Daily Archives: January 4, 2014

AAP ಮತ್ತು ಕಮ್ಯುನಿಷ್ಟರು : ಮಾರ್ಕ್ಸ್ ಯಾವಾಗಲೂ ಸರಿ

– ಬಿ.ಶ್ರೀಪಾದ ಭಟ್

“ಬಂಡವಾಳಶಾಹಿಯು ಎಷ್ಟೇ ಆಧುನಿಕಗೊಂಡರೂ ಅದು ಮತ್ತೆ ಫ್ಯಾಂಟಸಿ ಮತ್ತು ಪುರಾತನ ಆಚರಣೆಗಳಿಂದ,ಮಿಥ್‌ಗಳಿಂದ ತೊಳೆಯಲ್ಪಡುತ್ತದೆ.ಅದು ತಾನು ಸಾಧಿಸಿದ ಅಭಿವೃದ್ಧಿಯ ಕುರಿತಾಗಿ ಎಷ್ಟೇ ಜಂಬಪಟ್ಟರೂ ಕಡೆಗೆ ಅದು ತನ್ನ ಸ್ಥಾನದಲ್ಲಿ ಪ್ರಸ್ತುತವಾಗಿ ಉಳಿಯಲು ಪ್ರತಿಕ್ಷಣ Karl-Marxಹೋರಾಡಬೇಕಾಗುತ್ತದೆ. ಕಡೆಗೆ ಬಂಡವಾಳಶಾಹಿಯ ಮಿತಿ ಬಂಡವಾಳಶಾಹಿಯೇ. ತನ್ನ ವರ್ತಮಾನವನ್ನು ಪುನಸೃಷ್ಟಿಸಲು ವಿಫಲವಾಗುವ ಈ ಬಂಡವಾಳಶಾಹಿಯು ಭವಿಷ್ಯವನ್ನು ಸೃಷ್ಟಿಸಲು ಸಹ ಸಂಪೂರ್ಣವಾಗಿ ವಿಫಲವಾಗುತ್ತದೆ.” -ಕಾರ್ಲ ಮಾರ್ಕ್ಸ

7 ನೇ ಅಕ್ಟೋಬರ್ 1862 ರಂದು ಲಂಡನ್‌ನಿಂದ ಕಾರ್ಲ ಮಾರ್ಕ್ಸ ತನ್ನ ಸ್ನೇಹಿತ ಏಂಗೆಲ್ಸ್‌ಗೆ ಬರೆದ ಪತ್ರದ ಸಾರಾಂಶ:

Dear Engels,

The  landlord  came to see me on Monday and told me that, after having forborne so long, he would hand things over to his  land agent, unless I paid him within the shortest possible time. And that means putting the  broker  in. I likewise — oddly enough on the same day — got a final demand for the rates, as well as letters from the  épiciers, most of them acquainted with the  landlord, threatening to prosecute me and withhold  provisions.
Might you perhaps be able to do something in this way, using Borkheim as  escompteur  so as to stave off the crisis? Of the £10, I paid 6 to the piano man, a nasty brute who wouldn’t have hesitated to bring me before the  County Court. With 2 of the pounds I redeemed things that were in pawn and put what was left at my wife’s disposal.
I assure you that if it wasn’t for  family difficulties, I would far rather move into a  model lodging house than be constantly squeezing your purse.
Salut.
Your
K. M.

ಇದು ಏನನ್ನು ಹೇಳುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ.

ಏಕೆಂದರೆ ಮೇಲಿನ ಮಾತುಗಳೆಲ್ಲ ನೆನಪಾಗಲು ಕಾರಣ ಇತ್ತೀಚಿನ ಆಮ್ ಆದ್ಮಿ ಪಕ್ಷದ ಗೆಲುವಿನ ನಂತರ ಬಹುತೇಕ ಜನರು ಮಾರ್ಕ್ಸಿಸ್ಟರನ್ನು, ಕಮ್ಯುನಿಷ್ಟ್ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ ಎಂದು ಗೆಳೆಯರೊಬ್ಬರು ವಿವರಿಸಿದರು. arvind-kejriwal-delhi-electionsಅದ್ಯಾಕೆ ಹೀಗೆ ಎಂದು ಪ್ರಶ್ನಿಸಿದಾಗ ಅದು ಹಾಗೆಯೇ, ಆಮ್ ಆದ್ಮಿ ಪಕ್ಷದ ಸರಳತೆ, ಕೇವಲ ಒಂದು ವರ್ಷದಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿದ ಆಮ್ ಆದ್ಮಿ ಪಕ್ಷ, ದಿನನಿತ್ಯ ಏರುತ್ತಿರುವ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಇವೆಲ್ಲವನ್ನು ಕಮ್ಯುನಿಷ್ಟರ ಕಳೆದ ಅರವತ್ತು ವರ್ಷಗಳ ಹೋರಾಟಕ್ಕೆ ಹೋಲಿಸುತ್ತ ಮಾರ್ಕ್ಸಿಸ್ಟರನ್ನು ಗೇಲಿ ಮಾಡಲಾಗುತ್ತಿದೆ, ಎಂದು ವಿವರಿಸುತ್ತಿದ್ದರು. ಇದು ನಿಜ. ಮೊನ್ನೆ ಕಿರಿಯ ಮಿತ್ರನೊಬ್ಬ ಕಮ್ಯುನಿಷ್ಟರನ್ನು ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದ. ಅವರನ್ನು ಹಳೇ ತಲೆಮಾರಿನವರು, ಜಡ್ಡುಗಟ್ಟಿದವರು ಎಂದು ಜರೆಯುತ್ತಿದ್ದ.

