ಯುವ ರಾಜೇಂದ್ರಸಿಂಗ್ ಕಂಡ ನೀರಿನ ಕನಸು

– ರೂಪ ಹಾಸನ

2001 ರ ಮ್ಯಾಗೆಸ್ಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್, ‘ವಾಟರ್ ಮ್ಯಾನ್ ಆಫ್ ರಾಜಸ್ಥಾನ್’ ಎಂದೇ ಪ್ರಸಿದ್ಧರು. ರಾಜಸ್ಥಾನದ ನೀರಿನ ಮನುಷ್ಯ! 1959 ರಲ್ಲಿ ಉತ್ತರಪ್ರದೇಶದಲ್ಲಿ ಹುಟ್ಟಿ ಬೆಳೆದ ಜಮೀನ್ದಾರೀ ಮನೆತನದ ರಾಜೇಂದ್ರಸಿಂಗ್‌ಗೂ, rajendra-singh1ನೀರಿಲ್ಲದ ಮರುಭೂಮಿ ರಾಜಸ್ಥಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ! ಖಂಡಿತಾ ಯುವಜನರು ಕನಸು ಕಂಡರೆ, ಆ ಕನಸನ್ನು ನನಸು ಮಾಡಲು ಸತತ ಪರಿಶ್ರಮ, ಶ್ರದ್ಧೆಯಿಂದ ಭೂಮಿ ಮುಟ್ಟಿ ಪ್ರಯತ್ನಿಸಿದರೆ…….ಎಲ್ಲವೂ ಸಾಧ್ಯ ಎನ್ನುತ್ತಾರೆ ರಾಜಸ್ಥಾನದ ನೀರಿನ ಹರಿಕಾರ ರಾಜೇಂದ್ರಸಿಂಗ್.

1974 ರ ಒಂದು ದಿನ ರಾಜೇಂದ್ರಸಿಂಗ್ ಅವರಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅವರ ಮನೆಗೆ ಬಂದ ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ರಮೇಶ್ ಶರ್ಮ ಅವರ ಭೇಟಿ, ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ತಮ್ಮೊಂದಿಗೆ ಹಳ್ಳಿಯ ಶುಚಿತ್ವದ ಮತ್ತು ಮದ್ಯವ್ಯಸನ ಮುಕ್ತಿಗಾಗಿ ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದ ರಮೇಶ್ ಶರ್ಮ ಅವರು, ರಾಜೇಂದ್ರ ಅವರ ಎಳೆಯ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದರು. ಇದರೊಂದಿಗೆ 1975 ರಲ್ಲಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದ ಪ್ರತಾಪ್‌ಸಿಂಗ್ ತಮ್ಮ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು, water-man-rajendra-singhಜೊತೆಗೇ ಅದೇ ಸಂದರ್ಭದಲ್ಲಿ ಬಂದ ತುರ್ತುಪರಿಸ್ಥಿತಿ, ತರುಣ ರಾಜೇಂದ್ರ ಅವರು ತೀವ್ರವಾಗಿ ಮತ್ತು ಸ್ವತಂತ್ರವಾಗಿ ಪ್ರಜಾಪ್ರಭುತ್ವದ ವಿವಿಧ ಆಯಾಮಗಳ ಕುರಿತು ಯೋಚಿಸುವಂತಹ ಪ್ರಭಾವವನ್ನು ಬೀರಿದವು. ತದನಂತರ ಆಯುರ್ವೇದ ವೈದ್ಯನಾಗಿ ಪದವಿ ಪಡೆದರೂ, ಜಯಪ್ರಕಾಶ್ ನಾರಾಯಣ್ ಅವರು ಯುವಕರಿಗಾಗಿ ಪ್ರಾರಂಭಿಸಿದ್ದ ‘ಛಾತ್ರ ಯುವ ಸಂಘರ್ಷ ವಾಹಿನಿ’ ಎಂಬ ವಿದ್ಯಾರ್ಥಿ ಹೋರಾಟ ಸಂಘಟನೆಗೆ ಸೇರಿ ಯುವಶಕ್ತಿಯಿಂದ ಸಮಾಜ ಬದಲಾವಣೆಯ ತುರ್ತನ್ನು ರೂಢಿಸಿಕೊಳ್ಳತೊಡಗಿದರು.

ಸಮಾಜ ಸೇವೆಯ ಧ್ಯೇಯದೊಂದಿಗೆ, 1980 ರಲ್ಲಿ ರಾಷ್ಟ್ರೀಯ ಶಿಕ್ಷಣಪ್ರಚಾರ ಸಮಿತಿಯ ಸ್ವಯಂಸೇವಕನಾಗಿ ಸರ್ಕಾರಿ ಕೆಲಸಕ್ಕಾಗಿ ಸೇರಿಕೊಂಡರು. ಅದರದ್ದೇ ಭಾಗವಾಗಿ ವಯಸ್ಕರಿಗೆ ಶಿಕ್ಷಣ ನೀಡುವ ಸಲುವಾಗಿ ರಾಜಸ್ಥಾನದ ದೌಸಾ ಜಿಲ್ಲೆಗೆ ಹೋಗಬೇಕಾಯ್ತು. ಆಗಲೇ ‘ತರುಣ ಭಾರತ ಸಂಘ’ಕ್ಕೆ ಸೇರಿ, ಅದರ ಸಕ್ರಿಯ ಕಾರ್ಯದರ್ಶಿಯಾಗಿ ಯುವಕರಿಗೆ ಮತ್ತು ಸಂಘಕ್ಕೆ ಸ್ಪೂರ್ತಿದಾಯಕವಾಗಿ ಹಲವಾರು ಆಮೂಲಾಗ್ರ ಬದಲಾವಣೆಗಳನ್ನು ತಂದರು. ಯುವಕರ ಸಂಘಟನೆಗಾಗಿ ಹಳ್ಳಿಯಿಂದ ಹಳ್ಳಿಗೆ ಪ್ರವಾಸ ಮಾಡಿದ್ದು ಅವರ ಬದುಕಿನ ಒಂದು ಮಹತ್ವದ ಮೈಲಿಗಲ್ಲು ಎನ್ನಬಹುದು. ಇದು ಅವರು ಜನಪರವಾಗಿ ಯೋಚಿಸಲು ಮತ್ತು ಯೋಜಿಸಲು ಸಹಕಾರಿಯಾಯ್ತು. ಜನರ ನೆಲಮೂಲದ ಸಮಸ್ಯೆಗಳ ಅರಿವು ಯುವ ರಾಜೇಂದ್ರರ ಮನಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆದರೆ ತಾವಿರುವ ಸರ್ಕಾರಿ ಹುದ್ದೆ ತಮ್ಮ ಮುಕ್ತ ಮನಸ್ಥಿತಿಗೆ, ಚಟುವಟಿಕೆಗೆ ಸರಿಹೊಂದುವುದಿಲ್ಲವೆಂದೆನಿಸಿ 1984 ರಲ್ಲಿ ಕೆಲಸವನ್ನು ಬಿಟ್ಟು, ತಮ್ಮ ಬಳಿಯಿದ್ದ ವಸ್ತುಗಳನ್ನೆಲ್ಲಾ ಮಾರಿ, ತಮ್ಮ ನಾಲ್ಕು ಮಿತ್ರರೊಡಗೂಡಿ ಬಸ್ ಏರಿ ರಾಜಸ್ಥಾನದ ಮೂಲೆಯ ಆಳ್ವಾರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದು ತಲುಪಿದಾಗ ಅವರಿಗೆ ಕೇವಲ 26 ವರ್ಷ! rajendra-singh-check-damಅಲ್ಲಿ ಅವರು ಆಯುರ್ವೇದ ವೈದ್ಯವೃತ್ತಿ ಆರಂಭಿಸಿದರು. ಅವರ ಗೆಳೆಯರು ಸಾಕ್ಷರತಾ ಪ್ರಚಾರವನ್ನು ಆರಂಭಿಸಿದರು. ರಾಜೇಂದ್ರಸಿಂಗ್ ಅವರ ಜೊತೆಗೇ ಜನಪರ ಕೆಲಸಗಳನ್ನೂ!

ಆಳ್ವಾರ್ ಜಿಲ್ಲೆ ಒಂದೊಮ್ಮೆ ಹಸಿರಿನಿಂದ ಕೂಡಿ, ಧಾನ್ಯಗಳ ಮಾರಾಟಕ್ಕೆ ಪ್ರಸಿದ್ಧವಾಗಿತ್ತು. ಆದರೆ ರಾಜೇಂದ್ರಸಿಂಗ್ ಇಲ್ಲಿಗೆ ಬಂದ ಕಾಲದಲ್ಲಿ ಅದೊಂದು ಶುಷ್ಕವಾದ ಮರುಭೂಮಿಯಾಗಿತ್ತು. ಅರಣ್ಯನಾಶ ಮತ್ತು ಗಣಿಗಾರಿಕೆ ನೀರಿನ ಮೂಲಗಳನ್ನೇ ನಾಶಮಾಡಿತ್ತು. ಅಂತರ್ಜಲ ಭೂಮಿಯಾಳಕ್ಕೆ ಇಳಿದುಹೋಗಿತ್ತು. ಪಾರಂಪರಿಕ ಚೆಕ್ ಡ್ಯಾಂ [ಜೋಹಡ್] ವ್ಯವಸ್ಥೆಗಳನ್ನು ನಿರ್ಲಕ್ಷಿಸಿದ್ದ ಜನರು ಆಧುನಿಕ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದರು. ನೀರಿನ ತೀವ್ರ ಕೊರತೆಯಿಂದ ಇಡೀ ಜಿಲ್ಲೆಯನ್ನು ‘ಡಾರ್ಕ್ ಝೋನ್’ [ಕಪ್ಪು ಪ್ರದೇಶ]ವೆಂದು ಘೋಷಿಸಲಾಗಿತ್ತು. ರಾಜೇಂದ್ರಸಿಂಗ್ ಅವರಿಗೆ ನೀರಿನ ಸಮಸ್ಯೆಯ ತೀವ್ರತೆ ಅರ್ಥವಾಯ್ತು. ಇದೇ ಸಂದರ್ಭದಲ್ಲಿ ಹಳ್ಳಿಯೊಂದರ ಮುಖ್ಯಸ್ಥ ಮಂಗೂಲಾಲ್ ಪಟೇಲ್ ‘ರಾಜಾಸ್ಥಾನದಲ್ಲಿ ಶಿಕ್ಷಣಕ್ಕಿಂತಾ ನೀರಿನ ಸಮಸ್ಯೆ ತುಂಬಾ ದೊಡ್ಡದು’ ಎಂದು ಹೇಳಿದ ಮಾತು ಇವರ ಬದುಕಿನ ಮಹತ್ವದ ತಿರುವಿಗೆ ಕಾರಣವಾಯ್ತು.

ವಿದ್ಯಾವಂತನೆಂಬ ಹಮ್ಮಿನಿಂದ ಬದಲಾವಣೆಯ ಉಪದೇಶ ಕೊಡುವುದಕ್ಕಿಂತಾ ಮಣ್ಣು ಮುಟ್ಟಿ ಜನರ ಜೊತೆಗೆ ಬೆರೆತು ಕೆಲಸ ಮಾಡುವುದರಿಂದ ಮಾತ್ರ ಆಮೂಲಾಗ್ರ ಬದಲಾವಣೆ ಸಾಧ್ಯ ಎಂದು ನಿಶ್ಚಯಿಸಿ ಜೋಹಡ್‌ಗಳ ಮರು ನಿರ್ಮಾಣದಲ್ಲಿ ತೊಡಗಿದರು. ಇವರ ನಾಲ್ಕು ಗೆಳೆಯರು ಈ ಕೆಲಸ ತಮ್ಮಿಂದ ಸಾಧ್ಯವಿಲ್ಲವೆಂದು ಇವರನ್ನು ಬಿಟ್ಟು ಹೋದರು. ಇದರಿಂದ ಎದೆಗುಂದದ ರಾಜೇಂದ್ರ ಅವರು ಹಳ್ಳಿ ಹಳ್ಳಿಗಳಲಿ ಯುವಜನರನ್ನು ಸಂಘಟಿಸಿ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿದರು. ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿದರು. ಮಳೆ ನೀರು ಸಂಗ್ರಹ ಮತ್ತು ಅದರ ವ್ಯವಸ್ಥಿತ ಬಳಕೆಯಿಂದ water-man-singhಕೇವಲ 3 ವರ್ಷಗಳಲ್ಲಿ ಪ್ರತಿಫಲ ಕಾಣತೊಡಗಿ, ಕೆಲವೇ ವರ್ಷಗಳಲ್ಲಿ ಅದು ‘ವೈಟ್ ಝೋನ್’ [ಶ್ವೇತ ಪ್ರದೇಶ]ವಾಗಿ ಮಾರ್ಪಟ್ಟಿತು. ಅಂದಿನಿಂದ ಇಲ್ಲಿಯವರೆಗೂ ಆ ಪ್ರದೇಶಗಳಲ್ಲಿ ಎಂದಿಗೂ ನೀರಿನ ಕೊರತೆಯಾಗದಿರಲು ಸಾಧ್ಯವಾಗಿದ್ದು ನೀರಿನ ವ್ಯವಸ್ಥಿತ ನಿರ್ವಹಣೆಯಿಂದ! ಅದಕ್ಕೆ ಬೇಕಿರುವುದು ಒಂದಿಷ್ಟು ಶ್ರಮ, ಯುವಶಕ್ತಿಯ ಸಂಘಟನೆ ಮತ್ತು ಸಾಧಿಸುವ ಛಲ. ‘ಮಣ್ಣು ಮತ್ತು ನೀರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ’ ಎನ್ನುವ ರಾಜೇಂದ್ರಸಿಂಗ್ ಮಾತು ನಮಗೆ ಸರಿಯಾಗಿ ಅರ್ಥವಾದರೆ ಬಹುಶಃ ಪ್ರವಾಹ ಮತ್ತು ಬರ ಎರಡನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯವಿದೆ.

