Monthly Archives: June 2015

ಪುಸ್ತಕ ವಿಮರ್ಶೆ: “ಭಾರತ ಭಾಗ್ಯವಿಧಾತ”

– ಸುಭಾಷ್ ರಾಜಮಾನೆ

’ಭಾರತ ಭಾಗ್ಯವಿಧಾತ’ ಮಹಾಂತೇಶ ನವಲಕಲ್ ಅವರ ಎರಡನೆಯ ಕಥಾ ಸಂಕಲನ. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನವರಾದ ಮಹಾಂತೇಶ ಅವರು ತಮ್ಮ ಮೊದಲನೆಯ ಸಂಕಲನ ’ನೀರಿನ ನೆರಳು’ ಮೂಲಕವೇ ತಾನೊಬ್ಬ ಸೂಕ್ಷ್ಮ ಪ್ರಜ್ಞೆಯ ಕತೆಗಾರರೆಂದು ಗುರುತಿಸಿಕೊಂಡಿದ್ದಾರೆ. ಸಣ್ಣಕತೆಯ ಪ್ರಭೇದದ ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಿರುವ ಹೊಸ ತಲೆಮಾರಿನ ಕತೆಗಾರರಲ್ಲಿ ನವಲಕಲ್ ಮುಖ್ಯರಾಗಿದ್ದಾರೆ. ಸಣ್ಣಕತೆಯ ಪ್ರಭೇದಕ್ಕೆ ಪ್ರಧಾನವಾಗಿ ಬೇಕಿರುವ ಖಚಿತವಾದ ತಾತ್ವಿಕತೆ, ಚುರುಕಾದ ಭಾಷೆ, ಪಾತ್ರ ಪೋಷಣೆ, ನಾಟಕೀಯತೆ, ಅನಿರೀಕ್ಷಿತ ತಿರುವು- ಎಲ್ಲ ಗುಣಲಕ್ಷಣಗಳು ಅವರ ಕತೆಗಳಲ್ಲಿವೆ.

ನಮ್ಮ ಸಮಾಜವನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳೇ ಇಲ್ಲಿಯ ಕತೆಗಳ ವಸ್ತುಗಳಾಗಿವೆ. bharata Bhagyavidhata Mukaputaಅದರಲ್ಲೂ ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅನಾವರಣ ಮಾಡುತ್ತವೆ. ಬಹುತೇಕ ಕತೆಗಳು ಬದಲಾಗುತ್ತಿರುವ ಸಮಕಾಲೀನ ಸನ್ನಿವೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಸೆರೆಹಿಡಿಯುತ್ತವೆ. ಜಾಗತೀಕರಣದ ಆಕ್ರಮಣದಿಂದ ಗ್ರಾಮೀಣ ಸಮುದಾಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಶೋಧಿಸುವುದೇ ಕೆಲವು ಕತೆಗಳ ಕೇಂದ್ರ ಕಾಳಜಿಯಾಗಿದೆ ಎಂದು ಹೇಳಬಹುದು.

’ನಾನು ಚಂದ್ರಗುಪ್ತನೆಂಬ ಮೌರ್ಯ’ ಸಂಕಲನದ ಪ್ರಾತಿನಿಧಿಕ ಮತ್ತು ಒಂದು ಅತ್ಯುತ್ತಮ ಕತೆಯಾಗಿದೆ. ಚರಿತ್ರೆಯಲ್ಲಿ ಸಾಮಾಜಿಕ ಅಸಮಾನತೆಯ ಮೂಲಗಳು ಹೇಗೆ ಸಾಂಸ್ಥಿಕ ರೂಪವನ್ನು ಪಡೆದುಕೊಂಡಿವೆ ಎಂಬುದನ್ನು ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಹಲವು ರೀತಿಯ ಆಕರಗಳನ್ನು ಬಳಸಿಕೊಂಡಿರುವ ಕತೆಗಾರರು ಚಂದ್ರಗುಪ್ತನ ಮೂಲಕ ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ಸ್ವರೂಪಕ್ಕೂ ಕನ್ನಡಿ ಹಿಡಿಯುತ್ತಾರೆ. ನವ್ಯ ಕಾಲಘಟ್ಟದ ಕತೆ-ಕಾದಂಬರಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಪ್ರಜ್ಞಾಪ್ರವಾಹ ತಂತ್ರವನ್ನು ನವಲಕಲ್ ಅವರು ಸದರಿ ಕತೆಯಲ್ಲಿ ಪರಿಣಾಮಕಾರಿಯಾಗಿ ಬಳಸಿದ್ದಾರೆ. ಚಂದ್ರಗುಪ್ತ ಮೌರ್ಯ ತನ್ನ ಕೊನೆಯ ದಿನಗಳಲ್ಲಿ ಜಾತಿ, ಅಸ್ಪೃಶ್ಯತೆ, ಧರ್ಮ, ದೇವರು, ಅಧಿಕಾರ, ವ್ಯವಸ್ಥೆ, ಮಾನವೀಯತೆಗಳ ಕುರಿತು ತೀವ್ರವಾಗಿ ಪರಿತಪಿಸುವ ಹಾಗೂ ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳುವಂತೆ ಮಾಡಲಾಗಿದೆ. ಕತೆಯ ಈ ತಂತ್ರವೇ ಭಾರತದ ಪ್ರಾಚೀನ ಚರಿತ್ರೆಯನ್ನು ಏಕರೂಪಾತ್ಮಕ ನೆಲೆಯಲ್ಲಿಯೇ ನೋಡುವ ವಿಧಾನವನ್ನು ಭಂಜನ ಮಾಡುತ್ತದೆ; ಚಾರಿತ್ರಿಕ ಘಟನೆಗಳನ್ನು ಹತ್ತು ಹಲವು ದಿಕ್ಕುಗಳಿಂದ ಯೋಚಿಸುವಂತೆ ಮಾಡುತ್ತದೆ; ಚರಿತ್ರೆಯನ್ನು ಹೊಸ ಬೆಳಕಿನಲ್ಲಿ ಪುನಾರಚಿಸಲು ಯತ್ನಿಸುತ್ತದೆ; ಭೂತ-ವರ್ತಮಾನ-ಭವಿಷತ್‌ಗಳನ್ನು ಏಕತ್ರಗೊಳಿಸಿ ನೋಡುತ್ತದೆ.

ಬಹುರಾಷ್ಟ್ರೀಯ ಕಂಪನಿಗಳು ಅಗೋಚರವಾಗಿಯೇ ಗ್ರಾಮೀಣ ಪ್ರದೇಶದ ಬಡ ರೈತರನ್ನು ದಿವಾಳಿಯಾಗಿಸಿವೆ. ರೈತರು ತಮ್ಮ ಜೀವನಾಧಾರದ ನೆಲೆಯಾಗಿರುವ ಭೂಮಿಯನ್ನೆ ಕಳೆದುಕೊಳ್ಳುವ ದುಸ್ಥಿತಿಗೆ ತಲುಪಿರುವುದನ್ನು ’ಭಾರತ ಭಾಗ್ಯವಿಧಾತ’ ಕತೆ ನವಿರಾಗಿ ತೆರೆದಿಡುತ್ತದೆ. ಆದರೆ ವೈರುಧ್ಯದ ಸಂಗತಿಯೆಂದರೆ ತನ್ನ ಅಪ್ಪನನ್ನು ಬಲಿ ತೆಗೆದುಕೊಂಡ ಬಹುರಾಷ್ಟ್ರೀಯ ಕಂಪನಿಯೊಂದರಲ್ಲೇ ರಮೇಶ ಉದ್ಯೋಗ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಕಾರ್ಪೊರೇಟ್ ಜಗತ್ತು ಪರೋಕ್ಷವಾಗಿ ರೈತರ ವಿನಾಶಕ್ಕೆ ಮಾತ್ರ ಕಾರಣವಾಗಿಲ್ಲ; ಅದು ಶಿಕ್ಷಣ ಪಡೆದ ನಿರುದ್ಯೋಗಿ ತರುಣ ಪೀಳಿಗೆಯನ್ನು ತನ್ನ ಸೇವೆಗಾಗಿ ಅವಲಂಬಿಸುವಂತೆ ಮಾಡುವುದರಲ್ಲಿ ಸಫಲವಾಗಿದೆ ಎಂಬುದನ್ನು ಕತೆ ಮಾರ್ಮಿಕವಾಗಿ ವಿವರಿಸುತ್ತದೆ. ಆದ್ದರಿಂದ ರಮೇಶನಂತಹ ನವ ತರುಣರ ಪ್ರತಿರೋಧದ ಶಕ್ತಿಯನ್ನು ಕಾರ್ಪೊರೇಟ್ ಜಗತ್ತು ದಮನ ಮಾಡಿದೆ. ಇದರಿಂದ ನವ ವಸಾಹತುಶಾಹಿ ವ್ಯವಸ್ಥೆಯು ಭದ್ರವಾಗಿ ಕಾಲೂರಿ ತನ್ನ ಯಜಮಾನಿಕೆಯನ್ನು ನಿರಾಯಾಸವಾಗಿ ನಡೆಸುತ್ತಿದೆ.

ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಂದ ಅನುದಾನ ಪಡೆಯುವ ಸರ್ಕಾರೇತರ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ’ಎಲುಬಿನ ವ್ಯಾಪಾರ’ ಕತೆಯು ಶಿವಕುಮಾರ್‌ನೆಂಬ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಅಧಿಕಾರಶಾಹಿ ವರ್ಗದವರ ಅಮಾನವೀಯ ನಡತೆ ಮತ್ತು ಸುಳ್ಳು ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುವಿಕೆಯು ಶಿವಕುಮಾರ್‌ನನ್ನು ದಿಗ್ಭ್ರಾಂತನನ್ನಾಗಿಸುತ್ತದೆ. ಶಿವಕುಮಾರನಿಗೆ ಬೀಳುವ ಕನಸುಗಳು ತನ್ನ ಸುತ್ತಲಿನ ಜನರ ಅಮಾನುಷತೆಯನ್ನು ಕಂಡು ಕಂಗಾಲಾಗಿರುವುದನ್ನೇ ಧ್ವನಿಸುತ್ತವೆ. ಶಿವಕುಮಾರ್ ಮತ್ತು ’ಭಾರತ ಭಾಗ್ಯವಿಧಾತ’ ಕತೆಯ ರಮೇಶನಿಗೂ ಅನೇಕ ಬಗೆಗಳಲ್ಲಿ ಸಾಮ್ಯತೆಗಳಿವೆ. ಇಬ್ಬರು ಸಹ ಬುದ್ಧಿ ಮತ್ತು ಹೃದಯಗಳ ನಡುವಿನ ಸಂಘರ್ಷದಲ್ಲಿ ಹೃದಯವಂತಿಕೆಯ ದಾರಿಯಲ್ಲೆ ನಡೆದವರು. ಆದರೆ ಕತೆಯಲ್ಲಿನ ಒಳಿತು ಮತ್ತು ಕೇಡಿನ ಮಧ್ಯೆ ನಡೆಯುವ ಘರ್ಷಣೆಯಲ್ಲಿ ಕೇಡುಗಳ ಅಟ್ಟಹಾಸವೇ ವಿಜೃಂಭಿಸುವಂತಿದೆ. ಶಿವಕುಮಾರ್ ಮತ್ತು ರಮೇಶ- ಅನ್ಯಾಯ ಹಾಗೂ ಅವ್ಯವಸ್ಥೆಗೆ ಎಷ್ಟೇ ಪ್ರತಿರೋಧ ತೋರಿದರೂ ಕೊನೆಯಲ್ಲಿ ಅಸಹಾಯಕರಾಗಿಯೇ ಉಳಿಯುತ್ತಾರೆ.

ಹಿಂದೂ ಕರ್ಮ ಸಿದ್ಧಾಂತದ ವಿಡಂಬನಾತ್ಮಕ ಕತೆಯಾಗಿ ’ಶ್ವಾನ ಪರಿಣಯ ಪ್ರಸಂಗ’ ಗಮನಾರ್ಹವಾಗಿದೆ. ನಿರುದ್ವಿಗ್ನವಾದ ನಿರೂಪಣೆಯ ಧಾಟಿಯೇ ಓದುಗರನ್ನು ಸೆಳೆಯುತ್ತದೆ. ಶಾಂಭವಿ ಎನ್ನುವ ಮಹಿಳೆ ತನ್ನ ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಳೆಂದು ಗಾಢವಾಗಿ ನಂಬುವುದು ಮತ್ತು ಅದರ ಪ್ರಾಯಶ್ಚಿತ್ತ ನಿವಾರಣೆಗಾಗಿ ನಡೆಯುವ ಅವಾಂತರಗಳು ತಮಾಷೆಯಾಗಿವೆ. ಈ ತಮಾಷೆ ಮತ್ತು ವೈನೋದಿಕ ದೃಷ್ಟಿಯ ಹಿಂದೆ ಸಾಮಾಜಿಕ ಮೌಢ್ಯತೆಗಳು ದುರ್ಬಲ ಮನಸ್ಸನ್ನು ಆಕ್ರಮಿಸಿಕೊಂಡಿರುವ ಸ್ವರೂಪವನ್ನು ತೋರಿಸುತ್ತವೆ. ನಾಯಿಗಳ ಮದುವೆಯ ಸನ್ನಿವೇಶವು ವೈದಿಕ ಮೌಲ್ಯಗಳನ್ನು ಒಂದು ಅತಿರೇಕಕ್ಕೆ ಒಯ್ದು ನೋಡುವ ವಿನ್ಯಾಸವನ್ನು ಹೊಂದಿದೆ.