ಇನ್ನು “ಆಮ್ ಆದ್ಮಿ ಪಕ್ಷ”ಕ್ಕೆ ಬಂದರೆ ಇಂದು ಆ ಪಕ್ಷದ ನಾಯಕರ ಸರಳತೆ ಬಹಳಷ್ಟು ಪ್ರಶಂಸೆಗೊಳಗಾಗುತ್ತಿದೆ. ಇದು ಸಹಜವೇ. ಆ ಸರಳತೆ ಇಂದಿನ ತುರ್ತು ಅಗತ್ಯಗಳಲ್ಲೊಂದಾಗಿತ್ತು. ಆದರೆ ಆಮ್ ಆದ್ಮಿ ಪಕ್ಷವನ್ನು ಹೊಗಳುವ ಭರದಲ್ಲಿ ಕಮ್ಯುನಿಷ್ಟರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಟೀಕಿಸುತ್ತಿರುವವರಿಗೆ ಏನು ಹೇಳುವುದು? ಅವರ ಬಗ್ಗೆ ಮರುಕ ಹುಟ್ಟುತ್ತದೆ.

ಈ ಟೀಕಾಕಾರರು ಇಂಡಿಯಾದ ಕಮ್ಯುನಿಷ್ಟ್ ಪಕ್ಷಕ್ಕಾಗಿ, ಸಮತಾವಾದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಎಸ್.ವಿ.ಘಾಟೆ, ಪೂಚಲಪಲ್ಲಿ ಸುಂದರಯ್ಯ, ಮಾಕಿನೇನಿ ಬಸವಪುನ್ನಯ್ಯ, ಡಾಂಗೆ, ಬಿ.ಟಿ.ರಣದಿವೆ, ಎ.ಕೆ.ಗೋಪಾಲನ್, ದಾಮೋದರನ್, ಕ್ರಿಷ್ಣ ಪಿಳ್ಳೆ, ಪಿ.ಸಿ.ಜೋಶಿ, ಇನ್ನೂ ಮುಂತಾದ ಮಾರ್ಕ್ಸಿಸ್ಟ್ ನಾಯಕರನ್ನು ಮತ್ತೊಮ್ಮೆ ಅರ್ಥಪೂರ್ಣವಾಗಿ, ಸಮಗ್ರವಾಗಿ, ಸಾವಧಾನದಿಂದ ಅಧ್ಯಯನ ಮಾಡಲಿ. ಸಮಾಜವಾದದ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಈ ನಾಯಕರು ಎಂತಹ ಆದರ್ಶವಾದಿಗಳು. ಎಂತಹ ಸರಳ ಜೀವಿಗಳು. ಇವರು ಜೈಲಿಗೆ ಹೋಗಿ ಬಂದದ್ದು ಎಷ್ಟು ಸಲವೋ, ಪೋಲೀಸರ ಏಟು ತಿಂದದ್ದು ಎಷ್ಟು ಸಲವೋ ಲೆಕ್ಕವೇ ಇಲ್ಲ. ಎಲ್ಲವೂ ಆದರ್ಶ ಸಮಾಜದ ಕನಸಿಗಾಗಿ, ಸಮಾನತೆಗಾಗಿ. ವೈಯುಕ್ತಿಕ ಬದುಕಿಗಾಗಿ ಕೂಡಿಟ್ಟದ್ದು ಇಲ್ಲವೇ ಇಲ್ಲ. ನಿಸ್ವಾರ್ಥವಾಗಿ ಬದುಕಿದರು. Manik_Sarkarಇದನ್ನು ಅರಿಯದೆ ಕಳೆದ ಅರವತ್ತು ವರ್ಷಗಳಲ್ಲಿ ಕಮ್ಯನಿಷ್ಟರು ಏನು ಮಾಡಿದರು ಎಂದು ಪ್ರಶ್ನಿಸುವುದು ಅಮಾನವೀಯತೆ ಮತ್ತು ಮೂರ್ಖತನ. ಈ ಮಾನವತಾವಾದಿಗಳ ಪ್ರಾಮಾಣಿಕತೆ ಮತ್ತು ಸರಳತೆ ಇಂದಿಗೂ ಕಮ್ಯುನಿಷ್ಟ್ ಪಕ್ಷದಲ್ಲಿ ಜೀವಂತವಾಗಿದೆ. ಕೆಳ ಮಧ್ಯಮವರ್ಗದವರಂತೆ ಸರಳವಾಗಿ ಬದುಕುತ್ತಿರುವ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ತೊಂಬತ್ತರ ಇಳಿ ವಯಸ್ಸಿನಲ್ಲಿ ರಿಕ್ಷಾದಲ್ಲಿ ಅಡ್ಡಾಡುವ ಕೇರಳದ ಮಾಜಿ ಮುಖ್ಯಮಂತ್ರಿ ಅಚ್ಯತನಂದನ್ ಇಂದಿಗೂ ಜ್ವಲಂತ ಸಾಕ್ಷಿ. ಗುಜ್ರಾಲ್ ಸರ್ಕಾರದಲ್ಲಿ ದೇಶದ ಗೃಹ ಮಂತ್ರಿಯಾಗಿದ್ದ ಇಂದ್ರಜಿತ್ ಗುಪ್ತ ವಾಸಿಸುತ್ತಿದ್ದದ್ದು ಔಟ್ ಹೌಸ್‌ನಲ್ಲಿ. ಇಂತಹ ನೂರಾರು ಉದಾಹರಣೆಗಳಿವೆ. ಇಂದಿಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನ, ಆತನ ಕಾರ್ಯಕರ್ತರ ಮಾಸಿಕ ವೇತನ ತೀರಾ ಕಡಿಮೆ. ಆ ವೇತನವನ್ನು ಬರೆಯಲು ಕೂಡಾ ನಾಚಿಕೆ ಮತ್ತು ಕೀಳರಿಮೆ ಉಂಟಾಗುತ್ತದೆ. ತಿಂಗಳಿಗೆ ಅರವತ್ತು, ಎಪ್ಪತ್ತು ಲಕ್ಷದಷ್ಟು ಸಂಬಳಗಳನ್ನು ತೆಗೆದುಕೊಳ್ಳುವ ಜನ ತಿಂಗಳಿಗೆ ಕವಡೆಯಷ್ಟನ್ನೂ ಕೂಡಿಡದ, ಪ್ರತಿ ತಿಂಗಳೂ ಬಾಡಿಗೆಗಾಗಿ, ವಿದ್ಯುತ್ ಬಿಲ್‌ಗಾಗಿ, ರೇಷನ್‌ಗಾಗಿ ಕಷ್ಟಪಡುವ ಈ ಪ್ರಾಮಾಣಿಕ ಹೋರಾಟಗಾರರನ್ನು ಟೀಕಿಸುವುದು ನಿಜಕ್ಕೂ ಅವಿವೇಕತನ ಮತ್ತು ಜೀವವಿರೋಧಿ ವರ್ತನೆ.