ಇತ್ತೀಚೆಗಿನ ವರದಿಯಂತೆ ಕರ್ನಾಟಕ, ದೇಶದ ಎರಡನೆಯ ದೊಡ್ಡ ಮರುಭೂಮಿಯಾಗಿ ಪರಿವರ್ತನೆಯಾಗುತ್ತಿದೆ. 13 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಂತರ್ಜಲ ಬತ್ತಿ, ಕೃಷಿಗಿರಲಿ ಕುಡಿಯಲೂ ನೀರಿಲ್ಲದೇ ಜನ ತತ್ತರಿಸುತ್ತಿದ್ದಾರೆ. ಇನ್ನೊಂದೆಡೆ ಪ್ರವಾಹದಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಹಾಗಿದ್ದರೆ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ, ಮಳೇ ಮಾರುತಗಳು ದಿಕ್ಕನ್ನು ಬದಲಿಸಿವೆಯಷ್ಟೇ! ಮಳೆಯನ್ನು ಸೆಳೆಯಲು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಈಗಲಾದರೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿದ್ದರೆ ಮುಂದಿನ ಪರಿಣಾಮಗಳು ಇನ್ನಷ್ಟು ಘೋರವಾಗಬಹುದು. ಬಯಲುಸೀಮೆಯ ಜನರ ದಾಹ ತಣಿಸಲು ಎತ್ತಿನಹೊಳೆ ಯೋಜನೆ, ನೇತ್ರಾವತಿ ತಿರುವು ಯೋಜನೆ, ಪರಮಶಿವಯ್ಯ ವರದಿಯ ಅನುಷ್ಠಾನ….. ಹೀಗೆ ಸಾವಿರಾರು ಕೋಟಿಗಳ, ಅಪಾರ ಪ್ರಮಾಣದ ಕಾಡು ನಾಶದ, ಹಲವಾರು ವರ್ಷಗಳ ಕಾಮಗಾರಿಯ ಯೋಜನೆಗಳ ಪ್ರಸ್ತಾವನೆಗಳನ್ನು ತರಾತುರಿಯಾಗಿ ಪರಿಶೀಲಿಸಿ, ಸರ್ಕಾರ ಹಣವನ್ನು ಬಿಡುಗಡೆ ಮಾಡಲು ಕಾತುರವಾಗಿದೆ.

ಆದರೆ ಈ ಯೋಜನೆಗಳ ಕಾರಸ್ಥಾನವಾದ ಪಶ್ಚಿಮಘಟ್ಟದಲ್ಲಿ ಈಗಾಗಲೇ ನಡೆದಿರುವ ಹಲವಾರು ಅವೈಜ್ಞಾನಿಕ ಅಭಿವೃದ್ಧಿ water-manಕೆಲಸಗಳಿಂದ ಅಪಾರ ಪ್ರಮಾಣದ ಕಾಡು ನಾಶವಾಗಿದೆ. ಅಪರೂಪದ ಸಸ್ಯರಾಶಿ, ವನ್ಯಜೀವಿಗಳು ನಾಶವಾಗಿದ್ದರೆ, ಇನ್ನೂ ಕೆಲವು ಅಳಿವಿನ ಅಂಚಿನಲ್ಲಿವೆ. ಒತ್ತುವರಿಯಿಂದಾಗಿ ವನ್ಯಮೃಗಗಳು ಕಾಡಿನಂಚಿನ ನಾಡಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಹಾನಿಯೂ ಆಗುತ್ತಿದೆ. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿರದೇ ಮನುಷ್ಯ ಕೇಂದ್ರಿತವಾಗಿದ್ದರೆ ಇಂತಹ ಪ್ರಮಾದಗಳಾಗುತ್ತವೆ. ಅಂತರ್ಜಲ ಮರುಪೂರಣಕ್ಕೆ ರಾಜಸ್ಥಾನದ ಮರುಭೂಮಿಯಲ್ಲಿ ರಾಜೇಂದ್ರಸಿಂಗ್, ಲಕ್ಷ್ಮಣಸಿಂಗ್ ನಡೆಸಿದ ಪರ್ಯಾಯ ನೀರು ಸಂಗ್ರಹಣೆಯ, ಮಳೆಯ ಮರುಸೃಷ್ಟಿಯ, ಪ್ರಕೃತಿಯಿಂದಲೇ ಪ್ರಕೃತಿಯನ್ನು ಹುಟ್ಟಿಸುವ ನೈಸರ್ಗಿಕ ಮತ್ತು ಶಾಶ್ವತ ಪ್ರಯೋಗಗಳು ಬಯಲುಸೀಮೆಯಲ್ಲಿ ಆಗಬೇಕೇ ಹೊರತು ಉಳಿದಿರುವ ಕಾಡನ್ನು ಛಿದ್ರಮಾಡಿಯಲ್ಲ ಎಂಬುದನ್ನು ಯುವಶಕ್ತಿಯೇ ಮನದಟ್ಟು ಮಾಡಿಕೊಡುವ ಸಂದರ್ಭ ಈಗ ಬಂದಿದೆ.

They want Narendra Modi because…

– Sudhanshu Karkala

Many want Narendra Modi to become PM because of one reason – he ‘allowed’ or ‘did not avoid’ the post-Godhra riots. They speak of development only to mislead the voters. modi-advaniThe actual trump card is his ire against a particular community.

If development was the criteria, the BJP would have chosen likes of Shivrag Singh Chauhan or Raman Singh, who also match Narendra Modi when in terms of so-called development in their respective states. They stand behind in the race to top post, because they had no post-Godhra like riots, or did not have an opportunity like that, in their respective states.

Nobody should forget the fact that he advanced elections to Gujarat state assembly soon after post-Godhra riots only to sail through the image of ‘saviour of Hindutva’, he had acquired by allowing the riots in his state. That showed he is the politician of distinct species, which catch fish in troubled waters or Gujarat-Riotswarm themselves in the flames that burn innocents. Is there any better word than ‘mouth ka saudagar’, to explain him?

L.K. Advani, the former future prime minister of India, had done a similar exercise to come up in politics and make his party popular. He took out yatra in the name of Ram mandir in Ayodhya, which, in fact, did impact the party prospects in the following elections. Undoubtedly that Yatra played a prominent role in promoting him to the stature, he enjoys now. His growth was at the cost of lives of hundreds who were killed in riots, followed by the Yatra.

Being a former disciple of Advani, Narendra Modi, who had watched Advani’s growth from the close quarters, followed his guru to climb the ladder in politics. Otherwise, he would have not allowed the riots sanjeev-bhatt-gujaratwithin months after coming to power in Gujarat. (He came to power in October 2001 and riots were in Feb 2002).

Following the riots, he advanced the elections and returned to power, as he had polarised the voters on the communal lines through his controversial conduct during the riots. He planned his public speeches or interviews with media such that nowhere he either felt apologetic or remorseful for what had happened right beneath his nose. Since then, he has been successful in tailoring his image. Otherwise, he would have not hired a global PR firm to manage his public appearance.

The particular section of media, which is busy projecting Modi as the only efficient administrator, world-class orator, missed, rather deliberately, the event where he lost the track of his speech in English as the written speech copy fell down. If any other politician had done that the media would have not bothered to miss it.

For the country’s sake and to safeguard its diversity, politicians with communal agenda should be kept at bay.

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ
ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ (10)

ದೇವಲೋಕದ ಅಮೃತ ಫಲವೆಂಬಂತೆ ನಂಬುವ ತೆಂಗಿನಮರದಿಂದ ಎಳನೀರು, ತೆಂಗಿನಕಾಯಿಗಳನ್ನು ಕೊಯ್ಯುವುದಲ್ಲದೆ ಸೇಂದಿ (ಮೂರ್ತೆ) ಇಳಿಸಲೂ ಬಳಸುತ್ತಾರೆ. ತೆಂಗಿನ ಸುಳಿಕೊರಕ (ಗೊಬ್ಬರದ ಕಪ್ಪುಹುಳ) ಹುಳುಗಳನ್ನು ಕೊಂದರೆ ಹತ್ತು ದೇವಸ್ಥಾನ ಕಟ್ಟಿದಷ್ಟು ಪುಣ್ಯ ಎಂದೆನ್ನುತ್ತಲೇ, ಸತ್ತ/ಜೀವಂತವಿದ್ದ ಅದೇ ತೆಂಗಿನಮರವನ್ನು ಕತ್ತರಿಸಿ ಮನೆಯ ಪಕಾಸೆ, ಜಂತಿಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ತೆಂಗಿನ ಕಾಯಿ ತಲೆಮೇಲೆ ಬಿದ್ದು ಸತ್ತರೆ ಪುಣ್ಯ ಎಂಬ ನಂಬಿಕೆಯ ನಡುವೆಯೇ ಮೂತ್ರ ವಿಸರ್ಜನೆಯನ್ನು ತೆಂಗಿನ ಬುಡದಲ್ಲಿಯೇ ಮಾಡಿದರೆ ಪ್ರಶಸ್ತವೆಂದೂ ನಂಬುತ್ತಾರೆ!. ಅದನ್ನು ಕಲ್ಪವೃಕ್ಷ ಎನ್ನುತ್ತಲೇ Indian-Cow-calfಈ ಮಾದರಿಯ ಸಂಬಂಧಗಳನ್ನು ಜನ ತಮ್ಮ ದೈನಿಕದ ಬದುಕಿನಲ್ಲಿ ಕಟಿಕೊಳ್ಳಬಲ್ಲರು. ನೇಗಿಲನ್ನು ದೇವರೆಂದೇ ಆರಾಧಿಸಿಯೂ ಹಳತಾಗಿ ಉಳಲು ಅಸಾಧ್ಯವಾದಾಗ ದೀಪಾವಳಿಯ ಎಣ್ಣೆನೀರಸ್ನಾನದ ಒಲೆಗೆ ಉರುವಲಿನಂತೆ ಬಳಸಿಕೊಳ್ಳಬಲ್ಲರು. ಉಳುಮೆ ಮಾಡುವ ಜಾನುವಾರಿಗೆ ಬಾಸುಂಡೆ ಬರುವಂತೆ ಬಾರಿಸಿಯೂ ಅರ್‍ಹೂಡಿ ಬರುವಾಗ ಅದರ ಸಿರಿಪಾದವನ್ನು ತೊಳೆಯಬಲ್ಲರು ಮತ್ತು ಮಳೆಗಾಲದ ನೇಜಿಯ ಕೊನೆಗೆ ತಮ್ಮಂತೆಯೇ ಅದಕ್ಕೂ ಬರ್ಜರಿಯಾದ ಮರದತೊಗಟೆಯ ಚಗರು ಬೆರೆಸಿದ ಗಂಜಿ ಹಾಕಿ ರಜಾ ನೀಡಬಲ್ಲರು. ಬೆಳೆದು ನಿಂತ ಕದಿರನ್ನು ಉತ್ಸವದಂತೆ ಹೊತ್ತು ತರುವ ಅದೇ ಜನ ಭತ್ತದ ಒಡ್ಡು ಮಾಡುವಲ್ಲಿ ಅದನ್ನು ಕಾಲಡಿಯೇ ಮೆಟ್ಟಿತುಳಿಯಬಲ್ಲರು. ಪಂಪನ ಆದಿಪುರಾಣದ ಕೊನೆಯಲ್ಲಿ ಈ ಧಾನ್ಯ ಸಂಗತಿಗೆ ಸಂಬಂಧಿಸಿದ ವಿವೇಕಿಗಳನ್ನು,ಸಂಸ್ಕಾರವಂತರನ್ನು ಭರತ ಕಂಡುಕೊಂಡನೆಂಬ ಸಂದರ್ಭವೊಂದಿದೆ ಎನ್ನಲಾಗಿದೆ. ಅಲ್ಲಿ ಮೊಳಕೆಯೊಡೆದ ಧಾನ್ಯಗಳನ್ನು ಮೆಟ್ಟಿಕೊಂಡು ಬರಲಾರದ ಕೆಲವು ವಿವೇಕಿಗಳು ಭರತನಲ್ಲಿಗೆ ಬರಲಾಗದೆ ದೂರವೇ ನಿಂತರಂತೆ! ಈ ವಿವೇಕಿಗಳು ಖಂಡಿತ ಧಾನ್ಯದ ಒಡನಾಟವಿದ್ದವರು ಖಂಡಿತಾ ಆಗಿರಲಾರರು. ಯಾಕೆಂದರೆ ಕೃಷಿಕನೊಬ್ಬ ಈ ಮೊಳಕೆಯನ್ನು ಸದಾಕಾಲವೂ ಪೂಜಿಸುತ್ತಲೇ ಕೂರಲಾರ. ಈ ವಿವೇಕದ ಜೊತೆಗೆ ಆತನಲ್ಲಿ ಇನ್ನೂ ಒಂದು ವಿವೇಕವಿರುತ್ತದೆ. ಅದು ಮೆಟ್ಟಬೇಕಾದಾಗ, ಮುಟ್ಟಬೇಕಾದಾಗ ಎಲ್ಲವನ್ನೂ ದಾಟಿ ಮುಂದುವರೆಯುವಂತೆ ಪ್ರಚೋದಿಸಬಲ್ಲದು. ಅದು ಆತನ ಹೊಟ್ಟೆಯ ಹಸಿವು ಕಲಿಸಿದ ವಿವೇಕ! ಈ ವಿವೇಕವೇ ಆತನ ದಾರಿದೀಪ. ಅದು ಗದ್ದೆಯನ್ನು ಪೂಜಿಸುತ್ತದೆ, ಅದೇ ಗದ್ದೆಯ ಒಡಲು ಸೀಳಿ ಬೆತ್ತಲುಗೊಳಿಸಿ ಬಿತ್ತುತ್ತದೆ. ಉಪಯೋಗದ ನೆಲೆಯ ಭೌತಿಕ ಜಗತ್ತನ್ನು ಸರಿಯಾಗಿಯೇ ವಿವರಿಸಿಕೊಂಡ ಜನಸಾಮಾನ್ಯರ ವಿವೇಕದ ಬೆಳಕಿಗಷ್ಟೇ ಸಾಧವಾಗುವ ಆಹ್ವಾನ-ವಿಸರ್ಜನದ ತಾತ್ವಿಕಭಿತ್ತಿಯೂ ಇದರೊಳಗಿದೆ ಎಂಬುದನ್ನು ಮರೆಯಬಾರದು.

