Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಅಣ್ಣಾ ಹಜಾರೆ, ರಾಮಚಂದ್ರ ಗುಹಾ, ಗಂಗಾಧರ ಮೊದಲಿಯಾರ್‌

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಇಂದಿನ ಎರಡು ಅಂಕಣ ಲೇಖನಗಳು ಬಹಳ ಗಂಭೀರ ವಿಚಾರಗಳನ್ನು ಪ್ರಬುದ್ಧವಾಗಿ ಮತ್ತು ತೀಕ್ಷಣವಾಗಿ ಮಂಡಿಸಿವೆ.

ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾರ “ಅಣ್ಣಾ ಹಜಾರೆ ಹೋರಾಟದ ಶಕ್ತಿ ಮತ್ತು ಮಿತಿ” ಲೇಖನ ಹಜಾರೆಯವರ ಹೋರಾಟವನ್ನಷ್ಟೆ ಅಲ್ಲದೆ ಅವರ ಕೆಲವು ಚಿಂತನೆಗಳನ್ನೂ ಸಹ ವಿಮರ್ಶೆಗೆ ಒಡ್ಡಿದೆ. ನನ್ನ ಪ್ರಕಾರ ಆ ಲೇಖನದ ಬಹುಮುಖ್ಯ ಅಂಶಗಳು ಇವು:

“ಹಾಗೆ ಹೇಳಿದ ನಂತರವೂ ಅಣ್ಣಾ ಜೊತೆಗೆ ಅತಿಯಾಗಿ ಗುರುತಿಸಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹಜಾರೆ  ಒಳ್ಳೆಯ ವ್ಯಕ್ತಿ. ಬಹುಶಃ ಸಂತನಂತಹ ವ್ಯಕ್ತಿ. ಆದರೆ ಅವರ ಗ್ರಹಿಕೆ, ಗ್ರಾಮದ ಹಿರಿಯನ ಮಟ್ಟದಲ್ಲಷ್ಟೇ ಉಳಿದುಬಿಡುತ್ತದೆ.

ಅಣ್ಣಾ ಹಜಾರೆ ಅವರ ಶಕ್ತಿ ಹಾಗೂ ಮಿತಿಗಳೆರಡನ್ನೂ  ಈ ವರ್ಷದ ಕೊನೆಗೆ ಬಿಡುಗಡೆ ಆಗಲಿರುವ ಮುಕುಲ್ ಶರ್ಮಾ ಅವರ `ಗ್ರೀನ್ ಅಂಡ್ ಸ್ಯಾಫ್ರನ್` ಪುಸ್ತಕದಲ್ಲಿ ಚೆನ್ನಾಗಿ ಗುರುತಿಸಲಾಗಿದೆ. ಶರ್ಮಾ ಅವರು ಬಹಳ ಜನ ಮೆಚ್ಚುವಂತಹ ಪರಿಸರ ಪತ್ರಕರ್ತ.

ರಾಲೇಗಾಂವ್ ಸಿದ್ಧಿಯಲ್ಲಿ ವ್ಯಾಪಕ ಕ್ಷೇತ್ರಕಾರ್ಯವನ್ನು ಅವರು ಮಾಡಿದ್ದಾರೆ. ಅಲ್ಲಿ ಕಂಡ ಸಂಗತಿಗಳಿಂದ ಅವರು ಪ್ರಭಾವಿತರಾಗಿದ್ದಾರೆ. ಸಮರ್ಪಕ  ಜಲ ನಿರ್ವಹಣೆ ಬೆಳೆ ಇಳುವರಿಯನ್ನು ಸಾಕಷ್ಟು ಹೆಚ್ಚಿಸಿದೆ. ಇದರಿಂದಾಗಿ ಆದಾಯ ಹೆಚ್ಚಿ ಸಾಲದ ಹೊರೆಗಳನ್ನೂ  ಜನರಿಗೆ ಕಡಿಮೆ ಮಾಡಿದೆ. ಬದಲಿಗೆ, ಅಣ್ಣಾ ಹಜಾರೆ ಅವರ ಮಾರ್ಗ `ಆಳದಲ್ಲಿ ಬ್ರಾಹ್ಮಣಿಕೆ`ಯದು ಎಂಬುದನ್ನೂ ಅವರು ಕಂಡುಕೊಂಡಿದ್ದಾರೆ.

ಮದ್ಯ, ತಂಬಾಕು ಹಾಗೂ ಕೇಬಲ್ ಟಿವಿಗೂ ಅಲ್ಲಿ ನಿಷೇಧವಿದೆ. ಸಸ್ಯಾಹಾರವನ್ನೇ ಅಳವಡಿಸಿಕೊಳ್ಳಲು ದಲಿತ ಕುಟುಂಬಗಳಿಗೆ ಒತ್ತಾಯಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರನ್ನು ಕಂಬಕ್ಕೆ ಕಟ್ಟಿ  ಹೊಡೆಯಲಾಗಿದೆ.

ಹಜಾರೆಯವರ ಸೂಚನೆಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗಳೇ ನಡೆದಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಚುನಾವಣೆಗಳ ಸಂದರ್ಭಗಳಲ್ಲಿ, ರಾಲೇಗಾಂವ್ ಸಿದ್ಧಿಯಲ್ಲಿ ಪ್ರಚಾರಕ್ಕೇ ಅವಕಾಶ ನೀಡಿರಲಿಲ್ಲ. `ಆಧುನಿಕ ಪ್ರಜಾಪ್ರಭುತ್ವದ ಅನೇಕ ನಿರ್ಣಾಯಕ ಆದರ್ಶಗಳಿಗೆ ಹೊರತಾಗಿರುವುದು, ಈ ಪ್ರಾಮಾಣಿಕ ಸುಧಾರಣಾ ಪ್ರಯೋಗದಲ್ಲಿ ಬಹುಮುಖ್ಯವಾದದ್ದು` ಎಂದು ಈ ವರದಿಗಾರ ಬರೆದಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಅಣ್ಣಾ ಹಜಾರೆ ಅವರು ಸ್ವಯಂಪ್ರೇರಿತರಾಗಿ ನೀಡುತ್ತಿರುವ ಹೇಳಿಕೆಗಳು ವಿಶ್ವಾಸವನ್ನು ಮೂಡಿಸುವುದಿಲ್ಲ.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕಕ್ಕೆ ಇಷ್ಟೇ ಮುಖ್ಯವಾದ ಲೇಖನ ಗಂಗಾಧರ ಮೊದಲಿಯಾರ್‌ರ “ಸಿನಿಮಾದೊಳಗೇ ಒಬ್ಬ `ಅಣ್ಣಾ’ ಇದ್ದಾನಲ್ಲಾ” ಅಂಕಣ ಲೇಖನ. It’s a shame that something of this importance and critical had to be published in a cinema supplement rather in the op-ed page. ಈ ಲೇಖನ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವ ಸಿನಿಮಾ ಲೋಕದ ವ್ಯಕ್ತಿಗಳ ಹಿನ್ನೆಲೆಯಲ್ಲಿ ಕೆಲವು ಕೇಳಲೇಬೇಕಿದ್ದ ಪ್ರಶ್ನೆಗಳನ್ನು ಎತ್ತಿರುವುದೇ ಅಲ್ಲದೆ ಹೇಳಲೇಬೇಕಾದ ಉತ್ತರಗಳನ್ನೂ ಕೊಡುತ್ತದೆ. ಆ ಲೇಖನದ ಕೆಲವು ಸಾಲುಗಳು:

“ಲಾಂಗು ಮಚ್ಚುಗಳನ್ನು ಹಿಡಿದು, ಭೂಗತ ಲೋಕದ ಡಾನ್ ಆಗಿ, ಯುವಕರು ಕತ್ತಿ, ಚಾಕು ಚೂರಿ ಹಿಡಿಯಲು ಪ್ರೇರಣೆಯಾಗುವ `ಜೋಗಯ್ಯ` ಚಿತ್ರದ ಬಿಡುಗಡೆಗೆ ಎರಡು ದಿನ ಮುಂಚೆ ನಟ ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಸ್ವಾತಂತ್ರ್ಯಯೋಧರ ಉದ್ಯಾನವನದಲ್ಲಿ ನಡೆಯುತ್ತಿರುವ ನಿರಶನ ವೇದಿಕೆಯಲ್ಲಿ ಕಾಣಿಸಿಕೊಂಡರು.

ಸಿನಿಮಾ ನಟರು ಹೀಗೆ ದೇಶ ಸೇವೆಗೆ ಮುಂದಾಗುತ್ತಿರುವ ವೇಳೆಯಲ್ಲೇ ಕೆಲ ದಿನಗಳ ಹಿಂದೆ ನಡೆದ ಕೆಲವು ಘಟನೆಗಳನ್ನು ಸ್ವಲ್ಪ ಗಮನಿಸಿ.  ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ನಿರ್ಮಾಪಕ ಕೆ.ಮಂಜು ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ಕಿರುತೆರೆ ನಟರೂ, ನಿರ್ಮಾಪಕರೂ, ನಿರ್ದೇಶಕರೂ ಆಗಿರುವ ಸಿಹಿಕಹಿ ಚಂದ್ರು, ರವಿಕಿರಣ್ ಅವರುಗಳ ಭವ್ಯ ಬಂಗಲೆಗಳನ್ನು ಜಾಲಾಡಲಾಯಿತು. ಕೆಲವು ನಟರು, ನಿರ್ದೇಶಕರು, ನಟಿಯರು ಟಿವಿ ಚಾನಲ್ ಕಚೇರಿಗೆ ನುಗ್ಗಿ, ದಾಂದಲೆ ಮಾಡಿ ಸುದ್ದಿ ಮಾಡಿದರು. ಅತ್ತ ಕೇರಳದಲ್ಲಿ ಸೂಪರ್‌ಸ್ಟಾರ್‌ಗಳೆಂದೇ ಅಭಿಮಾನಿಗಳು ಆರಾಧಿಸುವ ಮುಮ್ಮಟಿ, ಮೋಹನ್‌ಲಾಲ್ ಅವರುಗಳ ಮನೆಗಳ ಮೇಲೆ ಸತತ ಮೂರುದಿನ ಆದಾಯ ತೆರಿಗೆ ವಂಚನೆ ಶಂಕೆಯಿಂದ ದಾಳಿ ನಡೆಸಿದ ತನಿಖಾಧಿಕಾರಿಗಳು ತಲಾ 30 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಂಡರು. ಇಂತಹ ಜನ ಇಂದು `ಜನಲೋಕಪಾಲ`ಕ್ಕೆ ಒತ್ತಾಯಿಸಿ, ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ತೊಲಗಿಸಲು ರಾಷ್ಟ್ರಧ್ವಜ ಹಿಡಿದು ಬೀದಿಗೆ ಬಂದಿರುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ

ಆರಂಭದ ದಶಕಗಳಲ್ಲಿ ಸಿನಿಮಾದಲ್ಲಿ ಜಮೀನ್ದಾರಿ ಪದ್ಧತಿ, ಅಲ್ಲಿನ ಕ್ರೌರ್ಯ ರೀತಿ ನೀತಿಗಳನ್ನು ವಿಶ್ಲೇಷಿಸುವ ಚಿತ್ರಗಳನ್ನು ಕಾಣಬಹುದಿತ್ತು. ಸ್ವಾತಂತ್ರ್ಯಾ ನಂತರ ತಲೆದೋರಿದ ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಸಮಸ್ಯೆ, ಬಡತನ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮೊದಲಾದ ಸಮಸ್ಯೆಗಳ ಕಡೆ ಸಿನಿಮಾ ಮಂದಿ ಗಮನ ಹರಿಸಿದ್ದರು.

70ರ ದಶಕದ ನಂತರ ಸಿನಿಮಾಕ್ಕೆ ಯಾವುದೇ ಸ್ಪಷ್ಟ ನಿಲುವೇ ಇಲ್ಲದೆ, ಸಾಮಾಜಿಕಬದ್ಧತೆಯೇ ಇಲ್ಲದೆ ಜನರಿಗೆ ಮನರಂಜನೆ ಒದಗಿಸುವುದೊಂದೇ ಸಿನಿಮಾ ಉದ್ದೇಶ ಎನ್ನುವಂತಾಯಿತು. ಗಾಂಧೀಜಿ ಅವರನ್ನು ತೋರಿಸುವುದು, ಅವರ ಆದರ್ಶಗಳನ್ನು ಹೇಳುವುದು ಈಗ ಒಂದು ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. `ಲಗೇ ರಹೋ ಮುನ್ನಾಬಾಯಿ` ನೆನಪಿಸಿಕೊಳ್ಳಿ. ಗೂಂಡಾಗಿರಿ ಮಾಡುತ್ತಿದ್ದವನು ಗಾಂಧೀಗಿರಿ ಮಾಡಲಾರಂಭಿಸುವುದು ಗಾಂಧೀಜಿಯವರನ್ನು ವಿಡಂಬಿಸಿದಂತೆಯೇ ಅಲ್ಲವೇ? ನಮ್ಮ ಬಹುತೇಕ ಸಿನಿಮಾಗಳಲ್ಲಿ ಕೆಟ್ಟ ರಾಜಕಾರಣಿಗಳನ್ನು ತೋರಿಸುವುದು ಅವರ ಗಾಂಧೀ ಟೋಪಿ ಮೂಲಕವೇ! ಈಗ ಸಿನಿಮಾ ನಟರು ಗಾಂಧೀ ಟೋಪಿ ಹಾಕಿಕೊಂಡು ಬೀದಿಗಿಳಿದಿದ್ದಾರೆ!

ಸಮಾಜವನ್ನು ಪರಿವರ್ತಿಸುವ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಮೌಢ್ಯವನ್ನು ತೊಲಗಿಸುವ, ನೈತಿಕ ವಾತಾವರಣ ಸೃಷ್ಟಿಸುವ, ಭ್ರಷ್ಟಾಚಾರದ ವಿರುದ್ಧ ಜನರನ್ನು ಕೆರಳಿಸುವ ಪ್ರಬಲ ಹಾಗೂ ಪ್ರಖರ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ ಎನ್ನುವ ವಾಸ್ತವ ಸತ್ಯವೇ ನಮ್ಮ ಸಿನಿಮಾ ಜನಕ್ಕೆ ಗೊತ್ತಿಲ್ಲವಲ್ಲಾ ಎಂದು ಮರುಕವಾಗುತ್ತಿದೆ. ಭಾರತದಲ್ಲಿ ಪ್ರತಿಯೊಬ್ಬ ಸಿನಿಮಾ ನಿರ್ದೇಶಕನೂ ಅಣ್ಣಾ ಹಜಾರೆ ಆಗಬಹುದು ಎನ್ನುವ  ಮಾಧ್ಯಮಶಕ್ತಿಯನ್ನೇ ನಮ್ಮ ಸಿನಿಮಾ ಮಂದಿ ಮನವರಿಕೆ ಮಾಡಿಕೊಂಡಿಲ್ಲ.

ಸಿನಿಮಾದ ಪ್ರಭಾವೀ ಆಯಸ್ಕಾಂತ ಶಕ್ತಿಯನ್ನು ಬಳಸಿಕೊಳ್ಳಲು ನಮ್ಮವರು ವಿಫಲರಾದರೆಂದೇ ಹೇಳಬೇಕು. ಸಿನಿಮಾ ಒಂದು ದೇಶವನ್ನೇ ಕಟ್ಟಲು ಏಣಿ ಆಗಬಹುದು ಎನ್ನುವುದನ್ನು ರಷ್ಯಾ ನೋಡಿ ಕಲಿಯಬೇಕು. ಬಡತನ, ಅನಕ್ಷರತೆ, ನಿರುದ್ಯೋಗ, ಮೌಢ್ಯ ಎಲ್ಲವೂ ತುಂಬಿತುಳುಕುತ್ತಿದ್ದ ಭಾರತ ದೇಶಕ್ಕೆ ಸಿನಿಮಾ ಪರಿವರ್ತನೆಯ ಹಾದಿಗಳನ್ನು ತೋರಬಹುದಿತ್ತು. ಭಾರತದಲ್ಲಿ ಸಿನಿಮಾ ತನ್ನ ಮೂಲ ಉದ್ದೇಶಕ್ಕೆ ವ್ಯತಿರಿಕ್ತ ದಾರಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

Screenshot courtesy: ಪ್ರಜಾವಾಣಿ

ರವಿ ಕೃಷ್ಣಾ ರೆಡ್ಡಿ

Anna_Hazare

ಅಣ್ಣಾ ಹಜಾರೆ ಹೋರಾಟ : ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ?

ಪರಶುರಾಮ ಕಲಾಲ್

ಅಣ್ಣಾ ಅಂದರೆ ಇಂಡಿಯಾ ಎಂದು ನಾವೆಲ್ಲರೂ ತುಂಬಾ ಗೌರವಿಸಿದ್ದ ಕಿರಣ್ ಬೇಡಿ ಎಂಬ ಮಾಜಿ ಅಧಿಕಾರಿ ಭಾರತದ ಭಾವುಟ ಹಿಡಿದು ಕುಣಿದಾಡುವುದು. ಕೇಜ್ರಿವಾಲ ಎಂಬ ವ್ಯಕ್ತಿ ಥೇಟ್ ಸ್ವಯಂ ಸೇವಾ ಸಂಸ್ಥೆಯ ವಕ್ತಾರನಾಗಿ ಸರ್ಕಾರದ ವಿರುದ್ಧ ಕಿಡಿ ಕಾರುವುದು.

ಪ್ರತಿನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳು ಮೊಂಬತ್ತಿ ಹಿಡಿದು ಮೆರವಣಿಗೆ ತೆಗೆಯುವುದು ಜನ ಲೋಕ್‌ಪಾಲ್ ಮಸೂದೆಗೆ ಆಗ್ರಹಿಸುವುದು ನನಗೆ ತಮಾಷೆಯಾಗಿ ಕಾಣುತ್ತಿದೆ.
ಈ ಅಸಂಗತ ನಾಟಕವನ್ನು ನಾವು ದಿನ ನೋಡಬೇಕಲ್ಲ ಎಂಬ ಖೇದವೂ ಕಾಡುತ್ತದೆ.

Anna_Hazare

Anna_Hazare (Pic courtesy: wikipedia)

ಸುಮ್ಮನೆ ಹೇಳಿ ಬಿಡುತ್ತೇನೆ. ಎಲ್ಲಾ ಸಂಸದರು ಲೋಕಸಭೆಯಲ್ಲಿ ಒಮ್ಮತದಿಂದ ಒಪ್ಪಿ ಅಣ್ಣಾ ಹಜಾರೆ ತಂಡ ಪ್ರತಿಪಾದಿಸುವ ಜನ ಲೋಕ್‌ಪಾಲ್ ಮಸೂದೆಯನ್ನು ಜಾರಿಗೆ ತಂದು ಬಿಟ್ಟರು ಎಂದು ಕೊಳ್ಳೋಣ. ಭ್ರಷ್ಟಾಚಾರ ಮಾಡಿದ ಪ್ರಧಾನಿ ಅಥವಾ ಸುಪ್ರೀಂಕೋರ್ಟು ನ್ಯಾಯಮೂರ್ತಿ ಇವರನ್ನು ಈ ಲೋಕ್‌ಪಾಲ್ ಗಲ್ಲಿಗೆ ಹಾಕುತ್ತದೆ ಎಂದೇ ಭಾವಿಸೋಣ. ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ? (ಇದು ಕಾರ್ಯಸಾಧುವಲ್ಲದ ಕಲ್ಪನೆ, ಆ ಮಾತು ಬೇರೆ.)

