Monthly Archives: December 2013

ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

[ವರ್ತಮಾನ.ಕಾಮ್‌ನ ಪ್ರಿಯ ಓದುಗರೇ,
ನಮ್ಮ ಬಳಗದಿಂದ “ವರ್ತಮಾನ.ಕಾಮ್‌ನ 2013 ವರ್ಷದ ವ್ಯಕ್ತಿ”ಯಾಗಿ ರಾಜ್ಯದ ನೈತಿಕ ಸಾಕ್ಷಿಪ್ರಜ್ಞೆಯಾಗಿ ಗುರುತಾಗಿರುವ ಮತ್ತು ಈ ನಾಡಿನಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ನೆಲೆಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠರನ್ನು ಆಯ್ಕೆ ಮಾಡಿದ್ದೇವೆ. ಇದು ಈ ವರ್ಷದ ಕೊನೆಯ ಲೇಖನ. ಇಂತಹ ಒಂದು ಧನ್ಯವಾದಪೂರ್ವಕ ಲೇಖನದಿಂದ ಈ ವರ್ಷಕ್ಕೆ ವಿದಾಯ ಹೇಳುತ್ತ, ಮತ್ತಷ್ಟು ಆಶಾವಾದ ಮತ್ತು ಕ್ರಿಯಾಶೀಲತೆಯಿಂದ ಹೊಸ ವರ್ಷವನ್ನು ಎದುರುಗೊಳ್ಳೋಣ. ಹಿರೇಮಠರಂತಹವರ ಕೆಲಸ ನಮ್ಮೆಲ್ಲರಲ್ಲೂ ಅಂತಹ ಸ್ಫೂರ್ತಿ ಮತ್ತು ಧೃಢನಿಶ್ಚಯ ಮೂಡಿಸಲಿ ಎಂದು ಆಶಿಸುತ್ತಾ…
ನಮಸ್ಕಾರ,
ರವಿ ಕೃಷ್ಣಾರೆಡ್ಡಿ]


ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

– ಬಿ.ಶ್ರೀಪಾದ ಭಟ್

“Because I am involved in mankind,
And therefore never send to know for whom the bell tolls;
It tolls for thee” ಎಂದು ಹೇಳಿದ ಕವಿ ಜಾನ್ ಡನ್‌ನ “for whom the bell tolls” ಸಾಲುಗಳನ್ನು ಉದಾಹರಿಸುತ್ತ ‘ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತದೆ? ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತದೆ?’ ಎಂದು “ಇಲ್ಲಿ ಯಾವನೂ ದ್ವೀಪವಲ್ಲ” ಎನ್ನುವ ತಮ್ಮ ಅದ್ಭುತ ಟಿಪ್ಪಣಿಯಲ್ಲಿ ಲಂಕೇಶ್ ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಅಂದು ಕಾಂಗ್ರೆಸ್ ಪಕ್ಷದ ಗುಂಡೂರಾವ್ ಅವರ ದುಷ್ಟ ಆಡಳಿತ ಕೊನೆಗೊಂಡು ಹೆಗಡೆಯ ಸರ್ಕಾರ ಅಧಿಕಾರದಲ್ಲಿತ್ತು. ಆದರೆ 1985 ರ ವೇಳೆಗೆ ಹೆಗಡೆ ಸರ್ಕಾರ ಸಹ ಹಾದಿ ತಪ್ಪತೊಡಗಿತ್ತು. ಆಗ ಕರ್ನಾಟಕದಲ್ಲಿ ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ಲಂಕೇಶ್ ಮೇಲಿನಂತೆ ಪ್ರಶ್ನಿಸಿದ್ದರು. ಮುಂದುವರೆದು ಲಂಕೇಶ್ “ಆತ್ಮವಿಲ್ಲದ ಆಡಳಿತ ನೀಡಬೇಡಿ” ಎಂದು ಹೇಳಿದ್ದರು. ಇಂದಿಗೂ ಈ ಟೀಕೆ ಟಿಪ್ಪಣಿ ಪ್ರಸ್ತುತ.

ಇಂದು ಬಿಜೆಪಿಯ ದುಷ್ಟ ಆಡಳಿತ ಕೊನೆಗೊಂಡು ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದಿನ ಹೆಗಡೆ ಸರ್ಕಾರದಂತೆಯೇ ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಹಳಿ ತಪ್ಪತೊಡಗಿದೆ. ನಾವೇನು ಮಾಡಬೇಕು?? ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಮ್ಮೆಲ್ಲರ ಪ್ರಕಾರ ಇದು ಶಾಂತಿಯ ಕಾಲ. ಕ್ರಾಂತಿ ಮುಗಿದಿದೆ. ಕಾಂಬುಜಿಗಳಿಗೆ (ಕಾಂಗ್ರೆಸ್ ಬುದ್ಧಿಜೀವಿಗಳು -ಚಂಪಾ ಹೇಳಿದ್ದು), ಮತ್ತು ಕಾಂಬುಜಿಗಳಾಗಲು ಬಾಗಿಲಲಿ ನಿಂತಿರುವ ಬಂಡಾಯದ ಅಂದಕಾಲತ್ತಿಲ್ ಸಾಹಿತಿಗಳಿಗೆ ಈ ಓಲಗದ ಸದ್ದು ಈಗ ಕೇಳಿಸುತ್ತಿಲ್ಲ !!

ನಮಗೂ ಕೇಳಿಸುತ್ತಿಲ್ಲ!! ಸಬ್ ಆರಾಮ್ ಹೈ!!

ಆದರೆ ಅಂದು ಬಳ್ಳಾರಿ ರಿಪಬ್ಲಿಕ್‌ನ ಸರ್ವಾಧಿಕಾರಕ್ಕೆ ಅಂತ್ಯ ಹಾಡಿ ಬಿಜೆಪಿ ಪಕ್ಷದ sr-hiremathಬೆನ್ನೆಲೆಬು ಮುರಿದು ಹಾಕಿದ ಎಸ್.ಆರ್. ಹಿರೇಮಠ್ ಅವರು ಈಗಲೂ ಸುಮ್ಮನೆ ಕುಳಿತಿಲ್ಲ. ಎಂಬತ್ತರ ದಶಕದ ಲಂಕೇಶ್ ಪತ್ರಿಕೆಯಂತೆ ಇಂದು ಸಹ ಅಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸೋಗಲಾಡಿ ಬುದ್ದಿಜೀವಿ ರಾಜಕಾರಣಿ ರಮೇಶ್ ಕುಮಾರ್‌ರಂತವರ ಬಣ್ಣ ಬಯಲು ಮಾಡುತ್ತಿದ್ದಾರೆ.

ಇಂದು ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಂತಿರುವ “ಎಸ್.ಆರ್. ಹಿರೇಮಠ್” ನಿಜಕ್ಕೂ ಈ ರಾಜ್ಯದ ವರ್ಷದ ವ್ಯಕ್ತಿ.


ಕೊನೆಗೆ, ದಕ್ಷಿಣ ಕನ್ನಡದಲ್ಲಿ ಎಲ್ಲಾ ಬಗೆಯ ಮೂಲಭೂತವಾದಿಗಳ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಮ್ರೇಡ್ ಮುನೀರ್ ಕಾಟಿಪಳ್ಳ ಮತ್ತವರ ಗೆಳೆಯರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕು. ಇವರ ಹೋರಾಟ ಒಂಟಿಧ್ವನಿಯಾಗಲು ಬಿಡಬಾರದು.  ಏಕೆಂದರೆ, ಲಂಕೇಶ್ ಹೇಳಿದಂತೆ, “No man is an island ಎನ್ನುವುದರ ಮೂಲಕ ಜಗತ್ತಿನ ಎಲ್ಲರ ಬದುಕು ತಳುಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊಂದಿರುವುದನ್ನು ಕವಿ ಸೂಚಿಸುತ್ತಾನೆ.”

