– ಎಚ್.ಜಯಪ್ರಕಾಶ್ ಶೆಟ್ಟಿ
ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಒಕ್ಕಲು ಕೆಲಸಕ್ಕಾಗಿ ಹಸು ಕರುಗಳನ್ನು ಸಾಕಿದರೂ ಅದೇ ಹೊಲಗದ್ದೆಗಳಿಗೆ ಅವು ಮೂತಿಯಿಟ್ಟರೆ ಬೆಳೆದದ್ದು ಇಲ್ಲವಾಗುತ್ತದೆ. ಸಾಕಿದವರ ಮನೆಯ ಗದ್ದೆಯಾಗಲೀ, ಪರರದ್ದಾಗಲೀ ಬೆಳೆದ ಪೈರನ್ನು ನಾಶಮಾಡುವುದು ಅಪರಾಧವೆಂಬುದು ನಮ್ಮೆಲ್ಲರ ಸಮಾನಾಭಿಪ್ರಾಯ. ದೇವರೆಂದು ನಾವೇ ಹಟ್ಟಿಯಲ್ಲಿ ಕರೆಯುವ ಈ ಭಾಗ್ಯಲಕ್ಷ್ಮಿಗಳು ಬೆಳೆದು ನಿಂತ ನಮ್ಮದೇ ಅಥವಾ ಇನ್ಯಾರದೊ ಪೈರಿಗೆ ದಾಳಿಯಿಟ್ಟಾಗ ಅವುಗಳಿಗೆ ಸಿಗುತ್ತಿದ್ದ ಸಂಭಾವನೆಗೆ ಅವುಗಳ ಮೈಮೇಲಿನ 33 ಕೋಟಿ ದೇವತೆಗಳು ಏಕಕಾಲದಲ್ಲಿ ಎದ್ದು ಓಡಿಹೋಗಬೇಕು. ಮನೆಯ ಹಸುವಾದರೆ ಹಟ್ಟಿಯಲ್ಲಿಯೇ ಸ್ವಲ್ಪ ಮಿತವಾಗಿಯೇ ನಡೆಯಬಹುದಾದ ಈ ದಂಡನೆ ಪರರ ಹಸುವಾದರೆ ಸೆರೆಹಿಡಿದು ಕಟ್ಟಿ ರೋಷ ತೆಗೆಯುವಷ್ಟು ಬಡಿದು, ದೊಡ್ಡಿಗೆ ಕಟ್ಟಿ ಬರುವಲ್ಲಿಯವರೆಗೆ ಪ್ರಕಟವಾಗಬಹುದು. ಇನ್ನು ಕೆಲವೊಮ್ಮೆ ಸೆರೆಹಿಡಿಯುವ ಯತ್ನದಲ್ಲಿ ಅವುಗಳ ಕಾಲು ಮುರಿಯಬಹುದು. ಕತ್ತಿ ಎಸೆದು ಕಾಲು ಕಡಿಯುವುದೂ ಸಂಭವಿಸಬಹುದು, ಕಲ್ಲು- ದೊಣ್ಣೆಯಿಂದ ಬಡಿದು ಅಟ್ಟುವ ಬರಕ್ಕೆ ಪ್ರಾಣಕ್ಕೆ ಸಂಚಕಾರವೂ ಆಗಬಹುದು. ಹಾಗೆ ಆದುದೂ ಇದೆ. ಹೊಡೆದ ಕಲ್ಲೋ, ಇಟ್ಟ ಬಡಿಗೆಯೋ ಆಯಕಟಿನ ಜಾಗಕ್ಕೆ ಬಿದ್ದು ಅನುದ್ದೇಶಿತವಾದರೂ ಕೊಂದು ತೆಗೆದ ಉದಾಹರಣಗಳಿವೆ. ಗದ್ದೆಗೆ ಬಂದ ಹಸುವಿನಿಂದಾದ ಹಾನಿಗೆ ಪ್ರತಿಯಾಗಿ ಮನೆಯ ಹಸುಗಳನ್ನು ಅವರ ಮನೆಯ ಗದ್ದೆಗೆ ಬಿಟ್ಟುಕೊಂಡು ಕೊಲೆಯತನಕ ಸಂಘರ್ಷನಡೆದ ಸಂದರ್ಭಗಳೂ ನನ್ನ ಅಕ್ಕ-ಪಕ್ಕದೂರುಗಳಲ್ಲಿ ನಡೆದುದಿದೆ. ಹಸುಕರುಗಳು ಬಂದು ಮಾಡಿದ ದಾಳಿಯೇ ಹೇತುವಾಗಿ ಎರಡು ಮನೆಗಳು ಬೈದಾಡಿಕೊಂಡು ಆಣೆಭಾಷೆ ಹಾಕಿಕೊಂಡು (ಅಣ್ಣಪ್ಪನ/ಮಂಜುನಾಥನ ಹೆಸರು ಹೇಳಿಹಾಕುವ ಆಣೆ) ನೀರಿನ ಸಂಬಂಧ ಕಳೆದುಕೊಂಡವರೂ ಉಂಟು. ಏನು ಮಾಡಿದರೂ ದನ ಬಿಡುವವರು ಬಂದೋಬಸ್ತು ಮಾಡೋದಿಲ್ಲವೆಂಬ ಸಿಟ್ಟಿನಿಂದ ಬೆಳೆದ ಬೆಳೆಗೆ ಎಂಡೋಸಲ್ಫಾನ್ ಹೊಡೆದು ಹಸುಗಳು ಸತ್ತದ್ದೂ ಉಂಟು (ಗದ್ದೆಗೆ ಬರುವ ಕೋಳಿಗಳಿಗೆ ಇಲಿಪಾಷಾಣ ಕಲಸಿದ ಅನ್ನವನ್ನು ತೆಂಗಿನ ಚಿಪ್ಪಿನಲ್ಲಿಟ್ಟು ಕೊಲ್ಲುವಂತೆ). ಹಸುಬಿಟ್ಟವರ ಮೇಲಿನ ಸಿಟ್ಟನ್ನು ಹಸುಗಳ ಮೇಲೆ ತೀರಿಸಿ ಅವುಗಳನ್ನು ದಿಕ್ಕು ತಪ್ಪುವಂತೆ ಓಡಾಡಿಸಿಕೊಂಡು ಯಾವುದೋ ದಿಕ್ಕಿಗೆ ಎಬ್ಬುವುದರಿಂದ ಹುಲಿ-ಕುರ್ಕನ ಬಾಯಿಗೆ ತುತ್ತಾದ ಸಾಕಷ್ಟು ಉದಾಹರಣೆಗಳೂ ಹಿಂದೆ ಇದ್ದವು. ದಿಕ್ಕುತಪ್ಪಿ ಹಟ್ಟಿಗೆ ಬರದ ಹಸುಗಳನ್ನು ಕಳೆದುಕೊಂಡು ಅಂಡಲೆದು ಹುಡುಕುವಂತಾದ ಅನೇಕ ಪ್ರಸಂಗಗಳು ಇವೆ. ಯಾರ್ಯಾರನ್ನೋ ಕಣಿಕೇಳಿ ಜೀವಧನವನ್ನೇ ಕಳೆದುಕೊಂಡಂತೆ ಹುಡುಕಾಡಿ ಕಾಣದೆ ಕಂಗೆಟ್ಟುದಿದೆ, ಹುಡುಕಿ ನಿಟ್ಟುಸಿರು ಬಿಟ್ಟುದಿದೆ.
