ನಾಗಬಂಧದ ಬಂಧನ: ನಂಬಿಕೆ ಮತ್ತು ಕೇಳಿಕೊಳ್ಳಬೇಕಾದ ಪ್ರಶ್ನೆಗಳು

– ಜಯಪ್ರಕಾಶ್ ಶೆಟ್ಟಿ ಹೆಚ್

ಇತ್ತೀಚೆಗೆ ಕರ್ನಾಟಕ ಸರ್ಕಾರ ಆಹ್ವಾನಿಸಿದ ಮೂಢನಂಬಿಕೆ ನಿಷೇಧದ ಕರಡಿನ ಕುರಿತು ಕೆಲವು ಕನ್ನಡ ಪತ್ರಿಕೆಗಳು ಮತ್ತು ಸಾಂಪ್ರದಾಯಿಕ ಮನಸ್ಸುಗಳು ಮಿತಿಮೀರಿ ಬೆಂಕಿಯುಗುಳಿದುವು. ಹಾಗೆಯೇ ಕಳೆದ ಕೆಲವು ವರ್ಷಗಳಿಂದ ಸುದ್ದಿಯಾಗುತ್ತಿರುವ ಎಂಜಲ ಎಲೆಯ ಮೇಲಿನ ಹೊರಳಾಟವನ್ನು ಈ ಮನಸ್ಸುಗಳು ಮತ್ತೆ ನಂಬಿಕೆಯ ಹೆಸರಿನಲ್ಲಿ ವೈಜ್ಞಾನಿಕ ಸತ್ಯವೆಂಬಂತೆಯೂ ವಿಶೇಷವಾಗಿ ಮೈಮೇಲೆ ಎಳೆದುಕೊಂಡು ಸಮರ್ಥಿಸಿಕೊಂಡವು. ಈ ಎರಡೂ ಸಂಗತಿಗಳು ಬೇರೆ ಬೇರೆಯಾದ ಬಿಡಿಸಂಗತಿಗಳಲ್ಲ. ಹೀಗೆ ಬೆಚ್ಚಿಬಿದ್ದಂತೆ ಪ್ರತಿಕ್ರಿಯಿಸಿದ ಮನಸ್ಸುಗಳೆದುರು ಕರಾವಳಿಯ ಅತಿಪ್ರಾಚೀನ ಆರಾಧನಾ ಮಾದರಿಯ ಕಿರುಪರಿಚಯದೊಂದಿಗೆ, ಆ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳನ್ನಿಡಬಯಸುತ್ತೇನೆ.

ಕರಾವಳಿಯ ಯಾವುದೇ ಹಳ್ಳಿ ಮೂಲೆಗೆ ಹೋದರೂ ನಿಮಗೆ ಒಂದಾದರು ನಾಗಬನ ಸಿಗದ ಹಳ್ಳಿಗಳು ಇರಲಾರವೇನೋ. nagabanaಅವಿಭಕ್ತ ಕುಟುಂಬದ ಮನೆಗೊಂದರಂತೆ ಸಿಕ್ಕೇ ಸಿಗುವ ಈ ನಾಗಬನಗಳು ಮೂಲತಃ ದೇವರಕಾಡುಗಳು. ಇವುಗಳನ್ನು ಕರೆಯುತ್ತಿದ್ದುದೇ ನಾಗಬನ ಇಲ್ಲವೇ ನಾಗಬಲ್ಲೆಗಳೆಂದೇ. ದೇವರ ಹೆಸರನ್ನು ಸ್ಥಳವಾಚಕಗಳ ಮೂಲಕ ಇಲ್ಲವೇ ದಿಗ್ವಾಚಕಗಳ ಮೂಲಕ ಸೂಚಿಸುವ ಪರಿಪಾಠವಿದೆ. ಅದರಂತೆ ಧರ್ಮಸ್ಥಳವನ್ನು ನಮ್ಮೂರುಗಳಲ್ಲಿ ಮುಗ್ದವಾಗಿ ’ತೆಂಕಲಾಯ್’ ಎಂದೇ ಕರೆದಂತೆ, ನಾಗನನ್ನು ಕರೆಯುತ್ತಿದ್ದುದೇ ’ಬನದದೇವ್ರು’ ಎಂದು. ಕಾರಣಿಕ ಮತ್ತು ಸತ್ವವನ್ನಾಧರಸಿ ಅದನ್ನು ಸತ್ಯದೇವತೆ ಎಂದೂ ಕರೆಯುವ ರೂಢಿ ನಮ್ಮೂರ ಕಡೆಯಿದೆ. ಗಂಡನ ಹೆಸರೊ, ಗಂಡನ ಅಣ್ಣನ ಹೆಸರೋ ನಾಗನಿಂದ ಆರಂಭವಾಗುವಂತಿದ್ದರೆ ಅದನ್ನು ಹೇಳಬಾರದ ಸಾಮಾಜಿಕ ನಿಷೇಧಕ್ಕಾಗಿ ಪರ್‍ಯಾಯ ಕಂಡುಕೊಳ್ಳುವ ದಾರಿಯಲ್ಲಿ ನಮ್ಮೂರ ಹೆಂಗಸರು ಆ ಹೆಸರಿರುವ ಜಾಗದಲ್ಲಿ ಬನದದೇವ್ರು ಹೆಸರು ಎಂದು ಸೇರಿಸಿ ಉಪನಾಮವನ್ನು ಕೂಡಿಸುತ್ತಾರೆ. ಈ ರೂಢಿ ನಮ್ಮೂರುಗಳಲ್ಲಿ ಇಂದಿಗೂ ಇದೆ. ಹೀಗೆ ಬಲ್ಲೆಗಳೆಂದು ಕರೆಯಲ್ಪಡುತ್ತಿದ್ದ ಜಾಗಗಳಲ್ಲಿ ಹುತ್ತದ ಜೊತೆಗೆ ಬಾಗಾಳು ಇಲ್ಲವೆ ಬನ್ನೇರಳೆ ಇತ್ಯಾದಿ ಮರಗಳು ಸರ್ವೇಸಾಮಾನ್ಯ. ಅಮೂಲ್ಯವಾದ ಅನೇಕ ಗಿಡಮೂಲಿಕೆಗಳೂ ಈ ಬನಗಳಲ್ಲಿ ಲಭ್ಯವಿರುತ್ತಿದ್ದುವು. ಈ ಮರಗಳಿಗಾಗಲೀ ಆಚ್ಛಾದಿಸಿಕೊಂಡ ಬನದ ಯಾವುದೇ ಭಾಗಕ್ಕಾಗಲೀ ಕುಡುಗೋಲನ್ನೆ ಹಾಕದೇ ಆ ಬನಗಳನ್ನು ಸ್ವಚ್ಚಂಧವಾಗಿ ಬೆಳೆಯಲು ಬಿಡುತ್ತಿದ್ದರು. ಸ್ಥಳೀಯವಾಗಿ ಸಿಗುವ ಕಪ್ಪು ಬಣ್ಣದ ಶಿಲೆಯಲ್ಲಿಯೋ ಅಥವಾ ಮೆದುಜಾತಿಯ ಜಾಜಿಕಲ್ಲಿನಲ್ಲಿಯೋ ಕೆತ್ತಿದ ನಾಲ್ಕಾರು ನಾಗಮಿಥುನದ ಶಿಲ್ಪಗಳು ಹುತ್ತಕ್ಕೋ, ಪೀಠದಂತಿರುವ ನಿಸರ್ಗಸಹಜ ಕಲ್ಲಿನ ದಿಬ್ಬಕ್ಕೋ ಆತುಕೊಂಡಂತೆ ಬನದ ನೆರಳಿನಲ್ಲಿ ಮಳೆ, ಬಿಸಿಲು, ಗಾಳಿಗಳಿಗೆ ತೆರೆದೇ ಇರುತ್ತಿದ್ದುವು. ಈ ಸಹಜತೆಯನ್ನು ಸೂಚಿಸುವಂತೆ, “ನಾಗನಕಲ್ಲಿಗೆ ನಾಯಿ ಉಚ್ಚಿಹೊಯ್ಯುವುದು ಇಪ್ದೆ (ಇರುವುದೇ)” ಎಂಬ ವಾಗ್ರೂಢಿಯನ್ನು ಮಾತಿಗೊಮ್ಮೆ ಬಳಸುವುದುಂಟು.