ಸರ್ಕಾರದ ಅಭಿವೃದ್ಧಿಯ ಯೋಜನೆಗಳು ನೂರಾರು ವರ್ಷಗಳಿಂದ ಕಾಡುಗಳಲ್ಲಿ ವಾಸಿಸುತ್ತ ಬಂದಿರುವ ಒಂದು ನಿರ್ದಿಷ್ಟ ಸಮುದಾಯದ ಬದುಕನ್ನು ಹೇಗೆಲ್ಲ ಅಸ್ತವ್ಯಸ್ತಗೊಳಿಸಿವೆ ಎಂಬುದನ್ನು ’ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ’ ಎಂಬ ಕತೆ ನಿರೂಪಿಸುತ್ತದೆ. ಆದರೆ ಕತೆಯ ವಸ್ತು ಮತ್ತು ಧೋರಣೆಗೆ ತಕ್ಕ ಭಾಷಾ ಶೈಲಿ ಇಲ್ಲದಿರುವುದರಿಂದ ಅದರ ಬಂಧವೂ ಸಡಿಲವಾಗಿರುವಂತೆ ಕಾಣುತ್ತದೆ.

ಪ್ರಗತಿಶೀಲ ಲೇಖಕರು ತಮ್ಮ ಕತೆ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಮಠದ ಸ್ವಾಮಿಗಳ ಅನಾಚಾರ, ಢಾಂಬಿಕತೆ, ಹಾದರ, ಭ್ರಷ್ಟತೆಗಳನ್ನು ರೊಚ್ಚಿನಿಂದ ಬರೆದವರು. ’ಬೇರಿಲ್ಲದ ಬೇವಿನ ಮರದ ಮೇಲೆ ರೆಕ್ಕೆ ಇಲ್ಲದ ಹಕ್ಕಿ’ ಕತೆಯಲ್ಲಿ ಪ್ರಗತಿಶೀಲ ಲೇಖಕರು ಬಳಸುವ ಆವೇಷದ ಧಾಟಿಯಿಲ್ಲ. ಕತೆಯಲ್ಲಿ ಬರುವ ಮಠದ ಸ್ವಾಮಿಗಳು ಆಗಾಗ ಉಸುರುವ ಬಸವಣ್ಣ, ಅಂಬಿಗರ ಚೌಡಯ್ಯ, ಕಡಕೋಳ ಮಡಿವಾಳರ ವಚನಗಳ ತಾತ್ವಿಕತೆಯು ಅನ್ಯರ ಉಪದೇಶಕ್ಕೆ ಸೀಮಿತವಾಗದೆ ಅವರು ತಮ್ಮ ಅಂತರಂಗವನ್ನೇ ಪರೀಕ್ಷಿಸಿಕೊಳ್ಳುವಂತೆ ಮಾಡಿವೆ. ಇಂತಹ ಸ್ವವಿಮರ್ಶೆಯ ವಿಧಾನವು ಪಾತ್ರದ ಮಾನಸಿಕ ಪಾತಳಿಯನ್ನು ತೆರೆದು ತೋರುವಂತೆ ಮಾಡುವಲ್ಲಿ ಸಫಲವಾಗುತ್ತದೆ. ಆಶಯದ ದೃಷ್ಟಿಯಿಂದ ಗ್ರಹಿಸುವುದಾದರೆ ಕತೆಯು ಜಾತಿ ಹಾಗೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಉದಾರವಾದಿ ನೆಲೆಯಲ್ಲಿಯೇ ನೋಡುತ್ತದೆ.

ನವಲಕಲ್ ಅವರ ಬಹುತೇಕ ಕತೆಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳ ಗೈರುಹಾಜರಿ ಎದ್ದು ಕಾಣುತ್ತದೆ. ಇಲ್ಲಿಯ ಕತೆಗಳಲ್ಲಿ ಪುರುಷ ಪಾತ್ರಗಳೇ ಕತೆಯ ತುಂಬ ಆವರಿಸಿಕೊಂಡು ಪ್ರಭಾವಿಯಾಗಿವೆ. ಇದರಿಂದ ಸ್ತ್ರೀ ಪಾತ್ರಗಳಿಗೆ ಸಿಗಬೇಕಾದಷ್ಟು ಸ್ಪೇಸ್ ಸಿಗುವುದಿಲ್ಲ. ಆದ್ದರಿಂದ ಪುರುಷ ಪಾತ್ರಗಳಂತೆ ಸ್ತ್ರೀ ಪಾತ್ರಗಳ ಮನೋಜಗತ್ತು ಸೂಕ್ಷ್ಮವಾಗಿ ಬಿಚ್ಚಿಕೊಳ್ಳುವುದಿಲ್ಲವೆನೋ ಅನ್ನಿಸುತ್ತದೆ. ಅಷ್ಟೆ ಅಲ್ಲದೆ ಹೆಣ್ಣು ಪಾತ್ರಗಳು ತುಂಬ ಸಂಪ್ರದಾಯಸ್ಥವಾದ ಮನೋಧರ್ಮವನ್ನು ಹೊಂದಿವೆ ಹಾಗೂ ಅಷ್ಟೇ ದುರ್ಬಲವಾಗಿವೆ; ಇಂತಹ ಕೆಲವು ಮಿತಿಗಳ ನಡುವೆಯೂ ನವಲಕಲ್ ಅವರ ಕತೆಗಳು ನಮ್ಮ ಕಾಲದ ಸಾಮಾಜಿಕ ಸಮಸ್ಯೆಗಳನ್ನು ಮುಖಾಮುಖಿ ಮಾಡುವುದರಿಂದ ಓದಲು ಪ್ರೇರಿಸುತ್ತವೆ.

“ಭಾರತ ಭಾಗ್ಯವಿಧಾತ”
ಲೇ: ಮಹಾಂತೇಶ್ ನವಲಕಲ್
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಹೊಸಪೇಟೆ
ಪುಟ: ೧೨೪, ಬೆಲೆ: ೧೦೦/-

“ಕಳ್ಳ” ಪೊಲೀಸರು!

– ಸದಾನಂದ

ಅವರೊಬ್ಬ ಎಸ್.ಪಿ ದರ್ಜೆ ಅಧಿಕಾರಿ. ಒಂದು ಲಕ್ಷದ ಲಂಚ ಬರುವುದಿದೆ ಎಂದಾಕ್ಷಣ ಖುದ್ದು ಅಧಿಕೃತ ಕಾರಿನಲ್ಲಿ, ಯೂನಿಫಾರಂ ನಲ್ಲಿಯೇ ಬಂದು ವ್ಯವಹಾರ ಕುದುರಿಸುತ್ತಾರೆ. ಅವರಿಗೆ ಸಹಚರರಾಗಿ ಇಬ್ಬರು ಪೇದೆಗಳು. ಇದು ಇತ್ತೀಚೆಗೆ ಸುವರ್ಣ ನ್ಯೂಸ್ ವಾಹಿನಿ ಪ್ರಸಾರ ಮಾಡಿದ ಕುಟುಕು ಕಾರ್ಯಾಚರಣೆ. ಪರಿಣಾಮ ಆ policeಮೂರೂ ಮಂದಿ ಅಮಾನತ್ತಾಗಿದ್ದಾರೆ. ಸತ್ಯವೆಂದರೆ, ಅವರು ಕೆಮರಾ ಕಣ್ಣಿಗೆ ಬಿದ್ದು ಅಮಾನತ್ತಾದರು. ಇಂತಹ ದಂಧೆ ಮಾಡುತ್ತಿರುವವರ ಸಂಖ್ಯೆ ಈ ಪೊಲೀಸ್ ಇಲಾಖೆಯಲ್ಲಿ ಬಹಳ ದೊಡ್ಡದೇ ಇದೆ. ಅವರೆಲ್ಲರೂ ಕೆಮರಾದಲ್ಲಿ ಸಿಕ್ಕಿಬಿದ್ದಿಲ್ಲ ಅಷ್ಟೆ.

ಕೆಲ ತಿಂಗಳುಗಳ ಹಿಂದೆ, ಮೈಸೂರಿನ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಇಳಿಸಿ ಬರೋಬ್ಬರಿ 20 ಕೋಟಿ ರೂಗಳನ್ನು ವಶಪಡಿಸಿಕೊಂಡು, ಎರಡು ಕೋಟಿಗಳ ಲೆಕ್ಕ ಕೊಟ್ಟವರು ಇದೇ ಪೊಲೀಸರು. ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಐಜಿಪಿ ದರ್ಜೆ ಅಧಿಕಾರಿಯ ಗನ್ ಮ್ಯಾನ್. ಒಂದು ಮೂಲದ ಪ್ರಕಾರ, ಅಷ್ಟು ದೊಡ್ಡ ಮೊತ್ತದ ಹಣ ಬಸ್ ನಲ್ಲಿ ರವಾನೆಯಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದೇ ಆ ಹಿರಿಯ ಅಧಿಕಾರಿಗೆ. ಅವರು ತಮ್ಮ ಸಹಚರರನ್ನು ಕಾರ್ಯಾಚರಣೆಗೆ ನಿಲ್ಲಿಸಿದರು. ಅಪರಾತ್ರಿಯಲ್ಲಿ ಮಲಗಿದ್ದ ಮತ್ತೊಬ್ಬ ಅಧಿಕಾರಿಯನ್ನು ಎಬ್ಬಿಸಿಕೊಂಡು ರಸ್ತೆಗೆ ಹೋಗಿ ನಿಂತು ಬಸ್ ಗೆ ಕೈ ಅಡ್ಡ ಹಾಕಿದರು. ಪ್ರಕರಣದಲ್ಲಿ ಸಣ್ಣವರು ಮಾತ್ರ ಅಮಾನತ್ತಾಗಿದ್ದಾರೆ.

ಇದೇ ಸಂದರ್ಭದಲ್ಲಿ ಇನ್ನೊಂದು ಘಟನೆ ಹೇಳಬೇಕು. ಅದು ಎಲ್ಲಿಯೂ ವರದಿಯಾದಂತಿಲ್ಲ. ಎಸ್.ಪಿ ದರ್ಜೆಯ ಅಧಿಕಾರಿಯೊಬ್ಬರು ತಮ್ಮ ಹಿಂದಿನ ಹುದ್ದೆಯಲ್ಲಿ ಪೆಟ್ರೋಲ್ ಕಳ್ಳರ ಜೊತೆ ವ್ಯವಹಾರ ಹೊಂದಿದ್ದರು ಎಂಬ ಆರೋಪ ಇತ್ತು. ತನಿಖೆಯನ್ನು ಸಿಐಡಿಗೆ ನಡೆಸಿತು. ಅಧಿಕಾರಿಯ ವಿರುದ್ಧ ಸಾಕ್ಷ್ಯಗಳಿದ್ದವು. ನಿವೃತ್ತಿ ಅಂಚಿನಲ್ಲಿರುವ ಅವರನ್ನು ಇದೇ ಸರಕಾರ ರಕ್ಷಿಸಿತು. ಅಧಿಕಾರಿ ಸಂಕಟದಿಂದ ಹೊರಬಂದಿದ್ದು ಒಂದು ವಿಶೇಷ. ಪೆಟ್ರೋಲ್ ಕಂಪನಿಗಾದ ನಷ್ಟ ತುಂಬಿಕೊಟ್ಟರೆ, ಕಂಪನಿಯವರು ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂಬ ಪ್ರಸ್ತಾಪ ಮುಂದಿಟ್ಟರು. ಅಧಿಕಾರಿ ತನ್ನ ಒಡೆತನದಲ್ಲಿದ್ದ ಜಮೀನಲ್ಲಿ ಒಂದಿಷ್ಟನ್ನು ಮಾರಿ, ಕಂಪನಿಗೆ ಕಟ್ಟಿ ಬಚಾವಾದರಂತೆ!! ದುಡ್ಡಿದ್ದವರಿಗೆ ಜೈಲು ವಾಸ ತಪ್ಪಿಸಿಕೊಳ್ಳಲು ನಾpolice-mainನಾ ದಾರಿಗಳಿವೆ.