ತಾವು ಬಳಸುವ ವಸ್ತುವನ್ನು ಯಾವಾಗ ಪೂಜಿಸಬೇಕು, ಹೇಗೆ ಬಳಸಬೇಕು ಎಂಬ ವ್ಯಾವಹಾರಿಕ ಸಂವಿಧಾನ ಹೊಂದಿರುವ ಕೃಷಿಕರಿಗೆ indian-cowತಾವು ಸಾಕುತ್ತಿರುವ ಗೋವೊಂದನ್ನು ಲಾಭದಾಯಕವಾಗಿ ಎಷ್ಟು ಕಾಲ ಇರಿಸಿಕೊಳ್ಳಬಹುದೆಂಬುದರ ಲೆಕ್ಕಾಚಾರವಿರುತ್ತದೆ. ಅದೇ ರೀತಿ ಅವುಗಳನ್ನು ಮಾರಲೇಬೇಕಾದ ಲೌಖಿಕ ಒತ್ತಡದ ನಡುವೆ ಯಾವ ವಯೋಮಾನದ, ಯಾವ ಗುಣಮಟ್ಟದ ಹಸುವನ್ನು ಯಾರು ಖರೀದಿಸಬಲ್ಲರು ಎಂಬ ಅರಿವೂ ಇರುತ್ತದೆ. ತಾನು ಮಾರುವುದು ಯಾಕೆ ಎಂಬುದು ಅರ್ಥವಾಗುವವನಿಗೆ ಇನ್ನೊಬ್ಬ ಕೊಂಡುಕೊಳ್ಳುತ್ತಾನೆಂದರೆ ತನಗೆ ಅನುಪಯುಕ್ತವಾದುದು ಆತನಿಗೆ ಉಪಯುಕ್ತವಾಗುವ ದಾರಿಯು ಎಂತಹುದು ಎಂಬುದೂ ಗೊತ್ತಿರುತ್ತದೆ. ಆದರೆ ಕೃಷಿಕರ ಜಗತ್ತಿನಲ್ಲಿ ಉಳಿದ ಕುರಿ, ಕೋಳಿಗಳ ಸಾಕಣೆಯ ಜತೆಗಿರದ ವಿಲಕ್ಷಣ ಸಂಬಂಧವೊಂದು ಈ ಜಾನುವಾರುಗಳ ಜತೆಗಿರುತ್ತದೆ. ಸಾಕುತ್ತಲೇ ಮೈಸವರುತ್ತಲೇ ಕುರಿ, ಕೋಳಿಗಳನ್ನು ಕಣ್ಣೆದುರಿಗೆ, ಕೊಂದು ತಿನ್ನುವುದು ಅವರಿಗೆ ಜೀವ-ಕರುಣೆ ಇಂತಹ ಯಾವ ಸಂಗತಿಯನ್ನು ಉದ್ದೀಪಿಸಬೇಕಾಗಿಲ್ಲ. ಆದರೆ ಹಸು-ಎಮ್ಮೆಗಳ ಜೊತೆಗಿನ ಸಂಬಂಧದ ಸ್ವರೂಪವನ್ನು ಹೀಗೆ ಸರಳವಾಗಿ ಅವರು ತೂಗಿಕೊಳ್ಳಲಾರರು. ಈ ಜಾನುವಾರುಲೋಕದ ಜೊತೆಗೆ ಅವರೊಳಗೆ ರೂಢಿಪ್ರಜ್ಞೆಯ ಮೂಲಕ ಭಾವನೆಯ ಆಳಕ್ಕೆ ಬೇರು ಬಿಟ್ಟ ಸಂಬಂಧದ ತಂತು ಒಂದಿರುತ್ತದೆ. ಅದರ ಪ್ರಭಾವದಿಂದಾಗಿ ತಾವು ಸಾಕಿ, ತಾವೇ ತಿನ್ನದ ಗೋವಿಗೆ ಸಂಬಂಧಿಸಿದಂತೆ ಸಾಗಹಾಕುವ ವೇಳೆ ಒಂದು ಸಣ್ಣ ಪಾಪಪ್ರಜ್ಞೆಯೂ ಕಾಡುವಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಅವರಿರುತ್ತಾರೆ ಎಂಬುದೂ ದಿಟ. ಜಾನುವಾರನ್ನು ಯಾರಿಗೇ ಮಾರುವುದಿರಲಿ, ತನ್ನ ಹಟ್ಟಿಯಿಂದ ಹೊರಹೊಡಿಸುವಾಗ ಹಣಕ್ಕಾಗಿ ತನ್ನ ಮಕ್ಕಳಂತಿರುವ ಬಂಧುತ್ವವೊಂದನ್ನು ಕಳೆದುಕೊಳ್ಳುವ ಸಂಕಟ ಅನುಭವಿಸದ ಕೃಷಿಕ ಪ್ರಾಯಶಃ ಇರಲಾರ. ತಾವೇ ಹೆರಿಗೆ ಮಾಡಿ, ತಾವೇ ಕೈತುತ್ತು ಹಾಕಿ, ತಾವೇ ಮೈತೊಳೆದು ಮಕ್ಕಳಂತೆ(?) ಸಾಕಿದವುಗಳೆನ್ನುವ ಭಾವನಾತ್ಮಕ ಸಂಬಂಧಗಳ ಕಾರಣದ ಸಂಕಟ ಅದು. ಪರಂಪರೆಯಿಂದ ಬಂದ ಕಥನಗಳು ಮತ್ತು drought-dead-cowತಾನೇ ಸಾಕಿದ್ದರ ಜೊತೆಗಿನ ಒಡನಾಟದ ಮೂಲಕ ಕಟ್ಟಿಕೊಂಡ ನಿಶ್ಚಿತ ಸಂಬಂಧಗಳನ್ನೆಲ್ಲಾ ನಿರಾಕರಿಸಿ ಮಾರಿ ಕೈತೊಳೆದುಕೊಳ್ಳುವ ಸಣ್ಣತನ ತನ್ನದೆನ್ನುವುದರಿಂದ ಹುಟ್ಟುವ ಪಾಪಪ್ರಜ್ಞೆಯದು. ಭೌತಿಕ ವ್ಯಾವಹಾರಿಕ ಸತ್ಯದ ನಡುವೆ ನುಸುಳಿಕೊಳ್ಳುವ ಈ ವಿಲಕ್ಷಣ ಸಂಬಂಧದ ಪರಿಣಾಮವಾಗಿ ಜಾನುವಾರುಗಳ ವಿಕ್ರಯವು ಸಾಕಿದಾತನಲ್ಲಿ ಒಂದು ಬಗೆಯ ಕೊಲೆಗಡುಕತನದ ಪಾಪಪ್ರಜ್ಞೆಯ ಭಾವವನ್ನೂ ಉದ್ದೀಪಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈ ಪಾಪಾತ್ಮಸ್ಥಿತಿಯನ್ನು ಬಹುವಾಗಿ ಅನುಭವಿಸುವವನು ಕೃಷಿಕನಾಗಿರುವ ಜೊತೆಗೆ ಮಧ್ಯಮ ಇಲ್ಲವೇ ಕೆಳಮಧ್ಯಮವರ್ಗಕ್ಕೆ ಸೇರಿದವನೂ ಆಗಿರುತ್ತಾನೆ. ಅಷ್ಟೇ ಅಲ್ಲದೆ ಆತ ಈ ದೇಶದ ಸಾಮಾನ್ಯ ಮಧ್ಯಮವರ್ಗವನ್ನು ಆಕ್ರಮಿಸಿಕೊಂಡಿರುವ ಕರ್ಮಸಿದ್ಧಾಂತದ ಹಿಡಿತ, ಪ್ರಭಾವಗಳಿಗೆ ಪಕ್ಕಾದವನೂ ಆಗಿರುತ್ತಾನೆ. ವರ್ತಮಾನದ ದುಸ್ಥಿತಿಯನ್ನು ತನ್ನ ಪೂರ್ವದ ಕರ್ಮಫಲವೆಂದು ನಂಬುತ್ತಾ, ತದನಂತರದ ಬದುಕಿನ ಪಾಪಗಳ ಕುರಿತು ಸದಾ ಆತಂಕದಲ್ಲಿಯೇ ಇರುವ ಮಧ್ಯಮವರ್ಗದ ಎಲ್ಲಾ ಗುಣದೋಷಗಳೂ ಈತನಲ್ಲಿರುತ್ತವೆ. ಆಯ್ಕೆಯಲ್ಲದ ಕೃಷಿಬದುಕಿನ ಹುಟ್ಟು ಮತ್ತು ವರ್ತಮಾನದಲ್ಲಿ ಅನುಭವಿಸುತ್ತಿರುವ ಭೌತಿಕ ದುರವಸ್ಥೆಯನ್ನು ಪುರಾಕೃತಕರ್ಮದ ಬಳುವಳಿಯಾಗಿಯೂ, ಆ ಕರ್ಮ ನಿಮಿತ್ತವಾದ ಈ ಬಾಳಿನ ಹೊಣೆಗಾರ ತಾನೇ ಎನ್ನುವಂತೆಯೂ ಆತ್ಮನಿಂದೆಯಲ್ಲಿ ನಿಂತುಬಿಡುವ, ಆತ್ಮದ ಆಚೆಗೆ ಪಾಪದ ಹೊಣೆಯನ್ನು ಗುರುತಿಸಲಾರದ ವರ್ಗಕ್ಕೆ ಸೇರಿದವನೀತ. ವರ್ತಮಾನದ ಸ್ಥಿತಿಗಾಗಿ ಹೀಗೆ ಗತದ ಹೊಣೆಹೊತ್ತುಕೊಳ್ಳಬೇಕಾದ ಅನಿವಾರ್‍ಯತೆಯಿಂದ ಪಾರಾಗಲಾರದ ಸಂಕಟದ ನಡುವೆಯೂ, ಸಾಕಿದ ಜೀವವನ್ನು ಕನಿಕರವಿಲ್ಲದೆ ಮಾರಬೇಕಾದ ವರ್ತಮಾನದ ಸ್ಥಿತಿಯಿಂದಾಗಿ ಮುಂದಿನ ಬಾಳಿನ ಪಾಪದ ಬುತ್ತಿಯನ್ನು ಬಲಿದುಕೊಳ್ಳುತ್ತಿದ್ದೇನೆ ಎಂಬ ತೊಳಲಾಟಕ್ಕೆ ಗುರಿಯಾಗುವವನಿವನು. ಹೀಗೆ ವ್ಯಕ್ತಿಗತ ನೆಲೆಯಲ್ಲಿ ಪಾಪದ ಹೊಣೆಹೊತ್ತು ಕೊರಗಿನಲ್ಲಿರುವವನೀತ. ಅಷ್ಟೇ ಅಲ್ಲದೆ ಈ ಕೊರಗಿನಿಂದ ಪಾರಾಗುವ ನಿರೀಕ್ಷೆ ಹೊಂದಿದವನೂ ಆಗಿ, ಪಾಪಚಕ್ರದಿಂದ ಪಾರುಗಾಣುವ ದಾರಿಕಾಣದೆ ಹತಾಶೆಯ ಮನಸ್ಥಿತಿಯಲ್ಲಿರುವವನೂ ಹೌದು.

ಕರ್ಮಚಕ್ರದ ಈ ಬದಲಾಗದ ನಿರಂತರತೆಗೆ ಸಿಕ್ಕಿ ಘಾಸಿಗೊಳಗಾಗುವ ಸಮುದಾಯದೊಳಗಿನ ಪಾಪಪ್ರಜ್ಞೆಯ ತೊಳಲಾಟ ಮತ್ತು ಅದರಿಂದ ಪಾರಾಗುವ ದಾರಿಕಾಣದೆ ಉಂಟಾಗುವ ಹತಾಶೆಗಳು ಸಮುದಾಯವನ್ನು ದಿಕ್ಕುತಪ್ಪಿಸುವ ಬಾಹ್ಯಶಕ್ತಿಯೊಂದರ ಉದ್ದೇಶಿತ ಕಾರ್‍ಯಯೋಜನೆಗೆ ಹಾಳತವಾಗಿ ಒದಗಿ ಬರುತ್ತವೆ. ಪಾಪಪ್ರಜ್ಞೆಯ ಹೊಣೆಗಾರಿಕೆಯಲ್ಲಿ ಸಣ್ಣಗೆ ನರಳುವ ಸಾಮಾನ್ಯರು ಕೊಡಮಾಡಿದ ಈ ಸಣ್ಣ ಜಾಗವನ್ನೇ ತನ್ನ ಶಕ್ತಿ ರಾಜಕಾರಣದ ಅಂಗಣವನ್ನಾಗಿ ಸ್ಥಾಪಿತ ಯಜಮಾನ್ಯವು ಬಳಸಿಕೊಳ್ಳುತ್ತದೆ. ರೈತನ ದುಸ್ಥಿತಿಗೆ ಇಡಿಯ ಸಾಮಾಜಿಕ ವ್ಯವಸ್ಥೆಯಲ್ಲಿನ ಆರ್ಥಿಕ ಅಸಮತೋಲನದ ಜೊತೆಗಿನ ಇತರ ಕಾರಣಗಳನ್ನು ಶೋಧಿಸಿ ತೋರುವ ವಾಸ್ತವಿಕ ಮಾರ್ಗಕ್ಕೆ ಬದಲಾಗಿ ಅದು ಬೇರೊಂದು ದಾರಿಯನ್ನು ಹಿಡಿಯುತ್ತದೆ. ರೈತನ ಅಸಹಾಯಕತೆಯ ಕ್ಷಣವು ಅವನ ಪಾಪೋತ್ಪಾದನೆಯ ಕ್ಷಣವಾಗಿ ಮಾರ್ಪಡುವ ಮೂಲ ಕಾರಣ ಆರ್ಥಿಕ ಆಮಿಷವೆಂದೂ, ಹಸುವನ್ನು ಸಾಕಿ ಹಸುವಿನಂತಾದ ಮುಗ್ದನನ್ನು ವಂಚನೆಯ ಬಲೆಯಲ್ಲಿ ಕೆಡವಿಹಾಕಲಾಗಿದೆಯಂತಲೂ ಅದು ವಾದಿಸುತ್ತದೆ. ತನಗೆ ನಿಜವಾಗಿಯೂ ಇಲ್ಲದ ನೆಲೆಯನ್ನು ಇರುವಂತೆ ನೋಡಿಕೊಳ್ಳುವ ಸಲುವಾಗಿಯೇ ಹೀಗೆ ಖರೀದಿದಾರರನ್ನು ಅದು ಅಪರಾಧೀಕರಣಕ್ಕಿಳಿಸಿ ರಾಕ್ಷಸೀಕರಣ ಮಾಡುತ್ತದೆ. ಪಾಪಾತ್ಮನಲ್ಲದವನಲ್ಲಿ ಪಾಪಾತ್ಮದ ಕುರಿತಾದ ಪಶ್ಚಾತ್ತಾಪ ಹುಟ್ಟಿಸುವ ಈ ಆರ್ಥಿಕ ಆಮಿಷದ ನಿವಾರಣೆಗೆ ತಾನು ಪೂರ್ಣ ನಾಯಕತ್ವವನ್ನು ವಹಿಸುವುದಾಗಿ ಹೇಳುತ್ತದೆ. ಹೀಗೆ ಸಾಮಾನ್ಯರ ದೈನಿಕದ ಬದುಕಿನ ಸಂದರ್ಭದಲ್ಲಿ ಸಿಗುವ ಇಂತಹ ಚಿಕ್ಕ ಚಿಕ್ಕ ಅವಕಾಶಗಳನ್ನೇ ತಮ್ಮ ಬೆಚ್ಚನೆಯ ಗೂಡನ್ನಾಗಿ ಸ್ಥಾಪಿತ ಯಜಮಾನಿಕೆ ಮಾರ್ಪಡಿಸಿಕೊಳ್ಳುತ್ತದೆ. brahma-cow-indiaಇಂತಹ ಸೂಕ್ಷ್ಮವಾದ ನೆಯ್ಗೆಯಲ್ಲಿರುವ ಮೂಕಪ್ರಾಣಿಯ ಕುರಿತಾದ ಕರುಣೆಯ ಪುಟ್ಟನೆಲೆಯಲ್ಲಿಯೇ ತನ್ನ ಯಶಸ್ಸಿನ ಬೀಜವನ್ನು ನೆಟ್ಟು ಹೆಮ್ಮರವಾಗಿಸಿದ ಸ್ಥಾಪಿತ ಯಜಮಾನಿಕೆ ಕೊಲೆಯ ಕಾರಣನಾದೆ ಎಂಬ ಕೃಷಿಕನ ಸ್ವ ಕರ್ಮದ ಹೊಣೆಗಾರಿಕೆಯನ್ನು ಅನ್ಯ ಮೂಲದಲ್ಲಿ ತೋರಿಸಿ, ರೈತನಿಗೆ ಪಾಪ ಮುಕ್ತಿಯ ನಿರುಮ್ಮಳತೆಯನ್ನು ನೀಡುತ್ತದೆ. ರೈತಾಪಿ ವರ್ಗ ಹಸುವನ್ನು ಯಂತ್ರವಾಗಿ ಬಳಸಿಯೂ, ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅದು ಮಾಡಬೇಕಾದ ಕೆಲಸವನ್ನು ಅದರ ಪರವಾಗಿಯೇ ತಾನು ಮಾಡುತ್ತಿರುವಂತೆ ನಂಬಿಸುತ್ತದೆ. ಹಸುವನ್ನು ವಿಕ್ರಯಿಸುವವನು ಸಾಕುವವನ ಬಡತನವನ್ನು ಬಳಸಿಕೊಂಡು ಅವನ ಭಾವನೆಗಳನ್ನು ಅತಿ ವ್ಯವಸ್ಥಿತವಾಗಿ ಧಮನಿಸುತ್ತಿದ್ದಾನೆ ಎಂಬ ವಿಚಾರವನ್ನು ವೈಚಾರಿಕ ಆಕೃತಿಯಾಗಿ ಗಟ್ಟಿಗೊಳಿಸುತ್ತಾ ಹೋಗುತ್ತದೆ. ಹೀಗೆ ಅಶಿಕ್ಷಿತ ಮತ್ತು ಅರೆಶಿಕ್ಷಿತ ಸಮುದಾಯಕ್ಕೆ ತಮ್ಮ ಪಾಪದ ಹೊಣೆಗಾರಿಕೆಯಿಂದ ಪರಿಹಾರ ನೀಡಿದ ಭ್ರಮೆಯನ್ನು ಉಂಟುಮಾಡುವ ಮುಲಕ ಈ ಸಾಂಸ್ಥಿಕ ಶಕ್ತಿಕೇಂದ್ರ ಮತ್ತಷ್ಟು ಸಾಮೀಪ್ಯವನ್ನು ಸಾಧಿಸುತ್ತದೆ.

