ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು


– ರವಿ ಕೃಷ್ಣಾರೆಡ್ದಿ


 

“It’s easier to fool people than to convince them that they have been fooled.”― Mark Twain

ಇದು ಅಮೆರಿಕ ಅಲ್ಲ ಮತ್ತು ಇಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಇಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ದೇಶದ ದೊಡ್ಡ ಪಕ್ಷವೊಂದು ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಸುತ್ತಮುತ್ತ ನಡೆದ ಘಟನಾವಳಿಗಳ ಬಗ್ಗೆ ಹೇಳುವುದಾದರೆ, ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಇರುವುದಿಲ್ಲ ಮತ್ತು ಅಭ್ಯರ್ಥಿಗಳೂ ಇರುವುದಿಲ್ಲ. ಬಹುಮತ ಪಡೆದ ಸಂಸದೀಯ ಗುಂಪು ಆಯ್ಕೆ ಮಾಡಿಕೊಳ್ಳುವ ನಾಯಕತ್ವದ ಸ್ಥಾನ ಅದು. ಇತ್ತೀಚೆಗೆ ಆಗುತ್ತಿರುವುದೆಲ್ಲ ಮೀಡಿಯಾ ಮ್ಯಾನೇಜ್ ಮಾತ್ರವಾಗಿದೆ ಮತ್ತು ನಿತ್ಯಹಸಿವಿನ ಕಾರಣಕ್ಕಾಗಿ ಅದನ್ನು ಮಾಧ್ಯಮಗಳು ಭಕ್ಷಿಸಿ ಜನರಿಗೆ ಉಣಬಡಿಸುತ್ತಿವೆ.

ಗುಜರಾತಿನ ನೆಲದಲ್ಲಿ ಹುಟ್ಟಿಬಂದ ಸಂತ, ರಾಜಕಾರಣಿ, ಶಾಂತಿದೂತ,  ಗಾಂಧೀಜಿ. 200px-MKGandhi[1]ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಕೊನೆಯವರೆಗೂ ಗಾಂಧೀಜಿಯನ್ನು ಗೌರವಿಸುತ್ತ ಉಳಿದವರು ಸರ್ದಾರ್ ಪಟೇಲ್. ದೇಶ ಕಟ್ಟಿದವರು. ಅಂತಹ ನೆಲದಲ್ಲಿ ಯಾವುದೇ ಪಾಪಪ್ರಜ್ಞೆ ಮತ್ತು ಪ್ರಾಯಶ್ಚಿತ್ತದ ಲವಲೇಶವೂ ಇಲ್ಲದ ಕಳೆಯ ಗಿಡವೊಂದು ಇಂದು ವಿಷಪೂರಿತ ಮುಳ್ಳುಗಳೊಂದಿಗೆ ಆಮ್ಲಜನಕಕ್ಕೆ ಬದಲಾಗಿ ಇಂಗಾಲವನ್ನೇ ಕಕ್ಕುವ ಹೆಮ್ಮರವಾಗಿ ಬೆಳೆದು ನಿಂತಿದೆ. ಭಾರತದ ಇತಿಹಾಸ, ಪರಂಪರೆ ಮತ್ತು ಆತ್ಮದ ಪರಿಚಯವೇ ಇಲ್ಲದ ಜನ ಈ ದೇಶವನ್ನು ರೋಬಾಟ್ ಯಂತ್ರಮಾನವರಂತೆಯ ಏಕೋದ್ದೇಶದ ಮನುಷ್ಯರ ಸಂಕುಚಿತ ರಾಷ್ಟ್ರ ಕಟ್ಟುವುದಕ್ಕಾಗಿ, ಈ ದೇಶದಲ್ಲಿ ನಡೆದ ಸಾಂಸ್ಕೃತಿಕ ಮತ್ತು ರಾಜಕೀಯ ಹೋರಾಟಗಳ, ನ್ಯಾಯ ಮತ್ತು ಸಮಾನತೆಯ, ಮಾನವನ ಪರಮಾದ್ಭುತ ಜೀವವಿಕಾಸದ ಮತ್ತು ವಲಸೆಯ ಕತೆಯನ್ನೇ ತಿರುಚಿ ಕಗ್ಗತ್ತಲ ಭವಿಷ್ಯ ಬರೆಯಹೊರಟಿದ್ದಾರೆ.

ಮೋದಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಕ್ಷಣ ಮೋದಿಯೇನೂ ಪ್ರಧಾನಿ ಆಗುವುದಿಲ್ಲ. ಚುನಾವಣೆಯಲ್ಲಿ ಏನಾಗುತ್ತದೆ ಎಂದು ಊಹಿಸಲಾಗದ ರಭಸದ ಮತ್ತು ಅನಿಶ್ಚಿತತೆತ ವರ್ತಮಾನದಲ್ಲಿ ನಾವಿದ್ದೇವೆ. ಈಗಿನ ಪರಿಸ್ಥಿತಿಯನ್ನು ಇಟ್ಟುಕೊಂಡು ಹೇಳುವುದಾದರೆ ಬಿಜೆಪಿ ಮತ್ತದರ ಎರಡೇ ಎರಡು ಮಿತ್ರಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಸರ್ಕಾರ ರಚಿಸುವ ಸ್ಥಿತಿ ಮುಟ್ಟುವುದಿಲ್ಲ. ಆದರೆ ಅವಿಭಜಿತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಅಪ್ರಸ್ತುತವಾಗುತ್ತ ಸಾಗಿರುವ ತೆಲುಗುದೇಶಂ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅಲ್ಲೊಂದು ಬೋನಸ್ ಪಕ್ಷ ಸಿಗುತ್ತದೆ, ಆದರೆ ಹೆಚ್ಚಿನ ಸೀಟುಗಳೇನೂ ಬರುವ ಹಾಗೆ ಕಾಣಿಸುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತ ಜೊತೆಯಾಗಬಹುದು. ಮಾಮೂಲಿನಂತೆ ಒಂದೇ ಪಕ್ಷಕ್ಕೆ ಅಪಾರವಾದ ಬಹುಮತ ಕೊಡುವ ತಮಿಳುನಾಡಿನ ನಿಯಮ ಈ ಸಾರಿಯೂ ಪುನರಾವರ್ತನೆ ಆಗಿ ಜಯಲಲಿತರ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬಂದರೆ ಅದು ಮಾತ್ರ ಮೋದಿಗೆ ನಿಜವಾದ ಬೋನಸ್.

ಆದರೂ ಚುನಾವಣೆಗಳಲ್ಲಿ ಹೀಗೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ತಿಂಗಳ ಹಿಂದೆ ಎರಡು ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಎರಡರಲ್ಲೂ ಸೋಲುತ್ತದೆ ಎಂದುಕೊಂಡ ಅನೇಕರಲ್ಲಿ ನಾನೂ ಒಬ್ಬ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಮಾತನಾಡಿಸಿದ ಕೆಲವು ಕಾಂಗ್ರೆಸ್ ನಾಯಕರಿಗೇ ವಿಶ್ವಾಸವಿರಲಿಲ್ಲ. ಹಾಗಾಗಿ, ಅಂಕಗಣಿತ ಏನೇ ಹೇಳಿದರೂ Modiಮೋದಿ ನೇತೃತ್ವದ ಎನ್‌ಡಿಎ‌ ಅಧಿಕಾರ ಸ್ಥಾನದ ಹತ್ತಿರಕ್ಕೆ ಬರುವುದೇ ಇಲ್ಲ ಎಂದು ಹೇಳುವುದು ನಮ್ಮಗಳ ಇಚ್ಚೆ ಆಗುತ್ತದೆಯೇ ಹೊರತು ಕಾಲಜ್ಞಾನವಾಗುವುದಿಲ್ಲ. ಅವಕಾಶವಾದಿ ಮತ್ತು ಸಮಯಸಾಧಕ ರಾಜಕಾರಣಿಗಳೇ ಹೆಚ್ಚಿರುವ ದೇಶ ನಮ್ಮದು. ಅದರ ಜೊತೆಗೆ, ದೇಶದಲ್ಲಿ ಹೆಚ್ಚುತ್ತಿರುವ ನಗರವಾಸಿಗಳು, ನಗರ ಪ್ರದೇಶಗಳಲ್ಲಿಯೇ ಹೆಚ್ಚು ಘಟಿಸುವ ಕೋಮುಗಲಭೆಗಳು ಮತ್ತದು ಮಾಡುವ ಓಟು-ಕ್ರೋಢೀಕರಣ, ತಂತ್ರಜ್ಞಾನವನ್ನು ಬಳಸಿಕೊಂಡು ಭಾವಾವೇಶ ಮತ್ತು ಸಂಕುಚಿತ ಮತಾಂಧತೆಯನ್ನು ಹರಡಲು ಮಾಡುತ್ತಿರುವ ವ್ಯವಸ್ಥಿತ ಪ್ರಯತ್ನ, ವ್ಯಕ್ತಿಪೂಜೆ, ಇತ್ಯಾದಿಗಳು ಮೋದಿ ಮತ್ತವರ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡುವ ಅಂಶಗಳು. ಹಾಗೇನಾದರೂ ಆದರೆ, ಭವಿಷ್ಯದ ಇತಿಹಾಸಕಾರರು ಈ ತಲೆಮಾರಿನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ.

ಆದರೆ ಕರ್ನಾಟಕ ಬೇರೆಯದೇ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸ ನನ್ನದು. ದೇಶದಲ್ಲಿಯ ಕೆಲವು ಕಡೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಎದ್ದು ಕುಣಿಯುತ್ತಿರುವ ಕೆಲವು ಪಿತೂರಿಕೋರ ನರಿಗಳಿಗೆ ಬಿಜೆಪಿ ಪಕ್ಷ ತಾನು ಪ್ರತಿನಿಧಿಸುತ್ತಿರುವ ಬೆಂಗಳೂರು ನಗರದ ಮೂರು ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಉಳಿಸಿಕೊಂಡರೂ ಸಾಧನೆ ಆಗುತ್ತದೆ ಎನ್ನುವುದರ ಅರಿವಿದ್ದಂತಿಲ್ಲ. ರಾಜ್ಯದಲ್ಲಿ ಸದ್ಯದ ವಾಸ್ತವವೇ ಬೇರೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿಯ ಕನಿಷ್ಟ ಮೂರು ಸ್ಥಾನಗಳಲ್ಲಿ (ಹೆಬ್ಬಾಳ, ಜಯನಗರ, ಬಸವನಗುಡಿ) ಕಾಂಗ್ರೆಸ್ ಹೀನಾಯವಾಗಿ ಸೋತು ಬಿಜೆಪಿ ಗೆಲ್ಲಲು ಸ್ವತಃ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಗಿದ್ದಂತಹ “ಒಳ್ಳೆಯ” ಹೆಸರು ಅಲ್ಲ. ಇಂತಹ ಅನುಚಿತ ಔದಾರ್ಯವನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶಿಸದೆ ಸರಿಯಾದ ತಂತ್ರಗಾರಿಕೆ ಮಾಡಿದರೆ, ಎಷ್ಟೇ ಮೋದಿ ಮುಖವಾಡಗಳು ಕುಣಿದಾಡಿದರೂ ಬೆಂಗಳೂರು ನಗರದಿಂದ ಒಬ್ಬನೇ ಒಬ್ಬ ಬಿಜೆಪಿ ಸಂಸದ ಗೆದ್ದು ಬರುವುದು ಕಷ್ಟವಿದೆ. ರಾಜ್ಯದ ಅನೇಕ ಕಡೆಯೂ ಇದೇ ಆಗಲಿದೆ.

ಮತ್ತು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತ, ಅದೇ ರಭಸದಲ್ಲಿ ನಮ್ಮ ರಾಜ್ಯ ಕಂಡ ಪರಮಾತಿಭ್ರಷ್ಟ ಯಡ್ಡಯೂರಪ್ಪನವರ ಜೊತೆಜೊತೆಗೆ ನಿಂತು ನರೇಂದ್ರ ಮೋದಿ ಮತ ಕೇಳಲಿರುವ ಚಿತ್ರ ಮೋದಿಯ ಅಧಿಕಾರದ ಹಪಹಪಿ ಮತ್ತು ನೀತಿಗಳಿಲ್ಲದ ಮನೋಭಾವವನ್ನೂ ಅನಾವರಣಗೊಳಿಸಲಿದೆ. ಇದನ್ನು ಪ್ರಾಮಾಣಿಕತೆ, ಬಲಿಷ್ಟ ದೇಶ, ಗಂಡಸುತನ, ದೇಶಭಕ್ತಿ, ಇತ್ಯಾದಿಗಳ ಹೆಸರಿನಲ್ಲಿ ಅಂತರ್ಜಾಲದಲ್ಲಿ ಎಗರಾಡುತ್ತಿರುವ ಕರ್ನಾಟಕದ ಕೆಲವು ಮತಾಂಧ ನರಿಗಳು ಹೇಗೆ ಸಮರ್ಥಿಸಿಕೊಳ್ಳಲಿವೆ? ಅವರಿಗೆ ಬೇಕಿರುವುದು ಜನಾಂಗ ನಿರ್ಮೂಲನೆಯೇ ಹೊರತು ಮನುಷ್ಯ ಸಮಾಜವನ್ನು ಕಟ್ಟುವ ಕಾಳಜಿ ಅಲ್ಲ. ಇದನ್ನು ಅರಿಯದ ಮುಗ್ಧರು, ದುಷ್ಟರು ಹಾಕಿದ ಕೋಮುದ್ವೇಷದ ಹೋಮದಲ್ಲಿ ಸಮಿತ್ತುಗಳಾಗಿ ಉರಿದುಹೋಗುತ್ತಿದ್ದಾರೆ. ದೇಶದ ಪ್ರಜ್ಞಾವಂತರೆಲ್ಲ ಈ ದುಷ್ಕೃತ್ಯದ ಸಾಮೂಹಿಕ ಜವಾಬ್ದಾರಿ ಹೊರಬೇಕಿದೆ.