ನನ್ನ ಪ್ರಶ್ನೆ ಇಷ್ಟು? ಈ ದೇಶದಲ್ಲಿ ಸರ್ಕಾರಿ ನೌಕರರು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿ ಎಷ್ಟು? ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರನ್ನು ಒಳಗೊಂಡ ನೌಕರರು ಎಷ್ಟು? ನಮ್ಮ ಎಲ್ಲಾ ರಾಷ್ಟ್ರೀಯ ಹಾಗೂ ಚೋಟಾ, ಮೋಟಾ ಪ್ರಾದೇಶಿಕ ಪಕ್ಷಗಳ ಜನ ಪ್ರತಿನಿಧಿಗಳ ಸಂಖ್ಯೆ ಎಷ್ಟು? ಇವರಲ್ಲಿ ಗ್ರಾ.ಪಂ.ಸದಸ್ಯರಿಂದ ಹಿಡಿದು, ಲೋಕಸಭೆ ಸದಸ್ಯರವರೆಗೆ ಈ ಎಲ್ಲರನ್ನೂ ಒಟ್ಟು ಸೇರಿಸಿದರೆ ಈ ದೇಶದ ಶೇ.2ರಷ್ಟು ಸಂಖ್ಯೆಯನ್ನು ಇದು ದಾಟುವುದಿಲ್ಲ. ಈ ಎರಡರಷ್ಟು ಸಂಖ್ಯೆಯ ಜನರನ್ನು ತೋರಿಸಿ, ಇಡೀ ರಾಷ್ಟ್ರದ ಜ್ವಲಂತ ಸಮಸ್ಯೆ ಇದೊಂದೆ ಎನ್ನುವಂತೆ ಬಿಂಬಿಸಿ ಹೋರಾಟ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?

ಸುಮ್ಮನೆ ಲೋಕಾಯುಕ್ತರ ವರದಿಯನ್ನು ಪ್ರಸ್ತಾಪಿಸುತ್ತೇನೆ. ಈ ವರದಿ ಆಕ್ರಮ ಗಣಿಗಾರಿಕೆ, ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವನ್ನು ಕೊಳ್ಳೆ ಹೊಡೆದು ರಫ್ತು ಮಾಡಿದ್ದು, ತೀವ್ರ ಭ್ರಷ್ಟಾಚಾರ ಎಲ್ಲವನ್ನೂ ಬಯಲು ಮಾಡಿದ್ದಾರೆ. ಸಂತೋಷ ಹೆಗಡೆಯವರು ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡಿದ್ದು ನನಗೆ ಇಲ್ಲಿ ಮುಖ್ಯ ಅನ್ನಿಸುತ್ತದೆ. ಸರ್ಕಾರದ ತೆರಿಗೆ ವಂಚಿಸಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು, ಈ ಹಣವನ್ನು ಸರ್ಕಾರ ವಶ ಪಡೆಸಿಕೊಳ್ಳಬೇಕು. ಕಾನೂನು ಪ್ರಕಾರ ಇದಕ್ಕಿಂತಲೂ ಬೇರೇನೂ ಮಾಡಲು ಸಾಧ್ಯವಿದೆ ಪಾಪ ಸಂತೋಷ ಹೆಗಡೆಯವರಿಗೆ.

ಇಲ್ಲಿ ಯಡಿಯೂರಪ್ಪ, ಸೋಮಣ್ಣ, ರೆಡ್ಡಿ ಬ್ರದರ್ಸ್ ಇವರೆಲ್ಲಾ ತುಂಬಾ ಭ್ರಷ್ಟರು. ಇದನ್ನೆಲ್ಲಾ ಒಪ್ಪಿಕೊಳ್ಳೋಣ. ಅವರನ್ನು ಜನ ಕ್ಯಾಕರಿಸಿ ಛೀ, ಥೂ ಎಂದು ಉಗಿಯುತ್ತಾರೋ ಬಿಡುತ್ತಾರೋ ಅದನ್ನು ಮುಂದೆ ನೋಡೋಣ.

ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಘೋಷಿಸಿ ಸತ್ಯ ಹರಿಶ್ಚಂದ್ರರೆಂದು ವೇದಿಕೆ ಮೇಲೆ ಕಂಗೊಳಿಸುವ ಕಾರ್ಪೋರೇಟ್ ಸಂಸ್ಥೆಗಳ ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಭಾಗವನ್ನು ಹೇಳುವ ಮೂಲಕ ನನ್ನ ಮಾತನ್ನು ವಿಸ್ತರಿಸುವೆ. ರಾಜ್ಯ ಸರ್ಕಾರದ ಒಡೆತನ ಇರುವ ಮೈಸೂರು ಮಿನರಲ್ಸ್ ಲಿ., ಕಂಪನಿ (ಎಂಎಂ.ಎಲ್.) ಜೊತೆ ಜಿಂದಾಲ್ ಉಕ್ಕು ಕಾರ್ಖಾನೆಯು ವಿಜಯನಗರ ಮಿನರಲ್ಸ್ ಪ್ರೈ. ಲಿ., (ವಿಎಂಪಿಲ್) ಎಂಬ ಹೆಸರಿನಲ್ಲಿ ಜಂಟಿಯಾಗಿ ಸಂಡೂರಿನ ಪ್ರದೇಶದಲ್ಲಿ ತಿಮ್ಮಪ್ಪನ ಗುಡಿ ಐರನ್ ಓರ್ ಕಂಪನಿ (ಟಿಐಓಎಂ) ಗಣಿಗಾರಿಕೆ ಆರಂಭಿಸಿತು. ಕರಾರಿನಲ್ಲಿ ಮೂರನೆ ವ್ಯಕ್ತಿಗೆ ಕಬ್ಬಿಣದ ಅದಿರು ಮಾರುವಂತಿಲ್ಲ ಎಂದಿದೆ. ಸೌಥ್ ವೆಸ್ಟ್ ಮೈನಿಂಗ್ ಲಿ., ಕಂಪನಿಯು 85,022 ಮೆಟ್ರಿಕ್  ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ. 2003-04ರಿಂದ 2004-05ರವರೆಗೆ 3,65,594 ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ.

ಜಿಂದಾಲ್ ಉಕ್ಕಿನ ಕಾರ್ಖಾನೆಯು ತನ್ನ ಅವಶ್ಯಕತೆಗೆ ಮೀರಿ ಕಬ್ಬಿಣದ ಅದಿರು ಖರೀದಿಸಿದೆ. ಮತ್ತು ಅದನ್ನು ಆಕ್ರಮವಾಗಿ ರಫ್ತು ಮಾಡಿದೆ. ತನ್ನ ಉಕ್ಕು ಉದ್ಯಮಕ್ಕೆ ಬೇಕಾಗಿದ್ದಕ್ಕಿಂತಲೂ 12,97,707 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಖರೀದಿಸಿದೆ. ಆಕ್ರಮವಾಗಿ ಇದನ್ನು ರಫ್ತು ಮಾಡಿದೆ. ಒಂದು ಟನ್ ಕಬ್ಬಿಣದ ಅದಿರಿಗೆ 2500 ರೂ. ಎಂದು ಲೆಕ್ಕ ಹಾಕಿದರೂ ಇದರ ಮೌಲ್ಯವು 324,42,52,500 ರೂ. ಆಗುತ್ತದೆ.

ಈ ಕಾರ್ಪೋರೇಟ್ ಸಂಸ್ಥೆಯ ಗಣಿದಾಹ, ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ತನ್ನ ಹೊಲಸು ಕೈಗಳನ್ನು ರಾಜಕಾರಣಿಗಳ ಬಿಳಿ ಬಟ್ಟೆಗೆ ಹಚ್ಚಿ, ಅವರ ಜೇಬು ಹೊಲಸು ಮಾಡಿ, ನೋಡಿ ಕಳ್ಳರು ಎಲ್ಲಿದ್ದಾರೆ ಎಂದು ಹೇಳುತ್ತಾ ಭಾರತದ ಭಾವುಟ ಹಿಡಿದು, ಮೊಂಬತ್ತಿ ಹಚ್ಚಿ ತಮ್ಮ ಕರಾಳ ಮುಖ ಬಚ್ಚಿಟ್ಟುಕೊಂಡು ದೇಶಭಕ್ತರಾಗಿ ಕಾಣುವ ಇವರ ಬಗ್ಗೆ ಜನ ಲೋಕ್‌ಪಾಲ್ ಮಸೂದೆಯಲ್ಲಿ ಉತ್ತರ ಇದೆಯಾ? ನನಗೆ ಗೊತ್ತು, ನಾನು ಹುತ್ತ ಹೊಡೆದಿದ್ದೇನೆ. ಪ್ರತಿಕ್ರಿಯೆಗಳು ಬರಲಿ, ನಂತರ ನನ್ನ ಸಂವಾದ ಮುಂದುವರೆಸುವೆ.

Anna Movement – Dalits Have Reasons to Worry

Bhumi Banu

Dalits are worried over the way the so called movement against corruption, led by Anna Hazare is going on. Members of Dalit Sangharsha Samiti and Samata Sainik Dal staged a dharna, different from what we have been shown in TV media, in Hassan on Tuesday. They raised voice against the Anna movement and the proposed draft of the Jan Lokpal Bill. They have serious disagreements with the Team Anna for its disrespect for parliamentary process in particular and constitution in general.

The downtrodden sections of society are worried because they see people who have been against the reservation in big numbers behind Anna. They have serious doubts about Anna himself. He, despite being a Gandhian and social reformer, has not succeeded to bring in harmony between Dalits and upper castes in his own village. The Dalits have never heard Anna criticizing the massacre of Dalits at Khirlanji in his home state. They never heard him supporting reservation in the private sector. Instead, on occasions Anna had praised Bal Thackrey and Narendra Modi – undoubtedly among inhuman creatures on the earth.

Besides, as noted thinker Kancha Ilaiah pointed out in a TV debate, the draft prepared by the civic society nowhere speaks about representation to a dalit, backward classes, minorities and women. They use the words – legal luminary, eminent personalities – to mean Noble awardees, Magsaysay recipients.

The mode of struggle opted by Anna and his team is reminds Dalits the historic fast by Mahatma Gandhi in opposition to separate electorate for them. A large section of Dalits even today argued had Gandhi not opposed the separate electorate the state of Dalits would have been better by this time. Naturally, for them Anna Hazare’s fast is no different from ‘blackmail’ tactics. One of the demands put forward by protesters in Hassan is that government not heed to the ‘blackmail’ tactics of Anna Hazare.

Prof Kancha Ilaiah rightly opined that if the government heeds to the Anna’s demand it would set a bad precedence and might lead to far more critical situations in future. Naxals might come up with a draft bill and demand the government pass it as it is in parliament. They might even ‘blackmail’ the government at gun point.