ಇಂತಹ ಪೊಲೀಸರು ಅನೇಕ ಮಂದಿ ಇದ್ದಾರೆ. ಎಲ್ಲರೂ ಹೀಗೆ ಎಂದು ಯಾವ ಕ್ಷೇತ್ರದ ಬಗ್ಗೆಯೂ ಹೇಳಲಾಗುವುದಿಲ್ಲ. ಮೊನ್ನೆ ಮೊನ್ನೆ ಒಂದು ಜಿಲ್ಲೆಯ ಎಸ್.ಪಿ ಒಬ್ಬರು ಒಂದಂಕಿ ಲಾಟರಿ ಅಡ್ಡಾ ಒಂದಕ್ಕೆ ದಾಳಿ ಮಾಡಿದಾಗ, ದಂಧೆ ನಡೆಸುತ್ತಿದ್ದವರು ಪೊಲೀಸರಿಗೆ ಆಫರ್ ಮಾಡಿದ್ದು ಬರೋಬ್ಬರಿ ಒಂದು ಕೋಟಿ ರೂ. ಆ ಅಧಿಕಾರಿ ನಿಯತ್ತಿನವರಾಗಿದ್ದ ಕಾರಣ, ದುಡ್ಡು ಮುಟ್ಟದೆ ಬಂಧಿಸಿ ಕರೆದು ಕೊಂಡು ಬಂದರು.

ಆದರೆ, ಸರಕಾರ, ಗೃಹ ಇಲಾಖೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಏನನ್ನೂ ಮಾಡಿದಂತಿಲ್ಲ. ಅಲೋಕ್ ಕುಮಾರ್, ಡಿಸಿಪಿ ಹನುಮಂತರಾಯಪ್ಪ ಅಮಾನತ್ತಾದರೆ, ಇಲಾಖೆ ಸುಧಾರಿಸುವುದಿಲ್ಲ. ಎಲ್ಲಿಯವರೆಗೆ ಪಿ.ಎಸ್.ಐ, ಸಿ.ಪಿ.ಐ. ಡಿವೈಎಸ್ಪಿ ಹಾಗೂ ಮೇಲಿನ ಹುದ್ದೆಗಳಿಗೆ ರಾಜಕಾರಣಿಗಳು ಲಾಬಿ ಮಾಡುವುದನ್ನು ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೆ ಭ್ರಷ್ಟಾಚಾರ ನಿಲ್ಲುವುದಿಲ್ಲ. ಬೇರೆ ಯಾವ ಇಲಾಖೆಯಲ್ಲೂ ಇಲ್ಲದ ಕೆಲ ವಿಚಿತ್ರ ಸಂಪ್ರದಾಯಗಳು ಈ ಇಲಾಖೆಯಲ್ಲಿವೆ. ಮೇಲಿನ ಅಧಿಕಾರಿಯ ಕುಟುಂಬದವರು ಶಾಪಿಂಗ್ ಗೆಂದು ಮಾರ್ಕೆಟ್ ಗೆ ಹೊರಟರೆ, ಆ ಏರಿಯಾದ ಪಿ.ಎಸ್.ಐ ಅಥವಾ ಸಿಪಿಐ ಶಾಪಿಂಗ್ ಬಿಲ್ ಕ್ಲಿಯರ್ ಮಾಡಿದ ಉದಾಹರಣೆಗಳಿವೆ. ಹಿರಿಯ ಅಧಿಕಾರಿಯೊಬ್ಬರು ಖಾಸಗಿ ಭೇಟಿಗೆಂದು ಬಂದು ಪಂಚತಾರಾ ಹೊಟೇಲ್ ನಲ್ಲಿ ಉಳಿದರೆ, ಅದರ ಖರ್ಚು ಸ್ಥಳೀಯ ಅಧಿಕಾರಿಯ ಜವಾಬ್ದಾರಿ. ಇಂತಹ ಕೆಲ ನಡವಳಿಕೆಗಳಿಂದಾಗಿ, ಪೊಲೀಸ್ ಇಲಾಖೆಯಲ್ಲಿ ನಿಯತ್ತಿನಿಂದ ಇರುವುದು ಕೇವಲ ಮಿಥ್ ಎಂಬಂತಾಗಿದೆ.

ಅಲ್ಲಲ್ಲಿ ಜನಸ್ನೇಹಿ ಪೊಲೀಸ್ ಎಂಬ ಬರಹಗಳಿರುವ ಬೋರ್ಡ್ ಗಳನ್ನು ಕಾಣುತ್ತೇವೆ. ಆದರೆ ಜನಸ್ನೇಹಿ ಪೊಲೀಸ್ ಎನ್ನುವುದು ವಾಸ್ತವವಾಗಿ ಎಲ್ಲಿ ಎಂಬುದು ಹುಡುಕಬೇಕಿದೆ. ದೂರು ಕೊಡಲು ಬಂದವರನ್ನು ಸೌಜನ್ಯದಿಂದ ಮಾತನಾಡಿಸುವ ಗುಣವಾಗಲಿ, ಅವರ ದೂರನ್ನು ಮೊದಲು ಕೇಳಿಸಿಕೊಳ್ಳುವ ಸಂಯಮವಾಗಲಿ ಇಲ್ಲ. ಮೈತುಂಬ ಭ್ರಷ್ಟಾಚಾರದ ಆರೋಪ ಹೊತ್ತು ಪಿಕ್ ಪಾಕೆಟ್ ಮಾಡಿ ಸಿಕ್ಕಿಬಿದ್ದವನ ಮೇಲೆ ಲಾಟಿ ಎತ್ತಲು ಅದ್ಹೇಗೆ ಮನಸ್ಸು ಬರುತ್ತೋ..? ಗೃಹ ಸಚಿವರು, ತಮ್ಮ ಬಿಡುವಿಲ್ಲದ ವ್ಯವಹಾರಗಳ ಮಧ್ಯೆಯೂ, ಇತ್ತ ಕಡೆ ಗಮನ ಹರಿಸುತ್ತಾರ?

ಹೆಸರು ಹೇಳಿಕೊಳ್ಳಲೂ ಹೇಸಿಕೊಳ್ಳುವವರು vs. ಭವಿಷ್ಯ ಭಾರತದ ದಿಟ್ಟ ಸ್ಥಂಭಗಳು


– ಶ್ರೀಧರ್ ಪ್ರಭು


“ಡಿಯರ್ ಮ್ಯಾಮ್” ಎಂದು ಶುರುವಾಗುವ ‘ಒಕ್ಕಣೆ’.
ಯಾರು ಬರೆದದ್ದು?
ಗೊತ್ತಿಲ್ಲ .
ಯಾರಿಗೆ ಬರೆದದ್ದು? ಈ ‘ಮ್ಯಾಮ್’ ಎಂದರೆ ಯಾರು?
ಗೊತ್ತಿಲ್ಲ.
ಯಾವಾಗ ಬರೆದದ್ದು?
ಗೊತ್ತಿಲ್ಲ.
ದಿನಾಂಕ ನಮೂದಾಗಿದೆಯಾ?
ಇಲ್ಲ.
ಪತ್ರಕ್ಕೆ ಯಾರಾದರೂ ಸಹಿ ಹಾಕಿದ್ದಾರಾ?
ಅದೂ ಇಲ್ಲ.
ಹೋಗಲಿ, ನಕಲಿಯೇ ಸರಿ, ಯಾರದಾದರೂ ಹೆಸರು ಬರೆದಿದ್ದಾರಾ? ಸಹಿ ಹಾಕಿದ್ದಾರಾ? ಇಲ್ಲವೇ ಇಲ್ಲ.

ಒಂದು ಕಡೆ “ನಾನು” ಇನ್ನೊಂದು ಕಡೆ “ನಾವು” ಇನ್ನೊಂದು ಕಡೆ “ಐಐಟಿ ವಿದ್ಯಾರ್ಥಿಗಳು” ಎಂದು ಹೇಳಿಕೊಳ್ಳುವ ಅನಾಮಧೇಯ, iit-madrasಗತಿ-ಗೋತ್ರವಿಲ್ಲದ ಒಂದು ಕಾಗದ.

ಈ “ಮ್ಯಾಮ್” ಯಾರು, ಈ ಹಾಳೆಗೆ “ಡ್ಯಾಡ್” ಯಾರು ಎಂದು ಗೊತ್ತಿಲ್ಲದ ಇಂತಹ ಒಂದು ಲಡಾಸು ಹಾಳೆಯೊಂದನ್ನು “ಆಧರಿಸಿ”, ಮೇ ೧೫, ೨೦೧೫ ರಂದು ಘನ ಭಾರತ ಸರಕಾರದ ಮಾನವ ಸಂಪನ್ಮೂಲ ಉನ್ನತ ಶಿಕ್ಷಣ ವಿಭಾಗದ ಅಧೀನ ಕಾರ್ಯದರ್ಶಿಯೊಬ್ಬರು ಚೆನ್ನೈನ IIT-M ನ ನಿರ್ದೇಶಕರಿಗೆ ಒಂದು ನಿರ್ದೇಶನ ಕೊಡುತ್ತಾರೆ. ನಿರ್ದೇಶನ ಜಾರಿ ಮಾಡಲು ನಿರ್ದೇಶಕರು ಚಾತಕ ಪಕ್ಷಿ ಯಂತೆ ಕಾದಿದ್ದು, ತಕ್ಷಣವೇ ವಿದ್ಯಾರ್ಥಿಗಳ “ಯೋಗಕ್ಷೇಮ” ನೋಡಿಕೊಳ್ಳುವ ಡೀನ್ ರಿಗೆ ಒಂದು ನಿರ್ದೇಶನ ರವಾನೆ ಮಾಡುತ್ತಾರೆ. ‘ಯೋಗಕ್ಷೇಮ’ದ ಡೀನ್ ಒಬ್ಬ ಅರ್.ವರುಣ ಕೃಷ್ಣ ಎಂಬ ವಿದ್ಯಾರ್ಥಿಗೆ ಒಂದೂವರೆ ಸಾಲಿನ ಒಂದು ಇಮೇಲ್ ಕಳಿಸಿ ತಕ್ಷಣವೇ ಜಾರಿಗೆ ಬರುವಂತೆ “ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್”ನ ಈ ಕ್ಷಣಕ್ಕೆ ಜಾರಿಗೆ ಬರುವಂತೆ ಮಾನ್ಯತೆ ರದ್ದು ಗೊಳಿಸುತ್ತಾರೆ.

ಈ ರದ್ದತಿಗೆ ಕಾರಣ? ‘ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಐಐಟಿ ನೀಡಿದ ‘ಸವಲತ್ತು’ ಗಳನ್ನ ದುರುಪಯೋಗ ಮಾಡಿಕೊಂಡಿದೆ ಎಂದು. ಯಾವ ಸವಲತ್ತು, ಯಾವಾಗ, ಯಾರು ಕೊಟ್ಟಿದ್ದು? ಯಾರು ಉಪಯೋಗಿಸಿದ್ದು? ಹೇಗೆ ದುರುಪಯೋಗ ಮಾಡಿದ್ದು? ಅದೆಲ್ಲ ‘ಪಿಕ್ಚರ್’ ನಲ್ಲಿಲ್ಲ ಸಿನಿಮಾ ಮುಗಿದ ಮೇಲೆ ನೋಡಿಕೊಳ್ಳಿ.

‘ಔಪಚಾರಿಕತೆ’ ಎಂದಾದರೂ ಸರಿ ಕಾರಣ ಕೇಳಿ ನೋಟಿಸು, ವಿವರಣೆ, ಏನಾದರೂ ಬೇಕೇ? ಅದೆಲ್ಲಾ ಯಾಕೆ? ಮೊದಲು ಕ್ರಮ ಕೈಗೊಂಡು ನಂತರ ‘ವಿಚಾರಣೆ’. ಹೇಗಿದೆ ನೋಡಿ ನಮ್ಮ ಕಾರ್ಯ ದಕ್ಷತೆಯ ತಾಕತ್ತು! ಕೇಂದ್ರ ಸರಕಾರ ಏನೂ (?) ಮಾಡುತ್ತಿಲ್ಲ ಎಂದು ಯಾಕೆ ಬೊಬ್ಬೆ ಹೊಡೆಯುತ್ತಾರೋ ತಲೆ ಸರಿಯಿಲ್ಲದ ಜನ!