ಮನೆಯ ಸಮೀಪವೇ ಇರುವ ಈ ಜಾಗಗಳಿಗೆ ನಾವು ಸಾಕಿದ ಕೋಳಿ, ಗಂಟಿ(ಹಸು)ಗಳು ಯಾವುದೇ ಭಿಡೆಯಿಲ್ಲದೆ ಹೋಗಿ ಮೆಂದು ಬರುತ್ತಿದ್ದುವು. ಕೋಳಿಗಳಂತೂ ಅಷ್ಟೇ ನಿರ್ಭಿಡೆಯಿಂದ ನಾಗನ ಕಲ್ಲಿನ ತಳಬುಡವನ್ನೆಲ್ಲ ಕೆದರಾಡಿ ಹುಳ ಹುಪ್ಪಡಿ ತಿಂದು ಬರುತ್ತಿದ್ದವು. nagarakalluಇದು ನಿನ್ನೆ ಮೊನ್ನೆಯವರೆಗೆ ಅನೇಕಕಡೆ ನಡೆದುಕಡೆ ಬಂದ ರೂಢಿ. ಇವುಗಳನ್ನು ಪೂಜಿಸುವ ಸರಳ ಮಾದರಿಗಳಾದ ತನುಹಾಕುವ(ಬಾಳೆಗೊನೆ ಒಪ್ಪಿಸುವ), ತಂಪು ಹಾಕುವ(ಒಂದಿಷ್ಟು ಹಾಲು, ಬಿಳಿಅಕ್ಕಿ ಅರ್ಪಿಸುವ) ಕೆಲಸಗಳಿಗೆ ವರ್ಷದ ಯಾವುದೋ ಒಂದೆರಡು ದಿನಗಳಲ್ಲಿ ಪುರೋಹಿತರು ಬರುತ್ತಿದ್ದರು. ತನುಹಾಕಿದ ಬಾಳೆಗೊನೆಯ ಬುಡದ ಚಿಪ್ಪು, ತಂಪು ಹಾಕಿದ ಅಚ್ಚೇರು ಅಕ್ಕಿಯನ್ನು ಪೂಜೆಯ ಕೂಲಿ ಎಂಬಂತೆ ಒಯ್ಯುತ್ತಿದ್ದರು. ಮನೆಗೊಂದರಂತೆ ಸಿಗುವ ಈ ನಾಗಬನಗಳಿಗೆಲ್ಲಾ ಕುಕ್ಕೆ ಸುಬ್ರಮ್ಮಣ್ಯವನ್ನೇ ಮೂಲಬನವಾಗಿ ಎಂದಿನಿಂದಲೋ ಏನೋ ನಂಬಿಕೊಂಡು ಬರಲಾಗಿದೆ. ಹಾಗಾಗಿ ಅದನ್ನು ಮೂಲಿ ಸ್ಥಳವೆಂತಲೇ ನಂಬಿಕೊಂಡು ಕರೆಯಲಾಗುತ್ತದೆ. ಅದಲ್ಲದೆ ನಾಗನಕಲ್ಲಿನ ಬುಡವನ್ನೂ ಮೂಲ ಎಂತಲೇ ಕರೆಯುವುದರಿಂದ “ಮೂಲಿ” ಎನ್ನುವುದು ಭೂಸೂಚಕವಾದ ಪದವೂ ಹೌದು. ನಾಗ ದರ್ಶನಗಳು ನಡೆದಾಗ ಮೂಲಿ ಪ್ರಸಾದ ಎಂದು ಮಣ್ಣನ್ನೆ ಕೊಡಲಾಗುತ್ತದೆ. ಈ ದರ್ಶನಗಳು ಹಲವುಕಾಲದಿಂದ ಪುರೋಹಿತ ವರ್ಗಕ್ಕೆ ಸೇರಿದವರ ಮೂಲಕವೇ ನಡೆದು ಬರುತ್ತಿದೆ. ಆದರೆ ದಲಿತರು ಆರಾಧಿಸಿಕೊಂಡು ಬರುತ್ತಿರುವ ನಾಗಾರಾಧನೆಯ ಮಾದರಿಯಾದ ಕಾಡ್ಯನಾಗನಿಗೆ ತಂಬಿಲ ಇಡುವ ಮತ್ತು ಆರಾಧಿಸುವ ಎಲ್ಲ ಕೆಲಸಗಳನ್ನು ಇಂದಿಗೂ ಅನೇಕ ಕಡೆ ದಲಿತರೇ ನಡೆಸಿಕೊಂಡು ಹೋಗುತ್ತಿದ್ದಾರೆ.

ನಾನು ಕಂಡಂತೆ ಹಣ್ಣು-ಹಾಲಿನ ಸರಳ ಮತ್ತು ಮಾಮೂಲಿ ಸೇವೆ ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು. ಅದಲ್ಲದೆ ನನ್ನ ಬಾಲ್ಯದದಿನಗಳಲ್ಲಿ ಕಂಡಂತೆ ವಿರಳವಾಗಿ ನಾಗದರ್ಶನವೋ, ಅತಿವಿರಳವಾಗಿ ನಾಗಮಂಡಲವೋ ನಡೆಯುತ್ತಿದ್ದುದುಂಟು. ಅದೇ ಸಂದರ್ಭದಲ್ಲಿ ಗದ್ದೆ ಬಯಲುಗಳಲ್ಲಿ ಏನಾದರೂ ಸತ್ತು ಬಿದ್ದ ಸರ್ಪ ಸಿಕ್ಕರೆ ಅವರ ಪಾಲಿಗೊಂದು ಗಂಟು(ನಿಧಿ)? ಸಿಕ್ಕಂತಯೇ ಎಂದು ಭಯ ಬೀಳುತ್ತಿದ್ದುದನ್ನೂ ಕಂಡಿದ್ದೇನೆ. ಯಾಕೆಂದರೆ ಈ ಹಾವುಗಳು ಹೇಗೇ ಸತ್ತಿರಲಿ ಅವುಗಳ ಬೊಜ್ಜ(ಸಂಸ್ಕಾರ) ಮಾಡಬೇಕಾದ ಹೊಣೆ ಹಾಗೆ ಕಂಡವರ ಮೇಲೆ ಬರುವಂತಹ ಭಯ ಅಂದೂ ಇದ್ದುದನ್ನು ನಾನು ಕಂಡವನಿದ್ದೇನೆ. ಸತ್ತು ಕೊಳೆತುಹೋದ ಹಾವಿದ್ದರೂ ಅದು ಸರ್ಪವಾಗಿದ್ದರೆ ಅದನ್ನು ಪುರೋಹಿತರ ಮೂಲಕ ಹಲಸಿನ ಕಟ್ಟಿಗೆಯಲ್ಲಿಟ್ಟು ಸುಡುವುದಲ್ಲದೆ, ಅದರ ಶ್ರಾದ್ಧವಿಧಿಯನ್ನು ಪುರೋಹಿತರ ಸಂತರ್ಪಣೆಯ ಮೂಲಕ ನಡೆಸಬೇಕಿತ್ತು. ಹೋಮ ಹವನದ ಜೊತೆಗೆ ನಿಗಧಿತ ಸಂಖ್ಯೆಯ ಬ್ರಾಹ್ಮಣರಿಗೆ ಊಟ ಹಾಕಲೇಬೇಕೆಂಬ ನಿಯಮವೂ ಚಾಲ್ತಿಯಲ್ಲಿತ್ತು. ಮನುಷ್ಯರು ಸತ್ತುಬಿದ್ದರೆ ಸಿಕ್ಕದ ಪ್ರಾಮುಖ್ಯತೆ ಸತ್ತ ಹಾವುಗಳಿಗೆ ದಕ್ಕುತ್ತಿದ್ದುದಲ್ಲದೆ, ಆ ಪ್ರಾಮುಖ್ಯತೆಯ ಲಾಭಗಳು ನಿಶ್ಚಿತವಾಗಿ ಒಂದು ಸಮುದಾಯಕ್ಕೇ ದಕ್ಕುತ್ತಿತ್ತು. ದುಬಾರಿಯೆನಿಯೂ ಇದು ಒಂದು ಮಿತಿಯಲ್ಲಿ ನಡೆದುಕೊಂಡು ಬರುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾಗಬನಗಳು ಬನಗಳಾಗಿಯೇ ಇದ್ದುವು. ಈ ಬನಗಳ ಸ್ವರೂಪಕ್ಕೆ ಇಂದಿನಂತೆ ಅಂದು ಈ ಅಕ್ರಮಕೂಟ ಕೈಯಿಕ್ಕಿರಲಿಲ್ಲ.