ನಮಗೂ ಆ ಓಲಗದ ಸದ್ದು ಕೇಳಿಸುವಂತೆ ನಮ್ಮ ಪಂಚೇಂದ್ರಿಯಗಳು ಸದಾ ಕಾರ್ಯನಿರ್ವಹಿಸುತ್ತಿರಲಿ…

ಶರಮ್ ನಹೀ ಶರ್ಮ…

– ಸುಧಾಂಶು ಕಾರ್ಕಳ

ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಣ ಮುಖ್ಯ ಪಾತ್ರ ವಹಿಸಿರುವ ಅನುಮಾನಗಳು ದಟ್ಟವಾಗಿವೆ. ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿದ್ದ ಯು.ಆರ್. ಅನಂತಮೂರ್ತಿಯವರು davanagere-vc-fiascoಸುದ್ದಿ ಮಾಧ್ಯಮಗಳಿಗೆ ಮಾತನಾಡಿ ಈ ಅನುಮಾನಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಅವರ ಅಧ್ಯಕ್ಷತೆಯ ಸಮಿತಿಯಲ್ಲಿದ್ದವರೇ ಭ್ರಷ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಆ ನಂತರ ಸರಕಾರ ಸೂಚಿಸಿದ್ದ ಹೆಸರನ್ನು ರಾಜಭವನ ತಿರಸ್ಕರಿಸಿದೆ ಹಾಗೂ ಸಮಿತಿ ಅಧ್ಯಕ್ಷರ ಹೊರತಾಗಿ ಇತರರು ಸೂಚಿಸಿದ್ದ ಹೆಸರಿಗೆ ಮನ್ನಣೆ ನೀಡಿದೆ. ರಾಜಭವನದಲ್ಲಿ ಇಂತಹ ಕೃತ್ಯಗಳು ನಡೆದಿವೆ ಎನ್ನುವುದನ್ನು ನಂಬಲಿಕ್ಕೆ ಅಸಹನೆ ಪಡಬೇಕಿಲ್ಲ. ರಾಜಭವನದ ಸದ್ಯದ ವಾರಸುದಾರರು ಇಂತಹ ಕೃತ್ಯಗಳಲ್ಲಿ ಸಿದ್ಧಹಸ್ತರು. ಅರ್ಹತೆ ಇಲ್ಲದ ವ್ಯಕ್ತಿಯನ್ನೇ ವಿ.ಸಿ.ಯಾಗಿ ನೇಮಕ ಮಾಡಿದ್ದಲ್ಲದೆ, ಅದೇ ವ್ಯಕ್ತಿಯ ಅವಧಿಯನ್ನೂ ಅವರು ವಿಸ್ತರಿಸಿದವರಲ್ಲವೆ? ಹಿಂದಿನ ವಿ.ವಿಯಲ್ಲಿ ವಿ.ಸಿ.ಯಾಗಿದ್ದಾಗ ನಾನಾ ಆರೋಪಗಳನ್ನು ಹೊತ್ತವರು ಮತ್ತೊಂದು ಪ್ರಮುಖ ವಿ.ವಿ.ಗೆ ಕುಲಪತಿಯಾಗಿ ಅನಾಯಾಸವಾಗಿ ನೇಮಕಗೊಳ್ಳುತ್ತಾರೆ. ಎಷ್ಟು ಕೋಟಿ ರೂಗಳ ವ್ಯವಹಾರ ಇದು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಈ ವಿ.ವಿ.ಗಳ ಅವ್ಯವಹಾರಗಳ ಗಲಾಟೆ ಮಧ್ಯದಲ್ಲಿ ಬಹಳ ಕಾಲದವರೆಗೆ ಮರೆಯಾಗಿ ಉಳಿದದ್ದು Tumkur-VC-Sharma-with-Governorತುಮಕೂರು ವಿಶ್ವವಿದ್ಯಾನಿಲಯದಲ್ಲಿ ಎಸ್.ಸಿ. ಶರ್ಮಾ ಅವರು ವಿ.ಸಿಯಾಗಿದ್ದಾಗ ನಡೆದ ಭಾನಗಡಿಗಳು. ಅವರು ತುಮಕೂರು ವಿ.ವಿ.ಗೆ ಕುಲಪತಿಯಾಗಿ ಬಂದಾಗಿನಿಂದ ಅವರು ನಡೆದುಕೊಂಡ ರೀತಿಯಲ್ಲಿ ಎರಡು ಹಂತಗಳನ್ನು ಗುರುತಿಸಬಹುದು. ಮೊದ ಮೊದಲು ಅವರು ಕಾನೂನಿನಲ್ಲಿರುವ ಅಸ್ಪಷ್ಟತೆಗಳ ಲಾಭ ಪಡೆದುಕೊಂಡರು. ನಂತರ ಅಧಿಕಾರದಲ್ಲಿರುವವರ ಸಖ್ಯ ಬಳಸಿಕೊಂಡು ತಮಗೆ ಅನುಕೂಲವಾಗುವ ಕಾನೂನನ್ನೇ ತರಲು ಮುಂದಾದರು!

ಅವರು ಅಧಿಕಾರಕ್ಕೆ ಬರುವಾಗಲೇ ವಿವಾದ ಹುಟ್ಟಿಕೊಂಡಿತು. ವಿ.ಸಿ.ಯಾಗುವವರು ತಮ್ಮ ಹಿಂದಿನ ಸ್ಥಾನದಲ್ಲಿ ಪಡೆಯುತ್ತಿದ್ದ ಸಂಭಾವನೆ/ಸಂಬಳ/ಸವಲತ್ತುಗಳನ್ನು ಮುಂದೆಯೂ ಪಡೆಯುತ್ತಾರೆ ಎಂದು ಕರ್ನಾಟಕದ ಕಾಯಿದೆಯಲ್ಲಿ ಇದ್ದದ್ದನ್ನು ಪತ್ತೆ ಹಚ್ಚಿ ತಾವು ಹಿಂದೆ ಇದ್ದ ಖಾಸಗಿ ಕಾಲೇಜಿನಲ್ಲಿ ಲಕ್ಷಾಂತರ ರೂ ಸಂಬಳ ಬರುತ್ತಿತ್ತು ಎಂದು ತೋರಿಸಿ, ವಿ.ಸಿ. ಆದಮೇಲೂ ಅದನ್ನೇ ಪಡೆದರು. (http://www.deccanherald.com/content/107863/F)Tumkur-VC-Shameless-Sharma ನೇಮಕಾತಿ ಸಂದರ್ಭದಲ್ಲಿ ಅವ್ಯವಹಾರದ ಸುದ್ದಿಗಳು ಅಲ್ಲಲ್ಲಿ ಬಂದರೂ, ತನಿಖೆಯಾಗಬೇಕು, ವಿ.ಸಿ. ರಾಜಿನಾಮೆ ನೀಡಬೇಕು ಎಂದು ಕೂಗು ಏಳಲಿಲ್ಲ.

ಇತ್ತೀಚೆಗೆ ಬಹಿರಂಗವಾಗಿರುವಂತೆ ಅವರ ಅವಧಿಯಲ್ಲಿ ಕೆಲವು ಅದ್ಭುತ ಸಾಧನೆಗಳು ವಿ.ವಿ.ಯಲ್ಲಿ ಆಗಿ ಹೋಗಿವೆ. ಆ ಸಾಧನೆಗಳಿಗೆ ಬಹುಶಹ ಭಾರತರತ್ನವೂ ಕಡಿಮೆಯೆ. ಕೇವಲ ಎಂಟು-ಒಂಭತ್ತು ತಿಂಗಳಿಗೆ ಪಿ.ಎಚ್.ಡಿ ಅಧ್ಯಯನ ಮುಗಿಸಿದ್ದಾರೆ ಇಲ್ಲಿಯ ಸಂಶೋಧಕರು (ಪ್ರಜಾವಾಣಿ ವರದಿ: 49 ದಿನದಲ್ಲಿ ಪಿಎಚ್.ಡಿ). ಜಗತ್ತಿನ ಯಾವ ವಿ.ವಿ.ಯಲ್ಲೂ ಇಂತಹದೊಂದು ಸಾಧನೆ ಆಗಿಲ್ಲ ಎನಿಸುತ್ತೆ. ಸಮಾಜ ಕಲ್ಯಾಣ ಇಲಾಖೆಯವರು ವಿವಿಧ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಆರು-ಎಂಟು ತಿಂಗಳ ತರಬೇತಿ ಆಯೋಜಿಸುತ್ತಾರೆ. ಆದರೆ ಅಲ್ಲಿ ತರಬೇತಿ ಪಡೆದವರನ್ನು ’ಡಾ’ ಎಂದು ಕರೆಯುವುದಿಲ್ಲ ಅಷ್ಟೆ.

