Daily Archives: August 13, 2012

ಝಕಾರಿಯಾ ಕಾಪಿಮಾಡಿದ ಪ್ಯಾರಾಗ್ರಾಫ್ ಮತ್ತು ಕಿವಿ ಕಚ್ಚಿದ ಸುಶೀಲ್ ಕುಮಾರ್!

– ರಮೇಶ್ ಕುಣಿಗಲ್

“I apologize unreservedly” – ಟೈಮ್ ಮತ್ತು ಸಿಎನ್ಎನ್ ಸಂಸ್ಥೆಗಳಿಂದ ಅಮಾನತ್ತುಗೊಂಡ ನಂತರ ಫರೀದ್ ಝಕಾರಿಯಾ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ. ಸಿಎನ್ಎನ್ ಬ್ಲಾಗ್ ನಲ್ಲಿ ಕೂಡಾ ತಮ್ಮ ತಪ್ಪು ಒಪ್ಪಿಕೊಂಡು ತನ್ನ ಸಂಪಾದಕರಿಗೆ, ಓದುಗರಿಗೆ, ನೋಡುಗರಿಗೆ ಹಾಗೂ ಜಿಲ್ ಲೆಪೋರಗೆ ಕ್ಷಮೆ ಕೋರಿದ್ದಾರೆ. (ಟೈಮ್ ಅವರನ್ನು ಒಂದು ತಿಂಗಳ ಕಾಲಾವಧಿಗೆ ಅಮಾನತ್ತು ಮಾಡಿದೆ.) ಲೆಪೋರ ದಿ ನ್ಯೂಯಾರ್ಕರ್ ನ ಏಪ್ರಿಲ್ 23 ರ ಸಂಚಿಕೆಗೆ ಬರೆದ ಲೇಖನದ ಕೆಲ ಸಾಲುಗಳನ್ನು ತನ್ನ ಅಂಕಣದಲ್ಲಿ ಯಥಾವತ್ತಾಗಿ ಬಳಸಿಕೊಂಡಿದ್ದು ಮತ್ತು ಮೂಲ ಲೇಖಕಿಯ ಹೆಸರು ಹೇಳದೆ ಅವು ತನ್ನದೇ ಸಾಲುಗಳು ಎಂಬಂತೆ ಬರೆದದ್ದು ಅವರ ಮೇಲಿರುವ ಆರೋಪ.

ತನ್ನ ಟೈಮ್ (ಆಗಸ್ಟ್ 20ರ ಸಂಚಿಕೆ) ಅಂಕಣದಲ್ಲಿ ಝಕಾರಿಯಾ ಬರೆದದ್ದು:

“Adam Winkler, a professor of constitutional law at UCLA, documents the actual history in Gunfight: The Battle over the Right to Bear Arms in America. Guns were regulated in the U.S. from the earliest years of the Republic. Laws that banned the carrying of concealed weapons were passed in Kentucky and Louisiana in 1813. Other states soon followed: Indiana in 1820, Tennessee and Virginia in 1838, Alabama in 1839 and Ohio in 1859. Similar laws were passed in Texas, Florida and Oklahoma. As the governor of Texas (Texas!) explained in 1893, the “mission of the concealed deadly weapon is murder. To check it is the duty of every self-respecting, law-abiding man.”

ಲೆಪೋರ ಏಪ್ರಿಲ್ 23 ರ ನ್ಯೂಯಾರ್ಕರ್ ನಲ್ಲಿ ಬರೆದದ್ದು:

“As Adam Winkler, a constitutional-law scholar at U.C.L.A., demonstrates in a remarkably nuanced new book, “Gunfight: The Battle Over the Right to Bear Arms in America,” firearms have been regulated in the United States from the start. Laws banning the carrying of concealed weapons were passed in Kentucky and Louisiana in 1813, and other states soon followed: Indiana (1820), Tennessee and Virginia (1838), Alabama (1839), and Ohio (1859). Similar laws were passed in Texas, Florida, and Oklahoma. As the governor of Texas explained in 1893, the “mission of the concealed deadly weapon is murder. To check it is the duty of every self-respecting, law-abiding man.”