ಆದರೆ ಇತ್ತೀಚೆಗಿನ ದಿನಗಳಲ್ಲಿಯ ಈ ಸ್ಥಿತಿ ಆತಂಕಕಾರಿಯಾಗಿ ಬೆಳೆಯುತ್ತಿದೆ. ನಂಬುಗೆ ಅನ್ನುವುದಕ್ಕಿಂತ ಮುಖ್ಯವಾಗಿ ಈ ಭಯವನ್ನೆ ಬಂಡವಾಳ ಮಾಡಿಕೊಂಡು ನಾಗನ ಹೆಸರಿನಲ್ಲಿ ಅನಾರೋಗ್ಯಕರವಾದ ದಂದೆಯೊಂದು ಅವ್ಯಾಹತವಾಗಿ ಊರ್ಜಿತವಾಗುತ್ತಿದೆ. ನಾಗದರ್ಶನಗಳು ನಡೆದಲ್ಲಿ nagaradhane-1ಮೂಲಿ ಸ್ಥಳದಿಂದ ಮಣ್ಣಿನ ಪ್ರಸಾದ ತೆಗೆದಷ್ಟೇ ಸುಲಭವಾಗಿ ಹೊಸ ಹರಕೆಗಳನ್ನು ಕಾಲಗರ್ಭದಿಂದ ಅಗೆದು ತೆಗೆದು ಹುಟ್ಗತಿ(ಮರೆಯಾದುದನ್ನು ನೆನಕೆ ಮಾಡುವುದು) ಕೊಡಲಾಗುತ್ತಿದೆ. ನಾಗಬನಗಳ ಜಾಗದಲ್ಲಿ ಕಾಂಕ್ರೀಟುಗೋಪುರ ನಿರ್ಮಾಣದ ಆಜ್ಞೆ ನೀಡಲಾಗುತ್ತಿದೆ. ಈ ಗೋಪುರಗಳಲ್ಲಿ ಹೊಸದಾಗಿ ಪ್ರತಿಷ್ಠಾಪನಕಾರ್‍ಯದ ನಂತರ ವರ್ಷಕ್ಕೊಂದರಂತೆ ಶುದ್ಧಕಳಶದಂತಹ ರಿನೀವಲ್ ಕಾರ್‍ಯಕ್ರಮಗಳ ಸರಣಿ ಹುಕುಂಗಳನ್ನು ಈ ಪಾತ್ರಿ ಮತ್ತು ಪುರೋಹಿತರ ಜಂಟಿಪಡೆ ಜಾರಿಗೊಳಿಸುತ್ತಿದೆ. ಆಶ್ಲೇಷಬಲಿ, ನಾಗಮಂಡಲಗಳು ನಿತ್ಯದ ಮಾತಾಗುವಷ್ಟು ಅತಿಸಂಖ್ಯೆ ಮತ್ತು ದುಬಾರಿಯಲ್ಲಿ ನಡೆಯುತ್ತಲೇ ಇವೆ. ಮುಖ್ಯವಾಗಿ ಇವು ಕುಟುಂಬಕ್ಕೆ ಸೇರಿದ ಬನಗಳಾಗಿಯೇ ಇರುವುದರಿಂದ ಮೂಲ ಅವಿಭಕ್ತ ಕುಟುಂಬದ ಉಳ್ಳವರು, ಇಲ್ಲದವರು ಎಂಬ ಭೇದವಿರದೆ ಎಲ್ಲರೂ ವಂತಿಗೆ(ವರಾಡ)ಕೊಟ್ಟು ಪಾಲ್ಗೊಳ್ಳಬೇಕಾಗುವ ಒತ್ತಡವೂ ನಿರ್ಮಾಣಗೊಳ್ಳುತ್ತಿದೆ. ಇದರಿಂದಾಗಿ ಹೀಗೆ ವರಾಡಕೊಟ್ಟು ಪಾಲ್ಗೊಳ್ಳುವ ಒತ್ತಡಕ್ಕೆ ಬಿದ್ದ ಅನೇಕ ಬಡಕುಟುಂಬಗಳು ಬಲಿಷ್ಠರ ನಡುವೆ ನಲುಗಿ ಹೋಗುವ ಪರಿಸ್ಥಿತಿ ಉಂಟಾಗುತ್ತಿದೆ. ಯಾವ ಯಾವುದೋ ಅಡ್ಡದಾರಿಯಲ್ಲಿ ಹಣಮಾಡಿದ ದಿಡೀರ್‌ಧನಿಕರು ತಮ್ಮ ಸಂಪಾದನೆಯ ಗಣಿತವನ್ನು ಈ ಮೂಲಕ ಲೋಕಕ್ಕೆ ಪ್ರದರ್ಶಿಸಲು ಅವಕಾಶವಾಗುತ್ತಿದೆ. ಈ ನೈತಿಕದಿವಾಳಿಶೂರರು ಧರ್ಮದುರಂಧರರಾಗಿ ನಾಗಮನ್ನಣೆ ಪಡೆದು, ಅನೈತಿಕವೆನ್ನುವುದು ಶುಚೀಕರಿಸಲ್ಪಟ್ಟ ನೈತಿಕನಾಣ್ಯವಾಗಿ ಚಲಾವಣೆಗೆ ಬರುತ್ತಿದೆ. ನಾಗನನ್ನು ನಂಬಿದ ನಿರ್ಗತಿಕರಿಗೆ ಸಂಕಟೋತ್ಪಾದಕರ ನುಡಿಯೆಂಜಲಿನಲ್ಲಿ ಹೊರಳುತ್ತಾ ಬದುಕಬೇಕಾದ ವಿಷಚಕ್ರ ಬಲಿಯುತ್ತಿದೆ. ವ್ಯಕ್ತಿಗೌರವ ಮರೆತು ಎಂಜಲಲ್ಲಿ ಹೊರಳಿದಷ್ಟೇ ಕನಿಷ್ಠವಾಗಿ, ತಮ್ಮ ಮಕ್ಕಳನ್ನು ಯಾರದೋ ಹೋಟೆಲು-ಮನೆಗಳಲ್ಲಿ ಒತ್ತೆಯಿಟ್ಟು ಪಡೆದ ಹಣವನ್ನು ದೈನೇಸಿಯಾಗಿ ಈ ಲೂಟಿಕೋರರ ಕೈಗಿತ್ತು, ಮತ್ತವರದೇ ಕಾಲಿಗೆ ಬೀಳಬೇಕಾದ ಸ್ಥಿತಿ ಮಡೆಸ್ನಾಕ್ಕಿಂತಲೂ ದಯನೀಯವಾಗುತ್ತಿದೆ.