ಗೌರವ ಡಾಕ್ಟರೇಟ್ ಗಳು ಇಲ್ಲಿ ಬೇಕಾಬಿಟ್ಟಿ. ಒಂದೇ ವರ್ಷ 25 ಜನರಿಗೆ ಕೊಟ್ಟಿದ್ದಾರೆ. Tumkur-VC-Sharma-and-doctoratesಯಾಕಿಷ್ಟು ಕೊಟ್ಟೀರಿ ಎಂದು ಕೇಳಿದರೆ, “ದುಡ್ಡು ಜಾಸ್ತಿ ಇದ್ದವರು, ಜಾಸ್ತಿ ದಾನ ಮಾಡ್ತಾರೆ..ಅದರಲ್ಲೇನು ತಪ್ಪು..?” ಎಂದು ಕೇಳುತ್ತಾರೆ (ಪ್ರಜಾವಾಣಿ ವರದಿ). ಹಾಗಾದರೆ ಇವರ ವಿ.ವಿಯಲ್ಲಿ ಗೌರವ ಡಾಕ್ಟರೇಟ್‌ಗಳು ಬೇಕಾದಷ್ಟು ಬಿದ್ದಿದ್ದವು, ಹಾಗಾಗಿ ಇವರು ತಮಗೆ ಬೇಕಾದವರಿಗೆಲ್ಲ ಕೊಟ್ಟರು. ಅವರು ದಾನಶೂರ ಕರ್ಣ… ಅಲ್ಲಲ್ಲ ಶರ್ಮ! ಹೀಗೆ ವಿ.ವಿಯಲ್ಲಿ ಇವರಿಂದ ವಿವಿಧ ಸವಲತ್ತು ಪಡೆದವರು ಅವರದೇ ಜಾತಿಯವರು ಎನ್ನುವುದನ್ನು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಗಳು ಸ್ಪಷ್ಟವಾಗಿ ಹೇಳುತ್ತವೆ. ಆದರೆ ವಿಪರ್ಯಾಸ ನೋಡಿ, ಈ ಭಾನಗಡಿಗಳು ಎಲ್ಲೋ ಒಂದು ಮೂಲೆಯಲ್ಲಿ ಚರ್ಚೆಯಾಗಿ ಮರೆಯಾಗುತ್ತವೆ. ಅವರ ಕೃತ್ಯಗಳಿಗೆ ಅವರು ಕೊಡುವ ಇನ್ನೊಂದು ಸಮರ್ಥನೆ, “ಇಷ್ಟೇ ಜನಕ್ಕೆ ಗೌರವ ಡಾಕ್ಟರೇಟ್ ಕೊಡಬೇಕೆಂದು ನಿಯಮವೇನಿಲ್ಲ.”

ಅವರು ತಮ್ಮ ಕಾಲಾವಧಿ ಮುಗಿಯುವ ವೇಳೆಗೆ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷರಾಗಿದ್ದರು. ಆ ಹಂತದಲ್ಲಿ ಅವರಿಗೆ ತಾವು ಹಿಂದೆ ಇದ್ದ ಶಿಕ್ಷಣ ಸಂಸ್ಥೆಗೆ ಹೋಗಿ ಪ್ರಾಂಶುಪಾಲರಾಗಿ ಮುಂದುವರಿಯಬೇಕೆಂಬ ಹಂಬಲ ಹುಟ್ಟಿಕೊಂಡಿತು. ಅದಕ್ಕೆ ಅಲ್ಲಿಯ ಆಡಳಿತ ಒಪ್ಪುತ್ತಿರಲಿಲ್ಲ. ಆಗ ಸರಕಾರ ಜಾರಿಯಲ್ಲಿದ್ದ ಕಾನೂನಿಗೆ ತಿದ್ದುಪಡಿ ತಂದು ಆ ಸವಲತ್ತನ್ನು ಅವರಿಗೆ ಒದಗಿಸಲು ಮುಂದಾಗುತ್ತಾರೆ. ಅಂದಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತಾರೆ. ಆದರೆ, ಆ ಹೊತ್ತಿಗೆ ಈ ಮಸೂದೆ ಹಿಂದಿನ ಮರ್ಮ ಅರಿತ ಕೆಲ ಹಿರಿಯರು, ವಿರೋಧ ಪಕ್ಷದ ಸದಸ್ಯರುಗಳು ವಿರೋಧಿಸಿದಾಗ, Tumkur-VC-Shameless-Sharma-and-minister-CT-Ravi-in-unholy-nexusರವಿ ತನ್ನ ಮಸೂದೆಯನ್ನ ಸಮರ್ಥನೆ ಮಾಡಿಕೊಳ್ಳಲಾಗದೆ ಮಸೂದೆಯನ್ನು ಹಿಂದಕ್ಕೆ ಪಡೆಯುತ್ತಾರೆ. (http://www.thehindu.com/todays-paper/tp-national/tp-karnataka/government-withdraws-university-amendment-bill-following-protests/article3715111.ece)

ಒಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರು ಈ ಮಟ್ಟಿಗೆ ಪ್ರಭಾವಿಯಾಗಿ ಬೆಳೆಯಲು ಸಾಧ್ಯವಾಗಿದ್ದು, ರಾಜಕಾರಣಿಗಳು ಅವರಿಗೆ ಬೆಂಬಲಿಗೆ ಇದ್ದದ್ದು. ರಾಜಭವನವೂ ಅವರಿಗೆ ಸಹಕರಿಸಿತು. ಇಲ್ಲವಾಗಿದ್ದಲ್ಲಿ, ಅವರ ಸಂಬಳದ ವಿಚಾರದಲ್ಲಿಯೇ ತಕ್ಕ ನಿರ್ಧಾರ ತೆಗೆದುಕೊಂಡಿದ್ದರೆ, ಅವರು ಮುಂದುವರಿದು ಈ ಮಟ್ಟಿಗೆ ಅವ್ಯವಹಾರಗಳಿಗೆ ಕೈ ಹಾಕುತ್ತಿರಲಿಲ್ಲ. ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಹೀಗೊಂದು ಕುವೆಂಪು ಜಯಂತಿ ಕಾರ್ಯಕ್ರಮ : ವಿರೋಧಾಭಾಸ ಎಂದರೆ ಇದೇ ಅಲ್ಲವೆ..?

– ಸೂರ್ಯಕಾಂತ್

ವಿರೋಧಾಭಾಸಕ್ಕೆ (Oxymoron) ಇದು ಪಕ್ಕಾ ಉದಾಹರಣೆ ಆಗಬಹುದು. ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿ ಬೋಧಿಸಿದ ಕುವೆಂಪು ಜಯಂತಿ ಕಾರ್ಯಕ್ರಮವೊಂದು ಭಾನುವಾರ (ಡಿ.29, 2013) ಹಾಸನದ ದುಬಾರಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು. ಒಕ್ಕಲಿಗ ಸಂಘದ ಪದಾಧಿಕಾರಿಗಳ ಮಧ್ಯೆ ಕುಳಿತು ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಕಾರ್ಯಕ್ರಮ ನಡೆಸಿಕೊಟ್ಟರು. ಸಭೆ ತುಂಬಿತ್ತು. ಮೊದಲು ಕುವೆಂಪು ಗೀತೆಗಳ ಗಾಯನ, kuvempu-caste-1ಕೊನೆಯಲ್ಲಿ ಪ್ರೊ.ಕೃಷ್ಣೇಗೌಡರಿಂದ ಹಾಸ್ಯ ಸಂಜೆ. ಅಂದಹಾಗೆ, ಆ ಕಾರ್ಯಕ್ರಮ ನಡೆದ ಕಲ್ಯಾಣಮಂಟಪವೂ ಇದೇ ಶಾಖಾ ಮಠಕ್ಕೆ ಸೇರಿದ್ದು.