ಬಹುಶಃ ಈ ಚುನಾವಣೆ ಕಾಂಗ್ರೆಸ್‌ನ rahul_priyanka_soniaಇಂದಿರಾಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಅವಸಾನಕ್ಕೂ ನಾಂದಿ ಹಾಡುತ್ತದೆ ಎನ್ನುವ ವಿಶ್ವಾಸ ನನ್ನದು. ಆ ಮೂಲಕ ದೇಶದಲ್ಲಿ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟುತ್ತವೆ ಮತ್ತು ರಾಷ್ಟ್ರೀಯ ಪಕ್ಷಗಳ ಸ್ಥಾನಮಾನಗಳು ಕುಸಿಯುತ್ತ ಹೋಗುತ್ತದೆ. ಆಂತರಿಕ ಪ್ರಜಾಪ್ರಭುತ್ವ ಕಟ್ಟಿಕೊಳ್ಳದೆ, ನೀತಿ ಮತ್ತು ಮೌಲ್ಯಗಳ ವಿಚಾರದಲ್ಲಿ ಪರ್ಯಾಯ ಕಲ್ಪಿಸದೇ ಹೋದರೆ ಕಾಂಗ್ರೆಸ್ ಸರ್ವನಾಶದತ್ತ ಸಾಗಲಿದೆ. ಅವರ ತಾಯಿಯ ಪರ ಕೆಲಸ ಮಾಡಿದ ಅನುಕಂಪ ಮತ್ತು 2004 ರಂತಹ ಚಾರಿತ್ರಿಕ ಅವಕಾಶಗಳು ರಾಹುಲ್ ಗಾಂಧಿಗೆ ಕೂಡಿ ಬರುವುದಿಲ್ಲ. ಅದನ್ನು ಮೀರುವ ಗಟ್ಟಿಯಾದ ವ್ಯಕ್ತಿತ್ವವನ್ನೂ ಅವರು ಬೆಳೆಸಿಕೊಂಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಕುಟುಂಬ ರಾಜಕಾರಣದ ಹಿಡಿತ ಇನ್ನೊಂದೈದತ್ತು ವರ್ಷಗಳಲ್ಲಿ ಇಲ್ಲವಾಗುವ ಸಾಧ್ಯತೆ ಇದೆ.

ಈ ದೇಶದಲ್ಲಿ ಜಾತ್ಯತೀತತೆ, ವೈವಿಧ್ಯತೆ, ಸಹಿಷ್ಣುತೆ, ಪ್ರಜಾಪ್ರಭುತ್ವ, ಸಮಾನತೆ, ನ್ಯಾಯ, ಇತ್ಯಾದಿಯಂತಹ ಸಾರ್ವಕಾಲಿಕ ಮೌಲ್ಯಗಳಲ್ಲಿ ವಿಶ್ವಾಸವಿಟ್ಟಂತಹ ಪಕ್ಷಗಳ ಕೊರತೆ ಇದೆ. ಮೋದಿಯನ್ನು ತೋರಿಸಿ ಕೆಲವು ಪಕ್ಷಗಳು ಜಾತ್ಯತೀತತೆ ಬಗ್ಗೆ ಮಾತನಾಡುತ್ತವೆಯೇ ಹೊರತು ಅವು ನಿಜಕ್ಕೂ ಜಾತ್ಯತೀತವೇನಲ್ಲ. ಮೋದಿಯಂತಹ ವ್ಯಕ್ತಿ ಇಷ್ಟು ಪ್ರಾಮುಖ್ಯತೆ ಗಳಿಸಲು ನಮ್ಮ ಜಾತ್ಯತೀತ ಪಕ್ಷಗಳ ದಿವಾಳಿತನ, ಅಪ್ರಾಮಾಣಿಕತೆ ಮತ್ತು ಮೌಲ್ಯದಾರಿದ್ರ್ಯಗಳು ಕಾರಣವೇ ಹೊರತು ಮೋದಿಯ ಆಡಳಿತ ವೈಖರಿ ಮತ್ತು ಭಾಷಣಗಳಲ್ಲ. ಮನಮೋಹನ ಸಿಂಗರು ಎರಡು-ಮೂರು ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ಸ್ಥಾನದಿಂದ ಹಿಂದೆಸರಿದು, ಮತ್ತೊಬ್ಬ ಕ್ರಿಯಾಶೀಲ ಮತ್ತು ಪ್ರಾಮಾಣಿಕರನ್ನು ಪ್ರಧಾನಿ ಮಾಡಿದ್ದರೆ ವಾಸ್ತವವೇ ಬೇರೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ನಾಯಕತ್ವ ಯಾವುದೇ ಸ್ವತಂತ್ರ ಮನೋಭಾವದ ವ್ಯಕ್ತಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಇದು ಕಾಂಗ್ರೆಸ್‌ಗಾದ ನಷ್ಟ ಮಾತ್ರವಲ್ಲ, ದೇಶದ ವರ್ತಮಾನ ಮತ್ತು ಭವಿಷ್ಯಕ್ಕೂ ಆದ ಅನ್ಯಾಯ.

ಭವಿಷ್ಯ ಆಶಾದಾಯಕವಾಗಿ ಇಲ್ಲದಿದ್ದರೂ, ಈ ನಾಡಿನಲ್ಲಿ ಸೀಮಿತ ಪ್ರಮಾಣದಲ್ಲಾದರೂ ನಡೆಯುತ್ತಿರುವ upward-mobility,garment-factory ಗಾರ್ಮೆಂಟ್ಸ್-ಐಟಿಬಿಟಿ-ಮಾಲ್‌ಗಳ ಕಾರಣಕ್ಕಾಗಿ ಕೆಳಮಧ್ಯಮವರ್ಗದ ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಆರ್ಥಿಕ ಸ್ವಾತಂತ್ರ್ಯ, ಕುಲಮತ‌ಅಂತಸ್ತುಗಳ ಭೇದವಿಲ್ಲದೆ ಪ್ರೇಮದಲ್ಲಿ ಬೀಳುತ್ತಿರುವ ಯುವಸಮಾಜ, ಹೆಚ್ಚುತ್ತಿರುವ ಅಂತರ್ಜಾತಿ ವಿವಾಹಗಳು, ಇವೆಲ್ಲವೂ ಹೊಸದಾದ ಭಾರತವನ್ನೇ ಸೃಷ್ಟಿಸುತ್ತಿವೆ. ಪೂರ್ವಿಕರ ಕೆಲವು ಪ್ರತಿಗಾಮಿ ಚಿಂತನೆಗಳನ್ನು ತೊಡೆದುಹಾಕಿ, ಈ ನೆಲದಲ್ಲಿ ಹುಟ್ಟಿದ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ನಮ್ಮ ಪರಂಪರೆಯಲ್ಲಿಯ ಬಂಡಾಯ, ಅಹಿಂಸಾತ್ಮಕ ಹೋರಾಟ, ಮತ್ತು ಸಹಬಾಳ್ವೆಯ ನಾಗರಿಕತೆಯನ್ನು ಹೊಸಕಾಲಕ್ಕೆ ಅನ್ವಯಿಸಿಕೊಂಡು ರೂಪಿಸಿಕೊಂಡರೆ ಪ್ರಪಂಚವೆಲ್ಲ ಸ್ಫೂರ್ತಿಗಾಗಿ ಇದರತ್ತ ನೋಡುವ ದೇಶವಾಗುತ್ತದೆ ನಮ್ಮದು. ಇಲ್ಲದಿದ್ದರೆ ಹಿಟ್ಳರನ ಜರ್ಮನಿಯ ಬಗ್ಗೆ ಇಂದಿನ ಜರ್ಮನ್ನರೂ ಹೇಗೆ ಅಸಹ್ಯಿಸಿಕೊಳ್ಳುತ್ತಾರೋ, ಅದನ್ನು disown ಮಾಡುತ್ತಾರೋ, ಭಾರತದ ಅಂತಹ ಅವಧಿಗೆ ಕಾರಣರೂ ಸಾಕ್ಷಿಗಳೂ ಆಗಿ ಈ ತಲೆಮಾರು ನಿಲ್ಲುತ್ತದೆ. ನಮ್ಮದೇ ಸಂತತಿ ನಮ್ಮ ಭ್ರಷ್ಟತೆ ಮತ್ತು ದುಷ್ಟತೆಯ ಕಾರಣಕ್ಕೆ ನಮ್ಮನ್ನು ನಿರಾಕರಿಸುವುದಕ್ಕಿಂತ ಹೆಚ್ಚಿನ ತಿರಸ್ಕಾರ ಇನ್ನೊಂದಿಲ್ಲ. ಭವಿಷ್ಯದ ಇತಿಹಾಸದ ಪುಟಗಳಲ್ಲಿ ಇಂದಿನ ವರ್ತಮಾನ ಹೇಗೆ ದಾಖಲಾಗಬೇಕು ಎನ್ನುವ ಎಚ್ಚರವನ್ನು ಇಂದಿನ ಭಾರತ ಪಡೆಯಬೇಕಿದೆ.

ಹಾಸನದಲ್ಲಿ ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕುರಿತ ವಿಚಾರಸಂಕಿರಣ

ಸ್ನೇಹಿತರೇ,

’ವರ್ತಮಾನ.ಕಾಮ್’ ಮತ್ತು ಹಾಸನದ ’ಸಹಮತ ವೇದಿಕೆ’ಯವರು ಕಳೆದ ಶನಿವಾರ ಹಾಸನದಲ್ಲಿ ಏರ್ಪಡಿಸಿದ್ದ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರಸಂಕಿರಣಕ್ಕೆ ದೊರೆತ ಸ್ಪಂದನೆ ಸಮಾಧಾನಕರವಾಗಿತ್ತು. ಬೆಂಗಳೂರಿನಿಂದ ಬಂದಿದ್ದ ಎಲ್.ಹನುಮಂತಯ್ಯ, ರಾಜಾ ನಾಯಕ್, ಮತ್ತು vartamaana-sahamata-invitationಸಿ.ಜಿ.ಶ್ರೀನಿವಾಸನ್‌ರವರು ದಲಿತರು ಉದ್ಯಮಿಗಳಾಗಬೇಕಾದ ಅಗತ್ಯ, ಮತ್ತು ಉದ್ಯಮವಲಯದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಅವರಿಗಿರುವ ಅವಕಾಶಗಳು, ಮತ್ತಿತರ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇಂತಹ ವಿಷಯಗಳ ಬಗ್ಗೆ ಪೂರಕವಾಗಿ ಸ್ಪಂದಿಸುವ ಹಾಸನದಲ್ಲಿರುವ ಪ್ರಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್‌ರವರು ಅಧ್ಯಕ್ಷತೆ ವಹಿಸಿ ದಲಿತರು ಎದುರಿಸಬಹುದಾದ ಸವಾಲುಗಳ ಬಗ್ಗೆ ಮಾತನಾಡಿದರು. ಹಾಸನದ ಪತ್ರಕರ್ತ ನಾಗರಾಜ್ ಹೆತ್ತೂರ್ ಕಾರ್ಯಕ್ರಮ ನಿರೂಪಿಸಿದರು. ಒಂದೂವರೆ ತಾಸಿನಲ್ಲಿ ಮುಗಿಯುತ್ತದೆ ಎಂದುಕೊಂಡ ಕಾರ್ಯಕ್ರಮ ಸಭಿಕರ ಪ್ರಶ್ನೆ, ಸಂವಾದ, ಆಸಕ್ತಿಯ ಕಾರಣವಾಗಿ ಎರಡೂವರೆ ತಾಸಿಗೂ ಹೆಚ್ಚಿಗೆ ನಡೆಯಿತು. ಲೇಖಕಿ ರೂಪ ಹಾಸನ, ಜೆ.ವಿ.ಕಾರ್‍ಲೊ, ಮುಂತಾದ ಹಲವು ಬರಹಗಾರರು ಮತ್ತು ಪ್ರಗತಿಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಟಿಪ್ಪಟಿಯನ್ನು ನಾನು ಈ ಮೊದಲೇ ಇಲ್ಲಿ ಬರೆಯಬೇಕಿತ್ತು. ಆದರೆ ನನ್ನ ಇತರೆ ಕೆಲವು ವೈಯಕ್ತಿಕ ಕೆಲಸಗಳ ಕಾರಣವಾಗಿ ಮಾಡಲಾಗಿರಲಿಲ್ಲ. ಕ್ಷಮೆ ಇರಲಿ. ಈ ಕಾರ್ಯಕ್ರಮದಲ್ಲಿ ಬಹಳ ಸವಿಸ್ತಾರವಾಗಿ ಮಾತನಾಡಿದ ಸಾಹಿತಿ, ರಾಜಕಾರಣಿ, ಮತ್ತು ಚಿಂತಕ ಎಲ್.ಹನುಮಂತಯ್ಯನವರ ಭಾಷಣದ ಧ್ವನಿಮುದ್ರಿಕೆಯನ್ನು ವರ್ತಮಾನ.ಕಾಮ್‌ನಲ್ಲಿ ಪಾಡ್‌ಕ್ಯಾಸ್ಟ್ ರೂಪದಲ್ಲಿ ಪ್ರಕಟಿಸುವ ಆಲೋಚನೆ ಇದೆ. ಒಂದಿಷ್ಟು ತಾಂತ್ರಿಕ ಕೆಲಸಗಳ ಕಾರಣದಿಂದಾಗಿ ಅದು ತಡವಾಗಿದೆ. ಇಷ್ಟರಲ್ಲೇ ಅದನ್ನು ಪ್ರಕಟಿಸುವ ಕೆಲಸ ಮಾಡಲಾಗುವುದು.

ಕಾರ್ಯಕ್ರಮ ಕುರಿತ ವರದಿಗಳು ಪ್ರಜಾವಾಣಿಯ ಸ್ಥಳೀಯ ಆವೃತ್ತಿಯಲ್ಲಿ, ಹಾಸನದ ಜನತಾ ಮಾಧ್ಯಮ ಪತ್ರಿಕೆಯಲ್ಲಿ, ಮತ್ತು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವನ್ನು ಇಲ್ಲಿ ಕೆಳಗೆ ಲಗತ್ತಿಸಲಾಗಿದೆ. ಹಾಗೆಯೇ ಹತ್ತಾರು ಚಿತ್ರಗಳನ್ನು ಹಾಸನದ ಐವಾನ್ ಡಿಸಿಲ್ವರು ತೆಗೆದಿದ್ದು ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನೂ ಹೆಚ್ಚಿನ ಚಿತ್ರಗಳು ಡಿಸಿಲ್ವರ ಫೇಸ್‌ಬುಕ್ ಪೇಜ್‌ನಲ್ಲಿ ಇವೆ.