ಈ ತಂತ್ರಯೋಜನೆ ಹಸುವಿನ ಉಳಿದೆಲ್ಲಾ ಆಯಾಮದ ಚರ್ಚೆಯನ್ನು ನಿವಾರಿಸಿ ಅದನ್ನು ಆಹಾರವಾಗಿ ಬಳಸುವ ಸಮಸ್ಯೆಯನ್ನು ಮಾತ್ರ ಮುನ್ನೆಲೆಗೆ ತರುತ್ತದೆ. ಇದು ವಾಸ್ತವಿಕವಾಗಿ ಜೀವಾತ್ಮ-ಹತ್ಯೆ-ವಧೆ-ಪಾಪಗಳೆಂಬ ಪರಿಭಾಷೆಗಳ ಚಕ್ರದಲ್ಲಿ ನಿರ್ದಿಷ್ಟವಾದ ಆಹಾರಕ್ರಮವೊಂದನ್ನು ಆಹಾರದ ಬದಲಾಗಿ ಆಕ್ರಮಣವೆಂಬ ಸಂಕಥನದಲ್ಲಿ ಬಂಧಿಸುವ ರಾಜಕಾರಣ. ಹಸಿವು ಆಹಾರಗಳ ಈ ರಾಜಕಾರಣದ ಪರಿಭಾಷೆಯು ಇಲ್ಲಿಗೆ ನಿಲ್ಲಲಾರದು. ಇದು ಮುಂದುವರೆದು ಸೂಕ್ಷ್ಮವಾಗಿ ಸಸ್ಯೇತರ ಮೂಲವನ್ನು ಆಹಾರ ಮಾದರಿಯ ಆಕರವಾಗಿ ಬಳಸುವ ಒಂದು ವಿಶಾಲ ಸಮುದಾಯವನ್ನೇ ರಾಕ್ಷಸೀಕರಣದ ಆವರಣದಲ್ಲಿ ಕಟ್ಟುವ ಕೆಲಸವನ್ನು ಚುರುಕುಗೊಳಿಸುತ್ತದೆ. ಇದರ ತಾಜಾ ಉದಾಹರಣೆಯಾಗಿಯೇ ಆಹಾರ ಸಂಸ್ಕೃತಿಯ ಬಹಿಷ್ಕೃತ ಮಾದರಿಯೆಂದು EGGS 2ವಾದಿಸಿ ಸರ್ಕಾರಿ ಶಾಲೆಯಲ್ಲಿ ಓದುವ ಬಡಮಕ್ಕಳ ಅನ್ನದ ತಟ್ಟೆಗೆ ಬೀಳಬಹುದಾಗಿದ್ದ ಮೊಟ್ಟೆಯಂತಹ ಪೌಷ್ಟಿಕ ಆಹಾರವನ್ನು ಅಪಹರಿಸಿದ್ದ ಬಗೆಯನ್ನು ನೆನೆದುಕೊಳ್ಳಬಹುದು. ಹೀಗೆ ಈ ಸಂಕಥನದ ವಿಸ್ತರಣೆಯಿಂದ ಅನ್ನವೊಂದು ಆಹಾರವಾಗುವ ಬದಲು ಅನ್ಯಗೊಂಡು ಸಾಂಸ್ಕೃತಿಕವಾಗಿ ಬಹಿಷ್ಕೃತ ಮಾದರಿಯಾಗುತ್ತದೆ. ಬಹಿಷ್ಕೃತವಾದುದನ್ನು ತಿಂದವರನ್ನು ಪಾರಂಪರಿಕ ಸಮಾಜ ಹೇಗೆ ಅಂಚಿಗೆ ಸರಿಸಿದೆಯೋ, ಅಂತೆಯೇ ಹೊಸಕಾಲದ ರಾಜಕೀಯ ಅಧಿಕಾರ ಕೇಂದ್ರದಿಂದಲೂ ಇವರನ್ನು ಅಂಚಿಗೆ ಸರಿಸುವುದೇ ಈ ಸ್ಥಾಪಿತಶಕ್ತಿಯ ಆತ್ಯಂತಿಕ ಗುರಿ. ಅದೆಲ್ಲವನೂ ಸಾಧಿಸಲು ಈ ಹಸು-ಎಮ್ಮೆಗಳ ಜಗತ್ತಿನ ಕಾರ್‍ಯಯೋಜನೆಗಳು ಪೂರಕವಾಗಿ ಒದಗಿ ಬರುತ್ತವೆ ಎಂಬುದನ್ನು ಗಮನಿಸಬೇಕು.

ಈಗಾಗಲೇ ಮೇಲೆ ಹೇಳಿದಂತೆ ಜಾನುವಾರುಗಳ ಕುರಿತ ಇಡಿಯ ರಾಜಕೀಯ ಸಂಕಥನಕ್ಕೆ ಜಾನುವಾರು ಜಗತ್ತಿನ ಇತರ ಸಮಸ್ಯೆಗಳು ಆದ್ಯತೆಯ ಪ್ರಶ್ನೆಗಳಲ್ಲ. ಹಾಗೊಂದು ವೇಳೆ ಅವುಗಳನ್ನು ಮುನ್ನೆಲೆಗೆ ತಂದು ಸಂಪನ್ಮೂಲವನ್ನು ಉಳಿಸುವುದೇ ಅದರ ಆದ್ಯತೆಗಳಾಗಿದ್ದ ಪಕ್ಷದಲ್ಲಿ, ಹಸು-ಎಮ್ಮೆಗಳ ಈ ಜಾನುವಾರು ಜಗತ್ತು ದೊಡ್ಡ ಸಂಖ್ಯೆಯಲ್ಲಿ ಕರಗುತ್ತಿರುವ ಈ ಹೊತ್ತಿನಲ್ಲಿ ಅಮೃತಸದೃಶವಾದ ಒಂದು ಲೀಟರ್ ಹಾಲು ತೆಗೆಯಲು ರೈತನಿಗೆ ಬೀಳುತ್ತಿರುವ ಖರ್ಚೆಷ್ಟು? ಆದರೆ ಆತ ನಿಜಕ್ಕೂ ಪಡೆಯುತ್ತಿರುವುದೆಷ್ಟು? ನಮ್ಮದೇ ನೆಲದೊಡಲಿನಿಂದ ತೆಗೆಯಲು ಅನುಮತಿಸಿದ ಒಂದು ಲೀಟರ್ ಖನಿಜಯುಕ್ತವೆನ್ನಲಾಗುವ ನೀರಿಗೆ ಎಷ್ಟು ಬೆಲೆಪಡೆಯಲು ಅನುಮತಿಸಲಾಗಿದೆ? ನಮ್ಮದೇ ಕಡಲಿನ ಉಪ್ಪನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ, ಅದರ ಮೇಲೆ ತೆರಿಗೆ ಸಲ್ಲದೆಂದು ಉಪವಾಸ ಕುಳಿತ ಗಾಂಧೀಜಿಯವರ ಹೋರಾಟದಿಂದ ಸ್ವಾತಂತ್ರ್ಯ ಪಡೆದ ಇದೇ ದೇಶ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಇಂದು ಒಂದು ಕೆ.ಜಿ ಉಪ್ಪನ್ನು ಎಷ್ಟು ದರದಲ್ಲಿ ಮಾರಲು ಅನುಮತಿ ನೀಡಿದೆ? ಇದೆಲ್ಲದರ ಜೊತೆಗೆ ನಮ್ಮದೇ ನಿಸರ್ಗ ಸಂಪತ್ತನ್ನು ಬಳಸುವ ದೇಶದ ಕುಭೇರರಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡುತ್ತಿರುವ ತೆರಿಗೆ ರಿಯಾಯಿತಿಗಳೆಷ್ಟು? ಎಂಬ ಪ್ರಶ್ನೆಗಳು ಮುಖ್ಯವಾಗುತ್ತಿದ್ದವು. ಇವುಗಳ ಬಗೆಗೆ ಚಕಾರವೆತ್ತದೆ ರೈತನ ದುಡಿಮೆಯ ಫಲವನ್ನು ಅಡ್ಡಾದಿಡ್ಡಿ ದರಕ್ಕೆ ಕಸಿದುಕೊಂಡು, ಆತನಿಂದ ಹೊಣೆಗಾರಿಕೆಯನ್ನು ನಿರೀಕ್ಷಿಸುವ ನಾಗರಿಕ ಸಮಾಜಕ್ಕೆ ರೈತನ ಸಮಸ್ಯೆಯ ನಿಜವಾದ ಅರಿವಾಗಲೀ, ಸಹಾನುಭೂತಿಯಾಗಲೀ ಇದೆಯೇ? ರೈತನಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ವಿಮೆಯ ಸೌಲಭ್ಯದ ವ್ಯಾಪ್ತಿಗೆ ಎಷ್ಟೊಂದು ಹಸುಗಳು ಒಳಪಟ್ಟಿವೆ? ಇದಕ್ಕೆಲ್ಲಾ ರೈತರ ಅಜ್ಞಾನವಷ್ಟೇ ಕಾರಣವೇ? cows-killed-by-droughtಬರಗಾಲದ ಹೊತ್ತಿನಲ್ಲಿ ಕುಡಿಯಲು ನೀರನ್ನೂ ಪಡೆಯದೆ ಸಾಯುವ ಜಾನುವಾರುಗಳು ಎಷ್ಟಿವೆ? ಅತ್ಯಂತ ಸಂಪದ್ಪರಿತವಾದ ನಾಟಿತಳಿ ಹಸುಗಳನ್ನು ದಾನವಾಗಿಯೂ ಸ್ವೀಕರಿಸದಿರುವಾಗ ಅದನ್ನು ಸಾಕಬೇಕಾದವರು ಯಾರು? ಹಸುವೆಂದರೆ ಬರಿಯ ಹಾಲಿನ ಉತ್ಪಾದನೆಗಷ್ಟೇ ಸೀಮಿತವಾದುದೇ? ಅದನ್ನು ಕೇಂದ್ರವಾಗಿರಿಸಿದ ಇನ್ನಿತರ ಉದ್ಯಮಗಳನ್ನು ಹೇಗೆ ವಿವರಿಸಿಕೊಳ್ಳಬೇಕು? ಆದಾಯ ಮತ್ತು ಯಜಮಾನಿಕೆಗಳ ಮಾಧ್ಯಮವಾಗಿ ದುಡಿಸಲ್ಪಟ್ಟಿರುವ ಜಾನುವಾರುಗಳ ಜಗತ್ತನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಯಾರ ಮೇಲಿದೆ? ಈ ಹೊಣೆಗಾರಿಕೆಯನ್ನು ಯಾರಿಂದ ನಿರೀಕ್ಷಿಸಲಾಗುತ್ತಿದೆ? ಯಾರ ಮೇಲೆ ಹೊರಿಸಲಾಗುತ್ತಿದೆ? ಚಲನೆ ಕಳೆದುಕೊಂಡು ಅಪ್ರಸ್ತುತಗೊಳ್ಳುತ್ತಾ ಕಣ್ಣೆದುರಿನಿಂದ ಮಾಯವಾಗುತ್ತಿದ್ದರೂ, ಭಾವನೆಯಲ್ಲಿ ಲಂಗರು ಹಾಕಿ ನಿಲ್ಲುವುದರಿಂದ ಹಸು ಮತ್ತು ಅದರ ಜೊತೆಗಿನ ಪಾರಂಪರಿಕವಾದ ಜ್ಞಾನ-ಮೌಲ್ಯಗಳನ್ನೊಳಗೊಂಡ ಸಾಂಸ್ಕೃತಿಕ ಜಗತ್ತು ಉಳಿಯುತ್ತದೆಯೇ? ಒಂದು ಸಾಂಸ್ಕೃತಿಕ ಸಂದರ್ಭವು ಜಡತ್ವಕ್ಕೆ ತಳ್ಳಲ್ಪಡುವುದರಿಂದ ಸಮಾಜದ ಮನಸ್ಥಿತಿಯ ಮೇಲೆ ಉಂಟಾಗುವ ಪರಿಣಾಮವೆಂತಹದು? ಇಂತಹ ಸಾಲು ಸಾಲು ಪ್ರಶ್ನೆಗಳನ್ನು ಅವರ ಎದುರಿಗಿಡಬೇಕಾಗಿದೆ.