The team Anna does not have a face who can remotely represent the depressed sections of society. Kiran Bedi has been on TV screen endorsing a washing powder (Ariel) occasionally. She endorses the product as the best in the market and converts the old cloth new. Any person who has used the product can easily blame that Kiran Bedi is wrong. Is it not corruption to endorse a product with blatant lies? Does a retired IPS officer, a Magsaysay awardee need to endorse a product for her survival? When she herself endorses a product for her greed for money, what moral rights she has to fight against corruption. There are hundreds of similar people who have been involved in the campaign across the country.

The larger threat the Dalits see in the whole drama is that the event might end up bringing in the BJP-led NDA in the rule at the Centre. They look at the protests as part of the BJP-RSS’ strategy to bring down the Cong-led UPA and replace it by the BJP.

ಪೋಸ್ಕೋ ಪಲಾಯನದ ಹಿಂದಿನ ರಾಜಕಾರಣ ಮತ್ತು ಕಾಡುತ್ತಿರುವ ಪ್ರಶ್ನೆಗಳು

ಹು.ಬಾ. ವಡ್ಡಟ್ಟಿ

ಪೋಸ್ಕೋ ಎಂಬ ಸ್ಟೀಲ್ ಉತ್ಪಾದಿಸುವ ದ.ಕೋರಿಯಾದ ಕಂಪನಿ ಗದಗ ಜಿಲ್ಲೆಯ ಹಳ್ಳಿಗುಡಿಯ ರೈತರ ಹೊಲಗಳಲ್ಲಿ ಸ್ಟೀಲ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪನೆ ಮಾಡುತ್ತಾರೆ ಎನ್ನುವ ಗಾಳಿ ಸುದ್ಧಿ ಮೊದಲು ದಲ್ಲಾಳಿಗಳ ಕಿವಿ ತಲುಪಿದಾಗ ದಲ್ಲಾಳಿಗಷ್ಟು ಖುಷಿ ಪಟ್ಟವರು ಈ ಜಗತ್ತಿನಲ್ಲಿ ಯಾರು ಇರಲಾರರು ಅನಿಸುತ್ತದೆ. ಆದರೆ 2011 ರ ಜೂನ್ ಕೊನೆಯ ವಾರದಲ್ಲಿ ಧಾರವಾಡದ ಕೆಐಎಡಿಬಿ(ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿ)ಯಿಂದ ರೈತರ ಮನೆ ಬಾಗಿಲಿಗೆ “ನಿಮ್ಮ ಭೂಮಿಯನ್ನು ಪೋಸ್ಕೋಗಾಗಿ ವಶಪಡಿಸಿಕೊಳ್ಳಲಾಗುತ್ತದೆ, ಆಕ್ಷೇಪಣೆಗಳು ಇದ್ಧರೆ ಧಾರವಾಡಕ್ಕೆ ಬಂದು ಕೆಐಎಡಿಬಿ ಗೆ ಸಲ್ಲಿಸಬಹುದು,” ಅನ್ನುವ ಸೂಚನೆಯು ತಲೆತಲಾಂತರಿಂದ ಭೂಮಿ ನಂಬಿ ಬದುಕಿರುವ ರೈತಾಪಿ ಜೀವಗಳಿಗೆ ಒಮ್ಮಿ೦ದೊಮ್ಮೆಲೆ ಬರಸಿಡಿಲು ಬಡಿದಂತೆ ಆಗಿ, ರೈತರು ಭೂಮಿ ಜೊತೆ ಹೊಂದಿರುವ ಭಾವನಾತ್ಮಾಕವಾದ ಸಂಬಂಧ ಹಾಗೂ ಭೂಮಿ ಆಧರಿಸಿ ಬದುಕು ಸಾಗಿಸುವುದಕ್ಕೆ ಕೊಡಲಿ ಪೆಟ್ಟುಬೀಳುತ್ತದೆ, ಆದ್ದರಿಂದ ಬದುಕು ಮುಂದೇನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತು.

ಅಭಿವೃದ್ದಿಯೆಂಬ ಬಿಸಿಲುಕುದುರೆಯ ನಾಗಾಲೋಟಕ್ಕೆ ಹಳ್ಳಿಗುಡಿ, ಜಂತ್ಲಿಶಿರೂರ್ , ಮೇವುಂಢಿ, ರೈತರು ಭೂಮಿಯನ್ನು ಕೊಡುವದರ ಮೂಲಕ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬಹುದೆಂಬ ಹುಸಿ ಕಲ್ಫನೆಯನ್ನು ಆಡಳಿತಾರೂಢ ಬಿಜೆಪಿಯ ಬೆಂಬಲಿಗರು ಜನರಲ್ಲಿ ಹುಟ್ಟುಹಾಕಿದರು. ಆದರೆ ಪೋಸ್ಕೋ ಆಗಮನದಿಂದ ಇಲ್ಲಿನ ಜನರ ಬದುಕಿಗೆ ನೆಮ್ಮದಿ ಸಿಗುತ್ತಾ ಮೂಲಭೂತ ಕಾಳಜಿಯಿಂದ ಪರಿಸರದ ಮೇಲೆ ಎಂಥ ಪರಿಣಾಮ ಉಂಟಾಗಬಹುದು ಎಂಬ ಆತಂಕ ಪರಿಸರವಾದಿಗಳು, ಪ್ರಗತಿಪರರು, ಮಠಾಧೀಶರದ್ದಾಗಿತ್ತು.ಆದರೂ ಪೋಸ್ಕೋ ಕಂಪನಿಯು ಉಕ್ಕು ಘಟಕ ಸ್ಥಾಪಿಸಲು ಪೂರಕವಾದ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ನೀರು ಸುಲಭವಾಗಿ ಕೈ ಅಳತೆಯಲ್ಲಿ ನಿರಾಯಾಸವಾಗಿ ದೊರಕುವುದು ಎಂದು ರಾಜಕಾರಣಿಗಳು, ದಲ್ಲಾಳಿಗಳು, ಅಭಿವೃದ್ದಿಯ ಮಂತ್ರ ಜಪಿಸುವ ಭೂಮಾಫೀಯಾದ ಕುಳಗಳು, ಪೋಸ್ಕೋ “ಯಜ್ಙ”ಕ್ಕೆ ಹಳ್ಳಿಗುಡಿಯ ರೈತರನ್ನು, ಭೂಮಿಯನ್ನು ಸಮಿತ್ತಾಗಿ ಸಿದ್ದಗೊಳಿಸತೊಡಗಿದರು.

ಇದರ ಹಿಂದಿರುವ ಹುನ್ನಾರ ಎಂದರೆ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ – 63 ಹುಬ್ಬಳ್ಳಿ- ಗುಂಟಕಲ್ಲನ್ನು ಜೊಡಿಸುವ ಬ್ರಾಡಗೇಜ್ ರೈಲು ಅದಕ್ಕಿಂತಲು, ಶಿಂಗಟಾಲುರುಗಳಂತಿರುವ  ಏತ ನೀರಾವರಿಯ ನೀರನ್ನು ಉಕ್ಕು ಘಟಕಕ್ಕೆ ಬಳಸಬಹುದು. ಜೊತೆಗೆ ಉಕ್ಕು ಘಟಕಕ್ಕೆ ಬೇಕಾಗುವ ಆದಿರನ್ನು 15 ಕಿ ಮೀ ಅಂತರದಲ್ಲಿರುವ ಕಪ್ಪತ್ತ ಗುಡ್ಡದಿಂದ ಕೊಳ್ಳೆಹೂಡೆಯಲು ಅನೂಕೂಲವಾಗುತ್ತದೆ ಎನ್ನುವ ದೂ(ದು)ರಾಲೊಚನೆಯೊಂದಿಗೆ ಪೋಸ್ಕೋ ಕಂಪನಿಗೆ, ಭೂಮಿ ಕಬಳಿಸುವ ದುಷ್ಟ ಯೋಜನೆಗೆ, ಸರ್ಕಾರವು ಕೈ ಹಾಕಿತು.

ಸರ್ಕಾರವು 2011 ರ ಮಾರ್ಚನಲ್ಲಿ ಕೈಗಾರಿಕೆಯ ಸಲುವಾಗಿ ಲ್ಯಾಂಡ್ ಬ್ಯಾಂಕ್ ಮಾಡಲು ಭೂಮಿ ಒಳಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಈ ಪ್ರಕಟಣೆಯು ಜನರಿಗೆ, ರೈತರ ಗಮನಕ್ಕೆ ಬಂದಿರಲಿಲ್ಲ. ಈ ಮೊದಲೇ ಗದಗ್ ಜಿಲ್ಲಾ ಉಸ್ತಾವಾರಿ ಸಚಿವಾರಾಗಿದ್ದ ಬಿ.ಶ್ರೀ ರಾಮುಲು ಅವರು ಹಳ್ಳಿಗುಡಿ – ಹಳ್ಳಿಕೇರಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿಯೇ 2 ಸಾವಿರ ಕೋಟಿ ರೂಪಾಯಿವೆಚ್ಚದಲ್ಲಿ ಉಕ್ಕು ಕಾರ್ಖಾನೆಯನ್ನು  ಸ್ಥಾಪಿಸಲಾಗುತ್ತದೆ  ಎನ್ನುವ ಮುನ್ಸುಚನೆ, 2009 ರಲ್ಲಿಯೇ ನೀಡಿದ್ದರಲ್ಲದೆ, ಉಕ್ಕು ಕಾರ್ಖಾನೆಯು ಗದಗ್ ಜಿಲ್ಲೆಯನ್ನು  ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ, ಗದಗ್ ಜಿಲ್ಲೆಯಲ್ಲಿ ಕಾರ್ಖಾನೆಯಿಂದಾಗಿ  , ಅಭಿವೃದ್ಧಿಯು, ತಾನೇ-ತಾನಾಗಿ ಜನರ ಬದುಕಿನಲ್ಲಿ  ಫಲಗಳನ್ನು ತಂದುಹಾಕುತ್ತದೆ. ಇನ್ನು ಮುಂದೆ ಸುಖದ, ನೆಮ್ಮದಿಯ ದಿನಗಳು ಬರಲಿವೆ ಎನ್ನುವ ಕನಸು ಕಾಣ ತೊಡಗಿದರು.