ಈ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಸಹಮತ ವೇದಿಕೆಯ ಸ್ನೇಹಿತರಿಗೆ ನಾನು ಆಭಾರಿ. ಹಾಗೆಯೇ, ಮೊದಲಿನಿಂದಲೂ ಈ ವಿಷಯದ ಬಗ್ಗೆ ಸ್ಪಂದಿಸುತ್ತ, ಈ ಕಾರ್ಯಕ್ರಮದ ಹಲವಾರು ಜವಾಬ್ದಾರಿಗಳನ್ನು ಹೊತ್ತು, ಬೆಂಗಳೂರಿನಿಂದ ನಮ್ಮೊಡನೆ ಬಂದಿದ್ದ ನಮ್ಮ ಬಳಗದ ಶ್ರೀಪಾದ್ ಭಟ್ಟರಿಗೂ ಸಹ ಧನ್ಯವಾದಗಳು. ಇದೇ ವಿಷಯದ ಬಗ್ಗೆ ದಕ್ಷಿಣ ಕರ್ನಾಟಕದಲ್ಲಿ ಹಲವು ಕಡೆ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಶ್ರೀಪಾದ ಭಟ್ಟರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಊರು ಅಥವ ನಗರಗಳಲ್ಲಿ ಇದನ್ನು ಆಯೋಜಿಸಲು ಆಸಕ್ತರಾಗಿರುವ ಸ್ನೇಹಿತರು ಅವರನ್ನು ಅಥವ ನನ್ನನ್ನು ಸಂಪರ್ಕಿಸಬಹುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಪತ್ರಿಕಾ ವರದಿಗಳು:

ಪ್ರಜಾವಾಣಿ:

prajavani

 

 

ಜನತಾ ಮಾಧ್ಯಮ :

janatha-maadhyama-1

janatha-maadhyama-2

 

 

The Hindu:

the-hindu-report-hassan
ಕೆಲವು ಚಿತ್ರಗಳು:

dalit-entrepreneurship-1
dalit-entrepreneurship-2
dalit-entrepreneurship-3
dalit-entrepreneurship-4
dalit-entrepreneurship-5
dalit-entrepreneurship-6
dalit-entrepreneurship-7
dalit-entrepreneurship-10
dalit-entrepreneurship-8
dalit-entrepreneurship-9
dalit-entrepreneurship-11
dalit-entrepreneurship-12
dalit-entrepreneurship-13
dalit-entrepreneurship-14
dalit-entrepreneurship-15
dalit-entrepreneurship-16

ಜಾನುವಾರು ಜಾನಪದ ಮತ್ತು ಐಬುಗಳು : ಗಂಗೆ, ಗೌರಿ,.. ಭಾಗ–9

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಹಟ್ಟಿಯಲ್ಲಿಯೇ ಹುಟ್ಟಿದವುಗಳು ಹಣೆಬರಹ. ಆದರೆ ತಂದು ಕಟ್ಟಿಕೊಳ್ಳುವವುಗಳು ಹೀಗೆ ಹಣೆಬರಹದಂತೆ ಬಂದು ತಗುಲಿಕೊಳ್ಳದಂತೆ ಜಾಗರೂಕತೆ ವಹಿಸುವುದಲ್ಲವೇ? ಅಂದಮೇಲೆ ಅದಕ್ಕಾಗಿ ಗ್ರಹಗತಿಗಳ ಲೆಕ್ಕಾಚಾರ, ಗುಣ ನಡತೆಯ ವಿಶ್ಲೇಷಣೆ ಎಲ್ಲವೂ ಇರಬೇಕು. ಹೀಗೆ ದನ ಎಮ್ಮೆಗಳನ್ನು ಸಾಕುವುದೆಂದರೆ ಅಲ್ಲೊಂದು ಒಳಿತು ಕೆಡುಕುಗಳ ಲೆಕ್ಕಾಚಾರವಿರುವ ಲಕ್ಷಣ ಶಾಸ್ತ್ರದ ಜಾನಪದ ಜಗತ್ತೂ ಇರುತ್ತದೆ. ಹಸುಕೊಳ್ಳುವಾಗ ಅದರ ನಾಲ್ಕುಕಾಲು, ಒಂದು ಬಾಲ, ಎರಡುಕಣ್ಣು, ಕಿವಿಗಳಷ್ಟೇ ಗಣಿಸಲ್ಪಡುವುದಲ್ಲ. handicapped-cowನಾಲ್ಕು ಕಾಲಿನ ಎರಡು ಕಿವಿಯ ಎಲ್ಲಾ ಜಾನುವಾರುಗಳು ವಿಕ್ರಯಯೋಗ್ಯ, ಪಾಲನಾಯೋಗ್ಯವೆಂಬ ಸ್ಥಿತಿಯಿಲ್ಲ. ಹೇಗೆ ಮದುವೆ ಮುಂಜಿಗಳಲ್ಲಿ ಗುಣಕೂಟ, ಯೋನಿಕೂಟ, ಅಂಗಾರಕ ಇನ್ನೂ ಏನೇನನ್ನೋ ನೋಡುವ ಕ್ರಮವಿರುವಂತೆ ಜಾನುವಾರಗಳ ವಿಲೇವಾರಿಯಲ್ಲಿಯೂ ಅವುಗಳ ದೇಹರಚನೆ, ಚಾಳಿ, ಆರೋಗ್ಯಾದಿಗಳನ್ನಾಧರಿಸಿದ ಒಂದು ಜಾನಪದ ಪಶುಮೀಮಾಂಸೆಯಿದೆ. ಈ ವಿವೇಚನಾಶಾಸ್ತ್ರ ಒಪ್ಪುವ ಮತ್ತು ನಿರಾಕರಿಸುವ ಸಂಗತಿಗಳನ್ನಾಧರಿಸಿ ಹಸುಗಳ ವಿಕ್ರಯನಡೆಸಲಾಗುತ್ತದೆ. ಈ ಪಶುಮೀಮಾಂಸೆಯ ಮೂಲಕ ಐಬುಗಳೆಂಬಂತೆ ನಿರೂಪಿತವಾದ ಸಂಗತಿಗಳೊಂದಿಗೆ ತುಳುಕು ಹಾಕಿಕೊಂಡ ಹಸುಗಳನ್ನು ಹಟ್ಟಿಯಲ್ಲಿ ಕಟ್ಟಿಕೊಳ್ಳುವುದೇ ಅನಿಷ್ಟದಾಯಕವೆಂಬಂತೆಯೂ ನಂಬಿಕೊಂಡಿರುವ ಜಾನಪದರಿಗೆ ಅವರ ಬದುಕು ಹಸುನುಮಾಡುವ ಸಲ್ಲಕ್ಷಣದ ಹಸುವಷ್ಟೇ ಬೇಕು ವಿನಹಾ ಹಸುವೆಂಬ ರೂಹುವಲ್ಲ.

ನನಗೆ ತಿಳಿದಿರುವ ಅಲ್ಪಮಾಹಿತಿಯನ್ನಾದರಿಸಿ ಹೇಳುವುದಿದ್ದರೆ ದೇಹ ರಚನೆಗೆ ಸಂಬಂಧಿಸಿ ಬಳಕೆಯಲ್ಲಿರುವ ಕುಂಟುಮೂಳೆ, ಚೋಂಕುಬಾಲ, ಕಂಟ್‌ಬಾಲ, ಇಳ್‌ಗೋಡು, ದಾಸ್‌ಹುಂಡ್, ಕತ್ರಿಸುಳಿ, ನೇತ್ರ್‌ಬೆಳು, ಚಕ್ರ್‌ಕೋಡ್, ಕಳ್ಕ್‌ಬಾಯಿ ಇತ್ಯಾದಿಗಳು ಒಳ್ಳೆಯ ಚಹರೆಗಳಲ್ಲ. ದೈಹಿಕ ಅಸಾಮರ್ಥ್ಯತೆಯ ಭಾಗವಾಗಿ ಜೀನಬಾವು ಸೆಡಿಗಾಲು ಇತ್ಯಾದಿಗಳು ಅನುಕೂಲಕರವಲ್ಲ. ನಡತೆ/ಚಾಳಿಯ ಭಾಗವಾಗಿ ಕಳಿಹಾಕುವುದು, ನೊಗಮುರದ್ದ್, ನೇಲ್‌ನೊಗದ ಜೊತೆಗೆ ಹಟ್ಟಿಗ್ ಹೊಗ್ಗದ್, ಹಾರ್‍ಸ್ಕಹೋಪ್ದ್, ಹೆಜ್‌ಮಣ್‌ತೆಗುದ್ ಇತ್ಯಾದಿಗಳು ಒಳ್ಳೆಯ ಚಾಳಿಯಲ್ಲ. ಇವೆಲ್ಲವನ್ನೂ ಐಬುಗಳೆಂದೇ ಜಾನುವಾರು ಜಾನಪದದಲ್ಲಿ ಗುರುತಿಸಲಾಗುತ್ತದೆ. ಈ ಪರಿಭಾಷೆಗಳ ಮೂಲಕವಾಗಿ ಜಾನುವಾರುಗಳ ಕಾರ್ಯಕ್ಷಮತೆಯ ಜತೆಗೆ ಇಷ್ಟಾನಿಷ್ಟ ಪ್ರಯೋಜನಗಳನ್ನು ವಿವರಿಸುವ ಈ ‘ಜಾನುವಾರು ಜಾನಪದ ಸಂವಿಧಾನ’ ಹಸುವಿನ ವಯಸ್ಸು ಮತ್ತು ದುಡಿಯುವ ಶಕ್ತಿಯನ್ನು ಮೀರಿಯೂ ಅದನ್ನು ಇಟ್ಟ್ಟುಕೊಳ್ಳಬೇಕಾದುದೋ, deformed-cowಇಲ್ಲ ಹಟ್ಟಿಯಿಂದ ಹೊರಗಿಡಬೇಕಾದದೋ ಎಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಹಸುವೊಂದನ್ನು ಕೊಡಲೇಬೇಕಾದ ಸಂದರ್ಭವನ್ನು ಕೇವಲ ಅದರ ವಯಸ್ಸು, ಗೊಡ್ಡುತನಗಳಷ್ಟೇ ನಿರ್ಧರಿಸುವುದಲ್ಲ. ಅದೊಂದು ಅನುಪಯುಕ್ತವಲ್ಲದ ಹಂತದಲ್ಲಿಯೂ ತನ್ನ ಐಬಿನ ಕಾರಣದಿಂದಾಗಿ ಸಾಕಿದವನ ಪಾಲಿಗೆ ಅಪಾಯಕಾರಿ ಸರಕಾಗಿ ಭಾವಿತವಾಗಲೂಬಹುದು. ಹಟ್ಟಿಯಲ್ಲಿ ಹಸುವಿರಬೇಕೆಂದು ಹಂಬಲಿಸುವ ಜನ ಈ ಐಬಿರುವ ಹಸು ಹಟ್ಟಿಯ ಹೊದ್ದುಹೋಕಿನಲ್ಲಿಯೇ ಇರಬಾರದೆಂಬ ಗಾಢವಾದ ನಂಬುಗೆಯನ್ನು ಹೊಂದಿರುವುದರಿಂದ ಹಸುವಿನ ಕೊಳ್ಳುವಿಕೆ ಕೊಡುವಿಕೆಗಳಲ್ಲಿ ಐಬುಗಳಿಗೆ ಪ್ರಮುಖ ಜಾಗವಿದೆ.

ಜಾನುವಾರುಗಳನ್ನು ಕೊಳ್ಳುವಾಗ ದೇಹರಚನೆ, ಬಣ್ಣ ಕೋಡುಗಳ ಸ್ವರೂಪ, ಮೈಮೇಲಿನ ರೊಮಗಳ ಸುಳಿ(ಸುರುಳಿ)ಗಳ ಸ್ವರೂಪಗಳನ್ನು ಅನುಭವಸ್ಥರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕೆಲವೊಮ್ಮೆ ಕೊಂಡುಕೊಳ್ಳುವವನಿಗೆ ಇದರ ಅರಿವಿಲ್ಲದೆ ಹೋದರೆ ಅವನು ಕೊಂಡುಕೊಂಡು ಬೆಪ್ಪಾದ ಮೇಲೆ ಅವುಗಳನ್ನು ಯಾರಿಗಾದರೂ ಸಾಗಹಾಕಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ. ಯಾಕೆಂದರೆ ಐಬುಗಳು ಅಷ್ಟೊಂದು ಪರಿಣಾಮಕಾರಿಯಾದ ನೆಲೆಯಲ್ಲಿ ಪ್ರಭಾವಬೀರಬಲ್ಲ ರೀತಿಯಲ್ಲಿ ನಂಬುಗೆಯ ಭಾಗವಾಗಿವೆ. ತಲೆಯ ಮೇಲಿನ ಉದ್ದನೆಯ ಬಿಳಿನಾಮ (ದಾಸ್‌ಹುಂಡು) ಕೊಂಡವನಗಂಟಿಗೆ ಪಂಗನಾಮವೆಂದೂ, ನೆತ್ರಬೆಳು (ರಕ್ತಕೆಂಪಿನ ಮಿಶ್ರಣದ ಬಿಳುಪು) ಯಜಮಾನನ ನೀರುಬಾರದ ಕಣ್ಣಲ್ಲಿ ನೆತ್ತರು ತರಿಸುತ್ತದೆ ಎಂದೂ ನಂಬುತ್ತಾರೆ. ಮೂರು ಹುರಿ ಮೂಳೆಗಳು ಕೂಡುವ ಜಾಗದಲ್ಲಿನ ಕುಂಟುಮೂಳೆ(ಕಿರುಗಾತ್ರದ ಮೂಳೆ), ಚಕ್ರಕೋಡು/ವೃತ್ತ್ತಾಕರದ ಕೋಡು, ಚೋಂಕ್ಬಾಲಗಳು ಹಸುವಿನ ಮೌಲ್ಯಕ್ಕೆ ಬಹುದೊಡ್ಡ ಹೊಡೆತ ಕೊಡುತ್ತವೆ. ಇನ್ನು ಚಾಳಿಗೆ ಸಂಬಂಧಿಸಿದಂತೆ ಉಳುವ ವೇಳೆಯಲ್ಲಿ ನೇಗಿಲು-ನೊಗಸಮೇತ ಪೇರಿಕೀಳುವ ಜಾನುವಾರುಗಳು ಹಾಗೆ ಓಡುವಾಗ ನೊಗಮುರಿದರೆ, ಇಲ್ಲವೇ ಅವುಗಳು ಹಾಗೆಯೇ ಹಟ್ಟಿಗೆ ಪ್ರವೇಶ ಮಾಡಿದ್ದರೆ ಹಟ್ಟಿಯನ್ನೇ ಉಳುವುದಕ್ಕಾಗಿ, ಎತ್ತುಬೀಜವನ್ನು ನಾಶಮಾಡಲಿಕ್ಕಾಗಿ ಬಂದವುಗಳೆಂಬಂತೆ ಭಾವಿಸುವುದರಿಂದ ಇಂತಹವುಗಳನ್ನು ಕಟ್ಟಿಕೊಳ್ಳಲೇಬಾರದೆಂಬ ದೃಢವಾದ ನಂಬುಗೆಯಿದೆ. ಹಾಗೆಯೇ ಜೇನುಬಾವು, ಸೆಡಿಕಾಲು(ಚಳಿಗಾಲದಲ್ಲಿ ನಡೆಯಲು ಎಳೆದಂತಾಗುವ ಕಾಲಿನ ರೋಗ) ಇತ್ಯಾದಿಗಳು ಋಣಾತ್ಮಕ ಐಬುಗಳೇ ಆಗಿವೆ.

