Daily Archives: March 3, 2014

ಸಾಹಿತ್ಯವನ್ನು ಸಾಂಪ್ರದಾಯೀಕರಣಗೊಳಿಸುತ್ತಿರುವ ಕವಿಕುಲತಿಲಕರು

– ಬಿ.ಶ್ರೀಪಾದ ಭಟ್

ಯೇಟ್ಸ್ ಕವಿಯ ಒಂದು ಜನಪ್ರಿಯ ಕವಿತೆ

Crazy Jane Talks with the Bishop

I met the Bishop on the road
And much said he and I.
‘Those breasts are flat and fallen now,wbyeats
Those veins must soon be dry;
Live in a heavenly mansion,
Not in some foul sty.’

‘Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.

‘A woman can be proud and stiff
When on love intent;
But Love has pitched his mansion in
The place of excrement;
For nothing can be sole or whole
That has not been rent.’

ಕನ್ನಡದ ಖ್ಯಾತ ಮಕ್ಕಳ ಸಾಹಿತಿ ಎಂದು ಬೆಂಗಳೂರು ಸುತ್ತಮುತ್ತ ಜಗತ್ಪ್ರಸಿದ್ಧಿ ಪಡೆದ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಯೇಟ್ಸ್‌ನ ಮೇಲಿನ ಕವಿತೆಯನ್ನು ಈ ಕೆಳಗಿನಂತೆ ಅನುವಾದ ಮಾಡಿದ್ದಾರೆ. (ಕೃಪೆ : ಸಂಚಯ 103, ಜನವರಿ – ಫೆಬ್ರವರಿ 2014)

ಪಾದ್ರಿಗೆ ತಿಕ್ಕಲು ಜೀನ್ ಮಾಡಿದ ಬೋಧನೆ

ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕು
ಅದೂಇದೂ ಮಾತನಾಡಿದೆವು

ಜೋತುಬೀಳುವವು ಮೊಲೆಗಳೊಂದು ದಿನ
ಒಳನಾಳಗಳು ಒಣಗುವವು
ಅದ್ದರಿಂದ ಬಾ ಭಗವಂತನ ದಿವ್ಯಸನ್ನಿಧಿಗೆ
ಬಿಟ್ಟು ಪಡುವ ಪಟ್ಟೆ ಪಲ್ಲಂಗ

ಸ್ವಾಮಿ ಭಗವಂತನ ಹೆಸರಲ್ಲೇ ಇದೆ ಭಗವು
ಭಗವಿಲ್ಲದೆ ಇಲ್ಲ ಭಗವಂತ
ಪಿತ್ತ ಕೆರಳಿ ಕೂಗಿದೆ ಆ ಪಾದ್ರಿಗೆ; ಮಲಗಲಿಕ್ಕೇನೆ
ಮಂಚವೂ ಚಿತೆಯೂ !

ಪುಟಿಯುವೆದೆಯ ತರುಣಿಗೆ ತುಪ್ಪಳದ ಮಂಚದೆಲ್ಲಂಥ ಪೊಗರು!
ಮೂತ್ರಾಮೇಧ್ಯವ ಬಿಡುವ ಕಡೆಯಲ್ಲೇ ಮತ್ತೆ ಪ್ರೀತಿಯ ಮಹಾ ಮಹಲ್ಲು!

ಒಂದನ್ನು ಬಿಟ್ಟೊಂದಿಲ್ಲ, ಈ ಅರಿವು
ತಮಗೂ ಆಗಲಿಕ್ಕುಂಟು!
ಭಗವೂ ಭಗವಂತನ ನಿವಾಸ
ನೆನಪಿಗಿರಲಿ ಉಡಿಯಲ್ಲೊಂದು ಗಂಟು

