Daily Archives: February 13, 2014

ಯಾರಿಗೆ ಬಂತು ಸ್ವಾತಂತ್ರ್ಯ? ಗಂಗೂರಿನ ದಲಿತರ ಪಾಲಿಗಂತೂ ಇಲ್ಲ!

– ಶುಕ್ಲಾಂ ಸಕಲೇಶಪುರ

ಪಬ್ಲಿಸಿಟಿ ಹುಚ್ಚಿಗಾಗಿ ದಲಿತರಿಗೆ ಕಟಿಂಗ್ ಮಾಡಲು ಬಂದವರು ಹಳೇಬೀಡು ಹತ್ತಿರದ ಗಂಗೂರಿನಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಏನೂ ತಪ್ಪಿಲ್ಲದ ಅಮಾಯಕ ಐದು ದಲಿತ ಯುವಕರು ಇಂದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೆಲವು ಮಹಿಳೆಯರೂ ಸೇರಿದಂತೆ ಒಟ್ಟು 20 ಮಂದಿ ಕೇಸು ಎದುರಿಸುತ್ತಿದ್ದಾರೆ. Gangoor-1ಅವರ ವಿರುದ್ಧ ದಾಖಲಾಗಿರುವ ಆರೋಪಗಳು: ಅಕ್ರಮ ಕೂಟ (ಸೆ.143 ಭಾದಂಸ), ಧಾರ್ಮಿಕ ಭಾವನೆಗಳಿಗೆ ಧಕ್ಕೆ (ಸೆ.295ಎ, 298) ಮತ್ತು ಹೆಣ್ಣಿನ ಮಾನಭಂಗ ಯತ್ನ (ಸೆ.354). ಸಾಮೂಹಿಕ ಕ್ಷೌರ ಮಾಡಿ ಹೋದ ಮುತ್ತುರಾಜ ತಮ್ಮ ಮೊಬೈಲ್ ದೂರವಾಣಿಯ ಸ್ವಿಚ್ ಆಫ್ ಮಾಡಿಕೊಂಡು ಬಹುಶಃ ಬೆಂಗಳೂರಿನಲ್ಲಿ ಹಾಯಾಗಿದ್ದಾರೆ. ಆದರೆ ಅಮಾಯಕ ಹುಡುಗರು ಆಕ್ರೋಶದಿಂದ, ವಿಷಾದದಿಂದ, ಅತೀವ ನೋವಿನಿಂದ ಜೈಲಿನಲ್ಲಿ ದಿನ ತಳ್ಳುತ್ತಿದ್ದಾರೆ. ಆಗಿರುವ ಅವಮಾನ ತಾಳಲಾರದೆ, ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.

ಆಗಿದ್ದಿಷ್ಟು…

ಗಂಗೂರು ಹಳೇಬೀಡು ಹೋಬಳಿಯ ಹಳ್ಳಿ. ಅಲ್ಲಿ ಹತ್ತಿರ ಹತ್ತಿರ 500 ಕುಟುಂಬಗಳಿರಬಹುದು. ಐವತ್ತು ಕುಟಂಬಗಳು ದಲಿತರವು. ಉಳಿದವರು ಮೇಲ್ವರ್ಗದವರು. ಅದೇ ಊರಿನಲ್ಲಿ ಒಂದು ಕಟಿಂಗ್ ಶಾಪ್ ಇತ್ತು. ಮುಜರಾಯಿ ಇಲಾಖೆ ಪಟ್ಟಿಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನವಿದೆ. ಹಲವು ವರ್ಷಗಳಿಂದ ನಡೆದುಬಂದಿರುವ ಕ್ರಮಗಳೇನೆಂದರೆ, ದಲಿತರಿಗೆ ಆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಕಟಿಂಗ್ ಶಾಪ್ ನಡೆಸುವ ಕ್ಷೌರಿಕ ಸಮುದಾಯದವರು, ದಲಿತರನ್ನು ಒಳ ಸೇರಿಸುವಂತಿಲ್ಲ. ವೈಯಕ್ತಿಕವಾಗಿ ಕ್ಷೌರಿಕನಿಗೆ ಆ ಬಗ್ಗೆ ವಿರೋಧವಿಲ್ಲ. ಆದರೆ ದಲಿತರನ್ನು ಸೇರಿಸಿದರೆ, ಸವರ್ಣೀಯರು ಅವನ ಬಳಿ ಬರುವುದಿಲ್ಲ ಎಂದು ತಾಕೀತು ಮಾಡಿದ್ದರು. ಆ ಕಾರಣ ಅವನು ದಲಿತರಿಗೆ ಕಟಿಂಗ್ ಮಾಡುತ್ತಿರಲಿಲ್ಲ. ಯುವಕರು ಪಕ್ಕದ ಊರಿಗೆ (ಸಾತೇನಹಳ್ಳಿ) ಹೋಗಿ ಕಟಿಂಗ್ ಅಥವಾ ಶೇವಿಂಗ್ ಮಾಡಿಸಿಕೊಂಡು ಬರುತ್ತಿದ್ದರು.

ಅಷ್ಟೇ ಅಲ್ಲ, ಈ ಊರಿನಲ್ಲಿ ದಲಿತರಿಗೆ ಸವಲತ್ತುಗಳು ಸಿಗುತ್ತಿಲ್ಲ. ವಿವಿಧ ಯೋಜನೆಗಳಲ್ಲಿ ಮನೆಗಳು ಮಂಜೂರಾದರೆ ಈ ಊರಿನ ದಲಿತರಿಗೆ ಸಿಗುತ್ತಿದ್ದದು ಬೆರಳೆಣಿಕೆಯಷ್ಟು. ನ್ಯಾಯಬೆಲೆ ಅಂಗಡಿಗೆ ಅಕ್ಕಿ, ಗೋಧಿ ತರಲು ಹೋದರೆ, ಅಲ್ಲಿರುವ ಸವರ್ಣೀಯರು ಭಿಕ್ಷೆ ಹಾಕುತ್ತಿರ ಧಿಮಾಕಿನಲ್ಲಿ ಗತ್ತು ತೋರಿಸುತ್ತಾರೆ. Gangoor-5ನಿಗದಿತ ದುಡ್ಡಿಗಿಂತ ಮೂವತ್ತು – ನಲವತ್ತು ರೂಪಾಯಿ ಕೇಳಿದರೂ ಕೊಡಬೇಕು. ಇಲ್ಲವಾದರೆ ಆ ತಿಂಗಳ ಪಡಿತರ ಇಲ್ಲ.