ಇವುಗಳಲ್ಲಿ ಕೆಲವು ಐಬುಗಳು ಹಸುವಿನ ಮೌಲ್ಯಕ್ಕೆ ಪೆಟ್ಟುಕೊಟ್ಟು ಸಾಕಿದವನಿಗೆ ಮೂರುಕಾಸಿನ ಬೆಲೆಸಿಗದಂತೆ ಮಡಿದರೆ, ಇನ್ನು ಕೆಲವು ಐಬುಗಳು ಆ ಇಡಿಯ ಜೋಡಿಯನ್ನೋ, ಒಂಟಿ ಹಸುವನ್ನೋ ಸಂಪೂರ್ಣ ನಿರಾಕೃತ ಸರಕಾಗಿಸುತ್ತವೆ. ಒಂದುವೇಳೆ ಬುದ್ಧಿವಂತ ದಲ್ಲಾಳಿಗಳ ಮೂಲಕ ಉಳುವ ಇನ್ನಾರಿಗಾದರೂ ವಿಕ್ರಯ ಮಾಡಿದರೆ ಕೊಂಡವರು ಐಬಿನ ಸಮಾಚಾರ ತಿಳಿದ ಮೇಲೆ ಅದನ್ನೊಂದು (ತನಗೆ ಕೊಟ್ಟವರ) ಘೋರ ಅಪರಾಧ/ವಂಚನೆಯಾಗಿಯೇ ಭಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಈ ಲಕ್ಷಣಮೀಮಾಂಸೆಯ ಕಿಂಚಿತ್ ಪರಿಚಯವಿರುವವರು ಈ ತೆರನಾದ ಹಸುಗಳನ್ನು ಧರ್ಮಕ್ಕೆ ಕೊಟ್ಟರೂ ಬೇಡವೆಂಬಂತೆ disabled-cowಸಾರುವಂತಾಗುವುದರಿಂದ ಅವುಗಳು ಯಾರ ಹಟ್ಟಿಯಲ್ಲಿರುತ್ತವೋ ಆ ಹಟ್ಟಿಯವನು ಕೊಡುವ ದಾರಿಕಾಣದೆ, ಉಳಿಸಿಕೊಳ್ಳಲಾರದೆ ಅತೀವ ಸಂಕಟ ಅನುಭವಿಸಿದ ಉದಾಹರಣೆಗಳಿವೆ. ಬಹುಶಃ ಪಶುವೊಂದನ್ನು ಉಪಯುಕ್ತ ಮತ್ತು ಅನುಪಯುಕ್ತವೆಂಬ ತೀರ್ಪಿಗೆ ಒಳಪಡಿಸುವ ಮುನ್ನವೇ ಇಂತಹ ಸಂದಿಗ್ದಗಳಿರುವುದರಿಂದ ಹಸುವೆಂಬುದನ್ನು ಏಕರೂಪಿ ಮಾದರಿಯಲ್ಲಿ, ಪವಿತ್ರತೆ, ಉಪಯುಕ್ತ, ಮುಗ್ಧ, ದೇವತೆಗಳ ಆವಾಸ ಎಂದೆಲ್ಲಾ ಪರಿಭಾವಿಸಲಾಗದು. ಹಾಗಾಗಿ ಸಹಜವಾಗಿಯೇ ಐಬಿರುವ ಹಸುಗಳನ್ನು ಈ ಜಾನಪದಮೀಮಾಂಸಾ ಆವರಣದಿಂದ ಹೊರಗಿರುವವರು, ಇಲ್ಲವೇ ಈ ಕಲ್ಪನೆಗಳ ಇರುವಿಕೆಯನ್ನೇ ನಿರಾಕರಿಸಿದವರು ಅಥವಾ ಮಾಂಸವಾಗಿ ಪರಿವರ್ತಿಸಿಕೊಳ್ಳಬಲ್ಲವರು ಮಾತ್ರ ಖರೀದಿಸಲು ಸಾಧ್ಯ.

ಬಹುಶ ರೈತನೊಬ್ಬ ತನ್ನ ಹಸುವನ್ನು ಇನ್ನೊಬ್ಬನಿಗೆ ಮಾರುವಾಗಲೆಲ್ಲಾ ಆತನ ಕಣ್ಣೆದುರಿರುವುದು ತನ್ನ ಜೀವಿತಕ್ಕೆ ನೆಲೆಯಾಗಬಲ್ಲ ಮೂಲಧನ. ಕೆಲವು ಐಬುಗಳ ಮೂಲಕ ಹತ್ತು ಸಾವಿರ ಬೆಲೆಬಾಳುವ ಜೋಡನ್ನು ಐದು ಸಾವಿರಕ್ಕೂ ಕೇಳುವವರಿಲ್ಲದಾದಾಗ, ತಾನೇ ಸ್ವಯಂ ಕಟ್ಟಿಕೊಂಡು ಸಾಕಲಾಗದಾದಾಗ ಐದಕ್ಕಿಂತ ಹೆಚ್ಚಿನ ದರ ಸಿಕ್ಕುತ್ತದೆ ಅಂತನಿಸಿದ ಗಿರಾಕಿಗೆ ಕೊಡಲಾರದ ಸಂದರ್ಭದಲ್ಲಿ ನಿಶ್ಚಿತವಾಗಿಯೂ ಅವನ ಹಟ್ಟಿ ,ಕೈ, ಮೆದುಳು ಎಲ್ಲವೂ ಬರಿದಾಗುತ್ತದೆ. ಬಾಲದಲ್ಲಿ ಬಿಳಿಯ ಉಂಗುರಾಕಾರದ ರಚನೆಯಿರುವ ಕರುವೊಂದು ಹಟ್ಟಿಯಲ್ಲಿರುವಷ್ಟು ದಿನವೂ ‘ಒಡು’ (ಉಡ) ವಂತಹ ಅನಿಷ್ಟ ಸಂಗತಿಯೊಂದು ತನಗೆ ತಗುಲಿಹಾಕಿಕೊಂಡಿದೆ ಎಂಬಲ್ಲಿ ನೆಮ್ಮದಿ ಹೇಗೆ ಸಾಧ್ಯ? ಮುದಿ ಹಾಗೂ ಒಳ್ಳೆಯ ಲಕ್ಷಣವಿಲ್ಲದ ಕೆಟ್ಟ ಐಬಿನ ಹಸುಗಳನ್ನೆಲ್ಲಾ ರೈತನ ತಲೆಗೆ ಕಟ್ಟಿ ನೀನು ಇವುಗಳನ್ನೆಲ್ಲಾ ಸಾಕಲೇಬೇಕು ಎಂಬ ಫರ್ಮಾನು ಏನಾದರೂ ಹೊರಟಲ್ಲಿ ಇಡಿಯ ಕೃಷಿ ಬದುಕಿನ ಜೀವನಕ್ರಮವೇ ಒಂದು ವಿರುದ್ಧ ದಿಕ್ಕಿನ ಬೆಳವಣಿಗೆಗೆ ಕಾರಣವಾಗಲಿದೆ. ಮನುಷ್ಯರ ಜಾತಕ ಹಿಡಿದು ಅವರ ಯೋಗಾಯೋಗ ಫಲ ಹೇಳಿ ನಂಬಿಸುವವರು, ಅಮೇರಿಕಾದ ಅಣ್ಣನ ವಿಶ್ವವ್ಯಾಪಾರ ಕಟ್ಟಡದ ಪುನರ್‌ನಿರ್ಮಾಣಕ್ಕೂ ವಾಸ್ತುವಿನ ಜ್ಞಾನ, deformed-calfನಂಬುಗೆ ಹರಿಸುವವರು, ರೈತರ/ಜಾನಪದರ ನಂಬುಗೆಯ ‘ಜಾನುವಾರು ಜಾನಪದ’ವನ್ನು ಅವೈಜ್ಞಾನಿಕ ಎನ್ನಲಾದೀತೇ? ಜ್ಯೋತಿಷ್ಯವನ್ನು ವಿಜ್ಞಾನವೆಂದು ಪಂಚಕಜ್ಜಾಯದ ತರಹ ಹಂಚಲಾಗುತ್ತಿರುವ ಕಾಲದಲ್ಲಿ ಜಾನುವಾರುಗಳಿಗೆ ಸಂಬಂಧಿಸಿದ ಜಾನಪದಲಕ್ಷಣ ಮೀಮಾಂಸೆಯನ್ನು ಹೇಗೆ ನಿರಾಕರಿಸಲಾಗುತ್ತದೆ? ಹಸುಕಟ್ಟಿಕೊಂಡವರು ಕಟ್ಟಿದ ಈ ಲಕ್ಷಣಮೀಮಾಂಸೆಗೆ ಜೀವನಾನುಭವದ ಹಿನ್ನೆಲೆಯೂ ಇದ್ದಿರಲೇಬೇಕಲ್ಲವೇ? ಜೀವನಾನುಭವಗಳ ಹಿನ್ನೆಲೆಯಲ್ಲಿ ಬೆಳೆದುಬಂದ ಈ ನಂಬಿಕೆಯ ಜೀವನಕ್ರಮವನ್ನು ಸ್ವಲ್ಪ ಆಪ್ತತೆಯಿಂದ ನೋಡಿದಲ್ಲಿ ಪವಿತ್ರಗೋವೊಂದು ಯಾವ ಹಟ್ಟಿಗಳಲ್ಲಿ ಯಾವ್ಯಾವ ಕಾರಣಕ್ಕಾಗಿ ಅಪವಿತ್ರವಾಗುತ್ತದೆ ಎಂಬ ಅರಿವು ಖಂಡಿತಾ ದಕ್ಕುತ್ತದೆ. ಯಾಕೆಂದರೆ ಅದು ಒಂದೇ ಏಟಿಗೆ ಆರಾಧನೆ ಮಾಡಿಯೋ, ಉಪಯೋಗ ಮಾಡಿಯೋ ಬಿಡಬಹುದಾದ ಸಂಗತಿಯಲ್ಲ. ಅದೊಂದು ಸಂಕೀರ್ಣವಾದ ಪ್ರತ್ಯೇಕಲೋಕ. ಏಕರೂಪಿಯಲ್ಲದ ಈ ಜಗತ್ತಿನಲ್ಲಿ ಅವರವರ ಗೋವು ಅವರವರೇ ಕಟ್ಟಿಕೊಳ್ಳತಕ್ಕಂತಹ ನೆಲೆಯಲ್ಲಿರುತ್ತದೆ.ಸಾರ್ವತ್ರಿಕವಾದ ಗೋಸಂಕಥನದ ಮೂಲಕ ಪವಿತ್ರೀಕರಿಸಲ್ಪಟ್ಟ ಅದರ ಅಂತರಿಕಜಗತ್ತು ಛಿದ್ರೀಕರಣಕ್ಕೆ ಒಳಗಾದುದೆಂಬುದನ್ನು ಸಾವಧಾನವಾಗಿ ಗಮನಿಸಬೇಕಾಗುತ್ತದೆ.

ರಂಗಸಮಾಜದ ಸದಸ್ಯರ ಜವಾಬ್ದಾರಿ

– ಪ್ರದೀಪ್ ಮಾಲ್ಗುಡಿ

ಕರ್ನಾಟಕ ರಂಗಾಯಣ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣ ಕಲಾವಿದರ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರ ಗರಡಿಯಲ್ಲಿ ಪಳಗಿ, ಕಾರ್ಯ ನಿರ್ವಹಿಸಿ, ಅಭಿನಯಿಸಿರುವ ಈ ನಟನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಅವರು ರಂಗಭೂಮಿಗೆ ಸಂಬಂಧಿಸಿದ ಅನೇಕ ಜ್ಞಾನಶಿಸ್ತುಗಳ ಬಗೆಗೆ ಪಡೆದಿರುವ ಅನುಭವವನ್ನು ರಂಗಭೂಮಿಯ ಕಡೆಗೆ ತಿರುಗಿಸಬೇಕಾದ ಕೆಲಸ ಅಗತ್ಯವಾಗಿ ಹಾಗೂ ತುರ್ತಾಗಿ ಆಗಬೇಕಿದೆ.

ಈ ಕಲಾವಿದರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು. ರಂಗಾಯಣದ Kalamandira_Mysoreಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರೊಡನೆ ಇವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಕಲಾವಿದರ ಅನುಭವ ಹೊಸ ರಂಗಾಯಣಗಳ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಕಲಾವಿದರ ಅನುಭವದ ಮೂಲಕ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣಗಳ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. ಈಗಿರುವ ಈ ಎಲ್ಲ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಿವೃತ್ತಿಯ ನಂತರ ರಂಗಾಯಣಗಳಲ್ಲಿ ನಿರ್ವಾತ ಉಂಟಾಗಬಾರದು. ಇವರ ನಿರ್ಗಮನದ ತರುವಾಯ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರ ಪಡೆಯನ್ನು ಸಜ್ಜುಗೊಳಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಹಿರಿಯ ಕಲಾವಿದರನ್ನು ಹೊಸ ರಂಗಾಯಣಗಳ ನಿರ್ದೇಶಕರ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಬಹುದು. ಈ ನುರಿತ ಕಲಾವಿದರ ಸೇವಾಹಿರಿತನವನ್ನು ಮಾನದಂಡವಾಗಿಟ್ಟುಕೊಂಡು, ಅವರಿಗೆ ಸರದಿಯ ಪ್ರಕಾರ ನಿರ್ದೇಶಕ ಸ್ಥಾನದ ಜವಾಬ್ದಾರಿಯನ್ನು ನೀಡಬಹುದು. ಹೊಸ ರಂಗಾಯಣಗಳ ನಿರ್ದೇಶಕರ ನೇಮಕಾತಿ ಸಮಯದಲ್ಲಿ ರಂಗಾಯಣದ ಹಿರಿಯ ಕಲಾವಿದರನ್ನೂ ಪರಿಗಣಿಸಬೇಕಾಗಿದೆ. ಏಕೆಂದರೆ, ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಈ ಮೂಲಕ ಇಷ್ಟು ದಿನಗಳ ಅವರ ನಿರಂತರವಾದ ರಂಗಭೂಮಿಯ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಿದಂತಾಗುತ್ತದೆ.

ಈ ಹಿಂದಿನ ಸರ್ಕಾರವು ಸಾಂಸ್ಕೃತಿಕ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವೆಂದರೆ, ರಂಗಾಯಣ ಕಲಾವಿದರ ವರ್ಗಾವಣೆ. ಆದರೆ ಈ ಹೊಸ ರಂಗಸಮಾಜದ ಸದಸ್ಯರು ಅದನ್ನು ರದ್ದುಗೊಳಿಸಿ ಅಚಾತುರ್ಯವೆಸಗಿದ್ದಾರೆ. ಮೈಸೂರಿನ ಕೆಲವು ಬುದ್ಧಿಜೀವಿಗಳು, ಸಾಹಿತಿ, ಕಲಾವಿದರು ಹಾಗೂ ಪ್ರೇಕ್ಷಕರು ತಾವು ಹಾಗೂ ರಂಗಾಯಣದ ಕಲಾವಿದರು ಸಾಯುವವರೆಗೂ ಮೈಸೂರಿನಲ್ಲೇ ನೆಲೆನಿಲ್ಲುವ, ಆ ಮೂಲಕ ಅವರ ನಟನೆ, ಅನುಭವ ಎಲ್ಲಿಯೂ ಬಳಕೆಯಾಗದಂತೆ, ಮತ್ತಾರಿಗೂ ಅವರ ಅಭಿನಯವನ್ನು ವೀಕ್ಷಿಸುವ ಅವಕಾಶ ಲಭಿಸದಂತೆ ಹುನ್ನಾರಗಳನ್ನು ಹೂಡುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರಂಗಸಮಾಜದ ಸದಸ್ಯರು ಕಾರ್ಯನಿರ್ವಹಿಸಬೇಕಾಗಿದೆ.

ಈಗಾಗಲೇ ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಕ್ರಿಯಾಶೀಲವಾಗಿದ್ದಾರೆ. ಈಗಿರುವ ರಂಗಾಯಣದ ನಿಯಮಾವಳಿಗಳಿಗೆ ಕೂಡ ಇದೇ ಸಮಯದಲ್ಲಿ ಸೂಕ್ತ ತಿದ್ದುಪಡಿ ತರುವ ಮೂಲಕ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಆಗ ಬಾಹ್ಯ ಒತ್ತಡಗಳು ಇಲ್ಲವಾಗುತ್ತವೆ.

ರಂಗಾಯಣದ ಮುಂದಿನ ಬಿಕ್ಕಟ್ಟುಗಳು:

ರಂಗಾಯಣದ ಮುಂದಿನ ನಿರ್ದೇಶಕರಾರು? ಎಂಬ ಪ್ರಶ್ನೆ ಈಗ ಮತ್ತೆ ರಂಗಭೂಮಿ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸ ಒದಗಿಸಿದೆ. ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಪರಸ್ಪರರನ್ನು ಬೆಂಬಲಿಸುವ ಅನೇಕ ಗುಂಪುಗಳು – ಅನೇಕ ಬಗೆಯಲ್ಲಿ ಕ್ರಿಯಾಶೀಲವಾಗಿವೆ. ರಂಗಾಯಣದ ಈಚಿನ ಮೂವರು ನಿರ್ದೇಶಕರು – ಬಿ.ಜಯಶ್ರೀ ಅವರ ರಾಜೀನಾಮೆ, ಪ್ರೊ.ಲಿಂಗದೇವರು ಹಳೆಮನೆಯವರ ಅಕಾಲಿಕ ನಿಧನ ಹಾಗೂ ಡಾ.ಬಿ.ವಿ.ರಾಜಾರಾಂ ಅವರನ್ನು ಸರ್ಕಾರವು ವಜಾಗೊಳಿಸಿದ ಕ್ರಮಗಳಿಂದ – ಈ ಮೂವರೂ ಅಕಾಲದಲ್ಲಿ ಹುದ್ದೆ ತೊರೆಯುವಂತಾದುದು ಪ್ರಸ್ತುತ ಸನ್ನಿವೇಶ ನಿರ್ಮಾಣಕ್ಕೆ ಕಾರಣ.

ಇದುವರೆಗಿನ ರಂಗಾಯಣದ ನಿರ್ದೇಶಕರ ಪಟ್ಟಿಯನ್ನು ಗಮನಿಸಿದಾಗ ಎದ್ದು ಕಾಣುವ ಅಂಶವೆಂದರೆ; ಎನ್.ಎಸ್.ಡಿ. ಪದವೀಧರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದಾರೆ. ಪ್ರೊ.ಲಿಂಗದೇವರು ಹಳೆಮನೆಯವರು ಹಾಗೂ ಬಿ.ವಿ.ರಾಜಾರಾಂರನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಎನ್.ಎಸ್.ಡಿ., ಪದವೀಧರರೆ ಆಗಿದ್ದಾರೆ. ಇದನ್ನು ಗಮನಿಸಿದಾಗ, ರಂಗಸಮಾಜದ ಸದಸ್ಯರು ಈ ಅರ್ಹತೆಯನ್ನು ಅಲಿಖಿತ ನಿಯಮವನ್ನಾಗಿ ಅನುಸರಿಸಿರುವಂತೆ ತೋರುತ್ತದೆ. ರಂಗಾಯಣದ ಕ್ರಿಯಾಶೀಲತೆಯನ್ನು ಅನೇಕ ಹಂತಗಳಲ್ಲಿ ವಿಸ್ತರಿಸುವ ಕೆಲಸವನ್ನು ಈ ಪದವೀಧರರು ಮಾಡಿದ್ದಾರೆ. ಈಗಲಾದರೂ ರಂಗಸಮಾಜವು ಆಯ್ಕೆಯಲ್ಲಿ ಅಂತಿಮಪಟ್ಟಿ ಕಳಿಸುವಾಗ ಈ ಬಗೆಯ ಅಲಿಖಿತ ನಿಯಮಗಳು ಇನ್ನೆಷ್ಟು ದಿನ ಅಗತ್ಯ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ರಂಗಸಮಾಜದ ಸದಸ್ಯರು ಕರ್ನಾಟಕದ ರಂಗಭೂಮಿಯಲ್ಲಿ ದೀರ್ಘಾವಧಿಯಿಂದ ತೊಡಗಿಕೊಂಡಿದ್ದಾರೆ. ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ಮೂಲಕ ರಂಗಭೂಮಿಯ ಚರಿತ್ರೆ, ಆಧುನಿಕ ವಿದ್ಯಮಾನ, ಅಧಿಕಾರ ಹಾಗೂ ಅದರ ಸಾಂಸ್ಥಿಕ ರೂಪಗಳು ಅದು ತರುವ ಒತ್ತಡಗಳನ್ನು ಅರಿಯದವರೇನೂ ಅಲ್ಲ. ಅವರು ಈ ಎಲ್ಲ ಸಮಸ್ಯೆಗಳ ನಡುವೆಯೂ ರಂಗಾಯಣದ ಸ್ಥಾಪನೆ, ಅದರ ಧ್ಯೇಯೋದ್ದೇಶಗಳನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ಅರ್ಹರನ್ನು ಆಯ್ಕೆ ಮಾಡಬೇಕಾಗಿದೆ.

ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಂಗಸಮಾಜವು ಹೆಸರುಗಳನ್ನು ಸೂಚಿಸುವಾಗ ನಿರ್ದೇಶಕರಾಗಿ ಹೆಸರಾದವರನ್ನು ಮತ್ತು ಅವರ ರಂಗಭೂಮಿಯ ಆಸಕ್ತಿ, ತೊಡಗುವಿಕೆ, ರಂಗಾಯಣದ ಆಡಳಿತವನ್ನು ನಿರ್ವಹಿಸುವ ಸಾಧ್ಯತೆ ಇತ್ಯಾದಿ ವಿಷಯಗಳನ್ನೂ ಗಮನದಲ್ಲಿರಿಸಿಕೊಂಡು ಮೂವರು ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸುತ್ತಿತ್ತು. ಈ ಬಾರಿಯೂ ಈ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕಾಗಿರುವುದು ರಂಗಸಮಾಜದ ಮೊದಲ ಜವಾಬ್ದಾರಿ. ಆ ಮೂಲಕ ಈ ಪಟ್ಟಿಯಲ್ಲಿ ಯೋಗ್ಯರಾದವರು ಮಾತ್ರ ಉಳಿದುಕೊಳ್ಳುವ ಆಯ್ಕೆ ಮಾಡುವುದು ಎರಡನೇ ಜವಾಬ್ದಾರಿಯಾಗಿದೆ.

ಆದರೆ ರಂಗಸಮಾಜವು ಸೂಚಿಸಿದ ಹೆಸರುಗಳನ್ನು ಇತ್ತೀಚೆಗೆ ಮೈಸೂರು, ಶಿವಮೊಗ್ಗ ಹಾಗೂ ಧಾರವಾಡದ ರಂಗಾಯಣಗಳಿಗೆ ಪರಿಗಣಿಸದಿರುವುದು ಗೊತ್ತಾಗಿದೆ. ಹಾಗಾದರೆ ರಂಗಾಯಣಕ್ಕೆ ರಂಗಸಮಾಜವೇಕೆ ಬೇಕು? ರಂಗಸಮಾಜದ ಅಸ್ತಿತ್ವವಿರುವುದು ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ. ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುವಲ್ಲಿ. ಅದು ಮುಂದೆ ರಂಗಾಯಣದ ಅಸ್ತಿತ್ವದ ಸ್ಥಿತ್ಯಂತರಗಳಿಗೂ ಕಾರಣವಾಗುತ್ತದೆ. ಆದ್ದರಿಂದ, ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಿಂದ ಬರುತ್ತಿರುವ, ಮುಂದೆ ಬರಬಹುದಾದ ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯವನ್ನು ರಂಗಭೂಮಿಯೇ ಒದಗಿಸುತ್ತದೆ. ರಂಗಭೂಮಿಯ ಒಡನಾಟವು ಈ ಬಗೆಯ ವಿವೇಕವನ್ನು ಕಲಿಸಿರುತ್ತದೆ. ಆದಾಗ್ಯೂ, ಸಾಂದರ್ಭಿಕವಾಗಿ ಪ್ರಭುತ್ವದ ಒತ್ತಡಗಳು ಈ ವಿವೇಕವನ್ನು ಹೊಸಕಿ ಹಾಕಿ-ತನಗೆ ಬೇಕಾದವರನ್ನು ಆರಿಸುವಂತಾಗಬಾರದು. ಪ್ರಭುತ್ವದ ಒತ್ತಡಕ್ಕೆ ಮಣಿಯುವುದಾದಲ್ಲಿ ರಂಗಸಮಾಜದ ಅಗತ್ಯವೇನಿದೆ?

ಇದುವರೆಗೆ ರಂಗಾಯಣದ ನಿರ್ದೇಶಕರಾಗಿರುವವರು ದಕ್ಷಿಣ ಕರ್ನಾಟಕದ ವ್ಯಾಪ್ತಿಯವರು, ಹವ್ಯಾಸಿ ರಂಗಕರ್ಮಿಗಳು, ನಿರ್ದೇಶಕರು. ಆದರೆ, ಉತ್ತರ ಕರ್ನಾಟಕದ ರಂಗಕರ್ಮಿಗಳು, ವೃತ್ತಿ ರಂಗಕರ್ಮಿಗಳು, ರಂಗಭೂಮಿಯ ತಂತ್ರಜ್ಞರು ಹಾಗೂ ನಾಟಕಕಾರರು ರಂಗಾಯಣದ ನಿರ್ದೇಶಕರಾಗಿಲ್ಲ. ರಂಗ ಸಮಾಜದ ಸದಸ್ಯರುಗಳು ಈ ಅನೇಕ ಅಂಶಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕಾಗಿದೆ. ಸಾಮಾಜಿಕ ನ್ಯಾಯದ ದೃಷ್ಟಿಯನ್ನು ಪರಿಗಣಿಸಿದ್ದಾದಲ್ಲಿ ಈಗಿನ ಆಕಾಂಕ್ಷಿಗಳ ಪಟ್ಟಿಯು ಅರ್ಧಕ್ಕಿಳಿಯುತ್ತದೆ. ಈ ಮಾನದಂಡಗಳನ್ನು ಅನುಸರಿಸಿದಲ್ಲಿ ರಂಗಾಯಣದ ಘನತೆಯೂ ಹೆಚ್ಚುತ್ತದೆ.