ಎರಡೂ ಬರಹಗಳನ್ನು ಅವಲೋಕಿಸಿದರೆ ಝಕಾರಿಯ ಎಡವಿದ್ದೆಲ್ಲಿ ಎನ್ನುವುದು ಗೊತ್ತಾಗುತ್ತೆ. ಲೆಪೋರ ತಮ್ಮ ಲೇಖನದಲ್ಲಿ ಆಡಮ್ ವಿಂಕ್ಲರ್ ಪುಸ್ತಕವನ್ನು ಹೆಸರಿಸುತ್ತಾ ಅಮೆರಿಕಾದ ಗನ್ ಸಂಸ್ಕೃತಿ ಬಗ್ಗೆ ಬರೆಯುತ್ತಾರೆ. ಝಕಾರಿಯಾ ತನ್ನ ಅಂಕಣದಲ್ಲಿ ಅದೇ ಮಾತುಗಳನ್ನು, ಅಲ್ಲಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ, ಬಳಸಿಕೊಳ್ಳುತ್ತಾರೆ. ಉತ್ಸಾಹಿ ಬ್ಲಾಗರ್ ಗಳು ಝಕಾರಿಯಾನ ಯಡವಟ್ಟನ್ನು ಹೊರತಂದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಝಕಾರಿಯಾನ ಸಂಪಾದಕರು/ಮಾಲೀಕರು ಅವರನ್ನು ಅಮಾನತ್ತು ಮಾಡಿದರು. ಝಕಾರಿಯಾವರನ್ನು ಅಮಾನತ್ತು ಮಾಡುವಾಗ ಟೈಮ್ ಮ್ಯಾಗಜೀನ್ ಹೇಳಿದ್ದು ‘ನಮ್ಮಲ್ಲಿ ಪ್ರಕಟವಾಗುವ ಬರಹಗಳಲ್ಲಿ ಅಂಕಿ ಅಂಶಗಳು ಪಕ್ಕಾ ಇದ್ದರಷ್ಟೇ ಸಾಲದು, ಬರವಣಿಗೆ ಕೂಡಾ ಸ್ವತಃ ಲೇಖಕರದ್ದೇ ಆಗಿರಬೇಕು’. ಝಕಾರಿಯಾ ಕೂಡ ಮರು ಮಾತಿಲ್ಲದೆ ತನ್ನಿಂದ ‘ಟೆರಿಬಲ್ ಮಿಸ್ಟೇಕ್’’ ಆಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಕನ್ನಡದ ಕೆಲ ಪತ್ರಿಕೆಗಳು ಸೇರಿದಂತೆ ಭಾರತದ ಬಹುತೇಕ ಪತ್ರಿಕೆಗಳಲ್ಲಿ ಝಕಾರಿಯಾರ ಸುದ್ದಿ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಯಿತು. ಟೈಮ್ ಮತ್ತು ಸಿಎನ್ಎನ್ ಸಂಸ್ಥೆಗಳಿಂದ ಅಮಾನತ್ತುಗೊಂಡ ಝಕಾರಿಯಾ ಮೂಲತಃ ಭಾರತೀಯ ಎನ್ನುವುದು ಇಷ್ಟರ ಮಟ್ಟಿಗೆ ಸುದ್ದಿಯಾಗಲು ಕಾರಣ. ಅಷ್ಟೇ ಅಲ್ಲ ಬಹುತೇಕ ಪತ್ರಕರ್ತರಿಗೆ ಝಕಾರಿಯಾನ ಕರಿಯರ್ ಆಕರ್ಷಣೀಯ. ಕೇವಲ 28 ರ ಹರೆಯಕ್ಕೆ ಅಮೆರಿಕಾದ ಮ್ಯಾಗಜೀನ್ ಫಾರಿನ್ ಅಫೇರ್ಸ್ ಸಂಪಾದಕರಾಗಿದ್ದು ಝಕಾರಿಯ.

ಮುಂಬೈನಲ್ಲಿ 1964ರಲ್ಲಿ ಹುಟ್ಟಿ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು. ನಂತರ ಹಾರ್ವರ್ಡ್ ವಿ.ವಿಯಿಂದ ಪಿಎಚ್ ಡಿ ಗಳಿಸಿದರು. ನಂತರದ ದಿನಗಳಲ್ಲಿ ಅವರ ಕರಿಯರ್ ಗ್ರಾಫ್ ಸದಾ ಏರುಗತಿಯಲ್ಲಿಯೇ. ವಿದೇಶಾಂಗ ನೀತಿ ನಿರೂಪಣೆಯಲ್ಲಿ ಪ್ರಭಾವ ಬೀರಬಲ್ಲ ಜಗತ್ತಿನ ಕೆಲವೇ ಕೆಲವು ಚಾಣಾಕ್ಷರ ಪೈಕೆ ಝಕಾರಿಯಾ ಒಬ್ಬರು. ಟೈಮ್ ನಲ್ಲಿ ಒಂದು ಕಾಲಂ. ಸಿಎನ್ಎನ್ ನಲ್ಲಿ GPS – Global Public Square ಎಂಬ ಶೋ. ನಾನಾ ದೇಶಗಳ ಅಗ್ರಗಣ್ಯ ನಾಯಕರನ್ನೆಲ್ಲಾ ಸಂದರ್ಶಿಸಿದ ಖ್ಯಾತಿ, ಅನುಭವ ಅವರದು. ಇದೇ ವರ್ಷ ಹೊರಬಂದ ದಿ ಪೋಸ್ಟ್ ಅಮೆರಿಕನ್ ವರ್ಲ್ಡ್ ಸೇರಿದಂತೆ ಇವರ ನಾಲ್ಕು ಪುಸ್ತಕಗಳು ಪ್ರಪಂಚದ ಹಲವು ಬುದ್ಧಿಜೀವಿಗಳಿಗೆ ಆಕರಗಳಾಗಿವೆ. ಭಾರತ ಸರಕಾರ ಅವರಿಗೆ ಪದ್ಮ ಭೂಷಣ ಗೌರವ ನೀಡಿದೆ.