ನಾಗಾರಾಧನೆ ಸಂಪ್ರದಾಯ ಮೂಲತಃ ಅವೈದಿಕನೆಲೆಯದು. ಪ್ರಾಚೀನವಾಗಿ ಅಲ್ಲಿ ಆರಾಧನೆಯ ಮುಖ್ಯಸಂಗತಿಯಾಗಿ ಬಳಕೆಯಾಗುತ್ತಿದ್ದುದು ಮಣ್ಣಿನಕಳಶಗಳು. ಶುದ್ಧನಿಸರ್ಗಾರಾಧನೆಯ ಈ ತಾಣವನ್ನು ಗುದ್ದಲಿ ಮತ್ತು ಕುಡುಗೋಲುಮುಕ್ತವಲಯವಾಗಿ ಘೋಷಿಸಿಕೊಂಡಿದ್ದರು. ನಾಗನ ಬನವನ್ನು ಸ್ವಯಂ ಕಡಿಯುವುದನ್ನು ನಿಷೇಧಿಸಿಕೊಂಡಿರುವ ಜೊತೆಗೆ ಹಾಗೊಂದು ವೇಳೆ ಇನ್ನಾರೋ ಅದನ್ನು ಕಡಿಯುತ್ತಿದ್ದರೆ ಸ್ವಯಂನಾಶವನ್ನು ಆಹ್ವಾನಿಸುವ ಆ ಮೂರ್ಖರನ್ನು ಪ್ರಶ್ನಿಸಬಾರದು ಎಂಬ ವಾಡಿಕೆಯೂ ಇದೆ. ಹಾಗೆ ಪ್ರಶ್ನಿಸಿದವನ ಮೇಲೆಯೇ ನಾಗನ ಮುನಿಸು ಬೀಳುತ್ತದೆ ಎಂಬಂತಿರುವ ಈ ನಂಬಿಕೆಯ ಆಳದಲ್ಲಿ ನಾಗಬನದ ರಕ್ಷಣೆಯ ಕುರಿತಾದ ತಿಳುವಳಿಕೆಯ ವ್ಯಾಪಕತೆಯಿದೆ. ಹೀಗೆ ಈ ಬನದ ಇರುವಿಕೆಗೆ ಯಾವುದೇ ಧಕ್ಕೆ ಒದಗದಂತೆ ನಮ್ಮ ಪೂರ್ವಿಕರು ಕಾಪಿಟ್ಟುಕೊಂಡಿದ್ದರು. ಸಹಜವಾಗಿ ಅಪೂರ್ವವಾದ ಜೇನು, ಗಿಡಮೂಲಿಕೆಗಳು ಇಲ್ಲ್ಲಿ ಲಭ್ಯವಿರುತ್ತಿದ್ದವು. ಕುಡುಗೋಲು ಹಾಕುವುದಕ್ಕೇ ನಮ್ಮ ಪೂರ್ವಿಕರು ಹಾಕಿಕೊಂಡಿದ್ದ ಸ್ವಯಂ ನಿಷೇಧದಿಂದಾಗಿ ಸಂದಣಿಸಿಕೊಂಡಿದ್ದ ನೀರಪೂರಣದ ಹುತ್ತಗಳ ಜೊತೆಗೆ ದಟ್ಟವಾದ ಬೀಳು, ಬಲ್ಲೆಗಳಿಂದ ಕೂಡಿಕೊಂಡ ಸಸ್ಯಾವಳಿಯ ಸಾಂದ್ರತೆ ಇರುತ್ತಿತ್ತು. ಯಾರೂ ಮುಟ್ಟದ ಮತ್ತು ಮುಟ್ಟದಂತೆ ಯಾರೊಬ್ಬರ ಎಚ್ಚರಿಕೆಯ ಅಗತ್ಯವೂ ಇಲ್ಲದೆ ಉಳಿದುಬಂದಿದ್ದ ಈ ಪಾರಂಪರಿಕ ರಕ್ಷಿತ ನಿಸರ್ಗತಾಣಗಳು ಇವತ್ತು ಪುನರುತ್ಥಾನದ ಹೆಸರಿನಲ್ಲಿ ಜೆಸಿಬಿ ಯಂತ್ರಗಳ ದೈತ್ಯಾಕ್ರಮಣಕ್ಕೆ ಸಿಕ್ಕಿ ಬೋಳಾಗುತ್ತಿವೆ. ಹೀಗೆ ಸಪಾಟುಗೊಂಡ ಜಾಗಗಳಲ್ಲಿ ಕಾಂಕ್ರೀಟು ಬನಗಳ ನವನಿರ್ಮಾಣಗಳು ಏಳುತ್ತಿವೆ.

ಹುತ್ತವನ್ನೇ ದೇವರೆಂದು ನಂಬಿ ಅದನ್ನೆ ನಾಗರಾಧನೆಯ ಬಹಳಮುಖ್ಯ ಸಂಕೇತವೆಂದು ಅರಾಧಿಸುತ್ತಿದ್ದ ಅದೇ ಜಾಗದಲ್ಲಿ ಹುತ್ತಗಳ ಮೂಲೋತ್ಪಾಟನೆಮಾಡಿ, ಇದರಿಂದಾದ ಹಾನಿ(ನಾಗನ ಮರಿ-ಮೊಟ್ಟೆಗಳ ನಾಶದ)ಯ ಪರಿಹಾರಕ್ಕಾಗಿ ಮತ್ತದೇ ಸರ್ಪಸಂಸ್ಕಾರವೆಂಬ ಪುರೋಹಿತಲೂಟಿಯ ಅವಕಾಶಗಳನ್ನು ನಿರ್ಮಿಸಲಾಗುತ್ತಿದೆ. ಗುದ್ದಲಿ, ಕುಡುಗೋಲುಗಳಲ್ಲದೆ ಬೆಂಕಿಯ ಪ್ರವೇಶಕ್ಕೂ ಸೀಮಿತ ಅವಕಾಶವಷ್ಟೇ ಇದ್ದ, ಜೇನುವಾಸದ ತಾಣಗಳೂ ಆಗಿದ್ದ ಈ ಬನಗಳೊಳಗೆ ಈಗ ನಿರಾಯಾಸವಾಗಿ ಹೋಮ ಹವನಾದಿ ಅಗ್ನಿಕೊಂಡದ ಜ್ವಾಲೆ ಬೆಳಗುತ್ತಿದೆ! ಜಲಪರಂಪರೆಗೆ ಸೇರಿದ ಈ ನಾಗಪರಂಪರೆ ಸಂಪೂರ್ಣವಾಗಿ ಅಗ್ನಿಪರಂಪರೆಯವರ ಹಿಡಿತಕ್ಕೆ ಸಂದು ಹೋಗಿದೆ. ಜೊತೆಗೆ ನಾಗನ ಹೆಸರಿನ ಏನೇ ಕೆಲಸ ಇದ್ದರೂ ಅಲ್ಲೊಂದು ಅನ್ನ ಸಂತರ್ಪಣೆ ಆಗಲೇಬೇಕಾದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಅನ್ನ ಹಂಚುವ ಈ ಕಾರ್‍ಯಕ್ರಮದಲ್ಲಿಯೂ ಅಡುಗೆಯನ್ನು ನಿರ್ದಿಷ್ಟ ಸಮುದಾಯದವರೇ ಮಾಡಬೇಕೆಂಬ ನಿಯಮವಿದೆ. ಅದು ಬರಿಯ ಅನ್ನಸಂತರ್ಪಣೆಯಷ್ಟೇ ಅಲ್ಲ, ಮಡಿಯೂಟವಾಗಬೇಕೆಂಬವಾಗಬೇಕೆಂಬ ಷರತ್ತಿಗೊಳಪಟ್ಟದ್ದೂ ಹೌದು. ನಾಗನಿಂದಾಗಿ ಹೀಗೆ ಉಣ್ಣಲೇಬೇಕಾದವರು ಮತ್ತು nagaradhaneಅಡುಗೆ ಮಾಡಬೇಕಾದವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದಷ್ಟೇ ಅಲ್ಲದೆ, ಅನ್ನ ಸಂತರ್ಪಣೆ ಮಾಡಿ ಹಸಿವಿರದವರ ಹಸಿವನ್ನು ತಣಿಸಿ! ಅವರ ಕಾಲಿಗೇ ಬೀಳಬೇಕಾದ ದುಸ್ತರ ಸ್ಥಿತಿಯಿದು. ಯಾಕೆಂದರೆ ನಾಗಪಾತ್ರ್ರಿಯ ಬಾಯಿಂದ ತಪ್ಪದೇ ಬರುವುದು “ಬ್ರಹ್ಮಕುಟುಂಬವನ್ನು ತೃಪ್ತಿಪಡಿಸುವ” ಆಜ್ಞೆಯ ನುಡಿ!. ಪುರೋಹಿತ, ಪಾತ್ರಿಯೊಂದಿಗೆ ಉಣ್ಣುವ ಮತ್ತು ಅಡಿಗೆಮಾಡುವ ಫಲಾನುಭವಿಗಳೆಲ್ಲಾ ಹೀಗೆ ಒಂದೇ ಸಮುದಾಯಕ್ಕೆ ಸೇರಿದವರಾಗಿ, ಇದೊಂದು ಧಾರ್ಮಿಕ ದಂದೆಯಾಗಿ ಮಾರ್ಪಟ್ಟಿರುವುದರ ಕುರಿತು ಕೊಡುವವರು ಗೊಣಗಿಕೊಂಡೇ ಕೊಡುತ್ತಿದ್ದಾರೆ. ಪಡೆಯುವವರು ಅಧಿಕಾಧಿಕ ಕಸಿಯುತ್ತಿದ್ದಾರೆ. ಇಲ್ಲಿ ಮೂಲಿಸ್ಥಾನದ ಮೂಲದ ನಂಬಿಕೆಗಳನ್ನು ಸಮೂಲವಾಗಿ ಕಿತ್ತು ಬಿಸಾಡಲಾಗಿದೆ.