ಶಕ್ತಿ ಕೇಂದ್ರಗಳ ಒಡೆಯುವಿಕೆಯ ಸಂಕ್ರಮಣ ಕಾಲ

– ಬಿ.ಶ್ರೀಪಾದ ಭಟ್

“ನಾವು ಬದುಕುತ್ತಿರುವ ವರ್ತಮಾನದ ಸ್ಥಿತಿಗತಿಗಳ ಬಗೆಗೆ ನಿಮಗೆ ಅರಿವಿಲ್ಲದಿದ್ದರೆ ನೀವು ನನ್ನ ಕತೆಗಳನ್ನು ಓದಬೇಕು. ಈ ನನ್ನ ಕತೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಂದಿನ ವರ್ತಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.” – ಸಾದತ್ ಹಸನ್ ಮಂಟೋ

ಇಂದು ಇಂಡಿಯಾ ದೇಶವು ತನಗರಿವಿಲ್ಲದಂತೆಯೇ ನಿಧಾನವಾಗಿ ಫ್ಯಾಸಿಸಂನ ಸ್ವರೂಪಕ್ಕೆ, ಅರಾಜಕತೆಯ ತೆಕ್ಕೆಗೆ ಜಾರಿಕೊಳ್ಳುತ್ತಿದೆ. ಬೌದ್ಧಿಕವಾಗಿ ದಾರಿದ್ರ್ಯಗೊಂಡಿರುವ ಬಹುಪಾಲು ಮಾಧ್ಯಮಗಳು ಈ ಫ್ಯಾಸಿಸಂನ ಆಳ ಅಗಲಗಳನ್ನು ಅರಿಯದೆಯೇ ಅಭಿವೃದ್ಧಿಯ ನೆಪದಲ್ಲಿ ಕೇವಲ ಸಂಕುಚಿತ ಆರ್ಥಿಕ ನೀತಿಯನ್ನು ಪ್ರತಿಪಾದಿಸುತ್ತ ಒಂದು ನಿರ್ದಿಷ್ಟ ಮೇಲ್ವರ್ಗಗಳ, ಮಧ್ಯಮವರ್ಗದ ಜೀವನ ಕ್ರಮವನ್ನೇ, ಅವರ ಏಕರೂಪಿ ಸಂಸ್ಕೃತಿಯನ್ನೇ ಇಂಡಿಯಾದ ಐಡೆಂಟಿಟಿಯೆಂದು ವಾದಿಸುತ್ತಿವೆ. ಆಮ್ ಆದ್ಮಿಯ ಕುರಿತಾಗಿ ಮಾತನಾಡುತ್ತಲೇ ಈ ಉದ್ದಿಮೆದಾರರು ಮತ್ತು ಮಾಧ್ಯಮಗಳು ಒಂದಾಗಿ ದೇಶದ ಬಡವನ ವಿರುದ್ಧ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಯಾವುದೇ ಜನಪರ ಕಾರ್ಯಕ್ರಮಗಳನ್ನು ಅಭಿವೃದ್ಧಿ ವಿರೋಧಿ ಎಂದು ವಾದಿಸುತ್ತಾರೆ.

ಈ ಕೇಂದ್ರೀಕೃತಗೊಂಡ ಕಾರ್ಪೋರೇಟ್ ಗುಂಪು ಯಾವುದೇ ಬಗೆಯ ಜನಪರ ಸಣ್ಣ ಯೋಜನೆಗಳನ್ನು ಉಗ್ರವಾಗಿ ವಿರೋಧಿಸುತ್ತದೆ. ಏಕೆಂದರೆ ತಮ್ಮ ಸ್ವಹಿತಾಸಕ್ತಿಗಾಗಿ ಸರ್ಕಾರಗಳೊಂದಿಗೆ ಬಹಿರಂಗವಾಗಿಯೇ ಡೀಲ್‌ಗಳನ್ನು ಮಾಡಿಕೊಂಡ ಈ ಕಾರ್ಪೋರೇಟ್ ವಲಯ ಆ ಡೀಲ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಬಹುಪಾಲು ಮಾಧ್ಯಮಗಳನ್ನು ಬಳಸಿಕೊಂಡು ಅವನ್ನು ತನ್ನ ಉಕ್ಕಿನ ಹಿಡಿತದಲ್ಲಿರಿಸಿಕೊಂಡಿತು.

ಕಳೆದ ಕೆಲವು ತಿಂಗಳಿಂದ ಈ ಮಾಧ್ಯಮಗಳ ವರ್ತನೆಗಳನ್ನು ಗಮನಿಸಿದರೆ ಇವರ ಅಮಾನವೀಯ ವರ್ತನೆಗಳಿಗೆ ಉತ್ತರ ಸಿಗುತ್ತದೆ. Food Security Billಅಹಾರ ಭದ್ರತೆ ಮಸೂದೆ ಬೇಡ, ಕೋಮುವಾದ ವಿರೋಧಿ ಮಸೂದೆ ಬೇಡ, ಭೂ ಸ್ವಾಧೀನ ಮಸೂದೆ ರೈತ ವಿರೋಧಿ, ಹೀಗೆ ಎಲ್ಲಾ ಬಗೆಯ ಜನಪರವಾದ ಪ್ರಗತಿಪರ ಯೋಜನೆಗಳ ವಿರುದ್ಧ ವಿಷ ಕಾರುತ್ತಿದ್ದಾರೆ. ಸಂಪೂರ್ಣವಾಗಿ ಕಾರ್ಪೋರೇಟ್‌ಗಳ ಹಿಡಿತದಲ್ಲಿರುವ ಈ ಮಾಧ್ಯಮಗಳ ವರ್ತನೆ ದೇಶದ ವಿಕೇಂದ್ರೀಕರಣದ ವ್ಯವಸ್ಥೆಗೆ, ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಂತ ಮಾರಕವಾದುದು. ಸಮುದಾಯವಾಗಿ, ಸಣ್ಣ ಸಣ್ಣ ವಿಕೇಂದ್ರಿಕೃತ ಯೋಜನೆಗಳ ಮೂಲಕ ದೇಶವನ್ನು ಕಟ್ಟುವುದನ್ನು ಇವರೆಲ್ಲ ಓಬೀರಾಯನ ಕಾಲದ, ಚಾಲ್ತಿಯನ್ನು ಕಳೆದುಕೊಂಡ ಸಮಾಜವಾದಿ ಚಿಂತನೆಗಳೆಂದು ನಿರಾಕರಿಸುತ್ತಿರುವ ರೀತಿ ಅಪಾಯಕಾರಿಯಾದದ್ದು.

ಕಡೆಗೆ ಕೇಂದ್ರ ಸರ್ಕಾರವು ತನ್ನ ಎಲ್ಲಾ ವೈಫಲ್ಯಗಳ ನಡುವೆಯೂ ಆಹಾರ ಭದ್ರತೆ ಮಸೂದೆಯನ್ನು ಜಾರಿಗೆ ತಂದು (ಅನೇಕ ಮಿತಿಗಳ ನಡುವೆಯೂ) ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಪ್ರತಿಯೊಬ್ಬ ಪ್ರಜೆಗೆ, ಪ್ರತಿ ತಿಂಗಳಿಗೆ ಕನಿಷ್ಟ 5 ಕೆ.ಜಿ.ಧಾನ್ಯ, ಅಕ್ಕಿ, ಬೇಳೆ, ಗರ್ಭಿಣಿ ಮತ್ತು ಬಾಣಂತಿ ಹೆಂಗಸರಿಗೆ ಪ್ರತಿ ತಿಂಗಳು ರೂ. 1000 ಸಹಾಯಧನ (6 ತಿಂಗಳವರೆಗೆ), ಪ್ರತಿಯೊಂದು ಮಗುವಿಗೂ ಮೂರು ವರ್ಷಗಳವೆರೆಗೆ ಪೌಷ್ಟಿಕ ಆಹಾರ, ಹೀಗೆ ಅನೇಕ ಜನಪರ ಆಶಯಗಳನ್ನು ಒಳಗೊಂಡ ಈ ಆಹಾರ ಭದ್ರತೆ ಮಸೂದೆಯ ಮೂಲಕ ದೇಶದ ಸುಮಾರು ಶೇಕಡ 67 ರಷ್ಟು ಜನಸಂಖ್ಯೆಗೆ ಖಾಯಂ ಆಗಿ ಸಬ್ಸಿಡಿ ರೂಪದಲ್ಲಿ ಧಾನ್ಯ ಕಾಳುಗಳು ಮತ್ತು ಅಕ್ಕಿ, ಬೇಳೆ ಸಿಗುವಂತೆ ಮತ್ತು ಅವರ ದಿನಿತ್ಯದ ಹೊಟ್ಟೆ ತುಂಬುವಂತೆ ಕಾನೂನನ್ನು ರೂಪಿಸಬಹುದೆಂದು ಒತ್ತಾಯಿಸುತ್ತಿದ್ದಾರೆ, ಅಲ್ಲದೆ ಇಂಡಿಯಾದಲ್ಲಿ ಆಹಾರ ಉತ್ಪಾದನೆಯ ಕೊರತೆ ಎಂದಿಗೂ ಕಾಡಿಲ್ಲ. ಇಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿಗೆ ಬೆಳೆಯುತಿದ್ದೇವೆ. food-security-wasted-grainsಆದರೆ ಅದನ್ನು ನಿರ್ವಹಿಸಲು, ವಿತರಿಸಲು ಸೋತಿದ್ದೇವೆ. ಬೆಳೆದ ಧಾನ್ಯ, ಅಕ್ಕಿ, ಬೇಳೆಗಳನ್ನು ತಿಂಗಳುಗಟ್ಟಲೆ ಸಂಗ್ರಸಿಡಲು ಸುರಕ್ಷಿತ ವ್ಯವಸ್ಥೆ ನಮ್ಮಲಿಲ್ಲ. ಹೀಗಾಗಿಯೇ ಟನ್‌ಗಟ್ಟಲೆ ಆಹಾರ ಧಾನ್ಯಗಳು ಕೊಳೆತು ಹೋಗುತ್ತವೆ. ಮತ್ತೊಂದು ಕಡೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟತೆ. ಇದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಮುಖ್ಯವಾಗಿ ಸಣ್ಣ ರೈತರು ತಾವು ಬೆಳೆದ ಧಾನ್ಯಕ್ಕೆ ಕನಿಷ್ಟ ಬೆಂಬಲ ಬೆಲೆಗೆ ಧಕ್ಕೆ ಬರದಂತೆ ಎಚ್ಚರವಹಿಸಬೇಕು.

ಈ ಹಿನ್ನೆಲೆಯಲ್ಲಿ ಈ ಆಹಾರ ಭದ್ರತೆ ಮಸೂದೆಯನ್ನು ಭವಿಷ್ಯದ ಹೂಡಿಕೆಯಾಗಿ (Future Investment) ನೋಡಬೇಕೆಂಬ ಕನಿಷ್ಟ ಅರಿವಿಲ್ಲದೆ ಬಹುಪಾಲು ಮಾಧ್ಯಮಗಳು ಮತ್ತು ಮಧ್ಯಮ, ಮೇಲ್ವರ್ಗದ ಜನತೆ ಇದನ್ನು ಒಂದು ಖರ್ಚನ್ನಾಗಿ ನೋಡುತ್ತಿದ್ದಾರೆ. ಇದನ್ನು ಜಾರಿಗೊಳಿಸಲು ದೇಶದ ಎಲ್ಲ ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿ ವಿರೋಧಿಸುತ್ತಿವೆ. ರೂಪಾಯಿ ಅಪಮೌಲ್ಯದ ಗುಮ್ಮನನ್ನು ಹುಟ್ಟು ಹಾಕಿವೆ. ಇನ್ನೇನು ಭಾರತ ವರ್ಲ್ಡಬ್ಯಾಂಕ್‌ನ ಮುಂದೆ ಮಂಡಿಯೂರಬೇಕಾಗುತ್ತದೆ ಎಂದು ಅಪಪ್ರಚಾರ ನಡೆಸುತ್ತಿವೆ. ಅನಗತ್ಯವಾಗಿ ಭಯದ, ಹತಾಶೆಯ ವಾತಾವರಣವನ್ನು ಫ್ಯಾಬ್ರಿಕೇಟ್ ಮಾಡುತ್ತಿವೆ.

ಈ ಆಹಾರ ಭದ್ರತೆ ಮಸೂದೆಯಿಂದ ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ಖರ್ಚಾಗುತ್ತದೆ. ಅಂದರೆ ವಾರ್ಷಿಕ ಜಿಡಿಪಿಯ ಶೇಕಡ 1.2 ರಷ್ಟು ಮಾತ್ರ. ಆದರೆ ಭಾರತದ ಕಾರ್ಪೋರೇಟ್ ವಲಯಗಳು ಸುಮಾರು 12 ಸಾವಿರ ಕೋಟಿಯಷ್ಟು ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳುತ್ತವೆ (ಶ್ ! ಯಾರೂ ಕೇಳಬೇಡಿ), ಈ ಕಾರ್ಪೋರೇಟ್ ವಲಯಗಳಿಗೆ ದೊರಕುವ ಇಂಧನ ವಿನಾಯ್ತಿ ಸುಮಾರು 1 ಲಕ್ಷ ಕೋಟಿ (ಇದನ್ನು ಚರ್ಚಿಸುವ ಹಾಗಿಲ್ಲ, ದೊಡ್ಡವರಿಗೆ ಸಂಬಂಧಿಸಿದ್ದು!!), ಇನ್ನು ವಿಜಯ್ ಮಲ್ಯರಂತಹ ವಂಚಕರು ಸರ್ಕಾರಕ್ಕೆ ಹಾಕುವ ಪಂಗನಾಮ ನೂರಾರು ಕೋಟಿ!! ಪ್ರತಿ ವರ್ಷದ ಮುಂಗಡ ಪತ್ರದಲ್ಲಿ ಮತ್ತೇನಾದರೂ ವಿನಾಯ್ತಿಗಳಿವೆಯೇ ಎಂದು ಬೇರೆ ಬಕಪಕ್ಷಿಯಂತೆ ಕಾದು ಕುಳಿಯುತ್ತಾರೆ ಈ ವರ್ಗಗಳು. ಇವರ ಈ ಬಗೆಯ ತೆರಿಗೆ ವಿನಾಯ್ತಿಗಳು, ವಂಚನೆಗಳು ಇನ್ನೂ ನೂರಾರಿವೆ. ಇದಲ್ಲದೆ ಈ ಕಾರ್ಪೋರೇಟ್ ವರ್ಗಗಳು ಶಾಸಕಾಂಗ ಮತ್ತು ಕಾರ್ಯಾಂಗಗಳೊಂದಿಗೆ ಮಿಲಕಾಯಿಸಿ ಹುಟ್ಟುಹಾಕಿದ ನೂರಾರು ಹಣಕಾಸು ಅವ್ಯವಹಾರಗಳು, ಹಗರಣಗಳು ಆ ಮೂಲಕ ಸರ್ಕಾರಕ್ಕೆ ಸಾವಿರಾರು ಕೋಟಿಯ ವಂಚನೆಗಳನ್ನು ಮರೆಯಲು ಸಾಧ್ಯವೇ?

ಆದರೆ ಸ್ವತಃ ಈ ಕಾರ್ಪೋರೇಟ್ ವಲಯಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ, ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳ ಮೊತ್ತದ ಅಸಲು ಸಾಲವನ್ನು ಮತ್ತು ಅವುಗಳ ಮೇಲಿನ ಬಡ್ಡಿಯನ್ನು ವರ್ಷಗಟ್ಟಲೆ ಪಾವತಿಸದೆ ಆ ಮೂಲಕ ದೇಶದ ಹಣಕಾಸಿನ ಸಮತೋಲನವನ್ನೇ ಹದಗೆಡಿಸಿ ತಮ್ಮ ದುಷ್ಟತನವನ್ನು ತೋರಿಸುತ್ತಿವೆ. ಸರ್ಕಾರಗಳು ಇವರನ್ನು ಪ್ರಶ್ನಿಸಲು ಧೈರ್ಯ ಮಾಡುತ್ತಿಲ್ಲ. ಆದರೆ ಬಡವರಿಗೆ ಸಬ್ಸಿಡಿ ಮಟ್ಟದಲ್ಲಿ ಆಹಾರ ಧಾನ್ಯಗಳು ಹಂಚಿದಾಕ್ಷಣ ಇನ್ನೇನು ಮುಳುಗಿಹೋಯಿತೆಂದು ಅಪಪ್ರಚಾರ ನಡೆಸುತ್ತವೆ ಈ ಭ್ರಷ್ಟ, ಅಮಾನವೀಯ ಗುಂಪು. ಇಂತಹ ಸ್ವಾರ್ಥ, ಹಿಂಸಾತ್ಮಕ ವ್ಯವಸ್ಥೆಯನ್ನು ಬೇರೆಲ್ಲಾದರೂ ಕಾಣಲು ಸಾಧ್ಯವೇ?

ತೊಂಬತ್ತರ ದಶಕದಲ್ಲಿ ಜಾಗತೀಕರಣಕ್ಕೆ ಸಂಪೂರ್ಣವಾಗಿ ಒಡ್ಡಿಕೊಂಡ ಇಂಡಿಯಾ ದೇಶ ಇಪ್ಪತ್ತೆರಡು ವರ್ಷಗಳ ನಂತರ ಇಂದು ತನ್ನ ಅತ್ಯುತ್ತಮ, ಜೀವಪರ ಮೂಲಧಾರೆಗಳು ಮತ್ತು ಸೂಕ್ಷ್ಮವಾದ ಜೀವಸಂಕುಲ ಮತ್ತು ಅವುಗಳ ಸರಪಣಿ, ನದಿಗಳು ಎಲ್ಲವೂ ನಾಶಗೊಂಡು ಇಂದು ಬಂಜರುಗೊಂಡು ನಿಂತಿವೆ. ಗ್ರಾಮೀಣ ಬದುಕು ಸಂಪೂರ್ಣವಾಗಿ ನಿರ್ಜೀವಗೊಂಡು ಶಕ್ತಿಹೀನವಾಗಿದ್ದರೆ, ನಗರಗಳು ಸುಖಲೋಲುಪ್ತತೆಯಲ್ಲಿ ವಿಕಾರಗೊಂಡಿವೆ. starved-peopleಏಕೆಂದರೆ ಅಧಿಕಾರಿ ವರ್ಗ ಮತ್ತು ಪ್ರಭುತ್ವ ಜಾಗತೀಕರಣವನ್ನು ಕೇವಲ ಒಂದು ಉಪಭೋಗ ಪ್ರಕ್ರಿಯೆಯಾಗಿ ಪರಿಗಿಣಿಸಿರುವುದು. 1991 ರಿಂದ ಇಲ್ಲಿಯವರೆಗೂ ಕಳೆದ ಇಪ್ಪತ್ತೆರೆಡು ವರ್ಷಗಳಲ್ಲಿ ಇಂಡಿಯಾದ ಎಲ್ಲಾ ಸರ್ಕಾರಗಳು ಮತ್ತು ಮಧ್ಯಮ ಮತ್ತು ಮೇಲ್ವರ್ಗಗಳು ಈ ಜಾಗತೀರಣವನ್ನು ಸುಖಲೋಲುಪ್ತ, ವಿಲಾಸೀಜೀವನಕ್ಕೆ ತೆರೆದ ಹೆಬ್ಬಾಗಿಲಾಗಿ ಪರಿವರ್ತಿಸಿ ಕೇವಲ ಶೇಕಡ 15 ರಿಂದ 20 ರಷ್ಟಿರುವ ಈ ವರ್ಗಗಳು ಇಂಡಿಯಾ ದೇಶವನ್ನೇ ಕೊಳ್ಳುಬಾಕ ಸಂಸ್ಕೃತಿಗೆ ದೂಡಿಬಿಟ್ಟವು. ಜಾಗತೀಕರಣವಿರಲಿ ಇಲ್ಲದಿರಲಿ, ಮುಕ್ತ ಆರ್ಥಿಕ ನೀತಿ ಇರಲಿ, ಇಲ್ಲದಿರಲಿ ಮೂಲಭೂತವಾಗಿ ಪ್ರಜಾಪ್ರಭುತ್ವದ ದೇಶವೊಂದರ ಆರ್ಥಿಕ ನೀತಿ ವ್ಯವಸಾಯ ಮತ್ತು ಎಲ್ಲ ಬಗೆಯ ಸಣ್ಣ ಕೈಗಾರಿಕ ವಲಯಗಳ ಉತ್ಪಾದನೆಯ ಮೇಲೆ ಮತ್ತು ಅವುಗಳ ವ್ಯಾಪಾರ ಸರಪಣಿಗಳ ಮೇಲೆ ಅವಲಂಬಿತವಾಗಿರಬೇಕೆಂಬ ಮೂಲನೀತಿಯನ್ನೇ ತಿರಸ್ಕರಿಸಿ ಶೇಕಡ 20 ರಷ್ಟು ಜನತೆಯ ಕೊಳ್ಳುವಿಕೆಯನ್ನೇ, ಅವರ ಈ ಕೊಳ್ಳುವಿಕೆಯ ಸಾಮರ್ಥ್ಯವನ್ನೇ ದೇಶದ ಆರ್ಥಿಕ ಪ್ರಗತಿಗೆ ಮಾನದಂಡವಾಗಿ ಬಳಸಿಕೊಂಡಿತು. ಅದನ್ನೇ ಜಿಡಿಪಿ ಎಂದು ಬಿಂಬಿಸಿತು.

ಇದರ ಫಲವಾಗಿ ದೇಶದ ಕೇವಲ ಶೇಕಡ 15 ರಿಂದ 20 ರಷ್ಟು ಜನಸಂಖ್ಯೆಯ ಬಳಿ ಮಾತ್ರ ಈ ಕೊಳ್ಳುವಿಕೆಯ ಸಾಮರ್ಥ್ಯ ಕೇಂದ್ರೀಕೃತಗೊಂಡಿತು. ಅದರ ಫಲವೇ ಈ ಕೊಳ್ಳುಬಾಕುತನದ ವಿಷವೃತ್ತಕ್ಕೆ ಸಿಲುಕಿಕೊಂಡ ಈ ವರ್ಗಗಳು ಬಕಾಸುರನಂತೆ ಬದುಕತೊಡಗಿದರೆ ಅವರ ಈ ಹೊಟ್ಟೆಬಾಕುತನವನ್ನು ತಣಿಸಲು ಕೇಂದ್ರ ಸರ್ಕಾರವು ಆಮದಿನ ಮೇಲಿನ ಹಿಡಿತವನ್ನು, ಕರಗಳನ್ನು ಸಡಿಲಿಸಿ ಮುಕ್ತ ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟಿತು. ಇದರ ಫಲವಾಗಿ ದೇಸಿ ಸರಕಿನ ಉತ್ಪಾದನೆಯ ಪ್ರಮಾಣ ಕ್ರಮೇಣವಾಗಿ ಕುಂಠಿತಗೊಂಡು ಆಮದು ವಸ್ತುಗಳು ನಮ್ಮ ಮನೆ ಬಾಗಿಲ ಬಳಿಗೆ ಬಂದು ಬೀಳತೊಡಗಿದವು. ಜಾಗತೀಕರಣದ ಆರಂಭದಲ್ಲಿ ದೇಸಿ ಸರಕುಗಳ ರಫ್ತನ್ನು ಅಭೂತಪೂರ್ವವಾಗಿದೆ ಎಂದು ಉತ್ಪ್ರೇಕ್ಷಿತಗೋಳಿಸಿ, ಸ್ವತಃ ಸರ್ಕಾರಗಳೇ ಇದನ್ನು ಪುಷ್ಟೀಕರಿಸಲು ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ತೋರಿಸಿದವು. ನೋಡಿ ಈ ದೇಸಿ ರಫ್ತು ನೀತಿ ಇದೇ ವೇಗದಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದು ಆಮದಿನ ಪ್ರಮಾಣವನ್ನು ಮೀರಿ ದೇಶಕ್ಕೆ ವಿದೇಶಿ ವಿನಿಮಯದ ಮೂಲಕ ಹಣಕಾಸು ಭದ್ರತೆಯನ್ನು ಹೆಚ್ಚಿಸುತ್ತದೆ ಎಂದು ಬೂಸಿ ಬಿಟ್ಟಿತು. ಆದರೆ ಇದೇ ಸರ್ಕಾರ ಮತ್ತೊಂದು ಕಡೆ ದೇಸಿ ಉತ್ಪಾದನೆಗೆ ಪೂರಕವಾಗುವಂತಹ, expensive-wedding-banquetsದೇಸಿ ಸರಕುಗಳು ದೇಶದಲ್ಲಿಯೇ ಮಾರಾಟಗೊಳ್ಳುವಂತಹ ವಿಕೇಂದ್ರಿಕೃತ ಸಣ್ಣ ಕೈಗಾರಿಕ ಯೋಜನೆಗಳನ್ನು ನಿಷ್ಕ್ರಿಯೆಗೊಳಿಸಿ ಭಾರಿ ಕೈಗಾರಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿ ಇಡೀ ಸಂಪತ್ತಿನ ವಹಿವಾಟು ಮರಳಿ ಕೆಲವೇ ಪ್ರತಿಷ್ಟಿತ, ಶ್ರೀಮಂತ ಮನೆತನಗಳಿಗೆ, ಕಂಪನಿಗಳಿಗೆ ಸೀಮಿತವಾಗುವಂತೆ ಆರ್ಥಿಕ ನೀತಿಯನ್ನು ಜಾರಿಗೊಳಿಸಿತು. ಇದರಿಂದಾಗಿ ಸಣ್ಣ ಕೈಗಾರಿಕೆಗಳು ತಮ್ಮದೇ ಬ್ರಾಂಡಿನ ಸರಕನ್ನು ಉತ್ಪಾದಿಸಿ ಅದನ್ನು ಮಾರುಕಟ್ಟೆ ಮಾಡುವ, ರಫ್ತು ಮಾಡುವ ಸಾಧ್ಯತೆಗಳೇ ನಾಶಗೊಂಡು ದೇಶದ ಸಣ್ಣ ಕೈಗಾರಿಕ ವಲಯ ಕೇವಲ ಜಾಬ್ ವರ್ಕಗಳ ಮಟ್ಟಕ್ಕೆ ಸೀಮಿತಗೊಂಡು ಕ್ರಮೇಣ ನಾಶಗೊಂಡಿತು.

ಉದಾಹರಣೆಗೆ ತೊಂಬತ್ತರ ದಶಕದಲ್ಲಿ ಮತ್ತು ಕಳೆದ ದಶಕದಲ್ಲಿ ಉಚ್ಷ್ರಾಯ ಸ್ಥಿತಿಯಲ್ಲಿದ್ದ ಗಾರ್ಮೆಂಟ್ ವಲಯವನ್ನು ಗಮನಿಸಿ. ಇಲ್ಲಿನ ಕಂಪನಿಗಳು ಆಧುನಿಕ ರೆಡಿಮೇಡ್ ಬಟ್ಟೆಗಳನ್ನು ಉತ್ಪಾದಿಸುತ್ತಿದ್ದವು. ಆದರೆ ಅವನ್ನು ತಮ್ಮ ಬ್ರಾಂಡ್‌ನಲ್ಲಿ ಮಾರಲಿಕ್ಕಲ್ಲ. ಬದಲಾಗಿ ವಿದೇಶಿ ಕಂಪನಿಗಳಿಗೆ ಜಾಬ್ ವರ್ಕ ರೂಪದಲ್ಲಿ ಮಾರಲಿಕ್ಕೆ. ಇದನ್ನು ಕೈಗಾರಿಕೆಯ ಭಾಷೆಯಲ್ಲಿ ಹೊರಗುತ್ತಿಗೆ (Out Sourcing) ಎಂದು ಕರೆಯುತ್ತಾರೆ. ನಮ್ಮಲ್ಲಿಂದ ಅತ್ಯಂತ ಕನಿಷ್ಟ ಬೆಲೆಯಲ್ಲಿ ಈ ಬಟ್ಟೆಗಳನ್ನು ಕೊಂಡುಕೊಂಡ ಈ ವಿದೇಶಿ ಕಂಪನಿಗಳು ನಂತರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ, ತಮ್ಮ ಬ್ರಾಂಡ್‌ನ ಹೆಸರಿನಲ್ಲಿ ಮರಳಿ ನಮಗೇ ಮಾರಾಟ ಮಾಡುತ್ತವೆ. ಇದರ ಫವಾಗಿ ನಮ್ಮ ದೇಸಿ ಕಂಪನಿಗಳು ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ರಫ್ತು ಮಾಡಿದರೆ ಮರಳಿ ನಮ್ಮ ವ್ಯವಸ್ಥೆಯೇ ಈ ವಿದೇಶಿ ಕಂಪನಿಗಳಿಂದ ಅದರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ ಆಮದು ಮಾಡಿಕೊಳ್ಳುತ್ತವೆ. ಇದು ನಮ್ಮ ವಿದೇಶಿ ವಿನಿಮಯದ ನೀತಿ!