ಇದಕ್ಕೆ ಪೂರಕವಾಗುವಂತೆ ಎಪ್ರಿಲ್ 15-2011 ರಲ್ಲಿ ಮೊದಲ ನೋಟಿಸ್, ‘1966 ರ ಕಲಂ 28 (2) ಮೇರೆಗೆ ಭೂಮಿಯು ಸ್ವಾಧೀನಪಡಿಸಿಕೊಳ್ಳುವ  ದಿಶೆಯಲ್ಲಿ ರೈತರಿಗೆ  ನಿಮ್ಮ ಆಕ್ಷೇಪಣೆಗಳಿದ್ದರೆ ಲಿಖಿತ ರೂಪದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು,’ ಕೆಐಎಡಿಬಿಯ ಧಾರವಾಡದ ಕಾರ್ಯಾಲಯವು ಗಡುವು ನೀಡಿತ್ತು.

ಜೂನ್ 23-2011 ರಂದು ಧಾರವಾಡ ಕೆಐಎಡಿಬಿಯು ಪುನಃ ರೈತರ ಮನೆಯಬಾಗಿಲಿಗೆ ಬಂದಾಗ, ಆ ನೋಟಿಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ ಕೈಗಾರಿಕೆ ಸ್ಥಾಪನೆ ಸಂಬಂಧಿಸಿ, ಹಳ್ಳಿಗುಡಿ ಗ್ರಾಮದ 3382-ಏಕರೆ ಭೂಮಿಯನ್ನು ಪೋಸ್ಕೋ ಇಂಡಿಯ ಪ್ರೈ.ಲಿ. ಕೈಗಾರಿಕೆ ಸ್ಥಾಪನೆಗೆ ಬೇಕಾಗಿದೆ ಅದರ ಸಲುವಾಗಿ ಆಪೇಕ್ಷೇಣೆಗಳನ್ನು ಸಲ್ಲಿಸಲು, ರೈತರಿಗೆ 10 ದಿನಗಳ ಗಡುವು ನೀಡಿತು. ರೈತರು, ಮಠಾಧೀಶರು, ಪ್ರಗತಿಪರ ಸಂಘಟನೆ, ರೈತರ ಸಂಘಟನೆಯವರು , ಐತಿಹಾಸಿಕ ಹೋರಾಟಕ್ಕೆ ಸಜ್ಜಾಗತೊಡಗಿದರು.  ಪೋಸ್ಕೋ  ಉಕ್ಕು ಕಾರ್ಖಾನೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕುರಿತು ಹಲವು ಸುದ್ದಿಗಳು ಪ್ರಕಟವಾದವು.

ರೈತರು ಸರ್ಕಾರಕ್ಕೆ ಭೂಮಿ ಕೊಡದಿರುವ ಗಟ್ಟಿ ನಿರ್ಧಾರಕ್ಕೆ  ಮಠಾಧೀಶರು, ಪ್ರಗತಿಪರರು, ಮಾಧ್ಯಮದವರು ಬೆಂಬಲವಾಗಿ  ನಿಂತರು. ಹೋರಾಟವು ಮುಂದುವರೆಯಲು ಹೇಗೆ ಸಾಧ್ಯವಾಯಿತು? ಜೊತೆಗೆ ಅಭಿವೃದ್ದಿಯ ಟೊಳ್ಳು-ಗಟ್ಟಿಯು ಜನರ, ರೈತರ, ಬದುಕಿನೊಂದಿಗೆ ಹೇಗೆ ಚೆಲ್ಲಾಟವಾಡುತ್ತಿದೆ ಎನ್ನುವ ಮುಂದಿರುವ ಪ್ರಶ್ನೆಗಳನ್ನು ಇಟ್ಟುಕೊ0ಡು ಮುಂದಿನ ಭಾಗದಲ್ಲಿ ನೊಡೋಣ.

  • ಗದಗ ಜಿಲ್ಲೆಯ ಅಭಿವೃದ್ದಿಗೆ ಪೋಸ್ಕೋ ಬೇಕೆ?
  • ಕೃಷಿ ಆಧಾರಿತ ಕೈಗಾರಿಕೆಗಳು, ಅನುಕೂಲಕರವೇ?
  • ಪೋಸ್ಕೋದಿಂದ ಪರಿಸರ – ಕಪ್ಪತಗುಡ್ಡದ ಮೇಲಾಗುವ ದುಷ್ಟಪರಿಣಾಮಗಳು ಏನು?
  • ಕಳೆದ 50 ವರ್ಷಗಳಿಂದ ಕೈಗಾರಿಕೆ ಏಕೆ ಸ್ಥಾಪನೆ ಆಗಿರಲಿಲ್ಲ?
  • ಸಿಂಗಾಟಲೂರು ಏತ ನೀರಾವರಿ ಈ ಭಾಗದಲ್ಲಿ ಕನಿಷ್ಟ ರೈತರ ಬದುಕಿಗೆ ಆಸರೆಯಾಗಲಿದೆಯೇ?
  • ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸರ್ಕಾರ ಹಣವನ್ನು ರೈತರಿಗೆ ನೀಡಿದರೆ ರೈತರ ಬದುಕಿನ ಪಯಣ ಯಾವ ದಿಕ್ಕಿನ ಕಡೆಗೆ?
  • ಭೂಸ್ವಾಧೀನ, “ಹಣ ಕೊಡುವ-ತೆಗೆದುಕೊಳ್ಳುವ” ಪ್ರಕ್ರಿಯೆಗಷ್ಟೆ ಸೀಮಿತವೆ?
  • ಪೋಸ್ಕೋ ಕಂಪನಿಯಿಂದ ಗದಗ್ ಜಿಲ್ಲೆಯಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ?
  • ಭೂಸ್ವಾಧೀನದಿಂದ ಭೂಹೀನವಾಗುವ ರೈತರ ಕುಟುಂಬಗಳು ಎಷ್ಟು? ಅವರು ಬದುಕಿನ ನೆಲೆ ಕಳೆದುಕೊಂಡಾಗ ಪರ್ಯಾಯ ಉದ್ಯೋಗ ಕಲ್ಪಿಸುವರು ಯಾರು?
  • ಪೋಸ್ಕೋಗೆ ಕೊಡುತ್ತಿರುವ ರೈತರ ಭೂಮಿಯು ಕೃಷಿ ಯೋಗ್ಯವಲ್ಲದ ಬಂಜರು, ಭೂಮಿ – ಕೈಗಾರಿಕೆ ಸಚಿವ ನಿರಾಣಿಯವರ ಹೇಳಿಕೆ.
  • ಪೋಸ್ಕೋಗೆ ತುಂಗಾಭದ್ರೆಯಿಂದ ನೀರು ಕೊಡದೇ, ಆಲಮಟ್ಟಿದಿಂದ ನೀರು ಕೊಡುತ್ತೆವೆ – ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ.

(ಮುಂದುವರೆಯುವುದು…)

ಚಿತ್ರಗಳು: ಲೇಖಕರವು

Anna_Hazare

ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…

ಅಣ್ಣಾ ಹಜಾರೆಯವರ ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ. ಯಾವುದೋ ಒಂದು ಲೊಕಪಾಲ್ ಮಸೂದೆ ಮುಂದಿನ ಒಂದೆರಡು ತಿಂಗಳಿನಲ್ಲಿ ಅಂಗೀಕಾರವಾಗುವುದು ಈಗ ನಂಬಬಹುದಾದ ವಿಚಾರ. ಇಂದಲ್ಲ ನಾಳೆ ಯಾವುದೋ ಒಂದು ಲೋಕ್‌ಪಾಲ್ ಬರುತ್ತಿತ್ತು. ಆದರೆ, ಅಣ್ಣಾ ಹಜಾರೆಯ ಉಪವಾಸ ಸತ್ಯಾಗ್ರಹ ಇಲ್ಲದೇ ಹೋಗಿದ್ದರೆ ಅದು ಇಷ್ಟು ಬೇಗ ಆಗುತ್ತಿರಲಿಲ್ಲ. ಮತ್ತು ಇಷ್ಟು ಪರಿಣಾಮಕಾರಿಯಾಗಿಯೂ ಇರುತ್ತಿರಲಿಲ್ಲ.

Anna_Hazare

Anna_Hazare

ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಮೂಲ ಬೇರು ಇರುವುದು ನಮ್ಮ ಸಮಾಜದಲ್ಲಿ ಸಾರ್ವತ್ರಿಕವಾಗಿಲ್ಲದ ಮೌಲ್ಯಗಳಿಂದ ಮತ್ತು ಪ್ರಜಾಪ್ರಭುತ್ವದ ಆಳವಾದ ಕಲ್ಪನೆ ನಮ್ಮ ಬಹುತೇಕ ದೇಶವಾಸಿಗಳಿಗೆ ಇಲ್ಲದಿರುವುದರಿಂದ. ಮೂರ್ನಾಲ್ಕು ದಶಕಗಳ ಹಿಂದೆ ಕಳ್ಳತನ-ಕೊಲೆ-ಸುಲಿಗೆಯಲ್ಲಿ ತೊಡಗಿದ ಜನರನ್ನು, ಲಂಚ ತೆಗೆದುಕೊಂಡು ಸಿಕ್ಕಿಬೀಳುತ್ತಿದ್ದವರನ್ನು ಸಮಾಜ ಒಂದು ರೀತಿ ನೋಡುತ್ತಿತ್ತು. ಅಘೋಷಿತ ಬಹಿಷ್ಕಾರ ಹಾಕುತ್ತಿತ್ತು. ಆದರೆ ಯಾವಾಗ ದುಡ್ಡು ಮತ್ತು ನಮ್ಮ ಈಗಿನ ಬುದ್ಧಿಗೇಡಿ ಭ್ರಷ್ಟ ರಾಜಕಾರಣಿಗಳ ಅಭಿವೃದ್ಧಿಯ ಕಲ್ಪನೆ ಸಮಾಜದಲ್ಲಿ ಸ್ಥಾನ ಪಡೆದುಕೊಂಡಿತೊ, ಆಗ ನಮ್ಮ ಸಮಾಜದಲ್ಲಿದ್ದ ಅಷ್ಟಿಷ್ಟು ನೀತಿ-ನಿಜಾಯಿತಿಗಳೆಲ್ಲ ಮೂಲೆಗುಂಪಾದವು. ನ್ಯಾಯವಾಗಿರುವುದು, ಸರಳ-ಆದರ್ಶ ಜೀವನ ನಡೆಸುವುದು ಸಮಾಜದ ಪ್ರಕಾರ ಕೇವಲ ಸೋತವರ ಮೌಲ್ಯಗಳಾದವೇ ಹೊರತು ಸಮಾಜದ ಮೌಲ್ಯಗಳಾಗಲಿಲ್ಲ. ನಮ್ಮದೇ ದೇಶದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಕಾನೂನಿನ ಪ್ರಕಾರ ನಡೆದುಕೊಳ್ಳುವುದಕ್ಕೆ, ಕಾನೂನು ಪಾಲಿಸುವುದಕ್ಕೆ ನಾವು ಯಾಕಾಗಿ ಲಂಚ ನೀಡಬೇಕು ಎಂದು ಜನ ನಿಂತು ಯೋಚಿಸಲಿಲ್ಲ. ಕೊಡದಿದ್ದರೆ ಕೆಲಸ ಆಗುವುದಿಲ್ಲ; ಎಲ್ಲರೂ ಕೊಡುತ್ತಾರೆ, ನಾವೂ ಕೊಡುವುದರಲ್ಲೇನು ತಪ್ಪು; ಇದು ಲೋಕಸಮ್ಮತ ಎನ್ನುವ ತೀರ್ಮಾನಕ್ಕೆ ಬಹುತೇಕ ಜನ ಬಂದ ಸಂದರ್ಭ ಇದು.