ಈ ಎಲ್ಲಾ ಹುನ್ನಾರಗಳನ್ನು ನಿರಸನಗೊಳಿಸಿ ಹಸುಸಾಕುವವರಿಗೆ ಗೌರವದ ಬದುಕಿನ ಜೊತೆಗೆ ನಮಗೆ ನಿಜಕ್ಕೂ ಬೇಕಾದ ತಳಿಗಳು ಉಳಿಯಬೇಕಾದರೆ ಅದನ್ನು ಸಾಕುವವರು ಪ್ರಜ್ಞಾವಂತರಾಗಬೇಕು. ದನ ಮೇಯಿಸುವುದು ಯಾತಕ್ಕೂ ಬೇಡದ ಉದ್ಯೋಗವೆಂಬ ಹಣೆಪಟ್ಟಿ ತೊಲಗಿ ಅದೊಂದು ಗೌರವ ತರುವ ಕಾಯಕವೆನಿಸುವ ವಾತಾವರಣ ಮೂಡಬೇಕು. ಭಾವನೆ ಮತ್ತು ಅಸಹಾಯಕತೆಯ ಮೇಲೆ ಯಜಮಾನಿಕೆ ಚಲಾಯಿಸಬಹುದಾದ ಅವಕಾಶ ಇಲ್ಲವಾಗಬೇಕು. cow-decorated-festivalವಾಸ್ತವವನ್ನು ಇರುವಂತೆಯೇ ವಿವರಿಸಿಕೊಳ್ಳಬಹುದಾದ ಸಾಂಸ್ಕೃತಿಕ ವಾತಾವರಣ ಸಿದ್ಧಗೊಳ್ಳಬೇಕು. ಆದರೆ ಜನರನ್ನು ಶಿಕ್ಷಣದ ಆವರಣಕ್ಕೆ ತಾರದೆಯೇ ಹುನ್ನಾರಗಳನ್ನು ಅರ್ಥೈಸಿಕೊಳ್ಳುವ ಅರಿವಿನ ಜಗತ್ತು ಅಸಾಧ್ಯವಾಗುತ್ತದೆ. ಈ ಅರಿವಿನ ಜಗತ್ತು ಸಾಧ್ಯವಾದಾಗ ಅವರೇ ತಮ್ಮದೆಂದು ಭಾವಿಸಿಕೊಂಡ ಪಾಪದ ನೆಲೆಗಳಾಗಲೀ, ಕಾರಣರೆಂದು ಭ್ರಮಿಸಿದ ‘ಅನ್ಯ’ತ್ಪದ ಕಲ್ಪನೆಯಾಗಲೀ ನಿರಸನಗೊಂಡು ತಾವು ತಮ್ಮ ಮೇಲೆ ಹೇರಿಕೊಂಡ ನಾಯಕತ್ವವನ್ನು ತಾವೇ ನಿರಾಕರಿಸುವಂತಾಗುತ್ತದೆ. ಹಾಗಾದಾಗ ಮಾತ್ರ ಹುನ್ನಾರಗಳಿಗೆ ಸಮ್ಮತಿಯ ಮುದ್ರೆಯೊತ್ತಿದ ಜನಸಾಮಾನ್ಯರೇ ಪ್ರತಿರಾಜಕಾರಣದ ನಿಜದ ನಾಯಕರಾಗಿ ಸ್ಥಾಪಿತ ಯಜಮಾನ್ಯವನ್ನು ನಿರಾಕರಿಸಿ ದೈನಿಕವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಸ್ಥಿತಿಯೊಂದು ಸಾಧ್ಯವಾಗದೇ ಇರುವಲ್ಲಿಯವರೆಗೆ, ಹಿಂದಣೆ-ಮುಂದಣೆಗಳೆಂಬ ಹಟ್ಟಿಯ ಅವಯವಗಳಲ್ಲಿ ಹಿಂದಣೆ-ಮುಂದಣೆಗಳು ತುಂಬುವ-ಖಾಲಿಯಾಗುವ ಈ ನಿರಂತರತೆಯ ಕೊಂಡಿ ಸರಿದುಹೋಗಿ ಕೆಂಪಿ, ಬುಡ್ಡಿ, ಕಾಳಿ, ಬೆಳ್ಳು, ಕೆಂಪಣ್ಣರ ಉಪಸ್ಥಿತಿ ನಾಪತ್ತೆಯಾಗುತ್ತಾ ಸಾಗುತ್ತದೆ. ಅಚ್ಚು ಹಾಕಿಕೊಟ್ಟ ಧರಣಿಮಂಡಲ, ಕಾಳಿಂಗ, ಕೊಳಲು, ಗಂಗೆ, ತುಂಗೆಯರ ಜಪವಷ್ಟೇ ನಮ್ಮದಾಗಿ, ಲೋಹದ ರೂಪದ ಮೋಹದ ಗೋವು ಉಚ್ಚೆಹಾರಿಸುವ, ಜೀವ ತುಂಬಿದ ಹಸುಗಳನ್ನು ಕೊಂದು ಮುಗಿಸುತ್ತದೆ.

ಮೋದಿ ಮತ್ತವರ ಆನ್‌ಲೈನ್ ಭಕ್ತರ ಬಗ್ಗೆ ಅನಗತ್ಯ ಭಯ ಬೇಡ…


– ರವಿ ಕೃಷ್ಣಾರೆಡ್ದಿ


 

ಕಳೆದ ಎರಡು ದಿನಗಳಿಂದ ವರ್ತಮಾನ,ಕಾಮ್‌ನಲ್ಲಿ ನಡೆಯುತ್ತಿರುವ ಚರ್ಚೆ ಮತ್ತದರ ಸ್ವರೂಪ ನೋಡಿದರೆ ಕರ್ನಾಟಕದ ಮಟ್ಟಿಗಂತೂ ಮೋದಿಯವರ ಆನ್‌ಲೈನ್ ಭಕ್ತರ ಬಗ್ಗೆ ಮತ್ತವರ ಪ್ರಚಾರ ಭರಾಟೆಯ ಬಗ್ಗೆ ಪ್ರಜಾಪ್ರಭುತ್ವವಾದಿಗಳು ಮತ್ತು ಜಾತ್ಯತೀತವಾದಿಗಳು ಭಯಪಡುವುದು ಅನವಶ್ಯಕ ಎನ್ನಿಸುತ್ತದೆ.

ಇಲ್ಲಿಯವರೆಗೂ ಬಹುಪಾಲು ಜನ ಅಂದುಕೊಳ್ಳುತ್ತಿದ್ದೇನೆಂದರೆ, ಅಂತರ್ಜಾಲದಲ್ಲೆಲ್ಲ ಮೋದಿಯ ಭಕ್ತರೇ ತುಂಬಿಕೊಂಡಿದ್ದಾರೆ, ಮೋದಿಯೇ ನಮ್ಮೆಲ್ಲಾ ಕಷ್ಟಗಳನ್ನು ತೊಡೆಯಲು ಬರುತ್ತಿರುವ ಪವಾಡಪುರುಷ, ಮತ್ತು ಬಲಿಷ್ಟ ದೇಶವನ್ನು ಕಟ್ಟಲು ಅವರಿಂದ ಮಾತ್ರ ಸಾಧ್ಯ ಎಂದೆಲ್ಲಾ ಗಟ್ಟಿಯಾದ ಜನಾಭಿಪ್ರಾಯ ರೂಪಿಸುತ್ತಿದ್ದಾರೆ ಎಂದು. ಆದರೆ, ಈ ಗುಂಪಿನಿಂದ ಯಾವ ರೀತಿಯ ಜನಾಭಿಪ್ರಾಯ ರೂಪಿಸಲು ಸಾಧ್ಯವಿದೆ ಮತ್ತು ಇವರ ಮಾತುಗಳನ್ನು ಒಪ್ಪದ ಜನ ಹೇಗೆ ಯೋಚನೆ ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆನ್‌ಲೈನ್ ಭಕ್ತರು ಮಾತ್ರ ಮತದಾರರಲ್ಲ, ಮತ್ತು ಆನ್‌ಲೈನ್‌ ಆಗಿರುವವರೆಲ್ಲ ಮೋದಿ ಜಪ ಮಾಡುವವವರಲ್ಲ.

ನೆನ್ನೆ ವರ್ತಮಾನ.ಕಾ‌ನಲ್ಲಿ ಎಮ್.ಸಿ.ಡೋಂಗ್ರೆಯವರ “ಮೋದಿಯ ಸುಳ್ಳುಗಳಿಗೆ ದೇಶದ ಜನ ಮರುಳಾಗದಿರಲಿ” ಲೇಖನ ಪ್ರಕಟವಾಯಿತು. ಆ ಲೇಖನದಲ್ಲಿ ಅನೇಕ ಅಂಕಿಅಂಶಗಳಿದ್ದವು. ಕೆಲವನ್ನು ಎಷ್ಟೇ ನಿರಾಕರಿಸಿದರೂ ಮೋದಿಯ ಪರ ಕೆಲಸ ಮಾಡುವ ಅಂಕಿಅಂಶಗಳೂ ಅದರಲ್ಲಿ ಸ್ಥೂಲವಾಗಿ ಇದೆ. ಆದರೆ ಆ ಲೇಖನದ ಒಟ್ಟಾರೆ ಧ್ವನಿ ಗುಜರಾತಿನ ಅಭಿವೃದ್ಧಿಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವುದೇ ಅಲ್ಲದೆ, ಅಲ್ಲಿ ಆಗಿರಬಹುದಾದ ಅಭಿವೃದ್ಧಿ ಕಾರ್ಯಗಳಿಗೆ modiಮೋದಿಯೊಬ್ಬರೇ ಕಾರಣಪುರುಷ ಅಲ್ಲ ಎನ್ನುವುದನ್ನು ತಿಳಿಸುತ್ತದೆ. ಮೋದಿಯನ್ನು ತಾರ್ಕಿಕವಾಗಿ ಮತ್ತು ಮಾಹಿತಿಯುಕ್ತವಾಗಿ ವ್ಯತಿರೇಕಿಸುವುದೇ ಮುಖ್ಯವಾಗಿರುವ ಆ ಲೇಖನ ವರ್ತಮಾನ.ಕಾಮ್ ಮಟ್ಟಿಗೆ ಅಂತರ್ಜಾಲದಲ್ಲಿ ವೈರಲ್ ಆಗಿ ಪ್ರಸರಿಸಿದಂತಹ ಲೇಖನ. ಸಾವಿರಾರು ಜನ ಆ ಲೇಖನವನ್ನು ಓದಿರುವುದೇ ಅಲ್ಲದೆ, ಸಾಕಷ್ಟು ಕಡೆ ಅದನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಅದನ್ನು ಹಂಚಿಕೊಂಡಿರುವವರ ಮತ್ತು ಲೈಕ್ ಮಾಡಿದವರ ಸಂಖ್ಯೆಯೇ ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ 800 ದಾಟಿದೆ. ಮತ್ತು ಹೀಗೆ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿರುವವರಲ್ಲಿ ಯಾರೊಬ್ಬರೂ ಮೋದಿಯ ಭಕ್ತರಾಗಿರುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಇಂತಹುದೊಂದು ದೊಡ್ದ ಗುಂಪು ನಿಶ್ಯಬ್ದವಾಗಿ ಇದೆ ಎನ್ನುವುದೇ ಅನೇಕ ವಿಷಯಗಳನ್ನು ಹೇಳುತ್ತದೆ.

ಈ ಲೇಖನ ಪ್ರಕಟವಾಗುವ ಹಿಂದಿನ ದಿನ ನಾನು ಬರೆದಿದ್ದ “ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು” ಪ್ರಕಟವಾಗಿತ್ತು. ಅಂಕಿಅಂಶಗಳಿಲ್ಲದ ಆ ಲೇಖನ ಮೋದಿಯಂತಹ ಕಿಂಚಿತ್ತೂ ಪ್ರಾಯಶ್ಛಿತ್ತ ಮನೋಭಾವವಿಲ್ಲದ ವ್ಯಕ್ತಿ ಮತ್ತು ಯಡ್ಡಯೂರಪ್ಪನಂತಹ ಭ್ರಷ್ಟಚಾರಿಯೊಡನೆ ರಾಜಿ ಮಾಡಿಕೊಂಡಾದರೂ ಸರಿ ಅಧಿಕಾರ ಹಿಡಿಯುವ ನೀತಿಯ ಹಿಂದೆ ಇದ್ದಿರಬಹುದಾದ ಲಾಲಸೆ ಮತ್ತು ನೀತಿರಾಹಿತ್ಯದ ಬಗ್ಗೆ ಚರ್ಚಿಸಿತ್ತು. ಇದನ್ನು ನಾನು ಹೇಳಬಯಸಿದ್ದೇಕೆಂದರೆ ಕೇಂದ್ರದಲ್ಲಿಯ ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತ ಮತ್ತು ಅದರ ಬಗ್ಗೆ ಸಕಾರಣಗಳಿಗಾಗಿಯೇ ಕೋಪೋದ್ರಿಕ್ತರಾಗಿರುವ ಒಂದು ಗುಂಪು ಮೋದಿ ಭ್ರಷ್ಟಾಚಾರಿಯಲ್ಲ ಎಂದುಕೊಂಡು ಅವರನ್ನು ಬೆಂಬಲಿಸುತ್ತಿರುವುದು ಅರ್ಥಹೀನ ಎನ್ನುವ ಕಾರಣಕ್ಕೆ. ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಬಿಜೆಪಿ ಉತ್ತಮ ಎಂದುಕೊಂಡಿರುವವರು ಮುಗ್ಧರು ಇಲ್ಲವೇ ಅಜ್ಞಾನಿಗಳು. ಆದರೆ ಹೊಸದೇನನ್ನೂ ಹೇಳದೆ, ಇತಿಹಾಸದಲ್ಲಿ ನಾವು ಹೇಗೆ ದಾಖಲಾಗಬೇಕು ಎನ್ನುವ ಬಗ್ಗೆ ಈ ತಲೆಮಾರು ಎಚ್ಚರ ವಹಿಸಬೇಕು ಎಂದು ಹೇಳಿದ್ದ ನನ್ನ ಆ ಲೇಖನ ಮೇಲಿನ ಲೇಖನದಷ್ಟಲ್ಲದಿದ್ದರೂ ನನ್ನ ಊಹೆಗೂ ಮೀರಿ ಅಂತರ್ಜಾಲದಲ್ಲಿ ಹರಡಿದೆ.

ಮತ್ತೆ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಲೇಖನಗಳ ವ್ಯಾಪ್ತಿ ದೊಡ್ದದಿದೆ. ಇದು ಕೇವಲ ಅಂತರ್ಜಾಲಕ್ಕೆ ಸೀಮಿತವಾಗಿಲ್ಲ. ರಾಜ್ಯದ ಅನೇಕ ಕಡೆಯ ಸ್ಥಳೀಯ ಆದರೆ ಪ್ರಭಾವಶಾಲಿಯಾಗಿರುವ ಅನೇಕ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಇಲ್ಲಿ ಪ್ರಕಟವಾಗುವ ಲೇಖನಗಳನ್ನು ಪ್ರಕಟಿಸುತ್ತವೆ. ರಾಜ್ಯದ ಯಾವಯಾವುದೋ ಮೂಲೆಗಳಿಂದ ಆಗಾಗ ಪರಿಚಿತರು ಫೋನ್ ಮಾಡಿ ’ಇಂದು ಆ ಲೇಖನ ಇಂತಿಂಥ ಪತ್ರಿಕೆಯಲ್ಲಿ ಬಂದಿದೆ’ ಎನ್ನುತ್ತಾರೆ. ಮೋದಿಯ ಬಗ್ಗೆ ಇಲ್ಲಿ ಪ್ರಕಟವಾದ ಲೇಖನಗಳೂ ಸಹ ಮುದ್ರಿತ ರೂಪದಲ್ಲಿ ಸಹಸ್ರಾರು ಓದುಗರನ್ನು ಮುಟ್ಟಿವೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತರ್ಜಾಲ ಕೇವಲ ಮೋದಿಯ ಭಕ್ತರಿಂದ ತುಂಬಿತುಳುಕಾಡುತ್ತಿಲ್ಲ. ಮತ್ತು ಮೋದಿಯನ್ನು ವಿರೋಧಿಸುವವರೆಲ್ಲ ಕಾಂಗ್ರೆಸ್‌ನ ನೀತಿಗಳನ್ನು ಮತ್ತು ಭ್ರಷ್ಟಾಚಾರವನ್ನು ಒಪ್ಪಿಕೊಂಡವರಾಗಲಿ, ವಿರೋಧಿಸದೇ ಉಳಿದವರಾಗಲಿ ಅಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿರುವ rahul_priyanka_soniaವಂಶಪಾರಂಪರ್ಯ ಹಿಡಿತ ಹಾಗೂ ಅನಿಯಂತ್ರಿತ ಭ್ರಷ್ಟಾಚಾರದಿಂದ ಮುಳುಗಿರುವ ಕಾಂಗ್ರೆಸ್‌ ಪಕ್ಷವನ್ನು ಮತ್ತು ಜನಾಂಗಭೇದ ಪ್ರತಿಪಾದಿಸುವ, ಕಂದಾಚಾರ ಮತ್ತು ಸುಳ್ಳುಗಳ ಮೂಲಕ ಜನರನ್ನು ಉದ್ರೇಕಿಸುವ, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ಗೆ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲದ ಬಿಜೆಪಿ ಪಕ್ಷಗಳೆರಡನ್ನೂ ತ್ಯಜಿಸಿ ಇನ್ನೊಂದು ಪರ್ಯಾಯವನ್ನು ಕಟ್ಟುವ ಅಗತ್ಯ ದೇಶದ ಜನರ ಮುಂದಿದೆ. ಮತ್ತು ಅದಕ್ಕೆ ಸಮಯವೂ ಬಂದಿದೆ. ಪ್ರಜ್ಞಾವಂತ ಜನ ಅದನ್ನು ಪ್ರತಿಪಾದಿಸಬೇಕಿದೆ. ಮೋದಿಯನ್ನು ವಿರೋಧಿಸುವ ಒಂದೇ ಕಾರಣಕ್ಕೆ ಕಾಂಗ್ರೆಸ್ ಅನ್ನು ಬೆಂಬಲಿಸುವುದು ಅಪ್ರಬುಧ್ಹತೆಯಷ್ಟೇ ಅಲ್ಲ, ಅಪ್ರಾಮಾಣಿಕತೆಯೂ ಸಹ.

ಕಳೆದ ಎರಡು-ಮೂರು ಸಹಸ್ರ ವರ್ಷಗಳಲ್ಲಿ ಎಂತೆಂತಹವರನ್ನೋ ಈ ದೇಶ ಸಹಿಸಿಕೊಂಡಿದೆ. ಹೊರಗಿನವರ ದಾಳಿ, ಒಳಗಿನವರ ಸಂಕುಚಿತತೆ, ಇಲ್ಲಿಗೆ ಕಾಲಿಟ್ಟು ಇಲ್ಲಿಯೇ ಒಂದಾಗಿಹೋದ ಅನೇಕ ಜನಾಂಗಗಳು, ಸತ್ಯ ಮತ್ತು ನ್ಯಾಯದ ಪ್ರತಿಪಾದನೆಗೆ ಹುಟ್ಟಿಕೊಂಡ ಅನೇಕ ಸಾಂಸ್ಕೃತಿಕ ಹೋರಾಟಗಳು, ಕವಿಗಳು, ದಾರ್ಶನಿಕರು, ಬುದ್ಧ-ಬಸವ-ಗಾಂಧಿಯಂತಹ ಕಾಲಾತೀತರು; ಹೀಗೇ ವಿಶ್ವದಲ್ಲಿಯೇ ಅನನ್ಯವಾದ ಪರಂಪರೆ ಈ ದೇಶಕ್ಕಿದೆ. ಪ್ರಜಾಪ್ರಭುತ್ವದ ಪ್ರಸರಿಕೆ ಹಾಗೂ ನಮ್ಮ ಸಂವಿಧಾನ ಇಂದಿರಾ ಗಾಂಧಿಯೇ ಆಗಲಿ ಮೋದಿಯೇ ಆಗಲಿ, ಯಾವೊಬ್ಬ ಸರ್ವಾಧಿಕಾರಿಯೂ ಈ ದೇಶದ ಭವಿಷ್ಯವನ್ನು ತಮಗನ್ನಿಸಿದ ಹಾಗೆ ಬದಲಾಯಿಸಲಾಗದ ಕಟ್ಟುಪಾಡುಗಳನ್ನು ನಿರ್ಮಿಸಿವೆ. ಇಡೀ ವಿಶ್ವವೇ ಸಹಿಷ್ಣುತೆಯೆಡೆಗೆ, ದೇವರ ವಿಷಯದಲ್ಲಿ ನಾಸ್ತಿಕತೆ ಮತ್ತು ಅನಾಸಕ್ತಿಯಿಂದ ಕೂಡಿದ ಮತಾತೀತತೆಯೆಡೆಗೆ, ವಿಶ್ವಮಾನವತೆಯೆಡೆಗೆ ಹೊರಟಿರುವಾಗ, ಆ ನಿಸರ್ಗ ಶಕ್ತಿಗೆ ಎದುರಾಗಿ ಬರುವ ಕ್ಷುಲ್ಲಕ ವ್ಯಕ್ತಿಗಳನ್ನು ಈ ದೇಶ ಮತ್ತು ವಿಶ್ವ ನುಂಗಿ ಅರಗಿಸಿಕೊಳ್ಳಲಿದೆ. ಮೋದಿ ಯಾಕಾಗಿ ಪ್ರಧಾನಿಯಾಗಬಾರದು ಎನ್ನುವುದು ನ್ಯಾಯ ಮತ್ತು ಸತ್ಯದ ಕಾರಣಗಳಿಗಾಗಿ ಇರಬೇಕು. ಆದರೆ ಅದು ಮೋದಿ ಪ್ರಧಾನಿಯಾಗಿಬಿಟ್ಟರೆ ಅಯ್ಯೋ ಎನ್ನುವ ಭಯದಿಂದ ಹುಟ್ಟುವುದಾಗಿರಬಾರದು. ಭಯಭೀತರು ಅಂತಹ ಸಂದರ್ಭ ಬಂದುಬಿಟ್ಟರೆ ಶರಣಾಗುತ್ತಾರೆ ಇಲ್ಲವೇ ಭಯದಿಂದಲೇ ಸಾಯುತ್ತಾರೆ. ಸತ್ಯ ಮತ್ತು ನ್ಯಾಯದ ಕಾರಣಕ್ಕೆ ಎದುರಿಸುವವರು ಎಂತಹ ಸಂದರ್ಭದಲ್ಲೂ ಧೃತಿಗೆಡದೆ ಹೋರಾಡುತ್ತಾರೆ. ಈ ಗುಂಪಿನಲ್ಲಿ ನಾವು ಯಾರು ಎನ್ನುವುದಷ್ಟೆ ಮುಖ್ಯ.

ಮೋದಿಯ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ

– ಎಮ್.ಸಿ.ಡೋಂಗ್ರೆ

2014 ರ ನಂತರದ ಭಾರತಕ್ಕೆ ಈಗಿನ ಗುಜರಾತಿನ ಮುಖ್ಯಮಂತ್ರಿಯಾಗಿರುವ ಶ್ರೀ ನರೇಂದ್ರ ಮೋದಿಯವರೇ ಸರಿಯಾದ ನಾಯಕನೆಂದೂ, ಹಾಗೂ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತವು ಅತ್ಯುನ್ನತವಾದ ಸರ್ವಾಂಗೀಣ ಏಳಿಗೆಯನ್ನು (ಗುಜರಾತ್ ಮಾದರಿಯಲ್ಲಿ) ಹೊಂದುವುದು ಶತಸ್ಸಿದ್ದ ಎಂದೂ ಬಿಂಬಿಸಲಾಗುತ್ತಿದೆ. ದೇಶದ ನಗರ ಕೇಂದ್ರದ ಯುವಜನರು ಮೋದಿಯ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿಯೂ ಸಹ ಸ್ವಲ್ಪ ಮಟ್ಟಿನ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನೂ ಸಹ ನೋಡಬಹುದಾಗಿದೆ. ಮೋದಿಯನ್ನು “ಅಭಿವೃದ್ಧಿಯ ಹರಿಕಾರ”ನೆಂದು ಬಿಂಬಿಸಲಾಗುತ್ತಿದ್ದೆಯೇ ವಿನಹ, ಅವರ ರಾಜಕೀಯ ಹಾಗೂ ವೈಚಾರಿಕ ಹಿನ್ನೆಲೆಯನ್ನು ಮರೆಮಾಚಲಾಗುತ್ತಿದೆ. ಮೋದಿಯ ಹೆಸರಿನ ಮೇಲೆ ಬಿ.ಜೆ.ಪಿ.ಗೆ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತಿದೆಯೇ ವಿನಹ, ಬಿ.ಜೆ.ಪಿ.ಯಿಂದ ಮೋದಿಗೆ ಅಲ್ಲ ಎಂಬುದನ್ನು ಗಮನಿಸಬೇಕು.

ನಗರ ಕೇಂದ್ರದ ಮಧ್ಯಮ ವರ್ಗಕ್ಕೆ ಸೇರಿರುವ ಅನೇಕ ಮಂದಿ ಯುವಕರು, ಶ್ರೀಮಂತ ವರ್ಗದ ಅನೇಕ ಮಂದಿ, Narendra_Modiಮೋದಿಯ ನಾಯಕತ್ವದ ಅಗತ್ಯ ದೇಶಕ್ಕೆ ಬಹಳವಿದೆಯೆಂದು ಹೇಳಲಾರಂಭಿಸಿದ್ದಾರೆ. ಈಗಿನ ನಮ್ಮ ಪ್ರಧಾನಿಯನ್ನು ಒಬ್ಬ “ಜೋಕರ್”ನಂತೆ ಸುಶಿಕ್ಷಿತರ ಮನಸ್ಸಿನಲ್ಲಿ ಮೂಡಿಸುವಲ್ಲಿ ಸಂಘ ಪರಿವಾರ ಸ್ವಲ್ಪ ಸಫಲತೆಯನ್ನು ಕಂಡುಕೊಂಡಿದೆ. ಮೊನ್ನೆಯ ಒಂದು ಸಂದರ್ಶನದಲ್ಲಿ ಬಿ.ಜೆ.ಪಿ.ಯ ನಾಯಕರಲ್ಲೊಬ್ಬರಾಗಿರುವ ಶ್ರೀ ಅರುಣ್ ಶೌರಿಯವರು ಮಾನ್ಯ ಮನಮೋಹನ ಸಿಂಗ್‌ರವರನ್ನು “ಒಬ್ಬ ಬೇಜವಾಬ್ದಾರಿ ಪ್ರಧಾನ ಮಂತ್ರಿ”ಯೆಂದೇ ನೇರವಾಗಿ ಪ್ರತಿಪಾದಿಸಿಯೂ ಆಗಿದೆ.

ಎಡಪಕ್ಷಗಳು ಹಾಗೂ ಕಾಂಗ್ರೆಸ್ ಇವೆರಡೂ ಪಕ್ಷಗಳು ಮೋದಿಯನ್ನು ಒಬ್ಬ “ಕೋಮುವಾದಿ” ಎಂದು ಬಿಂಬಿಸುವಲ್ಲಿ ಮಗ್ನವಾಗಿದ್ದಾವೆಯೇ ವಿನಹ, ಮೋದಿಯ ಕುರಿತು “ಅಭಿವೃದ್ಧಿಯ ಹರಿಕಾರ” ಎಂಬ ಇಮೇಜಿನ ಹಿಂದಿರುವ ಸುಳ್ಳುಗಳನ್ನು ಬಯಲಿಗೆಳೆಯುವಲ್ಲಿ ಸೋಲುತ್ತಿವೆ.

ಗುಜರಾತಿನಲ್ಲಿ ಎಂತಹ ಅಭಿವೃದ್ಧಿಗಳಾಗಿವೆ, ಅದರಲ್ಲಿ ಮೋದಿಯ ಪಾತ್ರ ಅಥವಾ ಕಾಣಿಕೆಯಾದರೂ ಎಷ್ಟು ಎಂಬುದರ ಕುರಿತು ನೈಜ ಚಿತ್ರಣವನ್ನು ಎಲ್ಲಿಯವರೆಗೆ ನಾವು ಜನಮನದಲ್ಲಿ ಮನದಟ್ಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಮೋದಿಯ ಕುರಿತು ಕುತೂಹಲ, ಮತ್ತು ಮೆಚ್ಚುಗೆ ಇದ್ದೇ ಇರುತ್ತದೆ. ಮೋದಿ ಕೋಮುವಾದಿಯೋ ಅಥವಾ ಅಲ್ಲವೋ ಎಂಬುದು ಜನರಿಗೆ ಈಗ ಮುಖ್ಯವಾದ ಅಂಶವೇ ಅಲ್ಲ. ಜನಸಾಮಾನ್ಯರು ತಮ್ಮ ನಾಯಕನಲ್ಲಿ ಚತುರ ಮಾತುಗಾರಿಕೆಯನ್ನು, ಸ್ಪಷ್ಟವಾಗಿ ಬಾಯಿಬಿಟ್ಟು ಹೇಳುವ ವ್ಯಕ್ತಿತ್ವವನ್ನು, ಹಾಗೂ ಆತ್ಮವಿಶ್ವಾಸದ ಲಕ್ಷಣಗಳನ್ನು ನೋಡಬಯಸುತ್ತಾರೆ.

ಹಾಗಿದ್ದಲ್ಲಿ ಮೋದಿಯ ನಾಯಕತ್ವದಲ್ಲಿ ಗುಜರಾತಿನ ಸಾಧನೆಗಳಾದರೂ ಏನು? ಎಂಬುದನ್ನು ಅವಲೋಕಿಸುವುದು ಬಹಳ ಅಗತ್ಯವೆನಿಸುತ್ತದೆ.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-1 : ಬಿ.ಜೆ.ಪಿ.ಯ ಆಳ್ವಿಕೆಯಲ್ಲಿ :

ಗುಜರಾತ್ ರಾಜ್ಯವನ್ನು ಬಿ.ಜೆ.ಪಿ.ಯು 1998-99 ರಿಂದ (ಅಂದರೆ ಸುಮಾರು 15 ವರ್ಷಗಳಿಂದ) ಆಳುತ್ತ ಬಂದಿದೆ. ಇದರಲ್ಲಿ ಮೋದಿಯ ಆಳ್ವಿಕೆ ಆರಂಭವಾದದ್ದು 10, 2001 ರಿಂದ.