ಇಲ್ಲಿ ಕೇವಲ ಹಣಕಾಸಿನ ಲಾಭನಷ್ಟದ ಅಂಶ ಮಾತ್ರವಿಲ್ಲ. ಮಹಿಳಾ ಕಾರ್ಮಿಕರ ಶೋಷಣೆಯಿದೆ. ಅವರ ಘನತೆಯನ್ನೇ ನಾಶಮಾಡಲಾಗಿದೆ. ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಕೆಲಸದ ಭದ್ರತೆಯಿಲ್ಲ. ಅದೇ ರೀತಿಯಾಗಿ ಯಾವುದೇ ಕಾರುಗಳ, autopartsದ್ವಿಚಕ್ರ ವಾಹನಗಳ ಬಿಡಿಭಾಗಗಳ ತಯಾರಕರು ಹೊರಗುತ್ತಿಗೆದಾರರೆಂದೇ (Sub contractors) ಪರಿಗಣಿಸಲ್ಪಡುತ್ತಾರೆ. ಅವರಿಗೆ ತಾವು ತಯಾರಿಸುವ ವಾಹನದ ಬಿಡಿಭಾಗಗಳ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಅದೆಲ್ಲ ಕೇವಲ ಜಾಬ್ ವರ್ಕ ಮಾತ್ರ!! ಒಮ್ಮೆ ಮಾರುಕಟ್ಟೆ ಕುಸಿದರೆ ಈ ಎಲ್ಲ ಕಂಪನಿಗಳು ಮುಚ್ಚಬೇಕಾಗುತ್ತವೆ. ಏಕೆಂದರೆ ಸಾಮರ್ಥ್ಯವಿದ್ದರೂ ತಮ್ಮದೇ ಬ್ರಾಂಡಿನ ಹೆಸರಿನಲ್ಲಿ ಬಿಡಿಭಾಗಗಳನ್ನು ತಯಾರಿಸಿ ಮಾರಲು ನಮ್ಮಲ್ಲಿನ ಕಂಪನಿಗಳಿಗೆ ಅಧಿಕಾರವಿರುವುದಿಲ್ಲ. ಏಕೆಂದರೆ ಅವುಗಳ ತಂತ್ರಜ್ಞಾನವನ್ನು, ಡಿಸೈನ್‌ನನ್ನು ಪೇಟೆಂಟ್ ಮಾಡಿಕೊಂಡಿರುತ್ತವೆ ವಿದೇಶಿ ಕಂಪನಿಗಳು.

ಇದು ಕೇವಲ ಉದಾಹರಣೆಯಷ್ಟೆ. ಇಂತಹ ಸಾವಿರಾರು ದುರಂತಗಳಿವೆ. ಇಂತಹ ಹಳಿ ತಪ್ಪಿದ ಆರ್ಥಿಕ ನೀತಿಗಳಿಂದ ಜಾಗತೀಕರಣದಿಂದ ಪುನಶ್ಚೇತನಗೊಳ್ಳಬಹುದಾದಂತಹ ಸಣ್ಣ ಕೈಗಾರಿಕೆಗಳ ಬೆನ್ನೆಲುಬನ್ನೇ ಮುರಿದು ಹಾಕಿದೆ ನಮ್ಮ ಸರ್ಕಾರ. ಕಡೆಗೆ ಈ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಭದ್ರತೆಯು ಅನಗತ್ಯವಾಗಿ ಸೆನ್ಸೆಕ್ಸ್‌ಗೆ ತಳುಕು ಹಾಕಿಕೊಂಡು ಅದರ ಏರಿಳಿತಗಳೇ ದೇಶದ ಆರ್ಥಿಕ ಭದ್ರತೆಯ ನಾಡಿಮಿಡಿತವೆಂಬಂತೆ ಇಡೀ ಹುಸಿ ವ್ಯವಸ್ಥೆಯೇ ರೂಪುಗೊಂಡಿದ್ದು ನಮ್ಮ ದೇಶದ ದುರಂತ ಅಧ್ಯಾಯವೇ ಸರಿ. ಇದರ ಫಲವಾಗಿ ಸ್ವಾವಲಂಬನೆಯ ಮೂಲಭೂತ ಸ್ವರೂಪವೇ ಕುರೂಪಗೊಂಡು ಕಳೆದ ಇಪ್ಪತ್ತು ವರ್ಷಗಳಲ್ಲಿ ಇಡೀ ಸಣ್ಣ ಕೈಗಾರಿಕ ವಲಯವೇ ನಾಶಗೊಂಡಿದೆ. ಇನ್ನು ಇಲ್ಲಿನ ವ್ಯವಸಾಯ ವೃತ್ತಿಯನ್ನು ನಾಶಗೊಳಿಸಿರುವುದರ ಕುರಿತಾಗಿ ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಇದರ ಫಲವೇ ಇಂದಿನ ಆರ್ಥಿಕ ಸ್ಥಿತಿ.

ಈ ಆರ್ಥಿಕ ನೀತಿಯ ಹಿಪೋಕ್ರೆಸಿಯನ್ನು ಗಮನಿಸಿ. ಒಂದು ಕಡೆ ಮಧ್ಯಮ ವರ್ಗಕ್ಕೆ ಸರಕುಗಳನ್ನು ಕೊಳ್ಳಲು, ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಸರ್ಕಾರವು ಅನೇಕ ಆಮಿಷಗಳನ್ನು ರೂಪಿಸುತ್ತದೆ. ಈ ಕೊಳ್ಳುಬಾಕುತನಕ್ಕೆ ಬಲಿಬಿದ್ದ ಈ ವರ್ಗಗಳು ನಿರಂತರವಾಗಿ ಕೊಳ್ಳುತ್ತಲೇ ಇರುತ್ತಾರೆ. ಅದಕ್ಕೆ ಕೊನೆಯೇ ಇಲ್ಲ. ಈ ಕೊಳ್ಳುವಿಕೆಯನ್ನು ಸರಿತೂಗಿಸಲು ಸರ್ಕಾರವು ಅಮದು ನೀತಿಯನ್ನು ಹುರಿದುಂಬಿಸುತ್ತದೆ. ಅನೇಕ ವೇಳೆ ಸ್ವತಃ ದುಪ್ಪಟ್ಟು ಬೆಲೆ ತೆತ್ತು ಆಮದು ಮಾಡಿಕೊಳ್ಳುತ್ತದೆ. ಉದಾಹರಣೆಗೆ ತೈಲದ ಆಮದು. ಅದರ ಖರ್ಚು ಮತ್ತು ಬಂಗಾರದ ಆಮದಿನ ಖರ್ಚು ಇಂದಿನ ರುಪಾಯಿಯ ಕುಸಿತಕ್ಕೆ ಮೂಲಭೂತ ಕಾರಣಗಳು.

ಮತ್ತೊಂದು ಕಡೆ ಮುಖ್ಯವಾಗಿ ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿಯುತ್ತಿರುವುದಕ್ಕೆ ಆತಂಕಪಡಬೇಕಾಗದ ಅಗತ್ಯವೇ ಇಲ್ಲ. Rupee-vs-dollarಅದರ ಬದಲಾಗಿ ಇಂದಿನ ಡಾಲರ್‌ನ ಎದುರು ರೂಪಾಯಿಯ ಕುಸಿತದಿಂದಾಗಿ ವಿದೇಶಿ ಸರಕುಗಳ ಆಮದು ಕಡಿಮೆಯಾಗಿ ನಮ್ಮಲ್ಲಿನ ದೇಸಿ ವಸ್ತುಗಳ ಖರೀದಿ ಹೆಚ್ಚಾಗುತ್ತದೆ. ಹಾಗಾಗುವಂತೆ ಅಂದರೆ ನಮ್ಮಲ್ಲಿನ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಗುವಂತೆ ಆ ಮೂಲಕ ಉತ್ಪಾದನೆಗೊಂಡ ದೇಸಿ ಸರಕುಗಳು ಹೆಚ್ಚು ಮಾರಲ್ಪಡುವಂತೆ ಸರ್ಕಾರವು ಸ್ಪಷ್ಟ ಆರ್ಥಿಕ ನೀತಿಯನ್ನು ರೂಪಿಸಬೇಕು. ಆ ಮೂಲಕ ದೇಸಿ ಸರಕುಗಳ ಬಳಕೆಯ ಪ್ರಮಾಣವನ್ನು ಹೆಚ್ಚಿಸಿ ಹೆಚ್ಚುವರಿ ವಸ್ತುಗಳನ್ನು ರಫ್ತು ಮಾಡಬಹುದು.ಈ ಮೂಲಕ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬಹುದು. ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಬಹುದು. ಆ ಮೂಲಕ ಸಮಾಜದ ಎಲ್ಲ ಸ್ಥರದ ವರ್ಗಗಳಿಗೂ ಉದ್ಯಮಪತಿಗಳಾಗುವ ಅವಕಾಶ ದೊರಕಿಸಿ ಇಡೀ ಉದ್ಯಮವನ್ನೇ ವಿಕೇಂದ್ರಿಕರಣಗೊಳಿಸಬಹುದು. ಇದೇ ಸಂದರ್ಭವನ್ನು ಬಳಸಿಕೊಂಡು ಮೊಟ್ಟಮೊದಲು ಮಧ್ಯಮವರ್ಗಗಳ ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಬಹುದು. ಆ ಮೂಲಕ ಸಂಪನ್ಮೂಲದ ಹಂಚಿಕೆಯನ್ನು ಸಮಾನ ಮಟ್ಟದಲ್ಲಿ ಅಂದರೆ ಸರ್ವರಿಗೂ ಸಮಬಾಳು ನೀತಿಯ ಹತ್ತಿರಕ್ಕೆ ಕೊಂಡೊಯ್ಯಬಹುದು. ಇದು ಇಂದಿನ ಸಂದರ್ಭದಲ್ಲಿ ಯಾವುದೇ ಸರ್ಕಾರವು ಕೈಗೊಳ್ಳಬಹುದಾದ ತೀರಾ ಸರಳೀಕೃತ ಗ್ರಹಿಕೆಯ ಸಮಾಜವಾದದ ಆರ್ಥಿಕ ನೀತಿ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಖಂಡಿತ ಅಗತ್ಯ. ಆದರೆ ಇದಾಗುತ್ತಿಲ್ಲ. ಕೇವಲ ಹುಸಿ ಆರ್ಥಿಕ ಅರಾಜಕತೆಯನ್ನು ಹುಟ್ಟು ಹಾಕುತ್ತಿದ್ದಾರೆ.

ದೇಶದ ಶೇಕಡ 10 ರಷ್ಟಿರುವ ಉಳ್ಳವರ ಈ ವರ್ಗಗಳು ಈ ಸಾಮಾಜಿಕ ನ್ಯಾಯದ, ಸಮಾನತೆಯ ನೀತಿಗಳಗನ್ನು ಹತ್ತಿಕ್ಕಲು ತಮ್ಮಲ್ಲಿ ವಿಟೋ ಇದೆ ಎಂಬಂತೆ ವರ್ತಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯ ಪರಸ್ಪರ ಅನುಮೋದನೆಯೊಂದಿಗೆ ಸಮಾಜವನ್ನು ಕಟ್ಟಬೇಕು ಮತ್ತು ಅದನ್ನು ಸಮರ್ಥಿಸಿಕೊಳ್ಳುವಂತಹ ನ್ಯಾಯವಂತಿಕೆಯೂ ಜೊತೆಗೂಡಬೇಕೆಂಬ ಸಮತಾವಾದದ ಆಶಯಗಳ ಹಿನ್ನೆಲೆಯಲ್ಲಿ ನಿಮ್ಮ “ವೆಲ್‌ಫೇರ್ ಸ್ಟೇಟ್” ಅರ್ಥಾತ್ “ಕಲ್ಯಾಣ ರಾಜ್ಯ”ದಲ್ಲಿ ನಮ್ಮ ವೆಲ್‌ಫೇರ್‌ನ ಪ್ರಮಾಣ ಎಷ್ಟಿದೆ ಎಂದು ದೇಶದ ಬಡವರು, ತಳ ಸಮುದಾಯಗಳು, ಆದಿವಾಸಿಗಳು ಪ್ರಶ್ನಿಸಿದರೆ ಈ ಉಳ್ಳವರು ಅದನ್ನು ನೀನು ದುಡಿದು ತಿನ್ನಯ್ಯಾ ಎಂದು ವಿವೇಚನೆಯಿಲ್ಲದೆ ಅಮಾನವೀಯತೆಯಿಂದ ಮಾತನಾಡುವಷ್ಟರ ಮಟ್ಟಿಗೆ ದೇಶದ ಕಾನ್ಸಿಯಸ್ ಅತ್ಮವಿನಾಶಕವಾಗಿದೆ. ಸಂಕುಚಿತಗೊಳ್ಳುತ್ತಿದೆ. SEZಆರ್ಥಿಕ ಪುನಶ್ಚೇತನದ ಸೋಗಿನಲ್ಲಿ ಯಾವುದೇ ಪೂರ್ವ ಯೋಜನೆ, ವಿವೇಚನೆ, ಸಾಮಾಜಿಕ ಬದ್ಧತೆಗಳಿಲ್ಲದೆ ನಮ್ಮ ಸರ್ಕಾರವು ವಿಶೇಷ ಆರ್ಥಿಕ ವಲಯವನ್ನು (SEZ) ರೂಪಿಸಿ ಬಡವರ ಜಮೀನನ್ನು ಕಿತ್ತುಕೊಂಡು ಉದ್ದಿಮೆದಾರರಿಗೆ ಅತ್ಯಂತ ಕನಿಷ್ಟ ಬೆಲೆಯಲ್ಲಿ ಮಾರಲು ಹೊರಟಾಗ ಯಾವ ಮಾನವಿಲ್ಲದೇ ಅದನ್ನು ಕಬಳಿಸಲು ಹೊರಟ ಈ ಕಾರ್ಪೋರೇಟ್ ವರ್ಗಗಳಿಗೆ ತಾವು ಬಡಜನರ ದುಡಿದು ತಿನ್ನುವ ಅವಕಾಶವನ್ನು ಸಹ ಕಿತ್ತುಕೊಳ್ಳುತಿದ್ದೇವೆ ಎಂಬಂತಹ ಕನಿಷ್ಟ ನ್ಯಾಯ ಪ್ರಜ್ಞೆಯಿಲ್ಲದೆ, ಉಲ್ಟಾ ಬಡವರಿಗೆ ದುಡಿದು ಬದುಕಲಿಕ್ಕೆ ಹೇಳುತ್ತಿದ್ದಾರೆ. ಆದರೆ ತಮ್ಮ ಈ ದುರಹಂಕಾರಕ್ಕೆ ನಂದಿಗ್ರಾಮ್, ರಾಯಗಡ್, ದಾದ್ರಿ, ಮುಂಡರಿಗಿಗಳಲ್ಲಿ ತಕ್ಕ ಶಾಸ್ತಿ ಅನುಭವಿಸಿದ್ದಾರೆ. ಅಲ್ಲೆಲ್ಲಾ ಬಡವರ ಜಮೀನು ಕಬಲಿಸಲು ಹೋಗಿ ಸರಿಯಾಗಿಯೇ ಹೊಡೆತ ತಿಂದಿದ್ದಾರೆ. ಈ ಶಕ್ತಿ ಕೇಂದ್ರಗಳನ್ನು ಒಡೆಯಲು ಇದು ಸಕಾಲ. ಇದು ನಿರಂತರವಾಗಿರುವಂತೆ ನೋಡಿಕೊಳ್ಳಬೇಕಾಗಿದೆ.