾರಗಳನ್ನು ನಿರಸನಗೊಳಿಸಿ ಹಸುಸಾಕುವವರಿಗೆ ಗೌರವದ ಬದುಕಿನ ಜೊತೆಗೆ ನಮಗೆ ನಿಜಕ್ಕೂ ಬೇಕಾದ ತಳಿಗಳು ಉಳಿಯಬೇಕಾದರೆ ಅದನ್ನು ಸಾಕುವವರು ಪ್ರಜ್ಞಾವಂತರಾಗಬೇಕು. ದನ ಮೇಯಿಸುವುದು ಯಾತಕ್ಕೂ ಬೇಡದ ಉದ್ಯೋಗವೆಂಬ ಹಣೆಪಟ್ಟಿ ತೊಲಗಿ ಅದೊಂದು ಗೌರವ ತರುವ ಕಾಯಕವೆನಿಸುವ ವಾತಾವರಣ ಮೂಡಬೇಕು. ಭಾವನೆ ಮತ್ತು ಅಸಹಾಯಕತೆಯ ಮೇಲೆ ಯಜಮಾನಿಕೆ ಚಲಾಯಿಸಬಹುದಾದ ಅವಕಾಶ ಇಲ್ಲವಾಗಬೇಕು. cow-decorated-festivalವಾಸ್ತವವನ್ನು ಇರುವಂತೆಯೇ ವಿವರಿಸಿಕೊಳ್ಳಬಹುದಾದ ಸಾಂಸ್ಕೃತಿಕ ವಾತಾವರಣ ಸಿದ್ಧಗೊಳ್ಳಬೇಕು. ಆದರೆ ಜನರನ್ನು ಶಿಕ್ಷಣದ ಆವರಣಕ್ಕೆ ತಾರದೆಯೇ ಹುನ್ನಾರಗಳನ್ನು ಅರ್ಥೈಸಿಕೊಳ್ಳುವ ಅರಿವಿನ ಜಗತ್ತು ಅಸಾಧ್ಯವಾಗುತ್ತದೆ. ಈ ಅರಿವಿನ ಜಗತ್ತು ಸಾಧ್ಯವಾದಾಗ ಅವರೇ ತಮ್ಮದೆಂದು ಭಾವಿಸಿಕೊಂಡ ಪಾಪದ ನೆಲೆಗಳಾಗಲೀ, ಕಾರಣರೆಂದು ಭ್ರಮಿಸಿದ ‘ಅನ್ಯ’ತ್ಪದ ಕಲ್ಪನೆಯಾಗಲೀ ನಿರಸನಗೊಂಡು ತಾವು ತಮ್ಮ ಮೇಲೆ ಹೇರಿಕೊಂಡ ನಾಯಕತ್ವವನ್ನು ತಾವೇ ನಿರಾಕರಿಸುವಂತಾಗುತ್ತದೆ. ಹಾಗಾದಾಗ ಮಾತ್ರ ಹುನ್ನಾರಗಳಿಗೆ ಸಮ್ಮತಿಯ ಮುದ್ರೆಯೊತ್ತಿದ ಜನಸಾಮಾನ್ಯರೇ ಪ್ರತಿರಾಜಕಾರಣದ ನಿಜದ ನಾಯಕರಾಗಿ ಸ್ಥಾಪಿತ ಯಜಮಾನ್ಯವನ್ನು ನಿರಾಕರಿಸಿ ದೈನಿಕವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಸ್ಥಿತಿಯೊಂದು ಸಾಧ್ಯವಾಗದೇ ಇರುವಲ್ಲಿಯವರೆಗೆ, ಹಿಂದಣೆ-ಮುಂದಣೆಗಳೆಂಬ ಹಟ್ಟಿಯ ಅವಯವಗಳಲ್ಲಿ ಹಿಂದಣೆ-ಮುಂದಣೆಗಳು ತುಂಬುವ-ಖಾಲಿಯಾಗುವ ಈ ನಿರಂತರತೆಯ ಕೊಂಡಿ ಸರಿದುಹೋಗಿ ಕೆಂಪಿ, ಬುಡ್ಡಿ, ಕಾಳಿ, ಬೆಳ್ಳು, ಕೆಂಪಣ್ಣರ ಉಪಸ್ಥಿತಿ ನಾಪತ್ತೆಯಾಗುತ್ತಾ ಸಾಗುತ್ತದೆ. ಅಚ್ಚು ಹಾಕಿಕೊಟ್ಟ ಧರಣಿಮಂಡಲ, ಕಾಳಿಂಗ, ಕೊಳಲು, ಗಂಗೆ, ತುಂಗೆಯರ ಜಪವಷ್ಟೇ ನಮ್ಮದಾಗಿ, ಲೋಹದ ರೂಪದ ಮೋಹದ ಗೋವು ಉಚ್ಚೆಹಾರಿಸುವ, ಜೀವ ತುಂಬಿದ ಹಸುಗಳನ್ನು ಕೊಂದು ಮುಗಿಸುತ್ತದೆ.