ಇದೇ ಸಮಯದಲ್ಲಿ ನಮ್ಮ ಜನರಿಗೆ ರಾಜಕೀಯ ಪಕ್ಷಗಳಲ್ಲಿ ಆಯ್ಕೆಗಳೂ ಇರಲಿಲ್ಲ. ನಾನು ಇತ್ತೀಚೆಗೆ ಎಲ್ಲರಿಗೂ ಹೇಳುವ ವಿಷಯ ಏನೆಂದರೆ, ’ಯಾವುದಾದರೂ ಒಂದು ಒಳ್ಳೆಯ ನಾಯಕನ ಅಥವ ಪಕ್ಷದ ಆಯ್ಕೆ ಕರ್ನಾಟಕದ ಜನಕ್ಕೆ ಇದ್ದಿದ್ದರೆ ಇಲ್ಲಿ ವರ್ಷದ ಹಿಂದೆಯೇ ಕ್ರಾಂತಿಯಾಗಿಬಿಡುತ್ತಿತ್ತು,’ ಎಂದು. ನಿಸ್ಸಂಶಯವಾಗಿ ಯಡ್ಡಯೂರಪ್ಪ ಮತ್ತವರ ಪಕ್ಷದ ಆಡಳಿತ ಹಗಲುದರೋಡೆಕೋರರದ್ದು. ಆ ಹಗಲುದರೋಡೆಯಿಂದಲೇ ಇಷ್ಟರಲ್ಲಿಯೇ ಮತ್ತೊಂದಷ್ಟು ಕರ್ನಾಟಕದ ರಾಜಕಾರಣಿಗಳು ಜೈಲು ಸೇರಬೇಕಾಗಿ ಬರಬಹುದು. ಆದರೆ ಮಿಕ್ಕ ಪಕ್ಷಗಳ ಕತೆ ಏನು? ಬಿಜೆಪಿಯದು ಹಗಲುದರೋಡೆಯಾದರೆ ಇತರರದು ಒಂದು ರೀತಿಯಲ್ಲಿ ರಾತ್ರಿದರೋಡೆ. ಕರ್ನಾಟಕದ ಕಾಂಗ್ರೆಸ್‌ನಲ್ಲಾಗಲಿ, ಜೆಡಿಎಸ್‌ನಲ್ಲಾಗಲಿ ಆದರ್ಶ ಮತ್ತು ಪ್ರಾಮಾಣಿಕತೆಯನ್ನು ಜನರಲ್ಲಿ ಉತ್ತೇಜಿಸುವ, ತಮ್ಮ ಮಾತುಗಳಲ್ಲಿ ಜನರಿಗೆ ನಂಬಿಕೆ ಉಂಟುಮಾಡುವಂತಹ ಒಬ್ಬನೇ ಒಬ್ಬ ಸಮೂಹನಾಯಕನಿಲ್ಲ. ’ಬಿಜೆಪಿಯವರಿಗೆ ಮಾತ್ರ ಆಡಳಿತ ನಡೆಸುವುದಕ್ಕೆ ಮತ್ತು ಅಕ್ರಮ ರೀತಿಯಲ್ಲಿ ಹಣ ಮಾಡುವುದಕ್ಕೆ ಅವಕಾಶ ಇದೆ, ನಮಗಿಲ್ಲ, ದಯವಿಟ್ಟು ನಮಗೂ ಆ ಅವಕಾಶ ಮಾಡಿಕೊಡಿ,’ ಎನ್ನುವಂತಹ ಮಾತುಗಳು ಇವರಿಂದ ಬರುತ್ತಿತ್ತೇ ಹೊರತು, ’ನಾವು ಅಕ್ರಮ-ಭ್ರಷ್ಟಾಚಾರಗಳಿಲ್ಲದ ರಾಜಕಾರಣ ಮತ್ತು ಆಡಳಿತ ನಡೆಸುತ್ತೇವೆ,’ ಎಂದು ಅವರು ಹೇಳಲು ಆಗಲೇ ಇಲ್ಲ. ಈಗಲೂ ಹೇಳುತ್ತಿಲ್ಲ. ಅವರು ಈ ಸಂದರ್ಭದಲ್ಲಿ ಬಿಜೆಪಿಗಿಂತ ಭಿನ್ನವಾದ ಆಡಳಿತ ಕೊಡಬಲ್ಲರು ಎನ್ನುವಂತಹ ನಂಬಿಕೆ ಕರ್ನಾಟಕದ ಜನಕ್ಕೆ ಬರದೇ ಇದ್ದುದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸ್ವಯಂ‍ಕೃತಾಪರಾಧಗಳು ಕಾರಣವೇ ವಿನಃ ಅನ್ಯವಲ್ಲ.

Sansad_Bhavan

Sansad_Bhavan

ಬಹುಶಃ ಇಂತಹ ಕಾರಣಗಳಿಂದಲೇ ಕರ್ನಾಟಕದ ಜನ ಕಳೆದ ಎರಡು ಮೂರು ವರ್ಷಗಳ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಾಕಷ್ಟು ಬೆಂಬಲ ಕೊಡದೇ ಇದ್ದದ್ದು. ಅದರ ಜೊತೆಗೆ ಜನರ ವೈಯಕ್ತಿಕ ಜಾತಿ ಮೂಲದ ಭ್ರಷ್ಟತೆಯೂ ಸೇರಿತ್ತು. ನಮ್ಮ ಜಾತಿಯವನು ಮಾಡಿದರೆ ಮಾತ್ರ ತಪ್ಪಾ ಎನ್ನುವಂತಹ ಸಮರ್ಥನೆ ನೀಚತನದ್ದು, ಅದನ್ನು ಆಡಲು ಸಂಕೋಚಪಟ್ಟುಕೊಳ್ಳಬೇಕು ಎಂದು ಜಾತಿವಾದಿಗಳು ಅಂದುಕೊಳ್ಳಲಿಲ್ಲ.

ಈ ಹಿನ್ನೆಲೆಯಲ್ಲಿಯೇ ನಾವು ಇಂದಿನ ಅಣ್ಣಾ ಹಜಾರೆ ಹೋರಾಟಕ್ಕೆ ಕರ್ನಾಟಕದಲ್ಲಿ ದೊರೆಯುತ್ತಿರುವ ಜನಬೆಂಬಲವನ್ನು ಗ್ರಹಿಸಲು ಯತ್ನಿಸಬೇಕು. ಇಷ್ಟೂ ದಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿಕೊಂಡು ಬಂದ ಕರ್ನಾಟಕದ ಹಲವು ಆಕ್ಟಿವಿಸ್ಟ್‌ಗಳಿಗೆ ಹಜಾರೆ ಹೋರಾಟಕ್ಕೆ ದೊರೆಯುತ್ತಿರುವ ಬೆಂಬಲ ಕಸಿವಿಸಿ ಉಂಟುಮಾಡಿರುವುದು ಸಹಜ. ಆದರೆ ಈ ಹೋರಾಟಗಾರರು ಮುಟ್ಟಲು ಸಾಧ್ಯವಾಗದಿದ್ದ ಜನವರ್ಗವನ್ನು ಈ ಅಣ್ಣಾ ಹಜಾರೆ ತಂಡ ಮುಟ್ಟಿದೆ ಎಂದು ಅವರು ತಿಳಿದುಕೊಂಡರೆ ಅವರ ಕಸಿವಿಸಿ ಮತ್ತು ಕೋಪ ಸ್ವಲ್ಪ ಮಟ್ಟಿಗೆ ತಣ್ಣಗಾಗಬಹುದು. ಈ ಹೋರಾಟಕ್ಕೆ ಅಜ್ಜ-ಗಾಂಧೀವಾದಿ-ಅಹಿಂಸೆ-ಉಪವಾಸ ಎಂಬಂತಹ ಸಾಂಸ್ಕೃತಿಕ-ಸಾಮಾಜಿಕ ರೂಪ ಇದೆ ಮತ್ತು ಅದಕ್ಕೆ ಟಿವಿ-ಪತ್ರಿಕಾ ಮಾಧ್ಯಮಗಳ ಅತಿಯಾದ ಉತ್ತೇಜನ ಮತ್ತು ಪ್ರಚಾರವೂ ದೊರಕಿದೆ. ಇದೊಂದು ರೀತಿಯಲ್ಲಿ ಈ ಸಂದರ್ಭದಲ್ಲಿ ಮಾತ್ರವೇ ಸಾಧ್ಯವಾಗಬಹುದಾದ ಘಟನೆಯೇ ಹೊರತು ಎರಡು-ಮೂರು ವರ್ಷಗಳ ಮೊದಲು ಘಟಿಸಲು ಸಾಧ್ಯವೇ ಇರಲಿಲ್ಲ. ಇದು 2G-CWG-ಗಣಿ ಮುಂತಾದ ಬಯಲಿಗೆ ಬಂದಂತಹ ಹಗರಣಗಳ ತದನಂತರದ ಕಾಲಘಟ್ಟದಲ್ಲಿ ಘಟಿಸಿದ ಕ್ರಿಯೆಯೇ ಹೊರತು, ಅವು ಈ ಮಟ್ಟದಲ್ಲಿ ಬಯಲಿಗೆ ಬರದೇ ಹೋಗಿದ್ದಲ್ಲಿ ಇದೇ ಅಣ್ಣಾ ಹಜಾರೆ ಎಷ್ಟೇ ಉಪವಾಸ ಕೂತಿದ್ದರೂ ಜನರಾಗಲಿ ಅಥವ ಮಾಧ್ಯಮಗಳಾಗಲಿ ಈ ಪರಿ ಪ್ರತಿಕ್ರಿಯಿಸುತ್ತಿರಲಿಲ್ಲ.