ಇಷ್ಟೆಲ್ಲಾ ಆಗಿರುವ ಝಕಾರಿಯಾ ತನ್ನ ಲೇಖನಕ್ಕೆ ಮತ್ತೊಬ್ಬರ ಬರಹದ ಸಾಲುಗಳನ್ನು ಬಳಸಿಕೊಳ್ಳುವ ಅಗತ್ಯವೇನಿತ್ತು? ನಂತರ ಕ್ಷಮೆ ಕೋರುವ ಅನಿವಾರ್ಯತೆ ಏಕೆ ಸೃಷ್ಟಿಸಿಕೊಳ್ಳಬೇಕಿತ್ತು? ಪ್ರಪಂಚದ ಉತ್ಕೃಷ್ಟ ವಿಶ್ವವಿದ್ಯಾನಿಲಯಗಳಲ್ಲಿ ಓದಿದ, ಅಗ್ರಮಾನ್ಯ ಚಿಂತಕರಲ್ಲಿ ಒಬ್ಬರೆನಿಸಿಕೊಂಡ ಝಕಾರಿಯಾ ಒಂದೇ ಒಂದು ಪ್ಯಾರಾವನ್ನು ಮತ್ತೊಬ್ಬರಿಂದ ಎರವಲು ಪಡೆದು ಹಳ್ಳಕ್ಕೆ ಬಿದ್ದರಲ್ಲಾ…

ಬರೆಯುವ ಉಮ್ಮೇದಿಯಲ್ಲಿ, ಮತ್ತೊಬ್ಬರ ಲೇಖನವನ್ನು ರೆಫರ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೆ? ಹಾಗೂ ಆಗಿರಬಹುದು. ಆ ಲೇಖಕಿ ತನ್ನ ಲೇಖನದಲ್ಲಿ ಮತ್ತೊಬ್ಬ ಗ್ರಂಥಕರ್ತನ ಬಗ್ಗೆ ಉಲ್ಲೇಖಿಸುವಾಗ ಬಳಸಿದ ಪದಗಳನ್ನು ಅದೇ ರೀತಿ ಎರವಲು ಪಡೆದರೆ ಏನಾದೀತು, ಎಂಬ ಆ ಕ್ಷಣದ ಉಡಾಫೆಯೂ ಈ ಸಂದಿಗ್ಧಕ್ಕೆ ತಂದು ನಿಲ್ಲಿಸಿರಲಿಕ್ಕೆ ಸಾಕು. ಆದರೆ, ಈ ಒಂದು ಪ್ರಕರಣದಿಂದ ಝಕಾರಿಯಾ ಸಂಪಾದಿಸಿದ್ದ ಮನ್ನಣೆ, ಜನಪ್ರಿಯತೆಗೆ ಕಪ್ಪು ಚುಕ್ಕಿ ತಾಕಿತಲ್ಲ!

ಇದೇ ಸಂದರ್ಭದಲ್ಲಿ ಥಟ್ಟನೆ ಹೋಲಿಕೆಗೆ ನೆನಪಾಗುವುದು ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಸುಶೀಲ್ ಕುಮಾರ್ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿಯ ಕಿವಿ ಕಚ್ಚಿದ ಎನ್ನುವ ಪ್ರಸಂಗ.