ನನ್ನೂರಿನ ಅನೇಕರಲ್ಲಿ ಹಸುಗಳನ್ನು ಬಂದೋಬಸ್ತ್ ಮಾಡುವುದಕ್ಕೆ ಸಂಬಂಧಿಸಿ ಅಸಡ್ಡೆಯೂ ಇದೆ. ಹೀಗೆ ಅಸಡ್ಡೆ ಮಾಡುವವರು ತಮ್ಮ ಹಸು-ಕರುಗಳಿಂದಾಗಿ ಹಗುರ ಮಾತುಗಳನ್ನು ಕೇಳುವುದನ್ನು ತಪ್ಪಿಸಿಕೊಳ್ಳಲಾಗದು. ಈ ಉದಾಸೀನತೆಯ ಕಾರಣದಿಂದ ಕಣ-ಮನೆ-ಗದ್ದೆಗಳಿಗೆ ಸ್ವಲ್ಪ ಮುಕ್ತವಾಗಿಯೇ ನುಗ್ಗುವ ಇವರ ಹಸುಕರುಗಳಿಂದಾಗಿ ಕೇಳಬಾರದ ಬೈಗುಳಗಳನ್ನೂ ಅಷ್ಟೇ ಮುಕ್ತವಾಗಿ ಕೇಳಬೇಕಾಗುತ್ತದೆ. ಅದು ಅನೇಕರಿಗೆ ಸ್ವಲ್ಪ ಅಭ್ಯಾಸವಾಗಿಯೂ ಉಂಟು. ನನ್ನ ಹತ್ತಿರದ ದಾಯಾದ್ಯರೊಬ್ಬರ ಈ ಸಂಬಂಧವಾದ ಅಜಾಗ್ರತೆ ಒಂದು ಮಳೆಗಾಲದ ಆರಂಭದಲ್ಲಿ ಸ್ವಲ್ಪ ದುಬಾರಿಯೇ ಆಯ್ತು. ಸಾಕಷ್ಟು ಬೇಸಾಯದ ಹೊಲವಿದ್ದ ಅವರಲ್ಲಿ ಊಳುವುದಕ್ಕೆಂದು ಗಟ್ಟಿಮುಟ್ಟಾದ ಆಳೆತ್ತರದ ಎರಡು ಕೋಣಗಳಿದ್ದವು. ಅವು ಅಂತಹ ಕಾಟು ಸ್ವಭಾವದವುಗಳೂ ಆಗಿರಲಿಲ್ಲ. ಆದರೆ ಜಾನುವಾರು ಜಾತಿಯಲ್ಲವೇ? ಹಸಿರು ಕಂಡಲ್ಲಿಗೆ ಬಾಯಿ ಎತ್ತಿಕೊಂಡು ಹೋಗುವುದು ಸಹಜವೇ. ಪಾಪದ ಕೋಣಗಳಿಗೆ ಸಂಬಂಧಿಸಿದಂತೆ ಒಂದಾನೊಂದು ಮಳೆಗಾಲದ ದಿನದಲ್ಲಿ ಆಗಬಾರದ ಅನಾಹುತದ ಘಟನೆಯೊಂದು ಘಟಿಸಿಯೇ ಹೋಯಿತು. ಆ ಘಟನೆಯಲ್ಲಿ ನಡೆದುದಿಷ್ಟು. ನೇಜಿಗೆ ಪೂರ್ವದಲ್ಲಿ ಗದ್ದೆಯಗಳನ್ನು ಉಳುಮೆಮಾಡಿ ಮಣ್ಣು ಹದ ಮಾಡುವ ಸಲುವಾಗಿ ಅರ್ಕ್ಲ್ಹೂಂಟಿ ಅಂತ ನಮ್ಮೂರಕಡೆ ಮಾಡುವುದಿದೆ. ಗದ್ದೆಯಲ್ಲಿ ಬೆಳೆದ ಹುಲ್ಲುಕಸಗಳು ಮಳೆಗಾಲದ ನೀರಲ್ಲಿ ಕೊಳೆಯುವುದಕ್ಕೆ ಅನುಕೂಲವಾಗುವಂತೆ ಮಾಡುವ ಮೊದಲ ಉಳುಮೆಗಳಿವು. ಈ ಉಳುಮೆಗಾಗಿ ಎಂದಿನಂತೆ ಕೋಣದ ಮಾಲಿಕ ಅವುಗಳನ್ನು ಉಳುಮೆಗೆ ಒಯ್ದಿದ್ದಾನೆ. ಹೂಡಿಬಿಟ್ಟು (ಉಳುಮೆ ಮಾಡಿ) ದೈವದಮನೆಯ ಎದುರಿನ ಮಕ್ಕಿಯ (ಬೆಟ್ಟುಗದ್ದೆ) ಹೊಂಡದಲ್ಲಿ ಮೈತೊಳೆದು, ಹಾಗೆಯೇ ಮೇಯಲಿ ಎಂದು ಅಲ್ಲಿಯೇ ಬಿಟ್ಟ ಯಜಮಾನ ಮನೆಯ ಕಡೆಗೆ ಬಂದಿದ್ದಾನೆ. ಅವುಗಳೊ ಹಾಗೆಯೇ ಮೇಯುತ್ತಾ ಮತ್ತೊಬ್ಬ ದಾಯಾದ್ಯರ ಮನೆಯೆದುರಿನ ಅಗೆ ಹಾಕಿದ ಗದ್ದೆಗೆ ಇಳಿದಿವೆ. ವಯಸ್ಸು ಮೀರಿದ ಯಜಮಾನ ದೊಣ್ಣೆ ಸಮೇತವಾಗಿ ಇವುಗಳನ್ನು ಅಟ್ಟಿಸಿಕೊಂಡು ಬಂದಾಗ ಕಕ್ಕಾಬಿಕ್ಕಿಯಾಗಿ ಹೊಳೆಬದಿಯ ಕಡೆಗೆ ಅವು ಪೇರಿಕಿತ್ತಿವೆ. ಆ ದಿಕ್ಕಿಗೆ ಬಂದವುಗಳನ್ನು ಬೆನ್ನಟ್ಟಿಕೊಂಡು ಬಂದ ಅಜ್ಜನ ಗಂಟಲಿಗೆ ಹೆದರಿ ಹೊಳೆಹಾರಿದ ಕೋಣಗಳಲ್ಲಿ ಒಂದು ಮಾತ್ರ ಮತ್ತೆಲ್ಲೋ ದಡ ಸೇರಿತ್ತು. ಆದರೆ ಮತ್ತೊಂದು ಕೋಣ ಯಾವ ದಿಕ್ಕಿಗೆ ಹೋಯಿತೆಂಬುದೇ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಬಂದ ಹೋರಿ(ಕೋಣ)ಯ ಯಜಮಾನ ಬಯಲಿನಲ್ಲಿ ಸಿಕ್ಕಿದ ಒಂಟಿಕೋಣವನ್ನು ಹಟ್ಟಿಗೆ ಕಟ್ಟಿ ಮಿಕ್ಕಿದ್ದನ್ನು ಸಿಕ್ಕ ಸಿಕ್ಕ ಕಡೆ ಹುಡುಕಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ.
ದಿನಗಳು ಉರುಳಿದವು. ಹಟ್ಟಿಯಲ್ಲಿ ಕಟ್ಟಿದ ಒಂಟಿಕೋಣ ತನ್ನ ಸಂಗಾತಿಗಾಗಿ ಅಲ್ಲಿಂದಲೇ ಗೆಲೆಯ(ಕೂಗ)ತೊಡಗಿತು. ಮನೆಮಂದಿ ಊರೆಲ್ಲಾ ಹುಡುಕಿ ಕಾಣದೆ ನಿಮಿತ್ತ ಕೇಳಿದರು. ದೈವ ಆಳಿಕೆ ಮಾಡಿ ನುಡಿ ಕೇಳಿದರು. ಮಾತ್ರವಲ್ಲ ತುಂಬಿದ ಮಳೆಗಾಲದಲ್ಲಿ ಬೆಳೆದುನಿಂತ ಅಗೆ ಬೆದೆಯನ್ನು ಮಣ್ಣಿನಲ್ಲಿ ಸೇರಿಸಲಾರದೆ ಹಡುಬಿದ್ದುಹೋಗುವ ಆತಂಕದಲ್ಲಿ ನರಳಿದರು. ದೈವದ ಪಾತ್ರಿ, ನಿಮಿತ್ತದ ಜ್ಯೋತಿಷಿಗಳು ಇವರಲ್ಲಿ ಇದ್ದಬದ್ದ ಭರವಸೆಯೂ ಕಳೆದುಹೋಗುವಂತೆ ಮಾಡಿದರೆ ವಿನಹಾ ಪರಿಹಾರ ನೀಡಲಾಗಲಿಲ್ಲ. ಒಬ್ಬೊಬ್ಬರು ಒಂದೊಂದು ತರಹ ಮಾತಾಡಿದರು. ಊರೂರು ಸುತ್ತಿಯೂ ಕೋಣದ ಸುಳಿವೇ ಸಿಗಲಿಲ್ಲ.
ಘಟನೆ ನಡೆದ ನಾಲ್ಕೈದು ದಿನಗಳ ತರುವಾಯ ತುಂಬಿದ ಹೊಳೆಯಲ್ಲಿ ತೇಲಿಬರುವ ಕಟ್ಟಿಗೆಯ ದಿಮ್ಮಿಗಳನ್ನು ಒಟ್ಟು ಹಾಕಿಕೊಂಡುಹೋಗುವ ತಮ್ಮ ರೂಢಿಯಂತೆ ಕಂಡ್ಲೂರಿನ ಕೆಲ ಸಾಬರುಗಳು ದೋಣಿ ಪಾತಿಯೊಂದಿಗೆ ಬಂದಿದ್ದರು. ವಾರಾಹಿಯ ಎಡದಂಡೆಯಲ್ಲಿರುವ ಬೀಳು-ಬಲ್ಲೆಗಳಲ್ಲಿ ಸೌದೆ ಕೂತಿರುತ್ತದೆ ಎಂಬ ಆಸೆಯಲ್ಲಿ ಪಾತಿಯನ್ನು ತೆಗೆದುಕೊಂಡು ಬಿದಿರು ಮೆಳೆಯೊಂದರಲ್ಲಿ ದೋಣಿಯ ಜಲ್ಲೆಯನ್ನು ತುರುಕಿದಾಗ ದೀರ್ಘವಾಗಿ ಉಸಿರು ಬಿಟ್ಟಂತಾಗಿ ಖಾದರ್ಸಾಬ್ ಬೆಚ್ಚಿಬಿದ್ದ! ತಕ್ಷಣ ಅದೊಂದು ಭೀಕರವಾದ ಹಾವಿರಬಹುದು ಎಂಬ ಆತಂಕಕ್ಕೆ ಒಳಗಾದ ಅಬ್ದುಲ್ ಖಾದರ್ ಹತ್ತಿರದಲ್ಲಿ ಲಭ್ಯವಿದ್ದ ಒಂದಿಬ್ಬರನ್ನು ಪಾತಿಯೊಂದಿಗೆ ಅಲ್ಲಿಗೆ ಬರುವಂತೆ ಕೂಗಿದ. ಪ್ರವಾಹದಲ್ಲಿ ತೇಲಿ ಬರುವ ಇಂತಹ ಹಾವುಗಳನ್ನು ಮುಟ್ಟಲು ಹೋಗುವುದು ಸ್ವಲ್ಪ ಆತಂಕಕಾರಿ. ಆದರೆ ನಂತರ ಸ್ವಲ್ಪ ಧೈರ್ಯ ಮಾಡಿಕೊಂಡು ದೋಣಿಯಲ್ಲಿಯೇ ನಿಂತು ಸರ್ಕಸ್ ಮಾಡಿ ಜಲ್ಲೆ ತೂರಿನೋಡುವಾಗ ಕೋಡಿಗೆ ಸಿಕ್ಕಿದ ಹಗ್ಗ ಬಿಡಿಸಿಕೊಳ್ಳಲಾರದೆ, ನೀರಿನಲ್ಲಿಯೇ ಕಾಲನ್ನೂ ಬಡಿಯಲಾರದ ನಿಸ್ತೇಜ ಸ್ಥಿತಿಯಲ್ಲಿರುವ ಕೋಣವನ್ನು ಕಂಡು ನಿರಾಳರಾಗಿ ತಮ್ಮ ಸೌದೆ ಕೆಲಸ ಮರೆತು, ಅದನ್ನು ಬಚಾವು ಮಾಡುವ ಕೆಲಸದಲ್ಲಿ ತೊಡಗಿಕೊಂಡರು. ಕೋಡಿಗೆ ಸಿಕ್ಕಿದ ಬೀಳಿನಿಂದ ಬಿಡಿಸಿಕೊಳ್ಳಲಾರದೇ ನೀರಿನಲ್ಲಿಯೇ ನಿಂತ ಕೋಣವನ್ನು ಅಲ್ಲಿಂದ ಬಿಡಿಸಿ ತೇಲಿ ಹೋಗದ ಹಾಗೆ ಹಗ್ಗವೊಂದನ್ನು ಬಳಸಿ ಕಟ್ಟಿಕೊಂಡು ದಡಕ್ಕೆ ತಂದರು. ಆದರೆ ಅವರಿಗೆ ಅದು ಯಾರ ಕೋಣ(ಹೋರಿ) ಎಂಬ ಮಾಹಿತಿಯಿರಲಿಲ್ಲ. ನಮ್ಮೂರಿನ ಕೋಣ ಕಳೆದು ಸುದ್ದಿಯನ್ನೂ ಆವರು ಬಲ್ಲವರಾಗಿರಲಿಲ್ಲ. ಯಾವ ಊರಿನ ಕೋಣವೊಂದು ಹೀಗೆ ತೇಲಿ ಬಂದು ಸಿಕ್ಕಿಹಾಕಿಕೊಂಡಿದೆ ಎಂಬುದನ್ನು ತಿಳಿಯದ ಅವರುಗಳು ಕಾಕತಾಳೀಯವಾಗಿ ಅದನ್ನು ನಮ್ಮಕಡೆಯ ಹೊಳೆಯದಡಕ್ಕೆ ತರಬೇಕಾಗಿ ಬಂದುದರಿಂದ ಆ ಸುದ್ದಿಯನ್ನು ನಮ್ಮೂರಿಗೆ ಮುಟ್ಟಿಸಿದರು. ಊರ ಕಡೆಗೆ ಬಂದು ಸಂಗತಿ ತಿಳಿಸಿದಾಗ ಇಲ್ಲಿಯವರೆಗೆ ಕೋಣ ಕಳೆದುಕೊಂಡು ಕಂಗಾಲಾಗಿದ್ದವರು ನಿಟ್ಟುಸಿರುಬಿಟ್ಟರು. ಅವರು ಮತ್ತು ಆ ಊರಮಂದಿಯ ಖುಷಿಗೆ ಪಾರವೇ ಇರಲಿಲ್ಲ. ಅನೇಕರಿಗೆ ಅದೊಂದು ಸಾಹಸವಾಗಿ, ಉಪಕಾರವಾಗಿ ಏನೇನೋ ಆಗಿ ಕಂಡಿತು. ಅಂದಿನಿಂದ ಖಾದರ್ ಈ ಘಟನೆಯೇ ನಿಮಿತ್ತವಾಗಿ ನಿರಂತರ ಸಂಪರ್ಕ ಹೊಂದಿದ ವ್ಯಕ್ತಿಯಾಗಿ ಊರಿನ ನಂಬಿಕಸ್ತನಾದುದು ಮುಂದಿನ ಮಾತು.
ಹೊಳೆಯಿಂದ ಹೊರಬಂದರೂ 4-5 ದಿನಗಳಿಂದ ಒಂದೇ ಸಮನೆ ಸುರಿಯುವ ಮಳೆ, ಕಾಲಬುಡದಲ್ಲಿರುವ ತಂಡಿನೀರುಗಳ ನಡುವೆ ಸಿಕ್ಕಿ ತಿನ್ನುವುದಕ್ಕೆ ಏನೂ ಇಲ್ಲದೆ ನಾಲ್ಕು ಹೆಜ್ಜೆ ನಡೆಯಲಾರದ ಸ್ಥಿತಿಗೆ ತಲುಪಿದ ಕೋಣವನ್ನು ಆ ಮುಸಲ್ಮಾನ ಹುಡುಗರ ನೆರವಿನಿಂದ ಹಟ್ಟಿಗೆ ತಂದರು. ಕೋಣ ಕಳೆದುಕೊಂಡಿದ್ದ ನನ್ನ ದಾಯಾದ್ಯರಿಗೆ ಅದು ಯಾವ ಸ್ಥಿತಿಯಲ್ಲಿಯೇ ಇರಲಿ, ಮನೆಗೆ ಬಂತಲ್ಲಾ ಎನ್ನುವ ನೆಮ್ಮದಿಯ ಮುಂದೆ ಸ್ವರ್ಗವೂ ಆ ಕ್ಷಣದಲ್ಲಿ ಹಗುರವಾಗಿಯೇ ಕಂಡಿತ್ತು. ಈ ಘಟನೆ ನಡೆಯುವ ವೇಳೆ ನಾನು 5-6 ನೇ ತರಗತಿಯಲ್ಲಿದ್ದೆ. ಇದು ಕನಿಷ್ಠ 30 ವರ್ಷಗಳ ಹಿಂದಿನ ಕಥೆ. ಅಚ್ಚರಿಯೆಂದರೆ ಇಂದು ನಾವು ಕೇಳಿಸಿಕೊಲ್ಳುತ್ತಿರುವ ಹಾಗೆ ಎಲ್ಲೆಂದರಲ್ಲಿ ಸಿಕ್ಕ ಹಸು ಕೋಣಗಳನ್ನು ಕದಿಯುತ್ತಾರೆಂಬ ಆಪಾದನೆಯನ್ನು ಯಾರ ಮೇಲೆ ಹೊರಿಸಲಾಗುತ್ತಿದೆಯೋ, ಅವರೇ ನನ್ನ ದಾಯಾದಿಗಳ ಎತ್ತುಬೀಜವನ್ನು ಆ ವರ್ಷದ ಮಟ್ಟಿಗೆ ಉಳಿಸಿಕೊಟ್ಟಿದ್ದರು ಎಂಬುದನ್ನು ಹೇಳಲು ನನಗೆ ಯಾವ ಮುಜುಗರವೂ ಇಲ್ಲ. ಆದರೆ ಕೋಣದ ಸಿಕ್ಕಿದ ತಕ್ಷಣ ಸಮಸ್ಯೆಯೆಲ್ಲವೂ ಪರಿಹಾರ ಕಂಡಿರಲಿಲ್ಲ. ನೀರಿಗೆ ಬಿದ್ದ ಕೋಣ ಸಿಕ್ಕಿದ್ದರೂ, ಸೋತು ಹೋದ ಕೋಣನ ಹೆಗಲ ಮೇಲೆ ನೊಗ ಇಡುವ ಧೈರ್ಯ ಬರಬೇಕಾದರೆ ಮತ್ತೆ 10-12 ದಿನಗಳೇ ಸಂದು ಹೋದವು. ಬೆಳೆದು ನಿಂತ ಅಗೆಬೆದೆಗಳು ಗಂಟುಬೀಳ ತೊಡಗಿದವು. ಕೊನೆಗೂ ನಟ್ಟಿಯೆಂಬ ಶಾಸ್ತ್ರವನ್ನು ಮುಗಿಸುವಾಗ ಎರಡು ವಾರಗಳು ತಡವಾಗಿ ಆ ವರ್ಷದ ಅವರ ಸಾಗುವಳಿಯ ಫಸಲಿನ ಮೇಲೇನೇ ಹೊಡೆತಬಿತ್ತು. ಆದರೆ ಆ ಸಜ್ಜನಿಕೆಯ ಯುವಕರಿಂದಾಗಿ ಕೋಣದ ಮೇಲಿನ ಗಂಟು ವಾರಾಹಿ ಪಾಲಾಗುವುದು ತಪ್ಪಿತು. ಆರ್ಹೂಡಿ ಹೊಟ್ಟುಸುಟ್ಟು ಮಾಡಿದ ಸಾಗುವಳಿಯ ವಾರ್ಷಿಕ ದೀಕ್ಷೆ ಈಡೇರಿತ್ತು.