ಬಾಬಾಸಾಹೇಬ್ ಜನ್ಮ ದಿನದಂದು (೧೪ ಏಪ್ರಿಲ್) ೨೦೧೪ ಅಂಬೇಡ್ಕರ್, ಪೆರಿಯಾರ್ ಮತ್ತು ಭಗತ್ ಸಿಂಗ್ ambedkar-periyar-study-circleವಿಚಾರಗಳಿಂದ ಪ್ರಭಾವಿತರಾದ ಚೆನ್ನೈ ನಲ್ಲಿರುವ ಐಐಟಿ ಯಲ್ಲಿನ ಎಲ್ಲ ಜಾತಿ ವರ್ಗ ವಿಭಾಗಗಳ ಸಮಾನ ಮನಸ್ಕ ವಿದ್ಯಾರ್ಥಿಗಳು ಒಂದುಗೂಡಿ ಒಂದು ವಿಚಾರ ಮಂಟಪ ಕಟ್ಟುತ್ತಾರೆ. ಒಂದು, ಐದು, ಹತ್ತು ಹೀಗೆ ತಮ್ಮ ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ (ಸಂಸ್ಥೆಯಿಂದ ಒಂದು ದಮ್ಮಡಿ ಕಾಸು ತೆಗೆದು ಕೊಳ್ಳದೆ) ವೈವಿಧ್ಯಮಯ ವಿಷಯಗಳನ್ನು ಅಯ್ದು ಪರಿಣಿತರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಯಂತ್ರ-ತಂತ್ರ-ಮಂತ್ರ ಗಳ ಮಾಯೆಯಲ್ಲಿ ಮುಳುಗಿದ್ದ ಅಗ್ರಹಾರವನ್ನೂ ನಾಚಿಸುವ ವಾತಾವರಣದಲ್ಲಿ, ‘ಭಾರತದ ಕೃಷಿ ಬಿಕ್ಕಟ್ಟು’, ‘೧೯೪೭ ರ ಕಾರ್ಖಾನೆ ಕಾಯಿದೆಗೆ ತಿದ್ದುಪಡಿ ಮತ್ತು ಕಾರ್ಮಿಕರ ಹಿತಾಸಕ್ತಿ’, ‘ಭಾಷಾ ಸಮಸ್ಯೆ’, ಕುಲಾಂತರಿ ಬೀಜಗಳು’ ಮೊದಲಾದ ವಿಚಾರ ಪ್ರಚೋದಕ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಸಂಘಟಿಸುತ್ತಾರೆ.

ಹೀಗಿದ್ದಾಗ, ಜೂನ್, ೨೦೧೪ ರ ಹೊತ್ತಿಗೆ ವಿದ್ಯಾರ್ಥಿ “ಯೋಗಕ್ಷೇಮ” ದ ಜವಾಬ್ದಾರಿಯಿರುವ ಡೀನ್ ರಿಂದ ಬಂತೊಂದು ಬುಲಾವು. ‘ನಿಮ್ಮ ವೇದಿಕೆಯ ಹೆಸರೇ ಸರಿಯಿಲ್ಲವಲ್ಲ’! ಈ ಅಂಬೇಡ್ಕರ್-ಪೆರಿಯಾರ್ ಎಂದೆಲ್ಲ ಹೆಸರು ಇಟ್ಟುಕೊಂಡರೆ ಸಮಾಜದ ಸ್ವಾಸ್ಥ್ಯ ಹಾಳಾಗುವುದಿಲ್ಲವೆ? ಅದೂ ಸರಿಯೇ. ಆದರೆ ಈ ‘ಹಾಳಾದ’ ವಿದ್ಯಾರ್ಥಿಗಳು ಹೆಸರು ಬದಲಿಸಲು ಒಪ್ಪಲಿಲ್ಲ!

ಸೆಪ್ಟೆಂಬರ್ ೨೦೧೪ ರಲ್ಲಿ ಮತ್ತೊಮ್ಮೆ ಅಂಬೇಡ್ಕರ್ ಮತ್ತು ಪೆರಿಯಾರ್ ಹೆಸರುಗಳು ಜನರ ಮಧ್ಯೆ ಕಂದಕವನ್ನು ತೋಡುತ್ತವೆ; ಆದ್ದರಿಂದ ನಿಮ್ಮ ‘ಹೆಸರು’ ಬದಲಿಸಿ ಎಂದು ಡೀನ್ ಮತ್ತೊಮ್ಮೆ ಹೆದರಿಸಲಾಯಿತು.

ಏಪ್ರಿಲ್ ೨೦೧೫ ರ ಅಂಬೇಡ್ಕರ್ ಜಯಂತಿಯ ಸಂದರ್ಭ ಮತ್ತು ತನ್ನ ಹುಟ್ಟಿನ ಮೊದಲ ವರ್ಷಾಚರಣೆ ಸಂದರ್ಭದಲ್ಲಿ ಅಂಬೇಡ್ಕರ್ “ಜಾತಿ ವಿನಾಶ”ದ ಉಕ್ತಿಗಳನ್ನು ನೇರವಾಗಿ ಉದಾಹರಿಸಿ ಬರೆದ ಕರಪತ್ರವನ್ನು ಹೊರಡಿಸಲಾಯಿತು. ಈ ಕರಪತ್ರದಲ್ಲಿ ‘ಭಾರತ ಮಾತೆ’ ಯ ಸಂಕಷ್ಟಗಳ ವಿವರಣೆ ಇತ್ತು ನಿಜ ಆದರೆ ಇದಕ್ಕಿಂತ ಖಾರದ ಕರಪತ್ರಗಳನ್ನು ಸ್ವತಃ ರಾಷ್ಟ್ರೀಯ ಸ್ವಯಂ ಸೇವಕ ಇಂದು ಕೇಂದ್ರದ ವಿರುದ್ಧ ಹೊರಡಿಸಿದೆ. ಅಂಬೇಡ್ಕರ್ ಜಯಂತಿಯ ಮೊದಲು ಅಥವಾ ನಂತರ ಯಾವುದೇ ಅಹಿತಕರ ಘಟನೆಗಳಾಗಲಿಲ್ಲ. IIT ಸಂಸ್ಥೆಯ ಯಾವ ನೀತಿ ನಿಯಮಗಳ ಉಲ್ಲಂಘನೆಯೂ ಆಗಲಿಲ್ಲ. ಏಕಾಏಕಿ, ತಮ್ಮ ಹೆಸರು ಬರೆದುಕೊಳ್ಳಲು ಅಂಜುವ ಪುಕ್ಕಲುಗಳು ‘ಬರೆದ’ ಬುರ್ನಾಸು ಹಾಳೆಯನ್ನು ಆಧರಿಸಿ ವಿಚಾರಶೀಲ ವಿದ್ಯಾರ್ಥಿಗಳ ಸಂಘಟನೆಯನ್ನು IIT ಮಟ್ಟಿಗೆ ನಿಷೇಧಿಸಲಾಗಿದೆ.

ಸ್ವತಃ ‘ಸ್ವಾತಂತ್ರ್ಯವೇ ನನ್ನ ಜನ್ಮ ಸಿದ್ಧ ಹಕ್ಕು’ ಎಂದವರೇ ಅಂಬೇಡ್ಕರ್ ಬರಹಗಳನ್ನು ಹೋಗಲಿ ಜಾಹೀರಾತನ್ನು ಪ್ರಕಟಿಸುವ ನೈತಿಕತೆ ತೋರಿಸಲಿಲ್ಲ. ಇನ್ನು ಇಂದಿನ ‘ಅಗ್ರಹಾರಗಳಿಂದ’ ಹೆಚ್ಚಿನದನ್ನು ನಿರೀಕ್ಷಿಸುವುದು ಮೂರ್ಖತನ. ಇತ್ತೀಚಿಗೆ ಸಾಮಾಜಿಕ ತಾಣಗಳ ಸರದಾರರೊಬ್ಬರು ತಂತ್ರಜ್ಞಾನ ಬೋಧಿಸುವ ಸಂಸ್ಥೆ ಯಲ್ಲಿ ಅಂಬೇಡ್ಕರ್ ಹೆಸರಿನ ಸಂಘಟನೆಯ ಔಚಿತ್ಯ ಪ್ರಶ್ನಿಸಿದ್ದಾರೆ? ಮೀಸಲಾತಿಯನ್ನು ಕಾರಣವಾಗಿಟ್ಟು ಕೊಂಡು ಅಂಬೇಡ್ಕರ್‌ರನ್ನು ವಿರೋಧಿಸುವ ಇವರು ಮೀಸಲಾತಿ ಇಲ್ಲದ ಅಷ್ಟೇ ಅಲ್ಲ, ೧೦೦% ಮೀಸಲಾತಿ ಇವರಿಗೇ ಇದ್ದ ಐದು ಸಾವಿರ ವರ್ಷಗಳ ‘ಸುವರ್ಣ ಯುಗ’ ದಲ್ಲಿ ತಮ್ಮ ಬ್ರಹ್ಮ ತೇಜಸ್ಸಿನಿಂದ ಒಂದು ಪಾಯಖಾನೆಯನ್ನೂ ಕೂಡ ಅವಿಷ್ಕರಿಸಲಾಗಲಿಲ್ಲ ಏಕೆ ಎಂದು ಅವರು ಉತ್ತರಿಸಬೇಕು.

ಇಂದು IIT ಗಳನ್ನು ಯಂತ್ರ-ಮಂತ್ರ ತಂತ್ರಗಳ ತಾಣ ಮಾಡ ಹೊರಟವರಿಗೆ ಇರುಸು ಮುರುಸು ಆಗುವುದೇನೆಂದರೆ, IIT Madras Student Protestಅಲ್ಲಿನ ಅನೇಕ ಜಾಗೃತ ವಿದ್ಯಾರ್ಥಿಗಳು ಜನಪರ ಸಿದ್ಧಾಂತಗಳ ಪರ ವಾಲುತ್ತಿರುವುದು. ನಿಮಗೆ ಗೊತ್ತಿರಲಿ ಚೆನ್ನೈ IIT ಯ Humanities and Social Sciences ವಿಭಾಗ ಒಂದರಲ್ಲೇ ಸುಮಾರು ನಲವತ್ತೆರಡು ಅಧ್ಯಾಪಕರಿದ್ದಾರೆ! ಸಾಮಾಜಿಕ ವಿಜ್ಞಾನವನ್ನು ವಿಜ್ಞಾನವೆಂದೇ ಒಪ್ಪದ ಬುರುಡೆ ಪುರಾಣ ಶೂರರಿಗೆ ಏನು ಹೇಳುವುದು? ಅಂಬೇಡ್ಕರ್ ಪೆರಿಯಾರ್ ಈ ದೇಶದಲ್ಲಿ ಹುಟ್ಟದಿದ್ದರೆ, ಗಂಡು ಮಕ್ಕಳಾಗಲು ಮಾತ್ರೆ ಕೊಡುವವರು ಯಾ ಬದರಿ ಕೇದಾರದಲ್ಲಿ ಭಕ್ತರು ಮಲವಿಸರ್ಜನೆ ಮಾಡಿದ್ದಕ್ಕೆ ಜಲಪ್ರಳಯದ ನಂಟು ತಾಗಿಸುವವರು ಪ್ರಳಯಾಂತಕ ಬುದ್ಧಿವಂತರೆನ್ನಿಸಿಕೊಳ್ಳುತ್ತಿದ್ದರು.

ಅಂಬೇಡ್ಕರ್ ಮೇರು ಪರ್ವತ; ಡಾಕ್ಟರ ಆಫ್ ಸೈನ್ಸ್ ಪದವಿ ಪಡೆದ ಪ್ರತಿಭಾವಂತರ ಹೆಸರನ್ನು ವೈಜ್ಞಾನಿಕ ಚಿಂತನೆಯ ಮಂಟಪಕ್ಕೆ ಇಡದೆ ಇನ್ಯಾರ ಹೆಸರನ್ನು ಇಡಬೇಕು? ಅವರು ಪಡೆದಷ್ಟು ಪದವಿಗಳನ್ನು ಒಂದೊಂದರಂತೆ ಒಬ್ಬಬ್ಬರಿಗೆ ಹಂಚಿದರೆ ನಾಲ್ಕಾರು ಅಗ್ರಹಾರಗಳು ಪದವೀಧರರಾಗಬಹುದು. ಇನ್ನು ಪೆರಿಯಾರ್ ಚಿಂತನೆ ಇಂದು ದಕ್ಷಿಣ ಭಾರತದ ಸಾಮಾಜಿಕ ಚಿಂತನೆಯ ಮೂಲ ದ್ರವ್ಯ. ಪೆರಿಯಾರ್ ರಿಂದ ಪ್ರೇರಿತವಾದ ಅನೇಕ ಸಂಘಟನೆಗಳು ನಾಡಿನಾದ್ಯಂತ ಸಾವಿರಾರು ಮೂಢನಂಬಿಕೆ ವಿರೋಧಿ ಕಾರ್ಯಕ್ರಮ ಗಳನ್ನು ಸಂಘಟಿಸಿದೆ. ಸಾಮಾಜಿಕ ವಿಜ್ಞಾನದ ಬಗ್ಗೆ ಬದ್ಧತೆ ಇರುವ ಯಾರೇ ಅದರೂ ಗೌರವಿಸುವ ಅಂಬೇಡ್ಕರ್-ಪೆರಿಯಾರ್ ರನ್ನು ಕೆಲವು ಕೊಳಕು ಮನಸ್ಸುಗಳ ಧಮಕಿಗೆ ಹೆದರಿ ಬಿಡುವಂತಿದ್ದರೆ ಭಾರತಕ್ಕೆ IIT Madras Student Protest-SmritiIraniಭವಿಷ್ಯವೇ ಇಲ್ಲ ಎಂದು ಕೊಳ್ಳಬೇಕಿತ್ತು. ಆದರೆ ಹಾಗಾಗಲಿಲ್ಲ.

ವಿಜ್ನ್ಯಾನದ ಮೊದಲ ಪಾಠ – ಪ್ರಶ್ನಿಸದೆ ಒಪ್ಪದಿರು. ಸಮಾಜದ ಕೊಳಕುಗಳನ್ನು ನಿರ್ಭೀತಿಯಿಂದ ಪ್ರಶ್ನಿಸಿದ, ಬದಲಿಸಿದ ಚಿಂತಕರಿಬ್ಬರೂ ಸಮಾಜ ವಿಜ್ಞಾನಿಗಳಲ್ಲವೇ? ಅಂಬೇಡ್ಕರ್ IIT ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪ್ರತಿಯೊಂದು ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯ ಪಠ್ಯಕ್ರಮದ ಭಾಗವಾಗಬೇಕು. ಅಂಬೇಡ್ಕರ್ ಮನಸ್ಸು ಮಾಡಿದ್ದರೆ ಅಮೇರಿಕಾದ ಯಾವುದೋ ದೊಡ್ಡ ವಿಶ್ವವಿದ್ಯಾಲಯದಲ್ಲಿ ಕುಳಿತು ಭಾರತದ ಬಗ್ಗೆ ಟೀಕೆ ಟಿಪ್ಪಣೆ ಮಾಡಿಕೊಂಡು ಡಾಲರ್ ಎಣಿಸಬಹುದಿತ್ತೇನೊ. ಅವರು ಸಹಿಸಿದ ಅಪಮಾನ ಸಂಕಟಗಳನ್ನು ನೋಡಿದರೆ ಅವರು ವಿದೇಶಕ್ಕೆ ಹೋಗಿದ್ದು ತಪ್ಪು ಎಂದು ಯಾರೂ ಎಂದುಕೊಳ್ಳುತ್ತಿರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ‘ಗೋಮಾತೆ’,’ಘರ್-ವಾಪಸಿ’ಜಪಿಸಿ, ಅಮೇರಿಕ ವೀಸಾ ಸಿಕ್ಕರೆ ಚೆನ್ನೈನಲ್ಲಿ ಸೊಳ್ಳೆಕಾಟದ ನೆಪ ಹೇಳಿ ಗುಟ್ಟಲ್ಲಿ ಅಮೇರಿಕ ಸೇರಿಕೊಳ್ಳುವ IIT ಯ ‘ಬುದ್ಧಿವಂತ’ ಜಾತಿಗಳ ವಟುಗಳು ನೈಜ ದೇಶಭಕ್ತಿ ಏನೆಂದು ಕಲಿಯಬೇಕಾದ್ದು ಅಂಬೇಡ್ಕರ್‌ರಿಂದ.

ಚೆನ್ನೈ ಮಾತ್ರವಲ್ಲ ದೇಶದ ಪ್ರತಿಯೊಂದು ಕಡೆಯೂ ದಿಟ್ಟ ಪ್ರತಿಭಟನೆಗಳು ನಡೆದಿವೆ. ಬಂಡೆಯಂತೆ ಸ್ಥಿರವಾಗಿ ನಿಂತಿರುವ ಈ ದಿಟ್ಟಪೋರರು ಭವಿಷ್ಯ ಭಾರತದ ಭರವಸೆ. ಏನೇ ಹೇಳಿ, ವಿವೇಕಾನಂದರ ಹೆಸರು ಉಪಯೋಗಿಸಿ ಕನಿಷ್ಠ ಹೆಸರು ಬರೆದುಕೊಳ್ಳುವುದಕ್ಕೂ ಅಂಜುವ ಜನ, ಈ ನೆಲದ ಸತ್ವ ಹೀರಿ ಬೆಳೆದ ನೈಜ ಮತ್ತು ದಿಟ್ಟ ಪೋರರನ್ನು ಎಂದಿಗೂ ಎದುರಿಸಲು ಸಾಧ್ಯವಿಲ್ಲ.

ಮೋದಿ ಸರ್ಕಾರದ ಒಂದು ವರ್ಷದ ಆಡಳಿತ : ಸುಳ್ಳುಗಳ ವಿಜೃಂಭಣೆ ಮತ್ತು ’ಬಹುತ್ವ’, ’ಬಂಧುತ್ವ’ ತತ್ವಗಳ ನಾಶ

– ಬಿ. ಶ್ರೀಪಾದ ಭಟ್

[ಇಲ್ಲಿನ ಪರಾಮರ್ಶೆಯಲ್ಲಿ ಕಾಂಗ್ರೆಸ್ ಪರವಾದ ಯಾವುದೇ ಧೋರಣೆಗಳಿಲ್ಲ. ನಾನು ಕಾಂಗ್ರೆಸ್ ವಕ್ತಾರನೂ, ಬೆಂಬಲಿಗನೂ ಅಲ್ಲ. ಕಳೆದ ದಶಕಗಳಲ್ಲಿ ಕಾಂಗ್ರೆಸ್ ಮಾಡಲಾರದ್ದನ್ನು ಈ ಮೋದಿ ಸರ್ಕಾರ ಒಂದು ವರ್ಷದಲ್ಲಿ ಮಾಡಬೇಕೆನ್ನುವ ಹಠವೇಕೆ ಎನ್ನುವ ಆತ್ಮವಂಚನೆಯ, ವಿತಂಡವಾದದ ಪ್ರಶ್ನೆಗಳಿಗೆ ಉತ್ತರವೂ ಅಲ್ಲ. ಏಕೆಂದರೆ ಈ ಬಿಜೆಪಿ ಮತ್ತು ಮೋದಿಯ ಸರ್ವಾಧಿಕಾರದ, ಹಿಂದುತ್ವದ ವಿರುದ್ಧ ಮಾತನಾಡುವವರನ್ನೆಲ್ಲ ಕಾಂಗ್ರೆಸ್ ಎಂಜೆಂಟ್ ಎಂದು ಜರೆಯುವ ಕಾಮಾಲೆ ಮನಸ್ಸುಗಳಿಗೆ ಉತ್ತರಿಸುವ ಬಾಲಿಶತನದ ಅವಶ್ಯಕತೆ ಸಹ ಇಲ್ಲ. ಹಿಂದಿನ ಯುಪಿಎ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ತಮ್ಮದೆಂದು ಸುಳ್ಳು ಹೇಳುತ್ತಿರುವ ಮೋದಿ ಸರ್ಕಾರದ ನಿಜಸ್ವರೂಪವನ್ನು ಬರೆಯಲು ಈ ಹೋಲಿಕೆಯನ್ನು ಮಾಡಲಾಗುತ್ತಿದೆ.]

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕರು,ಕೇಂದ್ರದ ಮಂತ್ರಿಗಳು modi_bjp_conclaveಮತ್ತು ಮಥುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳ ಕೆಲವು ಸ್ಯಾಂಪಲ್:

ಸುಳ್ಳು : ಎನ್‌ಡಿಎ ಸರ್ಕಾರದ ಮುಖ್ಯ ಯೋಜನೆ ’ಸ್ವಚ್ಛ ಭಾರತ ಆಭಿಯಾನ್’.
ಸತ್ಯ : ಯುಪಿಎ ೨ ನೇ ಸರ್ಕಾರ ಜಾರಿಗೊಳಿಸಿದ್ದ ’ನಿರ್ಮಲ್ ಭಾರತ್ ಆಭಿಯಾನ್’ ಅನ್ನು ಹೆಸರು ಬದಲಿಸಿ ’ಸ್ವಚ್ಛ ಭಾರತ್ ಆಭಿಯಾನ್’ ಎಂದು ಕರೆಯಲಾಗಿದೆ.

ಸುಳ್ಳು : ಗ್ರಾಹಕರ ಖಾತೆಗೆ ನೇರವಾಗಿ ಹಣದ ವರ್ಗಾವಣೆ (Direct Transfer of Cash) ಯ ಯೋಜನೆಯು ಮೋದಿ ನೇತೃತ್ವದ ಸರ್ಕಾರದ ಯೋಜನೆ.
ಸತ್ಯ : ಯುಪಿಎ ೨ ಸರ್ಕಾರವು ೨1 ಅಕ್ಟೋಬರ್ ೨೦೧೨ರಂದು ರಾಜಸ್ತಾನದ ದುಡು ಗ್ರಾಮದಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ’ನೇರವಾಗಿ ಹಣದ ವರ್ಗಾವಣೆ’ (Direct Transfer of Cash) ಯೋಜನೆಯನ್ನು ಉದ್ಘಾಟಿಸಿದರು. ಈ ಹಣದ ವರ್ಗಾವಣೆಯು ವೃದ್ಧರ ಪಿಂಚಣಿ, ಅರೋಗ್ಯದ ವಿಮೆ, ಉದ್ಯೋಗ ಖಾತ್ರಿ ಯೋಜನೆ ನರೇಗಾದಂದತಹ ಯೋಜನೆಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿತ್ತು.

ಸುಳ್ಳು : ಎನ್‌ಡಿಎ ಸರ್ಕಾರದ ಆಡಳಿತದ ಕಳೆದ ಒಂದು ವರ್ಷದ (೨೦೧೪-೧೫) ವಿದ್ಯುತ್ ಉತ್ಪಾದನೆಯು ಕಳೆದ ೩೦ ವರ್ಷಗಳ ವಿದ್ಯುತ್ ಉತ್ಪಾದನೆಗೆ ಸರಿಗಟ್ಟಿದೆ.
ಸತ್ಯ : ಜಗತ್ತಿನ ಇತಿಹಾಸದಲ್ಲಿಯೇ ಯಾವುದೇ ಸರ್ಕಾರವು ೩೦ ವರ್ಷಗಳ ವಿದ್ಯುತ್ ಉತ್ಪಾದನೆಯನ್ನು ಕೇವಲ ಒಂದು ವರ್ಷದಲ್ಲಿ ಸರಿಗಟ್ಟಲು ಸಾಧ್ಯವೇ? ಯಾವುದೇ ಬೇಜವಬ್ದಾರಿ ವ್ಯಕ್ತಿ, ಹೊಣೆಗಾರಿಕೆ ಇಲ್ಲದ ವ್ಯಕ್ತಿ ಇಂತಹ ಶತಮಾನದ ಸುಳ್ಳನ್ನು ನುಡಿಯಲು ಸಾಧ್ಯ. ಆದರೆ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಬೆನ್ನನ್ನು ತಟ್ಟಿಕೊಳ್ಳುವ ಆತ್ಮರತಿಯ ಪ್ರಲಾಪ ಫಲವಾಗಿ ಇಂತಹ ಅಸಂಬದ್ಧ ಮತ್ತು ಶತಮಾನದ ಸುಳ್ಳನ್ನು ಹೇಳಿದ್ದಾರೆ.

ಸುಳ್ಳು : ಪ್ರಾವಿಡೆಂಟ್ ಫಂಡ್‌ನ ಖಜಾನೆಯಲ್ಲಿ ಬಡ ಕಾರ್ಮಿಕರ ಸುಮಾರು ೨೭,೦೦೦ ಕೋಟಿ ಹಣ ಕೊಳೆಯುತ್ತಾ ಇತ್ತು. ಕಳೆದ ವರ್ಷ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು Unique Identity Number ನ ಮೂಲಕ ಕೆಲಸವನ್ನು ಬದಲಾಯಿಸಿದರೂ ಸಂಬಧಪಟ್ಟ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ವರ್ಗಾಯಿಸುವ ಕಾನೂನನ್ನು ಜಾರಿಗೊಳಿಸಿತು.
ಸತ್ಯ : ಆಗಿನ ಯುಪಿಎ ೨ ಸರ್ಕಾರ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ, ೨೪ ಮಾರ್ಚ ೨೦೧೪ರಂದು, ನೌಕರರ ಪ್ರಾವಿಡೆಂಟ್ ಫಂಡ್ (EPFO) ಇಲಾಖೆಯು ಹೊಸದಾದ Universal Account Number ಅನ್ನು ಘೋಷಿಸಿ ಅದಕ್ಕೆ ಬಳಕೆದಾರರ ಕೈಪಿಡಿ ಅನ್ನು ನೀಡಿ ಜುಲೈ ೨೦೧೪ ರಿಂದ ಆನ್‌ಲೈನ್ ವರ್ಗಾವಣೆಯನ್ನು ಆರಂಭಿಸಿತು.

ಸುಳ್ಳು : ಎನ್‌ಡಿಎ ಸರ್ಕಾರವು ರಸ್ತೆಗಳನ್ನು ನಿರ್ಮಿಸುವಲ್ಲಿ ಪರಿಣಿತಿಯನ್ನು ಸಾಧಿಸಿದೆ. ಈ ವಲಯದಲ್ಲಿ ಯುಪಿಎ ಸಂಪೂರ್ಣವಾಗಿ ವಿಫಲವಾಗಿದೆ.
ಸತ್ಯ : ಹಣಕಾಸು ಮಂತ್ರಿ ಅರುಣ್ ಜೈಟ್ಲಿ ೨೦೧೫-೧೬ರ ಮುಂಗಡ ಪತ್ರದಲ್ಲಿ ’ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಹಣ ೧೪,೦೦೦ ಕೋಟಿ ರೂ.ಗಳು. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ರಸ್ತೆಗಳ ನಿರ್ಮಾಣವನ್ನು Modi-selfieಪೂರ್ತಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಸುಮಾರು ೫೭,೦೦೦ ಕೋಟಿ ಹಣ ಬೇಕೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಕೇವಲ ಕಾಲು ಭಾಗ ಮಾತ್ರ!!!

ಇತರೆ ಉದಾಹರಣೆಗಳು :

  • ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಅವರು 100% Finance Inclusion ಎನ್ನುವ ಯೋಜನೆಯನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಜುಲೈ.೨೦೧೪ರ ವೇಳೆಗೆ ಶೇಕಡಾ ೫೮ ರಷ್ಟನ್ನು ಮಾತ್ರ ಸಾಧಿಸಲಾಗಿತ್ತು. ೨೦೦೧ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ೪೩.೯ ಕೋಟಿ ಬ್ಯಾಂಕ್ ಖಾತೆಗಳಿದ್ದವು. ೨೦೧೪ರಲ್ಲಿ ಯುಪಿಎ ಸರ್ಕಾರದ ಅಧಿಕಾರ ಕೊನೆಗೊಂಡಾಗ ದೇಶದಲ್ಲಿ ೭೭.೩೨ ಕೋಟಿಯಷ್ಟು ಬ್ಯಾಂಕ್ ಖಾತೆಗಳಿಗೆ ವೃದ್ಧಿಯಾಗಿತ್ತು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ ನರೇಂದ್ರ ಮೋದಿ ‘ಜನಧನ ಯೋಜನೆ’ ಎನ್ನುವ ಹೆಸರಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಯೋಜನೆಯು ಯುಪಿಎ ಸರ್ಕಾರದ ಮುಂದುವರೆದ ಯೋಜನೆ ಅದೂ ಬದಲುಗೊಂಡ ಹೆಸರಿನಲ್ಲಿ.
  • ಯುಪಿಎ ಸರ್ಕಾರ ಆರಂಭಿಸಿದ Skill India ಯೋಜನೆಯು ಮೋದಿ ಸರ್ಕಾರದಲ್ಲಿ Skill Development Mission ಆಗಿ ನಾಮ ಬದಲಾವಣೆ ಹೊಂದಿದೆ.
  • ಯುಪಿಎ ಸರ್ಕಾರದ ‘Rajiv Gandhi Mission for Clean Ganga Yojana’ ಯೋಜನೆಯು ಮೋದಿ ಸರ್ಕಾರದಲ್ಲಿ ‘Namo Gange’ ಎನ್ನುವ ಹೆಸರಿನಲ್ಲಿ ನಾಮ ಬದಲಾವಣೆ ಆಗಿದೆ.
  • ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವು ಶೇಕಡಾ ೫.೨% ರಷ್ಟಿದ್ದರೆ ಈ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಅದು ಕೇವಲ ಶೇಕಡಾ ೨.೧% ರಷ್ಟು ಮಾತ್ರ.
  • ‘ಮೇಕ್ ಇನ್ ಇಂಡಿಯಾ’ದ ಸ್ಲೋಗನ್ ಅಡಿಯಲ್ಲಿ ಕಳೆದ ಒಂದು ವರ್ಷದ ಮೋದಿ ನೇತೃತ್ವದಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ೦.

ಯಾವುದೇ ಸಂದರ್ಭದಲ್ಲಿಯೂ ಅಧಿಕಾರದಲ್ಲಿರುವ ಪಕ್ಷವೊಂದು ಪರಾಭವಗೊಂಡು ಬದಲೀ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಸಹಜವಾಗಿಯೇ ಹಿಂದಿನ ಸರ್ಕಾರದ ಕೆಲವು ಜನಪ್ರಿಯ ಜನ ಕಲ್ಯಾಣ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ. ಇದು ಹೊಸದೇನಲ್ಲ. SwachhBharath_Modiಹೊಸ ಸರ್ಕಾರವು ತನ್ನ ಪಕ್ಷದ ಗೌರವಾನ್ವಿತ, ಜನಪ್ರಿಯ ನಾಯಕರ ಹೆಸರಿನಲ್ಲಿ ಈ ಯೋಜನೆಗಳನ್ನು ಮರು ನಾಮಕರಣ ಮಾಡುತ್ತದೆ. ಇದನ್ನು ಒಪ್ಪಿಕೊಳ್ಳಲಾಗದಿದ್ದರೂ ಸಹ ಹೊಸದೇನಲ್ಲ. ಆದರೆ ಈ ಸದರಿ ಮೋದಿ ಸರ್ಕಾರವು ಕಳೆದ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತದ ಜನಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ನಾಮ ಬದಲೀಕರಣ ಮಾಡಿ ಅದು ತನ್ನ ಕಳೆದ ಒಂದು ವರ್ಷದ ಸಾಧನೆ ಎಂದು ಅಸಹ್ಯಕರವಾಗಿ ಪ್ರಚಾರ ಮಾಡಿಕೊಳ್ಳುತ್ತಿರುವುದು ಇತಿಹಾಸದಲ್ಲಿಯೇ ಪ್ರಥಮ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಇಂತಹ ಲಜ್ಜಗೇಡಿ, ಅಪ್ರಬುದ್ಧ ವರ್ತನೆಗಳಿಗೆ ಪರ್ಯಾಯ ಉದಾಹರಣೆಗಳೇ ಇಲ್ಲ. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಿಂದಿನ ಯುಪಿಎ ಸರ್ಕಾರದ ಕ್ಷಮತೆ ಏನು, ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಿದೆ ಎನ್ನುವ ಕನಿಷ್ಟ ರಾಜಕೀಯ ಪ್ರಶ್ನೆಗಳನ್ನು ಕೇಳುವ ಅವಕಾಶಗಳನ್ನು ಕೈಬಿಟ್ಟ ಈ ಮೋದಿ ಸರ್ಕಾರ ತನ್ನ ಸುಳ್ಳುಗಳನ್ನು ಪ್ರಚಾರ ಮಾಡಲು ಈ ಮೇಲಿನ ಹೈಜಾಕ್ ಮಾದರಿಯ ಕೆಳಮಟ್ಟದ ತಂತ್ರಗಳನ್ನು ಅನುಸರಿಸುತ್ತಿದೆ. ತನ್ನ ಹಿಂದಿನ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ತನ್ನದೆಂದು ಹೇಳಿಕೊಂಡು ಇಂದು ಪ್ರಜ್ಞಾವಂತರ ಎದುರು ನಗೆಪಾಟಿಲಿಗೀಡಾಗಿರುವ ಈ ಮೋದಿಯವರಲ್ಲಿ ಆಧುನಿಕ ಪ್ರಜ್ಞೆಯ ಕೊರತೆ, ಪ್ರಜಾಪ್ರಭುತ್ವದ ಸ್ವರೂಪದ ಕುರಿತಾದ ಕನಿಷ್ಟ ತಿಳುವಳಿಕೆಗಳ ಕೊರತೆ ಮತ್ತು ಮುಖ್ಯವಾಗಿ ‘ಎಲ್ಲರ ವಿಕಾಸ ಎಲ್ಲರ ಜೊತೆಗೆ’ ಎನ್ನುವ ಸ್ಲೋಗನ್‌ನ ಆಶಯದ ಕುರಿತಾಗಿ ಇರುವ ದಿವ್ಯ ನಿರ್ಲಕ್ಷ ಇಂದು ಒಂದು ವರ್ಷದ ಈ ಎನ್‌ಡಿಎ ಸರ್ಕಾರವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ.

ಕಳೆದ ವರ್ಷದ ಲೋಕಸಭೆಯ ಚುನಾವಣೆಯಲ್ಲಿ ಕ್ಯಾಪಿಟಲಿಸ್ಟ್, ಮಧ್ಯಮವರ್ಗ, ಯುವ ಜನತೆ ಮೋದಿಯ ‘ಅಚ್ಛೇ ದಿನ್’ ಸ್ಲೋಗನ್ ಕುರಿತಾಗಿ ಮಾರುಹೋಗಿ ಸಂಪೂರ್ಣವಾಗಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂಡಿಸಿದ್ದರು. ಇಲ್ಲಿನ ಪ್ರಜ್ಞಾವಂತರು ಲಿಬರಲ್ ಮೋದಿಯ ವ್ಯಕ್ತಿತ್ವದ ಕುರಿತಾಗಿ ಅನುಮಾನಗಳನ್ನು ಇಟ್ಟುಕೊಂಡೇ ಕಡೆಗೆ ಈ ದೇಶದ ಪ್ರಜಾಪ್ರಭುತ್ವ, ಸಾಮಾಜಿಕ, ಸಾಂಸ್ಕೃತಿಕ ವೈವಿದ್ಯತೆ ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳು ಈ ಮೋದಿಯ ಅಹಂಕಾರದ ವ್ಯಕ್ತಿತ್ವವನ್ನು, ಸರ್ವಾಧಿಕಾರಿ ಗುಣಗಳನ್ನು ನಿಯಂತ್ರಿಸುತ್ತದೆ ಎಂದು ನಂಬಿದ್ದರು. ಆದರೆ ಒಂದು ವರ್ಷದ modi_amit_shahನಂತರ ದೇಶದ ಪ್ರಧಾನಮಂತ್ರಿಯಾಗಿ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಯಾವುದೇ ಪಾಠಗಳನ್ನು ಕಲಿಯಲು ಸೋತಿದ್ದಾರೆ. ಅವರ ಸರ್ವಾಧಿಕಾರದ ವ್ಯಕ್ತಿತ್ವ, ಠೇಂಕಾರದ ನಡುವಳಿಕೆಗಳು ಮತ್ತಷ್ಟು ಬಲಗೊಂಡಿವೆ. ಮೋದಿಯ ನೇತೃತ್ವದಲ್ಲಿ ೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ಹತ್ಯಾಕಾಂಡದ ಪ್ರಶ್ನೆಗಳನ್ನೆತ್ತಿಕೊಂಡು ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇಂದು ಮೋದಿ ಒಬ್ಬ ಸ್ವತಂತ್ರ, ಒತ್ತಡರಹಿತ, ಪಕ್ಷದ ಕಟ್ಟುಪಾಡುಗಳಿಲ್ಲದ ನಾಯಕನಾಗಿ ಬೆಳೆದು ನಿಂತಿದ್ದಾರೆ. ಇಂದು ಪ್ರಧಾನಮಂತ್ರಿ ಕಾರ್ಯಾಲಯವು ಅತ್ಯಂತ ಬಲಿಷ್ಟ ಮತ್ತು ಪ್ರಭಾವಶಾಲಿ ಮುಖ್ಯ ಕಛೇರಿಯಾಗಿದೆ

ಉದಾಹರಣೆಗೆ ಈ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವರ್ಷದ ಅವಧಿಯಲ್ಲಿ ತಾವು ಸದಸ್ಯರಾಗಿರುವ ಭಾರತದ ಸಂಸತ್ತಿನಲ್ಲಿ ಕೆಲವೇ ಗಂಟೆಗಳಷ್ಟು ಪಾಲ್ಗೊಂಡು ವಿದೇಶಿ ಸಂಸತ್ತುಗಳಲ್ಲಿ ಅಧಿಕ ಸಮಯದಲ್ಲಿ ಭಾಗವಹಿಸಿದ್ದಾರೆ.

ಸಂವಿಧಾನಬದ್ಧ ಸಂಸ್ಥೆಗಳಾದ ಮುಖ್ಯ ಮಾಹಿತಿ ಕಮಿಷನರ್ (CIC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಇದೇ ಸಂಸ್ಥೆಯಲ್ಲಿ ೩ ಮಾಹಿತಿ ಕಮಿಷನರ್ ಹುದ್ದೆಗಳೂ ಖಾಲಿ ಇವೆ. ಭ್ರಷ್ಟಾಚಾರ ನಿಗ್ರಹಣ ಸಂಸ್ಥೆ ಮುಖ್ಯ ಜಾಗೃತ ಕಮಿಷನರ್ (CVC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಈ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಿಸಲು ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿಯ ಸಭೆಯನ್ನು ಕಳೆದ ಒಂದು ವರ್ಷದಲ್ಲಿ ಕೇವಲ ಎರಡು ಬಾರಿ ನಡೆಸಲಾಗಿದೆ, ಅದೂ ಔಪಚಾರಿಕವಾಗಿ. ಇದು ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಮೋದಿಯವರ ಜವಬ್ದಾರಿಯುತ ನಡೆಗಳ ಮಾದರಿ!!

ಫ್ರೊ. ಬಲವೇರ್ ಅರೋರರು, “ನೆಹ್ರೂವಿಯನ್ ಸಿದ್ಧಾಂತದ ಕಡೆಯ ಕಟ್ಟಡದಂತಿದ್ದ ‘ಯೋಜನಾ ಆಯೋಗ’ವನ್ನು ರದ್ದುಗೊಳಿಸಿ ಅದರ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಿ ಇತಿಹಾಸದ ತಪ್ಪುಗಳನ್ನು ಸರಿಪಡಿಸುವ ನಾಯಕನೆಂದು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ಛಾಪುಗೊಳ್ಳಬೇಕೆಂದು Modiಬಯಸುವ ಈ ಮೋದಿ ತಾನು ಇತಿಹಾಸದ ಈ ತಪ್ಪುಗಳನ್ನು ಸರಿಪಡಿಸುವುದರ ಮೂಲಕ ಈ ದೇಶಕ್ಕೆ ಒಂದು ಘನತೆಯನ್ನು ತಂದುಕೊಡುತ್ತೇನೆ ಎಂದೇ ನಂಬಿದ್ದಾರೆ. ತಮ್ಮ ಭಾಷಣದಲ್ಲಿ ಸಹಕಾರಿ ಫೆಡರಲಿಸಂ ಕುರಿತಾಗಿ ಮಾತನಾಡಿರುವ ಮೋದಿಯವರಿಗೆ ಅದರ ಕುರಿತಾದ ಬದ್ಧತೆಗಳು ಸಹ ಇನ್ನೂ ಪ್ರಕಟಗೊಂಡಂತಿಲ್ಲ. ಆದರೆ ಅಧಿಕಾರ ಮತ್ತು ಜವಬ್ದಾರಿಗಳನ್ನು ಮೂರು ಸ್ತರಗಳಲ್ಲಿ ಹಂಚಿಕೊಳ್ಳುವುದು ಈ ರಾಜ್ಯಗಳ ಸಹಕಾರಿ ಫೆಡರಲಿಸಂನ ಮುಖ್ಯ ಲಕ್ಷಣಗಳಲ್ಲೊಂದು. ಇದರಲ್ಲಿ ಜನರ ಆದೇಶದ ಮೂಲಕ ಆಯ್ಕೆಯಾಗುವ ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಅಧಿಕಾರವನ್ನು ಗೌರವಿಸುವುದು ಅತ್ಯಂತ ಪ್ರಮುಖ ಸಹಕಾರಿ ಫೆಡರಲಿಸಂನ ತತ್ವಗಳಲ್ಲೊಂದು. ಅದರಲ್ಲೂ ವಿರೋಧ ಪಕ್ಷಗಳ ಸರ್ಕಾರಗಳು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಕೇಂದ್ರ ಸರ್ಕಾರವು ಮತ್ತಷ್ಟು ಜಾಗರೂಕತೆಯಿಂದ, ಈ ಸಹಕಾರಿ ಫೆಡರಲಿಸಂನ ನೀತಿಗೆ ಬದ್ಧವಾಗಿರಬೇಕಾಗುತ್ತದೆ. ಸಂಶಯಾತೀತರಾಗಿ ವರ್ತಿಸಬೇಕಾಗುತ್ತದೆ. ರಾಜ್ಯಗಳ ಈ ಸಹಕಾರಿ ಫೆಡರಲಿಸಂ ನೀತಿಯು ಕೇಂದ್ರವು ರಾಜ್ಯಗಳೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವ ರಾಜಕೀಯ ಇಚ್ಚಾಶಕ್ತಿಯನ್ನು ನಿರೀಕ್ಷಿಸುತ್ತದೆ” ಎಂದು ಬರೆಯುತ್ತಾರೆ.

ಪ್ರಜಾಪ್ರಭುತ್ವದ ಕುರಿತಾಗಿ, ರಾಜ್ಯಗಳ ಜೊತೆ ಸಹಕಾರಿ ಫೆಡರಲಿಸಂ ಕುರಿತಾಗಿ ನಿರರ್ಗಳವಾಗಿ ಮಾತನಾಡುವ ಬಿಜೆಪಿ ವಕ್ತಾರರು ಮತ್ತು ಮೋದಿ ಮೊನ್ನೆಯವರೆಗೂ ರಾಜ್ಯಗಳ ಸ್ವಾಯತ್ತತೆಯ ಪರವಾಗಿ ವಾದಿಸುತ್ತಿದ್ದರು. ರಾಜ್ಯಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರ ಕುರಿತಂತೆ ಇವರಲ್ಲಿ ಒಮ್ಮತವಿದ್ದಂತಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಗುಣಲಕ್ಷಣಗಳು ಕಣ್ಮರೆಯಾಗಿವೆ.

೨೦೧೪ರಲ್ಲಿ ದೆಹಲಿ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು ನಂತರದ ದಿನಗಳಲ್ಲಿ ಅನೇಕ ಬಿಕ್ಕಟ್ಟುಗಳಿಗೆ ಬಲಿಯಾಗಬೇಕಾಯ್ತು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಜೊತೆ ಅಧಿಕಾರ ಹಂಚಿಕೆಯ ಕುರಿತಾಗಿ ಬೀದಿ ಕಾಳಗಕ್ಕೆ ಇಳಿದಿದ್ದಾರೆ. ಈ ಲೆಫ್ಟಿನೆಂಟ್ ಗವರ್ನರ್ ಜಂಗ್ ಅವರ ಅಧಿಕಾರಶಾಹಿ ಧೋರಣೆಗಳು, ತೀರ್ಮಾನಗಳು, ನೇಮಕಾತಿಗಳು ಅವರು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿರುವುದಕ್ಕೆ ಸಾಕ್ಷಿಯಂತಿವೆ. ಆದರೆ ಈ ಎಲ್ಲಾ ಗೊಂದಲಗಳ ಮಧ್ಯೆ ಈ ತನ್ನ ವಿರೋಧ ಪಕ್ಷ ಆಮ್ ಆದ್ಮಿ ಪಕ್ಷ ಮತ್ತು ಗವರ್ನರ್ ನಡುವಿನ ದೆಹಲಿಯ ತಿಕ್ಕಾಟಕ್ಕೆ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ತನ್ನ ವಿವರಣೆಯನ್ನು ನೀಡುತ್ತಾ ಮೇ modi-kejriwal೨೧, ೨೦೧೫ರಂದು ಕೇಂದ್ರ ಗೃಹ ಇಲಾಖೆಯಿಂದ ಒಂದು ನೋಟಿಫಿಕೇಶನ್ ಪ್ರಕಟವಾಯಿತು. ಅದರ ಸಂಕ್ಷಿಪ್ತ ವಿವರಗಳು ಹೀಗಿವೆ: “ದೆಹಲಿಯ ಸೇವೆಗಳ ಜವಾಬ್ದಾರಿಯು ಲೆಫ್ಟಿನೆಂಟ್ ಗವರ್ನರ್ ಅವರ ಸುಪರ್ದಿಗೆ ಬರುತ್ತವೆ. Sub-clause (a) of clause (3) of Article 239AA ನಲ್ಲಿ ನಮೂದಿಸಿರುವ ರಾಜ್ಯಗಳ ಪಟ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಸಂಗತಿಗಳು ಕೇಂದ್ರಾಡಳಿತ ರಾಜ್ಯಗಳಿಗೂ ಅನ್ವಯವಾಗುತ್ತವೆ. ರಾಷ್ಟ್ರದ ರಾಜಧಾನಿ ಪ್ರಾಂತವಾದ ದೆಹಲಿ ತನ್ನದೇ ಆದ ರಾಜ್ಯ ಮಟ್ಟದ ಸಾರ್ವಜನಿಕ ಸೇವಾ ವಲಯಗಳನ್ನು ಹೊಂದಿಲ್ಲ. ಎಲ್ಲಿ ಶಾಸಕಾಂಗದ ಅಧಿಕಾರವಿಲ್ಲವೋ ಅಲ್ಲಿ ಕಾರ್ಯಾಂಗದ ಅಧಿಕಾರವೂ ಇಲ್ಲವೆಂದು ಇಲ್ಲಿ ಸ್ಪಷ್ಟವಾಗುತ್ತದೆ. Entries 1, 2, & 18 ಅನುಸಾರ ರಾಜ್ಯಗಳ ಪಟ್ಟಿಯಲ್ಲಿ ಸಾರ್ವಜನಿಕ ಪ್ರಕಟಣೆ, ಪೋಲೀಸ್, ಭೂಮಿ ಮತ್ತು ಸೇವಾ ಕ್ಷೇತ್ರಗಳು ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಶಾಸಕಾಂಗದ ಅಧಿಕಾರದ ಪರಿಧಿಯೊಳಗೆ ಬರುವುದಿಲ್ಲ ಮತ್ತು ಈ ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಸರ್ಕಾರಕ್ಕೆ ಎಕ್ಸಿಕ್ಯೂಟಿವ್ ಅಧಿಕಾರಗಳು ಇರುವುದಿಲ್ಲ ಮತ್ತು ಈ ವಿಶೇಷ ಅಧಿಕಾರಗಳು ರಾಷ್ಟ್ರಪತಿ ಅಥವಾ ಅವರ ಪ್ರತಿನಿಧಿಯಾದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇರುತ್ತವೆ. ರಾಷ್ಟ್ರದ ರಾಜಧಾನಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮುಂದಿನ ಸೂಚನೆಗಳು ದೊರಕುವವರೆಗೂ ಸಾರ್ವಜನಿಕ ಪ್ರಕಟಣೆಗಳು, ಸೇವಾ ಕ್ಷೇತ್ರ, ಪೋಲಿಸ್, ಮತ್ತು ಭೂಮಿಗೆ ಸಂಬಂಧಪಟ್ಟಂತೆ ಅವರು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬಹುದು ಮತ್ತು ಕೇಂದ್ರ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸಬಹುದು.”

ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮೇಲಿನ ನೋಟಿಫಿಕೇಶನ್‌ನ ಉದ್ದೇಶ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮುಖಾಂತರ ಚುನಾಯಿತ ಸರ್ಕಾರದ ಮೇಲೆ ಹಿಡಿತವನ್ನು ಸಾಧಿಸುವುದು. ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಲದಲ್ಲಿ ಮಾತನಾಡುತ್ತ ರಾಜ್ಯಗಳ ಸಹಕಾರಿ ಫೆಡರಲಿಸಂ ಅವಶ್ಯಕತೆಯ ಕುರಿತಾಗಿ ಮಾತನಾಡಿದ್ದ ಮೋದಿ ಇಂದು ದೆಹಲಿಯ ಕೇಜ್ರಿವಾಲ್ ಸರ್ಕಾರದ ಸಂವಿಧಾನಬದ್ಧ ಹಕ್ಕುಗಳನ್ನು ಕತ್ತರಿಸುತ್ತಿರುವುದು ಮೋದಿ ಸರ್ಕಾರದ ಸರ್ವಾಧಿಕಾರದ ನೀತಿಯಲ್ಲದೆ ಮತ್ತೇನಿಲ್ಲ.

ಆದರೆ ೨೬,ಮೇ,೨೦೧೫ ರಂದು ದೆಹಲಿ ಹೈಕೋರ್ಟ್, “ಲೆಫ್ಟಿನೆಂಟ್ ಗವರ್ನರ್ ಅವರು ಮಂತ್ರಿಮಂಡಲದ ಸಲಹೆ ಮತ್ತು ಸಹಕಾರದೊಂದಿಗೆ ಕಾರ್ಯ ನಿರ್ವಹಿಸಬೇಕು ಮತ್ತು ಜನರ ತೀರ್ಪನ್ನು ಲೆಫ್ಟಿನೆಂಟ್ ಗವರ್ನರ್ ಗೌರವಿಸಬೇಕು ಮತ್ತು ಶಾಸಕಾಂಗದ ಅಸೆಂಬ್ಲಿಯ ಪರಿಧಿಯೊಳಗೆ ಕಾರ್ಯ ನಿರ್ವಹಿಸಬೇಕು” ಎನ್ನುವ ಮಹತ್ವದ ತೀರ್ಪನ್ನು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ಮುಖಭಂಗ ಅನುಭವಿಸಿರುವ ಕೇಂದ್ರ ಸರ್ಕಾರ ಹೈಕೋರ್ಟಿನ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಆದರೆ ಸುಪ್ರೀಂ ಕೋರ್ಟ ಸಹ ಇದಕ್ಕೆ ಸ್ಟೇ ನೀಡಲು ನಿರಾಕರಿಸಿದೆ.

ಕೇವಲ ಲಾಭ ನಷ್ಟದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚುನಾಯಿತ ಆಮ್ ಆದ್ಮಿ ಪಕ್ಷದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇಂದು ಆಮ್ ಆದ್ಮಿ ಪಕ್ಷ ಪಕ್ಷದ ಪ್ರಜಾಪ್ರಭುತ್ವದ ಹಕ್ಕುಗಳನ್ನು, ಸ್ವಾತಂತ್ರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಸರ್ಕಾರದ ಈ ಸರ್ವಾಧಿಕಾರದ ಧೋರಣೆಗಳಿಗೆ ಮುಂದಿನ ದಿನಗಳಲ್ಲಿ ಇತರೇ ಪ್ರಾಂತೀಯ ಸರ್ಕಾರಗಳು ಬಲಿಯಾಗುವುದನ್ನು ನಾವು ಸಂದೇಹಿಸುವಂತಿಲ್ಲ.

ಚೆನ್ನೈನಲ್ಲಿರುವ ಐಐಟಿ-ಮದ್ರಾಸ್‌ನ ವಿದ್ಯಾರ್ಥಿ ಅಸೋಸಿಯೇಶನ್‌ನ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಅನ್ನು ನಿಷೇಧಗೊಳಿಸಿ ಅಲ್ಲಿನ ಆಡಳಿತ ಮಂಡಳಿ ನೋಟೀಸ್ ನೀಡಿದೆ. (ದ ಹಿಂದೂ, ಮೇ ೨೯,೨೦೧೫). ಇದಕ್ಕೆ ಈ ಆಡಳಿತ ಮಂಡಳಿ ನೀಡಿರುವ ಕಾರಣ ಯಾವುದೋ periyar-ambedkarಅನಾಮಧೇಯ ದೂರನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗಿದೆ. ಈ ದೂರಿನಲ್ಲಿ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಮೋದಿಯವರ ಆಡಳಿತವನ್ನು ಟೀಕಿಸುವಂತಹ ಕರಪತ್ರವನ್ನು ಹಂಚಿ ದ್ವೇಷದ ಭಾವನೆಯನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಲಾಗಿದೆ.’ಅದಕ್ಕಾಗಿ ಈ ನಿಷೇಧ. ಈ ನಿಷೇಧವನ್ನು ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿ ಸ್ಮೃತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ. ಆದರೆ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್‌’ನ ವತಿಯಿಂದ ಮೋದಿ ಸರ್ಕಾರದ ಅರ್ಥಿಕ ಮತ್ತು ಸಾಂಸ್ಕೃತಿಕ ನೀತಿಗಳನ್ನು ಟೀಕಿಸಲಾಗಿತ್ತು. ಎಲ್ಲಿಯೂ ವ್ಯಕ್ತಿಗತ ತೇಜೋವಧೆಗೆ ನಡೆದಿರಲಿಲ್ಲ. ಆದರೆ ಈ ವಿದ್ಯಾರ್ಥಿ ಒಕ್ಕೂಟವನ್ನು ನಿಷೇಧಿಸಲಾಗಿದೆ.’ಈ ಮೂಲಕ ’ಕೇಂದ್ರ ಸರ್ಕಾರದ ಮತ್ತು ಮೋದಿಯವರ ನೀತಿಗಳ ಕುರಿತು ಚರ್ಚಿಸುವವರನ್ನು, ಟೀಕಿಸುವವರನ್ನು ನಿಷೇಧಿಸುತ್ತೇವೆ’ ಎನ್ನುವ ಸರಳವಾದ ಆದರೆ ಬ್ರೂಟಲ್ ಆದ ಸಂದೇಶವನ್ನು ಭಾರತೀಯರಿಗೆ ರವಾನಿಸಿದ್ದಾರೆ. ಆದರೆ ಶತಮಾನಗಳ ಕಾಲದಿಂದಲೂ ವಿದ್ಯಾಲಯಗಳು, ವಿಶ್ವವಿದ್ಯಾಲಯಗಳು ರಾಜಕೀಯ, ಸಾಂಸ್ಕೃತಿ ಚರ್ಚೆ, ಸಂವಾದ, ಟೀಕೆಗಳಿಗೆ ವೇದಿಕೆಯಾಗಿದ್ದವು ಎನ್ನುವ ಸರಳ ಇತಿಹಾಸದ ಜ್ಞಾನ ಈ ಸ್ಮೃತಿ ಇರಾನಿಯವರಿಗೆ ಇಲ್ಲದಿರುವುದು ಈ ದೇಶದ ಶಿಕ್ಷಣ ರಂಗದ ಬುರೇ ದಿನ್‌ಗಳಿಗೆ ಸಾಕ್ಷಿ.

ಇದಕ್ಕೂ ಹಿಂದೆ ಜೂನ್ ೨೦೧೪ರಂದು ಕೇರಳದ ಗುರುವಾಯೂರಿನ ಕೃಷ್ಣ ಕಾಲೇಜಿನ ೯ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಈ ವಿದ್ಯಾರ್ಥಿಗಳು ಕ್ರಾಸ್‌ವರ್ಡ ಪದಬಂಧವನ್ನು ಬರೆಯುವ ಸಂದರ್ಭದಲ್ಲಿ ಮೋದಿಯವರನ್ನು ಹೀಗೆಳೆಯುವಂತಹ ಭಾಷೆ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಮೋದಿ ಸರ್ಕಾರ ಭಾರತೀಯರಿಗೆ ಭರವಸೆ ನೀಡಿದ್ದ ಅಚ್ಛೇ ದಿನ್‌ಗಳೆಂದರೆ ಈ ಮಾದರಿಯದ್ದೇ?? ಇದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಫ್ಯಾಸಿಸಂ ಧೋರಣೆಯ ಲೇಟೆಸ್ಟ್ ಉದಾಹರಣೆ.

ಯುವ ಕಾದಂಬರಿಕಾರ ಚಂದ್ರಹಾಸ್ ಚೌಧುರಿ ಅವರು “ಮೋದಿ ಜನಿಸಿದ ಸುಮಾರು ೧೯೫೦ರ ದಶಕದ ಸಾಂಪ್ರದಾಯಿಕ ಭಾರತವು ಪ್ರಜಾಪ್ರಭುತ್ವದ ಹಕ್ಕುಗಳು, ಸ್ವಾತಂತ್ರ ಮತ್ತು ಧಾರ್ಮಿಕ ಸ್ವಾತಂತ್ರದ ಪರಿಕಲ್ಪನೆಗಳಲ್ಲಿ ಇಂದಿನ ಭಾರತ ದೇಶದ ಸಂದರ್ಭದಲ್ಲಿ ಬಹು ದೂರ ಸಾಗಿ ಬಂದಿದೆ. ಇಂದಿನ ಯುವಜನತೆ ಅಂತರ್ಜಾತೀಯ ವಿವಾಹದ ಕಡೆಗೆ ಸಹಜವಾಗಿ ಒಲವು ತೋರಿಸುತ್ತಿದ್ದಾರೆ. ಗೇ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದಾರೆ. ಮಹಿಳಾ ಸ್ವಾತಂತ್ರ ಮತ್ತು ವಿಮೋಚನೆಗಳ ಪರವಾಗಿ ಹೋರಾಡುತ್ತಿದ್ದಾರೆ. ಈ ಯುವಜನತೆಯ ಈ ನಡುವಳಿಕೆಗಳು ಮತ್ತು ಕ್ರಿಯಾಶೀಲತೆಯು ಮುಖ ಗಂಟಿಕ್ಕದೆ ಸಾರ್ವಜನಿಕವಾಗಿ ಮುಸ್ಲಿಂ ಹೆಸರನ್ನು ಹೇಳಲು ಅಸಮರ್ಥಗೊಂಡಿರುವ ಈ ಮೋದಿಯವರಿಗಿಂತ ತುಂಬಾ ಹೆಚ್ಚಿನ ಲಿಬರಲ್ ಆಗಿವೆ. ೪೦ ವರ್ಷಗಳಿಗಿಂತ ಕೆಳಗಿರುವ ಯುವ ಜನತೆ ಪೂರ್ವಗ್ರಹವಿಲ್ಲದೇ ಇತಿಹಾಸದಲ್ಲಿ ಸತ್ಯವನ್ನು ಹುಡುಕಾಡಲು ಬಯಸುತ್ತಿದ್ದರೆ ತನ್ನ ತಾರುಣ್ಯದ ದಿನಗಳಿಂದಲೂ ಹಿಂದೂ ಧರ್ಮದ ಪುನರುಜ್ಜೀವನದ ಅಜೆಂಡಾಗಳು ಮತ್ತು ಅದರ ಪಾವಿತ್ರತೆಯನ್ನು ಬೋಧಿಸುವ ಹಿಂದೂ ರಾಷ್ಟ್ರೀಯ ಚಳುವಳಿಗಳ ಚಿಂತನೆಗಳನ್ನು ಕಲಿತು, ಮೈಗೂಡಿಸಿಕೊಂಡಿರುವ ಈ ಮೋದಿ ಈ ಐಡಿಯಾಲಜಿಯ ಇತಿಹಾಸದ ಚಿಂತನೆಗಳ ಬಂದಿಯಾಗಿದ್ದಾರೆ ಮತ್ತು ಈ ಇತಿಹಾಸದ ಏಜೆಂಟರಾಗಿದ್ದಾರೆ. ಒಂದು ಸಾಂಪ್ರದಾಯಿಕ ಹಿಂದೂ ಬಡ ಕುಟುಂಬದಲ್ಲಿ ಜನಿಸಿದ ಮೋದಿ ಇಂದು ಅತ್ಯಂತ ಶಕ್ತಿಶಾಲಿ ನಾಯಕನಾಗಿದ್ದಾರೆ. ಆದರೆ ಇಂಡಿಯಾದ ವೈವಿಧ್ಯತೆಯನ್ನು ಒಪ್ಪಿಕೊಳ್ಳಲು ಅವರ ಮನಸ್ಸು ನಿರಾಕರಿಸುತ್ತದೆ. ಈ ಮೋದಿಯವರ ಪ್ರಧಾನ ಮಂತ್ರಿಯಾಗಿ ಒಂದು ವರ್ಷದ ಆಡಳಿತವನ್ನು ಅವಲೋಕಿಸಿದಾಗ ಇಂದಿನ ಸಂಕೀರ್ಣ ಮನಸ್ಥಿತಿಯ ಇಂಡಿಯಾಗೆ ಮೋದಿಯ ನಿಲುವುಗಳು ಮತ್ತು ಮನಸ್ಥಿತಿ ತುಂಬಾ ಹಳೆಯ ಕಾಲದ್ದು ಎಂದೆನಿಸುತ್ತದೆ. ೨೦೧೪ರಲ್ಲಿ ಯುವಜನತೆ ಸಮಗ್ರವಾಗಿ ಈ ಮೋದಿಯ ಪರ ಮತ ಚಲಾಯಿಸಿ ಅಧಿಕಾರ ತಂದುಕೊಟ್ಟರೆ ೨೦೧೯ರಲ್ಲಿ ಹೊಸದೊಂದು ಯುವಜನತೆಯ ಅಭೂತಪೂರ್ವ ಮೂವ್‌ಮೆಂಟ್‌ನ ಅಲೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ” ಎಂದು ವಿವರಿಸಿದ್ದಾರೆ.

“ಭಾರತದ ಪ್ರಜಾಪ್ರಭುತ್ವವು ತನ್ನ ಬಾಲ್ಯಾವಸ್ಥೆಯಿಂದ ಬೆಳೆದು ಮಾಗಬೇಕಾದರೆ “ಬಂಧುತ್ವ” (Fraternity) ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಬಂಧುತ್ವವು ಕೇಂದ್ರಸ್ಥಾನವನ್ನು ಅಲಂಕರಿಸಬೇಕು. ಒಳಗೊಳ್ಳುವಿಕೆ ಮತ್ತು ಬಹುತ್ವ ಚಿಂತನೆಗಳನ್ನು ಈ ಬಂಧುತ್ವ ಒಳಗೊಂಡಿರಬೇಕು” ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಈ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಒಂದು ವರ್ಷದ ಆಡಳಿತದಲ್ಲಿ ‘ಬಹುಸಂಖ್ಯಾತ ತತ್ವ’ದ ಪ್ರಚಾರ ಮತ್ತು ‘ನ್ಯಾಯಾಂಗ’ ಹಾಗೂ ‘ಶಾಸಕಾಂಗ’ಗಳ ಪ್ರಸ್ತುತತೆಯನ್ನೇ ಅಸಿಂಧುಗೊಳಿಸುವ ನೀತಿಗಳ ಮೂಲಕ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.