ಪಂದ್ಯದ ವೇಳೆಯಲ್ಲಿಯೇ ಎದುರಾಳಿ ರೆಫ್ರಿಗೆ ದೂರು ಕೊಟ್ಟ, ಆದರೆ ರೆಫ್ರಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರದ ವೀಡಿಯೋ ತುಣುಕುಗಳಲ್ಲಿ ಈ ಆರೋಪ ನಿಜ ಇರಬಹುದೇ ಎಂಬ ಅನುಮಾನಕ್ಕೆ ಎಡೆಮಾಡುವ ದೃಶ್ಯಗಳಿವೆ. ಬೆಳ್ಳಿ ಗೆದ್ದ ಹುಡುಗ, ಎದುರಾಳಿಯ ಕಿವಿ ಏಕೆ ಕಚ್ಚಬೇಕಿತ್ತು? ಈ ಸಂಭ್ರಮದ ಕ್ಷಣದಲ್ಲಿ ಒಂದು ವಿಷಾದ ಹಾಗೇ ಉಳಿದು ಬಿಡುತ್ತದೆ.

ಎರಡೂ ಘಟನೆಗಳು ಮೇಲ್ನೋಟಕ್ಕೆ ಭಿನ್ನ ಎನಿಸಬಹುದು. ಆದರೆ ಒಂದಂತೂ ಸತ್ಯ. ಝಕಾರಿಯಾಗೆ ತಾವು ಮಾಡುತ್ತಿರುವ ತಪ್ಪಿನ ಅರಿವಿತ್ತು. ಅಂತೆಯೇ ಸುಶೀಲ್ ಕುಮಾರ್ ಗೂ. ಗೊತ್ತಿದ್ದೂ ಯಡವಟ್ಟು ಮಾಡಿಕೊಂಡದ್ದೇಕೆ? ಎರಡು ಪ್ರಕರಣಗಳಲ್ಲಿ ಕಂಡುಬರುವ ಸಮಾನ ಅಂಶ – ಇಬ್ಬರೂ ಆ ಒಂದು ಕ್ಷಣ ಮೈ ಮರೆತರು.

ಇಬ್ಬರ ತಪ್ಪುಗಳಿಂದ ಕಲಿಯಬೇಕಾದವರು ಬೇಕಾದಷ್ಟು ಮಂದಿ ಇದ್ದಾರೆ. ಕನ್ನಡ ಬರಹಗಾರರ ಮತ್ತು ಮಾಧ್ಯಮ ಲೋಕದಲ್ಲಿ ಒಂದು ಪ್ಯಾರಾ ಕಾಪಿ ಮಾಡಿದ್ದು ಹೋಗಲಿಬಿಡಿ, ಇಡೀ ಪುಸ್ತಕವನ್ನೇ ಬೇರೆಯವರಿಂದ ಅನುವಾದ ಮಾಡಿಸಿ ತಮ್ಮದು ಎಂದು ಪ್ರಿಂಟ್ ಮಾಡಿಸಿಕೊಂಡವರಿದ್ದಾರೆ. ಮತ್ತೊಂದೆಡೆ ತಾವೇ ಬರೆದ ಬರಹಕ್ಕೆ ಮತ್ತೊಬ್ಬರ ಹೆಸರು ಕೊಟ್ಟು ಬಾಣ ಬಿಟ್ಟವರಿದ್ದಾರೆ. ಅಮಾಯಕ ಹೆಣ್ಣು ಮಕ್ಕಳ ಮಾನವನ್ನು ಟಿಆರ್ ಪಿಗಾಗಿ ಹರಾಜಿಗಿಟ್ಟು ಮೌಲ್ಯಗಳನ್ನೇ ಹೀರಿದವರೂ ಇದ್ದಾರೆ.

(ಚಿತ್ರಕೃಪೆ: ವಿಕಿಪೀಡಿಯ)

ಸದನದ ಕಲಾಪಗಳೇಕೆ ಈಗ ಹೀಗೆ?


-ಚಿದಂಬರ ಬೈಕಂಪಾಡಿ


 

ಮೌಲ್ಯಗಳು ಎಲ್ಲಾ ರಂಗಗಳಲ್ಲೂ ಇಳಿಮುಖವಾಗುತ್ತಿವೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಚರ್ಚೆಯಾಗುತ್ತಿರುವ ಅಂಶ. ನಂಬಿಕೆ, ನಡವಳಿಕೆ, ಆಚಾರ, ವಿಚಾರಗಳಿರಬಹುದು, ಸಾಮಾಜಿಕ, ಆರ್ಥಿಕ, ಔದ್ಯಮಿಕ ಕ್ಷೇತ್ರವೇ ಆಗಿರಬಹುದು ಒಂದು ರೀತಿಯಲ್ಲಿ ಬದಲಾವಣೆಯ ಬಿರುಗಾಳಿಗೆ ಸಿಕ್ಕಿ ಥರಗುಟ್ಟುತ್ತಿವೆಯೇನೋ ಅನ್ನಿಸುತ್ತಿದೆ. ಹಾಗೆಂದು ಎಲ್ಲವೂ ನಿಂತ ನೀರಾಗಿರಬೇಕು ಎನ್ನುವ ವಾದವಲ್ಲ ಅಥವಾ ಬದಲಾವಣೆಯೇ ಬೇಡ ಎನ್ನುವ ಸಂಕುಚಿತ ದೃಷ್ಟಿಯೂ ಅಲ್ಲ.