ನಂಬಿಕೆಯನ್ನು ಪ್ರಶ್ನಿಸುವಂತಿಲ್ಲ ಎಂದು ಉರಿದೆದ್ದುಬೀಳುವ “ಸಂಸ್ಕೃತಿ” ಮತ್ತು “ನಂಬಿಗೆ”ಯ ಕಾವಲುಗಾರರು ಗಟ್ಟಿಗೊಂಡು ಸಂಘಟಿತವಾಗುತ್ತಿರುವ ಈ ಕಾಲದಲ್ಲಿ, ಮಡೆಸ್ನಾನವನ್ನು ನಂಬಿಗೆಯ ಪ್ರಶ್ನೆಯೆತ್ತಿ ಬಾಯಿಮುಚ್ಚಿಸಲು ಯತ್ನಿಸಲಾಗುತ್ತಿದೆ. ಹೊರಳಬೇಡಿ ಅಂದರೆ ತಲೆಯಮೇಲೆಯೇ ಹೊತ್ತು ತಿರುಗುತ್ತೇವೆ ಎಂದು ಹೇಳಿಸುವುದಷ್ಟೇ ಅಲ್ಲ, ಮಾಡಿಸಲಾಗುತ್ತಿದೆ. ದುರಂತವೆಂದರೆ ಆಳುವವರ ಗುಣಗಾನ ಮಾಡಬಲ್ಲಷ್ಟು ಪ್ರಮಾಣದಲ್ಲಿ ಸಾಂಸ್ಕೃತಿಕ ವಸಾಹತುಶಾಹಿ ತನ್ನ ಅಂತಿಮ ದಿಗ್ವಿಜಯವನ್ನು ಸಾಧಿಸಿಬಿಟ್ಟಿದೆ. ಇಂತಹ ಯಶಸ್ಸಿನಲ್ಲಿ ಬೀಗುತ್ತಿರುವವರ ಎದುರಿಗೆ ಒಂದಿಷ್ಟು ಪ್ರಶ್ನೆಗಳನ್ನಾದರೂ ಇಟ್ಟು ಅಲ್ಲಿಯೂ ಇದ್ದಿರಬಹುದಾದ ಆತ್ಮ, ಪಾಪ-ಪುಣ್ಯಗಳನ್ನು ಕೆದಕಿ ಅಲ್ಲಿನ ಸೋಗಲಾಡಿತನವನ್ನು ಬೆಳಕಿಗೆ ತರಬೇಕಿದೆ. ಯಾಕೆಂದರೆ ಎಂಜಲ ಮೇಲೆ ಉರುಳುವವರ ಆಳದಲ್ಲಿ ನೆಟ್ಟು ಬೆಳೆಯಿಸಿದ ಮತ್ತು ಅವರನ್ನು ಅಲ್ಲಿಂದ ಪಾರಾಗದಂತೆ ಬಂಧಿಸಿಟ್ಟಿರುವ ದಯನೀಯ ಸ್ಥಿತಿಯ ಚರಿತ್ರೆಯೇ ಈ ಉರುಳಾಟದ ಹಿಂದಿದೆ ಎಂಬುದನ್ನು ಗಮನಿಸಬೇಕು. ಅದಲ್ಲದೆ ನಂಬಿಕೆಗಳೆಂದರೆ ಗೊಂಚಲಿದ್ದ ಹಾಗೆ. ಒಂದಕ್ಕೆ ಹೇಳಿದ ಮಾತು ಇನ್ನೊಂದಕ್ಕೂ ಅನ್ವಯಿಸುತ್ತದೆ. ಈ ನಂಬಿಗೆಗಳು ಯಾವ ತೆರನಾದ ಇರುವಿಕೆ ಮತ್ತು ವಿಕಾಸವನ್ನು ತೋರಿವೆ? ಹತ್ತಿಪ್ಪತ್ತು ವರ್ಷಗಳ ಹಿಂದಿದ್ದ ನಂಬಿಗೆ ಮತ್ತು ಆಚರಣೆಯ ಆವರಣಗಳು ಇಂದು ಯಾವ ಮಾರ್ಪಾಡಿಗೆ ಒಳಗಾಗಿವೆ? ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಈ ನಂಬುಗೆ ಮತ್ತು ಆಚರಣೆಗಳು ಬೀರುತ್ತಿರುವ ವಿಕೃತ ಪರಿಣಾಮಗಳೇನು? ಈ ಪ್ರಶ್ನೆ ಕರಾವಳಿಯ ಸಾಕಷ್ಟು ಜನರಲ್ಲಿ ಸಹಜವಾಗಿಯೇ ಅನುರಣಿಸುತ್ತಿದೆ. ನಿರ್ವಾತದಲ್ಲಿರುವ ಈ ಪಿಸುಮಾತುಗಳನ್ನು ಗಟ್ಟಿಯಾದ ಕೂಗಾಗಿ ಪರಿವರ್ತಿಸಬೇಕಿದೆ.