19998-99 ರಿಂದ 2001-02 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಶ್ರೀ ಕೇಶುಭಾಯ್ ಪಟೇಲರಿದ್ದರು. ಆಗ ಗುಜರಾತ್ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ 7.5% ಇತ್ತು. ಭಾರತದ ಅಭಿವೃದ್ಧಿ ದರ 10.7 % ಇತ್ತು. ಅಂದರೆ ಬಿ.ಜೆ.ಪಿ.ಯು ಅಧಿಕಾರಕ್ಕೆ ಬಂದಾಕ್ಷಣ ಮಹತ್ತರವಾದ ಪವಾಡಗಳೇನೂ ಗುಜರಾತಿನಲ್ಲಿ ನಡೆಯಲಿಲ್ಲ ಎನ್ನುವುದನ್ನು ತಿಳಿಯಬಹುದು.

ಮೋದಿಯ ಆಡಳಿತ ಅವಧಿ ಆರಂಭಗೊಂಡಿದ್ದು 2002-03 ನೇ ಇಸವಿಯಿಂದ. ಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧಿ ದರ gujarath16.25 %. ಭಾರತದ ವಾರ್ಷಿಕ ಅಭಿವೃದ್ಧೀ ದರ 14%. ಭಾರತದ ಈ ಒಟ್ಟು ಅಭಿವೃದ್ಧೀ ದರವನ್ನು ಲೆಖ್ಖ ಹಾಕುವಾಗ ಅದರಲ್ಲಿ ಗುಜರಾತಿನಂತಹ ಉತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯಗಳೂ ಸೇರಿರುತ್ತವೆ ಹಾಗೂ ಕಳಪೆ ಪ್ರದರ್ಶನ ನೀಡುವ ರಾಜ್ಯಗಳೂ ಸೇರಿರುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯವು ಭಾರತಕ್ಕಿಂತ ಅಭಿವೃದ್ಧೀ ದರದಲ್ಲಿ ಕೇವಲ 2..25% ಹೆಚ್ಚಿನ ಅಭಿವೃದ್ದಿ ದರವನ್ನು ತೋರಿಸುತ್ತಿರುವುದು ದೊಡ್ಡ ಮಾತೇನಲ್ಲ.

ಇಲ್ಲಿ ನೀಡಿರುವ ಅಂಕಿ-ಅಂಶಗಳ ಕುರಿತು ಒಂದು ಮಾತು.

  1. ಇಲ್ಲಿಯ ಅಂಕಿ-ಅಂಶಗಳು ಭಾರತದ ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಹೊರತರುವ “Handbook of Statistics of Indian Economy”ಎಂಬ ಕಿರುಹೊತ್ತಿಗೆಯ ಆಧರಿಸಿ ನೀಡಲಾಗಿದೆ.
  2. ಅಭಿವೃದ್ಧೀ ದರವನ್ನು ಹೇಳುವಾಗ “ಸಾಮಾನ್ಯ ಸರಾಸರಿ”ಯನ್ನು ತೆಗುಕೊಳ್ಳಲಾಗಿದೆ.
  3. ರಾಜ್ಯದ ಅಭಿವೃದ್ಧಿ ದರವನ್ನು ಹೇಳುವಾಗ “Net State Domestic Product at Factor Cost” ನಲ್ಲಿ ಹೇಳಲಾಗಿದೆ. Factor Cost ನ್ನು ಯಾಕೆ ತೆಗೆದುಕೊಂಡಿದ್ದೇವೆ ಎಂದರೆ ಆಗ ಎಲ್ಲ ಲೆಕ್ಕಾಚಾರದ ಮೇಲೆ ಬೆಲೆ ಏರಿಕೆಯ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವ ಪ್ರಯಾಸದ ಕೆಲಸ ತಪ್ಪುತ್ತದೆ ಎಂಬ ಕಾರಣಕ್ಕೆ. Net State Domestic Product ಅಂದರೆ ಒಂದು ರಾಜ್ಯದ ಒಂದು ವರ್ಷದ ಜಿ.ಡಿ.ಪಿ. ಮೈನಸ್ ಆ ರಾಜ್ಯದ ನಿವೇಶನ, ವಾಹನಗಳು, ಯಂತ್ರೋಪಕರಣಗಳು ಇತ್ಯಾದಿ Capital Goods ಗಳಲ್ಲಿ ಆದ “ಡೆಪ್ರಿಷಿಯೇಷನ್”.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-2 : ಬಿ.ಜೆ.ಪಿ.ಯೇತರ ಪಕ್ಷಗಳ ಆಳ್ವಿಕೆಯಲ್ಲಿ :

  1. 1998-99 ರ ಮೊದಲು ಗುಜರಾತನ್ನು ಕಾಂಗ್ರೆಸ್ ಸರ್ಕಾರವೇ ಅನೇಕ ವರ್ಷಗಳಿಂದ ಅಭಿವೃದ್ಧಿ ಪಡೆಸುತ್ತ ಬಂದಿದೆ. ಗುಜರಾತಿನ ಈಗಿನ ಆರ್ಥಿಕ ಅಭಿವೃದ್ಧಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದೇ ಅಲ್ಲಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವೆಂಬುದನ್ನು ನಾವು ಮರೆಯಬಾರದು. (1994-95 ರಿಂದ 1998-99 ರವರೆಗೆ ಗುಜರಾತಿನಲ್ಲಿ ರಾಜಕೀಯ ಅಸ್ಥಿರತೆಯಿತ್ತು. ಅನೇಕ ಮಂದಿ ಮುಖ್ಯಮಂತ್ರಿಗಳು ಈ ಅವಧಿಯಲ್ಲಿ ಆಗಿ ಹೋಗಿದ್ದು, ಈ ಒಂದು ಕಾಲಘಟ್ಟವನ್ನು ನಮ್ಮ ಅಧ್ಯಯನದಿಂದ ಹೊರಗಿಡುತ್ತಿದ್ದೇವೆ.)
  2. 1990-91 ರಿಂದ 1993-94 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಶ್ರೀ ಚಿಮನ್ ಭಾಯಿ ಪಟೇಲರಿದ್ದರು. Reliance-Gujarathಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧೀ ದರ 16.75 % ಇತ್ತು!!. ಅಂದರೆ ಮೋದಿಯ ಕಾಲದಲ್ಲಿರುವ ಅಭಿವೃದ್ಧೀ ದರಕ್ಕಿಂತಲೂ ಹೆಚ್ಚು!!.
  3. 1980-81 ರಿಂದ 1989-90 ರ ಅವಧಿಯಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ಮಾನ್ಯ ಮಾಧವಸಿಂಗ್ ಸೋಳಂಕಿ. ಇವರ ಆಳ್ವಿಕೆಯಲ್ಲಿ ಗುಜರಾತ್ ವಾರ್ಷಕ್ಕೆ 14.8 % ವೇಗದಲ್ಲಿ ಬೆಳೆಯುತ್ತಿತ್ತ್ತು. ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಕಲ್ಪನೆಯೇ ಇಲ್ಲದಿದ್ದ ಕಾಲ ಅದಾಗಿತ್ತು. ಆಂತಹ ಕಾಲಘಟ್ಟದಲ್ಲೇ ಶೇಕಡಾ 14.8 ರ ದರದಲ್ಲಿ ಅಭಿವೃದ್ಧಿ ಗುಜರಾತಿನಲ್ಲಿ ಆಗಿತ್ತು ಎಂದಾದಲ್ಲಿ ಮೋದಿಯ ಈಗಿನ 16.25% ಅಭಿವೃದ್ಧಿ ದರ ಬಡಾಯೀ ಕೊಚ್ಚಿಕೊಳ್ಳುವುದಕ್ಕೆ ಯೋಗ್ಯವಲ್ಲ. ಮೋದಿಯವರು ತನ್ನ ಮೊದಲು ಇದ್ದ ಅಭಿವೃದ್ಧೀ ದರವು ಕೆಳಗಿಳಿಯದಿರುವಂತೆ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಮಾತ್ರ ಖಂಡಿತವಾಗಿಯೂ ಎಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ.

ಮೋದಿಯ ಆಗಮನದ ಮೊದಲೇ:

ಗುಜರಾತ್ ಮೊದಲಿನಿಂದಲೂ ನಮ್ಮ ದೇಶದ ಬಹು ದೊಡ್ಡ ವ್ಯಾಪಾರ ಕೇಂದ್ರ. ಹರಪ್ಪ-ಮೊಹೆಂಜೋದಾರೋ ನಾಗರಿಕತೆಯ ಕಾಲದಿಂದಲೂ ಸಹ ಗುಜರಾತ್ ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸಂಪದ್ಭರಿತ ರಾಜ್ಯಗಳ ತುಲನೆಯಲ್ಲಿ 1985 ರಿಂದಲೇ ಗುಜರಾತ್ 3 ನೇ ಸ್ಥಾನದಲ್ಲಿದೆ.

  1. ಗುಜರಾತಿನಲ್ಲಿ ಒಟ್ಟು 18028 ಹಳ್ಳಿಗಳಿದ್ದು ಅವುಗಳಲ್ಲಿ 17940 ಹಳ್ಳಿಗಳು 1991 ರಲ್ಲೇ ಸಂಪೂರ್ಣವಾಗಿ ವಿದ್ಯುತ್ ಶಕ್ತಿಯನ್ನು ಪಡೆದಿದ್ದವು.
  2. ಗುಜರಾತಿನ ರಸ್ತೆಗಳಲ್ಲಿ 85% ರಸ್ತೆಗಳು ಮೋದಿ ಬರುವುದಕ್ಕಿಂತಲೂ ಮೊದಲೇ ಸಿಮೆಂಟ್ ರಸ್ತೆಗಳಾಗಿದ್ದವು.
  3. ಪ್ರಪಂಚದ ಅತಿ ದೊಡ್ಡ ಹಡಗುಗಳನ್ನು ಒಡೆಯುವ ಯಾರ್ಡ್, ಅಂಬಾನಿಯವರ ಜಾಮ್ ನಗರದ ಕಚ್ಚಾ ತೈಲ ಶುದ್ಧೀಕರಣ ಫ಼ಾಕ್ಟರಿ ಇವೆಲ್ಲ ಮೋದಿ ಬರುವ ಮೊದಲೇ ಗುಜರಾತಿನಲ್ಲಿ ಅಸ್ತಿತ್ವದಲ್ಲಿದ್ದವು.
  4. ಭಾರತಕ್ಕೆ ಬೇಕಾಗಿರುವ ತೈಲೋತ್ಪನ್ನಗಳಲ್ಲಿ 45% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿತ್ತು.
  5. ಭಾರತದ ಹಡಗುಗಳ ಮೂಲಕ ನಡೆಯುವ ಸರಕು-ಸಾಗಣೆಯ 18% ಗುಜರಾತಿನಿಂದ ಮೋದಿ ಬರುವ ಮೊದಲೇ ನಡೆಯುತ್ತಿತ್ತು.
  6. ನಮ್ಮ ದೇಶಕ್ಕೆ ಬೇಕಾದ ಕಚ್ಚಾ ತೈಲದ 23% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  7. ನಮಗೆ ಬೇಕಾಗಿರುವ ನೈಸರ್ಗಿಕ ಅನಿಲದಲ್ಲಿ 30% ಅನಿಲ ಗುಜರಾತಿನಿಂದ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  8. ನಮ್ಮ ದೇಶಕ್ಕೆ ಅಗತ್ಯವಾಗಿರುವ ಔಷಧಿಗಳಲ್ಲಿ 26% ಔಷಧಿಗಳೂ, 78% ಉಪ್ಪು ಹಾಗೂ 98% ಸೋಡಾ ಆಷ್ ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿದ್ದವು.

ಮೋದಿಯ ಗುಜರಾತ್ v/s ಬೇರೆ ಕೆಲವು ರಾಜ್ಯಗಳು :

2002-03 ರಿಂದ ಮೋದಿಯವರ ಆಡಳಿತ ಗುಜರಾತಿನಲ್ಲಿ ನಡೆಯುತ್ತಿದ್ದು ಗುಜರಾತ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ದೇಶದ ಬೇರೆ ಯಾವ ರಾಜ್ಯಗಳೂ ಈ ರೀತಿಯ ಅಭಿವೃದ್ಧಿಯನ್ನು ಸಾಧಿಸುತ್ತಿಲ್ಲ ಇದಕ್ಕೆಲ್ಲ ಮಾನ್ಯ ಮೋದಿಯವರ “ಸಮರ್ಥ ನಾಯಕತ್ವ”ವೇ ಕಾರಣ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಗುಜರಾತ್ ರಾಜ್ಯದಷ್ಟೆ ಪ್ರಮಾಣದಲ್ಲಿ(ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು) ಬೇರೆ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವುಗಳ ಕಡೆಗೆ ಒಂದು ಸಲ ನಮ್ಮ ಗಮನವನ್ನು ನೀಡೋಣ.

  1. ಮಹಾರಾಷ್ಟ್ರ ರಾಜ್ಯ: ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 15.5%.
    • ( ಅ) ಮಹಾರಾಷ್ಟ್ರದ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 54 ಪಟ್ಟು ಹೆಚ್ಚಾಗಿದೆ.
    • (ಆ) ಗುಜರಾತಿನ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 56 ಪಟ್ಟು ಹೆಚ್ಚಾಗಿದೆ.

    ಇದನ್ನು ಗಮನಿಸಿದಾಗ ಮಹಾರಾಷ್ಟ ರಾಜ್ಯದ ಸಾಧನೆಗಳು ಗುಜರಾತಿನ ಸಾಧನೆಗೆ ಬಹಳ ಸಮೀಪದಲ್ಲೇ ಇದೆ.

  2. ಹರಿಯಾಣಾ ರಾಜ್ಯ : 04/2005 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 18%
  3. ಆಂಧ್ರಪ್ರದೇಶ ರಾಜ್ಯ: 05/2004 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 16%
  4. ಇನ್ನು ಜಿ.ಡಿ.ಪಿ.ಯ ಲೆಕ್ಕ ಹಾಕಿದಾಗ ಇಡೀ ದೇಶದಲ್ಲಿ ಗುಜರಾತ್ ಐದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಮತ್ತು ತಮಿಳುನಾಡಿನ ನಂತರ ಗುಜರಾತ್ ಬರುತ್ತದೆ.
  5. ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವನ್ನು ಲೆಕ್ಕ ಹಾಕಿದರೆ, ಹರ್ಯಾಣಾದಲ್ಲಿ ರೂ. 78781/-, ಮಹಾರಾಷ್ಟ್ರದಲ್ಲಿ ರೂ. 74072/- ಆದರೆ ಗುಜರಾತಿನಲ್ಲಿ ರೂ. 63961/-.