ಬಹಳ ವರ್ಷಗಳಿಂದ ಹೀಗೆ ನಡೆಯುತ್ತಿತ್ತು. ಇತ್ತೀಚೆಗಿನ ಜನರೇಷನ್‌ನ ಯುವಕರು ಒಂದಿಷ್ಟು ಕಲಿತವರು. ಬೇರೆ ಬೇರೆ ಊರುಗಳಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ದಲಿತರು ಅನುಭವಿಸುತ್ತಿರುವ ಅವಮಾನಗಳ ಬಗ್ಗೆ ಆಕ್ರೋಷ ಬೆಳೆಸಿಕೊಂಡಿದ್ದಾರೆ. ಅವರು ಸಂಬಳ ತಗೊಂಡು ಒಳ್ಳೆ ಅಂಗಿ-ಪ್ಯಾಂಟು ಹಾಕಿಕೊಂಡು ಊರಿಗೆ ಬಂದರೆ, ಮೇಲ್ವರ್ಗದವರು.. “ಏನು ಧಿಮಾಕು ನೋಡೋ ಈ ಹುಡುಗರಿಗೆ. ನಮ್ಮೆದುರಿಗೆ ಹೀಗೆ ಮೆರೆಯೋ ಹಂಗಾಗಿದ್ದಾರೆ..” ಎಂದು ಟೀಕಿಸಿದ್ದನ್ನು ಕೇಳಿಸಿಕೊಂಡಿದ್ದಾರೆ. ಅವರಲ್ಲಿ ಜಾಗೃತಿ ಮೂಡಿದಂತೆ ’ಅಂಬೇಡ್ಕರ ಯುವಕ ಸಂಘ’ ಎಂದು ಕಟ್ಟಿಕೊಂಡಿದ್ದಾರೆ. ಈಗ್ಗೆ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗೆ, ಸಮಾಜ ಕಲ್ಯಾಣ ಅಧಿಕಾರಿಗೆ, ಬೇಲೂರು ತಹಸೀಲ್ದಾರ್‌ಗೆ ಮನವಿ ಕೊಟ್ಟರು. ಊರಿನಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ಇಲ್ಲ. ಇಂತಹ ಜಾತಿ ಆಧಾರಿತ ತಾರತಮ್ಯಕ್ಕೆ ಅಂತ್ಯ ಹಾಡಿ ಎಂದು ಕೇಳಿಕೊಂಡರು.

ವಿಚಿತ್ರ ಎಂದರೆ ಈ ದೇವಸ್ಥಾನದ ಕಟ್ಟಡಕ್ಕೆ ಇದೇ ದಲಿತರು ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ್ದಾರೆ. ಶ್ರಮದಾನ ಮಾಡಿದ್ದಾರೆ. ದಲಿತ ಯುವಕ ಶಿವಕುಮಾರ್‌ನ ಹಿರಿಯರು ಇದೇ ದೇವಾಲಯದ ಮುಖ್ಯದ್ವಾರಕ್ಕೆ ತಮ್ಮ ಜಮೀನನಲ್ಲಿದ್ದ ಹಲಸಿನ ಮರ ಕೊಡುಗೆಯಾಗಿ ನೀಡಿದ್ದಾರೆ. (ವಿಚಿತ್ರವೆಂದರೆ, ಅದೇ ಶಿವಕುಮಾರ್ ಇಂದು ಜೈಲಿನಲ್ಲಿದ್ದಾನೆ). ಆದರೂ ದಲಿತರಿಗೆ ಪ್ರವೇಶ ಇಲ್ಲ!

ಮನವಿಯ ಪರಿಣಾಮ ಬೇಲೂರಿನ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿದರು. ದೇವಸ್ಥಾನಕ್ಕೆ ಪ್ರವೇಶ ನಿಷೇಧ ಜಾರಿಯಲ್ಲಿರುವುದು ಮನವರಿಕೆಯಾಯಿತು. ಕಟಿಂಗ್ ಶಾಪ್ ಮಾಲೀಕನನ್ನು ಮಾತನಾಡಿಸಿದರು. ದಲಿತರಿಗೆ ನೀನು ಪ್ರವೇಶ ಕೊಡದಿದ್ದರೆ, ನೀನು ಈ ವ್ಯವಹಾರ ಮಾಡುವಂತಿಲ್ಲ ಎಂದು ಆದೇಶ ನೀಡಿದರು. ಅದರಂತೆ, ಅವನ ಅಂಗಡಿಗೆ ಬೀಗ ಬಿತ್ತು.

ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಎಂದರೆ ದಲಿತ ಯುವಕರು ಎಲ್ಲಿಯೂ ಸಂಯಮ ಕಳೆದುಕೊಳ್ಳಲಿಲ್ಲ. Gangoor-2ಜಿಲ್ಲಾ ಆಡಳಿತಕ್ಕೆ ಮನವಿ ಕೊಟ್ಟು ಹದಿನೈದು ದಿನಗಳ ಕಾಲ ಕಾದರು. ಅವರು ಆತುರ ಮಾಡುವ ಉದ್ದೇಶ ಇದ್ದಿದ್ದರೆ, ಎಂದೋ ಕೆಲ ಸವರ್ಣೀಯರ ವಿರುದ್ಧ ಅಸ್ರೃಶ್ಯತಾ ನಿಷೇಧ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ನ್ಯಾಯ ಕೇಳಬಹುದಿತ್ತು. ಆದರೆ ಊರಿನಲ್ಲಿ ಶಾಂತಿ ಕದಡಬಾರದು ಎಂಬ ಏಕೈಕ ಉದ್ದೇಶದಿಂದ ಅವರು ಹಾಗೆ ಮಾಡಲಿಲ್ಲ.

ಫೆಬ್ರವರಿ 10 ರಂದು ಜಿಲ್ಲಾಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದರು. ಆ ಮೂಲಕ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಅನಿಷ್ಟ ಪದ್ಧತಿಗೆ ಅಂತ್ಯ ಹಾಡಿದರು. ಇದೇ ಹೊತ್ತಲ್ಲಿ ಕೆಲ ಸವರ್ಣೀಯರಿಗೆ ಈ ಎಲ್ಲಾ ಬೆಳವಣಿಗೆಗಳಿಂದ ಬೇಸರವಿತ್ತು. ದೇವಾಲಯ ’ಅಪವಿತ್ರ’ ಆಯ್ತಲ್ಲೋ ಎಂದು ಕೆಲ ಮೇಲ್ವರ್ಗದ ಹೆಣ್ಣುಮಕ್ಕಳು ಕಣ್ಣೀರಿಟ್ಟರು. ಆದರೆ ಯಾರೂ ದಲಿತರ ಪ್ರವೇಶವನ್ನು ಪ್ರತಿಭಟಿಸುವ ಹಂತಕ್ಕೆ ಹೋಗಲಿಲ್ಲ.

ವಿವಾದ ಹುಟ್ಟಿದ್ದು…

ಈ ಎಲ್ಲಾ ಬೆಳವಣಿಗೆಗಳು ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ವಿಸ್ತೃತವಾಗಿ ವರದಿಯಾದವು. ಬೆಂಗಳೂರಿನ ಮುತ್ತುರಾಜ್ ರಾಜ್ಯಾದ್ಯಂತ ಹೆಸರಿರುವ ನಟ, ಕಲಾವಿದ, ಸವಿತಾ ಸಮಾಜದ ಮುಖಂಡ ಹಾಗೂ ಸೃಜನಶೀಲ ಕ್ಷೌರಿಕ. ಹಿರಿಯ ಸಾಹಿತಿ, ಕಲಾವಿದರನ್ನು ಸಂಪರ್ಕಿಸಿ ಅವರ ಹೇರ್ ಕಟ್ ಮಾಡುವ ಮೂಲಕ ಮಾಧ್ಯಮಗಳಲ್ಲಿ ಪ್ರಸಿದ್ಧಿ ಪಡೆದವರು. ಇವರ ಕಣ್ಣಿಗೆ ಗಂಗೂರಿನ ಬೆಳವಣಿಗೆಗಳು ಬಿದ್ದವು.

ಅವರು ಫೆ.11 ರ ಬೆಳಗ್ಗೆಯೇ ಹಾಸನಕ್ಕೆ ಆಗಮಿಸಿದರು. ತಮ್ಮ ವೃತ್ತಿಯ ಬಾಂಧವರನ್ನು ಸಂಪರ್ಕಿಸಿದರು. ಅದಕ್ಕಿಂತ ಉತ್ಸಾಹದಲ್ಲಿ ಪತ್ರಕರ್ತರನ್ನು ಸಂಪರ್ಕಿಸಿ ತಾನು ಗಂಗೂರಿಗೆ ಹೋಗಿ ದಲಿತರಿಗೆ ಕ್ಷೌರ ಮಾಡುತ್ತೇನೆ ಬನ್ನಿ ಎಂದು ಕರೆದರು. ಅಂತೆಯೇ ಊರು ತಲುಪಿದರು. Gangoor-3ದಲಿತ ಯುವಕರಿಗಾಗಿ ತಡಕಾಡಿದರು. ಸಿಕ್ಕವರು ಒಬ್ಬರೋ-ಇಬ್ಬರೋ ಅಷ್ಟೆ. ಆ ಹೊತ್ತಲ್ಲಿ ಊರಲ್ಲಿದ್ದ ಕೆಲವರು ಸಿಕ್ಕಿದ್ದಾರೆ ಅಷ್ಟೆ. ಆದರೆ ಮುತ್ತುರಾಜ್ ಸುಮ್ಮನಾಗಲಿಲ್ಲ. ಅದೇ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿದ್ದಾರೆ. ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಹುಡುಗರಿಗೆ ಕಟಿಂಗ್ ಮಾಡಲು ಅನುಮತಿ ಪಡೆದು ಹತ್ತು ಮಕ್ಕಳಿಗೆ ಕಟಿಂಗ್ ಮಾಡಿದ್ದಾರೆ. ಅವರಲ್ಲಿ ದಲಿತರು, ಸವರ್ಣೀಯರು ಇದ್ದರು. ಒಬ್ಬ ಹುಡುಗಿಯ ಕೂದಲನ್ನೂ ಕತ್ತರಿಸಿದ್ದಾರೆ.

ಈ ಘಟನೆ ಊರಿನ ಜನರಿಗೆ ಗೊತ್ತಾಗುತ್ತಿದ್ದಂತೆಯೇ ಪೋಷಕರು ಆಕ್ರೋಶದಿಂದ ಶಾಲೆಗೆ ಬಂದು ದಾಂಧಲೆ ನಡೆಸಿದರು. ಆ ಹೊತ್ತಿಗೆ ಮುತ್ತುರಾಜ್ ಅಂಡ್ ಗ್ಯಾಂಗ್ ಊರಲ್ಲಿರಲಿಲ್ಲ. ’ನಮ್ಮ ಹುಡುಗರ ಹೇರ್ ಕಟ್ ಮಾಡಿಸಲು ನಿಮಗೆ ಅನುಮತಿ ಕೊಟ್ಟವರಾರು..? ನಾವು ಧರ್ಮಸ್ಥಳಕ್ಕೆಂದು ಮುಡಿ ಬಿಡಿಸಿದ್ದೆವು. ಅದ್ಹೆಂಗೆ ಕಟ್ ಮಾಡಿಸಿದರಿ. ಇವತ್ತು ಮಂಗಳವಾರ ಬೇರೆ, ನಾವು ಮಂಗಳವಾರ ಹೇರ್ ಕಟ್ ಮಾಡಿಸೋಲ್ಲ..” – ರೊಚ್ಚಿಗೆದ್ದರು ಜನ. ಇಡೀ ಊರಿನ ಗ್ರಾಮಸ್ಥರೆಲ್ಲ ಶಾಲೆಯ ಆವರಣದಲ್ಲಿ ಜಮಾಯಿಸಿದರು. ಪ್ರತಿಭಟನೆ ಕಾವು ಏರುತ್ತಿತ್ತು. ಜಿಲ್ಲಾಧಿಕಾರಿ, ಎಸ್.ಪಿ. ಸಮಾಜ ಕಲ್ಯಾಣ ಅಧಿಕಾರಿ, ತಹಸೀಲ್ದಾರ್.. ಎಲ್ಲರೂ ಊರಿಗೆ ಹೋಗಬೇಕಾಯಿತು.

ದಲಿತರ ದೇವಾಲಯ ಪ್ರವೇಶದಿಂದ ಒಳಗೊಳಗೇ ಕ್ರುದ್ಧಗೊಂಡಿದ್ದ ಅವರಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಸಿಕ್ಕಿತು. ಶಾಲಾ ಆವರಣದಲ್ಲಿ, ವಿದ್ಯಾರ್ಥಿಗಳ ಹೇರ್ ಕಟ್ ಗೆ ಅವಕಾಶ ಮಾಡಿಕೊಟ್ಟ ಶಿಕ್ಷಕ ಆಕ್ರೋಶಕ್ಕೆ ಗುರಿಯಾದರು. ಶಿಕ್ಷಣ ಇಲಾಖೆಯ ಹಿರಿಯರು ಸ್ಥಳಕ್ಕೆ ಬರಬೇಕಾಯಿತು. ಇಷ್ಟಕ್ಕೆಲ್ಲಾ ಕಾರಣ ದಲಿತರ ಜೊತೆಗೂಡಿ ಸವರ್ಣೀಯ ಹುಡುಗ/ಹುಡುಗಿಯರ ಹೇರ್ ಕಟ್ ಮಾಡಿದ್ದು.

ರಾತ್ರಿ ಹತ್ತರವರೆಗೆ ಆಕ್ರೋಶಗೊಂಡಿದ್ದ ಪೋಷಕರನ್ನು ಸಮಾಧಾನಪಡಿಸಲು ಜಿಲ್ಲಾಧಿಕಾರಿ, ಎಸ್.ಪಿ ಹರಸಾಹಸ ಮಾಡಬೇಕಾಯಿತು. ಸಮಾಧಾನ ಪಡಿಸುವ ಕ್ರಮವಾಗಿ, ಹೇರ್ ಕಟ್ ಮಾಡಿಸಲು ಕಾರಣರಾದರು ಎಂಬ ಆರೋಪದ ಮೇಲೆ 20 ಜನರ ವಿರುದ್ಧ ದೂರು ದಾಖಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಆರೋಪಿ ನಂಬರ್ 1. ಇತರರ ಪೈಕಿ ಮುತ್ತುರಾಜ್ ಕೂಡ ಒಬ್ಬರು. ಉಳಿದ ಹದಿನೆಂಟು ಜನ ಊರ ದಲಿತರು. ಅವರ ಹೆಸರುಗಳನ್ನು ಕೊಟ್ಟಿದ್ದು ಆ ಊರಿನ ಸವರ್ಣೀಯರು. ಆ ಪಟ್ಟಿಯಲ್ಲಿ ದೇವಾಲಯ ಪ್ರವೇಶ ಪ್ರಕ್ರಿಯೆಯ ಮುಂದಾಳತ್ವ ವಹಿಸಿದ್ದ ಅನೇಕರಿದ್ದರು. ಅವರಲ್ಲಿ ಕೆಲವರು ಈ ಹೇರ್ ಕಟ್ ಪ್ರಸಂಗ ನಡೆದಾಗ ದೂರದ ಹಾಸನದಲ್ಲಿದ್ದರೂ, ಅವರ ಮೇಲೆ ಹೇರ್ ಕಟ್ ಮಾಡಿಸಲು ಪ್ರಚೋದನೆ ನೀಡಿದರು ಎಂದು ಆರೋಪಿಸಿ ದೂರು ದಾಖಲಾಗಿದೆ. ಉದ್ವಿಗ್ನಗೊಂಡಿದ್ದ ಹಳ್ಳಿಯ ಪರಿಸ್ಥಿತಿ ತಿಳಿಗೊಳಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ, ಆದರೆ ಹಾಗಂತ ಅಮಾಯಕರನ್ನು ಜೈಲಿಗೆ ತಳ್ಳಿದ್ದು ಸರಿಯೆ?

ಮುತ್ತುರಾಜ್ ಇಲ್ಲಿ ಬಂದು ಸಾಧಿಸುವಂತದ್ದೇನೂ ಇರಲಿಲ್ಲ. ಕಾರಣ ಇಷ್ಟೆ. ಬೇರೆ ಊರಿನಿಂದ ಬಂದು ಒಂದು ದಿನದ ಮಟ್ಟಿಗೆ ಹೇರ್ ಕಟಿಂಗ್ ಮಾಡುವ ಮೂಲಕ ಬಗೆಹರಿಸುವಂತಹ ಸಮಸ್ಯೆ ಇದಾಗಿರಲಿಲ್ಲ. ಅದೇ ಊರಿನ ಕ್ಷೌರಿಕ ದಲಿತರಿಗೂ ಕ್ಷೌರ ಮಾಡಲು ಸಿದ್ಧನಿದ್ದರು. ಆದರೆ, ಅದಕ್ಕೆ ಮೇಲ್ವರ್ಗದವರ ವಿರೋಧವಿತ್ತು. ಆ ಕಾರಣ ಆತ ದಲಿತರಿಗೆ ಕಟಿಂಗ್ ಮಾಡುತ್ತಿರಲಿಲ್ಲ. ಮುಖ್ಯವಾಗಿ ಬದಲಾಗಬೇಕಿದ್ದು ಸವರ್ಣೀಯರ ಮನಸ್ಥಿತಿ, ಅವರ ಆಲೋಚನ ವಿಧಾನ. ಅಂತಹ ಪರಿಣಾಮಗಳಿಗೆ ಯಾವುದೇ ಪ್ರಯತ್ನ ಮಾಡದ ಮುತ್ತುರಾಜ್ ಏಕಾಏಕಿ ಶಾಲೆಯ ಆವರಣದಲ್ಲಿ ಕಟಿಂಗ್ ಮಾಡಿ ಸಾಧಿಸಿದ್ದೇನು? ಪ್ರಚಾರದ ಹುಚ್ಚು ಅಲ್ಲದೆ, ಅವರ ಉದ್ದೇಶದಲ್ಲಿ ಮತ್ತೇನೂ ಕಾಣುವುದಿಲ್ಲ. ಇಲ್ಲವಾದಲ್ಲಿ, ಸುದ್ದಿ ತಿಳಿದ ತಕ್ಷಣ ಮಾಧ್ಯಮ ತಂಡದೊಂದಿಗೆ ಆ ಹಳ್ಳಿಗೆ ಭೇಟಿ ಕೊಡುವುದರ ಅಗತ್ಯವೇನಿತ್ತು?

ಮುತ್ತುರಾಜ್ ತಮ್ಮ ಈ ಪ್ರಸಂಗದಿಂದ ಸವರ್ಣೀಯರು ತಮಗೆ ದಲಿತರ ಮೇಲಿದ್ದ ಆಕ್ರೋಶವನ್ನು ಪೊಲೀಸ್ ಕೇಸಿನ ಮೂಲಕ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟರು. Gangoor-4ಇಂತಹದೊಂದು ಅವಕಾಶವನ್ನು ’ದುರುಪಯೋಗ’ ಮಾಡಿಕೊಂಡ ಅವರು ಆ ಪ್ರಸಂಗದ ವೇಳೆ ಆ ಊರಿನಲ್ಲಿ ಇಲ್ಲದಿದ್ದ ಹುಡುಗರ ಹೆಸರನ್ನು ಕೇಸಿನಲ್ಲಿ ದಾಖಲು ಮಾಡಿದರು. ಆ ಮೂಲಕ ’ದೇವಾಲಯ ಪ್ರವೇಶ’ ದ ಪ್ರಯತ್ನ ನಡೆಸಿದವರಿಗೆ ’ತಕ್ಕ ಪಾಠ’ ಕಲಿಸಿದ್ದೇವೆಂದು ಅವರು ಬೀಗುತ್ತಿರಬಹುದು!

ಶಾಂತಿ ನೆಲೆಸುವ ನೆಪ ಇಟ್ಟುಕೊಂಡು, ಮೇಲ್ವರ್ಗದವರು ಕೊಟ್ಟ ಹೆಸರುಗಳ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಅವರ ಹಿಂದೆ ಬಿದ್ದಿದ್ದಾರೆ. ಇದುವರೆಗೆ ಆರು ಮಂದಿ ಅರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದವರನ್ನು ಸದ್ಯದಲ್ಲೇ ಬಂಧಿಸಿದರೂ ಅಚ್ಚರಿ ಇಲ್ಲ. ಪಟ್ಟಿಯಲ್ಲಿ ಇನ್ನೂ ಕೆಲವು ಮಹಿಳೆಯರಿದ್ದಾರೆ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಮುತ್ತುರಾಜ್ ದೂರದಲ್ಲೆಲ್ಲೋ ಹಾಯಾಗಿದ್ದಾರೆ.

ದಲಿತರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿದುದರ ಪರಿಣಾಮ ಇಷ್ಟೆಲ್ಲಾ ಎದುರಿಸಬೇಕಾಯಿತು. ಇಂತಹ ಘಟನೆಗಳು ಹಕ್ಕುಗಳಿಗೆ ಒತ್ತಾಯಿಸುವ ಎಷ್ಟೋ ದಲಿತರ ಉತ್ಸಾಹವನ್ನು ಬಾಡಿಸುತ್ತವೆ. ಈಗ ಆ ಊರಲ್ಲಿ, ಈ ಯುವಕರನ್ನು ಹಿರಿಯರು ಇದೇ ಕಾರಣಕ್ಕೆ ಬಯ್ಯುತ್ತಿದ್ದಾರೆ. ’ಇಷ್ಟು ದಿನ ನಾವು ಇರಲಿಲ್ಲವಾ, ಹಂಗೆ ಇರೋಕೆ ಇವರಿಗೇನು ಬಂದಿತ್ತು ಕಷ್ಟ. ಈಗ ಜೈಲಲ್ಲಿ ಕುಂತು ಅನುಭವಿಸುತ್ತಿದ್ದಾರೆ..” ಎಂದು ಮಾತನಾಡುತ್ತಿದ್ದಾರೆ. ಹಾಗಾದರೆ, ಆ ಅಮಾಯಕ ದಲಿತ ಹುಡುಗರು ಮಾಡಿದ್ದ ತಪ್ಪಾದರು ಏನು?

ದಲಿತ ಪರ ಇರುವ ಮನಸುಗಳಿಗೆ ಕಾಡುವ ಬಹು ಮುಖ್ಯ ಪ್ರಶ್ನೆ: ಯಾರೋ ಬಂದು ದಲಿತ ಹುಡುಗರ ಜೊತೆಯಾಗಿ ನಮ್ಮ ಹುಡುಗರ ಹೇರ್ ಕಟ್ ಮಾಡಿದರು ಎಂಬ ಕಾರಣಕ್ಕೆ ಅವಮಾನವಾಯಿತು ಎಂದು ರೊಚ್ಚಿಗೇಳುವ ಮೇಲ್ವರ್ಗದವರಿಗೆ, ಶತಶತಮಾನಗಳ ಕಾಲ ಅವಮಾನವನ್ನು ಉಂಡು, ಹೊದ್ದು, ಅನುಭವಿಸಿ ಬದುಕುತ್ತಿರುವ ದಲಿತರ ಬಗ್ಗೆ ಏನೂ ಅನ್ನಿಸುತ್ತಿಲ್ಲವೆ?

ತಮ್ಮ ಮಲ ಅವರು ಹೊತ್ತಾಗ, ತಮ್ಮ ಕೊಟ್ಟಿಗೆಯ ದನ ಸತ್ತಾಗ ಅವರು ಬಂದು ’ದೇವರ ಹೆಣ’ವನ್ನು ಊರಾಚೆಗೆ ಸಾಗಿಸಿದಾಗ, ಅವರು ನೀರು ಬೇಕೆಂದಾಗಲೆಲ್ಲ ಎರಡು ಅಡಿ ದೂರದಲ್ಲೇ ನಿಂತು ಮೇಲಿಂದ ಹುಯ್ದಾಗ, ತಮ್ಮ ಕಸವನ್ನು ಅವರು ಬಾಚಿದಾಗ, ಇಷ್ಟು ವರ್ಷಕಾಲ ಭೂಮಿಯ ಒಡೆತನ ಇಲ್ಲದೆ, ಶಿಕ್ಷಣ ಇಲ್ಲದೆ ವ್ಯಥೆ ಪಟ್ಟು ಇಂದಿಗೂ ಅಸ್ಪೃಶ್ಯರೇ ಆಗಿ ಉಳಿಸಿರುವ ಬಗ್ಗೆ ಒಂದು ಸಾರಿಯಾದರು ’ಅವಮಾನ’ ಆಗಲಿಲ್ಲವೇ ಈ ಮೇಲ್ವರ್ಗದವರಿಗೆ?

12 Years a Slave – ಮೈಮನಗಳನ್ನು ಗಾಯಗೊಳಿಸುವ ಕಥಾನಕ

– ಬಿ. ಶ್ರೀಪಾದ ಭಟ್

2013 ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಬ್ರಿಟೀಶ್-ಅಮೇರಿಕನ್ ಹಾಲಿವುಡ್ ಸಿನಿಮಾ 12 Years a Slave ನಮ್ಮಲ್ಲಿ ಈ ತಿಂಗಳು ಬಿಡುಗಡೆಯಾಯ್ತು. 12-years-a-slave-book“Solomon Northup” ಬರೆದ “1853 Memoir” ಆತ್ಮಕಥೆಯನ್ನಾಧರಿಸಿ ಈ ಸಿನಿಮಾ ತಯಾರಾಗಿದೆ. ಇದರ ನಿರ್ದೇಶಕರು Steve McQueen. 1841 ರಲ್ಲಿ ಅಮೇರಿಕಾದಲ್ಲಿ ಜರಗುವ ಇದರ ಕತೆ ಸ್ಥೂಲವಾಗಿ ಹೀಗಿದೆ: Solomon Northup> (Chiwetel Ejiofor) ನ್ಯೂಯಾರ್ಕನ ನೀಗ್ರೋ ಪ್ರಜೆ. ಹೆಂಡತಿ ಮತ್ತು ಇಬ್ಬರು ಮಕ್ಕಳ ಸಂಸಾರ ಈತನದು. ವೃತ್ತಿಯಿಂದ ಕಾರ್ಪೆಂಟರ್ ಆಗಿರುವ ಈ ಸೋಲೋಮನ್‌ಗೆ ವಯೋಲಿನ್ ನುಡಿಸುವುದು ಒಂದು ಹವ್ಯಾಸ. ಒಂದು ದಿನ ಕೆಲವು ಆಗುಂತಕರು ಬಂದು ನಿನಗೆ ವಾಷಿಂಗ್ಟನ್‌ನಲ್ಲಿ ಏಳು ದಿನಗಳ ಕಾಲ ಸಂಗೀತಗಾರನ ಉದ್ಯೋಗವನ್ನು ಕೊಡಿಸುತ್ತೇವೆ ಎಂದು ನಂಬಿಸಿ ಸೋಲೋಮನ್‌ಗೆ ಮೋಸದಿಂದ ಮತ್ತು ಬರುವ ಔಷದಿಯನ್ನು ಕುಡಿಸುತ್ತಾರೆ. ಡ್ರಗ್‌ನ ಪ್ರಭಾವದಿಂದ ಚೇತರಿಸಿಕೊಂಡ ಸೋಲೋಮನ್ ಎಚ್ಚೆತ್ತಾಗ ಸರಪಳಿಯಲ್ಲಿ ಬಂಧಿತನಾಗಿರುತ್ತಾನೆ. ಜೀತದಾಳಾಗಿ ಸೋಲೋಮನ್ ಮಾರಾಟವಾಗಿರುತ್ತಾನೆ. ತನ್ನ ಊರಿನಲ್ಲಿ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದಿದ್ದ ನೀಗ್ರೋ ಸೋಲೋಮನ್‌ನನ್ನು ಕೆಲವೇ ನಿಮಿಷಗಳಲ್ಲಿ ಗಲೀಜಾದ ಸೆಲ್‌ನ ಗೋಡೆಗಳ ನೆರಳುಗಳಿಂದ ಆವೃತನಾಗಿ, ಸರಪಳಿಯಿಂದ ಬಂಧಿತನಾಗಿರುವುದನ್ನು ಕಂಡು ಸ್ವತಃ ಸೋಲೋಮನ್‌ನಂತೆಯೇ ಪ್ರೇಕ್ಷಕನೂ ಸಹ ಅಘಾತಗೊಳ್ಳುತ್ತಾನೆ. ಈ ದೃಶ್ಯದಲ್ಲಿ ಆತನನ್ನು ಜೀತದಾಳನ್ನಾಗಿಸಿದ ಅಪಹರಣಕಾರ ನೀಗ್ರೋ ಸೋಲೋಮನ್‌ನ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಾನೆ. ಪ್ರಾಣಿಗಳಿಗಿಂತಲೂ ಹಿನಾಯವಾಗಿ ನಡೆಸಿಕೊಳ್ಳುತ್ತಾನೆ. (ಈ ಹಲ್ಲೆಯ ಕ್ರೌರ್ಯ ನಮ್ಮನ್ನು ಇಡೀ ಚಿತ್ರದುದ್ದಕ್ಕೂ ಕಾಡುತ್ತದೆ. ಬೆಚ್ಚಿಬೀಳಿಸುತ್ತದೆ. ಕರಿಯರ ಮೇಲಿನ ಹಿಂಸೆ ನಮ್ಮ ನರನಾಡಿಗಳನ್ನು ತಣ್ಣಗಾಗಿಸುತ್ತದೆ. ಚಿತ್ರಮಂದಿರದಿಂದ ಹೊರಬಂದ ನಂತರವೂ ನಮಗೆ ಈ ಹಿಂಸೆಯಿಂದ ಬಿಡುಗಡೆ ಸಿಗುವುದಿಲ್ಲ. ಇಲ್ಲಿ ನಿರ್ದೇಶಕ ನಮ್ಮನ್ನು ಕೇವಲ ಶಾಕ್‌ಗೊಳಿಸುವ ಉದ್ದೇಶದಿಂದ, ರೋಚಕತೆಗೋಸ್ಕರ ಹಿಂಸೆಯನ್ನು ಪರದೆಯ ಮೇಲೆ ಜಾಳು ಜಾಲಾಗಿ ಚೆಲ್ಲಾಡುವುದಿಲ್ಲ, ಬದಲಾಗಿ ನಮ್ಮಲ್ಲಿನ ಸವರ್ಣೀಯ ಜಾತಿಗಳು ತಳಸಮುದಾಯಗಳ ಮೇಲೆ ದಾಳಿ ನಡೆಸುವ ಹಾಗೆಯೇ 19ನೇ ಶತಮಾನದ ಪಶ್ಚಿಮ ರಾಷ್ಟ್ರಗಳು ಅದರಲ್ಲೂ ಅಮೇರಿಕಾ ಅತ್ಯಂತ ಅಸೂಕ್ಷ್ಮವಾಗಿ, ಫ್ಯೂಡಲ್ ಮನಸ್ಥಿತಿಯಿಂದ ವರ್ತಿಸಿದೆ ಎಂದು ಪ್ರೇಕ್ಷಕನ ಮುಂದೆ ಸೈದ್ಧಾಂತಿಕ ಬದ್ಧತೆಯಿಂದ, ವೈಚಾರಿಕತೆಯಿಂದ ಬಿಚ್ಚಿಡುತ್ತಾನೆ. ಇಲ್ಲಿ ಹಿಂಸೆಯ ವೈಭವೀಕರಣವಿಲ್ಲ, ಆದರೆ ಅದರ ಕ್ರೌರ್ಯ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ.) ಜೀತದಾಳುಗಳ ವ್ಯಾಪಾರಿ ಫ್ರೀಮನ್ ಈತನಿಗೆ “ಪ್ಲಾಟ್” ಎಂದು ಮರುನಾಮಕರಣ ಮಾಡಿ ಲೂಸಿಯಾನಾದ ಪ್ಲಾಂಟೇಶನ್ ಮಾಲೀಕ ವಿಲಿಯಮ್ ಫೋರ್ಡಗೆ ಮಾರಾಟ ಮಾಡುತ್ತಾನೆ.

ಸೋಲೋಮನ್ ತನ್ನ ಸಜ್ಜನಿಕೆಯಿಂದ, ಕಾರ್ಪೆಂಟರ್ ವೃತ್ತಿಯ ಕುಶಲತೆಯಿಂದ ಪೋರ್ಡನ ಮೆಚ್ಚುಗೆ ಗಳಿಸುತ್ತಾನೆ, ಹಾಗೆಯೇ ಆತನಿಂದ ವೈಯೋಲಿನ್ ಅನ್ನು ಕಾಣಿಕೆಯಾಗಿ ಪಡೆಯುತ್ತಾನೆ. ಆದರೆ ಇಲ್ಲಿಯೂ ಸೋಲೋಮನ್‌ಗೆ ಕೆಟ್ಟದಿನಗಳು ಬೆನ್ನು ಹತ್ತುತ್ತವೆ. 12-years-a-slaveಇಲ್ಲಿ ಜನಾಂಗೀಯವಾದಿ ಕಾರ್ಪೆಂಟರ್ ಜಾನ್ ಟಿಬೇಟ್ಸ್ ಸೋಲೋಮನ್‌ನ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿರುತ್ತಾನೆ. ಈ ಟಿಬೇಟ್ಸ್ ಎನ್ನುವ ಜನಾಂಗೀಯವಾದಿ ಬಾಯಲ್ಲಿ ಕೋಳಿಯನ್ನು ಕಚ್ಚಿ ಹಿಡಿದು ಪೌಲ್ಟ್ರಿ ಫಾರ್ಮನಿಂದ ಹೊರ ಬರುವ ದೃಶ್ಯವೇ ನಮಗೆ ಆತನ ಕ್ರೌರ್ಯದ ಮನಸ್ಥಿತಿಯನ್ನು ಪರಿಚಯ ಮಾಡಿಕೊಡುತ್ತದೆ. ಆದರೆ ಧ್ರತಿಗಡೆದ ಸೋಲೋಮನ್ (ಫ್ಲಾಟ್) ತಿರುಗಿಬೀಳುತ್ತಾನೆ. ಪ್ರತಿರೋಧಿಸುತ್ತಾನೆ. ಕಡೆಗೆ ಮಾಲೀಕ ಫೋರ್ಡ ಸೋಲೋಮನ್‌ನನ್ನು ಈ ಲುಂಪೆನ್ ಗುಂಪಿಂದ ರಕ್ಷಿಸುತ್ತಾನೆ. ಆದರೆ ಬಹುದಿನಗಳ ಕಾಲ ಈ ಲುಂಪೆನ್ ಗುಂಪಿನಿಂದ ರಕ್ಷಿಸಲು ಸಾಧ್ಯವಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸುವ ಫೋರ್ಡ ಕಡೆಗೆ ಸೋಲೋಮನ್ ಅನ್ನು ಜೀವರಕ್ಷಣೆಯ ಸಲುವಾಗಿ ಮತ್ತೊಬ್ಬ ಫ್ಯೂಡಲಿಸ್ಟ್ ಎಡ್ವಿನ್ ಎಪ್ಸ್‌ಗೆ ಮಾರುತ್ತಾನೆ. ಈ ಎಪ್ಸ್ ಒಬ್ಬ ಸಾಡಿಸ್ಟ್, ವಿಕೃತವಾದಿ. ಕರಿಯರನ್ನು ಹಿಂಸಿಸುವುದು ತನ್ನ ಹಕ್ಕೆಂಬಂತೆ ವರ್ತಿಸುವ ಎಪ್ಸ್ ತನ್ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರಿಯ ಜೀತದಾಳು ದಿನಕ್ಕೆ ಕನಿಷ್ಟ 200 ಪೌಂಡ್ ಹತ್ತಿಯನ್ನು ಸಂಗ್ರಹಿಸಬೇಕೆಂದು ಆಜ್ಞೆ ವಿಧಿಸುತ್ತಾನೆ. ಕಡಿಮೆ ಸಂಗ್ರಹಿಸಿದರೆ ಹೊಡೆತಗಳು ಗ್ಯಾರಂಟಿ. ಹೆಣ್ಣು ಜೀತದಾಳು ’ಪೇಸ್ಟೆ’ (Lupita Nyong’o) ದಿನವೊಂದಕ್ಕೆ 500 ಪೌಂಡ್ ಹತ್ತಿಯನ್ನು ಸಂಗ್ರಹಿಸುತ್ತಾಳೆ. ಸಾಡಿಸ್ಟ್ ಏಪ್ಸ್‌ನ ಕಣ್ಣು ಈಕೆಯ ಮೇಲೆ ಬೀಳುತ್ತದೆ. ಈತನ ಕಾಮನೆಯ ಅತಿರೇಕ ಯಾವ ಮಟ್ಟದ್ದೆಂದರೆ ಪೇಸ್ಟೆಯನ್ನು ಕಾಮನೆಯಿಂದ ಹಿಂಸಿಸುವ ದೃಶ್ಯ ನಮ್ಮನ್ನು ಅಲ್ಲಾಡಿಸುತ್ತದೆ. ಅವಳ ಮೇಲೆ ಅತ್ಯಾಚಾರ ನಡೆಸುತ್ತಾನೆ. ಇಲ್ಲಿ ನಿರ್ದೇಶಕ Slavery and racism ಅನ್ನು ತೆರೆಯ ಮೇಲೆ ಬರೆಯುವಾಗ ಎಲ್ಲಿಯೂ ಕಪ್ಪುಬಿಳುಪಿನ ಮನಸ್ಥಿಯನ್ನು ತೋರಿಸುವುದಿಲ್ಲ. ಬದಲಾಗಿ ಇತಿಹಾಸದ ಪುಟಗಳು ತಂತಾನೆ ನೈಜವಾಗಿ ಹೊಸ ಭಾಷ್ಯೆಯೊಂದಿಗೆ ತೆರೆಯ ಮೇಲೆ ಮೂಡತೊಡಗುತ್ತವೆ. ಅಮೇರಿಕಾ ಇನ್ನು ಮುಂದೆ ಶತಮಾನಗಳ ಕಾಲದ ತನ್ನ ಗ್ಲುಲಾಮಗಿರಿ ಮತ್ತು ವರ್ಣಭೇದವನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಕಲಾವಂತಿಕೆ ಮತ್ತು ನೈಜತೆಯ ಸಂಯೋಜನೆ ಯಶಸ್ಸನ್ನು ಸಾಧಿಸಿದೆ. ಈ ಫ್ಯೂಡಲ್ ಏಪ್ಸ್ ಪ್ಲಾಂಟೇಶನ್‌ನಲ್ಲಿ ಹಬ್ಬುವ ಪ್ಲೇಗ್ ಮಾದರಿಯ ರೋಗಕ್ಕೆ ಈ Slaves ಕಾರಣವೆಂದು ನಿರ್ಧರಿಸಿ ಪಕ್ಕದ ಪ್ಲಾಂಟರ್‌ಗೆ ಲೀಸ್‌ನ ಮೇಲೆ ಮಾರಿಬಿಡುತ್ತಾನೆ. ಅಲ್ಲಿಯೂ ಸಹ ಸೋಲೋಮನ್ ತನ್ನ ಸರಳತೆ ಮತ್ತು ಕುಶಲತೆಯಿಂದ ಪ್ಲಾಂಟರ್‌ನ ವಿಶ್ವಾಸ ಗಳಿಸಿ ಈ ಪ್ಲಾಂಟರ್‌ನ ಶಿಫಾರಸ್ಸಿನ ಮೂಲಕ ಮದುವೆ ಮನೆಗಳಲ್ಲಿ ವಯೋಲಿನ್ ನುಡಿಸುವ ಅವಕಾಶ ಗಿಟ್ಟಿಸುತ್ತಾನೆ. ನಂತರದ ದೃಶ್ಯಗಳಲ್ಲಿ ಸೋಲೋಮನ್, ಪೇಟ್ಸೆ ಮರಳಿ ಏಪ್ಸ್‌ಗೆ ಮಾರಲ್ಪಡುವ, ಅಲ್ಲಿನ ದೌರ್ಜನ್ಯಗಳ ವಿವರಣೆಯಿದೆ. ಕಡೆಗೆ 12 ವರ್ಷಗಳ ಜೀತದಿಂದ ಮುಕ್ತಿಗೊಂಡು ಸೋಲೋಮನ್ 1853ರಲ್ಲಿ ಮರಳಿ ತನ್ನ ಹೆಂಡತಿ ಮಕ್ಕಳೊಂದಿಗೆ ಕೂಡಿಕೊಳ್ಳುತ್ತಾನೆ. ತನ್ನನ್ನು ಹಾಗೂ ಇತರೇ ನೀಗ್ರೋ ಜನರ ಮೇಲೆ ನಡೆ ದೌರ್ಜನ್ಯದ ವಿರುದ್ಧ ಕಾನೂನು ಸಮರ ನಡೆಸುವ ವಿಫಲ ಪ್ರಯತ್ನ ಮಾಡುತ್ತಾನೆ.