ಮುಖ್ಯವಾಗಿ ನಾಗರಾಧನೆಯನ್ನು ಸಮರ್ಥಿಸುವ ವೇಳೆ ಅದನ್ನೊಂದು ವೈಜ್ಞಾನಿಕ ತಳಹದಿಯುಳ್ಳ, ನೈಸರ್ಗಿಕ ಸಮತೋಲವನ್ನು ಕಾಪಾಡಿಕೊಳ್ಳುವ ಆಲೋಚನೆಯನ್ನು ಒಳಗೊಂಡ ನಿಸರ್ಗಾರಾಧನೆಯ ಮಾದರಿ ಎಂದೇ ಪರಿಭಾವಿಸಲಾಗುತ್ತದೆ. ಕುಡುಗೋಲ ಪ್ರವೇಶಕ್ಕೇ ಸ್ವಯಂನಿಷೇಧ ಹೇರಿಕೊಂಡ ದೇವರಕಾಡುಗಳನ್ನು ನಮ್ಮ ಪ್ರಾಚೀನರು ಕಾಯ್ದಿಟ್ಟುಕೊಂಡು ಬಂದ ಅಂತರ್ಜಲದ ಮರುಪೂರಣದ ತಂತ್ರಗಾರಿಕೆ ಮತ್ತು ಔಷದೀಯ ಗಿಡಮೂಲಕೆಗಳ ಸಂರಕ್ಷಣೆಯ ನಮ್ಮ ಪಾರಂಪರಿಕ ಹೆಮ್ಮೆಯೆಂದೂ ಗುರುತಿಸಿಕೊಳ್ಳಲಾಗಿದೆ. ಸತ್ತ ಹಾವಿನ ದೇಹಭಾಗದಲ್ಲಿಯೂ ಉಳಿದುಕೊಳ್ಳಬಹುದಾದ ವಿಷ ಅದರ ದೇಹ ಕೊಳೆತ ಜಾಗದಲ್ಲಿ ಬೆಳೆಯುವ ಹುಲ್ಲು ತಿನ್ನುವ ದನಕರುಗಳಿಗೆ ವರ್ಗಾವಣೆಗೊಳ್ಳದಿರಲಿ ಎಂಬ ಕಾರಣಕ್ಕಾಗಿ ಹಾವನ್ನೂ ಸುಟ್ಟುಹಾಕುವ ರೂಢಿಯನ್ನು ಬೆಳೆಸಲಾಯಿತು ಎಂದೇ ವೈಜ್ಞಾನಿಕ ಕಾರಣವನ್ನು ಹೇಳಲಾಗಿದೆ. ಇದರ ಜೊತೆಗೆ ಪಂಥಿಕವಾಗಿ ನಾಗಕುಲಕ್ಕೆ ಸೇರಿದವರಾದ ನಮ್ಮ ಪಾಲಿಗೆ ನಾಗನ ಹೆಣನೆಂದರೆ ನಮ್ಮ ಹಿರೀಕನ ಹೆಣವೆಂಬ ಗೌರವವೂ ಇರಲಾಗಿ, ಅಲ್ಲಿ ಸಂಸ್ಕಾರ ವಿಧಿಯ ಪಾಲನೆಯಿದೆ.

ಆದರೆ ವೈಜ್ಞಾನಿಕತೆಯ ಜೊತೆಗೆ ಇವೇ ನಂಬಿಕೆ, ಶೃದ್ಧೆಯ ಕಾರಣದಿಂದ ಶತಮಾನ ಹೋಗಲಿ ದಶಮಾನದ ಹಿಂದಿನವರೆಗೆ ಕಣ್ಣೆದುರೇ ಉಳಿದುಕೊಂಡಿದ್ದ ನಿಸರ್ಗರಚನೆಗಳು ಹೀಗೆ ದಂದೆಕೋರರ ಕೈಗೆ ಸಿಕ್ಕಿ ನೆಲೆಕಳೆದುಕೊಳ್ಳುವಾಗ, ನಂಬುಗೆಯ ವಕಾಲತ್ತಿನ ಮನಸ್ಸುಗಳು ಎಚ್ಚರಾದಂತೆ ಕಂಡಿಲ್ಲ! ಈಗ ಕಟ್ಟಲಾಗುತ್ತಿರುವ ಇಸ್ಲಾಮಿಕ್‌ಶೈಲಿಗೆ ಹತ್ತಿರದ ನಾಗಗೋಪುರಗಳೆಂಬ ಕಾಂಕ್ರೀಟ್ ವಾಸ್ತುರಚನೆಯಲ್ಲಿ ನಾಗ ನೆಲೆಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಅವು ಕೇಳಿಕೊಳ್ಳುತ್ತಿಲ್ಲ. ಇದಕ್ಕೆಲ್ಲಾ ಬಳಕೆಯಾಗುತ್ತ್ತಿರುವ ಹಣದ ಮೂಲದ ಕುರಿತಾದ ಪಾವಿತ್ರ್ಯದ ಪ್ರಶ್ನೆಯೂ ಅಲ್ಲಿಲ್ಲ! ಅಡ್ಡದಾರಿಯ ಸಂಪಾದನೆ ಮಾಡಿದ ಕಳ್ಳ-ಸುಳ್ಳರ ಜೊತೆಗೆ ನಿಷ್ಪಾಪಿ ಬಡವರೂ ಈ ಹೊಸ ರೂಪಾಂತರಕ್ಕೆ ತೆರಿಗೆ ಕಟ್ಟಿ ಸೋಲುತ್ತಿರುವುದನ್ನು ಈ ನಂಬುಗೆಯ ವಕೀಲರುಗಳು ಮೌನವಾಗಿಯೇ ಸಮರ್ಥಿಸುತ್ತಾರೆ! ಯಾಕೆಂದರೆ ನಾಗನ ಸಂಸ್ಕಾರಕ್ಕೆಂದು ವಂತಿಗೆ ಕೊಡಲಾಗದವರು ಊರೆಲ್ಲ ಜೋಳಿಗೆಹಿಡಿದು ಭಿಕ್ಷೆ ಬೇಡಿದ್ದನ್ನು ನಾನು ಕಂಡಿದ್ದೇನೆ. ಈ ಭಿಕ್ಷೆಯನ್ನೂ ನಿರ್ದಯವಾಗಿ ಕಸಿಯುವುದನ್ನು ನಂಬುಗೆ ಎಂದು ಹೇಗೆ ಸಮರ್ಥಿಸಲು ಸಾಧ್ಯ? ಹೇಗಾದರೂ ಮಾಡು ನನ್ನ ಸೇವೆ ಬಾಕಿ ಇರಿಸಿಕೊಳ್ಳಬಾರದು ಎಂದು ಹುಕುಂ ಕೊಡುವ ನಾಗಪಾತ್ರಿಗಳ “ನುಡಿ” ಅನೈತಿಕತೆಯನ್ನೂ ಉತ್ತೇಜಿಸುತ್ತದೆಯಲ್ಲವೆ? ಸಂಸ್ಕೃತಿ, ನಂಬುಗೆ ಇವುಗಳ ಕಾರ್‍ಯರೂಪದ ಅನುಷ್ಠಾನಕ್ಕಿರುವಷ್ಟೇ ಪ್ರಾಮುಖ್ಯತೆ, ಅವುಗಳ ನಿಷ್ಕಳಂಕ/ಪಾರದರ್ಶಕ ಮುಂದುವರಿಕೆಗೂ ಇರಬೇಲ್ಲವೆ?

ಬೀದಿಯಲ್ಲಿ ಬಿದ್ದ ಮನುಷ್ಯರ ಹೆಣವನ್ನು ನೋಡಿಯೂ ಮುಂಬರಿದರೆ ಸೋಂಕದ ಪಾಪ, ಸತ್ತ ಸರ್ಪನ ಹೆಣಕ್ಕಷ್ಟೇ ಸೀಮಿತ ಮಾಡಿಕೊಂಡಿರುವುದರಿಂದ, ಕರಾವಳಿಯ ಸಹಕಾರಿ ಬ್ಯಾಂಕುಗಳಲ್ಲಿಯ ಸಾಲದ ದಪ್ತರುಗಳು ಎಷ್ಟು ಬೆಳೆದಿವೆ ಎಂಬುದನ್ನು ಇವರುಗಳೇನಾದರೂ ಗಮನಿಸಿದ್ದಿದೆಯೇ? ಓದುಬಿಡಿಸಿದ ಮಕ್ಕಳನ್ನು ಹೋಟೆಲು, ಅಂಗಡಿಗಳಲ್ಲಿ ಒತ್ತೆಯಿಟ್ಟು ದುಡಿಸಿದ ತಾಯ್ತಂದೆಗಳ ಗೋಳಿನ ಚೀಲದಿಂದಲೂ, ಈ ನಾಗ ಮತ್ತು ಸತ್ತನಾಗಗಳ ನೆವದ ಮೂಲಕ ಮಾಡುತ್ತಿರುವ ಲೂಟಿಯನ್ನು ನಂಬಿಕೆಯಂದಷ್ಟೇ ಭಾವಿಸಿ ತಣ್ಣಗೆ ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ? ದರ್ಶನದ ಸಾಮಾನ್ಯ ನಿಯಮದಂತೆ ದಿನವೊಂದಕ್ಕೆ ಒಂದು ದರ್ಶನ ಮುಗಿಸಿದ ಪಾತ್ರಿಯ ಮೇಲೆ ಮತ್ತೊಂದು ಆಕರ್ಷಣೆ ಆಗಬೇಕೆಂದರೆ ಮುಂದಿನ ದಿನಕ್ಕಾಗಿ ಕಾಯಬೇಕು. ಅದಕ್ಕಾಗಿ Nagapatriಆತ ಮತ್ತೊಂದು ದಿನದ ವೃತಾಚರಣೆ ಮಾಡಬೇಕು. ಇದು ದೇವರು ಬರಿಸಿಕೊಳ್ಳುವುದನ್ನು ನಂಬಿಕೊಂಡುಬಂದ ಭೂತಾರಾಧನಾ ಪರಂಪರೆಯ ನಂಬಿಕೆ. ಆದರೆ ವಾದ್ಯದ ಹಿಮ್ಮೇಳವನ್ನೂ ತಯಾರಿಸಿಕೊಂಡು ಆಧುನಿಕ ವಾಹನಸೌಲಭ್ಯದ ನೆರವಿನಿಂದ ಜಗತ್ತನ್ನು ೨೧ ಬಾರಿ ಸುತ್ತ್ತಿಬಂದವನೆಂದು ಹೇಳಲಾಗುವ ಆ ಕೊಡಲಿರಾಮನನ್ನು ನೆನಪಿಸುವಂತೆ, ಬೆಳಗಿನಿಂದ ಸಂಜೆಯತನಕ ದರ್ಶನಕ್ಕೊಂದರಂತೆ ತಲಾ 3-5 ಸಾವಿರವನ್ನು ಪೀಕುತ್ತಾ, ಉಟ್ಟ ಪಟ್ಟೆಯಲ್ಲಿಯೇ ಹತ್ತಾರು ದರ್ಶನಗಳನ್ನು ಮಾಡಬಲ್ಲ ನಾಗಪಾತ್ರಿಗಳು ಹಾಕುತ್ತಿರುವ ದುಡಿಮೆಯ ಸ್ಕೆಚ್ಚು ಈ ನಂಬುಗೆಯ ಕಾವಲುಗಾರರಿಗೆ ಯಾಕೆ ದಂದೆ ಎಂದು ಅರ್ಥವಾಗುವುದಿಲ್ಲ? ಈ ನಡುವೆ ಭಾರತದಾದ್ಯಂತ ದೇಶ ಮತ್ತು ಸಂಸ್ಕೃತಿಯನ್ನು ಅತಿಯಾಗಿ ಪ್ರೀತಿಸುವವರ ಬಾಯಲ್ಲಿ ಈಗ ಕಪ್ಪು ಹಣ-ಭೃಷ್ಟಾಚಾರದ್ದೇ ಸುದ್ದಿ. ಅದಕ್ಕೆ ಅವರೆಲ್ಲರೂ ಸ್ವಿಸ್‌ಬ್ಯಾಂಕ್ ಎನ್ನುವ ಅಗೋಚರ ಸಂಸ್ಥೆಯನ್ನೇ ತೋರುತ್ತಾರೆ. ಆದರೆ ಈ ಧಾರ್ಮಿಕತೆ ಹೆಸರಿನ ಲೂಟಿ ಆ ಭೃಷ್ಟಚಾರದ ಚಿಂತನೆಯೊಳಗೆ ಬರುವುದೇ ಇಲ್ಲ! ಕಣ್ಣೆದುರೇ ನಡೆಯುವ ತೆರಿಗೆ ಕಟ್ಟದ ಹಣದ ಸೇರಿಕೆಯನ್ನು ಯಾವ ಬಣ್ಣದ ಹಣವೆನ್ನಬೇಕೋ ತಿಳಿಯದು? ತಿಂಗಳೊಂದರ ಕನಿಷ್ಟ ಲಕ್ಷವನ್ನೂ ಮೀರಿ ದುಡಿಯುತ್ತಿರುವ ನಾಗಪಾತ್ರಿಯಾದವನ ಆದಾಯಕ್ಕೂ, ಮಾಮೂಲಿ ದೈವಪಾತ್ರಿಯ ಆದಾಯಕ್ಕೆ ಇರುವ ಅಗಾಧವಾದ ಅಂತರವನ್ನು ತುಲನೆ ಮಾಡಿದಲ್ಲಿ ಇದು ತಿಳಿದೀತು. 20-30 ವರ್ಷಗಳ ಹಿಂದೆ ನಾಗಪಾತ್ರಿಗಳಾದವರು ಹೀಗೆಯೇ ಸಿರಿವಂತರಾಗಿದ್ದರೇ? ಇದು ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಲೂಟಿಯಲ್ಲವೆ? ಅದರೊಂದಿಗೆ ಅವೇ ನಂಬಿಕೆಗಳ ಮೂಲೋತ್ಪಾಟನೆಯೂ ಹೌದಲ್ಲವೇ?

ನಂಬುಗೆಯ ಹೆಸರಿನಲ್ಲಿ ಮರೆಮಾಚಿ ನಡೆಸುತ್ತಿರುವ ಲೂಟಿ ಹಾಗೂ ಹಳೆಯದು ಹಾಗೆಯೇ ಉಳಿಯಬೇಕೆಂದು made-snanaಮಡೆಸ್ನಾನದಂತಹ ಆಯ್ದಕೆಲವನ್ನು ಉಳಿಸಿಕೊಳ್ಳಬೇಕೆಂದು ಒದ್ದಾಡುವುದೂ ಎರಡೂ ಪರಸ್ಪರ ಪೂರಕವಾದ ಕಸರತ್ತುಗಳೇ. ಉಂಡ ಎಂಜಲಲ್ಲಿ ದೇಹವನ್ನೂ, ಹುಟ್ಟುಗತಿಯ ಹೆಸರಿನ ನುಡಿಯೆಂಜಲಿನಲ್ಲಿ ಆರ್ಥಿಕವಾದ ಉರುಳಾಟವನ್ನೂ ಉತ್ಪಾದನೆ ಮಾಡಿಕೊಂಡು ಬರುವುದು ಬೇರೆ ಬೇರೆಯಾದವುಗಳಲ್ಲ. ಆ ಕಾರಣಕ್ಕಾಗಿಯೇ ನಂಬುಗೆಗಳು ಪ್ರಶ್ನಿಸಲ್ಪಟ್ಟರೆ ಸಂಸ್ಕೃತಿಯೆಂಬ ಹೆಸರಿನ ಆಕರ್ಷಕಬಟ್ಟೆಯಲ್ಲಿ ಅವಿತಿರಿಸಿಕೊಂಡ ನಾಜೂಕಾದ ಆಯುಧಗಳು ಮತ್ತು ನಿರಾತಂಕವಾಗಿ ನಡೆಸಿಕೊಂಡು ಬರಲಾಗುತ್ತಿರುವ ತಳವರ್ಗದ ಮೇಲಿನ ದಾಳಿಯ ಯೋಜನೆಗಳು ನಗ್ನವಾಗಿ ಎಲ್ಲರಿಗೂ ಕಾಣಿಸಬಹುದೆಂಬ ಭಯದಿಂದಾಗಿಯೇ ಆ ವಿವರಗಳು ಮುನ್ನೆಲೆಗೆ ಬಂದಾಗಲೆಲ್ಲಾ ಮುಗಿಬಿದ್ದು ಸಮರ್ಥನೆಗಿಳಿಯುವುದನ್ನು ಕಾಣುತ್ತಿದ್ದೇವೆ. ನಂಬುಗೆ ಮತ್ತು ಸ್ಸಂಸ್ಕೃತಿಯ ಬಗೆಗೆ ಮಾತನಾಡುವವರಿಗೆ ಇಂತಹ ಪ್ರಶ್ನೆಗಳನ್ನು ಎದುರಾಗಿ ಉತ್ತರಿಸಿಕೊಳ್ಳುವ ಅಥವಾ ಹಾಗೆ ಆಗುತ್ತಿರುವ ನಂಬುಗೆಯ ಹೆಸರಿನ ಅನಾಚಾರವನ್ನು ತಡೆಯುವ ಹೊಣೆಗಾರಿಕೆಯೂ ಇರಬೇಕು. ಶತಮಾನದ ನಂಬಿಕೆಯನ್ನು ಗೌರವಿಸಬೇಕು ಎನ್ನುವವರಿಗೆ ಹತ್ತಾರು ವರ್ಷಗಳ ಹಿಂದಿನ ಕನಿಷ್ಠ ಆರೋಗ್ಯಕರ ಸ್ಥಿತಿಯಾದರೂ ಉಳಿಯಬೇಕೆಂಬ ಎಚ್ಚರ ಇರಬೇಕು. ಆದರೆ ಹೀಗೆ ಇರಬೇಕಾದುದನ್ನು ನಿರೀಕ್ಷಿಸುವ ನಾವುಗಳಿಗೆ ಜನರ ವಿವೇಚನೆಯ ಉಸಿರನ್ನೇ ಹಿಸುಕಬಲ್ಲವರಿಂದ ಹಸಿರುಳಿಸುವ, ಜನರ ಬೆವರಿಗೆ ಬೆಲೆಕೊಡುವ ಕರ್ತವ್ಯದ ನಿರೀಕ್ಷೆ ಮಾಡುವ ನಮ್ಮ ಬೋಳೇತನದ ಕುರಿತಾದ ಎಚ್ಚರವೂ ಇರಬೇಕು ಎಂಬುದನ್ನೂ ಮರೆಯಬಾರದು.

(ಈ ಲೇಖನ ಫೆಬ್ರವರಿ ತಿಂಗಳ ಹೊಸತು ಸಂಚಿಕೆಯಲ್ಲಿ ಈ ಮುನ್ನ ಪ್ರಕಟಗೊಂಡಿರುತ್ತದೆ)

5 thoughts on “ನಾಗಬಂಧದ ಬಂಧನ: ನಂಬಿಕೆ ಮತ್ತು ಕೇಳಿಕೊಳ್ಳಬೇಕಾದ ಪ್ರಶ್ನೆಗಳು

  1. Girish

    ನಾಗಪಾತ್ರ್ರಿಯ ಬಾಯಿಂದ ತಪ್ಪದೇ ಬರುವುದು “ಬ್ರಹ್ಮಕುಟುಂಬವನ್ನು ತೃಪ್ತಿಪಡಿಸುವ” ಆಜ್ಞೆಯ ನುಡಿ!. ಅಪ್ಪಟ ಸತ್ಯ… ಉತ್ತಮ ಲೇಖನ… ಅಂದ ಹಾಗೆ ದಲಿತರಿಂದ ಅರಾಧಿಸಲ್ಪಡುತ್ತಿದೆ ಎಂದು ಹೇಳಿರುವ ಕಾಡ್ಯನಾಗನ ಬನ ಎಲ್ಲಿದೆ ಸರ್?

    Reply
  2. ASHOK KUMAR VALADUR

    ಸರ್ ತುಂಬಾ ಒಳ್ಳೆಯ ಮಟ್ಟು ಅರ್ಥವತ್ತಾದ ಲೇಖನ. ಉಡುಪಿ ಮೂಲದಿಂದ ಬಂದ ನನಗೆ ಈ ಎಲ್ಲದರ ಪರಿಚಯ ವಿದೆ. ನಾನು ಖಂಡಿತ ಇಂತಹ ಆಚರಣೆಗಳನ್ನು ಒಪ್ಪುದಿಲ್ಲ. ಬೀದಿಯಲ್ಲಿ ಬಿದ್ದ ಮನುಷ್ಯರ ಹೆಣವನ್ನು ನೋಡಿಯೂ ಮುಂಬರಿದರೆ ಸೋಂಕದ ಪಾಪ, ಸತ್ತ ಸರ್ಪನ ಹೆಣಕ್ಕಷ್ಟೇ ಸೀಮಿತ ಮಾಡಿಕೊಂಡಿರುವುದರಿಂದ,……….ನಾವು ಧರ್ಮ ದ ಡಾಂಭಿಕತೆಯಲ್ಲಿ ಮಾನವೀಯತೆಯನ್ನು ಮರೆತಿದ್ದೇವೆ.

    Reply
  3. bhatmahesht

    ನೀವು ಬರೆದ ಲೇಖನ ಸರಿಯಾಗಿದೆ. ಅದರೆ ಕಾಂಗ್ರೆಸ ಪಕ್ಷ ಅಧಿಕಾರದಲ್ಲಿರುವುದರಿಂದ ಮುಂದಿನ ವರ್ಷ ಮಡೆಸ್ನಾನ ಯಾವುದೇ ವಿವಾದಗಳಿಲ್ಲದೆ, ಯಶಸ್ವಿಯಾಗಿ ನಡೆಯುತ್ತದೆ.

    Reply
  4. Jnanesh K

    ಇನ್ನೊಂದು ನಗೆ ತರಿಸುವ ವಿಷಯವೆಂದರೆ ಕುಟುಂಬದ ನಾಗ ದೇವರನ್ನು ಹುಡುಕುವುದು, ಆಯಾಯ ಕುಟುಂಬಕ್ಕೆ ಅವರವರದ್ದೇ ನಾಗ ಬಣ ಬೇಕಂತೆ ! ಅದಕ್ಕಾಗಿ ಅಷ್ಟಮಂಗಳ ಪ್ರಶ್ನೆ,. ಬಡವರಿಗೆ ನಾಗನ ಕೋಪದ ಭಯ ಹುಟ್ಟಿಸಿ ಪ್ರತಿ ತಲೆಗೆ ಕಡಿಮೆಯೆಂದರೆ ೫೦೦೦/- ವಂತಿಗೆ. ನಮ್ಮ ಕುಟುಂಬಕ್ಕೆ ಇವಗದ್ದು ನಾಲ್ಕನೆ ನಾಗ ಬನ !!!. ಜ್ಯೋತಿಷಿಗಳು ಬದಲಾದಂತೆ ನಾಗಬನವು ಬದಲು. ಏನಿದು ದೇವರು ಸರ್ವವ್ಯಾಪಿ ಅಲ್ಲವೇ. ಅವನನ್ನು ನಾವು ಹುಡುಕಬೇಕೆ…?? ಎಂಥ ಮೂರ್ಖತನ .

    Reply

Leave a Reply

Your email address will not be published. Required fields are marked *