ಮೋದಿಯ ಆಳ್ವಿಕೆಯಲ್ಲಿ ಈಗಿನ ಗುಜರಾತ್ :

ಸುಮಾರು 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಮಾನ್ಯ ನರೇಂದ್ರ ಮೋದಿಯವರ ಸಾಧನೆಗಳಾದರೂ ಏನು? ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಗಳಾದರೂ ಯಾವುವು? ಎಂಬಿತ್ಯಾದಿಗಳನ್ನು ತಿಳಿಯುವ ಮೊದಲು ಗುಜರಾತಿನ ಈಗಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು.

  1. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ 10 ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ ರಾಜ್ಯಕ್ಕೆ.
  2. 5 ವರ್ಷಕ್ಕೂ ಕಮ್ಮಿ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ 44.6% ಮಕ್ಕಳು ಸತ್ವಯುತ ಆಹಾರವಿಲ್ಲದೇ ಗುಜರಾತಿನಲ್ಲಿ ನರಳುತ್ತಿದ್ದಾವೆ.
  3. ಗುಜರಾತಿನ ಮಕ್ಕಳಲ್ಲಿ 70% ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ.
  4. ಎನ್.ಆರ್.ಇ.ಜಿ.ಎಸ್. ಸ್ಕೀಂನ ಅಡಿಯಲ್ಲಿ ಬೇರೆ ರಾಜ್ಯದಲ್ಲಿ ಕೊಡುವ ದಿನಗೂಲಿಯ ಅರ್ಧದಷ್ಟು ಮಾತ್ರ ದಿನಗೂಲಿಯನ್ನು ಗುಜರಾತ್ ಸರ್ಕಾರ ಕೊಡುತ್ತಿದೆ.
  5. ಸುಶಿಕ್ಷಿತ ಮಹಿಳೆಯರಲ್ಲಿ ಕೇವಲ 2.04% ಮಹಿಳೆಯರು ಮಾತ್ರ ಸರ್ಕಾರಿ ಹಾಗೂ ಅರೆ ಸರ್ಕಾರೀ ಉದ್ಯೋಗದಲ್ಲಿದ್ದಾರೆ.
  6. ಗುಜರಾತಿನಲ್ಲಿ ಅತೀ ಕಡಿಮೆ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಸಿಗುವ ಸಂಬಳ ಬಹಳ ನಿಕೃಷ್ಟವಾಗಿರುತ್ತದೆ.
  7. ಸಂಘಟಿತ ಕಾರ್ಮಿಕರಲ್ಲಿ ಉದ್ಯೋಗದ ಬೆಳವಣಿಗೆಯ ಪ್ರಮಾಣ ಅತಿ ಕಡಿಮೆಯಾಗಿದೆ. ವರ್ಷಕ್ಕೆ ಸಂಘಟಿತ ಕ್ಷೇತ್ರದಲ್ಲಿ ಕೇವಲ 0.50% ಉದ್ಯೋಗದಲ್ಲಿ ಹೆಚ್ಚಳವನ್ನು ಕಾಣಬಹುದು. ಅಂದರೆ ಈ ವರ್ಷ 1000 ಜನ ಕೆಲಸದಲ್ಲಿದ್ದರೆ, ಮುಂದಿನ ವರ್ಷದಲ್ಲಿ ಅವರ ಸಂಖ್ಯೆ ಕೇವಲ 1005 !
  8. ಮೋದಿಯವರ ಗುಜರಾತಿನಲ್ಲಿ ಬಡವರೆಂದರೆ ಯಾರೂ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೇ ಬೇರೆ!!. ನಗರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ 540/- ರೂಪಾಯಿ ದಾಟುವುದಿಲ್ಲವೋ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ modi-GIMಯಾರ ಮಾಸಿಕ ಆದಾಯ ರೂಪಾಯಿ 361/- ದಾಟುವುದಿಲ್ಲವೋ ಅವರು ಮಾತ್ರ ಬಡವರು. ಅವರಿಗೆ ಮಾತ್ರ BPL.ಕಾರ್ಡ್‌ನ್ನು ನೀಡಲಾಗುವುದು!!.
  9. ಪ್ರತಿ ವರ್ಷ ಅಂತಾರಾಷ್ಟ್ರೀಯ ಉದ್ಯಮಪತಿಗಳನ್ನು ಗುಜರಾತಿಗೆ ಕರೆಯಿಸಿ “ಗ್ಲೋಬಲ್ ಮೀಟ್” ಮಾಡಿ, ಅನೇಕ ಉದ್ದಿಮೆಗಳಿಗೆ ಅಲ್ಲಿ ಸಹಿಹಾಕುವ ಕೆಲಸ ಗುಜರಾತಿನಲ್ಲಿ ನಡೆಸುತ್ತ ಬರಲಾಗಿದೆ. ಆದರೆ ಅವುಗಳಲ್ಲಿ ಕೇವಲ 20% ಮಾತ್ರ ಇಲ್ಲಿಯವರೆಗೆ ಅನುಷ್ಠಾನಗೊಂಡಿವೆ.
  10. ನಮ್ಮ ದೇಶಕ್ಕೆ ಇಲ್ಲಿಯವರೆಗೆ ಹರಿದುಬಂದಿರುವ FDI ನಲ್ಲಿ ಕೇವಲ 5% ಮಾತ್ರ ಗುಜರಾತಿಗೆ ತರಿಸುವಲ್ಲಿ ಮೋದೀಯ ಮೋಡಿ ಕೆಲಸಮಾಡಿದೆ. ತಮಿಳುನಾಡು ಮತ್ತು ಕರ್ನಾಟಕವು ಸದ್ದಿಲ್ಲದೆ ತಲಾ 6% ಈ.FDI ನ್ನು ತಮ್ಮದಾಗಿಸಿದ್ದರೆ, ಮಹಾರಾಷ್ಟ್ರಾದವರು 35% ತಮ್ಮೆಡೆಗೆ ಸೆಳೆದಿದ್ದಾರೆ.

ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಅದು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದೂ ನೆಲವನ್ನು ಮುಟ್ಟುವುದೇ ಇಲ್ಲ!!.

ಗುಜರಾತಿನ ಕೃಷಿ :- ಸತ್ಯ ಮತ್ತು ಮಿಥ್ಯ

ನರೇಂದ್ರ ಮೋದಿಯ ಅಭಿಮಾನಿಗಳು ನರೇಂದ್ರಮೋದಿಯವರಿಂದ ಗುಜರಾತಿನ ಕೃಷಿ ಬಹಳವಾಗಿ ಬೆಳೆದಿದೆ. ಕೃಷಿಯಲ್ಲಿ ಭಾರತದ ಅಭಿವೃದ್ಧಿಗಿಂತ ಹೆಚ್ಚಿನದಾಗಿ ಅಭಿವೃದ್ಧಿ ಗುಜರಾತಿನಲ್ಲಿ ನಡೆದಿದೆ. ಇದಕ್ಕೆಲ್ಲ ಮೋದಿಯವರ ಸಮರ್ಥ ನಾಯಕತ್ವ, ಒಳನೋಟ ಇವುಗಳೇ ಕಾರಣ ಎಂದೆಲ್ಲ ಹೊಗಳಲು ಆರಂಭಿಸಿದ್ದಾರೆ.

ಮೋದಿಯೂ ಸಹ ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ಇತರ ಕಡೆಯಲಿ ಭಾಷಣ ಮಾಡುವಾಗ ಈಗ ಭಾರತದ guj-agricultureಕೃಷಿಕ್ಷೇತ್ರದಲ್ಲಿ ನಾವೇ ನಂಬರ್ 1 ಎಂದೆಲ್ಲ ಸುಳ್ಳುಗಳನ್ನೂ ಹೇಳಿಯಾಗಿದೆ. ಭಾರತದ ಕೃಷಿ ವರ್ಷಕ್ಕೆ 4% ನಂತೆ ವೃದ್ಧಿಯಾಗುತ್ತಿದೆ, ಆದರೆ ಗುಜರಾತಿನಲ್ಲಿ ಅದು 11% ನಂತೆ ಹೆಚ್ಚಾಗುತ್ತಿದೆ ಎಂದು ಬಾಯಿಗೆ ಬಂದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ.

ಕೇಂದ್ರ ಸಚಿವಾಲಯವು ಮುದ್ರಿಸಿರುವ ಭಾರತದ ಕೃಷಿಯ ಸ್ಥಿತಿ-ಗತಿ, 2012-13ರ ವರದಿಯ ಪ್ರಕಾರ ಕೃಷಿಯಲ್ಲಿ ಗುಜರಾತಿನ ಸ್ಥಾನ 8ನೇ ಸ್ಥಾನ.

2007-08 ರಿಂದ 2011-12 ರ ಅವಧಿಯಲ್ಲಿ ಗುಜರಾತಿನ ಕೃಷಿ ಅಭಿವೃದ್ಧಿಯು 4.8% ದರದಲ್ಲಿ ಪ್ರತಿವರ್ಷ ವೃದ್ಧಿಯಾಗುತ್ತಿದೆ.

ಗುಜರಾತ್ ಸರ್ಕಾರವು ಪ್ರತಿ ವರ್ಷ ತನ್ನ ಆರ್ಥಿಕ ಸ್ಥಿತಿ-ಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಈ ರೀತಿ ಪ್ರಕಟಿತ ಮಾಹಿತಿಯ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಲು ಬಯಸುತ್ತೇವೆ. ಆಗ ಮಾತ್ರ ಎಲ್ಲರಿಗೂ “ಈ ಮೋದಿ ಎನ್ನುವವ ಎಂತಹ ಸುಳ್ಳುಗಾರ” ಎಂಬುದು ಮನದಟ್ಟಾಗುತ್ತದೆ.

ವರ್ಷ ಆಹಾರಧಾನ್ಯಗಳು (ಲಕ್ಷ ಟನ್‌ಗಳಲ್ಲಿ) ಎಣ್ಣೆಕಾಳುಗಳು (ಲಕ್ಷ ಟನ್‌ಗಳಲ್ಲಿ) ಹತ್ತಿ ಬೆಳೆ(ಲಕ್ಷ ಬೇಲ್‌ಗಳಲ್ಲಿ)
1996-97 60.89 38.02 28.18
1997-98 61.13 38.65 34.17
1998-99 60.38 38.81 40.03
1999-2000 44.37 18.26 21.45
2000-01 31.84 17.37 12.82
2001-02 52.54 37.46 16.84
2002-03 43.95 18.77 18.39
2003-04 67.36 58.55 42.79
2004-05 51.53 28.99 55.40
2005-06 61.41 47.34 65.12
2006-07 61.10 28.46 87.87
2007-08 82.06 46.99 78.76
2008-09 63.45 39.32 82.75
2009-10 56.05 30.10 74.01
2010-11 100.71 51.42 98.25
2011-12 92.57 50.53 103.75

1996-97 ರಿಂದ 2004-05 ರವರೆಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದರ ವಾರ್ಷಿಕ ಸರಾಸರಿ 5.65% ಇತ್ತು, ಅದೀಗ 6.47% ಆಗಿದೆ.

ಗುಜರಾತಿನ ಕೃಷಿಯಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಈ ಕೆಲವು ಕಾರಣಗಳನ್ನು ಪಟ್ಟಿಮಾಡಬಹುದು:

  1. ಸರ್ದಾರ್ ಸರೋವರ ಆಣೆಕಟ್ಟಿನಿಂದ ಗುಜರಾತಿನ ಅನೇಕ ಭಾಗಗಳಿಗೆ 2002 ರಿಂದ ನೀರು ಲಭ್ಯವಾಗಲಾರಂಭಗೊಂಡಿದ್ದು.
  2. Bt ಹತ್ತಿಯನ್ನು ಬೆಳೆಸುತ್ತಿರುವುದು
  3. ಮೈನರ್ ಇರಿಗೇಷನ್‌ಗಳ ಆಳವಡಿಕೆ
  4. ಭೂಮಿಯ ಅಂತರ್ಜಲವನ್ನು ಹೆಚ್ಚಿಸಲು ಸಾವಿರಾರು ಚೆಕ್-ಡ್ಯಾಮ್ ಗಳ ರಚನೆ
  5. ಸಣ್ಣ-ಸಣ್ಣ ಯಾಂತ್ರಿಕ ಉಪಕರಣಗಳ ಬಳಕೆ
  6. ಒಳ್ಳೆಯ ಸಾರಿಗೆ ಸೌಕರ್ಯಗಳು
  7. ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಗೆ 3-ಫೇಸ್ ವಿದ್ಯುತ್ ಸರಬರಾಜು

ಮುಗಿಸುವ ಮೊದಲು:

ಗುಜರಾತಿನಲ್ಲಿ ಮೋದಿ ಆಳ್ವಿಕೆಯಲ್ಲಿ ನಗರದ ಮಧ್ಯಮ ವರ್ಗದ ಜನರು ಅನೇಕ ಸೌಲಭ್ಯಗಳಿಂದ, middleclass-indiaಅಭಿವೃದ್ಧಿಯ ಫಲವನ್ನು ಆನಂದಿಸುತ್ತ ಇದ್ದಾರೆಯೇ ವಿನಹ ಅಲ್ಲಿಯ ಆದಿವಾಸಿಗಳ ಹಾಗೂ ದಲಿತರ ಸ್ಥಿತಿ-ಗತಿ ಬಹಳ ಚಿಂತಾಜನಕವಾಗಿದೆ. ಫಲವತ್ತಾದ ಭೂಮಿಯನ್ನು ಉದ್ಯಮಪತಿಗಳಿಗೆ ನೀಡುತ್ತಿರುವುದರ ವಿರುದ್ಧ ಈಗಾಗಲೇ ಗುಜರಾತಿನ ಗ್ರಾಮ-ಗ್ರಾಮಗಳಲ್ಲಿ ಸಂಘಟಿತ ರೈತರಿಂದ ಪ್ರತಿರೋಧ ಬಲಗೊಳ್ಳುತ್ತಿದೆ. ಭಾರತದ ಉದ್ಯಮಪತಿಗಳಿಗೆ ಈಗ ಮೋದಿ ಬೇಕಾಗಿದ್ದಾರೆ. ಯು.ಪಿ.ಎ. ಸರ್ಕಾರದಿಂದ ನಿರೀಕ್ಷಿತ ಅನುಕೂಲತೆಗಳು ಸುಲಭವಾಗಿ ದೊರೆಯಲಾರದು ಎಂದು ಮನಗಂಡಿರುವ ಬಂಡವಾಳಶಾಹಿಗಳು ಈಗ ಮೋದಿಯನ್ನು “ದೇಶದ ಪ್ರಧಾನಿ”ಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಮೋದಿಯ ಸುಳ್ಳುಗಳನ್ನು ಬಯಲು ಮಾಡಬೇಕು, ಮೋದಿಯ ಕೊಳಕು ಕೋಮುವಾದವನ್ನು ಹಿಮ್ಮೆಟ್ಟಿಸುವಲ್ಲಿ ಸಂಘಟಿತ ಹಾಗೂ ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಬೇಕು.