ಕಂಬಾರರಿಗೆ ಜ್ಞಾನಪೀಠ

ಕನ್ನಡವೂ ಸೇರಿದಂತೆ ಒಟ್ಟು ಭಾರತೀಯ ಸಮಾಜದ ಬಹು ಸಂಖ್ಯಾತ ಅಂಚಿನ ಸಮುದಾಯ ತನ್ನ ಸೃಜನಶೀಲತೆ, ಪ್ರತಿರೋಧಕ ಶಕ್ತಿ, ಸತ್ವವನ್ನು ಕಳೆದುಕೊಂಡು ದಿಕ್ಕು ಕಾಣದ ಸ್ಥಿತಿಯಲ್ಲಿರುವ ಹೊತ್ತಿದು. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ ಆಂತರಿಕ ಪುರೋಹಿತಶಾಹಿ ಹಾಗೂ ಬಾಹ್ಯ ವಸಾಹತುಶಾಹಿಗೆ ಪ್ರತಿಲೋಮತೆಯನ್ನು ಬಹುಜನರ ಅಂಚಿನ ಸಂಸ್ಖೃತಿಯಲ್ಲಿ ಕಂಡು, ತಂದು ತಮ್ಮ ಬರಹಗಳಲ್ಲಿ ಮುಖ್ಯವಾಗಿ ನೆಲೆಗೊಳಿಸಿದ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಿಜಕ್ಕೂ ಸಂತೋಷದಾಯಕ. ಈ ಪ್ರಶಸ್ತಿ ಅಂಚಿನ ಸಮುದಾಯದಿಂದ ಬಂದ ಮೊದಲ ಕನ್ನಡದ ಮುಖ್ಯ ಲೇಖಕರಾದ ಕುವೆಂಪುವಿನ ನಂತರ ಕಂಬಾರರಿಗೆ ಬಂದಿರುವುದು ಆಕಸ್ಮಿಕವೇನಲ್ಲ. ಈ ಪ್ರಶಸ್ತಿ ಕಂಬಾರರನ್ನು ಕುವೆಂಪುವಿನ ನಂತರ ಆ ಸಮುದಾಯದ ವಾರಸುದಾರರನ್ನಾಗಿಸಿದೆ. ಕುವೆಂಪು ಮತ್ತು ಕಂಬಾರರಿಬ್ಬರೂ ಅಂಚಿನ ಸಂಸ್ಕೃತಿಯ ಚಿಂತಕರೂ ಹೌದು.

ಕುವೆಂಪು ಅವರು ಪ್ರಧಾನ ಕಥನಮಾತೃಕೆ ಮರೆಮಾಚಿದ ಅಂಚಿನ ಸಮುದಾಯದ ಸೃಜನಶೀಲ ಧಾರೆಯನ್ನು ಸತ್ವವನ್ನೂ ಪತ್ತೆ ಹಚ್ಚಿ ಪ್ರಧಾನ ಮಾತೃಕೆಯೊಂದಿಗೆ ಸಾರ್ಥಕ ಸಂಘರ್ಷವನ್ನುಏರ್ಪಡಿಸಿದವರು. ಕಂಬಾರರು ಅಂಚಿನ ಸಮುದಾಯದ ಜೀವಂತ ಕಥನವನ್ನೇ ಆಶ್ರಯಿಸಿ ಪ್ರತಿರೋಧ ಒಡ್ಡಿದವರು. ಕುವೆಂಪು ಬಹುಸಂಖ್ಯಾತ ಸಮುದಾಯದ ಸಿದ್ಧಾಂತಿಯಾದರೆ ಕಂಬಾರರು ವಕ್ತಾರರಾಗಿದ್ದಾರೆ ಎನ್ನಬಹುದು.

ಕಂಬಾರರ ಕಾವ್ಯ ದೇಶೀ ಭಾಷೆ ಮತ್ತು ವಸ್ತುವನ್ನು ಪ್ರಧಾನವಾಗಿ ಆಶ್ರಯಿಸಿದೆ. ಹಾಗೆಂದ ಮಾತ್ರಕ್ಕೆ ಕಂಬಾರರು ದೇಶೀ ಸಂಸ್ಕೃತಿ ಒಳಗಿನ ಲೋಪಗಳನ್ನು ಒಪ್ಪಿದವರಲ್ಲ. ಅವರ ಕಾವ್ಯ ನಮ್ಮ ಸಮಾಜದ ಪಾಳೇಗಾರಿಕೆ ಪುರೋಹಿತಶಾಹಿಯನ್ನು ಪ್ರಬಲವಾಗಿ ವಿರೋಧಿಸಿದೆ. ಅದಕ್ಕೆ ಬದಲಾಗಿ ಬಹುಸಂಖ್ಯಾತ ಕಥಾ ಪ್ರಭುತ್ವವಾಗದಿ ನೆಲೆಯನ್ನು ಎತ್ತಿ ಹಿಡಿದಿದೆ. ಇದಕ್ಕೂ ಮುಖ್ಯವಾಗಿ ಕಂಬಾರರ ಕಾವ್ಯ ಎಂದೂ ಜೀವಪರವಾಗಿದೆ. ಯಾಕೆಂದರೆ ನವ್ಯ ಭರಾಟೆಯ ಹೊತ್ತಿನಲ್ಲೇ ಕಾವ್ಯ ಬರೆಯಲು ಆರಂಭಿಸಿದ ಕಂಬಾರರು ಕಾಮದಂತಹ ವಿಷಯವನ್ನು ಸಮಷ್ಟಿಯ ಸಮಚಿತ್ತದೊಡನೆ ವ್ಯಷ್ಟಿಯ ಮಹತ್ವವನ್ನೂ ಪರಿಗಣಿಸಿ ಸಮ್ಮಿಲನಗೊಳಿಸಿದವರು. ಇಂತಹ ಜೀವಪರತೆಯೇ ಕನ್ನಡ ಸಮಾಜದ ಎಲ್ಲಾ ಕಾಲದ ಜೀವಪರತೆಯೂ ಹೌದು.

– ನಂದೀಶ್ ಹಂಚೆ

Leave a Reply

Your email address will not be published. Required fields are marked *