ಕಮ್ಯುನಿಷ್ಟ್ ಸರ್ಕಾರಗಳ ಸಾಧನೆಗಳೇನು, ಅವರು ಮಾಡಿದ್ದೇನು ಅದನ್ನೆಲ್ಲ ಅಕಡೆಮಿಕ್ ಆಗಿಯೇ ಚರ್ಚಿಸಬೇಕಾಗುತ್ತದೆ. ರಸ್ತೆಯ ಮೇಲಲ್ಲ. ಇಲ್ಲಿ ಅವರು ಅನೇಕ ಬಾರಿ ಸೋತಿದ್ದಾರೆ, ಕೆಲವು ಕಡೆ ಗೆದ್ದಿದ್ದಾರೆ. ಅದನ್ನು ಯಾವುದಕ್ಕೆ ಮಾನದಂಡವಾಗಿ ಬಳಸಗಾಗುತ್ತದೆ?

ಇನ್ನು ಕಮ್ಯುನಿಷ್ಟರು ಕಾರ್ಮಿಕರಿಗೆ ಮೋಸ ಮಾಡಿದರು, ಅವರನ್ನು ಬೀದಿಗೆ ತಳ್ಳಿದರು ಎಂದು ಅರ್ಥಹೀನವಾಗಿ ವಾದಿಸುವವರು ದಯವಿಟ್ಟು ನನ್ನೊಂದಿಗೆ ಮಾತನಾಡಿ. ಏಕೆಂದರೆ ಕಳೆದ ಇಪ್ಪತ್ತು ವರ್ಷಗಳ ಕಾಲ ಮ್ಯಾನೇಜ್‌ಮೆಂಟ್ ಮತ್ತು ಕಾರ್ಮಿಕರೊಂದಿಗೆ ಕೆಲಸ ಮಾಡಿರುವ ನನ್ನಂತಹವರಿಗೆ ಇದರ ಪೂರ್ಣ ಪಾಠಗಳು, ವಿವರಗಳು ಸಂಪೂರ್ಣವಾಗಿ ಗೊತ್ತು. ನಾವೆಲ್ಲ ಇದರ ಭಾಗಿಗಳು ಮತ್ತು ಸಾಕ್ಷೀದಾರರು. ಅನಗತ್ಯವಾಗಿ ತಿಳುವಳಿಕೆ ಇಲ್ಲದೆ ಟೀಕಿಸುವವರು ತಮ್ಮನ್ನು ತಾವು ದಯನೀಯವಾಗಿ ಬಯಲುಗೊಳಿಸಿಕೊಳ್ಳುತ್ತಾರೆ. ಏಕೆಂದರೆ ಇವರು ನೆನಪಿಡಬೇಕಾಗಿರುವುದು ಸತ್ಯಕ್ಕೆ ನೂರಾರು ಮುಖಗಳಿರುತ್ತವೆ. ನಾನು ನೋಡಿದ್ದು, ಕಂಡಿದ್ದಷ್ಟೇ ಸತ್ಯವಲ್ಲ. ಇದು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಹೌದು ಕಮುನಿಷ್ಟರ ಜಡತ್ವವನ್ನು ವಿಮರ್ಶಿಸೋಣ. ಅವರ ಹಲವಾರು ಕೂಪಮಂಡೂಕತೆಯ, ಓಬಿರಾಯನ ಕಾಲದ ಚಿಂತನೆಗಳು ಇಂದು ಚರ್ಚೆಗೊಳಬೇಕಾಗಿವೆ. ನನ್ನ ಅನೇಕ ಕಾಮ್ರೇಡ್ ಮಿತ್ರರು ಇದಕ್ಕೆ ಹಿಂಜರಿಯುತ್ತಿಲ್ಲ.

“Why Marx is right ?” ಎನ್ನುವ ತನ್ನ ಪುಸ್ತಕದಲ್ಲಿ ಚಿಂತಕ ಟೆರಿ ಈಗಲ್ಟನ್ ಹೇಳುತ್ತಾನೆ:

“ಮಾರ್ಕ್ಸವಾದದ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಪ್ರಚಲಿತವಿರುವ ಪ್ರಮುಖ ಟೀಕೆ ’ಮಾರ್ಕ್ಸವಾದದ ಕಾಲ ಮುಗಿದಿದೆ. ಇದು ತನ್ನ ಪ್ರಸ್ತುತತೆಯನ್ನು ಅಷ್ಟೋ ಇಷ್ಟೋ ಉಳಿಸಿಕೊಂಡಿರುವುದು ಕಾರ್ಖಾನೆಗಳ ಆ ಗಲೀಜಿನ ಇಕ್ಕಟ್ಟಾದ ವರ್ಕಶಾಪ್‌ಗಳಲ್ಲಿ, ಹಸಿವಿನ ಆಕ್ರಂದತೆಯಲ್ಲಿ, ಕಲ್ಲಿದ್ದಲಿನ ಕಗ್ಗತ್ತಲೆಯ ಗಣಿಗಾರಿಕೆಯಲ್ಲಿ, ಅಲ್ಲಿನ ಚಿಮ್ನಿಗಳು ಹೊರಸೂಸುವ ದಟ್ಟವಾದ ಕಪ್ಪು ಹೊಗೆಯಲ್ಲಿ, ವಿಶಾಲವಾಗಿ ವ್ಯಾಪಿಸಿಕೊಂಡಿರುವ ದಾರಿದ್ರ್ಯತೆಯಲ್ಲಿ, ಕಡೆಗೆ ಆದರೆ ಪ್ರಮುಖವಾಗಿ ದುಡಿಯುವ ವರ್ಗಗಳ ಬಳಿ ಮಾತ್ರ. ಆದರೆ ಮೇಲ್ಮುಖವಾಗಿ ಅತ್ಯಂತ ಕಿಪ್ರಗತಿಯಲ್ಲಿ ಬೆಳೆಯುತ್ತಿರುವ ವರ್ಗರಹಿತ ವ್ಯವಸ್ಥೆಯಲ್ಲಿ, ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಸಮಾಜದಲ್ಲಿ, ಕೈಗಾರಿಕೋತ್ತರದ ಇಂದಿನ ಕಾಲಘಟ್ಟದಲ್ಲಿ ಈ ಮಾರ್ಕ್ಸವಾದವು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಅದರ ಪ್ರಭಾವ ಶೂನ್ಯ. ಆದರೆ ಕೇವಲ ಕರ್ಮಠ ಎಡಪಂಥೀಯ ಚಿಂತನೆಗಳಲ್ಲಿ ಮುಳುಗಿರುವವರಲ್ಲಿ ಮಾತ್ರ ಈ ಮಾರ್ಕ್ಸವಾದದ ಕುರಿತಾದ ಹಪಾಹಪಿತನವಿದೆ. ಇವರಿಗೆ ಜಗತ್ತು ನಾಗಲೋಟದಲ್ಲಿ ಬೆಳೆಯುತ್ತ ಮತ್ತೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತಿರುವುದರ ವಾಸ್ತವತೆಯೇ ಅರಿವಿಲ್ಲ.’

“ಮಸಲ ಮೇಲಿನ ಮಾತುಗಳನ್ನು ನಂಬಬಹುದಾದರೆ ಇನ್ನು ಈ ಮಾರ್ಕ್ಸವಾದದ ಕಾಲ ಮುಗಿದುಹೋಗಿದೆ ಎನ್ನುವ ಚಿಂತನೆಗಳು, ಪ್ರಚಾರಗಳು ನಮ್ಮ ಎಲ್ಲಾ ಮಾರ್ಕ್ಸಿಸ್ಟರ ಕಿವಿಗೆ ಅತ್ಯಂತ ಸುಶ್ರಾವ್ಯವಾದ ಸಂಗೀತದಂತೆ ಕೇಳಿಸತೊಡಗಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಇನ್ನಾದರೂ ಈ ಮಾರ್ಕ್ಸಿಸ್ಟರು ಪಿಕೆಟಿಂಗ್‌ಗಳು, ಪ್ರತಿಭಟನೆಗಳು, ಹರತಾಳಗಳನ್ನು ಮಾಡುವ ಕರ್ಮಕಾಂಡಕ್ಕೆ ಸಂಪೂರ್ಣ ವಿರಾಮ ಕೊಟ್ಟು ಕಂಗಾಲಾದ ಸ್ಥಿತಿಯಲ್ಲಿರುವ ತಮ್ಮ ಮನೆಗಳಿಗೆ ಮರಳಿ ಹೆಂಡತಿ ಮಕ್ಕಳೊಂದಿಗೆ ಸಂಜೆಯ ವೇಳೆಯ ಪ್ರಶಾಂತತೆಯನ್ನು ಅನುಭವಿಸಬಹುದು. ಆ ಕಮಿಟಿ ಮೀಟಿಂಗ್‌ಗಳಿಗೆ ಸಂಪೂರ್ಣ ತಿಲಾಂಜಲಿಯನ್ನು ಕೊಡಬಹುದು. ಮಾರ್ಕ್ಸಿಸ್ಟರು ತಮ್ಮನ್ನು ಈ ಮಾರ್ಕ್ಸಿಸ್ಟರ ಸ್ಥಿತಿಯಿಂದ, ಬಂಧನದಿಂದ ಬಿಡುಗಡೆಯನ್ನು ಬಯಸಿದ್ದರು. ಏಕೆಂದರೆ ಈ ಮಾರ್ಕ್ಸವಾದದ ರೀತಿಯು ಬುದ್ಧಿಸಂಗಿಂತಲೂ, ಬಂಡವಾಳವಾದದ ರೀತಿಗಿಂತಲೂ ಸಂಪೂರ್ಣ ಭಿನ್ನ. ಒಂದು ರೀತಿ ಈ ಮಾರ್ಕ್ಸಿಸ್ಟರು ವೈದ್ಯರ ತರಹ. ಈ ವೈದ್ಯರುಗಳು ಮೆಡಿಸಿನ್ ಅನ್ನು ಅಧ್ಯಯನ ಮಾಡಿ ಅದನ್ನು ತಮ್ಮ ಬಳಿಗೆ ಬಂದಂತಹ ರೋಗಿಗಳ ಮೇಲೆ ಪ್ರಯೋಗಿಸಿ ಅವರ ಕಾಯಿಲೆಗಳನ್ನು ಗುಣಪಡಿಸಿದ ನಂತರ ಆ ರೋಗಿಗೆ ಆ ಸದರಿ ವೈದ್ಯರ ಅವಶ್ಯಕತೆ ಇರುವುದಿಲ್ಲ ಮತ್ತು ವೈದ್ಯರೊಂದಿಗಿನ ರೋಗಿಯ ಸಂಬಂಧ ಮುಗಿದುಹೋಗುತ್ತದೆ. ಅದೇ ಮಾದರಿ ಈ ಮಾರ್ಕ್ಸಿಸ್ಟರದ್ದು ಸಹ. ಒಮ್ಮೆ ಗುರಿಗಳನ್ನು ತಲುಪಿದ ನಂತರ ಇವರ ಅವಶ್ಯಕತೆಯಿರುವುದಿಲ್ಲ. ಈ ಅವಶ್ಯಕತೆಯೇ ಇಲ್ಲವೆಂದಾದ ಮೇಲೆ ಚೆಗವೇರಾನ ಪೋಸ್ಟರುಗಳ ಅವಶ್ಯಕತೆಯೂ ಇರುವುದಿಲ್ಲ.”

“ಮಾರ್ಕ್ಸವಾದದ ಕುರಿತಾಗಿ ಎರಡನೇ ಪ್ರಮುಖ ಟೀಕೆ ’ಮಾರ್ಕ್ಸಿಸಂ ತನ್ನ ಪಠ್ಯಗಳಲ್ಲಿ, ಬೌದ್ಧಿಕ ಚಿಂತನೆಗಳ ಮಟ್ಟದಲ್ಲಿ ಅತ್ಯಂತ ಪ್ರಖರವಾಗಿಯೂ, ಪ್ರಗತಿಪರವಾಗಿಯೂ, ಆಕರ್ಷಕವಾಗಿಯೂ ಮಿಂಚುತ್ತಿರುತ್ತದೆ. ಆದರೆ ವ್ಯಾವಹಾರಿಕವಾಗಿ, ಕಾರ್ಯರೂಪದಲ್ಲಿ ಅದು ಭಯೋತ್ಪಾದನೆ ರೂಪದಲ್ಲಿ, ಊಹಿಸಲಾಗದ ಮಟ್ಟದಲ್ಲಿ ಬಲತ್ಕಾರದ ಪ್ರಕ್ರಿಯೆಯಲ್ಲಿ ನಿರಂತರವಾಗಿರುತ್ತದೆ. ಮಾರ್ಕ್ಸಿಸಂ ಎಂದರೆ ಸ್ವಾತಂತ್ಯ್ರಹೀನ ಸ್ಥಿತಿ. ಪಶ್ಚಿಮದ ಬುದ್ಧಿಜೀವಿಗಳಿಗೆ, ಅಧ್ಯಾಪಕರಿಗೆ ಈ ಮಾರ್ಕ್ಸಿಸಂ ಅಪ್ಯಾಯಮಾನವಾಗಿಯೂ, ಒಂದು ರೀತಿಯಲ್ಲಿ ಅಂಗೈಯ್ಯಲ್ಲಿನ ಅರಮನೆಯಂತೆ ಕಂಗೊಳಿಸುತ್ತಿರುತ್ತದೆ. ಆದರೆ ಲಕ್ಷಾಂತರ ಬಡವರಿಗೆ, ಕೆಳವರ್ಗಗಳಿಗೆ ಮಾರ್ಕ್ಸಿಸಂ ದಾರಿದ್ರ್ಯದ, ಚಿತ್ರಹಿಂಸೆಯ, ಬಲತ್ಕಾರದ ಶೋಷಣೆಯ ಸ್ಥಿತಿಯಾಗಿರುತ್ತದೆ. ಇದನ್ನು ಅರಿತೂ ಮಾರ್ಕ್ಸಿಸಂ ಅನ್ನು ಬೆಂಬಲಿಸುತ್ತಾರೆಂದರೆ ಅವರೆಲ್ಲ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆಂದೇ ಅರ್ಥ. ಇವರು ಅಭಿವೃದ್ಧಿಪರವಾದ ಮಾರ್ಕೆಟ್ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ತಯಾರಿದ್ದಾರೆಂತಲೇ ಅರ್ಥ.’

“ಒಂದಂತೂ ನಿಜ. ಆಧುನಿಕ ಬಂಡವಾಳಶಾಹಿ ಸಮಾಜವು ಮಾವೋನ ಚೀನಾದಂತೆ, ಸ್ಟಾಲಿನ್ನಸ ಸೋವಿಯತ್ ಒಕ್ಕೂಟದಂತೆ ಅಸಹ್ಯ ಹುಟ್ಟಿಸುವ ಜೀತದ, ಕ್ರೌರ್ಯದ, ಹಿಂಸೆಯ ಫಲರೂಪ. ಈ ಬಂಡವಾಳಶಾಹಿ ವ್ಯವಸ್ಥೆಯು ಸಹ ರಕ್ತ ಮತ್ತು ಕಣ್ಣೀರಿನಿಂದ ಬಂಧಿಸಲ್ಪಟಿದೆ. 19ನೇ ಶತಮಾನದ ಅಂತ್ಯದ ವೇಳೆಗೆ ಲಕ್ಷಾಂತರ ಇಂಡಿಯನ್ನರು, ಆಫ್ರಿಕನ್ನರು, ಕೊರಿಯನ್ನರು, ರಶ್ಯನ್ನರು ಹಸಿವಿನಿಂದ, ದಾರಿದ್ರ್ಯದಿಂದ, ಕ್ಷಾಮದಿಂದ ಸತ್ತಿದ್ದರೆ ಅದು ಈ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯಿಂದ. ನಿಜ ಈ ಮುಕ್ತ ಆರ್ಥಿಕ ವ್ಯವಸ್ಥೆಯ ಬಂಡವಾಳಶಾಹಿ ಸ್ವರೂಪವು ಕೆಲವು ವಲಯಗಳಲ್ಲಿ ಧೃಡತೆಯನ್ನು, ಅಭಿವೃದ್ಧಿಯನ್ನು, ಸುಖದ ಅನುಭವವನ್ನು ತುಂದುಕೊಟ್ಟಿದೆ. ಅದೂ ಸಹ ಮಾವೋನ ಚೀನಾದಂತೆ, ಸ್ಟಾಲಿನ್ನನ ಸೋವಿಯತ್‌ನಂತೆ. ಆದರೆ ಇದನ್ನು ಮನುಷ್ಯರ ಪ್ರಾಣದ ಮೇಲೆ ಒತ್ತೆ ಇಟ್ಟು ಸಾಧಿಸಲಾಯಿತು. ಇವೆರೆಡೂ ಸಿದ್ಧಾಂತಗಳು ನರಮೇಧದ, ಕ್ಷಾಮದ ಜೊತೆಜೊತೆಗೆ ಸುಖದ ಲೋಲುಪ್ತತೆಯನ್ನು ಹುಟ್ಟುಹಾಕಿತು. ಇದರ ಫಲವೇನೆಂದರೆ ಮುಂದಿನ ವರ್ಷಗಳಲ್ಲಿ ಇಡೀ ವಿಶ್ವವೇ ನಾಶವಾಗುವ ಸ್ಥಿತಿಗೆ ತಲುಪಿದೆ.

“ಅತ್ಯಂತ ಕಳೆಗೆಟ್ಟ, ಶಕ್ತಿಹೀನ ಸ್ಥಿತಿಯಲ್ಲಿ ಸೋಶಿಯಲಿಸಂನ್ನು ಸಾಧಿಸಲಾಗುತ್ತದೆ ಎಂದು ಮಾರ್ಕ್ಸ ಊಹಿಸಿರಲಿಲ್ಲ. ಅಷ್ಟೇಕೆ ಬೋಲ್ಷೆವಿಕ್ ನಾಯಕತ್ವವಾಗಲೀ, ಲೆನಿನ್, ಟ್ರಾಟಸ್ಕಿ ತರಹದ ನಾಯಕರಿಗೂ ಸಹ ಈ ಮಾದರಿಯ ಕಮ್ಯುನಿಸಂನ್ನು ಊಹಿಸಿರಲಿಲ್ಲ. ಅಲ್ಪ ಪ್ರಮಾಣದ ಸಂಪತ್ತನ್ನು ಎಲ್ಲರಿಗೂ ಒದಗುವಂತೆ ಪುನರೂಪಿಸುವ ಪ್ರಕ್ರಿಯೆಯೇ ಅಸಮರ್ಥವಾದದ್ದೆಂದು ಮಾರ್ಕ್ಸವಾದಿಗಳಿಗೆ ಅರಿವಾಗಲಿಲ್ಲ. ಸ್ವತಃ ಮಾರ್ಕ್ಸ ಹೇಳಿದಂತೆ ಇಂತಹ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಸಾಧಿಸುವುದೆಂದರೆ ಹಳೇ ಯುಗದ ಹೆಳವಂಡಗಳು ಪುನಃ ಜನ್ಮ ತಾಳಿದಂತಷ್ಟೇ. ಇದರಿಂದ ಕ್ಷಾಮವು ಸಹ ಸಮಾಜವಾದದ ಹೆಸರಿನಲ್ಲಿ ಸಾರ್ವಜನೀಕರಣಗೊಳ್ಳುತ್ತದೆ. ಕೆಳಮಟ್ಟದಿಂದ ಸಂಪತ್ತನ್ನು ಕ್ರೋಢೀಕರಿಸುವುದೆಂದರೆ ಲಾಭದ ತುತ್ತತುದಿಯನ್ನು ತಲುಪುವುದಷ್ಟೆ. ಈ ತುತ್ತತುದಿಯನ್ನು ಯಾವ ವೇಗದಲ್ಲಿ ಸಾಧಿಸುತ್ತೇವೆಯೋ ಅದೇ ವೇಗದಲ್ಲಿ ನಾವು ಲಕ್ಷಾಂತರ ದಾರಿದ್ರ್ಯವನ್ನು ಹುಟ್ಟುಹಾಕಿರುತ್ತೇವೆ. ತಳಮಟ್ಟದಿಂದ ಆರ್ಥಿಕತೆಯ ಪ್ರಗತಿಯನ್ನು ಸಾಧಿಸುವುದೆಂದರೆ ಅದು ಅತ್ಯಂತ ನೋವಿನ, ಅಪಾರ ಶ್ರಮದ ಕೆಲಸ. ಈ ಕಷ್ಟ, ಕಾರ್ಪಣ್ಯಗಳಿಗೆ ಬಹುಸಂಖ್ಯಾತ ಜನತೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ಇದನ್ನು ಪ್ರಜಾಪ್ರಭುತ್ವದ ತಳಹದಿಯಲ್ಲಿ, ಸಮಾಜವಾದದ ನೆಲೆಯಲ್ಲಿ ಜನತೆಯು ಸ್ವಯಂಸೇವಕರಾಗಿ ಸಾಧಿಸಲು ವಿಫಲವಾದಾಗ ಪ್ರಭುತ್ವವು ಅಧಿಕಾರಯುಕ್ತದ, ಉಕ್ಕಿನ ಹಿಡಿತದ ಶೈಲಿಯಲ್ಲಿ ಸಾಧಿಸಲು ಮುಂದಾಗುತ್ತದೆ. ರಷ್ಯಾದ ಬೋಲ್ಷೆವಿಕ್ ವ್ಯವಸ್ಥೆಯನ್ನೇ ಮಿಲಿಟರೀಕರಣಗೊಳಿಸಿದ್ದು ಇದಕ್ಕೆ ಒಂದು ಉತ್ತಮ ಉದಾಹರಣೆ.”

ಕಮ್ಯುನಿಷ್ಟರನ್ನು ಟೀಕಿಸುವವರು ಟೆರಿ ಈಗಲ್ಟನ್ನನ ಮೇಲಿನ ಪುಸ್ತಕವನ್ನು ಖಂಡಿತ ಓದಲೇಬೇಕು. ಕನಿಷ್ಟ ಪೂರ್ವಗ್ರಹಗಳಿಂದಾದರೂ ಹೊರಬರಬಹುದು. ನಂತರ ಮಾರ್ಕ್ಸನನ್ನು ಅಮೂಲಾಗ್ರವಾಗಿ, ಹೊಸ ನೋಟದಲ್ಲಿ ಓದಲಿ.

ನಿಜ. ಜಾಗತೀಕರಣದ ನಾಗಲೋಟದ ಇಂದಿನ ಸಂದರ್ಭದಲ್ಲಿ ನಮ್ಮ ಎಡಪಂಥೀಯರು ಮಾರ್ಕ್ಸವಾದವನ್ನು ಹೊಸ ನೋಟದಲ್ಲಿ, ಹೊಸ ದಿಕ್ಕಿನಲ್ಲಿ ಅರ್ಥೈಸಬೇಕಾಗಿತ್ತು. ತಮ್ಮ ಹಳೆಯ ನುಡಿಕಟ್ಟುಗಳನ್ನು ಬದಲಿಸಿಕೊಳ್ಳಬೇಕಾಗಿತ್ತು. ಈ ಹೊಸ ನುಡಿಕಟ್ಟುಗಳು ಮಾರ್ಕ್ಸವಾದದಲ್ಲಿ ತನಗೆ ತಾನೇ ತೆರೆದುಕೊಳ್ಳುತ್ತವೆ. ಆದರೆ ನಮ್ಮ ಒಳಗಣ್ಣುಗಳು ತೆರೆದುಕೊಳ್ಳಬೇಕು. ಆದರೆ ನಮ್ಮ ಕಮ್ಯುನಿಷ್ಟರು ಇಂದು ತಮ್ಮ ಒಳಗಣ್ಣುಗಳನ್ನು ತೆರೆಯಲು ನಿರಾಕರಿಸುತ್ತಿರುವುದು Globalizationಒಂದು ಕಾಲದಲ್ಲಿ ಕಮ್ಯುನಿಷ್ಟರೊಂದಿಗೆ ಗುರುತಿಸಿಕೊಂಡಿದ್ದ ನಮ್ಮಂತಹವರಿಗೆ ನಿಜಕ್ಕೂ ವ್ಯಥೆಯೆನಿಸುತ್ತದೆ. ಏಕೆಂದರೆ ಜಾಗತೀಕರಣದ ಪ್ರಲೋಭನೆಗಳು ನಮ್ಮ ಬದುಕಿನ ನೈತಿಕತೆ ಹಾಳು ಮಾಡಿರುವುದು ನಿಜ. ಏಕೆಂದರೆ ನಾವೆಲ್ಲ ಈ ಜಾಗತೀಕರಣವನ್ನು ಕೊಳ್ಳುಬಾಕ ಸಂಸ್ಕೃತಿಗೆ ತೆರೆದ ಹೆಬ್ಬಾಗಿಲೆಂದು ತಪ್ಪಾಗಿ ಪರಿಗಣಿಸಿ ಹಿಗ್ಗಾಮುಗ್ಗಾ ಮುಕ್ಕತೊಡಗಿದ್ದೇ ಈ ಅಜೀರ್ಣಕ್ಕೆ ಕಾರಣ. ಆದರೆ ಇದೇ ಜಾಗತೀಕರಣವನ್ನು ಬಳಸಿಕೊಂಡು ನಮ್ಮ ತಳಸಮುದಾಯಗಳಲ್ಲಿ ಆರ್ಥಿಕವಾಗಿ ಬಲು ದೊಡ್ಡ ಚಲನಶೀಲತೆಯನ್ನು ತಂದುಕೊಡಬಹುದು, ಅಸ್ಪೃಶ್ಯತೆಯನ್ನು ಸಹ ಕ್ರಮೇಣವಾಗಿ ಅಳಸಿಹಾಕಬಹುದು ಎನ್ನುವ ಸಾಧ್ಯತೆಗಳನ್ನು ಕುರುಡಾಗಿ ನಿರಾಕರಿಸುತ್ತಿದ್ದಾರೆ ನಮ್ಮ ಎಡಪಂಥೀಯರು. ಮರಳಿ ಇದು ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂದೆಲ್ಲ ಹೇಳುತ್ತಿದ್ದಾರೆ, ಆದರೆ ಇದು ನಿಜಕ್ಕೂ ತಪ್ಪು. ಏಕೆಂದರೆ ಈಗಲ್ಟನ್ ಹೇಳುವಂತೆ ಭವಿಷ್ಯದಲ್ಲಿ ಉಂಟಾಗುವ ಬದಲಾವಣೆಯು ಇಂದಿನ ವ್ಯವಸ್ಥೆಯೊಂದಿಗೆ ಸಂಪೂರ್ಣ ಕಡಿತಗೊಂಡಿರುವಂತಾದ್ದಲ್ಲ ಅಥವಾ ಇಂದಿನ ವ್ಯವಸ್ಥೆಯ ಮುಂದುವರಿಕೆಯೂ ಅಲ್ಲ. ಅನೇಕ ಬಾರಿ ಮಾರ್ಕ್ಸ ಕಂಡುಕೊಂಡಿರುವಂತೆ “ಸಮಾಜವಾದವನ್ನು ಜಾರಿಗೊಳಿಸಬೇಕಾದರೆ ಮೊದಲು ಬಂಡವಾಳಶಾಹಿಯು ಚಾಲ್ತಿಯಲ್ಲಿರಬೇಕು”. ಇದನ್ನು ಜಗತ್ತಿನ ಯಾವುದೇ ಎಡಪಂಥೀಯ ರಾಜಕಾರಣಿಗಳು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ. ಅಷ್ಟೇಕೆ ನಮ್ಮ ಮಾರ್ಕ್ಸಿಸ್ಟರು ಆರ್ವೆಲ್‌ನ ಮಾಸ್ಟರ್ ಪುಸ್ತಕ “1948 1984″ ಕಾದಂಬರಿಯನ್ನು ಓದಲು ಸಹ ನಿರಾಕರಿಸುತ್ತಾರೆ!! ಅದು ವಿಚಿತ್ರ್ಯವೇ ಸರಿ!! ನೆನಪಿರಲಿ ಹೆಗೆಲ್‌ನ ಚಿಂತನೆಗಳಿಗೆ ಬಂಡಾಯವಾಗಿಯೇ ಮಾರ್ಕ್ಸ ಚಿಂತಿಸಿದ್ದಲ್ಲವೇ ? ಆದರೆ ಹೆಗೆಲ್‌ನ “antithesis dialectics” ಅನ್ನು ಇಂದಿಗೂ ಚರ್ಚಿಸಲಾಗುತ್ತಿದೆ. ಮಾರ್ಕ್ಸನ ಮೆಟೀರಿಯಲಿಸ್ಟಿಕ್ ಫಿಲಾಸಫಿ ಮತ್ತು ಹೆಗೆಲ್‌ನ ಆಧ್ಯಾತ್ಮದ ಕಾನ್ಸೆಪ್ಷನ್ ಎರಡನ್ನೂ ನಿರಾಕರಿಸಲು ಸಾಧ್ಯವಿಲ್ಲವಲ್ಲವೇ??