ಅಣ್ಣಾ ಹಜಾರೆ ಮತ್ತವರ ತಂಡದ ಬಗ್ಗೆ ಚಿಂತಕರ ಒಂದು ಗುಂಪಿನ ತಕರಾರು ಏನೇ ಇರಲಿ, ಅದು ಜನಸಾಮಾನ್ಯರಿಗೆ ಅಷ್ಟೇನೂ ಮುಖ್ಯವಾದದ್ದಲ್ಲ. ಸೈದ್ಧಾಂತಿಕ ಹಿನ್ನೆಲೆ ಮತ್ತು ಅದಕ್ಕೆ ಬೇಕಾದ ಓದು ಇಲ್ಲದ ಜನತೆ ಯಾವುದೇ ಸಂದರ್ಭದಲ್ಲಾಗಲಿ ಕೆಟ್ಟತನದ ವಿರುದ್ಧ ಮಾತನಾಡುತ್ತಿರುವವನ ಪರ ನಿಲ್ಲುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ದೊರಕುತ್ತಿರುವ ಜನಬೆಂಬಲ ನಿಜಕ್ಕೂ ಪ್ರಶಂಸನಾರ್ಹ. ಜನರಿಗೆ ಒಂದಲ್ಲ ಒಂದು ಸಮಯದಲ್ಲಿ ಆದರ್ಶಗಳು ಬೇಕು. ನ್ಯಾಯ-ನೀತಿಗಳು ಬೇಕು. ಅದರ ಪರ ನಿಲ್ಲಬೇಕು. ಅದನ್ನೇ ಈಗ ಬಹುತೇಕರು ಮಾಡುತ್ತಿರುವುದು.

ಹಾಗೆಂದ ಮಾತ್ರಕ್ಕೆ ಹಜಾರೆ ತಂಡದ ಕಾರ್ಯವೈಖರಿ ಮತ್ತು ಅವರು ಮುಂದೊಡ್ಡೂತ್ತಿರುವ ಮಸೂದೆಯಲ್ಲಿನ ಲೋಪದೋಷಗಳನ್ನು ವಿಮರ್ಶಿಸುತ್ತಿರುವವರನ್ನು ವಿಮರ್ಶಿಸುವುದಾಗಲಿ, ಅವರನ್ನು ಕೀಳುಮಾಡುವುದಾಗಲ್ಲಿ ಸರಿಯಲ್ಲ. ಇದು ಒಂದು ರೀತಿಯಲ್ಲಿ ಜನಪ್ರೀಯತೆ ಕಳೆದುಕೊಳ್ಳುವ ಕೆಲಸವಾದರೂ ಆಗಲೇಬೇಕಾದ ಕೆಲಸ. ಈ ನಿಟ್ಟಿನಲ್ಲಿ ನಾವು ಅರುಣಾ ರಾಯ್ ಮತ್ತವರ ಸಹಚರರನ್ನು ಮತ್ತು ಆರುಂಧತಿ ರಾಯ್‌ರಂತಹವರನ್ನು ಅಭಿನಂದಿಸಲೇಬೇಕು. ಈ ಸಂದರ್ಭದಲ್ಲಿ ನಾವು ಗಮನವಿಟ್ಟು ಅವಲೋಕಿಸಿದಾಗ, ಅಣ್ಣಾ ಹಜಾರೆ ತಂದದವರ್‍ಯಾರೂ ಅರುಣಾ ರಾಯ್ ಮತ್ತವರ ತಂಡದವರ ವಿರುದ್ಧ ವೈಯಕ್ತಿಕ ದಾಳಿ ಮಾಡುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಜನ್‌ಲೋಕ್‍ಪಾಲ್ ನೈಜ ರೀತಿಯಲ್ಲಿ ಜನರ ಕಾನೂನಾಗುವುದಕ್ಕೆ ಈ ರೀತಿಯ ವಿಮರ್ಶೆ ಅಗತ್ಯ ಎನ್ನುವ ಅರಿವು ಮತ್ತು ತಮ್ಮ ನಿಲುವಿನಲ್ಲಿಯೂ ಕೆಲವೊಂದು ತಪ್ಪುಗಳಿರಬಹುದು ಎನ್ನುವಂತಹ ವಿನಯ ಹಜಾರೆ ತಂಡದಲ್ಲಿರುವುವರಲ್ಲಿ ಇರುವ ಲಕ್ಷಣಗಳಿವೆ. ಅರುಣಾ ರಾಯ್ ಮತ್ತು ಅಣ್ಣಾ ಹಜಾರೆ ತಂಡದವರ ಸೌಜನ್ಯಯುತವಾದ ಭಿನ್ನಾಭಿಪ್ರಾಯ ಮಾದರಿಯಾದಂತಹುದು.

ಇದೇ ಸಂದರ್ಭದಲ್ಲಿ ದೇಶದ ಕೆಲವು ದಲಿತ ವರ್ಗದ ಹಿನ್ನೆಲೆಯ ಚಿಂತಕರು ಈ ಚಳವಳಿ ಮೇಲ್ಜಾತಿಯ-ಮೇಲ್ವರ್ಗಗಳ ಪಿತೂರಿ ಎನ್ನುವಂತೆ ಅಭಿಪ್ರಾಯ ಪಡುತ್ತಿದ್ದಾರೆ. ಅವರು ಹಾಗೆ ಹೇಳಲು ಸಾಕಷ್ಟು ಸಾಕ್ಷ್ಯಗಳು ಮೇಲ್ನೋಟಕ್ಕೇ ಕಾಣಿಸುತ್ತವೆ. ಆಧ್ಯಾತ್ಮ ಎಂಬ ಢೋಂಗಿಯ ಪುಂಗಿಯನ್ನು ಊದುವವರೂ ಈ ಚಳವಳಿಯ ಮುಖ್ಯಪಾತ್ರಧಾರಿಗಳಾಗಿರುವುದು ಈ ಚಳವಳಿಯ ಮಿತಿಗಳಲ್ಲಿ ಒಂದು. ಪ್ರಗತಿಪರ ಚಿಂತನೆ ಮತ್ತು ಸಮಾನತಾವಾದದ ವಿರೋಧಿಗಳು ಈ ಚಳವಳಿಯ ಮೂಲಕ ಜನಮಾನಸದಲ್ಲಿ ಚಲಾವಣೆಯಾಗಲು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಆದರೆ ಮೇಧಾ ಪಾಟ್ಕರ್‌ರಂತಹವರು, ಹಿಂದೂ ಸಮಾಜದ ಕೆಟ್ಟ ಆಚರಣೆಗಳ ವಿರುದ್ಧ ಧ್ವನಿಯೆತ್ತುತ್ತಲೆ ಬಂದಿರುವ, ಕೋಮುವಾದವನ್ನು ವಿರೋಧಿಸುವ ಅಗ್ನಿವೇಶ್‌ರಂತಹವರೂ ಈ ಚಳವಳಿಯ ಮುಂಚೂಣಿಯಲ್ಲಿರುವುದರಿಂದ ನಮ್ಮ ವಿಮರ್ಶೆ ಸಂಯಮದಿಂದ ಕೂಡಿರಬೇಕಾದ ಮತ್ತು ಕೆಲವು ವ್ಯಕ್ತಿ-ಗುಂಪುಗಳಿಗೆ ಸೀಮಿತಗೊಳಿಸಬೇಕಾದ ಅವಶ್ಯಕತೆ ಇದೆ. ಆಡಳಿತದಲ್ಲಿನ ಭ್ರಷ್ಟಾಚಾರ ಕಡಿಮೆಯಾಗಿ, ಭ್ರಷ್ಟರಿಗೆ ಶಿಕ್ಷೆಯಾದರೆ, ಅದರ ಒಳಿತು ಸಮಾಜದ ಎಲ್ಲಾ ವರ್ಗಗಳಿಗೂ ಇರುತ್ತದೆಯೇ ಹೊರತು ಕೇವಲ ಕೆಲವೇ ಜನವರ್ಗಗಳಿಗೆ ಅಲ್ಲ. ಮಿಕ್ಕ ವಿಷಯಗಳನ್ನು ಪ್ರಸ್ತಾಪಿಸಲು, ಹೋರಾಡಲು, ಮತ್ತೊಂದು ಸಮಯ-ಸಂದರ್ಭ ಇದ್ದೇ ಇರುತ್ತದೆ. ಆ ವಿಷಯಗಳನ್ನು ಪ್ರಾಮಾಣಿಕವಾಗಿ ಎತ್ತಬಲ್ಲ ಜನರೂ ಇರುತ್ತಾರೆ. ಅಣ್ಣಾ ಹಜಾರೆ ಸಮಾಜದ ಎಲ್ಲಾ ವಿಚಾರಗಳನ್ನು ಯೋಚಿಸಬಲ್ಲಂತಹ ಚಿಂತಕರಾಗಲಿ, ಸಮಾಜ ಸುಧಾರಕರಾಗಲಿ ಅಲ್ಲ. ನಮ್ಮ ಎಲ್ಲಾ ವಿಚಾರಗಳಿಗೆ, ಸಮಸ್ಯೆಗಳಿಗೆ ಅವರೇ ನಾಯಕರಾಗಲಿ, ಆದರ್ಶವಾಗಲಿ, ಪರಿಹಾರವಾಗಲಿ, ಅಲ್ಲ. ಆದರೆ, ಈ ಸಂದರ್ಭದಲ್ಲಿ, ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ, ಅವರನ್ನು ನಾಯಕರನ್ನಾಗಿ, ಆದರ್ಶವನ್ನಾಗಿ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಇಲ್ಲಿಯವರೆಗಿನ ಜೀವನದಲ್ಲಿ ಅವರು ಇಂತಹ ಹೋರಾಟವನ್ನು ಮಾಡಿಕೊಂಡೂ ಬಂದಿದ್ದಾರೆ. ಹಾಗಾಗಿ ಅವರು ಯೋಗ್ಯರೂ ಹೌದು, ಸಮರ್ಥರೂ ಹೌದು.

ಮತ್ತು, ಅಣ್ಣಾ ಹಜಾರೆ ನಮ್ಮ ಈಗಿನ ವಿಸ್ಮೃತಿಯಲ್ಲಿದ್ದ ಸಮಾಜವನ್ನು ಗಾಂಧಿಗೆ, ಅವರ ವಿಚಾರಕ್ಕೆ, ಆಚಾರಕ್ಕೆ ಎದುರು ತಂದು ನಿಲ್ಲಿಸಿದ್ದಾರೆ. ಗಾಂಧಿಯವರ ಅವಹೇಳನೆ ಮಾಡುವುದನ್ನೇ ಒಂದು ಮೌಲ್ಯ ಎಂದುಕೊಂಡ ಗುಂಪನ್ನೂ ಅವರು ತಮ್ಮ ಹಿಂದೆ ಬರುವಂತೆ ಮಾಡಿದ್ದಾರೆ. ದೇಶ ಈ ಮೂಲಕವಾದರೂ ಗಾಂಧಿಯನ್ನು ಮತ್ತೊಮ್ಮೆ ಪರಿಚಯಿಸಿಕೊಂಡರೆ ಅದು ಈ ಚಳವಳಿಯ ಸಾರ್ಥಕ್ಯದಲ್ಲೊಂದೆಂದು ನಾವು ಭಾವಿಸಬೇಕು. ದೇಶದ ಅನೇಕ ಕಡೆ ಅಕ್ಷರಶಃ ಲಕ್ಷಾಂತರ ಜನರು ಬೀದಿಗಿಳಿದಿದ್ದರೂ ಈ ಚಳವಳಿ ಅಹಿಂಸೆ ಮತ್ತು ಸೌಜನ್ಯತೆಯನ್ನು ಕಾಪಾಡಿಕೊಂಡಿದೆ ಎಂದರೆ ಅದು ಕೋಮು ಉನ್ಮಾದದಲ್ಲಿ ಆಗಾಗ ಜ್ವಲಿಸುವ ದೇಶದಲ್ಲಿ ಗಾಂಧಿಮಾರ್ಗದ ಜಯವಾಗಿಯೇ ಕಾಣಿಸುತ್ತಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನೋಡಿದರೆ, ಇಲ್ಲಿ ಅನೇಕ ಜನ ಅನೇಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇವರು ಕೇವಲ ಒಂದು ಪಕ್ಷದ ಭ್ರಷ್ಟಾಚಾರವನ್ನು ಮಾತ್ರ ಟೀಕಿಸುತ್ತಿಲ್ಲ. ಎಲ್ಲರ ಭ್ರಷ್ಟಾಚಾರವನ್ನೂ ಟೀಕಿಸುತ್ತಿದ್ದಾರೆ, ಕೇವಲ ಅದಷ್ಟನ್ನೇ ಅಲ್ಲ, ಅವರು ಮಠಗಳ ಭ್ರಷ್ಟಾಚಾರವನ್ನೂ ಎತ್ತುತ್ತಿದ್ದಾರೆ. ಸಮಾಜದ ಅನೇಕ ಲೋಪದೋಷಗಳನ್ನೂ ಎತ್ತುತ್ತಿದ್ದಾರೆ, ಹಾಗೆಯೇ ಪ್ರಜಾಪ್ರಭುತ್ವದ ಪಾಠವನ್ನೂ ಮಾಡುತ್ತಿದ್ದಾರೆ. ಅತಿರೇಕಗಳೂ ಇರುತ್ತವೆ, ನಿಜ. ಆದರೆ, ಅವೆಲ್ಲವುಗಳ ಮಧ್ಯೆ ಮುಕ್ತವಾದ ವಾತಾವರಣದಲ್ಲಿ ಜನರನ್ನು ಮುಕ್ತವಾಗಿ ಮಾತನಾಡಲು ಬಿಟ್ಟಿರುವುದು ಗಮನಿಸಬೇಕಾದ ಅಂಶ. ಕನ್ನಡದ ಚಿಂತಕ ವರ್ಗ ಮತ್ತು ಕ್ರಾಂತಿಗೀತೆಗಳನ್ನು ಹಾಡಿಕೊಂಡೇ ಒಂದೆರಡು ತಲೆಮಾರುಗಳನ್ನು ಪ್ರಭಾವಿಸುತ್ತ ಬಂದಂತಹ ಗಾಯಕರು ಇಲ್ಲಿ ಮಾಯವಾಗಿರುವುದು ವಿಪರ್ಯಾಸ. ಇದು ಆಯೋಜಕರ ಆಲೋಚನೆಯ ಮಿತಿಯೂ ಹೌದು, ಮತ್ತು ಈ ಚಿಂತಕ-ಗಾಯಕರ ಬದ್ಧತೆಯ ಪ್ರಶ್ನೆಯೂ ಹೌದು. ಇಲ್ಲಿ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಿಂತ ವೈಯಕ್ತಿಕ ದೌರ್ಬಲ್ಯಗಳೇ ಕಾರಣವಾಗಿ ಕಾಣಿಸುತ್ತವೆ.

ದುಡ್ಡು ಕೊಟ್ಟು ಜನರನ್ನು ಸೇರಿಸಿ ರ್‍ಯಾಲಿ ಸಂಘಟಿಸುವುದನ್ನು ಕಂಡೂಕಂಡು ನಮ್ಮ ಪ್ರಜಾಪ್ರಭುತ್ವದ ಅಧೋಗತಿಯ ಬಗ್ಗೆ ಚಿಂತಿತರಾಗಿದ್ದವರಿಗೆ ಇಲ್ಲೊಂದು ಉದಾಹರಣೆ ಇದೆ. ಈ ಚಳವಳಿಗೆ ಮಧ್ಯವಯಸ್ಕರು, ಉದ್ಯೋಗದಲ್ಲಿರುವವರು, ಜನಸಾಮಾನ್ಯರು, ಸ್ವಯಂಪ್ರೇರಿತರಾಗಿ ಬರುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ನಮ್ಮ ಮುಂದಿನ ಚಳವಳಿಗಳು ಮತ್ತು ರಾಜಕಾರಣ ನಡೆಯಬೇಕಿರುವುದೇ ಈ ರೀತಿಯಲ್ಲಿ. ಆದರೆ, ಈಗ ಯಾವುದೋ ಹುಮ್ಮಸ್ಸಿನಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿರುವ ಜನತೆ ಮತ್ತೆ ಚುನಾವಣಾ ಸಮಯದಲ್ಲಿ ತಮ್ಮ ಬೇಜವಾಬ್ದಾರಿ ತೋರಿಸಿದರೆ ಆಗ ಈ ಚಳವಳಿಯ ಮಿತಿ ಗೊತ್ತಾಗುತ್ತದೆ. ಕಳೆದ ಒಂದೆರಡು ಚುನಾವಣೆಗಳಲ್ಲಿ ಇದೇ ಜನ ಯೋಗ್ಯರಾದವರನ್ನು ಆರಿಸಿಕೊಂಡಿದ್ದರೆ ಈ ಚಳವಳಿಯ ಜರೂರತ್ತೇ ಇರುತ್ತಿರಲಿಲ್ಲ. ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ಸಂಸದರು ಮತ್ತು ಶಾಸಕರೇ ಬರೆಯುತ್ತಿದ್ದರು. ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇಂತಹುದೊಂದು ಚಳವಳಿಯಲ್ಲಿ ಮಾತ್ರ ಪಾಲ್ಗೊಳ್ಳಲು ಬರುತ್ತಿರುವವರೇ ಇಲ್ಲಿ ದೋಷಿಗಳು. ಭ್ರಷ್ಟಾಚಾರದ ವಿರುದ್ಧ ಕೂಗುವ ಧಿಕ್ಕಾರ ಇವರ ಭ್ರಷ್ಟಾಚಾರಕ್ಕೂ ಮತ್ತು ಬೇಜವಾಬ್ದಾರಿತನಕ್ಕೂ ಕೂಗುವ ಧಿಕ್ಕಾರವೂ ಹೌದು. ಪಕ್ಷಾತೀತವಾದ ಈ ಹೋರಾಟದ ನಂತರ ಜನ ಮತ್ತೆ ತಮಗಿಷ್ಟವಾದ ಪಕ್ಷವನ್ನು ವಿಮರ್ಶೆಗೊಳಪಡಿಸದೇ ಬೆಂಬಲಿಸಿದರೆ ಅದು ಅವರು ಈ ಚಳವಳಿಯಿಂದ ಏನನ್ನೂ ಕಲಿಯಲಿಲ್ಲ ಎಂದಾಗುತ್ತದೆ. ಜಾತಿವಾದಕ್ಕೆ, ಕೋಮುವಾದಕ್ಕೆ, ಹಣಕ್ಕೆ, ಬಲಕ್ಕೆ, ವಿವಿಧ ಲಾಲಸೆಗಳಿಗೆ ಬಲಿಯಾಗದೆ ಬಹುಸಂಖ್ಯಾತ ಜನ ಪ್ರಾಮಾಣಿಕವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಾಗಲಷ್ಟೇ ನಮ್ಮ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ. ಅದು ನಿಜವಾದ ಬದ್ಧತೆ.

(ಚಿತ್ರಕೃಪೆ: ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