ಯೇಟ್ಸ್‌ನಂತಹ ಸೂಕ್ಷ್ಮ ಸಂವೇದನೆಯ, ಮಹಾನ್ ಕವಿಗೆ ಸಂಪೂರ್ಣ ಅಪಚಾರದಂತಿದೆ ಈ ಅನುವಾದ. ಹಿಂದೊಮ್ಮೆ “ಯೇಟ್ಸ್ ಮುಟ್ಟಿದರೆ ಮುನಿಯಂಥ ಕವಿ” ಎಂದು ಪಿ.ಲಂಕೇಶ್ ಹೇಳಿದ್ದರು. ಇಂತಹ ಕವಿಯ ಸಂವೇದನೆಗಳನ್ನು, ಒಳನೋಟಗಳನ್ನು, ಕವಿತೆಗಳ ಸಾಲುಗಳ ಧ್ವನಿಯನ್ನು ಅರ್ಥ ಮಾಡಿಕೊಳ್ಳದ ಈ ವೆಂಕಟೇಶಮೂರ್ತಿಗಳಂತಹ ಕವಿಗಳು ಅತ್ಯಂತ ಶುಷ್ಕವಾಗಿ, ಜಡವಾದ ಅನುವಾದ ಮಾಡಿದ್ದಾರೆ. ಇಲ್ಲಿ ಯೇಟ್ಸ್‌ನ ತಲ್ಲಣಗಳು ನಮ್ಮದಾಗದಿದ್ದರೆ ಇಂತಹ ಕೆಟ್ಟದಾದ ಅನುವಾದ ಸಾಧ್ಯವಷ್ಟೆ.

ಆಕೆ ಜೇನ್ ಎಂಬ ಹೆಸರಿನಿಂದ ಯೇಟ್ಸ್‌ನನ್ನು ನಿದ್ದೆಗೆಡಿಸಿದವಳು. ಯೇಟ್ಸ್ ತನ್ನ ಖಿನ್ನತೆಯ ದಿನಗಳಲ್ಲಿ ಈ ಜೇನ್‌ಳ ಮೇಲೆ ಪದ್ಯಗಳನ್ನು ಬರೆದ. ತನ್ನ ಸ್ನೇಹಿತನಿಗೆ ಬರೆವ ಪತ್ರದಲ್ಲಿ ಯೇಟ್ಸ್ “I have begun a longish poem called “wisdom” in the attempt to shake off “Crazy Jane” and I begun to think that I shall take to religion unless you save me from it.” ಎನ್ನುತ್ತಾನೆ.

ಯೇಟ್ಸ್‌ನ ಈ ಯಾವುದೇ ಸಂವೇದನೆಗಳು ಕನ್ನಡದ ಈ ಸೋ ಕಾಲ್ಡ್ ಮಕ್ಕಳ ಕವಿಗೆ ಅರ್ಥವಾದಂತಿಲ್ಲ. ನೋಡಿ ’ಜೇನ್’ ಎನ್ನುವ ಹೆಸರನ್ನೇ ತಿರುಚಿ ’ಜೀನ್’ ಎಂದು ಅನುವಾದ ಮಾಡಿದ್ದಾರೆ. ಅಲ್ಲಿಗೇ ಹೂರಣವು ಬಿದ್ದು ಹೋಯಿತು.

ಮೊದಲನೇ stanza ದಲ್ಲಿ ಜೇನ್‌ಳಿಗೆ ನೀನು ನಿನ್ನ ಹಳೆಯ ಉನ್ಮಾದದ, Lust ನ ದಿನಗಳನ್ನು ಬಿಟ್ಟು ಚರ್ಚಿನ ಕಡೆಗೆ ಬಾ ಎನ್ನುವ ಪಾದ್ರಿ ಮುಂದುವರೆದು ಹೇಳುವ those breasts are flat and fallen now ಎನ್ನುವ ಸಾಲುಗಳು ಅನುವಾದದಲ್ಲಿ “ಜೋತುಬೀಳುವವು ಮೊಲೆಗಳೊಂದು ದಿನ” ಎಂದಿದೆ. ಇದಕ್ಕೆ ವಿವರಣೆ ಬೇಕಿಲ್ಲ. ನಿನ್ನ ಮೊಲೆಗಳು ಜೋತು ಬಿದ್ದು ನೀನೀಗ ಮುದಿಯಾಗಿದ್ದೀಯ ಎಂದು ಪಾದ್ರಿ ಹೇಳುತ್ತಿದ್ದರೆ ಅದನ್ನು ಕನ್ನಡದ ಕವಿ “ಮುಂದೊಂದು ದಿನ ಮುದಿಯಳಾಗುತ್ತೀಯ” ಎಂದು ಅನುವಾದಿಸುತ್ತಾನೆ. ಸೂಕ್ಷ್ಮ ಓದುಗರಿಗೆ ಇಲ್ಲಿ ಸದರಿ ಕವಿಯ ಬಾಲಿಶ ಅನುವಾದ ಮಾಡಿದ ಅನಾಹುತದ ವಿವರಣೆ ಕೊಡಬೇಕೆ?

ಎರಡನೇ stanza ದಲ್ಲಿ opposite go together ಎನ್ನುವ ಅರ್ಥದಲ್ಲಿ ಜೇನ್ ಪಾದ್ರಿಗೆ ಉತ್ತರಿಸುತ್ತಾಳೆ: fair goes with foul. ಈ ವೆಂಕಟೇಶಮೂರ್ತಿಯವರು ಇದನ್ನು
’ಸ್ವಾಮಿ ಭಗವಂತನ ಹೆಸರಲ್ಲೇ ಇದೆ ಭಗವು
ಭಗವಿಲ್ಲದೆ ಇಲ್ಲ ಭಗವಂತ’ ಎಂದೆಲ್ಲ ಜಾಳು ಜಾಳಾಗಿ, ಸನಾತನವಾದಿಯಂತೆ ಅನುವಾದಿಸುತ್ತಾರೆ. ಅಪಾರವಾದ ಮುಕ್ತತೆಯನ್ನು, ಸೃಜನಶೀಲತೆಯನ್ನು, ಬದುಕಿನ ಸಂಕೀರ್ಣತೆಯ ಕುರಿತಾದ ಆಳವಾದ ಕಾಮನ್‌ಸೆನ್ಸ್ ಅನ್ನು ಬೇಡುವ ಜೇನ್‌ಳ ಇಂತಹ ಸಾಲುಗಳನ್ನು ಕಾವ್ಯರೂಪವಾಗಿ ಅನುವಾದಿಸುವಾಗ ಅನುವಾದಕ ಯೇಟ್ಸ್‌ನ ಸಂವೇದನೆಗಳಿಗೆ ಹತ್ತಿರವಿದ್ದು ಕವಿಯ ಭಾವಕೋಶದೊಳಗೆ ಪ್ರಯಾಣಿಸಿ ಅನುವಾದಿಸಬೇಕಾದಂತಹ ಸಂದರ್ಭದಲ್ಲಿ ಸದರಿ ಕವಿಗಳು ಮಾಡಿದ್ದಾರೂ ಏನು?? ಇಲ್ಲಿನ ಅಪಚಾರಗಳನ್ನು ಸೂಕ್ಷ್ಮ ಓದುಗರಿಗೆ ಇಲ್ಲಿ ಬಿಡಿಸಿ ಹೇಳಬೇಕಿಲ್ಲ.

ಮುಂದುವರೆದು ಜೇನ್ ತನ್ನ ಸ್ನೇಹಿತರು ತನ್ನಂತೆಯೇ ದೇಹವನ್ನು ತೀವ್ರವಾಗಿ ಆರಾಧಿಸಿದರೂ ಆ ಕಾರಣಕ್ಕಾಗಿ ಅವರಿಗೆ ಗೋರಿಗಳನ್ನು ನಿರಾಕರಿಸಿಲ್ಲ ಎಂದು ಮಾರ್ಮಿಕವಾಗಿ ನುಡಿಯುತ್ತಾಳೆ. Nor grave nor bed denied. ಇದರ ಅನುವಾದ ನೋಡಿ “ಪಿತ್ತ ಕೆರಳಿ ಕೂಗಿದೆ ಆ ಪಾದ್ರಿಗೆ; ಮಲಗಲಿಕ್ಕೇನೆ ಮಂಚವೂ ಚಿತೆಯೂ!” ಯಾರಾದರೂ ಯೇಟ್ಸ್‌ನನ್ನು ಈ ರೀತಿ ಅಸೂಕ್ಷ್ಮತೆಯಿಂದ, ಅಸಂಬದ್ಧವಾಗಿ ಕಿರುಚಾಡುತ್ತಾ, ಸಾಂಪ್ರದಾಯಿಕ ಮನಸ್ಥಿತಿಯಿಂದ ಮುಟ್ಟಲು ಸಾಧ್ಯವೆ?? ಮುಟ್ಟಿದರೆ ಅದು ಬೂದಿಯಾಗುವುದು ಖಂಡಿತ. ಇಲ್ಲಿ ಕನ್ನಡದ ಇಡೀ ಸಾಲುಗಳು ಬೂದಿಯಾಗಿವೆ.

ಮೂರನೇ stanza ದಲ್ಲಿ ಜೇನ್ ಪ್ರೀತಿಯ passion ನ ಕುರಿತಾಗಿ ಅದ್ಭುತವಾಗಿ ಮಾತನಾಡುತ್ತಾ ಹೋಗುತ್ತಾಳೆ. ‘A women can be proud and stiff When on love intent’. ಕೆಲವೊಂದನ್ನು ಕಳೆದುಕೊಂಡಾಗಲೇ ಮನುಷ್ಯ ತನ್ನ ಬದುಕಿನ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯ ಎಂದು ಜೇನ್ ಅನುಭವದಿಂದ ಉದ್ಗರಿಸುತ್ತಾಳೆ. ಶೀಲದ ಪಾವಿತ್ರ್ಯದ ಪರಿಕಲ್ಪನೆಯನ್ನು ಅಪಮೌಲ್ಯಗೊಳಿಸಿದಾಗಲೇ ಪ್ರೀತಿಯನ್ನು ಮೊಗೆದು ಕುಡಿಯಲು ಸಾಧ್ಯವೆನ್ನುತಾಳೆ ಜೇನ್. ವ್ಯವಸ್ಥೆಯು ಒಳ್ಳೆಯತನದೊಂದಿಗೆ ಅನೈತಿಕತೆಯನ್ನು ಸಮಭಾವದಿಂದ ಸ್ವೀಕರಿಸಿದಾಗಲೇ ಅದು ಒಂದು ಯಶಸ್ವೀ ನಾಗರಿಕ ಸಮಾಜವೆನಿಸಿಕೊಳ್ಳುತ್ತದೆ ಎಂದು ಜೇನ್ ಹೇಳುತ್ತಾಳೆ.

ಇದನ್ನು ಈ ಕನ್ನಡದ ಕವಿಗಳು ಅರ್ಥ ಮಾಡಿಕೊಂಡಿರುವ ರೀತಿ ನೋಡಿ:
“ಒಂದನ್ನು ಬಿಟ್ಟೊಂದಿಲ್ಲ, ಈ ಅರಿವು
ತಮಗೂ ಆಗಲಿಕ್ಕುಂಟು!
ಭಗವೂ ಭಗವಂತನ ನಿವಾಸ
ನೆನಪಿಗಿರಲಿ ಉಡಿಯಲ್ಲೊಂದು ಗಂಟು”

ಯಾರಾದರೂ ನಮ್ಮನ್ನು ಈ ಕವಿಪುಂಗವರಿಂದ ಪಾರು ಮಾಡಿ !!!

ಜೇನ್‌ಳ ಫಿಲಾಸಫಿಯನ್ನು, ಸ್ವಗತವನ್ನು, ಕ್ರಿಯಾಶೀಲತೆಯನ್ನು, ಭಾವಕೋಶಗಳನ್ನು ಒಂದು ಹರಿಕತೆಯ ಅಸಂಬದ್ಧ hsvenkateshmurthyಪ್ರಲಾಪವನ್ನಾಗಿಸಿದ್ದಾರೆ ಈ ವೆಂಕಟೇಶಮೂರ್ತಿಗಳು. ಇಂತಹ ಸಾಂಪ್ರದಾಯಿಕ ಮನಸ್ಥಿತಿಯ ಕವಿ ಜೇನ್‌ಳನ್ನು ಮುಟ್ಟಲು ಸಾಧ್ಯವೇ?? ಸಾಧ್ಯವೇ ಇಲ್ಲ.

ಈ ಎಚ್.ಎಸ್.ವೆಂಕಟೇಶ್ ಮೂರ್ತಿಯವರು ಇನ್ನೂ ಹಲವಾರು ಕವಿತೆಗಳನ್ನು ಅನುವಾದಿಸಿದ್ದಾರೆ. ಆದರೆ ಇದನ್ನು ಓದಿ ಬೇರೆ ಅನುವಾದಗಳನ್ನು ಓದಲು ಧೈರ್ಯ ಬರಲಿಲ್ಲ. ಏಕೆಂದರೆ ಯೇಟ್ಸ್ ಮುಟ್ಟಿದರೆ ಮನಿ.

ಇದನ್ನು ಇಲ್ಲಿ ಬರೆಯಲು ಕಾರಣ ನನ್ನ ಆರಾಧ್ಯ ಕವಿ ಯೇಟ್ಸ್ ಸಂಪೂರ್ಣವಾಗಿ ಕುಲಗೆಟ್ಟಿದ್ದಕ್ಕೆ. ಮುಖ್ಯವಾಗಿ ವೆಂಕಟೇಶ್‌ಮೂರ್ತಿಗಳಂತಹ ಕವಿಗಳು ಇಂದು ಕನ್ನಡ ಸಾಹಿತ್ಯಲೋಕದಲ್ಲಿ ಪಡೆದುಕೊಳ್ಳುತ್ತಿರವ ಪ್ರಾಧಾನ್ಯತೆಯ ಹಿನ್ನೆಲೆಯಲ್ಲಿ ಇದನ್ನು ಬರೆಯಬೇಕಾಯಿತು. ಏಕೆಂದರೆ ಅಪ್ರಾಮಾಣಿಕತೆಗೆ, ಭಟ್ಟಂಗಿತನಕ್ಕೆ ಕುಖ್ಯಾತಿಯಾದ ನಮ್ಮ ಕನ್ನಡ ಸಾಹಿತ್ಯ ಲೋಕ ಇಂದು ವಟುಗಳ ನಿರಂತರ ಪ್ರಯತ್ನದಿಂದ ಬಹಳ ಜನಪ್ರಿಯರಾಗಿರುವ ವೆಂಕಟೇಶಮೂರ್ತಿಯವರನ್ನು (ಇವರ ಆತ್ಮೀಯ ಸ್ನೇಹಿತರು ಇಂದು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿದ್ದಾರೆ ಬೇರೆ ) ನಿಷ್ಟುರ ಕಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ಹೀಗಾಗಿ ಇವರು ಬರೆದದ್ದೇ ಭಗವದ್ಗೀತೆಯಾಗುವ ಅಪಾಯದ ದಿನಗಳಿವು.

ನಮ್ಮ ವಿಮರ್ಶಕರು ವೇದಿಕೆಗಳ, ಬಿರುದು ಬಾವಲಿಗಳ ಕುರಿತಾದ ಮೋಹಕತೆಯನ್ನು ತೊರೆದು ನಿಷ್ಠುರವಾದಿಗಳಾಗಬೇಕಾದಂತಹ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.