ಉದಾಹರಣೆಗೆ ವಿಧಾನ ಮಂಡಲ, ಸಂಸತ್ತಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಿಜಕ್ಕೂ ಹೀಗಾಗುತ್ತಿರುವುದು ಆತಂಕಕಾರಿ ಸಂಗತಿ. ಆದರೆ ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನೆ ಮಾಡುವುದು ಖಂಡಿತಕ್ಕೂ ಅಪರಾಧವಲ್ಲ. ಹಾಗೆ ನೋಡಿದರೆ ವಿಧಾನ ಮಂಡಲವಿರಬಹುದು, ಸಂಸತ್ತೇ ಆಗಿರಬಹುದು ಹಿಂದಿಗಿಂತಲೂ ಹೆಚ್ಚು ವಿದ್ಯೆ ಕಲಿತವರು ಆಯ್ಕೆಯಾಗಿ ಬರುತ್ತಿದ್ದಾರೆ. ಉದ್ಯಮಿಗಳು, ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದವರು ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಹಿಂದಿಗಿಂತ ಈಗ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ವಿಚಾರಗಳ ಚರ್ಚೆ ಆಗುತ್ತಿಲ್ಲ. ಮೊದಲಿನಂತೆ ಚಿಂತನೆಗಳು ಸದಸ್ಯರ ಮಾತುಗಳಲ್ಲಿ, ವಾದ ಮಂಡನೆಯಲ್ಲಿ ಇಲ್ಲ. ಹರಿತವಾದ ಪ್ರಶ್ನೆಗಳು, ಮೊನಚಾದ ಉತ್ತರಗಳು ಕಂಪನ ಉಂಟುಮಾಡುತ್ತಿಲ್ಲ ಇತ್ಯಾದಿ ಕೊರತೆಗಳನ್ನು ಪಟ್ಟಿ ಮಾಡುತ್ತಾರೆ.

ಇದು ಎಷ್ಟರ ಮಟ್ಟಿಗೆ ನಿಜ ಮತ್ತು ಯಾಕೆ ಹೀಗೆ ಎನ್ನುವ ಕುರಿತು ಚಿಂತನೆ ಮಾಡುವುದು ಯೋಗ್ಯ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವೊಂದರಲ್ಲಿ ಸದನದೊಳಗೆ ಚರ್ಚೆಯ ಗುಣಮಟ್ಟ ಕುಸಿಯುತ್ತಿದೆ. ವಾಟಾಳ್ ನಾಗರಾಜ್ ಅವರಂಥವರು ಸದನ ಪ್ರವೇಶಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಳೆದ ಮೂರು ದಶಕಗಳಿಂದ ಸದನದೊಳಗೆ-ಹೊರಗೆ ಜನಪ್ರತಿನಿಧಿಯಾಗಿ ಹೋರಾಟ ಮಾಡುತ್ತಲೇ ಬಂದ ಯಡಿಯೂರಪ್ಪ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎಂದರು ಎನ್ನುವ ಕಾರಣಕ್ಕಾಗಿಯಲ್ಲ, ವಾಸ್ತವವಾಗಿ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವುದನ್ನು ಒಪ್ಪಲೇಬೇಕು.

ಇಲಾಖೆಗಳ ಬೇಡಿಕೆಯ ಮೇಲಿನ ಚರ್ಚೆಯಾಗುವ ಸಂದರ್ಭದಲ್ಲಿ ಮಾತನಾಡುವ ಸದಸ್ಯ, ಒಂದಷ್ಟು ಮಂದಿ ಆ ಇಲಾಖೆಯ ಕುರಿತು ಆಸಕ್ತಿ ಇರುವವರು ಮಾತ್ರ ಸದನದಲ್ಲಿರುವುದು ಇತ್ತೀಚಿನ ದಿನಗಳ ವಾಸ್ತವ ಸ್ಥಿತಿ. ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯ ವೇಳೆ ಸಂಬಂಧಪಟ್ಟ ಸಚಿವರೂ ಹಾಜರಾಗದಿರುವ ಉದಾಹರಣೆಗಳಿವೆ. ಪ್ರತಿಪಕ್ಷದ ಸದಸ್ಯ ಸರ್ಕಾರದ ಮೇಲೆ ಸವಾರಿ ಮಾಡುತ್ತಿದ್ದರೆ ಅದನ್ನು ಪ್ರತಿಭಟಿಸುವ ಅಥವಾ ಆ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಆಸಕ್ತಿಯೂ ಇಲ್ಲದೆ ತೂಕಡಿಸುವವರನ್ನೂ ಕಾಣುವುದಿದೆ. ಈ ಹಿನ್ನೆಲೆಯಲ್ಲಿ ಸದನದ ಕಲಾಪಗಳಲ್ಲಿ ಹಿಂದಿನಂತೆ ಚರ್ಚೆಗಳು ನಡೆಯುತ್ತಿಲ್ಲ ಎನ್ನುವುದನ್ನು ಇಂದಿನ ದಿನಗಳಿಗೆ ಹೋಲಿಸಿದರೆ ಒಪ್ಪಲೇಬೇಕು.

ಎಂಭತ್ತರ ದಶಕದಲ್ಲಿ ವಿಧಾನ ಮಂಡಲದ ಕಲಾಪಗಳನ್ನು ಪತ್ರಕರ್ತನಾಗಿ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈಗಿನ ಕಲಾಪವನ್ನು ವಿಶ್ಲೇಷಿಸುವುದಾದರೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೇಳಿದ ಮಾತುಗಳು ಕಟು ಸತ್ಯ. ಕನ್ನಡ ಚಳವಳಿಯ ವಾಟಾಳ್ ನಾಗರಾಜ್ ಸದನದಲ್ಲಿದ್ದರೆ ಕಲಾಪಕ್ಕೆ ರಂಗಿರುತ್ತಿತ್ತು. ತಮಾಷೆ, ಕೀಟಲೆ, ಲೇವಡಿ ಮೂಲಕವೇ ಸರ್ಕಾರ, ಮಂತ್ರಿಗಳ ಮೇಲೆ ಅವರು ಬೀಸುತ್ತಿದ್ದ ಮಾತಿನ ಚಾಟಿಯನ್ನು ಈಗ ಕಾಣಲು ಸಾಧ್ಯವಾಗುತ್ತಿಲ್ಲ (ಇವರೊಬ್ಬರಿಗೇ ಈ ಮಾತು ಸೀಮಿತವಲ್ಲ, ಬೇರೆಯವರೂ ಇದ್ದರು). ಮುಖ್ಯಮಂತ್ರಿಯಾಗಿ ರಾಮಕೃಷ ಹೆಗ್ಡೆ, ವೀರೇಂದ್ರ ಪಾಟೀಲ್, ಸ್ಪೀಕರ್ ಆಗಿ ಎಸ್.ಎಂ.ಕೃಷ್ಣ, ಡಿ.ಬಿ.ಚಂದ್ರೇಗೌಡ, ರಮೇಶ್ ಕುಮಾರ್, ಸಚಿವರಾಗಿ ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಎಂ.ವೀರಪ್ಪ ಮೊಯ್ಲಿ, ಜೆ,ಎಚ್.ಪಟೇಲ್, ಕೆ.ಎಚ್.ರಂಗನಾಥ್, ಟಿ.ಎನ್.ನರಸಿಂಹಮೂರ್ತಿ, ಎಸ್.ಬಂಗಾರಪ್ಪ, ಎಂ.ಸಿ.ನಾಣಯ್ಯ, ಡಾ.ಜೀವರಾಜ್ ಆಳ್ವ, ಸಿ.ಭೈರೇಗೌಡ, ಪ್ರತಿಪಕ್ಷದ ಸಾಲಿನಲ್ಲಿ ಯಡಿಯೂರಪ್ಪ, ವಾಟಾಳ್ ನಾಗರಾಜ್ ಹೀಗೆ ಪಟ್ಟಿ ಮಾಡುತ್ತಾ ಸಾಗಬಹುದು. ಇವರೆಲ್ಲರ ಅಂದಿನ ವಿಚಾರ ಮಂಡನೆ, ವಾದ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ವಿಧಾನ, ಸಚಿವರುಗಳು ಪ್ರತಿಪಕ್ಷಗಳನ್ನು ನಿಭಾಯಿಸುತ್ತಿದ್ದ ಚಾಕಚಕ್ಯತೆ ಈಗಿನ ಕೊರತೆ ಎನ್ನುವುದು ವಾಸ್ತವ.

ಬಿ.ಎಂ.ಇದಿನಬ್ಬರಂಥ ಕೆಲವು ಮಂದಿ ಶಾಸಕರು ಬೆಳಿಗ್ಗೆ ಹತ್ತು ಗಂಟೆಗೆ ಸದನಕ್ಕೆ ಹಾಜರಾದರೆ ಮಧ್ಯರಾತ್ರಿವರೆಗೂ ಕಲಾಪದಲ್ಲಿ ಕುಳಿತಿರುತ್ತಿದ್ದರು. ಆಗ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ ರಾಜ್ಯದ ಸಮಗ್ರ ಚಿತ್ರಣ ಕೊಡುತ್ತಿದ್ದವು, ಸಮಸ್ಯೆಗಳನ್ನು ಬಿಡಿಸಲು ಮುಖ್ಯ ಅಸ್ತ್ರವಾಗುತ್ತಿದ್ದವು. ಪ್ರತಿಪಕ್ಷಗಳ ಸದಸ್ಯರಂತು ಹಸಿದ ಹೆಬ್ಬುಲಿಯಂತೆ ಸರ್ಕಾರದ ವಿರುದ್ಧ ಘರ್ಜಿಸುತ್ತಿದ್ದರು. ಸದನಕ್ಕೆ ಬರುವ ಮುನ್ನ ಸಚಿವರುಗಳು ಮಾತ್ರವಲ್ಲ, ಶಾಸಕರೂ ಕೂಡಾ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಬರುತ್ತಿದ್ದುದನ್ನು ಹತ್ತಿರದಿಂದ ಕಂಡಿದ್ದೇನೆ. ಆದಿನಗಳಲ್ಲಿ ಸದನ ಸಮೀಕ್ಷೆಯನ್ನು ಮಾಧ್ಯಮಗಳು ಅತ್ಯಂತ ಗಂಭೀರವಾಗಿ ಮಾಡುತ್ತಿದ್ದವು. ಸದನ ಸಮೀಕ್ಷೆಯನ್ನು ಓದಿದರೆ ಕಲಾಪದಲ್ಲಿ ಕುಳಿತು ನೋಡಿದಂಥ ಅನುಭವ ಆ ಬರವಣಿಗೆಯಲ್ಲಿರುತ್ತಿತ್ತು.

ಸದನದಲ್ಲಿ ಚರ್ಚೆಯಾಗಬೇಕಾಗಿದ್ದ ಜನರ ಸಮಸ್ಯೆಗಳ ಸ್ಥಾನವನ್ನು ಈಗ ಪಕ್ಷ ರಾಜಕಾರಣ ಆಕ್ರಮಿಸಿಕೊಂಡಿದೆ. ರಾಜಕೀಯ ವಿಚಾರಧಾರೆಗಳನ್ನು, ಪರಸ್ಪರ ಟೀಕೆ ಮಾಡಿಕೊಳ್ಳುವುದನ್ನೇ ಕಾಣಬಹುದೇ ಹೊರತು ಯೋಜನೆಗಳ ಅನುಷ್ಠಾನದ ಬಗ್ಗೆ ಅಷ್ಟೇನೂ ಗಂಭೀರವಾಗಿ ಚರ್ಚೆಗಳಾಗುತ್ತಿಲ್ಲ ಎನ್ನಲೇಬೇಕು. ಹೀಗೆಂದ ಮಾತ್ರಕ್ಕೇ ಸದನದ ಕಲಾಪವನ್ನೇ ಋಣಾತ್ಮಕವಾಗಿ ನೋಡಲಾಗುತ್ತಿದೆ ಎಂದುಕೊಳ್ಳಬೇಕಾಗಿಲ್ಲ. ವಾಸ್ತವಾಂಶವನ್ನು ಅವಲೋಕಿಸುವ ಅಗತ್ಯವಿದೆ.

ಈಗಿನ ಕಲಾಪದಲ್ಲಿ ರಾಜಕೀಯದ ಜಿದ್ದು ಕಣ್ಣಿಗೆ ರಾಚುತ್ತದೆ. ನಿಂದನೆಯಲ್ಲೂ ಅದೇನೋ ಸುಖ ಅನುಭವಿಸುವ ಸ್ಥಿತಿ. ಉದಾಹರಣೆಗೆ ರಾಜ್ಯಸಭೆಯಲ್ಲಿ ಗುರುವಾರ ನಡೆದ ಒಂದು ಘಟನೆ ಈಗಿನ ಸಂಸತ್ ಕಲಾಪ ಸಾಗುತ್ತಿರುವ ದಿಕ್ಕನ್ನು ಪುಷ್ಠೀಕರಿಸಬಲ್ಲುದು. ಅಸ್ಸಾಂ ದಳ್ಳುರಿಯ ಬಗ್ಗೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಉತ್ತರಿಸುತ್ತಿದ್ದ ಸಂದರ್ಭ ಸದಸ್ಯೆ ಜಯಾ ಬಚ್ಚನ್ ಮಧ್ಯೆಪ್ರವೇಶಿಸಿದಾಗ ಅತ್ಯಂತ ಜವಾಬ್ದಾರಿಯುತ ಹುದ್ದೆಯಲ್ಲಿರುವ ಶಿಂಧೆ ’ಮೇಡಂ ಇದು ಸಿನಿಮಾದ ವಿಚಾರವಲ್ಲ’ ಎನ್ನುವ ಮೂಲಕ ಕ್ಷಮೆಯಾಚಿಸಬೇಕಾಯಿತು. ರಾಜ್ಯಸಭೆ ಪ್ರವೇಶಿಸಿರುವ ಆಕೆ ಈ ದೇಶದ ಓರ್ವ ಕಲಾವಿದೆ. ಆಕೆ ಅತ್ಯಂತ ಗಂಭೀರವಾದ ಅಸ್ಸಾಂ ಗಲಭೆಯ ಕುರಿತು ಪ್ರತಿಕ್ರಿಯೆಸಲು ಮುಂದಾದಾಗ ಶಿಂಧೆ ಆಡಿದ ಮಾತು ಕಲಾವಿದೆಗೆ ಮಾಡಿದ ಅವಮಾನ. ಓರ್ವ ಸಿನಿಮಾ ನಟಿ ಸಿನಿಮಾ ಬಗ್ಗೆಯೇ ಮಾತನಾಡಬೇಕು ಎನ್ನುವ ಚೌಕಟ್ಟು ಹಾಕಿನೋಡುವ ಪ್ರವೃತ್ತಿಯೇ ಆತಂಕಕಾರಿ. ಗೃಹ ಸಚಿವರೇ ಕ್ಷಮೆಯಾಚಿಸಬೇಕಾಗಿ ಬಂದದ್ದು ದುರಂತವೇ ಸರಿ.

ಬಿಜೆಪಿಯ ಹಿರಿಯ ತಲೆ, ಅತ್ಯುತ್ತಮ ಸಂಸದೀಯಪಟು ಎಲ್.ಕೆ.ಅಡ್ವಾಣಿ ಅವರು ಲೋಕಸಭೆಯಲ್ಲಿ ಯುಪಿಎ ವಿರುದ್ಧ ಹರಿಹಾಯ್ದು ಬಳಕೆ ಮಾಡಿದ ಪದ ಕೋಲಾಹಲಕ್ಕೆ ಕಾರಣವಾಯಿತು. ಆರು ದಶಕಗಳನ್ನು ರಾಷ್ಟ್ರರಾಜಕಾರಣದಲ್ಲಿ ಕಳೆದಿರುವ ಅಡ್ವಾಣಿ ಅವರು ’ಅನೈತಿಕ’ ಎನ್ನುವ ವ್ಯಾಖ್ಯಾನಕೊಟ್ಟದ್ದು ಆಘಾತಕಾರಿ ಕೂಡಾ. ಬೇರೆ ಬೇರೆ ಕಾರಣಗಳಿಗಾಗಿ ಆ ಪದವನ್ನು ಸಮರ್ಥಿಸಿಕೊಳ್ಳಬಹುದು ಎನ್ನುವುದು ಬೇರೆ ವಿಚಾರ. ಆದರೆ ಕಲಾಪದಲ್ಲಿ ಕೇಳಿಬರುತ್ತಿರುವ ಟೀಕೆಗಳಿಗೆ ಇಂಥ ಘಟನಾವಳಿಗಳು ಪೂರಕವಾಗುತ್ತವೆ ಅನ್ನಿಸುವುದಿಲ್ಲವೇ?. ಹಾಗಾದರೆ ಈಗ ಹೇಳಿ ಕಲಾಪಗಳ ಗುಣಮಟ್ಟ ಕುಸಿಯುತ್ತಿಲ್ಲವೇ? ಹೀಗಾಗದಂತಾಗಲು ಮುಂದೇನು ಮಾಡಬೇಕು? ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಇದು ಚರ್ಚೆಗೆ ಒಳಪಡಬೇಕು.