ಕಾರ್ಯಕ್ರಮಕ್ಕೆ ಪ್ರಸ್ತಾವನೆ ಒದಗಿಸಿದವರು ‘ಆದಿಚುಂಚನಗಿರಿ ಸಂಸ್ಥಾನ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯಗಳನ್ನು, ಎಲ್ಲಾ ಜಾತಿಗಳನ್ನು ಸಮಾನವಾಗಿ ಕಂಡ ಆದರ್ಶ ಮಠ. ಹಾಗಾಗಿ ವಿಶ್ವಮಾನವ ಸಂದೇಶ ಸಾರಿದ ಕವಿ ಕುವೆಂಪು ಅವರ ಜಯಂತಿಯನ್ನು ಆದಿಚುಂಚನಗಿರಿ ಮಠ ಆಯೋಜಿಸಿರುವುದು ಅರ್ಥಪೂರ್ಣ’ ಎಂದರು. ಮಾತನಾಡಿದ ಇಬ್ಬರು ಸ್ವಾಮೀಜಿಗಳು ಕುವೆಂಪು ಅವರನ್ನು ನೆನಪಿಸಿಕೊಳ್ಳುವುದರ ಜೊತೆ ಜೊತೆಗೆ ತಮ್ಮ ಹಿರಿಯ ಗುರು ದಿವಂಗತ ಬಾಲಗಂಗಾಧರನಾಥ ಸ್ವಾಮಿಯವರನ್ನು ಕೊಂಡಾಡಿದರು. ಕುವೆಂಪು ಬರಹದ ಮೂಲಕ ಸಾರಿದ್ದನ್ನು ತಮ್ಮ ಗುರು ಅಕ್ಷರಶಃ ಸಾಧಿಸಿದರು ಎಂದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ ಅವರು ತಮ್ಮ ಮಾತುಗಳಲ್ಲಿ ಕುವೆಂಪು kuvempu-caste-2ಹೇಳಿದ್ದ ಮಂತ್ರ ಮಾಂಗಲ್ಯ, ಸರಳ ವಿವಾಹ ಕ್ರಮಗಳು ಒಂದು ಕಾಲಘಟ್ಟದ ತರುಣರನ್ನು ಪ್ರಭಾವಿಸಿದ ಪರಿಯನ್ನು ವಿವರಿಸಿದರು. ಅಂತಹದೇ ಪ್ರೇರಣೆಗೆ ಒಳಗಾಗಿ ಅವರು ಕೂಡಾ ಹುಡುಕಿ, ಹುಡುಕಿ ಅಮವಾಸ್ಯೆ ದಿನ ತೀರಾ ಸರಳವಾಗಿ ಮದುವೆಯಾದವರು. (ಅವರ ಮಗಳ ಮದುವೆಯನ್ನು ಅದ್ಧೂರಿಯಾಗಿ ಚಿಕ್ಕಮಗಳೂರಿನ ಒಕ್ಕಲಿಗರ ಸಂಘದ ಕಲ್ಯಾಣ ಮಂಟಪದಲ್ಲಿ ಮಾಡಿದರು ಎನ್ನುವುದು ಬೇರೆ ಮಾತು.)

ಈ ಕಾರ್ಯಕ್ರಮದಲ್ಲಿ ಹೆಚ್ಚು ಕಮ್ಮಿ ಸಭೆಯಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳು ಒಂದೇ ಸಮುದಾಯದವರು. ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಚಾರದ ವೇಳೆ ಅನೇಕ ಅಭ್ಯರ್ಥಿಗಳು ಕುವೆಂಪು ಭಾವಚಿತ್ರವನ್ನು ತಮ್ಮ ಕರಪತ್ರಗಳಲ್ಲಿ, ಬ್ಯಾನರ್‌ಗಳಲ್ಲಿ ವಿಶೇಷವಾಗಿ ಅಚ್ಚಾಗಿಸಿದ್ದಾರೆ. ಕುವೆಂಪು ಹುಟ್ಟಿದ್ದು ಒಕ್ಕಲಿಗರ ಮನೆಯಲ್ಲಿ. ಆ ಕಾರಣಕ್ಕೆ ಒಕ್ಕಲಿಗರು ಕುವೆಂಪು ಬಗ್ಗೆ ಹೆಮ್ಮೆ ಪಡುವುದು ಸಹಜ. ಆದರೆ ಹೆಮ್ಮೆ ಪಡುವುದಕ್ಕೆ ಒಂದು ಕ್ರಮ ಬೇಕಲ್ಲ. ಕುವೆಂಪು ತಮ್ಮ ಕಾವ್ಯ, ನಾಟಕ, ಕತೆ, ಲೇಖನಗಳ ಮೂಲಕ ಬೋಧಿಸಿದ್ದು ಶೋಷಣೆ ಮುಕ್ತ ಸಮಾಜದ ಅಗತ್ಯತೆಯನ್ನು. ವಿಶ್ವಮಾನವನಾಗುವುದೆಂದರೆ, ಯಾವ ಬಂಧನಗಳಲ್ಲಿದೆ ಹೊರಬರುವುದು. ಅವರ ಬರಹಗಳ ಒಟ್ಟು ತಾತ್ವಿಕತೆ ದೀನ ದಲಿತರ ಜಾಗೃತಿಗೆ ಮೊರೆ ಇಟ್ಟರೆ, ಉಳ್ಳವರ ಆತ್ಮವಿಮರ್ಶೆಗೆ ಕರೆ ಕೊಡುತ್ತದೆ. ಆ ನಿಟ್ಟಿನಲ್ಲಿ ಒಂದಿಷ್ಟು ಆಲೋಚಿಸಿದರೆ ಈ ಜನಾಂಗ ಪಡುವ ಹೆಮ್ಮೆಗೂ ಒಂದು ಅರ್ಥ ದಕ್ಕೀತಲ್ಲವೆ?

ಈ ಕಾರ್ಯಕ್ರಮ ನಡೆಯುವ ಒಂದು ದಿನದ ಹಿಂದೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ದಲಿತನೊಬ್ಬ ತನ್ನ ಜಮೀನಿನಲ್ಲಿ ಬಹಿರ್ದೆಸೆಗೆ ಬಂದಿದ್ದ ಎಂಬ ಕಾರಣಕ್ಕೆ ದಲಿತನ ಮನೆ ಮೇಲೆ ದಾಳಿ ಮಾಡಿದ ಸವರ್ಣೀಯರು ಅವನನ್ನು, ಅವನ ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಹೆಚ್ಚು ಕಮ್ಮಿ ಒಂದು ತಿಂಗಳ ಹಿಂದೆ ಹೊಳೆನರಸೀಪುರ ತಾಲೂಕಿನಲ್ಲಿ ದೇವಸ್ಥಾನಕ್ಕೆ ಒಬ್ಬ ದಲಿತ ಪ್ರವೇಶಿಸಿದ ಎಂಬ ಕಾರಣಕ್ಕೆ ಅವನನ್ನು ಅಲ್ಲಿಯ ಸವರ್ಣೀಯರು ಹೊಡೆದಿದ್ದರು. ಎರಡು ತಿಂಗಳ ಹಿಂದೆಯಷ್ಟೆ ಹಾಸನ ಸಮೀಪದ ಕುದುರೆಗುಂಡಿ ಎಂಬ ಹಳ್ಳಿಯಲ್ಲಿ ಸರಿಯಾಗಿ ತಮಟೆ ಬಾರಿಸಲಿಲ್ಲ ಎಂಬ ಕಾರಣಕ್ಕೆ ಒಬ್ಬ ದಲಿತನ ಮೇಲೆ ಬಲಿಷ್ಟರು ಹಲ್ಲೆ ಮಾಡಿದ್ದರು. ಅರಕಲಗೂಡು ತಾಲೂಕಿನ ಅನೇಕ ಹಳ್ಳಿಗಳಲ್ಲಿ ಇಂದಿಗೂ ದಲಿತರು ಜೀತದಾರರಾಗಿ ಉಳ್ಳವರ ಮನೆಯಲ್ಲಿ ದುಡಿಯುತ್ತಿದ್ದಾರೆ. ನೂರಾರು ದಲಿತರು ಇನ್ನೂ ಮಲಹೊರುವವರಾಗಿ ಇದೇ ಜಿಲ್ಲೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. (ಸರಕಾರಿ ದಾಖಲೆ ಪ್ರಕಾರ ಯಾರೂ ಇಲ್ಲ ಬಿಡಿ!)

ಈ ಭಾಗದ ಜನರನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ ಹಿರಿಯ ಮುತ್ಸದ್ಧಿ ತನ್ನೂರಿನ ದಲಿತರ ಸ್ಥಿತಿಗತಿ ಬಗ್ಗೆ ಒಮ್ಮೆಯೂ ಮಾತನಾಡುವುದಿಲ್ಲ! ಕುವೆಂಪು ಜಯಂತಿ ಆಯೋಜಿಸುವವರು ಮುಖ್ಯವಾಗಿ ಈ ಬಗ್ಗೆ ಮಾತನಾಡಬೇಕಿತ್ತಲ್ಲವೆ? ಸುತ್ತಲೂ ಶೋಷಣೆ, ದೌರ್ಜನ್ಯಗಳನ್ನು ಪೋಷಿಸಿಕೊಂಡು ಬಂದು, ವಿಶ್ವಮಾನವ ಸಂದೇಶವನ್ನು ಹೊತ್ತು ಮೆರೆಸಿದರೆ ಏನುಪಯೋಗ?

ಕುವೆಂಪು ಸರಳ ವಿವಾಹ ಉಪದೇಶಿಸುವುದರ ಹಿಂದೆ ವಿನಾ ಕಾರಣ ಖರ್ಚು ಮತ್ತು ವರದಕ್ಷಿಣೆ ವಿರೋಧಿಸುವ ಉದ್ದೇಶವಿತ್ತು. ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಹಾಸ್ವಾಮಿಗಳು kuvempuಅದ್ಧೂರಿಯಾಗಿ ನಡೆಯುವ ಮದುವೆಗಳಿಗೆ ತಾವು ಹೋಗುವುದಿಲ್ಲ ಅಥವಾ ವರದಕ್ಷಿಣೆ ಪಡೆದ/ನೀಡಿದ ವಿವಾಹಗಳಿಗೆ ಹೋಗುವುದಿಲ್ಲ ಎಂದು ಘೋಷಿಸಲು ಸಾಧ್ಯವೇ? ಅದು ಸಾಧ್ಯವಾಗಿದ್ದರೆ, ತಾವೇ ಮುಂದೆ ನಿಂತು ಮುತುವರ್ಜಿಯಿಂದ ತಮ್ಮ ಮಠದ ಆಶ್ರಯದಲ್ಲಿ ಅದ್ಧೂರಿ ಕಲ್ಯಾಣ ಮಂಟಪಗಳನ್ನು ಕಟ್ಟಿಸುತ್ತಿರಲಿಲ್ಲ.

ಬೇರೆ ಸಮುದಾಯಗಳ ಹಿತ ಒತ್ತಿಟ್ಟಿಗಿರಲಿ, ತಮ್ಮ ಮಠ ಪ್ರತಿನಿಧಿಸುವ ಸಮುದಾಯದ ಬಡ ಕುಟುಂಬಗಳ ಸ್ಥಿತಿಗತಿ ಬಗ್ಗೆ ಒಮ್ಮೆ ಯೋಚಿಸಬೇಕಲ್ಲವೆ? ವರದಕ್ಷಿಣೆ ಪಿಡುಗಿನಿಂದ ಪೋಷಕರು ಹತಾಶರಾಗಿದ್ದಾರೆ. ಬಡ ಗುಮಾಸ್ತ ತನ್ನ ಆದಾಯದ ಮಿತಿ ಒಳಗೆ ತನ್ನ ಹೆಣ್ಣು ಮಕ್ಕಳ ಮದುವೆ ಮಾಡುವ ಸ್ಥಿತಿಯಲ್ಲಿಲ್ಲ. ಕುವೆಂಪು ತಮ್ಮ ಜನಾಂಗದವರೆಂಬ ಹೆಮ್ಮೆಗೆ ಒಂದು ಅರ್ಥ ಬರಬೇಕೆಂದರೆ ಕನಿಷ್ಟ ಪಕ್ಷ ಈ ಸಮುದಾಯ ಸರಳ ವಿವಾಹದ ಕಡೆ ಯೋಚಿಸಬೇಕಲ್ಲವೆ? ಅದ್ಧೂರಿಯಾಗಿ ಕುವೆಂಪು ಜಯಂತಿ ಕಾರ್ಯಕ್ರಮ ಮಾಡುವ ಶ್ರೀಗಳು ಇತ್ತ ಸ್ವಲ್ಪ ಯೋಚಿಸಲಿ. ಇಲ್ಲವಾದರೆ, ’ವಿಶ್ವಮಾನವ ಸಂದೇಶ ಸಾರಿದ್ದೂ ನಮ್ಮ ಒಕ್ಕಲಿಗ ಕವಿಯೇ’ ಎಂಬ ಹೆಮ್ಮೆ ಪಡಲು ಅಂತಹದೊಂದು ಸಮಾರಂಭ ಅವಕಾಶ ಮಾತ್ರ ಆದೀತು. ಅಂದಹಾಗೆ ಈ ಹೆಮ್ಮೆಯೂ ವಿರೋಧಾಭಾಸಕ್ಕೆ ಪ್ರಬಲ ಉದಾಹರಣೆ!

ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಂಗಳೂರಿನಲ್ಲಿ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ


– ಮುನೀರ್ ಕಾಟಿಪಳ್ಳ


 

ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಮತ್ತೆ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ ಶುರುವಾಗಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಇಂತಹ ಬೆಳವಣಿಗೆ ನಿರೀಕ್ಷಿತವೇ ಆಗಿದ್ದರೂ ಏಕಾಏಕಿ ಮತೀಯ ಶಕ್ತಿಗಳು ಮೇಲುಗೈ ಸಾಧಿಸಿರುವುದು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಕ್ರಮಕೈಗೊಳ್ಳದೆ ಎದುರಾಳಿಗಳಿಗೆ ಆಟ ಬಿಟ್ಟು ಕೊಟ್ಟಿರುವುದು ಅನಿರೀಕ್ಷಿತ. ವಿಧಾನ ಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ಪರಿವಾರ ಇಂತಹದ್ದೊಂದು ಆಟಕ್ಕೆ ಸ್ಕೆಚ್ ಹಾಕಿ ಸಮಯ ಕಾಯುತ್ತಾ ಕೂತದ್ದು ಅವರ ನಡೆಗಳನ್ನು ಬಲ್ಲ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹುಟ್ಟಿಕೊಂಡ ಹೋರಾಟ ಇಲ್ಲಿನ ಕೋಮುಶಕ್ತಿಗಳ ಆಶ್ರಯದಾತರಾಗಿರುವ ಆಗೋಚರ ಸರಕಾರಗಳ ವಿರುದ್ಧದ ಜನ ಚಳುವಳಿಯಾಗಿ ಪರಿವರ್ತನೆಗೊಂಡಿದ್ದು, ಜನ ಚಳುವಳಿಗಳು ಜನಸಾಮಾನ್ಯರ ಮಧ್ಯೆ ಸಕ್ರಿಯಗೊಂಡಿದ್ದು, ನುಡಿಸಿರಿ, ಜನನುಡಿ alva-nudisiri-baraguru-bhairappaಕಾರ್ಯಕ್ರಮಗಳು ಹುಟ್ಟು ಹಾಕಿದ ವೈಚಾರಿಕ ಸಂಘರ್ಷಗಳ ಮಧ್ಯೆ ಏಕಾಏಕಿ ಮತೀಯ ಶಕ್ತಿಗಳಿಗೆ ಪ್ರಬಲವಾಗಿ ಎದ್ದು ನಿಲ್ಲಲು ಸಾಧ್ಯವಾದುದರ ಹಿಂದೆ ಆಳವಾದ ಪಿತೂರಿಯ ವಾಸನೆ ಬಡಿಯುತ್ತದೆ.

ಕರಾವಳಿಯ ಜಿಲ್ಲೆಗಳಲ್ಲಿ ನೈತಿಕ ಪೊಲೀಸ್‌ಗಿರಿ, ಭೂಗತ ಜಗತ್ತು, ಕ್ರಿಮಿನಲ್ ಚಟುವಟಿಕೆ, ಮತೀಯ ಹಿಂಸೆ ಹೊಸದಲ್ಲ. ಕಳೆದ ಒಂದು ದಶಕದಲ್ಲಿ ಇಲ್ಲಿನ ಜನತೆ ಈ ಕೂಟಗಳ ಅಪವಿತ್ರ ಮೈತ್ರಿಯಿಂದ ಹೈರಾಣಗೊಂಡಿರುವುದರಿಂದ ಪಕ್ಕನೆ ಇವರು ಹಣೆದ ಬಲೆಗೆ ಬೀಳಲಾರರು ಎಂಬ ನಿರೀಕ್ಷೆ ಜಾತ್ಯಾತೀತರದ್ದು. ಕಾಂಗ್ರೆಸ್ ಸರಕಾರವು ಹಳೆಯ ನೆನಪುಗಳಿಂದ ಪಾಠ ಕಲಿತು ಇಂತಹ ಶಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತದೆ ಎಂಬ ನಿರೀಕ್ಷೆಯು ಸಹಜ.

ಆದರೆ ಈಗ ನಡೆದಿರುವ ಬೆಳವಣಿಗೆಗಳು ಆತಂಕ ಉಂಟುಮಾಡುವಂತಿದೆ. ಹಿಂದುತ್ವವಾದಿ ಶಕ್ತಿಗಳಿಗೆ ಪರ್‍ಯಾಯ ಎಂಬಂತೆ ಬಿಂಬಿಸಿಕೊಂಡು ಮುಸ್ಲಿಮರ ಮಧ್ಯೆ ನೆಲೆ ಕಂಡುಕೊಂಡಿರುವ ಮತ ತೀವ್ರವಾದಿ ಶಕ್ತಿಗಳು ಈ ಬಾರಿಯ ಆಟದಲ್ಲಿ ನಿರ್ವಹಿಸುತ್ತಿರುವ ಪಾತ್ರ ಸಂಘ ಪರಿವಾರದ ಕೆಲಸವನ್ನು ಸುಲಭಗೊಳಿಸಿದೆ. ಅದರ ಜೊತೆಯಲ್ಲಿ ಮುಸ್ಲಿಂ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಹೊಸ ತಲೆಮಾರಿನ ಕ್ರಿಮಿನಲ್ ಹುಡುಗರ ಅಮಾನವೀಯ ವಿಕೃತ ಕೃತ್ಯಗಳು ಪರಿವಾರದ ರೊಟ್ಟಿಯನ್ನು ಅನಾಯಾಸವಾಗಿ ತುಪ್ಪಕ್ಕೆ ಜಾರಿಸಿದೆ.

ವಿಟ್ಲದಲ್ಲಿ ಕರಾವಳಿ ಅಲೆ ಪತ್ರಿಕೆಯ ವರದಿಗಾರ ವಿ.ಟಿ. ಪ್ರಸಾದ್‌ಗೆ ಪಿಎಫ್‌ಐ ಕಾರ್ಯಕರ್ತರು ಎನ್ನಲಾದ ಗುಂಪು ಮುಸ್ಲಿಂ ಮಹಿಳೆಗೆ ಸಹಾಯ ಮಾಡಿದ ಕಾರಣಕ್ಕೆ ಮಾಡಿದ ಬರ್ಬರ ಹಲ್ಲೆ, ಬಂಟ್ವಾಳದ ಗಡಿಯಾರ ಎಂಬಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿಸಿದ್ದಕ್ಕೆ ಜಯರಾಮ ಎಂಬ ಲಾರಿ ಚಾಲಕನಿಗೆ ಗುಂಪು ಕಟ್ಟಿಕೊಂಡು ಅನಾಗರಿಕ ರೀತಿಯಲ್ಲಿ ನಡೆಸಿದ ಹಲ್ಲೆ, ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಕೇರಳ ಮೂಲದ ಇಬ್ಬರು ಹಿಂದು ವಿದ್ಯಾರ್ಥಿಗಳಿಗೆ ಅವರ ಸಹಪಾಠಿ ಮುಸ್ಲಿಂ ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟದ್ದಕ್ಕೆ ನಡೆಸಿದ ಬಹಿರಂಗ ಹಲ್ಲೆಗಳು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದುತ್ವವಾದಿ ಸಂಘಟನೆಗಳಿಗೆ ಅಕಾಲದಲ್ಲಿ ಹಬ್ಬ ಆಚರಿಸುವಷ್ಟು ಸಂಭ್ರಮವನ್ನು ಉಂಟುಮಾಡಿದೆ. ಅದರೊಂದಿಗೆ ಹದಿಹರೆಯದ ಮುಸ್ಲಿಂ ಕ್ರಿಮಿನಲ್‌ಗಳ ಗುಂಪೊಂದು ಕೊಣಾಜೆ ಎಂಬಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿ ಮತ್ತಾಕೆಯ ಮುಸ್ಲಿಂ ಸಹಪಾಠಿಯನ್ನು ಅಪಹರಿಸಿ ಅವರನ್ನು ಕೂಡಿ ಹಾಕಿ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ ಆ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಆ ಸಂದರ್ಭದಲ್ಲಿ ನರೇಂದ್ರ ನಾಯಕ್ ಮತ್ತವರ ಪ್ರಗತಿಪರ ಬಳಗಕ್ಕೆ ವಿದ್ಯಾರ್ಥಿನಿಯ ಆಪ್ತರಿಂದ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಬಂಧಮುಕ್ತಗೊಳಿಸಿ ಕ್ರಿಮಿನಲ್ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗಟ್ಟಿದರು. ಪೊಲೀಸರ ನಿಷ್ಕೀಯತೆ, ಕಾಂಗ್ರೆಸ್ ಮಂತ್ರಿಗಳ, ಪುಡಿನಾಯಕರ ಸ್ನೇಹದಿಂದಾಗಿ ಇಲ್ಲಿನ ಭೂಗತ ಜಗತ್ತು ಇತ್ತೀಚೆಗೆ ಸ್ವಲ್ಪ ಹೆಚ್ಚೇ ಅನ್ನುವಷ್ಟು ಚಿಗಿತುಕೊಂಡಿದೆ. ದುಬಾಯ್ ಡಾನ್‌ಗಳಿಗೆ, ಅವರ ಒಂದು ಮೊಬೈಲ್ ಕರೆಗೆ ಇಲ್ಲಿನ ಉದ್ಯಮಿಗಳು ದೈವದೇವರುಗಳಿಗಿಂತಲೂ ಜಾಸ್ತಿ ಭಯ ಪಡುತ್ತಾರೆ.

ಕೊಣಾಜೆ ಘಟನೆ ನಡೆದದ್ದೇ ತಡ ಸಂಘ ಪರಿವಾರದ ಗುಂಪುಗಳು ವಿದ್ಯಾರ್ಥಿ ಜೋಡಿಗೆ ನೀಡಿದ ವಿಕೃತ ಹಿಂಸೆಯನ್ನು ಹಿಂದೂ ಧರ್ಮದ ಮೇಲಿನ ಸಂಘಟಿತ ದಾಳಿ ಎಂಬಂತೆಯೂ, ಕರಾವಳಿಯ ಇಡೀ ಬ್ಯಾರಿ ಮುಸ್ಲಿಂ ಸಮುದಾಯ ಇದಕ್ಕೆ ಹೊಣೆಯೆಂಬಂತೆಯೂ ಬೀದಿಗಿಳಿದು ಬಿಟ್ಟಿದೆ. ಇವರು ಆರ್ಭಟಕ್ಕೆ ಪೂರಕ ಎಂಬಂತೆ ಮುಸ್ಲಿಂvt-prasad-PFI-attack ನೈತಿಕ ಪೊಲೀಸರ ಸರಣಿ ದಾಳಿಗಳು ಇದೇ ಸಂದರ್ಭದಲ್ಲಿ ನಡೆದದ್ದು ಪರಿವಾರದ ಧರ್ಮರಕ್ಷಕರಿಗೆ ಆನೆಬಲ ಬಂದಂತಾಗಿದೆ. ಇಂತಹ ಸಂದರ್ಭದಲ್ಲಿ ತಕ್ಷಣ ಕ್ರಿಯಾಶೀಲ ಆಗಬೇಕಾದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮೂವರು ಮಂತ್ರಿಗಳ ನಿಧಾನ ಪ್ರತಿಕ್ರಿಯೆ ಜಿಲ್ಲೆಯ ಜನತೆಯ ಆತಂಕವನ್ನು ಹೆಚ್ಚಿಸಿದೆ. ವಿಟ್ಲ, ಗಡಿಯಾರ, ಪಳ್ನೀರ್ ಮುಂತಾದೆಡೆ ದಾಳಿಗಳನ್ನು ಸಂಘಟಿಸಿದ್ದ ಮುಸ್ಲಿಂ ಮತೀಯವಾದಿ ಗುಂಪುಗಳ ಮೇಲೆ ದೃಢವಾದ ಕ್ರಮಗಳನ್ನು ಕೈಗೊಳ್ಳದೇ ಇದ್ದುದಕ್ಕೆ ಕಾಂಗ್ರೆಸ್‌ಪಕ್ಷ ಮಾತ್ರ ಅಲ್ಲ ಜಿಲ್ಲೆಯ ಜನಸಾಮಾನ್ಯರೂ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಜರಂಗದಳ, ಹಿಂದೂ ಜಾಗರಣಾ ವೇದಿಕೆಗಳು ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರನ್ನು, ಜಾತ್ಯಾತೀತರನ್ನು ಹೀನಾಯವಾಗಿ ನಿಂದಿಸುತ್ತಿವೆ. ರಕ್ತಪಾತಕ್ಕೆ ಕರೆ ಕೊಡುತ್ತಿವೆ, ಹಿಂದೂ ಯುವಕರನ್ನು ಗಲಭೆಗೆ ಪ್ರಚೋದಿಸುತ್ತಿದೆ. ತಾವು ನೈತಿಕ ಪೊಲೀಸ್‌ಗಿರಿಯ ವಿರೋಧಿಗಳು ಎಂಬಂತೆ ಬಿಂಬಿಸಿಕೊಳ್ಳುವ ದೃಶ್ಯಗಳನ್ನು ಸೃಷ್ಟಿಸುತ್ತಿವೆ.

ಈ ಬಾರಿಯ ಧರ್ಮದಾಟದ ವಿಶೇಷತೆ ಏನೆಂದರೆ ಆಟದಲ್ಲಿ ಕಾಯಿ ಉರುಳಿಸುತ್ತಿರುವುದು ಮುಸ್ಲಿಂ ತೀವ್ರವಾದಿ ಗುಂಪು ಮತ್ತು ಕ್ರಿಮಿನಲ್ ಗುಂಪುಗಳು. ಹಿಂದೆಲ್ಲಾ ಇಂತಹ ಪರಿಸ್ಥಿತಿ ನಿರ್ಮಿಸಲು ಪರಿವಾರದ ಗೇಮ್ ಫ್ಲಾನರ್‌ಗಳು ಕಾಲ್ಪನಿಕ ಸುಳ್ಳಿನ ಕಂತೆಯನ್ನು ಕಟ್ಟಲು ಹರಸಾಹಸ (ಆಗೆಲ್ಲ ಜಿಲ್ಲೆಯ ಕೆಲ ಪತ್ರಿಕೆಗಳು ಅವರ ಕಥೆಗಳಿಗೆ ಜೀವತುಂಬಿದೆ)ಪಡಬೇಕಿತ್ತು. ಈಗ ಮುಸ್ಲಿಮರ ಮಧ್ಯೆ ಇಂತಹ ಘಟನೆಗಳನ್ನು ಸೃಷ್ಟಿಸಲು ಇವರ ದಯಾದಿಗಳು ರಣೋತ್ಸಾಹದಲ್ಲಿ ಮುಂದುವರಿಯುತ್ತಿರುವುದರಿಂದ ಅಷ್ಟರ ಮಟ್ಟಿಗೆ ಸಂಘ ಪರಿವಾರ ನಿರಾಳ.

ಮುಸ್ಲಿಂ ಮತೀಯವಾದಿಗಳು ಮತ್ತು ಹಿಂದುತ್ವವಾದಿಗಳು ಪರಸ್ಪರ ಹೊಂದಾಣಿಕೆಯಿಂದಲೇ (ಕಳೆದ ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪಿಗಳು ಸಕಾರಣವಾಗಿಯೇ ಕೇಳಿ ಬಂದಿದ್ದವು) ಇಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದು ನಿಜವಾಗಿದ್ದರೆ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ಆದರೆ ಎರಡೂ ಕಡೆಯ ಕೋಮುಶಕ್ತಿಗಳು ಕೈ ಹಾಕುತ್ತಿರುವುದು ತಮ್ಮ ಮತ ಬುಟ್ಟಿಗೆ ಎಂಬ ಅರಿವಿನಿಂದಲಾದರೂ ಮತೀಯವಾದಿಗಳ, ಅವರಿಗೆ ಪೂರಕವಾಗಿ ವರ್ತಿಸುತ್ತಿರುವ ಕ್ರಿಮಿನಲ್‌ಗಳನ್ನು ಮಟ್ಟಹಾಕದೆ ನಿರ್ಲಿಪ್ತರಾಗಿ ವರ್ತಿಸುತ್ತಿರುವ ತ್ರಿಮೂರ್ತಿ ಮಂತ್ರಿಗಳಾದ ರೈ, ಖಾದರ್, ಜೈನ್‌ಗಳ ವರ್ತನೆಯ ಬಗ್ಗೆ ಏನನ್ನೋಣ…

ಫರೂಕ್ ಶೇಖ್ – ತೀರಿಕೊಂಡ ಪಕ್ಕದಮನೆ ಹುಡುಗ

–  ಬಿ.ಶ್ರೀಪಾದ ಭಟ್

ಹಿಂದಿ ಚಿತ್ರ ನಟ ಫರೂಕ್ ಶೇಖ್ ಹೃಧಯಾಘಾತದಿಂದ ದುಬೈನಲ್ಲಿ ತೀರಿಕೊಂಡಿದ್ದಾನೆ. ಮೊನ್ನೆ ತಾನೆ ಕೋಮು ಸಾಮರಸ್ಯದ ಅಗತ್ಯತೆಯ ಕುರಿತಾಗಿ ಅತ್ಯಂತ ಕಳಕಳಿಯಿಂದ ಮಾತನಾಡಿದ ಫರೂಕ್ ಶೇಖ್ ಎಲ್ಲಾ ಧರ್ಮಗಳ ಮೂಲಭೂತವಾದವನ್ನು ಖಂಡಿಸಿದ್ದ. ಸೋ ಕಾಲ್ಡ್ ಬಾಲಿವುಡ್‌ನ ಮೆಗಾಸ್ಟಾರ್‌ಗಳು, ಬಿಗ್‌ಬಿಗಳು ಎಲ್ಲ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಸಾರ್ವಜನಿಕವಾಗಿ ಖಂಡಿಸಲು ಹಿಂಜರಿಯುತ್ತಿದ್ದರೆ, ಸೋಗಲಾಡಿತನದಿಂದ ತಲೆತಪ್ಪಿಸಿಕೊಳ್ಳುತ್ತಿದ್ದರೆ, ಫರೂಕ್ ಶೇಖ್ ನೇರವಾಗಿ ಮುಸ್ಲಿಂ ಮೂಲಭೂತವಾದಿಗಳ ಧರ್ಮಾಂದತೆಯನ್ನು ಖಂಡಿಸಿದ್ದ. 2002ರ ಗುಜರಾತ್‌ನ ಹತ್ಯಾಕಾಂಡವನ್ನು ವಿರೋಧಿಸಿ ಫ್ಯಾಸಿಸಂನ ಅಪಾಯಗಳ ಕುರಿತು ಮಾರ್ಮಿಕವಾಗಿ ಮಾತನಾಡಿದ್ದ. farooq-sheikh“ಸರ್ಕಾರಗಳು ಉಪವಾಸ ಮುಷ್ಕರಗಳನ್ನು ನಡೆಸುತ್ತ ಸಾಯುವವರೆಗೂ ಹೋರಾಡುತ್ತೇವೆ ಅಥವಾ ಬಂದೂಕು ಹಿಡಿದು ಹಿಂಸಾತ್ಮಕ ಹೋರಾಟದ ಮೂಲಕ ಬದಲಾವಣೆ ತರುತ್ತೇವೆ ಎನ್ನುವ ವಿಭಿನ್ನ ದೃವಗಳ ಗುಂಪಿಗೆ ತಲೆಬಾಗುತ್ತದೆ ಆದರೆ moderate ಜನರಿಗೆ ಜಾಗವೆಲ್ಲಿ?” ಎಂದು ನೋವಿನಿಂದ ಪ್ರಶ್ನಿಸಿದ್ದ ಫರೂಕ್ ಶೇಖ್ ನಟನಾಗಿಯೂ ಇದೇ ರೀತಿ. ಎಪ್ಪತ್ತರ ಮತ್ತು ಎಂಬತ್ತರ ದಶಕಗಳಲ್ಲಿ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್‌ಗಳು, ಆಂಗ್ರಿ ಯಂಗ್ ಮ್ಯಾನ್‌ಗಳು ದೇಶಾದ್ಯಾಂತ ಸೂಪರ್ ಮ್ಯಾನ್‌ಗಳಾಗಿ, ಕೈಗೆಟುಕದ ತಾರೆಗಳಾಗಿ ಅಬ್ಬರಿಸುತ್ತಿದ್ದರೆ ನಮ್ಮ ಫರೂಕ್ ಶೇಖ್ ಆ ದೇಶದೊಳಗಿನ ಸಾಮಾನ್ಯ ಜನರ ಪಾತ್ರವಾಗಿ ಈ ನೆಲದೊಳಗೆ ಬೇರು ಬಿಟ್ಟು ತಣ್ಣಗೆ ನಟಿಸುತ್ತಿದ್ದ. ಅಮೊಲ್ ಪಾಲೇಕರ್‌ನೊಂದಿಗೆ ಸೇರಿ ಜನಸಾಮಾನ್ಯರಿಗೆ ಐಡೆಂಟಿಟಿ ತಂದುಕೊಟ್ಟಿದ್ದ. ಆತನ Underplay ಶೈಲಿಯ ನಟನೆ ಜನಸಾಮಾನ್ಯ ಪ್ರೇಕ್ಷಕರನ್ನು ಗೆದ್ದಿತ್ತು. ಪ್ರೇಮವನ್ನು ನಿವೇದಿಸಲು ಮರ ಸುತ್ತಬೇಕಾಗಿಲ್ಲ, ಕುಣಿಯಬೇಕಿಲ್ಲ, ವ್ಯವಸ್ತೆಯೊಂದಿಗೆ ಹೋರಾಡಬೇಕಿಲ್ಲ, ಸುಂದರಾಂಗನಾಗಬೇಕಿಲ್ಲ, ಬದಲಾಗಿ ನನ್ನ ಹಾಗೆ ಖುಜುತ್ವದಿಂದ Underplay ಗುಣದಿಂದ, ತೊದಲು ನುಡಿಯಿಂದ ಗೆಳತಿಯ ಅಪ್ತ ಮತ್ತು ಮನದಾಳದ ಪ್ರೇಮಿಯಾಗಬಹುದು ಎಂದು ತೋರಿಸಿಕೊಟ್ಟಿದ್ದು ಫರೂಕ್ ಶೇಖ್. ರಾಜೇಶ್ ಖನ್ನಾನಿಗೆ ರಕ್ತದಲ್ಲಿ ಪ್ರೇಮ ಪತ್ರವನ್ನು ಬರೆಯುವಂತ ಹುಡುಗಿಯರ ಆರಾಧ್ಯ ದೈವವಾಗಿರಲಿಲ್ಲ ಫರೂಕ್ ಶೇಖ್. ಆದರೆ ನನಗೂ ಇಂತಹ ಜೊತೆಗಾರ ಸಿಕ್ಕರೆ ಎಷ್ಟು ಚೆನ್ನ ಎಂದು ಯುವತಿಯರು ಮನದಲ್ಲಿ ಹುಡುಕಾಟ ನಡೆಸುವಂತಹ ಅಪ್ತತೆಯನ್ನು ತಂದು ಕೊಟ್ಟದ್ದು ಫರೂಕ್ ಶೇಖ್‌ನ ಯಶಸ್ಸು.

“ಗರಂ ಹವಾ” ಚಿತ್ರದಲ್ಲಿ ಬಲರಾಜ್ ಸಾಹ್ನಿಯ ಮಗನಾಗಿ ಸಿಕಂದರ್ ಮಿರ್ಜಾ ಪಾತ್ರದಲ್ಲಿ ಮನಸೆಳೆಯುವಂತೆ ನಟಿಸಿದ್ದ ಫರೂಕ್ ಶೇಖ್ ಮುಸ್ಲಿಂರ ತಲ್ಲಣಗಳನ್ನು ಮನೋಜ್ಞವಾಗಿ ವ್ಯಕ್ತಪಡಿಸಿ ಮನದಲ್ಲಿ ನೋವು ಮೂಡಿಸಿದ್ದ. “ಗಮನ್” ಚಿತ್ರದಲ್ಲಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಕ್ಕೆ ಗುಳೇ ಬರುವ ಯುವಕನ ಪಾತ್ರದಲ್ಲಿ ಆತನ Underplay ಶೈಲಿಯ ನಟನೆಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ನಗರದ ದೌರ್ಜ್ಯನ್ಯಕ್ಕೆ,ಕ್ರೂರತೆಗೆ ಗೋಳಾಡಿ,ನರಳಾಡಿ ನಟಿಸುವ ಅವಶ್ಯಕತೆ ಇಲ್ಲ, ನನ್ನಂತೆ ಪಾತ್ರದೊಳಗೆ ಸೇರಿಕೊಂಡು Underplay ಶೈಲಿಯ ನಟನೆ ಎಲ್ಲವನ್ನೂ ಹೇಳಿಬಿಡುತ್ತದೆ ಎಂದು ಹೇಳುವಂತೆ ನಟಿಸಿದ್ದ ಫರೂಕ್ ಶೇಖ್. ಅಲ್ಲಿ ಅವನು ನಮ್ಮಲ್ಲಿ ಮೂಡಿಸಿದ್ದು ವಿಷಾದದ ಛಾಯೆ. ಇದು ಸ್ಮಿತಾ ಪಾಟೀಲ್ ಶೈಲಿ. ಸತ್ಯಜಿತ್ ರಾಯ್ ಅವರ “ಶತರಂಜ್‌ಕೆ ಖಿಲಾಡಿ”ಯಲ್ಲಿ ಅಕೀಲ್ ನ ಪಾತ್ರದಲ್ಲಿ ನಟಿಸಿದ್ದ.

“ನೂರಿ” ಚಿತ್ರದಲ್ಲಿ ಪೂನಂ ಧಿಲ್ಲೋನ್‌ಳೊಂದಿಗೆ ಯುವ ಪ್ರೇಮಿಯಾಗಿ ನಟಿಸಿದ್ದ ಫರೂಕ್ ಶೇಖ್ ಆ ಸಿನಿಮಾದ ಯಶಸ್ಸಿನಿಂದ ಬಾಲಿವುಡ್‌ನ ಗಲಭೆಯಲ್ಲಿ ಕಳೆದು ಹೋಗುವ ಅಪಾಯದಿಂದ ಸ್ವತಃ ತನ್ನ ವಿವೇಚನೆಯಿಂದ, ಕಾಮನ್‌ಸೆನ್ಸ್‌ನಿಂದ ಪಾರಾಗಿದ್ದ. ಆಗ ಈತನಿಗೆ ಸಾಥ್ ನೀಡಿದ್ದು ನಟಿ ದೀಪ್ತಿ ನಾವೆಲ್. ಇವರಿಬ್ಬರು ನಟಿಸಿದ “ಚಸ್ಮೆ ಬದ್ದೂರ್”,”ಸಾಥ್ ಸಾಥ್”,ಕಥಾ”,”ರಂಗ್ ಬಿರಂಗಿ”,”ಬಾಜಾರ್” ನಂತಹ ಸಿನಿಮಾಗಳು ಹೊಸ ಬಗೆಯ ಅಹ್ಲಾದವನ್ನು, ಹಾಯ್ ಎನ್ನಿಸುವಂತಹ ಸಮಾಧಾನವನ್ನು, ಅರೇ ಅಲ್ಲಿರುವವರು ನಾವಲ್ಲವೇ ಎನ್ನುವಂತಹ ಐಡೆಂಟಿಟಿಯನ್ನು ತಂದುಕೊಟ್ಟವು. ಫರೂಕ್ ಶೇಖ್ ಇದನ್ನೆಲ್ಲಾ ಸಾಧಿಸಿದ್ದು ಮುಗ್ಧತೆಯಿಂದ,ನೆಲದೊಳಗೆ ಬೇರು ಬಿಟ್ಟು ಆಕಾಶದ ನಕ್ಷತ್ರಕ್ಕೆ ಕೈಚಾಚದೆ ಹಾಗೆ ಸುಮ್ಮನೆ ಎನ್ನುವ ಗುಣದಿಂದ.

ಲಾ ಅನ್ನು ಓದಿಕೊಂಡಿದ್ದ ಫರೂಕ್ ಶೇಖ್ ನಾಟಕದೆಡೆಗೆ ಆಕರ್ಷಿತನಾಗಿ ತಾರುಣ್ಯದಲ್ಲಿ ಇಪ್ಟಾ ತಂಡದೊಂದಿಗೆ ಗುರುತಿಸಿಕೊಂಡಿದ್ದ. ಗರಂ ಹವಾ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ. ನಾಟಕದ ದಿನಗಳ ಸಹನಟಿ ರೂಪ ಅವರನ್ನು ಪ್ರೇಮಿಸಿ ಮದುವೆ ಆದ. 2010 ರಲ್ಲಿ “ಲಾಹೋರ್” ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅವಾರ್ಡ ಪಡೆದಿದ್ದ.

ದೀಪ್ತಿ ನಾವೆಲ್, ಫರೂಕ್ ಶೇಖ್, ಸ್ಮಿತಾ ಪಟೇಲ್, ಶಬನಾ ಅಜ್ಮಿ, ನಾಸಿರುದ್ದೀನ್ ಶಾ, ಓಂಪುರಿ ಇವರ ಕಾಲ ನಿಜಕ್ಕೂ ಹಿಂದಿ ಚಿತ್ರರಂಗದ ಗೋಲ್ಡನ್ ಯುಗ. ಏಕೆಂದರೆ ಇವರು ತಮ್ಮದೇ ರೀತಿಯಲ್ಲಿ ಒಂದು ತಲೆಮಾರನ್ನು ರೂಪಿಸಿದರು. ಅದು ನಮ್ಮ ತಲೆಮಾರು. ಏನಾದರೂ ಆಗದಿದ್ದರೂ ಪರವಾಗಿಲ್ಲ, ಸ್ವಂತಿಕೆಯನ್ನು ಬಿಟ್ಟುಕೊಟ್ಟು ಕಳೆದು ಹೋಗಬೇಡ ಎಂದು ಹೇಳಿಕೊಟ್ಟ ಇವರಿಗೆ ನಾವೆಲ್ಲ  “ಥ್ಯಾಂಕ್ಸ್ ಸರ್,ಥ್ಯಾಂಕ್ಸ್ ಮೇಡಂ” ಎಂದು ಹೇಳುತ್ತೇವೆ.