ಚಿತ್ರಕತೆಯಲ್ಲಿ ಹಿಡಿತವನ್ನು ಸಾಧಿಸಿರುವ ನಿರ್ದೇಶಕ ಸ್ಟೀವ್ ಮೆಕ್ವೀನ್ ನಿರೂಪಣೆಯಲ್ಲಿ ಆಧುನಿಕ ತಾಂತ್ರಿಕ ನೈಪುಣ್ಯತೆಯನ್ನು, ಅದು ಕಟ್ಟಿಕೊಡಬಹುದಾದ ಮನಮೋಹಕ ಸುವರ್ಣ ಚೌಕಟ್ಟನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಮ್ಮ ಪರ್ಯಾಯ ಸಿನಿಮಾಗಳ ಕ್ಲಾಸಿಕ್ ಎನ್ನಬಹುದಾದ ತಂತ್ರವನ್ನು ಅನುಸರಿಸಿದ್ದಾನೆ. ಅಂದರೆ rawness ಅನ್ನು ಅದರ ಎಲ್ಲಾ ತಾಜಾತನದೊಂದಿಗೆ ಮನಮುಟ್ಟುವ ಕಥಾನಕವಾಗಿಸುತ್ತಾನೆ. (ಉದಾಹರಣೆ – ಗೋವಿಂದ ನಿಹಾಲನಿ ನಿದೇಶನದ ” ಆಕ್ರೋಶ್”, ಗೌತಮ್ ಘೋಷ್ ನಿರ್ದೇಶನದ “ಪಾರ್” ಸಿನಿಮಾಗಳು.) ಯಾರ ವಿರುದ್ಧವೂ ಆರೋಪದ, ಅಪಾದನೆಯ ಬೆರಳು ತೋರಿಸಲು ನಿರ್ದೇಶಕ ನಿರಾಕರಿಸುತ್ತಾನೆ. twelve-years-a-slave-michael-fassbenderಇಡೀ ಸಿನಿಮಾದ ಪಯಣವೇ ನಮ್ಮನ್ನು ಒಳಗೊಳ್ಳುತ್ತಾ, ಸಿನಿಮಾ ನೋಡುತ್ತಾ ಸೋಲೋಮನ್‌ನೊಂದಿಗೆ ಸ್ವಾತಂತ್ರ್ಯದ ಹುಡುಕಾಟದಲ್ಲಿ, ಬದುಕುವ ದಾರಿಗಾಗಿ ನಾವೂ ಪಯಣಿಸುತ್ತಿರುತ್ತೇವೆ.

ಸೋಲೋಮನ್ ಆಗಿ Ejiofor ನ ನಟನೆ ಅದ್ಭುತ. ಕರಿಯ ನೀಗ್ರೋನ ಪಾತ್ರವೇ ತಾನಾಗಿರುವ (ಭಕ್ತ ಕುಂಬಾರದಲ್ಲಿ ನಮ್ಮ ಡಾ.ರಾಜ್‌ರಂತೆ) ಇಜಿಯೋಫರ್‌ನ ನಟನೆಯ ಕುರಿತಾದ ಕಾಮನ್‌ಸೆನ್ಸ್ ನಮ್ಮನ್ನು ಚಕಿತಗೊಳಿಸುತ್ತದೆ. ಉದಾಹರಣೆಗೆ, ಅಪಹರಣಗೊಂಡು ಒಂದು ಪ್ಲಾಂಟೇಶನ್‌ನಿಂದ ಮತ್ತೊಂದು ಪ್ಲಾಂಟೇಶನ್‌ಗೆ ಮಾರಾಟಗೊಂಡು ಬೋಟಿನಲ್ಲಿ ಪಯಣಿಸುತ್ತಿದ್ದಾಗ ಈತನ ಜೊತೆಗಿರುವ ನೀಗ್ರೋ ಒಬ್ಬ “ನಾವು ಈ ಬಿಳಿಯ ಅಪಹರಣಕಾರರ ವಿರುದ್ಧ ಹೋರಾಡೋಣ” ಎನ್ನುತ್ತಾನೆ. ಮತ್ತೊಬ್ಬ ನೀಗ್ರೋ ಇದನ್ನು ತಿರಸ್ಕರಿಸಿ “ಹೋರಾಡಿ ಸಾಯುವುದು ಬದುಕುಳಿಯುವ ಲಕ್ಷಣವಲ್ಲ, ನಾವು ತಲೆತಗ್ಗಿಸಿ ಬದುಕಲೇಕು” ಎಂದು ವಾದಿಸಿದಾಗ ಇವರಿಬ್ಬರ ನಡುವೆ ಕುಳಿತಿದ್ದ ಸೋಲೋಮನ್ ಉದ್ಗರಿಸುತ್ತಾನೆ “You tell me all is lost?” For me, I don’t want to survive, I want to live.” ಇದೇ ಈ ಸಿನಿಮಾದ ಹೆಗ್ಗಳಿಕೆ. ಇಲ್ಲಿ ಮಾನವತಾವಾದ ಯಾವುದೇ ಚೀರುವಿಕೆಗಳಿಲ್ಲದೆ ಗೆಲ್ಲುತ್ತದೆ.

ಇನ್ನು ಸ್ಯಾಡಿಸ್ಟ್ ಜಮೀನ್ದಾರ ಎಪ್ಸ್ ಆಗಿ ನಟಿಸಿರುವ ಫಾಸ್‌ಬೆಂಡರ್ ನಮ್ಮನ್ನು ಅಲ್ಲಾಡಿಸಿಬಿಡುತ್ತಾನೆ. ದಶಕಗಳ ಕಾಲ, ಶತಮಾನಗಳ ಕಾಲ ಅಮೇರಿಕಾದ ಈ Slavery & Racism ನ ಇತಿಹಾಸವನ್ನು ತನ್ನ ನಟನೆಯ ಮೂಲಕ ನಮ್ಮ ಮುಂದೆ ಇಂಚಿಂಚೂ ಮಂಡಿಸುತ್ತಾನೆ. ಅನೇಕ ಕಡೆ ಫಾಸ್‌ಬೆಂಡರ್ ಅಮರೀಶ್‌ ಪುರಿಯ ಮೊಗ್ಯಾಂಬೋ ಶೈಲಿಗೆ ಜಿಗಿತ ಪಡೆದುಕೊಂಡು ನಿರ್ದೇಶಕನ ಸಾರ್ಥಕತೆಯನ್ನೇ, ಆಶಯಗಳನ್ನೇ ಮಣ್ಣುಗೂಡಿಸಿಬಿಡುತ್ತಾನಲ್ಲ ಎನ್ನುವ ಆತಂಕವುಂಟಾಗುವಷ್ಟರಲ್ಲಿ ಇದೇ ಫಾಸ್‌ಬೆಂಡರ್ ಇಡೀ ಚಿತ್ರದ ಗತಿಯನ್ನು ಮರಳಿ ಹಳಿಯ ಮೇಲೆ ತಂದು ನಿಲ್ಲಿಸುತ್ತಾನೆ. ಇದು ಈ ಸಿನಿಮಾದ ಮತ್ತೊಂದು ಗೆಲವು. ಕಡೆಗೆ ದೈಹಿಕವಾಗಿ, ಮಾನಸಿಕವಾಗಿ ಗಾಯಗೊಂಡ ಪ್ರೇಕ್ಷಕ ಚಿತ್ರಮಂದಿರದಿಂದ ಹೊರಬರುತ್ತಾನೆ

ಉತ್ತಮ ಸಿನಿಮಾ, ಶ್ರೇಷ್ಠ ನಾಯಕ ನಟ (Ejiofor), ಶ್ರೇಷ್ಠ ನಿರ್ದೇಶಕ (Steve McQueen), ಶ್ರೇಷ್ಠ ಪೋಷಕ ನಟ (Fassbender) ಜೊತೆಗೆ ಇನ್ನೂ ಇತರ ಕೆಲವು ವಿಭಾಗಗಳಲ್ಲಿ ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದೆ.